Tuesday, December 31, 2013

NIMMALLI INTAHA VARTANEGALIVEYE? PART-1





                ನಿಮ್ಮಲ್ಲಿ ಇಂತಹ ವರ್ತನೆಗಳಿವೆಯೇ? - ಭಾಗ ೧ 

 ನಿಮ್ಮನ್ನು ಬಾಧಿಸಬಲ್ಲ ಅನೇಕ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆಯ ಅವಶ್ಯಕತೆಯೇ ಇರುವುದಿಲ್ಲ. ಔಷದ ಸೇವನೆಯ ಅನಿವಾರ್ಯತೆ ಇದ್ದರೂ, ವೈದ್ಯರು ನೀಡುವ ಸಲಹೆ- ಸೂಚನೆಗಳ ಪರಿಪಾಲನೆಯೂ ಚಿಕಿತ್ಸೆಯಷ್ಟೇ ಅವಶ್ಯಕ ಎಂದು ತಿಳಿದಿರಿ.
------------                 ------------                  ----------------                -----------------                           

ಮಲ್ಲಪ್ಪನ ಮಲಬದ್ಧತೆ 

ವಯೋವೃದ್ಧ ಮಲ್ಲಪ್ಪನನ್ನು ಕಳೆದ ೫೦ ವರ್ಷಗಳಿಂದ ಬಾಧಿಸುತ್ತಿದ್ದ ಮಲಬದ್ಧತೆಯನ್ನು ಗುಣಪಡಿಸಲು ಯಾವುದೇ ವೈದ್ಯರು ಸಫಲರಾಗಿರಲಿಲ್ಲ. ಇದೇ ಕಾರಣದಿಂದಾಗಿ ನಗರಕ್ಕೆ ಹೊಸದಾಗಿ ಬಂದಿದ್ದ ವೈದ್ಯರನ್ನು ಭೇಟಿಯಾದ ಮಲ್ಲಪ್ಪನು, ತನ್ನ ಸಮಸ್ಯೆಯನ್ನು ಬಗೆಹರಿಸುವಂತೆ ಅಂಗಲಾಚಿದ್ದನು. 

ಮಲ್ಲಪ್ಪನನ್ನು ಕೂಲಂಕುಶವಾಗಿ ಪರೀಕ್ಷಿಸಿದ್ದ ವೈದ್ಯರಿಗೆ ಶಾರೀರಿಕ ಕಾರಣಗಳಿಂದ ಮಲಬದ್ಧತೆ ಆರಂಭವಾಗಿಲ್ಲ ಎಂದು ತಿಳಿದುಬಂದಿತ್ತು. ಆತನ ಆಹಾರ ಸೇವನಾ ಕ್ರಮದ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ವೈದ್ಯರಿಗೆ ದಿಗ್ಭ್ರಮೆಯಾಗುವಂತಹ ಮಾಹಿತಿ ಲಭ್ಯವಾಗಿತ್ತು. 

ದಿನದಲ್ಲಿ ಮೂರುಬಾರಿ ಅನ್ನ- ಗಂಜಿಯನ್ನು ಉಣ್ಣುವ ಹಾಗೂ ಎರಡುಬಾರಿ ಚಹಾ ಕುಡಿಯುವ ಹವ್ಯಾಸವಿದ್ದ ಮಲ್ಲಪ್ಪನು, ದಿನವಿಡೀ ಒಂದು ಲೋಟ ನೀರನ್ನೂ ಕುಡಿಯುತ್ತಿರಲಿಲ್ಲ. ಅರ್ಥಾತ್ ಇಂದಿಷ್ಟು ಗಂಜಿತಿಳಿ ಹಾಗೂ ಚಹಾ ಸೇರಿದಂತೆ  ದಿನದಲ್ಲಿ ಕೇವಲ ನಾಲ್ಕು ಲೋಟಗಳಷ್ಟು ದ್ರವಾಹಾರ ಆತನ ಉದರವನ್ನು ಸೇರುತ್ತೀತು. ಸಾಕಷ್ಟು ಶಾರೀರಿಕ ಶ್ರಮದ ಕೆಲಸವನ್ನು ಮಾಡುತ್ತಿದ್ದುದರಿಂದ ಧಾರಾಳ ಬೆವರು ಸುರಿಸುತ್ತಿದ್ದುದು ಸ್ವಾಭಾವಿಕವಾಗಿತ್ತು. ತತ್ಪರಿಣಾಮವಾಗಿ ಸೇವಿಸಿದ ಆಹಾರ ಜೀರ್ಣವಾದಂತೆಯೇ, ದ್ರವಾಂಶದ ಕೊರತೆಯಿಂದ ಸಂಪೂರ್ಣವಾಗಿ ಶುಷ್ಕವಾಗುತ್ತಿದ್ದ ಮಲವು,ಎಷ್ಟು ತಿಣುಕಿದರೂ ವಿಸರ್ಜನೆಯಾಗುತ್ತಿರಲಿಲ್ಲ. ಇದರಿಂದಾಗಿ ಮಲ್ಲಪ್ಪನು ತನ್ನ ಗುದದ್ವಾರದಲ್ಲಿ ಕೈಬೆರಳನ್ನು ತೂರಿಸಿ, ಆಡಿನ ಹಿಕ್ಕೆಯಂತಹ ಗಟ್ಟಿಯಾದ ಮಲದ ತುಣುಕುಗಳನ್ನು ಹೊರತೆಗೆಯುವುದು ಅಭ್ಯಾಸವಾಗಿತ್ತು!. 

ನಿಜ ಹೇಳಬೇಕಿದ್ದಲ್ಲಿ ಮಲ್ಲಪ್ಪನ ಸಮಸ್ಯೆಯ ಪರಿಹಾರಕ್ಕೆ ಯಾವುದೇ ಔಷದ ಸೇವನೆಯ ಅವಶ್ಯಕತೆಯೇ ಇರಲಿಲ್ಲ. ದಿನನಿತ್ಯ ೩ ರಿಂದ ೫ ಲೀಟರ್ ನೀರು, ಬಾಳೆಹಣ್ಣು, ಪಪ್ಪಾಯಿ ಮತ್ತಿತರ ಹಣ್ಣುಗಳು, ಹಸಿ ತರಕಾರಿಗಳು ಹಾಗೂ ಒಂದಿಷ್ಟು ಹಾಲು ಮತ್ತು ಮೊಸರುಗಳ ದೈನಂದಿನ ಸೇವನೆಯಿಂದ ಮಲಬದ್ಧತೆಯ ಸಮಸ್ಯೆ ಉದ್ಭವಿಸುವುದಿಲ್ಲ. 

ನಿಮ್ಮ ದೈನಂದಿನ ಕೆಲಸಕಾರ್ಯಗಳ ನಡುವೆ ನಿಮ್ಮ ಶರೀರಕ್ಕೆ ಅವಶ್ಯಕವಾದ ೨  ರಿಂದ ೫ ಲೀಟರ್ ನೀರಿನ ಸೇವನೆಯಿಂದ ಆಮ್ಲಪಿತ್ತ , ಎದೆಯುರಿ, ಹೊಟ್ಟೆಯುಬ್ಬರ, ಅಜೀರ್ಣ ಮತ್ತು ಮಲಬದ್ಧತೆಗಳು ಬಾಧಿಸಲಾರವು. ಜೊತೆಗೆ ನಿಮಗೆ ಉಷ್ಣವಾಗಿದೆಎನ್ನುವ ಭ್ರಮೆಯನ್ನು ಹುಟ್ಟಿಸಬಲ್ಲ ಹಳದಿ ಬಣ್ಣದ ಮೂತ್ರ ವಿಸರ್ಜನೆ, ಉರಿಮೂತ್ರ, ಮೂತ್ರ ಪಿಂಡ- ನಾಳಗಳಲ್ಲಿ ಕಂಡುಬರುವ ಕಲ್ಲುಗಳು ಮತ್ತು ಮೂಲವ್ಯಾಧಿಯಂತಹ ಸಮಸ್ಯೆಗಳು ಕಾಡುವ ಸಾಧ್ಯತೆಗಳೇ ಇರುವುದಿಲ್ಲ. ಪ್ರತಿಬಾರಿ ಆಹಾರವನ್ನು ಸೇವಿಸುವಾಗ ಸಾಕಷ್ಟು ನೀರನ್ನು ಕುಡಿಯಿರಿ. ನಿಮ್ಮ ಪುಟ್ಟ ಕಂದನಿಗೂ ಬಾಲ್ಯದಿಂದಲೇ ಈ ಪಾಠವನ್ನು ಕಳಿಸಿ. ಅನೇಕರು ನಂಬಿರುವಂತೆ ಆಹಾರಸೇವನೆಯೊಂದಿಗೆ ನೀರು ಕುಡಿಯುವುದು ಹಾನಿಕರವಲ್ಲ. ಅಂತೆಯೇ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿ, ಅವಶ್ಯಕ ಪ್ರಮಾಣದ ಆಹಾರವನ್ನು ಸೇವಿಸುವುದು ಅಸಾಧ್ಯವೆನ್ನುವುದು ಕೂಡಾ ನಿಜವಲ್ಲ. 

ಬಹುತೇಕ ಜನರು ಬಾಯಾರಿದಾಗ ಮಾತ್ರ ನೀರು ಕುಡಿಯಬೇಕೆಂದು ನಂಬಿ, ಮಳೆ ಮತ್ತು ಚಳಿಗಾಲಗಳಲ್ಲಿ ಸೇವಿಸುವ ನೀರಿನ ಪ್ರಮಾಣವು ಕಡಿಮೆಯಾಗುವುದು. ಆದರೆ ಯಾವುದೇ ಋತುವಿನಲ್ಲೂ ಕನಿಷ್ಠ  ಲೀಟರ್ ಮತ್ತು ಬೇಸಗೆಯ ದಿನಗಳಲ್ಲಿ ಕನಿಷ್ಠ ೫ ಲೀಟರ್ ನೀರನ್ನು ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಿತಕರ. 

ಕೆಲವೊಂದು ಕಾಯಿಲೆಗಳಲ್ಲಿ ,ಅದರಲ್ಲೂ ವಿಶೇಷವಾಗಿ ಜ್ವರ, ವಾಂತಿ ಹಾಗೂ ಭೇದಿ ಮತ್ತು ಬಿಸಿಲಿನ ಝಳದಿಂದಾಗಿ ಶರೀರದಲ್ಲಿನ ನೀರಿನ ಪ್ರಮಾಣವು ತೀವ್ರವಾಗಿ ಕಡಿಮೆಯಾಗುವುದರಿಂದ, ಪ್ರಾಣಾಪಾಯದ ಸಾಧ್ಯತೆಗಳು ಹೆಚ್ಚುತ್ತವೆ. ಇಂತಹ ಸಂದರ್ಭಗಳಲ್ಲಿ ನೀರು, ಸಕ್ಕರೆ ಮತ್ತು ಒಂದಿಷ್ಟು ಉಪ್ಪನ್ನು ಬೆರೆಸಿ ತಯಾರಿಸಿದ ದ್ರಾವಣವನ್ನು ಆಗಾಗ ಕುಡಿಯುತ್ತಿರುವುದು ಜೀವರಕ್ಷಕವೆನಿಸುವುದು. 

ಸೂಜಿಮದ್ದು ಸಂಜೀವಿನಿಯಲ್ಲ 

ದೂರದ ಬಿಜಾಪುರದಿಂದ ದಕ್ಷಿಣ ಕಾಣದ ಜಿಲ್ಲೆಗೆ ಬಂದಿದ್ದ ಯಲ್ಲಪ್ಪನು ಕೃಷಿ ಕಾರ್ಮಿಕನಾಗಿ ದುಡಿಯುತ್ತಿದ್ದನು. ಮಳೆಗಾಲ ಆರಂಭವಾದ ಕೆಲವೇ ದಿನಗಳಲ್ಲಿ ಆತನ ಪುಟ್ಟ ಕಂಡ ಮಲ್ಲೆಶನಿಗೆ ತೀವ್ರ ಜ್ವರ ಹಾಗೂ ಶೀತ ಪ್ರಾರಂಭವಾಗಿತ್ತು. ಸ್ಥಳೀಯ ವೈದ್ಯರಲ್ಲಿ ಮಗುವನ್ನು ಕೊಂಡೊಯ್ದ ಯಲ್ಲಪ್ಪನು, ಮಗನಿಗೆ ಒಂದು ಸೂಜಿ ಹಾಕುವಂತೆ ವೈದ್ಯರಲ್ಲಿ ಗೋಗರೆದಿದ್ದನು. 

ಮಲ್ಲೇಶನ ಕಾಯಿಲೆಯ ವಿವರಗಳನ್ನು ಕೇಳಿದ ಬಳಿಕ ಆತನನ್ನು ಪರೀಕ್ಷಿಸಿದ ವೈದ್ಯರಿಗೆ, ಇದು ವೈರಸ್ ಗಳಿಂದ ಬರುವ ಸಾಮಾನ್ಯ ಶೀತ- ಜ್ವರವೆಂದು ಖಚಿತವಾಗಿತ್ತು. ನಾಲ್ಕು ದಿನಗಳ ಔಷದವನ್ನು ನೀಡಿ, ಇವುಗಳನ್ನು ಕ್ರಮಬದ್ಧವಾಗಿ ನೀಡುವಂತೆ ಹೇಳಿದರೂ, ಯಲ್ಲಪ್ಪ ಮಾತ್ರ ಒಂದು ಸೂಜಿ ಹಾಕ್ರೀ ಎಂದು ಒತ್ತಾಯಿಸಿದ್ದನು. ಮುಂದಿನ ಹಾತ್ತರು ನಿಮಿಷಗಳ ಕಾಲ ಒಂದೂವರೆ ವರ್ಷದ ಕಂದನಿಗೆ ಸೂಜಿ ನೀಡುವ ಅವಶ್ಯಕತೆಯಿಲ್ಲವೆಂದು ಮನದಟ್ಟು ಮಾಡುವಷ್ಟರಲ್ಲಿ ಸೋತು ಸುಣ್ಣವಾಗಿದ್ದರು!. ಏಕೆಂದರೆ ಆತನ ಊರಿನಲ್ಲಿ ಆರು ತಿಂಗಳ ಹಸುಗೂಸಿಗೂ ಸೂಜಿ ನೀಡುವ ವೈದ್ಯರ ಬಗ್ಗೆ ಆತನಿಗೆ ಅಪಾರವಾದ ನಂಬುಗೆಯಿತ್ತು. 

ಮುಂದಿನ ಬಾರಿ ಯಲ್ಲಪ್ಪ ವೈದ್ಯರಲ್ಲಿಗೆ ಬಂದಾಗ ಆತನೊಂದಿಗೆ ಹಲವಾರು ಜನರ ತಂಡವೇ ಬಂದಿತ್ತು. ಮುಗ್ಧ- ಅವಿದ್ಯಾವಂತ ಕಾರ್ಮಿಕರಿಗೆ ಸೂಜಿ ಹಾಕದೆ ಕಾಯಿಲೆಯನ್ನು ಗುಣಪಡಿಸುವ ವೈದ್ಯರ ಬಗ್ಗೆ ಕುತೂಹಲ ಮೂಡಿತ್ತು. ಜೊತೆಗೆ ತಮ್ಮ ಕಾಯಿಲೆಗೆ ಇದೇ ವೈದ್ಯರ  ಚಿಕಿತ್ಸೆ ಪಡೆಯುವ ಇರಾದೆಯೂ ಇತ್ತು. ವಿಶೇಷವೆಂದರೆ ಅಂದು ಬಂದಿದ್ದ ಐದಾರು ಹೊಸರೋಗಿಗಳು ಅಭ್ಯಾಸ ಬಲದಿಂದ ಸೂಜಿ ಹಾಕೊದಿಲ್ವೇನ್ರೀ ಎಂದು ಕೇಳಲು ಮರೆತಿರಲಿಲ್ಲ. ಆದರೆ ವೈದ್ಯರು ಮಾತ್ರ ಯಾರೊಬ್ಬರಿಗೂ ಸೂಜಿಯನ್ನೇ ಹಾಕಿರಲಿಲ್ಲ. 

ನಿಮ್ಮನ್ನು ಕಾಡಬಲ್ಲ ಪ್ರತಿಯೊಂದು ಕಾಯಿಲೆಗಳನ್ನು ಗುಣಪಡಿಸಲು ನಿರ್ದಿಷ್ಟ ಇಂಜೆಕ್ಷನ್ ಇಲ್ಲವೆಂದು ತಿಳಿದಿರಿ. ಯಾವುದೇ ಸಂದರ್ಭದಲ್ಲಿ ನೀವಾಗಿ ಇಂಜೆಕ್ಷನ್ ನೀಡಲೇಬೇಕೆಂದು ವೈದ್ಯರನ್ನು ಒತ್ತಾಯಿಸದಿರಿ. ಅಂತೆಯೇ ಕೆಲವೊಂದು ಸಂದರ್ಭಗಳಲ್ಲಿ ವೈದ್ಯರು ಇಂಜೆಕ್ಷನ್ ನೀದಬೇಕೆನ್ದಾಗ ನಿರಾಕರಿಸದಿರಿ. ಉದಾಹರಣೆಗೆ ನಿಮಗೆ ಯಾವುದೇ ಗಾಯವಾದಾಗ ನೀಡುವ ಟಿ.ಟಿ ಇಂಜೆಕ್ಷನ್ ಗೆ ಬದಲಿಯಾಗಿ ಗುಳಿಗೆ - ಔಷದಗಳು ಲಭ್ಯವಿಲ್ಲ. ತೀವ್ರ ವಾಂತಿಯನ್ನು ನಿಲ್ಲಿಸಲು ಇಜೆಕ್ಶನ್ ನೀಡುವುದು ಅನಿವಾರ್ಯ. ಅದೇ ರೀತಿಯಲ್ಲಿ ತೀವ್ರ ಆಸ್ತಮಾ,ತೀವ್ರ ನೋವು ಇತ್ಯಾದಿ ಸಮಸ್ಯೆಗಳಲ್ಲಿ ಕ್ಷಿಪ್ರ ಪರಿಣಾಮಕ್ಕಾಗಿ ಇಂಜೆಕ್ಷನ್ ನೀಡಲೇಬೇಕಾಗುವುದು. ಆದರೆ ನಿಮ್ಮನ್ನು ಬಾಧಿಸುವ ಸಾಮಾನ್ಯ ಶೀತ  - ಜ್ವರಗಳಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ಇಂಜೆಕ್ಷನ್ ಪ್ರಯೋಗ ನಿಶ್ಚಿತವಾಗಿಯೂ ಅನಿವಾರ್ಯವಲ್ಲ. 


  ಜ್ವರ ಒಂದು ಕಾಯಿಲೆಯಲ್ಲ 

ಜನ್ನುಮಾಮರಿಗೆ ಅಂದು ಮುಂಜಾನೆ ಎಚ್ಚರವಾಗುವಾಗಲೇ ತೀವ್ರ ಜ್ವರ ಮತ್ತು ಮೈಕೈನೋವು ಬಾಧಿಸುತ್ತಿದ್ದು, ಪರಿಚಯದ ವೈದ್ಯರಲ್ಲಿ ಚಿಕಿತ್ಸೆಗಾಗಿ ತೆರಳಿದರು. ಅದೇ ದಿನ ಎರಡು ಕಟ್ಟಡಗಳ ಕಾಂಕ್ರೀಟ್ ಕಾಮಗಾರಿ ಇರುವುದರಿಂದ, ತನ್ನ ಜ್ವರವನ್ನು ಕ್ಷಣಮಾತ್ರದಲ್ಲಿ ಗುಣಪಡಿಸಬಲ್ಲ ಇಜೆಕ್ಶನ್ ನೀಡುವಂತೆ ವೈದ್ಯರನ್ನು ಒತ್ತಾಯಿಸಿದ್ದರು. ರೋಗಿಯ ಗಡಿಬಿಡಿ ಸ್ವಭಾವದ ಅರಿವಿದ್ದ ವೈದ್ಯರು ಅವರ ಶಾರೀರಿಕ ತಪಾಸಣೆಯನ್ನು ನಡೆಸಿದ ಬಳಿಕ, "ವೈರಸ್" ಮೂಲದ ಜ್ವರವೆಂದು ಸಂದೇಹಿಸಿ, ಪ್ರತಿ ಆರು ಗಂಟೆಗೊಂದಾವರ್ತಿ ಪಾರಾಸಿಟಮಾಲ್ ಮಾತ್ರೆಯನ್ನು ನುಂಗಿ ವಿಶ್ರಾಂತಿ ಪಡೆಯಲು ಸೂಚಿಸಿದರು. ಎರಡು ದಿನಗಳ ನಂತರ ಏನಾದರೂ ತೊಂದರೆಗಳು ಕಾನಿಸಿಕೊಂದಲ್ಲಿ ಮತ್ತೆ ತನ್ನಲ್ಲಿ ಬರುವಂತೆ ಹೇಳಿದ ವೈದ್ಯರ ಬಗ್ಗೆ ಜನ್ನುಮಾಮರಿಗೆ ತುಸು ಅಸಮಾಧಾನವಾಗಿತ್ತು. 

ವೈದ್ಯರ ಸಲಹೆಯನ್ನು ನಿರ್ಲಕ್ಷಿಸಿ ತನ್ನ ಕಾಮಗಾರಿಗಳ ಮೇಲ್ವಿಚಾರಣೆ ಮುಗಿಸಿ ಮನೆಗೆ ಮರಳಿದಂತೆಯೇ ಜ್ವರ ತೀವ್ರವಾಗಿ ಉಲ್ಬಣಿಸಿತ್ತು. ಮರುದಿನ ಮಾತೊಬ್ಬ ವೈದ್ಯರನ್ನು ಮನೆಗೆ ಕರೆಸಿ, ಒತ್ತಾಯಪೂರ್ವಕವಾಗಿ ಇಂಜೆಕ್ಷನ್ ಪಡೆದುಕೊಂಡ ಜನ್ನುಮಾಮರು ತಮ್ಮ ಕಚೇರಿಗೆ ತೆರಳಿದ್ದರು. ಸಂಜೆಯ ತನಕ ಪ್ರಯಾಸದಿಂದ ತಮ್ಮ ಕೆಲಸಗಳನ್ನು ಮುಗಿಸಿ ಮನೆಗೆ ಮರಳಿದರು. ನಡುರಾತ್ರಿ ಕೆಂಡಾಮಂಡಲ ಜ್ವರದಿಂದ ಏನೇನೋ ಬಡಬಡಿಸುತ್ತಿದ್ದ ಪತಿಯ ಸ್ಥಿತಿಯನ್ನು ಕಂಡು ಹೌಹಾರಿದ ಜಾನಕಿಯವರು, ಮರುದಿನ ಬೆಳಿಗ್ಗೆ ಮತ್ತೆ ಅದೇ ವೈದ್ಯರನ್ನು ಕರೆಸಿ ಇನ್ನೊಂದು ಇಂಜೆಕ್ಷನ್ ಕೊಡಿಸಲು ಮರೆಯಲಿಲ್ಲ. 

ಮುಂದಿನ ೨೪ ತಾಸುಗಳಲ್ಲಿ ಉಲ್ಬಣಿಸಿದ್ದ ಜ್ವರದಿಂದಾಗಿ ಹಾಸಿಗೆಯಿಂದ ಏಳಲಾರದಷ್ಟು ನಿಶ್ಶಕ್ತಿಯೊಂದಿಗೆ ಮತ್ತೆ ಜ್ವರ ಮರುಕಳಿಸಿತ್ತು. ಈ ಬಾರಿ ತಮ್ಮ ಪರಿಚಯದ ವೈದ್ಯರನ್ನೇ ಮನೆಗೆ ಕರೆಸಿ ಪತಿಯ ಪರವಾಗಿ ಜಾನಕಿಯವರು ಕ್ಷಮೆ ಕೋರಿದ್ದರು. ಜನ್ನುಮಾಮರನ್ನು ಸಾವಕಾಶವಾಗಿ ಪರೀಕ್ಷಿಸಿದ ವೈದ್ಯರಿಗೆ "ಹೆಪಟೈಟಿಸ್" ಆರಂಭವಾಗಿರುವ ಬಗ್ಗೆ ಸಂದೇಹ ಮೂಡಿತ್ತು. ರೋಗಿಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಹತ್ತುದಿನಗಳ ಚಿಕಿತ್ಸೆಯನ್ನು ನೀಡಿದ ಬಳಿಕ ಜನ್ನುಮಾಮರ ಜ್ವರ ಗುಣವಾಗುವುದರೊಂದಿಗೆ, ಜ್ವರ ಬಾಧಿಸಿದಾಗ ಇಂಜೆಕ್ಷನ್ ಪಡೆಯುವ ಚಟವೂ ಗುಣವಾಗಿತ್ತು!. 

ಯಾವುದೇ ಸಂದರ್ಭದಲ್ಲಿ ಜ್ವರ ಬಂದಾಗ ನಿರ್ಲಕ್ಷಿಸದೆ ವೈದ್ಯರ ಸಲಹೆ ಪಡೆಯಿರಿ. ಸಾಮಾನ್ಯ ಶೀತದಿಂದ ಆರಂಭಿಸಿ ಮಾರಕ ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲೂ "ಜ್ವರ' ಒಂದು ಲಕ್ಷಣದ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಟಾನ್ಸಿಲೈಟಿಸ್, ಬ್ರಾಂಕೈಟಿಸ್, ಮಲೇರಿಯಾ, ಡೆಂಗೆ, ಟೈಫಾಯಿಡ್ಇತ್ಯಾದಿ ನೂರಾರು ವ್ಯಾಧಿಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣವಾದ ಜ್ವರದಲ್ಲೂ ಸಾಕಷ್ಟು ವೈವಿಧ್ಯಗಳಿವೆ. ರೋಗಿ ನೀಡುವ ಮಾಹಿತಿಯಿಂದ, ಆತನ ಶಾರೀರಿಕ ತಪಾಸಣೆಯಿಂದ ಹಾಗೂ ಅವಶ್ಯಕವೆನಿಸಿದಲ್ಲಿ ರಕ್ತ, ಮಲ, ಮೂತ್ರ ಹಾಗೂ ಕಫ ಇತ್ಯಾದಿಗಳ ಪರೀಕ್ಷೆಗಳಿಂದ ವೈದ್ಯರು ಜ್ವರಕ್ಕೆ ಕಾರಣವಾಗಿರುವ ವ್ಯಾಧಿಯನ್ನು ಪತ್ತೆಹಚ್ಚುವರು. 

ಬೆಳಿಗ್ಗೆ ಮೆಟಾಸಿನ್ ಮಾತ್ರೆ ನುಂಗಿ ಜ್ವರ ಕಡಿಮೆಯಾಗದೇ, ಮಧ್ಯಾಹ್ನ ಕ್ರೋಸಿನ್ ಮಾತ್ರೆಯನ್ನು ತಿನ್ನುವ "ಅತಿ ಬುದ್ಧಿವಂತ'ರಿಗೆ, ಇವೆರಡೂ ಮಾತ್ರೆಗಳಲ್ಲಿರುವ ಒಂದೇ ಎನ್ನುವದರ ಅರಿವೇ ಇರುವುದಿಲ್ಲ.ಸಾಮಾನ್ಯವಾಗಿ ಜ್ವರ ಬಾಧಿಸಿದಾಗ ಇತರ ಲಕ್ಷಣಗಳು ಇಲ್ಲದಿದ್ದಲ್ಲಿ ೨೪ ರಿಂದ ೪೮ ಗಂಟೆಗಳ ಕಾಲ ಪ್ರತಿ ೬ ಗಂಟೆಗೆ ಒಂದುಬಾರಿ ಪಾರಾಸಿಟಮಾಲ್ ಮಾತ್ರೆಯನ್ನು ಸೇವಿಸಬಹುದು. ಆದರೆ ಜ್ವರದೊಂದಿಗೆ ವಾಂತಿ, ಭೇದಿ, ಕೆಮ್ಮು, ಗಂಟಲು ನೋವು ಮತ್ತಿತರ ಸಮಸ್ಯೆಗಳು ಇದ್ದಲ್ಲಿ ವೈದ್ಯರ ಸಲಹೆ- ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಹಿತಕರ. ಅಂತೆಯೇ ಪುಟ್ಟ ಮಕ್ಕಳಿಗೆ ಜ್ವರ ಬಂದಾಗ 'ಫಿಟ್ಸ್" ( ಅಪಸ್ಮಾರದಂತಹ ಸಳೆತಗಳು) ಬಾಧಿಸುವುದು ತಿಳಿದಲ್ಲಿ, ವೈದ್ಯರ ಸಲಹೆ ಪಡೆದೇ ಔಷದಗಳನ್ನು ನೀಡಿ. ಯಾವುದೇ ಸಂದರ್ಭದಲ್ಲೂ ಜ್ವರ ಕಡಿಮೆಯಾಗಲಿಲ್ಲ ಎನ್ನುವ ಕಾರಣದಿಂದ ಚಿಕಿತ್ಸೆಯನ್ನು ಬದಲಾಯಿಸಲು ಅಥವಾ ಇಂಜೆಕ್ಷನ್ ನೀಡುವಂತೆ ವೈದ್ಯರನ್ನು ಒತ್ತಾಯಿಸದಿರಿ. 
ಅಂತಿಮವಾಗಿ ಜ್ವರ ಒಂದು ನಿರ್ದಿಷ್ಟ ವ್ಯಾಧಿಯಾಗಿರದೇ, ಅನೇಕ ರೋಗಗಳಲ್ಲಿ ಕಂಡುಬರುವ ಒಂದು ಲಕ್ಷಣ ಎನ್ನುವುದನ್ನು ಮರೆಯದಿರಿ.   


 ವಿದ್ಯಾನಂದನ ಉಚಿತ ಚಿಕಿತ್ಸೆ!

ವಿದ್ಯಾನಂದನ ವಿದ್ಯಾಭ್ಯಾಸವು ಹೈಸ್ಕೂಲಿನಲ್ಲೇ ಸಮಾಪ್ತಿಯಾಗಿದ್ದರೂ, ಆತನ ಬುದ್ಧಿಮತ್ತೆಗೆ ಯಾವುದೇ ಕೊರತೆ ಇರಲಿಲ್ಲ. ಹೊತ್ತೆಬಟ್ಟೆಗೆ ಸಾಕಾಗುವಷ್ಟು ಸಂಪಾದಿಸುತ್ತಿದ್ದ ಈ ಒಂಟಿಜೀವಿ, ಪರೋಪಕಾರಿ ಪಾಪಣ್ಣನಂತೆ ಪರಿಚಯದ ಜನರ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಒಂದೆರಡು ಗುಳಿಗೆಗಳನ್ನು ಉಚಿತವಾಗಿ ಕೊಡುತ್ತಿದ್ದನು. ಪುಕ್ಕಟೆ ಔಷದಿ ದೊರೆಯುವುದರಿಂದ ಅನೇಕ ಬಂಧುಮಿತ್ರರು ಆತನ ಸಲಹೆ ಮತ್ತು ಚಿಕಿತ್ಸೆಗಳಿಗೆ ಹಾತೊರೆಯುತ್ತಿದ್ದರು. 

ಅನೇಕ ವರ್ಷಗಳಿಂದ ಸಂಜೆಯ ಸಮಯದಲ್ಲಿ ತನ್ನ ಸ್ನೇಹಿತನ ಔಷದ ಅಂಗಡಿಯೊಂದಕ್ಕೆ ಭೇಟಿನೀಡುತ್ತಿದ್ದ ವಿದ್ಯನಂದನಿಗೆ, ಕ್ರಮೇಣ ಹಲವಾರು ಔಷದಗಳ ಹೆಸರು, ಇವುಗಳ ಉಪಯೋಗ ಇತ್ಯಾದಿ ವಿವರಗಳನ್ನು ಕೇಳಿ ಅರಿತುಕೊಳ್ಳುವ ಹವ್ಯಾಸ ಆರಂಭವಾಗಿತ್ತು. ಇದರೊಂದಿಗೆ ಸಣ್ಣಪುಟ್ಟ  ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಲು ಉಪಯುಕ್ತವೆನಿಸುವ ಕೆಲವು ಔಷದಗಳನ್ನು ಖರೀದಿಸಿ, ಬಂಧುಮಿತ್ರರಿಗೆ ಉಚಿತವಾಗಿ ನೀದಳು ಆರಂಭಿಸಿದ್ದನು. 

ಅದೊಂದು ಭಾನುವಾರ ಸಂಜೆ ನೆರೆಮನೆಯ ಸಂಕಪ್ಪನಿಗೆ ವಿಪರೀತ ಶೀತ ಮತ್ತು ತಲೆನೋವಿನೊಂದಿಗೆ ಜ್ವರ ಕಾಣಿಸಿಕೊಂಡಾಗ, ವಿದ್ಯಾನನದನ ಬಾಲಿ ಚಿಕಿತ್ಸೆಗಾಗಿ ಬಂದಿದ್ದನು. ಶೀತದ ಮಾತ್ರೆಗಳಲ್ಲೇ ದುಬಾರಿಯಾದ ಎರಡು ಮಾತ್ರೆಗಳನ್ನು ನೀಡಿದ ವಿದ್ಯಾನಂದನು, ಮರುದಿನ ಬೆಳಿಗ್ಗೆ ಶೀತ ಜ್ವರ ಮಾಯವಾಗುವುದೆಂದು ಭರವಸೆ ನೀಡಿದ್ದನು. ಆದರೆ ಅಧಿಕ ಪ್ರಸಂಗಿ ಸಂಕಪ್ಪನು ಎರಡೂ ಮಾತ್ರೆಗಳನ್ನು ಒಟ್ಟಿಗೆ ನುಂಗಿ ನೀರು ಕುಡಿದು ಮಲಗಿದ್ದನು. ಸುಮಾರು ಒಂದುಗಂತೆಯ ಬಳಿಕ ನಿಧಾನವಾಗಿ ಆರಂಭವಾದ ಹೊಟ್ಟೆ ಉರಿ ಮತ್ತು ನೋವುಗಳು ಕ್ರಮೇಣ ಹೆಚ್ಚುತ್ತಾ ಹೋಗಿ, ನಡುರಾತ್ರಿಯಲ್ಲಿ ಸಂಕಪ್ಪನಿಗೆ ರಕ್ತವಾಂತಿಯಾಗಿತ್ತು. ಗಾಬರಿಗೊಂಡ ಸಂಕಪ್ಪನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದನು. ತಜ್ಞವೈದ್ಯರ ಪರೀಕ್ಷೆಯ ಬಳಿಕ ಸಂಕಪ್ಪನ ಹಳೆಯ 'ಜಠರದ ಹುಣ್ಣು' ಆತನು ಸೇವಿಸಿದ್ದ ಶೀತದ ಮಾತ್ರೆಯಲ್ಲಿನ ಆಸ್ಪಿರಿನ್ ಎನ್ನುವ ಔಷದದ ಪರಿಣಾಮವಾಗಿ ತೀವ್ರವಾಗಿ ಉಲ್ಬಣಿಸಿದ ಕಾರಣದಿಂದ ರಕ್ತವಾಂತಿಯಾಗಿರುವುದು ಖಾತರಿಯಾಗಿತ್ತು. ತುರ್ತು ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಸಂಕಪ್ಪನಿಗೆ ವಾರ ಕಳೆದ ಬಳಿಕ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ವಿಷಯವನ್ನರಿತು ಗಾಬರಿಯಾದ ವಿದ್ಯಾನಂದನು ಇದೀಗ ತನ್ನ ಆರೋಗ್ಯದ ಸಮಸ್ಯೆಗಳಿಗೂ ವೈದ್ಯರ ಸಲಹೆಯನ್ನು ಪಡೆಯುತ್ತಿರುವುದು ಸತ್ಯ!. 

ತಮ್ಮ ರೋಗಿಗಳಿಗೆ ಅನೇಕ ವಿಧದ ಔಷದಗಳನ್ನು ಸೂಚಿಸುವ ಮುನ್ನ ವೈದ್ಯರು ತಮ್ಮ ರೋಗಿಯಲ್ಲಿ ಇರಬಹುದಾದ ಇತರ ಕಾಯಿಲೆಗಳು, ತೊಂದರೆಗಳು ಮತ್ತು ಅಲರ್ಜಿ ಮತ್ತಿತರ ಸಮಸ್ಯೆಗಳ ಬಗ್ಗೆ ಪರಾಮರ್ಶಿಸಿದ ಬಳಿಕವೇ ಚಿಕಿತ್ಸೆಯನ್ನು ನೀಡುವರು. ಇದರೊಂದಿಗೆ ಕೆಲ ಔಷದಿಗಳ ಅಡ್ಡ- ದುಷ್ಪರಿಣಾಮಗಳು ಹಾಗೂ ರೋಗಿ ಸೇವಿಸುವ ವಿಭಿನ್ನ ಔಷದಗಳ ನಡುವಿನ ಪರಸ್ಪರ ಪ್ರತಿಕ್ರಿಯೆಗಳ ಬಗ್ಗೆ ಅವಶ್ಯಕ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುವುದು. ಔಷದಗಳ ಪರಿಪೂರ್ಣ ಮಾಹಿತಿಯನ್ನು ಅರಿಯದ ಹಾಗೂ ವೈದ್ಯರೇ ಅಲ್ಲದ ವಿದ್ಯಾನಂದನಂತಹ ವ್ಯಕ್ತಿಗಳಿಂದ ಚಿಕಿತ್ಸೆ ಪಡೆಯುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ. 

ದೇವರ ಅಪ್ಪಣೆಯಂತೆ ಚಿಕಿತ್ಸೆ ನೀಡಬೇಕೆ?

ಚಿನ್ನಮ್ಮನ ಮಗಳು ಲಕ್ಷ್ಮಿಗೆ ಇತ್ತೀಚಿನ ಕೆಲದಿನಗಳಿಂದ ವಿಪರೀತ ಆಯಾಸ ಮತ್ತು ತಲೆತಿರುಗುವಿಕೆ ಬಾಧಿಸಲು ಆರಂಭಿಸಿತ್ತು. ಪರಿಚಯದ ವೈದ್ಯರ ಬಳಿ ಮಗಳನ್ನು ಕರೆದೊಯ್ದ ಚಿನ್ನಮ್ಮನು, ಮಗಳ ರಜೋಸ್ರಾವದ ತೊಂದರೆ ಮತ್ತು ಅಲ್ಪಾಹಾರ ಸೇವನೆಗಳ ವಿಚಾರವನ್ನು ತಿಳಿಸಲು ಮರೆತಿರಲಿಲ್ಲ. 

ಲಕ್ಷ್ಮಿಯ ಬಳಿ  ಅವಶ್ಯಕ ಪ್ರಶ್ನೆಗಳನ್ನು ಕೇಳಿದ ಬಳಿಕ ಶಾರೀರಿಕ ಪರೀಕ್ಷೆ ನಡೆಸಿದ ವೈದ್ಯರಿಗೆ, ಆಕೆಯ ಸಮಸ್ಯೆಗೆ ಪೋಷಕಾಂಶಗಳ ಕೊರತೆಯಿಂದ ಉದ್ಭವಿಸಿರುವ ರಕ್ತಹೀನತೆಯೇ ಕಾರಣವೆಂದು ತಿಳಿಯಿತು. ಚಿಕಿತ್ಸೆಯ ಮೊದಲ ಹಂತದಲ್ಲಿ ಆಕೆಗೆ ಜಂತು ಹುಳಗಳ ನಿವಾರಣೆಗಾಗಿ ಔಷದವನ್ನು ನೀಡಿ, ತದನಂತರ ನಿಶ್ಶಕ್ತಿಯನ್ನು ಕಡಿಮೆಮಾಡಲು ನಾಲ್ಕಾರು ಇಂಜೆಕ್ಷನ್ ನೀಡಲಾಯಿತು.ಬಳಿಕ ದಿನನಿತ್ಯ ಸೇವಿಸಬೇಕಾದ ಕಬ್ಬಿಣದ ಸತ್ವಗಳ ಮಾತ್ರೆಗಳನ್ನು ನೀಡಿದ ವೈದ್ಯರು, ಅಹಾರಸೇ ವನೆಯಲ್ಲಿ ಪರಿಪಾಲಿಸಬೇಕಾದ ನಿಯಮಗಳನ್ನು ವಿವರಿಸಿ ತಿಂಗಳು ಕಳೆದ ನಂತರ ಬರುವಂತೆ ಆದೇಶಿಸಿದ್ದರು. 

ಮುಂದಿನ ತಿಂಗಳು ಮರಳಿದ ಲಕ್ಷ್ಮಿಯ ನಿಶ್ಶಕ್ತಿ ಮತ್ತು ತಲೆತಿರುಗುವಿಕೆಯ ಸಮಸ್ಯೆಗಳು ಸಂಪೂರ್ಣವಾಗಿ ಮಾಯವಾಗಿದ್ದವು. ಮತ್ತೆ ಒಂದು ತಿಂಗಳ ಕಬ್ಬಿಣದ ಸತ್ವದ ಮಾತ್ರೆಗಳನ್ನು ನೀಡಿದ ವೈದ್ಯರ ಬಾಲಿ ಚಿನ್ನಮ್ಮನು ಇನ್ನೂ ಒಂದು ಬಗೆಯ ಔಷದವನ್ನು ನೀಡುವಂತೆ ಒತ್ತಾಯಿಸಿದ್ದಳು. ಅವಶ್ಯಕತೆಗಿಂತ ಹೆಚ್ಚು ನೀಡಲು ಸಮ್ಮತಿಸದ ವೈದ್ಯರು ಆಕೆಯ ಕೋರಿಕೆಯನ್ನು ನಿರಾಕರಿಸಿದ್ದರು. ಇದನ್ನು ಕೇಳಿ ಹೌಹಾರಿದಂತೆ ಕಂಡುಬಂದ ಚಿನ್ನಮ್ಮನ ಕಣ್ಣಲ್ಲಿ ನೀರು ತುಂಬಿತ್ತು. ಇದರ ಕಾರಣವರಿಯುವ ಕುತೂಹಲದಿಂದ ವೈದ್ಯರು ಆಕೆಯನ್ನು ಪ್ರಶ್ನಿಸಿದಾಗ ದೊರೆತ ಉತ್ತರವನ್ನು ಕೇಳಿ ವೈದ್ಯರಿಗೆ ದಿಗ್ಭ್ರಮೆಯಾಗಿತ್ತು. ಏಕೆಂದರೆ ಮಗಳ ಚಿಕಿತ್ಸೆಯ ಬಗ್ಗೆ ದೇವರಲ್ಲಿ ಪ್ರಶ್ನಿಸಿದಾಗ "ಪ್ರಸ್ತುತ ವೈದ್ಯರು ನೀಡಿರುವ ಚಿಕಿತ್ಸೆ ಸಮರ್ಪಕವಾಗಿದ್ದರೂ, ಮೂರು ವಿಧದ ಔಷದಗಳನ್ನು ನೀಡಿರುವುದರಿಂದ ಪರಿಣಾಮಕಾರಿಯಾಗದು. ಆದುದರಿಂದ ಚಿಕಿತ್ಸೆ ಇನ್ನಷ್ಟು ಫಲಪ್ರದವೆನಿಸಲು ಇನ್ನೂ ಒಂದು ವಿಧದ ಔಷದವನ್ನು ವೈದ್ಯರಿಂದ ಕೇಳಿ ಪಡೆಯಿರಿ' ಎಂದು ದೇವರ ಅಪ್ಪನೆಯಾಗಿತ್ತು!. ಆಶ್ಚರ್ಯಚಕಿತರಾದ ವೈದ್ಯರು ಈ ದೇವರ ದರ್ಶನ ಎಲ್ಲಿ ನಡೆಯುವುದೆಂದು ಕೇಳಿದಾಗ, ಸ್ವತಃ ಲಕ್ಷ್ಮಿಯ ಮೈಮೇಲೆ ದೇವರು ಬರುವ ವಿಚಾರ ತಿಳಿದುಬಂದಿತ್ತು.

ಚಿನ್ನಮ್ಮನಂತೆ ಮೂಢನಂಬಿಕೆ ಮತ್ತು ಕಂದಾಚಾರಗಳಿಗೆ ತಲೆಬಾಗುವ ಕೋಟ್ಯಂತರ ಜನರು ಭಾರತದಲ್ಲಿದ್ದಾರೆ. ಲಕ್ಷ್ಮಿಗೆ ಚಿಕಿತ್ಸೆಯನ್ನು ನೀಡಿದ ವೈದ್ಯರು ಇತರ ಯಾವುದೇ ವೈದ್ಯರು ನೀಡುವಂತಹ ಔಷದಗಳನ್ನು ನೀಡಿ, ನಿರೀಕ್ಷಿತ ಪರಿಣಾಮ ಕಂಡುಬಂದರೂ, ಚಿನ್ನಮ್ಮನಂತೆ ದೇವರ ಅಪ್ಪಣೆ ಪಡೆಯ ಬಯಸುವುದು ನಂಬಲಸಾಧ್ಯವೆನಿಸುತ್ತದೆ. ಜೊತೆಗೆ ಅವಿದ್ಯಾವಂತೆ ಚಿನ್ನಮ್ಮನು ತನ್ನ ಮಗಳ ಶರೀರದಲ್ಲಿ ಪ್ರತ್ಯಕ್ಷವಾಗುವ ದೇವತೆಯು ಆಕೆಯ ಆರೋಗ್ಯವನ್ನು ರಕ್ಷಿಸದಿರಲು ಕಾರಣವೇನೆಂದು ಚಿಂತನೆ ಮಾಡುವಷ್ಟು ಬುದ್ಧಿವಂತಳೂ ಆಗಿರಲಿಲ್ಲ. 

ಅಂತಿಮವಾಗಿ ಲಕ್ಷ್ಮಿಗೆ ಇನ್ನೊಂದು ವಿಧದ ಔಷದವನ್ನು ನೀಡಲು ವೈದ್ಯರು ನಿರಾಕರಿಸಿದ ಕಾರಣದಿಂದಾಗಿ, ಚಿನ್ನಮ್ಮನು ಪೇಟೆಯ ಔಷದ ಅಂಗಡಿಯಿಂದ ಒಂದು ಬಾಟಲಿ ಟಾನಿಕ್ ಖರೀದಿಸಿ ಮಗಳಿಗೆ ಕುಡಿಸಿದ್ದು ನಿಮ್ಮಾಣೆಗೂ ಸತ್ಯ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೨-೦೨-೨೦೦೪ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ (ಸತ್ಯ ಘಟನೆಗಳ ಆಧಾರದಲ್ಲಿ ಬರೆದಿರುವ) ಲೇಖನ . 



Saturday, December 28, 2013

INDIA opposes ban on ENDOSULPHAN!



 ಎಂಡೋಸಲ್ಫಾನ್  ನಿಷೇಧಕ್ಕೆ ಭಾರತದ ಪ್ರತಿರೋಧವೇಕೆ?

ದಿನನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ನಿಮ್ಮಲ್ಲಿದ್ದಲ್ಲಿ, ಆಗಾಗ ಪ್ರಕಟವಾಗುವ "ಎಂಡೋಸಲ್ಪ್ಹಾನ್ ಗೆ ಮತ್ತೊಂದು ಬಲಿ" ಎನ್ನುವ ಸುದ್ದಿಯನ್ನು ನೀವೂ ಓದಿರಲೇಬೇಕು. ಈ ಮಾರಕ ಕೀಟನಾಶಕದ ಹಾವಳಿಗೆ ಈಗಾಗಲೇ ನೂರಾರು ಅಮಾಯಕರು ಬಲಿಯಾಗಿದ್ದರೂ, ನಿಷೇಧಿತ ಕೀಟನಾಶಕಗಳ ಪಟ್ಟಿಯಲ್ಲಿ ಇದನ್ನು ಸೇರಿಸಲು ಭಾರತವಿ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
-----------            --------------               -----------                -------------                 ---------             

 ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ ತಯಾರಿಸಿ ಮಾರಾತಮಾದುತ್ತಿದ್ದ ಲಘುಪಾನೀಯಗಳಲ್ಲಿ ಅಪಾಯಕಾರಿ ಕೀಟನಾಶಕಗಳ ಅಂಶ ಪತ್ತೆಯಾದ ವರದಿಗಳು ಪ್ರಕಟವಾದೊಡನೆ ಉದ್ಭವಿಸಿದ್ದ "ಕೋಲಾಹಲ" ವನ್ನು ನೀವೂ ಮರೆತಿರಲಾರಿರಿ. ಅದೇ ರೀತಿಯಲ್ಲಿ ಇದೇ ದಶಕದ ಆದಿಯಲ್ಲಿ ಕಾಸರಗೋಡು ಸಮೀಪದ ಪದ್ರೆಯ ಆಸುಪಾಸಿನ ನೂರಾರು ನಿವಾಸಿಗಳು ಎಂಡೋಸಲ್ಪ್ಹಾನ್ ಕೀಟನಾಶಕದ ವಿಷಕಾರಕ ಪರಿಣಾಮಗಳಿಗೆ ಬಲಿಯಾದ ಮತ್ತು ನೂರಾರು ನಿವಾಸಿಗಳು ಗಂಭೀರ ಹಾಗೂ ಅಸಾಮಾನ್ಯ ಆರೋಗ್ಯದ ಸಮಸ್ಯೆಗಳಿಂದ ಇಂದಿಗೂ ಬಳಲುತ್ತಿರುವ ವರದಿಗಳನ್ನೂ ಮರೆತಿರುವ ಸಾಧ್ಯತೆಗಳಿಲ್ಲ. ಏಕೆಂದರೆ "ಎಂಡೋಸಲ್ಪ್ಹಾನ್ ಗೆ ಮತ್ತೊಂದು ಬಲಿ' ಎನ್ನುವ ಶೀರ್ಷಿಕೆಯಡಿಯಲ್ಲಿ, ಅಮಾಯಕರು ಮೃತಪಟ್ಟ ವರದಿಗಳು ಇಂದಿಗೂ ಪ್ರಕಟವಾಗುತ್ತಲೇ ಇವೆ. ಇದೇ ರೀತಿಯ ಸಮಸ್ಯೆಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಮತ್ತು ಬಂಟ್ವಾಳ ತಾಲೂಕುಗಳ ಕೆಲ ಪ್ರದೇಶಗಳಲ್ಲೂ ಕಂಡುಬಂದಿವೆ. ಆದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಎಂಡೋಸಲ್ಪ್ಹಾನ್ ಕೀಟ ನಾಶಕವನ್ನು ನಿಷೆಧಿಸುವ ಪ್ರಸ್ತಾವನೆಗೆ ಭಾರತ ಮತ್ತೊಮ್ಮೆ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ಇದರೊಂದಿಗೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು "ಎಂಡೋಸಲ್ಫಾನ್ ಸಿಂಪಡಿಕೆಯಿಂದ ಭಾರತೀಯರಿಗೆ ಯಾವುದೇ ರೀತಿಯ ತೊಂದರೆಗಳೇ ಸಂಭವಿಸಿಲ್ಲ" ಎಂದು ಘೋಷಿಸಿದೆ!. 

ಇವೆಲ್ಲಕ್ಕೂ ಮಿಗಿಲಾಗಿ ಎಂಡೋಸಲ್ಪ್ಹಾನ್ ನ ತಾಂಡವ ನೃತ್ಯದ ವರದಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವೂ, ಚಿಕ್ಕಮಗಳೂರಿನ ಆಸುಪಾಸಿನ ಕಾಫಿ ತೋಟಗಳಲ್ಲಿ ಹಾವಳಿ ಎಬ್ಬಿಸುತ್ತಿರುವ "ಬೋರರ್" ಕೀಟಗಳನ್ನು ನಾಶಪಡಿಸಲು ಎಂಡೋಸಲ್ಪ್ಹಾನ್ ಕೀತನಾಶಕವನ್ನು ಸಿಂಪಡಿಸುವಂತೆ ಕಾಫಿ ಬೋರ್ಡ್ ಸೂಚಿಸಿದೆ!. 

ಮಹಾದುರಂತ 

೧೯೯೦ ರ ದಶಕದಲ್ಲಿ ಕೇರಳದ ಕಾಸರಗೋಡು ತಾಲೂಕಿನ ಸ್ವರ್ಗ, ಪಡ್ರೆ, ಎನ್ಮಕಜೆ ಮತ್ತು ಕುಮ್ಬ್ದಾಜೆ ಪ್ರದೇಶಗಳ ನಿವಾಸಿಗಳಲ್ಲಿ ಅಸಾಮಾನ್ಯ ಹಾಗೂ ಮಾರಕ ಆರೋಗ್ಯದ ಸಮಸ್ಯೆಗಳು ಪತ್ತೆಯಾಗಿದ್ದವು. ಅನೇಕ ವಿಧದ ಕ್ಯಾನ್ಸರ್, ಆಸ್ತಮಾ, ಅಪಸ್ಮಾರ, ಜನ್ಮದತ್ತ ಅಂಗವೈಕಲ್ಯಗಳು, ಬುದ್ಧಿಮಾಂದ್ಯ, ಕೈಕಾಲುಗಳಲ್ಲಿ ಬಲಹೀನತೆ, ಬಂಜೆತನ, ನಪುಂಸಕತ್ವ, ವೈವಿಧ್ಯಮಯ ಚರ್ಮರೋಗಗಳು, ಕೇಂದ್ರ ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳು, ರಕ್ತಹೀನತೆ ಮತ್ತು ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವಂತಹ ಕಾಯಿಲೆಗಳು ಈ ಪ್ರದೇಶದ ನಿವಾಸಿಗಳನ್ನು ಕಾಡಲು ಆರಂಭಿಸಿದ್ದವು. ಇವರಲ್ಲಿ ಕೆಲವರು ಕ್ಯಾನ್ಸರ್ ನಂತಹ ಕಾಯಿಲೆಯಿಂದ ಮೃತಪಟ್ಟಲ್ಲಿ, ಇನ್ನು ಕೆಲವರು ತಮ್ಮನ್ನು ಪೀಡಿಸುತ್ತಿದ್ದ ವ್ಯಾಧಿಗಳ ಬಾಧೆಯನ್ನು ಸಹಿಸಲಾರದೇಆತ್ಮಹತ್ಯೆಗೆ ಶರಣಾಗಿದ್ದರು. ಇನ್ನೂ ಬದುಕಿ ಉಳಿದಿರುವ ಸಹಸ್ರಾರು ಜನರು ಇದೀಗ ಜೀವಂತ ಶವಗಳಂತೆ ಬದುಕನ್ನು ಸಾಗಿಸುತ್ತಿದ್ದಾರೆ. 

ಸರಿಸುಮಾರು ಇದೇ ಸಮಯದಲ್ಲಿ ದಕ್ಷಿನ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ, ಕೊಕ್ಕಡ, ನಿಡ್ಲೆ ಮತ್ತು ಪಟ್ರಮೆ ಪರಿಸರದ ನಿವಾಸಿಗಳಲ್ಲೂ ಇದೇ ರೀತಿಯ ಅಸಾಮಾನ್ಯ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಈ ರೀತಿಯಲ್ಲಿ ವಿಭಿನ್ನ ರಾಜ್ಯಗಳ ವಿಭಿನ್ನ ಪ್ರದೇಶಗಳ ನಿವಾಸಿಗಳನ್ನು ಬಾಧಿಸುತ್ತಿರುವ ಏಕರೀತಿಯ ಸಮಸ್ಯೆಗಳ ಮೂಲವನ್ನು ಪತ್ತೆ ಹಚ್ಚುವ ಪ್ರಯತ್ನವು ಕೊನೆಗೂ ಫಲಪ್ರದವೆನಿಸಿತ್ತು. ೧೯೭೦ ರ ದಶಕದಲ್ಲಿ ಇವೆರಡೂ ಪ್ರದೇಶಗಳಲ್ಲಿರುವ ಸಹಸ್ರಾರು ಎಕರೆ ಗೇರು ತೋಟಗಳಿಗೆ ಹೆಲಿಕಾಪ್ಟರ್ ಬಳಸಿ ಎಂಡೋಸಲ್ಪ್ಹಾನ್ ಕೀಟನಾಶಕವನ್ನು ವರ್ಷದಲ್ಲಿ ಎರಡು ಬಾರಿಯಂತೆ, ಸುಮಾರು ಎರಡು ದಶಕಗಳಿಗೂ ಅಧಿಕ ಕಾಲ ಸಿಂಪಡಿಸಿದ್ದುದೇ ಈ ಸಮಸ್ಯೆಗಳಿಗೆ ಕಾರಣವೆನಿಸಿತ್ತು. 

ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗರ ನೇತೃತ್ವದ ಕೆ. ಎಂ. ಸಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಮತ್ತು ದೆಹಲಿಯ ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವೈರಾನ್ಮೆಂಟ್ ಸಂಸ್ಥೆಯ ವಿಜ್ಞಾನಿಗಳ ತಂಡಗಳು ಪಡ್ರೆ ಪರಿಸರದಲ್ಲಿ ನಡೆಸಿದ್ದ ಅಧ್ಯನದ ಫಲವಾಗಿ, ಎಂಡೋಸಲ್ಪ್ಹಾನ್ ಕೀಟನಾಶಕದ ದೀರ್ಘಕಾಲೀನ ದುಷ್ಪರಿಣಾಮಗಳೇ ಈ ಸಮಸ್ಯೆಗಳಿಗೆ ಕಾರಣವೆಂದು ಸಾಬೀತಾಗಿತ್ತು. 

ಈ ಅಧ್ಯಯನದ ವರದಿಗಳು ತರಂಗ ವಾರ ಪತ್ರಿಕೆ ಮತ್ತು ಡೌನ್ ಟು ಅರ್ತ್ ಆಂಗ್ಲ ಪಾಕ್ಷಿಕ ಮತ್ತು ಸ್ಟಾರ್ ಟಿ ವಿ ಮತ್ತಿತರ ಚಾನೆಲ್ ಗಳಲ್ಲಿ ಪ್ರಕಟವಾದ ಬಳಿಕವೂ, ಕೇರಳ ರಾಜ್ಯ ಸರಕಾರ ಮಾತ್ರ ಇವೆಲ್ಲಾ ಸಮಸ್ಯೆಗಳಿಗೆ ಎಂಡೋಸಲ್ಫಾನ ಸಿಂಪಡಿಕೆಯೇ ಕಾರಣವೆಂದು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ಅಂದಿನ ದಿನಗಳಲ್ಲಿ ೪೦೦೦ ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸುತ್ತಿದ್ದ ಇಂತಹ ರಾಸಾಯನಿಕ ಕೀಟನಾಶಕಗಳ ತಯಾರಕರು, ಇವೆಲ್ಲಾ ವರದಿಗಳು ಸ್ಥಾಪಿತ ಹಿತಾಸಕ್ತಿಗಳು ತಮ್ಮ ವಿರುದ್ಧ ನಡೆಸಿರುವ ಫಿತೂರಿ ಎಂದು ದೂರಲು ಹಿಂಜರಿಯಲಿಲ್ಲ!. 

ಕೊನೆಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದ ಕೇರಳ ಸರಕಾರವು ಎಂಡೋಸಲ್ಪ್ಹಾನ್ ಸಿಂಪಡನೆಯನ್ನು ತಾತ್ಕಾಲಿಕವಾಗಿ ನಿಷೆಧಿಸಿದರೂ, ಪಡ್ರೆ ಪರಿಸರದ ಸಂತ್ರಸ್ತರಿಗೆ ಪರಿಹಾರವನ್ನು ನೀಡಿರಲಿಲ್ಲ. ಆದರೆ ಎಂಡೋಸಲ್ಪ್ಹಾನ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಚ್ಚುತಾನಂದನ್ ಮುಖ್ಯಮಂತ್ರಿಯಾದ ಬಳಿಕ ಈ ಸಂತ್ರಸ್ತರಿಗೆ ಕಿಂಚಿತ್ ಪರಿಹಾರವನ್ನು ಮಂಜೂರು ಮಾಡಿದ್ದರು. 

ಕರ್ನಾಟಕ ರಾಜ್ಯ ಸರಕಾರವೂ ಕೊಕ್ಕಡ, ಅರಸಿನಮಕ್ಕಿ, ಪಟ್ರಮೆ ಮತ್ತು ನಿಡ್ಲೆ ಪರಿಸರದ ನಿವಾಸಿಗಳನ್ನು ಪೀಡಿಸುತ್ತಿರುವ ಅನಾರೋಗ್ಯದ ಸಮಸ್ಯೆಗಳನ್ನು ಅಧ್ಯಯನ ಮಾಡಲು ತನಿಖಾ ತಂಡಗಳನ್ನು ನೇಮಕ ಮಾಡಿ ವರ್ಷಗಳೇ ಕಳೆದಿದ್ದರೂ, ಇಲ್ಲಿನ ಸಂತ್ರಸ್ತರಿಗೆ ಮಾತ್ರ ಸರಕಾರದಿಂದ ಇಂದಿನ ತನಕ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಇತ್ತೀಚಿಗೆ ಸಂಸದರಾಗಿ ಆಯ್ಕೆಯಾಗಿರುವ ಡಿ. ವಿ. ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲು ಇವರು ಸೌತದ್ಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎಂಡೋಸಲ್ಪ್ಹಾನ್ ಸಂತ್ರಸ್ತರ ಸಮಸ್ಯೆಗಳ ಅಧ್ಯಯನ ನಡೆಸಲು ಮತ್ತೊಂದು ತನಿಖಾ ತಂಡವನ್ನು ನೇಮಿಸುವ ಮತ್ತು ರಾಜ್ಯ ಸರಕಾರದಿಂದ ಪರಿಹಾರವನ್ನು ಕೊಡಿಸುವ ಪ್ರಯತ್ನಿಸುವ ಭರವಸೆಯನ್ನು ನೀಡಿದ್ದರು. ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿಯನ್ನು ನೀಡಿದ್ದ ಸಂದರ್ಭದಲ್ಲಿ, ಜೀವಂತ ಶವಗಳಂತೆ ಬದುಕುತ್ತಿರುವ ಇಲ್ಲಿನ ಸಂತ್ರಸ್ತರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ನೂರಾರು ಅಮಾಯಕರ ಪ್ರಾಣಕ್ಕೆ ಎರವಾಗಿರುವ ಮತ್ತು ಗಂಭೀರ ಕಾಯಿಲೆಗಳಿಗೆ ಕಾರಣವೆನಿಸಿರುವ ಈ ಮಾರಕ ಕೀಟನಾಶಕವನ್ನು ನಿಷೇಧಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. 

ಎಂಡೋಸಲ್ಫಾನ್ ನಿಂದ ಗಂಡಾಂತರ 

೧೯೫೦ ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಎಂಡೋಸಲ್ಪ್ಹಾನ್ ಕೀಟನಾಶಕವು ಸೈಕ್ಲೋಡೈನ್ ಗುಂಪಿಗೆ ಸೇರಿದೆ. ಕೇವಲ ಎರಡರಿಂದ ಮೂರು ದಶಕಗಳ ಬಳಕೆಯ ಬಳಿಕ ಈ ವಿಷಕಾರಕ ಕೀಟನಾಶಕವು ಮನುಷ್ಯರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಮನಿಸಿದ ಅನೇಕ ಪಾಶ್ಚಾತ್ಯ ದೇಶಗಳು  ೧೯೮೪ ರಲ್ಲೇ ಇದನ್ನು ನಿಷೇಧಿಸಿದ್ದವು. ತದನಂತರ ೯೦ ರ ದಶಕದಲ್ಲಿ ಇದರ ಮಾರಕತೆ ಮತ್ತು ರೋಗಕಾರಕ ದುಷ್ಪರಿಣಾಮಗಳನ್ನು ಹಲವಾರು ರಾಷ್ಟ್ರಗಳ ಅನೇಕ ವಿಜ್ಞಾನಿಗಳು ದಾಖಲಿಸಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಭಾರತ ಸರಕಾರವು ಇಂದಿನ ತನಕ ಇದನ್ನು ನಿಷೇಧಿಸಿಲ್ಲ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಅಮೇಕ ಭಾರತೀಯ ಕೃಷಿಕರು, ಈ ಕೀಟನಾಶಕದ ಬಳಕೆಯನ್ನೂ ನಿಲ್ಲಿಸಿಲ್ಲ. 

ಕಾಸರಗೋಡು ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಎಂಡೋಸಲ್ಪ್ಹಾನ್ ನ ತಾಂಡವ ನೃತ್ಯವನ್ನು ಕಂಡಿದ್ದರೂ, ದ. ಕ ಜಿಲ್ಲೆಯ ಅನೇಕ ಕೃಷಿಕರು, ಅಡಿಕೆ ಮರಗಳಿಗೆ ಸಿಂಪಡಿಸುವ "ಬೋರ್ಡೊ ದ್ರಾವಣ' ಕ್ಕೆ ಎಂಡೋಸಲ್ಪ್ಹಾನ್ ಬೆರೆಸಲು ಆರಂಭಿಸಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ. 

ಭಾರತದ ಪ್ರತಿರೋಧ 

ಮಾರಕ ಎಂಡೋಸಲ್ಪ್ಹಾನ್ ಕೀಟನಾಶಕದ ಮಾರಾಟವನ್ನು ನಿರ್ಬಂಧಿಸುವ ಅಂತರ ರಾಷ್ಟ್ರೀಯ ಪ್ರಸ್ತಾವನೆಗೆ ಭಾರತವು ಮತ್ತೊಮ್ಮೆ ತನ್ನ ಪ್ರತಿರೋಧವನ್ನು ವ್ಯಕ್ತಪಡಿಸಿದೆ. ತನ್ಮೂಲಕ ವಿಶ್ವಾದ್ಯಂತ ಇನ್ನಷ್ಟು ಅಮಾಯಕರು ಇದಕ್ಕೆ ಬಲಿಯಾಗುವ ಅವಕಾಶವನ್ನು ಕಲ್ಪಿಸಿದೆ. 

ಸಂಯುಕ್ತ ರಾಷ್ಟ್ರಗಳ ರಾಸಾಯನಿಕ ಮಾಹಿತಿ ಒಡಂಬಡಿಕೆಯಂತೆ, ಈ ಕೀಟನಾಶಕವನ್ನು ನಿರ್ಯಾತ ಮಾಡುವ ರಾಷ್ಟ್ರಗಳು ಇದರ ಅಪಾಯಕಾರಿ ದುಷ್ಪರಿಣಾಮಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಜೊತೆಗೆ ಇದನ್ನು ಆಯಾತ ಮಾಡಿಕೊಳ್ಳುವ ರಾಷ್ಟ್ರಗಳ ಪೂರ್ವ ಸೂಚಿತ ಸಮ್ಮತಿ (Prior informed consent- PIC) ಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. 

ರೋಮ್ ನಲ್ಲಿ ಇದೇ ವರ್ಷದ ಮಾರ್ಚ್ ೨೩ ರಿಂದ ೨೭ ರ ತನಕ ಜರಗಿದ PIC ರಾಸಾಯನಿಕ ಪುನರ್ ವಿಮರ್ಶಾ ಸಮಿತಿ (Chemical review committee- CRC) ಯ ಸಭೆಯಲ್ಲಿ ಭಾಗವಹಿಸಿದ್ದ ೨೯ ರಾಷ್ಟ್ರಗಳಲ್ಲಿ, ಭಾರತವನ್ನು ಹೊರತುಪಡಿಸಿ ಇತರ ಎಲ್ಲ ರಾಷ್ಟ್ರಗಳ ಪ್ರತಿನಿಧಿಗಳು ಎಂಡೋಸಲ್ಪ್ಹಾನ್ ಕೀಟನಾಶಕವನ್ನು ನಿರ್ಬಂಧಿತ ಕೀಟನಾಶಕಗಳ ಪಟ್ಟಿಯಲ್ಲಿ ಸೇರಿಸಲು ಒತ್ತಾಯಿಸಿದ್ದರು. ಆಫ್ರಿಕಾ ಖಂಡದ ಐದು ರಾಷ್ಟ್ರಗಳಲ್ಲಿ ಹತ್ತಿಯನ್ನು ಬೆಳೆಯುವ ಸಹಸ್ರಾರು ಕೃಷಿಕರು ಇದರ ದುಷ್ಪರಿಣಾಮಗಳಿಗೆ  ಬಲಿಯಾದ ಮತ್ತು ಅನಾರೋಗ್ಯ ಪೀಡಿತರಾಗಿರುವ ವರದಿಗಳೇ ಇದಕ್ಕೆ ಪ್ರಮುಖ ಕಾರಣವೆನಿಸಿತ್ತು. ಭಾರತದಲ್ಲೂ ತನ್ನ ಮಾರಕತೆಯನ್ನು ಮೆರೆದಿದ್ದ ಈ ಕೀಟನಾಶಕವನ್ನು ನಿರ್ಬಂಧಿಸಲು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿದ ಭಾರತದ ಪ್ರತಿನಿಧಿಯು, ಎಂಡೋಸಲ್ಪ್ಹಾನ್ ನ ಮೇಲೆ ನಿರ್ಬಂಧವನ್ನು ಹೇರುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಇದರೊಂದಿಗೆ ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಎಂಡೋಸಲ್ಪ್ಹಾನ್ ನ ದುಷ್ಪರಿಣಾಮಗಳ ಬಗ್ಗೆ ಲಭ್ಯವಿರುವ ಅಧ್ಯಯನಗಳ ವರದಿಗಳು ಅಪೂರ್ನವಾಗಿವೆ ಎನ್ನುವ ನೆಪವನ್ನು ಮುಂದೊಡ್ಡಿದ್ದರು. 

ಭಾರತವನ್ನು ಪ್ರತಿನಿಧಿಸಿದ್ದ ಪರಿಸರ ಮಂತ್ರಾಲಯದ ಸಲಹೆಗಾರ ಜಿ. ಕೆ. ಪಾಂಡೆ ಯವರು, ಈ ಸಭೆಯಲ್ಲಿ "ಭಾರತ ದೇಶದಲ್ಲಿ ಈ ಕೀಟನಾಶಕದ ಸಿಂಪಡಿಕೆಯಿಂದ ಒಬ್ಬನೇ ಒಬ್ಬ ವ್ಯಕ್ತಿಯೂ ಪೀಡಿತನಾಗಿಲ್ಲ' ಎಂದು ಘೋಷಿಸಿದ್ದರು!. 

ಇದಕ್ಕೂ ಮುನ್ನ ಗತವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದ ಸಭೆಯಲ್ಲಿ, ಎಂಡೋಸಲ್ಪ್ಹಾನ್ ಕೀಟನಾಶಕವನ್ನು PIC ಪಟ್ಟಿಯಲ್ಲಿ ಸೇರಿಸುವ ಪ್ರಸ್ತಾವನೆಯನ್ನು ಭಾರತವು ಪ್ರಬಲವಾಗಿ ವಿರೋಧಿಸಿತ್ತು. 

ಮನುಕುಲಕ್ಕೆ ಮಾರಕವೆನಿಸುತ್ತಿರುವ ಹಲವಾರು ಕೀಟನಾಶಕಗಳನ್ನು ನಿಷೇಧಿಸುವಂತೆ ಹೋರಾಡುತ್ತಿರುವ ಕಾರ್ಯಕರ್ತರೊಬ್ಬರ ಅಭಿಪ್ರಾಯದಂತೆ, CRC ಸಭೆಯಲ್ಲಿ ಈ ಕೀಟನಾಶಕವನ್ನು ನಿರ್ಬಂಧಿಸುವ ವಿಚಾರದಲ್ಲಿ ಸರ್ವಾನುಮತದ ಅನುಮೋದನೆ ದೊರೆಯದೇ ಇದ್ದಲ್ಲಿ, ಈ ಸಮಿತಿಯು ೨/೩ ಬಹುಮತದೊಂದಿಗೆ ಇದನ್ನು ಅಂಗೀಕರಿಸಬಹುದಾಗಿದೆ. ಮುಂದಿನ CRC ಸಭೆಯಲ್ಲಿ ಎಂಡೋಸಲ್ಪ್ಹಾನ್ ಕೀಟನಾಶಕವನ್ನು ಈ ಪಟ್ಟಿಯಲ್ಲಿ ಸೇರಿಸದೆ ಇದ್ದಲ್ಲಿ, ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳ ಸಹಸ್ರಾರು ಜನರು ಇದಕ್ಕೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ. 

ಈ ಲೇಖನ ಅಚ್ಚಿಗೆ ಹೋಗುವ ಮುನ್ನ ತಿಳಿದುಬಂದಂತೆ ವಿಶ್ವದಲ್ಲೇ ಅತ್ಯಧಿಕ ಪ್ರಮಾಣದ ಎಂಡೋಸಲ್ಪ್ಹಾನ್ ತಯಾರಿಸುತ್ತಿರುವ " ಬಾಯರ್ ಎ ಜಿ ಸಂಸ್ಥೆ"ಯು ೨೦೧೦ ರಿಂದ ಇದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಕೀಟನಾಶಕವನ್ನು ಅತ್ಯಂತ ಅಪಾಯಕಾರಿ ಎಂದು ಘೋಷಿಸಿದ್ದು, ಯುರೋಪಿಯನ್ ಒಕ್ಕೂಟದ ೨೭ ದೇಶಗಳು ಸೇರಿದಂತೆ ವಿಶ್ವದ ೬೨ ರಾಷ್ಟ್ರಗಳು ಇದನ್ನು ನಿಷೇಧಿಸಿವೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೭- ೦೮-೨೦೦೯ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


Friday, December 27, 2013

NIMMA MAKKALU AAROGYAPEYAVANNU SEVISUTTIRUVARE?



  ನಿಮ್ಮ ಮಕ್ಕಳು ಆರೋಗ್ಯಪೇಯಗಳನ್ನು ಸೇವಿಸುತ್ತಿರುವರೇ?

ತಮ್ಮ ಪುಟ್ಟ ಕಂದನು ಹೊಟ್ಟೆತುಂಬುವಷ್ಟು ಆಹಾರವನ್ನೇ ಸೇವಿಸುತ್ತಿಲ್ಲ ಎಂದು ದೂರದೇ ಇರುವ ತಾಯಂದಿರು ಭಾರತದಲ್ಲಿ ಇರಲಾರು ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅದೇ ರೀತಿಯಲ್ಲಿ ವಯಸ್ಸಿಗೆ ತಕ್ಕಷ್ಟು ಎತ್ತರ ಹಾಗೂ ತೂಕವಿದ್ದು, ಆರೋಗ್ಯದಿಂದಿರುವ ತನ್ನ ಮಗು ದಷ್ಟಪುಷ್ಟವಾಗಿಲ್ಲ ಎಂದು ಕೊರಗುವ ಮಾತೆಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಹಾಗೂ ಇದೇ ಕಾರಣದಿಂದಾಗಿ ತಮ್ಮ ಸಣ್ಣಪುಟ್ಟ ಮಕ್ಕಳಿಗೂ "ಆರೋಗ್ಯಪೇಯ" ((Health drink) ಗಳನ್ನು ನೀಡುವ ಕೆಟ್ಟ ಹವ್ಯಾಸ ಅನೇಕ ತಾಯಂದಿರಲ್ಲಿ ಇದೆ. ಏಕೆಂದರೆ ಇಂತಹ ಆರೋಗ್ಯಪೇಯಗಳನ್ನು ಕುಡಿಯುವ ಮಕ್ಕಳು ದಷ್ಟಪುಷ್ಟವಾಗಿ ಬೆಳೆಯುತ್ತಾರೆಂದು ಭಾರತೀಯ ನಾರಿಯರು ಧೃಢವಾಗಿ ನಂಬಿದ್ದಾರೆ!. 

ಆರೋಗ್ಯ- ಶಕ್ತಿವರ್ಧಕ ಪೇಯಗಳು 

ಪ್ರತಿನಿತ್ಯ ನೀವು ಸಿದ್ಧಪಡಿಸುವ ಆಹಾರವನ್ನು ಸೇವಿಸಲು ನಿರಾಕರಿಸುವ ಮಕ್ಕಳಿಗೆ ಪರಿಪೂರ್ಣ ಪೋಷಕಾಂಶಗಳನ್ನು ಒದಗಿಸುವ, ಶಾರೀರಿಕ ಹಾಗೂ ಮಾನಸಿಕ ಶಕ್ತಿಗಳೊಂದಿಗೆ ಶರೀರದ ಬೆಳವಣಿಗೆಯನ್ನು ವೃದ್ಧಿಸುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಿಮ್ಮ ಕಂದನ ಆರೋಗ್ಯವನ್ನು ಕಾಪಾಡಬಲ್ಲ ವೈವಿಧ್ಯಮಯ ಆರೋಗ್ಯಪೇಯಗಳ ಆಕರ್ಷಕ ಜಾಹೀರಾತುಗಳು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತವೆ. ಮಕ್ಕಳ ಬೆಳವಣಿಗೆಗೆ ಅತ್ಯವಶ್ಯಕವೆನಿಸುವ ವಿಭಿನ್ನ ಪೋಷಕಾಂಶಗಳು, ಖನಿಜಗಳು,ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಇತರ ಜೀವಸತ್ವಗಳಿಂದ ಸಮೃದ್ಧವಾಗಿದೆ ಎಂದು ಇವುಗಳ ತಯಾರಕರು ಸ್ವಯಂ ಘೋಷಿಸುವ ಜಾಹೀರಾತುಗಳಲ್ಲಿ,ಚಿಕ್ಕ ಮಕ್ಕಳ ಪಾಲಿಗೆ "ಹೀರೋ" ಗಳೆನಿಸಿರುವ ಪ್ರಖ್ಯಾತ ಕ್ರೀಡಾಪಟುಗಳನ್ನು ಬಳಸಲಾಗುತ್ತದೆ. ದೇಶದ ಮಾರುಕಟ್ಟೆಯಲ್ಲಿ ಇಂದು ಲಭ್ಯವಿರುವ ಅನ್ಯ ಅಸಂಖ್ಯ ಗ್ರಾಹಕ ಉತ್ಪನ್ನಗಳಂತೆಯೇ, ಇಂತಹ ಆರೋಗ್ಯ- ಶಕ್ತಿವರ್ಧಕ ಪೇಯಗಳ ಬಿರುಸಿನ ಮಾರಟಕ್ಕೆ ಬೇಕಾಗುವ "ಶಕ್ತಿ"ಯನ್ನು ಇಂತಹ ಚಿತ್ತಾಕರ್ಷಕ ಜಾಹೀರಾತುಗಳು ಒದಗಿಸುತ್ತವೆ. ಈ ಜಾಹೀರಾತುಗಳ ಮೋಡಿಗೆ ಮರುಳಾಗುವ ಗ್ರಾಹಕರಿಂದಾಗಿ, ಆರೋಗ್ಯಪೇಯಗಳ ಮಾರಾಟವು ವರ್ಷಂಪ್ರತಿ ಹೆಚ್ಚುತ್ತಲೇ ಇದೆ!. ಬಹುರಾಷ್ಟ್ರೀಯ ಮತ್ತು ಭಾರತೀಯ ಸಂಸ್ಥೆಗಳು ಗತವರ್ಷದಲ್ಲಿ ೧೫೦೦ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಹಿವಾಟನ್ನು ನಡೆಸಿದ್ದು, ಇವುಗಳು ಉತ್ಪಾದಿಸಿ ಮಾರಾಟಮಾಡಿದ್ದ ಆರೋಗ್ಯಪೇಯಗಳ ಪ್ರಮಾಣವು ೬೫ ಸಾವಿರ ಟನ್ ಗಳಾಗಿತ್ತು. 

ದೆಹಲಿಯಲ್ಲಿರುವ ಪ್ರಖ್ಯಾತ ಗ್ರಾಹಕ ರಕ್ಷಣಾ ಸಂಸ್ಥೆಯೊಂದು ೧೫ ವರ್ಷಕ್ಕಿಂತ ಕೆಳಗಿನ ಮಕ್ಕಳನ್ನೇ ಗುರಿಯಾಗಿಸಿ ಮಾರಾಟವಾಗುವ ೧೦ ವಿಭಿನ್ನ ಆರೋಗ್ಯಪೇಯಗಳ ಬಗ್ಗೆ ಒಂದೆರಡು ವರ್ಷಗಳ ಹಿಂದೆ ಅಧ್ಯಯನ ಮತ್ತು ಸಮೀಕ್ಷೆಗಳನ್ನು ನಡೆಸಿತ್ತು. ತತ್ಪರಿಣಾಮವಾಗಿ ದೆಹಲಿಯ ಶೇ. ೯೫.೫ ರಷ್ಟು ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಇಂತಹ ಆರೋಗ್ಯಪೇಯವೊಂದನ್ನುಕುಡಿಯುತ್ತರುವುದು ತಿಳಿದುಬಂದಿತ್ತು. ಇದರಲ್ಲಿ ಶೇ. ೯೦ ರಷ್ಟು ಮಕ್ಕಳು ಆರೋಗ್ಯಪೇಯಗಳ ಹರಳು ಅಥವಾ ಹುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದಲ್ಲಿ, ಇನ್ನುಳಿದವರು ಇದನ್ನು ನೇರವಾಗಿ ಬಾಯಿಗೆ ಹಾಕಿ ಚಪ್ಪರಿಸುತ್ತಿದ್ದರು. ಶೇ.೩೨ ರಷ್ಟು ಮಕ್ಕಳು ದಿನದಲ್ಲಿ ಒಂದುಬಾರಿ ಯಾವುದಾದರೊಂದು ಆರೋಗ್ಯಪೇಯವೊಂದನ್ನು ತಪ್ಪದೆ ಸೇವಿಸುತ್ತಿದ್ದರು. ವಿಶೇಷವೆಂದರೆ ಅಧಿಕತಮ ಮಕ್ಕಳೇ ಹೇಳುವಂತೆ ಆರೋಗ್ಯಪೇಯಗಳ ತಯಾರಕರು ತಮ್ಮ ಜಾಹೀರಾತುಗಳಲ್ಲಿ ಪ್ರಕಟಿಸುತ್ತಿದ್ದ ಆಶ್ವಾಸನೆಗಳು ( ಶಾರೀರಿಕ ಮತ್ತು ಮಾನಸಿಕ ಶಕ್ತಿ ಹಾಗೂ ಬೆಳವಣಿಗೆ ಹೆಚ್ಚುವ) ನಿಜವೆನಿಸಿದ್ದವು!. 

ಆರೋಗ್ಯಪೇಯಗಳಲ್ಲಿ  ಏನಿದೆ?

ಅಧಿಕತಮ ಆರೋಗ್ಯ- ಶಕ್ತಿವರ್ಧಕ ಪೇಯಗಳು ಮಾಲ್ಟ್ ಮೂಲದವುಗಳಾಗಿದ್ದು, ಇವುಗಳನ್ನು ಬಿಸಿಯಾದ ಅಥವಾ ಶೀತಲೀಕರಿಸಿದ ಹಾಲಿನಲ್ಲಿ ಬೆರೆಸಿ ಕುಡಿಯುವಂತೆ ಇವುಗಳ ತಯಾರಕರು ಸೂಚಿಸುತ್ತಾರೆ. ಆಶ್ಚರ್ಯವೆಂದರೆ ಹಾಲನ್ನು ಕಂಡೊಡನೆ ಮುಖವನ್ನು ಸಿನ್ದರಿಸುವ ಮಕ್ಕಳೂ, ಇಂತಹ ಸ್ವಾದಿಷ್ಟ ಪೇಯಗಳನ್ನು ಮನಸಾರೆ ಮೆಚ್ಚಿ ಗುಟುಕರಿಸುತ್ತಾರೆ!. 

ಆದ್ರೆ ಕೇವಲ ಇಂತಹ ಪೇಯಗಳನ್ನು ಮಾತ್ರ ಸೇವಿಸುವುದರಿಂದ ನಿಮ್ಮ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಶಕ್ತಿ ಮತ್ತು ಶರೀರದ ಎತ್ತರ ಹೆಚ್ಚುವ ಸಾಧ್ಯತೆಗಳಿಲ್ಲ. ಅದೇ ರೀತಿಯಲ್ಲಿ ಪ್ರತಿನಿತ್ಯ ಇಂತಹ ಪೇಯಗಳನ್ನು ಕುಡಿದಲ್ಲಿ ಕಂದನ ಶರೀರಕ್ಕೆ ಅತ್ಯವಶ್ಯಕವೆನಿಸುವ ಪೌಷ್ಟಿಕಾಂಶಗಳು- ಜೀವಸತ್ವಗಳು ಲಭಿಸುವುದಿಲ್ಲ. ಜೊತೆಗೆ ಹನ್ನುಹಂಪಳುಗಳು- ತರಕಾರಿಗಳನ್ನೇ ಸೇವಿಸದ ಮಕ್ಕಳು ಈ ಪೇಯಗಳನ್ನು ಸೇವಿಸುವ ಮೂಲಕ ಆರೋಗ್ಯವಂತರಾಗಿ ಇರುವುದು ಅಸಾಧ್ಯವೂ ಹೌದು. ಬಹುತೇಕ ವಿದ್ಯಾವನ್ತರಿಗೂ ಈ ಬಗ್ಗೆ ನಿಖರವಾದ ಮಾಹಿತಿ ತಿಳಿದಿರದ ಕಾರಣದಿಂದಾಗಿ, ಆರೋಗ್ಯಪೆಯಗಳು ಅಧಿಕತಮ ಮಕ್ಕಳ ದೈನಂದಿನ "ಆಹಾರ"ವಾಗಿ ಪರಿಣಮಿಸಿವೆ. 

ನಿಜ ಹೇಳಬೇಕಿದ್ದಲ್ಲಿ ಆರೋಗ್ಯಪೇಯಗಳನ್ನು ತಯಾರಿಸಲು ನೀವು ಬಳಸುವ "ಹಾಲು" ನಿಜಕ್ಕೂ ಒಂದು ಪರಿಪೂರ್ಣ ಆಹಾರವಾಗಿದೆ. ಉದಾಹರಣೆಗೆ ನಾವಿಂದು ಸಾಮಾನ್ಯವಾಗಿ ಬಳಸುವ ಹಸುವಿನ ಹಾಲು, ಅದರ ಕರುವಿನ ತ್ವರಿತ ಬೆಳವಣಿಗೆಗೆ ಅತ್ಯಂತ ಉಪಯುಕ್ತವೆನಿಸುತ್ತದೆ. ಅಕೆಂದರೆ ಹಸುವಿನ ಹಾಲಿನಲ್ಲಿ ಅನೇಕ ವಿಧದ ಪೋಷಕಾಂಶಗಳು ಇರುವುದರಿಂದ, ಪುಟ್ಟ ಮಕ್ಕಳ ಬೆಳವಣಿಗೆಯಲ್ಲೂ ಪರಿಣಾಮಕಾರಿ ಎನಿಸುತ್ತದೆ. 

ಮಾಲ್ಟ್ ಮೂಲದ ಪೇಯಗಳ ತಯಾರಿಕೆಯಲ್ಲಿ ಕೋಕೋ ಮತ್ತು ಸಕ್ಕರೆಗಳನ್ನು ಬಳಸುವುದರಿಂದ ಇವು ಸ್ವಾಭಾವಿಕವಾಗಿಯೇ ಸ್ವಾದಿಷ್ಟವಾಗಿರುತ್ತವೆ. ಆದರೆ ಕೋಕೋ ಸೇವಿಸಿದ ಸ್ವಲ್ಪ ಸಮಯದಲ್ಲೇ ತುಸು ಶಕ್ತಿ (Energy) ಹೆಚ್ಚುವುದಾದರೂ, ಇದರಿಂದ ಪುಟ್ಟ ಮಕ್ಕಳ ಹಸಿವು ನಶಿಸುತ್ತದೆ. 

ಭಾರತದಲ್ಲಿ ಮಾರಾಟವಾಗುತ್ತಿರುವ ಆರೋಗ್ಯಪೇಯಗಳಲ್ಲಿ ಕನಿಷ್ಠ ೩೭ ರಿಂದ ಗರಿಷ್ಠ ೭ ರಷ್ಟು ಪ್ರಮಾಣದ "ಸಕ್ಕರೆ" ಬೆರೆತಿರುತ್ತದೆ. ಕಿಲೋ ಒಂದರ ಸುಮಾರು ೩೦೦ ರೂ. ಗಳಿಂದ ೪೫೦ ರ್ರ್. ಗಳಿಗೆ ಮಾರಾಟವಾಗುವ ಇಂತಹ ಉತ್ಪನ್ನಗಳಲ್ಲಿ ಬೆರೆತಿರುವ ಸಕ್ಕರೆಯ ಬೆಲೆಯು ಕಿಲೋ ಒಂದರ ಸುಮಾರು ೩೦ ರಿಂದ ೩೨ ರೂ.ಗಳಾಗಿದೆ!. 

ಪ್ರತಿಯೊಂದು ಆರೋಗ್ಯಪೆಯದಲ್ಲೂ ವೈವಿಧ್ಯಮಯ ಪೋಷಕಾಂಶಗಳು, ಖನಿಜಗಳು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ನಾರಿನಂಶಗಳು ಇರುತ್ತವೆ. ಆದರೆ ಸಮತೋಲಿತ ಆಹಾರವನ್ನು ಸೇವಿಡುವ ಮಕ್ಕಳಿಗೆ, ಇದಕ್ಕಿಂತ ಅಧಿಕ ಪ್ರಮಾಣದ ಪೌಷ್ಟಿಕಾಂಶಗಳು ದೈನಂದಿನ ಆಹಾರದಲ್ಲೇ ಲಭಿಸುತ್ತವೆ. ಇದೇ ಕಾರಣದಿಂದಾಗಿ ಆರೋಗ್ಯಪೇಯಗಳು ಮಕ್ಕಳು ಪ್ರತಿನಿತ್ಯ ಸೇವಿಸುವ ಆಹಾರಕ್ಕೆ ಪರ್ಯಾಯ ಆಹಾರವೆನಿಸುವುದಿಲ್ಲ. 

ಬೆಳೆಯುವ ಮಕ್ಕಳಿಗೆ ಪ್ರತಿನಿತ್ಯ ಒಂದಿಷ್ಟು ಹಾಲು - ಮೊಸರು, ಸೊಪ್ಪು- ತರಕಾರಿಗಳು, ದವಸ ಧಾನ್ಯಗಳು, ಹಣ್ಣು ಹಂಪಲುಗಳು ಮತ್ತು ಮೊಟ್ಟೆ ಇತ್ಯಾದಿಗಳನ್ನೂ ಸೂಕ್ತ ಪ್ರಮಾಣದಲ್ಲಿ ನೀಡುವ ಹವ್ಯಾಸವನ್ನು ರೂಧಿಸಿಕೊಳ್ಳಿರಿ. ಜೊತೆಗೆ ಕ್ರೀಡೆ- ವ್ಯಾಯಾಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದಲ್ಲಿ, ನಿಮ್ಮ ಮಕ್ಕಳ ಶಾರೀರಿಕ- ಮಾನಸಿಕ ಶಕ್ತಿ ಮತ್ತು ಶಾರೀರಿಕ ಬೆಳವಣಿಗೆಗಳು ಹೆಚ್ಚುವುದರೊಂದಿಗೆ ಅವರ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ ಎನ್ನುವುದನ್ನು ಮರೆಯದಿರಿ. 

ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ!

ಸುಪ್ರಸಿದ್ಧ ಆರೋಗ್ಯ- ಶಕ್ತಿವರ್ಧಕ ಪೇಯವೊಂದನ್ನು ತಯಾರಿಸುವ ಸಂಸ್ಥೆಯು ತನ್ನ ಉತ್ಪನ್ನವನ್ನು ಪ್ರತಿನಿತ್ಯ ಸೇವಿಸುವುದರಿಂದ ಮಕ್ಕಳ ಬೆಳವಣಿಗೆ, ಶಾರೀರಿಕ ಮತ್ತು ಮಾನಸಿಕ ಶಕ್ತಿಗಳು ವೃದ್ಧಿಸುತ್ತವೆ ಎನ್ನುವ ಜಾಹೀರಾತನ್ನು ನೀಡುತ್ತಿತ್ತು. ಈ ವಿಚಾರವನ್ನು ಸಮರ್ಥಿಸಲು ತಾನೇ ನಡೆಸಿದ್ದ ಅಧ್ಯಯನವೊಂದರ ವರದಿಯನ್ನು ಬಳಸಿಕೊಳ್ಳುತ್ತಿತ್ತು. ಈ ವರದಿಯಂತೆ ೮೭೯ ಮಕ್ಕಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಒಂದು ಗುಂಪಿನ ಮಕ್ಕಳಿಗೆ ಮಾತ್ರ ತನ್ನ ಆರೋಗ್ಯಪೇಯವನ್ನು ಪ್ರತಿನಿತ್ಯ ನೀಡಿತ್ತು. ಇದನ್ನು ಹೊರತುಪಡಿಸಿದಲ್ಲಿ ಎರಡೂ ಗುಂಪಿನ ಮಕ್ಕಳ ಆಹಾರ, ಚಟುವಟಿಕೆಗಳು ಮತ್ತು ವಿದ್ಯಾಭ್ಯಾಸ ಇತ್ಯಾದಿಗಳು ಏಕರೀತಿಯಲ್ಲಿ ಇದ್ದವು. ೧೪ ತಿಂಗಳುಗಳ ಬಳಿಕ ಇವೆರಡೂ ಗುಂಪಿನ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಪ್ರತಿನಿತ್ಯ ಆರೋಗ್ಯಪೇಯವನ್ನು ಸೇವಿಸುತ್ತಿದ್ದ ಮಕ್ಕಳ ಎತ್ತರ ಹಾಗೂ ಶಾರೀರಿಕ ಮತ್ತು ಮಾನಸಿಕ ಶಕ್ತಿಗಳು ಹೆಚ್ಚಿರುವುದು ಪತ್ತೆಯಾಗಿತ್ತು. ಹೈದರಾಬಾದ್ ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್ ಸಂಸ್ಥೆಯು ಈ ಅಧ್ಯಯನವನ್ನು ನಡೆಸಿತ್ತು ಎಂದು ಸಂಸ್ಥೆ ಹೇಳಿಕೊಂಡಿತ್ತು. ಭಾರತದ ಟಿ. ವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದ್ದ ಈ ಜಾಹೀರಾತನ್ನು, ನೇಪಾಲದ ಚಾನೆಲ್ ಒಂದು ಪ್ರಮಾದವಶಾತ್ ಇಂಗ್ಲೆಂಡ್ ನಲ್ಲೂ ಪ್ರಸಾರ ಮಾಡಿತ್ತು. ಈ ಜಾಹೀರಾತನ್ನು ಗಮನಿಸಿದ್ದ ಇಂಗ್ಲೆಂಡ್ ನ ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್, ಈ ಆರೋಗ್ಯಪೇಯವನ್ನು ತಯಾರಿಸುವ ಸಂಸ್ಥೆಗೆ ನೋಟೀಸು ಜಾರಿಗೊಳಿಸಿ, ಇಂತಹ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಆದೇಶಿಸಿತ್ತು. 

ವಿಶೇಷವೆಂದರೆ ಭಾರತದ ನೂರಾರು ಟಿ. ವಿ ಚಾನೆಲ್ ಗಳಲ್ಲಿ ಇದೇ ರೀತಿಯ ಅನೇಕ ಜಾಹೀರಾತುಗಳು ಇಂದಿಗೂ ಪ್ರಸಾರವಾಗುತ್ತಿವೆ. ಆದರೆ ಇಂತಹ ಜಾಹೀರಾತುಗಳನ್ನು ನೀಡುವ ಸಂಸ್ಥೆಗಳ ವಿರುದ್ಧ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೩೦-೦೩-೨೦೧೨ ರ ಮಹಿಳಾ ಸಂಪದ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 


MLA -MP's offices under RTI!


  ಸಂಸದರ- ಶಾಸಕರ ಕಛೇರಿಗಳು ಮಾಹಿತಿ ಹಕ್ಕಿನ ವ್ಯಾಪ್ತಿಗೆ!

ರಾಜ್ಯದ- ದೇಶದ ಪ್ರಜೆಗಳು ಚುನಾಯಿಸಿದ ಶಾಸಕರು ಮತ್ತು ಸಂಸದರ ಕಛೇರಿಗಳು ಮಾಹಿತಿ ಪಡೆಯುವ ಹಕ್ಕು ಕಾಯಿದೆ-೨೦೦೫ ರ ಕಲಂ (೧) (ಎ) ಮತ್ತು ೪ (ಬಿ) ಗಳನ್ವಯ, ಈ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ/, ಎನ್ನುವ ಪ್ರಶ್ನೆಗೆ ಉತ್ತರ ನೀಡಲು ರಾಜ್ಯ ಸರಕಾರದ ಇಲಾಖೆಯೊಂದು ೯ ತಿಂಗಳುಗಳ ಕಾಲಾವಧಿಯನ್ನು ಬಳಸಿದೆ. ಮಾಹಿತಿ ಹಕ್ಕು ಕಾಯಿದೆಯನ್ವಯ ಈ ಮಾಹಿತಿಯನ್ನು ಕೇಳಿದ್ದ ಪುತ್ತೂರಿನ ಬಳಕೆದಾರ ಹಿತರಕ್ಷಣಾ ವೇದಿಕೆಯ ದಿನೇಶ್ ಭಟ್ ಇವರು ಅಪೇಕ್ಷಿತ ಮಾಹಿತಿಯು ನಿಗದಿತ ಅವಧಿಯಲ್ಲಿ ದೊರೆತಿರದ ಕಾರಣದಿಂದಾಗಿ, ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಬೇಕಾಗಿ ಬಂದಿತ್ತು. 

ಸರಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರುವ ಮೂಲಕ ದಕ್ಷತೆ ಮತ್ತು ಪ್ರಾಮಾನಿಕತೆಗಳನ್ನು ಹೆಚ್ಚಿಸುವ ಸಲುವಾಗಿ ಜಾರಿಗೊಂದಿದ್ದ ಮಾ. ಹ. ಕಾಯಿದೆಯು ಅಪೇಕ್ಷಿತ ಪರಿಣಾಮವನ್ನು ತೋರುವಲ್ಲಿ ವಿಫಲವಾಗಲು, ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಔದಾಸೀನ್ಯಗಳೇ ಕಾರನವೆನಿಸಿವೆ. ಅರ್ಜಿದಾರು ಅಪೇಕ್ಷಿಸಿರುವ ಮಾಹಿತಿಯನ್ನಿ ನೀಡದಿರುವುದು, ನೀಡಲು ವಿಳಂಬಿಸುವುದುಅಥವಾ ಯಾವುದೇ ಪ್ರತಿಕ್ರಿಯೆಯನ್ನೇ ತೋರದಿರುವ ಮೂಲಕ ವಿವಿಧ ಸಾರ್ವಜನಿಕ ಪ್ರಾಧಿಕಾರಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಈ ಕಾಯಿದೆಯ ಉದ್ದೇಶವನ್ನೇ ವಿಫಲಗೊಳಿಸುವ ಪ್ರಯತ್ನಗಳನ್ನು ಅನ್ದೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಅನೇಕ ಸ್ವಯಂ ಸೇವಾ ಸಂಘಟನೆಗಳು ಮಾ. ಹ. ಅಧಿನಿಯಮದ ಬಗ್ಗೆ ಜನಸಾಮಾನ್ಯರಿಗೆ ಅವಶ್ಯಕ ಮಾಹಿತಿ, ಮಾರ್ಗದರ್ಶನ ಮತ್ತು ಬೆಮ್ಬಲಗಳನ್ನು ನೀಡುವ ಮೂಲಕ ಮತ್ತು ಅವಶ್ಯಕವೆನಿಸಿದಲ್ಲಿ ರಾಜ್ಯ ಅಥವಾ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಲು ಸೂಚಿಸುವ ಮೂಲಕ, ಜನರು ಅಪೇಕ್ಷಿಸುವ ಮಾಹಿತಿಗಳನ್ನು ಪಡೆದುಕೊಳ್ಳಲು ಸಫಲರಾಗುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಇಂತಹ ಸಂಘಟನೆಗಳ ಕಾರ್ಯಕರ್ತರೂ ಅಪೇಕ್ಷಿತ ಮಾಹಿತಿಗಳನ್ನು ಪಡೆಯಲು ಹರಸಾಹಸವನ್ನೇ ನಡೆಸಬೇಕಾಗುತ್ತದೆ. ಇಂತಹ ಪ್ರಕರಣವೊಂದು ಇಂತಿದೆ. 

ನಮ್ಮನ್ನಾಳುವ ಶಾಸಕರು- ಸಂಸದರ ಕಛೇರಿಗಳು ಮಾ. ಹ. ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ ಎಂದು ದಿನೇಶ್ ಭಟ್ ಇವರು ೨೦೦೮ ರ ಜುಲೈ ೨೮ ರಂದು ಸಾರ್ವಜನಿಕ ಮಾಹಿತಿ ಅಧಿಕಾರಿ, ಪ್ರಧಾನ ಕಾರ್ಯದರ್ಶಿಯವರ ಕಚೇರಿ, ಕರ್ನಾಟಕ ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಮಾ. ಹ. ಕಾಯಿದೆಯನ್ವಯ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜ್ಯನ್ನು ಸಲ್ಲಿಸಿದ್ದರು. 

ಈ ಅರ್ಜಿಯಲ್ಲಿ ವಿಧಾನ ಸಭೆ ಮತ್ತು ಲೋಕ ಸಭೆಗಳ ಚುನಾಯಿತ ಜನ ಪ್ರತಿನಿಧಿಗಳಿಗೆ ರಾಜ್ಯ- ಕೇಂದ್ರ ಸರಕಾರಗಳ ವತಿಯಿಂದ ಕಚೇರಿ ಸೌಲಭ್ಯ, ಆಪ್ತ ಸಹಾಯಕರು, ದೂರವಾಣಿ, ವಾಹನಗಳು, ಕಚೇರಿಯ ನಿರ್ವಹಣಾ ವೆಚ್ಚ ಇತ್ಯಾದಿಗಳನ್ನು ಒದಗಿಸುವುದರಿಂದ , ಈ ಕಛೇರಿಗಳಿಗೆ ಮಾ. ಹ. ಕಾಯಿದೆ ಅನ್ವಯವಾಗುವುದೇ ಮತ್ತು ಅನ್ವಯವಾಗುವುದಾದಲ್ಲಿ ಅಪೇಕ್ಷಿತ ಮಾಹಿತಿಯನ್ನು ಪಡೆಯಲು ಅರ್ಜಿಯನ್ನು ಯಾರಿಗೆ ಹಾಗೂ ಯಾವರೀತಿಯಲ್ಲಿ ಸಲ್ಲಿಸಬೇಕು ಮತ್ತು ಶುಲ್ಕವನ್ನು ಯಾರ ಹೆಸರಿನಲ್ಲಿ ಪಾವತಿಸಬೇಕು ಎನ್ನುವ ಮಾಹಿತಿಗಳನ್ನು ನೀಡುವಂತೆ ಕೋರಿದ್ದರು. 

ಆದರೆ ನಿಗದಿತ ಅವಧಿಯಲ್ಲಿ ಸಂಬಂಧಿತ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಪೇಕ್ಷಿತ ಮಾಹಿತಿಯನ್ನು ನೀಡದೆ ಇದ್ದುದರಿಂದ, ೨೦೦೮ ರ ಸೆಪ್ಟೆಂಬರ್ ೬ ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು. ೨೦೦೮ ರ ಸೆಪ್ಟೆಂಬರ್ ೧೮ ರಂದು ಈ ದೂರನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಆಯೋಗವು, ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ನೀಡದ ಸಾ. ಮಾ. ಅಧಿಕಾರಿಗೆ ಏಕೆ ದಂಡವನ್ನು ವಿಧಿಸಬಾರದು ಎನ್ನುವ ಬಗ್ಗೆ ವಿವರಣೆ ನೀಡಲು ಮತ್ತು ೨೦೦೯ ರ ಜನವರಿ ೩೦ ರಂದು ಖುದ್ದಾಗಿ ಆಯೋಗದ ಮುಂದೆ ಹಾಜರಾಗುವಂತೆ ಮಧ್ಯಂತರ ಆದೇಶವನ್ನು ನೀಡಿತ್ತು. ಜೊತೆಗೆ ಈ ಮಾಹಿತಿಯನ್ನು ಬಹಿರಂಗಪಡಿಸಲು ಮಾ. ಹ. ಕಾಯಿದೆಯಲ್ಲಿ ವಿನಾಯಿತಿ ಹೊಂದಿಲ್ಲವಾದಲ್ಲಿ ಇದನ್ನು ತುರ್ತಾಗಿ ನೊಂದಾಯಿತ ಅಂಚೆಯ ಮೂಲಕ ದಿನೇಶ್ ಭಟ್ ಇವರಿಗೆ ಕಳುಹಿಸಿ, ಇದರ ಪ್ರತಿಯೊಂದನ್ನು ಕಡ್ಡಾಯವಾಗಿ ಆಯೋಗಕ್ಕೆ ಸಲ್ಲಿಸಲು ಆದೇಶಿಸಿತ್ತು. 

ಆದರೆ ಆಯೋಗದ ಆದೇಶಕ್ಕೆ ಮಾನ್ಯತೆಯನ್ನು ನೀಡದ ಸಾ. ಮಾ. ಅಧಿಕಾರಿಯು ೨೦೦೯ ರ ಜನವರಿ ೩೦ ರಂದು ಆಯೋಗದ ಮುಂದೆ ವಿಚಾರಣೆಗೂ ಹಾಜರಾಗಿರಲಿಲ್ಲ. ಈ ಅಧಿಕಾರಿಯ ನಿರ್ಲಕ್ಷ್ಯ ಮತ್ತು ಔದಾಸೀನ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು, ಈ ಅಧಿಕಾರಿಗೆ ಸೆಕ್ಷನ್ ೩೦ ಸಿ. ಪಿ. ಸಿ ಯನ್ವಯ ಸಮನ್ಸ್ ಜಾರಿ ಮಾಡಿ, ೩೦ ದಿನಗಳ ಒಳಗಾಗಿ ಅಪೇಕ್ಷಿತ ಮಾಹಿತಿಯನ್ನು ಅರ್ಜಿದಾರರಿಗೆ ಉಚಿತವಾಗಿ ನೊಂದಾಯಿತ ಅಂಚೆಯ ಮೂಲಕ ರವಾನಿಸಿ, ಇದರ ಪ್ರತಿಯೊಂದನ್ನು ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಈ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಇವರ ಮೇಲಧಿಕಾರಿಗೆ ಮಾ. ಹ. ಕಾಯಿದೆಯ ಕಲಂ ೧೯(೮) (ಎ೦ ಯಂತೆ ಆದೇಶಿಸಿತ್ತು. ಇದರೊಂದಿಗೆ ಮಾ. ಹ. ಕಾ. ಕಲಂ ೧೮ (೩) (ಎ)ಯನ್ವಯ ಅರ್ಜಿದಾರು ಕೋರಿರುವ ಮಾಹಿತಿಗೆ ಸಂಬಂಧಿಸಿದ ಕಡತಗಳೊಂದಿಗೆ ೨೦೦೯ ರ ಮೇ ೧೩ ರಂದು ಖುದ್ದಾಗಿ ಆಯೋಗದ ಮುಂದೆ ಹಾಜರಾಗುವಂತೆ ಆದೇಶಿಸಿತ್ತು. 

ಅಂತಿಮವಾಗಿ ತುಕ್ಕು ಹಿಡಿದಿದ್ದ ಸರಕಾರಿ ಯಂತ್ರವು ಮತ್ತೆ ಚಲಿಸಳು ಆರಂಭಿಸಿತ್ತು. ತತ್ಪರಿಣಾಮವಾಗಿ ಸರಕಾರದ ಪ್ರಧಾನ ಕಾರ್ಯದರ್ಶಿ, ಸಿ ಮತ್ತು ಆ. ಸು. ಇಲಾಖೆಯ್ ಇವರು ೨೦೦೯ ರ ಎಪ್ರಿಲ್ ೧೩ ರಂದು ದಿನೇಶ್ ಭಟ್ ಇವರು ಅಪೇಕ್ಷಿಸಿದ್ದ ಮಾಹಿತಿಯನ್ನು ನೀಡಿದ್ದರು!. ಈ ಅಧಿಕಾರಿ ನೀಡಿದ್ದ ಮಾಹಿತಿಯಂತೆ ಮಾ. ಹ. ಕಾ. ೨೦೦೫ ರ ಕಲಂ ೪ (೧) (ಎ) ಮತ್ತು ೪ (೧) (ಬಿ ) ಗಳನ್ವಯ ವಿಧಾನ ಸಭೆಯ ಮತ್ತು ಲೋಕ ಸಭೆಯ ಚುನಾಯಿತ ಪ್ರತಿನಿಧಿಗಳ ಕಛೇರಿಗಳು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆ. ಅಪೇಕ್ಷಿತ ಮಾಹಿತಿಗಳನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಅವರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿಧಾನ ಸಭೆಯ ಮತ್ತು ಲೋಕ ಸಭೆಯ ಚುನಾಯಿತ ಜನಪ್ರತಿನಿಧಿಗಳಿಗೆ, ಕಚೇರಿ ಸೌಲಭ್ಯ, ಆಪ್ತ ಸಹಾಯಕರ ಸೌಲಭ್ಯ ಮುಂತಾದವುಗಳನ್ನು ಒದಗಿಸುವುದರಿಂದ, ಸಂಬಂಧಿತ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ನಿಯೋಜಿತ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ನಿಗದಿತ ಶುಲ್ಕವನ್ನು ಇದೇ ಸಾ. ಮಾ. ಅಧಿಕಾರಿಗಳ ಹೆಸರಿನಲ್ಲಿ ಪಾವತಿಸಬೇಕಾಗುತ್ತದೆ. 

ಈ ರೀತಿಯಲ್ಲಿ ಸರಕಾರಕ್ಕೆ ತೆರಿಗೆಯನ್ನು ತೆರುವ ಪ್ರಜೆಗಳು ತಾವು ಚುನಾಯಿಸಿರುವ ಜನಪ್ರತಿನಿಧಿಗಳ ಕಾರ್ಯವೈಖರಿ, ಅಭಿವೃದ್ಧಿ ಕಾಮಗಾರಿಗಳ ವಿವರಗಳು ಮತ್ತು ಶಾಸಕರು ಮತ್ತು ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಗಳ ಬಗ್ಗೆ ಅವಶ್ಯಕ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. 

ಡಾ. ಸಿ.ನಿತ್ಯಾನಂದ ಪೈ
ಬಳಕೆದಾರ ಹಿತರಕ್ಷಣಾ ವೇದಿಕೆ 
ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೦೭- ೦೫- ೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 


Monday, December 23, 2013

HRUDAYA ROGAGALIGE VIDAYA?



                                  ಹೃದಯ ರೋಗಗಳಿಗೆ ವಿದಾಯ?

Have a heart man ಎಂದು ಆಂಗ್ಲ ಭಾಷೆಯಲ್ಲಿ, ಇನ್ನೊಬ್ಬರ ಬಗ್ಗೆ ಅನುಕಂಪವಿರಲಿ ಎಂಬರ್ಥದ ವಾಕ್ಯವನ್ನು ಉದ್ಧರಿಸುವುದನ್ನು ನೀವೂ ಕೇಳಿರಬಹುದು. ಆದರೆ ನಿಮ್ಮದೇ ಹೃದಯದ ಬಗ್ಗೆ ನಿಮಗೆ ಕಿಂಚಿತ್ ಅನುಕಂಪವೂ ಇಲ್ಲದಿದ್ದಲ್ಲಿ, ನಿಮ್ಮನ್ನು "ಹೃದಯ ಹೀನ" ರೆಂದು ಕರೆಯುವುದು ಅನ್ವರ್ಥವೆನಿಸುವುದರಲ್ಲಿ ಸಂದೇಹವಿಲ್ಲ!.
-------------                 --------------                ---------------                  -----------------              ---------------                   ------------------
  ಪ್ರಪಂಚದ ಪ್ರತಿಯೊಂದು ಮುಂದುವರಿದ ಅರ್ಥಾತ್ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಬಹುತೇಕ ಪ್ರಜೆಗಳನ್ನು ಬಾಧಿಸುತ್ತಿರುವ ಹೃದಯಾಘಾತಗಳ ಸಂಖ್ಯೆ ವರ್ಷಂಪ್ರತಿ ಹೆಚ್ಚುತ್ತಿದೆ. ಜತೆಗೆ ಇದರಿಂದಾಗಿ ಸಂಭವಿಸುತ್ತಿರುವ ಮರಣಗಳ ಪ್ರಮಾಣವೂ ಹೆಚ್ಚುತ್ತಿರುವುದು ಅನೇಕ ಅಧ್ಯಯನ ಮತ್ತು ಸಮೀಕ್ಷೆಗಳಿಂದ ಧೃಢಪಟ್ಟಿದೆ. "ಸುಖ- ಸಮೃದ್ಧಿ" ಗಳ ಕಾಯಿಲೆಯೆಂದು ಕರೆಯಬಹುದಾದ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು ವೃದ್ಧಿಸಲು, ಸುಖ ಮತ್ತು ಸಂರುದ್ಧಿಗಳ ಫಲವಾದ ವಿಲಾಸೀ ಜೀವನಶೈಲಿಯೇ ಮೂಲಕಾರಣವೆನ್ನಬಹುದು.

ವಿವಿಧ ರೀತಿಯ ಹೃದ್ರೋಗಗಳ ಚಿಕಿತ್ಸೆಯಲ್ಲಿ ನಾವಿಂದು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರೂ, ಇವುಗಳಿಂದಾಗಿ ಸಂಭವಿಸುವ ಮರಣಗಳ ಪ್ರಮಾಣ ಇಳಿಮುಖವಾಗದಿರುವುದು ಈ ಸಮಸ್ಯೆಯ ಗಂಭೀರತೆಯನ್ನು ಸೂಚಿಸುತ್ತದೆ.ಉದಾಹರಣೆಗೆ ಅಮೇರಿಕ ದೇಶದಲ್ಲಿ ೩೫ ರಿಂದ ೪೫ ವರ್ಷ ವಯಸ್ಸಿನವರ ಅಕಾಲ ಮರಣಕ್ಕೆ ಕಾರಣವೆನಿರುವ ಕಾಯಿಲೆಗಳಲ್ಲಿ ಕೊರೋನರಿ ಹೃದ್ರೋಗಗಳಿಗೆ ಅಗ್ರಸ್ಥಾನ ಸಲ್ಲುತ್ತದೆ. 

ಸುಖ-ಸಮೃದ್ಧಿಗಳ ಕಾಯಿಲೆ ಎನ್ನುವ ಅರ್ಥಪೂರ್ಣ ಪರ್ಯಾಯನಾಮವನ್ನು ಗಳಿಸಿರುವ ಹೃದಯದ ಕಾಯಿಲೆಗಳಿಗೆ ಆಧುನಿಕ ತಂತ್ರಜ್ಞಾನ, ಯಾಂತ್ರೀಕರಣ ಮತ್ತು ಆಧುನಿಕ ಸಂಶೋಧನೆಗಳ ಫಲವಾಗಿ ನಮ್ಮ ಜೀವನದ ಮಟ್ಟದಲ್ಲಿ ಹೆಚ್ಚುತ್ತಿರುವ ಸುಖಲೋಲುಪತೆಯೇಕಾರಣವೆನಿಸಿದೆ. ನಿಷ್ಕ್ರಿಯತೆಗೆ (Inactivity) ನೇರವಾಗಿ ಕಾರಣವೆನಿಸಿರುವ ಆಧುನಿಕ ಜೀವನಶೈಲಿಯ ದುಷ್ಪರಿಣಾಮಗಳನ್ನು ಪ್ರತಿನಿತ್ಯ ತೀವ್ರ ಶಾರೀರಿಕ ವ್ಯಾಯಾಮದಲ್ಲಿ(Intense physical exercise) ತೊಡಗಿಸಿಕೊಳ್ಳುವ ಮೂಲಕ ನಿವಾರಿಸಬಹುದಾಗಿದೆ. 

ಹೃದಯದ ಕಾಯಿಲೆಗಳು ಆಕಸ್ಮಿಕವಾಗಿ ಬರುವುದೆಂದು ನೀವು ನಂಬಿದ್ದಲ್ಲಿ ನಿಮ್ಮ ನಂಬಿಕೆ ನಿಜವಲ್ಲ. ನಿಮ್ಮ ಶರೀರದಲ್ಲಿ ನಿಧಾನವಾಗಿ ಪ್ರಾರಂಭವಾಗುವ ರೋಗಕಾರಕ ಪ್ರಕ್ರಿಯೆಗಳು ಕ್ರಮೇಣ ಹೆಚ್ಚುತ್ತಾ, ಮುಂದೊಂದು ದಿನ ಯಾವುದೇ ಮುನ್ಸೂಚನೆಯನ್ನು ನೀಡದೆ ಉಲ್ಬಣಿಸುತ್ತದೆ. "ತೀವ್ರ ಹೃದಯಾಘಾತ"ಕ್ಕೆ ಒಳಗಾದವರೂ ಹೇಳುವಂತೆ 'ನಿನ್ನೆಯ ತನಕ ನಾನು ಆರೋಗ್ಯವಾಗಿಯೇ ಇದ್ದೆ" ಎನ್ನುವುದು, ರೋಗಿಯೇ ನಿಜವೆಂದು ನಂಬಿದ್ದ ಅಪ್ಪಟ ಸುಳ್ಳು!. 

ಅಥೆರೋಸ್ಕ್ಲೆರೋಸಿಸ್, ಆರ್ಟೀರಿಯೋಸ್ಕ್ಲೆರೋಸಿಸ್, ಅಧಿಕ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹ, ತೀವ್ರ ಮಾನಸಿಕ ಒತ್ತಡ, ರಕ್ತದಲ್ಲಿ ಹೆಚ್ಚಿರುವ ಕೊಲೆಸ್ಟರಾಲ್ ಮತ್ತು ಟ್ರೈ ಗ್ಲಿಸರೈಡ್, ಅತಿಬೊಜ್ಜು, ಸ್ಥೂಲಕಾಯ, ಅತಿ ಧೂಮ - ಮದ್ಯಪಾನ ಮತ್ತು ಅನುವಂಶೀಯತೆಗಳು ಹೃದಯರೋಗಗಳಿಗೆ ಕಾರಣೀಭೂತವಾಗಿವೆ. ಈ ಮೇಲಿನ ಕಾರಣಗಳು ಮತ್ತು ಸಮಸ್ಯೆಗಳ ಸಂಖ್ಯೆ ಹೆಚ್ಚಿದಂತೆಯೇ, ಹೃದ್ರೋಗಗಳ ಸಂಭಾವ್ಯತೆ ಮತ್ತು ಇವುಗಳ ಮಾರಕತೆಯ ಪ್ರಮಾಣವೂ ಹೆಚ್ಚುವುದು.ಅನೇಕ ಜನರಲ್ಲಿ ಅವರ ವಯಸ್ಸು, ಲಿಂಗ, ಜನಾಂಗ ಮತ್ತು ಅನುವಂಶೀಯತೆಗಳು ಹೃದ್ರೋಗಗಳಿಗೆ ಕಾರಣವಾಗಬಹುದು. ದೈವ ನಿಯಾಮಕವಾದ ಈ ಅಂಶಗಳನ್ನು ಹುಲುಮಾನವರಾದ ನಾವು ಬದಲಾಯಿಸುವುದು ಅಸಾಧ್ಯ. ಇವೆಲ್ಲಕ್ಕೂ ಕಳಶವಿಟ್ಟಂತೆ "ನಿಷ್ಕ್ರಿಯತೆ" ಯೂ ಸೇರಿಕೊಂಡಲ್ಲಿ, ಹೃದ್ರೋಗಗಳಿಗೆ ನಿಮ್ಮ ಶರೀರದಲ್ಲಿ ಮುಕ್ತಪ್ರವೇಶ ಖಂಡಿತ. 

ಅಥೆರೋಸ್ಕ್ಲೆರೋಸಿಸ್ 

ಸುಧೃಢವಾದ ಮಾಂಸಪೇಶಿಗಳಿಂದನಿರ್ಮಿತವಾದ ನಮ್ಮ ಹೃದಯವು ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಬಾರಿ ಮಿಡಿಯುತ್ತಾ, ಸಹಸ್ರಾರು ಕಿಲೋಮೀಟರ್ ಗಳಷ್ಟು ಉದ್ದದ ರಕ್ತನಾಳಗಳ ಮೂಲಕ ಏಕಪ್ರಕಾರವಾಗಿ ಸಮಗ್ರ ಶರೀರಕ್ಕೆ ಅವಶ್ಯಕ ಪ್ರಮಾಣದ ರಕ್ತವನ್ನು ಪೂರೈಸುತ್ತದೆ. ನಿರಂತರವಾಗಿ ಶರೀರಕ್ಕೆ ರಕ್ತವನ್ನು ಪೂರೈಕೆ ಮಾಡುವ ಹೃದಯದ ಕಾರ್ಯಾಚರಣೆಗೆ ಅವಶ್ಯವಾದ ರಕ್ತವನ್ನು ಕೊರೋನರಿ ಆರ್ಟರಿಗಳು ಪೂರೈಸುತ್ತವೆ. 

ನಮ್ಮ ರಕ್ತದಲ್ಲಿ ಕೊಲೆಸ್ಟರಾಲ್ ಮತ್ತು ತತ್ಸಂಬಂಧಿ ಕೊಬ್ಬಿನ ಅಂಶಗಳ ಪ್ರಮಾಣ ಹೆಚ್ಚಿದಾಗ, ರಕ್ತನಾಳಗಳ ಒಳಭಾಗದಲ್ಲಿ ಶೇಖರವಾಗುತ್ತವೆ. ಇದರಿಂದಾಗಿ ರಕ್ತನಾಳಗಳು ಸಂಕುಚಿತಗೊಂಡು ಸಮರ್ಪಕ ರಕ್ತ ಸಂಚಾರಕ್ಕೆ ಅಡಚಣೆ ಉಂಟಾಗುವುದು. ಈ ಸ್ಥಿತಿಯನ್ನು ಅಥೆರೋಸ್ಕ್ಲೆರೋಸಿಸ್ ಎನ್ನುತ್ತಾರೆ. ಇದೇ ಕಾರಣದಿಂದಾಗಿ ಹಾಗೂ ವೃದ್ಧಾಪ್ಯದಿಂದಲೂ ರಕ್ತನಾಳಗಳು ಪೆಡಸಾಗುವಸ್ಥಿತಿಯನ್ನು ಆರ್ಟೀರಿಯೋ ಸ್ಕ್ಲೆರೋಸಿಸ್ ಎನ್ನುವರು. ಕೊರೋನರಿ ಆರ್ಟರಿಗಳಲ್ಲಿ ಇಂತಹ ಅಡಚಣೆಗಳು ಉದ್ಭವಿಸಿದಲ್ಲಿ ಹೃದಯಕ್ಕೆ ಪೂರೈಕೆಯಾಗುವ ರಕ್ತದ ಪ್ರಮಾಣವು ಕಡಿಮೆಯಾಗುವುದು. ಈ ಅಡಚಣೆ ತೀವ್ರಗೊಂಡಾಗ, ಜನಸಾಮಾನ್ಯರು ಹೇಳುವಂತೆ "ಹಾರ್ಟ್ ಅಟ್ಯಾಕ್' ಸಂಭವಿಸುವುದು. ವೈದ್ಯಕೀಯ ಪರಿಭಾಷೆಯಲ್ಲಿ "Myocardial infaarction" ಎಂದು ಕರೆಯುವ ಈ ಸಮಸ್ಯೆಯನ್ನು ಕನ್ನಡದಲ್ಲಿ ಹೃದಯಾಘಾತ ಎಂದು ಕರೆಯುವರು. ಹೃದಯಾಘಾತದ ಪರಿಣಾಮವಾಗಿ ಹೃದಯದ ಯಾವ ಭಾಗಕ್ಕೆ ರಕ್ತದ ಪೂರೈಕೆ ಸ್ಥಗಿತಗೊಂಡಿರುವುದೋ, ಆ ಭಾಗದ ಮಾಂಸಪೇಶಿಗಳು ಮೃತಪಡುತ್ತವೆ. ರಕ್ತದಲ್ಲಿನ ಕೊಲೆಸ್ಟರಾಲ್ ಅಂಶ ಹೆಚ್ಚುವುದರಿಂದ ಪ್ರಾರಂಭಗೊಳ್ಳುವ ಈ ಪ್ರಕ್ರಿಯೆಗಳು ಆಕಸ್ಮಿಕವಾಗಿ ಸಂಭವಿಸುವ ಸಾಧ್ಯತೆಗಳಿಲ್ಲ. ಕೆಲವಾರು ತಿಂಗಳುಗಳಿಂದ ಹಿಡಿದು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬಹುದಾದ ಈ ಬದಲಾವಣೆಗಳೊಂದಿಗೆ, ಇತರ ಗಂಭೀರ ಕಾಯಿಲೆಗಳ ಇರುವು ಕ್ಷಿಪ್ರಗತಿಯಲ್ಲಿ ಮುಂದುವರೆದು ಹೃದಯಾಘಾತದಲ್ಲಿ ಪರ್ಯವಸಾನವಾಗುವುದು. 

ಕೆಲವೇ ವರ್ಷಗಳ ಹಿಂದೆ ಯುದ್ಧದಲ್ಲಿ ಮಡಿದ ಅಮೆರಿಕದ ಯೋಧರ ಶವಗಳ ಮರಣೋತ್ತರ ಪರೀಕ್ಷಾ ವರದಿಗಳನ್ನು ಪರಿಶೀಲಿಸಿದಾಗ ಆಶ್ಚರ್ಯಕರ ವಿಷಯಗಳು ವೈದ್ಯರ ಗಮನವನ್ನು ಸೆಳೆದಿದ್ದವು. ಸರಾಸರಿ ೨೨ ವರ್ಷ ವಯಸ್ಸಿನ ಯೋಧರಲ್ಲಿ ಶೇ. ೭೭ ರಷ್ಟು ಮಂದಿಗೆ ಕೊರೋನರಿ ರಕ್ತನಾಳಗಳಲ್ಲಿ ಆಂಶಿಕ ಅಥವಾ ಸಂಪೂರ್ಣ ಅಡಚಣೆಗಳು ಪತ್ತೆಯಾಗಿದ್ದವು. ಆದರೆ ಕೊರಿಯಾ ದೇಶದ ಯೋಧರಲ್ಲಿ ಇಂತಹ ಗಮನಾರ್ಹ ಮತ್ತು ಗಂಭೀರ ಬದಲಾವಣೆಗಳು ಕಂಡುಬಂದಿರಲಿಲ್ಲ. ಈ ವರದಿಯಿಂದಾಗಿ ಅಮೆರಿಕದ ಪ್ರಜೆಗಳ ಆಹಾರ ಸೇವನಾಕ್ರಮ ಮತ್ತು ಆಧುನಿಕ ಜೀವನಶೈಲಿಗಳು ತಾರುಣ್ಯದಲ್ಲೇ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳ ಪ್ರಮಾಣ ಹೆಚ್ಚಲು ಕಾರಣವೆಂದು ತಿಳಿದುಬಂದಿತ್ತು. ಈ ಅಧ್ಯಯನದಿಂದ ಗಮನಿಸಬೇಕಾದ ಅಂಶವೇನೆಂದರೆ, ಅನೇಕರು ನಂಬಿರುವಂತೆ ವೃದ್ಧಾಪ್ಯದಲ್ಲಿ ಮಾತ್ರ ಹೃದ್ರೋಗದ ಸಾಧ್ಯತೆಗಳು ಹೆಚ್ಚು ಎನ್ನುವುದು ನಿಜವಲ್ಲ. ನಮ್ಮ ರಕ್ತದಲ್ಲಿ ಕೊಲೆಸ್ಟರಾಲ್ ಮತ್ತು ಕೊಬ್ಬಿನಂಶಗಳ ಸಂಗ್ರಹವು ಬಾಲ್ಯದಿಂದಲೇ ಪ್ರಾರಂಭವಾಗುವುದು. ಈ ಸಮಸ್ಯೆ ನಮ್ಮ ಮಕ್ಕಳನ್ನು ಪೀಡಿಸದಂತೆ ತಡೆಗಟ್ಟಲು ಅವರು ಸೇವಿಸುವ ಆಹಾರ ಮತ್ತು ದೈನಂದಿನ ವ್ಯಾಯಾಮಗಳ ಬಗ್ಗೆ ಒಂದಿಷ್ಟು ಕಾಳಜಿ ವಹಿಸಬೇಕಾಗುವುದು ನಮ್ಮ ಕರ್ತವ್ಯವೂ ಹೌದು. 

ಅನುವಂಶೀಯತೆ 

ಹೃದ್ರೋಗಗಳಿಗೆ ಸಾಮಾನ್ಯವಾಗಿ ಅನುವಂಶೀಯತೆಯ ನಂಟು ಇರುವುದುಂಟು. ನಿಮ್ಮ ತಂದೆತಾಯಂದಿರು, ಅಜ್ಜ ಮತ್ತು ಅಜ್ಜಿಯರಲ್ಲಿ ಹೃದ್ರೋಗವಿರುವುದು ಪತ್ತೆಯಾಗಿದ್ದಲ್ಲಿ ಅಥವಾ ಹ್ರುದ್ರೋಗಗಳಿಂದ ಮೃತಪಟ್ಟಿದ್ದಲ್ಲಿ ನೀವು ಸಾಕಷ್ಟು ಮುಂಜಾಗ್ರತೆ ವಹಿಸುವುದು ಪ್ರಾಣರಕ್ಷಕವೆನಿಸುವುದು. ತಾರುಣ್ಯದಲ್ಲಿ ಹೃದಯಾಘಾತಕ್ಕೆ ಒಳಗಾದ ರೋಗಿಗಳಲ್ಲಿ ಈ ಸಮಸ್ಯೆ ಅನುವಂಶಿಕವಾಗಿ ಬಂದಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಹೃದ್ರೋಗಗಳ ಅನುವಮ್ಶಿಕತೆಯ ಬಗ್ಗೆ ಸ್ಪಷ್ಟ ಕಾರಣಗಳು ಲಭ್ಯವಾಗದಿರುವುದು ನಿಜ. ಆದರೆ ನಮಗೆಲ್ಲರಿಗೂ ತಿಳಿದಿರುವಂತೆ ಸ್ಥೂಲದೇಹಿ ಮಾತಾಪಿತರ ಮಕ್ಕಳು ಸ್ಥೂಳದೆಹಿಗಲಾಗಿರುವುದು, ಅಂತೆಯೇ ಉಗ್ರ ಸ್ವಭಾವದವರ, ಮಾನಸಿಕ ರೋಗಿಗಳ ಮತ್ತು ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸುವವರ ಮಕ್ಕಳು ತಮ್ಮ ತಂದೆತಾಯಿಯರ ಗುಣ- ಸ್ವಭಾವಗಳನ್ನು ಹೊಂದಿರುವುದು ಸಹಜ. ಇದೇ ರೀತಿ ಹ್ರುದ್ರೋಗದೊಂದಿಗೆ ಮಧುಮೇಹ, ಅಧಿಕ ರಕ್ತದೊತ್ತಡಗಳಂತಹ ಗಂಭೀರ ಕಾಯಿಲೆಗಳೂ ಅನುವಂಶಿಕವಾಗಿ ಬರುವ ಸಾಧ್ಯತೆಗಳಿವೆ. ಆದರೆ ಇವೆಲ್ಲವೂ ನಮ್ಮ ಜೀವನಶೈಲಿಯ ನೇರ ಪರಿಣಾಮದಿಂದಾಗಿ ತಾರುಣ್ಯದಲ್ಲೇ ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತವೆ. 

ರಕ್ತದೊತ್ತಡ - ಕೊಲೆಸ್ಟರಾಲ್ 

ನಿಮ್ಮ ವೈದ್ಯರು ಯಾವುದೇ ಸಂದರ್ಭದಲ್ಲಿ ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿದ ಬಳಿಕ ೧೨೦/೮೦  ಇದೇ ಅಂದು ಹೇಳಿರಬಹುದು. ಈ ಅಂಕೆಗಳಲ್ಲಿ ಮೇಲೆ ಬರೆದ ೧೨೦ ಸಿಸ್ಟಾಲಿಕ್ ಅರ್ಥಾತ್ ಹೃದಯವು ರಕ್ತವನ್ನು ಹೊರಸೂಸುವ ಕ್ಷಣದ ಒತ್ತಡವಾಗಿರುತ್ತದೆ. ಅಂತೆಯೇ ಕೆಳಗೆ ನಮೂದಿಸಿದ ೮೦ ಸಂಖ್ಯೆಯು ಡಯಾಸ್ಟಾಲಿಕ್ ಅರ್ಥಾತ್ ಹೃದಯಬದಿತಗಳ ನಡುವಿನ ವಿರಾಮದ ಸ್ಥಿತಿಯ ಒತ್ತಡವಾಗಿರುತ್ತದೆ. ಇವೆರಡೂ ಅಂಕೆಗಳು ನಮ್ಮ ಚಟುವಟಿಕೆ, ಶಾರೀರಿಕ ಹಾಗೂ ಮಾನಸಿಕ ಸ್ಥಿತಿಗಳನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆಯಾಗುವುದು. ಸಾಮಾನ್ಯವಾಗಿ ತೀವ್ರ ಶಾರೀರಿಕ ವ್ಯಾಯಾಮದ ಸಂದರ್ಭದಲ್ಲಿ ರಕ್ತದೊತ್ತಡವು ಒಂದಿಷ್ಟು ಹೆಚ್ಚಾಗುವುದಾದರೂ, ವಿರಾಮದ ಬಳಿಕ ಸಹಜ ಸ್ಥಿತಿಗೆ ಮರಳುವುದು. ಆದರೆ ನೀವು ವಿರಮಿಸುತ್ತಿರುವಾಗಲೂ ನಿಮ್ಮ ರಕ್ತದೊತ್ತಡವು ೧೪೦/೯೦ ಕ್ಕಿಂತ ಅಧಿಕವಿದ್ದಲ್ಲಿ ,ನಿಮಗೆ ಅಧಿಕ ರಕ್ತದೊತ್ತಡವಿದೆ ಎಂದರ್ಥ. ಹೃದ್ರೋಗಗಳಿಗೆ ಮತ್ತು ಅಧಿಕ ರಕ್ತದೊತ್ತಡಕ್ಕೆ ಸಮೀಪದ ಸಂಬಂಧವಿದೆ. ಆಧುನಿಕ ಔಷದಗಳು ಹಾಗೂ ಜೀವನಶೈಲಿಯ ಬದಲಾವಣೆ ಮತ್ತು ಶಾರೀರಿಕ ವ್ಯಾಯಾಮಗಳಿಂದ ಇದನ್ನು ನಿಯಂತ್ರಿಸುವುದು ಸುಲಭಸಾಧ್ಯ. ಆದರೆ ಬಹುತೇಕ ಜನರಿಗೆ ವ್ಯಾಯಾಮದ ಮೂಲಕ ಇದನ್ನು ಹತೊತಿಯಲ್ಲಿರಿಸುವುದು ಹಾಗೂ ಇದರಿಂದಾಗಿ ತಾವು ಸೇವಿಸುವ ಔಷದಗಳ ಪ್ರಮಾಣವನ್ನು ಇಳಿಸಬಹುದೆನ್ನುವ ಮಹತ್ವಪೂರ್ಣ ಮಾಹಿತಿ ತಿಳಿದಿಲ್ಲ. 

ನಿಮ್ಮ ರಕ್ತದಲ್ಲಿ ಅವಶ್ಯಕತೆಗಿಂತಲೂ ಹೆಚ್ಚಿರುವ ಕೊಲೆಸ್ಟರಾಲ್ ಕೂಡಾ ಹೃದ್ರೋಗಕ್ಕೆ ಕಾರನವೆನಿಸುವ ಸಾಧ್ಯತೆಗಳಿವೆ. ಯಕೃತ್ತಿನಲ್ಲಿ ತಯಾರಾಗುವ ಕೊಲೆಸ್ಟರಾಲ್ ನಮ್ಮ ಶರೀರದ ಜೀವಕಣಗಳಿಗೆ ಹಾಗೂ ಅನೇಕ ಹಾರ್ಮೋನ್ ಗಳ ಉತ್ಪತ್ತಿಗೂ ಅವಶ್ಯವಾಗಿದೆ. ಆದರೆ ಕೊಲೆಸ್ಟರಾಲ್ ಮತ್ತು ಟ್ರೈ ಗ್ಲಿಸರೈಡ್ ಗಳ ಸಂಗ್ರಹ ಮಿತಿಮೀರಿದಾಗ ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತದಂತಹ ಗಂಭೀರ ಸಮಸ್ಯೆಗಳ ಅಪಾಯ ಹೆಚ್ಚುವುದು. 

೧೦೦ ಮಿ. ಲೀ ರಕ್ತದಲ್ಲಿ ೨೫೦ ಮಿ ಗ್ರಾಂ ಗಳಿಗಿಂತ ಹೆಚ್ಚು ಕೊಲೆಸ್ಟರಾಲ್ ಅಂಶವಿದ್ದಲ್ಲಿ ಅಪಾಯಕಾರಿ ಎನಿಸುವುದು. ಇಂತಹ ವ್ಯಕ್ತಿಗಳಲ್ಲಿ ೨೦೦ ಮಿ. ಗ್ರಾಂ ಗಿಂತ ಕಡಿಮೆ ಕೊಲೆಸ್ಟರಾಲ್ ಇರುವ ವ್ಯಕ್ತಿಗಳಿಗಿಂತ ಹೃದಯಾಘಾತದ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ. ಪ್ರಾಣಿಜನ್ಯ ಕೊಬ್ಬು ಮತ್ತು ಇತರ ಅತ್ಯಧಿಕ ಕೊಬ್ಬಿನಂಶಗಲ್ರುವ ಆಹಾರ ಸೇವನೆಯೊಂದಿಗೆ, ನಿಷ್ಕ್ರಿಯತೆಯೂ ಇದಕ್ಕೆ ಮುಖ್ಯ ಕಾರಣವೆನಿಸಬಲ್ಲದು. ನಿಮ್ಮ ಶರೀರದಲ್ಲಿ ಕೊಲೆಸ್ಟರಾಲ್ ನ ಸಂಗ್ರಹ ತೀವ್ರವಾಗಿ ಹೆಚ್ಚಿದಲ್ಲಿ ಇದನ್ನು ಇಳಿಸಬಲ್ಲ ಔಷದಗಳ ಸೇವನೆ ಅನಿವಾರ್ಯ. ಆದರೆ ಅಲ್ಪ ಪ್ರಮಾಣದಲ್ಲಿ ಹೆಚ್ಚಿದಾಗ ಕೊಬ್ಬುರಹಿತ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮಗಳಿಂದ ಇದನ್ನು ಇಳಿಸುವುದು ಸಾಧ್ಯ.  

 

 ಮಧುಮೇಹ 

ಅನೇಕರಲ್ಲಿ ಅನುವಂಶಿಕವಾಗಿ ಕಂಡುಬರುವ ಮಧುಮೇಹ ವ್ಯಾಧಿಯು ಇತ್ತೀಚಿನ ಕೆಲವರ್ಷಗಳಿಂದ ಬಾಲ್ಯ ಅಥವಾ ತಾರುಣ್ಯದಲ್ಲೇ ಪತ್ತೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಶಾಶ್ವತ ಪರಿಹಾರವಿಲ್ಲದ ಈ ವ್ಯಾಧಿಪೀಡಿತರಲ್ಲಿ ಅಥೆರೋಸ್ಕ್ಲೆರೋಸಿಸ್ ಹಾಗೂ ಅಧಿಕ ರಕ್ತದೊತ್ತಡಗಳೊಂದಿಗೆ, ಕೊರೋನರಿ ಹೃದ್ರೋಗ ಮತ್ತು ತತ್ಸಂಬಂಧಿತ ಸಮಸ್ಯೆಗಳ ಪರಿಣಾಮವಾಗಿ ಅಕಾಲಿಕ ಮರಣದ ಸಂಖ್ಯೆಯೂ ಹೆಚ್ಚುತ್ತಿದೆ. ಮಧುಮೇಹ ಹಾಗೂ ಹೃದ್ರೋಗಗಳಿಗೆ ನಿಮ್ಮ ರಕ್ತದಲ್ಲಿ ಹೆಚ್ಚಿರುವ ಕೊಬ್ಬಿನಂಶವೂ ಕಾರಣವೆನಿಸಬಲ್ಲದು. ಆಹಾರ ಸೇವನೆಯಲ್ಲಿ ಪಥ್ಯ ಮತ್ತು ದೈನಂದಿನ ವ್ಯಾಯಾಮಗಳಿಂದ ಇಂತಹ ಗಂಭೀರ ಸಮಸ್ಯೆಗಳನ್ನು ಖಚಿತವಾಗಿ ದೂರವಿರಿಸಬಹುದು. 

ಸ್ಥೂಲಕಾಯ- ಅತಿಬೊಜ್ಜು 

ಧಡೂತಿ ದೇಹದ ವ್ಯಕ್ತಿಗಳ ಆರೋಗ್ಯದ ಸಮಸ್ಯೆಗಳಿಗೆ ಅತಿಬೊಜ್ಜು ನೇರವಾಗಿ ಕಾರಣವೆನಿಸದಿದ್ದರೂ, ಹೃದ್ರೋಗಗಳಿಗೆ ಕಾರಣವೆನಿಸುವುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ ಅಧಿಕ ರಕ್ತದೊತ್ತಡವಿರುವ ಬಹಳಷ್ಟು ಜನರು ಸ್ಥೂಲಕಾಯರೇ ಆಗಿದ್ದು, ಇವರು ತೀವ್ರ ವ್ಯಾಯಾಮದಲ್ಲಿ ಭಾಗವಹಿಸುವ ಮೂಲಕ ತಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ಆದರೆ ಅತಿಆಹಾರಸೇವನೆ, ಅತಿಯಾದ ಕೊಬ್ಬಿನಂಶವಿರುವ ಖಾದ್ಯಗಳ ಸೇವನೆ ಹಾಗೂ ಸಿಹಿತಿಂಡಿಗಳು ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ, ಇವರ ರಕ್ತದಲ್ಲಿನ ಕೊಬ್ಬಿನ ಅಂಶವು ಅತಿಯಾಗಿರುತ್ತದೆ. ತತ್ಪರಿಣಾಮವಾಗಿ ಉದ್ಭವಿಸುವ ಅಥೆರೋಸ್ಕ್ಲೆರೋಸಿಸ್ ಮತ್ತು ಆರ್ಟೀರಿಯೋ ಸ್ಕ್ಲೆರೋಸಿಸ್ ಗಳು, ಕೊರೋನರಿ ಹೃದ್ರೋಗಗಳಿಗೆ ಆಹ್ವಾನವನ್ನು ನೀಡುವುದರಲ್ಲಿ ಸಂದೇಹವಿಲ್ಲ. 

ಸ್ಥೂಲದೇಹಿಗಳ ಶರೀರದಲ್ಲಿನ ಅತಿಯಾದ ಕೊಬ್ಬು, ತೀವ್ರ ವ್ಯಾಯಾಮದ ಸಂದರ್ಭದಲ್ಲಿ ಹೃದಯದ ಕಾರ್ಯಕ್ಷಮತೆಗೆ ಅಡ್ಡಿಪಡಿಸುವುದೇ ಒಂದು ಸಮಸ್ಯೆಯಾಗಿದೆ. ಇದೇ ಕಾರಣದಿಂದಾಗಿ ಸ್ಥೂಲದೇಹಿಗಳು ತಜ್ಞವೈದ್ಯರ ಸಲಹೆ ಪಡೆದು ತಮ್ಮ ತೂಕವನ್ನು ಇಳಿಸಿಕೊಳ್ಳುವುದು ಹಿತಕರವೆನಿಸುವುದು. 

ಧೂಮಪಾನ 

ಧೂಮಪಾನ, ನಶ್ಯ, ಪಾನ್ ಮತ್ತು ಪಾನ್ ಮಸಾಲಾಗಳಂತಹ ತಂಬಾಕಿನ ಉತ್ಪನ್ನಗಳು ಆರೋಗ್ಯಕ್ಕೆ ಅಪಾಯಕರ ಎನ್ನುವುದು ಸರ್ವವಿದಿತ. ಆದರೆ ವಿಶೇಷವಾಗಿ ಧೂಮಪಾನದ ದೀರ್ಘಕಾಲೀನ ದುಷ್ಪರಿಣಾಮಗಳಿಂದಾಗಿ ರಕ್ತನಾಳಗಳು ಪೆಡಸಾಗುವುದರಿಂದ, ಹೃದಯಾಘಾತದ ಸಾಧ್ಯತೆಗಳು ಹೆಚ್ಚುತ್ತವೆ. ಕ್ಯಾನ್ಸರ್ ನಂತಹ ಗಂಭೀರ ಹಾಗೂ ಮಾರಕ ಕಾಯಿಲೆಗೂ ಕಾರಣವೆನಿಸಬಲ್ಲ ತಂಬಾಕಿನ ಸೇವನೆ, ನಿಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದರ ಬಗ್ಗೆ ಸಂದೇಹವಿಲ್ಲ. 

ಮದ್ಯಪಾನ 

ದಿನನಿತ್ಯ ಅಲ್ಪಪ್ರಮಾಣದಲ್ಲಿ ಮದ್ಯ ಸೇವನೆಯಿಂದ ನಿಮ್ಮ ಹೃದಯದ "ಆರೋಗ್ಯ" ಉತ್ತಮವಾಗಿರುವುದೆಂದು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ. ಆದರೆ ಈ ಬಗ್ಗೆ ಸಾಕಷ್ಟು ಭಿನ್ನಭಿಪ್ರಾಯಗಳೂ ಇವೆ. ಜೊತೆಗೆ ಒಂದಿಷ್ಟು ಹೆಚ್ಚು ಮದ್ಯ ಸೇವನೆಯಿಂದಾಗಿ ಅಧಿಕ ರಕ್ತದೊತ್ತಡ, ಜಠರದ ಹುಣ್ಣುಗಳು, ಮಧುಮೇಹ ಮತ್ತಿತರ ಸಮಸ್ಯೆಗಳು ಉಲ್ಬಣಿಸುವುದರೊಂದಿಗೆ, ನೀವು ಮದ್ಯವ್ಯಸನಿಗಳಾಗುವ ಸಾಧ್ಯತೆಯೂ ಇದೆ. ಇದೇ ಕಾರಣದಿಂದಾಗಿ ಮದ್ಯ ಸೇವಿಸಿ ಹೃದಯದ ಆರೋಗ್ಯವನ್ನು ಕಾಪಾದುವುದಕ್ಕಿಂತ, ದೈನಂದಿನ ವ್ಯಾಯಾಮದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳಿತು. 

ವರ್ತನೆಗಳು 

ನಮ್ಮ ದೈನಂದಿನ ಜೀವನದಲ್ಲಿ ನಮ್ಮ ವರ್ತನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತವೆ. ನಮ್ಮ ಮಾನಸಿಕ ಹಾಗೂ ಭಾವನಾತ್ಮಕ ಪ್ರಕ್ರಿಯೆಗಳು ನಮ್ಮ ಆರೋಗ್ಯದ ಮೇಲೆ ಹಾಗೂ ಹೃದಯದ ಕಾರ್ಯಕ್ಷಮತೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಅರ್ಥಾತ್ ಸಂತೋಷದಿಂದ ಇರುವುದು ಆರೋಗ್ಯಕ್ಕೆ ಉತ್ತಮ. ಕೋಪ - ತಾಪ, ಧ್ವೇಷ - ಅಸೂಯೆಗಳು ನಿಮ್ಮ ಆರೋಗ್ಯಕ್ಕೆ ನಿಶ್ಚಿತವಾಗಿಯೂ  ಹಾನಿಕರವೆಂದು ಅರಿತಿರಿ. ಅಂತೆಯೇ ಇಂದಿನ ಯುವಜನತೆ 'ಕನಿಷ್ಠ ಸಮಯದಲ್ಲಿ ಗರಿಷ್ಠ ಸಾಧನೆ" ಮಾಡುವ ಹವ್ಯಾಸದಿಂದಾಗಿ ತೀವ್ರ ಶಾರೀರಿಕ ಮತ್ತು ಮಾನಸಿಕ ಒತ್ತಡಕ್ಕೆ ಗುರಿಯಾಗುವುದು ಸ್ವಾಭಾವಿಕ. ತತ್ಪರಿಣಾಮವಾಗಿ ಅಕಾಲದಲ್ಲಿ ಹೃದಯರೋಗಗಳಿಗೆ ಬಲಿಯಾಗುತ್ತಿರುವುದೂ ಅಷ್ಟೇ ಸ್ವಾಭಾವಿಕ. 

ನಿಷ್ಕ್ರಿಯತೆ 

ಈ ಬಗ್ಗೆ" ವ್ಯಾಯಾಮ ಮಾಡಿ, ಆರೋಗ್ಯವನ್ನು ಕಾಪಾಡಿ "ಲೇಖನದಲ್ಲಿ ಸಾಕಷ್ಟು ವಿವರಗಳನ್ನು ನೀಡಿರುವುದರಿಂದ  ಇದರ ಪುನರಾವರ್ತನೆಯ ಅವಶ್ಯಕತೆಯಿಲ್ಲ. 

ಅಂತಿಮವಾಗಿ ಅನುವಂಶಿಕತೆ, ಲಿಂಗ, ಜನಾಂಗ ಹಾಗೂ ವಯಸ್ಸುಗಳು ದೈವನಿಯಾಮಕವಾದುದರಿಂದ, ಈ ಬಗ್ಗೆ ನಾವೇನೂ ಮಾಡುವಂತಿಲ್ಲ. 

ಕೊರೋನರಿ ಹೃದ್ರೋಗಗಳು ಬಾರದಂತೆ ತಡೆಗಟ್ಟಲು ಯಾವುದೇ ರೋಗನಿರೋಧಕ ಔಷದಗಳು ಲಭ್ಯವಿಲ್ಲ ನಡು ನಿಮಗೂ ತಿಳಿದಿರಲೇಬೇಕು. ಸದ್ದು ಮಾಡದೆ ಪ್ರಾರಂಭವಾಗಿ, ನಿಧಾನವಾಗಿ ಬೆಳೆದು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಹೃದ್ರೋಗಗಳು ಮಾರಕವೂ ಹೌದು. 

ಆದರೆ ಕೊಬ್ಬಿನಂಶ ಕಡಿಮೆ ಇರುವ ಆಹಾರ ಸೇವನೆ, ನಿಯಮಿತ ವ್ಯಾಯಾಮ, ದುಶ್ಚಟಗಳಿಂದ ದೂರವಿರುವುದು, ಸುಖಲೋಲುಪ ಜೀವನಶೈಲಿಯನ್ನು ಮತ್ತು ನಿಷ್ಕ್ರಿಯತೆಯನ್ನು ತ್ಯಜಿಸಬಲ್ಲ ಮನೋಬಲ ನಿಮ್ಮಲ್ಲಿದ್ದಲ್ಲಿ, ನೀವು ಖಚಿತವಾಗಿಯೂ ಹೃದಯ ರೋಗಗಳಿಗೆ ವಿದಾಯ ಹೇಳುವುದು ಸಾಧ್ಯ. ಇದರೊಂದಿಗೆ ನಿಮ್ಮ ಆಯುಷ್ಯಕ್ಕೆ ಒಂದಿಷ್ಟು ವರ್ಷಗಳನ್ನು ಮತ್ತು ನಿಮ್ಮ ಮನಸ್ಸಿಗೆ ಒಂದಿಷ್ಟು ಹರ್ಷವನ್ನೂ ಸೇರಿಸಿಕೊಳ್ಳುವುದು ಸುಲಭಸಾಧ್ಯ. 

ನಕಲಿವೈದ್ಯರ ತಂತ್ರ!

ಸಾಮಾನ್ಯವಾಗಿ ಯಾವುದೇ ವೈದ್ಯರಲ್ಲಿ ಸಲಹೆ- ಚಿಕಿತ್ಸೆಗಳಿಗಾಗಿ ತೆರಳಿದ ರೋಗಿಯು ಅಣ್ಣ ಸಮಸ್ಯೆಗಳು, ಪತ್ತೆಯಾಗಿರುವ ಕಾಯಿಲೆಗಳು ಮತ್ತು ಪಡೆದಿರುವ ಚಿಕಿತ್ಸೆಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ನೀಡುವುದು ಸಹಜ. "ಬೆರಳು ತೋರಿಸಿದರೆ ಹಸ್ತವನ್ನು ನುಂಗುವ" ನಕಲಿವೈದ್ಯರು ಈ ಮಾಹಿತಿಯನ್ನೇ ಬಂಡವಾಳವನ್ನಾಗಿಸಿಕೊಂಡು ತಮ ಜೇಬನ್ನು ತುಂಬಿಸಿಕೊಳ್ಳುವುದು ಸತ್ಯ. 

ಕೊರೋನರಿ ರಕ್ತನಾಳಗಳಲ್ಲಿ ಅಡಚಣೆ ಇರುವ ರೋಗಿಯೊಬ್ಬರು ಇಂತಹ ನಕಲಿವೈದ್ಯನಲ್ಲಿಗೆ ಚಿಕಿತ್ಸೆಗಾಗಿ ಹೋಗಿದ್ದರು. ರೋಗಿ ನೀಡಿದ ಮಾಹಿತಯಾಗಳನ್ನು ಕೇಳಿದ ಬಳಿಕ ಆತನ ನಾಡಿಯನ್ನು ಪರೀಕ್ಷಿಸಿದ ನಾಟಕವಾಡಿದ ವೈದ್ಯನು, ನಿಮ್ಮ ರಕ್ತದಲ್ಲಿ ಕೊಲೆಸ್ಟರಾಲ್ ತುಂಬಾ ಹೆಚ್ಚಿದೆ ಎಂದಿದ್ದನು!. ಬಳಿಕ ತೆಳ್ಳಗಿನ ರಟ್ಟನ್ನು ಕೊಳವೆಯಾಕಾರದಲ್ಲಿ ಸುರುಳಿ ಮಾಡಿ, ಒಂದು ತುದಿಯನ್ನು ರೋಗಿಯ ಹೃದಯದ ಭಾಗದಲ್ಲಿ ಇರಿಸಿ ಮತ್ತೊಂದು ತುದಿಗೆ ಕಿವಿ ನೀಡಿ, ಒಂದೆರಡು ನಿಮಿಷಗಳ ಕಾಲ ಹೃದಯ ಬಡಿತವನ್ನು ಆಲಿಸಿದ ನಂತರ ರೋಗಿಯ ಕೊರೋನರಿ ರಕ್ತನಾಳಗಳಲ್ಲಿ ತೀವ್ರ ಅಡಚಣೆ ಇದೆ ಎಂದು ಹೇಳಿದ್ದನು. ವಿಶೇಷವೆಂದರೆ ಈ ಮಾಹಿತಿಯನ್ನು ರೋಗಿಯೇ ಆತನಿಗೆ ನೀಡಿದ್ದನು!.

ಒಂದೆರಡು ವಾರಗಳ ಚಿಕಿತ್ಸೆಯ ಬಳಿಕ ಇದೇ ಪರೀಕ್ಷೆಗಳ ಪುನರಾವರ್ತನೆಯ ನಂತರ ರೋಗಿಗೆ ಆಶ್ಚರ್ಯ- ಸಂತೋಷಗಳು ಉಂಟಾಗುವ ರೀತಿಯಲ್ಲಿ, ಶೇ. ೫೦ ರಷ್ಟು ಅಡಚಣೆಗಳು ನಿವಾರಣೆಯಾಗಿದ್ದು, ಮುಂದಿನ ಕೆಲವೇ ವಾರಗಳ ಚಿಕಿತ್ಸೆಯ ಬಳಿಕ ಅಡಚಣೆಗಳನ್ನು ಸಂಪೂರ್ಣವಾಗಿ ನಿವಾರಿಸುವ ಭರವಸೆಯನ್ನು ಈ ನಕಲಿವೈದ್ಯನು ನೀಡಿದ್ದನು!. 

ಇಂತಹ ನಕಲಿವೈದ್ಯರ ಹೇಳಿಕೆಗಳನ್ನು ಅಥವಾ ಚಿಕಿತ್ಸೆಯನ್ನು ನಂಬಿ ಪ್ರಯೋಗಿಸಿದಲ್ಲಿ, ಸಾಕಷ್ಟು ಹಣವನ್ನು ಕಳೆದುಕೊಳ್ಳುವುದರೊಂದಿಗೆ ನಿಮ್ಮ ಮಕ್ಕಳು 'ಅನಾಥ" ರಾಗುವುದರಲ್ಲಿ ಸಂದೇಹವಿಲ್ಲ. ನಿಮ್ಮ ಆರೋಗ್ಯದ ಸಮಸ್ಯೆಗಳಿಗೆ ನಿಮ್ಮ ನಂಬಿಗಸ್ಥ ಕುಟುಂಬ ವೈದ್ಯರ ಸಲಹೆಯಂತೆ ಸೂಕ್ತ ತಜ್ಞರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಹಿತಕರ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೧೫-೦೫- ೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


Friday, December 20, 2013

Exercise daily- Stay healthy





                 ವ್ಯಾಯಾಮ ಮಾಡಿ- ಆರೋಗ್ಯವನ್ನು ಕಾಪಾಡಿ 

ಯೌವ್ವನದಲ್ಲಿ ಸಾಕಷ್ಟು ಸಂಪಾದಿಸುತ್ತಿರುವಾಗಲೇ ಒಂದಿಷ್ಟು ಹಣವನ್ನು ಮುಂದೆ ವೃದ್ಧಾಪ್ಯದಲ್ಲಿ ಆಸರೆಯಾದೀತೆಂದು ಉಳಿತಾಯ ಮಾಡುವಂತೆಯೇ, ಬಾಲ್ಯದಿಂದಲೇ ಪ್ರತಿನಿತ್ಯ ಒಂದಿಷ್ಟು ಸಮಯವನ್ನು ವ್ಯಾಯಾಮ- ಕ್ರೀಡೆಗಳಿಗಾಗಿ ವಿನಿಯೋಗಿಸಿದಲ್ಲಿ ಮುಂದೆ ವೃದ್ಧಾಪ್ಯದಲ್ಲೂ ನಿಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಕಾಪಾಡಲು ಸಹಕಾರಿಯಾಗುವುದು. ಇದಕ್ಕೆ ತಪ್ಪಿದಲ್ಲಿ ನೀವು ಗಳಿಸಿ ಉಳಿಸಿದ ಹಣವನ್ನು,ಮುಂದೆ ನಿಮ್ಮನ್ನು ಕಾಡಬಹುದಾದ ಅನಾರೋಗ್ಯದ ಸಮಸ್ಯೆಗಳಿಗೆ ವಿನಿಯೋಗಿಸಬೇಕಾಗುವುದು ಎನ್ನುವುದನ್ನು ಮರೆಯದಿರಿ. 
-----------                ----------          -------------------             --------------           ----------              --------------                  ---------------        ---------

 ಪ್ರತಿನಿತ್ಯ ನಿಗದಿತ ಸಮಯದಲ್ಲಿ ನಿಯಮಿತವಾಗಿ ಶಾರೀರಿಕ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ನಿರತರಾಗುವುದು, ನಿಸ್ಸಂದೆಹವಾಗಿ ಹಾಗೂ ನಿರಂತರವಾಗಿ ನಿಮ್ಮ ಆರೋಗ್ಯ ರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸಬಲ್ಲದು. ಅತ್ಯಾಧುನಿಕ ಸಂಶೋಧನೆಗಳ ಫಲವಾಗಿ ನಮಗಿಂದು ಲಭ್ಯವಾಗಿರುವ ಅದ್ಭುತ ರೋಗನಿರೋಧಕ- ರೋಗ ನಿವಾರಕ ಔಷದಗಳಿಗಿಂತಲೂ, ದೈನಂದಿನ ಶಾರೀರಿಕ ವ್ಯಾಯಾಮವು ನಿಮ್ಮನ್ನು ರೋಗರಹಿತರನ್ನಾಗಿರಿಸಲು ಅತ್ಯಂತ ಪರಿಣಾಮಕಾರಿ ಎನಿಸಬಲ್ಲದು. 

ಪ್ರತಿನಿತ್ಯ ತಪ್ಪದೆ ಮಾಡುವ ಶಾರೀರಿಕ ವ್ಯಾಯಾಮದಿಂದ ಪರಿಪೂರ್ಣ "ದೈಹಿಕ ಕ್ಷಮತೆ" (Physical fitness) ಲಭಿಸುವುದರಲ್ಲಿ ಸಂದೇಹವಿಲ್ಲ. ಆದರೆ ಇದಕ್ಕಾಗಿ ಒಂದಿಷ್ಟು ಶಾರೀರಿಕ ಶ್ರಮದೊಂದಿಗೆ, ಸಾಕಷ್ಟು ಬೆವರಿಳಿಸಬೇಕಾಗುವುದು ಅನಿವಾರ್ಯ!. 

ದೈಹಿಕ ಕ್ಷಮತೆ ಎಂದರೇನು?

ಕಿಂಚಿತ್ ಶಾರೀರಿಕ ಶ್ರಮದ ಕೆಲಸ ಮಾಡಿದೊಡನೆ ಆಯಾಸವಾಗುವುದು, ಕ್ಷಿಪ್ರ ನದಿಗೆ ಅಥವಾ ಎತ್ತರವನ್ನು ಏರಿದಾಕ್ಷಣ ಎದುಸಿರು ಬಾಧಿಸುವುದು, ಅರ್ಧ ಗಂಟೆಯ ಶ್ರಮದ ಕೆಲಸ ಮಾಡಿದಲ್ಲಿ ಒಂದು ಗಂಟೆಯ ವಿಶ್ರಾಂತಿಯನ್ನು ಬಯಸುವುದು ಹಾಗೂ ಆಲಸ್ಯ ಮತ್ತು ಸೋಮಾರಿತನಗಳು ನಿಮ್ಮಲ್ಲಿದ್ದರೆ, ನಿಮ್ಮ ದೈಹಿಕ ಕ್ಷಮತೆಯು ಕನಿಷ್ಠ ಮಟ್ಟದಲ್ಲಿದೆ ಎಂದರ್ಥ. 

ನಿರಾಯಾಸವಾಗಿ ನಿಮ್ಮ ದೈನಂದಿನ ಕೆಲಸಗಳನ್ನು ಸಮರ್ಪಕವಾಗಿ ಮಾಡಿ ಮುಗಿಸಿದ ಬಳಿಕವೂ, ತುರ್ತು ಅಗತ್ಯಕ್ಕಾಗಿ ಒಂದಿಷ್ಟು "ಶಕ್ತಿ" (Energy) ಯನ್ನು ಉಳಿಸಿಕೊಳ್ಳಬಲ್ಲ ಸಾಮರ್ಥ್ಯ ನಿಮ್ಮಲ್ಲಿ ಇದ್ದಲ್ಲಿ, ನಿಮ್ಮ ದೈಹಿಕ ಕ್ಷಮತೆಯು ಉನ್ನತ ಮಟ್ಟದಲ್ಲಿ ಇದೆಯೆಂದು ತಿಳಿಯಿರಿ. 

ಪರಿಪೂರ್ಣ ದೈಹಿಕ ಕ್ಷಮತೆ ಲಭ್ಯವಾಗಬೇಕಿದ್ದಲ್ಲಿ, ನಿಮ್ಮ ಹೃದಯ, ರಕ್ತನಾಳಗಳು, ಶ್ವಾಸಕೋಶಗಳು ಮತ್ತು ಶರೀರದ ಮಾಂಸಪೇಶಿಗಳು ತಮ್ಮ ಕಾರ್ಯಕ್ಷಮತೆಯ ಉತ್ತುಂಗದಲ್ಲಿರುವುದು ಅವಶ್ಯ. ದೀರ್ಘಕಾಲೀನ ತೀವ್ರ ಶಾರೀರಿಕ ವ್ಯಾಯಾಮದಿಂದ ಮಾತ್ರ ನೀವು ಈ ಸ್ಥಿತಿಯನ್ನು ತಲುಪಲು ಸಾಧ್ಯ. 

ಜನಸಾಮಾನ್ಯರು ನಂಬಿರುವಂತೆ ತಮ್ಮ ದೈನಂದಿನ ಕೆಲಸಕಾರ್ಯಗಳಲ್ಲಿ ಮಹಡಿ ಏರುವುದು- ಇಳಿಯುವುದು, ಸಾಕಷ್ಟು ದೂರ ನಡೆದುಕೊಂಡು ಹೋಗುವುದು, ಬಾವಿಯಿಂದ ನೀರೆಳೆಯುವುದು, ಬಟ್ಟೆ ಒಗೆಯುವುದು ಇತ್ಯಾದಿ ಕೆಲಸಗಳನ್ನು ಶಾರೀರಿಕ ವ್ಯಾಯಾಮದ ವ್ಯಾಪ್ತಿಯಲ್ಲಿ ಸೇರಿಸಲಾಗದು. ಏಕೆಂದರೆ ಇಂತಹ ಶ್ರಮದಿಂದ ಏಕಪ್ರಕಾರವಾಗಿ ನಮ್ಮ ಹೃದಯ- ರಕ್ತನಾಳಗಳು, ಶ್ವಾಸಕೋಶಗಳು ಹಾಗೂ ಮಾಂಸಪೇಶಿಗಳು ತಮ್ಮ ಕಾರ್ಯಕ್ಷಮತೆಯ ಉತ್ತುಂಗ ಸ್ಥಿತಿಯನ್ನು ತಲುಪಲು ಸಾಧ್ಯವಾಗುವುದಿಲ್ಲ. 

ದೈಹಿಕ ಕ್ಷಮತೆ ಅವಶ್ಯಕವೇ?

ಇತ್ತೀಚಿನ ಕೆಲ ವರ್ಷಗಳಿಂದ ಅನೇಕ ವಿಧದ ಗಂಭೀರ- ಮಾರಕ ಕಾಯಿಲೆಗಳು ೨೦ ರಿಂದ ೩೦ ವರ್ಷ ವಯಸ್ಸಿನವರನ್ನು ಕಾಡುತ್ತಿರಲು, "ನಿಷ್ಕ್ರಿಯತೆ " (Inactivity) ಯೇ ಕಾರಣವೆಂದು ವೈದ್ಯಕೀಯ ಅಧ್ಯನಗಳಿಂದ ತಿಳಿದುಬಂದಿದೆ. ಏಕೆಂದರೆ ಈ ಹಿಂದೆ ಸಾಕಷ್ಟು ಶಾರೀರಿಕ ಶ್ರಮಕ್ಕೆ ಅವಕಾಶವಿದ್ದಂತಹ ಕೆಲಸಗಳನ್ನಿಂದು ಸ್ವಯಂಚಾಲಿತ ಯಂತ್ರಗಳನ್ನು ಬಳಸಿ ಮಾಡಲಾಗುತ್ತಿದೆ. ಆದರೆ ಈ ಐಶಾರಾಮಿ ಜೀವನಶೈಲಿಯಿಂದಾಗಿ ನಮ್ಮ ಸಂಪೂರ್ಣ ಆಯುಷ್ಯವನ್ನು ರೋಗರಹಿತರಾಗಿ ಆಸ್ವಾದಿಸಲು ನಾವಿಂದು ವಿಫಲರಾಗಿರುವುದು ನಿಜ. ಸುಖ ಸೌಲಭ್ಯದ ಮಟ್ಟವನ್ನು ಇನ್ನಷ್ಟು ಹೆಚ್ಚಿಸುವ ಸಂಶೋಧನೆಗಳಿಗಾಗಿ ಚೆಲ್ಲುತ್ತಿರುವ ಹಣದ ನೂರು ಪಟ್ಟು ಹಣವನ್ನು, ಇಂತಹ ಸಾಧನಗಳ ಬಳಕೆಯಿಂದ ನಮ್ಮನ್ನು ಕಾಡುತ್ತಿರುವ ಕಾಯಿಲೆಗಳ ಚಿಕಿತ್ಸೆಗಾಗಿ ವ್ಯಯಿಸುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿಇದರೊಂದಿಗೆ "ಮೂರ್ಖರ ಪೆಟ್ಟಿಗೆ" ಎಂದು ಕರೆಯಲ್ಪಡುವ ಟೆಲಿವಿಷನ್ ಎನ್ನುವ ಮನೋರಂಜನಾ ಸಾಧನವು ತನ್ನ ಜನಪ್ರಿಯತೆಯೊಂದಿಗೆ, ನಮ್ಮಲ್ಲಿ ನಿಷ್ಕ್ರಿಯತೆಯ ಭೂತವನ್ನು ಶಾಶ್ವತವಾಗಿ ನೆಲೆಯೂರಿಸಿದೆ. ಈ ನಿಷ್ಕ್ರಿಯತೆ ಹಾಗೂ ಐಶಾರಾಮಿ ಜೀವನಶೈಲಿಯಿಂದಾಗಿ ನಮ್ಮ "ರೋಗನಿರೋಧಕ ಶಕ್ತಿ" ವಿನಾಶದ ಅಂಚನ್ನು ತಲುಪಿರುವುದು ಅಷ್ಟೇ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಶಾರೀರಿಕ ಕ್ಷಮತೆ ಹಾಗೂ ಆರೋಗ್ಯದ ರಕ್ಷಣೆಗಾಗಿ ದಿನದಿನ ವ್ಯಾಯಾಮ ಅನಿವಾರ್ಯವೂ ಹೌದು. 

ಜೀವನಶೈಲಿ: ಅಂದು- ಇಂದು 

ಸೂರ್ಯೋದಯದಿಂದ ಸೂರ್ಯಾಸ್ತದ ತನಕ ತನ್ನ ಮನೆ, ಹೊಲ, ದನಕರುಗಳ ಪಾಲನೆಯೊಂದಿಗೆ ವ್ಯಾಪಾರ ಮತ್ತಿತರ ವೃತ್ತಿಗಳನ್ನು ಪ್ರಾಮಾಣಿಕವಾಗಿ ನಡೆಸುತ್ತಿದ್ದ, ದಿನವಿಡೀ ತನ್ನ ಆಳುಗಳೊಂದಿಗೆ ಹೆಗಲಿಗೆ ಹೆಗಲುಕೊಟ್ಟು ದುಡಿಯುತ್ತಿದ್ದ ಮನೆಯೊಡೆಯರು ಆರೋಗ್ಯವಂತರಾಗಿದ್ದರು. ಹತ್ತು ಮಕ್ಕಳನ್ನು ಹೊತ್ತು, ಹೆತ್ತು, ಸಾಕಿ ಸಲಹಿದ ಹಾಗೂ ದಿನವಿಡೀ ತನ್ನ ಸಂಸಾರಕ್ಕಾಗಿ ಗಾಣಕ್ಕೆ ಕಟ್ಟಿದ ಎತ್ತಿನಂತೆ ದುಡಿಯುತ್ತಿದ್ದ ಮಾತೆಯರು ರೋಗರಹಿತರಾಗಿದ್ದರು. ಮೈಲುಗಟ್ಟಲೆ ದೂರದಲ್ಲಿರುವ ಶಾಲೆಗೆ ಬುತ್ತಿ ಹೊತ್ತು ನಡೆದುಕೊಂಡೇ ಹೋಗಿಬರುತ್ತಿದ್ದ ಮಕ್ಕಳು ದಷ್ಟಪುಷ್ಟರಾಗಿದ್ದರು. ನಮ್ಮ ಹಿರಿಯರು ಯಥೇಚ್ಚವಾಗಿ ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪಗಳನ್ನು ಮೆದ್ದರೂ, ಸಾಕಷ್ಟು ಶ್ರಮಪಟ್ಟು ತಿಂದದ್ದನ್ನು ಕರಗಿಸುವ ಕಲೆಯೂ ಇವರಿಗೆ ಕರತಲಾಮಲಕವಾಗಿತ್ತು!. 

ಹಿಂದೆ ತಮ್ಮ ಮಡದಿ- ಮಕ್ಕಳು, ಚಿನ್ನ- ಬೆಳ್ಳಿ, ಆಸ್ತಿ- ಪಾಸ್ತಿಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವುದು ವಾಡಿಕೆಯಾಗಿತ್ತು. ಆದರೆ ನಾವಿಂದು ನಮ್ಮ ಬಿ. ಪಿ, ಡಯಾಬೆಟೆಸ್, ಹಾರ್ಟ್ ಅಟ್ಟಾಕ್, ಆರ್ಥ್ರೈಟಿಸ್, ಸ್ಪಾಂಡಿಲೈಟಿಸ್ ಇತ್ಯಾದಿ ಕಾಯಿಲೆಗಳನ್ನೇ ಬಿರುದು ಬಾವಲಿಗಳಂತೆ ಹೇಳಿಕೊಳ್ಳುವುದು ನಿಜವಲ್ಲವೇ?. 

ಆಹಾರ ಮತ್ತು ಸ್ಥೂಲಕಾಯ 

ನಮಗೆಲ್ಲರಿಗೂ ಒಂದೇ ರೀತಿಯ ಪೋಷಕಾಂಶಗಳು ಅವಶ್ಯವಾದರೂ, ವಯಸ್ಸಿಗನುಗುಣವಾಗಿ ಇವುಗಳ ಪ್ರಮಾಣ ವ್ಯತ್ಯಯವಾಗುವುದು. ತಾರುಣ್ಯದಲ್ಲಿ ಶಾರೀರಿಕ ಬೆಳವಣಿಗೆ ಹಾಗೂ ಹೆಚ್ಚು ಶಕ್ತಿಗಾಗಿ ಅಧಿಕ ಆಹಾರ ಬೇಕಾಗುವುದು. ಅಂತೆಯೇ ಮಹಿಳೆಯರಿಗಿಂತಲೂ ಪುರುಷರು ಹಾಗೂ ಕುಬ್ಜರಿಗಿಂತ ದೈತ್ಯರು ಅಧಿಕ ಆಹಾರವನ್ನು ಸೇವಿಸುವುದು ಸ್ವಾಭಾವಿಕ. ಆದರೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಅವಶ್ಯವಿರುವುದಕ್ಕಿನತ ಹೆಚ್ಚು ಕ್ಯಾಲರಿಗಳಿರುವ ಮತ್ತು ಅತಿ ಆಹಾರ ಸೇವನೆಯಿಂದ ಶರೀರದ ತೂಕವು ಹೆಚ್ಚುವುದು. 

ಬಹುತೇಕ ಸ್ಥೂಲ ದೇಹಿಗಳು ನಂಬಿರುವಂತೆ ಅವರ ಶಾರೀರಿಕ ಪ್ರಕ್ರಿಯೆಗಳಲ್ಲಿನ ದೋಷವೇ ಅವರಲ್ಲಿ ಬೊಜ್ಜು ಸಂಗ್ರಹವಾಗಳು ಕಾರಣ ಎನ್ನುವುದು ನಿಜವಲ್ಲ. ಅಮ್ನುಶ್ಯನ ಶರೀರದಲ್ಲಿರುವ ಬೊಜ್ಜಿನ ಕಣಗಳು ಯೌವ್ವನದಲ್ಲಿ ಕ್ಷಿಪ್ರವಾಗಿ ವೃದ್ಧಿಸುತ್ತವೆ. ಈ ಪ್ರಕ್ರಿಯೆ ಇದೇ ರೀತಿಯಲ್ಲಿ ಮುಂದುವರೆದಲ್ಲಿ, ಶಾಶ್ವತವೆನಿಸುವ ಸಂಭವವಿದೆ. ನೀವೆಲ್ಲರೂ ನಂಬಿರುವಂತೆ "ದಷ್ಟಪುಷ್ಟ ಮಗು ಎಂದರೆ ಆರೋಗ್ಯವಂತ ಮಗು" ಎನ್ನುವುದು ಮಿಥ್ಯೆ. 

ಸ್ಥೂಲ ದೇಹಿಗಳಲ್ಲಿ ಬೊಜ್ಜು ದ್ವಿಗುಣಿಸುವ ವೇಗವನ್ನು ತಡೆಯುವ ಏಕಮಾತ್ರ ಸೂತ್ರವೇ, ಆಹಾರ ಸೇವನೆಯಲ್ಲಿ ನಿಯಂತ್ರಣ ಮತ್ತು ದಿನದಿನ ವ್ಯಾಯಾಮ ಆಟವಾ ಕ್ರೀಡೆ. 

ಕೊಬ್ಬನ್ನು ಕರಗಿಸುವುದೆಂತು? 

ಮಾನವ ಶರೀರದಲ್ಲಿರುವ ಸುಮಾರು ಅರ್ಧ ಕಿಲೋ ಕೊಬ್ಬನ್ನು ಕರಗಿಸಲು ಕನಿಷ್ಠ ೩೫೦೦ ಕ್ಯಾಲರಿಗಳನ್ನು ವಿನಿಯೋಗಿಸಬೇಕಾಗುವುದು. ಪ್ರತಿದಿನ ೩೦ ನಿಮಿಷಗಳ ಕಾಲ ತೀವ್ರ ವ್ಯಾಯಾಮ ಮಾಡಿದಲ್ಲಿ, ಗರಿಷ್ಠ ೫೦೦ ಕ್ಯಾಲರಿಗಳನ್ನು ಕರಗಿಸುವುದು ಸಾಧ್ಯ. ಅರ್ಥಾತ್ ಒಂದು ವಾರದಲ್ಲಿ ದಿನನಿತ್ಯ ೩೦ ನಿಮಿಷಗಳ ಕಾಲ ವ್ಯಾಯಾಮ ಮಾಡಿದಲ್ಲಿ, ಅತಿ ಹೆಚ್ಚೆಂದರೆ ಅರ್ಧ ಕಿಲೋಗ್ರಾಂ ಕೊಬ್ಬು ಕರಗುತ್ತದೆ. ಆದರೆ ಇದರೊಂದಿಗೆ ನೀವು ಸೇವಿಸುವ ದೈನಂದಿನ ಆಹಾರದಲ್ಲಿ ನಿಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಅವಶ್ಯವಿರುವಷ್ಟೇ ಪ್ರಮಾಣದ ಕ್ಯಾಲರಿಗಳನ್ನು ಸೇವಿಸುವುದು ಅತೀ ಅವಶ್ಯ. 

ತೀವ್ರ ವ್ಯಾಯಾಮದಿಂದ ಒಂದು ನಿಮಿಷಕ್ಕೆ ನೀವು ವಿನಿಯೋಗಿಸಬಹುದಾದ ಕ್ಯಾಲರಿಗಳಿಗೆ ಒಂದಿಷ್ಟು ಉದಾಹರಣೆಗಳು ಇಂತಿವೆ. ಕ್ಷಿಪ್ರ ನಡಿಗೆ- ಸುಮಾರು ೧೨ ನಿಮಿಷಗಳಲ್ಲಿ ಒಂದು ಕಿ. ಮೀ : ೩.೮ ಕ್ಯಾಲರಿ. ಸೈಕಲ್ ಸವಾರಿ- ೩ ನಿಮಿಷದಲ್ಲಿ ಒಂದು ಕಿ. ಮೀ: ೧೦ ಕ್ಯಾಲರಿ. ಈಜು- ಒಂದು ನಿಮಿಷದಲ್ಲಿ ೨೫ ಮೀ : ೯.೧ ಕ್ಯಾಲರಿ. ಜಾಗಿಂಗ್-೬ ನಿಮಿಷದಲ್ಲಿ ಒಂದು ಕಿ. ಮೀ: ೧೦ ಕ್ಯಾಲರಿ. ಓಟ- ೩ ನಿಮಿಷದಲ್ಲಿ ೧ ಕಿ. ಮೀ: ೧೬ ಕ್ಯಾಲರಿ. ಇದೇ ರೀತಿಯಲ್ಲಿ ವಿವಿಧ ವ್ಯಾಯಾಮ ಮತ್ತು ಕ್ರೀಡೆಗಳಿಗೆ ಅನುಗುಣವಾಗಿ ನೀವು ವ್ಯಯಿಸುವ ಕ್ಯಾಲರಿಗಳ ಪ್ರಮಾಣವು ವ್ಯತ್ಯಯವಾಗುವುದು. 

ಆದರೆ ವ್ಯಾಯಾಮದ ಬಳಿಕ "ಯೇ ದಿಲ್ ಮಾಂಗೆ ಮೋರ್" ಎಂದು ಒಂದು ಬಾಟಲಿ ತಂಪು ಪಾನೀಯವೊಂದನ್ನು ಗುತುಕರಿಸಿದಲ್ಲಿ, ಸುಮಾರು ೧೫೦ ಕ್ಯಾಲರಿಗಳು ನಿಮ್ಮ ಉದರವನ್ನು ಸೇರುವುದು ಖಂಡಿತ ಎನ್ನುವುದನ್ನು ಮರೆಯದಿರಿ. 

ಬಹುತೇಕ ಸ್ಥೂಲ ದೇಹಿಗಳು ಹೇಳುವಂತೆ ವ್ಯಾಯಾಮ ಮಾಡುವುದರಿಂದ ಹಸಿವು ಹೆಚ್ಚಾಗಿ, ತಾವು ಸೇವಿಸುವ ಆಹಾರದ ಪ್ರಮಾಣವು ಅಧಿಕವಾಗುವುದು ಎನ್ನುವ ವಿಚಾರ ಸರಿಯಲ್ಲ. ಸದಾ ಚಟುವಟಿಕೆಯಿಂದ ಇರುವ ಸಕ್ರಿಯ ವ್ಯಕ್ತಿಗಳಲ್ಲಿ , ಹಸಿವೆಯು ಶರೀರಕ್ಕೆ ಅವಶ್ಯವಾದ "ಶಕ್ತಿ' ಯಾ ಪ್ರಮಾಣವನ್ನು ಸೂಚಿಸುತ್ತದೆ. ಆದರೆ ನಿಷ್ಕ್ರಿಯ ಮತ್ತು ಆಲಸಿ ವ್ಯಕ್ತಿಗಳಲ್ಲಿ ಹಸಿವು ಇದರ ಸೂಚನೆಯಲ್ಲ. ಇದೇ ಕಾರಣದಿಂದಾಗಿ ನಿಷ್ಕ್ರಿಯತೆಯ ಪರಿಣಾಮವಾಗಿ ನಿಮ್ಮ ಹಸಿವೆ ಹಾಗೂ ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾಗುವುದೆನ್ನುವುದು ನಿಜವಲ್ಲ. 

ವ್ಯಾಯಾಮ ಅವಶ್ಯಕವೇ?

ಬಹುತೇಕ ಜನರು ತಮ್ಮ ವಿದ್ಯಾರ್ಥಿ ಜೀವದಲ್ಲಿ ಯಾವುದಾದರೊಂದು ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರೂ, ವೃತ್ತಿ ಜೀವನ ಪ್ರಾರಂಭವಾದೊಡನೆ ಇದಕ್ಕೆ ವಿದಾಯ ಹೇಳುವುದು ಸ್ವಾಭಾವಿಕ. ಪ್ರಬುದ್ಧ ಪ್ರೌಢ ವಯಸ್ಸಿನಲ್ಲಿ ಪರಿಪೂರ್ಣ ಶಾರೀರಿಕ ಬೆಳವಣಿಗೆಯ ಫಲವಾಗಿ ತಮ್ಮ ಆರೋಗ್ಯ ಉತ್ತಮವಾಗಿದೆ ಎಂದು ಅನೇಕರು ಭ್ರಮಿಸುತ್ತಾರೆ. ಆದರೆ ಕೆಲವೇ ವರ್ಷಗಳಲ್ಲಿ ತಮ್ಮಲ್ಲಿ ಕಂಡುಬರುವ ಶಾರೀರಿಕ ಬದಲಾವಣೆಗಳು ಆಕಸ್ಮಿಕವಾಗಿ ಗಮನಕ್ಕೆ ಬಂದಾಗ ಇಂತಹ ವ್ಯಕ್ತಿಗಳಿಗೆ "ಶಾಕ್" ಹೊಡೆದಂತಾಗುವುದು ಸತ್ಯ. ಇದಲ್ಲದೆ ಗಂಭೀರ- ಮಾರಕ ಕಾಯಿಲೆಗಳು ಪತ್ತೆಯಾದಲ್ಲಿ ಶಾರೀರಿಕ ಸಮಸ್ಯೆಗಳೊಂದಿಗೆ ಮಾನಸಿಕ ನೆಮ್ಮದಿಗೂ ಸಂಚಕಾರ ಬರುವುದರಲ್ಲಿ ಸಂದೇಹವಿಲ್ಲ. 

ಈ ರೀತಿಯ ಸಮಸ್ಯೆಗಳು ಬಂದೆರಗಿದ ಬಳಿಕ ಎಚ್ಚೆತ್ತು ತಮ್ಮ ಆರೋಗ್ಯವನ್ನು ಕಾಪಾಡುವ ಬಗ್ಗೆ ಚಿಂತಿಸುವುದಕ್ಕಿಂತ, ಪ್ರಾರಂಭದಿಂದಲೇ ವ್ಯಾಯಾಮ- ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ನಿರಂತರವಾಗಿ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವುದು ಕ್ಷೇಮಕರ. 

ವ್ಯಾಯಾಮದ ಪರಿಣಾಮಗಳು 

ಕ್ರಮಬದ್ಧವಾಗಿ ನೀವು ವ್ಯಾಯಾಮವನ್ನು ಮಾಡಲು ಆರಂಭಿಸಿದಂತೆಯೇ ನಿಮ್ಮ ಶ್ವಾಸೋಚ್ಚ್ವಾಸ ಮತ್ತು ಹೃದಯದ ಬಡಿತದ ಗತಿಗಳು ಹೆಚ್ಚುತ್ತಾ ಹೋಗುತ್ತವೆ. ಈ ಗತಿಯ ವೇಗವು ನೀವು ಮಾಡುತ್ತಿರುವ ವ್ಯಾಯಾಮದ ತೀವ್ರತೆಗೆ ಅನುಗುಣವಾಗಿ ಹೆಚ್ಚುತ್ತದೆ. ತೀವ್ರ ವ್ಯಾಯಾಮದ ಸಂದರ್ಭದಲ್ಲಿ ಶರೀರದ ವಿವಿಧ ಅಂಗಾಂಗಗಳ ಮತ್ತು ಮಾಂಸಪೇಶಿಗಳ ಆಮ್ಲಜನಕದ ಬೇಡಿಕೆಯೂ ಹೆಚ್ಚುವುದು. ಇದರೊಂದಿಗೆ ಶರೀರದಲ್ಲಿ ಉತ್ಪನ್ನವಾಗುವ ತ್ಯಾಜ್ಯ ವಸ್ತುಗಳ ಪ್ರಮಾಣವು ರಕ್ತದಲ್ಲಿ ಸಂಗ್ರಹವಾಗುವ ಪ್ರಮಾಣವೂ ಏರುವುದು. ಈ ಸಂದರ್ಭದಲ್ಲಿ ತ್ಯಾಜ್ಯ ವಸ್ತುಗಳ ವಿಸರ್ಜನೆಯೊಂದಿಗೆ ಜೀವಕಣಗಳಿಗೆ "ಶಕ್ತಿ" ಯನ್ನು ಒದಗಿಸಲು ಅವಶ್ಯವಾದ ಆಮ್ಲಜನಕವನ್ನು ಪೂರೈಸುವ ಕ್ರಿಯೆಯು ನಮ್ಮ ಶ್ವಾಸಕೋಶಗಳು ಮತ್ತು ಹೃದಯದ ಸಂಯುಕ್ತ ಕಾರ್ಯಾಚರಣೆಯಿಂದ ಸಾಧ್ಯವಾಗುತ್ತದೆ. 

ನಾವು ವಿರಮಿಸುತ್ತಿರುವಾಗ ಪ್ರತಿ ನಿಮಿಷದಲ್ಲಿ ೬ ರಿಂದ ೮ ಲೀಟರ್ ಗಳಷ್ಟು ಗಾಳಿಯನ್ನು ಸೇವಿಸುವುದು ಸಹಜ. ಆದರೆ ಕ್ಷಿಪ್ರ ಓಟದಂತಹ ತೀವ್ರ ಶಾರೀರಿಕ ಕ್ರಿಯೆಯ ಸಂದರ್ಭದಲ್ಲಿ ಈ ಪ್ರಮಾಣವು ಪ್ರತಿ ನಿಮಿಷಕ್ಕೆ ೧೦೦ ಲೀಟರ್ ಗಳಿಗೆ ತಲುಪುವುದುಂಟು. ನಮ್ಮ ಹೃದಯದ ಮೂಲಕ ಶ್ವಾಸಕೋಶಕ್ಕೆ ಹರಿದು ಬರುವ ಕಲುಷಿತ ರಕ್ತದಲ್ಲಿನ ತ್ಯಾಜ್ಯಗಳನ್ನು ಹೊರಸೂಸಿ, ಆಮ್ಲಜನಕವನ್ನು ಹೀರಿ ಸಮೃದ್ಧವಾಗಿ ಮತ್ತೆ ಹೃದಯದ ಮೂಲಕ ಸಂಪೂರ್ಣ ಶರೀರಕ್ಕೆ ಸರಬರಾಜಾಗುವುದು. 

ಅವಿರತವಾಗಿ ಮಿಡಿಯುತ್ತಲೇ ಇರುವ ನಮ್ಮ ಹಿಡಿಗಾತ್ರದ ಹೃದಯವು ಸಾಮಾನ್ಯವಾಗಿ ಪ್ರತಿ ನಿಮಿಷದಲ್ಲಿ ೭೦ ರಿಂದ ೮೦ ಬಾರಿ, ಅಂದರೆ ದಿನದಲ್ಲಿ ಲಕ್ಷಕ್ಕೂ ಅಧಿಕ ಬಾರಿ ಬಡಿಯುತ್ತದೆ. ತೀವ್ರ ಶಾರೀರಿಕ ವ್ಯಾಯಾಮದ ಸಂದರ್ಭದಲ್ಲಿ ಈ ಬಡಿತದ ಗತಿ ಏರುವುದರೊಂದಿಗೆ, ಪ್ರತಿ ಬಡಿತದೊಂದಿಗೆ ಹೊರಸೂಸುವ ರಕ್ತದ ಪ್ರಮಾಣವೂ ಹೆಚ್ಚುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುತ್ತಿರುವುದರಿಂದ ಹೃದಯದ ರಕ್ತನಾಳಗಳ ಕಾರ್ಯಕ್ಷಮತೆಯ ಮಟ್ಟವು( ವ್ಯಾಯಾಮವನ್ನೇ ಮಾಡದವರಿಗಿಂತ ) ಇತರರಿಗಿಂತ ಅತ್ಯುತ್ತಮವಿರುತ್ತದೆ. 

ಇದಲ್ಲದೆ ಕೊಬ್ಬು ತುಂಬಿ ಉಬ್ಬಿರುವ ನಿಮ್ಮ ಹೊಟ್ಟೆ, ನಿತಂಬ, ಸ್ತನಗಳು ಮತ್ತು ಜೋತು ಬಿದ್ದಿರುವ ಮಾಂಸಖಂಡಗಳು ಕ್ರಮೇಣ ಕಠಿಣವಾಗುತ್ತಾ ಬರುವುದರೊಂದಿಗೆ, ನಿಮ್ಮ ಶಕ್ತಿಯ ಪ್ರಮಾಣವೂ ಹೆಚ್ಚುವುದು. ಸ್ವಲ್ಪ ಸಮಯದ ಬಳಿಕ ನಿಮ್ಮ ಆಲಸ್ಯ- ಸೋಮಾರಿತನಗಳು ದೂರವಾಗಿ, ಶಾರೀರಿಕ- ಮಾನಸಿಕ ಉಲ್ಲಾಸ, ಉತ್ಸಾಹ ಮತ್ತು ಚಿತನ್ಯಗಳು ವೃದ್ಧಿಸುತ್ತವೆ. ತತ್ಪರಿಣಾಮವಾಗಿ ದಿನವಿಡೀ ದುಡಿದ ಬಳಿಕವೂ,ನೀವು ಅನಾಯಾಸವಾಗಿ ಇನ್ನಷ್ಟು ಕೆಲಸ ಮಾಡುವ ಸಾಮರ್ಥ್ಯವನ್ನು ಗಳಿಸಿವಿರಿ. ಜತೆಗೆ ನಿಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ಗಳ ಪ್ರಮಾಣ ಕಡಿಮೆಯಾಗುವುದರಿಂದ, ಹೃದಯ- ರಕ್ತನಾಳಗಳ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶವು ನಿಯಂತ್ರಣದಲ್ಲಿರುವುದರೊಂದಿಗೆ, ಸಾಮಾನ್ಯ ಆರೋಗ್ಯದ ಮಟ್ಟವು ಉತ್ತಮಗೊಳ್ಳುವುದು. ಸಾಕಷ್ಟು ಶ್ರಮಪದುವುದರಿಂದಾಗಿ, ಸುಖನಿದ್ರೆಯೂ ಅನಾಯಾಸವಾಗಿ ಬರುವುದು. 

ವ್ಯಾಯಾಮದ ಮೂರು ಹಂತಗಳು 

ಪ್ರಾರಂಭಿಕ ಹಂತ- Warm up- ಯಾವುದೇ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗುವ ಮೊದಲು ಶರೀರದ ಮಾಂಸಪೇಶಿಗಳು, ಅವಯವಗಳು ಮತ್ತು ಅಸ್ಥಿಸಂಧಿಗಳು ತುಸು ಸಡಿಲವಾಗಿ, ಶರೀರದ ರಕ್ತಸಂಚಾರ ಹಾಗೂ ಉಷ್ಣತೆಗಳನ್ನು ಹೆಚ್ಚಿಸುವುದರೊಂದಿಗೆ, ಒಂದಿಷ್ಟು ಬೆವರು ಬರಿಸುವ ಈ ಹಂತವನ್ನು ಪರಿಪಾಲಿಸಿವಿಡಿ ಅತ್ಯವಶ್ಯಕವೂ ಹೌದು. 

ಮುಖ್ಯ ಹಂತ - Main event - ನೀವು ಆರಿಸಿಕೊಂಡ ವ್ಯಾಯಾಮ ಅಥವಾ ಕ್ರೀಡೆಯನ್ನು ಕ್ರಮಬದ್ಧವಾಗಿ ಪಾಲಿಸುವ ಹಂತ. 

ಮುಕ್ತಾಯದ ಹಂತ - Cooling down - ಈ ಹಂತದಲ್ಲಿ ತೀವ್ರ ಗತಿಯಲ್ಲಿರುವ ನಿಮ್ಮ ಶ್ವಾಸೋಚ್ಚ್ವಾಸ ಮತ್ತು ಹೃದಯದ ಬಡಿತವನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರುವ ಹಂತ. 

ಯಾವುದೇ ಕ್ರೀಡೆ ಅಥವಾ ವ್ಯಾಯಾಮಗಳಲ್ಲಿ ತೊಡಗುವಾಗ ಈ ಮೂರು ಹಂತಗಳನ್ನು ಕಡ್ಡಾಯವಾಗಿ ಪರಿಪಾಲಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಿತಕರವೆನಿಸುವುದು. ಇದರೊಂದಿಗೆ ತಜ್ಞರ ಮಾರ್ಗದರ್ಶನ ಮತ್ತು ಅವಶ್ಯಕತೆಯಿದ್ದಲ್ಲಿ ವೈದ್ಯರ ಸಲಹೆಯನ್ನು ಪಡೆಯುವುದು ಅನಾವಶ್ಯಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಉಪಯುಕ್ತವೆನಿಸುವುದು. 

ಹೊಸಬರಿಗೆ ಕಿವಿಮಾತು 

ನೀವು ಇದುವರೆಗೆ ಯಾವುದೇ ರೀತಿಯ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಿದ ಅನುಭವ ಇಲ್ಲದಿದ್ದಲ್ಲಿ, ನಿಮ್ಮ ವಯಸ್ಸು ೩೦ ವರ್ಷ ಮೀರಿದಲ್ಲಿ, ನಿಮ್ಮ ತಂದೆ, ತಾಯಿ ಅಥವಾ ನಿಮಗೆ ಅಧಿಕ ರಕ್ತದೊತ್ತಡ, ಹೃದಯ- ರಕ್ತನಾಳಗಳ ಕಾಯಿಲೆಗಳು, ಮಧುಮೇಹ, ಅಪಸ್ಮಾರ, ಆಸ್ತಮಾ ಹಾಗೂ ತಾವ್ರ ರಕ್ತಹೀನತೆಯಂತಹ ಕಾಯಿಲೆಗಳು ಇದ್ದಲ್ಲಿ, ನೀವು ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವ ಮುನ್ನ ವೈದ್ಯರಿಂದ ಶಾರೀರಿಕ ತಪಾಸಣೆಯನ್ನು ಮಾಡಿಸಿಕೊಳ್ಳಿ. 

ಉದಾಹರಣೆಗೆ ಮಧುಮೇಹ ರೋಗಿಗಳಲ್ಲಿ ತೀವ್ರ ವ್ಯಾಯಾಮದ ಪರಿಣಾಮವಾಗಿ ರಕ್ತದಲ್ಲಿನ ಸಕ್ಕರೆಯ ಅಂಶವು ಹಠಾತ್ ಕುಸಿಯುವ ಸಾಧ್ಯತೆಗಳಿವೆ. ಅಂತೆಯೇ ಆಸ್ತಮಾ ರೋಗಿಗಳು ಚಳಿಗಾಲದಲ್ಲಿ ಬೆಳಗಿನ ಜಾವ ತೀವ್ರ ನಡಿಗೆಯಂತಹ ವ್ಯಾಯಾಮ ಮಾಡುವುದರಿಂದ ಆಸ್ತಮಾ ಉಲ್ಬಣಿಸುವ ಸಾಧ್ಯತೆಗಳಿವೆ. ಇಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ತಜ್ಞ ವೈದ್ಯರ ಸಲಹೆ ಪಡೆಯುವುದು ಹಿತಕರವೆನಿಸುವುದು. 

ದಿನಪತ್ರಿಕೆಗಳಲ್ಲಿ ಮತ್ತು ಟಿ ವಿ ಚಾನಲ್ ಗಳಲ್ಲಿ ಪ್ರಕಟವಾಗುವ "ತೂಕ ಇಳಿಸುವ" ಅದ್ಭುತ ಔಷದಗಳ  ಜಾಹೀರಾತುಗಳನ್ನು ನಂಬಿ, ದುಬಾರಿ ಹಣವನ್ನು ತೆತ್ತು ಇವುಗಳನ್ನು ಖರೀದಿಸಿ ಸೇವಿಸಿದಲ್ಲಿ ನಿಮ್ಮ ಶರೀರದ ತೂಕ ಕ್ಷಿಪ್ರಗತಿಯಲ್ಲಿ ಇಳಿಯುವುದು ಅಸಾಧ್ಯ. ಆದರೆ ನಿಮ್ಮ ಹಣದ ಚೀಲದ ತೂಕವು ಕ್ಷಣ ಮಾತ್ರದಲ್ಲಿ ಇಳಿಯುವುದು ಸತ್ಯ. 

ಪಾಶ್ಚಾತ್ಯ ದೇಶಗಳ ಆಧುನಿಕ ಸಂಶೋಧನೆಗಳ ಫಲವೆಂದು ಘೋಷಿಸುವ, ನಿಮ್ಮ ಹೊಟ್ಟೆ,ತೊಡೆ, ನಿತಂಬಗಳು ಮತ್ತು ಸ್ಥನಗಳಮೇಲೆ ಹಚ್ಚಬಹುದಾದ ಮುಲಾಮುಗಳಿಂದ ನಿಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವುದು ಸುಲಭಸಾಧ್ಯ ಎನ್ನುವುದು ಅಪ್ಪಟ ಸುಳ್ಳು. ಸಾಕಷ್ಟು ಬೆವರನ್ನು ಸುರಿಸದೇ, ಅರ್ಥಾತ್ ಶ್ರಮಪಡದೇ, ಯಾವುದೇ ಪದ್ದತಿಯ ಗುಳಿಗೆ, ಚೂರ್ಣ, ಕ್ಯಾಪ್ಸೂಲ್ ಇತ್ಯಾದಿಗಳನ್ನು ಸೇವಿಸಿ ನಿಮ್ಮ ತೂಕವನ್ನು ಅನಾಯಾಸವಾಗಿ ಇಳಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿ, ನಿಮ್ಮ ಹಣದ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳದಿರಿ. 

ಶಾರೀರಿಕ ಶ್ರಮವಿಲ್ಲದೇ ಕೃತಕ ವಿಧಾನಗಳಿಂದ ನಿಮ್ಮ ಶರೀರದಿಂದ ಸಾಕಷ್ಟು ಬೆವರಿಳಿಸಿದಾಗ ನಿಮ್ಮ ತೂಕ ಕಡಿಮೆಯಾಗುವುದು ನಿಜ. ಆದರೆ ಈ ಪ್ರಯೋಗದ ಬಳಿಕ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದೊಡನೆ, ಕಡಿಮೆಯಾಗಿರುವುದೆಂದು ನೀವು ನಂಬಿರುವ "ತೂಕ" ವು ಮತ್ತೆ ಹೆಚ್ಚುವುದು ಕೂಡಾ ಅಷ್ಟೇ ನಿಜ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ  ಪತ್ರಿಕೆಯ ೧೭-೦೭-೨೦೦೩ ರ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ 
ಅಂಕಣದಲ್ಲಿ ಪ್ರಕಟಿತ ಲೇಖನ. 

Wednesday, December 18, 2013

SHAAREERIKA DOSHAGALIRUVA TANAKA SAMASYE PARIHARAVAAGADU!





 ಶಾರೀರಿಕ ದೋಷಗಳಿರುವ  ತನಕ ಸಮಸ್ಯೆ ಪರಿಹಾರವಾಗದು!

ಶಾಂತಮ್ಮನ ಏಕಮಾತ್ರ ಪುತ್ರ ಗಣೇಶನಿಗೆ ಗಾಯತ್ರಿಯೊಂದಿಗೆ ವಿವಾಹವಾಗಿ ಎರಡು ವರ್ಷಗಳೇ ಸಂದಿದ್ದವು. ಇದೀಗ ತನ್ನ ಮಗನಿಗೆ ಸಂತಾನಪ್ರಾಪ್ತಿ ಆಗದೇ ಇರುವುದು ಶಾಂತಮ್ಮನ ಚಿಂತೆಗೆ ಕಾರಣವೆನಿಸಿತ್ತು. ಅತ್ತೆಯ ಕೊರಗಿಗೆ ತಾನೇ ಕಾರಣ ಎನ್ನುವ ಭ್ರಮೆಯಿಂದ, ಗಾಯತ್ರಿಯೂ ದಿನಗಳು ಉರುಳಿದಂತೆಯೇ ಸೊರಗಲಾರಂಭಿಸಿದ್ದಳು. ಸದಾ ತನ್ನ ವ್ಯಾಪಾರ ವಹಿವಾಟುಗಳಲ್ಲಿ ಮಗ್ನನಾಗಿದ್ದ ಗಣೇಶನು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. 

ತನ್ನ ಮಗನ ಸಂತಾನಹೀನತೆಗೆ ಜಾತಕದಲ್ಲಿನ ದೋಷಗಳು ಕಾರಣವಾಗಿರಬಹುದೇ ಎನ್ನುವ ಸಂದೇಹ ಶಾಂತಮ್ಮನನ್ನು ಸದಾ  ಕಾಡುತ್ತಿತ್ತು. ಅಂತಿಮವಾಗಿ ಈ ಸಂದೇಹವನ್ನು ನಿವಾರಿಸಿಕೊಳ್ಳಲು ತಮ್ಮ ಕುಟುಂಬದ ಜ್ಯೋತಿಷಿಗಳನ್ನು ಭೇಟಿಯಾಗಿ, ತನ್ನ ಮಗ ಮತ್ತು ಸೊಸೆಯರ ಜಾತಕಗಳನ್ನು ಕೂಲಂಕುಶವಾಗಿ ಪರಿಶೀಲಿಸುವಂತೆ ವಿನಂತಿಸಿದ್ದಳು.ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಇವೆರಡೂ ಜಾತಕಗಳನ್ನು ಪರಿಶೀಲಿಸಿದ ಜ್ಯೋತಿಷಿಗೆ, ಪೂರ್ವಜನ್ಮಕ್ಕೆ ಸಂಬಂಧಿಸಿದ ಒಂದೆರಡು ದೋಷಗಳು ಪತ್ತೆಯಾಗಿದ್ದವು. ಈ ದೋಷಗಳಿಗೆ ನಿರ್ದಿಷ್ಟ ಪರಿಹಾರಗಳೂ ಇವೆಯೆಂದ ಜ್ಯೋತಿಷಿಗಳು, ಇದನ್ನು ನೆರವೇರಿಸಬೇಕಾದ ವಿಧಿ ವಿಧಾನಗಳು ಮತ್ತು ಇದನ್ನು ಸಮರ್ಪಕವಾಗಿ ನಡೆಸಬಲ್ಲ ಪುರೋಹಿತರೊಬ್ಬರ ವಿವರಗಳನ್ನೂ ತಿಳಿಸಿದರು. ವಿಶೇಷವೆಂದರೆ ಗಣೇಶನ ಮದುವೆಗೆ ಮುನ್ನ ಇವೆರಡೂ ಜಾತಕಗಳನ್ನು ಪರಿಶೀಲಿಸಿದ್ದ ಇದೇ ಜ್ಯೋತಿಷಿಗೆ, ಅಂದು ಪೂರ್ವಜನ್ಮಕ್ಕೆ ಸಂಬಧಿಸಿದ ದೋಷಗಳು ಪತ್ತೆಯಾಗಲಿಲ್ಲವೇಕೆ?, ಎನ್ನುವ ವಿಚಾರ ಮುಗ್ದೆ ಶಾಂತಮ್ಮನ ಮನಸ್ಸಿಗೂ ಹೊಳೆದಿರಲಿಲ್ಲ!. 

ತಿಂಗಳೊಪ್ಪತ್ತಿನಲ್ಲಿ ಜ್ಯೋತಿಷಿ ಸೂಚಿಸಿದ್ದ ಪರಿಹಾರಗಳನ್ನು ಸಾಂಗವಾಗಿ ನೆರವೇರಿಸಿದ ಶಾಂತಮ್ಮನು ನೆಮ್ಮದಿಯ ನಿಟ್ಟುಸಿರನ್ನು ಬಿಟ್ಟಿದ್ದಳು. ಮುಂದಿನ ಆರು ತಿಂಗಳುಗಳಲ್ಲಿ ಸೊಸೆಯಿಂದ ಶುಭವಾರ್ತೆ ದೊರೆಯುವುದೆನ್ನುವ ನಿರೀಕ್ಷೆಯಲ್ಲಿದ್ದ ಆಕೆಗೆ ನಿರಾಸೆಯಾಗಿತ್ತು. ಜ್ಯೋತಿಷಿಯ ಪರಿಹಾರ ಪರಿಣಾಮವನ್ನು ತೋರುವುದೆಂದು ನಂಬಿದ್ದ ಗಾಯತ್ರಿಗೂ, ಇದೀಗ ತಾನು ಬಂಜೆ ಎನ್ನುವ ಭಾವನೆ ಮೂಡಿತ್ತು.

ಅದೊಂದು ದಿನ ಅನಿರೀಕ್ಷಿತವಾಗಿ ಗಾಯತ್ರಿಯನ್ನು ಭೇಟಿಯಾಗಲು ಬಂದಿದ್ದ ಆಕೆಯ ಸಂಬಂಧಿಯೊಬ್ಬರು ಮುತ್ತೂರಿನಲ್ಲಿ ಸಂತತಿಹೀನರಿಗೆ ಚಿಕಿತ್ಸೆಯನ್ನು ನೀಡುವ "ವೈದ್ಯ" ರೊಬ್ಬರ ಬಗ್ಗೆ ಹೇಳಿದ್ದರು. ಈ ವ್ಯಕ್ತಿಯ ಚಿಕಿತ್ಸೆಯಿಂದ ಅನೇಕ ದಂಪತಿಗಳಿಗೆ ಸಂತಾನ ಭಾಗ್ಯ ಪ್ರಾಪ್ತಿಯಾದ ಘಟನೆಗಳನ್ನೂ ವಿಸ್ತಾರವಾಗಿ ವಿವರಿಸಿದ್ದರು. ಇದನ್ನು ಕೇಳಿದ ಶಾಂತಮ್ಮನಿಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿದ್ದು ಮಾತ್ರ ಸುಳ್ಳೇನಲ್ಲ. ಗಯಾತ್ರಿಯು ಈ ಚಿಕಿತ್ಸೆಯನ್ನು ಪಡೆಯಲು ಸಿದ್ಧಳಿದ್ದರೂ, ನಕಲಿವೈದ್ಯರ ಬಗ್ಗೆ ನಂಬಿಕೆಯಿಲ್ಲದ ಗಣೇಶನು ಇದಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಗಳೇ ಇರಲಿಲ್ಲ. ಅದೃಷ್ಟವಶಾತ್ ಈ ವೈದ್ಯನ ಚಿಕಿತ್ಸೆಯನ್ನು ಪಡೆಯಲು ದಂಪತಿಗಳು ಆತನಲ್ಲಿಗೆ ಹೋಗಬೇಕಾದ ಅವಶ್ಯಕತೆಯೇ ಇರಲಿಲ್ಲ. ಕೇವಲ ಪತ್ನಿಯರನ್ನು ಪರೀಕ್ಷಿಸಿ ಔಷದವನ್ನು ನೀಡುವುದೇ ಆತನ ವಿಶೇಷತೆಯಾಗಿತ್ತು!. 

ಕೆಲವೇ ದಿನಗಳ ಬಳಿಕ ಗಾಯತ್ರಿಯನ್ನು ಒತ್ತಾಯಪೂರ್ವಕವಾಗಿ ಮುತ್ತೂರಿಗೆ ಕರೆದೊಯ್ದ ಶಾಂತಮ್ಮನಿಗೆ ಈ "ಚಿಕಿತ್ಸಕ" ನನ್ನು ಕಂಡು ತುಸು ಗಾಬರಿಯೂ ಆಗಿತ್ತು. ಒಂದೆರಡು ಪ್ರಶ್ನೆಗಳನ್ನು ಕೇಳಿದ ಬಳಿಕ ಗಾಯತ್ರಿಯನ್ನು ಒಳಗೆ ಕರೆದೊಯ್ದು ಪರೀಕ್ಷಿಸಿದ ವೈದ್ಯನು, ಚಿಕಿತ್ಸೆಯನ್ನು ನೀಡುವ ಹಾಗೂ ಗಾಯತ್ರಿಗೆ ಸಂತಾನ ಪ್ರಾಪ್ತಿಯಾಗುವ ಆಶ್ವಾಸನೆಯನ್ನು ನೀಡಿದ್ದನು. ಮೂರು ಬಾಟಲಿ ಕಷಾಯವನ್ನು ನೀಡಿದ ವೈದ್ಯನು, ಇದನ್ನು ಸೇವಿಸುವ ವಿಧಾನ ಮತ್ತು ಪರಿಪಾಲಿಸಬೇಕಾದ ಪಥ್ಯಗಳ ವಿವರಗಳನ್ನು ನೀಡಿದ್ದನು. ಜೊತೆಗೆ ಇವೆಲ್ಲವನ್ನೂ ಸಮರ್ಪಕವಾಗಿ ಪರಿಪಾಲಿಸದೇ ಇದ್ದಲ್ಲಿ ಚಿಕಿತ್ಸೆ ಫಲಕಾರಿಯಾಗದು ಎಂದು ಎಚ್ಚರಿಕೆಯನ್ನೂ ನೀಡಿದ್ದನು!. 

ಸುಮಾರು ಒಂದುವರ್ಷ ನಿರಂತರವಾಗಿ ಈ ಚಿಕಿತ್ಸೆಯನ್ನು ಶ್ರದ್ಧೆಯಿಂದ ಪಡೆದುಕೊಂಡರೂ, ಗಾಯತ್ರಿ ಮಾತ್ರ ಗರ್ಭ ಧರಿಸಲೇ ಇಲ್ಲ. ಸಾಯುವ ಮುನ್ನ ಮೊಮ್ಮಗನನ್ನು ಕಾಣಬೇಕೆಂಬ ತನ್ನ ಕನಸು ಇನ್ನು ನನಸಾಗದೆನ್ನುವ ದುಃಖದಿಂದ ಶಾಂತಮ್ಮನು ಪ್ರತಿನಿತ್ಯ ಮೌನವಾಗಿ ಕಣ್ಣೇರು ಸುರಿಸುತ್ತಿದ್ದಳು. ಅತ್ತೆಯ ವ್ಯಥೆಗೆ ತನ್ನ ಬಂಜೆತನವೇ ಕಾರಣವೆಂದು ನಂಬಿದ್ದ ಗಾಯತ್ರಿಯೂ ತನ್ನ ನೋವನ್ನು ನುಂಗಿಕೊಂಡು ಕೊರಗುತ್ತಿದ್ದಳು. 

ತನ್ಮಧ್ಯೆ ವಿದೇಶದಲ್ಲಿ ನೆಲೆಸಿದ್ದ ಶಾಂತಮ್ಮನ ಸೋದರ ಹಾಗೂ ಪ್ರಖ್ಯಾತ ವೈದ್ಯ ಸತೀಶನು ಅನೇಕ ವರ್ಷಗಳ ಬಳಿಕ ತನ್ನ ಹುಟ್ಟೂರಿಗೆ ಮರಳಿದ್ದನು. ಈ ಸಂದರ್ಭದಲ್ಲಿ ಅಕ್ಕನನ್ನು ಕಾಣಲು ಬಂದಿದ್ದ ಸತೀಶನಿಗೆ ಮನೆಯ ಬಾಗಿಲನ್ನು ತೆರೆದ ಗಾಯತ್ರಿಯ ಗುರುತೇ ಸಿಕ್ಕಿರಲಿಲ್ಲ. ಉತ್ಸಾಹದ ಚಿಲುಮೆಯಾಗಿದ್ದ, ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಿದ್ದ ಗಾಯತ್ರಿಯು ಸಾಕಷ್ಟು ಸೊರಗಿದ್ದು, ಮೌನಕ್ಕೆ ಶರಣಾಗಿದ್ದುದೇ ಇದಕ್ಕೆ ಕಾರಣವಾಗಿತ್ತು. 

ಉಭಯಕುಶಲೋಪರಿಗಳ ಬಳಿಕ ನೇರವಾಗಿ ಅಕ್ಕನ ಬಳಿ ಗಾಯತ್ರಿಯ ವಿಷಯವನ್ನು ಪ್ರಸ್ತಾಪಿಸಿದ ಆತನಿಗೆ, ಸಮಸ್ಯೆಯ ಮೂಲವನ್ನು ಅರಿತು ವಿಷಾದವಾಯಿತು. ಈ ವೈಜ್ಞಾನಿಕ ಯುಗದಲ್ಲೂ ಮೂಢನಂಬಿಕೆ ಮತ್ತು ಕಂದಾಚಾರಗಳಿಗೆ ಬಲಿಯಾಗಿ, ಮಾನಸಿಕ ನೆಮ್ಮದಿಯನ್ನೇ ಕಳೆದುಕೊಂಡಿರುವ ತನ್ನ ಅಕ್ಕ ಮತ್ತು ಸೊಸೆಯರ ಬಗ್ಗೆ ಅನುಕಂಪವೂ ಮೂಡಿತ್ತು. ಪೂರ್ವಜನ್ಮದಲ್ಲಿ ತಾವು ಮಾಡಿದ್ದ ಪಾಪಗಳಿಗೆ ಇದೀಗ ಶಿಕ್ಷೆಯನ್ನು ಅನುಭವಿಸುತ್ತಿರುವುದಾಗಿ ನಂಬಿ, ಪಾಪಪ್ರಜ್ಞೆಯಿಂದ ಪರಿತಪಿಸುತ್ತಿದ್ದ ಇವರಿಗೆ ವೈಜ್ಞಾನಿಕ ಪರಿಹಾರವನ್ನು ನೀಡಲು ಸತೀಶನು ನಿರ್ಧರಿಸಿದನು. 

ವಾರ ಕಳೆಯುತ್ತಲೇ ಗಣೇಶ ಮತ್ತು ಗಾಯತ್ರಿಯರನ್ನು ತನ್ನ ಪರಿಚಿತ ಸಂತತಿ ತಜ್ಞರ ಬಳಿಗೆ ಕರೆದೊಯ್ದು ಅವಶ್ಯಕ ಪರೀಕ್ಷೆಗಳನ್ನು ನಡೆಸುವಂತೆ ಕೋರಿದ್ದ ಸತೀಶನಿಗೆ, ಪರೀಕ್ಷೆಯ ಪರಿಣಾಮಗಳು ತಾನು ನಿರೀಕ್ಷಿಸಿದಂತೆಯೇ ಇದ್ದುದು ಆಶ್ಚರ್ಯವೆನಿಸಿರಲಿಲ್ಲ. ಇದರಂತೆ ಗಣೇಶನಲ್ಲಿ ವೀರ್ಯಾಣುಗಳ ಸಂಖ್ಯೆ ತುಸು ಕಡಿಮೆಯಿರುವುದು ಪತ್ತೆಯಾಗಿತ್ತು. ಅಂತೆಯೇ ಗಾಯತ್ರಿಯಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎನ್ನುವ ವಿಶಿಷ್ಟ ಸಮಸ್ಯೆಯಿಂದಾಗಿ, ಆಕೆಯ ಶರೀರದಲ್ಲಿ ಅಂಡಾಣುಗಳೇ ಉತ್ಪತ್ತಿಯಾಗುತ್ತಿರಲಿಲ್ಲ. ಇವೆರಡೂ ಕಾರಣಗಳಿಂದ ಗಾಯತ್ರಿಯು ಗರ್ಭಧರಿಸಿರಲಿಲ್ಲ. ಸತೀಶನ ಹೇಳಿಕೆಯಂತೆ ಈ ದಂಪತಿಗಳಲ್ಲಿರುವ ಶಾರೀರಿಕ ದೋಷಗಳನ್ನು ಪರಿಹರಿಸದೇ, ಯಾವುದೇ ಜ್ಯೋತಿಷಿ ಅಥವಾ ಪೂಜೆ ಪುನಸ್ಕಾರಗಳಿಂದ ಸಂತಾನಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆಗಳೇ ಇರಲಿಲ್ಲ!. 

ಅಂತಿಮವಾಗಿ ತಜ್ಞ ವೈದ್ಯರು ನೀಡಿದ ಚಿಕಿತ್ಸೆ ಫಲಪ್ರದವೆನಿಸಿ, ವರ್ಷ ಕಳೆಯುವಷ್ಟರಲ್ಲೇ ಗಾಯತ್ರಿ ಗರ್ಭಧರಿಸಿದ್ದಳು. ನವಮಾಸ ಕಳೆದು ಆರೋಗ್ಯವಂತ ಹೆಣ್ಣುಮಗುವನ್ನು ಹೆತ್ತ ಗಾಯತ್ರಿಗೂ ತಾನು ತಾಯಿಯಾಗಿರುವುದು ಹೆಮ್ಮೆಯೆನಿಸಿತ್ತು. ತನಗೆ ಮೊಮ್ಮಗಳನ್ನು ಕರುಣಿಸಲು ಕಾರಣಕರ್ತನೆನಿಸಿದ ತನ್ನ ತಮ್ಮ ಸತೀಶನಿಗೆ ಮನಸ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಲು ಶಾಂತಮ್ಮ ಮರೆಯಲಿಲ್ಲ. 

ಈ ವಿಶಿಷ್ಟ ಅನುಭವದ ಬಳಿಕ ಸಂತತಿಹೀನರಿಗೆ ಜಾತಕಗಳಲ್ಲಿನ ದೋಷಗಳು ಮತ್ತು ನಕಲಿವೈದ್ಯರ ಚಿಕಿತ್ಸೆಗಳ ಗೊಡವೆಗೆ ಹೋಗದೇ,ಅನುಭವೀ ಹಾಗೂ ಯೋಗ್ಯ  ಸಂತತಿ ತಜ್ಞರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವಂತೆ ಶಾಂತಮ್ಮನು "ಉಚಿತ ಸಲಹೆ" ಯನ್ನು ನೀಡುತ್ತಿರುವುದು ಸತ್ಯ!. 

ಸಾರಸ್ವತ ಜಾಗೃತಿ ಪತ್ರಿಕೆಯ ದಿ. ೧೬-೦೬- ೨೦೦೪ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ. 

Tuesday, December 17, 2013

Manassannu nirmalagolisade samasye parihaaravagadu.




     ಮನಸ್ಸನ್ನು ನಿರ್ಮಲಗೊಳಿಸದೆ ಸಮಸ್ಯೆ ಪರಿಹಾರವಾಗದು 

ಮಾಧವರಾಯರ ಐವರು ಗಂಡುಮಕ್ಕಳು ತಮ್ಮ ಸಂಸಾರದೊಂದಿಗೆ ಒಂದೇ ಸೂರಿನಡಿಯಲ್ಲಿ ವಾಸವಾಗಿರಲು ಪರಸ್ಪರ ಪ್ರೀತಿ ವಾತ್ಸಲ್ಯಗಳೇ ಕಾರಣವಾಗಿರಲಿಲ್ಲ. ತಮ್ಮದೇ ಆದ ಕೆಲವೊಂದು ನಿರ್ದಿಷ್ಟ ಸಮಸ್ಯೆಗಳಿಂದಾಗಿ, ಇಪ್ಪತ್ತ ಒಂದು ಸದಸ್ಯರ ಈ ಕುಟುಂಬವು ಒಂದೇ ಮನೆಯಲ್ಲಿ ವಾಸಿಸಬೇಕಾದ ಅನಿವಾರ್ಯತೆ ಇತ್ತು. 

ರಾಯರ ನಿಧನಕ್ಕೆ ಮೊದಲು ಈ ಸಹೋದರರ ಅನ್ಯೋನ್ಯತೆ ಮತ್ತು ಬಾಂಧವ್ಯಗಳನ್ನು ಕಂಡವರೆಲ್ಲರೂ ಇವರನ್ನು ಪಂಚ ಪಾಂಡವರೆಂದು ಕರೆಯುತ್ತಿದ್ದುದರಲ್ಲಿ ಉತ್ಪ್ರೆಕ್ಷೆಯಿರಲಿಲ್ಲ. ಆದರೆ ಕಾಲಕ್ರಮೇಣ ಒಬ್ಬರ ಬಳಿಕ ಮತ್ತೊಬ್ಬರಂತೆ ಈ ಸಹೋದರರು ವಿವಾಹವಾದ ಬಳಿಕ, ಸೊಸೆಯಂದಿರ ನಡುವೆ ಪ್ರಾರಂಭವಾಗುತ್ತಿದ್ದ ಚಿಕ್ಕಪುಟ್ಟ ಜಗಳಗಳು ರಾಯರ ನಿಧನಾನಂತರ ಹೆಚ್ಚಿದ್ದವು. ಇದೇ ಕಾರಣದಿಂದಾಗಿ ಇವರ ಮನೆ- ಮನಗಳಲ್ಲಿ ಸುಖ- ಶಾಂತಿಗಳೇ ಇರಲಿಲ್ಲ. 

ಇತ್ತೀಚಿನ ಒಂದೆರಡು ವರ್ಷಗಳಲ್ಲಿ ಈ ಕುಟುಂಬದ ಸದಸ್ಯರಿಗೆ ವಿವಿಧ ರೀತಿಯ ತೊಂದರೆಗಳು, ಆರೋಗ್ಯದ ಸಮಸ್ಯೆಗಳು ಮತ್ತು ಅಪಶಕುನಗಳು ಬಾಧಿಸಲು ಆರಂಭಿಸಿದ್ದವು. ಒಮ್ಮೆ ಮನೆಯ ಹಿಂದಿನ ಬಾವಿಯಲ್ಲಿ ಬೆಕ್ಕು ಸತ್ತು ಬಿದ್ದರೆ, ಮತ್ತೊಮ್ಮೆ ಮನೆಯ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿತ್ತು. ಎರಡೇ ತಿಂಗಳುಗಳ ಬಳಿಕ ಮೂರನೆಯ ಸೊಸೆಗೆ ಆಕಸ್ಮಿಕವಾಗಿ ಗರ್ಭಪಾತ ಸಂಭವಿಸಿದ ಬೆನ್ನಲ್ಲೇ ಹಿರಿಯ ಮಗ ನರಸಿಂಹನು ಜಾರಿ ಬಿದ್ದು ಕಾಲುಮುರಿದುಕೊಂಡಿದ್ದನು. ಇಷ್ಟೆಲ್ಲಾ ಸಾಲದೆನ್ನುವಂತೆ ರಾಯರ ಪತ್ನಿಗೆ ರಕ್ತದೊತ್ತಡ ಹೆಚ್ಚಿದ ಪರಿಣಾಮವಾಗಿ ಪಕ್ಷವಾತ ಬಂದೆರಗಿತ್ತು. ಇದರೊಂದಿಗೆ ಈ ಸೋದರರ ಹತ್ತಾರು ಮಕ್ಕಳಲ್ಲಿ ಒಂದಿಬ್ಬರಿಗಾದರೂ ಕಾಯಿಲೆ- ಕಸಾಲೆಗಳು ತಪ್ಪುತ್ತಿರಲಿಲ್ಲ. ಐವರು ಸೊಸೆಯಂದಿರ ನಡುವಿನ ಭಿನ್ನಾಭಿಪ್ರಾಯ ಹಾಗೂ ವೈಮನಸ್ಸಿನಿಂದಾಗಿ, ಈ ಮನೆಯಲ್ಲಿ ನಡೆಯುತ್ತಿದ್ದ ನಿತ್ಯಕಲಹಗಳಿಗೆ ಅಂತ್ಯವೂ ಇರಲಿಲ್ಲ. ಇಂತಹ ಸಂಕೀರ್ಣ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಮನೆಮಂದಿಗೆಲ್ಲ ಮಾನಸಿಕ ನೆಮ್ಮದಿಯೇ ಇರಲಿಲ್ಲ. 

ತಮ್ಮ ಕುಟುಂಬದ ಸಮಸ್ಯೆಗಳಿಗೆ ಯಾವುದಾದರೂ ದೋಷಗಳೇ ಕಾರಣವಾಗಿರಬೇಕೆಂದು ನರಸಿಂಹನು ಧೃಢವಾಗಿ ನಂಬಿದ್ದನು. ಅಂತೆಯೇ ಇವುಗಳನ್ನು ಶಾಶ್ವತವಾಗಿ ಪರಿಹರಿಸಬೇಕೆನ್ನುವ ಉದ್ದೇಶದಿಂದ ತಮ್ಮ ಕುಟುಂಬದ ಜ್ಯೋತಿಷ್ಯರಲ್ಲಿಗೆ ತೆರಳಿದ್ದನು. ನರಸಿಮ್ಹನಿಂದ ಕುಟುಂಬದ ಸಮಸ್ಯೆಗಳನ್ನು ಅಮೂಲಾಗ್ರವಾಗಿ ಕೇಳಿ ತಿಳಿದುಕೊಂಡ ಜ್ಯೋತಿಷ್ಯರು ಆತನಿಗೆ ಅಭಯವನ್ನು ನೀಡಿದ್ದರು. ಅವರ ಅಭಿಪ್ರಾಯದಂತೆ ಈ ಅವಿಭಕ್ತ ಕುಟುಂಬವನ್ನು ಬಾಧಿಸುತ್ತಿರುವ ದೋಷಗಳನ್ನು ಪತ್ತೆಹಚ್ಚಲು ಸೂಕ್ತ ವಿಧಿವಿಧಾನಗಳೂ ಇದ್ದವು. ಆದರೆ ಇದಕ್ಕಾಗಿ ಇವರು ವಾಸಿಸುತ್ತಿದ್ದ ಮನೆಯಲ್ಲಿ ನಿರ್ದಿಷ್ಟ ಪೂಜೆ ಪುನಸ್ಕಾರಗಳನ್ನು ನಡೆಸಿದ ಬಳಿಕ "ಪ್ರಶ್ನೆ" ಇಡಬೇಕಾಗಿತ್ತು. ಮಾತ್ರವಲ್ಲ ಈ ಕಾರ್ಯಕ್ರಮದಲ್ಲಿ ಇವರ ಕುಟುಂಬದ ಇತರ ಸದಸ್ಯರ ಉಪಸ್ಥಿತಿಯ ಅವಶ್ಯಕತೆಯೂ ಇತ್ತು. 

ಶುಭದಿನದಂದು ಕುಟುಂಬಸ್ತರ ಉಪಸ್ಥಿತಿಯಲ್ಲಿ ಪುರೋಹಿತರಿಂದ ಶಾಸ್ತ್ರೋಕ್ತ ವಿಧಿವಿಧಾನಗಳಂತೆ ಪೂಜಾಕಾರ್ಯಗಳು ಸಾಂಗವಾಗಿ ನೆರವೇರಿದವು. ತದನಂತರ ಜ್ಯೋತಿಷ್ಯರು ತಮ್ಮ ಕವದೆಗಳನ್ನು ಹರಡಿ "ಪ್ರಶ್ನೆ" ಇದುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇವರ ಪ್ರಾಥಮಿಕ ವಿಶ್ಲೇಷಣೆಯಂತೆ ಈ ಕುಟುಂಬದಲ್ಲಿ ಇದುವರೆಗೆ ಮೃತಪಟ್ಟಿರುವ ೨೯ ಹಿರಿಯರ ಆತ್ಮಗಳಿಗೆ ಸದ್ಗತಿ ಹಾಗೂ ಮೊಕ್ಷಗಳೇ ದೊರೆತಿರಲಿಲ್ಲ. ಇದೇ ಕಾರಣದಿಂದಾಗಿ ಇವೆಲ್ಲಾ ಆತ್ಮಗಳು ಇದೇ ಪರಿಸರದಲ್ಲಿ ಸುತ್ತಾದಿಕೊಂಡಿದ್ದು, ಇದೀಗ ತಾವು ಒಂದೊಂದೇ ಆತ್ಮಗಳನ್ನು ಸ್ಥಳಕ್ಕೆ ಆಹ್ವಾನಿಸುವುದಾಗಿ ಹೇಳಿದರು. ಜ್ಯೋತಿಷ್ಯರ ಮಾತುಗಳನ್ನು ಕೇಳಿ ಗರಬಡಿದವರಂತೆ ಕುಳಿತಿದ್ದ ಐವರು ಸಹೋದರರ ಪ್ರತಿಕ್ರಿಯೆಗೂ ಕಾಯದೆ ತಮ್ಮ ಕಾರ್ಯವನ್ನು ಮುಂದುವರೆಸಿದರು. ಪ್ರಥಮವಾಗಿ ಕುಟುಂಬದ ಎರಡು ತಲೆಮಾರಿನ ಹಿಂದಿನ ಹಿರಿಯರೊಬ್ಬರ ಹೆಸರನ್ನು ಗಟ್ಟಿಯಾಗಿ ಉಚ್ಚರಿಸುತ್ತಾ, ಅದೃಶ್ಯ ಶಕ್ತಿಯೊಂದನ್ನು ಆಹ್ವಾನಿಸಿ ಸಮೀಪದ ಮಣೆಯ ಮೇಲೆ ಆಸೀನರಾಗುವಂತೆ ಜ್ಯೋತಿಷ್ಯರು ಕೈಸನ್ನೆ ಮಾಡಿದರು. ಕ್ಷಣಮಾತ್ರದಲ್ಲಿ ಆಹ್ವಾನಿತ ಆತ್ಮವು ಅಲ್ಲಿ ಕುಳಿತಿರುವುದಾಗಿ ಘೋಷಿಸಿದರು!. 

ನರಸಿಂಹ ಮತ್ತು ಆತನ ಸಹೋದರರಿಗೆ ಈ ಘೋಷಣೆಯು ಸಿಡಿಲು ಬಡಿದಂತಾಗಿತ್ತು. ಭಯ ಭಕ್ತಿಮಿಶ್ರಿತ ಕುತೂಹಲಗಳಿಂದ ಮಣೆಯನ್ನೇ ದಿಟ್ಟಿಸುತ್ತಿದ್ದ ಕುಟುಂಬಸ್ಥರು, ತಕ್ಷಣ ಕೈಮುಗಿದು ಸಾಷ್ಟಾಂಗ ನಮಸ್ಕಾರ ಮಾಡಿದರು. ಒಂದಾದ ಬಳಿಕ ಮತ್ತೊಂದರಂತೆ ಆತ್ಮಗಳನ್ನು ಆಹ್ವಾನಿಸುವ ಪ್ರಕ್ರಿಯೆ ಅವ್ಯಾಹತವಾಗಿ ಸಾಗುತ್ತಿತ್ತು. ಆಶ್ಚರ್ಯವೆಂದರೆ ಈ ಆತ್ಮಗಳು ಜ್ಯೋತಿಷ್ಯರನ್ನು ಹೊರತುಪಡಿಸಿ ಇತರರಿಗೆ ಕಾಣಿಸುತ್ತಿರಲಿಲ್ಲ!. 

ಮಧ್ಯರಾತ್ರಿಯ ಹೊತ್ತಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವ ಮೊದಲು, ಈ ಕುಟುಂಬವನ್ನು ಬಾಧಿಸುತ್ತಿರುವ ದೋಷಗಳು ಹಾಗೂ ಅವುಗಳ ನಿವಾರಣೆಯ ವಿಧಾನಗಳನ್ನು ಜ್ಯೋತಿಷ್ಯರು ವಿವರವಾಗಿ ಹೇಳಿದರು. ತಮ್ಮ ಸಮಸ್ಯೆಗಳು ಅತಿ ಶೀಘ್ರದಲ್ಲಿ ಅಂತ್ಯಗೊಳ್ಳಲಿವೆ ಎಂದು ನಂಬಿದ ಮನೆಮಂದಿ, ಅಂದು ರಾತ್ರಿ ನಿರಾಳವಾಗಿ ನಿದ್ರಿಸಿದ್ದರು. 

ತಿನಗಳು ಕಳೆಯುವಷ್ಟರಲ್ಲಿ ಜ್ಯೋತಿಷ್ಯರು ಸೂಚಿಸಿದ್ದ ನಿವೃತ್ತಿಗಳನ್ನು ಸಮರ್ಪಕವಾಗಿ ಈಡೇರಿಸಿದ್ದ ಈ ಕುಟುಂಬಕ್ಕೆ ತುಸು ಮಾನಸಿಕ ನೆಮ್ಮದಿ ದೊರಕಿತ್ತು. ಆದರೆ ದಿನಗಳು ಉರುಳಿದಂತೆಯೇಸೊಸೆಯಂದಿರ ನಿತ್ಯಕಲಹಗಳು ಮತ್ತೆ ಆರಂಭಗೊಂಡಿದ್ದವು. ಅತ್ಯಲ್ಪ ಸಮಯದಲ್ಲೇ ಮನೆಯ ಸ್ಥಿತಿಗತಿ ಹಾಗೂ ವಾತಾವರಣಗಳು ಮತ್ತೆ ಪೂರ್ವಸ್ಥಿತಿಗೆ ಮರಳಿದ್ದವು. ಹಿರಿಯರ ಆತ್ಮೋದ್ಧಾರದ ಕಾರ್ಯಕ್ರಮಗಳು ಸಾಂಗವಾಗಿ ನಡೆದು ಕುಟುಂಬದ ದೋಷಗಳು ಪರಿಹಾರಗೊಂದಿದ್ದರೂ, ಮನೆಮಂದಿಯ ಸಮಸ್ಯೆಗಳು ಮತ್ತೆ ಮರುಕಳಿಸಿದ್ದುದು ನರಸಿಂಹನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. 

ಮನಸ್ಸಿದ್ದಲ್ಲಿ ಮಾರ್ಗವಿದೆ 

ನಿಜಹೆಳಬೇಕಿದ್ದಲ್ಲಿ ನರಸಿಂಹನ ಕುಟುಂಬದ ಸಮಸ್ಯೆಗಳಿಗೆ ಪೂರ್ವಜನ್ಮದ ಅಥವಾ ಹಿರಿಯರ ದೋಷ ಹಾಗೂ ಶಾಪಗಳು ಕಾರಣವಾಗಿರಲೇ ಇಲ್ಲ. ಬಾವಿಯಲ್ಲಿ ಬೆಕ್ಕು ಬಿದ್ದು ಸಾಯುವುದು, ತೆಂಗಿನ ಮರಕ್ಕೆ ಸಿಡಿಲು ಬಡಿಯುವುದು ಪ್ರಕೃತಿ ಸಹಜ ಕ್ರಿಯೆಗಳೇ ಹೊರತು ದೋಷವಂತೂ ಅಲ್ಲ. ಅಂತೆಯೇ ಗರ್ಭಿನಿಗೆ ಕಾರಣಾಂತರಗಳಿಂದ ಗರ್ಭಪಾತವಾಗುವುದು, ಹಾಗೂ ಅಧಿಕ ರಕ್ತದೊತ್ತದವಿರುವ ರೋಗಿಗೆ ಪಕ್ಷವಾತ ಸಂಭವಿಸುವುದು ಮತ್ತು ಹಲವಾರು ಮಕ್ಕಳಿರುವಲ್ಲಿ ಶೀತ, ಕೆಮ್ಮು, ಗಂಟಲುನೋವು ಮತ್ತು ಜ್ವರ ಮತ್ತಿತರ ಕಾಯಿಲೆಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಸ್ವಾಭಾವಿಕ. ಸಾವಿಲ್ಲದ ಮನೆಯ ಸಾಸಿವೆಯನ್ನು ಅರಸಿಕೊಂಡು ಅಲೆದಂತೆ, ಇಂತಹ ಸಮಸ್ಯೆಗಳೇ ಇಲ್ಲದ ಕುಟುಂಬವನ್ನು ಅರಸುವುದು ಅಸಾಧ್ಯವೆನಿಸುವುದು. 

ಪರಸ್ಪರ ದ್ವೇಷ,ಅಸ್ಸೋಯೆಗಳನ್ನು ತೊರೆದು, ಪ್ರೀತಿ ವಾತ್ಸಲ್ಯಗಳಿಂದ ಒಂದಾಗಿ ಬಾಳಬೇಕೆಂಬ ಹಂಬಲವಿಲ್ಲದ ಈ ಸೋದರರಿಗೆ, ತಮ್ಮ ಪತ್ನಿಯರ ತಪ್ಪಿನ ಅರಿವಿದ್ದರೂ ಇದನ್ನು ಸರಿಪಡಿಸುವ ಮನೋಬಲವಿರಲಿಲ್ಲ. ಅದೇ ರೀತಿ ಒಂದೇ ಮನೆಯಲ್ಲಿ ವಾಸ್ತವ್ಯವಿರುವ ಸಂದರ್ಭದಲ್ಲಿ ಒಂದಿಷ್ಟು ಹೊಂದಾಣಿಕೆ, ಸಹನಶೀಲತೆ ಹಾಗೂ ತ್ಯಾಗಗಳು ಅನಿವಾರ್ಯ ಎನ್ನುವುದನ್ನು ಇವರ ಪತ್ನಿಯರೂ ಅರಿತುಕೊಂಡಿರಲಿಲ್ಲ. ಮಾತ್ರವಲ್ಲ, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿರಲಿಲ್ಲ. ಇಂತಹ ಸಂಕುಚಿತ ಮನೋಭಾವಗಳಿಂದಾಗಿ, ದೋಷಗಳ ಪರಿಹಾರಗಳನ್ನು ನಡೆಸಿದ ಬಳಿಕವೂ ಈ ಕುಟುಂಬದ ಸಮಸ್ಯೆಗಳು ಅಂತ್ಯಗೊಂಡಿರಲಿಲ್ಲ!. 

ಅಂತಿಮವಾಗಿ ಈ ಕುಟುಂಬದ ಶ್ರೇಯೋಭಿಲಾಷಿ ಎನಿಸಿದ್ದ ವಯೋವೃದ್ಧ ಜನ್ನುಮಾಮರ ಸಲಹೆಯಂತೆ ಐವರು ಸೋದರರು ಒಂದಾಗಿ ಕುಳಿತು, ತಮ್ಮತಮ್ಮ ಸಮಸ್ಯೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ಸಂವಾದ ನಡೆಸಿದರು. " ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಕುಟುಂಬಗಳಿಂದ ಬಂದ ಸೊಸೆಯಂದಿರು, ಪರಸ್ಪರ ತಿಳುವಳಿಕೆಯಿಂದ ಬಾಳುವುದು ಅಸಾಧ್ಯ" ಎನ್ನುವ ವಿಚಾರವನ್ನು ಒಪ್ಪಿಕೊಂಡರು. ಹಾಗೂ ಇದೇ ಕಾರಣದಿಂದಾಗಿ ಐವರು ಸಹೋದರರೂ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುವ ನಿರ್ಧಾರವನ್ನು ತಳೆದರು. ಜೊತೆಗೆ ಹಬ್ಬ ಹರಿದಿನಗಳಲ್ಲಿ ಎಲ್ಲ ಸೋದರರ ಕುಟುಂಬಗಳು ಒಂದಾಗಿ ಸೇರಿ ದೇವರ ಸೇವೆಯನ್ನು ಮಾಡಲು ನಿರ್ಧರಿಸಿದರು. 

ಅನ್ಯಥಾ ಶರಣಂ ನಾಸ್ತಿ,ತ್ವಮೇವ ಶರಣಂ ಮಮಃ, ಎಂದು ದೇವರಿಗೆ ಕೈಮುಗಿದು ಜ್ಯೋತಿಷ್ಯರ ನೆರವಿಲ್ಲದೆ ಮನಸ್ಸಿನ ಕೊಲೆಯನ್ನೆಲಾ ತೊಳೆದು ಅರ್ಥಪೂರ್ಣವಾಗಿ ಬಾಳುವ ನಿರ್ಧಾರಕ್ಕೆ ಬಂದಿದ್ದರು. ವರ್ಷ ಕಳೆಯುವುದರಲ್ಲಿ ಕಾರ್ಯಗತಗೊಂಡಿದ್ದ ಇವರ ನಿರ್ಧಾರದ ಪರಿಣಾಮವಾಗಿ, ಇದೀಗ ಈ ಸೋದರರ ಸಮಸ್ಯೆಗಳು ಹೇಳಹೆಸರಿಲ್ಲದಂತೆ ಮಾಯವಾಗಿರುವುದು ಸತ್ಯ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಸಾರಸ್ವತ ಜಾಗೃತಿ ಪತ್ರಿಕೆಯ ೦೧-೦೯- ೨೦೦೪ ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ.