Wednesday, November 27, 2013

Beware of Medical advertisements


                         ಔಷದಗಳ ಜಾಹೀರಾತುಗಳಿಗೆ ಮರುಳಾಗದಿರಿ

  ಪತಿನಿತ್ಯ  ಪತ್ರಿಕೆಗಳನ್ನು ಓದುವ ಹಾಗೂ ಟೆಲಿವಿಷನ್ ವಾಹಿನಿಗಳನ್ನು ವೀಕ್ಷಿಸುವ ಹವ್ಯಾಸ ನಿಮಗಿದ್ದಲ್ಲಿ, ಇವುಗಳಲ್ಲಿ ಪ್ರಕಟ- ಪ್ರಸಾರವಾಗುವ ಅನೇಕ ಔಷದಗಳ ಜಾಹೀರಾತುಗಳನ್ನು ನೀವು ಕಂಡಿರಲೇಬೇಕು. ಆದರೆ ಇಂತಹ ಜಾಹೀರಾತುಗಳಿಗೆ ಮರುಳಾಗಿ ನೀವು ಕಷ್ಟಪಟ್ಟು ಸಂಪಾದಿಸಿದ ಹಣದೊಂದಿಗೆ, ನಿಮ್ಮ ಆರೋಗ್ಯವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎನ್ನುವುದನ್ನು ಮರೆಯದಿರಿ!. 
-----------              ----------------                  --------------------                    ---------------                -----------------           ------------
       
       ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ  ಔಷದಗಳ ಜಾಹೀರಾತುಗಳಿಂದ ಪ್ರಭಾವಿತರಾಗಿ, ಇಂತಹ ಉತ್ಪನ್ನಗಳನ್ನು ಖರೀದಿಸಿ ಬಳಸುವ ಜನರು ನಮ್ಮ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಔಷದಗಳನ್ನು ಬಳಸಿ ಸಂಕಷ್ಟಗಳಿಗೆ ಈಡಾದ ಜನರೂ ಬಹಳಷ್ಟು ಇದ್ದಾರೆ!. 

ಮಧುಮೇಹ ಇನ್ನು ಬಾಧಿಸದು!

ಆಕಸ್ಮಿಕವಾಗಿ ಹೃದಯಾಘಾತಕ್ಕೆ ಒಳಗಾಗಿದ್ದ ರಾಮಕೃಷ್ಣ ರಾಯರನ್ನು ತತ್ ಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ನಡೆಸಿದ್ದ ಪರೀಕ್ಷೆಗಳಿಂದ ರಾಯರ ರಕ್ತದಲ್ಲಿನ ಸಕ್ಕರೆಯ ಅಂಶವು ಅನಿಯಂತ್ರಿತವಾಗಿ ಹೆಚ್ಚಿರುವುದು ಪತ್ತೆಯಾಗಿತ್ತು. 

ಒಂದೆರಡು ದಿನಗಳ ಬಳಿಕ ತುಸು ಚೇತರಿಸಿಕೊಂಡಿದ್ದ ರಾಯರನ್ನು ಈ ಬಗ್ಗೆ ಪ್ರಶ್ನಿಸಿದ ವೈದ್ಯರಿಗೆ, ಅವರು ನೀಡಿದ್ದ ಉತ್ತರವನ್ನು ಕೇಳಿ ಆಶ್ಚರ್ಯವಾಗಿತ್ತು. ನಿವೃತ್ತಿಯ ಬಳಿಕ ಸಮಯ ಕಳೆಯಲು ದಿನನಿತ್ಯ ಟೆಲಿವಿಷನ್ ವೀಕ್ಷಿಸುತ್ತಿದ್ದ ರಾಯರು, ಇದರಲ್ಲಿ ಪ್ರಸಾರವಾಗುತ್ತಿದ್ದ ವಿಸ್ಮಯಕಾರಿ ಔಷದವನ್ನು ಸೇವಿಸಿದಲ್ಲಿ "ಮಧುಮೇಹ ಇನ್ನು ಬಾಧಿಸದು" ಎನ್ನುವ ಜಾಹೀರಾತನ್ನು ನಂಬಿ ಮೋಸ ಹೋಗಿದ್ದರು. ವೈದ್ಯರು ಸೂಚಿಸಿದ್ದ ಮಾತ್ರೆಗಳ ಸೇವನೆಯನ್ನು ತ್ಯಜಿಸಿ, ಈ ಜಾಹೀರಾತಿನ ಔಷದವನ್ನು ಸೇವಿಸಲು ಆರಂಭಿಸಿದ್ದುದೇ ರಾಯರ ಹೃದಯಾಘಾತಕ್ಕೆ ಹೆತುವಾಗಿತ್ತು!. 

ಮೋಡಿ ಮಾಡುವ ಜಾಹೀರಾತುಗಳು 

ಟಿ. ವಿ ವಾಹಿನಿಗಳಲ್ಲಿ ಪ್ರಸಾರವಾಗುವ ಸಾಮಾನ್ಯ ಶೀತ ಹಾಗೂ ತಲೆನೋವಿನಿಂದ ಪ್ರಾರಂಭಿಸಿ, ಮಧುಮೇಹದಂತಹ ಶಾಶ್ವತ ಪರಿಹಾರವಿಲ್ಲದ ಗಂಭೀರ ಕಾಯಿಲೆಗಳಿಗೆ "ವಿಸ್ಮಯಕಾರಿ ಔಷದ'ಗಳ ಚಿತ್ತಾಕರ್ಷಕ ಜಾಹೀರಾತುಗಳು ನಿಶ್ಚಿತವಾಗಿಯೂ ವೀಕ್ಷಕರನ್ನು ಮೋಡಿ ಮಾಡುತ್ತವೆ. ಅದರಲ್ಲೂ ಸಿನಿಮಾ ಹಾಗೂ ಕಿರುತೆರೆಯ ತಾರೆಯರು ಮತ್ತು ಪ್ರಖ್ಯಾತ ಕ್ರೀಡಾಪಟುಗಳು ಪಾತ್ರವಹಿಸಿರುವ ಜಾಹೀರಾತುಗಳಲ್ಲಿ ವೈಭವೀಕರಿಸಿದ ಔಷದಗಳಿಗೆ ಸ್ವಾಭಾವಿಕವಾಗಿಯೇ ಅತ್ಯಧಿಕ ಬೇಡಿಕೆ ಇರುತ್ತದೆ. ಜತೆಗೆ ವೈದ್ಯರ ಸಲಹೆ ಸೂಚನೆಗಳ ಅವಶ್ಯಕತೆಯಿಲ್ಲದೆ, ನೇರವಾಗಿ ಔಷದ ಅಂಗಡಿಗಳಿಂದ ಖರೀದಿಸಬಹುದಾಗಿರುವುದರಿಂದ ವೈದ್ಯರಿಗೆ ನೀಡುವ ಶುಲ್ಕವೂ ಉಳಿತಾಯವಾಗುತ್ತದೆ. ಆದರೆ ಇವುಗಳನ್ನು ಸೇವಿಸಿದ ಬಳಿಕ ಉದ್ಭವಿಸಬಹುದಾದ ಸಮಸ್ಯೆಗಳಿಗೆ ಇವುಗಳ ತಯಾರಕರು ಅಥವಾ ಮಾರಾಟಗಾರರು ಹೊಣೆಗಾರರಾಗುವುದೇ ಇಲ್ಲ!. 

ಒಂದೆರಡು ದಶಕಗಳ ಹಿಂದೆ ಕರಪತ್ರಗಳು ಮತ್ತು ಅಪರೂಪದಲ್ಲಿ ಪತ್ರಿಕೆಗಳಲ್ಲಿ ಕಾಣಸಿಗುತ್ತಿದ್ದ ಬೆರಳೆಣಿಕೆಯಷ್ಟು ಔಷದಗಳ ಜಾಹೀರಾತುಗಳು, ಇದೀಗ ದೃಶ್ಯಮಾಧ್ಯಮಗಳಲ್ಲಿ ಧಾರಾಳವಾಗಿ ಪ್ರಸಾರಗೊಳ್ಳುತ್ತಿವೆ. ಈ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳು ದುಬಾರಿ ಎನಿಸಿದರೂ, ಕೋಟ್ಯಂತರ ವೀಕ್ಷಕರಲ್ಲಿ ದುರ್ಬಲ ಮನಸ್ಸಿನವರನ್ನು ಮರುಳು ಮಾಡಲು ಯಶಸ್ವಿಯಾಗುತ್ತದೆ. ಪರಿಣಾಮವಾಗಿ ಇಂತಹ ಉತ್ಪನ್ನಗಳು ಬಿಸಿಬಿಸಿ ದೋಸೆಯಂತೆ ಮಾರಾಟವಾಗುತ್ತವೆ. 

ಶಾಶ್ವತ ಪರಿಹಾರವೇ ಇಲ್ಲದ ಮಧುಮೇಹ, ಆಸ್ತಮಾ ಗಳಂತಹ ಕಾಯಿಲೆಗಳನ್ನು ಗುಣಪಡಿಸಬಲ್ಲ, ಧಡೂತಿ ದೇಹವನ್ನು ಬಳುಕುವ ಬಳ್ಳಿಯಂತೆ ತೆಳ್ಳಗಾಗಿಸಬಲ್ಲ, ಅಸ್ಥಿಸಂಧಿಗಳ ನೋವನ್ನು ಚಿಟಿಕೆ ಹೊಡೆಯುವಷ್ಟರಲ್ಲೇ ನಿವಾರಿಸಬಲ್ಲ, ಕೊಬ್ಬಿನಿಂದ ಉಬ್ಬಿದ ಹೊಟ್ಟೆಯನ್ನು ಕ್ಷಿಪ್ರಗತಿಯಲ್ಲಿ ಕರಗಿಸಬಲ್ಲ, ಕುಳ್ಳರನ್ನು ನೀಳಕಾಯರನ್ನಾಗಿಸಬಲ್ಲ, ಯುವತಿಯರ ಸ್ತನಗಳ ಗಾತ್ರವನ್ನು ನಿಶ್ಚಿತವಾಗಿ ಹಿಗ್ಗಿಸಬಲ್ಲ, ಮರೆಗುಳಿಗಳ ಸ್ಮರಣಶಕ್ತಿಯನ್ನು ವೃದ್ಧಿಸಬಲ್ಲ, ಮಧ್ಯ ಹಾಗೂ ಇಳಿವಯಸ್ಸಿನವರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಬಲ್ಲ ಮತ್ತು ನೂರಾರು ಅನ್ಯವಿಧದ ಆರೋಗ್ಯದ ಸಮಸ್ಯೆಗಳನ್ನು ನಿಸ್ಸಂದೇಹವಾಗಿ ಪರಿಹರಿಸಬಲ್ಲ "ವಿಸ್ಮಯಕಾರಿ ಅದ್ಭುತ ಔಷದಗಳು" ಕೇವಲ ಜಾಹೀರಾತುಗಳ ಬಲದಿಂದಲೇ ಮಾರಾಟವಾಗುತ್ತವೆ. 

ಇಂತಹ ಔಷದಗಳ ತಯಾರಕರು ತಮ್ಮ ಉತ್ಪನ್ನಗಳ ಅದ್ಭುತ ಪರಿಣಾಮಗಳನ್ನು ಜಾಹೀರಾತುಗಳಲ್ಲಿ ಸವಿಸ್ತಾರವಾಗಿ ವರ್ಣಿಸಿದರೂ, ಇವುಗಳ ಅಡ್ಡ ಅಥವಾ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ ಮಾಹಿತಿಯನ್ನೂ ನೀಡುವುದಿಲ್ಲ. ಅದೇ ರೀತಿಯಲ್ಲಿ ವೈದ್ಯರ ಸಲಹೆಯನ್ನು ಪಡೆಯದೇ ಯಾವುದೇ ಔಷದಗಳನ್ನು ಸೇವಿಸುವುದು ಸುರಕ್ಷಿತವಲ್ಲ ಎನ್ನುವ ಎಚ್ಚರಿಕೆಯನ್ನೂ ನೀಡುವುದಿಲ್ಲ. 

ಉದಾಹರಣೆಗೆ ಅನೇಕ ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ತಲೆನೋವು ನಿವಾರಕ ಗುಳಿಗೆಯೊಂದರ ಜಾಹೀರಾತಿನಲ್ಲಿ,ಆ ಗುಳಿಗೆಯಲ್ಲಿನ ಔಷದದ ಹೆಸರನ್ನೇ ನಮೂದಿಸುವುದಿಲ್ಲ. ನಿಜ ಹೇಳಬೇಕಿದ್ದಲ್ಲಿ ಅಸಿಟೈಲ್ ಸಾಲಿಸಿಕ್ ಎಸಿಡ್ ಅರ್ಥಾತ್ ಆಸ್ಪಿರಿನ್ ಎಂದು ಕರೆಯಲ್ಪಡುವ ಈ ಔಷದವು ತಲೆನೋವು,ಮೈಕೈ ನೋವು, ಮತ್ತು ಜ್ವರಗಳನ್ನು ಕ್ಷಿಪ್ರಗತಿಯಲ್ಲಿ ಪರಿಹರಿಸುವುದಾದರೂ, ಇದನ್ನು ಆಸ್ತಮಾ, ಅತಿ ಆಮ್ಲ ಬಾಧೆ (ಹೈಪರ್ ಎಸಿಡಿಟಿ ), ಜಠರದ ಹುಣ್ಣುಗಳಿಂದ ಬಳಲುವವರು ಮತ್ತು ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳು ಸೇವಿಸುವಂತಿಲ್ಲ. ಆದರೆ ಈ ಉತ್ಪನ್ನದ ಜಾಹೀರಾತಿನಲ್ಲಿ ಈ ಪ್ರಮುಖ ವಿಚಾರವನ್ನೇ ಬಹಿರಂಗಪಡಿಸುವುದಿಲ್ಲ!. 

ದುಬಾರಿ ಬೆಲೆಯನ್ನು ತೆತ್ತು ನೀವು ಖರೀದಿಸಿ ಬಳಸುವ ಇಂತಹ ಔಷದಗಳು" ಪವಾಡ ಸದೃಶ ಪರಿಣಾಮ"ಗಳನ್ನು ನೀಡಲು ವಿಫಲವಾಗುವ ಮತ್ತು ಕೆಲ ಸಂದರ್ಭಗಳಲ್ಲಿ ರಾಮಕೃಷ್ಣ ರಾಯರ ಅನುಭವದಂತೆ ಪ್ರಾಣಾಪಾಯಕ್ಕೂ ಕಾರನವೆನಿಸುವ ಸಾಧ್ಯತೆಗಳಿವೆ. ಆದರೆ ತಜ್ಞವೈದ್ಯರ ವಿರುದ್ಧ ವೈದ್ಯಕೀಯ ನಿರ್ಲಕ್ಷ್ಯದ ದಾವೆಯನ್ನು ಹೂಡುವ ಜನಸಾಮಾನ್ಯರು, ಜಾಹೀರಾತಿನ ಔಷದಗಳನ್ನು ಸೇವಿಸಿ ಗಂಭೀರ ಸಮಸ್ಯೆಗಳು ಉದ್ಭವಿಸಿದರೂ, ಅವುಗಳ ತಯಾರಕರ ವಿರುದ್ಧ ದಾವೆಯನ್ನು ಹೂಡಿದ ನಿದರ್ಶನಗಳಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಇಂತಹ ಔಷದಗಳ ಬೇಡಿಕೆ ಮತ್ತು ಮಾರಾಟಗಳು ಕಡಿಮೆಯಾಗುವುದೇ ಇಲ್ಲ!. 

ನಿಯಂತ್ರಿಸುವುದೆಂತು?

ಜನಸಾಮಾನ್ಯರನ್ನು ದಿಕ್ಕುತಪ್ಪಿಸುವ ಹಾಗೂ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಗುಣಪಡಿಸುವುದಾಗಿ ಘೋಷಿಸುವ ಔಷದಗಳ ಜಾಹೀರಾತುಗಳನ್ನು ನಿಯಂತ್ರಿಸಲು, ಡ್ರಗ್ಸ್ ಎಂಡ್ ಮ್ಯಾಜಿಕ್ ರೆಮೆಡೀಸ್ (ಒಬ್ಜೆಕ್ಷನೆಬಲ್ ಅಡ್ವರ್ಟೈಸ್ ಮೆಂಟ್ಸ್) ಏಕ್ಟ್ ೧೯೫೪ ಮತ್ತು ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ರೂಲ್ಸ್ ಎನ್ನುವ ಕಾನೂನುಗಳಿವೆ. ಈ ಕಾಯಿದೆಗಳಂತೆ ಶಾಶ್ವತ ಪರಿಹಾರವಿಲ್ಲದ, ಚಿಕಿತ್ಸೆ ಲಭ್ಯವಿಲ್ಲದ ಕಾಯಿಲೆಗಳು ಮತ್ತು ಕೆಲವಿಧದ ಆರೋಗ್ಯದ ಸಮಸ್ಯೆಗಳನ್ನು ಹೆಸರಿಸಲಾಗಿದ್ದು, ಇವುಗಳ ಬಗ್ಗೆ ಜಾಹೀರಾತುಗಳನ್ನೇ ನೀಡುವಂತಿಲ್ಲ. ಆದರೆ ಈ ಅಧಿಸೂಚನೆ, ನಿಯಮಗಳು ಕೇವಲ ಮುದ್ರಣ ಮಾಧ್ಯಮಗಳಿಗೆ ಮಾತ್ರ ಅನ್ವಯಿಸುತ್ತಿದ್ದು, ಟಿ . ವಿ ಚಾನೆಲ್ ಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಈ ಕಾಯಿದೆಗಳನ್ನು ರೂಪಿಸುವಾಗ ಭಾರತದಲ್ಲಿ ಟೆಲಿವಿಶನ್ ಮಾಧ್ಯಮವೇ ಅಸ್ತಿತ್ವದಲ್ಲಿ ಇರಲಿಲ್ಲ!. 

ಆದರೆ ಸರಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಮಾತ್ರ ಇಂತಹ ಜಾಹೀರಾತುಗಳಿಗೆ ಅವಕಾಶವಿಲ್ಲ. ದೂರದರ್ಶನ ಅಳವಡಿಸಿಕೊಂಡಿರುವ ನೀತಿಸಂಹಿತೆಯಂತೆ ಯಾವುದೇ ಜಾಹೀರಾತುಗಳು ನಿರ್ದಿಷ್ಟ ಕಾಯಿಲೆಯೊಂದನ್ನು ಗುಣಪಡಿಸುವ ಅಥವಾ ಯಾವುದೇ ವ್ಯಾಧಿ ಲಕ್ಷಣಗಳನ್ನು (ಉದಾ- ತಲೆನೋವು, ಸೊಂಟನೋವು ಇತ್ಯಾದಿ) ಗುಣಪಡಿಸುವ ಅಥವಾ ಪರೋಕ್ಷ ಆಶ್ವಾಸನೆಗಳನ್ನೇ ನೀಡುವಂತಿಲ್ಲ. ಆದರೆ ಖಾಸಗಿ ಚಾನೆಲ್ ಗಳು ಇಂತಹ ನೀತಿಸಂಹಿತೆಯನ್ನು ಅನುಸರಿಸುವುದಿಲ್ಲ. ಮಾತ್ರವಲ್ಲ, ಅನೇಕ ಕುಟುಕು ಕಾರ್ಯಾಚರಣೆಗಳ ಮೂಲಕ ಅಸಂಖ್ಯ ಹಗರಣಗಳನ್ನು ಬಯಲಿಗೆಳೆದ ಖಾಸಗಿ ಟಿ. ವಿ ವಾಹಿನಿಗಳು, ತಮ್ಮ ಚಾನೆಲ್ ನಲ್ಲಿ ಜನರನ್ನು ಮರುಳು ಮಾಡಿ ಹಣಗಳಿಸುವ ಇಂತಹ ಧಂದೆಯ ಬಗ್ಗೆ ಚಕಾರವನ್ನೇ ಎತ್ತುವುದಿಲ್ಲ!. 

ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯವು ಜನಸಾಮಾನ್ಯರನ್ನು ಮರುಳುಗೊಳಿಸುವ ಔಷದಗಳ ಜಾಹೀರಾತುಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕೆಲವು ಸಮಿತಿಗಳನ್ನು ರಚಿಸಿತ್ತು. ೨೦೦೪ ರಲ್ಲಿ ಅದಾಗಲೇ ಅಸ್ತಿತ್ವದಲ್ಲಿದ್ದ ಕಾನೂನುಗಳ ಅನುಷ್ಠಾನಕ್ಕಾಗಿ ಪ್ರತ್ಯೇಕ ಮಂಡಳಿಯೊಂದನ್ನು ನೇಮಿಸಿ, ಜಾಹೀರಾತುಗಳಲ್ಲಿ ನಿಷೇಧಿತ ಕಾಯಿಲೆಗಳ ಪಟ್ಟಿಯನ್ನು ಪುನರ್ ವಿಮರ್ಶಿಸಿ, ಈ ಪಟ್ಟಿಯಲ್ಲಿ ಎಚ್. ಐ. ವಿ - ಏಡ್ಸ್ ಮತ್ತು ಪೋಲಿಯೋ ದಂತಹ ಇತರ ಕೆಲವು ಕಾಯಿಲೆಗಳನ್ನು ಸೇರಿಸಲು ನಿರ್ಧರಿಸಿತ್ತು. ಆದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರ ಸರಕಾರವು ತದನಂತರ ಈ ಬಗ್ಗೆ ಸೂಕ್ತ  ಹಾಗೂ ಅವಶ್ಯಕ ಕ್ರಮಗಳನ್ನು ಕೈಗೊಂಡಿಲ್ಲ. ಇದೆ ಕಾರಣದಿಂದಾಗಿ ಅಮಾಯಕ ಜನರನ್ನು ಮರುಳು ಮಾಡಿ ಕೋಟ್ಯಂತರ ರೂಪಾಯಿಗಳ ಲಾಭಗಳಿಸುತ್ತಿರುವ ಇಂತಹ ಔಷದ ತಯಾರಕರು ಪ್ರಕಟಿಸುತ್ತಿರುವ ಜಾಹೀರಾತುಗಳಿಗೆ ಕಡಿವಾಣವನ್ನು ತೊಡಿಸುವವರೇ ಇಲ್ಲದಂತಾಗಿರುವುದು ಮಾತ್ರ ಸುಳ್ಳೇನಲ್ಲ!. ಅಂತೆಯೇ ಇಂತಹ ಜಾಹೀರಾತುಗಳನ್ನು ನಂಬಿ, ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಬಳಸಿದ ಬಳಿಕ ತಮ್ಮ ಆರೋಗ್ಯದೊಂದಿಗೆ ಸಾಕಷ್ಟು ಹಣವನ್ನೂ ಕಳೆದುಕೊಳ್ಳುತ್ತಿರುವ ಗ್ರಾಹಕರ ಸಮಸ್ಯೆಗಳಿಗೆ ಅಂತ್ಯವೂ ಇಲ್ಲದಂತಾಗಿರುವುದು ಸತ್ಯ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೨-೧೦-೨೦೦೮ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  
     

Tuesday, November 26, 2013

Self medication can be dangerous



                                              ಸ್ವಯಂ ವೈದ್ಯರಾಗದಿರಿ ಜೋಕೆ!

ವೈದ್ಯರನ್ನು ಸಂದರ್ಶಿಸಿ ಸಲಹೆಯನ್ನು ಪಡೆಯುವುದು ಔಷದ ಸೇವಿಸಲೇಬೇಕಾದ ಅನಿವಾರ್ಯತೆಗಾಗಿ ಅಲ್ಲ ಎನ್ನುವುದನ್ನು ಅರಿತಿರಿ. ಹೊಸ ವೈದ್ಯರಿಗಿಂತ ಹಳೆ ರೋಗಿ ಮೇಲು ಎನ್ನುವ ಗಾದೆಮಾತನ್ನು ಕೇಳಿ, ಸ್ವಯಂ ವೈದ್ಯರಾದಲ್ಲಿ ಪರಿಣಾಮ ಏನಾಗುವುದೆಂಬ ಕೆಲವು ನಿದರ್ಶನಗಳು ಇಲ್ಲಿವೆ. 
----------            ----------------                      ---------------------                  -----------------------           --------------           ------------

    ಬಿರ್ಮಣ್ಣನ ಬಿ. ಪಿ 

೪೮ ವರ್ಷದ ಕಟ್ಟುಮಸ್ತಾದ  ಶರೀರ ಹೊಂದಿದ್ದ ಬಿರ್ಮಣ್ಣನು ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡುತ್ತಿದ್ದನು. ಅವಿದ್ಯಾವಂತನಾದರೂ ಆತನ ಲೋಕಜ್ಞಾನ ಅಪಾರವಾಗಿತ್ತು. ತುಸು ಅಧಿಕಪ್ರಸಂಗಿತನ ಆತನ ಸ್ವಭಾವಗಳಲ್ಲಿ ಒಂದಾಗಿತ್ತು. 

ಸುಮಾರು ಮೂರು ವರ್ಷಗಳ ಹಿಂದೆ ಉರಿಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಬಿರ್ಮಣ್ಣನು ಆಕಸ್ಮಿಕವಾಗಿ ತಲೆತಿರುಗಿದಂತಾಗಿ ಬಿದ್ದಿದ್ದನು. ತನ್ನ ಸಮಸ್ಯೆಗೆ ಪಿತ್ತಬಾಧೆಯೇ ಕಾರಣವೆಂದು ಭಾವಿಸಿ, ಸಾಕಷ್ಟು ಮನೆಮದ್ದು ಮಾಡಿದರೂ ಆತನ ತಲೆತಿರುಗುವಿಕೆ ಕಡಿಮೆಯಾಗಿರಲಿಲ್ಲ. ಅಂತಿಮವಾಗಿ ಸಮೀಪದ ವೈದ್ಯರನ್ನು ಭೇಟಿಯಾಗಿ, ತನ್ನ ಸಮಸ್ಯೆ ಹಾಗೂ ತಲೆಗೆ ಲಿಂಬೆ ಹುಳಿಯ ರಸ ಹಾಕುವುದರಿಂದ ಆರಂಭಿಸಿ, "ಪುನಾರ್ಪುಳಿ"( ಬಿರಿಂಡ) ಯ ಶರಬತ್ತನ್ನು ಕುಡಿಯುವ ತನಕ ಪಿತ್ತೋದ್ರೇಕದ ವಿವಿಧ ಚಿಕಿತ್ಸೆಗಳ ವಿವರಗಳನ್ನು ವೈದ್ಯರಲ್ಲಿ ಹೇಳಿದ್ದನು. ಆದರೆ ಇಷ್ಟೆಲ್ಲಾ ಚಿಕಿತ್ಸೆಗಳನ್ನು ಮಾಡಿದ್ದರೂ, ಆತನ ಸಮಸ್ಯೆ ಪರಿಹಾರವಾಗಿರದ ಬಗ್ಗೆ ಬಿರ್ಮಣ್ಣನ ಬಳಿ ಉತ್ತರವಿರಲಿಲ್ಲ!. 

ಅವಶ್ಯಕ ಪರೀಕ್ಷೆಗಳ ಬಳಿಕ ಬಿರ್ಮಣ್ಣನನ್ನು ಕಾಡುತ್ತಿದ್ದ ಅಧಿಕ ರಕ್ತದೊತ್ತಡವನ್ನು ಪತ್ತೆಹಚ್ಚಿದ ವೈದ್ಯರು, ನಿಯಮಿತವಾಗಿ ಔಷದವನ್ನು ಸೇವಿಸಿ ವಾರದಲ್ಲೊಮ್ಮೆ ಬಂದು ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವಂತೆ ಹೇಳಿದ್ದರು. ಕೆಲವೇ ದಿನಗಳಲ್ಲಿ ಬಿರ್ಮಣ್ಣನ ಬಿ. ಪಿ ನಿಯಂತ್ರಣಕ್ಕೆ ಬರುವುದರೊಂದಿಗೆ, ತಲೆತಿರುಗುವಿಕೆಯೂ ಮಾಯವಾಗಿತ್ತು. ಮುಂದೆ ತಿಂಗಳಿಗೊಮ್ಮೆ ವೈದ್ಯರಲ್ಲಿ ರಕ್ತದೊತ್ತಡವನ್ನು ಪರೀಕ್ಷಿಸಿಕೊಂಡು, ಔಷದವನ್ನು ಪಡೆಯುವುದು ವಾಡಿಕೆಯಾಯಿತು. ಆದರೆ ಸುಮಾರು ಮೂರು ವರ್ಷಗಳ ಬಳಿಕ ಬಿರ್ಮಣ್ಣನ ಭೇಟಿ ಹಠಾತ್ ನಿಂತು ಹೋಗಿತ್ತು. 

ಇದಾಗಿ  ಸುಮಾರು ಮೂರು ತಿಂಗಳುಗಳ ಬಳಿಕ ಬಿರ್ಮಣ್ಣನ ಪತ್ನಿಯಿಂದ ವೈದ್ಯರಿಗೆ ತುರ್ತು ಕರೆ ಬಂದೊಡನೆ ಆತನ ಮನೆಗೆ ಧಾವಿಸಿದ್ದ ವೈದ್ಯರಿಗೆ, ಶರೀರದ ಬಲಭಾಗ ಪಕ್ಷವಾತ ಪೀಡಿತವಾಗಿ ಮಲಗಿದ್ದ ಬಿರ್ಮಣ್ಣನನ್ನು ಕಂಡು ವಿಷಾದವಾಗಿತ್ತು. ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಿ, ತುರ್ತು ಚಿಕಿತ್ಸೆಯನ್ನು ನೀಡಲಾಯಿತು. 

ಈ ಪರಿಸ್ಥಿತಿಗೆ ಕಾರಣವೇನೆಂದು ಬಿರ್ಮಣ್ಣನ ಮಗನ ಬಳಿ ಪ್ರಶ್ನಿಸಿದಾಗ ದೊರೆತ ಉತ್ತರದಿಂದ ವೈದ್ಯರಿಗೆ ಅಚ್ಚರಿಯಾಗಿತ್ತು. ಸುಮಾರು ಮೂರು ವರ್ಷಗಳಿಂದ ಕ್ರಮಬದ್ಧವಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದ ಬಿರ್ಮಣ್ಣನಿಗೆ, ಪ್ರತಿಬಾರಿ ವೈದ್ಯರು ನಿನ್ನ ಬಿ. ಪಿ ನಾರ್ಮಲ್ ಇದೆ, ಆದರೆ ಮಾತ್ರೆಗಳ ಸೇವನೆಯನ್ನು ನಿಲ್ಲಿಸಬೇಡ ಎಂದು ಹೇಳುವುದು ಏಕೆಂದು ಆತನಿಗೆ ಅರ್ಥವಾಗಿರಲಿಲ್ಲ. ಈ ಚಿದಂಬರ ರಹಸ್ಯವನ್ನು ಭೇದಿಸಲು ಬಿರ್ಮಣ್ಣನು ಔಷದ ಸೇವನೆಯನ್ನು ನಿಲ್ಲಿಸಿ ನಡೆಸಿದ ಪ್ರಯೋಗ ಈ ರೀತಿಯಲ್ಲಿ ಅಂತ್ಯಗೊಂಡಿತ್ತು!. 

ಶಾಶ್ವತವಾಗಿ ಗುಣವಾಗದಂತಹ ಕಾಯಿಲೆಗಳಲ್ಲಿ ಜೀವನಪರ್ಯಂತ ಚಿಕಿತ್ಸೆ ಅನಿವಾರ್ಯ. ವೈದ್ಯರ ಆದೇಶವಿಲ್ಲದೇ ಅಥವಾ ನಕಲಿ ವೈದ್ಯರ ಪೊಳ್ಳು ಭರವಸೆಗಳನ್ನು ನಂಬಿ, ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನೇಕ ರೋಗಿಗಳು ಬಿರ್ಮಣ್ಣನಂತೆಯೇ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ನಿಜಕ್ಕೂ ವಿಷಾದನೀಯ. 

ಉರಿಮೂತ್ರಕ್ಕೆ ಕಾರಣ -"ಉಷ್ಣ"!

ಗ್ಯಾರೇಜ್ ಒಂದರಲ್ಲಿ ಮೆಕಾನಿಕ್ ಆಗಿದ್ದ ಮಧ್ಯವಯಸ್ಸಿನ ಅಣ್ಣು ಮಿತಭಾಷಿ. ದಿನವಿಡೀ ದುಡಿಯುತ್ತಿದ್ದ ಆತನಿಗೆ ಯಾವುದೇ ದುಶ್ಚಟಗಳೇ ಇರಲಿಲ್ಲ. ಆದರೆ ಇತ್ತೀಚಿನ ಕೆಲದಿನಗಳಿಂದ ಅಣ್ಣುವಿಗೆ ಉರಿಮೂತ್ರದ ಸಮಸ್ಯೆ ಪ್ರಾರಂಭವಾಗಿತ್ತು. "ಉಷ್ಣದಿಂದ ಈ ಸಮಸ್ಯೆ ಉಂಟಾಗಿದೆಯೆಂದು ನಂಬಿದ ಆತನು ದಿನಕ್ಕೆರಡು ಎಳನೀರನ್ನು ಕುಡಿಯುತ್ತಿದ್ದನು. ಎಳನೀರು ಕುಡಿದಾಗ ಕೊಂಚ ಸಮಾಧಾನವಾದರೂ, ಸಮಸ್ಯೆ ಮಾತ್ರ ಪರಿಹಾರವಾಗಲೇ ಇಲ್ಲ. ಪದೇಪದೇ ಮೂತ್ರ ವಿಸರ್ಜಿಸಬೇಕಾದ ತೊಂದರೆಯೊಂದಿಗೆ ಅಸಹನೀಯ ಉರಿ ಮತ್ತು ನೋವುಗಳೊಂದಿಗೆ ಇದೀಗ ಮೂತ್ರದಲ್ಲಿ ಒಂದಿಷ್ಟು ರಕ್ತವೂ ಕಂಡುಬಂದಿತ್ತು. ಇದರಿಂದ ಗಾಬರಿಗೊಂಡ ಅಣ್ಣು, ಪರಿಚಿತ ವೈದ್ಯರಲ್ಲಿ ಧಾವಿಸಿದ್ದನು. ಪ್ರಯೋಗಾಲಯದಲ್ಲಿ ಆತನ ಮೂತ್ರವನ್ನು ಪರೀಕ್ಷಿಸಿದ ವೈದ್ಯರಿಗೆ ಮೂತ್ರನಾಳದ ಸೋಂಕು ಪತ್ತೆಯಾಗಿತ್ತು. ಒಂದು ವಾರದ ಚಿಕಿತ್ಸೆಯಿಂದ ಚೇತರಿಸಿಕೊಂಡ ಅಣ್ಣುವಿಗೆ ದಿನದಲ್ಲಿ ಎರಡರಿಂದ ಮೂರು ಲೀಟರ್ ನೀರನ್ನು ಕುಡಿಯಲು ಸೂಚಿಸಿದ್ದ ವೈದ್ಯರ ಸಲಹೆಯನ್ನು ಪರಿಪಾಲಿಸುವುದು ವಾಡಿಕೆಯಾಯಿತು. ಆದರೆ ದಿನದಲ್ಲಿ ಕನಿಷ್ಠ ಒಂದು ಎಳನೀರನ್ನು ಕುಡಿಯುವುದನ್ನು ಆತನು ಇಂದಿಗೂ ನಿಲ್ಲಿಸಿಲ್ಲ. ಏಕೆಂದು ಯಾರಾದರೂ ಕೇಳಿದರೆ ಅಣ್ಣು ನೀಡುವ ಉತ್ತರ "ನಾನು ಮಾಡುತ್ತಿರುವ ಕಬ್ಬಿಣದ ಕೆಲಸವೇ ಉಷ್ಣ"!. 

ಇಂಜೆಕ್ಷನ್ ಗೆ ಬದಲಾಗಿ ಮಾತ್ರೆ!

ಕೃಷಿ ಕಾರ್ಮಿಕ ಕೊರಗಪ್ಪನು ಧಣಿಗಳ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಆತನ ಪಾದಕ್ಕೆ ತುಕ್ಕುಹಿಡಿದ ಮೊಳೆಯೊಂದು ಚುಚ್ಚಿತ್ತು. ವಿಷಯವರಿತ ಧಣಿಗಳು ತಕ್ಷಣ ವೈದ್ಯರಲ್ಲಿ ಹೋಗಿ ಧನುರ್ವಾತ ನಿರೋಧಕ ಇಂಜೆಕ್ಷನ್ ಪಡೆಯುವಂತೆ ಹೇಳಿ ಹಣವನ್ನೂ ನೀಡಿದರು. 

ತನ್ನ ಜನ್ಮದಲ್ಲೇ ಇಂಜೆಕ್ಷನ್ ತೆಗೆದುಕೊಳ್ಳದ ಕೊರಗಪ್ಪನಿಗೆ ಇದೀಗ ಪ್ರಾಣಸಂಕಟ ಶುರುವಾಯಿತು. ಇಂಜೆಕ್ಷನ್ ಪಡೆಯಲಿಲ್ಲವೆಂದು ತಿಳಿದರೆ ಧಣಿಗಳ ಕೋಪಕ್ಕೆ ಗುರಿಯಾಗಬೇಕಾದ ಕಾರಣದಿಂದ,  ಹೆದರುತ್ತಲೇ ವೈದ್ಯರಲ್ಲಿ ತೆರಳಿ ಆಣಿ ತಾಗಿದ್ದಕ್ಕೆ  ನೀಡುವ ಇಂಜೆಕ್ಷನ್ ಗೆ ಬದಲಾಗಿ ಮಾತ್ರೆಯನ್ನು ನೀಡುವಂತೆ ವಿನಂತಿಸಿದ್ದನು. ವೈದ್ಯರು ಈ ಇಂಜೆಕ್ಷನ್ ಗೆ ಬದಲಾಗಿ ಯಾವುದೇ ಮಾತ್ರೆ ಲಭ್ಯವಿಲ್ಲವೆಂದು ಎಷ್ಟು ತಿಳಿಹೇಳಿದರೂ ಕೊರಗಪ್ಪನಿಗೆ ಮಾತ್ರ ಅರ್ಥವಾಗಲಿಲ್ಲ. ಸಾಕಷ್ಟು ಚರ್ಚೆ ನಡೆಸಿದ ಆತನು ಅಂತಿಮವಾಗಿ ಇಂಜೆಕ್ಷನ್ ಪಡೆಯದೇ ಹೊರನಡೆದಿದ್ದನು. 

ಸುಮಾರು ಅರ್ಧಗಂಟೆಯ ಬಳಿಕ ಮರಳಿದ ಕೊರಗಪ್ಪನು ಕೋಪೋದ್ರಿಕ್ತನಾಗಿದ್ದನು. ವೈದ್ಯರ ಬಳಿ ತಾನು ತಂದಿದ್ದ ಮೂರು ಕ್ಯಾಪ್ಸೂಲ್ ಗಳನ್ನು ತೋರಿಸುತ್ತಾ, ನೀವು ಲಭ್ಯವಿಲ್ಲವೆಂದು ಹೇಳಿದ ಮಾತ್ರೆ ಇದೋ ನೋಡಿ......... , ಮೆಡಿಕಲ್ ನಲ್ಲಿ ನಾನೇ ಕೇಳಿ ಪಡೆದಿದ್ದು ಎಂದು ಹೇಳಿದ್ದನು. ಆತನಿಂದ ಮಾತ್ರೆಗಳನ್ನು ಪಡೆದು ಪರೀಕ್ಷಿಸಿದ ವೈದ್ಯರಿಗೆ "ಟೆಟ್ರಾ ಸೈಕ್ಲಿನ್" ಕ್ಯಾಪ್ಸೂಲ್ ಗಳನ್ನು ಕಂಡು ಅಚ್ಚರಿಯಾಗಿತ್ತು. ನಿಜ ಹೇಳಬೇಕಿದ್ದಲ್ಲಿ ಈ ಮಾತ್ರೆಗಳಿಗೂ ಧನುರ್ವಾತದ ಇಂಜೆಕ್ಷನ್ ಗೂ ಯಾವುದೇ ಸಂಬಂಧವಿರಲಿಲ್ಲ. ಆದರೆ ಕೊರಗಪ್ಪನೊಂದಿಗೆ ವಾಗ್ವಾದ ಮಾಡಲು ಅಸಫಲನಾದ ಔಷದ ಅಂಗಡಿಯ ಮಾಲಕನು, ಈ ಮೂರು ಕ್ಯಾಪ್ಸೂಲ್ ಗಳನ್ನು ನೀಡಿ ಆತನನ್ನು ಸಾಗಹಾಕಿದ್ದನು. 

ಆದರೆ ಕೊರಗಪ್ಪನ ದೃಷ್ಟಿಯಲ್ಲಿ ಸತ್ಯವನ್ನು ಹೇಳಿದ್ದ ವೈದ್ಯರು ಫಟಿಂಗನಂತೆ ಹಾಗೂ ಮಾತ್ರೆಯನ್ನು ನೀಡಿದ್ದ ಅಂಗಡಿಯಾತ ಸತ್ಯ ಹರಿಶ್ಚಂದ್ರನಂತೆ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ!. 

ಸ್ವಯಂ ವೈದ್ಯೆ ರತ್ನಮ್ಮ 

ಅದೊಂದು ರಾತ್ರಿ ಸುಮಾರು ಹತ್ತು ಗಂಟೆಯ ಸಮಯದಲ್ಲಿ ರತ್ನಮ್ಮನ ಮನೆಯಿಂದ ದೂರವಾಣಿ ಕರೆ ಬಂದಾಗ ಹೋಗಿದ್ದ ವೈದ್ಯರಿಗೆ, ಪುಟ್ಟ ರಾಜೇಶನು ತೀವ್ರಗೊಂಡ ಜ್ವರ ತಲೆಗೇರಿ "ಫಿಟ್ಸ್" (ಅಪಸ್ಮಾರದಂತಹ ಸೆಳೆತಗಳು) ನಿಂದ ನರಳುತ್ತಿದ್ದುದನ್ನು ಕಂಡು ತುರ್ತು ಚಿಕಿತ್ಸೆಯನ್ನು ನೀಡಿದ್ದರು. ಬಳಿಕ ರಾಜೇಶನ ಜ್ವರದ ವಿವರಗಳನ್ನು ಕೇಳಿದಾಗ, ಸುಮಾರು ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದುದು ತಿಳಿದುಬಂದಿತ್ತು. ವಿಶೇಷವೆಂದರೆ ಆರು ತಿಂಗಳ ಹಿಂದೆ ಇದೇ ವೈದ್ಯರು ರಾಜೇಶನ ಶೀತ ಜ್ವರಗಳಿಗೆ ನೀಡಿದ್ದ ಔಷದದಲ್ಲಿ ಅರ್ಧದಷ್ಟನ್ನು ಉಳಿಸಿದ್ದ ರತ್ನಮ್ಮನು, ಅದೇ ಔಷದವನ್ನು ಇದೀಗ ಮೊಮ್ಮಗನಿಗೆ ನೀಡಿದ್ದರು. ರಾಜೇಶನನ್ನು ಬಾಧಿಸುತ್ತಿರುವ ಟಾನ್ಸಿಲೈಟಿಸ್ ಕಾಯಿಲೆಯು ಶೀತ ಜ್ವರಗಳಿಗೆ ನೀಡಿದ್ದ ಹಳೆಯ ಔಷದಗಳಿಗೆ ಮಣಿದಿರಲಿಲ್ಲ. ಹಾಗೂ ಇದೇ ಕಾರಣದಿಂದಾಗಿ ಉಲ್ಬನಿಸಿದ್ದ ಜ್ವರವು ತಲೆಗೇರಿದ ಪರಿಣಾಮವಾಗಿ ರಾಜೇಶನಿಗೆ ಫಿಟ್ಸ್ ಬಾಧಿಸಿತ್ತು. 

ಇನ್ನು ಮುಂದೆ ಇಂತಹ ತಪ್ಪನ್ನು ಪುನರಾವರ್ತಿಸದಂತೆ ಎಚ್ಚರಿಕೆಯನ್ನು ನೀಡಿದ ವೈದ್ಯರು ರಾಜೇಶನಿಗೆ ಅವಶ್ಯಕ ಔಷದಗಳನ್ನು ನೀಡಿ ಮರಳಿದ್ದರು. 

ಪುಂಡಜ್ಜನ ಮಲಬದ್ಧತೆ 

ಅರುವತ್ತು ವರ್ಷ ವಯಸ್ಸಿನ ಪುಂಡಜ್ಜನಿಗೆ ಹಲವಾರು ವರ್ಷಗಳಿಂದ ಮಲಬದ್ಧತೆಯ ಸಮಸ್ಯೆ ಇದ್ದಿತು. ಇದನ್ನು ಪರಿಹರಿಸಲು ಅವರು ಸೇವಿಸಿದ್ದ ಔಷದಗಳೂ ಅಸಂಖ್ಯ. ಯಾವುದೇ ಔಷದಕ್ಕೆ ಮಣಿಯದ ತನ್ನ ಸಮಸ್ಯೆಯು ಅಂತಿಮವಾಗಿ ಅವರ ಸೋದರಳಿಯ ಹಾಗೂ ವೈದ್ಯ ಸೂಚಿಸಿದ್ದ "ಇಚ್ಛಾ ಭೇದಿ" ಮಾತ್ರೆಯ ಸೇವನೆಯಿಂದ ತಕ್ಕಮಟ್ಟಿಗೆ ಶಮನಗೊಂಡಿತ್ತು. ಆಡುಮಾತಿನಂತೆ "ಜಾಪಾಳ ಮಾತ್ರೆ, ಕೈಲಾಸ ಯಾತ್ರೆ" ಎಂದು ಪ್ರಖ್ಯಾತವಾಗಿದ್ದ ಈ ಔಷದವು, ಪುಂಡಜ್ಜನ ಪಾಲಿಗೆ ಸಾಕ್ಷಾತ್ ಸಂಜೀವಿನಿಯಾಗಿ ಪರಿಣಮಿಸಿತ್ತು. 

ಹಲವಾರು ದಿನಗಳ ಬಳಿಕ ಸಮಾರಂಭವೊಂದಕ್ಕೆ ಬಂದಿದ್ದ ಬಂಧುವೊಬ್ಬರು ಒಂದೆರಡು ದಿನ ಪುಂಡಜ್ಜನ ಮನೆಯಲ್ಲಿ ಉಳಿದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಮಲಬದ್ಧತೆಯಿಂದ ತೊಂದರೆಗೀಡಾದ ಈ ಬಂಧುವಿಗೆ ಪುಂಡಜ್ಜನು ತಾನು ಸೇವಿಸುವ ಅದ್ಭುತ ಮಾತ್ರೆಯೊಂದನ್ನು ನೀಡಿದ್ದರು. ಮಾತ್ರೆಯನ್ನು ನುಂಗಿದ ಬಂಧುವಿಗೆ ಮುಂದೆ ಬಂದೆರಗಲಿರುವ ಆಪತ್ತಿನ ಸುಳಿವೇ ಇರಲಿಲ್ಲ. 

ಮಾತ್ರೆಯನ್ನು ಸೇವಿಸಿದ ಒಂದೆರಡು ಗಂಟೆಯ ಬಳಿಕ ಆರಂಭವಾಗಿದ್ದ ಭೇದಿ ಮಾತ್ರ ನಿಲ್ಲಲೇ ಇಲ್ಲ. ಹೊಟ್ಟೆನೋವು ಮತ್ತು ಭೇದಿಯಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಈ ಬಂಧುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಚಿಕಿತ್ಸೆಯನ್ನು ನೀಡಬೇಕಾಯಿತು. ಇದರಿಂದಾಗಿ ಸಾಕಷ್ಟು ಸಂಕಟವನ್ನು ಅನುಭವಿಸಿದ ಬಂಧುವು, ಇನ್ನು ಮುಂದೆ ವೈದ್ಯರ ಸಲಹೆ ಪಡೆಯದೇ ಯಾವುದೇ ಔಷದವನ್ನು ಸೇವಿಸುವುದಿಲ್ಲವೆಂದು ಶಪಥವನ್ನು ಮಾಡಿದ್ದು ಪುಂಡಜ್ಜನಿಗೆ ತಿಳಿಯಲಿಲ್ಲ!. 

ಮಂತ್ರವೋ- ಮಾತ್ರೆಯೋ?

ತಮ್ಮ ಕುಟುಂಬ ಮಿತ್ರ ಸುಬ್ಬಣ್ಣನವರ ಅನಾರೋಗ್ಯದ ವಿಷಯ ತಿಳಿದೊಡನೆ ಅವರಲ್ಲಿ ತೆರಳಿದ್ದ ವೈದ್ಯರಿಗೆ ಸಾಕಷ್ಟು ದಣಿದಂತೆ ಕಾಣುತ್ತಿದ್ದ ಸುಬ್ಬಣ್ಣರ ಮುಖದಲ್ಲಿ ನೋವಿನ ಛಾಯೆಯೂ ಕಂಡಿತ್ತು. ಸುಬ್ಬಣ್ಣರೇ ಹೇಳಿದಂತೆ ಒಂದೆರಡು ದಿನಗಳಿಂದ ಬೆನ್ನು, ಹೆಗಲು ಮತ್ತು ಕುತ್ತಿಗೆಯ ಒಂದು ಪಾರ್ಶ್ವದಲ್ಲಿ ತೀವ್ರ ನೋವುಗಳೊಂದಿಗೆ ಜ್ವರವೂ ಬಾಧಿಸಲಾರಂಭಿಸಿತ್ತು. ಇದೀಗ ನೋವಿದ್ದ ಭಾಗದಲ್ಲಿ ನೀರು ತುಂಬಿದ ಗುಳ್ಳೆಗಳು ಮೂಡಿದ್ದು, ಮೇಲ್ನೋಟಕ್ಕೆ "ಸರ್ಪಸುತ್ತು" ಎಂದು ಕರೆಯಲ್ಪಡುವ "ಹರ್ಪಿಸ್" ಕಾಯಿಲೆ ಬಾಧಿಸಿರುವುದು ವೈದ್ಯರಿಗೆ ಖಚಿತವಾಗಿತ್ತು. ಈ ಕಾಯಿಲೆಗೆ ಆಧುನಿಕ ಹಾಗೂ ನಿಶ್ಚಿತವಾಗಿ ಇದನ್ನು ಗುಣಪಡಿಸಬಲ್ಲ ಔಷದಗಳು ಇವೆಯೆಂದ ವೈದ್ಯರು, ಒಂದೆರಡು ವಾರಗಳಲ್ಲಿ ಇದು ಗುಣವಾಗುವುದೆನ್ನುವ ಭರವಸೆಯನ್ನು ನೀಡಿದರು. 

ಚಿಂತಾಕ್ರಾಂತ ಸುಬ್ಬಣ್ಣರ ಮುಖವನ್ನು ನೋಡುತ್ತಲೇ ವೈದ್ಯರಿಗೆ ರೋಗಿಯ "ಧರ್ಮಸಂಕಟ"ದ ಅರಿವಾಯಿತು. ಏಕೆಂದರೆ ಬಹುತೇಕ ಜನರು ನಂಬಿರುವಂತೆ ಈ ಸರ್ಪದ ಹೆಡೆ ಮತ್ತು ಬಾಲಗಳು ಸೇರಿದಲ್ಲಿ ರೋಗಿಯ ಮರಣ ಖಚಿತ ಎನ್ನುವುದು ಶತ ಪ್ರತಿಶತ ಸುಳ್ಳು ಎಂದು ವೈದ್ಯರು ಸಾರಿ ಹೇಳಿದರೂ, ಸುಬ್ಬಣ್ಣರಿಗೆ ಸಮಾಧಾನವಾಗಿರಲಿಲ್ಲ. ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದ ಸುಬ್ಬಣ್ಣರು, ಅಂತಿಮವಾಗಿ ಹಳ್ಳಿಮದ್ದು ಮತ್ತು ಮಂತ್ರವಾದ ಚಿಕಿತ್ಸೆ ಮಾಡುವುದಾಗಿ ನಿರ್ಧರಿಸಿದ್ದರು.

ಸುಮಾರು ಹತ್ತು ದಿನಗಳ ಬಳಿಕ ಸುಬ್ಬಣ್ಣರಲ್ಲಿಂದ ತುರ್ತು ಕರೆ ಬಂದಾಗ ವಿಳಂಬಿಸದೇ ತೆರಳಿದ್ದ ವೈದ್ಯರಿಗೆ ಸುಬ್ಬಣ್ಣರನ್ನು ಕಂಡು ಆಶ್ಚರ್ಯವಾಗಿತ್ತು. ಅವರ ಬೆನ್ನು,ಹೆಗಲು, ಕುತ್ತಿಗೆ ಮತ್ತು ಹಣೆಗಳ ಭಾಗದಲ್ಲಿ ಹಳ್ಳಿಮದ್ದಿನ ಲೇಪ ಹಾಕಲಾಗಿತ್ತು. ಕಾಯಿಲೆಯ ತೀವ್ರತೆ ಹಾಗೂ ಆಹಾರ ಸೇವನೆಯಲ್ಲಿ ಅನುಸರಿಸುತ್ತಿದ್ದ ಪಥ್ಯಗಳಿಂದಾಗಿ ಸರಿಯಾಗಿ ಆಹಾರವನ್ನು ಸೇವಿಸದ ಸುಬ್ಬಣ್ಣರ ಮುಖದಲ್ಲಿ ಪ್ರೇತಕಳೆ ಕಾಣಿಸುತ್ತಿತ್ತು. ಅವರ ಎಡ ಕಣ್ಣಿನಲ್ಲಿ ನೋವು ಮತ್ತು ದೃಷ್ಟಿಮಾಂದ್ಯಗಳೊಂದಿಗೆ ಬೆನ್ನು ಹಾಗೂ ಹೆಗಲಿನ ಭಾಗದಲ್ಲಿ ಛಳಕು ಹೊಡೆದಂತೆ ತೀವ್ರ ನೋವು ಬಾಧಿಸುತ್ತಿತ್ತು. 

ಸುಬ್ಬಣ್ಣರನ್ನು ಪರೀಕ್ಷಿಸಿದ ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿ, ತಜ್ಞವೈದ್ಯರ ಚಿಕಿತ್ಸೆಯನ್ನು ಕೊಡಿಸಿದ್ದರು. ಒಂದು ವಾರದ ಚಿಕಿತ್ಸೆಯಿಂದ ಅವರ ದೃಷ್ಟಿಮಾಂದ್ಯ  ಹಾಗೂ ಲೇಪದಿಂದ ಉಲ್ಬನಿಸಿದ್ದ ಗುಳ್ಳೆಗಳು ಗುಣವಾಗಿದ್ದರೂ, ಹೊತ್ತುಗೊತ್ತಿಲ್ಲದೆ ಬಾಧಿಸುತ್ತಿದ್ದ ನೋವಿಗಾಗಿ ಸುದೀರ್ಘಕಾಲ ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತು. ಆದರೆ ಸುಬ್ಬಣ್ಣರು ನಂಬಿದ್ದಂತೆ ಅವರ ಶರೀರದ ಮೇಲೆ ಮೂಡಿದ್ದ ಸರ್ಪಸುತ್ತಿನ ಹೆಡೆ ಮತ್ತು ಬಾಲಗಳು ಸೇರಿರಲೇ ಇಲ್ಲ!. ಅಂತೆಯೇ ಹಳ್ಳಿಮದ್ದಿನ ಚಿಕಿತ್ಸೆ ಫಲಕಾರಿಯಾಗದ ಕಾರಣದಿಂದಾಗಿ ಸೇವಿಸಿದ ಆಧುನಿಕ ಔಷದಗಳ ಪ್ರಭಾವದಿಂದ ಅವರ ದೃಷ್ಟಿಯೂ ನಾಶವಾಗಿರಲಿಲ್ಲ. ಯಾವ ಔಷದ ಈ ಕಾಯಿಲೆಗೆ ಸೂಕ್ತವಲ್ಲವೆಂದು ಸುಬ್ಬಣ್ಣರು ನಂಬಿದ್ದರೋ,ಅದೇ ಔಷದಗಳು ಅವರ ಸಮಸ್ಯೆಯನ್ನು ಬಗೆಹರಿಸಲು ಉಪಯುಕ್ತವೆನಿಸಿದ್ದವು. 

ವೆರಿಸೆಲ್ಲಾ ಎನ್ನುವ ವೈರಸ್ಗಳಿಂದ ಉದ್ಭವಿಸುವ ಸೀತಾಳೆ ಸಿಡುಬು ಗುಣವಾದರೂ, ಈ ವೈರಸ್ ಗಳು ಮನುಷ್ಯನ ಶರೀರದ ನರಗಳಲ್ಲಿ ನಿಷ್ಕ್ರಿಯವಾಗಿ ಉಳಿದುಕೊಳ್ಳುತ್ತವೆ. ಅವಕಾಶ ದೊರೆತಾಗ ಸಕ್ರಿಯಗೊಂಡು ಸರ್ಪಸುತ್ತಿಗೆ ಕಾರಣವೆನಿಸುತ್ತವೆ. ಈ ಕಾಯಿಲೆಯನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳು ಲಭ್ಯವಿದ್ದು, ವ್ಯಾಧಿ ಪ್ರತ್ಯಕ್ಷವಾದೊಡನೆ ಚಿಕಿತ್ಸೆ ಪ್ರಾರಂಭಿಸಿದಲ್ಲಿ ಕೆಲವೇ ದಿನಗಳಲ್ಲಿ ವಾಸಿಯಾಗುತ್ತದೆ. ಅಂತೆಯೇ ಸೀತಾಳೆ ಸಿಡುಬು ಮತ್ತು ಸರ್ಪಸುತ್ತು, ಇವೆರಡೂ ವಾಧಿಗಳನ್ನು ತಡೆಗಟ್ಟಬಲ್ಲ ವ್ಯಾಕ್ಸೀನ್ ಕೂಡಾ ಲಭ್ಯವಿದೆ. ಇದನ್ನು ಪಡೆದುಕೊಂಡಲ್ಲಿ ಇವೆರಡೂ ವ್ಯಾಧಿಗಳಿಂದ ಸಂಪೂರ್ಣ ರಕ್ಷಣೆಯನ್ನು ಪಡೆಯಬಹುದಾಗಿದೆ. 

ಹುಚ್ಚುನಾಯಿ ಕಡಿತಕ್ಕೆ ಹಳ್ಳಿಮದ್ದು 

ಸಾಂತಪ್ಪ ಮತ್ತು ಈಚು ಚಿಕ್ಕ ಹಳ್ಳಿಯೊಂದರಿಂದ ನಗರದ ಹೈಸ್ಕೂಲಿಗೆ ಹೋಗುತ್ತಿದ್ದ ಗೆಳೆಯರು. ಅದೊಂದು ದಿನ ಎಂದಿನಂತೆ ಶಾಲೆಗೆ ಹೋಗುತ್ತಿದ್ದಾಗ ಎಲ್ಲಿಂದಲೋ ಓಡಿಬಂದ ಹುಚ್ಚು ನಾಯಿಯೊಂದು ಸಾಂತಪ್ಪನಿಗೆ ಕಚ್ಚಿತ್ತು. ಸಿಟ್ಟಿನಿಂದ ಕಲ್ಲುಬೀಸಿದ ಈಚುವನ್ನು ಅಟ್ಟಿಸಿಕೊಂಡು ಕಚ್ಚಿದ ನಾಯಿಯು ಓಡಿಹೋಗಿತ್ತು. ಗಾಯಗೊಂಡಿದ್ದ ಹುಡುಗರನ್ನು ಗ್ರಾಮಸ್ತರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಗಾಯವನ್ನು ತೊಳೆದು ಪಟ್ಟಿಹಾಕಿದ ದಾದಿಯು ಇಂಜೆಕ್ಷನ್ ನೀಡಲು ಬಂದಾಗ, ಸಾಂತಪ್ಪ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದ್ದನು. ಇಂಜೆಕ್ಷನ್ ಪಡೆದ ಈಚು ಆಸ್ಪತ್ರೆಯೆಲ್ಲ ಹುಡುಕಾಡಿದರೂ ಸಾಂತಪ್ಪ ಮಾತ್ರ ಕಾಣಸಿಗಲಿಲ್ಲ.

ಈಚುವಿನಿಂದ ವಿಷಯವರಿತ ಸಾಂತಪ್ಪನ ತಂದೆಯು ಮಗನನ್ನು "ಹಳ್ಳಿಮದ್ದು" ನೀದುವವರಲ್ಲಿ ಕರೆದೊಯ್ದನು. ಅಂದಿನಿಂದಲೇ ಸಾಂತಪ್ಪನಿಗೆ ಅಭೂತಪೂರ್ವ ಪಥ್ಯದೊಂದಿಗೆ ಕಷಾಯ- ಮಾತ್ರೆಗಳ ಸೇವನೆ ಆರಂಭವಾಗಿತ್ತು.  ಇದೇ ಸಂದರ್ಭದಲ್ಲಿ ಈಚು ಮಾತ್ರ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಪಡೆದುಕೊಳ್ಳುತ್ತಿದ್ದನು. 

ಸುಮಾರು ಮೂರು ತಿಂಗಳುಗಳ ಬಳಿಕ ಸಾಂತಪ್ಪನ ಮಾನಸಿಕ ಹಾಗೂ ಶಾರೀರಿಕ ಕ್ರಿಯೆಗಳಲ್ಲಿ ಅಸಾಮಾನ್ಯ ಬದಲಾವಣೆಗಳನ್ನು ಕಂಡು ಹೆದರಿದ ಆತನ ತಂದೆಯು, ಮಗನನ್ನು ಆಸ್ಪತ್ರೆಗೆ ಕರೆದೊಯ್ದರು. ಆತನನ್ನು ಪರೀಕ್ಷಿಸಿದ ವೈದ್ಯರು 'ನೀರಿನ ಭಯ" ಆರಂಭವಾಗಿರುವುದರಿಂದ ಚಿಕಿತ್ಸೆ ಅಸಾಧ್ಯವೆಂದು ಕೈಚೆಲ್ಲಿದ್ದರು. 

ಮುಂದೆ ಒಂದು ವಾರದ ದಿಗ್ಬಂಧನದಲ್ಲಿ ಸಾಕಷ್ಟು ಯಾತನೆಯನ್ನು ಅನುಭವಿಸಿದ ಸಾಂತಪ್ಪನು,ಒಂದೆರಡು ದಿನಗಳಲ್ಲೇ ಕೊನೆಯುಸಿರೆಳೆದಿದ್ದನು.ರೇಬೀಸ್ ನಿರೋಧಕ ಇಂಜೆಕ್ಷನ್ ಪಡೆದುಕೊಳ್ಳದ ಸಾಂತಪ್ಪನು ಅನಾವಶ್ಯಕವಾಗಿ ತನ್ನ ಜೀವವನ್ನೇ ತೆತ್ತಿದ್ದನು. ಇಂತಹ ತಪ್ಪನ್ನು ಮಾಡದ ಈಚು ಇಂದಿಗೂ ಆರೋಗ್ಯದಿಂದಿದ್ದು, ಅಗಲಿದ ಮಿತ್ರನನ್ನು ನೆನಪಿಸಿ ಕಣ್ಣೀರಿಡುತ್ತಾನೆ. 

ನೀವೇನು ಮಾಡಬಹುದು?

ಯಾವುದೇ ಕಾಯಿಲೆ ಬಾಧಿಸಿದಾಗ ಪ್ರಾಥಮಿಕ ಹಂತದಲ್ಲೇ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದಲ್ಲಿ, ಅಲ್ಪಾವಧಿಯಲ್ಲೇ ಕನಿಷ್ಠ ಪ್ರಮಾಣದ ಔಷದ ಸೇವನೆಯಿಂದ ಗರಿಷ್ಟ ಪ್ರಮಾಣದ ಪರಿಹಾರ ಲಭಿಸುವುದು. 

ವೈದ್ಯರ ಸಲಹೆ ಪಡೆಯದೇ ಯಾವುದೇ ಔಷದಗಳನ್ನು ಸೇವಿಸದಿರಿ. ವೈದ್ಯರು ಸೂಚಿಸಿದ ಔಷದಗಳ ಬಗ್ಗೆ ಮತ್ತು ಇವುಗಳ ಸೇವನೆಯಿಂದ ಉದ್ಭವಿಸಬಲ್ಲ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳಿ. ಕಾಯಿಲೆಯ ತೀವ್ರತೆಗೆ ಅನುಗುಣವಾಗಿ ನಿಗದಿತ ಪ್ರಮಾಣದಲ್ಲಿ, ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಅವಧಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಔಷದದ ಪ್ರಮಾಣದಲ್ಲಿ ಸ್ವಯಂ ಬದಲಾವಣೆ ಮಾಡುವುದು ಅಥವಾ ನಿಲ್ಲಿಸುವುದು ಅಪಾಯಕರವೆಂದು ತಿಳಿದಿರಿ. ನೀವು ಸೇವಿಸುತ್ತಿರುವ ಔಷದಗಳನ್ನು ಅಂತಹದೇ ಸಮಸ್ಯೆಗಳಿರುವ ಇತರರಿಗೆ ನೀಡದಿರಿ. ವೈದ್ಯರು ನಿಮಗೆ ನೀಡಿದ ಔಷದದ ಚೀಟಿಯ ಆಧಾರದ ಮೇಲೆ ಅನಿರ್ದಿಷ್ಟಕಾಲ ಅಥವಾ ನಿಮಗೆ ಬೇಕೆನಿಸಿದಾಗ ಔಷದವನ್ನು ಸೇವಿಸುವುದು ಮಾರಕವೆನಿಸೀತು. ಗಂಭೀರ- ಮಾರಕ ಮತ್ತು ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳಲ್ಲಿ ಜೀವನಪರ್ಯಂತ ಔಷದ ಸೇವನೆ ಅನಿವಾರ್ಯವೆಂದು ಅರಿತಿರಿ. 

ಸ್ವಯಂ ಚಿಕಿತ್ಸೆಯ ಅಂಗವಾಗಿ ಗಳಿಗೆಗೊಂದು ಗುಳಿಗೆಯನ್ನು ನುಂಗುವ ಹವ್ಯಾಸ ಹಿತಕರವಲ್ಲ. ಅಂತಿಮವಾಗಿ "ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೩-೦೧-೨೦೦೩ ರ ಸಂಚಿಕೆಯ ಬಳಕೆದಾರ;ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 



Sunday, November 24, 2013

Vamshoddhaarakarannu baadhisaballa vamshavaahinigalu!



             ವಂಶೋದ್ಧಾರಕರನ್ನು ಬಾಧಿಸಬಲ್ಲ ವಂಶವಾಹಿನಿಗಳು!

ಸಹಸ್ರಾರು ವರ್ಷಗಳಿಂದ ಭಾರತದ ಹಿಂದೂ ಧರ್ಮೀಯರಲ್ಲಿ ಸೋದರಸಂಬಂಧಿಗಳಲ್ಲಿ ವಿವಾಹ ನಡೆಯುವುದು ಆಚರಣೆಯಲ್ಲಿತ್ತು. ಮೂಲತಃ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯಗಳ ಪ್ರತೀಕವಾಗಿದ್ದ ಇಂತಹ ವಿವಾಹಗಳಿಗೆ, ಪರಸ್ಪರ ಜಾತಕಗಳ ಹೊಂದಾಣಿಕೆಯಂತಹ ಕನಿಷ್ಠ ಅವಶ್ಯಕತೆಯೂ ಇರಲಿಲ್ಲ. 

ಅನೇಕ ಕುಟುಂಬಗಳಲ್ಲಿ "ಕೊಟ್ಟ ಹೆಣ್ಣು ಕುಲದಿಂದ ಹೊರಕ್ಕೆ" ಎನ್ನುವಂತಾಗದಿರಲು, ಇನ್ನು ಕೆಲವರಲ್ಲಿ ಪುತ್ರ ಸಂತಾನ ಇಲ್ಲದ ಕಾರಣದಿಂದ ಹಾಗೂ ತಾವು ಕಷ್ಟಪಟ್ಟು  ಸಂಪಾದಿಸಿದ ಆಸ್ತಿ ಪಾಸ್ತಿಗಳು ಅನ್ಯರ ಪಾಲಾಗದಿರಲಿ ಎನ್ನುವ ಸ್ವಾರ್ಥದಿಂದಲೂ ಸೋದರ ಸಂಬಂಧಿಗಳಲ್ಲಿ ಅನೇಕ ವಿವಾಹಗಳು ನೆರವೇರುತ್ತಿದ್ದವು. 

ತಮ್ಮ ಮಕ್ಕಳು- ಮೊಮ್ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಂಬಲಿಸುತ್ತಿದ್ದ ನಮ್ಮ ಪೂರ್ವಜರಿಗೆ, ಇಂತಹ ವಿವಾಹಗಳ ಪರಿಣಾಮದಿಂದಾಗಿ ತಮ್ಮ ಮುಂದಿನ ಸಂತತಿಯನ್ನು ಪೀಡಿಸಬಲ್ಲ ಅನುವಂಶಿಕ ಕಾಯಿಲೆಗಳ ಬಗ್ಗೆ ತಿಳಿದಿರಲಿಲ್ಲ. ಏಕೆಂದರೆ ಅಂದಿನ ದಿನಗಳಲ್ಲಿ ನುರಿತ ವೈದ್ಯರು ಹಾಗೂ ಸಮರ್ಪಕವಾದ ವೈದ್ಯಕೀಯ ಮಾಹಿತಿಗಳು ಜನಸಾಮಾನ್ಯರಿಗೆ ಲಭ್ಯವಿರಲಿಲ್ಲ. 

ಅನುವಂಶಿಕ ಕಾಯಿಲೆಗಳು ಎಂದರೇನು?

ಕುಟುಂಬದ ಹಿರಿಯರಿಂದ ಅವರ ಮಕ್ಕಳು- ಮೊಮ್ಮಕ್ಕಳಿಗೆ ವಂಶವಾಹಿನಿಗಳ ಮೂಲಕ ಅಯಾಚಿತವಾಗಿ ಬಳುವಳಿಯಂತೆ ಬರುವ ಕಾಯಿಲೆಗಳಿಗೆ ಅನುವಂಶಿಕ ಕಾಯಿಲೆಗಳೆನ್ನುತ್ತಾರೆ. ರಕ್ತಸಂಬಂಧಿಗಳಲ್ಲಿ ನಡೆಯುವ ವಿವಾಹದ ಪರಿಣಾಮವಾಗಿ ಇಂತಹ ಕಾಯಿಲೆಗಳು ಮುಂದಿನ ಸಾಧ್ಯತೆಗಳು ನಿಸ್ಸಂದೇಹವಾಗಿ ದ್ವಿಗುಣಗೊಳ್ಳುತ್ತವೆ!. 

ಉದಾಹರಣೆಗೆ ನಿಮ್ಮ ಮನೆಯಲ್ಲೊಂದು ಪುಟ್ಟ ಕಂದ ಹುಟ್ಟಿದಾಗ ನೋಡಲು ಬಂದ ಬಂಧುಮಿತ್ರರು, "ಮಗು ಥೇಟ್ ಅಪ್ಪನಂತೆ ಅಥವಾ ತಾಯಿಯ ಪಡಿಯಚ್ಚು" ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಸ್ವಾಭಾವಿಕ. ಈ ಕಂದನ ಕಣ್ಣು, ಕಿವಿ, ಬಾಯಿ, ಮೂಗು, ತಲೆಗೂದಲು, ಶರೀರದ ಆಕಾರ- ಗಾತ್ರ ಮತ್ತಿತರ ಗುಣಲಕ್ಷಣಗಳು, ತಂದೆ ತಾಯಂದಿರ ವಂಶವಾಹಿನಿಗಳ ಮೂಲಕ ಪೂರ್ವನಿರ್ಧರಿತವಾಗಿ ಬರುತ್ತವೆ. ಇದೇ ರೀತಿಯಲ್ಲಿ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಮತ್ತು ಬೆಳವಣಿಗೆಗಳು ವಂಶವಾಹಿನಿಗಳ ಗುಣ- ದೋಷಗಳನ್ನು ಹೊಂದಿಕೊಂಡು ವ್ಯತ್ಯಯವಾಗುವುದುಂಟು. ಇದರಂತೆ ಸ್ಥೂಲಕಾಯರ ಮಕ್ಕಳು ಬೃಹತ್ ಗಾತ್ರದ ಶರೀರವನ್ನು ಹೊಂದಿರುವುದು, ಕುಬ್ಜ ದಂಪತಿಗಳ ಮಕ್ಕಳು ಕುಳ್ಳಗಿರುವುದು, ಬಕ್ಕತಲೆಯುಳ್ಳವರ ಮಕ್ಕಳು ಯೌವ್ವನದಲ್ಲೇ ಬೋಳುತಲೆಯನ್ನು ಹೊಂದಿರುವುದೇ  ಮುಂತಾದ ಗುಣಲಕ್ಷಣಗಳನ್ನು ನಾವು ದೈನಂದಿನ ಜೀವನದಲ್ಲಿ ಕಾಣಬಹುದು. ಇದಲ್ಲದೇ ನಮ್ಮ ತಂದೆ- ತಾಯಿ, ಅಜ್ಜ- ಅಜ್ಜಿಯರಲ್ಲಿ ಇದ್ದಿರಬಹುದಾದ ಅನೇಕ ಗಂಭೀರ- ಮಾರಕ ಕಾಯಿಲೆಗಳು ಅವರ ವಂಶವಾಹಿನಿಗಳ ಮೂಲಕ ನಿಮಗೂ ಜನ್ಮದತ್ತವಾಗಿ ಬರುವ ಸಾಧ್ಯತೆಗಳಿವೆ. ಇದನ್ನು ಅನುವಂಶಿಕತೆ ಅಥವಾ ಅನುವಂಶೀಯತೆ ಎನ್ನುತ್ತಾರೆ. 

ಅನುವಂಶಿಕತೆಯ ಮೂಲ 

ಅನುವಂಶಿಕತೆ ಹಾಗೂ ಇದರಿಂದ ಉದ್ಭವಿಸಬಲ್ಲ ಕಾಯಿಲೆಗಳ ಬಗ್ಗೆ ಅರಿತುಕೊಲ್ಲಬೇಕಾದಲ್ಲಿ ಒಂದಿಷ್ಟು ವೈದ್ಯಕೀಯ ಮಾಹಿತಿಗಳನ್ನು ಅರಿತುಕೊಳ್ಳುವುದು ಅವಶ್ಯವೆನಿಸುವುದು. 

ನಮ್ಮ ಶರೀರದಲ್ಲಿರುವ ಜೀವಕಣಗಳಲ್ಲಿ ತಂದೆಯಿಂದ ಪಡೆದ ೨೩ ಹಾಗೂ ತಾಯಿಯಿಂದ ಪಡೆದ ೨೩ ಸೇರಿದಂತೆ ಒಟ್ಟು ೪೬ ವರ್ಣತಂತುಗಳು(ಕ್ರೋಮೊಸೋಮ್ಸ್) ಇರುತ್ತವೆ. ಇವುಗಳು ೨೩ ಜೋಡಿಗಳಾಗಿ ಇರುತ್ತವೆ. ಇವುಗಳಲ್ಲಿ ಒಂದು ಜೋಡಿ "ಲಿಂಗ ನಿರ್ಧಾರಕ" (ಸೆಕ್ಸ್ ಕ್ರೋಮೊಸೋಮ್ಸ್)ಗಳಾಗಿರುತ್ತವೆ. ಇವುಗಳು ಪುರುಷರಲ್ಲಿ ಎಕ್ಸ್ ವೈ ಮತ್ತು ಸ್ತ್ರೀಯರಲ್ಲಿ ಎಕ್ಸ್ ಎಕ್ಸ್ ಎಂದು ಗುರುತಿಸಲ್ಪಟ್ಟಿವೆ. ಪುರುಷರ ವೀರ್ಯಾಣುವಿನಲ್ಲಿರುವ ಎಕ್ಸ್ ವರ್ಣತಂತುವು ಸ್ತ್ರೀಯರ ಅಂಡಾಣುವಿನಲ್ಲಿರುವ ಎಕ್ಸ್ ವರ್ಣತಂತುವಿನೊಂದಿಗೆ ವಿಲೀನವಾದಾಗ ಹುಟ್ಟುವ ಮಗುವು ಹೆಣ್ಣಾಗಿರುತ್ತದೆ. ಅಂತೆಯೇ ಪುರುಷರ ವೈ ವರ್ಣತಂತುವು ಸ್ತ್ರೀಯರ  ಎಕ್ಸ್ ವರ್ಣತಂತುವಿನೊಂದಿಗೆ ವಿಲೀನವಾದಾಗ ಹುಟ್ಟುವ ಮಗು ಗಂಡೇ ಆಗಿರುತ್ತದೆ. ಬಹುತೇಕ ವಿದ್ಯಾವಂತ ಪುರುಷರಿಗೂ ತನಗೆ ಹುಟ್ಟುವ ಮಗು ಗಂಡು ಅಥವಾ ಹೆಣ್ಣಾಗಲು ತಾನೇ ಕಾರಣಕರ್ತನೆಂದು ತಿಳಿದಿಲ್ಲ!. ಈ ಎರಡು ವರ್ಣತಂತುಗಳನ್ನು ಹೊರತುಪಡಿಸಿ ಉಳಿದ ೨೨ ಜೊತೆ ವರ್ಣತಂತುಗಳನ್ನು ಅಟೋಸೊಮ್ಸ್ ಎನ್ನುವರು. 

ಪ್ರತಿಯೊಂದು ವರ್ಣತಂತುವಿನಲ್ಲೂ ಸಾವಿರಕ್ಕೂ ಹೆಚ್ಚು ವಂಶವಾಹಿನಿಗಳು (ಜೀನ್ಸ್) ಇರುತ್ತವೆ. ಇವುಗಳಲ್ಲಿ ವ್ಯಕ್ತಿಯ ಶಾರೀರಿಕ - ಮಾನಸಿಕ ಗುಣಲಕ್ಷಣಗಳು, ಅನುವಂಶಿಕ ಕಾಯಿಲೆಗಳ ಮಾಹಿತಿಗಳು ಮತ್ತಿತರ ಕೆಲವು ಸಂಕೇತಗಳು ಅಡಕವಾಗಿರುತ್ತವೆ. ಪ್ರತಿಯೊಂದು ವರ್ಣತಂತು ಅಥವಾ ವಂಶವಾಹಿನಿಗಳಲ್ಲಿ ಇರಬಹುದಾದ ನ್ಯೂನ್ಯತೆ, ವೈಪರೀತ್ಯ, ವಿಕೃತಿಗಳು ಅಥವಾ ಇವುಗಳ ಪರಿವರ್ತನೆಯ ಪರಿಣಾಮವಾಗಿ ಕೆಲವೊಂದು ನಿರ್ದಿಷ್ಟ ಕಾಯಿಲೆಗಳು, ನ್ಯೂನ್ಯತೆಗಳು ಹಾಗೂ ವೈಕಲ್ಯಗಳು ನಮ್ಮಲ್ಲಿ ಕಂಡುಬರಬಹುದು. ಇಂತಹ ಸಮಸ್ಯೆಗಳಿಗೆ ಕಾರಣವಾಗಿರುವ ವರ್ಣತಂತುಗಳು - ವಂಶವಾಹಿನಿಗಳನ್ನು ಗುರುತಿಸಿ, ಇವುಗಳಲ್ಲಿ ಸಂಭವಿಸಿರುವ ಪರಿವರ್ತನೆಗಳನ್ನು ಪತ್ತೆಹಚ್ಚುವಲ್ಲಿ ವೈದ್ಯಕೀಯ ವಿಜ್ಞಾನಿಗಳು ಅವಿರತ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚೆಗೆ "ಮಾನವನ ವಂಶವಾಹಿನಿಗಳ ನಕ್ಷೆ" ಯನ್ನು ಯಶಸ್ವಿಯಾಗಿ ಸಿದ್ಧಪಡಿಸಿರುವುದು ಅದ್ಭುತ ಸಾಧನೆಯೆನ್ನಬಹುದು. ಇದರ ಫಲವಾಗಿ ಇಂತಹ ಕಾಯಿಲೆಗಳನ್ನು ಪತ್ತೆಹಚ್ಚಲು- ತಡೆಗಟ್ಟಲು ಅವಶ್ಯಕ ಪರೀಕ್ಷೆಗಳು ಹಾಗೂ ಚಿಕಿತ್ಸೆಯನ್ನು ಸಂಶೋಧಿಸುವುದು ಸಾಧ್ಯವಾಗಬಹುದು. 

ಜನಸಾಮಾನ್ಯರು ಆಡುಭಾಷೆಯಲ್ಲಿ ಬಳಸುವ "ಬ್ರಹ್ಮಲಿಖಿತ" ಅಥವಾ "ಹಣೆಬರಹ" ಎನ್ನುವ ಮಾತು, ವಂಶವಾಹಿನಿಗಳ ಬಗ್ಗೆ ನಿಜವೆನಿಸುವುದು. ಏಕೆಂದರೆ ಇವುಗಳಲ್ಲಿ ಅಡಕವಾಗಿರುವ "ಮಾಹಿತಿ"ಯನ್ನು ಬದಲಿಸಲು ಇದುವರೆಗೆ ಯಾವುದೇ ವೈದ್ಯಕೀಯ ವಿಜ್ಞಾನಿಯೂ ಯಶಸ್ವಿಯಾಗಿಲ್ಲ!. 

ಕಾರಣಗಳ ವೈವಿಧ್ಯ 

ಮನುಕುಲವನ್ನು ಬಾಧಿಸಬಲ್ಲ ಕೆಲವೊಂದು ಕಾಯಿಲೆಗಳು ಕೇವಲ ವಂಶವಾಹಿನಿಗಳ ವೈಪರೀತ್ಯದಿಂದಾಗಿ ಉದ್ಭವಿಸುತ್ತವೆ. ಇವುಗಳಲ್ಲಿ ಪರಿಸರ ಅಥವಾ ಅನ್ಯ ಕಾರಣಗಳು ಪ್ರಭಾವ ಬೀರುವುದಿಲ್ಲ. ಇಂತಹ ಕಾಯಿಲೆಗಳಲ್ಲಿ ವರ್ನತಂತುಗಳ ಅಸಮಾನತೆಯೂ ಸೇರಿದ್ದು ಇವುಗಳನ್ನು ಏಕ ಕಾರಣದಿಂದ ಉದ್ಭವಿಸುವ ಕಾಯಿಲೆಗಳೆಂದು ಕರೆಯುವರು. ಕೇವಲ ಒಂದು ವಂಶವಾಹಿನಿಯ ನ್ಯೂನ್ಯತೆಯಿಂದ ಅಪರೂಪದಲ್ಲಿ ಕಾಣಸಿಗುವ ಸಾವಿರಕ್ಕೂ ಹೆಚ್ಚು ವಿಧದ ಸಮಸ್ಯೆಗಳಿದ್ದು, ಇವುಗಳು ಜನ್ಮದತ್ತವಾಗಿ ಅಥವಾ ಬಾಲ್ಯದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ ಇವುಗಳಿಗೆ ಅಪವಾದಗಳೂ ಇವೆ. ಇಂತಹ ಗಂಭೀರ ಕಾಯಿಲೆಗಳು ಮಾತಪಿತರಿಂದ ನೇರವಾಗಿ ಮಕ್ಕಳಿಗೆ ಬರುವ ಸಾಧ್ಯತೆಗಳಿದ್ದು, ರಕ್ತಸಂಬಂಧಿಗಳಲ್ಲಿ ಇವುಗಳ ಸಂಭಾವ್ಯತೆ ಇನ್ನಷ್ಟು ಹೆಚ್ಚಾಗಬಹುದು. ಸಾಮಾನ್ಯವಾಗಿ ಈ ರೀತಿಯ ನ್ಯೂನ್ಯತೆ- ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿರುವುದಿಲ್ಲ. 

ಇನ್ನು ಕೆಲವು ಕಾಯಿಲೆಗಳು ನಮ್ಮ ಪರಿಸರ ಅರ್ಥಾತ್ ಸೋಂಕು, ಆಹಾರ ಮತ್ತು ಪೋಷಕಾಮ್ಶಗಲ್ ಕಾರಣದಿಂದಾಗಿ ಬರುತ್ತವೆ. ಮತ್ತೆ ಕೆಲವು ಕಾಯಿಲೆಗಳು ಅನುವಂಶಿಕತೆ ಮತ್ತು ಪರಿಸರ ಇವೆರಡೂ ಕಾರಣಗಳಿಂದ ಉದ್ಭವಿಸುತ್ತವೆ. ಇವುಗಳನ್ನು ಬಹುಕಾರಣಗಳಿಂದ ಬರುವ ಕಾಯಿಲೆಗಳೆನ್ನುವರು. ಇವುಗಳಲ್ಲಿ ಜನ್ಮದತ್ತ ವೈಕಲ್ಯಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಜನ್ಮದತ್ತ ಹೃದ್ರೋಗಗಳು, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಸಿಜೋಫ್ರೆನಿಯಾ ದಂತಹ ಗಂಭೀರ ಮಾನಸಿಕ ವ್ಯಾಧಿಗಳು ಸೇರಿವೆ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳಲ್ಲಿ ಒಂದಕ್ಕೂ ಹೆಚ್ಚು ವಂಶವಾಹಿನಿಗಳ ವೈಪರೀತ್ಯ ಕಾರಣವಾಗಿರುತ್ತದೆ. 

ವರ್ಣತಂತುಗಳ ಅಸಾಮಾನ್ಯತೆಯಿಂದಾಗಿ ಡೌನ್ಸ್ ಸಿಂಡ್ರೋಮ್, ಸೀಳು ತುಟಿ- ಒಸಡುಗಳಂತಹ ಜನ್ಮದತ್ತ ವೈಕಲ್ಯಗಳು, ಸ್ವಯಂ ಸಂಭವಿಸುವ ಗರ್ಭಪಾತ, ವ್ಯಕ್ತಿತ್ವದ ಸಮಸ್ಯೆಗಳು ಹಾಗೂ ಇನ್ನಿತರ ಕಾಯಿಲೆಗಳು ಬರುವುದುಂಟು. 

ಅನುವಂಶಿಕ ಕಾಯಿಲೆಗಳು ಅನೇಕಬಾರಿ ಒಂದು ತಲೆಮಾರಿನಲ್ಲಿ ಮಾಯವಾಗಿ ಮತ್ತೆ ಮುಂದಿನ ಸಂತತಿಯಲ್ಲಿ ಪ್ರತ್ಯಕ್ಷವಾಗಬಹುದು. ತೀವ್ರ ಮತ್ತು ಗಂಭೀರ ಅನುವಂಶಿಕ ಕಾಯಿಲೆಗಳಿರುವ ರೋಗಿಗಳಲ್ಲಿ  ವೈದ್ಯಕೀಯ ಕಾರಣಗಳಿಂದಾಗಿ ತಲೆದೋರಿದ ಸಂತಾನಹೀನತೆಯಿಂದ ಅಥವಾ ಇಂತಹ ವ್ಯಕ್ತಿಗಳು ಯೌವ್ವನದಲ್ಲಿ ವಿವಾಹಕ್ಕೆ ಮೊದಲೇ ಮೃತರಾಗುವುದರಿಂದ, ಈ ಕುಟುಂಬದಲ್ಲಿನ ಅನುವಂಶಿಕ ಕಾಯಿಲೆಯೂ ಸ್ವಾಭಾವಿಕವಾಗಿ ಅಂತ್ಯಗೊಳ್ಳುವುದು. ಗಿಡ್ಡ ಕಾಲಿನ ಕುಬ್ಜರು ಇದಕ್ಕೆ ಉತ್ತಮ ಉದಾಹರಣೆ ಎನಿಸುತ್ತಾರೆ. ಅಂತೆಯೇ ತಮ್ಮ ಕಾಯಿಲೆಯ ಅರಿವಿಲ್ಲದೇ ವಿವಾಹವಾದ ವ್ಯಕ್ತಿಗಳ ಮುಂದಿನ ಸಂತತಿಯನ್ನು ಈ ಸಮಸ್ಯೆ ಬಾಧಿಸುವುದರಲ್ಲಿ ಸಂದೇಹವಿಲ್ಲ. 

ಅಪರೂಪದಲ್ಲಿ ಒಂದೇ ರೀತಿಯ ವಂಶವಾಹಿನಿಗಳ ನ್ಯೂನ್ಯತೆಗಳಿರುವ ದಂಪತಿಗಳಲ್ಲಿ ಹುಟ್ಟುವ ಎಲ್ಲ ಮಕ್ಕಳಲ್ಲಿ ಈ ನ್ಯೂನ್ಯತೆ ಕಂಡುಬರುವುದು. ಇಂತಹ ಸಾಧ್ಯತೆಗಳು ರಕ್ತ ಸಂಬಂಧಿಗಳ ವಿವಾಹದಿಂದಾಗಿ ಉದ್ಭವಿಸಿವುದೇ ಹೆಚ್ಚು. ಏಕೆಂದರೆ ಒಂದೇ ರೀತಿಯ ನ್ಯೂನ್ಯತೆಗಳು ರಕ್ತ ಸಂಬಂಧಿಗಳಲ್ಲದವರಲ್ಲಿ ಕಂಡುಬರುವ ಸಾಧ್ಯತೆಗಳು ಅತ್ಯಂತ ವಿರಳ. ದೀರ್ಘಾಯುಷ್ಯದ ಪರಂಪರೆ ಇರುವ ಕುಟುಂಬಗಳಲ್ಲಿ ಅನುವಂಶಿಕ ಕಾಯಿಲೆಗಳು ಇರುವುದನ್ನು ಪತ್ತೆ ಹಚ್ಚುವುದು ಅತ್ಯಂತ ಸುಲಭ. ಸೋದರ ಸಂಬಂಧಿಗಳು ವಿವಾಹವಾದಾಗ ಈ ದಂಪತಿಗಳಲ್ಲಿ ಹುಟ್ಟುವ ಮಕ್ಕಳು ಹೆರಿಗೆಯ ಕೆಲವು ವಾರಗಳ ಮೊದಲು ಅಥವಾ ಹೆರಿಗೆಯ ಬಳಿಕ ಕೆಲವೇ ವಾರಗಳಲ್ಲಿ ಮರಣಹೊಂದುವುದು, ಅಪರೂಪದಲ್ಲಿ ಕೆಲವು ಜನ್ಮದತ್ತ ವೈಕಲ್ಯಗಳು ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುವುದೇ ಮುಂತಾದ ಸಮಸ್ಯೆಗಳು ಕಂಡುಬರುವ ಸಾಧ್ಯತೆಗಳು ಹೆಚ್ಚಾಗಿವೆ. ಅಂತೆಯೇ ಕೆಲವರಲ್ಲಿ ವಿಶಿಷ್ಟ ರೀತಿಯ ಕಿವುಡು- ಮೂಕತನ ಹಾಗೂ ಜನ್ಮದತ್ತ ಕುರುಡುತನಗಳೂ ಕಂಡುಬರುವುದುಂಟು. ವಿಶೇಷವಾಗಿ ಕುಟುಂಬದ ಹಿರಿಯರಲ್ಲಿ ಇಂತಹ ಸಮಸ್ಯೆಗಳಿದ್ದಲ್ಲಿ, ಇವು ಮುಂದಿನ ಸಂತತಿಯಲ್ಲಿ ಪುನರಾವರ್ತನೆಯಾಗುವುದು ಸಾಮಾನ್ಯ. 

ಒಂದು ಕುಟುಂಬದ ಹಲವಾರು ತಲೆಮಾರುಗಳಲ್ಲಿ ಒಂದು ಅಥವಾ ಹೆಚ್ಚು ವಿಧದ ನಿರ್ದಿಷ್ಟ ಕಾಯಿಲೆಗಳು ಕಂಡುಬಂದಲ್ಲಿ, ಈ ಕಾಯಿಲೆಗಳು ಅನುವಂಶಿಕವಾಗಿ ಈ ಕುಟುಂಬದ ಸದಸ್ಯರನ್ನು ಕಾಡುತ್ತಿದೆ ಎಂದು ಖಚಿತವಾಗಿ ಹೇಳಬಹುದು. 

ಅನುವಂಶಿಕ ಕಾಯಿಲೆಗಳಲ್ಲಿ ಹಲವಾರು ವೈವಿಧ್ಯಗಳಿದ್ದು, ಈ ಲೇಖನದಲ್ಲಿ ಇವೆಲ್ಲವನ್ನೂ ವಿವರಿಸಿಲ್ಲ. ಆದರೆ ಅನುವಂಶಿಕ ಕಾಯಿಲೆಯ  ಉದಾಹರಣೆಗಾಗಿ "ಹೆಮೊಫಿಲಿಯಾ" ವ್ಯಾಧಿಯನ್ನು ಆಯ್ದುಕೊಳ್ಳಲಾಗಿದೆ. 

ಶತಪ್ರತಿಶತ ಅನುವಂಶಿಕವಾಗಿ ಉದ್ಭವಿಸುವ ಹೆಮೊಫಿಲಿಯಾ ವ್ಯಾಧಿಯು, ರಕ್ತ ಹೆಪ್ಪುಗಟ್ಟಲು ಅವಶ್ಯವಾದ ಎಂಟಿ ಹೆಮೊಫಿಲಿಕ್ ಅಂಶಗಳ (೮, ಎಎಚ್ ಎಫ್ ಅಥವಾ ಎ ಎಚ್ ಜಿ) ಕೊರತೆಯಿಂದ ಸಂಭವಿಸುತ್ತದೆ. ಜೀವನಪರ್ಯಂತ ಕಾಡಬಲ್ಲ ಈ ವ್ಯಾಧಿಗೆ ಸಮರ್ಪಕ ಚಿಕಿತ್ಸೆ ಲಭ್ಯವಿಲ್ಲ. ಇಂತಹ ವ್ಯಕ್ತಿಗಳಲ್ಲಿ ಕಾರಣಾಂತರಗಳಿಂದ ರಕ್ತಸ್ರಾವವಾದಾಗ, ಅದು ತೀವ್ರಗೊಳ್ಳುವುದಲ್ಲದೇ ರಕ್ತ ಹೆಪ್ಪುಗಟ್ಟುವುದು ವಿಳಂಬಿತವಾಗುವುದು. 

ಹೆಮೊಫಿಲಿಯಾ ಇರುವ ಗಂಡಸಿನಿಂದ ಆತನ ಗಂಡುಮಕ್ಕಳಿಗೆ ಹಾಗೂ ಗಂಡುಮಕ್ಕಳ ಮುಂದಿನ ಸಂತತಿಗೆ  ಈ ಸಮಸ್ಯೆಯು ಅನುವಂಶಿಕವಾಗಿ ಬರುವುದಿಲ್ಲ. ಆದರೆ ಹೆಣ್ಣುಮಕ್ಕಳು ಈ ವಂಶವಾಹಿನಿಗಳ ವಾಹಕರಾಗಿ ತಮ್ಮಲ್ಲಿ ಹುಟ್ಟುವ ಕೆಲವು ಗಂಡುಮಕ್ಕಳಿಗೆ ಈ ಕಾಯಿಲೆಯನ್ನು ಬಳುವಳಿಯಾಗಿ ನೀಡುತ್ತಾರೆ. ಅಂತೆಯೇ ಇವರಲ್ಲಿ ಹುಟ್ಟುವ ಕೆಲವು ಹೆಣ್ಣುಮಕ್ಕಳು ತಮ್ಮ ತಾಯಂದಿರಂತೆಯೇ "ವಾಹಕ"ರಾಗುವ ಸಾಧ್ಯತೆಗಳಿವೆ. 

ಹೆಮೊಫಿಲಿಯಾ ಇರುವ ಗಂಡಸರು, ಅವರ ಸೋದರಿಯರು ಮತ್ತು ಅವರ ಹೆಣ್ಣುಮಕ್ಕಳು ವಿವಾಹವಾದರೂ, ಮಕ್ಕಳಾಗದಂತೆ ಎಚ್ಚರ ವಹಿಸುವುದು ಹಿತಕರ. ಜೊತೆಗೆ ಈ ಕುಟುಂಬದಲ್ಲಿ ಅನುವಂಶಿಕವಾಗಿ ಹರಡುತ್ತಿರುವ ಕಾಯಿಲೆಯೊಂದನ್ನು ಸಮಾಪ್ತಿಗೊಳಿಸಲು ಇದುವೇ ಅತ್ಯಂತ ಸುಲಭೊಪಾಯವೂ ಹೌದು. 

ಸಮಸ್ಯೆಯನ್ನು ತಡೆಗಟ್ಟುವುದೆಂತು?

ಪ್ರಸ್ತುತ ಅನುವಂಶಿಕವಾಗಿ ಬರಬಲ್ಲ ಬಹುತೇಕ ಗಂಭೀರ- ಮಾರಕ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಕಾರಣದಿಂದಾಗಿ, ಇಂತಹ ಕುಟುಂಬಗಳ ಸದಸ್ಯರು ವಿವಾಹಕ್ಕೆ ಮುನ್ನ ವೈದ್ಯಕೀಯ ತಜ್ಞರೊಂದಿಗೆ ಅನುವಂಶಿಕತೆಯ ಬಗ್ಗೆ "ಆಪ್ತ ಸಂವಾದ"( ಜೆನೆಟಿಕ್ ಕೌನ್ಸೆಲಿಂಗ್) ನಡೆಸುವುದು ಉತ್ತಮ. ಏಕೆಂದರೆ ವಿವಾಹಯೋಗ್ಯ ವಯಸ್ಸಿನಲ್ಲಿ ಆರೋಗ್ಯವಂತರಾಗಿದ್ದರೂ, ಮುಂದೆ ಅನುವಂಶಿಕ ಕಾರಣಗಳಿಂದ ವ್ಯಾಧಿಪೀಡಿತರಾಗುವುದು ಹಾಗೂ ತಮ್ಮ ಸಂತತಿಗೂ ಈ ಸಮಸ್ಯೆಯನ್ನು ಬಳುವಳಿಯಾಗಿ ನೀಡುವುದು ಸುಲಭ ಸಾಧ್ಯ. 

ಆಪ್ತ ಸಂವಾದದ ಉದ್ದೇಶ ಇಂತಹ ವ್ಯಕ್ತಿಗಳಲ್ಲಿ ಇರಬಹುದಾದ ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚುವುದು ಹಾಗೂ ಇದು ಅನುವಂಶಿಕವಾಗಿ ಬಂದಿರುವುದನ್ನು ಖಚಿತಪಡಿಸಿಕೊಳ್ಳುವುದೇ ಆಗಿದೆ. ಅಂತೆಯೇ ಈ ವ್ಯಕ್ತಿಯ ಕುಟುಂಬದ ಇತರ ಸದಸ್ಯರಲ್ಲಿ ಇದೇ ವ್ಯಾಧಿಯ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಧೃಢಪಡಿಸಬೇಕಾಗುತ್ತದೆ. ತದನಂತರ ಆಯಾ ವ್ಯಕ್ತಿಗಳಲ್ಲಿರುವ ಅಥವಾ ಮುಂದೆ ಬರಬಹುದಾದ ಕಾಯಿಲೆಗಳಿಗೆ ಅನುಗುಣವಾಗಿ ವೈದ್ಯರು ನಿರ್ದಿಷ್ಟ ಮಾಹಿತಿ, ಸಲಹೆ ಮತ್ತು ಸೂಚನೆಗಳನ್ನು ನೀಡುವರು. ತಜ್ಞವೈದ್ಯರು ನೀಡುವ ಸಲಹೆ ಸೂಚನೆಗಳು, ಈ ಸಮಸ್ಯೆಯನ್ನು ತಡೆಗಟ್ಟಲು ಮಹತ್ವಪೂರ್ಣವೆನಿಸುವುದು. 

ಸಂದೇಶನ ಬೆನ್ನು ನೋವಿಗೆ ಕಾರಣವೇನು?

ಸೌಮ್ಯ ಸ್ವಭಾವದ ಬುದ್ಧಿವಂತ ತರುಣ ಸಂದೇಶನಿಗೆ ಸ್ನಾತಕೋತ್ತರ ವ್ಯಾಸಂಗ ಮುಗಿಸಿದಂತೆಯೇ ಅಮೆರಿಕದಲ್ಲಿ ಉದ್ಯೋಗ ದೊರೆತಿತ್ತು. ಕೈತುಂಬಾ ಸಂಬಳ ದೊರೆಯುವ ಉದ್ಯೋಗ ದೊರೆತಾಗ ಆತನ ಮನೆಮಂದಿಗೆಲ್ಲ "ಸ್ವರ್ಗಕ್ಕೆ ಮೂರೇ ಗೇಣು" ಎನಿಸಿತ್ತು. ಅಮೆರಿಕಕ್ಕೆ ತೆರಳಿದ ಸಂದೇಶ ಎರಡು ವರ್ಷಗಳ ಬಳಿಕ ಭಾರತಕ್ಕೆ ಮರಳಿದಾಗ, ಆತನ ಮಾತಾಪಿತರಿಗೆ ಮಗನ ಗುರುತು ಸಿಗದಷ್ಟು ಬದಲಾಗಿದ್ದನು. ಸಾಕಷ್ಟು ತೂಕವನ್ನು ಕಳೆದುಕೊಂಡು ತುಸು ವಯಸ್ಸಾದವನಂತೆ ಕಾಣುತ್ತಿದ್ದ ಮಗನನ್ನು ಕಂಡ ತಾಯಿಗೆ ಕಣ್ಣೀರು ಉಕ್ಕಿಹರಿದಿತ್ತು. ಮರುದಿನ ಅಮೆರಿಕಕ್ಕೆ ತೆರಳಿದ ಬಳಿಕ ಆರಂಭವಾಗಿದ್ದ ಬೆನ್ನುನೋವಿನ ಬಗ್ಗೆ ತಂದೆತಾಯಿಯರ ಬಳಿ ಹೇಳಿದ ಸಂದೇಶನು, ದಿನದಲ್ಲಿ ೧೨ ಗಂಟೆಗಳ ಕಾಲ ಕಂಪ್ಯೂಟರ್ ನ ಮುಂದೆ ಕುಳಿತುಕೊಳ್ಳುವುದೇ ತನ್ನ ಸಮಸ್ಯೆಗೆ ಕಾರಣವೆಂದು ಭಾವಿಸಿದ್ದನು. 

ಮಗನ ಸ್ಥಿತಿಯನ್ನು ಕಂಡು ಗಾಬರಿಯಾಗಿದ್ದ ಆತನ ತಂದೆಯು, ಸ್ಥಳೀಯ ತಜ್ಞರನ್ನು ಭೇಟಿಯಾಗಿ ಪರೀಕ್ಷಿಸಲ್ಪಟ್ಟ ಬಳಿಕ ಅವರ ಸಲಹೆಯಂತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ತಜ್ನವೈದ್ಯರು ನಡೆಸಿದ್ದ ಇತರ ಪರೀಕ್ಷೆಗಳಿಂದ ಸಂದೇಶನ ಬೆನ್ನುಹುರಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು. ವಿಷಯವನ್ನರಿತ ಮಾತಾಪಿತರು ದಿಗ್ಭ್ರಾಂತರಾಗಿದ್ದರು. 

ವಾಸ್ತವದಲ್ಲಿ ಸಂದೇಶನ ತಂದೆ ಮತ್ತು ತಾಯಿಯರಿಬ್ಬರ ಕುಟುಂಬಗಳ ಹಲವಾರು ಹಿರಿಯರ ಮರಣಗಳಿಗೆ ಕಾರಣವೆನಿಸಿದ್ದ ಮಾರಕ ಕ್ಯಾನ್ಸರ್, ಇದೀಗ ಅನುವಂಶಿಕವಾಗಿ ಹರಿಯುತ್ತಾ ಬಂದು ಸಂದೇಶನನ್ನು ಕಾಡಲಾರಂಭಿಸಿತ್ತು. ಇದೀಗ ಜೀವನ್ಮರಣದ ಮಧ್ಯೆ ಉಯ್ಯಾಲೆಯಾಡುತ್ತಿರುವ ಸಂದೇಶನು, ತನ್ನದಲ್ಲದ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುತ್ತಿರುವುದು ವಿಷಾದನೀಯ. 

ನಿಮಗೊಂದು ಕಿವಿಮಾತು 

ವಿವಾಹಯೋಗ್ಯರಾಗಿರುವ ನೀವು ಹಿಂದೂ ಧರ್ಮೀಯರಾಗಿದ್ದು ಜಾತಕದ ಬಗ್ಗೆ ನಂಬಿಕೆಯಿದ್ದಲ್ಲಿ, ಪರಸ್ಪರ ಜಾತಕಗಳ ಹೊಂದಾಣಿಕೆಯೊಂದಿಗೆ ಇವೆರಡೂ ಕುಟುಂಬಗಳ ಹಿರಿಯರಲ್ಲಿ ಅನುವಂಶಿಕ ಕಾಯಿಲೆಗಳಿವೆಯೇ ಎಂದು ತಿಳಿದುಕೊಳ್ಳಿ. ವಿಶೇಷವಾಗಿ ಕ್ಯಾನ್ಸರ್, ಬಾಲ ಮಧುಮೇಹ, ಜನ್ಮದತ್ತ ಹೃದ್ರೋಗ, ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಮಧುಮೇಹ, ಹೆಮೊಫಿಲಿಯಾ, ಆಸ್ತಮಾ,ತೀವ್ರ ಅಪಸ್ಮಾರ, ಉನ್ಮಾದ,ಮಾನಸಿಕ ಖಿನ್ನತೆ, ಸಿಜೋಫ್ರೆನಿಯಾ, ಡೌನ್ಸ್ ಸಿಂಡ್ರೋಮ್ ಮತ್ತಿತರ ಗಂಭೀರ ಕಾಯಿಲೆಗಳು ಎರಡೂ ಕುಟುಂಬಗಳಲ್ಲಿ ಇದ್ದಲ್ಲಿ, ಇವು ಮುಂದಿನ ಸಂತತಿಯನ್ನು ಪೀಡಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಇಂತಹ ಸಂದರ್ಭಗಳಲ್ಲಿ ಜಾತಕಗಳ ಹೊಂದಾಣಿಕೆ ಇದ್ದರೂ ವಿವಾಹವಾಗದಿರುವುದೇ ಲೇಸು. 

ಯಾವುದೇ ಕಾರಣಕ್ಕೂ ಸೋದರ ಸಂಬಂಧದಲ್ಲಿ ವಿವಾಹವಾಗದಿರಿ. ಏಕೆಂದರೆ ನಿಮ್ಮ ಮತ್ತು ನಿಮ್ಮ ಸೋದರ ಸಂಬಂಧಿಯಲ್ಲಿರುವ ೪೬ ವರ್ಣತಂತುಗಳಲ್ಲಿ, ಕನಿಷ್ಠ ೨೩ ವರ್ಣತಂತುಗಳು ಸಮಾನವಾಗಿರುತ್ತವೆ. ಇದೇ ಕಾರಣದಿಂದಾಗಿ ನಿಮ್ಮ ಕುಟುಂಬದ ಹಿರಿಯರಲ್ಲಿ ಇದ್ದಿರಬಹುದಾದ ಅನುವಂಶಿಕ ಕಾಯಿಲೆಗಳು ನಿಮ್ಮ ಮುಂದಿನ ಸಂತತಿಯನ್ನು ಪೀಡಿಸುವ ಸಾಧ್ಯತೆಗಳು ದ್ವಿಗುಣಗೊಳ್ಳುತ್ತವೆ!. 

ಕೆಲ ವ್ಯಕ್ತಿಗಳು ವೈದ್ಯರ ಸಲಹೆಯಂತೆ ವಿವಾಹವಾದರೂ, ಮಕ್ಕಳಾಗದಂತೆ ಎಚ್ಚರಿಕೆ ವಹಿಸುವುದರಿಂದ, ನಿಮ್ಮ ಕಣ್ಣ ಮುಂದೆಯೇ ನಿಮ್ಮ ಮಕ್ಕಳು ಗಂಭೀರ- ಮಾರಕ ಕಾಯಿಲೆಗಳಿಂದ ಪೀಡಿತರಾದಲ್ಲಿ ಉಂಟಾಗುವ ಮನೋವ್ಯಾಕುಲ, ಅಪರಾಧೀ ಮನೋಭಾವ ಹಾಗೂ ಅನಾವಶ್ಯಕ  ಮತ್ತು ನಿಷ್ಪ್ರಯೋಜಕ ಎನಿಸುವ ಚಿಕಿತ್ಸಾ ವೆಚ್ಚಗಳಿಂದ ಪಾರಾಗಬಹುದು. ಜೊತೆಗೆ ಆರೋಗ್ಯವಂತ ಅನಾಥ ಮಗುವೊಂದನ್ನು ದತ್ತು ಪಡೆದು ಸಾಕಿ ಸಲಹಿದಲ್ಲಿ ಧನ್ಯತಾ ಭಾವನೆಯೊಂದಿಗೆ ಒಂದಿಷ್ಟು ಪುಣ್ಯವೂ ಲಭಿಸುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೧-೦೧-೨೦೦೪ ರ ಸಂಚಿಕೆಯ ಬಳಕೆದಾರ:ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  


Friday, November 22, 2013

Medical problems and Divorce

           ವೈದ್ಯಕೀಯ ಸಮಸ್ಯೆಗಳು ಮತ್ತು ವಿವಾಹ ವಿಚ್ಛೇದನ 

ಅನೇಕ ವರ್ಷಗಳ ಹಿಂದೆ ಭಾರತದ ಹಿಂದೂ ಧರ್ಮೀಯರಲ್ಲಿ ಕಾರಣಾಂತರಗಳಿಂದ ಅಪರೂಪದಲ್ಲಿ ಸಂಭವಿಸುತ್ತಿದ್ದ ವಿವಾಹ ವಿಚ್ಛೇದನಗಳು ಸಂಬಂಧಿತ ಕುಟುಂಬದ ಘನತೆ,ಗೌರವ ಮತ್ತು ಪ್ರತಿಷ್ಠೆಗಳಿಗೆ ಕುತ್ತಾಗಿ ಪರಿಣಮಿಸುತ್ತಿತ್ತು. ಇದೇ ಕಾರಣದಿಂದಾಗಿ ಅನೇಕ ಕುಟುಂಬಗಳು ತಮ್ಮ ಕೌಟುಂಬಿಕ ಹಾಗೂ ದಾಂಪತ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದ ಸ್ಥಿತಿಯಲ್ಲೂ ಇತರರಿಗೆ ತಿಳಿಯದಂತೆ ಗುಟ್ಟಾಗಿರಿಸುತ್ತಿದ್ದರು. ದಾಂಪತ್ಯ ಜೀವನದಲ್ಲಿ ಎಳ್ಳು ಕಾಳಿನಷ್ಟು ಸಾಮರಸ್ಯವಿರದಿದ್ದರೂ, ಹೊರ ಜಗತ್ತಿಗೆ ಇದರ ಅರಿವಾಗದಂತೆ ವರ್ತಿಸುತ್ತಿದ್ದರು. ಇಷ್ಟು ಮಾತ್ರವಲ್ಲ, ತಾವು ಅನ್ಯೋನ್ಯವಾಗಿರುವಂತೆ ನಾಟಕವಾಡುವ ಮೂಲಕ ತಮ್ಮ ಕುಟುಂಬದ ಮರ್ಯಾದೆಯನ್ನು ಉಳಿಸಿಕೊಳ್ಳುತ್ತಿದ್ದರು!. 

ಆದರೆ ಇಂದು ಪಾಶ್ಚಾತ್ಯ ಹಾಗೂ ಆಧುನಿಕ ಜೀವನಶೈಲಿಗಳಿಗೆ ಮಾರುಹೋಗಿರುವ ಭಾರತೀಯರ ಆಚಾರ ವಿಚಾರಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯು ಅಚ್ಚಳಿಯದ ಪ್ರಭಾವನ್ನು ಬೀರಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ನಮಗಿಂದು ವಿವಾಹ ಮತ್ತು ವಿಚ್ಛೇದನಗಳು, ಜನನ ಮತ್ತು ಮರಣಗಳಷ್ಟೇ ಸ್ವಾಭಾವಿಕವಾಗಿ ತೋರುತ್ತಿದೆ. ಈ ಸಮಸ್ಯೆಯು ಭಾರತದ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎನ್ನುವುದು ಗಮನಾರ್ಹ. 

ದಾಂಪತ್ಯ ಜೀವನದಲ್ಲಿ ಪತಿ ಪತ್ನಿಯರ ನಡುವೆ ಉದ್ಭವಿಸುವ ಅನೇಕ ಕ್ಷುಲ್ಲಕ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸುವಷ್ಟು ಸಹನೆ ನಮ್ಮಲ್ಲಿ ಇರದಿರುವುದೇ, ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳಿಗೆ ಕಾರಣವೆಂದಲ್ಲಿ ತಪ್ಪೆನಿಸಲಾರದು. ಇದರೊಂದಿಗೆ ದಾಂಪತ್ಯ ಜೀವನಕ್ಕೆ ತೊಡಕಾಗಬಲ್ಲ ಶಾರೀರಿಕ-ಮಾನಸಿಕ ಸಮಸ್ಯೆಗಳಿದ್ದೂ ವಿವಾಹವಾಗುವ ಸ್ತ್ರೀ ಪುರುಷರು ವಿಚ್ಛೇದನಗಳ ಸಂಖ್ಯೆ ಇನ್ನಷ್ಟು ಹೆಚ್ಚಲು ನೇರವಾಗಿ ಕಾರಣರಾಗುತ್ತಾರೆ. ಬಹುತೇಕ ವೈವಾಹಿಕ ಸಮಸ್ಯೆ ಮತ್ತು ವಿಚ್ಛೇದನಗಳಿಗೆ ಪತಿ- ಪತ್ನಿಯರಲ್ಲಿ ಇರಬಹುದಾದ ವೈದ್ಯಕೀಯ- ಆರೋಗ್ಯದ ಸಮಸ್ಯೆಗಳೇ ಕಾರಣವೆಂದು ಅಧ್ಯಯನ- ವಿಶ್ಲೇಷಣೆಗಳಿಂದ ತಿಳಿದುಬಂದಿದೆ. ಈ ರೀತಿಯ ಸಮಸ್ಯೆಗಳಲ್ಲಿ ಕಾರಣಾಂತರಗಳಿಂದ ಬಾಧಿಸುವ ಲೈಂಗಿಕ ಸಮಸ್ಯೆಗಳು, ಕಾಮಾಸಕ್ತಿಯ ಮತ್ತು ಸ್ತ್ರೀ ಪುರುಷರ ಸಮಾಗಮದ ಬಗ್ಗೆ ಇರುವ ಅಜ್ಞಾನವೇ ಕಾರಣವಾಗಿರುತ್ತದೆ. 

ಅನೇಕ ವಿದ್ಯಾವಂತರಲ್ಲೂ ಕಂಡುಬರುವ ಇಂತಹ ತೊಂದರೆಗಳನ್ನು ಮುಚ್ಚಿಡುವುದಕ್ಕಿಂತಲೂ, ಪತಿಪತ್ನಿಯರು ಬಿಚ್ಚುಮನಸ್ಸಿನಿಂದ ತಮ್ಮ ಸಮಸ್ಯೆಗಳನ್ನು ವಿಶ್ಲೇಷಿಸಿ ಅವಶ್ಯವೆನಿಸಿದಲ್ಲಿ ತಮ್ಮ ಕುಟುಂಬ ವೈದ್ಯರ ಅಥವಾ ತಜ್ಞವೈದ್ಯರ  ಚಿಕಿತ್ಸೆ ಹಾಗೂ ಕೆಲ ಸಂದರ್ಭಗಳಲ್ಲಿ ಮಾನಸಿಕ ತಜ್ಞರೊಂದಿಗೆ ಆಪ್ತ ಸಂವಾದ ನಡೆಸುವುದರ  ಮೂಲಕ ಪರಿಹರಿಸಿಕೊಳ್ಳಬಹುದು. ಆದರೆ ಇಂದು ಪುಟ್ಟ ಸಮಸ್ಯೆಯನ್ನು ಬೆಟ್ಟದಂತೆ ಬೆಳೆಸಿ, ತಮ್ಮ ಸಮಸ್ಯೆಗಳಿಗೆ ಸಂಗಾತಿಯನ್ನೇ ಹೊಣೆಗಾರರೆಂದು ದೂಷಿಸಿ, ಕ್ಷಣಮಾತ್ರದಲ್ಲಿ ವಿಚ್ಛೇದನ ಪಡೆಯುವ ನಿರ್ಧಾರ ಕೈಗೊಳ್ಳುವುದು ನಿಜಕ್ಕೂ ವಿಷಾದನೀಯ. 

ವೈದ್ಯಕೀಯ ಕಾರಣಗಳು 

ವೈವಾಹಿಕ ಜೀವನದಲ್ಲಿ ಅದರಲ್ಲೂ ವಿಶೇಷವಾಗಿ ಯೌವ್ವನದಲ್ಲಿ, ಪತಿಪತ್ನಿಯರಿಬ್ಬರೂ ಲೈಂಗಿಕ ಸುಖವನ್ನು ಬಯಸುವುದು ಸ್ವಾಭಾವಿಕ. ಆದರೆ ಕೆಲವೊಂದು ಸಂದರ್ಭಗಳಲ್ಲಿ ತನ್ನ ಲೈಂಗಿಕ ಅಜ್ಞಾನ ಹಾಗೂ ಕಾಮಾಸಕ್ತಿಯ ಕೊರತೆಯಿಂದಾಗಿ, ಸಂಗಾತಿ ಅಪೇಕ್ಷಿಸುವ ಶಾರೀರಿಕ ಸುಖವನ್ನು ನೀಡದ ಪತಿ ಅಥವಾ ಪತ್ನಿಯರು ಜಿಗುಪ್ಸೆಗೊಂಡು ಪರಸ್ಪರ ದ್ವೇಷಿಸುವುದು ಹಾಗೂ ಅಂತಿಮವಾಗಿ ವಿಚ್ಛೇದನಕ್ಕೆ ಶರಣಾಗುವುದುಂಟು. 

ಅಂತೆಯೇ ಪುರುಷರಲ್ಲಿ ಅನುವಂಶಿಕವಾಗಿ ಬಂದಿರಬಹುದಾದ ಮಧುಮೇಹ,ಅಧಿಕ ರಕ್ತದೊತ್ತಡ, ಅಪಸ್ಮಾರ ಮತ್ತು ಕೆಲವಿಧದ ಮಾನಸಿಕ ರೋಗಗಳು ಯೌವವನದಲ್ಲೇ ಉದ್ಭವಿಸಿದಲ್ಲಿ, ಇವುಗಳ ಚಿಕಿತ್ಸೆಗಾಗಿ ಬಳಸುವ ಔಷದಗಳ ದೀರ್ಘಕಾಲೀನ ಸೇವನೆ ಹಾಗೂ ಇವುಗಳ ಅಡ್ಡ ಪರಿಣಾಮಗಳು ಪುರುಷರಲ್ಲಿ ನಿಮಿರುದೌರ್ಬಲ್ಯಕ್ಕೆ ಕಾರಣವೆನಿಸುವುದುಂಟು. ಈ ಬಗ್ಗೆ ಸಮರ್ಪಕ ಮಾಹಿತಿಯಿಲ್ಲದ ವ್ಯಕ್ತಿಗಳು ತಮ್ಮ ಸಮಸ್ಯೆಯನ್ನು ವೈದ್ಯರ ಬಾಲಿ ಚರ್ಚಿಸದೇ, ತಮ್ಮ ದಾಂಪತ್ಯ ಜೀವನದಲ್ಲಿ ಅನಾವಶ್ಯಕ ವಿರಸ ಹಾಗೂ ಕೆಲವೊಮ್ಮೆ ವಿಚ್ಛೇದನಗಳಿಗೂ ಕಾರಣವೆನಿಸುತ್ತಾರೆ. 

ಅಪರೂಪದಲ್ಲಿ ಕೆಲವು ಸ್ತ್ರೀ ಪುರುಷರ ಶರೀರದಲ್ಲಿ ಹಾರ್ಮೋನ್ ಗಳ ವ್ಯತ್ಯಯದಿಂದಾಗಿ ಹಾಗೂ ಕೆಲವರಲ್ಲಿ ಜನ್ಮದತ್ತವಾಗಿ ಪ್ರಜನನಾಂಗಗಳ ವಿಕೃತಿಗಳು ಕಂಡುಬರುತ್ತವೆ. ಅದೇ ರೀತಿಯಲ್ಲಿ ಸ್ತ್ರೀಯರಲ್ಲಿ ಪುರುಷರ ಮತ್ತು ಪುರುಷರಲ್ಲಿ ಸ್ತ್ರೀಯರ ಶಾರೀರಿಕ ಗುಣಲಕ್ಷಣಗಳು ಉದ್ಭವಿಸುತ್ತವೆ. ಇನ್ನು ಕೆಲ ಪುರುಷರಲ್ಲಿ ಜನ್ಮದತ್ತ ನಪುಂಸಕತ್ವವಿದ್ದು, ಮಾತಾಪಿತರಲ್ಲಿ ಹೇಳಲಾಗದೇ ವಿವಾಹವಾಗುವುದುಂಟು. ಬಹುತೇಕ ಗಂಡಸರಲ್ಲಿ ತಮ್ಮ ಪುರುಷತ್ವದ ಬಗ್ಗೆ ಇರುವ ಅಂಧಾಭಿಮಾನವೇ ಇದಕ್ಕೆ ಕಾರಣವೆನ್ನಬಹುದು. ಆದರೆ ಇಂತಹ ಪೌರುಷಹೀನ ವ್ಯಕ್ತಿಗಳು ತಮ್ಮ ಸಾಮಾಜಿಕ ಪ್ರತಿಷ್ಠೆಯ ಸಲುವಾಗಿ ತಮ್ಮ ಸಮಸ್ಯೆಯನ್ನು ಗುಟ್ಟಾಗಿ ಇರಿಸಿದರೂ, ಅನಿವಾರ್ಯವಾಗಿ ವಿವಾಹವಾದಲ್ಲಿ ಈ ಗುಟ್ಟು ರಟ್ಟಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಇಂತಹ ವಿವಾಹಗಳು ವಿಚ್ಛೇದನದಲ್ಲಿ ಪರ್ಯವಸಾನವಾಗಲು, ಇಂತಹವರ ಪತ್ನಿಯರು ನ್ಯಾಯಾಲಯದ ಮೊರೆಹೊಗಬೇಕಾವುದು ಹಾಗೂ ನ್ಯಾಯಾಲಯದಲ್ಲಿ ತನ್ನ ಪತಿಯ ಸಮಸ್ಯೆಯನ್ನು ಬಹಿರಂಗಗೊಳಿಸಬೇಕಾಗುತ್ತದೆ. ಈ ಕಾರಣದಿಂದಾಗಿ ಹಾಗೂ ಶಾಶ್ವತ ಪರಿಹಾರವಿಲ್ಲದ ಶಾರೀರಿಕ ಸಂಸ್ಯೆಗಳಿರುವ ವ್ಯಕ್ತಿಗಳು ವಿವಾಹವಾಗದಿರುವುದೇ ಲೇಸು!. 

ಕೆಲವೊಂದು ದಂಪತಿಗಳಲ್ಲಿ ಕಂಡುಬರುವ ವಿಶಿಷ್ಟ ರೀತಿಯ ಲೈಂಗಿಕ ಸಮಸ್ಯೆಗಳಿಗೆ ಶಾರೀರಿಕ ತೊಂದರೆಗಳಿಗಿಂತ ಮಾನಸಿಕ ಸಮಸ್ಯೆಗಳೇ ಕಾರಣವಾಗಿರುತ್ತವೆ. ಇವುಗಳಲ್ಲಿ ವಿರುದ್ಧ ಲಿಂಗಿಗಳ ಬಗ್ಗೆ ದ್ವೇಷ, ಅನಾಸಕ್ತಿ, ಪ್ರಜನನಾಂಗಗಳ ಹಾಗೂ ಸುರತ ಕ್ರಿಯೆಯ ಬಗ್ಗೆ ಅಸಹ್ಯಕರ ಭಾವನೆಗಳು,ಹದಿಹರೆಯದಲ್ಲಿ ವಿಫಲವಾದ ಪ್ರೇಮ ಪ್ರಕರಣಗಳು ಪ್ರಮುಖವಾಗಿವೆ. ಅದೇ ರೀತಿಯಲ್ಲಿ ಮಾನಸಿಕ ರೋಗಗಳಾದ ಉದ್ವೇಗ, ಖಿನ್ನತೆ, ಮಾನಸಿಕ ಒತ್ತಡ ಮತ್ತು ಸಿಜೋಫ್ರೆನಿಯಾ ಗಳಂತಹ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಕಂಡುಬರುವ ದಾಂಪತ್ಯ ಸಮಸ್ಯೆಗಳು ಶಾಶ್ವತ ಪರಿಹಾರವಿಲ್ಲದೇ ವಿಚ್ಛೇದನದಲ್ಲಿ ಅಂತ್ಯಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿವೆ. 

ಬಹುತೇಕ ಮಾನಸಿಕ ಸಮಸ್ಯೆ ಹಾಗೂ ವ್ಯಾಧಿಗಳಿಗೆ ಅತ್ಯುತ್ತಮ ಚಿಕಿತ್ಸೆ ಲಭ್ಯವಿದ್ದರೂ, ರೋಗಿಗಳ ಹಾಗೂ ಕುಟುಂಬದವರ ಅಸಹಕಾರಗಳಿಂದಾಗಿ ನಿಷ್ಫಲವೆನಿಸುತ್ತವೆ. ಆದರೆ ಸಿಜೋಫ್ರೆನಿಯಾ ದಂತಹ ಗಂಭೀರ ಮಾನಸಿಕ ವ್ಯಾಧಿಗಳು ಅನುವಂಶಿಕವಾಗಿ ಮುಂದಿನ ಸಂತತಿಯನ್ನು ಪೀಡಿಸುವ ಸಾಧ್ಯತೆಗಳು ಇರುವುದರಿಂದ ಹಾಗೂ ಈ ವ್ಯಾಧಿಗೆ ಶಾಶ್ವತ ಪರಿಹಾರವಿಲ್ಲದ್ದರಿಂದ ಇಂತಹ ವ್ಯಕ್ತಿಗಳು ವಿವಾಹವಾಗಲೇಬಾರದು. ಸಣ್ಣಪುಟ್ಟ ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಲಭ್ಯವಿದ್ದು, ಚಿಕಿತ್ಸೆಯಿಂದ ಗುಣಮುಖರಾದ ವ್ಯಕ್ತಿಗಳು ವಿವಾಹವಾಗಬಹುದು. ಆದರೆ ಸಮಾಜದಲ್ಲಿ ಇಂತಹ ವ್ಯಕ್ತಿಗಳನ್ನು ಸಂದೇಹದ ದೃಷ್ಟಿಯಿಂದಲೇ ನೋಡುವ ಕಾರಣದಿಂದಾಗಿ, ಇವರ ವರ್ತನೆ, ನಡವಳಿಕೆಗಳಲ್ಲಿ ಕಿಂಚಿತ್ ವ್ಯತ್ಯಯವಾದರೂ ದುರಂತ ಸಂಭವಿಸಬಹುದು. ಅದರಲ್ಲೂ ಜರೆಯುವ ಸ್ವಭಾವದ ಪತಿ ಅಥವಾ ಪತ್ನಿಯರಿಂದಾಗಿ ರೋಗಿಯ ಮಾನಸಿಕ ಸ್ಥಿತಿಗತಿಗಳಲ್ಲಿ ಏರುಪೇರಾಗಿ ವ್ಯಾಧಿ ಮತ್ತೆ ಮರುಕಳಿಸುವುದು ಅಪರೂಪವೇನಲ್ಲ. ಇವೆಲ್ಲಾ ವ್ಯಾಧಿಗಳ ಚಿಕಿತ್ಸೆಯಲ್ಲಿ ಬಳಸುವ ಔಷದಗಳ ಪ್ರಭಾವದಿಂದಾಗಿ ಇವರಲ್ಲಿ ಕಾಮಾಸಕ್ತಿಯ ಕೊರತೆ, ನಿಮಿರುದೌರ್ಬಲ್ಯ ಹಾಗೂ ಅನ್ಯ ವಿಧದ ಲೈಂಗಿಕ ಸಮಸ್ಯೆಗಳು ಉದ್ಭವಿಸುವುದುಂಟು. 

ಶಾರೀರಿಕ ಕಾರಣಗಳಿಂದ ತಲೆದೋರುವ ಲೈಂಗಿಕ ಸಮಸ್ಯೆಗಳಿಗೆ ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಕೊರತೆ, ಅತಿಯಾದ ಕೊಲೆಸ್ಟರಾಲ್ , ಅಧಿಕತೂಕ, ಅತಿಬೊಜ್ಜು, ಅನಿಯಂತ್ರಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಬೆನ್ನುಹುರಿ ಮತ್ತು ಮರ್ಮಾಂಗಗಳಿಗೆ  ಸಂಬಂಧಿಸಿದ ಆಘಾತಗಳು, ಅತಿ ಮದ್ಯಪಾನ ಮತ್ತು ಅತಿ ಧೂಮಪಾನ ಇತ್ಯಾದಿಗಳು ಕಾರಣವಾಗಿರುತ್ತವೆ. ಇವೆಲ್ಲಾ ಸಮಸ್ಯೆಗಳನ್ನು ಸೂಕ್ತ ಚಿಕಿತ್ಸೆ ಹಾಗೂ ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಸರಿಪಡಿಸಬಹುದು. 

ಆದರೆ ಅತಿ ಹೆಚ್ಚು ಸಂಖ್ಯೆಯ ದಂಪತಿಗಳು ತಮ್ಮ ಲೈಂಗಿಕ ಸಮಸ್ಯೆಗಳ ಬಗ್ಗೆ ಪರಸ್ಪರ ಚರ್ಚಿಸುವುದಿಲ್ಲ. ಅಂತೆಯೇ ತಮ್ಮ ನಂಬಿಗಸ್ತ ವೈದ್ಯರ ಬಳಿ ಸಮಾಲೋಚನೆಯನ್ನೂ ನಡೆಸಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಹಿಂಜರಿಯುತ್ತಾರೆ. ತಮ್ಮ ವೈಯುಕ್ತಿಕ ಹಾಗೂ ಕುಟುಂಬದ ಘನತೆ ಗೌರವಗಳು ಬೀದಿಪಾಲಾಗದಿರಲಿ ಎನ್ನುವ ಕಾರಣದಿಂದ ಮುಚ್ಚಿಟ್ಟ ಇಂತಹ ಸಮಸ್ಯೆಗಳು ಅಂತಿಮವಾಗಿ ಸೆರಗಿನಲ್ಲಿ ಕಟ್ಟಿಟ್ಟ ಕೆಂಡದಂತೆ ಹೊರಬೀಳುವುದರಲ್ಲಿ ಸಂದೇಹವಿಲ್ಲ. ಇಂತಹ ಸಮಸ್ಯೆಗಳಿಗೆ ವಿವಾಹ ವಿಚ್ಛೇದನವು ಖಚಿತವಾಗಿಯೂ ನಿರ್ದಿಷ್ಟ ಪರಿಹಾರವಲ್ಲ. ಈ ರೀತಿಯ ಕ್ಷುಲ್ಲಕ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ, ಸೂಕ್ತ ಚಿಕಿತ್ಸೆಯಿಂದ ಪರಿಹರಿಸಿಕೊಳ್ಳುವುದರಿಂದ ದಾಂಪತ್ಯ ಜೀವನವು ಸುಖಮಯವಾಗುವುದು ಸಾಧ್ಯವಿದೆ. 

ಇವೆಲ್ಲಾ ಕಾರಣಗಳಿಂದಾಗಿ ವಿವಾಹಯೋಗ್ಯ ಯುವಕ ಯುವತಿಯರು ಪರಸ್ಪರ ಭೇಟಿಯಾಗಿ, ತಮ್ಮ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಚರ್ಚಿಸಿದ ಬಳಿಕ ವಿವಾಹದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಹಿತಕರ. ಶಾಶ್ವತ ಪರಿಹಾರವಿಲ್ಲದ ಹಾಗೂ ದಾಂಪತ್ಯ ಜೀವನಕ್ಕೆ ತೊಡಕಾಗಬಲ್ಲ ಶಾರೀರಿಕ- ಮಾನಸಿಕ ಸಮಸ್ಯೆಗಳಿಂದ ಬಳಲುವವರು ವಿವಾಹವಾಗದಿರುವುದು ಇನ್ನಷ್ಟು ಹಿತಕರವೆನಿಸುವುದು. ಮಾತ್ರವಲ್ಲ, ಇಂತಹ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ ವಿಚ್ಛೇದನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುವುದು. 

ಅಂತಿಮವಾಗಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತಲೂ ಉತ್ತಮ ಎನ್ನುವ ಮಾತಿನಂತೆಯೇ, ಸಮಸ್ಯೆಗಳನ್ನು ಸೃಷ್ಟಿಸದಿರುವುದು ಸಮಸ್ಯೆಗಳ ಪರಿಹಾರಕ್ಕಿಂತ ಉತ್ತಮ ಎನ್ನುವುದನ್ನು ನೀವೂ ಒಪ್ಪುವುದರಲ್ಲಿ ಸಂದೇಹವಿಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೯-೦೭-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 



Wednesday, November 20, 2013

Dangerous Steroids



               ಸ್ಟೆರಾಯ್ಡ್ ಗಳು ಸರ್ವರೋಗಹರ ಸಂಜೀವಿನಿಯಲ್ಲ!

   ಅತಿಯಾದರೆ ಅಮೃತವೂ ವಿಷವೆನಿಸಬಲ್ಲದು ಎನ್ನುವ ನಾಣ್ಣುಡಿಯು ಸ್ಟೆರಾಯ್ಡ್ ಎನ್ನುವ ಔಷದಗಳ ಬಗ್ಗೆ ನಿಶ್ಚಿತವಾಗಿಯೂ ಅನ್ವರ್ಥವೆನಿಸುತ್ತದೆ. ನಿಮ್ಮ ಕುಟುಂಬ ವೈದ್ಯರಿಂದ ಪ್ರಾರಂಭಿಸಿ, ವಿವಿಧ ತಜ್ಞವೈದ್ಯರ ಬತ್ತಳಿಕೆಗಳಲ್ಲೂ ಸ್ಥಾನಗಳಿಸಿರುವ ಈ ದಿವ್ಯ ಔಷದದ ಬಗ್ಗೆ ಅನೇಕ ವಿದ್ಯಾವಂತರಲ್ಲೂ ಸಾಕಷ್ಟು ತಪ್ಪುಕಲ್ಪನೆಗಳಿವೆ. ಕ್ಷುಲ್ಲಕ ಕಾಯಿಲೆಗಳಿಂದ ಹಿಡಿದು ಮನುಷ್ಯನ ಪ್ರಾಣಕ್ಕೆ ಎರವಾಗಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳಲ್ಲೂ ಬಳಸಲ್ಪಡುವ ಸ್ಟೆರಾಯ್ಡ್ ಗಳು ರೋಗಿಗಳ ಹಾಗೂ ವೈದ್ಯರ ಪಾಲಿಗೆ "ಸಂಜೀವಿನಿ" ಎನಿಸುವ ಬಗ್ಗೆ ಎರಡು ಮಾತಿಲ್ಲ. ಆದರೆ ಬಹುತೇಕ ಜನರು ನಂಬಿರುವಂತೆ, ಸ್ಟೆರಾಯ್ಡ್ ಗಳು ಸರ್ವರೋಗಹರ ಸಂಜೀವಿನಿಯಲ್ಲ!. 
-----------             ---------------            --------------                       -----------                 -------------------                 ----------------

  ಸ್ಟೆರಾಯ್ಡ್ ಗಳೆಂದರೇನು?

ಮಾನವ ಶರೀರದಲ್ಲಿರುವ "ಅಡ್ರಿನಲ್(ಗ್ರಂಥಿಗಳ) ಕಾರ್ಟೆಕ್ಸ್ ಸ್ವಾಭಾವಿಕವಾಗಿ ಸ್ರವಿಸುವ ವಿಭಿನ್ನ ಚೋದನಿ (ಹಾರ್ಮೋನ್) ಗಳಲ್ಲಿ ಸ್ಟೆರಾಯ್ಡ್ ಗಳೂ ಸೇರಿವೆ. ಸಾಂಪ್ರದಾಯಿಕವಾಗಿ ಕಾರ್ಟಿಕೋಸ್ಟೆರಾಯ್ಡ್ ಗಳೆಂದು ಗುರುತಿಸಲ್ಪಟ್ಟಿರುವ ಈ ಹಾರ್ಮೋನ್ ಗಳನ್ನು ಕೃತಕವಾಗಿ ತಯಾರಿಸಲೂ ಸಾಧ್ಯವಿದೆ. 

ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿನ ಅಡ್ರಿನಲ್ ಗ್ರಂಥಿಗಳು ಪ್ರತಿನಿತ್ಯ ಸುಮಾರು ೨೦ ಮಿಲಿಗ್ರಾಂ ಹೈಡ್ರೋ ಕಾರ್ಟಿಸೋನ್ ಮತ್ತು ೦. ೨೫ ಮಿಲಿಗ್ರಾಂ ನಷ್ಟು ಪ್ರಮಾಣದ ಅಲ್ಡೋಸ್ಟೆರಾನ್ ಹಾರ್ಮೋನ್ ಗಳನ್ನು  ಸ್ರವಿಸುತ್ತವೆ. 

೧೯೩೦ ನೆ ಇಸವಿಯಲ್ಲಿ ಕೆಂಡಾಲ್ ಎನ್ನುವ ವೈದ್ಯಕೀಯ ವಿಜ್ಞಾನಿಯೊಬ್ಬರು ಸ್ಟೆರಾಯ್ಡ್ ಗಳನ್ನು ಗುರುತಿಸಿ,ಪ್ರತ್ಯೇಕಿಸಿದ ಬಳಿಕ ಇವುಗಳ ಗುಣಧರ್ಮಗಳನ್ನು ಅಧ್ಯಯನ ಮಾಡಿದ್ದರು. ಬಳಿಕ ೧೯೪೯ ರಲ್ಲಿ ಹೆಂಚ್ ಎನ್ನುವ ವಿಜ್ಞಾನಿಯೂ "ರುಮಟಾಯ್ಡ್ ಆರ್ಥ್ರೈಟಿಸ್ "ಪೀಡಿತ ರೋಗಿಗಳಿಗೆ ಸ್ಟೆರಾಯ್ಡ್ ಗಳನ್ನು ನೀಡಿದಾಗ ಅತ್ಯುತ್ತಮ ಪರಿಣಾಮ ದೊರೆಯುವುದನ್ನು ಅರಿತುಕೊಂಡರು. ವೈದ್ಯಕೀಯ ಕ್ಷೇತ್ರದಲ್ಲೇ ಮಹತ್ವಪೂರ್ಣವೆನಿಸಿದ ಈ ಸಂಶೋಧನೆಗಾಗಿ ಕೆಂಡಾಲ್, ರಿಚ್ ಸ್ಟೀನ್ ಮತ್ತು ಹೆಂಚ್ ಈ ಮೂವರು ವಿಜ್ಞಾನಿಗಳಿಗೆ ೧೯೫೦ ರಲ್ಲಿ ನೊಬೆಲ್ ಪುರಸ್ಕಾರವನ್ನು ನೀಡಲಾಗಿತ್ತು. 

ಮಾನವನನ್ನು ಪೀಡಿಸುವ ಹಲವಾರು ಕಾಯಿಲೆಗಳಲ್ಲಿ ಅನಿವಾರ್ಯವಾಗಿ ಬಳಸಲ್ಪಡುವ ಸ್ತೆರಾಯ್ದ್ ಗಳು ಮಾತ್ರೆ,ಇಜೆಕ್ಷನ್,ಮುಲಾಮು, ಇನ್ ಹೇಲರ್, ಕರ್ಣ- ನೇತ್ರ ಬಿಂದು ಇತ್ಯಾದಿ ರೂಪಗಳಲ್ಲಿ ಬಳಸಲ್ಪಡುತ್ತವೆ. 

ಪರಿಣಾಮಗಳು 

ಆಧುನಿಕ ವೈದ್ಯಪದ್ದತಿಯಲ್ಲಿ ಸ್ಟೆರಾಯ್ಡ್ ಗಳು ಅತ್ಯಂತ ಪ್ರಭಾವಶಾಲಿ ಹಾಗೂ ಶಕ್ತಿಯುತ ಔಷದಗಳೆಂದು ಮಾನ್ಯತೆ ಪಡೆದಿವೆ. ಆದರೆ ಯಾವುದೇ ವ್ಯಾಧಿಯ ಚಿಕಿತ್ಸೆಯಲ್ಲಿ ಇವುಗಳನ್ನು ಬಳಸುವಾಗ ಕೆಲವೊಂದು ಪ್ರಾಥಮಿಕ ನಿಯಮಗಳನ್ನು ಪರಿಪಾಲಿಸುವುದು ಅತ್ಯವಶ್ಯಕವೂ ಹೌದು. 

ಪ್ರಾಣಾಪಾಯದ ಸಂದರ್ಭಗಳಲ್ಲಿ ವೈದ್ಯರು ನೀಡುವ ಸ್ಟೆರಾಯ್ಡ್ ಗಳ ಪ್ರಮಾಣವು ತುಸು ಅಧಿಕವಾಗಿರುವುದಾದರೂ, ಇದರಿಂದಾಗಿ ಯಾವುದೇ ದುಷ್ಪರಿಣಾಮಗಳು ಉದ್ಭವಿಸುವ ಸಾಧ್ಯತೆಗಳು ಇರುವುದಿಲ್ಲ. ಸ್ಟೆರಾಯ್ಡ್ ಗಳನ್ನು ನೀಡಲೇಬಾರದೆಂದು ನಿರ್ಭಂಧಿಸಿರುವ ಕೆಲ ನಿರ್ದಿಷ್ಟ ಕಾಯಿಲೆಗಳನ್ನು ಹೊರತುಪಡಿಸಿ, ಇತರ ಕಾಯಿಲೆಗಳ ಅಲ್ಪಾವಧಿಯ ಚಿಕಿತ್ಸೆಯೂ ಹಾನಿಕರವೆನಿಸದು. ಆದರೆ ಇವುಗಳ ದೀರ್ಘಕಾಲೀನ ಸೇವನೆಯು ಅನೆಕವಿಧದ ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಸ್ಟೆರಾಯ್ಡ್ ಗಳನ್ನು ಅವಶ್ಯಕ ಪ್ರಮಾಣದಲ್ಲಿ ನೀಡಲಾರಂಭಿಸಿ, ಕ್ರಮೇಣ ಇವುಗಳ ಪ್ರಮಾಣವನ್ನು ಕಡಿಮೆಮಾಡುತ್ತಾ ಬಂದು, ಅಂತಿಮವಾಗಿ ಇವುಗಳ ಸೇವನೆಯನ್ನು ನಿಲ್ಲಿಸಬೇಕಾಗುವುದು. 

ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಂತೆ ರುಮಟಾಯ್ಡ್ ಆರ್ಥ್ರೈಟಿಸ್,ರುಮಾಟಿಕ್ ಜ್ವರ,ಗೌಟ್,ತೀವ್ರ ಉಲ್ಬಣಿಸಿರುವ ಆಸ್ತಮಾ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಸ್ವಯಂ ಪ್ರತಿರೋಧಕ ವ್ಯಾಧಿಗಳು,ಕಣ್ಣು,ಕರುಳು, ಮೆದುಳು ಹಾಗೂ ಚರ್ಮ ಸಂಬಂಧಿತ ನಿರ್ದಿಷ್ಟ ವ್ಯಾಧಿಗಳು,ಕೆಲವಿಧದ ಕ್ಯಾನ್ಸರ್ ಗಳು, ಬದಲಿ ಮೂತ್ರಪಿಂಡ- ಹೃದಯಗಳನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯ ಬಳಿಕ, ಕೆಲವಿಧದ ಮೂತ್ರಾಂಗ ಸಂಬಂಧಿತ ಕಾಯಿಲೆಗಳಲ್ಲಿ ಹಾಗೂ ಅಡ್ರಿನಲ್ ಮತ್ತು ಪಿಟ್ಯೂಟರಿ ಗ್ರಂಥಿಗಳ ಕಾರ್ಯಕ್ಷಮತೆಯನ್ನು ಪರೀಕ್ಷಿಸುವಲ್ಲಿ ಸ್ಟೆರಾಯ್ಡ್ ಗಳ ಬಳಕೆಯು ಉಪಯುಕ್ತವೆನಿಸುವುದು. ಸಾಮಾನ್ಯವಾಗಿ ನೀವೂ ಕಂಡಿರಬಹುದಾದ ಔಷದಜನ್ಯ ಅಥವಾ ಇತರ ಕಾರಣಗಳಿಂದ ಉದ್ಭವಿಸಬಲ್ಲ "ತೀವ್ರ ಸ್ವರೂಪದ ಅಲರ್ಜಿ" ಯಲ್ಲಿ ಸ್ಟೆರಾಯ್ಡ್ ಗಳು ನಿಸ್ಸಂದೇಹವಾಗಿಯೂ ಪ್ರಾಣ ರಕ್ಷಕವೆನಿಸುತ್ತವೆ. 

ಪ್ರತಿಕೂಲ- ಅಡ್ಡ ಪರಿಣಾಮಗಳು 

ಸ್ಟೆರಾಯ್ಡ್ ಗಳ ದೀರ್ಘಕಾಲೀನ ಸೇವನೆಯ ಪರಿಣಾಮಗಳು ಖಚಿತವಾಗಿಯೂ ರೋಗಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಇದೇ ಕಾರಣದಿಂದಾಗಿ ನಿಮ್ಮ ವೈದ್ಯರು ಅನಿವಾರ್ಯ ಸಂದರ್ಭಗಳಲ್ಲಿ ಅಪರೂಪವಾಗಿ ಸೂಚಿಸುವ ಸ್ಟೆರಾಯ್ಡ್ ಗಳನ್ನು ನಿಗದಿತ ಅವಧಿಗಿಂತ ಅಧಿಕ ಕಾಲ ಅಥವಾ ಸ್ವೇಚ್ಛೆಯಿಂದ ಪದೇಪದೇ ಬಳಸುವುದು ಅಪಾಯಕಾರಿ ಎನ್ನುವುದು ನೆನಪಿರಲಿ. 

ಆದರೆ ಅನೇಕ ವಿದ್ಯಾವಂತರೂ ವೈದ್ಯರ ಸಲಹೆಯನ್ನೇ ಪಡೆಯದೇ ಸ್ಟೆರಾಯ್ಡ್ ಗಳನ್ನೂ ಸೇವಿಸುವುದು ವೈದ್ಯರಿಗೂ ತಿಳಿದಿರುವ ರಹಸ್ಯ. ಇಂತಹ ಸ್ವಯಂ ಚಿಕಿತ್ಸೆಗೆ ಸ್ಟೆರಾಯ್ಡ್ ಗಳ ಸೇವನೆಯಿಂದ ತಮ್ಮ ಆರೋಗ್ಯದ ಸಮಸ್ಯೆ ಕ್ಷಿಪ್ರಗತಿಯಲ್ಲಿ ಪರಿಹಾರಗೊಳ್ಳುವುದರೊಂದಿಗೆ, ತಮ್ಮ ಆರೋಗ್ಯ ಉತ್ತಮವಾಗಿದೆ ಎನ್ನುವ "ಹಿತಾನುಭವ" ಅಥವಾ ಭ್ರಮೆಯೂ ಪ್ರಮುಖ ಕಾರಣವೆನಿಸಿದೆ. ಇದಲ್ಲದೇ ದುಬಾರಿ ಬೆಲೆಯ ಔಷದಗಳೊಂದಿಗೆ ಹೋಲಿಸಿದಾಗ ಇವುಗಳ ಬೆಲೆ ಅತ್ಯಲ್ಪವಾಗಿರುವುದು, ಕನಿಷ್ಠ ವೆಚ್ಚದಲ್ಲಿ ಗರಿಷ್ಠ  ನೀಡಬಲ್ಲ ಸ್ಟೆರಾಯ್ಡ್ ಗಳನ್ನು ಆಯ್ಕೆ ಮಾಡುವುದು ಮತ್ತೊಂದು ಕಾರಣವಾಗಿದೆ. 

ಸ್ಟೆರಾಯ್ಡ್ ಗಳ ದೀರ್ಘಕಾಲೀನ ಸೇವನೆಯಿಂದ ಶರೀರದ ತೂಕ,ಗಾತ್ರ ಮತ್ತು  ಕ್ರಮೇಣ ಬದಲಾಗುತ್ತವೆ. ರೋಗಿಯ ಮುಖವು ಹುಣ್ಣಿಮೆಯ ಚಂದ್ರನಂತೆ ದುಂಡಗಾಗಿ ಕುತ್ತಿಗೆ,ಹೆಗಲು ಮತ್ತು ಸೊಂಟಗಳು ಉಬ್ಬಿಕೊಂಡು ಕೊಬ್ಬಿದ ಗೂಳಿಯಂತಾಗುವುದು. ಶರೀರದಲ್ಲಿ ಅವಶ್ಯಕತೆಗಿಂತ ಹೆಚ್ಚು ಲವಣಗಳು ಮತ್ತು ನೀರಿನ ಸಂಗ್ರಹದಿಂದಾಗಿ ಬಾವು ಕಂಡುಬರುವುದು. ರೋಗಿಯ ಹೊಟ್ಟೆ, ತೊಡೆ, ಬೆನ್ನು ಮತ್ತು ಪೃಷ್ಟಗಳ ಮೇಲೆ ಬಾಣಂತಿಯರಲ್ಲಿ ಕಾಣಬಹುದಾದ ಬಿಳಿಯ ಬಣ್ಣದ "ಗೀರು"ಗಳು ಪ್ರತ್ಯಕ್ಷವಾಗುತ್ತವೆ. ಚಿಕ್ಕ ಮಕ್ಕಳಲ್ಲಿ  ಶಾರೀರಿಕ ಬೆಳವಣಿಗೆ ಕುಂಠಿತಗೋಳ್ಳುವುದರೊಂದಿಗೆ ಗಡ್ಡ- ಮೀಸೆಗಳು ಮೂಡುತ್ತವೆ. ಅನೇಕ ರೋಗಿಗಳಲ್ಲಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಗಂಭೀರ- ಮಾರಕ ವ್ಯಾಧಿಗಳು ಆರಂಭವಾಗುವ ಅಥವಾ ಈಗಾಗಲೇ ಈ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಲ್ಲಿ ಇವು ಉಲ್ಬಣಿಸುವ ಸಾಧ್ಯತೆಗಳು ಹೆಚ್ಚುತ್ತವೆ. ಇದಲ್ಲದೆ ಗಾಯ ಮತ್ತು ವೃಣಗಳು ಮಾಗದಿರುವುದು,ಶರೀರದ ಮಾಂಸಪೇಶಿಗಳಲ್ಲಿ ತೀವ್ರ ನೋವು ಮತ್ತು ಸುಲಭದಲ್ಲೇ ವಿವಿಧ ರೀತಿಯ ಸೋಂಕುಗಳಿಗೆ ಈಡಾಗುವ ಸಾಧ್ಯತೆಗಳೂ ಹೆಚ್ಚುತ್ತವೆ. 

ಇನ್ನು ಕೆಲವರಲ್ಲಿ ಜಠರದ ಹುಣ್ಣುಗಳು, ಮೂಳೆಗಳ ದೌರ್ಬಲ್ಯ, ನಿದ್ರಾಹೀನತೆ,ನರ ದೌರ್ಬಲ್ಯ, ಜ್ವರ ಹಾಗೂ ವಿವಿಧರೀತಿಯ ಮಾನಸಿಕ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. ರೋಗಿ  ಸೇವಿಸುತ್ತಿರುವ ಸ್ಟೆರಾಯ್ಡ್ ಗಳ ಪ್ರಮಾಣ ಮತ್ತು ಅವಧಿಗಳನ್ನು ಹೊಂದಿಕೊಂಡು ಅಪರೂಪದಲ್ಲಿ ಹೈಪೊಥಾಲಮಸ್, ಪಿಟ್ಯೂಟರಿ ಮತ್ತು ಅಡ್ರಿನಲ್ ಗ್ರಂಥಿಗಳ ಸಂಯುಕ್ತ ಕಾರ್ಯಕ್ಷಮತೆಗಳೂ ಕುಂಠಿತವಾಗುವ ಸಾಧ್ಯತೆಗಳಿವೆ. 

ಬಳಸಬಾರದ ಸ್ಥಿತಿಗಳು 

ಸ್ಟೆರಾಯ್ಡ್ ಔಷದಗಳನ್ನು ಜಠರದ ಹುಣ್ಣು, ಮಧುಮೇಹ, ಅಧಿಕ ರಕ್ತದೊತ್ತಡ, ಟಿ. ಬಿ, ಕೆಲವಿಧದ ಸೋಂಕುಗಳು,ಮೂಳೆಗಳ ದೌರ್ಬಲ್ಯ, ಅಪಸ್ಮಾರ, ಕೆಲವೊಂದು ಮಾನಸಿಕ ವ್ಯಾಧಿಗಳು, ಮೂತ್ರಾಂಗಗಳ ವೈಫಲ್ಯ, ಕಂಜೆಸ್ಟಿವ್ ಹಾರ್ಟ್ ಫೈಲ್ಯೂರ್ ಗಳಂತಹ ವ್ಯಾಧಿಪೀಡಿತರು ಮತ್ತು ಗರ್ಭಿಣಿಯರು ಸೇವಿಸಲೇಬಾರದು. 

ಸ್ಟೆರಾಯ್ಡ್ ಗಳ ಅನಿಯಮಿತ ಹಾಗೂ ದೀರ್ಘಕಾಲೀನ ಸೇವನೆಯ ದುಷ್ಪರಿಣಾಮಗಳನ್ನು ಅರಿತ ಬಳಿಕವೂ ನೀವು ಇವುಗಳ ಸೇವನೆಯನ್ನು ಮುಂದುವರೆಸಿದಲ್ಲಿ, ಪ್ರಾನಾಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ!. 

ಆಸ್ತಮಾ ಗುಣವಾಯಿತು!

ಬಾಲ್ಯದಿಂದಲೇ ಆಸ್ತಮಾ ದಿಂದ ಬಳಲುತ್ತಿದ್ದ ನವೀನನಿಗೆ ತನ್ನನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದ ಈ ವ್ಯಾಧಿಯಿಂದ ಪಾರಾಗುವ ದಾರಿ  ಯಾವುದೆಂದು ತಿಳಿದಿರಲಿಲ್ಲ. ಬಂಧು ಮಿತ್ರರು ಸೂಚಿಸಿದ ಹಾಗೂ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದ ನೂರಾರು ವೈದ್ಯರ ಚಿಕಿತ್ಸೆಗಾಗಿ ಸಹಸ್ರಾರು ರುಪಾಯಿಗಳನ್ನು ವ್ಯಯಿಸಿದ್ದರೂ, ಆತನ ಆಸ್ತಮಾ ವ್ಯಾಧಿಗೆ ಶಾಶ್ವತ ಪರಿಹಾರ ದೊರೆತಿರಲಿಲ್ಲ. 

ಹಗಲು ರಾತ್ರಿಯೆನ್ನದೇ ಯಾವುದೇ ಪೂರ್ವಸೂಚನೆಯನ್ನು ನೀಡದೇ, ಕ್ಷಣ ಮಾತ್ರದಲ್ಲಿ ಆರಂಭಗೊಂಡು ತೀವ್ರವಾಗಿ ಉಲ್ಬಣಿಸುತ್ತಿದ್ದ ಈ ಕಾಯಿಲೆಯಿಂದಾಗಿ ಆತನ ಶರೀರವು ನರಪೇತಲ ನಾರಾಯಣನಂತಾಗಿತ್ತು. ಆತನ ಕಾಯಿಲೆಗೆ ಶಾಶ್ವತ ಪರಿಹಾರವೇ ಇಲ್ಲವೆಂದು ಕುಟುಂಬ ವೈದ್ಯರು ಹೇಳಿದ್ದ ಸತ್ಯವನ್ನು ಹಾಗೂ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇರಿಸಲು ಸೂಚಿಸಿದ ಚಿಕಿತ್ಸೆ ಮತ್ತು ಮುಂಜಾಗ್ರತೆಗಳನ್ನು ಪರಿಪಾಲಿಸಲು ಆಟ ಸಿದ್ಧನಿರಲಿಲ್ಲ. 

ಆಪ್ತ ಸ್ನೇಹಿತನೊಬ್ಬನ ಸಲಹೆಯಂತೆ ಆಸ್ತಮಾ ಕಾಯಿಲೆಯನ್ನು ಗುಣಪಡಿಸಬಲ್ಲ ವೈದ್ಯನೋಬ್ಬನ ಬಗ್ಗೆ ಅರಿತ ನವೀನನು ಮರುದಿನವೇ ಆತನಲ್ಲಿ ಧಾವಿಸಿದ್ದನು. ಈ ವೈದ್ಯನ ಮನೆಯ ಅಂಗಳದಲ್ಲಿ ನಾಲ್ಕಾರು ನೌಕರರು ಹತ್ತಾರು ವಿಧದ ಗಿಡಮೂಲಿಕೆಗಳ ಔಷದ ತಯಾರಿಕೆಯಲ್ಲಿ ತೊಡಗಿರುವುದನ್ನು ಕಂಡ ನವೀನನಿಗೆ ತನ್ನ ವ್ಯಾಧಿ ಗುಣವಾಗುವುದೆಂಬ ಭರವಸೆ ಮೂಡಿತ್ತು. 

ಸಾಕಷ್ಟು ಸಮಯ ಸರತಿಯಲ್ಲಿ ಕಾದ   ನವೀನನನ್ನು ಪರೀಕ್ಷಿಸಿದ ಬಳಿಕ ಮೂರು ವಿಧದ ಔಷದಗಳನ್ನು  ವೈದ್ಯನು,ಇವುಗಳ ಸೇವನಾ ಕ್ರಮ ಹಾಗೂ ಪರಿಪಾಲಿಸಬೇಕಾದ ಪಥ್ಯಗಳನ್ನು ತಿಳಿಸಿ, ತನ್ನ ಚಿಕಿತ್ಸೆಪಡೆದ ಸಹಸ್ರಾರು ರೋಗಿಗಳು ಸಂಪೂರ್ಣವಾಗಿ ರೋಗಮುಕ್ತರಾಗಿರುವುದನ್ನು ತಿಳಿಸಲು ಮರೆಯಲಿಲ್ಲ!. 

ಮರುದಿನ ಔಷದ ಸೇವನೆ ಆರಂಭಿಸಿದಂತೆಯೇ ಮಾಯವಾದ ನವೀನನ ಆಸ್ತಮಾ, ತಿಂಗಳು ಕಳೆದರೂ ಮತ್ತೆ ಮರುಕಳಿಸಲೇ ಇಲ್ಲ!. ಸಂತೃಪ್ತನಾದ ಆತನು ವೈದ್ಯರ ಸಲಹೆಯಂತೆ ಚಿಕಿತ್ಸೆಯನ್ನು ಮುಂದುವರೆಸಿದನು. ಆತನ ಕಾಯಿಲೆ ಮಾಯವಾಗುವುದರೊಂದಿಗೆ ಆತನ ಆರೋಗ್ಯದ ಮಟ್ಟ ಮತ್ತು ಶರೀರದ ತೂಕವೂ ಕ್ರಮೇಣ ಹೆಚ್ಚುತ್ತಾ, ವರ್ಷ ಕಳೆಯುವಷ್ಟರಲ್ಲಿ ಧಡೂತಿ ದೇಹದ ನವೀನನು ಪರಿಚಿತರೂ ಗುರುತಿಸದಷ್ಟು ಬದಲಾಗಿದ್ದನು. 

ಈ ಸಂದರ್ಭದಲ್ಲಿ ವಿದೇಶದಲ್ಲಿ ನೆಲೆಸಿದ್ದ ಆತನ ಸೋದರ ಸಂಬಂಧಿ ವೈದ್ಯರೊಬ್ಬರು ನವೀನನ ಮನೆಗೆ ಭೇಟಿ ನೀಡಿದ್ದರು. ಎರಡು ವರ್ಷಗಳ ಹಿಂದೆ ಆತನನ್ನು ಕಂಡಿದ್ದ ವೈದ್ಯರಿಗೆ, ಇದೀಗ ನವೀನನನ್ನು ಕಂಡು ಆಶ್ಚರ್ಯವಾಗಿತ್ತು. ಆತನ ಧಡೂತಿ ದೇಹದ ಬಗ್ಗೆ ವಿಚಾರಿಸಿದ ವೈದ್ಯರಿಗೆ ನವೀನನ ಆಸ್ತಮಾ ವ್ಯಾಧಿಯ ಚಿಕಿತ್ಸೆಯ ವಿವರಗಳನ್ನು ಕೇಳಿ, "ಗಿಡ ಮೂಲಿಕೆ"ಗಳ ಔಷದದ ಬಗ್ಗೆ ಸಂದೇಹ ಮೂಡಿತ್ತು. ಈ ಔಷದಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಇವುಗಳಲ್ಲಿ ಧಾರಾಳವಾಗಿ ಸ್ಟೆರಾಯ್ಡ್ ಗಳನ್ನು ಬೇರೆಸಿರುವುದು ಪತ್ತೆಯಾಗಿತ್ತು!. 

ಸತ್ಯ ಸಂಗತಿಯನ್ನು ಅರಿತ ನವೀನನಿಗೆ ದಿಗ್ಭ್ರಮೆಯಾಗಿದ್ದರೂ, ಆತನ ಸಂಬಂಧಿ ವೈದ್ಯರಿಗೆ ಮಾತ್ರ ಕಿಂಚಿತ್ ಅಚ್ಚರಿಯೂ ಆಗಿರಲಿಲ್ಲ. ಏಕೆಂದರೆ ಗಿಡಮೂಲಿಕೆಗಳ ಔಷದಗಳಲ್ಲಿ ಸ್ಟೆರಾಯ್ಡ್ ಮಾತ್ರೆಗಳನ್ನು ಪುಡಿ ಮಾಡಿ ಬೆರೆಸುವ ಮೂಲಕ ಆಸ್ತಮಾ, ಸಂಧಿವಾತ ಹಾಗೂ ಇತರ ಕೆಲ ವ್ಯಾಧಿಗಳಿಗೆ ಚಿಕಿತ್ಸೆ ನೀಡುವ ನಕಲಿ ವೈದ್ಯರ ಬಗ್ಗೆ ಇವರಿಗೆ ಮಾಹಿತಿಯಿತ್ತು. 

ಅದಾಗಲೇ ಸ್ಟೆರಾಯ್ಡ್ ಔಷದಗಳ ದಾಸನಾಗಿದ್ದ ನವೀನನ ಚಿಕಿತ್ಸೆಯನ್ನು ಏಕಾಏಕಿ ನಿಲ್ಲಿಸಲಾರದ ಅನಿವಾರ್ಯತೆ ವೈದ್ಯರಿಗಿತ್ತು. ಅಂತೆಯೇ ಚಿಕಿತ್ಸೆಯನ್ನು ನಿಲ್ಲಿಸಿದರೆ  ಪ್ರಾನಾಪಾಯದ ಸಾಧ್ಯತೆಯೂ ಇತ್ತು. ಇದೇ ಕಾರಣದಿಂದಾಗಿ ನವೀನನನ್ನು ಕೆಲದಿನಗಳ ಕಾಲ ಆಸ್ಪತ್ರೆಗೆ ದಾಖಲಿಸಿ, ಆತನು ಸೇವಿಸುತ್ತಿದ್ದ ಔಷದಗಳ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಬಂದು, ಅಂತಿಮವಾಗಿ ನಿಲ್ಲಿಸಲಾಯಿತು. ಚೇತರಿಸಿಕೊಂಡ ನವೀನನು ಇದೀಗ ತಜ್ಞವೈದ್ಯರ ಸಲಹೆಯಂತೆ ಇನ್ ಹೇಲರ್ ಬಳಸುವ ಹಾಗೂ ತನ್ನ ಶರೀರಕ್ಕೆ ಒಗ್ಗದ ಆಹಾರ- ವಿಹಾರಗಳನ್ನು ವರ್ಜಿಸುವ ಮೂಲಕ ಆಸ್ತಮಾ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಲು ಸಫಲನಾಗಿದ್ದಾನೆ. ಇದಕ್ಕೂ ಮಿಗಿಲಾಗಿ ತನ್ನ ಬಂಧು ಮಿತ್ರರರಲ್ಲಿ ಆಸ್ತಮಾ ಪೀಡಿತರಿದ್ದಲ್ಲಿ, ತಾನು ಪ್ರಯೋಗಿಸಿದ್ದ ಚಿಕಿತ್ಸೆ ಹಾಗೂ ಇದರ ದುಷ್ಪರಿಣಾಮಗಳಿಂದಾಗಿ ಅನುಭವಿಸಿದ ನರಕಯಾತನೆಯ ಬಗ್ಗೆ ಹೇಳಿ, ಇಂತಹ ಪ್ರಯೋಗಗಳನ್ನು ಕೈಗೊಳ್ಳದಂತೆ ಎಚ್ಚರಿಕೆ ನೀಡುತ್ತಾನೆ!. 

ಡಾ. ಸಿ . ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೩-೦೨-೨೦೦೫ ರ ಸಂಚಿಕೆಯ ಬಳಕೆದಾರ:ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  




Monday, November 18, 2013

Vitamins




    ವಿಟಮಿನ್ ಗಳ ವಿಪರೀತ ಸೇವನೆ ವಿಪತ್ಕಾರಕವೆನಿಸೀತು!

ಮನುಷ್ಯರಲ್ಲಿ ವಿವಿಧ ವಿಟಮಿನ್ ಗಳ ಕೊರತೆಯಿಂದಾಗಿ ವಿವಿಧ ವ್ಯಾಧಿಗಳು ಉದ್ಭವಿಸುವಂತೆಯೇ,ವಿಟಮಿನ್ ಗಳ ಅತಿಸೇವನೆಯೂ ಅನೇಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಹುದೆನ್ನುವ ಸತ್ಯ ಜನಸಾಮಾನ್ಯರಿಗೆ ತಿಳಿದಿಲ್ಲ. ಈ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
----------------            ----------------------                   ----------------------                             -------------------------------           ---------
ತಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ಇರುವ ಅನೇಕ ಜನರು, ತಮ್ಮ ಆರೋಗ್ಯದ ಮಟ್ಟವನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳುವ ಸಲುವಾಗಿ ಅಥವಾ ಆಯುರಾರೋಗ್ಯಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಉದ್ದೇಶದಿಂದ, ದಿನನಿತ್ಯ ವಿವಿಧರೀತಿಯ ವಿಟಮಿನ್ ಗಳನ್ನು ಸೇವಿಸುತ್ತಾರೆ. ಆದರೆ ಇಂತಹ ಉಪಕ್ರಮಗಳು ಮಿತಿಮೀರಿದಾಗ ಕೆಲವೊಂದು ಕಾಯಿಲೆಗಳಿಗೆ ಕಾರಣವೆನಿಸುತ್ತವೆ ಎನ್ನುವುದನ್ನು ಅರಿಯದೇ, ಸಮಸ್ಯೆಗಳು ತಲೆದೋರಿದ ಬಳಿಕ ಪರಿತಪಿಸುತ್ತಾರೆ. 

ಅನೇಕ ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿರುವವಿವಿಧ ವಿಟಮಿನ್ ಗಳ ದೈನಂದಿನ ಸೇವನೆಯು ನಿಶ್ಚಿತವಾಗಿಯೂ ನಿಷ್ಪ್ರಯೋಜಕವೆಂದು ಅಧ್ಯಯನಗಳಿಂದ ತಿಳಿದುಬಂದಿದೆ. ನಿರ್ದಿಷ್ಟ ವಿಟಮಿನ್ ಒಂದರ ಕೊರತೆಯಿಂದ ಉದ್ಭವಿಸಿರಬಹುದಾದ ವ್ಯಾಧಿಯ ಚಿಕಿತ್ಸೆಯನ್ನು ಹೊರತುಪಡಿಸಿ, ಆರೋಗ್ಯವಂತ ವ್ಯಕ್ತಿಗಳು ಅಕಾರಣವಾಗಿ ಪ್ರತಿನಿತ್ಯ ಸೇವಿಸುವ ವಿಟಮಿನ್ ಗಳು ಯಾವುದೇ ವ್ಯಾಧಿಯನ್ನು ತಡೆಗಟ್ಟಲು ವಿಫಲವೆನಿಸುತ್ತವೆ. ಆದರೆ ಇವುಗಳನ್ನು ಅತಿಯಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕೆಲವಿಧದ ಕಾಯಿಲೆಗಳನ್ನು ಹುಟ್ಟುಹಾಕುವಲ್ಲಿ ಮಾತ್ರ ನಿಸ್ಸಂದೇಹವಾಗಿಯೂ ಸಫಲವೆನಿಸುತ್ತವೆ!. 

ವಿಟಮಿನ್ ಗಳ ಸೇವನೆ ಅವಶ್ಯಕವೇ?

ಮಾನವ ಶರೀರದ ಪಾಲನೆ, ಪೋಷಣೆ ಹಾಗೂ ವಿವಿಧ ಜೈವಿಕ ಕ್ರಿಯೆಗಳಿಗೆ ಅತ್ಯವಶ್ಯಕ ಎನಿಸುವ ವಿಭಿನ್ನ ವಿಟಮಿನ್ ಗಳು- ಹಾಗೂ ಪೋಷಕಾಂಶಗಳು, ನಾವು ಪ್ರತಿನಿತ್ಯ ಸೇವಿಸುವ ವೈವಿಧ್ಯಮಯ ಆಹಾರ ಪದಾರ್ಥಗಳಲ್ಲಿ ಯಥೇಚ್ಛವಾಗಿ ಇರುತ್ತವೆ. ಅದೇ ರೀತಿಯಲ್ಲಿ ನಾವು ಸೇವಿಸುವ ಆಹಾರ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವೂ ಇದೆ. ಸಮೃದ್ಧ ಪೋಷಕಾಂಶಗಳಿರುವ ಆಹಾರಗಳನ್ನು ದಿನನಿತ್ಯ ಸೇವಿಸುವುದರಿಂದ, ನಮ್ಮ ಆರೋಗ್ಯದ ಮಟ್ಟವೂ ಉತ್ತಮವಾಗಿರುತ್ತದೆ. ಅಂತೆಯೇ ಪೋಷಕಾಂಶಗಳ ಕೊರತೆಯಿರುವ ಸತ್ವಹೀನ ಆಹಾರಗಳ ಸೇವನೆಯಿಂದ, ಅನೇಕ ರೀತಿಯ ಕಾಯಿಲೆಗಳು ಬಂದೆರಗುವ ಸಾಧ್ಯತೆಗಳೂ ಇವೆ. 

ನಾವು ದಿನನಿತ್ಯ ಸೇವಿಸುವ ಅಕ್ಕಿ, ರಾಗಿ, ಗೋಧಿ,ಜೋಳ,ದ್ವಿದಳ ಧಾನ್ಯಗಳು,ಗೆಡ್ಡೆ ಗೆಣಸುಗಳು,ಹಸಿರು ಸೊಪ್ಪು-ತರಕಾರಿಗಳು, ಮೀನು,ಮೊಟ್ಟೆ, ಮಾಂಸ, ಹಾಲು,ಎಣ್ಣೆ, ಬೆಣ್ಣೆ, ತುಪ್ಪ ಹಾಗೂ ಹಣ್ಣು ಹಂಪಲುಗಳಲ್ಲಿ ವಿಭಿನ್ನ ಪೋಷಕಾಂಶಗಳಿವೆ. ಇವುಗಳಲ್ಲಿ ಜೀವಸತ್ವಗಳು(ವಿಟಮಿನ್ ಗಳು), ಖನಿಜಗಳು,ಲವಣಗಳು,ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬುಗಳು ಪ್ರಮುಖವಾಗಿವೆ. ಈ ಬಗ್ಗೆ ಶಾಲಾ ಪಟ್ಯಪುಸ್ತಕಗಳಲ್ಲೂ ಲಭ್ಯ ಮಾಹಿತಿಯನ್ನು ಸಂಗ್ರಹಿಸಿ ಪರಿಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವೆನಿಸುವುದು. 

ಅನುಭವಿ ವೈದ್ಯರೇ ಹೇಳುವಂತೆ ಸರಿಯಾದ ಸಮಯದಲ್ಲಿ, ಸೂಕ್ತ ಪ್ರಮಾಣದಲ್ಲಿ, ಸಮೃದ್ಧ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವ,ಪ್ರತಿನಿತ್ಯ ಶಾರೀರಿಕ ವ್ಯಾಯಾಮ- ಕ್ರೀಡೆಗಳಲ್ಲಿ ತೊಡಗುವ, ದುಶ್ಚಟಗಳಿಂದ ದೂರವಿರುವ ಮತ್ತು ಮಾನಸಿಕ ನೆಮ್ಮದಿಯೊಂದಿಗೆ ಸಂತೃಪ್ತ ಜೀವೆನ ಸಾಗಿಸುವ ವ್ಯಕ್ತಿಗಳು, ಯಾವುದೇ ವಿಧದ ವಿಟಮಿನ್- ಟಾನಿಕ್ ಗಳನ್ನು ಸೇವಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ. 

ಆದರೆ ನಿರ್ದಿಷ್ಟ ವಿಟಮಿನ್ ಗಳ ಕೊರತೆಯಿಂದ ಉದ್ಭವಿಸಿರುವ ವ್ಯಾಧಿಪೀಡಿತರು, ವೈದ್ಯರ ಸಲಹೆಯಂತೆ ಅವಶ್ಯಕ ವಿಟಮಿನ್ ಗಳನ್ನು ನಿಗದಿತ ಪ್ರಮಾಣದಲ್ಲಿ, ನಿಗದಿತ ಆವಧಿಗೆ ಸೇವಿಸಲೇಬೇಕಾಗುವುದು. 

ಇವೆಲ್ಲಕ್ಕಿಂತ ಮಿಗಿಲಾಗಿ ಸತ್ವಹೀನ ಆಹಾರವನ್ನು ಸೇವಿಸುವ ಅಥವಾ ಆಹಾರವನ್ನೇ ಸೇವಿಸದ ಕಾರಣದಿಂದಾಗಿ ಉದ್ಭವಿಸುವ ದುಷ್ಪರಿಣಾಮಗಳನ್ನು, ಯಾವುದೇ ವಿಟಮಿನ್ - ಟಾನಿಕ್ ಗಳ ಸೇವನೆಯಿಂದ ತಡೆಗಟ್ಟುವುದು ಅಥವಾ ನಿವಾರಿಸುವುದು ಅಸಾಧ್ಯವೆನಿಸುವುದು. ಇದೇ ಕಾರಣದಿಂದಾಗಿ ನೀವು ದಿನನಿತ್ಯ ವೀಕ್ಷಿಸುವ ಜಾಹೀರಾತುಗಳಲ್ಲಿ ವರ್ಣಿಸುವಂತೆ, ನಿಮ್ಮ ಮಕ್ಕಳು ಆಹಾರವನ್ನೇ ಸೇವಿಸದಿದ್ದಲ್ಲಿ ಈ ಕೊರತೆಯನ್ನು ನೀಗಿಸಲು ನೀಡಬೇಕಾದ ದುಬಾರಿಬೆಲೆಯ "ಆರೋಗ್ಯ ಪೇಯ" ಗಳು ನಿಸ್ಸಂದೇಹವಾಗಿಯೂ ನಿಷ್ಪ್ರಯೋಜಕ ಎನಿಸುತ್ತವೆ!. 

ಅನಾರೋಗ್ಯ- ನಿಶ್ಶಕ್ತಿ 

ವರ್ಷಂಪ್ರತಿ ಋತುಗಳು ಬದಲಾಗುವಾಗ ಅಥವಾ ಇತರ ಕಾರಣಗಳಿಂದ ನಿಮ್ಮನ್ನು ಬಾಧಿಸಬಲ್ಲ ಸಣ್ಣಪುಟ್ಟ ಕಾಯಿಲೆಗಳು ಹಲವಾರು. ನಿಜ ಹೇಳಬೇಕಿದ್ದಲ್ಲಿ ಔಷದ ಸೇವನೆಯ ಅವಶ್ಯಕತೆಯೇ ಇಲ್ಲದ, ಒಂದೆರಡು ದಿನಗಳ ವಿಶ್ರಾಂತಿಯಿಂದ ತಾವಾಗಿ ಶಮನಗೊಳ್ಳುವ ಇಂತಹ ವ್ಯಾಧಿಗಳು ರೋಗಿಗಳ ಅಜಾಗರೂಕತೆಯಿಂದ ಉಲ್ಬಣಿಸುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಈ ವ್ಯಾಧಿಯ ಬಾಧೆಯನ್ನು ಪರಿಹರಿಸಲು ಔಷದಗಳ ಸೇವನೆ ಅನಿವಾರ್ಯವೆನಿಸುವುದು. ಈ ರೀತಿಯಲ್ಲಿ ನಾಲ್ಕಾರು ದಿನಗಳ ಕಾಲ ಬಾಧಿಸಿದ ವ್ಯಾಧಿಯಿಂದಾಗಿ,ನಿಮ್ಮ ಶರೀರದ ತೂಕ,ಆಕಾರಗಳೊಂದಿಗೆ ಹಸಿವೆ ಮತ್ತು ನಿದ್ರೆಗಳೂ ಕಡಿಮೆಯಾದಂತೆ ಭಾಸವಾಗುವುದು ಸ್ವಾಭಾವಿಕ. ಇವೆಲ್ಲವುಗಳನ್ನೂ ಮತ್ತೆ ಪೂರ್ವಸ್ಥಿತಿಗೆ ಸರಿಯಾಗಿ ದುರಸ್ತಿಪಡಿಸಲು, ವಿಟಮಿನ್ - ಟಾನಿಕ್ ಗಳ ಅವಶ್ಯಕತೆಯೇ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. 

ಸಾಮಾನ್ಯವಾಗಿ ವಿವಿಧ ಕಾಯಿಲೆಗಳಿಗೆ ಅನುಗುಣವಾಗಿ ರೋಗಿಗಳಲ್ಲಿ ಜ್ವರ,ತಲೆ-ಮೈಕೈನೋವು,ವಾಕರಿಕೆ-ವಾಂತಿ,ಭೇದಿ,ಕೆಮ್ಮು-ದಮ್ಮು,ಬಾಯಿರುಚಿ ಹಾಗೂ ಹಸಿವಿಲ್ಲದಿರುವುದು,ಮಲಬದ್ಧತೆಗಳಂತಹ ತೊಂದರೆಗಳು ಬಾಧಿಸುತ್ತವೆ. ಇವುಗಳ ಪರಿಹಾರಕ್ಕಾಗಿ ನೀವು ಸೇವಿಸುವ ಔಷದಗಳೊಂದಿಗೆ ನಿಮ್ಮ ಶರೀರದ ಸ್ವಾಭಾವಿಕ ರೋಗಪ್ರತಿರೋಧಕ ಕ್ರಿಯೆಗಳೂ ಒಂದಾಗಿ, ರೋಗಕಾರಕ ರೋಗಾಣುಗಳ ವಿರುದ್ಧ ಹೋರಾಡುತ್ತವೆ. ಜೊತೆಗೆ ಇಂತಹ ಸ್ಥಿತಿಯಲ್ಲಿ ನೀವು ಸೇವಿಸುವ ಆಹಾರದ ಪ್ರಮಾಣವೂ ಕಡಿಮೆಯಾಗುವುದರಿಂದ, ನಿಮ್ಮಲ್ಲಿ ತೀವ್ರ ಆಯಾಸ,ನಿಶ್ಶಕ್ತಿ,ತಲೆತಿರುಗುವಿಕೆ, ನಿದ್ರಾಹೀನತೆಗಳಂತಹ ಅನೇಕ ತೊಂದರೆಗಳು ಕಂಡುಬರುತ್ತವೆ. ಇಂತಹ ತೊಂದರೆಗಳು- ಸಮಸ್ಯೆಗಳು ಸ್ವಯಂ ಶಮನಗೊಳ್ಳಲು ನೀವು ಪ್ರತಿನಿತ್ಯ ಸೇವಿಸುವ ಸತ್ವಭರಿತ ಆಹಾರಗಳೇ ಸಾಕಾಗುವುದು. ಈ ವಿಚಾರವನ್ನು ಅರಿತಿರದ ಜನಸಾಮಾನ್ಯರು ಇಂತಹ ಸಂದರ್ಭಗಳಲ್ಲಿ, ತಮ್ಮ ವೈದ್ಯರ ಬಳಿ ಒತ್ತಾಯಪೂರ್ವಕವಾಗಿ ವಿಟಮಿನ್ ಮಾತ್ರೆ- ಟಾನಿಕ್ ಗಳನ್ನು ಕೇಳಿ ಪಡೆದುಕೊಳ್ಳುವುದು ಅಪರೂಪವೇನಲ್ಲ!. ರೋಗಿಯೇ ಕಾರಣಕರ್ತನೆನಿಸುವ ಇಂತಹ ಅಧಿಕ ಪ್ರಸಂಗಿತನದಿಂದ ಅನಾವಶ್ಯಕವಾಗಿ ವಿಟಮಿನ್- ಟಾನಿಕ್ ಗಳನ್ನು ಸೇವಿಸುವುದರೊಂದಿಗೆ,ಸಾಕಷ್ಟು ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. 

ಹೈಪರ್ ವಿಟಾಮಿನೋಸಿಸ್ 

ಸಾಮಾನ್ಯವಾಗಿ ವೈದ್ಯರ ಸಲಹೆ ಪಡೆಯದೇ ಅಕಾರಣವಾಗಿ ಹಾಗೂ ಅನಾವಶ್ಯಕವಾಗಿ ನೀವು ಸೇವಿಸುವ ವಿಟಮಿನ್ ಗಳ ಪ್ರಮಾಣ ಮಿತಿಮೀರಿದಾಗ ಉದ್ಭವಿಸಬಹುದಾದ ಸಮಸ್ಯೆಗಳನ್ನು ಹೈಪರ್ ವಿಟಾಮಿನೋಸಿಸ್ ಎಂದು ಕರೆಯುತ್ತಾರೆ. 

ವಿಟಮಿನ್ ಗಳ ವಿಲೀನತೆಯ ಆಧಾರದಲ್ಲಿ ಇವುಗಳನ್ನು ಕೊಬ್ಬಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳು ಎಂದು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು. ನೀರಿನಲ್ಲಿ ಕರಗಬಲ್ಲ " ಎ " ಗುಂಪಿನ ಮತ್ತು " ಸಿ " ಜೀವಸತ್ವಗಳನ್ನು ತುಸು ಅಧಿಕ  ಸೇವಿಸಿದರೂ, ಇವುಗಳು ಶರೀರದಲ್ಲಿ ಸಂಗ್ರಹವಾಗದೆ ಮಲ - ಮೂತ್ರಗಳೊಂದಿಗೆ ವಿಸರ್ಜಿಸಲ್ಪಡುತ್ತವೆ. ಆದರೆ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್ ಎ, ಡಿ , ಇ , ಮತ್ತು ಕೆ" ಜೀವಸತ್ವಗಳನ್ನು ಅತಿಯಾಗಿ ಸೇವಿಸಿದಲ್ಲಿ, ಇವುಗಳು ಶರೀರದಲ್ಲಿ ಸಂಗ್ರಹವಾಗುವುದರೊಂದಿಗೆ ಅನೇಕ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ.

ಉದಾಹರಣೆಗೆ ನಾವು ಸೇವಿಸುವ ಆಹಾರದ ಮೂಲಕ ಸುಮಾರು ೫೦೦ ರಿಂದ ೫೦೦೦ ಮೈಕ್ರೋ ಗ್ರಾಮ್ ನಷ್ಟು ವಿಟಮಿನ್ ಎ ನಮ್ಮ ಶರೀರಕ್ಕೆ ದೊರೆಯುವುದು. ಮಾನವ ಶರೀರದ ದೈನಂದಿನ ಅವಶ್ಯಕತೆ ಕೇವಲ ೭೫೦ ಮೈಕ್ರೋ ಗ್ರಾಮ್ ಆಗಿದ್ದರೂ, ಕೆಲ ಔಷದ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳಲ್ಲಿ ೧೫೦೦ ರಿಂದ ೪೫೦೦ ಮೈಕ್ರೋ ಗ್ರಾಮ್ " ಎ " ಜೀವಸತ್ವವನ್ನು ತುಂಬಿರುತ್ತಾರೆ!. ಅನಾವಶ್ಯಕವಾಗಿ ಇಂತಹ ಉತ್ಪನ್ನಗಳನ್ನು ಸೇವಿಸಿದಲ್ಲಿ ಇದು ಶರೀರದಲ್ಲಿ ಸಂಗ್ರಹಿಸಲ್ಪಡುವುದು. ತತ್ಪರಿಣಾಮವಾಗಿ ಮೂಳೆಗಳ ದೌರ್ಬಲ್ಯ,ವಾಕರಿಕೆ,ತಲೆನೋವು,ಕೈಕಾಲುಗಳ ಚಲನವಲನಗಳು ಕುಂಠಿತವಾಗುವುದು, ಕೂದಲು ಉದುರುವುದು,ಚರ್ಮದ ಮೇಲ್ಪದರ ಏಳುವುದು, ದೃಷ್ಟಿಮಾಂದ್ಯ, ನೋಡುವ ವಸ್ತು - ದೃಶ್ಯಗಳು ಎರಡಾಗಿ ಕಾಣುವುದು,ನಾಸಿಕಾ ರಕ್ತಸ್ರಾವಗಳಂತಹ ತೊಂದರೆಗಳು ಉದ್ಭವಿಸುತ್ತವೆ. 

ಅದೇ ರೀತಿ ವಿಟಮಿನ್ "  ಡಿ  " ಯ ದೈನಂದಿನ ಅವಶ್ಯಕತೆಯು ೧೦೦ ಐ. ಯು ಗಳಾಗಿದ್ದು, ಇದು ಸೂರ್ಯನ ಕಿರಣಗಳಿಂದ ಸುಲಭವಾಗಿ ಲಭಿಸುತ್ತದೆ. ಈ ಜೀವಸತ್ವದ ದೀರ್ಘಕಾಲೀನ ಅತಿಸೇವನೆಯಿಂದಾಗಿ, ನಾವು ಸೇವಿಸಿದ ಆಹಾರದಲ್ಲಿರುವ ಪೋಷಕಾಂಶಗಳು ಕರುಳಿನಲ್ಲಿ ಹೀರಲ್ಪಡುವ ಪ್ರಕ್ರಿಯೆಯು ಅಧಿಕವಾಗುವುದರೊಂದಿಗೆ,ಎಲುಬುಗಳಲ್ಲಿನ ಕ್ಯಾಲ್ಸಿಯಂ ರಕ್ತಕ್ಕೆ ಬಿಡುಗಡೆಯಾಗುವುದು. ಇದರಿಂದಾಗಿ "ಹೈಪರ್ ಕ್ಯಾಲ್ಸೀಮಿಯ" ಎನ್ನುವ ಸ್ಥಿತಿ ಉದ್ಭವಿಸುವುದು. ಇದರೊಂದಿಗೆ ಹೃದಯ, ಶ್ವಾಸಕೋಶ,ಮೂತ್ರಪಿಂಡಗಳು ಪೆಡಸಾಗುವುದು, ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗುವುದು,ಮೂತ್ರಪಿಂಡಗಳ ವೈಫಲ್ಯ, ಎಲುಬುಗಳ ಅಸಹಜ ಬೆಳವಣಿಗೆ ಮತ್ತು ಇವುಗಳಲ್ಲಿನ ಖನಿಜಾಂಶಗಳು ನಶಿಸುವುದರಿಂದ ಮೂಳೆ ಮುರಿತದಂತಹ ಸಮಸ್ಯೆಗಳು ಬಾಧಿಸುತ್ತವೆ. 

ವಿಟಮಿನ್ " ಇ " ಇದರ ದೈನಂದಿನ ಅವಶ್ಯಕತೆಯು ಕೇವಲ ೧೦ ಮಿಲಿ ಗ್ರಾಮ್ ಗಳಾಗಿದ್ದು, ಇದರ ಅತಿಸೇವನೆಯಿಂದ ದೃಷ್ಟಿ ಮಸುಕಾಗುವುದು, ಕಣ್ಣು ಕತ್ತಲಾವರಿಸುವುದು,ಚರ್ಮದ ಉರಿಯೂತ,ಮೊಡವೆಗಳು ಮೂಡುವುದು,ರಕ್ತನಾಳಗಳು ವಿಕಸಿತಗೊಳ್ಳುವುದು,ಜೀರ್ಣಾಂಗಗಳ ತೊಂದರೆಗಳು,ರಕ್ತದಲ್ಲಿನ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಪ್ರಮಾಣ ಹೆಚ್ಚುವುದರೊಂದಿಗೆ, ರಕ್ತ ಹೆಪ್ಪುಗಟ್ಟುವ  ಅವಧಿಯೂ ಹೆಚ್ಚುವುದು. 

ಇನ್ನು " ಬಿ " ಗುಂಪಿಗೆ ಸೇರಿದ ಥಯಾಮಿನ್ ನ ಅತಿಸೇವನೆಯಿಂದ ತಲೆನೋವು,ನಿದ್ರಾಹೀನತೆ,ತೀವ್ರ ಎದೆಬಡಿತ ಹಾಗೂ ಅನಾಫೈಲಾಕ್ಸಿಸ್ (ತೀವ್ರ ಸ್ವರೂಪದ ಮಾರಕವೆನಿಸಬಲ್ಲ ಅಲರ್ಜಿ) ನಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. "ನಯಾಸಿನ್"ನ ಅತಿಸೇವನೆಯಿಂದ ಸೂಕ್ಷ್ಮ ರಕ್ತನಾಳಗಳು ವಿಕಸಿತವಾಗುವುದು, ಮುಖ ಕೆಂಪಾಗುವುದು,ಜೀರ್ಣಾಂಗಗಳ ತೊಂದರೆಗಳು,ತುರಿಕೆ,ರಕ್ತದಲ್ಲಿನ ಸಕ್ಕರೆ ಮತ್ತು ಯೂರಿಕ್ ಆಸಿಡ್ ನ ಪ್ರಮಾಣಗಳು ಹೆಚ್ಚುವುದರೊಂದಿಗೆ, ಎಲ್. ಡಿ . ಎಲ್ ಮತ್ತು ಕೊಲೆಸ್ಟರಾಲ್ ಗಳ ಪ್ರಮಾಣ ಇಳಿಯುವುದು. ಇದೇ ರೀತಿ "ಪೈರಿಡಾಕ್ಸಿನ್ " ನ ದುಷ್ಪರಿಣಾಮಗಳಲ್ಲಿ, ಮೆದುಳಿನ ನ್ಯೂರಾನ್ ಗಳಿಗೆ ಹಾನಿ,ಕೈಕಾಲುಗಳಲ್ಲಿ ಸಂವೇದನೆಗಳ ಅಭಾವ,ನಡೆದಾಡಲು ಅಸಾಧ್ಯವೆನಿಸುವುದು ಮತ್ತು ಗರ್ಭಿಣಿಯರು ಇದನ್ನು ಅತಿಯಾಗಿ ಸೇವಿಸುವುದರಿಂದ ನವಜಾತ ಶಿಶುಗಳಲ್ಲಿ ಅಪಸ್ಮಾರ ಉದ್ಭವಿಸುವ ಸಾಧ್ಯತೆಗಳಿವೆ. 

ವಿಟಮಿನ್ "ಸಿ "ಯ ದೈನಂದಿನ ಅವಶ್ಯಕತೆಯು ೩೦ ರಿಂದ ೪೦ ಮಿಲಿ ಗ್ರಾಮ್ ಗಳಾಗಿದ್ದು, ಇದರ ಅತಿಸೇವನೆ ಹೊಟ್ಟೆಯುಬ್ಬರ, ಭೇದಿ,ಜೀರ್ಣಾಂಗಗಳ ತೊಂದರೆಗಳಿಗೆ ಕಾರಣವೆನಿಸಬಹುದು. 

ಸ್ವಾಮೀ, ಇವೆಲ್ಲವೂ ಕೇವಲ ಸ್ಯಾಂಪಲ್ ಗಳು ಮಾತ್ರ!. ಜನಸಾಮಾನ್ಯರು ಔಷದ ಅಂಗಡಿಗಳಿಂದ ಖರೀದಿಸಿ ಸೇವಿಸುವ ಬಿ ಕಾಂಪ್ಲೆಕ್ಸ್, ಪ್ರೋಟೀನ್,ಖನಿಜಗಳು,ಲವಣಗಳು,ರಕ್ತ - ಶಕ್ತಿ ವರ್ಧಕ ಟಾನಿಕ್ ಗಳ "ಕಾಕ್ ಟೈಲ್ " ಗಳನ್ನು ಅತಿಯಾಗಿ ಸೇವಿಸುವುದರಿಂದ ಉದ್ಭವಿಸಬಲ್ಲ ಆರೋಗ್ಯದ  ಪಟ್ಟಿಯು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗಬಹುದು. ಇವೆಲ್ಲವನ್ನೂ ವಿಶದವಾಗಿ ವಿವರಿಸಲು ಈ ಅಂಕಣದಲ್ಲಿ ಸ್ಥಳಾಭಾವವಿರುವುದರಿಂದ, ಈ ಲೇಖನವನ್ನು ಇಲ್ಲಿಗೆ ಅಂತ್ಯಗೊಳಿಸಬೇಕಾಗಿದೆ. 

ಅಂತಿಮವಾಗಿ ಒಂದೇ ಮಾತಿನಲ್ಲಿ ಹೇಳುವುದಾದಲ್ಲಿ  ನಿಮ್ಮ ಶರೀರದ ಬೇಕು - ಬೇಡಗಳ ಅರಿವಿಲ್ಲದೆ,ನಿರ್ದಿಷ್ಟ ಕಾರಣಗಳೇ ಇಲ್ಲದೆ, ಸ್ವೇಚ್ಛೆಯಿಂದ ನೀವು ಸೇವಿಸುವ ವಿಟಮಿನ್ - ಟಾನಿಕ್ ಗಳು  ಒಳಿತಿಗಿಂತಲೂ ಹೆಚ್ಚು ಕೆಡುಕನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚೆನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

 ಉದಯವಾಣಿ ಪತ್ರಿಕೆಯ ದಿ. ೨೪-೦೩-೨೦೦೫ ರ ಸಂಚಿಕೆಯ ಬಳಕೆದಾರ:ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 

 



Aspirin-the wonder drug

                                ಆಪದ್ಬಾಂಧವ " ಆಸ್ಪಿರಿನ್ "!

    ನಿಮ್ಮನ್ನು ಪೀಡಿಸುವ ತಲೆ ಸಿಡಿತದಿಂದ ಪಾರಾಗಲು ನೀವು ಸೇವಿಸುವ ಔಷದವೊಂದು, ಹೃದಯಾಘಾತಕ್ಕೆ ಒಳಗಾದ ರೋಗಿಗಳನ್ನು ಸಾವಿನ ದವಡೆಗಳಿಂದ ಕಾಪಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದಲ್ಲಿ ನಿಮಗೂ ನಂಬಲಸಾಧ್ಯ ಎನಿಸಬಹುದು. ಇಂತಹ ಅದ್ಭುತ ಸಾಮರ್ಥ್ಯವನ್ನು ಹೊಂದಿರುವ ಅಮೃತ ಸಂಜೀವಿನಿಯಂತೆ ಪರಿಣಾಮವನ್ನು ಬೀರುವ "ಆಸ್ಪಿರಿನ್" ಎನ್ನುವ ಔಷದದ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ. 
---------------                    ----------------                  ---------------                  ------------------                         -------------------

   ಬೀಡಾಬೀಡಿ ಅಂಗಡಿಗಳಲ್ಲೂ ಮಾರಾಟವಾಗುವ, ಚಿಟಿಕೆ ಹೊದೆಯುವಷ್ಟರಲ್ಲೇ ಶೀತ- ತಲೆನೋವುಗಳನ್ನು ಗುಣಪಡಿಸುವುದೆನ್ನುವ ಜಾಹೀರಾತುಗಳನ್ನು ನಂಬಿ ನೀವೂ ಸೇವಿಸಿರಬಹುದಾದ ವೈವಿಧ್ಯಮಯ ಶೀತನಿವಾರಕ ಮಾತ್ರೆಗಳಲ್ಲಿ ಬಳಸಲ್ಪಡುವ ಪ್ರಮುಖ ಔಷದವೇ ಆಸ್ಪಿರಿನ್. ನಿಜ ಹೇಳಬೇಕಿದ್ದಲ್ಲಿ ಇಂತಹ ಮಾತ್ರೆಗಳು ನಿಮ್ಮನ್ನು ಕಾಡುವ ಶೀತವನ್ನು ಗುಣಪಡಿಸುವ ಸಾಧ್ಯತೆಗಳೇ ಇಲ್ಲ. ಆದರೆ ಸಾಮಾನ್ಯವಾಗಿ ಶೀತದೊಂದಿಗೆ ಪ್ರತ್ಯಕ್ಷವಾಗುವ ತಲೆನೋವು, ಮೈಕೈ ನೋವು ಹಾಗೂ ಜ್ವರಗಳನ್ನು ಆಸ್ಪಿರಿನ್ ಕ್ಷಿಪ್ರಗತಿಯಲ್ಲಿ ಪರಿಹರಿಸುವುದರಿಂದ, ಶೀತ ಗುಣವಾದಂತೆ ನಿಮಗೆ ಭಾಸವಾಗುವುದು ಮಾತ್ರ ಸುಳ್ಳೇನಲ್ಲ!. 

ಅದ್ಭುತ ಔಷದ ಆಸ್ಪಿರಿನ್ 

ಔಷದ ಶಾಸ್ತ್ರದಲ್ಲಿ "ಅಸಿಟೈಲ್ ಸಾಲಿಸಿಲಿಕ್ ಎಸಿಡ್ " ಎಂದು ಕರೆಯಲ್ಪಡುವ ಈ ಔಷದವನ್ನು ಸಂಶೋಧಿಸಿದ್ದ ಸಂದರ್ಭದಲ್ಲಿ, ತನ್ನ ನೋವು ಮತ್ತು ಉರಿಯೂತ ನಿವಾರಕ ಗುಣಗಳಿಂದಾಗಿ ಇದು ರುಮಟಾಯ್ಡ್ ಆರ್ಥ್ರೈಟಿಸ್  ಹಾಗೂ ರುಮಾಟಿಕ್ ಜ್ವರ ಪೀಡಿತರಿಗೆ ವರದಾನವಾಗಿ ಪರಿಣಮಿಸಿತ್ತು. 

ಆಧುನಿಕ ವೈದ್ಯಪದ್ಧತಿಯ ಪಿತಾಮಹನೆನಿಸಿರುವ "ಹಿಪೋಕ್ರೆಟ್ಸ್", ಕೆಲ ಶತಮಾನಗಳ ಹಿಂದೆ ಮರದ ತೊಗಟೆಯೊಂದರಿಂದ ಸಿದ್ಧಪಡಿಸಿದ್ದ "ಕಷಾಯ" ವು ನೋವು ಮತ್ತು ಜ್ವರಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿತ್ತು. ಈ ಕಶಾಯದಲ್ಲಿನ ಮೂಲ ದ್ರವ್ಯವನ್ನು ಪತ್ತೆ ಹಚ್ಚುವ ಪ್ರಯತ್ನದ ಫಲವಾಗಿ, ೧೮೨೦ ರಲ್ಲಿ "ಸಾಲಿಸಿಲಿನ್" ಎನ್ನುವ ಔಷದ ಲಭ್ಯವಾಗಿತ್ತು. ಪ್ರಸ್ತುತ "ಸಾಲಿಸಿಲೇಟ್ಸ್" ಅ ಎಂದು ಕರೆಯಲ್ಪಡುವ ಔಷದಗಳ ಕುಟುಂಬದ ಮುತ್ತಜ್ಜನೇ ಸಾಲಿಸಿಲಿನ್!. 

೧೮೫೩ ರಲ್ಲಿ ಚಾರ್ಲ್ಸ್ ಜೆರ್ಹಾರ್ಟ್  ಎನ್ನುವ ಫ್ರೆಂಚ್ ಫ್ರೆಂಚ್ ವಿಜ್ಞಾನಿಯು ಹಿಪೋಕ್ರೆಟ್ಸ್ ನ ಕಷಾಯದಿಂದ "ಅಸಿಟೈಲ್ ಸಾಲಿಸಿಲಿಕ್ ಎಸಿಡ್" ಎನ್ನುವ ಔಷದವನ್ನು ಸಿದ್ಧಪದಿಸಿದ್ದನು. ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದ್ದ ಈ ಮಹತ್ವಪೂರ್ಣ ಸಂಶೋಧನೆಯು, ಸುಮಾರು ಅರ್ಧ ಶತಮಾನದ ಬಳಿಕ ಫೆಲಿಕ್ಸ್ ಹೊಫ್ ಮಾನ್ ಎನ್ನುವ ವಿಜ್ಞಾನಿಯಿಂದಾಗಿ ಬೆಳಕಿಗೆ ಬಂದಿತ್ತು. ತನ್ನ ವಯೋವೃದ್ಧ ತಂದೆಯ "ಸಂಧಿವಾತ"ದ ಸಮಸ್ಯೆಯನ್ನು ಗುಣಪಡಿಸುವಲ್ಲಿ ಈ ಔಷದವು "ರಾಮಬಾಣ"ದಂತೆ ಪರಿಣಮಿಸಿದ್ದುದನ್ನು ಅರಿತುಕೊಂಡ ಹೊಫ್ ಮಾನ್, ಇದಕ್ಕೆ "ಆಸ್ಪಿರಿನ್"ಎಂದು ನಾಮಕರಣ ಮಾದಿದ್ದನ್. 

ಅಂತಿಮವಾಗಿ ೧೯೧೫ ರಲ್ಲಿ ವಾಣಿಜ್ಯ ಉತ್ಪನ್ನದ ರೂಪದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಆಸ್ಪಿರಿನ್, ಅಲ್ಪಾವಧಿಯಲ್ಲೇ ವಿಶ್ವವಿಖ್ಯಾತವಾಗಿತ್ತು!. 

ಆಸ್ಪಿರಿನ್ ನ ಉಪಯೋಗಗಳು 

ಆಸ್ಪಿರಿನ್ ನ ಜ್ವರನಿವಾರಕ,ವೇದನಾಹಾರಕ ಮತ್ತು ಉರಿಯೂತ ಶಾಮಕ ಗುಣಗಳಿಂದಾಗಿ ತಲೆ, ಮೈಕೈ, ಬೆನ್ನು,ಸೊಂಟ,ಎಲುಬು ಸಂಧಿಗಳ ನೋವುಗಳೊಂದಿಗೆ ಹಲ್ಲು ನೋವಿನಂತಹ ಕ್ಷುಲ್ಲಕ ಸಮಸ್ಯೆಗಳನ್ನೂ ಕ್ಷಿಪ್ರಗತಿಯಲ್ಲಿ ಪರಿಹರಿಸಬಲ್ಲದು. ಇದಲ್ಲದೆ ಯಾವುದೇ ಕಾರಣದಿಂದ ಬಂದಿರಬಹುದಾದ ಜ್ವರವನ್ನು ತಾತ್ಕಾಲಿಕವಾಗಿ ಶಮನಗೊಳಿಸಬಲ್ಲದು. 

ಅತ್ತಿತ್ತ ಚಲಿಸಲಾರದಷ್ಟು ತೀವ್ರ ನೋವಿರುವ ರುಮಾಟಿಕ್ ಜ್ವರ ಪೀಡಿತರೂ, ಆಸ್ಪಿರಿನ್ ಸೇವಿಸಲು ಆರಂಭಿಸಿದ ಒಂದೆರಡು ದಿನಗಳಲ್ಲೇ ನಡೆದಾಡುವಂತೆ ಆಗುವುದೇ ಇದರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಅದೇ ರೀತಿಯಲ್ಲಿ ರುಮಟಾಯ್ದ್ ಆರ್ಥ್ರೈಟಿಸ್ ರೋಗಿಗಳನ್ನು ಪೀಡಿಸುವ ಕೀಳು ನೋವು,ಉರಿಯೂತ ಮತ್ತು ಬೆಳಗಿನ ಜಾವದಲ್ಲಿ ಸೆಟೆದುಕೊಂಡಿರುವ ಸಂಧಿಗಳ ಸಮಸ್ಯೆ ಹಾಗೂ ಆಸ್ಟಿಯೋ ಆರ್ಥ್ರೈಟಿಸ್ ನ ತೀವ್ರ ನೋವುಗಳನ್ನು ಆಸ್ಪಿರಿನ್ ಗಣನೀಯವಾಗಿ ಕಡಿಮೆಮಾಡಬಲ್ಲದು. 

ಹೃದಯಾಘಾತ- ಪಕ್ಷಾಘಾತ (ಮೆದುಳಿನ ರಕ್ತನಾಳಗಳಲ್ಲಿನ ಅಡಚಣೆಗಳಿಂದ ಸಂಭವಿಸಿದ) ಪೀಡಿತ ರೋಗಿಗಳಲ್ಲಿ, ಇಂತಹ ಗಂಭೀರ- ಮಾರಕ  ಮತ್ತೆ ಮರುಕಳಿಸದಂತೆ ತಡೆಗಟ್ಟಲು ಆಸ್ಪಿರಿನ್ ನ ದೈನಂದಿನ ಸೇವನೆ ಅನಿವಾರ್ಯವೆನಿಸುವುದು. ನೂತನವಾಗಿ ಆರಂಭಗೊಂಡಿರುವ  ತೀವ್ರವಾಗಿ ಉಲ್ಬಣಿಸಿರುವ "ಎಂಜೈನಾ" ಪೀಡಿತ ರೋಗಿಗಳಿಗೆ ಹೃದಯಾಘಾತ ಸಂಭವಿಸದಂತೆ, ದಿನಕ್ಕೊಂದು ಆಸ್ಪಿರಿನ್ ಸೇವನೆ ನಿಶ್ಚಿತವಾಗಿಯೂ ಉಪಯುಕ್ತವೆನಿಸುವುದು. ಇದೇ ರೀತಿಯಲ್ಲಿ "ತಾತ್ಕಾಲಿಕ ಪಕ್ಷವಾತ" (ಟ್ರಾನ್ಸಿಯೆಂಟ್ ಇಸ್ಕೀಮಿಕ್ ಎಟಾಕ್) ಎಂದು ಕರೆಯಲ್ಪಡುವ,  ಅಲ್ಪಾವಧಿ ಬಾಧಿಸುವ ಪಕ್ಷಾಘಾತ ಪೀಡಿತ ರೋಗಿಗಳಲ್ಲಿ ಮುಂದೆ ಸಂಭವಿಸಬಹುದಾದ ಪೂರ್ಣ ಪ್ರಮಾಣದ ಪಕ್ಷಾಘಾತದ ಸಾಧ್ಯತೆಗಳನ್ನು ದೈನಂದಿನ ಆಸ್ಪಿರಿನ್ ಸೇವನೆಯ ಮೂಲಕ ದೂರವಿರಿಸಬಹುದು. 

ಮಧುಮೇಹ ರೋಗಿಗಳ ಶರೀರದಲ್ಲಿ ತುಸು ಅಧಿಕ ಪ್ರಮಾಣದಲ್ಲಿ ಉತ್ಪನ್ನವಾಗುವ "ಥ್ರೊಂಬೋಕ್ಸೇನ್", ರಕ್ತ ಹೆಪ್ಪುಗಟ್ಟುವ ಪ್ರಕ್ರಿಯಯನ್ನು ಉತ್ತೇಜಿಸಬಲ್ಲದು. ತತ್ಪರಿಣಾಮವಾಗಿ ಸಂಭವಿಸಬಲ್ಲ ಹೃದಯಾಘಾತದ ಸಾಧ್ಯತೆಗಳನ್ನು ಆಸ್ಪಿರಿನ್ ಸೇವನೆಯಿಂದ ದೂರವಿರಿಸಬಹುದು. ಜತೆಗೆ ಥ್ರೊಂಬೋಕ್ಸೇನ್" ನ ಉತ್ಪಾದನೆಯನ್ನು ಆಸ್ಪಿರಿನ್ ಕುಂಠಿತಗೊಳಿಸುವುದರಿಂದ ತಜ್ಞ ವೈದ್ಯರು ಮಧುಮೇಹ ರೋಗಿಗಳಿಗೆ ದಿನನಿತ್ಯ ಅಲ್ಪ ಪ್ರಮಾಣದ ಆಸ್ಪಿರಿನ್ ಸೇವಿಸಲು ಸೂಚಿಸುವರು. 

ಕಳೆದ ದಶಕದಲ್ಲಿ ನಡೆದಿದ್ದ ಸಂಶೋಧನೆಗಳಂತೆ ದೈನಂದಿನ ಆಸ್ಪಿರಿನ್ ಸೇವನೆಯಿಂದ ಅನ್ನನಾಳ, ಜಠರ,ದೊಡ್ಡ ಕರುಳು ಹಾಗೂ ಗುದದ್ವಾರದ ಕ್ಯಾನ್ಸರ್ ಗಳು ಸೇರಿದಂತೆ ಅನೇಕ ವಿಧದ ಕ್ಯಾನ್ಸರ್ ಗಳನ್ನು ತಡೆಗಟ್ಟಬಹುದೆಂದು ತಿಳಿದುಬಂದಿದೆ. 

ಇದಲ್ಲದೆ ಮನುಷ್ಯನ ಮೆದುಳಿನಲ್ಲಿ ಸಂಭವಿಸಬಲ್ಲ ಉರಿಯೂತವು ಕಾಲಕ್ರಮೇಣ "ಅಲ್ಜೀಮರ್ಸ್" ಕಾಯಿಲೆಗೆ ಮೂಲವೆನಿಸುವುದು. ಆದರೆ ಕಾರಣಾಂತರಗಳಿಂದ ಆಸ್ಪಿರಿನ್ ಅಥವಾ ಇತರ ಉರಿಯೂತ ನಿವಾರಕ ಔಷದಗಳನ್ನು ಸುದೀರ್ಘಕಾಲ ಸೇವಿಸುತ್ತಿರುವ ವ್ಯಕ್ತಿಗಳಲ್ಲಿ, ಅಲ್ಜೀಮರ್ಸ್ ಕಾಯಿಲೆಯು ಉದ್ಭವಿಸುವ ಸಾಧ್ಯತೆಗಳು ಕಡಿಮೆ ಎಂದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ. ಇದಲ್ಲದೆ ವಯೋವೃದ್ಧರಲ್ಲಿ ಸಾಮಾನ್ಯವಾಗಿ ಕಂಡುಬರುವ "ಮರೆಗುಳಿತನ"ವೂ ಆಸ್ಪಿರಿನ್ ಸೇವಿಸುವವರಲ್ಲಿ ಅತ್ಯಂತ ಕನಿಷ್ಠ ಪ್ರಮಾಣದಲ್ಲಿರುವುದು!. 

ಇವೆಲ್ಲಕಿಂತಲೂ ಮಿಗಿಲಾಗಿ ಯಾರಿಗಾದರೂ ಹೃದಯಾಘಾತ ಸಂಭವಿಸುತ್ತಿರುವುದೆಂಬ ಸಂದೇಹ ಮೂಡಿದಾಗ, ತತ್ ಕ್ಷಣ ಒಂದೆರಡು ಆಸ್ಪಿರಿನ್ ಮಾತ್ರೆಗಳನ್ನು ಬಾಯಿಯಲ್ಲಿರಿಸಿ ಚಪ್ಪರಿಸುವುದರಿಂದ ಇಂತಹ ವ್ಯಕ್ತಿಗಳನ್ನು ಸಾವಿನ ದವಡೆಗಳಿಂದ  ಕಾಪಾಡಬಲ್ಲ ಈ ಅದ್ಭುತ ಔಷದವು, ನಿಜಕ್ಕೂ ಅಮೃತ ಸಂಜೀವಿನಿ ಎನಿಸುವುದು. ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಹಿನ್ನಡೆಯುಂಟುಮಾಡಬಲ್ಲ ಹಾಗೂ ಹೆಪ್ಪುಗಟ್ಟಿದ ರಕ್ತದ ತುಣುಕುಗಳನ್ನು ಕರಗಿಸಬಲ್ಲ ಆಸ್ಪಿರಿನ್ ನ ವಿಶಿಷ್ಟ ಸಾಮರ್ಥ್ಯವೇ ಇದಕ್ಕೆ ಕಾರಣವೆನಿಸುತ್ತದೆ. ಇದೇ ಉದ್ದೇಶದಿಂದ ಹೃದಯಾಘಾತಕ್ಕೆ ಒಳಗಾದ ರೋಗಿಗಳಿಗೆ ವೈದ್ಯರು ನೀಡುವ ಸಹಸ್ರಾರು ರೂಪಾಯಿ ಬೆಲೆಬಾಳುವ ಸ್ಟ್ರೆಪ್ಟೋಕೈನೇಸ್ - ಯುರೋಕೈನೇಸ್ ಇಂಜೆಕ್ಷನ್ ಗಳಿಗಿಂತ ಕೊಂಚ ಕಡಿಮೆ ಪರಿಣಾಮ ಬೀರಬಲ್ಲ ಒಂದು ಆಸ್ಪಿರಿನ್ ಮಾತ್ರೆಯ ಬೆಲೆಯೂ ಕೇವಲ ಹತ್ತಾರು ಪೈಸೆಗಳು ಮಾತ್ರ!. ಪ್ರಪಂಚದ ಅತಿ ಹೆಚ್ಚು ಜನರಿಗೆ ಚಿರಪರಿಚಿತವಾಗಿರುವ, ಕನಿಷ್ಠ ವೆಚ್ಚದಲ್ಲಿ ಗರಿಷ್ಟ ಪರಿಣಾಮ ನೀಡಬಲ್ಲ ಹಾಗೂ ಜೀವರಕ್ಷಕ ಎನಿಸುವ  ಆಸ್ಪಿರಿನ್ ನಂತಹ ಔಷದ ಮತ್ತೊಂದಿಲ್ಲ ಎಂದಲ್ಲಿ ಅತಿಶಯೋಕ್ತಿ  ಎನಿಸಲಾರದು. 

ಪ್ರತಿಕೂಲ ಪರಿಣಾಮಗಳು 

ಆಸ್ಪಿರಿನ್ ನ ದೀರ್ಘಕಾಲೀನ ಸೇವನೆಯಿಂದಾಗಿ ವಾಕರಿಕೆ, ವಾಂತಿ, ಎದೆ ಉರಿ, ಹೊಟ್ಟೆನೋವು, ಜಠರದ ಹುನ್ನುಗಳು ಮತ್ತು ಆಂತರಿಕ ರಕ್ತಸ್ರಾವದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಆಸ್ಪಿರಿನ್  ಅಲರ್ಜಿಯಿಂದ ಶರೀರದಾದ್ಯಂತ  ತುರಿಕೆ,ದಡಿಕೆ ಮತ್ತು  ಬಾವು, ಮೂಗಿನಿಂದ ನೀರಿಳಿಯುವುದು,ಆಸ್ತಮಾ, ಉಸಿರಾಟದ ಅಡಚಣೆ ಹಾಗೂ ಪ್ರಾನಾಪಾಯಕ್ಕೆ ಕಾರನವೆನಿಸಬಲ್ಲ "ಅನಾಫೈಲಾಕ್ಟಿಕ್ ರಿಯಾಕ್ಷನ್" ಗಳು ಸಂಭವಿಸುವ ಸಾಧ್ಯತೆಗಳಿವೆ. 

ಸುದೀರ್ಘಕಾಲ ಆಸ್ಪಿರಿನ್ ಸೇವಿಸುವುದರಿಂದ ಕಣ್ಣು ಕತ್ತಲಾವರಿಸುವುದು,ಕಿವಿಗಳಲ್ಲಿ ಶಬ್ದ ಕೇಳಿಸಿದಂತಾಗುವುದು,ತಲೆತಿರುಗುವಿಕೆ, ಕಣ್ಣು- ಕಿವಿಗಳು ಮಂದವಾಗುವುದು ಹಾಗೂ ಶರೀರದಲ್ಲಿನ ದ್ರವ- ಲವಣಾಂಶಗಳಲ್ಲಿ ವ್ಯತ್ಯಯವಾಗಬಹುದು. ಇದಲ್ಲದೆ ಜಠರದಲ್ಲಿ ರಕ್ತಸ್ರಾವ ಹಾಗೂ ರಕ್ತವಾಂತಿಯಂತಹ ತೊಂದರೆಗಳೂ ತಲೆದೋರಬಹುದು. 

ಅತಿಯಾದ ಪ್ರಮಾಣದಲ್ಲಿ ಇದನ್ನು ಸೇವಿಸಿದಲ್ಲಿ ತೀವ್ರ ವಿಷಕಾರಕವೆನಿಸುವ ಗಂಭೀರ- ಮಾರಕ ತೊಂದರೆಗಳು ಕಂಡುಬರುವುದುಂಟು. ತೀವ್ರ ವಾಂತಿ, ನಿರ್ಜಲೀಕೃತ ಸ್ಥಿತಿ,ತೀವ್ರ ಅಸ್ವಸ್ಥತೆ, ಬಡಬಡಿಸುವಿಕೆ, ಭಯಾನಕ ಹಗಲುಗನಸುಗಳು, ತೀವ್ರ ಜ್ವರ, ಫಿಟ್ಸ್, ಕೊಮಾ, ಶ್ವಾಸಾಂಗಗಳ ವೈಫಲ್ಯ ಮತ್ತು ಹೃದಯ- ರಕ್ತನಾಳಗಳ ಕುಸಿತದಿಂದಾಗಿ ಮರಣಕ್ಕೂ ಕಾರಣವೆನಿಸಬಲ್ಲ ಈ ಸ್ಥಿತಿಯನ್ನು "ಅಕ್ಯೂಟ್ ಸಾಲಿಸಿಲೇಟ್ ಪೊಯ್ಸನಿಂಗ್" ಎನ್ನುವರು. ಇಂತಹ ಅಪಾಯಕಾರಿ ದುಷ್ಪರಿಣಾಮಗಳಿಗೆ ಕಾರಣವೆನಿಸಬಲ್ಲ ಆಸ್ಪಿರಿನ್ ಔಷದವನ್ನು ವೈದ್ಯರ ಸೂಚನೆಯಿಲ್ಲದೆ ಸುದೀರ್ಘಕಾಲ ಸೇವಿಸುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದು ನೆನಪಿರಲಿ. 

ಅಂತಿಮವಾಗಿ ಸೂಕ್ತ ಕಾರಣಗಳಿಲ್ಲದೇ ಹಾಗೂ ವೈದ್ಯರ ಸಲಹೆ ಪಡೆಯದೇ ಸ್ವೇಚ್ಛೆಯಿಂದ ಆಸ್ಪಿರಿನ್ ಸೇವಿಸದಿರಿ. ಅಂತೆಯೇ "ಜೀವರಕ್ಷಕ" ಔಷದದ ದುರುಪಯೋಗದಿಂದ ಇದು "ಜೀವ ಭಕ್ಷಕ"ವಾಗಿ ಪರಿಣಮಿಸಬಲ್ಲದು ಎನ್ನುವುದನ್ನು ಮರೆಯದಿರಿ. 

ಬಳಸಬಾರದ ಸ್ಥಿತಿಗಳು 

ಆಸ್ಪಿರಿನ್ ಅಲರ್ಜಿ, ಜಠರದ ಹುಣ್ಣುಗಳು, ವಿವಿಧರೀತಿಯ ರಕ್ತಸ್ರಾವದ ಸಮಸ್ಯೆಗಳಿರುವ ವ್ಯಕ್ತಿಗಳು ಮತ್ತು ಇನ್ ಫ್ಲೂ ಯೆಂಜಾ ಮತ್ತು ಸೀತಾಳೆ ಸಿಡುಬು ಪೀಡಿತ ಮಕ್ಕಳು ಆಸ್ಪಿರಿನ್ ಸೇವಿಸಬಾರದು. "ರೆಯೇಸ್ ಸಿಂಡ್ರೋಮ್" ಎನ್ನುವ ಮಕ್ಕಳನ್ನು ಕಾಡುವ ಗಂಭೀರ ಸಮಸ್ಯೆಗೆ ಕಾರಣವೆನಿಸುವುದರಿಂದಾಗಿ, ಮಕ್ಕಳಿಗೆಂದೇ ತಯಾರಿಸುತ್ತಿದ್ದ ಆಸ್ಪಿರಿನ್ ಉತ್ಪನ್ನಗಳನ್ನು ಬಹುತೇಕ ದೇಶಗಳು ಹಲವಾರು ವರ್ಷಗಳ ಹಿಂದೆಯೇ ನಿಷೇಧಿಸಿವೆ. 

ಸುದೀರ್ಘಕಾಲ ಆಸ್ಪಿರಿನ್ ಸೇವಿಸಿದ ಗರ್ಭಿಣಿಯರಲ್ಲಿ ವಿಳಂಬಿತ ಹೆರಿಗೆ,ಪ್ರಸವೋತ್ತರ ಅಧಿಕ ರಕ್ತಸ್ರಾವ ಮತ್ತು ಹುಟ್ಟುವ ಮಗುವಿನ ತೂಕ ಕಡಿಮೆಯಾಗುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಗರ್ಭಿಣಿಯರು ಆಸ್ಪಿರಿನ್ ಸೇವಿಸಬಾರದು. ಅದೇ ರೀತಿಯಲ್ಲಿ ಮಗುವಿಗೆ ಮೊಲೆಹಾಲು ಉಣಿಸುವ ಮಾತೆಯರು ಆಸ್ಪಿರಿನ್ ಸೇವಸದಿರುವುದು ಹಿತಕರ. ಆಸ್ಪಿರಿನ್ ಸೇವಿಸುವ ವ್ಯಕ್ತಿಗಳು ಶಸ್ತ್ರಚಿಕಿತ್ಸೆಗೆ ಒಳಗಾಗುವ ಒಂದು ವಾರದ ಮೊದಲೇ ಇದರ ಸೇವನೆಯನ್ನು ನಿಲ್ಲಿಸಬೇಕಾಗುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೧-೦೪-೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  




Saturday, November 16, 2013

Sarpasuttina Darpavanndagisi!


                                                ಸರ್ಪಸುತ್ತಿನ ದರ್ಪವನ್ನಡಗಿಸಿ! 

    ಬಹುತೇಕ ಗ್ರಾಮೀಣ ಜನರೊಂದಿಗೆ ಅನೇಕ ವಿದ್ಯಾವಂತ ನಗರವಾಸಿಗಳ ಮನದಲ್ಲಿ ಮೂಢನಂಬಿಕೆಗಳು ಮತ್ತು ತಪ್ಪುಕಲ್ಪನೆಗಳು ಮನೆಮಾಡಲು ಕಾರಣವೆನಿಸಿರುವ ಕಾಯಿಲೆಗಳಲ್ಲಿ "ಸರ್ಪಸುತ್ತು" ಅಗ್ರಸ್ಥಾನಗಳಿಸಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ಇಂದಿಗೂ ನಂಬಿರುವಂತೆ, ಸರ್ಪಸುತ್ತಿನ ಚಿಕಿತ್ಸೆಗೆ ಆಧುನಿಕ ಪದ್ದತಿಯ ಔಷದಗಳೇ ಇಲ್ಲವೆನ್ನುವುದು ನಿಶ್ಚಿತವಾಗಿಯೂ ನಿಜವಲ್ಲ!. 
--------------              --------------------                               -------------------                               ----------------         -----------------

ವೆರಿಸೆಲ್ಲಾ ಜೋಸ್ಟರ್  ಎನ್ನುವ ವೈರಸ್ ಗಳಿಂದ ಉದ್ಭವಿಸುವ ಹರ್ಪಿಸ್ ಜೋಸ್ಟರ್ ಎಂದು ಕರೆಯಲ್ಪಡುವ ಕಾಯಿಲೆಯನ್ನು ದ. ಕ. ಜಿಲ್ಲೆಯ ಜನರು ಸರ್ಪಸುತ್ತು ಎಂದು ಕರೆಯುತ್ತಾರೆ. ಬಹುತೇಕ ರೋಗಕಾರಕ ರೋಗಾಣುಗಳು ಒಂದು ನಿರ್ದಿಷ್ಟ ಕಾಯಿಲೆಯನ್ನು ಹುಟ್ಟುಹಾಕುವುದಾದಲ್ಲಿ, ಈ ವಿಶಿಷ್ಟ ಕಾಯಿಲೆಗೆ ಕಾರಣವೆನಿಸುವ ವೈರಸ್ ಗಳು ಸೀತಾಳೆ ಸಿಡುಬು(ಚಿಕನ್ ಪೋಕ್ಸ್) ಮತ್ತು ಸರ್ಪಸುತ್ತು  ಎನ್ನುವ ಎರಡು ಕಾಯಿಲೆಗಳಿಗೆ ಕಾರಣವೆನಿಸುತ್ತವೆ. 

ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳಲ್ಲಿ ಪ್ರಾರಂಭವಾಗಿ, ತೀವ್ರ ಸಾಂಕ್ರಾಮಿಕ ರೂಪವನ್ನು ತಾಳಿ ಹರಡುವ ಸೀತಾಳೆ ಸಿಡುಬಿನ ಪೀಡುಗು ಪ್ರತ್ಯಕ್ಷವಾದಂತೆಯೇ, ಸರ್ಪಸುತ್ತಿನ ಹಾವಳಿಯೂ ಅಲ್ಲಲ್ಲಿ ಹೆಡೆ ಎತ್ತುವುದನ್ನು ನೀವೂ ಕಂಡಿರಲೇಬೇಕು. ಸರ್ಪಸುತ್ತು ಪೀಡಿತ ವ್ಯಕ್ತಿಯ ಸಂಪರ್ಕದಿಂದ ಇದು ಮತ್ತೊಬ್ಬರಿಗೆ ಹರಡುವುದಿಲ್ಲ. ಅಂತೆಯೇ ಸೀತಾಳೆ ಸಿಡುಬು ಪೀಡಿತ ಮಕ್ಕಳಿಂದ ಹಿರಿಯರಿಗೆ ಈ ಪಿಡುಗು ಅಥವಾ ಸರ್ಪಸುತ್ತು ಬಾಧಿಸುವ ಸಾಧ್ಯತೆಗಳಿಲ್ಲ. ಆದರೆ ಸರ್ಪಸುತ್ತು ಪೀಡಿತ ಹಿರಿಯರ ಸಂಪರ್ಕದಿಂದ ಚಿಕ್ಕ ಮಕ್ಕಳಿಗೆ ಸೀತಾಳೆ ಸಿಡುಬು ಉದ್ಭವಿಸುವ ಸಾಧ್ಯತೆಗಳಿವೆ. 

ಸೀತಾಳೆ ಸಿಡುಬು ಪೀಡಿತ ರೋಗಿಗಳು ನಿಗದಿತ ಅವಧಿಯ ಬಳಿಕ ವ್ಯಾಧಿಮುಕ್ತರಾದರೂ,ಇವರ ಶರೀರದಲ್ಲಿರುವ ವೆರಿಸೆಲ್ಲಾ ವೈರಸ್ ಗಳು ಸಂಪೂರ್ಣವಾಗಿ ನಾಶವಾಗುವುದಿಲ್ಲ. ಇಂತಹ ವ್ಯಕ್ತಿಗಳ ಶರೀರದಲ್ಲಿನ ನರಗಳ ಗಾಂಗ್ಲಿಯಾನ್ ಗಳಲ್ಲಿ ತಟಸ್ಥ ಹಾಗೂ ನಿಷ್ಕ್ರಿಯವಾಗಿ ಅವಿತುಕೊಳ್ಳುವ ಈ ವೈರಸ್ ಗಳು, ಸೂಕ್ತ ಅವಕಾಶ ದೊರೆತಾಗ (ಉದಾ- ಸೀತಾಳೆ ಸಿಡುಬು ಪೀಡಿತ ರೋಗಿಯ ಸಂಪರ್ಕ) ಮತ್ತೆ ಸಕ್ರಿಯಗೊಂಡು ಸರ್ಪಸುತ್ತು ಉದ್ಭವಿಸಲು ಕಾರಣವೆನಿಸುತ್ತವೆ. 

ಮೂಢನಂಬಿಕೆ- ತಪ್ಪುಕಲ್ಪನೆಗಳು 

ಮಂತ್ರ-ತಂತ್ರಗಳು ಮತ್ತು ನಾಟಿ ಔಷದಗಳೇ ಈ ವ್ಯಾಧಿಗೆ ಏಕಮಾತ್ರ ಪರಿಹಾರವೆಂದು ಅನೇಕ ಜನರು ನಂಬಿದ್ದಾರೆ. ಇಂತಹ ಚಿಕಿತ್ಸೆಗಳು ಫಲಪ್ರದವೆನಿಸಲು ಸೂಕ್ತ ಕಾರಣಗಳೂ ಇವೆ.ವೈರಸ್ ಗಳಿಂದ ಉದ್ಭವಿಸುವ ಹಲವಾರು ಅನ್ಯ ವ್ಯಾಧಿಗಳಂತೆಯೇ ಆರೋಗ್ಯದ ಮಟ್ಟ ಉತ್ತಮವಾಗಿರುವ ಹಾಗೂ ವಿಶೇಷವಾಗಿ ತಾರುಣ್ಯದಲ್ಲಿ ಉದ್ಭವಿಸಿದ ಸರ್ಪಸುತ್ತು, ನಿರ್ದಿಷ್ಟ ಅವಧಿಯ ಬಳಿಕ ಸ್ವಯಂ ಶಮನಗೊಳ್ಳಬಹುದು. ಉದಾಹರಣೆಗೆ "ಔಷದ ಸೇವಿಸಿದಲ್ಲಿ ಒಂದು ವಾರದಲ್ಲಿ ಹಾಗೂ ಸೇವಿಸದಿದ್ದಲ್ಲಿ ಏಳು ದಿನಗಳಲ್ಲಿ ಶೀತವು ಗುಣವಾಗುವುದು" ಎನ್ನುವ ಮಾತು ಇದಕ್ಕೊಂದು ಉತ್ತಮ ಉದಾಹರಣೆಯೂ ಹೌದು. ಇದೇ ರೀತಿಯಲ್ಲಿ ನಾಟಿ ಮದ್ದು, ಮಂತ್ರ- ತಂತ್ರಗಳನ್ನು ಪ್ರಯೋಗಿಸಿದ ರೋಗಿಗಳು, ಈ ಚಿಕಿತ್ಸೆಯಿಂದಲೇ ಸರ್ಪಸುತ್ತು ಗುಣವಾಯಿತೆಂದು ಭ್ರಮಿಸುತ್ತಾರೆ. 

ಇದರೊಂದಿಗೆ ರೋಗಿಯ ಶರೀರದ ಮೇಲೆ ಮೂಡಿರುವ "ಸರ್ಪ"ವು ದೇಹದ ಸುತ್ತಲೂ ಹರಡುತ್ತಾ, ಇದರ ಹೆಡೆ ಮತ್ತು ಬಾಲಗಳು ಸಂಧಿಸಿದಲ್ಲಿ ರೋಗಿ ಮೃತಪಡುವನು ಎನ್ನುವ ನಂಬಿಕೆ ಅಪ್ಪಟ ಸುಳ್ಳು. ರೋಗಿಯ ಶರೀರದಲ್ಲಿ ಇರುವ ನರಗಳಿಗೆ ತಗಲಿದ ಸೋಂಕಿಗೆ ಅನುಗುಣವಾಗಿ, ಶರೀರದ ಹೊರಭಾಗದ ಚರ್ಮದ ಮೇಲೆ ಮೂಡುವ ಸರ್ಪಸುತ್ತು ರೋಗಿಯ ಶರೀರವನ್ನು ಸುತ್ತುವರಿಯುವ ಸಾಧ್ಯತೆಗಳೇ ಇಲ್ಲ. ಏಕೆಂದರೆ ನಮ್ಮ ಬೆನ್ನೆಲುಬಿನಿಂದ ಉದ್ಭವಿಸಿ ಶರೀರದ ಎರಡೂ ಭಾಗಗಳಿಗೆ ಹಬ್ಬಿರುವ ಯಾವುದೇ ನರಗಳು ನಮ್ಮ ಶರೀರವನ್ನು ಸುತ್ತುವರಿದಿರುವುದೇ ಇಲ್ಲ!. ಇದೇ ಕಾರಣದಿಂದ ಸರ್ಪದ ಹೆಡೆ ಮತ್ತು ಬಾಲಗಳು ಪರಸ್ಪರ ಸಂಧಿಸುವ ಸಾಧ್ಯತೆಗಳೂ ಇಲ್ಲ. 

ಆದರೆ ಅನಾದಿ ಕಾಲದಿಂದ ಇಂತಹ "ದಂತ ಕಥೆ"ಗಳನ್ನು ನಂಬಿ, ಜೀವಭಯದಿಂದ ಮಂತ್ರ- ತಂತ್ರ ಮತ್ತು ನಾಟಿ ಔಷದಗಳಿಗೆ ಶರಣಾಗುವ ರೋಗಿಗಳು, ಸಂಕೀರ್ಣ ಸಮಸ್ಯೆಗಳು ಅಥವಾ ಪ್ರಾನಾಪಾಯದ ಸಾಧ್ಯತೆಗಳು ಕಂಡುಬಂದಾಗ ತಜ್ಞವೈದ್ಯರ ಬಳಿಗೆ ಧಾವಿಸುವುದು ಅಪರೂಪವೇನಲ್ಲ. 

ರೋಗಲಕ್ಷಣಗಳು 

ಅಲ್ಪಪ್ರಮಾಣದ ಜ್ವರ,ತಲೆ- ಮೈಕೈ ನೋವುಗಳೊಂದಿಗೆ ಆರಂಭವಾಗುವ ಸರ್ಪಸುತ್ತಿನಲ್ಲಿ, ಸೋಂಕು ಪೀಡಿತ ನರಗಳಿರುವ ಶರೀರದ ಭಾಗಗಳಲ್ಲಿ ತೀವ್ರ ಹಾಗೂ ಅಸಹನೀಯ ನೋವು ಕಾಣಿಸಿಕೊಳ್ಳುವುದು. ಕೆಲ ರೋಗಿಗಳಲ್ಲಿ ಈ ನೋವಿನ ತೀವ್ರತೆಯು ಇದೇ ರೀತಿಯ ನೋವಿಗೆ ಕಾರಣವೆನಿಸಬಲ್ಲ ಎಂಜೈನಾ, ಹೃದಯಾಘಾತ ಹಾಗೂ ಮೂತ್ರನಾಳಗಲ್ಲಿನ ಕಲ್ಲುಗಳಂತಹ ಕಾಯಿಲೆಗಳನ್ನು ಅನುಕರಿಸುವುದು. ಇದೇ ಕಾರಣದಿಂದಾಗಿ ಈ ಹಂತದಲ್ಲಿ ಅನುಭವೀ ವೈದ್ಯರಿಗೂ ಈ ವ್ಯಾಧಿಯನ್ನು ನಿಖರವಾಗಿ ಪತ್ತೆಹಚ್ಚುವುದು ಕಷ್ಟಸಾಧ್ಯವೆನಿಸುವುದು. 

ಮುಂದಿನ ಒಂದೆರಡು ದಿನಗಳಲ್ಲಿ ನೋವಿರುವ ಭಾಗವು ಕೆಂಪಾಗಿ ತುಸು ಊದಿಕೊಳ್ಳುವುದರೊಂದಿಗೆ, ಸಣ್ಣಪುಟ್ಟ ಗುಳ್ಳೆಗಳು ಮೂಡುತ್ತವೆ.ಹಾಗೂ ಈ ಸಂದರ್ಭದಲ್ಲಿ ಅನೇಕ ರೋಗಿಗಳಿಗೆ ಗುಳ್ಳೆಗಳು ಮೂಡಿದ ಭಾಗದಲ್ಲಿ ಅಸಾಧ್ಯ ಉರಿ ಮತ್ತು ತುರಿಕೆಗಳು ಬಾಧಿಸಬಹುದು.  ಈ ಗುಳ್ಳೆಗಳು ನೀರುತುಂಬಿದ ಗುಳ್ಳೆಗಳಾಗಿ ಪರಿವರ್ತನೆಗೊಂಡು, ಐದರಿಂದ ಹತ್ತು ದಿನಗಳಲ್ಲಿ  ಬಾಡಿದಂತೆಯೇ ಇವುಗಳ ಮೇಲಿನ ಚರ್ಮವು ಒಣಗಿ ಉದುರಿಹೋಗುತ್ತದೆ. ಆದರೆ ಗುಳ್ಳೆಗಳಿದ್ದ ಜಾಗದಲ್ಲಿನ ಚರ್ಮದ ಮೇಲೆ ಇವುಗಳ ಕಲೆಗಳು ಸುದೀರ್ಘಕಾಲ ಉಳಿದುಕೊಳ್ಳುವ ಸಾಧ್ಯತೆಗಳೂ ಇವೆ. ಅಂತೆಯೇ ಈ ಗುಳ್ಳೆಗಳಿಗೆ ದ್ವಿತೀಯ ಹಂತದ ಸೋಂಕು ತಗಲಿದಲ್ಲಿ (ಈ ಗುಳ್ಳೆಗಳಿಗೆ ಹಾಕುವ ನಾಟಿ ಮದ್ದಿನ ಲೇಪ ಒಣಗಿದಂತೆಯೇ, ಗುಳ್ಳೆಗಳು ಒಡೆದಾಗ ಇಂತಹ ಸಮಸ್ಯೆ ಉದ್ಭವಿಸಬಹುದು) ಈ ಕಲೆಗಳು ಇನ್ನಷ್ಟು ಗಾಢವಾಗುತ್ತವೆ. ಹಾಗೂ ಕೆಲ ರೋಗಿಗಳಲ್ಲಿ ಈ ಭಾಗದಲ್ಲಿ ಸ್ಪರ್ಶಜ್ಞಾನ ನಶಿಸುವುದುಂಟು. ಇದಲ್ಲದೇ ವ್ಯಾಧಿ ತೀವ್ರಗೊಂಡಿದ್ದಲ್ಲಿ ಚರ್ಮದ ಮೇಲಿನ ಕಲೆಗಳು ಇರುವ ಭಾಗದಲ್ಲಿ ಹೊತ್ತುಗೊತ್ತಿನ ಪರಿವೆ ಇಲ್ಲದೇ ಆಕಸ್ಮಿಕವಾಗಿ ಉದ್ಭವಿಸುವ ಪೋಸ್ಟ್ ಹರ್ಪೆಟಿಕ್ "ನ್ಯೂರಾಲ್ಜಿಯಾ" ಎಂದು ಕರೆಯಲ್ಪಡುವ ಅಸಹನೀಯ ನೋವು, ವಿಶೇಷವಾಗಿ ವಯೋವೃದ್ಧರನ್ನು ಕೆಲ ತಿಂಗಳುಗಳಿಂದ ಹಿಡಿದು ವರ್ಷಗಳ ಕಾಲ ಎಡೆಬಿಡದೆ ಬಾಧಿಸುವುದು. 

ಮುಖ, ಕೈ-ಕಾಲು, ತೊಡೆಗಳಲ್ಲದೆ ಶರೀರದ ವಿವಿಧ ಭಾಗಗಳಲ್ಲಿ ಮೂಡಬಲ್ಲ ಸರ್ಪಸುತ್ತಿನ ಗುಳ್ಳೆಗಳು ಕಣ್ಣಿನ ಮೇಲೆ ಉದ್ಭವಿಸಿ ಉಲ್ಬಣಿಸಿದಲ್ಲಿ, ದೃಷ್ಟಿನಾಶದ ಸಾಧ್ಯತೆಗಳಿವೆ. ಸಾಮಾನ್ಯವಾಗಿ ೧೦ ರಿಂದ ೧೪ ದಿನಗಳಲ್ಲಿ ಗುಣವಾಗುವ ಈ ಕಾಯಿಲೆಯು ರೋಗಿಯ ವಯಸ್ಸು, ಆತನಲ್ಲಿ ಇರಬಹುದಾದ ಅನ್ಯ ಕಾಯಿಲೆಗಳು, ಆತನ ಆರೋಗ್ಯ ಮತ್ತು ಶಾರೀರಿಕ ಕ್ಷಮತೆಯ ಮಟ್ಟಗಳಿಗೆ ಅನುಗುಣವಾಗಿ ಅಲ್ಪ ಅಥವಾ ಸುದೀರ್ಘ ಕಾಲ ಬಾಧಿಸಬಹುದು. 

ಸಂಕೀರ್ಣ ಸಮಸ್ಯೆಗಳು 

ಅನಪೇಕ್ಷಿತ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಸರ್ಪಸುತ್ತು, ರೋಗಿಯ ವಯಸ್ಸು ಹೆಚ್ಚಾದಂತೆಯೇ ಅನೇಕ ಸಂಕೀರ್ಣ ಸಮಸ್ಯೆಗಳಿಗೆ ಮೂಲವೆನಿಸುತ್ತದೆ. ರೋಗಿಯ ಕಣ್ಣಿನ ಮೇಲೆ ಮೂಡಿದ ಗುಳ್ಳೆಗಳು ಒಡೆದು ಹುಣ್ಣಾಗಿ ಉಲ್ಬಣಿಸಿದಲ್ಲಿ ದೃಷ್ಟಿದೋಷ ಅಥವಾ ದೃಷ್ಟಿನಾಶವೂ ಸಂಭವಿಸಬಹುದು. ಗುಳ್ಳೆಗಳು ಮೂಡಿದ ಭಾಗದಲ್ಲಿ ಸ್ಪರ್ಶಜ್ಞಾನದ ಅಭಾವ ಅಥವಾ ಅಸಹನೀಯ ನೋವು ಹಾಗೂ ಕುತ್ತಿಗೆಯ ಮೇಲ್ಭಾಗದ ನಿರ್ದಿಷ್ಟ ನರಗಳಿಗೆ ತಗಲಿದ ಸೋಂಕಿನಿಂದಾಗಿ ತೀವ್ರ ಸ್ವರೂಪದ ತಲೆತಿರುಗುವಿಕೆ (ವರ್ಟಿಗೊ), ಮತ್ತು ಮುಖದ ಒಂದು ಪಾರ್ಶ್ವಕ್ಕೆ ಪಕ್ಷವಾತ ಬಂದೆರಗುವ ಸಾಧ್ಯತೆಗಳಿವೆ. ಅತ್ಯಂತ ಅಪರೂಪ ಎನಿಸಿರುವ "ಸರ್ವಾಂಗೀಣ ಸರ್ಪಸುತ್ತು" ಹೆಚ್ಚಾಗಿ ವಯೋವೃದ್ಧರು ಹಾಗೂ ರೋಗಪ್ರತಿರೋಧಕ ಶಕ್ತಿಯ ಕೊರತೆಗೆ ಕಾರಣವೆನಿಸುವ ವ್ಯಾಧಿಪೀಡಿತರಲ್ಲಿ ಕಂಡುಬರುವುದುಂಟು. 

೫೦ ವರ್ಷ ಮೀರಿದ ವ್ಯಕ್ತಿಗಳಲ್ಲಿ ಈ ಕಾಯಿಲೆ ಗುಣವಾದ ಬಳಿಕವೂ, ಹೊತ್ತುಗೊತ್ತಿನ ಪರಿವೆಯಿಲ್ಲದೆ, ಗುಳ್ಳೆಗಳು ಮೂಡಿದ್ದ ಜಾಗದಲ್ಲಿ ಕಂಡುಬರುವ ತೀವ್ರ ನೋವು ಹಲವಾರು ವರ್ಷಗಳ ಕಾಲ ಪೀಡಿಸುತ್ತದೆ. ರೋಗಿಯ ವಯಸ್ಸು ಹೆಚ್ಚಾದಷ್ಟು, ನೋವಿನ ತೀವ್ರತೆಯೂ ಹೆಚ್ಚುತ್ತದೆ. ಇಂತಹ ಅಸಾಮಾನ್ಯ ತೊಂದರೆಗಳಿಗೆ ಕಾರಣವೆನಿಸುವುದರಿಂದ, ೫೦ ವರ್ಷ ಮೀರಿದ ವ್ಯಕ್ತಿಗಳು ಈ ವ್ಯಾಧಿ ಪ್ರತ್ಯಕ್ಷವಾದೊಡನೆ ತಜ್ನವೈದ್ಯರಿಂದ ಚಿಕಿತ್ಸೆ ಪಡೆಯುವುದು ಹಿತಕರ. 

ರೋಗನಿದಾನ- ಚಿಕಿತ್ಸೆ 

ಸರ್ಪಸುತ್ತಿನ ವಿಶಿಷ್ಟ ಗುಣ ಲಕ್ಷಣಗಳಿಂದಾಗಿ ನಿಮ್ಮ ಕುಟುಂಬ ವೈದ್ಯರೂ ಇದನ್ನು ನಿಖರವಾಗಿ ಗುರುತಿಸಬಲ್ಲರು. ಆದರೂ ಸಂದೇಹಾಸ್ಪದ ಸನ್ನಿವೇಶಗಳಲ್ಲಿ ಈ ಗುಳ್ಳೆಗಳ ಮೇಲಿನ ಚರ್ಮಕೋಶಗಳನ್ನು ಸೂಕ್ಷ್ಮದರ್ಶಕದ ಮೂಲಕ ಪರೀಕ್ಷಿಸಿ, ರೋಗವನ್ನು ಖಚಿತಪಡಿಸಿಕೊಳ್ಳಬಹುದು. 

ವೈದ್ಯಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅವಿರತ ಸಂಶೋಧನೆಗಳ ಫಲವಾಗಿ ಸರ್ಪಸುತ್ತಿಗೆ ಕಾರಣವೆನಿಸುವ ವೈರಸ್ ಗಳ ದರ್ಪವನ್ನು ಅಡಗಿಸಬಲ್ಲ ಔಷದಗಳನ್ನು ಹಲವಾರು ವರ್ಷಗಳ ಹಿಂದೆಯೇ ಸಂಶೋಧಿಸಲಾಗಿದೆ. ಈ ಔಷದಗಳನ್ನು ವ್ಯಾಧಿ ಪ್ರತ್ಯಕ್ಷವಾದೊಡನೆ ಸೇವಿಸಲು ಆರಂಭಿಸಿದಲ್ಲಿ, ನಿಶ್ಚಿತವಾಗಿಯೂ ರೋಗವನ್ನು ನಿಯಂತ್ರಿಸಬಲ್ಲದು. ಇದರೊಂದಿಗೆ ವ್ಯಾಧಿಯ ತೀವ್ರತೆ, ಅವಧಿ, ಇದರಿಂದಾಗಿ ತಲೆದೋರುವ ಉರಿ ಮತ್ತು ತುರಿಕೆಗಳೊಂದಿಗೆ ಅಸಹನೀಯ ನೋವು ಮತ್ತು ಸಂಕೀರ್ಣ ಸಮಸ್ಯೆಗಳನ್ನು ಈ ಔಷದಗಳು ಅನಾಯಾಸವಾಗಿ ನಿಯಂತ್ರಿಸುತ್ತವೆ. 

ಆದರೆ ಇಷ್ಟೊಂದು ಪರಿಣಾಮಕಾರಿ ಔಷದಗಳು ಜನಸಾಮಾನ್ಯರು ಸರ್ಪಸುತ್ತಿಗೆ ಚಿಕಿತ್ಸೆ ಇಲ್ಲವೆಂದು ನಂಬಿದ್ದ ಆಧುನಿಕ ಚಿಕಿತ್ಸಾ ಪದ್ದತಿಯ ಕೊಡುಗೆ ಎನ್ನುವುದನ್ನು ಮರೆಯದಿರಿ!. 

ಸರ್ಪಸುತ್ತನ್ನು ತಡೆಗಟ್ಟುವುದೆಂತು?

"ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವ ಮಾತನ್ನು ನೀವೂ ಕೇಳಿರಬೇಕು. ಅದರಲ್ಲೂ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದಂತೆ, ಸೀತಾಳೆ ಸಿಡುಬು ಮತ್ತು ಸರ್ಪಸುತ್ತುಗಳೆರಡನ್ನೂ ಯಶಸ್ವಿಯಾಗಿ ತಡೆಗಟ್ಟಬಲ್ಲ ಒಂದು ಚುಚ್ಚುಮದ್ದು ಪಡೆದುಕೊಳ್ಳುವುದು ಇಂತಹ ಒಂದು ಪರಿಣಾಮಕಾರಿ ವಿಧಾನವಾಗಿದೆ. 

೧೨ ತಿಂಗಳ ಹಸುಗೂಸಿನಿಂದ ಹಿಡಿದು ೧೨ ವರ್ಷ ವಯಸ್ಸಿನ ಮಕ್ಕಳಿಗೆ ವೆರಿಸೆಲ್ಲಾ ವ್ಯಾಕ್ಸೀನ್ ನ ಒಂದು ಮತ್ತು ೧೨ ವರ್ಷ ಮೀರಿದವರಿಗೆ ಎರಡು ಚುಚ್ಚುಮದ್ದುಗಳನ್ನು ನೀಡಿದಲ್ಲಿ, ಇವೆರಡೂ ವ್ಯಾಧಿಗಳನ್ನು ಖಚಿತವಾಗಿ ತಡೆಗಟ್ಟಬಹುದು. ಈ ವ್ಯಾಕ್ಸೀನ್ ಪಡೆದುಕೊಂಡವರಲ್ಲಿ ಆಕಸ್ಮಿಕವಾಗಿ ಈ ವ್ಯಾಧಿಗಳು ಉದ್ಭವಿಸಿದರೂ, ಇವುಗಳ ತೀವ್ರತೆ ಮತ್ತು ಅವಧಿಗಳು ಸಾಕಷ್ಟು ಸೌಮ್ಯ ಹಾಗೂ ಕಡಿಮೆ ಇರುತ್ತವೆ. ಆದರೆ ವ್ಯಾಧಿಯಿಂದ ಉದ್ಭವಿಸಬಲ್ಲ ಸಂಕೀರ್ಣ ಸಮಸ್ಯೆಗಳು ಈ ಚುಚ್ಚುಮದ್ದನ್ನು ಪಡೆದವರನ್ನು ಬಾಧಿಸುವ ಸಾಧ್ಯತೆಗಳೇ ಇಲ್ಲ. ಆದುದರಿಂದ ತುಸು ದುಬಾರಿಯೆನಿಸಿದರೂ, ವೆರಿಸೆಲ್ಲಾ ವ್ಯಾಕ್ಸೀನ್ ಚುಚ್ಚುಮದ್ದನ್ನು ನಿಮ್ಮ ಮಕ್ಕಳಿಗೆ ಕೊಡಿಸಿದಲ್ಲಿ ಸೀತಾಳೆ ಸಿಡುಬು ಮತ್ತು ಸರ್ಪಸುತ್ತಿನ ಪೀಡೆಯನ್ನು ಸುಲಭವಾಗಿ ತಡೆಗಟ್ಟಬಹುದಾಗಿದೆ. ಇವೆಲ್ಲಕ್ಕೂ ಮಿಗಿಲಾಗಿ ಇವೆರಡು ವ್ಯಾಧಿಗಳು ಬಾಧಿಸಿದ ಸಂದರ್ಭಗಳಲ್ಲಿ ರೋಗಿ ಅನುಭವಿಸುವ ಯಾತನೆ ಮತ್ತು ಚಿಕಿತ್ಸಾ ವೆಚ್ಚಗಳೊಂದಿಗೆ ತುಲನೆ ಮಾಡಿದಲ್ಲಿ, ವ್ಯಾಕ್ಸೀನ್ ನ ವೆಚ್ಚವು ತೀರಾ ನಗಣ್ಯ ಎನಿಸುವುದು. 

ಡಾ. ಸಿ ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೨-೦೫- ೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.