Saturday, November 5, 2016

CONSTRUCTION WASTE - RECYCLE AND REUSE


          ಕಟ್ಟಡಗಳ ಭಗ್ನಾವಶೇಷ : ಮರುಬಳಕೆಗಿದೆ ಅವಕಾಶ !

ನಿರಂತರ ಹಾಗೂ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಭಾರತದ ಜನಸಂಖ್ಯೆಗೆ ಅನುಗುಣವಾಗಿ ನಾವಿಂದು ನಿರ್ಮಿಸುತ್ತಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳು, ರಸ್ತೆ, ಸೇತುವೆ, ಫ್ಲೈ ಓವರ್, ಸಬ್ ವೇ ಇತ್ಯಾದಿಗಳ ನಿರ್ಮಾಣ ಕಾಮಗಾರಿಗಳೂ ಶರವೇಗದಲ್ಲಿ ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಹಳೆಯ ಹಾಗೂ ದುಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾಮಗಾರಿಗಳೂ ಎಡೆಬಿಡದೆ ಸಾಗುತ್ತಿವೆ. ತತ್ಪರಿಣಾಮವಾಗಿ ಇವುಗಳಿಂದ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿ ಹೆಚ್ಚುತ್ತಿವೆ. ಈ ತ್ಯಾಜ್ಯಗಳನ್ನು ನಾವು ಮರುಬಳಕೆ ಮಾಡದೇ ಇದ್ದಲ್ಲಿ, ಇವುಗಳನ್ನು ತುಂಬಿಸಲು ಅಥವಾ ವಿಲೇವಾರಿ ಮಾಡಲು ಬೇಕಾಗುವ ಲ್ಯಾಂಡ್ ಫಿಲ್ ಸೈಟ್ ಗಳ ಸಂಖ್ಯೆಯೂ ಇನ್ನಷ್ಟು ವೃದ್ಧಿಸಲಿದೆ. ಲಭ್ಯ ಮಾಹಿತಿಯಂತೆ ಪುರಸಭಾ ತ್ಯಾಜ್ಯಗಳಲ್ಲಿ ಶೇ. ೧೦ ರಿಂದ ೨೦ ರಷ್ಟಿರುವ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸಿ ಮರುಬಳಕೆ ಮಾಡದೇ ಇದ್ದಲ್ಲಿ, ಈ ತ್ಯಾಜ್ಯಗಳಿಂದ ಉದ್ಭವಿಸಲಿರುವ ಗಂಭೀರ ಮತ್ತು ಅಪಾಯಕಾರಿ ಸಮಸ್ಯೆಗಳು ದೇಶದ ಪ್ರಗತಿಗೆ ಕಂಟಕವಾಗಿ ಪರಿಣಮಿಸಲಿವೆ.

ಭಗ್ನಾವಶೇಷಗಳು

ಬಹುತೇಕ ನೂತನ ಕಟ್ಟಡಗಳ ನಿರ್ಮಾಣದ ಸಂದರ್ಭದಲ್ಲಿ, ಹಳೆಯ ಕಟ್ಟಡಗಳನ್ನು ಕೆಡವಲಾಗುತ್ತದೆ. ಅದೇ ರೀತಿಯಲ್ಲಿ ಕೆಲ ಹಳೆಯ ಕಟ್ಟಡಗಳನ್ನು ಪುನರ್ ನವೀಕರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅಗಾಧ ಪ್ರಮಾಣದ ತ್ಯಾಜ್ಯಗಳು ಉತ್ಪನ್ನವಾಗುತ್ತವೆ. ಸಾಮಾನ್ಯವಾಗಿ ಇಂತಹ ತ್ಯಾಜ್ಯಗಳನ್ನು ನಿರುಪಯುಕ್ತ ಎಂದು ಪರಿಗಣಿಸುವುದರಿಂದ, ಅಯಾ ಪಟ್ಟಣ ಅಥವಾ ನಗರಗಳ ಹೊರವಲಯದಲ್ಲಿನ ರಾಜ್ಯ ಅಥವಾ ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ ತಂದು ಸುರಿಯಲಾಗುತ್ತದೆ.

ಕತ್ತಲಾದ ಬಳಿಕವೇ ನಡೆಯುವ ಇಂತಹ “ ಅನೈತಿಕ ತ್ಯಾಜ್ಯ ವಿಲೇವಾರಿ “ ಯಿಂದಾಗಿ, ರಸ್ತೆಗಳ ಇಕ್ಕೆಲಗಳಲ್ಲಿರುವ ಚರಂಡಿಗಳು ಮುಚ್ಚಲ್ಪಡುವುದರಿಂದ ಮಳೆಗಾಲದ ದಿನಗಳಲ್ಲಿ ನೂತನ ರಸ್ತೆಗಳೂ ನಿರ್ನಾಮಗೊಳ್ಳುತ್ತವೆ. ಮುನಿಸಿಪಲ್ ಕಾಯಿದೆಯಂತೆ ಇಂತಹ ತ್ಯಾಜ್ಯಗಳನ್ನು ಕೇವಲ ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ಮಾತ್ರ ವಿಲೇವಾರಿ ಮಾಡಬೇಕಾಗುವುದಾದರೂ, ರಸ್ತೆಗಳ ಬದಿಗಳಲ್ಲಿ ಸುರಿಯುವ ಹವ್ಯಾಸ ದಿನೇದಿನೇ ಹೆಚ್ಚುತ್ತಿದೆ. ನಿಶಾಚರರು ನಡೆಸುವ ಈ ಕಾರ್ಯಾಚರಣೆಯನ್ನು ತಡೆಗಟ್ಟಲು ಆಗದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಅನಿವಾರ್ಯವಾಗಿ ಸುಮ್ಮನಿರಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತಿದೆ.

ತ್ಯಾಜ್ಯ – ವಿಲೇವಾರಿ

ನಮ್ಮ ದೇಶದಲ್ಲಿ ವರ್ಷಂಪ್ರತಿ ೧೦ ರಿಂದ ೧೫ ದಶಲಕ್ಷ ಟನ್ ಗಳಷ್ಟು ಪ್ರಮಾಣದ “ ನಿರ್ಮಾಣ ಕಾಮಗಾರಿಗಳ ತ್ಯಾಜ್ಯ “ ಉತ್ಪನ್ನವಾಗುತ್ತವೆ. ಆದರೆ ಇದರ ಅತಿ ಸಣ್ಣ ಪಾಲು ಮಾತ್ರ ಮರುಬಳಕೆಯಾಗುತ್ತಿದೆ. ಮುನಿಸಿಪಲ್ ಘನತ್ಯಾಜ್ಯ ನಿರ್ವಹಣೆಯ ಕಾಯಿದೆ ೨೦೦೦ ದಂತೆ, ಇಂತಹ ತ್ಯಾಜ್ಯಗಳನ್ನು ಪ್ರತ್ಯೆಕಿಸಬೇಕಾಗಿದ್ದರೂ, ಅನ್ಯ ತ್ಯಾಜ್ಯಗಳೊಂದಿಗೆ ಇವುಗಳನ್ನು ಬೆರೆಸಿ ವಿಲೇವಾರಿ ಮಾಡಲಾಗುತ್ತಿದೆ. ಗತವರ್ಷದಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ್ದ ಭೀಕರ ನೆರೆ ದುರಂತಕ್ಕೆ ಅನಿಯಂತ್ರಿತ, ಕಾನೂನುಬಾಹಿರ ಮತ್ತು ಅತಿಯಾದ ನಿರ್ಮಾಣ ಕಾಮಗಾರಿಗಳು ಮತ್ತು ಇವುಗಳಿಂದ ಉತ್ಪನ್ನವಾಗಿದ್ದ ತ್ಯಾಜ್ಯಗಳನ್ನು ಬೇಕಾಬಿಟ್ಟಿಯಾಗಿ ವಿಲೇವಾರಿ ಮಾಡಿದ್ದುದೇ ಕಾರಣವೆನಿಸಿತ್ತು.

ಪುನರ್ ಆವರ್ತನ – ಮರುಬಳಕೆ        

ಅನೇಕ ದೇಶಗಳಲ್ಲಿ ಕಟ್ಟಡಗಳನ್ನು ಧ್ವಂಸಗೊಳಿಸುವ ಸಂದರ್ಭದಲ್ಲಿ ದೊರೆಯುವ ಇಟ್ಟಿಗೆ, ಕಲ್ಲು ಮತ್ತು ಕಾಂಕ್ರೀಟ್ ತುಂಡುಗಳನ್ನು ಹುಡಿಮಾಡಿದ ಬಳಿಕ, ಇವುಗಳನ್ನು ನೂತನ ರಸ್ತೆಗಳ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲೂ ಈ ವಿಧಾನವನ್ನು ಅನುಸರಿಸುವುದಾದಲ್ಲಿ, ಈ ವಿನೂತನ ವಿಧಾನವನ್ನು ಭಾರತದಲ್ಲೂ ಅನುಷ್ಠಾನಿಸುವುದು ಅಸಾಧ್ಯವೇನಲ್ಲ. ಇಂತಹ ಉಪಯುಕ್ತ ಉಪಕ್ರಮಗಳಿಂದ ನೂತನ ನಿರ್ಮಾಣ ಕಾಮಗಾರಿಗಳ ವೆಚ್ಚ ಕಡಿಮೆಯಾಗುವುದರೊಂದಿಗೆ, ನಿರುಪಯುಕ್ತ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಇದಕ್ಕೂ ಮಿಗಿಲಾಗಿ ರಸ್ತೆಗಳ ಬದಿಗಳಲ್ಲಿ ಇಂತಹ ತ್ಯಾಜ್ಯಗಳನ್ನು ಸುರಿಯುವ ಮೂಲಕ ರಸ್ತೆಗಳನ್ನೇ ಹಾಳುಗೆಡಹುವ ಅನಿಷ್ಠ ಪದ್ದತಿಗೆ ವಿದಾಯ ಹೇಳಬಹುದಾಗಿದೆ.

ಒಂದೆರಡು ವರ್ಷಗಳ ಹಿಂದಿನ ಮಾಹಿತಿಯಂತೆ ದೆಹಲಿಯ ಮುನಿಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು ೪೦೦೦ ಟನ್ ಗಳಷ್ಟು ನಿರ್ಮಾಣ ಕಾಮಗಾರಿಗಳ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಅರ್ಥಾತ್, ಒಂದು ವರ್ಷದಲ್ಲಿ ೧.೫ ದಶಲಕ್ಷ ಟನ್ ತ್ಯಾಜ್ಯವು ದೇಶದ ರಾಜಧಾನಿಯೊಂದರಲ್ಲೇ ಸಂಗ್ರಹವಾಗುತ್ತಿತ್ತು. ಈ ತ್ಯಾಜ್ಯಗಳನ್ನು ಮರುಬಳಕೆ ಅಥವಾ ಪುನರ್ ಆವರ್ತನಗೊಳಿಸಿ ಬಳಸಿದ್ದಲ್ಲಿ, ಅಲ್ಲಿನ ಲ್ಯಾಂಡ್ ಫಿಲ್ ಸೈಟ್ ಗಳ ಆಯುಷ್ಯವು ಇನ್ನಷ್ಟು ಹೆಚ್ಚುತ್ತಿತ್ತು!. ಜೊತೆಗೆ ನೂತನ ರಸ್ತೆಗಳ ನಿರ್ಮಾಣದಲ್ಲಿ ಈ ತ್ಯಾಜ್ಯಗಳನ್ನು ಬಳಸಿದ್ದಲ್ಲಿ, ನಿರ್ಮಾಣ ವೆಚ್ಚ ಕಡಿಮೆಯಾಗುತ್ತಿದ್ದುದರಿಂದ ಇನ್ನಷ್ಟು ಹೊಸ ರಸ್ತೆಗಳನ್ನು ನಿರ್ಮಿಸಬಹುದಾಗಿತ್ತು.

ಕೊನೆಯ ಮಾತು

ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಯಾದಿಯಲ್ಲಿರುವ ಅಮೇರಿಕ. ಇಂಗ್ಲೆಂಡ್, ಜಪಾನ್, ಜರ್ಮನಿ, ಡೆನ್ಮಾರ್ಕ್ ಮತ್ತಿತರ ದೇಶಗಳು ಈಗಾಗಲೇ ಇಂತಹ ತ್ಯಾಜ್ಯಗಳನ್ನು ಪುನರ್ ಆವರ್ತನಗೊಳಿಸುವ ಅಥವಾ ಮರುಬಳಕೆ ಮಾಡುವ ಸಲುವಾಗಿ ಅವಶ್ಯಕ ಕಾನೂನು – ನಿಯಮಗಳನ್ನು ರೂಪಿಸಿವೆ. ಮಾತ್ರವಲ್ಲ, ಇವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿವೆ. ಆದರೆ ನಮ್ಮ ದೇಶದಲ್ಲಿ ಇಂದಿನ ತನಕ ಇಂತಹ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲು ಉಪಯುಕ್ತವೆನಿಸುವ ಮತ್ತು ನೂತನ ನಿರ್ಮಾಣ ಕಾಮಗಾರಿಗಳ ವೆಚ್ಚವನ್ನು ಕಡಿಮೆಮಾಡಬಲ್ಲ ವಿಧಾನಗಳ ಬಗ್ಗೆ ಚಿಂತಿಸಲು ನಮ್ಮನ್ನಾಳುವವರಿಗೆ ಸಮಯವೇ ಇಲ್ಲ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು




                                                                                                 

No comments:

Post a Comment