Friday, May 30, 2014

E- Governance




  ನಾಗರಿಕರಿಗೆ ವರದಾನವೆನಿಸಲಿರುವ ಇ - ಆಡಳಿತ 

ತಮ್ಮ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಎಡತಾಕುವ ಜನಸಾಮಾನ್ಯರನ್ನು ಇಲ್ಲಸಲ್ಲದ ನೆಪವನ್ನು ಮುಂದೊಡ್ಡಿ ಸತಾಯಿಸುವ ಸರ್ಕಾರಿ ನೌಕರರ ವರ್ತನೆಗಳಿಗೆ ಸದ್ಯೋಭವಿಷ್ಯದಲ್ಲಿ ಕಡಿವಾಣ ಬೀಳಲಿದೆ. ಏಕೆಂದರೆ ಈ ವರ್ಷಾಂತ್ಯದಲ್ಲಿ ಬಹುತೇಕ ಸರ್ಕಾರಿ ಸೇವೆಗಳನ್ನು ಇ - ಆಡಳಿತದ ಮೂಲಕ ನೀಡುವ ಯೋಜನೆಯೊಂದು ಕಾರ್ಯಗತವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬಂದ ಬಳಿಕ, ಸರ್ಕಾರಿ ನೌಕರರಿಂದ ರಾಜ್ಯದ ಪ್ರಜೆಗಳಿಗೆ ಸಂಭವಿಸುತ್ತಿದ್ದ ಕಿರುಕುಳ ಮತ್ತು ಭ್ರಷ್ಟಾಚಾರದ ಸಮಸ್ಯೆಗಳು ನಿಶ್ಚಿತವಾಗಿಯೂ ಕೊನೆಗೊಳ್ಳಲಿವೆ. 

ರಾಜ್ಯದ ಹಾಗೂ ದೇಶದ ಪ್ರಜೆಗಳಿಗೆ ಸರ್ಕಾರ ಒದಗಿಸುವ ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸಲು ಉಪಯುಕ್ತವೆನಿಸಬಲ್ಲ ಇ - ಆಡಳಿತವನ್ನು ಜಾರಿಗೆ ತರುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದ ಸರ್ಕಾರೇತರ ಸಂಸ್ಥೆಗಳಲ್ಲಿ, ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯೂ ಸಕ್ರಿಯವಾಗಿ ಕಾರ್ಯನಿರ್ವಹಿಸಿತ್ತು. 

ಇ -ಆಡಳಿತ 

ರಾಷ್ಟ್ರೀಯ ಇ - ಆಡಳಿತ ಯೋಜನೆಯ ಅಂಗವಾಗಿ ಕರ್ನಾಟಕ ಇ - ಜಿಲ್ಲಾ ಯೋಜನೆಯನ್ನು ಅನುಷ್ಠಾನಗೊಳಿಸಲು, ೨೮ ಸರ್ಕಾರಿ ಇಲಾಖೆಗಳು ಜನರಿಗೆ ಒದಗಿಸುವ ೩೬೯ ಸೇವೆಗಳನ್ನು ಈಗಾಗಲೇ ಆಯ್ಕೆಮಾಡಲಾಗಿದೆ. ಸಂಬಂಧಿತ ಅಧಿಕಾರಿಗಳು ಹೇಳುವಂತೆ ಇವೆಲ್ಲಾ ಸೇವೆಗಳನ್ನು ಇ - ಆಡಳಿತದ ಮೂಲಕ ಒದಗಿಸುವ ಕಾರ್ಯವು ಇದೇ ವರ್ಷದ ಅಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗಲಿದೆ. ಕೇಂದ್ರ ಸರ್ಕಾರದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಮಂತ್ರಾಲಯದ ಅಧೀನದಲ್ಲಿರುವ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಒದಗಿಸುವ ಆರ್ಥಿಕ ನೆರವಿನಿಂದ ಅನುಷ್ಠಾನಗೊಳ್ಳಲಿರುವ ಇ - ಜಿಲ್ಲಾ ಯೋಜನೆಯು, ಸರ್ಕಾರದಿಂದ ಪ್ರಜೆಗಳಿಗೆ ವಿದ್ಯುನ್ಮಾನ ಮತ್ತು ಬೃಹತ್ ಪ್ರಮಾಣದ ಸೇವೆಗಳನ್ನು ಜಿಲ್ಲಾ ಮತ್ತು ಕೆಳಮಟ್ಟಗಳಲ್ಲಿ ನೀಡಲಿದೆ. ರಾಜ್ಯ ಇ -ಆಡಳಿತ ಇಲಾಖೆಯ ಅಧೀನದಲ್ಲಿರುವ ನಾಗರಿಕ ಸೇವೆಗಳನ್ನು ವಿದ್ಯುನ್ಮಾನ ವಿಧಾನದಿಂದ ನೀಡುವ ನಿರ್ದೇಶನಾಲಯದ ಮಾಹಿತಿಯಂತೆ, ಈ ಯೋಜನೆಯನ್ನು ಅನುಷ್ಠಾನಿಸಲು  ನಿಯೋಜಿತ ಸಂಸ್ಥೆಯು ಸರ್ಕಾರದ ವಿವಿಧ ಇಲಾಖೆಗಳ ೧೮೫೬ ಸೇವೆಗಳನ್ನು ಗುರುತಿಸಿದ್ದು, ೧೨೭೦ ಸೇವೆಗಳನ್ನು ಸಮ್ಮಿಶ್ರಗೊಳಿಸಲು ನಿರ್ಧರಿಸಿದೆ. ಇವುಗಳಲ್ಲಿ ೨೮ ಇಲಾಖೆಗಳ ೩೬೯ ಸೇವೆಗಳನ್ನು ಆಯ್ಕೆಮಾಡಲಾಗಿದೆ. 

ಇ - ಜಿಲ್ಲಾ ಯೋಜನೆಯ ಬಗ್ಗೆ ವಿಸ್ತ್ರತ ಯೋಜನಾ ವರದಿಯನ್ನು ಈಗಾಗಲೇ ಸರ್ಕಾರವು ಅನುಮೋದಿಸಿದ್ದು, ಇದರ ಅನುಷ್ಠಾನದ ಸಲುವಾಗಿ ಒಡಂಬಡಿಕೆಯೊಂದಕ್ಕೆ ಸಹಿಹಾಕಲಾಗಿದೆ. ಹಾಗೂ ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಿಸಲಾಗುತ್ತದೆ. ರಾಜ್ಯ ಸಚಿವ ಸಂಪುಟವು ಇದೇ ವರ್ಷದ ಆದಿಯಲ್ಲಿ ಈ ಯೋಜನೆಗೆ ಹಸಿರು ನಿಶಾನೆಯನ್ನು ತೋರಿದ್ದು, ಇದನ್ನು ಅನುಷ್ಠಾನಗೊಳಿಸಲು ಆದೇಶಿಸಿದೆ. ಪ್ರಸ್ತುತ ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಈ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಇವುಗಳ ಅನುಮತಿ ಪತ್ರವನ್ನು ನಿರೀಕ್ಷಿಸಲಾಗಿದೆ. ಎಲ್ಲವೂ ಸುಸೂತ್ರವಾಗಿ ಜರಗಿದಲ್ಲಿ ಇದೇ ವರ್ಷದ ಅಂತ್ಯದಲ್ಲಿ ರಾಜ್ಯದ ಪ್ರಜೆಗಳಿಗೆ ಇ - ಸೇವೆಗಳು ಲಭ್ಯವಾಗಲಿವೆ. 

ಉದಾಹರಣೆಗೆ ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸುದು ಹಾಗೂ ಇದರ ಸ್ಥಿತಿಗತಿಗಳನ್ನು ಗಮನಿಸುವುದು ಇ - ಜಿಲ್ಲಾ ಆಡಳಿತ ಯೋಜನೆಯಲ್ಲಿ ಸುಲಭವೆನಿಸಲಿದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅಯಾಚಿತ ಸಂಕಷ್ಟಗಳಿಗೆ ಕಾರಣವೆನಿಸುತ್ತಿರುವ ಪ್ರೌಢ ಶಿಕ್ಷಣ ಮಂಡಳಿಯ ಒಂಬತ್ತು ಸೇವೆಗಳು ಈ ಯೋಜನೆಯಲ್ಲಿ ಲಭ್ಯವಿದೆ. ಇದರಿಂದಾಗಿ ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿ, ಅಂಕಪಟ್ಟಿಯ ನಕಲು ಪ್ರತಿ, ಪುನರ್ ಮೌಲ್ಯಮಾಪನ ಮತ್ತಿತರ ಸೇವೆಗಳು ಇ - ಸೇವೆಯ ಮೂಲಕ ದೊರೆಯಲಿವೆ. ಇದಲ್ಲದೇ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ, ಹಿಂದುಳಿದ ವರ್ಗ ಮತ್ತು ಪಂಗಡಗಳ ಅಭಿವೃದ್ಧಿ, ಅಲ್ಪಸಂಖ್ಯಾತರ ಮತ್ತು ಸಮಾಜ ಕಲ್ಯಾಣ ಮತ್ತಿತರ ಇಲಾಖೆಗಳ ಹಲವಾರು ಸೇವೆಗಳು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಾಗಲಿವೆ. 

ದೇಶದ ಇತರ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಈ ಯೋಜನೆಯು ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಂಡ ಬಳಿಕ, ರಾಜ್ಯದ ಪ್ರಜೆಗಳಿಗೆ ಇದು ನಿಸ್ಸಂದೇಹವಾಗಿಯೂ ವರದಾನವಾಗಿ ಪರಿಣಮಿಸಲಿದೆ. ಆದರೆ ಇದರ ಅನುಷ್ಠಾನ ಅಸಮರ್ಪಕವಾದಲ್ಲಿ, ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಲಿದೆ. ಇವೆಲ್ಲಕ್ಕೂ ಮಿಗಿಲಾಗಿ ರಾಜ್ಯದ ಪ್ರಜೆಗಳು ಸರ್ಕಾರ ಒದಗಿಸಲಿರುವ ಈ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ತನ್ಮೂಲಕ ಅನಾವಶ್ಯಕ ತೊಂದರೆಗಳನ್ನು ಸುಲಭವಾಗಿಯೇ ನಿವಾರಿಸಿಕೊಳ್ಳಬಹುದಾಗಿದೆ. 

ಕೊನೆಯ ಮಾತು 

ರಾಜ್ಯದ ಜನತೆಗೆ ನಿಗದಿತ ಕಾಲಮಿತಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವ ಸಲುವಾಗಿ ಜಾರಿಗೆ ಬಂದಿದ್ದ " ಸಕಾಲ " ಯೋಜನೆಯಿಂದಾಗಿ, ಜನಸಾಮಾನ್ಯರು ತಮ್ಮ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರು ಬಾರಿ ಭೇಟಿ ನೀಡಬೇಕಾದ ಸಮಸ್ಯೆ ತಕ್ಕ ಮಟ್ಟಿಗೆ ಪರಿಹಾರಗೊಂಡಿತ್ತು. ಸಕಾಲ ಯೋಜನೆಯ ಯಶಸ್ಸನ್ನು ಗಮನಿಸಿದ ರಾಜ್ಯ ಸರ್ಕಾರವು, ಹಲವಾರು ಸರ್ಕಾರಿ ಇಲಾಖೆಗಳ ನೂರಾರು ಸೇವೆಗಳನ್ನು ಇದರ ವ್ಯಾಪ್ತಿಗೆ ಸೇರಿಸಿತ್ತು. ಆದರೆ ಇಂದಿಗೂ ರಾಜ್ಯದ ಅನೇಕ ಪ್ರಜೆಗಳಿಗೆ ಸಕಾಲ ಯೋಜನೆ ಏನೆಂದೇ ತಿಳಿದಿಲ್ಲ ಎಂದಲ್ಲಿ ನೀವೂ ನಂಬಲಾರಿರಿ. ಅದೇ ರೀತಿಯಲ್ಲಿ ಮುಂದೆ ಜಾರಿಗೊಳ್ಳಲಿರುವ ಇ - ಆಡಳಿತ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳಲು, ಕಂಪ್ಯೂಟರ್ ಮತ್ತು ಅಂತರಜಾಲಗಳ ಬಳಕೆಯ ಬಗ್ಗೆ ಒಂದಿಷ್ಟು ಜ್ನಾನವಿರುವುದು ಅತ್ಯಗತ್ಯವೂ ಹೌದು. ಪ್ರಗತಿಪಥದಲ್ಲಿ ಮುನ್ನಡೆಯುತ್ತಿರುವ ನಮ್ಮ ದೇಶದ ಬಹುತೇಕ ನಗರ- ಪಟ್ಟಣಗಳಲ್ಲಿನ ಜನರಿಗೆ ಮೊಬೈಲ್ ದೂರವಾಣಿಯ ಮೂಲಕ ಈ ಸೇವೆಯನ್ನು ಬಳಸಿಕೊಳ್ಳುವ ವಿಧಾನವನ್ನು ಕಲಿಸಿದಲ್ಲಿ, ಇ - ಆಡಳಿತ ಯೋಜನೆಯು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 



Thursday, May 29, 2014

CONSTRUCTION WASTE DUMPED NEAR HIGHWAYS !




 ಹೆದ್ದಾರಿಯ ಬದಿಯಲ್ಲಿ ರಾಶಿ ಬಿದ್ದಿರುವ ನಿರ್ಮಾಣ ತ್ಯಾಜ್ಯಗಳು 

ನಮ್ಮ ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳಲ್ಲಿ, ವರ್ಷದ ೩೬೫ ದಿನಗಳಲ್ಲೂ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಜಮೀನು ಮತ್ತು ಕಟ್ಟಡಗಳ ಬೇಡಿಕೆಯ ಪ್ರಮಾಣಗಳು ದಿನೇದಿನೇ ಹೆಚ್ಚುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. ಇದರೊಂದಿಗೆ ಗಗನಕ್ಕೇರುತ್ತಿರುವ ಜಮೀನಿನ ಬೆಲೆಯಿಂದಾಗಿ ಹಾಗೂ ಖಾಲಿ ಜಮೀನಿನ ಕೊರತೆಯಿಂದಾಗಿ, ಬಹುತೇಕ ಜನರು ಹಳೆಯ ವಸತಿ ಮತ್ತು ವಾಣಿಜ್ಯ ಕಟ್ಟಡಗಳನ್ನು ಖರೀದಿಸಿದ ಬಳಿಕ ಇವುಗಳನ್ನು ಕೆಡವಿ ನೂತನ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಾರೆ. ಈ ಸಂದರ್ಭದಲ್ಲಿ ಉತ್ಪನ್ನವಾಗುವ ನಿರ್ಮಾಣ ತ್ಯಾಜ್ಯಗಳನ್ನು, ಕತ್ತಲಾದ ಬಳಿಕ ನಗರದ ಹೊರವಲಯದಲ್ಲಿನ ಖಾಲಿ ಜಾಗಗಳು, ನಿರ್ಜನ ಪ್ರದೇಶಗಳು ಅಥವಾ ಹೆದ್ದಾರಿಗಳ ಬದಿಗಳಲ್ಲಿ ಸುರಿದು ಪಲಾಯನ ಮಾಡುತ್ತಾರೆ. 

ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳಲ್ಲಿ ಕಾಣಸಿಗುವ ಇಂತಹ ನಿರ್ಮಾಣ ತ್ಯಾಜ್ಯಗಳೊಂದಿಗೆ, ಇತರ ಅನೇಕ ವಿಧದ ತ್ಯಾಜ್ಯಗಳನ್ನೂ ಇದೇ ರೀತಿಯಲ್ಲಿ ಕದ್ದುಮುಚ್ಚಿ ವಿಲೇವಾರಿ ಮಾಡುವುದರಿಂದಾಗಿ, ಇಂತಹ ರಸ್ತೆಗಳು ಮತ್ತು ಪ್ರದೇಶಗಳು ತ್ಯಾಜ್ಯ ವಿಲೇವಾರಿ ಘಟಕಗಳಂತೆ ಗೋಚರಿಸುತ್ತವೆ. ಇದನ್ನು ಕಂಡ ಜನಸಾಮಾನ್ಯರು ಸ್ಥಳೀಯ ಸಂಸ್ಥೆಯ ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ದೂಷಿಸುತ್ತಾರೆ. ಆದರೆ ಇರುಳಿನಲ್ಲಿ ನಡೆಯುವ ಈ ಅನೈತಿಕ ತ್ಯಾಜ್ಯ ವಿಲೇವಾರಿಯನ್ನು ತಡೆಗಟ್ಟುವುದು ಹೇಳಿದಷ್ಟು ಸುಲಭವೇನಲ್ಲ. ಏಕೆಂದರೆ ರಾತ್ರಿ ಪಾಳಿಯ ಪೊಲೀಸರಂತೆ ನಗರದ ನಿರ್ಜನ ಪ್ರದೇಶಗಳು ಮತ್ತು ಹೆದ್ದಾರಿಗಳಲ್ಲಿ ಈ ಅಧಿಕಾರಿಗಳು ಗಸ್ತು ತಿರುಗುವುದು ಅಸಾಧ್ಯವೂ ಹೌದು. ಹಗಲಿನಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾದ ಈ ಅಧಿಕಾರಿಗಳು, ಇರುಳಿನಲ್ಲಿ ನಿದ್ದೆಗೆಟ್ಟು ಇಂತಹ ಹೊಣೆಗಾರಿಕೆಯನ್ನು ನಿಭಾಯಿಸುವುದು ನಿಶ್ಚಿತವಾಗಿಯೂ ಉಚಿತವಲ್ಲ. 

ರಸ್ತೆಗಳ ಬದಿಗಳಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವುದರಿಂದ, ರಸ್ತೆಯ ಮೇಲೆ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು ಚರಂಡಿಗಳನ್ನು ಸೇರಲು ಅಡಚಣೆ ಸಂಭವಿಸುತ್ತದೆ. ಇದರಿಂದಾಗಿ ಮಳೆನೀರು ರಸ್ತೆಯ ಬದಿಯಲ್ಲೇ ಸಂಗ್ರಹವಾಗುವುದರಿಂದ, ಪುಟ್ಟಕೆರೆಗಳಂತೆ ತೋರುತ್ತವೆ. ಜೊತೆಗೆ ಈ ರೀತಿಯಲ್ಲಿ ನೀರು ನಿಂತ ರಸ್ತೆಯ ಭಾಗವು ಘನ ವಾಹನಗಳ ಸಂಚಾರದ ಸಂದರ್ಭದಲ್ಲಿ ಕುಸಿಯುವುದರಿಂದ, ರಸ್ತೆಗಳು ತೀವ್ರವಾಗಿ ಹಾನಿಗೆ ಒಳಗಾಗುತ್ತವೆ. ಇಂತಹ ಸಮಸ್ಯೆಗಳು ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದಲ್ಲಿ, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಗಳು ಬಾಧಿಸುವುದರೊಂದಿಗೆ, ರಸ್ತೆ ಅಪಘಾತಗಳಿಗೂ ಕಾರಣವೆನಿಸುತ್ತವೆ. ಅನೇಕ ಸಂದರ್ಭಗಳಲ್ಲಿ ಅಮಾಯಕರ ಪ್ರಾಣಹಾನಿಗೂ ಕಾರಣವೆನಿಸಬಲ್ಲ ಈ ಸಮಸ್ಯೆಗೆ, ಇಂತಹ ನಿರ್ಮಾಣ ತ್ಯಾಜ್ಯಗಳನ್ನು ರಸ್ತೆಗಳ ಬದಿಗಳಲ್ಲಿ ಸುರಿದವರೇ ಕಾರಣಕರ್ತರೆನಿಸುತ್ತಾರೆ. ಆದರೆ ಕದ್ದುಮುಚ್ಚಿ ರಾತ್ರಿಯ ವೇಳೆಯಲ್ಲಿ ತ್ಯಾಜ್ಯಗಳನ್ನು ಸುರಿಯುವ ಮಂದಿ, ತಮ್ಮ ನಿರ್ಲಕ್ಷ್ಯದಿಂದ ಉದ್ಭವಿಸಬಲ್ಲ ಸಮಸ್ಯೆಗಳ ಬಗ್ಗೆ ಯಾವತ್ತೂ ಚಿಂತಿಸುವುದೇ ಇಲ್ಲ. 

ವಿಶೇಷವೆಂದರೆ ಕೆಲ ಸಂದರ್ಭಗಳಲ್ಲಿ ನಿರ್ಮಾಣ ಅಥವಾ ಇತರ ತ್ಯಾಜ್ಯಗಳನ್ನು ತಂದು ಸುರಿಯುವುದನ್ನು ಕಣ್ಣಾರೆ ಕಂಡರೂ ಸಂಬಂಧಿತ ಅಧಿಕಾರಿಗಳಿಗೆ ಅಥವಾ ಇಲಾಖೆಗಳಿಗೆ ದೂರನ್ನು ನೀಡಲು ಹಿಂಜರಿವ ಜನರು, ಅಧಿಕಾರಿಗಳನ್ನು ದೂಷಿಸಲು ಎಂದಿಗೂ ಹಿಂಜರಿಯುವುದೇ ಇಲ್ಲ!. ಕನಿಷ್ಠಪಕ್ಷ ಈ ರೀತಿಯಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುವ ವಾಹನಗಳ ನೋಂದಣಿ ಸಂಖ್ಯೆಯನ್ನು ದಾಖಲಿಸಿಕೊಂಡು, ಸಂಬಂಧಿತ ಇಲಾಖೆಗಳಿಗೆ ದೂರವಾಣಿಯ ಮೂಲಕ ಈ ಮಾಹಿತಿಯನ್ನು ನೀಡುವ ಮೂಲಕ  ತಪ್ಪಿತಸ್ತರನ್ನು ಶಿಕ್ಷಿಸಲು ನೆರವಾಗುವುದು " ನಾಗರಿಕ ಪ್ರಜ್ಞೆ" ಯ ಅವಿಭಾಜ್ಯ ಅಂಗವಾಗಿದ್ದು, ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವಲ್ಲಿ ಇದು ಉಪಯುಕ್ತವೆನಿಸಬಲ್ಲದು.  

ತಡೆಗಟ್ಟುವುದೆಂತು ?

ದೇಶದಲ್ಲಿ ದಿನನಿತ್ಯ ಉತ್ಪನ್ನವಾಗುವ ಅಗಾಧ ಪ್ರಮಾಣದ ನಿರ್ಮಾಣ ತ್ಯಾಜ್ಯಗಳನ್ನು ಸಮರ್ಪಕವಾಗಿ ಮರುಬಳಕೆ ಮಾಡಲು, ಪುನರ್ ಆವರ್ತನಗೊಳಿಸಲು ಅಥವಾ ಸುರಕ್ಷಿತವಾಗಿ ವಿಲೇವಾರಿ ಮಾಡಲು ಹಲವಾರು ವಿಧಾನಗಳಿವೆ. ಇವುಗಳನ್ನು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಸಂದರ್ಭೋಚಿತವಾಗಿ ಅಳವಡಿಸಿಕೊಳ್ಳ ಬೇಕಿದೆ. ಈ ವಿಧಾನಗಳಲ್ಲಿ ತಗ್ಗು ಪ್ರದೇಶವನ್ನು ಮಣ್ಣು ತುಂಬಿಸಿ ಎತ್ತರಿಸುವ ಸ್ಥಳಗಳ ತಳಭಾಗದಲ್ಲಿ ಈ ನಿರ್ಮಾಣ ತ್ಯಾಜ್ಯಗಳನ್ನು ಹರಡಿದ ಬಳಿಕ, ಮೇಲಿನ ಭಾಗಕ್ಕೆ ಮಣ್ಣು ತುಂಬಿಸಿದಲ್ಲಿ ಗಣನೀಯ ಪ್ರಮಾಣದ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿದಂತಾಗುವುದು. ಅಂತೆಯೇ ಕಲ್ಲು, ಸಿಮೆಂಟ್, ಕಾಂಕ್ರೀಟ್ ಮತ್ತಿತರ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದ ಸಂದರ್ಭದಲ್ಲಿ ಬಳಸುವ ವಿಧಾನವು ಈಗಾಗಲೇ ಅನೇಕ ದೇಶಗಳಲ್ಲಿ ಬಳಸಲ್ಪಡುತ್ತಿದೆ. ಅದೇ ರೀತಿಯಲ್ಲಿ ಸಿಮೆಂಟ್ ಹಾಗೂ ಕಾಂಕ್ರೀಟ್ ತ್ಯಾಜ್ಯಗಳನ್ನು ಹುಡಿಮಾಡಿ, ಸಿಮೆಂಟ್ ಬ್ಲಾಕ್ ಗಳನ್ನು ತಯಾರಿಸುವ ಘಟಕಗಳಲ್ಲಿ ಮರುಬಳಕೆ ಮಾಡಬಹುದಾಗಿದೆ. ಇಂತಹ ವಿಧಾನಗಳನ್ನು ನಾವು ಅಳವಡಿಸಿಕೊಳ್ಳದೇ ಇದ್ದಲ್ಲಿ, ನಮ್ಮ ದೇಶದ ಪ್ರತಿಯೊಂದು ಮಹಾನಗರ, ನಗರ ಮತ್ತು ಪಟ್ಟಣಗಳ ಮೂಲೆಮೂಲೆಗಳಲ್ಲಿ ನಿರ್ಮಾಣ ತ್ಯಾಜ್ಯಗಳ ರಾಶಿಗಳು ರಾರಾಜಿಸಲಿವೆ!. 

ಕೊನೆಯ ಮಾತು 

ಅಧಿಕಾರ ಸ್ವೀಕಾರದ ಬಳಿಕ ದೇಶದ ನೂತನ ಪ್ರಧಾನಿಯಾದ ನರೇಂದ್ರ ಮೋದಿಯವರು " ಸ್ವಚ್ಚ ಭಾರತ " ಎನ್ನುವ ಆಂದೋಲನವನ್ನು ಆರಂಭಿಸುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಪ್ರಧಾನ ಮಂತ್ರಿ ಹುದ್ದೆಗೆ ಮೋದಿಯವರನ್ನು ಬೆಂಬಲಿಸಿದಂತೆಯೇ, ಈ ವಿಶಿಷ್ಟ ಯೋಜನೆಯನ್ನು ನಾವುನೀವೆಲ್ಲರೂ ಬೆಂಬಲಿಸಿದಲ್ಲಿ, ಈ ಯೋಜನೆಯು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಅದೇ ರೀತಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಸಹಕಾರ ದೊರೆಯದೆ ಇದ್ದಲ್ಲಿ, ಇದು ದಯನೀಯವಾಗಿ ವಿಫಲವಾಗುವುದರಲ್ಲೂ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು   



Monday, May 26, 2014

MOBILE TOWERS- ARE THEY DANGEROUS ?



  ಮೊಬೈಲ್ ಟವರ್ ಗಳ ನಿರ್ಮಾಣ - ಸಮಸ್ಯೆಗಳು 

ಮೊಬೈಲ್ ದೂರವಾಣಿಗಳನ್ನು ಅತಿಯಾಗಿ ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ವ್ಯಾಧಿಗಳು ಉದ್ಭವಿಸುವ ಸಾಧ್ಯತೆಗಳಿವೆ ಎನ್ನುವುದು ನಿಮಗೂ ತಿಳಿದಿರಲೇಬೇಕು. ಸೆಲ್ ಫೋನ್ ಗಳನ್ನು ಬಳಸದ ವ್ಯಕ್ತಿಗಳು ಈ ವಿಚಾರವನ್ನು ಅರಿತು ನೆಮ್ಮದಿಯ ನಿಟ್ಟುಸಿರು ಬಿಟ್ಟಿರಬಹುದು. ಆದರೆ ಇದೀಗ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಮೊಬೈಲ್ ಟವರ್ ಗಳು ಅವಿರತವಾಗಿ ಹೊರಸೂಸುವ ವಿದ್ಯುತ್ ಆಯಾಸ್ಕಾಂತೀಯ ಅಲೆಗಳು ಮನುಕುಲಕ್ಕೆ ಮಾರಕವೆನಿಸುತ್ತಿವೆ ಎನ್ನುವುದು ಪ್ರಾಯಶಃ ನಿಮಗೂ ತಿಳಿದಿರಲಾರದು. ಈ ಬಗ್ಗೆ ನೀವು ಅರಿತುಕೊಳ್ಳಲೇಬೇಕಾದ ಕಿಂಚಿತ್ ಮಾಹಿತಿ ಇಲ್ಲಿದೆ. 
----------------                 ------------------                   ---------------            ---------------------            ------------

ಶತಕೋಟಿ ಸಂಖ್ಯೆಯನ್ನು ದಾಟಿ ವಿಶ್ವದಾಖಲೆಯತ್ತ ದಾಪುಗಾಲು ಹಾಕುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ ಮೊಬೈಲ್ ದೂರವಾಣಿಗಳ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಎಲ್ಲರ  ಕೈಗೆಟಕುವ ಬೆಲೆಗೆ ಲಭಿಸುತ್ತಿರುವ ಈ ಪುಟ್ಟ ದೂರವಾಣಿಗಳು ನಮ್ಮ ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿವೆ. 

ಕೆಲವೇ ವರ್ಷಗಳ ಹಿಂದೆ ಶ್ರೀಮಂತ ವ್ಯಕ್ತಿಗಳಿಗೂ ಪ್ರತಿಷ್ಠೆಯ ಸಂಕೇತವೆನಿಸಿದ್ದ ಮೊಬೈಲ್ ದೂರವಾಣಿಗಳು, ಇದೀಗ ಕಡುಬಡವರ ಕೈಯಲ್ಲೂ ರಾರಾಜಿಸುತ್ತಿವೆ. ಅಬಾಲವೃದ್ಧರೂ ಉಪಯೋಗಿಸುತ್ತಿರುವ ಸೆಲ್ ಫೋನ್ ಗಳ ರಿಂಗಣಗಳು ಎಲ್ಲೆಂದರಲ್ಲಿ ಮೊಳಗುತ್ತಿವೆ. ಆದರೆ ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳು, ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸುತ್ತಿವೆ. 

ದೂರಸಂಪರ್ಕ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಭಾಗವಹಿಸಲು ಅವಕಾಶವನ್ನು ಕಲ್ಪಿಸಿದ ಬಳಿಕ, ಸರ್ಕಾರಿ ಸ್ವಾಮ್ಯದ ಸಂಸ್ಥೆ ಮತ್ತು ಹಲವಾರು ಖಾಸಗಿ ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ತತ್ಪರಿಣಾಮವಾಗಿ ಸೆಲ್ಯುಲರ್ ಸೇವಾ ಸಂಸ್ಥೆಗಳು ಗ್ರಾಹಕರಿಗೆ ವಿಧಿಸುತ್ತಿದ್ದ ದರಗಳನ್ನು ಗಣನೀಯ ಪ್ರಮಾಣದಲ್ಲಿ ಇಳಿಸಿವೆ. ಇದರಿಂದಾಗಿ ಇವುಗಳ ಗ್ರಾಹಕರ ಸಂಖ್ಯೆಯೂ ನಿರಂತರವಾಗಿ ಹೆಚ್ಚುತ್ತಿದೆ. ಸೆಲ್ಯುಲರ್ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಗಳು ತಮ್ಮ ಸಂಪರ್ಕ ಜಾಲವನ್ನು ವಿಸ್ತರಿಸುವ ಸಲುವಾಗಿ ನಿರ್ಮಿಸುತ್ತಿರುವ ಟವರ್ ಗಳ ಸಂಖ್ಯೆಯೂ ಇದೇ ಕಾರಣದಿಂದಾಗಿ ತ್ವರಿತಗತಿಯಲ್ಲಿ ಹೆಚ್ಚುತ್ತಿದೆ. 

ಬಹುತೇಕ ಸ್ಥಳೀಯ ಸಂಸ್ಥೆಗಳು ಮೊಬೈಲ್ ದೂರವಾಣಿ ಟವರ್ ಗಳ ನಿರ್ಮಾಣಕ್ಕೆ ಅನುಮತಿಯನ್ನು ನೀಡುವ ಮುನ್ನ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬೆಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಇದೇ ಕಾರಣದಿಂದಾಗಿ ದೇಶದ ಮೂಲೆ ಮೂಲೆಗಳಲ್ಲಿ ಅಸಂಕ್ಯ ಮೊಬೈಲ್ ಟವರ್ ಗಳು ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ. 

ಸುರಕ್ಷತೆಯತ್ತ ನಿರ್ಲಕ್ಷ್ಯ 

ಸಾಮಾನ್ಯವಾಗಿ ಭೂಮಿಯ ಅಥವಾ ಬಹುಮಹಡಿ ಕಟ್ಟಡಗಳ ಮೇಲೆ ಮೊಬೈಲ್ ಟವರ್ ಗಳನ್ನು ನಿರ್ಮಿಸಲು ಅನುಮತಿಯನ್ನು ನೀಡುವ ಮುನ್ನ, ಅನುಭವೀ ಕಟ್ಟಡ ವಿನ್ಯಾಸ ಮತ್ತು ನಿರ್ಮಾಣ ತಜ್ಞರು ಈ ಕಟ್ಟಡದ ನಕ್ಷೆ ಮತ್ತು ರಚನೆಗಳನ್ನು ಪರಿಶೀಲಿಸಿ, ಹಲವಾರು ಟನ್ ಭಾರದ ಟವರ್ ಗಳನ್ನು ಹೊರಬಲ್ಲ ಧಾರಣಾ ಸಾಮರ್ಥ್ಯವು ಈ ಕಟ್ಟಡಕ್ಕೆ ಇದೆಯೇ ಎಂದು ನಿರ್ಧರಿಸಬೇಕಾಗುವುದು. ಇದಲ್ಲದೇ ಈ ಗೋಪುರದಿಂದ ಸ್ಥಳೀಯ ನಿವಾಸಿಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದ ಬಳಿಕವೇ ಸುರಕ್ಷತಾ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಯಾವುದೇ ಕಟ್ಟಡದ ನಿರ್ಮಾಣದ ಸಂದರ್ಭದಲ್ಲಿ ಇದರ ಮೇಲೊಂದು ಟವರ್ ನಿರ್ಮಿಸುವ ಸಲುವಾಗಿ ವಿನ್ಯಾಸಗೊಳಿಸದೇ ಇದ್ದಲ್ಲಿ, ಇಂತಹ ಕಟ್ಟಡಗಳ ಮೇಲೆ ಟವರ್ ಗಳನ್ನು ನಿರ್ಮಿಸುವುದು ಅಸುರಕ್ಷಿತ ಮತ್ತು ಅಪಾಯಕಾರಿ ಎನಿಸುವುದು. ಆದರೆ ಅಧಿಕತಮ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ಪ್ರಮುಖ ವಿಚಾರವನ್ನು ನಿರ್ಲಕ್ಷಿಸಿ, ಟವರ್ ಗಳ ನಿರ್ಮಾಣಕ್ಕೆ ಅನುಮತಿಯನ್ನು ನೀಡುತ್ತಿದ್ದಾರೆ. ಆಕಸ್ಮಿಕವಾಗಿ ಟವರ್ ಗಳ ಭಾರವನ್ನು ತಾಳಲಾರದೇ ಅಥವಾ ಬಿರುಗಾಳಿ ಮಳೆಗಳ ಸಂದರ್ಭದಲ್ಲಿ ಇವುಗಳು ಕುಸಿದಲ್ಲಿ ಅಮಾಯಕರ ಪ್ರಾಣಕ್ಕೆ ಎರವಾಗುವ ಸಾಧ್ಯತೆಗಳಿವೆ. 

ನಿಜ ಹೇಳಬೇಕಿದ್ದಲ್ಲಿ ಮೊಬೈಲ್ ಗೋಪುರಗಳ ಸುತ್ತಮುತ್ತಲ ೩೬ ಮೀಟರ್ ಪ್ರದೇಶದಲ್ಲಿ ಜನರು ವಾಸಿಸುವಂತಿಲ್ಲ. ಅರ್ಥಾತ್, ಜನವಸತಿ ಪ್ರದೇಶಗಳಲ್ಲಿ ಗೋಪುರಗಳನ್ನು ನಿರ್ಮಿಸುವಂತಿಲ್ಲ. ಇದಲ್ಲದೇ ಯಾವುದೇ ಪ್ರದೇಶದಲ್ಲಿ ಗೋಪುರವನ್ನು ನಿರ್ಮಿಸುವ ಮುನ್ನ, ಆಸುಪಾಸಿನ ನಿವಾಸಿಗಳ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರಾಪೇಕ್ಷಣಾ ಪತ್ರವನ್ನು ಪಡೆದುಕೊಳ್ಳಲೇಬೇಕೆನ್ನುವ ವಿಚಾರ ಜನಸಾಮಾನ್ಯರಿಗೆ ತಿಳಿದಿಲ್ಲ. ವಿಶೇಷವೆಂದರೆ ಈ ನಿಯಮವನ್ನು ಅನುಷ್ಠಾನಗೊಳಿಸಲು ಸರ್ಕಾರವೇ ಆಸ್ಪದವನ್ನು ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಆದೇಶದಂತೆ ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿ ಈನುವ ನೆಪವನ್ನೊಡ್ಡಿ, ಮೊಬೈಲ್ ಗೋಪುರಗಳ ನಿರ್ಮಾಣಕ್ಕೆ ಯಾರೂ ಅಡ್ಡಿಪಡಿಸುವಂತಿಲ್ಲ!. ಪ್ರಾಯಶಃ ಇದೇ ಕಾರಣದಿಂದಾಗಿ ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ ಸೆಲ್ಯುಲರ್ ಸೇವಾ ಸಂಸ್ಥೆಗಳು ತಮಗೆ ಬೇಕೆನಿಸಿದಾಗ ಹಾಗೂ ತಮಗೆ ಬೇಕೆನಿಸಿದಲ್ಲಿ ಸಂಪರ್ಕ ಗೋಪುರಗಳನ್ನು ನಿರಾತಂಕವಾಗಿ ನಿರ್ಮಿಸುತ್ತಿವೆ. 

ಇವೆಲ್ಲಕ್ಕೂ ಮಿಗಿಲಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸುವ ಮುನ್ನ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ನಿಗದಿತ ಮೊತ್ತವನ್ನು ಒಂದುಬಾರಿ ಪಾವತಿಸಬೇಕಾಗಿವುದು. ಸೆಲ್ಯುಲರ್ ಸೇವಾ ಸಂಸ್ಥೆಗಳು ನಿರಂತರವಾಗಿ ಆದಾಯವನ್ನು ಗಳಿಸುತ್ತಿದ್ದರೂ, ತಾವು ನಿರ್ಮಿಸಿರುವ ಟವರ್ ಗಳಿಗೆ ವರ್ಷಂಪ್ರತಿ ತೆರಿಗೆಯನ್ನೇ ಪಾವತಿಸುತ್ತಿಲ್ಲ!. ಆದರೆ ಕಡುಬಡವರ ಪುಟ್ಟ ವಾಸ್ತವ್ಯದ ಮನೆಯಿಂದ ಅವರಿಗೆ ಯಾವುದೇ ಆದಾಯ ದೊರೆಯದಿದ್ದರೂ, ವರ್ಷಂಪ್ರತಿ ಆಸ್ತಿತೆರಿಗೆಯನ್ನು ಮಾತ್ರ ತಪ್ಪದೆ ತೆರಬೇಕಾಗುತ್ತದೆ. ಸರ್ಕಾರದ ಈ ಧೋರಣೆಗೆ ಕಾರಣವೇನೆಂದು ನಮಗೂ ತಿಳಿದಿಲ್ಲ. ವಿಶೇಷವೆಂದರೆ ಮೊಬೈಲ್ ಟವರ್ ನಿರ್ಮಿಸಿರುವ ಜಾಗ ಅಥವಾ ಕಟ್ಟಡಗಳ ಮಾಲಿಕರಿಗೆ ಸೆಲ್ಯುಲರ್ ಸೇವಾ ಸಂಸ್ಥೆಗಳು ಪ್ರತಿ ತಿಂಗಳಿನಲ್ಲೂ ನಿಗದಿತ ಶುಲ್ಕ ಅಥವಾ ಬಾಡಿಗೆಯನ್ನು ನೀಡುತ್ತಿದ್ದರೂ, ಸ್ಥಳೀಯ ಸಂಸ್ಥೆಗಳಿಗೆ ವರ್ಷದಲ್ಲೊಂದು ಬಾರಿ ತೆರಿಗೆಯನ್ನು ಪಾವತಿಸುವ ಬಗ್ಗೆ ಚಕಾರವೆತ್ತುವುದಿಲ್ಲ. 

ನಾವಿಂದು ಅತ್ಯಾಧುನಿಕ ಹಾಗೂ ಅತ್ಯವಶ್ಯಕ ವಿದೇಶಿ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳುತ್ತಿದ್ದರೂ, ವಿದೇಶಗಳಲ್ಲಿ ಅನುಸರಿಸುತ್ತಿರುವ ಸುರಕ್ಷತಾ ಕ್ರಮಗಳನ್ನು ಮಾತ್ರ ಅನುಸರಿಸುತ್ತಿಲ್ಲ. ಇದೇ ಕಾರಣದಿಂದಾಗಿ ಜನಸಾಮಾನ್ಯರ ಆರೋಗ್ಯಕ್ಕೆ ಮಾರಕವೆನಿಸುತ್ತಿರುವ ಮೊಬೈಲ್ ಗೋಪುರಗಳನ್ನು ನಮ್ಮ ದೇಶದಲ್ಲಿ ವಸತಿ ಪ್ರದೇಶಗಳು ಮತ್ತು ಅಸುರಕ್ಷಿತ ಕಟ್ಟಡಗಳ ಮೇಲೂ ನಿರ್ಮಿಸಲಾಗುತ್ತಿದೆ.ಇದಕ್ಕೂ ಮಿಗಿಲಾಗಿ ಈಗ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಿ ಗೋಪುರಗಳನ್ನು ನಿರ್ಮಿಸಿದ ಸಂಸ್ಥೆಗಳಿಗೆ ಇದು "ಅಕ್ರಮ " ಎಂದು ಸ್ಥಳೀಯ ಸಂಸ್ಥೆಗಳು ನೋಟಿಸ್ ಜಾರಿಮಾಡಿದಲ್ಲಿ, ನಿಗದಿತ ದಂಡವನ್ನು ಪಾವತಿಸಿ ಇವುಗಳನ್ನು " ಸಕ್ರಮ " ಗೊಳಿಸಲಾಗುತ್ತಿದೆ!. 

ಅಪಾಯಕಾರಿ ಅಲೆಗಳು 

ಮೊಬೈಲ್ ಗೋಪುರಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯನ ಮೆದುಳು, ನರಮಂಡಲ, ಹೃದಯ, ಶ್ವಾಸಕೋಶಗಳು ಮತ್ತು ಕಣ್ಣುಗಳಿಗೆ ಸಂಬಂಧಿಸಿದ ಗಂಭೀರ ಆರೋಗ್ಯದ ಸಮಸ್ಯೆಗಳೊಂದಿಗೆ, ಕೆಲವಿಧದ ಕ್ಯಾನ್ಸರ್ ಗಳಿಗೂ ಕಾರಣವೆನಿಸಬಲ್ಲದು ಎಂದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. 

ಜರ್ಮನಿಯಲ್ಲಿ ಸುಮಾರು ೧೦ ವರ್ಷಗಳ ಕಾಲ ನಡೆಸಿದ್ದ ಅಧ್ಯಯನದ ವರದಿಯಂತೆ, ಮೊಬೈಲ್ ಗೋಪುರಗಳ ವಿದ್ಯುತ್ ಆಯಸ್ಕಾಂತೀಯ ಅಲೆಗಳಿಗೆ ಸುದೀರ್ಘಕಾಲ ಗುರಿಯಾಗಿದ್ದ ವ್ಯಕ್ತಿಗಳಿಗೆ, ವಿವಿಧ ರೀತಿಯ ಕ್ಯಾನ್ಸರ್ ಗಳು ಬಾಧಿಸುವ ಸಾಧ್ಯತೆಗಳು ಮೂರುಪಟ್ಟು ಹೆಚ್ಚಾಗುವುದು ಎಂದು ತಿಳಿದುಬಂದಿದೆ. ೧೦೦೦ ರೋಗಿಗಳ ದಾಖಲೆಗಳನ್ನು ಪರಿಶೀಲಿಸಿದ ಸಂಶೋಧಕರ ಅಭಿಪ್ರಾಯದಂತೆ, ಮೊಬೈಲ್ ಗೋಪುರಗಳ ೪೦೦ ಮೀಟರ್ ಸುತ್ತಳತೆಯ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಅನೇಕ ವಿಧದ ಕ್ಯಾನ್ಸರ್ ಗಳು ಉದ್ಭವಿಸುವ ಸಾಧ್ಯತೆಗಳು ೧೦೦ ಪಟ್ಟು ಹೆಚ್ಚುತ್ತದೆ. 

ಈ ಗೋಪುರಗಳ ವ್ಯಾಪ್ತಿಯಲ್ಲಿ ಹರಡುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಶಕ್ತಿಯ ಮಟ್ಟವು, ಪ್ರತಿ ಚದರ ಮೀಟರ್ ಗೆ ೭೨೬೦ ಮೈಕ್ರೋವ್ಯಾಟ್ಸ್ ಆಗಿರುತ್ತದೆ. ಇದರಿಂದಾಗಿ ಉದ್ಭವಿಸಬಲ್ಲ ಕ್ಯಾನ್ಸರ್ ಗಳಲ್ಲಿ ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ತದನಂತರದ ಸ್ಥಾನಗಳು ಅನುಕ್ರಮವಾಗಿ ಶುಕ್ಲ ಗ್ರಂಥಿ, ಮೇದೋಜೀರಕ ಗ್ರಂಥಿ, ಕರುಳು, ಚರ್ಮ, ಶ್ವಾಸಕೋಶಗಳು ಮತ್ತು ರಕ್ತದ ಕ್ಯಾನ್ಸರ್ ಗಳಿಗೆ ಸಲ್ಲುತ್ತವೆ. 

ಅದೃಶ್ಯ ವಿದ್ಯುತ್ ಆಯಸ್ಕಾಂತೀಯ ವಿಕಿರಣಗಳ ಮಾರಕ ಪರಿಣಾಮಗಳ ವಿರುದ್ಧ ಅಮೆರಿಕದ ಜನರು ಪ್ರತಿಭಟಿಸಲು ಆರಂಭಿಸಿದ್ದಾರೆ. ವಸತಿ ಪ್ರದೇಶಗಳಲ್ಲಿ ಗೋಪುರಗಳ ನಿರ್ಮಾಣವನ್ನು ವಿರೋಧಿಸುತ್ತಿರುವ ಅಲ್ಲಿನ ಪ್ರಜೆಗಳು, ನ್ಯಾಯಾಲಯಗಳಲ್ಲಿ ಹೂಡಿರುವ ದಾವೆಗಳ ಸಂಖ್ಯೆಯು ೫೦೦ ರ ಗಾಡಿಯನ್ನು ದಾಟಿದೆ. 

ಈ ಗಂಭೀರ ಸಮಸ್ಯೆಯ ಬಿಸಿ ಇದೀಗ ಕೇಂದ್ರ ಸರ್ಕಾರಕ್ಕೂ ತಟ್ಟಿದ್ದು, ಸರ್ಕಾರವು ಶಾಲೆ ಮತ್ತಿತರ ವಿದ್ಯಾಸಂಸ್ಥೆಗಳು ಮತ್ತು ಆಸ್ಪತ್ರೆಗಳ ಸಮೀಪದಲ್ಲಿ ಮೊಬೈಲ್ ಗೋಪುರಗಳನ್ನು ನಿರ್ಮಿಸದಂತೆ ನಿಷೇಧಿಸಿದೆ. ಆದರೆ ಆರೋಗ್ಯಕ್ಕೆ ಹಾನಿಕರ ಎನ್ನುವ ನೆಪವನ್ನೊಡ್ಡಿ ಗೋಪುರಗಳ ನಿರ್ಮಾಣಕ್ಕೆ ಅಡ್ಡಿಪಡಿಸಬಾರದು ಎನ್ನುವ ಸರ್ಕಾರದ ಆದೇಶವನ್ನು ಅಕ್ಷರಶಃ ಪರಿಪಾಲಿಸುತ್ತಿರುವ ಸ್ಥಳೀಯ ಸಂಸ್ಥೆಗಳು, ಇಂತಹ ಕಟ್ಟಡಗಳ ಮೇಲೂ ಗೋಪುರಗಳ ನಿರ್ಮಾಣಕ್ಕೆ ಕಣ್ಣುಮುಚ್ಚಿ ಅನುಮತಿಯನ್ನು ನೀಡುತ್ತಿವೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 



Saturday, May 24, 2014

HERBAL TOOTHPASTE- IS IT REALLY NATURAL ?





  "ಹರ್ಬಲ್ " ಟೂತ್ ಪೇಸ್ಟ್ : ನಿಜಕ್ಕೂ ನೈಸರ್ಗಿಕವೇ ?

ಇತ್ತೀಚಿನ ಕೆಲವರ್ಷಗಳಿಂದ ಭಾರತೀಯ ಗ್ರಾಹಕರಲ್ಲಿ  ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಹವ್ಯಾಸ ಹೆಚ್ಚುತ್ತಿದೆ. ಇದರೊಂದಿಗೆ ಆಯುರ್ವೇದೀಯ ಪದ್ದತಿಯಲ್ಲಿ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳನ್ನು ಬಳಸುವ ಬಹುತೇಕ ಗ್ರಾಹಕರು, ತಾವು ದಿನನಿತ್ಯ ಬಳಸುವ ಟೂತ್ ಪೇಸ್ಟ್, ಸೋಪ್, ಶಾಂಪೂ, ಕೇಶ ತೈಲ, ತಲೆಗೂದಲಿಗೆ ಬಳಿಯುವ ಬಣ್ಣಗಳೇ ಮುಂತಾದವುಗಳನ್ನು ಬಳಸಲು, ಇವು ನೈಸರ್ಗಿಕ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿರುವುದೆನ್ನುವ ಧೃಢ ವಿಶ್ವಾಸವೇ ಕಾರಣವೆನಿಸಿದೆ. ಆದರೆ ಇಂತಹ " ಹರ್ಬಲ್ " ಅಥವಾ ಆಯುರ್ವೇದ ಉತ್ಪನ್ನಗಳಲ್ಲಿ ಇರುವ ನೈಸರ್ಗಿಕ ದ್ರವ್ಯಗಳು ಅಥವಾ ಗಿಡಮೂಲಿಕೆಗಳ ಪ್ರಮಾಣ ಎಷ್ಟೆನ್ನುವುದು ಯಾವುದೇ ಗ್ರಾಹಕರಿಗೆ ತಿಳಿದಿಲ್ಲ. ಉದಾಹರಣೆಗೆ ನೀವು ಬಳಸುತ್ತಿರುವ ಹರ್ಬಲ್ ಟೂತ್ ಪೇಸ್ಟ್ ಮತ್ತು ಇತರ ಯಾವುದೇ ಸಾಮಾನ್ಯ ಟೂತ್ ಪೇಸ್ಟ್ ಗಳ ನಡುವೆ ವಿಶೇಷ ವ್ಯತ್ಯಾಸಗಳೇ ಇಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಉತ್ಪಾದಕರ ಮಾರಾಟ ತಂತ್ರ 

ಬೆಳಗಿನ ಜಾವ ಸವಿನಿದ್ದೆಯಿಂದ ಎದ್ದ ಬಳಿಕ ಹಾಗೂ ರಾತ್ರಿ ನಿದ್ದೆಗೆ ಶರಣಾಗುವ ಮುನ್ನ ನಿಮ್ಮ ಹಲ್ಲು ಮತ್ತು ಒಸಡುಗಳನ್ನು ಸ್ವಚ್ಚಗೊಳಿಸಲು ಬಳಸುವ ಟೂತ್ ಪೇಸ್ಟ್ ನಲ್ಲಿರುವ ದ್ರವ್ಯಗಳ ಬಗ್ಗೆ ನಿಮಗೂ ಅರಿವಿರಲಾರದು. ಅಧಿಕತಮ ಜನರು ಇಂತಹ ಉತ್ಪನ್ನಗಳ ಉತ್ಪ್ರೇಕ್ಷಿತ ಜಾಹೀರಾತುಗಳಿಗೆ ಮರುಳಾಗಿ, ಇವುಗಳನ್ನು ಖರೀದಿಸಿ ಬಳಸುತ್ತಿರುವುದು ಸತ್ಯ. 

ಇತ್ತೀಚಿನ ಕೆಲ ವರ್ಷಗಳಿಂದ ಜನಪ್ರಿಯವೆನಿಸಿರುವ " ಹರ್ಬಲ್ " ( ಸಸ್ಯಗಳಿಂದ ತಯಾರಿಸಿದ ) ಉತ್ಪನ್ನಗಳನ್ನು ಬಳಸುತ್ತಿರುವ ಅಸಂಖ್ಯ ಜನರು, ಇವುಗಳನ್ನು ವಿವಿಧ ರೀತಿಯ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಲಾಗಿದೆ ಎಂದೇ ನಂಬಿದ್ದಾರೆ. ಹಾಗೂ ಇದೇ ಕಾರಣದಿಂದಾಗಿ ಇವುಗಳು " ನೈಸರ್ಗಿಕ ಮತ್ತು ರಾಸಾಯನಿಕ ರಹಿತ " ಎಂದು ಭಾವಿಸಿದ್ದಾರೆ. ಆದರೆ ಹರ್ಬಲ್ ಟೂತ್ ಪೇಸ್ಟ್ ಗಳಲ್ಲಿರುವ ಗಿಡಮೂಲಿಕೆಗಳ ಪ್ರಮಾಣವು, ಇವುಗಲ್ಲಿರುವ ದ್ರವ್ಯಗಳ ಶೇ. ೫ ರಷ್ಟು ಮಾತ್ರ ಎಂದಲ್ಲಿ ನೀವೂ ನಂಬಲಾರಿರಿ. ಈ ಕ್ಷುಲ್ಲಕ ಪ್ರಮಾಣದ ಗಿಡಮೂಲಿಕೆಗಳ ಅಂಶವನ್ನು ಹೊರತುಪಡಿಸಿದಲ್ಲಿ, ಈ ಉತ್ಪನ್ನ ಹಾಗೂ ಇತರ ಯಾವುದೇ ಸಾಮಾನ್ಯ ಟೂತ್ ಪೇಸ್ಟ್ ಗಳಿಗೂ ಯಾವುದೇ ವ್ಯತ್ಯಾಸವೇ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. ಅರ್ಥಾತ್, ಹರ್ಬಲ್ ಟೂತ್ ಪೇಸ್ಟ್ ಗಳಲ್ಲಿರುವ ಶೇ. ೯೫ ರಷ್ಟು ಅಂಶಗಳು, ಇತರ ಟೂತ್ ಪೇಸ್ಟ್ ಗಳಲ್ಲಿರುವಂತಹ ರಾಸಾಯನಿಕಗಳೇ ಆಗಿವೆ!. 

ಭಾರತದ ಸುಪ್ರಸಿದ್ಧ ಗ್ರಾಹಕ ಸಂಸ್ಥೆಯೊಂದು ಗತವರ್ಷದಲ್ಲಿ ನಡೆಸಿದ್ದ ಅಧ್ಯಯನದ ಪರಿಣಾಮವಾಗಿ ಈ ಸತ್ಯಸಂಗತಿ ಬಯಲಿಗೆ ಬಂದಿದೆ. ಈ ವರದಿಯಂತೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಹರ್ಬಲ್ ಟೂತ್ ಪೇಸ್ಟ್ ಗಳು " ನೈಸರ್ಗಿಕ, ಗಿಡಮೂಲಿಕೆಗಳಿಂದ ತಯಾರಿಸಿದ ಮತ್ತು ರಾಸಾಯನಿಕ ರಹಿತ " ಎಂದು ಘೋಷಿಸುವ ಅರ್ಹತೆಯನ್ನೇ ಹೊಂದಿಲ್ಲ. 

ವ್ಯತ್ಯಾಸವೇನು ? 

ಹರ್ಬಲ್ ಟೂತ್ ಪೇಸ್ಟ್ ಗಳ ಬಣ್ಣ ಮತ್ತು ಸ್ವಾದಗಳನ್ನು ಹೊರತುಪಡಿಸಿ, ಅನ್ಯ ವಿಚಾರಗಳಲ್ಲಿ ಇವುಗಳ ಮತ್ತು ಇತರ ಸಾಮಾನ್ಯ ಟೂತ್ ಪೇಸ್ಟ್ ಗಳ ನಡುವೆ ಯಾವುದೇ ವ್ಯತ್ಯಾಸವೇ ಇಲ್ಲ. ಹರ್ಬಲ್ ಟೂತ್ ಪೇಸ್ಟ್ ಗಳನ್ನು ಶತ ಪ್ರತಿಶತ ನೈಸರ್ಗಿಕ ಎನ್ನಬೇಕಿದ್ದಲ್ಲಿ, ಇವುಗಳಲ್ಲಿ ಯಾವುದೇ ರೀತಿಯ ಕೃತಕ ಹಾಗೂ ಅಸ್ವಾಭಾವಿಕ ರಾಸಾಯನಿಕಗಳು, ವರ್ಣಕಾರಕಗಳು, ರುಚಿವರ್ಧಕಗಳು, ಮತ್ತು ಸಂರಕ್ಷಕ ದ್ರವ್ಯಗಳನ್ನು ಬಳಸದೇ, ಕೇವಲ ನೈಸರ್ಗಿಕ ದ್ರವ್ಯಗಳನ್ನಷ್ಟೇ ಬಳಸಬೇಕಾಗುವುದು. ಇದಲ್ಲದೇ ಬೆಳವಣಿಗೆಯ ಚೋದನಿಗಳು, ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಬಳಸಿ ಇವುಗಳನ್ನು ಸಂಸ್ಕರಿಸಬಾರದು. ಆದರೆ ನಮ್ಮ ದೇಶದಲ್ಲಿ ಲಭ್ಯವಿರುವ ಹತ್ತು ವಿಧದ ಹರ್ಬಲ್ ಟೂತ್ ಪೇಸ್ಟ್ ಮತ್ತು ಎರಡು ವಿಧದ ಟೂತ್ ಪೌಡರ್ ಗಳನ್ನು ಅಂತರ ರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗಳಿಗೆ ಒಳಪಡಿಸಿದಾಗ, ಇವುಗಳಲ್ಲಿ ಯಾವುದೇ ಉತ್ಪನ್ನವು " ಹರ್ಬಲ್ " ಎಂದು ಪ್ರಮಾಣೀಕರಿಸಬಹುದಾದ ಅರ್ಹತೆಯನ್ನೇ ಹೊಂದಿರಲಿಲ್ಲ ಎಂದು ಗ್ರಾಹಕ ಸಂಸ್ಥೆಯು ಬಹಿರಂಗಪಡಿಸಿದೆ. ಇಷ್ಟು ಮಾತ್ರವಲ್ಲ, ಇದೇ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿದ್ದ ಟೂತ್ ಪೌಡರ್ ಗಳು " ಸೂಕ್ಷ್ಮಾಣುಜೀವಿ" ಗಳ ಪರೀಕ್ಷೆಯಲ್ಲಿ ವಿಫಲವಾಗಿದ್ದುದರಿಂದ, ಇವುಗಳ ಬಳಕೆಯೂ ನಿಮ್ಮ ಬಾಯಿಯ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಸುರಕ್ಷಿತವಲ್ಲ ಎಂದು ತಿಳಿದುಬಂದಿದೆ. ಇಂತಹ ಟೂತ್ ಪೌಡರ್ ಗಳನ್ನು ಬಳಸುವುದಕ್ಕಿಂತಲೂ, ಸಾಮಾನ್ಯ ಟೂತ್ ಪೇಸ್ಟ್ ಗಳನ್ನು ಮತ್ತು ಟೂತ್ ಬ್ರಶ್ ಗಳನ್ನು ಬಳಸುವುದು ನಿಮ್ಮ ಹಲ್ಲು ಮತ್ತು ಒಸಡುಗಳನ್ನು ಸಂರಕ್ಷಿಸಲು ಉಪಯುಕ್ತವೆನಿಸುವುದು. 

ಜನಸಾಮಾನ್ಯರು ಬಳಸುವ ಸಾಮಾನ್ಯ ಟೂತ್ ಪೇಸ್ಟ್ ಗಳಲ್ಲಿ ಹಲ್ಲುಗಳನ್ನು ತಿಕ್ಕಿ ಸ್ವಚ್ಚಗೊಳಿಸುವ, ನೊರೆಯನ್ನು ಉಂಟುಮಾಡುವ, ದಂತಕುಳಿಗಳನ್ನು ತಡೆಗಟ್ಟಬಲ್ಲ, ರುಚಿಕಾರಕ ಮತ್ತು ಸಿಹಿಯಾದ ಸ್ವಾದವನ್ನು ನೀಡುವ ಕೃತಕ ರಾಸಾಯನಿಕಗಳ ಪ್ರಮಾಣವು ಶೇ. ೯೦ ರಷ್ಟು ಇರುವುದು. ಇನ್ನುಳಿದಂತೆ ಶೇ. ೧೦ ರಷ್ಟು ರುಚಿವರ್ಧಕ ಸ್ವಾದಗಳೇ ಮುಂತಾದ ಅನ್ಯದ್ರವ್ಯಗಳನ್ನು ಬಳಸುವ ಮೂಲಕ ಇಂತಹ ಉತ್ಪನ್ನಗಳ ವೈಶಿಷ್ಟ್ಯತೆಯನ್ನು ಕಾಪಾಡಲಾಗುತ್ತದೆ. ಈ ಶೇ. ೧೦ ರಷ್ಟು ಅಂಶಗಳಲ್ಲಿ ಕೇವಲ ಶೇ. ೨.೫ ರಷ್ಟು ಸಸ್ಯಗಳ ಸಾರಗಳು ಅಥವಾ ಆಯುರ್ವೇದ ದ್ರವ್ಯಗಳನ್ನು ಬಳಸಿದೊಡನೆ, ಈ ಉತ್ಪನ್ನಗಳು ಹರ್ಬಲ್ ಟೂತ್ ಪೇಸ್ಟ್ ಗಳಾಗಿ ಪರಿವರ್ತನೆಗೊಳ್ಳುತ್ತವೆ!. 

ಅದೇನೇ ಇರಲಿ, ಬಹುತೇಕ ಗ್ರಾಹಕರಂತೂ ಇಂತಹ ಉತ್ಪನ್ನಗಳು ಹರ್ಬಲ್ ಅಥವಾ ಆಯುರ್ವೇದ ಪದ್ದತಿಯಿಂದ ತಯಾರಿಸಿದ ಉತ್ಪನ್ನಗಳೇ ಎಂದು ನಂಬಿರುವುದು ಮಾತ್ರ ಸುಳ್ಳೇನಲ್ಲ!. 

ಕೊನೆಯ ಮಾತು 

ಕೃತಕ ರಾಸಾಯನಿಕಗಳ ಬಳಕೆ ಅಪಾಯಕಾರಿ ಎನ್ನುವ ಕಾರಣದಿಂದಾಗಿಯೇ ಸಸ್ಯಜನ್ಯ ದ್ರವ್ಯಗಳಿಂದ ಸಿದ್ಧಪಡಿಸಿದ ಉತ್ಪನ್ನಗಳನ್ನು ಬಳಸುವ ಅನೇಕ ಗ್ರಾಹಕರು, ಅಪರೂಪದಲ್ಲಿ ಇವುಗಳ ಸತ್ಯಾಸತ್ಯತೆಯನ್ನು ಅರಿತುಕೊಳ್ಳುವ ಸಂದರ್ಭ ಅಯಾಚಿತವಾಗಿ ಲಭಿಸುವುದುಂಟು. ಇಂತಹ ಘಟನೆಯೊಂದು ಇಂತಿದೆ. ಬಿಳಿಯಾದ್ದ ತನ್ನ ತಲೆಗೂದಲುಗಳಿಗೆ ಕಪ್ಪು ಬಣ್ಣವನ್ನು ಬಳಿದ ಪರಿಣಾಮವಾಗಿ ತೀವ್ರಸ್ವರೂಪದ "ಅಲರ್ಜಿ" ಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬರಿಗೆ, ಇನ್ನು ಮುಂದೆ ಇಂತಹ ಯಾವುದೇ ಉತ್ಪನ್ನವನ್ನು ಬಳಸದಂತೆ ವೈದ್ಯರು ಎಚ್ಚರಿಕೆಯನ್ನು ನೀಡಿದ್ದರು. ಆದರೆ ತನ್ನ ಪತ್ನಿ ಬಳಸುತ್ತಿದ್ದ " ಹರ್ಬಲ್ " ಉತ್ಪನ್ನವೊಂದು ನಿರಪಾಯಕಾರಿ ಎಂದು ನಂಬಿ ತನ್ನ ಮೀಸೆಗೆ ಬಳಿದುಕೊಂಡ ಈತನಿಗೆ, ಮತ್ತೊಮ್ಮೆ ತೀವ್ರಸ್ವರೂಪದ ಅಲರ್ಜಿ ತಲೆದೋರಿದ ಪರಿಣಾಮವಾಗಿ ಒಂದುವಾರ ಮನೆಯಲ್ಲೇ ಕುಳಿತುಕೊಳ್ಳುವ ಪ್ರಸಂಗ ಸಂಭವಿಸಿತ್ತು. ಏಕೆಂದರೆ ಮೀಸೆಗೆ ಬಣ್ಣವನ್ನು ಬಳಿದುಕೊಂಡ ಪರಿಣಾಮವಾಗಿ ಈತನ ಮುಖವು, ಹನುಮಂತನ ಮೂತಿಯಂತಾಗಿತ್ತು !. 

ಈ ಹರ್ಬಲ್ ಉತ್ಪನ್ನವು ನಿಜಕ್ಕೂ ಸಸ್ಯಗಳಿಂದ ತಯಾರಿಸಿದ್ದಲ್ಲಿ, ಇದನ್ನು ಬಳಸಿದ ವ್ಯಕ್ತಿಗೆ ಯಾವುದೇ ರೀತಿಯ ದುಷ್ಪರಿಣಾಮ ಅಥವಾ ಅಡ್ಡ ಪರಿಣಾಮ ಮತ್ತು ಅಲರ್ಜಿ ಗಳಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳೇ ಇರುತ್ತಿರಲಿಲ್ಲ. ಆದರೆ ಈ ಉತ್ಪನ್ನದಲ್ಲಿ ಸಾಕಷ್ಟು ಕೃತಕ ರಾಸಾಯನಿಕಗಳು ಇದ್ದುದರಿಂದಾಗಿಯೇ ಆತನಿಗೆ ತೀವ್ರಸ್ವರೂಪದ ಅಲರ್ಜಿ ಉದ್ಭವಿಸಿತ್ತು. ಇಂತಹ ಅನೇಕ ಘಟನೆಗಳನ್ನು ಚರ್ಮರೋಗ ತಜ್ಞರು ತಮ್ಮ ರೋಗಿಗಳಿಗೆ ಉದಾಹರಣೆಯನ್ನಾಗಿ ನೀಡುತ್ತಾರೆ. ಆದರೂ ಇದನ್ನು ಗಂಭೀರವಾಗಿ ಪರಿಗಣಿಸದ ವ್ಯಕ್ತಿಗಳು, ಮತ್ತೆ ತಮ್ಮ ತಪ್ಪುಗಳನ್ನು ಪುನರಾವರ್ತಿಸುತ್ತಾರೆ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 



Thursday, May 22, 2014

Solidwaste management



 ತ್ಯಾಜ್ಯ ಸಂಗ್ರಹದ ಬಗ್ಗೆ ಅನಾವಶ್ಯಕ ವ್ಯಾಜ್ಯವೇಕೆ ?

ರಾಜ್ಯದ ಅಧಿಕತಮ ನಗರ- ಪಟ್ಟಣಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಳು ಸಮರ್ಪಕವಾಗಿ ಜರಗದೇ ಇರುವ ಕಾರಣದಿಂದಾಗಿ, ಕಣ್ಣು ಹಾಯಿಸಿದಲ್ಲೆಲ್ಲಾ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳೇ ಕಾಣಸಿಗುತ್ತಿವೆ. ಸ್ಥಳೀಯ ಜನರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ, ಜನರ ಅಸಹಕಾರ, ತ್ಯಾಜ್ಯ ಸಂಗ್ರಹಕ್ಕೆ ಬೇಕಾಗುವ ಸಿಬಂದಿಗಳ ಕೊರತೆ, ಸಂಗ್ರಹಿತ ತ್ಯಾಜ್ಯಗಳನ್ನು ಸಾಗಿಸುವ, ಪ್ರತ್ಯೇಕಿಸುವ, ಪುನರ್ ಆವರ್ತನ ಮಾಡುವ, ಮತ್ತು ವೈಜ್ಞಾನಿಕ ವಿಧಾನದಿಂದ ವಿಲೇವಾರಿ ಮಾಡುವ ವ್ಯವಸ್ಥೆಯ ಅಭಾವ ಮತ್ತಿತರ ಕಾರಣಗಳಿಂದಾಗಿ, ತ್ಯಾಜ್ಯ ವಿಲೇವಾರಿಯ ಸಮಗ್ರ ವ್ಯವಸ್ಥೆಯೇ ವಿಫಲವೆನಿಸುತ್ತಿದೆ. ದೇಶದ ಸರ್ವೋಚ್ಚ ನ್ಯಾಯಾಲಯವು ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ನಿಗದಿಸಿದ್ದ ಗಡುವು ಮುಗಿದಿದ್ದರೂ, ಇಂದಿನ ತನಕ ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಪ್ರಯತ್ನಗಳು ವಿಫಲವಾಗುತ್ತಿವೆ. ಇದರಲ್ಲಿ ಸ್ಥಳೀಯರ ಅಸಹಕಾರವೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. 

ಸ್ವಚ್ಛತೆಗೆ ಆದ್ಯತೆ 

ಬಹುತೇಕ ಭಾರತೀಯರು ಮುಂಜಾನೆ ಎದ್ದೊಡನೆ ತಮ್ಮ ಮನೆಗಳ ಮೂಲೆಮೂಲೆಗಳನ್ನು ಗುಡಿಸಿದ ಬಳಿಕ ನೆಲವನ್ನು ಒರೆಸಿ ಸ್ವಚ್ಚಗೊಳಿಸುವ ಸಂಪ್ರದಾಯವನ್ನು  ಇಂದಿಗೂ  ತಪ್ಪದೇ ಪರಿಪಾಲಿಸುತ್ತಾರೆ. ಅಂತೆಯೇ ತಮ್ಮ ಮನೆಯ ಸುತ್ತಮುತ್ತಲ ಆವರಣವನ್ನು ಗುಡಿಸಿ ಚೊಕ್ಕಟವಾಗಿ ಇರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಂಗ್ರಹಿತ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಕಿಂಚಿತ್ ಕೂಡಾ ಚಿಂತಿಸುವುದಿಲ್ಲ. 

ಸಾಮಾನ್ಯವಾಗಿ ಪ್ರತಿಯೊಂದು ಮನೆಗಳಲ್ಲೂ ದಿನನಿತ್ಯ ಉತ್ಪನ್ನವಾಗುವ ಹಸಿ ಮತ್ತು ಇತರ ಒಣ ತ್ಯಾಜ್ಯಗಳನ್ನು ವಿಭಿನ್ನ ವಿಧಾನಗಳಿಂದ ವಿಲೇವಾರಿ ಮಾಡಬೇಕಾಗುತ್ತದೆ. ಹಸಿ ತ್ಯಾಜ್ಯಗಳನ್ನು ತಮ್ಮ ಆವರಣದಲ್ಲಿರುವ ಮರಗಳ ಬುಡಗಳಲ್ಲಿ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಗುಂಡಿಗಳಲ್ಲಿ ವಿಲೇವಾರಿ ಮಾಡಬಹುದಾಗಿದೆ. ಆದರೆ ಒಣ ತ್ಯಾಜ್ಯಗಳನ್ನು ಮೊದಲು ಪುನರ್ ಆವರ್ತನಗೊಳಿಸಬಲ್ಲ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನಾಗಿ ಪ್ರತ್ಯೇಕಿಸಬೇಕಾಗುತ್ತದೆ. ಪುನರ್ ಬಳಸಬಹುದಾದ ಅಥವಾ ಪುನರ್ ಆವರ್ತನಗೊಳಿಸಬಹುದಾದ ಕಾಗದ, ರಟ್ಟು, ಪ್ಲಾಸ್ಟಿಕ್- ಗಾಜಿನ ಬಾಟಲಿ ಮತ್ತಿತರ ತ್ಯಾಜ್ಯಗಳನ್ನು, ಇವುಗಳನ್ನು ಖರೀದಿಸುವ ಕೇಂದ್ರಗಳಿಗೆ ಮಾರಾಟ ಮಾಡಬಹುದಾಗಿದೆ. ಆದರೆ ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ಮಾತ್ರ " ಲ್ಯಾಂಡ್ ಫಿಲ್ ಸೈಟ್" ಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. 

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕಸದ ತೊಟ್ಟಿರಹಿತ ನಿರ್ಮಲ ನಗರಗಳನ್ನು ರೂಪಿಸಬೇಕಾದ ಹೊಣೆಗಾರಿಕೆಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ಅಂತೆಯೇ ತ್ಯಾಜ್ಯಗಳು ಉತ್ಪನ್ನವಾಗುವ ವಸತಿ- ವಾಣಿಜ್ಯ ಕಟ್ಟಡಗಳಿಂದ ಇವುಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿ ಸಾಗಿಸಿ, ಪ್ರತ್ಯೇಕಿಸಿದ ಬಳಿಕ ಪುನರ್ ಬಳಕೆ ಮಾಡಲಾಗದ ತ್ಯಾಜ್ಯಗಳನ್ನು ಮಾತ್ರ ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಆದರೆ ಅನೇಕ ನಗರ- ಪಟ್ಟಣಗಳಲ್ಲಿ ಈ ವ್ಯವಸ್ಥೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಅಂತೆಯೇ ನಾವಿಂದು ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವೂ ಕಡಿಮೆಯಾಗುತ್ತಿಲ್ಲ. ಏಕೆಂದರೆ ಒಂದು ಬಾರಿ ಬಳಸಿ ಎಸೆಯುವ ವಸ್ತುಗಳನ್ನು ಉಪಯೋಗಿಸುವ ಹವ್ಯಾಸ ಭಾರತೀಯರಲ್ಲಿ ಹೆಚ್ಚುತ್ತಿರುವುದು ಇದಕ್ಕೊಂದು ಪ್ರಮುಖ ಕಾರಣವೆನಿಸಿದೆ. 

ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ವಸತಿ- ವಾಣಿಜ್ಯ ಕಟ್ಟಡಗಳಲ್ಲಿ  ಉತ್ಪನ್ನವಾಗುವ ವೈವಿಧ್ಯಮಯ ತ್ಯಾಜ್ಯಗಳನ್ನು ಮಳೆನೀರು ಹರಿವ ಚರಂಡಿಗಳು ಅಥವಾ ಯಾವುದೇ ಖಾಲಿ ಜಾಗಗಳಲ್ಲಿ ಎಸೆಯುವ ಕೆಟ್ಟ ಹವ್ಯಾಸವು ದಿನೇದಿನೇ ಹೆಚ್ಚುತ್ತಿರುವುದು, ಸ್ಥಳೀಯ ಸಂಸ್ಥೆಗಳಿಗೆ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ. ಮನೆಮನೆಗಳಿಂದ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಲು ಬೇಕಾದಷ್ಟು ಸಿಬಂದಿ ಅಥವಾ ಸ್ವಸಹಾಯ ಗುಂಪುಗಳ ಕಾರ್ಯಕರ್ತರು ಸಿಗದೇ ಇರುವಾಗ, ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳನ್ನು ತೆಗೆಯುವುದಾದರೂ ಹೇಗೆಂದು ಜನಸಾಮಾನ್ಯರು ಚಿಂತಿಸುವುದಿಲ್ಲ. ಕೇವಲ ತ್ಯಾಜ್ಯ ಸಂಗ್ರಹಕ್ಕಾಗಿ ವಿಧಿಸುವ ಶುಲ್ಕವನ್ನು ಉಳಿಸುವ ಸಲುವಾಗಿ ಇಂತಹ ಸಮಸ್ಯೆಗಳನ್ನು ಹುಟ್ಟುಹಾಕುವ ಜನರು, ಇದರಿಂದ ಮುಂದೆ ಸಂಭವಿಸಬಲ್ಲ ಗಂಭೀರ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವ ಸಾಧ್ಯತೆಗಳೇ ಇಲ್ಲ. 

ನಿಜ ಹೇಳಬೇಕಿದ್ದಲ್ಲಿ ಈಗಾಗಲೇ ನಾವು ಅನುಭವಿಸುತ್ತಿರುವ ಜಾಗತಿಕ ತಾಪಮಾನದ ಹೆಚ್ಚಳ, ಹವಾಮಾನದ ವ್ಯತ್ಯಯದ ಪರಿಣಾಮವಾಗಿ ತಲೆದೋರುತ್ತಿರುವ ಅತಿವೃಷ್ಟಿ- ಅನಾವೃಷ್ಟಿ, ಸಾಂಕ್ರಾಮಿಕ ವ್ಯಾಧಿಗಳ ಬಾಧೆ ಮತ್ತು ಮಾರಕತೆಗಳೇ ಮುಂತಾದ ಸಮಸ್ಯೆಗಳಿಗೆ, ನಾವಿಂದು ಉತ್ಪಾದಿಸುತ್ತಿರುವ ಅತಿಯಾದ ತ್ಯಾಜ್ಯಗಳು ಮತ್ತು ಇವುಗಳ ಅವೈಜ್ಞಾನಿಕ ವಿಲೇವಾರಿಗಳೂ ಕಾರಣವಾಗಿವೆ. ಈ ಸಮಸ್ಯೆಯು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಕಾಡಲಿದೆ. ಈ ಸತ್ಯವನ್ನು ಅರ್ಥೈಸಿಕೊಂಡು, ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರೊಂದಿಗೆ, ಇವುಗಳ ವೈಜ್ಞಾನಿಕ ವಿಲೇವಾರಿಯಲ್ಲಿ ಸ ಭಾಗಿಯಾಗುವುದು ನಮ್ಮನಿಮ್ಮೆಲ್ಲರ  ಹಿತದೃಷ್ಟಿಯಿಂದ ಆರೋಗ್ಯಕರ ಎನ್ನುವುದನ್ನು ಮರೆಯದಿರಿ. 

ಕೊನೆಯ ಮಾತು 

ಘನತ್ಯಾಜ್ಯ ನಿರ್ವಹಣೆಯ ಯಶಸ್ಸಿಗಾಗಿ ಶ್ರಮಿಸುತ್ತಿರುವ ಸ್ಥಳೀಯ ಸಂಸ್ಥೆಗಳ ಸಿಬಂದಿಗಳೊಂದಿಗೆ ಸಹಕರಿಸುವ ಮೂಲಕ ಮತ್ತು ನಮ್ಮಲ್ಲಿ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡುವ ಮೂಲಕ, ನಿಮ್ಮ ಊರನ್ನು ನಿಶ್ಚಿತವಾಗಿಯೂ "ನಿರ್ಮಲ ನಗರ" ವನ್ನಾಗಿಸುವುದು ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ. ಜೊತೆಗೆ ನಮ್ಮ ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಇದು ಅನಿವಾರ್ಯವೂ ಹೌದು. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 



Wednesday, May 21, 2014

SARKAARADA BOKKASAKKE HOREYAGUTTIRUVA NIVRATTA SHAASAKARU !







ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವ ನಿವೃತ್ತ ಶಾಸಕರು !   

ಯಾವುದೇ ರೀತಿಯ ಶೈಕ್ಷಣಿಕ ಅಥವಾ ಔದ್ಯೋಗಿಕ ಅರ್ಹತೆ, ಅನುಭವ ಮತ್ತು ಬುದ್ಧಿವಂತಿಕೆಗಳು ಇಲ್ಲದಿದ್ದರೂ ಕೈತುಂಬಾ ಸಂಬಳ ಮತ್ತು ಭತ್ಯೆಗಳೊಂದಿಗೆ, ಅನ್ಯ ಹಲವಾರು ವಿಧದ ಉಚಿತ ಸವಲತ್ತುಗಳನ್ನು ಮತ್ತು ಅಜೀವಪರ್ಯಂತ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಗಳಿಸಬಲ್ಲ ಉತ್ತಮ ಉದ್ಯೋಗವೊಂದಿರುವುದು ರಾಜ್ಯದ ಬಹುತೇಕ ಪ್ರಜೆಗಳಿಗೆ ತಿಳಿದಿಲ್ಲ. ಆದರೆ ಇದನ್ನು ಗಳಿಸಿಕೊಳ್ಳಲು ಬೇಕಾದಂತಹ ಸಾಮರ್ಥ್ಯ ನಿಮ್ಮಲ್ಲಿದ್ದಲ್ಲಿ, ಕೇವಲ ಐದು ವರ್ಷಗಳ ಕಾಲ ದುಡಿದಲ್ಲಿ ಅಥವಾ ದುಡಿದಂತೆ ನಟಿಸಿದಲ್ಲಿ ಮುಂದೆ ಜೀವನಪರ್ಯಂತ ಆರಾಮವಾಗಿ ವಿಶ್ರಮಿಸಬಹುದಾಗಿದೆ. ಈ ಉದ್ಯೋಗ ದೊರೆಯಬೇಕಿದ್ದಲ್ಲಿ ಒಂದಿಷ್ಟು ರಾಜಕೀಯ ಪ್ರಭಾವ, ಮತ್ತೊಂದಿಷ್ಟು ಹಣಬಲ ಮತ್ತು ಸಾಕಷ್ಟು ತೋಳ್ಬಲಗಳ ಅವಶ್ಯಕತೆ ಇದೆ. ಜೊತೆಗೆ ಈ ಉದ್ಯೋಗವನ್ನು ಗಳಿಸಲು ನೀವು ಕೇವಲ ಒಂದುಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಬೇಕಾಗುತ್ತದೆ. ತದನಂತರ ಐದು ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದಲ್ಲಿ,ಮುಂದೆ ನಿಶ್ಚಿಂತೆಯಿಂದ ನಿವೃತ್ತ ಜೀವನವನ್ನು ನಡೆಸಬಹುದಾಗಿದೆ!. 
------------               -----------------                ---------------               -----------------          -------------

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ಮುತ್ತಿನಂತಹ ಮಾತುಗಳು ಈಗಾಗಲೇ ಅರ್ಥಹೀನವೆನಿಸಿರುವುದು ನಿಮಗೂ ತಿಳಿದಿರಲೇಬೇಕು. ಏಕೆಂದರೆ ಒಮ್ಮೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ನಿರ್ದಿಷ್ಠ ಅಭ್ಯರ್ಥಿಯೊಬ್ಬರನ್ನು ಆಯ್ಕೆಮಾಡಿದ ಬಳಿಕ, ದೇಶದ ಮತದಾರರು ಮುಂದಿನ ಚುನಾವಣೆಯ ತನಕ ಕೇವಲ " ಸೇವಕ" ರಾಗಿರುತ್ತಾರೆಯೇ ಹೊರತು ಪ್ರಭುಗಳಾಗಿರುವುದಿಲ್ಲ. ಆದರೆ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗಿದ್ದ ರಾಜಕೀಯ ನೇತಾರರು, ಮುಂದಿನ ಐದು ವರ್ಷಗಳ ಕಾಲ " ಪ್ರಭು" ಗಳಾಗಿ ವಿಜೃಂಭಿಸುವುದು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಅಧಿಕಾರದಲ್ಲಿರುವಾಗ ಸಕಲ ಸುಖ ವೈಭೋಗಗಳನ್ನು ಸರ್ಕಾರದ ವೆಚ್ಚದಲ್ಲಿ ಸವಿಯುವ ನಮ್ಮ ಶಾಸಕರು, ನಿವೃತ್ತರಾದ ಬಳಿಕ ಜೀವನಪರ್ಯಂತ ಕೈತುಂಬಾ ( ತಮಗೆ ಲಭಿಸುತ್ತಿದ್ದ ಮಾಸಿಕ ವೇತನಕ್ಕಿಂತಲೂ ಅಧಿಕ) ಪಿಂಚಣಿಯನ್ನು  ಪಡೆಯುತ್ತಿರುವುದು ಮತ್ತು ಅಕಸ್ಮಾತ್ ಈ ಶಾಸಕರು ನಿಧನರಾದಲ್ಲಿ, ಇವರು ಸೂಚಿಸಿದ್ದ ಕುಟುಂಬದ ಸದಸ್ಯರೊಬ್ಬರಿಗೆ ಶೇ. ೫೦ ರಷ್ಟು ಪಿಂಚಣಿಯನ್ನು ನೀಡುವುದು ಪ್ರಾಯಶಃ ನಿಮಗೂ ತಿಳಿದಿರಲಾರದು. 


ಕೇವಲ ಎರಡು ವರ್ಷಗಳ ಹಿಂದೆ ರಾಜ್ಯದ ಇತಿಹಾಸದಲ್ಲೇ ಮೊದಲಬಾರಿಗೆ ಅಂದಿನ ಮುಖ್ಯಮಂತ್ರಿಗಳು ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ಆಯವ್ಯಯ ಪತ್ರವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದುದನ್ನು ನೀವೂ ಮರೆತಿರಲಾರಿರಿ. ಇದರೊಂದಿಗೆ ರಾಜ್ಯಸರ್ಕಾರದ ಸಾಲದ ಮೊತ್ತವೂ ಸಹಜವಾಗಿಯೇ ಲಕ್ಷ ಕೋಟಿಯನ್ನು ಮೀರಿತ್ತು. ವಿಶೇಷವೆಂದರೆ ಇದೇ ಅಧಿವೇಶನದಲ್ಲಿ ರಾಜ್ಯದ ಮಾಜಿ ಶಾಸಕರಿಗೆ ನೀಡುವ ಮಾಸಿಕ ಪಿಂಚಣಿ, ಭತ್ಯೆ ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸದ್ದುಗದ್ದಲವಿಲ್ಲದೇ ಅಂಗೀಕರಿಸಲಾಗಿತ್ತು. ತತ್ಪರಿಣಾಮವಾಗಿ ಕರ್ನಾಟಕದ ಹಾಲಿ ಶಾಸಕರಿಗೆ ನೀಡುತ್ತಿದ್ದ ಮಾಸಿಕ ವೇತನಕ್ಕಿಂತಲೂ, ಮಾಜಿ ಶಾಸಕರಿಗೆ ನೀಡುವ ಮಾಸಿಕ ಪಿಂಚಣಿಯ ಮೊತ್ತವೇ ಅಧಿಕವಾಗಲಿತ್ತು!. 

ನಿಜಹೆಳಬೇಕಿದ್ದಲ್ಲಿ ನಮ್ಮ ದೇಶದಲ್ಲಿ ಯಾವುದೇ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬನು ಸುದೀರ್ಘಕಾಲ ಸೇವೆಸಲ್ಲಿಸಿ  ನಿವೃತ್ತನಾದ ಬಳಿಕ ಲಭಿಸುವ ಮಾಸಿಕ ಪಿಂಚಣಿಯ ಮೊತ್ತವು, ಆತನು ಪಡೆಯುತ್ತಿದ್ದ ಮಾಸಿಕ ವೇತನಕ್ಕಿಂತ ಸಾಕಷ್ಟು ಕಡಿಮೆಯಾಗಿರುತ್ತದೆ. ಅದೇ ರೀತಿಯಲ್ಲಿ ಸರ್ಕಾರಿ ಉದ್ಯೋಗಿಗಳು ನಿವೃತ್ತಿ ವೇತನವನ್ನು ಪಡೆಯಬೇಕಿದ್ದಲ್ಲಿ ಕನಿಷ್ಠ ೧೫ ವರ್ಷಗಳ ಕಾಲ ಸೇವೆ ಸಲ್ಲಿಸಲೇಬೇಕು. ಆದರೆ ರಾಜ್ಯದ ಶಾಸಕರು ಕೇವಲ ೫ ವರ್ಷಗಳ ಅವಧಿಯನ್ನು ಪೂರೈಸಿದಲ್ಲಿ, ಜೀವನಪರ್ಯಂತ ಪಿಂಚಣಿ ಮತ್ತಿತರ ಆರ್ಥಿಕ ಹಾಗೂ ಅನ್ಯ ಸೌಲಭ್ಯಗಳನ್ನು ಪಡೆಯಬಹುದಾಗಿದೆ!. ಇಷ್ಟು ಮಾತ್ರವಲ್ಲ, ಆಕಸ್ಮಿಕವಾಗಿ ಇವರು ನಿಧನರಾದಲ್ಲಿ, ಇವರೇ ಸೂಚಿಸಿದ್ದ ಇವರ ಕುಟುಂಬದ ಸದಸ್ಯರೊಬ್ಬರಿಗೆ ಶೇ. ೫೦ ರಷ್ಟು ಪಿಂಚಣಿ ಮತ್ತು ವೈದ್ಯಕೀಯ ಭತ್ಯೆ ದೊರೆಯುತ್ತದೆ. ವಿಶೇಷವೆಂದರೆ ತಮ್ಮ ವೇತನ, ಭತ್ಯೆ ಮತ್ತು ಇನ್ನಿತರ ಸವಲತ್ತುಗಳನ್ನು ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸಿದಷ್ಟು ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವ ಅಧಿಕಾರ ನಮ್ಮ ಶಾಸಕರ ಕೈಯಲ್ಲೇ ಇದೆ. ಜೊತೆಗೆ ಇಂತಹ ಪ್ರಸ್ತಾವನೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸುವಾಗ, ಆಡಳಿತ ಹಾಗೂ ವಿರೋಧ ಪಕ್ಷಗಳ ಶಾಸಕರಲ್ಲಿ ಬಹಳ ಅಪರೂಪದಲ್ಲಿ ಕಂಡುಬರುವ " ಸಹಮತ" ವು, ಇಂತಹ ವಿಚಾರಗಳಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತದೆ. 


ಕರ್ನಾಟಕದ ನಿವೃತ್ತ ಶಾಸಕರಿಗೆ ಸರ್ಕಾರದ ವತಿಯಿಂದ ಲಭಿಸುತ್ತಿರುವ ಮಾಸಿಕ ಪಿಂಚಣಿ ಮತ್ತು ಇತರ ಅರ್ಥಿಕ ಹಾಗೂ ಅನ್ಯ ಸೌಲಭ್ಯಗಳ ಬಗ್ಗೆ ಅರಿತುಕೊಳ್ಳುವ ಕುತೂಹಲದಿಂದ, ಮಾಹಿತಿ ಪಡೆಯುವ ಹಕ್ಕು ಕಾಯಿದೆ-೨೦೦೫ ರನ್ವಯ ಇದೇ ವರ್ಷದಲ್ಲಿ ಸಲ್ಲಿಸಿದ್ದ ಅರ್ಜಿಗಳ ಫಲವಾಗಿ ದೊರೆತಿರುವ ಮಾಹಿತಿಗಳು  ನಮ್ಮನಿಮ್ಮೆಲ್ಲರನ್ನು ದಿಗ್ಭ್ರಮೆಗೊಳಿಸುವಂತಿದೆ. ಈ ಬಗ್ಗೆ ಸರ್ಕಾರವೇ ಒದಗಿಸಿರುವ ಅಧಿಕೃತ ಮಾಹಿತಿ ಇಂತಿದೆ. 

 ಅರ್ಹತೆಗಳು - ಲಭ್ಯ ಸವಲತ್ತುಗಳು 

* ಕರ್ನಾಟಕ ವಿಧಾನ ಮಂಡಲಗಳ ವೇತನ, ನಿವೃತ್ತಿ ವೇತನ ಮತ್ತು ಭತ್ಯೆಗಳ ಅಧಿನಿಯಮ ೧೯೫೬ ರಂತೆ ಶಾಸಕರಾಗಿ ಆಯ್ಕೆಯಾಗಿರುವ ವ್ಯಕ್ತಿಗಳು ಪಿಂಚಣಿಯನ್ನು ಪಡೆಯಲು ಅರ್ಹರಿರುತ್ತಾರೆ. ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ಪ್ರತಿಯೊಬ್ಬ ಶಾಸಕರಿಗೆ ಅವರ ಜೀವಿತಾವಧಿಯಲ್ಲಿ ಪ್ರತಿ ತಿಂಗಳಲ್ಲೂ ೨೫,೦೦೦ ರೂ. ನಿವೃತ್ತಿ ವೇತನವನ್ನು ಪಾವತಿಸಲಾಗುತ್ತದೆ. ಐದು ವರ್ಷಗಳಿಗಿಂತ ಅಧಿಕ ಸೇವೆಯನ್ನು ಸಲ್ಲಿಸಿದಲ್ಲಿ, ತದನಂತರದ ಪ್ರತಿಯೊಂದು ವರ್ಷಕ್ಕೆ ೧೦೦೦ ರೂ.ಗಳಂತೆ ಹೆಚ್ಚುವರಿ ನಿವೃತ್ತಿ ವೇತನವನ್ನು ನೀಡಲಾಗುತ್ತಿದ್ದು, ಇದರ ಗರಿಷ್ಠ ಮಿತಿಯನ್ನು ೩೫,೦೦೦ ರೂ.ಗಳಿಗೆ  ನಿಗದಿಸಲಾಗಿದೆ. 

*ಮಾಜಿ ಶಾಸಕರು ತಮ್ಮ ಜೊತೆಗಾರರೊಂದಿಗೆ ಪ್ರಯಾಣಿಸಲು ವರ್ಗಾವಣೆ ಮಾಡಲಾಗದ ಒಂದು ಬಸ್ ಪಾಸ್/ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಇದನ್ನು ಬಳಸಿ ಕರ್ನಾಟಕ ಮತ್ತು ಅನ್ಯ ಯಾವುದೇ ರಾಜ್ಯಗಳಲ್ಲಿ, ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ನಿರ್ದಿಷ್ಟ ದರ್ಜೆಯಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

* ಇದಲ್ಲದೇ ಮಾಜಿ ಶಾಸಕರು ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚದ ರಸೀತಿಗಳನ್ನು ಮರುಪಾವತಿಗಾಗಿ ಸಲ್ಲಿಸಿದಲ್ಲಿ, ಇವರಿಗೆ ನೀಡುವ ಮಾಸಿಕ ೪೦೦೦/-ರೂ. ವೈದ್ಯಕೀಯ ವೆಚ್ಚವನ್ನು ಕಳೆದು ಉಳಿದ ಮೊತ್ತವನ್ನು ಪಾವತಿಸಲಾಗುತ್ತದೆ. ಹಾಗೂ ಇದಕ್ಕೆ ಯಾವುದೇ ಇತಿಮಿತಿಗಳನ್ನು ನಿಗದಿಸಿಲ್ಲ. 

* ಇಷ್ಟು ಮಾತ್ರವಲ್ಲ, ೨೮-೦೪- ೨೦೧೨ ರಿಂದ ಜಾರಿಗೆ ಬರುವಂತೆ ರೈಲು- ವಿಮಾನ ಪ್ರಯಾಣ ಭತ್ಯೆಯಾಗಿ ವಾರ್ಷಿಕ ೧,೦೦,೦೦೦ ರೂ.ಗಳನ್ನು ಪ್ರತಿ ಎಪ್ರಿಲ್ ಹಾಗೂ ಒಕ್ಟೋಬರ್ ತಿಂಗಳುಗಳಲ್ಲಿ ಎರಡು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ. ಈ ಮೊತ್ತಕ್ಕೆ ಪ್ರತಿಯಾಗಿ ವಿಮಾನ- ರೈಲುಯಾನಗಳ ಟಿಕೆಟ್ ಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕಿಲ್ಲ. ಅರ್ಥಾತ್, ಮಾಜಿ ಶಾಸಕರು ಒಂದು ವರ್ಷದಲ್ಲಿ ಅಥವಾ ಯಾವತ್ತೂ ಎಲ್ಲಿಗೂ ಪ್ರಯಾಣಿಸದಿದ್ದರೂ, ಈ ಭತ್ಯೆಯು ಅವರಿಗೆ ಲಭಿಸುತ್ತದೆ.  

* ಮಾಜಿ ಶಾಸಕರು ಮೃತಪಟ್ಟಲ್ಲಿ ಅವರ ಕುಟುಂಬ ಅಂದರೆ ಪತಿ ಅಥವಾ ಪತ್ನಿ, ಅಪ್ರಾಪ್ತ ಮಗ ಮತ್ತು ಅವಿವಾಹಿತ ಅಪ್ರಾಪ್ತ ಮಗಳು, ಇವರಲ್ಲಿ ಯಾರಾದರೂ ಒಬ್ಬರಿಗೆ ಕುಟುಂಬ ಪಿಂಚಣಿಯನ್ನು ನೀಡಲಾಗುತ್ತದೆ. ದಿ. ೦೧-೦೧-೨೦೦೯ ರ ನಂತರ ನಿಧನರಾದ ಮಾಜಿ ಶಾಸಕರು ಪಡೆಯುತ್ತಿದ್ದ ಪಿಂಚಣಿಯ ಶೇ.೫೦ ರಷ್ಟು ಮೊತ್ತವನ್ನು ಕುಟುಂಬದ ಸದಸ್ಯರೊಬ್ಬರಿಗೆ ನೀಡಲಾಗುತ್ತದೆ. ಈ ಸೌಲಭ್ಯವು ಕುಟುಂಬ ಪಿಂಚಣಿದಾರರಿಗೆ ಅಜೀವ ಪರ್ಯಂತ ಅಥವಾ ಮರುಮದುವೆಯಾಗುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯ ತನಕ ನೀಡಲಾಗುತ್ತದೆ. 

* ಇವೆಲ್ಲಕ್ಕೂ ಮಿಗಿಲಾಗಿ ದಿ. ೦೫-೦೨-೨೦೧೧ ರಿಂದ ಅನ್ವಯವಾಗುವಂತೆ, ೧೯೫೨ ಕ್ಕೂ ಮುನ್ನ ( ಮೈಸೂರು ಪ್ರಜಾಪ್ರತಿನಿಧಿಯಾಗಿ) ಹಾಗೂ ಅನಂತರ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿ ನಿಧನರಾಗಿದ್ದ ಮಾಜಿ ಶಾಸಕರ ಕುಟುಂಬಗಳಿಗೂ ಕುಟುಂಬ ಪಿಂಚಣಿಯನ್ನು ನೀಡಲು ಸರ್ಕಾರ ಆದೇಶಿಸಿದೆ. 

* ಇದರೊಂದಿಗೆ ದಿ. ೧೭- ೦೧- ೨೦೧ ರಿಂದ ಜಾರಿಗೆ ಬರುವಂತೆ ಮಾಸಿಕ ೨೦೦೦/- ರೂ.ಗಳನ್ನು ವೈದ್ಯಕೀಯ ಭತ್ಯೆಯಾಗಿ ಕುಟುಂಬ ಪಿಂಚಣಿದಾರರಿಗೆ ಪಾವತಿಸಲಾಗುತ್ತಿದೆ. 

*೧೯೫೨ ನೇ ಇಸವಿಗೆ ಮುನ್ನ ( ಮೈಸೂರು ಪ್ರಜಾ ಪ್ರತಿನಿಧಿಯಾಗಿ) ಹಾಗೂ ನಂತರ ಸದಸ್ಯರಾಗಿ ( ಶಾಸಕರಾಗಿ ) ಸೇವೆ ಸಲ್ಲಿಸಿ ನಿಧನರಾಗಿರುವವರ ಕುಟುಂಬಗಳಿಗೆ ಕುಟುಂಬ ಪಿಂಚಣಿಯನ್ನು ನೀಡುವ ಆದೇಶವನ್ನು ೨೨-೦೨- ೨೦೧೪ ರಂದು ಹೊರಡಿಸಲಾಗಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. 

* ಇದೀಗ ನಿವೃತ್ತಿವೇತನವನ್ನು ಪಡೆಯುತ್ತಿರುವ ಶಾಸಕರ ಸಂಖ್ಯೆಯು ೫೫೩ ಆಗಿದ್ದು, ೨೦೧೩-೧೪ ನೇ ಸಾಲಿನಲ್ಲಿ  ಇವರಿಗೆ ಸಂದಿರುವ ಪಿಂಚಣಿ ಹಾಗೂ ವೈದ್ಯಕೀಯ ಭತ್ಯೆಯ ಒಟ್ಟು ಮೊತ್ತವು ೨೧, ೩೫,೭೬,೦೦೦/- ರೂ. ಗಳಾಗಿವೆ. 

* ನಿಧನರಾಗಿರುವ ಶಾಸಕರ ಕುಟುಂಬ ಪಿಂಚಣಿಯನ್ನು ಪಡೆಯುತ್ತಿರುವವರ ಸಂಖ್ಯೆಯು ೨೬೩ ಆಗಿದ್ದು, ೨೦೧೩-೧೪ ನೇ  ಸಾಲಿನಲ್ಲಿ ಇವರಿಗೆ ಸಂದಿರುವ ಕುಟುಂಬ ಪಿಂಚಣಿ ಮತ್ತು ವೈದ್ಯಕೀಯ ಭತ್ಯೆಯ ಒಟ್ಟು ಮೊತ್ತವು ೫,೧೦,೦೦,೦೦೦ ಆಗಿದೆ. 

* ಪಿಂಚಣಿ ಪಡೆಯುತ್ತಿರುವ ಶಾಸಕರಿಗೆ ೨೦೧೩-೧೪ ನೇ ಸಾಲಿನಲ್ಲಿ ಸಂದಿರುವ ರೈಲ್ವೇ - ವಿಮಾನ ಪ್ರಯಾಣ ಭತ್ಯೆಯು ೩,೬೮,೨೯,೩೫೫/- ರೂ. ಮತ್ತು ವೈದ್ಯಕೀಯ ವೆಚ್ಚವು ೨,೨೫,೨೨,೯೭೧/- ರೂ. ಗಳಾಗಿತ್ತು. 

* ಮಾಜಿ ಶಾಸಕರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ೨೦೧೩-೧೪ ನೇ ಆರ್ಥಿಕ ವರ್ಷದಲ್ಲಿ ಸಂದಾಯವಾಗಿದ್ದ ಪಿಂಚಣಿ ಮತ್ತಿತರ ಸಕಲ ಆರ್ಥಿಕ ಸೌಲಭ್ಯಗಳ ಪಾವತಿಗಾಗಿ ಸರ್ಕಾರವು ವ್ಯಯಿಸಿರುವ ಒಟ್ಟು ಮೊತ್ತವು ೩೨,೩೯,೨೮,೩೨೬/- ರೂ. ಗಳಾಗಿವೆ. 

ಇನ್ನಷ್ಟು ಹೆಚ್ಚಲಿರುವ ಹೊರೆ 

ಸರ್ಕಾರವು ಅಧಿಕೃತವಾಗಿ ನೀಡಿರುವ ಮಾಹಿತಿಯಂತೆ ಗತ ಆರ್ಥಿಕ ವರ್ಷದಲ್ಲಿ ಮಾಜಿ ಶಾಸಕರಿಗೆ- ಶಾಸಕರ ಕುಟುಂಬದ ಸದಸ್ಯರಿಗಾಗಿ  ಸುಮಾರು ೩೨. ೩೦ ಕೋಟಿ ರೂ. ಗಳನ್ನು ವ್ಯಯಿಸಿದೆ. ಇದರಲ್ಲಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಾಜಿ ಶಾಸಕರು ಪ್ರಯಾಣಿಸಿದ ವೆಚ್ಚವನ್ನು ಸಂಸ್ಥೆಯಿಂದ ಮಾಹಿತಿ ದೊರೆತಿರದ ಕಾರಣದಿಂದಾಗಿ, ಈ ಮೊತ್ತವನ್ನು ಪಾವತಿಸಿಲ್ಲ. ಜೊತೆಗೆ ೧೯೫೨ ನೇ ಇಸವಿಗೆ ಮುನ್ನ ಮತ್ತು ನಂತರ ಶಾಸಕರಾಗಿ ಸೇವೆ ಸಲ್ಲಿಸಿ ನಿಧನರಾಗಿದ್ದವರ ಕುಟುಂಬ ಪಿಂಚಣಿಯ ಪಾವತಿಯು ಇನ್ನಷ್ಟೇ ಆರಂಭವಾಗಬೇಕಿದ್ದು, ೨೦೧೪-೧೫ ನೇ ಆರ್ಥಿಕ  ವರ್ಷದಲ್ಲಿ ಮಾಜಿ ಶಾಸಕರನ್ನು ಸಲಹಲು ಸರ್ಕಾರ ವ್ಯಯಿಸಲಿರುವ ಮೊತ್ತವು ಇನ್ನಷ್ಟು ಹೆಚ್ಚಲಿದೆ. ಇದರೊಂದಿಗೆ ಹಾಲಿ ಶಾಸಕರು ತಮ್ಮ ಮಾಸಿಕ ವೇತನ ಮತ್ತಿತರ ಸೌಲಭ್ಯಗಳನ್ನು ಹೆಚ್ಚಿಸುವತ್ತ ತಮ್ಮ ಗಮನವನ್ನು ಹರಿಸಿದ್ದು, ರಾಜ್ಯದ ಬೊಕ್ಕಸದ ಹೊರೆ ಮತ್ತಷ್ಟು ಹೆಚ್ಚಲಿದೆ!. 

ಕೊನೆಯ ಮಾತು 

ಸಮಾಜಸೇವೆ ಮಾಡುವ ಸಲುವಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿರುವುದಾಗಿ ಹೇಳುವ ನಮ್ಮ ರಾಜಕಾರಣಿಗಳು, ಚುನಾವಣೆಗಳಲ್ಲಿ ಗೆದ್ದು ಶಾಸಕರಾದ ಬಳಿಕ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗುತ್ತಿರುವುದು ಮತದಾರರಿಗೆ ತಿಳಿಯದ ವಿಚಾರವೇನಲ್ಲ. ಆದರೂ ನಿವೃತ್ತರಾದ ಬಳಿಕ ಸರ್ಕಾರದ ಬೊಕ್ಕಸದಿಂದ ಲಭಿಸುವ ಮಾಸಿಕ ಪಿಂಚಣಿ ಮತ್ತಿತರ ಸೌಲಭ್ಯಗಳಿಗಾಗಿ ಇವರು ಕೈಚಾಚುವುದೇಕೆ?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. 

ಡಾ .ಸಿ . ನಿತ್ಯಾನಂದ ಪೈ, ಪುತ್ತೂರು 


Monday, May 19, 2014

obstacles in road widening




 ರಸ್ತೆಗಳ ವಿಸ್ತರಣೆಗೆ ಸಂಭವಿಸುತ್ತಿರುವ ಅಡಚಣೆಗಳು 

ರಾಜ್ಯದ ಬಹುತೇಕ ಸಣ್ಣಪುಟ್ಟ ನಗರ- ಪಟ್ಟಣಗಳ ಅಧಿಕತಮ ರಸ್ತೆಗಳು ಅತ್ಯಂತ ಅಗಲಕಿರಿದಾಗಿ ಉಳಿದಿರಲು, ಇವುಗಳ ಇಕ್ಕೆಲಗಳಲ್ಲಿ ಹಲವಾರು ವರ್ಷಗಳ ಹಿಂದೆ ನಿರ್ಮಿತವಾಗಿದ್ದ ವಸತಿ- ವಾಣಿಜ್ಯ ಕಟ್ಟಡಗಳೇ ಕಾರಣವೆನಿಸಿವೆ. ಅಂದಿನ ದಿನಗಳಲ್ಲಿ ಎತ್ತಿನ ಗಾಡಿ ಮತ್ತು ಬೆರಳೆಣಿಕೆಯಷ್ಟು ಸಣ್ಣಪುಟ್ಟ ಮೋಟಾರು ವಾಹನಗಳು ಅಪರೂಪದಲ್ಲಿ ಸಂಚರಿಸುತ್ತಿದ್ದ ಈ ರಸ್ತೆಗಳು ಕಾರಣಾಂತರಗಳಿಂದ ವಿಸೃತಗೊಂಡಿರಲೇ ಇಲ್ಲ. 

ಇಂತಹ ಕಾರಣಗಳಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿದ್ದ ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸದೇ ಇರುವುದು ಹಾಗೂ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ವಿಶೇಷ ಆಸಕ್ತಿಯನ್ನು ತೋರದಿರುವುದು ಪ್ರಮುಖ ಕಾರಣವೆನಿಸಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಹಳೆಯ ಕಟ್ಟಡಗಳನ್ನು ಕೆಡವಿ ನೂತನ ಕಟ್ಟಡಗಳನ್ನು ನಿರ್ಮಿಸಿದರೂ, ರಸ್ತೆಯ ವಿಸ್ತರಣೆಗಾಗಿ ಇಂತಿಷ್ಟು ಜಮೀನನ್ನು ಬಿಟ್ಟುಕೊಡಬೇಕು ಎನ್ನುವ ನಿಯಮವನ್ನು ಪರಿಪಾಲಿಸದೇ ಇರುವುದು ಅಥವಾ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದೇ ಇರುವುದು, ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಈ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಭ್ರಷ್ಟಾಚಾರ ಅಥವಾ ರಾಜಕೀಯ ನೇತಾರರ ಹಸ್ತಕ್ಷೇಪಗಳು ಪ್ರಮುಖವಾಗಿವೆ. ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಸೂಕ್ತ ನೀತಿನಿಯಮಗಳಿದ್ದರೂ, ಇವುಗಳನ್ನು ಅನುಷ್ಠಾನಿಸಲು ಬೇಕಾದ ಇಚ್ಛಾಶಕ್ತಿಯ ಕೊರತೆಯಿಂದಾಗಿ, ಅಧಿಕತಮ ನಗರ- ಪಟ್ಟಣಗಳ ರಸ್ತೆಗಳು ಇಂದಿಗೂ ಯಥಾಸ್ಥಿತಿಯಲ್ಲಿ ಉಳಿದುಕೊಂಡಿವೆ. 

ಸಮಸ್ಯೆಗಳು 

ಹೆಚ್ಚುತ್ತಿರುವ ಜನ- ವಾಹನಗಳ ಸಂಖ್ಯೆಗೆ ಅನುಗುಣವಾಗಿ ಆಯಾ ನಗರ- ಪಟ್ಟಣಗಳ ರಸ್ತೆಗಳನ್ನು ವಿಸ್ತರಿಸದೆ ಇರುವುದರಿಂದಾಗಿ, ಜನ-ವಾಹನಗಳ ಸುಗಮ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತದೆ. ತತ್ಪರಿಣಾಮವಾಗಿ ಸಂಭವಿಸುವ ಟ್ರಾಫಿಕ್ ಜಾಮ್ ನಿಂದಾಗಿ, ಸಾಲುಗಟ್ಟಿ ನಿಲ್ಲುವ ವಾಹನಗಳ ಇಂಧನದ ಬಳಕೆಯ ಪ್ರಮಾಣ ಹೆಚ್ಚುವುದರೊಂದಿಗೆ, ಇವುಗಳು ಉಗುಳುವ ಅಗಾಧ ಪ್ರಮಾಣದ ಹೊಗೆಯು ತೀವ್ರ ಸ್ವರೂಪದ ಪರಿಸರ ಪ್ರದೂಷಣೆ ಮತ್ತು ಜನಸಾಮ್ಯರ ಅನಾರೋಗ್ಯಗಳಿಗೆ ಕಾರಣವೆನಿಸುತ್ತದೆ. ಅದೇ ರೀತಿಯಲ್ಲಿ ಅಗಲಕಿರಿದಾದ ರಸ್ತೆಗಳ ಇಕ್ಕೆಲಗಳಲ್ಲಿ ಪಾದಚಾರಿಗಳು ನಿರಾತಂಕವಾಗಿ ಸಂಚರಿಸಬಲ್ಲ ಕಾಲುದಾರಿಗಳ ಅಭಾವದಿಂದಾಗಿ, ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯ ಮೇಲೆ ನಡೆದಾಡುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೇ, ಅಯಾಚಿತ ಅಪಘಾತಗಳಿಗೂ ಮೂಲವೆನಿಸುತ್ತದೆ. ಇದಲ್ಲದೇ ಇಂತಹ ರಸ್ತೆಗಳ ಇಕ್ಕೆಲಗಳಲ್ಲಿ ವಾಹನಗಳು ತಂಗಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ದೊರೆಯದಿರುವುದರಿಂದಾಗಿ, ರಸ್ತೆ- ರಸ್ತೆಬದಿಗಳಲ್ಲೇ ತಂಗುವ ವಾಹನಗಳಿಂದಾಗಿ ಅನ್ಯ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುವುದರೊಂದಿಗೆ,ರಸ್ತೆ ಅಪಘಾತಗಳಿಗೂ ಕಾರಣವೆನಿಸುತ್ತದೆ. ಇವೆಲ್ಲಾ ಸಮಸ್ಯೆಗಳ ಬಗ್ಗೆ ಅರಿವಿದ್ದರೂ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಳಸಿಕೊಳ್ಳುವ ಮೂಲಕ ರಸ್ತೆಗಳನ್ನು ವಿಸ್ತರಿಸುವತ್ತ ಗಮನಹರಿಸುವುದಿಲ್ಲ. 

ವಿಶೇಷವೆಂದರೆ ಹಳೆಯ ಕಟ್ಟಡಗಳನ್ನು ಕೆಡವಿ ನೂತನ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭದಲ್ಲಿ, ರಸ್ತೆಯ ಬದಿಯಲ್ಲಿನ ತಮ್ಮ ಖಾಸಗಿ ಜಮೀನಿನ ಅಂಚಿನಿಂದ ಸುಮಾರು ೬ ರಿಂದ ೯ ಮೀಟರ್ ಜಮೀನನ್ನು ರಸ್ತೆಗಾಗಿ ಬಿಟ್ಟುಕೊಡಬೇಕೆನ್ನುವ ನಿಯಮವಿದೆ. ಆದರೆ ಅನೇಕ ಕಟ್ಟಡಗಳ ಮಾಲೀಕರು ತಮ್ಮ ಹಳೆಯ ಕಟ್ಟಡಗಳನ್ನು ಕೆಡವಿದೊಡನೆ, ತಮ್ಮ ಜಮೀನಿನ ಅಂಚಿನ ಉದ್ದಕ್ಕೂ ತಾತ್ಕಾಲಿಕವಾದ ಆವರಣವೊಂದನ್ನು ನಿರ್ಮಿಸುತ್ತಾರೆ. ಇದರಿಂದಾಗಿ ಇದರ ಹಿಂದೆ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳು ದಾರಿಹೋಕರ ಕಣ್ಣಿಗೆ ಬೀಳುವುದಿಲ್ಲ. ಅಂತೆಯೇ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು- ಚುನಾಯಿತ ಜನಪ್ರತಿನಿಧಿಗಳು ಇತ್ತ ಕಣ್ಣು ಹಾಯಿಸುವುದೇ ಇಲ್ಲ!. ಅದೃಷ್ಟವಶಾತ್ ಎಲ್ಲ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ ಇಂತಹ ಸಮಸ್ಯೆ ತಲೆದೋರದಿರಲು, ಪ್ರಜ್ಞಾವಂತ ಕಟ್ಟಡ ಮಾಲಿಕರ ಪ್ರಾಮಾಣಿಕತೆಯೇ ಪ್ರಮುಖ ಕಾರಣವಾಗಿರುತ್ತದೆ. 

ಆದರೆ ಅನೇಕ ಸಂದರ್ಭಗಳಲ್ಲಿ  ತೆರೆಯ  ಮರೆಯಲ್ಲಿ ನಡೆಯುವ ಕಟ್ಟಡ ನಿರ್ಮಾಣದೊಂದಿಗೆ ತೆರೆಯ ಮರೆಯಲ್ಲಿ ನಡೆಯುವ ಅವ್ಯವಹಾರಗಳ ಪರಿಣಾಮವಾಗಿ, ಅನೇಕ ಕಟ್ಟಡಗಳ ಮಾಲಿಕರು ರಸ್ತೆಯ ವಿಸ್ತರಣೆಗಾಗಿ ನಿಗದಿತ ಪ್ರಮಾಣದ ಜಮೀನನ್ನು ಬಿಟ್ಟುಕೊಡುವುದಿಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ರಸ್ತೆಗಳ ವಿಸ್ತರಣೆ ಆಗದೇ ಇರುವುದರಿಂದ, ತತ್ಸಂಬಂಧಿತ ಸಮಸ್ಯೆಗಳು ಪರಿಹಾರಗೊಳ್ಳುವುದೇ ಇಲ್ಲ!. ಸ್ಥಳೀಯ ಜನರಿಗೆ ಇವೆಲ್ಲಾ ವಿಚಾರಗಳ ಅರಿವಿದ್ದರೂ ಪ್ರತಿಭಟಿಸದೇ ಇರುವುದರಿಂದಾಗಿ, ಸಮಸ್ಯೆಗಳು ಸುದೀರ್ಘಕಾಲ ಜನಸಾಮಾನ್ಯರನ್ನು ಬಾಧಿಸುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


Wednesday, May 14, 2014

Karnataka MLA's Foreign tour


ಶಾಸಕರ ವಿದೇಶ ಅಧ್ಯಯನ ಪ್ರವಾಸವನ್ನು ರದ್ದುಪಡಿಸಿ 

ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎನ್ನುವ ಆಡುಮಾತು, ಕರ್ನಾಟಕದ ಶಾಸಕರ ವಿದೇಶ ಅಧ್ಯಯನ ಪ್ರವಾಸದ ಬಗ್ಗೆ ಅನ್ವರ್ಥವೆನಿಸುತ್ತದೆ. ಏಕೆಂದರೆ ರಾಜ್ಯದ ಪ್ರಜೆಗಳು ಪಾವತಿಸಿದ ತೆರಿಗೆಯ ಹಣವನ್ನು ಸನ್ಮಾನ್ಯ ಶಾಸಕರು ತಮ್ಮ ಮೋಜು- ಮಸ್ತಿಗಳಿಗಾಗಿ ವ್ಯಯಿಸುತ್ತಿದ್ದಾರೆ. 

ರಾಜ್ಯದ ಶಾಸಕರ ವಿದೇಶ ಯಾತ್ರೆಯ ಬಗ್ಗೆ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಕೂಡಾ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಜೊತೆಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಪ್ರತಿಕೂಲ ಪ್ರತಿಕ್ರಿಯೆಗಳು ಪ್ರಕಟಗೊಂಡಿವೆ. ಆದರೂ ರಾಜ್ಯದಲ್ಲಿ ಲೋಕಸಭಾ ಚುನಾವಣೆಗಳು ಮುಗಿದೊಡನೆ, ನಾಲ್ಕು ಸದನ ಸಮಿತಿಗಳು ವಿದೇಶ ಅಧ್ಯಯನ ಪ್ರವಾಸಕ್ಕೆ ಹೊರಡಲು ಹೊರಡಲು ಪೂರ್ವಸಿದ್ಧತೆಗಳನ್ನು ನಡೆಸಿದ್ದವು. ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿರುವ ಈ ಪ್ರವಾಸಕ್ಕೆ ಅನುಮತಿಯನ್ನು ನೀಡಲು ನಿರಾಕರಿಸಿದ್ದ ವಿಧಾನ ಸಭಾಧ್ಯಕ್ಷರು, ವಿದೇಶ ಪ್ರವಾಸದ ವಿಚಾರದಲ್ಲಿ ಕೆಲವೊಂದು ನೀತಿ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ನೇಮಿಸಿರುವ ಅಧಿಕೃತ ಸಮಿತಿಯು ತನ್ನ  ಶಿಫಾರಸುಗಳನ್ನು ಸಲ್ಲಿಸಿದ ಬಳಿಕವೇ ಅಂತಿಮ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.ಜೊತೆಗೆ ಕಳೆದ ಐದು ವರ್ಷಗಳಲ್ಲಿ ವಿದೇಶ ಪ್ರವಾಸವನ್ನು ಕೈಗೊಂಡಿದ್ದ ಸಮಿತಿಗಳು ಸಲ್ಲಿಸಿದ್ದ ಅಧ್ಯಯನದ ವರದಿಗಳನ್ನು ಪರಿಶೀಲಿಸುವುದಾಗಿಯೂ ಘೋಷಿಸಿದ್ದಾರೆ. ತನ್ಮೂಲಕ ೨೦೦೯ ರಲ್ಲಿ ರೂಪಿಸಿದ್ದ ಮಾರ್ಗದರ್ಶಿ ನಿಯಮಗಳ ಬಗ್ಗೆ ತಮಗೇನೂ ತಿಳಿದಿಲ್ಲವೆಂದು ಮತ್ತು ಇದಕ್ಕೂ ಮುನ್ನ ವಿದೇಶ ಪ್ರವಾಸ ಕೈಗೊಂಡಿದ್ದ ಸದನ ಸಮಿತಿಗಳು ತಮಗೆ ಸಲ್ಲಿಸಿದ್ದ ಅಧ್ಯಯನದ ವರದಿಗಳನ್ನು ಇಂದಿನ ತನಕ ತಾವು ಪರಿಶೀಲಿಸಿಲ್ಲ ಎನ್ನುವುದನ್ನು ಸ್ವಯಂ ಧೃಢಪಡಿಸಿದ್ದಾರೆ. 


ಕರ್ನಾಟಕ ರಾಜ್ಯದ ವಿಧಾನ ಮಂಡಲಗಳ ವಿವಿಧ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ಅಧ್ಯಯನದ ನೆಪದಲ್ಲಿ ಉಚಿತ ವಿದೇಶ ಪ್ರವಾಸ ಕೈಗೊಳ್ಳುವುದನ್ನು ಇದೀಗ  ಅಂತ್ಯಗೊಳಿಸಲೇಬೇಕಾಗಿದೆ. ರಾಜ್ಯದ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ವ್ಯಯಿಸಿ, ಮೋಜು- ಮಸ್ತಿಗಳ ಸಲುವಾಗಿ ಸುಪ್ರಸಿದ್ಧ ವಿದೇಶಿ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ನಮ್ಮ ಶಾಸಕರುಅಲ್ಲಿ ನಡೆಸುವ " ಅಧ್ಯಯನ" ಏನೆಂದು ಜನಸಾಮಾನ್ಯರಿಗೂ ತಿಳಿದಿದೆ. ವಿಶೇಷವೆಂದರೆ ವಿವಿಧ ಸದನ ಸಮಿತಿಗಳ ಕರ್ತವ್ಯ ಹಾಗೂ ಹೊಣೆಗಾರಿಕೆಗಳಿಗೆ ಮತ್ತು ಇವರು ಅಧ್ಯಯನದ ಸಲುವಾಗಿ ಸಂದರ್ಶಿಸುವ ವಿದೇಶಿ ಪ್ರವಾಸಿ ತಾಣಗಳಿಗೆ ಯಾವುದೇ ಸಂಬಂಧ ಇಲ್ಲದಿರುವುದು ಈ ಪ್ರವಾಸದ ಉದ್ದೇಶವನ್ನು ಬಯಲುಗೊಳಿಸುತ್ತದೆ !.
ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದ ಪ್ರತಿಕೂಲ ಪ್ರತಿಕ್ರಿಯೆಗಳ ಹೊರತಾಗಿಯೂ, ಇದೇ ವರ್ಷದ ಆದಿಯಲ್ಲಿ ವಿದೇಶ ಪ್ರವಾಸವನ್ನು ಕೈಗೊಂಡಿದ್ದ ಶಾಸಕರ ಸಂದರ್ಶನವನ್ನು ನಡೆಸಿದ್ದ ರಾಷ್ಟ್ರೀಯ ಖಾಸಗಿ ಟಿ. ವಿ ವಾಹಿನಿಯ ವರದಿಗಾರರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಶಾಸಕರು ನೀಡಿದ್ದ ಉತ್ತರಗಳುಈ ಕಾರ್ಯಕ್ರಮವನ್ನು ವೀಕ್ಷಿಸಿದವರಿಗೆ ಸಾಕಷ್ಟು ಮನೋರಂಜನೆಯನ್ನು ನೀಡಲು ಯಶಸ್ವಿಯಾಗಿತ್ತು!. 

ಪ್ರವಾಸಕ್ಕೆ ತಡೆ 

ವಿಧಾನಸಭೆಯ ಸ್ಪೀಕರ್ ಕಾಗೋಡು ತಿಮ್ಮಪ್ಪನವರ ಹೇಳಿಕೆಯಂತೆ ರಾಜ್ಯದ ಜನತೆ ಬರಗಾಲದಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಶಾಸಕರು ವಿದೇಶ ಪ್ರವಾಸಕ್ಕೆ ತೆರಳುವುದು ಸರಿಯಲ್ಲ.ಈ ಬಗ್ಗೆ ಯಾವುದೇ ಪ್ರಸ್ತಾವನೆ ತಮ್ಮ ಬಳಿಗೆ ಬಂದಿಲ್ಲ. ಪ್ರಸ್ತಾವನೆ ಬಂದರೂ ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲಿ ಸೂಕ್ತ ನೀತಿನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ತಾವು ಇದೀಗ ನೇಮಿಸಿರುವ ಸಮಿತಿಯ ವರದಿಯು ಕೈಸೇರಿದ ಬಳಿಕ ಈ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದಾಗಿಯೂ ಹೇಳಿದ್ದಾರೆ. 

ಇದಕ್ಕೂ ಮಿಗಿಲಾಗಿ ವಿಧಾನ ಸಭೆಯ ಸಚಿವಾಲಯದ ಕಾರ್ಯದರ್ಶಿಯವರು ಸುತ್ತೊಲೆಯೊಂದನ್ನು ಹೊರಡಿಸಿಯಾವುದೇ ಸದನ ಸಮಿತಿಗಳ ಸದಸ್ಯರಾಗಿರುವ ಶಾಸಕರು ವಿದೇಶ ಪ್ರವಾಸದ ಪ್ರಸ್ತಾವನೆಯನ್ನು ಸಲ್ಲಿಸದಂತೆ ಸೂಚಿಸಿದ್ದಾರೆ. ಜೊತೆಗೆ ವಿಧಾನ ಸಭೆಯ ಅಧ್ಯಕ್ಷರು ನೇಮಿಸಿರುವ ಅಧಿಕೃತ ಸಮಿತಿಯು ಈ ಬಗ್ಗೆ ಮಾರ್ಗದರ್ಶಿ ನೀತಿ ನಿಯಮಗಳನ್ನು ರೂಪಿಸುವ ತನಕ ಶಾಸಕರ ವಿದೇಶ ಪ್ರವಾಸವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸೂಚಿಸಿದ್ದಾರೆ. ಪ್ರಾಯಶಃ ರಾಜ್ಯದ ಅನೇಕ ಭಾಗಗಳಲ್ಲಿ ತೀವ್ರ ಬರಗಾಲ ಬಾಧಿಸುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಶಾಸಕರು ವಿದೇಶಗಳಿಗೆ ತೆರಳಿ ಮೋಜುಮಸ್ತಿ ಮಾಡುವುದು ಸರಿಯಲ್ಲ ಎನ್ನುವ ಟೀಕೆಗೆ ಅವಕಾಶವನ್ನು ನೀಡದಿರಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಆದರೆ ಈ ಸದನ ಸಮಿತಿಗಳು ತಮ್ಮ ವಿದೇಶ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿವೆಯೇ ಹೊರತು ರದ್ದುಪಡಿಸಿಲ್ಲ. ಆದುದರಿಂದ ಇಂದಲ್ಲ ನಾಳೆ ವಿದೇಶ ಪ್ರವಾಸವನ್ನು ಕೈಗೊಳ್ಳುವುದರಲ್ಲಿ ಸಂದೇಹವಿಲ್ಲ!. 
.
ಅದೇರೀತಿಯಲ್ಲಿ ವಿಧಾನಸಭಾಧ್ಯಕ್ಷರು ತಾವು ನೇಮಿಸಿರುವ ಸಮಿತಿಯ ವರದಿ ಕೈಸೇರಿದ ಬಳಿಕ, ಅದರಲ್ಲಿನ ಶಿಫಾರಸುಗಳನ್ವಯ ಸದನ ಸಮಿತಿಗಳಿಗೆ ವಿದೇಶ ಪ್ರವಾಸಕ್ಕೆ ಅನುಮತಿಯನ್ನು ನೀಡುವುದಾಗಿ  ಹೇಳಿದ್ದಾರೆ. ಅರ್ಥಾತ್, ಶಾಸಕರ ವಿದೇಶ ಅಧ್ಯಯನ ಪ್ರವಾಸ ರದ್ದುಗೊಳ್ಳುವ ಸಾಧ್ಯತೆಗಳಿಲ್ಲ ಎನ್ನುವುದನ್ನು ಪರೋಕ್ಷವಾಗಿ ಸೂಚಿಸಿದ್ದಾರೆ.

ಬದಲಾಗಲಿರುವ ವ್ಯವಸ್ಥೆ 

ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿಯಂತೆ ರಾಜ್ಯದ ಶಾಸಕರು ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸವನ್ನು ಖಾಸಗಿ ಟ್ರಾವಲ್ ಏಜೆಂಟರ ಮೂಲಕ ನಿಗದಿಸಿಕೊಂಡು, ಮೋಜುಮಾಡುವುದಕ್ಕೆ ಬ್ರೇಕ್ ಹಾಕುವಂತಹ ಪ್ರಯತ್ನವೊಂದು ನಡೆದಿದೆ. 

ಶಾಸಕರು ಇನ್ನುಮುಂದೆ ಕೇಂದ್ರ ವಿದೇಶಾಂಗ ಸಚಿವಾಲಯದ ಮೂಲಕವೇ ವಿದೇಶ ಪ್ರವಾಸ ಕೈಗೊಳ್ಳಬೇಕು ಮತ್ತು ವಿದೇಶಗಳಲ್ಲಿ ಭೇಟಿನೀಡುವ ತಾಣಗಳನ್ನು ಆಯಾ ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳೇ ನಿರ್ಧರಿಸಬೇಕು. ಶಾಸಕರ ವಿದೇಶ ಪ್ರವಾಸದ ಮಾರ್ಗಸೂಚಿ ನಿಯಮಗಳನ್ನು ಸಿದ್ಧಪಡಿಸಲು ರಚಿಸಲಾದ ವಿಧಾನಮಂಡಲದ ಉಭಯ ಸದನಗಳ ಕಾರ್ಯದರ್ಶಿಗಳ ಸಮಿತಿಯು ಇಂತಹದ್ದೊಂದು ಶಿಫಾರಸು ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. 

ಶಾಸಕರು ಯಾವ ವಿಷಯದ ಮೇಲೆ ಯಾವ ದೇಶದಲ್ಲಿ ಅಧ್ಯಯನ ಮಾಡಲು ಪ್ರವಾಸ ಕೈಗೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ಮಾಹಿತಿ ನೀಡಬೇಕಾಗುತ್ತದೆ. ಬಳಿಕ ವಿದೇಶಾಂಗ ಸಚಿವಾಲಯವು ಶಾಸಕರು ಹೋಗಬಯಸುವ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಈ ಮಾಹಿತಿಯನ್ನು ರವಾನಿಸಿ, ಎಲ್ಲೆಲ್ಲಿ ಅಧ್ಯಯನವನ್ನು ನಡೆಸಬಹುದು ಎನ್ನುವುದರ ಬಗ್ಗೆ ಪಟ್ಟಿಯನ್ನು ಪಡೆದುಕೊಳ್ಳಬೇಕಾಗುವುದು. ಅಂತೆಯೇ ಅಲ್ಲಿನ ಸರಕಾರಕ್ಕೂ ವಿಷಯವನ್ನು ತಿಳಿಸಿ, ಶಾಸಕರನ್ನು ಸ್ವಾಗತಿಸಿ ಮಾಹಿತಿ ನೀಡುವ ವ್ಯವಸ್ಥೆ ಮಾಡಿಸುವುದು ಇದರ ಉದ್ದೇಶವೆಂದು ಹೇಳಲಾಗಿದೆ. 

ಈ ವಿಚಾರವು ನಿಜವಾಗಿದ್ದಲ್ಲಿ ನಮ್ಮ ಶಾಸಕರು ಇದನ್ನು ತೀವ್ರವಾಗಿ ವಿರೋಧಿಸುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಇಂತಹ ಅಧ್ಯಯನ ಪ್ರವಾಸದಲ್ಲಿ ಮೋಜು- ಮಸ್ತಿಗಳಿಗೆ ಅವಕಾಶ ದೊರೆಯುವ ಸಾಧ್ಯತೆಗಳೇ ಇಲ್ಲ!. ಆದರೂ ಜನಸಾಮಾನ್ಯರ ಅಭಿಪ್ರಾಯದಂತೆ ರಾಜ್ಯದ ಶಾಸಕರಿಗೆ ನೀಡಿರುವ " ಪುಕ್ಕಟೆ ವಿದೇಶ ಅಧ್ಯಯನ ಪ್ರವಾಸ" ದ ಸೌಲಭ್ಯವನ್ನು ರದ್ದುಪಡಿಸಲೇಬೇಕು. 

ಅಸ್ತಿತ್ವದಲ್ಲಿರುವ ನೀತಿನಿಯಮಗಳು  

ನಿಜ ಹೇಳಬೇಕಿದ್ದಲ್ಲಿ ಸದನ ಸಮಿತಿಗಳ ಸದಸ್ಯರಾಗಿರುವ ವಿಧಾನ ಸಭೆ ಮತ್ತ ವಿಧಾನ ಪರಿಷತ್ತುಗಳ ಶಾಸಕರು ಕೈಗೊಳ್ಳುವ ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಕೆಲವೊಂದು ನೀತಿ ನಿಯಮಗಳನ್ನು ೨೦೦೯ರ ಜೂನ್ ತಿಂಗಳಿನಲ್ಲೇ  ರೂಪಿಸಲಾಗಿತ್ತು. ಇದರ ಯಥಾಪ್ರತಿಯೊಂದು ನಮಗೆ ಮಾಹಿತಿ ಪಡೆಯುವ ಹಕ್ಕು ಕಾಯಿದೆ- ೨೦೦೫ ರನ್ವಯ ಇದೇ  ವರ್ಷದ ಆದಿಯಲ್ಲಿ ಲಭಿಸಿತ್ತು.ಈ ನೀತಿ ನಿಯಮಗಳು ಈ ಕೆಳಗಿನಂತಿವೆ.

ಪ್ರಸ್ತಾವನೆ:

೧೨ ನೆ ವಿಧಾನ ಸಭೆಯ ಅವಧಿಯಲ್ಲಿ ತಮ್ಮ ಐದು ವರ್ಷಗಳ ಅವಧಿಯಲ್ಲಿ ಸಮಿತಿಗಳು ಎರಡು ಬಾರಿ ಸ್ವದೇಶಿ ಅಧ್ಯಯನ ಪ್ರವಾಸ ಹಾಗೂ ಒಮ್ಮೆ ವಿದೇಶಿ ಅಧ್ಯಯನ ಪ್ರವಾಸ ಕೈಗೊಳ್ಳಲು ಅಂದಿನ ಮಾನ್ಯ ಸಭಾಧ್ಯಕ್ಷರು ಅನುಮತಿ ನೀಡಿದ್ದರು. ವಿಧಾನ ಮಂಡಲದ ಸಮಿತಿಗಳು ಒಂದುಬಾರಿ ವಿದೇಶ ಪ್ರವಾಸ ಹಾಗೂ ಮೂರು ಬಾರಿ ಸ್ವದೇಶಿ ಅಧ್ಯಯನ ಪ್ರವಾಸ ಕೈಗೊಳಲು ಅನುವು ಮಾಡಿಕೊಡಲು ಮಾನ್ಯ ಸಭಾಧ್ಯಕ್ಷರ ಸೂಚನೆಯಂತೆ ವಿಶೇಷ ಮಂಡಳಿಯ ಮುಂದೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಿ, ಸದರಿ ಪ್ರಸ್ತಾವನೆಗೆ ಮಾನ್ಯ ವಿಶೇಷ ಮಂಡಳಿಯು ಅನುಮೋದನೆ ನೀಡಿರುತ್ತದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ,ವಿಧಾನ ಮಂಡಲದ ವಿವಿಧ ಸಮಿತಿಗಳು ವಿದೇಶ ಪ್ರವಾಸ ಕೈಗೊಳ್ಳುವ ಸಂಬಂಧ ಈ ಕೆಳಕಂಡ ನಿಯಮಗಳನ್ನು ವಿಧಿಸಲಾಗಿದೆ.
. ಒಬ್ಬ ಸದಸ್ಯರು ಅವರ ಸದಸ್ಯತ್ವದ ಅವಧಿಯಲ್ಲಿ ಯಾವುದಾದರೂ ಒಂದು ಸಮಿತಿಯೊಂದಿಗೆಒಂದು ಬಾರಿ ಮಾತ್ರ ವಿದೇಶಿ ಪ್ರವಾಸ ಕೈಗೊಳ್ಳತಕ್ಕದ್ದು.
. ಒಬ್ಬ ಸದಸ್ಯರು ಒಂದು ಸಮಿತಿಯೊಂದಿಗೆ ವಿದೇಶಿ ಪ್ರವಾಸ ಕೈಗೊಂಡ ಪಕ್ಷದಲ್ಲಿ ಅವರು ಮುಂದಿನ ವರ್ಷಗಳಲ್ಲಿ ಬೇರೊಂದು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವಾಗ ಆ ಸಮಿತಿಯು ವಿದೇಶಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮತ್ತೊಮ್ಮೆ ಯಾವುದೇ ಸಮಿತಿಯೊಂದಿಗೆ ಎರಡನೇ ಬಾರಿ ವಿದೇಶಿ ಪ್ರವಾಸ ಕೈಗೊಳ್ಳಲು ಅವಕಾಶ ನೀಡುವಂತಿಲ್ಲ.
. ಸಮಿತಿಯು ದೂರದ ದೇಶಕ್ಕೆ ವಿದೇಶಿ ಪ್ರವಾಸ ನಿಗದಿಗೊಳಿಸಿದ ಸಂದರ್ಭದಲ್ಲಿ ಮಾರ್ಗದ ಮಧ್ಯೆ ಇರುವ ದೇಶಗಳಿಗೆ ಮಾತ್ರ ಭೇಟಿ ನೀಡತಕ್ಕದ್ದು.
. ವಿದೇಶಿ ಅಧ್ಯಯನ ಪ್ರವಾಸವನ್ನು ಪ್ರಯಾಣದ ದಿನಗಳನ್ನು ಹೊರತುಪಡಿಸಿ ಒಟ್ಟು ೧೫ ದಿನಗಳು ಮೀರದಂತೆ ಕೈಗೊಳ್ಳತಕ್ಕದ್ದು.
. ವಿದೇಶ ಪ್ರವಾಸ ಕೈಗೊಳ್ಳುವ ಸದಸ್ಯರು ಹಾಗೂ ಅಧಿಕಾರಿಗಳ ಖರ್ಚು ವೆಚ್ಚವನ್ನು ( ಪ್ರಯಾಣ - ದಿನ ಭತ್ಯೆ ಸೇರಿದಂತೆ) ಸರ್ಕಾರಿ ಆದೇಶ ಸಂಖ್ಯೆ: ಎಫ್ ಡಿ ೯ ಎಸ್ ಆರ್ ಎ ೨೦೦೦ದಿನಾಂಕ ೨೦-೧೧-೨೦೦೩ ರನ್ವಯ ನಿಯಂತ್ರಣಗೊಳಿಸತಕ್ಕದ್ದು.
. ಅಧ್ಯಯನ ಪ್ರವಾಸ ಕೈಗೊಳ್ಳುವ ಸದಸ್ಯರು/ ಅಧಿಕಾರಿಗಳು ಎಕಾನಮಿ ದರ್ಜೆಯಲ್ಲಿ ಮಾತ್ರ ಪ್ರಯಾಣ ಕೈಗೊಳ್ಳತಕ್ಕದ್ದು.
.ಅಂತಿಮ ಪ್ರಯಾಣದ ಬಿಲ್ಲನ್ನು ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಅಂದರೆ ವಿಮಾನಯಾನಕ್ಕೆ ಸಂಬಂಧಪಟ್ಟ ಬಿಲ್ಲುಗಳು, ಬೋರ್ಡಿಂಗ್ ಪಾಸ್,ಹೋಗುವ  ಹೋಟೆಲ್ ರೆಂಟಲ್ ರಸೀದಿಯನ್ನು ಕಡ್ಡಾಯವಾಗಿ ಸಲ್ಲಿಸಲು ಹಾಗೂ ಮೇಲೆ ತಿಳಿಸಿದ ಆದೇಶದನ್ವಯ ಅವರ ಪ್ರಯಾಣ ಭತ್ಯೆಯನ್ನು ಪಡೆಯತಕ್ಕದ್ದು.
. ವಿದೇಶಿ ಅಧ್ಯಯನ ಪ್ರವಾಸ ಕೈಗೊಳ್ಳುವ ಸಮಿತಿಯೊಂದಿಗೆ ಪ್ರಯಾಣ ಮಾಡುವ ಅಧಿಕಾರಿ/ನೌಕರರ ( ವರದಿಗಾರರು ಸೇರಿದಂತೆ) ಸಂಖ್ಯೆಯನ್ನು ಮೂರಕ್ಕೆ ಮಿತಿಗೊಳಿಸತಕ್ಕದ್ದು.
. ಸಚಿವಾಲಯದ ಅಧಿಕಾರಿಗಳು ಯಾವುದೇ ಒಂದಕ್ಕಿಂತ ಹೆಚ್ಚಿನ ಸಮಿತಿಗಳಲ್ಲಿ ಇದ್ದ ಪಕ್ಷದಲ್ಲಿ ವಿಧಾನ ಸಭೆಯ ಒಂದು ಅವಧಿಯಲ್ಲಿ ಯಾವುದಾದರೂ ಒಂದು ಸಮಿತ್ಯೊಂದಿಗೆ ಒಮ್ಮೆ ಮಾತ್ರ ಪ್ರವಾಸ ಕೈಗೊಳ್ಳತಕ್ಕದ್ದು.
೧೦. ವಿದೇಶಿ ಅಧ್ಯಯನ ಪ್ರವಾಸ ಕೈಗೊಂಡ ಸಮಿತಿಗೆ ಪ್ರವಾಸದ ನಂತರ ಪ್ರವಾಸಕ್ಕೆ ಸಂಬಂಧಪಟ್ಟ ಸಂಕ್ಷಿಪ್ತ ವರದಿಯನ್ನು ಮಾನ್ಯ ಸಭಾಪತಿಯವರು/ ಮಾನ್ಯ ಸಭಾಧ್ಯಕ್ಷರಿಗೆ ಸಲ್ಲಿಸತಕ್ಕದ್ದು.
೧೧. ವಿದೇಶಿ ಅಧ್ಯಯನ ಪ್ರವಾಸಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಪಟ್ಟಿಗೆ ಸನ್ಮಾನ್ಯಸಭಾಪತಿಯವರ/  ಸಭಾಧ್ಯಕ್ಷರ ಅನುಮೋದನೆ ಪಡೆಯತಕ್ಕದ್ದು.

೨೦೦೯ ರಲ್ಲಿ ರೂಪಿತಗೊಂಡಿದ್ದ ನಿಯಮಗಳಿದ್ದರೂಇದೀಗ ಮಾನ್ಯ ಸಭಾಧ್ಯಕ್ಷರು ಮತ್ತೆ ಹೊಸದಾಗಿ ಮಾರ್ಗದರ್ಶಿ ನೀತಿ ನಿಯಮಗಳನ್ನು ರೂಪಿಸಲು ಸಮಿತಿಯೊಂದನ್ನು ನೇಮಿಸಿರುವುದು ಏಕೆಂದು ಅರಿತುಕೊಳ್ಳುವ ಹಕ್ಕು ರಾಜ್ಯದ ಪ್ರಜೆಗಳಿಗೆ ಇದೆ. ತಾವು ತೆತ್ತಿರುವ ತೆರಿಗೆಯ ಹಣವನ್ನುತಾವೇ ಆಯ್ಕೆಮಾಡಿರುವ ಶಾಸಕರು ವಿದೇಶಿ ಅಧ್ಯಯನ ಪ್ರವಾಸದ ನೆಪದಲ್ಲಿ ಮೋಜು- ಮಸ್ತಿಗಳಿಗಾಗಿ ವ್ಯಯಿಸುವುದನ್ನು ನಿಲ್ಲಿಸುವಂತೆ ಸೂಚಿಸುವ ಹಕ್ಕು ಕೂಡಾ ರಾಜ್ಯದ ಪ್ರಜೆಗಳಿಗೆ ನಿಶ್ಚಿತವಾಗಿಯೂ ಇದೆ. ಆದರೆ ಒಂದುಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾದ ಬಳಿಕ ಮತದಾರರ ಸಲಹೆ ಸೂಚನೆಗಳನ್ನು ಮನ್ನಿಸಲು ಸಿದ್ಧರಿಲ್ಲದ ನಮ್ಮ ನೇತಾರರು, ತಮ್ಮ ಇಚ್ಛೆಯಂತೆ ನಡೆದುಕೊಳ್ಳುವುದು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ.ಉದಾಹರಣೆಗೆ ಕರ್ನಾಟಕ ವಿಧಾನಮಂಡಲದ ೧೫ ಸದನ ಸಮಿತಿಗಳಲ್ಲಿ, ಬಿ. ಜೆ. ಪಿ ಸರ್ಕಾರದ ಅಧಿಕಾರಾವಧಿಯಲ್ಲಿ ೧೨ ಸದನ ಸಮಿತಿಗಳು ವಿದೇಶ ಪ್ರವಾಸವನ್ನು ಕೈಗೊಂಡಿದ್ದವು. ಆದರೆ ಇವುಗಳಲ್ಲಿ ಮೂರು ಸಮಿತಿಗಳು ತಾವು ನಡೆಸಿದ್ದ " ಅಧ್ಯಯನ" ದ ವರದಿಗಳನ್ನೇ ಸಭಾಧ್ಯಕ್ಷರಿಗೆ ಸಲ್ಲಿಸಿರಲಿಲ್ಲ!. ಇನ್ನುಳಿದ ೯ ಸಮಿತಿಗಳು ಸಲ್ಲಿಸಿದ್ದ ವರದಿಗಳನ್ನು ಸಭಾಧ್ಯಕ್ಷರು ಪರಿಶೀಲಿಸಿರಲಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಶಾಸಕರ ವಸತಿ ಸೌಕರ್ಯಗಳ ಸಮಿತಿ, ವಿಧಾನಸಭೆಯ ಅರ್ಜಿಗಳ ಸಮಿತಿ, ಗ್ರಂಥಾಲಯಗಳ ಸಮಿತಿ ಮತ್ತು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಗಳು ತಲಾ ಎರಡುಬಾರಿ ವಿದೇಶ ಪ್ರವಾಸಕ್ಕೆ ತೆರಳಿದ್ದವು!. 

ಅದೇ ರೀತಿಯಲ್ಲಿ ವಿವಿಧ ಸದನ ಸಮಿತಿಗಳ ಕರ್ತವ್ಯ ಮತ್ತು ಹೊಣೆಗಾರಿಕೆಗಳಿಗೆ ಮತ್ತು ವಿದೇಶ ಪ್ರವಾಸಗಳಿಗೆ ಏನೇನೂ ಸಂಬಂಧವಿಲ್ಲ. ಉದಾಹರಣೆಗೆ ಶಾಸಕರ ವಸತಿ ಸೌಕರ್ಯಗಳ ಸಮಿತಿ ಅಥವಾ ಗ್ರಂಥಾಲಯಗಳ ಸಮಿತಿಗಳ ಸದಸ್ಯರು ಅಥವಾ ಇತರ ಯಾವುದೇ ಸಮಿತಿಗಳು ವಿದೇಶಗಳಲ್ಲಿ ,ಅದರಲ್ಲೂ ಸುಪ್ರಸಿದ್ಧ ಪ್ರವಾಸಿ ತಾಣಗಳನ್ನು ಸಂದರ್ಶಿಸಿ ಏನನ್ನು ಅಧ್ಯಯನ ಮಾಡುತ್ತಾರೆ ಹಾಗೂ ಇವುಗಳಿಗೆ ಮತ್ತು ಈ ಸಮಿತಿಗಳ ಕರ್ತವ್ಯ ಹಾಗೂ ಹೊಣೆಗಾರಿಕೆಗಳಿಗೆ ಇರುವ ಸಂಬಂಧವಾದರೂ ಏನು?, ಇಂತಹ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. 

ಅದೇನೇ ಇರಲಿ, ರಾಜಕಾರಣಿಗಳ ಹಲವಾರು ಹಗರಣಗಳನ್ನು ಬಯಲಿಗೆಳೆಯಲು ಮತ್ತು ಇಂತಹವರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ಹೂಡುವ ಪ್ರಜ್ಞಾವಂತ ನಾಗರಿಕರು, ನಮ್ಮ ಶಾಸಕರ ಸ್ವದೇಶಿ ಮತ್ತು ವಿದೇಶಿ ಪುಕ್ಕಟೆ  ಪ್ರವಾಸ ಭಾಗ್ಯವನ್ನು  ರದ್ದುಗೊಳಿಸುವಂತೆ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡುವರೇ ಎಂದು ಕಾದುನೋಡೋಣ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 















Saturday, May 10, 2014

BIRD FLU


  " ಪಕ್ಷಿಜ್ವರ" ದಿಂದ ರಕ್ಷಣೆ ಇಹುದೇ ?

೨೦೦೩ ರಲ್ಲಿ ಏಶಿಯಾ ಖಂಡದಲ್ಲಿ ಉದ್ಭವಿಸಿ, ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದ್ದ " ಸಾರ್ಸ್" ವ್ಯಾಧಿಯ ಹಾವಳಿ ಕಡಿಮೆಯಾಯಿತೆಂದು ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಂತೆಯೇ, ಇದೀಗ ( ೨೦೦೪ ರಲ್ಲಿ) ಹೆಡೆ ಎತ್ತಿರುವ " ಪಕ್ಷಿಜ್ವರ" ವು ಮನುಕುಲಕ್ಕೆ ಮಾರಕ ಎನಿಸಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈಗಾಗಲೇ ಹತ್ತಕ್ಕೂ ಹೆಚ್ಚು ರೋಗಿಗಳನ್ನು ಬಲಿಪಡೆದಿರುವ ಈ ಕಾಯಿಲೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
---------------                 -----------------             -------------------                  -------------------             -----------------

ಏನಿದು ಪಕ್ಷಿಜ್ವರ ? 

ಕಳೆದ ಶತಮಾನದಲ್ಲಿ ಹಲವಾರು ಬಾರಿ ಸಾಂಕ್ರಾಮಿಕವಾಗಿ ಹಬ್ಬಿ, ಪಕ್ಷಿಸಂಕುಲವನ್ನು ಪೀಡಿಸಿದ್ದ ಇನ್ಫ್ಲುಯೆಂಜಾ ಜ್ವರಕ್ಕೆ ಕಾರಣವೆನಿಸಿದ್ದ ವೈರಸ್ ಗಳಲ್ಲಿ ಸುಮಾರು ೧೫ ಪ್ರಭೇದಗಳಿವೆ. ಅನೇಕ ವರ್ಷಗಳಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಪತ್ತೆಯಾಗಿದ್ದ ಪಕ್ಷಿಜ್ವರವು, ಕಳೆದ ಶತಮಾನದ ಅಂತ್ಯದ ತನಕ ಕೇವಲ ಪಕ್ಷಿಗಳಿಂದ ಪಕ್ಷಿಗಳಿಗೆ ಮಾತ್ರ ಹರಡುತ್ತಿತ್ತು. ಇತರ ಯಾವುದೇ ರೋಗಾಣುಗಳಂತೆಯೇ ಈ ವೈರಸ್ ಗಳಲ್ಲಿನ ವಂಶವಾಹಿನಿಗಳು, ಕಾಲಕ್ರಮೇಣ ಪರಿವರ್ತನೆಗೊಂಡು ಇದೀಗ ಪಕ್ಷಿಗಳಿಂದ ಮನುಷ್ಯರಿಗೆ ಹರಡುವ ಸಾಮರ್ಥ್ಯವನ್ನು ಗಳಿಸಿವೆ. 

ಸಾಮಾನ್ಯವಾಗಿ ಮೊಟ್ಟೆ ಮತ್ತು ಮಾಂಸಗಳಿಗಾಗಿ ಬೆಳೆಸುವ ಕೋಳಿ ಹಾಗೂ ಬಾತುಕೋಳಿಗಳಿಗೆ ಈ ಸೋಂಕು ತಗಲಿದಲ್ಲಿ, ಇದರ ವೈರಸ್ ಗಳು ಕಾಡ್ಗಿಚ್ಚಿನಂತೆ ಹರಡುತ್ತವೆ. ಅತ್ಯಲ್ಪ ಸಮಯದಲ್ಲಿ ರೋಗಪೀಡಿತ ಕೋಳಿಗಳು ಸಾಮೂಹಿಕವಾಗಿ ಸಾಯಲಾರಂಭಿಸುತ್ತವೆ. ಪ್ರಸ್ತುತ ಈ ವ್ಯಾಧಿ ಪತ್ತೆಯಾಗಿರುವ ದೇಶಗಳ ಸರ್ಕಾರಗಳು ಈ ವೈರಸ್ ಪತ್ತೆಯಾಗಿರುವ ಪ್ರಾಂತ್ಯಗಳಲ್ಲಿನ ಎಲ್ಲ ಕೋಳಿ ಮತ್ತು ಬಾತುಕೋಳಿಗಳನ್ನು ಸಂಹರಿಸಲು ಆದೇಶಿಸಿವೆ. ಏಕೆಂದರೆ ಲಕ್ಷಾಂತರ ಕೋಳಿಗಳಿಗೆ ಈ ವೈರಸ್ ಹರಡಿದಲ್ಲಿ, ಅಷ್ಟೇ ಪ್ರಮಾಣದಲ್ಲಿ ಇವುಗಳ ಸಂಪರ್ಕವಿರುವ ಅಪಾರ ಸಂಖ್ಯೆಯ ಮನುಷ್ಯರಿಗೆ ಈ ವ್ಯಾಧಿ ಹರಡುವ ಸಾಧ್ಯತೆಗಳು ಇನ್ನಷ್ಟು ಹೆಚ್ಚುತ್ತವೆ. 

ಆತಂಕಕಾರಿ ಬೆಳವಣಿಗೆ 

೧೯೯೭ ರಲ್ಲಿ ಹಾಂಗ್ ಕಾಂಗ್ ನಲ್ಲಿ ಪತ್ತೆಯಾಗಿದ್ದ ಪಕ್ಷಿಜ್ವರದ ವೈರಸ್ ಗಳಲ್ಲಿಯೇ ಅತ್ಯಂತ ಪ್ರಬಲ ಹಾಗೂ ಮಾರಕವೆನಿಸಿರುವ ಎಚ್ ೫ ಏನ್ ೧ ಎನ್ನುವ ತಳಿಯು, ಇದೀಗ ವಿಯೆಟ್ನಾಂ ಮತ್ತು ಥಾಯ್ಲೆಂಡ್ ದೇಶಗಳಲ್ಲಿ ಹತ್ತಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. ಈ ವೈರಸ್ ಣ ೧೫ ಪ್ರಭೇದಗಳಲ್ಲಿ ಎಚ್ ೭ ಎನ೧ ಹಾಗೂ ಎಚ್ ೯ ಎನ೧ ಎನ್ನುವ ಎರಡು ತಳಿಗಳು ತುಸು ಶಕ್ತಿಯುತ ಎನಿಸಿದರೂ, ಇದುವರೆಗೆ ಈ ತಳಿಗಳು ಪಕ್ಷಿಗಳಿಂದ ಮನುಷ್ಯರಿಗೆ ಹರಡಿಲ್ಲ. 

ಇದಕ್ಕೂ ಮುನ್ನ ಸಾಮಾನ್ಯವಾಗಿ ಪಕ್ಷಿಗಳಿಂದ ಪಕ್ಷಿಗಳಿಗೆ ಹರಡುತ್ತಿದ್ದ ಈ ವೈರಸ್, ಕಾಲಕ್ರಮೇಣ ಫಾರ್ಮ್ ಗಳಲ್ಲಿ ಕೋಳಿಗಳೊಂದಿಗೆ ಸಾಕಿದ್ದ ಹಂದಿಗಳಿಗೆ ಹರಡಿ, ತನ್ಮೂಲಕ ಮನುಷ್ಯರಿಗೆ ಹರಡಲಾರಂಭಿಸಿತು. 

ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಗೆ ಕಳವಳ ಮೂಡಿಸಿರುವ ಅತ್ಯಂತ ಗಂಭೀರ ಹಾಗೂ ಮಾರಕವೆನಿಸಬಲ್ಲ ಸಂಭಾವ್ಯ ಸಮಸ್ಯೆಯು ಇಂತಿದೆ. ಆಕಸ್ಮಿಕವಾಗಿ ಮನುಷ್ಯನಲ್ಲಿ ಕಂಡುಬರುವ ಇನ್ಫ್ಲುಯೆಂಜಾ ವೈರಸ್ ಮತ್ತು ಪಕ್ಷಿಗಳನ್ನು ಪೀಡಿಸುವ ಇನ್ಫ್ಲುಯೆಂಜಾ ವೈರಸ್ ಗಳೆರಡೂ, ಏಕಕಾಲದಲ್ಲಿ ಒಬ್ಬ ವ್ಯಕ್ತಿಯ ಶರೀರದಲ್ಲಿ ಪ್ರವೇಶ ಗಳಿಸಿದಲ್ಲಿ, ಇವೆರಡೂ ವೈರಸ್ ಗಳು ತಮ್ಮ ವಂಶವಾಹಿನಿಗಳನ್ನು ವಿನಿಮಯಿಸಿಕೊಳ್ಳುವ ಸಾಧ್ಯತೆಗಳಿವೆ. ತತ್ಪರಿಣಾಮವಾಗಿ ಉದ್ಭವಿಸಬಲ್ಲ ನೂತನ ತಳಿಗಳು ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಮರ್ಥ್ಯವನ್ನು ಗಳಿಸಿಕೊಂಡಲ್ಲಿ, ಈ ವ್ಯಾಧಿಯು ಮನುಕುಲಕ್ಕೆ ಮಾರಕವೆನಿಸುವುದರಲ್ಲಿ ಸಂದೇಹವಿಲ್ಲ. ಜನಸಾಮಾನ್ಯರ ಕಲ್ಪನೆಗೂ ಮೀರಿದ ಇಂತಹ ಸಾಧ್ಯತೆಗಳು ನಿಜವಾದಲ್ಲಿ, ಈ ವೈರಸ್ ಲಕ್ಷಾಂತರ ಜನರ ಪ್ರಾಣಕ್ಕೆ ಎರವಾಗುವುದರಲ್ಲಿ ಸಂದೇಹವಿಲ್ಲ. 

ಹಲವಾರು ದೇಶಗಳಲ್ಲಿ ಇದೀಗ ಏಕಕಾಲದಲ್ಲಿ ಉದ್ಭವಿಸಿದ ಈ ಪಕ್ಷಿಜ್ವರವು, ಹಿಂದೆಂದೂ ಈ ರೀತಿಯಲ್ಲಿ ವ್ಯಾಪಕವಾಗಿ ಪತ್ತೆಯಾಗಿರಲೇ ಇಲ್ಲ. ಪ್ರಾಯಶಃ ಕೋಳಿ ಸಾಕಣಾ ಕೇಂದ್ರಗಳಿಗೆ ಲಗ್ಗೆಯಿಡುವ ಗಿಡುಗಗಳಂತಹ ಹಾಗೂ ದೇಶದಿಂದ ದೇಶಕ್ಕೆ ವಲಸೆ ಹೋಗುವ ಪಕ್ಷಿಗಳಿಂದಾಗಿ  ಈ ವ್ಯಾಧಿಯು ಹಲವಾರು ದೇಶಗಳಿಗೆ ಹರಡಿರುವ ಸಾಧ್ಯತೆಗಳಿವೆ. ಹಾಂಗ್ ಕಾಂಗ್ ನಲ್ಲಿ ಪತ್ತೆಯಾಗಿದ್ದ ಸತ್ತ ಗಿಡುಗನ ದೇಹದಲ್ಲಿ ಈ ವೈರಸ್ ಪತ್ತೆಯಾಗಿರುವುದು ಇಂತಹ ಸಾಧ್ಯತೆಗಳನ್ನು ಪುಷ್ಟೀಕರಿಸುತ್ತದೆ. ಹಾಗೂ ಇದೇ  ಕಾರಣದಿಂದಾಗಿ ಪಕ್ಷಿಜ್ವರವನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಅಸಾಧ್ಯವೆನಿಸಬಲ್ಲದು. 

ಈಗಾಗಲೇ ವಿಯೆಟ್ನಾಂ, ಥಾಯ್ಲೆಂಡ್, ಜಪಾನ್, ದಕ್ಷಿಣ ಕೊರಿಯ, ಕಾಂಬೋಡಿಯ, ಇಂಡೋನೇಶಿಯ, ಚೀನಾ, ತೈವಾನ್, ಲಾವೋಸ್ ಮತ್ತು ನಮ್ಮ ನೆರೆಯ ಪಾಕಿಸ್ತಾನಗಳಲ್ಲಿ ಈ ವ್ಯಾಧಿ ವ್ಯಾಪಕವಾಗಿ ಹರಡಿದೆ. ಆದರೆ ಪಾಕಿಸ್ತಾನದಲ್ಲಿ ಪತ್ತೆಯಾದ ಈ ವೈರಸ್ ನ ಎಚ್ ೭ ಎನ್ ೧ ಹಾಗೂ ಎಚ್ ೯ ಎನ್ ೧ ತಳಿಗಳು ಇದುವರೆಗೆ ಪಕ್ಷಿಗಳಿಂದ ಪಕ್ಷಿಗಳಿಗೆ ಹರಡುವುದೇ ಹೊರತು, ಪಕ್ಷಿಗಳಿಂದ ಮನುಷ್ಯರಿಗೆ ಹರಡಿಲ್ಲ ಎನ್ನುವುದೇ ಸಮಾಧಾನದ ವಿಷಯ.

ಮನುಷ್ಯನಿಂದ ಮನುಷ್ಯನಿಗೆ ?

ಈ ಲೇಖನವನ್ನು ಬರೆಯುತ್ತಿರುವ ಸಂದರ್ಭದಲ್ಲಿ ಲಭಿಸಿದ ಮಾಹಿತಿಯಂತೆ ವಿಯೆಟ್ನಾಂ ದೇಶದ ಇಬ್ಬರು ಸೋದರಿಯರು, ತಮ್ಮ ರೋಗಪೀಡಿತ ಸೋದರನ ಸಂಪರ್ಕದಿಂದ ರೋಗಪೀಡಿತರಾಗಿ  ಸಾವನ್ನಪ್ಪಿದ್ದಾರೆ. ಇದು ನಿಜವಾಗಿದ್ದಲ್ಲಿ ಈ ಬಾರಿ ಉದ್ಭವಿಸದ ಪಕ್ಷಿಜ್ವರ ಮನುಷ್ಯನಿಂದ ಮನುಷ್ಯನಿಗೆ ಹರಡಿದ ಮೊದಲ ಘಟನೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ೧೯೯೭ ರಲ್ಲಿ ಹಾಂಗ್ ಕಾಂಗ್ ನಲ್ಲಿ ಅಲ್ಪ ಪ್ರಮಾಣದ ರೋಗಿಗಳಲ್ಲಿ ಪಕ್ಷಿಜ್ವರವು ಮನುಷ್ಯನಿಂದ ಮನುಷ್ಯನಿಗೆ ಹರಡಿದ್ದರೂ, ಸಾಂಕ್ರಾಮಿಕ ರೂಪವನ್ನು ತಳೆದಿರಲಿಲ್ಲ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ರೀತಿಯ ಪರಸ್ಪರ ದ್ವಂದಾರ್ಥದ ಹೇಳಿಕೆಗಳು ಜನರಲ್ಲಿ ಆತಂಕವನ್ನು ಮೂಡಿಸುತ್ತವೆ. 

ರೋಗಲಕ್ಷಣಗಳು 

ಮನುಷ್ಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಇನ್ಫ್ಲುಯೆಂಜಾ ಜ್ವರದ ಲಕ್ಷಣಗಳಾದ ಜ್ವರ, ತಲೆನೋವು, ಮೈಕೈ ನೋವು, ಒಣಕೆಮ್ಮು, ಮೂಗು ಮತ್ತು ಶ್ವಾಸನಾಳಗಳಲ್ಲಿ ಕೆರೆತ, ಕಣ್ಣಿನ ರೆಪ್ಪೆಯ ಉರಿಯೂತಗಳೊಂದಿಗೆ ಕೆಲವೊಂದು ರೋಗಿಗಳಲ್ಲಿ ತೀವ್ರ ಜ್ವರ ಮತ್ತು ಚಳಿಗಳು ಪಕ್ಷಿಜ್ವರ ಪೀಡಿತ ವ್ಯಕ್ತಿಗಳಲ್ಲಿ ಕಂಡುಬರಬಹುದು. 

ಕಾಯಿಲೆ ಉಲ್ಬಣಿಸಿದಲ್ಲಿ ನ್ಯುಮೋನಿಯ, ಶ್ವಾಸೋಚ್ಚ್ವಾಸದ ತೊಂದರೆಗಳು, ವಾಂತಿ ಮತ್ತು ತೀವ್ರ ಚಳಿಜ್ವರಗಳಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹೃದಯದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ " ಟಾಕ್ಸಿಕ್ ಕಾರ್ಡಿಯಾಕ್ ಮಯೋಪತಿ" ಯಿಂದ ಮರಣ ಸಂಭವಿಸಬಹುದು. ಇದಲ್ಲದೇ ಮೆದುಳಿನ ಉರಿಯೂತ ಮತ್ತಿತರ ಗಂಭೀರ - ಮಾರಕ ಸಮಸ್ಯೆಗಳೂ ಬಾಧಿಸುವ ಸಾಧ್ಯತೆಗಳಿವೆ. ಇದುವರೆಗೆ ಪಕ್ಷಿಜ್ವರದಿಂದ ಮೃತಪಟ್ಟ ವ್ಯಕ್ತಿಗಳಲ್ಲಿ ಹೆಚ್ಚಿನವರು ಎಳೆಯ ವಯಸ್ಸಿನವರು ಮತ್ತು ವೃದ್ಧರಾಗಿರಲು ಕಾರಣವೇನೆಂದು ತಿಳಿದುಬಂದಿಲ್ಲ. 

ಚಿಕಿತ್ಸೆ 

ಈ ವೈರಸ್ ನ್ನು ನಾಶಪಡಿಸಬಲ್ಲ ಅಥವಾ ನಿಯಂತ್ರಣದಲ್ಲಿ ಇರಿಸಬಲ್ಲ ನಿರ್ದಿಷ್ಟ ಔಷದಗಳನ್ನು ಇದುವರೆಗೆ ಸಂಶೋಧಿಸಿಲ್ಲ. ರೋಗಿಯ ರೋಗಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ಔಷದಗಳನ್ನು ನೀಡಬೇಕಾಗುತ್ತದೆ. ರೋಗಿಗೆ ಸಂಪೂರ್ಣ ವಿಶ್ರಾಂತಿಯನ್ನು ನೀಡುವುದರೊಂದಿಗೆ ಆತನನ್ನು ಪ್ರತ್ಯೆಕವಾಗಿರಿಸಿ, ರೋಗ ಇತರರಿಗೆ ಹರಡುವ ಸಾಧ್ಯತೆಗಳನ್ನು ನಿವಾರಿಸುವುದು ಪ್ರಾಥಮಿಕ ಅವಶ್ಯಕತೆಯೂ ಹೌದು. 

ವಿಶ್ವ ಆರೋಗ್ಯ ಸಂಸ್ಥೆಯು ವೈರಸ್ ನ್ನು ತಡೆಗಟ್ಟಬಲ್ಲ ಲಸಿಕೆಯನ್ನು ಸಂಶೋಧನೆಗೆ ಆದ್ಯತೆ ನೀಡಿದೆ. ಆದರೆ ಲಸಿಕೆಯ ಸಂಶೋಧನೆ ಮತ್ತು ತದನಂತರ ಇದರ ಸಾಧಕ- ಬಾಧಕಗಳ ಹಾಗೂ ಸಾಮರ್ಥ್ಯದ ಬಗ್ಗೆ ನಡೆಸಲೆಬೇಕಾದ ಅಧ್ಯಯನಗಳಿಗೆ ಸಾಕಷ್ಟು ಸಮಯ ತಗಲುವುದು ಅನಿವಾರ್ಯ. 

ಏಕಮಾತ್ರ ಪರಿಹಾರ 

ಪಕ್ಷಿಗಳು, ಅದರಲ್ಲೂ ವಿಶೇಷವಾಗಿ ಕೋಳಿಗಳು ಸಾಮೂಹಿಕವಾಗಿ ಸಾಯಲು ಆರಂಭಿಸಿದಲ್ಲಿ " ಪಕ್ಷಿಜ್ವರ" ವೆಂದು ಸಂದೇಹಿಸಬೇಕಾಗುತ್ತದೆ. ಸತ್ತ ಕೋಳಿಗಳ ಶರೀರದಲ್ಲಿ ಈ ವೈರಸ್ ಗಳ ಇರುವಿಕೆಯನ್ನು ಖಚಿತಪಡಿಸಿಕೊಂಡು, ಫಾರ್ಮ್ ಗಳಲ್ಲಿರುವ ಎಲ್ಲಾ ಕೋಳಿ ಹಾಗೂ ಹಂದಿಗಳನ್ನು ಸಂಹರಿಸಿ ಸುಟ್ಟುಹಾಕಬೇಕಾಗುವುದು. ರೋಗಪೀಡಿತ ಪಕ್ಷಿಗಳ ನಾಸಿಕಸ್ರಾವ ಮತ್ತು ಮಲಗಳ ಮೂಲಕ ಈ ವೈರಸ್ ಸುಲಭವಾಗಿ ಹರಡುತ್ತವೆ. ಈ ವಿಸರ್ಜಿತ ಮಲವು ಮಣ್ಣಿನಲ್ಲಿ ಬೆರೆತು, ಧೂಳಿನ ಕಣಗಳೊಂದಿಗೆ ಗಾಳಿಯ ಮೂಲಕ ಹರಡುವುದರಿಂದ, ಈ ವೈರಸ್ ಗಳು ಇನ್ನಷ್ಟು ವ್ಯಾಪಕವಾಗಿ ಹರಡಲು ಉಪಯುಕ್ತವೆನಿಸುತ್ತದೆ. ಫಾರ್ಮ್ ನ ಉದ್ಯೋಗಿಗಳು ಹಾಗೂ ರೋಗಪೀಡಿತ ಕೋಳಿಗಳನ್ನು ಸಂಹರಿಸುವ ಕೆಲಸಗಾರರು ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. 

ಭಕ್ಷಣೆಯಿಂದ ರೋಗ ಬಾಧಿಸದು 

ಮಾಂಸಾಹಾರ ಪ್ರಿಯರಿಗೆ ಚಿಂತೆಗೆ ಕಾರಣವೆನಿಸಿರುವ ಪಕ್ಷಿಜ್ವರದ ವೈರಸ್, ಲಭ್ಯ ಮಾಹಿತಿಯಂತೆ ರೋಗಪೀಡಿತ ಕೋಳಿಯ ಮಾಂಸದ ಭಕ್ಷಣೆಯಿಂದ ನಿಮ್ಮನ್ನು ಪೀಡಿಸಲಾರದು. ಆದರೆ ಹಸಿ ಮೊಟ್ಟೆ ಅಥವಾ ಹಸಿ ಮಾಂಸವನ್ನು ಅಡುಗೆಗಾಗಿ ಸಿದ್ಧಪಡಿಸುವವರು, ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ. 

ರೆಫ್ರಿಜೆರೇಟರ್ ಅಥವಾ ಫ್ರೀಜರ್ ನಲ್ಲಿ ಮಾಂಸವನ್ನು ಶೇಖರಿಸಿ ಇಡುವುದರಿಂದ ಈ ವೈರಸ್ ನ ರೋಗಕಾರಕತೆ ಹಾಗೂ ತೀವ್ರತೆಗಳು ಕಡಿಮೆಯಾಗದು. ಆದರೆ ೭೦ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಇದನ್ನು ಬೇಯಿಸಿ ತಯಾರಿಸಿದ ಖಾದ್ಯಗಳಲ್ಲಿ ಈ ವೈರಸ್ ಗಳು ಬದುಕಿರುವ ಸಾಧ್ಯತೆಗಳು ಇಲ್ಲವೆಂದೇ ಹೇಳಬಹುದಾಗಿದೆ. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೫-೦೨೨-೨೦೦೪ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


Thursday, May 8, 2014

ULB's fail to collect property tax !





 ಆಸ್ತಿತೆರಿಗೆಯನ್ನು ಸಂಗ್ರಹಿಸದ ಸ್ಥಳೀಯ ಸಂಸ್ಥೆಗಳು !

ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ಸ್ವಂತ ಆದಾಯದ ಮೂಲಗಳಲ್ಲಿ ಸ್ವಯಂಘೋಷಿತ ಆಸ್ತಿತೆರಿಗೆಯು ಅಗ್ರಸ್ಥಾನದಲ್ಲಿದೆ.ಆದರೆ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಸೊರಗಿರುವ ಸ್ಥಳೀಯಸಂಸ್ಥೆಗಳು, ಶೇ.೩೧ ರಷ್ಟು ಆಸ್ತಿಗಳ ತೆರಿಗೆಯನ್ನೇ ಸಂಗ್ರಹಿಸುತ್ತಿಲ್ಲ ಎಂದಲ್ಲಿ ನೀವೂ ನಂಬಲಾರಿರಿ.ಈ ವಿಲಕ್ಷಣ ಸಮಸ್ಯೆಗೆ ಸ್ಥಳೀಯಸಂಸ್ಥೆಗಳ ಸಿಬಂದಿಗಳ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ರಾಜಕಾರಣಿಗಳ ಹಸ್ತಕ್ಷೇಪಗಳೇ ಕಾರಣವೆನಿಸಿವೆ. ಈ ಸಮಸ್ಯೆಗೆ ಬುದ್ಧಿವಂತರ ಜಿಲ್ಲೆಯೆನಿಸಿರುವ ದಕ್ಷಿಣ ಕನ್ನಡವೂ ಅಪವಾದವೆನಿಸಿಲ್ಲ. ಗತವರ್ಷದ ಮಧ್ಯಭಾಗದಲ್ಲಿ ಲಭಿಸಿದ್ದ ಈ ಮಾಹಿತಿಯು ಜನಸಾಮಾನ್ಯರ ಮನದಲ್ಲಿ ಅನೇಕ ಸಂದೇಹಗಳು ಮೂಡಲು ಕಾರಣ ವೆನಿಸಲಿದೆ.

ಆಸ್ತಿಗಳ ಮಾಹಿತಿ ಸಂಗ್ರಹ 

ಸ್ಥಳೀಯಸಂಸ್ಥೆಗಳಲ್ಲಿ ಇ- ಆಡಳಿತವನ್ನು ಅನುಷ್ಠಾನಿಸುವ ನಿಟ್ಟಿನಲ್ಲಿ ಕರ್ನಾಟಕ ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಡ್ ಫೈನಾನ್ಸ್ ಕಾರ್ಪೋರೇಶನ್ (ಕೆ.ಯು.ಐ.ಡಿ.ಎಫ್. ಸಿ ) ಸಂಸ್ಥೆಯು, ರಾಜ್ಯದ ೨೧೩ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಪ್ರತಿಯೊಂದು ಜಮೀನು, ಕಟ್ಟಡಗಳು ಮತ್ತು ಖಾಲಿ ನಿವೇಶನಗಳನ್ನು ಗುರುತಿಸಿ, ಪ್ರತಿಯೊಂದು ಆಸ್ತಿಗೂ ವಿಶಿಷ್ಠ ಗುರುತು ಸಂಖ್ಯೆಯನ್ನು ನೀಡಿತ್ತು. ಆದರೆ ಈ ಯೋಜನೆಯ ವ್ಯಾಪ್ತಿಯಿಂದ ಬೆಂಗಳೂರು ಮಹಾನಗರವನ್ನು ಹೊರಗಿರಿಸಲಾಗಿತ್ತು. 

ಸ್ಥಳೀಯಸಂಸ್ಥೆಗಳ ವ್ಯಾಪ್ತಿಯಲ್ಲಿನ ಆಸ್ತಿಗಳ ವಿವರಗಳು ಮತ್ತು ಮೌಲ್ಯಗಳನ್ನು ನಿಷ್ಕರ್ಷಿಸುವ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗಿತ್ತು. ೨೦೦೫ ರಿಂದ ೨೦೧೦ ರ ಅವಧಿಯಲ್ಲಿ ನಿರ್ಮಲ ನಗರ ಯೋಜನೆಯನ್ವಯ ೪೯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳ ಸಮೀಕ್ಷೆಯನ್ನು ನಡೆಸಲಾಗಿತ್ತು. ಏಶಿಯನ್ ಅಭಿವೃದ್ಧಿ ಬ್ಯಾಂಕಿನ ಆರ್ಥಿಕ ನೆರವಿನಿಂದ ನಡೆಸಿದ್ದ ಈ ಸಮೀಕ್ಷೆಯಲ್ಲಿ ಮೆನೇಜ್ಮೆಂಟ್ ಇನ್ಫಾರ್ಮೇಶನ್ ಸಿಸ್ಟಂ(ಎಂ.ಐ. ಎಸ್) ಮತ್ತು ಗ್ಲೋಬಲ್ ಇನ್ಫಾರ್ಮೇಶನ್ ಸಿಸ್ಟಮ್(ಜಿ. ಐ.ಎಸ್) ಗಳನ್ನು ಬಳಸಿ, ೨೨,೮೬, ೩೧೨ ಆಸ್ತಿಗಳ ನಕ್ಷೆಗಳನ್ನು ಸಿದ್ಧಪಡಿಸಲಾಗಿತ್ತು. ಆಶ್ಚರ್ಯವೆಂದರೆ ಇವುಗಳಲ್ಲಿ ೮,೦೬,೭೪೧ ಆಸ್ತಿಗಳು ತೆರಿಗೆಯ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ !.  

೨೦೦೯ ರಿಂದ ೨೦೧೧ ರ ಅವಧಿಯಲ್ಲಿ ನಡೆಸಿದ್ದ ದ್ವಿತೀಯ ಹಂತದ ಸಮೀಕ್ಷೆಯನ್ನು ಕರ್ನಾಟಕ ಪೌರಾಡಳಿತ ಸುಧಾರಣಾ ಯೋಜನೆಯನ್ವಯ ೧೬೪ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಸಿದ್ದು, ಈ ಯೋಜನೆಗೆ ವಿಶ್ವ ಬ್ಯಾಂಕ್ ಆರ್ಥಿಕ ನೆರವನ್ನು ನೀಡಿತ್ತು. ಇದರಲ್ಲಿ ೧೫,೨೨, ೨೯೦ ಆಸ್ತಿಗಳ ಸಮೀಕ್ಷೆಯನ್ನು ನಡೆಸಿದ್ದು, ಇವುಗಳಲ್ಲಿ ೪,೦೦,೯೯೮ ಆಸ್ತಿಗಳು ತೆರಿಗೆಯನ್ನೇ ಪಾವತಿಸದಿರುವುದು ಪತ್ತೆಯಾಗಿತ್ತು. ಇವೆರಡೂ ಸಮೀಕ್ಷೆಗಳ ಪರಿಣಾಮವಾಗಿ ರಾಜ್ಯದ ೧.೨ ದಶಲಕ್ಷ ಅರ್ಥಾತ್, ಶೇ.೩೧ ರಷ್ಟು ಆಸ್ತಿಗಳ ಸ್ವಯಂಘೋಷಿತ ಆಸ್ತಿತೆರಿಗೆಯನ್ನು ನಿಷ್ಕರ್ಷೆ ಮಾಡದಿರುವುದು ಅಥವಾ ಪಾವತಿಸದಿರುವುದು ತಿಳಿದುಬಂದಿತ್ತು !. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆಗೆ ಮುನ್ನ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದ ಆಸ್ತಿಗಳ ಸಂಖ್ಯೆಯು ೧,೮೪,೧೬೫ ಆಗಿದ್ದು, ಸಮೀಕ್ಷೆಯ ಬಳಿಕ ಈ ಸಂಖ್ಯೆಯು ೨,೯೬,೬೫೯ ಆಗಿತ್ತು!.

ರಾಜ್ಯಾದ್ಯಂತ ಸಮೀಕ್ಷೆಯನ್ನು ನಡೆಸಿ, ಅವಶ್ಯಕ ಮಾಹಿತಿಗಳನ್ನು ಸಂಗ್ರಹಿಸಿದ್ದರೂ, ಸ್ಥಳೀಯ ಸಂಸ್ಥೆಗಳು ೨೦೦೩-೦೪ ರಲ್ಲಿ ಜಾರಿಗೆ ಬಂದಿದ್ದ ಸ್ವಯಂಘೋಷಿತ ಆಸ್ತಿತೆರಿಗೆ ಪದ್ದತಿಯನ್ವಯ ( ಆಸ್ತಿಗಳ ಮಾಲಕರು ಅಥವಾ ಬಾಡಿಗೆದಾರರು ಘೋಷಿಸಿದಂತೆ) ತೆರಿಗೆಯನ್ನು ಸಂಗ್ರಹಿಸುತ್ತಿವೆ.ಇವುಗಳಲ್ಲಿ ಸಾಕಷ್ಟು ಮಂದಿ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ನೀಡಿ ತಮ್ಮ ತೆರಿಗೆಯ ಹೊರೆಯನ್ನು ಗಣನೀಯವಾಗಿ ಕಡಿಮೆಮಾಡಿಕೊಂಡಿದ್ದಲ್ಲಿ, ಇನ್ನು ಕೆಲವರು ತೆರಿಗೆಯನ್ನೇ ಪಾವತಿಸದೇ ಇರುವುದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ತಿಳಿಯದ ವಿಚಾರವೇನಲ್ಲ. ಸಮೀಕ್ಷೆಯಿಂದ  ಶೇ. ೩೨ ರಷ್ಟು ಆಸ್ತಿಗಳ ಮಾಲೀಕರು ಅಥವಾ ಬಾಡಿಗೆದಾರರು ಕಾನೂನುಬಾಹಿರವಾಗಿ ಆಸ್ತಿತೆರಿಗೆಯ ವ್ಯಾಪ್ತಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವುದು ಸಾಬೀತಾಗಿದೆ. ಇವರನ್ನು ತೆರಿಗೆಯ ವ್ಯಾಪ್ತಿಗೆ ತರುವ ಹೊಣೆಗಾರಿಕೆಯನ್ನು " ಪೌರಾಡಳಿತ ಸುಧಾರಣಾ ಕೋಶ" ಎನ್ನುವ ಪ್ರತ್ಯೇಕ ವಿಭಾಗಕ್ಕೆ ನೀಡಲಾಗಿದೆ. ಈ ಸಂಸ್ಥೆಯು ತೆರಿಗೆ ಸಂಗ್ರಹಣೆಯಲ್ಲಿ ಪರಿವರ್ತನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆಯನ್ನೂ ನಿರ್ವಹಿಸಬೇಕಾಗಿದೆ. 

ಈ ಕೋಶವು ಎಂ.ಐ.ಎಸ್ ಮತ್ತು ಜಿ.ಐ.ಎಸ್ ಮಾಹಿತಿಗಳ ಆಧಾರದ ಮೇಲೆ ಆಸ್ತಿಗಳನ್ನು ಈಗಾಗಲೇ ಗುರುತಿಸಿದೆ. ಜೊತೆಗೆ ಈ ಆಸ್ತಿಗಳ ಕ್ರಮಸಂಖ್ಯೆ, ಕಟ್ಟಡಗಳ ವಿಸ್ತೀರ್ಣ, ನಿರ್ಮಾಣದ ಸ್ವರೂಪ,ಮಾಲೀಕರ - ಬಾಡಿಗೆದಾರರ ಸಮಗ್ರ ಮಾಹಿತಿಗಳೊಂದಿಗೆ ೨೦೦೨ ನೆ ಸಾಲಿನಿಂದ ಪಾವತಿಸಿರುವ ತೆರಿಗೆಯ ವಿವರಗಳನ್ನು ದಾಖಲಿಸಿದ್ದು, ಇವೆಲ್ಲವೂ ಪೌರಾಡಳಿತ ಇಲಾಖೆಯ ಬಳಿ ಇವೆ. ಈ ರೀತಿಯ ಮಾಹಿತಿ ಸಂಗ್ರಹ ವ್ಯವಸ್ಥೆಯು ದೇಶದಲ್ಲೇ ಅತಿ ದೊಡ್ಡ ಪ್ರಯೋಗವಾಗಿದೆ. 

ಪೌರಾಡಳಿತ ಸುಧಾರಣಾ ಕೋಶವು ಆಸ್ತಿ- ಜಿ.ಐ.ಎಸ್ ಆಧಾರಿತ ಆಸ್ತಿತೆರಿಗೆ ಮಾಹಿತಿ ವ್ಯವಸ್ಥೆಯ ಅಂಗವಾಗಿ ಆನ್ ಲೈನ್ ತೆರಿಗೆ ನಿಷ್ಕರ್ಷೆ ಮತ್ತು ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಆದರೆ ಈ ಪದ್ಧತಿಯನ್ನು ಶೇ.೫೦ ಕ್ಕೂ ಕಡಿಮೆ ಸ್ಥಳೀಯಸಂಸ್ಥೆಗಳು ಅಳವಡಿಸಿಕೊಂಡಿವೆ. ಇದನ್ನು ಪ್ರತಿಯೊಂದು ಸ್ಥಳೀಯಸಂಸ್ಥೆಗಳಲ್ಲಿ ಜಾರಿಗೊಳ್ಳದೇ, ಆಸ್ತಿತೆರಿಗೆ ಸಂಗ್ರಹಣೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿಲ್ಲ. ನಿಜಹೆಳಬೇಕಿದ್ದಲ್ಲಿ ತಾಂತ್ರಿಕ ಸಿಬಂದಿಗಳ ಕೊರತೆಯಿಂದಾಗಿ ಈ ವ್ಯವಸ್ಥೆಯ ಅನುಷ್ಠಾನ ವಿಳಂಬಗೊಳ್ಳುತ್ತಿದೆ.

ಕೆ.ಯು.ಐ.ದಿ.ಎಫ್.ಸಿ ಅಧಿಕಾರಿಗಳು ಹೇಳುವಂತೆ ಅಕ್ರಮ- ಕಾನೂನುಬಾಹಿರ ಕಟ್ಟಡಗಳನ್ನು ಈಗಾಗಲೇ ಗುರುತಿಸಿ,ಅವಶ್ಯಕ ಮಾಹಿತಿಗಳನ್ನು ದಾಖಲಿಸಿರುವುದರಿಂದ ಸ್ಥಳೀಯಸಂಸ್ಥೆಗಳು ಇವರಿಂದ ತೆರಿಗೆಯನ್ನು ವಸೂಲು ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ ರಾಜಕೀಯ ಹಸ್ತಕ್ಷೇಪ ಹಾಗೂ ತೆರಿಗೆ ಸಂಗ್ರಹಿಸುವ ಅಧಿಕಾರಿಗಳು ಮತ್ತು ಆಸ್ತಿಗಳ ಮಾಲಕರು- ಬಾಡಿಗೆದಾರರ ನಡುವಿನ "ಹೊಂದಾಣಿಕೆ"ಯಿಂದಾಗಿ, ಇವರಿಂದ ತೆರಿಗೆಯನ್ನು ಸಂಗ್ರಹಿಸಲು ಅನಾವಶ್ಯಕ ಸಮಸ್ಯೆಗಳು ತಲೆದೋರುತ್ತಿವೆ. 

ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ ಇಷ್ಟೊಂದು ಶ್ರಮವಹಿಸಿ ದಾಖಲಿಸಿರುವ ಸಮಗ್ರ ಮಾಹಿತಿಗಳನ್ನು ಸ್ಥಳೀಯಸಂಸ್ಥೆಗಳು ಮಾತ್ರ ಬಳಸಿಕೊಳ್ಳುತ್ತಿಲ್ಲ. ಈ ಮಾಹಿತಿಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ, ರಾಜ್ಯದ ಸ್ಥಳೀಯಸಂಸ್ಥೆಗಳ ಆಸ್ತಿತೆರಿಗೆ ಸಂಗ್ರಹದ ಪ್ರಮಾಣವು ಶೇ.೩೦ ರಿಂದ ೪೦ ರಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ!. 

ಇಚ್ಚಾಶಕ್ತಿಯ ಕೊರತೆ 

ಈ ಸಮೀಕ್ಷೆಯಿಂದ ತಿಳಿದುಬಂದಂತೆ ರಾಜ್ಯದ ಸ್ಥಳೀಯಸಂಸ್ಥೆಗಳು ತಮ್ಮ ಕಾರ್ಯಕ್ಷಮತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ, ನಮ್ಮನ್ನಾಳುವವರಲ್ಲಿ ಧೃಢವಾದ ರಾಜಕೀಯ ಇಚ್ಚಾಶಕ್ತಿ ಇಲ್ಲದೇ "ತೆರಿಗೆಯ ಬಲೆ" ಯನ್ನು ವಿಸ್ತರಿಸುವುದು ಅಸಾಧ್ಯ. ತಜ್ಞರೊಬ್ಬರ ಅಭಿಪ್ರಾಯದಂತೆ ಈ ಶೇ.೩೨ ರಷ್ಟಿರುವ ಅಕ್ರಮ ಆಸ್ತಿಗಳಿಂದ ತೆರಿಗೆಯನ್ನು ಸಂಗ್ರಹಿಸಿದಲ್ಲಿ, ಇವರ ಅಕ್ರಮವನ್ನು ಸಕ್ರಮಗೊಳಿಸಿದಂತಾಗುತ್ತದೆ. ವಿಶೇಷವೆಂದರೆ ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಸೂಕ್ತ ನಿರ್ಧಾರವನ್ನು ತಳೆಯದಿರುವುದರಿಂದಾಗಿ, ಅನೇಕ ಆಸ್ತಿಗಳ ಮಾಲೀಕರು ತೆರಿಗೆಯನ್ನು ಪಾವತಿಸದಿದ್ದರೂ ಕುಡಿಯುವ ನೀರಿನ ಮತ್ತು ವಿದ್ಯುತ್ ಸಂಪರ್ಕವನ್ನು ಪಡೆದು ಬಳಸಿಕೊಳ್ಳುತ್ತಿದ್ದಾರೆ!. 

ಸಾಮಾನ್ಯವಾಗಿ ಕಟ್ಟಡವೊಂದರ ನಿರ್ಮಾಣಕ್ಕೆ ಮುನ್ನ, ನಿರ್ಮಿಸುವ ಸಂದರ್ಭದಲ್ಲಿ ಮತ್ತು ನಿರ್ಮಾಣದ ಕಾಮಗಾರಿಗಳು ಪರಿಪೂರ್ಣಗೊಳ್ಳುವ ತನಕ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವ ಸಾಧ್ಯತೆಗಳೇ ಇಲ್ಲ. ಆದರೂ ಶೇ. ೩೨ ರಷ್ಟು ಆಸ್ತಿಗಳು ತೆರಿಗೆಯನ್ನು ಪಾವತಿಸದೇ ಇರುವುದು ಹೇಗೆ ಎನ್ನುವುದು ನಮಗೂ ಅರ್ಥವಾಗುತ್ತಿಲ್ಲ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು


 

Saturday, May 3, 2014

ASTITERIGEYANNE SANGRAHISADA STHALEEYASAMSTHEGALU !






 ಆಸ್ತಿತೆರಿಗೆಯನ್ನು ಸಂಗ್ರಹಿಸದ ಸ್ಥಳೀಯ ಸಂಸ್ಥೆಗಳು !

ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ಸ್ವಂತ ಆದಾಯದ ಮೂಲಗಳಲ್ಲಿ ಸ್ವಯಂಘೋಷಿತ ಆಸ್ತಿತೆರಿಗೆಯು ಅಗ್ರಸ್ಥಾನದಲ್ಲಿದೆ.ಆದರೆ ಆರ್ಥಿಕ ಸಂಪನ್ಮೂಲಗಳ ಕೊರತೆಯಿಂದ ಸೊರಗಿರುವ ಸ್ಥಳೀಯಸಂಸ್ಥೆಗಳು, ಶೇ.೩೧ ರಷ್ಟು ಆಸ್ತಿಗಳ ತೆರಿಗೆಯನ್ನೇ ಸಂಗ್ರಹಿಸುತ್ತಿಲ್ಲ ಎಂದಲ್ಲಿ ನೀವೂ ನಂಬಲಾರಿರಿ.ಈ ವಿಲಕ್ಷಣ ಸಮಸ್ಯೆಗೆ ಸ್ಥಳೀಯಸಂಸ್ಥೆಗಳ ಸಿಬಂದಿಗಳ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ರಾಜಕಾರಣಿಗಳ ಹಸ್ತಕ್ಷೇಪಗಳೇ ಕಾರಣವೆನಿಸಿವೆ. ಈ ಸಮಸ್ಯೆಗೆ ಬುದ್ಧಿವಂತರ ಜಿಲ್ಲೆಯೆನಿಸಿರುವ ದಕ್ಷಿಣ ಕನ್ನಡವೂ ಅಪವಾದವೆನಿಸಿಲ್ಲ. ಗತವರ್ಷದ ಮಧ್ಯಭಾಗದಲ್ಲಿ ಲಭಿಸಿದ್ದ ಈ ಮಾಹಿತಿಯು ಜನಸಾಮಾನ್ಯರ ಮನದಲ್ಲಿ ಅನೇಕ ಸಂದೇಹಗಳು ಮೂಡಲು ಕಾರಣ ವೆನಿಸಲಿದೆ.

ಆಸ್ತಿಗಳ ಮಾಹಿತಿ ಸಂಗ್ರಹ 

ಸ್ಥಳೀಯಸಂಸ್ಥೆಗಳಲ್ಲಿ ಇ- ಆಡಳಿತವನ್ನು ಅನುಷ್ಠಾನಿಸುವ ನಿಟ್ಟಿನಲ್ಲಿ ಕರ್ನಾಟಕ ಅರ್ಬನ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಡ್ ಫೈನಾನ್ಸ್ ಕಾರ್ಪೋರೇಶನ್ (ಕೆ.ಯು.ಐ.ಡಿ.ಎಫ್. ಸಿ ) ಸಂಸ್ಥೆಯು, ರಾಜ್ಯದ ೨೧೩ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಪ್ರತಿಯೊಂದು ಜಮೀನು, ಕಟ್ಟಡಗಳು ಮತ್ತು ಖಾಲಿ ನಿವೇಶನಗಳನ್ನು ಗುರುತಿಸಿ, ಪ್ರತಿಯೊಂದು ಆಸ್ತಿಗೂ ವಿಶಿಷ್ಠ ಗುರುತು ಸಂಖ್ಯೆಯನ್ನು ನೀಡಿತ್ತು. ಆದರೆ ಈ ಯೋಜನೆಯ ವ್ಯಾಪ್ತಿಯಿಂದ ಬೆಂಗಳೂರು ಮಹಾನಗರವನ್ನು ಹೊರಗಿರಿಸಲಾಗಿತ್ತು. 

ಸ್ಥಳೀಯಸಂಸ್ಥೆಗಳ ವ್ಯಾಪ್ತಿಯಲ್ಲಿನ ಆಸ್ತಿಗಳ ವಿವರಗಳು ಮತ್ತು ಮೌಲ್ಯಗಳನ್ನು ನಿಷ್ಕರ್ಷಿಸುವ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗಿತ್ತು. ೨೦೦೫ ರಿಂದ ೨೦೧೦ ರ ಅವಧಿಯಲ್ಲಿ ನಿರ್ಮಲ ನಗರ ಯೋಜನೆಯನ್ವಯ ೪೯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಆಸ್ತಿಗಳ ಸಮೀಕ್ಷೆಯನ್ನು ನಡೆಸಲಾಗಿತ್ತು. ಏಶಿಯನ್ ಅಭಿವೃದ್ಧಿ ಬ್ಯಾಂಕಿನ ಆರ್ಥಿಕ ನೆರವಿನಿಂದ ನಡೆಸಿದ್ದ ಈ ಸಮೀಕ್ಷೆಯಲ್ಲಿ ಮೆನೇಜ್ಮೆಂಟ್ ಇನ್ಫಾರ್ಮೇಶನ್ ಸಿಸ್ಟಂ(ಎಂ.ಐ. ಎಸ್) ಮತ್ತು ಗ್ಲೋಬಲ್ ಇನ್ಫಾರ್ಮೇಶನ್ ಸಿಸ್ಟಮ್(ಜಿ. ಐ.ಎಸ್) ಗಳನ್ನು ಬಳಸಿ, ೨೨,೮೬, ೩೧೨ ಆಸ್ತಿಗಳ ನಕ್ಷೆಗಳನ್ನು ಸಿದ್ಧಪಡಿಸಲಾಗಿತ್ತು. ಆಶ್ಚರ್ಯವೆಂದರೆ ಇವುಗಳಲ್ಲಿ ೮,೦೬,೭೪೧ ಆಸ್ತಿಗಳು ತೆರಿಗೆಯ ವ್ಯಾಪ್ತಿಗೆ ಒಳಪಟ್ಟಿರಲಿಲ್ಲ !.  

೨೦೦೯ ರಿಂದ ೨೦೧೧ ರ ಅವಧಿಯಲ್ಲಿ ನಡೆಸಿದ್ದ ದ್ವಿತೀಯ ಹಂತದ ಸಮೀಕ್ಷೆಯನ್ನು ಕರ್ನಾಟಕ ಪೌರಾಡಳಿತ ಸುಧಾರಣಾ ಯೋಜನೆಯನ್ವಯ ೧೬೪ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಸಿದ್ದು, ಈ ಯೋಜನೆಗೆ ವಿಶ್ವ ಬ್ಯಾಂಕ್ ಆರ್ಥಿಕ ನೆರವನ್ನು ನೀಡಿತ್ತು. ಇದರಲ್ಲಿ ೧೫,೨೨, ೨೯೦ ಆಸ್ತಿಗಳ ಸಮೀಕ್ಷೆಯನ್ನು ನಡೆಸಿದ್ದು, ಇವುಗಳಲ್ಲಿ ೪,೦೦,೯೯೮ ಆಸ್ತಿಗಳು ತೆರಿಗೆಯನ್ನೇ ಪಾವತಿಸದಿರುವುದು ಪತ್ತೆಯಾಗಿತ್ತು. ಇವೆರಡೂ ಸಮೀಕ್ಷೆಗಳ ಪರಿಣಾಮವಾಗಿ ರಾಜ್ಯದ ೧.೨ ದಶಲಕ್ಷ ಅರ್ಥಾತ್, ಶೇ.೩೧ ರಷ್ಟು ಆಸ್ತಿಗಳ ಸ್ವಯಂಘೋಷಿತ ಆಸ್ತಿತೆರಿಗೆಯನ್ನು ನಿಷ್ಕರ್ಷೆ ಮಾಡದಿರುವುದು ಅಥವಾ ಪಾವತಿಸದಿರುವುದು ತಿಳಿದುಬಂದಿತ್ತು !. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆಗೆ ಮುನ್ನ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದ ಆಸ್ತಿಗಳ ಸಂಖ್ಯೆಯು ೧,೮೪,೧೬೫ ಆಗಿದ್ದು, ಸಮೀಕ್ಷೆಯ ಬಳಿಕ ಈ ಸಂಖ್ಯೆಯು ೨,೯೬,೬೫೯ ಆಗಿತ್ತು!.

ರಾಜ್ಯಾದ್ಯಂತ ಸಮೀಕ್ಷೆಯನ್ನು ನಡೆಸಿ, ಅವಶ್ಯಕ ಮಾಹಿತಿಗಳನ್ನು ಸಂಗ್ರಹಿಸಿದ್ದರೂ, ಸ್ಥಳೀಯ ಸಂಸ್ಥೆಗಳು ೨೦೦೩-೦೪ ರಲ್ಲಿ ಜಾರಿಗೆ ಬಂದಿದ್ದ ಸ್ವಯಂಘೋಷಿತ ಆಸ್ತಿತೆರಿಗೆ ಪದ್ದತಿಯನ್ವಯ ( ಆಸ್ತಿಗಳ ಮಾಲಕರು ಅಥವಾ ಬಾಡಿಗೆದಾರರು ಘೋಷಿಸಿದಂತೆ) ತೆರಿಗೆಯನ್ನು ಸಂಗ್ರಹಿಸುತ್ತಿವೆ.ಇವುಗಳಲ್ಲಿ ಸಾಕಷ್ಟು ಮಂದಿ ತಪ್ಪು ಅಥವಾ ಸುಳ್ಳು ಮಾಹಿತಿಗಳನ್ನು ನೀಡಿ ತಮ್ಮ ತೆರಿಗೆಯ ಹೊರೆಯನ್ನು ಗಣನೀಯವಾಗಿ ಕಡಿಮೆಮಾಡಿಕೊಂಡಿದ್ದಲ್ಲಿ, ಇನ್ನು ಕೆಲವರು ತೆರಿಗೆಯನ್ನೇ ಪಾವತಿಸದೇ ಇರುವುದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ತಿಳಿಯದ ವಿಚಾರವೇನಲ್ಲ. ಸಮೀಕ್ಷೆಯಿಂದ  ಶೇ. ೩೨ ರಷ್ಟು ಆಸ್ತಿಗಳ ಮಾಲೀಕರು ಅಥವಾ ಬಾಡಿಗೆದಾರರು ಕಾನೂನುಬಾಹಿರವಾಗಿ ಆಸ್ತಿತೆರಿಗೆಯ ವ್ಯಾಪ್ತಿಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವುದು ಸಾಬೀತಾಗಿದೆ. ಇವರನ್ನು ತೆರಿಗೆಯ ವ್ಯಾಪ್ತಿಗೆ ತರುವ ಹೊಣೆಗಾರಿಕೆಯನ್ನು " ಪೌರಾಡಳಿತ ಸುಧಾರಣಾ ಕೋಶ" ಎನ್ನುವ ಪ್ರತ್ಯೇಕ ವಿಭಾಗಕ್ಕೆ ನೀಡಲಾಗಿದೆ. ಈ ಸಂಸ್ಥೆಯು ತೆರಿಗೆ ಸಂಗ್ರಹಣೆಯಲ್ಲಿ ಪರಿವರ್ತನೆಗಳನ್ನು ಜಾರಿಗೊಳಿಸುವ ಹೊಣೆಗಾರಿಕೆಯನ್ನೂ ನಿರ್ವಹಿಸಬೇಕಾಗಿದೆ. 

ಈ ಕೋಶವು ಎಂ.ಐ.ಎಸ್ ಮತ್ತು ಜಿ.ಐ.ಎಸ್ ಮಾಹಿತಿಗಳ ಆಧಾರದ ಮೇಲೆ ಆಸ್ತಿಗಳನ್ನು ಈಗಾಗಲೇ ಗುರುತಿಸಿದೆ. ಜೊತೆಗೆ ಈ ಆಸ್ತಿಗಳ ಕ್ರಮಸಂಖ್ಯೆ, ಕಟ್ಟಡಗಳ ವಿಸ್ತೀರ್ಣ, ನಿರ್ಮಾಣದ ಸ್ವರೂಪ,ಮಾಲೀಕರ - ಬಾಡಿಗೆದಾರರ ಸಮಗ್ರ ಮಾಹಿತಿಗಳೊಂದಿಗೆ ೨೦೦೨ ನೆ ಸಾಲಿನಿಂದ ಪಾವತಿಸಿರುವ ತೆರಿಗೆಯ ವಿವರಗಳನ್ನು ದಾಖಲಿಸಿದ್ದು, ಇವೆಲ್ಲವೂ ಪೌರಾಡಳಿತ ಇಲಾಖೆಯ ಬಳಿ ಇವೆ. ಈ ರೀತಿಯ ಮಾಹಿತಿ ಸಂಗ್ರಹ ವ್ಯವಸ್ಥೆಯು ದೇಶದಲ್ಲೇ ಅತಿ ದೊಡ್ಡ ಪ್ರಯೋಗವಾಗಿದೆ. 

ಪೌರಾಡಳಿತ ಸುಧಾರಣಾ ಕೋಶವು ಆಸ್ತಿ- ಜಿ.ಐ.ಎಸ್ ಆಧಾರಿತ ಆಸ್ತಿತೆರಿಗೆ ಮಾಹಿತಿ ವ್ಯವಸ್ಥೆಯ ಅಂಗವಾಗಿ ಆನ್ ಲೈನ್ ತೆರಿಗೆ ನಿಷ್ಕರ್ಷೆ ಮತ್ತು ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಆದರೆ ಈ ಪದ್ಧತಿಯನ್ನು ಶೇ.೫೦ ಕ್ಕೂ ಕಡಿಮೆ ಸ್ಥಳೀಯಸಂಸ್ಥೆಗಳು ಅಳವಡಿಸಿಕೊಂಡಿವೆ. ಇದನ್ನು ಪ್ರತಿಯೊಂದು ಸ್ಥಳೀಯಸಂಸ್ಥೆಗಳಲ್ಲಿ ಜಾರಿಗೊಳ್ಳದೇ, ಆಸ್ತಿತೆರಿಗೆ ಸಂಗ್ರಹಣೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಗಳಿಲ್ಲ. ನಿಜಹೆಳಬೇಕಿದ್ದಲ್ಲಿ ತಾಂತ್ರಿಕ ಸಿಬಂದಿಗಳ ಕೊರತೆಯಿಂದಾಗಿ ಈ ವ್ಯವಸ್ಥೆಯ ಅನುಷ್ಠಾನ ವಿಳಂಬಗೊಳ್ಳುತ್ತಿದೆ.

ಕೆ.ಯು.ಐ.ದಿ.ಎಫ್.ಸಿ ಅಧಿಕಾರಿಗಳು ಹೇಳುವಂತೆ ಅಕ್ರಮ- ಕಾನೂನುಬಾಹಿರ ಕಟ್ಟಡಗಳನ್ನು ಈಗಾಗಲೇ ಗುರುತಿಸಿ,ಅವಶ್ಯಕ ಮಾಹಿತಿಗಳನ್ನು ದಾಖಲಿಸಿರುವುದರಿಂದ ಸ್ಥಳೀಯಸಂಸ್ಥೆಗಳು ಇವರಿಂದ ತೆರಿಗೆಯನ್ನು ವಸೂಲು ಮಾಡಲು ಯಾವುದೇ ಅಡ್ಡಿಯಿಲ್ಲ. ಆದರೆ ರಾಜಕೀಯ ಹಸ್ತಕ್ಷೇಪ ಹಾಗೂ ತೆರಿಗೆ ಸಂಗ್ರಹಿಸುವ ಅಧಿಕಾರಿಗಳು ಮತ್ತು ಆಸ್ತಿಗಳ ಮಾಲಕರು- ಬಾಡಿಗೆದಾರರ ನಡುವಿನ "ಹೊಂದಾಣಿಕೆ"ಯಿಂದಾಗಿ, ಇವರಿಂದ ತೆರಿಗೆಯನ್ನು ಸಂಗ್ರಹಿಸಲು ಅನಾವಶ್ಯಕ ಸಮಸ್ಯೆಗಳು ತಲೆದೋರುತ್ತಿವೆ. 

ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ ಇಷ್ಟೊಂದು ಶ್ರಮವಹಿಸಿ ದಾಖಲಿಸಿರುವ ಸಮಗ್ರ ಮಾಹಿತಿಗಳನ್ನು ಸ್ಥಳೀಯಸಂಸ್ಥೆಗಳು ಮಾತ್ರ ಬಳಸಿಕೊಳ್ಳುತ್ತಿಲ್ಲ. ಈ ಮಾಹಿತಿಗಳನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ, ರಾಜ್ಯದ ಸ್ಥಳೀಯಸಂಸ್ಥೆಗಳ ಆಸ್ತಿತೆರಿಗೆ ಸಂಗ್ರಹದ ಪ್ರಮಾಣವು ಶೇ.೩೦ ರಿಂದ ೪೦ ರಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ!. 

ಇಚ್ಚಾಶಕ್ತಿಯ ಕೊರತೆ 

ಈ ಸಮೀಕ್ಷೆಯಿಂದ ತಿಳಿದುಬಂದಂತೆ ರಾಜ್ಯದ ಸ್ಥಳೀಯಸಂಸ್ಥೆಗಳು ತಮ್ಮ ಕಾರ್ಯಕ್ಷಮತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ, ನಮ್ಮನ್ನಾಳುವವರಲ್ಲಿ ಧೃಢವಾದ ರಾಜಕೀಯ ಇಚ್ಚಾಶಕ್ತಿ ಇಲ್ಲದೇ "ತೆರಿಗೆಯ ಬಲೆ" ಯನ್ನು ವಿಸ್ತರಿಸುವುದು ಅಸಾಧ್ಯ. ತಜ್ಞರೊಬ್ಬರ ಅಭಿಪ್ರಾಯದಂತೆ ಈ ಶೇ.೩೨ ರಷ್ಟಿರುವ ಅಕ್ರಮ ಆಸ್ತಿಗಳಿಂದ ತೆರಿಗೆಯನ್ನು ಸಂಗ್ರಹಿಸಿದಲ್ಲಿ, ಇವರ ಅಕ್ರಮವನ್ನು ಸಕ್ರಮಗೊಳಿಸಿದಂತಾಗುತ್ತದೆ. ವಿಶೇಷವೆಂದರೆ ರಾಜ್ಯ ಸರ್ಕಾರವು ಈ ವಿಚಾರದಲ್ಲಿ ಸೂಕ್ತ ನಿರ್ಧಾರವನ್ನು ತಳೆಯದಿರುವುದರಿಂದಾಗಿ, ಅನೇಕ ಆಸ್ತಿಗಳ ಮಾಲೀಕರು ತೆರಿಗೆಯನ್ನು ಪಾವತಿಸದಿದ್ದರೂ ಕುಡಿಯುವ ನೀರಿನ ಮತ್ತು ವಿದ್ಯುತ್ ಸಂಪರ್ಕವನ್ನು ಪಡೆದು ಬಳಸಿಕೊಳ್ಳುತ್ತಿದ್ದಾರೆ!. 

ಸಾಮಾನ್ಯವಾಗಿ ಕಟ್ಟಡವೊಂದರ ನಿರ್ಮಾಣಕ್ಕೆ ಮುನ್ನ, ನಿರ್ಮಿಸುವ ಸಂದರ್ಭದಲ್ಲಿ ಮತ್ತು ನಿರ್ಮಾಣದ ಕಾಮಗಾರಿಗಳು ಪರಿಪೂರ್ಣಗೊಳ್ಳುವ ತನಕ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವ ಸಾಧ್ಯತೆಗಳೇ ಇಲ್ಲ. ಆದರೂ ಶೇ. ೩೨ ರಷ್ಟು ಆಸ್ತಿಗಳು ತೆರಿಗೆಯನ್ನು ಪಾವತಿಸದೇ ಇರುವುದು ಹೇಗೆ ಎನ್ನುವುದು ನಮಗೂ ಅರ್ಥವಾಗುತ್ತಿಲ್ಲ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು