Saturday, April 7, 2018

SAVE WATER



               ಜೀವಜಲವನ್ನು ಸಂರಕ್ಷಿಸಲು ಸನ್ನದ್ಧರಾಗಿ

ನಿರಂತರವಾಗಿ ಹೆಚ್ಚುತ್ತಿರುವ ಜಗತ್ತಿನ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಅನಿಯಂತ್ರಿತವಾಗಿ ಸಂಭವಿಸುತ್ತಿರುವ ಜಲ – ವಾಯು ಮಾಲಿನ್ಯ ಹಾಗೂ ಪರಿಸರ ಪ್ರದೂಷಣೆಗಳ ಪರಿಣಾಮವಾಗಿ  ವೃದ್ಧಿಸುತ್ತಿರುವ ಜಾಗತಿಕ ತಾಪಮಾನದ ಹೆಚ್ಚಳವು, ಮನುಕುಲಕ್ಕೆ ಮಾರಕವೆನಿಸಬಲ್ಲ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ.  ಇಂತಹ ಸಮಸ್ಯೆಗಳಲ್ಲಿ “ ಜಲಕ್ಷಾಮ “ ವು ಪ್ರಮುಖವಾಗಿದೆ. ಇದಕ್ಕೆ ಅನ್ಯ ಕಾರಣಗಳೂ ಇವೆ. ಈ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
ಮನುಷ್ಯನು ಈ ಭೂಮಿಯ ಮೇಲೆ ಜೀವಿಸಲು ಸ್ವಚ್ಚವಾದ ಗಾಳಿ, ಶುದ್ಧವಾದ ನೀರು ಮತ್ತು ಸಮತೋಲಿತ ಆಹಾರಗಳು ಅತ್ಯವಶ್ಯಕ ಎನಿಸುತ್ತವೆ. ಆದರೆ ಕಳೆದ ಕೆಲವರ್ಷಗಳಿಂದ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ “ ಜಲಕ್ಷಾಮ “ ದ ಸಮಸ್ಯೆ ಉದ್ಭವಿಸಿ ಉಲ್ಬಣಿಸುತ್ತಿದೆ. ಈ ಸಮಸ್ಯೆಗೆ ಭಾರತವೂ ಅಪವಾದವೆನಿಸಿಲ್ಲ. ನಮ್ಮ ದೇಶದ ಹಲವಾರು ರಾಜ್ಯಗಳಲ್ಲಿ ಬೇಸಗೆಯ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರವಿದೆ. ಇತ್ತೀಚಿನ ಮಾಹಿತಿಯಂತೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ, ಸದ್ಯೋಭವಿಷ್ಯದಲ್ಲಿ ಸಂಪೂರ್ಣ ಶುಷ್ಕವಾಗಲಿರುವ ಹದಿನೊಂದು ಸಂಭಾವ್ಯ  ಮಹಾನಗರಗಳಲ್ಲಿ ನಮ್ಮ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಮಹಾನಗರವು ಇದೇ  ವರ್ಷದ ಜುಲೈ 15 ರಂದು ಸಂಪೂರ್ಣವಾಗಿ ಶುಷ್ಕವಾಗಲಿದೆ!.

ಕ್ಷಯಿಸುತ್ತಿರುವ ಮುಂಗಾರು ಮಳೆ
ಕೆಲವೇ ದಶಕಗಳ ಹಿಂದೆ ದೇಶದ ಬಹುತೇಕ ಭಾಗಗಳಲ್ಲಿ ಹಗಲಿರುಳು ಸುರಿಯುತ್ತಿದ್ದ ಮುಂಗಾರು ಮಳೆಯು ಕಾಲಕ್ರಮೇಣ ಕಡಿಮೆಯಾಗಿ ವರುಷಗಳೇ ಸಂದಿವೆ. ಥಟ್ಟನೆ ಆರಂಭವಾಗಿ ಅಷ್ಟೇ ವೇಗದಲ್ಲಿ ಮಾಯವಾಗುವ ಇಂದಿನ ಮಳೆ ಮತ್ತು ಹಿಂದೆ ಧೋ ಎಂದು ಎಡೆಬಿಡದೆ  ಸುರಿಯುತ್ತಿದ್ದ ಜಡಿಮಳೆಗೆ ಅಜಗಜಾಂತರ ವ್ಯತ್ಯಾಸವಿದೆ. ಬೆಳಗಿನ ಜಾವ ಸೂರಿನ ಮೇಲೆ ಬೀಳುತ್ತಿದ್ದ ಮಳೆಯ ಸದ್ದಿಗೆ ಎಚ್ಚರವಾಗುತಿದ್ದ ಮತ್ತು ಮಳೆಯ ಸದ್ದನ್ನು ಆಲಿಸುತ್ತಾ ನಿದ್ದೆಗೆ ಜಾರುತ್ತಿದ್ದ ದಿನಗಳು ಇದೀಗ ಕೇವಲ ನೆನಪುಗಳಾಗಿರುವುದು ಸತ್ಯ.
 ನಾವು ಕೃಷಿ ಮತ್ತು ಅನ್ಯ ಉದ್ದೇಶಗಳಿಗಾಗಿ ಮಳೆನೀರನ್ನೇ ಅವಲಂಬಿಸಿರುವುದರಿಂದಾಗಿ, ಕ್ಷಯಿಸುತ್ತಿರುವ ಮುಂಗಾರು ಮಳೆಯೊಂದಿಗೆ ನಾವಿಂದು ವ್ಯಯಿಸುತ್ತಿರುವ ಅಗಾಧ ಪ್ರಮಾಣದ ನೀರಿನಿಂದಾಗಿ,ಸದ್ಯೋಭವಿಷ್ಯದಲ್ಲಿ  ತೀವ್ರ ಸ್ವರೂಪದ ಜಲಕ್ಷಾಮದ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಇತ್ತೀಚಿನ ಕೆಲವರ್ಷಗಳಿಂದ ನಮ್ಮ ರಾಜ್ಯದ ( ಮತ್ತು ಅನ್ಯ ರಾಜ್ಯಗಳ ) ಬಹುತೇಕ ತಾಲೂಕುಗಳಲ್ಲಿ ಕಂಡುಬರುತ್ತಿರುವ “ ಬರ “ ವು, ಮುಂದೆ ಸಂಭವಿಸಲಿರುವ ತೀವ್ರ ಸ್ವರೂಪದ ಜಲಕ್ಷಾಮದ ಮುನ್ಸೂಚನೆಯೇ ಆಗಿದೆ.
ಬೇಡಿಕೆ – ಲಭ್ಯತೆ
ಸುಮಾರು ನಾಲ್ಕು ವರ್ಷಗಳ ಹಿಂದೆ ನಮ್ಮ ದೇಶದ ನೀರಿನ ಬೇಡಿಕೆಯ ಪ್ರಮಾಣವು 718 ಬಿಲಿಯನ್ ( ಲಕ್ಷ ಕೋಟಿ ) ಕ್ಯುಬಿಕ್ ಮೀಟರ್ ಆಗಿದ್ದು, 2025 ರಲ್ಲಿ ಈ ಪ್ರಮಾಣವು 833 ಬಿಲಿಯನ್ ಕ್ಯು. ಮೀ. ತಲುಪಲಿದೆ. ಇದರಲ್ಲಿ ಕೃಷಿ ನೀರಾವರಿಗಾಗಿ ಬಳಸಲ್ಪಡುತ್ತಿದ್ದ ನೀರಿನ ಪ್ರಮಾಣವು 2010 ರಲ್ಲಿ 557 ಬಿ.ಕ್ಯು.ಮೀ. ಆಗಿದ್ದು, 2050 ರಲ್ಲಿ ಇದು 807 ಬಿ.ಕ್ಯು.ಮೀ. ತಲುಪಲಿದೆ. ದೇಶದ ಜನರ ಗೃಹಬಳಕೆಯ ನೀರಿನ ಪ್ರಮಾಣವು 2010 ರಲ್ಲಿ ಕೇವಲ 43 ಬಿ.ಕ್ಯು.ಮೀ. ಆಗಿದ್ದು, 2015 ರಲ್ಲಿ 62 ಹಾಗೂ 2050 ರಲ್ಲಿ 110 ಬಿ.ಕ್ಯು.ಮೀ. ಆಗಲಿದೆ!.
ಉದ್ದಿಮೆಗಳು ಬಳಸುತ್ತಿದ್ದ ನೀರಿನ ಪ್ರಮಾಣವು 2010 ರಲ್ಲಿ ಕೇವಲ 37 ಬಿ.ಕ್ಯು.ಮೀ. ಆಗಿದ್ದು, 2025 ರಲ್ಲಿ 62 ಹಾಗೂ 2050 ರಲ್ಲಿ 81 ಬಿ.ಕ್ಯು.ಮೀ. ತಲುಪಲಿದೆ. ಅದೇ ರೀತಿಯಲ್ಲಿ ವಿದ್ಯುತ್ ಉತ್ಪಾದನೆಗಾಗಿ 2010 ರಲ್ಲಿ 19 ಬಿ.ಕ್ಯು.ಮೀ. ಬಳಸಲಾಗಿದ್ದು, 2025 ರಲ್ಲಿ ಇದು 30 ಮತ್ತು 2050 ರಲ್ಲಿ 70 ಬಿ.ಕ್ಯು.ಮೀ. ಆಗಲಿದೆ. ಈ ರೀತಿಯಲ್ಲಿ ವಿವಿಧ ಉದ್ದೇಶಗಳಿಗಾಗಿ ನಮಗಿಂದು ಅಗಾಧ ಪ್ರಮಾಣದ ನೀರಿನ ಅವಶ್ಯಕತೆ ಇದ್ದರೂ, ದೇಶದ ಅನೇಕ ಭಾಗಗಳಲ್ಲಿ ಕಂಡುಬರುತ್ತಿರುವ ಜಲಕ್ಷಾಮದ ಸಮಸ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ. ವಿಶೇಷವೆಂದರೆ ನಮ್ಮ ದೇಶದಲ್ಲಿ ಸುರಿಯುವ ಮಳೆಯ ನೀರಿನ ಶೇ. 65 ರಷ್ಟು ಪಾಲು ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ. ಅದೇ ರೀತಿಯಲ್ಲಿ ನಾವು ದಿನನಿತ್ಯ ಬಳಸುವ ನೀರಿನ ಶೇಕಡಾ 80 ರಷ್ಟನ್ನು ಚರಂಡಿಗಳಿಗೆ ವಿಸರ್ಜಿಸಲಾಗುತ್ತಿದೆ.  
ಭಾರತವು ಒಂದು ವರ್ಷದಲ್ಲಿ ಸುಮಾರು 210 ಬಿ. ಕ್ಯು.ಮೀ. ಗಿಂತಲೂ ಅಧಿಕ ಪ್ರಮಾಣದ ಅಂತರ್ಜಲವನ್ನು ಬಳಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎನ್ನಲಾಗಿದೆ. ನಮ್ಮ ದೇಶದಲ್ಲಿನ ಶೇ. 60 ರಷ್ಟು ನೀರಾವರಿ ಜಮೀನಿಗೂ ಇದೇ ಅಂತರ್ಜಲವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ದೇಶದ ಶೇ. 60 ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ.
2010 ರಲ್ಲಿ ದೇಶದ ಜನಸಂಖ್ಯೆಯು 1029 ದಶಲಕ್ಷವಾಗಿದ್ದು, ಅಂದಿನ ನೀರಿನ ಲಭ್ಯತೆಯ ಪ್ರಮಾಣವು ಒಂದು ವರ್ಷದಲ್ಲಿ ತಲಾ 1806 ಕ್ಯು. ಮೀ. ಆಗಿತ್ತು. 2011 ರಲ್ಲಿ ಜನಸಂಖ್ಯೆ 1210 ದಶಲಕ್ಷ ಹಾಗೂ ನೀರಿನ ಲಭ್ಯತೆಯ ಪ್ರಮಾಣವು 1545 ಕ್ಯು.ಮೀ. ಹಾಗೂ 2025 ರಲ್ಲಿ ಜನಸಂಖ್ಯೆ 1394 ( ಅಂದಾಜು ) ದ.ಲ. ಮತ್ತು ಲಭ್ಯತೆ 1340 ಕ್ಯು.ಮೀ. ಮತ್ತು 2050 ರಲ್ಲಿ ಜನಸಂಖ್ಯೆ 1640 ( ಅಂದಾಜು ) ದ.ಲ. ಮತ್ತು ಲಭ್ಯತೆಯ ಪ್ರಮಾಣವು 1140 ಕ್ಯು.ಮೀ. ತಲುಪಲಿದೆ. ಅರ್ಥಾತ್, ನೀರಿನ ಲಭ್ಯತೆಯ ಪ್ರಮಾಣವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕಡಿಮೆಯಾಗುತ್ತಾ ಹೋಗಲಿದೆ.
ನೀರಿನ ಮರುಬಳಕೆ
ದೇಶದಲ್ಲಿನ ಉದ್ದಿಮೆಗಳು ತಾವು ಬಳಸಿ ವಿಸರ್ಜಿಸುವ ಶೇ. 90 ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸಿ ನದಿಗಳಿಗೆ ವಿಸರ್ಜಿಸುತ್ತಿವೆ. ಆದರೆ ಈ ಶುದ್ಧೀಕರಿಸಿದ ನೀರು ಪರಿಸರಸ್ನೇಹಿ ಮಾನದಂಡಗಳಿಗೆ ಅನುಗುಣವಾಗಿಲ್ಲ. ಅಂತೆಯೇ ದೇಶದ ಅಧಿಕತಮ ನಗರ – ಮಹಾನಗರಗಳಲ್ಲಿನ ಬೃಹತ್ ವಸತಿ – ವಾಣಿಜ್ಯ ಸಂಕೀರ್ಣಗಳು ವಿಸರ್ಜಿಸುತ್ತಿರುವ ಕಲುಷಿತ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುತ್ತಿಲ್ಲ. ಇದಕ್ಕಾಗಿ ಸೂಕ್ತ ಕಾನೂನುಗಳನ್ನು ಸರ್ಕಾರ ರೂಪಿಸಿದರೂ, ಇದನ್ನು ಸ್ಥಳೀಯ ಸಂಸ್ಥೆಗಳು  ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿಲ್ಲ. ಮಂದಿನ ಒಂದೆರಡು ದಶಕಗಳಲ್ಲಿ ನಾವು ಬಳಸಿ ವಿಸರ್ಜಿಸಿದ ಕಲುಷಿತ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಬೇಕಗುವುದು ಎನ್ನುವದರ ಅರಿವು ಜನಸಾಮಾನ್ಯರಲ್ಲಿಲ್ಲ.
ಪರಿಹಾರವೇನು?
ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ನಗರ – ಪಟ್ಟಣಗಳಲ್ಲಿನ ಪ್ರತಿಯೊಂದು ಕಟ್ಟಡಗಳಲ್ಲೂ, ಮಳೆನೀರಿನ ಕೊಯ್ಲನ್ನು ಕಡ್ಡಾಯವಾಗಿಸಬೇಕು. ಈ ವಿಧಾನದಿಂದ ನಾವಿಂದು ಬಳಸದಿರುವ ಶೇ. 65 ರಷ್ಟು ಮಳೆನೀರನ್ನು ಉಳಿಸಿ ಬಳಸಬಹುದಾಗಿದೆ. ಇದಲ್ಲದೇ ಪ್ರತಿಯೊಂದು ವಸತಿ – ವಾಣಿಜ್ಯ ಸಂಕೀರ್ಣಗಳಲ್ಲಿ ಜಲ ಶುದ್ಧೀಕರಣ ಸ್ಥಾವರಗಳ ನಿರ್ಮಾಣವನ್ನು ಕಡ್ಡಾಯಗೊಳಿಸಬೇಕು. ಪ್ರತಿಯೊಂದು ಕೊಳವೆ ಬಾವಿಗೂ ಜಲಮರುಪೂರಣ ವ್ಯವಸ್ಥೆಯನ್ನು ಕಡ್ಡಾಯ ಮಾಡಬೇಕು. ಸಿಹಿನೀರಿನ ಬಾವಿ ಹಾಗೂ ಕೆರೆ – ಕುಂಟೆಗಳನ್ನು  ಸಂರಕ್ಷಿಸಬೇಕು.  ಅದೇ ರೀತಿಯಲ್ಲಿ ಧಾರಾಳ ನೀರು ಲಭ್ಯವಿರುವಲ್ಲಿ ಅನಾವಶ್ಯಕವಾಗಿ ನೀರನ್ನು ಪೋಲುಮಾಡುವ ಕೆಟ್ಟ ಹವ್ಯಾಸಕ್ಕೆ ಕಡಿವಾಣ ತೊಡಿಸಲೇಬೇಕು. ಸಣ್ಣಪುಟ್ಟ ವಸತಿ ಕಟ್ಟಡಗಳಲ್ಲಿ ಉತ್ಪನ್ನವಾಗುವ ಕಲುಷಿತ ನೀರನ್ನು ಶುದ್ಧೀಕರಿಸಲು ಅಸಾಧ್ಯವೆನಿಸಿದಲ್ಲಿ, ಕನಿಷ್ಠ ಪಕ್ಷ  ಕೈತೋಟ ಅಥವಾ ಗಿಡಮರಗಳಿಗೆ ಉಣಿಸುವ ಹವ್ಯಾಸವನ್ನು ಪ್ರೋತ್ಸಾಹಿಸಬೇಕು. ಇವೆಲ್ಲಕ್ಕೂ ಮಿಗಿಲಾಗಿ ಸ್ಥಳೀಯ ಸಂಸ್ಥೆಗಳು ಸರಬರಾಜು ಮಾಡುವ ಶುದ್ಧೀಕರಿಸಿದ ಕುಡಿಯುವ ನೀರನ್ನು ಪೂರೈಸಲು ವ್ಯಯಿಸುವಷ್ಟು ಹಣವನ್ನು ಸ್ಥಳೀಯ ನಿವಾಸಿಗಳಿಂದ ವಸೂಲು ಮಾಡಬೇಕು. ಅಂತಿಮವಾಗಿ ನಾವು ನೀವೆಲ್ಲರೂ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ “ ಜಲ ಸಂರಕ್ಷಣೆ “ ಮಾಡದೇ ಇದ್ದಲ್ಲಿ, ಈ ಭೂಮಿಯು ಮರುಭೂಮಿ ಆಗಲಿದೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು, ದ. ಕ