Wednesday, April 22, 2015

ORGANISERS TO CLEAN THE VENUE !





ಸ್ವಚ್ಛತೆ - ತ್ಯಾಜ್ಯ ವಿಲೇವಾರಿ : ಸಂಘಟಕರ ಜವಾಬ್ದಾರಿ

ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಇದೀಗ ಹೊರಡಿಸಿರುವ ಆದೇಶದಂತೆಯಾವುದೇ ಸಾರ್ವಜನಿಕ ಕಾರ್ಯಕ್ರಮಗಳು ಜರಗಿದ  ಸ್ಥಳವನ್ನು ಸ್ವಚ್ಛಗೊಳಿಸುವ ಹಾಗೂ ಸಂಗ್ರಹಿತ ತ್ಯಾಜ್ಯಗಳನ್ನು ತ್ಯಾಜ್ಯವಿಲೇವಾರಿ ಘಟಕಗಳಿಗೆ ಸಾಗಿಸುವ ಜವಾಬ್ದಾರಿಯನ್ನು ಸಂಘಟಕರೇ ವಹಿಸಿಕೊಳ್ಳಬೇಕಾಗಿದೆ.ಸ್ವಚ್ಛ ಭಾರತ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಆದೇಶವನ್ನು ಹೊರಡಿಸಿದ್ದು, ಇದು ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ.

ಸ್ಥಳೀಯ ಸಂಸ್ಥೆಗಳ ಹೊಣೆ

ಸ್ಥಳೀಯ ಸಂಸ್ಥೆಗಳು ಈ ಆದೇಶವನ್ನು ಅನುಷ್ಠಾನಗೊಳಿಸಬೇಕಾಗಿದ್ದುದೇಶದ ಪ್ರತಿಯೊಂದು ರಾಜ್ಯಗಳಿಗೂ ಈ ಬಗ್ಗೆ ಅವಶ್ಯಕ ಮಾಹಿತಿಯನ್ನು ಕಳುಹಿಸಲಾಗಿದೆ. ನೂತನ ನಿಯಮಗಳಂತೆ ಯಾವುದೇ ಕಾರ್ಯಕ್ರಮದ ಸಂಘಟಕರು ಸ್ವಚ್ಛತೆಯನ್ನು ಪರಿಪಾಲಿಸುವ ಬಗ್ಗೆ ಲಿಖಿತ ಒಪ್ಪಿಗೆಯನ್ನು ಮತ್ತು ನಿಗದಿತ ಭದ್ರತಾ ಮೊತ್ತವನ್ನು ಸ್ಥಳೀಯ ಸಂಸ್ಥೆಗಳಿಗೆ ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ ನೀಡಲೇಬೇಕು. ಕಾರ್ಯಕ್ರಮದಲ್ಲಿ ೫೦೦ ಕ್ಕೂ ಕಡಿಮೆ ಜನರು ಸೇರುವುದಾದಲ್ಲಿ ೧೦,೦೦೦ ರೂ, ೫೦,೦೦೦ ಜನರು ಸೇರುವುದಾದಲ್ಲಿ ೫೦,೦೦೦ ಸಾವಿರ ರೂ, ಮತ್ತು ೫೦,೦೦೦ ಕ್ಕೂ ಅಧಿಕ ಜನರು ಸೇರುವುದಾದಲ್ಲಿ ೧,೦೦,೦೦೦ ರೂ, ಗಳನ್ನು ಭದ್ರತಾ ಮೊತ್ತದ ರೂಪದಲ್ಲಿ ನೀಡಬೇಕಾಗುವುದು.

ಸಂಘಟಕರ ಜವಾಬ್ದಾರಿ

 ಸಂಘಟಕರು  ಕಾರ್ಯಕ್ರಮ ಜರಗಿದ ಸ್ಥಳವನ್ನು ಸ್ವಚ್ಛಗೊಳಿಸಲು ವಿಫಲರಾದಲ್ಲಿ, ಸ್ಥಳೀಯ ಸಂಸ್ಥೆಗಳು ಭದ್ರತಾ ಮೊತ್ತವನ್ನು ಬಳಸಿ ಸ್ಥಳದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಬೇಕಾಗುತ್ತದೆ. ಯಾವುದೇ ಕಾರ್ಯಕ್ರಮಗಳ ಸಂಘಟಕರು ಭದ್ರತಾ ಮೊತ್ತವನ್ನು ತೆರದಿದ್ದಲ್ಲಿ, ಕಾರ್ಯಕ್ರಮವನ್ನು ನಡೆಸಲು ಅನುಮತಿಯನ್ನು ನಿರಾಕರಿಸಲಾಗುತ್ತದೆ. ಅರ್ಥಾತ್, ಭದ್ರತಾ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಕಾರ್ಯಕ್ರಮಕ್ಕೆ ಅನುಮತಿಯನ್ನು ನೀಡುವಂತಿಲ್ಲ.

ಇಷ್ಟು ಮಾತ್ರವಲ್ಲ, ಕಾರ್ಯಕ್ರಮ ಜರಗುವ ಸ್ಥಳದಲ್ಲಿ ಅವಶ್ಯಕ ಸಂಖ್ಯೆಯ ಕಸದ ತೊಟ್ಟಿಗಳೊಂದಿಗೆ, ತ್ಯಾಜ್ಯ ಸಂಗ್ರಹಕ್ಕಾಗಿ ಅವಶ್ಯಕ ಸಂಖ್ಯೆಯ ಸಿಬಂದಿಗಳನ್ನೂ ಸಂಘಟಕರೇ ನಿಯೋಜಿಸಬೇಕಾಗುತ್ತದೆ. ಅಂತೆಯೇ ಕಾರ್ಯಕ್ರಮ ಮುಗಿದೊಡನೆ ಸಂಗ್ರಹಿತ ತ್ಯಾಜ್ಯಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಸಿರುವ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಬೇಕಾಗುವುದು.

ಇದರೊಂದಿಗೆ ಸಂಘಟಕರು ಕಾರ್ಯಕ್ರಮ ನಡೆದಿರುವ ಸ್ಥಳವನ್ನು ಮುಂದಿನ ೬ ಗಂಟೆಗಳಲ್ಲಿ ಸ್ವಚ್ಛಗೊಳಿಸಿಜಾಗದ ಮಾಲೀಕರಿಗೆ ಒಪ್ಪಿಸಬೇಕಾಗುವುದು. ಕಾರ್ಯಕ್ರಮದ ಸಂಘಟಕರು ಈ ನಿಯಮಗಳನ್ನು ಕ್ರಮಬದ್ಧವಾಗಿ ಪರಿಪಾಲಿಸಿದಲ್ಲಿ, ಅವರು ನೀಡಿದ್ದ ಭದ್ರತಾ ಮೊತ್ತವನ್ನು ಸ್ಥಳೀಯ ಸಂಸ್ಥೆಗಳು ೩ ದಿನಗಳ ಒಳಗಾಗಿ ಮರಳಿಸಬೇಕಾಗುತ್ತದೆ. ಸಂಘಟಕರು ಸಮರ್ಪಕವಾಗಿ ಸ್ಥಳವನ್ನು ಸ್ವಚ್ಚಗೊಳಿಸದೆ ಇದ್ದಲ್ಲಿ, ಸ್ಥಳೀಯ ಸಂಸ್ಥೆಗಳು ಭದ್ರತಾ ಮೊತ್ತವನ್ನು ಬಳಸಿ ಸ್ಥಳವನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿದ ಬಳಿಕ ಉಳಿದ ಹಣವನ್ನು ಮರಳಿಸಬೇಕಾಗುತ್ತದೆ.  

ಅನುಷ್ಠಾನದಲ್ಲಿ ಪಾರದರ್ಶಕತೆಯಿರಲಿ

ಪ್ರಸ್ತುತ ಕೇಂದ್ರ ನಗರಾಭಿವೃದ್ಧಿ ಸಚಿವಾಲಯವು ಹೊರಡಿಸಿರುವ ನೂತನ ಆದೇಶವನ್ನು ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆ ಸ್ಥಳೀಯ ಸಂಸ್ಥೆಗಳ ಮೇಲಿದೆ. ಅದರಲ್ಲೂ ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲಿ ಜರಗುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ಪಕ್ಷಗಳ ಮತ್ತು ಧಾರ್ಮಿಕ ಕಾರ್ಯಕ್ರಮಗಳೇ ಹೆಚ್ಚಾಗಿವೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಸಂಘಟನೆಗಳು ಇಂತಹ ನಿಯಮಗಳನ್ನು ಪರಿಪಾಲಿಸುವುದಿಲ್ಲ. ಜೊತೆಗೆ ತಮ್ಮ ಪ್ರಭಾವವನ್ನು ಬಳಸುವ ಮೂಲಕ ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲಂಘಿಸಲು ಹಿಂಜರಿಯುವುದೇ ಇಲ್ಲ. ತತ್ಪರಿಣಾಮವಾಗಿ " ಯಥಾ ರಾಜಾ, ತಥಾ ಪ್ರಜಾ " ಎನ್ನುವ ಮಾತಿನಂತೆದೇಶದ ಪ್ರಜೆಗಳೂ ಇಂತಹ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಆಶ್ಚರ್ಯವೇನಿಲ್ಲ. ಇದೇ ಕಾರಣದಿಂದಾಗಿ ನೂತನ ನಿಯಮವನ್ನು ನಿರ್ದಾಕ್ಷಿಣ್ಯವಾಗಿ ಅನುಷ್ಠಾನಗೊಳಿಸಲೇ ಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ಸ್ವಚ್ಚ ಭಾರತ ಅಭಿಯಾನವು ನಿಸ್ಸಂದೇಹವಾಗಿ ವಿಫಲವಾಗಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  



Friday, April 17, 2015





ಪುತ್ತೂರು:  ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳ ಸಾಮ್ರಾಜ್ಯ!

ಮುತ್ತು ಬೆಳೆಯುತ್ತಿದ್ದ ಊರೆಂದೇ ಖ್ಯಾತಿವೆತ್ತ ಪುತ್ತೂರಿನ ಒಡೆಯ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯುಈ ಬಾರಿ ಎಂದಿಗಿಂತಲೂ ವೈಭವೋಪೇತವಾಗಿ ಜರಗಿದೆ. ಅಂತೆಯೇ ಜಾತ್ರೆಯಂದು ಉಪಸ್ಥಿತರಿರುವ ಭಕ್ತಾದಿಗಳ ಸಂಖ್ಯೆಯೂ ವರ್ಷಂಪ್ರತಿ ಹೆಚ್ಚುತ್ತಿದೆ. ತಮ್ಮ ಆರಾಧ್ಯದೈವದ ಜಾತ್ರೆಯನ್ನು ಕಣ್ಣಾರೆ ಕಂಡುಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾಗುವ ಭಕ್ತರು, ದೇವಳದ ರಥಬೀದಿ ಮತ್ತು ಇದರ ಇಕ್ಕೆಲಗಳಲ್ಲಿ ಎಸೆದಿರುವ ತ್ಯಾಜ್ಯಗಳ ರಾಶಿಯನ್ನು ಕಂಡಾಗ ಮಾತ್ರ ದಿಗ್ಭ್ರಮೆಯಾಗುತ್ತದೆ.

ಸ್ವಚ್ಛತೆಗೆ ಆದ್ಯತೆ

ಸಾಮಾನ್ಯವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಸೂತಕ, ಸ್ವಚ್ಛತೆ ಮತ್ತು ಮಡಿಮೈಲಿಗೆಗಳ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಸಾಮಾನ್ಯವಾಗಿ ದೇವಳಕ್ಕೆ ಭೇಟಿ ನೀಡುವ ಜನರು ಸ್ನಾನವನ್ನು ಮಾಡಿ ಶುಚಿರ್ಭೂತರಾಗಿ ತೆರಳುವುದು ಸಂಪ್ರದಾಯ. ಅದೇ ರೀತಿಯಲ್ಲಿ ದೇವಳದ ಆವರಣದಲ್ಲಿ ಸದ್ದುಗದ್ದಲಗಳನ್ನು ಮಾಡದೇಸ್ವಚ್ಛತೆಯನ್ನು ಕಾಪಾಡುವ ಹವ್ಯಾಸ ಭಕ್ತರಲ್ಲಿದೆ. ಆದರೆ ಸಹಸ್ರಾರು ಜನರು ಸೇರುವಂತಹ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಇವೆಲ್ಲವನ್ನೂ ನಿರ್ಲಕ್ಷಿಸುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.

ಗದ್ದೆಯಲ್ಲಿ ತ್ಯಾಜ್ಯಗಳು

ಪುತ್ತೂರು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿರುವ ಬ್ರಹ್ಮರಥೋತ್ಸವದಂದು ಅತ್ಯಧಿಕ ಸಂಖ್ಯೆಯ ಭಕ್ತರು ಕುಟುಂಬ ಸಹಿತ ಹಾಜರಾಗುತ್ತಾರೆ. ಸಂಜೆ ದೇವಳದ ಗದ್ದೆಗೆ ಹೋಗುವ ಮುನ್ನ ತಮಗೆ ಬೇಕಾಗುವ ಕುಡಿಯುವ ನೀರು, ಒಂದಿಷ್ಟು ಖಾದ್ಯಪದಾರ್ಥಗಳು ಮತ್ತು ಹಣ್ಣುಹಂಪಲುಗಳೊಂದಿಗೆ, ಹಳೆಯ ವೃತ್ತ ಪತ್ರಿಕೆಗಳನ್ನು ಕೊಂಡೊಯ್ಯುತ್ತಾರೆ. ಜಾತ್ರೆಯ ಗದ್ದೆಯಲಲ್ಲಿ ಸುತ್ತಾಡಿದ ಬಳಿಕ, ಆಯಕಟ್ಟಿನ ಜಾಗದಲ್ಲಿ ವೃತ್ತಪತ್ರಿಕೆಯನ್ನು ಹರಡಿ ಕುಳಿತುಕೊಳ್ಳುತ್ತಾರೆ. ತಾವು ತಂದಿರುವ ಖಾದ್ಯಪೇಯಗಳಲ್ಲದೇ, ಸ್ಥಳದಲ್ಲಿ ದೊರೆಯುವ ಇತರ ಖಾದ್ಯಪೇಯಗಳನ್ನು ಖರೀದಿಸಿ ಸೇವಿಸುತ್ತಾರೆ. ಬಳಿಕ ಉಳಿಯುವ ಸಕಲವಿಧದತ್ಯಾಜ್ಯಗಳನ್ನು ಅಲ್ಲೇ ಎಸೆದುಬಿಡುತ್ತಾರೆ!.

ಈ ತ್ಯಾಜ್ಯಗಳಲ್ಲಿ ವೃತ್ತಪತ್ರಿಕೆಗಳು, ಖಾದ್ಯಗಳನ್ನು ತರಲು ಬಳಸಿದ ಪ್ಲಾಸ್ಟಿಕ್ ಕೈಚೀಲಗಳು, ಪೇಯ ಅಥವಾ ಕುಡಿಯುವ ನೀರನ್ನು ತರಲು ಬಳಸಿದ ಪ್ಲಾಸ್ಟಿಕ್ ಬಾಟಲಿಗಳು, ಖಾಲಿ ಐಸ್ ಕ್ರೀಮ್ ಕಪ್ - ಚಮಚಗಳು, ತಂಪುಪಾನೀಯಗಳ ಪ್ಲಾಸ್ಟಿಕ್ ಲೋಟಗಳು, ಅನ್ಯ ಖಾದ್ಯಗಳ ತಟ್ಟೆಗಳು, ಚುರುಮುರಿ ಮತ್ತಿತರ ಖಾದ್ಯಗಳ ಖಾಲಿ ಲಕೋಟೆ ಇತ್ಯಾದಿ ತ್ಯಾಜ್ಯಗಳು ಪ್ರಮುಖವಾಗಿವೆ. ಆದರೆ ಈ ಬಾರಿ ಜಾತ್ರೆಯ ಗದ್ದೆಯಲ್ಲಿ ಎಸೆದಿರುವ ತ್ಯಾಜ್ಯಗಳಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳಿಗೆ ಸಿಂಹಪಾಲು ಸಲ್ಲುತ್ತದೆ.( ಜಾತ್ರೆಯ ಮರುದಿನ ಬೆಳಗ್ಗೆ ಸ್ಥಳವೀಕ್ಷಣೆ ಮಾಡಿದಾಗ, ಸಹಸ್ರಾರು ಬಾಟಲಿಗಳನ್ನು ಕಂಡು ನಮಗೂ ಅಚ್ಚರಿಯಾಗಿತ್ತು.)ತದನಂತರದ ಸ್ಥಾನ ವೃತ್ತಪತ್ರಿಕೆಗಳಿಗೆ ಸಲ್ಲುತ್ತದೆ. ಸಹಸ್ರಾರು ಜನರು ಎಸೆದಿರುವ ವೈವಿಧ್ಯಮಯ  ತ್ಯಾಜ್ಯಗಳ ಪ್ರಮಾಣವೂ ಅತಿಯಾಗಿದ್ದು, ಇದನ್ನು ಸಂಗ್ರಹಿಸಿವಾಹನಗಳಲ್ಲಿ ತುಂಬಿಸಿ, ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಿ ವಿಲೇವಾರಿ ಮಾಡಲುಪೌರಕಾರ್ಮಿಕರು ಹರಸಾಹಸವನ್ನೇ ನಡೆಸಬೇಕಾಗುತ್ತದೆ. ವಿಶೇಷವಾಗಿ ಎಪ್ರಿಲ್ ೧೮ ಮತ್ತು ೧೯ ರಂದು ಮುಂಜಾನೆ ಪೌರಕಾರ್ಮಿಕರ ದಂಡು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವುದನ್ನು ಕಾಣಬಹುದಾಗಿದೆ. ಜೊತೆಗೆ ಅಂದು ಸಂಗ್ರಹವಾಗುವ ಬೃಹತ್ ಪ್ರಮಾಣದ ತ್ಯಾಜ್ಯಗಳ ರಾಶಿಗಳನ್ನು ಕಂಡಾಗ, ನಿಜಕ್ಕೂ ಗಾಬರಿಯಾಗುತ್ತದೆ.

ಕಡಿಮೆಮಾಡುವುದೆಂತು?

ನಿಜ ಹೇಳಬೇಕಿದ್ದಲ್ಲಿ ಈ ತ್ಯಾಜ್ಯಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲ ಸುಲಭೋಪಾಯವೊಂದು ಇಂತಿದೆ. ಜಾತ್ರೆಯ ಗದ್ದೆಗೆ ಬರುವಾಗ ತಾವು ತಂದಿದ್ದ ಪ್ರತಿಯೊಂದು ವಸ್ತುಗಳನ್ನು ಹಾಕಿದ್ದ ಕೈಚೀಲದಲ್ಲೇತಾವು ಉತ್ಪಾದಿಸಿದ್ದ ತ್ಯಾಜ್ಯಗಳನ್ನು ತುಂಬಿಸಿ ಮನೆಗೆ ಕೊಂಡೊಯ್ಯುವುದೇ ಅತ್ಯಂತ ಸುಲಭದ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಆದರೆ ಇದನ್ನು ಮಾಡಬಲ್ಲ ಇಚ್ಛಾಶಕ್ತಿಯ ಕೊರತೆ ನಮ್ಮಲ್ಲಿರುವುದರಿಂದ, ಜಾತ್ರೆಯ ಗದ್ದೆಯು ಸಂಪೂರ್ಣವಾಗಿ ತ್ಯಾಜ್ಯಗಳಿಂದ ತುಂಬಿ, ತ್ಯಾಜ್ಯ ವಿಲೇವಾರಿ ಘಟಕದಂತೆ ಕಾಣುತ್ತದೆ. ಹಾಗೂ ಇದೇ ಕಾರಣದಿಂದಾಗಿ ದೇವಳದ ಸುತ್ತಮುತ್ತಲ ಪರಿಸರದ ನೈರ್ಮಲ್ಯಕ್ಕೆ ಧಕ್ಕೆಯಾಗುವುದರೊಂದಿಗೆ, ಅಯಾಚಿತ ಸಮಸ್ಯೆಗಳಿಗೂ ಕಾರಣವೆನಿಸುತ್ತಿದೆ. " ಮನಸ್ಸಿದ್ದಲ್ಲಿ ಮಾರ್ಗ " ಎನ್ನುವ ಮಾತಿನಂತೆ, ಮುಂದಿನ ವರ್ಷದ ಜಾತ್ರೆಯ ಸಂದರ್ಭದಲ್ಲಾದರೂ, ದೇವಳದ ಗದ್ದೆಯಲ್ಲಿ ತ್ಯಾಜ್ಯಗಳನ್ನು ಎಸೆಯುವ ಕೆಟ್ಟ ಹವ್ಯಾಸವನ್ನು ಭಕ್ತಾದಿಗಳು ತೊರೆದಲ್ಲಿ, ಶ್ರೀ ದೇವಳದ ಆವರಣವು ಸ್ವಚ್ಛ ಮತ್ತು ನಿರ್ಮಲವಾಗಿ ಕಂಗೊಳಿಸುವುದರಲ್ಲಿ  ಸಂದೇಹವಿಲ್ಲ.

ಕೊನೆಯ ಮಾತು

ಅದೇನೇ ಇರಲಿ, ದೇಶದ ಪ್ರಧಾನಿ ಮೋದಿಯವರು ಗತವರ್ಷದ ಅಕ್ಟೋಬರ್ ನಲ್ಲಿ ಉದ್ಘಾಟಿಸಿದ್ದ " ಸ್ವಚ್ಛ ಭಾರತ ಅಭಿಯಾನ " ದ ಅಂಗವಾಗಿ ಮತ್ತು ನಮ್ಮಸುತ್ತಮುತ್ತಲ ಪರಿಸರ ಹಾಗೂ ನಮ್ಮ ನಿಮ್ಮೆಲ್ಲರ  ಆರೋಗ್ಯದ ರಕ್ಷಣೆಯ ಸಲುವಾಗಿಯಾದರೂ, ನಾವಿಂದು ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡಬೇಕಾಗಿದೆ. ಅಂತೆಯೇ ಅಸ್ವಚ್ಛ ಭಾರತವು ನಿಸ್ಸಂದೇಹವಾಗಿಯೂ, ಅಸ್ವಸ್ಥ ಭಾರತವಾಗಿ ಬದಲಾಗುವುದು ಎನ್ನುವುದು ನೆನಪಿರಲಿ. ಅಂತಿಮವಾಗಿ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿರಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎನ್ನುವುದನ್ನು ಮರೆಯದಿರಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು.



Tuesday, April 7, 2015

SAFE FOOD IS ALWAYS GOOD

ಸುರಕ್ಷಿತ ಆಹಾರ ಸೇವನೆ : ವಿಶ್ವ ಆರೋಗ್ಯ ಸಂಸ್ಥೆಯ ಅಭಿಯಾನ

ವರ್ಷಂಪ್ರತಿ ಎಪ್ರಿಲ್ ತಿಂಗಳಿನ ಏಳನೇ ತಾರೀಕಿನಂದು ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ “ ವಿಶ್ವ ಆರೋಗ್ಯ ದಿನ “ ವನ್ನು ಆಚರಿಸಲಾಗುತ್ತದೆ. ಈ ಬಾರಿ ವಿಶ್ವ ಆರೋಗ್ಯ ಸಂಸ್ಥೆಯು ಸ್ವಚ್ಛತೆ ಮತ್ತು ಆರೋಗ್ಯಗಳ ಬಗ್ಗೆ ಅರಿವನ್ನು ಮೂಡಿಸುವ ವಿಶೇಷ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದರಲ್ಲಿ ನಾವು ಸೇವಿಸುವ ವೈವಿಧ್ಯಮಯ ಅಹಾರಪದಾರ್ಥಗಳು,ಮೊಟ್ಟೆ, ಮೀನು, ಮಾಂಸ, ಸೊಪ್ಪು ತರಕಾರಿ ಮತ್ತು ಹಣ್ಣು ಹಂಪಲುಗಳ ಸೇವನೆಯ ವಿಚಾರದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ನಾವಿಂದು ಉಸಿರಾಡುವ ಗಾಳಿ, ಕುಡಿಯುವ ನೀರು ಮತ್ತು ಸೇವಿಸುವ ವೈವಿಧ್ಯಮಯ ಆಹಾರಪದಾರ್ಥಗಳು ಕಲುಷಿತವಾಗಿರುವುದು ನಿಮಗೂ ತಿಳಿದಿರಬೇಕು. ತತ್ಪರಿಣಾಮವಾಗಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳು ಉದ್ಭವಿಸುತ್ತಿರುವುದರ ವಿಚಾರವೂ ತಿಳಿದಿರಲೇಬೇಕು. ಪ್ರಸ್ತುತ ಕಲುಷಿತ ಹಾಗೂ ಅಸುರಕ್ಷಿತ ಆಹಾರ ಸೇವನೆಯ ಅಪಾಯಗಳ ಬಗ್ಗೆ ಮತ್ತು ಸುರಕ್ಷಿತ ಆಹಾರಪದಾರ್ಥಗಳ ಸೇವನೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಅಭಿಯಾನವೊಂದನ್ನು ಆರಂಭಿಸಿದೆ. ತನ್ಮೂಲಕ ಇದರಿಂದ ಉದ್ಭವಿಸಬಲ್ಲ ಅನೇಕ ವಿಧದ “ ಆಹಾರ ಜನ್ಯ “ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟಲು ಉದ್ದೇಶಿಸಿದೆ. ಈ ಅಭಿಯಾನದಲ್ಲಿ ವಿಶೇಷವಾಗಿ ದೇಶದ ಕೃಷಿಕರು ಮತ್ತು ವಿದ್ಯಾವಂತರು ಕೈಜೋಡಿಸಿದಲ್ಲಿ, ಅಪೇಕ್ಷಿತ ಪರಿಣಾಮ ದೊರೆಯುವುದರಲ್ಲಿ ಸಂದೇಹವಿಲ್ಲ.

ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು

ನಾವಿಂದು ಸೇವಿಸುತ್ತಿರುವ ಅಧಿಕತಮ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯುವಾಗ ಗಣನೀಯ ಪ್ರಮಾಣದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಬಳಸಲಾಗುತ್ತಿದೆ. ರೈತರು ತಾವು ಬೆಳೆಯುವ ಬೆಳೆಗಳ ಫಸಲು ಹೆಚ್ಚಲು ಮತ್ತು ಇವುಗಳನ್ನು ನಾಶಪಡಿಸಬಲ್ಲ ಕೀಟಗಳ ಹಾವಳಿಯನ್ನು ತಡೆಗಟ್ಟಲು ಹೇರಳವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಾರೆ. ಇವುಗಳ ಅತಿಯಾದ ಹಾಗೂ ಅವೈಜ್ಞಾನಿಕ ಬಳಕೆಯಿಂದಾಗಿ, ಇಂತಹ ಆಹಾರಪದಾರ್ಥಗಳನ್ನು ಸೇವಿಸುವ ಜನರಲ್ಲಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳು ತಲೆದೋರುತ್ತವೆ. ಅದರಲ್ಲೂ ಅತ್ಯಂತ ಅಪಾಯಕಾರಿ ಎನಿಸಬಲ್ಲ ಕೆಲ ಕೀಟನಾಶಕಗಳ ಬಳಕೆಯಿಂದ ಮಾರಕ ಕ್ಯಾನ್ಸರ್ ನಂತಹ ಕಾಯಿಲೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗೇರು ಅಭಿವೃದ್ಧಿ ಮಂಡಳಿಗಳು ಕೆಲ ದಶಕಗಳ ಹಿಂದೆ ವೈಮಾನಿಕವಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್ ಕೀಟನಾಶಕದ ದೀರ್ಘಕಾಲೀನ ದುಷ್ಪರಿಣಾಮದಿಂದ ಬಳಲುತ್ತಿರುವ ಸಹಸ್ರಾರು ಜನರು, ಇಂದಿಗೂ ಇದಕ್ಕೆ ಜೀವಂತ ಸಾಕ್ಷಿಗಳಾಗಿದ್ದಾರೆ.

ಭಾರತದಲ್ಲಿ ಸುಮಾರು ೧೯೭ ವಿಧದ ಕೀಟನಾಶಕಗಳು ಲಭ್ಯವಿದ್ದು, ಇವುಗಳಲ್ಲಿ ಕನಿಷ್ಠ ೩೦ ವಿಧದ ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಆದರೆ ಇವುಗಳನ್ನು ಬಳಸುವ ಬಹುತೇಕ ರೈತಾಪಿ ಜನರಿಗೆ ಇವುಗಳ ವೈಜ್ಞಾನಿಕ ಬಳಕೆಯ ಬಗ್ಗೆ ಮಾಹಿತಿ ಇಲ್ಲದ ಕಾರಣದಿಂದಾಗಿ, ತಮಗೆ ತೋಚಿದಷ್ಟು ಪ್ರಮಾಣದಲ್ಲಿ ಬಳಸುತ್ತಾರೆ. ಇದಲ್ಲದೇ ಕೀಟನಾಶಕಗಳ ಜೊತೆಗೆ ನೀಡುವ ಸೂಚನಾ ಪತ್ರವನ್ನು ಓದದ ಮತ್ತು ಇವುಗಳನ್ನು ನೀರಿನಲ್ಲಿ ಬೆರೆಸಿ ಬೆಳೆಗಳಿಗೆ ಸಿಂಪಡಿಸುವ ವಿಧಾನದಲ್ಲಿ ತರಬೇತಿಯನ್ನೇ ಪಡೆದಿರದ ರೈತರು, ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ೧೫ ದಿನಗಳಿಗೆ ಮುನ್ನ ಕೀಟನಾಶಕಗಳ ಸಿಂಪಡಣೆಯನ್ನು ನಿಲ್ಲಿಸಬೇಕೆನ್ನುವ ಸೂಚನೆಯನ್ನು ಪರಿಪಾಲಿಸುವುದೇ ಇಲ್ಲ.

ಪರಿಹಾರವೇನು ?

ಅಡುಗೆ ಕೆಲಸದಲ್ಲಿ ತೊಡಗುವ ಮುನ್ನ ನಿಮ್ಮ ಕೈಗಳು ಮತ್ತು  ಅಡುಗೆಮನೆಯ ಎಲ್ಲ ಪರಿಕರಗಳನ್ನು ಸ್ವಚ್ಛಗೊಳಿಸಿ. ಅಡುಗೆ ಮಾಡಿ ಮುಗಿಸಿದ ಬಳಿಕ ಇವೆಲ್ಲವನ್ನೂ ಮತ್ತೊಮ್ಮೆ ಸ್ವಚ್ಛಗೊಳಿಸಿರಿ.

ಸಾಧ್ಯವಿರುವಷ್ಟು ಸಾವಯವ ವಿಧಾನದಿಂದ ಬೆಳೆದ ತರಕಾರಿ, ಸೊಪ್ಪುಗಳು ಮತ್ತು ಹಣ್ಣು ಹಂಪಲುಗಳನ್ನೇ ಸೇವಿಸಿ. ನಿಮ್ಮ ಮನೆಯ ಸಮೀಪದಲ್ಲಿ ಅಥವಾ ತಾರಸಿಯಲ್ಲಿ ಪುಟ್ಟ ಕೈತೋಟವನ್ನು ನಿರ್ಮಿಸಿ, ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ಸಾವಯವ ಪದ್ದತಿಯಲ್ಲಿ ಬೆಳೆಯಿರಿ. ಇದರಿಂದಾಗಿ ನಿಮಗೆ ಸಾಕಷ್ಟು ವ್ಯಾಯಾಮದೊಂದಿಗೆ, ಉತ್ತಮ ಗುಣಮಟ್ಟದ ತರಕಾರಿಗಳು ಲಭ್ಯವಾಗುವುದರಿಂದ ಆರೋಗ್ಯದ ಮಟ್ಟವೂ ವೃದ್ಧಿಸುತ್ತದೆ. ಮನೆಯ ಸುತ್ತಮುತ್ತ ಖಾಲಿ ಜಾಗವಿದ್ದಲ್ಲಿ ಮಾವು, ಹಲಸು, ಚಿಕ್ಕು ಮತ್ತಿತರ ಹಣ್ಣಿನ ಮರಗಳನ್ನು ಬೆಳೆಸಿರಿ. ತಾಜಾ ಹಣ್ಣುಗಳೊಂದಿಗೆ ನಿಮಗೆ ಒಂದಿಷ್ಟು ನೆರಳನ್ನು ನೀಡಲು ಇಂತಹ ಮರಗಳು ಉಪಯುಕ್ತವೆನಿಸುತ್ತವೆ.

ನೀವು ದಿನನಿತ್ಯ ಬಳಸುವ ದವಸ – ಧಾನ್ಯಗಳು, ತರಕಾರಿಗಳು, ಹಸಿರುಸೊಪ್ಪುಗಳು ಮತ್ತು ಹಣ್ಣು ಹಂಪಲುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಿದಲ್ಲಿ, ಇವುಗಳನ್ನು  ಬಳಸುವ ಮುನ್ನ ಕನಿಷ್ಠ ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ತನ್ಮಧ್ಯೆ ಎರಡರಿಂದ ಮೂರುಬಾರಿ ಇವುಗಳನ್ನು ತೊಳೆದು, ನೀರನ್ನು ಬದಲಾಯಿಸಿ.

ಇದೇ ರೀತಿಯಲ್ಲಿ ಸ್ವಚ್ಛಗೊಳಿಸಿದ ದವಸ ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕವೇ ಗಿರಣಿಗಳಲ್ಲಿ ಹುಡಿಮಾಡಿ ಹಿಟ್ಟನ್ನು ಸಿದ್ಧಪಡಿಸಿ. ಬೇಯಿಸಬೇಕಾದ ದವಸ ಧಾನ್ಯಗಳನ್ನು ಮತ್ತು ತರಕಾರಿಗಳನ್ನು ಪ್ರೆಷರ್ ಕುಕರ್ ನಲ್ಲಿ ೧೫೦ ರಿಂದ ೧೯೦ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಬೇಯಿಸಿರಿ. ಇದರಿಂದಾಗಿ ಇವುಗಳಲ್ಲಿರುವ ಪೌಷ್ಠಿಕಾಂಶಗಳು ಆಂಶಿಕವಾಗಿ ನಶಿಸಿದರೂ, ಇದರೊಂದಿಗೆ ಅಪಾಯಕಾರಿ ರಾಸಾಯನಿಕ ಕೀಟನಾಶಕಗಳು ನಾಶವಾಗುತ್ತವೆ.

ಅತ್ಯಧಿಕ ಪ್ರಮಾಣದ ಕೀಟನಾಶಕಗಳನ್ನು ಬಳಸಿ ಬೆಳೆಯುವ ದ್ರಾಕ್ಷಿ, ಸೇಬು, ಮಾವು ಇತ್ಯಾದಿ ಹಣ್ಣುಗಳನ್ನು ಹಾಗೂ ಸೊಪ್ಪು ತರಕಾರಿಗಳನ್ನು ಮೇಲಿನಂತೆಯೇ ನೀರಿನಲ್ಲಿ ಮುಳುಗಿಸಿಟ್ಟು, ಸ್ವಚ್ಛಗೊಳಿಸಿದ ಬಳಿಕ ಬಳಸಿ. ಸೊಪ್ಪುಗಳನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿದ ಬಳಿಕ ಕೊಂಚ ಉಪ್ಪನ್ನು ಬೆರೆಸಿದ ನೀರಿನಲ್ಲಿ ಒಂದಿಷ್ಟು ಹೊತ್ತು ಮುಳುಗಿಸಿಟ್ಟ ನಂತರ ಬಳಸಿ.

ಹಸಿ ಆಹಾರ್ಪದರ್ಥಗಳನ್ನು ಮತ್ತು ಸೇವನೆಗೆ ಸಿದ್ಧವಾಗಿರುವ ( ರೆಡಿ ಟು ಈಟ್ ) ಆಹಾರಗಳನ್ನು ಬೆರೆಸಬೇಡಿ. ಅದರಲ್ಲೂ ಹಸಿ ತರಕಾರಿಗಳು, ಹಸಿ ಮಾಂಸ ಮತ್ತು ಮೀನುಗಳನ್ನು ಯಾವುದೇ ಸಂದರ್ಭದಲ್ಲೂ ಬೆರೆಸಬೇಡಿ.

ಮೊಟ್ಟೆ, ಮೀನು ಹಾಗೂ ಕೋಳಿ ಮತ್ತಿತರ ಮಾಂಸಗಳನ್ನು ಸಮರ್ಪಕವಾಗಿ ಬೇಯಿಸಿದ ಬಳಿಕವೇ ಸೇವಿಸಿರಿ. ಸೇವನೆಯ ಬಳಿಕ ಉಳಿದ ಆಹಾರಗಳನ್ನು ಮತ್ತೊಮ್ಮೆ ಕುದಿಸಿಡಿ.

ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿದ ಎರಡು ಗಂಟೆಗಳಲ್ಲಿ ಇವುಗಳನ್ನು ಫ್ರಿಜ್ ನಲ್ಲಿರಿಸುವುದು ಸುರಕ್ಷಿತವೆನಿಸುವುದು. ಆದರೆ ಫ್ರೀಜರ್ ನಲ್ಲಿ ಇರಿಸಿದ ಆಹಾರಗಳನ್ನು ಹೊರಗಿರಿಸಿ ಬಳಸುವುದಕ್ಕಿಂತಲೂ, ಈ ಪಾತ್ರೆಯನ್ನು ನೀರಿನಲ್ಲಿರಿಸಿ ಅಥವಾ ಮೈಕ್ರೋವೇವ್ ಬಳಸಿ ಡಿ ಫ್ರಾಸ್ಟ್ ಮಾಡುವುದು ಹಿತಕರವೆನಿಸುವುದು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು