Saturday, January 27, 2018

BEWARE OF LIFESTYLE DISEASES


                ಜೀವನಶೈಲಿಯ ಕಾಯಿಲೆಗಳು ಹೆಚ್ಚುತ್ತಿವೆ, ಜೋಕೆ

ಅತ್ಯಧಿಕ ಭಾರತೀಯರ ಮರಣಕ್ಕೆ ಕಾರಣವೆನಿಸುತ್ತಿರುವ ಕಾಯಿಲೆಗಳಲ್ಲಿ ಇದೀಗ “ ಪರಸ್ಪರ ಹರಡದ ಕಾಯಿಲೆಗಳು “ ಅಗ್ರಸ್ಥಾನದಲ್ಲಿವೆ. ಜೀವನಶೈಲಿಯ ಕಾಯಿಲೆಗಳು ಎಂದೂ ಕರೆಯಲ್ಪಡುವ ಈ ಗಂಭೀರ ವ್ಯಾಧಿಗಳು ಅನಿಯಂತ್ರಿತವಾಗಿ ವೃದ್ಧಿಸುತ್ತಿರಲು, ನಾವಿಂದು ಅನುಸರಿಸುತ್ತಿರುವ ಆರಾಮದಾಯಕ ಮತ್ತು ನಿಷ್ಕ್ರಿಯ ಜೀವನಶೈಲಿಗಳೊಂದಿಗೆ, ಪರಿಸರ ಸಂಬಂಧಿ ಅಪಾಯಕಾರಿ ಅಂಶಗಳೂ  ಪ್ರಮುಖ ಕಾರಣವೆನಿಸಿವೆ. ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಿರಾನ್ಮೆಂಟ್ ( ಸಿ ಎಸ್ ಇ ) ಸಂಸ್ಥೆಯು  ಇತ್ತೀಚಿಗೆ ನಡೆಸಿದ್ದ  ಅಧ್ಯಯನದಿಂದ  ಲಭಿಸಿರುವ  ಈ ಮಾಹಿತಿಯು ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.

ಪ್ರಸ್ತುತ ಭಾರತದಲ್ಲಿ ಸಂಭವಿಸುತ್ತಿರುವ ಮರಣಗಳಲ್ಲಿ ಶೇ. 61 ರಷ್ಟು ಮರಣಗಳು ಜೀವನಶೈಲಿಯ  ಕಾಯಿಲೆಗಳಿಂದ ಸಂಭವಿಸುತ್ತಿವೆ ಎಂದು ಸಿ ಎಸ್ ಇ ಪ್ರಕಟಿಸಿರುವ ವರದಿಯಿಂದ  ಬಹಿರಂಗಗೊಂಡಿದೆ.ಅಂತೆಯೇ  ಪರಿಸರ ಸಂಬಂಧಿ ಅಪಾಯಕಾರಿ ಅಂಶಗಳಿಗೆ ಮತ್ತು  ಏಳು ವಿಧದ ಜೀವನಶೈಲಿಯ ಕಾಯಿಲೆಗಳಿಗೆ ಇರಬಹುದಾದ ಸಂಬಂಧದ ಸಂಭಾವ್ಯತೆಯನ್ನು  ಈ ವರದಿಯಲ್ಲಿ  ಉಲ್ಲೇಖಿಸಲಾಗಿದೆ.

ಅಪಾಯಕಾರಿ ಕಾಯಿಲೆಗಳು/ ಸಮಸ್ಯೆಗಳು 

ಸಿ ಎಸ್ ಇ ವರದಿಯಂತೆ ಸ್ಥೂಲಕಾಯ, ಕ್ಯಾನ್ಸರ್, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಮಧುಮೇಹ ( ಡಯಾಬೆಟೆಸ್ ),   ಶ್ವಾಸಾಂಗಗಳ ವ್ಯಾಧಿಗಳು ( ದೀರ್ಘಕಾಲೀನ ಶ್ವಾಸಕೋಶಗಳ ಅಡಚಣೆಯ ತೊಂದರೆ ), ಚೋದನಿಗಳ ( ಹೋ ರ್ಮೋನ್ ) ಅಸಮತೋಲನ, ಆಹಾರದ ಒಗ್ಗದಿರುವಿಕೆ ( ಅಲರ್ಜಿ ) ಮತ್ತು ಮಾನಸಿಕ ವ್ಯಾಧಿಗಳು ಜೀವನಶೈಲಿಯ ವ್ಯಾಧಿ – ಸಮಸ್ಯೆಗಳಲ್ಲಿ ಪ್ರಮುಖವಾಗಿವೆ.

ಪರಿಹಾರವೇನು?

ಪ್ರಸ್ತುತ ಕ್ಯಾನ್ಸರ್ ಕಾಯಿಲೆಯನ್ನು ಉದಾಹರಣೆಯಾಗಿಸಿದಲ್ಲಿ, 2020 ಕ್ಕೆ ಮುನ್ನ ನಮ್ಮ ದೇಶದಲ್ಲಿ ವರ್ಷಂಪ್ರತಿ 1.73 ದಶಲಕ್ಷಕ್ಕೂ ಅಧಿಕ ಜನರು ಈ ಮಾರಕ ಕಾಯಿಲೆಗೆ ಈಡಾಗಲಿರುವರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾಯುಮಾಲಿನ್ಯ, ತಂಬಾಕಿನ ಬಳಕೆ, ಮದ್ಯಪಾನ, ಆಹಾರಸೇವನಾ ಪದ್ದತಿಯಲ್ಲಿ ಬದಲಾವಣೆಗಳು ಕ್ಯಾನ್ಸರ್ ಉದ್ಭವಿಸುವಲ್ಲಿ ಕಾರಣವೆನಿಸಿದರೂ, ಶೇ. 20 ರಷ್ಟು ಕ್ಯಾನ್ಸರ್ ಪ್ರಕರಣಗಳು ಪರಿಸರದಲ್ಲಿನ ವಿಷಕಾರಕ ಅಂಶಗಳಿಂದಾಗಿ ಉದ್ಭವಿಸುತ್ತವೆ. ಇದೇ ಕಾರಣದಿಂದಾಗಿ ಪರಿಸರ ಸಂಬಂಧಿತ ಅಪಾಯಕಾರಿ ಅಂಶಗಳನ್ನು ಕ್ಷಿಪ್ರಗತಿಯಲ್ಲಿ ನಿವಾರಿಸುವ ಮೂಲಕ, ಶೇ. 61 ರಷ್ಟು  ಮರಣಗಳಿಗೆ ಕಾರಣವೆನಿಸುತ್ತಿರುವ ಜೀವನಶೈಲಿಯ ಕಾಯಿಲೆಗಳನ್ನು ನಿಯಂತ್ರಿಸಬೇಕೆಂದು ಈ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.

ಲಭ್ಯ ಮಾಹಿತಿಯಂತೆ ಕಳೆದ ಎರಡು ದಶಕಗಳಲ್ಲಿ ಅಧಿಕ ರಕ್ತದ ಒತ್ತಡ, ಮಧುಮೇಹ, ಅಧಿಕತೂಕ – ಅತಿಬೊಜ್ಜು, ಖಿನ್ನತೆ ಮತ್ತಿತರ  ಮಾನಸಿಕ ವ್ಯಾಧಿಗಳು ಭಾರತೀಯರಲ್ಲಿ ಸಾಮಾನ್ಯ ಹಾಗೂ ವ್ಯಾಪಕವಾಗಿ ಕಂಡುಬರುತ್ತಿವೆ. ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ವಾಯುಮಾಲಿನ್ಯದ ಪರಿಣಾಮವಾಗಿ ಮನುಷ್ಯನ ಹೃದಯ, ಶ್ವಾಸಾಂಗಗಳು ಮತ್ತು ಮೂತ್ರಪಿಂಡಗಳು ಹಾನಿಗೀಡಾಗುತ್ತಿವೆ. ಇದಲ್ಲದೇ ಗಾಳಿಯಲ್ಲಿರುವ ವಿಷಕಾರಕ ಅಂಶಗಳಿಂದಾಗಿ ಸಂತಾನಹೀನತೆ, ಮತ್ತು ಇನ್ಸುಲಿನ್ ಪ್ರತಿರೋಧವೇ ಮುಂತಾದ ಗಂಭೀರ ಸಮಸ್ಯೆಗಳು ಭಾರತೀಯರನ್ನು ಕಾಡುತ್ತಿವೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ಪರಿಹರಿಸದೇ ಇದ್ದಲ್ಲಿ, ನಮ್ಮ ಮುಂದಿನ ಸಂತತಿಯನ್ನು ಇದು ಶಾಪದೋಪಾದಿಯಲ್ಲಿ ಪೀಡಿಸಲಿದೆ.

ನಾಲ್ಕು ಅಂಶಗಳು

ವಿಶ್ವ ಆರೋಗ್ಯ ಸಂಸ್ಥೆಯು ಮದ್ಯಪಾನ, ತಂಬಾಕಿನ ಉತ್ಪನ್ನಗಳ ಬಳಕೆ, ಅಪೌಷ್ಟಿಕ – ನಿರುಪಯುಕ್ತ ಆಹಾರ ( ಜಂಕ್ ಫುಡ್ ) ಸೇವನೆ ಮತ್ತು ನಿಷ್ಕ್ರಿಯ ಜೀವನಶೈಲಿಗಳು ಜೀವನಶೈಲಿಯ ಅರ್ಥಾತ್ ಪರಸ್ಪರ ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಕಾಯಿಲೆಗಳಿಗೆ ಕಾರಣವೆಂದು ಗುರುತಿಸಿದೆ. ಸಂಸ್ಥೆಯ ಅಭಿಪ್ರಾಯದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ಕಿಂಚಿತ್ ಹಣವನ್ನು ವಿನಿಯೋಗಿಸುವ ಮೂಲಕ, ಈ ಗಂಭೀರ ಸಮಸ್ಯೆಯನ್ನು ಮತ್ತು ಇದರಿಂದಾಗಿ ಸಂಭವಿಸುವ ಮರಣದ ಪ್ರಮಾಣವನ್ನು ನಿಶ್ಚಿತವಾಗಿ ನಿಯಂತ್ರಿಸಬಹುದಾಗಿದೆ.

ಸರಕಾರ- ಪ್ರಜೆಗಳ  ಹೊಣೆಗಾರಿಕೆ  

ದೇಶದ ಪ್ರಜೆಗಳ ಆರೋಗ್ಯ ರಕ್ಷಣೆಯ ಮಹತ್ತರವಾದ ಹೊಣೆಗಾರಿಕೆಯು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲಿದೆ. ಆದರೆ ಮಾನವಜನ್ಯ ಜಲ – ವಾಯು ಮಾಲಿನ್ಯ, ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಹೆಚ್ಚುತ್ತಿರುವ ಜಾಗತಿಕ ತಾಪಮಾನ ಮತ್ತು ಪರಿಸರ ಪ್ರದೂಷಣೆಯ ಸಮಸ್ಯೆಯನ್ನು ನಿವಾರಿಸಲು ಮತ್ತು ಜೀವನಶೈಲಿಯ ಕಾಯಿಲೆಗಳನ್ನು ನಿಶ್ಚಿತವಾಗಿ ನಿಯಂತ್ರಿಸಲು, ದೇಶದ ಪ್ರತಿಯೊಬ್ಬ ಪ್ರಜೆಯ ಮನಸ್ಪೂರ್ವಕ ಸಹಕಾರದ ಅವಶ್ಯಕತೆಯಿದೆ. ಈ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ, ಮುಂದಿನ ಕೆಲವೇ ವರ್ಷಗಳಲ್ಲಿ ಜೀವನಶೈಲಿಯ ಕಾಯಿಲೆಗಳಿಗೆ ಬಲಿಯಾಗುವ ಭಾರತೀಯರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ.

ಕೊನೆಯ ಮಾತು

ನಿಷ್ಕ್ರಿಯ ಜೀವನಶೈಲಿ, ನಿರುಪಯುಕ್ತ ಆಹಾರ ಸೇವನೆ ಮತ್ತು ಸುಖಲೋಲುಪ ಜೀವನಕ್ಕೆ ಒಗ್ಗಿಹೋಗಿರುವ ಬಹುತೇಕ ಶ್ರೀಮಂತರು, ಲಕ್ಷಾಂತರ ರೂಪಾಯಿಗಳ ಆರೋಗ್ಯ ವಿಮೆಯನ್ನು ಮಾಡಿಸಿಕೊಂಡು ನಿಶ್ಚಿಂತರಾಗಿದ್ದೇವೆ ಎನ್ನುತ್ತಾರೆ. ಆದರೆ ಈ ಆರೋಗ್ಯ ವಿಮೆಯು ವ್ಯಾಧಿಪೀಡಿತರ ಚಿಕಿತ್ಸೆಯ ಖರ್ಚುವೆಚ್ಚಗಳನ್ನು ಪಡೆದುಕೊಳ್ಳಲು ನೆರವಾಗಬಹುದೇ ಹೊರತು, ಯಾವುದೇ ಕಾಯಿಲೆಗಳಿಂದ ರಕ್ಷಣೆ ನೀಡಲು ಸಫಲವಾಗದು ಎನ್ನುವ ಸತ್ಯವನ್ನು ಮರೆತುಬಿಡುತ್ತಾರೆ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು