Wednesday, October 21, 2015

GOVT. BANS PLASTIC CARRY BAGS ETC.


           ಪ್ಲಾಸ್ಟಿಕ್ ನಿಷೇಧದ ನಿರ್ಧಾರ : ನಿಜಕ್ಕೂ ಆರೋಗ್ಯಕರ

ಕರ್ನಾಟಕ ರಾಜ್ಯ ಸರ್ಕಾರವು ಇದೀಗ ಪರಿಸರ ಸಂರಕ್ಷಣಾ ಕಾಯಿದೆಯ ಕಲಂ  ೫ ರನ್ವಯ ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳ ಮೇಲೆ ನಿಷೇಧವನ್ನು ಹೇರುವ ಕರಡು ಅಧಿಸೂಚನೆಗೆ ಹಸಿರು ನಿಶಾನೆಯನ್ನು ತೋರಿದೆ. ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯು ಈ ಬಗ್ಗೆ ಸೂಚನೆಯನ್ನು ಪ್ರಕಟಿಸಲಿದ್ದು, ಸಾರ್ವಜನಿಕರಿಂದ ಸೂಕ್ತ ಸಲಹೆಗಳು ಅಥವಾ ಆಕ್ಷೇಪಗಳನ್ನು ಆಹ್ವಾನಿಸಲಿದೆ. ರಾಜ್ಯ ಮಂತ್ರಿ ಮಂಡಲದ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿರುವ ಕರಡು ಅಧಿಸೂಚನೆಯಲ್ಲಿ ೪೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಲಕೋಟೆಗಳು, ಜಾಹೀರಾತುಗಳಲ್ಲಿ ಬಳಸುವ ಫ್ಲೆಕ್ಸ್, ಪ್ಲಾಸ್ಟಿಕ್ ತೋರಣಗಳು ಹಾಗೂ ಧ್ವಜಗಳು, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆಗಳು, ಥರ್ಮೋಕೂಲ್ ನಿರ್ಮಿತ ತಟ್ಟೆ ಮತ್ತು ಲೋಟ ಇತ್ಯಾದಿ ೧೩ ವಿಧದ ವಸ್ತುಗಳ ತಯಾರಿಕೆ, ಸಾಗಾಣಿಕೆ, ವಿತರಣೆ ಮತ್ತು ಮಾರಾಟಗಳನ್ನೇ ನಿಷೇಧಿಸುವ ಪ್ರಸ್ತಾವನೆಯಿದೆ. ಪ್ರಾಯಶಃ ಇದೇ ವರ್ಷದ ಅಂತ್ಯಕ್ಕೆ ಮುನ್ನ ಈ ಅಧಿಸೂಚನೆಯು ಜಾರಿಯಾಗಲಿದೆ.

ನಿಷೇಧ ಪರಿಣಾಮಕಾರಿಯಾಗಲಿ

೨೦೧೧ ರಲ್ಲಿ ದೇಶಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯಗಳ ನಿಭಾವಣೆ ಮತ್ತು ನಿರ್ವಹಣೆಗಳ ನಿಯಮ ೨೦೧೧ ಜಾರಿಗೆ ಬಂದಿದ್ದು, ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳ ತಯಾರಿಕೆ ಮತ್ತು ಮಾರಾಟಗಳನ್ನು ನಿಷೇಧಿಸಲಾಗಿತ್ತು. ಅಂತೆಯೇ ಕೆಲ ರಾಜ್ಯಗಳು ಮತ್ತು ಮಹಾನಗರಗಳು ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳ ಮಾರಾಟವನ್ನು ನಿಷೇಧಿಸಿದ್ದವು.ಆದರೆ ಈ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರ ಅಸಹಕಾರಗಳಿಂದಾಗಿ, ಇಂದಿಗೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳನ್ನು ದೇಶಾದ್ಯಂತ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ!.

ಪ್ಲಾಸ್ಟಿಕ್ ಉದ್ದಿಮೆಗಳ ವಕ್ತಾರರು ಹೇಳುವಂತೆ ರಾಜ್ಯದಲ್ಲಿ ತೆಳ್ಳನೆಯ ಪ್ಲಾಸ್ಟಿಕ್ ಕೈಚೀಲಗಳನ್ನು ತಯಾರಿಸದೆ ಇದ್ದರೂ, ನೆರೆಯ ರಾಜ್ಯಗಳಿಂದ ಇವುಗಳನ್ನು ಕದ್ದುಮುಚ್ಚಿ ಆಮದು ಮಾಡಲಾಗುತ್ತಿದೆ. ಇದರಿಂದಾಗಿ ನಮ್ಮ ಉತ್ಪನ್ನಗಳು ಮಾರಾಟವಾಗದೇ ನಷ್ಟ ಸಂಭವಿಸುತ್ತಿದೆ. ಆದರೆ ಕೆಲ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾತ್ರಿಯ ಪಾಳಿಯಲ್ಲಿ ತಯಾರಿಸಿ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ೨೦ ಮೈಕ್ರಾನ್ ದಪ್ಪದ ಹಾಗೂ ಇದಕ್ಕೂ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲಗಳ ಬೆಲೆಗಳ ನಡುವೆ ಅಗಾಧ ಅಂತರ ಇರುವುದರಿಂದಾಗಿ, ತೆಳ್ಳಗಿನ ಪ್ಲಾಸ್ಟಿಕ್ ಚೀಲಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೂ ಇದೇ ಕಾರಣದಿಂದಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೆನಿಸುತ್ತಿದೆ.

ತ್ಯಾಜ್ಯಗಳ ಸಮಸ್ಯೆ 

ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಗಲಿರುಳು ಕಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಆಂಶಿಕವಾಗಿ ಪರಿಹರಿಸಬಲ್ಲ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ತಳೆದಿದೆ. ಕೊನೆಗೂ ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ ಮತ್ತೆ ಚಲಿಸಲು ಆರಂಭಿಸಿದ ಪರಿಣಾಮವಾಗಿ, ಇದೀಗ ೪೦ ಮೈಕ್ರಾನ್ ಗಳಿಗಿಂತ ತೆಳ್ಳಗಿನ ಕೈಚೀಲ ಮತ್ತಿತರ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ದಿನಬಳಕೆಯ ವಸ್ತುಗಳನ್ನು ನಿಷೇಧಿಸಲು ರಾಜ್ಯ ಮಂತ್ರಿಮಂಡಲವು ನಿರ್ಧರಿಸಿದೆ. ಅನೇಕ ವರ್ಷಗಳಿಂದ ಇಂತಹ ದಿಟ್ಟ ನಿರ್ಧಾರವೊಂದನ್ನು ತಳೆಯಲು ಸರ್ಕಾರವನ್ನು ಒತ್ತಾಯಿಸುತ್ತಿದ್ದ ಸ್ವಯಂ ಸೇವಾ ಸಂಘಟನೆಗಳ ಆಗ್ರಹಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ನಿರ್ಧಾರವು ಅನುಷ್ಠಾನಗೊಂಡ ಬಳಿಕ ರಾಜ್ಯದ ಪ್ರತಿಯೊಂದು ಹಳ್ಳಿಗಳಿಂದ ಆರಂಭಿಸಿ, ರಾಜಧಾನಿಯಾಗಿರುವ ಬೆಂಗಳೂರಿನ ತನಕ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯು ತಕ್ಕ ಮಟ್ಟಿಗೆ ಪರಿಹಾರಗೊಳ್ಳಲಿದೆ. ಆದರೆ ಈ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳಬೇಕಿದ್ದಲ್ಲಿ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಅಸಂಖ್ಯ ಗ್ರಾಹಕ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ವಿವಿಧ ರೀತಿಯ ಪ್ಲಾಸ್ಟಿಕ್ ಗಳನ್ನೂ ನಿಷೇಧಿಸಲೇಬೇಕು. ಇದಕ್ಕೆ ತಪ್ಪಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಇವುಗಳಿಂದಾಗಿ ಉದ್ಭವಿಸುವ ವೈವಿಧ್ಯಮಯ ಸಮಸ್ಯೆಗಳನ್ನು ಸಮರ್ಪಕವಾಗಿ ಸಂಪೂರ್ಣವಾಗಿ ಪರಿಹರಿಸುವುದು ಅಸಾಧ್ಯವೆನಿಸಲಿದೆ.

ಕೆಲವರ್ಷಗಳ ಹಿಂದೆ ರಾಜ್ಯ ಸರ್ಕಾರವು ೨೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ನಿಷೇಧಿಸಿತ್ತು. ನಿಷೇಧ ಜಾರಿಯಾದ ಕೆಲವೇ ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಅತ್ಯಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳು, ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿದ್ದವು!. ವಿಶೇಷವೆಂದರೆ ಈ ಬಾರಿ ೪೦ ಮೈಕ್ರಾನ್ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾಜ್ಯದಲ್ಲಿ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡಲು ಅವಕಾಶವನ್ನು ನೀಡಲಾಗಿದೆ. ಅರ್ಥಾತ್ ೪೦ ಮೈಕ್ರಾನ್ ಗಿಂತ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಪ್ಲಾಸ್ಟಿಕ್ ಉತ್ಪನ್ನಗಳ ಘಟಕಗಳು ತಯಾರಿಸಬಹುದಾಗಿದೆ. ಹಾಗೂ ಇದೇ ಕಾರಣದಿಂದಾಗಿ ಇಂತಹ ಉತ್ಪನ್ನಗಳು ರಾಜ್ಯದ ಮಾರುಕಟ್ಟೆಗಳಲ್ಲಿ ಹಿಂದಿನಂತೆ ಗುಪ್ತವಾಗಿ ಮಾರಾಟವಾಗುವ ಸಾಧ್ಯತೆಗಳೂ ಇವೆ. ಇದನ್ನು ನಿಶ್ಚಿತವಾಗಿ ನಿಯಂತ್ರಿಸಬೇಕಿದ್ದಲ್ಲಿ, ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲಿ ತಯಾರಿಸುವ ಮತ್ತು ವಿದೇಶಗಳಿಗೆ ರಫ್ತು ಮಾಡುವುದನ್ನೂ ನಿಷೆಧಿಸಲೇಬೇಕಾಗುವುದು.

ತ್ಯಾಜ್ಯಗಳು ಕಡಿಮೆಯಾಗಲಿವೆ

ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಕಾಣಸಿಗುವ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಸಭೆ - ಸಮಾರಂಭಗಳ ಸಂದರ್ಭದಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ನಿರ್ಮಿತ ತಟ್ಟೆ, ಲೋಟ, ಚಮಚ ಮತ್ತಿತರ ತ್ಯಾಜ್ಯಗಳ ಪ್ರಮಾಣವು ನಿಸ್ಸಂದೇಹವಾಗಿ ಕಡಿಮೆಯಾಗಲಿದೆ. ಇದರಿಂದಾಗಿ ರಸ್ತೆಯ ಬದಿಗಳಲ್ಲಿನ ಚರಂಡಿಗಳಲ್ಲಿ ವಿಸರ್ಜಿಸಲ್ಪಡುವ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗಲಿದ್ದು, ಇವುಗಳನ್ನು ತಿಂದು ಅಸುನೀಗುವ ಪಶುಪಕ್ಷಿಗಳ ಸಂಖ್ಯೆಯೂ ಇಳಿಮುಖವಾಗಲಿದೆ. ಇದಲ್ಲದೇ ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಹರಿದು ನದಿ ಮತ್ತು ಸಮುದ್ರಗಳನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗಲಿದೆ.  ಇಷ್ಟು ಮಾತ್ರವಲ್ಲ, ಈ ತ್ಯಾಜ್ಯಗಲಿಂದಾಗಿ ಸಂಭವಿಸುತ್ತಿದ್ದ  ಜಲಪ್ರದೂಷಣೆಯ ಪ್ರಮಾಣವು ನಿಯಂತ್ರಿಸಲ್ಪಡುವುದಲ್ಲದೇ, ಜಲಚರಗಳ ಅಕಾಲಿಕ ಮರಣದ ಪ್ರಮಾಣವೂ ಕಡಿಮೆಯಾಗಲಿದೆ.

ಸರ್ಕಾರದ ಈ ನಿರ್ಧಾರದಿಂದ ಖಾಲಿಜಾಗಗಳು ಮತ್ತು ಚರಂಡಿಗಳಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಕೊಳಚೆನೀರಿನ ಹರಿವಿಗೆ ಅಡಚಣೆಯಾಗುತ್ತಿದ್ದ ಕಾರಣದಿಂದಾಗಿ ಉದ್ಭವಿಸುತ್ತಿದ್ದ ಅನೇಕ ಆರೋಗ್ಯದ ಸಮಸ್ಯೆಗಳು ಮತ್ತು ಧಾರಾಕಾರ ಮಳೆ ಸುರಿದಾಗ ಉದ್ಭವಿಸುವ ಕೃತಕ ನೆರೆಯ ಸಮಸ್ಯೆಗಳು  ಸ್ವಾಭಾವಿಕವಾಗಿಯೇ ನಿಯಂತ್ರಿಸಲ್ಪಡಲಿವೆ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಗೆ ಬೆಂಕಿ ಹಚ್ಚಿ ಸುಡುವುದರಿಂದ ಉತ್ಪನ್ನವಾಗುವ ಅಪಾಯಕಾರಿ ಹಸಿರುಮನೆ ಅನಿಲಗಳಿಂದಾಗಿ ಹೆಚ್ಚುವ ಜಾಗತಿಕ ತಾಪಮಾನ ಮತ್ತು ತತ್ಪರಿಣಾಮವಾಗಿ ಉದ್ಭವಿಸುವ ಹವಾಮಾನದ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳೂ ಕಡಿಮೆಯಾಗಲಿವೆ.

ಇವೆಲ್ಲಕ್ಕೂ ಮಿಗಿಲಾಗಿ ರಾಜದ ಸ್ಥಳೀಯ ಸಂಸ್ಥೆಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿರುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆ, ಸಾಗಾಟ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ತಗಲುವ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ. ಇದರೊಂದಿಗೆ ವಿದೇಶಗಳಿಂದ ಆಮದು ಮಾಡುತ್ತಿರುವ ಕಚ್ಚಾ ತೈಲಕ್ಕಾಗಿ ಸರ್ಕಾರವು ವ್ಯಯಿಸುತ್ತಿರುವ ಅಮೂಲ್ಯವಾದ ವಿದೇಶೀ ವಿನಿಮಯವೂ  ಉಳಿತಾಯವಾಗಲಿದೆ.

ಆದರೂ ಕೇವಲ ಕೆಲವಿಧದ ಪ್ಲಾಸ್ಟಿಕ್ ಗಳನ್ನು ನಿಷೇಧಿಸುವುದರಿಂದ ತ್ಯಾಜ್ಯಗಳ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳುವ ಸಾಧ್ಯತೆಗಳಿಲ್ಲ. ಹಾಗೂ ಇದೇ ಕಾರಣದಿಂದಾಗಿ ಸರ್ಕಾರವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಪ್ರಸ್ತುತ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಿದಂತೆಯೇ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಇವುಗಳು ಉತ್ಪನ್ನವಾಗುವ ಮೂಲಗಳಿಂದಲೇ ಪ್ರತ್ಯೇಕಿಸಿ ಸಂಗ್ರಹಿಸುವ, ಸುರಕ್ಷಿತವಾಗಿ ಸಾಗಿಸುವ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಗಳನ್ನು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲೂ ಒದಗಿಸಬೇಕು. ಉದಾಹರಣೆಗೆ  ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುವುದನ್ನು ಕಡ್ಡಾಯಗೊಳಿಸುವ ಮೂಲಕ, ರಸ್ತೆಗಳ ನಿರ್ಮಾಣದ ವೆಚ್ಚವನ್ನು ಉಳಿಸುವ, ರಸ್ತೆಗಳ ಆಯುಷ್ಯವನ್ನು ಹೆಚ್ಚಿಸುವ ಮತ್ತು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಹಾಗೂ ಉಪಯುಕ್ತವೆನಿಸುವಂತೆ ವಿಲೇವಾರಿ ಮಾಡುವ ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲೇಬೇಕು. ಇಂತಹ ಉಪಕ್ರಮಗಳನ್ನು ಶೀಘ್ರದಲ್ಲಿ ಜಾರಿಗೊಳಿಸದೇ, ಕೇವಲ ನಿರ್ದಿಷ್ಟ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಅಪೇಕ್ಷಿತ ಫಲಿತಾಂಶ ದೊರೆಯದು ಎನ್ನುವುದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ನಿಷೇಧಿಸಲ್ಪಡಲಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ವರ್ತಕರು ಖರೀದಿಸದಿರುವ ಮತ್ತು ಗ್ರಾಹಕರು ತಿರಸ್ಕರಿಸುವ ಇಚ್ಛಾಶಕ್ತಿಯನ್ನು ತೋರದಿದ್ದಲ್ಲಿ, ಸರ್ಕಾರದ ಪ್ರಯತ್ನವು ನಿಶ್ಚಿತವಾಗಿಯೂ ನಿಷ್ಪ್ರಯೋಜಕ ಎನಿಸಲಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


Friday, October 16, 2015

G Category sites - Politicians grab it!



          ಜಿ ಪ್ರವರ್ಗದ ನಿವೇಶನ :ರಾಜಕಾರಣಿಗಳಿಂದ ಆಪೋಶನ

ಸಮಾಜ ಸೇವೆ ಮಾಡುವ ಸಲುವಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದಾಗಿ ಹೇಳುವ ರಾಜಕಾರಣಿಗಳು, ಒಂದುಬಾರಿ ಚುನಾವಣೆಯಲ್ಲಿ ಗೆದ್ದ  ಬಳಿಕ ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸಾಕಷ್ಟು ಶ್ರಮಿಸುತ್ತಾರೆ. ಅಂತೆಯೇ ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸಿದಷ್ಟು ಪ್ರಮಾಣದಲ್ಲಿ ತಮ್ಮ ಸಂಬಳ, ಭತ್ಯೆ, ಪಿಂಚಿಣಿ ಮತ್ತಿತರ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ, ಸಾಕಷ್ಟು ಸಂಪತ್ತನ್ನೂ ಗಳಿಸುವತ್ತ ಗಮನ ಹರಿಸುತ್ತಾರೆ. ಇಂತಹ ಸವಲತ್ತುಗಳಲ್ಲಿ ಕ್ಷುಲ್ಲಕ ಬೆಲೆಗೆ ಬೆಂಗಳೂರಿನಲ್ಲಿ  “ ಜಿ ಪ್ರವರ್ಗದ ನಿವೇಶನ “ ವನ್ನು ಮಂಜೂರು ಮಾಡಿಸಿಕೊಳ್ಳುವುದೂ ಸೇರಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಕಳೆದ ಹಲವರು ವರ್ಷಗಳಿಂದ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ " ಜಿ ಪ್ರವರ್ಗದ ನಿವೇಶನ " ಗಳ ವಿಚಾರವು, ಇದೀಗ ಮತ್ತೊಮ್ಮೆ ಮಾಧ್ಯಮಗಳಿಗೆ ಗ್ರಾಸವೆನಿಸುತ್ತಿದೆ. ರಾಜ್ಯದ ಉಚ್ಛ ನ್ಯಾಯಾಲಯದ ಆದೇಶದಂತೆ ಸ್ಥಗಿತಗೊಂಡಿದ್ದ ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯು ಮತ್ತೊಮ್ಮೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗೂ ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆಯ ನಿಯಮಗಳಿಗೆ ರಾಜ್ಯ ಸರ್ಕಾರವು ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ. ವಿಶೇಷವೆಂದರೆ ಕೆಲ ವರ್ಷಗಳ ಹಿಂದೆ ಉಚ್ಛ ನ್ಯಾಯಾಲಯವು ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯ ಪ್ರಕರಣದ ಬಗ್ಗೆ ತೀರ್ಪನ್ನು ನೀಡುವಾಗ, ರಾಜ್ಯ ಸರ್ಕಾರವು ಬಿಡಿ ನಿವೇಶನಗಳ ಹಂಚಿಕೆಯ ನಿಯಮಗಳನ್ನು ಸಮರ್ಪಕವಾಗಿ ರೂಪಿಸುವಂತೆ ನೀಡಿದ್ದ ಸಲಹೆಯನ್ನು ಈ ತಿದ್ದುಪಡಿಗಾಗಿ ಬಳಸಿಕೊಂಡಿದೆ!.

ಜಿ ಪ್ರವರ್ಗ ರಾಜಕಾರಣಿಗಳಿಗಲ್ಲ

 ಕರ್ನಾಟಕದಲ್ಲಿ ಜರಗಿದ್ದ ಹಲವಾರು ಹಗರಣಗಳಲ್ಲಿ ದುಬಾರಿ ಬೆಲೆಯ ಗೃಹ ನಿವೇಶನಗಳನ್ನು ಅತ್ಯಲ್ಪ ಬೆಲೆಗೆ  ರಾಜ್ಯದ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಇವರ ಬಂಧುಮಿತ್ರರಿಗೆ ಹಂಚಿದ್ದ ಹಗರಣವೂ ಸೇರಿದೆ. ಜಿ ಪ್ರವರ್ಗದ ನಿವೇಶನಗಳನ್ನು ಈ ರೀತಿಯಲ್ಲಿ ವಿತರಿಸುವುದು ಸರಿಯಲ್ಲ ಎಂದು ರಾಜ್ಯದ ಉಚ್ಛ ನ್ಯಾಯಾಲಯವೇ ೨೦೧೦ ರ ತೀರ್ಪಿನಲ್ಲಿ ಉಲ್ಲೇಖಿಸಿದೆ.  ೧೯೭೬ ರ ಬಿ ಡಿ ಎ ನಿಯಮಗಳಂತೆ  ಗೃಹ ನಿವೇಶನಗಳನ್ನು ಹಂಚುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲದಿದ್ದರೂ,ಸಹಸ್ರಾರು ನಿವೇಶನಗಳನ್ನು ಹಂಚಿದ್ದು ಕಾನೂನುಬಾಹಿರವೆಂದು ಹೇಳಿದ್ದು, ಈ ರೀತಿಯಲ್ಲಿ ನಿವೇಶನಗಳನ್ನು ಹಂಚುವುದನ್ನು ನಿಲ್ಲಿಸುವಂತೆ ಆದೇಶಿಸಿತ್ತು. ಈ ತೀರ್ಪು ಹೊರಬಿದ್ದ ಬಳಿಕವೂ, ರಾಜ್ಯ ಸರ್ಕಾರವು ಕೆಲ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತಿತರ ೨೨ ಪ್ರಭಾವಶಾಲಿ ವ್ಯಕ್ತಿಗಳಿಗೆ ೨೦೧೧ ರಲ್ಲಿ ಮತ್ತೆ ಜಿ ಪ್ರವರ್ಗದ ನಿವೇಶನಗಳನ್ನು ಮಂಜೂರು ಮಾಡಿತ್ತು!.

೧೯೯೭ ರಿಂದ ೨೦೧೧ ರ ಅವಧಿಯಲ್ಲಿ ಜಿ ಪ್ರವರ್ಗದನ್ವಯ ೧೧೨೮ ನಿವೇಶನಗಳನ್ನು ಮುಖ್ಯಮಂತ್ರಿಗಳ  ಕೋಟಾದಲ್ಲಿ ವಿತರಿಸಲಾಗಿತ್ತು. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ . ಕೃಷ್ಣ – ೩೩೪, ಜೆ. ಎಚ್. ಪಟೇಲ್ – ೨೨೨, ಧರ್ಮ ಸಿಂಗ್ – ೭೬, ಕುಮಾರಸ್ವಾಮಿ – ೨೮೬ ಮತ್ತು ಯಡ್ಡ್ಯೂರಪ್ಪ – ೨೧೦ ನಿವೇಶನಗಳನ್ನು ವಿತರಿಸಿದ್ದು, ಇದರಲ್ಲಿ ರಾಜ್ಯದ ಸಂಸದರು ಮತ್ತು ಶಾಸಕರಿಗೆ ಸಿಂಹಪಾಲು ಸಂದಿದೆ.

ಜಿ ಪ್ರವರ್ಗದ ನಿವೇಶನಗಳನ್ನು ಹಂಚುವ ಅಧಿಕಾರವನ್ನು ರಾಜ್ಯ ಸರ್ಕಾರ – ಮುಖ್ಯಮಂತ್ರಿಗಳಿಗೆ ನೀಡಿರುವುದನ್ನು ರದ್ದುಪಡಿಸುವಂತೆ ಹಿರಿಯ ವಕೀಲರೊಬ್ಬರು ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ  ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ೨೦೦೯ ರ ಅಂತ್ಯದಲ್ಲಿ ಸಲ್ಲಿಸಿದ್ದರು. ಜಿ ಪ್ರವರ್ಗದ ನಿವೇಶನಗಳ ವಿತರಣೆಗೆ ತಡೆಯಾಜ್ಞೆ ನೀಡಿದ ನ್ಯಾಯಾಲಯವು, ತದನಂತರ ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಹೊಂದಿರದವರಿಗೆ ನಿವೇಶನಗಳನ್ನು ನೀಡಬಹುದು ಎಂದಿತ್ತು. ಇದಲ್ಲದೇ ಬಿ ಡಿ ಎ ನಿವೇಶನಗಳ ಹಂಚಿಕೆಗಾಗಿ ಸೂಕ್ತ ನಿಯಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಹಾಗೂ ಜಿ ಪ್ರವರ್ಗದ ನಿವೇಶನಗಳ ಮಂಜೂರಾತಿಯ ಬಗ್ಗೆ ವಿಚಾರಣೆಯನ್ನು ನಡೆಸಲು ನ್ಯಾ. ಪದ್ಮರಾಜ ಆಯೋಗವನ್ನು ನೇಮಿಸಿತ್ತು. ಆಯೋಗವು ವಿಚಾರಣೆಯನ್ನು ನಡೆಸಿದ ಬಳಿಕ ೨೦೦೪ – ೨೦೧೧ ರ ಅವಧಿಯಲ್ಲಿ ನೀಡಿದ್ದ ೩೦೮ ನಿವೇಶನಗಳ ಮಂಜೂರಾತಿಯನ್ನು ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆಯೋಗದ ವರದಿಯನ್ನು ತಿರಸ್ಕರಿಸಿದ್ದ ಸರ್ಕಾರವು ಇದಕ್ಕಾಗಿ ಮತ್ತೊಂದು ಸಮಿತಿಯನ್ನು ನೇಮಿಸಿತ್ತು!.  

ಪ್ರಸ್ತುತ ಉಚ್ಛ ನ್ಯಾಯಾಲಯವು ಬಿ ಡಿ ಎ ನಿಯಮಗಳನ್ನು ಸಮರ್ಪಕವಾಗಿ ರೂಪಿಸುವಂತೆ ಉಚ್ಛ ನ್ಯಾಯಾಲಯ ಹಿಂದೆ ನೀಡಿದ್ದ ಆದೇಶವನ್ನು ಬಳಸಿಕೊಂಡಿರುವ ಸರ್ಕಾರವು, ರಾಜ್ಯದ ಶಾಸಕರು ಮತ್ತು ಸಂಸದರಿಗೆ ಜಿ ಪ್ರವರ್ಗದ ನಿವೇಶನಗಳನ್ನು ನೀಡಲು ಅನುಕೂಲವಾಗುವಂತೆ ಬಿ ಡಿ ಎ ನಿಯಮಗಳಿಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ.

ಬಿ ಡಿ ಎ ನಿಯಮಗಳು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತಾನು ನಿರ್ಮಿಸಿರುವ ಬಡಾವಣೆಗಳಲ್ಲಿನ ಬಿಡಿ ನಿವೇಶನಗಳನ್ನು ವಿತರಿಸಲು ಕೆಲವೊಂದು ನಿಯಮಗಳನ್ನು ರೂಪಿಸಿದೆ. ನಿಯಮ ೫ ( ನಿವೇಶನಗಳ ಮಂಜೂರಾತಿ ) ೧೦೮೪ ಮತ್ತು ೧೯೯೭ ರಂತೆ ಬಿಡಿ ನಿವೇಶನಗಳ ವಿತರಣೆಗಾಗಿ ಏಳು  ಪ್ರವರ್ಗಗಳನ್ನು ಗುರುತಿಸಿದೆ. ಇವುಗಳಲ್ಲಿ ಎ ಪ್ರವರ್ಗಕ್ಕೆ ಸೇರಿದ ನಿವೇಶನಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ವಿತರಿಸಬೇಕಾಗುವುದು. ಬಿ ಪ್ರವರ್ಗದ ನಿವೇಶನಗಳನ್ನು ಕ್ರೀಡೆಗಳಲ್ಲಿ ಉನ್ನತ ಸಾಧನೆಗೈದವರಿಗೆ, ಸಿ ಪ್ರವರ್ಗ – ಕಲೆ, ವಿಜ್ಞಾನ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಸಾಧನೆಗೈದವರಿಗೆ, ಡಿ – ಮಾಜಿ ಸೈನಿಕರಿಗೆ, ಎಫ್ – ಕರ್ತವ್ಯದಲ್ಲಿರುವಾಗ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರಿಗೆ ಮತ್ತು ಜಿ ಪ್ರವರ್ಗದ ನಿವೇಶನಗಳನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ವ್ಯಕ್ತಿಗಳಿಗೆ ( ಸರ್ಕಾರದ ಸೂಚನೆಯಂತೆ,ಇಂತಹ ವ್ಯಕ್ತಿಗಳಿಗೆ ನಿವೇಶನಗಳನ್ನು ಮಂಜೂರು ಮಾಡುವ ಅಧಿಕಾರವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಿರುವುದರಿಂದ ಇದನ್ನು ಮುಖ್ಯಮಂತ್ರಿಗಳ ವಿವೇಚನಾ ಕೋಟಾ ಎಂದು ಕರೆಯಲಾಗುತ್ತಿದೆ ) ವಿತರಿಸಬೇಕಾಗುತ್ತದೆ. ಆದರೆ ಬಿ ಡಿ ಎ ರೂಪಿಸಿರುವ ನಿಯಮಗಳನ್ನು ಅನೇಕ ಸಂದರ್ಭಗಳಲ್ಲಿ ರಾಜಾರೋಷವಾಗಿ ಉಲ್ಲಂಘಿಸಲಾಗಿದೆ. ಈ ವಿಚಾರದಲ್ಲಿ ರಾಜಕಾರಣಿಗಳು, ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಇವರ ಬಂಧುಮಿತ್ರರಿಗೆ ( ಜಿ ಪ್ರವರ್ಗದ ನಿವೇಶನಗಳನ್ನು ಪಡೆಯುವ ಅರ್ಹತೆ ಇಲ್ಲದಿದ್ದರೂ ) ದುಬಾರಿ ಬೆಲೆಯ ನಿವೇಶನಗಳನ್ನು ಅತ್ಯಲ್ಪ ಬೆಲೆಗೆ ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದೆ.

ಬಿ ಡಿ ಎ ನಿಯಮಗಳಂತೆ ಜಿ ಪ್ರವರ್ಗದ ನಿವೇಶನಗಳನ್ನು ಪಡೆಯುವ ವ್ಯಕ್ತಿಗಳು ಸ್ವಂತ ಮನೆ ಅಥವಾ ನಿವೇಶನವನ್ನು ಹೊಂದಿರಬಾರದು. ಅದಾಗಲೇ ಒಂದು ನಿವೇಶನವನ್ನು ಪಡೆದುಕೊಂಡವರು ಮತ್ತೊಂದು ನಿವೇಶನವನ್ನು ಪಡೆಯುವಂತಿಲ್ಲ. ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ಕಟ್ಟಲು ಪಡೆದ ನಿವೇಶನವನ್ನು ಮುಂದಿನ ೧೦ ವರ್ಷಗಳ ಕಾಲ ಮಾರುವಂತಿಲ್ಲ. ಏಕೆಂದರೆ ನಿವೇಶನ ಮಂಜೂರಾದ ೧೦ ವರ್ಷಗಳ ಬಳಿಕವೇ ಇದು ಫಲಾನುಭವಿಗಳ ಹೆಸರಿಗೆ ವರ್ಗಾವಣೆಯಾಗುತ್ತದೆ. ಹಾಗೂ ಈ ೧೦ ವರ್ಷಗಳ ಅವಧಿಯಲ್ಲಿ ಫಲಾನುಭವಿಗಳು ವಾರ್ಷಿಕ ೧೦ ರೂ. ಸ್ಥಳ ಬಾಡಿಗೆಯನ್ನು ಬಿ ಡಿ ಎ ಗೆ ಪಾವತಿಸಬೇಕು. ನಿವೇಶನ ಮಂಜೂರಾದ ಬಳಿಕ ಐದು ವರ್ಷಗಳಲ್ಲಿ ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ನಿರ್ಮಿಸಬೇಕೇ ಹೊರತು, ಬೇರೆ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈ ನಿವೇಶನ ಅಥವಾ ಕಟ್ಟಡವನ್ನು ಪರಭಾರೆ ಮಾಡುವಂತಿಲ್ಲ. ಈ ಷರತ್ತುಗಳನ್ನು ಅಥವಾ ೧೯೮೪ ರ ನಿವೇಶನ ಹಂಚಿಕೆ ನಿಯಮಗಳನ್ನು ಉಲ್ಲಂಘಿಸಿದಲ್ಲಿ, ೧೫ ದಿನಗಳ ನೋಟೀಸನ್ನು ನೀಡಿ, ಯಾವುದೇ ಪರಿಹಾರವನ್ನು ನೀಡದೇ ಈ ಸ್ವತ್ತನ್ನು ಬಿ ಡಿ ಎ ಸ್ವಾಧೀನ ಪಡಿಸಿಕೊಳ್ಳಬಹುದು. ಇದಲ್ಲದೆ ಅನ್ಯ ಕೆಲವು ಷರತ್ತುಗಳಿದ್ದರೂ, ಜಿ ಪ್ರವರ್ಗದ ನಿವೇಶನಗಳನ್ನು ಪಡೆದಿರುವ ಬಹುತೇಕ ರಾಜಕಾರಣಿಗಳು ಅಧಿಕತಮ ಷರತ್ತುಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ಕಟ್ಟಲು ಪಡೆದಿದ್ದ ನಿವೇಶನದಲ್ಲಿ ಐದು ಅಂತಸ್ತಿನ ವಾಣಿಜ್ಯ ಸಂಕೀರ್ಣವನ್ನೇ ನಿರ್ಮಿಸಿದ್ದಾರೆ!. ಬಿ ಡಿ ಎ ಶರತ್ತುಗಳ ಉಲ್ಲಂಘನೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಲ್ಲಿ, ನೂರಾರು ಜಿ ಪ್ರವರ್ಗದ ನಿವೇಶನಗಳನ್ನು ಯಾವುದೇ ಪರಿಹಾರ ನೀಡದೇ ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಆದರೆ “ ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು? “ ಎನ್ನುವ ಸಮಸ್ಯೆ ಇದಾಗಿದೆ.

ಬಿ ಡಿ ಎ ನೀಡಿದ್ದ ಮಾಹಿತಿ

ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ೨೦೦೯ ರಲ್ಲಿ ಬಳಕೆದಾರರ ಹಿತರಕ್ಷಣಾ ವೇದಿಕೆಯು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಲಭಿಸಿದ್ದ ಮಾಹಿತಿ ಇಂತಿದೆ. ಬಿ ಡಿ ಎ ನಿವೇಶನ ಹಂಚಿಕೆ ನಿಯಮಾವಳಿ ೧೯೮೪ ರನ್ವಯ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ. ಆದರೂ ೦೬-೦೮-೧೯೯೭ ರ ಸರ್ಕಾರದ ಮಾರ್ಗಸೂಚಿಯನುಸಾರ ಬಿ ಡಿ ಎ ಬಿಡಿ ನಿವೇಶನಗಳನ್ನು ವಿಲೇವಾರಿ ಮಾಡಬೇಕಾಗಿರುತ್ತದೆ.ಸದರಿ ಮಾರ್ಗಸೂಚಿಯನ್ವಯ ಸರ್ಕಾರ ನಿರ್ದೇಶನ ನೀಡುವ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಿಗೆ ( ಪ್ರಾಯಶಃ ಸಾರ್ವಜನಿಕ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ್ದ – ಉನ್ನತ ಸಾಧನೆಗೈದ ಎನ್ನುವ ಅರ್ಥದಲ್ಲಿ ) ಜಿ ಪ್ರವರ್ಗದ ನಿವೇಶನಗಳನ್ನು ಹಂಚಿಕೆ ಮಾಡಲು ಆವಕಾಶವಿರುತ್ತದೆ ಎನ್ನುವ ಮಾಹಿತಿಯನ್ನು ನೀಡಲಾಗಿತ್ತು. ಆದರೆ ಇದೀಗ ಮತ್ತೆ ರಾಜಕಾರಣಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರವು, ಜಿ ಪ್ರವರ್ಗದ ನಿವೇಶನಗಳನ್ನು ಮುಖ್ಯಮಂತ್ರಿಗಳ ಆದೇಶದಂತೆ ವಿತರಿಸಲು ಬಿ ಡಿ ಎ ನಿಯಮಗಳಿಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ. ಇದರಂತೆ ಲಭ್ಯ ನಿವೇಶನಗಳಲ್ಲಿ ಶೇ.೩೦ ರಷ್ಟನ್ನು ಸಾರ್ವಜನಿಕ ಸೇವೆಯಲ್ಲಿರುವವರಿಗೆ ( ಅರ್ಥಾತ್ ರಾಜಕಾರಣಿಗಳಿಗೆ ) ವಿತರಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ.  ತತ್ಪರಿಣಾಮವಾಗಿ ಮುಂದಿನ ಕೆಲವೇ ತಿಂಗಳುಗಳಲ್ಲಿ ರಾಜ್ಯದ ಅನೇಕ ರಾಜಕಾರಣಿಗಳು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಅತ್ಯಲ್ಪ ಬೆಲೆಗೆ ದುಬಾರಿ ನಿವೇಶನಗಳನ್ನು ಪಡೆಯಲಿದ್ದಾರೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು






Thursday, October 8, 2015

RTI ACT 2005 - LOOSING ITS TEETH



      ಮಾಹಿತಿಹಕ್ಕು ಕಾಯಿದೆ : ಇನ್ನಷ್ಟು ದುರ್ಬಲಗೊಳ್ಳುವುದೇ? 

ದೇಶಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಸಂದಿವೆ. ಕಳೆದ ಹತ್ತು ವರ್ಷಗಳಲ್ಲಿ ಈ ಕಾಯಿದೆಯ ಯಶಸ್ಸಿನಿಂದ ಕುಪಿತರಾಗಿರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಇದನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಇಂದಿಗೂ ಮುಂದುವರೆಸಿದ್ದಾರೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭವ್ಯ ಭಾರತದ ಪ್ರಜಾಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗಳು ದುರ್ಲಭವೆನಿಸಿವೆ. ತತ್ಪರಿಣಾಮವಾಗಿ ದೇಶದ ಪ್ರಜೆಗಳು ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರುಬಾರಿ ಅಲೆದಾಡುವುದು ಮತ್ತು ಅಧಿಕಾರಿಗಳಿಂದ ಅನಾವಶ್ಯಕ ಕಿರುಕುಳಗಳಿಗೆ ಒಳಗಾಗುವುದು ಅನಿವಾರ್ಯವೆನಿಸಿದೆ. ನಮ್ಮನ್ನಾಳುವ ರಾಜಕೀಯ ನೇತಾರರು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳ ಇಂತಹ ವರ್ತನೆಗಳಿಂದಾಗಿ, ಪ್ರಜಾಪ್ರಭುತ್ವದಲ್ಲಿ ಪ್ರಜಾಪೀಡನೆಯೇ  ಮೂಲಮಂತ್ರವೆನಿಸಿದೆ!.

ಈ ಅವ್ಯವವಸ್ಥೆಯನ್ನು ಸರಿಪಡಿಸಲು ದೇಶದ ಪ್ರಜ್ಞಾವಂತ ನಾಗರಿಕರು ಪ್ರಯತ್ನಿಸದಿದ್ದರೂ, ಬೆರಳೆಣಿಕೆಯಷ್ಟು ಸಂಖ್ಯೆಯ ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು ಹಾಗೂ ಭಾರತಕ್ಕೆ ಕೋಟ್ಯಂತರ ಡಾಲರ್ ಸಾಲವನ್ನು ನೀಡುವ ವಿಶ್ವ ಬ್ಯಾಂಕ್ ಮತ್ತು ಕೆಲ ಪಾಶ್ಚಿಮಾತ್ಯ ದೇಶಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು, ಅಂತಿಮವಾಗಿ ೨೦೧೫ ರ ಅಕ್ಟೋಬರ್ ೧೨ ರಂದು ದೇಶಾದ್ಯಂತ " ಮಾಹಿತಿ ಪಡೆಯುವ ಹಕ್ಕು ಕಾಯಿದೆ - ೨೦೧೫ ನ್ನು ಜಾರಿಗೆ ತಂದಿತ್ತು. ಯು ಪಿ ಎ ಸರ್ಕಾರದ ಈ ಕೊಡುಗೆಯು ಜನಸಾಮಾನ್ಯರ ಪಾಲಿಗೆ ಅತ್ಯಂತ ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು!.

ತಮ್ಮ ಹಕ್ಕುಗಳಿಗೆ ಚ್ಯುತಿಯಾದಾಗ, ಅನ್ಯಾಯವಾದಾಗ, ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗೆ ಸರ್ಕಾರಿ ಅಧಿಕಾರಿಗಳು ಅಥವಾ ಸಿಬಂದಿಗಳು ಅಡ್ಡಿಆತಂಕಗಳನ್ನು ಒಡ್ಡಿದಾಗ ಮತ್ತು ಇವರಿಂದ ಅನಾವಶ್ಯಕ ಕಿರುಕುಳಗಳಿಗೆ ಗುರಿಯಾಗುತ್ತಿದ್ದ ಪ್ರಜೆಗಳಿಗೆ ರಕ್ಷಣೆಯನ್ನು ನೀಡಲು ಮಾಹಿತಿಹಕ್ಕು ಕಾಯಿದೆಯು ಯಶಸ್ವಿಯಾಗಿತ್ತು. ಇಷ್ಟು ಮಾತ್ರವಲ್ಲ, ದೇಶದ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಇತರ ಸಿಬಂದಿಗಳು ಶಾಮೀಲಾಗಿರುವ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತ್ತು. ತತ್ಪರಿಣಾಮವಾಗಿ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳ ಸ್ವೇಚ್ಛಾಚಾರ,ಭ್ರಷ್ಟಾಚಾರ ಮತ್ತು ಸರ್ವಾಧಿಕಾರಿ ಪ್ರವೃತ್ತಿಗಳಿಗೆ ಕಡಿವಾಣವನ್ನು ತೊಡಿಸಿತ್ತು.

ಅಸಹಾಯಕ ಹಾಗೂ ಪ್ರಾಮಾಣಿಕ ನಾಗರಿಕರ ಪಾಲಿಗೆ ಪ್ರಬಲ ಅಸ್ತ್ರವೆನಿಸಿದ್ದ ಈ ಕಾಯಿದೆಯು ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ರಾಜಕೀಯ ನೇತಾರರಿಗೂ ಕಂಟಕಪ್ರಾಯವಾಗಿ ಪರಿಣಮಿಸಿದ್ದ ಪರಿಣಾಮವಾಗಿ, ಇದನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅಂದಿನ ದಿನಗಳಲ್ಲೇ ಆರಂಭವಾಗಿದ್ದವು. ಇದರ ಅಂಗವಾಗಿ ಈ ಕಾಯಿದೆಗೆ ಕೆಲವೊಂದು ತಿದ್ದುಪಡಿಗಳನ್ನು ಜಾರಿಗೆ ತರುವ ಮೂಲಕ, ಹಲ್ಲು ಕಿತ್ತ ಹಾವಿನಂತಾಗಿಸುವ ಸರ್ಕಾರದ ಪ್ರಯತ್ನವನ್ನು  ಸಾರ್ವಜನಿಕರ ಪ್ರಬಲ ಪ್ರತಿಭಟನೆಯಿಂದಾಗಿ ಕೈಬಿಡಲಾಗಿತ್ತು.

ಅಸಮರ್ಪಕ ಅನುಷ್ಠಾನ

ಈ ಕಾಯಿದೆಯ ಸೆಕ್ಷನ್ ೪ ರಂತೆ ಸಾರ್ವಜನಿಕ ಪ್ರಾಧಿಕಾರಗಳು ೧೭ ವಿಧದ ಮಾಹಿತಿಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸಬೇಕಿದೆ. ಇವುಗಳಲ್ಲಿ ಪ್ರಾಧಿಕಾರದ ಸಂರಚನೆ, ಕಾರ್ಯನಿರ್ವಹಿಸುವ ಕ್ರಮ, ಪ್ರಾಧಿಕಾರದ ಆಯವ್ಯಯಗಳ ವಿವರಗಳು, ಸಾರ್ವಜನಿಕರು ಭಾಗವಹಿಸಬಹುದಾದ ವೇದಿಕೆಗಳ ವಿವರ, ಮಾಹಿತಿ ಪಡೆಯುವ ವಿಧಾನಗಳೇ ಮುಂತಾದ ಮಾಹಿತಿಗಳನ್ನು ತಾವಾಗಿ ಪ್ರಕಟಿಸುವುದರೊಂದಿಗೆ ಆಗಾಗ ಪರಿಷ್ಕರಿಸಬೇಕಿದೆ. ನಾಗರಿಕರಿಗೆ ಅವಶ್ಯಕ ಮತ್ತು ಉಪಯುಕ್ತವೆನಿಸುವ ಮಾಹಿತಿಗಳನ್ನು ನೇರವಾಗಿ ಮತ್ತು ಸುಲಭವಾಗಿ ಒದಗಿಸಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಅಧಿಕತಮ ಪ್ರಾಧಿಕಾರಗಳು ಸ್ವಯಂಪ್ರೇರಿತವಾಗಿ ಇಂತಹ ಮಾಹಿತಿಗಳನ್ನು ಪ್ರಕಟಿಸದೇ ಇರುವುದರಿಂದಾಗಿ, ಈ ಕಾಯಿದೆಯ ಪ್ರಾಥಮಿಕ ಉದ್ದೇಶವೇ ವಿಫಲವಾಗುತ್ತಿದೆ. ಜೊತೆಗೆ ಈ ಮಾಹಿತಿಗಳನ್ನು ಪಡೆದುಕೊಳ್ಳಲೂ ಮಾ.ಹ.ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸಬೇಕಿದೆ!.

ಮಾಹಿತಿಯನ್ನೇ ನೀಡದ ಅಧಿಕಾರಿಗಳು

ಸರ್ಕಾರ ನಿಗದಿಸಿರುವ ಕೆಲವೊಂದು ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನೀಡಬೇಕಾದ ಹೊಣೆಗಾರಿಕೆಯನ್ನು ಸಾರ್ವಜನಿಕ ಪ್ರಾಧಿಕಾರಗಳು ಸಮರ್ಪಕವಾಗಿ ನಿಭಾಯಿಸಲು ವಿಫಲವಾಗಿವೆ. ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ನಾಗರಿಕರು ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ, ಅರ್ಜಿಗಳನ್ನು ಸ್ವೀಕರಿಸಿದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ, ಅಪೂರ್ಣ ಅಥವಾ ಸುಳ್ಳು ಮಾಹಿತಿಗಳನ್ನು ನೀಡಿದ, ಅರ್ಜಿದಾರರಿಗೆ ಕಿರುಕುಳ ನೀಡಿದ ಹಾಗೂ ಬೆದರಿಕೆಯನ್ನು ಒಡ್ಡಿದ ಅಸಂಖ್ಯ ಪ್ರಕರಣಗಳು ದೇಶಾದ್ಯಂತ ಸಂಭವಿಸಿವೆ. ಇದಕ್ಕೂ ಮಿಗಿಲಾಗಿ ಬೃಹತ್ ಹಗರಣಗಳನ್ನು ಬಯಲಿಗೆಳೆಯಳು ಪ್ರಯತ್ನಿಸಿದ ೩೦೦ ರಕ್ಕೂ ಅಧಿಕ ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದ್ದು,೪೦ ಕ್ಕೂ  ಅಧಿಕ ಕಾರ್ಯಕರ್ತರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯ್ಯಲಾಗಿದೆ. ಜನಸಾಮಾನ್ಯರ ಮನದಲ್ಲಿ ಭೀತಿಯನ್ನು ಹುಟ್ಟಿಸುವ ಮೂಲಕ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯಲು ಪ್ರಯತ್ನಿಸುವ ಕಾರ್ಯಕರ್ತರನ್ನು ದಮನಿಸಲು ಯತ್ನಿಸಲಾಗುತ್ತಿದೆ.

ಮಾಹಿತಿ ಹಕ್ಕು ಕಾಯಿದೆಯನ್ನು ಪರೋಕ್ಷವಾಗಿ ದುರ್ಬಲಗೊಳಿಸಲು ಕೆಲ ಅಧಿಕಾರಿಗಳು ಅನುಸರಿಸುವ ತಂತ್ರಗಳು ಇಂತಿವೆ. ಅರ್ಜಿದಾರರು ಅಂಚೆಯ ಮೂಲಕ ಕಳುಹಿಸಿದ ಲಕೋಟೆಯಲ್ಲಿ ಅರ್ಜಿಯೇ ಇರಲಿಲ್ಲ ಎನ್ನುವುದು,ಅಪೇಕ್ಷಿಸಿರುವ ಮಾಹಿತಿಗಳನ್ನು ನಿಗದಿತ ಅವಧಿಯಲ್ಲಿ ನೀಡದಿರುವುದು, ನಿಗದಿತ ಶುಲ್ಕಕ್ಕೆ ಬದಲಾಗಿ ದುಬಾರಿ ಶುಲ್ಕವನ್ನು ವಿಧಿಸುವುದು, ಅಪೇಕ್ಷಿತ ಮಾಹಿತಿ ( ಕಡತಗಳು ) ತಮ್ಮಲ್ಲಿಲ್ಲ ಎನ್ನುವುದು, ಪ್ರಥಮ ಮೇಲ್ಮನವಿ ಸಲ್ಲಿಸಿದರೂ ಮಾಹಿತಿ ನೀಡದಿರುವುದೇ ಮುಂತಾದ ವಿಧಾನಗಳಿಂದ ಅರ್ಜಿದಾರರನ್ನು ಸತಾಯಿಸಿದ ಘಟನೆಗಳು ಸಾಕಷ್ಟಿವೆ. ಇದರೊಂದಿಗೆ ಕೇಂದ್ರ ಸರ್ಕಾರ ಮತ್ತು ಬಹುತೇಕ ರಾಜ್ಯ ಸರ್ಕಾರಗಳು ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳಿಗೆ ಅವಶ್ಯಕ ಸಂಖ್ಯೆಯ ಆಯುಕ್ತರನ್ನು ನೇಮಿಸದೇ ಇರುವುದರಿಂದಾಗಿ, ಈ ಆಯೋಗಗಳಲ್ಲಿ ಮೇಲ್ಮನವಿಯನ್ನು ಸಲ್ಲಿಸಿರುವ ಸಹಸ್ರಾರು ಪ್ರಕರಣಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ!.

ಶಿಕ್ಷೆ – ದಂಡ ವಿಧಿಸದ ಆಯೋಗ

ಇಷ್ಟೆಲ್ಲಾ ಸಾಲದೆನ್ನುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳು ಅಪೇಕ್ಷಿತ ಮಾಹಿತಿಗಳನ್ನು ನೀಡಲು ವಿಳಂಬಿಸಿದ ಅಥವಾ ನಿರಾಕರಿಸಿದ ಕಾರಣದಿಂದಾಗಿ ರಾಜ್ಯ ಹಾಗೂ ಕೇಂದ್ರ ಮಾಹಿತಿ ಆಯೋಗಕ್ಕೆ ದೂರನ್ನು ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ, ವಿಚಾರಣೆಯ ಬಳಿಕ ಅಪೇಕ್ಷಿತ ಮಾಹಿತಿಗಳನ್ನು ನೀಡುವಂತೆ ಆಯುಕ್ತರು ಆದೇಶಿಸಿದರೂ, ತಪ್ಪಿತಸ್ತ ಅಧಿಕಾರಿಗೆ ದಂಡವನ್ನು ವಿಧಿಸದ ಹಾಗೂ ಶಿಸ್ತುಕ್ರಮ ಕೈಗೊಳ್ಳದ ನೂರಾರು ಪ್ರಕರಣಗಳಿವೆ. ಪ್ರಾಯಶಃ ಅಧಿಕತಮ ಆಯುಕ್ತರು ನಿವೃತ್ತ ಐ ಎ ಎಸ್  ಅಧಿಕಾರಿಗಳೇ ಆಗಿರುವುದರಿಂದ, ಇವರು ತಮ್ಮ ಹಿಂದಿನ ಸಹೋದ್ಯೋಗಿಗಳಿಗೆ ದಂಡ ವಿಧಿಸಲು ಅಥವಾ ಶಿಕ್ಷೆಯನ್ನು ನೀಡಲು ಹಿಂಜರಿಯುತ್ತಾರೆ.ಆದರೆ ಅಧಿಕಾರಿಗಳು ಎಸಗಿದ ತಪ್ಪಿಗೆ ಸೂಕ್ತ ಶಿಕ್ಷೆ ನೀಡದಿರುವುದು ಈ ಕಾಯಿದೆಯ ಮೂಲ ಉದ್ದೇಶಕ್ಕೆ ಕಂಟಕವಾಗಿ ಪರಿಣಮಿಸಿದೆ.

ಪ್ರಸ್ತುತ ದೇಶದ ಬಹುತೇಕ ರಾಜ್ಯಗಳ ಮಾಹಿತಿ ಆಯೋಗಗಳ ಮುಂದೆ ವಿಚಾರಣೆಗಾಗಿ ಉಳಿದಿರುವ ಪ್ರಕರಣಗಳ ಸಂಖ್ಯೆ ಲಕ್ಷಕ್ಕೂ ಹೆಚ್ಚಿವೆ.ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಂದೆ ವಿಚಾರಣೆಗಾಗಿ ಕಾಯುತ್ತಿರುವ ಪ್ರಕರಣಗಳ ಒಟ್ಟು ಸಂಖ್ಯೆಯೇ ೧೪ ಸಾವಿರದಷ್ಟಿದೆ.ಆಯೋಗವು ಮೊದಲ ಆಲಿಕೆಯನ್ನು ಕೈಗೆತ್ತಿಕೊಳ್ಳಲು ಸರಾಸರಿ ೬ ರಿಂದ ೮ ತಿಂಗಳುಗಳು ತಗಲುತ್ತದೆ. ಕೆಲ ರಾಜ್ಯಗಳ ಮಾಹಿತಿ ಆಯೋಗಗಳು ಇದೀಗ ಕೈಗೆತ್ತಿಕೊಂಡಿರುವ ಪ್ರಕರಣಗಳು ೨೦೧೨ ರಲ್ಲಿ ಮೇಲ್ಮನವಿಯನ್ನು ಸಲ್ಲಿಸಿದವೇ ಆಗಿವೆ. ಇನ್ನು ಕೇಂದ್ರ ಮಾಹಿತಿ ಆಯೋಗದಲ್ಲಿ ಇದೇ   ವರ್ಷದ ಜುಲೈ ತಿಂಗಳಿನಲ್ಲಿ ವಿಚಾರಣೆಗಾಗಿ ಕಾಯುತ್ತಿದ್ದ ಪ್ರಕರಣಗಳ ಸಂಖ್ಯೆಯು ೪೦ ಸಾವಿರದ ಗಡಿಯನ್ನು ದಾಟಿತ್ತು!. ಈ ರೀತಿಯಲ್ಲಿ ದೇಶದ ಪ್ರಜೆಗಳು ಅಪೇಕ್ಷಿಸುವ ಮಾಹಿತಿಗಳನ್ನು ನೀಡದೇ ಸತಾಯಿಸುವ ವಿಶಿಷ್ಠ  ಧೋರಣೆಯಿಂದಾಗಿ, ಜನಸಾಮಾನ್ಯರ ಮೂಲಭೂತ ಹಕ್ಕಿಗೆ ಚ್ಯುತಿಯಾಗುವುದರೊಂದಿಗೆ, ಕಾಯಿದೆಯನ್ನು ಜಾರಿಗೆ ತಂದ ಮೂಲ ಉದ್ದೇಶವೇ ವಿಫಲವಾಗಿದೆ.

ಅದೇನೇ ಇರಲಿ, ಪ್ರಸ್ತುತ ಮಾಹಿತಿ ಪಡೆಯುವ ಹಕ್ಕು ಕಾಯಿದೆಯ ದಶಮಾನೋತ್ಸವದ ಸಂದರ್ಭದಲ್ಲಿ ದೇಶದ ನಾಗರಿಕರು ಈ ಕಾಯಿದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವ ಮೂಲಕ, ಪ್ರಜಾಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ದಕ್ಷತೆಗಳನ್ನು ಹೆಚ್ಚಿಸಲು  ಯತ್ನಿಸುವ ಮೂಲಕ, ಸರ್ಕಾರಿ ಅಧಿಕಾರಿಗಳು ಮತ್ತು ನಮ್ಮನ್ನಾಳುವವರ  ಭ್ರಷ್ಟಾಚಾರ ಹಾಗೂ ಸ್ವೇಚ್ಛಾಚಾರಗಳಿಗೆ ಕಡಿವಾಣವನ್ನು ತೊಡಿಸಲು ಶ್ರಮಿಸಬೇಕಾಗಿದೆ. ಜೊತೆಗೆ ಈ ಕಾಯಿದೆಯನ್ನು ಇನ್ನಷ್ಟು ಪ್ರಬಲಗೊಳಿಸಲು ಪ್ರಯತ್ನಿಸಬೇಕಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು