Thursday, November 27, 2014

WASTE TO ENERGY - SWEDEN MODEL





ತ್ಯಾಜ್ಯ ವಿಲೇವಾರಿ : ಸ್ವೀಡನ್ - ಜಗತ್ತಿಗೇ ಮಾದರಿ 

ಭವ್ಯ ಭಾರತದ ಉದ್ದಗಲಕ್ಕೂ ಕಾಣಸಿಗುವ ಅಗಾಧ ಪ್ರಮಾಣದ ಮತ್ತು ವೈವಿಧ್ಯಮಯ ತ್ಯಾಜ್ಯಗಳಿಂದ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ದೇಶದ ಪ್ರಧಾನಿ ನರೇಂದ್ರ ಮೋದಿಯವರು " ಸ್ವಚ್ಛ ಭಾರತ ಅಭಿಯಾನ " ವನ್ನು ಗಾಂಧೀಜಿಯವರ ಜನ್ಮದಿನದಂದು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳ  ರಾಜಕೀಯ ನೇತಾರರು, ಗಣ್ಯ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ, ಸ್ವಚ್ಚತಾ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು. ಪ್ರಾರಂಭಿಕ ಹಂತದಲ್ಲಿ ಕೇವಲ ವೈಯುಕ್ತಿಕ ಪ್ರಚಾರದ ಸಲುವಾಗಿ ಇದರಲ್ಲಿ ಭಾಗವಹಿಸಿದ್ದ ಹಲವಾರು ನೇತಾರರು ಮತ್ತು ಗಣ್ಯ ವ್ಯಕ್ತಿಗಳು, ಈಗಾಗಲೇ ನೇಪಥ್ಯಕ್ಕೆ ಸರಿದಿದ್ದಾರೆ. ಆದರೆ ಅನೇಕ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು ಮಾತ್ರ, ಸ್ವಯಂಸ್ಪೂರ್ತಿಯಿಂದ ಈ ಅಭಿಯಾನವನ್ನು ಮುಂದುವರೆಸುತ್ತಿದ್ದಾರೆ. 

ಮಹಾತ್ಮಾ ಗಾಂಧಿಯವರ ಜನ್ಮದಿನವಾಗಿರುವ ಅಕ್ಟೋಬರ್ ೨ ರಂದು ಈ ಅಭಿಯಾನಕ್ಕೆ ಚಾಲನೆಯನ್ನು ನೀಡುವ ಸಂದರ್ಭದಲ್ಲಿ ಮೋದಿಯವರು ಅಪೇಕ್ಷಿಸಿದಂತೆ, ವಾರದಲ್ಲಿ ಎರಡು ಘಂಟೆಗಳಂತೆ ವರ್ಷದಲ್ಲಿ ೧೦೦ ಘಂಟೆಗಳನ್ನು ನಾವೆಲ್ಲರೂ ಸ್ವಚ್ಚತೆಗಾಗಿ ಮೀಸಲಾಗಿರಿಸಿದಲ್ಲಿ, ಮುಂದಿನ ಐದು ವರ್ಷಗಳಲ್ಲಿ ನಮ್ಮ ದೇಶವು ಸ್ವಚ್ಛ, ಸ್ವಸ್ಥ ಮತ್ತು ಸುಂದರವಾಗುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸಮರ್ಪಕವಾದ ಶೌಚಾಲಯಗಳ ನಿರ್ಮಾಣ ಮತ್ತು ತ್ಯಾಜ್ಯಗಳ ಉತ್ಪಾದನೆಯನ್ನೇ ಕಡಿಮೆಮಾಡುವ ಮೂಲಕ, ಈ ಸಮಸ್ಯೆಯನ್ನು ನಿಶ್ಚಿತವಾಗಿಯೂ ಪರಿಹರಿಸಬಹುದು ಎನ್ನುವ ಪ್ರಧಾನಿಯವರ ಕಿವಿಮಾತುಗಳನ್ನು ಅನೇಕರು ಈಗಾಗಲೇ ಮರೆತುಬಿಟ್ಟಿದ್ದಾರೆ. ಏಕೆಂದರೆ ಅನೇಕ ಜನರ ಅನಿಸಿಕೆಯಂತೆ ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವ ಭಾರತೀಯರ ಕೆಟ್ಟ ಹವ್ಯಾಸವನ್ನು ತಿದ್ದುವುದು ಅಸಾಧ್ಯ. ಅಂತೆಯೇ ತಾವು ಇದರಲ್ಲಿ ಭಾಗಿಯಾದರೂ, ಇತರರು ಕಂಡಲ್ಲಿ ತ್ಯಾಜ್ಯಗಳನ್ನು ಎಸೆಯುವುದನ್ನು ನಿಲ್ಲಿಸದಿರುವುದರಿಂದ ಸಮಸ್ಯೆ ಬಗೆಹರಿಯದು ಎನ್ನುವುದು ನಿಶ್ಚಿತವಾಗಿಯೂ ನಿಜವಲ್ಲ. ಇದೀಗ ಅಭಿಯಾನ ಆರಂಭಗೊಂಡು ಎರಡು ತಿಂಗಳುಗಳು ಕಳೆದಿದ್ದು, ಅಪೇಕ್ಷಿತ ಪರಿಣಾಮವನ್ನು ತೋರಲು ವಿಫಲವಾಗಿದೆ ಎನ್ನುವ ಜನರಿಗೆ, ಸಿಂಗಾಪುರವನ್ನು ಕಾಡುತ್ತಿದ್ದ ಇದೇ ಸಮಸ್ಯೆಯನ್ನು ಪರಿಹರಿಸಲು ೧೨ ವರ್ಷಗಳೇ ತಗಲಿದ್ದವು ಎನ್ನುವ ವಿಚಾರ ತಿಳಿದಿರಲಾರದು. ಅದೇ ರೀತಿಯಲ್ಲಿ ತ್ಯಾಜ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಗಳಲ್ಲಿ ಜಗತ್ತಿಗೆ ಮಾದರಿ ಎನಿಸಿರುವ ಸ್ವೀಡನ್ ದೇಶದ ಬಗ್ಗೆ ಅವಶ್ಯಕ ಮಾಹಿತಿ ದೊರೆತಿರಲಾರದು. ತಮ್ಮ ದೇಶದಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳಲ್ಲಿ ಶೇ.೯೯ ರಷ್ಟು ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸುವ ಮತ್ತು ತ್ಯಾಜ್ಯಗಳನ್ನು ಬಳಸಿ ತಮಗೆ ಬೇಕಾಗುವಷ್ಟು " ಇಂಧನ " ( ಶಾಖ ಮತ್ತು ವಿದ್ಯುತ್ ) ವನ್ನು ಉತಾದಿಸುತ್ತಿರುವ ಸ್ವೀಡನ್ ದೇಶದಲ್ಲಿ, ಕೇವಲ ಶೇ. ೧ ರಷ್ಟು ತ್ಯಾಜ್ಯಗಳು ಮಾತ್ರ " ಲ್ಯಾಂಡ್ ಫೈಲ್ ಸೈಟ್ " ಗಳನ್ನು ಸೇರುತ್ತಿವೆ ಎಂದಲ್ಲಿ ನೀವೂ ನಂಬಲಾರಿರಿ. 

ಸ್ವೀಡನ್ ಮಾದರಿ 

ಕೇವಲ ೯.೬ ದಶಲಕ್ಷ ಜನಸಂಖ್ಯೆ ಮತ್ತು ೪,೫೦,೨೯೫ ಚ.ಕಿ.ಮೀ ವಿಸ್ತೀರ್ಣವಿರುವ ಸ್ವೀಡನ್ ದೇಶದಲ್ಲಿ ತ್ಯಾಜ್ಯಗಳ ಪುನರ್ ಆವರ್ತನದ ವಿಚಾರದಲ್ಲಿ ಕ್ರಾಂತಿಯೇ ನಡೆದಿದೆ. ಜೊತೆಗೆ ತ್ಯಾಜ್ಯಗಳಿಂದ ಶಾಖ ಮತ್ತು ವಿದ್ಯುತ್ ಉತ್ಪಾದಿಸುವ ಮೂಲಕ ತ್ಯಾಜ್ಯಗಳ ಪ್ರಮಾಣವೂ ಗಣನೀಯವಾಗಿ  ಕಡಿಮೆಯಾಗಿರುವುದರಿಂದ, " ಶೂನ್ಯ ತ್ಯಾಜ್ಯ ವಲಯ " ಎಂದು ಗುರುತಿಸಲ್ಪಟ್ಟಿದೆ. 

ಸ್ವೀಡನ್ ದೇಶದಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಲ್ಲೇ ಪ್ರತ್ಯೇಕಿಸಲಾಗುತ್ತದೆ. ಜೈವಿಕ ತ್ಯಾಜ್ಯಗಳನ್ನು ಪ್ರತ್ಯೇಕಿಸಿದ ಬಳಿಕ ಮರುಬಳಕೆ ಅಥವಾ ಪುನರ್ ಆವರ್ತನಗೊಳಿಸಬಹುದಾದ ಪ್ರತಿಯೊಂದು ವಸ್ತುವನ್ನು ಪ್ರತ್ಯೇಕಿಸಿ ತೆಗೆದಿರಿಸಲಾಗುತ್ತದೆ. ತದನಂತರ ಸಂಪೂರ್ಣವಾಗಿ ನಿಷ್ಪ್ರಯೋಜಕವೆನಿಸುವ ವಸ್ತುಗಳನ್ನು ವೈಜ್ಞಾನಿಕವಾಗಿ ದಹನ ಮಾಡುವ ಇನ್ಸಿನರೇಟರ್ ಗಳಿಗೆ ರವಾನಿಸಲಾಗುತ್ತದೆ. ಈ ದೇಶದ ಕಾನೂನಿನಂತೆ ತ್ಯಾಜ್ಯಗಳ ಸಂಗ್ರಹಣೆ, ಪುನರ್ ಆವರ್ತನ ಮತ್ತು ವಿಲೇವಾರಿಗಳಿಗೆ ತಗಲುವ ವೆಚ್ಚಗಳಿಗೆ ಇವುಗಳ ಉತ್ಪಾದಕರೇ ಹೊಣೆಗಾರರಾಗಿರುತ್ತಾರೆ. ಉದಾಹರಣೆಗೆ ಯಾವುದೇ ವಾಣಿಜ್ಯ ಪೇಯಗಳ ಮಾರಾಟಗಾರರು ಇವುಗಳ ಖಾಲಿ ಬಾಟಲಿಗಳನ್ನು ಗ್ರಾಹಕರಿಂದ ಹಿಂದಕ್ಕೆ ಪಡೆದು, ಮರುಬಳಕೆ ಅಥವಾ ಪುನರ್ ಆವರ್ತನ ಮಾಡಬೇಕಾದ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ. 

ತ್ಯಾಜ್ಯಗಳ ಅಭಾವ! 

ಸ್ವೀಡನ್ ದೇಶದಲ್ಲಿ ಒಂದು ವರ್ಷದಲ್ಲಿ ಸುಮಾರು ೨೦ ದಶಲಕ್ಷ ಟನ್ ನಿರುಪಯುಕ್ತ ತ್ಯಾಜ್ಯಗಳನ್ನು ಇನ್ಸಿನರೇಟರ್ ಗಳಲ್ಲಿ ದಹಿಸುವ ಮೂಲಕ, ಶೇ.೫೦ ರಷ್ಟು ಮುನಿಸಿಪಲ್ ತ್ಯಾಜ್ಯಗಳನ್ನು ಇಂಧನದ ಉತ್ಪಾದನೆಗಾಗಿ ಬಳಸಲಾಗುತ್ತದೆ. ಇಲ್ಲಿನ ಪ್ರತಿಯೊಂದು ಇನ್ಸಿನರೇಟರ್ ಗಳೂ ವಿದ್ಯುತ್ ಉತ್ಪಾದಿಸುತ್ತವೆ. ಇಂತಹ " ತ್ಯಾಜ್ಯಗಳಿಂದ ಇಂಧನ " ವನ್ನು ಉತ್ಪಾದಿಸುವ  ೩೨ ಘಟಕಗಳು ಸ್ವೀಡನ್ ದೇಶದಲ್ಲಿವೆ. ೨೦೧೨ ರಲ್ಲಿ ಈ ಘಟಕಗಳು ೧೪.೭ ಟೆರಾ ವ್ಯಾಟ್ಸ್ ಅವರ್ " ಶಕ್ತಿ " (ಎನರ್ಜಿ ) ಯನ್ನು ಉತ್ಪಾದಿಸಿದ್ದವು.ಇವುಗಳಲ್ಲಿ ತ್ಯಾಜ್ಯಗಳನ್ನು ದಹಿಸುವಾಗ ಉತ್ಪನ್ನವಾಗುವ ಹಬೆಯನ್ನು ಜನರೇಟರ್ ಗಳ ಟರ್ಬೈನ್ ಗಳನ್ನು ಚಾಲನೆಮಾಡಲು ಬಳಸುವ ಮೂಲಕ, ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತದೆ. ಉದಾಹರಣೆಗೆ ಹೆಲ್ಸಿನ್ ಬೋರ್ಗ್ ನಗರದ ಜನಸಂಖ್ಯೆಯು ೧,೩೨,೯೮೯ ಆಗಿದ್ದು, ಇಲ್ಲಿನ ಒಂದು ಘಟಕವು ಶೇ.೪೦ ರಷ್ಟು ಮನೆಗಳಿಗೆ ಚಳಿಗಾಲದಲ್ಲಿ ಬೇಕಾಗುವಷ್ಟು ಶಾಖವನ್ನು ಉತ್ಪಾದಿಸುತ್ತದೆ. ಅಂತೆಯೇ ದೇಶದಲ್ಲಿನ ಇತರ ಘಟಕಗಳು ೯,೫೦,೦೦೦ ಮನೆಗಳಿಗೆ ಶಾಖ ಮತ್ತು ೨,೬೦,೦೦೦ ಮನೆಗಳಿಗೆ ವಿದ್ಯುಚ್ಚಕ್ತಿಯನ್ನು ಒದಗಿಸುತ್ತದೆ. ವಿಶೇಷವೆಂದರೆ ಇಲ್ಲಿನ ಇನ್ಸಿನರೇಟರ್ ಗಳಲ್ಲಿ ದಹಿಸಲು ತ್ಯಾಜ್ಯಗಳ ಅಭಾವವಿದ್ದು, ಇಂಗ್ಲೆಂಡ್, ಇಟಲಿ,ನಾರ್ವೆ ಮತ್ತು ಐರ್ ಲ್ಯಾಂಡ್ ದೇಶಗಳಿಂದ ಇದಕ್ಕಾಗಿಯೇ ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗೂ ಇದಕ್ಕಾಗಿ ಇವೆಲ್ಲ ದೇಶಗಳು ನಿಗದಿತ ಶುಲ್ಕವನ್ನು ಸ್ವೀಡನ್ ಗೆ ಪಾವತಿಸುತ್ತವೆ. 

ಇದಲ್ಲದೇ ಸ್ವೀಡನ್ ನಲ್ಲಿ ೨೪೨ ಬಯೋಗ್ಯಾಸ್ ಘಟಕಗಳಿದ್ದು, ಇವುಗಳು ೧೫೮೯ ಜಿಗಾವ್ಯಾಟ್ಸ್ ಅವರ್ ಬಯೋಗ್ಯಾಸನ್ನು ಉತ್ಪಾದಿಸುತ್ತವೆ. ಇದರಲ್ಲಿ ಶೇ.೫೦ ರಷ್ಟು ಬಯೋಗ್ಯಾಸ್ ವಾಹನಗಳಲ್ಲಿ ಇಂಧನವನ್ನಾಗಿ ಬಳಸಲಾಗುತ್ತಿದೆ. ಈ ರೀತಿಯಲ್ಲಿ ಸ್ವೀಡನ್ ದೇಶದಲ್ಲಿ ಅಸಾಂಪ್ರದಾಯಿಕ ಇಂಧನದ ಬಳಕೆ ವ್ಯಾಪಕವಾಗಿದೆ. ತನ್ಮೂಲಕ ದುಬಾರಿ ಬೆಲೆಯ ಪೆಟ್ರೋಲಿಯಂ ತೈಲದ ಬಳಕೆಯನ್ನೇ ನಿಯಂತ್ರಿಸಲಾಗುತ್ತಿದೆ. 

ಇನ್ಸಿನರೇಟರ್ ಗಳಲ್ಲಿ ತ್ಯಾಜ್ಯಗಳನ್ನು ದಹಿಸುವ ಬಗ್ಗೆ ಒಂದಿಷ್ಟು ವಾದವಿವಾದಗಳಿದ್ದರೂ, ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ತ್ಯಾಜ್ಯಗಳನ್ನು ಸುರಿಯುವುದರಿಂದ ಉತ್ಪನ್ನವಾಗುವ ಮಿಥೇನ್ ಅನಿಲ ಮತ್ತು ದ್ರವರೂಪಿ ತ್ಯಾಜ್ಯಗಳ ದ್ರಾವಣವು ಭೂಮಿಯಲ್ಲಿ ಇಂಗುವ ಮೂಲಕ, ಅಂತರ್ಜಲವನ್ನು ಕಲುಷಿತಗೊಳಿಸುವ ಸಮಸ್ಯೆಯೊಂದಿಗೆ ತುಲನೆ ಮಾಡಿದಾಗ, ಇನ್ಸಿನರೇಟರ್ ಗಳಲ್ಲಿ ದಹಿಸುವುದು ಸೂಕ್ತವೆನಿಸುತ್ತದೆ. ವಿಶೇಷವೆಂದರೆ ಜಗತ್ತಿನಲ್ಲಿ ಉತ್ಪನ್ನವಾಗುವ ಶೇ.೪೦ ರಷ್ಟು ತ್ಯಾಜಗಳನ್ನು ಇಂದಿಗೂ ಮುಕ್ತವಾಗಿ ಸುಟ್ಟುಬಿಡಲಾಗುತ್ತಿದ್ದು, ಇದು ಜನಸಾಮಾನ್ಯರ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. 

ಭಾರತದಲ್ಲೂ ಜಾರಿಯಾಗಲಿ 

ಸ್ವೀಡನ್ ದೇಶದ ಮಾದರಿಯನ್ನು ನಮ್ಮ ದೇಶದಲ್ಲೂ ಜಾರಿಗೊಳಿಸಿದಲ್ಲಿ ಅಗಾಧ ಪ್ರಮಾಣದ ನಿರುಪಯುಕ್ತ ತ್ಯಾಜ್ಯಗಳನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಹಾಗೂ ಇದರಿಂದಾಗಿ ಈಗಾಗಲೇ ತುಂಬಿ ತುಳುಕುತ್ತಿರುವ ಲ್ಯಾಂಡ್ ಫೈಲ್ ಸೈಟ್ ಗಳಿಗೆ ಬದಲಾಗಿ ಹೊಸ ಸೈಟ್ ಗಳನ್ನು ನಿರ್ಮಿಸುವ ವೆಚ್ಚವೂ ಉಳಿತಾಯವಾಗಲಿದೆ. ಅಂತೆಯೇ ಲ್ಯಾಂಡ್ ಫೈಲ್ ಸೈಟ್ ಸ್ಥಾಪನೆಯನ್ನು ವಿರೋಧಿಸುವ ಜನರು ನಿಶ್ಚಿಂತರಾಗಿ ಇರಬಹುದಾಗಿದೆ.

 ಇಷ್ಟು ಮಾತ್ರವಲ್ಲ, ಸದಾ ವಿದ್ಯುತ್ ಕ್ಷಾಮದಿಂದ ಬಳಲುತ್ತಿರುವ ಭಾರತದ ಅನೇಕ ರಾಜ್ಯಗಳಿಗೆ ಅವಶ್ಯಕ ಪ್ರಮಾಣದ ವಿದ್ಯುಚ್ಛಕ್ತಿಯೂ ಲಭ್ಯವಾಗಲಿದೆ. ಸ್ವೀಡನ್ ದೇಶದ ತಜ್ಞರ ಅಭಿಪ್ರಾಯದಂತೆ, ಮೂರು ಟನ್ ತ್ಯಾಜ್ಯಗಳು ಒಂದು ಟನ್ ಪೆಟ್ರೋಲಿಯಂ ತೈಲಕ್ಕೆ ಸಮ. ಇದೇ ಕಾರಣದಿಂದಾಗಿ ಆ ದೇಶದಲ್ಲಿ ತ್ಯಾಜ್ಯಗಳನ್ನು ಸಮರ್ಪಕವಾಗಿ ಹಾಗೂ ಉಪಯುಕ್ತ ವಿಧಾನದಲ್ಲಿ ಬಳಸುವ ಮೂಲಕ ಸಾಕಷ್ಟು ಪ್ರಮಾಣದ ಇಂಧನವನ್ನು ಉಳಿಸುವುದರೊಂದಿಗೆ, ಗಣನೀಯ ಪ್ರಮಾಣದ ವಿದ್ಯುಚ್ಛಕ್ತಿಯನ್ನೂ ಉತ್ಪಾದಿಸಲಾಗುತ್ತಿದೆ. ಪ್ರಾಯಶಃ ಭಾರತದಲ್ಲೂ ಇದೇ ವಿಧಾನವನ್ನು ಅನುಷ್ಠಾನಿಸುವುದರ ಸಾಧಕ- ಬಾಧಕಗಳ ಬಗ್ಗೆ ತಜ್ಞರ ಅಭಿಪ್ರಾಯವನ್ನು ಪಡೆಯುವುದು ಹಿತಕರವೆನಿಸಬಹುದು. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಚಿತ್ರ- ಸ್ವೀಡನ್ ನಲ್ಲಿ ಪುನರ್ ಆವರ್ತನಗೊಳಿಸಿದ ಸಾಮಾಗ್ರಿಗಳಿಂದ ನಿರ್ಮಿತ ಕಟ್ಟಡ 





Saturday, November 15, 2014

ADB LOAN - NOT REPAID




 ಎ . ಡಿ . ಬಿ ಸಾಲ : ಬಡ್ಡಿಯನ್ನೂ ಮರುಪಾವತಿಸಿಲ್ಲ !

೧೯೯೦ ರ ದಶಕದ ಅಂತ್ಯದಲ್ಲಿ ಕರ್ನಾಟಕದ ಕರಾವಳಿ ಪ್ರದೇಶದ ಆಯ್ದ ೧೦ ನಗರ - ಪಟ್ಟಣಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು, ರಾಜ್ಯ ಸರ್ಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ಆಧಾರಿತ ಯೋಜನೆಯೊಂದನ್ನು ಅಂಗೀಕರಿಸಿತ್ತು. ಈ ಯೋಜನೆಯ ಅನುಷ್ಠಾನದ ಬಳಿಕ ಈ ೧೦ ನಗರ-ಪಟ್ಟಣಗಳ ನಿವಾಸಿಗಳ ಜೀವನದ ಮಟ್ಟವು ಉನ್ನತ ಸ್ಥಿತಿಗೆ ಏರಲಿದೆ ಎಂದು ಘೋಷಿಸಲಾಗಿತ್ತು. 

ದುಬಾರಿ ಬಡ್ಡಿ 

ಈ ಯೋಜನೆಯ ಅನುಷ್ಠಾನಕ್ಕಾಗಿ ಎ.ಡಿ.ಬಿ ಸಂಸ್ಥೆಯು ೭೩೫ ಕೋಟಿ ರೂ.ಗಳ ಸಾಲವನ್ನು ಭಾರತ ಸರ್ಕಾರಕ್ಕೆ ಶೇ.೬ ರ ಬಡ್ಡಿಯಲ್ಲಿ ನೀಡಿತ್ತು. ಈ ಮೊತ್ತದಲ್ಲಿ ೨೨೦.೫ ಕೋಟಿ ರೂ. ಗಳನ್ನು ತನ್ನ ಪಾಲಿನ ಅನುದಾನವನ್ನಾಗಿ ಪರಿವರ್ತಿಸಿದ್ದ ಕೇಂದ್ರ ಸರ್ಕಾರವು, ಈ ಸಾಲದ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ನೀಡುವ ಸಂದರ್ಭದಲ್ಲಿ ಶೇ.೧೩ ರ ಬಡ್ಡಿಯನ್ನು ವಿಧಿಸಿತ್ತು!. 

ಕೇಂದ್ರ ನೀಡಿದ್ದ ೭೩೫ ಕೋಟಿ ರೂ. ಗಳಿಗೆ ತನ್ನ ಪಾಲಿನ ಅನುದಾನವಾದ ೨೧.೧೧ ಕೋಟಿ ರೂ.ಗಳನ್ನು ಸೇರಿಸಿದ್ದ ರಾಜ್ಯ ಸರ್ಕಾರವು, ೧೦೫೬.೧೧ ಕೋಟಿ. ರೂ.ಗಳ ಬೃಹತ್ ಯೋಜನೆಯನ್ನು ಸಿದ್ಧಪಡಿಸಿತ್ತು. ಅಂತೆಯೇ ಯೋಜನೆಯ ಫಲಾನುಭವಿ ನಗರ- ಪಟ್ಟಣಗಳ ಜನಸಂಖ್ಯೆಗೆ ಅನುಗುಣವಾಗಿ, ಯೋಜನೆಯ ಒಟ್ಟು ವೆಚ್ಚದ  ಕನಿಷ್ಠ ಶೇ.೧೮ ರಿಂದ ಗರಿಷ್ಠ ಶೇ.೫೯ ರಷ್ಟು ಸಾಲ ಮತ್ತು ಕನಿಷ್ಠ ಶೇ. ೩೨ ರಿಂದ ಗರಿಷ್ಠ ೮೨ ರಷ್ಟು ಮೊತ್ತವನ್ನು ಅನುದಾನದ ರೂಪದಲ್ಲಿ ನೀಡಲು ನಿರ್ಧರಿಸಿತ್ತು. ಜೊತೆಗೆ ಸಾಲದ ಮೊತ್ತಕ್ಕೆ ವಾರ್ಷಿಕ ಶೇ. ೧೩.೫ ಬಡ್ಡಿಯ ದರವನ್ನು ನಿಗದಿಸಿತ್ತು. ಯೋಜನೆಯ ಅನುಷ್ಥಾನಕ್ಕಾಗಿ ೫ ವರ್ಷಗಳ ಅವಧಿಯನ್ನು ನಿಗದಿಸಿದ್ದು, ಈ ಅವಧಿಯಲ್ಲಿ ಸಾಲದ ಮೊತ್ತದ ಮೇಲಿನ ಬಡ್ಡಿಯನ್ನು ರಾಜ್ಯ ಸರ್ಕಾರವೇ ನೀಡಲಿತ್ತು. ತದನಂತರ ಪ್ರತಿ ಆರು ತಿಂಗಳುಗಳಿಗೊಮ್ಮೆ ಫಲಾನುಭವಿ ಸ್ಥಳೀಯ ಸಂಸ್ಥೆಗಳು ಸಾಲದ ಕಂತು ಮತ್ತು ಬಡ್ಡಿಯ ಹಣವನ್ನು ರಾಜ್ಯ ಸರ್ಕಾರಕ್ಕೆ ಮರುಪಾವತಿಸಬೇಕಾಗಿತ್ತು. 

೨೦೦೧ ರಲ್ಲಿ ಯೋಜನೆಯ ಕಾಮಗಾರಿಗಳು ಅನುಷ್ಠಾನಗೊಳ್ಳಲು ಸಿದ್ಧತೆಗಳು ನಡೆದಂತೆಯೇ, ಸರ್ಕಾರೇತರ ಸ್ವಯಂ ಸೇವಾ ಸೇವಾ ಸಂಘಟನೆಗಳು ಎ.ಡಿ.ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಗಳ ದುಬಾರಿ ಬಡ್ಡಿದರದ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸುವುದರೊಂದಿಗೆ, ಜನಾಭಿಪ್ರಾಯವನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದವು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕುಸಿಯಲು ಆರಂಭಿಸಿದ್ದ ಬಡ್ಡಿಯ ದರಗಳ ಅರಿವಿದ್ದರೂ, ರಾಜ್ಯ - ಕೇಂದ್ರ ಸರ್ಕಾರಗಳು ಈ ಬಗ್ಗೆ ಮೌನ ವಹಿಸಿದ್ದವು. 

ಅಂತಿಮವಾಗಿ ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಯ ನೇತೃತ್ವದಲ್ಲಿ ಅನುಷ್ಠಾನಗೊಳ್ಳಲು ಆರಂಭಿಸಿದ್ದ ಕರಾವಳಿ ಕರ್ನಾಟಕದ ಕುಡ್ಸೆಂಪ್ ಯೋಜನೆಗಳು ೨೦೦೪ ರಲ್ಲಿ ಪರಿಪೂರ್ಣಗೊಳ್ಳಬೇಕಿತ್ತಾದರೂ, ಕೆಲ ನಗರಗಳಲ್ಲಿ ಇಂದಿಗೂ ಪರಿಪೂರ್ಣಗೊಂಡಿಲ್ಲ!. ಆದರೆ ರಾಜ್ಯ ಸರ್ಕಾರದ ಕಡತಗಳಲ್ಲಿ ಈ ಯೋಜನೆಯು ಅನುಷ್ಠಾನಗೊಂಡಿದ್ದು, ಫಲಾನುಭವಿ ಸ್ಥಳೀಯ ಸಂಸ್ಥೆಗಳು ತಾವು ಪಡೆದಿದ್ದ ಸಾಲದ ಮೊತ್ತದ ಕಂತು ಮತ್ತು ಬಡ್ಡಿಗಳ ಮರುಪಾವತಿಯನ್ನು ಆರಂಭಿಸಬೇಕಿತ್ತು.

ಬಡ್ಡಿಯ ದರದಲ್ಲಿ ಕಡಿತ 

ತನ್ಮಧ್ಯೆ ದುಬಾರಿ ಬಡ್ಡಿ ದರದ ಹೊರೆಯೊಂದಿಗೆ ಸಾಲದ ಕಂತುಗಳನ್ನು ಮರುಪಾವತಿಸುವುದು ಸ್ಥಳೀಯ ಸಂಸ್ಥೆಗಳಿಗೆ ಅಸಾಧ್ಯವೆನಿಸಲಿದೆ ಎನ್ನುವ ವಿಚಾರವನ್ನು ಸ್ವಯಂ ಸೇವಾ ಸಂಘಟನೆಗಳ ನಿರಂತರ ಆಂದೋಲನ ಹಾಗೂ ಪ್ರಚಾರಗಳಿಂದ ಅರಿತ ರಾಜ್ಯ ಸರ್ಕಾರವು, ಸದ್ದಿಲ್ಲದೇ ಬಡ್ಡಿ ದರವನ್ನು ೮.೫ ಕ್ಕೆ ಇಳಿಸಿತ್ತು!. ತದನಂತರ ಸ್ಥಳೀಯ ಸಂಸ್ಥೆಗಳು ವಾರ್ಷಿಕ ಕನಿಷ್ಠ ಶೇ.೭೫ ರಷ್ಟು ಸ್ವಯಂ ಘೋಷಿತ ಆಸ್ತಿತೆರಿಗೆಯನ್ನು ಸಂಗ್ರಹಿಸಿದಲ್ಲಿ ಶೇ.೧, ತಮ್ಮ ಲೆಕ್ಕಪತ್ರಗಳ ನಿರ್ವಹಣೆಯಲ್ಲಿ ಸಮರ್ಪಕ ಬದಲಾವಣೆಗಳೊಂದಿಗೆ ಕಂಪ್ಯೂಟರೀಕರಣಗೊಳಿಸಿದಲ್ಲಿ ಮತ್ತೆ ಶೇ.೧ ಮತ್ತು ಕುಡಿಯುವ ನೀರಿನ ಶುಲ್ಕವನ್ನು ಪರಿಷ್ಕರಿಸಿ ದ್ವಿಗುಣಗೊಳಿಸಿದಲ್ಲಿ ಮತ್ತೆ ಶೇ.೧ ರಷ್ಟು ಎಂದು ಒಟ್ಟು ಶೇ.೩ ರಷ್ಟು ಬಡ್ಡಿಯನ್ನು ಮತ್ತೆ ಕಡಿತ ಮಾಡುವ ಆಮಿಷವನ್ನು ಒಡ್ಡಿತ್ತು. ಇದನ್ನು ಅಕ್ಷರಶಃ ಪಾಲಿಸಲಿರುವ ಸ್ಥಳೀಯ ಸಂಸ್ಥೆಗಳು ತಾವು ಪಡೆದಿದ್ದ ಸಾಲದ ಮೊತ್ತದ ಮೇಲೆ ನೀಡಬೇಕಾಗಿದ್ದ ಬಡ್ಡಿಯ ದರವು ಶೇ.೧೩.೫ ರಿಂದ ಶೇ.೫.೫ ಕ್ಕೆ ಇಳಿಯಲಿತ್ತು. 

ಸಾಲ- ಬಡ್ಡಿ ಮರುಪಾವತಿಸಿಲ್ಲ 

ರಾಜ್ಯ ಸರ್ಕಾರವು ಎ.ಡಿ.ಬಿ ಸಾಲದ ಮೇಲಿನ ಬಡ್ಡಿಯ ದರವನ್ನು ಕೇವಲ ಶೇ. ೫.೫ ಕ್ಕೆ ಇಳಿಸಿದ್ದರೂ, ಕರಾವಳಿ ಕರ್ನಾಟಕದ ೧೦ ನಗರ ಪಟ್ಟಣಗಳು ತಮ್ಮ ಸಾಲ ಮತ್ತು ಬಡ್ಡಿಯ ಕಂತುಗಳನ್ನು ಇಂದಿನ ತನಕ ತನಕ ಮರುಪಾವತಿಸಿಲ್ಲ. ಈ ಬಗ್ಗೆ ನಿಜಸ್ಥಿತಿಯನ್ನು ಅರಿತುಕೊಳ್ಳಲು ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಗೆ ಮಾಹಿತಿ ಹಕ್ಕು ಕಾಯಿದೆಯಂತೆ ೧೫-೧೦-೨೦೧೪ ರಂದು ಬಳಕೆದಾರರ ವೇದಿಕೆಯ ವತಿಯಿಂದ ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಗೆ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ೧೨-೧೧-೨೦೧೪ ರಂದು ದೊರೆತ ಮಾಹಿತಿಯಂತೆ, ಕರಾವಳಿ ಕರ್ನಾಟಕದ ೧೦ ನಗರ- ಪಟ್ಟಣಗಳಲ್ಲಿ ಕುಂದಾಪುರ ಸ್ಥಳೀಯ ಸಂಸ್ಥೆಯು ೨.೭೫ ಕೋಟಿ ರೂ.ಗಳನ್ನು ಮರುಪಾವತಿಸಿದ್ದು, ಇದನ್ನು ಬಡ್ಡಿಯ ಮೊತ್ತಕ್ಕೆ ಸರಿ ಹೊಂದಿಸಲಾಗಿದೆ. ಅರ್ಥಾತ್ ಇತರ ಒಂಬತ್ತು ಸ್ಥಳೀಯ ಸಂಸ್ಥೆಗಳು ಇಂದಿನ ತನಕ ಸಾಲ ಅಥವಾ ಬಡ್ಡಿಯ ಒಂದೇ ಒಂದು ಕಂತನ್ನು ಮರುಪಾವತಿಸಿಲ್ಲ ಎನ್ನುವ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳು ನೀಡಿದ್ದಾರೆ. 

ನಿಗದಿತ ಸಮಯದಲ್ಲಿ- ಅವಧಿಯಲ್ಲಿ ಸಾಲ- ಬಡ್ಡಿಯನ್ನು ಮರುಪಾವತಿಸದ ಸ್ಥಳೀಯ ಸಂಸ್ಥೆಗಳ ವಿರುದ್ಧ ಸರ್ಕಾರ ಅಥವಾ ಕೆ.ಯು.ಐ.ಡಿ.ಎಫ್.ಸಿ ಕೈಗೊಂಡಿರುವ ಕಾನೂನು ಕ್ರಮಗಳ ಬಗ್ಗೆ ಮಾಹಿತಿಯನ್ನು ಕೇಳಿದ್ದು, ನಮಗೆ ದೊರೆತಿದ್ದ ಮಾಹಿತಿ ಇಂತಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಪ್ರಸ್ತುತ ಸಾಲ ಮತ್ತು ಬಡ್ಡಿಗಳ ವಿವರ ಮತ್ತು ಹಿಂದಿನ ಕಂತಿನವರೆಗಿನ ಅಸಲು ಮತ್ತು ಬಡ್ಡಿಗಳ ಬಾಕಿಯ ವಿವರಗಳನ್ನು ಡಿಮಾಂಡ್ ನೋಟೀಸಿನಲ್ಲಿ ಪ್ರತಿ ೬ ತಿಂಗಳಿಗೊಮ್ಮೆ ಕಳುಹಿಸಲಾಗುತ್ತದೆ. ಜೊತೆಗೆ ಈ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ವರ್ಷಂಪ್ರತಿ ನೀಡುವ ವಿವಿಧ ಅನುದಾನದ ಮೊತ್ತದಲ್ಲಿ, ಇವುಗಳು ಮರುಪಾವತಿಸಬೇಕಾದ ಮೊತ್ತವನ್ನು ಕಡಿತಗೊಳಿಸಿ ಕೆ.ಯು.ಐ.ಡಿ.ಎಫ್.ಸಿ ಸಂಸ್ಥೆಗೆ ಕಳುಹಿಸುವಂತೆ ಕ್ರಮಕೈಗೊಳ್ಳಲು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರವನ್ನು ಬರೆಯಲಾಗಿದೆ ಎನ್ನುವ ಮಾಹಿತಿಯನ್ನೂ ಸಂಬಂಧಿತ ಅಧಿಕಾರಿಗಳು ನೀಡಿರುತ್ತಾರೆ. ಆದರೆ ಈ ಪ್ರಯತ್ನಗಳು ಇಂದಿನ ತನಕ ಅಪೇಕ್ಷಿತ ಪರಿಣಾಮವನ್ನು ನೀಡಿಲ್ಲ. ಅರ್ಥಾತ್, ತಾನು ನೀಡಿದ್ದ ಸಾಲವನ್ನು ಬಡ್ಡಿ ಸಹಿತ ವಸೂಲು ಮಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನಲು ಅಡ್ಡಿಯಿಲ್ಲ. 

ಇದಲ್ಲದೇ ೧೦೫೬ ಕೋಟಿ ರೂ.ಗಳ ಯೋಜನೆಗೆ ಇದುವರೆಗೆ ಕೇವಲ ೧೦೦೧ ಕೋಟಿ ರೂ.ಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಸಾಲದ ಮೊತ್ತ ೪೬೨.೯೩ ಕೋಟಿ ಮತ್ತು ಅನುದಾನದ ಮೊತ್ತವು ೫೩೬.೨೯ ಕೋಟಿಗಳಾಗಿವೆ ಎನ್ನುವ ಮಾಹಿತಿಯೂ ಇದೇ ಸಂದರ್ಭದಲ್ಲಿ ಲಭ್ಯವಾಗಿದೆ. 

ಅದೇನೇ ಇರಲಿ, ಕುಡ್ಸೆಂಪ್ ಯೋಜನೆಗಳ ಅನುಷ್ಠಾನಕ್ಕೆ ಮುನ್ನ ನಡೆಸಿದ್ದ ಸಮೀಕ್ಷೆಯೊಂದರಲ್ಲಿ, ಈ ಯೋಜನೆಗೆ ಆಯ್ಕೆಯಾಗಿದ್ದ ೧೦ ಫಲಾನುಭವಿ ಸ್ಥಳೀಯ ಸಂಸ್ಥೆಗಳಲ್ಲಿ ಮೂರು ಸಂಸ್ಥೆಗಳು ತಾವು ಪಡೆದುಕೊಳ್ಳಲಿರುವ ಸಾಲದ ಮೊತ್ತ ಮತ್ತು ಇದರ ಮೇಲಿನ ಬಡ್ಡಿಗಳನ್ನು ಮರುಪಾವತಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ವರದಿಯಾಗಿತ್ತು. ಆದರೆ ಇದೀಗ ಕುಂದಾಪುರವನ್ನು ಹೊರತುಪಡಿಸಿ ಇತರ ಒಂಬತ್ತು ಸ್ಥಳೀಯ ಸಂಸ್ಥೆಗಳು ಒಂದೇ ಒಂದು ಕಂತನ್ನೂ ಮರುಪಾವತಿಸದೇ ಇರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ. ಅಂತೆಯೇ ರಾಜ್ಯ ಸರ್ಕಾರದ ಬೇಜವಾಬ್ದಾರಿಯನ್ನು ಸಾಬೀತುಪಡಿಸುತ್ತದೆ. 

ಕೊನೆಯ ಮಾತು 

ಪುತ್ತೂರು ಪುರಸಭೆಯೂ ಈ ಯೋಜನೆಯ ಫಲಾನುಭಾವಿಯಾಗಿದ್ದು, ಎ.ಡಿ.ಬಿ ಸಾಲದ ಅಸಲು ಮತ್ತು ಬಡ್ಡಿಗಳನ್ನು ಮರುಪಾವತಿಸಿಲ್ಲ. ಆದರೆ ಕೆಲವೇ ತಿಂಗಳುಗಳ ಹಿಂದೆ ಪುತ್ತೂರು ಪುರಸಭೆಗೆ ೯೦ ಕೋಟಿ ರೂ.ಗಳ ಅನುದಾನವನ್ನು ನಗರಾಭಿವೃದ್ಧಿ ಸಚಿವರು ಘೋಷಿಸಿದ್ದು, ಇದರಲ್ಲಿ ಒಳಚರಂಡಿ ಯೋಜನೆಗಾಗಿ ೭೫ ಕೋಟಿ ಮತ್ತು ಕುಡಿಯುವ ನೀರಿನ ಪೂರೈಕೆಯ ಯೋಜನೆಗಾಗಿ ೧೫ ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದೆಂದು ಘೋಷಿಸಲಾಗಿತ್ತು. 

ಈ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಕಲೆಹಾಕಿದಾಗ, ಇದು ಎ.ಡಿ.ಬಿ ಸಾಲ ಆಧಾರಿತ ಯೋಜನೆಯೇ ಹೊರತು ಅನುದಾನವಲ್ಲ ಎಂದು ತಿಳಿದುಬಂದಿತ್ತು!. ಹಿಂದಿನ ಎ.ಡಿ.ಬಿ ಸಾಲವನ್ನೇ ಮರುಪಾವತಿಸದ ಸ್ಥಳೀಯ ಸಂಸ್ಥೆಗೆ ಮತ್ತೆ ಹೊಸ ಸಾಲವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿರುವುದು ಏಕೆಂದು ನಮಗೂ ಅರ್ಥವಾಗುತ್ತಿಲ್ಲ. ವಿಶೇಷವೆಂದರೆ ಹಿಂದಿನ ಎ.ಡಿ.ಬಿ ಯೋಜನೆಯ ಅನುಷ್ಠಾನಕ್ಕೆ ಮುನ್ನ  ಪುತ್ತೂರಿನಲ್ಲಿ ಒಳಚರಂಡಿ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ನಡೆಸಿದ್ದ ಅಧ್ಯಯನದ ವರದಿಯಂತೆ, ಇಲ್ಲಿ ಒಳಚರಂಡಿ ಯೋಜನೆಯನ್ನು ಜಾರಿಗೊಳಿಸುವುದು ಸೂಕ್ತವಲ್ಲ ಎಂದು ತಿಳಿದುಬಂದಿತ್ತು. ನಿಜ ಸ್ಥಿತಿ ಹೀಗಿದ್ದಲ್ಲಿ ಇದೀಗ ಒಳಚರಂಡಿ ಯೋಜನೆಯನ್ನು ಅನುಷ್ಠಾನಗೊಳಿಸುವುದಾದರೂ ಹೇಗೆ ಮತ್ತು ಏಕೆ?, ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡುವವರು ಯಾರೆಂದು ನಮಗೂ ತಿಳಿದಿಲ್ಲ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು  

ಚಿತ್ರ- ಎ ಡಿ ಬಿ ಯೋಜನೆಯಲ್ಲಿ ನಿರ್ಮಿಸಿದ್ದ ಕಿಂಡಿ ಆಣೆಕಟ್ಟು 


Tuesday, November 11, 2014

NOV.14- WORLD DIABETES DAY




ನ.೧೪ - ವಿಶ್ವ ಮಧುಮೇಹ ದಿನ 

ಆರೋಗ್ಯಕರ ಜೀವನ ಮತ್ತು ಮಧುಮೇಹ 

ಮಧುಮೇಹ ಎನ್ನುವ ಸುಂದರ ನಾಮಧೇಯದ ವ್ಯಾಧಿಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಕೇವಲ ಒಂದೆರಡು ದಶಕಗಳ ಹಿಂದಿನ ತನಕ, ಮಧ್ಯವಯಸ್ಸನ್ನು ಮೀರಿದವರನ್ನು ಪೀಡಿಸುತ್ತಿದ್ದ ಈ ವ್ಯಾಧಿಯು ಇದೀಗ ತಾರುಣ್ಯದಲ್ಲೇ ಪ್ರತ್ಯಕ್ಷವಾಗುವುದರೊಂದಿಗೆ, ತತ್ಸಂಬಂಧಿತ ಸಂಕೀರ್ಣ ಸಮಸ್ಯೆಗಳ ಸಂಭಾವ್ಯತೆಯೂ ಹೆಚ್ಚುತ್ತಿದೆ.ಇದಕ್ಕೆ ನಿರ್ದಿಷ್ಟ ಕಾರಣಗಳೂ ಇವೆ. ಇವುಗಳಲ್ಲಿ ಜೀವನಶೈಲಿಯ ಬದಲಾವಣೆಯಿಂದಾಗಿ ನಶಿಸುತ್ತಿರುವ ಶಾರೀರಿಕ ಚಟುವಟಿಕೆಗಳು, ಕೊಬ್ಬು, ಸಕ್ಕರೆಗಳಿಂದ ಸಮೃದ್ಧವಾಗಿರುವ ಮತ್ತು ನಿಷ್ಪ್ರಯೋಜಕ ಕ್ಯಾಲರಿಗಳಿರುವ ಆಹಾರಗಳ ಅತಿಸೇವನೆ ಮತ್ತು ಹೆಚ್ಚುತ್ತಿರುವ ಮಾನಸಿಕ ಒತ್ತಡಗಳೇ ಇದಕ್ಕೆ ಕಾರಣವೆನಿಸುತ್ತಿವೆ. ಈ ಗಂಭೀರ ವ್ಯಾಧಿಯ ಸಂಭಾವ್ಯತೆಯನ್ನು ಕಡಿಮೆ ಮಾಡುವ ಸಲುವಾಗಿ,ಇದನ್ನು ತಡೆಗಟ್ಟುವ,ಪತ್ತೆಹಚ್ಚುವ, ಚಿಕಿತ್ಸಿಸುವ ಹಾಗೂ ಇದರಿಂದ ಉದ್ಭವಿಸಬಲ್ಲ ಗಂಭೀರ ಸಮಸ್ಯೆಗಳು ಮತ್ತು ಮಾರಕತೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ, ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟವು, ಸಂಯುಕ್ತ ರಾಷ್ಟ್ರಗಳು ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ೧೭೦ ದೇಶಗಳಲ್ಲಿರುವ ಮಧುಮೇಹ ಸಂಘಟನೆಗಳ ಸಹಯೋಗದಲ್ಲಿ " ವಿಶ್ವ ಮಧುಮೇಹ ದಿನ" ವನ್ನು ಪ್ರತಿವರ್ಷ ನವೆಂಬರ್ ೧೪ ರಂದು ಆಚರಿಸುತ್ತಿದೆ. ಈ ಬಾರಿ " ಆರೋಗ್ಯಕರ ಜೀವನ ಮತ್ತು ಮಧುಮೇಹ" ಎನ್ನುವ ಘೋಷಣೆಯೊಂದಿಗೆ ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. 

ಚಾರ್ಲ್ಸ್ ಬೆಸ್ಟ್ ಎನ್ನುವ ಸಹೋದ್ಯೋಗಿಯೊಂದಿಗೆ ಸೇರಿ, ಅಸಂಖ್ಯ ಮಧುಮೇಹಿಗಳ ಪಾಲಿಗೆ ಸಾಕ್ಷಾತ್ ಸಂಜೀವಿನಿ ಎನಿಸಿದ್ದ " ಇನ್ಸುಲಿನ್ " ಔಷದವನ್ನು ೧೯೨೨ ರಲ್ಲಿ ಸಂಶೋಧಿಸಿದ್ದ ಫ್ರೆಡರಿಕ್ ಬಾಂಟಿಂಗ್ ಎನ್ನುವ ವೈದ್ಯಕೀಯ ಸಂಶೋಧಕರ  ಜನ್ಮದಿನವನ್ನು , ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ.


ಮಧುಮೇಹ ಎಂದರೇನು? 

ಮನುಷ್ಯನ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಗಳಲ್ಲಿ ಇರುವ ಬೀಟಾ ಕಣಗಳು ಸ್ವಾಭಾವಿಕವಾಗಿ ಉತ್ಪಾದಿಸುವ ಇನ್ಸುಲಿನ್ ನ ಪ್ರಮಾಣವು ಕುಂಠಿತಗೊಂಡಾಗ ಅಥವಾ ಶರೀರವು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾದಾಗ ಅಥವಾ ಇನ್ಸುಲಿನ್ ಉತ್ಪಾದನೆಯು ಸಂಪೂರ್ಣವಾಗಿ ನಶಿಸಿದಾಗ  ಮಧುಮೇಹ ವ್ಯಾಧಿ ಪ್ರತ್ಯಕ್ಷವಾಗುವುದು.ತತ್ಪರಿಣಾಮವಾಗಿ ರೋಗಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಅನಿಯಂತ್ರಿತವಾಗಿ ಹೆಚ್ಚುವುದು. 

 ಆಧುನಿಕ ಜೀವನಶೈಲಿ, ನಿರುಪಯುಕ್ತ (ಜಂಕ್ ಫುಡ್ ) ಆಹಾರಗಳ ಅತಿಸೇವನೆ, ನಿಷ್ಕ್ರಿಯತೆ, ಅಧಿಕತೂಕ, ಅತಿಬೊಜ್ಜು ಮತ್ತು ಅನುವಂಶಿಕತೆಗಳು ಇದಕ್ಕೆ ಕಾರಣವೆನಿಸುತ್ತವೆ. ಈ ವ್ಯಾಧಿಯು ನವಜಾತ ಶಿಶುಗಳಿಂದ ಆರಂಭಿಸಿ, ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದು. ವೈದ್ಯಕೀಯ ಸಂಶೋಧಕರು ಇದುವರೆಗೆ ಶಾಶ್ವತ ಪರಿಹಾರವನ್ನು ನೀಡಬಲ್ಲ ಔಷದವನ್ನು ಪತ್ತೆಹಚ್ಚಿರದ ಕಾಯಿಲೆಗಳಲ್ಲಿ ಮಧುಮೇಹವೂ ಒಂದಾಗಿದೆ.

 ಮಧುಮೇಹವನ್ನು ಸ್ಥೂಲವಾಗಿ ಇನ್ಸುಲಿನ್ ಅವಲಂಬಿತ (ಟೈಪ್-೧ )ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ(ಟೈಪ್-೨ ) ಎಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಟೈಪ್-೧, ಅದೇ ತಾನೇ ಜನಿಸಿದ ಶಿಶುವಿನಿಂದ ಆರಂಭಿಸಿ ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದು. ಆದರೆ ಟೈಪ್-೨, ಸಾಮಾನ್ಯವಾಗಿ ಮಧ್ಯವಯಸ್ಸು ಕಳೆದ ಬಳಿಕವೇ ತಲೆದೋರುವುದು. ಆದರೆ ಇತ್ತೀಚಿನ ಕೆಲವರ್ಷಗಳಿಂದ ಇದು ತಾರುಣ್ಯದಲ್ಲೇ ಉದ್ಭವಿಸುತ್ತಿರುವುದು ಕಳವಳಕ್ಕೆ ಕಾರಣವೆನಿಸಿದೆ.  ಮಧುಮೇಹ ಪೀಡಿತರು ತಮ್ಮ ಜೀವನಶೈಲಿಯಲ್ಲಿ ಅವಶ್ಯಕ ಬದಲಾವಣೆ, ಆಹಾರ ಸೇವನೆಯಲ್ಲಿ ಪಥ್ಯ, ದೈನಂದಿನ ವ್ಯಾಯಾಮ, ಶರೀರದ ತೂಕ ಹೆಚ್ಚಿದ್ದಲ್ಲಿ ಇಳಿಸಿಕೊಳ್ಳುವುದು, ಮಾನಸಿಕ ಒತ್ತಡಗಳ ನಿವಾರಣೆ ಮತ್ತು ಸೂಕ್ತ ಔಷದಗಳ ಸೇವನೆಯಿಂದ ಮಧುಮೇಹವನ್ನು ಸಮರ್ಪಕವಾಗಿ ನಿಯಂತ್ರಿಸಬಹುದು. 

ಪೂರ್ವ ಸೂಚನೆಗಳು 

ಅತಿ ಆಯಾಸ, ಅತಿ ಬಾಯಾರಿಕೆ, ಶರೀರದ ತೂಕ ಕಡಿಮೆಯಾಗುತ್ತಲೇ ಹೋಗುವುದು, ತಲೆ ತಿರುಗಿದಂತಾಗುವುದು, ಕಣ್ಣುಗಳ ದೃಷ್ಟಿ ಮಂಜಾಗುವುದು, ಪದೇಪದೇ ಮೂತ್ರ ವಿಸರ್ಜಿಸಬೇಕೆನಿಸುವುದು, ಗಾಯಗಳು ಗುಣವಾಗದೇ ಉಲ್ಬಣಿಸುವುದು, ಇತರ ವ್ಯಾಧಿಗಳು ಬಾಧಿಸಿದಾಗ ಸೂಕ್ತ ಚಿಕಿತ್ಸೆ ಪಡೆದುಕೊಂಡರೂ ಗುಣವಾಗದಿರುವುದೇ ಮುಂತಾದ ಲಕ್ಷಣಗಳು ಮಧುಮೇಹ ಪೀಡಿತರಲ್ಲಿ ಕಂಡುಬರುತ್ತವೆ. 

ತಪ್ಪು ಕಲ್ಪನೆಗಳು 

ನಮ್ಮ ಶರೀರದ ಮೇಲೆ ಆಗಿರುವ ಗಾಯಗಳು ತ್ವರಿತಗತಿಯಲ್ಲಿ ಗುಣವಾಗುತ್ತಿರುವುದರಿಂದ, ತಮಗೆ ಮಧುಮೇಹ ವ್ಯಾಧಿ ಇಲ್ಲವೆಂದು ಅನೇಕ ವಿದ್ಯಾವಂತರೂ ನಂಬಿದ್ದಾರೆ. ಅದೇ ರೀತಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆಸಿದ್ದ ರಕ್ತ ಪರೀಕ್ಷೆಯ ಸಂದರ್ಭದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ನಿಗದಿತ ಮಿತಿಯಲ್ಲಿ ಇದ್ದುದರಿಂದ, ಮುಂದೆ ತಮ್ಮನ್ನು ಮಧುಮೇಹ ಬಾಧಿಸದು ಎನ್ನುವವರೂ ಇದ್ದಾರೆ. ಆದರೆ ಇಂತಹ ನಂಬಿಕೆಗಳು ಹಾಗೂ ತಪ್ಪುಕಲ್ಪನೆಗಳು ಹುಸಿಯಾದ ಪ್ರಸಂಗಗಳು ಸಾಕಷ್ಟಿವೆ. 

ಇನ್ನು ಕೆಲವು ಮಧುಮೇಹ ರೋಗಿಗಳು ಸಕ್ಕರೆಯಿಂದ ತಯಾರಿಸಿದ ಖಾದ್ಯ-ಪೇಯಗಳನ್ನು ತ್ಯಜಿಸಿದರೂ, ಬೆಲ್ಲದಿಂದ ತಯಾರಿಸಿದ ಮತ್ತು ಜೇನುತುಪ್ಪದೊಂದಿಗೆ ಅನ್ಯ ಖಾದ್ಯಗಳನ್ನು ಧಾರಾಳವಾಗಿ ಸೇವಿಸುತ್ತಾರೆ. ಈ ವಿಚಾರವನ್ನು ಸಮರ್ಥಿಸಲು ಬೆಲ್ಲ ಮತ್ತು ಜೆನುತುಪ್ಪಗಳು ನೈಸರ್ಗಿಕ ಉತ್ಪನ್ನಗಳಾಗಿರುವುದರಿಂದ ಇವುಗಳ ಸೇವನೆ ತ್ಯಾಜ್ಯವಲ್ಲ ಎಂದು ವಾದಿಸುತ್ತಾರೆ. ಆದರೆ ಸಕ್ಕರೆ ಮತ್ತು ಬೆಲ್ಲಗಳನ್ನು ಕಬ್ಬಿನಿಂದಲೇ ತಯಾರಿಸಲಾಗುತ್ತದೆ ಮತ್ತು ಜೇನುತುಪ್ಪದಲ್ಲಿ ಸಕ್ಕರೆಯ ಅಂಶವಿದೆ ಎನ್ನುವುದನ್ನು ಅನುಕೂಲಕರವಾಗಿ ಮರೆತುಬಿಡುತ್ತಾರೆ!. 

ಹೆಚ್ಚುತ್ತಿರುವ ಮಧುಮೇಹಿಗಳು 

೧೯೭೧ ರಿಂದ ೨೦೦೦ ನೇ ಇಸವಿಯ ಅವಧಿಯಲ್ಲಿ ಜಗತ್ತಿನಲ್ಲಿರುವ ಮಧುಮೇಹಿಗಳ ಪ್ರಮಾಣವು ಶೇ. ೧.೨ ರಿಂದ ೧೨.೧ ಕ್ಕೆ ಏರಿತ್ತು. ಭಾರತವು ವಿಶ್ವದ " ಮಧುಮೇಹಿಗಳ ರಾಜಧಾನಿ " ಎಂದು ಗುರುತಿಸಲ್ಪಟ್ಟಿದೆ. ಏಕೆಂದರೆ ೨೦೦೦ ನೇ ಇಸವಿಯಲ್ಲೇ ಭಾರತದಲ್ಲಿ ೩೧.೭ ದಶಲಕ್ಷ ಮಧುಮೇಹಿಗಳಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕವೆನಿಸಿತ್ತು!. ಇದೇ ಸಂದರ್ಭದಲ್ಲಿ ಚೀನಾ ದೇಶದಲ್ಲಿ ೨೦.೮ ದಶಲಕ್ಷ ಹಾಗೂ ಅಮೇರಿಕದಲ್ಲಿ ೧೭.೭ ದಶಲಕ್ಷ ಮಧುಮೇಹಿಗಳಿದ್ದರು. ಜಾಗತಿಕ ಮಟ್ಟದಲ್ಲಿ ೨೦೦೦ ನೇ ಇಸವಿಯಲ್ಲಿ ೧೭೧ ದಶಲಕ್ಷವಿದ್ದ ಮಧುಮೇಹಿಗಳ ಸಂಖ್ಯೆಯು, ೨೦೦ ರಲ್ಲಿ ೩೬೬ ದಶಲಕ್ಷಕ್ಕೆ ಏರುವ ಸಾಧ್ಯತೆಗಳಿವೆ. ಹಾಗೂ ಈ ಸಂದರ್ಭದಲ್ಲಿ ಭಾರತದ ಮಧುಮೇಹಿಗಳ ಸಂಖ್ಯೆಯು ೭೯.೪ ದಶಲಕ್ಷ, ಚೀನಾದಲ್ಲಿ ೪೨.೩ ಮತ್ತು ಅಮೆರಿಕದಲ್ಲಿ ೩೦.೩ ದಶಲಕ್ಷವನ್ನು ತಲುಪಲಿದೆ ಎಂದು ಊಹಿಸಲಾಗಿದೆ. 

ಸಂಕೀರ್ಣ ಸಮಸ್ಯೆಗಳನ್ನು ತಡೆಗಟ್ಟಿ 

ಕೆಲವೇ ದಶಕಗಳ ಹಿಂದೆ ಸಾಂಕ್ರಾಮಿಕವಾಗಿ ಹರಡುವ ಮಾರಕ ಕಾಯಿಲೆ ಮತ್ತು ಸೋಂಕುಗಳಿಗೆ ಲಕ್ಷಾಂತರ ಜನರು ಬಲಿಯಾಗುತ್ತಿದ್ದಲ್ಲಿ, ಇಂದು ಸಾಂಕ್ರಾಮಿಕವಾಗಿ ಹರಡದ,ಆದರೆ ಅತಿಹೆಚ್ಚು ಜನರನ್ನು ಬಲಿಪಡೆಯುತ್ತಿರುವ ಮಾರಕ ಕಾಯಿಲೆಗಳಲ್ಲಿ ಮಧುಮೇಹವೂ ಒಂದಾಗಿದೆ. ದೃಷ್ಟಿನಾಶ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಮೂತ್ರಪಿಂಡಗಳ ವೈಫಲ್ಯ ಮತ್ತು ಅಂಗಾಂಗ ವಿಚ್ಛೇದನಗಳಂತಹ ಅಪಾಯಕಾರಿ ಹಾಗೂ ಸಂಕೀರ್ಣ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಈ ವ್ಯಾಧಿಯ ಸಂಭಾವ್ಯತೆಯನ್ನು ತಡೆಗಟ್ಟುವ ಸಲುವಾಗಿಯೇ ವಿಶ್ವ ಮಧುಮೇಹ ದಿನವನ್ನು ಪ್ರಪಂಚದ ೧೭೦ ರಾಷ್ಟ್ರಗಳಲ್ಲಿನ ೨೩೦ ಮಧುಮೇಹ ಸಂಘಟನೆಗಳ ಸಹಕಾರದಿಂದ ಆಚರಿಸಲಾಗುತ್ತಿದೆ. ಹಾಗೂ ಈ ಕಾಯಿಲೆಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಮೂಲಕ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸಂಯುಕ್ತ ರಾಷ್ಟ್ರಗಳು ಸಂಸ್ಥೆಗಳು ಒಂದಾಗಿ ಶ್ರಮಿಸುತ್ತಿವೆ. 

ಅಂತಿಮವಾಗಿ ಹೇಳುವುದಾದಲ್ಲಿ, ಸೂಕ್ತ ಔಷದೋಪಚಾರಗಳಿಂದ ನಿಶ್ಚಿತವಾಗಿಯೂ ನಿಯಂತ್ರಿಸಲು ಆಗುವಂತಹ ಈ ವ್ಯಾಧಿಯನ್ನು, ನಿಸ್ಸಂದೇಹವಾಗಿ ಗುಣಪಡಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡಿ ಕಾಸುಕೀಳುವ ನಕಲಿ ವೈದ್ಯರ ಮಾತಿಗೆ ಮರುಳಾಗದಿರಿ. ಅಂತೆಯೇ ನಿಮ್ಮನ್ನು ಕಾಡುವ ಮಧುಮೇಹವನ್ನು ಗುಣಪಡಿಸುವುದಾಗಿ ಅನ್ಯ ಚಿಕಿತ್ಸೆಯನ್ನು ನೀಡುವ ನಕಲಿ ವೈದ್ಯನ ಮಾತನ್ನು ನಂಬಿ, ನೀವು ಇದೀಗ ಸೇವಿಸುತ್ತಿರುವ ಆಧುನಿಕ ಪದ್ದತಿಯ ಔಷದಗಳ ಸೇವನೆಯನ್ನು ಅಥವಾ ಇನ್ಸುಲಿನ್ ಚುಚ್ಚುಮದ್ದನ್ನು ಪಡೆದುಕೊಳ್ಳುವುದನ್ನು ನಿಲ್ಲಿಸದಿರಿ. ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರ ಅಥವಾ ಅವರ ಸಲಹೆಯಂತೆ ತಜ್ಞ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವುದರೊಂದಿಗೆ, ಆರೋಗ್ಯಕರ ಜೀವನಶೈಲಿಯನ್ನು ಪರಿಪಾಲಿಸುವ ಮೂಲಕ ನಿಶ್ಚಿಂತರಾಗಿರಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 









 


Sunday, November 9, 2014

BURNING TRASH IS DANGEROUS





 
 ತ್ಯಾಜ್ಯಗಳ ಮುಕ್ತ ದಹನ : ಅನಾರೋಗ್ಯಕ್ಕೆ ಆಹ್ವಾನ 

ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳಲ್ಲಿ, ಶೇ.೪೦ ರಷ್ಟು ತ್ಯಾಜ್ಯಗಳನ್ನು ಅನಿಯಂತ್ರಿತವಾಗಿ ದಹಿಸಲಾಗುತ್ತಿದೆ. ಈ ಸಮಸ್ಯೆಗೆ ಭಾರತವೂ ಅಪವಾದವೆನಿಸಿಲ್ಲ ಎಂದು ಇತ್ತೀಚಿಗೆ ನಡೆಸಿದ್ದ ಅಧ್ಯಯನದ ವರದಿಯಿಂದ ಬಹಿರಂಗಗೊಂಡಿದೆ. ಈ ರೀತಿಯಲ್ಲಿ ದಹಿಸಲ್ಪಡುವ ತ್ಯಾಜ್ಯಗಳು ಹೊರಸೂಸುವ ಪ್ರದೂಷಕಗಳ ಪ್ರಮಾಣವು, ಪರಿಸರದಲ್ಲಿ ಬಿಡುಗಡೆಯಾಗುತ್ತಿರುವ ಮಾನವ ಜನ್ಯ ಜಾಗತಿಕ ಪ್ರದೂಷಕಗಳ ಶೇ.೨೯ ರಷ್ಟಿದೆ!. 

ಅನಿಯಂತ್ರಿತ ಹಾಗೂ ಮುಕ್ತ ತ್ಯಾಜ್ಯಗಳ ದಹನವನ್ನು ವಾಣಿಜ್ಯ ದಹನ ವ್ಯವಸ್ಥೆಯಂತೆ ( ಕಮರ್ಷಿಯಲ್ ಇನ್ಸಿನರೇಟರ್) ನಿಯಂತ್ರಿಸುವುದು ಅಸಾಧ್ಯವೆನಿಸುತ್ತದೆ. ಹಾಗೂ ಇದೇ ಕಾರಣದಿಂದಾಗಿ ಇದು ಮನುಕುಲಕ್ಕೆ ಮಾರಕವಾಗಿ ಪರಿಣಮಿಸುತ್ತದೆ.ಈ ಅಧ್ಯಯನವನ್ನು ನಡೆಸಿದ್ದ ಅಮೇರಿಕ ಮೂಲದ ನೇಶನಲ್ ಸೆಂಟರ್ ಫಾರ್ ಅಟ್ಮೋಸ್ಫೆರಿಕ್ ರಿಸರ್ಚ್ ಸಂಸ್ಥೆಯ ಹೇಳಿಕೆಯಂತೆ, ತ್ಯಾಜ್ಯಗಳ ಅನಿಯಂತ್ರಿತ ಹಾಗೂ ಮುಕ್ತ ದಹಿಸುವಿಕೆಯಿಂದ ಹೊರಸೂಸುವ ಪ್ರದೂಷಕಗಳ ಪ್ರಮಾಣವು,   ಅಭಿವೃದ್ಧಿ ಹೊಂದುತ್ತಿರುವ ಮತ್ತು ಅತ್ಯಧಿಕ ಜನಸಂಖ್ಯೆ ಇರುವ ರಾಷ್ಟ್ರಗಳಾದ ಭಾರತ, ಚೀನಾ, ಬ್ರೆಜಿಲ್, ಮೆಕ್ಸಿಕೊ, ಪಾಕಿಸ್ತಾನ ಮತ್ತು ಟರ್ಕಿ ದೇಶಗಳಲ್ಲಿ ಹೆಚ್ಚಿದೆ. ಈ ಅನಾರೋಗ್ಯಕರ ಮತ್ತು ಅಪಾಯಕಾರಿ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ತ್ಯಾಜ್ಯಗಳ ದಹನ

ನಿಮ್ಮಲ್ಲಿ ದಿನನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳಾದ ಕಾಗದ, ನಿರುಪಯುಕ್ತ ವಸ್ತುಗಳು, ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳು, ನಿಷ್ಪ್ರಯೋಜಕ ಬ್ಯಾಟರಿಗಳು, ಪೈಂಟ್, ಎಣ್ಣೆ, ವಿದ್ಯುತ್ ಬಲ್ಬ್, ಹಳೆಯ ಬಟ್ಟೆಬರೆಗಳೇ ಮುಂತಾದ ನಿರುಪಯುಕ್ತ ವಸ್ತುಗಳನ್ನು ಬೆಂಕಿ ಹಚ್ಚಿ ಸುಡುವ ಮೂಲಕ ಸುಲಭದಲ್ಲೇ ವಿಲೇವಾರಿ ಮಾಡುವ ಹವ್ಯಾಸವಿದ್ದಲ್ಲಿ, ನಿಮ್ಮ ಹಾಗೂ ನಿಮ್ಮ ಮನೆಮಂದಿಯೊಂದಿಗೆ ನೆರೆಕರೆಯ ನಿವಾಸಿಗಳ ಆರೋಗ್ಯಕ್ಕೆ ಇದು ಅಪಾಯಕಾರಿಯಾಗಿ ಪರಿಣಮಿಸುವುದೆಂದು ನಿಮಗೂ ತಿಳಿದಿರಲಾರದು. ಅದರಲ್ಲೂ ವಿಶೇಷವಾಗಿ ಹಸುಗೂಸುಗಳು, ಮಕ್ಕಳು, ವಯೋವೃದ್ಧರು ಮತ್ತು ಗರ್ಭಿಣಿಯರ ಪಾಲಿಗೆ " ಧೂಮಕೇತು " ವಿನಂತೆ ಕಾಡಬಲ್ಲ ಈ ದಹನಕ್ರಿಯೆಯಿಂದ ಉದ್ಭವಿಸುವ ಅಪಾಯಕಾರಿ ಅನಿಲಗಳು, ಅನೇಕ ವಿಧದ ಗಂಭೀರ ಮತ್ತು ಮಾರಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. 

ಈ ಧೂಮದಲ್ಲಿ ಏನಿದೆ?

ನೀವು ತ್ಯಾಜ್ಯಗಳನ್ನು ಬೆಂಕಿ ಹಚ್ಚಿ ಸುಡುವಾಗ ಫೋರ್ಮಾಲ್ ಡಿಹೈಡ್, ಹೈಡ್ರೋಜನ್ ಕ್ಲೋರೈಡ್, ಸಲ್ಫರ್ ಡೈಆಕ್ಸೈಡ್, ಡೈಆಕ್ಸಿನ್,ಮತ್ತು ಫುರಾನ್ ಇತ್ಯಾದಿ ಅಪಾಯಕಾರಿ ಅನಿಲಗಳು ಬಿಡುಗಡೆಯಾಗುತ್ತವೆ. ಇವುಗಳಲ್ಲಿ ಡೈಆಕ್ಸಿನ್ ಮತ್ತು ಫುರಾನ್ ಅನಿಲಗಳು ಕ್ಯಾನ್ಸರ್ ಕಾರಕವೆಂದು ಗುರುತಿಸಲ್ಪಟ್ಟಿವೆ.೨ ರಿಂದ ೪೦ ಮನೆಗಳಲ್ಲಿ ಮುಕ್ತವಾಗಿ ದಹಿಸುವ ತ್ಯಾಜ್ಯಗಳನ್ನು ದಹಿಸುವಾಗ ಉತ್ಪನ್ನವಾಗುವ ಡೈಆಕ್ಸಿನ್ ಮತ್ತು ಫುರಾನ್ ಗಳ ಪ್ರಮಾಣವು, ಆಧುನಿಕ ಇನ್ಸಿನರೇಟರ್ ಒಂದರಲ್ಲಿ ವೈಜ್ಞಾನಿಕ ಹಾಗೂ ಸುರಕ್ಷಿತ ವಿಧಾನಗಳಿಂದ ೨೦೦ ಟನ್ ತ್ಯಾಜ್ಯಗಳನ್ನು ದಹಿಸುವಾಗ ಉತ್ಪನ್ನವಾಗುವ ಡೈಆಕ್ಸಿನ್ ಮತ್ತು ಫುರಾನ್ ಗಳ ಪ್ರಮಾಣದಷ್ಟೇ ಆಗಿರುತ್ತವೆ!.ಏಕೆಂದರೆ ಇನ್ಸಿನರೇಟರ್ ಗಳಲ್ಲಿ ತ್ಯಾಜ್ಯಗಳನ್ನು ಗರಿಷ್ಠ ಉಷ್ಣತೆಯಲ್ಲಿ ದಹಿಸಲಾಗುತ್ತದೆ. ಆದರೆ ಮುಕ್ತವಾಗಿ ತ್ಯಾಜ್ಯಗಳನ್ನು ದಹಿಸುವಾಗ ಉಷ್ಣತೆಯ ಪ್ರಮಾಣವು ಇದಕ್ಕಿಂತಲೂ ಸಾಕಷ್ಟು ಕಡಿಮೆಯಿರುತ್ತದೆ. ಇದೇ ಕಾರಣದಿಂದಾಗಿ ಇದು ಸುತ್ತಮುತ್ತಲ ನಿವಾಸಿಗಳ ಆರೋಗ್ಯಕ್ಕೂ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

ಡೈಆಕ್ಸ್ಸಿನ್ ಮತ್ತು ಫುರಾನ್ ಅನಿಲಗಳನ್ನು ಶ್ವಾಸೋಚ್ಚ್ವಾಸದೊಂದಿಗೆ ಸೇವಿಸಿದಾಗ, ಶ್ವಾಸಕೋಶಗಳಲ್ಲಿ ಹೈಡ್ರೋಕ್ಲೋರಿಕ್ ಆಸಿಡ್ ಉತ್ಪನ್ನವಾಗುವುದು. ಈ ಆಮ್ಲದಿಂದಾಗಿ ಶ್ವಾಸನಾಳಗಳಲ್ಲಿ ಸಣ್ಣಪುಟ್ಟ ಹುಣ್ಣುಗಳು ಉದ್ಭವಿಸುವ ಸಾಧ್ಯತೆಗಳಿವೆ. ಇದಲ್ಲದೇ ಡೈಆಕ್ಸಿನ್ ಮತ್ತು ಫುರಾನ್ ಅನಿಲಗಳು ಅತ್ಯಂತ ವಿಷಕಾರಕಗಳಾಗಿದ್ದು, ಇವುಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ಸೇವಿಸಿದರೂ  ಗಂಭೀರ ವ್ಯಾಧಿಗಳಿಗೆ ಅಥವಾ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲವು. 

ಕ್ಯಾನ್ಸರ್ ಕಾರಕ 

ನಿರುಪಯುಕ್ತ ತ್ಯಾಜ್ಯಗಳನ್ನು ಮುಕ್ತವಾಗಿ ದಹಿಸುವಾಗ ಅತ್ಯಧಿಕ ಉಷ್ಣತೆಯಲ್ಲಿ ದಹನಕ್ರಿಯೆ ಜರಗದ ಕಾರಣದಿಂದಾಗಿ, ಇದರಿಂದ ಉತ್ಪನ್ನವಾಗುವ "ಸೂಕ್ಷ್ಮಾತಿಸೂಕ್ಷ್ಮ ಕಣ" ಗಳು ( ಪಾರ್ಟಿಕ್ಯುಲೇಟ್ ಮ್ಯಾಟ್ಟರ್) ಮನುಷ್ಯರ ಶ್ವಾಸದೊಂದಿಗೆ ಸೇವಿಸಲು ಸೂಕ್ತವಲ್ಲದ ಮತ್ತು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ.ಅಮೇರಿಕಾದಲ್ಲಿ ನಡೆಸಿದ್ದ ಅಧ್ಯಯನವೊಂದರ ವರದಿಯಂತೆ, ಮನುಷ್ಯರ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸುವ ಹಾಗೂ ವಾಯುಮಾಲಿನ್ಯಕ್ಕೆ ಮೂಲವೆನಿಸುವ ವಿಷಕಾರಕ ದ್ರವ್ಯಗಳಲ್ಲಿ "ಅಪರಿಪೂರ್ಣ ದಹನಕ್ರಿಯೆ" ಯಿಂದ ಉದ್ಭವಿಸುವ ದ್ರವ್ಯ- ಅನಿಲಗಳು ಕ್ಯಾನ್ಸರ್ ಕಾರಕವೆಂದು ತಿಳಿದುಬಂದಿದೆ. ಇದಲ್ಲದೇ ಈ ಸೂಕ್ಷ್ಮಾತಿಸೂಕ್ಷ್ಮ ಕಣಗಳು ಕ್ಯಾನ್ಸರ್, ದೀರ್ಘಕಾಲೀನ ಶ್ವಾಸಕೋಶಗಳ ಉರಿಯೂತಗಳಂತಹ ಸಮಸ್ಯೆಗಳೊಂದಿಗೆ, ಕಣ್ಣು, ಕಿವಿ, ಮೂಗು ಮತ್ತು ಗಂಟಲು ಮತ್ತಿತರ ಅಂಗಗಳಿಗೆ ಸಂಬಂಧಿಸಿದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ.ನಿಮ್ಮ ಶ್ವಾಸಕೋಶಗಳನ್ನು ಪ್ರವೇಶಿಸಿದ ತುಸು ದೊಡ್ಡ ಗಾತ್ರದ ಕಣಗಳನ್ನು ಕೆಮ್ಮುವಾಗ ಅಥವಾ ಶೀನುವಾಗ ಹೊರಹಾಕಬಹುದಾದರೂ, ಸಣ್ಣ ಗಾತ್ರದ ಕಣಗಳು ಶರೀರದಲ್ಲೇ ಉಳಿದುಕೊಳ್ಳುವುದರಿಂದ ಅಪಾಯಕಾರಿಯಾಗಿ ಪರಿಣಮಿಸುತ್ತವೆ. 

ಮುಕ್ತವಾಗಿ ತ್ಯಾಜ್ಯಗಳನ್ನು ಸುಡುವಾಗ ಉತ್ಪನ್ನವಾಗುವ ಅನಿಲ ಹಾಗೂ ಸೂಕ್ಷ್ಮಾತಿಸೂಕ್ಷ್ಮ ಕಣಗಳ ರೂಪದಲ್ಲಿ ಹೊರಬೀಳದ ಅಪಾಯಕಾರಿ ದ್ರವ್ಯಗಳು ಬೂದಿಯಲ್ಲಿ  ಉಳಿದುಕೊಳ್ಳುವುದರಿಂದ, ಈ ಬೂದಿಯೂ ಮನುಷ್ಯರಲ್ಲಿ ಅನಾರೋಗ್ಯಕ್ಕೆ ಕಾರಣವೆನಿಸುತ್ತದೆ. ಈ ಬೂದಿಯಿಂದಾಗಿ ಸಮೀಪದಲ್ಲಿನ ಬಾವಿ ಅಥವಾ ಅನ್ಯ ಜಲಮೂಲಗಳು ಕಲುಷಿತಗೊಳ್ಳುವುದರಿಂದ, ಈ ನೀರನ್ನು ಕುಡಿದ ಮನುಷ್ಯರಿಗೆ ಹಾಗೂ ಇವುಗಳಲ್ಲಿರುವ ಜಲಚರಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಈ ಬಗ್ಗೆ ಬರೆಯುತ್ತಾ ಹೋದಲ್ಲಿ ಹತ್ತಾರು ಪುಟಗಳಷ್ಟು ಪ್ರಮುಖ ವಿಚಾರಗಳಿವೆ. ಇವೆಲ್ಲವನ್ನೂ ಈ ಪುಟ್ಟ ಲೇಖನದಲ್ಲಿ ಬರೆಯುವುದು ಅಸಾಧ್ಯವಾಗಿರುವುದರಿಂದ, ಸಂಕ್ಷಿಪ್ತ ಮಾಹಿತಿಗಳನ್ನು ಮಾತ್ರ ನೀಡಲಾಗಿದೆ. 

ಕೊನೆಯ ಮಾತು 

ನಿಮ್ಮಲ್ಲಿ ದಿನನಿತ್ಯ ಉತ್ಪನ್ನವಾಗುವ ವೈವಿಧ್ಯಮಯ ತ್ಯಾಜ್ಯಗಳನ್ನು ಕ್ಷಣಮಾತ್ರದಲ್ಲಿ ಬೆಂಕಿ ಹಚ್ಚಿ ಸುಡಬಹುದಾದರೂ, ಇದರಿಂದ ಸಂಭವಿಸಬಲ್ಲ ಅನಾಹುತಗಳನ್ನು ತಡೆಗಟ್ಟುವುದು ಅಸಾಧ್ಯವೂ ಹೌದು. ಈ ಸಮಸ್ಯೆಯನ್ನು ಬಗೆಹರಿಸಲು ನೀವು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಸಾಧ್ಯವಿರುವಷ್ಟು ಕಡಿಮೆ ಮಾಡಿ. ಅದರಲ್ಲೂ ಪ್ಲಾಸ್ಟಿಕ್ ಕೈಚೀಲ ಮತ್ತು ಅನ್ಯ ಉತ್ಪನ್ನಗಳ ಬಳಕೆಯನ್ನೇ ನಿಲ್ಲಿಸಿ. ನಿರ್ದಿಷ್ಟ ಗುಣಮಟ್ಟದ ಸ್ವಚ್ಚ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪುನರ್ ಬಳಕೆ, ಪುನರ್ ಆವರ್ತನ ಅಥವಾ ರಸ್ತೆಗಳ ನಿರ್ಮಾಣದಲ್ಲಿ ಬಳಸಬಹುದಾದರೂ, ನಮ್ಮ ರಾಜ್ಯ ಸರ್ಕಾರವು ಈ ಬಗ್ಗೆ ಅವಶ್ಯಕ ಕಾನೂನುಗಳನ್ನೇ ರೂಪಿಸಲು ವಿಫಲವಾಗಿದೆ. ತತ್ಪರಿಣಾಮವಾಗಿ ಪ್ಲಾಸ್ಟಿಕ್ ಮತ್ತು ಅನ್ಯವಿಧದ ತ್ಯಾಜ್ಯಗಳ ಸಮಸ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. ಈ ಸಮಸ್ಯೆಯನ್ನು ನಿಯಂತ್ರಿಸದೆ ಇದ್ದಲ್ಲಿ, ಇದು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಪೀಡಿಸಲಿದೆ. ಇವೆಲ್ಲಾ ಕಾರಣಗಳಿಂದಾಗಿ ನಿಮ್ಮಲ್ಲಿ ಉತ್ಪನ್ನವಾದ ತ್ಯಾಜ್ಯಗಳನ್ನು ನಿಮ್ಮ ವಸತಿ- ವಾಣಿಜ್ಯ ಕಟ್ಟಡಗಳಿಂದ ಸಂಗ್ರಹಿಸುವ ಕಾರ್ಯಕರ್ತರಿಗೆ ತಪ್ಪದೇ ನೀಡುವ ಮೂಲಕ ನಿಮ್ಮ ಮತ್ತು ದೇಶದ ಅನ್ಯ ಪ್ರಜೆಗಳ ಆರೋಗ್ಯವನ್ನು ರಕ್ಷಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  







 


Tuesday, November 4, 2014

RTI ACT : CENTRE MAKES IT TIGHT !






 ಮಾಹಿತಿಹಕ್ಕು ಕಾಯಿದೆ: ಇನ್ನಷ್ಟು ಪ್ರಬಲವಾಗುವುದೇ ?

ಹಿನ್ನೆಲೆ 

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ಬ್ರಿಟಿಷರ ಗುಲಾಮಗಿರಿಯಿಂದ ಬಿಡುಗಡೆ ದೊರೆತಿದ್ದರೂ, ಸುಮಾರು ಆರು ದಶಕಗಳ ಕಾಲ ದೇಶದ ಪ್ರಜೆಗಳಿಗೆ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ " ಸರ್ಕಾರಿ ರಹಸ್ಯಗಳ ಅಧಿನಿಯಮ- ೧೯೨೩ " ರಂತೆ, ಸರ್ಕಾರದ ಮಾಹಿತಿಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿತ್ತು!. 

ಆದರೆ ಯು.ಪಿ.ಎ ಸರ್ಕಾರವು ತಳೆದಿದ್ದ ದಿಟ್ಟ ನಿರ್ಧಾರದ ಪರಿಣಾಮವಾಗಿ ಅಕ್ಟೋಬರ್ ೧೨,೨೦೦೫ ರಂದು ಮಾಹಿತಿ ಪಡೆಯುವ ಹಕ್ಕು ಕಾಯಿದೆ ೨೦೦೫ ಅಧಿನಿಯಮವು ಜಾರಿಗೆಬಂದಿತ್ತು. ಪ್ರಜಾಪ್ರಭುತ್ವದಲ್ಲಿ " ಪ್ರಭು " ಎನಿಸಿರುವ ಮತದಾರನಿಗೆ ಸರ್ಕಾರ ನೀಡಿದ್ದ ಅತ್ಯುತ್ತಮ ಕೊಡುಗೆ ಇದಾಗಿತ್ತು. 

ನೂತನ ಸರ್ಕಾರದ ನಿರ್ಧಾರ 

ದೇಶಾದ್ಯಂತ ಮಾಹಿತಿಹಕ್ಕು ಕಾಯಿದೆ ಜಾರಿಗೆ ಬಂದು ಒಂಬತ್ತು ವರ್ಷಗಳೇ ಸಂದಿವೆ. ಈ ಕಾಯಿದೆಯು ನೈಜ ಪ್ರಜಾಪ್ರಭುತ್ವದಲ್ಲಿ ದೇಶದ ಪ್ರಜೆಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ. ಅಂತೆಯೇ ಮಾಹಿತಿ ಪಡೆಯುವ ಹಕ್ಕನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿಗಳಿಗೆ ಸಂಬಂಧಿಸಿದ ಅನೇಕ ಹಗರಣಗಳನ್ನು ಬಯಲಿಗೆಳೆದಿದ್ದ ಕಾರ್ಯಕರ್ತರನ್ನು ದಮನಿಸುವ ಹಾಗೂ ಈ ಕಾಯಿದೆಯನ್ನೇ ದುರ್ಬಲಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದ್ದವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇತ್ತೀಚಿಗೆ ಅಧಿಕಾರದ ಗದ್ದುಗೆಯನ್ನೆರಿದ ಮೋದಿಯವರ ಸರ್ಕಾರವು, ಮಾಹಿತಿಹಕ್ಕು ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸಿದ ಪ್ರಜೆಗಳು ಅಪೇಕ್ಷಿಸುವ ಮಾಹಿತಿಗಳನ್ನು ಆಯಾ ಸಚಿವಾಲಯದ ಅಥವಾ ತತ್ಸಂಬಂಧಿತ ಸಾರ್ವಜನಿಕ ಪ್ರಾಧಿಕಾರದ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಂತೆ ಆದೇಶಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ನಿಶ್ಚಿತವಾಗಿಯೂ ಆಡಳಿತದಲ್ಲಿ ಪಾರದರ್ಶಕತೆಯನ್ನು ಇನ್ನಷ್ಟು ಹೆಚ್ಚಿಸಲಿದೆ. 

ಸರ್ವೋಚ್ಛ ನ್ಯಾಯಾಲಯದ ಸೂಚನೆ 

ವಿಶೇಷವೆಂದರೆ ಕೇಂದ್ರ ಸರ್ಕಾರದ ಆದೇಶ ಹೊರಬಿದ್ದ ಕೆಲವೇ ದಿನಗಳಲ್ಲಿ ದೇಶದ ಸರ್ವೋಚ್ಛ ನ್ಯಾಯಾಲದಲ್ಲಿ ವಕೀಲರೊಬ್ಬರು ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದಕ್ಕೆ ಸಂಬಂಧಿಸಿದಂತೆ, ಮೂವರು ನ್ಯಾಯಮೂರ್ತಿಗಳ ಪೀಠವು ಮಾಹಿತಿ ಹಕ್ಕು ಕಾಯಿದೆಗೆ ಸಂಬಂಧಿಸಿದಂತೆ ಮಹತ್ವಪೂರ್ಣ ಸಲಹೆಯೊಂದನ್ನು ನೀಡಿದೆ. ಈ ಪೀಠವು ಮಾಹಿತಿ ಹಕ್ಕು ಕಾಯಿದೆಯನ್ವಯ ಅಪೇಕ್ಷಿತ ಮಾಹಿತಿಯನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ನೀಡಲು ಸಾಧ್ಯವೇ ಎನ್ನುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿಪ್ರಾಯವನ್ನು ಕೇಳಿದೆ. ಈ ವಿಚಾರದ ಬಗ್ಗೆ ಮುಂದಿನ ಮೂರು ತಿಂಗಳುಗಳಲ್ಲಿ ತಮ್ಮ ನಿರ್ಧಾರವನ್ನು ತಿಳಿಸುವಂತೆ ಆದೇಶಿಸಿದೆ. 

ಸರ್ವೋಚ್ಛ ನ್ಯಾಯಾಲಯದ ಅನಿಸಿಕೆಯಂತೆ ಮಾಹಿತಿಹಕ್ಕು ಕಾಯಿದೆ ಜಾರಿಗೆ ಬಂದು ಒಂಬತ್ತು ವರ್ಷಗಳೇ ಕಳೆದಿದ್ದರೂ, ಈ ಕಾಯಿದೆಯನ್ವಯ ಕಡ್ಡಾಯವಾಗಿ ಜಾರಿಗೊಳಿಸಬೇಕಿದ್ದ ಅನೇಕ  ನಿಯಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವುದು, ದೇಶದ ಪ್ರಜೆಗಳಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಿಸಿದೆ.

ಅಂತರ್ಜಾಲ ತಾಣದಲ್ಲಿ ಮಾಹಿತಿ 

೨೦೦೫ ರಲ್ಲಿ ಈ ಕಾಯಿದೆ ಜಾರಿಗೊಂಡ ಬಳಿಕ ನಿರ್ದಿಷ್ಟ ಮಾಹಿತಿಗಳನ್ನು ಅಪೇಕ್ಷಿಸಿ, ನಿಗದಿತ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಿದ ನಾಗರಿಕರಿಗೆ ಅಂಚೆಯ ಮೂಲಕ ಮಾಹಿತಿಯನ್ನು ಒದಗಿಸಲಾಗುತ್ತಿತ್ತು. ಹಾಗೂ ಇದಕ್ಕಾಗಿ ನಿಗದಿತ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕಿತ್ತು. ಇದೀಗ ಕೇಂದ್ರ ಸರ್ಕಾರ ನಿರ್ಧರಿಸುವಂತೆ ಹಾಗೂ ಸರ್ವೋಚ್ಛ ನ್ಯಾಯಾಲಯವು ಅಪೇಕ್ಷಿಸುವಂತೆ, ಅಪೇಕ್ಷಿತ ಮಾಹಿತಿಗಳನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಅರ್ಥಾತ್, ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದಲ್ಲಿ ಇದೇ ಮಾಹಿತಿಯನ್ನು ಅಪೇಕ್ಷಿಸುವ ಇತರ ನಾಗರಿಕರು ಇದಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿಲ್ಲ. ತಾವು ಅಪೇಕ್ಷಿಸುವ ಮಾಹಿತಿಯು ನಿರ್ದಿಷ್ಟ ಸಚಿವಾಲಯ ಆಥವಾ ಸಾರ್ವಜನಿಕ ಪ್ರಾಧಿಕಾರದ ಅಂತರ್ಜಾಲ ತಾಣದಲ್ಲಿ ಲಭ್ಯವಿದೆಯೇ ಎಂದು ಪರಿಶೀಲಿಸಿದ ಬಳಿಕ, ಇದು ಲಭ್ಯವಿಲ್ಲದೇ ಇದ್ದಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುವುದು. ಅಕ್ಟೋಬರ್ ೩೧ ರಂದು ಜಾರಿಗೊಂಡಿದ್ದ ಈ ಆದೇಶದಿಂದಾಗಿ ಸಾರ್ವಜನಿಕ ಪ್ರಾಧಿಕಾರಗಳ ಹೊರೆಯು ಕಡಿಮೆಯಾಗುವುದರೊಂದಿಗೆ, ಸಾಕಷ್ಟು ಸಮಯ ಮತ್ತು ಹಣದ ಉಳಿತಾಯವೂ ಆಗಲಿದೆ. ಇದಕ್ಕೂ ಮಿಗಿಲಾಗಿ ತಮಗೆ ಬೇಕಿದ್ದ ಮಾಹಿತಿಯು ಅಂತರ್ಜಾಲ ತಾಣದಲ್ಲಿ ಲಭ್ಯವಿದ್ದಲ್ಲಿ, ಮಾಹಿತಿಹಕ್ಕು ಕಾಯಿದೆಯಂತೆ ಅರ್ಜಿಯನ್ನು ಸಲ್ಲಿಸಿ, ಈ ಮಾಹಿತಿಯನ್ನು ಪಡೆದುಕೊಳ್ಳಲು ೩೦ ರಿಂದ ೪೦ ದಿನಗಳ ಕಾಲ ಕಾಯಬೇಕಾದ ಹಾಗೂ ಮಾಹಿತಿ ದೊರೆಯದೇ ಇದ್ದಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ಸಲ್ಲಿಸುವ ಮತ್ತು ಈ ಪ್ರಾಧಿಕಾರದಿಂದಲೂ ಮಾಹಿತಿ ಲಭ್ಯವಾಗದಿದ್ದಲ್ಲಿ, ಮಾಹಿತಿ ಆಯೋಗಕ್ಕೆ ದೂರನ್ನು ಸಲ್ಲಿಸಬೇಕಾದ ಸಂಕಷ್ಟದಿಂದ  ಅರ್ಜಿದಾರರನ್ನು ಪಾರುಮಾಡುತ್ತದೆ. ಅದೇ ರೀತಿಯಲ್ಲಿ ಈ ಮಾಹಿತಿಗಳು ಅಂತರ್ಜಾಲ ತಾಣದಲ್ಲಿ ಪ್ರಕಟವಾಗುವುದರಿಂದ, ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಸತ್ಯಕ್ಕೆ ದೂರವಾದ, ಅಪೂರ್ಣ ಅಥವಾ ಸುಳ್ಳು ಮಾಹಿತಿಗಳನ್ನು ನೀಡುವ ಸಾಧ್ಯತೆಗಳನ್ನು ತಡೆಗಟ್ಟುತ್ತದೆ.  

ಕೇಂದ್ರ ಸರ್ಕಾರದ ಆದೇಶದಲ್ಲಿ ಮತ್ತೊಂದು ಪ್ರಮುಖ ಅಂಶವೂ ಇದೆ. ಅಂತರ್ಜಾಲ ತಾಣದಲ್ಲಿ ಎಲ್ಲಾ ಮಾಹಿತಿಗಳನ್ನು ಪ್ರಕಟಿಸಬೇಕೆಂದು ಸೂಚಿಸಿದ್ದರೂ, ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸದ ಮಾಹಿತಿಗಳನ್ನು ಪ್ರಕಟಿಸಬೇಕಾಗಿಲ್ಲ ಎಂದು ಸೂಚಿಸಲಾಗಿದೆ. ಏಕೆಂದರೆ ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸುವುದು , ಇಂತಹ ವ್ಯಕ್ತಿಗಳಿಗೆ ತೀವ್ರ ಮುಜುಗರಕ್ಕೆ ಕಾರಣವೆನಿಸುವ ಸಾಧ್ಯತೆಗಳಿರುವುದರಿಂದಾಗಿ ಈ ನಿರ್ಧಾರವನ್ನು ತಳೆಯಲಾಗಿದೆ. 

ಅರ್ಜಿದಾರರಿಗೆ ಆಪತ್ತು 

ಇವೆಲ್ಲಕ್ಕೂ ಮಿಗಿಲಾಗಿ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸುವಾಗ, ಇದರೊಂದಿಗೆ ಅರ್ಜಿದಾರರ ಹೆಸರನ್ನು ಪ್ರಕಟಿಸಲು ಸರ್ಕಾರ ನಿರ್ಧರಿಸಿರುವುದು, ನಿಸ್ಸಂದೇಹವಾಗಿಯೂ ಮಾಹಿತಿಹಕ್ಕು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವೆನಿಸಲಿದೆ. ಏಕೆಂದರೆ ದೇಶದ ಅನೇಕ ರಾಜ್ಯಗಳಲ್ಲಿ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯಲು ಅರ್ಜಿಯನ್ನು ಸಲ್ಲಿಸಿದ್ದ ಅನೇಕ ಸಕ್ರಿಯ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಾಗೂ ಇವರ ಮೇಲೆ ಹಲ್ಲೆ ನಡೆಸಿದ ಹಲವಾರು ಘಟನೆಗಳು ನಡೆದಿವೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಮಾಹಿತಿಹಕ್ಕು ಕಾರ್ಯಕರ್ತರ ಪಾಲಿಗೆ ಪ್ರಾಣಾಪಾಯಕ್ಕೆ ಕಾರಣವೆನಿಸುವ ಸಾಧ್ಯತೆಗಳಿರುವುದರಿಂದ, ದೇಶದ ನಾಗರಿಕರು ನಿರ್ಭೀತಿಯಿಂದ ತಮ್ಮ ಹಕ್ಕನ್ನು ಚಲಾಯಿಸಲು ಹಿಂಜರಿಯುವ ಸಾಧ್ಯತೆಗಳು ಉಜ್ವಲವಾಗಿವೆ. ಜೊತೆಗೆ ಈ ನಿಯಮದಿಂದಾಗಿ ಇದೀಗ ಸರ್ಕಾರವು ಜಾರಿಗೆ ತಂದಿರುವ ನೂತನ ನಿಯಮಗಳು ತಮ್ಮ ಉದ್ದೇಶವನ್ನು ಈಡೇರಿಸಲು ವಿಫಲವಾಗಲಿವೆ. ಈ ಪ್ರಮುಖ ವಿಚಾರವನ್ನು ಕೇಂದ್ರ ಸರ್ಕಾರ ಮತ್ತು ದೇಶದ ಸರ್ವೋಚ್ಛ ನ್ಯಾಯಾಲಯಗಳು ಪರಿಶೀಲನೆ ಮಾಡಿ, ಇದನ್ನು ನಿಶ್ಚಿತವಾಗಿಯೂ ರದ್ದುಪಡಿಸಬೇಕಿದೆ. ತನ್ಮೂಲಕ ಮಾಹಿತಿ ಹಕ್ಕು ಕಾಯಿದೆ ೨೦೦೫ ನ್ನು ದೇಶದ ಪ್ರಜೆಗಳು ಸಮರ್ಪಕವಾಗಿ ಬಳಸುವ ಮೂಲಕ, ಈ ಕಾಯಿದೆಯನ್ನು ಜಾರಿಗೊಳಿಸಿದ್ದ ಮೂಲ ಉದ್ದೇಶ ವಿಫಲವಾಗದಂತೆ ಹಾಗೂ ದೇಶದ ನಾಗರಿಕರಿಗೆ ಇನ್ನಷ್ಟು ಉಪಯುಕ್ತವೆನಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

 

Monday, November 3, 2014

USE PLASTIC WASTE TO BUILD NEW ROADS






 ತ್ಯಾಜ್ಯ ಪ್ಲಾಸ್ಟಿಕ್ ಬಳಸಿ : ಉತ್ತಮ ರಸ್ತೆಗಳನ್ನು ನಿರ್ಮಿಸಿ

ಕರ್ನಾಟಕ ರಾಜ್ಯ ಸರ್ಕಾರವು ವರ್ಷಂಪ್ರತಿ ರಾಜ್ಯದ ರಸ್ತೆಗಳನ್ನು ದುರಸ್ತಿಪಡಿಸಲು, ನವೀಕರಿಸಲು ಮತ್ತು ನೂತನ ರಸ್ತೆಗಳನ್ನು ನಿರ್ಮಿಸಲು ಸಹಸ್ರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಆದರೆ ಈ ರಸ್ತೆಗಳು ಮಾತ್ರ ಅಲ್ಪಾವಧಿಯಲ್ಲೇ ಅಳಿದುಹೊಗುತ್ತಿವೆ. ಶಿರಾಡಿ ಘಾಟಿಯ ರಸ್ತೆಯು ಇದಕ್ಕೊಂದು ಉತ್ತಮ ಉದಾಹರಣ ಎನಿಸುತ್ತದೆ. 

ಪ್ಲಾಸ್ಟಿಕ್ ರಸ್ತೆ! 

ನಮ್ಮ ರಾಜ್ಯದ ಪ್ರತಿಯೊಂದು ಹಳ್ಳಿಯಿಂದ ಆರಂಭಿಸಿ ರಾಜಧಾನಿಯಾದ ಬೆಂಗಳೂರಿನ ತನಕ, ಪ್ರತಿಯೊಂದು ಊರುಗಳಲ್ಲೂ ಕಣ್ಣಿಗೆ ರಾಚುವಂತೆ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ನಿಯಂತ್ರಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿವೆ. ಏಕೆಂದರೆ ಕನ್ನಡಿಗರು ಪ್ರತಿನಿತ್ಯ ಬಳಸಿ ಎಸೆಯುತ್ತಿರುವ  ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಅತಿಯಾಗಿದೆ. ಜನಸಾಮಾನ್ಯರ ಸಹಕಾರವಿಲ್ಲದೇ ಇಂತಹ ಸಮಸ್ಯೆಗಳನ್ನು ಸ್ಥಳೀಯ ಸಂಸ್ಥೆಗಳು ಪರಿಹರಿಸುವುದು ಅಸಾಧ್ಯವೆನಿಸುತ್ತದೆ. ಆದರೆ ಈ ಸಮಸ್ಯೆಯನ್ನು ನಿಶ್ಚಿತವಾಗಿ ಬಗೆಹರಿಸಬಲ್ಲ ವೈಜ್ಞಾನಿಕ ವಿಧಾನವೊಂದನ್ನು ಬೆಂಗಳೂರಿನ ಕನ್ನಡಿಗ ಅಹ್ಮದ್ ಖಾನ್ ಇವರು ಆವಿಷ್ಕರಿಸಿ ವರ್ಷಗಳೇ ಸಂದಿವೆ. " ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆದಂತೆ " ಎನಿಸುವ ಈ ವಿಧಾನವನ್ನು ಅನುಷ್ಠಾನಿಸಿದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯಗಳ ಸುರಕ್ಷಿತ ವಿಲೇವಾರಿಯೊಂದಿಗೆ, ಉತ್ತಮ ಗುಣಮಟ್ಟದ ಹಾಗೂ ಸುದೀರ್ಘಕಾಲ ಬಾಳ್ವಿಕೆ ಬರುವ ಮತ್ತು ದುಬಾರಿ ಬೆಲೆಯ ಬಿಟುಮಿನ್ ನ ವೆಚ್ಚವನ್ನು ಆಂಶಿಕವಾಗಿ ಉಳಿತಾಯಮಾಡಬಲ್ಲ ರಸ್ತೆಗಳು ಜನರಿಗೆ ಲಭ್ಯವಾಗಲಿವೆ!. 

ಸ್ವಯಂ ಸಂಶೋಧನೆ 

ಬೆಂಗಳೂರಿನ ಕೆ.ಕೆ.ಪ್ಲಾಸ್ಟಿಕ್ಸ್ ಸಂಸ್ಥೆಯು ಅನೇಕ ವರ್ಷಗಳಿಂದ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಪರಿಹರಿಸಲು ಒಂದು ಪ್ರಯೋಗಾಲಯವನ್ನು ಸ್ಥಾಪಿಸಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಕೆ ಮಾಡುವ ಬಗ್ಗೆ ಸಂಶೋಧನೆಯೊಂದನ್ನು ನಡೆಸಿತ್ತು. ಇದರ ಅಂಗವಾಗಿ ಬೆಂಗಳೂರಿನ ರಸ್ತೆಗಳಲ್ಲಿ ಉದ್ಭವಿಸಿದ್ದ ಹೊಂಡಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೆರೆಸಿ ಸಿದ್ಧಪಡಿಸಿದ ಬಿಟುಮಿನ್ ಮಿಶ್ರಣವನ್ನು ಬಳಸಿ ಮುಚ್ಚಿತ್ತು. ತಿಂಗಳುಗಳೇ ಕಳೆದರೂ ಈ ಮುಚ್ಚಿದ ಹೊಂಡಗಳು ಮತ್ತೆ ಹಾಳಾಗದೇ ಇರುವುದರಿಂದ, ಆರ್.ವಿ. ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ನೇತ್ರತ್ವದಲ್ಲಿ ಮತ್ತಷ್ಟು ಸಂಶೋಧನೆಯನ್ನು ತನ್ನದೇ ವೆಚ್ಚದಲ್ಲಿ ನಡೆಸಿತ್ತು.ತತ್ಪರಿಣಾಮವಾಗಿ ರಸ್ತೆಗಳ ಗುಣಮಟ್ಟ ಹೆಚ್ಚುವುದರೊಂದಿಗೆ, ಇವುಗಳ ಆಯುಷ್ಯವು  ಸಾಮಾನ್ಯ ರಸ್ತೆಗಳಿಗಿಂತ ಕನಿಷ್ಠ ಎರಡು ಪಟ್ಟು ಹೆಚ್ಚುವುದು ತಿಳಿದುಬಂದಿತ್ತು. 

ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಂತೆಯೇ, ಇದನ್ನು ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನಿಂದ ಪ್ರಮಾಣೀಕರಿಸುವಂತೆ ಸೂಚಿಸಲಾಗಿತ್ತು. ತದನಂತರ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ೪೦ ಕಿ.ಮೀ. ರಸ್ತೆಯನ್ನು ನೂತನ ವಿಧಾನದಿಂದ ಸಿದ್ಧಪಡಿಸಲಾಯಿತು. ಈ ಯೋಜನೆ ಯಶಸ್ವಿಯಾದಂತೆಯೇ, ಬೆಂಗಳೂರಿನಲ್ಲಿ  ೧೨೦೦ ಕಿ.ಮೀ. ಉದ್ದದ ನೂತನ ರಸ್ತೆಗಳನ್ನುಇದೇ ವಿಧಾನದಿಂದ  ನಿರ್ಮಿಸಲಾಗಿತ್ತು. 

ಕೆ.ಕೆ ಪ್ಲಾಸ್ಟಿಕ್ಸ್ ಸಂಸ್ಥೆಯು ರಸ್ತೆಗಳ ನಿರ್ಮಾಣದಲ್ಲಿ ಬಳಸಲು ನಿರ್ದಿಷ್ಟ ಗುಣಮಟ್ಟದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಖರೀದಿಸುತ್ತಿದ್ದು, ಒಂದು ಕೆ.ಜಿ. ತ್ಯಾಜ್ಯ ಪ್ಲಾಸ್ಟಿಕ್ ಗೆ ೮ ರೂ. ಹಣವನ್ನು ಪ್ರೋತ್ಸಾಹ ಧನದ ರೂಪದಲ್ಲಿ ನೀಡುತ್ತದೆ. ಇದರಿಂದಾಗಿ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗುವುದರೊಂದಿಗೆ, ಇದನ್ನು ಸಂಗ್ರಹಿಸಿದವರಿಗೆ ಒಂದಿಷ್ಟು ಆದಾಯವೂ ದೊರೆಯತ್ತದೆ. ಈ ಪ್ರಯೋಗವು ಈಗಾಗಲೇ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ಅನುಷ್ಠಾನಗೊಳ್ಳಬೇಕಿದೆ. ಈ ಸಂಶೋಧನೆಯನ್ನು ಮಾಡಿದ್ದ ಕೆ.ಕೆ.ಪ್ಲಾಸ್ಟಿಕ್ಸ್ ಸಂಸ್ಥೆಯ ಮಾಲೀಕ ಅಹ್ಮದ್ ಖಾನ್ ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಆದರೆ " ಹಿತ್ತಲ ಗಿಡ ಮದ್ದಲ್ಲ " ಎನ್ನುವ ರಾಜ್ಯ ಸರ್ಕಾರದ ಧೋರಣೆಯಿಂದಾಗಿ, ರಾಜ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಜೊತೆಗೆ ಈ ಉಪಯುಕ್ತ ಸಂಶೋಧನೆಯನ್ನು ಪರಿಣಾಮಕಾರಿಯಾಗಿ ಬಳಸದ ಕಾರಣದಿಂದಾಗಿ, ನೂತನವಾಗಿ ನಿರ್ಮಿಸಿದ ರಸ್ತೆಗಳೂ ವರ್ಷಕಳೆಯುವಷ್ಟರಲ್ಲೇ ನಿರ್ನಾಮಗೊಳ್ಳುತ್ತಿವೆ.

ಬೆಂಗಳೂರಿನ ಕೆ.ಕೆ. ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿ, ಗತ ದಶಕದಲ್ಲಿ ಇದೇ ವಿಧಾನದಿಂದ ೧೨೦೦ ಕಿ.ಮೀ ರಸ್ತೆಗಳನ್ನು ನಿರ್ಮಿಸಲು ೩೫೦೦ ಟನ್ ತ್ಯಾಜ್ಯ ಪ್ಲಾಸ್ಟಿಕ್ ಬಳಸಿದ್ದು, ಈ ರಸ್ತೆಗಳು ಇಂದಿಗೂ ಸುಸ್ಥಿತಿಯಲ್ಲಿವೆ!. ಆದರೆ ಈ ವಿಚಾರದ ಅರಿವಿದ್ದರೂ, ರಾಜ್ಯ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಗಳು ಈ ವಿಧಾನದಿಂದ ರಾಜ್ಯದ ಪ್ರತಿಯೊಂದು ರಸ್ತೆಗಳನ್ನು ದುರಸ್ತಿಪಡಿಸುವ ಹಾಗೂ ನೂತನ ರಸ್ತೆಗಳನ್ನು ನಿರ್ಮಿಸುವುದನ್ನೇ ನಿರ್ಲಕ್ಷಿಸಿರುವುದು ನಂಬಲಸಾಧ್ಯವೆನಿಸುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ರಸ್ತೆಗಳನ್ನು ನಿರ್ಮಿಸುವ ವಿಧಾನವನ್ನು ಗತ ದಶಕದಲ್ಲೇ ಅನುಷ್ಠಾನಿಸಿದ್ದಲ್ಲಿ, ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿಯೊಂದಿಗೆ, ರಾಜ್ಯದ ಅನೇಕ " ಲ್ಯಾಂಡ್ ಫೈಲ್ ಸೈಟ್ " ಗಳು ತುಂಬಿ ತುಳುಕುವುದನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿತ್ತು. ಜೊತೆಗೆ ಇಂತಹ ರಸ್ತೆಗಳು ಸುದೀರ್ಘ ಕಾಲ ಬಾಳ್ವಿಕೆ ಬರುವುದರಿಂದ, ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಹಣದ ಉಳಿತಾಯವೂ ಆಗುತ್ತಿತ್ತು. ಪ್ರಾಯಶಃ ಅಲ್ಪಾವಧಿಯಲ್ಲೇ ಅಳಿದುಹೋಗುವ ರಸ್ತೆಗಳನ್ನು ನಿರ್ಮಿಸಿದಲ್ಲಿ, ಇವುಗಳ ದುರಸ್ತಿ ಅಥವಾ ನೂತನ ರಸ್ತೆಗಳ ನಿರ್ಮಾಣದ ಕಾಮಗಾರಿಗಳಲ್ಲಿ ತಮಗೆ ದೊರೆಯುವ " ಕಮಿಷನ್ " ನ ಆಸೆಗಾಗಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ರಸ್ತೆಗಳನ್ನು ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಸಂದೇಹ ಜನಸಾಮಾನ್ಯರನ್ನು ಕಾಡುತ್ತಿರುವುದು ಸುಳ್ಳೇನಲ್ಲ. 

ಜನಾಗ್ರಹದಿಂದ ಪರಿಹಾರ 

ಪ್ರಸ್ತುತ ರಾಜ್ಯದ ಎಲ್ಲಾ ನಗರ- ಪಟ್ಟಣಗಳಲ್ಲಿನ ರಸ್ತೆಗಳು ಮಳೆಗಾಲ ಆರಂಭವಾದ ಕೆಲವೇ ವಾರಗಳಲ್ಲಿ ನಾಮಾವಶೇಷವಾಗುತ್ತಿರುವುದು ನಿಮಗೂ ತಿಳಿದಿರಲೇಬೇಕು. ಸಣ್ಣಪುಟ್ಟ ಗಾತ್ರದ ಹೊಂಡಗಳಿಂದ ಆರಂಭಿಸಿ, ಗಜಗಾತ್ರದ ಹೊಂಡಗಳಿಲ್ಲದ ರಸ್ತೆಗಳನ್ನು ಹುಡುಕುವುದು " ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ಅರಸಿದಂತೆ " ಎನಿಸುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಮಸ್ಯೆಯನ್ನು ಅಲ್ಪ ವೆಚ್ಚದಲ್ಲಿ ಬಗೆಹರಿಸಬಹುದಾದ ಪ್ಲಾಸ್ಟಿಕ್ ರಸ್ತೆಗಳನ್ನು ನಿರ್ಮಿಸಲು ಸರ್ಕಾರದ ಮೇಲೆ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರು ಒತ್ತಡವನ್ನು ಹೇರಬೇಕಾಗಿದೆ. ತನ್ಮೂಲಕ ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೇವಾರಿ ಮತ್ತು ಉತ್ತಮ ಗುಣಮಟ್ಟದ ರಸ್ತೆಗಳನ್ನು ಹೊಂದುವ ನಮ್ಮ ಹಕ್ಕನ್ನು ನಾವಿಂದು ಚಲಾಯಿಸಬೇಕಾಗಿದೆ. 

ಅಂತಿಮವಾಗಿ " ಸ್ವಚ್ಚ  ಭಾರತ ಅಭಿಯಾನ " ದ ಮಾದರಿಯಲ್ಲೇ  " ಸ್ವಚ್ಚ ಕರ್ನಾಟಕ " ಯೋಜನೆಯನ್ನು ಅನುಷ್ಠಾನಗೊಳಿಸಲು ಬಯಸಿರುವ  ರಾಜ್ಯದ ಮುಖ್ಯಮಂತ್ರಿಯವರ ಕನಸನ್ನು ನನಸಾಗಿಸಬೇಕಿದ್ದಲ್ಲಿ, ರಾಜ್ಯದ ಪ್ರತಿಯೊಂದು ರಸ್ತೆಗಳ ದುರಸ್ತಿ ಮತ್ತು ನೂತನ ರಸ್ತೆಗಳ ನಿರ್ಮಾಣದಲ್ಲಿ ಕಡ್ಡಾಯವಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸುವ ವಿಧಾನವನ್ನು ಅನುಸರಿಸಲೇಬೇಕು ಎನ್ನುವ " ಸುಗ್ರೀವಾಜ್ಞೆ " ಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು