Wednesday, December 30, 2015

VIOLATION OF TRAFFIC RULES.........


ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ನಿಯಂತ್ರಿಸುವುದೆಂತು?
ರಾಜ್ಯದ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ವರ್ಷಂಪ್ರತಿ  ಜನವರಿ ತಿಂಗಳಿನಲ್ಲಿ ಸಾರಿಗೆ ಇಲಾಖೆ ಮತ್ತು ಸಂಚಾರ ವಿಭಾಗದ ಆರಕ್ಷಕರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಚಾರ ನಿಯಮಗಳ ಪಾಲನೆ ಮತ್ತು ಸುರಕ್ಷಿತ ಜನ - ವಾಹನಗಳ ಸಂಚಾರ ಮತ್ತಿತರ ವಿಚಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೇವರ ವರ್ಷಾವಧಿ ಜಾತ್ರೆಯಂತೆ ತಪ್ಪದೇ ಜರಗುವ ಈ ಸಪ್ತಾಹದ ಬಳಿಕ, ಜನಸಾಮಾನ್ಯರು ಹಾಗೂ ಸಾರಿಗೆ ಇಲಾಖೆ ಮತ್ತು ಸಂಚಾರ ವಿಭಾಗದ ಆರಕ್ಷಕರು ಈ ಪ್ರಮುಖ ವಿಚಾರವನ್ನೇ ಮರೆತುಬಿಡುತ್ತಾರೆ!.

ನಿಯಮಗಳ ಉಲ್ಲಂಘನೆ

ದೇಶದ ರಸ್ತೆಗಳಲ್ಲಿ ಜನ – ವಾಹನಗಳ ಸುಗಮ ಸಂಚಾರಕ್ಕಾಗಿ ಅನೇಕ ನೀತಿನಿಯಮಗಳು ಮತ್ತು ಕಾನೂನುಗಳನ್ನು ರೂಪಿಸಲಾಗಿದೆ. ಇವೆಲ್ಲವನ್ನೂ ಚಾಚೂ ತಪ್ಪದೆ ಪರಿಪಾಲಿಸಿದಲ್ಲಿ ಸಂಚಾರ ಸಮಸ್ಯೆಗಳು ಮತ್ತು ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಅಂತೆಯೇ ರಸ್ತೆ ಅಪಘಾತಗಳಿಂದ ಸಂಭವಿಸುವ ಮರಣಗಳ ಪ್ರಮಾಣವನ್ನೂ ನಿಸ್ಸಂದೇಹವಾಗಿ ನಿಯಂತ್ರಿಸಬಹುದಾಗಿದೆ. ಆದರೆ ಈ ನಿಯಮಗಳು ಮತ್ತು ಕಾನೂನುಗಳನ್ನು ಸ್ವಯಂಪ್ರೇರಿತರಾಗಿ ಪರಿಪಾಲಿಸುವ ಹವ್ಯಾಸವು ರಸ್ತೆಗಳನ್ನು ಬಳಸುವವರಲ್ಲಿ ಇಲ್ಲದಿರುವ ಕಾರಣದಿಂದಾಗಿಯೇ, ಗಂಭೀರ ಅಪಘಾತಗಳೊಂದಿಗೆ ಅಯಾಚಿತ ಸಮಸ್ಯೆಗಳು ಉದ್ಭವಿಸುತ್ತವೆ. ಜೊತೆಗೆ ಪಾದಚಾರಿಗಳೂ ಸೇರಿದಂತೆ, ಲಕ್ಷಾಂತರ ಅಮಾಯಕರ ಪ್ರಾಣಹಾನಿಗೆ ಕಾರಣವೆನಿಸುತ್ತಿದೆ.

 ಸಾಮಾನ್ಯವಾಗಿ ಸಂಚಾರ ವಿಭಾಗದ ಆರಕ್ಷಕರು  ಉಪಸ್ಥಿತರಿರುವ ಸ್ಥಳಗಳಲ್ಲಿ ಅಧಿಕತಮ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ತಪ್ಪದೇ ಪರಿಪಾಲಿಸುವುದನ್ನು ನೀವೂ ಕಂಡಿರಲೇಬೇಕು. ಆದರೆ ಆರಕ್ಷಕರು ಹಾಜರಿಲ್ಲದ  ಸ್ಥಳಗಳಲ್ಲಿ ಅಥವಾ ಇವರ ಅನುಪಸ್ಥಿತಿಯಲ್ಲಿ, ಅನೇಕ ಚಾಲಕರು ಸಂಚಾರ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸಲು ಹಿಂಜರಿಯುವುದಿಲ್ಲ!.

ಸಾಮಾನ್ಯವಾಗಿ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ವಾಹನ ಚಾಲಕರು ವಾಹನ ಚಾಲನಾ ಪರವಾನಿಗೆ ಇಲ್ಲದಿದ್ದರೂ ವಾಹನ ಚಲಾಯಿಸುವುದು, ಅತಿವೇಗದ ಚಾಲನೆ, ಹೆಲ್ಮೆಟ್  - ಸೀಟ್ ಬೆಲ್ಟ್ ಧರಿಸದಿರುವುದು, ಪ್ರವೇಶ ನಿಷೇಧಿಸಿರುವ ರಸ್ತೆಗಳಲ್ಲಿ ವಾಹನ ಚಲಾಯಿಸುವುದು, ದ್ವಿಚಕ್ರ ವಾಹನಗಳಲ್ಲಿ  ತ್ರಿಮೂರ್ತಿಗಳು ಸಂಚರಿಸುವುದು,ಮೊಬೈಲ್ ದೂರವಾಣಿಯಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು, ಅಮಲು ಪದಾರ್ಥ – ಮದ್ಯ ಸೇವಿಸಿ ವಾಹನ ಚಲಾಯಿಸುವುದೇ ಮುಂತಾದ ಅಪಾಯಕಾರಿ ಹವ್ಯಾಸಗಳು ಪ್ರಮುಖವಾಗಿವೆ. ಇಂತಹ ಕೆಟ್ಟ ಹವ್ಯಾಸವು ಸ್ವಯಂ ಚಾಲಕರಿಗೆ ಮಾತ್ರವಲ್ಲ, ಅನ್ಯ ವಾಹನಗಳು – ಚಾಲಕರಿಗೆ ಮತ್ತು ರಸ್ತೆಯನ್ನು ಬಳಸುವ ಪಾದಚಾರಿಗಳು ಮತ್ತಿತರರ ಪ್ರಾಣಕ್ಕೆ ಎರವಾಗುವ ಸಾಧ್ಯತೆಗಳಿವೆ.

ಸಾರಿಗೆ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಮೇಲೆ ನಮೂದಿಸಿದ ಕೆಲ ಹವ್ಯಾಸಗಳೊಂದಿಗೆ ವಾಹನಗಳ ಜೀವಿತಾವಧಿ ತೆರಿಗೆಯನ್ನು ಪಾವತಿಸದಿರುವುದು, ನೂತನ ವಾಹನಗಳನ್ನು ನೋಂದಣಿ ಮಾಡಿಸದೇ ರಸ್ತೆಯಲ್ಲಿ ಓಡಿಸುವುದು, ನೆರೆಯ ರಾಜ್ಯಗಳಲ್ಲಿ ನೋಂದಣಿ ಮಾಡಿರುವ ವಾಹನಗಳನ್ನು ರಾಜ್ಯದಲ್ಲಿ ನೋಂದಣಿ ಮಾಡಿಸದೇ ಬಳಸುವುದು, ನಿಗದಿತ ಪ್ರಮಾಣಕ್ಕಿಂತ ಅಧಿಕ ಸರಕುಗಳನ್ನು ಅಥವಾ ಪ್ರಯಾಣಿಕರನ್ನು ಹೇರುವುದು, ಸರಕು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸುವುದು, ಸುಸ್ಥಿತಿಯಲ್ಲಿಲ್ಲದ ವಾಹನಗಳನ್ನು ಬಳಸುವುದು, ಲಾರಿಗಳ ಗಾತ್ರಕ್ಕಿಂತ ಉದ್ದದ ಅಥವಾ ಹೊರ ಚಾಚುವ ಸರಕುಗಳನ್ನು ಸಾಗಿಸುವುದು, ಬಸ್ಸುಗಳ ಮೇಲೆ ಅತಿಯಾದ ಪ್ರಮಾಣದಲ್ಲಿ ಸರಕುಗಳನ್ನು ತುಂಬಿಸಿ ಸಾಗಿಸುವುದೇ ಮುಂತಾದ ನಿಯಮಗಳ ಉಲ್ಲಂಘನೆಗಳ ಪ್ರಕರಣಗಳು ಪ್ರಮುಖವಾಗಿವೆ. ತತ್ಪರಿಣಾಮವಾಗಿ ಅನಿರೀಕ್ಷಿತ ಅಪಘಾತ ಸಂಭವಿಸಿದಲ್ಲಿ, ಸಾವುನೋವಿನ ಪ್ರಮಾಣಗಳು ಸ್ವಾಭಾವಿಕವಾಗಿಯೇ ತುಸು ಅಧಿಕವಾಗಿರುತ್ತವೆ.

ತಪಾಸಣೆ – ದಂಡ  
                                                                                                               
ಪ್ರಾದೇಶಿಕ ಸಾರಿಗೆ ಕಚೇರಿ ಅಥವಾ ಸಂಚಾರ ವಿಭಾಗದ ಆರಕ್ಷಕ ಠಾಣೆಗಳಿರುವ ನಗರ – ಪಟ್ಟಣಗಳಲ್ಲಿ, ಇವೆರಡೂ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬಂದಿಗಳು ನಿಯಮಿತವಾಗಿ ವಾಹನಗಳ ತಪಾಸಣೆಯನ್ನು ಮಾಡಿ ತಪ್ಪಿತಸ್ಥರಿಗೆ ದಂಡವನ್ನು ವಿಧಿಸುತ್ತಿದ್ದಲ್ಲಿ, ಸಾರಿಗೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಮಾಣವು ತುಸು ಕಡಿಮೆ ಇರುತ್ತದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಒಂದಿಷ್ಟು ಹೆಚ್ಚುವರಿ ಆದಾಯ ಲಭ್ಯವಾಗುತ್ತದೆ. ಅರ್ಥಾತ್ ಒಂದೇ ಕಲ್ಲಿನಿಂದ  ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ!.

ಉದಾಹರಣೆಗೆ ಇತ್ತೀಚಿಗೆ  ಬೆಂಗಳೂರು ನಗರದಲ್ಲಿ  ಸಾರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ್ದ ತಪಾಸಣೆಯ ಸಂದರ್ಭದಲ್ಲಿ ಸಾರಿಗೆ ನಿಯಮ – ಕಾನೂನುಗಳನ್ನು ಉಲ್ಲಂಘಿಸಿದ್ದ ವಾಹನಗಳ ಚಾಲಕರಿಂದ ೪೦ ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದೇ ರೀತಿಯಲ್ಲಿ ಕೆಲವೇ ತಿಂಗಳುಗಳ ಹಿಂದೆ ಸಂಚಾರ ವಿಭಾಗದ ಆರಕ್ಷಕರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಹಲವಾರು ಲಕ್ಷ ರೂಪಾಯಿಗಳ ದಂಡವನ್ನು ವಸೂಲು ಮಾಡಿದ ಸುದ್ದಿಯೂ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇವೆರಡೂ ಇಲಾಖೆಗಳು ನಿಯಮಿತವಾಗಿ ಇಂತಹ ಕಾರ್ಯಾಚರಣೆಯನ್ನು ನಡೆಸುತ್ತಿದ್ದಲ್ಲಿ, ಸಂಚಾರ - ಸಾರಿಗೆ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸುವವರ ಸಂಖ್ಯೆ ನಿಶ್ಚಿತವಾಗಿಯೂ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

ಕೊನೆಯ ಮಾತು

ಡಿಸೆಂಬರ್  ಮೂರನೆಯ ವಾರದಲ್ಲಿ ಸಾರಿಗೆ ಮಂಗಳೂರಿನಲ್ಲಿ ಇಲಾಖೆಯವರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಮೋಟಾರು ವಾಹನಗಳ ಅಧಿನಿಯಮಗಳನ್ನು ಉಲ್ಲಂಘಿಸಿದ್ದ ಕಾಂಟ್ರಾಕ್ಟ್ ಕ್ಯಾರಿಯೇಜ್  ಬಸ್ಸುಗಳ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಂಡಿದ್ದರು. ಇಲಾಖೆಯ ಅಧಿಕಾರಿಗಳೇ ಹೇಳಿದಂತೆ ಸಿ.ಸಿ ಬಸ್ಸುಗಳು ಸ್ಟೇಜ್ ಕ್ಯಾರಿಯರ್ಸ್ ಗಳಂತೆ ಟಿಕೆಟ್ ನೀಡಿ ಪ್ರಯಾಣಿಕರನ್ನು ಕೊಂಡೊಯ್ಯುವುದು ಕಾನೂನುಬಾಹಿರವಾಗಿದೆ. ಹಾಗೂ ಇದೇ ಕಾರಣದಿಂದಾಗಿ ಆರು ಸಿ.ಸಿ ಬಸ್ಸುಗಳ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವೆಂದರೆ ದ.ಕ ಜಿಲ್ಲೆಯಲ್ಲಿ ಸಿ.ಸಿ ಬಸ್ಸುಗಳು ಸ್ಟೇಜ್ ಕ್ಯಾರಿಯರ್ ನಂತೆ ಪ್ರಯಾಣಿಕರನ್ನು ಕೊಂಡೊಯ್ಯುವುದು  ಅನೇಕ ವರ್ಷಗಳಿಂದ ಅಡೆತಡೆಯಿಲ್ಲದೆ ( ಇಂದಿಗೂ ) ನಡೆಯುತ್ತಿದೆ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Monday, December 21, 2015

SOLID WASTE MANAGEMENT - DO IT PROPERLY


                     ವೈಜ್ಞಾನಿಕ ತಾಜ್ಯವಿಲೇವಾರಿ : ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ

ರಾಜ್ಯದ ಬಹುತೇಕ ನಗರ – ಮಹಾನಗರಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಆದರೆ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳಿಂದ ತ್ಯಾಜ್ಯಗಳನ್ನು ವಿಲೇವಾರಿ ಮಾಡಬಲ್ಲ ವ್ಯವಸ್ಥೆಗಳಿರುವ ನಗರ – ಮಹಾನಗರಗಳೂ ಇದನ್ನು ಕ್ರಮಬದ್ಧವಾಗಿ ನಡೆಸಲು ವಿಫಲವಾಗಿವೆ. ಈ ಅನಾರೋಗ್ಯಕರ ಮತ್ತು ಅಪಾಯಕಾರಿ ಸಮಸ್ಯೆಗೆ ಕೇವಲ ಸ್ಥಳೀಯ ಸಂಸ್ಥೆಗಳು ಮಾತ್ರವಲ್ಲ, ಸ್ಥಳೀಯ ನಿವಾಸಿಗಳ ಅಸಹಕಾರವೂ ಪ್ರಮುಖ ಕಾರಣವೆನಿಸಿದೆ. ಕರ್ನಾಟಕ ಮುನಿಸಿಪಲ್ ಕಾಯಿದೆಯಂತೆ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಲ್ಲೇ ( ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಂದ ) ಈ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನಿಯೋಜಿತ ಸಂಗ್ರಾಹಕರಿಗೆ ನೀಡಬೇಕಿದ್ದು, ಇದಕ್ಕಾಗಿ ನಿಗದಿತ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಅಲ್ಪಮೊತ್ತದ ಶುಲ್ಕವನ್ನು ತೆರಲು ನಿರಾಕರಿಸುವ ಅನೇಕ ಜನರು, ತಮ್ಮಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿರುವುದರಿಂದಾಗಿ, ಕಣ್ಣು ಹಾಯಿಸಿದಲ್ಲೆಲ್ಲಾ ತ್ಯಾಜ್ಯಗಳ ರಾಶಿಗಳೇ ಕಾಣಸಿಗುತ್ತವೆ. ವಿಶೇಷವೆಂದರೆ ಆಧುನಿಕ ತ್ಯಾಜ್ಯ ವಿಲೇವಾರಿ ಘಟಕಗಳಿರುವ ನಗರ – ಮಹಾನಗರಗಳಲ್ಲೂ, ವೈಜ್ಞಾನಿಕ ವಿಧಾನಗಳಿಂದ ಹಾಗೂ ಸುರಕ್ಷಿತವಾಗಿ ತ್ಯಾಜ್ಯಗಳನ್ನು ವಿಲೇವಾರಿ ಮಾಡದಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ. ಇದೀಗ ರಾಜ್ಯದ ಉಚ್ಛ ನ್ಯಾಯಾಲಯವು ಬೆಂಗಳೂರು ಮಹಾನಗರ ಪಾಲಿಕೆ ಮತ್ತು “ ತ್ಯಾಜ್ಯಗಳ ಉತ್ಪಾದಕರಿಗೆ “ ( ಸ್ಥಳೀಯ ನಿವಾಸಿಗಳಿಗೆ ) ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದು, ಇವುಗಳನ್ನು ಸಮರ್ಪಕವಾಗಿ ಪರಿಪಾಲಿಸುವಂತೆ ಆದೇಶಿಸಿದೆ.

ಅವೈಜ್ಞಾನಿಕ ವ್ಯವಸ್ಥೆ

ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ  ದಿನನಿತ್ಯ ಉತ್ಪನ್ನವಾಗುತ್ತಿರುವ ಅಗಾಧ ಪ್ರಮಾಣದ ಹಾಗೂ ವೈವಿಧ್ಯಮಯ ಘನತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ,ಸುರಕ್ಷಿತವಾಗಿ ತ್ಯಾಜ್ಯವಿಲೇವಾರಿ ಘಟಕಗಳಿಗೆ ಸಾಗಿಸಿದ ಬಳಿಕ ವೈಜ್ಞಾನಿಕ ವಿಧಿವಿಧಾನಗಳಿಂದ ವಿಲೇವಾರಿ ಮಾಡಲು ಪಾಲಿಕೆಯು ದಯನೀಯವಾಗಿ ವಿಫಲಗೊಂಡಿದೆ. ಈ ವೈಫಲ್ಯಕ್ಕೆ ಸ್ಥಳೀಯ ನಿವಾಸಿಗಳ ಅಸಹಕಾರ, ಹೆಚ್ಚುತ್ತಲೇ ಇರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ತ್ಯಾಜ್ಯಗಳ ಪ್ರಮಾಣ ಮತ್ತು ಅವಶ್ಯಕ ಸಂಖ್ಯೆಯ ತ್ಯಾಜ್ಯ ವಿಲೇವಾರಿ ಘಟಕಗಳ ಕೊರತೆಗಳೂ ಪರೋಕ್ಷವಾಗಿ ಕಾರಣವೆನಿಸಿದೆ. ಇದರೊಂದಿಗೆ ಈಗಾಗಲೇ ತುಂಬಿ ತುಳುಕುತ್ತಿರುವ ಹಳೆಯ ತ್ಯಾಜ್ಯ ವಿಲೇವಾರಿ ಘಟಕಗಳ ಆಸುಪಾಸಿನ ನಿವಾಸಿಗಳು, ಈ ಘಟಕಗಳಲ್ಲಿ ತ್ಯಾಜ್ಯಗಳನ್ನು ಸುರಿಯದಂತೆ ಮತ್ತು ನೂತನ ಘಟಕಗಳಿಗಾಗಿ ಆಯ್ಕೆಮಾಡಿರುವ ಸ್ಥಳಗಳ ಸಮೀಪದ ನಿವಾಸಿಗಳು ಘಟಕವನ್ನು ಆರಂಭಿಸದಂತೆ ನಡೆಸುತ್ತಿರುವ ಪ್ರತಿಭಟನೆಗಳಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ಈ ಅಪಾಯಕಾರಿ ಮತ್ತು ಅನಾರೋಗ್ಯಕರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಕೆಲ ಸಾರ್ವಜನಿಕ ಮತ್ತು ಸ್ವಯಂ ಸೇವಾ ಸಂಘಟನೆಗಳು ರಾಜ್ಯದ ಉಚ್ಛ ನ್ಯಾಯಾಲಯದ ಮೊರೆಹೋಗಿದ್ದವು. ಇದೀಗ ನ್ಯಾಯಾಲಯವು ಈ ವಿಚಾರದಲ್ಲಿ ಮಧ್ಯಂತರ ತೀರ್ಪೊಂದನ್ನು ನೀಡಿದ್ದು, ತ್ಯಾಜ್ಯ ಸಂಗ್ರಹ, ಸಾಗಾಣಿಕೆ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಮಾರ್ಗದರ್ಶಿ ಸಲಹೆ ಸೂಚನೆಗಳನ್ನು ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಲ್ಲಿ ಬೆಂಗಳೂರಿನ ನಿವಾಸಿಗಳನ್ನು ಶಾಪದೋಪಾದಿಯಲ್ಲಿ ಕಾಡುತ್ತಿರುವ ಬೃಹತ್ ಸಮಸ್ಯೆಯೊಂದು ನಿಶ್ಚಿತವಾಗಿಯೂ ಬಗೆಹರಿಯುವ ಸಾಧ್ಯತೆಗಳೂ ಇವೆ. ಆದರೆ ಇದಕ್ಕೆ ಸ್ಥಳೀಯ ನಿವಾಸಿಗಳ ಮನಸ್ಪೂರ್ವಕ ಸಹಕಾರವು ಅತ್ಯವಶ್ಯಕವೆನಿಸಲಿದೆ.

ತ್ಯಾಜ್ಯಗಳ ನಿರ್ವಹಣೆ – ವಿಲೇವಾರಿ
ಉಚ್ಛ ನ್ಯಾಯಾಲಯದ ಆದೇಶದಂತೆ ಇನ್ನುಮುಂದೆ ತ್ಯಾಜ್ಯಗಳ ಉತ್ಪಾದಕರು ಅರ್ಥಾತ್ ಬೆಂಗಳೂರಿನ ನಿವಾಸಿಗಳು ತಮ್ಮಲ್ಲಿ ಉತ್ಪನ್ನವಾಗುವ ಹಸಿ, ಒಣ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಇದನ್ನು ನಿಯೋಜಿತ  ತ್ಯಾಜ್ಯ ಸಂಗ್ರಹಕಾರರಿಗೆ ನೀಡಬೇಕಾಗುತ್ತದೆ. ಅಂತೆಯೇ ತುಸು ಅಧಿಕ ಪ್ರಮಾಣದ ತ್ಯಾಜ್ಯಗಳನ್ನು ಉತ್ಪಾದಿಸುವವರು, ಈ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ನೀಡುವಂತಿಲ್ಲ. ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಹಾಗೂ ಹಸಿ ತ್ಯಾಜ್ಯಗಳನ್ನು ಹಸಿರು ಬಣ್ಣದ ತೊಟ್ಟಿಯಲ್ಲಿ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಕೆಂಪು ಬಣ್ಣದ ತೊಟ್ಟಿಗಳಲ್ಲಿ  ಮತ್ತು ಮಣ್ಣಿನಲ್ಲಿ ಕರಗಿ ಬೇರೆಯದ ಹಾಗೂ ಒಣ ತ್ಯಾಜ್ಯಗಳನ್ನು ಮರುಬಳಕೆ ಮಾಡಬಹುದಾದ ಚೀಲಗಳಲ್ಲಿ ತುಂಬಿಸಿಡುವುದು ಕಡ್ಡಾಯವೆನಿಸಲಿದೆ.

ಹಸಿರು ಬಣ್ಣದ ತೊಟ್ಟಿಗಳಲ್ಲಿ ಅಡುಗೆಮನೆಯ ತ್ಯಾಜ್ಯಗಳು, ತರಕಾರಿಗಳು,ಹಣ್ಣುಗಳ ಸಿಪ್ಪೆ, ಕೊಳೆತ ತರಕಾರಿ – ಹಣ್ಣುಗಳು, ಮೀನು, ಮಾಂಸ ಹಾಗೂ ಕೋಳಿಗಳ ಮುಳ್ಳು – ಎಲುಬುಗಳು, ಬೇಯಿಸಿದ ಮತ್ತು ಬಳಸಿ ಉಳಿದ ಆಹಾರಪದಾರ್ಥಗಳು, ಬಳಸಿರುವ ಕಾಫಿ – ಚಹಾ ಹುಡಿ ಮತ್ತಿತರ ತ್ಯಾಜ್ಯಗಳನ್ನು ಹಾಕಬೇಕಾಗುವುದು. ಅದೇ ರೀತಿಯಲ್ಲಿ ಕೆಂಪು ಬಣ್ಣದ ತೊಟ್ಟಿಯಲ್ಲಿ ಬ್ಯಾಂಡೇಜ್, ಬಳಸಿದ ಹತ್ತಿ, ಮಕ್ಕಳಿಗೆ ತೊಡಿಸಿದ ಡಯಾಪರ್ , ಮಹಿಳೆಯರು ಬಳಸಿದ ಸ್ಯಾನಿಟರಿ ಪ್ಯಾಡ್, ಹಳೆಯ ರೇಜರ್ – ಬ್ಲೇಡ್, ನಿರುಪಯುಕ್ತ ಕಬ್ಬಿಣದ ವಸ್ತುಗಳು ಹಾಗೂ ಔಷದಗಳು, ಒಡೆದ ಗಾಜಿನ ಚೂರುಗಳಂತಹ ವಸ್ತುಗಳನ್ನು ಹಾಕಬೇಕಾಗುವುದು. ಇದಲ್ಲದೇ ವಿವಿಧ ದಿನಬಳಕೆ ವಸ್ತುಗಳನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್ ಮತ್ತಿತರ ಹೊರಕವಚಗಳು, ಪ್ಲಾಸ್ಟಿಕ್ ಕೈಚೀಲ, ಬಾಟಲಿ,ತಟ್ಟೆ,ಲೋಟ ಹಾಗೂ ಚಮಚಗಳು,ರಟ್ಟಿನ ಪೆಟ್ಟಿಗೆಗಳು, ಅಲ್ಯುಮಿನಿಯಂ ಹಾಳೆಗಳು, ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂ ಕರಡಿಗೆಗಳು, ರಬ್ಬರ್ ಹಾಗೂ ಹಳೆಯ ಪಾದರಕ್ಷೆಗಳು, ಕೆಟ್ಟು ಹೋದ ಸಿ ಎಫ್ ಎಲ್, ಟ್ಯೂಬ್ ಲೈಟ್ ಹಾಗೂ ಸಾಮಾನ್ಯ ಬಲ್ಬ್ ಗಳು, ಬ್ಯಾಟರಿಗಳು, ಹಳೆಯ ಪೊರಕೆ ಮತ್ತಿತರ ನಿರುಪಯುಕ್ತ ವಸ್ತುಗಳನ್ನು ಮರುಬಳಕೆ ಮಾಡಬಹುದಾದ ಚೀಲಗಳಲ್ಲಿ ಸಂಗ್ರಹಿಸಿ ಇರಿಸಬೇಕಾಗುತ್ತದೆ.
ಈ ರೀತಿಯಲ್ಲಿ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಪ್ರತ್ಯೇಕಿಸಿ ಇರಿಸಿರುವ ತ್ಯಾಜ್ಯಗಳನ್ನು ನಿಯೋಜಿತ ಸಂಗ್ರಹಗಾರರು ಪ್ರತಿನಿತ್ಯ ನಿಗದಿತ ಸಮಯದಲ್ಲಿ ಸಂಗ್ರಹಿಸಿದ ಬಳಿಕ,  ನೇರವಾಗಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಸಾಗಿಸಬೇಕು. ಹಾಗೂ ತ್ಯಾಜ್ಯ ಸಾಗಾಟದ ವಾಹನದಲ್ಲಿ ತುಂಬಿಸಿದ ತ್ಯಾಜ್ಯಗಳನ್ನು ಸಂಪೂರ್ಣವಾಗಿ ಮುಚ್ಚಿಯೇ ಸಾಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದರೊಂದಿಗೆ ಮಾರುಕಟ್ಟೆಗಳು ಮತ್ತು ಉದ್ಯಾನವನಗಳಲ್ಲಿ ಹೇರಳವಾಗಿ ಉತ್ಪನ್ನವಾಗುವ ಹಾಗೂ ಸುಲಭದಲ್ಲೇ ಕೊಳೆಯುವಂತಹ ತರಕಾರಿ, ಹಣ್ಣು ಹಂಪಲುಗಳು, ಮೀನು ಮತ್ತು ಮಾಂಸಗಳ ತ್ಯಾಜ್ಯಗಳನ್ನು ಬಳಸಿ ಆಯಾ ಸ್ಥಳಗಳಲ್ಲೇ ಗೊಬ್ಬರವನ್ನಾಗಿ ಪರಿವರ್ತಿಸಬಲ್ಲ ವ್ಯವಸ್ಥೆಯನ್ನು ಸಿದ್ಧಪಡಿಸುವ ಮೂಲಕ, ಇವುಗಳನ್ನು ಸಂಗ್ರಹಿಸುವ ಮತ್ತು  ಸಾಗಿಸುವ ವೆಚ್ಚ ಮತ್ತು ಸಮಯಗಳನ್ನು ಉಳಿಸುವುದರೊಂದಿಗೆ, ಈ ಗೊಬ್ಬರವನ್ನು ಉದ್ಯಾನವನಗಳಲ್ಲಿ ಬಳಸಬಹುದಾಗಿದೆ ಎಂದು ಹೇಳಿದೆ.

ಇವೆಲ್ಲಕ್ಕೂ ಮಿಗಿಲಾಗಿ ಘನತ್ಯಾಜ್ಯ ನಿರ್ವಹಣಾ ನಿಯಮಗಳು ೨೦೧೫ ನ್ನು ಪರಿಪಾಲಿಸದೇ ಇರುವುದು ಕರ್ನಾಟಕ ಮುನಿಸಿಪಲ್ ಕಾಯಿದೆಯ ಸೆಕ್ಷನ್ ೪೩೧ ಎ ಅನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಬಹುದಾಗಿದೆ ಎಂದೂ ನ್ಯಾಯಾಲಯವು ಅಭಿಪ್ರಾಯಿಸಿದೆ.

ಅದೇನೇ ಇರಲಿ, ಇದೀಗ ರಾಜ್ಯದ ಉಚ್ಛ ನ್ಯಾಯಾಲಯದ ಈ ಆದೇಶವನ್ನು ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರಿನ ನಿವಾಸಿಗಳು ಪರಿಪಾಲಿಸುವರೇ ಮತ್ತು ತಮ್ಮನ್ನು ನಿರಂತರವಾಗಿ ಕಾಡುತ್ತಿರುವ ಗಂಭೀರ ಸಮಸ್ಯೆಯೊಂದನ್ನು ಪರಿಹರಿಸಲು ಮನಸ್ಪೂರ್ವಕ ಸಹಕಾರವನ್ನು ನೀಡುವರೇ?, ಎನ್ನುವುದನ್ನು ಕಾಲವೇ ಹೇಳಬೇಕಷ್ಟೆ!.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು


ಚಿತ್ರ – ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರತ್ಯೇಕಿಸದೇ ಸುರಿದಿರುವ ತ್ಯಾಜ್ಯಗಳು   


     

Monday, December 7, 2015

AIR POLLUTION - CONTROL IT



           ವಾಯುಮಾಲಿನ್ಯದ ಸಮಸ್ಯೆಯನ್ನು ನಿರ್ಲಕ್ಷಿಸದಿರಿ      

ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಬಗ್ಗೆ ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಿರಾನ್ಮೆಂಟ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಎಚ್ಚರಿಕೆಯನ್ನು ನೀಡುತ್ತಿದೆ. ವಿಶೇಷವೆಂದರೆ ಜಗತ್ತಿನ ಅತ್ಯಂತ ಪ್ರದೂಷಿತ ೨೦ ನಗರಗಳಲ್ಲಿ, ೧೩ ನಗರಗಳು ನಮ್ಮ ದೇಶದ ಮಹಾನಗರಗಳೇ ಆಗಿವೆ!. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಗರ - ಪಟ್ಟಣಗಳಲ್ಲಿ ದಿನೇದಿನೇ ವೃದ್ಧಿಸುತ್ತಿರುವ ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಮೀನಮೇಷ ಎನಿಸುತ್ತಿವೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು.

ದೇಶದ ಸಂವಿಧಾನದಲ್ಲಿ ಸ್ವಚ್ಛವಾದ ಗಾಳಿ ಹಾಗೂ ಶುದ್ಧವಾದ ನೀರುಗಳನ್ನು ಪಡೆಯುವ   ಮತ್ತು ಪರಿಶುದ್ಧ ಪರಿಸರದಲ್ಲಿ ಜೀವಿಸುವ ಹಕ್ಕನ್ನು ಪ್ರಜೆಗಳಿಗೆ ನೀಡಿದ್ದರೂ, ಇವೆಲ್ಲವೂ ನಮಗಿಂದು ದುರ್ಲಭವೆನಿಸಿವೆ. ಆದರೆ ವಾಯು, ಜಲ ಮತ್ತು ಪರಿಸರ ಮಾಲಿನ್ಯದ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುವಲ್ಲಿ ಜನಸಾಮಾನ್ಯರ ನಿರ್ಲಕ್ಷ್ಯದೊಂದಿಗೆ ಹೆಚ್ಚುತ್ತಿರುವ ಜನ ಮತ್ತು ವಾಹನಗಳ ಸಂಖ್ಯೆಗಳೂ ಕಾರಣವೆನಿಸಿವೆ.

ಇತ್ತೀಚಿಗೆ ದೆಹಲಿಯ ಉಚ್ಛ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಆದೇಶಿಸಿತ್ತು. ತತ್ಪರಿಣಾಮವಾಗಿ ಸರ್ಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗುವುದೇ ಎನ್ನುವುದನ್ನು ಕಾದುನೋಡಬೇಕಷ್ಟೇ.

ಮಾರಕವೆನಿಸುವ ವಾಯುಮಾಲಿನ್ಯ

ಭಾರತದ ಮಹಾನಗರಗಳನ್ನು ಜ್ಞಾಪಿಸಿದೊಡನೆ ಕಿಕ್ಕಿರಿದ ವಾಹನಗಳ ಮತ್ತು ಜನಸಂದಣಿಗಳೊಂದಿಗೆ, ತೀವ್ರಸ್ವರೂಪದ ವಾಯುಮಾಲಿನ್ಯದ ನೆನಪಾಗುವುದು ಸ್ವಾಭಾವಿಕ. ಕೆಲವೇ ವರ್ಷಗಳ ಹಿಂದೆ ದೇಶದ ಮಹಾನಗರಗಳಿಗೆ ಸೀಮಿತವಾಗಿದ್ದ ಈ ಸಮಸ್ಯೆಯು, ಇದೀಗ ದೇಶದ ಸಣ್ಣಪುಟ್ಟ ನಗರ ಹಾಗೂ ಪಟ್ಟಣಗಳಿಗೂ ಹರಡಲಾರಂಭಿಸಿದೆ. ಇರುವೆಗಳ ಸಾಲಿನಂತೆ ಸಂಚರಿಸುವ ಸಾಲುಸಾಲು ವಾಹನಗಳು ಹೊರಸೂಸುವ ಹೊಗೆಯಿಂದಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವು, ಅನೇಕ ವಿಧದ ಗಂಭೀರ ಮತ್ತು ಮಾರಕ ವ್ಯಾಧಿಗಳಿಗೆ ಕಾರಣವೆನಿಸುತ್ತಿದೆ. ಇತ್ತೀಚಿನ ವರದಿಗಳಂತೆ ದೆಹಲಿಯ ಜನರು ಉಸಿರಾಡುವ ಗಾಳಿಯು, ಮಕ್ಕಳು ಮತ್ತು ವಯೋವೃದ್ಧರು ಉಸಿರಾಡಲು ಅಯೋಗ್ಯವೆನಿಸುವಷ್ಟು ಪ್ರದೂಷಿತವಾಗಿದೆ!.

ಅಧಿಕೃತ ಮಾಹಿತಿಯಂತೆ ಭಾರತದ ಶೇ.೫೦ ರಷ್ಟು ನಗರಗಳು ಅತ್ಯಂತ ಪ್ರದೂಷಿತ ಪ್ರದೇಶಗಳೆನಿಸಿವೆ.ಅಂತೆಯೇ ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ಮರಣಗಳಿಗೆ ಕಾರಣವೆನಿಸುವ ಅಪಾಯಕಾರಿ ಸಮಸ್ಯೆಗಳಲ್ಲಿ, ವಾಯುಮಾಲಿನ್ಯವು ೫ ನೆಯ ಸ್ಥಾನದಲ್ಲಿದೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸಲು ನಾವು ವಿಫಲರಾದಲ್ಲಿ, ಪ್ರಾಯಶಃ ಮುಂದಿನ ಕೆಲವೇ ವರ್ಷಗಳಲ್ಲಿ ಇದು ಅಗ್ರಸ್ಥಾನವನ್ನು ತಲುಪುವ  ಸಾಧ್ಯತೆಗಳೂ ಇವೆ.

ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳನ್ನು ಬಳಸುವ ವಾಹನಗಳು ಹೊರಹೊಮ್ಮುವ ಧೂಮದಲ್ಲಿ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜೆನ್ ಮುಂತಾದ ಅಪಾಯಕಾರಿ ಅನಿಲಗಳಿವೆ. ಈ ಹಸಿರುಮನೆ ಅನಿಲಗಳನ್ನು ಸೇವಿಸುವ ಜನರಲ್ಲಿ ಕಣ್ಣುಗಳಲ್ಲಿ ಉರಿ, ತಲೆನೋವು, ವಾಕರಿಕೆ, ಶ್ವಾಸಾಂಗಗಳ ಕಾಯಿಲೆಗಳು, ಶ್ವಾಸಕೋಶಗಳ ಉರಿಯೂತ, ಹೃದ್ರೋಗಗಳ ಉಲ್ಬಣಿಸುವಿಕೆ ಮತ್ತು ಕೆಲವಿಧದ ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳಿವೆ. ಹಾಗೂ ಇದೇ  ಕಾರಣದಿಂದಾಗಿ  ವಾಯುಮಾಲಿನ್ಯದ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸಬೇಕಿದೆ.

ಮುಂದೇನು ಸಂಭವಿಸಲಿದೆ?

ತಜ್ಞರ ಅಭಿಪ್ರಾಯದಂತೆ ಮುಂದಿನ ಎರಡು ದಶಕಗಳಲ್ಲಿ ಭಾರತೀಯರ ದೈನಂದಿನ ಸಂಚಾರದ ಪ್ರಮಾಣವು ದುಪ್ಪಟ್ಟಾಗಲಿದೆ. ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವವರ ಪ್ರಮಾಣವು ಶೇ. ೨೬ ರಿಂದ ಶೇ. ೧೬ ಕ್ಕೆ ಕುಸಿಯಲಿದೆ. ಇದರೊಂದಿಗೆ ವೈಯುಕ್ತಿಕ ವಾಹನಗಳ ಪ್ರಮಾಣವು ಶೇ.೩೪ ರಿಂದ ಶೇ. ೫೧ ಕ್ಕೆ ಏರಲಿದೆ. ಅಂತೆಯೇ ಮಹಾನಗರಗಳಲ್ಲಿ ಸಂಚರಿಸುವ ವಾಹನಗಳ ವೇಗವು ಇದೀಗ ಪ್ರತಿ ಗಂಟೆಗೆ ೧೬ ಕಿ.ಮೀ. ಇದ್ದು, ಮುಂದೆ ಇದು ಗಂಟೆಗೆ ೮ ಕಿ.ಮೀ. ಗಳಿಗೆ ಇಳಿಯಲಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ದೇಶದ ನಗರಗಳಲ್ಲಿ ಸಂಭವಿಸಲಿರುವ ವಾಯುಮಾಲಿನ್ಯದ ಪ್ರಮಾಣವು ಇನ್ನಷ್ಟು ಹೆಚ್ಚಲಿದೆ!.

ನಿಯಂತ್ರಿಸುವುದೆಂತು?

ದೇಶಾದ್ಯಂತ ಅತ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ವಾಯುಮಾಲಿನ್ಯವು ಅನಾರೋಗ್ಯಕರ ಹಾಗೂ ಅಪಾಯಕಾರಿಯಾಗಿದ್ದು, ಇದನ್ನು ನಿಶ್ಚಿತವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುವುದು ಇದರಂತೆ ರಾಷ್ಟ್ರೀಯ ಪರಿಶುದ್ಧ ಗಾಳಿ ಕ್ರಿಯಾಯೋಜನೆಯೊಂದನ್ನು ರೂಪಿಸಿ, ಇದನ್ನು ಅನುಷ್ಠಾನಿಸುವ ಮೂಲಕ ದೇಶದ ಪ್ರತಿಯೊಂದು ನಗರಗಳು ೨೦೨೦-೨೧ ಕ್ಕೆ ಮುನ್ನ ಪರಿಶುದ್ಧ ಗಾಳಿಯ ಮಾನದಂಡಗಳಿಗೆ ಅನುಗುಣವಾಗಿರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇದಲ್ಲದೇ ವಾಹನಗಳು ಉಗುಳುವ ಹೊಗೆಯ ವಿಚಾರದಲ್ಲಿ ರೂಪಿಸಿರುವ ಮಾನದಂಡಗಳನ್ನು ( ಭಾರತ್ ೪, ೫ ಮತ್ತು ೬ ) ೨೦೨೦-೨೧ ಕ್ಕೆ ಮುನ್ನ ಹಣತಹಂತವಾಗಿ ಜಾರಿಗೆ ತರುವುದು ಅನಿವಾರ್ಯವೆನಿಸಲಿದೆ. ಇದರೊಂದಿಗೆ ಡೀಸೆಲ್ ಇಂಧನವನ್ನು ಬಳಸುವ ವಾಹನಗಳು ಹೊರಸೂಸುವ ಹೊಗೆಯಲ್ಲಿನ ಪ್ರದೂಷಕಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು “ ಕ್ಯಾನ್ಸರ್ ಕಾರಕ “ ಎಂದು ಘೋಷಿಸಿದ್ದು, ಇದನ್ನು ನಿಯಂತ್ರಿಸಲು ಭಾರತ್ – ೬ ಮಾನದಂಡದ ಅನುಷ್ಠಾನ ಅತ್ಯವಶ್ಯಕವೆನಿಸುವುದು. ಅಂತೆಯೇ ಸಾರ್ವಜನಿಕ ಸಾರಿಗೆ ವಾಹನಗಳ ಸಲುವಾಗಿ ಒಂದಿಷ್ಟು ಸಹಾಯಧನದಿಂದಾಗಿ ಕಡಿಮೆಬೆಲೆಗೆ ಲಭಿಸುವ ಡೀಸೆಲ್ ಇಂಧನವನ್ನು ಬಳಸುವ ಶ್ರೀಮಂತರ ವಿಲಾಸಿ ಕಾರುಗಳು ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ ಮೇಲಿನ ಅಬಕಾರಿ ಸುಂಕ ಮತ್ತು ಇಂಧನದ ತೆರಿಗೆಗಳನ್ನು ಮತ್ತಷ್ಟು ಹೆಚ್ಚಿಸಬೇಕಾಗುವುದು.

ಇವೆಲ್ಲಕ್ಕೂ ಮಿಗಿಲಾಗಿ ದೇಶದ ಪ್ರತಿಯೊಂದು ನಗರ – ಮಹಾನಗರಗಳಲ್ಲಿ ಸಿ ಎನ್ ಜಿ ಅನಿಲವನ್ನು ಬಳಸುವ ಸಾರಿಗೆ ವಾಹನಗಳ ಬಳಕೆಯನ್ನುಕಡ್ಡಾಯಗೊಳಿಸುವುದು,, ಈ ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು ಮತ್ತು ಇದನ್ನು ಬಳಸುವ ವಾಹನಗಳ ಮೇಲೆ ವಿಧಿಸುವ ತೆರಿಗೆಯಲ್ಲಿ ರಿಯಾಯಿತಿ ನೀಡುವುದು ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಲು ಉಪಯುಕ್ತವೆನಿಸುವುದು. ಇದರೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸುವ ಹಾಗೂ ಅತ್ಯಲ್ಪ ಪ್ರಮಾಣದ ಪ್ರದೂಷಕಗಳನ್ನು ವಿಸರ್ಜಿಸುವ ಮತ್ತು ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು.

ಅಂತಿಮವಾಗಿ ನಗರಪ್ರದೇಶಗಳ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು ಹಾಗೂ ಇದಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡುವುದು ಹಾಗೂ ಇದನ್ನು ಸರಿದೂಗಿಸಲು ಕಾರುಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸುವುದು, ಕಾರುಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದುಪಡಿಸಿ ಶುಲ್ಕ ವಿಧಿಸುವುದು, ಪಾದಚಾರಿಗಳು ನಿರಾತಂಕವಾಗಿ ಸಂಚರಿಸಬಲ್ಲ ಸುರಕ್ಷಿತ ಕಾಲುದಾರಿಗಳ ನಿರ್ಮಾಣ, ಸೈಕಲ್ ಸವಾರರಿಗೆ ಪ್ರತ್ಯೇಕ ಹಕ್ಕಿನ ಹಾದಿ, ಶೇ.೮೦ ರಷ್ಟು ನಗರವಾಸಿಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತಹ ಉಪಕ್ರಮಗಳು, ವೈಯುಕ್ತಿಕ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸುವುದೇ ಮುಂತಾದ ಉಪಕ್ರಮಗಳನ್ನು ಅನುಷ್ಠಾನಿಸುವ ಮೂಲಕ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ. ಜೊತೆಗೆ ಪರಿಸರ ಮತ್ತು ಜನಸಾಮಾನ್ಯರ ಆರೋಗ್ಯಗಳನ್ನೂ ಸಂರಕ್ಷಿಸಬಹುದಾಗಿದೆ.

ಕೊನೆಯ ಮಾತು

ದೆಹಲಿ ಸರ್ಕಾರವು ಜನವರಿ ೧ ರಿಂದ ಸಮ ಮತ್ತು ಬೆಸ ಸಂಖ್ಯೆಯಿಂದ ಅಂತ್ಯಗೊಳ್ಳುವ ನೋಂದಣಿ ಸಂಖ್ಯೆ ಇರುವ ಖಾಸಗಿ ಕಾರುಗಳು, ದಿನ ಬಿಟ್ಟು ದಿನ ಸಂಚರಿಸಬೇಕು ಎಂದು ಆದೇಶಿಸಿದೆ. ಆದರೆ ಬಹುತೇಕ ಶ್ರೀಮಂತರಲ್ಲಿ ಹಲವಾರು ಕಾರುಗಳಿದ್ದು, ಇವುಗಳಲ್ಲಿ ಸಮ ಮತ್ತು ಬೆಸ ಸಂಖ್ಯೆಯನ್ನು ಹೊಂದಿರುವ ಕಾರುಗಳು ಇರುವ ಸಾಧ್ಯತೆಗಳಿವೆ. ಇಲ್ಲದಿದ್ದಲ್ಲಿ ಶ್ರೀಮಂತರು ಈ ಸಮಸ್ಯೆಯಿಂದ ಪಾರಾಗಲು ಸಮ ಅಥವಾ ಬೆಸ ಸಂಖ್ಯೆಯಿಂದ ಅಂತ್ಯಗೊಳ್ಳುವ ನೋಂದಣಿ ಸಂಖ್ಯೆಯಿರುವ ಹೊಸ ಕಾರನ್ನು ಖರೀದಿಸುವ ಸಾಧ್ಯತೆಗಳೂ ಇವೆ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


Saturday, December 5, 2015

RTI - MAKE IT MORE PEOPLE FRIENDLY



    ಮಾಹಿತಿ ಹಕ್ಕು ಕಾಯಿದೆ : ಮತ್ತಷ್ಟು ಜನಸ್ನೇಹಿ ಆಗಬೇಕಿದೆ

ದೇಶಾದ್ಯಂತ ಮಾಹಿತಿಹಕ್ಕು ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಇದರಲ್ಲಿ ಕಂಡುಬಂದಿರಬಹುದಾದ ಲೋಪದೋಷಗಳು ಮತ್ತು ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ, ಇದನ್ನು ಮತ್ತಷ್ಟು ಜನಸ್ನೇಹಿ ಮಾಡಬಲ್ಲ ಸರಳ ಮತ್ತು ಸುಲಭವಾದ ವಿಧಾನವೂ ಇದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಹಿನ್ನೆಲೆ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌಪ್ಯತೆಯ ಮುಸುಕಿನಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ಅಂದಿನ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ, ದೇಶದ ಪ್ರಜೆಗಳಿಗೆ ಮಾತ್ರ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ ಸುಮಾರು ಹತ್ತು ವರ್ಷಗಳ ಹಿಂದಿನ ತನಕ " ಸರ್ಕಾರಿ ರಹಸ್ಯಗಳ ಅಧಿನಿಯಮ ೧೯೨೩ " ರಂತೆ ಸರ್ಕಾರದ ಬಳಿಯಿರುವ ಮಾಹಿತಿಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿತ್ತು!.

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆಗಳು ದುರ್ಲಭವೆನಿಸಿದ್ದವು. ತತ್ಪರಿಣಾಮವಾಗಿ ದೇಶದ ಪ್ರಜೆಗಳು ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರುಬಾರಿ ಅಲೆದಾಡಬೇಕಾದ ಮತ್ತು ಅಧಿಕಾರಿಗಳಿಂದ ಅನಾವಶ್ಯಕ ಕಿರುಕುಳಗಳಿಗೆ ಗುರಿಯಾಗಬೇಕಾದ ಪರಿಸ್ಥಿತಿ ಇದ್ದಿತು. ಈ ಅವ್ಯವಸ್ಥೆಯನ್ನು ಸರಿಪಡಿಸಲು ಬೆರಳೆಣಿಕೆಯಷ್ಟು ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು, ನಮ್ಮ ದೇಶಕ್ಕೆ ಕೋಟ್ಯಂತರ ರೂಪಾಯಿ ಸಾಲವನ್ನು ನೀಡುವ ವಿಶ್ವ ಬ್ಯಾಂಕ್ ಮತ್ತು ಕೆಲ ಪಾಶ್ಚಿಮಾತ್ಯ ದೇಶಗಳ ನಿರಂತರ ಒತ್ತಡಗಳಿಗೆ ಮಣಿದಿದ್ದ ಕೇಂದ್ರ ಸರ್ಕಾರವು, ಭಾರತದಲ್ಲಿ ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ನು ೨೦೦೫ ರಲ್ಲಿ  ಜಾರಿಗೆ ತಂದಿತ್ತು.

ಅರ್ಜಿದಾರರಿಗೆ ಆತಂಕ

ಆದರೆ ೨೦೦೫ ರ ಅಕ್ಟೋಬರ್ ೧೨ ರಂದು ದೇಶಾದ್ಯಂತ ಜಾರಿಗೆ ಬಂದಿದ್ದ " ಮಾಹಿತಿ ಪಡೆಯುವ ಹಕ್ಕು ಅಧಿನಿಯಮವು, ಕೆಲವೊಂದು ದೇಶದ ಭದ್ರತೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಈ ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಕಳೆದಿದ್ದರೂ, ಮಾ.ಹ. ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸುವ ಕಾರ್ಯಕರ್ತರಿಗೆ ನಿಗದಿತ ಅವಧಿಯಲ್ಲಿ ಅಪೇಕ್ಷಿತ ಮಾಹಿತಿಗಳನ್ನು ನೀಡದಿರುವ, ಪ್ರಥಮ ಮೇಲ್ಮನವಿಯನ್ನು ಸಲ್ಲಿಸಿದರೂ ಸ್ಪಂದಿಸದಿರುವ, ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುವ – ಬೆದರಿಕೆಯನ್ನು ಒಡ್ಡುವ, ದೈಹಿಕ ಹಲ್ಲೆಯನ್ನು ನಡೆಸಿದ ಮತ್ತು ಸುಮಾರು ೫೦ ಅರ್ಜಿದಾರರು ಬಲಿಯಾದ ಪ್ರಕರಣಗಳು ನಿಜಕ್ಕೂ ಆತಂಕಕಾರಿ ಬೆಳವಣಿಗೆಗಳಾಗಿವೆ. ಈ ವಿಲಕ್ಷಣ ಬೆಳವಣಿಗೆಗಳಿಗೆ ಮಾಹಿತಿಹಕ್ಕು ಕಾಯಿದೆಯನ್ನು ಬಳಸಿ ಬಹಿರಂಗಗೊಂಡ ಭ್ರಷ್ಟಾಚಾರದ ಪ್ರಕರಣಗಳು ಮತ್ತು ಬಹುಕೋಟಿ ಹಗರಣಗಳೇ ಕಾರಣವೆನಿಸಿವೆ.

ಸರ್ಕಾರದ ಆಡಳಿತದಲ್ಲಿ ಪ್ರಜೆಗಳು ಭಾಗಿಯಾಗುವ ಪರಿಣಾಮಕಾರಿ ವಿಧಾನಗಳಲ್ಲಿ ಮಾಹಿತಿ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಪ್ರಮುಖವಾಗಿದೆ. ಈ ಕಾಯಿದೆಯು ಭಾರತದ ಪ್ರತಿಯೊಬ್ಬ ಪ್ರಜೆಗೆ ಅಪೇಕ್ಷಿತ ಮಾಹಿತಿಗಳನ್ನು ಸರ್ಕಾರದಿಂದ ಪಡೆಯುವ ಹಕ್ಕನ್ನು ನೀಡಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲ ಮಾಹಿತಿಗಳು ಸಾರ್ವಜನಿಕರ ಸೊತ್ತು ಎನ್ನುವುದನ್ನು ಈ ಕಾಯಿದೆ ಅಂಗೀಕರಿಸಿದೆ. ಇದೇ ಕಾರಣದಿಂದಾಗಿ ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನಿಗದಿತ ಅವಧಿಯಲ್ಲಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಆದರೆ ಪ್ರಜೆಗಳ ಪಾಲಿಗೆ ಪ್ರಬಲ ಅಸ್ತ್ರವೆಂದು ಪರಿಗಣಿತವಾದ ಈ ಕಾಯಿದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿರುವ ನಾಗರಿಕರಿಗೆ, ಅನೇಕ ರೀತಿಯ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಜೊತೆಗೆ ಈ ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅವಿರತವಾಗಿ ಸಾಗುತ್ತಿವೆ.

ಸ್ವಯಂಪ್ರೇರಿತ ಮಾಹಿತಿ

ಮಾಹಿತಿಹಕ್ಕು ಕಾಯಿದೆಯಾ ಸೆಕ್ಷನ್ ೪ ರನ್ವಯ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಗಳು ೧೭ ವಿಧದ ಮಾಹಿತಿಗಳನ್ನು ಕಡ್ಡಾಯವಾಗಿ ಹಾಗೂ ಯಾರೂ ಕೇಳದೇ ಇದ್ದರೂ ಪ್ರಕಟಿಸಬೇಕಾಗುವುದು. ಇವುಗಳಲ್ಲಿ ಪ್ರಾಧಿಕಾರದ ಸಂರಚನೆ, ಕಾರ್ಯ ನಿರ್ವಹಿಸುವ ಕ್ರಮ, ಆಯವ್ಯಯದ ವಿವರಗಳು, ಸಾರ್ವಜನಿಕರು ಭಾಗವಹಿಸಬಹುದಾದ ವೇದಿಕೆಗಳ ವಿವರ, ಅಪೇಕ್ಷಿತ ಮಾಹಿತಿಗಳನ್ನು ಪಡೆಯುವ ವಿಧಾನ ಇತ್ಯಾದಿ ಮಾಹಿತಿಗಳನ್ನು ಪ್ರಕತಿಸುವುದರೊಂದಿಗೆ,ಇವುಗಳನ್ನು ನಿಯಮಿತವಾಗಿ ಪರಿಷ್ಕರಿಸಬೇಕಾಗುತ್ತದೆ. ಪ್ರಜೆಗಳಿಗೆ ಅವಶ್ಯಕ ಮತ್ತು ಉಪಯುಕ್ತ ಮಾಹಿತಿಗಳು ನೇರವಾಗಿ ಹಾಗೂ ಸುಲಭವಾಗಿ ದೊರೆಯಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಆದರೆ ರಾಜ್ಯದ ಬಹುತೇಕ ಸಾರ್ವಜನಿಕ ಪ್ರಾಧಿಕಾರಗಳು ಈ ಮಾಹಿತಿಗಳನ್ನು ಪ್ರಕಟಿಸದೇ ಇರುವುದರಿಂದ, ಈ ಕಾಯಿದೆಯ ಮೂಲ ಉದ್ದೇಶವೇ ವಿಫಲವಾಗುತ್ತಿದೆ.  ಹಾಗೂ ಇದೇ ಕಾರಣದಿಂದಾಗಿ ಈ ಮಾಹಿತಿಗಳನ್ನು ಪಡೆಯಲು ಅಪೇಕ್ಷಿಸುವ ಜನರು, ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತಿದೆ. ವಿಶೇಷವೆಂದರೆ ಅರ್ಜಿ ಸಲ್ಲಿಸಿದವರಿಗೂ ಅನೇಕ ಸಂದರ್ಭಗಳಲ್ಲಿ ಈ ಮಾಹಿತಿಗಳನ್ನು ನೀಡಲು ಸತಾಯಿಸಲಾಗುತ್ತಿದೆ. ತತ್ಪರಿಣಾಮವಾಗಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಬೇಕು ಎನ್ನುವ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. 

ಪಾರದರ್ಶಕತೆಗೊಂದು ಸುಲಭೋಪಾಯ

ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸುವ ಮೂಲಕ ಅಧಿಕಾರಿಗಳ ದಕ್ಷತೆ. ಪ್ರಾಮಾಣಿಕತೆ  ಹಾಗೂ ಉತ್ತರದಾಯಿತ್ವಗಳನ್ನು ಹೆಚ್ಚಿಸುವುದರೊಂದಿಗೆ, ಭ್ರಷ್ಟಾಚಾರಕ್ಕೆ ಕಡಿವಾಣವನ್ನು ತೊಡಿಸಲು ಮಾಹಿತಿಹಕ್ಕು ಕಾಯಿದೆ ಅತ್ಯಂತ ಪರಿಣಾಮಕಾರಿ ಎನಿಸುತ್ತದೆ. ಖ್ಯಾತ ಮಾಹಿತಿಹಕ್ಕು ಕಾರ್ಯಕರ್ತ ಮತ್ತು ಕೇಂದ್ರ ಮಾಹಿತಿ ಆಯುಕ್ತರಾಗಿದ್ದ ಶೈಲೇಶ್ ಗಾಂಧಿಯವರು ಹೇಳುವಂತೆ, ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರಬಲ್ಲ ಸುಲಭೋಪಾಯವೊಂದು ಇಂತಿದೆ.

ದೇಶದ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ಕೆಲಸಕಾರ್ಯಗಳಿಗಾಗಿ ಕಂಪ್ಯೂಟರ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದರೊಂದಿಗೆ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಗಳು ತಮ್ಮದೇ ಆದ ಅಂತರ್ಜಾಲ ತಾಣವೊಂದನ್ನು ಸಿದ್ಧಪಡಿಸಿ, ತಮ್ಮ ಕಚೇರಿಯ ಎಲ್ಲ ವ್ಯವಹಾರಗಳನ್ನು ಈ ತಾಣಗಳಲ್ಲಿ ನಿಯಮಿತವಾಗಿ ಪ್ರಕಟಿಸಿದಲ್ಲಿ, ಪಾರದರ್ಶಕತೆಯು ಸುಲಭದಲ್ಲೇ ಜಾರಿಗೊಳ್ಳುತ್ತದೆ. ಉದಾಹರಣೆಗೆ ಸ್ಥಳೀಯ ಸಂಸ್ಥೆಯೊಂದು ತನ್ನ ಮುಂಗಡ ಆಯವ್ಯಯ ಪತ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಲಭಿಸಿರುವ ಅನುದಾನದ ವಿವರಗಳು, ಹಮ್ಮಿಕೊಂಡಿರುವ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಮತ್ತಿತರ ವಿವರಗಳು, ಆಸ್ತಿತೆರಿಗೆ ಮತ್ತು ಕುಡಿಯುವ ನೀರಿನ ಶುಲ್ಕಗಳ ಸಂಗ್ರಹದ ವಿವರಗಳು, ಅನ್ಯಮೂಲಗಳಿಂದ ಲಭಿಸುವ ಆದಾಯ, ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳಿಗಾಗಿ ನೀಡಿರುವ ಅನುಮತಿ ಮತ್ತಿತರ ವಿವರಗಳೇ ಮುಂತಾದ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದಲ್ಲಿ, ಇಂತಹ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿಸಲ್ಲಿಸುವ ಅವಶ್ಯಕತೆಯೇ ಉದ್ಭವಿಸದು. ಜೊತೆಗೆ ಸಮಗ್ರ ವ್ಯವಹಾರಗಳು ಪಾರದರ್ಶಕವಾಗಿ ನಡೆಯುವುದರಿಂದ, ಅವ್ಯವಹಾರ ಮತ್ತು ವಂಚನೆಗಳಿಗೆ ಆಸ್ಪದವಿರದು. ಉದಾಹರಣೆಗೆ ನಿರ್ದಿಷ್ಟ ವಸ್ತುವೊಂದನ್ನು ಖರೀದಿಸಲು ಸ್ಥಳೀಯ ಸಂಸ್ಥೆಯು ಟೆಂಡರ್ ಗಳನ್ನು ಆಹ್ವಾನಿಸಿದ ಬಳಿಕ ಸಲ್ಲಿಕೆಯಾದ ಎಲ್ಲ ಟೆಂಡರ್ ಗಳ ವಿವರಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕಾಗುವುದರಿಂದ, ಭ್ರಷ್ಟಾಚಾರ ಮತ್ತು ವಂಚನೆಗಳಿಗೆ ಅವಕಾಶವೇ ಇರುವುದಿಲ್ಲ. ಆಕಸ್ಮಿಕವಾಗಿ ವಂಚನೆ ನಡೆದರೂ, ಅಂತರ್ಜಾಲ ತಾಣದಲ್ಲಿ ತತ್ಸಂಬಂಧಿತ ಮಾಹಿತಿಯನ್ನು ಗಮನಿಸಿದ ನಾಗರಿಕರಿಗೆ ಇದು ತಿಳಿಯುವುದರಿಂದ, ಮೋಸ – ವಂಚನೆಗಳ ಸಂಭಾವ್ಯತೆಯೂ ನಿವಾರಿಸಲ್ಪಡುತ್ತದೆ.

ಹಣ – ಸಮಯಗಳ ಉಳಿತಾಯ

ಸರ್ಕಾರದ ಪ್ರತಿಯೊಂದು ಇಲಾಖೆಗಳ ವ್ಯವಹಾರಗಳನ್ನು ಕಂಪ್ಯೂಟರೀಕರಣಗೊಳಿಸಿದಲ್ಲಿ, ಈ ಕಾಗದಪತ್ರಗಳನ್ನು ಸಿದ್ಧಪಡಿಸಲು, ಕಡತಗಳಲ್ಲಿ ಇರಿಸಲು, ಸಂರಕ್ಷಿಸಲು ಮತ್ತು ಅವಶ್ಯಕತೆಯಿದ್ದಾಗ ಇವುಗಳನ್ನು ಹುಡುಕಲು ವ್ಯಯಿಸುವ ಸಮಯ ಮತ್ತು ಕೋಟ್ಯಂತರ ರೂಪಾಯಿಗಳ ವೆಚ್ಚಗಳನ್ನೂ ಉಳಿಸಬಹುದಾಗಿದೆ. ಜೊತೆಗೆ ಪ್ರಮುಖ ಕಡತಗಳು ಅಥವಾ ಇವುಗಳಲ್ಲಿರುವ ಕೆಲ ದಾಖಲೆಗಳು ಕಾಣೆಯಾಗುವಂತಹ ಘಟನೆಗಳನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ. ಶೈಲೇಶ್ ಗಾಂಧಿಯವರ ಈ ಅಮೂಲ್ಯ ಸಲಹೆಯನ್ನು ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಿದಲ್ಲಿ, ನಿಶ್ಚಿತವಾಗಿಯೂ ಮಾಹಿತಿಹಕ್ಕು ಕಾಯಿದೆಯು ಮತ್ತಷ್ಟು “ ಜನಸ್ನೇಹಿ “ ಮತ್ತು ಅತ್ಯಂತ ಪರಿಣಾಮಕಾರಿ ಎನಿಸುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಇದನ್ನು ಜಾರಿಗೊಳಿಸಿದ್ದ ಮೂಲ ಉದ್ದೇಶವು ಈಡೇರುವುದರಲ್ಲಿ ಅಡ್ಡಿ ಆತಂಕಗಳು ಉದ್ಭವಿಸುವ ಸಾಧ್ಯತೆಗಳೇ ಇಲ್ಲ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು