Wednesday, August 27, 2014

RAT FEVER -LEPTOSPIROSIS



 ಇಲಿಜ್ವರ : ಮುಂಜಾಗರೂಕತೆ ವಹಿಸಿ 

ಇಲಿ ಓಡಿತು ಎನ್ನುವುದನ್ನು ಕೇಳಿದವನು, ಹುಲಿ ಓಡಿತು ಎಂದು ಹೇಳಿದಂತೆ, ಎನ್ನುವ ತುಳುವರ ಆಡುಮಾತು " ಇಲಿಜ್ವರ " ದ ಬಗ್ಗೆ ಅನ್ವರ್ಥವೆನಿಸುತ್ತದೆ. ಏಕೆಂದರೆ ಈ ಸೋಂಕು ಪೀಡಿತ ಮೂಷಿಕದ ಮೂತ್ರದ ಮೂಲಕ ಹರಡುವ ಇಲಿಜ್ವರವು, ಅನೇಕ ರೋಗಿಗಳ ಪಾಲಿಗೆ ಪ್ರಾಣಾಂತಿಕವಾಗಿ ಪರಿಣಮಿಸುತ್ತಿದೆ.

ಕಳೆದ ಕೆಲ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲಭಾಗಗಳಲ್ಲಿ ವ್ಯಾಪಕವಾಗಿ ಹರಡಿದ್ದ ಡೆಂಗೆ, ಚಿಕುನ್ ಗುನ್ಯ ಮತ್ತು ಇನ್ಫ್ಲುಯೆಂಜಾ ಜ್ವರಗಳಂತಹ ವ್ಯಾಧಿಗಳಿಗೆ, ನಿರ್ದಿಷ್ಟ ವೈರಸ್ ಗಳೇ ಕಾರಣವೆನಿಸಿವೆ. ಇವುಗಳಲ್ಲಿ ಮೊದಲ ಎರಡು ಕಾಯಿಲೆಗಳಲ್ಲದೇ, ಮಲೇರಿಯ ಜ್ವರವೂ ಸೊಳ್ಳೆಗಳಿಂದ ಹರಡುತ್ತದೆ. ಆದರೆ ಈ ವ್ಯಾಧಿಗಳೊಂದಿಗೆ ಅಪರೂಪದಲ್ಲಿ ಪತ್ತೆಯಾಗುತ್ತಿರುವ ಇಲಿಜ್ವರವು, "ಸ್ಪೈರೋಕೆಟ್ " ಎನ್ನುವ ಬ್ಯಾಕ್ಟೀರಿಯಾಗಳಿಂದ ಉದ್ಭವಿಸುತ್ತದೆ. 

ವೈದ್ಯಕೀಯ ಪರಿಭಾಷೆಯಲ್ಲಿ " ಲೆಪ್ಟೋಸ್ಪೈರೋಸಿಸ್ " ಎಂದು ಕರೆಯಲ್ಪಡುವ ಇಲಿಜ್ವರವು, ಈ ಸೋಂಕು ಪೀಡಿತ ಇಲಿಗಳ ಮೂತ್ರ, ನಾಸಿಕ - ನೇತ್ರ ಮತ್ತು ಶರೀರದ ಇತರ ಅಂಗಾಂಗಗಳ ಸ್ರಾವಗಳ ಮೂಲಕ ಮತ್ತು ಇಲಿಗಳು ಕಚ್ಚುವ ಮೂಲಕವೂ ಕಾಡು ಪ್ರಾಣಿಗಳು, ಸಾಕುಪ್ರಾಣಿಗಳು ಮತ್ತು ಮನುಷ್ಯರಿಗೆ ಹರಡುವುದು. ಡಾ. ವೇಲ್ ಎಂಬಾತನು ಪತ್ತೆಹಚ್ಚಿದ್ದ ಈ ವ್ಯಾಧಿಯ ರೋಗಾಣುಗಳಿಂದ ಪೀಡಿತ ಇಲಿಗಳು ವಿಸರ್ಜಿಸಿದ ಮೂತ್ರದಲ್ಲಿರುವ ರೋಗಾಣುಗಳಿಂದ ಕಲುಷಿತಗೊಂಡ ನೀರು ಮತ್ತು ಮಣ್ಣಿನ ಮೂಲಕವೂ ಈ ಸೋಂಕು ಹರಡಬಲ್ಲದು. ಸೋಂಕು ಪೀಡಿತ ಇಲಿಗಳು ವಿಸರ್ಜಿಸುವ ಒಂದು ಮಿಲಿ ಲೀಟರ್ ಮೂತ್ರದಲ್ಲಿ, ೧೦ ಕೋಟಿಗೂ ಅಧಿಕ ಬ್ಯಾಕ್ಟೀರಿಯಾಗಳು ಇರುತ್ತವೆ!. 

ಉದಾಹರಣೆಗೆ ನಿಮ್ಮ ಮನೆಯಂಗಳದಲ್ಲಿ ಬೆಳೆದಿರುವ ಹುಲ್ಲಿನ ಮೇಲೆ ಸೋಂಕು ಪೀಡಿತ ಇಲಿಯೊಂದು ವಿಸರ್ಜಿಸಿದ ಮೂತ್ರವನ್ನು ನಿಮ್ಮ ನಾಯಿಯು ನೆಕ್ಕಿದಲ್ಲಿ, ಈ ರೋಗಾಣುಗಳು ನಾಯಿಯ ಶರೀರವನ್ನು ಪ್ರವೇಶಿಸಿ ರೋಗವನ್ನು ಉಂಟುಮಾಡುತ್ತವೆ. ಅದೇ ರೀತಿಯಲ್ಲಿ ನಿಮ್ಮ ಮನೆಯಂಗಳದಲ್ಲಿರುವ ಕೈತೋಟದಲ್ಲಿ ನೀವು ಕೆಲಸಮಾಡುತ್ತಿರುವಾಗ, ನಿಮ್ಮ ಕೈಯ್ಯಲ್ಲಿ ಇರಬಹುದಾದ ಪುಟ್ಟ ಗಾಯಗಳ ಮೂಲಕ ಅಥವಾ ಸಂದರ್ಭೋಚಿತವಾಗಿ ನಿಮ್ಮ ಕಣ್ಣು, ಮೂಗು ಅಥವಾ ಬಾಯಿಯ ಮೂಲಕ ನಿಮ್ಮ ಶರೀರದಲ್ಲಿ ಪ್ರವೇಶಗಳಿಸುವ ಈ ಬ್ಯಾಕ್ಟೀರಿಯಾಗಳು, ಇಲಿಜ್ವರಕ್ಕೆ ಕಾರಣ ವೆನಿಸುತ್ತವೆ. ಈ ವ್ಯಾಧಿಯು ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವುದಾದರೂ, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. 

ಲೆಪ್ಟೋಸ್ಪೈರೋಸಿಸ್ ಎಂದು ಕರೆಯಲ್ಪಡುವ ಈ ಸೋಂಕು ಮನುಷ್ಯರಲ್ಲಿ ಉದ್ಭವಿಸಲು, ಲೆಪ್ಟೋಸ್ಪೈರಾ ಇಕ್ಟೆರೋ ಹೆಮೊರೆಜಿಯೇ ಅಥವಾ ಲೆಪ್ಟೋಸ್ಪೈರಾ ಕೆನಿಕೊಲಾ ಎನ್ನುವ ಎರಡು ವಿಧದ ಬ್ಯಾಕ್ಟೀರಿಯಾಗಳೇ ಕಾರಣವೆನಿಸುತ್ತವೆ. 

ರೋಗಲಕ್ಷಣಗಳು 

ಈ ರೋಗಾಣುಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿದ ಮುಂದಿನ ೪ ರಿಂದ ೨೧ ದಿನಗಳಲ್ಲಿ ಇಲಿಜ್ವರದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಪ್ರಾಥಮಿಕ ಹಂತದಲ್ಲಿ ನಿಮ್ಮನ್ನು ಸಾಮಾನ್ಯವಾಗಿ ಪೀಡಿಸುವ ಫ್ಲೂ ಜ್ವರದ ಲಕ್ಷಣಗಳನ್ನೇ ಹೋಲುವ ವಿಪರೀತ ತಲೆನೋವು, ಶರೀರದ ಮಾಂಸಪೇಶಿಗಳು, ಅಸ್ಥಿಸಂಧಿಗಳು ಮತ್ತು ಕಣ್ಣುಗಳಲ್ಲಿ ನೋವು, ಕಣ್ಣುಗಳು ಕೆಂಪಾಗಿ ನೀರು ಒಸರುವುದು, ಶರೀರದಾದ್ಯಂತ ದದ್ದುಗಳು ಮೂಡುವುದು, ಒಂದಿಷ್ಟು ಚಳಿ ಮತ್ತು ಜ್ವರಗಳು ಈ ವ್ಯಾಧಿ ಪೀಡಿತರಲ್ಲಿ ಕಂಡುಬರುತ್ತವೆ. ತದನಂತರದ ಐದರಿಂದ ಹತ್ತು ದಿನಗಳ ಅವಧಿಯಲ್ಲಿ ಈ ಲಕ್ಷಣಗಳು ನಿಧಾನವಾಗಿ ಮಾಯವಾಗುತ್ತವೆ. ಈ ಹಂತದಲ್ಲಿ ತಮ್ಮನ್ನು ಬಾಧಿಸುತ್ತಿರುವ ವ್ಯಾಧಿ ಯಾವುದೆಂದು ಅರಿಯದವರು, ಸ್ವಯಂ ವೈದ್ಯರು ಮತ್ತು ಇಂತಹ "ಸಣ್ಣಪುಟ್ಟ ಕಾಯಿಲೆ"ಗಳಿಗೆ ಚಿಕಿತ್ಸೆಯನ್ನೇ ಪಡೆದುಕೊಳ್ಳದ ವ್ಯಕ್ತಿಗಳಲ್ಲಿ, ಮುಂದಿನ ಹಂತದಲ್ಲಿ ಗಂಭೀರ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ. 

ದ್ವಿತೀಯ ಹಂತದಲ್ಲಿ ಮತ್ತೆ ಮರುಕಳಿಸುವ ಪ್ರಾಥಮಿಕ ಹಂತದ ಲಕ್ಷಣಗಳೊಂದಿಗೆ, ಕೆಲ ರೋಗಿಗಳಲ್ಲಿ ಕಣ್ಣು, ಮೆದುಳು ಮತ್ತು ಬೆನ್ನುಹುರಿಗಳಿಗೆ ಸಂಬಂಧಿಸಿದ ನರಗಳ ಉರಿಯೂತ ಹಾಗೂ ಕುತ್ತಿಗೆಯ ಸೆಡೆತಗಳು ಉದ್ಭವಿಸುತ್ತವೆ. ಈ ರೋಗಾಣುಗಳು ಮೆದುಳಿನ ಮೇಲೆ ಪರೋಕ್ಷವಾಗಿ ಬೀರುವ ಪರಿಣಾಮದಿಂದಾಗಿ, ಮೆದುಳು ಜ್ವರವನ್ನು ಹೋಲುವ ಲಕ್ಷಣಗಳು ಅನೇಕ ರೋಗಿಗಳಲ್ಲಿ ಕಂಡುಬರುತ್ತವೆ. ಅಪರೂಪದಲ್ಲಿ ಕೆಲ ರೋಗಿಗಳಲ್ಲಿ ಶ್ವಾಸಕೋಶಗಳು, ಯಕೃತ್, ಪ್ಲೀಹ, ಮೂತ್ರಪಿಂಡಗಳು ಮತ್ತು ಹೃದಯಕ್ಕೆ ಸಂಬಂಧಿಸಿದ ಕೆಲ ನಿರ್ದಿಷ್ಟ ರೋಗಲಕ್ಷಣಗಳು ಕಂಡುಬರುತ್ತವೆ. ಅದೇ ರೀತಿಯಲ್ಲಿ ಯಕೃತ್, ಮೂತ್ರಾಂಗಗಳು ಮತ್ತು ಹೃದಯದ ವೈಫಲ್ಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ, ಇಲಿಜ್ವರವು ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಈ ರೀತಿಯ ಯಾವುದೇ ಸಮಸ್ಯೆಗಳು ಬಾಧಿಸದೇ ಇದ್ದಲ್ಲಿ, ಸುಮಾರು ೩ ರಿಂದ ೪ ವಾರಗಳ ಅವಧಿಯಲ್ಲಿ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರು. 

ರೋಗಿಯ ರಕ್ತ, ಮೂತ್ರ ಇತ್ಯಾದಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮೂಲಕ ಈ ವ್ಯಾಧಿಯನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ. ಅಂತೆಯೇ ಪ್ರಾರಂಭಿಕ ಹಂತದಲ್ಲಿ ಈ ವ್ಯಾಧಿಯನ್ನು ನಿಯಂತ್ರಿಸಬಲ್ಲ ಜೀವನಿರೋಧಕ ಔಷದಗಳು ಲಭ್ಯವಿದೆ. ಆದುದರಿಂದ ಈ ವ್ಯಾಧಿಯನ್ನು ನಿರ್ಲಕ್ಷಿಸದೇ, ಕ್ಷಿಪ್ರಗತಿಯಲ್ಲಿ ತಜ್ಞವೈದ್ಯರಿಂದ ಚಿಕಿತ್ಸೆಯನ್ನು ಪದೆದುಕೊಂಡಲ್ಲಿ ಪ್ರಾಣಾಪಾಯದ ಸಂಭಾವ್ಯತೆಯನ್ನು ನಿಶ್ಚಿತವಾಗಿಯೂ ತಡೆಗಟ್ಟಬಹುದಾಗಿದೆ. 

ಇಲಿಜ್ವರ ಅರ್ಥಾತ್ ಲೆಪ್ಟೋಸ್ಪೈರೋಸಿಸ್  ವ್ಯಾಧಿಪೀಡಿತರಲ್ಲಿ ಶೇ.೧೦ ರಿಂದ ೪೦ ರಷ್ಟು ರೋಗಿಗಳು ಗಂಭೀರ ಸಮಸ್ಯೆಗಳಿಂದ ಮೃತಪಡುತ್ತಾರೆ. ಆದರೆ ವ್ಯಾಧಿಯ ತೀವ್ರತೆ, ಇದರಿಂದಾಗಿ ರೋಗಿಯ ಪ್ರಮುಖ ಅಂಗಾಂಗಗಳಿಗೆ ಸಂಭವಿಸಿರಬಹುದಾದ ಹಾನಿಯ ಪ್ರಮಾಣ, ರೋಗಿಯ ವಯಸ್ಸು, ಆತನಲ್ಲಿ ಈಗಾಗಲೇ ಇರುವ ಅನ್ಯ ಗಂಭೀರ ಆರೋಗ್ಯದ ಸಮಸ್ಯೆಗಳು ಮತ್ತು ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಹೊಂದಿಕೊಂಡು, ಈ ಮಾರಕತೆಯ ಪ್ರಮಾಣವೂ ಹೆಚ್ಚು ಅಥವಾ ಕಡಿಮೆಯಾಗಬಲ್ಲದು. ಇಲಿಜ್ವರವನ್ನು ತಡೆಗಟ್ಟಬಲ್ಲ ಲಸಿಕೆಯೊಂದು ಯುರೋಪ್ ಮತ್ತು ಏಷ್ಯಾ ಖಂಡಗಳಲ್ಲಿ ಲಭ್ಯವಿದೆ. ಆದರೆ ಇದನ್ನು ಪಡೆದುಕೊಳ್ಳುವವರ ಪ್ರಮಾಣವೂ ಸಾಕಷ್ಟು ಕಡಿಮೆಯಿದೆ.

ಕೊನೆಯ ಮಾತು 

ನಿಜ ಹೇಳಬೇಕಿದ್ದಲ್ಲಿ ಹೆಚ್ಚುತ್ತಿರುವ ಇಲಿಗಳ ಸಂಖ್ಯೆ ಮತ್ತು ಇಲಿಜ್ವರಗಳ ಪ್ರಕರಣಗಳು ಹೆಚ್ಚಲು ಜನಸಾಮಾನ್ಯರೇ ಕಾರಣಕರ್ತರೆಂದಲ್ಲಿ ತಪ್ಪೆನಿಸಲಾರದು. ಏಕೆಂದರೆ ನಾವಿಂದು ಉತ್ಪಾದಿಸಿ ಕಂಡಲ್ಲಿ ಎಸೆಯುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳೊಂದಿಗೆ, ಸಾಕಷ್ಟು ಆಹಾರ ಪದಾರ್ಥಗಳನ್ನೂ ಎಸೆಯುತ್ತಿರುವುದರಿಂದ ಮೂಷಿಕಗಳ ಸಂಖ್ಯೆಯೂ ದಿನೇದಿನೇ ಹೆಚ್ಚುತ್ತಿದೆ. ತತ್ಪರಿಣಾಮವಾಗಿ ಇಲಿಜ್ವರದ ಸಮಸ್ಯೆಯೂ ಇದಕ್ಕೆ ಅನುಗುಣವಾಗಿ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿದೆ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೨೫-೦೭-೨೦೧೦ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 




Friday, August 22, 2014

SARS- The new age epidemic


ನಿಗೂಢ ವೈರಸ್ ತಂದ ಸಮಸ್ಯೆ : " ಸಾರ್ಸ್ "

ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳ ಜನರಲ್ಲಿ ಭಯಮಿಶ್ರಿತ ಕುತೂಹಲ ಮತ್ತು ಆತಂಕಗಳಿಗೆ ಕಾರಣವೆನಿಸಿರುವ "ಸಾರ್ಸ್"(Severe Acute Respiratory Syndrome) ಎಂದು ಕರೆಯಲ್ಪಡುವ ಕಾಯಿಲೆಯು, ಹಾಂಗ್ ಕಾಂಗ್ ನ ಸಮೀಪ ಸುಮಾರು ಆರು ತಿಂಗಳುಗಳ ಹಿಂದೆ ಕಾಣಿಸಿಕೊಂಡಿತ್ತು. ನಮ್ಮೆಲ್ಲರನ್ನೂ ಸಾಮಾನ್ಯವಾಗಿ ಕಾಡುವ ಶೀತ- ಫ್ಲೂ ವ್ಯಾಧಿಯ ಲಕ್ಷಣಗಳನ್ನೇ ಹೋಲುವ ಈ ನಿಗೂಢ ವ್ಯಾಧಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣದಿಂದಾಗಿ ಇದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿರುವುದು ಸತ್ಯ. ಈ ಕಾಯಿಲೆಯಿಂದ ಬಳಲುವ ರೋಗಿಗಳಲ್ಲಿ ನ್ಯುಮೋನಿಯ ರೋಗದ ಲಕ್ಷಣಗಳೂ ಕಂಡುಬರುತ್ತಿದ್ದು, ಶೇ.೪ ರಷ್ಟು ರೋಗಿಗಳು ಮೃತಪಡುತ್ತಿರುವುದು ವಾಸ್ತವ. ಹಠಾತ್ತಾಗಿ ಪ್ರತ್ಯಕ್ಷವಾಗಿ ನೂರಾರು ರೋಗಿಗಳ ಮರಣಕ್ಕೆ ಕಾರಣವೆನಿಸಿರುವ ಈ ವಿಶಿಷ್ಠ ವ್ಯಾಧಿಯ ಬಗ್ಗೆ ಜಗತ್ತಿನಾದ್ಯಂತ ವೈದ್ಯಕೀಯ ವಿಜ್ಞಾನಿಗಳು, ಸಮರೋಪಾದಿಯಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯ (WHO) ಸಾಂಕ್ರಾಮಿಕ ವ್ಯಾಧಿ ವಿಭಾಗದ ನಿರ್ದೇಶಕ ಡಾ. ಕಾರ್ಲೋಸ್ ಅರ್ಬಾನಿಯವರು ಪ್ರಪ್ರಥಮವಾಗಿ ಈ ಕಾಯಿಲೆಯ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದ ಫಲವಾಗಿ, ಅನೇಕ ವೈದ್ಯರು- ದಾದಿಯರ ಪ್ರಾಣಗಳು ಉಳಿದಿದ್ದವು. ಈ ತೆರನ ಅಪಾಯದ ಬಗ್ಗೆ ಸಾಕಷ್ಟು ಅರಿವಿದ್ದರೂ, ಅನೇಕ ಅರೆವೈದ್ಯಕೀಯ ಸಿಬಂದಿಗಳು ಹಿಂಜರಿಯದೆ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಬಹಳಷ್ಟು ರೋಗಿಗಳಿಗೆ ಚಿಕಿತ್ಸೆ-ಉಪಚಾರಗಳನ್ನು ನೀಡಿದ್ದ ಕಾರಣದಿಂದಾಗಿ ಈ ಕಾಯಿಲೆಗೆ ಬಲಿಯಾಗಬೇಕಾಯಿತು. ವಿಶೇಷವೆಂದರೆ ಈ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದ ಡಾ.ಕಾರ್ಲೋಸ್ ಅರ್ಬಾನಿಯವರೂ ಇದೇ ಕಾಯಿಲೆಗೆ ಬಲಿಯಾಗಿದ್ದುದು ನಿಜಕ್ಕೂ ವಿಷಾದನೀಯ. ಇದೀಗ ಡಾ.ಕಾರ್ಲೋಸ್ ಅವರ ಗೌರವಾರ್ಥ, ಈ ಕಾಯಿಲೆಗೆ ಕಾರಣವೆನಿಸಿರುವ ವೈರಸ್ ಗೆ ಅವರ ಹೆಸರನ್ನಿಡಲಾಗಿದೆ. ಹಗಲಿರುಳು ನಡೆಸಿದ್ದ ಸಂಶೋಧನೆಗಳ ಫಲವಾಗಿ ಈ ವೈರಸ್ ನ "ವಂಶವಾಹಿನಿಗಳ ಸಂಕೇತ" (Genetic code) ನ್ನು ಭೇದಿಸಲಾಗಿದ್ದು, ತತ್ಪರಿಣಾಮವಾಗಿ ಈ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚಲು ಅವಶ್ಯಕವೆನಿಸುವ " ಪರೀಕ್ಷೆ " ಗಳನ್ನು ಕಂಡುಹಿಡಿಯಲು ಉಪಯುಕ್ತವೆನಿಸಲಿದೆ. 

ಸಾರ್ಸ್ ವ್ಯಾಧಿಗೆ ಕಾರಣವೇನು?

ಮನುಷ್ಯನನ್ನು ಸಾಮಾನ್ಯವಾಗಿ ಬಾಧಿಸುವ ಶೀತ-ಜ್ವರಗಳಿಗೆ ಕಾರಣವೆನಿಸುವ ಕೊರೋನ ವೈರಸ್ ಕುಟುಂಬಕ್ಕೆ ಸೇರಿದ ಒಂದು ನೂತನ ವೈರಸ್, ಸಾರ್ಸ್ ವ್ಯಾಧಿಗೆ ಕಾರಣವಾಗಿದೆ. ಇದಲ್ಲದೇ ಕೆಲವೊಂದು ರೋಗಿಗಳಲ್ಲಿ ಪಾರಾಮಿಕ್ಸೋ ವೈರಸ್ ಗಳು ಕೂಡಾ ಪತ್ತೆಯಾಗಿವೆ. ತೀವ್ರ ಸಾಂಕ್ರಾಮಿಕವಾಗಿ ಹರಡಬಲ್ಲ ಈ ವೈರಸ್, ಈಗಾಗಲೇ ೩೦ ಕ್ಕೂ ಅಧಿಕ ದೇಶಗಳಿಗೆ ಹರಡಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ವಿಶ್ವವ್ಯಾಪಿಯಾಗುವ ಸಾಧ್ಯತೆಗಳಿವೆ. ಈಗಾಗಲೇ ಭಾರತದ ಸುತ್ತಮುತ್ತಲ ೧೩ ರಾಷ್ಟ್ರಗಳಲ್ಲಿ ಸಾರ್ಸ್ ಪತ್ತೆಯಾಗಿರುವುದು ಭಾರತೀಯರಲ್ಲಿ ಆತಂಕಕ್ಕೆ ಕಾರಣವೆನಿಸಿದೆ. 

ಹರಡುವುದೆಂತು?

ಸಾರ್ಸ್ ವ್ಯಾಧಿಪೀಡಿತರ ಸಂಪರ್ಕ, ರೋಗಿ ಶೀನಿದಾಗ ಹಾಗೂ ಕೆಮ್ಮಿದಾಗ ಉಗುಳಿನ ಸಣ್ಣ ಕಣಗಳೊಂದಿಗೆ ಹೊರಬೀಳುವ  ಮೂಲಕ ಮತ್ತು ರೋಗಿ ಬಳಸಿದ ವಸ್ತುಗಳನ್ನು ಅನ್ಯರು ಬಳಸುವುದರಿಂದ ಈ ವೈರಸ್ ಗಳು ಇತರರಿಗೆ ಸುಲಭದಲ್ಲೇ ಹರಡುತ್ತವೆ. 

ಲಕ್ಷಣಗಳು 

ಮನುಷ್ಯನ ಶರೀರವನ್ನು ಪ್ರವೇಶಿಸಿದ ಈ ವೈರಸ್ ಗಳಿಂದಾಗಿ ಸುಮಾರು ಎರಡು ದಿನಗಳಿಂದ ಏಳು ದಿನಗಳಲ್ಲಿ ಜ್ವರ, ತಲೆನೋವು, ಗಂಟಲು ನೋವು, ಶೀತ ಹಾಗೂ ಕೆಮ್ಮುಗಳು ಪ್ರಾರಂಭವಾಗುತ್ತವೆ. ಕೆಲ ರೋಗಿಗಳಲ್ಲಿ ಎದೆನೋವು ಮತ್ತು ಶ್ವಾಸೋಚ್ಚ್ವಾಸದಲ್ಲಿ ತೊಂದರೆಯಂತಹ ನ್ಯುಮೋನಿಯ ವ್ಯಾಧಿಯ ಲಕ್ಷಣಗಳು ಕಂಡುಬಂದಲ್ಲಿ, ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಬೇಕಾಗುವುದು ಅನಿವಾರ್ಯ. 

ಚಿಕಿತ್ಸೆ 

ಸಾರ್ಸ್ ವ್ಯಾಧಿಯನ್ನು ನಿಖರವಾಗಿ ಗುಣಪಡಿಸಬಲ್ಲ ಔಷದಗಳನ್ನು ಇನ್ನಷ್ಟೇ ಪತ್ತೆಹಚ್ಚಬೇಕಾಗಿದೆ. ಆದುದರಿಂದ ರೋಗಲಕ್ಷಣಗಳಿಗೆ ಅನುಗುಣವಾಗಿ ಕೆಲವೊಂದು ಜೀವನಿರೋಧಕಗಳು, ಜ್ವರಹಾರಕಗಳು ಮತ್ತು ಸಂದರ್ಭೋಚಿತವಾಗಿ ಸ್ಟಿರಾಯ್ಡ್ ಮತ್ತಿತರ ಔಷದಗಳನ್ನು ನೀಡಬೇಕಾಗುವುದು. ಇದರೊಂದಿಗೆ ಶ್ವಾಸೋಚ್ಚ್ವಾಸದ ತೊಂದರೆಗಳು ಕಂಡುಬಂದಲ್ಲಿ "ರೆಸ್ಪಿರೇಟರ್" ಗ ಬಳಸುವುದು ರೋಗಿಯ ಪ್ರಾಣವನ್ನುಳಿಸಲು ನೆರವಾಗಬಲ್ಲದು. 

ಅವಿರತ ಸಂಶೋಧನೆ 

ಮನುಷ್ಯನಲ್ಲಿ ಶೀತಕ್ಕೆ ಕಾರಣವೆನಿಸುವ ಕೊರೊನಾ ವೈರಸ್ ಕುಟುಂಬಕ್ಕೆ ಸೇರಿದ ಇದೊಂದು ವೈರಸ್ ಮಾತ್ರ ಮಾರಕವಾಗಿ ಪರಿಣಮಿಸಲು ಕಾರಣವೇನೆಂದು ಅರಿತುಕೊಳ್ಳಲು, ಜಗತ್ತಿನ ಸುಪ್ರಸಿದ್ಧ ೧೩ ಪ್ರಯೋಗಾಲಯಗಳಲ್ಲಿ ಹಗಲಿರುಳು ಸಂಶೋಧನೆ ನಡೆಯುತ್ತಿದೆ. ಇದರೊಂದಿಗೆ ಪ್ರತಿಯೊಂದು ಪ್ರಯೋಗಾಲಯಗಳು ಪರಸ್ಪರ ಮಾಹಿತಿಗಳನ್ನು ವಿನಿಮಯಿಸಿಕೊಳ್ಳುತ್ತಾ, ಈ ಸಮಸ್ಯೆಗೆ ಪರಿಹಾರವನ್ನು ಪತ್ತೆಹಚ್ಚುವಲ್ಲಿ ಶ್ರಮಿಸುತ್ತಿವೆ. ಪ್ರಸ್ತುತ ವೈದ್ಯಕೀಯ ವಿಜ್ಞಾನಿಗಳು ಸಂದೇಹಿಸಿದಂತೆ, ಪ್ರಾಯಶಃ ಒಬ್ಬ ವ್ಯಕ್ತಿಯ ಶರೀರದಲ್ಲಿ ಏಕಕಾಲದಲ್ಲಿ ಪ್ರವೇಶಿಸಿದ್ದ ಎರಡು ವಿಧದ ಕೊರೋನಾ ವೈರಸ್ ಗಳ ವಂಶವಾಹಿನಿಗಳ ಸಮ್ಮಿಶ್ರಣದಿಂದಾಗಿ ಉತ್ಪನ್ನವಾಗಿದ್ದ ನೂತನ ತಳಿಯೇ ಸಾರ್ಸ್ ವ್ಯಾಧಿಯ ಮಾರಕತೆಗೆ ಕಾರಣವಾಗಿರಬಹುದು. ಅಥವಾ ಮನುಷ್ಯನೊಂದಿಗೆ ಸಂಪರ್ಕವಿರುವ ಪ್ರಾಣಿಗಳಿಂದಾಗಿ ಈ ವೈರಸ್ ಮನುಷ್ಯರಿಗೆ ಹರಡಿರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದರೆ ಈ ಬಗ್ಗೆ ಯಾವುದೇ ಸಮರ್ಥನೀಯ ಪುರಾವೆಗಳು ಲಭಿಸಿಲ್ಲ. ಸಾರ್ಸ್ ವೈರಸ್ ಗಳ ವಂಶವಾಹಿನಿಗಳ ಅಧ್ಯಯನದಿಂದ ಇಂತಹ ಅವಶ್ಯಕ ಮಾಹಿತಿ ಮತ್ತು ಸಂದೇಹಗಳಿಗೆ ಸಮಾಧಾನ ದೊರೆಯುವುದು ನಿಶ್ಚಿತ. 

ಲಸಿಕೆಗಳನ್ನು ಪತ್ತೆಹಚ್ಚಬಹುದೇ? 

ಮನುಷ್ಯರನ್ನು ಬಾಧಿಸುವ ಕಾಯಿಲೆಗಳನ್ನು ಗುಣಪಡಿಸಬಲ್ಲ ಔಷದಗಳ ಮತ್ತು ಇದನ್ನು ತಡೆಗಟ್ಟಬಲ್ಲ ಲಸಿಕೆಗಳನ್ನು ಸಂಶೋಧಿಸಲು ಸಾಕಷ್ಟು ಸಮಯಾವಕಾಶ ಬೇಕಾಗುವುದು. ಮನುಷ್ಯನನ್ನು ಹೋಲುವ ಮಂಗಗಳ ಮೇಲೆ ನಡೆಸುವ ಇಂತಹ ಪ್ರಯೋಗಗಳು ಸಾಕಷ್ಟು ದುಬಾರಿಯೂ ಹೌದು. ಜೊತೆಗೆ ಇಂತಹ ವೈಜ್ಞಾನಿಕ ಸಂಶೋಧನೆಗಳು ಯಶಸ್ವಿಯಾಗಿ ಫಲಪ್ರದವೆನಿಸಲು, ಹಲವಾರು ವರ್ಷಗಳೇ ಬೇಕಾಗಬಹುದು. ಇದೇ ಕಾರಣದಿಂದಾಗಿ ಯಾವುದೇ ಹೊಸ ವ್ಯಾಧಿಯೊಂದು ಪತ್ತೆಯಾದೊಡನೆ, ಇದನ್ನು ಗುಣಪಡಿಸಬಲ್ಲ ಔಷದಗಳನ್ನು ಕಂಡುಹುಡುಕಲು ಸುದೀರ್ಘಕಾಲ ಸಂಶೋಧನೆಗಳನ್ನು ನಡೆಸಬೇಕಾಗುತ್ತದೆ. 

ಸಾರ್ಸ್ ವೈರಸ್ ಗಳು ಭಾರತವನ್ನು ಪ್ರವೇಶಿಸದಂತೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ಹಾಗೂ ಇದಕ್ಕಾಗಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಶೇಷ ವೈದ್ಯಕೀಯ ತಂಡಗಳು ಶಂಕಿತ ರೋಗಿಗಳನ್ನು ಪ್ರತ್ಯೇಕಿಸಿ ತಪಾಸಣೆಗೆ ಒಳಪಡಿಸುತ್ತಿವೆ. ಅವಶ್ಯಕತೆಯಿದ್ದಲ್ಲಿ ಇಂತಹ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿ, ಪ್ರತ್ಯೇಕವಾಗಿರಿಸಿ ನಿರ್ದಿಷ್ಟ ಪರೀಕ್ಷೆಗಳಿಗೆ ಒಳಪಡಿಸುವ ವ್ಯವಸ್ಥೆಯೂ ಇದೆ. ಆದರೂ ಪ್ರತಿನಿತ್ಯ ವಿವಿಧ ದೇಶಗಳಿಂದ ಭಾರತಕ್ಕೆ ಆಗಮಿಸುವ ಸಹಸ್ರಾರು ವಿದೇಶೀ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡುವುದು ಸುಲಭಸಾಧ್ಯವೆನಲ್ಲ.

ಗೋವಾದಲ್ಲಿ ಇತ್ತೀಚಿಗೆ ಪತ್ತೆಯಾಗಿದ್ದ ಭಾರತದ ಮೊತ್ತ ಮೊದಲ ಸಾರ್ಸ್ ರೋಗಿಯನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಮುಂದಿನ ಎರಡೇ ದಿನಗಳಲ್ಲಿ ಈ ರೋಗಿಯು ಸಾರ್ಸ್ ವ್ಯಾಧಿಯಿಂದ ಸಂಪೂರ್ಣವಾಗಿ ಮುಕ್ತನಾಗಿರುವನೆಂದು ಪತ್ರಿಕಾ ಹೇಳಿಕೆಯನ್ನೂ ನೀಡಲಾಗಿತ್ತು. ನಿಜ ಹೇಳಬೇಕಿದ್ದಲ್ಲಿ ಇಷ್ಟೊಂದು ಕ್ಷಿಪ್ರಗತಿಯಲ್ಲಿ ಸಾರ್ಸ್ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳು ಲಭ್ಯವಿದೆಯೇ ಎನ್ನುವ ಮಾಹಿತಿ ಬಹುತೇಕ ವೈದ್ಯರಿಗೂ ತಿಳಿದಿಲ್ಲ!. 

ಅಂತಿಮವಾಗಿ ಹೇಳುವುದಾದಲ್ಲಿ ನುರಿತ ಅನುಭವೀ ವೈದ್ಯರೂ ಖಚಿತವಾಗಿ ಪತ್ತೆಹಚ್ಚಲಾರದ , ಜನಸಾಮಾನ್ಯರಿಗೆ ಸ್ಪಷ್ಟ ಮಾಹಿತಿ ಇರದ, ಪ್ರಸ್ತುತ ನಿಗೂಢವೆನ್ನಬಹುದಾದ ಸಾರ್ಸ್ ವ್ಯಾಧಿಯ ಬಗ್ಗೆ ಒಂದಿಷ್ಟು ಸಮಯದ ಬಳಿಕ ಬಹಳಷ್ಟು ಮಾಹಿತಿಗಳು ಲಭ್ಯವಾಗಲಿವೆ. 

ನಿಮಗಿದು ತಿಳಿದಿರಲಿ 

ಹತ್ತಾರು ವರ್ಷಗಳ ಹಿಂದೆ ನಮ್ಮ ಜಿಲ್ಲೆಯಲ್ಲಿ ಮಲೇರಿಯ ವ್ಯಾಧಿಯು ವ್ಯಾಪಕವಾಗಿ ಹರಡಿ, ಅನೇಕ ರೋಗಿಗಳ ಮರಣಕ್ಕೆ ಕಾರಣವೆನಿಸಿತ್ತು. ಇದರಿಂದಾಗಿ ಭಯಭೀತರಾಗಿದ್ದ ಜನರು ವೈದ್ಯರ ಸಲಹೆಯನ್ನೂ ಪಡೆಯದೇ, ರಕ್ತ ಪರೀಕ್ಷೆ ಮಾಡಿಸಿಕೊಳ್ಳಲು ಪ್ರಯೋಗಾಲಯಗಳ ಮುಂದೆ ಸಾಲುಗಟ್ಟಿ ನಿಂತಿದ್ದು ನಿಮಗೂ ನೆನಪಿರಬಹುದು. 

ಇದೀಗ ಶೀತ-ಕೆಮ್ಮಿನೊಂದಿಗೆ ಗಂಟಲು ನೋವು,ಎದೆನೋವು ಮತ್ತು ಜ್ವರಗಳು ಬಾಧಿಸಿದೊಡನೆ ಪ್ರಯೋಗಾಲಯಗಳಿಗೆ ಧಾವಿಸದಿರಿ. ನಿಮ್ಮ ರಕ್ತ, ಮಲ, ಮೂತ್ರಗಳ ಪರೀಕ್ಷೆಯಿಂದ ಸಾರ್ಸ್ ವೈರಸ್ ನಿಮ್ಮ ಶರೀರದಲ್ಲಿ ಇರುವುದನ್ನು ಖಚಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ. ಶತಪ್ರತಿಶತ ಸಾರ್ಸ್ ವೈರಸ್ ನ್ನು ಗುರುತಿಸಲು ವಂಶವಾಹಿನಿಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಇತ್ತೀಚಿನ ಮಾಹಿತಿಯಂತೆ ಈ ಪರೀಕ್ಷೆಯನ್ನು ಒಬ್ಬ ವ್ಯಕ್ತಿಗೆ ನಡೆಸಲು ಸುಮಾರು ೮೦೦೦ ರೂ.ಗಳು ವೆಚ್ಚವಾಗುತ್ತವೆ. ಜೊತೆಗೆ ಇಂತಹ ಪರೀಕ್ಷೆಗಳನ್ನು ಸಣ್ಣಪುಟ್ಟ ಪ್ರಯೋಗಾಲಯಗಳಲ್ಲಿ ನಡೆಸಲಾಗದು. 

ಸಾರ್ಸ್ ರೋಗಕ್ಕೆ ಕಾರಣವಾಗಿರುವ ವೈರಸ್ ಗಳನ್ನು ನಿಖರವಾಗಿ ಪತ್ತೆಹಚ್ಚಲು ರೋಗಿಯಿಂದ ಸಂಗ್ರಹಿಸಿದ ಸೀರಮ್ ನ್ನು, ನೇಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ,ಪೂನಾ ಅಥವಾ ನೇಶನಲ್ ಇನ್ಸ್ತಿತ್ಯೋತ್ ಆಫ್ ಕಮ್ಯೂನಿಕೆಬಲ್ ಡಿಸೀಸಸ್, ದೆಹಲಿ, ಇಲ್ಲಿಗೆ ಕಳುಹಿಸಿ ಪರೀಕ್ಷಿಸಬೇಕಾಗುವುದು. ಈ ಎರಡು ಸಂಸ್ಥೆಗಳು ಮಾತ್ರ ಖಚಿತವಾಗಿ ರೋಗಿಯು ಸಾರ್ಸ್ ವ್ಯಾಧಿಯಿಂದ ಬಳತ್ತಿರುವುದನ್ನು ಪತ್ತೆಹಚ್ಚುವ ಪರೀಕ್ಷೆಗಳನ್ನು ನಡೆಸುವ ಸೌಲಭ್ಯಗಳನ್ನು ಹೊಂದಿವೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೦೧-೦೫-೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ - ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 



Thursday, August 21, 2014

SHAASAKARA VIDESHA YATRE RADAAGADU !




 

 

 ಶಾಸಕರ ವಿದೇಶ ಅಧ್ಯಯನ ಪ್ರವಾಸ ಭಾಗ್ಯ ರದ್ದಾಗದು !

ಚುನಾವಣೆಗಳ ಸಂದರ್ಭದಲ್ಲಿ ಮತದಾರರನ್ನು ಓಲೈಸುವ ಸಲುವಾಗಿ ಮತ್ತು ತದನಂತರ ತಮ್ಮ "ಮತನಿಧಿ " ಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವ ಸಲುವಾಗಿ, ಪ್ರತಿಯೊಂದು ರಾಜಕೀಯ ಪಕ್ಷಗಳು ಹಲವಾರು ಯೋಜನೆಗಳನ್ನು ಘೋಷಿಸಿ ಅನುಷ್ಠಾನಿಸುತ್ತವೆ. ಇವುಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಭಾಗ್ಯ, ಅನ್ನಭಾಗ್ಯ, ಕ್ಷೀರ ಭಾಗ್ಯ, ಶಾದಿ ಭಾಗ್ಯಗಳಂತಹ ಅನೇಕ " ಉಚಿತ ಭಾಗ್ಯ " ಗಳು ಸೇರಿವೆ. ಆದರೆ ಇದೇ ರಾಜಕಾರಣಿಗಳು ತಮ್ಮ ಸುಖ ಸೌಲಭ್ಯಗಳಿಗಾಗಿ ತಾವೇ ರೂಪಿಸಿ ಪಡೆದುಕೊಳ್ಳುವ " ಉಚಿತ ಭಾಗ್ಯ " ಗಳ ಸಂಖ್ಯೆಯೂ ಸಾಕಷ್ಟಿದೆ. ಇವುಗಳಲ್ಲಿ ಶಾಸಕರ ವಿದೇಶ ಅಧ್ಯಯನ ಪ್ರವಾಸವೂ ಒಂದಾಗಿದೆ. 

ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ ಈ ವಿಶೇಷ ಸೌಲಭ್ಯದ ಲೋಪದೋಷಗಳನ್ನು ಸರಿಪಡಿಸಲು ಮತ್ತು ದುರುಪಯೋಗವನ್ನು ತಡೆಗಟ್ಟಲು, ವಿಧಾನಸಭೆಯ ಅಧ್ಯಕ್ಷರು ನೇಮಿಸಿದ್ದ ಅಧಿಕಾರಿಗಳ ಸಮಿತಿಯೊಂದು, ತನ್ನ ಸಲಹೆ ಸೂಚನೆಗಳು ಮತ್ತು ಶಿಫಾರಸುಗಳ ವರದಿಯನ್ನು ಅಧ್ಯಕ್ಷರಿಗೆ ಸಲ್ಲಿಸಿದೆ. ಅನೇಕ ವರ್ಷಗಳಿಂದ ಶಾಸಕರ ಮೋಜು ಮಸ್ತಿಗಳಿಗೆ ಆಸ್ಪದವನ್ನು ನೀಡುತ್ತಿದ್ದ ಈ ಸೌಲಭ್ಯವು ರದ್ದಾಗುತ್ತದೆ ಎಂದು ನಂಬಿದ್ದ ಜನಸಾಮಾನ್ಯರಿಗೆ, ಸಮಿತಿಯ ವರದಿಯಿಂದ ನಿಜಕ್ಕೂ ಭ್ರಮನಿರಸನವಾಗಿದೆ.

ಹಿನ್ನೆಲೆ  

ಕರ್ನಾಟಕದ ಶಾಸಕರಿಗೆ ಲಭಿಸುವ ಅನೇಕ ಸೌಲಭ್ಯಗಳಲ್ಲಿ, ವಿವಿಧ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕನಿಷ್ಠ ಒಂದುಬಾರಿ ವಿದೇಶ ಅಧ್ಯಯನ ಪ್ರವಾಸವನ್ನು ಕೈಗೊಳ್ಳುವ ಅವಕಾಶವಿತ್ತು. ಆದರೆ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಎರಡುಬಾರಿ ವಿದೇಶ ಪ್ರವಾಸಕ್ಕೆ ಅವಕಾಶ ನೀಡುವ ನಿರ್ಧಾರವನ್ನು ತಳೆಯಲಾಗಿತ್ತು. ಇಷ್ಟು ಮಾತ್ರವಲ್ಲ, ಇದೇ ಅವಧಿಯಲ್ಲಿ ಮೂರುಬಾರಿ ಉಚಿತವಾಗಿ ಸ್ವದೇಶದಲ್ಲಿ ಪ್ರವಾಸ ಮಾಡಬಹುದಾದ ಸೌಲಭ್ಯವನ್ನೂ ಶಾಸಕರಿಗೆ ನೀಡಲಾಗಿತ್ತು.

ರಾಜ್ಯದ ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿರುವ ಶಾಸಕರು ಕಳೆದ ಹಲವಾರು ವರ್ಷಗಳಿಂದ ಸುಪ್ರಸಿದ್ಧ ಪ್ರವಾಸಿತಾಣಗಳಿರುವ ದೇಶಗಳಿಗೆ ಭೇಟಿನೀಡಿ, ಮೋಜು-ಮಸ್ತಿ ಮಾಡುತ್ತಿರುವ ಬಗ್ಗೆ ವ್ಯಾಪಕವಾದ ಪ್ರತಿಭಟನೆ ಜನರಿಂದ ವ್ಯಕ್ತವಾಗಿತ್ತು. ಹಾಗೂ ಇದೇ ಕಾರಣದಿಂದಾಗಿ ಈ ಪ್ರವಾಸವನ್ನು " ವಿದೇಶ ಅಧ್ಯಯನ ಪ್ರವಾಸ " ಎಂದು ಪುನರ್ ನಾಮಕರಣ ಮಾಡಲಾಗಿತ್ತು. ಆದರೆ ಶಾಸಕರ ಮೋಜು- ಮಸ್ತಿಗಳು ಮತ್ತು ಸುಪ್ರಸಿದ್ಧ ಪ್ರವಾಸಿತಾಣಗಳಿಗೆ ಭೇಟಿನೀಡುವ ಪದ್ಧತಿಯು ಎಂದಿನಂತೆಯೇ ಅಬಾಧಿತವಾಗಿ ಮುಂದುವರೆದಿತ್ತು!. 

ಅಸಂಬದ್ಧ ವರದಿಗಳು 

ವಿದೇಶ ಪ್ರವಾಸದಿಂದ ಮರಳಿದ ಬಳಿಕ ಅನೇಕ ಸಮಿತಿಗಳು ತಮ್ಮ ಅಧ್ಯಯನದ ವರದಿಗಳನ್ನೇ ಸಭಾಧ್ಯಕ್ಷರಿಗೆ ಸಲ್ಲಿಸಿಲ್ಲ. ಕೆಲ ಸಮಿತಿಗಳು ಸಲ್ಲಿಸಿರುವ ವರದಿಗಳನ್ನು ನೀವು ಓದಿದಲ್ಲಿ ಹೊಟ್ಟೆ ಹುಣ್ಣಾಗುವಂತೆ ನಗುವುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ ಜಗತ್ಪ್ರಸಿದ್ಧ ಪೀಸಾ ವಾಲು ಗೋಪುರದ ಬಗ್ಗೆ ನಮೂದಿಸಿರುವಂತೆ, ಇದರ ಮೂಲ ಅಸ್ತಿಭಾರದಲ್ಲೇ ದೋಷವಿದೆ. ವರ್ಷದಿಂದ ವರ್ಷಕ್ಕೆ ಈ ಗೋಪುರವು ೦.೦೪ ಡಿಗ್ರಿಯಷ್ಟು ವಾಲುವ ಚಾಲನೆಯಲ್ಲಿದ್ದು, ಕೊನೆಗೆ ಭೂಮಿಗೆ ಬೀಳುವ ಸಂಭವ ಇರುವುದಾಗಿ ಸಮಿತಿಗೆ ತಿಳಿದುಬಂತು!. 

ಇದಕ್ಕೂ ಮಿಗಿಲಾಗಿ ಯುರೋಪ್ ನ ಅತಿ ಎತ್ತರದ ಪರ್ವತ ಶಿಖರವಾಗಿರುವ ಯಂಗ್ ಫ್ರಾವ್ ಯೋಕ್ ಗೆ ಭೇಟಿ ನೀಡಿದ್ದ ಸರ್ಕಾರಿ ಭರವಸೆಗಳ ಸಮಿತಿಯು, ಈ ಹಿಮಾಚ್ಛಾದಿತ ಶಿಖರವನ್ನೇರಲು ಸುಮಾರು ನೂರಾರು ವರ್ಷಗಳ ಹಿಂದೆ ನಿರ್ಮಿಸಿದ್ದ ಸುರಂಗ ರೈಲು ಮಾರ್ಗವನ್ನು ವೀಕ್ಷಿಸಿತ್ತು. ಇದನ್ನು ಏರಲು ಪುಟ್ಟ ರೈಲೊಂದು ಸಂಚರಿಸುತ್ತಿದ್ದು, ಇದರಲ್ಲಿ ಪ್ರಯಾಣಿಸಿದ್ದ ಶಾಸಕರಿಗೆ ಅತ್ಯಾಶ್ಚರ್ಯವಾಗಿತ್ತು. ಈ ಬಗ್ಗೆ ತಮ್ಮ ವರದಿಯಲ್ಲಿ ಶಾಸಕರು ನೀಡಿದ್ದ ಸಲಹೆಯೊಂದು ಈ ರೀತಿ ಇದ್ದಿತು. ನಮ್ಮ ದೇಶದಲ್ಲಿರುವ ಹಿಮಾಲಯ ಪ್ರದೇಶದಲ್ಲಿ ಅನೇಕ ಪರ್ವತ ಶಿಖರಗಳಿದ್ದು, ಇದೇ ರೀತಿಯ ಸೌಲಭ್ಯವನ್ನು ಅಲ್ಲಿಯೂ ಕಲ್ಪಿಸಿಕೊಟ್ಟರೆ ಹೆಚ್ಚುಹೆಚ್ಚ್ಚು ಪ್ರವಾಸಿಗಳನ್ನು ಅಕರ್ಷಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು. ಇದು ಅಕ್ಷರಶಃ ಈ ವರದಿಯಲ್ಲಿನ ವಾಕ್ಯವೇ ಹೊರತು ಲೇಖಕರದ್ದಲ್ಲ್ಲ. ಇಂತಹ ವರದಿಗಳನ್ನು ಓದಿದಲ್ಲಿ ಕೇವಲ ಕಾಟಾಚಾರಕ್ಕಾಗಿ ಈ ವರದಿಗಳನ್ನು ಸಲ್ಲಿಸಿರುವುದು ಸ್ಪಷ್ಟವಾಗುತ್ತದೆ.

ಪ್ರವಾಸಕ್ಕೆ ಬ್ರೇಕ್   

 ಇದೇ ವರ್ಷದ ಬೇಸಗೆಯ ಸಂದರ್ಭದಲ್ಲಿ ರಾಜ್ಯದ ಅನೇಕ ತಾಲೂಕುಗಳ ಜನರು ಕುಡಿಯಲು ನೀರಿಲ್ಲದೇ ಬಳಲುತ್ತಿದ್ದರೂ, ಈ ಬರಪೀಡಿತ ಪ್ರದೇಶಗಳ ಸಮಸ್ಯೆಯನ್ನು ಬಗೆಹರಿಸಬೇಕಾದ ತಮ್ಮ ಹೊಣೆಗಾರಿಕೆಯನ್ನು ಮರೆತ ಕೆಲ ಶಾಸಕರು, ವಿದೇಶ ಅಧ್ಯಯನ ಪ್ರವಾಸಕ್ಕೆ ಸಜ್ಜಾಗಿದ್ದರು. ರಾಜ್ಯದ ಪ್ರಜೆಗಳ ಸಮಸ್ಯೆಯನ್ನು ನಿರ್ಲಕ್ಷಿಸಿ, ಪ್ರಜೆಗೆಳು ತೆತ್ತ ತೆರಿಗೆಯ ಹಣವನ್ನು ಬಳಸಿ ವಿದೇಶ ಪ್ರವಾಸಕ್ಕೆ ಹೊರಟಿದ್ದ ಶಾಸಕರ ವರ್ತನೆಗಳ ಬಗ್ಗೆ ಮಾಧ್ಯಮಗಳಲ್ಲಿ ವಿಸೃತ ವರದಿಗಳು ಪ್ರಕಟವಾದಂತೆಯೇ, ವಿಧಾನಸಭಾಧ್ಯಕ್ಷರು ಇದಕ್ಕೆ ಬ್ರೇಕ್ ಹಾಕಿದ್ದರು. ಜೊತೆಗೆ ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ೨೦೦೯ ರಲ್ಲಿ ರೂಪಿಸಿದ್ದ ಮಾರ್ಗದರ್ಶಿ ನೀತಿನಿಯಮಗಳಿದ್ದರೂ, ಇವುಗಳನ್ನು ಅವಶ್ಯಕತೆಯಿದ್ದಲ್ಲಿ ಬದಲಿಸಲು ಹೊಸದಾಗಿ ಮತ್ತೊಂದು ಸಮಿತಿಯನ್ನು ನೇಮಿಸಿದ್ದರು. ಈ ಸಮಿತಿಯ ವರದಿ ತಮ್ಮ ಕೈಸೇರಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದರು. 

ಖಡಕ್ ರಾಜಕಾರಣಿ ಎಂದೇ ಪ್ರಸಿದ್ಧರಾಗಿದ್ದ ವಿಧಾನಸಭಾಧ್ಯಕ್ಷರು, ರಾಜ್ಯದ ಶಾಸಕರ ವಿದೇಶ ಪ್ರವಾಸದ ಸೌಲಭ್ಯವನ್ನು ನಿಶ್ಚಿತವಾಗಿಯೂ ರದ್ದುಪಡಿಸುತ್ತಾರೆಂದು ಅನೇಕರು ಭಾವಿಸಿದ್ದರೂ, ಇವರ ಆದೇಶವನ್ನು ಗಮನಿಸಿದಾಗ ಶಾಸಕರ ವಿದೇಶ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆಯೇ ಹೊರತು, ರದ್ದುಪಡಿಸಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ವಿಧಾನಸಭಾಧ್ಯಕ್ಷರು ೨೦೦೯ ರಲ್ಲಿ ಶಾಸಕರ ವಿದೇಶ ಪ್ರವಾಸದ ಬಗ್ಗೆ ರೂಪಿಸಿದ್ದ ಪ್ರಮುಖ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಥಾನಗೊಳಿಸುವ ಮೂಲಕ ಶಾಸಕರ ಸ್ವೇಚ್ಚಾಚಾರಗಳಿಗೆ ಕಡಿವಾಣವನ್ನು ತೊಡಿಸಬಹುದಾಗಿದ್ದರೂ, ನೂತನ ಸಮಿತಿಯೊಂದನ್ನು ನೇಮಕಗೊಳಿಸಿದ್ದುದು ಏಕೆಂದು ನಮಗೂ ತಿಳಿದಿಲ್ಲ. ಪ್ರಾಯಶಃ ಈ ಬಾರಿಯ ವಿದೇಶ ಪ್ರವಾಸದ ಬಗ್ಗೆ ಜನಸಾಮಾನ್ಯರು ಮತ್ತು ಮಾಧ್ಯಮಗಳು ತೋರಿದ್ದ ವ್ಯಾಪಕ ಆಕ್ರೋಶವನ್ನು ತುಸು ತಣ್ಣಗಾಗಿಸಲು ಹಾಗೂ ಒಂದಿಷ್ಟು ಸಮಯಾವಕಾಶವನ್ನು ಪಡೆದುಕೊಳ್ಳುವ ಸಲುವಾಗಿ ಈ ನಿರ್ಧಾರವನ್ನು ಅವರು ತಳೆದಿರಬಹುದು. 

ಸಮಿತಿಯ ವರದಿಯಲ್ಲೇನಿದೆ?

ಸಮಿತಿಯ ವರದಿಯಲ್ಲಿ ಉಲ್ಲೇಖಿಸಿರುವಂತೆ ಇನ್ನು ಮುಂದೆ ಯಾವುದೇ ಸದನ ಸಮಿತಿಗಳು ಪ್ರತ್ಯೇಕವಾಗಿ ವಿದೇಶ ಪ್ರವಾಸವನ್ನು ಕೈಗೊಳ್ಳುವಂತಿಲ್ಲ.ಈ ಪದ್ದತಿಗೆ ಬದಲಾಗಿ ಶಾಸಕರ ಮೂರು ಅಥವಾ ನಾಲ್ಕು ತಂಡಗಳು ವಿದೇಶಗಳಿಗೆ ಭೇಟಿ ನೀಡಬಹುದಾಗಿದ್ದು, ನಿರ್ದಿಷ್ಟ ವಿಷಯಗಳ ಬಗ್ಗೆ ಅಧ್ಯಯನವನ್ನು ನಡೆಸಬೇಕಾಗುವುದು. ಉದಾಹರಣೆಗೆ ಮೂಲ ಸೌಕರ್ಯ, ತ್ಯಾಜ್ಯ ಸಂಗ್ರಹ- ವಿಲೇವಾರಿ, ಉತ್ತಮ ಗುಣಮಟ್ಟದ ರಸ್ತೆಗಳು- ಕಾಲುದಾರಿಗಳು, ಕೃಷಿ ಪದ್ಧತಿ, ಕಾನೂನು ಸುವ್ಯವಸ್ಥೆ ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಆದರೆ ಹಿಂದಿನಂತೆ ಪ್ರವಾಸದಿಂದ ಮರಳಿದ ಬಳಿಕ ಅಧ್ಯಯನದ ವರದಿಯನ್ನು ನೀಡದೇ ಇರಲು ಅವಕಾಶ ಇಲ್ಲದಿರುವುದರಿಂದ, ಕಾಲಮಿತಿಯಲ್ಲಿ ತಾವು ನಡೆಸಿದ್ದ ಅಧ್ಯಯನದ ವರದಿಯನ್ನು ವಿಧಾನ ಸಭೆಯ ಅಥವಾ ಪರಿಷತ್ತಿನ ಅಧ್ಯಕ್ಷರಿಗೆ ಸಲ್ಲಿಸಲೇಬೇಕಾಗುತ್ತದೆ!. 

ಇಷ್ಟು ಮಾತ್ರವಲ್ಲ, ಯಾವುದೇ ಶಾಸಕರು ವಿದೇಶ ಪ್ರವಾಸದ ಸಂದರ್ಭದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಜೊತೆಗೆ ಕರೆದೊಯ್ಯುವಂತಿಲ್ಲ. ಆದರೆ ಕುಟುಂಬದ ಸದಸ್ಯರ ಖರ್ಚು ವೆಚ್ಚಗಳನ್ನು ಶಾಸಕರೇ ಭರಿಸುವುದಾದಲ್ಲಿ, ಇದಕ್ಕೆ ಅಡ್ಡಿಪಡಿಸುವುದಿಲ್ಲ. ವಿಧಾನಸಭಾಧ್ಯಕ್ಷರು ನೇಮಿಸಿದ್ದ ಈ ಸಮಿತಿಯು ಸಲ್ಲಿಸಿರುವ ವರದಿಯಲ್ಲಿನ ಸಲಹೆ ಸೂಚನೆಗಳು ಮತ್ತು ಶಿಫಾರಸುಗಳನ್ನು ವಿಶೇಷ ಮಂಡಳಿಯೊಂದು ಇನ್ನಷ್ಟೇ ಅಂಗೀಕರಿಸಬೇಕಿದೆ ಎನ್ನುವ ಮಾಹಿತಿಯನ್ನು ಸ್ಪೀಕರ್ ನೀಡಿದ್ದಾರೆ. ಈ ವರದಿಯಲ್ಲಿನ ಸಲಹೆ ಸೂಚನೆಗಳನ್ನು ಮತ್ತು ಶಿಫಾರಸುಗಳನ್ನು ಕಂಡ ನಮ್ಮ ಶಾಸಕರು, ಇದನ್ನು ಅಂಗೀಕರಿಸದಂತೆ ವಿಶೇಷ ಮಂಡಳಿಯ ಮೇಲೆ ಒತ್ತಡವನ್ನು ಹೇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಂತೆಯೇ ಈ ವರದಿಯನ್ನು ಅಂಗೀಕರಿಸದೇ, ಹಿಂದಿನ ಪದ್ದತಿಯನ್ನೇ ಮುಂದುವರೆಸಿದಲ್ಲಿ ರಾಜ್ಯದ ಪ್ರಜೆಗಳ ಆಕ್ರೋಶಕ್ಕೆ ಗುರಿಯಾಗುವುದರಲ್ಲಿ ಮಾತ್ರ ಸಂದೇಹವಿಲ್ಲ. 

ಸೌಲಭ್ಯವನ್ನೇ ರದ್ದುಪಡಿಸಿ 

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವುದು ನಿಜವಾದಲ್ಲಿ, ಪ್ರಜೆಗಳು ಪಾವತಿಸಿದ ತೆರಿಗೆಯ ಹಣವನ್ನು ಬಳಸಿ ನಮ್ಮ ಶಾಸಕರು ಕೈಗೊಳ್ಳುವ  ಉಚಿತ ಸ್ವದೇಶ ಪ್ರವಾಸ ಮತ್ತು ವಿದೇಶ ಅಧ್ಯಯನ ಪ್ರವಾಸಗಳನ್ನು  ರದ್ದುಗೊಳಿಸಲೇಬೇಕು. ಏಕೆಂದರೆ ಇದಕ್ಕೂ ಮುನ್ನ ವಿದೇಶ ಅಧ್ಯಯನ ಪ್ರವಾಸಗಳನ್ನು ಕೈಗೊಂಡಿದ್ದ ಶಾಸಕರ ತಂಡಗಳು ನೀಡಿದ್ದ ವರದಿಗಳಲ್ಲಿ ( ವರದಿಗಳನ್ನು ನೀಡಿದ್ದಲ್ಲಿ ! ) ಶಿಫಾರಸು ಮಾಡಿರುವ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ಉದಾಹರಣೆಗಳೇ ಇಲ್ಲ. ಇದಕ್ಕೂ ಮಿಗಿಲಾಗಿ ವಿದೇಶಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ಸ್ವಚ್ಚತೆ, ಕಾನೂನು ಪರಿಪಾಲನೆ, ಶಿಸ್ತು ಮತ್ತಿತರ ವಿಚಾರಗಳು ಮತ್ತು ಅತ್ಯುತ್ತಮ ಮೂಲಸೌಕರ್ಯಗಳ ಸೌಲಭ್ಯ ಇತ್ಯಾದಿಗಳ ವಿವರಗಳನ್ನು ಅರಿತುಕೊಳ್ಳಲು ಆಯಾ ದೇಶಗಳಿಗೆ ಭೇಟಿ ನೀಡಬೇಕಾದ ಅವಶ್ಯಕತೆಯೇ ಉದ್ಭವಿಸುವುದಿಲ್ಲ. ಇವೆಲ್ಲಾ ಮಾಹಿತಿಗಳು ಅಂತರ್ಜಾಲ ತಾಣಗಳಲ್ಲಿ ಸುಲಭದಲ್ಲೇ ಲಭಿಸುತ್ತವೆ. ಇದೇ ಕಾರಣದಿಂದಾಗಿ ಇಂತಹ ಅಧ್ಯಯನ ಪ್ರವಾಸಗಳಿಂದ ನಮ್ಮ ರಾಜಕ್ಕೆ ಮತ್ತು ರಾಜ್ಯದ ಪ್ರಜೆಗಳಿಗೆ ಯಾವುದೇ ರೀತಿಯ ಲಾಭವಿಲ್ಲ. ಅಂತೆಯೇ ಇದರಿಂದ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳು ದೊರೆಯುವ ಮತ್ತು ತತ್ಪರಿಣಾಮವಾಗಿ ಇವರ ಜೀವನದ ಮಟ್ಟವು ಉನ್ನತ ಸ್ಥರಕ್ಕೆ ಏರುವ ಸಾಧ್ಯತೆಗಳೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. 

ಸರ್ಕಾರಿ ಅಧಿಕಾರಿಗಳೇ ಸದಸ್ಯರಾಗಿದ್ದ ಈ ಸಮಿತಿಯ ಸಂಪೂರ್ಣ ವರದಿಯ ಬಗ್ಗೆ ನಮ್ಮ ಶಾಸಕರು ಏನೆನ್ನುತ್ತಾರೆ ಅನ್ನುವುದನ್ನು ಅರಿತುಕೊಳ್ಳುವ ಕುತೂಹಲ ಜನಸಾಮಾನ್ಯರ ಮನದಲ್ಲಿ ಮೂಡಿದಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ತಾವು ಚುನಾಯಿಸಿದ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಅರಿತುಕೊಳ್ಳುವ ಹಕ್ಕು ರಾಜ್ಯದ ಜನರಿಗೆ ಇದೆ.


ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



Tuesday, August 19, 2014

EBOLA - UPDATE



 ಎಬೊಲ : ಮತ್ತೊಂದಿಷ್ಟು ಮಾಹಿತಿ 


ಪಶ್ಚಿಮ ಆಫ್ರಿಕಾದ ನಾಲ್ಕು ದೇಶಗಳಲ್ಲಿ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಉದ್ಭವಿಸಿ, ಕಾಡ್ಗಿಚ್ಚಿನಂತೆ ಹರಡುತ್ತಿರುವ ಎಬೊಲ ವೈರಸ್ ಗಳ ಮಾರಕತೆಗೆ ಈಗಾಗಲೇ ಸುಮಾರು ೧೩೦೦ ರೋಗಿಗಳು ಬಲಿಯಾಗಿದ್ದಾರೆ. ಎಬೊಲ ರಕ್ತಸ್ರಾವಕ ವ್ಯಾಧಿ ಪೀಡಿತರಲ್ಲಿ ಶೇ.೯೦ ರಷ್ಟು ಜನರು ಮೃತಪಡುವ ಸಾಧ್ಯತೆಗಳಿದ್ದು, ಈ ವ್ಯಾಧಿಯನ್ನು ನಿಯಂತ್ರಿಸಲು ಲೈಬೀರಿಯ, ಸಿಯೆರಾ ಲಿಯೋನ್, ಗಿನಿ ಮತ್ತು ನೈಜೀರಿಯ ದೇಶಗಳು ಹರಸಾಹಸವನ್ನೇ ನಡೆಸುತ್ತಿವೆ. ಈ ವೈರಸ್ ಗಳ ಹಾವಳಿಯನ್ನು ನಿಯಂತ್ರಿಸಲು, ವ್ಯಾಧಿ ಪೀಡಿತರಿಗೆ ಅನ್ನಾಹಾರಗಳನ್ನು ಒದಗಿಸಲು ಮತ್ತು ರೋಗಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆಯನ್ನು ನೀಡಲು ವಿಶ್ವ ಆರೋಗ್ಯ ಸಂಸ್ಥೆಯ ತಂಡಗಳು ಹಗಲಿರುಳು ಶ್ರಮಿಸುತ್ತಿವೆ. 

ಪಶ್ಚಿಮ ಆಫ್ರಿಕಾದ ಈ ದೇಶಗಳಲ್ಲಿ ಕರ್ತವ್ಯನಿರತರಾಗಿದ್ದ ಅನೇಕ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬಂದಿಗಳು ಮೃತಪಟ್ಟಿದ್ದು, ಇತರ ಹಲವಾರು ಸಿಬಂದಿಗಳು ತಮ್ಮ ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ತತ್ಪರಿಣಾಮವಾಗಿ ಈ ವೈರಸ್ ಗಳ ಹಾವಳಿಯನ್ನು ನಿಯಂತ್ರಿಸಲು ಮತ್ತು ವ್ಯಾಧಿ ಪೀಡಿತರನ್ನು ಚಿಕಿತ್ಸಿಸಲು ನಡೆಸುತ್ತಿರುವ ಹೋರಾಟಕ್ಕೆ ತುಸು ಹಿನ್ನಡೆಯಾಗಿದೆ. 

ಎಬೊಲ ಪೀಡಿತ ಪ್ರದೇಶಗಳಲ್ಲಿ ಸುಮಾರು ಹತ್ತು ದಶಲಕ್ಷ ಜನರು ವಾಸಿಸುತ್ತಿದ್ದು, ಇವರನ್ನು ಸ್ಥಳೀಯ ಭದ್ರತಾ ಪಡೆಗಳು ಸುತ್ತುವರೆದಿವೆ. ಇಷ್ಟೊಂದು ಜನರಿಗೆ ಅನ್ನಾಹಾರಗಳನ್ನು ಒದಗಿಸುವ ಮೂಲಕ ಜನರ ಅನಾವಶ್ಯಕ ಚಲನವಲನಗಳನ್ನು ನಿಯಂತ್ರಿಸಲಾಗಿದೆ. ಜೊತೆಗೆ ಪ್ರತಿನಿತ್ಯ ನಿಯಮಿತವಾಗಿ ಇಷ್ಟೊಂದು ಜನರಿಗೆ ಅವಶ್ಯಕ ಆಹಾರವನ್ನು ಒದಗಿಸುವ ಸಿಬಂದಿಗಳಿಗೆ ಮತ್ತು ವೈದ್ಯಕೀಯ- ಅರೆ ವೈದ್ಯಕೀಯ ಸಿಬಂದಿಗಳಿಗೆ ವ್ಯಾಧಿ ಹರಡದಂತೆ ಅವಶ್ಯಕ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಏಕೆಂದರೆ ಈ ವ್ಯಾಧಿ ಪೀಡಿತ ೨,೨೪೦ ರೋಗಿಗಳಲ್ಲಿ, ೧,೨೯೯ ರೋಗಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಇದೇ ತಿಂಗಳಿನ ೧೪ - ೧೬ ನೇ ತಾರೀಕುಗಳ ನಡುವೆ ಲೈಬೀರಿಯದಲ್ಲಿ ೫೩, ಸಿಯೆರ ಲಿಯೋನ್ ನಲ್ಲಿ ೧೭ ಮತ್ತು ಗಿನಿಯಲ್ಲಿ ೧೪ ರೋಗಿಗಳು ಮೃತಪಟ್ಟಿದ್ದಾರೆ. 

ಲೈಬೀರಿಯ ದೇಶದ ಗಡಿ ಪ್ರದೇಶದಲ್ಲಿ ಮತ್ತು ಬಡವರು ವಾಸವಾಗಿರುವ ಕೊಳೆಗೇರಿಗಳಲ್ಲಿ ಈ ವೈರಸ್ ಹರಡುವುದನ್ನು ನಿಯಂತ್ರಿಸಲು ಅನೇಕ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಕೆಲ ದಿನಗಳ ಹಿಂದೆ ಶಂಕಿತ ಎಬೊಲ ಪೀಡಿತ ವ್ಯಕ್ತಿಗಳನ್ನು ಪ್ರತ್ಯೇಕಿಸಿ ಇರಿಸಿದ್ದ ತಾಣದ ಮೇಲೆ ದಾಳಿ ಮಾಡಿದ್ದ ಸ್ಥಳೀಯ ಜನರಿಂದಾಗಿ, ಅಲ್ಲಿದ್ದ ೧೭ ವ್ಯಕ್ತಿಗಳು ನಾಪತ್ತೆಯಾಗಿದ್ದರು. ಆದರೆ ಅದೃಷ್ಟವಶಾತ್ ಇವರೆಲ್ಲರನ್ನೂ ಪತ್ತೆ ಹಚ್ಚಿ ಮತ್ತೆ ಪ್ರತ್ಯೇಕಿಸಿ ಇರಿಸಲು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 

ನೂತನ ಔಷದ 

ಎಬೊಲ ವೈರಸ್ ಗಳನ್ನು ಮಣಿಸಬಲ್ಲ ನೂತನ ಔಷದವೊಂದನ್ನು ಸಂಶೋಧಿಸಲಾಗಿದ್ದರೂ, ಇದನ್ನು ಕೇವಲ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿತ್ತು. ಝೆಡ್ ಮಾಪ್ ಎಂದು ಹೆಸರಿಸಲಾಗಿರುವ ಈ ಔಷದವನ್ನು ಮನುಷ್ಯರ ಮೇಲೆ ಪ್ರಯೋಗಿಸದೇ ಇದ್ದರೂ, ಎಬೊಲ ವೈರಸ್ ವ್ಯಾಧಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದೇ ಇರುವುದರಿಂದ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಮನುಷ್ಯರಿಗೆ ನೀಡಲು ಹಸಿರು ನಿಶಾನೆಯನ್ನು ತೋರಿದೆ. ಈ ಔಷದವನ್ನು ಸೇವಿಸಿದ ರೋಗಿಗಳಲ್ಲಿ ಗಮನಾರ್ಹ ಚೇತರಿಕೆಯ ಲಕ್ಷಣಗಳು ಕಂಡುಬಂದಿವೆ. ಆದರೆ ಇದರ ತಯಾರಕರಾದ ಮಾಪ್ ಫಾರ್ಮಸ್ಯೂಟಿಕಲ್ಸ್ ಸಂಸ್ಥೆಯ ಬಳಿಯಿದ್ದ ಅಲ್ಪ ಪ್ರಮಾಣದ ಈ ಔಷದದ ದಾಸ್ತಾನು ಮುಗಿದಿದೆ. ಹಾಗೂ ಇದೇ ಕಾರಣದಿಂದಾಗಿ ಈ ಔಷದದ ಹೊಸ ದಾಸ್ತಾನು ಸರಬರಾಜಾಗುವ ತನಕ, ಎಬೊಲ ಪೀಡಿತ ವ್ಯಕ್ತಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆಗಳಿವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 






Saturday, August 16, 2014

KARNAATAKADA SHAASAKARA ANAAROGYA.........


 

 ಕರ್ನಾಟಕದ ಶಾಸಕರ ಅನಾರೋಗ್ಯ ಹಾಗೂ ಉಚಿತ ಚಿಕಿತ್ಸಾ ಭಾಗ್ಯ !

ತಮ್ಮ ಪಕ್ಷದ ಮತ್ತು ತಮ್ಮ ವೈಯುಕ್ತಿಕ ಜನಪ್ರಿಯತೆಯನ್ನು ಹೆಚ್ಚಿಸುವ ಹಾಗೂ ತನ್ಮೂಲಕ ಅಮಾಯಕ ಜನರ ಮತಗಳನ್ನು ಗಳಿಸಿಕೊಳ್ಳುವ ಸಲುವಾಗಿ, ರಾಜಕಾರಣಿಗಳು ಅನೇಕ ಜನಪ್ರಿಯ ( ಉಚಿತ ) ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಅವಕಾಶ ಸಿಕ್ಕಿದಾಗಲೆಲ್ಲಾ " ತಾವು ಜಾರಿಗೊಳಿಸಿದ್ದ ಯೋಜನೆ" ಗಳ ಬಗ್ಗೆ ಪುಂಖಾನುಪುಂಖವಾಗಿ ಕೊರೆಯುವ ರಾಜಕಾರಣಿಗಳು,ಇಂತಹ ಯೋಜನೆಗಳಿಗಾಗಿ ಸರ್ಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಾರೆಯೇ ಹೊರತು ತಮ್ಮ ಜೇಬಿನಿಂದಲ್ಲ. ಆದೇ ರೀತಿಯಲ್ಲಿ  ತಮ್ಮ ( ಅರ್ಥಾತ್ ಶಾಸಕರ ) ಸಲುವಾಗಿ ಸದ್ದುಗದ್ದಲವಿಲ್ಲದೇ ಇವರು ಪಡೆದುಕೊಳ್ಳುತ್ತಿರುವ ಅನೇಕ " ಉಚಿತ ಸೌಲಭ್ಯ" ಗಳ ಬಗ್ಗೆ ದೇಶದ ಸಾಮಾನ್ಯ ಪ್ರಜೆಗಳಿಗೂ ಸೂಕ್ತ ಮಾಹಿತಿಯ ಅರಿವಿರುವುದಿಲ್ಲ!. 

ಉಚಿತ ಚಿಕಿತ್ಸಾ ಭಾಗ್ಯ!

ನಮ್ಮ ಶಾಸಕರು ತಮ್ಮ ಸಲುವಾಗಿ ತಾವೇ ಮಂಜೂರು ಮಾಡಿಸಿದ್ದ ಅನೇಕ ಸೌಲಭ್ಯಗಳಲ್ಲಿ, ಉಚಿತ ಚಿಕಿತ್ಸಾ ಭಾಗ್ಯವೂ ಒಂದಾಗಿದೆ. ವಿಶೇಷವೆಂದರೆ ಇಂತಹ ಹಲವಾರು ಸೌಲಭ್ಯಗಳು ದೇಶದ ಪ್ರತಿಯೊಂದು ರಾಜ್ಯಗಳ ಶಾಸಕರು ಮತ್ತು ಸಂಸದರಿಗೂ ಲಭಿಸುತ್ತಿದೆ. ನಮ್ಮ ದೇಶದ ವಿವಿಧ ರಾಜ್ಯಗಳ ಶಾಸಕರು ಮತ್ತು ಸಂಸದರಲ್ಲಿ ಕೋಟ್ಯಾಧಿಪತಿಗಳೇ ಹೆಚ್ಚಾಗಿದ್ದು, ಚುನಾವಣೆಯ ಸಂದರ್ಭದಲ್ಲಿ ಇವರೆಲ್ಲರೂ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಾರೆ. ಆದರೆ ಒಮ್ಮೆ ಶಾಸಕ ಅಥವಾ ಸಂಸದರಾಗಿ ಚುನಾಯಿತರಾದಂತೆಯೇ, ತಮಗೆ ಲಭ್ಯವಿರುವ ಪ್ರತಿಯೊಂದು ಸೌಲಭ್ಯಗಳನ್ನು ನಿಸ್ಸಂಕೋಚವಾಗಿ ಬಳಸಿಕೊಳ್ಳುತ್ತಾರೆ!. 

ಸಚಿವರಿಗೆ ವಿದೇಶದಲ್ಲಿ ಚಿಕಿತ್ಸೆ 

ಇತ್ತೀಚಿಗೆ ಕರ್ನಾಟಕದ ವಸತಿ ಸಚಿವರು ತಮ್ಮ ಆರೋಗ್ಯದ ಸಮಸ್ಯೆಯ ಚಿಕಿತ್ಸೆಯ ಸಲುವಾಗಿ ಸಿಂಗಾಪುರಕ್ಕೆ ತಮ್ಮ ಪರಿವಾರದೊಂದಿಗೆ ತೆರಳಲು ಹಾಗೂ ಅಲ್ಲಿನ ಖ್ಯಾತ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಮತ್ತು ಮರಳಿಬರಲು ವ್ಯಯಿಸಿದ್ದ ೧.೧೬ ಕೋಟಿ ರೂ.ಗಳಲ್ಲದೇ, ಬೆಂಗಳೂರಿನ ಆಸ್ಪತ್ರೆಗೆ ಪಾವತಿಸಿದ್ದ ೫ ಲಕ್ಷ ರೂ. ಗಳನ್ನು ರಾಜ್ಯ ಸರ್ಕಾರ ಮರುಪಾವತಿಸಿದೆ. ಅಸ್ತಿತ್ವದಲ್ಲಿರುವ ನಿಯಮಗಳಂತೆ ಇವರಿಗೆ ಕೇವಲ ೫ ಲಕ್ಷ ರೂ. ಗಳನ್ನು ವೈದ್ಯಕೀಯ ವೆಚ್ಚಕ್ಕಾಗಿ ನೀಡಬಹುದಾಗಿದ್ದರೂ, ಮುಖ್ಯಮಂತ್ರಿಗಳು ಈ ನಿಯಮವನ್ನು ಉಲ್ಲಂಘಿಸಿ ೧.೨೧ ಕೋಟಿ ರೂ.ಗಳನ್ನು ಸಚಿವರಿಗೆ ಪಾವತಿಸಿರುವುದು ನಂಬಲಸಾಧ್ಯವೆನಿಸುತ್ತದೆ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಮಾಜಿ ಮಂತ್ರಿಯೋಬ್ಬರಿಗೆ ಶ್ರವಣ ಸಾಧನವನ್ನು ಖರೀದಿಸಲು ವ್ಯಯಿಸಿದ್ದ ೫ ಲಕ್ಷ ರೂ.ಗಳನ್ನು ಮರುಪಾವತಿಸಲಾಗಿತ್ತು. ಈ ವಿಚಾರವು ಸಾಕಷ್ಟು ವಾದವಿವಾದಗಳಿಗೂ ಕಾರಣವೆನಿಸಿತ್ತು. ಅದೇ ರೀತಿಯಲ್ಲಿ ಇತ್ತೀಚಿಗೆ ವಿಧಾನ ಪರಿಷತ್ತಿನ ಸದಸ್ಯರೊಬ್ಬರು ತನ್ನ ಬಕ್ಕ ತಲೆಗೆ ಕೂದಲನ್ನು ಕಸಿಮಾಡಿಸಲು ವ್ಯಯಿಸಿದ್ದ ೧.೨೫ ಲಕ್ಷ ರೂ. ಗಳನ್ನು ಸರ್ಕಾರದಿಂದ ಮರುಪಾವತಿಯ ರೂಪದಲ್ಲಿ ಪಡೆದುಕೊಳ್ಳಲು ಅರ್ಜಿಸಲ್ಲಿಸಿದ ವಿಚಾರ ಮಾಧ್ಯಮಗಳ ಮೂಲಕ ಬಹಿರಂಗವಾದೊಡನೆ, ಈ ಬಗ್ಗೆ ಜನಸಾಮಾನ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಆತಂಕಗೊಂಡ ಈ ಸದಸ್ಯರು ತಾವು ತಮ್ಮನ್ನು ಕಾಡುತ್ತಿರುವ ಚರ್ಮವ್ಯಾಧಿಯ ಚಿಕಿತ್ಸೆಯ ವೆಚ್ಚದ ಮರುಪಾವತಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೇ ಹೊರತು, ಕೂದಲು ಕಸಿಮಾಡಿಸಲು ಅಲ್ಲವೆನ್ನುವ ಹೇಳಿಕೆಯನ್ನು ನೀಡಿದ್ದರು. ಜೊತೆಗೆ ಇನ್ನು ಮುಂದೆ ಯಾವುದೇ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಸರ್ಕಾರದಿಂದ ಪಡೆಯುವುದಿಲ್ಲ ಎಂದು ಶಪಥ ಮಾಡಿದ್ದರು!. 

ಆದರೆ ಇದೀಗ ರಾಜ್ಯದ ವಸತಿ ಸಚಿವರಿಗೆ ಒಂದು ಕೋಟಿಗೂ ರೂ.ಗಳಿಗೂ ಅಧಿಕ ಮೊತ್ತವನ್ನು ಮರುಪಾವತಿಸಿರುವುದು ರಾಜ್ಯದ ಜನರ ಮನಸ್ಸಿನಲ್ಲಿ ಒಂದಿಷ್ಟು ಕುತೂಹಲ ಹಾಗೂ ಸಾಕಷ್ಟು ಅಸಮಾಧಾನವನ್ನು ಮೂಡಿಸಿದೆ. ವಿಶೇಷವೆಂದರೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು, ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಬಾರಿಗೆ ಅಲ್ಲ ಮತ್ತು ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿರುವುದು ನೂರಕ್ಕೆ ನೂರು ಸತ್ಯ. ಏಕೆಂದರೆ ರಾಜ್ಯದ ಪ್ರಜೆಗಳು ಪಾವತಿಸಿರುವ ತೆರಿಗೆಯ ಹಣದಲ್ಲಿ, ನಮ್ಮ ಶಾಸಕರಿಗೆ ಅನೇಕ ವರ್ಷಗಳಿಂದ ಕೋಟ್ಯಂತರ ರೂಪಾಯಿಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಪಾವತಿಸಿದೆ. ಇನ್ನು ಮುಂದೆಯೂ ಪಾವತಿಸಲಿದೆ. 

ಆದರೆ ರಾಜ್ಯದ ವಸತಿ ಸಚಿವರ ಅನಾರೋಗ್ಯದ ಪ್ರಕರಣ ತುಸು ಬಿನ್ನವಾಗಿದೆ. ಸಚಿವರು ಉಸಿರಾಟದ ಸಮಸ್ಯೆಯಿಂದ ಮೊದಲು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು.ಈ ಸಂದರ್ಭದಲ್ಲಿ, ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವಂತೆ ಅವರ ಸ್ನೇಹಿತ ರಜನೀಕಾಂತ್ ನೀಡಿದ್ದ ಸಲಹೆಯನ್ನು ಮನ್ನಿಸಿದ ಸಚಿವರನ್ನು ಏರ್ ಎಂಬುಲೆನ್ಸ್ ನಲ್ಲಿ ಅವರ ಪರಿವಾರದೊಂದಿಗೆ ಅಲ್ಲಿಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ರಜನೀಕಾಂತ್ ಅವರೇ ಭರಿಸಲಿದ್ದಾರೆ ಎನ್ನುವ "ಗಾಳಿಸುದ್ದಿ" ಯೂ ಮಾಧ್ಯಮಗಳಲ್ಲಿ ಹರಡಿತ್ತು. ಇದರಿಂದ ಕೆರಳಿದ ಸಚಿವರು, ತನ್ನ ಚಿಕಿತ್ಸಾ ವೆಚ್ಚವನ್ನು ಭರಿಸುವ ಸಾಮರ್ಥ್ಯ ತನಗಿದೆ ಎಂದಿದ್ದರು. ಆದರೆ ಗುಣಮುಖರಾಗಿ ಸಿಂಗಪುರದಿಂದ ಮರಳಿದ ಬಳಿಕ ತನ್ನ ಪ್ರಯಾಣದ ಮತ್ತು ಚಿಕಿತ್ಸಾ ವೆಚ್ಚಗಳನ್ನು ಸರ್ಕಾರದ ಬೊಕ್ಕಸದಿಂದ ಪಡೆದುಕೊಂಡಿದ್ದರು!. 

ನಿಜ ಹೇಳಬೇಕಿದ್ದಲ್ಲಿ ರಾಜ್ಯದ ಪ್ರಜೆಗಳಿಗೆ ಸಮರ್ಪಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಆದರೆ ಜನಪ್ರತಿನಿಧಿಗಳಿಗೆ ಅವಶ್ಯಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಮತ್ತು ಕೆಲ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ವ್ಯಯಿಸಿದ್ದ ವೆಚ್ಚವನ್ನು ಮರುಪಾವತಿಸಲು, ಅಸ್ತಿತ್ವದಲ್ಲಿರುವ ನಿಯಮಗಳನ್ನೇ ಉಲ್ಲಂಘಿಸುತ್ತಿದೆ. 

ವೈದ್ಯಕೀಯ ಭತ್ಯೆ?

ಕರ್ನಾಟಕದ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಜೀವನ ಪರ್ಯಂತ ಉಚಿತ ಚಿಕಿತ್ಸಾ ಭಾಗ್ಯ ಲಭ್ಯವಿದೆ. ಒಂದುಬಾರಿ ಶಾಸಕರಾಗಿ ಆಯ್ಕೆಯಾದಲ್ಲಿ ಇವರಿಗೆ ಮತ್ತು ಕುಟುಂಬದ ಸದಸ್ಯರಿಗೆ ಲಭಿಸುವ ಉಚಿತ ಚಿಕಿತ್ಸಾ ಭಾಗ್ಯವು, ಶಾಸಕರು ನಿವೃತ್ತರಾದ ಅಥವಾ ಮೃತಪಟ್ಟ ಬಳಿಕವೂ ಅವರ ಕುಟುಂಬದ ಸದಸ್ಯರಿಗೆ ದೊರೆಯುತ್ತದೆ. ನಿವೃತ್ತ ಶಾಸಕರಿಗೆ ಸರ್ಕಾರ ನೀಡುವ ಮಾಸಿಕ ಪಿಂಚಣಿಯೊಂದಿಗೆ, ಪ್ರತಿತಿಂಗಳಿನಲ್ಲೂ ವೈದ್ಯಕೀಯ ವೆಚ್ಚವೆಂದು ೪ ಸಾವಿರ ರೂಪಾಯಿಗಳನ್ನು ಮತ್ತು ಮೃತ ಶಾಸಕರ ಕುಟುಂಬದ ಸದಸ್ಯರೊಬ್ಬರಿಗೆ ನೀಡುವ ಕುಟುಂಬ ಪಿಂಚಣಿಯೊಂದಿಗೆ ವೈದ್ಯಕೀಯ ವೆಚ್ಚವೆಂದು ೨ ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯವು ಯಾವುದೇ ರೀತಿಯ ಅನಾರೋಗ್ಯದಿಂದ ಪೀಡಿತರಾಗಿರದ ಶಾಸಕರು ಅಥವಾ ಅವರ ಕುಟುಂಬದ ಸದಸ್ಯರಿಗೂ ಅಯಾಚಿತವಾಗಿ ಲಭಿಸುತ್ತಿದೆ!. 

ನಿಯಮಗಳು ಎಂತಿವೆ?

ರಾಜ್ಯ ಸರ್ಕಾರದ ನಿಯಮಗಳಂತೆ ಅನಾರೋಗ್ಯ ಪೀಡಿತ ಶಾಸಕರು ನಮ್ಮ ರಾಜ್ಯದಲ್ಲಿನ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಅವಶ್ಯಕ ಚಿಕಿತ್ಸೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅವಶ್ಯಕ ಚಿಕಿತ್ಸಾ ಸೌಲಭ್ಯಗಳು ನಮ್ಮ ದೇಶದಲ್ಲಿ ಲಭ್ಯವಿಲ್ಲದಲ್ಲಿ, ವಿದೇಶಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಚಿಕಿತ್ಸಾ ವೆಚ್ಚವನ್ನು ಶಾಸಕರೇ ಪಾವತಿಸಿದಲ್ಲಿ, ಸೂಕ್ತ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿ ಮರುಪಾವತಿಯ ರೂಪದಲ್ಲಿ ಪಡೆದುಕೊಳ್ಳಬಹುದಾಗಿದ್ದರೂ, ಇದರ ಮಿತಿಯು ಕೇವಲ ೫ ಲಕ್ಷ ರೂ.ಗಳಾಗಿವೆ. ಕರ್ನಾಟಕ ವಿಧಾನ ಮಂಡಲಗಳ ( ಸದಸ್ಯರ ವೈದ್ಯಕೀಯ ಸೌಲಭ್ಯ) ನಿಯಮಗಳು ೧೯೬೯  ಮತ್ತು ಕರ್ನಾಟಕ ವಿಧಾನ ಮಂಡಲಗಳ ( ನಿವೃತ್ತ ಶಾಸಕರ ವೈದ್ಯಕೀಯ ಸೌಲಭ್ಯ) ಗಳ ನಿಯಮಗಳು ೨೦೦೭ ಗಳಂತೆ, ರಾಜ್ಯದ ಹಾಲಿ ಮತ್ತು ಮಾಜಿ ಶಾಸಕರು ಮತ್ತು ಅವರ ಕುಟುಂಬದ ಅನ್ಯ ಸದಸ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. ಅಂತೆಯೇ ಸರ್ಕಾರ ಸೂಚಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಅಲಭ್ಯ ಔಷದಗಳನ್ನು ಹೊರಗೆ ಖರೀದಿಸಿದಲ್ಲಿ, ಈ ಮೊತ್ತವನ್ನು ಸರ್ಕಾರದಿಂದ ಮರುಪಾವತಿಯ ರೂಪದಲ್ಲಿ ಪಡೆಯಬಹುದಾಗಿದೆ. 

ಒಂದಿಷ್ಟು ಉದಾಹರಣೆಗಳು 

ಕರ್ನಾಟಕದ ಶಾಸಕರು ಮತ್ತು ಅವರ ಕುಟುಂಬದ ಸದಸ್ಯರು ಜನವರಿ ೨೦೦೭ ರಿಂದ ಅಕ್ಟೋಬರ್ ೨೦೦೯ ರ ಅವಧಿಯಲ್ಲಿ ಪಡೆದಿದ್ದ ಮೊತ್ತವು ೫.೨ ಕೋಟಿ ರೂ. ಗಳಾಗಿತ್ತು. ಸರ್ಕಾರವು ಇಷ್ಟೊಂದು ದೊಡ್ಡ ಮೊತ್ತವನ್ನು ಶಾಸಕರ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ವ್ಯಯಿಸಿದ್ದರೂ, ಈ ಶಾಸಕರನ್ನು ಪೀಡಿಸಿದ್ದ ಕಾಯಿಲೆಯ ವಿವರಗಳ ಬಗ್ಗೆ ಸರ್ಕಾರದ ಬಳಿ ಸೂಕ್ತ ಮಾಹಿತಿಯೇ ಇಲ್ಲ. 

ಕರ್ನಾಟಕದ ಒಬ್ಬ ಶಾಸಕರು ೨೦೦೯ ರಲ್ಲಿ ಕೇವಲ ೧೦ ತಿಂಗಳುಗಳಲ್ಲಿ ೧೭.೬೮ ಲಕ್ಷ ರೂ.ಗಳನ್ನು ವೈದ್ಯಕೀಯ ವೆಚ್ಚದ ಮರುಪಾವತಿಯ ರೂಪದಲ್ಲಿ ಪಡೆದುಕೊಂಡಿದ್ದರು. ವಿಶೇಷವೆಂದರೆ ಇವರನ್ನು ಪೀಡಿಸಿದ್ದ ಆರೋಗ್ಯದ ಸಮಸ್ಯೆ ಯಾವುದೆಂದು ಸರ್ಕಾರಕ್ಕೆ ತಿಳಿದಿರಲಿಲ್ಲ!. ಇವರು ಫೆಬ್ರವರಿಯಲ್ಲಿ ೫,೮೩,೭೧೦, ಮಾರ್ಚ್ ನಲ್ಲಿ ೬೪,೧೫೫, ಎಪ್ರಿಲ್ ನಲ್ಲಿ ೨,೮೧,೮೯೫, ಜೂನ್ ನಲ್ಲಿ ೨,೭೪,೮೩೦, ಜುಲೈ ನಲ್ಲಿ ೧,೪೭,೮೭೬, ಆಗಸ್ಟ್ ನಲ್ಲಿ ೧,೪೧,೪೧೦, ಅಕ್ಟೋಬರ್ ನಲ್ಲಿ ೨,೭೫,೨೩೨ ರೂ ಗಳನ್ನು ತಮ್ಮ ಚಿಕಿತ್ಸೆಗಾಗಿ ವ್ಯಯಿಸಿರುವುದಾಗಿ ಮರುಪಾವತಿಯನ್ನು ಪಡೆದುಕೊಂಡಿದ್ದರು. ಇನ್ನು ನಾಲ್ಕಾರು ಲಕ್ಷ ರೂ.ಗಳನ್ನು ಪಡೆದಿರುವ ಶಾಸಕರ ಪಟ್ಟಿ ಸಾಕಷ್ಟು ಉದ್ದವಿದೆ. 

ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಪಡೆದುಕೊಂಡ ರಾಜಕಾರಣಿಗಳಲ್ಲಿ ಮಾಜಿ ಶಾಸಕರ ಪಾಲೇ ಸಾಕಷ್ಟು ಅಧಿಕವಾಗಿದೆ. ಉದಾಹರಣೆಗೆ ೨೦೦೭- ೨೦೦೯ ರ ಅವಧಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಪಡೆದುಕೊಂಡಿದ್ದ ಮೊತ್ತವು ೫,೧೯,೪೫,೩೬೬ ರೂಗಳಾಗಿದ್ದು, ಮಾಜಿ ಶಾಸಕರ ಪಾಲು ಇಂತಿದೆ. ೨೦೦೭- ೧,೦೧,೬೮,೪೪೧, ೨೦೦೮- ೧,೫೫,೧೩,೬೯೭, ೨೦೦೯- ೧,೫೦,೦೨,೫೭೦ ರೂ.ಗಳಾಗಿದೆ. ಇದೇ ಅವಧಿಯಲ್ಲಿ ಹಾಲಿ ಶಾಸಕರು ಪಡೆದಿದ್ದ ಮೊತ್ತವು ಹೀಗಿದೆ. ೨೦೦೭- ೫೩,೭೩,೭೮೦, ಹಾಗೂ ೯,೫೨,೭೦೯, ಮತ್ತು ೨೦೦೯- ೪೯,೩೪,೧೬೯ ರೂ.ಗಳಾಗಿತ್ತು. 

ಇಷ್ಟೆಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರುವ ಶಾಸಕರು, ತಮ್ಮ ಹೊಣೆಗಾರಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮತ್ತು ನಾಡಿನ ಜನತೆಯ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿಯನ್ನು ತೋರಬೇಕಿದೆ!.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



Saturday, August 9, 2014

EBOLA VIRUS- DEADLY AND DANGEROUS







ಮಾರಕ ವ್ಯಾಧಿಯೊಂದರ ಮೂಲ : ಎಬೊಲ 

ಪ್ರಸ್ತುತ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳಲ್ಲಿ  ಭಯಮಿಶ್ರಿತ ಕುತೂಹಲಕ್ಕೆ ಕಾರಣವೆನಿಸಿರುವ ವ್ಯಾಧಿಗಳಲ್ಲಿ ಎಬೊಲ ಅಗ್ರಸ್ಥಾನದಲ್ಲಿದೆ. ವೈರಸ್ ಗಳಿಂದ ಉದ್ಭವಿಸಿ ತ್ವರಿತಗತಿಯಲ್ಲಿ ಹರಡುತ್ತಾ, ಈಗಾಗಲೇ ಸುಮಾರು ಒಂದು ಸಾವಿರ ರೋಗಿಗಳನ್ನು ಬಲಿಪಡೆದಿರುವ ಈ ವಿಶಿಷ್ಠ ವ್ಯಾಧಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
---------------          -------------             -----------             --------------           ---------------

ವೈದ್ಯಕೀಯ ಸಂಶೋಧಕರು ಅತ್ಯಂತ ಅಪಾಯಕಾರಿ ಹಾಗೂ ಮಾರಕ ಎಂದು ಗುರುತಿಸಿರುವ ವೈರಸ್ ಗಳಲ್ಲಿ " ಎಬೊಲ " ವೈರಸ್ ಗಳೂ ಸೇರಿವೆ. ಈ ವೈರಸ್ ಗಳ ಐದು ತಳಿಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ ಮೂರು ತಳಿಗಳು ಅತ್ಯಂತ ಮಾರಕವೆಂದು ಪರಿಗಣಿಸಲ್ಪಟ್ಟಿವೆ. ಅತ್ಯಂತ ಪ್ರಬಲ ತಳಿಯೊಂದರ ಮಾರಕತೆಯ ಪ್ರಮಾಣವು ಶೇ.೯೦ ರಷ್ಟಿದೆ. ಇದಕ್ಕೂ ಮಿಗಿಲಾಗಿ ಈ ವೈರಸ್ ಗಳ ಹಾವಳಿಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಅಥವಾ ಖಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ಇದರ ಸಾಂಕ್ರಾಮಿಕತೆ ಮತ್ತು ಮಾರಕತೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಎಬೊಲದ ಮೂಲ 

ಎಬೊಲ ವೈರಸ್ ಕಾಯಿಲೆ ಅಥವಾ ಎಬೊಲ ರಕ್ತಸ್ರಾವಕ ಜ್ವರ ಎಂದು ಕರೆಯಲ್ಪಡುವ ಗಂಭೀರ ಹಾಗೂ ಮಾರಕ ಸಮಸ್ಯೆಗೆ ಕಾರಣವೆನಿಸಿರುವ ಎಬೊಲ ವೈರಸ್ ಗಳು, ೧೯೭೬ ರಲ್ಲಿ ಮೊತ್ತ ಮೊದಲಬಾರಿಗೆ ಕಾಂಗೊ ಮತ್ತು ಸೂಡಾನ್ ದೇಶಗಳಲ್ಲಿ ಏಕಕಾಲದಲ್ಲಿ ಉದ್ಭವಿಸಿ ಸಾಂಕ್ರಾಮಿಕವಾಗಿ ಹರಡಿದ್ದವು. ಕಾಂಗೊ ದೇಶದ ಎಬೊಲ ನದಿ ಪ್ರಾಂತ್ಯದಲ್ಲಿ ಇದು ಪ್ರತ್ಯಕ್ಷವಾಗಿದ್ದುದರಿಂದ, ಈ ವೈರಸ್ ಗಳನ್ನು ಎಬೊಲ ಎಂದು ಹೆಸರಿಸಲಾಗಿತ್ತು. 

೧೯೭೬ ರಿಂದ ೨೦೧೨ ಅವಧಿಯಲ್ಲಿ ೧೨ ಬಾರಿ ವಿವಿಧ ದೇಶಗಳಲ್ಲಿ ಪ್ರತ್ಯಕ್ಶವಾಗಿದ್ದ ಈ ವೈರಸ್ ಗಳು, ಕೇವಲ ೧೦೦೦ ಕ್ಕೂ ಕಡಿಮೆ ಜನರನ್ನು ಪೀಡಿಸಿದ್ದವು. ಆದರೆ ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ ಗಿನಿ ದೇಶದಲ್ಲಿ ಉದ್ಭವಿಸಿ, ತ್ವರಿತಗತಿಯಲ್ಲಿ ಲೈಬೀರಿಯ, ಸಿಯೆರಾ ಲಿಯೋನ್ ಮತ್ತು ನೈಜೀರಿಯ ದೇಶಗಳಲ್ಲಿ ಹರಡುತ್ತಾ, ಈಗಾಗಲೇ ಸರಿಸುಮಾರು ೧೦೦೦ ಜನರನ್ನು ಬಲಿಪಡೆದಿರುವ ಈ ವೈರಸ್ ಗಳ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳು, ಕಳೆದ ನಾಲ್ಕು ದಶಕಗಳಲ್ಲೇ ಸರ್ವಾಧಿಕವೆನಿಸಿದೆ. ಇದೇ ಕಾರಣದಿಂದಾಗಿ ಇದೀಗ ವಿಶ್ವ ಆರೋಗ್ಯ ಸಂಸ್ಥೆಯು ಎಬೊಲ ವೈರಸ್ ಗಳ ಹಾವಳಿಯನ್ನು " ಅಂತಾರಾಷ್ಟ್ರೀಯ ಅರೋಗ್ಯ ತುರ್ತುಸ್ಥಿತಿ " ಎಂದು ಘೋಷಿಸಿದೆ. ಇಷ್ಟು ಮಾತ್ರವಲ್ಲ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳೂ, ಈ ವ್ಯಾಧಿಯ ಹರಡುವಿಕೆಯ ಸಂಭಾವ್ಯತೆಯ ಬಗ್ಗೆ ಕಟ್ಟೆಚ್ಚರವಹಿಸುವಂತೆ ಸೂಚಿಸಿದೆ. 

ಹರಡುವುದು ಹೇಗೆ?

ಸೋಂಕುಪೀಡಿತ ಕಾಡುಪ್ರಾಣಿಗಳ ರಕ್ತ ಹಾಗೂ ಶರೀರದ ದ್ರವಗಳ ಸಂಪರ್ಕದಿಂದ  ಮನುಷ್ಯರಿಗೆ ಹರಡುವ ಈ ವೈರಸ್ ಗಳು, ಬಳಿಕ ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು. ಸೋಂಕುಪೀಡಿತ  ವ್ಯಕ್ತಿಗಳ ರಕ್ತ ಹಾಗೂ ಶರೀರದ ಇತರ ದ್ರವಗಳ ಸಂಪರ್ಕದಿಂದ ಇದು ಇತರರಿಗೆ ಹರಡುವುದೇ ಹೊರತು, ಶೀತ- ಕೆಮ್ಮುಗಳಂತೆ ಗಾಳಿಯ ಮೂಲಕ ಹರಡಲಾರದು. 

ಎಬೊಲ ಪೀಡಿತ ರೋಗಿಗಳ ರಕ್ತ, ಮಲ, ಮೂತ್ರ, ಜೊಲ್ಲು, ಬೆವರು ಹಾಗೂ ಇನ್ನಿತರ ದ್ರವಗಳ ನೇರ ಸಂಪರ್ಕದಿಂದ ಈ ವ್ಯಾಧಿಯು ಸುಲಭದಲ್ಲೇ ಹರಡುವುದು. ಇದಲ್ಲದೇ ರೋಗಿಗಳು ಬಳಸಿದ ವಸ್ತುಗಳನ್ನು ಇತರರು ಬಳಸುವುದರಿಂದ, ಸೋಂಕುಪೀಡಿತ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಪರ್ಕದಿಂದ, ಈ ವ್ಯಾಧಿಯಿಂದ ಮೃತಪಟ್ಟ ರೋಗಿಗಳ ಮೃತಶರೀರವನ್ನು ಸಮರ್ಪಕ ಸುರಕ್ಷಾ ವಿಧಾನಗಳನ್ನು ಅನುಸರಿಸದೇ ಮುಟ್ಟುವುದು ಅಥವಾ ಹೊರುವುದರಿಂದಲೂ ಎಬೊಲ ಇತರರಿಗೆ ಹರಡುತ್ತದೆ. ಅಂತೆಯೇ ರೋಗಿ ಬಳಸಿದ ಬಟ್ಟೆಗಳು, ಅನ್ಯ ಪರಿಕರಗಳು ಮತ್ತು ರೋಗಿಯ ಸಲುವಾಗಿ ಬಳಸಿದ ವೈದ್ಯಕೀಯ ಉಪಕರಣಗಳನ್ನು ಇತರರು ಬಳಸಿದಲ್ಲಿ ಈ ವ್ಯಾಧಿ ಮತ್ತೊಬ್ಬರಿಗೆ ಹರಡುತ್ತದೆ. 

ಈ ಆಧುನಿಕ ಯುಗದಲ್ಲಿ ಸಹಸ್ರಾರು ಜನರು ವಿಮಾನಗಳ ಮೂಲಕ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಂಚರಿಸುವುದರಿಂದ, ಇಂತಹ ಸೋಂಕುಪೀಡಿತ ವ್ಯಕ್ತಿಗಳಿಂದ ಈ ವೈರಸ್ ಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸುಲಭದಲ್ಲೇ ಹರಡುತ್ತವೆ. 

ಪತ್ತೆಹಚ್ಚುವುದೆಂತು ?

ಶಂಕಿತ ಎಬೊಲ ವ್ಯಾಧಿಪೀಡಿತ ವ್ಯಕ್ತಿಯ ಶಾರೀರಿಕ ತಪಾಸಣೆ ಹಾಗೂ ವೈದ್ಯಕೀಯ ಪ್ರಯೋಗಾಲಯಗಳಲ್ಲಿ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸುವ ಮೂಲಕ ಎಬೊಲ ವೈರಸ್ ಕಾಯಿಲೆಯ ಇರುವಿಕೆಯನ್ನು ಪತ್ತೆಹಚ್ಚಬಹುದಾಗಿದೆ.

ರೋಗಲಕ್ಷಣಗಳು 

ಎಬೊಲ ವೈರಸ್ ಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿದ ಎರಡರಿಂದ ಇಪ್ಪತ್ತೊಂದು ದಿನಗಳಲ್ಲಿ ವ್ಯಾಧಿಯ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಆಕಸ್ಮಿಕವಾಗಿ ಉದ್ಭವಿಸುವ ಜ್ವರದೊಂದಿಗೆ ತೀವ್ರ ನಿಶ್ಶಕ್ತಿ, ಶರೀರದ ಅಸ್ಥಿಸಂಧಿಗಳು ಹಾಗೂ ಮಾಂಸಪೇಶಿಗಳಲ್ಲಿ ಅಸಹನೀಯ ನೋವು, ತಲೆನೋವು, ಹೊಟ್ಟೆನೋವು, ಗಂಟಲಲ್ಲಿ ಕೆರೆತ- ನೋವು,ಹಸಿವಿಲ್ಲದಿರುವುದೇ ಮುಂತಾದ ಫ್ಲೂ ಜ್ವರದಂತಹ ಲಕ್ಷಣಗಳು ಪ್ರತ್ಯಕ್ಷವಾಗುತ್ತವೆ. ಬಳಿಕ ಕೆಲರೋಗಿಗಳಲ್ಲಿ ವಾಕರಿಕೆ, ವಾಂತಿ ಹಾಗೂ ಭೇದಿಗಳು ಬಾಧಿಸುತ್ತವೆ. ತದನಂತರ ಶೇ. ೫೦ ರಷ್ಟು ರೋಗಿಗಳ ಚರ್ಮದ ಮೇಲೆ ದದ್ದುಗಳು ಮೂಡುವುದು, ಮೂತ್ರಪಿಂಡಗಳು ಹಾಗೂ ಯಕೃತ್ತಿನ ಕಾರ್ಯಕ್ಷಮತೆಯಲ್ಲಿ ವ್ಯತ್ಯಯಗಳು ತಲೆದೋರುತ್ತವೆ. ಈ ಹಂತದಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತಸ್ರಾವ ಮತ್ತು ತೀವ್ರ ನಿರ್ಜಲೀಕೃತ ಸ್ಥಿತಿಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. 
ಶೇ.೪೦ ರಿಂದ ೫೦ ರಷ್ಟು ರೋಗಿಗಳನ್ನು ಬಾಧಿಸುವ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವಗಳಿಂದಾಗಿ ಇನ್ನಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಇವುಗಳಲ್ಲಿ ರಕ್ತ ಹೆಪ್ಪುಗಟ್ಟದಿರುವುದು, ರಕ್ತವಾಂತಿ, ಮಲದೊಂದಿಗೆ ಹಾಗೂ ಕೆಮ್ಮಿದಾಗ ರಕ್ತ ಹೊರಬೀಳುವುದು ಮತ್ತು  ಚರ್ಮಕ್ಕೆ ತೂತು ಬಿದ್ದಲ್ಲಿ ( ಉದಾ- ಇಂಜೆಕ್ಷನ್ ನೀಡಿದ ಬಳಿಕ) ರಕ್ತಸ್ರಾವ ಸಂಭವಿಸಬಹುದು. ಇದಲ್ಲದೇ ಜೀರ್ಣಾಂಗಗಳಲ್ಲಿ, ಮೂಗು, ಒಸಡು  ಮತ್ತು ಯೋನಿಯಿಂದ ರಕ್ತಸ್ರಾವ ಸಂಭವಿಸಬಹುದು. ಈ ರೀತಿಯ ರಕ್ತಸ್ರಾವ ತೀವ್ರ ಸ್ವರೂಪದಲ್ಲಿ ಇರುವ ಸಾಧ್ಯತೆಗಳು ಕಡಿಮೆಯಿದ್ದರೂ, ಇದು ರೋಗಿಯ ಸ್ಥಿತಿ ವಿಷಮಿಸುತ್ತಿರುವುದನ್ನು ಸೂಚಿಸುತ್ತದೆ. ಅಂತೆಯೇ ತೀವ್ರ ರಕ್ತಸ್ರಾವವು ಬಹುತೇಕ ಸಂದರ್ಭಗಳಲ್ಲಿ ರೋಗಿಯ ಮರಣದೊಂದಿಗೆ ಪರ್ಯವಸಾನಗೊಳ್ಳುತ್ತದೆ. 
ತಡೆಗಟ್ಟುವುದು ಹೇಗೆ?

ಎಬೊಲ ವ್ಯಾಧಿಪೀಡಿತ ರೋಗಿಗಳನ್ನು ಸಂಪೂರ್ಣವಾಗಿ ಗುಣಮುಖರಾಗುವ ತನಕ ಇತರ ವ್ಯಕ್ತಿಗಳ ಸಂಪರ್ಕವಿರದಂತೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆಯನ್ನು ನೀಡಬೇಕು. ಎಬೊಲ ವೈರಸ್ ಸೋಂಕಿನಿಂದ ಬಳಲುತ್ತಿರುವರೆಂದು ಸಂದೇಹಿಸಿದ ವ್ಯಕ್ತಿಗಳನ್ನು ಕೂಡಾ ಪ್ರತ್ಯೇಕವಾಗಿರಿಸಿ, ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ಬಳಿಕ ವ್ಯಾಧಿಪೀಡಿತರಲ್ಲ ಎಂದು ಸಾಬೀತಾದ ಬಳಿಕವೇ ಬಿಡಬೇಕು. ರೋಗಿಗಳನ್ನು ಚಿಕಿತ್ಸಿಸುವ ಹಾಗೂ ಆರೈಕೆ ಮಾಡುವ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬಂದಿಗಳು, ಸೂಕ್ತ ಸುರಕ್ಷಾ ಕ್ರಮಗಳು ಹಾಗೂ ದಿರುಸುಗಳನ್ನು ಧರಿಸಬೇಕು. ರೋಗಿಗಳು ಬಳಸಿರುವ ಬಟ್ಟೆ ಮತ್ತಿತರ ಪರಿಕರಗಳನ್ನು ಅನ್ಯರು ಬಳಸಬಾರದು. ಮೃತಪಟ್ಟ ರೋಗಿಯ ದೇಹವನ್ನು ದಹಿಸಬೇಕು. ಇದಲ್ಲದೇ ಶಂಕಿತ ರೋಗಪೀಡಿತ ಪ್ರಾಣಿಗಳ ಸಂಪರ್ಕ ಹಾಗೂ ಇವುಗಳ ಮಾಂಸದ ಸೇವನೆಯನ್ನು ವರ್ಜಿಸಬೇಕು. 

ಎಬೊಲ ವ್ಯಾಧಿಪೀಡಿತ ಗಂಡಸರು ಸಂಪೂರ್ಣವಾಗಿ ಗುಣಮುಖರಾದ ಬಳಿಕ, ಸುಮಾರು ೫೦ ದಿನಗಳ ತನಕ ಇವರ ವೀರ್ಯದಲ್ಲಿ ವೈರಸ್ ಗಳು ಇರುವ ಸಾಧ್ಯತೆಗಳು ಇರುವುದರಿಂದ, ಕನಿಷ್ಠ ಎರಡು ತಿಂಗಳುಗಳ ಕಾಲ ಇವರೊಂದಿಗೆ ಲೈಂಗಿಕ ಸಂಪರ್ಕವನ್ನು ತಪ್ಪಿಸಬೇಕು. 

ಚಿಕಿತ್ಸೆ 

ಈಗಾಗಲೇ ಹೇಳಿರುವಂತೆ ಎಬೊಲ ವೈರಸ್ ವ್ಯಾಧಿಯನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ರೋಗಿಯಲ್ಲಿ ಕಂಡುಬರುವ ರೋಗಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ತೀವ್ರ ಅಸ್ವಸ್ಥರಾಗಿರುವ ಅಥವಾ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ವಿಶೇಷ ತೀವ್ರ ನಿಗಾ ಘಟಕಗಳಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಬೇಕಾಗುವುದು. 



 ಈ ಬಾರಿ ಉದ್ಭವಿಸಿದ್ದೆಲ್ಲಿ ?

ಇತ್ತೀಚಿನ ವರದಿಗಳಂತೆ ಗಿನಿ ದೇಶದ ಹಳ್ಳಿಯೊಂದರಲ್ಲಿ ಎರಡು ವರ್ಷ ವಯಸ್ಸಿನ ಬಾಲಕನೊಬ್ಬನು ಕಳೆದ ಡಿಸೆಂಬರ್ ತಿಂಗಳಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದನು. ಬಾಲಕನು ಮೃತಪಟ್ಟು ವಾರ ಕಳೆಯುವಷ್ಟರಲ್ಲಿ ಆತನ ತಾಯಿಯೂ ಮೃತಪಟ್ಟಿದ್ದಳು. ತದನಂತರ ಆತನ ಮೂರು ವರ್ಷದ ಸೋದರಿ ಮತ್ತು ಆತನ ಅಜ್ಜಿ ನಿಧನರಾಗಿದ್ದರು. ಆದರೆ ಈ ನಾಲ್ವರ ಮರಣಕ್ಕೆ ಕಾರಣವೇನೆಂದು ಯಾರಿಗೂ ತಿಳಿದಿರಲೇ ಇಲ್ಲ. ಅಜ್ಜಿಯ ಶವಸಂಸ್ಕಾರದಲ್ಲಿ ಭಾಗವಹಿಸಿದ್ದ ಇಬ್ಬರು ಸಂಬಂಧಿಗಳು ಈ ನಿಗೂಢ ಕಾಯಿಲೆಯನ್ನು ತಮ್ಮ ಹಳ್ಳಿಗೆ ಕೊಂಡೊಯ್ದಿದ್ದರು. ಬಳಿಕ ಆರೋಗ್ಯ ಕಾರ್ಯಕರ್ತನೊಬ್ಬನು ಈ ವ್ಯಾಧಿಯನ್ನು ಮತ್ತೊಬ್ಬರಿಗೆ ಹರಡಿದಂತೆಯೇ ಮೃತಪಟ್ಟಿದ್ದನು. ಹಾಗೂ ಆತನಿಗೆ ಚಿಕಿತ್ಸೆಯನ್ನು ನೀಡಿದ್ದ ವೈದ್ಯರೂ ಇದಕ್ಕೆ ಬಲಿಯಾಗಿದ್ದರು. ಇವರಿಬ್ಬರೂ ಅದಾಗಲೇ ಈ ಕಾಯಿಲೆಯನ್ನು ತಮ್ಮ ಪರಿಚಿತರು ಮತ್ತು ಸಂಬಂಧಿಗಳಿಗೆ ಹರಡಿದ್ದರು. ಅಂತಿಮವಾಗಿ ಇದೇ ವರ್ಷದ ಮಾರ್ಚ್  ತಿಂಗಳಿನಲ್ಲಿ ಈ ಮಾರಕ ವ್ಯಾಧಿಯು ಎಬೊಲ ಎಂದು ಪತ್ತೆಹಚ್ಚುವಷ್ಟರಲ್ಲಿ , ಅನೇಕ ಅಮಾಯಕರು ಇದಕ್ಕೆ ಬಲಿಯಾಗಿದ್ದರು. ಜೊತೆಗೆ ಗಡಿಯ ಸಮೀಪದಲ್ಲಿನ ಲೈಬೀರಿಯ ಮತ್ತು ಸಿಯೆರಾ ಲಿಯೋನ್ ದೇಶಗಳಲ್ಲೂ ಅನೇಕ ಪ್ರಕರಣಗಳು ಉದ್ಭವಿಸಲಾರಂಭಿಸಿದ್ದವು. 

ನಾಲ್ವರು ಬಲಿಯಾಗಿದ್ದ  ಹಳ್ಳಿಯು ಗಿನಿ ದೇಶದ ಗಡಿಭಾಗದಲ್ಲಿದ್ದು, ಇದಕ್ಕೆ ಹೊಂದಿಕೊಂಡಂತೆ ಸಿಯೇರ ಲಿಯೋನ್ ಮತ್ತು ಲೈಬೀರಿಯಾ ದೇಶಗಳಿವೆ. ಈ ಹಿಂದುಳಿದ ಹಾಗೂ ಬಡ ದೇಶಗಳ ನಡುವಿನ ಗಡಿಭಾಗದ ರಸ್ತೆಗಳು ಹಿಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ, ಪ್ರತಿನಿತ್ಯ ನೂರಾರು ಜನರು ಈ ಮೂರು ದೇಶಗಳ ನಡುವೆ ಸಂಚರಿಸುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ, ಗಿನಿಯ ಹಳ್ಳಿಯಲ್ಲಿ ಉದ್ಭವಿಸಿದ್ದ ಎಬೊಲ ವೈರಸ್ ಗಳು, ಸುಲಭದಲ್ಲೇ ಸಮೀಪದ ದೇಶಗಳಿಗೆ ಹರಡಿದ್ದವು. 

ಆದರೆ ಈ ಬಾರಿ ಈ ವ್ಯಾಧಿಗೆ ಮೊದಲು ಬಲಿಯಾದ ಬಾಲಕನಿಗೆ ಈ ವೈರಸ್ ಗಳ ಸೋಂಕು ಎಲ್ಲಿಂದ ಬಂದಿತ್ತ್ತು ಎನ್ನುವ ಮಾಹಿತಿ ಯಾರಿಗೂ ತಿಳಿದಿಲ್ಲ. ಇದಕ್ಕೂ ಮುನ್ನ ಸಂಭವಿಸಿದ್ದ ಎಬೊಲ ಸಾಂಕ್ರಾಮಿಕತೆಯಂತೆಯೇ, ಸೋಂಕು ಪೀಡಿತ ಕಾಡುಪ್ರಾಣಿಗಳಿಂದ ಇದು ಬಂದಿರಬೇಕು ಎಂದು ವೈದ್ಯಕೀಯ ವಿಜ್ಞಾನಿಗಳು ಊಹಿಸಿದ್ದಾರೆ. ಆಫ್ರಿಕನ್ ಜನರು ಮಾಂಸಕ್ಕಾಗಿ ಕೊಲ್ಲುವ  ಮಂಗ ಹಾಗೂ ಹಣ್ಣುಗಳನ್ನು ತಿನ್ನುವ ಬಾವಲಿಗಳನ್ನು ಸಂಹರಿಸುವಾಗ, ಇವುಗಳ ರಕ್ತದಲ್ಲಿರಬಹುದಾದ ವೈರಸ್ ಗಳು ಮನುಷ್ಯನ ಶರೀರದಲ್ಲಿ ಪ್ರವೇಶವನ್ನು ಗಳಿಸಿರಬೇಕು. ಈ ಮಾಂಸವನ್ನು ಬೇಯಿಸಿದಾಗ ವೈರಸ್ ಗಳು ನಾಶವಾಗುವುದಾದರೂ, ಇವುಗಳನ್ನು ಕಡಿಯುವ ವ್ಯಕ್ತಿಗಳಿಗೆ ಸೋಂಕು ಬಾಧಿಸುವ ಸಾಧ್ಯತೆಗಳಿವೆ. ಅದೇ ರೀತಿಯಲ್ಲಿ ಬಾವಲಿಗಳು ತಿಂದು ಹಾಕಿದ ಹಾಗೂ ಇವುಗಳ ಮಲಮೂತ್ರಗಳಿಂದ ಕಲುಷಿತ  ಹಣ್ಣುಗಳನ್ನು ಸೇವಿಸಿದ ವ್ಯಕ್ತಿಗಳಿಗೂ ಈ ಸೋಂಕು ಸುಲಭದಲ್ಲೇ ಬಾಧಿಸುವ ಸಾಧ್ಯತೆಗಳಿವೆ. 

ಪ್ರಸ್ತುತ ಈ ಬಾರಿಯ ಎಬೊಲ ಹಾವಳಿಯ ಮೂಲವನ್ನು ಪತ್ತೆಹಚ್ಚಿದ್ದರೂ, ಈಗಾಗಲೇ ಸಹಸ್ರಾರು ಜನರಿಗೆ ಮತ್ತು ಹಲವಾರು ದೇಶಗಳಿಗೆ ಹರಡಿರುವ ಈ ವ್ಯಾಧಿಯನ್ನು ನಿಯಂತ್ರಿಸಲು, ಹಲವಾರು ತಿಂಗಳುಗಳೇ ಬೇಕಾಗುವುದೆಂದು ತಜ್ಞ ವೈದ್ಯರು ಅಭಿಪ್ರಾಯಿಸಿದ್ದಾರೆ. 



ಪ್ರಸ್ತುತ ಪಶ್ಚಿಮ ಆಫ್ರಿಕಾದ ನಾಲ್ಕು ದೇಶಗಳಲ್ಲಿ ಪತ್ತೆಯಾಗಿರುವ ಎಬೊಲ ವೈರಸ್ ಗಳು, ನಮ್ಮ ದೇಶದ ಜನತೆಯನ್ನು ಕಾಡುವ ಸಾಧ್ಯತೆಗಳಿಲ್ಲ. ಆದರೆ ವ್ಯಾಧಿಪೀಡಿತ ದೇಶಗಳಿಗೆ ಭೇಟಿ ನೀಡಿ ನಮ್ಮ ದೇಶಕ್ಕೆ ಆಗಮಿಸುವ ವ್ಯಕ್ತಿಗಳಿಂದ ಇದು ಭಾರತವನ್ನು ಪ್ರವೇಶಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದೇ ಕಾರಣದಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದೇಶಗಳಿಂದ ವಿಮಾನಗಳಲ್ಲಿ ಆಗಮಿಸುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ತಪಾಸಣೆಗೆ ಒಳಪಡಿಸಿ, ಫ್ಲೂ ಜ್ವರದಂತಹ ಲಕ್ಷಣಗಳಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿದೊಡನೆ ಪ್ರತ್ಯೇಕಿಸಿ, ಇನ್ನಷ್ಟು ಪರೀಕ್ಷೆಗಳಿಗೆ ಒಳಪಡಿಸುತ್ತಿವೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 







Wednesday, August 6, 2014

SOLIDWASTE MANAGEMENT - WHO IS RESPONSIBLE ?



 ಘನತ್ಯಾಜ್ಯ ಸಂಗ್ರಹ- ನಿರ್ವಹಣೆ : ಯಾರ ಹೊಣೆ ?

ನಮ್ಮ ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ , ಕಣ್ಣು ಹಾಯಿಸಿದಲ್ಲೆಲ್ಲಾ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತವೆ. ಈ ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ ಎಂದು ದೂರುವ ಜನರು, ತಮ್ಮ ವಸತಿ- ವಾಣಿಜ್ಯ ಕಟ್ಟಡಗಳಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಇವುಗಳನ್ನು ಸಂಗ್ರಹಿಸುವ ಕಾರ್ಯಕರ್ತರಿಗೆ ನೀಡಲು ಸಹಕರಿಸುತ್ತಿಲ್ಲ. ಇನ್ನು ಕೆಲವರಂತೂ ಮಾತೆತ್ತಿದರೆ ಸಿಂಗಾಪುರ ಮತ್ತು ಅಮೆರಿಕಗಳಲ್ಲಿನ ಸ್ವಚ್ಚತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೂ, ತಮ್ಮಲ್ಲಿ ಉತ್ಪನ್ನವಾಗಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನೀಡುವುದಿಲ್ಲ.

 ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬಂದ ಬಳಿಕ, ಬಹುತೇಕ ನಗರ - ಪಟ್ಟಣಗಳಲ್ಲಿದ್ದ ಸಿಮೆಂಟ್ ನಿರ್ಮಿತ ತೆರೆದ ಕಸದ ತೊಟ್ಟಿಗಳನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಲಾಗಿತ್ತು. ಆದರೆ ಇದೇ ನ್ಯಾಯಾಲಯವು ಆದೇಶಿಸಿದ್ದಂತೆ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ದೈನಂದಿನ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಬೇಕೆನ್ನುವ ಪ್ರಮುಖ ವಿಚಾರವನ್ನು ನಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ನಿಗದಿಸಿದ್ದ ಅವಧಿ ಮುಗಿದು ವರ್ಷಗಳೇ ಕಳೆದಿದ್ದರೂ, ಈ ಬಗ್ಗೆ ನಗರಾಭಿವೃದ್ಧಿ ಇಲಾಖೆಯು ತಲೆಕೆಡಿಸಿಕೊಂಡಿಲ್ಲ. 

ನಿರ್ವಹಣೆ- ವಿಲೇವಾರಿ 

ದೇಶದ ಪ್ರಥಮ ದರ್ಜೆಯ ನಗರಗಳಲ್ಲಿನ ಘನತ್ಯಾಜ್ಯ ನಿರ್ವಹಣೆಯ ಬಗ್ಗೆ ನೇಮಕಗೊಂಡಿದ್ದ ಸಮಿತಿಯೊಂದು, ೧೯೯೯ ರಲ್ಲಿ ಈ ಬಗ್ಗೆ ವರದಿಯೊಂದನ್ನು ಸರ್ವೋಚ್ಛ  ನ್ಯಾಯಾಲಯಕ್ಕೆ ಸಲ್ಲಿಸಿತ್ತು. ತತ್ಪರಿಣಾಮವಾಗಿ ಘನತ್ಯಾಜ್ಯ ನಿರ್ವಹಣೆಯ ಕಾರ್ಯಕ್ರಮದ ವಿಚಾರದಲ್ಲಿ ನೂತನ ಧೋರಣೆಯೂ ೨೦೦೦ ನೇ ಇಸವಿಯಲ್ಲಿ ಜಾರಿಗೆ ಬಂದಿತ್ತು. ಈ ಧೋರಣೆಯಂತೆ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯ ನಿರ್ವಹಣೆಯ ಪರಿಪೂರ್ಣವಾದ ಯೋಜನೆಯೊಂದನ್ನು ರೂಪಿಸಿ, ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದ ಇವುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ, ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಹಾಗೂ ಪುನರ್ ಆವರ್ತನಕ್ಕೆ ಉಪಯುಕ್ತವೆನಿಸುವ ತ್ಯಾಜ್ಯಗಳನ್ನು ಅದಕ್ಕಾಗಿಯೇ ಬಳಸುವ ವಿಚಾರಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಆದರೆ ಈ ಧೋರಣೆಯನ್ನು ಕಾರ್ಯರೂಪಕ್ಕೆ ತರಲು ಬಹುತೇಕ ಸ್ಥಳೀಯ ಸಂಸ್ಥೆಗಳು ದಯನೀಯವಾಗಿ ವಿಫಲಗೊಂಡಿವೆ. 

ಮುನಿಸಿಪಲ್ ಘನತ್ಯಾಜ್ಯ ( ಆಡಳಿತ ಮತ್ತು ನಿರ್ವಹಣೆ) ನಿಯಮ ೧೯೯೯ ರಂತೆ ನಗರ ಪ್ರದೇಶಗಳಲ್ಲಿ ಮುಕ್ತವಾಗಿ ತ್ಯಾಜ್ಯಗಳನ್ನು ಸುರಿಯುವುದು ಅಪರಾಧವೆನಿಸುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಲ್ಯಾಂಡ್ ಫಿಲ್ ಗಳನ್ನು ನಿರ್ಮಿಸಲು ಸೂಕ್ತವಾದ ಸ್ಥಳಗಳನ್ನು ಗುರುತಿಸಿ, ಸುದೀರ್ಘಕಾಲ ಇವುಗಳನ್ನು ಬಳಸುವಂತೆ ಸಿದ್ಧಪಡಿಸಿ ತ್ಯಾಜ್ಯಗಳ ಸಂಸ್ಕರಣೆ ಮತ್ತು ವಿಲೆವಾರಿಗಳಿಗೆ ಅವಶ್ಯಕ ವ್ಯವಸ್ಥೆಗಳನ್ನು ಸ್ಥಳೀಯ ಸಂಸ್ಥೆಗಳು ಮಾಡಬೇಕಾಗುತ್ತದೆ. 

ವಿಶೇಷವೆಂದರೆ ಈ ವ್ಯವಸ್ಥೆ ಲಭ್ಯವಿರುವ ಅನೇಕ ನಗರ- ಪಟ್ಟಣಗಳಲ್ಲೂ, ರಸ್ತೆಗಳ ಬದಿಗಳು, ಚರಂಡಿಗಳು ಮತ್ತು ಖಾಲಿಜಾಗಗಳಲ್ಲಿ ಸ್ಥಳೀಯ ನಿವಾಸಿಗಳು ತ್ಯಾಜ್ಯಗಳನ್ನು ಸುರಿಯುವುದು ನಿರಂತರವಾಗಿ ನಡೆಯುತ್ತಿದೆ. ತ್ಯಾಜ್ಯ ಸಂಗ್ರಹ, ಸಾಗಾಟ, ಸಂಸ್ಕರಣೆ ಮತ್ತು ವಿಲೇವಾರಿ ವ್ಯವಸ್ಥೆಗಳಿಗಾಗಿ ಸ್ಥಳೀಯ ಸಂಸ್ಥೆಗಳು ವಿಧಿಸುವ ಶುಲ್ಕವನ್ನು ಉಳಿಸಲು ನಾಗರಿಕರು ಮೊರೆಹೋಗುವ ಈ ವಿಧಾನವು, ಸಮಗ್ರ ವ್ಯವಸ್ಥೆಯ ವೈಫಲ್ಯದೊಂದಿಗೆ ಸ್ಥಳೀಯ ನಿವಾಸಿಗಳ ಅನಾರೋಗ್ಯಕ್ಕೂ ಕಾರಣ ವೆನಿಸುತ್ತಿದೆ. 

ಉದಾಹರಣೆಗೆ ಪುತ್ತೂರಿನಲ್ಲಿ ಹಲವಾರು ವರ್ಷಗಳ ಹಿಂದೆಯೇ ಕುಡ್ಸೆಂಪ್ ಯೋಜನೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ತತ್ಸಂಬಂಧಿತ ಕಸದ ತೊಟ್ಟಿಗಳು ಮತ್ತು ವಾಹನಗಳಿಗಾಗಿ ಸುಮಾರು ಎರಡು ಕೋಟಿಗೂ ಅಧಿಕ ಹಣವನ್ನು ವ್ಯಯಿಸಲಾಗಿತ್ತು. ಆದರೆ ನಗರದಲ್ಲಿ ಸಂಗ್ರಹವಾಗುತ್ತಿದ್ದ ವೈವಿಧ್ಯಮಯ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ಸಂಸ್ಕರಿಸದೇ, ಇವೆಲ್ಲಾ ತ್ಯಾಜ್ಯಗಳನ್ನು ಲ್ಯಾಂಡ್ ಫಿಲ್ ಸೈಟ್ ನಲ್ಲಿ ಸುರಿಯಲಾಗುತ್ತಿತ್ತು!. ತತ್ಪರಿಣಾಮವಾಗಿ ಈ ಲ್ಯಾಂಡ್ ಫಿಲ್ ಸೈಟ್ ಈಗಾಗಲೇ ಅರ್ಧದಷ್ಟು ತುಂಬಿದ್ದು, ಇದು ಸಂಪೂರ್ಣವಾಗಿ ತುಂಬಿದಲ್ಲಿ, ಹೊಸದಾಗಿ ಮತ್ತೊಂದು ಸೈಟ್ ನಿರ್ಮಿಸಲು ಕೋಟ್ಯಂತರ ರೂಪಾಯಿಗಳು ವೆಚ್ಚವಾಗಲಿದೆ. ಇದರೊಂದಿಗೆ ನಗರದ ಹೊರವಲಯದಲ್ಲಿನ ಸಣ್ಣಪುಟ್ಟ ಗ್ರಾಮಗಳ ನಿವಾಸಿಗಳು, ತಮ್ಮ ಗ್ರಾಮದ ಸಮೀಪ ಇಂತಹ ಘಟಕಗಳನ್ನು ನಿರ್ಮಿಸಲು ವಿರೋಧ ವ್ಯಕ್ತಪಡಿಸುವುದು ತೊಡಕಾಗಿ ಪರಿಣಮಿಸಲಿದೆ. ಆದುದರಿಂದ ಸಂಗ್ರಹಿತ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಪ್ರತ್ಯೇಕಿಸಿ, ಸಂಪೂರ್ಣವಾಗಿ ನಿರುಪಯುಕ್ತವೆನಿಸುವ ತ್ಯಾಜ್ಯಗಳನ್ನು ಮಾತ್ರ ಲ್ಯಾಂಡ್ ಫಿಲ್ ಸೈಟ್ ನಲ್ಲಿ ಹಾಕಿದಲ್ಲಿ, ಇದು ಸುದೀರ್ಘಕಾಲ ಬಾಳ್ವಿಕೆ ಬರಲಿದೆ. ಪ್ರಸ್ತುತ ಸ್ವಚ್ಚ ಪುತ್ತೂರು ಅಭಿಯಾನದ ಅಂಗವಾಗಿ ಸಂಗ್ರಹಿತ ತ್ಯಾಜ್ಯಗಳನ್ನು ಪ್ರತ್ಯೇಕಿಸುವ ಮೂಲಕ, ನಿರುಪಯುಕ್ತ ತ್ಯಾಜ್ಯಗಳನ್ನು ಮಾತ್ರ ಸೈಟ್ ನಲ್ಲಿ ಹಾಕಲಾಗುತ್ತಿದೆ. ಆದರೂ ಜನಸಾಮಾನ್ಯರ ಸಹಕಾರವಿಲ್ಲದ ಕಾರಣದಿಂದಾಗಿ ನಗರದ ಅನೇಕ ಪ್ರದೇಶಗಳಲ್ಲಿ ತ್ಯಾಜ್ಯಗಳ ರಾಶಿಗಳು ಕಾಣಸಿಗುತ್ತಿವೆ. 

ಬಗೆಹರಿಯದ ಸಮಸ್ಯೆ 

ನಗರದಾದ್ಯಂತ ಅಲ್ಲಲ್ಲಿ ಕಾಣಸಿಗುವ ತ್ಯಾಜ್ಯಗಳ ರಾಶಿಗಳ  ಬಗ್ಗೆ ವೃತ್ತ ಪತ್ರಿಕೆಗಳಲ್ಲಿ ಆಗಾಗ ಸಚಿತ್ರ ವರದಿಗಳು ಪ್ರಕಟವಾಗುತ್ತಲೇ ಇರುತ್ತವೆ. ಈ ಸಮಸ್ಯೆಯ ಬಗ್ಗೆ ಒಂದಿಷ್ಟು ಅಧ್ಯಯನ ನಡೆಸಿದಾಗ ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ. 

ಪುತ್ತೂರಿನ ವಿವಿಧ ಭಾಗಗಳಲ್ಲಿ ತ್ಯಾಜ್ಯಗಳನ್ನು ಹಾಕಲು ಸಿಮೆಂಟ್ ನಿರ್ಮಿತ ಹಾಗೂ ಕುಡ್ಸೆಂಪ್ ಯೋಜನೆಯಲ್ಲಿ ಲಭಿಸಿದ್ದ ಫೈಬರ್ ಕಸದ ತೊಟ್ಟಿಗಳನ್ನು ಇರಿಸಲಾಗಿತ್ತು. ದಿನನಿತ್ಯ ಪೌರಕಾರ್ಮಿಕರು ಇವುಗಳನ್ನು ತೆರವುಗೊಳಿಸುತ್ತಿದ್ದರು. ಆದರೆ ಕಸದ ತೊಟ್ಟಿರಹಿತ ನಿರ್ಮಲ ಗ್ರಾಮ ಯೋಜನೆ ಅನುಷ್ಠಾನಗೊಂಡಂತೆಯೇ, ಇವೆಲ್ಲಾ ಕಸದ ತೊಟ್ಟಿಗಳನ್ನು ತೆರೆವುಗೊಳಿಸಲಾಗಿತ್ತು. ಜೊತೆಗೆ ವಸತಿ- ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸುವ ಕಾರ್ಯವೂ ಆರಂಭವಾಗಿತ್ತು. ಆದರೆ ಕಸದ ತೊಟ್ಟಿ ಕಣ್ಮರೆಯಾದರೂ, ಕಸದ ರಾಶಿಗಳು ಮಾತ್ರ ಕಣ್ಮರೆಯಾಗಲೇ ಇಲ್ಲ!.ಏಕೆಂದರೆ ತೊಟ್ಟಿಗಳನ್ನು ಇರಿಸಿದ್ದ ಜಾಗಗಳಲ್ಲಿ ಕದ್ದುಮುಚ್ಚಿ ಕಸವನ್ನು ಹಾಕುವ ಅಭ್ಯಾಸವನ್ನು ಅನೇಕರು ನಿಲ್ಲಿಸಿರಲಿಲ್ಲ. ಈ ಪ್ರವೃತ್ತಿ ಇಂದಿಗೂ ಅನಿಯಂತ್ರಿತವಾಗಿ ನಡೆಯುತ್ತಿದ್ದು, ಇದಕ್ಕೆ ಕಡಿವಾಣವನ್ನು ತೊಡಿಸದೆ ಇದ್ದಲ್ಲಿ ಪುತ್ತೂರಿನ ತ್ಯಾಜ್ಯ ನಿರ್ವಹಣೆಯ ಯೋಜನೆ ಯಶಸ್ವಿಯಾಗುವ ಸಾಧ್ಯತೆಗಳೇ ಇಲ್ಲ. 

ವಿಶೇಷವೆಂದರೆ ಕಸದ ತೊಟ್ಟಿಗಳಿದ್ದ ಜಾಗಗಳಲ್ಲಿ ಹಾಗೂ ರಸ್ತೆಯ ಬದಿಗಳಲ್ಲಿ ಜನರು ಸುರಿದಿದ್ದ ತ್ಯಾಜ್ಯಗಳನ್ನು ಪೌರಕಾರ್ಮಿಕರು ಆಗಾಗ ತೆರವುಗೊಳಿಸುತ್ತಾರೆ. ಆದರೆ ಮತ್ತೆ ಮರುದಿನ ಅದೇ ಜಾಗಗಳಲ್ಲಿ ಇನ್ನಷ್ಟು ತ್ಯಾಜ್ಯಗಳನ್ನು ಸ್ಥಳೀಯ ನಿವಾಸಿಗಳು ತಂದು ಸುರಿಯುತ್ತಾರೆ. ನಿಜ ಸ್ಥಿತಿ ಇಂತಿರುವಾಗ, ಈ ಸಮಸ್ಯೆಯನ್ನು ಬಗೆಹರಿಸುವುದಾದರೂ ಹೇಗೆ?. ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ!. 

ಕೊನೆಯ ಮಾತು 

ಪ್ರಸ್ತುತ ಭಾರತೀಯರು ಒಂದು ವರ್ಷದಲ್ಲಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವು ೧.೩ ಬಿಲಿಯನ್ ಟನ್ ಆಗಿದ್ದು, ಇದು ೨೦೨೫ ರಲ್ಲಿ ದುಪ್ಪಟ್ಟಾಗಲಿದೆ. ತ್ಯಾಜ್ಯಗಳ ಉತ್ಪಾದನೆಯಲ್ಲಿ ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕಕ್ಕೆ ಅಗ್ರಸ್ಥಾನ ಸಲ್ಲುತ್ತದೆ. ಏಕೆಂದರೆ ಅಲ್ಲಿ ದಿನನಿತ್ಯ ಉತ್ಪಾದನೆಯಾಗುತ್ತಿರುವ ತ್ಯಾಜ್ಯಗಳ ಪ್ರಮಾಣವು ೬,೨೧,೦೦೦ ಟನ್ ಗಳಾಗಿವೆ. ವಿಶೇಷವೆಂದರೆ ತ್ಯಾಜ್ಯಗಳ ಪುನರ್ ಆವರ್ತನದ ವಿಚಾರದಲ್ಲಿ ಜರ್ಮನಿ ಅಗ್ರಸ್ಥಾನದಲ್ಲಿದ್ದು, ಅಲ್ಲಿ ಉತ್ಪನ್ನವಾಗುವ ಶೇ.೯೫ ರಷ್ಟು ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಲಾಗುತ್ತಿದೆ. ಇಷ್ಟು ಮಾತ್ರವಲ್ಲ, ಇನ್ನುಳಿದ ಶೇ.೫ ರಷ್ಟು ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸುವ ಪ್ರಯತ್ನಗಳು ಸಾಗುತ್ತಿವೆ!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Friday, August 1, 2014

Mobile tower radiation : is it SAFE ?





ಮೊಬೈಲ್ ಟವರ್ ವಿಕಿರಣ : ನಿರಪಾಯಕಾರಿಯೇ ?

ಮನುಷ್ಯನು ತನ್ನ ಸುಖಸೌಕರ್ಯಗಳಿಗಾಗಿ ಆವಿಷ್ಕರಿಸಿರುವ ಉಪಕರಣಗಳಲ್ಲಿ ಸೆಲ್ಯುಲರ್ ದೂರವಾಣಿಯೂ ಒಂದಾಗಿದೆ. ಆದರೆ ಈ ಪುಟ್ಟ ದೂರವಾಣಿಗಳು ಮತ್ತು ಇವುಗಳ ಸಂಪರ್ಕಜಾಲದ ಗೋಪುರಗಳು, ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಈ ವಿಚಾರದ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆದಿದ್ದು, ಸೆಲ್ಯುಲರ್ ದೂರವಾಣಿಗಳ ಮತ್ತು ಇವುಗಳ ಸೇವಾ ಸಂಸ್ಥೆಗಳ ತಯಾರಕರು ಇದನ್ನು ಅಲ್ಲಗಳೆಯುತ್ತಿದ್ದಲ್ಲಿ, ವೈದ್ಯಕೀಯ ವಿಜ್ಞಾನಿಗಳು ಇದು ನಿಜವೆಂದು ವಾದಿಸುತ್ತಾರೆ. ಪ್ರಸ್ತುತ ಹೈದರಾಬಾದ್ ನಲ್ಲಿ ಜುಲೈ ಅಂತ್ಯದಲ್ಲಿ ಜರಗಿದ್ದ ಕಾರ್ಯಾಗಾರವೊಂದರ ಸಂದರ್ಭದಲ್ಲಿ ನಡೆಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಸೆಲ್ಯುಲರ್ ಸೇವಾ ಸಂಸ್ಥೆಗಳ ಒಕ್ಕೂಟದ ಮಹಾ ನಿರ್ದೇಶಕರು ನೀಡಿದ್ದ ಹೇಳಿಕೆ ಇಲ್ಲಿದೆ. ಜೊತೆಗೆ ಇತರ ಕೆಲ ಮಾಹಿತಿಗಳೂ ಇವೆ.
-------------------          ----------           ----------           ---------          -----------              ------------------

ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಸಂಸ್ಥೆಯ ಮಹಾ ನಿರ್ದೇಶಕರು  ಹೇಳುವಂತೆ, ಸೆಲ್ಯುಲರ್ ಟವರ್ ಮತ್ತು ಸೆಲ್ ಫೋನ್ ಗಳಿಂದ ಹೊರಹೊಮ್ಮುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ನಿಂದ ಯಾವುದೇ ರೀತಿಯ ಕ್ಯಾನ್ಸರ್ ವ್ಯಾಧಿ ಉದ್ಭವಿಸುವ ಸಾಧ್ಯತೆಗಳಿಲ್ಲ. ಹೈದರಾಬಾದ್ ನಲ್ಲಿ ನಡೆಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ವಿವರಗಳನ್ನು ನೀಡಿದ ನಿರ್ದೇಶಕರು ಹಾಗೂ ಖ್ಯಾತ ಕ್ಯಾನ್ಸರ್ ತಜ್ಞರು, ಜನರು ಈ ಬಗ್ಗೆ ಭಯಭೀತರಾಗಬೇಕಿಲ್ಲ ಎಂದು ಹೇಳಿದ್ದರು. 

ಈ ಪತ್ರಿಕಾ ಗೋಷ್ಠಿಯಲ್ಲಿ ಅನೇಕ ಅಧ್ಯಯನಗಳ ವರದಿಗಳು ಮತ್ತು ಹಲವಾರು ಕ್ಯಾನ್ಸರ್ ತಜ್ಞರೊಂದಿಗೆ ಸಜ್ಜಾಗಿದ್ದ ಮಹಾನಿರ್ದೇಶಕರು, ಸೆಲ್ ಫೋನ್ ಗಳ ವಿಕಿರಣದಿಂದ ಕ್ಯಾನ್ಸರ್ ಉದ್ಭವಿಸಲಾರದು ಎಂದು ಪ್ರತಿಪಾದಿಸಿದ್ದರು. ಮೊಬೈಲ್ ಸಂಪರ್ಕಜಾಲ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಏರ್ಪಡಿಸಿದ್ದ ಕಾರ್ಯಾಗಾರದ ಸಂದರ್ಭದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಪಶು,ಪಕ್ಷಿ ಹಾಗೂ ಸಸ್ಯ  ಸಂಕುಲಗಳ ಮೇಲೆ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಗಳ ಪರಿಣಾಮಗಳ ಬಗ್ಗೆ ಅಧ್ಯಯನವನ್ನು ಡಿಪಾರ್ಟ್ಮೆಂಟ್ ಆಫ್ ಸಯನ್ಸ್ ಎಂಡ್ ಟೆಕ್ನಾಲಜಿ ಮತ್ತು ಮನುಷ್ಯರ ಮೇಲೆ ಬೀರಬಲ್ಲ ಪರಿಣಾಮಗಳ ಬಗ್ಗೆ ಟಾಟಾ ಮೆಮೋರಿಯಲ್ ಆಸ್ಪತ್ರೆ ನಡೆಸಿರುವುದಾಗಿ ಹೇಳಿದ್ದರು.

ನಿರಪಾಯಕಾರಿ ಎನ್ನುವ ವರದಿ 

ಈ ಅಧ್ಯಯನದ ವರದಿಯು ಮೊಬೈಲ್ ಟವರ್ ಗಳು ಹೊರಸೂಸುವ ವಿಕಿರಣಗಳು ಮನುಷ್ಯರು, ಪಶುಪಕ್ಷಿಗಳು ಮತ್ತು ಸಸ್ಯಸಂಕುಲಗಳ ಮೇಲೆ ಯಾವುದೇ ರೀತಿಯ ದುಷ್ಪರಿಣಾಮವನ್ನು ಬೀರುವುದಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ, ಆದರೆ ಸೆಲ್ ಫೋನ್ ಹ್ಯಾಂಡ್ ಸೆಟ್ ಗಳ ದುಷ್ಪರಿಣಾಮಗಳನ್ನು ಅಲ್ಲಗಳೆಯುವಂತಿಲ್ಲ ಎಂದೂ ಹೇಳಿದ್ದರು. ಗೋಷ್ಠಿಯಲ್ಲಿ ಉಪಸ್ಥಿತರಿದ್ದ ತಜ್ಞರ ಹೇಳಿಕೆಯಂತೆ, ಕೇಂದ್ರ ಸರ್ಕಾರವು ಮೊಬೈಲ್ ತಯಾರಕರಿಗೆ ಕೆಲವೊಂದು ಮಾನದಂಡಗಳನ್ನು ನಿಗದಿಸಿದ್ದು, ಇವುಗಳು ಹೊರಸೂಸುವ ವಿಕಿರಣದ ಪ್ರಮಾಣವನ್ನು ಕನಿಷ್ಠ ಮಟ್ಟದಲ್ಲಿ ಇರಿಸಲಾಗುತ್ತಿದೆ. ಹೈದರಾಬಾದ್ ನಲ್ಲಿರುವ ೪೮೦೦ ಟವರ್ ಗಳ ಬಗ್ಗೆ ನಡೆಸಿದ ಅಧ್ಯಯನದಂತೆ, ಇವೆಲ್ಲ ಟವರ್ ಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಸುಮಾರು ೮೦೦ ದಶಲಕ್ಷ ಮೊಬೈಲ್ ಬಳಕೆದಾರರಿದ್ದು, ಮೊಬೈಲ್ ಟವರ್ ಗಳಿಂದಾಗಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವುದನ್ನು ಒಂದೇ ಒಂದು ಅಧ್ಯಯನದ ವರದಿಯೂ ಸಾಬೀತುಪಡಿಸಿಲ್ಲವೆಂದರು. ಅದೇ ರೀತಿಯಲ್ಲಿ ಗುಬ್ಬಿ ಮತ್ತು ಜೇನುನೊಣಗಳ ಸಂಖ್ಯೆ ನಶಿಸುತ್ತಿರಲು ರೈತಾಪಿ ಜನರು ಅತಿಯಾಗಿ ಬಳಸುತ್ತಿರುವ ಕೀಟನಾಶಕಗಳು ಕಾರಣವೇ ಹೊರತು ಟವರ್ ಗಳಲ್ಲ ಎಂದು ಹೇಳಿದ್ದರು. 

ಖ್ಯಾತ ಕ್ಯಾನ್ಸರ್ ತಜ್ಞರೊಬ್ಬರು ಈ ವಿಚಾರವನ್ನು ಸಾಬೀತುಪಡಿಸಲು ಒಂದು ವಿಶಿಷ್ಠ ಹಾಗೂ ಗೌಪ್ಯ ಅಧ್ಯಯನವನ್ನು ನಡೆಸಿದ್ದು, ಇದರ ಅಂಗವಾಗಿ ನಿಗದಿತ ಪ್ರದೇಶವೊಂದರಲ್ಲಿದ್ದ ಮೊಬೈಲ್ ಟವರ್ ಕಾರ್ಯಾಚರಿಸದೇ ಇರುವ ವಿಚಾರವನ್ನು ಜನರಿಂದ ಮುಚ್ಚಿಟ್ಟು, ಇದರ ಹಾನಿಕಾರಕ ಪರಿಣಾಮಗಳ ಬಗ್ಗೆ ವಿಚಾರಿಸಿದಾಗ ಇದರ ಆಸುಪಾಸಿನಲ್ಲಿ ವಾಸ್ತವ್ಯವಿದ್ದ ಜನರು ಕ್ಯಾನ್ಸರ್ ನ ಲಕ್ಷಣಗಳು ತಮ್ಮಲ್ಲಿ ಕಂಡುಬರುತ್ತಿವೆ ಎಂದು ದೂರಿರುವುದಾಗಿ ತಿಳಿಸಿದರು. ಅರ್ಥಾತ್, ಟವರ್ ಗಳ ಸಮೀಪ ವಾಸ್ತವ್ಯವಿರುವ ಜನರು ವಿನಾಕಾರಣ ಇವುಗಳ ದುಷ್ಪರಿಣಾಮಗಳ ಬಗ್ಗೆ ದೂರುತ್ತಾರೆ ಎನ್ನುವುದೇ ಈ ತಜ್ಞರ ಅಭಿಮತವಾಗಿತ್ತು.

ಅನ್ಯ ವರದಿಗಳು ಏನೆನ್ನುತ್ತವೆ?

 ನಿಜ ಹೇಳಬೇಕಿದ್ದಲ್ಲಿ ಸೆಲ್ಯುಲರ್ ಟವರ್ ಗಳು ಮತ್ತು ದೂರವಾಣಿಗಳು ಹೊರಸೂಸುವ ವಿಕಿರಣದ ದೀರ್ಘಕಾಲೀನ ದುಷ್ಪರಿಣಾಮಗಳ ಬಗ್ಗೆ ನೂರಾರು ಅಧ್ಯಯನಗಳನ್ನು ವಿವಿಧ ದೇಶಗಳು ನಡೆಸಿದ್ದು, ಬಹುತೇಕ ವರದಿಗಳಲ್ಲಿ ಜನರ ಆರೋಗ್ಯದ ಮೇಲೆ ಬೀರಬಲ್ಲ ದುಷ್ಪರಿಣಾಮಗಳು ಮತ್ತು ತತ್ಪರಿಣಾಮವಾಗಿ ಉದ್ಭವಿಸಬಲ್ಲ ಗಂಭೀರ- ಮಾರಕ ವ್ಯಾಧಿಗಳ ಉಲ್ಲೇಖವಿದೆ. 

ಭಾರತದಲ್ಲಿ ಅತಿಹೆಚ್ಚು ಜನರು ಮೊಬೈಲ್ ದೂರವಾಣಿಗಳನ್ನು ಹೊಂದಿದ್ದು, ಸೆಲ್ಯುಲರ್ ಸೇವಾ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿಗಳ ಆದಾಯ ದೊರೆಯುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ಸೆಲ್ಯುಲರ್ ಟವರ್ ಗಳು ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್ ಗಳಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಸಂಭವಿಸುವ ಸಾಧ್ಯತೆಗಳಿಲ್ಲವೆಂದು ಸೇವಾ ಸಂಸ್ಥೆಗಳು ವಾದಿಸುತ್ತವೆ. ಆದರೆ ಈ ಬಗ್ಗೆ ನಡೆಸಿರುವ ಅನೇಕ ಸಂಶೋಧನೆ- ಅಧ್ಯಯನಗಳ ವರದಿಗಳಂತೆ, ಇದು ಮನುಷ್ಯರು, ಪಶುಪಕ್ಷಿಗಳು ಮತ್ತು ಸಸ್ಯ ಸಂಕುಲಗಳ ಮೇಲೂ ದುಷ್ಪರಿಣಾಮವನ್ನು ಬೀರಬಲ್ಲದು ಎನ್ನುವ ಮಾಹಿತಿ ಲಭ್ಯವಿದೆ. 

 ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳು ನಿರಂತರವಾಗಿ ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯರ ಮತ್ತು ಪಶುಪಕ್ಷಿಗಳಲ್ಲಿ ಗಂಭೀರ ಹಾಗೂ ಮಾರಕ ವ್ಯಾಧಿಗಳು ಮತ್ತು ಮರಣಕ್ಕೂ ಕಾರಣವೆನಿಸುತ್ತಿವೆ. ವಿಶ್ವದ ಅನೇಕ ರಾಷ್ಟ್ರಗಳ ವಿಜ್ಞಾನಿಗಳು ನಡೆಸಿರುವ ಹಲವಾರು ಅಧ್ಯಯನಗಳಿಂದ ಈ ಕಹಿ ಸತ್ಯವು ನಿಜವೆಂದು ಸಾಬೀತಾಗಿದೆ. ಅದೇ ರೀತಿಯಲ್ಲಿ ಸೆಲ್ಯುಲರ್ ದೂರವಾಣಿಗಳ ಅತಿಬಳಕೆಯಿಂದ ಉದ್ಭವಿಸುವ ಆರೋಗ್ಯದ ಸಮಸ್ಯೆಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕವಾದ ಚರ್ಚೆ ನಡೆಯುತ್ತಿದೆ. 

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಪರಿಸರ ಮಂತ್ರಾಲಯವು ಈ ಬಗ್ಗೆ ಪ್ರಕಟಿತ ವರದಿಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ೨೦೧೦ ರಲ್ಲಿ ರಚಿಸಿತ್ತು. ಪಂಜಾಬ್ ವಿಶ್ವ ವಿದ್ಯಾಲಯವು ಅಂದು ಪ್ರಕಟಿಸಿದ್ದ ವರದಿಯೊಂದು ಈ ತಜ್ಞರ ಸಮಿತಿಯ ನೇಮಕಕ್ಕೆ ಕಾರಣವೆನಿಸಿತ್ತು. ಗುಬ್ಬಚ್ಚಿ ಹಾಗೂ ಇತರ ಕೆಲ ಪಕ್ಷಿಗಳು ಮತ್ತು ಜೇನುನೊಣಗಳಂತಹ ಕೀಟಗಳ ಸಂತತಿ ನಶಿಸುತ್ತಿರಲು ಮೊಬೈಲ್ ಟವರ್ ಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳೇ ಕಾರಣವೆಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. 

ಸಮಸ್ಯೆಯ ಹಿನ್ನೆಲೆ 

ಸೆಲ್ಯುಲರ್ ಟವರ್ ಗಳು ಮತ್ತು ದೂರವಾಣಿಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯರ ಮೆದುಳು, ನರಮಂಡಲ, ಹೃದಯ, ಶ್ವಾಸಕೋಶಗಳು ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯದ ಸಮಸ್ಯೆಗಳೊಂದಿಗೆ, ಕೆಲ ವಿಧದ ಮಾರಕ ಕ್ಯಾನ್ಸರ್ ಗಳಿಗೂ ಕಾರಣವೆನಿಸಬಲ್ಲದೆಂದು ಅನೇಕ ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. 

ಜರ್ಮನಿಯಲ್ಲಿ ೧೦ ವರ್ಷಗಳ ಕಾಲ ನಡೆಸಿದ್ದ ಅಧ್ಯಯನದ ವರದಿಯಂತೆ, ವಿದ್ಯುತ್ ಆಯಸ್ಕಾಂತೀಯ ಅಲೆಗಳಿಗೆ ಸುದೀರ್ಘಕಾಲ ಗುರಿಯಾಗುವ ವ್ಯಕ್ತಿಗಳಿಗೆ ವಿವಿಧ ರೀತಿಯ ಕ್ಯಾನ್ಸರ್ ಬಾಧಿಸುವ ಸಾಧ್ಯತೆಗಳು ಮೂರು ಪಟ್ಟು ಹೆಚ್ಚುತ್ತವೆ ಎಂದು ತಿಳಿದುಬಂದಿದೆ. ಸುಮಾರು ೧೦೦೦ ಕ್ಕೂ ಅಧಿಕ ಕ್ಯಾನ್ಸರ್ ಪೀಡಿತ ರೋಗಿಗಳ ದಾಖಲೆಗಳನ್ನು ಪರಿಶೀಲಿಸಿದ್ದ ಸಂಶೋಧಕರ ಅಭಿಪ್ರಾಯದಂತೆ, ಮೊಬೈಲ್ ಗೋಪುರಗಳ ೪೦೦ ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ವ್ಯಕ್ತಿಗಳಿಗೆ ವಿವಿಧ ರೀತಿಯ ಕ್ಯಾನ್ಸರ್ ಗಳು ಬಾಧಿಸುವ ಸಾಧ್ಯತೆಗಳು ೧೦೦ ಪಟ್ಟು ಹೆಚ್ಚುತ್ತದೆ. 

ಟವರ್ ಗಳ ವ್ಯಾಪ್ತಿಯಲ್ಲಿ ಹರಡುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣ ಶಕ್ತಿಯ ಪ್ರಮಾಣವು, ಪ್ರತಿ ಚದರ ಮೀಟರ್ ಗೆ ೭೨೬೦ ಮೈಕ್ರೋವಾಟ್ಸ್ ಆಗಿರುತ್ತದೆ. ತತ್ಪರಿಣಾಮವಾಗಿ ಉದ್ಭವಿಸಬಲ್ಲ ಕ್ಯಾನ್ಸರ್ ಗಳಲ್ಲಿ ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಅನಂತರದ ಸ್ಥಾನಗಳು ಅನುಕ್ರಮವಾಗಿ ಶುಕ್ಲಗ್ರಂಥಿ, ಮೇದೋಜೀರಕ ಗ್ರಂಥಿ, ಕರುಳು, ಚರ್ಮ, ಶ್ವಾಸಕೋಶಗಳು ಮತ್ತು ರಕ್ತದ ಕ್ಯಾನ್ಸರ್ ಗಳಿಗೆ ಸಲ್ಲುತ್ತದೆ. ಇಷ್ಟು ಮಾತ್ರವಲ್ಲ, ವಿಶ್ವ ಆರೋಗ್ಯ ಸಂಸ್ಥೆಯೂ ಈ ವಿಕಿರಣದ ಹಾನಿಕಾರಕ ಪರಿಣಾಮಗಳ ಬಗ್ಗೆ ವಿಶ್ವದ ಪ್ರತಿಯೊಂದು ರಾಷ್ಟ್ರಗಳಿಗೆ ಕೆಲ ವರ್ಷಗಳ ಹಿಂದೆಯೇ ಎಚ್ಚರಿಕೆಯನ್ನು ನೀಡಿತ್ತು. 

ಅದೃಶ್ಯ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಮಾರಕ ಪರಿಣಾಮಗಳ ಬಗ್ಗೆ ಅನೇಕ ದೇಶಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಜನವಸತಿ ಪ್ರದೇಶಗಳಲ್ಲಿ ಟವರ್ ಗಳ ಸ್ಥಾಪನೆಯ ವಿರುದ್ಧ ಅಮೆರಿಕದ ಪ್ರಜೆಗಳು ನ್ಯಾಯಾಲಯಗಳಲ್ಲಿ ಹೂಡಿದ್ದ ದಾವೆಗಳ ಸಂಖ್ಯೆ ೧೦೦೦ ಗಡಿಯನ್ನು ಮೀರಿತ್ತು.

ಭಾರತದಲ್ಲೂ ಮೊಬೈಲ್ ಟವರ್ ಗಳನ್ನು ಜನವಸತಿ ಪ್ರದೇಶ, ವಿದ್ಯಾ ಸಂಸ್ಥೆಗಳು ಹಾಗೂ ಆಸ್ಪತ್ರೆಗಳ ಸಮೀಪದಲ್ಲಿ ಸ್ಥಾಪಿಸಬಾರದೆನ್ನುವ ನಿಯಮವಿದೆ. ಆದರೆ ಈ ನಿಯಮವನ್ನು ಬಹುತೇಕ ಸೆಲ್ಯುಲರ್ ಸೇವಾ ಸಂಸ್ಥೆಗಳು ರಾಜಾರೋಷವಾಗಿ ಉಲ್ಲಂಘಿಸಿವೆ. ನಿರ್ಬಂಧಿತ ಪ್ರದೇಶಗಳಲ್ಲಿ ಟವರ್ ಗಳು ತಲೆ ಎತ್ತುತ್ತಿದ್ದರೂ, ಸ್ಥಳೀಯ ಸಂಸ್ಥೆಗಳು ಮಾತ್ರ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿವೆ. ಇವೆಲ್ಲಕ್ಕೂ ಮಿಗಿಲಾಗಿ ಸೆಲ್ಯುಲರ್ ದೂರವಾಣಿಗಳ ಮಾರಾಟ ಮತ್ತು ಬಳಕೆಗಳಿಗೆ ಅನುಗುಣವಾಗಿ, ನೂತನ ಟವರ್ ಗಳ ನಿರ್ಮಾಣವೂ ಅಡೆತಡೆಗಳಿಲ್ಲದೇ ಸಾಗುತ್ತಿದೆ. 

ವಿಶೇಷವೆಂದರೆ ಇವೆಲ್ಲಾ ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವಿಚಾರಗಳ ಅರಿವಿದ್ದರೂ, ಸೆಲ್ಯುಲರ್ ದೂರವಾಣಿಗಳ ಬಳಕೆಯೂ ದಿನೇದಿನೇ ಹೆಚ್ಚುತ್ತಿದೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು