Tuesday, January 28, 2014

Artificial colouring agents





              ಅನಾರೋಗ್ಯಕರ ವರ್ಣಕಾರಕಗಳು!

ವರ್ಣರಂಜಿತ ಉಡುಪುಗಳು,ಬಣ್ಣಬಣ್ಣದ ಹೂಗಳು,ಹಚ್ಚ ಹಸುರಿನ ಮರಗಿಡಗಳು ಮತ್ತು ಬಾಯಲ್ಲಿ ನೀರೂರಿಸುವ ರಂಗುರಂಗಿನ ಖಾದ್ಯಪೇಯಗಳು ಸಹಜವಾಗಿಯೇ ನಮ್ಮ ಕಣ್ಮನಗಳನ್ನು ಸೆಳೆಯುತ್ತವೆ. ನೀವು ಮಾರುಕಟ್ಟೆಯಲ್ಲಿ ಹಣ್ಣುಹಂಪಲು ಅಥವಾ ತರಕಾರಿಗಳನ್ನು ಖರೀದಿಸುವಾಗ ಚೆನ್ನಾಗಿ ಕಲಿತ ಚಿನ್ನದ ಬಣ್ಣದ ಮಾವು ಮತ್ತು ಕಡುಗೆಂಪು ಬಣ್ಣದ ಸೇಬು ಅಥವಾ ಟೊಮೇಟೊಗಳನ್ನು ಆಯ್ದುಕೊಳ್ಳಲು ಇವುಗಳ ಆಕರ್ಷಕ ಬಣ್ಣಗಳೇ ಕಾರಣವಾಗಿರುತ್ತವೆ. ಅದೇ ರೀತಿಯಲ್ಲಿ ಕೃಷ್ಣವರ್ಣದ ಕನ್ಯೆಯರಿಗಿಂತಲೂ ಗೋಧಿಯ ಬಣ್ಣದ ಚೆಲುವೆಯರಿಗೆ ಯುವಕರು ಮನಸೋಲಲು, ಇವರ ಚರ್ಮದ ಬಣ್ಣವೇ ಕಾರಣವೆನಿಸುವುದು!. 

ಆದರೆ ಚಿನ್ನದ ಬಣ್ಣದ ಜಿಲೇಬಿ, ಕಡು ಕೇಸರಿ ಬಣ್ಣದ ಜಹಾಂಗೀರ್, ಹಸಿರು- ಹಳದಿ- ಗುಲಾಬಿ ವರ್ಣಗಳ ಐಸ್ ಕ್ರೀಮ್ ಗಳು, ಕಡುಗೆಂಪು ಬಣ್ಣದ ಹಣ್ಣಿನ ಜಾಮ್ ಗಳು ಮತ್ತು ವಿವಿಧ ಬಣ್ಣಗಳ ಪೇಯಗಳು ನೋಡುಗರ ಮನಸೆಳೆಯಲು ಇವುಗಳ ತಯಾರಿಕೆಯಲ್ಲಿ ಬಳಸಿರುವ ಕೃತಕ ವರ್ಣಕಾರಕ ರಾಸಾಯನಿಕಗಳೇ ಕಾರಣವಾಗಿರುತ್ತವೆ!. 

ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವೆನಿಸಿರುವ ವೈವಿಧ್ಯಮಯ ಬಣ್ಣಗಳನ್ನು ಪ್ರಾಕೃತಿಕ ( ಸ್ವಾಭಾವಿಕ) ಮತ್ತು ಕೃತಕ ಎಂದು ಎರಡು ವಿಧಗಳನ್ನಾಗಿ ವಿಂಗಡಿಸಬಹುದು. ಜನಸಾಮಾನ್ಯರು ದಿನನಿತ್ಯ ಸೇವಿಸುವ ಖಾದ್ಯಪೆಯಗಳು, ಔಷದಗಳು ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಸುವ ಕೃತಕ ವರ್ನಕಾರಕ ರಾಸಾಯನಿಕಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಆದರೆ ಇದರ ಅರಿವಿಲ್ಲದ ಕಾರಣದಿಂದಾಗಿ ನಾವಿಂದು ಇಂತಹ ಖಾದ್ಯಪೇಯಗಳನ್ನು ಅತಿಯಾಗಿ ಸೇವಿಸುತ್ತಿರುವುದು ಸುಳ್ಳೇನಲ್ಲ. 

ಅಡಿಟಿವ್ಸ್- Additives 

ಪೊಟ್ಟಣಗಳಲ್ಲಿ ಮಾರಾಟ ಮಾಡುವ ಸಿದ್ಧ ಅಥವಾ ಇತರ ರೂಪದ ಆಹಾರಪದಾರ್ಥಗಳ ತಯಾರಿಕೆಯಲ್ಲಿ, ಸಾಮಾನ್ಯವಾಗಿ ಅಡಿಟಿವ್ಸ್ ಎಂದು ಕರೆಯಲ್ಪಡುವ ರಾಸಾಯನಿಕ ದ್ರವ್ಯಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳನ್ನು ಬಳಸುವುದರಿಂದ ಇಂತಹ ಆಹಾರ ಪದಾರ್ಥಗಳ ಬಣ್ಣ ಮತ್ತು ರುಚಿಗಳು ಹೆಚ್ಚುವುದರೊಂದಿಗೆ, ಈ ಉತ್ಪನ್ನಗಳು ಸುದೀರ್ಘಕಾಲ ಕೆಡದೇ ಉಳಿಯುತ್ತವೆ. 

ದೊಡ್ಡ ಪ್ರಮಾಣದಲ್ಲಿ ಖಾದ್ಯಪೇಯಗಳನ್ನು ಶೇಖರಿಸಿಟ್ಟ ಸ್ಥಳಗಳಲ್ಲಿ ಗಾಳಿ, ಬೆಳಕು, ಅತಿಯಾದ ಉಷ್ಣತೆ ಅಥವಾ ತೇವಾಂಶಗಳಿಂದಾಗಿ ನಶಿಲ್ಪಡುವ ಬಣ್ಣಗಳನ್ನು ವರ್ಧಿಸಲು, ಸ್ವಾಭಾವಿಕ ಬಣ್ಣಗಳನ್ನು ಇನ್ನಷ್ಟು ವೃದ್ಧಿಸಲು, ಸ್ವಾಭಾವಿಕವಾಗಿ ವ್ಯತ್ಯಯವಾಗುವ ಬಣ್ಣಗಳನ್ನು ಸರಿಪಡಿಸಲು ಮತ್ತು ಬಣ್ಣಗಳಿಲ್ಲದ ಅಹಾರಪದಾರ್ಥಗಳಿಗೆ ಆಕರ್ಷಕ ಬಣ್ಣಗಳನ್ನು ನೀಡಲು, ಕೃತಕ ವರ್ಣಕಾರಕಗಳನ್ನು ಬಳಸಲಾಗುತ್ತದೆ. ಆದರೆ ನಾವು ಖರೀದಿಸುವ ಅನೇಕ ವಸ್ತುಗಳ ಬಣ್ಣಗಳು ಸ್ವಾಭಾವಿಕವೇ ಅಥವಾ ಕೃತಕವೇ ಎಂದು ಮೇಲ್ನೋಟಕ್ಕೆ ತಿಳಿಯುವುದಿಲ್ಲ. ಏಕೆಂದರೆ ಪ್ರಕೃತಿ ಸಹಜ ಬಣ್ಣಗಳಿರುವ ಹಣ್ಣುಹಂಪಲುಗಳಲ್ಲೂ ಇಂತಹ ಕೃತಕ ವರ್ಣಕಾರಕಗಳನ್ನು ಬಳಸುತ್ತಾರೆ. ಉದಾಹರಣೆಗೆ ಮರದಲ್ಲೇ ಕಲಿತ ಕಿತ್ತಳೆ ಹಣ್ಣುಗಳ ಹೊರಗಿನ ಸಿಪ್ಪೆಗೆ ಕೇಸರಿಮಿಶ್ರಿತ ಕಂಡು ಅಥವಾ ಕಡುಹಸಿರು ಬಣ್ಣವನ್ನು ನೀಡಲು "ಸಿಟ್ರಿಕ್ ರೆಡ್ ನಂ. ೨ " ಎನ್ನುವ ಕೃತಕ ವರ್ಣಕಾರಕವನ್ನು ಸಿಂಪಡಿಸುವುದು ನಿಮಗೂ ತಿಳಿದಿರಲಾರದು. 

ಅನೇಕ ವಿಧದ ಆಹಾರಪದಾರ್ಥಗಳ ತಯಾರಿಕೆಯಲ್ಲಿ ನೈಸರ್ಗಿಕ ಮೂಲಗಳಿಂದ ಲಭಿಸುವ ಬೀಟಾ ಕರೋಟಿನ್, ಪಪಾರಿಕಾ, ಓಲಿಯೋರೆಸಿನ್, ಅರಶಿನ, ಕುಂಕುಮ, ಕುಂಕುಮಕೇಶರ, ಪಾಪ್ರಿಕಾ, ದ್ರಾಕ್ಷೆ ಹಣ್ಣಿನ ಸಿಪ್ಪೆಯ ಸಾರ ಇತ್ಯಾದಿಗಳನ್ನು ವರ್ಣಕಾರಕಗಳನ್ನಾಗಿಬಳಸುತ್ತಾರೆ. ಆದರೆ ಕೃತಕ ರಾಸಾಯನಿಕ ವರ್ಣಕಾರಕಗಳನ್ನು ಅತ್ಯಲ್ಪ ವೆಚ್ಚದಲ್ಲಿ, ಅತ್ಯಂತ ಸುಲಭವಾಗಿ ತಯಾರಿಸಬಹುದಾಗಿದೆ. ಹೀಗಾಗಿ ಇವುಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ಕೆಲವು ಬಣ್ಣಗಳನ್ನು ವಿಷಕಾರಿ ಖನಿಜ ಮತ್ತು ಲೋಹಮೂಲದ ದ್ರವ್ಯಗಳಿಂದ ಸಿದ್ಧಪಡಿಸುವುದರಿಂದ, ಇವುಗಳು ಮನುಷ್ಯನ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುತ್ತವೆ. 

ರಾಸಾಯನಿಕವಾಗಿ ಸಂಯೋಜಿಸಲ್ಪಡುವ ಹೆಚ್ಚಿನ ಎಲ್ಲ ವರ್ಣಕಾರಕಗಳನ್ನು "ಅನಿಲೈನ್" ಎನ್ನುವ ಪೆಟ್ರೋಲಿಯಂ ಉತ್ಪನ್ನದಿಂದ ತಯಾರಿಸುತ್ತಾರೆ. ಆದರೆ ಶುದ್ಧ ರೂಪದ ಅನಿಲೈನ್, ವಿಷಕಾರಕವೂ ಹೌದು. ಇನ್ನು ಕೆಲವಿಧದ ವರ್ಣಕಾರಕಗಳನ್ನು ಇತರ ಉದ್ದೇಶಗಳಿಗಾಗಿ ( ಉದಾ-  ಬಟ್ಟೆಗಳಿಗೆ ಬಣ್ಣ ನೀಡಲು) ತಯಾರಿಸುವರಾದರೂ, ಇಂತಹ ಪಾಯಕಾರಿ ದ್ರವ್ಯಗಳನ್ನು ಖಾದ್ಯಪೆಯಗಳ ತಯಾರಿಕೆಯಲ್ಲಿ ಬಳಸುವ ಕೆಟ್ಟ ಹವ್ಯಾಸ ಭಾರತೀಯರಲ್ಲೂ ಇದೆ. 

ಸಾಮಾನ್ಯವಾಗಿ ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸುವ "ಅಡಿಟಿವ್" ಗಳ ವಿಷಕಾರಕ ಚಹರೆಯನ್ನು ಐರೋಪ್ಯ ಒಕ್ಕೂಟದಲ್ಲಿ ವಾಡಿಕೆಯಲ್ಲಿರುವ "ಸಂಕೇತ ಸಂಖ್ಯೆ" ಗಳನ್ನೂ ಬಳಸಿ ಮರೆಮಾಚಲಾಗುತ್ತದೆ. ಇ- ನಂಬರ್ ಎಂದು ಕರೆಯಲ್ಪಡುವ ಈ ಸಂಖ್ಯೆಯಿಂದ ಅಡಿಟಿವ್ ಗಳನ್ನೂ ಗುರುತಿಸುವುದು ಜನಸಾಮಾನ್ಯರಿಗೆ ಅಸಾಧ್ಯವೆನಿಸುತ್ತದೆ. ಉದಾಹರಣೆಗೆ ಟಾರ್ಟಾಜೈನ್ ಎನ್ನುವ ಕೃತಕ ವರ್ಣಕಾರಕಕ್ಕೆ ಇ- ೧೦೨ ಸಂಖ್ಯೆಯನ್ನು ನೀಡಿದ್ದು, ಇದನ್ನು ಸಿಹಿತಿಂಡಿಗಳು, ಹಣ್ಣುಗಳ ಜಾಮ್, ಕುರುಕಲು ತಿಂಡಿಗಳು ಹಾಗೂ ಪೇಯಗಳಿಗೆ ಆಕರ್ಷಕ ಬಣ್ಣವನ್ನು ನೀಡಲು ಬಳಸಲಾಗುತ್ತಿದೆ. ಈ ರಾಸಾಯನಿಕವು ಪುಟ್ಟ ಮಕ್ಕಳಲ್ಲಿ ಆಸ್ತಮಾ ಮತ್ತು ಶರೀರದಾದ್ಯಂತ ತುರಿಕೆ- ದಡಿಕೆಗಳು ಮೂಡಲು ಕಾರಣವೆನಿಸಬಲ್ಲದು!. 

ಎರಿತ್ರೋಸೈನ್ ಅರ್ಥಾತ್ ಇ- ೧೨೭ ಸಂಖ್ಯೆಯ ರಾಸಾಯನಿಕವನ್ನು ಚೆರ್ರಿ ಹಣ್ಣುಗಳು, ಇತರ ಕೆಲವಿಧದ ಸಂಸ್ಕರಿತ ಹಣ್ಣುಗಳು, ಸಿಹಿ ತಿಂಡಿಗಳು, ಬೇಕರಿ ಉತ್ಪನ್ನಗಳು ಮತ್ತು ಕುರುಕಲು ತಿಂಡಿಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಈ ದ್ರವ್ಯವು ಮನುಷ್ಯನ ಶರೀರದಲ್ಲಿ ಥೈರಾಯ್ಡ್ ಹಾರ್ಮೋನ್ ಗಳ ಪ್ರಮಾಣವನ್ನು ಹೆಚ್ಚಿಸುವುದರಿಂದ, ಹೈಪರ್ ಥೈರಾಯ್ಡಿಸಂ ಎನ್ನುವ ಗಂಭೀರ ಸಮಸ್ಯೆಗೆ ಕಾರಣವೆನಿಸುವುದು. 

ಅಮರಾಂತ್ ಯಾನೆ ಇ- ೧೨ ಎನ್ನುವ ರಾಸಾಯನಿಕವನ್ನು ಕೇಕ್ ಗಳ ಮಿಶ್ರಣ, ಜೆಲ್ಲಿ ಕ್ರಿಸ್ಟಲ್ಸ್ ಇತ್ಯಾದಿಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಪ್ರಾಣಿಗಳ ಮೇಲೆ ಪ್ರಯೋಗಿಸಿ ನಡೆಸಿದ್ದ ಪರೀಕ್ಷೆಗಳಿಂದ ತಿಳಿದುಬಂದಂತೆ, ಈ ದ್ರವ್ಯವು ಕ್ಯಾನ್ಸರ್, ಜನ್ಮದತ್ತ ವೈಕಲ್ಯಗಳು ಮತ್ತು ಗರ್ಭಸ್ಥ ಶಿಶುಗಳ ಮರಣಕ್ಕೂ ಕಾರಣವೆನಿಸಬಲ್ಲದು ಎಂದು ತಿಳಿದುಬಂದಿದೆ. 

ಕೃತಕ ರಾಸಾಯನಿಕಗಳೊಂದಿಗೆ ಅಲ್ಯುಮಿನಿಯಂ, ಬೆಳ್ಳಿ, ಚಿನ್ನಗಳಂತಹ ಲೋಹಗಳನ್ನು ಕೂಡಾ ಇ- ಸಂಖ್ಯೆಯ ಮೂಲಕ ಮರೆಮಾಚಿ, ವರ್ಣಕಾರಕಗಳನ್ನಾಗಿ ಬಳಸುತ್ತಾರೆ ಎಂದಲ್ಲಿ ನೀವೂ ನಂಬಲಾರಿರಿ. ಆದರೆ ಇ- ೧೭೩, ಇ- ೧೭೪ ಮತ್ತು ಇ- ೧೭೫ ಸಂಕೇತ ಸಂಖ್ಯೆಗಳು ಅನುಕ್ರಮವಾಗಿ ಮೇಲೆ ನಮೂದಿಸಿರುವ ಲೋಹಗಳದ್ದೇ ಆಗಿವೆ!. 

ಕೃತಕ ವರ್ಣಕಾರಕಗಳು ಅಸ್ಥಿರವಾಗಿರುವುದರಿಂದ, ಇವುಗಳು ಖಾದ್ಯ ವಸ್ತುಗಳಿಗೆ ಶಾಶ್ವತವಾಗಿ "ಅಂಟಿಕೊಳ್ಳಲು " ಇತರ ರಾಸಾಯನಿಕ ಅಂಟುದ್ರವ್ಯಗಳನ್ನು ಬಳಸುತ್ತಾರೆ. ಇವುಗಳಲ್ಲಿ ಸೋಡಿಯಂ ಸಲ್ಫೈಟ್ , ಸೋಡಿಯಂ ನೈಟ್ರೇಟ್ ಮತ್ತು ಸಲ್ಫರ್ ಡೈ ಆಕ್ಸೈಡ್ ಸೇರಿವೆ. ಸಾಮಾನ್ಯವಾಗಿ ಸೋಡಿಯಂ ನೈಟ್ರೈಟ್ ನ್ನು, ಸಂಸ್ಕರಿಸಿ ಪ್ಯಾಕ್ ಮಾಡಿದ ಮಾಂಸ ಮತ್ತು ಮೀನುಗಳಲ್ಲಿ ಅಂಟುಕಾರಕಗಳನ್ನಾಗಿ ಬಳಸಲಾಗುತ್ತಿದ್ದು, ಇದೇ ದ್ರವ್ಯವನ್ನು ಬಟ್ಟೆಗಳಿಗೆ ಬಣ್ಣವನ್ನು ನೀಡಲೂ ಬಳಸುತ್ತಾರೆ. ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಂತೆ, ಈ ಲವಣವು ಮನುಷ್ಯನ ಉದರದಲ್ಲಿರುವ ರಾಸಾಯನಿಕಗಳೊಂದಿಗೆ ಸೇರಿ ಉತ್ಪನ್ನವಾಗುವ ನೈಟ್ರೋಸೈನ್, ಕ್ಯಾನ್ಸರ್ ವ್ಯಾಧಿಗೆ ಕಾರಣವೆನಿಸುತ್ತದೆ. 

ಕೃತಕ ವರ್ನಕಾರಕಗಳ ಬಗ್ಗೆ ಅಧ್ಯಯನಗಳನ್ನು ನಡೆಸಿರುವ ಸಂಶೋಧಕರ ಅಭಿಪ್ರಾಯದಂತೆ, ನಾವೆಲ್ಲರೂ ವರ್ಷಂಪ್ರತಿ ಸುಮಾರು ಐದರಿಂದ ಆರು ಕಿಲೋಗ್ರಾಂ ಗಳಷ್ಟು ಪ್ರಮಾಣದ ಸಂರಕ್ಷಕ, ವರ್ಣಕಾರಕ, ರುಚಿವರ್ಧಕ, ಖಾದ್ಯಗಳನ್ನು ಘನೀಕರಿಸುವ ಮತ್ತು ಸ್ಥಿರವಾಗಿಸಬಲ್ಲ ರಾಸಾಯನಿಕಗಳನ್ನು ಸೇವಿಸುತ್ತೇವೆ. ಈ ಅಪಾಯಕಾರಿ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕಲು ನಮ್ಮ ಶರೀರವು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಜೊತೆಗೆ ಇವುಗಳ ವಿಷಕಾರಕ ಮತ್ತು ಅನಪೇಕ್ಷಿತ ಅಡ್ಡ ಪರಿಣಾಮಗಳಿಂದಾಗಿ, ನಾವು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಈಡಾಗಬೇಕಾಗುತ್ತದೆ. 

ಭಾರತದಲ್ಲಿ ಆಹಾರ ಉತ್ಪನ್ನಗಳ ತಯಾರಿಕೆಗೆ ಪರವಾನಿಗೆಯನ್ನು ನೀಡುವ ಸಂದರ್ಭದಲ್ಲಿ, ಸರಕಾರ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸದೆ ಇರುವುದರಿಂದ ಇವುಗಳ ತಯಾರಕರು ಯಾವುದೇ ನಿಯಮಗಳನ್ನು ಪರಿಪಾಲಿಸದೇ ಸ್ವೇಚ್ಚೆಯಿಂದ ವರ್ತಿಸುತ್ತಿರುವುದು ಸತ್ಯ. ಈ ಸಮಸ್ಯೆಯಿಂದ ಪಾರಾಗಲು ಸಂಸ್ಕರಿತ ಮತ್ತು ಸಿದ್ಧ ಆಹಾರ ಪದಾರ್ಥಗಳು ಮತ್ತು ಪೇಯಗಳನ್ನು ಸೇವಿಸದಿರುವುದೇ ಏಕಮಾತ್ರ ಪರಿಹಾರವಾಗಿದೆ.

ಕರ್ನಾಟಕದಲ್ಲೂ.......!

ಸುಮಾರು ಏಳು ವರ್ಷಗಳ ಹಿಂದೆ(೨೦೦೭ ರಲ್ಲಿ) ಮೈಸೂರಿನಲ್ಲಿ ನಡೆಸಿದ್ದ ಸಮೀಕ್ಷೆಯೊಂದರಿಂದ ತಿಳಿದುಬಂದಂತೆ, ಜನಸಾಮಾನ್ಯರು ದಿನನಿತ್ಯ ಬಳಸುವ- ಸೇವಿಸುವ ಬೇಳೆಕಾಳುಗಳೇ ಮುಂತಾದ ಆಹಾರ ಪದಾರ್ಥಗಳಲ್ಲೂ ಕೃತಕ ವರ್ಣಕಾರಕಗಳನ್ನು ಬಳಸುತ್ತಿರುವುದು ಪತ್ತೆಯಾಗಿತ್ತು. ಮೈಸೂರಿನ ೮ ದಿನಸಿ ಅಂಗಡಿಗಳಿಂದ ಸಂಗ್ರಹಿಸಿದ ಕಡಲೆ ಬೇಳೆಯ ಸ್ಯಾಂಪಲ್ ಗಳಲ್ಲಿನ ಶೇ. ೫೦ ರಷ್ಟು ಸ್ಯಾಂಪಲ್ ಗಳಲ್ಲಿ ಮೆಟಾನಿಲ್ ಯೆಲ್ಲೋ ಮತ್ತು ಶೇ. ೬ ರಷ್ಟು ಸ್ಯಾಂಪಲ್ ಗಳಲ್ಲಿ ಅರಾಮೈನ್ ಎನ್ನುವ ವರ್ಣಕಾರಕಗಳನ್ನು ಹಾಗೂ ಶೇ. ೯ ರಷ್ಟು ಹೆಸರುಕಾಳಿನ ಸ್ಯಾಂಪಲ್ ಗಳಲ್ಲಿ ಮೆಟಾನಿಲ್ ಯೆಲ್ಲೋ ಇರುವುದು ಪತ್ತೆಯಾಗಿತ್ತು. 

ಸಮೀಕ್ಷೆಗಾಗಿ ಸಂಗ್ರಹಿಸಿದ್ದ ಕಾಳಮೆಣಸಿನ ಮಾದರಿಗಳನ್ನು ಪರೀಕ್ಷಿಸಿದಾಗ, ಇವುಗಳು ಆಕರ್ಷಕವಾಗಿ ಮಿರುಗುವಂತೆ ಕಾಣಿಸಲು ಖನಿಜ ತೈಲಗಳನ್ನು ಬಳಸಿರುವುದು ತಿಳಿದುಬಂದಿತ್ತು. ಇಂತಹ ಖನಿಜ ತೈಲಗಳ ಸೇವನೆಯಿಂದ ವಾಕರಿಕೆ, ವಾಂತಿ ಹಾಗೂ ಭೇದಿಗಳಂತಹ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. 

ಏಲಕ್ಕಿಯ ಶೇ.೫೦ ಕ್ಕೂ ಅಧಿಕ ಮಾದರಿಗಳಲ್ಲಿನ ತೈಲಾಂಶವನ್ನೇ ತೆಗೆದಿದ್ದು, ಕೃತಕ ಬಣ್ಣವನ್ನು ಬೆರೆಸುವುದರ ಮೂಲಕ ಇದನ್ನು ಮರೆಮಾಚಲು ಯತ್ನಿಸಿರುವುದು ಬಯಲಾಗಿತ್ತು. ಅಂತೆಯೇ ಶೇ. ೮ ರಷ್ಟು ಲವಂಗದ ಮಾದರಿಗಳಲ್ಲಿ ಕಿಂಚಿತ್ ಕೂಡಾ ಎಣ್ಣೆಯ ಅಂಶವೇ ಇರದಿರುವುದು ತಿಳಿದುಬಂದಿತ್ತು. ಅದೇ ರೀತಿಯಲ್ಲಿ ಅರಶಿನದ ಹುಡಿ, ಮೆಣಸಿನ ಹುಡಿ ಹಾಗೂ ಕೊತ್ತಂಬರಿಗಳಲ್ಲೂ ಕೃತಕ ವರ್ಣಕಾರಕಗಳನ್ನು ಧಾರಾಳವಾಗಿ ಬಳಸಿರುವುದು ಪತ್ತೆಯಾಗಿತ್ತು. 

ಪ್ರಾಯಶಃ ಇಂತಹ ಪರೀಕ್ಷೆಗಳಿಗೆ ಒಳಗಾಗದ ಸಹಸ್ರಾರು ಅನ್ಯ ಆಹಾರ ಪದಾರ್ಥಗಳಲ್ಲಿ ಯಾವ ರೀತಿಯ ರಾಸಾಯನಿಕಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಲಾಗಿದೆ ಎನ್ನುವುದು, ಆ ಸೃಷ್ಟಿಕರ್ತನಿಗೂ ತಿಳಿದಿರಲಾರದು ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೪- ಒ೭- ೨೦೦೮ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 




Monday, January 27, 2014

Construction Waste




            ಕಟ್ಟಡಗಳ ಭಗ್ನಾವಶೇಷ: ಪುನರ್ಬಳಕೆಗೆ ಅವಕಾಶ!

ಭವ್ಯ ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಅವಿರತವಾಗಿ ವೈವಿಧ್ಯಮಯ ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಇಂತಹ ನಿರ್ಮಾಣ ಕಾಮಗಾರಿಗಳಲ್ಲಿ ಗಣನೀಯ ಪ್ರಮಾಣದ ನೂತನ ಕಟ್ಟಡಗಳನ್ನು ನಿರ್ಮಿಸುವ ಸಂದರ್ಭಗಳಲ್ಲಿ ಹಳೆಯ ಕಟ್ಟಡಗಳನ್ನು ಕೆಡವಲಾಗುತ್ತದೆ. ಅಂತೆಯೇ ಅನೇಕ ಕಟ್ಟಡಗಳನ್ನು ಪುನರ್ ನವೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಗಾಧ ಪ್ರಮಾಣದ ತ್ಯಾಜ್ಯಗಳು ಉತ್ಪನ್ನವಾಗುತ್ತವೆ. ಸಾಮಾನ್ಯವಾಗಿ ಇಂತಹ ತ್ಯಾಜ್ಯಗಳನ್ನು ನಿರುಪಯುಕ್ತ ಎಂದು ಪರಿಗಣಿಸಲಾಗುವುದರಿಂದ, ಇವುಗಳನ್ನು ಕಟ್ಟಲಾದ ಬಳಿಕ ನಗರಗಳ, ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ತಂದು ಸುರಿಯಲಾಗುತ್ತದೆ. ಕತ್ತಲಾದ ಬಳಿಕವೇ ನಡೆಯುವ ಇಂತಹ "ತ್ಯಾಜ್ಯ ವಿಲೇವಾರಿ" ಯಿಂದಾಗಿ, ರಸ್ತೆಯ ಇಕ್ಕೆಲಗಳಲ್ಲಿನ ಚರಂಡಿಗಳು ಮುಚ್ಚಲ್ಪಡುವುದರಿಂದ, ಮಳೆಗಾಲದ ದಿನಗಳಲ್ಲಿ ಈ ರಸ್ತೆಗಳು ನಿರ್ನಾಮಗೊಳ್ಳುತ್ತವೆ. ಮುನಿಸಿಪಲ್ ಕಾಯಿದೆಯಂತೆ ಇಂತಹ ತ್ಯಾಜ್ಯಗಳನ್ನು ಕೇವಲ "ಲ್ಯಾಂಡ್ ಫಿಲ್ ಸೈಟ್" ಗಳಲ್ಲಿ ವಿಲೇವಾರಿ ಮಾಡಬೇಕಾಗುವುದಾದರೂ, ಇಂತಹ ನಿಯಮಗಳ ಅರಿವಿದ್ದೂ ಉಲ್ಲಂಘಿಸುವ ಜನರಿಂದಾಗಿ, ರಸ್ತೆಯ ಬದಿಗಳಲ್ಲೇ ಸುರಿಯಲಾಗುತ್ತಿದೆ. ನಿಶಾಚರರು ನಡೆಸುವ ಈ ಕಾರ್ಯಾಚರಣೆಯನ್ನು ತಡೆಗಟ್ಟಲು ಆಗದ ಸ್ಥಳೀಯ ಸಂಸ್ಥೆಗಳ ಸಿಬಂದಿಗಳು, ಅನಿವಾರ್ಯವಾಗಿ ಸುಮ್ಮನಿರಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಪುನರ್ ಆವರ್ತನ- ಮರುಬಳಕೆ 

ಭಾರತದಲ್ಲಿ ಪ್ರತಿವರ್ಷ ೧೦ ರಿಂದ ೧೨ ಮಿಲಿಯನ್ ಟನ್ ಗಳಷ್ಟು "ನಿರ್ಮಾಣ ಕಾಮಗಾರಿಗಳ ತ್ಯಾಜ್ಯ" ಉತ್ಪನ್ನವಾಗುತ್ತದೆ. ಆದರೆ ಇದರ ಅತಿಸಣ್ಣ ಪಾಲು ಮಾತ್ರ ಮರುಬಳಕೆಯಾಗುತ್ತಿದೆ. ಮುನಿಸಿಪಲ್ ಘನತ್ಯಾಜ್ಯ ನಿರ್ವಹಣೆಯ ಕಾಯಿದೆ ೨೦೦೦ ದಂತೆ, ಇಂತಹ ತ್ಯಾಜ್ಯಗಳನ್ನು ಪ್ರತ್ಯೇಕಿಸಬೇಕಾಗಿದ್ದರೂ, ಇವುಗಳನ್ನು ಅನ್ಯ ತ್ಯಾಜ್ಯಗಳೊಂದಿಗೆ ಬೆರೆಸಿ ವಿಲೇವಾರಿ ಮಾಡಲಾಗುತ್ತಿದೆ. ಇತ್ತೀಚಿಗೆ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ದುರಂತಕ್ಕೆ, ಅನಿಯಂತ್ರಿತ, ಕಾನೂನುಬಾಹಿರ ಮತ್ತು ಅತಿಯಾದ ನಿರ್ಮಾಣ ಕಾಮಗಾರಿಗಳು ಮತ್ತು ಇವುಗಳಿಂದ ಉತ್ಪನ್ನವಾಗಿದ್ದ ಹಾಗೂ ಕಂಡಲ್ಲಿ ಸುರಿದಿದ್ದ ತ್ಯಾಜ್ಯಗಳೇ ಕಾರಣವೆನಿಸಿದ್ದವು. 

ಅನೇಕ ದೇಶಗಳಲ್ಲಿ ಕಟ್ಟಡಗಳನ್ನು ಧ್ವಂಸಗೊಳಿಸಿದ ಸಂದರ್ಭಗಳಲ್ಲಿ ಲಭಿಸುವ ಇಟ್ಟಿಗೆ, ಕಲ್ಲು ಮತ್ತು ಕಾಂಕ್ರೀಟ್ ಗಳನ್ನು ಹುದಿಮಾಡಿದ ಬಳಿಕ ನೂತನ ರಸ್ತೆಗಳ ನಿರ್ಮಾಣದಲ್ಲಿ ಇವುಗಳನ್ನು ಬಳಸಲಾಗುತ್ತಿದೆ. ಇತರ ದೇಶಗಳು ತ್ಯಾಜ್ಯಗಳನ್ನು ಬಳಸಿ ನೂತನ ರಸ್ತೆಗಳನ್ನು ನಿರ್ಮಿಸುವುದಾದಲ್ಲಿ, ಈ ವಿನೂತನ ವಿಧಾನವನ್ನು ಭಾರತದಲ್ಲಿ ಅನುಷ್ಠಾನಗೊಳಿಸುವುದು ಅಸಾಧ್ಯವೇನಲ್ಲ. ಇಂತಹ ಕ್ರಮಗಳಿಂದ ನಿರ್ಮಾಣ ಕಾಮಗಾರಿಗಳ ವೆಚ್ಚ ಕಡಿಮೆಯಾಗುವುದರೊಂದಿಗೆ, ನಿರುಪಯುಕ್ತ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಮತ್ತು ರಸ್ತೆಗಳ ಬದಿಗಳಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವ ಮೂಲಕ ರಸ್ತೆಗಳನ್ನೇ ಹಾಳುಗೆಡಹುವ ಕೆಟ್ಟ ಪದ್ದತಿಗೆ ವಿದಾಯ ಹೇಳುವುದು ಸುಲಭಸಾಧ್ಯವೆನಿಸುವುದು. 

ದೆಹಲಿಯ ಮುನಿಸಿಪಲ್ ಕಾರ್ಪೋರೇಶನ್ ಹೇಳುವಂತೆ, ಅಲ್ಲಿ ಪ್ರತಿನಿತ್ಯ ೪೦೦೦ ಟನ್ ಗಳಷ್ಟು ನಿರ್ಮಾಣ ಕಾಮಗಾರಿಗಳ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಅರ್ಥಾತ್, ವರ್ಷದಲ್ಲಿ ೧.೫ ದಶಲಕ್ಷ ಟನ್ ತ್ಯಾಜ್ಯಗಳು ದೇಶದ ರಾಜಧಾನಿಯೊಂದರಲ್ಲೇ ಉತ್ಪನ್ನವಾಗುತ್ತಿವೆ!. ಈ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡಿದಲ್ಲಿ, ಅಲ್ಲಿನ ಲ್ಯಾಂಡ್ ಫಿಲ್ ಸೈಟ್ ಗಳ ಆಯುಷ್ಯ ಇನ್ನಷ್ಟು ಹೆಚ್ಚುತ್ತದೆ. ಇದರೊಂದಿಗೆ ಸ್ಥಳೀಯ ರಸ್ತೆಗಳ ನವೀಕರಣ- ಪುನರ್ ನಿರ್ಮಾಣದ ಕಾಮಗಾರಿಗಳ ವೆಚ್ಚ ಸಾಕಷ್ಟು ಕಡಿಮೆಯಾಗುವುದರಿಂದ, ಇನ್ನಷ್ಟು ರಸ್ತೆಗಳನ್ನು ನಿರ್ಮಿಸಬಹುದಾಗಿದೆ. 

ಹೆಚ್ಚುತ್ತಿರುವ ನಿರ್ಮಾಣ ಕಾಮಗಾರಿಗಳು 

ನಿರಂತರ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ, ನಾವು ನಿರ್ಮಿಸುತ್ತಿರುವ ವಸತಿ- ವಾಣಿಜ್ಯ ಕಟ್ಟಡಗಳ, ರಸ್ತೆ, ಸೇತುವೆ, ಫ್ಲೈ ಓವರ್, ಸಬ್ ವೇ ಇತ್ಯಾದಿಗಳ ನಿರ್ಮಾಣಗಳೂ ಶರವೇಗದಲ್ಲಿ ಸಾಗುತ್ತಿವೆ. ಜನಸಂಖ್ಯೆ ಇನ್ನಷ್ಟು ಹೆಚ್ಚಿದಂತೆ ಇವುಗಳ ಬೇಡಿಕೆಯೂ ಇನ್ನಷ್ಟು ಹೆಚ್ಚಲಿದೆ. ತತ್ಪರಿಣಾಮವಾಗಿ ಇವುಗಳಿಂದ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿ ಹೆಚ್ಚಲಿದೆ. ಈ ತ್ಯಾಜ್ಯಗಳನ್ನು ನಾವು ಮರುಬಳಕೆ ಮಾಡದೇ ಇದ್ದಲ್ಲಿ, ಇವುಗಳನ್ನು ತುಂಬಿಸಲು ನಿರ್ಮಿಸಬೇಕಾದ ಲ್ಯಾಂಡ್ ಫಿಲ್ ಸೈಟ್ ಗಳ ಸಂಖ್ಯೆ ಅತಿಯಾಗಲಿದೆ. ಲಭ್ಯ ಮಾಹಿತಿಯಂತೆ ಪುರಸಭಾ ತ್ಯಾಜ್ಯಗಳಲ್ಲಿ ಶೇ. ೧೦ ರಿಂದ ೨೦ ರಷ್ಟಿರುವ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡದೇ ಇದ್ದಲ್ಲಿ, ಇದರಿಂದ ಉದ್ಭವಿಸಲಿರುವ ಗಂಭೀರ- ಅಪಾಯಕಾರಿ ಸಮಸ್ಯೆಗಳು ದೇಶದ ಪ್ರಗತಿಗೆ ಕಂಟಕವಾಗಿ ಪರಿಣಮಿಸಲಿವೆ. 

ಕೊನೆಯ ಮಾತು 

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಯಾದಿಯಲ್ಲಿರುವ ಅಮೆರಿಕ, ಇಂಗ್ಲೆಂಡ್, ಜಪಾನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳು ಈಗಾಗಲೇ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡುವ ಬಗ್ಗೆ ಅವಶ್ಯಕ ನಿಯಮಗಳನ್ನು ರೂಪಿಸಿವೆ. ಮಾತ್ರವಲ್ಲ, ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂದಿನ ತನಕ ಈ ರೀತಿಯ ನಿಯಮಗಳನ್ನು ರೂಪಿಸಿಲ್ಲ. ಏಕೆಂದರೆ ನಮ್ಮನ್ನಾಳುವವರಿಗೆ ಇಂತಹ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಲ್ಲ ಮತ್ತು ನೂತನ ನಿರ್ಮಾಣ ಕಾಮಗಾರಿಗಳ ವೆಚ್ಚವನ್ನು ಸಾಕಷ್ಟು ಕಡಿಮೆಮಾದಬಲ್ಲ ವಿಧಾನಗಳ ಬಗ್ಗೆ ಚಿಂತಿಸಲು ಸಮಯವೇ ಇಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


Thursday, January 23, 2014

Road safety week-11th to 17th jan.2014.


                           ರಸ್ತೆ ಸುರಕ್ಷತಾ ಸಪ್ತಾಹದ ಬೆಳ್ಳಿ ಹಬ್ಬ 
ಕಳೆದ ೨೫ ವರ್ಷಗಳಿಂದ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯವು ವರ್ಷಂಪ್ರತಿ ಜನವರಿ ತಿಂಗಳಿನಲ್ಲಿ  ರಸ್ತೆ ಸುರಕ್ಷಾ ಸಪ್ತಾಹವನ್ನು ಆಚರಿಸುತ್ತಾ ಬಂದಿದೆ. ಆದರೆ ನಮ್ಮದೇಶದಲ್ಲಿ  ಸಂಭವಿಸುತ್ತಿರುವ  ಅಪಘಾತಗಳ ಸಂಖ್ಯೆ ಮಾತ್ರ ದಿನೇದಿನೇ ಹೆಚ್ಚುತ್ತಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
-------------                  -----------------                  -------------------                     ------------                ------------

ಅನೇಕ ವರ್ಷಗಳಿಂದ ಭಾರತದಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹವನ್ನು ವರ್ಷಂಪ್ರತಿ ಆಚರಿಸಲಾಗುತ್ತಿದೆ. ದೇಶದ ಪ್ರತಿಯೊಂದು ರಾಜ್ಯಗಳಲ್ಲಿನ ಸಂಚಾರ ವಿಭಾಗದ ಆರಕ್ಷಕರು, ಸಾರಿಗೆ ಇಲಾಖೆ ಮತ್ತು ಅನೇಕ ಸ್ವಯಂಸೇವಾ ಸಂಘಟನೆಗಳು ಒಂದಾಗಿ ಆಚರಿಸುವ ಈ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಆರಕ್ಷಕರೊಂದಿಗೆ,  ಹೆಚ್ಚಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಮತ್ತು ಇತರ ಕೆಲ ಸಂಘಟನೆಗಳ ಕಾರ್ಯಕರ್ತರು ಮಾತ್ರ ಭಾಗವಹಿಸುತ್ತಾರೆ. ಕಳೆದ ೨೫ ವರ್ಷಗಳಿಂದ ಈ ಕಾರ್ಯಕ್ರಮವನ್ನು ನಾವು ನಡೆಸುತ್ತಿದ್ದರೂ,ರಸ್ತೆ ಅಪಘಾತಗಳ ಪ್ರಮಾಣ ಇನ್ನಷ್ಟು ಹೆಚ್ಚುತ್ತಿರುವುದು ರಸ್ತೆ ಅಪಘಾತಗಳನ್ನು ತಡೆಗಟ್ಟುವಲ್ಲಿ  ನಮ್ಮ ಇಚ್ಛಾಶಕ್ತಿಯ ಕೊರತೆಯನ್ನು ತೋರುತ್ತದೆ. 

ಈ ಸಪ್ತಾಹದ ಸಂದರ್ಭದಲ್ಲಿ ಪ್ರತಿಯೊಂದು ನಗರ- ಪಟ್ಟಣಗಳ ಬೀದಿಬೀದಿಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸುವ ಅಥವಾ ಕರಪತ್ರಗಳನ್ನು ಮುದ್ರಿಸಿ ಹಂಚುವ ಪರಿಪಾಠವನ್ನು ತಪ್ಪದೇ ಪರಿಪಾಲಿಸಲಾಗುತ್ತದೆ. ಆದರೆ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನುಷ್ಠಾನಿಸಬೇಕಾದ ಅನೇಕ ವಿಚಾರಗಳನ್ನು ಮಾತ್ರ ಅನುಕೂಲಕರವಾಗಿ ಮರೆತುಬಿಡಲಾಗುತ್ತಿದೆ!. 

ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಹ್ವಾನಿತ ಗಣ್ಯರು, ಸಾಮಾನ್ಯವಾಗಿ ಸಾರಿಗೆ ನಿಯಮಗಳನ್ನು ಪರಿಪಾಲಿಸಬೇಕಾದ ಮತ್ತು ಈ ಬಗ್ಗೆ ಜನಸಮಾನ್ಯರಲ್ಲಿ ಅರಿವು ಮೂಡಿಸಬಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಮತ್ತು ತತ್ಪರಿಣಾಮವಾಗಿ ಸಂಭವಿಸುವ ಮರಣಗಳ ಪ್ರಮಾಣವನ್ನು ನಿಯಂತ್ರಿಸುವ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ಇಂತಹ ಭಾಷಣಗಳು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗುತ್ತಿದ್ದಲ್ಲಿ, ನಮ್ಮ ದೇಶದ ಜನತೆಯನ್ನು ಕಾಡುತ್ತಿರುವ ನೂರಾರು ಸಮಸ್ಯೆಗಳು ಕ್ಷಣಮಾತ್ರದಲ್ಲಿ ಪರಿಹಾರಗೊಲ್ಲುತ್ತಿದ್ದುದರಲ್ಲಿ ಸಂದೇಹವಿಲ್ಲ!

ರಸ್ತೆ ಅಪಘಾತಗಳ ರಾಜಧಾನಿ 

ಭಾರತವು ವಿಶ್ವದ ರಸ್ತೆ ಅಪಘಾತಗಳ ರಾಜಧಾನಿ ಎಂದು ಕರೆಸಿಕೊಳ್ಳಲು ಸಮರ್ಥನೀಯ ಕಾರಣಗಳೂ ಇವೆ. ಇವುಗಳಲ್ಲಿ ನಮ್ಮ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆ ಅತ್ಯಧಿಕವಾಗಿರುವುದರೊಂದಿಗೆ, ಇದರಿಂದಾಗಿ ಘಟಿಸುವ ಮರಣಗಳ ಪ್ರಮಾಣವೂ ಅತ್ಯಧಿಕವಾಗಿರುವುದು ಪ್ರಮುಖ ಕಾರಣವೆನಿಸಿದೆ. ಭಾರತದಲ್ಲಿ ಪ್ರತಿ ಗಂಟೆಗೆ ಸುಮಾರು ೧೫ ರಿಂದ ೨೦ ಜನರು ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಾರೆ. ಅರ್ಥಾತ್, ಒಂದು ವರ್ಷದಲ್ಲಿ ಸರಿ ಸುಮಾರು ೧,೪೦,೦೦೦ ಜನರು ಅಪಘಾತಗಳಲ್ಲಿ ಮೃತಪಡುವುದರೊಂದಿಗೆ, ಇದಕ್ಕೂ ಅಧಿಕ ಸಂಖ್ಯೆಯ ಜನರು ಶಾಶ್ವತ ಅಂಗವೈಕಲ್ಯಗಳಿಗೆ ಈಡಾಗುತ್ತಿದ್ದಾರೆ. 

ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನವೊಂದರ ವರದಿಯಂತೆ ಭಾರತದಲ್ಲಿ ಸಂಭವಿಸುವ ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ಮರಣದ ಪ್ರಮಾಣವು ಶೇ. ೩೨ ರಷ್ಟಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕವೆನಿಸಿದೆ. ಇದೇ ವರದಿಯಲ್ಲಿ ಉಲ್ಲೇಖಿಸಿರುವಂತೆ ನಮ್ಮ ದೇಶದಲ್ಲಿ ಶೇ. ೫೦ ರಷ್ಟು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದಲ್ಲಿ, ಶೇ. ೧೦ ರಷ್ಟು ಚತುಷ್ಚಕ್ರ ವಾಹನ ಸವಾರರು ಸೀಟ್ ಬೆಲ್ಟ್ ಧರಿಸುತ್ತಾರೆ!. ರಸ್ತೆ ಅಪಘಾತಗಳಲ್ಲಿ ಮರಣದ ಪ್ರಮಾಣ ಹೆಚ್ಚಲು ಇದೊಂದು ಪ್ರಮುಖ ಕಾರಣವೂ ಹೌದು. 

ಅಂತೆಯೇ ಅತಿವೇಗದ ವಾಹನ ಚಾಲನೆ, ಮದ್ಯ ಅಥವಾ ಅಮಲು ಪದಾರ್ಥಗಳನ್ನು ಸೇವಿಸಿ ವಾಹನ ಚಲಾಯಿಸುವುದು, ವಾಹನ ಚಾಲನೆಯಲ್ಲಿ ಪರಿಣತಿ ಇಲ್ಲದಿದ್ದರೂ ವಾಹನ ಚಲಾಯಿಸುವುದು, ಸಾರಿಗೆ ನಿಯಮಗಳನ್ನು ನಿರ್ಲಕ್ಷಿಸುವುದು, ದ್ವಿಚಕ್ರ ವಾಹನದಲ್ಲಿ ಮೂರು ಅಥವಾ ನಾಲ್ಕು ಮಂದಿ ಪ್ರಯಾಣಿಸುವುದು, ಇತರ ವರ್ಗದ ವಾಹನಗಳಲ್ಲೂ ನಿಗದಿತ ಸಂಖ್ಯೆಗಿಂತ ಅಧಿಕ ಸವಾರರನ್ನು ತುಂಬಿಸುವುದು, ಲಾರಿಗಳಲ್ಲಿ ಜನರನ್ನು ಸಾಗಿಸುವುದು, ಖಾಸಗಿ ಮತ್ತು ಸರಕಾರಿ ಸಾರಿಗೆ ವಾಹನಗಳ ನಡುವೆ ಪೈಪೋಟಿ, ಕಣ್ಣು ಕೋರೈಸುವ ವಾಹನಗಳ ದೀಪಗಳ ಹಾವಳಿ, ದುಸ್ಥಿತಿಯಲ್ಲಿರುವ ರಸ್ತೆಗಳು, ಅಲೆಮಾರಿ ಜಾನುವಾರುಗಳ ಬಾಧೆ, ವೃತ್ತಿಪರ ಚಾಲಕರು ಸಾಕಷ್ಟು ವಿರಾಮವಿಲ್ಲದೇ ವಾಹನಗಳನ್ನು ಚಲಾಯಿಸುವುದು, ಯಾವುದೇ ಸೂಚನೆಯನ್ನು ನೀಡದೇ ಹಠಾತ್ ವಾಹನಗಳನ್ನು ನಿಲ್ಲಿಸುವುದು ಅಥವಾ ತಿರುಗಿಸುವುದು, ದೃಷ್ಟಿ ದೋಷವಿರುವ ಹಾಗೂ ಇದನ್ನು ಸರಿಪಡಿಸಿಕೊಳ್ಳದೇ ವಾಹನ ಚಲಾಯಿಸುವುದು, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಇತ್ಯಾದಿ ಕಾರಣಗಳಿಂದಾಗಿ ರಸ್ತೆ ಅಪಘಾತಗಳ ಪ್ರಮಾಣವು ದಿನೇದಿನೇ ಹೆಚ್ಚುತ್ತಿದೆ.

ನಿಯಂತ್ರಿಸುವುದು ಹೇಗೆ?

ವಾಹನ ಚಾಲನಾ ಪರವಾನಿಗೆಯನ್ನು ನೀಡುವ ಮುನ್ನ ಚಾಲಕರನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸುವುದು, ಪ್ರತಿಯೊಂದು ನಗರ- ಪಟ್ಟಣಗಳಲ್ಲಿ ಸಂಚಾರ ವಿಭಾಗದ ಆರಕ್ಷಕರಿಂದ ನಿಯಮಿತವಾಗಿ ವಾಹನಗಳ ತಪಾಸಣೆಯನ್ನು ಮಾಡಿಸುವ ಮೂಲಕ ಪರವಾನಿಗೆಯಿಲ್ಲದೇ ಅಥವಾ ಮದ್ಯ- ಮಾದಕ ದ್ರವ್ಯ ಸೇವಿಸಿ ಚಾಲನೆ ಮಾಡುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮಗಳನ್ನು ಜರಗಿಸುವುದು, ಸಂಚಾರ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವುದು ಮತ್ತು ಇವರ ಪರವಾನಿಗೆಯನ್ನು ಅಮಾನತುಗೊಳಿಸುವುದು, ರಸ್ತೆ ಅಪಘಾತಗಳು ಸಂಭವಿಸಿದಾಗ ಇದರ ಕಾರಣವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವುದೇ ಮುಂತಾದ ಕ್ರಮಗಳನ್ನು ಸಂಬಂಧಿತ ಇಲಾಖೆಗಳು ಅನುಷ್ಠಾನಿಸಿದಲ್ಲಿ, ನಮ್ಮ ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳ ಸಂಖ್ಯೆ, ಇವುಗಳಿಂದ ಸಂಭವಿಸುವ ಮರಣಗಳ ಮತ್ತು ಶಾಶ್ವತ ಅಂಗವೈಕಲ್ಯಗಳ ಪ್ರಮಾಣಗಳನ್ನು ಕಡಿಮೆಮಾಡುವುದು ಸಾಧ್ಯ. ಆದರೆ ಇವೆಲ್ಲಕ್ಕೂ ಮಿಗಿಲಾಗಿ ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವ ಪ್ರತಿಯೊಬ್ಬ ಚಾಲಕರೂ ಸಂಚಾರ ನಿಯಮಗಳನ್ನು ಪರಿಪಾಲಿಸಿದಲ್ಲಿ, ಭಾರತವನ್ನು " ವಿಶ್ವದ ರಸ್ತೆ ಅಪಘಾತಗಳ ರಾಜಧಾನಿ " ಪಟ್ಟದಿಂದ ಕೆಳಗಿಳಿಸುವುದು ಅಸಾಧ್ಯವೇನಲ್ಲ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  

Wednesday, January 22, 2014

EPILEPSY_ APASMARA



                       ಅಪವಾದ ತರಬಲ್ಲ ಅಪಸ್ಮಾರ 

ಅನಾದಿಕಾಲದಿಂದ ಭಾರತೀಯರಲ್ಲಿ ಅಪಸ್ಮಾರ ವ್ಯಾಧಿಯ ಬಗ್ಗೆ ಅನೇಕ ತಪ್ಪುಕಲ್ಪನೆಗಳಿವೆ. ಆದರೆ ವಿಶ್ವವಿಖ್ಯಾತ ವ್ಯಕ್ತಿಗಳಾಗಿದ್ದ ಸಾಕ್ರೆಟಿಸ್, ಅಲೆಕ್ಸಾಂಡರ್ ಚಕ್ರವರ್ತಿ, ಜೂಲಿಯಸ್ ಸೀಸರ್,ಪೈಥಾಗರಸ್, ಚಾರ್ಲ್ಸ್ ನ್ಯೂಟನ್, ಚಾರ್ಲ್ಸ್ ಡಿಕೆನ್ಸ್, ವಿನ್ಸೆಂಟ್ ವಾನ್ ಗಾಗ್ ಮತ್ತು ಗುತಮ ಬುದ್ಧರಂತಹ ಮಹಾ ಮೇಧಾವಿಗಳ ಮಹೋನ್ನತ ಸಾಧನೆಗಳಿಗೆ ಅಪಸ್ಮಾರವು ಎಂದೂ ತೊಡಕಾಗಿರಲಿಲ್ಲ ಎನ್ನುವ ಸತ್ಯವೂ ಭಾರತೀಯರಿಗೆ ತಿಳಿದಿಲ್ಲ!. ಇದರೊಂದಿಗೆ ಖ್ಯಾತ ಕ್ರಿಕೆಟಿಗರಾದ ಟೋನಿ ಗ್ರೆಗ್, ಜಾಂಟಿ ರೋಡ್ಸ್ ಇವರಿಬ್ಬರೂ ಅಪಸ್ಮಾರ ಪೀಡಿತರೆಂದಲ್ಲಿ ಪ್ರಾಯಶಃ ನೀವೂ ನಂಬಲಾರಿರಿ. ಅಪಸ್ಮಾರ ಪೀಡಿತರು ಸೂಕ್ತ ಚಿಕಿತ್ಸೆ ಮತ್ತು ಶಿಸ್ತುಬದ್ಧ ಜೀವನಶೈಲಿಯಿಂದ ಆರೋಗ್ಯಕರ ಮತ್ತು ಸ್ವಾಭಾವಿಕ ಜೀವನ ನಡೆಸಲು ಸಾಧ್ಯ ಎನ್ನುವುದನ್ನು ಮರೆಯದಿರಿ. 
----------              ----------------                   ---------------                 ---------------                  

 ಸಹಸ್ರಾರು ವರ್ಷಗಳ ಹಿಂದೆ ಆಯುರ್ವೇದ ಶಾಸ್ತ್ರದಲ್ಲಿ ವಿಸ್ತ್ರತವಾಗಿ ಉಲ್ಲೇಖಿಸಲ್ಪಟ್ಟಿರುವ "ಅಪಸ್ಮಾರ" ಎನ್ನುವ ಕಾಯಿಲೆಯನ್ನು ಜನಸಾಮಾನ್ಯರು ಆಡುಭಾಷೆಯಲ್ಲಿ ಮೂರ್ಛೆ ರೋಗ, ಮಲರೋಗ ಅಥವಾ ಫಿಟ್ಸ್ ಎಂದು ಕರೆಯುತ್ತಾರೆ. ಕೆಲವೇ ವರ್ಷಗಳ ಹಿಂದಿನ ತನಕ ಗ್ರಾಮೀಣ ಜನರು ಮಾಟ - ಮಂತ್ರ ಅಥವಾ ಭೂತ- ಪ್ರೇತಗಳ ಬಾಧೆಯಿಂದಾಗಿ ಬರುವುದೆಂದು ನಂಬಿದ್ದ ಈ ವ್ಯಾಧಿಯ ಬಗ್ಗೆ ಅನೇಕ ವಿದ್ಯಾವಂತರ ಮನಗಳಲ್ಲೂ ಸಾಕಷ್ಟು ತಪ್ಪುಕಲ್ಪನೆಗಳಿವೆ.

ಈ ವ್ಯಾಧಿಪೀಡಿತವ್ಯಕ್ತಿಯ ಸ್ವಪ್ರತಿಷ್ಠೆ ಹಾಗೂ ಸಾಮಾಜಿಕ ಸ್ಥಾನಮಾನಗಳಿಗೆ ಚ್ಯುತಿ ಉಂಟಾಗಬಹುದೆಂಬ ಭಾವನೆಯಿಂದ, ಕೀಳರಿಮೆಗೆ ಕಾರಣವೆನಿಸಬಲ್ಲ ಈ ವಿಶಿಷ್ಟ ಕಾಯಿಲೆಯನ್ನು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯಿಂದ ಹತೋಟಿಯಲ್ಲಿ ಇರಿಸುವುದು ಸುಲಭಸಾಧ್ಯ. 

ಅಪಸ್ಮಾರ ಎಂದರೇನು?

ಮನುಷ್ಯನ ಮೆದುಳಿನ ಕಾರ್ಯಕ್ಷಮತೆ ಹಾಗೂ ಪ್ರಜ್ಞಾವಸ್ಥೆಗಳಲ್ಲಿ ಆಕಸ್ಮಿಕವಾಗಿ ಸಂಭವಿಸಬಲ್ಲ ವ್ಯತ್ಯಯಗಳಿಂದಾಗಿ ಅಪಸ್ಮಾರ ಉದ್ಭವಿಸುತ್ತದೆ. ಈ ಸಂದರ್ಭದಲ್ಲಿ ಮೆದುಳಿನಿಂದ ಬಿಡುಗಡೆಯಾಗುವ ನ್ಯೂರಾನ್ ಗಳ ಪ್ರಮಾಣವು ಮಿತಿಮೀರುವುದರೊಂದಿಗೆ, ಕ್ಷಿಪ್ರಗತಿಯಿಂದ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ಅಪಸ್ಮಾರದ "ಸೆಳೆತ" (Convulsions- fits) ಗಳು ಪ್ರತ್ಯಕ್ಷವಾಗುತ್ತವೆ. 

ಆರೋಗ್ಯವಂತ ವ್ಯಕ್ತಿಗಳ ಮೆದುಳಿನಲ್ಲೂ ಸಾಮಾನ್ಯವಾಗಿ ಸೂಕ್ಷ್ಮ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತದೆ. ನಿಯಮಿತ ಪ್ರಮಾಣದಲ್ಲಿ ಉತ್ಪನ್ನವಾಗುವ ಈ ವಿದ್ಯುತ್ ಪ್ರವಾಹದ ನೆರವಿನಿಂದ ಮೆದುಳಿನ ಕಣಗಳು ನಮ್ಮ ದೇಹದ ವಿವಿಧರೀತಿಯ ನಿಯಂತ್ರಣ ಕ್ರಿಯೆಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತವೆ. 

ಕಾರಣಾಂತರಗಳಿಂದ ಆಗಾಗ ಮರುಕಳಿಸುತ್ತಿರುವ ಅಪಸ್ಮಾರದಲ್ಲಿ ರೋಗಿಯ ಮೆದುಳಿನ ಕಾರ್ಯಕ್ಷಮತೆ ಹಾಗೂ ಪ್ರಜ್ಞಾವಸ್ಥೆಯಲ್ಲಿ ಕೆಲವಾರು ನಿಮಿಷಗಳ ವ್ಯತ್ಯಯ ಕಂಡುಬರಬಹುದು. ಬಹುತೇಕ ಅಪಸ್ಮಾರ ರೋಗಿಗಳಲ್ಲಿ ಈ ವ್ಯಾಧಿ ಉದ್ಭವಿಸಲು ನಿರ್ದಿಷ್ಟ ಕಾರಣಗಳನ್ನು ನಿಖರವಾಗಿ ಗುರುತಿಸುವುದು ಅಥವಾ ಪತ್ತೆಹಚ್ಚುವುದು ಅಸಾಧ್ಯವೂ ಹೌದು. ಅಪಸ್ಮಾರ ಪೀಡಿತ ಕುಟುಂಬಕ್ಕೆ ಸೇರಿದ ಮಕ್ಕಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಅಪಸ್ಮಾರದ ಸಮಸ್ಯೆಯೇ ಇಲ್ಲದ ಕುಟುಂಬಗಳ ಮಕ್ಕಳಲ್ಲೂ ಇದು ಪ್ರತ್ಯಕ್ಷವಾಗುವ ಸಾಧ್ಯತೆಗಳಿವೆ. 

ಮೆದುಳಿಗೆ ಸಂಬಂಧಿಸಿದ ಕೆಲವ್ಯಾಧಿಗಳಲ್ಲಿ ಅಪಾಯದ ಸಂಕೇತವಾಗಿ ಹಾಗೂ ರೋಗ ಲಕ್ಷಣದ ರೂಪದಲ್ಲಿ ಅಪಸ್ಮಾರದಂತಹ "ಸೆಳೆತ"ಗಳು ಬಾಧಿಸಬಹುದು. ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಆಕಸ್ಮಿಕ ಹಾಗೂ ತೀವ್ರವಾಗಿ ಕುಸಿದಾಗ, ವಿಪರೀತ ಮದ್ಯಪಾನದ ಚಟವಿದ್ದವರು ತಮ್ಮ ಚಟವನ್ನು ಹಠಾತ್ ನಿಲ್ಲಿಸಿದಾಗ, ಮೂತ್ರಾಂಗಗಳಿಗೆ ಸಂಬಂಧಿಸಿದ ಗಂಭೀರ ವ್ಯಾಧಿಗಳ ಪರಿಣಾಮವಾಗಿ ಸಂಭವಿಸುವ "ಯುರೇಮಿಯ" ಎನ್ನುವ ಸ್ಥಿತಿಯಲ್ಲಿ ಹಾಗೂ "ಹೃದಯದ ತಡೆ"ಯಂತಹ ಸ್ಥಿತಿಯಲ್ಲೂ, ಅಪಸ್ಮಾರದಂತಹ ಸೆಳೆತಗಳು ಪ್ರತ್ಯಕ್ಷವಾಗುವ ಸಾಧ್ಯತೆಗಳಿವೆ.ಅಂತೆಯೇ ವಿವಿಧ ವ್ಯಾಧಿಗಳ ಪ್ರಮುಖ ಲಕ್ಷಣವಾಗಿ ಕಂಡುಬರುವ "ಜ್ವರ" ವು ಅನಿಯಂತ್ರಿತವಾಗಿ ಹೆಚ್ಚಿದಾಗ ಅನೇಕ ಮಕ್ಕಳಲ್ಲಿ ಸೆಳೆತಗಳು ಉದ್ಭವಿಸುವುದು ಅಪರೂಪವೇನಲ್ಲ. ಇವೆಲ್ಲಾ ಕಾರಣಗಳಿಂದಾಗಿ "ನೈಜ ಅಪಸ್ಮಾರ" ವನ್ನು ನಿಖರವಾಗಿ ಪತ್ತೆಹಚ್ಚಿ ಚಿಕಿತ್ಸೆ ಪಡೆಯಲು, ನಿಮ್ಮ ಕುಟುಂಬ ವೈದ್ಯರ ಬಳಿ ಚರ್ಚಿಸಿ ನರರೋಗ ತಜ್ಞರ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಹಿತಕರ. 

ಅಪಸ್ಮಾರ ವ್ಯಾಧಿಯಲ್ಲಿ ವಿವಿಧ ಪ್ರಭೇದಗಳಿದ್ದು, ಇವುಗಳ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಎಲೆಕ್ಟ್ರೋ ಏನ್ ಸೆಫೆಲೋಗ್ರಾಂ ಎನ್ನುವ ಉಪಕರಣದ ಮೂಲಕ ರೋಗಿಯೋರ್ವನಿಗೆ ಯಾವ ಪ್ರಭೇದದ ಅಪಸ್ಮಾರ ಇದೇ ಎನ್ನುವುದನ್ನು ನಿಖರವಾಗಿ ಗುರುತಿಸಬಹುದು. ಆದರೆ ಜನಸಾಮಾನ್ಯರಿಗೆ ಈ ಬಗ್ಗೆ ಪ್ರಾಥಮಿಕ ಮಾಹಿತಿಯ ಅವಶ್ಯಕತೆ ಇಲ್ಲದ ಕಾರಣದಿಂದಾಗಿ ಈ ಲೇಖನದಲ್ಲಿ ಇದರ ಬಗ್ಗೆ ವಿವರಿಸಿಲ್ಲ. 

ಅಪಸ್ಮಾರದ ಲಕ್ಷಣಗಳು 

ಅಪಸ್ಮಾರದ ವಿವಿಧ ಪ್ರಭೇದಗಳಿಗೆ ಅನುಗುಣವಾಗಿ ವಿಭಿನ್ನ ಲಕ್ಷಣಗಳು ಕಂಡುಬರುತ್ತವೆ. ಆದರೆ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಇಂತಿವೆ. 

ಸಾಮಾನ್ಯ ಅಪಸ್ಮಾರದ ರೋಗಿಗಳಲ್ಲಿ ಕೈಕಾಲುಗಳು ನಡುಗುವುದು ಅಥವಾ ಝುಮ್ ಎನಿಸುವುದು, ಶರೀರದಲ್ಲಿ ವಿದ್ಯುತ್ ಪ್ರವಹಿಸಿದಂತಹ ಸಂವೇದನೆ, ಏನೆನ್ನೋ ಕಂಡಂತೆ- ಪ್ರಖರವಾದ ಬೆಳಕು ಝಗಝಗಿಸಿದಂತೆ - ಶಬ್ದ ಕೇಳಿಸಿದಂತೆ ಹಾಗೂ ಅಕಾರಣವಾಗಿ ತೀವ್ರ ಭಯಪೀಡಿತರಾದಂತೆ ಮತ್ತು ಕೆಲವರಿಗೆ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡಿದಂತೆ ಅನಿಸುವುದೇ ಮುಂತಾದ ಅನುಭವ ಇತ್ಯಾದಿ ಲಕ್ಷಣಗಳು ಕಂಡುಬರುವುದುಂಟು. 

ಸಂಕೀರ್ಣ ಅಪಸ್ಮಾರದಲ್ಲಿ ರೋಗಿಯು ಗೊಂದಲಕ್ಕೆ ಒಳಗಾದಂತೆ ವರ್ತಿಸುವುದು, ತನ್ನಷ್ಟಕ್ಕೆ ತಾನೇ ಗೊಣಗುತ್ತುವುದು, ಮೈಮೇಲಿನ ಬಟ್ಟೆಗಳನ್ನು ಎಳೆದಾಡುವುದು- ಹರಿಯುವುದು ಹಾಗೂ ಬಾಯಿ ಚಪ್ಪರಿಸುವುದೇ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲರೋಗಿಗಳಂತೂ ಕ್ಷಣಮಾತ್ರದಲ್ಲಿ ನೆಲಕ್ಕುರುಳಿ, ಕೈಕಾಲುಗಳನ್ನು ಸೆಟೆದುಕೊಳ್ಳುತ್ತಾ, ಹಲ್ಲುಗಳನ್ನು ಕಡಿಯುತ್ತಾ , ಬಾಯಿಯಿಂದ ಜೊಲ್ಲು- ನೊರೆಯನ್ನು ಸುರಿಸಿ ಒಂದೆರಡು ಕ್ಷಣಗಳಲ್ಲೇ ಪ್ರಜ್ಞಾಹೀನರಾಗುತ್ತಾರೆ. ಈ ಸಂದರ್ಭದಲ್ಲಿ ರೋಗಿ ತನ್ನ ನಾಲಗೆಯನ್ನು ಕಚ್ಚಿದಲ್ಲಿ ತೀವ್ರ ರಕ್ತಸ್ರಾವ ಸಂಭವಿಸುವ ಸಾಧ್ಯತೆಗಳಿವೆ. ಇಂತಹ ಲಕ್ಷಣಗಳೊಂದಿಗೆ ಕೆಲರೋಗಿಗಳು ತಮಗರಿವಿಲ್ಲದೇ ಮಲಮೂತ್ರಗಳನ್ನು ವಿಸರ್ಜಿಸುವುದು ಅಪರೂಪವೇನಲ್ಲ. 

ಸ್ಟೇಟಸ್ ಎಪಿಲೆಪ್ತಿಕಸ್ ಎನ್ನುವ ಗಂಭೀರ ಸ್ಥಿತಿಯಲ್ಲಿ, ಅಪಸ್ಮಾರದ ಸೆಳೆತಗಳು ತಾವಾಗಿ ಶಮನಗೊಳ್ಳದೇ, ತುಸು ದೀರ್ಘಕಾಲ ಬಾಧಿಸುವುದರಿಂದ, ರೋಗಿಯ ಪ್ರಾಣಕ್ಕೆ ಸಂಚಕಾರ ಬರುವುದುಂಟು. ಇಂತಹ ರೋಗಿಗಳಲ್ಲಿ ಅನ್ಯಥಾ ಕಾಲಹರಣ ಮಾಡದೇ, ತತ್ ಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡುವುದು ಪ್ರಾಣರಕ್ಷಕ ಎನಿಸುವುದು.  

ಚಿಕಿತ್ಸೆ 

ಅಪಸ್ಮಾರ ಪೀಡಿತ ವ್ಯಕ್ತಿಗಳಿಗೆ ಅತ್ಯವಶ್ಯಕವಾದ ಔಷದಗಳೊಂದಿಗೆ, ಸಾಮಾಜಿಕ ಹಾಗೂ ಮಾನಸಿಕ ಆರೈಕೆಯನ್ನು ನೀಡಲು ಇವರ ಬಂಧುಮಿತ್ರರ ಸಹಕಾರ ಅನಿವಾರ್ಯವೆನಿಸುತ್ತದೆ.ದೈನಂದಿನ ಜೀವನದಲ್ಲಿ ಇಂತಹ ವ್ಯಕ್ತಿಗಳನ್ನು ಪ್ರತ್ಯೆಕವಾಗಿರಿಸಿದಲ್ಲಿ ಅಥವಾ ಸಂದೇಹದ ದೃಷ್ಟಿಯಿಂದ ನೋಡಿದಲ್ಲಿ ಚಿಕಿತ್ಸೆ ವಿಫಲವಾಗುವ ಸಾಧ್ಯತೆಗಳಿವೆ. 

ಅಪಸ್ಮಾರದ ಚಿಕಿತ್ಸೆಯ ಪ್ರಾಥಮಿಕ ಉದ್ದೇಶವು ಈ ವ್ಯಾಧಿಯನ್ನು ಮತ್ತೆ ಮರುಕಳಿಸದಂತೆ ತಡೆಗಟ್ಟುವ ವಿಧಾನವೇ ಹೊರತು ಇದನ್ನು ಶಾಶ್ವತವಾಗಿ ಗುಣಪಡಿಸುವ ಮಾರ್ಗವಲ್ಲ ಎನ್ನುವುದು ಬಹುತೇಕ ವಿದ್ಯಾವನ್ತರಿಗೂ ತಿಳಿದಿಲ್ಲ. 

ರೋಗಪೀಡಿತ ವ್ಯಕ್ತಿಗಳಿಗೆ ಚಿಕಿತ್ಸೆಯನ್ನು ನೀಡುವ ಮೊದಲು ನರರೋಗ ತಜ್ಞರು ಎಲೆಕ್ಟ್ರೋ ಎನ್  ಸೆಫಲೋ ಗ್ರಾಮ್, ಸಿ. ಟಿ ಸ್ಕಾನ್,ಎಂ. ಆರ್.ಐ ಮತ್ತಿತರ ಕೆಲ ನಿರ್ದಿಷ್ಟ ಪರೀಕ್ಷೆಗಳನ್ನು ನಡೆಸುವರು. ತದನಂತರ ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ, ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಗಮನದಲ್ಲಿರಿಸಿ, ಅವಶ್ಯಕ ಔಷದಗಳನ್ನು ಸೂಚಿಸುವರು. ಈ ಸಂದರ್ಭದಲ್ಲಿ ರೋಗಿಯಲ್ಲಿ ಇರಬಹುದಾದ ಅನ್ಯ ಆರೋಗ್ಯದ ಸಮಸ್ಯೆಗಳಿಗೂ ಸೂಕ್ತ ಚಿಕಿತ್ಸೆಯನ್ನು ನೀಡಲೇಬೇಕಾಗುವುದು. 

ತಜ್ಞ ವೈದ್ಯರು ಸೂಚಿಸಿದ ಔಷದಗಳನ್ನು ಪ್ರತಿನಿತ್ಯ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಮತ್ತು ನಿಗದಿತ ಅವಧಿಗೆ ಸೇವಿಸಲೇಬೇಕು. ನಿಗದಿತ ಅವಧಿಗೆ ಮುನ್ನ ಔಷದಗಳ ಪ್ರಭಾವದಿಂದಾಗಿ ತನ್ನ ಅಪಸ್ಮಾರ ಗುಣವಾಗಿದೆ ಎನ್ನುವ ಭ್ರಮೆಯಿಂದ ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ, ವ್ಯಾಧಿಯು ಮತ್ತೆ ಮರುಕಳಿಸುವುದು. ಮಾತ್ರವಲ್ಲ, ಇದರಿಂದಾಗಿ ಚಿಕಿತ್ಸೆಯ ಅವಧಿಯೂ ಇನ್ನಷ್ಟು ದೀರ್ಘವಾಗುವುದು. 

ಸಾಮಾನ್ಯವಾಗಿ ಎರಡರಿಂದ ಐದು ವರ್ಷಗಳ ಕಾಲ ವೈದ್ಯರು ಸೂಚಿಸಿದಂತೆ ಸೇವಿಸಲೆಬೇಕಾಗಿರುವ ಔಷದಗಳನ್ನು ಮತ್ತೆ ವೈದ್ಯರ ಸಲಹೆಯಂತೆ ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ನಿಲ್ಲಿಸುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. ಆದರೆ ಕೆಲ ರೋಗಿಗಳಲ್ಲಿ ಜೀವನ ಪರ್ಯಂತ ಔಷದ ಸೇವನೆ ಅನಿವಾರ್ಯವೆನಿಸಬಲ್ಲದು. 

ಕಂಬಿ ಎಣಿಸುತ್ತಿರುವ ಅಪಸ್ಮಾರ ತಜ್ಞ!

ಭಾರತದ ಸುಪ್ರಸಿದ್ದ ಪತ್ರಿಕೆಗಳು- ಸಾಪ್ತಾಹಿಕಗಳಲ್ಲಿ "ನೀರಜ್ ಕ್ಲಿನಿಕ್" ಎನ್ನುವ ಹೆಸರಿನಲ್ಲಿ ನಿಯಮಿತವಾಗಿ ಪ್ರಕಟವಾಗುತ್ತಿದ್ದ ಜಾಹೀರಾತುಗಳನ್ನು ೨೦೦೪ ನೆ ಇಸವಿಯ ತನಕ ನೀವೂ ಕಂಡಿರಬಹುದು. ಕೇವಲ ಅಪಸ್ಮಾರ ವ್ಯಾಧಿಯನ್ನು ಮಾತ್ರ ಸಂಪೂರ್ಣವಾಗಿ ಗುಣಪಡಿಸುವ ಭರವಸೆ ನೀಡುತ್ತಿದ್ದ " ನಕಲಿ ವೈದ್ಯ" ನೋಬ್ಬನು, ಇತರ ಯಾವುದೇ ವ್ಯಾಧಿಗಳಿಗೆ ಚಿಕಿತ್ಸೆ ನೀಡುವುದಿಲ್ಲ ಅಂದು ತನ್ನ ಜಾಹೀರಾತಿನಲ್ಲಿ ನಮೂದಿಸುತ್ತಿದ್ದನು. ಈತ ನೀಡುತ್ತಿದ್ದ ಜಾಹೀರಾತುಗಳಲ್ಲಿ ಪ್ರಕಟಿಸಿದಂತೆ, ಹಿಮಾಲಯದ ತಪ್ಪಲಿನಿಂದ ಆಯ್ದು ತಂದ ಅಪರೂಪದ ಮೂಲಿಕೆಗಳಿಂದ ಸಿದ್ಧಪಡಿಸಿದ, ಈತನೇ ಸಂಶೋಧಿಸಿದ್ದ ಔಷದಗಳನ್ನು ಹಲವಾರು ವರ್ಷಗಳ ಕಾಲ ನಿರಂತರವಾಗಿ ಸೇವಿಸಿದಲ್ಲಿ, ಅಪಸ್ಮಾರವು ಸಂಪೂರ್ಣವಾಗಿ ಗುಣವಾಗುವುದೆಂದು ಭರವಸೆ ನೀಡಲಾಗುತ್ತಿತ್ತು. ಚಿಕಿತ್ಸೆಯ ಅಂಗವಾಗಿ ಈತನು ನೀಡುತ್ತಿದ್ದ ಮೂರು ತಿಂಗಳುಗಳ ಔಷದಿಗೆ ಈತನು ವಿಧಿಸುತ್ತಿದ್ದ ಶುಲ್ಕವು ಕೇವಲ ೬೦೦೦ ರೂಪಾಯಿಗಳು ಮಾತ್ರ!.  

ಸುಮಾರು ೧೪ ವರ್ಷಗಳ ಹಿಂದೆ ಅಂದರೆ ೨೦೦೧  ರಲ್ಲಿ ಈತನ ಖ್ಯಾತಿಯ ಬಗ್ಗೆ ಕೇಳಿ, ಚಿಕಿತ್ಸೆ ಪಡೆಯಲು ಬರುತ್ತಿದ್ದ ಸಹಸ್ರಾರು ರೋಗಿಗಳ ಸಾಲನ್ನು ಕಂಡು ನಿಬ್ಬೆರಗಾಗಿದ್ದ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು, ಈತನು ನೀಡುತ್ತಿದ್ದ ಔಷದಗಳನ್ನು ಸಂಗ್ರಹಿಸಲು ಯಶಸ್ವಿಯಾಗಿದ್ದರು, ಈ ಔಷದಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ, ಈ ನಕಲಿ ವೈದ್ಯನ ಗುಟ್ಟು ರಟ್ಟಾಗಿತ್ತು. 

ಕೆಲವಾರು ದಶಕಗಳಿಂದ ಆಧುನಿಕ ವೈದ್ಯಪದ್ದತಿಯ ವೈದ್ಯರು ತಮ್ಮ ಅಪಸ್ಮಾರ ರೋಗಿಗಳಿಗೆ ನೀಡುತ್ತಿದ್ದ ಹಾಗೂ ಕೇವಲ ೫೦ ಪೈಸೆ ಬೆಲೆಯಿದ್ದ "ಫಿನೋ ಬಾರ್ಬಿಟೋನ್" ಎನ್ನುವ ಔಷದವನ್ನು ಈತನ "ಮೂಲಿಕೆಗಳಿಂದ ಸಿದ್ಧಪಡಿಸಿದ ಔಷದ" ಗಳಲ್ಲಿ ಧಾರಾಳವಾಗಿ ಬೆರೆಸಲಾಗಿತ್ತು. ವಿಶೇಷವೆಂದರೆ ನಿಮ್ಮ ಕುಟುಂಬ ವೈದ್ಯರೂ ನೀಡಬಹುದಾದ ಈ ಮಾತ್ರೆಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ದಿನನಿತ್ಯ ಸೇವಿಸಿದಲ್ಲಿ, ಸುಮಾರು ಐದಾರು ವರ್ಷಗಳಲ್ಲಿ ಅಧಿಕತಮ ಅಪಸ್ಮಾರ ರೋಗಿಗಳು ಈ ಪೀಡೆಯಿಂದ ಮುಕ್ತರಾಗಿ ಸಾಮಾನ್ಯ ಜೀವನ ನಡೆಸಬಹುದು. 

ಹಲವಾರು ವರ್ಷಗಳ ಹಿಂದೆ ನಡೆಸಿದ್ದ ಈ ಕಾರ್ಯಾಚರಣೆಯ ವಿವರಗಳನ್ನು ಭಾರತದ ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸುವಂತೆ ಕೋರಿದ್ದ ಬಂಟ್ವಾಳದ ಡಾ. ಬಿ. ಏನ್.ಬಾಳಿಗ ಇವರ ಪ್ರಯತ್ನ ಸಫಲವಾಗಿರಲಿಲ್ಲ. ಯಾವುದೇ ಪತ್ರಿಕೆಗಳಾಗಲೀ ಅಥವಾ ಈ ಬಗ್ಗೆ ದ್ದೊರು ಸ್ವೀಕರಿಸಿದ್ದ ಔಷದ ನಿಯಂತ್ರಣ ಅಧಿಕಾರಿಯವರಾಗಲೀ , ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ, ಈ ನಕಲಿ ವೈದ್ಯನ ಧಂಧೆ ನಿರಾತಂಕವಾಗಿ ಸಾಗಿತ್ತು. 

ಅಂತಿಮವಾಗಿ ಅನಿವಾಸಿ ಭಾರತೀಯರೊಬ್ಬರು ನೀಡಿದ್ದ ದೂರಿನಂತೆ ಈತನನ್ನು ೨೦೦೪ ರ ಮಧ್ಯಭಾಗದಲ್ಲಿ ಬಂಧಿಸಲಾಗಿತ್ತು. ಲಕ್ಷಾಂತರ ರೂಪಾಯಿ ಆದಾಯ ತೆರಿಗೆಯನ್ನು ಪಾವತಿಸುತ್ತಿದ್ದ ಈ ಕೊಟ್ಯಾಧೀಶ್ವರನು, ತದನಂತರ ಜೈಲಿನ ಕಂಬಿಗಳನ್ನು ಎನಿಸುತ್ತಿದ್ದುದು ಮಾತ್ರ ಸತ್ಯ!. 

ಅಂತೆಯೇ ಅಪಸ್ಮಾರಕ್ಕೊಂದು ಆಯುರ್ವೇದ ಔಷದವೆಂದು "ಆಸ್ಬೆಸ್ಟೊಸ್ ಭಸ್ಮ" ಎನ್ನುವ ಔಷದವನ್ನು ಮಾರುತ್ತಿದ್ದ ಬೆಂಗಳೂರಿನ ವೈದ್ಯನೊಬ್ಬನಿಂದ ಚಿಕಿತ್ಸೆಯನ್ನು ಪಡೆದಿದ್ದ ನೂರಾರು ರೋಗಿಗಳು ಅಯಾಚಿತ ತೊಂದರೆಗಳಿಗೆ ಈಡಾಗಿದ್ದರು. ಈತನ ಮಾತನ್ನು ನಂಬಿ, ತಾವು ಸೇವಿಸುತ್ತಿದ್ದ ಅಪಸ್ಮಾರ ವ್ಯಾಧಿಯನ್ನು ನಿಯಂತ್ರಿಸುವ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿದ್ದ ರೋಗಿಗಳು ತೀವ್ರ ಅಪಸ್ಮಾರದಿಂದ ಬಳಲಬೇಕಾಗಿ ಬಂದಿತ್ತು. 

ಅದೇನೇ ಇರಲಿ, ಯಾವುದೇ ಕಾರಣಕ್ಕೂ ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರು ಮತ್ತು ಅವರ ಸೂಚನೆಯಂತೆ ನೀವು ಸಂದರ್ಶಿಸಿರುವ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ನಿಲ್ಲಿಸದಿರಿ. ನಕಲಿ ವೈದ್ಯರ ಪೊಳ್ಳು ಭರವಸೆಗಳಿಗೆ ಮರುಳಾಗಿ ನಿಮ್ಮ ಆರೋಗ್ಯ ಮತ್ತು ಹಣವನ್ನು ಕಳೆದುಕೊಂಡು ಪರಿತಪಿಸದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೦- ೦೨- ೨೦೦೫ ರ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  





Thursday, January 16, 2014

RENAL CALCULUS

    ಅಚ್ಚರಿ ಮೂಡಿಸಬಲ್ಲ ಮೂತ್ರಾಶ್ಮರಿ!


ಸಂಸ್ಕೃತ ಭಾಷೆಯಲ್ಲಿ “ಅಶ್ಮರಿ” ಎಂದರೆ ಕಲ್ಲು ಎಂದರ್ಥ. ಮಾನವನ ಮೂತ್ರಾಂಗಗಳಲ್ಲಿ ಉದ್ಭವಿಸಬಲ್ಲ ಅಶ್ಮರಿಗಳನ್ನುಸಹಸ್ರಾರು ವರ್ಷಗಳ ಹಿಂದೆಯೇ ಆಯುರ್ವೇದ ಸಂಹಿತೆಗಳಲ್ಲಿ “ಮೂತ್ರಾಶ್ಮರಿ" ಎಂದು ವಿಶದವಾಗಿ ವರ್ಣಿಸಲಾಗಿದೆ. ಅಚ್ಚರಿ ಮೂಡಿಸಬಲ್ಲ ಈ ಮೂತ್ರಾಶ್ಮರಿಯ ಬಗ್ಗೆ ನೀವು ತಿಳಿದಿರಲೇ ಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ.


ಎಂದಿನಂತೆಯೇ ರಾತ್ರಿಯ ವಾಕಿಂಗ್ ಮುಗಿಸಿ ಮನೆಗೆ ಮರಳಿದ ಅನಂತನಿಗೆ ತುಸು ಹೊತ್ತಿನ ಬಳಿಕ ಹೊಟ್ಟೆಯ ಬಲಭಾಗದಲ್ಲಿ ಚೂರಿಯಿಂದ ತಿವಿದಂತೆ ತೀವ್ರ ನೋವು ಪ್ರಾರಂಭವಾಗಿತ್ತು. ಸ್ನೇಹಿತನ ಜನ್ಮ ದಿನಾಚರಣೆಯ ಔತಣಕೂಟದಲ್ಲಿ ತಾನು ಸೇವಿಸಿದ ಮಧು- ಮಾಮ್ಸಗಲೇ ಈ ಹೊಟ್ಟೆನೋವಿಗೆ ಕಾರಣವೆಂದು ಭಾವಿಸಿದ ಅನಂತನು, ಗಂಟಲಿಗೆ ಬೆರಳು ಹಾಕಿ ಪ್ರಯತ್ನಪೂರ್ವಕವಾಗಿ ತಿಂದದ್ದನ್ನೆಲ್ಲವನ್ನೂ ವಾಂತಿಮಾಡಿದ್ದನು. ಬಳಿಕ ಒಂದೆರಡು ಅಂಟಾಸಿಡ್ ಮಾತ್ರೆಗಳನ್ನು ಚಪ್ಪರಿಸಿ, ತನ್ನ ವೈದ್ಯಮಿತ್ರನೊಬ್ಬ ಹಿಂದೊಮ್ಮೆ ಹೇಳಿದಂತೆ ಫ್ರಿಜ್ ನಲ್ಲಿರಿಸಿದ ತಣ್ಣನೆಯ ಹಾಲನ್ನು ಗಟಗಟನೆ ಕುಡಿದಿದ್ದನು. ಆದರೆ ಅನಂತನ “ಗ್ಯಾಸ್ ಟ್ರಬಲ್’ ಮಾತ್ರ ಕಡಿಮೆಯಾಗಲೇ ಇಲ್ಲ.


ಅರ್ಧ ತಾಸು ಕಳೆಯುವಷ್ಟರಲ್ಲೇ ನೋವಿನ ತೀವ್ರತೆ ಇನ್ನಷ್ಟು ಹೆಚ್ಚಾಗಿ, ಅನಂತನಿಗೆ ಕುಳಿತುಕೊಳ್ಳಲು ಅಥವಾ ಮಲಗಲೂ ಆಗದಂತಹ ಸ್ಥಿತಿ ಉಂಟಾಗಿತ್ತು. ಅತೀವ ನೋವಿನಿಂದ ಚಡಪಡಿಸುತ್ತಿದ್ದ ಪತಿಯ ಅವಸ್ಥೆಯನ್ನು ಕಂಡು ಗಾಬರಿಗೊಂಡ ಆರತಿಯು, ತಮ್ಮ ಕುಟುಂಬ ವೈದ್ಯರನ್ನು ಮನೆಗೆ ಕರೆಸಿದ್ದಳು. ಅನಂತನನ್ನು ಅಮೂಲಾಗ್ರವಾಗಿ ಪರೀಕ್ಷಿಸಿದ ವೈದ್ಯರಿಗೆ “ಮೂತ್ರಾಶ್ಮರಿ" ಯಾ ಬಗ್ಗೆ ಸಂದೇಹಮೂಡಿತ್ತು. ಆದರೆ ಅನಂತನ ಅಭಿಪ್ರಾಯದಂತೆ ಆತನನ್ನು ಕಾಡುತ್ತಿದ್ದ “ಗ್ಯಾಸ್ಟ್ರಿಕ್" ತೊಂದರೆಯೇ ಹೊಟ್ಟೆನೋವಿಗೆ ಕಾರಣವಾಗಿತ್ತು. ಹೊಟ್ಟೆನೋವಿನ ಶಮನಕ್ಕಾಗಿ ಚುಚ್ಚುಮದ್ದನ್ನು ನೀಡಿದ ವೈದ್ಯರು, ಮರುದಿನ ಮುಂಜಾನೆ ಆಹಾರ ಸೇವನೆಗೆ ಮುನ್ನ ಉದರದ “ಅಲ್ಟ್ರ ಸೌಂಡ್ ಸೋನೋಗ್ರಾಂ” ಮಾಡಿಸಲು ಆದೇಶಿಸಿದರು.


ಚುಚ್ಚು ಮದ್ದಿನ ಪ್ರಭಾವದಿಂದ ನೋವು ಕಡಿಮೆಯಾಗಿ ಚೇತರಿಸಿಕೊಂಡಿದ್ದ ಅನಂತನಿಗೆ ವೈದ್ಯರ “ರೋಗ ನಿದಾನ" (ಡಯಾಗ್ನೋಸಿಸ್) ಬಗ್ಗೆ ಸಂದೇಹ ಮೂಡಿತ್ತು. ಇದೇ ಕಾರಣದಿಂದಾಗಿ ಮರುದಿನ ಮುಂಜಾನೆ ಸೋನೋಗ್ರಾಂ ಮಾಡಿಸದೇ, ತುರ್ತು ಕೆಲಸದ ಮೇಲೆ ಮಂಗಳೂರಿಗೆ ಹೋಗಿದ್ದನು. ಅದೇ ರಾತ್ರಿ ಮತ್ತೆ ಮರುಕಳಿಸಿದ ನೋವಿನ ಬಾಧೆಯನ್ನು ತಡೆಯಲಾರದೇ, ನೆಲದ ಮೇಲೆ ಹೊರಳಾಡಲು ಆರಂಭಿಸಿದ ಅನಂತನ ಶರೀರವಿಡೀ ಬೆವರಿನಿಂದ ತೋಯ್ದು ತೊಪ್ಪೆಯಾಗಿತ್ತು. ನೋವನ್ನು ಸಹಿಸಲಾರದೇ ವೈದ್ಯರನ್ನು ಮನೆಗೆ ಕರೆಸಿದ ಅನಂತನು ಅರೆಜೀವವಾದಂತೆ ಕಾಣುತ್ತಿದ್ದನು.


ಅನಂತನ ಅವಾಂತರವನ್ನು ಕಂಡು ಮರುಕ ಹುಟ್ಟಿದರೂ, ಹಿಂದಿನ ರಾತ್ರಿ ತಾನು ನೀಡಿದ ಆದೇಶವನ್ನು ಪರಿಪಾಲಿಸದ ಬಗ್ಗೆ ವೈದ್ಯರಿಗೆ ಕೊಂಚ ಅಸಮಾಧಾನವೂ ಆಗಿತ್ತು. ಆದರೆ ಕ್ಷಣಮಾತ್ರದಲ್ಲಿ ತನ್ನ ತಪ್ಪಿಗಾಗಿ ಕ್ಷಮೆಯಾಚಿಸಿದ ಅನಂತನನ್ನು ಸಮೀಪದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದರು.


ಮರುದಿನ ಮುಂಜಾನೆ ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ಬಳಿಕ ಅನಂತನ ಎರಡೂ ಮೂತ್ರಪಿಂಡಗಳಲ್ಲಿ ಹಾಗೂ ಬಲಬದಿಯ ಮೂತ್ರನಾಳದಲ್ಲಿ ಹಲವಾರು ಕಲ್ಲುಗಳು ಪತ್ತೆಯಾಗಿದ್ದವು!.


ಮೂತ್ರಾಶ್ಮರಿ ಎಂದರೇನು?


ಮನುಷ್ಯನ ಮೂತ್ರದಲ್ಲಿ ಸ್ವಾಭಾವಿಕವಾಗಿ ಇರುವಂತಹ ಲವಣಗಳು ವಿಶಿಷ್ಟ ಹಾಗೂ ಸಂಕೀರ್ಣ ಪ್ರಕ್ರಿಯೆಗಳ ಪರಿಣಾಮವಾಗಿ ಹರಳಿನಂತೆ ಪರಿವರ್ತನೆಗೊಳ್ಳುವುದರಿಂದ”ಮೂತ್ರಾಶ್ಮರಿ' ಉದ್ಭವಿಸುವುದು. ನಮ್ಮ ರಕ್ತದಲ್ಲಿ ನಿರಂತರವಾಗಿ ಸಂಗ್ರಹವಾಗುವ ತ್ಯಾಜ್ಯಗಳನ್ನು “ಸೋಸುವ" ಹಾಗೂ ಹೆಚ್ಚುವರಿ ನೀರನ್ನು ಶರೀರದಿಂದ ಹೊರಹಾಕುವ ಕಾರ್ಯವನ್ನು ನಿರ್ವಹಿಸುವ ಮೂತ್ರಪಿಂಡಗಳೇ ಮೂತ್ರಾಶ್ಮರಿಯ ಉಗಮಸ್ಥಾನಗಳಾಗಿವೆ.

 

ಅಶ್ಮರಿಯ ವೈವಿಧ್ಯಗಳು


ಸಾಮಾನ್ಯವಾಗಿ ಆಕ್ಸಲೇಟ್, ಫಾಸ್ಫೇಟ್, ಯೂರಿಕ್ ಎಸಿಡ್- ಯೂರೇಟ್ ಮತ್ತು ಸಿಸ್ಟೈನ್ ಎನ್ನುವ ಕಲ್ಲುಗಳು ಮನುಷ್ಯನ ಮೂತ್ರಾಂಗಗಳಲ್ಲಿ ಕಂಡುಬರುತ್ತವೆ. ಆದರೆ ಹೆಚ್ಚಿನ ರೋಗಿಗಳಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹಾಗೂ ಕ್ಯಾಲ್ಸಿಯಂ ಫಾಸ್ಫೇಟ್ ಅಥವಾ ಇವೆರಡರ ಸಮ್ಮಿಶ್ರಣದ ಕಲ್ಲುಗಳು ಹೆಚ್ಚಾಗಿ ಪತ್ತೆಯಾಗುತ್ತವೆ. ಕೆಲ ವ್ಯಕ್ತಿಗಳಲ್ಲಿ ಅಮೋನಿಯಂ ಫಾಸ್ಫೇಟ್ ಹಾಗೂ ಮ್ಯಾಗ್ನೆಸಿಯಂ ಫಾಸ್ಫೇಟ್ ಅಥವಾ ಇವೆರಡರ ಸಮ್ಮಿಶ್ರಣದ ಕಲ್ಲುಗಳು ಉದ್ಭವಿಸಿವುದುಂಟು.


ಫಾಸ್ಫೇಟ್ ಕಲ್ಲುಗಳು ಕ್ಷಾರೀಯ ಮೂತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುವುದರಿಂದಾಗಿ, ಪ್ರಾರಂಭಿಕ ಹಂತದಲ್ಲಿ ಇವುಗಳ ಇರುವಿಕೆಯ ಬಗ್ಗೆ ರೋಗಿಗಳಿಗೆ ಯಾವುದೇ ರೀತಿಯ ಸುಳಿವು ಸಿಗುವುದಿಲ್ಲ.ಆಮ್ಲೀಯ ಮೂತ್ರದಲ್ಲಿ ಉದ್ಭವಿಸುವ ಸಿಸ್ಟೈನ್ ಕಲ್ಲುಗಳು, ಅಪರೂಪದಲ್ಲಿ ಎಳೆಯ ಹುಡುಗಿಯರಲ್ಲಿ ಕಂಡುಬರುವುದು. ಆದರೆ ಅಮೋನಿಯಂ ಮತ್ತು ಸೋಡಿಯಂ ಯೂರೇಟ್ ಕಲ್ಲುಗಳು, ಸಾಮಾನ್ಯವಾಗಿ ಮಕ್ಕಳಲ್ಲಿ ಮಾತ್ರ ಪತ್ತೆಯಾಗುತ್ತವೆ.


ಈ ಸಮಸ್ಯೆಗೆ ಕಾರಣವೇನು?


ಮಾನವನ ಮೂತ್ರಾಂಗಗಳಲ್ಲಿ ಕಲ್ಲುಗಳು ಉದ್ಭವಿಸಲು ಕೆಲವೊಂದು ನಿರ್ದಿಷ್ಟ ಅಂಶಗಳು ಪ್ರಮುಖ ಪಾತ್ರವಹಿಸುತ್ತವೆ. ಹೈಪರ್ ಪಾರಾಥೈರಾಯ್ಡಿಸಂ, ಗೌಟ್, ಅತಿಯಾದ ಆಕ್ಸಲೇಟ್ ಯುಕ್ತ ಮೂತ್ರ, ಜನ್ಮದತ್ತ ಸಿಸ್ಟೈನ್ ಯುಕ್ತ ಮೂತ್ರ ಮತ್ತು ಮೂತ್ರಾಂಗಗಳ ಸೋಂಕುಗಳು ಇವುಗಳಲ್ಲಿ ಪ್ರಮುಖವಾಗಿವೆ. ಅಂತೆಯೇ ನಮ್ಮ ಶರೀರಕ್ಕೆ ಅತ್ಯವಶ್ಯಕವೆನಿಸುವ ಪೋಷಕಾಂಶಗಳ ಅಸಮತೋಲನದಿಂದ, ಮೂತ್ರದಲ್ಲಿ ವಿಸರ್ಜಿಸಲ್ಪಡುವ ಸಿಟ್ರೇಟ್ ನ ಪ್ರಮಾಣ ಕಡಿಮೆಯಾದಾಗ, ಮೂತ್ರ ವಿಸರ್ಜನೆಗೆ ಅಡಚಣೆ ಉಂಟುಮಾಡಬಲ್ಲ ವಿವಿಧ ವ್ಯಾಧಿಗಳಿಂದ ಹಾಗೂ ಸುದೀರ್ಘಕಾಲ ಹಾಸಿಗೆ ಹಿಡಿದಿರುವ ರೋಗಿಗಳನ್ನು ಮೂತ್ರಾಶ್ಮರಿ ಪೀಡಿಸುವ ಸಾಧ್ಯತೆಗಳಿವೆ.

ಆದರೆ ಬಹುತೇಕ ಜನರಲ್ಲಿ ಕಂಡುಬರುವ ಆಕ್ಸಲೇಟ್ ಮತ್ತು ಫಾಸ್ಫೇಟ್ ಸಮ್ಮಿಶ್ರಣದ ಕಲ್ಲುಗಳು ಉದ್ಭವಿಸಲು ಖಚಿತ ಹಾಗೂ ನಿರ್ದಿಷ್ಟ ಕಾರಣಗಳು ಸ್ಪಷ್ಟವಾಗಿಲ್ಲ. ಅತಿ ಉಷ್ಣ ಹವೆ ಇರುವ ಪ್ರದೇಶಗಳ ನಿವಾಸಿಗಳಲ್ಲಿ ಮೂತ್ರದ ಸಾಂದ್ರತೆ ಹೆಚ್ಚಿರುವುದರಿಂದ, ಅತಿಯಾದ ಕ್ಯಾಲ್ಸಿಯಂ ಭರಿತ ಆಹಾರ ಅಥವಾ ಔಷದಗಳ ಸೇವನೆಯಿಂದ ಮತ್ತು ನಿಷ್ಕ್ರಿಯತೆಯ ಪರಿಣಾಮವಾಗಿಯೂ ಮೂತ್ರಾಂಗಗಳ ಕಲ್ಲುಗಳು ಉದ್ಭವಿಸಬಲ್ಲವು.

ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಆರೋಗ್ಯ ರಕ್ಷಣೆಯಲ್ಲಿ ಮಹತ್ವಪೂರ್ಣ ಪಾತ್ರವಹಿಸುವ  ಶುದ್ಧವಾದ ನೀರನ್ನು ಅವಶ್ಯಕ ಪ್ರಮಾಣದಲ್ಲಿ ಕುಡಿಯದಿರುವುದು ಕೂಡಾ ಮೂತ್ರಾಷ್ಮರಿಗಳು ಉದ್ಭವಿಸಲು ಪ್ರಧಾನ ಅಂಶವೆನಿಸುತ್ತದೆ.

 

ರೋಗ ಲಕ್ಷಣಗಳು


ಮೂತ್ರಾಶ್ಮರಿ ಪೀಡಿತ ವ್ಯಕ್ತಿಗಳಲ್ಲಿ ಆಕಸ್ಮಿಕವಾಗಿ ಪ್ರತ್ಯಕ್ಷವಾಗುವ ತೀವ್ರ ನೋವು ಮತ್ತು ರಕ್ತಮಿಶ್ರಿತ ಮೂತ್ರ ವಿಸರ್ಜನೆಗಳು ಈ ವ್ಯಾಧಿಯ ಪ್ರಮುಖ ಲಕ್ಷಣಗಳಾಗಿವೆ. ಶೇ. ೭೫ ರಷ್ಟು ರೋಗಿಗಳಲ್ಲಿ ಪಕ್ಕೆ, ಬೆನ್ನು ಮತ್ತು ಉದರಗಳ ಎರಡೂ ಭಾಗಗಳಲ್ಲಿ ಯಾವುದಾದರೂ ನಿರ್ದಿಷ್ಟ ಸ್ಥಾನದಲ್ಲಿ ಆಕಸ್ಮಿಕವಾಗಿ ತೀವ್ರ ನೋವು ಕಂಡುಬರುತ್ತದೆ.


ಮೂತ್ರಪಿಂಡಗಳಲ್ಲಿರುವ ಸಣ್ಣಪುಟ್ಟ ಅಥವಾ ಮಧ್ಯಮ ಗಾತ್ರದ ಕಲ್ಲುಗಳು ಸ್ವಾಭಾವಿಕವಾಗಿ ಮೂತ್ರದೊಂದಿಗೆ ವಿಸರ್ಜಿತವಾಗುವ ಸಂದರ್ಭದಲ್ಲಿ,  ಮೂತ್ರನಾಳಗಳು ಅಥವಾ ಮೂತ್ರನಾಳ ಮತ್ತು ಮೂತ್ರಾಶಯಗಳು ಸೇರುವಲ್ಲಿ ಸಿಲುಕಿಕೊಂಡಾಗ ಉದ್ಭವಿಸುವ ನೋವಿನ ತೀವ್ರತೆಯು, ಹೆರಿಗೆಯ ನೋವಿನ ಹತ್ತಾರು ಪಟ್ಟು ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಪಕ್ಕೆಗಳು, ಬೆನ್ನು ಮತ್ತು ಹೊಟ್ಟೆಯ ಒಂದು ಅಥವಾ ಎರಡೂ ಬದಿಗಳಲ್ಲಿ ತೀವ್ರ ನೋವು ಹಾಗೂ ಕೆಲವರಲ್ಲಿ ಪಕ್ಕೆಗಳಿಂದ ತೊಡೆಯ ಸಂದಿಯ ತನಕ ಛಳಕು ಹೊಡೆದಂತೆ ನೋವು ಬಾಧಿಸಬಹುದು.


ನೋವಿನ ತೀವ್ರತೆ ಅತಿಯಾದಂತೆ ರೋಗಿಯು ತೊಡೆ ಮತ್ತು ಕಾಲುಗಳನ್ನು ಹೊಟ್ಟೆಗೆ ಆನಿಸಿಕೊಂಡು ನರಳುವುದು, ವಾಕರಿಕೆ ಹಾಗೂ ವಾಂತಿ, ಅತಿಯಾಗಿ ಬೆವರುವುದು ಹಾಗೂ ನಾಡಿ ಬಡಿತ ತೀವ್ರಗೊಳ್ಳುವುದರೊಂದಿಗೆ, ಶರೀರದ ತಾಪಮಾನ ಕಡಿಮೆಯಾಗಿ ಶರೀರ ತಣ್ಣಗಾಗುವುದು. ಅಸಹನೀಯವಾದ ಈ ನೋವಿನಿಂದಾಗಿ ಮೂತ್ರಶಂಕೆ ಬಾಧಿಸಿದಂತೆ ಭಾಸವಾದಾಗ, ಮೂತ್ರ ವಿಸರ್ಜಿಸಲು ಪ್ರಯತ್ನಿಸಿದಲ್ಲಿ ನಾಲ್ಕಾರು ಹನಿ ಮೂತ್ರದೊಂದಿಗೆ ಒಂದೆರಡು ರಕ್ತದ ಹನಿಗಳು ಹೊರಬೀಳುವುದು ಅಪರೂಪವೇನಲ್ಲ.


ಹೊಟ್ಟೆ ಮತ್ತು ಬೆನ್ನುಗಳಲ್ಲಿ ನೋವು ಕಂಡುಬಂದಾಗ ಜನಸಾಮಾನ್ಯರ ಮನಸ್ಸಿನಲ್ಲಿ “ಗ್ಯಾಸ್ ಟ್ರಬಲ್' ಬಾಧಿಸುತ್ತಿದೆ ಎನ್ನುವ ಭ್ರಮೆಗೆ ಕಾರಣವೆನಿಸುವ ಮೂತ್ರಾಶ್ಮರಿಯು, ಜೀರಿಗೆಯ ಕಷಾಯವನ್ನು ಸೇವಿಸುವುದರಿಂದ ಶಮನಗೊಳ್ಳದು.


ತಡೆಯಲು ಅಸಾಧ್ಯವೆನಿಸುವ ನೋವಿನಿಂದ ಬಳಲುತ್ತಿರುವ ರೋಗಿಗಳನ್ನು ತಕ್ಷಣ ಸಮೀಪದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ, ತಜ್ನವೈದ್ಯರಿಂದ ಚಿಕಿತ್ಸೆ ಕೊಡಿಸುವುದು ಹಿತಕರ.


ಪತ್ತೆ ಹಚ್ಚುವುದೆಂತು?


ಕ್ಷ- ಕಿರಣ ಅಥವಾ ಅಲ್ಟ್ರಾ ಸೌಂಡ್ ಸೋನೋಗ್ರಾಂ ಪರೀಕ್ಷೆಯ ಮೂಲಕ ರೋಗಿಯ ಮೂತ್ರಾಂಗಗಳಲ್ಲಿನ ಕಲ್ಲುಗಳ ಸಂಖ್ಯೆ, ಗಾತ್ರ ಹಾಗೂ ಇವುಗಳು ಠಿಕಾಣಿ ಹೂಡಿರುವ ಸ್ಥಳಗಳನ್ನು ನಿಖರವಾಗಿ ಅರಿತುಕೊಳ್ಳಬಹುದು. ಕೆಲ ರೋಗಿಗಳಲ್ಲಿ ಇದರೊಂದಿಗೆ ರಕ್ತಮಿಶ್ರಿತ ಮೂತ್ರ ವಿಸರ್ಜನೆ ಹಾಗೂ ಅನ್ಯ ಕ್ಲಿಷ್ಟಕರ ಸಮಸ್ಯೆಗಳು ತಲೆದೋರಿದಾಗ ಇನ್ನಿತರ ಪರೀಕ್ಷೆಗಳನ್ನು ನಡೆಸಬೇಕಾಗುವುದು.


ಚಿಕಿತ್ಸೆ


ಮರಳಿನ ಕಣಗಳಂತಹ ಹಾಗೂ ಇದಕ್ಕೂ ಸ್ವಲ್ಪ ದೊಡ್ಡ ಗಾತ್ರದ ಕಲ್ಲುಗಳು ಯಾವುದೇ ಔಷ್ದವನ್ನು ಸೇವಿಸದೆ ಇದ್ದರೂ, ಮೂತ್ರದೊಂದಿಗೆ ವಿಸರ್ಜಿಸಲ್ಪಡುತ್ತವೆ. ಆದರೂ ಬಹುತೇಕ ಜನರು ವಿಭಿನ್ನ ವೈದ್ಯ ಪದ್ದತಿಗಳಲ್ಲಿ ಲಭ್ಯವಿರುವ “ ಕಲ್ಲನ್ನು ಕರಗಿಸಬಲ್ಲ" ಔಷದಗಳು ಹಾಗೂ ಬಾಲೆಯ ದಿಂಡಿನ ರಸವನ್ನು ಕುಡಿಯುವ “ಮನೆ ಮದ್ದು" ಪ್ರಯೋಗಿಸುವುದು ಅಪರೂಪವೇನಲ್ಲ. ಅದೇ ರೀತಿಯಲ್ಲಿ ಆಧುನಿಕ ಜೀವನ ಶೈಲಿಯನ್ನು ರೂಢಿಸಿಕೊಂಡಿರುವ ರೋಗಿಗಳು ಮೂತ್ರಾಶ್ಮರಿಯ ಸಮಸ್ಯೆಯಿಂದ ಮುಕ್ತರಾಗಲು, ಧಾರಾಳವಾಗಿ ಬಿಯರ್ ಸೇವಿಸುವ ಚಿಕಿತ್ಸೆಯನ್ನು ಪ್ರಯೋಗಿಸುವುದು ಸುಳ್ಳೇನಲ್ಲ!. ಆದರೆ ಮೂತ್ರಾಂಗಗಳಲ್ಲಿನ ಕಲ್ಲುಗಳ ಸಂಖ್ಯೆ ಮತ್ತು ಇವುಗಳ ಗಾತ್ರ ಹೆಚ್ಚಾಗಿದ್ದಲ್ಲಿ ಅಥವಾ ಮೂತ್ರಾಂಗಗಳಲ್ಲಿ ಇವು ಸಿಲುಕಿಕೊಂಡ ಸಂದರ್ಭಗಳಲ್ಲಿ, ಇವುಗಳಿಂದ ಮುಕ್ತಿಪಡೆಯಲು ತುರ್ತು ಚಿಕಿತ್ಸೆ ಪಡೆಯಬೇಕಾಗುವುದು ಅನಿವಾರ್ಯವೂ ಹೌದು.


ಔಷದ ಸೇವನೆಯನ್ನು ಹೊರತುಪಡಿಸಿದಂತೆ ಲಿತೊಟ್ರಿಪ್ಸಿ, ಯುರಿಟರೋಸ್ಕೋಪಿ, ಲಾಪರೋಸ್ಕೊಪಿಕ್ ಸರ್ಜರಿ, ಕೀ ಹೋಲ್ ಸರ್ಜರಿ, ಓಪನ್ ಸರ್ಜರಿಗಳಂತಹ ಚಿಕಿತ್ಸೆಗಳು ಪ್ರಮುಖವಾಗಿವೆ. ಆದರೆ ಇವೆಲ್ಲಾ ಚಿಕಿತ್ಸಾ ವಿಧಾನಗಳಲ್ಲಿ ಸಾಧಕ- ಬಾಧಕಗಳೆರಡೂ ಇರುವ ಸಾಧ್ಯತೆಗಳು ಇವೆ.


ಸಾಮಾನ್ಯವಾಗಿ ಮೂತ್ರಾಂಗಗಳ ಕಲ್ಲುಗಳ ಗಾತ್ರ, ಉದ್ಭವಿಸಿರುವ ಅಥವಾ ಸಿಲುಕಿರುವ ಸ್ಥಾನ, ಪ್ರಭೇದ ಹಾಗೂ ಕಾಠಿಣ್ಯಗಳೊಂದಿಗೆ, ರೋಗಿಯ ಹಿಂದಿನ ವೈದ್ಯಕೀಯ ಚರಿತ್ರೆ, ಆತನ ಸಾಮಾನ್ಯ ಆರೋಗ್ಯದ ಮಟ್ಟ ಹಾಗೂ ಆರ್ಥಿಕ ಸಾಮರ್ಥ್ಯಗಳು ಚಿಕಿತ್ಸೆಯ ಆಯ್ಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ.


ಅವಿದ್ಯಾವಂತ ಹಾಗೂ ಅಮಾಯಕರಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸಬಲ್ಲ ಈ ಗಂಭೀರ ಸಮಸ್ಯೆಯನ್ನು ಸಮರ್ಪಕವಾಗಿ ಸಮರ್ಪಕವಾಗಿ ಪರಿಹರಿಸಬಲ್ಲ ಯುರಾಲಜಿಸ್ಟ್ ಗಳು, ತಮ್ಮ ರೋಗಿಗಳ ಬಾಲಿ ಚಿಕಿತ್ಸೆಯ ಒಳಿತು- ಕೆಡುಕುಗಳನ್ನು ಚರ್ಚಿಸಿದ ಬಳಿಕವೇ ಚಿಕಿತ್ಸೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವರು.


ನಿಮಗಿದು ತಿಳಿದಿರಲಿ

ಮೂತ್ರಾಶ್ಮರಿಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆದು ಪರಿಹಾರಗೊಂಡರೂ, ಇದು ಮತ್ತೆ ಮರುಕಳಿಸುವ ಸಾಧ್ಯತೆಗಳಿವೆ. ಮಾತ್ರವಲ್ಲ, ಇದನ್ನು ಉತ್ತೇಜಿಸಬಲ್ಲ ಅನೇಕ ಅಪಾಯಕಾರಿ ಅಂಶಗಳೂ ಇವೆ. ಇವುಗಳಲ್ಲಿ ಕೆಲವೊಂದು ಅಂಶಗಳನ್ನು ಬದಲಾಯಿಸುವುದು ಅಸಾಧ್ಯವೆನಿಸುವುದು.


ಮೂತ್ರಾಶ್ಮರಿಯಿಂದ ಮುಕ್ತರಾಗಲು ದುಬಾರಿ ಬೆಲೆಯ ಔಷದಗಳನ್ನು ಖರೀದಿಸಿ ಸೇವಿಸುವ ಬದಲಾಗಿ ಹಾಗೂ ಈ ಸಮಸ್ಯೆಯನ್ನು ದೂರವಿರಿಸಲು, ದಿನನಿತ್ಯ ಕನಿಷ್ಠ ಮೂರರಿಂದ ಐದು ಲೀಟರ್ ನೀರನ್ನು ಕುಡಿಯುವುದು ಉಪಯುಕ್ತವೆನಿಸುವುದು. ಅನೇಕ ರೋಗಿಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿ ಎನಿಸುವುದು. ಈ ‘ಜಲ ಚಿಕಿತ್ಸೆ"ಗಾಗಿ ಹಣವನ್ನು ವ್ಯಯಿಸುವ ಅವಶ್ಯಕತೆಯೇ ಇರುವುದಿಲ್ಲ!. ಹಾಗೂ ಇದರಿಂದಾಗಿ ಮೂತ್ರದಲ್ಲಿನ ಲವಣಗಳ ಸಾಂದ್ರತೆ ಕಡಿಮೆಯಾಗುವುದರಿಂದಾಗಿ, ಈ ಲವಣಗಳು ಘನೀಕೃತಗೊಂಡು ಕಲ್ಲುಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಜೊತೆಗೆ ಧಾರಾಳ ನೀರನ್ನು ಕುಡಿಯುವುದರಿಂದ ಸುಸೂತ್ರವಾಗಿ ಮೂತ್ರ ವಿಸರ್ಜನೆಯಾಗುವುದರಿಂದ,  ಸಣ್ಣಪುಟ್ಟ ಹರಳುಗಳು ಬೆಳೆದು ಕಲ್ಲಾಗುವ ಮುನ್ನವೇ ಸುಲಭದಲ್ಲಿ ವಿಸರ್ಜಿಸಲ್ಪಡುತ್ತವೆ.


ಅಂತೆಯೇ ಚಿಕಿತ್ಸೆಯಿಂದ ಗುಣಪಡಿಸಬಹುದಾದ ಹಾಗೂ ಮುಂಜಾಗರೂಕತೆಯಿಂದ ತಡೆಗಟ್ಟಬಹುದಾದ ಮೂತ್ರಾಂಗಗಳ ವೈಫಲ್ಯಕ್ಕೆ ಮೂತ್ರಾಶ್ಮರಿ ಕಾರಣವೆನಿಸಬಲ್ಲದು. ಆದರೆ ಮೂತ್ರಾಶ್ಮರಿ ಪೀಡಿತರೆಲ್ಲರೂ ಈ ಗಂಭೀರ- ಮಾರಕ ಸಮಸ್ಯೆಗೆ ಈಡಾಗುವ ಸಾಧ್ಯತೆಗಳಿಲ್ಲದಿರಲು ನಮ್ಮ ಶರೀರದಲ್ಲಿ ಎರಡು ಮೂತ್ರಪಿಂಡಗಳು ಇರುವುದೇ ಕಾರಣವಾಗಿದೆ.


ಆದರೆ ಎರಡೂ ಮೂತ್ರಪಿಂಡಗಳಲ್ಲಿ ಉದ್ಭವಿಸಿರುವ ಒಂದಕ್ಕೂ ಅಧಿಕ ಸಂಖ್ಯೆಯ ದೊಡ್ಡ ಗಾತ್ರದ ಕಲ್ಲುಗಳಿರುವ ಮತ್ತು ಇದರೊಂದಿಗೆ ಮಧುಮೇಹ ಹಾಗೂ ಮೂತ್ರಾಂಗಗಳ ಸೋಂಕುಪೀಡಿತ ವ್ಯಕ್ತಿಗಳಿಗೆ ಇಂತಹ ಅಪಾಯದ ಸಾಧ್ಯತೆಗಳು ಹೆಚ್ಚಿವೆ.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು


ಉದಯವಾಣಿ ಪತ್ರಿಕೆಯ ದಿ. ೨೬-೦೫-೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.



Wednesday, January 15, 2014

POLAAGUTTIRUVA SARAKAARADA HANAKKE YAARU HONE?




        ಪೋಲಾಗುತ್ತಿರುವ ಸರಕಾರದ ಹಣಕ್ಕೆ ಯಾರು ಹೊಣೆ?

 ಸರಕಾರೀ ಕಛೇರಿಗಳಲ್ಲಿ ದುಡಿಯುವ ತನ್ನ ಸಿಬಂದಿಗಳಿಗಾಗಿ ಸರಕಾರ ಒದಗಿಸುವ ಹಲವಾರು ಸೌಲಭ್ಯಗಳನ್ನು ಅನೇಕ ಅಧಿಕಾರಿಗಳು ಮತ್ತು ಸಿಬಂದಿಗಳು ದುರ್ಬಳಕೆ ಮಾಡುವ ವಿಚಾರವನ್ನು ನೀವು ಕಂಡು ಅಥವಾ ಕೇಳಿರಬಹುದು. ಇವುಗಳಲ್ಲಿ ಸ್ಥಿರ ದೂರವಾಣಿ ಮತ್ತು ಸರಕಾರೀ ವಾಹನಗಳು ಅತಿ ಹೆಚ್ಚು ದುರ್ಬಳಕೆಯಾಗುವ ಸೌಲಭ್ಯಗಳಾಗಿವೆ. ಸರಕಾರಿ ದೂರವಾಣಿಯನ್ನು ತತ್ಸಂಬಂಧಿತ ಕಛೇರಿಗಳ ಸಿಬಂದಿಗಳು ಮಾತ್ರ ದುರ್ಬಳಕೆ ಮಾಡುವುದಾದಲ್ಲಿ, ವಾಹನಗಳನ್ನು ಸಿಬಂದಿಗಳು, ಅಧಿಕಾರಿಗಳು ಮತ್ತು ಇವರ ಬಂಧು ಬಳಗಗಳು ದುರ್ಬಳಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದಲ್ಲದೆ ಸರಕಾರಿ ಕಛೇರಿಗಳಲ್ಲಿ ಲಭ್ಯವಿರುವ ಇನ್ನೂ ಹತ್ತುಹಲವು ಸೌಲಭ್ಯಗಳು ಇದೇ ರೀತಿಯಲ್ಲಿ ದುರ್ಬಳಕೆಯಾಗುತ್ತಿರುವುದು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಆದರೆ ಇಂತಹ ಸೌಲಭ್ಯಗಳನ್ನು ಹೊರತುಪಡಿಸಿ, ವಿನಾ ಕಾರಣ ಪೋಲಾಗುವ ಸರಕಾರದ ಹಣದ ಬಗ್ಗೆ ಪ್ರಾಯಶಃ ನಿಮಗೂ ತಿಳಿದಿರಲಾರದು.

ಅಂಚೆ ವೆಚ್ಚ 

ಸರಕಾರಿ ಕಛೇರಿಗಳ ದೈನಂದಿನ ವ್ಯವಹಾರಗಳಲ್ಲಿ ಪತ್ರ ವ್ಯವಹಾರವೂ ಒಂದಾಗಿದೆ. ಸರಕಾರಿ ಕಚೇರಿಗಳಿಗೆ ಬರುವ ಹಲವಾರು ಅರ್ಜಿಗಳು, ಪತ್ರಗಳು ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ, ದಿನನಿತ್ಯ ಅನೇಕ ಪತ್ರಗಳು- ಆದೇಶಗಳನ್ನು ಅಂಚೆಯ ಮೂಲಕ ಸಂಬಂಧಿಸಿದವರಿಗೆ ಕಳುಹಿಸಲಾಗುತ್ತದೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರಕಾರಿ ಕಚೇರಿಯಲ್ಲಿ ಪೋಲಾಗುತ್ತಿರುವ ಹಣಕ್ಕೆ ಸಂಬಂಧಿಸಿದ ನಿದರ್ಶನವೊಂದು ಇಲ್ಲಿದೆ.

ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕನಾಗಿರುವ ನಾನು, ಕೆಲವೇ ದಿನಗಳ ಹಿಂದೆ ವಿಧಾನ ಸೌಧದ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ಅರ್ಜಿಯೊಂದನ್ನು ಸಲ್ಲಿಸಿದ್ದೆನು.  ಈ ಅರ್ಜಿಯಲ್ಲಿ ಅಪೇಕ್ಷಿಸಿದ್ದ ಮಾಹಿತಿಗಳನ್ನು ೧೪ ವಿಭಿನ್ನ ಅಧಿಕಾರಿಗಳು ಒದಗಿಸಬೇಕಾದ ಪ್ರಯುಕ್ತ, ಈ ಅಧಿಕಾರಿಗಳಿಗೆ ಕರ್ನಾಟಕ ವಿಧಾನ ಸಭೆಯ ಅಧೀನ ಕಾರ್ಯದರ್ಶಿಯವರು ಪತ್ರವನ್ನು ಬರೆದು, ಈ ಮಾಹಿತಿಗಳನ್ನು ಅರ್ಜಿದಾರರಿಗೆ ಒದಗಿಸುವಂತೆ ಸೂಚಿಸಿದ್ದರು. 

ಇವುಗಳಲ್ಲಿ ನಾಲ್ಕು ಪತ್ರಗಳ ಯಥಾಪ್ರತಿಗಳನ್ನು ಮಾಹಿತಿ ಹಕ್ಕು ಕಾಯಿದೆಯ ನಿಯಮದಂತೆ ಅರ್ಜಿದಾರರಿಗೆ ಕಳುಹಿಸಿದ್ದರು. ವಿಶೇಷವೆಂದರೆ ಈ ನಾಲ್ಕೂ ಪತ್ರಗಳನ್ನು ಕಳುಹಿಸಿದ್ದ ಅಧಿಕಾರಿಯ ಕಚೇರಿಯ ಸಿಬಂದಿಗಳ ನಿರ್ಲಕ್ಷ್ಯದಿಂದಾಗಿ, ನಾಲ್ಕು ಪತ್ರಗಳನ್ನು ಪ್ರತ್ಯೇಕವಾಗಿ ನೊಂದಾಯಿತ ಅಂಚೆಯ ಮೂಲಕ ನನಗೆ  ಕಳುಹಿಸಿದ್ದರು. ಈ ನಾಲ್ಕೂ ಪತ್ರಗಳಲ್ಲಿ ವಿಧಾನ ಸಭೆಯ ಅಧೀನ ಕಾರ್ಯದರ್ಶಿಯವರ ಸಹಿ ಇದ್ದು, ಈ ನಾಲ್ಕು ಪತ್ರಗಳನ್ನು ಒಂದೇ ಲಕೋಟೆಯಲ್ಲಿ ಹಾಕಿ ಕಳುಹಿಸಿದ್ದಲ್ಲಿ, ಇವುಗಳ ಅಂಚೆ ವೆಚ್ಚವು ಕೇವಲ ೨೫ ರಿಂದ ೩೦ ರೂಪಾಯಿಗಳಷ್ಟೇ ಆಗುತ್ತಿತ್ತು. ಆದರೆ ಈ ನಾಲ್ಕು ಪತ್ರಗಳನ್ನು ಪ್ರತ್ಯೇಕವಾಗಿ ನೊಂದಾಯಿತ ಅಂಚೆಯ ಮೂಲಕ ಕಳುಹಿಸಿದ್ದುದರಿಂದ, ಇವುಗಳ ಅಂಚೆ ವೆಚ್ಚವು ೧೦೦ ರೂಪಾಯಿಗಳಾಗಿತ್ತು!. ಜನಸಾಮಾನ್ಯರು ತೆರುವ ತೆರಿಗೆಯ ಹಣವನ್ನು ಈ ರೀತಿಯಲ್ಲಿ ಪೋಲು ಮಾಡುವುದು ಸರ್ವಥಾ ಸಮರ್ಥನೀಯವಲ್ಲ ಎನ್ನುವ ವಿಚಾರವನ್ನು ಇದೀಗ ಅಧೀನ ಕಾರ್ಯದರ್ಶಿಯವರ ಗಮನಕ್ಕೆ ತರುವ ಸಲುವಾಗಿ ಪತ್ರವೊಂದನ್ನು ಅರ್ಜಿದಾರರು ಬರೆಯಲಿದ್ದಾರೆ. ಆದರೆ ಸರಕಾರದ ನೂರಾರು ಕಛೇರಿಗಳ ಅಧಿಕಾರಿಗಳಿಗೆ ಸರಕಾರದ ಬೊಕ್ಕಸದ ಹಣ ಈ ರೀತಿಯಲ್ಲಿ ಪೋ ಲಾಗುವುದರ ಮಾಹಿತಿಯನ್ನು ನೀಡುವುದು ಅರ್ಜಿದಾರರಿಗೆ ಅಸಾಧ್ಯವೆನಿಸುವುದು. ಇದೇ ಕಾರಣದಿಂದಾಗಿ ಪತ್ರಿಕೆಯಲ್ಲಿ ಈ ಮಹತ್ವಪೂರ್ಣ ವಿಚಾರವನ್ನು ಪ್ರಕಟಿಸುವ ಮೂಲಕ ಎಲ್ಲ ಸರಕಾರಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡುವ ಪ್ರಯತ್ನವಿದು.

ಆಧಾರ್ ಕಾರ್ಡ್ ನಲ್ಲೂ ಇದೇ ಸಮಸ್ಯೆ 

ದೇಶದ ಪ್ರಜೆಗಳೆಲ್ಲರೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಪಡೆದುಕೊಳ್ಳಲೇಬೇಕೆಂದು ಕೇಂದ್ರ ಸರಕಾರ ಪ್ರಕಟಿಸಿದಂತೆಯೇ, ಪುತ್ತೂರಿನ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿದ ನಾನು ಮತ್ತು ನನ್ನ ಪತ್ನಿ,  ನಮ್ಮ ವಿವರಗಳು - ಭಾವಚಿತ್ರಗಳನ್ನು ನೀಡಿ ನೋಂದಣಿ ಮಾಡಿಸಿಕೊಂಡಿವು.  ಕೆಲವೇ ತಿಂಗಳುಗಳ ಬಳಿಕ ನನ್ನ ಆಧಾರ್ ಕಾರ್ಡ್ ಸಾಮಾನ್ಯ ಅಂಚೆಯ ಮೂಲಕ ಬಂದಿತ್ತು. ಇದಾದ ಒಂದು ತಿಂಗಳ ಬಳಿಕ ಪತ್ನಿಯ ಕಾರ್ಡ್ ಅಂಚೆಯ ಮೂಲಕ ಬಂದು ತಲುಪಿತ್ತು. ಇವೆರಡೂ ಆಧಾರ್ ಕಾರ್ಡ್ ಗಳನ್ನೂ ಸಾಮಾನ್ಯ ಅಂಚೆಯ ಮೂಲಕ ಕಳುಹಿಸಿದ್ದು, ಇವುಗಳಿಗೆ ತಲಾ ಐದು ರೂಪಾಯಿ ಅಂಚೆ ವೆಚ್ಚ ತಗಲಿತ್ತು. ಒಂದೇ ದಿನ ನೋಂದಣಿ ಮಾಡಿಸಿಕೊಂಡಿದ್ದ ನಮ್ಮಿಬ್ಬರ  ಎರಡೂ ಕಾರ್ಡ್ ಗಳನ್ನು ಒಂದು ಲಕೋಟೆಯಲ್ಲಿ ಕಳುಹಿಸಿದ್ದಲ್ಲಿ, ಅಂಚೆ ವೆಚ್ಚವು ಕೇವಲ ಐದು ರೂಪಾಯಿಯಾಗುತ್ತೀತ್ತು. ಆದರೆ ಪ್ರತ್ಯೇಕವಾಗಿ ಕಾರ್ಡ್ ಗಳನ್ನೂ ಕಳುಹಿಸಿದ್ದುದರಿಂದ ಈ ವೆಚ್ಚವು ದುಪ್ಪಟ್ಟಾಗಿತ್ತು!. ಇದೇ ರೀತಿಯಲ್ಲಿ ಕೋಟ್ಯಂತರ ದಂಪತಿಗಳ ಹಾಗೂ ಒಂದೇ ಕುಟುಂಬದ ಹಲವು ಸದಸ್ಯರ ಆಧಾರ್ ಕಾರ್ಡ್ ಗಳನ್ನು ಪ್ರತ್ಯೇಕವಾಗಿ ಅಂಚೆಯ ಮೂಲಕ ಕಳುಹಿಸುವುದರಿಂದ, ಸ್ವಾಭಾವಿಕವಾಗಿಯೇ ಇವುಗಳ ಅಂಚೆ ವೆಚ್ಚವು ಹಲವಾರು ಪಟ್ಟು ಹೆಚ್ಚುತ್ತದೆ. ಅರ್ಥಾತ್, ಆಧಾರ ಕಾರ್ಡ್ ಗಳನ್ನು ಪ್ರತ್ಯೇಕವಾಗಿ ಕಳುಹಿಸಲು ಕೋಟ್ಯಂತರ ರೂಪಾಯಿಗಳನ್ನು ಅನಾವಶ್ಯಕವಾಗಿ ಪೋಲು ಮಾಡಲಾಗುತ್ತಿದೆ. 

ಸರಕಾರದ ಹಣವನ್ನು ಈ ರೀತಿಯಲ್ಲಿ ಅನಾವಶ್ಯಕವಾಗಿ ಪೋಲು ಮಾಡುವುದನ್ನು ಇನ್ನು ಮುಂದಾದರೂ ನಿಲ್ಲಿಸಿದಲ್ಲಿ, ಪ್ರಜೆಗಳು ನೀಡುವ ತೆರಿಗೆಯ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದಾಗಿದೆ.

ಚಿತ್ರದಲ್ಲಿ ನಾಲ್ಕು ಅಂಚೆ ಲಕೋಟೆ ಮತ್ತು ನಾಲ್ಕು ಪತ್ರಗಳನ್ನು ಕಾಣಬಹುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

Monday, January 13, 2014

NAVAJAATA SHISHUGALA SAMRAKSHANE- YAARA HONE?


           ನವಜಾತ ಶಿಶುಗಳ ಸಂರಕ್ಷಣೆ- ಯಾರ ಹೊಣೆ?

ಕಿತ್ತು ತಿನ್ನುವ ಬಡತನದಿಂದ ಬಳಲುತ್ತಿರುವ ತಾಯಂದಿರೂ, ತಾವು ಉಪವಾಸ ಬಿದ್ದಾದರೂ ತಮ್ಮ ಕಂದನಿಗೆ ಕೈತುತ್ತು ನೀಡದೆ ಇರಲಾರರು. ಆದರೆ ಕೆಲ ಸಂದರ್ಭಗಳಲ್ಲಿ ಕಾರಣಾಂತರಗಳಿಂದ ಸಂಭವಿಸಬಲ್ಲ ನವಜಾತ ಶಿಶುಗಳ ಮರಣವನ್ನು ತಡೆಗಟ್ಟಲಾರದೇ, ಅನೇಕ ಮಾತೆಯರು ಅಸಹಾಯಕರಾಗಿ ಸೋಲುತ್ತಾರೆ. ಭಾರತದ ಅಭುತೆಕ ಬಡ ಕುಟುಂಬಗಳಲ್ಲಿ ವ್ಯಾಪಕವಾಗಿ ಕಾಣಸಿಗುವ ಇಂತಹ ಮರಣಗಳ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
---------             ---------------                --------------               --------------            ------------                  ------------             ------------------

ಪ್ರಸ್ತುತ ಭಾರತದಲ್ಲಿ ಜನಿಸುತ್ತಿರುವ ಪ್ರತಿ ೧೦೦೦ ನವಜಾತ ಶಿಶುಗಳ ಜೀವಂತ ಜನನಗಳಲ್ಲಿ, ಸುಮಾರು ೫೦ ಶಿಶುಗಳು ಅಕಾಲಿಕ ಮರಣಕ್ಕೆ ತುತ್ತಾಗುತ್ತಿವೆ ಎಂದು ಇತ್ತೀಚಿಗೆ ಸರಕಾರ ಪ್ರಕಟಿಸಿದ್ದ ವರದಿಯೊಂದು ಬಹಿರಂಗಪಡಿಸಿದೆ. ಯುನೈಟೆಡ್ ನೇಶನ್ಸ್ ಕೆಲವರ್ಷಗಳ ಹಿಂದೆ ನಿಗದಿಸಿದ್ದ "ಸಹಸ್ರಮಾನದ ಅಭಿವೃದ್ಧಿ ಗುರಿ"ಯಂತೆ, ಇದೀಗ ಈ ಪ್ರಮಾಣವು ಪ್ರತಿ ೧೦೦೦ ಜನನಗಳಲ್ಲಿ ೨೮ ಕ್ಕೆ ಇಳಿಯಲೇಬೇಕಾಗಿತ್ತು. ಆದರೆ ಭಾರತದ ನಾಲ್ಕು ನಾಲ್ಕು ರಾಜ್ಯಗಳು ಮತ್ತು ಐದು ಕೇಂದ್ರಾಡಳಿತ ಪ್ರದೇಶಗಳನ್ನು ಹೊರತುಪಡಿಸಿ, ಅನ್ಯರಾಜ್ಯಗಳು ಈ ಗುರಿಯನ್ನು ಸಾಧಿಸಲು ವಿಫಲವಾಗಿವೆ. ಅದರಲ್ಲೂ ಒಂಬತ್ತು ರಾಜ್ಯಗಲಂತೂ ದಯನೀಯವಾಗಿ ವಿಫಲವಾಗಿವೆ!. 

ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವ ಭಾರತವು ವಿವಿಧ ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆಗೈಯ್ಯುವ ಮೂಲಕ, ವಿಶ್ವದ ಅನ್ಯ ರಾಷ್ಟ್ರಗಳ ಗಮನವನ್ನು ಸೆಳೆಯಲು ಯಶಸ್ವಿಯಾಗಿದೆ. ಅದೇ ರೀತಿಯಲ್ಲಿ ಅರೋಗ್ಯ ಕ್ಷೇತ್ರದಲ್ಲಿ ನಾವಿಂದು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರೂ, ಶಿಶುಸಂರಕ್ಷಣೆಯ ವಿಚಾರದಲ್ಲಿ ಮಾತ್ರ ನಮ್ಮ ಸಾಧನೆ ತೃಪ್ತಿಕರ ಮಟ್ಟವನ್ನು ತಲುಪಿಲ್ಲ. 

ಜಾಗತಿಕ ಮಟ್ಟದಲ್ಲಿ ಶಿಶುಸಂರಕ್ಷಣೆಯ ವಿಚಾರದಲ್ಲಿ ಕಾವಲು ಪಡೆಯಂತೆ ಕಾರ್ಯ ನಿರ್ವಹಿಸುತ್ತಿರುವ "ಯೂನಿಸೆಫ್' ಸಂಸ್ಥೆಯು ಒಂದೆರಡು ವರ್ಷಗಳ ಹಿಂದೆ ಪ್ರಕಟಿಸಿದ್ದ ವರದಿಯಲ್ಲಿ, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ, ಅದರಲ್ಲೂ ನವಜಾತ ಶಿಶುಗಳ ಮರಣದ ಪ್ರಮಾಣವನ್ನು ನಿಯಂತ್ರಿಸುವಲ್ಲಿ ಭಾರತವು ದಯನೀಯವಾಗಿ ವಿಫಲಗೊಂಡಿದೆ ಎಂದು ಉಲ್ಲೇಖಿಸಿತ್ತು. 

ಅಕಾಲಿಕ ಮರಣ- ಅನಾರೋಗ್ಯ 

ಯುನೈಟೆಡ್ ನೇಶನ್ಸ್ ಮತ್ತು ಯೂನಿಸೆಫ್ ಸಂಸ್ಥೆಗಳು ೨೦೦೮ ರ ಆದಿಯಲ್ಲಿ ಪ್ರಕಟಿಸಿದ್ದ "ಜಾಗತಿಕ ಮಟ್ಟದಲ್ಲಿ ಶಿಶುಗಳ ಸ್ಥಿತಿಗತಿಗಳು' ಎನ್ನುವ ವರದಿಯಂತೆ, ತನ್ನ ಪ್ರಜೆಗಳ ಹಿತರಕ್ಷಣೆಯ ದೃಷ್ಟಿಯಿಂದ ಕೈಗೊಂಡಿರುವ ನಿರ್ದಿಷ್ಟ ಕ್ರಮಗಳಿಂದ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಮರಣದ ಪ್ರಮಾಣವನ್ನು ಭಾರತವು ತಕ್ಕ ಮಟ್ಟಿಗೆ ನಿಯಂತ್ರಿಸಿದ್ದರೂ, ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮಿಸಬೇಕಾಗಿದೆ ಎಂದು ಉಲ್ಲೇಖಿಸಲಾಗಿತ್ತು. 

೧೯೭೦ ರ ದಶಕದಲ್ಲಿ ಭಾರತದಲ್ಲಿ ಜನಿಸಿದ ಪ್ರತಿ ೧೦೦೦ ಜೀವಂತ ಜನನಗಳಲ್ಲಿ, ಸುಮಾರು ೨೦೨ ಶಿಶುಗಳು ತಮ್ಮ ಮೊದಲ ಹುಟ್ಟು ಹಬ್ಬವನ್ನು ಆಚರಿಸುವ ಮುನ್ನ ಮೃತಪಡುತ್ತಿದ್ದವು. ಆದರೆ ೨೦೦೦ ನೆ ಇಸವಿಯಲ್ಲಿ ಈ ಪ್ರಮಾಣವು ಪ್ರತಿ ೧೦೦೦ ಕ್ಕೆ ೬೮ ಮತ್ತು ೨೦೦೯ ರಲ್ಲಿ ೫೦ ಕ್ಕೆ ಇಳಿದಿತ್ತು. ಆದರೆ ಸಹಸ್ರಮಾನದ ಗುರಿಯಂತೆ ಇದು ೨೮ ಕ್ಕೆ ಇಳಿಯಬೇಕಾಗಿತ್ತು. 

ಶಿಶು ಸಂರಕ್ಷಣೆಯಲ್ಲಿ ಭಾರತವು ವಿಫಲವಾಗಿರುವುದನ್ನು ಯೂನಿಸೆಫ್ ಹಾಗೂ ಯುನೈಟೆಡ್ ನೇಶನ್ಸ್ ಸಂಸ್ಥೆಗಳ ವರದಿಯಲ್ಲಿನ ಅಂಕಿ ಅಂಶಗಳು ಧೃಡೀಕರಿಸುತ್ತವೆ.ಈ ವರದಿಯಂತೆ ಭಾರತದಲ್ಲಿ ಜನಿಸಿದ ಒಂದು ದಶಲಕ್ಷ ಶಿಶುಗಳು, ಮುಂದಿನ ೨೮ ದಿನಗಳಿಗೆ ಮುನ್ನ ಮೃತಪಡುತ್ತವೆ. ಜಗತ್ತಿನ ಶೇ. ೨೫ ರಷ್ಟು ನವಜಾತ ಶಿಶುಗಳ ಮರಣವು ಭಾರತದಲ್ಲೇ ಸಂಭವಿಸುತ್ತಿವೆ. ವಿಶ್ವಾದ್ಯಂತ ವಿವಿಧ ಕಾರಣಗಳಿಂದ ಮೃತಪಡುವ ೫ ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೇ. ೨೧ ರಷ್ಟು ಮಕ್ಕಳು ಭಾರತೀಯರದ್ದೇ ಆಗಿವೆ. 

ಇಷ್ಟು ಮಾತ್ರವಲ್ಲ, ಜಗತ್ತಿನಾದ್ಯಂತ ಜನಿಸುತ್ತಿರುವ ಕಡಿಮೆ ತೂಕದ ಶಿಶುಗಳಲ್ಲಿ ಶೇ. ೪೩ ರಷ್ಟು ಶಿಶುಗಳು ಭಾರತದಲ್ಲೇ ಜನಿಸುತ್ತಿವೆ. ನಮ್ಮ ದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಪೋಷಕಾಂಶಗಳ ಕೊರತೆಯಿಂದ ಬಳತ್ತಿರುವ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡಲು, ಈ ಸಮಸ್ಯೆಯ ನಿವಾರಣೆಗಾಗಿ ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಅನುಷ್ಠಾನದ ವೇಗವನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ. ವಿಶೇಷವೆಂದರೆ ಈ ಯೋಜನೆಗಾಗಿ ಸರಕಾರವು ಪ್ರತಿವರ್ಷ ಸಹಸ್ರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದ್ದರೂ, ಇದರ ಮೂಲ ಉದ್ದೇಶವಾಗಿರುವ ಪೌಷ್ಟಿಕ ಆಹಾರದ ಪೂರೈಕೆಗಾಗಿ ಅತ್ಯಲ್ಪ ಪ್ರಮಾಣದ ಹಣ ವಿನಿಯೋಗವಾಗುತ್ತಿದೆ. ಏಕೆಂದರೆ ಈ ಮೊತ್ತದ ಸಿಂಹಪಾಲು, ಯೋಜನೆಯ ಅನುಷ್ಠಾನಕ್ಕೆ ಸಂಬಧಿಸಿದ ಅನ್ಯ ಉದ್ದೇಶಗಳಿಗಾಗಿ ಖರ್ಚಾಗುತ್ತಿದೆ!. 

ಅದೇನೇ ಇರಲಿ, ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ನವಜಾತ ಶಿಶುಗಳ ಮರಣದ ಪ್ರಮಾಣವು ಪ್ರತಿ ಸಾವಿರಕ್ಕೆ ೪೧ ರಷ್ಟಿದ್ದು, ದೇಶದ ೩೫ ರಾಜ್ಯಗಳಲ್ಲಿ ೨೦ ನೆಯ ಸ್ಥಾನದಲ್ಲಿದೆ. ಇದೇ ಸಂದರ್ಭದಲ್ಲಿ ಕೇರಳ, ಗೋವಾ, ಮಣಿಪುರ ಹಾಗೂ ನಾಗಾಲ್ಯಾಂಡ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೆಶಗಳಾಗಿರುವ ಅಂಡಮಾನ್- ನಿಕೊಬಾರ್ ದ್ವೀಪಗಳು, ಚಂಡೀಘಡ, ಡಾಮನ್ ಹಾಗೂ ದಿಯು,ಲಕ್ಷದ್ವೀಪ ಮತ್ತು ಪುದುಚೇರಿಗಳು ಮಾತ್ರ ಸಹಸ್ರಮಾನದ ಅಭಿವೃದ್ಧಿ ಗುರಿಯನ್ನು ಸಾಧಿಸಲು ಸಫಲವಾಗಿವೆ. ಈ ಪ್ರದೇಶಗಳಲ್ಲಿ ನವಜಾತ ಶಿಶುಗಳ ಮರಣದ ಪ್ರಮಾಣವು ಪ್ರತಿ ೧೦೦೦ ಕೀ ಕೇವಲ ೨೮ ಅಥವಾ ಇದಕ್ಕೂ ಕಡಿಮೆಯಾಗಿದೆ. 

ಆದರೆ ಬಿಹಾರ, ಜಾರ್ಖಂಡ್, ಒರಿಸ್ಸಾ,ಉತ್ತರ ಪ್ರದೇಶ, ಛತ್ತೀಸ್ ಘಡ, ಉತ್ತರಾಖಂಡ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಪ್ರತಿ ೧೦೦೦ ಜೀವಂತ ಜನನಗಳಲ್ಲಿ ೫೦ ಕ್ಕೂ ಅಧಿಕ ಶಿಶುಗಳು ಮೃತಪಡುತ್ತಿವೆ. ಸರಕಾರದ ಅಂಕಿ ಅಂಶಗಳಂತೆ ಭಾರತದಲ್ಲಿ ಶಿಶುಗಳ ಮರಣದ ಪ್ರಮಾಣವು ಸರಾಸರಿ ೧೦೦೦ ಕ್ಕೆ ೫೦ ರಷ್ಟಿದೆ!. 

ಕಳೆದ ಕೆಲ ದಶಕಗಳಿಂದ ಇಳಿಮುಖವಾಗುತ್ತಿರುವ ಈ ಪ್ರಮಾಣವು ಕೇವಲ ಶೇ. ೨ ರಷ್ಟೇ ಆಗಿದ್ದು, ಇದು ೨೦೧೫ ರಲ್ಲಿ ಪ್ರತಿ ೧೦೦೦ ಕ್ಕೆ ೪೨ ರಿಂದ ೪೭ ಕ್ಕೆ ಇಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಆದರೂ ಈ ಪ್ರಮಾಣವು ಸಹಸ್ರಮಾನದ ಗುರಿಯಾಗಿರುವ ೨೮ ಕ್ಕಿಂತ ಸಾಕಷ್ಟು ಅಧಿಕವಾಗಿದೆ. ಈ ಉದ್ದೇಶವನ್ನು ಈಡೇರಿಸಲು ಅತ್ಯಧಿಕ ಪ್ರಮಾಣದ ನವಜಾತ ಶಿಶುಗಳು ಮೃತಪಡುತ್ತಿರುವ ೯ ರಾಜ್ಯಗಳತ್ತ ಸರಕಾರವು ತನ್ನ ಗಮನವನ್ನು ಕೇಂದ್ರೀಕರಿಸಲಿದೆ. 

ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಸಮಸ್ಯೆಯ ನಿಯಂತ್ರಣಕ್ಕಾಗಿ ಬಡತನದ ರೇಖೆಗಿಂತ ಕೆಳಗಿರುವವರಿಗೆ ಅಲ್ಪಬೆಲೆಗೆ ಪಡಿತರ ಧಾನ್ಯಗಳನ್ನು ಒದಗಿಸುತ್ತಿದೆ. ಜೊತೆಗೆ ಕಿಶೋರಿಯರು, ಗರ್ಭಿಣಿಯರು ಮತ್ತು ಅಂಗನವಾಡಿಗಳಿಗೆ ಹಾಜರಾಗುವ ಶಿಶುಗಳಿಗೆ ಪೌಷ್ಟಿಕ ಆಹಾರವನ್ನು ಪೂರೈಸುತ್ತಿವೆ. ಇದರೊಂದಿಗೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ತೆಯನ್ನೂ ಜಾರಿಗೊಳಿಸಿವೆ. ಇವೆಲ್ಲವುಗಳ ಹೊರತಾಗಿಯೂ ನವಜಾತ ಶಿಶುಗಳ ಮರಣ ಮತ್ತು ಪೌಷ್ಠಿಕಾಂಶಗಳ ನ್ಯೂನತೆಯಿಂದ ಉದ್ಭವಿಸುತ್ತಿರುವ ಸಮಸ್ಯೆಗಳ ನಿಯಂತ್ರಣವು ನಿರೀಕ್ಷಿತ ಮಟ್ಟದಲ್ಲಿ ಫಲಪ್ರದವೆನಿಸಿಲ್ಲ. 

ಅಂತಿಮವಾಗಿ ಹೇಳುವುದಾದಲ್ಲಿ, ಭಾರತ ಸರಕಾರವು ನವಜಾತ ಶಿಶುಗಳ ಮರಣದ ಪ್ರಮಾಣವನ್ನು ನಿಯಂತ್ರಿಸಲು ಯಶಸ್ವಿಯಾಗಬೇಕಿದ್ದಲ್ಲಿ ಜನಸಾಮಾನ್ಯರಿಗೆ ಅತ್ಯವಶ್ಯಕ ಎನಿಸುವ ವೈದ್ಯಕೀಯ ಸೌಲಭ್ಯಗಳು, ಜನಸಂಖ್ಯಾ ನಿಯಂತ್ರಣ, ಹಳ್ಳಿಹಳ್ಳಿಗಳಲ್ಲಿ ಶುದ್ಧವಾದ ಕುಡಿಯುವ ನೀರು ಮತ್ತು ಶೌಚಾಲಯಗಳನ್ನು ಒದಗಿಸುವುದು, ಅನಕ್ಷರಸ್ಥರು ಮತ್ತು ಗ್ರಾಮೀಣ ಜನರ ಮನದಲ್ಲಿ ಭದ್ರವಾಗಿ ಬೇರೂರಿರುವ ಮೂಢನಂಬಿಕೆ ಮತ್ತು ಸಾಂಕ್ರಾಮಿಕ ವ್ಯಾಧಿಗಳನ್ನು ನಿವಾರ್ಸುವ ಉಪಕ್ರಮಗಳನ್ನು ಅನುಷ್ಠಾನಗೊಳಿಸಬೇಕಾಗುವುದು. ಇದರೊಂದಿಗೆ ಈ ಉಪಕ್ರಮಗಳು ಯಶಸ್ವಿಯಾಗಲು ದೇಶದ ಪ್ರಜೆಗಳ ಮನಸ್ಪೂರ್ವಕ ಸಹಕಾರವೂ ಅತ್ಯವಶ್ಯಕ ಎನಿಸುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಡಿ. ೦೬- ೦೫- ೨೦೧೧ ರ ಸಂಪದದಲ್ಲಿ ಪ್ರಕಟಿತ ಲೇಖನ. 


Saturday, January 11, 2014

BOTTLED WATER






                 ಬಾಟಲಿ ನೀರು: ಹರಿಸೀತು ಕಣ್ಣೀರು!

ಒಂದೆರಡು ದಶಕಗಳ ಹಿಂದಿನ ತನಕ ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮ ಮನೆಗೆ ಬಂದ ಅಥಿತಿಗಳಿಗೆ, ಕುದಿಸಿ ತಣಿಸಿದ ನೀರಿನೊಂದಿಗೆ ಬೆಲ್ಲದ ತುಂಡನ್ನು ನೀಡುವ ಸಂಪ್ರದಾಯವಿತ್ತು. ಅಥಿತಿಗಳ ದಣಿವು ಮತ್ತು ಬಾಯಾರಿಕೆಗಳನ್ನು ನೀಗಿಸಲು ಇದು ಉಪಯುಕ್ತವೆನಿಸುತ್ತಿತ್ತು. 

ಆದರೆ ಇಂದು ಬೆಲ್ಲ ಮತ್ತು ಮತ್ತು ನೀರಿನ ಸ್ಥಾನವನ್ನು ಲಘುಪಾನೀಯಗಳು ಅಥವಾ ಬಾಟಲೀಕರಿಸಿದ ಕುಡಿಯುವ ನೀರು ಆಕ್ರಮಿಸಿಕೊಂಡಿರುವುದರಿಂದ, ಹಿಂದಿನ ಸಂಪ್ರದಾಯ ಕಣ್ಮರೆಯಾಗಿದೆ. ಇದರೊಂದಿಗೆ ಖಾಸಗಿ- ಸರಕಾರಿ ಸಮಾರಂಭಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ, ಗಣ್ಯ ವ್ಯಕ್ತಿಗಳ- ಅಥಿತಿಗಳ ಮುಂದೆ ಕುಡಿಯುವ ನೀರಿನ ಬಾಟಲಿಗಳು ರಾರಾಜಿಸುತ್ತವೆ. ಬಹುತೇಕ ಜನರು ಅತ್ಯಂತ ಪರಿಶುದ್ಧ ಮತ್ತು ಆರೋಗ್ಯಕರವೆಂದು ನಂಬಿರುವ ಈ ಬಾಟಲೀಕರಿಸಿದ ನೀರಿನ ಬಳಕೆ ವ್ಯಾಪಕವಾಗಿ ಹೆಚ್ಚಲು ನಿರ್ದಿಷ್ಟ ಕಾರಣಗಳೂ ಇವೆ.

ಆರೋಗ್ಯ ರಕ್ಷಣೆ
 ಮನುಷ್ಯನು ತನ್ನ ಆರೋಗ್ಯದ ರಕ್ಷಣೆಗಾಗಿ  ಅನೇಕ ಮಾರ್ಗೋಪಾಯಗಳನ್ನು ಕಂಡುಹಿಡಿದಿದ್ದಾನೆ. ಇವುಗಳಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸಬಲ್ಲ "ಜಲಜನ್ಯ ಕಾಯಿಲೆ" ಗಳಿಂದ ರಕ್ಷಿಸಿಕೊಳ್ಳಲು, ಕುಡಿಯುವ ನೀರನ್ನು ಶುದ್ಧೀಕರಿಸಿ ಸುರಕ್ಷಿತವನ್ನಾಗಿಸುವುದೂ ಒಂದಾಗಿದೆ. 

ನಾವು ಕುಡಿಯಲು ಬಳಸುವ ನೀರನ್ನು ಶುದ್ಧೀಕರಿಸಲು ವಿವಿಧ ತಂತ್ರಜ್ಞಾನಗಳು ಹಾಗೂ ಯಂತ್ರಗಳು ಲಭ್ಯವಿದೆ. ಆದರೆ ನೀರನ್ನು ತೆಳ್ಳಗಿನ ಬಟ್ಟೆಯಲ್ಲಿ ಸೋಸಿ, ಒಲೆಯ ಮೇಲಿರಿಸಿದ ಬಳಿಕ ಕುದಿಯಲು ಆರಂಭಿಸಿದ ನಂತರ ಸುಮಾರು ೨೦ ನಿಮಿಷಗಳ ಕಾಲ ಕುದಿಸಿ, ತಣಿಸಿದ ಬಳಿಕ ಬಳಸುವುದು ನಿಶ್ಚಿತವಾಗಿಯೂ ಆರೋಗ್ಯಕರವೆನಿಸುವುದು. 

ಆದರೆ ಇಂದು ಅಧಿಕತಮ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ಯಾಂಡಲ್ ಫಿಲ್ಟರ್, ನಲ್ಲಿಗೆ ಜೋಡಿಸುವ ಫಿಲ್ಟರ್, ಅಲ್ಟ್ರಾ ವಯೊಲೆಟ್ ಕಿರಣಗಳು ಅಥವಾ ರಿವರ್ಸ್ ಓಸ್ಮೊಸಿಸ್ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಿದ ಉಪಕರಣಗಳನ್ನು ಬಳಸಲಾರಂಭಿಸಿದ್ದಾರೆ. ಮತ್ತೆ ಕೆಲವರಂತೂ ಮಾರುಕಟ್ಟೆಯಲ್ಲಿ ದೊರೆಯುವ ಶುದ್ಧೀಕರಿಸಿದ ಕುಡಿಯುವ ನೀರಿನ ಬಾಟಲಿ- ಜಾಡಿಗಳನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಕುಡಿಯುತ್ತಾರೆ. ಅಂತೆಯೇ ವಿಭಿನ್ನ ವಿಧಾನಗಳನ್ನು ಬಳಸುತ್ತಿರುವ ಪ್ರತಿಯೊಬ್ಬರೂ, ತಾವು ಪರಿಶುದ್ಧವಾದ ನೀರನ್ನೇ ಕುಡಿಯುತ್ತಿದ್ದೇವೆ ಎಂದು ನಂಬಿದ್ದಾರೆ. ಇವೆಲ್ಲಕ್ಕೂ ಮಿಗಿಲಾಗಿ ಪರಿಸರ ಪ್ರದೂಷಣೆಯಿಂದಾಗಿ ಕಲುಷಿತಗೊಂಡಿರುವ ನೀರನ್ನು ಕುಡಿದು, ಕಾಯಿಲೆಗಳನ್ನು ಆಹ್ವಾನಿಸುವ ಬದಲಾಗಿ 'ಬಾಟಲೀಕರಿಸಿದ' ನೀರನ್ನು ಬಳಸುವ ಮೂಲಕ ಇನ್ನಷ್ಟು ಪರಿಸರ ಪ್ರದೂಷಣೆಗೆ ಕಾರಣಕರ್ತರೆನಿಸುತ್ತಾರೆ!. 

ವಾಣಿಜ್ಯ ಸರಕು 

ಶ್ರೀಮಂತ ರಾಷ್ಟ್ರಗಳ ಶ್ರೀಮಂತ ಜನರು ತಮ್ಮ ಅಂತಸ್ತು, ಆರೋಗ್ಯ ಮತ್ತುಅ ಪ್ರತಿಷ್ಠೆಗಳ ದ್ಯೋತಕವಾಗಿ (ಆದರೆ ಅನಾವಶ್ಯಕವಾಗಿ) ಬಳಸಲು ಆರಂಭಿಸಿದ್ದ ಶುದ್ಧೀಕರಿಸಿದ ಕುಡಿಯುವ ನೀರಿನ ಬಾಟಲಿಗಳ ಉತ್ಪಾದನೆಯ ಉದ್ದಿಮೆಯು, ಇದೀಗ ರಕ್ತಬೀಜಾಸುರನೋಪಾದಿಯಲ್ಲಿ ಬೆಳೆಯುತ್ತಿದೆ. 

೨೦೦೬ ರಲ್ಲಿ ಅಮೆರಿಕದ ಪ್ರಜೆಗಳು ೩೧ ಬಿಲಿಯನ್ ಬಾಟಲೀಕರಿಸಿದ ನೀರನ್ನು ಖರೀದಿಸಲು ೧೧ ಬಿಲಿಯನ್ ಡಾಲರ್ ಗಳನ್ನುವ್ಯಯಿಸಿದ್ದರು. ಈ ವಿಚಾರದಲ್ಲಿ ಭಾರತೀಯರೂ ಹಿಂದಿಲ್ಲ. ಜಗತ್ತಿನಲ್ಲಿ ಅತ್ಯಧಿಕ ಬಾಟಲೀಕರಿಸಿದ ನೀರನ್ನು ಬಳಸುವ ದೇಶಗಳ ಪಟ್ಟಿಯಲ್ಲಿ ಭಾರತವು ೧೦ ನೆಯ ಸ್ಥಾನದಲ್ಲಿದೆ. ೧೯೯೦ ರಲ್ಲಿ ಭಾರತೀಯರು ೨ ಮಿಲಿಯನ್ ನೀರಿನ ಬಾಟಲಿಗಳ ಪೆಟ್ಟಿಗೆಗಳನ್ನು ಖರೀದಿಸಿದ್ದು, ೨೦೦೬ ರಲ್ಲಿ ಇದರ ಪ್ರಮಾಣವು ೬೮ ಮಿಲಿಯನ್ ಪೆಟ್ಟಿಗೆಗಳನ್ನು ತಲುಪಿತ್ತು!. 

ಲೀಟರ್ ಒಂದಕ್ಕೆ ನೀವು ೧೫ ರೂ. ಗಳನ್ನೂ ತೆತ್ತು ನೀವು ಖರೀದಿಸುವ ಬಾಟಲೀಕರಿಸಿದ ನೀರಿನ ಶುದ್ಧಾಶುದ್ಧತೆಯ ಬಗ್ಗೆ ಸಾಕಷ್ಟು ವಾದವಿವಾದಗಳಿವೆ. ಇದೇ ದಶಕದ ಆದಿಯಲ್ಲಿ ಭಾರತದ ಪ್ರತಿಷ್ಠಿತ ಸಂಸ್ಥೆಯಾಗಿರುವ "ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಯರಾನ್ಮೆಂಟ್" ನ ವಿಜ್ಞಾನಿಗಳು ಭಾರತದಲ್ಲಿ ತಯಾರಿಸಲ್ಪಟ್ಟು ಮಾರಾಟವಾಗುವ ವಿವಿಧ ತಯಾರಕರ (ಶುದ್ಧೀಕರಿಸಿದ ಬಾಟಲಿ ನೀರನ್ನು)ಉತ್ಪನ್ನಗಳನ್ನು ಪರೀಕ್ಷಿಸಿ, ಇವುಗಳು ಪರಿಶುದ್ಧವಾಗಿಲ್ಲ ಎಂದು ಘೋಷಿಸಿದ್ದರು. ಕಳೆದ ತಿಂಗಳಿನಲ್ಲಿ ವಿಶ್ವವಿಖ್ಯಾತ ಬಹುರಾಷ್ಟ್ರೀಯ ಸಂಸ್ಥೆಯೊಂದು (ಅಮೇರಿಕಾದಲ್ಲಿ) ತಾನು ಮಾರಾಟಮಾಡುತ್ತಿರುವ ಬಾಟಲೀಕರಿಸಿದ ನೀರು "ಕೇವಲ ನಳ್ಳಿ ನೀರಲ್ಲದೇ ಬೇರೇನೂ ಅಲ್ಲ" ಎಂದು ಅನಿವಾರ್ಯವಾಗಿ ಒಪ್ಪಿಕೊಂಡಿತ್ತು!. 

ಭಾರತದಲ್ಲಿ ಮಾರಾಟವಾಗುತ್ತಿರುವ ಶುದ್ಧೀಕರಿಸಿದ ಬಾಟಲೀಕರಿಸಿದ ನೀರಿನ ಗುಣಮಟ್ಟ- ಶುದ್ಧತೆಗಳು ನಿಗದಿತ ಮಟ್ಟದಲ್ಲಿ ಇರುವುದಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ "ISI" ಪ್ರಮಾಣಪತ್ರವನ್ನು ನೀಡುವ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಸಂಸ್ಥೆಗೆ, ಭಾರತದ ಸಹಸ್ರಾರು ಬಾಟಲೀಕರಿಸಿದ ನೀರಿನ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ ಪ್ರಮಾಣಪತ್ರವನ್ನು ನೀಡಲು ಅರ್ಜಿಯನ್ನು ಸಲ್ಲಿಸಿವೆ. ಆದರೆ ಈ ಸಂಸ್ಥೆಯ ಬಳಿ ನೀರಿನ ಗುಣಮಟ್ಟ ಹಾಗೂ ಶುದ್ಧಾಶುದ್ಧತೆಗಳನ್ನು ಪರೀಕ್ಷಿಸಲು ಬೇಕಾದ ವ್ಯವಸ್ಥೆ- ಸೌಲಭ್ಯಗಳು ಇಲ್ಲದಿರುವುದರಿಂದ, ನಮಗೆ ದೊರೆಯುತ್ತಿರುವ ಬಾಟಲೀಕರಿಸಿದ ನೀರಿನ ಪರಿಶುದ್ಧತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ!.

  ಲಾಭದಾಯಕ ಉದ್ದಿಮೆ 

ಬಡ ಭಾರತದಲ್ಲಿ ೧೯೯೯-೨೦೦೪ ರ ಅವಧಿಯಲ್ಲಿ ಈ ನೀರಿನ ಬಾಟಲಿಗಳ ಮಾರಾಟವು ಐದು ಪಟ್ಟು ಹೆಚ್ಚಿತ್ತು. ವಾರ್ಷಿಕ ಶೇ.೪೦ ರಷ್ಟು ವೃದ್ಧಿಸುತ್ತಿರುವ ಹಾಗೂ ಸಹಸ್ರಾರು ಕೋಟಿ ರೂಪಾಯಿಗಳ ಈ ಉದ್ದಿಮೆಯು ಅತ್ಯಂತ ಲಾಭದಾಯಕವೆನಿಸಿದೆ. ಇದೇ ಕಾರಣದಿಂದಾಗಿ ಭಾರತದಾದ್ಯಂತ ಈಗಾಗಲೇ ೧೦೦೦ ಕ್ಕೂ ಅಧಿಕ ವಾಣಿಜ್ಯ ಸಂಸ್ಥೆಗಳು ಈ ವ್ಯವಹಾರವನ್ನು ಪ್ರಾರಂಭಿಸಿವೆ. 

ಭಾರತದಲ್ಲಿ ಭದ್ರವಾಗಿ ಬೇರೂರಿರುವ ಕೆಲ ಬಹುರಾಷ್ಟ್ರೀಯ ಸಂಸ್ಥೆಗಳು, ಅನೇಕ ರಾಜ್ಯಗಳಲ್ಲಿ ಈ ಉದ್ದಿಮೆಯನ್ನು ಆರಂಭಿಸಿ, ಅತ್ಯಲ್ಪ ವೆಚ್ಚದಲ್ಲಿ ಅಪಾರ ಲಾಭವನ್ನು ಗಳಿಸುತ್ತಿವೆ. ಬರಪೀಡಿತ ಜೈಪುರದಲ್ಲಿ ಇಂತಹ ಘಟಕವೊಂದನ್ನು ಆರಂಭಿಸಿರುವ ಸಂಸ್ಥೆಯೊಂದು, ಕೊಳವೆ ಬಾವಿಯೊಂದನ್ನು ಕೊರೆದು ಪ್ರತಿನಿತ್ಯ ಲಕ್ಷಾಂತರ ಲೀಟರ್ ನೀರನ್ನು ಬಳಸುತ್ತಿದೆ. ಅಗಾಧ ಪ್ರಮಾಣದ ನೀರನ್ನು ಬಳಸಿದರೂ, ಇದಕ್ಕಾಗಿ ಸ್ಥಳೀಯ ಸಂಸ್ಥೆಗೆ ಕೆಲ ವರ್ಷಗಳ ಹಿಂದಿನ ತನಕ ಕೇವಲ ೨೪,೦೦೦ ರೂ.ಗಳನ್ನೂ ವರ್ಷದಲ್ಲೊಮ್ಮೆ ಪಾವತಿಸುತ್ತಿತ್ತು!. ಅರ್ಥಾತ್ ೧೦೦೦ ಲೀಟರ್ ನೀರಿಗೆ ಕೇವಲ ೧೪ ಪೈಸೆ ಶುಲ್ಕವನ್ನು ನೀಡುತ್ತಿತ್ತು. ಅಂದರೆ ತಾನು ಸಿದ್ಧಪಡಿಸುತ್ತಿದ್ದ ಒಂದು ಲೀಟರ್ ಬಾಟಲೀಕರಿಸಿದ ನೀರಿಗೆ, ಈ ಸಂಸ್ಥೆಯು ೦.೦೨ ರಿಂದ ೦.೦೩ ಪೈಸೆಗಳನ್ನು ವ್ಯಯಿಸುತ್ತಿತ್ತು!. 

ಅದೇ ರೀತಿಯಲ್ಲಿ ಈ ನೀರನ್ನು ಶುದ್ಧೀಕರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿದರೂ, ಒಂದು ಲೀಟರ್ ನೀರಿನ ಶುದ್ಧೀಕರಣದ ವೆಚ್ಚ ಕೇವಲ ೨೫ ಪೈಸೆಗಳಾಗುತ್ತವೆ. ವಿಶೇಷವೆಂದರೆ ಈ ಶುದ್ಧೀಕರಿಸಿದ ನೀರನ್ನು ತುಂಬಿಸಿ ಮಾರಾಟಮಾಡುವ ಪ್ಲಾಸ್ಟಿಕ್ ಬಾಟಲಿಯೊಂದಕ್ಕೆ ೩ ರಿಂದ ೪ ರೂ. ಹಾಗೂ ಇವುಗಳ ಸಾಗಾಟ ಮತ್ತು ತಮ್ಮ ಉತ್ಪನ್ನದ ಜಾಹೀರಾತುಗಳಿಗಾಗಿ ವ್ಯಯಿಸುವ ಮೊತ್ತವನ್ನು ಸೇರಿಸಿದ ಬಳಿಕವೂ, ತಯಾರಕರಿಗೆ ಇದು ಹೊರೆಯೆನಿಸುವುದಿಲ್ಲ. ಇದೇ ಕಾರಣದಿಂದ ಬಾಟಲಿಯೊಂದಕ್ಕೆ ೧೫ ರೂ. ಗಳಂತೆ ಮಾರಾಟವಾಗುವ ಈ ವಾಣಿಜ್ಯ ಸರಕು, ಇದರ ತಯಾರಕರಿಗೆ ಕೈತುಂಬಾ ಲಾಭವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. 

ವಿಶೇಷವೆಂದರೆ ಸ್ಥಳೀಯ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಜನಸಾಮಾನ್ಯರಿಗೆ ಪ್ರತಿನಿತ್ಯ ಪೂರೈಸುವ ಶುದ್ಧೀಕರಿಸಿದ ಕುಡಿಯುವ ನೀರಿನ ದರವನ್ನು ಹೆಚ್ಚಿಸಿದಾಗ ತೀವ್ರವಾಗಿ ಪ್ರತಿಭಟಿಸುವ ಜನಸಾಮಾನ್ಯರು, ದುಬಾರಿ ಬೆಲೆಯನ್ನು ತೆತ್ತು ನೀರಿನ ಬಾಟಲಿಗಳನ್ನು ಖರೀದಿಸಿ ಕುಡಿಯುವುದು ನಂಬಲಸಾಧ್ಯವೆನಿಸುತ್ತದೆ. 

ಅಮೆರಿಕ- ಯುರೋಪ್ ಗಳಲ್ಲಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಸರಬರಾಜು ಮಾಡುವ ನೀರಿನ ಗುಣಮಟ್ಟ- ಪರಿಶುದ್ಧತೆಗಳು, ಅಲ್ಲಿ ದೊರೆಯುವ ಬಾಟಲೀಕರಿಸಿದ ನೀರಿಗಿಂತಲೂ ಉತ್ತಮವಾಗಿರುತ್ತದೆ!. ಏಕೆಂದರೆ ಅಲ್ಲಿನ ಸರಕಾರಗಳು ಇದಕ್ಕೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿಸಿದ್ದು, ಇದರ ಪರಿಪಾಲನೆ ಸಮರ್ಪಕವಾಗಿ ನಡೆಯುತ್ತಿದೆಯೇ ಎಂದು ಆಗಾಗ ಪರಿಶೀಲಿಸಲಾಗುತ್ತದೆ. ನಮ್ಮ ದೇಶದಲ್ಲಿನ ಸ್ಥಳೀಯಾಡಳಿತ  ಸಂಸ್ಥೆಗಳು ಸರಬರಾಜು ಮಾಡುವ ಕುಡಿಯುವ ನೀರಿಗೆ ಒಂದಿಷ್ಟು ಅಧಿಕ ಶುಲ್ಕವನ್ನು ತೆರಲು ಜನರು ಸಿದ್ಧರಿದ್ದಲ್ಲಿ, ಅದೇ ಗುಣಮಟ್ಟದ ನೀರನ್ನು ನಮಗೆ ಪೂರೈಸುವುದು ಅಸಾಧ್ಯವೇನಲ್ಲ.

ಪರಿಸರಕ್ಕೆ ಹಿತಕರವಲ್ಲ 

ಶುದ್ಧೀಕರಿಸಿದ ನೀರಿನ ಬಾಟಲಿಗಳ ಉದ್ದಿಮೆಯಿಂದಾಗಿ ಪೋಲಾಗುವ ಅಗಾಧ ಪ್ರಮಾಣದ ನೀರು, ವಿದ್ಯುತ್ ಶಕ್ತಿ ಹಾಗೂ ಬಾಟಲಿಗಳ  ತಯಾರಿಕೆ ಮತ್ತು ಸಾಗಾಟ ಗಳಿಗಾಗಿ ಬಳಸಲ್ಪಡುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇವೆಲ್ಲಕ್ಕಿಂತ ಮಿಗಿಲಾಗಿ ಬಳಸಿ ಎಸೆದ ಖಾಲಿ ಬಾಟಲಿಗಳಿಂದ ಸಂಭವಿಸುವ ಪರಿಸರ ಪ್ರದೂಷಣೆ ಹಾಗೂ ಜಾಗತಿಕ  ತಾಪಮಾನದ ಏರಿಕೆಗಳು ಮನುಕುಲಕ್ಕೆ ಮಾರಕವೆನಿಸುತ್ತಿವೆ. ಮಾತ್ರವಲ್ಲ, ಶುದ್ಧೀಕರಿಸಿದ ನೀರನ್ನು ಸಿದ್ಧಪಡಿಸುವ ಘಟಕಗಳಿಂದ ಹೊರಬೀಳುವ ತ್ಯಾಜ್ಯಗಳಿಂದಾಗಿ, ಸುತ್ತಮುತ್ತಲಿನ ಜಲಮೂಲಗಳೂ ಕಲುಷಿತಗೊಳ್ಳುತ್ತಿವೆ. ಈ ಅಪಾಯಕಾರಿ ಬೆಳವಣಿಗೆಯನ್ನು ಅಧ್ಯಯನ ಮಾಡಿರುವ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು, ಈ ಸಮಸ್ಯೆಯ ನಿವಾರಣೆಯತ್ತ ಗಮನಹರಿಸುತ್ತಿವೆ. 

ಅಮೆರಿಕದ ಸಾನ್ ಫ್ರಾನ್ಸಿಸ್ಕೋ ನಗರದ ಸರಕಾರಿ ಕಛೇರಿಗಳಲ್ಲಿ ಬಾಟಲೀಕರಿಸಿದ ನೀರಿನ ಬಳಕೆಯನ್ನು ಇತ್ತೀಚಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಏಕೆಂದರೆ ಅಮೆರಿಕದಲ್ಲಿ ದಿನನಿತ್ಯ ೬೦ ಮಿಲಿಯನ್ ನೀರಿನ ಬಾಟಲಿಗಳನ್ನು ಬಳಸಿ ಎಸೆಯಲಾಗುತ್ತಿದೆ. ತ್ಯಾಜ್ಯ ವಿಲೇವಾರಿಯ ಸಮಸ್ಯೆ ಹಾಗೂ ಇದರಿಂದಾಗಿ ಸಂಭವಿಸುವ ಪರಿಸರ ಪ್ರದೂಷಣೆಗಳು ಈ ಸರಕಾರಗಳಿಗೆ ತಲೆನೋವಾಗಿ ಪರಿಣಮಿಸಿವೆ. ಸಾಲ್ಟ್ ಲೇಕ್ ಸಿಟಿಯ ಸರಕಾರಿ ನೌಕರರು ಯಾವುದೇ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಪೂರೈಸದಂತೆ ಅಲ್ಲಿನ ಮೇಯರ್ ಆದೇಶಿಸಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿನ ವಿಲಾಸಿ ಹೋಟೆಲ್ ಗಳು ತಮ್ಮ ಗ್ರಾಹಕರಿಗೆ ಬಾಟಲೀಕರಿಸಿದ ನೀರನ್ನು ಒದಗಿಸುವುದನ್ನೇ ನಿಲ್ಲಿಸಿದ್ದವು!.

ಬಾಟಲೀಕರಿಸಿದ ನೀರನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಕುಡಿಯುವ ಹವ್ಯಾಸವನ್ನು ನಾವು ಪಾಶ್ಚಾತ್ಯರಿಂದ ಕಲಿತಿರುವುದು ಸತ್ಯ. ಆದರೆ ಇದೀಗ ಪಾಶ್ಚಾತ್ಯರು ಇದನ್ನು ವರ್ಜಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ಅನುಕರಿಸಲು ನಾವು ಸಿದ್ದರಿದ್ದೇವೆಯೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಷ್ಟೇ. ಜೊತೆಗೆ ಬಾಟಲೀಕರಿಸಿದ ನೀರಿನಿಂದಾಗಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಲು ಪಾಶ್ಚಾತ್ಯರು ಕೈಗೊಂಡಿರುವ ನಿರ್ದಾಕ್ಷಿಣ್ಯ ಕ್ರಮಗಳನ್ನು ಭಾರತೀಯರು ಅನುಸರಿಸುವುದು ಅಸಾಧ್ಯವೇನಲ್ಲ. 

ಒಂದು ಲೀಟರ್ ಬಾಟಲೀಕರಿಸಿದ ನೀರಿನ ಬೆಲೆಯಲ್ಲೇ, ಸ್ಥಳೀಯಾಡಳಿತ ಸಂಸ್ಥೆಗಳು ಪೂರೈಸುವ ಒಂದು ಸಾವಿರ ಲೀಟರ್ ಶುದ್ಧೀಕರಿಸಿದ ಕುಡಿಯುವ ನೀರಿನ ಒಂದು ಅಂಶವನ್ನು ೨೦ ನಿಮಿಷಗಳ ಕಾಲ ಕುದಿಸಿ, ತಣಿಸಿ ಕುಡಿಯುವುದು ಆರೋಗ್ಯಕರ ಎನಿಸೀತು. ಇದರಿಂದಾಗಿ ಈಗಾಗಲೇ ಮಿತಿಮೀರುತ್ತಿರುವ ಪರಿಸರ ಪ್ರದೂಷಣೆ ಹಾಗೂ ಜಲಮೂಲಗಳು ಕಳುಶಿತವಾಗುವ ಮತ್ತು ಜಾಗತಿಕ ತಾಪಮಾನದ ಹೆಚ್ಚಳವನ್ನು ತಡೆಗಟ್ಟುವುದು- ನಿಯಂತ್ರಿಸುವುದು ನಿಶ್ಚಿತವಾಗಿಯೂ ಸುಲಭಸಾಧ್ಯವೆನಿಸೀತು.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು
ಉದಯವಾಣಿ ಪತ್ರಿಕೆಯ ಡಿ. ೧೩-೦೯- ೨೦೦೭ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.

Wednesday, January 8, 2014

DISCOVERY OF MEDICINES



                 ಔಷದಗಳ ಸಂಶೋಧನೆ ಹೇಗೆ ನಡೆಯುತ್ತದೆ?

  ಮನುಷ್ಯನ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಲು, ಮಾರಕ ವ್ಯಾಧಿಗಳಿಂದ ರಕ್ಷಿಸಿಕೊಳ್ಳಲು ಮತ್ತು ವಿವಿಧ ವ್ಯಾಧಿಗಳು ಬಾಧಿಸಿದ ಸಂದರ್ಭದಲ್ಲಿ ರೋಗಮುಕ್ತರಾಗಳು ಔಷದಗಳ ಬಳಕೆ ಅನಿವಾರ್ಯ. ನಮ್ಮ ಆರೋಗ್ಯ ರಕ್ಷಣೆಯ ಸಲುವಾಗಿ ನಿರಂತರವಾಗಿ ನಡೆಯುತ್ತಿರುವ ಔಷದ ಸಂಶೋಧನೆಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.

---------                ---------------                 ----------------                  -----------------               -------

 ಮನುಕುಲವನ್ನು ಬಾಧಿಸುತ್ತಿರುವ ಅನೇಕ ಗಂಭೀರ ಹಾಗೂ ಮಾರಕ ವ್ಯಾಧಿಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ  ಲಸಿಕೆಗಳು, ಬಹುತೇಕ ವ್ಯಾಧಿಗಳನ್ನು ಕ್ಷಿಪ್ರಗತಿಯಲ್ಲಿ ಗುಣಪಡಿಸಬಲ್ಲ ಅಥವಾ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಸಮರ್ಪಕವಾಗಿ ಹತೋಟಿಯಲ್ಲಿ ಇರಿಸಬಲ್ಲ ಔಷದಗಳಿವೆ. ಇನ್ನು ಕೆಲವಿಧದ ವ್ಯಾಧಿಗಳನ್ನು ತದೆಗತ್ತಬಲ್ಲ, ನಿಯಂತ್ರಿಸಬಲ್ಲ ಅಥವಾ ಗುಣಪಡಿಸಬಲ್ಲ ಔಷದಗಳೇ ಲಭ್ಯವಿಲ್ಲ ಎಂದು ನಿಮಗೂ ತಿಳಿದಿರಲೇಬೇಕು. 

ಪ್ರಸ್ತುತ ಶಾಶ್ವತ ಪರಿಹಾರವಿಲ್ಲದ, ಲಭ್ಯ ಔಷದಗಳಿಗೆ ಮಣಿಯದ, ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದಿರುವ ಮತ್ತು ಚಿಕಿತ್ಸೆ ಲಭ್ಯವಿರುವ ಕಾಯಿಲೆಗಳನ್ನು ಇನ್ನಷ್ಟು ಕ್ಷಿಪ್ರಗತಿಯಲ್ಲಿ ಗುಣಪಡಿಸಬಲ್ಲ, ಇನ್ನಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಔಷದಗಳನ್ನು ಆವಿಷ್ಕರಿಸುವ ಸಂಶೋಧನೆಗಳು ಜಗತ್ತಿನಾದ್ಯಂತ ಅವಿರತವಾಗಿ ಸಾಗುತ್ತಿವೆ. ಸಹಸ್ರಾರು ವೈದ್ಯಕೀಯ ವಿಜ್ಞಾನಿಗಳು- ಸಂಶೋಧಕರ ನಿರಂತರ ಪ್ರಯತ್ನಗಳ ಫಲವಾಗಿ ನಮಗಿಂದು ವಿನೂತನ ಔಷದಗಳು ಲಭಿಸುತ್ತಿವೆ. 

ಔಷದಗಳ ಸಂಶೋಧನೆ 

ನೂತನ ಔಷದವೊಂದನ್ನು ಸಂಶೋಧಿಸಿದ ಬಳಿಕ, ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಹಲವಾರು "ಅಗ್ನಿ ಪರೀಕ್ಷೆ" ಗಳನ್ನು ಎದುರಿಸಿ ತೇರ್ಗಡೆಯಾಗಬೇಕಾಗುತ್ತದೆ. ಇವೆಲ್ಲಾ ಪರೀಕ್ಷೆಗಳನ್ನು ಕ್ರಮಬದ್ಧವಾಗಿ ನಡೆಸಲು ಸುದೀರ್ಘ ಅವಧಿಯೂ ಬೇಕಾಗುತ್ತದೆ.ಹಾಗೂ ಇದಕ್ಕಾಗಿ ಕೋಟ್ಯಂತರ ರೂಪಾಯಿಗಳೂ ವೆಚ್ಚವಾಗುತ್ತವೆ. 

ಇತ್ತೀಚಿಗೆ ಸಾಮಾನ್ಯವಾಗಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ನೂತನ ಔಷದಗಳಲ್ಲಿ ಹೆಚ್ಚಿನವು ವಾಣಿಜ್ಯ ಔಷದ ತಯಾರಿಕಾ ಸಂಸ್ಥೆಗಳ ಸಂಶೋಧಕರು ಪತ್ತೆಹಚ್ಚಿದವೇ ಆಗಿವೆ. ಏಕೆಂದರೆ ಇಂತಹ ಸಂಶೋಧನೆಗಳಿಗಾಗಿ ಸಹಸ್ರಾರು ಕೋಟಿ ರೂಪಾಯಿಗಳನ್ನು ವಯಯಿಸುವ ಸಾಮರ್ಥ್ಯವು ಇಂತಹ ಔಷದ ತಯಾರಿಕಾ ಸಂಸ್ಥೆಗಲ್ಲಿಗೆ ಇದೆ. ಖಾಸಗಿ ಹಾಗೂ ಸರಕಾರಿ ಕೃಪಾಪೋಷಿತ ಸಂಶೋಧನಾ ಕೇಂದ್ರಗಳಿಗೆ ಈ ರೀತಿಯ ಆರ್ಥಿಕ ಸಾಮರ್ಥ್ಯ ಇಲ್ಲದಿರುವುದು ಅವುಗಳ ಹಿನ್ನಡೆಗೆ ಪ್ರಮುಖ ಕಾರಣವೆನಿಸಿದೆ. 

ನೂತನ ಔಷದಗಳ ಸಂಶೋಧನೆಯು ಸಂಕೀರ್ಣ ಹಾಗೂ ಸುದೀರ್ಘ ಕಾಲ ನಡೆಯುವ ಕಾರ್ಯವಾಗಿದ್ದು, ಇದಕ್ಕೆ ಐದರಿಂದ ಹತ್ತು ವರ್ಷಗಳ ಅವಧಿಯೊಂದಿಗೆ, ಕೋಟ್ಯಂತರ ರೂಪಾಯಿಗಳು ವೆಚ್ಚವಾಗುತ್ತವೆ. ಅಂತಿಮವಾಗಿ ಮಾರುಕಟ್ಟೆಯನ್ನು ಪ್ರವೇಶಿಸುವ ನಿರ್ದಿಷ್ಟ ಔಷದವನ್ನು ಸಂಶೋಧಿಸಿದ ಔಷದ ತಯಾರಿಕಾ ಸಂಸ್ಥೆಗಳು, ಅಲ್ಪಾವಧಿಯಲ್ಲೇ ತಾವು ವ್ಯಯಿಸಿದ ಮೊತ್ತಕ್ಕಿಂತಲೂ ಹಲವಾರು ಪಟ್ಟು ಅಧಿಕ ಲಾಭವನ್ನು ಗಳಿಸುತ್ತವೆ. 

ಪ್ರಸ್ತುತ ಬಳಕೆಯಲ್ಲಿರುವ ಅಧಿಕತಮ ಆಧುನಿಕ ಔಷದಗಳನ್ನು ಪ್ರಯೋಗಾಲಯಗಳಲ್ಲಿ ಪ್ರಾನುಗಳ ಮೇಲೆ ಹಾಗೂ ತದನಂತರ ಮನುಷ್ಯರ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಗಿದೆ. ಇತ್ತೀಚಿನ ಕೆಲವರ್ಷಗಳಿಂದ ಇಂತಹ ಪ್ರಯೋಗಗಳ ವಿಧಿವಿಧಾನಗಳಲ್ಲಿ ಅವಶ್ಯಕ ಪರಿವರ್ತನೆಗಳನ್ನು ಜಾರಿಗೆ ತಂದಿದ್ದು, ಕಟ್ಟುನಿಟ್ಟಿನ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. 

ಸಂಶೋಧನೆಯ ಹಂತಗಳು 

ಅನೇಕ ಔಷದಗಳನ್ನು ಅಥವಾ ಮೂಲದ್ರವ್ಯಗಳನ್ನು ಹೆಚ್ಚಾಗಿ ಸಸ್ಯಮೂಲಗಳಿಂದಲೇ ಪಡೆಯಲಾಗುತ್ತಿದ್ದರೂ, ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಔಷದಗಳು ಸಂಯೋಜಿತ ರಾಸಾಯನಿಕಗಳ ಮಿಶ್ರಣಗಳಿಂದ ಸಿದ್ಧಪಡಿಸಿದವುಗಳೇ ಆಗಿವೆ. ಇತ್ತೀಚಿನ ಕೆಲವರ್ಷಗಳಲ್ಲಿ ಬಯೋ ಟೆಕ್ನಾಲಜಿ ಮತ್ತು ಜೆನೆಟಿಕ್ ಎಂಜಿನಿಯರಿಂಗ್ ತಂತ್ರಜ್ಞಾನಗಳಿಂದಾಗಿ, ನೂತನ ಔಷದಗಳ ಸಂಶೋಧನೆಯಲ್ಲಿ ಇನ್ನಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಸಾಮಾನ್ಯವಾಗಿ ನೂತನವಾಗಿ ಸಂಶೋಧಿಸಲ್ಪಟ್ಟ ಔಷದವೊಂದು ಉಪಯುಕ್ತವೆಂದು ಕಂಡುಬಂದಲ್ಲಿ, ಅದರ ಪರಿಣಾಮಗಳು ಮತ್ತು ಸುರಕ್ಷತೆಯನ್ನು ಮೊದಲು ಪರೀಕ್ಷಿಸಲಾಗುತ್ತದೆ. ಹಲವಾರು ಪ್ರಾಣಿಗಳ ಮೇಲೆ ಈ ಔಷದವನ್ನು ಪ್ರಯೋಗಿಸುವುದರ ಮೂಲಕ ಈ ಪ್ರಾಥಮಿಕ ಅಧ್ಯಯನವನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಪ್ರಿ ಕ್ಲಿನಿಕಲ್ ಟೆಸ್ಟಿಂಗ್ ಎಂದು ಕರೆಯುವರು. ಈ ಹಂತದಲ್ಲಿ ಪ್ರಯೋಗಿಸಿದ ಔಷದದ ಬಳಕೆಯಿಂದ ಸಂಭವಿಸಬಹುದಾದ ತೊಂದರೆ- ಅಪಾಯಗಳಿಗಿಂತ, ಇದರಿಂದ ದೊರೆಯುವ ಪ್ರಯೋಜನವೇ ಹೆಚ್ಚೆಂದು ಖಚಿತವಾದಲ್ಲಿ, ಮುಂದಿನ ಹಂತದಲ್ಲಿ ಈ ಔಷದವನ್ನು ಮನುಷ್ಯರ ಮೇಲೆ ಪ್ರಯೋಗಿಸಲಾಗುತ್ತದೆ. ಇದನ್ನು ಕ್ಲಿನಿಕಲ್ ಟ್ರಯಲ್ಸ್ ಎಂದು ಕರೆಯುತ್ತಾರೆ. ಆದರೆ ನೂತನವಾಗಿ ಸಂಶೋಧಿಸಿದ ಯಾವುದೇ ಔಷದವನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಮುನ್ನ "ಡ್ರಗ್ ಕಂಟ್ರೋಲರ್ ಜನರಲ್' ಇವರ ಅನುಮತಿಯನ್ನು ಪಡೆದುಕೊಳ್ಳಲೇಬೇಕಾಗುತ್ತದೆ. ಈ ಅನುಮತಿಯನ್ನು ಪ್ರಾಣಿಗಳ ಮೇಲೆ ನಡೆಸಿದ್ದ ಅಧ್ಯಯನದ ವರದಿಯ ಆಧಾರದ ಮೇಲೆ ನೀಡಲಾಗುತ್ತದೆ. 

ಮನುಷ್ಯರ ಮೇಲೆ ನಡೆಸುವ ಕ್ಲಿನಿಕಲ್ ಟ್ರಯಲ್ಸ್ ಗಳನ್ನುಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ನಿಯಮಿತ ಸಂಖ್ಯೆಯ ಆರೋಗ್ಯವಂತ ಸ್ವಯಂಸೇವಕರಿಗೆ ಈ ಔಷದವನ್ನು ನೀಡಿ, ಇದರ ಸುರಕ್ಷತೆ ಮತ್ತು ಪ್ರಮಾಣಗಳನ್ನು ನಿರ್ಧರಿಸುವ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಾಮಾನ್ಯವಾಗಿ ಈ ಹಂತದಲ್ಲಿ ಪರೀಕ್ಷೆಗೆ ಒಳಗಾಗುವ ೨೫೦ ಔಷದಗಳಲ್ಲಿ ಕೇವಲ ೫ ಔಷದಗಳು ಮಾತ್ರ ಮುಂದಿನ ಹಂತಕ್ಕೆ ತೇರ್ಗಡೆಯಾಗುತ್ತವೆ. 

ಮೇಲಿನ ವಿಧಾನದಿಂದ ಔಷದದ ಪ್ರಮಾಣ ಮತ್ತು ಸುರಕ್ಷತೆಗಳನ್ನು ನಿರ್ಧರಿಸಿದ ಬಳಿಕ, ದ್ವಿತೀಯ ಹಂತದಲ್ಲಿ ಇದರ ಪರಿನಾಮಹಾಗೂ ಕಾರ್ಯಕ್ಷಮತೆಗಳೊಂದಿಗೆ ಇದರ ಅಡ್ಡ ಪರಿಣಾಮ- ದುಷ್ಪರಿಣಾಮಗಳ ಬಗ್ಗೆ ಅಧ್ಯಯನವನ್ನೂ ನಡೆಸುತ್ತಾರೆ. ಈ ಹಂತದಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವ ಔಷದವು ಅಂತಿಮ ಹಂತಕ್ಕೆ ಆಯ್ಕೆಯಾಗುವುದು. 

ಅಂತಿಮ ಹಂತದಲ್ಲಿ ವಿಭಿನ್ನ ಕೇಂದ್ರಗಳಲ್ಲಿ ಸಾಕಷ್ಟು ಸಂಖ್ಯೆಯ ಸ್ವಯಂಸೇವಕ ರೋಗಿಗಳ ಮೇಲೆ ಈ ಔಷದವನ್ನು ಪ್ರಯೋಗಿಸಿ, ಇದರ ಕಾರ್ಯಕ್ಷಮತೆ- ಒಳ್ಳೆಯ ಪರಿಣಾಮಗಳೊಂದಿಗೆ,ಇದರ ಪ್ರತಿಕೂಲ ಪರಿಣಾಮಗಳು ಮತ್ತು ದೀರ್ಘಕಾಲೀನ ಬಳಕೆಯಿಂದ ಉದ್ಭವಿಸಬಹುದಾದ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲಾಗುತ್ತದೆ. ಈ ಹಂತದಲ್ಲಿ ಪರೀಕ್ಷಿಸಲ್ಪಡುವ ಐದು ಔಷದಗಳಲ್ಲಿ ಕೇವಲ ಒಂದು ಔಷದವಷ್ಟೇ ತೇರ್ಗಡೆಯಾಗಿ, ಮಾರುಕಟ್ಟೆಯನ್ನು ಪ್ರವೇಶಿಸಲು ಯಶಸ್ವಿಯಾಗುವುದು ಸಾಮಾನ್ಯ. 

ಈ ರೀತಿಯಲ್ಲಿ ಮೂರು ಹಂತಗಳ ಕ್ಲಿನಿಕಲ್ ಟ್ರಯಲ್ಸ್ ಗಳ ವರದಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ, ನೂತನವಾಗಿ ಸಂಶೋಧಿಸಿದ ಔಷದವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅನುಮತಿಯನ್ನು ನೀಡಲಾಗುತ್ತದೆ. ವಿವಿಧ ಹಂತಗಳಲ್ಲಿ ಸುದೀರ್ಘಕಾಲ ನಡೆಯುವ ಹಲವು ಅಧ್ಯಯನಗಳ ಬಳಿಕ ನೂತನ ಔಷದವು ಮಾರುಕಟ್ಟೆಯನ್ನು ಪ್ರವೇಶಿಸಿದರೂ, ಮುಂದೆ ಎಂದಾದರೂ ಸಂಭವಿಸಬಹುದಾದ ಆಡ್- ಪ್ರತಿಕೂಲ ಪರಿಣಾಮಗಳ ಬಗ್ಗೆ ವೈದ್ಯರು ಮತ್ತು ಔಷದ ತಯಾರಿಕಾ ಸಂಸ್ಥೆಗಳು ಗಮನವಿರಿಸಬೇಕಾಗುವುದು. ಇದೇ ಕಾರಣದಿಂದಾಗಿ ನಿಮ್ಮ ವೈದ್ಯರು ಸೂಚಿಸುವ ಯಾವುದೇ (  ಹಳೆಯ ಅಥವಾ ನೂತನ) ಔಷದಗಳನ್ನು ಸೇವಿಸಲು ಆರಂಭಿಸಿದ ಬಳಿಕ ಉದ್ಭವಿಸಬಹುದಾದ ಆಡ್- ಅನಪೇಕ್ಷಿತ ಹಾಗೂ ಪ್ರತಿಕೂಲ ಪರಿಣಾಮಗಳನ್ನು ನಿಮ್ಮ ವೈದ್ಯರಿಗೆ ತಿಳಿಸಿರಿ. ಏಕೆಂದರೆ ಕ್ಲಿನಿಕಲ್ ಟ್ರಯಲ್ಸ್ ನ ಸಂದರ್ಭದಲ್ಲಿ ಕಂಡುಬರದಿದ್ದ ಕೆಲವೊಂದು ಪರಿಣಾಮಗಳು, ಮುಂದೆ ಎಂದಾದರೂ ಕಂಡುಬರುವ ಸಾಧ್ಯತೆಗಳಿವೆ. ಜೊತೆಗೆ ಇಂತಹ ಪರಿಣಾಮಗಳನ್ನು ತಿಳಿದುಕೊಳ್ಳುವುದರಿಂದ ವೈದ್ಯರಿಗೆ ಮತ್ತು ಫಾರ್ಮಕೋ ವಿಜಿಲೆನ್ಸ್ ಕೇಂದ್ರಗಳಿಗೆ ನಿರ್ದಿಷ್ಟ ಔಷದವೊಂದರ ಅಪರೂಪದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಹಾಗೂ ಇದೇ ಔಷದದ ಬಗ್ಗೆ ಇದೇ ರೀತಿಯ ಮಾಹಿತಿಗಳು ಅನ್ಯ ವೈದ್ಯರಿಗೂ ದೊರೆತಿದ್ದಲ್ಲಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಇವರ ಮೂಲಕ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ. 

ಕೊನೆಯ ಮಾತು 

ವಿಶ್ವಾದ್ಯಂತ ವೈದ್ಯಕೀಯ ಸಂಶೋಧಕರು ಆವಿಷ್ಕರಿಸುತ್ತಿರುವ ಔಷದಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಇದೇ ಸಂದರ್ಭದಲ್ಲಿ ವಿಶ್ವದ ಶೇ.೩೦ ರಷ್ಟು ಜನತೆಗೆ ಅತ್ಯವಶ್ಯಕ ಹಾಗೂ ಜೀವರಕ್ಷಕ ಔಷದಗಳು ದುರ್ಲಭವೆನಿಸುತ್ತಿವೆ. ಕೆಲವೊಂದು ರಾಷ್ಟ್ರಗಳಲ್ಲಂತೂ ಈ ಪ್ರಮಾಣವು ಶೇ. ೫೦ ರಷ್ಟಿದೆ. 

ಇಷ್ಟು ಮಾತ್ರವಲ್ಲ, ಲಭ್ಯ ಔಷದಗಳಿಗೆ ಮಣಿಯದ ಅಥವಾ ಪ್ರತಿರೋಧವನ್ನು ಗಳಿಸಿಕೊಂಡಿರುವ ರೋಗಾಣುಗಳ ಸಂಖ್ಯೆಯೂ ವೃದ್ಧಿಸುತ್ತಲೇ ಇದೆ. ಜೊತೆಗೆ ಅನೇಕ ರೋಗಾಣುಗಳು ಕಾಲಕ್ರಮೇಣ ಪರಿವರ್ತನೆಗೊಂಡು, ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದಾಗಿ, ತಮ್ಮ ಸಾಂಕ್ರಾಮಿಕತೆ ಮತ್ತು ಮಾರಕತೆಗಳನ್ನು ಮೆರೆಯುತ್ತಿವೆ. ಆದರೂ ವೈದ್ಯಕೀಯ ವಿಜ್ಞಾನಿಗಳು "ಹಠ ಬಿಡದ ತ್ರಿವಿಕ್ರಮ' ನಂತೆಯೇ, ವಿನೂತನ ಔಷದಗಳ ಸಂಶೋಧನೆಯಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೪- ೧೨- ೨೦೦೮ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


Tuesday, January 7, 2014

Dangerous dust



                         ಎಲ್ಲೆಲ್ಲೂ ಧೂಳು- ಸ್ಥಳೀಯರ ಗೋಳು 

ತನ್ನ ಪ್ರಜೆಗಳ ಆರೋಗ್ಯ ರಕ್ಷಣೆ ಮತ್ತು ವ್ಯಾಧಿಪೀಡಿತರ ಚಿಕಿತ್ಸೆಗಳಿಗಾಗಿ ಸರಕಾರವು ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಜನಸಾಮಾನ್ಯರನ್ನು ಪೀಡಿಸುವ ವ್ಯಾಧಿಕಾರಕ ಸಮಸ್ಯೆಗಳು ಅನಿಯಂತ್ರಿತವಾಗಿ ಹೆಚ್ಚುತ್ತಿವೆ. ಇಂತಹ ಒಂದು ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಹಿಂಗಾರು ಮಳೆ ಹಿಂದಕ್ಕೆ ಸರಿದು ಇದೀಗ ಎರಡು ತಿಂಗಳುಗಳೇ ಸಂದಿವೆ. ಇದರೊಂದಿಗೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಮತ್ತೆ ಆರಂಭವಾಗಿವೆ. ಹಳೆಯ ಕಟ್ಟಡಗಳನ್ನು ಕೆಡಹುವ- ಹೊಸ ಕಟ್ಟಡಗಳನ್ನು ನಿರ್ಮಿಸುವ, ಹಳೆಯ ರಸ್ತೆಗಳನ್ನು ವಿಸ್ತರಿಸುವ- ಹೊಸ ರಸ್ತೆಗಳನ್ನು ನಿರ್ಮಿಸುವ ಮತ್ತು ರಸ್ತೆ ಹೊಂಡಗಳನ್ನು ಮಣ್ಣು ತುಂಬಿಸಿ ತಾತ್ಕಾಲಿಕವಾಗಿ ದುರಸ್ತಿಪಡಿಸುವ ಕಾಮಗಾರಿಗಳ ಭರಾಟೆ ಜೋರಾಗಿಯೇ ನಡೆಯುತ್ತಿದೆ. ತತ್ಪರಿಣಾಮವಾಗಿ ನಗರದಾದ್ಯಂತ 'ಧೂಳಿನ ಸಮಸ್ಯೆ" ವ್ಯಾಪಕವಾಗಿ ಕಂಡುಬರುತ್ತಿದೆ. ಇದರೊಂದಿಗೆ ಮಾಗಿಯ ಛಳಿಯ ತೀವ್ರತೆ ಈ ಬಾರಿ ತುಸು ಅಧಿಕವಾಗಿದ್ದು, ಬೆಳಗಿನಜಾವ ಮಂಜು ಮುಸುಕಿದ ವಾತಾವರಣ ಇರುತ್ತದೆ. ಇಷ್ಟೆಲ್ಲಾ ಸಾಲದೆನ್ನುವಂತೆ ಅತಿಯಾದ ವಾಹನಗಳ ಸಂಚಾರದಿಂದಾಗಿ ಇವುಗಳು ಉಗುಳುವ ಹೊಗೆಯಲ್ಲಿನ ಅಪಾಯಕಾರಿ ಅಂಶಗಳು ವಾತಾವರಣದಲ್ಲಿ ಹೇರಳವಾಗಿದ್ದು, ನಾವು ಉಸಿರಾಡುವ ಗಾಳಿಯೊಂದಿಗೆ ನಮ್ಮ ಶ್ವಾಸಕೋಶಗಳನ್ನು  ಪ್ರವೇಶಿಸುವ ಮೂಲಕ ನಮ್ಮ ಆರೋಗ್ಯವನ್ನು ಹಾಳುಗೆಡವುತ್ತಿವೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ,  ವೈವಿಧ್ಯಮಯ ಆರೋಗ್ಯದ  ಸಮಸ್ಯೆಗಳು ಸ್ಥಳೀಯರನ್ನು ಕಾಡುತ್ತಿವೆ. 

ಅನಾರೋಗ್ಯಕ್ಕೆ ಮೂಲ 

ಧೂಳು, ಮಂಜು ಮತ್ತು ಚಳಿಗಾಲ ಹಾವಳಿಯಿಂದಾಗಿ ಬಹುತೇಕ ಜನರಲ್ಲಿ ಮೂಗು, ಗಂಟಲು, ಶ್ವಾಸಕೋಶಗಳು, ಕಣ್ಣು, ಕಿವಿ ಮತ್ತು ಚರ್ಮಗಳಿಗೆ ಸಂಬಂಧಿಸಿದ ಹಲವಾರು ವ್ಯಾಧಿಗಳು ಬಾಧಿಸುತ್ತಿವೆ. ಇವುಗಳಲ್ಲಿ ಧೂಳಿನ ಅಲರ್ಜಿಯಿಂದಾಗಿ ಉದ್ಭವಿಸುವ ಶೀನು, ನೆಗಡಿ, ಕೆಮ್ಮು, ಆಸ್ತಮಾ, ಗಂಟಲು ಹಾಗೂ ಧ್ವನಿಪೆಟ್ಟಿಗೆಗಳ ಸೋಂಕು, ಶ್ವಾಸಕೋಶಗಳ ಉರಿಯೂತ ಮತ್ತು ಜ್ವರ, ಕಣ್ಣುಗಳ ಉರಿಯೂತ ಹಾಗೂ ಸೋಂಕು, ಕಿವಿಯ ಸೋಂಕು, ಅಲರ್ಜಿ ಮತ್ತು ತುರಿಕೆಗಲಂತಹ ಚರ್ಮವ್ಯಾಧಯಾಗಳು ಹಲವಾರು ವಾರಗಳಿಂದ ಸ್ಥಳೀಯರನ್ನು, ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಪೀಡಿಸುತ್ತಿವೆ. ವಿಶೇಷವೆಂದರೆ ಸೋಂಕಿನಿಂದ ಉದ್ಭವಿಸಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಮರ್ಥ್ಯವುಳ್ಳ ವ್ಯಾಧಿಗಳು ಶಾಲಾಕಾಲೇಜುಗಳು, ಸಭೆ ಸಮಾರಂಭಗಳು, ಹೋಟೆಲ್- ಸಭಾಂಗಣಗಳು, ಜನಜಂಗುಳಿ ಇರುವ ಸ್ಥಳಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಸುಲಭವಾಗಿ ಹರಡುತ್ತವೆ. ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಅವಶ್ಯಕ ಚಿಕಿತ್ಸೆಯನ್ನು ಪಡೆದುಕೊಂಡರೂ, ವ್ಯಾಧಿಪೀದಿತ ಅವಧಿಯಲ್ಲಿ ತಮ್ಮ ಕಾಯಿಲೆಯನ್ನು ತಮ್ಮೊಂದಿಗೆ ಸಂಪರ್ಕವಿರುವ ವ್ಯಕ್ತಿಗಳಿಗೆ ಅನಾಯಾಸವಾಗಿ ಹರಡುತ್ತಾರೆ. ಇನ್ನು ಚಿಕಿತ್ಸೆಯನ್ನೇ ಪಡೆಯದ ವ್ಯಕ್ತಿಗಳು ಸುದೀರ್ಘಕಾಲ ಈ ಸಮಸ್ಯೆಯಿಂದ ಬಳಲುವುದರಿಂದ, ಚಿಕಿತ್ಸೆಯನ್ನು ಪಡೆದುಕೊಂಡ ವ್ಯಕ್ತಿಗಳಿಗಿಂತಲೂ ಅಧಿಕ ಜನರಿಗೆ ತಮ್ಮ ಕಾಯಿಲೆಯನ್ನು ಹರಡಬಲ್ಲರು. ಈ ರೀತಿಯಲ್ಲಿ ಅಸಾಮಾನ್ಯ ಸಮಸ್ಯೆಗಳಿಗೆ ಕಾರನವೆನಿಸುತ್ತಿರುವ "ಧೂಳು", ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ. 

ಸ್ತಳೀಯ ಸಂಸ್ಥೆಗಳು, ಚುನಾಯಿತ ಜನ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯೊಂದಿಗೆ ಜನಸಾಮಾನ್ಯರೂ ಕೈಜೋಡಿಸಿದಲ್ಲಿ, ಈ ಸಮಸ್ಯೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸುವುದು ಅಸಾಧ್ಯವೇನಲ್ಲ. ಆದರೆ ಇದಕ್ಕೆ ಬೇಕಾದ "ಇಚ್ಛಾ ಶಕ್ತಿ" ಯ ಕೊರತೆಯಿಂದಾಗಿ ಇಂತಹ ಅನೇಕ ಸಮಸ್ಯೆಗಳು ಪರಿಹಾರಗೊಲ್ಲದೆ ಉಳಿದುಕೊಂಡಿರುವುದು ಮಾತ್ರ ಸುಳ್ಳೇನಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


Thursday, January 2, 2014

Know your medicines




   ನೀವು ಸೇವಿಸುವ ಔಷದಗಳ ಬಗ್ಗೆ ನಿಮಗೆ ತಿಳುವಳಿಕೆ ಇರಲಿ 

  ತಮ್ಮ ರೋಗಿಗಳನ್ನು ಬಾಧಿಸುತ್ತಿರುವ ವ್ಯಾಧಿಯನ್ನು ನಿಖರವಾಗಿ ಪತ್ತೆ ಹಚ್ಚಿದ ಬಳಿಕ, ರೋಗಿಯ ವಯಸ್ಸು, ಕಾಯಿಲೆಯ ತೀವ್ರತೆ ಹಾಗೂ ಅವಧಿ, ಆತನಲ್ಲಿ ಇರಬಹುದಾದ ಇತರ ಕಾಯಿಲೆಗಳು, ಇದಕ್ಕೂ ಮುನ್ನ ಯಾವುದೇ ಔಷದ ಸೇವನೆಯಿಂದ ಉದ್ಭವಿಸಿರಬಹುದಾದ ಅಲರ್ಜಿ ಅಥವಾ ಪ್ರತಿಕೂಲ ಪರಿಣಾಮಗಳೇ ಮುಂತಾದ ಅಂಶಗಳನ್ನು ಗಮನದಲ್ಲಿರಿಸಿ, ವೈದ್ಯರು ಇದೀಗ ನೀಡಬೇಕಾದ ಔಷದಗಳು ಮತ್ತು ಅವುಗಳ ಪ್ರಮಾಣಗಳನ್ನು ನಿರ್ಧರಿಸುತ್ತಾರೆ. ಇದೇ ಕಾರಣದಿಂದಾಗಿ ನಿಮ್ಮ ವೈದ್ಯರು ನಿಮಗೆ ನೀಡಿರುವ ಔಷದಗಳನ್ನು ಯಾವುದೇ ಕಾರಣಕ್ಕೂ ಇತರರಿಗೆ ನೀಡುವುದು ಅಯಾಚಿತ ಹಾಗೂ ಅಪಾಯಕಾರಿ ಸಮಸ್ಯೆಗಳಿಗೆ ಮೂಲವೆನಿಸಬಹುದು. 

ಸಾಮಾನ್ಯವಾಗಿ ವೈದ್ಯರು ತಮ್ಮ ರೋಗಿಗಳ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ನೀಡುವ "ಚಿಕಿತ್ಸೆ' ಯಲ್ಲಿ ಔಷದಗಳು ನಿಸ್ಸಂದೇಹವಾಗಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಅಂತೆಯೇ ವಿವಿಧ ರೀತಿಯ ಔಷದಗಳು ಅತ್ಯಂತ ಪರಿಣಾಮಕಾರಿ ಎನಿಸುವುದರೊಂದಿಗೆ, ಕೆಲ ಸಂದರ್ಭಗಳಲ್ಲಿ ಮಾರಕ ಹಾಗೂ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ. ಇದೇ ಕಾರಣದಿಂದಾಗಿ ಯಾವುದೇ ಆರೋಗ್ಯದ ಸಮಸ್ಯೆಗಳಿಗಾಗಿ ವೈದ್ಯರು ನಿಮಗೆ ನೀಡುವ ಔಷದಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ವೈದ್ಯರಿಂದ ಪಡೆದುಕೊಳ್ಳುವುದು ಮತ್ತು "ಸ್ವಯಂ ವೈದ್ಯ"ರಾಗದಿರುವುದು ಹಿತಕರವೆನಿಸುವುದು. 

ಔಷದಗಳಿಂದ ಅಪಾಯ?

ಚಿಕೂನ್ ಗುನ್ಯಾ ಕಾಯಿಲೆಯಿಂದ ಪೀದಿತನಾಗಿದ್ದ ಕೂಲಿ ಕಾರ್ಮಿಕ ಕೃಷ್ಣಪ್ಪನು ವೈದ್ಯರು ನೀಡಿದ್ದ ಔಷದಗಳನ್ನು ಕ್ರಮಬದ್ಧವಾಗಿ ಸೇವಿಸಿದ್ದರೂ, ವೈದ್ಯರ ಸಲಹೆಯಂತೆ ವಿಶ್ರಾಂತಿಯನ್ನು ಮಾತ್ರ ಪಡೆದಿರಲಿಲ್ಲ. ಜ್ವರಮುಕ್ತನಾದೊಡನೆ ಮತ್ತೆ ತೋಟದ ಕೆಲಸಕ್ಕೆ ಮರಳಿದ್ದ ಆತನಿಗೆ ಒಂದೆರಡು ದಿನಗಳ ಬಳಿಕ ಜ್ವರ ಹಾಗೂ ಗಂತುನೋವುಗಳು ಮತ್ತೆ ಮರುಕಲಿಸಿದ್ದವು. ತನ್ನ ಸಲಹೆಯನ್ನು ಪರಿಪಾಲಿಸದ ರೋಗಿಗಳ ಮೇಲೆ ಹರಿಹಾಯುವ ವೈದ್ಯರ ಉರಿನಾಲಗೆಗೆ ಹೆದರಿ ಚಿಕಿತ್ಸ್ಸಾಲಯಕ್ಕೆ ತೆರಳದ ಕೃಷ್ಣಪ್ಪನು, ವೈದ್ಯರು ತನಗೆ ಹಿಂದೆ ನೀಡಿದ್ದ ಮಾತ್ರೆಗಳನ್ನು ಔಷದ ಅಂಗಡಿಯಿಂದ ಖರೀದಿಸಿ ಸೇವಿಸಿದ್ದನು. ಒಂದೆರಡು ದಿನಗಳಲ್ಲೇ ಗುಣಮುಖನಾದ ಕೃಷ್ಣಪ್ಪನಿಗೆ, ಒಂದೆರಡು ತಾಸು ಕೆಲಸ ಮಾಡಿದೊಡನೆ ಗಂಟು- ಸೊಂಟ ನೋವು ಬಾಧಿಸಲಾರಂಭಿಸಿತ್ತು. ಇದೇ ಕಾರಣದಿಂದಾಗಿ ತನಗೆ ಬೇಕೆನಿಸಿದಾಗ ಔಷದ ಅಂಗಡಿಯಿಂದ ನೋವಿನ ಮಾತ್ರೆಗಳನ್ನು ಖರೀದಿಸಿ ಸೇವಿಸಲು ಆರಂಭಿಸಿದ್ದನು. 

ದಿನವಿಡೀ ಶಾರೀರಿಕಶ್ರಮದ ಕೆಲಸಗಳನ್ನು ಮಾಡುತ್ತಿದ್ದುದರಿಂದ ಸಂಜೆಯಾಗುತ್ತಲೇ ತೀವ್ರಗೊಳ್ಳುತ್ತಿದ್ದ ಗಂಟುನೋವು, ಮಾತ್ರೆ ನುಂಗಿದ ಬಳಿಕ ಕಡಿಮೆಯಾಗುತ್ತಿದ್ದರೂ, ಬೆಳಿಗ್ಗೆ ಎದ್ದೊಡನೆ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಇದರಿಂದಾಗಿ ದಿನದಲ್ಲಿ ಎರಡುಬಾರಿ ವೇದನಾ ಶಾಮಕ ಗುಳಿಗೆಗಳನ್ನು ನುಂಗುವುದು ಕೃಷ್ಣಪ್ಪನಿಗೆ ರೂಢಿಯಾಯಿತು. 

ನೋವು ನಿವಾರಕ ಗುಳಿಗೆಗಳನ್ನು ದಿನನಿತ್ಯ ಸೇವಿಸಲು ಆರಂಭಿಸಿದ ಕೆಲದಿನಗಳ ಬಳಿಕ ಆತನಿಗೆ ಸಣ್ಣಗೆ ಹೊಟ್ಟೆನೋವು ಮತ್ತು ಎದೆಯುರಿಯಂತಹ ತೊಂದರೆಗಳು ಬಾಧಿಸಿದರೂ ಉಪೇಕ್ಷಿಸಿದ ಕೃಷ್ಣಪ್ಪನಿಗೆ, ವಾರ ಕಳೆಯುವಷ್ಟರಲ್ಲಿ ಹೊಟ್ಟೆನೋವು ಉಲ್ಬಣಿಸಿ ರಕ್ತಮಿಶ್ರಿತ ವಾಂತಿಯಾಗಿತ್ತು. ತತ್ ಕ್ಷಣ ಆಸ್ಪತ್ರೆಗೆ ದಾಖಲಿಸಲ್ಪಟ್ಟ ಆತನನ್ನು ಪರೀಕ್ಷಿಸಿದ ವೈದ್ಯರಿಗೆ, ಆತನನ್ನು ಸುದೀರ್ಘ ಕಾಲದಿಂದ ಬಾಧಿಸುತ್ತಿದ್ದ ಜಠರದ ಹುಣ್ಣು ಉಳ್ಬನಿಸಿರಿವುದು ಪತ್ತೆಯಾಗಿತ್ತು. ಅಂತೆಯೇ ಈ ಸಮಸ್ಯೆಗೆ ಆತನು ಅತಿಯಾಗಿ ಸೇವಿಸಿದ್ದ ನೋವುನಿವಾರಕ ಗುಲಿಗೆಗಳೇ ಕಾರಣವೆಂದು ಖಚಿತವಾಗಿತ್ತು. 

ಕ್ರಿಷ್ಣಪ್ಪನಂತೆಯೇ ಅನೇಕ ಜನರು ವೈದ್ಯರು ಒಂದುಬಾರಿ ಸೂಚಿಸಿದ ಔಷದಗಳನ್ನು ಮತ್ತೆ ಅವರ ಸಲಹೆ ಪಡೆಯದೇ ಹಾಗೂ ವೈದ್ಯರ ಸಲಹೆಯನ್ನೇ ಪಡೆದುಕೊಳ್ಳದೆ ಅಥವಾ ಬಂಧುಮಿತ್ರರ ಸಲಹೆಯಂತೆ ಔಷದಗಳನ್ನು ಅಂಗಡಿಗಳಿಂದ ಖರೀದಿಸಿ ಸೇವಿಸುತ್ತಾರೆ. ಹಾಗೂ ಇದೇ ಕಾರಣದಿಂದಾಗಿ ಅನಾವಶ್ಯಕ ತೊಂದರೆಗಳಿಗೆ ಒಳಗಾಗುತ್ತಾರೆ. ಕೆಲಸಂದರ್ಭಗಳಲ್ಲಿ ಈ ರೀತಿಯ "ಸ್ವಯಂ ವೈದ್ಯ" ಪ್ರಯೋಗಗಳು ಪ್ರಾಣಾಪಾಯಕ್ಕೂ ಕಾರಣವೆನಿಸುದು ಅಪರೂಪವೇನಲ್ಲ. 

ರೋಗಿಗಳ ಪ್ರಮಾದ

ಇತ್ತೀಚಿನ ಕೆಲವರ್ಷಗಳಲ್ಲಿ ಔಷದ ಸೇವನೆಯ ವಿಚಾರದಲ್ಲಿ ರೋಗಿಗಳ ಹಾಗೂ ಜನಸಾಮಾನ್ಯರ ನಿರ್ಲಕ್ಷ್ಯಗಳಿಂದಾಗಿ ಸಂಭವಿಸುತ್ತಿರುವ ಪ್ರಮಾದಗಳ ಪ್ರಮಾಣವು ಮಿತಿಮೀರಿದೆ ಎಂದು ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ, ಸ್ಯಾಂಟಿಯಾಗೊದ ಸಂಶೋಧಕರು ಧೃಡೀಕರಿಸಿದ್ದಾರೆ. ಈ ಸಂಶೋಧನೆಯ ಅಂಗವಾಗಿ ೧೯೮೩ ರಿಂದ  ೨೦೦೪ ನೆ ಇಸವಿಯ ಅವಧಿಯಲ್ಲಿ ಅಮೇರಿಕಾದಲ್ಲಿ ಮೃತಪಟ್ಟಿದ್ದ ೫ ದಶಲಕ್ಷ  ವ್ಯಕ್ತಿಗಳ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದಾಗ, ಇವರಲ್ಲಿ ಸುಮಾರು ೨ ಲಕ್ಷ ಜನರು ಔಷದ ಸೇವನಾ ಕ್ರಮದಲ್ಲಿ ಸಂಭವಿಸಿದ್ದ ವ್ಯತ್ಯಯಗಳಿಂದಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ಆದರೆ ಭಾರತದಲ್ಲಿ ಇಂತಹ ಅಧ್ಯಯನಗಳು ನಡೆಯದೇ ಇರುವುದರಿಂದ, ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿಲ್ಲ. 

ಔಷದಗಳು ಅಪಾಯಕಾರಿಯೇ?

ಮನುಷ್ಯನ ಆರೋಗ್ಯವನ್ನು ರಕ್ಷಿಸಲು, ಕೆಲವೊಂದು ವ್ಯಾಧಿಗಳು ಬಾಧಿಸದಂತೆ ತಡೆಗಟ್ಟಲು ಮತ್ತು ಅನಾರೋಗ್ಯಪೀಡಿತರನ್ನು ರೋಗಮುಕ್ತರನ್ನಾಗಿಸಲು ಔಷದಗಳು ಅತ್ಯಂತ ಉಪಯುಕ್ತ ಅಸ್ತ್ರಗಳೆನಿಸಿವೆ. ಅದೇ ರೀತಿಯಲ್ಲಿ ಔಷದಗಳನ್ನು ಎರಡು ಅಲಗಿನ ಅಸ್ತ್ರಗಳಿಗೂ ಹೋಲಿಸಬಹುದಾಗಿದೆ. ಏಕೆಂದರೆ ಆಧುನಿಕ ಔಷದಗಳು ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನು ತೋರುವ ಮತ್ತು ಕೆಲ ಸಂದರ್ಭಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ. 

ಜನಸಾಮಾನ್ಯರು ಅನಾರೋಗ್ಯಪೀಡಿತರಾದಾಗ ತಮ್ಮ ನಂಬಿಗಸ್ತ ವೈದ್ಯರನ್ನು ಸಂದರ್ಶಿಸಿ ಚಿಕಿತ್ಸೆಯನ್ನು ಪಡೆದುಕೊಂಡರೂ, ಅಧಿಕತಮ ಜನರು ತಮ್ಮನ್ನು ಬಾಧಿಸುತ್ತಿರುವ ವ್ಯಾಧಿ ಯಾವುದು ಹಾಗೂ ಇದನ್ನು ಗುಣಪಡಿಸುವ ಸಲುವಾಗಿ ನೀಡಿರುವ ಔಷದಗಳು ಮತ್ತು ಇವುಗಳ ಸಾಧಕ- ಬಾಧಕಗಳ ಬಗ್ಗೆ ವೈದ್ಯರಿಂದ ಅವಶ್ಯಕ ಮಾಹಿತಿಗಳನ್ನೇ ಪಡೆದುಕೊಳ್ಳುವುದಿಲ್ಲ. ಅದೇ ರೀತಿಯಲ್ಲಿ ವೈದ್ಯರು ನೀಡಿರುವ ಔಷದಗಳನ್ನು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಮತ್ತು ನಿಗದಿತ ಅವಧಿಗೆ ಸೇವಿಸುವುದೇ ಇಲ್ಲ!. ಈ ರೀತಿಯ ನಿರ್ಲಕ್ಷ್ಯಗಳಿಂದಾಗಿ ಬಹುತೇಕ ಸಂದರ್ಭಗಳಲ್ಲಿ ರೋಗಿಯ ಕಾಯಿಲೆಯು ಸಂಪೂರ್ಣವಾಗಿ ಗುಣವಾಗದೇ ಉಳಿದುಕೊಳ್ಳುವುದರೊಂದಿಗೆ ಅನಪೇಕ್ಷಿತ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. 

ಇವೆಲ್ಲಾ ಮಾಹಿತಿಗಳನ್ನು ರೋಗಿಗಳು ಅರಿತುಕೊಂಡಲ್ಲಿ ವೈದ್ಯರು ನೀಡುವ ಚಿಕಿತ್ಸೆಯು ಇನ್ನಷ್ಟು ಪರಿಣಾಮಕಾರಿ ಎನಿಸುವುದರೊಂದಿಗೆ, ಅನಾವಶ್ಯಕ ತೊಂದರೆಗಳು ಉದ್ಭವಿಸುವುದನ್ನು ತಡೆಗಟ್ಟಬಹುದಾಗಿದೆ. 

ನಿಮ್ಮ ವೈದ್ಯರು ನೀಡುವ ಔಷದಗಳನ್ನು ಜಾಣ್ಮೆಯಿಂದ, ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿ ಬಳಸಲು, ಔಷದಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀವು ತಿಳಿದಿರಲೇ ಬೇಕು. ಇವುಗಳಲ್ಲಿ ಔಷದಗಳ ಹೆಸರು, ಇವುಗಳನ್ನು ಸೇವಿಸುವ ಇದ್ದೇಶ ಹಾಗೂ ಪ್ರಮಾಣ, ಇವುಗಳ ಅಡ್ಡ - ದುಷ್ಪರಿಣಾಮಗಳು ಮತ್ತು ಇಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಅಥವಾ ಚಿಕಿತ್ಸೆ, ಇವುಗಳೊಂದಿಗೆ ಸೇವಿಸಬಾರದ ಇತರ ಔಷದಗಳ ವಿವರ,ಸೇವಿಸಬೇಕಾದ ಸಮಯ, ಪ್ರಮಾಣ ಮತ್ತು ಅವಧಿ, ಇವುಗಳನ್ನು ಸೇವಿಸುವಾಗ ವರ್ಜಿಸಬೇಕಾದ ಖಾದ್ಯಪೆಯಗಳು, ಇವುಗಳನ್ನು ಸಂಗ್ರಹಿಸಿ ಇರಿಸಬೇಕಾದ ವಿಧಾನಗಳನ್ನು ವೈದ್ಯರು ಅಥವಾ ಫಾರ್ಮಸಿಸ್ಟ್ ಬಳಿಯಲ್ಲಿ ಕೇಳಿ ತಿಳಿದುಕೊಳ್ಳುವುದು ಸುರಕ್ಷಿತವೂ ಹೌದು. 

ರಾಸಾಯನಿಕ ಔಷದಗಳನ್ನು ಮಾತ್ರೆ, ಕ್ಯಾಪ್ಸೂಲ್, ಇಂಜೆಕ್ಷನ್, ಸಿರಪ್, ಮುಲಾಮು ಇವೆ ಮುಂತಾದ ಹಲವಾರು ರೂಪಗಳಲ್ಲಿ ಸಿದ್ಧಪಡಿಸುತ್ತಾರೆ. ತನ್ಮೂಲಕ ರೋಗಿಗಳ ಬಳಕೆಗೆ ಇವು ಅನುಕೂಲಕರವೆನಿಸುತ್ತವೆ. ಉದಾಹರಣೆಗೆ ವಾನ್ತಿಯಾಗುತ್ತಿರುವ ರೋಗಿಗೆ ಅಥವಾ ಸ್ಮೃತಿ ತಪ್ಪಿದ ರೋಗಿಗಳಿಗೆ ಮಾತ್ರೆ-ಸಿರಪ್ ಇತ್ಯಾದಿಗಳನ್ನು ನೀಡುವುದು ಅಸಾಧ್ಯವೆನಿಸುವುದರಿಂದ, ಇಂತಹ ರೋಗಿಗಳಿಗೆ ಅವಶ್ಯಕ ಔಷದಗಳನ್ನು ಇಂಜೆಕ್ಷನ್ ರೂಪದಲ್ಲಿ ನೀಡಬೇಕಾಗುವುದು. ಆದರೆ ಒಂದು ಔಷದವು ಅನೇಕ ರೂಪಗಳಲ್ಲಿ ಲಭ್ಯವಿದ್ದರೂ, ಇವುಗಳಲ್ಲಿನ ರಾಸಾಯನಿಕ ಔಷದಗಳ ಪ್ರಮಾಣವು ಏಕರೀತಿಯಲ್ಲಿ ಇರುವುದಿಲ್ಲ. ಇದೇ ಕಾರಣದಿಂದಾಗಿ ಇಂತಹ "ಬಹುರೂಪಿ" ಔಷದಗಳ ಬಗ್ಗೆ ಸಮರ್ಪಕ ಮಾಹಿತಿಯಿಲ್ಲದೆ ಇವುಗಳನ್ನು ಸೇವಿಸುವುದು ಸರಿಯಲ್ಲ. 

ಅವಧಿ ಮೀರಿದ ಔಷದಗಳು 

ಔಷದಗಳನ್ನು ಖರೀದಿಸುವಾಗ ಮತ್ತು ಸೇವಿಸುವ ಮುನ್ನ, ಇವುಗಳ ಹೊರಕವಚಗಳ ಮೇಲೆ ಮುದ್ರಿಸಿರುವ "ಅಂತಿಮ ಅವಧಿ"ಯನ್ನು ಗಮನಿಸಿ.  ತಯಾರಕರು ನಿಗದಿಸಿದ ದಿನಾಂಕದ ಬಳಿಕ ಈ ಔಷದವು ಸೇವನೆಗೆ ಯೋಗ್ಯವಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. 

ನಾವು ಸೇವಿಸುವ ಖಾದ್ಯಪೇಯಗಳಂತೆಯೇ ಔಷದಗಳನ್ನು ತಯಾರಿಸಿದ ಬಳಿಕ ನಿಧಾನವಾಗಿ ಇವುಗಳಲ್ಲಿನ ಸತ್ವಗಳು ನಶಿಸಲು ಆರಂಭಿಸುತ್ತವೆ. ವಾತಾವರಣದಲ್ಲಿನ ಬೆಳಕು, ಉಷ್ಣತೆ ಮತ್ತು ತೆವಾಮ್ಶಗಳೂ ಇದಕ್ಕೆ ಕಾರಣವೆನಿಸುತ್ತವೆ. ಇದೇ ಕಾರಣದಿಂದಾಗಿ ತಯಾರಕರ ಸೂಚನೆಯಂತೆ ಔಷದಗಳನ್ನು ಸಂಗ್ರಹಿಸಿ ಇಡಬೇಕಾಗುತ್ತದೆ. ಆದರೆ ನಿಗದಿತ ಅವಧಿಯಲ್ಲಿ ಸಿದ್ಧ ಔಷದಗಳು ಕಳೆದುಕೊಳ್ಳಬಹುದಾದ ಸತ್ವಗಳನ್ನು ಸರಿದೂಗಿಸಲು, ಇವುಗಳನ್ನು ತಯಾರಿಸುವಾಗ ಒಂದಿಷ್ಟು ಹೆಚ್ಚುವರಿ ಔಷದೀಯ ಅಂಶಗಳನ್ನು ಸೇರಿಸಲಾಗುತ್ತದೆ. ಇದರಿಂದಾಗಿ ನಿಗದಿತ ಅವಧಿಯಲ್ಲಿ ಈ ಔಷದಗಳಲ್ಲಿನ ಸತ್ವಗಳು ಕೊಂಚ ನಶಿಸಿದರೂ, ನಿಗದಿತ ಪ್ರಮಾಣಕ್ಕಿಂತ ಕಡಿಮೆಯಾಗುವುದಿಲ್ಲ. 

ಅಂತೆಯೇ ನಿಗದಿತ ಅವಧಿಯ ಮರುದಿನವೇ ಯಾವುದೇ ಔಷದಗಳು ಅಯೋಗ್ಯವೆನಿಸುವುದಿಲ್ಲ.ಏಕೆಂದರೆ ಈ ಔಷದಗಳಲ್ಲಿನ ಸತ್ವಗಳು ನಿಗದಿತ ದಿನಾಂಕದ ಬಳಿಕ ಇನ್ನಷ್ಟು ನಶಿಸುವ ಸಾಧ್ಯತೆಗಳಿರುವುದರಿಂದ, ನಿಮ್ಮ ಆರೋಗ್ಯದ ಸಮಸ್ಯೆ ಇವುಗಳ ಸೇವನೆಯಿಂದ ಪರಿಹಾರಗೊಳ್ಳದೆ ಇರುವುದರೊಂದಿಗೆ, ಇನ್ನಷ್ಟು ಉಲ್ಬಣಿ ಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ ನಿರ್ದಿಷ್ಟ ಅವಧಿಯ ಬಳಿಕ ಇವುಗಳನ್ನು ಸೇವಿಸಿದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ, ನಿರ್ದಿಷ್ಟ ದಿನಾಂಕವನ್ನು ಹೊರಕವಚದ ಮೇಲೆ ಮುದ್ರಿಸಲಾಗುತ್ತದೆ. ವಿಶೇಷವೆಂದರೆ ಕೆಲವೊಂದು ಸಂದರ್ಭಗಳಲ್ಲಿ ಕೆಲ ಔಷದಗಳು ನಿಗದಿತ ದಿನಾಂಕಕ್ಕಿಂತ ಮೊದಲೇ ಕೆಟ್ಟುಹೋಗುವುದುಂಟು. ಇವುಗಳ ಬಣ್ಣ, ವಾಸನೆ ಮತ್ತು ಭೌತಿಕ ಬದಲಾವಣೆಗಳಿಂದ ಇದನ್ನು ಸುಲಭದಲ್ಲೇ ಪತ್ತೆ ಹಚ್ಚಬಹುದು. 

ಅಂತಿಮವಾಗಿ ಔಷದಗಳ ಬಗ್ಗೆ ಅವಶ್ಯಕ ಮಾಹಿತಿಗಳನ್ನು ಅರಿತುಕೊಳ್ಳುವುದರಿಂದ, ಇವುಗಳ ಸೇವನೆಯಿಂದ ಆರೋಗ್ಯ ಬಿಗಡಾಯಿಸುವ ಅಥವಾ ಅನಾರೋಗ್ಯ ಪೀಡಿತರ ಕಾಯಿಲೆಗಳು ಇನ್ನಷ್ಟು ಉಲ್ಬಣಿಸುವ ಮತ್ತು ಶಾರೀರಿಕ ಹಾಗೂ ಮಾನಸಿಕ ತೊಂದರೆಗಳಿಗೆ ಗುರಿಯಾಗುವುದನ್ನು ಸುಲಭದಲ್ಲೇ ನಿವಾರಿಸಿಕೊಳ್ಳಬಹುದು ಈನುವುದನ್ನು ನೆನೆಪಿಡಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೭-೦೮-೨೦೦೮ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.