Friday, September 27, 2013

Tips for travellers


                                                                 ಪ್ರವಾಸಿಗಳಿಗೆ ಕಿವಿಮಾತು 

ನಿಮ್ಮ ರಜಾದಿನಗಳನ್ನು ಪ್ರೇಕ್ಷಣೀಯ ಸ್ಥಳಗಳಲ್ಲಿ ಹಾಯಾಗಿ ಕಳೆಯಲು ಬಯಸುತ್ತೀರಾ? ಅಥವಾ ಪ್ರಸಿದ್ಧ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿ, ಸೇವೆ ಸಲ್ಲಿಸಿ ಒಂದಿಷ್ಟು ಪುಣ್ಯಗಳಿಸಲು ಬಯಸುತ್ತೀರಾ?. ಹಾಗಿದ್ದಲ್ಲಿ ಕೆಲವೊಂದು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿದಲ್ಲಿ ನಿಮ್ಮ ಉದ್ದೇಶವು ಸುಸೂತ್ರವಾಗಿ ಈಡೇರುವುದರಲ್ಲಿ ಸಂದೇಹವಿಲ್ಲ. 

ಶಾಹೀನಾಳ ಶಾಪಿಂಗ್ 

ಮೈಸೂರು ಪ್ರವಾಸಕ್ಕಾಗಿ ಹೊರಟಿದ್ದ ಸುಳ್ಯದ ಕಾಲೇಜು ಕನ್ಯೆಯರು, ತಮ್ಮ ಕಾಲೇಜಿನ ಉದ್ಯೋಗಿ ಶಾಹೀನಾಳನ್ನು ಒತ್ತಾಯಪೂರ್ವಕವಾಗಿ ತಮ್ಮೊಂದಿಗೆ ಕರೆದೊಯ್ದಿದ್ದರು. ಮೈಸೂರಿನ ವಿವಿಧ ಪ್ರೇಕ್ಷಣೀಯ ಸ್ಥಳಗಳಲ್ಲಿ ಮನಸಾರೆ ಸುತ್ತಾಡಿ ಆನಂದಿಸಿದ ಈ ಯುವತಿಯರು, ಊರಿಗೆ ಮರಳುವ ಮುನ್ನ ಶಾಪಿಂಗ್ ನಡೆಸಲು ಬಯಸಿದ್ದರು. ತಮ್ಮ ಮಾರ್ಗದರ್ಶಿ ಸೂಚಿಸಿದ್ದ ಕೆಲ ಆಯ್ದ ಅಂಗಡಿಗಳಲ್ಲಿ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಲು ತೆರಳಿದ್ದ ಗುಂಪಿನಿಂದ ಶಾಹೀನಾ ಪ್ರತ್ಯೇಕಗೊಂಡಿದ್ದಳು. 

ಚಿತ್ತಾಕರ್ಷಕ ಕಲಾಕೃತಿಗಳನ್ನು ಪ್ರದರ್ಶಿಸಿದ್ದ ಅಂಗಡಿಯೊಂದನ್ನು ಪ್ರವೇಶಿಸಿದ್ದ ಆಕೆಗೆ, ನಾಲ್ಕಾರು ಗಂಧದ ಕಲಾಕೃತಿಗಳನ್ನು ಖರೀದಿಸುವ ಬಯಕೆಯಿತ್ತು. ಅಂಗಡಿಯ ನೌಕರನು ತೋರಿಸಿದ ಅನೇಕ ಕಲಾಕೃತಿಗಳಲ್ಲಿ ತಾನು ಮೆಚ್ಚಿದ ನಾಲ್ಕು ಗಂಧದ ಪುಟ್ಟ ವಿಗ್ರಹಗಳನ್ನು ಖರೀದಿಸಿದ ಬಳಿಕ, ಸ್ನೇಹಿತೆಯರನ್ನು ಸೇರಿಕೊಂಡ ಶಾಹೀನಾ ಮರುದಿನ ಸಂಜೆ ಊರಿಗೆ ತಲುಪಿದ್ದಳು. 

ತಾನು ತಂದಿದ್ದ ಕರಕುಶಲ ವಸ್ತುಗಳನ್ನು ಮನೆಮಂದಿಗೆ ತೋರಿಸಲು ಪೆಟ್ಟಿಗೆಯನ್ನು ತೆರೆದ ಆಕೆಗೆ ಏನೋ ಸಂದೇಹ ಮೂಡಿತ್ತು. ಅಂಗಡಿಯಾತ ತನಗೆ ತೋರಿಸಿದ್ದ ವಸ್ತುಗಳು ಗಂಧದಿಂದ ತಯಾರಿಸಿದ್ದರೂ, ಆಕೆಗೆ ನೀಡಿದ್ದ ನಾಲ್ಕೂ ವಿಗ್ರಹಗಳು ಸಾಮಾನ್ಯ ಮರದಲ್ಲಿ ಕೆತ್ತಿದ್ದು ಇವುಗಳಿಗೆ ಒಂದಿಷ್ಟು ಗಂಧದ ಎಣ್ಣೆಯನ್ನು ಹಚ್ಚಲಾಗಿತ್ತು!. ಮಾಗದರ್ಶಿಯ ಮಾತಿಗೆ ಮರುಳಾದ ಶಾಹೀನಾ, ಇಂಗುತಿಂದ ಮಂಗನಂತಾಗಿದ್ದಳು. 

ಪ್ರವಾಸಿಗಳ ರಕ್ಷಣೆಗಾಗಿ ಶಾಸನ 

ದೇಶ ವಿದೇಶಗಳಿಂದ ತಮ್ಮ ರಾಜ್ಯಕ್ಕೆ ಭೇಟಿ ನೀಡುವ ಅಸಂಖ್ಯ ಪ್ರವಾಸಿಗರು- ಯಾತ್ರಿಕರನ್ನು "ಮಾರ್ಗದರ್ಶಿ" ಗಳು ಶೋಷಿಸುವುದನ್ನು ತಡೆಗಟ್ಟಲು ಉತ್ತರ ಪ್ರದೇಶ ಸರಕಾರವು ಶಾಸನವೊಂದನ್ನು ರೂಪಿಸುತ್ತಿದೆ. ಸಾಮಾನ್ಯವಾಗಿ ಮಾರ್ಗದರ್ಶಿಗಳು ತಾವು ಸೂಚಿಸಿದ ಹೋಟೆಲ್ ಗಳಲ್ಲೇ ತಂಗುವಂತೆ, ತಾವು ತೋರಿಸಿದ ಅಂಗಡಿಗಳಿಂದಲೇ ಖರೀದಿಸುವಂತೆ ಪ್ರವಾಸಿಗಳ ಮೇಲೆ ಒತ್ತಡ ಹೇರುವುದರಿಂದ,ತಮ್ಮ ರಾಜ್ಯಕ್ಕೆ ಭೇಟಿನೀಡುವ ಪ್ರವಾಸಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಅನೇಕ ರಾಜ್ಯಗಳ ಗಮನಕ್ಕೆ ಬಂದಿದೆ. ಪ್ರವಾಸೋದ್ಯಮದ ಬೆಳವಣಿಗೆಗೆ ಮಾರಕವೆನಿಸುವ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ತೊಡಿಸುವ ಉದ್ದೇಶದಿಂದಲೇ, ಇಂತಹ ಶಾಸನ ರೂಪಿತವಾಗುತ್ತಿದೆ. 

ಅನೇಕ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗಳ ಅನುಕೂಲಕ್ಕಾಗಿ ಉಚಿತ ಮಾಹಿತಿ- ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ್ದರೂ,ದೇಶೀ ಪ್ರವಾಸಿಗಳು ಇವುಗಳನ್ನು ಬಳಸಿಕೊಳ್ಳಲು ಹಿಂಜರಿಯುತ್ತಾರೆ. ಪ್ರಾಯಶಃ ಸರಕಾರೀ ಕಛೇರಿಗಳಲ್ಲಿ ತಮಗೆ ಲಭಿಸಿದ್ದ "ಉಪಚಾರ"ಗಳ ಅನುಭವವೂ ಇದಕ್ಕೆ ಕಾರಣವೆನಿಸಿರಬಹುದು!. ಆದರೆ ವಿದೇಶೀ ಪ್ರವಾಸಿಗಳು ಮಾಹಿತಿ ಕೇಂದ್ರಗಳ ಮಾರ್ಗದರ್ಶನದಂತೆ ಟ್ಯಾಕ್ಸಿ,ಆಟೋರಿಕ್ಷಾ  ಮತ್ತು ಸ್ಥಳೀಯ ಗೈಡ್ ಗಳಿಂದ ಆಗಬಹುದಾದ ಸುಲಿಗೆ ಮತ್ತು ಕಿರುಕುಳಗಳನ್ನು ನಿವಾರಿಸಿಕೊಳ್ಳುತ್ತಾರೆ. 

ಶಾಸನಗಳು- ನಿಯಮಗಳು ಏನೇ ಇದ್ದರೂ, ಪ್ರವಾಸಿಗಳು- ಯಾತ್ರಿಕರು ಕಿಂಚಿತ್ ಮುಂಜಾಗರೂಕತೆ ವಹಿಸಿದಲ್ಲಿ ಪ್ರಯಾಣದ ಸಂದರ್ಭದಲ್ಲಿ ಬಸ್ಸು-ರೈಲ್ವೇ ನಿಲ್ದಾಣಗಳಲ್ಲಿ ನಡೆಯುವ ಶೋಷಣೆ,ಕಿರುಕುಳ ಮತ್ತು ಮೋಸಹೋಗುವಿಕೆಯಿಂದ ಮುಕ್ತಿ ಪಡೆಯಬಹುದು. ಅಂತೆಯೇ ಪ್ರವಾಸಕ್ಕೆ ತೆರಳಿದ ಅಪರಿಚಿತ ಊರಿನಲ್ಲಿ ಊರಿನಲ್ಲಿ ವಿವಿಧ ನಿಯಮಗಳ ಪರಿಪಾಲನೆ,ನ್ಯಾಯ-ಅನ್ಯಾಯಗಳ ಕುರಿತಾದ ಪ್ರಶ್ನೆ-ಚರ್ಚೆಗಳು ವೈಯುಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಹಿತಕರವಲ್ಲ. ಜೊತೆಗೆ ಅಲ್ಲಿನ ಅಧಿಕಾರಿಗಳು ಆ ದೂರದ ಊರಿನಲ್ಲಿ ಹೂಡಬಹುದಾದ  ಮೊಕದ್ದಮೆಗಳಿಂದಾಗಿ ಪ್ರವಾಸದ ಸವಿಯೋ ಕಹಿಯೇನಿಸೀತು!. 

ಶೋಷಣೆ ಏನು-ಎಂತು?

ಅನೇಕ ಪ್ರಖ್ಯಾತ ಪ್ರೇಕ್ಷಣೀಯ ಸ್ಥಳಗಳಲ್ಲಿ ಮತ್ತು ಅಸಂಖ್ಯ ಭಗವದ್ಭಕ್ತರು ಭೇಟಿ ನೀಡುವ ಪುಣ್ಯಕ್ಷೇತ್ರಗಳಲ್ಲಿ ನಿರಂತರವಾಗಿ ಪ್ರವಾಸಿಗರ ಮತ್ತು ಭಕ್ತಜನರ ಶೋಷಣೆ ನಡೆಯುತ್ತಿರುವುದರ ಅನುಭವ ನಿಮಗೂ ಆಗಿರಬಹುದು. ನೀವು ಖರೀದಿಸಿದ ಅವಶ್ಯಕ ವಸ್ತುಗಳು, ಸ್ಮರನಿಕೆಗಳಿಗೆ ನಿಗದಿತ ದರಕ್ಕಿಂತಲೂ ಅಧಿಕ ಹಣವನ್ನು ವಸೂಲು ಮಾಡುವುದು, ಖ್ಯಾತ ಕಂಪೆನಿಗಳ ಉತ್ಪನ್ನಗಳನ್ನು ಹೋಲುವ ನಕಲಿ ವಸ್ತುಗಳನ್ನು ಮಾರಾಟ ಮಾಡುವುದೇ ಮುಂತಾದ ಧಂಧೆಗಳು ಅವ್ಯಾಹತವಾಗಿ ನಡೆಯುತ್ತಿರಲು ನಮ್ಮನಿಮ್ಮೆಲ್ಲರ ಅಜಾಗರೂಕತೆಯೂ ಕಾರಣವೆನಿಸುತ್ತದೆ. ವಿವಿಧ ರೀತಿಯ  ಚಾಕಲೇಟ್, ಬಿಸ್ಕಿಟ್, ಶುದ್ಧೀಕರಿಸಿದ ನೀರಿನ ಬಾಟಲಿಗಳು, ಧ್ವನಿ ಸುರುಳಿಗಳು ಹಾಗೂ ಫಿಲ್ಮ್ ರೋಲ್ ಗಳು ನೀತಿಭ್ರಷ್ಟ ವ್ಯಾಪಾರಿಗಳ ಮಳಿಗೆಗಳಲ್ಲಿ ಅಸಲಿ ರೂಪದಲ್ಲಿ ದೊರೆಯುವ ಸಾಧ್ಯತೆಗಳೇ ಇಲ್ಲ.
Parle-g ಯಂತೆ ಕಾಣುವ Perle-G,Krack-jack ನ್ನು ಹೋಲುವ Klack-jack,Bisleri ಯನ್ನು ನಾಚಿಸುವ Bislieri, Vicks ನ ತದ್ರೂಪಿಯಂತಹ Kwicks, Colgate ನ ಪಡಿಯಚ್ಚಿನಂತಹ Coligate, ಇಂತಹ ಹತ್ತುಹಲವು ವಿಧದ ನಕಲಿ ಮಾಲುಗಳು ಮಾರಾಟವಾಗುತ್ತಿರುವುದು ಸಹಸ್ರಾರು ಜನರಿಂದ ತುಂಬಿ ಗಿಜಿಗುಡುತ್ತಿರುವ ಸುಪ್ರಸಿದ್ದ ತಾಣಗಳಲ್ಲಿ ಎಂದು ಅರಿತಿರಿ. ಮಾತ್ರವಲ್ಲ, ಇಂತಹ  ಬಳಕೆ ನಿಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದನ್ನು ಮರೆಯದಿರಿ. 

ಸರಕಾರ ಸುಮ್ಮನಿದೆಯೇಕೆ?

ಅಮಾಯಕ ಪ್ರವಾಸಿ- ಯಾತ್ರಿಕರನ್ನು ಮರುಳುಗೊಳಿಸುವ ಇಂತಹ ತಂತ್ರಗಳ ಅರಿವು ಸರಕಾರಕ್ಕೆ ತಿಳಿದಿದ್ದರೂ,ಇಂತಹವರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು, ನಿಗೂಢ ಕಾರಣಗಳಿಂದಾಗಿ ಇಂತಹ ತಾಣಗಳಲ್ಲಿ ನಿಯಮಿತವಾಗಿ ತಪಾಸಣೆ ಅಥವಾ ತನಿಖೆಯನ್ನು ನಡೆಸುವುದೇ ಇಲ್ಲ!. 

ಆದರೆ ಈ ಬಗ್ಗೆ ಖಚಿತ ಮಾಹಿತಿ ದೊರೆತಲ್ಲಿ ಖ್ಯಾತನಾಮ ಸಂಸ್ಥೆಗಳು ತಮ್ಮದೇ ಆದ ತನಿಖಾ ತಂಡವನ್ನು ರಚಿಸಿ ಅಥವಾ ನಿವೃತ್ತ ಪೋಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಹಾಗೂ ಅವಶ್ಯಕವೆನಿಸಿದಲ್ಲಿ ಸ್ಥಳೀಯ ಪೋಲೀಸ್ ಇಲಾಖೆಯ ನೆರವಿನೊಂದಿಗೆ, ತಮ್ಮ ಕಂಪೆನಿಯ ಉತ್ಪನ್ನಗಳನ್ನೇ ಹೋಲುವ ನಕಲಿ ವಸ್ತುಗಳ ನಿರ್ಮೂಲನಕ್ಕೆ ಮುಂದಾಗುತ್ತಾರೆ. 

ರಾಷ್ಟ್ರಮಟ್ಟದಲ್ಲಿ ಈ ರೀತಿಯ ನಕಲಿ ಮಾಲುಗಳ ಮಾರಾಟದಿಂದಾಗಿ ಅಸಲಿ ಉತ್ಪನ್ನಗಳ ತಯಾರಕರಿಗೆ ವಾರ್ಷಿಕ ೨೫೦೦ ಕೋಟಿ ಹಾಗೂ ಸರಕಾರಕ್ಕೆ ತೆರಿಗೆಯ ರೂಪದಲ್ಲಿ ೯೦೦ ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸುತ್ತಿದೆ ಎಂದು ಆರ್ಥಿಕ ಪತ್ರಿಕೆಗಳು ವರದಿಮಾಡಿವೆ. ಆದರೆ ಈ ಬಗ್ಗೆ ಸರಕಾರಕ್ಕೆ ಸಾಕಷ್ಟು ಮಾಹಿತಿಯಿದ್ದರೂ, ಈ ಸಮಸ್ಯೆಯನ್ನು ಬಗೆಹರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳದಿರುವುದು ಏಕೆ?,ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳಿಲ್ಲ. 

ಸ್ವಸುರಕ್ಷಾ ಕ್ರಮಗಳು 

ಪ್ರವಾಸಿಗರಿಗೆ ಸುಲಭಸಾಧ್ಯವೆನಿಸುವ ಕೆಲ ಮುಂಜಾಗರೂಕತಾ ಕ್ರಮಗಳನ್ನು ಮುಂದಾಗಿ ಕೈಗೊಂಡಲ್ಲಿ, ದೂರದೂರಿನಲ್ಲಿ ವಿನಾಕಾರಣ ಶೋಷಣೆಗೆ ಒಳಗಾಗುವುದು ಮತ್ತು ಮೋಸಹೋಗುವಿಕೆಯಂತಹ ಸಮಸ್ಯೆಗಳಿಂದ ಪಾರಾಗಬಹುದು. 

ಪ್ರವಾಸಕ್ಕೆ ಹೊರಡುವ ಮುನ್ನ ಅನಧಿಕೃತ ಮಧ್ಯವರ್ತಿಗಳಿಂದ ಬಸ್ಸು,ರೈಲು ಮತ್ತು ವಿಮಾನಗಳ ಟಿಕೆಟುಗಳನ್ನು ಖರೀದಿಸುವುದು ತೊಂದರೆಗಳಿಗೆ ಆಹ್ವಾನ ನೀಡಿದಂತೆ ಎನ್ನುವುದನ್ನು ಮರೆಯದಿರಿ. ಅಧಿಕೃತ ಮೂಲಗಲಿಂದಲೇ ಖರೀದಿಸಿದರೂ ನಿಮ್ಮ ಟಿಕೆಟುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪ್ರಯಾಣದ ದಿನ ಮತ್ತು ಸಮಯಗಳು ಸಮಯಗಳನ್ನು ಸರಿಯಾಗಿ ನಮೂದಿಸಿರುವುದನ್ನು ಖಾತರಿಪಡಿಸಿಕೊಳ್ಳಿ. 

ಅನಿರೀಕ್ಷಿತವಾಗಿ ಸಂಭವಿಸುವ ರಸ್ತೆತಡೆ - ಬಂದ್ ಅಥವಾ ನೀವು ಪ್ರಯಾಣಿಸುತ್ತಿರುವ ವಾಹನ ಕೈಕೊಟ್ಟಲ್ಲಿ  ಪ್ರಯೋಜನಕಾರಿ ಎನಿಸಬಲ್ಲ ಕಿರುಗಾತ್ರದ ಮತ್ತು ಕಡಿಮೆತೂಕದ ಖಾದ್ಯವಸ್ತುಗಳು ನಿಮ್ಮ ಬಳಿ ಇರಲಿ. ಚಾಕಲೇಟ್, ಒಣ ಹಣ್ಣುಗಳು, ಬ್ರೆಡ್-ಜಾಮ್,  ತಾಜಾ ಹಣ್ಣುಗಳು ಹಾಗೂ ಮಕ್ಕಳೊಂದಿಗೆ ಪ್ರಯಾಣಿಸುವಾಗ ಚಪಾತಿ, ಇಡ್ಲಿ, ಪಲಾವ್ ಮತ್ತು ಮೊಸರನ್ನಗಳಂತಹ ಆಹಾರಗಳೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರನ್ನು ಕೊಂಡೊಯ್ಯಿರಿ. ಪುಟ್ಟಕಂದ ಜೋತೆಗಿದ್ದಲ್ಲಿ ಥರ್ಮಾಸ್ ಫ್ಲಾಸ್ಕ್ ನಲ್ಲಿ ಬಿಸಿಹಾಲು ಅಥವಾ ನೀರು ಮತ್ತು ಮಕ್ಕಳ ಪೌಷ್ಟಿಕ ಆಹಾರದ ಡಬ್ಬಿ ಜೊತೆಗಿರಲಿ. ಪ್ರವಾಸಕ್ಕೆ ಹೊರಡುವ ಮುನ್ನ ನಿಮ್ಮದೇ ಊರಿನ ಪರಿಚಿತ ವ್ಯಾಪಾರಿಯಲ್ಲಿ ಅವಶ್ಯಕ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುವುದು ಹಾಗೂ ಪ್ರವಾಸದ ಸಂದರ್ಭದಲ್ಲಿ ಭೇಟಿ ನೀಡಿದ ನಗರದ ಪ್ರತಿಷ್ಠಿತ ಮಳಿಗೆಗಳಲ್ಲಿ ಖರೀದಿಸುವುದು ಹಿತಕರ. ಇದರಿಂದಾಗಿ ಬಸ್- ರೈಲು ನಿಲ್ದಾಣಗಳಲ್ಲಿ ಗಡಿಬಿಡಿಯಿಂದ ಖರೀದಿಸುವಾಗ ಮೋಸಹೋಗುವುದನ್ನು ನಿವಾರಿಸಿಕೊಳ್ಳಬಹುದು. ಫೋಟೋಗ್ರಫಿ ಹವ್ಯಾಸಿಗಳು ತಮಗೆ ಬೇಕೆನಿಸುವಷ್ಟು ಫಿಲ್ಮ್ ರೋಲ್ ಗಳನ್ನು ಅಧಿಕೃತ ವಿತರಕರಿಂದ ಖರೀದಿಸಿ ಕೊಂಡೊಯ್ದಲ್ಲಿ, ನೀವು ಸೆರೆಹಿಡಿದ ಅವಿಸ್ಮರಣೀಯ ದೃಶ್ಯಗಳು ಉತ್ತಮ ಚಿತ್ರಗಳ ರೂಪದಲ್ಲಿ ನಿಮ್ಮದಾಗುವುದು. 

ಪ್ರೇಕ್ಷಣೀಯ ಅಥವಾ ತೀರ್ಥಕ್ಷೇತ್ರಗಳಲ್ಲಿ ಸ್ಮರಣಿಕೆ ಇತ್ಯಾದಿಗಳನ್ನು ಅಧಿಕೃತ ಸರಕಾರೀ ಮಳಿಗೆಗಳಲ್ಲಿ ಖರೀದಿಸಿದಲ್ಲಿ, ಉತ್ತಮ ಗುಣಮಟ್ಟದ ವಸ್ತುಗಳು ಯೋಗ್ಯ ಬೆಲೆಗೆ ಲಭಿಸುವುದೆಂದು ನೆನಪಿರಲಿ. 

ಪ್ರವಾಸದ ಸಂದರ್ಭದಲ್ಲಿ ಪೀಡಿಸಬಲ್ಲ  ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ, ನಿಮ್ಮ ಕುಟುಂಬ ವೈದ್ಯರ ಸಲಹೆಯಂತೆ ಕೆಲವೊಂದು ಔಷದಗಳನ್ನು ಮರೆಯದೆ ಪಡೆದುಕೊಳ್ಳಿ. ದಿನನಿತ್ಯ ಔಷದ ಸೇವನೆಯ ಅವಶ್ಯಕತೆ ಇರುವವರು, ಸಾಕಷ್ಟು ಪ್ರಮಾಣದ ಔಷದಗಳನ್ನು ಕೊಂಡೊಯ್ಯುವುದು ಕ್ಷೇಮಕರ. 

ಸ್ವಂತ ವಾಹನದಲ್ಲಿ ಪ್ರಯಾಣಿಸುವಾಗ ವಾಹನದ ಮತ್ತು ಚಾಲಕನ ದಾಖಲೆಗಳನ್ನು ಮರೆಯದಿರಿ. ಬಾಡಿಗೆಯ ವಾಹನಗಳನ್ನು ಪಡೆದುಕೊಳ್ಳುವಾಗ ಅನುಭವಿ ಚಾಲಕ ಮತ್ತು ಸುಸ್ಥಿತಿಯಲ್ಲಿರುವ ವಾಹನಗಳನ್ನೇ ಆಯ್ಕೆಮಾಡಿ. 

ವಿಶೇಷವಾಗಿ ವಿದೇಶ ಪ್ರವಾಸಕ್ಕೆ ಹೊರಡುವ ಮುನ್ನ, ಈಗಾಗಲೇ ಆ ದೇಶವನ್ನು ಸಂದರ್ಶಿಸಿರುವ ಬಂಧುಮಿತ್ರರ ಬಳಿ ಅಲ್ಲಿನ ವಿವಿಧ ವ್ಯವಸ್ಥೆ-ಕಾನೂನುಗಳ ಬಗ್ಗೆ ಅವಶ್ಯಕ ಮಾಹಿತಿಯನ್ನು ಪಡೆದುಕೊಂಡಲ್ಲಿ, ಅನಾವಶ್ಯಕ ತೊಂದರೆಗಳು- ಖರ್ಚು ವೆಚ್ಚಗಳನ್ನು ನಿವಾರಿಸಿಕೊಳ್ಳುವುದು ಸುಲಭಸಾಧ್ಯವೂ ಹೌದು. 

ಅಂತಿಮವಾಗಿ ಪ್ರವಾಸಕ್ಕೆ ಹೊರಡುವ ಮೊದಲೇ ನಿಮ್ಮ ಯಾನ- ತಾಣಗಳ ಬಗ್ಗೆ ಸಾಕಷ್ಟು ಮಾಹಿತಿಗಳೊಂದಿಗೆ, ನಿಮಗೆ ಅವಶ್ಯಕವೆನಿಸುವ ವಸ್ತುಗಳನ್ನು ಸಂಗ್ರಹಿಸಿ ಅನಾವಶ್ಯಕ ತೊಂದರೆಗಳಿಂದ  ಮುಕ್ತರಾಗಿ. ತನ್ಮೂಲಕ ಪ್ರವಾಸದ ಆನಂದವನ್ನು ಮನಸಾರೆ ಸವಿಯಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 
ಮಾಹಿತಿ- ದಿನೇಶ್ ಭಟ್. ಕೆ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೪-೧೧-೨೦೦೪ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

Thursday, September 26, 2013

Eating too much salt is dangerous


                                           ಉಪ್ಪು ತಿನ್ನುವುದರಲ್ಲಿ ತಪ್ಪೇನಿದೆ?

      ಉಪ್ಪಿಗಿಂತ ರುಚಿಯಿಲ್ಲ ......, ಊಟಕ್ಕಿಲ್ಲದ ಉಪ್ಪಿನಕಾಯಿ ......., ಇತ್ಯಾದಿ ಆಡುಮಾತುಗಳು ನಮ್ಮ ದೈನಂದಿನ ಆಹಾರದಲ್ಲಿ ನಾವೆಲ್ಲರೂ ತಪ್ಪದೇ ಬಳಸುತ್ತಿರುವ ಉಪ್ಪಿನ ಮಹತ್ವವನ್ನು ಸೂಚಿಸುತ್ತವೆ. ಆದರೆ ಉಪ್ಪಿನ ಸ್ವಾದಕ್ಕೆ ಮಾರುಹೋಗಿರುವ ಭಾರತೀಯರಿಗೆ, ಅತಿಯಾದ ಉಪ್ಪಿನ ಸೇವನೆಯಿಂದ ಮುಂದೊಂದು ದಿನ ಬಂದೆರಗಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ನೀವು ತಿಳಿದಿರಲೇ ಬೇಕಾದ ಕಿಂಚಿತ್ ಮಾಹಿತಿ ಇಲ್ಲಿದೆ. 
-------------                  ------------------                         ----------------                       ----------------             -----------------
"ಉಪ್ಪು ತಿಂದವರು ನೀರು ಕುಡಿಯಲೇಬೇಕು" ಎನ್ನುವ ಆಡುಮಾತನ್ನು ನೀವು ಕೇಳಿರಲೇಬೇಕು. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂದು ಸೂಚಿಸುವ ಈ ಅರ್ಥಗರ್ಭಿತ ಮಾತುಗಳು, ಅತಿಯಾಗಿ ಉಪ್ಪು ತಿಂದವರು ಮುಂದೊಂದು ದಿನ ಔಷದವನ್ನು ಸೇವಿಸಲೇಬೇಕು ಎನ್ನುವ ವಿಚಾರಕ್ಕೂ ಅನ್ವರ್ಥವೆನಿಸುತ್ತದೆ!. 

ಉಮ್ಮಕ್ಕನ ಉಪ್ಪಿನಕಾಯಿ 

ಉಪ್ಪಿನಕಾಯಿ ಇಲ್ಲದಿದ್ದಲ್ಲಿ ಊಟವನ್ನೇ ಊಟವನ್ನೇ ಮಾಡದೆ ಉಪವಾಸವಿರುತ್ತಿದ್ದ ಉಮ್ಮಕ್ಕನಿಗೆ, ಇದೀಗ ಮಧ್ಯವಯಸ್ಸಿನಲ್ಲಿ ಅತಿಯಾದ ಆಯಾಸದೊಂದಿಗೆ ತಲೆಸುತ್ತಿದಂತೆ ಆಗುತ್ತಿತ್ತು. ಸಾಮಾನ್ಯವಾಗಿ ಭಾರತೀಯ ನಾರಿಯರು ನಂಬಿರುವಂತೆ, ಮುಟ್ಟು ನಿಲ್ಲುವ ವಯಸ್ಸಿನಲ್ಲಿ ಕಂಡುಬರುವ ಇಂತಹ ತೊಂದರೆಗಳಿಗೆ ಪಿತ್ತಭಾದೆಯೇ ಕಾರಣವೆಂದು ಉಮ್ಮಕ್ಕನೂ ಧೃಢವಾಗಿ ನಂಬಿದ್ದಳು. 

ತನ್ನನ್ನು ಪೀಡಿಸುತ್ತಿರುವ ಪಿತ್ತಭಾದೆಯನ್ನು ಶಮನಗೊಳಿಸಲು ನೆತ್ತಿಗೆ ಲಿಂಬೆ ರಸವನ್ನು ಹಾಕುವುದರಿಂದ ಹಿಡಿದು, ದಿನದಲ್ಲಿ ನಾಲ್ಕಾರುಬಾರಿ "ಪುನಾರ್ಪುಳಿ"ಯಾ ಶರಬತ್ತು ಸೇವಿಸುವುದೇ ಮುಂತಾದ ಮನೆಮದ್ದುಗಳು ಅಪೇಕ್ಷಿತ ಪರಿಹಾರವನ್ನು ನೀಡಿರಲಿಲ್ಲ. ಪತ್ನಿಯ ಸಮಸ್ಯೆ ದಿನೇದಿನೇ ಉಲ್ಬಣಿಸುತ್ತಿರುವುದನ್ನು ಕಂಡು ಗಾಬರಿಗೊಂಡ ಸೋಮಪ್ಪನು, ಆಕೆಯನ್ನು ಸಮೀಪದ ವೈದ್ಯರಲ್ಲಿಗೆ ಕರೆದೊಯ್ದನು. 

ಉಮ್ಮಕ್ಕನ ಸಮಸ್ಯೆ, ಆಕೆಯ ದಿನಚರಿ ಹಾಗೂ ಆಹಾರ-ವಿಹಾರಗಳ ಬಗ್ಗೆ ಮಾಹಿತಿ ಪಡೆದ ಬಳಿಕ ಶಾರೀರಿಕ ತಪಾಸಣೆ ನಡೆಸಿದ ವೈದ್ಯರಿಗೆ, ಆಕೆಯ ರಕ್ತದ ಒತ್ತಡವು ತೀವ್ರವಾಗಿ ಏರಿರುವುದು ಪತ್ತೆಯಾಗಿತ್ತು. ತದನಂತರ ಕೆಲವೊಂದು ಪರೀಕ್ಷೆಗಳನ್ನು ನಡೆಸಿದ ವೈದ್ಯರು, ಜೀವನಪರ್ಯಂತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯನ್ನು ಉಮ್ಮಕ್ಕನಿಗೆ ಸೂಕ್ಷ್ಮವಾಗಿ ಸೂಚಿಸಿದ್ದರು. ಜೊತೆಗೆ ದೈನಂದಿನ ಆಹಾರ ಪದಾರ್ಥಗಳಲ್ಲಿ ಆಕೆ ಬಳಸುತ್ತಿರುವ ಉಪ್ಪಿನ ಪ್ರಮಾಣವನ್ನು ಕನಿಷ್ಠ ಅರ್ಧದಷ್ಟು ಕಡಿಮೆ ಮಾಡಲೇಬೇಕೆಂದು ಹೇಳಿದ್ದರು. ಅಂತೆಯೇ ಉಪ್ಪುಖಾರಗಳು ಅತಿಯಾಗಿರುವ ಮೀನು- ಮಾಂಸಗಳ ಖಾದ್ಯಗಳು ಹಾಗೂ ಕೊಬ್ಬಿನ ಅಂಶ ಅತಿಯಾಗಿರುವ ಎಣ್ಣೆ, ಬೆಣ್ಣೆ ಮತ್ತು ತುಪ್ಪಗಳ ಸೇವನೆಯನ್ನೇ ವರ್ಜಿಸುವಂತೆ ಎಚ್ಚರಿಕೆ ನೀಡಿದ್ದರು. 

ವೈದ್ಯರ ಸೂಚನೆಯನ್ನು ಚಾಚೂ ತಪ್ಪದೆ ಪರಿಪಾಲಿಸಲು ಆರಂಭಿಸಿದ್ದ ಉಮ್ಮಕ್ಕನಿಗೆ ಪಂಚಪ್ರಾಣವೆನಿಸಿದ್ದ ಉಪ್ಪಿನಕಾಯಿ ಇಲ್ಲದೆ ತುತ್ತು ಅನ್ನವೂ ಸೇರುತ್ತಿರಲಿಲ್ಲ. ಇದೇ ಕಾರಣದಿಂದಾಗಿ ಆಕೆ ಸೇವಿಸುತ್ತಿದ್ದ ಅನ್ನಾಹಾರಗಳ ಪ್ರಮಾಣ ಕಡಿಮೆಯಾದಂತೆಯೇ, ಆಕೆಯ ಧಡೂತಿ ದೇಹವೂ ನಿಧಾನವಾಗಿ ಕರಗಲು ಆರಂಭಿಸಿತ್ತು. ಇದರೊಂದಿಗೆ "ಜೀವಭಯ" ದಿಂದಾಗಿ ಕ್ಲಪ್ತ ಸಮಯದಲ್ಲಿ ತಪ್ಪದೇ ಸೇವಿಸುತ್ತಿದ್ದ ಉಮ್ಮಕ್ಕನು, ವರ್ಷ ಕಳೆಯುವಷ್ಟರಲ್ಲೇ ೧೫ ಕೆ. ಜಿ ತೂಕವನ್ನೂ ಕಳೆದುಕೊಂಡಿದ್ದಳು. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ಆಕೆಯ ರಕ್ತದ ಒತ್ತಡವು ಅಪೇಕ್ಷಿತ ಮಟ್ಟಕ್ಕೆ ಇಳಿಯುವುದರೊಂದಿಗೆ, ಆಕೆಯನ್ನು ಕಳೆದ ನಾಲ್ಕಾರು ವರ್ಷಗಳಿಂದ ಬಾಧಿಸುತ್ತಿದ್ದ "ಮಂಡಿ ನೋವು" ಇದೀಗ ಮಾಯವಾಗಿತ್ತು!. 

ಅಡುಗೆ ಉಪ್ಪು 

ರಸಾಯನ ಶಾಸ್ತ್ರದಲ್ಲಿ ಸೋಡಿಯಂ ಕ್ಲೋರೈಡ್ ಎಂದು ಕರೆಯಲ್ಪಡುವ ಅಡುಗೆ ಉಪ್ಪನ್ನು ಆಡುಭಾಷೆಯಲ್ಲಿ ಕಾಮನ್ ಸಾಲ್ಟ್ ಎಂದೂ ಕರೆಯುತ್ತಾರೆ. ನಾವೆಲ್ಲರೂ ಪ್ರತಿನಿತ್ಯ ತಪ್ಪದೇ ಸೇವಿಸುವ ಉಪ್ಪಿನಲ್ಲಿ ಶೇ. ೪೦ ರಷ್ಟು ಸೋಡಿಯಂ ಮತ್ತು ಶೇ. ೬೦ ರಷ್ಟು ಕ್ಲೋರೈಡ್ ನ ಅಂಶಗಳಿವೆ. ನಮ್ಮ ಶರೀರದಲ್ಲಿರುವ ದ್ರವಾಂಶಗಳನ್ನು ಮತ್ತು ನಮ್ಮ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸೋಡಿಯಂ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇದೇ ಕಾರಣದಿಂದಾಗಿ ಕೆಲವೊಂದು ವ್ಯಾಧಿಗಳು ಬಾಧಿಸಿರುವ ಸಂದರ್ಭದಲ್ಲಿ, ರೋಗಿಯ ಶರೀರದಲ್ಲಿನ ದ್ರವಾಂಶಗಳು ಸ್ವಾಭಾವಿಕವಾಗಿ ವಿಸರ್ಜಿಸಲ್ಪಡದೆ ಶರೀರದಲ್ಲಿ ಸಂಗ್ರಹಿಸಲ್ಪಟ್ಟಿರುವ ಸ್ಥಿತಿಯಲ್ಲಿ ಹಾಗೂ ಅಧಿಕ ರಕ್ತದೊತ್ತಡವಿರುವ ರೋಗಿಗಳಿಗೆ, ಉಪ್ಪಿನ ಸೇವನೆಯನ್ನು ಕಡಿಮೆಮಾಡುವ ಅಥವಾ ವರ್ಜಿಸಬೇಕೆನ್ನುವ ಸಲಹೆಯನ್ನು ವೈದ್ಯರು ನೀಡುತ್ತಾರೆ. 

ಕೆಲವಿಧದ ಗಂಭೀರ ಕಾಯಿಲೆಗಳು ಬಾಧಿಸಿದ ಸಂದರ್ಭವನ್ನು ಹೊರತುಪಡಿಸಿ, ಆರೋಗ್ಯವಂತ ವ್ಯಕ್ತಿಗಳು ಒಂದುದಿನದಲ್ಲಿ ಸೇವಿಸಬಹುದಾದ ಉಪ್ಪಿನ ಪ್ರಮಾಣವು ೨೪೦೦ ಮಿಲಿಗ್ರಾಂ ಮೀರಬಾರದು. ಆದರೆ ತಮ್ಮ ವೈಯುಕ್ತಿಕ ಆರೋಗ್ಯಕ್ಕಿಂತ ತಮ್ಮ "ಜಿಹ್ವಾ ಚಾಪಲ್ಯ"ಕ್ಕೆ ಪ್ರಾಧಾನ್ಯ ನೀಡುವ ಅಧಿಕತಮ ಭಾರತೀಯರು, ತಾವು ಸೇವಿಸುವ ಉಪ್ಪಿನ ಪ್ರಮಾನದತ್ತ ಗಮನವನ್ನೇ ಹರಿಸುವುದಿಲ್ಲ!. 

ನಾವು ದಿನನಿತ್ಯ ಸೇವಿಸುವ ವೈವಿಧ್ಯಮಯ ಆಹಾರಪದಾರ್ಥಗಳಲ್ಲಿ ಧಾರಾಳವಾಗಿ ಉಪ್ಪನ್ನು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಒಂದಿನಿತೂ ಲಾಭವಿಲ್ಲದಿದ್ದರೂ, ಹಲವಾರು ವರ್ಷಗಳ ಬಳಿಕ ಸಾಕಷ್ಟು ಕಷ್ಟನಷ್ಟಗಳು ಸಂಭವಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ವಿಶ್ವದ ವಿವಿಧ ದೇಶಗಳ ವಿಭಿನ್ನ ಜನಾಂಗಗಳ ಆಹಾರ ಸೇವನಾ ಕ್ರಮಗಳನ್ನು ಸುದೀರ್ಘಕಾಲ ಅಧ್ಯಯನ ಮಾಡಿರುವ ವಿಜ್ಞಾನಿಗಳು, ವಿಶ್ವದ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಪ್ರಜೆಗಳಲ್ಲಿ ಜಠರದ ಕ್ಯಾನ್ಸರ್ ನ ಪ್ರಮಾಣವು ಕ್ಷುಲ್ಲಕವಾಗಿರಲು ಅಲ್ಲಿನ ಜನರು ದಿನನಿತ್ಯ ಸೇವಿಸುವ ಉಪ್ಪಿನ ಪ್ರಮಾಣವು ಅತ್ಯಲ್ಪವಾಗಿರುವುದೇ ಕಾರಣವೆಂದು ಪತ್ತೆಹಚ್ಚಿದ್ದಾರೆ. ಅದೇ ರೀತಿಯಲ್ಲಿ ಜಠರ,ಕರುಳು ಹಾಗೂ ಗುದದ ಕ್ಯಾನ್ಸರ್ ಗಳಿಂದ ಬಳಲುತ್ತಿರುವ ಜನರು ಅತಿಯಾಗಿ ಉಪ್ಪನ್ನು ಸೇವಿಸುವುದರೊಂದಿಗೆ, ತರಕಾರಿ, ಹಣ್ಣುಹಂಪಲುಗಳು ಮತ್ತು ನಾರಿನ ಅಂಶಗಳು ಸಮೃದ್ಧವಾಗಿರುವ ಆಹಾರ ಪದಾರ್ಥಗಳು ಮತ್ತು ಕೆಲವಿಧದ ಜೀವಸತ್ವಗಳನ್ನು ಸೇವಿಸದಿರುವುದೇ ಕಾರಣವೆಂದು ಕಂಡುಹುಡುಕಿದ್ದಾರೆ. 

ಸಾಮಾನ್ಯವಾಗಿ ನಮ್ಮ ದೈನಂದಿನ ಅವಶ್ಯಕತೆಗೆ ನಿಗದಿಸಿರುವ ಮಿತಿಗಿಂತಲೂ ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತದ, ಮೂಳೆಗಳ ಸವೆತ ಮತ್ತು ಕೆಲವಿಧದ ಕ್ಯಾನ್ಸರ್ ಗಳು ಉದ್ಭವಿಸುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆದರೆ ಅನೇಕರು ನಾವು ದಿನನಿತ್ಯ ಸೇವಿಸುವ ಉಪ್ಪಿನ ಪ್ರಮಾಣವನ್ನು ನಿಯಂತ್ರಿಸಬೇಕಾಗಿಲ್ಲ ಎಂದು ವಾದಿಸಲು ಅವರ ಅಜ್ಞಾನವೇ ಕಾರಣವಾಗಿರುತ್ತದೆ. 

ಗಂಭೀರ ಸಮಸ್ಯೆಗಳು 

ಬಹುತೇಕ ಜನರಲ್ಲಿ ಅಧಿಕ ತೂಕ,ಅತಿಬೊಜ್ಜು, ದೀರ್ಘಕಾಲೀನ ಮಧುಮೇಹ,ತೀವ್ರ ಮಾನಸಿಕ ಒತ್ತಡ,ಚಿಂತೆ,ಅತಿಯಾದ ಮದ್ಯ- ಧೂಮಪಾನ ಮತ್ತು ಅನುವಂಶಿಕ ಕಾರಣಗಳಿಂದ ಅಧಿಕ ರಕ್ತದೊತ್ತಡ ಉದ್ಭವಿಸುವ ಸಾಧ್ಯತೆಗಳಿದ್ದು, ಕೇವಲ ಅತಿಯಾದ ಉಪ್ಪಿನ ಸೇವನೆಯೊಂದೇ ಇದಕ್ಕೆ ಕಾರಣವೆನಿಸದು ಎಂದು ನಂಬಲಾಗಿತ್ತು. ಆದರೆ ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿರುವಂತೆ ಶೇ. ೧೦ ರಿಂದ ೨೦ ರಷ್ಟು ಜನರಲ್ಲಿ ಅತಿಯಾದ ಉಪ್ಪಿನ ಸೇವನೆಯಿಂದ ಅಧಿಕ ರಕ್ತದೊತ್ತಡ ಆರಂಭವಾಗಿರುವುದು ತಿಳಿದುಬಂದಿದೆ. 

ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಂತೆ ಅತಿಯಾದ ಉಪ್ಪಿನ ಸೇವನೆಯಿಂದ ಮಾನವನ ಶರೀರದಲ್ಲಿರುವ ರಕ್ತನಾಳಗಳು ತಮ್ಮ "ಸ್ಥಿತಿ ಸ್ಥಾಪಕತ್ವ ಗುಣ" ವನ್ನು ಕಳೆದುಕೊಂಡು ಪೆಡಸಾಗುತ್ತವೆ. "ಅಥೆರೊಸ್ಕ್ಲೆರೋಸಿಸ್" ಎನ್ನುವ ಈ ಸ್ಥಿತಿ ಉದ್ಬವಿಸಲು ಇನ್ನಿತರ ಕಾರಣಗಳೂ ಇವೆ. ನಿಧಾನಗತಿಯಲ್ಲಿ ಸಂಭವಿಸಬಲ್ಲ ಇಂತಹ ಬದಲಾವಣೆಗಳಿಂದಾಗಿ, ಹೃದಯ- ರಕ್ತನಾಳಗಳ ಕಾಯಿಲೆಗಳು, ಹೃದಯಾಘಾತ ಹಾಗೂ ಮೆದುಳಿನ ಆಘಾತಗಳಂತಹ ಗಂಭೀರ- ಮಾರಕ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. 

ದಿನನಿತ್ಯ ನಾವು ಸೇವಿಸುವ ಉಪ್ಪಿನ ಪ್ರಮಾಣಕ್ಕೆ ಅನುಗುಣವಾಗಿ ನಮ್ಮ ಶರೀರದಲ್ಲಿನ ಕ್ಯಾಲ್ಸಿಯಂ ನ ಒಂದು ಅಂಶವು ಮೂತ್ರದೊಂದಿಗೆ ವಿಸರ್ಜಿಸಲ್ಪಡುತ್ತದೆ. ತತ್ಪರಿಣಾಮವಾಗಿ ಉದ್ಭವಿಸಬಲ್ಲ ಕ್ಯಾಲ್ಸಿಯಂ ನ ಕೊರತೆಯು, ಅಂತಿಮವಾಗಿ ಮೂಲೆಗಳ ಸವೆತ ಹಾಗೂ ದೌರ್ಬಲ್ಯಗಳಲ್ಲಿ ಪರ್ಯವಸಾನಗೊಳ್ಳುವ ಸಾಧ್ಯತೆಗಳೂ ಇವೆ. ಈ ರೀತಿಯ ವೈವಿಧ್ಯಮಯ ಸಮಸ್ಯೆಗಳು ಮುಂದೆ ಎಂದಾದರೂ ನಮ್ಮನ್ನು ಬಾಧಿಸಬಹುದಾದರಿಂದ, ನಾವು ದಿನನಿತ್ಯ ಸೇವಿಸುವ ಉಪ್ಪಿನ ಪ್ರಮಾಣವನ್ನು ಕನಿಷ್ಠ ಮತ್ತು ಆರೋಗ್ಯಕರ ಮಟ್ಟದಲ್ಲಿ ಇರಿಸಿಕೊಳ್ಳುವುದು ಹಿತಕರವೆನಿಸುವುದು. ಅಂತೆಯೇ ನಮ್ಮ ರಕ್ತದೊತ್ತದವು ಆರೋಗ್ಯಕರ ಮಟ್ಟದಲ್ಲಿ ಇರುವಾಗಲೇ ಈ ನಿಯಮವನ್ನು ಪರಿಪಾಲಿಸುವುದರಿಂದ, ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ಬಂದೆರಗಬಲ್ಲ ಅಧಿಕ ರಕ್ತದೊತ್ತಡವನ್ನು ದೂರವಿರಿಸುವುದು ಸುಲಭಸಾಧ್ಯವೂ ಹೌದು.

ನೀವೇನು ಮಾಡಬಹುದು?

ನಿಮ್ಮ ಹಾಗೂ ನಿಮ್ಮ ಕುಟುಂಬದ ಸದಸ್ಯರ ದೈನಂದಿನ ಉಪ್ಪಿನ ಸೇವನೆಯ ಪ್ರಮಾಣವನ್ನು ೨೪೦೦ ಮಿಲಿಗ್ರಾಂ ಗಳಿಗೆ ಮಿತಿಗೊಳಿಸಿ. ನೀವು ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಲ್ಲಿ, ನಿಮ್ಮ ದೈನಂದಿನ ಆಹಾರದಲ್ಲಿ ಬಳಸುತ್ತಿರುವ ಉಪ್ಪಿನ ಪ್ರಮಾಣವನ್ನು ನಿಧಾನವಾಗಿ ಕಡಿಮೆಮಾಡುತ್ತಾ  ಬನ್ನಿ. ಹಠಾತ್ತಾಗಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ನೀವು ಸೇವಿಸುವ ಆಹಾರಗಳ ಸ್ವಾದವೂ ಹಠಾತ್ತಾಗಿ ಬದಲಾಗುವುದರಿಂದ, ನೀವು ಸೇವಿಸುವ ಆಹಾರಗಳ ಪ್ರಮಾಣವೂ ಕಡಿಮೆಯಾಗುವುದರಿಂದ ಅನ್ಯ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ.

ನಿಮ್ಮ ಮಕ್ಕಳು ಮೆಚ್ಚಿ ಸವಿಯುವ ಬರ್ಗರ್,ಪಿಜ್ಜಾ, ನೂಡಲ್ಸ್, ಕಬಾಬ್ ಹಾಗೂ ವಿವಿಧರೀತಿಯ ಕರಿದ ತಿನಿಸುಗಳಲ್ಲಿ, ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದ ಉಪ್ಪು ಬೆರೆತಿರುತ್ತದೆ. ಅದೇ ರೀತಿಯಲ್ಲಿ ಉಪ್ಪಿನಕಾಯಿ, ಟೊಮೆಟೋ ಸಾಸ್, ಸೋಯಾ ಸಾಸ್ ಇತ್ಯಾದಿಗಳಲ್ಲೂ ಉಪ್ಪಿನ ಪ್ರಮಾಣ ಹೆಚ್ಚಿರುತ್ತದೆ. ಇದಕ್ಕೂ ಮಿಗಿಲಾಗಿ ಬಹುರಾಷ್ಟ್ರೀಯ ಹಾಗೂ ಭಾರತೀಯ ಸಂಸ್ಥೆಗಳು ಧಾರಾಳವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ ವೈವಿಧ್ಯಮಯ ಕರಿದ ತಿನಿಸುಗಳಲ್ಲಿ, ಅಜಿನೋಮೊಟೋ ಅರ್ಥಾತ್ ಮೊನೊ ಸೋಡಿಯಂ ಗ್ಲುಟಾಮೆಟ್ ನ್ನು ಅತಿಯಾಗಿ ಬಳಸುತ್ತಾರೆ. ಇಂತಹ ಸ್ವಾದಿಷ್ಟ ಖಾದ್ಯಗಳನ್ನು ಅತಿಯಾಗಿ ಸೇವಿಸುವುದರಿಂದ, ನಿಮ್ಮ ಉದರವನ್ನು ಸೇರುವ "ಲವಣ"ದ ಪ್ರಮಾಣವೂ ಅತಿಯಾಗುವುದು. ಇಂತಹ ಖಾದ್ಯಗಳ ಸೇವನೆಯನ್ನು ವರ್ಜಿಸುವುದು ನಿಮ್ಮ ಹಾಗೂ ನಿಮ್ಮ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಹಿತಕರವೆನಿಸುವುದು. 

ಸೂಪರ್ ಬಜಾರ್ ಅಥವಾ ಮಾಲ್ ಗಳಲ್ಲಿ ನೀವು ಖರೀದಿಸುವ "ಸಿದ್ಧ ಆಹಾರ"ಗಳ ಹೊರಕವಚಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ, ಇವುಗಳ ತಯಾರಿಕೆಯಲ್ಲಿ ಬಳಸಿರುವ ಮೊನೊ ಸೋಡಿಯಂ ಗ್ಲುಟಾ ಮೆಟ್, ಸೋಡಿಯಂ ಸಿಟ್ರೆಟ್, ಸೋಡಿಯಂ ನೈಟ್ರೇಟ್, ಸೋಡಿಯಂ ಫಾಸ್ಫೇಟ್, ಹಾಗೂ ಸೋಡಿಯಂ ಸಾಕರಿನ್ ಗಳಂತಹ ರಾಸಾಯನಿಕಗಳು ಎಷ್ಟು ಪ್ರಮಾಣದಲ್ಲಿವೆ ಎನ್ನುವುದನ್ನು ಅರಿತುಕೊಳ್ಳಬಹುದು. ಇಂತಹ ಖಾದ್ಯಗಳ ಸ್ವಾದವನ್ನು ಹೆಚ್ಚಿಸಲು ಹಾಗೂ ಸಂರಕ್ಷಿಸಲು ಬಳಸಲ್ಪಡುವ "ಸೋಡಿಯಂ" ನ ವಿವಿಧ ಅವತಾರಗಳು, ನಿಮ್ಮ ಆರೋಗ್ಯಕ್ಕೆ ಹಾನಿಕರ ಎನ್ನುವುದು ನೆನಪಿರಲಿ. 

ಸಾಮಾನ್ಯವಾಗಿ ಸಂಸ್ಕರಿಸಿದ- ಶೈತ್ಯೀಕರಿಸಿದ, ಡಬ್ಬಿಗಳಲ್ಲಿ ತುಂಬಿ ಮಾರಾಟಮಾಡುವ ಮೀನು- ಮಾಂಸ ಗಳಂತಹ ಖಾದ್ಯಗಳ ದಬ್ಬಿಗಳಲ್ಲಿನ "ದ್ರವ"ವನ್ನು ಹೊರಚೆಲ್ಲಿ, ಶುದ್ಧನೀರಿನಲ್ಲಿ ಇವುಗಳನ್ನುನ್ನು ತೊಳೆಯದೇ ಬಳಸದಿರಿ. ಇದರಿಂದಾಗಿ ಇವುಗಳನ್ನು ಕೆಡದಂತೆ ಸಂರಕ್ಷಿಸಲು ಬಳಸುವ ಉಪ್ಪಿನ ಅಂಶವನ್ನು ಸುಲಭದಲ್ಲೇ ನಿವಾರಿಸಬಹುದು. 

ಕೊನೆಯದಾಗಿ "ಅತಿಯಾದರೆ ಅಮೃತವೂ ವಿಷವೆನಿಸಬಲ್ಲದು" ಎನ್ನುವ ಆಡುಮಾತಿಗೆ, ನೀವು ದಿನನಿತ್ಯ ಸೇವಿಸುವ ಉಪ್ಪು ಕೂಡಾ ಅಪವಾದವೇನಲ್ಲ ಎನ್ನುವುದನ್ನು ಮಾತ್ರ ಮರೆಯದಿರಿ!. 



ನಿಮಗಿದು ತಿಳಿದಿರಲಿ 

ನಮ್ಮ ಶರೀರದಲ್ಲಿರುವ ಸೋಡಿಯಂ ನ ಪ್ರಮಾಣವು ಸಾಮಾನ್ಯವಾಗಿ ನಾವು ದಿನನಿತ್ಯ ಸೇವಿಸುವ ಮತ್ತು ವಿಸರ್ಜಿಸುವ ಸೋಡಿಯಂ ನ ಪ್ರಮಾಣಕ್ಕೆ ಅನುಗುಣವಾಗಿರುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಹಾಗೂ ಅನುಕೂಲಕರ ಹವಾಮಾನದಲ್ಲಿ ಶರೀರವು ಕಳೆದುಕೊಳ್ಳುವ ಸೋಡಿಯಂ ನ ಪ್ರಮಾಣವು ಕ್ಷುಲ್ಲಕವಾಗಿರುತ್ತದೆ. ಅಲ್ಪ ಪ್ರಮಾಣದ ಉಪ್ಪನ್ನು ಸೇವಿಸುವ ಆರೋಗ್ಯವಂತರ ಮೂತ್ರಪಿಂಡಗಳು ಸ್ವಸಾಮರ್ಥ್ಯದಿಂದ ಶರೀರದಲ್ಲಿನ ಸೋಡಿಯಂ ನ ಸಮತೋಲನವನ್ನು ಕಾಪಾಡಿಕೊಳ್ಳಬಲ್ಲವು. ಇದೇ ಕಾರಣದಿಂದಾಗಿ ನಾವು ದಿನನಿತ್ಯ ಸೇವಿಸುವ ಉಪ್ಪಿನ ಪ್ರಮಾಣದಲ್ಲಿನ ಕೊರತೆಯಿಂದಾಗಿ ಉದ್ಭವಿಸಬಲ್ಲ ಸಮಸ್ಯೆಗಳಿಗಿಂತಲೂ ಹೆಚ್ಚಾಗಿ, ಕಾರಣಾಂತರಗಳಿಂದ ನಮ್ಮ ಶರೀರವು ಅತಿಯಾದ ಪ್ರಮಾಣದಲ್ಲಿ ಸೋಡಿಯಂ ನ್ನು ಕಳೆದುಕೊಳ್ಳುವುದೇ ಗುರುತರವಾದ ತೊಂದರೆಗಳಿಗೆ ಕಾರಣವೆನಿಸುತ್ತದೆ. 

ನಮ್ಮ ಆರೋಗ್ಯದ ದೃಷ್ಟಿಯಿಂದ ನೀರು ಮತ್ತು ಉಪ್ಪಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ಶರೀರದಲ್ಲಿ ಲವಣದ ಕೊರತೆಯುಂಟಾದಾಗ, ಇದಕ್ಕೆ ಇದಕ್ಕೆ ಅನುಗುಣವಾಗಿ ಶರೀರದಲ್ಲಿನ ನೀರಿನ ಅಂಶವೂ ಕಡಿಮೆಯಾಗುವುದು. ಆದರೆ ಕೇವಲ ಶುದ್ಧ ಸೋಡಿಯಂ ನ ಕೊರತೆಯೊಂದಿಗೆ ನೀರಿನ ಕೊರತೆ ಉದ್ಭವಿಸದೇ ಇರುವ ಸ್ಥಿತಿ ಅಪರೂಪವೂ ಹೌದು. ವಿಶೇಷವೆಂದರೆ ಅತಿಯಾದ ಲವಣ ಮತ್ತು ನೀರಿನ ಕೊರತೆ ಬಾಧಿಸಿದ ಸಂದರ್ಭದಲ್ಲಿ, ಅತಿಯಾಗಿ ಲವಣಾಂಶ ರಹಿತ ನೀರನ್ನು ಕುಡಿಯುವುದು ಇಂತಹ ಸಮಸ್ಯೆಗೆ ಕಾರಣವೆನಿಸುತ್ತದೆ. ಅತ್ಯುಷ್ಣ ಪ್ರದೇಶಗಳಲ್ಲಿ ಅತಿಯಾಗಿ ಬೆವರಿದಾಗ, ಉಪ್ಪನ್ನು ಬೆರೆಸದ ನೀರನ್ನು ಧಾರಾಳವಾಗಿ ಕುಡಿಯುವುದು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. 

ಕೆಲ ಸಂದರ್ಭಗಳಲ್ಲಿ ಮೂತ್ರ- ಮಲಗಳೊಂದಿಗೆ ವಿಸರ್ಜಿಸಲ್ಪಡುವ ಸೋಡಿಯಂ ನ ಪ್ರಮಾಣ ಹೆಚ್ಚಾಗುವುದರಿಂದ  ಕೆಲ ವ್ಯಾಧಿಗಳಿಂದಾಗಿ ಮೂತ್ರಪಿಂಡಗಳು ಶರೀರದಲ್ಲಿನ ಲವಣಾಂಶವನ್ನು ಕಾಪಾಡಿಕೊಳ್ಳಲು ವಿಫಲವಾಗುವುದರಿಂದಲೂ ಸೋಡಿಯಂ ನ ತೀವ್ರ ಕೊರತೆ ಉದ್ಭವಿಸುವುದುಂಟು. ಈ ಸಂದರ್ಭದಲ್ಲಿ ನಾಲಿಗೆ ಒಣಗುವುದು, ಚರ್ಮದ ಸ್ಥಿತಿಸ್ಥಾಪಕತ್ವ ಕಡಿಮೆಯಾಗಿ ಸುಕ್ಕುಗಟ್ಟುವುದು, ರಕ್ತದೊತ್ತಡ ಕುಸಿಯುವುದು ಹಾಗೂ ನಾಡಿ ಬಡಿತ ಹೆಚ್ಚುವುದೇ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದಲ್ಲದೆ ಸುಸ್ತು,ಸಂಕಟ,ನಿರಾಸಕ್ತಿ,ಅತಿಆಯಾಸ,ಮಾಂಸಪೇಶಿಗಳ ಸೆಳೆತ,ತಲೆನೋವು ಹಾಗೂ ಎದ್ದು ನಿಂತಾಗ ಕಣ್ಣು ಕತ್ತಲಾವರಿಸುವಂತಹ ತೊಂದರೆಗಳು ಬಾಧಿಸಬಹುದು. ಸೋಡಿಯಂ ನ ಕೊರತೆಯ ಪ್ರಮಾಣವು ಮಿತಿಮೀರಿದಾಗ ಶರೀರದಲ್ಲಿ ರಕ್ತದ ಪ್ರಮಾಣವೂ ಕಡಿಮೆಯಾಗುವುದರಿಂದಾಗಿ ಉದ್ಭವಿಸುವ ಆಘಾತ (ಶಾಕ್) , ಕೈಕಾಲುಗಳು ತಣ್ಣಗಾಗುವುದು, ತೂಕಡಿಕೆ ಮತ್ತು ಆಕಸ್ಮಿಕ ಮರಣವೂ ಸಂಭವಿಸುವ ಸಾಧ್ಯತೆಗಳಿವೆ. 

ಸೋಡಿಯಂ ನ ತೀವ್ರ ಕೊರತೆಯುಂಟಾದಾಗ ಸಕ್ಕರೆ ಅಥವಾ ಗ್ಲುಕೋಸ್ ಮಿಶ್ರಿತ ನೀರನ್ನು ಅತಿಯಾಗಿ ಕುಡಿದಲ್ಲಿ ಸಮಸ್ಯೆ ಇನ್ನಷ್ಟು ಉಲ್ಬಣಿಸುವುದು. ಆದುದರಿಂದ ಈ ಸಂದರ್ಭದಲ್ಲಿ ಉಪ್ಪು ಮತ್ತು ಸಕ್ಕರೆಗಳನ್ನು ಬೆರೆಸಿರುವ ನೀರನ್ನು ಕುಡಿಸಿದಲ್ಲಿ, ರೋಗಿಯ ಜೀರ್ಣಾಂಗಗಳಿಂದ ಇದು ಹೀರಲ್ಪಡಲು ವಿಳಂಬವಾಗುವುದು. ಇದೆ ಕಾರಣದಿಂದಾಗಿ ರೋಗಿಯ ರಕ್ತನಾಳಗಳ ಮೂಲಕ ಅವಶ್ಯಕ ಪ್ರಮಾಣದ ಉಪ್ಪು-ಸಕ್ಕರೆಯ ಅಂಶಗಳಿರುವ ದ್ರಾವಣವನ್ನು ನೀಡುವುದು ಪ್ರಾಣರಕ್ಷಕವೆನಿಸುವುದು. 

ಅಂತೆಯೇ ತೀವ್ರ ಜ್ವರ,ವಾಂತಿ,ಭೇದಿಗಳಂತಹ ವ್ಯಾಧಿಗಳು ಬಾಧಿಸಿದಾಗ, ರೋಗಿಯ ಶರೀರದಲ್ಲಿ ನೀರು- ಲವಣಗಳ ಕೊರತೆ ಉದ್ಭವಿಸುವುದು. ವೈದ್ಯಕೀಯ ಪರಿಭಾಷೆಯಲ್ಲಿ ಡಿಹೈಡ್ರೇಶನ್ ಎನ್ನುವ ಈ ಸ್ಥಿತಿಯನ್ನು ನಿರ್ಲಕ್ಷಿಸಿದಲ್ಲಿ, ಪ್ರಾಣಾಪಾಯದ ಸಾಧ್ಯತೆಗಳು ಹೆಚ್ಚುತ್ತವೆ. ಇಂತಹ ಸಂದರ್ಭಗಳಲ್ಲಿ ಕುದಿಸಿ ತಣಿಸಿದ ನೀರಿನಲ್ಲಿ ಒಂದು ಚಮಚ ಸಕ್ಕರೆ ಹಾಗೂ ಚಿಟಿಕೆ ಉಪ್ಪನ್ನು ಬೆರೆಸಿ ತಯಾರಿಸಿದ ದ್ರಾವಣವನ್ನು ಅಲ್ಪ ಪ್ರಮಾಣದಲ್ಲಿ ಆಗಾಗ ನೀಡುವುದರಿಂದ ಈ ಸಮಸ್ಯೆ ಸುಲಭದಲ್ಲೇ ಪರಿಹಾರಗೊಳ್ಳುವುದು. 

ಆದರೆ ತೀವ್ರ ವಾಂತಿಯಿಂದ ಪೀಡಿತ ರೋಗಿಗಳಿಗೆ ಇಂತಹ ದ್ರಾವಣವನ್ನು ಕುಡಿಸುವುದು ಅಸಾಧ್ಯವಾದುದರಿಂದ, ಆಸ್ಪತ್ರೆಯಲ್ಲಿ ದಾಖಲಿಸಿ ರಕ್ತನಾಳಗಳ ಮೂಲಕ ವಿಶೇಷ ದ್ರಾವಣಗಳನ್ನು ನೀಡಬೇಕಾಗುವುದು. ಅಂತಿಮವಾಗಿ ಕ್ರೀಡಾಪಟುಗಳಲ್ಲಿ ಅತಿಯಾದ ಚಟುವಟಿಕೆಗಳಿಂದ ಉದ್ಭವಿಸುವ "ಮಾಂಸಪೇಶಿಗಳ ಸೆಳೆತ"ದ ಸಮಸ್ಯೆಯನ್ನು ಕ್ಷಿಪ್ರಗತಿಯಲ್ಲಿ ಪರಿಹರಿಸಲು,ಮೇಲೆ ಸೂಚಿಸಿದ ಪರಿಹಾರಗಳು ಅತ್ಯಂತ ಪರಿಣಾಮಕಾರಿ ಎನಿಸುತ್ತವೆ. 

ಡಾ. ಸಿ . ನಿತ್ಯಾನಂದ ಪೈ,ಪುತ್ತೂರು 



ಉದಯವಾಣಿ ಪತ್ರಿಕೆಯ ದಿ. ೨೩-೦೩-೨೦೦೬ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

Tuesday, September 24, 2013

Intaha vartanegalu nimmalliveye?



                                   ನಿಮ್ಮ ನಡೆ ನುಡಿಗಳಿಗೆ ಹಿಡಿದ ಕನ್ನಡಿ ?
  ತನ್ನ ಮನೆ ಮಂದಿಯ ನಡೆನುಡಿಗಳನ್ನು ದಿನನಿತ್ಯ ಕಂಡು-ಕೇಳುವ ಪುಟ್ಟ ಕಂಡನು ಇವುಗಳನ್ನು ಅನುಕರಿಸುವುದು ಸ್ವಾಭಾವಿಕ. ಇದೇ ಕಾರಣದಿಂದಾಗಿ ನಿಮ್ಮ ಕಂದನ ಗುಣ-ಅವಗುಣಗಳಿಗೆ ನೀವು ಹೊಣೆಗಾರರೇ ಹೊರತು ಆ ಮುಗ್ಧ ಕಂದನಲ್ಲ!. ಸದ್ಗುಣ- ದುರ್ಗುಣಗಳ ನಡುವಿನ ಅಂತರವನ್ನೇ ಅರಿತಿರದ ನಿಮ್ಮ ಕಂದನ ವರ್ತನೆಗಳು, ನಿಶ್ಚಿತವಾಗಿಯೂ ನಿಮ್ಮ ನಡೆ ನುಡಿಗಳಿಗೆ ಹಿಡಿದ ಕನ್ನಡಿ ಎನ್ನುವುದನ್ನು ಮರೆಯದಿರಿ. 
----------------                     -------------                     -------------------             -------------------                 ---------------------

     ಏಳನೆಯ ತರಗತಿಯನ್ನು ತಲುಪುವಷ್ಟರಲ್ಲೇ ಐದು ಶಾಲೆಗಳಿಂದ ಉಚ್ಚಾಟಿತನಾಗಿದ್ದ ಗುರುದತ್ತನು, ರಾಜಕಾರಣಿಯೊಬ್ಬರ ಪ್ರಭಾವದಿಂದಾಗಿ ಸುತ್ತೂರಿನ ಪ್ರತಿಷ್ಟಿತ ಶಾಲೆಯೊಂದರಲ್ಲಿ ಸೇರ್ಪಡೆಗೊಂಡಿದ್ದನು. ನೂತನ ಶಾಲೆಯನ್ನು ಸೇರಿ ತಿಂಗಳು ಕಳೆಯುವಷ್ಟರಲ್ಲೇ ತನ್ನ "ದಾದಾಗಿರಿ" ಯಿಂದ ಕುಪ್ರಸಿದ್ದನಾಗಿದ್ದ ಈತನನ್ನು, ಶಾಲಾ ವಿದ್ಯಾರ್ಥಿಗಳೆಲ್ಲರೂ "ಗೂಂಡಾಗುರು" ಎಂದು ಕರೆಯಲು ಆರಂಭಿಸಿದ್ದರು!. 

ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದರೂ ನೋಡಲು ಕಾಲೇಜು ವಿದ್ಯಾರ್ಥಿಯಂತೆ ಕಾಣುತ್ತಿದ್ದ ಗುರುದತ್ತನು  ಇತರ ವಿದ್ಯಾರ್ಥಿಗಳೊಂದಿಗೆ ಕಾಲುಕೆರೆದು ಜಗಳವಾಡಿ, ಅವರನ್ನು ಹೊಡೆದು ಬಡಿದು ಹಿಂಸಿಸುವುದು ಪರಿಪಾಠವಾಗಿತ್ತು. ಇದರೊಂದಿಗೆ ವಿದ್ಯಾರ್ಥಿನಿಯರ ಜಡೆ ಕತ್ತರಿಸುವುದು,ಗುಂಡುಸೂಜಿಯಿಂದ ಚುಚ್ಚುವುದು,ಇತರರಲ್ಲಿರುವ ವಸ್ತುಗಳನ್ನು ಬಲಾತ್ಕಾರದಿಂದ ಕಿತ್ತುಕೊಳ್ಳುವುದು, ವಿದ್ಯಾರ್ಥಿಗಳ ಊಟದ ಡಬ್ಬಿಯನ್ನು ಲಪಟಾಯಿಸಿ ಅದರಲ್ಲಿದ್ದ ಖಾದ್ಯಗಳನ್ನು ತಿಂದ ಬಳಿಕ ಕಸವನ್ನು ತುಂಬಿಸಿ ಇಡುವುದು, ಅಧ್ಯಾಪಕರ ವಾಹನಗಳ ಚಕ್ರಗಳ ಗಾಳಿ ತೆಗೆಯುವುದೇ ಮುಂತಾದ ವಿಕೃತ ಚೇಷ್ಟೆಗಳು ಆತನ ದೈನಂದಿನ ಪ್ರವೃತ್ತಿಗಳಾಗಿದ್ದವು. ಈ ಗೂಂಡಾಗುರುವಿನ ನಿರಂಕುಶ ವರ್ತನೆಗಳಿಗೆ ಕಡಿವಾಣ ತೊಡಿಸುವುದು "ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು?" ಎನ್ನುವಂತಾಗಿತ್ತು!. 

ಆದರೆ ಗುರುದತ್ತನ ಇಂತಹ ವರ್ತನೆಗಳಿಗೆ ನಿರ್ದಿಷ್ಟ ಕಾರಣಗಳೂ ಇದ್ದವು. ಈತನ ತಂದೆ ಶ್ರೀನಿವಾಸ ರಾಯರು ಶ್ರೀಮಂತ ದಂಪತಿಗಳ ಏಕಮಾತ್ರ ಪುತ್ರನಾಗಿದ್ದರು. ವಂಶೋದ್ಧಾರಕನೆಂಬ ಮಮಕಾರದಿಂದ ಅಂಕೆ-ಅಂಕುಶಗಳಿಲ್ಲದೆ ಬೆಳೆಸಿದ್ದ ಮಗನಿಗೆ, ಆತನ ತಾಯಿಯು ಕೇಳಿದ್ದೆಲ್ಲವನ್ನೂ ಕ್ಷಣಮಾತ್ರದಲ್ಲಿ ನೀಡುತ್ತಿದ್ದರು. ತಾಯಿಯ ಬಳಿ ಕಾಡಿಬೇಡಿ ಪಡೆಯುತ್ತಿದ್ದ ಹಣವನ್ನು ಸ್ನೇಹಿತರಿಗಾಗಿ ನೀರಿನಂತೆ ವ್ಯಯಿಸುತ್ತಿದ್ದ ಶ್ರೀನಿವಾಸನು, ಇದೇ ಸಾಮರ್ಥ್ಯದಿಂದಾಗಿ "ಪುಂಡರ ತಂಡ "ದ ನಾಯಕ ಎನಿಸಿದ್ದನು!. 

ಬಳಿಕ ಕಾಲೇಜಿನ ಮೆಟ್ಟಿಲೇರಿದೊಡನೆ ದುಷ್ಟರ ಸಹವಾಸದಿಂದ ಕುಡಿತ, ಜೂಜು ಹಾಗೂ ವೇಶ್ಯಾಸಂಗದಂತಹ ದುರ್ವ್ಯಸನಗಳ ದಾಸನಾಗಿದ್ದ ಮಗನನ್ನು ಸರಿದಾರಿಗೆ ತರಲು ಮಾತಾಪಿತರು ನಡೆಸಿದ್ದ ಪ್ರಯತ್ನಗಳು ವಿಫಲವಾಗಿದ್ದವು. ಅಂತಿಮವಾಗಿ ಸಾಮಾನ್ಯ ಪದವಿಯನ್ನೂ ಗಳಿಸಲಾಗದ ಶ್ರೀನಿವಾಸನಿಗೆ "ಮದುವೆಯಾಗದೆ ಹುಚ್ಚು ಬಿಡದು" ಎಂದು ನಿರ್ಧರಿಸಿದ್ದ ಮಾತಾಪಿತರು, ಬಡ ಕುಟುಂಬದ ಹೆಣ್ಣಿನೊಂದಿಗೆ ವಿವಾಹವನ್ನು ನೆರವೇರಿಸಿದ್ದರು. 

ವರ್ಷ ಕಳೆಯುವಷ್ಟರಲ್ಲಿ ಗುರುದತ್ತನ ಜನನವಾದ ಬಳಿಕ ಹೆಂಡತಿಯನ್ನು ಕಂಡೊಡನೆ ಕನಲಿ ಕೆಂಡವಾಗುತ್ತಿದ್ದ ಶ್ರೀನಿವಾಸನು, ದಿನನಿತ್ಯ ಕುಡಿದು ಬಂದು ಆಕೆಯನ್ನು ಥಳಿಸುವುದು ವಾಡಿಕೆಯಾಗಿತ್ತು. ಎಳೆಯ ಕಂದ ಗುರುದತ್ತನ ಮನದಲ್ಲಿ ಅಚ್ಚಳಿಯದೆ ಉಳಿದಿದ್ದ ತಂದೆಯ ಹಿಂಸಾತ್ಮಕ ಪ್ರವೃತ್ತಿಗಳೇ, ಇದೀಗ ಈ ಬಾಲಕನು ಇತರರಿಗೆ ಹಿಂಸೆಯನ್ನು ನೀಡಲು ಪ್ರೇರಣೆಯಾಗಿತ್ತು. 

ಅನೇಕ ಮಕ್ಕಳಲ್ಲಿ ಕಾಣಸಿಗುವ ಇಂತಹ ವೈವಿಧ್ಯಮಯ  ದುರ್ವರ್ತನೆಗಳಿಗೆ, ಪ್ರಾರಂಭಿಕ ಹಂತದಲ್ಲೇ ಮಾನಸಿಕ ತಜ್ಞರ ಚಿಕಿತ್ಸೆ- ಆಪ್ತ ಸಂವಾದಗಳಿಂದ ಸೂಕ್ತ ಪರಿಹಾರ ಪಡೆದುಕೊಳ್ಳುವುದು ಸುಲಭಸಾಧ್ಯ. ಆದರೆ ಇಂತಹ ಸಮಸ್ಯೆಗಳಿಗೆ ನಿಶ್ಚಿತ ಪರಿಹಾರ ಇರುವುದರ ಅರಿವು ಬಹುತೇಕ ವಿದ್ಯಾವಂತರಿಗೂ ಇಲ್ಲದ ಕಾರಣದಿಂದಾಗಿ, ಸಮಸ್ಯೆಗಳು ಇನ್ನಷ್ಟು ಉಲ್ಬಣಿಸುವಲ್ಲಿ ಪ್ರಮುಖ ಕಾರಣವೆನಿಸುತ್ತದೆ. 

ಅನ್ನ ತಿನ್ನದ ಮಗು?

ಡಾಕ್ಟ್ರೆ, ನನ್ಮಗು ಹೊಟ್ಟೆಗೇನೂ ತಿನ್ನೋದೇ ಇಲ್ಲ, ಒಂದುಸಾರಿ ಚೆನ್ನಾಗಿ ಪರೀಕ್ಷೆ ಮಾಡಿ ಒಂದ್ ಟಾನಿಕ್ ಬರ್ಕೊಡಿ ಎಂದು ಅಂಗಲಾಚಿದ ಅವ್ವಮ್ಮನ ಮಾತುಗಳನ್ನು ಆಲಿಸಿದ ವೈದ್ಯರಿಗೆ ಆಶ್ಚರ್ಯವಾಗಿತ್ತು. ಏಕೆಂದರೆ ಆಕೆಯ ಸೊಂಟದ ಮೇಲಿದ್ದ ಸುಮಾರು ಮೂರು ವರ್ಷದ ಪೋರನು ದಷ್ಟಪುಷ್ಟವಾಗಿದ್ದು, ಮೇಲ್ನೋಟಕ್ಕೆ ಆರೋಗ್ಯವಂತನಾಗಿ ಕಾಣುತ್ತಿದ್ದನು. 

ಆದರೂ ಅವ್ವಮ್ಮನ ಅಪೇಕ್ಷೆಯಂತೆ ಪುಟ್ಟ ಆದಮ್ ನನ್ನು ಅಮೂಲಾಗ್ರವಾಗಿ ಪರೀಕ್ಷಿಸಿದ್ದ ವೈದ್ಯರಿಗೆ ಆತನು ಆರೋಗ್ಯದಿಂದ ಇರುವುದು ಖಚಿತವಾಗಿತ್ತು. ಮಾತ್ರವಲ್ಲ, ಹೊಟ್ಟೆಗೆ ಏನನ್ನೂ ತಿನ್ನದ ಮಗು ಇಷ್ಟೊಂದು ಆರೋಗ್ಯದಿಂದ ಇರುವುದು ಅಸಾಧ್ಯವೆಂದೂ ತಿಳಿದಿತ್ತು. ಇದೇ ಕಾರಣದಿಂದಾಗಿ ಅವ್ವಮ್ಮನ ದೂರಿನ ಸತ್ಯಾಸತ್ಯತೆಗಳನ್ನು ಪರಾಮರ್ಶಿಸಲು ಕುತೂಹಲ ಮೂಡಿತ್ತು. 

ಅವ್ವಮ್ಮನನ್ನು ಕುಳಿತುಕೊಳ್ಳಲು ಹೇಳಿದ ವೈದ್ಯರು ಸಾವಕಾಶವಾಗಿ ಆಕೆಯ ಮನೆಮಂದಿಯ ವಿವರಗಳನ್ನು ಕೇಳಿ ಪಡೆದುಕೊಂಡರು. ಆಕೆಯೇ ಹೇಳುವಂತೆ ಆಕೆಯ ಪತಿ ಹಾಗೂ ನಾಲ್ವರು ಮಕ್ಕಳೊಂದಿಗೆ ಮೈದುನ, ಆತನ ಪತ್ನಿ ಹಾಗೂ ಮೂವರು ಮಕ್ಕಳಲ್ಲದೇ, ಅವ್ವಮ್ಮನ ಅತ್ತೆಮಾವಂದಿರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಹದಿಮೂರು ಸದಸ್ಯರಿರುವ ಈ ಕುಟುಂಬದಲ್ಲಿ, ಇವರೆಲ್ಲರೂ ಒಂದಾಗಿ ಕುಳಿತು ಆಹಾರ ಸೇವಿಸುವ ಸಾಧ್ಯತೆಗಳೇ ಇರಲಿಲ್ಲ. ಇದೇ ಕಾರಣದಿಂದಾಗಿ ದಿನದ ನಾಲ್ಕು ಹೊತ್ತಿನಲ್ಲೂ ಅವರವರ ಅನುಕೂಲಕ್ಕೆ ತಕ್ಕಂತೆ, ಸರದಿಯಲ್ಲಿ ಆಹಾರ ಸೇವಿಸುವುದು ವಾಡಿಕೆಯಾಗಿತ್ತು. ಇದರೊಂದಿಗೆ ಪುಟ್ಟ ಮಕ್ಕಳಿಗೆ ಮನೆಯ ಹಿರಿಯರಾಗಿದ್ದ ಬೀಪಾತುಮ್ಮನು ಕೈತುತ್ತು ನೀಡುವ ಸಂಪ್ರದಾಯವೂ ಇದ್ದಿತು. ದಿನನಿತ್ಯ ಇದೆಲ್ಲವನ್ನೂ ಗಮನಿಸುತ್ತಿದ್ದ ಹಾಗೂ ತಮ್ಮ ಬಾಲ್ಯದಲ್ಲಿ ತಮಗೂ ದೊರೆಯುತ್ತಿದ್ದ ಕೈತುತ್ತಿನ ಸವಿಯನ್ನು ಮರೆಯದ ಇತರ ಮಕ್ಕಳು, ಇದೀಗ ಪುಟ್ಟ ಆದಮ್ ನಿಗೆ ಪ್ರೀತಿಯಿಂದ ಒಂದೆರಡು ಕೈತುತ್ತು ನೀಡಲು ಮರೆಯುತ್ತಿರಲಿಲ್ಲ. ಇದು ಸಾಲದೆನ್ನುವಂತೆ ಮನೆಯ ಹಿರಿಯರು ಊಟ-ತಿಂಡಿಗಾಗಿ ಕುಳಿತೊಡನೆ ಅವರ ತೊಡೆಯೇರುತ್ತಿದ್ದ ಆದಮ್, ಒತ್ತಾಯಪೂರ್ವಕವಾಗಿ ಒಂದೆರಡು ಕೈತುತ್ತುಗಳನ್ನು ಕೇಳಿ ಪಡೆಯುತ್ತಿದ್ದನು. ಹನಿಗೂಡಿ ಹಳ್ಳ ಎನ್ನುವಂತೆ, ಹತ್ತಾರುಮಂದಿಯ ಕೈತುತ್ತಿನಿಂದ ಆದಮ್ ನ ಪುಟ್ಟ ಹೊಟ್ಟೆ ಸಲೀಸಾಗಿ ತುಂಬುತ್ತಿತ್ತು!. 

ತನ್ನ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಇದನ್ನು ಗಮನಿಸದ ಅವ್ವಮ್ಮನು ತನಗೆ ಬಿಡುವಾದೊಡನೆ ಮಗುವಿಗೆ ಉಣಬಡಿಸುತ್ತಿದ್ದಳು. ಆದರೆ ಅದಾಗಲೇ ತನ್ನ ಹೊಟ್ಟೆಯನ್ನು ತುಂಬಿಸಿಕೊಂಡಿದ್ದ ಆದಮ್, ತನ್ನ ತಾಯಿ ನೀಡುತ್ತಿದ್ದ ಕೈತುತ್ತನ್ನು ನಿರಾಕರಿಸುತ್ತಿದ್ದನು. ಹಾಗೂ ಇದೇ ಕಾರಣದಿಂದಾಗಿ ತನ್ನ ಪುಟ್ಟ ಕಂಡನು ಹೊಟ್ಟೆಗೆ ಏನನ್ನೂ ತಿನ್ನದೇ ಹಸಿವಿನಿಂದ ಬಳಲುತ್ತಿರುವನೆಂದು ನಂಬಿದ್ದ ಆಕೆಯ ತಾಯಿಕರುಳು ಮಿಡಿಯುತ್ತಿತ್ತು!. 

ಆದಮ್ ನ ಆರೋಗ್ಯದ ಮಟ್ಟ ತೃಪ್ತಿಕರವಾಗಿದೆಯೆಂದು ಭರವಸೆ ನೀಡಿದ ವೈದ್ಯರು, ಅವ್ವಮ್ಮನ ಸಂದೇಹಗಳಿಗೆ ಸೂಕ್ತ ಸಮಾಧಾನ ನೀಡಿದರು. ನಿಮ್ಮ ಮನೆಯ ಹತ್ತು ಸದಸ್ಯರು ಒಂದೊಂದು ತುತ್ತು ಅನ್ನ ನೀಡಿದರೂ, ಪುಟ್ಟ ಮಗುವಿನ ಹೊಟ್ಟೆ ತುಂಬಲು ಸಾಕಾಗುತ್ತದೆ. ಮಾತ್ರವಲ್ಲ, ನೀವು ಆತನಿಗೆ ನೀಡುವ ಅನ್ನದ ಪ್ರಮಾಣಕ್ಕಿಂತ ತುಸು ಹೆಚ್ಚೇ ಆಗುತ್ತದೆಂದು ವೈದ್ಯರು ಹೇಳಿದರು. ಜೊತೆಗೆ ಮಗುವಿನ ತೂಕ, ಎತ್ತರ ಹಾಗೂ ಚಟುವಟಿಕೆಗಳು ಉತ್ತಮವಾಗಿ ಇರುವುದರಿಂದ ಆತನಿಗೆ ಯಾವುದೇ ಟಾನಿಕ್ ನೀಡುವ ಅವಶ್ಯಕತೆಯೇ ಇಲ್ಲವೆಂದರು. ಅಂತಿಮವಾಗಿ ನಿಮ್ಮ ಮನೆಮಂದಿಯೆಲ್ಲರೂ ಆದಮ್ ನಿಗೆ ಕೈತುತ್ತು ನೀಡುವ ಕೆಟ್ಟ ಹವ್ಯಾಸವನ್ನು ನಿಲ್ಲಿಸಿ, ಆತನಿಗೆ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಸಮತೋಲಿತ ಆಹಾರವನ್ನು ನೀಡಬೇಕಾದ ಅವಶ್ಯಕತೆಯನ್ನು ಒತ್ತಿಹೇಳಿದರು. 

ಕಾಮಾತುರಾಣಾಮ್...... 

ಹತ್ತಾರು ಬಾಡಿಗೆ ಮನೆಗಳ ಮಾಲೀಕರಾದ ವಾಮನರಾಯರ ವಠಾರದಲ್ಲಿ ನೆಲೆಸಿದ್ದ ನಿವಾಸಿಗಳಿಗೆ, ರಾಯರ ಏಕಮಾತ್ರ ಪುತ್ರ ವಿನೋದನೆಂದರೆ ಪಂಚಪ್ರಾಣ. ದಿನವಿಡೀ ಅತ್ತಿತ್ತ ಓಡಾಡುತ್ತಾ ಮುತ್ತಿನಂತಹ ಮಾತುಗಳನ್ನು ಆಡುತ್ತಿದ್ದ ಈ ಪುಟ್ಟ ಬಾಲಕನಿಗೆ ಪ್ರತಿಯೊಂದು ಮನೆಯಲ್ಲೂ ಮುಕ್ತಪ್ರವೇಶ ಇದ್ದಿತು. ಇದೀಗ ಒಂದನೆಯ ತರಗತಿಗೆ ಸೇರಿದ್ದ ವಿನೋದನ ಬಾಲಲೀಲೆಗಳು ವಠಾರದ ನಿವಾಸಿಗಳನ್ನು ಆಯಸ್ಕಾಂತದಂತೆ ಆಕರ್ಷಿಸುತ್ತಿದ್ದವು. 

ರಾಯರ ಪಕ್ಕದ ಮನೆಯಲ್ಲಿ ವಾಸ್ತವ್ಯವಿದ್ದ ಹರೀಶ್ ಭಾಯಿ ಮೂಲತಃ ಉತ್ತರ ಭಾರತದವರಾಗಿದ್ದರೂ, ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರು. ಪತ್ನಿ ಸುಮನ್ ಹಾಗೂ ಮಕ್ಕಳಾದ ಸೀತಾ ಮತ್ತು ಗೀತಾರೊಂದಿಗೆ ರಾಯರ ವಠಾರದಲ್ಲಿ ವಾಸ್ತವ್ಯ ಹೂಡಿ ಎರಡು ವರ್ಷಗಳೇ ಸಂದಿದ್ದವು. ಅತ್ಯಂತ ಸ್ನೇಹಜೀವಿ ಎನಿಸಿದ್ದ ಹರೀಶ್ ಭಾಯಿ ಯವರ ಮನೆಗೆ ವಿನೋದನು ಹತ್ತಾರುಬಾರಿ ಬಂದು ಹೋಗುವುದರೊಂದಿಗೆ, ತಿಂದು ಹೋಗುವುದೂ ವಾಡಿಕೆಯಾಗಿತ್ತು. 

ಅದೊಂದು ಸಂಜೆ ಕಾಲೇಜಿನಿಂದ ಮರಳಿದ್ದ ಸೀತಾ, ಆರಾಮ ಕುರ್ಚಿಯಲ್ಲಿ ಕುಳಿತು ಪತ್ರಿಕೆಯನ್ನು ಓದುತ್ತಿದ್ದಳು. ಓದಿನಲ್ಲಿ ತಲ್ಲೀನಳಾಗಿದ್ದ ಆಕೆಗೆ, ಕಳ್ಳ ಹೆಜ್ಜೆಯನ್ನಿಟ್ಟು ಹಿಂದಿನಿಂದ ಬಂದು ನಿಂತ ವಿನೋದನು ಕಂಡಿರಲಿಲ್ಲ. ಒಂದೆರಡು ಕ್ಷಣ ಆಕೆಯ ಹಿಂದೆ ನಿಂತು ದಿಟ್ಟಿಸುತ್ತಿದ್ದ ಪುಟ್ಟ ವಿನೋದನು, ಕ್ಷಣಮಾತ್ರದಲ್ಲಿ ಆಕೆಯನ್ನು ಆಲಂಗಿಸಿ ತನ್ನ ಎರಡೂ ಕೈಗಳಿಂದ ಆಕೆಯ ಸ್ತನಗಳನ್ನು ಅದುಮಿದ್ದನು!. 

ಅನಿರೀಕ್ಷಿತವಾಗಿ ಸಂಭವಿಸಿದ ಈ ಘಟನೆಯಿಂದ ದಿಗ್ಭ್ರಾಂತಳಾದ ಸೀತಾ ಜೋರಾಗಿ ಕಿರುಚಿದ್ದಳು. ಗಾಬರಿಗೊಂಡಿದ್ದ ಸೀತಾಳನ್ನು ಅಣಕಿಸಿದ ವಿನೋದನು ಕೇಕೆಹಾಕಿ ನಕ್ಕಿದ್ದನು. ಮಗಳ ಕೂಗನ್ನು ಕೇಳಿ ಆಕೆಯ ತಾಯಿ ಧಾವಿಸಿ ಬರುವಷ್ಟರಲ್ಲೇ, ವಿನೋದನು ಸ್ಥಳದಿಂದ ಪಲಾಯನ ಮಾಡಿದ್ದನು. 

ಪುಟ್ಟ ಬಾಲಕನ ಕೆಟ್ಟ ವರ್ತನೆಯಿಂದ ಸಿಟ್ಟಿಗೆದ್ದ ಸೀತಾ, ತಾಯಿಯ ಬಳಿ ನಡೆದ ಘಟನೆಯನ್ನು ಹೇಳಿದ್ದಳು. ವಿಷಯವರಿತ ಆಕೆಯ ಬಾಯಿಂದ "ಒಂದಲ್ಲ ಒಂದು ದಿನ ಇಂತಹ ಇಂತಹ ಪ್ರಸಂಗ ನಡೆಯಬಹುದೆಂದು ನಾನು ಊಹಿಸಿದ್ದು ಇಂದು ನಿಜವಾಯಿತು" ಎನ್ನುವ ಉದ್ಗಾರ ಹೊರಬಿದ್ದಿತ್ತು. ಆದರೆ ತಾಯಿಯ ಮಾತುಗಳು ಸೀತಾಳಿಗೆ ಅರ್ಥವಾಗಲೇ ಇಲ್ಲ. ಈ ಹಿಂದೆ ತಾನು ಕಣ್ಣಾರೆ ಕಂಡಿದ್ದ ಘಟನೆಯನ್ನು ಸುಮನ್ ಮರೆತಿರಲಿಲ್ಲ. 

ರಾಯರ ವಠಾರದಲ್ಲಿ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ತಮ್ಮ ಮಕ್ಕಳು ಶಾಲಾಕಾಲೇಜುಗಳಿಂದ ಹಿಂದಿರುಗುವ ತನಕ, ಇಲ್ಲಿನ ಹೆಂಗಸರು ಹರಟೆ ಹೊಡೆಯಲು ಅಕ್ಕಪಕ್ಕದ ಮನೆಗಳಿಗೆ ಹೋಗುತ್ತಿದ್ದರು. ಬಹುತೇಕ ಮನೆಗಳಲ್ಲಿ ಈ ಹೊತ್ತಿನಲ್ಲಿ ಗಂಡಸರು ಇರದ ಕಾರಣದಿಂದಾಗಿ ಇವರೆಲ್ಲರೂ ನಿರ್ಭಿಡೆಯಿಂದ ಮತ್ತೊಬ್ಬರ ಮನೆಗಳಿಗೆ ಹೋಗುವುದು ವಾಡಿಕೆಯಾಗಿತ್ತು. 

ಅದೊಂದು ದಿನ ಸುಮನ್ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ರಾಯರ ಮನೆಗೆ ಹೋದಾಗ ಮುಂದಿನ ಬಾಗಿಲು ಕೊಂಚ ತೆರೆದಿತ್ತು. ಎಂದಿನಂತೆ ಬಾಗಿಲನ್ನು ದೂಡಿ ಒಳನಡೆದ ಆಕೆಗೆ, ಬಲಬದಿಯ ಕೋಣೆಯಲ್ಲಿ ರಾಯರ ಸೋದರ ಶಂಕರ ತನ್ನ ಅತ್ತಿಗೆಯೊಂದಿಗೆ  ಇಹಲೋಕದ ಪರಿವೆಯೇ ಇಲ್ಲದಂತೆ ಕಾಮಕೇಳಿಯಲ್ಲಿ ನಿರತರಾಗಿದ್ದುದು ಕಂಡಿತ್ತು. ಕ್ಷಣಮಾತ್ರದಲ್ಲಿ ಸದ್ದುಮಾಡದೆ ಮನೆಗೆ ಮರಳಿದ್ದ ಆಕೆಯ ಮನಸ್ಸಿಗೆ  ಆಘಾತವಾಗಿತ್ತು. ರಾಯರ ಪತ್ನಿಯು ತನ್ನ ಮೈದುನನೊಂದಿಗೆ ಚಕ್ಕಂದವಾಡುವುದನ್ನು ಹಲವುಬಾರಿ ಕಂಡಿದ್ದ ಆಕೆಗೆ, ಪುಟ್ಟ ವಿನೋದನ ವಿಚಿತ್ರ ವರ್ತನೆಗಳಿಗೆ,   ತನ್ನ ತಾಯಿ ಮತ್ತು ಚಿಕ್ಕಪ್ಪನ ಸರಸಸಲ್ಲಾಪಗಳನ್ನು ಆತನು ಅನೇಕಬಾರಿ ಕಂಡಿರುವುದೇ ಕಾರಣವೆಂದು ಮನಸ್ಸಿಗೆ ಹೊಳೆದಿತ್ತು.

ನಿಜಹೇಳಬೇಕಿದ್ದಲ್ಲಿ ಸುಮನ್ ಳ ಊಹೆ ಶತಪ್ರತಿಶತ ನಿಜವಾಗಿತ್ತು. ಚಿಕ್ಕಪ್ಪನು ತನ್ನ ತಾಯಿಯೊಂದಿಗೆ ಕದ್ದುಮುಚ್ಚಿ ನಡೆಸುತ್ತಿದ್ದ ಸರಸಗಳನ್ನು ಕಣ್ಣಾರೆ ಕಂಡಿದ್ದ ವಿನೋದನಿಗೆ ಇದೇನೆಂದು ತಿಳಿಯದೇ ಇದ್ದರೂ,ಈ ಘಟನೆಗಳೇ ಇದೀಗ ಸೀತಾಳೊಂದಿಗೆ ಸರಸವಾಡಲು ಆತನನ್ನು ಪ್ರಚೋದಿಸಿದ್ದವು!. 

ಏಕಲವ್ಯನ ಕಥೆ 

ಬಾಲವಾಡಿಗೆ ಕಾಲಿಡುವಷ್ಟರಲ್ಲೇ ಸುಳ್ಳು ಹೇಳುವುದರಲ್ಲಿ ನಿಸ್ಸೀಮನಾಗಿದ್ದ ಕೃಷ್ಣನಿಗೆ ನಿಜಕ್ಕೂ ಸುಳ್ಳು ಎಂದರೆ ಏನೆಂದು ತಿಳಿದಿರಲಿಲ್ಲ. ಆದರೆ ಸುಳ್ಳುಗಳ ಸರಮಾಲೆಯನ್ನು ಪೋಣಿಸುವ ಕಲೆಯನ್ನು ಈ ಪೋರನು ಏಕಲವ್ಯನೋಪಾದಿಯಲ್ಲಿ ಕಲಿತುಕೊಳ್ಳಲು, ಆತನ ತಂದೆಯೇ "ಗುರು" ಎನಿಸಿದ್ದರು!. 

ಉದ್ಯೋಗಸ್ಥ ದಂಪತಿಗಳಾದ ರಾಜೇಶ ಮತ್ತು ರಾಧಿಕಾಳ ಮುದ್ದಿನ ಮಗನಾದ ಕೃಷ್ಣನು, ಹಗಲಿರುಳು ತನ್ನ ಅಜ್ಜಿಯ ನೆರಳಿನಂತೆ ಇರುತ್ತಿದ್ದನು. ತಂದೆತಾಯಿಯ ಪ್ರೀತಿಯಿಂದ ವಂಚಿತನಾಗಿದ್ದ ಈ ಪುಟ್ಟ ಮಗುವಿಗೆ ಅಜ್ಜಿಯೇ ಪಂಚಪ್ರಾಣ ಎನಿಸಿದ್ದುದು ವಿಶೇಷವೇನಲ್ಲ. 

ಹಗಲಿಡೀ ದುಡಿದು ಮನೆಗೆ ಮರಳುವಾಗ ಬಳಲಿ ಬಸವಳಿದಿರುತ್ತಿದ್ದ ಈ ದಂಪತಿಗಳಿಗೆ ಒಂದಿಷ್ಟು ಮುಂಗೋಪವೂ ಇದ್ದಿತು. ಪ್ರತಿನಿತ್ಯ ಕತ್ತಲಾಗುವ ಹೊತ್ತಿನಲ್ಲಿ ತಂದೆ ತಾಯಿಯೊಂದಿಗೆ ಚೆಲ್ಲಾಟವಾಡುತ್ತಿದ್ದ ಈ ತುಂಟನ ತಂಟೆಗಳು ಮಿತಿಮೀರಿದಾಗ, ಸಿಟ್ಟಿಗೇಳುತ್ತಿದ್ದ  ರಾಜೇಶನು ಎರಡೇಟು ಬಿಗಿಯುತ್ತಿದ್ದನು. ಆದರೆ ಏಟು ಬಿದ್ದೊಡನೆ ಅಳಲಾರಂಭಿಸುತ್ತಿದ್ದ ಮಗುವನ್ನು ಸಂತೈಸಲು ಆತನನ್ನು ಎತ್ತಿಕೊಂಡು ಮುದ್ದಾಡಿದ ಬಳಿಕ, ನಾಳೆ ಸಂಜೆ ಮನೆಗೆ ಬರುವಾಗ ನಿನಗಾಗಿ ಡೈರಿ ಮಿಲ್ಕ್ ಚಾಕಲೇಟು ತರುತ್ತೇನೆ ಎನ್ನುತ್ತಿದ್ದನು. ಇದೇ ರೀತಿಯಲ್ಲಿ ಅನೇಕ ಸಂದರ್ಭಗಳಲ್ಲಿ ಕೃಷ್ಣನು ಅತ್ತೊಡನೆ ಆತನಿಗೆ ಆಟಿಕೆಗಳು,ಬಲೂನು,ಸೈಕಲ್, ಹೊಸಬಟ್ಟೆ ಇತ್ಯಾದಿಗಳನ್ನು "ನಾಳೆ ಸಂಜೆ ತಂದು ಕೊಡುತ್ತೇನೆ" ಎಂದು ಸಂತೈಸುತ್ತಿದ್ದ ರಾಜೇಶನು, ಕೊಟ್ಟ ಮಾತನ್ನು ಯಾವತ್ತೂ ಪರಿಪಾಲಿಸುತ್ತಿರಲಿಲ್ಲ!. 

ಆದರೆ ಪ್ರತಿರಾತ್ರಿ ಕೃಷ್ಣನು ಮಲಗುವ ಮುನ್ನ ಆತನ ಅಜ್ಜಿಯು ತಪ್ಪದೇ ಹೇಳಬೇಕಾಗಿದ್ದ "ಪುಣ್ಯಕೋಟಿಯ ಕಥೆ'ಯಲ್ಲಿ, ನುಡಿದಂತೆಯೇ ನಡೆಯಲೇ ಬೇಕೆನ್ನುವ ಅರ್ಥದ "ಕೊಟ್ಟ ಮಾತಿಗೆ ತಪ್ಪಲಾರೆ......"ಕೇಳಿದೊಡನೆ ಕೃಷ್ಣನು ಕಣ್ಣೀರು ಸುರಿಸುತ್ತಿದ್ದನು. ಅಜ್ಜಿ ವಿವರಿಸುತ್ತಿದ್ದ ನುಡಿಗಳಿಗೂ, ತನ್ನ ತಂದೆಯ ನಡವಳಿಕೆಗಳಿಗೂ ಇರುವ ವ್ಯತ್ಯಾಸಗಳು ಈ ಪುಟ್ಟ ಬಾಲಕನ ನಿಷ್ಕಲ್ಮಶ ಮನದ ಮೇಲೆ ಗಾಢವಾದ ಪರಿಣಾಮವನ್ನು ಬೀರಿದ್ದವು. ಪ್ರಾಯಶಃ ನುಡಿಗಿಂತ ನಡೆ ಮೇಲು ಎಂದು ಭಾವಿಸಿದ ಕೃಷ್ಣನು, ತನ್ನ ತಂದೆಯ ನಡೆನುಡಿಗಳನ್ನು ಅನುಕರಿಸಲು ಆರಂಭಿಸಿದ ಪರಿಣಾಮವಾಗಿ, ಸುಳ್ಳು ಹೇಳುವ ಕಲೆಯನ್ನು ಕರತಲಾಮಲಕವಾಗಿಸಿಕೊಂಡಿದ್ದನು!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೬-೧೦-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 
                          

Monday, September 23, 2013

Hypothyroidism




      ಹೆಂಗಸರನ್ನೇ ಹೆಚ್ಚಾಗಿ ಬಾಧಿಸುವ ಹೈಪೊಥೈರಾಯ್ಡಿಸಂ 

ಜನಸಾಮಾನ್ಯರು ತಮ್ಮನ್ನು ಬಾಧಿಸುವ ಕಾಯಿಲೆಗಳ ನೈಜ ಹೆಸರಿನ ಬದಲಾಗಿ ಬಳಸುವ ಬಿ. ಪಿ, ಶುಗರ್, ಗ್ಯಾಸ್ ಟ್ರಬಲ್  ಇತ್ಯಾದಿ ನಾಮಧೇಯಗಳ ಸಾಲಿನಲ್ಲಿ ಥೈರಾಯ್ಡ್ ಎನ್ನುವ ಹೆಸರೂ ಸೇರಿದೆ. ಆದರೆ ವಾಸ್ತವದಲ್ಲಿ ಥೈರಾಯ್ಡ್ ಎನ್ನುವುದು ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಒಂದು ಗ್ರಂಥಿಯ ಹೆಸರೇ ಹೊರತು ಅದೊಂದು ಕಾಯಿಲೆಯಲ್ಲ. ಆದರೆ ಈ ಗ್ರಂಥಿಯ ಕಾರ್ಯಕ್ಷಮತೆಯಲ್ಲಿ ಸಂಭವಿಸಬಲ್ಲ ವ್ಯತ್ಯಯಗಳು ಅಸಾಮಾನ್ಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. ಹೈಪೊಥೈರಾಯ್ಡಿಸಂ ಇಂತಹ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಸಮಸ್ಯೆಯ ಮೂಲ 

ನಮ್ಮ ಶರೀರದಲ್ಲಿನ ಥೈರಾಯ್ಡ್ ಗ್ರಂಥಿಯು ಸ್ವಾಭಾವಿಕವಾಗಿ ಸ್ರವಿಸುವ ಥೈರಾಯ್ಡ್ ಹಾರ್ಮೋನ್ ನ ಪ್ರಮಾಣವು ಕಡಿಮೆಯಾದಾಗ ಹೈಪೊಥೈರಾಯ್ಡಿಸಂ ಉದ್ಭವಿಸುವುದು. ಅತ್ಯಲ್ಪ ಪ್ರಮಾಣದ ಜನರಲ್ಲಿ ಈ ಸಮಸ್ಯೆಯು ತಾತ್ಕಾಲಿಕವಾಗಿ ಬಾಧಿಸಿ ಮಾಯವಾಗಬಹುದಾದರೂ,ಅಧಿಕತಮ ಜನರಲ್ಲಿ ಶಾಶ್ವತವಾಗಿ ಉಳಿದುಕೊಳ್ಳುವುದು. ಇದೇ ಕಾರಣದಿಂದಾಗಿ ಈ ವಿಶಿಷ್ಟ ಸಮಸ್ಯೆಯನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಲು, ಜೀವನಪರ್ಯಂತ ಔಷದ ಸೇವನೆ ಅನಿವಾರ್ಯವೆನಿಸುವುದು. 

ಹೈಪೊಥೈರಾಯ್ಡಿಸಂ ಸಮಸ್ಯೆಯು ಮಧ್ಯವಯಸ್ಸಿನ ಹೆಂಗಸರನ್ನೇ ಹೆಚ್ಚಾಗಿ ಬಾಧಿಸುವುದಾದರೂ, ಅಪರೂಪದಲ್ಲಿ ಗಂಡಸರು ಮತ್ತು ಮಕ್ಕಳನ್ನೂ ಬಾಧಿಸಬಲ್ಲದು. ಪ್ರಾರಂಭಿಕ ಹಂತದಲ್ಲಿ ಇದರ ಲಕ್ಷಣಗಳು ಸೌಮ್ಯರೂಪದಲ್ಲಿ ಪ್ರಕಟಗೊಳ್ಳುವುದರಿಂದ ಇದನ್ನು ತಕ್ಷಣ ಪತ್ತೆಹಚ್ಚುವುದು ಕಷ್ಟಸಾಧ್ಯವೆನಿಸುವುದು. ಆದರೆ ಕಾಲಕ್ರಮೇಣ ಈ  ಲಕ್ಷಣಗಳು ವೃದ್ಧಿಸಿದಂತೆಯೇ, ಸಾಮಾನ್ಯ ವೈದ್ಯರಿಗೂ ಇದನ್ನು ನಿಖರವಾಗಿ ಗುರುತಿಸುವುದು ಸುಲಭಸಾಧ್ಯ ಎನಿಸುವುದು. 

ಲಕ್ಷಣಗಳು 

ಥೈರಾಯ್ಡ್ ಗ್ರಂಥಿಯು ಸ್ರವಿಸುವ ಹಾರ್ಮೋನ್ ನ ಪ್ರಮಾಣವು ಕಡಿಮೆಯಾದಂತೆಯೇ, ಪಿಟ್ಯುಟರಿ ಗ್ರಂಥಿಗಳು ಈ ಕೊರತೆಯನ್ನು ಸರಿದೂಗಿಸಲು ಥೈರಾಯ್ಡ್ ಸ್ಟಿಮ್ಯುಲೇಟಿಂಗ್ ಹಾರ್ಮೋನನ್ನು (ಟಿ ಎಸ ಎಚ್) ಉತ್ಪಾದಿಸಲು ಆರಂಭಿಸುತ್ತದೆ. ತತ್ಪರಿಣಾಮವಾಗಿ ಥೈರಾಯ್ಡ್ ಗ್ರಂಥಿಯ ಗಾತ್ರವು ತುಸು ಹಿಗ್ಗುತ್ತದೆ. ಈ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ " Goitre" ಎನ್ನುತ್ತಾರೆ. ಇದರೊಂದಿಗೆ ರೋಗಿಯ ರಕ್ತದಲ್ಲಿನ ಕೊಲೆಸ್ಟರಾಲ್ ಮತ್ತು ಲಿಪಿಡ್ ಗಳ ಪ್ರಮಾಣವೂ ಹೆಚ್ಚುವುದು. 

ಥೈರಾಯ್ಡ್ ಹಾರ್ಮೋನ್ ನ ಪ್ರಮಾಣವು ಇನ್ನಷ್ಟು ಕಡಿಮೆಯಾದಂತೆಯೇ, ರೋಗಿಯ ಶಾರೀರಿಕ ಪ್ರಕ್ರಿಯೆಗಳೂ ನಿಧಾನವಾಗಿ ಕುಂಠಿತಗೊಳ್ಳುತ್ತವೆ. ಈ ಸಂದರ್ಭದಲ್ಲಿ ಅತಿಆಯಾಸ,ಸುಸ್ತು,ತೂಕಡಿಕೆ, ಜ್ಞಾಪಕಶಕ್ತಿ ಕಡಿಮೆಯಾಗುವುದು, ಕಲಿಯುವಿಕೆಯ ಸಾಮರ್ಥ್ಯ ಕಡಿಮೆಯಾಗುವುದು (ವಿಶೇಷವಾಗಿ ಮಕ್ಕಳಲ್ಲಿ ), ಕೂದಲುಗಳು ಶುಷ್ಕವಾಗುದು ಹಾಗೂ ಉದುರುವುದು, ಚರ್ಮ ಮತ್ತು ಉಗುರುಗಳು ಶುಷ್ಕವಾಗುವುದು, ಮುಖ ಹಾಗೂ ಶರೀರದ ಕೆಲ ಭಾಗಗಳು ಊದಿಕೊಳ್ಳುವುದು, ಮಾಂಸಪೇಶಿಗಳು ಮತ್ತು ಅಸ್ಥಿ ಸಂಧಿಗಳಲ್ಲಿ ನೋವು, ಶರೀರದ ತೂಕ ಹೆಚ್ಚುವುದು, ಮಾತನಾಡುವಾಗ ತೊದಲುವುದು, ಮಲಬದ್ಧತೆ, ಮಹಿಳೆಯರಲ್ಲಿ ಅತಿಯಾದ ರಜೋಸ್ರಾವ- ಗರ್ಭಪಾತ, ಮಕ್ಕಳಲ್ಲಿ ಶಾರೀರಿಕ- ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವುದೇ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಇದಲ್ಲದೆ ಮಾನಸಿಕ ಖಿನ್ನತೆ, ಗರ್ಭಧಾರಣೆ ಆಗದಿರುವುದು ಮತ್ತು ಕಾಮಾಸಕ್ತಿಯ ಕೊರತೆಗಳಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. 

ಕಾರಣಗಳೇನು?

ಹೈಪೋಥೈರಾಯ್ಡಿಸಂ ಕೆಲವರಲ್ಲಿ ಅನುವಂಶಿಕವಾಗಿ ಉದ್ಭವಿಸಿದಲ್ಲಿ, ಇನ್ನು ಕೆಲವರಲ್ಲಿ ಶರೀರದ ರಕ್ಷಣಾ ವ್ಯವಸ್ಥೆಯು ಥೈರಾಯ್ಡ್ ಗ್ರಂಥಿಗಳಲ್ಲಿ ಉಂಟುಮಾಡುವ "ಪ್ರತಿಕ್ರಿಯೆ" ಇದಕ್ಕೆ ಕಾರಣವೆನಿಸುವುದು. ಮತ್ತೆ ಕೆಲವರಲ್ಲಿ ಥೈರಾಯ್ಡ್ ಗ್ರಂಥಿಯ ಒಂದು ಭಾಗವನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದ ನಂತರ, ಇದು ಉತ್ಪಾದಿಸುವ ಹಾರ್ಮೋನ್ ನ ಪ್ರಮಾಣವು ಕಡಿಮೆಯಾಗುವುದರಿಂದಲೂ ಉದ್ಭವಿಸಬಹುದು. 

ಅದೇರೀತಿಯಲ್ಲಿ ಥೈರಾಯ್ಡ್ ಗ್ರಂಥಿಗೆ ತಗಲಿದ ತೀವ್ರ ಸೋಂಕು ಹಾಗೂ ಕೆಲವಿಧದ ಔಷದಗಳ ಸೇವನೆಯೂ ಇದಕ್ಕೆ ಕಾರಣವೆನಿಸಬಹುದು. ಹೈಪೊಥೈರಾಯ್ದಿಸಂ ಸಮಸ್ಯೆಯಿಂದ ಬಳಲುತ್ತಿರುವವರಿಗೆ ವೈದ್ಯರು ನೀಡುತ್ತಿರುವ ಚಿಕಿತ್ಸೆಯ ಪರಿಣಾಮವಾಗಿ ಮತ್ತು ಮಕ್ಕಳಲ್ಲಿ ಜನ್ಮದತ್ತವಾಗಿ ಇರಬಹುದಾದ ಥೈರಾಯ್ಡ್ ಟಿಶ್ಯೂಗಳ ಕೊರತೆ ಅಥವಾ ಎನಜೈಮ್ ಗಳ ನ್ಯೂನತೆಗಳಿಂದಾಗಿಯೂ ಹೈಪೊಥೈರಾಯ್ಡಿಸಂ ಉದ್ಭವಿಸಬಹುದು. 

ಅಲ್ಪ ಪ್ರಮಾಣದ ಹೆಂಗಸರಲ್ಲಿ ಹೆರಿಗೆಯ ಬಳಿಕ ತಲೆದೋರುವ ಈ ಸಮಸ್ಯೆಯು, ಸ್ವಲ್ಪ ಸಮಯದ ಬಳಿಕ ಸಹಜ ಸ್ಥಿತಿಗೆ ಮರಳುವುದು. ಇದಲ್ಲದೆ ಪಿಟ್ಯುಟರಿ ಗ್ರಂಥಿಗೆ ಸಂಬಂಧಿಸಿದ ವ್ಯಾಧಿಯೊಂದು ಇದಕ್ಕೆ ಕಾರಣವೆನಿಸಬಹುದಾದರೂ,ಇದು ಅತ್ಯಂತ ಅಪರೂಪವೂ ಹೌದು. 

ಪತ್ತೆಹಚ್ಚುವುದೆಂತು?

ಶಂಕಿತ ರೋಗಿಗಳಲ್ಲಿ ಕಂಡುಬರುವ ಹೈಪೊಥೈರಾಯ್ದಿಸಂ ನ ಲಕ್ಷಣಗಳೊಂದಿಗೆ ಇವರ ರಕ್ತದಲ್ಲಿನ ಟಿ ಎಸ ಎಚ್, ಟಿ ೪, ಮತ್ತು ಟಿ ೫ ಗಳ ಪ್ರಮಾಣಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವ ಮೂಲಕ ಹಾಗೂ ಥೈರಾಯ್ಡ್ ಎಂಟಿಬಾಡಿಗಳು ಹೆಚ್ಚಾಗಿರುವುದನ್ನು ಪತ್ತೆಹಚ್ಚುವ ಮೂಲಕ, ಹೈಪೊಥೈರಾಯ್ದಿಸಂ ಬಾಧಿಸುತ್ತಿರುವುದನ್ನು ನಿಖರವಾಗಿ ಪತ್ತೆಹಚ್ಚಬಹುದಾಗಿದೆ. 

ಚಿಕಿತ್ಸೆ 

ಈ ವಿಶಿಷ್ಟ ಸಮಸ್ಯೆಯನ್ನು ಪರಿಹರಿಸಲು ತಜ್ಞವೈದ್ಯರು ಸೂಚಿಸುವ ಔಷದವನ್ನು ಬರಿಹೊಟ್ಟೆಯಲ್ಲಿ ದಿನದಲ್ಲಿ ಒಂದುಬಾರಿಯಂತೆ ಜೀವನಪರ್ಯಂತ ಸೇವಿಸಬೇಕಾಗುವುದು. ಇದರೊಂದಿಗೆ ನಿಗದಿತ ಅವಧಿಯಲ್ಲಿ ರಕ್ತವನ್ನು ಪರೀಕ್ಷಿಸುವ ಮೂಲಕ, ತಾವು ಸೇವಿಸುತ್ತಿರುವ ಔಷದದ ಪ್ರಮಾಣವು ಸಮರ್ಪಕವಾಗಿದೆಯೇ ಮತ್ತು ಚಿಕಿತ್ಸೆಯು ನಿರೀಕ್ಷಿತ ಪರಿಣಾಮವನ್ನು ನೀಡುತ್ತಿರುವುದೇ ಎನ್ನುವುದನ್ನು ಸುಲಭವಾಗಿ ಅರಿತುಕೊಳ್ಳಬಹುದಾಗಿದೆ. ಏಕೆಂದರೆ ವೈದ್ಯರು ಸೂಚಿಸಿದ ಔಷದದ ಪ್ರಮಾಣವು ಅವಶ್ಯಕತೆಗಿಂತ ಕಡಿಮೆಯಾದಲ್ಲಿ, ರೋಗಿಯನ್ನು  ಸಮಸ್ಯೆಗಳು ಮತ್ತು ರೋಗಲಕ್ಷಣಗಳು ಮಾಯವಾಗುವುದಿಲ್ಲ. ಜೊತೆಗೆ ರಕ್ತದಲ್ಲಿರುವ ಕೊಲಸ್ಟರಾಲ್ ಮತ್ತು ಲಿಪಿಡ್ ಗಳ ಪ್ರಮಾಣವೂ ಕೆಳಗಿಳಿಯುವುದಿಲ್ಲ. ತತ್ಪರಿಣಾಮವಾಗಿ ರೋಗಿಯ ರಕ್ತನಾಳಗಳು ಪೆಡಸಾಗುವುದರೊಂದಿಗೆ ಹೃದಯಕ್ಕೆ ರಕ್ತವನ್ನು ಪೂರೈಸುವ ರಕ್ತನಾಳಗಳ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳು  ಹೆಚ್ಚುತ್ತವೆ. ಅದೇ ರೀತಿಯಲ್ಲಿ ಔಷದದ ಪ್ರಮಾಣವು ಅತಿಯಾದಲ್ಲಿ ರೋಗಿಯ ಹೃದಯದ ಮೇಲೆ ಬೀಳುವ ಹೊರೆ ಹೆಚ್ಚಾಗುವುದರಿಂದ, ರೋಗಿಯ ನಾಡಿ ಬಡಿತದ ಗತಿಯಲ್ಲಿ ಏರುಪೇರುಗಳು ಸಂಭವಿಸುತ್ತವೆ. ಜೊತೆಗೆ ರೋಗಿಯ ಬೆನ್ನೆಲುಬು ಮೃದುವಾಗುವ ಸಾಧ್ಯತೆಗಳಿವೆ. 

ಹೈಪೊಥೈರಾಯ್ದಿಸಂ ನಿಂದ ಬಳಲುತ್ತಿರುವವರು ಗರ್ಭವತಿಯಾದಲ್ಲಿ, ಗರ್ಭಸ್ಥ ಶಿಶುವಿನ ಬೆಳವಣಿಗೆ ಕುಂಠಿತಗೊಳ್ಳುವುದು ಹಾಗೂ ಹೆರಿಗೆಯ ಸಂದರ್ಭದಲ್ಲಿ ಅನಪೇಕ್ಷಿತ ತೊಂದರೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಇಂತಹ ವ್ಯಕ್ತಿಗಳು ಗರ್ಭಧಾರಣೆಯಾದಂದಿನಿಂದ ಹೆರಿಗೆಯ ತನಕ, ತಜ್ಞವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಅತ್ಯವಶ್ಯಕ ಎನಿಸುವುದು. 

ಭಾರತದಲ್ಲಿ ಶೇ. ೧೦ ರಷ್ಟು ಮಹಿಳೆಯರು ಹೈಪೊಥೈರಾಯ್ದಿಸಂ ನಿಂದ ಬಳಲುತ್ತಿದ್ದು, ವಿಶೇಷ ಖರ್ಚುವೆಚ್ಚಗಳಿಲ್ಲದ ಇದರ ಚಿಕಿತ್ಸೆಯನ್ನು ಕ್ರಮಬದ್ಧವಾಗಿ ಪಡೆದುಕೊಂಡಲ್ಲಿ, ಈ ಸಮಸ್ಯೆಯನ್ನು ನಿಶ್ಚಿತವಾಗಿಯೂ ನಿಯಂತ್ರಣದಲ್ಲಿ ಇರಿಸಬಹುದಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ನಕಲಿ ವೈದ್ಯರ ಅಥವಾ ಬಂಧುಮಿತ್ರರ "ಪುಕ್ಕಟೆ ಸಲಹೆ"ಗಳನ್ನು ನಂಬಿ, ಔಷದ ಸೇವನೆಯನ್ನು ನಿಲ್ಲಿಸಿದಲ್ಲಿ ಈ ಸಮಸ್ಯೆಯು ನಿಶ್ಚಿತವಾಗಿಯೂ ಮರುಕಳಿಸುತ್ತದೆ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೯-೧೦-೨೦೧೧ ರ ಸಂಚಿಕೆಯ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ 


Wednesday, September 18, 2013

Placebo- the wonder drug!




                                 ಔಷದವಲ್ಲದ ಅದ್ಭುತ ಔಷದ: ಪ್ಲಾಸಿಬೊ!

ಒಂದೂರಿನಲ್ಲಿ ರಾಜನೊಬ್ಬ ಗುಣವಾಗದ ಕಾಯಿಲೆಯಿಂದ ಪೀಡಿತನಾಗಿದ್ದ. ಯಾವ ವೈದ್ಯರ ಔಷದವೂ ಪರಿಣಾಮ ಬೀರದಾಗ, ತನ್ನ ಕಾಯಿಲೆಯನ್ನು ಗುಣಪಡಿಸುವ ವೈದ್ಯರಿಗೆ ಅರ್ಧ ರಾಜ್ಯವನ್ನೇ ಬಹುಮಾನವಾಗಿ ಕೊಡುವುದಾಗಿಯೂ ರಾಜ ಡಂಗುರ ಹೊಡೆಸಿದ. ಆದರೂ ಪ್ರಯೋಜನವಾಗಲಿಲ್ಲ. 

ಒಂದು ದಿನ, ಪಕ್ಕದ ಊರಿನ ಬೆಟ್ಟವೊಂದರಲ್ಲಿ ಒಬ್ಬ ವೃದ್ಧ ಪಂಡಿತನಿರುವನೆಂದೂ, ಎಂತೆಂಥ ಕಾಯಿಲೆಗಳನ್ನೂ ಗುಣಪಡಿಸುವಲ್ಲಿ ಆಟ ವಿಶೇಷ ಸಿದ್ದಿಪಡೆದಿರುವನೆಂದೂ ದೂತನೊಬ್ಬ ರಾಜನಿಗೆ ಸುದ್ದಿ ನೀಡಿದ. ಕೂಡಲೇ ರಾಜ ತನ್ನ ಮಂತ್ರಿಯೊಂದಿಗೆ ಕುದುರೆಯಲ್ಲಿ ಪಕ್ಕದೂರಿನ ಬೆಟ್ಟವನ್ನು ಏರಿ, ಪಂಡಿತನನ್ನು ಭೇಟಿಯಾದ. 

ರಾಜನನ್ನು ಪರೀಕ್ಷಿಸಿದ ಪಂಡಿತ ಭಸ್ಮವೊಂದರ ಪೊಟ್ಟಣವನ್ನು ನೀಡಿ," ರಾಜ, ಬರಿಗಾಲಲ್ಲೇ ನಡೆದು ಅರಮನೆಯನ್ನು ಸೇರಿದ ಬಳಿಕ ಈ ಭಸ್ಮವನ್ನು ಹಣೆಗೆ ಹಚ್ಚಿಕೋ" ಎಂದ. ರಾಜ ಪಂಡಿತನ ಸೂಚನೆಯನ್ನು ಅಕ್ಷರಶಃ ಪರಿಪಾಲಿಸಿ ಬೇಗನೆ ಗುಣಮುಖನಾದ!. ರಾಜನಿಗೆ ಪಂಡಿತನ ಚಿಕಿತ್ಸೆಯಿಂದ ತನ್ನ ಕಾಯಿಲೆ ಗುಣವಾಗಿದ್ದರಿಂದ ಅಮಿತಾನಂದವಾಗಿತ್ತು. ಅಂತೆಯೇ ತನ್ನ ಮಾತಿಗೆ ತಪ್ಪದೆ ಅರ್ಧ ರಾಜ್ಯವನ್ನು ಬಹುಮಾನವಾಗಿ ನೀಡುವುದಾಗಿ ತಿಳಿಸಲು ರಾಜ ಮತ್ತೊಮ್ಮೆ ಪಂಡಿತನ ಬಳಿಗೆ ಬಂದ. ರಾಜನನ್ನು ಕಂಡು ನಸುನಕ್ಕ ಪಂಡಿತನು, ರಾಜ, ನಾನು ಅಂತಹ ಮಹತ್ಕಾರ್ಯವನ್ನೇನೂ ಮಾಡಿಲ್ಲ. ನೀನು ನನ್ನ ಮೇಲಿಟ್ಟ ವಿಶ್ವಾಸವೇ ನಿನ್ನನ್ನು ಗುಣಮುಖನನ್ನಾಗಿಸಿತು. ವಾಸ್ತವವಾಗಿ ನಾನು ನಿನಗೆ ನೀಡಿದ್ದು ಭಸ್ಮವೇ ಅಲ್ಲ, ನಮ್ಮ ಅಡುಗೆಮನೆಯ ಒಲೆಯಲ್ಲಿನ ಬೂದಿ,ಎಂದನು. 

ವಿಶ್ವಾಸ ಎನ್ನುವುದು ಎಷ್ಟು ಪರಿಣಾಮಕಾರಿ ಎನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಅನೇಕ ವಿಧದ ಪರ್ಯಾಯ ಚಿಕಿತ್ಸಾ ಕ್ರಮಗಳು ರೋಗಿಯ ಮೇಲೆ ಪರಿಣಾಮ ಬೀರುವುದು ಈ ವಿಶ್ವಾಸದಿಂದಲೇ. ಆ ಕಾರಣಕ್ಕಾಗಿಯೇ ಆಧುನಿಕ ವೈದ್ಯವಿಜ್ಞಾನವೂ ತನ್ನ ಚಿಕಿತ್ಸಾ ಕ್ರಮಗಳಲ್ಲಿ "ವಿಶ್ವಾಸ"ದ ಲಾಭವನ್ನು ಪಡೆದುಕೊಂಡಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಸಾಮಾನ್ಯವಾಗಿ ವೈದ್ಯರು ನೀಡುವ ಮಾತ್ರೆ,ಮುಲಾಮು,ಕ್ಯಾಪ್ಸೂಲ್,ಸಿರಪ್ ಹಾಗೂ ಇಂಜೆಕ್ಷನ್ ಗಳನ್ನು ಬಣ್ಣ,ವಾಸನೆ,ರುಚಿ,ರೂಪ ಇತ್ಯಾದಿಗಳಲ್ಲಿ ಹೋಲುವ, ಆದರೆ ವಾಸ್ತವಾಗಿ ಔಷದವೇ ಅಲ್ಲದ ದಿವ್ಯೌಷದಗಳಿಗೆ ವೈದ್ಯಕೀಯ ಪರಿಭಾಷೆಯಲ್ಲಿ "ಪ್ಲಾಸಿಬೊ" ಎನ್ನುತ್ತಾರೆ. ನಿಮಗೆ ಹೊಟ್ಟೆನೋವು ಅಥವಾ ತಲೆನೋವು ಬಾಧಿಸಿದ್ದ ಸಂದರ್ಭವನ್ನು ನೆನಪಿಸಿಕೊಳ್ಳಿ. ನಿಮ್ಮ ಪರಿಚಿತ ವೈದ್ಯರು ನೀಡಿದ ಗುಳಿಗೆಯನ್ನು ನುಂಗಿ, ನೀರು ಕುಡಿದೊಡನೆ ನೋವು ಕಡಿಮೆಯಾಗುತ್ತಿರುವ "ಹಿತಾನುಭವ" ಆಗಿದ್ದುದು ನಿಜವಲ್ಲವೇ. ಇದನ್ನೇ "ಪ್ಲಾಸಿಬೋ ಎಫೆಕ್ಟ್ " ಎನ್ನುತ್ತಾರೆ. ಯಾವುದೇ ಔಷದ ಅಪೇಕ್ಷಿತ ಪರಿಣಾಮ ಬೀರಲು, ವೈದ್ಯರ ಮೇಲೆ ರೋಗಿಗಳಿಗೆ ಇರುವ ಅಪರಿಮಿತ ವಿಶ್ವಾಸವೇ ಕಾರಣವೆಂದು ಅನೇಕರಿಗೆ ತಿಳಿದಿಲ್ಲ. 

ಉಪಯೋಗ 

ಅನೇಕ ವೈದ್ಯರು ಸಂದರ್ಭೋಚಿತವಾಗಿ ತಮ್ಮ ರೋಗಿಗಳನ್ನು ಬಾಧಿಸುವ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಪ್ಲಾಸಿಬೊ ಗಳನ್ನು ಬಳಸುತ್ತಾರೆ. ನೂತನವಾಗಿ ಸಂಶೋಧಿಸಿದ ಔಷದವೊಂದನ್ನು ಮನುಷ್ಯರ ಮೇಲೆ ಪ್ರಯೋಗಿಸುವ ಸಂದರ್ಭದಲ್ಲೂ ಪ್ಲಾಸಿಬೊಗಳ ಬಳಕೆ ಅನಿವಾರ್ಯ. ಚಿಕಿತ್ಸೆ ನಿಷ್ಪ್ರಯೋಜಕವೆನಿಸುವ ಅನೇಕ ಗಂಭೀರ, ಮಾರಕ ಕಾಯಿಲೆಗಳ ಅಂತಿಮ ಹಂತದಲ್ಲಿ(ಉದಾಹರಣೆಗೆ ತೀವ್ರವಾಗಿ ಉಲ್ಬಣಿಸಿರುವ ಕ್ಯಾನ್ಸರ್) "ರೋಗಭೀತಿ"(ಹೈಪೋಕಾಂಡ್ರಿಯಾಸಿಸ್) ಯಿಂದ ಬಳಲುತ್ತಿರುವ ರೋಗಿಗಳಿಗೆ ಹಾಗೂ ಚಿಕಿತ್ಸೆಯ ಅವಶ್ಯಕತೆಯೇ ಇಲ್ಲದಿದ್ದರೂ, ಚಿಕಿತ್ಸೆ ಅನಿವಾರ್ಯವೆಂದು ಧೃಢವಾಗಿ ನಂಬಿರುವ ವ್ಯಕ್ತಿಗಳಿಗೆ ಪ್ಲಾಸಿಬೊಗಳು ಅತ್ಯಂತ ಪರಿಣಾಮಕಾರಿ ಎನಿಸುತ್ತವೆ!. 

ಪ್ಲಾಸಿಬೊಗಳನ್ನು ಔಷದೀಯ ಗುಣವಿಲ್ಲದ ಆದರೆ ರೋಗಿಗಳಿಗೆ ಯಾವುದೇ ಸಂದರ್ಭದಲ್ಲೂ ಅಪಾಯಕಾರಿ ಎನಿಸದ ದ್ರವ್ಯಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಪರೂಪದಲ್ಲಿ ವೈದ್ಯರು ನೈಜ ಔಷದಗಳನ್ನೇ ಪ್ಲಾಸಿಬೊ ರೂಪದಲ್ಲಿ ಬಳಸುವುದುಂಟು. ಅನೇಕ ಸಂದರ್ಭಗಳಲ್ಲಿ ಯಾವುದೇ ಔಷದವು ತನ್ನ ಔಷದೀಯ ಗುಣಕ್ಕಿಂತಲೂ ಪ್ಲಾಸಿಬೊ ಪರಿಣಾಮದಿಂದಲೇ ರೋಗಿಗೆ ಉಪಶಮನವನ್ನು ನೀಡುವಲ್ಲಿ ಯಶಸ್ವಿಯಾಗುವುದು ಸುಳ್ಳೇನಲ್ಲ!. 

ವಿಶಿಷ್ಟ ವ್ಯಕ್ತಿತ್ವದ ರೋಗಿಗಳಲ್ಲಿ ಶಾರೀರಿಕ ಸಮಸ್ಯೆಗಳಿಗಿಂತ "ಮಾನಸಿಕ ಜನ್ಯ ಶಾರೀರಿಕ ಸಮಸ್ಯೆಗಳು" ಉದ್ಭವಿಸಿದಾಗ, ಪ್ಲಾಸಿಬೊಗಳು ಅತ್ಯುತ್ತಮ ಪರಿಣಾಮ ಬೀರಬಲ್ಲವು. ಮಾನಸಿಕ ಉದ್ವೇಗ,ತೀವ್ರ ಆಯಾಸ,ನಿಶ್ಶಕ್ತಿ, ತಲೆನೋವು, ನಿದ್ರಾಹೀನತೆ, ಉಸಿರು ಕಟ್ಟಿದಂತಾಗುವುದು, ಹಸಿವೆಯಿಲ್ಲದಿರುವುದು ಹಾಗೂ ಮಲಬದ್ಧತೆಗಳಂತಹ ಸಮಸ್ಯೆಗಳು ಮಾನಸಿಕಜನ್ಯವೆಂದು ಖಚಿತವಾದಾಗ, ಅನುಭವಿ ವೈದ್ಯರು ಪ್ಲಾಸಿಬೊಗಳನ್ನು ಯಶಸ್ವಿಯಾಗಿ ಬಳಸಿರುವ ಅನೇಕ ನಿದರ್ಶನಗಳಿವೆ. 

ಪ್ಲಾಸಿಬೊಗಳನ್ನು ಬಳಸುವಾಗ ಇವುಗಳು ರೋಗಿಯ ಕಾಯಿಲೆಗೆ ಸೂಕ್ತವೆನಿಸುವಂತೆ, ರೋಗಿ ಅಪೇಕ್ಷಿಸಿರುವಂತೆಯೇ ಇದ್ದು, ಯಾವುದೇ ಸಂದರ್ಭದಲ್ಲೂ ರೋಗಿಗೆ ಹಾನಿಕರವೆನಿಸಬಾರದು. ಅಂತೆಯೇ ಇವು ಅತ್ಯಂತ ಪರಿಣಾಮಕಾರಿ ಎನಿಸಲು ಇವುಗಳ ಬಣ್ಣ, ವಾಸನೆ, ಆಕಾರ ಮತ್ತು ರೂಪಗಳು ವಿಶಿಷ್ಟವಾಗಿರುವುದೂ ಅವಶ್ಯ. ಪ್ಲಾಸಿಬೊಗಳಲ್ಲಿ ಎಲ್ಲಕಿಂತ ಅದ್ಭುತ ಪರಿಣಾಮ ಬೀರುವುದರಲ್ಲಿ ಸೂಜಿಮದ್ದಿಗೆ ಅಗ್ರಸ್ಥಾನ ಸಲ್ಲುತ್ತದೆ. ಹೆಚ್ಚಿನ ರೋಗಿಗಳಿಗೆ ಹಲವಾರು ದಿನಗಳ ಮಾತ್ರೆ-ಔಷದ ಸೇವನೆಯಿಂದ ದೊರೆಯುವಷ್ಟೇ ಉಪಶಮನವು ಕೇವಲ ಒಂದು ಇಂಜೆಕ್ಷನ್ ನೀಡಬಲ್ಲದೆಂದರೆ ಇದರ ಪ್ರಭಾವ ಎಷ್ಟೆಂದು ಸುಲಭವಾಗಿ ಊಹಿಸಬಹುದು. ಶೇಕಡಾ ೮೦ ರಷ್ಟು ಪರಿಣಾಮಕಾರಿಯಾಗಿರುವ ಇಂಜೆಕ್ಷನ್ ಗಳನ್ನು ಕೆಲವೊಮ್ಮೆ ವೈದ್ಯರೇ ಒತ್ತಾಯಪೂರ್ವಕವಾಗಿ ನೀಡಲು ಅಥವಾ ರೋಗಿಗಳೇ ತಾವಾಗಿ ಕೇಳಿ ಪಡೆದುಕೊಳ್ಳಲು "ಪ್ಲಾಸಿಬೊ ಪರಿಣಾಮ" ಕಾರಣವೇ ಹೊರತು ಇಂಜೆಕ್ಷನ್ ನಲ್ಲಿರುವ ಔಷದವಲ್ಲ!. 

ನೂತನ ಔಷದವೊಂದನ್ನು ಮಾರುಕಟ್ಟೆಗೆ ಬಿಡುಗಡೆಮಾಡುವ  ಮುನ್ನ ಕಡ್ಡಾಯವಾಗಿ ನಡೆಸುವ ಕೆಲವೊಂದು ಪ್ರಯೋಗ-ಪರೀಕ್ಷೆಗಳ ಸಂದರ್ಭದಲ್ಲಿ,ಈ ಔಷದಗಳನ್ನು ನೀಡುವ ವೈದ್ಯರು ಹಾಗೂ ಸೇವಿಸುವ ರೋಗಿಗಳು ಅದರ ಪರಿಣಾಮಗಳ ಬಗ್ಗೆ ತಾರತಮ್ಯ ಮಾಡದಂತೆ ಮತ್ತು ಪೂರ್ವಾಗ್ರಹ ಪೀಡಿತರಾಗಿ ನೇತ್ಯಾತ್ಮಕ ವರದಿ ನೀಡದಂತೆ, ನೈಜ ಔಷದಗಳೊಂದಿಗೆ ಪ್ಲಾಸಿಬೊಗಳನ್ನು ಬಳಸುತ್ತಾರೆ. ಆದರೆ ಈ ಸಂದರ್ಭದಲ್ಲಿ ವೈದ್ಯರಿಗೆ ತಾನು ನೀಡಿದ ಹಾಗೂ ರೋಗಿಗಳಿಗೆ ತಾವು ಸೇವಿಸಿದ ಔಷದವು ನೈಜ ಅಥವಾ ಪ್ಲಾಸಿಬೊ ಎಂದು ತಿಳಿದಿರುವುದೇ ಇಲ್ಲ. ಇಂತಹ ಪ್ರಯೋಗಗಳ ಮೂಲಕ ನೂತನ ಔಷದಗಳ ಗುಣಾವಗುಣಗಳನ್ನು ನಿಖರವಾಗಿ ಅರಿತುಕೊಳ್ಳಲು ಸಾಧ್ಯವಾಗುವುದು. 

ವೈದ್ಯರು ನೀಡುವ ಭರವಸೆಗಳ ಮೂಲಕ ರೋಗಿಯ ಆತ್ಮವಿಶ್ವಾಸವನ್ನು ವೃದ್ಧಿಸುವಂತೆ ಮಾಡಿ, ಪ್ಲಾಸಿಬೊ ಪರಿಣಾಮವನ್ನು ಇನ್ನಷ್ಟು ಹೆಚ್ಚಿಸುವುದು ಸುಲಭಸಾಧ್ಯ. ಇದೆ ರೀತಿಯಲ್ಲಿ ರೋಗಿ ಸಾಮಾನ್ಯವಾಗಿ ಭೇಟಿಮಾಡುವ ವೈದ್ಯರಿಗಿಂತ, ಅಪರಿಚಿತರಾಗಿರುವ ಖ್ಯಾತ ತಜ್ಞರೊಬ್ಬರು ನೀಡುವ ಭರವಸೆಯು "ಸಂಜೀವಿನಿ" ಯಂತೆ ಪರಿಣಾಮಕಾರಿಯಾಗುವುದು. 

ಮಾರುಕಟ್ಟೆಯಲ್ಲಿ ಸುಲಭವಾಗಿ ಲಭಿಸುವ ವಿವಿಧರೀತಿಯ ಔಷದಗಳನ್ನು ಖರೀದಿಸಿ, ಸ್ವಯಂ ಪ್ರಯೋಗಿಸುವ ಹವ್ಯಾಸವಿರುವ ವ್ಯಕ್ತಿಗಳನ್ನು ಸ್ವಯಂವೈದ್ಯರು ಎನ್ನುತ್ತಾರೆ. ಪ್ಲಾಸಿಬೊಗಳಂತೆಯೇ ಸ್ವಯಂ ಪ್ರಯೋಗಿಸಿದ ಔಷದಗಳಿಂದಲೂ ನಿರೀಕ್ಷಿತ ಉಪಶಮನ ಪಡೆಯುವುದು ಆಶ್ಚರ್ಯವೇನಲ್ಲ!. 

ಮಾನಸಿಕ ಖಿನ್ನತೆ ಹಾಗೂ ಕೆಲವಿಧದ ಮಾನಸಿಕ ರೋಗಿಗಳಲ್ಲಿ ಪ್ಲಾಸಿಬೊ ಚಿಕಿತ್ಸೆಯು ನಿಷ್ಪ್ರಯೋಜಕವೆನಿಸುವುದು. ಆದರೆ ದುರ್ಬಲ ಮನಸ್ಸಿನ ವ್ಯಕ್ತಿಗಳು ಮಾತ್ರ ಸುಲಭದಲ್ಲೇ ಪ್ಲಾಸಿಬೊ ಮೋಡಿಗೆ ಮರುಳಾಗುತ್ತಾರೆ. ಅಂತೆಯೇ ಸಂದೇಹದ ಸ್ವಭಾವದ ವ್ಯಕ್ತಿಗಳಿಗೆ ವೈದ್ಯರು ನೀಡುವ ಅತ್ಯುತ್ತಮ ಔಷದಗಳೇ ಉಪಶಮನವನ್ನು ನೀಡಲು ವಿಫಲವಾಗುವುದರಿಂದ, ಪ್ಲಾಸಿಬೊಗಳು ಸಫಲವಾಗುವ ಸಾಧ್ಯತೆಗಳೇ ಇಲ್ಲವೆನ್ನಬಹುದು. ಇಂತಹ ವಿಶಿಷ್ಟವ್ಯಕ್ತಿಗಳು ತಮ್ಮ ಮೇಲೆ ಯಾವುದೇ ಔಷದಗಳು ಪರಿಣಾಮ ಬೀರದೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಸ್ವಾಭಾವಿಕವೂ ಹೌದು. 

ದುಷ್ಪರಿಣಾಮಗಳು 

ನೈಜ ಔಷದಗಳಂತೆಯೇ ಪ್ಲಾಸಿಬೊ ಸೇವನೆಯು ಕೆಲವೊಂದು ಅಡ್ಡ ಪರಿಣಾಮಗಳನ್ನು ತೋರಬಹುದು. ಇವುಗಳಲ್ಲಿ ಅಲರ್ಜಿ,ತಲೆನೋವು,ಬಾಯಿ-ಗಂಟಲುಗಳು ಒಣಗಿದಂತೆ ಆಗುವುದು,ತೂಕಡಿಕೆ,ನಿದ್ರಾಹೀನತೆ,ಬಾಯಿಹುಣ್ಣು, ಅತಿಆಯಾಸ,ಮಲಬದ್ಧತೆ,ನಿಮಿರು ದೌರ್ಬಲ್ಯಗಳಂತಹ ಸಮಸ್ಯೆಗಳು ಪ್ರಮುಖವಾಗಿವೆ. ಆದರೆ ಇಂತಹ ಸಂದರ್ಭದಲ್ಲಿ ವೈದ್ಯರು ನೀಡುವ ಮತ್ತೊಂದು ಪ್ಲಾಸಿಬೊ ಸೇವಿಸಿದೊಡನೆ, ಈ ಸಮಸ್ಯೆಗಳು ಆಶ್ಚರ್ಯಕರ ರೀತಿಯಲ್ಲಿ ಮಾಯವಾಗುತ್ತವೆ!. 

ಅಂತಿಮವಾಗಿ, ಈ ಲೇಖನವನ್ನು ಓದಿದ ಬಳಿಕ ನಿಮ್ಮ ಕುಟುಂಬ ವೈದ್ಯರು ಅಥವಾ ತಜ್ಞರು ಮುಂದೆ ಯಾವುದೇ ಸಂದರ್ಭದಲ್ಲಿ ನಿಮಗೆ ನೀಡಬಹುದಾದ ಔಷದಗಳನ್ನು ವಿನಾಕಾರಣ ಪ್ಲಾಸಿಬೊ ಎಂದು ಸಂದೇಹಿಸದಿರಿ!. 

 ಡಾ. ಸಿ. ನಿತ್ಯಾನಂದ ಪೈ,ಪುತ್ತೂರು  

ತರಂಗ ವಾರಪತ್ರಿಕೆಯ ೨೪-೦೫-೨೦೦೪ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ 

 

Thursday, September 12, 2013

Artificial sweeteners



            ಕೃತಕ ಮಾಧುರ್ಯಕಾರಕಗಳು ಹಾನಿಕಾರಕವೇ?

ತಮ್ಮ  ಆರೋಗ್ಯದ ಸಮಸ್ಯೆಗಳಿಂದಾಗಿ ಸಕ್ಕರೆಯನ್ನು ಸೇವಿಸಲಾರದ ವ್ಯಕ್ತಿಗಳು, ಅನಿವಾರ್ಯವಾಗಿ ಬಳಸುತ್ತಿರುವ ಕೃತಕ ಮಾಧುರಕಾರಕಗಳನ್ನು ಅತ್ಯಂತ ಸುರಕ್ಷಿತವೆಂದು ನಂಬಿರಬಹುದು. ಆದರೆ ಈ ರಾಸಾಯನಿಕಗಳ ದೀರ್ಘಕಾಲೀನ ಹಾಗೂ ಅತಿಯಾದ ಸೇವನೆಯಿಂದ ಅನಾರೋಗ್ಯ ಬಾಧಿಸುವ ಸಾಧ್ಯತೆಗಳಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 
-----------           -----------------        ---------------------             -------------------------             ----------------------           -----------------

ಸಾಮಾನ್ಯವಾಗಿ ನಾವೆಲ್ಲರೂ ದಿನನಿತ್ಯ ಸೇವಿಸುವ ವೈವಿಧ್ಯಮಯ ಖಾದ್ಯಪೇಯಗಳಲ್ಲಿ ಬಳಸುವ ಸಕ್ಕರೆಯ ಸ್ವಾದವನ್ನು ಮೆಚ್ಚದವರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಆದರೆ ಮಧುಮೇಹ,ಅಧಿಕತೂಕ ಹಾಗೂ ಅತಿಬೊಜ್ಜಿನಿಂದ ಬಳಲುತ್ತಿರುವವರು, ತಮ್ಮ ಆರೋಗ್ಯದ ರಕ್ಷಣೆಯ ಹಿತದೃಷ್ಟಿಯಿಂದ ಸಕ್ಕರೆಯ ಸೇವನೆಯನ್ನೇ ವರ್ಜಿಸುವುದು ಅಪರೂಪವೇನಲ್ಲ. ಅಂತೆಯೇ ತಮ್ಮ ಶರೀರದ ತೂಕ, ಆಕಾರ ಮತ್ತು ಸೌಂದರ್ಯಗಳ ಬಗ್ಗೆ ಅತಿಯಾದ ಕಾಳಜಿಯಿರುವ ರೂಪದರ್ಶಿಯರು,ಚಿತ್ರನಟಿಯರು ಮತ್ತು ಕಾಲೇಜು ಕನ್ಯೆಯರು, ಅತಿಯಾದ ಕ್ಯಾಲರಿಗಳಿಂದ ಸಮೃದ್ಧವಾಗಿರುವ ಸಕ್ಕರೆಯಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೂರವಿರಿಸುವುದು ಸ್ವಾಭಾವಿಕವೋ ಹೌದು. 

ಇಂತಹ ಸಮಸ್ಯೆಗಳು ಅಥವಾ ಕಾಳಜಿಯಿರುವ ವ್ಯಕ್ತಿಗಳಿಗಾಗಿಯೇ ಆವಿಷ್ಕರಿಸಲ್ಪಟ್ಟಿರುವ ವಿವಿಧರೀತಿಯ ಕೃತಕ ಮಾಧುರ್ಯಕಾರಕಗಳು( Artificial sweetners) , ಹಲವಾರು ವರ್ಷಗಳಿಂದ ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಸಕ್ಕರೆಗಿಂತ ನೂರಾರುಪಟ್ಟು ಸಿಹಿಯಾಗಿರುವ,ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನೇ ಹೆಚ್ಚಿಸದ ಮತ್ತು ಸಕ್ಕರೆಯೊಂದಿಗೆ ತುಲನೆ ಮಾಡಿದಾಗ ನಿಕೃಷ್ಟ ಪ್ರಮಾಣದ ಕ್ಯಾಲರಿಗಳಿರುವ ಈ ರಾಸಾಯನಿಕಗಳು, ಇವೆಲ್ಲಾ ಕಾರಣಗಳಿಂದಾಗಿ ಜಗತ್ತಿನಾದ್ಯಂತ ಜನಪ್ರಿಯವೆನಿಸಿವೆ. 

ಪಾಶ್ಚಿಮಾತ್ಯ ದೇಶಗಳಲ್ಲಿ ಸಕ್ಕರೆಯ ಬೆಲೆ ಅತಿಯಾಗಿರುವುದು ಕೂಡಾ ಕೃತಕ ಮಾಧುರ್ಯಕಾರಕಗಳನ್ನು ಅಲ್ಲಿನ ಜನರು ಅತಿಯಾಗಿ ಬಳಸಲು ಪ್ರಮುಖ ಕಾರಣವೆನಿಸಿದೆ. ಆದರೆ ಇದನ್ನು ಸೇವಿಸುತ್ತಿರುವ ಬಹುತೇಕ ಭಾರತೀಯರು ಇವುಗಳ ದೀರ್ಘಕಾಲೀನ ಹಾಗೂ ಅತಿಯಾದ ಸೇವನೆಯಿಂದ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳ ಬಗ್ಗೆ ಇಂದಿನ ತನಕ ತಲೆಕೆಡಿಸಿಕೊಂಡಿಲ್ಲ!. 

ಪ್ರಸ್ತುತ ಲಭ್ಯವಿರುವ ಕೃತಕ ಮಾಧುರ್ಯಕಾರಕಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟಮಾಡಿ, ಕೋಟ್ಯಂತರ ರೂಪಾಯಿಗಳ ಲಾಭಗಳಿಸುತ್ತಿರುವ ಸಂಸ್ಥೆಗಳು ಕೇವಲ ಬೆರಳೆಣಿಕೆಯಷ್ಟಿವೆ. ವಿಶೇಷವೆಂದರೆ ಇಂತಹ ಸಂಸ್ಥೆಗಳು ತಮ್ಮ ಉತ್ಪನ್ನಗಳ ಅತಿಯಾದ ಹಾಗೂ ದೀರ್ಘಕಾಲೀನ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಲಭ್ಯವಿರುವ ವೈಜ್ಞಾನಿಕ- ವೈದ್ಯಕೀಯ ಅಧ್ಯಯನಗಳ ವರದಿಗಳನ್ನು ಮಾತ್ರ ಬಹಿರಂಗಪಡಿಸುವುದೇ ಇಲ್ಲ. ಮಾತ್ರವಲ್ಲ, ಇಂತಹ ನಿಖರವಾದ ಮಾಹಿತಿಗಳ ಹೊರತಾಗಿಯೂ ತಮ್ಮ ವಾಣಿಜ್ಯ ಉತ್ಪನ್ನಗಳ ಮುಕ್ತ ಮಾರಾಟಕ್ಕೆ, ವಿಶ್ವದ ಬಹುತೇಕ ರಾಷ್ಟ್ರಗಳ ಸರಕಾರಗಳಿಂದ ಅನುಮತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ನಂಬಲು ಅಸಾಧ್ಯವೆನಿಸುತ್ತದೆ!. 

ಆಕಸ್ಮಿಕ ಸಂಶೋಧನೆ 

೧೮೭೮ ರಲ್ಲಿ ಆಕಸ್ಮಿಕವಾಗಿ ಸಂಶೋಧಿಸಲ್ಪಟ್ಟಿದ್ದ "ಸಾಕರಿನ್", ಸಕ್ಕರೆಗಿಂತಲೂ ಸುಮಾರು ೨೦೦ ರಿಂದ ೭೦೦ ಪಟ್ಟು ಸಿಹಿಯಾಗಿತ್ತು. ಇದಕ್ಕೂ ಮಿಗಿಲಾಗಿ ಮಧುಮೇಹ ರೋಗಿಗಳು ತಮ್ಮ ವ್ಯಾಧಿಯನ್ನು ಉಲ್ಬಣಿಸಿಕೊಳ್ಳದೇ ಇದನ್ನು ಸೇವಿಸಬಹುದಾಗಿತ್ತು. ತತ್ಪರಿಣಾಮವಾಗಿ ಇಂತಹ ಅನಾರೋಗ್ಯಪೀಡಿತರಿಗೆ ಈ ರಾಸಾಯನಿಕವು ವರದಾನವಾಗಿ ಪರಿಣಮಿಸಿತ್ತು. 

೧೮೮೫ ರಲ್ಲಿ ಪೇಟೆಂಟ್ ಗಳಿಸಿದ್ದ ಈ ಕೃತಕ ಮಾಧುರ್ಯಕಾರಕವು "ಮೊನ್ಸಾಂಟೊ ಕೆಮಿಕಲ್ಸ್ ಕಂಪೆನಿ"ಯ ಪ್ರಪ್ರಥಮ ವಾಣಿಜ್ಯ ಉತ್ಪನ್ನವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿ, ಅತ್ಯಲ್ಪ ಅವಧಿಯಲ್ಲೇ ವಿಶ್ವವಿಖ್ಯಾತವಾಯಿತು. ಭಾರತದಲ್ಲೂ ಮಾರಾಟವಾಗುತ್ತಿರುವ ಸಾಕರಿನ್, ಇಂದಿಗೂ ತನ್ನ ಜನಪ್ರಿಯತೆ ಮತ್ತು ಬೇಡಿಕೆಗಳನ್ನು ಉಳಿಸಿಕೊಂಡಿದೆ. 

ತದನಂತರ ಗತ ಶತಮಾನದಲ್ಲಿ ಸಂಶೋಧಿಸಲ್ಪಟ್ಟಿದ್ದ ಅಸ್ಪಾರ್ಟೆಮ್, ಸೋಡಿಯಂ ಸೈಕ್ಲಾಮೇಟ್, ಏಸ್ ಸಲ್ಫೆಮ್-ಕೆ, ಅಲಿಟೇಮ್, ಹಾಗೂ ಸುಕ್ರಾಲೋಸ್ ಮುಂತಾದ ಮಾಧುರ್ಯಕಾರಕಗಳು ಕಾಲಕ್ರಮೇಣ ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ಇವುಗಳಲ್ಲಿ ಸೋಡಿಯಂ ಸೈಕ್ಲಾಮೇಟ್ ನ ಬಳಕೆಯನ್ನು ಅಮೇರಿಕಾದಲ್ಲಿ ನಿಷೇಧಿಸಿದ್ದರೂ,ಇದನ್ನು ತಯಾರಿಸಿ ಇತರ ದೇಶಗಳಿಗೆ ರಫ್ತುಮಾಡುವ ಧಂಧೆಯು ೧೯೭೦ ರಿಂದ ಅವ್ಯಾಹತವಾಗಿ ಸಾಗುತ್ತಿದೆ!. ಕೆಲವರ್ಷಗಳ ಹಿಂದೆ ವಿಶ್ವ ಮಾರುಕಟ್ಟೆಯನ್ನು ಪ್ರವೇಶಿಸಿದ್ದ "ನಿಯೋಟೇಮ್", ಸಕ್ಕರೆಗಿಂತ ೧೩,೦೦೦ ಪಟ್ಟು ಸಿಹಿಯಾಗಿದೆ!. ಅಸ್ಪಾರ್ಟೆಮ್ ನಿಂದಲೇ ಸಿದ್ದಪಡಿಸಿರುವ ಈ ಮಾಧುರ್ಯಕಾರಕವು ಅಮೇರಿಕಾದ ಎಫ್. ಡಿ. ಎ ನಿಂದ ಅಂಗೀಕರಿಸಲ್ಪಟ್ಟಿದ್ದು, ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಕಾಲಿರಿಸಲು ಕೇಂದ್ರ ಸರಕಾರದ ಅನುಮತಿಯನ್ನು ಕೋರಿದೆ. ಆದರೆ ಅಸ್ಪಾರ್ಟೆಮ್ ನ ಸೇವನೆಯು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುವ ಸಾಧ್ಯತೆ ಮತ್ತು ಸಂದೇಹಗಳಿರುವುದರಿಂದಾಗಿ, ಇದರಿಂದಲೇ ತಯಾರಿಸಲ್ಪಡುವ ನಿಯೋಟೇಮ್ ನ ಸುರಕ್ಷಿತತೆಯ ಬಗ್ಗೆ ಸಂದೇಹ ಮೂಡುವುದು ಸ್ವಾಭಾವಿಕವೋ ಹೌದು. ಪ್ರಾಯಶಃ ಇದೇ ಕಾರಣದಿಂದಾಗಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ನಿಯೋಟೇಮ್, ಏಸ್ಸಲ್ಫೇನ್ -ಕೆ, ಸುಕ್ರಾಲೋಸ್ ಮತ್ತು ಸಾಕರಿನ್ ಗಳ ಸೇವನೆ ಸುರಕ್ಷಿತವೆ ಎಂದು ಅಧ್ಯಯನ ನಡೆಸಲು ಲಕ್ನೋ ದ ಇಂಡಸ್ಟ್ರಿಯಲ್ ಟಾಕ್ಸಿಕಾಲಜಿ ರಿಸರ್ಚ್ ಸೆಂಟರ್ ನ ವಿಜ್ಞಾನಿಗಳಿಗೆ ೨೦೦೪ ನೆ ಇಸವಿಯ ಅಂತ್ಯದಲ್ಲಿ ಆದೇಶಿಸಿತ್ತು. ಹಾಗೂ ಈ ಆದೇಶಕ್ಕೆ ೨೦೦೪ ರಲ್ಲಿ ಅಮೇರಿಕಾದ ಕ್ಯಾಲಿಫೋರ್ನಿಯದ ನ್ಯಾಯಾಲಯದಲ್ಲಿ, ಕೃತಕ ಮಾಧುರ್ಯಕಾರಕವೊಂದರ ವಿರುದ್ಧ ನ್ಯಾಯವಾದಿಯೊಬ್ಬರು ಹೂಡಿದ್ದ ದಾವೆಯೇ ಕಾರಣವೆನಿಸಿರುವ ಸಾಧ್ಯತೆಗಳಿವೆ. 

ಅಸ್ಪಾರ್ಟೆಮ್  ಮತ್ತು ಅನಾರೋಗ್ಯ 

೧೯೬೫ ರಲ್ಲಿ ಸಂಶೋಧಿಸಲ್ಪಟ್ಟು ಹಲವಾರು ವಾದವಿವಾದಗಳ ಹೊರತಾಗಿಯೂ ೧೯೮೧ ರಲ್ಲಿ ಅಮೇರಿಕಾದ ಎಫ್. ಡಿ. ಎ ಸಂಸ್ಥೆಯ ಅನುಮೋದನೆಯನ್ನು ಗಳಿಸಲು ಸಫಲವಾಗಿದ್ದ ಅಸ್ಪಾರ್ಟೆಮ್, ಅಲ್ಲಿ ಮಾರಾಟವಾಗುತ್ತಿರುವ ಕೃತಕ ಮಾಧುರ್ಯಕಾರಕಗಳ ಮಾರುಕಟ್ಟೆಯಲ್ಲಿ ಶೇ. ೭೦ ರಷ್ಟು ಪಾಲನ್ನು ಗಳಿಸಿದೆ. 

೨೦೦೪ ರ ಸೆಪ್ಟೆಂಬರ್ ೧೫ ರಂದು ಜೋ ಬೆಲ್ಲೋನ್ ಎಂಬ ನ್ಯಾಯವಾದಿಯು ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ನ್ಯೂಟ್ರಾಸ್ವೀಟ್ಸ್, ಅಮೇರಿಕನ್ ಡಯಾಬೆಟೆಸ್ ಅಸೋಸಿಯೇಶನ್ ಮತ್ತು ಮೊನ್ಸಾಂಟೊ ಕಂಪೆನಿಗಳ ವಿರುದ್ಧ ೩೫,೦೦೦,೦೦೦ ಡಾಲರ್ ಗಳ ದಾವೆಯನ್ನು ಹೂಡಿದ್ದನು. 

ಬೆಲ್ಲೋನ್ ಹೇಳುವಂತೆ ಆಪಾದಿತರು ಉದ್ದೇಶಪೂರ್ವಕವಾಗಿ ಉತ್ಪಾದಿಸಿ ಮಾರಾಟ ಮಾಡುತ್ತಿರುವ ಹಾಗೂ ಉತ್ತೇಜನ ನೀಡುತ್ತಿರುವ "ವಿಷಕಾರಕ ಅಸ್ಪಾರ್ಟೆಮ್" ನ ಸೇವನೆಯು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತದೆ. ಸಂಧಿವಾತ,ಆಸ್ತಮಾ,ಭೇದಿ,ಅಧಿಕ ರಕ್ತದೊತ್ತಡ,ಮೆದುಳಿನ ಕ್ಯಾನ್ಸರ್, ಸ್ಮರಣ ಶಕ್ತಿ ಹಾಗೂ ದೃಷ್ಟಿ ನಾಶದಂತಹ ಗಂಭೀರ ಸಮಸ್ಯೆಗಳೊಂದಿಗೆ,ಅಸ್ಪಾರ್ಟೆಮ್ ನ ಸೇವನೆಯು  ಮಧುಮೇಹ ವ್ಯಾಧಿಯನ್ನು ಉಲ್ಬಣಿಸುವುದೆಂದು ತಿಳಿದೂ, ಅಮೇರಿಕನ್ ಡಯಾಬೆಟೆಸ್ ಅಸೋಸಿಯೇಶನ್ ಸಂಸ್ಥೆಯು ಈ ಉತ್ಪನ್ನವನ್ನು ಅನುಮೊದಿಸುತ್ತಿರುವುದರಿಂದಾಗಿ ಇದರ ವಿರುದ್ಧ ದಾವೆಯನ್ನು ಹೂಡಲಾಗಿತ್ತು. 

೧೯೬೫ ರಲ್ಲಿ ಸಂಶೋಧಿಸಲಾಗಿದ್ದ ಅಸ್ಪಾರ್ಟೆಮ್ ರಾಸಾಯನಿಕವನ್ನು ೧೯೭೦ ರಲ್ಲಿ ಯುನಿವರ್ಸಿಟಿ ಆಫ್ ವಿಸ್ಕಾನ್ಸಿನ್ ನಲ್ಲಿ ಮೊದಲ ಬಾರಿಗೆ ಪ್ರಯೋಗಗಳಿಗೆ ಒಳಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಾಲಿನೊಂದಿಗೆ ಬೆರೆಸಿದ್ದ ಅಸ್ಪಾರ್ಟೆಮ್ ಸೇವಿಸಿದ್ದ ಏಳು ಕೋತಿಮರಿಗಳಲ್ಲಿ ಒಂದು ಮರಿ ಮೃತಪಟ್ಟಿದ್ದು,ಉಳಿದ ಐದು ಮರಿಗಳಿಗೆ ಅಪಸ್ಮಾರದಂತಹ ಸೆಳೆತಗಳು ಬಾಧಿಸಿದ್ದವು ಎಂದು ಬೆಲ್ಲೋನ್ ಅಪಾದಿಸಿದ್ದನು. ಇಂತಹ ದುಷ್ಪರಿಣಾಮಗಳ ಹೊರತಾಗಿಯೂ, ಇದರ ತಯಾರಕರು ೧೯೭೪ ರಲ್ಲಿ ತಮ್ಮ ಉತ್ಪನ್ನಕ್ಕೆ ಅಮೇರಿಕಾದ ಎಫ್. ಡಿ. ಎ ಸಂಸ್ಥೆಯ ಅನುಮೋದನೆಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದರು.

ಆದರೆ ಈ ಉತ್ಪನ್ನವು ಮಾರುಕಟ್ಟೆಗೆ ಬಿಡುಗಡೆಯಾಗುವ ಮುನ್ನ ವಾಷಿಂಗ್ ಟನ್ ಯುನಿವರ್ಸಿಟಿಯ ನರ ಮಾನಸಿಕ ತಜ್ಞರಾಗಿದ್ದ ಪ್ರೊಫೆಸರ್ ಜಾನ್ ಒಲ್ನೆ ಯವರು, ಅಸ್ಪಾರ್ಟೆಮ್ ನ ಬಳಕೆಯಿಂದ ಮನುಷ್ಯನ ಮೆದುಳಿಗೆ ಹಾನಿ ಸಂಭವಿಸುವುದರಿಂದ ಇದರ ಮಾರಾಟಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. ತತ್ಪರಿಣಾಮವಾಗಿ ಎಫ್. ಡಿ. ಎ ಸಂಸ್ಥೆಯು ಇದರ ತಯಾರಿಕೆಗೆ ನೀಡಿದ್ದ ಅನುಮತಿಯನ್ನು ತಡೆಹಿಡಿದು, ಸತ್ಯ ಶೋಧನೆಗಾಗಿ ಸಮಿತಿಯೊಂದನ್ನು ನೇಮಿಸಿತ್ತು. 

ಆದರೆ ಈ ಮಾಧುರ್ಯಕಾರಕದ ತಯಾರಕರು ೧೯೭೭ ರಲ್ಲಿ ಪ್ರಬಲ ರಾಜಕಾರಣಿಯೊಬ್ಬರನ್ನು ತಮ್ಮ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದ ಪರಿಣಾಮವಾಗಿ, ೧೯೮೧ ರಲ್ಲಿ ಅಸ್ಪಾರ್ಟೆಮ್ ನ ಉತ್ಪಾದನೆ, ಮಾರಾಟ ಮತ್ತು ಬಳಕೆಗಳಿಗೆ ಅನುಮತಿಯನ್ನು ಪಡೆದುಕೊಳ್ಳಲು ಯಶಸ್ವಿಯಾಗಿದ್ದರು. ಎರಡು ವರ್ಷಗಳ ಬಳಿಕ ಇದರ ತಯಾರಕರು ತಮ್ಮ ಉತ್ಪನ್ನವನ್ನು ಲಘು ಪಾನೀಯಗಳು ಮತ್ತು ಮಕ್ಕಳಿಗೆ ನೀಡುವ ಜೀವಸತ್ವಗಳ ತಯಾರಿಕೆಯಲ್ಲಿ ಬಳಸಲು ಎಫ್. ಡಿ. ಎ ಸಂಸ್ಥೆಯ ಅನುಮತಿಯನ್ನು ಪಡೆದುಕೊಂಡಿದ್ದರು!. 

೧೯೯೬ ರಲ್ಲಿ ಪ್ರೊಫೆಸರ್ ಒಲ್ನೆ ಪ್ರಕಟಿಸಿದ್ದ ಅಧ್ಯಯನಗಳ ವರದಿಯಂತೆ ಅಸ್ಪಾರ್ಟೆಮ್ ರಾಸಾಯನಿಕವು "ಮೆದುಳಿನ ಗಡ್ಡೆ "ಗಳಿಗೆ ಕಾರಣವೆನಿಸಬಹುದು ಎಂದು ಪ್ರಸ್ತಾಪಿಸಲಾಗಿತ್ತು. ಆದರೆ ಅದಾಗಲೇ ಈ ಕೃತಕ ಮಾಧುರ್ಯಕಾರಕವು ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾರಾಟವಾಗಲು ಪ್ರಾರಂಭವಾಗಿತ್ತು. 

೧೯೯೮ ರಲ್ಲಿ ಬಾರ್ಸೆಲೋನಾ ವಿಶ್ವವಿದ್ಯಾಲಯವು ನಡೆಸಿದ್ದ ಅಧ್ಯಯನ - ಸಂಶೋಧನೆಗಳ ವರದಿಯಂತೆ, ಅಸ್ಪಾರ್ಟೆಮ್ ನ ಸೇವನೆಯಿಂದಾಗಿ ಮಾನವ ಶರೀರದಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳ ಪರಿಣಾಮವಾಗಿ ವಾಂತಿ, ಭೇದಿಗಳೊಂದಿಗೆ ಮರಣವೂ ಸಂಭವಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿತ್ತು. ೨೦೦೪ ರಲ್ಲಿ ಪ್ರಕಟಗೊಂಡಿದ್ದ ಮತ್ತೊಂದು ವರದಿಯಂತೆ, ಕೃತಕ ಮಾಧುರ್ಯಕಾರಕಗಳು ಮಧುಮೇಹ ಅಥವಾ ಅತಿಬೊಜ್ಜಿನ - ಅಧಿಕ ತೂಕದ ವ್ಯಕ್ತಿಗಳಿಗೆ ಉಪಯುಕ್ತವೆನಿಸುವುದಿಲ್ಲ. ಏಕೆಂದರೆ ಇವುಗಳ ಸೇವನೆಯಿಂದ ಮಾನವನ ಆಹಾರ ಸೇವನೆಯ ಪ್ರಮಾಣ ಹಾಗೂ ಶರೀರದ ತೂಕವನ್ನು ನಿಯಂತ್ರಿಸುವ ಸ್ವಾಭಾವಿಕ ಪ್ರಕ್ರಿಯೆಯು ವ್ಯತ್ಯಯವಾಗುವುದು. ತತ್ಪರಿಣಾಮವಾಗಿ ಸಕ್ಕರೆಯ ಬದಲಾಗಿ ಕೃತಕ ಮಾಧುರ್ಯಕಾರಕಗಳನ್ನು ಸೇವಿಸಿದಾಗ, 
ನಮ್ಮ ಶರೀರವು ನಾಲಗೆಯ ರುಚಿಯ ಮೂಲಕ ತನಗೆ ಅವಶ್ಯಕವೆನಿಸುವ ಕ್ಯಾಲರಿಗಳ ಪ್ರಮಾಣವನ್ನು ನಿರ್ಧರಿಸಲು ವಿಫಲವಾಗುತ್ತದೆ. ಇದರಿಂದಾಗಿ ಸಕ್ಕರೆಯಿಂದ ಸಿದ್ಧಪಡಿಸಿದ ಆಹಾರವನ್ನು ಸೇವಿಸುವಾಗಲೂ ಇದರಲ್ಲಿ ಕ್ಯಾಲರಿಗಳೇ ಇಲ್ಲವೆನ್ನುವ ಭ್ರಮೆ ಹುಟ್ಟಿಸಿ, ಅತಿ ಆಹಾರ ಸೇವನೆಗೆ ಕಾರಣವೆನಿಸುವ ಸಾಧ್ಯತೆಗಳಿವೆ. 

ಕೃತಕ ಮಾಧುರ್ಯಕಾರಕಗಳ ಸೇವನೆಯಿಂದ ಉದ್ಭವಿಸಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಹಲವಾರು ಅಧ್ಯಯನಗಳ ವರದಿಗಳು ಪ್ರಕಟಗೊಂಡಿದ್ದರೂ,ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಇಂತಹ ಉತ್ಪನ್ನಗಳು ಇವುಗಳ ತಯಾರಕರಿಗೆ ಭಾರೀ ಲಾಭವನ್ನು ಗಳಿಸಬಲ್ಲ ಉದ್ಯಮವಾಗಿ ಬೆಳೆದಿರುವುದೇ ಪ್ರಮುಖ ಕಾರಣವೆನಿಸಿದೆ. 

ಅದೇನೇ ಇರಲಿ, ಇಂತಹ ವಾಣಿಜ್ಯ ಉತ್ಪನ್ನಗಳ ತಯಾರಕರು - ಮಾರಾಟಗಾರರ ಜಾಹೀರಾತುಗಳನ್ನು ನಂಬಿ, ಇವರ ಉತ್ಪನ್ನಗಳು ಆರೋಗ್ಯಕರ ಎಂದು ಭಾವಿಸಿ ಸೇವಿಸುವ ಭಾರತೀಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೆ ಇವುಗಳ ಅತಿಯಾದ - ದೀರ್ಘಕಾಲೀನ ಸೇವನೆಯ ದುಷ್ಪರಿಣಾಮಗಳನ್ನು ಅರಿತುಕೊಂಡ ಬಳಿಕವೂ, ಇದರ ಬಳಕೆಯನ್ನು ಮುಂದುವರಿಸುವುದು ಅಪಾಯಕ್ಕೆ ಆಹ್ವಾನವನ್ನು ನೀಡಿದಂತೆ ಎನ್ನುವುದನ್ನು ಮರೆಯದಿರಿ. 

ಸಾಕರಿನ್ - ಅಸ್ಪಾರ್ಟೆಮ್ ಗಳ ಬೃಹತ್ ಉದ್ಯಮ 

ವಿಶ್ವ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕೃತಕ ಮಾಧುರ್ಯಕಾರಕಗಳಲ್ಲಿ ಸಾಕರಿನ್ ಗೆ ಸಿಂಹಪಾಲು ಸಲ್ಲುತ್ತದೆ. ಅರ್ಥಾತ್ ಸಾಕರಿನ್ ಗೆ ಶೇ. ೭೧ ರಷ್ಟು ಮತ್ತು ಅಸ್ಪಾರ್ಟೆಮ್ ಗೆ ಶೇ. ೨೩ ರಷ್ಟು ಬೇಡಿಕೆಯಿದೆ. ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ. ೧೮೭೮ ರಲ್ಲಿ ಸಂಶೋಧಿಸಲ್ಪಟ್ಟ ಸಾಕರಿನ್, ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲೂ ಸುಲಭ ಬೆಲೆಗೆ ಲಭ್ಯವಿದೆ. 

ವಿಶ್ವಾದ್ಯಂತ ಉತ್ಪಾದಿಸಲ್ಪಡುವ ಕೃತಕ ಮಾಧುರ್ಯಕಾರಕಗಳಲ್ಲಿ ಶೇ. ೩೩ ರಷ್ಟು ಅಮೇರಿಕ ದೇಶವೊಂದರಲ್ಲೇ ಮಾರಾಟವಾಗುತ್ತಿದೆ. ಆಶ್ಚರ್ಯವೆಂದರೆ ಅಲ್ಲಿ ಮಾರಾಟವಾಗುತ್ತಿರುವ ಅಸ್ಪಾರ್ಟೆಮ್ ನ ಪ್ರಮಾಣವು ಶೇ. ೭೦ ರಷ್ಟಿದ್ದು, ಸಾಕರಿನ್ ನ ಪ್ರಮಾಣವು ಶೇ. ೩೦ ರಷ್ಟಿದೆ!. 

ಪ್ರಸ್ತುತ ಇಂತಹ ವಾಣಿಜ್ಯ ಉತ್ಪನ್ನಗಳ ತಯಾರಕರು ಹಾಗೂ ವಾಣಿಜ್ಯ ಬಳಕೆದಾರರು ಪೇಟೆಂಟ್ ಇರದ ಹಳೆಯ ತಲೆಮಾರಿನ ಹಾಗೂ ಅಲ್ಪಬೆಲೆಗೆ ಲಭಿಸುವ ಮಾಧುರ್ಯಕಾರಕಗಳಿಗೆ ಬದಲಾಗಿ,ಹೊಸದಾಗಿ ಆವಿಷ್ಕರಿಸಿದ ದುಬಾರಿ ಬೆಲೆಯ ನೂತನ ಉತ್ಪನ್ನಗಳನ್ನು ಬೆಂಬಲಿಸಿ ಮಾರಾಟ ಮಾಡುತ್ತಿರುವುದು, ತಮಗೆ ದೊರೆಯುವ ಅಪಾರವಾದ ಲಾಭದ ಸಲುವಾಗಿಯೇ ಹೊರತು ಜನಸಾಮಾನ್ಯರ ಹಿತದೃಷ್ಟಿಯಿಂದಲ್ಲ. ದುಬಾರಿ ಬೆಲೆಯ ನಿಯೋಟೇಮ್ ನಿಶ್ಚಿತವಾಗಿಯೂ ಅಸ್ಪಾರ್ಟೆಮ್ ಗಿಂತ ಸುರಕ್ಷಿತವೆಂದು ಇದರ ತಯಾರಕರು ಹೇಳುವುದು ಇದನ್ನು ಸಮರ್ಥಿಸುತ್ತದೆ. 

ಅದೇ ರೀತಿಯಲ್ಲಿ ಭಾರತದಲ್ಲಿ ಹೆಸರುವಾಸಿಯಾಗಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದು ತಾನು ತಯಾರಿಸಲಿರುವ "ಕ್ರೀಡಾ ಪೇಯ"ದಲ್ಲಿ ಅಸ್ಪಾರ್ಟೆಮ್ ಬಳಸಲು ಅನುಮತಿಯನ್ನು ಕೇಳಿತ್ತು. ಆದರೆ ಭಾರತದಲ್ಲಿ ಅಲ್ಪಬೆಲೆಗೆ ಲಭಿಸುವ ಸಾಕರಿನ್ ಗೆ ಬದಲಾಗಿ ದುಬಾರಿ ಬೆಲೆಯ ಹಾಗೂ ವಿದೇಶದಿಂದ ಆಮದು ಮಾಡಬೇಕಾದ ಅಸ್ಪಾರ್ಟೆಮ್ ನ ಬಳಕೆ ಒಳಿತಲ್ಲವೆಂದು ಸಂಬಂಧಿತ ಇಲಾಖೆಯ ಅಧಿಕಾರಿಗಳು ಇದನ್ನು ವಿರೋಧಿಸಿದ್ದರು. 

ಆದರೆ ಜೂನ್ ೨೦೦೪ ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಅಧಿಸೂಚನೆಯಂತೆ, ಕೃತಕ ಮಾಧುರ್ಯಕಾರಕಗಳ ಬಳಕೆಯ ವ್ಯಾಪ್ತಿಯನ್ನು ಹೆಚ್ಚಿಸಿರುವುದು ನಂಬಲು ಅಸಾಧ್ಯವೆನಿಸುತ್ತದೆ. 

ಕೊನೆಯ ಮಾತು 

ಪ್ರಸ್ತುತ ನಮ್ಮ ದೈನಂದಿನ ಆಹಾರ ಸೇವನೆಯಲ್ಲಿ ಕೃತಕ ಮಾಧುರ್ಯಕಾರಕಗಳ ಬಳಕೆಯೂ ದಿನೇದಿನೇ ಹೆಚ್ಚುತ್ತಿದೆ. ಅಧಿಕತಮ ಖಾದ್ಯಪೇಯಗಳಲ್ಲಿ ಇವುಗಳ ಬಳಕೆ ಅತಿಯಾಗುತ್ತಿರಲು, ಮಧುಮೇಹ ಪೀಡಿತರು ಮತ್ತು ಆಹಾರ ಸೇವನೆಯಲ್ಲಿ ಕ್ಯಾಲರಿಗಳನ್ನು ನಿಯಂತ್ರಿಸುವ ವ್ಯಕ್ತಿಗಳು ಕಾರಣವೆನಿಸಿದ್ದಾರೆ. ಈ ಕೃತಕ ಮಾಧುರ್ಯಕಾರಕಗಳು ಇದೀಗ ಹಿಂದೂ ದೇವತೆಗಳ ಪ್ರಸಾದಗಳ ತಯಾರಿಕೆಯಲ್ಲೂ ಬಳಸಲ್ಪಡುತ್ತಿರುವುದು ಇದಕ್ಕೊಂದು ಇವುಗಳ ಜನಪ್ರಿಯತೆಗೊಂದು  ಉತ್ತಮ ಉದಾಹರಣೆಯೆನಿಸುತ್ತದೆ!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೧೯-೦೧-೨೦೦೬ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 




Friday, September 6, 2013

Medical miracles



          ವೈದ್ಯಕೀಯ ಪವಾಡಗಳು ಸಂಭವಿಸುವುದು ನಿಜವೇ? 

ಪವಾಡಗಳು ಮತ್ತು ಪವಾಡಪುರುಷರ ತವರೂರು ಎನಿಸಿರುವ ಭವ್ಯ ಭಾರತದಲ್ಲಿ ದಿನನಿತ್ಯ ಅಸಂಖ್ಯ ಪವಾಡಗಳು ಸಂಭವಿಸುತ್ತವೆ. ಏಕೆಂದರೆ ಪವಾಡಗಳನ್ನು ನಂಬುವ ಮನೋಭಾವವು ಅನೇಕ ಭಾರತೀಯರಲ್ಲಿ ಜನ್ಮದತ್ತವಾಗಿಯೇ ಬಂದಿರುತ್ತದೆ. ಆದರೆ ವೈಜ್ಞಾನಿಕ ಸಾಕ್ಷ್ಯಾಧಾರಗಳೇ ಇಲ್ಲದ "ವಿಸ್ಮಯಕಾರಿ ಚಿಕಿತ್ಸೆ" ಗಳನ್ನೂ "ವೈದ್ಯಕೀಯ ಪವಾಡ" ಗಳೆಂದು ಪರಿಗಣಿಸಿ ಪ್ರಯೋಗಿಸುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ!. 

---------------            -------------------           -----------------               ------------------               ----------------                 ----------------ಈ ಲೇಖನದ ತಲೆಬರಹವನ್ನು ಕಂಡು ಕುತೂಹಲದಿಂದ ನೀವಿದನ್ನು ಓದುತ್ತಿರುವುದು ನಿಜವಾಗಿರಲೇಬೇಕು. ಅಂತೆಯೇ ಇದನ್ನು ಓದಲಾರಂಭಿಸುವ ಮುನ್ನ ವೈದ್ಯಕೀಯ ಪವಾಡಗಳು ಸಂಭವಿಸುವುದು ನಿಜವೇ?, ಎನ್ನುವ ಸಂದೇಹವೂ ನಿಮ್ಮ ಮನದಲ್ಲಿ ಮೂಡಿರಬೇಕು. 

ಪ್ರಾಮಾಣಿಕವಾಗಿ ಹೇಳಬೇಕಿದ್ದಲ್ಲಿ ವೈದ್ಯಕೀಯ ಪವಾಡಗಳು ಸಂಭವಿಸುವುದು ಶತಪ್ರತಿಶತ ಸತ್ಯ. ಆದರೆ ಈ ಪವಾಡಗಳು ನಿಶ್ಚಿತವಾಗಿಯೂ ನೀವು ಕೇಳಿರಬಹುದಾದ ಅಥವಾ ಕಲ್ಪಿಸಿರಬಹುದಾದ ಪವಾಡಗಳಲ್ಲ ಎಂದಲ್ಲಿ ನಿಮಗೂ ಆಶ್ಚರ್ಯವೆನಿಸುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಜನಸಾಮಾನ್ಯರು ನಂಬುವಂತಹ ಪವಾಡಗಳಿಗೆ ವೈದ್ಯಕೀಯ ವಿಜ್ಞಾನಿಗಳು ಅಥವಾ ಸಂಶೋಧಕರು ಕಾರಣಕರ್ತರೆನಿಸುವುದಿಲ್ಲ. ಆದರೆ ಶಾಶ್ವತ ಪರಿಹಾರವೇ ಇಲ್ಲದ ಅಥವಾ ಗಂಭೀರ- ಮಾರಕವೆನಿಸಬಲ್ಲ ಹಾಗೂ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ವ್ಯಾಧಿಯೊಂದನ್ನು ಯಾವುದೇ ವೈದ್ಯಕೀಯ ಅರ್ಹತೆಗಳೇ ಇಲ್ಲದ ವ್ಯಕ್ತಿಯೊಬ್ಬನು ಗುಣಪಡಿಸಿದನೆಂದು ಹಬ್ಬಿದ "ಗಾಳಿ ಸುದ್ದಿ"ಯು, ಅನೇಕರ ಪಾಲಿಗೆ ವೈದ್ಯಕೀಯ ಪವಾಡವೆಂದೇ ತೋರುತ್ತದೆ. 

ಉದಾಹರಣೆಗೆ ಪಂಡಿತ ಭೀಮಸೇನ ಜೋಷಿಯವರು ಶಾಸ್ತ್ರೀಯ ಸಂಗೀತವನ್ನು ಅದ್ಭುತವಾಗಿ ಹಾಡುವುದು ಜನಸಾಮಾನ್ಯರ ಪಾಲಿಗೆ ಪವಾಡವೆನಿಸುವುದಿಲ್ಲ. ಆದರೆ ಬಡಪಾಯಿ ಭಿಕ್ಷುಕನೊಬ್ಬ ಅದ್ಭುತವಾಗಿ ಹಾಡುವುದು ಅನೇಕರ ಪಾಲಿಗೆ ಪವಾಡದಂತೆ ಕಾಣುವುದು ಮಾತ್ರ ಸುಳ್ಳೇನಲ್ಲ!. 

ಅದೇ ರೀತಿಯಲ್ಲಿ ನೂರಾರು ವೈದ್ಯಕೀಯ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ಸಂಶೋಧಿಸಿದ, ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹಾಗೂ ಮಹತ್ವಪೂರ್ಣವೆಂದು ಮನ್ನಣೆಗಳಿಸಿದ ಮತ್ತು ವೈಜ್ಞಾನಿಕವಾಗಿ ಪ್ರಮಾಣೀಕರಿಸಿದ "ಅದ್ಭುತ ಸಂಶೋಧನೆ" ಗಳು ನಮ್ಮ ಪಾಲಿಗೆ ವೈದ್ಯಕೀಯ ಪವಾಡಗಳೆಂದು ತೋರುವುದಿಲ್ಲ. ಆದರೆ ಮದ್ದೂರಿನ ವ್ಯಕ್ತಿಯೊಬ್ಬ ಮಧುಮೇಹವನ್ನು ಗುಣಪಡಿಸುವ, ಅನಂತಪುರದ ಹಳ್ಳಿಗನೊಬ್ಬ ಆಸ್ತಮಾ ಪರಿಹರಿಸುವ ಅಥವಾ ಕ್ಯಾಸನೂರಿನಲ್ಲಿ ಕ್ಯಾನ್ಸರ್ ಗುಣಪಡಿಸುವ ಚಿಕಿತ್ಸಕನ ಬಗ್ಗೆ ಹರಡುವ ವದಂತಿಗಳು, ಅನೇಕರ ಪಾಲಿಗೆ ವೈದ್ಯಕೀಯ ಪವಾಡಗಳಂತೆ ತೋರುತ್ತವೆ!. 

ಸುಪ್ರಸಿದ್ಧ ಕನ್ನಡ ವಾರಪತ್ರಿಕೆಯೊಂದು ಹಲವಾರು ವರ್ಷಗಳ ಹಿಂದೆ ವಿಶೇಷ ಲೇಖನವೊಂದನ್ನು ಪ್ರಕಟಿಸಿತ್ತು. ಮಧುಮೇಹ ವ್ಯಾಧಿಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವೊಂದನ್ನು ಕಂಡುಹಿಡಿದಿದ್ದ ಸ್ವಯಂ ಘೋಷಿತ ವೈದ್ಯನೊಬ್ಬನ ಸಾಧನೆಯನ್ನು,ಇದೊಂದು ವೈದ್ಯಕೀಯ ಪವಾಡ ಎನ್ನುವ ರೀತಿಯಲ್ಲಿ ಪ್ರಕಟಿಸಿದ್ದ ಈ ಲೇಖನದಲ್ಲಿ ಸಾಕಷ್ಟು ಉತ್ಪ್ರೇಕ್ಷೆಯೂ ಇದ್ದಿತು. 

ಸ್ವತಃ ಮಧುಮೇಹದಿಂದ ಬಳಲುತ್ತಿದ್ದ ಈ ವ್ಯಕ್ತಿಯು ತನ್ನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬಲ್ಲ ಔಷದವನ್ನು ಕಂಡುಹಿಡಿಯುವ ಧೃಢ ಸಂಕಲ್ಪದಿಂದ, ಅನೇಕ ಆಯುರ್ವೇದ ಗ್ರಂಥಗಳನ್ನು ಅಧ್ಯಯನ ಮಾಡಿದ್ದುದನ್ನು ಈ ಲೇಖನದಲ್ಲಿ ರಸವತ್ತಾಗಿ ವರ್ಣಿಸಲಾಗಿತ್ತು. ಜೊತೆಗೆ ವಿವಿಧ ಗಿಡಮೂಲಿಕೆಗಳಿಂದ ತಾನೇ ಸಿದ್ಧಪಡಿಸಿದ ಔಷದಗಳನ್ನು ತನ್ನ ಮೇಲೆಯೇ ಪ್ರಯೋಗಿಸಿ, ಇದರ ಪರಿಣಾಮವನ್ನು ಅಧ್ಯಯನ ಮಾಡಿ ಸಫಲವಾಗಿದ್ದ ವಿಚಾರವನ್ನು ವಿಶದವಾಗಿ ವಿವರಿಸಲಾಗಿತ್ತು. ಬಳಿಕ ತನ್ನ ಸಂಶೋಧನೆಯನ್ನು ಅನ್ಯ ಮಧುಮೇಹಿಗಳ ಮೇಲೆ ಪ್ರಯೋಗಿಸಿ ಗುಣಪಡಿಸಿದ, ಅರ್ಥಾತ್ ಶಾಶ್ವತ ಪರಿಹಾರವೇ ಇಲ್ಲದ ಮಧುಮೇಹ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸಬಲ್ಲ, ಪವಾಡ ಸದೃಶ ಪರಿಣಾಮವನ್ನು ನೀಡಬಲ್ಲ ಈತನ ಔಷದವನ್ನು ಸೇವಿಸಿದಲ್ಲಿ ನಿಶ್ಚಿತವಾಗಿಯೂ ಮಧುಮೇಹ ಗುಣವಾಗುವುದೆಂದು ಘಂಟಾಘೋಷವಾಗಿ ಸಾರಲಾಗಿತ್ತು!. 

ವಾರಪತ್ರಿಕೆಯ ಈ ಸಂಚಿಕೆ ಮಾರುಕಟ್ಟೆಗೆ ಬಿಡುಗಡೆಯಾದೊಡನೆ, ರಾಜ್ಯದ ಮತ್ತು ನೆರೆಯ ರಾಜ್ಯಗಳಿಂದ ಮಧುಮೇಹ ರೋಗಿಗಳ ಮಹಾಪೂರವೇ ಈತನ ಚಿಕಿತ್ಸೆಗಾಗಿ ಹರಿದುಬಂದಿತ್ತು. ಜನಮರುಳೋ, ಜಾತ್ರೆ ಮರುಳೋ ಎನ್ನುವಂತಹ ಸನ್ನಿವೇಶ ಸೃಷ್ಟಿಸಲ್ಪಟ್ಟು ಚಿಕಿತ್ಸಕನ ಖ್ಯಾತಿ ಮುಗಿಲಿಗೆ ಏರಿತ್ತು. 

ಆದರೆ ಕೆಲವೇ ತಿಂಗಳುಗಳು ಕಳೆಯುವಷ್ಟರಲ್ಲಿ ಈ ಪವಾಡ ಸದೃಶ ಔಷದವು ಮಧುಮೇಹವನ್ನು ಶಾಶ್ವತವಾಗಿ ಪರಿಹರಿಸುವುದು ಬಿಡಿ, ಸಮರ್ಪಕವಾಗಿ ನಿಯಂತ್ರಿಸಲೂ ವಿಫಲವಾಗಿ ನೂರಾರು ರೋಗಿಗಳ ವ್ಯಾಧಿ ಉಲ್ಬಣಿಸಿದ ಪರಿಣಾಮವಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಕೆಲ ರೋಗಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಒಂದೆರಡು ವರ್ಷಗಳು ಕಳೆಯುವಷ್ಟರಲ್ಲಿ ತಮ್ಮ ವ್ಯಾಧಿ ಗುಣವಾಗದೆನ್ನುವ ಸತ್ಯವನ್ನು ಬಹುತೇಕ ರೋಗಿಗಳು ಅರಿತುಕೊಂಡ ಪರಿಣಾಮವಾಗಿ, ಈ ಚಿಕಿತ್ಸಕ ಹಾಗೂ ಈತನ ಔಷದಗಳು ಸಂಪೂರ್ಣವಾಗಿ ಬೇಡಿಕೆಯನ್ನು ಕಳೆದುಕೊಂಡಿದ್ದು ಮಾತ್ರ ಸತ್ಯ!. 

ಪ್ರತ್ಯಕ್ಷವಾಗಿ ಕಂಡರೂ.......... 

ಸಾಮಾನ್ಯವಾಗಿ ಮೇಲೆ ವಿವರಿಸಿದ ಘಟನೆಗಳಿಗೆ ಕಾರಣವೆನಿಸಿದ್ದ "ಸ್ವಯಂ ಘೋಷಿತ ವೈದ್ಯನೊಬ್ಬನ ಸಂಶೋಧನೆ" , ಸುದ್ದಿ ಮಾಧ್ಯಮಗಳಲ್ಲಿ ವರದಿಯಾದೊಡನೆ ಕಾಡ್ಗಿಚ್ಚಿನಂತೆ ಹರಡುತ್ತದೆ. ಇಂತಹ ಸಂದರ್ಭಗಳಲ್ಲಿ ತಾವು ಪ್ರಕಟಿಸಲಿರುವ ವೈದ್ಯಕೀಯ ವಿಸ್ಮಯ ಅಥವಾ ಪವಾಡಗಳ  ಸತ್ಯಾಸತ್ಯತೆಯನ್ನು ಪರೀಕ್ಷಿಸದೇ, ಬೆರಳೆಣಿಕೆಯಷ್ಟು ಜನರ ಅಭಿಪ್ರಾತಗಳನ್ನು ಪರಿಗಣಿಸಿದ ವರದಿಗಾರರು-ಲೇಖಕರು ತಳೆವ ನಿರ್ಧಾರಗಳು ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುವ ಸಾಧ್ಯತೆಗಳಿವೆ. 

ನಿಜಹೆಳಬೇಕಿದ್ದಲ್ಲಿ ಇಂತಹ ವಿಷಯಗಳನ್ನು ಪ್ರಕಟಿಸುವ ಮುನ್ನ, ಮಾಧ್ಯಮದವರು ಈ ಬಗ್ಗೆ ಅವಶ್ಯಕ ವೈಜ್ಞಾನಿಕ ಮಾಹಿತಿಗಳನ್ನು ಪಡೆದುಕೊಂಡು, ಅನುಭವಿ ತಜ್ಞವೈದ್ಯರ ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು.ಜೊತೆಗೆ ಈ ಔಷದದ ಸೇವನೆಯಿಂದ ತನ್ನ ಕಾಯಿಲೆ ಸಂಪೂರ್ಣವಾಗಿ ಗುಣವಾಗಿದೆ ಎನ್ನುವ ವ್ಯಕ್ತಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಏಕೆಂದರೆ ಕೆಲ ಸಂದರ್ಭಗಳಲ್ಲಿ ಈ ಔಷದ ಸೇವಿಸಿದ್ದರಿಂದ ತನ್ನ ಕಾಯಿಲೆ ಗುಣವಾಯಿತು ಎನ್ನುವ  ವ್ಯಕ್ತಿಗಳಿಗೆ, ನಿಜಕ್ಕೂ ಇಂತಹ ಕಾಯಿಲೆಯೇ ಬಾಧಿಸಿರುವುದಿಲ್ಲ. ವೈಯುಕ್ತಿಕ ಲಾಭ ಅಥವಾ ಹಣದಾಸೆಗೆ ಬಲಿಯಾಗಿ ಇಂತಹ ಹೇಳಿಕೆಗಳನ್ನು ನೀಡಲು ಸಿದ್ಧರಿರುವ ಜನರನ್ನು ಬಳಸಿಕೊಳ್ಳುವ ನಕಲಿ ವೈದ್ಯರ ಸಂಖ್ಯೆಯೂ ಕಡಿಮೆಯೇನಿಲ್ಲ!.

ಈ ಸಂದರ್ಭದಲ್ಲಿ ಹುಚ್ಚುನಾಯಿ ಕಡಿತಕ್ಕೆ ಪರಿಣಾಮಕಾರಿ ಔಷದ ನೀಡುವ ವ್ಯಕ್ತಿಯೊಬ್ಬನ ಖ್ಯಾತಿ ಹರಡಲು ಕಾರಣವೆನಿಸಿದ್ದ ಘಟನೆಯೊಂದು ಇಂತಿದೆ. ಬಡ ಕುಟುಂಬದ ಶಾಲಾ ಬಾಲಕನೊಬ್ಬ ದಾರಿಯಲ್ಲಿ ಕಂಡ ನಾಯಿಗೆ ಕಲ್ಲೆಸೆದ ಕಾರಣದಿಂದ ಅದು ಆತನಿಗೆ ಕಚ್ಚಿತ್ತು. ಘಟನೆ ನಡೆದ ಸಂದರ್ಭದಲ್ಲಿ ಹುಚ್ಚುನಾಯಿಗಳ ಹಾವಳಿ ಅತಿಯಾಗಿದ್ದು, ಅನೇಕರು ಹುಚ್ಚುನಾಯಿಗಳ ಕಡಿತಕ್ಕೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಬಾಲಕನಿಗೆ ಹುಚ್ಚುನಾಯಿ ಕಡಿದಿದೆ ಎಂದು ಸಂದೇಹಿಸಿದ ಮನೆಮಂದಿ,ಆತನನ್ನು ಸರಕಾರೀ ಆಸ್ಪತ್ರೆಗೆ ಕರೆದೊಯ್ದಿದ್ದರೂ ಅವಶ್ಯಕ ಔಷದ ಲಭ್ಯವಿರಲಿಲ್ಲ. ದುಬಾರಿ ಬೆಲೆಯ ಇಂಜೆಕ್ಷನ್ ಖರೀದಿಸಲಾಗದೇ "ಹಳ್ಳಿ ಮದ್ದಿನ ಚಿಕಿತ್ಸೆ" ಗೆ ಶರಣಾಗಿದ್ದರು. ನಿಗದಿತ ಅವಧಿಗೆ ಚಿಕಿತ್ಸೆ ಪಡೆದಿದ್ದ ಬಾಲಕನು, ಪವಾಡ ಸದೃಶವಾಗಿ ಬದುಕಿ ಉಳಿದಿದ್ದನು. ಈ ಘಟನೆಗೆ ಸಿಕ್ಕ ಪ್ರಚಾರದಿಂದಾಗಿ ಹಳ್ಳಿ ಮದ್ದು ನೀಡುವ ಚಿಕಿತ್ಸಕನ ಅದೃಷ್ಟದ ಬಾಗಿಲು ತೆರೆದಿತ್ತು. 

ನಿಜ ಹೇಳಬೇಕಿದ್ದಲ್ಲಿ ಈ ಬಾಲಕನಿಗೆ ಕಚ್ಚಿದ್ದ ನಾಯಿಗೆ "ರೇಬಿಸ್ ಸೋಂಕು" ತಗಲಿರಲೇ ಇಲ್ಲ. ಬಾಲಕನ ಕಲ್ಲೇಟಿನಿಂದ ಸಿಟ್ಟಿಗೆದ್ದ ನಾಯಿ ಸ್ವಾಭಾವಿಕವಾಗಿ ಆತನನ್ನು ಕಚ್ಚಿತ್ತು. ಆದರೆ ರೇಬಿಸ್ ನ ಸೋಂಕಿಲ್ಲದ ನಾಯಿ ಕಚ್ಚಿದ್ದರಿಂದಾಗಿಯೇ ಬಾಲಕನು ಬಚಾವಾಗಿದ್ದನೇ ಹೊರತು, ಹಳ್ಳಿ ಮದ್ದಿನಿಂದಲ್ಲ ಎನ್ನುವ ಸತ್ಯ ಬಹುತೇಕ ಜನರಿಗೆ ತಿಳಿದಿರಲೇ ಇಲ್ಲ!. 

ಹುಚ್ಚುನಾಯಿ ಕಡಿತದಿಂದ ಉದ್ಭವಿಸುವ ರೇಬಿಸ್ ಕಾಯಿಲೆಯನ್ನು ನಿಶ್ಚಿತವಾಗಿ ತಡೆಗಟ್ಟಲು ಏಂಟಿ ರೇಬಿಸ್ ವೆಕ್ಸೀನ್ ಇಂಜೆಕ್ಷನ್ ಹೊರತುಪಡಿಸಿ ಅನ್ಯ ಔಷದವೇ ಇಲ್ಲ. ವಿಶೇಷವೆಂದರೆ ಹುಚ್ಚುನಾಯಿ ಕಡಿತಕ್ಕೆ ಒಳಗಾಗಿ ಹಳ್ಳಿ ಮದ್ದು ಪ್ರಯೋಗಿಸಿ, ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟಲ್ಲಿ, "ಅಪಥ್ಯ" ದ ಪರಿಣಾಮದಿಂದಾಗಿ ರೋಗಿ ಸತ್ತಿರಬೇಕು ಎನ್ನುವ ಅಪವಾದವೂ ತಪ್ಪಿದ್ದಲ್ಲ!. 

ಇವೆಲ್ಲಾ ಕಾರಣಗಳಿಂದಾಗಿ ಇಂತಹ ವಿಸ್ಮಯಕಾರಿ ಚಿಕಿತ್ಸೆಗಳನ್ನು ವೈದ್ಯಕೀಯ ಪವಾಡವೆಂದು ಘೋಷಿಸುವ ಮುನ್ನ, ಘಟನೆಯ ಪೂರ್ವಾಪರಗಳನ್ನೂ ಅರಿತುಕೊಳ್ಳಲೇಬೇಕು. 

ವಿಚಿತ್ರ ಆದರೂ ಸತ್ಯ!

ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಅನಂತ- ಅನಿತಾ ದಂಪತಿಗಳಿಗೆ ವಿವಾಹವಾಗಿ ಮೂರು ವರ್ಷಗಳೇ ಕಳೆದಿದ್ದರೂ ಸಂತಾನ ಭಾಗ್ಯ ಪ್ರಾಪ್ತಿಯಾಗಿರಲಿಲ್ಲ. ಜ್ಯೋತಿಷಿಗಳ ಸಲಹೆಯಂತೆ ಜಾತಕಗಳಲ್ಲಿನ ದೋಷಗಳ ಪರಿಹಾರಕ್ಕಾಗಿ ಅನೇಕ ನಿವೃತ್ತಿಗಳನ್ನು ನಡೆಸಿದರೂ ಪ್ರಯೋಜನವಾಗದೇ, ಅಂತಿಮವಾಗಿ ತಜ್ಞ ವೈದ್ಯರಲ್ಲಿ ಸಲಹೆ ಪಡೆಯಲು ತೆರಳಿದ್ದರು. 

ದಂಪತಿಗಳನ್ನು ಅವಶ್ಯಕ ಪರೀಕ್ಷೆಗಳಿಗೆ ಒಳಪಡಿಸಿದ ವೈದ್ಯರಿಗೆ, ಸಂತಾನ ಹೀನತೆಗೆ ಕಾರಣವೆನಿಸಬಲ್ಲ ನ್ಯೂನತೆಗಳು ಇವರಿಬ್ಬರಲ್ಲೂ ಪತ್ತೆಯಾಗಿರಲಿಲ್ಲ. ಅಂತೆಯೇ ಸುರತ ಕ್ರಿಯೆಯ ಬಗ್ಗೆ ಹಾಗೂ ಈ ಸಂದರ್ಭದಲ್ಲಿ ಯಾವುದೇ ರೀತಿಯ ಶಾರೀರಿಕ- ಮಾನಸಿಕ ತೊಂದರೆಗಳು ಬಾಧಿಸುತ್ತಿವೆಯೇ ಎಂದು ವೈದ್ಯರು ಕೇಳಿದಾಗ ನಕಾರಾತ್ಮಕ ಉತ್ತರ ದೊರೆತಿತ್ತು. ಇದರಿಂದಾಗಿ ಸಮಸ್ಯೆಯ ಮೂಲವನ್ನು ಪತ್ತೆಹಚ್ಚಲು ವಿಫಲರಾದ ವೈದ್ಯರು, ತನ್ನ ಸಂದೇಹವೊಂದನ್ನು ಪರಿಹರಿಸಲು ಅನಿತಾಳ ಶಾರೀರಿಕ ಪರೀಕ್ಷೆ ನಡೆಸಿದರು. ಪರಿಣಾಮವಾಗಿ ಆಕೆಯ "ಕನ್ಯಾಪೊರೆ" ಯಥಾ ಸ್ಥಿತಿಯಲ್ಲಿರುವುದು ತಿಳಿದುಬಂದಿತ್ತು!. 

ಅರ್ಥಾತ್ ಈ ಸ್ನಾತಕೋತ್ತರ ಪದವೀಧರ ದಂಪತಿಗಳು ಯೌವ್ವನದಲ್ಲಿ ಕೇವಲ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿದ್ದರೇ ಹೊರತು,"ಕಾಮಸೂತ್ರ " ದಂತಹ ಲೈಂಗಿಕ ವಿಜ್ಞಾನದ ಪುಸ್ತಕಗಳನ್ನು ಕಣ್ಣಿನಿಂದಲೂ ಕಂಡಿರಲಿಲ್ಲ. ಇದರೊಂದಿಗೆ ವಿವಾಹವಾಗಿ ಮೂರು ವರ್ಷಗಳೇ ಕಳೆದಿದ್ದರೂ, ಇವರಿಬ್ಬರಲ್ಲೂ ನಾಚಿಕೆ- ಸಂಕೋಚಗಳು ಮಾಯವಾಗಿರಲಿಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮದಿಂದಾಗಿ ಇವರ ನಡುವೆ ಯಶಸ್ವಿ ಹಾಗೂ ನೈಜ ಸುರತಕ್ರಿಯೆ ನಡೆದಿರಲಿಲ್ಲ. 

ಆದರೆ ವೈದ್ಯರು ಸುರತಕ್ರಿಯೆಯ ಸಂದರ್ಭದಲ್ಲಿ  ತೊಂದರೆಗಳು ಬಾಧಿಸಿವೆಯೇ ಎಂದು ಕೇಳಿದಾಗ ಇಲ್ಲವೆಂದು ಉತ್ತರಿಸಿದ್ದ ದಂಪತಿಗಳಿಗೆ,ನಿಜಕ್ಕೂ ಸುರತಕ್ರಿಯೆಯ ಬಗ್ಗೆ ಏನೇನೂ ತಿಳಿದಿರಲಿಲ್ಲ. ಇದೇ ಕಾರಣದಿಂದಾಗಿ "ತಾವು ಮಾಡುತ್ತಿರುವುದೇ ಸರಿ" ಎಂದು ಇವರಿಬ್ಬರೂ  ಧೃಢವಾಗಿ ನಂಬಿದ್ದರು!. 

ಅಂತಿಮವಾಗಿ ಇವರ ಸಂತಾನ ಹೀನತೆಗೆ ಕಾರಣವೆನಿಸಿದ್ದ "ಅಜ್ಞಾನ" ವನ್ನು ಹೋಗಲಾಡಿಸಲು ಕೆಲವೊಂದು ಕಿವಿಮಾತುಗಳನ್ನು ಹೇಳಿದ ವೈದ್ಯರು, ಲೈಂಗಿಕ ವಿಜ್ಞಾನದ ಪುಸ್ತಕವೊಂದನ್ನು ನೀಡಿದರು. ಜೊತೆಗೆ ಇವರ ಮಾನಸಿಕ ನೆಮ್ಮದಿಗಾಗಿ ಒಂದಿಷ್ಟು ವಿಟಮಿನ್ ಗುಳಿಗೆಗಳನ್ನು ನೀಡಿ, ಒಂದು ತಿಂಗಳ ಅವಧಿಗೆ ಸೇವಿಸಲು ಸೂಚಿಸಿದರು. 

ಸುಮಾರು ಒಂದು ವರ್ಷದ ಬಳಿಕ ಮತ್ತೆ ತನ್ನಲ್ಲಿಗೆ ಬಂದ ದಂಪತಿಗಳನ್ನು ಕಂಡು ವೈದ್ಯರಿಗೆ ಸಂತೋಷವಾಗಿತ್ತು. ಏಕೆಂದರೆ ಅನಿತಾಳ ಉಬ್ಬಿದ ಹೊಟ್ಟೆಯೇ ಆಕೆ ಗರ್ಭಿಣಿಎಂದು ಸಾರುತ್ತಿತ್ತು. ತನ್ನ ಸಲಹೆ- ಸೂಚನೆಗಳು ಫಲಪ್ರದವೆನಿಸಿದ ಬಗ್ಗೆ ಹೆಮ್ಮೆ ಪಟ್ಟಿದ್ದ ವೈದ್ಯರಿಗೆ, ಅನಂತನ ಮಾತುಗಳನ್ನು ಕೇಳಿದಾಗ "ಕಿವಿಗೆ ಕಾದ ಸೀಸವನ್ನು ಸುರಿದಂತಾಗಿತ್ತು". 

ಅನಂತನ ಹೇಳಿಕೆಯಂತೆ ವೈದ್ಯರು ನೀಡಿದ್ದ ಗುಳಿಗೆಗಳಿಂದ ನಿರೀಕ್ಷಿತ ಪರಿಣಾಮ ದೊರೆಯದ ಕಾರಣದಿಂದಾಗಿ, ಆರು ತಿಂಗಳು ಹಳ್ಳಿ ಮದ್ದು ಸೇವಿಸಿದ ಬಳಿಕವೇ ಅನಿತಾ ಗರ್ಭ ಧರಿಸಿದ್ದಳು!. 

ಈ ಆರೋಗ್ಯವಂತ ದಂಪತಿಗಳು ಸರಿಯಾದ ರೀತಿಯಲ್ಲಿ ಸಂಭೋಗಿಸದೇ ಉದ್ಭವಿಸಿದ್ದ ಸಂತಾನ ಹೀನತೆಯ ಸಮಸ್ಯೆಯು ವೈದ್ಯರ ಸಲಹೆ- ಸೂಚನೆಗಳಿಂದಾಗಿ ಪರಿಹಾರಗೊಂಡಿದ್ದು ಸತ್ಯ. ಅದೇ ರೀತಿಯಲ್ಲಿ ಈ ಸಲಹೆ- ಸೂಚನೆಗಳನ್ನು ದಂಪತಿಗಳು ಅಕ್ಷರಶಃ ಪರಿಪಾಲಿಸಿದ್ದರಿಂದಲೇ ಅನಿತಾ ಗರ್ಭವತಿಯಾಗಿದ್ದುದು ಕೂಡಾ ಅಷ್ಟೇ ಸತ್ಯ. ಆದರೂ ಈ ವಿದ್ಯಾವಂತ ದಂಪತಿಗಳು ಹೇಳುವಂತೆ ಹಳ್ಳಿಯ ಚಿಕಿತ್ಸಕ ನೀಡಿದ್ದ ವಿಸ್ಮಯಕಾರಿ ಚಿಕಿತ್ಸೆಯ ಪವಾಡ ಸದೃಶ ಪರಿಣಾಮವೇ ಸಂತಾನ ಪ್ರಾಪ್ತಿಗೆ ಕಾರಣ ಎನ್ನುವುದು, ವಿದ್ಯಾವಂತರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ ಎನ್ನಬೇಕಷ್ಟೇ!. 

ಪವಾಡ ಸದೃಶ ಲಸಿಕೆಗಳು 

ಈ ಲೇಖನವನ್ನು ಓದಿದ ಬಳಿಕ "ವೈದ್ಯಕೀಯ ಪವಾಡ" ಗಳು ಸಂಭವಿಸುವುದು ನಿಜವೇ ಎನ್ನುವ ಸಂದೇಹ ನಿಮ್ಮನ್ನೂ ಕಾಡುತ್ತಿರಬಹುದು. ನಿಜ ಹೇಳಬೇಕಿದ್ದಲ್ಲಿ ವೈದ್ಯಕೀಯ ಪವಾಡಗಳು ಸಹಸ್ರಾರು ವರ್ಷಗಳ ಹಿಂದೆಯೂ ಸಂಭವಿಸಿದ್ದವು. ಅದೇ ರೀತಿಯಲ್ಲಿ ಇಂದೂ ಸಂಭವಿಸುತ್ತಿವೆ ಹಾಗೂ ಮುಂದೆಯೂ ಸಂಭವಿಸಲಿವೆ. 

ಸಹಸ್ರಾರು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿಯಲ್ಲಿ ಗರ್ಭಿಣಿಯ ಉದರವನ್ನು ಸೀಳಿ, ಗರ್ಭಸ್ಥ ಶಿಶುವನ್ನು ಹೊರತೆಗೆದ (ಇಂದಿನ ಸಿಸೇರಿಯನ್ ಸೆಕ್ಷನ್) ಅಥವಾ ಕತ್ತರಿಸಿದ ಕಿವಿ ಅಥವಾ ಮೂಗನ್ನು, ಶರೀರದ ಇತರ ಅಂಗಾಂಗಗಳ ಚರ್ಮ ಇತ್ಯಾದಿಗಳನ್ನು ಬಳಸಿ ಪುನರ್ ನಿರ್ಮಿಸುವ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಆಚಾರ್ಯ ಸುಶ್ರುತರು ಆವಿಷ್ಕರಿಸಿದ್ದು ವೈದ್ಯಕೀಯ ಪವಾಡವೇ ಹೊರತು ಬೇರೇನೂ ಅಲ್ಲ. 

ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅದ್ಭುತ ಸಂಶೋಧನೆಗಳ ಮೂಲಕ ಮನುಕುಲಕ್ಕೆ ವರದಾನವೆನಿಸುವ ಸಾಧನೆಗೈದ ಎಡ್ವರ್ಡ್ ಜೆನ್ನರ್, ಲೂಯಿಸ್ ಪಾಶ್ಚರ್, ಅಲೆಗ್ಸಾಂಡರ್ ಫ್ಲೆಮಿಂಗ್ ಮುಂತಾದ ನೂರಾರು ವಿಜ್ಞಾನಿಗಳ ಸಂಶೋಧನೆ-ಆವಿಷ್ಕಾರಗಳು ವೈದ್ಯಕೀಯ ಪವಾಡಗಳೇ ಆಗಿದ್ದರೂ, ನಮಗಿಂದು ಇವುಗಳ ಮಹತ್ವದ ಅರಿವಿಲ್ಲ. ನೂರಾರು ವರ್ಷಗಳ ಹಿಂದೆ ಲಕ್ಷಾಂತರ ಜನರನ್ನು ಬಲಿ ಪಡೆದಿದ್ದ ಸಿಡುಬಿನ ಪಿಡುಗನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ "ಲಸಿಕೆ"ಯ ಸಂಶೋಧನೆಯಿಂದಾಗಿ, ಕೋಟ್ಯಂತರ ಜನರ ಪ್ರಾಣಗಳನ್ನು ಉಳಿಸುವುದರೊಂದಿಗೆ ಈ ಮಾರಿಯನ್ನೇ ಪ್ರಪಂಚದಿಂದ ಉಚ್ಚಾಟಿಸಲಾಗಿತ್ತು. ಅಂತೆಯೇ "ಇನ್ಸುಲಿನ್" ನ ಆವಿಷ್ಕಾರವು ಅಸಂಖ್ಯ ಮಧುಮೇಹಿಗಳ ಪಾಲಿಗೆ ಸಾಕ್ಷಾತ್ ಸಂಜೀವಿನಿ ಎನಿಸಿತ್ತು. 

ಆದರೂ ಜನಸಾಮಾನ್ಯರ ಪಾಲಿಗೆ ಇಂತಹ ಅಸಂಖ್ಯ ಸಂಶೋಧನೆಗಳು ವೈದ್ಯಕೀಯ ಪವಾಡಗಳೆಂದು ತೋರುವುದೇ ಇಲ್ಲ. ಇದಕ್ಕೆ ಹೊರತಾಗಿ ಶಾಶ್ವತ ಪರಿಹಾರವಿಲ್ಲದ ಅಥವಾ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ಗಂಭೀರ- ಮಾರಕ ಕಾಯಿಲೆಯೊಂದನ್ನು ನಿಶ್ಚಿತವಾಗಿ ಗುಣಪಡಿಸುವ "ಗಾಳಿ ಸುದ್ದಿ" ಗಳು, ಅನೇಕರಿಗೆ ವೈದ್ಯಕೀಯ ಪವಾಡದಂತೆ ಗೋಚರಿಸುವುದು ಮಾತ್ರ ವಿಷಾದನೀಯ ಎನ್ನದೆ ವಿಧಿಯಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

  
ಉದಯವಾಣಿ ಪತ್ರಿಕೆಯ ೦೬-೦೭-೨೦೦೬ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 


Tuesday, September 3, 2013

Hypervitaminosis




    ವಿಟಮಿನ್ ಗಳ ವಿಪರೀತ ಸೇವನೆ ವಿಪತ್ಕಾರಕವೆನಿಸೀತು!

ಮನುಷ್ಯರಲ್ಲಿ ವಿವಿಧ ವಿಟಮಿನ್ ಗಳ ಕೊರತೆಯಿಂದಾಗಿ ವಿವಿಧ ವ್ಯಾಧಿಗಳು ಉದ್ಭವಿಸುವಂತೆಯೇ,ವಿಟಮಿನ್ ಗಳ ಅತಿಸೇವನೆಯೂ ಅನೇಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಹುದೆನ್ನುವ ಸತ್ಯ ಜನಸಾಮಾನ್ಯರಿಗೆ ತಿಳಿದಿಲ್ಲ. ಈ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
----------------            ----------------------                   ----------------------                             -------------------------------           ---------
ತಮ್ಮ ಆರೋಗ್ಯದ ಬಗ್ಗೆ ಅತೀವ ಕಾಳಜಿ ಇರುವ ಅನೇಕ ಜನರು, ತಮ್ಮ ಆರೋಗ್ಯದ ಮಟ್ಟವನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳುವ ಸಲುವಾಗಿ ಅಥವಾ ಆಯುರಾರೋಗ್ಯಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳುವ ಉದ್ದೇಶದಿಂದ, ದಿನನಿತ್ಯ ವಿವಿಧರೀತಿಯ ವಿಟಮಿನ್ ಗಳನ್ನು ಸೇವಿಸುತ್ತಾರೆ. ಆದರೆ ಇಂತಹ ಉಪಕ್ರಮಗಳು ಮಿತಿಮೀರಿದಾಗ ಕೆಲವೊಂದು ಕಾಯಿಲೆಗಳಿಗೆ ಕಾರಣವೆನಿಸುತ್ತವೆ ಎನ್ನುವುದನ್ನು ಅರಿಯದೇ, ಸಮಸ್ಯೆಗಳು ತಲೆದೋರಿದ ಬಳಿಕ ಪರಿತಪಿಸುತ್ತಾರೆ. 

ಅನೇಕ ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿರುವವಿವಿಧ ವಿಟಮಿನ್ ಗಳ ದೈನಂದಿನ ಸೇವನೆಯು ನಿಶ್ಚಿತವಾಗಿಯೂ ನಿಷ್ಪ್ರಯೋಜಕವೆಂದು ಅಧ್ಯಯನಗಳಿಂದ ತಿಳಿದುಬಂದಿದೆ. ನಿರ್ದಿಷ್ಟ ವಿಟಮಿನ್ ಒಂದರ ಕೊರತೆಯಿಂದ ಉದ್ಭವಿಸಿರಬಹುದಾದ ವ್ಯಾಧಿಯ ಚಿಕಿತ್ಸೆಯನ್ನು ಹೊರತುಪಡಿಸಿ, ಆರೋಗ್ಯವಂತ ವ್ಯಕ್ತಿಗಳು ಅಕಾರಣವಾಗಿ ಪ್ರತಿನಿತ್ಯ ಸೇವಿಸುವ ವಿಟಮಿನ್ ಗಳು ಯಾವುದೇ ವ್ಯಾಧಿಯನ್ನು ತಡೆಗಟ್ಟಲು ವಿಫಲವೆನಿಸುತ್ತವೆ. ಆದರೆ ಇವುಗಳನ್ನು ಅತಿಯಾಗಿ ಸೇವಿಸುವ ವ್ಯಕ್ತಿಗಳಲ್ಲಿ ಕೆಲವಿಧದ ಕಾಯಿಲೆಗಳನ್ನು ಹುಟ್ಟುಹಾಕುವಲ್ಲಿ ಮಾತ್ರ ನಿಸ್ಸಂದೇಹವಾಗಿಯೂ ಸಫಲವೆನಿಸುತ್ತವೆ!. 

ವಿಟಮಿನ್ ಗಳ ಸೇವನೆ ಅವಶ್ಯಕವೇ?

ಮಾನವ ಶರೀರದ ಪಾಲನೆ, ಪೋಷಣೆ ಹಾಗೂ ವಿವಿಧ ಜೈವಿಕ ಕ್ರಿಯೆಗಳಿಗೆ ಅತ್ಯವಶ್ಯಕ ಎನಿಸುವ ವಿಭಿನ್ನ ವಿಟಮಿನ್ ಗಳು- ಹಾಗೂ ಪೋಷಕಾಂಶಗಳು, ನಾವು ಪ್ರತಿನಿತ್ಯ ಸೇವಿಸುವ ವೈವಿಧ್ಯಮಯ ಆಹಾರ ಪದಾರ್ಥಗಳಲ್ಲಿ ಯಥೇಚ್ಛವಾಗಿ ಇರುತ್ತವೆ. ಅದೇ ರೀತಿಯಲ್ಲಿ ನಾವು ಸೇವಿಸುವ ಆಹಾರ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವೂ ಇದೆ. ಸಮೃದ್ಧ ಪೋಷಕಾಂಶಗಳಿರುವ ಆಹಾರಗಳನ್ನು ದಿನನಿತ್ಯ ಸೇವಿಸುವುದರಿಂದ, ನಮ್ಮ ಆರೋಗ್ಯದ ಮಟ್ಟವೂ ಉತ್ತಮವಾಗಿರುತ್ತದೆ. ಅಂತೆಯೇ ಪೋಷಕಾಂಶಗಳ ಕೊರತೆಯಿರುವ ಸತ್ವಹೀನ ಆಹಾರಗಳ ಸೇವನೆಯಿಂದ, ಅನೇಕ ರೀತಿಯ ಕಾಯಿಲೆಗಳು ಬಂದೆರಗುವ ಸಾಧ್ಯತೆಗಳೂ ಇವೆ. 

ನಾವು ದಿನನಿತ್ಯ ಸೇವಿಸುವ ಅಕ್ಕಿ, ರಾಗಿ, ಗೋಧಿ,ಜೋಳ,ದ್ವಿದಳ ಧಾನ್ಯಗಳು,ಗೆಡ್ಡೆ ಗೆಣಸುಗಳು,ಹಸಿರು ಸೊಪ್ಪು-ತರಕಾರಿಗಳು, ಮೀನು,ಮೊಟ್ಟೆ, ಮಾಂಸ, ಹಾಲು,ಎಣ್ಣೆ, ಬೆಣ್ಣೆ, ತುಪ್ಪ ಹಾಗೂ ಹಣ್ಣು ಹಂಪಲುಗಳಲ್ಲಿ ವಿಭಿನ್ನ ಪೋಷಕಾಂಶಗಳಿವೆ. ಇವುಗಳಲ್ಲಿ ಜೀವಸತ್ವಗಳು(ವಿಟಮಿನ್ ಗಳು), ಖನಿಜಗಳು,ಲವಣಗಳು,ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬುಗಳು ಪ್ರಮುಖವಾಗಿವೆ. ಈ ಬಗ್ಗೆ ಶಾಲಾ ಪಟ್ಯಪುಸ್ತಕಗಳಲ್ಲೂ ಲಭ್ಯ ಮಾಹಿತಿಯನ್ನು ಸಂಗ್ರಹಿಸಿ ಪರಿಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರವೆನಿಸುವುದು. 

ಅನುಭವಿ ವೈದ್ಯರೇ ಹೇಳುವಂತೆ ಸರಿಯಾದ ಸಮಯದಲ್ಲಿ, ಸೂಕ್ತ ಪ್ರಮಾಣದಲ್ಲಿ, ಸಮೃದ್ಧ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವ,ಪ್ರತಿನಿತ್ಯ ಶಾರೀರಿಕ ವ್ಯಾಯಾಮ- ಕ್ರೀಡೆಗಳಲ್ಲಿ ತೊಡಗುವ, ದುಶ್ಚಟಗಳಿಂದ ದೂರವಿರುವ ಮತ್ತು ಮಾನಸಿಕ ನೆಮ್ಮದಿಯೊಂದಿಗೆ ಸಂತೃಪ್ತ ಜೀವೆನ ಸಾಗಿಸುವ ವ್ಯಕ್ತಿಗಳು, ಯಾವುದೇ ವಿಧದ ವಿಟಮಿನ್- ಟಾನಿಕ್ ಗಳನ್ನು ಸೇವಿಸುವ ಅವಶ್ಯಕತೆಯೇ ಉದ್ಭವಿಸುವುದಿಲ್ಲ. 

ಆದರೆ ನಿರ್ದಿಷ್ಟ ವಿಟಮಿನ್ ಗಳ ಕೊರತೆಯಿಂದ ಉದ್ಭವಿಸಿರುವ ವ್ಯಾಧಿಪೀಡಿತರು, ವೈದ್ಯರ ಸಲಹೆಯಂತೆ ಅವಶ್ಯಕ ವಿಟಮಿನ್ ಗಳನ್ನು ನಿಗದಿತ ಪ್ರಮಾಣದಲ್ಲಿ, ನಿಗದಿತ ಆವಧಿಗೆ ಸೇವಿಸಲೇಬೇಕಾಗುವುದು. 

ಇವೆಲ್ಲಕ್ಕಿಂತ ಮಿಗಿಲಾಗಿ ಸತ್ವಹೀನ ಆಹಾರವನ್ನು ಸೇವಿಸುವ ಅಥವಾ ಆಹಾರವನ್ನೇ ಸೇವಿಸದ ಕಾರಣದಿಂದಾಗಿ ಉದ್ಭವಿಸುವ ದುಷ್ಪರಿಣಾಮಗಳನ್ನು, ಯಾವುದೇ ವಿಟಮಿನ್ - ಟಾನಿಕ್ ಗಳ ಸೇವನೆಯಿಂದ ತಡೆಗಟ್ಟುವುದು ಅಥವಾ ನಿವಾರಿಸುವುದು ಅಸಾಧ್ಯವೆನಿಸುವುದು. ಇದೇ ಕಾರಣದಿಂದಾಗಿ ನೀವು ದಿನನಿತ್ಯ ವೀಕ್ಷಿಸುವ ಜಾಹೀರಾತುಗಳಲ್ಲಿ ವರ್ಣಿಸುವಂತೆ, ನಿಮ್ಮ ಮಕ್ಕಳು ಆಹಾರವನ್ನೇ ಸೇವಿಸದಿದ್ದಲ್ಲಿ ಈ ಕೊರತೆಯನ್ನು ನೀಗಿಸಲು ನೀಡಬೇಕಾದ ದುಬಾರಿಬೆಲೆಯ "ಆರೋಗ್ಯ ಪೇಯ" ಗಳು ನಿಸ್ಸಂದೇಹವಾಗಿಯೂ ನಿಷ್ಪ್ರಯೋಜಕ ಎನಿಸುತ್ತವೆ!. 

ಅನಾರೋಗ್ಯ- ನಿಶ್ಶಕ್ತಿ 

ವರ್ಷಂಪ್ರತಿ ಋತುಗಳು ಬದಲಾಗುವಾಗ ಅಥವಾ ಇತರ ಕಾರಣಗಳಿಂದ ನಿಮ್ಮನ್ನು ಬಾಧಿಸಬಲ್ಲ ಸಣ್ಣಪುಟ್ಟ ಕಾಯಿಲೆಗಳು ಹಲವಾರು. ನಿಜ ಹೇಳಬೇಕಿದ್ದಲ್ಲಿ ಔಷದ ಸೇವನೆಯ ಅವಶ್ಯಕತೆಯೇ ಇಲ್ಲದ, ಒಂದೆರಡು ದಿನಗಳ ವಿಶ್ರಾಂತಿಯಿಂದ ತಾವಾಗಿ ಶಮನಗೊಳ್ಳುವ ಇಂತಹ ವ್ಯಾಧಿಗಳು ರೋಗಿಗಳ ಅಜಾಗರೂಕತೆಯಿಂದ ಉಲ್ಬಣಿಸುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಈ ವ್ಯಾಧಿಯ ಬಾಧೆಯನ್ನು ಪರಿಹರಿಸಲು ಔಷದಗಳ ಸೇವನೆ ಅನಿವಾರ್ಯವೆನಿಸುವುದು. ಈ ರೀತಿಯಲ್ಲಿ ನಾಲ್ಕಾರು ದಿನಗಳ ಕಾಲ ಬಾಧಿಸಿದ ವ್ಯಾಧಿಯಿಂದಾಗಿ,ನಿಮ್ಮ ಶರೀರದ ತೂಕ,ಆಕಾರಗಳೊಂದಿಗೆ ಹಸಿವೆ ಮತ್ತು ನಿದ್ರೆಗಳೂ ಕಡಿಮೆಯಾದಂತೆ ಭಾಸವಾಗುವುದು ಸ್ವಾಭಾವಿಕ. ಇವೆಲ್ಲವುಗಳನ್ನೂ ಮತ್ತೆ ಪೂರ್ವಸ್ಥಿತಿಗೆ ಸರಿಯಾಗಿ ದುರಸ್ತಿಪಡಿಸಲು, ವಿಟಮಿನ್ - ಟಾನಿಕ್ ಗಳ ಅವಶ್ಯಕತೆಯೇ ಇಲ್ಲವೆಂದಲ್ಲಿ ನಿಮಗೂ ಆಶ್ಚರ್ಯವೆನಿಸೀತು. 

ಸಾಮಾನ್ಯವಾಗಿ ವಿವಿಧ ಕಾಯಿಲೆಗಳಿಗೆ ಅನುಗುಣವಾಗಿ ರೋಗಿಗಳಲ್ಲಿ ಜ್ವರ,ತಲೆ-ಮೈಕೈನೋವು,ವಾಕರಿಕೆ-ವಾಂತಿ,ಭೇದಿ,ಕೆಮ್ಮು-ದಮ್ಮು,ಬಾಯಿರುಚಿ ಹಾಗೂ ಹಸಿವಿಲ್ಲದಿರುವುದು,ಮಲಬದ್ಧತೆಗಳಂತಹ ತೊಂದರೆಗಳು ಬಾಧಿಸುತ್ತವೆ. ಇವುಗಳ ಪರಿಹಾರಕ್ಕಾಗಿ ನೀವು ಸೇವಿಸುವ ಔಷದಗಳೊಂದಿಗೆ ನಿಮ್ಮ ಶರೀರದ ಸ್ವಾಭಾವಿಕ ರೋಗಪ್ರತಿರೋಧಕ ಕ್ರಿಯೆಗಳೂ ಒಂದಾಗಿ, ರೋಗಕಾರಕ ರೋಗಾಣುಗಳ ವಿರುದ್ಧ ಹೋರಾಡುತ್ತವೆ. ಜೊತೆಗೆ ಇಂತಹ ಸ್ಥಿತಿಯಲ್ಲಿ ನೀವು ಸೇವಿಸುವ ಆಹಾರದ ಪ್ರಮಾಣವೂ ಕಡಿಮೆಯಾಗುವುದರಿಂದ, ನಿಮ್ಮಲ್ಲಿ ತೀವ್ರ ಆಯಾಸ,ನಿಶ್ಶಕ್ತಿ,ತಲೆತಿರುಗುವಿಕೆ, ನಿದ್ರಾಹೀನತೆಗಳಂತಹ ಅನೇಕ ತೊಂದರೆಗಳು ಕಂಡುಬರುತ್ತವೆ. ಇಂತಹ ತೊಂದರೆಗಳು- ಸಮಸ್ಯೆಗಳು ಸ್ವಯಂ ಶಮನಗೊಳ್ಳಲು ನೀವು ಪ್ರತಿನಿತ್ಯ ಸೇವಿಸುವ ಸತ್ವಭರಿತ ಆಹಾರಗಳೇ ಸಾಕಾಗುವುದು. ಈ ವಿಚಾರವನ್ನು ಅರಿತಿರದ ಜನಸಾಮಾನ್ಯರು ಇಂತಹ ಸಂದರ್ಭಗಳಲ್ಲಿ, ತಮ್ಮ ವೈದ್ಯರ ಬಳಿ ಒತ್ತಾಯಪೂರ್ವಕವಾಗಿ ವಿಟಮಿನ್ ಮಾತ್ರೆ- ಟಾನಿಕ್ ಗಳನ್ನು ಕೇಳಿ ಪಡೆದುಕೊಳ್ಳುವುದು ಅಪರೂಪವೇನಲ್ಲ!. ರೋಗಿಯೇ ಕಾರಣಕರ್ತನೆನಿಸುವ ಇಂತಹ ಅಧಿಕ ಪ್ರಸಂಗಿತನದಿಂದ ಅನಾವಶ್ಯಕವಾಗಿ ವಿಟಮಿನ್- ಟಾನಿಕ್ ಗಳನ್ನು ಸೇವಿಸುವುದರೊಂದಿಗೆ,ಸಾಕಷ್ಟು ಹಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. 

ಹೈಪರ್ ವಿಟಾಮಿನೋಸಿಸ್ 

ಸಾಮಾನ್ಯವಾಗಿ ವೈದ್ಯರ ಸಲಹೆ ಪಡೆಯದೇ ಅಕಾರಣವಾಗಿ ಹಾಗೂ ಅನಾವಶ್ಯಕವಾಗಿ ನೀವು ಸೇವಿಸುವ ವಿಟಮಿನ್ ಗಳ ಪ್ರಮಾಣ ಮಿತಿಮೀರಿದಾಗ ಉದ್ಭವಿಸಬಹುದಾದ ಸಮಸ್ಯೆಗಳನ್ನು ಹೈಪರ್ ವಿಟಾಮಿನೋಸಿಸ್ ಎಂದು ಕರೆಯುತ್ತಾರೆ. 

ವಿಟಮಿನ್ ಗಳ ವಿಲೀನತೆಯ ಆಧಾರದಲ್ಲಿ ಇವುಗಳನ್ನು ಕೊಬ್ಬಿನಲ್ಲಿ ಕರಗುವ ಮತ್ತು ನೀರಿನಲ್ಲಿ ಕರಗುವ ಜೀವಸತ್ವಗಳು ಎಂದು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು. ನೀರಿನಲ್ಲಿ ಕರಗಬಲ್ಲ " ಎ " ಗುಂಪಿನ ಮತ್ತು " ಸಿ " ಜೀವಸತ್ವಗಳನ್ನು ತುಸು ಅಧಿಕ  ಸೇವಿಸಿದರೂ, ಇವುಗಳು ಶರೀರದಲ್ಲಿ ಸಂಗ್ರಹವಾಗದೆ ಮಲ - ಮೂತ್ರಗಳೊಂದಿಗೆ ವಿಸರ್ಜಿಸಲ್ಪಡುತ್ತವೆ. ಆದರೆ ಕೊಬ್ಬಿನಲ್ಲಿ ಕರಗಬಲ್ಲ ವಿಟಮಿನ್ ಎ, ಡಿ , ಇ , ಮತ್ತು ಕೆ" ಜೀವಸತ್ವಗಳನ್ನು ಅತಿಯಾಗಿ ಸೇವಿಸಿದಲ್ಲಿ, ಇವುಗಳು ಶರೀರದಲ್ಲಿ ಸಂಗ್ರಹವಾಗುವುದರೊಂದಿಗೆ ಅನೇಕ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ.

ಉದಾಹರಣೆಗೆ ನಾವು ಸೇವಿಸುವ ಆಹಾರದ ಮೂಲಕ ಸುಮಾರು ೫೦೦ ರಿಂದ ೫೦೦೦ ಮೈಕ್ರೋ ಗ್ರಾಮ್ ನಷ್ಟು ವಿಟಮಿನ್ ಎ ನಮ್ಮ ಶರೀರಕ್ಕೆ ದೊರೆಯುವುದು. ಮಾನವ ಶರೀರದ ದೈನಂದಿನ ಅವಶ್ಯಕತೆ ಕೇವಲ ೭೫೦ ಮೈಕ್ರೋ ಗ್ರಾಮ್ ಆಗಿದ್ದರೂ, ಕೆಲ ಔಷದ ತಯಾರಿಕಾ ಸಂಸ್ಥೆಗಳು ತಮ್ಮ ಉತ್ಪನ್ನಗಳಲ್ಲಿ ೧೫೦೦ ರಿಂದ ೪೫೦೦ ಮೈಕ್ರೋ ಗ್ರಾಮ್ " ಎ " ಜೀವಸತ್ವವನ್ನು ತುಂಬಿರುತ್ತಾರೆ!. ಅನಾವಶ್ಯಕವಾಗಿ ಇಂತಹ ಉತ್ಪನ್ನಗಳನ್ನು ಸೇವಿಸಿದಲ್ಲಿ ಇದು ಶರೀರದಲ್ಲಿ ಸಂಗ್ರಹಿಸಲ್ಪಡುವುದು. ತತ್ಪರಿಣಾಮವಾಗಿ ಮೂಳೆಗಳ ದೌರ್ಬಲ್ಯ,ವಾಕರಿಕೆ,ತಲೆನೋವು,ಕೈಕಾಲುಗಳ ಚಲನವಲನಗಳು ಕುಂಠಿತವಾಗುವುದು, ಕೂದಲು ಉದುರುವುದು,ಚರ್ಮದ ಮೇಲ್ಪದರ ಏಳುವುದು, ದೃಷ್ಟಿಮಾಂದ್ಯ, ನೋಡುವ ವಸ್ತು - ದೃಶ್ಯಗಳು ಎರಡಾಗಿ ಕಾಣುವುದು,ನಾಸಿಕಾ ರಕ್ತಸ್ರಾವಗಳಂತಹ ತೊಂದರೆಗಳು ಉದ್ಭವಿಸುತ್ತವೆ. 

ಅದೇ ರೀತಿ ವಿಟಮಿನ್ "  ಡಿ  " ಯ ದೈನಂದಿನ ಅವಶ್ಯಕತೆಯು ೧೦೦ ಐ. ಯು ಗಳಾಗಿದ್ದು, ಇದು ಸೂರ್ಯನ ಕಿರಣಗಳಿಂದ ಸುಲಭವಾಗಿ ಲಭಿಸುತ್ತದೆ. ಈ ಜೀವಸತ್ವದ ದೀರ್ಘಕಾಲೀನ ಅತಿಸೇವನೆಯಿಂದಾಗಿ, ನಾವು ಸೇವಿಸಿದ ಆಹಾರದಲ್ಲಿರುವ ಪೋಷಕಾಂಶಗಳು ಕರುಳಿನಲ್ಲಿ ಹೀರಲ್ಪಡುವ ಪ್ರಕ್ರಿಯೆಯು ಅಧಿಕವಾಗುವುದರೊಂದಿಗೆ,ಎಲುಬುಗಳಲ್ಲಿನ ಕ್ಯಾಲ್ಸಿಯಂ ರಕ್ತಕ್ಕೆ ಬಿಡುಗಡೆಯಾಗುವುದು. ಇದರಿಂದಾಗಿ "ಹೈಪರ್ ಕ್ಯಾಲ್ಸೀಮಿಯ" ಎನ್ನುವ ಸ್ಥಿತಿ ಉದ್ಭವಿಸುವುದು. ಇದರೊಂದಿಗೆ ಹೃದಯ, ಶ್ವಾಸಕೋಶ,ಮೂತ್ರಪಿಂಡಗಳು ಪೆಡಸಾಗುವುದು, ಮೂತ್ರಪಿಂಡಗಳಲ್ಲಿ ಕಲ್ಲುಗಳು ಉಂಟಾಗುವುದು,ಮೂತ್ರಪಿಂಡಗಳ ವೈಫಲ್ಯ, ಎಲುಬುಗಳ ಅಸಹಜ ಬೆಳವಣಿಗೆ ಮತ್ತು ಇವುಗಳಲ್ಲಿನ ಖನಿಜಾಂಶಗಳು ನಶಿಸುವುದರಿಂದ ಮೂಳೆ ಮುರಿತದಂತಹ ಸಮಸ್ಯೆಗಳು ಬಾಧಿಸುತ್ತವೆ. 

ವಿಟಮಿನ್ " ಇ " ಇದರ ದೈನಂದಿನ ಅವಶ್ಯಕತೆಯು ಕೇವಲ ೧೦ ಮಿಲಿ ಗ್ರಾಮ್ ಗಳಾಗಿದ್ದು, ಇದರ ಅತಿಸೇವನೆಯಿಂದ ದೃಷ್ಟಿ ಮಸುಕಾಗುವುದು, ಕಣ್ಣು ಕತ್ತಲಾವರಿಸುವುದು,ಚರ್ಮದ ಉರಿಯೂತ,ಮೊಡವೆಗಳು ಮೂಡುವುದು,ರಕ್ತನಾಳಗಳು ವಿಕಸಿತಗೊಳ್ಳುವುದು,ಜೀರ್ಣಾಂಗಗಳ ತೊಂದರೆಗಳು,ರಕ್ತದಲ್ಲಿನ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಪ್ರಮಾಣ ಹೆಚ್ಚುವುದರೊಂದಿಗೆ, ರಕ್ತ ಹೆಪ್ಪುಗಟ್ಟುವ  ಅವಧಿಯೂ ಹೆಚ್ಚುವುದು. 

ಇನ್ನು " ಬಿ " ಗುಂಪಿಗೆ ಸೇರಿದ ಥಯಾಮಿನ್ ನ ಅತಿಸೇವನೆಯಿಂದ ತಲೆನೋವು,ನಿದ್ರಾಹೀನತೆ,ತೀವ್ರ ಎದೆಬಡಿತ ಹಾಗೂ ಅನಾಫೈಲಾಕ್ಸಿಸ್ (ತೀವ್ರ ಸ್ವರೂಪದ ಮಾರಕವೆನಿಸಬಲ್ಲ ಅಲರ್ಜಿ) ನಂತಹ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. "ನಯಾಸಿನ್"ನ ಅತಿಸೇವನೆಯಿಂದ ಸೂಕ್ಷ್ಮ ರಕ್ತನಾಳಗಳು ವಿಕಸಿತವಾಗುವುದು, ಮುಖ ಕೆಂಪಾಗುವುದು,ಜೀರ್ಣಾಂಗಗಳ ತೊಂದರೆಗಳು,ತುರಿಕೆ,ರಕ್ತದಲ್ಲಿನ ಸಕ್ಕರೆ ಮತ್ತು ಯೂರಿಕ್ ಆಸಿಡ್ ನ ಪ್ರಮಾಣಗಳು ಹೆಚ್ಚುವುದರೊಂದಿಗೆ, ಎಲ್. ಡಿ . ಎಲ್ ಮತ್ತು ಕೊಲೆಸ್ಟರಾಲ್ ಗಳ ಪ್ರಮಾಣ ಇಳಿಯುವುದು. ಇದೇ ರೀತಿ "ಪೈರಿಡಾಕ್ಸಿನ್ " ನ ದುಷ್ಪರಿಣಾಮಗಳಲ್ಲಿ, ಮೆದುಳಿನ ನ್ಯೂರಾನ್ ಗಳಿಗೆ ಹಾನಿ,ಕೈಕಾಲುಗಳಲ್ಲಿ ಸಂವೇದನೆಗಳ ಅಭಾವ,ನಡೆದಾಡಲು ಅಸಾಧ್ಯವೆನಿಸುವುದು ಮತ್ತು ಗರ್ಭಿಣಿಯರು ಇದನ್ನು ಅತಿಯಾಗಿ ಸೇವಿಸುವುದರಿಂದ ನವಜಾತ ಶಿಶುಗಳಲ್ಲಿ ಅಪಸ್ಮಾರ ಉದ್ಭವಿಸುವ ಸಾಧ್ಯತೆಗಳಿವೆ. 

ವಿಟಮಿನ್ "ಸಿ "ಯ ದೈನಂದಿನ ಅವಶ್ಯಕತೆಯು ೩೦ ರಿಂದ ೪೦ ಮಿಲಿ ಗ್ರಾಮ್ ಗಳಾಗಿದ್ದು, ಇದರ ಅತಿಸೇವನೆ ಹೊಟ್ಟೆಯುಬ್ಬರ, ಭೇದಿ,ಜೀರ್ಣಾಂಗಗಳ ತೊಂದರೆಗಳಿಗೆ ಕಾರಣವೆನಿಸಬಹುದು. 

ಸ್ವಾಮೀ, ಇವೆಲ್ಲವೂ ಕೇವಲ ಸ್ಯಾಂಪಲ್ ಗಳು ಮಾತ್ರ!. ಜನಸಾಮಾನ್ಯರು ಔಷದ ಅಂಗಡಿಗಳಿಂದ ಖರೀದಿಸಿ ಸೇವಿಸುವ ಬಿ ಕಾಂಪ್ಲೆಕ್ಸ್, ಪ್ರೋಟೀನ್,ಖನಿಜಗಳು,ಲವಣಗಳು,ರಕ್ತ - ಶಕ್ತಿ ವರ್ಧಕ ಟಾನಿಕ್ ಗಳ "ಕಾಕ್ ಟೈಲ್ " ಗಳನ್ನು ಅತಿಯಾಗಿ ಸೇವಿಸುವುದರಿಂದ ಉದ್ಭವಿಸಬಲ್ಲ ಆರೋಗ್ಯದ  ಪಟ್ಟಿಯು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗಬಹುದು. ಇವೆಲ್ಲವನ್ನೂ ವಿಶದವಾಗಿ ವಿವರಿಸಲು ಈ ಅಂಕಣದಲ್ಲಿ ಸ್ಥಳಾಭಾವವಿರುವುದರಿಂದ, ಈ ಲೇಖನವನ್ನು ಇಲ್ಲಿಗೆ ಅಂತ್ಯಗೊಳಿಸಬೇಕಾಗಿದೆ. 

ಅಂತಿಮವಾಗಿ ಒಂದೇ ಮಾತಿನಲ್ಲಿ ಹೇಳುವುದಾದಲ್ಲಿ  ನಿಮ್ಮ ಶರೀರದ ಬೇಕು - ಬೇಡಗಳ ಅರಿವಿಲ್ಲದೆ,ನಿರ್ದಿಷ್ಟ ಕಾರಣಗಳೇ ಇಲ್ಲದೆ, ಸ್ವೇಚ್ಛೆಯಿಂದ ನೀವು ಸೇವಿಸುವ ವಿಟಮಿನ್ - ಟಾನಿಕ್ ಗಳು  ಒಳಿತಿಗಿಂತಲೂ ಹೆಚ್ಚು ಕೆಡುಕನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚೆನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  

ಉದಯವಾಣಿ ಪತ್ರಿಕೆಯ ೨೪-೦೩-೨೦೦೫ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ