Sunday, November 13, 2016

EYES ON DIABETES

                           ನ. ೧೪ : ವಿಶ್ವ ಮಧುಮೇಹ ದಿನಾಚರಣೆ
                    ಮಧುಮೇಹದ ಮೇಲೊಂದು ಕಣ್ಣಿರಲಿ
           

ಮಧುಮೇಹ ಎನ್ನುವ ಸುಂದರ ನಾಮಧೇಯದ ಗಂಭೀರ ಕಾಯಿಲೆಯು, ಈ ವ್ಯಾಧಿಪೀಡಿತರ ಪಾಲಿಗೆ ಅತ್ಯಂತ “ ಕಹಿ “ ಎಂದೆನಿಸುವುದು ಸುಳ್ಳೇನಲ್ಲ. ಅದರಲ್ಲೂ ವಿಶೇಷವಾಗಿ ಸಿಹಿತಿಂಡಿಗಳನ್ನು ಮೆಚ್ಚಿ ಸವಿಯುವ ಭಾರತೀಯರಿಗೆ, ಈ ವ್ಯಾಧಿಯ ಇರುವಿಕೆಗಿಂತಲೂ ಹೆಚ್ಚಾಗಿ, ಸಕ್ಕರೆ ಹಾಗೂ ಬೆಲ್ಲಗಳನ್ನು ಬಳಸಿ ಸಿದ್ಧಪಡಿಸುವ ವೈವಿಧ್ಯಮಯ ಸಿಹಿತಿಂಡಿಗಳನ್ನು ತಿನ್ನುವಂತಿಲ್ಲ ಎನ್ನುವ ವಿಚಾರವೇ ಅತ್ಯಂತ ಅಸಹನೀಯವೆನಿಸುತ್ತದೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಹುಟ್ಟಿನಿಂದ ಸಾವಿನ ತನಕ ನಾವು ಆಚರಿಸುವ ಪ್ರತಿಯೊಂದು ಸಮಾರಂಭಗಳಲ್ಲಿ ಸಿಹಿತಿಂಡಿಗಳಿಗೆ ಸಿಂಹಪಾಲು ಸಲ್ಲುತ್ತದೆ. ಪ್ರಾಯಶಃ ಇದೇ ಕಾರಣದಿಂದಾಗಿ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯ ಮಧುಮೇಹ ಪೀಡಿತರು ನಮ್ಮ ದೇಶದಲ್ಲೇ ಇರುವುದರಿಂದಾಗಿ, ಭಾರತವು ವಿಶ್ವದ ಮಧುಮೇಹಿಗಳ ರಾಜಧಾನಿ “ ಎಂದೇ ಕರೆಯಲ್ಪಡುತ್ತಿದೆ. ವಿಶ್ವ ಮಧುಮೇಹ ದಿನದ ಸಲುವಾಗಿ ಈ ವ್ಯಾಧಿಯ ಬಗ್ಗೆ ಅರಿವು ಮೂಡಿಸುವ ಕಿಂಚಿತ್ ಮಾಹಿತಿ ಇಲ್ಲಿದೆ.

ವಿಶ್ವದ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳನ್ನು ಕಾಡುತ್ತಿರುವ ಮಧುಮೇಹ ವ್ಯಾಧಿಯ ಪಿಡುಗು, ಇತ್ತೀಚಿನ ಕೆಲ ವರ್ಷಗಳಿಂದ ಅನಿಯಂತ್ರಿತವಾಗಿ ಹೆಚ್ಚುತ್ತಿದೆ. ಶಾಶ್ವತ ಪರಿಹಾರವಿಲ್ಲದ ಹಾಗೂ ಸಂಕೀರ್ಣ ಸಮಸ್ಯೆಗಳಿಗೆ ಮತ್ತು ಕಾರಣಾಂತರಗಳಿಂದ ರೋಗಿಯ ಅಕಾಲಿಕ ಮರಣಕ್ಕೂ ಕಾರಣವೆನಿಸಬಲ್ಲ ಈ ಗಂಭೀರ ಹಾಗೂ ಮಾರಕ ಕಾಯಿಲೆಯನ್ನು ನಾವಿಂದು ನಿಯಂತ್ರಿಸಬೇಕಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಅಂತರರಾಷ್ಟ್ರೀಯ ಮಧುಮೇಹ ಒಕ್ಕೂಟವು ವರ್ಷಂಪ್ರತಿ ನವೆಂಬರ್ ೧೪ ರಂದು ಆಚರಿಸುವ “ ವಿಶ್ವ ಮಧುಮೇಹ ದಿನ “ ಮತ್ತು ಈ ವ್ಯಾಧಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯೋಜಿಸುತ್ತಿರುವ ಅಭಿಯಾನದಲ್ಲಿ ನಾವೆಲ್ಲರೂ ಪಾಲ್ಗೊಳ್ಳಬೇಕಿದೆ. ಏಕೆಂದರೆ ಮಧುಮೇಹ ಪೀಡಿತ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೆ, ತಮ್ಮನ್ನು ಈ ವ್ಯಾಧಿ ಕಾಡುತ್ತಿರುವ  ಬಗ್ಗೆ ತಿಳಿದಿರುವುದೇ ಇಲ್ಲ!.

ಚಾರ್ಲ್ಸ್ ಬೆಸ್ಟ್ ಎನ್ನುವ ಸಹಸಂಶೋಧಕನೊಂದಿಗೆ ಸೇರಿ ಜಗತ್ತಿನ ಮಧುಮೇಹಿಗಳ ಪಾಲಿಗೆ ಸಾಕ್ಷಾತ್ “ ಸಂಜೀವಿನಿ “ ಎನಿಸಿರುವ “ ಇನ್ಸುಲಿನ್ “ ಔಷದವನ್ನು ೧೯೨೨ ಆವಿಷ್ಕರಿಸಿದ್ದ ಫ್ರೆಡರಿಕ್ ಬಾಂಟಿಂಗ್ ನ ಜನ್ಮದಿನವಾದ ನ. ೧೪ ನ್ನು, ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ನ. ೧೪ ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ಮಧುಮೇಹದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಮತ್ತು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸುತ್ತಿವೆ.

ಮಧುಮೇಹ – ಡಯಾಬೆಟೆಸ್

ಮನುಷ್ಯನ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಯಲ್ಲಿನ ಬೀಟಾ ಕಣಗಳು ಉತ್ಪಾದಿಸುವ ಇನ್ಸುಲಿನ್ ನ ಪ್ರಮಾಣದಲ್ಲಿ ಕೊರತೆಯಾದಾಗ ಅಥವಾ ಶರೀರವು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾದಾಗ ಅಥವಾ ಇನ್ಸುಲಿನ್ ನ ಉತ್ಪಾದನೆಯೇ ಸಂಪೂರ್ಣವಾಗಿ ನಶಿಸಿದಾಗ, ಡಯಾಬೆಟೆಸ್ ಅರ್ಥಾತ್ ಮಧುಮೇಹ ವ್ಯಾಧಿಯು ಉದ್ಭವಿಸುತ್ತದೆ. ತತ್ಪರಿಣಾಮವಾಗಿ ರೋಗಿಯ ರಕ್ತದಲ್ಲಿನ ಸಕ್ಕರೆಯ ಅಂಶವು ಅನಿಯಂತ್ರಿತವಾಗಿ ಹೆಚ್ಚುತ್ತದೆ.

ಮಧುಮೇಹವನ್ನು ಇನ್ಸುಲಿನ್ ಅವಲಂಬಿತ ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಎಂದು ಸ್ಥೂಲವಾಗಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಇದಲ್ಲದೇ ಮಹಿಳೆಯರು ಗರ್ಭಧರಿಸಿದಾಗ ಕಂಡುಬರುವ ಮಧುಮೇಹವು, ಸಾಮಾನ್ಯವಾಗಿ ಹೆರಿಗೆಯ ಬಳಿಕ ಕಣ್ಮರೆಯಾಗುವುದು.
ಇನ್ಸುಲಿನ್ ಅವಲಂಬಿತ ಮಧುಮೇಹವು ನವಜಾತ ಶಿಶುವಿನಿಂದ ಆರಂಭಿಸಿ, ಯಾವುದೇ ವಯಸ್ಸಿನವರಲ್ಲೂ ಉದ್ಭವಿಸಬಹುದು. ಆದರೆ ಎರಡನೆಯ ವಿಧದ ಮಧುಮೇಹವು ಹೆಚ್ಚಾಗಿ ಮಧ್ಯ ವಯಸ್ಸಿನಲ್ಲಿ ಅಥವಾ ಇಳಿವಯಸ್ಸಿನಲ್ಲಿ ತಲೆದೋರುವುದಾದರೂ, ಇತ್ತೀಚಿನ ಕೆಲವರ್ಷಗಳಿಂದ ಯೌವ್ವನಸ್ತರಲ್ಲೂ ಪತ್ತೆಯಾಗುತ್ತಿದೆ. ಜೊತೆಗೆ ಇವೆರಡೂ ವಿಧದ ಮಧುಮೇಹ ವ್ಯಾಧಿಯ ಪ್ರಮಾಣವು ತ್ವರಿತಗತಿಯಲ್ಲಿ ವೃದ್ಧಿಸುತ್ತಿದೆ.

ಆಧುನಿಕ – ನಿಷ್ಕ್ರಿಯ ಜೀವನ ಶೈಲಿ, ನಿರುಪಯುಕ್ತ ಮತ್ತು ಅತಿಆಹಾರ ಸೇವನೆ, ಅಧಿಕ ತೂಕ – ಅತಿಬೊಜ್ಜು, ತೀವ್ರ ಮಾನಸಿಕ ಒತ್ತಡ, ಅನುವಂಶಿಕತೆ ಮತ್ತು ಅನ್ಯ ಕೆಲ ಕಾರಣಗಳು ಮಧುಮೇಹ ಉದ್ಭವಿಸಲು ಪ್ರಮುಖ ಕಾರಣಗಳೆನಿಸುತ್ತವೆ.

ಪೂರ್ವಸೂಚನೆಗಳು

ಅತಿಆಯಾಸ, ಅತಿಯಾದ ಬಾಯಾರಿಕೆ, ಶರೀರದ ತೂಕ ಕಡಿಮೆಯಾಗುವುದು, ತಲೆತಿರುಗುವಿಕೆ, ಕಣ್ಣುಗಳ ದೃಷ್ಠಿ ಮಂಜಾಗುವುದು, ಪದೇಪದೇ ಮೂತ್ರ ವಿಸರ್ಜಿಸಬೇಕೆನಿಸುವುದು, ಮೂತ್ರಾಂಗಗಳಲ್ಲಿ ತುರಿಕೆ, ಗಾಯಗಳು ಮತ್ತು ಅನ್ಯ ಕಾಯಿಲೆಗಳು ಬೇಗನೆ ವಾಸಿಯಾಗದೇ ಉಲ್ಬಣಿಸುವುದೇ ಮುಂತಾದ ಪೂರ್ವಸೂಚನೆಗಳು ಮಧುಮೇಹ ಪೀಡಿತರಲ್ಲಿ ಕಂಡುಬರುತ್ತವೆ.

ಪತ್ತೆಹಚ್ಚುವುದೆಂತು?

ಬೆಳಗ್ಗೆ ಆಹಾರ ಸೇವಿಸುವ ಮುನ್ನ ( ಬರೀ ಹೊಟ್ಟೆಯಲ್ಲಿ ) ನಿಮ್ಮ ರಕ್ತದಲ್ಲಿನ ಗ್ಲುಕೋಸ್ ನ ಪ್ರಮಾಣವು ೧೦೦ ಎಂ. ಜಿ / ಡಿ ಸಿ ಎಲ್ ಗಿಂತ ಹೆಚ್ಚಿದ್ದಲ್ಲಿ ಅಥವಾ ಮಧ್ಯಾಹ್ನ ಊಟಮಾಡಿದ ಎರಡು ಗಂಟೆಯ ಬಳಿಕ ೧೪೦ ಎಂ. ಜಿ / ಡಿ ಸಿ ಎಲ್ ಗಿಂತ ಅಧಿಕವಿದ್ದಲ್ಲಿ, ನಿಮಗೆ ಮಧುಮೇಹ ವ್ಯಾಧಿ ಇದೆಯೆಂದು ತಿಳಿಯಿರಿ. ಆದರೆ ರಕ್ತದಲ್ಲಿನ ಗ್ಲುಕೋಸ್ ನ ಪ್ರಮಾಣವು ಅಲ್ಪಪ್ರಮಾಣದಲ್ಲಿ ಹೆಚ್ಚಿದ್ದಲ್ಲಿ, ಕೇವಲ ಆಹಾರ ಸೇವನೆಯಲ್ಲಿ ಪಥ್ಯ ಮತ್ತು ಜೀವನ ಶೈಲಿಯ ಬದಲಾವಣೆಗಳಿಂದ ಇದನ್ನು ನಿಯಂತ್ರಿಸಬಹುದಾಗಿದೆ. ಈ ವಿಧಾನ ಅಪೇಕ್ಷಿತ ಪರಿಣಾಮ ನೀಡದಿದ್ದಲ್ಲಿ ಮಾತ್ರ ದೈನಂದಿನ ಔಷದ ಸೇವನೆ ಅನಿವಾರ್ಯವೆನಿಸುವುದು.

ಚಿಕಿತ್ಸೆ

ಮಧುಮೇಹ ಪೀಡಿತ ವ್ಯಕ್ತಿಗಳು ತಮ್ಮ ಜೀವನ ಶೈಲಿಯಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳುವುದರೊಂದಿಗೆ, ಆಹಾರ ಸೇವನೆಯಲ್ಲಿ ಪಥ್ಯ, ದಿನನಿತ್ಯ ವ್ಯಾಯಾಮ, ನಡಿಗೆ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ಶರೀರದ ತೂಕ ಮತ್ತು ಅಧಿಕ ಬೊಜ್ಜನ್ನು ಇಳಿಸಿಕೊಳ್ಳುವುದು, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳುವುದರೊಂದಿಗೆ ತಜ್ಞ ವೈದ್ಯರು ಸೂಚಿಸಿದ ಔಷದಗಳನ್ನು ಕ್ರಮಬದ್ಧವಾಗಿ ಸೇವಿಸುವ ಮೂಲಕ ಈ ವ್ಯಾಧಿಯನ್ನು ನಿಶ್ಚಿತವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದಾಗಿದೆ. ಜೊತೆಗೆ ನಿಗದಿತ ಅವಧಿಯಲ್ಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ, ತಮ್ಮ ವ್ಯಾಧಿ ನಿಯಂತ್ರಣದಲ್ಲಿರುವ ಅಥವಾ ಹದ್ದುಮೀರಿರುವ ವಿಚಾರವನ್ನು ಸುಲಭದಲ್ಲೇ ಅರಿತುಕೊಳ್ಳಬಹುದಾಗಿದೆ.

ತಪ್ಪುಕಲ್ಪನೆಗಳು

ಮಧುಮೇಹ ಪೀಡಿತರಿಗೆ ಕೇವಲ ಸಕ್ಕರೆಯನ್ನು ಬಳಸಿ ತಯಾರಿಸಿದ ಖಾದ್ಯಪೇಯಗಳು ನಿಷಿದ್ಧ. ಆದುದರಿಂದ ಬೆಲ್ಲ ಮತ್ತು ಜೇನುತುಪ್ಪಗಳನ್ನು ಸೇವಿಸಬಹುದು ಎಂದು ಅನೇಕರು ನಂಬಿದ್ದು, ಇದು ಅಪ್ಪಟ ಸುಳ್ಳು. ಏಕೆಂದರೆ ಸಕ್ಕರೆ ಮತ್ತು ಬೆಲ್ಲಗಳನ್ನು ತಯಾರಿಸುವುದ ಕಬ್ಬಿನಿಂದಲೇ ಎನ್ನುವುದು ನಿಮಗೂ ತಿಳಿದಿದೆಯಲ್ಲವೇ?.

ಮಧುಮೇಹ ವ್ಯಾಧಿಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವನ್ನು ಇಂದಿನ ತನಕ ಯಾವುದೇ ವೈದ್ಯಕೀಯ ವಿಜ್ಞಾನಿಗಳು ಪತ್ತೆಹಚ್ಚಿಲ್ಲ. ಆದರೆ ಈ ವ್ಯಾಧಿಯಲ್ಲದೇ ಶಾಶ್ವತ ಪರಿಹಾರವೇ ಇಲ್ಲದ ಅನ್ಯ ಕೆಲ ವ್ಯಾಧಿಗಳನ್ನೂ ಶಾಶ್ವತವಾಗಿ ಗುಣಪಡಿಸುವುದಾಗಿ ಘೋಷಿಸುವ ಜಾಹೀರಾತುಗಳಿಗೆ ನಮ್ಮ ದೇಶದಲ್ಲಿ ಬರವಿಲ್ಲ. ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಇಂತಹ “ ದಾರಿತಪ್ಪಿಸುವ ಜಾಹೀರಾತು “ ಗಳಿಗೆ ಮರುಳಾಗಿ, ತಾವು ಸೇವಿಸುತ್ತಿದ್ದ ಔಷದಗಳನ್ನು ತ್ಯಜಿಸಿ, ನಕಲಿ ವೈದ್ಯರ – ಔಷದ ತಯಾರಕರ ಚಿಕಿತ್ಸೆಗಳನ್ನು ಪ್ರಯೋಗಿಸಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ಇವೆಲ್ಲವುಗಳ ಅರಿವಿದ್ದರೂ ಆರೋಗ್ಯ ಇಲಾಖೆ, ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ಇಂತಹ ಕಾನೂನುಬಾಹಿರ ಜಾಹೀರಾತುಗಳನ್ನು ನೀಡುವವರ ವಿರುದ್ಧ ಯಾವುದೇ ಕಾನೂನುಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ನಮ್ಮ ದೇಶದಲ್ಲಿ ಇಂತಹ ವ್ಯಾಧಿಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ನೊಬೆಲ್ ಪ್ರಶಸ್ತಿ

ಮಧುಮೇಹ ಹಾಗೂ ಶಾಶ್ವತ ಪರಿಹಾರವಿಲ್ಲದ ಅನ್ಯ ವ್ಯಾಧಿಗಳನ್ನು ನಿಶ್ಚಿತವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಪತ್ತೆ ಹಚ್ಚಿದವರಿಗೆ “ ನೊಬೆಲ್ ಪ್ರಶಸ್ತಿ “ ಕಟ್ಟಿಟ್ಟ ಬುತ್ತಿ. ಇಂತಹ ಕಾಯಿಲೆಗಳನ್ನು ಗುಣಪಡಿಸಬಲ್ಲ ಔಷದಗಳನ್ನು ತಾವು ಸಂಶೋಧಿಸಿರುವುದಾಗಿ ಜಾಹೀರಾತುಗಳನ್ನು ನೀಡಿ, ಜುಜುಬಿ ಮೊತ್ತದ ಹಣವನ್ನು ಸಂಪಾದಿಸುವುದರ ಬದಲಾಗಿ, ನೊಬೆಲ್ ಪ್ರಶಸ್ತಿಯೊಂದಿಗೆ ಲಕ್ಷಾಂತರ ಡಾಲರ್ ಬಹುಮಾನವನ್ನೂ ಗಳಿಸುವ ಅವಕಾಶವನ್ನು ಇವರು ಬಳಸಿಕೊಳ್ಳದಿರಲು ಕಾರಣವೇನೆಂದು ಇದೀಗ ನಿಮಗೂ ಅರ್ಥವಾಗಿರಬೇಕಲ್ಲವೇ?.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು




Saturday, November 5, 2016

CONSTRUCTION WASTE - RECYCLE AND REUSE


          ಕಟ್ಟಡಗಳ ಭಗ್ನಾವಶೇಷ : ಮರುಬಳಕೆಗಿದೆ ಅವಕಾಶ !

ನಿರಂತರ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ ನಾವಿಂದು ನಿರ್ಮಿಸುತ್ತಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳು, ರಸ್ತೆ, ಸೇತುವೆ, ಫ್ಲೈ ಓವರ್, ಸಬ್ ವೇ ಇತ್ಯಾದಿಗಳ ನಿರ್ಮಾಣ ಕಾಮಗಾರಿಗಳೂ ಶರವೇಗದಲ್ಲಿ ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಹಳೆಯ ಹಾಗೂ ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾಮಗಾರಿಗಳೂ ಎಡೆಬಿಡದೆ ಸಾಗುತ್ತಿವೆ. ತತ್ಪರಿಣಾಮವಾಗಿ ಇವುಗಳಿಂದ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿ ಹೆಚ್ಚುತ್ತಿವೆ. ಈ ತ್ಯಾಜ್ಯಗಳನ್ನು ನಾವು ಮರುಬಳಕೆ ಮಾಡದೇ ಇದ್ದಲ್ಲಿ, ಇವುಗಳನ್ನು ತುಂಬಿಸಲು ಅಥವಾ ವಿಲೇವಾರಿ ಮಾಡಲು ಬೇಕಾಗುವ ಲ್ಯಾಂಡ್ ಫಿಲ್ ಸೈಟ್ ಗಳ ಸಂಖ್ಯೆಯೂ ಇನ್ನಷ್ಟು ವೃದ್ಧಿಸಲಿದೆ. ಲಭ್ಯ ಮಾಹಿತಿಯಂತೆ ಪುರಸಭಾ ತ್ಯಾಜ್ಯಗಳಲ್ಲಿ ಶೇ. ೧೦ ರಿಂದ ೨೦ ರಷ್ಟಿರುವ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡದೇ ಇದ್ದಲ್ಲಿ, ಈ ತ್ಯಾಜ್ಯಗಳಿಂದ ಉದ್ಭವಿಸಲಿರುವ ಗಂಭೀರ ಮತ್ತು ಅಪಾಯಕಾರಿ ಸಮಸ್ಯೆಗಳು ದೇಶದ ಪ್ರಗತಿಗೆ ಕಂಟಕವಾಗಿ ಪರಿಣಮಿಸಲಿವೆ.

ಭಗ್ನಾವಶೇಷಗಳು

ಬಹುತೇಕ ನೂತನ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ, ಹಳೆಯ ಕಟ್ಟಡಗಳನ್ನು ಕೆಡವಲಾಗುತ್ತದೆ. ಅದೇ ರೀತಿಯಲ್ಲಿ ಕೆಲ ಹಳೆಯ ಕಟ್ಟಡಗಳನ್ನು ಪುನರ್ ನವೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಗಾಧ ಪ್ರಮಾಣದ ತ್ಯಾಜ್ಯಗಳು ಉತ್ಪನ್ನವಾಗುತ್ತವೆ. ಸಾಮಾನ್ಯವಾಗಿ ಇಂತಹ ತ್ಯಾಜ್ಯಗಳನ್ನು ನಿರುಪಯುಕ್ತ ಎಂದು ಪರಿಗಣಿಸುವುದರಿಂದ, ಅಯಾ ಪಟ್ಟಣ ಅಥವಾ ನಗರಗಳ ಹೊರವಲಯದಲ್ಲಿನ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ತಂದು ಸುರಿಯಲಾಗುತ್ತದೆ.

ಕತ್ತಲಾದ ಬಳಿಕವೇ ನಡೆಯುವ ಇಂತಹ “ ಅನೈತಿಕ ತ್ಯಾಜ್ಯ ವಿಲೇವಾರಿ “ ಯಿಂದಾಗಿ, ರಸ್ತೆಗಳ ಇಕ್ಕೆಲಗಳಲ್ಲಿರುವ ಚರಂಡಿಗಳು ಮುಚ್ಚಲ್ಪಡುವುದರಿಂದ ಮಳೆಗಾಲದ ದಿನಗಳಲ್ಲಿ ನೂತನ ರಸ್ತೆಗಳೂ ನಿರ್ನಾಮಗೊಳ್ಳುತ್ತವೆ. ಮುನಿಸಿಪಲ್ ಕಾಯಿದೆಯಂತೆ ಇಂತಹ ತ್ಯಾಜ್ಯಗಳನ್ನು ಕೇವಲ ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ಮಾತ್ರ ವಿಲೇವಾರಿ ಮಾಡಬೇಕಾಗುವುದಾದರೂ, ರಸ್ತೆಗಳ ಬದಿಗಳಲ್ಲಿ ಸುರಿಯುವ ಹವ್ಯಾಸ ದಿನೇದಿನೇ ಹೆಚ್ಚುತ್ತಿದೆ. ನಿಶಾಚರರು ನಡೆಸುವ ಈ ಕಾರ್ಯಾಚರಣೆಯನ್ನು ತಡೆಗಟ್ಟಲು ಆಗದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಅನಿವಾರ್ಯವಾಗಿ ಸುಮ್ಮನಿರಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿದೆ.

ತ್ಯಾಜ್ಯ – ವಿಲೇವಾರಿ

ನಮ್ಮ ದೇಶದಲ್ಲಿ ವರ್ಷಂಪ್ರತಿ ೧೦ ರಿಂದ ೧೫ ದಶಲಕ್ಷ ಟನ್ ಗಳಷ್ಟು ಪ್ರಮಾಣದ “ ನಿರ್ಮಾಣ ಕಾಮಗಾರಿಗಳ ತ್ಯಾಜ್ಯ “ ಉತ್ಪನ್ನವಾಗುತ್ತವೆ. ಆದರೆ ಇದರ ಅತಿ ಸಣ್ಣ ಪಾಲು ಮಾತ್ರ ಮರುಬಳಕೆಯಾಗುತ್ತಿದೆ. ಮುನಿಸಿಪಲ್ ಘನತ್ಯಾಜ್ಯ ನಿರ್ವಹಣೆಯ ಕಾಯಿದೆ ೨೦೦೦ ದಂತೆ, ಇಂತಹ ತ್ಯಾಜ್ಯಗಳನ್ನು ಪ್ರತ್ಯೆಕಿಸಬೇಕಾಗಿದ್ದರೂ, ಅನ್ಯ ತ್ಯಾಜ್ಯಗಳೊಂದಿಗೆ ಇವುಗಳನ್ನು ಬೆರೆಸಿ ವಿಲೇವಾರಿ ಮಾಡಲಾಗುತ್ತಿದೆ. ಗತವರ್ಷದಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ್ದ ಭೀಕರ ನೆರೆ ದುರಂತಕ್ಕೆ ಅನಿಯಂತ್ರಿತ, ಕಾನೂನುಬಾಹಿರ ಮತ್ತು ಅತಿಯಾದ ನಿರ್ಮಾಣ ಕಾಮಗಾರಿಗಳು ಮತ್ತು ಇವುಗಳಿಂದ ಉತ್ಪನ್ನವಾಗಿದ್ದ ತ್ಯಾಜ್ಯಗಳನ್ನು ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡಿದ್ದುದೇ ಕಾರಣವೆನಿಸಿತ್ತು.

ಪುನರ್ ಆವರ್ತನ – ಮರುಬಳಕೆ        

ಅನೇಕ ದೇಶಗಳಲ್ಲಿ ಕಟ್ಟಡಗಳನ್ನು ಧ್ವಂಸಗೊಳಿಸುವ ಸಂದರ್ಭದಲ್ಲಿ ದೊರೆಯುವ ಇಟ್ಟಿಗೆ, ಕಲ್ಲು ಮತ್ತು ಕಾಂಕ್ರೀಟ್ ತುಂಡುಗಳನ್ನು ಹುಡಿಮಾಡಿದ ಬಳಿಕ, ಇವುಗಳನ್ನು ನೂತನ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲೂ ಈ ವಿಧಾನವನ್ನು ಅನುಸರಿಸುವುದಾದಲ್ಲಿ, ಈ ವಿನೂತನ ವಿಧಾನವನ್ನು ಭಾರತದಲ್ಲೂ ಅನುಷ್ಠಾನಿಸುವುದು ಅಸಾಧ್ಯವೇನಲ್ಲ. ಇಂತಹ ಉಪಯುಕ್ತ ಉಪಕ್ರಮಗಳಿಂದ ನೂತನ ನಿರ್ಮಾಣ ಕಾಮಗಾರಿಗಳ ವೆಚ್ಚ ಕಡಿಮೆಯಾಗುವುದರೊಂದಿಗೆ, ನಿರುಪಯುಕ್ತ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಇದಕ್ಕೂ ಮಿಗಿಲಾಗಿ ರಸ್ತೆಗಳ ಬದಿಗಳಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವ ಮೂಲಕ ರಸ್ತೆಗಳನ್ನೇ ಹಾಳುಗೆಡಹುವ ಅನಿಷ್ಠ ಪದ್ದತಿಗೆ ವಿದಾಯ ಹೇಳಬಹುದಾಗಿದೆ.

ಒಂದೆರಡು ವರ್ಷಗಳ ಹಿಂದಿನ ಮಾಹಿತಿಯಂತೆ ದೆಹಲಿಯ ಮುನಿಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು ೪೦೦೦ ಟನ್ ಗಳಷ್ಟು ನಿರ್ಮಾಣ ಕಾಮಗಾರಿಗಳ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಅರ್ಥಾತ್, ಒಂದು ವರ್ಷದಲ್ಲಿ ೧.೫ ದಶಲಕ್ಷ ಟನ್ ತ್ಯಾಜ್ಯವು ದೇಶದ ರಾಜಧಾನಿಯೊಂದರಲ್ಲೇ ಸಂಗ್ರಹವಾಗುತ್ತಿತ್ತು. ಈ ತ್ಯಾಜ್ಯಗಳನ್ನು ಮರುಬಳಕೆ ಅಥವಾ ಪುನರ್ ಆವರ್ತನಗೊಳಿಸಿ ಬಳಸಿದ್ದಲ್ಲಿ, ಅಲ್ಲಿನ ಲ್ಯಾಂಡ್ ಫಿಲ್ ಸೈಟ್ ಗಳ ಆಯುಷ್ಯವು ಇನ್ನಷ್ಟು ಹೆಚ್ಚುತ್ತಿತ್ತು!. ಜೊತೆಗೆ ನೂತನ ರಸ್ತೆಗಳ ನಿರ್ಮಾಣದಲ್ಲಿ ಈ ತ್ಯಾಜ್ಯಗಳನ್ನು ಬಳಸಿದ್ದಲ್ಲಿ, ನಿರ್ಮಾಣ ವೆಚ್ಚ ಕಡಿಮೆಯಾಗುತ್ತಿದ್ದುದರಿಂದ ಇನ್ನಷ್ಟು ಹೊಸ ರಸ್ತೆಗಳನ್ನು ನಿರ್ಮಿಸಬಹುದಾಗಿತ್ತು.

ಕೊನೆಯ ಮಾತು

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಯಾದಿಯಲ್ಲಿರುವ ಅಮೇರಿಕ. ಇಂಗ್ಲೆಂಡ್, ಜಪಾನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳು ಈಗಾಗಲೇ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸುವ ಅಥವಾ ಮರುಬಳಕೆ ಮಾಡುವ ಸಲುವಾಗಿ ಅವಶ್ಯಕ ಕಾನೂನು – ನಿಯಮಗಳನ್ನು ರೂಪಿಸಿವೆ. ಮಾತ್ರವಲ್ಲ, ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂದಿನ ತನಕ ಇಂತಹ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಉಪಯುಕ್ತವೆನಿಸುವ ಮತ್ತು ನೂತನ ನಿರ್ಮಾಣ ಕಾಮಗಾರಿಗಳ ವೆಚ್ಚವನ್ನು ಕಡಿಮೆಮಾಡಬಲ್ಲ ವಿಧಾನಗಳ ಬಗ್ಗೆ ಚಿಂತಿಸಲು ನಮ್ಮನ್ನಾಳುವವರಿಗೆ ಸಮಯವೇ ಇಲ್ಲ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು




                                                                                                 

Wednesday, October 26, 2016

BDA : SUPPRESSING RTI?

           ಬಿ ಡಿ ಎ : ಮಾಹಿತಿಹಕ್ಕು ಕಾಯಿದೆಯನ್ನು ದಮನಿಸುತ್ತಿದೆಯೇ?

ಕೆಲದಿನಗಳಿಂದ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿಸಿರುವ ಮತ್ತು ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವೆನಿಸಿರುವ “ ಉಕ್ಕಿನ ಮೇಲ್ಸೇತುವೆ “ ಯ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮಾಹಿತಿಹಕ್ಕು ಕಾರ್ಯಕರ್ತರೊಬ್ಬರಿಗೆ ನೀಡಲು ಬಿ ಡಿ ಎ ನಿರಾಕರಿಸಿದೆ. ತನ್ಮೂಲಕ ಸರ್ಕಾರವೇ ತನ್ನ ಪ್ರಜೆಗಳಿಗೆ ನೀಡಿದ್ದ ಮಾಹಿತಿ ಪಡೆಯುವ ಹಕ್ಕನ್ನು ದಮನಿಸಿದೆ!.

 ದೇಶಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ ಜಾರಿಗೆ ಬಂದು ೧೧ ವರ್ಷಗಳೇ ಸಂದಿವೆ. ಈ ಅವಧಿಯಲ್ಲಿ ಈ ಕಾಯಿದೆಯನ್ನು ದುರ್ಬಲಗೊಳಿಸಲು, ತೆರೆಯ ಮರೆಯಲ್ಲಿ ನಿರಂತರ ಪ್ರಯತ್ನಗಳೂ ನಡೆಯುತ್ತಲೇ ಇವೆ. ಪ್ರಾರಂಭಿಕ ಹಂತದಿಂದಲೂ ಈ ಕಾಯಿದೆಯನ್ನು ವಿರೋಧಿಸುತ್ತಿದ್ದ ಅನೇಕ ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಬಹುಕೋಟಿ ಹಗರಣಗಳು ಬೆಳಕಿಗೆ ಬರಲು ಈ ಪ್ರಬಲ ಕಾಯಿದೆ ಕಾರಣವೆನಿಸಿದೆ. ಜನಸಾಮಾನ್ಯರ ಪಾಲಿಗೆ ಅತ್ಯಂತ ಪ್ರಬಲ ಅಸ್ತ್ರವೆನಿಸಿರುವ ಹಕ್ಕು ಕಾಯಿದೆಯನ್ವಯ ಅರ್ಜಿ ಸಲ್ಲಿಸಿದ್ದ ಪ್ರಜೆಗಳಿಗೆ ಕುಂಟು ನೆಪವನ್ನು ಮುಂದೊಡ್ಡಿ ಅಪೇಕ್ಷಿತ ಮಾಹಿತಿಗಳನ್ನು ನೀಡಲು ನಿರಾಕರಿಸಿದ ಪ್ರಕರಣಗಳು ಸಾಕಷ್ಟಿವೆ. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಇದಕ್ಕೆ ಸೇರ್ಪಡೆಯಾಗಿದೆ!.

ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ನೂತನ  " ಸ್ಟೀಲ್ ಫ್ಲೈ ಓವರ್ " ಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವಂತೆ ಮಾ.. ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸಿದ್ದ ವ್ಯಕ್ತಿಗೆ ಬಿ. ಡಿ. ಎ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಉತ್ತರವು, ಈ ಕಾಯಿದೆಯ ಮೂಲ ಉದ್ದೇಶಕ್ಕೆ ಧಕ್ಕೆಯುಂಟುಮಾಡುವಂತಿದೆ!.

ಮಾಹಿತಿಯೇ ಅಲ್ಲ!

ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳವನ್ನು ಸಂಪರ್ಕಿಸುವ ಸಲುವಾಗಿ ನಿರ್ಮಿಸಲು ಉದ್ದೇಶಿಸಿರುವ ಸುಮಾರು ೧೮೦೦ ಕೋಟಿ ರೂ. ವೆಚ್ಚದ ಸ್ಟೀಲ್ ಫ್ಲೈ ಓವರ್ ನಿರ್ಮಾಣದ ಸಲುವಾಗಿ ಕರೆದಿದ್ದ ಟೆಂಡರ್ ನ ವಿವರಗಳನ್ನು ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದ ಸಾಯಿದತ್ತ ಎನ್ನುವ ಕಾರ್ಯಕರ್ತರಿಗೆ ಬಿ.ಡಿ. ಎ ನೀಡಿರುವ ಉತ್ತರ ಇಂತಿದೆ. ಸಾ. ಮಾ ಅಧಿಕಾರಿ ನೀಡಿರುವ ಉತ್ತರದಲ್ಲಿ ಅರ್ಜಿದಾರರು ಕೋರಿರುವ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ, ಏಕೆಂದರೆ ಈ ಮಾಹಿತಿಗಳು ಮಾಹಿತಿಹಕ್ಕು ಕಾಯಿದೆಯನ್ವಯ " ಮಾಹಿತಿ " ಎಂದು ಅರ್ಥೈಸುವಂತಿಲ್ಲ. ಅರ್ಜಿದಾರರು ಅಪೇಕ್ಷಿಸಿರುವ ದಾಖಲೆಗಳನ್ನು ಸೃಷ್ಟಿಸಬೇಕಿದ್ದು, ಇದರ ವಿವರಗಳು ಬಿ.ಡಿ. ಎ ಮತ್ತು ಖಾಸಗಿ ಸಂಸ್ಥೆಗಳ ಒಡಂಬಡಿಕೆಯ ಷರತ್ತು - ನಿಯಮಗಳ ಅಧೀನದಲ್ಲಿ ಬರುತ್ತವೆ. ಇದಲ್ಲದೇ ಅಪೇಕ್ಷಿತ ಮಾಹಿತಿಗಳು “ ವೈಯುಕ್ತಿಕ “ ವಾಗಿದ್ದು, ಇದನ್ನು ಇದನ್ನು ಪ್ರಕಟಿಸುವುದಕ್ಕೆ ಮತ್ತು ಸಾರ್ವಜನಿಕ ಚಟುವಟಿಕೆ ಹಾಗೂ ಹಿತಾಸಕ್ತಿಗಳಿಗೆ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.

ಇಷ್ಟು ಮಾತ್ರವಲ್ಲ, ಮಾಹಿತಿಹಕ್ಕು ಕಾಯಿದೆಯ ಸೆಕ್ಷನ್ ೮ ( ೧ ) ( ಜೆ ) ಯಂತೆ ಈ ಮಾಹಿತಿಯು “ ತೃತೀಯ ವ್ಯಕ್ತಿ “ ಗೆ ಸಂಬಂಧಿಸಿದ್ದಾಗಿದ್ದು, ಅಪೇಕ್ಷಿತ ಮಾಹಿತಿಗಳನ್ನು ಅರ್ಜಿದಾರರಿಗೆ ನೀಡಲು ಕೆಲ ದಾಖಲೆಗಳನ್ನು ಸೃಷ್ಟಿಸಬೇಕಾಗುವುದು. ಬಿ ಡಿ ಎ ನ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಉತ್ತರದಲ್ಲಿ, ಕೇಂದ್ರ ಮಾಹಿತಿ ಆಯೋಗದ ಆದೇಶವೊಂದರಂತೆ “ ಮಾ. ಹ. ಕಾಯಿದೆಯ ಸೆಕ್ಷನ್ ೨ ( ಜೆ ) ಯನ್ವಯ ಯಾವುದೇ ಸಾರ್ವಜನಿಕ ಪ್ರಾಧಿಕಾರವು ದಾಖಲೆಗಳನ್ನು ಸೃಷ್ಟಿಸುವಂತಿಲ್ಲ. ಇದರೊಂದಿಗೆ ತಮಿಳುನಾಡಿನ ಮಾಹಿತಿ ಆಯೋಗವು ಯಾವುದೇ ಯೋಜನೆಯ ವಿವರಗಳನ್ನು ಯೋಜನೆಯ ಪ್ರಾರಂಭಿಕ ಹಂತದಲ್ಲಿ ಬಹಿರಂಗಪಡಿಸುವಂತಿಲ್ಲ ಎಂದು ಹಿಂದೆ ನೀಡಿದ್ದ  ತೀರ್ಪೊಂದನ್ನು ಉಲ್ಲೇಖಿಸಲಾಗಿದೆ.ಹಾಗೂ ಇದೇ ಕಾರಣದಿಂದಾಗಿ ಇದೀಗ ಪ್ರಾರಂಭಿಕ ಹಂತದಲ್ಲಿರುವ ಉಕ್ಕಿನ ಮೇಲ್ಸೇತುವೆಯ ನಿರ್ಮಾಣದ ಯೋಜನೆಯ ವಿವರಗಳನ್ನು ಬಹಿರಂಗಪಡಿಸಲಾಗದು ಎಂದು ಉತ್ತರಿಸಲಾಗಿದೆ.

ಇವೆಲ್ಲಕ್ಕೂ ಮಿಗಿಲಾಗಿ ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಯು ಅಗಾಧವಾಗಿದ್ದು, ಇದನ್ನು ಒದಗಿಸಲು ಸಾಕಷ್ಟು ಸಂಪನ್ಮೂಲಗಳ ಅವಶ್ಯಕತೆಯಿದ್ದು ಇದಕ್ಕಾಗಿ ಸಾಕಷ್ಟು ಸಮಯವನ್ನೂ ವ್ಯಯಿಸಬೇಕಾಗುತ್ತದೆ. ಈ ಮಾಹಿತಿಗಳು ರಾಜ್ಯದ ಅಭಿವೃದ್ಧಿ  ಕ್ರಿಯಾ ಯೋಜನೆ ಮತ್ತು ಆರ್ಥಿಕ ಹಿತಗಳನ್ನು ಒಳಗೊಂಡಿರುವುದರಿಂದ, ಈ ಯೋಜನೆಯ ವಿವರಗಳನ್ನು ನೀಡುವಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ಪುರಸ್ಕರಿಸುವಂತಿಲ್ಲ ಎಂದು ಸಾ. ಮಾ. ಅಧಿಕಾರಿ ಉತ್ತರಿಸಿದ್ದಾರೆ!.

ಸ್ವಯಂಪ್ರೇರಿತ ಮಾಹಿತಿ

ಮಾಹಿತಿಹಕ್ಕು ಕಾಯಿದೆಯನ್ವಯ ಕೆಲವೊಂದು ನಿರ್ದಿಷ್ಟ ಮಾಹಿತಿಗಳಿಗೆ ಸೆಕ್ಷನ್ ೮ ( ೧ ) ಮತ್ತು ೯ ರನ್ವಯ ವಿನಾಯಿತಿಯನ್ನು ನೀಡಲಾಗಿದೆ. ಇದೇ ಸೆಕ್ಷನ್ ನ ೮ ( ೧ ) ( ಜೆ ) ಯನ್ನು ತಿರುಚಿರುವ ಬಿ ಡಿ ಎ ನ ಸಾ. ಮಾ. ಅಧಿಕಾರಿಯು, ಈ ಸೆಕ್ಷನ್ ನ ಅಂತ್ಯದಲ್ಲಿ ನಮೂದಿಸಿರುವಂತೆ “ ಮೇಲೆ ಹೇಳಿದ ವಿನಾಯಿತಿಗಳು ಪರಿಪೂರ್ಣವಾದುದಲ್ಲ. ಈ ಮಾಹಿತಿಯನ್ನು ನೀಡುವುದರಿಂದ ಸಾರ್ವಜನಿಕ ಹಿತವನ್ನು ರಕ್ಷಿಸಿದಂತಾಗುತ್ತದೆ ( ಸೆಕ್ಷನ್ ೮ ( ೨ ) ) ಎಂದಾದಲ್ಲಿ, ಈ ಮಾಹಿತಿಯನ್ನು ನೀಡಬಹುದು “ ಎನ್ನುವ ಸಾಲನ್ನು ಅನುಕೂಲಕರವಾಗಿ ಮರೆತುಬಿಟ್ಟಿದ್ದಾರೆ!.

ಇವೆಲ್ಲಕ್ಕೂ ಮಿಗಿಲಾಗಿ ಮಾ. ಹ. ಕಾಯಿದೆ ೨೦೦೫ ಅನ್ವಯವಾಗುವ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಕೆಲವೊಂದು ಮಾಹಿತಿಗಳನ್ನು ಯಾರೂ ಕೇಳದಿದ್ದರೂ, ಸ್ವಯಂಪ್ರೇರಿತವಾಗಿ ತಮ್ಮ ಕಚೇರಿಯ ಸೂಚನಾ ಫಲಕ್ ಮತ್ತು ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಬೇಕೆಂದು ಹೇಳುತ್ತದೆ. ಇದೊಂದು ಬಹುಮುಖ್ಯ ಅಂಶವಾಗಿದ್ದು, ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಸಂಪೂರ್ಣ ವಿವರಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸುವ ಹೊಣೆಗಾರಿಕೆ ಇವುಗಳ ಮೇಲಿದೆ. ಅರ್ಥಾತ್, ಯಾರೊಬ್ಬರೂ ಕೇಳದೇ ಇದ್ದರೂ ಅಥವಾ ಮಾಹಿತಿಹಕ್ಕು ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸದೇ ಇದ್ದರೂ, ಸ್ಟೀಲ್ ಫ್ಲೈ ಓವರ್ ಕಾಮಗಾರಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಬಿ ಡಿ ಎ ಸ್ವಯಂಪ್ರೇರಿತವಾಗಿ ಪ್ರಕಟಿಸಲೇಬೇಕಾಗುತ್ತದೆ.

ಕೊನೆಯ ಮಾತು

ಬಿ ಡಿ ಎ ನ ಸಾ. ಮಾ. ಅಧಿಕಾರಿಯು ಅಪೇಕ್ಷಿತ ಮಾಹಿತಿಗಳನ್ನು ಒದಗಿಸದಿರುವ ಬಗ್ಗೆ ಅರ್ಜಿದಾರರು ಮಾ. ಹ. ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ದೂರನ್ನು ನೀಡಿದ ಬಳಿಕವೂ ಅಪೇಕ್ಷಿತ ಮಾಹಿತಿ ಲಭಿಸದೇ ಇದ್ದಲ್ಲಿ, ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ನೀಡುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಮಾಹಿತಿ ಆಯೋಗವು ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಗಳನ್ನು ಕ್ಷಿಪ್ರವಾಗಿ ಮತ್ತು ನಿಶ್ಶುಲ್ಕವಾಗಿ ನೀಡುವಂತೆ ಆದೇಶಿಸುವುದರಲ್ಲೂ ಸಂದೇಹವಿಲ್ಲ. ಇದರೊಂದಿಗೆ ಇನ್ನು ಮುಂದೆ ಇಂತಹ ಮಾಹಿತಿಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸುವಂತೆ ಸೂಚಿಸಿದಲ್ಲಿ, ಇಂತಹ ಘಟನೆಗಳ ಪುನರಾವರ್ತನೆ ಆಗುವ ಸಾಧ್ಯತೆಗಳೂ ಇಲ್ಲ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


Monday, October 3, 2016

BREAST CANCER




     ಸ್ತನ ಕ್ಯಾನ್ಸರ್ : ಅರಿವು ಮೂಡಿಸುವ ಮಾಸ ಅಕ್ಟೋಬರ್ 

ಕೇವಲ ಮಧ್ಯವಯಸ್ಸನ್ನು ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುವ ವ್ಯಾಧಿಯೆಂದು ಅನೇಕ ಭಾರತೀಯರು ಇಂದಿಗೂ ನಂಬಿರುವ ಸ್ತನಗಳ ಕ್ಯಾನ್ಸರ್ ವ್ಯಾಧಿಯು, ಹದಿಹರೆಯದ ಹುಡುಗಿಯರು ಮತ್ತು ತರುಣಿಯರನ್ನೂ ಪೀಡಿಸಬಲ್ಲದು. ವಿಶೇಷವೆಂದರೆ ಈ ವ್ಯಾಧಿಯು ಕೇವಲ ಮಹಿಳೆಯರನ್ನು ಮಾತ್ರವಲ್ಲ, ಅತ್ಯಲ್ಪ ಪ್ರಮಾಣದ ಪುರುಷರನ್ನೂ ಬಾಧಿಸಬಲ್ಲದು ಎಂದು ನಿಮಗೂ ತಿಳಿದಿರಲಾರದು. ಈ ವಿಶಿಷ್ಟ ವ್ಯಾಧಿಯ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಗ್ರಸ್ಥಾನ 

ಜಾಗತಿಕ ಮಟ್ಟದಲ್ಲಿ ಮಹಿಳೆಯರಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಗಳಲ್ಲಿ ಸ್ತನ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಈ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವುದರೊಂದಿಗೆ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಇದರ ಮಾರಕತೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಈ ಸಂದೇಶದೊಂದಿಗೆ, ಈ ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಂಘಟನೆಗಳು ಜೊತೆಗೂಡಿ, ವರ್ಷಂಪ್ರತಿ ಅಕ್ಟೋಬರ್ ತಿಂಗಳನ್ನು " ಗುಲಾಬಿ ಮಾಸ " ವನ್ನಾಗಿ ಆಚರಿಸುತ್ತವೆ. ಹಾಗೂ ಇದಕ್ಕೆ ಗುಲಾಬಿ ವರ್ಣದ ರಿಬ್ಬನ್ ಲಾಂಛನವನ್ನಾಗಿ ಬಳಸಲಾಗುತ್ತಿದೆ.  

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಬಗ್ಗೆ ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಇಂತಹ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಅವಶ್ಯಕ ವಿವರಗಳನ್ನು ದಾಖಲಿಸಿಕೊಳ್ಳುವ ಪದ್ದತಿಯು ಇದಿಗೂ ಅನುಷ್ಠಾನಗೊಂಡಿಲ್ಲ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಭಿಪ್ರಾಯದಂತೆ, ಭಾರತದ ಪ್ರತಿ ೨೨ ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ನಿಂದ ಪೀಡಿತರಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬಾಕೆಯು, ತನ್ನ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ಗೆ ಈಡಾಗುವ ಸಾಧ್ಯತೆಗಳಿವೆ.  ಮಹಿಳೆಯರ ವಯಸ್ಸು ಹೆಚ್ಚಾದಂತೆಯೇ, ಇದರ ಸಂಭಾವ್ಯತೆಯೂ ಹೆಚ್ಚುತ್ತದೆ. 

ಕಾರಣವೇನು?

ಸ್ತನಗಳ ಕ್ಯಾನ್ಸರ್ ಉದ್ಭವಿಸಲು ನಿಖರವಾದ ಹಾಗೂ ನಿರ್ದಿಷ್ಟವಾದ ಕಾರಣಗಳು ಏನೆಂದು ಹೇಳಲಾಗದು. ಆದರೆ ಈ ವ್ಯಾಧಿಯ ಸಂಭಾವ್ಯತೆಗೆ ಸಂಬಂಧಿಸಿದಂತೆ ಕೆಲವೊಂದು ಅಪಾಯಕಾರಿ ಅಂಶಗಳು ಇಂತಿವೆ. ಇವುಗಳಲ್ಲಿ ಮೇಲೆ ನಮೂದಿಸಿದಂತೆ ಲಿಂಗ ಮತ್ತು ವಯಸ್ಸು, ೧೨ ವರ್ಷ ವಯಸ್ಸಿಗೆ ಮುನ್ನ ಪುಷ್ಪವತಿಯರಾಗಿದ್ದ ಬಾಲಕಿಯರು, ೫೫ ವರ್ಷ ವಯಸ್ಸಿನ ಬಳಿಕ ಋತುಬಂಧವಾದ ಸ್ತ್ರೀಯರು, ಅವಿವಾಹಿತರು, ಸಂತಾನ ಪ್ರಾಪ್ತಿಯಾಗದವರು, ೪೦ ವರ್ಷ ವಯಸ್ಸಿನ ಬಳಿಕ ಮಕ್ಕಳನ್ನು ಹೆತ್ತವರು, ಕಂದನಿಗೆ ತನ್ನ ಮೊಲೆಹಾಲನ್ನು ಊಡಿಸದವರು, ಗರ್ಭನಿರೋಧಕ ಔಷದಗಳನ್ನು ಸೇವಿಸುತ್ತಿದ್ದ ಮತ್ತು ಸೇವಿಸುತ್ತಿರುವವರು, ಅನ್ಯ ಕಾರಣಗಳಿಗಾಗಿ ಹಾರ್ಮೋನ್ ಯುಕ್ತ ಔಷದಗಳನ್ನು ಸೇವಿಸುವ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಸಮೀಪದ ಸಂಬಂಧಿಗಳು ಈ ವ್ಯಾಧಿಗೆ ತುತ್ತಾಗುವ ಸಾಧ್ಯತೆಗಳಿವೆ. ಇದಲ್ಲದೆ ಅನುವಂಶಿಕತೆ ಮತ್ತು ಪರಿವರ್ತಿತ ಹಾಗೂ ಅಸಾಮಾನ್ಯ ವಂಶವಾಹಿನಿಗಳ ಇರುವಿಕೆ, ಅಧಿಕ ತೂಕ ಹಾಗೂ ಅತಿ ಬೊಜ್ಜು, ಅತಿಯಾದ ಧೂಮ ಹಾಗೂ ಮದ್ಯಪಾನ ಮತ್ತು ನಿರುಪಯುಕ್ತ ಆಹಾರಗಳನ್ನು ( ಜಂಕ್ ಫುಡ್ ) ಅತಿಯಾಗಿ ಸೇವಿಸುವ ಹವ್ಯಾಸ ಇರುವವರಲ್ಲೂ, ಈ ವ್ಯಾಧಿ ತಲೆದೋರುವ ಸಾಧ್ಯತೆಗಳು ಹೆಚ್ಚಿವೆ. 

ಜಾಗತಿಕ ಮಟ್ಟದಲ್ಲಿ ವರ್ಷಂಪ್ರತಿ ೧.೩೮ ದಶಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ೪,೫೮,೦೦೦ ರೋಗಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಗೆ ಅಭಿವೃದ್ಧಿ ಹೊಂದಿರುವ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳೂ ಅಪವಾದವೆನಿಸಿಲ್ಲ. ಆದರೆ ಮಧ್ಯಮ ಮತ್ತು ಅಲ್ಪ ಆದಾಯವಿರುವ ದೇಶಗಳಲ್ಲಿ ಸ್ತನ ಕ್ಯಾನ್ಸರ್ ವ್ಯಾಧಿಗೆ ಬಲಿಯಾಗುತ್ತಿರುವವರ ಪ್ರಮಾಣವು ೨,೬೯,೦೦೦ ಕ್ಕೂ ಹೆಚ್ಚಿದೆ. 

ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ವರ್ಷಂಪ್ರತಿ ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚುತ್ತಲೇ ಇದ್ದು, ಇದಕ್ಕೆ ಅನುಗುಣವಾಗಿ ವ್ಯಾಧಿಪೀಡಿತರ ಮರಣದ ಪ್ರಮಾಣವೂ ವೃದ್ಧಿಸುತ್ತಿದೆ. ಆದರೆ ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಇದನ್ನು ಗುಣಪಡಿಸುವ ಸಾಧ್ಯತೆಗಳು ಶೇ.೯೮ ರಷ್ಟಿದ್ದು, ವಿಳಂಬವಾದಲ್ಲಿ ಇದರ ಪ್ರಮಾಣವು ಕೇವಲ ಶೇ. ೨೭ ರಷ್ಟಿರುತ್ತದೆ.  

ಪ್ರಸ್ತುತ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಗ್ರಾಮೀಣ ಜನರ ಅಜ್ಞಾನ, ವಿದ್ಯಾವಂತರ ಲಜ್ಜೆ ಮತ್ತು ತಮ್ಮ ಶಾರೀರಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಹವ್ಯಾಸಗಳಿಂದಾಗಿ, ಗಣನೀಯ ಪ್ರಮಾಣದ ಪ್ರಕರಣಗಳು ವೈದ್ಯರ ಗಮನಕ್ಕೆ ಬರುವುದೇ ಇಲ್ಲ!. 

ಪ್ರಾಯಶಃ ಇಂತಹ ಕಾರಣಗಳಿಂದಾಗಿಯೇ ಬಹುತೇಕ ಮಹಿಳೆಯರು ತಮ್ಮ ಸ್ತನಗಳಲ್ಲಿ ಪುಟ್ಟ ಹುಣಸೆ ಬೀಜದಷ್ಟು ಗಾತ್ರದ ಗೆಡ್ಡೆಯೊಂದು ಇರುವುದನ್ನು ( ಪ್ರಾಥಮಿಕ ಹಂತ ) ಅರಿತರೂ, ವೈದ್ಯರನ್ನು ಸಂದರ್ಶಿಸುವುದಿಲ್ಲ. ಈ ಗೆಡ್ಡೆಯು ತುಸು ದೊಡ್ಡದಾದ ಬಳಿಕ ( ತುಸು ವೃದ್ಧಿಸಿದ ಹಂತ ) ಮತ್ತು ಇನ್ನು ಕೆಲವರು ಈ ಗೆಡ್ಡೆಯಲ್ಲಿ ತೀವ್ರ ನೋವು ಆರಂಭಗೊಂಡ ಬಳಿಕ ( ಮೂರನೇ ಹಂತ ) ವೈದ್ಯರನ್ನು ಭೇಟಿಯಾಗುತ್ತಾರೆ. ತತ್ಪರಿಣಾಮವಾಗಿ ಈ ರೋಗಿಗಳು ಸಾಕಷ್ಟು ಶಾರೀರಿಕ ಹಾಗೂ ಮಾನಸಿಕ ಯಾತನೆಗಳೊಂದಿಗೆ, ಆರ್ಥಿಕ ಸಂಕಷ್ಟಗಳಿಗೂ ಒಳಗಾಗುತ್ತಾರೆ. 

ಎಲ್ಲವೂ ಕ್ಯಾನ್ಸರ್ ಅಲ್ಲ 

ಅನೇಕ ವಿದ್ಯಾವಂತರೂ ಸ್ತನಗಳಲ್ಲಿ ಉದ್ಭವಿಸುವ ಗೆಡ್ಡೆಗಳೆಲ್ಲವೂ ಕ್ಯಾನ್ಸರ್ ಎಂದೇ ನಂಬುತ್ತಾರೆ. ಆದರೆ ನಿಜ ಹೇಳಬೇಕಿದ್ದಲ್ಲಿ, ಇವುಗಳಲ್ಲಿ ಶೇ. ೭೫ ರಷ್ಟು ಗೆಡ್ಡೆಗಳು ನಿರಪಾಯಕಾರಿಗಳೇ ಆಗಿರುತ್ತವೆ. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಗೆಡ್ಡೆಗಳು ಉದ್ಭವಿಸಿದಲ್ಲಿ, ಇದನ್ನು ನಿರಪಾಯಕಾರಿ ಎಂದು ನೀವಾಗಿ ನಿರ್ಧರಿಸಿ ಮುಚ್ಚಿಡುವ ಪ್ರಯತ್ನವು " ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ " ದಂತಾಗುವುದು ಎನ್ನುವುದನ್ನು ಮರೆಯದಿರಿ. ಈ ಮಾಹಿತಿಯನ್ನು ನಿಮ್ಮ ಬಂಧುಮಿತ್ರರೊಂದಿಗೆ ಹಂಚಿಕೊಳ್ಳುವ ಮೂಲಕ " ಗುಲಾಬಿ ಮಾಸ " ದ ಆಚರಣೆಯಲ್ಲಿ ನೀವೂ ಸಕ್ರಿಯವಾಗಿ ಪಾಲ್ಗೊಳ್ಳಿರಿ. ತನ್ಮೂಲಕ ಸ್ತನ ಕ್ಯಾನ್ಸರ್ ನ ಮಾರಕತೆಯನ್ನು ತಡೆಗಟ್ಟಲು ಸಹಕರಿಸಿ. 

ಸ್ವಯಂ ಸ್ತನ ಪರೀಕ್ಷೆ 

ಮಾರಕವೆನಿಸಬಲ್ಲ ಸ್ತನ ಕ್ಯಾನ್ಸರ್ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸ್ವಯಂ ಸ್ತನ ಪರೀಕ್ಷೆಯು ಅತ್ಯಂತ ಸರಳ ಹಾಗೂ ಸುಲಭ ವಿಧಾನವೂ ಹೌದು. ಹದಿಹರೆಯದ ಹುಡುಗಿಯರಿಂದ ಆರಂಭಿಸಿ, ವಯೋವೃದ್ಧ ಮಹಿಳೆಯರ ತನಕ ಪ್ರತಿಯೊಬ್ಬರೂ ಈ ಸರಳ ವಿದಾನವನ್ನು ತಮ್ಮ ಪರಿಚಿತ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ. ಬಳಿಕ ಪ್ರತಿ ತಿಂಗಳಲ್ಲೂ ಸ್ವಯಂ ಸ್ತನ ಪರೀಕ್ಷೆಯನ್ನು ನಡೆಸುತ್ತಿದ್ದಲ್ಲಿ, ಅಸಾಮಾನ್ಯ ಬದಲಾವಣೆಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ. ಜೊತೆಗೆ ಸ್ತನಗಳಲ್ಲಿ ನೋವು, ಜ್ವರ, ಸ್ತನ ಹಾಗೂ ಕಂಕುಳಿನಲ್ಲಿ ಇರುವ ಲಿಂಫ್ ಗ್ರಂಥಿಗಳಲ್ಲಿ ಬಾವು, ಸ್ತನಗಳಲ್ಲಿ ಉದ್ಭವಿಸಿರುವ ಚಿಕ್ಕಪುಟ್ಟ ಗೆಡ್ಡೆಗಳು ಅಥವಾ ಯಾವುದೇ ರೀತಿಯ ಅಸಾಮಾನ್ಯ ಬದಲಾವಣೆಗಳನ್ನು ಗಮನಿಸಿದೊಡನೆ, ತಜ್ಞ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಅಯಾಚಿತ ಸಮಸ್ಯೆಗಳನ್ನು ನಿಶ್ಚಿತವಾಗಿ ತಡೆಗಟ್ಟಬಹುದು. 

ಅಂತಿಮವಾಗಿ ಹೇಳುವುದಾದಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಾಥಮಿಕ ಹಂತದಲ್ಲೇ ಪತ್ತೆಯಾಗುತ್ತಿರುವ ಪ್ರಮಾಣವು ಅತ್ಯಲ್ಪವಾಗಿದೆ. ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ತನ್ಮೂಲಕ ಇದಕ್ಕೆ ಬಲಿಯಾಗುವ ರೋಗಿಗಳ ಪ್ರಮಾಣವನ್ನೂ ಕನಿಷ್ಠ ಶೇ.೩೦ ರಷ್ಟು ಕಡಿಮೆ ಮಾಡಬಹುದಾಗಿದೆ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 













  

SWACH BHARATH SECOND ANNIVERSARY


      ಸ್ವಚ್ಛ ಭಾರತ ಅಭಿಯಾನದ ದ್ವಿತೀಯ ವಾರ್ಷಿಕೋತ್ಸವ  

ಎರಡು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ದೇಶದ ಪ್ರಧಾನ ಜನಸೇವಕ ನರೇಂದ್ರ ಮೋದಿಯವರು ಸ್ವತಃ ಕಸವನ್ನು ಗುಡಿಸುವ ಮೂಲಕ " ಸ್ವಚ್ಛಭಾರತ ಅಭಿಯಾನ " ವನ್ನು  ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ವಾರದಲ್ಲಿ ಎರಡು ಘಂಟೆಗಳಂತೆ, ವರ್ಷದಲ್ಲಿ ೧೦೦ ಘಂಟೆಗಳನ್ನು ಸ್ವಚ್ಛತೆಗಾಗಿ ವಿನಿಯೋಗಿಸಬೇಕು ಎಂದು ವಿನಂತಿಸಿದ್ದರು. ಈ ಅಭಿಯಾನವು ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ನಡೆಯಲಿದ್ದು, ಗಾಂಧೀಜಿಯವರ ೧೫೦ ನೇ ಜನ್ಮದಿನದಂದು ಸಂಪನ್ನಗೊಳ್ಳಲಿದ್ದು, ಈ ಅವಧಿಯಲ್ಲಿ ನಮ್ಮ ದೇಶವನ್ನು  ಸ್ವಚ್ಛ, ಸ್ವಸ್ಥ ಮತ್ತು ಸುಂದರವನ್ನಾಗಿಸಲು ದೇಶದ ಪ್ರಜೆಗಳೆಲ್ಲರೂ ಶ್ರಮಿಸುವಂತೆ ಕರೆನೀಡಿದ್ದರು.

 ಈ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳ ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳು, ಬೃಹತ್ ಉದ್ದಿಮೆ – ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಶ್ರೀಸಾಮಾನ್ಯರು ಇದರಲ್ಲಿ ಭಾಗಿಯಾಗಿದ್ದು, ಇನ್ನುಮುಂದೆ ಪ್ರತಿ ತಿಂಗಳಿನಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುವುದಾಗಿ ಘೋಷಿಸಿದ್ದರು. ಆದರೆ ಈ ಆರಂಭಶೂರತ್ವವು ಒಂದೆರಡು ತಿಂಗಳುಗಳಲ್ಲೇ ಅಂತ್ಯಗೊಂಡಿದ್ದುದು ಮಾತ್ರ ಸುಳ್ಳೇನಲ್ಲ!. ಪ್ರಾಯಶಃ ಮಾಧ್ಯಮಗಳಲ್ಲಿ ಲಭಿಸಲಿರುವ ಪುಕ್ಕಟೆ ಪ್ರಚಾರಕ್ಕಾಗಿ ಭಾಗಿಯಾಗಿದ್ದ ಇವರೆಲ್ಲರೂ, ಬಳಿಕ ಕಣ್ಮರೆಯಾಗಿದ್ದರು. ನಿಜ ಹೇಳಬೇಕಿದ್ದಲ್ಲಿ  ಕೇವಲ ಪ್ರಚಾರದ ಸಲುವಾಗಿ ಭಾಗಿಯಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ  ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ದೇಶದ ಜನತೆ ಮನಸ್ಪೂರ್ವಕವಾಗಿ ಇದರಲ್ಲಿ ಭಾಗವಹಿಸಿದಲ್ಲಿ, ಇದು ಯಶಸ್ವಿಯಾಗುವುದರಲ್ಲೂ ಸಂದೇಹವಿಲ್ಲ.

ವಿಶೇಷವೆಂದರೆ ಈ ಅಭಿಯಾನ ಆರಂಭವಾಗುವ ಮುನ್ನವೇ ದೇಶದ ಅನೇಕ ಮಹಾನಗರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ " ಆಗ್ಲಿ ಇಂಡಿಯನ್ಸ್ " ನಾಮಧೇಯದ ಸೇವಾ ಸಂಘಟನೆ ಮತ್ತು ಅಭಿಯಾನ ಆರಂಭವಾದ ಬಳಿಕ ಇದರಲ್ಲಿ ಭಾಗಿಯಾಗಿದ್ದ ರಾಮಕೃಷ್ಣ ಮಿಶನ್ ಮತ್ತಿತರ ಬೆರಳೆಣಿಕೆಯಷ್ಟು ಸಂಘಟನೆಗಳು, ಇಂದಿಗೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುತ್ತಿವೆ. ತತ್ಪರಿಣಾಮವಾಗಿ ಅನೇಕ ನಗರಗಳಲ್ಲಿನ ದುರ್ವಾಸನೆಯನ್ನು ಬೀರುವ ಹಾಗೂ ಅಸಹ್ಯವೆನಿಸುವ ತ್ಯಾಜ್ಯಗಳ ರಾಶಿಗಳು ಕಣ್ಮರೆಯಾಗಿವೆ. ಜೊತೆಗೆ ಇಂತಹ ಸ್ಥಳಗಳು ಸ್ವಚ್ಚ ಮತ್ತು ಸುಂದರವಾಗಿವೆ. 

ಅಭಿಯಾನಕ್ಕೆ ಎರಡು ವರ್ಷ

ದೇಶದ ವಿವಿಧ ರಾಜ್ಯಗಳ ಮಾಹಿತಿಯನ್ನು ಪರಿಶೀಲಿಸಿದಾಗ ಈ ಅಭಿಯಾನವು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಪ್ರಧಾನಿಯವರ ಅಪೇಕ್ಷೆಯಂತೆ ದೇಶದ ಪ್ರತಿಯೊಬ್ಬ ಪ್ರಜೆಯು ಇದರಲ್ಲಿ ಭಾಗವಹಿಸಿದ್ದಲ್ಲಿ, ಅಭಿಯಾನವು  ಇನ್ನಷ್ಟು ಯಶಸ್ವಿಯಾಗುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸ್ಥಳೀಯ ಸಂಸ್ಥೆಗಳು, ರಾಜ್ಯಮತ್ತು ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ಸಂಗ್ರಹ ಮಾತ್ರವಲ್ಲ, ಈ ತ್ಯಾಜ್ಯಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಿವಿಧಾನಗಳಿಂದ ಪುನರ್ಬಳಕೆ ಹಾಗೂ ಪುನರ್ ಆವರ್ತನಗೊಳಿಸುವ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ, ಸಿಮೆಂಟ್ ಮತ್ತು ಉಕ್ಕಿನ ಕಾರ್ಖಾನೆಗಳ ಕುಲುಮೆಗಳಲ್ಲಿ ಇಂಧನವನ್ನಾಗಿ ಬಳಸುವ, ಭಗ್ನಗೊಳಿಸಿದ ಕಟ್ಟಡಗಳ ತ್ಯಾಜ್ಯಗಳಿಂದ ಹೊಸ ಕಟ್ಟಡಗಳನ್ನು ಅಥವಾ ಹೊಸ ರಸ್ತೆಗಳನ್ನು ನಿರ್ಮಿಸುವ, ತ್ಯಾಜ್ಯಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳನ್ನು ಸ್ಥಾಪಿಸುವ, ಸಂಪೂರ್ಣವಾಗಿ ನಿರುಪಯುಕ್ತ ಎನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇನ್ಸಿನರೇಟರ್ ಮೂಲಕ ಸುರಕ್ಷಿತವಾಗಿ ದಹಿಸುವ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ವಾಹನಗಳಲ್ಲಿ ಬಳಸಬಹುದಾದ ಇಂಧನವನ್ನು ತಯಾರಿಸಬಲ್ಲ ಘಟಕಗಳನ್ನು ಸ್ಥಾಪಿಸಿದಲ್ಲಿ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಮತ್ತು ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ತುಂಬಿ ತುಳುಕುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು ಕಣ್ಮರೆಯಾಗುತ್ತಿದ್ದವು. ತತ್ಪರಿಣಾಮವಾಗಿ ಹೊಸ ಲ್ಯಾಂಡ್ ಫಿಲ್ ಸೈಟ್ ಗಳ ನಿರ್ಮಾಣಕ್ಕಾಗಿ ಸ್ಥಳವನ್ನು ಹುಡುಕುವ ಹಾಗೂ ಸ್ಥಾಪಿಸಲು ತಗಲುವ ವೆಚ್ಚಗಳನ್ನು ಮತ್ತು ಇವುಗಳ ಸ್ಥಾಪನೆಯನ್ನು ವಿರೋಧಿಸುವ ಜನರ ಪ್ರತಿಭಟನೆಗಳನ್ನು ಸುಲಭದಲ್ಲೇ ನಿವಾರಿಸಬಹುದಾಗಿತ್ತು. 

ನೀವೇನು ಮಾಡಬಹುದು

ಬಡವ ಶ್ರೀಮಂತರೆನ್ನುವ ಭೇದವಿಲ್ಲದೇ ದೇಶದ ಪ್ರಜೆಗಳೆಲ್ಲರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.ಕಾರಣಾಂತರಗಳಿಂದ ಈ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಭಾಗಿಗಳಾಗಲು ಸಾಧ್ಯವಿಲ್ಲದಿದ್ದಲ್ಲಿ, ತಾವು ದಿನನಿತ್ಯ ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವ ಕೆಟ್ಟ ಹವ್ಯಾಸವನ್ನು ತೊರೆಯುವ ಮೂಲಕವೂ ಅಭಿಯಾನವನ್ನು ಯಶಸ್ವಿಗೊಳಿಸಬಹುದಾಗಿದೆ. ಅಂತೆಯೇ ಅಧಿಕತಮ ಜನರು ಅತಿಯಾಗಿ ಬಳಸುವ ಪ್ಲಾಸ್ಟಿಕ್ ಕೈಚೀಲ ಮತ್ತಿತರ " ಬಳಸಿ ಎಸೆಯುವ " ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ, ಪುನರ್ ಬಳಕೆ ಮಾಡುವ ಮೂಲಕ ಹಾಗೂ ನಿರುಪಯುಕ್ತ ಪ್ಲಾಸ್ಟಿಕ್ ಚೀಲಗಳನ್ನು ಪುನರ್ ಆವರ್ತನಗೊಳಿಸುವ ಸಲುವಾಗಿ ಪ್ರತ್ಯೇಕಿಸಿ ಇರಿಸುವ ಮೂಲಕ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ನಿರಾಕರಿಸುವ ಮೂಲಕ, ಇಂತಹ ವಸ್ತುಗಳನ್ನು ತ್ಯಾಜ್ಯ ರೂಪದಲ್ಲಿ ವಿಸರ್ಜಿಸುವುದನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ.

ವಿದ್ಯಾರ್ಥಿಗಳಿಗೊಂದು ಅವಕಾಶ

ಶಾಲಾಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವುದರೊಂದಿಗೆ ಒಂದಿಷ್ಟು ಆದಾಯವನ್ನು ಗಳಿಸಬಲ್ಲ ಸುಲಭೋಪಾಯವೊಂದು ಇಂತಿದೆ. ತಮ್ಮ ಮನೆಗಳಲ್ಲಿ, ಶಾಲಾಕಾಲೇಜುಗಳ ಆವರಣಗಳಲ್ಲಿ, ತಾವು ದಿನನಿತ್ಯ ನಡೆದಾಡುವ ರಸ್ತೆಗಳ ಬದಿಗಳಲ್ಲಿ ಕಾಣಸಿಗುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಸ್ವಚ್ಚವಾದ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಸಂಗ್ರಹಿಸಿ, ನಿಮ್ಮದೇ ಊರಿನ ಗುಜರಿ ಅಂಗಡಿಗಳಿಗೆ ನೀಡಬಹುದಾಗಿದೆ. ಅದೇ ರೀತಿಯಲ್ಲಿ ರಟ್ಟಿನ ಪೆಟ್ಟಿಗೆಗಳು ನಿರುಪಯುಕ್ತ ಕಾಗದ ಇತ್ಯಾದಿ ವಸ್ತುಗಳನ್ನು ಒಲೆಯಲ್ಲಿ ಸುಡುವ ಬದಲಾಗಿ, ಇವುಗಳನ್ನು ಕೂಡಾ ಗುಜರಿ ಅಂಗಡಿಗಳಿಗೆ ಮಾರಬಹುದಾಗಿದೆ. ಇದರಿಂದಾಗಿ ತ್ಯಾಜ್ಯಗಳ ಉತ್ಪಾದನೆಯು ಕಡಿಮೆಯಾಗುವುದಲ್ಲದೇ, ನೀವು ಸಂಗ್ರಹಿಸಿ ಮಾರಾಟ ಮಾಡುವ ತ್ಯಾಜ್ಯಗಳ ಪ್ರಮಾಣಕ್ಕೆ ಅನುಗುಣವಾಗಿ ನಿಮಗೆ ಒಂದಿಷ್ಟು ಆದಾಯವೂ ಲಭಿಸುತ್ತದೆ. ನಮ್ಮೂರಿನ ಶಾಲೆಯೊಂದರ ವಿದ್ಯಾರ್ಥಿಗಳು ಈ ವಿಧಾನವನ್ನು ಅನುಸರಿಸುವ ಮೂಲಕ, ತಮಗೆ ಬೇಕಾಗುವ ಸ್ಲೇಟು, ಪುಸ್ತಕ, ಪೆನ್ಸಿಲ್, ಪೆನ್, ಸ್ಕೂಲ್ ಬ್ಯಾಗ್, ಕೊಡೆ ಮತ್ತಿತರ ವಸ್ತುಗಳನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪಡೆಯುತ್ತಿದ್ದಾರೆ. ಈ ವಿಧಾನವನ್ನು ದೇಶದ ಎಲ್ಲ ಶಾಲಾಕಾಲೇಜುಗಳಲ್ಲಿ ಅನುಷ್ಠಾನಿಸಬಹುದಾಗಿದೆ. ತನ್ಮೂಲಕ ವಿದ್ಯಾರ್ಥಿಗಳಿಗೆ ಈ ಅಭಿಯಾನದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸುವುದರೊಂದಿಗೆ, ಅವರ ಹೊಣೆಗಾರಿಕೆಯನ್ನು ಹೆಚ್ಚಿಸಬಹುದಾಗಿದೆ.

ಇಷ್ಟು ಮಾತ್ರವಲ್ಲ, ಮಾರುಕಟ್ಟೆ ಅಥವಾ ಸಮೀಪದ ಅಂಗಡಿಗಳಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಹೋಗುವಾಗ ಮರೆಯದೇ ಬಟ್ಟೆಯ ಚೀಲವೊಂದನ್ನು ಒಯ್ಯಿರಿ. ಸರಣಿ ಮಳಿಗೆಗಳಲ್ಲಿ ಖರೀದಿಸುವ ಪ್ರತಿಯೊಂದು ತರಕಾರಿ ಹಾಗೂ ಹಣ್ಣುಗಳನ್ನು ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಲೇಬೇಕೆಂದು ಒತ್ತಾಯಿಸಿದಲ್ಲಿ ನಿರಾಕರಿಸಿ. ಇವೆಲ್ಲವುಗಳನ್ನು ತೂಕ ಮಾಡಿದ ಬಳಿಕ ಇವುಗಳ ತೂಕ ಮತ್ತು ಬೆಲೆಯನ್ನು ಸೂಚಿಸುವ  ಸ್ಟಿಕ್ಕರ್ ಗಳನ್ನು ಕೇವಲ ಒಂದು ಪ್ಲಾಸ್ಟಿಕ್ ಚೀಲಕ್ಕೆ ಅಂಟಿಸುವಂತೆ ಸೂಚಿಸಿ. ಅನಿವಾರ್ಯವಾಗಿ ಪ್ಲಾಸ್ಟಿಕ್ ಚೀಲವನ್ನು ವ್ಯಾಪಾರಿಗಳಿಂದ ಪಡೆದುಕೊಂಡಲ್ಲಿ, ಇದನ್ನು ಹಲವಾರು ಬಾರಿ ಪುನರ್ಬಳಸಿ. ಯಾವುದೇ ಸಂದರ್ಭದಲ್ಲೂ ನಿಮ್ಮ ಮನೆಯಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಸಲುವಾಗಿಯೇ ಪ್ಲಾಸ್ಟಿಕ್ ಕೈಚೀಲಗಳನ್ನು ಕೇಳಿ ಪಡೆಯದಿರಿ!.

ಪ್ರಧಾನ ಮಂತ್ರಿಯವರು ಅಪೇಕ್ಷಿಸಿದಂತೆ ಕನಿಷ್ಠ ನೀವು ದಿನನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡಿ.ಉತ್ಪಾದಿಸಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಹಸಿ ತ್ಯಾಜ್ಯಗಳನ್ನು ನಿಮ್ಮ ಆವರಣದಲ್ಲಿರುವ ಮರಗಿಡಗಳ ಬುಡದಲ್ಲಿ ಹಾಕಿರಿ. ಗುಜರಿ ಅಂಗಡಿಗೆ ನೀಡಲು ಆಸಾಧ್ಯವೆನಿಸುವ ಹಾಗೂ ತೀರಾ ನಿರುಪಯುಕ್ತ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ಮಾತ್ರ ನಿಮ್ಮ ವಸತಿ – ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯಕರ್ತರಿಗೆ ನೀಡಿ. ನಿಮ್ಮೂರಿನ ಸ್ಥಳೀಯ ಸಂಸ್ಥೆಯು ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ನಿರ್ವಹಿಸಲು ವಿಧಿಸುವ ಶುಲ್ಕವನ್ನು ತಪ್ಪದೆ ಪಾವತಿಸಿ. ಈ ಶುಲ್ಕವನ್ನು ಉಳಿಸುವ ಸಲುವಾಗಿ ತ್ಯಾಜ್ಯಗಳನ್ನು ರಸ್ತೆಬದಿ ಅಥವಾ ಚರಂಡಿಗಳಲ್ಲಿ ಎಸೆಯದಿರಿ. ನಿಮ್ಮ ನೆರೆಕರೆಯ ನಿವಾಸಿಗಳಿಗೂ ಇದೇ ರೀತಿಯಲ್ಲಿ ಸಹಕರಿಸಲು ಪ್ರೇರೇಪಿಸಿ.

ಅಭಿಯಾನದ ಪ್ರಗತಿ 

ಸರ್ಕಾರಿ ಅಂಕಿ ಅಂಶಗಳಂತೆ ಸ್ವಚ್ಛ ಭಾರತ ಅಭಿಯಾನದಲ್ಲಿ ಗಣನೀಯ ಪ್ರಮಾಣದ ಪ್ರಗತಿ ಕಂಡುಬರುತ್ತದೆ. ಈ ಅಭಿಯಾನದಲ್ಲಿ ಬಯಲು ಶೌಚಮುಕ್ತ ಭಾರತ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣವೆ ಮುಂತಾದ ಅನ್ಯ ಯೋಜನೆಗಳನ್ನು ಸೇರಿಸಿದ್ದು, ಇವೆಲ್ಲವನ್ನೂ ಒಂದಾಗಿ ಪರಿಗಣಿಸಿರುವುದು ಇದಕ್ಕೆ ಕಾರಣವೆನಿಸುತ್ತದೆ. ಆದರೆ ದೇಶದ ಮೂಲೆಮೂಲೆಗಳಲ್ಲಿ ಇಂದಿಗೂ ಕಾಣಸಿಗುವ ತ್ಯಾಜ್ಯಗಳ ರಾಶಿಗಳನ್ನು ಕಂಡಾಗ, ಅಭಿಯಾನದ ಯಶಸ್ಸಿನ ಬಗ್ಗೆ ಸಂದೇಹವೂ ಮೂಡುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ತ್ಯಾಜ್ಯಗಳ ಸಮಸ್ಯೆ ಬಗೆಹರಿಯಬೇಕಿದ್ದಲ್ಲಿ, ದೇಶದ ಪ್ರತ್ಯೊಬ್ಬ ಪ್ರಜೆಯ ಸಹಕಾರ ಅತ್ಯವಶ್ಯಕ ಎನಿಸುತ್ತದೆ. ಆದುದರಿಂದ ಮುಂದಿನ ಮೂರು ವರ್ಷಗಳಲ್ಲಿ ಈ ಅಭಿಯಾನವು ಅಪೇಕ್ಷಿತ ಫಲಿತಾಂಶವನ್ನು ನೀಡಬೇಕಿದ್ದಲ್ಲಿ, ನಾವುನೀವೆಲ್ಲರೂ ಒಂದಾಗಿ ಇದರ ಯಶಸ್ಸಿಗಾಗಿ ಶ್ರಮಿಸಲೇಬೇಕು. 

ಕೊನೆಯ ಮಾತು

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಸ್ವಚ್ಛತೆ ಮತ್ತು ನಮ್ಮ ಆರೋಗ್ಯಕ್ಕೆ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ಸ್ವಚ್ಛತೆ ಇರುವಲ್ಲಿ ವ್ಯಾಧಿಗಳ ಬಾಧೆ ಇರುವ ಸಾಧ್ಯತೆಗಳಿಲ್ಲ. ಆದರೆ ಅಸ್ವಚ್ಛ ಪರಿಸರದಲ್ಲಿ ಕಾಯಿಲೆಗಳ ಹಾವಳಿ ಸ್ವಾಭಾವಿಕವಾಗಿಯೇ ಹೆಚ್ಚಾಗಿರುತ್ತದೆ. ಆದುದರಿಂದ ನಿಮ್ಮ ಮನೆ, ಸುತ್ತಲಿನ ಆವರಣ, ಸಮೀಪದ ರಸ್ತೆ, ನಿಮ್ಮ ಕೇರಿ ಮತ್ತು ಊರಿನ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ, ನಮ್ಮ ದೇಶವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರ ಭಾರತವನ್ನಾಗಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Saturday, September 3, 2016

SEP. 4 - WORLD SEXUAL HEALTH DAY



                   ಸೆ. 4 : ವಿಶ್ವ ಲೈಂಗಿಕ ಆರೋಗ್ಯ ದಿನಾಚರಣೆ 

ಈ ಲೇಖನದ ತಲೆಬರಹವನ್ನು ಕಂಡು ನಿಮಗೂ ಆಶ್ಚರ್ಯವಾಗಿರಲೇಬೇಕು. ಏಕೆಂದರೆ ಭಾರತೀಯರೂ ಸೇರಿದಂತೆ ಅನೇಕ ದೇಶಗಳ ಪ್ರಜೆಗಳಿಗೆ ಕಳೆದ ಐದು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ವಿಶ್ವ ಲೈಂಗಿಕ ಆರೋಗ್ಯ ದಿನವನ್ನು ಆಚರಿಸುತ್ತಿರುವ ವಿಚಾರ ತಿಳಿದಿಲ್ಲ. ಅದರಲ್ಲೂ ಭಾರತೀಯರಿಗೆ ನಮ್ಮ ದೇಶದಲ್ಲೂ ಈ ವಿಶೇಷ ಹಾಗೂ ಮಹತ್ವಪೂರ್ಣ ದಿನವನ್ನು ಆಚರಿಸುವ ಬಗ್ಗೆ ಹಾಗೂ ತನ್ಮೂಲಕ ಲೈಂಗಿಕತೆಯ ಬಗ್ಗೆ ಸತ್ಯ, ನಿಖರ ಮತ್ತು ವೈಜ್ಞಾನಿಕ ಮಾಹಿತಿಗಳನ್ನು ಜನಸಾಮಾನ್ಯರಿಗೆ ಒದಗಿಸಿ, ಅವರ ಅಜ್ಞಾನ ಮತ್ತು ತಪ್ಪುಕಲ್ಪನೆಗಳನ್ನು ತೊಡೆದು ಹಾಕುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರ ಅರಿವಿಲ್ಲ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ವಿಶೇಷ ದಿನಾಚರಣೆ 

ವರ್ಲ್ಡ್ ಅಸೋಸಿಯೇಶನ್ ಫೊರ್ ಸೆಕ್ಶುವಲ್ ಹೆಲ್ತ್ ಸಂಘಟನೆಯು 2010 ರ ಸೆಪ್ಟೆಂಬರ್ ನಲ್ಲಿ ಪ್ರಪ್ರಥಮ ಬಾರಿಗೆ " ವಿಶ್ವ ಲೈಂಗಿಕ ಆರೋಗ್ಯ ದಿನ " ವನ್ನು ಜಾಗತಿಕ ಮಟ್ಟದಲ್ಲಿ ಆಚರಿಸುವಂತೆ ಕರೆನೀಡಿತ್ತು. " ನಾವು ಇದರ ಬಗ್ಗೆ ಮಾತನಾಡೋಣ " ( LETS TALK ABOUT IT! ) ಎನ್ನುವ ಘೋಷವಾಕ್ಯದೊಂದಿಗೆ ಆಚರಿಸಲಾಗಿದ್ದ ಈ ಕಾರ್ಯಕ್ರಮವು, ಇದೀಗ ಜಗತ್ತಿನ 36 ರಾಷ್ಟ್ರಗಳಲ್ಲಿ ವರ್ಷಂಪ್ರತಿ ಆಚರಿಸಲ್ಪಡುತ್ತಿದೆ. ಈ ಬಾರಿ " ಲೈಂಗಿಕತೆಯ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢ ನಂಬಿಕೆಗಳನ್ನು ತೊಡೆದುಹಾಕಿರಿ " ಎನ್ನುವ ಘೋಷವಾಕ್ಯದೊಂದಿಗೆ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಅಜ್ಞಾನ - ಮಡಿವಂತಿಕೆ 

ಭಾರತದ ಯುವಜನರಿಗೆ ಲೈಂಗಿಕ ಆರೋಗ್ಯದ ಬಗ್ಗೆ ಇರುವ ಅಜ್ಞಾನ ಹಾಗೂ ಅವಿದ್ಯಾವಂತರು ಮತ್ತು ಹಳೆಯ ಪೀಳಿಗೆಯವರಲ್ಲಿ ಇರುವ ಮಡಿವಂತಿಕೆಗಳು ಹಲವಾರು ವಿಧದ ಸಂಕೀರ್ಣ ಸಮಸ್ಯೆಗಳಿಗೆ ಕಾರಣವೆನಿಸಿವೆ. ಯಾವುದು ಸರಿ, ಯಾವುದು ತಪ್ಪು, ಯಾವ ಶಾರೀರಿಕ ಪ್ರಕ್ರಿಯೆಗಳು ಸ್ವಾಭಾವಿಕ ಮತ್ತು ಯಾವುದು ವ್ಯಾಧಿ ಲಕ್ಷಣವೆಂದು ಅರಿಯದವರು ನಮ್ಮ ನಿಮ್ಮ ನಡುವೆ ಇಂದಿಗೂ ಇದ್ದಾರೆ. ತಾತ್ಕಾಲಿಕ ನಿಮಿರು ದೌರ್ಬಲ್ಯದಂತಹ ಸೌಮ್ಯರೂಪದ ಸಮಸ್ಯೆ, ಹಸ್ತ ಮೈಥುನ ಮತ್ತು ಸ್ವಪ್ನಸ್ಖಲನದಂತಹ ಸ್ವಾಭಾವಿಕ ಕ್ರಿಯೆಯನ್ನೂ ಲೈಂಗಿಕ ದೌರ್ಬಲ್ಯವೆಂದು ನಂಬಿ, ಕೊರಗುವ ಯುವಜನರು ಸಾಕಷ್ಟಿದ್ದಾರೆ. ಪ್ರಕೃತಿ ನಿಯಮದಂತೆ ಪುಟ್ಟ ಕಂದ ಹುಟ್ಟಬೇಕಿದ್ದಲ್ಲಿ ಸ್ತ್ರೀಪುರುಷ ಸಮಾಗಮ ಅಗತ್ಯ ಎಂದರಿಯದ ಅಮಾಯಕ ಯುವಜನರು ಈ ಆಧುನಿಕ ಯುಗದಲ್ಲೂ ಇದ್ದಾರೆ ಎಂದಲ್ಲಿ ನೀವೂ ನಂಬಲಾರಿರಿ. ಇದೇ ರೀತಿಯಲ್ಲಿ ಹತ್ತುಹಲವು ವಿಚಾರಗಳ ಬಗ್ಗೆ ಜನಸಾಮಾನ್ಯರ ಮನದಲ್ಲಿ ಬಲವಾಗಿ ಬೇರೂರಿರುವ ಮೂಢನಂಬಿಕೆಗಳು, ಗಣನೀಯ ಪ್ರಮಾಣದ ಜನರ ಲೈಂಗಿಕ ಆರೋಗ್ಯಕ್ಕೆ ಕಂಟಕವಾಗಿ ಪರಿಣಮಿಸುತ್ತಿರುವುದು ಸತ್ಯ. ಇವೆಲ್ಲವುಗಳನ್ನು ತೊಡೆದುಹಾಕಿ, ಸತ್ಯವಾದ ಹಾಗೂ ನಿಖರವಾದ ಮತ್ತು ವೈಜ್ಞಾನಿಕ ಮಾಹಿತಿಗಳನ್ನು ಒದಗಿಸುವ ಸಲುವಾಗಿಯೇ, ವಿಶ್ವ ಲೈಂಗಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ. 

ಭಾರತೀಯರಲ್ಲಿ ತಮ್ಮ ಧರ್ಮ ಮತ್ತು ಆಚಾರ ವಿಚಾರಗಳ ಬಗ್ಗೆ ಇರುವ ಕಟ್ಟುನಿಟ್ಟಿನ ಮಡಿವಂತಿಕೆಗಿಂತಲೂ ತುಸು ಹೆಚ್ಚು ಮಡಿವಂತಿಕೆಯು ಲೈಂಗಿಕತೆಯ ಬಗ್ಗೆ ಇದೆ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಒಂದೆರಡು ದಶಕಗಳ ಹಿಂದಿನ ತನಕ ಲೈಂಗಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಜನರು ಹಿಂಜರಿಯುತ್ತಿದ್ದುದು ಇದಕ್ಕೊಂದು ಉತ್ತಮ ಉದಾಹರಣೆಯೂ ಹೌದು. ವಿಶ್ವ ವಿಖ್ಯಾತ " ಕಾಮಸೂತ್ರ " ದ ಲೇಖಕ ವಾತ್ಸಾಯನನ ತವರಿನಲ್ಲೂ ಇಂತಹ ವರ್ತನೆಗಳಿವೆ ಎನ್ನುವುದು ಅಚ್ಚರಿಯ ವಿಷಯವೇ ಸರಿ. 

ಈ ಮಡಿವಂತಿಕೆಯ ಪರಿಣಾಮವಾಗಿ ತಮ್ಮ ಲೈಂಗಿಕ ಸಮಸ್ಯೆಗಳನ್ನು ತಮ್ಮ ಕುಟುಂಬ ವೈದ್ಯರ ಬಳಿಯಲ್ಲೂ ಚರ್ಚಿಸಲು ನಾಚುವ ವ್ಯಕ್ತಿಗಳು, ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ನಕಲಿ ವೈದ್ಯರ ಬಲೆಗೆ ಬೀಳುತ್ತಾರೆ. ತತ್ಪರಿಣಾಮವಾಗಿ ಸಾಕಷ್ಟು ಹಣದೊಂದಿಗೆ ತಮ್ಮ ಮಾನಸಿಕ ನೆಮ್ಮದಿಯನ್ನೂ ಕಳೆದುಕೊಳ್ಳುತ್ತಾರೆ. ವಿಶೇಷವೆಂದರೆ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ತಜ್ಞ ವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳದ ವ್ಯಕ್ತಿಗಳು, ದಾಂಪತ್ಯ ಸಮಸ್ಯೆಗಳಿಗೆ ಮತ್ತು ಅನೇಕ ಸಂದರ್ಭಗಳಲ್ಲಿ ವಿವಾಹ ವಿಚ್ಛೇದನಕ್ಕೆ ಶರಣಾಗುವುದು ಕೂಡಾ ಅಪರೂಪವೇನಲ್ಲ. ನಮ್ಮ ದೇಶದಲ್ಲಿ ದಾರಿತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಿಸಬಲ್ಲ ಕಟ್ಟುನಿಟ್ಟಿನ ಕಾನೂನುಗಳಿದ್ದರೂ, ಇಂದಿಗೂ ಮಾಧ್ಯಮಗಳಲ್ಲಿ ಇಂತಹ ಜಾಹೀರಾತುಗಳು ಪ್ರಕಟವಾಗುತ್ತಲೇ ಇರುವುದು ಮಾತ್ರ ನಂಬಲಸಾಧ್ಯ ಎನಿಸುತ್ತದೆ.

ಸೆಕ್ಸಾಲಜಿ ಎಕ್ಸ್ಪೋ  

ಲೈಂಗಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ವೈದ್ಯಕೀಯ ಮತ್ತು ಸ್ವಯಂಸೇವಾ ಸಂಘಟನೆಗಳು ಜೊತೆಯಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಸಾಕಷ್ಟು ತಪ್ಪು ಕಲ್ಪನೆಗಳು ಮತ್ತು ಮೂಢನಂಬಿಕೆಗಳು ಮನೆಮಾಡಿದ್ದು, ಇವುಗಳನ್ನು ನಿವಾರಿಸಲು ವಿಶೇಷ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ. ಭಾರತದಲ್ಲಿ ದ ಇಂಡಿಯನ್ ಅಸೋಸಿಯೇಶನ್ ಫೊರ್ ಸೆಕ್ಸಾಲಜಿ ಸಂಘಟನೆಯು, ಅನ್ಯ ಕೆಲ ಸಂಘಟನೆಗಳ ಸಹಯೋಗದಲ್ಲಿ ಇಂಟರ್ನ್ಯಾಶನಲ್ ಸೆಕ್ಸಾಲಜಿ ಎಕ್ಸ್ಪೋ ಕಾರ್ಯಕ್ರಮವನ್ನು ಸೆ. 2 ರಿಂದ 4 ರ ತನಕ ನಡೆಸುತ್ತಿದೆ. ಮನುಷ್ಯರನ್ನು ಬಾಧಿಸುವ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಮತ್ತಿತರ ಕಾಯಿಲೆಗಳ ಚಿಕಿತ್ಸೆಯಲ್ಲಿ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳು ಇರುವಂತೆಯೇ, ಲೈಂಗಿಕ ಆರೋಗ್ಯ ಮತ್ತು ಸಮಸ್ಯೆಗಳ ಚಿಕಿತ್ಸೆಯ ವಿಚಾರದಲ್ಲೂ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಭಾರತದ ಸಂಘಟನೆಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 

ಕೊನೆಯ ಮಾತು 

ಜಗತ್ತಿನ ಅನ್ಯ ರಾಷ್ಟ್ರಗಳ ಜನರಂತೆಯೇ ಭಾರತೀಯರಲ್ಲೂ ಲೈಂಗಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಾಕಷ್ಟಿವೆ. ವಿಶೇಷವೆಂದರೆ ಇಂತಹ ಸಮಸ್ಯೆಗಳಿರುವ ವ್ಯಕ್ತಿಗಳು ತಮ್ಮ ನಂಬಿಗಸ್ತ ವೈದ್ಯರ ಸಲಹೆಯನ್ನು ಪಡೆಯುವುದರ ಹೊರತಾಗಿ, ತಮ್ಮ ಬಂಧುಮಿತ್ರರ ಸಲಹೆ - ಸೂಚನೆಗಳನ್ನು ಅಥವಾ ನಕಲಿ ವೈದ್ಯರ ಚಿಕಿತ್ಸೆಯನ್ನು ಪಡೆಯುವ ಮೂಲಕ ತಮ್ಮ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಾರೆ. ಏಕೆಂದರೆ ಲೈಂಗಿಕ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ನೀಡುವ ತಜ್ಞರು ಯಾರೆಂದು ಅನೇಕರಿಗೆ ತಿಳಿದಿಲ್ಲ. ಇದೇ ಕಾರಣದಿಂದಾಗಿ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ಹಾಗೂ ಸ್ವಯಂ " ಸೆಕ್ಸಾಲಜಿಸ್ಟ್ " ಎಂದು ಘೋಷಿಸಿಕೊಳ್ಳುವ ನಕಲಿವೈದ್ಯರ ಮಾತಿಗೆ ಮರುಳಾಗಿ, ಸಹಸ್ರಾರು ರೂಪಾಯಿಗಳನ್ನು ತೆತ್ತು ( ನಿರುಪಯುಕ್ತ )  ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ. 

ಪುರುಷರನ್ನು ಬಾಧಿಸುವ ಲೈಂಗಿಕ ಸಮಸ್ಯೆಗಳ ಚಿಕಿತ್ಸೆಗೆ ಯುರಾಲಜಿಸ್ಟ್ - ಎನ್ಡ್ರೋಲಜಿಸ್ಟ್  ಮತ್ತು ಸ್ತ್ರೀಯರ ಸಮಸ್ಯೆಗಳ ಚಿಕಿತ್ಸೆಗಾಗಿ ಗೈನೆಕಾಲಜಿಸ್ಟ್ ಎಂದು ಕರೆಯಲ್ಪಡುವ ತಜ್ಞವೈದ್ಯರ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಿಶ್ಚಿತವಾಗಿಯೂ ಹಿತಕರವೆನಿಸುವುದು ಎನ್ನುವುದನ್ನು ಅರಿತಿರಿ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 




Wednesday, June 29, 2016

NATIONAL DOCTORS DAY


      ಜುಲೈ ೧ : ರಾಷ್ಟ್ರೀಯ ವೈದ್ಯರ ದಿನಾಚರಣೆ
                             ಬೆಳ್ಳಿ ಹಬ್ಬದ ಸಂಭ್ರಮಾಚರಣೆ 

ಸಹಸ್ರಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ವೈದ್ಯ ಬಾಂಧವರನ್ನು ಸದಾ ಗೌರವಿಸುತ್ತಿದ್ದ ನಮ್ಮ ಪೂರ್ವಜರು, ಕೃತಜ್ಞತಾ ಪೂರ್ವಕವಾಗಿ " ವೈದ್ಯೋ ನಾರಾಯಣೋ ಹರಿ " ಎಂದು ನಮಿಸುತ್ತಿದ್ದರು. ಅಂತೆಯೇ ನಮ್ಮ ದೇಶದಲ್ಲಿ ೧೯೯೧ ರಿಂದ ವರ್ಷಂಪ್ರತಿ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಇದೀಗ ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಬೆಳ್ಳಿಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಾಗೂ ನಿಮ್ಮ ಆತ್ಮೀಯ ಮಿತ್ರರೂ ಆಗಿರುವ ವೈದ್ಯರಿಗೆ, ನಿಮ್ಮ ಪ್ರೀತಿ ವಿಶ್ವಾಸಗಳ ದ್ಯೋತಕವಾಗಿ ಇಂದು ಶುಭಕಾಮನೆಗಳನ್ನು ಸಲ್ಲಿಸುವ ಮೂಲಕ ಈ ದಿನವನ್ನು ಅವಿಸ್ಮರಣೀಯವನ್ನಾಗಿಸಿ. 

ವೈದ್ಯರ ದಿನಾಚರಣೆಯ ಹಿನ್ನೆಲೆ 

ಜಾಗತಿಕ ಮಟ್ಟದಲ್ಲಿ ಮೊತ್ತಮೊದಲಬಾರಿಗೆ " ವೈದ್ಯರ ದಿನ " ವನ್ನು ೧೯೩೩ ರ ಮಾರ್ಚ್ ೩೦ ರಂದು ಆಚರಿಸಲಾಗಿತ್ತು. ಖ್ಯಾತ ವೈದ್ಯ ಚಾರ್ಲ್ಸ್. ಬಿ . ಆಲ್ಮಂಡ್ ಇವರ ಪತ್ನಿ ಇ. ಬಿ. ಆಲ್ಮಂಡ್ ಇವರು, ವೈದ್ಯರನ್ನು ಗೌರವಿಸುವ ಸಲುವಾಗಿ ವರ್ಷದಲ್ಲಿ ಕನಿಷ್ಠ ಒಂದು ದಿನವನ್ನು ಮೀಸಲಿಡಬೇಕು ಎಂದು ನಿರ್ಧರಿಸಿದಂತೆ ಇದನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ವೈದ್ಯರಿಗೆ ಶುಭಾಶಯ ಪತ್ರವನ್ನು ಕಳುಹಿಸುವ ಅಥವಾ ಹೇಳುವ ಮತ್ತು ವಿಧಿವಶರಾಗಿರುವ ಖ್ಯಾತ ವೈದ್ಯರ ಸಮಾಧಿಗಳ ಮೇಲೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ಗೌರವಿಸಲಾಗುತ್ತಿತ್ತು. 

ತದನಂತರ ಅಮೆರಿಕ ದೇಶದ ಜನಪ್ರತಿನಿಧಿಗಳು ೧೯೫೮ ರ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸುವ ನಿರ್ಣಯವೊಂದನ್ನು ಅಂಗೀಕರಿಸಿದ್ದರು. ಜಾರ್ಜ್ ಬುಶ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ವರ್ಷಂಪ್ರತಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನಾಗಿ ಆಚರಿಸುವ ವಿಧೇಯಕಕ್ಕೆ ೧೯೯೦ ರ ಅಕ್ಟೋಬರ್ ೩೦ ರಂದು ಸಹಿಹಾಕಿದ್ದು, ೧೯೯೧ ರಿಂದ ಇದು ಜಾರಿಗೊಂಡಿತ್ತು. 

ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸಲು ನಿರ್ದಿಷ್ಟ ಕಾರಣವೊಂದು ಇಂತಿದೆ. ಡಾ. ಕ್ರಾಫರ್ಡ್ ಲಾಂಗ್ ಎನ್ನುವ ವೈದ್ಯರು ೧೮೪೨ ರ ಮಾರ್ಚ್ ೩೦ ರಂದು ಮೊತ್ತಮೊದಲಬಾರಿಗೆ ಈಥರ್ ಎನ್ನುವ ಅರಿವಳಿಕೆ ಔಷದವನ್ನು ಬಳಸಿ, ರೋಗಿಯ ಕತ್ತಿನ ಭಾಗದಲ್ಲಿದ್ದ ಗೆಡ್ಡೆಯೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದರು. ಈ ಸಂದರ್ಭದಲ್ಲಿ ತನಗೆ ಕಿಂಚಿತ್ ಕೂಡಾ ನೋವಿನ ಅನುಭವ ಆಗಿರಲಿಲ್ಲವೆಂದು ರೋಗಿ ಹೇಳಿದ್ದನು. ನೋವಿಲ್ಲದೇ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾದ ವಿಧಾನ ಮತ್ತು ಔಷದವನ್ನು ಸಂಶೋಧಿಸಿ ಬಳಸಿದ್ದ ಈ ದಿನವನ್ನು, ಜಗತ್ತಿನ ಬಹುತೇಕ ರಾಷ್ಟ್ರಗಳು ವೈದ್ಯರ ದಿನವನ್ನಾಗಿ ಆಚರಿಸುತ್ತಿವೆ. 

ಡಾ. ಬಿ. ಸಿ. ರಾಯ್ ಜನ್ಮದಿನ 

ಅಪ್ರತಿಮ ವೈದ್ಯ ಹಾಗೂ ಮಹಾನ್ ರಾಜಕಾರಣಿ ಎಂದೇ ಸುಪ್ರಸಿದ್ಧರಾಗಿದ್ದ ಡಾ. ಬಿದಾನ ಚಂದ್ರ ರಾಯ್ ಇವರ ಜನ್ಮದಿನವನ್ನು ಭಾರತದಲ್ಲಿ " ರಾಷ್ಟ್ರೀಯ ವೈದ್ಯರ ದಿನ " ವನ್ನಾಗಿ ಆಚರಿಸಲಾಗುತ್ತಿದೆ. ವಿಶೇಷವೆಂದರೆ ಜುಲೈ ೧, ೧೮೮೨ ರಂದು ಜನಿಸಿದ್ದ ಡಾ. ರಾಯ್, ೧೯೬೨ ಜುಲೈ ೧ ರಂದು ಅರ್ಥಾತ್ ತಮ್ಮ ಜನ್ಮದಿನದಂದೇ  ವಿಧಿವಶರಾಗಿದ್ದರು. ಈ ಮಹಾನ್ ಸಾಧಕನ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರವು ೧೯೯೧ ರಲ್ಲಿ ನಿರ್ಧರಿಸಿತ್ತು. 

೧೮೮೨ ಜುಲೈ ೧ ರಂದು ಜನಿಸಿದ್ದ ಬಿ. ಸಿ. ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದ ಬಳಿಕ, ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ೧೯೧೧ ರಲ್ಲಿ ಸ್ವದೇಶಕ್ಕೆ ಮರಳಿದ ಡಾ. ರಾಯ್, ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. 

ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಡಾ. ರಾಯ್, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ತದನಂತರ ೧೪ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮುಖ್ಯಮಂತ್ರಿಯಂತಹ ಬಿಡುವಿಲ್ಲದ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ಪ್ರತಿನಿತ್ಯ ಕನಿಷ್ಠ ೧ ಗಂಟೆಯಷ್ಟು ಸಮಯವನ್ನು ಕೊಳೆಗೇರಿಯ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ವಿನಿಯೋಗಿಸುತ್ತಿದ್ದರು. ಡಾ. ರಾಯ್ ಇವರ ಮಹೋನ್ನತ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರವು, ೧೯೬೧ ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 
--------------------------------------------------------------------------------------------
                ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮ ಕೈಯ್ಯಲ್ಲೇ ಇದೆ!
--------------------------------------------------------------------------------------------

ಪ್ರಸ್ತುತ ನಮ್ಮ ದೇಶದಲ್ಲಿ ವಿಭಿನ್ನ ವೈದ್ಯಕೀಯ ಚಿಕಿತ್ಸಾ ಪದ್ದತಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸಹಸ್ರಾರು ವರ್ಷಗಳ ಹಿಂದೆ ಆವಿಷ್ಕರಿಸಿದ್ದ ಆಯುರ್ವೇದದೊಂದಿಗೆ ಸಿದ್ಧ, ಯುನಾನಿ, ಹೋಮಿಯೋಪತಿ, ಆಲೋಪತಿಗಳಲ್ಲದೇ, ಪ್ರಕೃತಿ ಚಿಕಿತ್ಸಾ ಪದ್ದತಿಯೂ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ ಅತ್ಯಧಿಕ ಸಂಖ್ಯೆಯ ಭಾರತೀಯರು ತಮ್ಮ ಆರೋಗ್ಯದ ರಕ್ಷಣೆಗಾಗಿ, ಮಾರಕ ಅಥವಾ ಗಂಭೀರ ಕಾಯಿಲೆಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಮತ್ತು ಅನ್ಯ ವ್ಯಾಧಿಗಳು ಬಾಧಿಸಿದ ಸಂದರ್ಭಗಳಲ್ಲಿ ಆಧುನಿಕ ಅರ್ಥಾತ್ ಅಲೋಪತಿ ವೈದ್ಯಕೀಯ ಪದ್ದತಿಯನ್ನು ಬಳಸುತ್ತಿದ್ದಾರೆ. ಈ ರೀತಿಯಲ್ಲಿ ಹಲವಾರು ವೈದ್ಯಕೀಯ ಪದ್ದತಿಗಳು ನಮ್ಮ ದೇಶದಲ್ಲಿ ಬಳಸಲ್ಪಡುತ್ತಿದ್ದರೂ, ಇವೆಲ್ಲಾ ಪದ್ದತಿಗಳ ಮೂಲ ಉದ್ದೇಶವು ಮನುಷ್ಯನ ಸ್ವಾಸ್ಥ್ಯ ರಕ್ಷಣೆಯೇ ಆಗಿದೆ. 

ಮನುಷ್ಯನನ್ನು ಬಾಧಿಸಬಲ್ಲ ಸಹಸ್ರಾರು ವಿಧದ ಕಾಯಿಲೆಗಳಿಗೆ ಕಾರಣಗಳೂ ನೂರಾರು. ಇವುಗಳಲ್ಲಿ ರೋಗನಿರೋಧಕ ಶಕ್ತಿಯ ಕೊರತೆ, ಅನುವಂಶಿಕತೆ, ಬ್ಯಾಕ್ಟೀರಿಯಾ ಹಾಗೂ ವೈರಸ್ ಮತ್ತಿತರ ರೋಗಕಾರಕ ಸೂಕ್ಷ್ಮಾಣುಜೀವಿಗಳು, ಜನ್ಮದತ್ತ ವೈಕಲ್ಯ ಹಾಗೂ ತೊಂದರೆಗಳು, ಆಧುನಿಕ ಜೀವನಶೈಲಿ, ಅತಿಯಾದ ಮಾನಸಿಕ ಒತ್ತಡ, ಮಾದಕ ದ್ರವ್ಯ ಇತ್ಯಾದಿಗಳ ಸೇವನೆಯಂತಹ ದುಶ್ಚಟಗಳು, ಪ್ರದೂಷಿತ ಪರಿಸರ, ಕಲುಷಿತ ನೀರು ಮತ್ತು ಗಾಳಿ, ಕೀಟನಾಶಕಗಳನ್ನು ಬಳಸಿ ಬೆಳೆಸಿದ ಆಹಾರ ಪದಾರ್ಥಗಳ ಸೇವನೆಯೊಂದಿಗೆ, ಅಲ್ಪಾವಧಿಯಲ್ಲಿ ಕೈತುಂಬಾ ಸಂಪಾದಿಸುವ ಸಲುವಾಗಿ ನಿದ್ರಾಹಾರಗಳನ್ನು ನಿರ್ಲಕ್ಷಿಸಿ ಎಡೆಬಿಡದೇ ದುಡಿಯುವುದೇ ಮುಂತಾದ ಕಾರಣಗಳು ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. 

ಅದೇ ರೀತಿಯಲ್ಲಿ ಮನುಷ್ಯನನ್ನು ಬಾಧಿಸುವ ಬಹುತೇಕ ವ್ಯಾಧಿಗಳನ್ನು ಗುಣಪಡಿಸಬಲ್ಲ ಔಷದಗಳು ಲಭ್ಯವಿದ್ದು, ಶಾಶ್ವತ ಪರಿಹಾರವೇ ಇಲ್ಲದ ಕೆಲ ಗಂಭೀರ ಕಾಯಿಲೆಗಳನ್ನು ಸಮರ್ಪಕವಾಗಿ ನಿಯಂತ್ರಿಸಬಲ್ಲ ಔಷದಗಳಿವೆ. ಆದರೆ ಕೆಲವಿಧದ ಗಂಭೀರ ಅಥವಾ ಮಾರಕ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳೇ ಇಲ್ಲವೆನ್ನುವುದು ನಿಮಗೂ ತಿಳಿದಿರಲೇಬೇಕು. ಆದರೆ ಇಂತಹ ವ್ಯಾಧಿಗಳನ್ನು ಗುಣಪಡಿಸಬಲ್ಲ ಔಷದಗಳನ್ನು ಪತ್ತೆಹಚ್ಚಲು ವೈದ್ಯಕೀಯ ವಿಜ್ಞಾನಿಗಳು ನಿರಂತರವಾಗಿ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ. 

ಆರೋಗ್ಯವೇ ಭಾಗ್ಯ 

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಅದೇ ರೀತಿಯಲ್ಲಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ ಎನ್ನುವ ಉಕ್ತಿಯನ್ನೂ ಕೇಳಿರಬೇಕು. ಇವೆರಡೂ ಮಾತುಗಳನ್ನು ಅಕ್ಷರಶಃ ಪರಿಪಾಲಿಸಿದಲ್ಲಿ, ಕಾಯಿಲೆಗಳನ್ನು ದೂರವಿರಿಸುವುದು ಸುಲಭಸಾಧ್ಯ. 

ನಿಮ್ಮ ಶಾರೀರಿಕ ಕ್ಷಮತೆಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಪರಿಪಾಲಿಸಬೇಕು. ಇದರ ಅಂಗವಾಗಿ ದಿನನಿತ್ಯ ಮುಂಜಾನೆ ಬೇಗನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ಕನಿಷ್ಠ ಅರ್ಧದಿಂದ ಒಂದು ಗಂಟೆಯ ಕಾಲ ವ್ಯಾಯಾಮ ಅಥವಾ ಯೋಗ ಹಾಗೂ ಪ್ರಾಣಾಯಾಮ ಅಥವಾ ಶಾರೀರಿಕ ಶ್ರಮದ ಕ್ರೀಡೆಗಳಲ್ಲಿ ಅಥವಾ ನಡಿಗೆಯಲ್ಲಿ ತೊಡಗಿಸಿಕೊಳ್ಳಿರಿ. 

ಪ್ರತಿನಿತ್ಯ ಸಮತೋಲಿತ ಆಹಾರವನ್ನು ಸೇವಿಸಿ. ಎಣ್ಣೆ, ಬೆಣ್ಣೆ, ತುಪ್ಪಗಳನ್ನು ಬಳಸಿ ತಯಾರಿಸಿದ ಮತ್ತು ಸಿಹಿತಿಂಡಿಗಳ ಸೇವನೆಯಲ್ಲಿ ಇತಿಮಿತಿಗಳಿರಲಿ. ಮಾಂಸಾಹಾರಕ್ಕಿಂತ ಸಸ್ಯಾಹಾರದ ಸೇವನೆ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಎನ್ನುವುದನ್ನು ಮರೆಯದಿರಿ. 

ನಿಮ್ಮ ಮಕ್ಕಳನ್ನು ಗಂಭೀರ ಅಥವಾ ಮಾರಕ ವ್ಯಾಧಿಗಳಿಂದ ರಕ್ಷಿಸಬಲ್ಲ ವಿವಿಧ ಲಸಿಕೆಗಳನ್ನು ನಿಗದಿತ ಸಮಯದಲ್ಲಿ ತಪ್ಪದೆ ಕೊಡಿಸಿ. ಅಂತೆಯೇ ಸಾಂಕ್ರಾಮಿಕ ವ್ಯಾಧಿಗಳು ವ್ಯಾಪಕವಾಗಿ ಕಂಡುಬಂದಲ್ಲಿ, ಇವುಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದ್ದಲ್ಲಿ ಪಡೆದುಕೊಳ್ಳಿ. ಅಂತೆಯೇ ಅನ್ಯ ಕಾಯಿಲೆಗಳು ಬಾಧಿಸಿದಾಗ ನಿಮ್ಮ ನಂಬಿಗಸ್ಥ ವೈದ್ಯರ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆಯಿರಿ. ವೈದ್ಯರ ನಿರ್ಧಾರದ ಬಗ್ಗೆ ಸಂದೇಹವಿದ್ದಲ್ಲಿ, ಅವರು ಸೂಚಿಸಿದ ಚಿಕಿತ್ಸೆಯನ್ನು ನಿರಾಕರಿಸುವ ಹಾಗೂ ಮತ್ತೊಬ್ಬ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವ ಹಕ್ಕು ನಿಮಗಿದೆ.

ಅಂತಿಮವಾಗಿ ಕ್ಷಿಪ್ರಗತಿಯಲ್ಲಿ ಶ್ರೀಮಂತರಾಗುವ ಹಂಬಲದಿಂದ ನಿದ್ರಾಹಾರಗಳನ್ನು ನಿರ್ಲಕ್ಷಿಸಿ ಕೈತುಂಬಾ ಹಣವನ್ನು ಸಂಪಾದಿಸುವ ಸಂದರ್ಭದಲ್ಲಿ  ಕಳೆದುಕೊಂಡ ಆರೋಗ್ಯವನ್ನು ಮತ್ತೆ ಗಳಿಸಲು, ಅದುವರೆಗೆ ಸಂಪಾದಿಸಿದ ಹಣವನ್ನು ಮತ್ತೆ ಕಳೆದುಕೊಳ್ಳದಿರಿ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 



Sunday, June 12, 2016

JUNE 14 - WORLD BLOOD DONORS DAY



---

                       ಜೂನ್ 14 : ವಿಶ್ವ ರಕ್ತದಾನಿಗಳ ದಿನ 

2004 ರಿಂದ ಜಗತ್ತಿನ ಅನೇಕ ರಾಷ್ಟ್ರಗಳು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತವೆ.
 ಈ ಬಾರಿ " ರಕ್ತವು ನಮ್ಮೆಲ್ಲರನ್ನೂ ಜೋಡಿಸುತ್ತದೆ "  ಎನ್ನುವ ಘೋಷವಾಕ್ಯದೊಂದಿಗೆ, ಈ ದಿನವನ್ನು ಆಚರಿಸಲಾಗುತ್ತಿದೆ. ಸರಳವಾಗಿ ಹೇಳಬೇಕಿದ್ದಲ್ಲಿ,ನೀವು ಸ್ವಯಂಪ್ರೇರಿತವಾಗಿ ನೀಡುವ ರಕ್ತವು ನಿಮ್ಮ ಸಂಬಂಧಿಗಳಲ್ಲದ ವ್ಯಕ್ತಿಗಳೊಂದಿಗೆ  " ರಕ್ತಸಂಬಂಧ " ವನ್ನು ಅಯಾಚಿತವಾಗಿ ಸೃಷ್ಟಿಸುತ್ತದೆ!. 

ರಕ್ತದಾನ - ಜೀವದಾನ
ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಬೇಕೆಂದಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಎರಡಲ್ಲ, ಮೂರು ಜೀವಗಳನ್ನು ಉಳಿಸಬಲ್ಲದು. ಜೊತೆಗೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ, ನಿಮ್ಮ ಆರೋಗ್ಯದ ಮಟ್ಟವೂ ಉನ್ನತಸ್ತರದಲ್ಲಿ ಇರುವುದು. ಇದಕ್ಕೂ ಮಿಗಿಲಾಗಿ ಹಲವಾರು ಜೀವಗಳನ್ನು ಉಳಿಸಿದ ಸಂತೃಪ್ತಿಯು ನಿಮ್ಮ ಮನಸ್ಸಿಗೆ ಮುದನೀಡುವುದು.

ರಕ್ತದ ಬೇಡಿಕೆ ಮತ್ತು ಪೂರೈಕೆ

ಜಾಗತಿಕ ಮಟ್ಟದಲ್ಲಿ ಪ್ರಾಣಾಪಾಯದ ಸ್ಥಿತಿಯಲ್ಲಿರುವ ರೋಗಿಗಳನ್ನು ಬದುಕಿಸಲು ಅತ್ಯವಶ್ಯಕವೆನಿಸುವ  ಸುರಕ್ಷಿತ ರಕ್ತ ಮತ್ತು ಇತರ ರಕ್ತದ ಉತ್ಪನ್ನಗಳ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಆದರೆ ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ರಕ್ತ ಮತ್ತು ರಕ್ತದ ಅನ್ಯ ಉತ್ಪನ್ನಗಳ ಪೂರೈಕೆ ಅಪೇಕ್ಷಿತ ಪ್ರಮಾಣದಲ್ಲಿ ಹೆಚ್ಚುತ್ತಿಲ್ಲ. ಅರ್ಥಾತ್ ಅಧಿಕತಮ ಆರೋಗ್ಯವಂತ ಯುವಕ - ಯುವತಿಯರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರುವುದಿಲ್ಲ!.

ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ ವಿಶ್ವ ರಕ್ತದಾನಿಗಳ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಜನಸಾಮಾನ್ಯರನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ಜೊತೆಗೆ ರಕ್ತದಾನದ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಮತ್ತು ಜನರ ಮನಸ್ಸಿನಲ್ಲಿ ಈ ಬಗ್ಗೆ ಇರಬಹುದಾದ ತಪ್ಪುಕಲ್ಪನೆಗಳನ್ನು ತೊಡೆದುಹಾಕುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ರಕ್ತದಾನಿಗಳ ದಿನ

ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ ವಿಶ್ವ ರಕ್ತದಾನಿಗಳ ದಿನವನ್ನು  ೨೦೦೪ ರ ಜೂನ್ ೧೪ ರಂದು ಆಚರಿಸಲಾಗಿತ್ತು. ರಕ್ತದ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಆಧುನಿಕ ರಕ್ತಪೂರಣ ಪದ್ಧತಿಯ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯ ವಿಜ್ಞಾನಿ, ೧೯೦೧ ರಲ್ಲಿ ರಕ್ತದ ಎ, ಬಿ, ಎಬಿ ಮತ್ತು ಓ ಗುಂಪುಗಳನ್ನು ಪತ್ತೆಹಚ್ಚಿದ ಮತ್ತು ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ ಮಾನವನ ರಕ್ತದಲ್ಲಿರುವ “ ರೀಸಸ್ ಫ್ಯಾಕ್ಟರ್ “ ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಗಳ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತದ ಮರುಪೂರಣವನ್ನು ನಡೆಸಲು ಇವರು ಕಾರಣಕರ್ತರೆನಿಸಿದ್ದರು. ಈ ಮಹಾನ್ ಸಂಶೋಧಕರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಯಾವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ದಿನದಂದು ವಿಶೇಷವಾಗಿ ಸ್ವಯಂಪ್ರೇರಿತ ರಕ್ತದಾನವನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮಗಳನ್ನು ಸ್ವಯಂಸೇವಾ ಸಂಘಟನೆಗಳು ಹಮ್ಮಿಕೊಳ್ಳುತ್ತವೆ. ತನ್ಮೂಲಕ ಇನ್ನಷ್ಟು ಜನರು ಈ ಮಹಾನ್ ಕಾರ್ಯದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತವೆ.

ರಕ್ತದಾನಕ್ಕೆ ಆದ್ಯತೆ

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಪ್ರತಿ ೧೦೦೦ ಜನರಲ್ಲಿ ಕನಿಷ್ಠ ೧೦ ವ್ಯಕ್ತಿಗಳು ಮಾಡುವ ರಕ್ತದಾನದ ಪ್ರಮಾಣ ತೃಪ್ತಿಕರವೆನಿಸುತ್ತದೆ. ಆದರೆ ೭೫ ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರಕ್ತದಾನದ ಪ್ರಮಾಣವು ಇದಕ್ಕೂ ಸಾಕಷ್ಟು ಕಡಿಮೆಯಿದೆ. ಈ ಕೊರತೆಯನ್ನು ನೀಗಿಸಲು ನಿಯಮಿತವಾಗಿ, ಸ್ವಯಂಪ್ರೇರಿತವಾಗಿ ಮತ್ತು ಉಚಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಪ್ರೋತ್ಸಾಹಿಸುವ ಮೂಲಕ ಸುರಕ್ಷಿತ ರಕ್ತದ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಈ ವಿಧಾನದ ಮೂಲಕ ರಕ್ತವನ್ನು ಸಂಗ್ರಹಿಸುವಂತೆ ಸಲಹೆಯನ್ನು ನೀಡಿದೆ.

ಜಗತ್ತಿನ 62 ದೇಶಗಳು ತಮಗೆ ಬೇಕಾಗುವ ಶೇ. 100 ರಷ್ಟು ರಕ್ತವನ್ನು ಸ್ವಯಂಪ್ರೇರಿತ ದಾನಿಗಳಿಂದಲೇ ಸಂಗ್ರಹಿಸುತ್ತಿವೆ. ಇತ್ತೀಚಿನ ಅಂಕಿಅಂಶಗಳಂತೆ. ಜಗತ್ತಿನಾದ್ಯಂತ 108 ದಶಲಕ್ಷ ಯುನಿಟ್ ರಕ್ತವನ್ನು ಸಂಗ್ರಹಿಸಲಾಗುತ್ತಿದೆ. ನಿಜ ಹೇಳಬೇಕಿದ್ದಲ್ಲಿ ಜಗತ್ತಿನ ಜನಸಂಖ್ಯೆಯ ಶೇ. 1 ರಷ್ಟು ಜನರು ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಲ್ಲಿ, ಹೆಚ್ಚುತ್ತಿರುವ ರಕ್ತದ ಬೇಡಿಕೆಯನ್ನು ನಿರಾಯಾಸವಾಗಿ ಪೂರೈಸಬಹುದಾಗಿದೆ. 

ಜಾಗತಿಕ ಮಟ್ಟದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆಯು ಗತದಶಕದಲ್ಲಿ ಹೆಚ್ಚಾಗಿದ್ದು ,ಜಗತ್ತಿನ  ೭೩ ರಾಷ್ಟ್ರಗಳು ತಮ್ಮ ಅವಶ್ಯಕತೆಯ ಶೇ.೯೦ ರಷ್ಟು ರಕ್ತವನ್ನು ಇಂತಹ ದಾನಿಗಳಿಂದಲೇ ಸಂಗ್ರಹಿಸುತ್ತಿವೆ. ಆದರೆ ೧೬ ಅತ್ಯಧಿಕ ಆದಾಯವಿರುವ, ೪೮ ಮಧ್ಯಮ ಆದಾಯವಿರುವ ಮತ್ತು ೧೬ ಕನಿಷ್ಠ ಆದಾಯವಿರುವ ದೇಶಗಳು ಸೇರಿದಂತೆ ೭೨ ರಾಷ್ಟ್ರಗಳು  ಶೇ. ೫೦ ರಷ್ಟು ರಕ್ತವನ್ನು ಹಣವನ್ನು ಪಡೆದು ರಕ್ತವನ್ನು ನೀಡುವ ಅಥವಾ ತಾವು ನೀಡಿದ್ದ ರಕ್ತಕ್ಕೆ ಪ್ರತಿಯಾಗಿ ಬೇರೊಂದು ಗುಂಪಿನ ರಕ್ತವನ್ನು ಮರಳಿ ಪಡೆಯುವ ದಾನಿಗಳಿಂದಲೇ ಸಂಗ್ರಹಿಸುತ್ತಿವೆ!.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಇದೀಗ ಜಗತ್ತಿನ ಶೇ. ೬೦ ರಾಷ್ಟ್ರಗಳು ಅವಶ್ಯಕತೆಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ದಾನಿಗಳಿಂದ ಸಂಗ್ರಹಿಸುತ್ತಿವೆ. ಇನ್ನುಳಿದ ಶೇ.೪೦ ರಾಷ್ಟ್ರಗಳು ರೋಗಿಗಳ ಸಂಬಂಧಿಗಳನ್ನು ಅಥವಾ ಅನ್ಯ ಮೂಲಗಳನ್ನು  ಅವಲಂಬಿಸುತ್ತಿವೆ. ೨೦೨೦ ನೇ ಇಸವಿಗೆ ಮುನ್ನ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ತಮಗೆ ಬೇಕಾದಷ್ಟು ಪ್ರಮಾಣದ ರಕ್ತವನ್ನು ಉಚಿತವಾಗಿ ಮತ್ತು ಸ್ವಯಂಪ್ರೇರಿತವಾಗಿ ರಕ್ತವನ್ನು ನೀಡುವ ದಾನಿಗಳಿಂದಲೇ ಸಂಗ್ರಹಿಸಬೇಕೆನ್ನುವ  ಉದ್ದೇಶ ಮತ್ತು ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಹೊಂದಿದೆ. ಈ ಉದ್ದೇಶ ನೆರವೇರಲು ಮತ್ತು ನಿಗದಿತ ಗುರಿಯನ್ನು ಸಾಧಿಸಲು, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳು ಸ್ವಯಂಪ್ರೇರಿತ ರಕ್ತದಾನವನ್ನು ಮಾಡಬೇಕಿದೆ.

ರಕ್ತದಾನ – ಶ್ರೇಷ್ಠ ದಾನ

ಅನಾದಿಕಾಲದಿಂದಲೂ ಭಾರತದ ಹಿಂದೂ ಮತ್ತು ಅನ್ಯ ಕೆಲ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧ ರೀತಿಯ – ವಸ್ತುಗಳನ್ನು ದಾನವಾಗಿ ನೀಡುವ ಪದ್ಧತಿ ರೂಢಿಯಲ್ಲಿತ್ತು. ಅರ್ಹ ವ್ಯಕ್ತಿಗಳಿಗೆ ನೀಡುವ ದಾನಗಳಿಂದ ತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಕಿಂಚಿತ್ ಪುಣ್ಯವೂ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಗೆಯೂ ಇದಕ್ಕೆ ಕಾರಣವೆನಿಸಿತ್ತು. ಈ ನಂಬಿಗೆಯು ಇಂದಿಗೂ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿದವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವೇ ರಕ್ತದಾನ. ಅಕ್ಷರಶಃ “ ಜೀವದಾನ “ ಎನಿಸುವ ಈ ದಾನಕ್ಕೆ ಜಾತಿಮತಗಳ ಮತ್ತು ಬಡವ ಬಲ್ಲಿದರೆನ್ನುವ ಭೇದವಿಲ್ಲ.ಅಂತೆಯೇ ಈ ದಾನಕ್ಕೆ ಅನ್ಯ ಯಾವುದೇ ದಾನಗಳು ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ವಿಶ್ವ ರಕ್ತದಾನಿಗಳ ದಿನವನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ಮರಣೀಯವನ್ನಾಗಿಸಿ.

ನಿಮಗಿದು ತಿಳಿದಿರಲಿ

ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಅಪಘಾತ, ಹೆರಿಗೆ ಮತ್ತು ಅನ್ಯ ಕಾರಣಗಳಿಂದ ಸಂಭವಿಸುವ ಅತಿಯಾದ ರಕ್ತಸ್ರಾವಗಳಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ, ಸೂಕ್ತ ಸಮಯದಲ್ಲಿ ನಿರ್ದಿಷ್ಟ ಗುಂಪಿನ ಹಾಗೂ ಅವಶ್ಯಕ ಪ್ರಮಾಣದ ಸುರಕ್ಷಿತ ರಕ್ತ ಲಭ್ಯವಾಗದೇ ಸಹಸ್ರಾರು ಜನರು ಮೃತಪಡುತ್ತಾರೆ. ನಮ್ಮ ದೇಶವೂ ಈ ಸಮಸ್ಯೆಗೆ ಅಪವಾದವೆನಿಸಿಲ್ಲ. ಇದಲ್ಲದೇ ಅನೇಕರಿಗೆ ರಕ್ತದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಅನೇಕ ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಆದರೆ ಇತ್ತೀಚಿನ ಕೆಲವರ್ಷಗಳಿಂದ ಭಾರತದ ಹಲವಾರು ಸ್ವಯಂಸೇವಾ ಸಂಸ್ಥೆಗಳು ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ನಮ್ಮಲ್ಲಿ ಸ್ವಯಂಪ್ರೇರಿತ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

ನಿಮಗೆ ೧೮ ವರ್ಷ ತುಂಬಿದಂದಿನಿಂದ ೬೦ ವರ್ಷ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದಲ್ಲಿ, ೫೦೦ ಕ್ಕೂ ಅಧಿಕ ವ್ಯಕ್ತಿಗಳ ಪ್ರಾಣಗಳನ್ನು ಉಳಿಸಬಹುದಾಗಿದೆ. ಇದರೊಂದಿಗೆ ಸಾಕಷ್ಟು ಪುಣ್ಯ ಮತ್ತು ಮಾನಸಿಕ ನೆಮ್ಮದಿಯನ್ನೂ ಗಳಿಸಬಹುದಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Monday, May 23, 2016

FAKE DOCTORS








                          ನಕಲಿ ವೈದ್ಯರಿಗಿನ್ನು ಉಳಿಗಾಲವಿಲ್ಲ!

ರಾಜ್ಯದ ಪ್ರಜೆಗಳ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಆರೋಗ್ಯಪಾಲನೆಗೆ ಉತ್ತೇಜನ ನೀಡುವುದು ಮತ್ತು ವೈದ್ಯ ಧರ್ಮದ ತತ್ವಗಳಿಗನುಸಾರವಾಗಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಒದಗಿಸಬೇಕಾದ ಸೇವೆಯ ಗುಣಮಟ್ಟಗಳನ್ನು ನಿಗದಿಪಡಿಸುವ ಮೂಲಕ, ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ವ್ಯವಹಾರಗಳನ್ನು ಕಾನೂನಿನ ಮೂಲಕ ನಿಯಂತ್ರಿಸಿ ಮೇಲ್ವಿಚಾರಣೆ ಮಾಡುವುದು ಯುಕ್ತವಾಗಿರುವುದರಿಂದ ಇದಕ್ಕಾಗಿ ಸೂಕ್ತ ಕಾಯಿದೆಯೊಂದನ್ನು ರಾಜ್ಯ ಸರ್ಕಾರವು ೨೦೧೦ ರಲ್ಲಿ ಜಾರಿಗೆ ತಂದಿತ್ತು.ಇದನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಎಂದು ಹೆಸರಿಸಲಾಗಿತ್ತು.

ಸುಮಾರು ಐದು ವರ್ಷಗಳ ಹಿಂದೆ ರಾಜ್ಯಾದ್ಯಂತ ಅನುಷ್ಠಾನಗೊಂಡಿದ್ದ " ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ೨೦೦೭ " ಕಾಯಿದೆಯನ್ವಯ, ಕರ್ನಾಟಕದ ಪ್ರತಿಯೊಬ್ಬ ವೈದ್ಯರು, ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಸ್ಕ್ಯಾನ್ ಸೆಂಟರ್ ಗಳು ಮತ್ತು ಇದಕ್ಕೆ ಸಂಬಂಧಿಸಿದ ಪ್ರತಿಯೊಂದು ಖಾಸಗಿ ಸಂಸ್ಥೆಗಳು ೨೦೧೦ ರ ಫೆಬ್ರವರಿ ತಿಂಗಳಿನಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿತ್ತು.ಹಾಗೂ ಸರ್ಕಾರಿ ಅಧಿಕಾರಿಗಳು, ಐ ಎಂ ಎ ಮತ್ತು ಆಯುಷ್ ನ ಪ್ರತಿನಿಧಿಗಳಿರುವ ತಂಡವು ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಸಂದರ್ಶಿಸಿ, ಕಾಯಿದೆಯ ಮಾನದಂಡಗಳಿಗೆ ಅನುಗುಣವಾಗಿ ಇದೆಯೇ ಎಂದು ಪರಿಶೀಲಿಸಬೇಕಿತ್ತು. ಈ ಸಂದರ್ಭದಲ್ಲಿ ವಿವಿಧ ವೈದ್ಯಕೀಯ ಪದ್ದತಿಗಳ ಪದವೀಧರ ವೈದ್ಯರು, ತಮ್ಮ ಪದವಿ ಹಾಗೂ ಸ್ನಾತಕೊತ್ತರ ಪದವಿಗಳ ಮತ್ತು ತಾವು ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿ ಮಾಡಿಸಿರುವ ದಾಖಲೆಗಳ ಯಥಾಪ್ರತಿಗಳನ್ನು ನಿಯೋಜಿತ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಬೇಕಿತ್ತು. 

ಈ ಕಾಯಿದೆಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘೋಷಿಸಿದ್ದಂತೆ " ನಕಲಿ ವೈದ್ಯರಿಗಿನ್ನು ಉಳಿಗಾಲವಿಲ್ಲ " ಎನ್ನುವ ಶಿರೋನಾಮೆಯ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟಗೊಂಡಿದ್ದವು. ಆದರೆ ಕಾಯಿದೆ ಅನುಷ್ಠಾನಗೊಂಡು ಐದು ವರ್ಷಗಳೇ ಕಳೆದಿದ್ದರೂ, ಯಾವುದೇ ರೀತಿಯ ವೈದ್ಯಕೀಯ ಪದವಿಯನ್ನೇ ಗಳಿಸದ ಮತ್ತು ವೈದ್ಯಕೀಯ ವಿಜ್ಞಾನದ ಗಂಧಗಾಳಿಗಳನ್ನೇ ಅರಿತಿರದ ಅಸಂಖ್ಯ " ನಕಲಿ ವೈದ್ಯರು ", ಇಂದಿಗೂ ತಮ್ಮ ವೃತ್ತಿಯನ್ನು ನಿರಾತಂಕವಾಗಿ ನಡೆಸುತ್ತಲೇ ಇದ್ದಾರೆ!. ಇಷ್ಟು ಮಾತ್ರವಲ್ಲ, " ನಕಲಿ ವೈದ್ಯಕೀಯ ಪದವಿ " ಗಳನ್ನು ಹಣಕೊಟ್ಟು ಖರೀದಿಸಿದ್ದ ನೂರಾರು ಜನರು ರಾಜಾರೋಷವಾಗಿ ತಮ್ಮ ಹೆಸರಿನ ಹಿಂದೆ " ಡಾ " ಎನ್ನುವ ಪದವನ್ನು ಜೋಡಿಸಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವುದು ರಾಜ್ಯ ಸರ್ಕಾರಕ್ಕೆ ತಿಳಿಯದ ವಿಚಾರವೇನಲ್ಲ. ಆದರೆ ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ. 

ಕ. ಖಾ. ವೈ. ಸಂಸ್ಥೆಗಳ ಅಧಿನಿಯಮದಂತೆ ತಮ್ಮ ಹೆಸರನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ವೈದ್ಯರು ಸಲ್ಲಿಸಿದ್ದ ಪದವಿ ಅಥವಾ ಸ್ನಾತಕೋತ್ತರ ಪದವಿಗಳ ಪ್ರಮಾಣಪತ್ರದ ಯಥಾಪ್ರತಿಗಳನ್ನು ಬಳಸಿ, ಆಯಾ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ ಇವುಗಳ ಸಾಚಾತನವನ್ನು ತತ್ಸಂಬಂಧಿತ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕಿತ್ತು. ತತ್ಪರಿಣಾಮವಾಗಿ ಅನೈತಿಕ ಮತ್ತು ಕಾನೂನುಬಾಹಿರವಾಗಿ ಅನೇಕರು ಗಳಿಸಿದ್ದ ನಕಲಿ ಪದವಿ ಪ್ರಮಾಣಪತ್ರಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿತ್ತು. ಹಾಗೂ ಇವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು. ಅದೇ ರೀತಿಯಲ್ಲಿ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಯಾವುದೇ ವೈದ್ಯಕೀಯ ಪದವಿಯನ್ನೇ ಗಳಿಸಿರದ ಮತ್ತು ಕಾನೂನುಬಾಹಿರವಾಗಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವ ( ಸರ್ಕಾರದ ಆದೇಶದಂತೆ ನೋಂದಣಿ ಮಾಡಿಸದ ) ನಕಲಿ ವೈದ್ಯರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಖಚಿತ ಮಾಹಿತಿ ತಿಳಿದಿದ್ದರೂ, ಇಂತಹ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನುಕ್ರಮಗಳನ್ನು ಕೈಗೊಳ್ಳದ ಕಾರಣದಿಂದಾಗಿ ಇವರೆಲ್ಲರೂ ನಿಶ್ಚಿಂತೆಯಿಂದ ತಮ್ಮ ಧಂಧೆಯನ್ನು ನಡೆಸುತ್ತಲೇ ಇದ್ದಾರೆ. ಹಾಗೂ ಅಮಾಯಕ ರೋಗಿಗಳ ಸುಲಿಗೆಯನ್ನು ಮಾಡುವುದರೊಂದಿಗೆ, ಅವರ  ಪ್ರಾಣಕ್ಕೆ ಎರವಾಗುತ್ತಿದ್ದಾರೆ. ವಿಶೇಷವೆಂದರೆ ಇಂತಹ ನಕಲಿ ವೈದ್ಯರಲ್ಲಿ ಕ್ಯಾನ್ಸರ್ ತಜ್ಞರು, ಸಂತತಿ ಇಲ್ಲದವರಿಗೆ ಸಂತಾನಭಾಗ್ಯ ಕರುಣಿಸುವ ಮತ್ತು ಮಧುಮೇಹದಂತಹ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಗುಣಪಡಿಸುವುದಾಗಿ ಘೋಷಿಸುವ ತಜ್ಞರುಗಳು ಇದ್ದಾರೆ. ಇಷ್ಟೆಲ್ಲಾ ಸಾಲದೆನ್ನುವಂತೆ ಶಾಶ್ವತ ಪರಿಹಾರವೇ ಇಲ್ಲದ ಕಾಯಿಲೆಗಳನ್ನು ಖಚಿತವಾಗಿ ಗುಣಪಡಿಸುವ ಭರವಸೆಯನ್ನು ನೀಡುವ ಜಾಹೀರಾತುಗಳನ್ನು ನೀಡುವ ನಕಲಿ ವೈದ್ಯರು ಮತ್ತು ಔಷದ ತಯಾರಿಕಾ ಸಂಸ್ಥೆಗಳ ಹಾವಳಿಯೂ ದಿನೇದಿನೇ ಹೆಚ್ಚುತ್ತಲೇ ಇದೆ. ಆದರೆ ರಾಜ್ಯದ ಪ್ರಜೆಗಳನ್ನು ಕಾಡುತ್ತಿರುವ ಇಂತಹ  ಸಮಸ್ಯೆಗಳನ್ನು ಪರಿಹರಿಸುವುದು ಬಿಡಿ, ನಿಯಂತ್ರಿಸುವುದರಲ್ಲೂ ರಾಜ್ಯದ ಆರೋಗ್ಯ ಇಲಾಖೆ ದಯನೀಯವಾಗಿ ವಿಫಲವಾಗಿರುವುದು ಸುಳ್ಳೇನಲ್ಲ!. 

ಆದರೆ ಇದೀಗ ಮತ್ತೊಮ್ಮೆ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ಸನ್ನದ್ಧವಾಗಿರುವ ಆರೋಗ್ಯ ಇಲಾಖೆಯು, ಐದು ವರ್ಷಗಳ ಹಿಂದೆ ಕ.ಖಾ. ವೈ. ಸಂ. ಅಧಿನಿಯಮದಂತೆ ನೋಂದಣಿ ಮಾಡಿಸಿಕೊಂಡಿದ್ದ ಅಸಲಿ ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳು, ಇದೀಗ ಮತ್ತೊಮ್ಮೆ ನಿಗದಿತ ಶುಲ್ಕವನ್ನು ಪಾವತಿಸಿ ತಮ್ಮ ನೋಂದಣಿಯನ್ನು ನವೀಕರಿಸುವಂತೆ ಸೂಚನೆಯನ್ನು ನೀಡಿದೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



Thursday, May 12, 2016

VANISHING WATERBODISES !


        ದೇಶದ ಜಲಮೂಲಗಳು ಬತ್ತಿಹೋಗುತ್ತಿವೆ, ಜೋಕೆ! 

ಜಾಗತಿಕ ತಾಪಮಾನದ ಹೆಚ್ಚಳ ಮತ್ತು ತತ್ಸಂಬಂಧಿತ ಅನ್ಯ ಕಾರಣಗಳ ಫಲವಾಗಿ ರಾಜ್ಯದ ಜನತೆ ಇದುವರೆಗೆ ಕಂಡುಕೇಳರಿಯದ ಬೇಸಗೆಯ ಧಗೆಯಿಂದ ಹೈರಾಣಾಗಿದ್ದಾರೆ. ಜೊತೆಗೆ ಬಹುತೇಕ ಜಿಲ್ಲೆಗಳಲ್ಲಿ ಉದ್ಭವಿಸಿರುವ ಜಲಕ್ಷಾಮದಿಂದ ಕಂಗಾಲಾಗಿದ್ದಾರೆ. ಕೆಲವೆಡೆ ಕುಡಿಯುವ ನೀರನ್ನು ಅರಸಿಕೊಂಡು  ಅಲೆದಾಡಬೇಕಾದಂತಹ ಭೀಕರ ಬರ ಬಾಧಿಸುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜಲಮೂಲಗಳು ಬತ್ತಿಹೋಗಿವೆ ಅಥವಾ ಬತ್ತಿಹೋಗುತ್ತಿವೆ. ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಜನತೆಯನ್ನು ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅವಶ್ಯಕ ಹಾಗೂ ದೀರ್ಘಕಾಲೀನ ಪರಿಹಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲು ವಿಫಲವಾಗಿರುವ ಪರಿಣಾಮವಾಗಿ, ಇದೀಗ ಜಲಕ್ಷಾಮದ ತೀವ್ರತೆ ಇನ್ನಷ್ಟು ಹೆಚ್ಚಿದೆ. 

ವಿಶೇಷವೆಂದರೆ ಕರ್ನಾಟಕವೂ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿನ ಜಲಮೂಲಗಳು ನಶಿಸುತ್ತಿರುವ ಮತ್ತು ಅಂತರ್ಜಲದ ಮಟ್ಟವು ಪಾತಾಳಕ್ಕೆ ಕುಸಿಯುತ್ತಿರುವ ಬಗ್ಗೆ " ವಿಶ್ವ ಬ್ಯಾಂಕ್ " ಐದು ವರ್ಷಗಳ ಹಿಂದೆಯೇ ಎಚ್ಚರಿಕೆಯನ್ನು ನೀಡಿತ್ತು. ಅಂತೆಯೇ ಈ ಸಮಸ್ಯೆಯನ್ನು ತಡೆಗಟ್ಟುವಂತಹ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಪರೋಕ್ಷವಾಗಿ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಕಾರಣಕರ್ತರೆನಿಸಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಜಲಕ್ಷಾಮದ ಕರಿನೆರಳು 

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಒಬ್ಬ ವ್ಯಕ್ತಿಗೆ ಒಂದುದಿನದಲ್ಲಿ ಬೇಕಾಗುವ ನೀರಿನ ಪ್ರಮಾಣ ೧೩೫ ಲೀಟರ್. ಆದರೆ ಧಾರಾಳ ನೀರು ಲಭ್ಯವಿರುವ ಪ್ರದೇಶಗಳ ನಿವಾಸಿಗಳು ಇದರ ಹತ್ತಾರು ಪಟ್ಟು ನೀರನ್ನು ಅನಾವಶ್ಯಕವಾಗಿ ಪೋಲುಮಾಡುತ್ತಾರೆ. ತತ್ಪರಿಣಾಮವಾಗಿ ನಮ್ಮ ದೇಶದ ಶೇ. ೬೦ ರಷ್ಟು ಜಲಮೂಲಗಳು ನಿಧಾನವಾಗಿ ನಶಿಸುತ್ತಾ, ಮುಂದಿನ ೧೫ ವರ್ಷಗಳಲ್ಲಿ ಸಂಪೂರ್ಣವಾಗಿ ಬತ್ತಿಹೋಗಲಿವೆ ಎಂದು ವಿಶ್ವಬ್ಯಾಂಕ್ ೨೦೧೧ ರಲ್ಲೇ ಎಚ್ಚರಿಕೆಯನ್ನು ನೀಡಿತ್ತು. ವಿಶ್ವಬ್ಯಾಂಕ್ ಮುಂದಿನ ೧೫ ವರ್ಷಗಳಲ್ಲಿ ಸಂಭವಿಸಲಿಸಲಿದೆ ಎಂದಿದ್ದ ಭವಿಷ್ಯವು, ಕೇವಲ ೫ ವರ್ಷಗಳಲ್ಲೇ ನಿಜವಾಗುತ್ತಿದೆ. 

ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಿರುವಂತೆ ೨೦೧೧ ರಲ್ಲೇ ಭಾರತದಲ್ಲಿರುವ ಶೇ.೨೯ ರಷ್ಟು ಜಲಮೂಲಗಳು ಅಪಾಯಕಾರಿ, ಗಂಭೀರ ಸ್ಥಿತಿಯಲ್ಲಿ ಅಥವಾ ವಿನಾಶದ ಹಾದಿಯಲ್ಲಿದ್ದವು. ಭಾರತೀಯರ ನೀರಿನ ದುರ್ಬಳಕೆಯ ಪ್ರಮಾಣವು ಇದೇ ರೀತಿಯಲ್ಲಿ ಹಾಗೂ ಇದೇ ವೇಗದಲ್ಲಿ ಮುದುವರೆದಲ್ಲಿ, ೨೦೨೫ ರಲ್ಲಿ ಶೇ. ೬೫ ರಷ್ಟು ಜಲಮೂಲಗಳು ಗಂಭೀರ ಸ್ಥಿತಿಯನ್ನು ತಲುಪಲಿವೆ. ಇದರೊಂದಿಗೆ ದೇಶದ ವಿವಿಧಭಾಗಗಳಲ್ಲಿ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಗಳೂ, ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಕಾರಣವೆನಿಸಲಿವೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ನಮೂದಿಸಲಾಗಿತ್ತು. 

ಭಾರತೀಯರು ಅತಿಯಾಗಿ ಪೋಲುಮಾಡುತ್ತಿರುವ ನೀರಿನ ಬಗ್ಗೆ ಒಂದಿಷ್ಟು ಅರಿವು ಮೂಡಿಸಬಲ್ಲ ಮಾಹಿತಿಯೊಂದು ಈ ವರದಿಯಲ್ಲಿ ಸೇರಿತ್ತು. ಪ್ರಪಂಚದ ಜನರೆಲ್ಲರೂ ಒಂದು ದಿನದಲ್ಲಿ ಬಳಸುವ ನೀರಿನ ಶೇ. ೨೫ ರಷ್ಟು ಪಾಲನ್ನು ಬಳಸುವವರು ಭಾರತೀಯರೇ ಆಗಿದ್ದಾರೆ. ಭಾರತೀಯರು ಒಂದು ವರ್ಷದಲ್ಲಿ ಬಳಸುವ ನೀರಿನ ಪ್ರಮಾಣವು ಅಂದು ೨೩೦ ಕ್ಯುಬಿಕ್ ಕಿಲೋ ಲೀಟರ್ ಗಳಾಗಿತ್ತು!. 

ದೇಶದ ವಿವಿಧ ರಾಜ್ಯಗಳ ಕೃಷಿಕರು ಬಳಸುತ್ತಿದ್ದ ಶೇ.೬೫ ರಷ್ಟು ನೀರು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಪೂರೈಸುತ್ತಿದ್ದ ಶುದ್ಧೀಕರಿಸಿದ ಕುಡಿಯುವ ನೀರಿನ ಶೇ. ೮೦ ರಷ್ಟನ್ನು ಪಡೆದುಕೊಳ್ಳಲು ಅಂತರ್ಜಲ ಮತ್ತು ಭೂಜಲ ಮೂಲಗಳನ್ನೇ ಅವಲಂಬಿಸಿವೆ. 

ಭಾರತದಲ್ಲಿರುವ ೫೭೨೩ ಭೂಜಲ ಕ್ಷೇತ್ರಗಳಲ್ಲಿ ೧೬೧೫ ಕ್ಷೇತ್ರಗಳು ಅತಿ ಗಂಭೀರ ಅಥವಾ ಅತಿಯಾಗಿ ಬಳಸಲ್ಪಡುವ ಸ್ಥಿತಿಯಲ್ಲಿವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಭೂಜಲ ಪ್ರಾಧಿಕಾರವು ಇವುಗಳಲ್ಲಿನ ೧೦೮ ಪ್ರಮುಖ ಕ್ಷೇತ್ರಗಳನ್ನು ಸಂರಕ್ಷಿಸಲು ಐದುವರ್ಷಗಳ ಹಿಂದೆಯೇ ಅವಶ್ಯಕ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಕೇಂದ್ರ ಭೂಜಲ ಪ್ರಾಧಿಕಾರ ಮತ್ತು ಕೆಲ ರಾಜ್ಯ ಸರ್ಕಾರಗಳ ಬಳಿ ಭೂಜಲ ಸಂರಕ್ಷಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಅವಶ್ಯಕ ಸಿಬಂದಿಗಳೇ ಇರದಿದ್ದ ಕಾರಣದಿಂದಾಗಿ, ಇದು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗಿರಲಿಲ್ಲ. 

ಪರಿಹಾರವೇನು?

ನಮ್ಮ ಮುಂದಿನ ಪೀಳಿಗೆಯನ್ನು ಜಲಕ್ಷಾಮದ ಸಮಸ್ಯೆ ಬಾಧಿಸದಂತೆ ತಡೆಗಟ್ಟಲು, ನಾವಿಂದು ಅನಾವಶ್ಯಕ ಹಾಗೂ ಅತಿಯಾಗಿ ಪೋಲುಮಾಡುತ್ತಿರುವ ನೀರಿನ ಪ್ರಮಾಣವನ್ನು ನಿಶ್ಚಿತವಾಗಿಯೂ ಕಡಿಮೆ ಮಾಡಲೇಬೇಕು. ಇದರೊಂದಿಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಜಲಸಂರಕ್ಷಣೆಯ ಕೆಲವೊಂದು ಉಪಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಅನುಷ್ಠಾನಿಸಲೇಬೇಕು. 

ರೈತಾಪಿ ಜನರು ಬೆಳೆಯುವ ಬೆಳೆಗಳಿಗೆ ಅಗತ್ಯವಿರುವಷ್ಟೇ ನೀರುಣಿಸುವ ವೈಜ್ಞಾನಿಕ ಮಾಹಿತಿಗಳನ್ನು ಕೃಷಿಕರಿಗೆ ಸರ್ಕಾರವೇ ಒದಗಿಸಬೇಕು. ಜೊತೆಗೆ ರೈತರಿಗೆ ಉಚಿತವಾಗಿ ವಿದ್ಯುತ್ ಒದಗಿಸುತ್ತಿರುವುದರಿಂದ ದಿನದಲ್ಲಿ ಹಲವಾರು ಘಂಟೆಗಳ ಕಾಲ ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದ ನೀರನ್ನು ಪೋಲುಮಾಡುವುದನ್ನು ನಿಯಂತ್ರಿಸಬೇಕು. ಇದಕ್ಕಾಗಿ ರೈತರು ಬಳಸುವ ವಿದ್ಯುತ್ತಿಗೆ ಒಂದಿಷ್ಟು ಶುಲ್ಕವನ್ನು ವಿಧಿಸಬೇಕು. ಸರ್ಕಾರದ ಅನುಮತಿ ಇಲ್ಲದೇ ಖಾಸಗಿ ವ್ಯಕ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಯಂತ್ರಿಸಬೇಕು. ಅದರಲ್ಲೂ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದ ಸ್ಥಳಗಳಲ್ಲಿ, ಇನ್ನಷ್ಟು ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಷೇಧಿಸಬೇಕು. ಇದಕ್ಕೆ ಬದಲಾಗಿ ತೆರೆದ ಮತ್ತು ಕೊಳವೆ ಬಾವಿಗಳ ಜಲಮರುಪೂರಣವನ್ನು ಕಡ್ಡಾಯಗೊಳಿಸಬೇಕು. 

ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಮಳೆನೀರಿನ ಕೊಯ್ಲನ್ನು ಕಡ್ಡಾಯಗೊಳಿಸಬೇಕು. ಕೆರೆ ಮತ್ತು ತೆರೆದ ಬಾವಿಗಳ ಹೂಳನ್ನು ತೆಗೆಸುವುದರೊಂದಿಗೆ, ಕಾರಣಾಂತರಗಳಿಂದ ಮುಚ್ಚಿರುವ ಕೆರೆ- ಬಾವಿಗಳನ್ನು ಮತ್ತೆ ಪುನರುಜ್ಜೀವನಗೊಳಿಸಲೇಬೇಕು. ನಗರ - ಮಹಾನಗರಗಳಲ್ಲಿನ ಬಹುಮಹಡಿ ಕಟ್ಟಡಗಳು, ಬೃಹತ್ ಉದ್ದಿಮೆಗಳು ಮತ್ತು ಅನ್ಯ ವಾಣಿಜ್ಯ ಕಟ್ಟಡಗಳಿಂದ ವಿಸರ್ಜಿಸಲ್ಪಡುವ ಕಲುಷಿತ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಮರುಬಳಕೆ ಮಾಡಬಲ್ಲ ಘಟಕಗಳ ಸ್ಥಾಪನೆಯನ್ನು ಕಡ್ಡಾಯಗೊಳಿಸಬೇಕು. 

ಸ್ಥಳೀಯ ಸಂಸ್ಥೆಗಳು ಜನರಿಗೆ ಪೂರೈಕೆಮಾಡುವ ಶುದ್ಧೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಗಲುವ ಸಂಪೂರ್ಣ ವೆಚ್ಚವನ್ನು ಜನರಿಂದಲೇ ವಸೂಲು ಮಾಡಬೇಕು. ತತ್ಪರಿಣಾಮವಾಗಿ ಅಲ್ಪಬೆಲೆಗೆ ನಿರಾಯಾಸವಾಗಿ ಲಭಿಸುವ ಶುದ್ಧೀಕರಿಸಿದ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಬಹುದಾಗಿದೆ. 

ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಹಾಗೂ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ, ದೇಶದ ಪ್ರತಿಯೊಬ್ಬ ಪ್ರಜೆಯೂ ಜಲಸಂರಕ್ಷಣೆಯ ಉಪಕ್ರಮಗಳನ್ನು ಸ್ವಯಂಪ್ರೇರಿತರಾಗಿ ಅನುಷ್ಠಾನಗೊಳಿಸಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ವಿಶ್ವಬ್ಯಾಂಕ್ ವರದಿಯಲ್ಲಿ ನಮೂದಿಸಿದಂತೆ, ದೇಶದ ಜಲಮೂಲಗಳು ಸದ್ಯೋಭವಿಷ್ಯದಲ್ಲಿ ನಶಿಸಲಿವೆ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 




Friday, May 6, 2016

DO NOT WASTE WATER


                    ಜೀವಜಲವನ್ನು ಅನಾವಶ್ಯಕವಾಗಿ ಪೋಲುಮಾಡದಿರಿ

ಕೆಲವೇ ದಶಕಗಳ ಹಿಂದೆ ಹಗಲಿರುಳು ಸುರಿಯುತ್ತಿದ್ದ ಮುಂಗಾರು ಮಳೆಯು ಕಾಲಕ್ರಮೇಣ ಕ್ಷಯಿಸುತ್ತಾ ಬಂದು ವರುಷಗಳೇ ಸಂದಿವೆ. ಥಟ್ಟನೆ ಬಂದೆರಗಿ ಅಷ್ಟೇ ವೇಗವಾಗಿ ಅದೃಶ್ಯವಾಗುವ ಇಂದಿನ ಮುಂಗಾರು ಮಳೆ ಮತ್ತು ಎಡೆಬಿಡದೆ ಧೋ ಎಂದು ಸುರಿಯುತ್ತಿದ್ದ ಹಿಂದಿನ ಜಡಿಮಳೆಗಳಿಗೆ ಅಜಗಜಾಂತರ ವ್ಯತ್ಯಾಸವೂ ಇದೆ. ಮುಂಗಾರು ಮಳೆಯ ಕೊರತೆ ಮತ್ತು ಹೆಚ್ಚುತ್ತಿರುವ ನೀರಿನ ಬಳಕೆಗಳು ಸುದೀರ್ಘಕಾಲದ ಬಳಿಕ ಜಲಕ್ಷಾಮಕ್ಕೆ ಕಾರಣವೆನಿಸಿದೆ. 

ಜಲಕ್ಷಾಮದ ಸಮಸ್ಯೆ 

ಬೆಳಗಿನ ಜಾವ ಸೂರಿನ ಮೇಲೆ ಬೀಳುತ್ತಿದ್ದ ಮಳೆನೀರಿನ ಸದ್ದಿಗೆ ಎಚ್ಚರವಾಗುತ್ತಿದ್ದ ಹಾಗೂ ಮಳೆಯ ಸದ್ದನ್ನು ಆಲಿಸುತ್ತಾ ನಿದ್ರೆಗೆ ಜಾರುತ್ತಿದ್ದ ದಿನಗಳು ಇದೀಗ ಕೇವಲ ನೆನಪುಗಳಾಗಿವೆ. ಬಾವಿ, ಕೆರೆ, ತೊರೆ ಮತ್ತು ಸದಾ ತುಂಬಿರುತ್ತಿದ್ದ ಹಾಗೂ ಜಲಕ್ಷಾಮ ಎಂದರೇನೆಂದು ಅರಿತಿರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯಲೂ ನೀರಿಲ್ಲದಿರುವುದು ಸಮಸ್ಯೆಯ ಗಂಭೀರತೆಯನ್ನು ಸಾರುತ್ತಿದೆ. ಪ್ರಸ್ತುತ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಈ ಬಾರಿ ಕಣ್ಮರೆಯಾಗಿರುವ ಮುಂಗಾರು ಪೂರ್ವ ಮಳೆಗಳ ಸಂಯುಕ್ತ ಪರಿಣಾಮದಿಂದಾಗಿ  ಪ್ರಾಕೃತಿಕ ಜಲಮೂಲಗಳಾದ ಬಾವಿ, ಕೆರೆ, ತೊರೆ ಮತ್ತು ನದಿಗಳು ಈಗಾಗಲೇ ಬತ್ತಿ ಬರಡಾಗಿವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯು ಪುನರಪಿ ಕಾಡದಂತೆ ಹಾಗೂ ಪಾತಾಳವನ್ನು ತಲುಪಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು, ಕೊಳವೆಬಾವಿಗಳಿಗೆ ಜಲ ಮರುಪೂರಣ ಮತ್ತು ಮಳೆನೀರಿನ ಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾಗಿದೆ. ಜೊತೆಗೆ ನಾವಿಂದು ಅನಾವಶ್ಯಕ ಹಾಗೂ ಅತಿಯಾಗಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. 

ಜಗತ್ತಿನ ಜಲಸಂಪನ್ಮೂಲದ ಶೇ. ೪ ರಷ್ಟನ್ನು ಹೊಂದಿರುವ ಭಾರತವು ಕೆಲವೇ ವರ್ಷಗಳ ಹಿಂದೆ " ಜಲ ಸಮೃದ್ಧ " ದೇಶವಾಗಿತ್ತು. ಅಗಾಧ ಪ್ರಮಾಣದ ಜಲ ಸಂಪನ್ಮೂಲಗಳಿದ್ದರೂ, ೨೦೧೧ ರಲ್ಲಿ ನಮ್ಮ ದೇಶವು " ನೀರಿನ ಕೊರತೆಯ ಸಮಸ್ಯೆ " ಇರುವ ರಾಷ್ಟ್ರಗಳ ಯಾದಿಯಲ್ಲಿ ಸೇರ್ಪಡೆಗೊಂಡಿತ್ತು. ಇದಕ್ಕೆ ನಿರ್ದಿಷ್ಟ ಕಾರಣವೂ ಇದ್ದಿತು. 

ಬೇಡಿಕೆ - ಲಭ್ಯತೆ 

ಒಂದೆರಡು ವರ್ಷಗಳ ಹಿಂದೆ ಭಾರತದಲ್ಲಿ ನೀರಿನ ಬೇಡಿಕೆಯ ಪ್ರಮಾಣವು ೭೧೮ ಬಿಲಿಯನ್ ( ದಶಲಕ್ಷ ಕೋಟಿ ) ಕ್ಯುಬಿಕ್ ಮೀಟರ್ ಗಳಾಗಿದ್ದು, ೨೦೫೦ ರಲ್ಲಿ ಇದು ೮೩೩ ಬಿ. ಕ್ಯು. ಮೀಟರ್ ತಲುಪಲಿದೆ ಎಂದು ಊಹಿಸಲಾಗಿತ್ತು. ಇದರಲ್ಲಿ ಕೃಷಿ ಜಮೀನಿನ ನೀರಾವರಿಗಾಗಿ ಬಳಸಲ್ಪಡುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ೫೫೭ ಬಿ.ಕ್ಯು. ಮೀಟರ್ ಆಗಿದ್ದು, ೨೦೫೧ ರಲ್ಲಿ ಇದು ೮೦೭ ಬಿ.ಕ್ಯು. ಮೀಟರ್ ತಲುಪಲಿದೆ ಎನ್ನಲಾಗಿತ್ತು. ಇದೇ ಸಂದರ್ಭದಲ್ಲಿ ದೇಶದ ಜನತೆಯ ಗೃಹಬಳಕೆಯ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೪೩ ಬಿ.ಕ್ಯು. ಮೀ. ಆಗಿದ್ದು, ೨೦೨೫ ರಲ್ಲಿ ೬೨ ಹಾಗೂ ೨೦೫೦ ರಲ್ಲಿ ೧೧೧ ಬಿ.ಕ್ಯು.ಮೀ ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಉದ್ದಿಮೆಗಳು ಬಳಸುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೩೭ ಬಿ.ಕ್ಯು.ಮೀ. ಆಗಿದ್ದು, ೨೦೨೫ ರಲ್ಲಿ ಇದು ೬೭ ಮತ್ತು ೨೦೫೦ ರಲ್ಲಿ ೮೧ ಬಿ. ಕ್ಯು. ಮೀ. ಆಗಲಿದೆ ಎಂದು ಊಹಿಸಲಾಗಿತ್ತು. ಅದೇ ರೀತಿಯಲ್ಲಿ ೨೦೧೦೧ ರಲ್ಲಿ ವಿದ್ಯುತ್ ಉತ್ಪಾದನೆಗಾಗಿ ೧೯ ಬಿ.ಕ್ಯು.ಮೀ. ಬಳಕೆಯಾಗಿದ್ದು, ೨೦೨೫ ರಲ್ಲಿ ಇದು ೩೦ ಮತ್ತು ೨೦೫೦ ರಲ್ಲಿ ೭೦ ಬಿ.ಕ್ಯು.ಮೀ. ಮೀರಲಿದೆ ಎಂದು ಅಂದಾಜಿಸಲಾಗಿದೆ. ಈ ರೀತಿಯಲ್ಲಿ ವಿವಿಧ ಉದ್ದೇಶಗಳಿಗಾಗಿ ನಮಗಿಂದು ಅಗಾಧ ಪ್ರಮಾಣದ ನೀರಿನ ಅವಶ್ಯಕತೆ ಇದ್ದರೂ, ದೇಶದ ಅನೇಕ ಭಾಗಗಳಲ್ಲಿ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಏಕೆಂದರೆ ನಮ್ಮಲ್ಲಿ ಸುರಿಯುವ ಮಳೆನೀರಿನ ಶೇ. ೬೫ ರಷ್ಟು ಪಾಲು ಸಮುದ್ರವನ್ನು ಸೇರುತ್ತಿದೆ. 

ಭಾರತೀಯರು ಒಂದು ವರ್ಷದಲ್ಲಿ ೨೧೦ ಬಿ.ಕ್ಯು.ಮೀ. ಗೂ ಅಧಿಕ ಪ್ರಮಾಣದ ಅಂತರ್ಜಲವನ್ನು ಬಳಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎನ್ನಲಾಗಿದೆ. ನಮ್ಮ ದೇಶದಲ್ಲಿನ ಶೇ. ೬೦ ರಷ್ಟು ನೀರಾವರಿ ಜಮೀನಿಗೆ ಇದೇ ಅಂತರ್ಜಲವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ದೇಶದ ಶೇ. ೬೦ ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಕೊರತೆ ಬಾಧಿಸುತ್ತಿದೆ. 

೨೦೧೦ ರಲ್ಲಿ ದೇಶದ ಜನಸಂಖ್ಯೆಯು ೧.೦೨೯ ಬಿಲಿಯನ್ ಆಗಿದ್ದು, ಅಂದಿನ ನೀರಿನ ಲಭ್ಯತೆಯ ಪ್ರಮಾಣವು ಒಂದುವರ್ಷದಲ್ಲಿ ತಲಾ ೧೮೧೬ ಕ್ಯು. ಮೀ. ಆಗಿತ್ತು. ೨೦೧೧ ರಲ್ಲಿ ಜನಸಂಖ್ಯೆಯು ೧.೨೧೦ ಬಿ. ಹಾಗೂ ನೀರಿನ ಲಭ್ಯತೆಯ ಪ್ರಮಾಣವು ತಲಾ ೧೫೪೫ ಆಗಿತ್ತು. ೨೦೨೫ ರಲ್ಲಿ ದೇಶದ ಜನಸಂಖ್ಯೆಯು ೧.೩೯೪ ಬಿ. ( ಅಂದಾಜು ) ಮತ್ತು ನೀರಿನ ಲಭ್ಯತೆ ೧೩೪೦ ಮತ್ತು ೨೦೫೦ ರಲ್ಲಿ ಜನಸಂಖ್ಯೆ ೧.೬೪೦ ಬಿ. ಹಾಗೂ ನೀರಿನ ಲಭ್ಯತೆಯು ೧೧೪೦ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಅರ್ಥಾತ್, ದೇಶದ ಜನಸಂಖ್ಯೆ ಹೆಚ್ಚಿದಂತೆಯೇ, ನೀರಿನ ಲಭ್ಯತೆಯ ಪ್ರಮಾಣವು ಕುಸಿಯಲಿದೆ. 

ಕಲುಷಿತ ನೀರು 

ದೇಶದಲ್ಲಿನ ಉದ್ದಿಮೆಗಳು ಬಳಸಿ ವಿಸರ್ಜಿಸುವ ಶೇ. ೯೦ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸಿ ನದಿ - ಸಮುದ್ರಗಳಿಗೆ ವಿಸರ್ಜಿಸುತ್ತಿವೆ. ಆದರೆ ಈ ಶುದ್ಧೀಕರಿಸಿದ ಕಲುಷಿತ ನೀರು ಪರಿಸರಸ್ನೇಹಿ ಮಾನದಂಡಗಳಿಗೆ ಅನುಗುಣವಾಗಿಲ್ಲ. ನಮ್ಮ ದೇಶದಲ್ಲಿ ಶೇ.೭೦ ರಷ್ಟು ಪ್ರಮಾಣದ ಜಲಪ್ರದೂಷಣೆಗೆ ನಮ್ಮ ನಗರ - ಮಹಾನಗರಗಳು ಉತ್ಪಾದಿಸುತ್ತಿರುವ ತ್ಯಾಜ್ಯಗಳೇ ಕಾರಣವೆನಿಸಿವೆ. ದೇಶದ ಶೇ. ೩೬ ರಷ್ಟು ಜನರು ವಾಸಿಸುವ ನಗರಗಳು ಬೃಹತ್ ಪ್ರಮಾಣದ ಕಲುಷಿತ ನೀರನ್ನು ಉತ್ಪಾದಿಸಿ ವಿಸರ್ಜಿಸುತ್ತಿವೆ. ಅವಶ್ಯಕ ಮೂಲಸೌಕರ್ಯಗಳ ಕೊರತೆಯಿಂದಾಗಿ ಸ್ಥಳೀಯ ಸಂಸ್ಥೆಗಳು ಕೇವಲ ಶೇ. ೩೧ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸುತ್ತಿವೆ. ಹಾಗೂ ಇನ್ನುಳಿದ ಶೇ. ೬೯ ರಷ್ಟು ಕಲುಷಿತ ನೀರನ್ನು ಚರಂಡಿಗಳಲ್ಲಿ ವಿಸರ್ಜಿಸುತ್ತಿವೆ. ಈ ಕಲುಷಿತ ನೀರನ್ನು ಶುದ್ಧೀಕರಿಸಿ ಅನ್ಯ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಹಾಗೂ ಇದಕ್ಕಾಗಿ ವಿವಿಧ ಸಾಮರ್ಥ್ಯದ ಜಲಶುದ್ಧೀಕರಣ ಸ್ಥಾವರಗಳು ಲಭ್ಯವಿದೆ. ಗಣನೀಯ ಪ್ರಮಾಣದ ಕಲುಷಿತ ನೀರನ್ನು ಚರಂಡಿಗಳಿಗೆ ವಿಸರ್ಜಿಸುವ ಪ್ರತಿಯೊಂದು ಕಟ್ಟಡ, ಉದ್ದಿಮೆ ಇತ್ಯಾದಿಗಳು ಕಡ್ಡಾಯವಾಗಿ ಜಲಶುದ್ಧೀಕರಣ ಸ್ಥಾವರಗಳನ್ನು ಸ್ಥಾಪಿಸುವಂತೆ ಸರ್ಕಾರವು ಆದೇಶಿಸಿದಲ್ಲಿ, ಬೃಹತ್ ಪ್ರಮಾಣದ ನೀರಿನ ಉಳಿತಾಯವಾಗಲಿದೆ. 

ಪರಿಹಾರವೇನು?

ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ - ಪಟ್ಟಣಗಳಲ್ಲಿರುವ ಪ್ರತಿಯೊಂದು ಕಟ್ಟಡಗಳಲ್ಲೂ ಮಳೆನೀರು ಕೊಯ್ಲನ್ನು ಕಡ್ಡಾಯವಾಗಿಸಬೇಕು. ಇದರಿಂದಾಗಿ ನಾವಿಂದು ಬಳಸದೇ ಇರುವ ಶೇ. ೬೫ ರಷ್ಟು ಮಳೆನೀರನ್ನು ಉಳಿಸಿ ಬಳಸಬಹುದಾಗಿದೆ. 

ಅಂತೆಯೇ ಕಲುಷಿತ ಜಲಮೂಲಗಳಲ್ಲಿನ ನೀರನ್ನು ಶುದ್ಧೀಕರಿಸಲು ಲಭ್ಯವಿರುವ ೧೩೦ ಕ್ಕೂ ಅಧಿಕ ವಿಧದ ಸಸ್ಯಗಳು ಮತ್ತು ಸೂಕ್ಷ್ಮಾಣುಜೀವಿಗಳನ್ನೂ ಬಳಸುವ ಮೂಲಕ, ಇಂತಹ ನೀರಿನ ಗುಣಮಟ್ಟಗಳನ್ನು ಹೆಚ್ಚಿಸಬೇಕು. ಜೊತೆಗೆ ಇಂತಹ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಮತ್ತಷ್ಟು ಜನರು ಇವುಗಳನ್ನು ಬಳಸುವಂತಾಗಬೇಕು. 

ಅಂತಿಮವಾಗಿ ಅತ್ಯಧಿಕ ಪ್ರಮಾಣದ ಜಲಪ್ರದೂಷಣೆಗೆ ಕಾರಣವೆನಿಸುತ್ತಿರುವ ಬೃಹತ್ ಉದ್ದಿಮೆ - ಕೈಗಾರಿಕಾ ಘಟಕಗಳು ಹಾಗೂ ನಗರ - ಮಹಾನಗರಗಳು, ಈ ಸಮಸ್ಯೆಯನ್ನು ಸ್ವಯಂ ಪರಿಹರಿಸಬೇಕು ಎನ್ನುವ ಕಾನೂನನ್ನು ರೂಪಿಸಿ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇವೆಲ್ಲವುಗಳೊಂದಿಗೆ ನಾವಿಂದು ಅತಿಯಾಗಿ ಬಳಸಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸಲು, ದೇಶದ ಪ್ರತಿಯೊಬ್ಬ ಪ್ರಜೆಯೂ ಧೃಢ ಸಂಕಲ್ಪ ಮಾಡಬೇಕು. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು