Saturday, June 27, 2015

JULY 1 - NATIONAL DOCTORS DAY


                          ಜುಲೈ ೧ : ವಿಶ್ವ ವೈದ್ಯರ ದಿನಾಚರಣೆ 

                        ಸರ್ವೇ ಜನಾ ಸುಖಿನೋಭವಂತು


ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಆಚರಿಸಲ್ಪಡುವ ವಿಶೇಷ ದಿನಗಳಲ್ಲಿ " ವಿಶ್ವ ವೈದ್ಯರ ದಿನ " ವೂ ಒಂದಾಗಿದೆ. ಜನಸಾಮಾನ್ಯರ ಆರೋಗ್ಯವನ್ನು ರಕ್ಷಿಸುವ, ಅನಾರೋಗ್ಯಪೀಡಿತರಾದಾಗ ಸೂಕ್ತ ಚಿಕಿತ್ಸೆಯನ್ನು ನೀಡಿ ಗುಣಪಡಿಸುವ ಮತ್ತು ರೋಗಿಗಳಿಗೆ ಸಾಂತ್ವನ ನೀಡುವ ಸಲುವಾಗಿ ಹಗಲಿರುಳು ಶ್ರಮಿಸುವ  ವೈದ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಇದನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಡಾ.ಬಿ.ಸಿ.ರಾಯ್ ಇವರ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
---------------------------------------------------------------------------------------------
ಆರೋಗ್ಯವೇ ಭಾಗ್ಯ

ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆ ಮತ್ತು ಅಧ್ಯಯನಗಳ ಫಲವಾಗಿ ಭಾರತೀಯರ ಆರೋಗ್ಯದ ಮಟ್ಟವು ತೃಪ್ತಿಕರವಾಗಿದ್ದು, ಸರಾಸರಿ ಆಯುಷ್ಯದ ಪ್ರಮಾಣವೂ ಹೆಚ್ಚಿದೆ. ಆದರೆ ಇದೇ ಸಂದರ್ಭದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ, ವಾಯು - ಜಲಮಾಲಿನ್ಯ, ಪರಿಸರ ಪ್ರದೂಷಣೆ, ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ಹಾಗೂ ಅಪಾಯಕಾರಿ ತ್ಯಾಜ್ಯಗಳ ಪ್ರಮಾಣ, ಸೇವಿಸುತ್ತಿರುವ ಕಲುಷಿತ ಹಾಗೂ ಕೀಟನಾಶಕಗಳಿಂದ ಸಮೃದ್ಧವಾಗಿರುವ ಆಹಾರ, ನಿರುಪಯುಕ್ತ ( ಜಂಕ್ ಫುಡ್ ) ಹಾಗೂ ಸಂಸ್ಕರಿತ ಆಹಾರಗಳ ಅತಿ ಸೇವನೆ, ಆಧುನಿಕ - ಆರಾಮದಾಯಕ ಜೀವನ ಶೈಲಿ, ನಿಷ್ಕ್ರಿಯತೆ,ಮದ್ಯ -  ಮಾದಕ ದ್ರವ್ಯಗಳ ಸೇವನೆ, ಸ್ವಾಭಾವಿಕ ರೋಗನಿರೋಧಕ ಶಕ್ತಿ ಕುಂಠಿತಗೊಂಡಿರುವುದು, ಅನುವಂಶಿಕತೆಯೇ ಮುಂತಾದ ಕಾರಣಗಳಿಂದಾಗಿ, ಭಾರತೀಯರನ್ನು ಪೀಡಿಸುತ್ತಿರುವ ವೈವಿಧ್ಯಮಯ ಕಾಯಿಲೆಗಳ ಬಾಧೆಯು ನಿಧಾನವಾಗಿ ಆದರೆ ನಿಶ್ಚಿತವಾಗಿಯೂ ಹೆಚ್ಚುತ್ತಿದೆ. ವಿಶೇಷವೆಂದರೆ ಇವೆಲ್ಲಾ ಸಮಸ್ಯೆಗಳಿಗೆ ಕಾರಣಕರ್ತರು ನಾವೇ ಎನ್ನುವುದು ವಿಷಾದನೀಯ.

ಹದಿಹರೆಯದಲ್ಲೇ ಪ್ರತ್ಯಕ್ಷವಾಗುವ ವ್ಯಾಧಿಗಳು

ಕಳೆದ ಒಂದೆರಡು ದಶಕಗಳಿಂದ ಮನುಷ್ಯನನ್ನು ಪೀಡಿಸುವ ಹಾಗೂ ಸಾಂಕ್ರಾಮಿಕವಾಗಿ ಹರಡದ ಮತ್ತು ಹರಡಬಲ್ಲ ಕಾಯಿಲೆಗಳ ಪ್ರಮಾಣವು ದಿನೇದಿನೇ ಹೆಚ್ಚುತ್ತಿವೆ. ಸಾಂಕ್ರಾಮಿಕವಾಗಿ ಹರಡದ ಕಾಯಿಲೆಗಳಲ್ಲಿ ಮಧುಮೇಹ, ಅಧಿಕ ರಕ್ತದ ಒತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ಸೇರಿದಂತೆ ಹಲವಾರು ಗಂಭೀರ ವ್ಯಾಧಿಗಳ ಸಂಭಾವ್ಯತೆ ಹೆಚ್ಚುತ್ತಿದೆ. ಅಂತೆಯೇ ಹಿಂದೆ ಮಧ್ಯ ವಯಸ್ಸು ಕಳೆದ ಬಳಿಕ ಉದ್ಭವಿಸುತ್ತಿದ್ದ ಇಂತಹ ವ್ಯಾಧಿಗಳು, ಇದೀಗ ಹದಿಹರೆಯ ಅಥವಾ ಯಾವ್ವನಸ್ತರಲ್ಲೇ ಪತ್ತೆಯಾಗುತ್ತಿವೆ. ಇನ್ನು ಪರಸ್ಪರ ಹರಡಬಲ್ಲ ಸಾಂಕ್ರಾಮಿಕ ಕಾಯಿಲೆಗಳು ಕೆಲವೇ ಗಂಟೆಗಳಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹರಡುತ್ತಿವೆ. ಸೂಕ್ತ ಹಾಗೂ ನಿಶ್ಚಿತ ಚಿಕಿತ್ಸೆ ಲಭ್ಯವಿರುವ ಕಾಯಿಲೆಗಳನ್ನು ನಿಯಂತ್ರಿಸುವ ಅಥವಾ ಗುಣಪಡಿಸುವ ಸಾಧ್ಯತೆಗಳಿದ್ದು, ಚಿಕಿತ್ಸೆ ಲಭ್ಯವಿಲ್ಲದ ಕೆಲ ಕಾಯಿಲೆಗಳು ಉಲ್ಬಣಿಸಿ ರೋಗಿಗಳ ಮರಣದಲ್ಲಿ ಪರ್ಯವಸಾನವಾಗುವುದು ಅಪರೂಪವೇನಲ್ಲ.

ಮನುಷ್ಯರನ್ನು ಪೀಡಿಸುವ ಬಹುತೇಕ ಕಾಯಿಲೆಗಳನ್ನು ಖಚಿತವಾಗಿ ಗುಣಪಡಿಸಬಲ್ಲ ಔಷದಗಳು ಲಭ್ಯವಿದೆ.ಜೊತೆಗೆ ಸೂಕ್ತ ಹಾಗೂ ನಿಶ್ಚಿತ ಪರಿಹಾರವಿಲ್ಲದ ಅನೇಕ ಕಾಯಿಲೆಗಳನ್ನು ಖಚಿತವಾಗಿ ನಿಯಂತ್ರಿಸಬಲ್ಲ ಔಷದಗಳು ಲಭ್ಯವಿದೆ. ಅಂತೆಯೇ ಕೆಲ ವ್ಯಾಧಿಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದೆ. ಇನ್ನು ಕೆಲವಿಧದ ಕಾಯಿಲೆಗಳನ್ನು ತಡೆಗಟ್ಟಬಲ್ಲ ಲಸಿಕೆಗಳು ಅಥವಾ ಗುಣಪಡಿಸಬಲ್ಲ ಔಷದಗಳು ಲಭ್ಯವಿಲ್ಲದಿರುವುದರಿಂದ, ಇಂತಹ ವ್ಯಾಧಿಪೀಡಿತರು ಸೂಕ್ತ ಚಿಕಿತ್ಸೆಯ ಅಭಾವ ಮತ್ತು ಅನ್ಯ ಕಾರಣಗಳಿಂದಾಗಿ ಮೃತಪಡುವ ಸಾಧ್ಯತೆಗಳೂ ಇವೆ.

ಪರಿಸರ ಪ್ರದೂಷಣೆ

ಮನುಷ್ಯರ ಆರೋಗ್ಯ ಮತ್ತು ಪರಿಸರಗಳಿಗೆ ಅವಿನಾಭಾವ ಸಂಬಂಧವಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಉದ್ದಿಮೆ - ಕೈಗಾರಿಕೆಗಳು ಮತ್ತು ವಿದ್ಯುತ್ ಉತ್ಪಾದನಾ ಘಟಕಗಳು, ನಾವಿಂದು ಅತಿಯಾಗಿ ಹಾಗೂ ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ತ್ಯಾಜಗಳು ಹಾಗೂ ಇತರ ಕೆಲ ಕಾರಣಗಳಿಂದಾಗಿ ಸಂಭವಿಸುತ್ತಿರುವ ಪರಿಸರ ಮಾಲಿನ್ಯದ ಪರಿಣಾಮವಾಗಿ, ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಹವಾಮಾನದ ವೈಪರೀತ್ಯಗಳಂತಹ ಗಂಭೀರ ಸಮಸ್ಯೆಗಳು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತವೆ. ತತ್ಪರಿಣಾಮವಾಗಿ ಉದ್ಭವಿಸುವ ಸಮಸ್ಯೆಗಳು ದೇಶದ ಪ್ರಜೆಗಳ ಆರೋಗ್ಯ ಹಾಗೂ ಆದಾಯಗಳೊಂದಿಗೆ, ದೇಶದ ಆರ್ಥಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತಿವೆ.

ಮಾನಸಿಕ ಒತ್ತಡ

ಇವೆಲ್ಲಕ್ಕೂ ಮಿಗಿಲಾಗಿ ಬದಲಾಗುತ್ತಿರುವ ನಮ್ಮ ಜೀವನಶೈಲಿಯ ಪರಿಣಾಮವಾಗಿ  ವೃದ್ಧಿಸುತ್ತಿರುವ ಮಾನಸಿಕ ಒತ್ತಡಗಳು ನಮ್ಮ ಆರೋಗ್ಯವನ್ನು ಏರುಪೇರು ಮಾಡುವಲ್ಲಿ ಯಶಸ್ವಿಯಾಗಿವೆ. ವಿಶೇಷವೆಂದರೆ ಪುಟ್ಟ ಮಕ್ಕಳೂ ಇದಕ್ಕೆ ಅಪವಾದವೆನಿಸಿಲ್ಲ. ಈ ವಿಲಕ್ಷಣ ಸಮಸ್ಯೆಗೆ ಇಂದಿನ ಸ್ಪರ್ಧಾತ್ಮಕ ಯುಗವೇ ಕಾರಣ ಎಂದಲ್ಲಿ ತಪ್ಪೆನಿಸಲಾರದು. ಅತಿಯಾದ ಮಾನಸಿಕ ಒತ್ತಡವು ಕೇವಲ ಮಾನಸಿಕ ಸಮಸ್ಯೆಗಳಷ್ಟೇ ಅಲ್ಲ, ಶಾರೀರಿಕ ಆರೋಗ್ಯದ ಮೇಲೂ ತೀವ್ರ ಸ್ವರೂಪದ ದುಷ್ಪರಿಣಾಮವನ್ನು ಬೀರಬಲ್ಲದು ಎಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು.

ಸ್ವಯಂ ಚಿಕಿತ್ಸೆ

ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಗಳ ಫಲವಾಗಿ ನಾವಿಂದು ಅಧಿಕತಮ ಕಾಯಿಲೆಗಳನ್ನು ನಿಖರವಾಗಿ ಪತ್ತೆಹಚ್ಚಬಲ್ಲ ವಿಧಾನ – ಪರೀಕ್ಷೆಗಳನ್ನು ಪತ್ತೆಹಚ್ಚಲಾಗಿದೆ. ಜೊತೆಗೆ ಅತ್ಯಂತ ಪರಿಣಾಮಕಾರಿ ಹಾಗೂ ವಿನೂತನ ಔಷದಗಳನ್ನು ಸಂಶೋಧಿಸಲಾಗಿದೆ. ಆದರೆ ಇದೇ ಸಂದರ್ಭದಲ್ಲಿ ಹಲವಾರು ಅಪಾಯಕಾರಿ ರೋಗಾಣುಗಳು ಅನೇಕ ಔಷದಗಳಿಗೆ ಪ್ರತಿರೋಧ ಶಕ್ತಿಯನ್ನು ಗಳಿಸಲು ಯಶಸ್ವಿಯಾಗಿವೆ. ಈ ಸಮಸ್ಯೆಗೆ ಅನ್ಯ ಕೆಲ ಕಾರಣಗಳೊಂದಿಗೆ, ವೈದ್ಯರ ಸಲಹೆಯನ್ನೇ ಪಡೆಯದೇ ರೋಗಿಗಳು “ ಸ್ವಯಂ ಚಿಕಿತ್ಸೆ “ ಯ ಪ್ರಯೋಗದ ಮೂಲಕ ಸೇವಿಸುವ ಹಾಗೂ ಕೆಲ ಸಂದರ್ಭಗಳಲ್ಲಿ ವೈದ್ಯರೇ ನೀಡಬಹುದಾದ ಅನಾವಶ್ಯಕ ಔಷದ ಸೇವನೆಯೂ ಒಂದು ಪ್ರಮುಖ ಕಾರಣವೆನಿಸಿದೆ.

ದಾರಿತಪ್ಪಿಸುವ ಜಾಹೀರಾತುಗಳು

ದಿನನಿತ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವ ನೂರಾರು ಜಾಹೀರಾತುಗಳಲ್ಲಿ ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಹಲವಾರು ಉತ್ಪನ್ನಗಳ ಜಾಹೀರಾತುಗಳೂ ಪ್ರಸಾರವಾಗುತ್ತವೆ. ಇವುಗಳಲ್ಲಿ ದಾರಿತಪ್ಪಿಸುವ ಹಾಗೂ ವಿಸ್ಮಯಕಾರಿ ಪರಿಣಾಮವನ್ನು ನೀಡಬಲ್ಲ ಮತ್ತು ಆಕ್ಷೇಪಾರ್ಹ ಜಾಹೀರಾತುಗಳು ಸಾಕಷ್ಟಿವೆ. ಇಂತಹ ಉತ್ಪನ್ನಗಳ ತಯಾರಕರು ಸರ್ಕಾರವೇ ರೂಪಿಸಿರುವ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದರೂ, ತತ್ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಇವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದಾಗಿ ಅಮಾಯಕ ಜನರು ಈ ಉತ್ಪನ್ನಗಳನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಬಳಸುವ ಮೂಲಕ, ಸಾಕಷ್ಟು ಹಣದೊಂದಿಗೆ ತಮ್ಮ ಆರೋಗ್ಯವನ್ನೂ ಕಳೆದುಕೊಳ್ಳುತ್ತಾರೆ!. ಔಷದಗಳು ಹಾಗೂ ವಿಸ್ಮಯಕಾರಿ ಪರಿಹಾರಗಳ  ( ಆಕ್ಷೇಪಾರ್ಹ ಜಾಹೀರಾತುಗಳು ) ನಿಯಮ ೧೯೫೪ ರಂತೆ, ೫೦ ಕ್ಕೂ ಅಧಿಕ ವ್ಯಾಧಿಗಳು ಮತ್ತು ಆರೋಗ್ಯದ ಸಮಸ್ಯೆಗಳ ಬಗ್ಗೆ ಜಾಹೀರಾತುಗಳನ್ನು ಪ್ರಕಟಿಸುವಂತಿಲ್ಲ.ಆದರೂ ಈ ವರ್ಗಕ್ಕೆ ಸೇರಿದ ಹಾಗೂ ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳನ್ನು ಗುಣಪಡಿಸುವುದಾಗಿ ಪ್ರಕಟಿಸುವ ಘೋಷಿಸುವ ಅಸಂಖ್ಯ ಜಾಹೀರಾತುಗಳು ಇಂದಿಗೂ ಪ್ರಕಟವಾಗುತ್ತಿವೆ. ಆದರೆ ಈ ರೀತಿಯ ಜಾಹೀರಾತುಗಳನ್ನು ನೀಡುವವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ತತ್ಪರಿಣಾಮವಾಗಿ ಇಂತಹ ಜಾಹೀರಾತುಗಳ ಮೂಲಕ ಮಾರಾಟವಾಗುವ ಉತ್ಪನ್ನಗಳನ್ನು ಬಳಸಿ ತಮ್ಮ ಪ್ರಾಣವನ್ನೇ ಕಳೆದುಕೊಂಡವರ ಸಂಖ್ಯೆಯೂ ಕಡಿಮೆಯೇನಿಲ್ಲ.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ

ವೈದ್ಯಕೀಯ ವಿಜ್ಞಾನಿಗಳು – ಸಂಶೋಧಕರ ಅವಿರತ ಪ್ರಯತ್ನಗಳ ಫಲವಾಗಿ ರೋಗ ನಿದಾನ – ಚಿಕಿತ್ಸಾ ವಿಧಾನಗಳಲ್ಲಿ ನಾವಿಂದು ಅಸಾಧಾರಣ ಪ್ರಗತಿಯನ್ನು ಸಾಧಿಸಿರುವುದು ನಿಜ. ಆದರೆ ಇದೆ ಸಂದರ್ಭದಲ್ಲಿ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರ ಪ್ರದೂಷಣೆ, ಆಹಾರ – ವಿಹಾರಗಳಲ್ಲಿ ಪಾಶ್ಚಾತ್ಯರ ಅನುಕರಣೆ, ನಿಷ್ಕ್ರಿಯ ಜೀವನಶೈಲಿ, ಮಾನಸಿಕ ಒತ್ತಡಗಳು ಹಾಗೂ ದುಶ್ಚಟಗಳೇ ಮುಂತಾದ ಕಾರಣಗಳಿಂದಾಗಿ, ಗಂಭೀರ ಮತ್ತು ಮಾರಕ ಕಾಯಿಲೆಗಳ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಇವೆಲ್ಲಾ ಸಮಸ್ಯೆಗಳನ್ನು ನಿಯಂತ್ರಿಸುವ ಮಾರ್ಗೋಪಾಯಗಳು ಜನಸಾಮಾನ್ಯರಿಗೂ ತಿಳಿದಿವೆ. ಆದರೆ ಇದನ್ನು ಕಾರ್ಯರೂಪಕ್ಕೆ ತರಲು ಬೇಕಾದ ಇಚ್ಛಾಶಕ್ತಿಯ ಕೊರತೆ ನಮ್ಮಲ್ಲಿದೆ. ಇದೇ ಕಾರಣದಿಂದಾಗಿ “ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ “ ಎನ್ನುವ ಆಡುಮಾತಿನಂತೆ, ಆರೋಗ್ಯಕರ ಜೀವನಶೈಲಿಯ ಪರಿಪಾಲನೆ, ಸಮತೋಲಿತ ಹಾಗೂ ಪೌಷ್ಠಿಕ ಆಹಾರ ಸೇವನೆ,ದೈನಂದಿನ ವ್ಯಾಯಾಮ, ಮಾನಸಿಕ ಒತ್ತಡ ಹಾಗೂ ದುಶ್ಚಟಗಳಿಂದ ದೂರವಿರುವುದು, ಅನಾರೋಗ್ಯ ಬಾಧಿಸಿದಲ್ಲಿ ನಂಬಿಗಸ್ತ ವೈದ್ಯರ ಸಲಹೆ – ಚಿಕಿತ್ಸೆಗಳನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳುವುದು ಹಿತಕರವೆನಿಸುವುದು.  

ಡಾ. ಬಿ.ಸಿ. ರಾಯ್ ಜನ್ಮದಿನ

ಅಪ್ರತಿಮ ವೈದ್ಯ, ಸುಪ್ರಸಿದ್ಧ ಶಿಕ್ಷಣ ತಜ್ಞ ಮತ್ತು ಮಹಾನ್ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಡಾ. ಬಿ.ಸಿ. ರಾಯ್ ಇವರ ಜನ್ಮದಿನವನ್ನು ಭಾರತದಲ್ಲಿ “ ವೈದ್ಯರ ದಿನ “ ವನ್ನಾಗಿ ಆಚರಿಸಲಾಗುತ್ತಿದೆ. ಡಾ. ರಾಯ್ ಇವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ್ದ ಸೇವೆಯನ್ನು ಗುರುತಿಸಿದ್ದ ಭಾರತ ಸರ್ಕಾರವು ಇವರ ಜನ್ಮದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲು ೧೯೯೧ ರಲ್ಲಿ ನಿರ್ಧರಿಸಿತ್ತು.

೧೮೮೨ ರ ಜುಲೈ ೧ ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದ್ದ ಬಿದಾನ ಚಂದ್ರ ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ ಬಳಿಕ ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ೧೯೧೧ ರಲ್ಲಿ ಭಾರತಕ್ಕೆ ಮರಳಿದ ರಾಯ್, ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.

ಮಹಾತ್ಮಾ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಡಾ.ರಾಯ್,  ಸ್ವಾತಂತ್ರ್ಯ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ತದನಂತರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ೧೪ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರು. ರಾಜಕೀಯ, ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಡಾ. ರಾಯ್ ಇವರ ಮಹೋನ್ನತ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರವು, ೧೯೬೧ ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

೧೯೬೨ ರ ಜುಲೈ ೧ ರಂದು ಅರ್ಥಾತ್ ತಮ್ಮ ಜನ್ಮದಿನದಂದೆ ವಿಧಿವಶರಾಗಿದ್ದ ಡಾ.ರಾಯ್ ಸ್ಮರಣಾರ್ಥ, ವೈದ್ಯಕೀಯ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿರುವ ಭಾರತೀಯರಿಗೆ ರಾಷ್ಟ್ರಮಟ್ಟದ ಪುರಸ್ಕಾರವನ್ನು ನೀಡುವ ಸಂಪ್ರದಾಯವನ್ನು ೧೯೭೬ ರಲ್ಲಿ ಆರಂಭಿಸಿದ್ದು, ಇಂದಿಗೂ ಮುಂದುವರೆದಿದೆ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು





Thursday, June 25, 2015

JUNE 26 : INTERNATIONAL DAY AGAINST DRUG ABUSE


         ಜೂನ್ 26 : ವಿಶ್ವ ಮಾದಕದ್ರವ್ಯ ವಿರೋಧಿ ದಿನ  
      ಮಾದಕದ್ರವ್ಯಗಳ ವ್ಯಸನ : ನಿರರ್ಥಕವಾಗುವುದು ಜೀವನ
                     

ಕಳೆದ ಹಲವಾರು ದಶಕಗಳಿಂದ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಮಾದಕದ್ರವ್ಯಗಳ ಸೇವನೆಯ ಚಟ ದಿನೇದಿನೇ ಹೆಚ್ಚುತ್ತಿದೆ. ಈ ಅಪಾಯಕಾರಿ ವ್ಯಸನಕ್ಕೆ ಹದಿಹರೆಯದ ಮತ್ತು ಯುವಜನರು ಬಲಿಯಾಗುತ್ತಿರುವುದು ನಿಜಕ್ಕೂ ಗಾಬರಿಹುಟ್ಟಿಸುವಂತಿದೆ. ಈ ಸಮಸ್ಯೆಗೆ ಭಾರತವೂ ಅಪವಾದವೆನಿಸಿಲ್ಲ. ಅಂತೆಯೇ ಈ ಸಮಸ್ಯೆಗೆ ಬಡ, ಮಧ್ಯಮ ಆದಾಯದ ಮತ್ತು ಶ್ರೀಮಂತ ರಾಷ್ಟ್ರಗಳೆನ್ನುವ ಭೇದವೂ ಇಲ್ಲವೆಂದಲ್ಲಿ ನೀವೂ ನಂಬಲಾರಿರಿ. ಮಾದಕದ್ರವ್ಯಗಳ ಸೇವನೆಯ ಪರಿಣಾಮವಾಗಿ ಉದ್ಭವಿಸುತ್ತಿರುವ ವೈವಿಧ್ಯಮಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಯುನೈಟೆಡ್ ನೇಶನ್ಸ್ ಸಂಸ್ಥೆಯು, 1987 ರ ಡಿಸೆಂಬರ್ 7 ರಂದು ಜರಗಿದ್ದ ಅಧಿವೇಶನದಲ್ಲಿ ಪ್ರತಿವರ್ಷ ಜೂನ್ 26 ರಂದು ವಿಶ್ವ ಮಾದಕದ್ರವ್ಯ ವಿರೋಧಿ ದಿನವನ್ನಾಗಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ತನ್ಮೂಲಕ ಈ ಸಮಸ್ಯೆಯ ವಿರುದ್ಧ ಹೋರಾಟವನ್ನು ನಡೆಸುವ ನಿಟ್ಟಿನಲ್ಲಿ ವಿವಿಧ ದೇಶಗಳ ಸಹಕಾರದೊಂದಿಗೆ " ಮಾದಕದ್ರವ್ಯ ಮುಕ್ತ ಜಗತ್ತು " ಎನ್ನುವ ಧ್ಯೇಯವನ್ನು ಅನುಷ್ಠಾನಗೊಳಿಸಲು ನಿರ್ಧರಿಸಿತ್ತು. 1988 ರಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾದಕದ್ರವ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ " LETS DEVELOP OUR LIVES,OUR COMMUNITIES, OUR IDENTITIES WITHOUT DRUGS " ಎನ್ನುವ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ವಿಶೇಷವಾಗಿ ಯುವಜನರ ಜೀವನವನ್ನೇ ನಾಶಪಡಿಸುತ್ತಿರುವ ಮಾದಕದ್ರವ್ಯಗಳ ವಿರುದ್ಧ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಬೇಕಿದ್ದಲ್ಲಿ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಸರ್ಕಾರಗಳು ಮತ್ತು ಪ್ರತಿಯೊಬ್ಬ ಪ್ರಜೆಯ ಸಹಕಾರ ಅತ್ಯವಶ್ಯಕವೆನಿಸುವುದು.

ಸಂಘಟಿತ ಪ್ರಯತ್ನ  

ಮಾದಕದ್ರವ್ಯಗಳ ವಿರುದ್ಧ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತ ಪ್ರಯತ್ನಗಳು ನಡೆಯುತ್ತಿದ್ದರೂ, ಈ ಸಮಸ್ಯೆಯು ಅನಿಯಂತ್ರಿತವಾಗಿ ಮುಂದುವರೆಯುತ್ತಿದೆ. ತತ್ಪರಿಣಾಮವಾಗಿ ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಮತ್ತು ನೆಮ್ಮದಿಗಳೊಂದಿಗೆ ವಿವಿಧ ದೇಶಗಳ ಸುರಕ್ಷತೆ ಮತ್ತು ಸ್ವಾಯತ್ತತೆಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಬಹುತೇಕ ದೇಶಗಳ ಯುವಜನತೆಯನ್ನು ಶಾಪದೋಪಾದಿಯಲ್ಲಿ ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯ ವಿರುದ್ಧ ಹೋರಾಡಲು, ಪ್ರತಿಯೊಂದು ದೇಶಗಳ ಸರ್ಕಾರಗಳು ಆರ್ಥಿಕ ಮತ್ತು ರಾಜಕೀಯ ಬೆಂಬಲವನ್ನು ನೀಡುವ ಮೂಲಕ ಸಹಕರಿಸುವಂತೆ ಯುನೈಟೆಡ್ ನೇಶನ್ಸ್ ಸಂಸ್ಥೆಯು ಮನವಿ ಮಾಡಿದೆ.

ಹೆಚ್ಚುತ್ತಿರುವ ವ್ಯಸನಿಗಳು 

ಯುನೈಟೆಡ್ ನೇಶನ್ಸ್ ಸಂಸ್ಥೆಯ ಮಾಹಿತಿಯಂತೆ ಜಗತ್ತಿನ ಸುಮಾರು 200 ದಶಲಕ್ಷಕ್ಕೂ ಅಧಿಕ ಜನರು ವಿವಿಧ ರೀತಿಯ ಮಾದಕದ್ರವ್ಯಗಳ ದಾಸಾನುದಾಸರಾಗಿದ್ದಾರೆ. ಇವರಲ್ಲಿ 162 ದಶಲಕ್ಷ ಜನರು ಕೆನ್ನಬಿಸ್,ಮರಿಹುವಾನ, ಹಶೀಶ್ ಹಾಗೂ ಟಿ ಎಚ್ ಸಿ, 35 ದಶಲಕ್ಷ ಜನರು ಎ ಟಿ ಎಸ್, ಎಕ್ಸ್ಟಸಿ, ಮೇಥಾಆಮ್ಫಿಟಾಮೈನ್, 16 ದಶಲಕ್ಷ ವ್ಯಸನಿಗಳು ಒಪಿಯಂ,ಮಾರ್ಫಿನ್ ಮತ್ತು ಅಫೀಮಿನ ಕೃತಕ ಉತ್ಪನ್ನಗಳು ಮತ್ತು 13 ದಶಲಕ್ಷ ವ್ಯಸನಿಗಳು ಕೊಕೇನ್ ನಂತಹ ಮಾದಕದ್ರವ್ಯಗಳನ್ನು ಸೇವಿಸುತ್ತಿದ್ದಾರೆ. ಈ ಮಾದಕವ್ಯಸನಿಗಳು ತಮ್ಮ ದೈನಂದಿನ ಸೇವನೆಯ ಮಾದಕದ್ರವ್ಯಗಳಿಗೆ ಹಣದ ಅಭಾವವಿದ್ದಲ್ಲಿ, ಅಮಾಯಕರ ಮೇಲೆ ಹಲ್ಲೆ ನಡೆಸುವ, ಸುಲಿಗೆ ಮಾಡುವ ಹಾಗೂ ಅನೇಕ ಸಂದರ್ಭಗಳಲ್ಲಿ ಕೊಲೆಯಂತಹ ಪಾತಕಗಳನ್ನು ನಡೆಸಿದ ಉದಾಹರಣೆಗಳು ಸಾಕಷ್ಟಿವೆ.

ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸರಬರಾಜಾಗುವ ಮಾದಕದ್ರವ್ಯಗಳ ಕಳ್ಳಸಾಗಾಣಿಕೆಯು ನಮ್ಮ ನೆರೆಯ ಅಫ್ಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಬಾಂಗ್ಲಾ ದೇಶ್,ಭೂತಾನ ಮತ್ತು ಶ್ರೀಲಂಕಾ ದೇಶಗಳ ಮೂಲಕ ನಡೆಯುತ್ತಿದೆ. ಇಂತಹ ದ್ರವ್ಯಗಳಲ್ಲಿ ಆಫೀಮು, ಗಾಂಜಾ, ಚರಸ್, ಕೊಕೇನ್ ಗಳಂತಹ ದ್ರವ್ಯಗಳಲ್ಲದೇ, ವೈದ್ಯಕೀಯ ಕ್ಷೇತ್ರದಲ್ಲಿ ಬಳಸುವ ಕೆಲವಿಧದ ( ಮತ್ತೇರಿಸಬಲ್ಲ ) ಔಷದಗಳನ್ನೂ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ.

  ನಮ್ಮ ದೇಶದಲ್ಲಿ ಹದಿಹರೆಯದವರು, ಯುವಜನರಲ್ಲದೇ, ಶಾಲಾ ವಿದ್ಯಾರ್ಥಿಗಳು ಕೂಡಾ ಮಾದಕದ್ರವ್ಯ ಸೇವನೆಯ ಚಟವನ್ನು ಹೊಂದಿದ್ದಾರೆ. ಈ ವಿಚಾರದಲ್ಲಿ ದೇಶದ ಅನ್ಯ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ಅಗ್ರಸ್ಥಾನದಲ್ಲಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ನಿನ್ನೆಯ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯಂತೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳು ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬನನ್ನು ಬಂಧಿಸಿದ್ದು, ಆತನು “ ರೇವ್ ಪಾರ್ಟಿ “ ಗಳಿಗೆ ಮಾದಕದ್ರವ್ಯಗಳನ್ನು ಸರಬರಾಜು ಮಾಡುತ್ತಿದ್ದು ಸ್ವತಃ ವ್ಯಸನಿಯೂ ಆಗಿರುವ  ಪ್ರಕರಣ ಬಯಲಾಗಿದೆ. ವಿಶೇಷವೆಂದರೆ ಈತನು ಸರಬರಾಜು ಮಾಡುತ್ತಿದ್ದ ದ್ರವ್ಯಗಳಲ್ಲಿ ಎಲ್ ಎಸ್ ಡಿ ಮತ್ತು ಎಂ ಡಿ ಎಂ ಎ ಎನ್ನುವ ಚಿತ್ತವಿಭ್ರಮೆ ಅಥವಾ ಭ್ರಾಂತಿ ಮೂಡಿಸಬಲ್ಲ ಅಪಾಯಕಾರಿ ಮತ್ತು ಮಾರಕ ದ್ರವ್ಯಗಳು ಸೇರಿದ್ದವು. ಕೇಂದ್ರ ನರಮಂಡಲದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮ ಬೀರಬಲ್ಲ ಈ ದ್ರವ್ಯಗಳು, ಸಿಜೊಫ್ರೆನಿಯಾದಂತಹ ಗಂಭೀರ ಮಾನಸಿಕ ವ್ಯಾಧಿಯಲ್ಲದೇ ಹೃದಯ ಸ್ಥಂಭನ ಮತ್ತು ಮರಣಕ್ಕೂ ಕಾರಣವೆನಿಸಬಲ್ಲವು.


ಬಹುತೇಕ ವ್ಯಸನಿಗಳು ತಮ್ಮ ಸ್ನೇಹಿತರ ಒತ್ತಾಯಕ್ಕೆ ಮಣಿದು ಅಥವಾ ಅನ್ಯ ಕಾರಣಗಳಿಂದ ಮಾದಕದ್ರವ್ಯಗಳ ಸೇವನೆಯನ್ನು ಆರಂಭಿಸುತ್ತಾರೆ. ಕಾಲಕ್ರಮೇಣ ಇವುಗಳ ಸೇವನೆಯ ವ್ಯಸನಕ್ಕೆ ಈಡಾಗಿ, ತಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳೊಂದಿಗೆ, ಸಾಕಷ್ಟು ಹಣ ಮತ್ತು ಮರ್ಯಾದೆಗಳನ್ನೂ ಕಳೆದುಕೊಳ್ಳುತ್ತಾರೆ. ಜೊತೆಗೆ ತಮ್ಮ ಕುಟುಂಬದ ಅನ್ಯ ಸದಸ್ಯರ ನೆಮ್ಮದಿಯನ್ನು ಕೆಡಿಸುವುದರೊಂದಿಗೆ, ಅವರ ಸಾಮಾಜಿಕ ಜೀವನಕ್ಕೂ ಅಡ್ಡಿಆತಂಕಗಳನ್ನು ತಂದೊಡ್ಡುತ್ತಾರೆ. ದೀರ್ಘಕಾಲೀನ ವ್ಯಸನಿಗಳು ಕಾರಣಾಂತರಗಳಿಂದ ಆತ್ಮಹತ್ಯೆಗೂ ಶರಣಾಗುವುದು ಅಪರೂಪವೇನಲ್ಲ. ಮತ್ತೆ ಕೆಲವರು ಗಂಭೀರ ಸ್ವರೂಪದ ಶಾರೀರಕ ಅಥವಾ ಮಾನಸಿಕ ಕಾಯಿಲೆಗಳಿಗೆ ಬಲಿಯಾಗುತ್ತಾರೆ.

ಕೊನೆಯ ಮಾತು

ಅಂತರ ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಮಾದಕದ್ರವ್ಯಗಳ ಸೇವನೆಯ ಚಟವನ್ನು ತಡೆಗಟ್ಟಲು ಯುನೈಟೆಡ್ ನೇಶನ್ಸ್ ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗುವ ಮೂಲಕ, ನಮ್ಮ ದೇಶದಲ್ಲೂ ವೃದ್ಧಿಸುತ್ತಿರುವ ಈ ಸಮಸ್ಯೆಯನ್ನು ತೊಡೆದುಹಾಕಲು ನಾವಿಂದು ಪ್ರಯತ್ನಿಸಬೇಕಾಗಿದೆ. ಅಂತೆಯೇ ದೇಶದ ಯುವಜನತೆ ಇಂತಹ ವ್ಯಸನಗಳಿಗೆ ಬಲಿಯಾಗದಂತೆ ತಡೆಗಟ್ಟುವ ಹೊಣೆಗಾರಿಕೆ ನಮ್ಮನಿಮ್ಮೆಲ್ಲರ ಮೇಲಿದೆ. ಅಂತಿಮವಾಗಿ ಈ ವರ್ಷದ ಮಾದಕದ್ರವ್ಯ ವಿರೋಧಿ ದಿನಾಚರಣೆಯ ಘೋಷವಾಕ್ಯದಂತೆ, “ ನಮ್ಮ ಜೀವನ, ನಮ್ಮ ಸಮುದಾಯ, ನಮ್ಮ ವ್ಯಕ್ತಿತ್ವಗಳನ್ನು ಮಾದಕದ್ರವ್ಯ ರಹಿತವಾಗಿ ಅಭಿವೃದ್ಧಿಪಡಿಸೋಣ “ ಎನ್ನುವುದನ್ನು ಕಾರ್ಯಗತಗೊಳಿಸಲು ಶ್ರಮಿಸೋಣ.

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು





Monday, June 22, 2015

SAFE DISPOSAL OF DANGEROUS GARBAGE



ಅಪಾಯಕಾರಿ ತ್ಯಾಜ್ಯವಿಲೇವಾರಿಗೊಂದು ಸುಲಭದ ದಾರಿ!

ಇತ್ತೀಚೆಗಷ್ಟೇ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿಸಿದ್ದ ಹಾಗೂ ಮಾಧ್ಯಮಗಳಲ್ಲಿ ಬಹಳಷ್ಟು ಸುದ್ದಿಗಳಿಗೆ ಮೂಲವೆನಿಸಿದ್ದ " ಮ್ಯಾಗಿ ನೂಡಲ್ಸ್ " ಗಳನ್ನು ನೆಸ್ಲೆ ಸಂಸ್ಥೆಯು ಮಾರುಕಟ್ಟೆಯಿಂದ ಮರಳಿ ಪಡೆದಿತ್ತು. ತದನಂತರ ತಾನು ಮರಳಿ ಪಡೆದಿದ್ದ ಸುಮಾರು 27,420 ಟನ್ ಗಳಷ್ಟು ಪ್ರಮಾಣದ ಈ ಉತ್ಪನ್ನವನ್ನು ಐದು ಸಿಮೆಂಟ್ ತಯಾರಿಕಾ ಘಟಕಗಳ  ಕುಲುಮೆಗಳಲ್ಲಿ ದಹಿಸುವ ಮೂಲಕ ನಾಶಪಡಿಸಿತ್ತು. ಕರ್ನಾಟಕದ ಕಲಬುರ್ಗಿ ಸಮೀಪದ ವಾಡಿಯಲ್ಲಿನ ಘಟಕದಲ್ಲೂ 577ಟನ್ ಮ್ಯಾಗಿಯನ್ನು ದಹಿಸಲಾಗಿತ್ತು.

 ಮ್ಯಾಗಿಯನ್ನು ಮೆಚ್ಚಿ ಸವಿಯುತ್ತಿದ್ದವರಿಗೆ ಅಪಥ್ಯವೆನಿಸಿದ್ದ ಈ ನಡೆಯು, ಅಪಾಯಕಾರಿ ಘನಲೋಹವಾಗಿರುವ ಸೀಸ ಮತ್ತು ಅತಿಯಾದ ಪ್ರಮಾಣದಲ್ಲಿ ಪತ್ತೆಯಾಗಿದ್ದ ಮೊನೊ ಸೋಡಿಯಂ ಗ್ಲುಟಾಮೇಟ್ ಎನ್ನುವ ರುಚಿವರ್ಧಕ ಕೃತಕ ರಾಸಾಯನಿಕ ಮಿಶ್ರಿತ ಉತ್ಪನ್ನವನ್ನು ಸುರಕ್ಷಿತವಾಗಿ ನಾಶಪಡಿಸಲು ಯಶಸ್ವಿಯಾಗಿತ್ತು. ಇದೇ ವಿಧಾನವನ್ನು ಅನೇಕ ವಿಧದ ಅಪಾಯಕಾರಿ ತ್ಯಾಜ್ಯಗಳನ್ನು ವಿಲೇವಾರಿ ಆಡಲು ಬಳಸುವ ವಿಚಾರ ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಪಾಯಕಾರಿ ತ್ಯಾಜ್ಯಗಳು

ನಮ್ಮ ದೇಶದಲ್ಲಿ ಪ್ರತಿನಿತ್ಯ ಲಕ್ಷಾಂತರ ಟನ್ ತ್ಯಾಜ್ಯಗಳು ಉತ್ಪನ್ನವಾಗುತ್ತಿದ್ದು, ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಈ ವೈವಿಧ್ಯಮಯ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಸುರಕ್ಷಿತವಾಗಿ ವಿಲೇವಾರಿ ಮಾಡಬಲ್ಲ ವ್ಯವಸ್ಥೆಗಳ ಅಭಾವದಿಂದಾಗಿ ವಾಯು - ಜಲಮಾಲಿನ್ಯ, ಪರಿಸರ ಪ್ರದೂಷಣೆ ಮತ್ತು ಗಂಭೀರ ತೊಂದರೆಗಳಿಗೆ  ಕಾರಣವೆನಿಸಬಲ್ಲ ಆರೋಗ್ಯದ ಸಮಸ್ಯೆಗಳು ಹೆಚ್ಚುತ್ತಿವೆ.

ಸಾಮಾನ್ಯವಾಗಿ ದೇಶದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಸಂಗ್ರಹಿಸಿ ತ್ಯಾಜ್ಯವಿಲೇವಾರಿ ಘಟಕಗಳಿಗೆ ಸಾಗಿಸಿದ ಬಳಿಕ, ಇವುಗಳನ್ನು ಪ್ರತ್ಯೇಕಿಸಬೇಕಾಗುವುದು. ಬಳಿಕ ಪುನರ್ ಆವರ್ತನಗೊಳಿಸಲು ಅಸಾಧ್ಯವೆನಿಸುವ ತ್ಯಾಜ್ಯಗಳನ್ನು ಮಾತ್ರ ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ವಿಲೇವಾರಿ ಮಾಡಬೇಕಾಗುವುದು. ಪುನರ್ ಆವರ್ತನಗೊಳಿಸಬಹುದಾದ ತ್ಯಾಜ್ಯಗಳನ್ನು ತತ್ಸಂಬಂಧಿತ ಘಟಕಗಳಿಗೆ ರವಾನಿಸಬೇಕಾಗುವುದು. ಅಂತಿಮವಾಗಿ ಉಳಿದ ಅಪಾಯಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕ ಹಾಗೂ ಸುರಕ್ಷಿತ ವಿಧಾನಗಳಿಂದ ವಿಲೇವಾರಿ ಮಾಡಬೇಕೆಂದು ದೇಶದ ಸರ್ವೋಚ್ಛ ನ್ಯಾಯಾಲಯವು ಆದೇಶಿಸಿ ವರ್ಷಗಳೇ ಕಳೆದಿವೆ. ಆದರೆ ಬಹುತೇಕ ಸ್ಥಳೀಯ ಸಂಸ್ಥೆಗಳಿಗೆ ತ್ಯಾಜ್ಯ ಸಂಗ್ರಹ ಮತ್ತು ವಿವಿಧ ಹಂತಗಳ ವಿಲೇವಾರಿಗಳು ಕಬ್ಬಿಣದ ಕಡಲೆಯಾಗಿ ಪರಿಣಮಿಸಿವೆ!.

ವಿಶೇಷವೆಂದರೆ ಅಪಾಯಕಾರಿ ತ್ಯಾಜ್ಯಗಳೂ ಸೇರಿದಂತೆ ಅನೇಕ ವಿಧದ ತ್ಯಾಜ್ಯಗಳನ್ನು ವೈಜ್ಞಾನಿಕ ವಿಧಾನಗಳಿಂದ ಸುರಕ್ಷಿತವಾಗಿ ವಿಲೇವಾರಿ ಮಾಡಬಲ್ಲ ವ್ಯವಸ್ಥೆಯೊಂದನ್ನು ಅನೇಕ ಸಂಸ್ಥೆಗಳು ಹೊಂದಿದ್ದು, ಈ ವ್ಯವಸ್ಥೆಯು ದೇಶಾದ್ಯಂತ ಅನುಷ್ಠಾನಗೊಳಿಸಲು ಸರ್ಕಾರ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಕುಲುಮೆಗಳಿಗೆ ಇಂಧನ!

ನಮ್ಮ ದೇಶದಲ್ಲಿ ಉತ್ಪನ್ನವಾಗುತ್ತಿರುವ ಲಕ್ಷಾಂತರ ಟನ್ ತ್ಯಾಜ್ಯಗಳಲ್ಲಿ, ಗಣನೀಯ ಪ್ರಮಾಣದ ಅಪಾಯಕಾರಿ ಮತ್ತು ಇತರ ತ್ಯಾಜ್ಯಗಳನ್ನು ಸಿಮೆಂಟ್ ಮತ್ತು ಉಕ್ಕು ತಯಾರಿಕಾ ಘಟಕಗಳಲ್ಲಿನ ಕುಲುಮೆಗಳಲ್ಲಿ ಪರ್ಯಾಯ ಇಂಧನವನ್ನಾಗಿ ಬಳಸಲಾಗುತ್ತಿದೆ. ತನ್ಮೂಲಕ ಅಪಾಯಕಾರಿ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ತತ್ಪರಿಣಾಮವಾಗಿ ಈ ಘಟಕಗಳು ಇಂಧನಕ್ಕಾಗಿ ವ್ಯಯಿಸುತ್ತಿರುವ ಕೋಟ್ಯಂತರ ರೂಪಾಯಿಗಳನ್ನು ಉಳಿಸುವುದರೊಂದಿಗೆ, ಈ ತ್ಯಾಜ್ಯಗಳಿಂದ ಸಂಭವಿಸಬಲ್ಲ ಪರಿಸರ ಮಾಲಿನ್ಯವನ್ನೂ ಸುಲಭದಲ್ಲೇ ನಿಯಂತ್ರಿಸುತ್ತಿವೆ.

ಭಾರತದ ಖ್ಯಾತನಾಮ ಸಿಮೆಂಟ್ ತಯಾರಿಕಾ ಸಂಸ್ಥೆಯಾಗಿರುವ ಎ ಸಿ ಸಿ ಕಂಪೆನಿಯು ತನ್ನ ಸಿಮೆಂಟ್ ತಯಾರಿಕಾ ಘಟಕಗಳಲ್ಲಿನ ಕುಲುಮೆಗಳಲ್ಲಿ 23 ವಿಧದ ತ್ಯಾಜ್ಯಗಳನ್ನು ಪರ್ಯಾಯ ಇಂಧನವನ್ನಾಗಿ ಬಳಸುವ ಮೂಲಕ, 2009 ನೆ ಇಸವಿಯಲ್ಲಿ 40.77 ಕೋಟಿ ಮತ್ತು 2010 ರಲ್ಲಿ 47 ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿತ್ತು. ಇವುಗಳಲ್ಲಿ ನಿರುಪಯುಕ್ತ ಟಯರ್ ಗಳ ಚೂರುಗಳು, ಪ್ಲಾಸ್ಟಿಕ್ ತ್ಯಾಜ್ಯಗಳು, ಆಸಿಡ್ ಟಾರ್ ಮಡ್ಡಿ, ಇದ್ದಿಲು, ತ್ಯಾಜ್ಯ ತೈಲೋತ್ಪನ್ನಗಳಂತಹ 22,092 ಟನ್ ತ್ಯಾಜ್ಯಗಳನ್ನು ಉರುವಲಿನ ರೂಪದಲ್ಲಿ ಬಳಸಿತ್ತು!.

ನಿಜ ಹೇಳಬೇಕಿದ್ದಲ್ಲಿ ನಿರುಪಯುಕ್ತ ಪ್ಲಾಸ್ಟಿಕ್, ಟಯರ್,ತೈಲಗಳು ಹಾಗೂ ಪೆಟ್ರೋಲಿಯಂ ಸಂಸ್ಕರಣಾ ಘಟಕಗಳ ತ್ಯಾಜ್ಯಗಳು, ಪೈಂಟ್, ಬಳಸಿದ ಕಲ್ಲಿದ್ದಲು ಇವೇ ಮುಂತಾದ ಅಪಾಯಕಾರಿ ತ್ಯಾಜ್ಯಗಳನ್ನು ಕುಲುಮೆಗಳಲ್ಲಿ ಉರಿಸುವ ಮೂಲಕ ಹಸಿರು ಮನೆ ಅನಿಲಗಳ ಹೊರ ಸೂಸುವಿಕೆಯ ಪ್ರಮಾಣವನ್ನು ನಿಯಂತ್ರಿಸುವುದರೊಂದಿಗೆ, ಇಂತಹ ತ್ಯಾಜ್ಯಗಳನ್ನು ಸ್ಥಳೀಯ ಸಂಸ್ಥೆಗಳು ವಿಲೇವಾರಿ ಮಾಡಲು ಬಳಸುವ ಲ್ಯಾಂಡ್ ಫೈಲ್ ಸೈಟ್ ಗಳ ನಿರ್ಮಾಣ ಮತ್ತು ಅವಶ್ಯಕತೆಗಳನ್ನೂ ನಿಯಂತ್ರಿಸಬಹುದಾಗಿದೆ.

ಇದಲ್ಲದೇ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉಕ್ಕಿನ ಕಾರ್ಖಾನೆಗಳಲ್ಲಿನ ಕುಳುಮೆಗಳಲ್ಲಿ ಇಂಧನದ ರೂಪದಲ್ಲಿ ಬಳಸುವ ಮೂಲಕ ಸುರಕ್ಷಿತವಾಗಿ ದಹಿಸುವ ತಂತ್ರಜ್ಞಾನವನ್ನು, ಭಾರತೀಯ ಸಂಜಾತೆ ವೀಣಾ ಸಹಜವಾಲ್ ಎನ್ನುವ ವಿಜ್ಞಾನಿಯೊಬ್ಬರು ಕೆಲ ವರ್ಷಗಳ ಹಿಂದೆಯೇ ಕಂಡುಹುಡುಕಿದ್ದರು. ಈ ತಂತ್ರಜ್ಞಾನವನ್ನು ಜಗತ್ತಿನ ಸುಪ್ರಸಿದ್ಧ ಉಕ್ಕು ತಯಾರಿಕಾ ಘಟಕಗಳಲ್ಲಿ ಬಳಸಲಾಗುತ್ತಿದ್ದರೂ, ಭಾರತ ಉಕ್ಕು ತಯಾರಿಕಾ ಘಟಕಕಗಳಲ್ಲಿ ವ್ಯಾಪಕವಾಗಿ ಬಳಸುತ್ತಿಲ್ಲ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೂತನ ರಸ್ಯೆಗಳ ನಿರ್ಮಾಣದಲ್ಲಿ ಬಳಸುವ ತಂತ್ರಜ್ಞಾನ ನಮ್ಮಲ್ಲಿ ಲಭ್ಯವಿದೇ.ಇದರಿಂದ  ರಸ್ತೆಗಳ ನಿರ್ಮಾಣದ ವೆಚ್ಚಕಡಿಮೆಯಾಗುವುದರೊಂದಿಗೆ ಸುದೀರ್ಘಕಾಲ ಬಾಳ್ವಿಕೆ ಬರುವ ವಿಚಾರದ ಅರಿವಿದ್ದರೂ,ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ತಂತ್ರಜ್ಞಾನವನ್ನು ಕಡ್ಡಾಯವಾಗಿ ಬಳಸಲು ಆದೇಶಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ನಮ್ಮ ದೇಶದ ಜನಸಂಖ್ಯೆಯಂತೆಯೇ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಗುತ್ತಿಲ್ಲ. ತತ್ಪರಿಣಾಮವಾಗಿ ಹಳ್ಳಿಯಿಂದ ಆರಂಭಿಸಿ ದಿಲ್ಲಿಯ ತನಕ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ತ್ಯಾಜ್ಯಗಳ ರಾಶಿಗಳು  ಕಣ್ಮರೆಯಾಗುತ್ತಿಲ್ಲ!.

ಅದೇನೇ ಇರಲಿ, ಪ್ರಸ್ತುತ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸಿಮೆಂಟ್ ಮತ್ತು ಉಕ್ಕು ತಯಾರಿಕಾ ಘಟಕಗಳಲ್ಲಿನ ಕುಲುಮೆಗಳಲ್ಲಿ ನಿರುಪಯುಕ್ತ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಕಡ್ಡಾಯವಾಗಿ ದಹಿಸಲು ಹಾಗೂ ನೂತನವಾಗಿ ನಿರ್ಮಿಸುವ ಪ್ರತಿಯೊಂದು ರಸ್ತೆಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ನಿರ್ಮಿಸುವುದನ್ನು ಕಡ್ಡಾಯಗೊಳಿಸಲು  ಅವಶ್ಯಕವೆನಿಸುವ ಕಾನೂನುಗಳನ್ನು ಕೇಂದ್ರ ಸರ್ಕಾರವು ಆದ್ಯತೆಯ ಮೇರೆಗೆ ಜಾರಿಗೊಳಿಸಬೇಕಾಗಿದೆ. ತನ್ಮೂಲಕ ಸ್ಥಳೀಯ ಸಂಸ್ಥೆಗಳಿಗೆ ತಲೆನೋವಾಗಿರುವ ಹಾಗೂ ದೇಶದ ಪ್ರಜೆಗಳ ಆರೋಗ್ಯಕ್ಕೆ ಮಾರಕವೆನಿಸುತ್ತಿರುವ ಅಪಾಯಕಾರಿ ತ್ಯಾಜ್ಯಗಳ ಸುರಕ್ಷಿತ ವಿಲೇವಾರಿಗೆ ಆಸ್ಪದವನ್ನು ಕಲ್ಪಿಸಬೇಕಿದೆ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು




Tuesday, June 16, 2015

VIRAL FEVERS




ವೈರಾಣು ಜ್ವರ : ಚಿಕಿತ್ಸೆಯೊಂದಿಗೆ ವಿಶ್ರಾಂತಿಯೇ ಪರಿಹಾರ

ಪ್ರಸ್ತುತ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಡೆಂಗೆ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳೊಂದಿಗೆ, ಮಲೇರಿಯ, ಫ್ಲೂ ಜ್ವರ, ಸಾಮಾನ್ಯ ಶೀತ ಮತ್ತಿತರ ಕಾಯಿಲೆಗಳ ಹಾವಳಿ ಹೆಚ್ಚುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಅದರಲ್ಲೂ ಡೆಂಗೆ ಮತ್ತು ಚಿಕೂನ್ ಗುನ್ಯಾ ವ್ಯಾಧಿಗಳ ಬಗ್ಗೆ ಜನಸಾಮಾನ್ಯರು ಭಯಭೀತರಾಗಿರಲು, ಹಲವಾರು ರೋಗಿಗಳು ಈ ಕಾಯಿಲೆಗಳಿಗೆ ಬಲಿಯಾಗಿರುವುದೇ ಪ್ರಮುಖ ಕಾರಣವೆನಿಸಿದೆ. ತತ್ಪರಿಣಾಮವಾಗಿ ಕಿಂಚಿತ್ ಜ್ವರ ಬಾಧಿಸಿದೊಡನೆ ವೈದ್ಯರ ಬಳಿಗೆ ಧಾವಿಸುವ ರೋಗಿಗಳು, ತಮ್ಮ ರಕ್ತವನ್ನು ಪರೀಕ್ಷಿಸುವ ಅವಶ್ಯಕತೆಯ ಬಗ್ಗೆ ವೈದ್ಯರಿಗೆ ಸಲಹೆಯನ್ನು ನೀಡುತ್ತಿದ್ದಾರೆ!.

ಹವಾಮಾನದ ಬದಲಾವಣೆಯ ಪರಿಣಾಮ

ಸಾಮಾನ್ಯವಾಗಿ ಬೇಸಗೆಯ ಧಗೆಯ ಹೆಚ್ಚಿದಾಗ ಸುರಿಯುವ ಮುಂಗಾರುಪೂರ್ವ ಮಳೆಯು ಇಳೆಯನ್ನು ತುಸು ತಂಪಾಗಿಸುತ್ತದೆ. ಮುಂದಿನ ಕೆಲವೇ ದಿನಗಳಲ್ಲಿ ಆರಂಭವಾಗುವ ಮಳೆಗಾಲದ ಪರಿಣಾಮವಾಗಿ ವಾತಾವರಣವು ಇನ್ನಷ್ಟು  ತಂಪಾಗುತ್ತದೆ. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿ ಬಿಸಿಲುಮಳೆಗಳ ಕಣ್ಣುಮುಚ್ಚಾಲೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಉದ್ಭವಿಸುವ ಕೆಲ ವ್ಯಾಧಿಗಳಿಗೆ ಕಾರಣವೆನಿಸುವ ವೈರಸ್ ಗಳು, ಇಂತಹ ವಾತಾವರಣದಲ್ಲಿ ಕ್ಷಿಪ್ರಗತಿಯಲ್ಲಿ ವೃದ್ಧಿಸುತ್ತಾ ಹರಡುತ್ತವೆ. ಇದೇ ಸಂದರ್ಭದಲ್ಲಿ ಶಾಲಾಕಾಲೇಜುಗಳು ಆರಂಭವಾಗುವುದರಿಂದ, ಈ ವೈರಸ್ ಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಗಳು ಇನ್ನಷ್ಟು ಹೆಚ್ಚುತ್ತವೆ.

ವೈರಾಣುಗಳಿಂದ ಜ್ವರ

ಸಾಮಾನ್ಯವಾಗಿ ವೈರಸ್ ಗಳಿಂದ ತಲೆದೋರುವ ಜ್ವರವು ಸೌಮ್ಯ ರೂಪದಲ್ಲಿರುವುದು. ಆದರೆ ಕೆಲವೊಂದು ವೈರಾಣುಗಳಿಂದ ಉದ್ಭವಿಸುವ ಜ್ವರದಲ್ಲಿ, ರೋಗಿಯನ್ನು ಥರಥರ ನಡುಗಿಸುವಂತಹ ಚಳಿ ಕಂಡುಬರುತ್ತದೆ. ವ್ಯಾಧಿಯ ತೀವ್ರತೆ ಕೊಂಚ ಅಧಿಕವಾಗಿದ್ದಲ್ಲಿ, ಇಂತಹ ಚಳಿಜ್ವರವು ಎಂಟೆದೆಯ ಬಂಟರನ್ನೂ ಹಾಸಿಗೆ ಹಿಡಿಯುವಂತೆ ಮಾಡುತ್ತದೆ!. ಮಲೇರಿಯ, ಡೆಂಗೆ, ಚಿಕೂನ್ ಗುನ್ಯಾ, ಫ್ಲೂ ಜ್ವರ ಮುಂತಾದ ಕಾಯಿಲೆಗಳಲ್ಲಿ ಚಳಿಜ್ವರ ಕಂಡುಬರುವ ಸಾಧ್ಯತೆಗಳಿರುವುದರಿಂದ, ಬಹುತೇಕ ರೋಗಿಗಳು ಚಳಿಜ್ವರ ಬಾಧಿಸಿದೊಡನೆ ಗಾಬರಿಯಾಗುತ್ತಾರೆ.

ಜ್ವರ - ನೂರು ತರಹ

ಜ್ವರ ಕೇವಲ ಒಂದು ರೋಗ ಲಕ್ಷಣವಾಗಿದ್ದು, ನೂರಾರು ವ್ಯಾಧಿಗಳಲ್ಲಿ ಕಂಡುಬರುತ್ತದೆ. ಸಾಮಾನ್ಯ ಶೀತದಿಂದ ಆರಂಭಿಸಿ ಮಾರಕ ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲೂ ಜ್ವರ ಒಂದು ಲಕ್ಷಣವಾಗಿರುತ್ತದೆ. ಆದುದರಿಂದ ಆಕಸ್ಮಿಕವಾಗಿ ಜ್ವರ ಬಾಧಿಸಿದೊಡನೆ, ಇದು ಡೆಂಗೆ, ಚಿಕೂನ್ ಗುನ್ಯಾ ಅಥವಾ ಮತ್ಯಾವುದೋ ಕಾಯಿಲೆಯೆಂದು ಸ್ವಯಂ ನಿರ್ಧರಿಸದಿರಿ. ಕೇವಲ ಒಂದು ವಿಧದ ರಕ್ತ ಪರೀಕ್ಷೆಯಿಂದ ನಿಮ್ಮನ್ನು ಪೀಡಿಸುತ್ತಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆ ಹಚ್ಚುವುದು ಅಸಾಧ್ಯ ಎನ್ನುವುದನ್ನು ತಿಳಿದಿರಿ. ನಿಮ್ಮ ವೈದ್ಯರು ರೋಗಿಯನ್ನು ಪರೀಕ್ಷಿಸಿದ ಬಳಿಕ ಆತನಲ್ಲಿ ಕಂಡುಬರುವ ಲಕ್ಷಣಗಳ ಆಧಾರದ ಮೇಲೆ ವ್ಯಾಧಿಯನ್ನು ಪತ್ತೆಹಚ್ಚಲು ವಿಫಲರಾದಲ್ಲಿ, ತಮ್ಮ ಸಂದೇಹವನ್ನು ದೂರಮಾಡಲು ಸೂಚಿಸುವ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿ. ವಿವಿಧ ಕಾಯಿಲೆಗಳನ್ನು ಪತ್ತೆ ಹಚ್ಚಲು ವಿಭಿನ್ನ ಪರೀಕ್ಷೆಗಳು ಇರುವುದರಿಂದ, ವೈದ್ಯರು ಸೂಚಿಸದೇ ಪ್ರಯೋಗಾಲಕ್ಕೆ ತೆರಳಿ ನೀವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳದಿರಿ.

 ಇದೀಗ ಜೂನ್ ತಿಂಗಳಿನ ಮಧ್ಯಭಾಗದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೬೦೦ ಕ್ಕೂ ಅಧಿಕ ಡೆಂಗೆ ಮತ್ತು ೨೦೦ ಕ್ಕೂ ಅಧಿಕ ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು, ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಇವೆರಡೂ ವ್ಯಾಧಿಗಳನ್ನು ಖಚಿತವಾಗಿ ಗುಣಪಡಿಸಬಲ್ಲ ಔಷದಗಳು ಲಭ್ಯವಿಲ್ಲದಿರುವುದರಿಂದಾಗಿ ಹಾಗೂ ಅನಿರೀಕ್ಷಿತ ಅಥವಾ ಗಂಭೀರ ವೈದ್ಯಕೀಯ ಸಮಸ್ಯೆಗಳಿಂದ ಕೆಲ ರೋಗಿಗಳು ಮೃತಪಡುತ್ತಾರೆ.

ಸಾಮಾನ್ಯ ಶೀತ – ಫ್ಲೂ ಜ್ವರ

ಮಳೆಗಾಲ ಆರಂಭವಾದೊಡನೆ ಅಧಿಕತಮ ಜನರನ್ನು ಪೀಡಿಸುವ ಸಾಮಾನ್ಯ ಶೀತವು ಸಂದರ್ಭೋಚಿತವಾಗಿ ಉಲ್ಬಣಿಸಿದಲ್ಲಿ, ಚಳಿಜ್ವರ, ಕೆಮ್ಮು ಮತ್ತು ವಿಪರೀತ ತಲೆನೋವು ಕೂಡಾ ಬಾಧಿಸಬಹುದು.ಇದಕ್ಕೆ ಕಾರಣವೆನಿಸಬಲ್ಲ ವೈರಸ್ ಗಳಲ್ಲಿ ಸುಮಾರು ೨೫೦ ಕ್ಕೂ ಅಧಿಕ ಪ್ರಭೇದಗಳಿದ್ದು, ವಿಶೇಷವಾಗಿ ಮಕ್ಕಳಲ್ಲಿ ಒಂದುಬಾರಿ ಆರಂಭವಾದ ಶೀತ ಗುಣವಾದಂತೆಯೇ, ಮತ್ತೊಮ್ಮೆ ಬೇರೊಂದು ವೈರಸ್ ನಿಂದಾಗಿ ಪುನರಪಿ ಶೀತ ಬಾಧಿಸುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಫ್ಲೂ ಜ್ವರ ತಲೆದೋರಿದಲ್ಲಿ ಮೇಲಿನ ಲಕ್ಷಣಗಳೊಂದಿಗೆ ವಿಪರೀತ ಮೈಕೈ ನೋವು, ತಲೆನೋವು, ಗಂಟಲ ಕೆರೆತ, ಒಣಕೆಮ್ಮು  ಹಾಗೂ ಕಣ್ಣುಗಳು ಕೆಂಪಾಗಿ ಉರಿಯುವ ಅಥವಾ ನೀರು ಒಸರುವ ಸಮಸ್ಯೆಗಳು ಬಾಧಿಸಬಹುದು. ಫ್ಲೂ ಜ್ವರವನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳು ಲಭ್ಯವಿಲ್ಲದಿದ್ದರೂ, ಇದನ್ನು ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದೆ. ಆದರೆ ಈ ಲಸಿಕೆಯನ್ನು ಪದೇಪದೇ ತೆಗೆದುಕೊಳ್ಳಬೇಕಾಗುತ್ತದೆ.  ಮಳೆಗಾಲದ ದಿನಗಳಲ್ಲಿ ಮಾತ್ರವಲ್ಲ, ಚಳಿಗಾಲದಲ್ಲೂ ಕಂಡುಬರಬಹುದಾದಂತಹ ಇಂತಹ ಸಮಸ್ಯೆಗಳನ್ನು ನಿರ್ಲಕ್ಷಿಸದೇ, ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳೊಂದಿಗೆ ಸಂಪೂರ್ಣ ವಿಶ್ರಾಂತಿಯನ್ನು  ಪಡೆದುಕೊಳ್ಳುವುದು ಹಿತಕರವೆನಿಸುವುದು. ಅಂತೆಯೇ ಸ್ವಯಂ ಚಿಕಿತ್ಸೆಯ ಪ್ರಯೋಗಗಳು ಮತ್ತಷ್ಟು ಸಂಕಷ್ಟಗಳಿಗೆ ಕಾರಣವೆನಿಸಬಹುದು.

ನಿಮಗಿದು ತಿಳಿದಿರಲಿ

ವೈರಾಣುಗಳಿಂದ ಉದ್ಭವಿಸುವ ಜ್ವರಗಳೆಲ್ಲವೂ ಮಾರಣಾಂತಿಕ ಎನಿಸುವುದಿಲ್ಲ. ನೂರಾರು ವ್ಯಾಧಿಗಳ ಲಕ್ಷಣದ ರೂಪದಲ್ಲಿ ಪ್ರಕಟವಾಗುವ ಜ್ವರ, ನಿಜಕ್ಕೂ ಒಂದು ವ್ಯಾಧಿಯೇ ಅಲ್ಲ. ಸಾಮಾನ್ಯವಾಗಿ ವೈರಾಣುಗಳಿಂದ ಉದ್ಭವಿಸುವ ಜ್ವರವು ೩ ರಿಂದ ೭ ದಿನಗಳ ಕಾಲ ಬಾಧಿಸುವುದರಿಂದ, ಒಂದೆರಡು ದಿನಗಳ ಚಿಕಿತ್ಸೆಯಿಂದ ಜ್ವರ ಶಮನವಾಗಿಲ್ಲವೆಂದು ಪದೇಪದೇ ವೈದ್ಯರನ್ನು ಬದಲಾಯಿಸದಿರಿ.

ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಪ್ರಮಾಣದಲ್ಲಿ, ನಿಗದಿತ ಅವಧಿಗೆ ತಪ್ಪದೇ ಸೇವಿಸಿ. ಜೊತೆಗೆ ಧಾರಾಳ ದ್ರವಾಹಾರವನ್ನು ಸೇವಿಸಿ ವಿಶ್ರಾಂತಿಯನ್ನು ಪಡೆದಲ್ಲಿ, ಅಯಾಚಿತ ಸಮಸ್ಯೆಗಳನ್ನು ತಡೆಗಟ್ಟಬಹುದು ಎನ್ನುವುದನ್ನು ಮರೆಯದಿರಿ.

ತೀವ್ರ ಜ್ವರದೊಂದಿಗೆ ವಿಪರೀತ ಕೆಮ್ಮು,ಗಂಟಲು ನೋವು, ಅಸಹನೀಯ ತಲೆನೋವು, ವಾಂತಿ, ಭೇದಿ, ಅಪಸ್ಮಾರದಂತಹ ಸೆಳೆತಗಳು ಪ್ರತ್ಯಕ್ಷವಾದಲ್ಲಿ ಮತ್ತು ರೋಗಿಯು ಪ್ರಜ್ಞಾಹೀನನಾದಲ್ಲಿ, ತಕ್ಷಣ ಆಸ್ಪತ್ರೆಗೆ ದಾಖಲಿಸಿ ತಜ್ಞ ವೈದ್ಯರ ಸಲಹೆ – ಚಿಕಿತ್ಸೆಯನ್ನು ಕೊಡಿಸಿ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Saturday, June 13, 2015

JUNE 14 : WORLD BLOOD DONORS DAY



               ಜೂನ್ ೧೪ : ವಿಶ್ವ ರಕ್ತದಾನಿಗಳ ದಿನಾಚರಣೆ

ವಿಶ್ವದ  ಬಹುತೇಕ ರಾಷ್ಟ್ರಗಳಲ್ಲಿ ಜೂನ್ ೧೪ ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ " ನನ್ನ ಜೀವವನ್ನು ಉಳಿಸಿದಕ್ಕಾಗಿ ಧನ್ಯವಾದಗಳು " ಎನ್ನುವ ವಿಚಾರದೊಂದಿಗೆ," ಉಚಿತವಾಗಿ ನೀಡಿ, ಆಗಾಗ ನೀಡಿ. ರಕ್ತದಾನ ಮಹತ್ವಪೂರ್ಣ." ಎನ್ನುವ ಘೋಷಣೆಯೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.

ರಕ್ತದಾನ - ಜೀವದಾನ
ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಬೇಕೆಂದಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಮೂರು ಜೀವಗಳನ್ನು ಉಳಿಸಬಲ್ಲದು. ಜೊತೆಗೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ, ನಿಮ್ಮ ಆರೋಗ್ಯದ ಮಟ್ಟವೂ ಉನ್ನತಸ್ತರದಲ್ಲಿ ಇರುವುದು. ಇದಕ್ಕೂ ಮಿಗಿಲಾಗಿ ಹಲವಾರು ಜೀವಗಳನ್ನು ಉಳಿಸಿದ ಸಂತೃಪ್ತಿಯು ನಿಮ್ಮ ಮನಸ್ಸಿಗೆ ಮುದನೀಡುವುದು.

ರಕ್ತದ ಬೇಡಿಕೆ ಮತ್ತು ಪೂರೈಕೆ

ಜಾಗತಿಕ ಮಟ್ಟದಲ್ಲಿ ಪ್ರಾಣಾಪಾಯದ ಸ್ಥಿತಿಯಲ್ಲಿರುವ ರೋಗಿಗಳನ್ನು ಬದುಕಿಸಲು ಅತ್ಯವಶ್ಯಕವೆನಿಸುವ  ಸುರಕ್ಷಿತ ರಕ್ತ ಮತ್ತು ಇತರ ರಕ್ತದ ಉತ್ಪನ್ನಗಳ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಆದರೆ ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ರಕ್ತ ಮತ್ತು ರಕ್ತದ ಅನ್ಯ ಉತ್ಪನ್ನಗಳ ಪೂರೈಕೆ ಅಪೇಕ್ಷಿತ ಪ್ರಮಾಣದಲ್ಲಿ ಹೆಚ್ಚುತ್ತಿಲ್ಲ. ಅರ್ಥಾತ್ ಅಧಿಕತಮ ಆರೋಗ್ಯವಂತ ಯುವಕ - ಯುವತಿಯರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರುವುದಿಲ್ಲ!.

ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ ವಿಶ್ವ ರಕ್ತದಾನಿಗಳ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಜನಸಾಮಾನ್ಯರನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ಜೊತೆಗೆ ರಕ್ತದಾನದ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಮತ್ತು ಜನರ ಮನಸ್ಸಿನಲ್ಲಿ ಈ ಬಗ್ಗೆ ಇರಬಹುದಾದ ತಪ್ಪುಕಲ್ಪನೆಗಳನ್ನು ತೊಡೆದುಹಾಕುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ರಕ್ತದಾನಿಗಳ ದಿನ

ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ ವಿಶ್ವ ರಕ್ತದಾನಿಗಳ ದಿನವನ್ನು  ೨೦೦೪ ರ ಜೂನ್ ೧೪ ರಂದು ಆಚರಿಸಲಾಗಿತ್ತು. ರಕ್ತದ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಆಧುನಿಕ ರಕ್ತಪೂರಣ ಪದ್ಧತಿಯ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯ ವಿಜ್ಞಾನಿ, ೧೯೦೧ ರಲ್ಲಿ ರಕ್ತದ ಎ, ಬಿ, ಎಬಿ ಮತ್ತು ಓ ಗುಂಪುಗಳನ್ನು ಪತ್ತೆಹಚ್ಚಿದ ಮತ್ತು ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ ಮಾನವನ ರಕ್ತದಲ್ಲಿರುವ “ ರೀಸಸ್ ಫ್ಯಾಕ್ಟರ್ “ ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಗಳ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತದ ಮರುಪೂರಣವನ್ನು ನಡೆಸಲು ಇವರು ಕಾರಣಕರ್ತರೆನಿಸಿದ್ದರು. ಈ ಮಹಾನ್ ಸಂಶೋಧಕರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಯಾವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ದಿನದಂದು ವಿಶೇಷವಾಗಿ ಸ್ವಯಂಪ್ರೇರಿತ ರಕ್ತದಾನವನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮಗಳನ್ನು ಸ್ವಯಂಸೇವಾ ಸಂಘಟನೆಗಳು ಹಮ್ಮಿಕೊಳ್ಳುತ್ತವೆ. ತನ್ಮೂಲಕ ಇನ್ನಷ್ಟು ಜನರು ಈ ಮಹಾನ್ ಕಾರ್ಯದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತವೆ.

ರಕ್ತದಾನಕ್ಕೆ ಆದ್ಯತೆ

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಪ್ರತಿ ೧೦೦೦ ಜನರಲ್ಲಿ ಕನಿಷ್ಠ ೧೦ ವ್ಯಕ್ತಿಗಳು ಮಾಡುವ ರಕ್ತದಾನದ ಪ್ರಮಾಣ ತೃಪ್ತಿಕರವೆನಿಸುತ್ತದೆ. ಆದರೆ ೭೫ ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರಕ್ತದಾನದ ಪ್ರಮಾಣವು ಇದಕ್ಕೂ ಸಾಕಷ್ಟು ಕಡಿಮೆಯಿದೆ. ಈ ಕೊರತೆಯನ್ನು ನೀಗಿಸಲು ನಿಯಮಿತವಾಗಿ, ಸ್ವಯಂಪ್ರೇರಿತವಾಗಿ ಮತ್ತು ಉಚಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಪ್ರೋತ್ಸಾಹಿಸುವ ಮೂಲಕ ಸುರಕ್ಷಿತ ರಕ್ತದ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಈ ವಿಧಾನದ ಮೂಲಕ ರಕ್ತವನ್ನು ಸಂಗ್ರಹಿಸುವಂತೆ ಸಲಹೆಯನ್ನು ನೀಡಿದೆ.

ಜಾಗತಿಕ ಮಟ್ಟದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆಯು ಗತದಶಕದಲ್ಲಿ ಹೆಚ್ಚಾಗಿದ್ದು ,ಜಗತ್ತಿನ  ೭೩ ರಾಷ್ಟ್ರಗಳು ತಮ್ಮ ಅವಶ್ಯಕತೆಯ ಶೇ.೯೦ ರಷ್ಟು ರಕ್ತವನ್ನು ಇಂತಹ ದಾನಿಗಳಿಂದಲೇ ಸಂಗ್ರಹಿಸುತ್ತಿವೆ. ಆದರೆ ೧೬ ಅತ್ಯಧಿಕ ಆದಾಯವಿರುವ, ೪೮ ಮಧ್ಯಮ ಆದಾಯವಿರುವ ಮತ್ತು ೧೬ ಕನಿಷ್ಠ ಆದಾಯವಿರುವ ದೇಶಗಳು ಸೇರಿದಂತೆ ೭೨ ರಾಷ್ಟ್ರಗಳು  ಶೇ. ೫೦ ರಷ್ಟು ರಕ್ತವನ್ನು ಹಣವನ್ನು ಪಡೆದು ರಕ್ತವನ್ನು ನೀಡುವ ಅಥವಾ ತಾವು ನೀಡಿದ್ದ ರಕ್ತಕ್ಕೆ ಪ್ರತಿಯಾಗಿ ಬೇರೊಂದು ಗುಂಪಿನ ರಕ್ತವನ್ನು ಮರಳಿ ಪಡೆಯುವ ದಾನಿಗಳಿಂದಲೇ ಸಂಗ್ರಹಿಸುತ್ತಿವೆ!.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಇದೀಗ ಜಗತ್ತಿನ ಶೇ. ೬೦ ರಾಷ್ಟ್ರಗಳು ಅವಶ್ಯಕತೆಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ದಾನಿಗಳಿಂದ ಸಂಗ್ರಹಿಸುತ್ತಿವೆ. ಇನ್ನುಳಿದ ಶೇ.೪೦ ರಾಷ್ಟ್ರಗಳು ರೋಗಿಗಳ ಸಂಬಂಧಿಗಳನ್ನು ಅಥವಾ ಅನ್ಯ ಮೂಲಗಳನ್ನು  ಅವಲಂಬಿಸುತ್ತಿವೆ. ೨೦೨೦ ನೇ ಇಸವಿಗೆ ಮುನ್ನ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ತಮಗೆ ಬೇಕಾದಷ್ಟು ಪ್ರಮಾಣದ ರಕ್ತವನ್ನು ಉಚಿತವಾಗಿ ಮತ್ತು ಸ್ವಯಂಪ್ರೇರಿತವಾಗಿ ರಕ್ತವನ್ನು ನೀಡುವ ದಾನಿಗಳಿಂದಲೇ ಸಂಗ್ರಹಿಸಬೇಕೆನ್ನುವ  ಉದ್ದೇಶ ಮತ್ತು ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಹೊಂದಿದೆ. ಈ ಉದ್ದೇಶ ನೆರವೇರಲು ಮತ್ತು ನಿಗದಿತ ಗುರಿಯನ್ನು ಸಾಧಿಸಲು, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳು ಸ್ವಯಂಪ್ರೇರಿತ ರಕ್ತದಾನವನ್ನು ಮಾಡಬೇಕಿದೆ.

ರಕ್ತದಾನ – ಶ್ರೇಷ್ಠ ದಾನ

ಅನಾದಿಕಾಲದಿಂದಲೂ ಭಾರತದ ಹಿಂದೂ ಮತ್ತು ಅನ್ಯ ಕೆಲ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧ ರೀತಿಯ – ವಸ್ತುಗಳನ್ನು ದಾನವಾಗಿ ನೀಡುವ ಪದ್ಧತಿ ರೂಢಿಯಲ್ಲಿತ್ತು. ಅರ್ಹ ವ್ಯಕ್ತಿಗಳಿಗೆ ನೀಡುವ ದಾನಗಳಿಂದ ತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಕಿಂಚಿತ್ ಪುಣ್ಯವೂ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಗೆಯೂ ಇದಕ್ಕೆ ಕಾರಣವೆನಿಸಿತ್ತು. ಈ ನಂಬಿಗೆಯು ಇಂದಿಗೂ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿದವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವೇ ರಕ್ತದಾನ. ಅಕ್ಷರಶಃ “ ಜೀವದಾನ “ ಎನಿಸುವ ಈ ದಾನಕ್ಕೆ ಜಾತಿಮತಗಳ ಮತ್ತು ಬಡವ ಬಲ್ಲಿದರೆನ್ನುವ ಭೇದವಿಲ್ಲ.ಅಂತೆಯೇ ಈ ದಾನಕ್ಕೆ ಅನ್ಯ ಯಾವುದೇ ದಾನಗಳು ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ವಿಶ್ವ ರಕ್ತದಾನಿಗಳ ದಿನವನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ಮರಣೀಯವನ್ನಾಗಿಸಿ.

ನಿಮಗಿದು ತಿಳಿದಿರಲಿ

ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಅಪಘಾತ, ಹೆರಿಗೆ ಮತ್ತು ಅನ್ಯ ಕಾರಣಗಳಿಂದ ಸಂಭವಿಸುವ ಅತಿಯಾದ ರಕ್ತಸ್ರಾವಗಳಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ, ಸೂಕ್ತ ಸಮಯದಲ್ಲಿ ನಿರ್ದಿಷ್ಟ ಗುಂಪಿನ ಹಾಗೂ ಅವಶ್ಯಕ ಪ್ರಮಾಣದ ಸುರಕ್ಷಿತ ರಕ್ತ ಲಭ್ಯವಾಗದೇ ಸಹಸ್ರಾರು ಜನರು ಮೃತಪಡುತ್ತಾರೆ. ನಮ್ಮ ದೇಶವೂ ಈ ಸಮಸ್ಯೆಗೆ ಅಪವಾದವೆನಿಸಿಲ್ಲ. ಇದಲ್ಲದೇ ಅನೇಕರಿಗೆ ರಕ್ತದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಅನೇಕ ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಆದರೆ ಇತ್ತೀಚಿನ ಕೆಲವರ್ಷಗಳಿಂದ ಭಾರತದ ಹಲವಾರು ಸ್ವಯಂಸೇವಾ ಸಂಸ್ಥೆಗಳು ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ನಮ್ಮಲ್ಲಿ ಸ್ವಯಂಪ್ರೇರಿತ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

ನಿಮಗೆ ೧೮ ವರ್ಷ ತುಂಬಿದಂದಿನಿಂದ ೬೦ ವರ್ಷ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದಲ್ಲಿ, ೫೦೦ ಕ್ಕೂ ಅಧಿಕ ವ್ಯಕ್ತಿಗಳ ಪ್ರಾಣಗಳನ್ನು ಉಳಿಸಬಹುದಾಗಿದೆ. ಇದರೊಂದಿಗೆ ಸಾಕಷ್ಟು ಪುಣ್ಯ ಮತ್ತು ಮಾನಸಿಕ ನೆಮ್ಮದಿಯನ್ನೂ ಗಳಿಸಬಹುದಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು






Wednesday, June 10, 2015

DENGUE FEVER BACK WITH A BANG


            ಮತ್ತೆ ಮರುಕಳಿಸುತ್ತಿರುವ  " ಡೆಂಗೆ " ಜ್ವರ

ವೈದ್ಯಕೀಯ ಶಬ್ದಕೋಶದಲ್ಲಿ " ಡೆಂಗೆ " ಎಂದು ನಮೂದಿಸಿರುವ ಜ್ವರವೊಂದನ್ನು ಡೆಂಘಿ, ಡೆಂಘೆ ಅಥವಾ ಡೆಂಗ್ಯೂ ಎಂದು ಮುದ್ರಿಸಿ ಉಚ್ಚರಿಸುವುದನ್ನು ನೀವು ಕಂಡಿರಲೇಬೇಕು. ಸೊಳ್ಳೆಗಳಿಂದ ಹರಡುವ ಈ ವ್ಯಾಧಿಯನ್ನು ಯಾವುದೇ ರೀತಿಯಲ್ಲಿ ಉಚ್ಚರಿಸಿದರೂ, ಇದರ ರೋಗಲಕ್ಷಣಗಳು, ಅಪಾಯಕಾರಿ ಅಂಶಗಳು ಮತ್ತು ಮಾರಕತೆಗಳ ಪ್ರಮಾಣವು ಕಡಿಮೆಯಾಗದು. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇರಿಸುವ ಮೂಲಕ ಮತ್ತು ಸೊಳ್ಳೆಗಳ ಸಂತತಿಯನ್ನು ಸಂಪೂರ್ಣವಾಗಿ ನಾಶಗೊಳಿಸುವ ತನಕ, ಈ ವ್ಯಾಧಿಯ ಹಾವಳಿಯನ್ನು ನಿಯಂತ್ರಿಸುವುದು ಅಸಾಧ್ಯವೂ ಹೌದು.

ಹಿನ್ನೆಲೆ
ಸುಮಾರು ಆರೇಳು ವರ್ಷಗಳ ಹಿಂದೆ ನಮ್ಮ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳದ ಗಡಿಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಾ, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದ್ದ ಚಿಕೂನ್ ಗುನ್ಯಾ ಕಾಯಿಲೆಯೊಂದಿಗೆ ಡೆಂಗೆ ಜ್ವರದ ಹಲವಾರು ಪ್ರಕರಣಗಳು ಪತ್ತೆಯಾಗಿದ್ದವು. ಇವೆರಡೂ ವ್ಯಾಧಿಗಳು ಸೋಂಕು ಪೀಡಿತ ವ್ಯಕ್ತಿಗಳಿಗೆ ಕಚ್ಚಿದ್ದ ಸೊಳ್ಳೆಗಳಿಂದ ಹರಡುವುದರಿಂದ, ಜೊತೆಯಾಗಿ ಕಾಣಿಸಿಕೊಂಡ ಪ್ರಕರಣಗಳು ಸಾಕಷ್ಟು ಇವೆ. ಈ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಪತ್ತೆ ಹಚ್ಚಿರದೇ ಇರುವುದರಿಂದಾಗಿ ಉಲ್ಬಣಿಸಿದ್ದ ಈ  ವ್ಯಾಧಿಯು, ಸಾಕಷ್ಟು ಸಂಖ್ಯೆಯ ರೋಗಿಗಳ ಮರಣಕ್ಕೂ ಕಾರಣವೆನಿಸಿವೆ. ಅಂತೆಯೇ ಈ ವ್ಯಾಧಿಗಳ ಮಾರಕತೆಯು ಜನಸಾಮಾನ್ಯರ ಮನದಲ್ಲಿ ಭೀತಿಯನ್ನು ಹುಟ್ಟಿಸಲೂ ಯಶಸ್ವಿಯಾಗಿವೆ.

ಏನಿದು ಡೆಂಗೆ ?

ಅರ್ಬೋ ವೈರಸ್ ಗಳ ವರ್ಗಕ್ಕೆ ಸೇರಿದ ಡೆಂಗೆ ರೋಗಕಾರಕ ವೈರಸ್ ಗಳು ಸಾಮಾನ್ಯವಾಗಿ ಎಡೆಸ್ ಇಜಿಪ್ತೈ ಜಾತಿಯ ಹೆಣ್ಣು ಸೊಳ್ಳೆಗಳಿಂದ ಹರಡುತ್ತವೆ. ಡೆಂಗೆ ವ್ಯಾಧಿಪೀಡಿತರನ್ನು ಕಚ್ಚಿದ ಈ ಸೊಳ್ಳೆಗಳು, ೮ ರಿಂದ ೧೨ ದಿನಗಳಲ್ಲಿ ಡೆಂಗೆ ವೈರಸ್ ಗಳನ್ನು ಹರಡುವ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತವೆ. ವಿಶೇಷವೆಂದರೆ ಈ ಸೊಳ್ಳೆಗಳು ಸಾಯುವ ತನಕ ಈ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತವೆ.

ರೋಗಲಕ್ಷಣಗಳು

ಡೆಂಗೆ ವ್ಯಾಧಿಪೀಡಿತರನ್ನು ಕಚ್ಚಿದ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಗಳನ್ನು ಕಚ್ಚಿದ ಅನಂತರ ಸುಮಾರು ೫ - ೬ ದಿನಗಳಲ್ಲಿ ರೋಗಲಕ್ಷಣಗಳು ಪ್ರಕಟವಾಗುತ್ತವೆ. ಕಾಯಿಲೆಯ ತೀವ್ರತೆ ಹೆಚ್ಚಿದ್ದಲ್ಲಿ ೭ ರಿಂದ ೧೦ ದಿನಗಳು ಹಾಗೂ ಸೌಮ್ಯರೂಪದಲ್ಲಿ ಇದ್ದರೆ ೪ ರಿಂದ ೬ ದಿನಗಳ ಕಾಲ ರೋಗಿಯನ್ನು ಪೀಡಿಸುತ್ತದೆ.

ಡೆಂಗೆ ವ್ಯಾಧಿ ಪೀಡಿತರಲ್ಲಿ ಆಕಸ್ಮಿಕವಾಗಿ ಆರಂಭವಾಗುವ ಜ್ವರ, ಶರೀರದಾದ್ಯಂತ ಮಾಂಸಪೇಶಿಗಳಲ್ಲಿ ನೋವು, ವಿಶೇಷವಾಗಿ ಕಣ್ಣುಗಳ ಹಿಂಭಾಗ, ತಲೆ ಮತ್ತು ಅಸ್ಥಿ ಸಂಧಿಗಳಲ್ಲಿ ವಿಪರೀತ ನೋವು, ಕಣ್ಣುಗಳು ಕೆಂಪಾಗಿ ನೀರು ಒಸರುವುದು, ಬೆಳಕನ್ನು ನೋಡಲು ಆಗದಿರುವುದು, ವಾಕರಿಕೆ, ವಾಂತಿ, ಹಸಿವಿಲ್ಲದಿರುವುದು, ಎದ್ದೇಳಲು ಆಗದೇ ಹಾಸಿಗೆಯಲ್ಲೇ ಬಿದ್ದುಕೊಂಡಿರುವುದು, ಕೆಲರೋಗಿಗಳಲ್ಲಿ ಬಾಯಿ – ಮೂಗುಗಳಿಂದ ರಕ್ತಸ್ರಾವ, ನಿದ್ರಾಹೀನತೆ ಮತ್ತು ಖಿನ್ನತೆಗಳಂತಹ ಲಕ್ಷಣಗಳು ಕಂಡುಬರುತ್ತವೆ.

ವ್ಯಾಧಿಯ ತೀವ್ರತೆ ಹೆಚ್ಚಿದ್ದಲ್ಲಿ ಏರುವ ಜ್ವರದ ಬಾಧೆಯು ೭ ರಿಂದ ೧೦ ದಿನಗಳ ಕಾಲ ಬಾಧಿಸಬಹುದು. ಕೆಲ ರೋಗಿಗಳಲ್ಲಿ ಮೂರು ದಿನಗಳ ಬಳಿಕ ಮಾಯವಾಗುವ ಜ್ವರ ಮತ್ತು ಅನ್ಯ ಲಕ್ಷಣಗಳು, ಒಂದೆರಡು ದಿನಗಳಲ್ಲೇ ಮತ್ತೆ ಮರುಕಳಿಸುವುದು ಅಪರೂಪವೇನಲ್ಲ. ಈ ಸಂದರ್ಭದಲ್ಲಿ ರೋಗಿಗಳ ಕೈಕಾಲುಗಳ ಮೇಲೆ ಬೆವರುಸಾಲೆಯಂತಹ ದದ್ದುಗಳು ಮೂಡಿ, ಕ್ರಮೇಣ ಶರೀರದ ಅನ್ಯಭಾಗಗಳಿಗೂ ಹರಡಬಹುದು. ರೋಗಿಗಳು ಜ್ವರಮುಕ್ತರಾದ ಬಳಿಕವೂ ಅತಿಯಾದ ಆಯಾಸ ಮತ್ತು ಬಳಲಿಕೆಗಳಿಂದ ಮಲಗಿಕೊಂಡೇ ಇರುವುದು ಈ ವ್ಯಾಧಿಯ ಪೀಡೆಗಳಲ್ಲಿ ಒಂದಾಗಿದೆ.

ಡೆಂಗೆ ಪೀಡಿತ ರೋಗಿಗಳು ಈ ವೈರಸ್ ಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಂಡರೂ, ಇದು ಕೇವಲ ೯ ತಿಂಗಳ ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಹಲವಾರು ಬಾರಿ ಡೆಂಗೆ ಜ್ವರದಿಂದ ಪೀಡಿತರಾಗಿರುವ ವ್ಯಕ್ತಿಗಳು, ಶಾಶ್ವತ ರೋಗನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುವರು.

೧೯೫೬ ರಿಂದ ದಕ್ಷಿಣ ಆಫ್ರಿಕಾದಲ್ಲಿ ಅನೇಕ ಬಾರಿ ಸಾಂಕ್ರಾಮಿಕವಾಗಿ ಹರಡಿದ್ದ ಡೆಂಗೆ ಜ್ವರದೊಂದಿಗೆ ಚಿಕೂನ್ ಗುನ್ಯಾ ವೈರಸ್ ಗಳು ಸೇರಿಕೊಂಡಿದ್ದ ಪರಿಣಾಮವಾಗಿ ಉದ್ಭವಿಸಿದ್ದ ಸಮಸ್ಯೆಗಳಲ್ಲಿ ಆಘಾತ ( ಶಾಕ್ ) ರಕ್ತಸ್ರಾವಗಳು ಪ್ರಮುಖವಾಗಿದ್ದವು. ಡೆಂಗೆ ಹೆಮೊರೆಜಿಕ್ ಫಿವರ್ ಎನ್ನುವ ಈ ಅಪಾಯಕಾರಿ ಸಮಸ್ಯೆಯ ಮಾರಕತೆಗೆ ಶೇ. ೧೦ ರಷ್ಟು ರೋಗಿಗಳು ಬಲಿಯಾಗಿದ್ದರು.

ಪತ್ತೆ ಹಚ್ಚುವುದೆಂತು ?

ಶಂಕಿತ ಜ್ವರಪೀಡಿತರ ರಕ್ತದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮೂಲಕ ಡೆಂಗೆ ವೈರಸ್ ಗಳ ಇರುವಿಕೆಯನ್ನು ಪತ್ತೆ ಹಚ್ಚಬಹುದಾಗಿದೆ.

ಚಿಕಿತ್ಸೆ

ಡೆಂಗೆ ಜ್ವರವನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ವೈದ್ಯಕೀಯ ವಿಜ್ಞಾನಿಗಳು ಇಂದಿನ ತನಕ ಪತ್ತೆ ಹಚ್ಚಿಲ್ಲ. ರೋಗಿಯಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷದಗಳನ್ನು ಸೇವಿಸಿ, ಸಂಪೂರ್ಣ ವಿಶ್ರಾಂತಿಯನ್ನು ಪಡೆಯುವುದೇ ಇದಕ್ಕೆ ಪರಿಹಾರವಾಗಿದೆ. ಆದರೆ ಗಂಭೀರ ಸ್ಥಿತಿಯಲ್ಲಿರುವ ಹಾಗೂ ಅನ್ಯ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು  ಮತ್ತು ವಯೋವೃದ್ಧರನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕಾಗುವುದು.

ರೋಗಪೀಡಿತರನ್ನು ಪ್ರತ್ಯೇಕವಾದ ಕೋಣೆಯಲ್ಲಿರಿಸಿ, ಸೊಳ್ಳೆಪರದೆಯನ್ನು ಕಡ್ಡಾಯವಾಗಿ ಬಳಸುವ ಮೂಲಕ, ಈ ವ್ಯಾಧಿಯು ಅನ್ಯರಿಗೆ ಹರಡದಂತೆ ತಡೆಗಟ್ಟಬಹುದಾಗಿದೆ. ಇದರೊಂದಿಗೆ ಸುತ್ತಮುತ್ತಲೂ ಇರಬಹುದಾದ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳನ್ನು ನಾಶಪಡಿಸುವ ಮೂಲಕ ಈ ವ್ಯಾಧಿಯ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ.

ಲಸಿಕೆ

ಸೂಕ್ತ ಚಿಕಿತ್ಸೆ ಇಲ್ಲದ ವ್ಯಾಧಿಗಳನ್ನು ಖಚಿತವಾಗಿ ತಡೆಗಟ್ಟಲು ಲಸಿಕೆಗಳು ಅತ್ಯಂತ ಪರಿಣಾಮಕಾರಿ ಎನಿಸುತ್ತವೆ. ಆದರೆ ಡೆಂಗೆ ಜ್ವರವನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಯನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು