Tuesday, December 26, 2017

CONSTRUCTION WASTE ................


         ಕಟ್ಟಡಗಳ ಭಗ್ನಾವಶೇಷ : ಮರುಬಳಕೆಗೆ ಅವಕಾಶ


ಬೆಂಗಳೂರು ಮಹಾನಗರದಲ್ಲಿ ಪ್ರತಿನಿತ್ಯ ೩೬೦೦ ಟನ್ ಗಳಿಗಿಂತ ಅಧಿಕ ಪ್ರಮಾಣದ “ ಕಟ್ಟಡಗಳ ಭಗ್ನಾವಶೇಷ “ ಉತ್ಪನ್ನವಾಗುತ್ತಿದ್ದು, ಇವುಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುತ್ತಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ. ಈ ಸಮಸ್ಯೆಗೆ ದೇಶದ ಅನ್ಯ ಪಟ್ಟಣ – ನಗರಗಳೂ ಅಪವಾದವೆನಿಸಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಬಿ ಬಿ ಎಂ ಪಿ ಅವಶ್ಯಕ ಕಾನೂನುಗಳನ್ನು ರೂಪಿಸಲು ಸಜ್ಜಾಗಿದೆ. ಕಂಡಕಂಡಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವವರಿಗೆ ೧ ರಿಂದ ೫ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲು ನೂತನ ಕಾನೂನಿನಲ್ಲಿ ಅವಕಾಶವನ್ನು ಕಲ್ಪಿಸಲಾಗುತ್ತದೆ. ಜೊತೆಗೆ ಕದ್ದುಮುಚ್ಚಿ ತ್ಯಾಜ್ಯಗಳನ್ನು ಸುರಿಯುವವರನ್ನು ಗುರುತಿಸಲು ಸಾಕಷ್ಟು ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಿದೆ. ತನ್ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಬಿ ಬಿ ಎಂ ಪಿ ನಿರ್ಧರಿಸಿದೆ. ಆದರೆ ಇದೇ ಸಂದರ್ಭದಲ್ಲಿ ಈ ತ್ಯಾಜ್ಯಗಳನ್ನು ಮರುಬಳಕೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಮತ್ತು ಬಿ ಬಿ ಎಂ ಸಿ ಯ ಬೊಕ್ಕಸಕ್ಕೆ ಒಂದಿಷ್ಟು ಹಣವನ್ನು ಉಳಿಸಬಲ್ಲ ವಿಧಾನಗಳನ್ನು ಅಳವಡಿಸಿಕೊಳ್ಳುವ ವಿಚಾರವನ್ನು ಮಾತ್ರ  ಮರೆತುಬಿಟ್ಟಿದೆ!.

ಸಮಸ್ಯೆಯ ಮೂಲ

ನಿರಂತರ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ನಾವು ನಿರ್ಮಿಸುತ್ತಿರುವ ವಸತಿ – ವಾಣಿಜ್ಯ ಕಟ್ಟಡಗಳು, ರಸ್ತೆಗಳು, ಫ್ಲೈ ಓವರ್, ಸಬ್ ವೇ ಇತ್ಯಾದಿಗಳ ನಿರ್ಮಾಣಗಳು ಶರವೇಗದಲ್ಲಿ ಸಾಗುತ್ತಿವೆ. ಜನಸಂಖ್ಯೆ ಇನ್ನಷ್ಟು ಹೆಚ್ಚಿದಂತೆ ಇವುಗಳ ಬೇಡಿಕೆಯೂ ಇನ್ನಷ್ಟು ಹೆಚ್ಚಲಿದೆ. ಇದರೊಂದಿಗೆ ಹಳೆಯ ಕಟ್ಟಡಗಳ ದುರಸ್ತಿ, ನವೀಕರಣ ಮತ್ತು ಹಳೆಯ ಕಟ್ಟಡಗಳನ್ನು ಭಗ್ನಗೊಳಿಸಿ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಅತಿಯಾಗಿದೆ. ಬೆಂಗಳೂರು ನಗರದಲ್ಲಿ ದಿನನಿತ್ಯ ಉತ್ಪನ್ನವಾಗುವ ಇಂತಹ ತ್ಯಾಜ್ಯಗಳ ಪ್ರಮಾಣವು ೩೬೦೦ ಟನ್ ಗಳಾಗಿದ್ದು, ದೇಶದಲ್ಲಿ ಉತ್ಪನ್ನವಾಗುತ್ತಿರುವ ಇಂತಹ ತ್ಯಾಜ್ಯಗಳ ಪ್ರಮಾಣವು ೧೨ ರಿಂದ ೧೫ ಮಿಲಿಯನ್ ಟನ್ ಗಳಾಗಿದೆ. ವಿಶೇಷವೆಂದರೆ ಈ ತ್ಯಾಜ್ಯಗಳ ಸಮಸ್ಯೆಯು “ ರಕ್ತಬೀಜಾಸುರ “ ನಂತೆ ವೃದ್ಧಿಸುತ್ತಿದೆ. ಇದನ್ನು ಪರಿಹರಿಸಬಲ್ಲ ಮಾರ್ಗೋಪಾಯಗಳನ್ನು ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸದೇ ಇದ್ದಲ್ಲಿ, ಜನಸಾಮಾನ್ಯರ ಆರೋಗ್ಯಕ್ಕೆ ಮತ್ತು ದೇಶದ ಪ್ರಗತಿಗೆ ಕಂಟಕವಾಗಿ ಪರಿಣಮಿಸಲಿದೆ.

ಪರಿಹಾರವೇನು?

ಮನಸ್ಸಿದ್ದಲ್ಲಿ ಮಾರ್ಗವಿದೆ ಎನ್ನುವ ಮಾತಿನಂತೆ, ಈ ಸಮಸ್ಯೆಯನ್ನು ಬಗೆಹರಿಸಲು ಸುಲಭ ಮತ್ತು ಉಪಯುಕ್ತ ವಿಧಾನಗಳು ಸಾಕಷ್ಟಿವೆ. ಆದರೆ ಇವುಗಳನ್ನು ಕಟ್ಟುನಿಟ್ಟಾಗಿ  ಅನುಷ್ಠಾನಿಸುವ ಇಚ್ಛಾಶಕ್ತಿ ಸರಕಾರ ಮತ್ತು ಪ್ರಜೆಗಳಲ್ಲಿ ಇರಲೇಬೇಕಾಗುತ್ತದೆ.
ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಯಾದಿಯಲ್ಲಿರುವ ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳು ಈಗಾಗಲೇ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಬಳಸುವ ಸಲುವಾಗಿ ಅನೇಕ ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಅನುಷ್ಠಾನಿಸಿವೆ. ಕಟ್ಟಡಗಳನ್ನು ಭಗ್ನಗೊಳಿಸುವಾಗ ಲಭಿಸುವ ಇಟ್ಟಿಗೆ, ಕಲ್ಲುಗಳು ಮತ್ತು ಕಾಂಕ್ರೀಟ್ ತುಂಡುಗಳನ್ನು ಹುಡಿಮಾಡಿದ ಬಳಿಕ, ಇದನ್ನು ನೂತನ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಈ ದೇಶಗಳು ತ್ಯಾಜ್ಯಗಳನ್ನು ಬಳಸಿ ನೂತನ ರಸ್ತೆಗಳನ್ನು ನಿರ್ಮಿಸುವುದಾದಲ್ಲಿ, ಈ ವಿಧಾನವನ್ನು ನಾವೂ ಅನುಷ್ಠಾನಿಸುವುದು ಅಸಾಧ್ಯವೇನಲ್ಲ.ತತ್ಪರಿಣಾಮವಾಗಿ ನಿರ್ಮಾಣ ಕಾಮಗಾರಿಗಳ ವೆಚ್ಚ ಕಡಿಮೆಯಾಗುವುದರೊಂದಿಗೆ, ನಿರುಪಯುಕ್ತ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಸುಲಭಸಾಧ್ಯವೆನಿಸಲಿದೆ. ಇದಕ್ಕೂ ಮಿಗಿಲಾಗಿ ಮುನಿಸಿಪಲ್ ಕಾಯಿದೆಯಂತೆ “ ಲ್ಯಾಂಡ್ ಫಿಲ್ ಸೈಟ್ “ ಗಳಲ್ಲಿ ಸುರಿಯಬೇಕಾದ ತ್ಯಾಜ್ಯಗಳನ್ನು ಈ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ, ಇರುವ ಲ್ಯಾಂಡ್ ಫಿಲ್ ಸೈಟ್ ಗಳ ಆಯುಷ್ಯವನ್ನು ಹೆಚ್ಚಿಸಬಹುದಾಗಿದೆ.

ಕೊನೆಯ ಮಾತು

ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ನಮ್ಮ ದೇಶದಲ್ಲಿ  ರಸ್ತೆಗಳ ದುರಸ್ತಿ, ಪುನರ್ ನವೀಕರಣ ಮತ್ತು ನೂತನ ರಸ್ತೆಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿದೆ. ಅಂತೆಯೇ ನಮ್ಮಲ್ಲಿ ಉತ್ಪನ್ನವಾಗುತ್ತಿರುವ ಕಟ್ಟಡ ತ್ಯಾಜ್ಯಗಳ ಪ್ರಮಾಣವೂ ದಿನೇದಿನೇ ಹೆಚ್ಚುತ್ತಿದೆ. ಈ ತ್ಯಾಜ್ಯಗಳನ್ನು ಬಳಸಿ ನೂತನ ರಸ್ತೆಗಳನ್ನು ನಿರ್ಮಿಸುವ ಮೂಲಕ ಉಳಿತಾಯವಾಗುವ ಹಣವನ್ನು ಬಳಸುವ ಮೂಲಕ ಇನ್ನಷ್ಟು ಹೊಸ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ. ಇದಕ್ಕೂ ಮಿಗಿಲಾಗಿ ನೂತನ ರಸ್ತೆಗಳ ನಿರ್ಮಾಣದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಳಸಿದಲ್ಲಿ, ಈ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆ ಬರುವುದಲ್ಲದೆ, ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಆದರೆ ನಮ್ಮನ್ನಾಳುವವರು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿರುವರೇ ಎನ್ನುವುದು “ ಮಿಲಿಯನ್ ಡಾಲರ್ “ ಪ್ರಶ್ನೆಯಾಗಿದೆ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು


Monday, October 30, 2017

BREAST CANCER - CONSULT A SPECIALIST DOCTOR


 ಸ್ತನ ಕ್ಯಾನ್ಸರ್ : ಅರಿವು ಮೂಡಿಸುವ ಮಾಸ ಅಕ್ಟೋಬರ್ 

ಕೇವಲ ಮಧ್ಯವಯಸ್ಸನ್ನು ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುವ ವ್ಯಾಧಿಯೆಂದು ಅನೇಕ ಭಾರತೀಯರು ಇಂದಿಗೂ ನಂಬಿರುವ ಸ್ತನಕ್ಯಾನ್ಸರ್ ವ್ಯಾಧಿಯು, ಹದಿಹರೆಯದ ಹುಡುಗಿಯರು ಮತ್ತು ತರುಣಿಯರನ್ನೂ ಪೀಡಿಸಬಲ್ಲದು. ವಿಶೇಷವೆಂದರೆ ಈ ವ್ಯಾಧಿಯು ಕೇವಲ ಮಹಿಳೆಯರನ್ನು ಮಾತ್ರವಲ್ಲ, ಅತ್ಯಲ್ಪ ಪ್ರಮಾಣದ ಪುರುಷರನ್ನೂ ಬಾಧಿಸಬಲ್ಲದು ಎಂದು ನಿಮಗೂ ತಿಳಿದಿರಲಾರದು. ಈ ವಿಶಿಷ್ಟ ವ್ಯಾಧಿಯ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಗ್ರಸ್ಥಾನ 

ಜಾಗತಿಕ ಮಟ್ಟದಲ್ಲಿ ಮಹಿಳೆಯರಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಗಳಲ್ಲಿ ಸ್ತನ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಈ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವುದರೊಂದಿಗೆ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಇದರ ಮಾರಕತೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಈ ಸಂದೇಶದೊಂದಿಗೆ, ಈ ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಂಘಟನೆಗಳು ಜೊತೆಗೂಡಿ, ವರ್ಷಂಪ್ರತಿ ಅಕ್ಟೋಬರ್ ತಿಂಗಳನ್ನು " ಗುಲಾಬಿ ಮಾಸ " ವನ್ನಾಗಿ ಆಚರಿಸುತ್ತವೆ. ಹಾಗೂ ಇದಕ್ಕಾಗಿ ಗುಲಾಬಿ ವರ್ಣದ ರಿಬ್ಬನನ್ನು ಲಾಂಛನವನ್ನಾಗಿ ಬಳಸಲಾಗುತ್ತಿದೆ.  

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಬಗ್ಗೆ ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಇಂತಹ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಅವಶ್ಯಕ ವಿವರಗಳನ್ನು ದಾಖಲಿಸಿಕೊಳ್ಳುವ ಪದ್ದತಿಯು ಸಮರ್ಪಕವಾಗಿ  ಅನುಷ್ಠಾನಗೊಂಡಿಲ್ಲ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಭಿಪ್ರಾಯದಂತೆ, ಭಾರತದ ಪ್ರತಿ ೨೨ ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ನಿಂದ ಪೀಡಿತರಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬಾಕೆಯು, ತನ್ನ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ಗೆ ಈಡಾಗುವ ಸಾಧ್ಯತೆಗಳಿವೆ.  ಮಹಿಳೆಯರ ವಯಸ್ಸು ಹೆಚ್ಚಾದಂತೆಯೇ, ಇದರ ಸಂಭಾವ್ಯತೆಯೂ ಹೆಚ್ಚುತ್ತದೆ.

ಕೆಲವೇ ದಶಕಗಳ ಹಿಂದೆ ೫೦ ವರ್ಷ ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುತ್ತಿದ್ದ ಸ್ತನ ಕ್ಯಾನ್ಸರ್, ಇತ್ತೀಚಿನ ಕೆಲವರ್ಷಗಳಿಂದ ೨೫ ರಿಂದ ೫೦ ವರ್ಷ ವಯೋಮಾನದವರಲ್ಲೂ ಪತ್ತೆಯಾಗುತ್ತಿದೆ. ಪ್ರಸ್ತುತ ಪತ್ತೆಯಾಗುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. ೬೫ ರಿಂದ ೭೦ ರಷ್ಟು ೫೦ ವರ್ಷ ಕಳೆದ ಮತ್ತು ಶೇ. ೩೦ ರಿಂದ ೩೫ ರಷ್ಟು ಪ್ರಕರಣಗಳು ೫೦ ವರ್ಷಕ್ಕಿಂತ ಕೆಳಗಿನವರಲ್ಲಿ ಪತ್ತೆಯಾಗುತ್ತಿವೆ.

ವಿಶೇಷವೆಂದರೆ ಶೇ. ೭೦ ಕ್ಕೂ ಅಧಿಕ ಪ್ರಕರಣಗಳು ಉಲ್ಬಣಿಸಿದ ಸ್ಥಿತಿಯಲ್ಲಿ ಪತ್ತೆಯಾಗುತ್ತಿರುವುದರಿಂದ, ಈ ರೋಗಿಗಳು ಬದುಕಿ ಉಳಿಯುವ ಸಾಧ್ಯತೆ ಕಡಿಮೆಯಾಗುವುದರೊಂದಿಗೆ  ಅಕಾಲಿಕ ಮರಣದ ಪ್ರಮಾಣವೂ ಹೆಚ್ಚುತ್ತಿದೆ.  

ಕಾರಣವೇನು?

ಸ್ತನಗಳ ಕ್ಯಾನ್ಸರ್ ಉದ್ಭವಿಸಲು ನಿಖರವಾದ ಹಾಗೂ ನಿರ್ದಿಷ್ಟವಾದ ಕಾರಣಗಳು ಏನೆಂದು ಹೇಳಲಾಗದು. ಆದರೆ ಈ ವ್ಯಾಧಿಯ ಸಂಭಾವ್ಯತೆಗೆ ಸಂಬಂಧಿಸಿದಂತೆ ಕೆಲವೊಂದು ಅಪಾಯಕಾರಿ ಅಂಶಗಳು ಇಂತಿವೆ. ಇವುಗಳಲ್ಲಿ ಮೇಲೆ ನಮೂದಿಸಿದಂತೆ ಲಿಂಗ ಮತ್ತು ವಯಸ್ಸು, ೧೨ ವರ್ಷ ವಯಸ್ಸಿಗೆ ಮುನ್ನ ಪುಷ್ಪವತಿಯರಾಗಿದ್ದ ಬಾಲಕಿಯರು, ೫೫ ವರ್ಷ ವಯಸ್ಸಿನ ಬಳಿಕ ಋತುಬಂಧವಾದ ಸ್ತ್ರೀಯರು, ಅವಿವಾಹಿತರು, ಸಂತಾನ ಪ್ರಾಪ್ತಿಯಾಗದವರು, ೪೦ ವರ್ಷ ವಯಸ್ಸಿನ ಬಳಿಕ ಮಕ್ಕಳನ್ನು ಹೆತ್ತವರು, ಕಂದನಿಗೆ ತನ್ನ ಮೊಲೆಹಾಲನ್ನು ಊಡಿಸದವರು, ಗರ್ಭನಿರೋಧಕ ಔಷದಗಳನ್ನು ಸೇವಿಸುತ್ತಿದ್ದ ಮತ್ತು ಸೇವಿಸುತ್ತಿರುವವರು, ಅನ್ಯ ಕಾರಣಗಳಿಗಾಗಿ ಹಾರ್ಮೋನ್ ಯುಕ್ತ ಔಷದಗಳನ್ನು ಸೇವಿಸುವ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಸಮೀಪದ ಸಂಬಂಧಿಗಳು ಈ ವ್ಯಾಧಿಗೆ ತುತ್ತಾಗುವ ಸಾಧ್ಯತೆಗಳಿವೆ. ಇದಲ್ಲದೆ ಅನುವಂಶಿಕತೆ ಮತ್ತು ಪರಿವರ್ತಿತ ಹಾಗೂ ಅಸಾಮಾನ್ಯ ವಂಶವಾಹಿನಿಗಳ ಇರುವಿಕೆ, ಅಧಿಕ ತೂಕ ಹಾಗೂ ಅತಿ ಬೊಜ್ಜು, ಅತಿಯಾದ ಧೂಮ ಹಾಗೂ ಮದ್ಯಪಾನ ಮತ್ತು ನಿರುಪಯುಕ್ತ ಆಹಾರಗಳನ್ನು ( ಜಂಕ್ ಫುಡ್ ) ಅತಿಯಾಗಿ ಸೇವಿಸುವ ಹವ್ಯಾಸ ಇರುವವರಲ್ಲೂ, ಈ ವ್ಯಾಧಿ ತಲೆದೋರುವ ಸಾಧ್ಯತೆಗಳು ಹೆಚ್ಚಿವೆ. 

ಜಾಗತಿಕ ಮಟ್ಟದಲ್ಲಿ ವರ್ಷಂಪ್ರತಿ ೧.೩೮ ದಶಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ,೫೮,೦೦೦ ರೋಗಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಗೆ ಅಭಿವೃದ್ಧಿ ಹೊಂದಿರುವ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳೂ ಅಪವಾದವೆನಿಸಿಲ್ಲ. ಆದರೆ ಮಧ್ಯಮ ಮತ್ತು ಅಲ್ಪ ಆದಾಯವಿರುವ ದೇಶಗಳಲ್ಲಿ ಸ್ತನ ಕ್ಯಾನ್ಸರ್ ವ್ಯಾಧಿಗೆ ಬಲಿಯಾಗುತ್ತಿರುವವರ ಪ್ರಮಾಣವು ೨,೬೯,೦೦೦ ಕ್ಕೂ ಹೆಚ್ಚಿದೆ. 

ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ವರ್ಷಂಪ್ರತಿ ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚುತ್ತಲೇ ಇದ್ದು, ಇದಕ್ಕೆ ಅನುಗುಣವಾಗಿ ವ್ಯಾಧಿಪೀಡಿತರ ಮರಣದ ಪ್ರಮಾಣವೂ ವೃದ್ಧಿಸುತ್ತಿದೆ. ಆದರೆ ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಇದನ್ನು ಗುಣಪಡಿಸುವ ಸಾಧ್ಯತೆಗಳು ಶೇ.೯೮ ರಷ್ಟಿದ್ದು, ವಿಳಂಬವಾದಲ್ಲಿ ಇದರ ಪ್ರಮಾಣವು ಕೇವಲ ಶೇ. ೨೭ ರಷ್ಟಿರುತ್ತದೆ.  

ಪ್ರಸ್ತುತ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಗ್ರಾಮೀಣ ಜನರ ಅಜ್ಞಾನ, ವಿದ್ಯಾವಂತರ ಲಜ್ಜೆ ಮತ್ತು ತಮ್ಮ ಶಾರೀರಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಹವ್ಯಾಸಗಳಿಂದಾಗಿ, ಗಣನೀಯ ಪ್ರಮಾಣದ ಪ್ರಕರಣಗಳು ವೈದ್ಯರ ಗಮನಕ್ಕೆ ಬರುವುದೇ ಇಲ್ಲ!. 

ಪ್ರಾಯಶಃ ಇಂತಹ ಕಾರಣಗಳಿಂದಾಗಿಯೇ ಬಹುತೇಕ ಮಹಿಳೆಯರು ತಮ್ಮ ಸ್ತನಗಳಲ್ಲಿ ಪುಟ್ಟ ಹುಣಸೆ ಬೀಜದಷ್ಟು ಗಾತ್ರದ ಗೆಡ್ಡೆಯೊಂದು ಇರುವುದನ್ನು ( ಪ್ರಾಥಮಿಕ ಹಂತ ) ಅರಿತರೂ, ವೈದ್ಯರನ್ನು ಸಂದರ್ಶಿಸುವುದಿಲ್ಲ. ಈ ಗೆಡ್ಡೆಯು ತುಸು ದೊಡ್ಡದಾದ ಬಳಿಕ ( ತುಸು ವೃದ್ಧಿಸಿದ ಹಂತ ) ಮತ್ತು ಇನ್ನು ಕೆಲವರು ಈ ಗೆಡ್ಡೆಯಲ್ಲಿ ತೀವ್ರ ನೋವು ಆರಂಭಗೊಂಡ ಬಳಿಕ ( ಮೂರನೇ ಹಂತ ) ವೈದ್ಯರನ್ನು ಭೇಟಿಯಾಗುತ್ತಾರೆ. ತತ್ಪರಿಣಾಮವಾಗಿ ಈ ರೋಗಿಗಳು ಸಾಕಷ್ಟು ಶಾರೀರಿಕ ಹಾಗೂ ಮಾನಸಿಕ ಯಾತನೆಗಳೊಂದಿಗೆ, ಆರ್ಥಿಕ ಸಂಕಷ್ಟಗಳಿಗೂ ಒಳಗಾಗುತ್ತಾರೆ. 

ಎಲ್ಲವೂ ಕ್ಯಾನ್ಸರ್ ಅಲ್ಲ 

ಅನೇಕ ವಿದ್ಯಾವಂತರೂ ಸ್ತನಗಳಲ್ಲಿ ಉದ್ಭವಿಸುವ ಗೆಡ್ಡೆಗಳೆಲ್ಲವೂ ಕ್ಯಾನ್ಸರ್ ಎಂದೇ ನಂಬುತ್ತಾರೆ. ಆದರೆ ನಿಜ ಹೇಳಬೇಕಿದ್ದಲ್ಲಿ, ಇವುಗಳಲ್ಲಿ ಶೇ. ೭೫ ರಷ್ಟು ಗೆಡ್ಡೆಗಳು ನಿರಪಾಯಕಾರಿಗಳೇ ಆಗಿರುತ್ತವೆ. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಗೆಡ್ಡೆಗಳು ಉದ್ಭವಿಸಿದಲ್ಲಿ, ಇದನ್ನು ನಿರಪಾಯಕಾರಿ ಎಂದು ನೀವಾಗಿ ನಿರ್ಧರಿಸಿ ಮುಚ್ಚಿಡುವ ಪ್ರಯತ್ನವು " ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ " ದಂತಾಗುವುದು ಎನ್ನುವುದನ್ನು ಮರೆಯದಿರಿ. ಈ ಮಾಹಿತಿಯನ್ನು ನಿಮ್ಮ ಬಂಧುಮಿತ್ರರೊಂದಿಗೆ ಹಂಚಿಕೊಳ್ಳುವ ಮೂಲಕ " ಗುಲಾಬಿ ಮಾಸ " ದ ಆಚರಣೆಯಲ್ಲಿ ನೀವೂ ಸಕ್ರಿಯವಾಗಿ ಪಾಲ್ಗೊಳ್ಳಿರಿ. ತನ್ಮೂಲಕ ಸ್ತನ ಕ್ಯಾನ್ಸರ್ ನ ಮಾರಕತೆಯನ್ನು ತಡೆಗಟ್ಟಲು ಸಹಕರಿಸಿ. 

ಸ್ವಯಂ ಸ್ತನ ಪರೀಕ್ಷೆ 

ಮಾರಕವೆನಿಸಬಲ್ಲ ಸ್ತನ ಕ್ಯಾನ್ಸರ್ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸ್ವಯಂ ಸ್ತನ ಪರೀಕ್ಷೆಯು ಅತ್ಯಂತ ಸರಳ ಹಾಗೂ ಸುಲಭ ವಿಧಾನವೂ ಹೌದು. ಹದಿಹರೆಯದ ಹುಡುಗಿಯರಿಂದ ಆರಂಭಿಸಿ, ವಯೋವೃದ್ಧ ಮಹಿಳೆಯರ ತನಕ ಪ್ರತಿಯೊಬ್ಬರೂ ಈ ಸರಳ ವಿದಾನವನ್ನು ತಮ್ಮ ಪರಿಚಿತ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ. ಬಳಿಕ ಪ್ರತಿ ತಿಂಗಳಲ್ಲೂ ಸ್ವಯಂ ಸ್ತನ ಪರೀಕ್ಷೆಯನ್ನು ನಡೆಸುತ್ತಿದ್ದಲ್ಲಿ, ಅಸಾಮಾನ್ಯ ಬದಲಾವಣೆಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ. ಜೊತೆಗೆ ಸ್ತನಗಳಲ್ಲಿ ನೋವು, ಜ್ವರ, ಸ್ತನ ಹಾಗೂ ಕಂಕುಳಿನಲ್ಲಿ ಇರುವ ಲಿಂಫ್ ಗ್ರಂಥಿಗಳಲ್ಲಿ ಬಾವು, ಸ್ತನಗಳಲ್ಲಿ ಉದ್ಭವಿಸಿರುವ ಚಿಕ್ಕಪುಟ್ಟ ಗೆಡ್ಡೆಗಳು ಅಥವಾ ಯಾವುದೇ ರೀತಿಯ ಅಸಾಮಾನ್ಯ ಬದಲಾವಣೆಗಳನ್ನು ಗಮನಿಸಿದೊಡನೆ, ತಜ್ಞ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಅಯಾಚಿತ ಸಮಸ್ಯೆಗಳನ್ನು ನಿಶ್ಚಿತವಾಗಿ ತಡೆಗಟ್ಟಬಹುದು. 

ಅಂತಿಮವಾಗಿ ಹೇಳುವುದಾದಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಾಥಮಿಕ ಹಂತದಲ್ಲೇ ಪತ್ತೆಯಾಗುತ್ತಿರುವ ಪ್ರಮಾಣವು ಅತ್ಯಲ್ಪವಾಗಿದೆ. ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ತನ್ಮೂಲಕ ಇದಕ್ಕೆ ಬಲಿಯಾಗುವ ರೋಗಿಗಳ ಪ್ರಮಾಣವನ್ನೂ ಕನಿಷ್ಠ ಶೇ.೩೦ ರಷ್ಟು ಕಡಿಮೆ ಮಾಡಬಹುದಾಗಿದೆ. 

ನಿಮಗಿದು ಗೊತ್ತೇ?

ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆ ಬಿಡುಗಡೆ ಮಾಡಿದ ವರದಿಯಂತೆ, ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಪ್ರಕರಣಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಸ್ತನ ಕ್ಯಾನ್ಸರ್ ಪ್ರಕರಣಗಳ ಪ್ರಮಾಣವು ಶೇ. ೨೭ ರಷ್ಟಿದೆ!. ವಿಶೇಷವೆಂದರೆ  ದೆಹಲಿಯಲ್ಲಿ  ಈ ಪ್ರಮಾಣವು ಶೇ. ೪೧ ರಷ್ಟಿದ್ದು, ಸ್ತನ ಕ್ಯಾನ್ಸರ್ ನ ರಾಜಧಾನಿ ಎನಿಸಿದೆ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು



Sunday, June 25, 2017

SAY NO TO DRUGS


                                ಜೂನ್ 26 – ವಿಶ್ವ ಮಾದಕದ್ರವ್ಯ ವಿರೋಧಿ ದಿನ
       ಮಾದಕ ದ್ರವ್ಯಗಳ ವ್ಯಸನ : ನಿರರ್ಥಕವೆನಿಸುವುದು ಜೀವನ

ಕಳೆದ ಹಲವಾರು ದಶಕಗಳಿಂದ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮಾದಕ ದ್ರವ್ಯಗಳ ಸೇವನೆಯ ಚಟ ದಿನೇದಿನೇ ಹೆಚ್ಚುತ್ತಿದೆ. ಈ ಅಪಾಯಕಾರಿ ವ್ಯಸನಕ್ಕೆ ಯುವಜನರೊಂದಿಗೆ ಪುಟ್ಟ ಮಕ್ಕಳೂ ಬಲಿಯಾಗುತ್ತಿರುವುದು ಗಾಬರಿ ಹುಟ್ಟಿಸುವಂತಿದೆ. ಈ ವಿಶ್ವವ್ಯಾಪಿ ಸಮಸ್ಯೆಗೆ ನಮ್ಮ ದೇಶವೂ ಅಪವಾದವೆನಿಸಿಲ್ಲ. ಅಂತೆಯೇ ಈ ಸಮಸ್ಯೆಗೆ ಬಡ, ಮಧ್ಯಮ ಆದಾಯದ ಮತ್ತು ಶ್ರೀಮಂತ ರಾಷ್ಟ್ರಗಳೆನ್ನುವ ಭೇದವೂ ಇಲ್ಲವೆಂದಲ್ಲಿ ನೀವೂ ನಂಬಲಾರಿರಿ.

ಮಾದಕ ದ್ರವ್ಯಗಳ ಸೇವನೆಯ ಪರಿಣಾಮವಾಗಿ ಉದ್ಭವಿಸುತ್ತಿರುವ ವೈವಿಧ್ಯಮಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಯುನೈಟೆಡ್ ನೇಶನ್ಸ್ ಸಂಸ್ಥೆಯು, 1987 ರ ಡಿಸೆಂಬರ್ 7 ರಂದು ಆಯೋಜಿಸಿದ್ದ ಅಧಿವೇಶನದಲ್ಲಿ ಪ್ರತಿವರ್ಷ ಜೂನ್ 26 ರಂದು “ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ “ ವನ್ನಾಗಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ತನ್ಮೂಲಕ ಈ ಸಮಸ್ಯೆಯ ವಿರುದ್ಧ ಹೋರಾಟವನ್ನು ನಡೆಸುವ ನಿಟ್ಟಿನಲ್ಲಿ, ವಿವಿಧ ದೇಶಗಳ ಸಹಕಾರದೊಂದಿಗೆ “ ಮಾದಕ ದ್ರವ್ಯ ಮುಕ್ತ ಜಗತ್ತು “ ಎನ್ನುವ ಧ್ಯೇಯವನ್ನು ಅನುಷ್ಠಾನಗೊಳಿಸಲು ನಿರ್ಧರಿಸಿತ್ತು. 1988 ರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾದಕ ದ್ರವ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ “ ಮಕ್ಕಳ ಮತ್ತು ಯುವಜನರ ಮಾತುಗಳನ್ನು ಆಲಿಸುವುದು, ಅವರ ಆರೋಗ್ಯಪೂರ್ಣ ಮತ್ತು ಸುರಕ್ಷಿತ ಬೆಳವಣಿಗೆಯ ಮೊದಲ ಹೆಜ್ಜೆ “ ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶೇಷವಾಗಿ ಯುವಜನರ ಜೀವನವನ್ನೇ ನಾಶಪಡಿಸುತ್ತಿರುವ ಮಾದಕದ್ರವ್ಯಗಳ ವಿರುದ್ಧ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಬೇಕಿದ್ದಲ್ಲಿ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಸರ್ಕಾರಗಳು ಮತ್ತು ಪ್ರತಿಯೊಬ್ಬ ಪ್ರಜೆಯ ಮನಸ್ಪೂರ್ವಕ ಸಹಕಾರ ಅತ್ಯವಶ್ಯಕವೆನಿಸುವುದು.

ಸಂಘಟಿತ ಪ್ರಯತ್ನ

ಮಾದಕದ್ರವ್ಯಗಳ ವಿರುದ್ಧ ಹೋರಾಟದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ, ಈ ಭಯಾನಕ ಮತ್ತು ಅಪಾಯಕಾರಿ ಸಮಸ್ಯೆಯು ಅನಿಯಂತ್ರಿತವಾಗಿ ಮುಂದುವರೆಯುತ್ತಿದೆ. ತತ್ಪರಿಣಾಮವಾಗಿ ಸಾರ್ವಜನಿಕ ಆರೋಗ್ಯ, ಸುರಕ್ಷತೆ ಮತ್ತು ನೆಮ್ಮದಿಗಳೊಂದಿಗೆ, ವಿವಿಧ ದೇಶಗಳ ಸುರಕ್ಷತೆ ಮತ್ತು ಸ್ವಾಯತ್ತತೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಅಧಿಕತಮ ದೇಶಗಳ ಯುವಜನತೆಯನ್ನು ಶಾಪದೋಪಾದಿಯಲ್ಲಿ ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯ ವಿರುದ್ಧ ಹೋರಾಡಲು, ಜಗತ್ತಿನ ಪ್ರತಿಯೊಂದು ದೇಶಗಳ ಸರ್ಕಾರಗಳು ಆರ್ಥಿಕ ಮತ್ತು ಸಾಮಾಜಿಕ ಬೆಂಬಲಗಳನ್ನು ನೀಡುವ ಮೂಲಕ ಸಹಕರಿಸುವಂತೆ ಯುನೈಟೆಡ್ ನೇಶನ್ಸ್ ಸಂಸ್ಥೆ ಮನವಿ ಮಾಡುತ್ತಿದೆ.

ಕಳ್ಳ ಸಾಗಾಣಿಕೆ

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸರಬರಾಜಾಗುವ ಮಾದಕದ್ರವ್ಯಗಳ ಕಳ್ಳ ಸಾಗಾಣಿಕೆಯು ನಮ್ಮ ನೆರೆಯ ಅಫ್ಘಾನಿಸ್ಥಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾ ದೇಶ, ಭೂತಾನ ಮತ್ತು ಶ್ರೀಲಂಕಾ ದೇಶಗಳ ಮೂಲಕ ನಡೆಯುತ್ತದೆ. ಇಂತಹ ದ್ರವ್ಯಗಳಲ್ಲಿ ಆಫೀಮು, ಗಾಂಜಾ, ಚರಸ್, ಕೊಕೇನ್ ಗಳಂತಹ ದ್ರವ್ಯಗಳಲ್ಲದೇ, ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಕೆಲವಿಧದ ಮತ್ತೇರಿಸಬಲ್ಲ ಔಷದಗಳನ್ನೂ ಕಳ್ಳಸಾಗಾಣಿಕೆ ಮಾಡಲಾಗುತ್ತದೆ. 

ಹೆಚ್ಚುತ್ತಿರುವ ವ್ಯಸನಿಗಳು

ಲಭ್ಯ ಮಾಹಿತಿಯಂತೆ ಜಾಗತಿಕ ಮಟ್ಟದಲ್ಲಿ ಸುಮಾರು 200 ದಶಲಕ್ಷಕ್ಕೂ ಅಧಿಕ ಜನರು ವಿವಿಧ ರೀತಿಯ ಮಾದಕ ದ್ರವ್ಯಗಳ ದಾಸಾನುದಾಸರಾಗಿದ್ದಾರೆ. ಇವರಲ್ಲಿ 162 ದಶಲಕ್ಷ ಜನರು ಕೆನಬಿಸ್, ಮರಿಹುವಾನ, ಹಶೀಶ್ ಹಾಗೂ ಟಿ. ಸಿ. ಎಚ್, 35 ದಶಲಕ್ಷ ಜನರು ಎ. ಟಿ. ಎಸ್, ಎಕ್ಸ್ಟಸಿ ಹಾಗೂ ಮೆಥ ಆಮ್ಫಿಟಮೈನ್, 16 ದಶಲಕ್ಷ ವ್ಯಸನಿಗಳು ಓಪಿಯಂ, ಮೊರ್ಫಿನ್ ಮತ್ತು ಅಫೀಮಿನ ಕೃತಕ ಉತ್ಪನ್ನಗಳು ಮತ್ತು 13 ದಶಲಕ್ಷ ವ್ಯಸನಿಗಳು ಕೊಕೇನ್ ನಂತಹ ಮಾದಕದ್ರವ್ಯಗಳನ್ನು ಸೇವಿಸುತ್ತಿದ್ದಾರೆ. ಈ ಮಾದಕ ವ್ಯಸನಿಗಳು ತಮ್ಮ ದೈನಂದಿನ ಸೇವನೆಯ ಮಾದಕದ್ರವ್ಯಗಳನ್ನು ಖರೀದಿಸಲು ಹಣದ ಅಭಾವವಿದ್ದಲ್ಲಿ, ಅಮಾಯಕರ ಮೇಲೆ ಹಲ್ಲೆನಡೆಸುವ, ಸುಲಿಗೆ ಮಾಡುವ ಮತ್ತು ಅನೇಕ ಸಂದರ್ಭಗಳಲ್ಲಿ ಕೊಲೆಯಂತಹ ಪಾತಕಗಳನ್ನು ನಡೆಸಿರುವ ಉದಾಹರಣೆಗಳು ಸಾಕಷ್ಟಿವೆ.

ಬಹುತೇಕ ವ್ಯಸನಿಗಳು ತಮ್ಮ ಸ್ನೇಹಿತರ ಒತ್ತಾಯಕ್ಕೆ ಮಣಿದು ಅಥವಾ ಅನ್ಯ ಕಾರಣಗಳಿಂದ ಮಾದಕದ್ರವ್ಯಗಳ ಸೇವನೆಯನ್ನು ಆರಂಭಿಸುತ್ತಾರೆ. ಕಾಲಕ್ರಮೇಣ ಇವುಗಳ ಸೇವನೆಯ ವ್ಯಸನಕ್ಕೆ ಈಡಾಗಿ, ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳೊಂದಿಗೆ, ಸಾಕಷ್ಟು ಹಣದೊಂದಿಗೆ, ತಮ್ಮ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಕುಟುಂಬದ ಅನ್ಯ ಸದಸ್ಯರ ನೆಮ್ಮದಿಯನ್ನು ಕೆಡಿಸುವುದರೊಂದಿಗೆ, ಅವರ ಸಾಮಾಜಿಕ ಜೀವನಕ್ಕೂ ಅಡ್ಡಿ ಆತಂಕಗಳನ್ನು ತಂದೊಡ್ಡುತ್ತಾರೆ. ಅನೇಕ ವ್ಯಸನಿಗಳು ಗಂಭೀರ ಸ್ವರೂಪದ ಶಾರೀರಿಕ ಹಾಗೂ ಮಾನಸಿಕ ಕಾಯಿಲೆಗಳಿಗೆ ಈಡಾಗುತ್ತಾರೆ. ದೀರ್ಘಕಾಲೀನ ವ್ಯಸನಿಗಳು ಕಾರಣಾಂತರಗಳಿಂದ ಆತ್ಮಹತ್ಯೆಗೆ ಶರಣಾಗುವುದು ಕೂಡಾ ಅಪರೂಪವೇನಲ್ಲ.

ನಮ್ಮ ದೇಶದಲ್ಲಿ ಯುವಜನರು, ಹದಿಹರೆಯದವರಲ್ಲದೇ, ಶಾಲಾ ವಿದ್ಯಾರ್ಥಿಗಳೂ ಮಾದಕದ್ರವ್ಯ ಸೇವನೆಯ ಚಟವನ್ನು ಹೊಂದಿದ್ದಾರೆ. ಈ ವಿಚಾರದಲ್ಲಿ ದೇಶದ ಅನ್ಯ ರಾಜ್ಯಗಳಿಗೆ ಹೋಲಿಸಿದಾಗ, ಕರ್ನಾಟಕವೂ ಉನ್ನತ ಸ್ಥಾನದಲ್ಲಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸುಮಾರು ಎರಡು ವರ್ಷಗಳ ಹಿಂದೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳು ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬನನ್ನು ಬಂಧಿಸಿದ್ದು, ಈತನು “ ರೇವ್ ಪಾರ್ಟಿ “ ಗಳಿಗೆ ಮಾದಕದ್ರವ್ಯಗಳನ್ನು ಸರಬರಾಜು ಮಾಡುವುದರೊಂದಿಗೆ, ಸ್ವಯಂ ವ್ಯಸನಿಯೂ ಆಗಿದ್ದ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಈತನು ಸರಬರಾಜು ಮಾಡುತ್ತಿದ್ದ ದ್ರವ್ಯಗಳಲ್ಲಿ ಎಲ್ ಎಸ್ ಡಿ ಮತ್ತು ಎಂ ಡಿ ಎಂ ಎ ಎನ್ನುವ ಚಿತ್ತ ವಿಭ್ರಮೆ ಅಥವಾ ಭ್ರಾಂತಿಯನ್ನು ಮೂಡಿಸಬಲ್ಲ ಅಪಾಯಕಾರಿ ದ್ರವ್ಯಗಳು ಸೇರಿದ್ದವು. ಕೇಂದ್ರ ನರಮಂಡಲದ ಮೇಲೆ ತೀವ್ರಸ್ವರೂಪದ ದುಷ್ಪರಿಣಾಮಗಳನ್ನು ಬೀರಬಲ್ಲ ಈ ದ್ರವ್ಯಗಳು, ಸಿಜೋಫ್ರೆನಿಯಾದಂತಹ ಗಂಭೀರ ಮಾನಸಿಕ ವ್ಯಾಧಿಯಲ್ಲದೇ, ಹೃದಯಸ್ಥಂಭನ ಮತ್ತು ಮರಣಕ್ಕೂ ಕಾರಣವೆನಿಸಬಲ್ಲದು. ಇವೆಲ್ಲಾ ಮಾಹಿತಿಗಳನ್ನು ಅರಿತ ಬಳಿಕ ಮಾದಕದ್ರವ್ಯಗಳ ಸೇವನೆ ಅತ್ಯಂತ ಅಪಾಯಕಾರಿ ಎನ್ನುವುದು ಇದೀಗ ನಿಮಗೂ ಅರಿವಾಗಿರಲೇಬೇಕು. ಇದೇ ಕಾರಣದಿಂದಾಗಿ ಮಾದಕದ್ರವ್ಯಗಳ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ನೀವೂ ಕೈಜೋಡಿಸಲೇಬೇಕು.

ಕೊನೆಯ ಮಾತು

ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಮಾದಕದ್ರವ್ಯ ಸೇವನೆಯ ಚಟವನ್ನು ತಡೆಗಟ್ಟಲು ಯುನೈಟೆಡ್ ನೇಶನ್ಸ್ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗುವ ಮೂಲಕ ನಮ್ಮ ದೇಶದಲ್ಲೂ ವೃದ್ಧಿಸುತ್ತಿರುವ ಈ ಸಮಸ್ಯೆಯನ್ನು ತೊಡೆದುಹಾಕಲು ಪ್ರಯತ್ನಿಸಬೇಕಾಗಿದೆ. ಅಂತೆಯೇ ದೇಶದ ಯುವಜನತೆ ಇಂತಹ ವ್ಯಸನಗಳಿಗೆ ಬಲಿಯಾಗದಂತೆ ತಡೆಗಟ್ಟುವ ಹೊಣೆಗಾರಿಕೆ ನಮ್ಮ ನಿಮ್ಮೆಲ್ಲರ ಮೇಲಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು




Wednesday, June 14, 2017

WORLD BLOOD DONORS DAY - JUN 14


                                   ಜೂನ್ 14 : ವಿಶ್ವ ರಕ್ತದಾನಿಗಳ ದಿನ
                            ಜೀವದಾನ ಎನಿಸಬಲ್ಲ ರಕ್ತದಾನ

ಬಹುತೇಕ ಜನರು ಧೃಢವಾಗಿ ನಂಬಿರುವಂತೆ ಕಾರಣಾಂತರಗಳಿಂದ ಪ್ರಾಣಾಪಾಯದ .ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರ ಜೀವವನ್ನು ಕೇವಲ ವೈದ್ಯರು ಮಾತ್ರ ಉಳಿಸಬಲ್ಲರು ಎನ್ನುವುದು ನಿಜವಲ್ಲ. ಇಂತಹ ವ್ಯಕ್ತಿಗಳ ಜೀವವನ್ನು ಉಳಿಸಲು ನಿಮ್ಮಿಂದಲೂ ಸಾಧ್ಯ ಎನ್ನುವ ವಿಚಾರವು ಪ್ರಾಯಶಃ ನಿಮಗೂ ತಿಳಿದಿರಲಾರದು. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ವ್ಯಕ್ತಿಗಳ ಪ್ರಾಣವನ್ನು ಉಳಿಸಬಲ್ಲದು ಎನ್ನುವುದನ್ನು ಅರಿತಿರಿ. ಇದೇ ಉದ್ದೇಶಕ್ಕಾಗಿ ರಕ್ತದಾನ ಮಾಡಿ, ಈಗಲೇ ಮಾಡಿ ಮತ್ತು ಪದೇಪದೇ ಮಾಡುತ್ತಿರಿ.
-----------------------------------------------------------------------------------------------

ಆರೋಗ್ಯವಂತ ವ್ಯಕ್ತಿಯ ಶರೀರದಲ್ಲಿ ಸುಮಾರು ಐದರಿಂದ ಆರು ಲೀಟರ್ ಗಳಷ್ಟು ಪ್ರಮಾಣದ ರಕ್ತ ಇರುತ್ತದೆ. ಕೆಲವೊಂದು ಪೂರ್ವಯೋಜಿತ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹಾಗೂ ಪ್ರಸವದ ಸಂದರ್ಭದಲ್ಲಿ ಮತ್ತು ಕಾರಣಾಂತರಗಳಿಂದ  ರಕ್ತ ಅಥವಾ ರಕ್ತದಲ್ಲಿರುವ ಘಟಕಗಳ ಪ್ರಮಾಣವು ಕಡಿಮೆಯಾದಾಗ, ಮನುಷ್ಯನ ಆರೋಗ್ಯ ಹದಗೆಡುವ ಅಥವಾ ಪ್ರಾಣಕ್ಕೆ ಸಂಚಕಾರ ಸಂಭವಿಸುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ ತ್ವರಿತವಾಗಿ ಮತ್ತು ಸಂದರ್ಭೋಚಿತವಾಗಿ ಪೂರ್ಣ ರಕ್ತವನ್ನು ಅಥವಾ ರಕ್ತದ ಘಟಕಗಳನ್ನು ಮರುಪೂರಣ ಮಾಡುವ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರುಮಾಡಬಹುದಾಗಿದೆ. ಆದರೆ ಇಂತಹ ಸಂದರ್ಭಗಳಲ್ಲಿ ಅವಶ್ಯಕ ಪ್ರಮಾಣದ ಹಾಗೂ ಸುರಕ್ಷಿತ ರಕ್ತ ದೊರೆಯದೇ ಇದ್ದಲ್ಲಿ, ರೋಗಿಯು ಪ್ರಾಣಾಪಾಯಕ್ಕೆ ಈಡಾಗುವ ಹಾಗೂ ಮೃತಪಡುವ ಸಾಧ್ಯತೆಗಳು ಹೆಚ್ಚುತ್ತವೆ.

 ಪ್ರಸ್ತುತ ಜಾಗತಿಕ ಮಟ್ಟದಲ್ಲಿ ರಕ್ತದ ಬೇಡಿಕೆಯ ಪ್ರಮಾಣವು ಪೂರೈಕೆಯ ಪ್ರಮಾಣಕ್ಕಿಂತ ಸಾಕಷ್ಟು ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ವಾರ್ಷಿಕ 108 ಮಿಲಿಯನ್ ಯೂನಿಟ್ ರಕ್ತ ಸಂಗ್ರಹವಾಗುತ್ತಿದೆ. ಪ್ರತಿಯೊಂದು ದೇಶದ ಶೇ 1 ರಷ್ಟು ಪ್ರಜೆಗಳು ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಲ್ಲಿ, ಆಯಾ ದೇಶದ ರಕ್ತದ ಬೇಡಿಕೆಯನ್ನು ಸುಲಭದಲ್ಲೇ ಪೂರೈಸಬಹುದಾಗಿದೆ. ಜಗತ್ತಿನ 62 ರಾಷ್ಟ್ರಗಳು ತಮ್ಮ ಬೇಡಿಕೆಯ ಶೇ. 100 ರಷ್ಟು ರಕ್ತವನ್ನು ಸ್ವಯಂಪ್ರೇರಿತವಾಗಿ ಮತ್ತು ಫಲಾಪೇಕ್ಷೆಯಿಲ್ಲದೇ ನೀಡುವ ದಾನಿಗಳಿಂದ ಸಂಗ್ರಹಿಸುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳೂ 2020 ಕ್ಕೆ ಮುನ್ನ ಸ್ವಯಂಪ್ರೇರಿತ ದಾನಿಗಳಿಂದಲೇ ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ. ನೀವು 18 ರಿಂದ 60 ವಯಸ್ಸಿನವರಾಗಿದ್ದು ಆರೋಗ್ಯವಂತರಾಗಿದ್ದಲ್ಲಿ, ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ನಮ್ಮ ದೇಶದಲ್ಲಿ ಕಂಡುಬರುತ್ತಿರುವ ರಕ್ತದ ಕೊರತೆಯನ್ನು ನೀಗಿಸಬಹುದಾಗಿದೆ. ತತ್ಪರಿಣಾಮವಾಗಿ ಅಸಂಖ್ಯ ರೋಗಿಗಳ ಪ್ರಾಣ ಉಳಿಸುವುದರೊಂದಿಗೆ, ಒಂದಿಷ್ಟು ಪುಣ್ಯವನ್ನೂ ಗಳಿಸಬಹುದಾಗಿದೆ!.  

ವಿಶ್ವ ರಕ್ತದಾನಿಗಳ ದಿನ

ವಿಶ್ವ ರಕ್ತದಾನಿಗಳ ದಿನವನ್ನು ಜೂನ್   14, 2004 ರಂದು ಮೊತ್ತಮೊದಲಿಗೆ ಆಚರಿಸಲಾಗಿತ್ತು. ತದನಂತರ ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ ಇದನ್ನು ವರ್ಷಂಪ್ರತಿ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ, ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ, ರೆಡ್ ಕ್ರೆಸೆಂಟ್ ಸೊಸೈಟೀಸ್, ರಕ್ತದಾನಿಗಳ ಅಂತರ ರಾಷ್ಟ್ರೀಯ ಒಕ್ಕೂಟ ಮತ್ತು ಅಂತರ ರಾಷ್ಟ್ರೀಯ ರಕ್ತಪೂರಣ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ವಿಶ್ವಾದ್ಯಂತ ನಡೆಸಲಾಗುತ್ತದೆ.  ಈ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಅವಶ್ಯಕತೆ, ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳು ಮತ್ತು ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂಪ್ರೇರಿತ ರಕ್ತದಾನ ಮಾಡುವ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳೊಂದಿಗೆ ವಿಶೇಷ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಅಂತೆಯೇ ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಅಸಂಖ್ಯ ಜನರ ಪ್ರಾಣಗಳನ್ನು ಉಳಿಸಿರುವ ರಕ್ತದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಲಾಗುತ್ತದೆ.

ಕಾರ್ಲ್ ಲ್ಯಾಂಡ್ ಸ್ಟೈನರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಧುನಿಕ ರಕ್ತಪೂರಣ ವಿಧಾನದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಈ ವೈದ್ಯರು, 1901 ರಲ್ಲಿ ಮನುಷ್ಯನ ರಕ್ತದ ಎ, ಬಿ ಮತ್ತು ಓ ಗುಂಪುಗಳನ್ನು ಪತ್ತೆಹಚ್ಚಿದ ಮತ್ತು ಆಧುನಿಕ ಪದ್ದತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. 1937 ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಹ ಸಂಶೋಧಕರೊಂದಿಗೆ “ ರೀಸಸ್ ಫ್ಯಾಕ್ಟರ್ “ ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರಕ್ತವನ್ನು ಪಡೆಯುವ ರೋಗಿಗಳ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತವನ್ನು ಪೂರಣ ಮಾಡಲು ಇವರು ಕಾರಣಕರ್ತರೆನಿಸಿದ್ದರು.

ಈ ವೈದ್ಯರ ಅಸಾಧಾರಣ ಸಾಧನೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಲ್ಲಿಸಿದ್ದ ಕೊಡುಗೆಯನ್ನು ಪರಿಗಣಿಸಿ, ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ನಿಮಗಿದು ತಿಳಿದಿರಲಿ

ಪೂರ್ವಯೋಜಿತ ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರಕ್ತವು ಪ್ರಮುಖ ಸಾಧನ ಸಂಪತ್ತು ಎನಿಸುತ್ತದೆ. ಅಂತೆಯೇ ರಕ್ತವು ಗಂಬೀರ ಸ್ಥಿತಿಯಲ್ಲಿರುವ ವ್ಯಕ್ತಿಗಳ ಜೀವಿತಾವಧಿಯನ್ನು ವೃದ್ಧಿಸುವುದರೊಂದಿಗೆ, ಇವರ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದಲ್ಲದೇ ಶಸ್ತ್ರಚಿಕಿತ್ಸೆ ಹಾಗೂ ಸಂಕೀರ್ಣ ವೈದ್ಯಕೀಯ ಚಿಕಿತ್ಸೆಗಳಲ್ಲಿ ಅತ್ಯಂತ ಉಪಯುಕ್ತವೆನಿಸುತ್ತದೆ. ಇದಲ್ಲದೇ ಪ್ರಾಕೃತಿಕ ವಿಕೋಪ, ರಸ್ತೆ ಮತ್ತಿತರ ಅಪಘಾತಗಳು, ಭಯೋತ್ಪಾದಕ ಕೃತ್ಯಗಳು ಮತ್ತು ಯುದ್ಧ ಇತ್ಯಾದಿ ಸಂದರ್ಭಗಳಲ್ಲಿ ರಕ್ತವು ಜೀವರಕ್ಷಕ ಎನಿಸುತ್ತದೆ. ಆದರೆ ಇಂತಹ ಪರಿಸ್ಥಿತಿಗಳನ್ನು ವೈದ್ಯರು ಸಮರ್ಥವಾಗಿ ನಿಭಾಯಿಸಲು ಸುರಕ್ಷಿತ ಹಾಗೂ ಅವಶ್ಯಕ ಪ್ರಮಾಣದ ರಕ್ತದ ಪೂರೈಕೆ ಅನಿವಾರ್ಯವೆನಿಸುತ್ತದೆ. ಇದಕ್ಕಾಗಿ ಸರ್ಕಾರಿ ಮತ್ತು ಸ್ವಯಂಸೇವಾ ಸಂಘಟನೆಗಳು ನಡೆಸುವ ರಕ್ತನಿಧಿ ( ಬ್ಲಡ್ ಬ್ಯಾಂಕ್ ) ಗಳಲ್ಲಿ ಅವಶ್ಯಕ ಸೌಲಭ್ಯಗಳೊಂದಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂಪ್ರೇರಿತ ರಕ್ತದಾನ ಮಾಡುವ ದಾನಿಗಳ ಸಹಕಾರದ ಅವಶ್ಯಕತೆಯಿದೆ. ಆರೋಗ್ಯವಂತ ವ್ಯಕ್ತಿಯೊಬ್ಬನು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ. ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಅನೇಕ ಜನರ ಪ್ರಾಣಗಳನ್ನು ಉಳಿಸುವುದರೊಂದಿಗೆ, ಇಂತಹ ದಾನಿಗಳು ತಮ್ಮ ವೈಯುಕ್ತಿಕ ಆರೋಗ್ಯದ ಮಟ್ಟವನ್ನೂ ಉನ್ನತಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.

ಬೇಡಿಕೆ – ಪೂರೈಕೆ

ಭಾರತದ ಜನಸಂಖ್ಯೆಯು 125 ಕೋಟಿಯನ್ನು ಮೀರಿದ್ದು, ದೇಶದಲ್ಲಿ ರಕ್ತದ ಬೇಡಿಕೆಯ ಪ್ರಮಾಣವು ವಾರ್ಷಿಕ ಸುಮಾರು 5 ಕೋಟಿ ಯೂನಿಟ್ ಆಗಿದೆ. ಆದರೆ ರಕ್ತದ ಪೂರೈಕೆಯ ಪ್ರಮಾಣವು ಕೇವಲ ೨. ೫ ಕೋಟಿ ಯೂನಿಟ್ ಎಂದಲ್ಲಿ ನೀವೂ ನಂಬಲಾರಿರಿ. ಇದಕ್ಕೂ ಮಿಗಿಲಾಗಿ ಸೂಕ್ತ ಸಮಯದಲ್ಲಿ ಸುರಕ್ಷಿತ ಮತ್ತು ಅವಶ್ಯಕ ಪ್ರಮಾಣದ ರಕ್ತ ಲಭ್ಯವಾಗದ ಕಾರಣದಿಂದಾಗಿ ಅನೇಕ ರೋಗಿಗಳು ಮೃತಪಡುತ್ತಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸಬೇಕಿದ್ದಲ್ಲಿ ನಮ್ಮ ದೇಶದ ಯುವಜನತೆ ನಿಯಮಿತವಾಗಿ ಹಾಗೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕಿದೆ. ಅರ್ಥಾತ್, ಈ ವರ್ಷದ ವಿಶ್ವ ರಕ್ತದಾನಿಗಳ ದಿನದ ಘೋಷ ವಾಕ್ಯವಾದ “ ರಕ್ತದಾನ ಮಾಡಿ, ಈಗಲೇ ಮಾಡಿ, ಪದೇಪದೇ ಮಾಡಿ “ ಎನ್ನುವುದನ್ನು ಅಕ್ಷರಶಃ ಪರಿಪಾಲಿಸಬೇಕಿದೆ.

ಡಾ. ಸಿ. ನಿತ್ಯಾನಂದ ಪೈ,
ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು





                  

Thursday, March 2, 2017

ROAD SAFETY WEEK - NEW RULES


                      ವರ್ಷವಿಡೀ ನಡೆಯುತ್ತಿರಲಿ ರಸ್ತೆ ಸುರಕ್ಷಾ ಸಪ್ತಾಹ


ನಮ್ಮ ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸಲು ಉಪಯುಕ್ತವೆನಿಸಬಲ್ಲ ನೂರಾರು ಕಾನೂನು ಮತ್ತು ನೀತಿನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿವೆ. ಆದರೆ ಇವುಗಳನ್ನು ಅನುಷ್ಠಾನಗೊಳಿಸುವಲ್ಲಿ ತತ್ಸಂಬಂಧಿತ ಅಧಿಕಾರಿಗಳು ವಿಫಲರಾಗಿರುವುದು ನಿಮಗೂ ತಿಳಿದಿರಲೇಬೇಕು. ರಸ್ತೆ ಸುರಕ್ಷಾ ಸಪ್ತಾಹದ ಆಚರಣೆಯು ಇದಕ್ಕೊಂದು ಉತ್ತಮ ಉದಾಹರಣೆ ಎನಿಸುತ್ತದೆ. ಈ ಸಪ್ತಾಹದ ಸಂದರ್ಭದಲ್ಲಿ ಸಾರಿಗೆ ಇಲಾಖೆ  ಮತ್ತು ಸಂಚಾರಿ ಆರಕ್ಷಕರು ತೋರುವ ಕ್ರಿಯಾಶೀಲತೆಯನ್ನು ಇನ್ನುಳಿದ ದಿನಗಳಲ್ಲೂ ತೋರಿದಲ್ಲಿ, ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳು ಹಾಗೂ ಶಾಶ್ವತ ಅಂಗವೈಕಲ್ಯಕ್ಕೆ ಈಡಾಗುವವರು ಮತ್ತು ಇವುಗಳಿಗೆ  ಬಲಿಯಾಗುವವರ ಸಂಖ್ಯೆ ನಿಶ್ಚಿತವಾಗಿಯೂ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

ರಸ್ತೆ ಸುರಕ್ಷಾ ಸಪ್ತಾಹ

ಕಳೆದ ೨೮ ವರ್ಷಗಳಿಂದ ನಮ್ಮ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಜನವರಿ ತಿಂಗಳಿನಲ್ಲಿ ರಸ್ತೆ ಸುರಕ್ಷಾ ಸಪ್ತಾಹವನ್ನು ಆಚರಿಸಲಾಗುತ್ತಿದೆ, ಈ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಆರಕ್ಷಕರು, ಸಾರಿಗೆ ಇಲಾಖೆಗಳೊಂದಿಗೆ, ಅನೇಕ ಸ್ವಯಂಸೇವಾ ಸಂಘಟನೆಗಳು ಭಾಗಿಯಾಗುತ್ತವೆ. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸುಮಾರು ಮೂರು ದಶಕಗಳಿಂದ ಈ ಕಾರ್ಯಕ್ರಮ ಜರಗುತ್ತಿದ್ದರೂ, ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ಅಪಘಾತಗಳು ಮತ್ತು ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ನಮ್ಮ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ.

ರಸ್ತೆ ಸುರಕ್ಷಾ ಸಪ್ತಾಹದ ಸಂದರ್ಭದಲ್ಲಿ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಬ್ಯಾನರ್ ಗಳನ್ನೂ ಅಳವಡಿಸುವ ಹಾಗೂ ಕರಪತ್ರಗಳನ್ನು ಮುದ್ರಿಸಿ ಹಂಚುವ ಮೂಲಕ ರಸ್ತೆ ಸುರಕ್ಷತೆಯ ಬಗ್ಗೆ ಅರಿವನ್ನು ಮೂಡಿಸಲಾಗುವುದಾದರೂ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನುಷ್ಠಾನಿಸಬೇಕಾದ ಅನೇಕ ವಿಚಾರಗಳನ್ನು ಅನುಕೂಲಕರವಾಗಿ ಮರೆತುಬಿಡಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನಿತ ಗಣ್ಯರು, ಅದರಲ್ಲೂ ರಾಜಕೀಯ ನೇತಾರರು  ಸಾಮಾನ್ಯವಾಗಿ ಸಾರಿಗೆ ನಿಯಮಗಳನ್ನು ಪರಿಪಾಲಿಸಬೇಕಾದ ಮತ್ತು ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸುವ, ಅಪಘಾತಗಳನ್ನು ತಡೆಗಟ್ಟುವ ಮತ್ತು ಇದರಿಂದಾಗಿ ಸಂಭವಿಸುತ್ತಿರುವ ಮರಣಗಳ ಪ್ರಮಾಣವನ್ನು ನಿಯಂತ್ರಿಸುವ ಬಗ್ಗೆ ಭಾಷಣಗಳನ್ನು ಬಿಗಿಯುತ್ತಾರೆ. ಆದರೆ ತಾವು ಸರ್ಕಾರಿ ವಾಹನಗಳಲ್ಲಿ ಸಂಚರಿಸುವಾಗ ಇವೆಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತಾರೆ ಎನ್ನುವುದು ದೇಶದ ಪ್ರಜೆಗಳಿಗೆ ತಿಳಿಯದ ವಿಚಾರವೇನಲ್ಲ.

ರಸ್ತೆ ಅಪಘಾತಗಳ ರಾಜಧಾನಿ

ಭಾರತವು ವಿಶ್ವದ ರಸ್ತೆ ಅಪಘಾತಗಳ ರಾಜಧಾನಿ ಎನಿಸಿದ್ದ ಚೀನಾ ದೇಶವನ್ನು ಪದಚ್ಯುತಗೊಳಿಸಿ, ಅಗ್ರಸ್ಥಾನವನ್ನು ಅಲಂಕರಿಸಿ ಕೆಲವರ್ಷಗಳೇ ಕಳೆದಿವೆ. ಇದಕ್ಕೆ ಸಾಕಷ್ಟು ಸಮರ್ಥನೀಯ ಕಾರಣಗಳೂ ಇವೆ. ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ಅತ್ಯಧಿಕವಾಗಿರುವುದರೊಂದಿಗೆ, ಇವುಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯೂ ಅತ್ಯಧಿಕವಾಗಿರುವುದು ಪ್ರಮುಖ ಕಾರಣವೆನಿಸಿದೆ. ೨೦೧೪ ರ ಅಂಕಿ ಅಂಶಗಳಂತೆ ನಮ್ಮ ದೇಶದಲ್ಲಿ ಪ್ರತಿ ಗಂಟೆಗೆ ೨೦ ಕ್ಕೂ ಅಧಿಕ ಜನರು ರಸ್ತೆ ಅಪಘಾತಗಳಿಂದ ಮೃತಪಡುತ್ತಾರೆ. ಅರ್ಥಾತ್, ಒಂದು ವರ್ಷದಲ್ಲಿ ಸುಮಾರು ೧,೪೦,೦೦೦ ಜನರು ರಸ್ತೆ ಅಪಘಾತಗಳಲ್ಲಿ ಮೃತಪಡುವುದರೊಂದಿಗೆ, ಇದಕ್ಕೂ ಅಧಿಕ ಸಂಖ್ಯೆಯ ಜನರು ಶಾಶ್ವತ ಅಂಗವೈಕಲ್ಯಗಳಿಗೆ ಈಡಾಗುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದರಂತೆ ಭಾರತದಲ್ಲಿ ಸಂಭವಿಸುವ ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಮರಣದ ಪ್ರಮಾಣವು ಶೇ. ೨ ಕ್ಕೂ ಅಧಿಕವಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕವೆನಿಸಿದೆ. ಇದೇ ವರದಿಯಲ್ಲಿ ಉಲ್ಲೇಖಿಸಿರುವಂತೆ, ನಮ್ಮ ದೇಶದಲ್ಲಿ ಕೇವಲ ಶೇ. ೫೦ ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದಲ್ಲಿ, ಶೇ. ೧೦ ರಷ್ಟು ಲಘು ವಾಹನಗಳ ಸವಾರರು ಸೀಟ್ ಬೆಲ್ಟ್ ಧರಿಸುತ್ತಾರೆ!. ರಸ್ತೆ ಅಪಘಾತಗಳಲ್ಲಿ ಮರಣದ ಪ್ರಮಾಣವು ಹೆಚ್ಚಲು ಇದೊಂದು ಪ್ರಮುಖ ಕಾರಣವೂ ಹೌದು.

ಅಂತೆಯೇ,  ಅತಿವೇಗದ ಚಾಲನೆ, ಮದ್ಯ ಅಥವಾ ಅನ್ಯ ಅಮಲು ಪದಾರ್ಥ ಸೇವಿಸಿವಾಹನ ಚಲಾಯಿಸುವುದು, ವಾಹನ ಚಾಲನೆಯಲ್ಲಿ ಪರಿಣತಿ ಇಲ್ಲದಿದ್ದರೂ ವಾಹನ ಚಲಾಯಿಸುವುದು, ಸಾರಿಗೆ ನಿಯಮಗಳನ್ನು ಉಲ್ಲಂಘಿಸುವುದು, ದ್ವಿಚಕ್ರ ವಾಹನದಲ್ಲಿ ಮೂರು ಅಥವಾ ನಾಲ್ಕು ಮಂದಿ ಪ್ರಯಾಣಿಸುವುದು, ಇತರ ವರ್ಗದ ವಾಹನಗಳಲ್ಲೂ ನಿಗದಿತ ಸಂಖ್ಯೆಗಿಂತ ಅಧಿಕ ಜನರನ್ನು ತುಂಬಿಸುವುದು, ಸರಕು ಸಾಗಾಟದ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವುದು, ಕಣ್ಣು ಕೋರೈಸುವ ದೀಪಗಳನ್ನು ಬೆಳಗಿಸಿ ವಾಹನ ಚಲಾಯಿಸುವುದು, ದುಸ್ಥಿತಿಯಲ್ಲಿರುವ ರಸ್ತೆಗಳು, ಅಲೆಮಾರಿ ಜಾನುವಾರುಗಳ ಹಾವಳಿ, ವೃತ್ತಿಪರ ಚಾಲಕರು ಸಾಕಷ್ಟು ವಿಶ್ರಾಂತಿ ಪಡೆಯದೇ ವಾಹನ ಚಲಾಯಿಸುವುದು, ಯಾವುದೇ ಸೂಚನೆಯನ್ನು ನೀಡದೆ ಥಟ್ಟನೇ ವಾಹನಗಳನ್ನು ನಿಲ್ಲಿಸುವುದು ಅಥವಾ ತಿರುಗಿಸುವುದು, ದೃಷ್ಠಿದೋಷವಿರುವ ಚಾಲಕರು ಇದನ್ನು ಸರಿಪಡಿಸಿಕೊಳ್ಳದೇ ವಾಹನ ಚಲಾಯಿಸುವುದು ಮತ್ತು ಅನಿಯಂತ್ರಿತವಾಗಿ ಹೆಚ್ಚುತ್ತಲೇ ಇರುವ ವಾಹನಗಳ ಸಂಖ್ಯೆಗಳಿಂದಾಗಿ, ರಸ್ತೆ ಅಪಘಾತಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ನಿಯಂತ್ರಿಸುವುದೆಂತು?

ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಚಾಲಕರನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸುವುದು, ಪ್ರತಿಯೊಂದು ನಗರ ಹಾಗೂ ಪಟ್ಟಣಗಳಲ್ಲಿನ ಸಂಚಾರಿ ಆರಕ್ಷಕರಿಂದ ವರ್ಷವಿಡೀ ನಿಯಮಿತವಾಗಿ ವಾಹನಗಳ ಮತ್ತು ಇವುಗಳ ಚಾಲಕರ ದಾಖಲೆಗಳನ್ನು ತಪಾಸಣೆಯನ್ನು ಮಾಡಿಸುವ ಮೂಲಕ, ಪರವಾನಿಗೆ ಇಲ್ಲದೇ ಅಥವಾ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವ ಚಾಲಕರನ್ನು ಪತ್ತೆಹಚ್ಚಿ ಸೂಕ್ತ ಕಾನೂನುಕ್ರಮ ಜರಗಿಸಬೇಕು. ಗಂಭೀರ ಸ್ವರೂಪದ ಮತ್ತು ಸಾವುನೋವುಗಳಿಗೆ ಕಾರಣವೆನಿಸುವ ಅಪಘಾತಗಳ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ನಡೆಸಿ, ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಇದೇ ರೀತಿಯಲ್ಲಿ ಅಪಘಾತ ಮತ್ತು ಅಮಾಯಕರ ಅಕಾಲಿಕ ಮರಣಗಳಿಗೆ ಕಾರಣವೆನಿಸುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಅತಿವೇಗದ ಚಾಲನೆ, ಅವೈಜ್ಞಾನಿಕ ರಸ್ತೆ ಉಬ್ಬುಗಳು, ಅಪ್ರಾಪ್ತರು ವಾಹನ ಚಲಾಯಿಸುವುದು, ರಸ್ತೆಗಳ ದುಸ್ಥಿತಿ ಮತ್ತಿತರ ಸಮಸ್ಯೆಗಳನ್ನು ಪರಿಹರಿಸುವುದೇ ಮುಂತಾದ ಕ್ರಮಗಳನ್ನು ತತ್ಸಂಬಂಧಿತ ಇಲಾಖೆಗಳು ಕೈಗೊಳ್ಳಬೇಕು. ಇದರೊಂದಿಗೆ  ಪ್ರತಿಯೊಬ್ಬ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ತಪ್ಪದೆ ಪರಿಪಾಲಿಸಿದಲ್ಲಿ, ಭಾರತವನ್ನು ರಸ್ತೆ ಅಪಘಾತಗಳ ರಾಜಧಾನಿ  ಎನ್ನುವ ಪಟ್ಟದಿಂದ ಕೆಳಗಿಳಿಸುವುದು ಅಸಾಧ್ಯವೇನಲ್ಲ.

ತಾಜಾ ಸುದ್ದಿ

ಈ ಲೇಖನವನ್ನು ಬರೆದು ಮುಗಿಸುವಷ್ಟರಲ್ಲಿ ವಾಟ್ಸಾಪ್            ನಲ್ಲಿ ಬಂದ ಸಂದೇಶದಂತೆ, ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ನಿಯಮಗಳು ಈ ಕೆಳಗಿನಂತಿವೆ.

ಫೆಬ್ರವರಿ ೨೧ ರಂದು ರಾಜ್ಯ ಸಭೆಯು ಮೋಟಾರು ವಾಹನಗಳ ( ತಿದ್ದುಪಡಿ ) ಕಾಯಿದೆ ೨೦೧೬ ನ್ನು ಅಂಗೀಕರಿಸಿದ್ದು, ಇದು ಇದೇ ತಿಂಗಳಿನ ೧ ನೇ ತಾರೀಕಿನಿಂದ ಜಾರಿಗೊಂಡಿದೆ. ನೂತನ ನಿಯಮಗಳಂತೆ ವಾಹನವನ್ನು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸದಿದ್ದಲ್ಲಿ ರೂ ೧೦೦೦, ವಾಹನದ ವಿಮಾ ದಾಖಲೆ ಇಲ್ಲದಿದ್ದಲ್ಲಿ ರೂ ೧,೫೦೦, ನೋಂದಣಿ ಮತ್ತು ಅನ್ಯ ದಾಖಲೆಗಳು ಇಲ್ಲದಿದ್ದಲ್ಲಿ ರೂ ೫,೦೦೦ ಹಾಗೂ ವಾಹನವನ್ನು ಮುಟ್ಟುಗೋಲು ಹಾಕುವುದುಮತ್ತು ಚಾಲನಾ ಪರವಾನಿಗೆ ಇಲ್ಲದಿದ್ದಲ್ಲಿ ರೂ ೧೦,೦೦೦ ದಂಡವನ್ನು ವಿಧಿಸಲಾಗುವುದು.ವಾಹನವನ್ನು ಚಲಾಯಿಸುವಾಗ  ಮೊಬೈಲ್ ಬಳಸಿದಲ್ಲಿ ರೂ ೫೦೦೦, ಮದ್ಯ ಸೇವಿಸಿ ವಾಹನ ಚಲಾಯಿಸಿದಲ್ಲಿ ರೂ ೨೫,೦೦೦ ಹಾಗೂ ಇದನ್ನು ಮೂರುಬಾರಿ ಪುನರಾವರ್ತಿಸಿದಲ್ಲಿ ವಾಹನ ಚಾಲನಾ ಪರವಾನಿಗೆ ಮುಟ್ಟುಗೋಲು ಹಾಕುವುದು ಮತ್ತು ವಾಹನದ ಪ್ರದೂಷಣೆಯ ಪ್ರಮಾಣ ಪತ್ರ ಇರದಿದ್ದಲ್ಲಿ ರೂ ೧,೫೦೦ ದಂಡವನ್ನು ತೆರಬೇಕಾಗುವುದು. ಇಂತಹ ತಪ್ಪುಗಳನ್ನು ಮೂರುಬಾರಿ ಪುನರಾವರ್ತಿಸಿದಲ್ಲಿ ವಾಹನ ಚಾಲನಾ ಪರವಾನಿಗೆಯನ್ನು ರದ್ದುಪಡಿಸುವಂತಹ  ಕಠಿಣ ಕ್ರಮಗಳನ್ನು ಕೈಗೊಳ್ಳಲು ನೂತನ ತಿದ್ದುಪಡಿಯಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಆದರೆ ಈ ಕಾನೂನು ಮತ್ತು ನಿಯಮಗಳನ್ನು ತತ್ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಜಾರಿಗೊಳಿಸದೇ ಇದ್ದಲ್ಲಿ, ಕೇಂದ್ರ ಸರ್ಕಾರದ ಈ ನಡೆಯು ನಿಷ್ಪ್ರಯೋಜಕವೆನಿಸಲಿದೆ. ಇಷ್ಟು ಮಾತ್ರವಲ್ಲ, ರಸ್ತೆ ಅಪಘಾತಗಳು ಮತ್ತು ಇವುಗಳಿಂದಾಗಿ ಶಾಶ್ವತ ಅಂಗವೈಕಲ್ಯ ಅಥವಾ ಮರಣಕ್ಕೆ ಈಡಾಗುವವರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು