Thursday, May 22, 2014

Solidwaste management



 ತ್ಯಾಜ್ಯ ಸಂಗ್ರಹದ ಬಗ್ಗೆ ಅನಾವಶ್ಯಕ ವ್ಯಾಜ್ಯವೇಕೆ ?

ರಾಜ್ಯದ ಅಧಿಕತಮ ನಗರ- ಪಟ್ಟಣಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಳು ಸಮರ್ಪಕವಾಗಿ ಜರಗದೇ ಇರುವ ಕಾರಣದಿಂದಾಗಿ, ಕಣ್ಣು ಹಾಯಿಸಿದಲ್ಲೆಲ್ಲಾ ವೈವಿಧ್ಯಮಯ ತ್ಯಾಜ್ಯಗಳ ರಾಶಿಗಳೇ ಕಾಣಸಿಗುತ್ತಿವೆ. ಸ್ಥಳೀಯ ಜನರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ನಡುವೆ ಸಮನ್ವಯದ ಕೊರತೆ, ಜನರ ಅಸಹಕಾರ, ತ್ಯಾಜ್ಯ ಸಂಗ್ರಹಕ್ಕೆ ಬೇಕಾಗುವ ಸಿಬಂದಿಗಳ ಕೊರತೆ, ಸಂಗ್ರಹಿತ ತ್ಯಾಜ್ಯಗಳನ್ನು ಸಾಗಿಸುವ, ಪ್ರತ್ಯೇಕಿಸುವ, ಪುನರ್ ಆವರ್ತನ ಮಾಡುವ, ಮತ್ತು ವೈಜ್ಞಾನಿಕ ವಿಧಾನದಿಂದ ವಿಲೇವಾರಿ ಮಾಡುವ ವ್ಯವಸ್ಥೆಯ ಅಭಾವ ಮತ್ತಿತರ ಕಾರಣಗಳಿಂದಾಗಿ, ತ್ಯಾಜ್ಯ ವಿಲೇವಾರಿಯ ಸಮಗ್ರ ವ್ಯವಸ್ಥೆಯೇ ವಿಫಲವೆನಿಸುತ್ತಿದೆ. ದೇಶದ ಸರ್ವೋಚ್ಚ ನ್ಯಾಯಾಲಯವು ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ನಿಗದಿಸಿದ್ದ ಗಡುವು ಮುಗಿದಿದ್ದರೂ, ಇಂದಿನ ತನಕ ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಪ್ರಯತ್ನಗಳು ವಿಫಲವಾಗುತ್ತಿವೆ. ಇದರಲ್ಲಿ ಸ್ಥಳೀಯರ ಅಸಹಕಾರವೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. 

ಸ್ವಚ್ಛತೆಗೆ ಆದ್ಯತೆ 

ಬಹುತೇಕ ಭಾರತೀಯರು ಮುಂಜಾನೆ ಎದ್ದೊಡನೆ ತಮ್ಮ ಮನೆಗಳ ಮೂಲೆಮೂಲೆಗಳನ್ನು ಗುಡಿಸಿದ ಬಳಿಕ ನೆಲವನ್ನು ಒರೆಸಿ ಸ್ವಚ್ಚಗೊಳಿಸುವ ಸಂಪ್ರದಾಯವನ್ನು  ಇಂದಿಗೂ  ತಪ್ಪದೇ ಪರಿಪಾಲಿಸುತ್ತಾರೆ. ಅಂತೆಯೇ ತಮ್ಮ ಮನೆಯ ಸುತ್ತಮುತ್ತಲ ಆವರಣವನ್ನು ಗುಡಿಸಿ ಚೊಕ್ಕಟವಾಗಿ ಇರಿಸುತ್ತಾರೆ. ಆದರೆ ಈ ಸಂದರ್ಭದಲ್ಲಿ ಸಂಗ್ರಹಿತ ತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಕಿಂಚಿತ್ ಕೂಡಾ ಚಿಂತಿಸುವುದಿಲ್ಲ. 

ಸಾಮಾನ್ಯವಾಗಿ ಪ್ರತಿಯೊಂದು ಮನೆಗಳಲ್ಲೂ ದಿನನಿತ್ಯ ಉತ್ಪನ್ನವಾಗುವ ಹಸಿ ಮತ್ತು ಇತರ ಒಣ ತ್ಯಾಜ್ಯಗಳನ್ನು ವಿಭಿನ್ನ ವಿಧಾನಗಳಿಂದ ವಿಲೇವಾರಿ ಮಾಡಬೇಕಾಗುತ್ತದೆ. ಹಸಿ ತ್ಯಾಜ್ಯಗಳನ್ನು ತಮ್ಮ ಆವರಣದಲ್ಲಿರುವ ಮರಗಳ ಬುಡಗಳಲ್ಲಿ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಗುಂಡಿಗಳಲ್ಲಿ ವಿಲೇವಾರಿ ಮಾಡಬಹುದಾಗಿದೆ. ಆದರೆ ಒಣ ತ್ಯಾಜ್ಯಗಳನ್ನು ಮೊದಲು ಪುನರ್ ಆವರ್ತನಗೊಳಿಸಬಲ್ಲ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನಾಗಿ ಪ್ರತ್ಯೇಕಿಸಬೇಕಾಗುತ್ತದೆ. ಪುನರ್ ಬಳಸಬಹುದಾದ ಅಥವಾ ಪುನರ್ ಆವರ್ತನಗೊಳಿಸಬಹುದಾದ ಕಾಗದ, ರಟ್ಟು, ಪ್ಲಾಸ್ಟಿಕ್- ಗಾಜಿನ ಬಾಟಲಿ ಮತ್ತಿತರ ತ್ಯಾಜ್ಯಗಳನ್ನು, ಇವುಗಳನ್ನು ಖರೀದಿಸುವ ಕೇಂದ್ರಗಳಿಗೆ ಮಾರಾಟ ಮಾಡಬಹುದಾಗಿದೆ. ಆದರೆ ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ಮಾತ್ರ " ಲ್ಯಾಂಡ್ ಫಿಲ್ ಸೈಟ್" ಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. 

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಕಸದ ತೊಟ್ಟಿರಹಿತ ನಿರ್ಮಲ ನಗರಗಳನ್ನು ರೂಪಿಸಬೇಕಾದ ಹೊಣೆಗಾರಿಕೆಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲಾಗಿದೆ. ಅಂತೆಯೇ ತ್ಯಾಜ್ಯಗಳು ಉತ್ಪನ್ನವಾಗುವ ವಸತಿ- ವಾಣಿಜ್ಯ ಕಟ್ಟಡಗಳಿಂದ ಇವುಗಳನ್ನು ಸಂಗ್ರಹಿಸಿ, ಸುರಕ್ಷಿತವಾಗಿ ಸಾಗಿಸಿ, ಪ್ರತ್ಯೇಕಿಸಿದ ಬಳಿಕ ಪುನರ್ ಬಳಕೆ ಮಾಡಲಾಗದ ತ್ಯಾಜ್ಯಗಳನ್ನು ಮಾತ್ರ ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ಆದರೆ ಅನೇಕ ನಗರ- ಪಟ್ಟಣಗಳಲ್ಲಿ ಈ ವ್ಯವಸ್ಥೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಅಂತೆಯೇ ನಾವಿಂದು ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವೂ ಕಡಿಮೆಯಾಗುತ್ತಿಲ್ಲ. ಏಕೆಂದರೆ ಒಂದು ಬಾರಿ ಬಳಸಿ ಎಸೆಯುವ ವಸ್ತುಗಳನ್ನು ಉಪಯೋಗಿಸುವ ಹವ್ಯಾಸ ಭಾರತೀಯರಲ್ಲಿ ಹೆಚ್ಚುತ್ತಿರುವುದು ಇದಕ್ಕೊಂದು ಪ್ರಮುಖ ಕಾರಣವೆನಿಸಿದೆ. 

ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ವಸತಿ- ವಾಣಿಜ್ಯ ಕಟ್ಟಡಗಳಲ್ಲಿ  ಉತ್ಪನ್ನವಾಗುವ ವೈವಿಧ್ಯಮಯ ತ್ಯಾಜ್ಯಗಳನ್ನು ಮಳೆನೀರು ಹರಿವ ಚರಂಡಿಗಳು ಅಥವಾ ಯಾವುದೇ ಖಾಲಿ ಜಾಗಗಳಲ್ಲಿ ಎಸೆಯುವ ಕೆಟ್ಟ ಹವ್ಯಾಸವು ದಿನೇದಿನೇ ಹೆಚ್ಚುತ್ತಿರುವುದು, ಸ್ಥಳೀಯ ಸಂಸ್ಥೆಗಳಿಗೆ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ. ಮನೆಮನೆಗಳಿಂದ ತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಲು ಬೇಕಾದಷ್ಟು ಸಿಬಂದಿ ಅಥವಾ ಸ್ವಸಹಾಯ ಗುಂಪುಗಳ ಕಾರ್ಯಕರ್ತರು ಸಿಗದೇ ಇರುವಾಗ, ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳನ್ನು ತೆಗೆಯುವುದಾದರೂ ಹೇಗೆಂದು ಜನಸಾಮಾನ್ಯರು ಚಿಂತಿಸುವುದಿಲ್ಲ. ಕೇವಲ ತ್ಯಾಜ್ಯ ಸಂಗ್ರಹಕ್ಕಾಗಿ ವಿಧಿಸುವ ಶುಲ್ಕವನ್ನು ಉಳಿಸುವ ಸಲುವಾಗಿ ಇಂತಹ ಸಮಸ್ಯೆಗಳನ್ನು ಹುಟ್ಟುಹಾಕುವ ಜನರು, ಇದರಿಂದ ಮುಂದೆ ಸಂಭವಿಸಬಲ್ಲ ಗಂಭೀರ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವ ಸಾಧ್ಯತೆಗಳೇ ಇಲ್ಲ. 

ನಿಜ ಹೇಳಬೇಕಿದ್ದಲ್ಲಿ ಈಗಾಗಲೇ ನಾವು ಅನುಭವಿಸುತ್ತಿರುವ ಜಾಗತಿಕ ತಾಪಮಾನದ ಹೆಚ್ಚಳ, ಹವಾಮಾನದ ವ್ಯತ್ಯಯದ ಪರಿಣಾಮವಾಗಿ ತಲೆದೋರುತ್ತಿರುವ ಅತಿವೃಷ್ಟಿ- ಅನಾವೃಷ್ಟಿ, ಸಾಂಕ್ರಾಮಿಕ ವ್ಯಾಧಿಗಳ ಬಾಧೆ ಮತ್ತು ಮಾರಕತೆಗಳೇ ಮುಂತಾದ ಸಮಸ್ಯೆಗಳಿಗೆ, ನಾವಿಂದು ಉತ್ಪಾದಿಸುತ್ತಿರುವ ಅತಿಯಾದ ತ್ಯಾಜ್ಯಗಳು ಮತ್ತು ಇವುಗಳ ಅವೈಜ್ಞಾನಿಕ ವಿಲೇವಾರಿಗಳೂ ಕಾರಣವಾಗಿವೆ. ಈ ಸಮಸ್ಯೆಯು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಕಾಡಲಿದೆ. ಈ ಸತ್ಯವನ್ನು ಅರ್ಥೈಸಿಕೊಂಡು, ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸುವ ಮೂಲಕ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವುದರೊಂದಿಗೆ, ಇವುಗಳ ವೈಜ್ಞಾನಿಕ ವಿಲೇವಾರಿಯಲ್ಲಿ ಸ ಭಾಗಿಯಾಗುವುದು ನಮ್ಮನಿಮ್ಮೆಲ್ಲರ  ಹಿತದೃಷ್ಟಿಯಿಂದ ಆರೋಗ್ಯಕರ ಎನ್ನುವುದನ್ನು ಮರೆಯದಿರಿ. 

ಕೊನೆಯ ಮಾತು 

ಘನತ್ಯಾಜ್ಯ ನಿರ್ವಹಣೆಯ ಯಶಸ್ಸಿಗಾಗಿ ಶ್ರಮಿಸುತ್ತಿರುವ ಸ್ಥಳೀಯ ಸಂಸ್ಥೆಗಳ ಸಿಬಂದಿಗಳೊಂದಿಗೆ ಸಹಕರಿಸುವ ಮೂಲಕ ಮತ್ತು ನಮ್ಮಲ್ಲಿ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡುವ ಮೂಲಕ, ನಿಮ್ಮ ಊರನ್ನು ನಿಶ್ಚಿತವಾಗಿಯೂ "ನಿರ್ಮಲ ನಗರ" ವನ್ನಾಗಿಸುವುದು ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ. ಜೊತೆಗೆ ನಮ್ಮ ನಿಮ್ಮೆಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಇದು ಅನಿವಾರ್ಯವೂ ಹೌದು. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 



No comments:

Post a Comment