Tuesday, December 3, 2013

Article no-100. niddegedisuva nimirudourbalya (Erectile dysfunction)

                             ನಿದ್ದೆಗೆಡಿಸುವ ನಿಮಿರು ದೌರ್ಬಲ್ಯ 

     ಹದಿಹರೆಯದಿಂದ ಪ್ರಾರಂಭಿಸಿ ಇಳಿವಯಸ್ಸಿನ ತನಕ ಯಾವುದೇ ವಯಸ್ಸಿನಲ್ಲೂ ಪ್ರತ್ಯಕ್ಷವಾಗಬಲ್ಲ "ನಿಮಿರು ದೌರ್ಬಲ್ಯ" ಅರ್ಥಾತ್ ನಪುಂಸಕತ್ವವು, ಲಕ್ಷಾಂತರ ಪುರುಷರ ನಿದ್ದೆಗೆಡಿಸುತ್ತಿರುವುದು ಸತ್ಯ. ಆದರೆ ಈ ಸಮಸ್ಯೆಯಿಂದ ಬಳಲುತ್ತಿರುವ ಶೇ. ೧೦ ಮಂದಿ ಮಾತ್ರ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯುವುದು ಕೂಡಾ ಅಷ್ಟೇ ಸತ್ಯ. 
---------              --------         -----------               ------------             -----------       --------------             -----------            ------

  ಜನ್ಮದತ್ತವಾಗಿ ಮನುಷ್ಯನಲ್ಲಿರುವ ಅತ್ಯಂತ ಪ್ರಬಲವಾದ "ಬದುಕಿ ಉಳಿಯುವ ಇಚ್ಛೆ" ಯ ನಂತರದ ಸ್ಥಾನವು "ಕಾಮೇಚ್ಛೆ" ಗೆ ಸಲ್ಲುತ್ತದೆ ಎಂದಲ್ಲಿ ನೀವು ನಂಬಲಾರಿರಿ. ಈ ತೆರನ ಪ್ರಕೃತಿ ಸಹಜ ಹಾಗೂ ಪ್ರಬಲ ಇಚ್ಛೆಯೊಂದನ್ನು ಈಡೇರಿಸಲು ತೊಡಕಾಗಬಲ್ಲ ನಿಮಿರು ದೌರ್ಬಲ್ಯ ಅಥವಾ ನಪುಂಸಕತ್ವವು ಸಹಸ್ರಾರು ಪುರುಷರ ನಿದ್ದೆಗೆಡಿಸಲು ಕಾರಣವೆನಿಸಿದೆ. ವಿಶ್ವದ ಶೇ. ೧೦ ರಿಂದ ೧೫ ರಷ್ಟು ಪುರುಷರಲ್ಲಿ ಕಂಡುಬರುವ ಈ ಸಮಸ್ಯೆಯ ಬಗ್ಗೆ ನಿಮಗೊಂದಿಷ್ಟು ನೈಜ ಮಾಹಿತಿಯನ್ನು ನೀಡುವ ಪ್ರಯತ್ನವಿದು. 

ನಿಮಿರು ದೌರ್ಬಲ್ಯ ಎಂದರೇನು?

ಸ್ವಾಭಾವಿಕವಾಗಿ ರತಿಸುಖವನ್ನು ಸವಿಯಲು ಅವಶ್ಯಕವಾದ ಪುರುಷನ ಶಿಶ್ನದ ನಿಮಿರುವಿಕೆಯಿಂದ ಆರಂಭಿಸಿ, ಯಶಸ್ವಿಯಾಗಿ ಸಂಭೋಗ ಕ್ರಿಯೆಯನ್ನು ನಡೆಸಿದ ಬಳಿಕ ವೀರ್ಯ ಸ್ಖಲನವಾಗುವವರೆಗೆ, ಪ್ರತಿಯೊಂದು ಹಂತದಲ್ಲೂ ಶಿಶ್ನದ ಗಡಸುತನವನ್ನು ಕಾಪಾಡಿಕೊಳ್ಳಲಾಗದ ಹಾಗೂ ಸಂಭೋಗ ನಡೆಸಲು ಅಸಾಧ್ಯವಾದ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ನಪುಂಸಕತ್ವ ಅಥವಾ ನಿಮಿರು ದೌರ್ಬಲ್ಯ ಎಂದು ಕರೆಯುತ್ತಾರೆ. 

ಆರೋಗ್ಯವಂತ ಪುರುಷರಲ್ಲಿ ಶಿಶ್ನದ ನಿಮಿರುವಿಕೆಯು ಒಂದು ಸಂಕೀರ್ಣ ಶಾರೀರಿಕ ಪ್ರಕ್ರಿಯೆಯಾಗಿದ್ದು, ಇದಕ್ಕೆ ಅವಶ್ಯವಾದ ಪ್ರಚೋದನೆಯ ಕೇಂದ್ರಸ್ಥಾನವು ಮೆದುಳಿನಲ್ಲಿದೆ. ಅಂದರೆ ಮೆದುಳಿನಲ್ಲಿ ಉದ್ಭವಿಸುವ ಕಾಮೋತ್ತೇಜಕ ಪ್ರಚೋದನೆಗಳು ಸಂಬಂಧಿತ ನರಗಳ ಮೂಲಕ ಶಿಶ್ನಹಾಗೂ ಅದರಲ್ಲಿರುವ ರಕ್ತನಾಳಗಳಿಗೆ ರವಾನಿಸಲ್ಪಡುತ್ತದೆ. ತತ್ಪರಿಣಾಮವಾಗಿ ಆರೋಗ್ಯವಂತ ಪುರುಷರ ಶಿಶ್ನದಲ್ಲಿನ ನರಗಳು ಹಾಗೂ ಜೀವಕಣಗಳು ಬಿಡುಗಡೆಮಾಡುವ ನೈಟ್ರಿಕ್ ಆಕ್ಸೈಡ್, ಕೆಲವೊಂದು ಚೋದನಿಗಳನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಸೈಕ್ಲಿಕ್ ಗಾನೋಸಿನ್ ಮೊನೋಫೋಸ್ಫೆಟ್ ಗಳ ಉತ್ಪಾದನೆ ಹೆಚ್ಚುತ್ತದೆ. ಇದು ಶಿಶ್ನದಲ್ಲಿನರಕ್ತನಾಳಗಳ ಸುತ್ತಲಿನ ಟಿಶ್ಯೂ ಗಳನ್ನು ಸಡಿಲಗೊಳಿಸುವುದು. ಪರಿಣಾಮವಾಗಿ ಶಿಶ್ನದಲ್ಲಿನ ರಕ್ತನಾಳಗಳು ವಿಕಸಿತಗೊಂಡು, ಇವುಗಳಲ್ಲಿ ಒಂದಿಷ್ಟು ಅಧಿಕ ಪ್ರಮಾಣದ ರಕ್ತವು ತುಂಬಿಕೊಳ್ಳುವುದರಿಂದ ಶಿಶ್ನವು ನಿಮಿರುವುದು. ಪಿ ಡಿ ಇ -೫ ಎನ್ನುವ ಚೋದನಿಯು ಸಿ ಜಿ ಎಂ ಪಿ ಯನ್ನು ಪಚನಗೊಳಿಸುತ್ತದೆ. ಈ ಪ್ರಕ್ರಿಯೆಯು ತ್ವರಿತಗತಿಯಲ್ಲಿ ನಡೆದಾಗ ಶಿಶ್ನದ ನಿಮಿರುವಿಕೆಯು ಕ್ಷಿಪ್ರಗತಿಯಲ್ಲಿ ಕುಂಠಿತವಾಗುತ್ತದೆ. ಈ ವಿಶಿಷ್ಟವಾದ ಪ್ರಕ್ರಿಯೆಗಳಲ್ಲಿನ ಯಾವುದೇ ಹಂತದಲ್ಲಿ ಕಾರಣಾಂತರಗಳಿಂದ ಉದ್ಭವಿಸಬಹುದಾದ ಅಡಚಣೆಗಳಿಂದಾಗಿ ನಿಮಿರು ದೌರ್ಬಲ್ಯ ಸಂಭವಿಸುತ್ತದೆ. 

ನಿಜ ಹೇಳಬೇಕಿದ್ದಲ್ಲಿ ಪುರುಷರನ್ನು ಬಾಧಿಸುವ ನಿಮಿರು ದೌರ್ಬಲ್ಯ ಅಥವಾ ನಪುಂಸಕತೆಯು ಖಂಡಿತವಾಗಿಯೂ ನೀವು ಕಲ್ಪಿಸಿಕೊಂಡಷ್ಟು ಅಥವಾ ನಕಲಿ ವೈದ್ಯರು ಚಿತ್ರಿಸುವಷ್ಟು ಭಯಾನಕವಲ್ಲ. ಅಂತೆಯೇ ಇದು ಗುಣಪಡಿಸಲು ಅಸಾಧ್ಯವೆನಿಸುವ ಸಮಸ್ಯೆಯೂ ಅಲ್ಲ. ಬಹುಶಃ ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಒಂದು ಬಾರಿಯಾದರೂ "ತಾತ್ಕಾಲಿಕ ನಿಮಿರು ದೌರ್ಬಲ್ಯ" ದ ಅನುಭವ ಆಗದಿರುವ ಪುರುಷರು ಈ ಜಗತ್ತಿನಲ್ಲೇ ಇರಲಾರರು. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿರುವ ಪುರುಷರು ಮಾತ್ರ ಖಂಡಿತವಾಗಿಯೂ ಸಿಗಲಾರರು!. 

ನಪುಂಸಕತೆಯ ವೈವಿಧ್ಯಗಳು 

ನಪುಂಸಕತೆಯನ್ನು ಸ್ಥೂಲವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಮೊದಲನೆಯದಾಗಿರುವ ಪ್ರಾಥಮಿಕ ನಪುಂಸಕತೆಯು ಜನ್ಮದತ್ತವಾಗಿ ಬರುವುದಲ್ಲದೇ, ಶಾಪದಂತೆ ಶಾಶ್ವತವಾಗಿ ಕಾಡುವುದು. ದ್ವಿತೀಯ ವಿಧದ ನಪುಂಸಕತ್ವವು ಕೆಲವಾರು ವರ್ಷಗಳ ಅಥವಾ ತಿಂಗಳುಗಳ ಕಾಲ ಸ್ವಾಭಾವಿಕ ಸುರತಸುಖವನ್ನು ಅನುಭವಿಸಿದ ಬಳಿಕ ಆಕಸ್ಮಿಕವಾಗಿ ಅಥವಾ ನಿಧಾನವಾಗಿ ಪ್ರತ್ಯಕ್ಷವಾಗುವುದು. ಕೆಲವೊಮ್ಮೆ ಈ ಸಮಸ್ಯೆಯು ಯಾವುದಾದರೂ ವ್ಯಾಧಿಯ ಲಕ್ಷಣವೂ ಆಗಿರುವ ಸಾಧ್ಯತೆಗಳಿವೆ. 

ಅನೇಕ ಜನರಲ್ಲಿ ಮಧ್ಯವಯಸ್ಸಿನ ಬಳಿಕ ಅವರ ಆರೋಗ್ಯದ ಮತ್ತು ಶಾರೀರಿಕ ಕ್ಷಮತೆಯ ಮಟ್ಟ ಮತ್ತು ಅವರಲ್ಲಿರಬಹುದಾದ ದುಶ್ಚಟಗಳಿಗೆ ಅನುಗುಣವಾಗಿ ನಿಮಿರು ದೌರ್ಬಲ್ಯ ಬಾಧಿಸುವುದು ಸ್ವಾಭಾವಿಕವೂ ಹೌದು. ಸಾಮಾನ್ಯವಾಗಿ ೬೦ ವರ್ಷ ಮೀರಿದ ಪುರುಷರನ್ನು ಪೀಡಿಸುವ ನಿಮಿರು ದೌರ್ಬಲ್ಯದ ಪ್ರಮಾಣವು, ೪೦ ವರ್ಷ ಮೀರಿದವರಿಗಿಂತ ನಾಲ್ಕು ಪಟ್ಟು ಹೆಚ್ಚಿರುತ್ತದೆ. ಅಂತೆಯೇ ಈ ಸಮಸ್ಯೆಯ ಸಾಧ್ಯತೆಗಳು ಮತ್ತು ಪ್ರಮಾಣಗಳೂ ಹೆಚ್ಚುತ್ತಾ ಹೋಗುತ್ತವೆ. 

ಈ ಸಮಸ್ಯೆಗೆ ಕಾರಣಗಳೇನು?

ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸಬಲ್ಲ ಪ್ರಮುಖ ತೊಂದರೆಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು. 
೧. ಪುರುಷರ ಶಿಶ್ನಕ್ಕೆ ಶುದ್ಧ ರಕ್ತವನ್ನು ಪೂರೈಸುವ ರಕ್ತನಾಳಗಳಲ್ಲಿನ ತೊಂದರೆಗಳಿಂದಾಗಿ ಶಿಶ್ನದ ನಿಮಿರುವಿಕೆಗೆ ಅವಶ್ಯಕವೆನಿಸುವಷ್ಟು ಶುದ್ಧ ರಕ್ತದ ಪೂರೈಕೆ ಆಗದಿರುವುದು. 

 ೨.ಶಿಶ್ನದಿಂದ ಅಶುದ್ಧ ರಕ್ತವನ್ನು ಕೊಂಡೊಯ್ಯುವ ರಕ್ತನಾಳಗಳಲ್ಲಿನ ಸೋರುವಿಕೆಯಿಂದಾಗಿ, ಶಿಶ್ನದ ನಿಮಿರುವಿಕೆಯನ್ನು ಕಾಪಾಡಿಕೊಳ್ಳುವಷ್ಟು ಪ್ರಮಾಣದ ರಕ್ತ ಶಿಶ್ನದಲ್ಲಿ ಉಳಿದುಕೊಳ್ಳದಿರುವುದು. ೩. ನರಮಂಡಲದ ಸಮಸ್ಯೆಗಳು ೪. ಶರೀರದಲ್ಲಿ ಅವಶ್ಯಕ ಚೋದನಿಗಳ ಕೊರತೆ ೫. ಮಾನಸಿಕ ಕಾರಣಗಳು. ಈ ಐದು ಕಾರಣಗಳಲ್ಲಿ ಯಾವುದಾದರೂ ಒಂದು ಅಥವಾ ಅದಕ್ಕೂ ಹೆಚ್ಚು ಕಾರಣಗಳ ಸಂಯುಕ್ತ ಪರಿಣಾಮಗಳು ಪುರುಷರ ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸಬಹುದು. 

ಪುರುಷರ ಲಿಂಗ ನಿರ್ಧಾರಕ ವರ್ಣತಂತುವಿನ ಪುಟ್ಟ ತುಣುಕೊಂದು ನಷ್ಟವಾದಲ್ಲಿ ಜನ್ಮದತ್ತವಾದ ತೀವ್ರ ನಪುಂಸಕತೆ ಉದ್ಭವಿಸಬಹುದು. ಅತಿಯಾದ ಧೂಮಪಾನ, ಮದ್ಯಪಾನಗಳ ದೀರ್ಘಕಾಲೀನ ದುಷ್ಪರಿಣಾಮದ ಫಲವಾಗಿ ಅನೇಕ ಮಧ್ಯವಯಸ್ಸಿನ ಪುರುಷರು ನಿಮಿರು ದೌರ್ಬಲ್ಯದಿಂದ ಬಳಲುತ್ತಾರೆ. 

ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಂತೆ ನಮ್ಮ ಪರಿಸರದಲ್ಲಿರುವ ಮಾನವ ನಿರ್ಮಿತವಾದ ೬೦ ಸಹಸ್ರಕ್ಕೂ ಹೆಚ್ಚು ವಿಧದ ರಾಸಾಯನಿಕ ದ್ರವ್ಯಗಳಿಂದಾಗಿಮನುಷ್ಯನಲ್ಲಿ ಮತ್ತು ಕಾಡು ಪ್ರಾಣಿಗಳಲ್ಲೂ ನಪುಂಸಕತೆ ಕಂಡು ಬರುತ್ತಿದೆ. ಮಾತ್ರವಲ್ಲ ಈ ವಿಷಕಾರಕವೆಂದು ಕರೆಯಬಹುದಾದ ರಾಸಾಯನಿಕಗಳ ದುಷ್ಪರಿಣಾಮದಿಂದಾಗಿ ಜಗತ್ತಿನ ಅನೇಕ ದೇಶಗಳ ಪುರುಷರ ವೀರ್ಯದಲ್ಲಿರುವ ವೀರ್ಯಾಣುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ೧೯೯೨ ರಲ್ಲೇ ವಾತಾವರಣದಲ್ಲಿರುವ ರಾಸಾಯನಿಕಗಳು ಮಾನವನ ಸಂತಾನೋತ್ಪತ್ತಿಗೆ ಆಪತ್ಕಾರಿಯಾಗಿ ಪರಿಣಮಿಸಲಿವೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದರು. 

ಅತ್ಯಲ್ಪ ಪ್ರಮಾಣದ ಪುರುಷರಲ್ಲಿ ಕಾಮೇಚ್ಛೆಯ  ಕೊರತೆ, ಸುರತಕ್ರಿಯೆಯ ಬಗ್ಗೆ ನಿರಾಸಕ್ತಿ, ಸ್ತ್ರೀಯರ ಶರೀರದ ಬಗ್ಗೆ ಅಸಹ್ಯಕರ ಭಾವನೆಗಳು ಮತ್ತು ಜಿಗುಪ್ಸೆ, ಸಲಿಂಗ ಕಾಮದ ಬಗ್ಗೆ ಅತ್ಯಾಸಕ್ತಿಯೂ, ಸ್ತ್ರೀ ಸಂಗದ ಸಂದರ್ಭದಲ್ಲಿ ಈ ಸಮಸ್ಯೆಗೆ ಕಾರಣವೆನಿಸಬಲ್ಲದು. ಅಂತೆಯೇ ಅತಿ ಆಯಾಸ, ತೀವ್ರ ಮಾನಸಿಕ ಒತ್ತಡ, ಅತಿಯಾದ ಭಯ ಮತ್ತು ಆತಂಕ, ಪತಿ- ಪತ್ನಿಯರ (ಗೆಳೆಯ- ಗೆಳತಿಯರ) ಸಂಬಂಧಗಳಲ್ಲಿ ಕಾರಣಾಂತರಗಳಿಂದ ಉದ್ಭವಿಸಬಲ್ಲ ಸಮಸ್ಯೆಗಳು, ವೈವಿಧ್ಯವನ್ನು ಬಯಸುವ ಪುರುಷರಿಗೆ ಒಬ್ಬಳೇ ಸಂಗಾತಿಯ ಅಂಗಸಂಗದಿಂದ ಉಂಟಾಗುವ ಏಕತಾನತೆ, ಸಂಗಾತಿಯ ಅಸಹಕಾರಗಳೂ ಈ ಸಮಸ್ಯೆಯನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ. ಇದಲ್ಲದೆ ಅನಿಯಂತ್ರಿತ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಪಕ್ಷವಾತ, ಪಾರ್ಕಿನ್ಸನ್ಸ್,ಅಲ್ಜೈಮರ್ಸ್, ಅಪಸ್ಮಾರಗಲಂತಹ ಕಾಯಿಲೆಗಳು, ಅತಿಯಾದ ಕೊಲೆಸ್ಟರಾಲ್, ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಕೊರತೆ, ಪ್ರಜನಾನಂಗ ಮತ್ತು ಸೊಂಟದ ಮಾಂಸಪೇಶಿಗಳಿಗೆಸಂಭವಿಸಿದ ಆಘಾತಗಳು, ಪ್ರಾಸ್ಟೇಟ್ ಗ್ರಂಥಿಯ ತೊಂದರೆಗಳು, ಶಾಶ್ವತ ಪರಿಹಾರವಿಲ್ಲದ ಮಧುಮೇಹ, ಅಧಿಕ ರಕ್ತದೊತ್ತಡಗಳಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇರಿಸಲು ಸೇವಿಸಲೇ ಬೇಕಾದ ಔಷದಗಳ ದೀರ್ಘಕಾಲೀನ ಸೇವನೆಯ ಅಡ್ಡ ಪರಿಣಾಮಗಳು ಹಾಗೂ ಮಾದಕ ದ್ರವ್ಯಗಳ ಸೇವನೆಯೂ ನಿಮಿರು ದೌರ್ಬಲ್ಯಕ್ಕೆ ಕಾರಣವೆನಿಸಬಹುದು. 

ತೀವ್ರ ಮಾನಸಿಕ ಒತ್ತಡ, ಖಿನ್ನತೆ, ಉದ್ವೇಗ, ಸಿಜೋಫ್ರೆನಿಯಾಗಳಂತಹ ಗಂಭೀರ ಮಾನಸಿಕ ವ್ಯಾಧಿಗಳು, ರತಿಕ್ರೀಡೆಯ ಸಂದರ್ಭದಲ್ಲಿ ಅನಪೇಕ್ಷಿತವಾಗಿ ಉದ್ಭವಿಸಬಲ್ಲ ಅಡಚಣೆಗಳು, ಸಂಭೋಗದ ಸಮಯದಲ್ಲಿ ತೀವ್ರ ನೋವು ಮತ್ತು ಉರಿ ಇತ್ಯಾದಿ ಕಾರಣಗಳೂ ನಪುಂಸಕತೆ ಅಥವಾ ನಿಮಿರು ದೌರ್ಬಲ್ಯಕ್ಕೆ ಮೂಲವೆನಿಸಬಹುದು. 

ಚಿಕಿತ್ಸೆ- ಎಂತು- ಏನು?

ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನ ಕಾರಣಗಳಿಂದ ಉದ್ಭವಿಸುವ ನಿಮಿರುದೌರ್ಬಲ್ಯಕ್ಕೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ. ಇವುಗಳಲ್ಲಿ ಕೆಲವಿಧದ ಇಂಜೆಕ್ಷನ್ ಗಳು, ವಯಾಗ್ರಾದಂತಹ ಮಾತ್ರೆಗಳು, ಶಿಶ್ನದಲ್ಲಿ ತುಂಬುವ ರಕ್ತದ ಪ್ರಮಾಣವನ್ನು ಹೆಚ್ಚಿಸುವ ಚಿಕಿತ್ಸೆ, ಶಿಶ್ನಕ್ಕೆ ನೀಡುವ ಇಂಜೆಕ್ಷನ್, ಶಿಶ್ನಕ್ಕೆ ಲೆಪಿಸಬೇಕಾದ ಮುಲಾಮುಗಳು- ಸ್ಪ್ರೇ ಗಳನ್ನು ನಿಮಿರುದೌರ್ಬಲ್ಯದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ನಿರ್ದಿಷ್ಟ ಕಾರಣವಿದ್ದು, ಅವಶ್ಯಕತೆಯಿದ್ದಲ್ಲಿ ಕೆಲವ್ಯಕ್ತಿಗಳಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯವೆನಿಸಬಹುದು. 

ಆದರೆ ನಕಲಿವೈದ್ಯರು ನೀಡುವ ಸಹಸ್ರಾರು ರೂಪಾಯಿ ಬೆಲೆಯ ಹಾಗೂ ಅಡ್ಡ ಪರಿನಾಮಗಲಿಲ್ಲದ ಮತ್ತು ಗಿಡಮೂಲಿಕೆಗಳಿಂದ ಸಿದ್ಧಪದಿಸಿರುವುದೆಂದು ಹೇಳಲಾಗುವ 'ಲೈಂಗಿಕ ಶಕ್ತಿವರ್ಧಕ' ಔಷದಗಳ ಸೇವನೆಯಿಂದ ನಿಮ್ಮ ಸಮಸ್ಯೆ ಪರಿಹಾರವಾಗದಿದ್ದರೂ, ನಿಮ್ಮ ಹಣದ ಥೈಲಿ ಹಗುರವಾಗುವುದರಲ್ಲಿ ಸಂದೇಹವಿಲ್ಲ!. 

ಜನ್ಮದತ್ತವಾಗಿ ಬಂದಿರುವ ಪ್ರಾಥಮಿಕ ನಪುಂಸಕತೆಯನ್ನು ಯಾವುದೇ ಚಿಕಿತ್ಸೆಯಿಂದ ಗುಣಪಡಿಸುವುದು ಅಸಾಧ್ಯ. ದ್ವಿತೀಯ ವಿಧದ ನಪುಂಸಕತೆಯಲ್ಲಿ ಆಯಾ ವ್ಯಕ್ತಿಯ ಶಾರೀರಿಕ ಹಾಗೂ ಮಾನಸಿಕ ಸ್ಥಿತಿಗತಿಗಳು, ಶಾರೀರಿಕ ಕ್ಷಮತೆಯ ಮಟ್, ಆತನಲ್ಲಿ ಇರಬಹುದಾದ ದುಶ್ಚಟಗಳು ಮತ್ತು ಇತರ ಗಂಭೀರ ಕಾಯಿಲೆಗಳ ತೀವ್ರತೆಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಬೇಕಾಗುವುದು. ಮಾನಸಿಕ ಸಮಸ್ಯೆಗಳಿದ್ದಲ್ಲಿ ಮಾನಸಿಕ ತಜ್ಞರಿಂದ ಚಿಕಿತ್ಸೆ ಮತ್ತು ಆಪ್ತ ಸಂವಾದಗಳೂ ಅನಿವಾರ್ಯವೆನಿಸಬಹುದು. ಅಂತಿಮವಾಗಿ ವಿವಾಹಿತರಲ್ಲಿ ಪತ್ನಿಯ ಹೃತ್ಪೂರ್ವಕ ಸಹಕಾರವೂ ಚಿಕಿತ್ಸೆ ಫಲಪ್ರದವೆನಿಸಲು ಅತ್ಯವಶ್ಯಕ ಎನಿಸುವುದು. 

ಆರೋಗ್ಯವಂತರನ್ನೂಕಾಡಬಲ್ಲ ಈ ವಿಶಿಷ್ಟ ಸಮಸ್ಯೆ ನಿಮ್ಮಲ್ಲೂ ಕಂಡುಬಂದಲ್ಲಿ ಅನಾವಶ್ಯಕವಾಗಿ ತಲೆಕೆಡಿಸಿಕೊಳ್ಳದೆ ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳಿರಿ. ಯಾವುದೇ ಕಾರಣಕ್ಕೂ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ನಕಲಿ ಲೈಂಗಿಕ ತಜ್ಞರ ಜಾಲಕ್ಕೆ ಸಿಲುಕದಿರಿ. 

ನಿಮಗಿದು ತಿಳಿದಿರಲಿ

ಜಗತ್ತಿನ ಅನೇಕ ಪುರುಷರ ಗಮನ ಸೆಳೆದಿದ್ದ "ವಯಾಗ್ರ" ಗುಳಿಗೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದರೂ, ಇದನ್ನು ಸುರತಕ್ರಿಯೆಯ ನಾಲ್ಕು ಗಂಟೆ ಮೊದಲೇ ಸೇವಿಸಬೇಕಾಗುವುದು. ಅದೇ ರೀತಿಯಲ್ಲಿ ಅಲ್ಪಾವಧಿಯಲ್ಲೇ ಇದರ ಪರಿಣಾಮವೂ ಅಂತ್ಯಗೊಳ್ಳುವುದು. ಆದರೆ ತದನಂತರ ಬಿಡುಗಡೆಯಾಗಿದ್ದ "ಸಿಯಾಲಿಸ್" ಎನ್ನುವ ಔಷದವನ್ನು ಸೇವಿಸಿದ ೧೬ ನಿಮಿಷಗಳಲ್ಲೇ ಶೇ. ೮೮ ಜನರಲ್ಲಿ ಉತ್ತಮ ಪರಿಣಾಮ ಕಂಡುಬಂದಿತ್ತು. ಈ ಔಷದವು ಸುಮಾರು ೩೬ ಗಂಟೆಗಳ ತನಕ ತನ್ನ ಪರಿಣಾಮವನ್ನು ತೋರಿತ್ತು. ಆದರೆ ಈ ಔಷದದ ೧೦ ಮಿಲಿಗ್ರಾಂ ಮಾತ್ರೆಯೊಂದಕ್ಕೆ ಕೇವಲ ೧೩,೦೦೦ ರೂ. ಬೆಲೆಯೂ ಇತ್ತು. 

ವಾರ್ಡೆನಾಫಿಲ್ಎನ್ನುವ ಮತ್ತೊಂದು ನೂತನ ಔಷದದ ಪರೀಕ್ಷಾರ್ಥ ಪ್ರಯೋಗದಲ್ಲಿ ಶೇ. ೮೫ ಪುರುಷರಲ್ಲಿ ಅತ್ಯುತ್ತಮ ಫಲಿತಾಂಶ ಕಂಡುಬಂದಿತ್ತು. ವಿಶೇಷವೆಂದರೆ ಇದರೊಂದಿಗೆ ಔಷದರಹಿತ ಪ್ಲಾಸಿಬೋ ಸೇವಿಸಿದ ಮತ್ತೊಂದು ಗುಂಪಿನ ಪುರುಷರಲ್ಲಿ ಶೇ. ೨೮ ಜನರಲ್ಲಿ ಅದ್ಭುತ ಪರಿಣಾಮ ದೊರೆತಿತ್ತು. ಅರ್ಥಾತ್ ಇವರಲ್ಲಿ ಕಂಡುಬಂದಿದ್ದ ನಿಮಿರುದೌರ್ಬಲ್ಯಕ್ಕೆ ಮಾನಸಿಕ ಕಾರಣಗಳೇ ಮೂಲವಾಗಿದ್ದವು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೩೦- ೦೯- ೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ .



No comments:

Post a Comment