Wednesday, December 30, 2015

VIOLATION OF TRAFFIC RULES.........


ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ನಿಯಂತ್ರಿಸುವುದೆಂತು?
ರಾಜ್ಯದ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ವರ್ಷಂಪ್ರತಿ  ಜನವರಿ ತಿಂಗಳಿನಲ್ಲಿ ಸಾರಿಗೆ ಇಲಾಖೆ ಮತ್ತು ಸಂಚಾರ ವಿಭಾಗದ ಆರಕ್ಷಕರ ಸಂಯುಕ್ತ ಆಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಚಾರ ನಿಯಮಗಳ ಪಾಲನೆ ಮತ್ತು ಸುರಕ್ಷಿತ ಜನ - ವಾಹನಗಳ ಸಂಚಾರ ಮತ್ತಿತರ ವಿಚಾರಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ದೇವರ ವರ್ಷಾವಧಿ ಜಾತ್ರೆಯಂತೆ ತಪ್ಪದೇ ಜರಗುವ ಈ ಸಪ್ತಾಹದ ಬಳಿಕ, ಜನಸಾಮಾನ್ಯರು ಹಾಗೂ ಸಾರಿಗೆ ಇಲಾಖೆ ಮತ್ತು ಸಂಚಾರ ವಿಭಾಗದ ಆರಕ್ಷಕರು ಈ ಪ್ರಮುಖ ವಿಚಾರವನ್ನೇ ಮರೆತುಬಿಡುತ್ತಾರೆ!.

ನಿಯಮಗಳ ಉಲ್ಲಂಘನೆ

ದೇಶದ ರಸ್ತೆಗಳಲ್ಲಿ ಜನ – ವಾಹನಗಳ ಸುಗಮ ಸಂಚಾರಕ್ಕಾಗಿ ಅನೇಕ ನೀತಿನಿಯಮಗಳು ಮತ್ತು ಕಾನೂನುಗಳನ್ನು ರೂಪಿಸಲಾಗಿದೆ. ಇವೆಲ್ಲವನ್ನೂ ಚಾಚೂ ತಪ್ಪದೆ ಪರಿಪಾಲಿಸಿದಲ್ಲಿ ಸಂಚಾರ ಸಮಸ್ಯೆಗಳು ಮತ್ತು ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಅಂತೆಯೇ ರಸ್ತೆ ಅಪಘಾತಗಳಿಂದ ಸಂಭವಿಸುವ ಮರಣಗಳ ಪ್ರಮಾಣವನ್ನೂ ನಿಸ್ಸಂದೇಹವಾಗಿ ನಿಯಂತ್ರಿಸಬಹುದಾಗಿದೆ. ಆದರೆ ಈ ನಿಯಮಗಳು ಮತ್ತು ಕಾನೂನುಗಳನ್ನು ಸ್ವಯಂಪ್ರೇರಿತರಾಗಿ ಪರಿಪಾಲಿಸುವ ಹವ್ಯಾಸವು ರಸ್ತೆಗಳನ್ನು ಬಳಸುವವರಲ್ಲಿ ಇಲ್ಲದಿರುವ ಕಾರಣದಿಂದಾಗಿಯೇ, ಗಂಭೀರ ಅಪಘಾತಗಳೊಂದಿಗೆ ಅಯಾಚಿತ ಸಮಸ್ಯೆಗಳು ಉದ್ಭವಿಸುತ್ತವೆ. ಜೊತೆಗೆ ಪಾದಚಾರಿಗಳೂ ಸೇರಿದಂತೆ, ಲಕ್ಷಾಂತರ ಅಮಾಯಕರ ಪ್ರಾಣಹಾನಿಗೆ ಕಾರಣವೆನಿಸುತ್ತಿದೆ.

 ಸಾಮಾನ್ಯವಾಗಿ ಸಂಚಾರ ವಿಭಾಗದ ಆರಕ್ಷಕರು  ಉಪಸ್ಥಿತರಿರುವ ಸ್ಥಳಗಳಲ್ಲಿ ಅಧಿಕತಮ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ತಪ್ಪದೇ ಪರಿಪಾಲಿಸುವುದನ್ನು ನೀವೂ ಕಂಡಿರಲೇಬೇಕು. ಆದರೆ ಆರಕ್ಷಕರು ಹಾಜರಿಲ್ಲದ  ಸ್ಥಳಗಳಲ್ಲಿ ಅಥವಾ ಇವರ ಅನುಪಸ್ಥಿತಿಯಲ್ಲಿ, ಅನೇಕ ಚಾಲಕರು ಸಂಚಾರ ನಿಯಮಗಳನ್ನು ರಾಜಾರೋಷವಾಗಿ ಉಲ್ಲಂಘಿಸಲು ಹಿಂಜರಿಯುವುದಿಲ್ಲ!.

ಸಾಮಾನ್ಯವಾಗಿ ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ವಾಹನ ಚಾಲಕರು ವಾಹನ ಚಾಲನಾ ಪರವಾನಿಗೆ ಇಲ್ಲದಿದ್ದರೂ ವಾಹನ ಚಲಾಯಿಸುವುದು, ಅತಿವೇಗದ ಚಾಲನೆ, ಹೆಲ್ಮೆಟ್  - ಸೀಟ್ ಬೆಲ್ಟ್ ಧರಿಸದಿರುವುದು, ಪ್ರವೇಶ ನಿಷೇಧಿಸಿರುವ ರಸ್ತೆಗಳಲ್ಲಿ ವಾಹನ ಚಲಾಯಿಸುವುದು, ದ್ವಿಚಕ್ರ ವಾಹನಗಳಲ್ಲಿ  ತ್ರಿಮೂರ್ತಿಗಳು ಸಂಚರಿಸುವುದು,ಮೊಬೈಲ್ ದೂರವಾಣಿಯಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು, ಅಮಲು ಪದಾರ್ಥ – ಮದ್ಯ ಸೇವಿಸಿ ವಾಹನ ಚಲಾಯಿಸುವುದೇ ಮುಂತಾದ ಅಪಾಯಕಾರಿ ಹವ್ಯಾಸಗಳು ಪ್ರಮುಖವಾಗಿವೆ. ಇಂತಹ ಕೆಟ್ಟ ಹವ್ಯಾಸವು ಸ್ವಯಂ ಚಾಲಕರಿಗೆ ಮಾತ್ರವಲ್ಲ, ಅನ್ಯ ವಾಹನಗಳು – ಚಾಲಕರಿಗೆ ಮತ್ತು ರಸ್ತೆಯನ್ನು ಬಳಸುವ ಪಾದಚಾರಿಗಳು ಮತ್ತಿತರರ ಪ್ರಾಣಕ್ಕೆ ಎರವಾಗುವ ಸಾಧ್ಯತೆಗಳಿವೆ.

ಸಾರಿಗೆ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಮೇಲೆ ನಮೂದಿಸಿದ ಕೆಲ ಹವ್ಯಾಸಗಳೊಂದಿಗೆ ವಾಹನಗಳ ಜೀವಿತಾವಧಿ ತೆರಿಗೆಯನ್ನು ಪಾವತಿಸದಿರುವುದು, ನೂತನ ವಾಹನಗಳನ್ನು ನೋಂದಣಿ ಮಾಡಿಸದೇ ರಸ್ತೆಯಲ್ಲಿ ಓಡಿಸುವುದು, ನೆರೆಯ ರಾಜ್ಯಗಳಲ್ಲಿ ನೋಂದಣಿ ಮಾಡಿರುವ ವಾಹನಗಳನ್ನು ರಾಜ್ಯದಲ್ಲಿ ನೋಂದಣಿ ಮಾಡಿಸದೇ ಬಳಸುವುದು, ನಿಗದಿತ ಪ್ರಮಾಣಕ್ಕಿಂತ ಅಧಿಕ ಸರಕುಗಳನ್ನು ಅಥವಾ ಪ್ರಯಾಣಿಕರನ್ನು ಹೇರುವುದು, ಸರಕು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸುವುದು, ಸುಸ್ಥಿತಿಯಲ್ಲಿಲ್ಲದ ವಾಹನಗಳನ್ನು ಬಳಸುವುದು, ಲಾರಿಗಳ ಗಾತ್ರಕ್ಕಿಂತ ಉದ್ದದ ಅಥವಾ ಹೊರ ಚಾಚುವ ಸರಕುಗಳನ್ನು ಸಾಗಿಸುವುದು, ಬಸ್ಸುಗಳ ಮೇಲೆ ಅತಿಯಾದ ಪ್ರಮಾಣದಲ್ಲಿ ಸರಕುಗಳನ್ನು ತುಂಬಿಸಿ ಸಾಗಿಸುವುದೇ ಮುಂತಾದ ನಿಯಮಗಳ ಉಲ್ಲಂಘನೆಗಳ ಪ್ರಕರಣಗಳು ಪ್ರಮುಖವಾಗಿವೆ. ತತ್ಪರಿಣಾಮವಾಗಿ ಅನಿರೀಕ್ಷಿತ ಅಪಘಾತ ಸಂಭವಿಸಿದಲ್ಲಿ, ಸಾವುನೋವಿನ ಪ್ರಮಾಣಗಳು ಸ್ವಾಭಾವಿಕವಾಗಿಯೇ ತುಸು ಅಧಿಕವಾಗಿರುತ್ತವೆ.

ತಪಾಸಣೆ – ದಂಡ  
                                                                                                               
ಪ್ರಾದೇಶಿಕ ಸಾರಿಗೆ ಕಚೇರಿ ಅಥವಾ ಸಂಚಾರ ವಿಭಾಗದ ಆರಕ್ಷಕ ಠಾಣೆಗಳಿರುವ ನಗರ – ಪಟ್ಟಣಗಳಲ್ಲಿ, ಇವೆರಡೂ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬಂದಿಗಳು ನಿಯಮಿತವಾಗಿ ವಾಹನಗಳ ತಪಾಸಣೆಯನ್ನು ಮಾಡಿ ತಪ್ಪಿತಸ್ಥರಿಗೆ ದಂಡವನ್ನು ವಿಧಿಸುತ್ತಿದ್ದಲ್ಲಿ, ಸಾರಿಗೆ ಮತ್ತು ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಮಾಣವು ತುಸು ಕಡಿಮೆ ಇರುತ್ತದೆ. ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಒಂದಿಷ್ಟು ಹೆಚ್ಚುವರಿ ಆದಾಯ ಲಭ್ಯವಾಗುತ್ತದೆ. ಅರ್ಥಾತ್ ಒಂದೇ ಕಲ್ಲಿನಿಂದ  ಎರಡು ಹಕ್ಕಿಗಳನ್ನು ಹೊಡೆದಂತಾಗುತ್ತದೆ!.

ಉದಾಹರಣೆಗೆ ಇತ್ತೀಚಿಗೆ  ಬೆಂಗಳೂರು ನಗರದಲ್ಲಿ  ಸಾರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ್ದ ತಪಾಸಣೆಯ ಸಂದರ್ಭದಲ್ಲಿ ಸಾರಿಗೆ ನಿಯಮ – ಕಾನೂನುಗಳನ್ನು ಉಲ್ಲಂಘಿಸಿದ್ದ ವಾಹನಗಳ ಚಾಲಕರಿಂದ ೪೦ ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಿದ್ದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದೇ ರೀತಿಯಲ್ಲಿ ಕೆಲವೇ ತಿಂಗಳುಗಳ ಹಿಂದೆ ಸಂಚಾರ ವಿಭಾಗದ ಆರಕ್ಷಕರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಹಲವಾರು ಲಕ್ಷ ರೂಪಾಯಿಗಳ ದಂಡವನ್ನು ವಸೂಲು ಮಾಡಿದ ಸುದ್ದಿಯೂ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇವೆರಡೂ ಇಲಾಖೆಗಳು ನಿಯಮಿತವಾಗಿ ಇಂತಹ ಕಾರ್ಯಾಚರಣೆಯನ್ನು ನಡೆಸುತ್ತಿದ್ದಲ್ಲಿ, ಸಂಚಾರ - ಸಾರಿಗೆ ನಿಯಮಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸುವವರ ಸಂಖ್ಯೆ ನಿಶ್ಚಿತವಾಗಿಯೂ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

ಕೊನೆಯ ಮಾತು

ಡಿಸೆಂಬರ್  ಮೂರನೆಯ ವಾರದಲ್ಲಿ ಸಾರಿಗೆ ಮಂಗಳೂರಿನಲ್ಲಿ ಇಲಾಖೆಯವರು ನಡೆಸಿದ್ದ ಕಾರ್ಯಾಚರಣೆಯಲ್ಲಿ ಮೋಟಾರು ವಾಹನಗಳ ಅಧಿನಿಯಮಗಳನ್ನು ಉಲ್ಲಂಘಿಸಿದ್ದ ಕಾಂಟ್ರಾಕ್ಟ್ ಕ್ಯಾರಿಯೇಜ್  ಬಸ್ಸುಗಳ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಂಡಿದ್ದರು. ಇಲಾಖೆಯ ಅಧಿಕಾರಿಗಳೇ ಹೇಳಿದಂತೆ ಸಿ.ಸಿ ಬಸ್ಸುಗಳು ಸ್ಟೇಜ್ ಕ್ಯಾರಿಯರ್ಸ್ ಗಳಂತೆ ಟಿಕೆಟ್ ನೀಡಿ ಪ್ರಯಾಣಿಕರನ್ನು ಕೊಂಡೊಯ್ಯುವುದು ಕಾನೂನುಬಾಹಿರವಾಗಿದೆ. ಹಾಗೂ ಇದೇ ಕಾರಣದಿಂದಾಗಿ ಆರು ಸಿ.ಸಿ ಬಸ್ಸುಗಳ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವೆಂದರೆ ದ.ಕ ಜಿಲ್ಲೆಯಲ್ಲಿ ಸಿ.ಸಿ ಬಸ್ಸುಗಳು ಸ್ಟೇಜ್ ಕ್ಯಾರಿಯರ್ ನಂತೆ ಪ್ರಯಾಣಿಕರನ್ನು ಕೊಂಡೊಯ್ಯುವುದು  ಅನೇಕ ವರ್ಷಗಳಿಂದ ಅಡೆತಡೆಯಿಲ್ಲದೆ ( ಇಂದಿಗೂ ) ನಡೆಯುತ್ತಿದೆ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Monday, December 21, 2015

SOLID WASTE MANAGEMENT - DO IT PROPERLY


                     ವೈಜ್ಞಾನಿಕ ತಾಜ್ಯವಿಲೇವಾರಿ : ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ

ರಾಜ್ಯದ ಬಹುತೇಕ ನಗರ – ಮಹಾನಗರಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಆದರೆ ಆಧುನಿಕ ಮತ್ತು ವೈಜ್ಞಾನಿಕ ವಿಧಾನಗಳಿಂದ ತ್ಯಾಜ್ಯಗಳನ್ನು ವಿಲೇವಾರಿ ಮಾಡಬಲ್ಲ ವ್ಯವಸ್ಥೆಗಳಿರುವ ನಗರ – ಮಹಾನಗರಗಳೂ ಇದನ್ನು ಕ್ರಮಬದ್ಧವಾಗಿ ನಡೆಸಲು ವಿಫಲವಾಗಿವೆ. ಈ ಅನಾರೋಗ್ಯಕರ ಮತ್ತು ಅಪಾಯಕಾರಿ ಸಮಸ್ಯೆಗೆ ಕೇವಲ ಸ್ಥಳೀಯ ಸಂಸ್ಥೆಗಳು ಮಾತ್ರವಲ್ಲ, ಸ್ಥಳೀಯ ನಿವಾಸಿಗಳ ಅಸಹಕಾರವೂ ಪ್ರಮುಖ ಕಾರಣವೆನಿಸಿದೆ. ಕರ್ನಾಟಕ ಮುನಿಸಿಪಲ್ ಕಾಯಿದೆಯಂತೆ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಲ್ಲೇ ( ವಸತಿ ಮತ್ತು ವಾಣಿಜ್ಯ ಕಟ್ಟಡಗಳಿಂದ ) ಈ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ನಿಯೋಜಿತ ಸಂಗ್ರಾಹಕರಿಗೆ ನೀಡಬೇಕಿದ್ದು, ಇದಕ್ಕಾಗಿ ನಿಗದಿತ ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಅಲ್ಪಮೊತ್ತದ ಶುಲ್ಕವನ್ನು ತೆರಲು ನಿರಾಕರಿಸುವ ಅನೇಕ ಜನರು, ತಮ್ಮಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿರುವುದರಿಂದಾಗಿ, ಕಣ್ಣು ಹಾಯಿಸಿದಲ್ಲೆಲ್ಲಾ ತ್ಯಾಜ್ಯಗಳ ರಾಶಿಗಳೇ ಕಾಣಸಿಗುತ್ತವೆ. ವಿಶೇಷವೆಂದರೆ ಆಧುನಿಕ ತ್ಯಾಜ್ಯ ವಿಲೇವಾರಿ ಘಟಕಗಳಿರುವ ನಗರ – ಮಹಾನಗರಗಳಲ್ಲೂ, ವೈಜ್ಞಾನಿಕ ವಿಧಾನಗಳಿಂದ ಹಾಗೂ ಸುರಕ್ಷಿತವಾಗಿ ತ್ಯಾಜ್ಯಗಳನ್ನು ವಿಲೇವಾರಿ ಮಾಡದಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ. ಇದೀಗ ರಾಜ್ಯದ ಉಚ್ಛ ನ್ಯಾಯಾಲಯವು ಬೆಂಗಳೂರು ಮಹಾನಗರ ಪಾಲಿಕೆ ಮತ್ತು “ ತ್ಯಾಜ್ಯಗಳ ಉತ್ಪಾದಕರಿಗೆ “ ( ಸ್ಥಳೀಯ ನಿವಾಸಿಗಳಿಗೆ ) ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸೂಚನೆಗಳನ್ನು ನೀಡಿದ್ದು, ಇವುಗಳನ್ನು ಸಮರ್ಪಕವಾಗಿ ಪರಿಪಾಲಿಸುವಂತೆ ಆದೇಶಿಸಿದೆ.

ಅವೈಜ್ಞಾನಿಕ ವ್ಯವಸ್ಥೆ

ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ  ದಿನನಿತ್ಯ ಉತ್ಪನ್ನವಾಗುತ್ತಿರುವ ಅಗಾಧ ಪ್ರಮಾಣದ ಹಾಗೂ ವೈವಿಧ್ಯಮಯ ಘನತ್ಯಾಜ್ಯಗಳನ್ನು ಕ್ರಮಬದ್ಧವಾಗಿ ಸಂಗ್ರಹಿಸಿ,ಸುರಕ್ಷಿತವಾಗಿ ತ್ಯಾಜ್ಯವಿಲೇವಾರಿ ಘಟಕಗಳಿಗೆ ಸಾಗಿಸಿದ ಬಳಿಕ ವೈಜ್ಞಾನಿಕ ವಿಧಿವಿಧಾನಗಳಿಂದ ವಿಲೇವಾರಿ ಮಾಡಲು ಪಾಲಿಕೆಯು ದಯನೀಯವಾಗಿ ವಿಫಲಗೊಂಡಿದೆ. ಈ ವೈಫಲ್ಯಕ್ಕೆ ಸ್ಥಳೀಯ ನಿವಾಸಿಗಳ ಅಸಹಕಾರ, ಹೆಚ್ಚುತ್ತಲೇ ಇರುವ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುತ್ತಿರುವ ತ್ಯಾಜ್ಯಗಳ ಪ್ರಮಾಣ ಮತ್ತು ಅವಶ್ಯಕ ಸಂಖ್ಯೆಯ ತ್ಯಾಜ್ಯ ವಿಲೇವಾರಿ ಘಟಕಗಳ ಕೊರತೆಗಳೂ ಪರೋಕ್ಷವಾಗಿ ಕಾರಣವೆನಿಸಿದೆ. ಇದರೊಂದಿಗೆ ಈಗಾಗಲೇ ತುಂಬಿ ತುಳುಕುತ್ತಿರುವ ಹಳೆಯ ತ್ಯಾಜ್ಯ ವಿಲೇವಾರಿ ಘಟಕಗಳ ಆಸುಪಾಸಿನ ನಿವಾಸಿಗಳು, ಈ ಘಟಕಗಳಲ್ಲಿ ತ್ಯಾಜ್ಯಗಳನ್ನು ಸುರಿಯದಂತೆ ಮತ್ತು ನೂತನ ಘಟಕಗಳಿಗಾಗಿ ಆಯ್ಕೆಮಾಡಿರುವ ಸ್ಥಳಗಳ ಸಮೀಪದ ನಿವಾಸಿಗಳು ಘಟಕವನ್ನು ಆರಂಭಿಸದಂತೆ ನಡೆಸುತ್ತಿರುವ ಪ್ರತಿಭಟನೆಗಳಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತಿದೆ. ಈ ಅಪಾಯಕಾರಿ ಮತ್ತು ಅನಾರೋಗ್ಯಕರ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಕೆಲ ಸಾರ್ವಜನಿಕ ಮತ್ತು ಸ್ವಯಂ ಸೇವಾ ಸಂಘಟನೆಗಳು ರಾಜ್ಯದ ಉಚ್ಛ ನ್ಯಾಯಾಲಯದ ಮೊರೆಹೋಗಿದ್ದವು. ಇದೀಗ ನ್ಯಾಯಾಲಯವು ಈ ವಿಚಾರದಲ್ಲಿ ಮಧ್ಯಂತರ ತೀರ್ಪೊಂದನ್ನು ನೀಡಿದ್ದು, ತ್ಯಾಜ್ಯ ಸಂಗ್ರಹ, ಸಾಗಾಣಿಕೆ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಮಾರ್ಗದರ್ಶಿ ಸಲಹೆ ಸೂಚನೆಗಳನ್ನು ನೀಡಿದೆ. ನ್ಯಾಯಾಲಯದ ಈ ಆದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಲ್ಲಿ ಬೆಂಗಳೂರಿನ ನಿವಾಸಿಗಳನ್ನು ಶಾಪದೋಪಾದಿಯಲ್ಲಿ ಕಾಡುತ್ತಿರುವ ಬೃಹತ್ ಸಮಸ್ಯೆಯೊಂದು ನಿಶ್ಚಿತವಾಗಿಯೂ ಬಗೆಹರಿಯುವ ಸಾಧ್ಯತೆಗಳೂ ಇವೆ. ಆದರೆ ಇದಕ್ಕೆ ಸ್ಥಳೀಯ ನಿವಾಸಿಗಳ ಮನಸ್ಪೂರ್ವಕ ಸಹಕಾರವು ಅತ್ಯವಶ್ಯಕವೆನಿಸಲಿದೆ.

ತ್ಯಾಜ್ಯಗಳ ನಿರ್ವಹಣೆ – ವಿಲೇವಾರಿ
ಉಚ್ಛ ನ್ಯಾಯಾಲಯದ ಆದೇಶದಂತೆ ಇನ್ನುಮುಂದೆ ತ್ಯಾಜ್ಯಗಳ ಉತ್ಪಾದಕರು ಅರ್ಥಾತ್ ಬೆಂಗಳೂರಿನ ನಿವಾಸಿಗಳು ತಮ್ಮಲ್ಲಿ ಉತ್ಪನ್ನವಾಗುವ ಹಸಿ, ಒಣ ಮತ್ತು ಅಪಾಯಕಾರಿ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಇದನ್ನು ನಿಯೋಜಿತ  ತ್ಯಾಜ್ಯ ಸಂಗ್ರಹಕಾರರಿಗೆ ನೀಡಬೇಕಾಗುತ್ತದೆ. ಅಂತೆಯೇ ತುಸು ಅಧಿಕ ಪ್ರಮಾಣದ ತ್ಯಾಜ್ಯಗಳನ್ನು ಉತ್ಪಾದಿಸುವವರು, ಈ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ನೀಡುವಂತಿಲ್ಲ. ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಹಾಗೂ ಹಸಿ ತ್ಯಾಜ್ಯಗಳನ್ನು ಹಸಿರು ಬಣ್ಣದ ತೊಟ್ಟಿಯಲ್ಲಿ ಹಾಗೂ ಅಪಾಯಕಾರಿ ತ್ಯಾಜ್ಯಗಳನ್ನು ಕೆಂಪು ಬಣ್ಣದ ತೊಟ್ಟಿಗಳಲ್ಲಿ  ಮತ್ತು ಮಣ್ಣಿನಲ್ಲಿ ಕರಗಿ ಬೇರೆಯದ ಹಾಗೂ ಒಣ ತ್ಯಾಜ್ಯಗಳನ್ನು ಮರುಬಳಕೆ ಮಾಡಬಹುದಾದ ಚೀಲಗಳಲ್ಲಿ ತುಂಬಿಸಿಡುವುದು ಕಡ್ಡಾಯವೆನಿಸಲಿದೆ.

ಹಸಿರು ಬಣ್ಣದ ತೊಟ್ಟಿಗಳಲ್ಲಿ ಅಡುಗೆಮನೆಯ ತ್ಯಾಜ್ಯಗಳು, ತರಕಾರಿಗಳು,ಹಣ್ಣುಗಳ ಸಿಪ್ಪೆ, ಕೊಳೆತ ತರಕಾರಿ – ಹಣ್ಣುಗಳು, ಮೀನು, ಮಾಂಸ ಹಾಗೂ ಕೋಳಿಗಳ ಮುಳ್ಳು – ಎಲುಬುಗಳು, ಬೇಯಿಸಿದ ಮತ್ತು ಬಳಸಿ ಉಳಿದ ಆಹಾರಪದಾರ್ಥಗಳು, ಬಳಸಿರುವ ಕಾಫಿ – ಚಹಾ ಹುಡಿ ಮತ್ತಿತರ ತ್ಯಾಜ್ಯಗಳನ್ನು ಹಾಕಬೇಕಾಗುವುದು. ಅದೇ ರೀತಿಯಲ್ಲಿ ಕೆಂಪು ಬಣ್ಣದ ತೊಟ್ಟಿಯಲ್ಲಿ ಬ್ಯಾಂಡೇಜ್, ಬಳಸಿದ ಹತ್ತಿ, ಮಕ್ಕಳಿಗೆ ತೊಡಿಸಿದ ಡಯಾಪರ್ , ಮಹಿಳೆಯರು ಬಳಸಿದ ಸ್ಯಾನಿಟರಿ ಪ್ಯಾಡ್, ಹಳೆಯ ರೇಜರ್ – ಬ್ಲೇಡ್, ನಿರುಪಯುಕ್ತ ಕಬ್ಬಿಣದ ವಸ್ತುಗಳು ಹಾಗೂ ಔಷದಗಳು, ಒಡೆದ ಗಾಜಿನ ಚೂರುಗಳಂತಹ ವಸ್ತುಗಳನ್ನು ಹಾಕಬೇಕಾಗುವುದು. ಇದಲ್ಲದೇ ವಿವಿಧ ದಿನಬಳಕೆ ವಸ್ತುಗಳನ್ನು ಪ್ಯಾಕ್ ಮಾಡಿರುವ ಪ್ಲಾಸ್ಟಿಕ್ ಮತ್ತಿತರ ಹೊರಕವಚಗಳು, ಪ್ಲಾಸ್ಟಿಕ್ ಕೈಚೀಲ, ಬಾಟಲಿ,ತಟ್ಟೆ,ಲೋಟ ಹಾಗೂ ಚಮಚಗಳು,ರಟ್ಟಿನ ಪೆಟ್ಟಿಗೆಗಳು, ಅಲ್ಯುಮಿನಿಯಂ ಹಾಳೆಗಳು, ಪ್ಲಾಸ್ಟಿಕ್ ಹಾಗೂ ಅಲ್ಯುಮಿನಿಯಂ ಕರಡಿಗೆಗಳು, ರಬ್ಬರ್ ಹಾಗೂ ಹಳೆಯ ಪಾದರಕ್ಷೆಗಳು, ಕೆಟ್ಟು ಹೋದ ಸಿ ಎಫ್ ಎಲ್, ಟ್ಯೂಬ್ ಲೈಟ್ ಹಾಗೂ ಸಾಮಾನ್ಯ ಬಲ್ಬ್ ಗಳು, ಬ್ಯಾಟರಿಗಳು, ಹಳೆಯ ಪೊರಕೆ ಮತ್ತಿತರ ನಿರುಪಯುಕ್ತ ವಸ್ತುಗಳನ್ನು ಮರುಬಳಕೆ ಮಾಡಬಹುದಾದ ಚೀಲಗಳಲ್ಲಿ ಸಂಗ್ರಹಿಸಿ ಇರಿಸಬೇಕಾಗುತ್ತದೆ.
ಈ ರೀತಿಯಲ್ಲಿ ವಸತಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಪ್ರತ್ಯೇಕಿಸಿ ಇರಿಸಿರುವ ತ್ಯಾಜ್ಯಗಳನ್ನು ನಿಯೋಜಿತ ಸಂಗ್ರಹಗಾರರು ಪ್ರತಿನಿತ್ಯ ನಿಗದಿತ ಸಮಯದಲ್ಲಿ ಸಂಗ್ರಹಿಸಿದ ಬಳಿಕ,  ನೇರವಾಗಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಸಾಗಿಸಬೇಕು. ಹಾಗೂ ತ್ಯಾಜ್ಯ ಸಾಗಾಟದ ವಾಹನದಲ್ಲಿ ತುಂಬಿಸಿದ ತ್ಯಾಜ್ಯಗಳನ್ನು ಸಂಪೂರ್ಣವಾಗಿ ಮುಚ್ಚಿಯೇ ಸಾಗಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದರೊಂದಿಗೆ ಮಾರುಕಟ್ಟೆಗಳು ಮತ್ತು ಉದ್ಯಾನವನಗಳಲ್ಲಿ ಹೇರಳವಾಗಿ ಉತ್ಪನ್ನವಾಗುವ ಹಾಗೂ ಸುಲಭದಲ್ಲೇ ಕೊಳೆಯುವಂತಹ ತರಕಾರಿ, ಹಣ್ಣು ಹಂಪಲುಗಳು, ಮೀನು ಮತ್ತು ಮಾಂಸಗಳ ತ್ಯಾಜ್ಯಗಳನ್ನು ಬಳಸಿ ಆಯಾ ಸ್ಥಳಗಳಲ್ಲೇ ಗೊಬ್ಬರವನ್ನಾಗಿ ಪರಿವರ್ತಿಸಬಲ್ಲ ವ್ಯವಸ್ಥೆಯನ್ನು ಸಿದ್ಧಪಡಿಸುವ ಮೂಲಕ, ಇವುಗಳನ್ನು ಸಂಗ್ರಹಿಸುವ ಮತ್ತು  ಸಾಗಿಸುವ ವೆಚ್ಚ ಮತ್ತು ಸಮಯಗಳನ್ನು ಉಳಿಸುವುದರೊಂದಿಗೆ, ಈ ಗೊಬ್ಬರವನ್ನು ಉದ್ಯಾನವನಗಳಲ್ಲಿ ಬಳಸಬಹುದಾಗಿದೆ ಎಂದು ಹೇಳಿದೆ.

ಇವೆಲ್ಲಕ್ಕೂ ಮಿಗಿಲಾಗಿ ಘನತ್ಯಾಜ್ಯ ನಿರ್ವಹಣಾ ನಿಯಮಗಳು ೨೦೧೫ ನ್ನು ಪರಿಪಾಲಿಸದೇ ಇರುವುದು ಕರ್ನಾಟಕ ಮುನಿಸಿಪಲ್ ಕಾಯಿದೆಯ ಸೆಕ್ಷನ್ ೪೩೧ ಎ ಅನ್ವಯ ಶಿಕ್ಷಾರ್ಹ ಅಪರಾಧವಾಗಿದ್ದು, ಇದನ್ನು ಉಲ್ಲಂಘಿಸಿದವರಿಗೆ ದಂಡವನ್ನು ವಿಧಿಸಬಹುದಾಗಿದೆ ಎಂದೂ ನ್ಯಾಯಾಲಯವು ಅಭಿಪ್ರಾಯಿಸಿದೆ.

ಅದೇನೇ ಇರಲಿ, ಇದೀಗ ರಾಜ್ಯದ ಉಚ್ಛ ನ್ಯಾಯಾಲಯದ ಈ ಆದೇಶವನ್ನು ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರಿನ ನಿವಾಸಿಗಳು ಪರಿಪಾಲಿಸುವರೇ ಮತ್ತು ತಮ್ಮನ್ನು ನಿರಂತರವಾಗಿ ಕಾಡುತ್ತಿರುವ ಗಂಭೀರ ಸಮಸ್ಯೆಯೊಂದನ್ನು ಪರಿಹರಿಸಲು ಮನಸ್ಪೂರ್ವಕ ಸಹಕಾರವನ್ನು ನೀಡುವರೇ?, ಎನ್ನುವುದನ್ನು ಕಾಲವೇ ಹೇಳಬೇಕಷ್ಟೆ!.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು


ಚಿತ್ರ – ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ರತ್ಯೇಕಿಸದೇ ಸುರಿದಿರುವ ತ್ಯಾಜ್ಯಗಳು   


     

Monday, December 7, 2015

AIR POLLUTION - CONTROL IT



           ವಾಯುಮಾಲಿನ್ಯದ ಸಮಸ್ಯೆಯನ್ನು ನಿರ್ಲಕ್ಷಿಸದಿರಿ      

ದೇಶದ ರಾಜಧಾನಿಯಾಗಿರುವ ದೆಹಲಿಯಲ್ಲಿ ವಾಯುಮಾಲಿನ್ಯದ ಸಮಸ್ಯೆ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಬಗ್ಗೆ ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಿರಾನ್ಮೆಂಟ್ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ಎಚ್ಚರಿಕೆಯನ್ನು ನೀಡುತ್ತಿದೆ. ವಿಶೇಷವೆಂದರೆ ಜಗತ್ತಿನ ಅತ್ಯಂತ ಪ್ರದೂಷಿತ ೨೦ ನಗರಗಳಲ್ಲಿ, ೧೩ ನಗರಗಳು ನಮ್ಮ ದೇಶದ ಮಹಾನಗರಗಳೇ ಆಗಿವೆ!. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಗರ - ಪಟ್ಟಣಗಳಲ್ಲಿ ದಿನೇದಿನೇ ವೃದ್ಧಿಸುತ್ತಿರುವ ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಲು ಮೀನಮೇಷ ಎನಿಸುತ್ತಿವೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು.

ದೇಶದ ಸಂವಿಧಾನದಲ್ಲಿ ಸ್ವಚ್ಛವಾದ ಗಾಳಿ ಹಾಗೂ ಶುದ್ಧವಾದ ನೀರುಗಳನ್ನು ಪಡೆಯುವ   ಮತ್ತು ಪರಿಶುದ್ಧ ಪರಿಸರದಲ್ಲಿ ಜೀವಿಸುವ ಹಕ್ಕನ್ನು ಪ್ರಜೆಗಳಿಗೆ ನೀಡಿದ್ದರೂ, ಇವೆಲ್ಲವೂ ನಮಗಿಂದು ದುರ್ಲಭವೆನಿಸಿವೆ. ಆದರೆ ವಾಯು, ಜಲ ಮತ್ತು ಪರಿಸರ ಮಾಲಿನ್ಯದ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುವಲ್ಲಿ ಜನಸಾಮಾನ್ಯರ ನಿರ್ಲಕ್ಷ್ಯದೊಂದಿಗೆ ಹೆಚ್ಚುತ್ತಿರುವ ಜನ ಮತ್ತು ವಾಹನಗಳ ಸಂಖ್ಯೆಗಳೂ ಕಾರಣವೆನಿಸಿವೆ.

ಇತ್ತೀಚಿಗೆ ದೆಹಲಿಯ ಉಚ್ಛ ನ್ಯಾಯಾಲಯವು ಸ್ವಯಂಪ್ರೇರಿತವಾಗಿ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಲು ಸರ್ಕಾರಕ್ಕೆ ಆದೇಶಿಸಿತ್ತು. ತತ್ಪರಿಣಾಮವಾಗಿ ಸರ್ಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಆದರೆ ಇದು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗುವುದೇ ಎನ್ನುವುದನ್ನು ಕಾದುನೋಡಬೇಕಷ್ಟೇ.

ಮಾರಕವೆನಿಸುವ ವಾಯುಮಾಲಿನ್ಯ

ಭಾರತದ ಮಹಾನಗರಗಳನ್ನು ಜ್ಞಾಪಿಸಿದೊಡನೆ ಕಿಕ್ಕಿರಿದ ವಾಹನಗಳ ಮತ್ತು ಜನಸಂದಣಿಗಳೊಂದಿಗೆ, ತೀವ್ರಸ್ವರೂಪದ ವಾಯುಮಾಲಿನ್ಯದ ನೆನಪಾಗುವುದು ಸ್ವಾಭಾವಿಕ. ಕೆಲವೇ ವರ್ಷಗಳ ಹಿಂದೆ ದೇಶದ ಮಹಾನಗರಗಳಿಗೆ ಸೀಮಿತವಾಗಿದ್ದ ಈ ಸಮಸ್ಯೆಯು, ಇದೀಗ ದೇಶದ ಸಣ್ಣಪುಟ್ಟ ನಗರ ಹಾಗೂ ಪಟ್ಟಣಗಳಿಗೂ ಹರಡಲಾರಂಭಿಸಿದೆ. ಇರುವೆಗಳ ಸಾಲಿನಂತೆ ಸಂಚರಿಸುವ ಸಾಲುಸಾಲು ವಾಹನಗಳು ಹೊರಸೂಸುವ ಹೊಗೆಯಿಂದಾಗಿ ಹೆಚ್ಚುತ್ತಿರುವ ವಾಯುಮಾಲಿನ್ಯವು, ಅನೇಕ ವಿಧದ ಗಂಭೀರ ಮತ್ತು ಮಾರಕ ವ್ಯಾಧಿಗಳಿಗೆ ಕಾರಣವೆನಿಸುತ್ತಿದೆ. ಇತ್ತೀಚಿನ ವರದಿಗಳಂತೆ ದೆಹಲಿಯ ಜನರು ಉಸಿರಾಡುವ ಗಾಳಿಯು, ಮಕ್ಕಳು ಮತ್ತು ವಯೋವೃದ್ಧರು ಉಸಿರಾಡಲು ಅಯೋಗ್ಯವೆನಿಸುವಷ್ಟು ಪ್ರದೂಷಿತವಾಗಿದೆ!.

ಅಧಿಕೃತ ಮಾಹಿತಿಯಂತೆ ಭಾರತದ ಶೇ.೫೦ ರಷ್ಟು ನಗರಗಳು ಅತ್ಯಂತ ಪ್ರದೂಷಿತ ಪ್ರದೇಶಗಳೆನಿಸಿವೆ.ಅಂತೆಯೇ ನಮ್ಮ ದೇಶದಲ್ಲಿ ಸಂಭವಿಸುತ್ತಿರುವ ಮರಣಗಳಿಗೆ ಕಾರಣವೆನಿಸುವ ಅಪಾಯಕಾರಿ ಸಮಸ್ಯೆಗಳಲ್ಲಿ, ವಾಯುಮಾಲಿನ್ಯವು ೫ ನೆಯ ಸ್ಥಾನದಲ್ಲಿದೆ. ಈ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸಲು ನಾವು ವಿಫಲರಾದಲ್ಲಿ, ಪ್ರಾಯಶಃ ಮುಂದಿನ ಕೆಲವೇ ವರ್ಷಗಳಲ್ಲಿ ಇದು ಅಗ್ರಸ್ಥಾನವನ್ನು ತಲುಪುವ  ಸಾಧ್ಯತೆಗಳೂ ಇವೆ.

ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳನ್ನು ಬಳಸುವ ವಾಹನಗಳು ಹೊರಹೊಮ್ಮುವ ಧೂಮದಲ್ಲಿ ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನೊಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ಆಕ್ಸೈಡ್ ಆಫ್ ನೈಟ್ರೋಜೆನ್ ಮುಂತಾದ ಅಪಾಯಕಾರಿ ಅನಿಲಗಳಿವೆ. ಈ ಹಸಿರುಮನೆ ಅನಿಲಗಳನ್ನು ಸೇವಿಸುವ ಜನರಲ್ಲಿ ಕಣ್ಣುಗಳಲ್ಲಿ ಉರಿ, ತಲೆನೋವು, ವಾಕರಿಕೆ, ಶ್ವಾಸಾಂಗಗಳ ಕಾಯಿಲೆಗಳು, ಶ್ವಾಸಕೋಶಗಳ ಉರಿಯೂತ, ಹೃದ್ರೋಗಗಳ ಉಲ್ಬಣಿಸುವಿಕೆ ಮತ್ತು ಕೆಲವಿಧದ ಕ್ಯಾನ್ಸರ್ ಉದ್ಭವಿಸುವ ಸಾಧ್ಯತೆಗಳಿವೆ. ಹಾಗೂ ಇದೇ  ಕಾರಣದಿಂದಾಗಿ  ವಾಯುಮಾಲಿನ್ಯದ ಸಮಸ್ಯೆಯನ್ನು ಸಮರೋಪಾದಿಯಲ್ಲಿ ನಿಯಂತ್ರಿಸಬೇಕಿದೆ.

ಮುಂದೇನು ಸಂಭವಿಸಲಿದೆ?

ತಜ್ಞರ ಅಭಿಪ್ರಾಯದಂತೆ ಮುಂದಿನ ಎರಡು ದಶಕಗಳಲ್ಲಿ ಭಾರತೀಯರ ದೈನಂದಿನ ಸಂಚಾರದ ಪ್ರಮಾಣವು ದುಪ್ಪಟ್ಟಾಗಲಿದೆ. ಇದರೊಂದಿಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವವರ ಪ್ರಮಾಣವು ಶೇ. ೨೬ ರಿಂದ ಶೇ. ೧೬ ಕ್ಕೆ ಕುಸಿಯಲಿದೆ. ಇದರೊಂದಿಗೆ ವೈಯುಕ್ತಿಕ ವಾಹನಗಳ ಪ್ರಮಾಣವು ಶೇ.೩೪ ರಿಂದ ಶೇ. ೫೧ ಕ್ಕೆ ಏರಲಿದೆ. ಅಂತೆಯೇ ಮಹಾನಗರಗಳಲ್ಲಿ ಸಂಚರಿಸುವ ವಾಹನಗಳ ವೇಗವು ಇದೀಗ ಪ್ರತಿ ಗಂಟೆಗೆ ೧೬ ಕಿ.ಮೀ. ಇದ್ದು, ಮುಂದೆ ಇದು ಗಂಟೆಗೆ ೮ ಕಿ.ಮೀ. ಗಳಿಗೆ ಇಳಿಯಲಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ದೇಶದ ನಗರಗಳಲ್ಲಿ ಸಂಭವಿಸಲಿರುವ ವಾಯುಮಾಲಿನ್ಯದ ಪ್ರಮಾಣವು ಇನ್ನಷ್ಟು ಹೆಚ್ಚಲಿದೆ!.

ನಿಯಂತ್ರಿಸುವುದೆಂತು?

ದೇಶಾದ್ಯಂತ ಅತ್ಯಂತ ವ್ಯಾಪಕವಾಗಿ ಹಬ್ಬುತ್ತಿರುವ ವಾಯುಮಾಲಿನ್ಯವು ಅನಾರೋಗ್ಯಕರ ಹಾಗೂ ಅಪಾಯಕಾರಿಯಾಗಿದ್ದು, ಇದನ್ನು ನಿಶ್ಚಿತವಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರವು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗುವುದು ಇದರಂತೆ ರಾಷ್ಟ್ರೀಯ ಪರಿಶುದ್ಧ ಗಾಳಿ ಕ್ರಿಯಾಯೋಜನೆಯೊಂದನ್ನು ರೂಪಿಸಿ, ಇದನ್ನು ಅನುಷ್ಠಾನಿಸುವ ಮೂಲಕ ದೇಶದ ಪ್ರತಿಯೊಂದು ನಗರಗಳು ೨೦೨೦-೨೧ ಕ್ಕೆ ಮುನ್ನ ಪರಿಶುದ್ಧ ಗಾಳಿಯ ಮಾನದಂಡಗಳಿಗೆ ಅನುಗುಣವಾಗಿರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಇದಲ್ಲದೇ ವಾಹನಗಳು ಉಗುಳುವ ಹೊಗೆಯ ವಿಚಾರದಲ್ಲಿ ರೂಪಿಸಿರುವ ಮಾನದಂಡಗಳನ್ನು ( ಭಾರತ್ ೪, ೫ ಮತ್ತು ೬ ) ೨೦೨೦-೨೧ ಕ್ಕೆ ಮುನ್ನ ಹಣತಹಂತವಾಗಿ ಜಾರಿಗೆ ತರುವುದು ಅನಿವಾರ್ಯವೆನಿಸಲಿದೆ. ಇದರೊಂದಿಗೆ ಡೀಸೆಲ್ ಇಂಧನವನ್ನು ಬಳಸುವ ವಾಹನಗಳು ಹೊರಸೂಸುವ ಹೊಗೆಯಲ್ಲಿನ ಪ್ರದೂಷಕಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು “ ಕ್ಯಾನ್ಸರ್ ಕಾರಕ “ ಎಂದು ಘೋಷಿಸಿದ್ದು, ಇದನ್ನು ನಿಯಂತ್ರಿಸಲು ಭಾರತ್ – ೬ ಮಾನದಂಡದ ಅನುಷ್ಠಾನ ಅತ್ಯವಶ್ಯಕವೆನಿಸುವುದು. ಅಂತೆಯೇ ಸಾರ್ವಜನಿಕ ಸಾರಿಗೆ ವಾಹನಗಳ ಸಲುವಾಗಿ ಒಂದಿಷ್ಟು ಸಹಾಯಧನದಿಂದಾಗಿ ಕಡಿಮೆಬೆಲೆಗೆ ಲಭಿಸುವ ಡೀಸೆಲ್ ಇಂಧನವನ್ನು ಬಳಸುವ ಶ್ರೀಮಂತರ ವಿಲಾಸಿ ಕಾರುಗಳು ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವಾಹನಗಳ ಮೇಲಿನ ಅಬಕಾರಿ ಸುಂಕ ಮತ್ತು ಇಂಧನದ ತೆರಿಗೆಗಳನ್ನು ಮತ್ತಷ್ಟು ಹೆಚ್ಚಿಸಬೇಕಾಗುವುದು.

ಇವೆಲ್ಲಕ್ಕೂ ಮಿಗಿಲಾಗಿ ದೇಶದ ಪ್ರತಿಯೊಂದು ನಗರ – ಮಹಾನಗರಗಳಲ್ಲಿ ಸಿ ಎನ್ ಜಿ ಅನಿಲವನ್ನು ಬಳಸುವ ಸಾರಿಗೆ ವಾಹನಗಳ ಬಳಕೆಯನ್ನುಕಡ್ಡಾಯಗೊಳಿಸುವುದು,, ಈ ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು ಮತ್ತು ಇದನ್ನು ಬಳಸುವ ವಾಹನಗಳ ಮೇಲೆ ವಿಧಿಸುವ ತೆರಿಗೆಯಲ್ಲಿ ರಿಯಾಯಿತಿ ನೀಡುವುದು ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಲು ಉಪಯುಕ್ತವೆನಿಸುವುದು. ಇದರೊಂದಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸುವ ಹಾಗೂ ಅತ್ಯಲ್ಪ ಪ್ರಮಾಣದ ಪ್ರದೂಷಕಗಳನ್ನು ವಿಸರ್ಜಿಸುವ ಮತ್ತು ಬ್ಯಾಟರಿ ಚಾಲಿತ ವಾಹನಗಳ ಬಳಕೆಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕು.

ಅಂತಿಮವಾಗಿ ನಗರಪ್ರದೇಶಗಳ ನಿವಾಸಿಗಳಿಗೆ ಕೈಗೆಟಕುವ ದರದಲ್ಲಿ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸುವುದು ಹಾಗೂ ಇದಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡುವುದು ಹಾಗೂ ಇದನ್ನು ಸರಿದೂಗಿಸಲು ಕಾರುಗಳ ಮೇಲಿನ ತೆರಿಗೆಯನ್ನು ಮತ್ತಷ್ಟು ಹೆಚ್ಚಿಸುವುದು, ಕಾರುಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ರದ್ದುಪಡಿಸಿ ಶುಲ್ಕ ವಿಧಿಸುವುದು, ಪಾದಚಾರಿಗಳು ನಿರಾತಂಕವಾಗಿ ಸಂಚರಿಸಬಲ್ಲ ಸುರಕ್ಷಿತ ಕಾಲುದಾರಿಗಳ ನಿರ್ಮಾಣ, ಸೈಕಲ್ ಸವಾರರಿಗೆ ಪ್ರತ್ಯೇಕ ಹಕ್ಕಿನ ಹಾದಿ, ಶೇ.೮೦ ರಷ್ಟು ನಗರವಾಸಿಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸುವಂತಹ ಉಪಕ್ರಮಗಳು, ವೈಯುಕ್ತಿಕ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸುವುದೇ ಮುಂತಾದ ಉಪಕ್ರಮಗಳನ್ನು ಅನುಷ್ಠಾನಿಸುವ ಮೂಲಕ ವಾಯುಮಾಲಿನ್ಯದ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ. ಜೊತೆಗೆ ಪರಿಸರ ಮತ್ತು ಜನಸಾಮಾನ್ಯರ ಆರೋಗ್ಯಗಳನ್ನೂ ಸಂರಕ್ಷಿಸಬಹುದಾಗಿದೆ.

ಕೊನೆಯ ಮಾತು

ದೆಹಲಿ ಸರ್ಕಾರವು ಜನವರಿ ೧ ರಿಂದ ಸಮ ಮತ್ತು ಬೆಸ ಸಂಖ್ಯೆಯಿಂದ ಅಂತ್ಯಗೊಳ್ಳುವ ನೋಂದಣಿ ಸಂಖ್ಯೆ ಇರುವ ಖಾಸಗಿ ಕಾರುಗಳು, ದಿನ ಬಿಟ್ಟು ದಿನ ಸಂಚರಿಸಬೇಕು ಎಂದು ಆದೇಶಿಸಿದೆ. ಆದರೆ ಬಹುತೇಕ ಶ್ರೀಮಂತರಲ್ಲಿ ಹಲವಾರು ಕಾರುಗಳಿದ್ದು, ಇವುಗಳಲ್ಲಿ ಸಮ ಮತ್ತು ಬೆಸ ಸಂಖ್ಯೆಯನ್ನು ಹೊಂದಿರುವ ಕಾರುಗಳು ಇರುವ ಸಾಧ್ಯತೆಗಳಿವೆ. ಇಲ್ಲದಿದ್ದಲ್ಲಿ ಶ್ರೀಮಂತರು ಈ ಸಮಸ್ಯೆಯಿಂದ ಪಾರಾಗಲು ಸಮ ಅಥವಾ ಬೆಸ ಸಂಖ್ಯೆಯಿಂದ ಅಂತ್ಯಗೊಳ್ಳುವ ನೋಂದಣಿ ಸಂಖ್ಯೆಯಿರುವ ಹೊಸ ಕಾರನ್ನು ಖರೀದಿಸುವ ಸಾಧ್ಯತೆಗಳೂ ಇವೆ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


Saturday, December 5, 2015

RTI - MAKE IT MORE PEOPLE FRIENDLY



    ಮಾಹಿತಿ ಹಕ್ಕು ಕಾಯಿದೆ : ಮತ್ತಷ್ಟು ಜನಸ್ನೇಹಿ ಆಗಬೇಕಿದೆ

ದೇಶಾದ್ಯಂತ ಮಾಹಿತಿಹಕ್ಕು ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಇದರಲ್ಲಿ ಕಂಡುಬಂದಿರಬಹುದಾದ ಲೋಪದೋಷಗಳು ಮತ್ತು ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ, ಇದನ್ನು ಮತ್ತಷ್ಟು ಜನಸ್ನೇಹಿ ಮಾಡಬಲ್ಲ ಸರಳ ಮತ್ತು ಸುಲಭವಾದ ವಿಧಾನವೂ ಇದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಹಿನ್ನೆಲೆ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು ೫೮ ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೌಪ್ಯತೆಯ ಮುಸುಕಿನಲ್ಲೇ ಕಾರ್ಯನಿರ್ವಹಿಸುತ್ತಿದ್ದವು. ಅಂದಿನ ದಿನಗಳಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದರೂ, ದೇಶದ ಪ್ರಜೆಗಳಿಗೆ ಮಾತ್ರ ತಮಗೆ ಬೇಕಾದ ಮಾಹಿತಿಗಳನ್ನು ಸರ್ಕಾರದಿಂದ ಪಡೆದುಕೊಳ್ಳುವ ಸ್ವಾತಂತ್ರ್ಯವೇ ಇರಲಿಲ್ಲ. ಏಕೆಂದರೆ ಸುಮಾರು ಹತ್ತು ವರ್ಷಗಳ ಹಿಂದಿನ ತನಕ " ಸರ್ಕಾರಿ ರಹಸ್ಯಗಳ ಅಧಿನಿಯಮ ೧೯೨೩ " ರಂತೆ ಸರ್ಕಾರದ ಬಳಿಯಿರುವ ಮಾಹಿತಿಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿತ್ತು!.

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆಗಳು ದುರ್ಲಭವೆನಿಸಿದ್ದವು. ತತ್ಪರಿಣಾಮವಾಗಿ ದೇಶದ ಪ್ರಜೆಗಳು ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರುಬಾರಿ ಅಲೆದಾಡಬೇಕಾದ ಮತ್ತು ಅಧಿಕಾರಿಗಳಿಂದ ಅನಾವಶ್ಯಕ ಕಿರುಕುಳಗಳಿಗೆ ಗುರಿಯಾಗಬೇಕಾದ ಪರಿಸ್ಥಿತಿ ಇದ್ದಿತು. ಈ ಅವ್ಯವಸ್ಥೆಯನ್ನು ಸರಿಪಡಿಸಲು ಬೆರಳೆಣಿಕೆಯಷ್ಟು ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು, ನಮ್ಮ ದೇಶಕ್ಕೆ ಕೋಟ್ಯಂತರ ರೂಪಾಯಿ ಸಾಲವನ್ನು ನೀಡುವ ವಿಶ್ವ ಬ್ಯಾಂಕ್ ಮತ್ತು ಕೆಲ ಪಾಶ್ಚಿಮಾತ್ಯ ದೇಶಗಳ ನಿರಂತರ ಒತ್ತಡಗಳಿಗೆ ಮಣಿದಿದ್ದ ಕೇಂದ್ರ ಸರ್ಕಾರವು, ಭಾರತದಲ್ಲಿ ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ನು ೨೦೦೫ ರಲ್ಲಿ  ಜಾರಿಗೆ ತಂದಿತ್ತು.

ಅರ್ಜಿದಾರರಿಗೆ ಆತಂಕ

ಆದರೆ ೨೦೦೫ ರ ಅಕ್ಟೋಬರ್ ೧೨ ರಂದು ದೇಶಾದ್ಯಂತ ಜಾರಿಗೆ ಬಂದಿದ್ದ " ಮಾಹಿತಿ ಪಡೆಯುವ ಹಕ್ಕು ಅಧಿನಿಯಮವು, ಕೆಲವೊಂದು ದೇಶದ ಭದ್ರತೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲ ಮಾಹಿತಿಗಳನ್ನು ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಈ ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಕಳೆದಿದ್ದರೂ, ಮಾ.ಹ. ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸುವ ಕಾರ್ಯಕರ್ತರಿಗೆ ನಿಗದಿತ ಅವಧಿಯಲ್ಲಿ ಅಪೇಕ್ಷಿತ ಮಾಹಿತಿಗಳನ್ನು ನೀಡದಿರುವ, ಪ್ರಥಮ ಮೇಲ್ಮನವಿಯನ್ನು ಸಲ್ಲಿಸಿದರೂ ಸ್ಪಂದಿಸದಿರುವ, ತಮ್ಮ ಅರ್ಜಿಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸುವ – ಬೆದರಿಕೆಯನ್ನು ಒಡ್ಡುವ, ದೈಹಿಕ ಹಲ್ಲೆಯನ್ನು ನಡೆಸಿದ ಮತ್ತು ಸುಮಾರು ೫೦ ಅರ್ಜಿದಾರರು ಬಲಿಯಾದ ಪ್ರಕರಣಗಳು ನಿಜಕ್ಕೂ ಆತಂಕಕಾರಿ ಬೆಳವಣಿಗೆಗಳಾಗಿವೆ. ಈ ವಿಲಕ್ಷಣ ಬೆಳವಣಿಗೆಗಳಿಗೆ ಮಾಹಿತಿಹಕ್ಕು ಕಾಯಿದೆಯನ್ನು ಬಳಸಿ ಬಹಿರಂಗಗೊಂಡ ಭ್ರಷ್ಟಾಚಾರದ ಪ್ರಕರಣಗಳು ಮತ್ತು ಬಹುಕೋಟಿ ಹಗರಣಗಳೇ ಕಾರಣವೆನಿಸಿವೆ.

ಸರ್ಕಾರದ ಆಡಳಿತದಲ್ಲಿ ಪ್ರಜೆಗಳು ಭಾಗಿಯಾಗುವ ಪರಿಣಾಮಕಾರಿ ವಿಧಾನಗಳಲ್ಲಿ ಮಾಹಿತಿ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಪ್ರಮುಖವಾಗಿದೆ. ಈ ಕಾಯಿದೆಯು ಭಾರತದ ಪ್ರತಿಯೊಬ್ಬ ಪ್ರಜೆಗೆ ಅಪೇಕ್ಷಿತ ಮಾಹಿತಿಗಳನ್ನು ಸರ್ಕಾರದಿಂದ ಪಡೆಯುವ ಹಕ್ಕನ್ನು ನೀಡಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಸ್ವಾಧೀನದಲ್ಲಿರುವ ಎಲ್ಲ ಮಾಹಿತಿಗಳು ಸಾರ್ವಜನಿಕರ ಸೊತ್ತು ಎನ್ನುವುದನ್ನು ಈ ಕಾಯಿದೆ ಅಂಗೀಕರಿಸಿದೆ. ಇದೇ ಕಾರಣದಿಂದಾಗಿ ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನಿಗದಿತ ಅವಧಿಯಲ್ಲಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಆದರೆ ಪ್ರಜೆಗಳ ಪಾಲಿಗೆ ಪ್ರಬಲ ಅಸ್ತ್ರವೆಂದು ಪರಿಗಣಿತವಾದ ಈ ಕಾಯಿದೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುತ್ತಿರುವ ನಾಗರಿಕರಿಗೆ, ಅನೇಕ ರೀತಿಯ ಅಡ್ಡಿ ಆತಂಕಗಳು ಎದುರಾಗುತ್ತಿವೆ. ಜೊತೆಗೆ ಈ ಕಾಯಿದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅವಿರತವಾಗಿ ಸಾಗುತ್ತಿವೆ.

ಸ್ವಯಂಪ್ರೇರಿತ ಮಾಹಿತಿ

ಮಾಹಿತಿಹಕ್ಕು ಕಾಯಿದೆಯಾ ಸೆಕ್ಷನ್ ೪ ರನ್ವಯ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಗಳು ೧೭ ವಿಧದ ಮಾಹಿತಿಗಳನ್ನು ಕಡ್ಡಾಯವಾಗಿ ಹಾಗೂ ಯಾರೂ ಕೇಳದೇ ಇದ್ದರೂ ಪ್ರಕಟಿಸಬೇಕಾಗುವುದು. ಇವುಗಳಲ್ಲಿ ಪ್ರಾಧಿಕಾರದ ಸಂರಚನೆ, ಕಾರ್ಯ ನಿರ್ವಹಿಸುವ ಕ್ರಮ, ಆಯವ್ಯಯದ ವಿವರಗಳು, ಸಾರ್ವಜನಿಕರು ಭಾಗವಹಿಸಬಹುದಾದ ವೇದಿಕೆಗಳ ವಿವರ, ಅಪೇಕ್ಷಿತ ಮಾಹಿತಿಗಳನ್ನು ಪಡೆಯುವ ವಿಧಾನ ಇತ್ಯಾದಿ ಮಾಹಿತಿಗಳನ್ನು ಪ್ರಕತಿಸುವುದರೊಂದಿಗೆ,ಇವುಗಳನ್ನು ನಿಯಮಿತವಾಗಿ ಪರಿಷ್ಕರಿಸಬೇಕಾಗುತ್ತದೆ. ಪ್ರಜೆಗಳಿಗೆ ಅವಶ್ಯಕ ಮತ್ತು ಉಪಯುಕ್ತ ಮಾಹಿತಿಗಳು ನೇರವಾಗಿ ಹಾಗೂ ಸುಲಭವಾಗಿ ದೊರೆಯಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಆದರೆ ರಾಜ್ಯದ ಬಹುತೇಕ ಸಾರ್ವಜನಿಕ ಪ್ರಾಧಿಕಾರಗಳು ಈ ಮಾಹಿತಿಗಳನ್ನು ಪ್ರಕಟಿಸದೇ ಇರುವುದರಿಂದ, ಈ ಕಾಯಿದೆಯ ಮೂಲ ಉದ್ದೇಶವೇ ವಿಫಲವಾಗುತ್ತಿದೆ.  ಹಾಗೂ ಇದೇ ಕಾರಣದಿಂದಾಗಿ ಈ ಮಾಹಿತಿಗಳನ್ನು ಪಡೆಯಲು ಅಪೇಕ್ಷಿಸುವ ಜನರು, ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತಿದೆ. ವಿಶೇಷವೆಂದರೆ ಅರ್ಜಿ ಸಲ್ಲಿಸಿದವರಿಗೂ ಅನೇಕ ಸಂದರ್ಭಗಳಲ್ಲಿ ಈ ಮಾಹಿತಿಗಳನ್ನು ನೀಡಲು ಸತಾಯಿಸಲಾಗುತ್ತಿದೆ. ತತ್ಪರಿಣಾಮವಾಗಿ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಬೇಕು ಎನ್ನುವ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. 

ಪಾರದರ್ಶಕತೆಗೊಂದು ಸುಲಭೋಪಾಯ

ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸುವ ಮೂಲಕ ಅಧಿಕಾರಿಗಳ ದಕ್ಷತೆ. ಪ್ರಾಮಾಣಿಕತೆ  ಹಾಗೂ ಉತ್ತರದಾಯಿತ್ವಗಳನ್ನು ಹೆಚ್ಚಿಸುವುದರೊಂದಿಗೆ, ಭ್ರಷ್ಟಾಚಾರಕ್ಕೆ ಕಡಿವಾಣವನ್ನು ತೊಡಿಸಲು ಮಾಹಿತಿಹಕ್ಕು ಕಾಯಿದೆ ಅತ್ಯಂತ ಪರಿಣಾಮಕಾರಿ ಎನಿಸುತ್ತದೆ. ಖ್ಯಾತ ಮಾಹಿತಿಹಕ್ಕು ಕಾರ್ಯಕರ್ತ ಮತ್ತು ಕೇಂದ್ರ ಮಾಹಿತಿ ಆಯುಕ್ತರಾಗಿದ್ದ ಶೈಲೇಶ್ ಗಾಂಧಿಯವರು ಹೇಳುವಂತೆ, ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರಬಲ್ಲ ಸುಲಭೋಪಾಯವೊಂದು ಇಂತಿದೆ.

ದೇಶದ ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ದೈನಂದಿನ ಕೆಲಸಕಾರ್ಯಗಳಿಗಾಗಿ ಕಂಪ್ಯೂಟರ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಇದರೊಂದಿಗೆ ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರಗಳು ತಮ್ಮದೇ ಆದ ಅಂತರ್ಜಾಲ ತಾಣವೊಂದನ್ನು ಸಿದ್ಧಪಡಿಸಿ, ತಮ್ಮ ಕಚೇರಿಯ ಎಲ್ಲ ವ್ಯವಹಾರಗಳನ್ನು ಈ ತಾಣಗಳಲ್ಲಿ ನಿಯಮಿತವಾಗಿ ಪ್ರಕಟಿಸಿದಲ್ಲಿ, ಪಾರದರ್ಶಕತೆಯು ಸುಲಭದಲ್ಲೇ ಜಾರಿಗೊಳ್ಳುತ್ತದೆ. ಉದಾಹರಣೆಗೆ ಸ್ಥಳೀಯ ಸಂಸ್ಥೆಯೊಂದು ತನ್ನ ಮುಂಗಡ ಆಯವ್ಯಯ ಪತ್ರ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಲಭಿಸಿರುವ ಅನುದಾನದ ವಿವರಗಳು, ಹಮ್ಮಿಕೊಂಡಿರುವ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ಮತ್ತಿತರ ವಿವರಗಳು, ಆಸ್ತಿತೆರಿಗೆ ಮತ್ತು ಕುಡಿಯುವ ನೀರಿನ ಶುಲ್ಕಗಳ ಸಂಗ್ರಹದ ವಿವರಗಳು, ಅನ್ಯಮೂಲಗಳಿಂದ ಲಭಿಸುವ ಆದಾಯ, ಕಟ್ಟಡ ಮತ್ತಿತರ ನಿರ್ಮಾಣ ಕಾಮಗಾರಿಗಳಿಗಾಗಿ ನೀಡಿರುವ ಅನುಮತಿ ಮತ್ತಿತರ ವಿವರಗಳೇ ಮುಂತಾದ ಮಾಹಿತಿಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದಲ್ಲಿ, ಇಂತಹ ಮಾಹಿತಿಗಳನ್ನು ಪಡೆದುಕೊಳ್ಳಲು ಅರ್ಜಿಸಲ್ಲಿಸುವ ಅವಶ್ಯಕತೆಯೇ ಉದ್ಭವಿಸದು. ಜೊತೆಗೆ ಸಮಗ್ರ ವ್ಯವಹಾರಗಳು ಪಾರದರ್ಶಕವಾಗಿ ನಡೆಯುವುದರಿಂದ, ಅವ್ಯವಹಾರ ಮತ್ತು ವಂಚನೆಗಳಿಗೆ ಆಸ್ಪದವಿರದು. ಉದಾಹರಣೆಗೆ ನಿರ್ದಿಷ್ಟ ವಸ್ತುವೊಂದನ್ನು ಖರೀದಿಸಲು ಸ್ಥಳೀಯ ಸಂಸ್ಥೆಯು ಟೆಂಡರ್ ಗಳನ್ನು ಆಹ್ವಾನಿಸಿದ ಬಳಿಕ ಸಲ್ಲಿಕೆಯಾದ ಎಲ್ಲ ಟೆಂಡರ್ ಗಳ ವಿವರಗಳನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಬೇಕಾಗುವುದರಿಂದ, ಭ್ರಷ್ಟಾಚಾರ ಮತ್ತು ವಂಚನೆಗಳಿಗೆ ಅವಕಾಶವೇ ಇರುವುದಿಲ್ಲ. ಆಕಸ್ಮಿಕವಾಗಿ ವಂಚನೆ ನಡೆದರೂ, ಅಂತರ್ಜಾಲ ತಾಣದಲ್ಲಿ ತತ್ಸಂಬಂಧಿತ ಮಾಹಿತಿಯನ್ನು ಗಮನಿಸಿದ ನಾಗರಿಕರಿಗೆ ಇದು ತಿಳಿಯುವುದರಿಂದ, ಮೋಸ – ವಂಚನೆಗಳ ಸಂಭಾವ್ಯತೆಯೂ ನಿವಾರಿಸಲ್ಪಡುತ್ತದೆ.

ಹಣ – ಸಮಯಗಳ ಉಳಿತಾಯ

ಸರ್ಕಾರದ ಪ್ರತಿಯೊಂದು ಇಲಾಖೆಗಳ ವ್ಯವಹಾರಗಳನ್ನು ಕಂಪ್ಯೂಟರೀಕರಣಗೊಳಿಸಿದಲ್ಲಿ, ಈ ಕಾಗದಪತ್ರಗಳನ್ನು ಸಿದ್ಧಪಡಿಸಲು, ಕಡತಗಳಲ್ಲಿ ಇರಿಸಲು, ಸಂರಕ್ಷಿಸಲು ಮತ್ತು ಅವಶ್ಯಕತೆಯಿದ್ದಾಗ ಇವುಗಳನ್ನು ಹುಡುಕಲು ವ್ಯಯಿಸುವ ಸಮಯ ಮತ್ತು ಕೋಟ್ಯಂತರ ರೂಪಾಯಿಗಳ ವೆಚ್ಚಗಳನ್ನೂ ಉಳಿಸಬಹುದಾಗಿದೆ. ಜೊತೆಗೆ ಪ್ರಮುಖ ಕಡತಗಳು ಅಥವಾ ಇವುಗಳಲ್ಲಿರುವ ಕೆಲ ದಾಖಲೆಗಳು ಕಾಣೆಯಾಗುವಂತಹ ಘಟನೆಗಳನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ. ಶೈಲೇಶ್ ಗಾಂಧಿಯವರ ಈ ಅಮೂಲ್ಯ ಸಲಹೆಯನ್ನು ಕೇಂದ್ರ ಸರ್ಕಾರವು ಅನುಷ್ಠಾನಗೊಳಿಸಿದಲ್ಲಿ, ನಿಶ್ಚಿತವಾಗಿಯೂ ಮಾಹಿತಿಹಕ್ಕು ಕಾಯಿದೆಯು ಮತ್ತಷ್ಟು “ ಜನಸ್ನೇಹಿ “ ಮತ್ತು ಅತ್ಯಂತ ಪರಿಣಾಮಕಾರಿ ಎನಿಸುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಇದನ್ನು ಜಾರಿಗೊಳಿಸಿದ್ದ ಮೂಲ ಉದ್ದೇಶವು ಈಡೇರುವುದರಲ್ಲಿ ಅಡ್ಡಿ ಆತಂಕಗಳು ಉದ್ಭವಿಸುವ ಸಾಧ್ಯತೆಗಳೇ ಇಲ್ಲ!.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 




Monday, November 9, 2015

NOV 14 - WORLD DIABETES DAY



                    ನವೆಂಬರ್ ೧೪ : ವಿಶ್ವ ಮಧುಮೇಹ ದಿನ

          ಮಧುಮೇಹದ ಪಿಡುಗನ್ನು ತಡೆಗಟ್ಟಲು ಪ್ರಯತ್ನಿಸಿ

ಮಧುಮೇಹ ಎನ್ನುವ ಸುಂದರ ನಾಮಧೇಯದ ಗಂಭೀರ ವ್ಯಾಧಿಯು ಪ್ರಪಂಚದ ಪ್ರತಿಯೊಂದು ದೇಶಗಳಲ್ಲಿ ವ್ಯಾಪಕವಾಗಿ ಪತ್ತೆಯಾಗುತ್ತಿದ್ದು, ಆಧುನಿಕ ಹಾಗೂ ನಿಷ್ಕ್ರಿಯ ಜೀವನ ಶೈಲಿ ಮತ್ತು ಆಹಾರವಿಹಾರಗಳೂ ಇದಕ್ಕೆ ಕಾರಣವೆನಿಸಿವೆ. ಪರಸ್ಪರ ಹರಡದ ಆದರೆ ವರ್ಷಂಪ್ರತಿ ಜಗತ್ತಿನಾದ್ಯಂತ ಸಹಸ್ರಾರು ಜನರನ್ನು ಬಲಿಪಡೆಯುವ ಕೆಲವೇ ಕಾಯಿಲೆಗಳಲ್ಲಿ ಮಧುಮೇಹವೂ ಒಂದಾಗಿದೆ. ಈ ಅಪಾಯಕಾರಿ ಹಾಗೂ ಮಾರಕವೆನಿಸಬಲ್ಲ ಕಾಯಿಲೆಯ ಪಿಡುಗನ್ನು ತಡೆಗಟ್ಟುವ ಉದ್ದೇಶದಿಂದ ಮತ್ತು ಜನಸಾಮಾನ್ಯರಲ್ಲಿ ಇದರ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ, ವರ್ಷಂಪ್ರತಿ ನವೆಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಜಾಗತಿಕ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ.

ವಿಶ್ವ ಮಧುಮೇಹ ದಿನ

ಸಹ ವಿಜ್ಞಾನಿ ಚಾರ್ಲ್ಸ್ ಬೆಸ್ಟ್ ಇವರ ಜೊತೆಯಲ್ಲಿ ಹಗಲಿರುಳು ಶ್ರಮಿಸಿ, ವಿಶ್ವದ ಮಧುಮೇಹಿಗಳ ಪಾಲಿಗೆ ಅಕ್ಷರಶಃ " ಸಂಜೀವಿನಿ " ಎನಿಸಿರುವ " ಇನ್ಸುಲಿನ್ " ಔಷದವನ್ನು ಆವಿಷ್ಕರಿಸಿದ್ದ ಫ್ರೆಡರಿಕ್ ಬಾಂಟಿಂಗ್ ಎನ್ನುವ ವಿಜ್ಞಾನಿಯ ಜನ್ಮದಿನವನ್ನು, ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರೊಂದಿಗೆ ಈ ವ್ಯಾಧಿಯ ಸಂಭಾವ್ಯತೆ, ತಡೆಗಟ್ಟುವಿಕೆ, ಅನಪೇಕ್ಷಿತ ಹಾಗೂ ಗಂಭೀರ ದುಷ್ಪರಿಣಾಮಗಳು ಮತ್ತು ಸಮರ್ಪಕ ಚಿಕಿತ್ಸೆಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು, ವಿಶ್ವ ಮಧುಮೇಹ ಒಕ್ಕೂಟ, ಸಂಯುಕ್ತ ರಾಷ್ಟ್ರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ನವೆಂಬರ್ ೧೪ ರಂದು ಆಯೋಜಿಸಲಾಗುತ್ತದೆ.

ಪ್ರಸ್ತುತ ಜಗತ್ತಿನಾದ್ಯಂತ ೩೮೭ ದಶಲಕ್ಷ  ಮಧುಮೇಹ ಪೀಡಿತರಿದ್ದು, ಈ ಸಂಖ್ಯೆಯು ೨೦೩೫ ರಲ್ಲಿ ೬೦೦ ದಶಲಕ್ಷವನ್ನು ಮೀರಲಿದೆ ಎಂದು  ಅಂದಾಜಿಸಲಾಗಿದೆ. ಭಾರತದಲ್ಲಿ ೨೦೧೧ ರಲ್ಲಿ ಈ ಸಂಖ್ಯೆಯು ೬೧ ದಶಲಕ್ಷವಾಗಿದ್ದು, ೨೦೩೦ ರಲ್ಲಿ ೧೦೧ ದಶಲಕ್ಷವನ್ನು ಮೀರಲಿದೆ!. ಆದರೆ ಚೀನಾ ದೇಶದಲ್ಲಿ ೯೩ ದಶಲಕ್ಷ ಮಧುಮೇಹಿಗಳಿದ್ದು, ವಿಶ್ವದ ಮಧುಮೇಹಿಗಳ ರಾಜಧಾನಿ ಎಂದೇ ಕರೆಯಲ್ಪಡುತ್ತಿದೆ. 

ಮಧುಮೇಹ ಎಂದರೇನು?

ಮನುಷ್ಯನ ಶರೀರದ ಮೇದೋಜೀರಕ ಗ್ರಂಥಿಗಳಲ್ಲಿನ ಬೀಟಾ ಜೀವಕಣಗಳಲ್ಲಿ ಉತ್ಪನ್ನವಾಗುವ ಇನ್ಸುಲಿನ್ ಚೋದನಿಯ ಪ್ರಮಾಣ ಕುಂಠಿತಗೊಂಡಾಗ ಅಥವಾ ಉತ್ಪನ್ನವಾದ ಇನ್ಸುಲಿನ್ ಚೋದನಿಯನ್ನು ಶರೀರವು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾದಾಗ ಅಥವಾ ಇನ್ಸುಲಿನ್ ನ ಉತ್ಪಾದನೆ ಸಂಪೂರ್ಣವಾಗಿ ನಶಿದಾಗ ಮಧುಮೇಹ ವ್ಯಾಧಿ ಉದ್ಭವಿಸುತ್ತದೆ. ತತ್ಪರಿಣಾಮವಾಗಿ ರೋಗಿಯ ರಕ್ತದಲ್ಲಿನ ಸಕ್ಕರೆಯ ( ಗ್ಲೂಕೋಸ್ ) ಪ್ರಮಾಣವು ಅನಿಯಂತ್ರಿತವಾಗಿ ವೃದ್ಧಿಸುತ್ತದೆ. ಈ ವ್ಯಾಧಿಯನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ, ರೋಗಿಯ ಶರೀರ ಮತ್ತು ಪ್ರಮುಖ ಅಂಗಾಂಗಗಳಿಗೆ ಹಾನಿ ಸಂಭವಿಸುವ ಅಥವಾ ಇವುಗಳ ವೈಫಲ್ಯಕ್ಕೆ ಕಾರಣವೆನಿಸುವ ಸಾಧ್ಯತೆಗಳಿವೆ.

ಪ್ರಭೇದಗಳು

ಮಧುಮೇಹ ವ್ಯಾಧಿಯನ್ನು ಸ್ಥೂಲವಾಗಿ ಎರಡು ಪ್ರಭೇದಗಳನ್ನಾಗಿ ವಿಂಗಡಿಸಿದ್ದು, ಪ್ರಭೇದ ೧ ನ್ನು ಇನ್ಸುಲಿನ್ ಅವಲಂಬಿತ ಮತ್ತು ಪ್ರಭೇದ ೨ ನ್ನು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಎಂದು ವರ್ಗೀಕರಿಸಲಾಗಿದೆ. ಇದಲ್ಲದೇ ಮಹಿಳೆಯರು ಗರ್ಭವತಿಯರಾದಾಗ ಪ್ರತ್ಯಕ್ಷವಾಗುವ ಜೆಸ್ಟೇಶನಲ್ ಡಯಾಬೆಟೆಸ್ ಎಂದು ಕರೆಯಲ್ಪಡುವ ಪ್ರಭೇದವು, ತಾಯಿ ಮತ್ತು ಗರ್ಭಸ್ಥ ಶಿಶುವಿಗೆ ಅಸಾಮಾನ್ಯ ತೊಂದರೆಗಳಿಗೆ ಕಾರಣವೆನಿಸಬಲ್ಲದು. ಬಹುತೇಕ ಮಹಿಳೆಯರಲ್ಲಿ ಹೆರಿಗೆಯ ಬಳಿಕ ಇದು ಕಣ್ಮರೆಯಾಗುವುದು. ಆದರೆ ಈ ಸಮಸ್ಯಾ ಪೀಡಿತ ಮಹಿಳೆಯರಲ್ಲಿ ಶೇ. ೫೦ ರಷ್ಟು ಮಹಿಳೆಯರು ಮುಂದಿನ ೫ ರಿಂದ ೧೦ ವರ್ಷಗಳಲ್ಲಿ ಮಧುಮೇಹ ( ಪ್ರಭೇದ -೨ ) ವ್ಯಾಧಿಗೆ ಈಡಾಗುತ್ತಾರೆ.

ಇನ್ಸುಲಿನ್ ಅವಲಂಬಿತ ಮಧುಮೇಹವು ಸಾಮಾನ್ಯವಾಗಿ ಸ್ವಯಂ ಪ್ರತಿರೋಧಕ ಪ್ರತಿಕ್ರಿಯೆಯ ಪರಿಣಾಮವಾಗಿ ಉದ್ಭವಿಸುವುದಾಗಿದ್ದು, ಇದರಲ್ಲಿ ಶರೀರದ ರಕ್ಷಣಾ ವ್ಯವಸ್ಥೆಯೇ ಇನ್ಸುಲಿನ್ ಉತ್ಪಾದಿಸುವ ಬೀಟಾ ಕಣಗಳ ಮೇಲೆ ದಾಳಿ ನಡೆಸುತ್ತದೆ. ಈ ಪ್ರಭೇದವು ಹೆಚ್ಚಾಗಿ ನವಜಾತ ಶಿಶುಗಳು ಮತ್ತು ಹದಿಹರೆಯದವರನ್ನೇ ಕಾಡುವುದಾದರೂ, ಯಾವುದೇ ವಯಸ್ಸಿನಲ್ಲೂ  ತಲೆದೋರಬಹುದು. ಹಾಗೂ ಈ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಪ್ರತಿನಿತ್ಯ ಇನ್ಸುಲಿನ್ ಚುಚ್ಚು ಮದ್ದನ್ನು ಪಡೆದುಕೊಳ್ಳಬೇಕಾಗುವುದು. ಆದರೆ ಪ್ರಭೇದ ೨ ಮಧುಮೇಹವು ಹೆಚ್ಚಾಗಿ ಮಧ್ಯ ಅಥವಾ ಇಳಿ ವಯಸ್ಸಿನಲ್ಲಿ ಉದ್ಭವಿಸುವುದಾದರೂ, ಇತ್ತೀಚಿನ ಕೆಲವರ್ಷಗಳಿಂದ ಹದಿಹರೆಯದವರಲ್ಲೂ ಪತ್ತೆಯಾಗುತ್ತಿದೆ. ಪಾಶ್ಚಾತ್ಯರ ಜೀವನಶೈಲಿಯ ಅಂಧಾನುಕರಣೆ, ನಿರುಪಯುಕ್ತ ಹಾಗೂ ಅತಿಯಾದ ಕೊಬ್ಬಿನ ಅಂಶಗಳಿರುವ ( ಜಂಕ್ ಫುಡ್ ) ಆಹಾರಗಳ ಅತಿಸೇವನೆ, ನಿಷ್ಕ್ರಿಯತೆ, ತೀವ್ರ ಮಾನಸಿಕ ಒತ್ತಡ, ಅತಿಬೊಜ್ಜು, ಅಧಿಕ ತೂಕ, ಪ್ರದೂಷಿತ ಪರಿಸರ ಮತ್ತು ಅನುವಂಶಿಕತೆ ಇತ್ಯಾದಿ ಕಾರಣಗಳಿಂದ ಉದ್ಭವಿಸುವ " ಡಯಾಬೆಟೆಸ್ ಮೆಲೈಟಸ್ " ಅರ್ಥಾತ್ ಮಧುಮೇಹ ವ್ಯಾಧಿಯ ಸಂಭಾವ್ಯತೆಯ ಪ್ರಮಾಣವು ದಿನೇದಿನೇ ಹೆಚ್ಚುತ್ತಿದೆ.

ಅಪಾಯಕಾರಿ ಅಂಶಗಳು

ಮಧುಮೇಹದ ಪ್ರಭೇದ ೧ ರ ಅಪಾಯಕಾರಿ ಅಂಶಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಆದರೆ ಕುಟುಂಬದ ಹಿರಿಯರಲ್ಲಿ ಈ ವಿಧದ ಮಧುಮೇಹವಿದ್ದಲ್ಲಿ, ಇದರ ಸಂಭಾವ್ಯತೆಯ ಅಪಾಯವು ತುಸು ಹೆಚ್ಚುತ್ತದೆ. ಪರಿಸರಕ್ಕೆ ಸಂಬಂಧಿಸಿದ ಅಂಶಗಳು ಮತ್ತು ಕೆಲ ವಿಧದ ವೈರಸ್ ಗಳ ಸೋಂಕುಗಳೂ ಇದಕ್ಕೆ ಕಾರಣವೆನಿಸುತ್ತವೆ.

ಪ್ರಭೇದ ೨ ಕ್ಕೆ ಕಾರಣವೆನಿಸಬಲ್ಲ ಅಪಾಯಕಾರಿ ಅಂಶಗಳಲ್ಲಿ ಅನುವಂಶಿಕತೆ, ಅಧಿಕತೂಕ ಹಾಗೂ ಅತಿಬೊಜ್ಜು, ಅನಾರೋಗ್ಯಕರ ಆಹಾರ ಸೇವನೆ, ನಿಷ್ಕ್ರಿಯತೆ, ಹೆಚ್ಚುತ್ತಿರುವ ವಯಸ್ಸು, ಜನಾಂಗ, ಗ್ಲುಕೋಸ್ ನ ಅಸಹಿಷ್ಣುತೆ, ಗರ್ಭಾವಸ್ಥೆಯಲ್ಲಿ ಪೌಷ್ಠಿಕ ಆಹಾರದ ಕೊರತೆ ಮತ್ತು ಮಧುಮೇಹದ ಇರುವಿಕೆಗಳು ಪ್ರಮುಖವಾಗಿವೆ.

ಪೂರ್ವಸೂಚನೆಗಳು

ಪದೇ ಪದೇ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ ಹಾಗೂ ಹಸಿವೆ, ಅತಿಆಯಾಸ, ಶರೀರದ ತೂಕ ಕಡಿಮೆಯಾಗುವುದು, ಕಣ್ಣಿನ ದೃಷ್ಟಿ ಮಸುಕಾಗುವುದು, ಮೂತ್ರ ವಿಸರ್ಜನಾಂಗಗಳಲ್ಲಿ ತುರಿಕೆ ಉಂಟಾಗುವುದು, ಗಾಯವಾದಾಗ ಹಾಗೂ ಅನ್ಯ ಕಾಯಿಲೆಗಳು ಬಾಧಿಸಿದಾಗ ಸೂಕ್ತ ಚಿಕಿತ್ಸೆ ಪಡೆದರೂ ವಾಸಿಯಾಗದಿರುವುದು ಅಥವಾ ಉಲ್ಬಣಿಸುವುದೇ ಮುಂತಾದ ಪೂರ್ವಸೂಚನೆಗಳು ಮಧುಮೇಹ ಪೀಡಿತರಲ್ಲಿ ಕಂಡುಬರುತ್ತದೆ. ವಿಶೇಷವೆಂದರೆ ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸುವ ಜನರು ಮುಂದೆ ಗಂಭೀರ ಸಮಸ್ಯೆಗಳಿಗೆ ಈಡಾಗಿ ಆಸ್ಪತ್ರೆ ಸೇರಿದ ಬಳಿಕವೇ ಮಧುಮೇಹದ ಇರುವಿಕೆ ಪತ್ತೆಯಾಗುವುದು!.

ಚಿಕಿತ್ಸೆ

ಮಧುಮೇಹ ಪೀಡಿತ ವ್ಯಕ್ತಿಗಳು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರೊಂದಿಗೆ ಆಹಾರ ಸೇವನೆಯಲ್ಲಿ ಪಥ್ಯ, ಸಮತೋಲಿತ ಹಾಗೂ ಪೌಷ್ಠಿಕ ಅಂಶಗಳಿರುವ ಆಹಾರ ಸೇವನೆ, ಪ್ರತಿನಿತ್ಯ ನಡಿಗೆ, ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ಅಧಿಕತೂಕ – ಅತಿಬೊಜ್ಜು ಇದ್ದಲ್ಲಿ ಇದನ್ನು ಇಳಿಸಿಕೊಳ್ಳುವುದು, ಮಾನಸಿಕ ಒತ್ತಡದ ನಿವಾರಣೆಗೆ ಓದು, ಸಂಗೀತ ಅಥವಾ ಯೋಗಾಭ್ಯಾಸ, ಪ್ರಾಣಾಯಾಮ ಅಥವಾ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು ಹಿತಕರವೆನಿಸುವುದು. ಇದರೊಂದಿಗೆ ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಸೇವಿಸುವ ಮೂಲಕ ಈ ವ್ಯಾಧಿಯನ್ನು ನಿಯಂತ್ರಿಸಬಹುದು ಮತ್ತು ಇದು ಉಲ್ಬಣಿಸಿದಲ್ಲಿ ಉದ್ಭವಿಸಬಲ್ಲ ಸಮಸ್ಯೆಗಳನ್ನು ತಡೆಗಟ್ಟಬಹುದು.

ಮಧುಮೇಹ ವ್ಯಾಧಿಯು ಕಾರಣಾಂತರಗಳಿಂದ ಉಲ್ಬಣಿಸಿದಲ್ಲಿ ಅಧಿಕ ರಕ್ತದೊತ್ತಡ, ಹ್ರದ್ರೋಗಗಳು,ದೃಷ್ಟಿನಾಶ, ಮೂತ್ರಪಿಂಡಗಳ ವೈಫಲ್ಯ ಹಾಗೂ ಕೆಲ ಸಂದರ್ಭಗಳಲ್ಲಿ ಅಂಗ ವಿಚ್ಛೇದನದಂತಹ ಗಂಭೀರ ಸಮಸ್ಯೆಗಳಿಗೆ ಮತ್ತು ರೋಗಿಯ ಅಕಾಲಿಕ ಮರಣಕ್ಕೂ ಕಾರಣವೆನಿಸಬಲ್ಲದು.

ತಪ್ಪುಕಲ್ಪನೆಗಳು

ಅನೇಕ ಮಧುಮೇಹ ಪೀಡಿತ ವ್ಯಕ್ತಿಗಳು ನಂಬಿರುವಂತೆ ಸಕ್ಕರೆಯ ಸೇವನೆಗೆ ಬದಲಾಗಿ ಬೆಲ್ಲ, ಕಲ್ಲುಸಕ್ಕರೆ ಮತ್ತು ಜೇನುತುಪ್ಪಗಳನ್ನು ಧಾರಾಳವಾಗಿ ಸೇವಿಸುವುದು ನಿಶ್ಚಿತವಾಗಿಯೂ ಸುರಕ್ಷಿತ ಮತ್ತು ನಿಜವಲ್ಲ. ಅಂತೆಯೇ ಜಗತ್ತಿನ ವಿವಿಧ ದೇಶಗಳಲ್ಲಿರುವ ವೈವಿಧ್ಯಮಯ ವೈದ್ಯಕೀಯ ಪದ್ದತಿಗಳಲ್ಲಿ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ಇದಕ್ಕೂ ಮಿಗಿಲಾಗಿ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸಿದವರಿಗೆ “ ನೊಬೆಲ್ ಪ್ರಶಸ್ತಿ “ ಯೊಂದಿಗೆ ಕೋಟ್ಯಂತರ ಡಾಲರ್ ಬಹುಮಾನ ದೊರೆಯುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ದೇಶದ ಮೂಲೆಮೂಲೆಗಳಲ್ಲಿ ಕಾಣಸಿಗುವ “ ನಕಲಿ ವೈದ್ಯರು “ , ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸುವ ಭರವಸೆಯೊಂದಿಗೆ ನೀಡಿದ ಔಷದಗಳನ್ನು ಸೇವಿಸಿ, ತಜ್ಞ ವೈದ್ಯರು ತಮಗೆ ನೀಡಿದ್ದ ಔಷದಗಳ ಸೇವನೆಯನ್ನು ನಿಲ್ಲಿಸಿದ್ದ ಅಸಂಖ್ಯ ವ್ಯಕ್ತಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆಗಳು ಸಾಕಷ್ಟಿವೆ. ಇದೇ ಕಾರಣದಿಂದಾಗಿ ನಕಲಿ ವೈದ್ಯರ ಪೊಳ್ಳು ಭರವಸೆಗಳಿಗೆ ಬಲಿಯಾಗಿ, ನೀವು ಕಷ್ಟಪಟ್ಟು ಸಂಪಾದಿಸಿದ್ದ ಸಹಸ್ರಾರು ರೂಪಾಯಿಗಳೊಂದಿಗೆ ನಿಮ್ಮ ಪ್ರಾಣವನ್ನೂ ಕಳೆದುಕೊಳ್ಳದಿರಿ!.


ಕೊನೆಯ ಮಾತು

ಮಧುಮೇಹ ಪೀಡಿತರಾದ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೆ, ಈ ವ್ಯಾಧಿಯ ಇರುವಿಕೆ ತಿಳಿದಿರುವುದೇ ಇಲ್ಲ. ಆದುದರಿಂದ ನಿಮ್ಮ ಮಾತಾಪಿತರ ಕುಟುಂಬಗಳ ಸದಸ್ಯರಲ್ಲಿ ಮಧುಮೇಹ ಪೀಡಿತರು ಇದ್ದಲ್ಲಿ, ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಪಡೆದು ರಕ್ತದ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ತನ್ಮೂಲಕ ಈ ವ್ಯಾಧಿ ಇರುವುದನ್ನು ಅಥವಾ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು











Tuesday, November 3, 2015

CONJESTION CHARGES AND TRAFFIC JAM



  ವಾಹನ ದಟ್ಟಣೆಯನ್ನು ನಿಶ್ಚಿತವಾಗಿ ನಿಯಂತ್ರಿಸಬಲ್ಲ ವಿಶಿಷ್ಟ ಶುಲ್ಕ!

ಭಾರತದ ಪ್ರತಿಯೊಂದು ಪಟ್ಟಣ, ನಗರ ಮತ್ತು ಮಹಾನಗರಗಳ ರಸ್ತೆಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಕಾರುಗಳ ಮೇಲೆ " ದಟ್ಟಣೆ ಶುಲ್ಕ " ವನ್ನು ವಿಧಿಸುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚಿಂತನೆಯನ್ನು ನಡೆಸಿತ್ತು. ಈ ಶುಲ್ಕವನ್ನು ವಿಧಿಸುವ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ ಹಾಗೂ ನಿರ್ದಿಷ್ಟ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವುದರೊಂದಿಗೆ, ವಾಹನ ದಟ್ಟಣೆಯಿಂದಾಗಿ ಸಂಭವಿಸುವ ವಾಯು ಮಾಲಿನ್ಯ ಮತ್ತು ಪರಿಸರ ಪ್ರದೂಷಣೆಯನ್ನೂ ಸುಲಭದಲ್ಲೇ ನಿಯಂತ್ರಿಸಬಹುದಾಗಿತ್ತು. ಆದರೆ ಈ ಚಿಂತನೆಯು ಇಂದಿನ ತನಕ ಕಾರ್ಯರೂಪಕ್ಕೆ ಬರದಿರಲು ಕಾರಣವೇನೆಂದು ನಮಗೂ ತಿಳಿದಿಲ್ಲ.

ಭಾರತದ ಬಹುತೇಕ ರಸ್ತೆಗಳ ಬಹುದೊಡ್ಡ ಭಾಗವನ್ನು ಮೋಟಾರು ಕಾರುಗಳೇ ಬಳಸುತ್ತವೆ. ಈ " ಕಾರುಬಾರನ್ನು " ನಿಯಂತ್ರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದು, ಇದರ ಸಾಧಕ - ಬಾಧಕಗಳ ಅಧ್ಯಯನವನ್ನು ನಡೆಸಿದ ಬಳಿಕ ಅನುಷ್ಠಾನಿಸುವಂತೆ ಆದೇಶಿಸಿದೆ. ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ಇನ್ಸ್ ಸ್ಟಿಟ್ಯೂಟ್ ಆಫ್ ಅರ್ಬನ್ ಟ್ರಾನ್ಸ್ ಪೋರ್ಟ್, ಕಾರುಗಳ ಮೇಲೆ ಈ ಶುಲ್ಕವನ್ನು ವಿಧಿಸುವ ಪ್ರಸ್ತಾವನೆಯನ್ನು ಶಿಫಾರಸು ಮಾಡಿತ್ತು.

ಏನಿದು ದಟ್ಟಣೆ ಶುಲ್ಕ?

ಕಾನೂನುಬದ್ಧವಾಗಿ ಘೋಷಿಸಿರುವ ಹಾಗೂ ಅತಿಯಾದ ವಾಹನ ದಟ್ಟಣೆಯಿರುವ ನಿರ್ದಿಷ್ಟ ಪ್ರದೇಶವನ್ನು ಪ್ರವೇಶಿಸುವ ವಾಹನಗಳಿಗೆ ಪೂರ್ವ ನಿರ್ಧಾರಿತ ಶುಲ್ಕವನ್ನು ವಿಧಿಸುವ ಪರಿಣಾಮಕಾರಿ ವಿಧಾನವೇ " ದಟ್ಟಣೆ ಶುಲ್ಕ " ಅರ್ಥಾತ್ ಕಂಜೆಶನ್ ಚಾರ್ಜ್. ಸುಗಮ ಸಂಚಾರಕ್ಕೆ ಸಂಭವಿಸುವ ಅಡ್ಡಿ ಆತಂಕಗಳು, ವಿಳಂಬ, ಸಮಯ ಹಾಗೂ ಇಂಧನದ ಅಪವ್ಯಯ, ವಾಯುಮಾಲಿನ್ಯ, ಪರಿಸರ ಪ್ರದೂಷಣೆ ಇವೇ ಮುಂತಾದ ಸಮಸ್ಯೆಗಳನ್ನು ತಡೆಗಟ್ಟಲು ಈ ಶುಲ್ಕವನ್ನು ವಿಧಿಸುವುದು ಉಪಯುಕ್ತವೆನಿಸಲಿದೆ.

ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳನ್ನು ಸದಾ ಅನಿಯಂತ್ರಿತವಾಗಿ ಪ್ರವೇಶಿಸುವ ವಾಹನಗಳು ಅನ್ಯ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವುದರಿಂದ, ಜನಸಾಮಾನ್ಯರು ಸ್ವಂತ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುವುದರಿಂದ ಮತ್ತು ತತ್ಪರಿಣಾಮವಾಗಿ ಈ ಪ್ರದೇಶ ಹಾಗೂ ನಿರ್ದಿಷ್ಟ ರಸ್ತೆಗಳಲ್ಲಿ ತಂಗುವ  ವಾಹನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುವುದು. ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ದಿಲ್ಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಎಂಡ್ ಆರ್ಕಿಟೆಕ್ಚರ್ ಸಂಸ್ಥೆಯು ಹೇಳುವಂತೆ, ವಾಹನವೊಂದಕ್ಕೆ ಕೇವಲ ೧೦ ರೂ. ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳಲ್ಲಿನ ವಾಹನ ದಟ್ಟಣೆಯ ಪ್ರಮಾಣವು ಶೇ. ೨೦ ರಿಂದ ೨೫ ರಷ್ಟು ಕಡಿಮೆಯಾಗುವುದು. ಸಿಂಗಾಪುರ, ಸ್ಟಾಕ್ ಹೋಮ್ ಹಾಗೂ ಲಂಡನ್ ಮುಂತಾದಲ್ಲಿ ಈ ಶುಲ್ಕವನ್ನು ಕೆಲವರ್ಷಗಳಿಂದ ವಿಧಿಸಲಾಗುತ್ತಿದ್ದು, ಈ ಪ್ರಯೋಗವು ಅಪೇಕ್ಷಿತ ಪರಿಣಾಮವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಕಡತಗಳಲ್ಲಿ ಉಳಿದ ಪ್ರಸ್ತಾವನೆ

ನಮ್ಮ ದೇಶದಲ್ಲಿ ಮೊಟ್ಟಮೊದಲಬಾರಿಗೆ ದಟ್ಟಣೆ ಶುಲ್ಕ ವಿಧಿಸುವ ವಿಚಾರವನ್ನು ರಾಷ್ಟ್ರೀಯ ಸಾರಿಗೆ ಧೋರಣೆ - ೨೦೦೬ ರಲ್ಲಿ ಪ್ರಸ್ತಾವಿಸಲಾಗಿದ್ದರೂ, ಸಂಬಂಧಿತ ಸಚಿವಾಲಯವು ಇದನ್ನು ಪರಿಗಣಿಸಿರಲಿಲ್ಲ. ತದನಂತರ ೧೨ ನೆ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ದಟ್ಟಣೆ ಶುಲ್ಕವನ್ನು ವಿಧಿಸುವ ಮತ್ತು ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸುವ ಮೂಲಕ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದ್ದಿತು. ಜೊತೆಗೆ ಯೋಜನಾ ಆಯೋಗವು ಜಾಗತಿಕ ಮಟ್ಟದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ದಟ್ಟಣೆ ಶುಲ್ಕವನ್ನು ನಿರ್ಧರಿಸುವ ವಿಧಾನವನ್ನು ಅಧ್ಯಯನ ಮಾಡಿ ವಿಶ್ಲೇಷಿಸಲು ಸೂಚಿಸಿತ್ತು. ಆದರೆ ನಮ್ಮ ದೇಶದಲ್ಲಿ " ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ " ವು ಚಲಿಸುವುದು ಅತ್ಯಂತ ನಿಧಾನವಾಗಿರುವುದರಿಂದ, ಪ್ರಸ್ತಾವನೆಗಳು ಮತ್ತು ಆದೇಶಗಳು ಅನುಷ್ಠಾನಗೊಳ್ಳುವುದಕ್ಕಿಂತಲೂ ಕಸದ ಬುಟ್ಟಿಯನ್ನು ಸೇರುವ ಸಾಧ್ಯತೆಗಳೇ ಅಧಿಕ.

೨೦೦೮ ರಲ್ಲಿ ನಗರ ಮೂಲಸೌಕರ್ಯಗಳ ಸಲಹಾ ಸಂಸ್ಥೆಯೊಂದು ನಡೆಸಿದ್ದ ಅಧ್ಯಯನದಂತೆ, ೨೦೩೦ ರಲ್ಲಿ ದೇಶದ ಮಹಾನಗರಗಳಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳು ಓಡಾಡುವ ಸಮಯ ( ಪೀಕ್ ಅವರ್ ) ದಲ್ಲಿ ಇವುಗಳ ವೇಗವು ಗಂಟೆಗೆ ಕೇವಲ ೬ ಕಿ.ಮೀ. ಗೆ ಕುಸಿಯಲಿದೆ ಎಂದು ತಿಳಿದುಬಂದಿತ್ತು. (ಆದರೆ ವಾಸ್ತವದಲ್ಲಿ ೨೦೧೫ ಕ್ಕೆ ಮುನ್ನವೇ ಈ ಪರಿಸ್ಥಿತಿ ಉದ್ಭವಿಸಿದೆ.) ಅರ್ಥಾತ್ ವಾಹನಗಳ ಸಂಚಾರವು ಅಕ್ಷರಶಃ ಸ್ಥಗಿತಗೊಳ್ಳಲಿದೆ ಎಂದು ಭವಿಷ್ಯವನ್ನು ನುಡಿದಿತ್ತು!.

ಸಾರ್ವಜನಿಕ ಸಾರಿಗೆ ಅಭಿವೃದ್ಧಿ

ತಜ್ಞರ ಅಭಿಪ್ರಾಯದಂತೆ ನಮ್ಮ ದೇಶದಲ್ಲಿ ದಟ್ಟಣೆ ಶುಲ್ಕವನ್ನು ವಿಧಿಸುವುದು ಉಪಯುಕ್ತವೆನಿಸುವುದಾದರೂ, ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಸುಲಭಸಾಧ್ಯವೇನಲ್ಲ. ಏಕೆಂದರೆ ನಮ್ಮ ದೇಶದ ವಿವಿಧ ನಗರಗಳ ಗಾತ್ರ, ಜನಸಂಖ್ಯೆ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳು ಅನೇಕ ಗೊಂದಲಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದರೊಂದಿಗೆ, ದಟ್ಟಣೆ ಶುಲ್ಕವನ್ನು ವಿಧಿಸುವ ಮೂಲಕ ಕಡಿಮೆಯಾಗಲಿರುವ ವಾಹನಗಳ ಸಂಖ್ಯೆಗಳ ವೈಜ್ಞಾನಿಕ ಲೆಕ್ಕಾಚಾರವನ್ನು ಮಾಡಬೇಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ದಟ್ಟಣೆ ಶುಲ್ಕವನ್ನು ವಿಧಿಸುವ ಮುನ್ನ ಸಮರ್ಪಕವಾದ ಹಾಗೂ ಸುಗಮ ವಾಹನ ಸಂಚಾರಕ್ಕೆ ಅತ್ಯವಶ್ಯಕವೆನಿಸುವ ಉತ್ತಮ ರಸ್ತೆಗಳು, ಪಾದಚಾರಿಗಳಿಗಾಗಿ ಸುರಕ್ಷಿತ ಕಾಲುದಾರಿಗಳೇ ಮುಂತಾದ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಲು ಅವಶ್ಯಕ ಅತ್ಯಾಧುನಿಕ ತಂತ್ರಜ್ಞಾನ ಮತ್ತಿತರ ವ್ಯವಸ್ಥೆಗಳಿಗಾಗಿ ಸಹಸ್ರಾರು ಕೋಟಿ ರೂಪಾಯಿಗಳ ಹೂಡಿಕೆಯ ಅವಶ್ಯಕತೆಯಿದೆ. ಆದರೆ ತತ್ಪರಿಣಾಮವಾಗಿ ಜನಸಾಮಾನ್ಯರಿಗೆ ಲಭಿಸಲಿರುವ ಪ್ರಯೋಜನಗಳನ್ನು, ಅಂದರೆ ವಾಹನಗಳ ದಟ್ಟಣೆಯ ಪ್ರಮಾಣದಲ್ಲಿ ಇಳಿಕೆ, ಸುಗಮ ವಾಹನ ಸಂಚಾರಕ್ಕೆ ಆಸ್ಪದ, ಸಮಯ ಮತ್ತು ಇಂಧನಗಳ  ಉಳಿತಾಯ, ಕಡಿಮೆಯಾಗಲಿರುವ ವಾಯುಮಾಲಿನ್ಯ ಹಾಗೂ ಪರಿಸರ ಪ್ರದೂಷಣೆಯ ಪ್ರಮಾಣ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಗಳಿಸಬಹುದಾದ ಹೆಚ್ಚುವರಿ ಆದಾಯಗಳನ್ನು ಪರಿಗಣಿಸಿದಾಗ, ಇದು ನಿಸ್ಸಂದೇಹವಾಗಿಯೂ ಅತ್ಯಂತ ಲಾಭದಾಯಕವೆನಿಸಲಿದೆ.

ಪ್ರಸ್ತುತ ನಮ್ಮ ದೇಶದ ಪ್ರತಿಯೊಂದು ನಗರ - ಮಹಾನಗರಗಳಲ್ಲಿನ ವಾಹನ ದಟ್ಟಣೆ ಹಾಗೂ ತತ್ಸಂಬಂಧಿತ ಅನ್ಯ ಸಮಸ್ಯೆಗಳನ್ನು ಗಮನಿಸಿದಾಗ, ದಟ್ಟಣೆ ಶುಲ್ಕವನ್ನು ತ್ವರಿತಗತಿಯಲ್ಲಿ ಜಾರಿಗೆ ತರುವುದು ಅನಿವಾರ್ಯವೆನಿಸುತ್ತಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Wednesday, October 21, 2015

GOVT. BANS PLASTIC CARRY BAGS ETC.


           ಪ್ಲಾಸ್ಟಿಕ್ ನಿಷೇಧದ ನಿರ್ಧಾರ : ನಿಜಕ್ಕೂ ಆರೋಗ್ಯಕರ

ಕರ್ನಾಟಕ ರಾಜ್ಯ ಸರ್ಕಾರವು ಇದೀಗ ಪರಿಸರ ಸಂರಕ್ಷಣಾ ಕಾಯಿದೆಯ ಕಲಂ  ೫ ರನ್ವಯ ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳ ಮೇಲೆ ನಿಷೇಧವನ್ನು ಹೇರುವ ಕರಡು ಅಧಿಸೂಚನೆಗೆ ಹಸಿರು ನಿಶಾನೆಯನ್ನು ತೋರಿದೆ. ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯು ಈ ಬಗ್ಗೆ ಸೂಚನೆಯನ್ನು ಪ್ರಕಟಿಸಲಿದ್ದು, ಸಾರ್ವಜನಿಕರಿಂದ ಸೂಕ್ತ ಸಲಹೆಗಳು ಅಥವಾ ಆಕ್ಷೇಪಗಳನ್ನು ಆಹ್ವಾನಿಸಲಿದೆ. ರಾಜ್ಯ ಮಂತ್ರಿ ಮಂಡಲದ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿರುವ ಕರಡು ಅಧಿಸೂಚನೆಯಲ್ಲಿ ೪೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಲಕೋಟೆಗಳು, ಜಾಹೀರಾತುಗಳಲ್ಲಿ ಬಳಸುವ ಫ್ಲೆಕ್ಸ್, ಪ್ಲಾಸ್ಟಿಕ್ ತೋರಣಗಳು ಹಾಗೂ ಧ್ವಜಗಳು, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆಗಳು, ಥರ್ಮೋಕೂಲ್ ನಿರ್ಮಿತ ತಟ್ಟೆ ಮತ್ತು ಲೋಟ ಇತ್ಯಾದಿ ೧೩ ವಿಧದ ವಸ್ತುಗಳ ತಯಾರಿಕೆ, ಸಾಗಾಣಿಕೆ, ವಿತರಣೆ ಮತ್ತು ಮಾರಾಟಗಳನ್ನೇ ನಿಷೇಧಿಸುವ ಪ್ರಸ್ತಾವನೆಯಿದೆ. ಪ್ರಾಯಶಃ ಇದೇ ವರ್ಷದ ಅಂತ್ಯಕ್ಕೆ ಮುನ್ನ ಈ ಅಧಿಸೂಚನೆಯು ಜಾರಿಯಾಗಲಿದೆ.

ನಿಷೇಧ ಪರಿಣಾಮಕಾರಿಯಾಗಲಿ

೨೦೧೧ ರಲ್ಲಿ ದೇಶಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯಗಳ ನಿಭಾವಣೆ ಮತ್ತು ನಿರ್ವಹಣೆಗಳ ನಿಯಮ ೨೦೧೧ ಜಾರಿಗೆ ಬಂದಿದ್ದು, ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳ ತಯಾರಿಕೆ ಮತ್ತು ಮಾರಾಟಗಳನ್ನು ನಿಷೇಧಿಸಲಾಗಿತ್ತು. ಅಂತೆಯೇ ಕೆಲ ರಾಜ್ಯಗಳು ಮತ್ತು ಮಹಾನಗರಗಳು ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳ ಮಾರಾಟವನ್ನು ನಿಷೇಧಿಸಿದ್ದವು.ಆದರೆ ಈ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರ ಅಸಹಕಾರಗಳಿಂದಾಗಿ, ಇಂದಿಗೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳನ್ನು ದೇಶಾದ್ಯಂತ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ!.

ಪ್ಲಾಸ್ಟಿಕ್ ಉದ್ದಿಮೆಗಳ ವಕ್ತಾರರು ಹೇಳುವಂತೆ ರಾಜ್ಯದಲ್ಲಿ ತೆಳ್ಳನೆಯ ಪ್ಲಾಸ್ಟಿಕ್ ಕೈಚೀಲಗಳನ್ನು ತಯಾರಿಸದೆ ಇದ್ದರೂ, ನೆರೆಯ ರಾಜ್ಯಗಳಿಂದ ಇವುಗಳನ್ನು ಕದ್ದುಮುಚ್ಚಿ ಆಮದು ಮಾಡಲಾಗುತ್ತಿದೆ. ಇದರಿಂದಾಗಿ ನಮ್ಮ ಉತ್ಪನ್ನಗಳು ಮಾರಾಟವಾಗದೇ ನಷ್ಟ ಸಂಭವಿಸುತ್ತಿದೆ. ಆದರೆ ಕೆಲ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾತ್ರಿಯ ಪಾಳಿಯಲ್ಲಿ ತಯಾರಿಸಿ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ೨೦ ಮೈಕ್ರಾನ್ ದಪ್ಪದ ಹಾಗೂ ಇದಕ್ಕೂ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲಗಳ ಬೆಲೆಗಳ ನಡುವೆ ಅಗಾಧ ಅಂತರ ಇರುವುದರಿಂದಾಗಿ, ತೆಳ್ಳಗಿನ ಪ್ಲಾಸ್ಟಿಕ್ ಚೀಲಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೂ ಇದೇ ಕಾರಣದಿಂದಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೆನಿಸುತ್ತಿದೆ.

ತ್ಯಾಜ್ಯಗಳ ಸಮಸ್ಯೆ 

ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಗಲಿರುಳು ಕಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಆಂಶಿಕವಾಗಿ ಪರಿಹರಿಸಬಲ್ಲ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ತಳೆದಿದೆ. ಕೊನೆಗೂ ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ ಮತ್ತೆ ಚಲಿಸಲು ಆರಂಭಿಸಿದ ಪರಿಣಾಮವಾಗಿ, ಇದೀಗ ೪೦ ಮೈಕ್ರಾನ್ ಗಳಿಗಿಂತ ತೆಳ್ಳಗಿನ ಕೈಚೀಲ ಮತ್ತಿತರ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ದಿನಬಳಕೆಯ ವಸ್ತುಗಳನ್ನು ನಿಷೇಧಿಸಲು ರಾಜ್ಯ ಮಂತ್ರಿಮಂಡಲವು ನಿರ್ಧರಿಸಿದೆ. ಅನೇಕ ವರ್ಷಗಳಿಂದ ಇಂತಹ ದಿಟ್ಟ ನಿರ್ಧಾರವೊಂದನ್ನು ತಳೆಯಲು ಸರ್ಕಾರವನ್ನು ಒತ್ತಾಯಿಸುತ್ತಿದ್ದ ಸ್ವಯಂ ಸೇವಾ ಸಂಘಟನೆಗಳ ಆಗ್ರಹಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ನಿರ್ಧಾರವು ಅನುಷ್ಠಾನಗೊಂಡ ಬಳಿಕ ರಾಜ್ಯದ ಪ್ರತಿಯೊಂದು ಹಳ್ಳಿಗಳಿಂದ ಆರಂಭಿಸಿ, ರಾಜಧಾನಿಯಾಗಿರುವ ಬೆಂಗಳೂರಿನ ತನಕ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯು ತಕ್ಕ ಮಟ್ಟಿಗೆ ಪರಿಹಾರಗೊಳ್ಳಲಿದೆ. ಆದರೆ ಈ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳಬೇಕಿದ್ದಲ್ಲಿ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಅಸಂಖ್ಯ ಗ್ರಾಹಕ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ವಿವಿಧ ರೀತಿಯ ಪ್ಲಾಸ್ಟಿಕ್ ಗಳನ್ನೂ ನಿಷೇಧಿಸಲೇಬೇಕು. ಇದಕ್ಕೆ ತಪ್ಪಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಇವುಗಳಿಂದಾಗಿ ಉದ್ಭವಿಸುವ ವೈವಿಧ್ಯಮಯ ಸಮಸ್ಯೆಗಳನ್ನು ಸಮರ್ಪಕವಾಗಿ ಸಂಪೂರ್ಣವಾಗಿ ಪರಿಹರಿಸುವುದು ಅಸಾಧ್ಯವೆನಿಸಲಿದೆ.

ಕೆಲವರ್ಷಗಳ ಹಿಂದೆ ರಾಜ್ಯ ಸರ್ಕಾರವು ೨೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ನಿಷೇಧಿಸಿತ್ತು. ನಿಷೇಧ ಜಾರಿಯಾದ ಕೆಲವೇ ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಅತ್ಯಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳು, ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿದ್ದವು!. ವಿಶೇಷವೆಂದರೆ ಈ ಬಾರಿ ೪೦ ಮೈಕ್ರಾನ್ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾಜ್ಯದಲ್ಲಿ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡಲು ಅವಕಾಶವನ್ನು ನೀಡಲಾಗಿದೆ. ಅರ್ಥಾತ್ ೪೦ ಮೈಕ್ರಾನ್ ಗಿಂತ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಪ್ಲಾಸ್ಟಿಕ್ ಉತ್ಪನ್ನಗಳ ಘಟಕಗಳು ತಯಾರಿಸಬಹುದಾಗಿದೆ. ಹಾಗೂ ಇದೇ ಕಾರಣದಿಂದಾಗಿ ಇಂತಹ ಉತ್ಪನ್ನಗಳು ರಾಜ್ಯದ ಮಾರುಕಟ್ಟೆಗಳಲ್ಲಿ ಹಿಂದಿನಂತೆ ಗುಪ್ತವಾಗಿ ಮಾರಾಟವಾಗುವ ಸಾಧ್ಯತೆಗಳೂ ಇವೆ. ಇದನ್ನು ನಿಶ್ಚಿತವಾಗಿ ನಿಯಂತ್ರಿಸಬೇಕಿದ್ದಲ್ಲಿ, ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲಿ ತಯಾರಿಸುವ ಮತ್ತು ವಿದೇಶಗಳಿಗೆ ರಫ್ತು ಮಾಡುವುದನ್ನೂ ನಿಷೆಧಿಸಲೇಬೇಕಾಗುವುದು.

ತ್ಯಾಜ್ಯಗಳು ಕಡಿಮೆಯಾಗಲಿವೆ

ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಕಾಣಸಿಗುವ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಸಭೆ - ಸಮಾರಂಭಗಳ ಸಂದರ್ಭದಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ನಿರ್ಮಿತ ತಟ್ಟೆ, ಲೋಟ, ಚಮಚ ಮತ್ತಿತರ ತ್ಯಾಜ್ಯಗಳ ಪ್ರಮಾಣವು ನಿಸ್ಸಂದೇಹವಾಗಿ ಕಡಿಮೆಯಾಗಲಿದೆ. ಇದರಿಂದಾಗಿ ರಸ್ತೆಯ ಬದಿಗಳಲ್ಲಿನ ಚರಂಡಿಗಳಲ್ಲಿ ವಿಸರ್ಜಿಸಲ್ಪಡುವ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗಲಿದ್ದು, ಇವುಗಳನ್ನು ತಿಂದು ಅಸುನೀಗುವ ಪಶುಪಕ್ಷಿಗಳ ಸಂಖ್ಯೆಯೂ ಇಳಿಮುಖವಾಗಲಿದೆ. ಇದಲ್ಲದೇ ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಹರಿದು ನದಿ ಮತ್ತು ಸಮುದ್ರಗಳನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗಲಿದೆ.  ಇಷ್ಟು ಮಾತ್ರವಲ್ಲ, ಈ ತ್ಯಾಜ್ಯಗಲಿಂದಾಗಿ ಸಂಭವಿಸುತ್ತಿದ್ದ  ಜಲಪ್ರದೂಷಣೆಯ ಪ್ರಮಾಣವು ನಿಯಂತ್ರಿಸಲ್ಪಡುವುದಲ್ಲದೇ, ಜಲಚರಗಳ ಅಕಾಲಿಕ ಮರಣದ ಪ್ರಮಾಣವೂ ಕಡಿಮೆಯಾಗಲಿದೆ.

ಸರ್ಕಾರದ ಈ ನಿರ್ಧಾರದಿಂದ ಖಾಲಿಜಾಗಗಳು ಮತ್ತು ಚರಂಡಿಗಳಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಕೊಳಚೆನೀರಿನ ಹರಿವಿಗೆ ಅಡಚಣೆಯಾಗುತ್ತಿದ್ದ ಕಾರಣದಿಂದಾಗಿ ಉದ್ಭವಿಸುತ್ತಿದ್ದ ಅನೇಕ ಆರೋಗ್ಯದ ಸಮಸ್ಯೆಗಳು ಮತ್ತು ಧಾರಾಕಾರ ಮಳೆ ಸುರಿದಾಗ ಉದ್ಭವಿಸುವ ಕೃತಕ ನೆರೆಯ ಸಮಸ್ಯೆಗಳು  ಸ್ವಾಭಾವಿಕವಾಗಿಯೇ ನಿಯಂತ್ರಿಸಲ್ಪಡಲಿವೆ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಗೆ ಬೆಂಕಿ ಹಚ್ಚಿ ಸುಡುವುದರಿಂದ ಉತ್ಪನ್ನವಾಗುವ ಅಪಾಯಕಾರಿ ಹಸಿರುಮನೆ ಅನಿಲಗಳಿಂದಾಗಿ ಹೆಚ್ಚುವ ಜಾಗತಿಕ ತಾಪಮಾನ ಮತ್ತು ತತ್ಪರಿಣಾಮವಾಗಿ ಉದ್ಭವಿಸುವ ಹವಾಮಾನದ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳೂ ಕಡಿಮೆಯಾಗಲಿವೆ.

ಇವೆಲ್ಲಕ್ಕೂ ಮಿಗಿಲಾಗಿ ರಾಜದ ಸ್ಥಳೀಯ ಸಂಸ್ಥೆಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿರುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆ, ಸಾಗಾಟ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ತಗಲುವ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ. ಇದರೊಂದಿಗೆ ವಿದೇಶಗಳಿಂದ ಆಮದು ಮಾಡುತ್ತಿರುವ ಕಚ್ಚಾ ತೈಲಕ್ಕಾಗಿ ಸರ್ಕಾರವು ವ್ಯಯಿಸುತ್ತಿರುವ ಅಮೂಲ್ಯವಾದ ವಿದೇಶೀ ವಿನಿಮಯವೂ  ಉಳಿತಾಯವಾಗಲಿದೆ.

ಆದರೂ ಕೇವಲ ಕೆಲವಿಧದ ಪ್ಲಾಸ್ಟಿಕ್ ಗಳನ್ನು ನಿಷೇಧಿಸುವುದರಿಂದ ತ್ಯಾಜ್ಯಗಳ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳುವ ಸಾಧ್ಯತೆಗಳಿಲ್ಲ. ಹಾಗೂ ಇದೇ ಕಾರಣದಿಂದಾಗಿ ಸರ್ಕಾರವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಪ್ರಸ್ತುತ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಿದಂತೆಯೇ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಇವುಗಳು ಉತ್ಪನ್ನವಾಗುವ ಮೂಲಗಳಿಂದಲೇ ಪ್ರತ್ಯೇಕಿಸಿ ಸಂಗ್ರಹಿಸುವ, ಸುರಕ್ಷಿತವಾಗಿ ಸಾಗಿಸುವ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಗಳನ್ನು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲೂ ಒದಗಿಸಬೇಕು. ಉದಾಹರಣೆಗೆ  ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುವುದನ್ನು ಕಡ್ಡಾಯಗೊಳಿಸುವ ಮೂಲಕ, ರಸ್ತೆಗಳ ನಿರ್ಮಾಣದ ವೆಚ್ಚವನ್ನು ಉಳಿಸುವ, ರಸ್ತೆಗಳ ಆಯುಷ್ಯವನ್ನು ಹೆಚ್ಚಿಸುವ ಮತ್ತು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಹಾಗೂ ಉಪಯುಕ್ತವೆನಿಸುವಂತೆ ವಿಲೇವಾರಿ ಮಾಡುವ ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲೇಬೇಕು. ಇಂತಹ ಉಪಕ್ರಮಗಳನ್ನು ಶೀಘ್ರದಲ್ಲಿ ಜಾರಿಗೊಳಿಸದೇ, ಕೇವಲ ನಿರ್ದಿಷ್ಟ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಅಪೇಕ್ಷಿತ ಫಲಿತಾಂಶ ದೊರೆಯದು ಎನ್ನುವುದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ನಿಷೇಧಿಸಲ್ಪಡಲಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ವರ್ತಕರು ಖರೀದಿಸದಿರುವ ಮತ್ತು ಗ್ರಾಹಕರು ತಿರಸ್ಕರಿಸುವ ಇಚ್ಛಾಶಕ್ತಿಯನ್ನು ತೋರದಿದ್ದಲ್ಲಿ, ಸರ್ಕಾರದ ಪ್ರಯತ್ನವು ನಿಶ್ಚಿತವಾಗಿಯೂ ನಿಷ್ಪ್ರಯೋಜಕ ಎನಿಸಲಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು