Monday, March 31, 2014

............FOR ONE VOTE, ONE SEAT !




  ....ಒಂದು ಓಟಿಗಾಗಿ, ಒಂದು ಸೀಟಿಗಾಗಿ!

ಭವ್ಯ ಭಾರತದಲ್ಲಿ ಇದುವರೆಗೆ ನಡೆದಿದ್ದ ಯಾವುದೇ ಚುನಾವಣೆಗಳಲ್ಲಿ ಜನರು ಕಂಡು ಕೇಳರಿಯದಂತಹ ವಿಚಿತ್ರ ವಿದ್ಯಮಾನಗಳನ್ನು ಕಾಣುವ ಸೌಭಾಗ್ಯ ದೇಶದ ಮತದಾರರಿಗೆ ಪ್ರಾಪ್ತವಾಗಿದೆ. ಈ ಬಾರಿಯ ಚುನಾವಣೆ ನಿಸ್ಸಂದೇಹವಾಗಿ ನಮ್ಮನ್ನಾಳುವವರ ನಿಜವಾದ ಬಣ್ಣವನ್ನು ಬಯಲುಮಾಡಿದೆ. ಅಧಿಕಾರದ ಗದ್ದುಗೆಯನ್ನು ಏರಲೇಬೇಕೆನ್ನುವ ಹೆಬ್ಬಯಕೆಯು, ರಾಜಕೀಯ ಪುಡಾರಿಗಳು ನಡೆಸುತ್ತಿರುವ ಅದ್ಭುತ ಕಸರತ್ತುಗಳಿಗೆ ಕಾರಣವೆನಿಸಿದೆ. ವಿವಿಧ ಪಕ್ಷಗಳ ನಾಯಕರು ಮತ್ತು ಅಭ್ಯರ್ಥಿಗಳು ನಡೆಸುತ್ತಿರುವ ದೊಂಬರಾಟಗಳು, ಪುಟ್ಟ ಮಕ್ಕಳು ಆಡುವ "ಮರಕೋತಿ" ಆಟವನ್ನು ನೆನಪಿಸುತ್ತಿವೆ!.

ಪ್ರಸ್ತುತ ಏರುತ್ತಲೇ ಇರುವ ತಾಪಮಾನವನ್ನು ಲೆಕ್ಕಿಸದೇ ಸುಡುಬಿಸಿಲಿನಲ್ಲೂ ಮತದಾರರ ಮನೆಬಾಗಿಲಿಗೆ ಬಂದು, ಕೈಮುಗಿದು ಮತಯಾಚನೆ ಮಾಡುತ್ತಿರುವ ಅಭ್ಯರ್ಥಿಗಳು ತಮಗೆ ಮತವನ್ನು ನೀಡಬೇಕೆಂದು ಗೋಗರೆಯುತ್ತಿದ್ದಾರೆ. ಆದರೆ ಅದೃಷ್ಟವಶಾತ್ ಚುನಾವಣೆಯಲ್ಲಿ ಗೆದ್ದಲ್ಲಿ, ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಜನಸಾಮಾನ್ಯರೇ ಇವರ ಮನೆಬಾಗಿಲಿಗೆ ಹೋಗಿ ಕೈಮುಗಿದು ಗೋಗರೆಯಬೇಕಾಗುತ್ತದೆ ಎನ್ನುವುದು ಮತದಾರರಿಗೆ ತಿಳಿದಿರದ ವಿಚಾರವೇನಲ್ಲ!.

ರಾಜಕೀಯ ಕ್ಷೇತ್ರದಲ್ಲಿ ನಿವೃತ್ತಿಯ ವಯಸ್ಸನ್ನೇ ನಿಗದಿಸದೇ ಇರುವುದು ಅನೇಕ ರಾಜಕೀಯ ನೇತಾರರಿಗೆ ವರದಾನವಾಗಿ ಪರಿಣಮಿಸಿರುವುದು ಸುಳ್ಳೇನಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮ ಘನತೆ ಹಾಗೂ ಗೌರವಗಳನ್ನು ಮೆರೆದಿದ್ದ ಹಿಂದಿನ ತಲೆಮಾರಿನ ರಾಜಕೀಯ ನೇತಾರರು, ಇದೀಗ ತಮ್ಮ ಇಳಿವಯಸ್ಸಿನಲ್ಲಿ "ಚಲಾವಣೆಯಲ್ಲಿ ಇಲ್ಲದ ನಾಣ್ಯ" ದಂತಾಗಿದ್ದರೂ, ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಅಧಿಕಾರವನ್ನು ಚಲಾಯಿಸಲು ಹರಸಾಹಸವನ್ನೇ ನಡೆಸುತ್ತಿದ್ದಾರೆ. ಅದೇರೀತಿಯಲ್ಲಿ ಚಲಾವಣೆಯಲ್ಲಿ ಇರುವ ನಾಣ್ಯಗಳಂತಹ ಗೌರವಾನ್ವಿತ ಹಿರಿಯ ನಾಯಕರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಿರುವ ಪ್ರಸಂಗಗಳೂ ನಡೆಯುತ್ತಿವೆ. 

ಚುನಾವಣೆಯ ದಿನಗಳು ಸಮೀಪಿಸಿದಂತೆಯೇ ನಮ್ಮ ರಾಜಕೀಯ ನಾಯಕರ ಆಲಾಪ- ಪ್ರಲಾಪಗಳು ದಿನೇದಿನೇ ಹೆಚ್ಚುತ್ತಲೇ ಹೋಗುತ್ತವೆ. ಒಂದು ವೇದಿಕೆಯಲ್ಲಿ ತಮ್ಮ ವಿರೋಧಿಗಳ ವಿರುದ್ಧ ಸಿಂಹದಂತೆ ಘರ್ಜಿಸುವ ನೇತಾರರು, ಮತ್ತೊಂದು ವೇದಿಕೆಯಲ್ಲಿ ಗಳಗಳನೇ ಅಳುವುದು ಮತದಾರರಿಗೆ ಪುಕ್ಕಟೆ ಮನೋರಂಜನೆಯನ್ನು ನೀಡುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ಈ ರೀತಿಯಲ್ಲಿ ಅದ್ಭುತವಾಗಿ ನಟಿಸುತ್ತಿರುವ ನಾಯಕರ ಬಗ್ಗೆ " ನಗುವ ಹೆಂಗಸರನ್ನು ಮತ್ತು ಅಳುವ ಗಂಡಸರನ್ನು ನಂಬಬೇಡ" ಎಂದು ಮತದಾರರು ಲೇವಡಿ ಮಾಡುವಂತಾಗಿದೆ. 

ತಾವು ಸ್ಪರ್ಧಿಸಿರುವ ಕ್ಷೇತ್ರದ ಮತದಾರರನ್ನು ಕಾಡುತ್ತಿರುವ ಯಾವುದೇ ಸಮಸ್ಯೆಗಳು ಮತ್ತು ಇವುಗಳನ್ನು ಪರಿಹರಿಸಲು ತಾನು ಕೈಗೊಳ್ಳಲಿರುವ ಕಾರ್ಯತಂತ್ರಗಳ ಬಗ್ಗೆ ಯಾವುದೇ ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ವಿವರಿಸುವುದನ್ನು ನೀವೂ ಕೇಳಿರಲಾರಿರಿ. ಆದರೆ ತಮ್ಮ ಎದುರಾಳಿಗಳು ಹಾಗೂ ವಿರೋಧ ಪಕ್ಷಗಳು ತಮ್ಮನ್ನು ಸೋಲಿಸಲು ಹೆಣೆದಿರುವ ಷಡ್ಯಂತ್ರಗಳ ಬಗ್ಗೆ ನಿರರ್ಗಳವಾಗಿ ಕೊರೆಯುವ ಅಭರ್ಥಿಗಳು, ಎದುರಾಳಿಯ ದೌರ್ಬಲ್ಯಗಳು, ಆತನ ಹಗರಣಗಳು ಮತ್ತು ಆತನ ಚರಿತ್ರೆಯನ್ನು ಅಧ್ಯಯನ ಮಾಡಲು ಸಾಕಷ್ಟು ಸಮಯವನ್ನು ವಿನಿಯೋಗಿಸಿದರೂ, ಸ್ವಕ್ಷೇತ್ರದ ಸಮಸ್ಯೆಗಳನ್ನು ಅಧ್ಯಯನ ಮಾಡಲು ಇವರಿಗೆ ಒಂದಿಷ್ಟೂ ಬಿಡುವೇ ಇರುವುದಿಲ್ಲ!. 

ಪಕ್ಷಾತೀತರು!

ಪಕ್ಷದ ಟಿಕೆಟ್ ದೊರೆಯದ ಕಾರಣದಿಂದಾಗಿ ಅದೇ ತಾನೇ ತಾನು ತೊರೆದಿದ್ದ ಪಕ್ಷ ಮತ್ತು ಅದರ ನೇತಾರರನ್ನು  ವಾಚಾಮಗೋಚರವಾಗಿ ದೂಷಿಸುವ ಕೆಲ "ದಳಪತಿ" ಗಳು, ತಾವು ಹಿಂದೆ ನಿಂದಿಸುತ್ತಿದ್ದ ಪಕ್ಷವನ್ನು ಸೇರುವುದಲ್ಲದೇ, ಆ ಪಕ್ಷವನ್ನು ಮತ್ತು ಅದರ ನಾಯಕರನ್ನು ಹಾಡಿಹೊಗಳಲು ಆ ಪಕ್ಷವು ಆತನಿಗೆ ನೀಡಿದ್ದ ಟಿಕೆಟ್ ನ ಪ್ರಭಾವವೇ ಹೊರತು ಬೇರೇನೂ ಅಲ್ಲ!.

ಈ ಸಂದರ್ಭದಲ್ಲಿ ಆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದ ಅಭ್ಯರ್ಥಿಯೊಬ್ಬನನ್ನು ಕಡೆಗಣಿಸಿ, ಇದೀಗ ಟಿಕೆಟ್ ನ ಆಸೆಯಿಂದ ಪಕ್ಷವನ್ನು ಸೇರಿದ್ದ ಮತ್ತೊಂದು ಪಕ್ಷದ ಪ್ರಭಾವಿ ನಾಯಕರೊಬ್ಬರಿಗೆ ಟಿಕೆಟ್ ನೀಡುವುದು "ರಾಜಕೀಯ ಚದುರಂಗ" ದ ಆಟದ ನಡೆಗಳಲ್ಲಿ ಒಂದಾಗಿದೆ. ಪಕ್ಷದ ಸಿದ್ಧಾಂತಗಳಲ್ಲಿ ನಂಬಿಕೆ ಇಲ್ಲದಿದ್ದರೂ, ಟಿಕೆಟ್ ನ ಆಸೆಯಿಂದ ವಲಸೆ ಬಂದಿರುವ ಪುಡಾರಿಗಳ ವಿರುದ್ಧ ಸಿಡಿದೆದ್ದ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ "ಶಿಸ್ತು ಕ್ರಮ" ಕೈಗೊಳ್ಳುವ ನಾಯಕರು, ತಮ್ಮ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳಲು " ವ್ಯಕ್ತಿಗಿಂತ ಪಕ್ಷ ದೊಡ್ಡದು" ಎಂದು ಹೇಳಿಕೆಯನ್ನು ನೀಡುತ್ತಾರೆ.

ಇಷ್ಟು ಮಾತ್ರವಲ್ಲ, ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ನೀಡಲು ನಿರಾಕರಿಸಿ ಕಡೆಗಣಿಸಿದ್ದ ತಮ್ಮದೇ ಪಕ್ಷದ ಅಭ್ಯರ್ಥಿಗಳನ್ನು ಸಮಾಧಾನಿಸಲು, ಅವರನ್ನು ಮುಂದೆ ಅವಕಾಶ ದೊರೆತಾಗ ಎಂ. ಎಲ್. ಸಿ ಅಥವಾ ಎಂ. ಎಲ್. ಎ ಮಾಡುವ ಅಥವಾ ಇತರ ಗೌರವಾನ್ವಿತ ಹುದ್ದೆಯನ್ನು ನೀಡುವ ಆಮಿಷವನ್ನು ಒಡ್ಡುವುದು ಸುಳ್ಳೇನಲ್ಲ. ಆದರೆ ಇಂತಹ ಕೊಡುಗೆಗಳನ್ನು ತಿರಸ್ಕರಿಸುವ ನಿಷ್ಠಾವಂತ ಕಾರ್ಯಕರ್ತರ ಬಗ್ಗೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಿ, ಅವರ ಮಾನವನ್ನು ಹರಾಜು ಹಾಕಲು ಪಕ್ಷಗಳ ನಾಯಕರು ಹಿಂಜರಿಯುವುದಿಲ್ಲ. ಇಂತಹ ಪ್ರಹಸನಗಳಿಂದ ಪಕ್ಷದ ವರ್ಚಸ್ಸಿಗೆ ಹಾನಿಯಾದರೂ, ಈ ನೇತಾರರು ತಮ್ಮ ನಿರ್ಧಾರಗಳನ್ನು ಮಾತ್ರ ಬದಲಿಸುವುದಿಲ್ಲ. 

ಇದಲ್ಲದೇ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬದಲಾಗದಿದ್ದರೂ, ಇವರಿಗೆ ಟಿಕೆಟ್ ನೀಡಿದ್ದ ಪಕ್ಷಗಳು ಬದಲಾಗಿರಲು ಈ ಅಭ್ಯರ್ಥಿಗಳು ಬಟ್ಟೆ ಬದಲಾಯಿಸಿದಂತೆಯೇ ಪಕ್ಷಗಳನ್ನು ಬದಲಾಯಿಸಿರುವುದೇ ಕಾರಣವಾಗಿರುತ್ತದೆ. ಅಂತೆಯೇ ಇಂತಹ ಅಭ್ಯರ್ಥಿಗಳಿಗೆ ಮತ್ತೆ ಮತ್ತೆ ಮತವನ್ನು ನೀಡುವ ಮೂಲಕ ಚುನಾಯಿಸುವ ಮತದಾರರೇ ಇದಕ್ಕೆ ನೇರವಾಗಿ ಕಾರಣವೆನಿಸುತ್ತಾರೆ.

ಆಶ್ವಾಸನೆಗಳ ಸುರಿಮಳೆ

ಚುನಾವಣಾ ಕಣದಲ್ಲಿರುವ ಒಂದು ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ಆಶ್ವಾಸನೆಗಳ ಸುರಿಮಳೆಯು, ಮತ್ತೊಂದು ಪಕ್ಷದ ಭರವಸೆಗಳ ಮಹಾಪೂರದಲ್ಲಿ ಕೊಚ್ಚಿ ಹೋಗುತ್ತದೆ. ಇದೇ ಕಾರಣದಿಂದಾಗಿ ಮಗುದೊಂದು ಪಕ್ಷವು, ಇವೆರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಅಂಶಗಳೊಂದಿಗೆ ತನ್ನ ಪಾಲಿನ ಮತ್ತಷ್ಟು ಕೊಡುಗೆಗಳನ್ನು ಸೇರಿಸಿ, ವಿನೂತನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತದೆ. ವಿಶೇಷವೆಂದರೆ ಇಂತಹ ಭರವಸೆ- ಕೊಡುಗೆಗಳನ್ನು ನೀಡುವಂತೆ ದೇಶದ ಮತದಾರರು ಯಾವತ್ತೂ ಮನವಿಯನ್ನೇ ಮಾಡಿರುವುದಿಲ್ಲ!. 

ಇವೆಲ್ಲಕ್ಕೂ ಮಿಗಿಲಾಗಿ ತಾವು ಅಧಿಕಾರದಲ್ಲಿದ್ದಾಗ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದ ರಾಜಕೀಯ ಪಕ್ಷಗಳು- ನೆತಾರು, ಇದೀಗ ಜನರು ನಿರೀಕ್ಷಿಸದ ಕೊಡುಗೆಗಳನ್ನು ಕೊಡುಗೈ ಯಿಂದ ದಾನಮಾಡಲು ಮುಂದಾಗಿರುವುದು ಏಕೆಂದು ದೇಶದ ಮತದಾರರಿಗೆ ನಿಶ್ಚಿತವಾಗಿಯೂ ತಿಳಿದಿದೆ.

ಚುನಾವಣಾ ಪ್ರಚಾರ ಸಭೆಗಳಲ್ಲಿ ತಮ್ಮ ರಂಗುರಂಗಿನ ಮಾತುಗಳಿಂದ " ಅಂಗೈಯಲ್ಲಿ ಅರಮನೆ ಹಾಗೂ ಆಕಾಶದಲ್ಲಿ ಕಾಮನ ಬಿಲ್ಲು" ಗಳನ್ನೂ ತೋರಿಸುವ ರಾಜಕೀಯ ನೇತಾರರು, ಅದೃಷ್ಟವಶಾತ್ ಚುನಾವಣೆಗಳಲ್ಲಿ ಗೆದ್ದು ಅಧಿಕಾರದ ಸೂತ್ರವನ್ನು ಹಿಡಿದಲ್ಲಿ, ಇವೆಲ್ಲವನ್ನೂ ಮರೆತುಬಿಡುತ್ತಾರೆ. ಪ್ರತಿಬಾರಿ ಚುನಾವಣೆಯ ಸಂದರ್ಭದಲ್ಲಿ ಪಕ್ಷಗಳು ಪ್ರಕಟಿಸುವ ಪ್ರಣಾಳಿಕೆಗಳಲ್ಲಿ, ಹಿಂದಿನ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಪುನರಪಿ ನೀಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ!.

ಅಂತಿಮವಾಗಿ ಹೇಳುವುದಾದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಏನು ಮಾಡಲಿದೆ ಎನ್ನುವುದಕ್ಕಿಂತ, ಮತ್ತೊಂದು ಪಕ್ಷದ ಅಭ್ಯರ್ಥಿಯ ವೈಯುಕ್ತಿಕ ವಿಚಾರಗಳು ಮತ್ತು ಚರಿತ್ರೆಯನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವುದರೊಂದಿಗೆ, ಅವರ ತೇಜೋವಧೆಗೆ ಪ್ರಯತ್ನಿಸುತ್ತಿರುವುದು ಗಮನಾರ್ಹವಾಗಿದೆ.ಇದರೊಂದಿಗೆ ಮತ್ತೊಂದು ಪಕ್ಷ ಅಧಿಕಾರದ ಗದ್ದುಗೆಯನ್ನು ಏರಿದಲ್ಲಿ ದೇಶದ ಅಧೋಗತಿಗೆ ಕಾರಣವೆನಿಸಲಿದೆ ಎಂದು ಘಂಟಾಘೋಷವಾಗಿ ಸಾರುವ ಪ್ರವೃತ್ತಿಯು ದಿನೇದಿನೇ ಹೆಚ್ಚುತ್ತಿದೆ!.

ಅದೇನೇ ಇರಲಿ, ದೇಶದ ಮತದಾರನ್ನು ಒಮ್ಮೆ ಅಥವಾ ಎರಡುಬಾರಿ ಮರುಳು ಮಾಡಬಹುದೇ ವಿನಃ, ಪ್ರತಿಬಾರಿ ಮರುಳು ಮಾಡಲಾಗದು ಎನ್ನುವುದನ್ನು ನಮ್ಮನ್ನಾಳುವ ನೇತಾರರಿಗೆ ತಿಳಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಆದುದರಿಂದ ನಿಮ್ಮ ಮತವನ್ನು ತಪ್ಪದೆ ಚಲಾಯಿಸುವ ಮೂಲಕ ಅರ್ಹರನ್ನು ಚುನಾಯಿಸುವ ಅಧಿಕಾರವನ್ನು ತಪ್ಪದೇ ಬಳಸಲೇಬೇಕಾಗಿದೆ.

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 


Friday, March 28, 2014

Brain Attack- STROKE.



 ಮೆದುಳಿನ ಆಘಾತ: ಪ್ರತ್ಯಕ್ಷವಾಗುವುದು ಪಕ್ಷವಾತ 

ಮಾನವ ಶರೀರದ ಪ್ರತಿಯೊಂದು ಅಂಗಾಂಗಗಳು ಸಮರ್ಪಕವಾಗಿ ಕಾರ್ಯಾಚರಿಸಲು,ಇವುಗಳಿಗೆ ನಿರಂತರವಾಗಿ ಶುದ್ಧ ರಕ್ತದ ಪೂರೈಕೆ ಅತ್ಯವಶ್ಯಕ ಎನಿಸುವುದು. ಆದರೆ ಮನುಷ್ಯನ ಮೆದುಳಿಗೆ ಪೂರೈಕೆಯಾಗುವ ಶುದ್ಧ ರಕ್ತದ ಪ್ರಮಾಣವು ತೀವ್ರವಾಗಿ ಕಡಿಮೆಯಾದಾಗ ಅಥವಾ ತೀವ್ರವಾಗಿ ಹೆಚ್ಚಿದಾಗ, ಮೆದುಳಿನ ಆಘಾತವು ಸಂಭವಿಸುವುದು. ಕ್ಷಣಮಾತ್ರದಲ್ಲಿ ರೋಗಿಯ ಮರಣಕ್ಕೂ ಕಾರಣವೆನಿಸಬಲ್ಲ ಈ ಗಂಭೀರ ಸಮಸ್ಯೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
----------------               ---------------                ---------------                -----------------             ----------------

ವಿದ್ಯಾವಂತ- ಅವಿದ್ಯಾವಂತರೆನ್ನುವ ಭೇದವಿಲ್ಲದೆ, ಬಹುತೇಕ ಜನರಲ್ಲಿ ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳಿಗೆ ಕಾರಣವಾಗಿರುವ ಗಂಭೀರ- ಮಾರಕ ಕಾಯಿಲೆಗಳಲ್ಲಿ ಪಕ್ಷವಾತವು ಪ್ರಮುಖವಾಗಿದೆ. ಮೆದುಳಿಗೆ ಆಘಾತವಾದಾಗ ಉದ್ಭವಿಸುವ ಈ ಕಾಯಿಲೆಗೆ ಜನಸಾಮಾನ್ಯರು ಆಡುಭಾಷೆಯಲ್ಲಿ ಪಾರ್ಶ್ವವಾಯು, ಲಕ್ವ, ಮತ್ತು ಪಕ್ಷವಾತವೆಂದೂ ಕರೆಯುತ್ತಾರೆ. ರೋಗಿಯ ಶರೀರದ ಒಂದು ಭಾಗವನ್ನು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಿಷ್ಕ್ರಿಯವಾಗಿಸಬಲ್ಲ ಈ ವ್ಯಾಧಿ ಬಾಧಿಸಿದಾಗ, ತುರ್ತುಚಿಕಿತ್ಸೆ ನೀಡಬೇಕಾಗುವುದು ಅನಿವಾರ್ಯವೂ ಹೌದು. ವೃಥಾ ಕಾಲಹರಣ ಮಾಡಿ ಚಿಕಿತ್ಸೆಯನ್ನು ನೀಡಲು ವಿಳಂಬಿಸಿದಲ್ಲಿ, ರೋಗಿಯು ಜೀವನಪರ್ಯಂತ ಪರಾವಲಂಬಿಯಾಗುವ ಅಥವಾ ಕೆಲವೊಮ್ಮೆ ಪ್ರಾಣವನ್ನೇ ಕಳೆದುಕೊಳ್ಳುವ ಸಾಧ್ಯತೆಗಳಿವೆ.

ಮೆದುಳಿನ ಆಘಾತ 

ಮನುಷ್ಯನ ಹೃದಯಕ್ಕೆ ನಿರಂತರವಾಗಿ ಶುದ್ಧ ರಕ್ತವನ್ನು ಪೂರೈಕೆಮಾಡುವ ಕೊರೋನರಿ ರಕ್ತನಾಳಗಳಲ್ಲಿ ಉದ್ಭವಿಸಬಲ್ಲ ಅಡಚಣೆಗಳಿಂದಾಗಿ ಹೃದಯಾಘಾತ ಸಂಭವಿಸುವುದು. ಅದೇ ರೀತಿಯಲ್ಲಿ ಮೆದುಳಿಗೆ ಪೂರೈಕೆಯಾಗುವ ಶುದ್ಧ ರಕ್ತದ ಪ್ರಮಾಣದಲ್ಲಿ ಕಾರಣಾಂತರಗಳಿಂದ ವ್ಯತ್ಯಯವಾದಲ್ಲಿ, ಮೆದುಳಿನ ಆಘಾತ ಸಂಭವಿಸುವುದು. ಈ ಆಘಾತದ ಪರಿಣಾಮವಾಗಿ ಮೆದುಳಿನ ಜೀವಕಣಗಳಿಗೆ ಅತ್ಯವಶ್ಯಕವಾದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ತತ್ಪರಿಣಾಮವಾಗಿ ಮೆದುಳಿನ ಜೀವಕಣಗಳು ಮೃತಪಡುವುದರಿಂದಾಗಿ, ಮೆದುಳಿಗೆ ಶಾಶ್ವತವಾದ ಹಾನಿ ಉಂಟಾಗುವುದು. ಮೃತಪಟ್ಟ ಮೆದುಳಿನ ಜೀವಕಣಗಳನ್ನು ಪುನಶ್ಚೇತನಗೊಳಿಸುವುದು ಅಸಾಧ್ಯವಾದುದರಿಂದ, ಮೆದುಳಿಗೆ ಸಂಭವಿಸಿದ ಹಾನಿಯನ್ನು ನಿಯಂತ್ರಿಸಲು ರೋಗಿಯನ್ನು ತ್ವರಿತವಾಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡುವುದು ಪ್ರಾಣರಕ್ಷಕವೆನಿಸುವುದು. 

ಈ ಸಮಸ್ಯೆಗೆ ಕಾರಣವೇನು? 

ಮನುಷ್ಯನ ಹೃದಯವು ಕರೋಟಿಡ್ ಮತ್ತು ವರ್ಟಿಬ್ರಲ್ ಆರ್ಟರಿಗಳೆಂಬ ಎರಡು ಜೊತೆ ರಕ್ತನಾಳಗಳ ಮೂಲಕ ಮೆದುಳಿಗೆ ನಿರಂತರವಾಗಿ ಶುದ್ಧ ರಕ್ತವನ್ನು ಪೂರೈಸುತ್ತದೆ. ಇವುಗಳಲ್ಲಿ ವರ್ಟಿಬ್ರಲ್ ಆರ್ಟರಿಗಳು ಮೆದುಳಿನ ಕಾಂಡದ ಬಳಿ ಒಂದಾಗಿ, ಬಾಸಿಲಾರ್ ಆರ್ಟರಿಯಾಗಿ ಪರಿವರ್ತನೆಗೊಳ್ಳುತ್ತವೆ. 

ಮನುಷ್ಯನಿಗೆ ವಯಸ್ಸಾದಂತೆಯೇ ಸ್ವಾಭಾವಿಕವಾಗಿ ಅಥವಾ ಅತಿ ಧೂಮಪಾನದ ಚಟದಿಂದಾಗಿ ಹಾಗೂ ಮಧುಮೇಹದಂತಹ ಕಾಯಿಲೆಗಳಿಂದಾಗಿ, ಶರೀರದ ರಕ್ತನಾಳಗಳು ಪೆಡಸಾಗುತ್ತವೆ. ವೈದ್ಯಕೀಯ ಪರಿಭಾಷೆಯಲ್ಲಿ ಈ ಸ್ಥಿತಿಯನ್ನು ಆರ್ಟಿರಿಯೋ ಸ್ಕ್ಲೆರೋಸಿಸ್ ಎನ್ನುವರು. ಇದರೊಂದಿಗೆ ಈ ರಕ್ತನಾಳಗಳ ಒಳಮೈಯಲ್ಲಿ ಪಾಚಿಯಂತೆ ಸಂಗ್ರಹವಾಗುವ ಕೊಬ್ಬಿನ ಅಂಶಗಳಿಂದಾಗಿ ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ, ಇವುಗಳ ಮೂಲಕ ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣವೂ ನಿಧಾನವಾಗಿ ಕುಂಠಿತಗೊಳ್ಳುವುದು. ಕೆಲವೊಮ್ಮೆ ಈ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಅಥವಾ ಕೊಬ್ಬಿನ ತುಣುಕುಗಳು ಸ್ವಸ್ಥಾನದಿಂದ ರಕ್ತದ ಪ್ರವಾಹದೊಂದಿಗೆ ಸಂಚರಿಸಿ ಉದ್ಭವಿಸುವ ಅಡಚಣೆಗಳಿಂದಾಗಿಯೂ, ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣವು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಶಿಸುತ್ತದೆ. ಈ ಸಂದರ್ಭದಲ್ಲಿ ಮೆದುಳಿಗೆ ಪೂರೈಕೆಯಾಗುವ ಪೋಷಕಾಂಶಗಳ ಕೊರತೆಯಿಂದ ಸಂಭವಿಸುವ ಮೆದುಳಿನ ಆಘಾತಕ್ಕೆ "ಇಸ್ಕೀಮಿಕ್ ಸ್ಟ್ರೋಕ್" ಎಂದು ಕರೆಯುತ್ತಾರೆ. 

ಅಂತೆಯೇ ಮೆದುಳಿನ ಒಳ ಅಥವಾ ಹೊರಭಾಗದಲ್ಲಿನ ರಕ್ತನಾಳಗಳಲ್ಲಿ ಕಾರಣಾಂತರಗಳಿಂದ ರಕ್ತಸ್ರಾವವಾದಲ್ಲಿ, ಕ್ಷಣಮಾತ್ರದಲ್ಲಿ ಮೆದುಳಿಗೆ ತೀವ್ರ ಹಾನಿಯಾಗಿ ಸಂಭವಿಸುವ ಆಘಾತವನ್ನು " ಹೆಮೊರೆಜಿಕ್ ಸ್ಟ್ರೋಕ್' ಎನ್ನುತ್ತಾರೆ. 

ಸಾಮಾನ್ಯವಾಗಿ ಹೆಮೊರೆಜಿಕ್ ಸ್ಟ್ರೋಕ್ ಸಂಭವಿಸಲು ತೀವ್ರ ಅಧಿಕ ರಕ್ತದೊತ್ತಡ, ಅಪಘಾತದ ಸಂದರ್ಭದಲ್ಲಿ ತಲೆಗೆ ಬೀಳುವ ಹೊಡೆತ- ಪೆಟ್ಟು, ಅಪರೂಪದಲ್ಲಿ ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಮೆದುಳಿನ ಗೆಡ್ಡೆಗಳು( ಟ್ಯೂಮರ್), ಮತ್ತು ಮೆದುಳಿನ ರಕ್ತನಾಳಗಳು ಕಾರಣಾಂತರಗಳಿಂದ ಶಿಥಿಲವಾಗಿ ದುರ್ಬಲಗೊಂಡು, ಚಿಕ್ಕಗುಳ್ಳೆಯಂತೆ ಹಿಗ್ಗಿದಾಗ (ಅನ್ಯೂರಿಸಂ) ಮತ್ತು ಇವುಗಳು ಒಡೆದು ರಕ್ತಸ್ರಾವವಾಗುವುದೂ ಕಾರಣವೆನಿಸುತ್ತದೆ. 

ಇದರೊಂದಿಗೆ ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಅಧಿಕ ರಕ್ತದೊತ್ತಡ, ಮಧುಮೇಹ, ಅಧಿಕ ತೂಕ- ಅತಿಬೊಜ್ಜು, ಅತಿ ಧೂಮಪಾನ, ಅತಿಯಾದ ಕೊಲೆಸ್ಟರಾಲ್, ತೀವ್ರ ರಕ್ತಹೀನತೆ, ರಕ್ತದೊತ್ತಡ ತೀವ್ರವಾಗಿ ಕುಸಿಯುವುದು ಮತ್ತು ಅನುವಂಶಿಕತೆಯೂ ಮೆದುಳಿನ ಆಘಾತಕ್ಕೆ ಕಾರಣವಾಗುವ ಸಾಧ್ಯತೆಗಳಿವೆ. 

ಪೂರ್ವಸೂಚನೆ- ಲಕ್ಷಣ 

ಬಹುತೇಕ ರೋಗಿಗಳಲ್ಲಿ ಮೆದುಳಿನ ಆಘಾತದಿಂದಾಗಿ ಸಂಭವಿಸುವ ಪಕ್ಷವಾತವು ಪ್ರತ್ಯಕ್ಷವಾಗುವ ಮುನ್ನ ಕೆಲವೊಂದು ಪೂರ್ವಸೂಚನೆಗಳನ್ನು ನೀಡುವುದುಂಟು. ಮತ್ತೆ ಕೆಲವರಲ್ಲಿ ಒಂದುಬಾರಿ ಸಂಭವಿಸಿದ ಪಕ್ಷವಾತವು ಮುಂದೆ ಮತ್ತೊಮ್ಮೆ ಬಂದೆರಗಲಿರುವ ಪಕ್ಷವಾತದ ಪೂರ್ವಸೂಚನೆ ಎನಿಸುತ್ತದೆ. ಏಕೆಂದರೆ ಹೃದಯಾಘಾತದಂತೆಯೇ ಪಕ್ಷವಾತವೂ ಒಬ್ಬ ರೋಗಿಯನ್ನು ಒಂದಕ್ಕೂ ಹೆಚ್ಚುಬಾರಿ ಬಾಧಿಸುವುದು ಅಪರೂಪವೇನಲ್ಲ. 

ಇಸ್ಕೀಮಿಕ್ ಸ್ಟ್ರೋಕ್ ನ ಪೂರ್ವಸೂಚನೆಗಳಲ್ಲಿ ಕ್ಷಣಕಾಲ ರೋಗಿಯನ್ನು ಬಾಧಿಸಿ, ತಾನಾಗಿಯೇ ಮಾಯವಾಗುವ " ತಾತ್ಕಾಲಿಕ ಪಕ್ಷವಾತ" ( ಟ್ರಾನ್ಸಿಯೆಂಟ್ ಇಸ್ಕೀಮಿಕ್ ಎಟಾಕ್, ಟಿ.ಐ.ಎ ) ಪ್ರಮುಖವಾಗಿದೆ. ಕೆಲವೇ ನಿಮಿಷಗಳಿಂದ ಹಿಡಿದು ಕೆಲವು ಘಂಟೆಗಳ ಕಾಲ " ಇದ್ದು ಹೋಗುವ" ಈ ಸಮಸ್ಯೆ ಉದ್ಭವಿಸುವ ಮೊದಲು ಒಂದು ಕಣ್ಣಿನಲ್ಲಿ ದೃಷ್ಟಿದೋಷ, ಆಂಶಿಕ ಅಥವಾ ಸಂಪೂರ್ಣ ದೃಷ್ಟಿನಾಶ, ದೃಷ್ಟಿ ಮಸುಕಾಗುವುದು, ಒಂದು ಕೈ ಮತ್ತು ಒಂದು ಕಾಲಿನಲ್ಲಿ ಅಥವಾ ಕೈಕಾಲುಗಳೆರಡರಲ್ಲೂ ಬಲಹೀನತೆ,ಸ್ಪರ್ಶಜ್ಞಾನದ ಹಾಗೂ ಕಾರ್ಯಕ್ಷಮತೆಯ ಕೊರತೆ ಅಥವಾ ಅಭಾವ ಕಂಡುಬರುವುದು. ಇದಲ್ಲದೆ ಮಾತನಾಡುವಾಗ ತೊದಲುವುದು, ಭಾಷಾ ಸಮಸ್ಯೆ, ಮುಖದ ಒಂದುಭಾಗ ಜೋತುಬಿದ್ದಂತಾಗಿ ವಕ್ರವಾಗುವುದು, ತಲೆ ತಿರುಗಿದಂತಾಗುವುದುಮತ್ತು ಕಣ್ಣು ಕತ್ತಲಾವರಿಸಿದಂತೆ ಆಗುವುದೇ ಮುಂತಾದ ಲಕ್ಷಣಗಳು ಕಂಡುಬರುತ್ತವೆ. 

ಹೆಮೊರೆಜಿಕ್ ಸ್ಟ್ರೋಕ್ ಸಂಭವಿಸುವ ಮೊದಲು ಕ್ಷಣಮಾತ್ರದಲ್ಲಿ ಆರಂಭವಾಗಿ ಅತಿಯಾಗಿ ಉಲ್ಬಣಿಸುವ ಅಸಾಮಾನ್ಯ ತಲೆನೋವು, ವಾಂತಿ, ಅಪಸ್ಮಾರ ಮತ್ತು ಪ್ರಜ್ಞಾಹೀನತೆಯಂತಹ ಲಕ್ಷಣಗಳು ಕಂಡುಬರುತ್ತವೆ. 

ಅಪಾಯಕಾರಿ ಅಂಶಗಳು 

ತಾತ್ಕಾಲಿಕ ಪಕ್ಷವಾತದಲ್ಲಿ (ಟಿ.ಐ.ಎ) ಮೆದುಳಿಗೆ ಪೂರೈಸುವ ರಕ್ತನಾಳವೊಂದರಲ್ಲಿ ಆಕಸ್ಮಿಕವಾಗಿ ಉದ್ಭವಿಸುವ ಅಡಚಣೆಯಿಂದಾಗಿ ಪಕ್ಷವಾತದ ಲಕ್ಷಣಗಳು ಕಂಡುಬಂದರೂ, ಇದರಿಂದಾಗಿ ಮೆದುಳಿಗೆ ಗಂಭೀರವಾದ ಹಾನಿ ಸಂಭವಿಸುವ ಮೊದಲು ಈ ಅಡಚಣೆ ತಾನಾಗಿಯೇ ನಿವಾರಿಸಲ್ಪಡುವುದು. ಆದರೂ ಗಂಭೀರ ಸಮಸ್ಯೆಯೊಂದು ಸ್ವಯಂ ಪರಿಹಾರಗೊಂಡರೂ ನಿರ್ಲಕ್ಷಿಸದೆ ತುರ್ತುಚಿಕಿತ್ಸೆ ಪಡೆಯುವುದರಿಂದ, ಮುಂದೆ ಸಂಭವಿಸಬಹುದಾದ ಪೂರ್ಣ ಪ್ರಮಾಣದ ಪಕ್ಷವಾತವನ್ನು ತಡೆಗಟ್ಟುವುದು ಸುಲಭಸಾಧ್ಯ ಎನಿಸುವುದು. 

ಟಿ.ಐ.ಎ ಪೀಡಿತ ಶೇ.೧೦ ರಷ್ಟು ರೋಗಿಗಳಲ್ಲಿ ಮುಂದಿನ ಎರಡು ವಾರಗಳ ಅವಧಿಯಲ್ಲಿ ಪೂರ್ಣ ಪ್ರಮಾಣದ ಪಕ್ಷವಾತ ಸಂಭವಿಸುವುದು. ಅಂತೆಯೇ ಪೂರ್ಣ ಪ್ರಮಾಣದ ಪಕ್ಷವಾತಕ್ಕೆ ಒಳಗಾದವರಲ್ಲಿ ಶೇ. ೩೦ ಮಂದಿಗೆ ಇದಕ್ಕೂ ಮುನ್ನ ತಾತ್ಕಾಲಿಕ ಪಕ್ಷವಾತ ಬಾಧಿಸಿರುತ್ತದೆ. 

ತಾತ್ಕಾಲಿಕ ಪಕ್ಷವಾತಕ್ಕೆ ದೊಡ್ಡ ಅಥವಾ ಸಣ್ಣಪುಟ್ಟ ರಕ್ತನಾಳಗಳ ಅಡಚಣೆಯೊಂದಿಗೆ, ಕೆಲವೊಮ್ಮೆ ಹೃದಯ ಸಂಬಂಧಿ ಕಾಯಿಲೆಗಳೂ ಕಾರಣವಾಗುತ್ತವೆ. ಆದುದರಿಂದ ಈ ಸಮಸ್ಯೆಯ ನಿರ್ದಿಷ್ಟ ಕಾರಣವನ್ನು ಅರಿಯಲು ಅವಶ್ಯಕ ಪರೀಕ್ಷೆಗಳನ್ನು ನಡೆಸಲೆಬೇಕಾಗುತ್ತದೆ. ಇದರೊಂದಿಗೆ ತಜ್ಞವೈದ್ಯರ ಸಲಹೆಯಂತೆ ಔಷದ- ಶಸ್ತ್ರ ಚಿಕಿತ್ಸೆಯ ಮೂಲಕ ಮುಂದೆ ಸಂಭವಿಸಬಹುದಾದ ಆಘಾತಗಳನ್ನು ನಿವಾರಿಸಿಕೊಳ್ಳಬಹುದು. 

ಇದೇ ರೀತಿಯಲ್ಲಿ ಕರೋಟಿಡ್ ರಕ್ತನಾಳಗಳ ಒಳಮೈಯಲ್ಲಿ ಸಂಗ್ರಹವಾಗಿರುವ ಕೊಬ್ಬು ಇತ್ಯಾದಿ ಅಂಶಗಳಿಂದಾಗಿ ಇವುಗಳು ಸಂಕುಚಿತಗೊಂಡು ಮೆದುಳಿಗೆ ಪೂರೈಕೆಯಾಗುವ ರಕ್ತದ ಪ್ರಮಾಣ ಕಡಿಮೆಯಾಗುವ ಸ್ಥಿತಿಯನ್ನು "ಕರೋಟಿಡ್ ಸ್ಟೆನೋಸಿಸ್" ಎನ್ನುತ್ತಾರೆ. ಈ ಅಡಚಣೆಯ ಪ್ರಮಾಣ ಶೇ. ೫೦ ಕ್ಕೂ ಕಡಿಮೆಯಿದ್ದಲ್ಲಿ ಔಷದ ಚಿಕಿತ್ಸೆ ಹಾಗೂ ಶೇ.೫೦ ಕ್ಕೂ ಹೆಚ್ಚಿದ್ದಲ್ಲಿ ಶಸ್ತ್ರಚಿಕಿತ್ಸೆ ಅವಶ್ಯಕವೆನಿಸುವುದು. ಇಂತಹ ನಿರ್ದಿಷ್ಟ ಚಿಕಿತ್ಸೆಗಳ ಮೂಲಕ ರಕ್ತನಾಳಗಳಲ್ಲಿನ ಅಡಚಣೆಗಳನ್ನು ನಿವಾರಿಸಿ, ಮತ್ತೆ ಸಹಜವಾದ ರಕ್ತಸಂಚಾರವನ್ನು ಪುನರ್ ಸ್ಥಾಪಿಸಲು ಸಾಧ್ಯವಾಗುವುದು. 

ಮೆದುಳಿನ ರಕ್ತನಾಳಗಳ ಹೊರಮೈ ಶಿಥಿಲಗೊಂಡು ದುರ್ಬಲವಾಗಿ, ಚಿಕ್ಕ ಗುಳ್ಳೆಯಂತೆ ಹಿಗ್ಗಿ ಸಂಭವಿಸುವ ಅನ್ಯೂರಿಸಂನಿಂದಾಗಿ ಕೆಲವೊಮ್ಮೆ ರಕ್ತವು ಹನಿಹನಿಯಾಗಿ ಜಿನುಗುವುದು. ಆದರೆ ಕಾರಣಾಂತರಗಳಿಂದ ಅನ್ಯೂರಿಸಂ ಒಡೆದು ತೀವ್ರ ರಕ್ತಸ್ರಾವವಾಗುವ ಸಾಧ್ಯತೆಗಳೂ ಇವೆ. ಮೆದುಳಿನ ಒಳಭಾಗದಲ್ಲಿ ಸಂಭವಿಸುವ ಇಂತಹ ರಕ್ತಸ್ರಾವಕ್ಕೆ "ಇಂಟ್ರಾ ಸೆರೆಬ್ರಲ್ ಹೆಮೋರೇಜ್"(ಐ.ಸಿ.ಎಚ್) ಹಾಗೂ ಮೆದುಳಿನ ಹೊರಭಾಗದಲ್ಲಿ ಸಂಭವಿಸುವ ರಕ್ತಸ್ರಾವಕ್ಕೆ "ಸಬ್ ಅರಕ್ನಾಯ್ದ್ ಹೆಮೋರೇಜ್"(ಎಸ್.ಎ.ಎಚ್) ಎಂದು ಕರೆಯುವರು. 

ಎಸ್.ಎ.ಎಚ್ ಪೀಡಿತ ರೋಗಿಗಳಲ್ಲಿ ಶೇ.೩೦ ಮಂದಿ ಆಸ್ಪತ್ರೆಯನ್ನು ಸೇರುವ ಮುನ್ನವೇ ಮೃತಪಡುತ್ತಾರೆ. ಇನ್ನುಳಿದವರಲ್ಲಿ ಶೇ.೬೦ ಮಂದಿ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ. ಮತ್ತೆ ಶೇ.೧೦ ಮಂದಿ ಶಾಶ್ವತ ಅಂಗವೈಕಲ್ಯಗಳಿಂದ ಪೀಡಿತರಾಗುವುದು ಅಥವಾ ಇತರ ಸಮಸ್ಯೆಗಳಿಂದ ಮೃತಪಡುವುದು ಅಪರೂಪವೇನಲ್ಲ. 

ಅನೇಕರಲ್ಲಿ ಕರೋಟಿಡ್ ರಕ್ತನಾಳಗಳ ಅಡಚಣೆಯ ಪ್ರಮಾಣವನ್ನು ಪತ್ತೆಹಚ್ಚಲು ನಡೆಸುವ ಪರೀಕ್ಷೆಗಳ ಸಂದರ್ಭದಲ್ಲಿ ಪತ್ತೆಯಾಗುವ ಅನ್ಯೂರಿಸಂ, ಕೆಲವೊಮ್ಮೆ ತಾನಾಗಿ ಹಿಗ್ಗಿದಾಗ ಸಮೀಪದ ಮೆದುಳಿನ ಯಾವುದೇ ನರಗಳ ಅಥವಾ ಒಂದು ಭಾಗದ ಮೇಲೆ ಒತ್ತಡ ಬೀಳುವುದರಿಂದ, ಕೆಲವೊಂದು ವಿಶಿಷ್ಟ ಲಕ್ಷಣಗಳನ್ನು ತೋರುತ್ತದೆ. ಇವುಗಳಲ್ಲಿ ದೃಷ್ಟಿ ಮಸುಕಾಗುವುದು, ನೋಡುವ ವಸ್ತು ಎರಡಾಗಿ ಕಾಣಿಸುವುದು ಮತ್ತು ತಲೆನೋವು ಮುಖ್ಯವಾಗಿವೆ. 

ಸಾಮಾನ್ಯವಾಗಿ ಅನ್ಯೂರಿಸಂ ಉದ್ಭವಿಸಿರುವ ಸ್ಥಳ ಹಾಗೂ ಇದರ ಗಾತ್ರ ಮತ್ತು ರೋಗಿಯ ವೈದ್ಯಕೀಯ ಚರಿತ್ರೆಯನ್ನು ಹೊಂದಿಕೊಂಡು ತಜ್ಞವೈದ್ಯರು ಚಿಕಿತ್ಸೆಯನ್ನು ನಿರ್ಧರಿಸುವರು. ಅನ್ಯೂರಿಸಂ ನ ಗಾತ್ರ ವೃದ್ಧಿಸಿದಂತೆಯೇ ಹಾಗೂ ಸಮಯ ಕಳೆದಂತೆಯೇ ಇವು ಒಡೆಯುವ ಸಾಧ್ಯತೆಗಳು ಹೆಚ್ಚುತ್ತಲೇ ಹೋಗುತ್ತವೆ. ಅದೇ ರೀತಿಯಲ್ಲಿ ಅನ್ಯೂರಿಸಂ ನಿಂದ ರಕ್ತಸ್ರಾವವಾದಲ್ಲಿ ಈ ಸಮಸ್ಯೆ ಮರುಕಳಿಸುವ ಸಾಧ್ಯತೆಗಳೂ ಹೆಚ್ಚುತ್ತವೆ. 

ಅನ್ಯೂರಿಸಂ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ತಲೆಬುರುಡೆಯನ್ನು ತೆರೆದು, ಅನ್ಯೂರಿಸಂ ನ ಬುಡದಲ್ಲಿ "ಕ್ಲಿಪ್" ಅಳವಡಿಸುವುದು ಅಥವಾ ರಕ್ತನಾಳಗಳ ಮೂಲಕ " ನ್ಯೂರೋ ಎಂಡೋವಾಸ್ಕ್ಯುಲಾರ್ ಥೆರಪಿ" ಮೂಲಕವೂ ಈ ಸಮಸ್ಯೆಯನ್ನು ಪರಿಹರಿಸಬಹುದು. 

ಅಪರೂಪದಲ್ಲಿ ಕೆಲವೊಂದು ಜನರಲ್ಲಿ ಪತ್ತೆಯಾಗುವ ರಕ್ತನಾಳಗಳ ಅಸಾಮಾನ್ಯ ವಿಕೃತಿಗಳು ಹೆಚ್ಚಾಗಿ ಗರ್ಭಸ್ಥ ಶಿಶುವಿನಲ್ಲಿ ಉದ್ಭವಿಸುತ್ತವೆ. ಇವುಗಳಲ್ಲಿ ಶುದ್ಧ ಹಾಗೂ ಅಶುದ್ದ ರಕ್ತ ಹರಿಯುವ ರಕ್ತನಾಳಗಳ ಅಸಾಮಾನ್ಯ ಜೋಡಣೆಗಳು ಸೇರಿವೆ. ಅಶುದ್ಧ ರಕ್ತ ಹರಿವ ರಕ್ತನಾಳಗಳು ನೇರವಾಗಿ ಅಶುದ್ಧ ರಕ್ತಹರಿವ ರಕ್ತನಾಳಗಳೊಂದಿಗೆ ಜೋಡಣೆಯಾಗಿರುವುದು ಪತ್ತೆಯಾದಲ್ಲಿ, ಅವುಗಳು ಒಡೆದು ರಕ್ತಸ್ರಾವವಾಗುವುದನ್ನು ತಡೆಗಟ್ಟಲು ಶಸ್ತ್ರಚಿಕಿತ್ಸೆ ಅನಿವಾರ್ಯವೆನಿಸುವುದು. ರಕ್ತನಾಳಗಳ ವಿಕೃತಿಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಕ್ಷಿಪ್ರವಾಗಿ ಸರಿಪಡಿಸದಿದ್ದಲ್ಲಿ, ಇವುಗಳ ಸಮೀಪದ ಮೆದುಳಿನ ಭಾಗಗಳ ಮೇಲೆ ಒತ್ತಡ ಹೆಚ್ಚುವುದರಿಂದಾಗಿ ತಲೆನೋವು, ಅಪಸ್ಮಾರಗಳಂತಹ ಲಕ್ಷಣಗಳಲ್ಲದೇ, ಈ ರಕ್ತನಾಳಗಳು ಹಿಗ್ಗಿ ಒಡೆದು ರಕ್ತಸ್ರಾವವಾದಲ್ಲಿ ಮೆದುಳಿಗೆ ಶಾಶ್ವತವಾದ ಹಾನಿ, ಪಕ್ಷವಾತ ಮತ್ತು ಕೆಲವೊಮ್ಮೆ ರೋಗಿಯ ಮರಣಕ್ಕೂ ಕಾರಣವೆನಿಸುವುದು. 

ವಿಶದವಾಗಿ ವಿವರಿಸಿದ ಈ ಮೇಲಿನ ಅಪಾಯಕಾರಿ ಅಂಶಗಳ ಬಗ್ಗೆ ಹಾಗೂ ಮೆದುಳಿನ ಆಘಾತಕ್ಕೆ ನಿರ್ದಿಷ್ಟ ಕಾರಣಗಳ ಬಗ್ಗೆ ಏನೇನೂ ತಿಳಿದಿರದ ನಕಲಿ ವೈದ್ಯರು, ತಮ್ಮಲ್ಲಿ ಬರುವ ರೋಗಿಗಳ- ಅವರ ಸಂಬಂಧಿಗಳ ಅಜ್ನಾನವನ್ನೇ ಬಂಡವಾಳವನ್ನಾಗಿಸಿಕೊಂಡು ತಮ್ಮ ಜೇಬನ್ನು ತುಂಬಿಸಿಕೊಳ್ಳುವುದು ಮಾತ್ರ ಸುಳ್ಳೇನಲ್ಲ.

ಚಿಕಿತ್ಸೆ ಎಂತು - ಏನು 

ಆರೋಗ್ಯವಂತ ವ್ಯಕ್ತಿಗಳ ಹೃದಯವು ಶರೀರಕ್ಕೆ ಪೂರೈಸುವ ರಕ್ತದಲ್ಲಿ ಶೇ. ೨೦ ರಷ್ಟು ಮೆದುಳಿಗೆ ಸರಬರಾಜಾಗುತ್ತದೆ. ಈ ಶುದ್ಧ ರಕ್ತದ ಪ್ರಮಾಣವು ಶೇ. ೫೦ ಕ್ಕಿಂತ ಕಡಿಮೆಯಾದಲ್ಲಿ ಮೆದುಳಿನ ಕಾರ್ಯಕ್ಷಮತೆಯಲ್ಲಿ ವ್ತ್ಯತ್ಯಯವಾಗುವುದು. ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಅಥವಾ ಕೊಬ್ಬಿನ ತುಣುಕುಗಳಿಂದ ಉದ್ಭವಿಸಿದ ಅಡಚಣೆಯಿಂದಾಗಿ ಸಂಭವಿಸುವ ಇಸ್ಕೀಮಿಕ್ ಸ್ಟ್ರೋಕ್ ನಲ್ಲಿ ಈ ಅಡಚಣೆಗಳನ್ನು ಔಷದ ಅಥವಾ ಶಸ್ತ್ರಚಿಕಿತ್ಸೆಯಿಂದ ನಿವಾರಿಸಬೇಕಾಗುತ್ತದೆ. 

ಸಾಮಾನ್ಯವಾಗಿ ಕರೋಟಿಡ್  ಮತ್ತು ವರ್ಟೆಬ್ರಲ್ ಆರ್ಟರಿಗಳಲ್ಲಿ ಅಡಚಣೆಗಳು ಉದ್ಭವಿಸಿದರೂ, ಇವುಗಳ ಮೂಲಕ ಕಿಂಚಿತ್ ಪ್ರಮಾಣದ ರಕ್ತವು ಮೆದುಳಿಗೆ ಪೂರೈಕೆಯಾಗುವುದು. ಆದರೆ ಈ ಅಲ್ಪಪ್ರಮಾಣದ ರಕ್ತದಿಂದ ಮೆದುಳಿನ ಜೀವಕಣಗಳಿಗೆ ಅಗತ್ಯವಿರುವಷ್ಟು ಪೋಷಕಾಂಶಗಳು ದೊರೆಯದ ಕಾರಣದಿಂದಾಗಿ, ಮೆದುಳಿನ ಕಾರ್ಯಕ್ಷಮತೆ ಕುಂಠಿತವಾಗುವುದಲ್ಲದೆ ಅದರ ಕಾರ್ಯವೂ ಸ್ಥಗಿತಗೊಳ್ಳುವುದು. ತತ್ಪರಿಣಾಮವಾಗಿ ಮೆದುಳಿನ ಆಘಾತ ಸಂಭವಿಸುವುದು. ಈ ಸಂದರ್ಭದಲ್ಲಿ ಮೆದುಳಿನ ನಿರ್ದಿಷ್ಟ ಸ್ಥಾನವೊಂದರಲ್ಲಿ ರಕ್ತದ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಲ್ಲಿ ಇಲ್ಲಿನ ಜೀವಕಣಗಳು ೩ ರಿಂದ ೫ ನಿಮಿಷಗಳಲ್ಲಿ ಮೃತಪಡುತ್ತವೆ. ಆದರೆ ಇದರ ಸುತ್ತಮುತ್ತಲಿನ ಭಾಗದಲ್ಲಿರುವ ಜೀವಕಣಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಂಡರೂ ಜೀವಂತವಾಗಿರುತ್ತವೆ. ಈ ಸ್ಥಿತಿಯಲ್ಲಿ ಮೆದುಳಿನ ಈ ಭಾಗದ ಜೀವಕಣಗಳು ಸುಮಾರು ೩ ಘಂಟೆಗಳ ಕಾಲ ಬದುಕಿ ಉಳಿಯುತ್ತವೆ. ಆಧುನಿಕ ಚಿಕಿತ್ಸಾ ಪದ್ದತಿಯಂತೆ ಈ ಜೀವಕಣಗಳನ್ನು ರಕ್ಷಿಸುವುದರೊಂದಿಗೆ, ಮೆದುಳಿಗೆ ಸಂಭವಿಸುವ ಶಾಶ್ವತ ಹಾನಿಯನ್ನು ಯಶಸ್ವಿಯಾಗಿ ನಿಯಂತ್ರಿಸಬಹುದಾಗಿದೆ. ಆದರೆ ಈ ಚಿಕಿತ್ಸೆಯನ್ನು ರೋಗಿಗೆ ಆಘಾತವಾದ ೩ ಘಂಟೆಗಳ ಅವಧಿಯಲ್ಲಿ ನೀಡಬೇಕಾಗುವುದು. ಮಾತ್ರವಲ್ಲ, ಈ ಚಿಕಿತ್ಸೆಯನ್ನು ನೀಡುವ ಮೊದಲು ರೋಗಿಯನ್ನು ಪರೀಕ್ಷೆಗೊಳಪಡಿಸಿ, ಮೆದುಳಿನ ರಕ್ತಸ್ರಾವ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುವುದು. 

ಮೆದುಳಿನ ರಕ್ತಸ್ರಾವದಿಂದ ಸಂಭವಿಸುವ ಹೆಮೊರೆಜಿಕ್ ಸ್ಟ್ರೋಕ್, ಕೆಲವೊಮ್ಮೆ ಇಸ್ಕೀಮಿಕ್ ಸ್ಟ್ರೋಕ್ ನ ಪರಿಣಾಮವಾಗಿ ಉದ್ಭವಿಸಿದ ಸಮಸ್ಯೆಗಳಿಂದಾಗಿ ಅಥವಾ ಹೆಪ್ಪುಗಟ್ಟಿದ ರಕ್ತದ ತುಣುಕುಗಳು ಕರಗಲು ನೀಡಿದ ಔಷದಗಳ ಪರಿಣಾಮವಾಗಿಯೂ ಸಂಭವಿಸಬಹುದು. ಹೆಮೊರೆಜಿಕ್ ಸ್ಟ್ರೋಕ್ ಗೆ ಕಾರಣಗಳು ಭಿನ್ನವಾಗಿದ್ದರೂ, ಇದೊಂದು ಗಂಭೀರ ಹಾಗೂ ಮಾರಕ ಸಮಸ್ಯೆಯಾದುದರಿಂದ ಕ್ಷಿ ಪ್ರಗತಿಯಲ್ಲಿ ತುರ್ತುಚಿಕಿತ್ಸೆ ನೀಡಬೇಕಾಗುವುದು. 

ಮೆದುಳಿನ ಒಳಭಾಗದಲ್ಲಿ ರಕ್ತಸ್ರಾವದಿಂದ ಹೆಪ್ಪುಗಟ್ಟಿದ ರಕ್ತವನ್ನು ಶಸ್ತ್ರಚಿಕಿತ್ಸೆಯ ಅಥವಾ ಇತರ ವಿಧಾನದಿಂದ ತೆಗೆಯಬೇಕಾಗುವುದು. ಅಂತೆಯೇ ಮೆದುಳಿನ ಹೊರಭಾಗದಲ್ಲಿ ರಕ್ತಸ್ರಾವವಾಗಿ ಮೆದುಳು- ಬೆನ್ನುಹುರಿಯ ದ್ರವದಲ್ಲಿ ರಕ್ತದ ಅಂಶಗಳು ಪತ್ತೆಯಾದಲ್ಲಿ, ಮೆದುಳಿನ ಹೊರಭಾಗದಲ್ಲಿ ಶುದ್ಧ ರಕ್ತ ಹರಿವ ರಕ್ತನಾಳಗಳು ಸ್ವಯಂ ಸಂಕುಚಿತವಾಗುತ್ತವೆ. ರಕ್ತಸ್ರಾವ ಸಂಭವಿಸಿದ ಒಂದೆರಡು ದಿನಗಳಿಂದ ಹಿಡಿದು, ಒಂದೆರಡು ವಾರಗಳ ತನಕ ಈ ಸಮಸ್ಯೆ ಬಾಧಿಸುವ ಸಾಧ್ಯತೆಗಳಿದ್ದು ಇದರ ಪರಿಣಾಮವಾಗಿ ಮತ್ತಷ್ಟು ಆಘಾತಗಳಾಗುವುದುಂಟು. ಕೆಲವೊಮ್ಮೆ ಮೆದುಳು- ಬೆನ್ನುಹುರಿಯ ದ್ರವವು ಮೆದುಳಿನ ಸುತ್ತಲಿನ ಭಾಗದಲ್ಲಿ ಸಂಗ್ರಹವಾಗಿ ಹೈಡ್ರೋ ಸೆಫಾಲಸ್ ಉದ್ಭವಿಸುವುದು. ಮೆದುಳಿನ ಸುತ್ತಲೂ ಸಂಗ್ರಹವಾಗುವ ಈ ದ್ರವವು ಸ್ವಾಭಾವಿಕವಾಗಿ ಶರೀರದಲ್ಲಿ ಹೀರಲ್ಪಡುವ ಪ್ರಕ್ರಿಯೆಯು ಸಬ್ ಅರಕ್ನಾಯ್ದ್ ಹೆಮೊ ರೇಜ್ ನಿಂದಾಗಿ ಕುಂಠಿತಗೊಳ್ಳುವುದು. ಸಾಮಾನ್ಯವಾಗಿ ಎಸ್.ಎ.ಎಚ್ ಸಂಭವಿಸಿದ ಬಳಿಕ ಹೈಡ್ರೋ ಸೇಫಾಲಸ್ ತಲೆದೋರಲು ಹಲವಾರು ತಿಂಗಳುಗಳೇ ಬೇಕಾಗಬಹುದು. ಈ ಸಮಸ್ಯೆಯನ್ನು ಸಿ.ಟಿ ಸ್ಕ್ಯಾನ್ ಮೂಲಕ ಪತ್ತೆ ಹಚ್ಚಿ, ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬಹುದು. 

 ಇವೆಲ್ಲ ಚಿಕಿತ್ಸೆಗಳ ಹೊರತಾಗಿಯೂ ಪಕ್ಷವಾತದ ಪರಿಣಾಮವಾಗಿ ರೋಗಿಯ ಶರೀರದ ಒಂದು ಭಾಗದ ಅಂಗಾಂಗಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇದನ್ನು ಸರಿಪಡಿಸಲು " ಫಿಸಿಯೋಥೆರಪಿ" ಯನ್ನು ಹಲವಾರು ತಿಂಗಳುಗಳ ಕಾಲ ನಿರಂತರ ಹಾಗೂ ಕ್ರಮಬದ್ಧವಾಗಿ ಪಡೆದುಕೊಳ್ಳುವ ಮೂಲಕ, ಅನೇಕ ರೋಗಿಗಳು ತಮ್ಮ ಅಂಗಾಂಗಗಳ ಕಾರ್ಯಾಕ್ಷಮತೆಯನ್ನು ಮತ್ತೆ ಸಹಜ ಸ್ಥಿತಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ನಿಮಗಿದು ತಿಳಿದಿರಲಿ 

ಪ್ರಸ್ತುತ ಪ್ರಪಂಚದ ಅತಿಹೆಚ್ಚು ಜನರ ಮರಣಕ್ಕೆ ಕಾರಣವೆನಿಸುವ ಕಾಯಿಲೆಗಳಲ್ಲಿ, ಹೃದ್ರೋಗ ಮತ್ತು ಕ್ಯಾನ್ಸರ್ ನ ಬಳಿಕ ಮೂರನೆಯ ಸ್ಥಾನವು ಮೆದುಳಿನ ಆಘಾತಕ್ಕೆ ಸಲ್ಲುತ್ತದೆ.ಈ ವಿಶಿಷ್ಟ ವ್ಯಾಧಿ ಹಾಗೂ ಇದರ ಚಿಕಿತ್ಸೆಯ ಬಗ್ಗೆ ಇಂದಿನ ವೈಜ್ಞಾನಿಕ ಯುಗದಲ್ಲೂ ಜನಮನದಲ್ಲಿ ಭದ್ರವಾಗಿ ಬೇರೂರಿರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಅನೇಕ ರೋಗಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದು ಸತ್ಯ. ಇದರೊಂದಿಗೆ ನಕಲಿವೈದ್ಯರು ಈ ವ್ಯಾಧಿಯ ಅಸಲಿ ಕಾರಣವನ್ನು ಅರಿತುಕೊಳ್ಳದಿದ್ದರೂ, ನೀಡುವ ಅಸಮರ್ಪಕ, ಅಪ್ರಯೋಜಕ ಚಿಕಿತ್ಸೆಯಿಂದಾಗಿ ಇನ್ನಷ್ಟು ರೋಗಿಗಳು ಶಾಶ್ವತವಾದ ಮೆದುಳಿನ ಹಾನಿ ಮತ್ತು ತತ್ಸಂಬಂಧಿತ ಸಮಸ್ಯೆಗಳಿಂದಾಗಿ ಹಾಸಿಗೆ ಹಿಡಿದಿರುವುದು ಅಥವಾ ಇಹಲೋಕವನ್ನೇ ತ್ಯಜಿಸಿರುವುದು ಕೂಡಾ ಅಷ್ಟೇ ಸತ್ಯ!. 

ಮೆದುಳಿನ ಆಘಾತದಿಂದಾಗಿ ಸಂಭವಿಸುವ ಪಕ್ಷವಾತಕ್ಕೆ " ಇಂಗ್ಲಿಷ್ ಮದ್ದು" ಸೂಕ್ತವಲ್ಲ ಎನ್ನುವುದು ಅನೇಕ ವಿದ್ಯಾವಂತರೂ ನಂಬಿರುವ ಅಪ್ಪಟ ಸುಳ್ಳು. ನಿಜ ಹೇಳಬೇಕಿದ್ದಲ್ಲಿ ಈ ವ್ಯಾಧಿ ಉದ್ಭವಿಸಲು ನಿಖರವಾದ ಕಾರಣವನ್ನು ಅರಿತುಕೊಳ್ಳಬೇಕಿದ್ದಲ್ಲಿ,  ಇದೇ ಇಂಗ್ಲಿಷ್ ಪದ್ದತಿಯ ಪರೀಕ್ಷೆಗಳು ಅನಿವಾರ್ಯ ಎನ್ನುವುದು ಕೂಡಾ ಅನೇಕರಿಗೆ ತಿಳಿದಿಲ್ಲ. ಸಿ ಟಿ ಸ್ಕ್ಯಾನ್, ಎಂ ಆರ್ ಐ, ಎಂ ಆರ್ ಎ, ಡಾಪ್ಲರ್ ಅಲ್ಟ್ರಾ ಸೌಂಡ್ ಮತ್ತಿತರ ಪರೀಕ್ಷೆಗಳ ಮೂಲಕ ಮೆದುಳಿನ ಆಘಾತದ ಕಾರಣವನ್ನು ಪತ್ತೆಹಚ್ಚದೆ ನೀಡುವ ಯಾವುದೇ ಪದ್ದತಿಯ ಚಿಕಿತ್ಸೆ ಫಲಪ್ರದವೆನಿಸದು. 

ಅಂತೆಯೇ ರಕ್ತನಾಳಗಳ ಅಡಚಣೆ ಮತ್ತು ರಕ್ತಸ್ರಾವದಿಂದ ಸಂಭವಿಸುವ ಆಘಾತಗಳ ಚಿಕಿತ್ಸೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದೇ ಕಾರಣದಿಂದಾಗಿ ಮೆದುಳಿನ ಆಘಾತಕ್ಕೆ ಒಳಗಾದ ರೋಗಿಯನ್ನು ತಕ್ಷಣ ಸುಸಜ್ಜಿತ ಆಸ್ಪತ್ರೆಗೆ ದಾಖಲಿಸಿ, ಅವಶ್ಯಕ ಪರೀಕ್ಷೆಗಳ ಮೂಲಕ ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಿ, ರೋಗಿಯನ್ನು ಪ್ರಾಣಾಪಾಯದಿಂದ ಪಾರುಮಾಡಲು ತಜ್ನವೈದ್ಯರಿಂದ ಚಿಕಿತ್ಸೆ ಪಡೆಯುವುದು ಹಿತಕರವೆನಿಸುವುದು. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೩-೦೬-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  


Wednesday, March 26, 2014

Vaidyo narayano hari !. Part-2




   ವೈದ್ಯೋ ನಾರಾಯಣೋ ಹರಿ ! - ಭಾಗ ೨ 

ಸಂತೋಷನ ದುಃಖಕ್ಕೆ ಕಾರಣವೇನು?

ಗಜಗಾತ್ರದ ಸಂತೋಷನಿಗೆ ಪಿತ್ರಾರ್ಜಿತ ಆಸ್ತಿಪಾಸ್ತಿಗಳೊಂದಿಗೆ, ಇತರ ಮೂಲಗಳಿಂದ ಕೈತುಂಬಾ ಆದಾಯ ದೊರೆಯುತ್ತಿತ್ತು. ಆದರೆ ೧೨೦ ಕಿಲೋ ತೂಕದ ವಿವಾಹಯೋಗ್ಯ ಸಂತೋಷನ ಕೈಹಿಡಿಯಲು ಯಾವುದೇ ಕನ್ಯಾಮಣಿಯು ಸಿದ್ಧಳಿರಲಿಲ್ಲ ಎನ್ನುವುದೇ ಸಂತೋಷನ ದುಃಖಕ್ಕೆ ಮೂಲ ಕಾರಣವಾಗಿತ್ತು. 

ಶಾರೀರಿಕ ಶ್ರಮದ ಅಭಾವ, ಅನುವಂಶಿಕತೆ ಮತ್ತು ದಿನದಲ್ಲಿ ಐದಾರು ಬಾರಿ ಸಮೃದ್ಧ ಆಹಾರ ಸೇವಿಸುವ ಸ್ವಭಾವವೇ ಆತನ ಗಜಗಾತ್ರಕ್ಕೆ ಕಾರಣವೆನಿಸಿತ್ತು. ಆದರೆ ವಿವಾಹವಾಗಬೇಕೆನ್ನುವ ಏಕೈಕ ಆಕಾಂಕ್ಷೆಯಿಂದ ಪರಿಚಯದ ವೈದ್ಯರ ಬಳಿ ತೆರಳಿದ ಸಂತೋಷನಿಗೆ, ಎಣ್ಣೆ, ಬೆಣ್ಣೆ, ತುಪ್ಪ ಹಾಗೂ ಸಕ್ಕರೆಗಳನ್ನು ಬಳಸಿ ಸಿದ್ಧಪಡಿಸಿದ ಆಹಾರಪದಾರ್ಥಗಳನ್ನು ವರ್ಜಿಸುವುದರೊಂದಿಗೆ, ಅನ್ನದ ಪ್ರಮಾಣವನ್ನು ಕಡಿಮೆಮಾಡಿ ತರಕಾರಿಗಳ ಸಲಾಡ್ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಜೊತೆಗೆ ದಿನದಲ್ಲಿ ಎರಡು ಬಾರಿ ತಲಾ ಒಂದು ಗಂಟೆಯಂತೆ ಕ್ಷಿಪ್ರ ನಡಿಗೆಯಲ್ಲಿ ತೊಡಗಿಸಿಕೊಳ್ಳಲು ಆದೇಶಿಸಿದ್ದರು. ವೈದ್ಯರ ಸೂಚನೆಗಳನ್ನು ಪರಿಪಾಲಿಸಲು ಸಿದ್ಧನಿಲ್ಲದ ಸಂತೋಷನು, ತನ್ನ ತೂಕವನ್ನು ಸುಲಭದಲ್ಲೇ ಇಳಿಸಬಲ್ಲ ವಿಧಾನವನ್ನು ಅರಸತೊಡಗಿದ್ದನು. ಈ ಸಂದರ್ಭದಲ್ಲಿ ಭೇಟಿಯಾಗಿದ್ದ ಬಂಧುವೊಬ್ಬರು ಸೂಚಿಸಿದ ಸರಳ ಚಿಕಿತ್ಸೆಯೊಂದು ಆತನಿಗೆ ಆಕರ್ಷಕವಾಗಿ ಕಂಡಿತ್ತು. ಏಕೆಂದರೆ ವೈದ್ಯರು ಹೇಳಿದಂತಹ ಯಾವುದೇ ನಿಯಮಗಳನ್ನು ಈ ಚಿಕಿತ್ಸೆಯಲ್ಲಿ ಪರಿಪಾಲಿಸುವ ಅವಶ್ಯಕತೆಯೇ ಇರಲಿಲ್ಲ!. 

ಒಂದಿಷ್ಟೂ ಬೆವರಿಳಿಸದೇ ಮತ್ತು ಆಹಾರ ಸೇವನೆಯಲ್ಲಿ ಪಥ್ಯವನ್ನು ಅನುಸರಿಸದೇ ಪಡೆಯಬಹುದಾದ ಈ ಚಿಕಿತ್ಸೆಯಲ್ಲಿ, ವಾರದ ಏಳು ದಿನಗಳಲ್ಲಿ ಏಳು ವಿಭಿನ್ನ ಸಸ್ಯಗಳ ಎಲೆಗಳಿಂದ ತಯಾರಿಸಿದ ರಸವನ್ನು ನಿಗದಿತ ಪ್ರಮಾಣದಲ್ಲಿ, ನಿಗದಿತ ದಿನದಂದು ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಸೇವಿಸಬೇಕಾಗಿತ್ತು. ಶುಭದಿನದಂದು ಚಿಕಿತ್ಸೆಯನ್ನು ಪ್ರಾರಂಭಿಸಿದ ಸಂತೋಷನು, ನಿರಂತರವಾಗಿ ಆರು ತಿಂಗಳುಗಳ ಕಾಲ "ಸಪ್ತ ಸಸ್ಯಗಳ ಸ್ವರಸ" ವನ್ನು ಸೇವಿಸಿದರೂ, ಆತನ ತೂಕ ಆರು ಕಿಲೋಗಳಷ್ಟು ಕೂಡಾ ಕಡಿಮೆಯಾಗಲಿಲ್ಲ. ಸಂತೋಷನ ದುಃಖ ಇನ್ನಷ್ಟು ಹೆಚ್ಚಲು ಕಾರಣವೆನಿಸಿದ್ದ ಈ ಚಿಕಿತ್ಸೆಯು ಅಪೇಕ್ಷಿತ ಪರಿಣಾಮವನ್ನು ನೀಡಬೇಕಿದ್ದಲ್ಲಿ, ಆತನ ವೈದ್ಯರು ಸೂಚಿಸಿದ್ದ ನಿಯಮಗಳ ಪರಿಪಾಲನೆ ಅವಶ್ಯವಾಗಿತ್ತು. ಹಾಗೂ ಇದನ್ನು ಅನುಸರಿಸಲು ಸಿದ್ಧನಿಲ್ಲದ ಕಾರಣದಿಂದಾಗಿಯೇ, ಸಂತೋಷನ ತೂಕವು ಕಿಂಚಿತ್ ಕೂಡಾ ಕಡಿಮೆಯಾಗದಿರಲು ಮೂಲವೆನಿಸಿತ್ತು. 

" ಮಹಾಕಾಯ" ರು ತಮ್ಮ ತೂಕವನ್ನು ಇಳಿಸಿಕೊಳ್ಳಲು ನಿಶ್ಚಿತವಾಗಿಯೂ ಯಾವುದೇ ಔಷದ ಸೇವನೆಯ ಅವಶ್ಯಕತೆಯಿಲ್ಲ. ತಮ್ಮ ಜಿಹ್ವಾ ಚಾಪಲ್ಯವನ್ನು ಹತೋಟಿಯಲ್ಲಿ ಇರಿಸಬಲ್ಲ ಮನೋಬಲ ಹಾಗೂ ತೀವ್ರ ವ್ಯಾಯಾಮದಲ್ಲಿ ಭಾಗವಹಿಸಲು ಬೇಕಾದ ಶಾರೀರಿಕ ಬಲಗಳೊಂದಿಗೆ, ಜೀವನಶೈಲಿಯಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧರಿದ್ದಲ್ಲಿ ಅಪೇಕ್ಷಿತ ಪರಿಣಾಮ ದೊರೆಯುವುದರಲ್ಲಿ ಸಂದೇಹವಿಲ್ಲ. ಆದರೆ ಕಾಸು ಖರ್ಚಿಲ್ಲದೆ ಮಾಡುವ ಪ್ರಯೋಗಗಳು ಮತ್ತು ದುಬಾರಿ ಬೆಲೆಯ ತೂಕ ಇಳಿಸಿಕೊಳ್ಳುವ ಚಿಕಿತ್ಸೆಗಳು, ನಿಮ್ಮ ಆರೋಗ್ಯದ ಮತ್ತು ಹಣದ ಥೈಲಿಯನ್ನು ಸೊರಗಿಸಬಹುದೇ ಹೊರತು ನಿಮ್ಮ ತೂಕವನ್ನಲ್ಲ ಎನ್ನುವುದನ್ನು ಮರೆಯದಿರಿ.

ಚಂದ್ರಪ್ಪನ ಚರ್ಮರೋಗ 

ಕಿಂಚಿತ್ ಶೀತವಾದರೂ ತನ್ನ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವ ಚಂದ್ರಪ್ಪನಿಗೆ, ಕಡು ಬೇಸಗೆಯ ದಿನಗಳಲ್ಲಿ ತೊಡೆ ಸಂದಿಯಲ್ಲಿ ತುರಿಕೆ ಆರಂಭವಾಗಿತ್ತು.ಸಾರ್ವಜನಿಕ ಸ್ಥಳಗಳಲ್ಲಿ ತುರಿಕೆ ಪ್ರಾರಂಭವಾದಾಗ ತುಸು ಮುಜುಗರವಾಗುತ್ತಿದ್ದರೂ, ವೈದ್ಯರಲ್ಲಿ ಹೋಗಲು ಆತನಿಗೆ ಸಂಕೋಚವಾಗಿತ್ತು. ಸ್ನೇಹಿತರ ಸಲಹೆಯಂತೆ ವಿವಿಧ ರೀತಿಯ ಟಾಲ್ಕಂ ಪೌಡರ್ ಗಳು ಮತ್ತು ಜಾಹೀರಾತುಗಳಲ್ಲಿ ಕಂಡಿದ್ದ ಅನೇಕ ಮುಲಾಮುಗಳಿಂದ ಒಂದಿಷ್ಟೂ ಪರಿಹಾರ ದೊರೆಯದಿದ್ದಾಗ ಚಂದ್ರಪ್ಪನಿಗೆ ಕೊಂಚ ಭೀತಿಯೂ ಉಂಟಾಗಿತ್ತು. 

ಪತಿಯ ತುರಿಕೆಯನ್ನು ಕೆಲದಿನಗಳಿಂದ ಗಮನಿಸಿದ ಪತ್ನಿಯು ಈ ಬಗ್ಗೆ ವಿಚಾರಿಸಿದಾಗ ಆತನ ಮುಖವು ಬಾಡಿತ್ತು. ಸದಾ ಪತಿಯನ್ನು ಸಂದೇಹಿಸುತ್ತಿದ್ದ ಸಂಶಯ ಪಿಶಾಚಿಯಾದ ಆಕೆಗೆ, ತನ್ನ ಪತಿಗೆ " ಹೊರಗಿನ ಚಾಳಿ" ಆರಂಭವಾಗಿದ್ದು ಯಾವುದೋ ಗುಹ್ಯ ರೋಗವು ಬಾಧಿಸುತ್ತಿದೆ ಎನ್ನುವ ಸಂಶಯ ಮೂಡಿತ್ತು. ಇದೇ ಕಾರಣದಿಂದಾಗಿ ಪತಿ ಪತ್ನಿಯರ ನಡುವೆ ಉದ್ಭವಿಸಿದ್ದ ವಿರಸಕ್ಕೆ ಕಾರಣವೆನಿಸಿದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಸಲುವಾಗಿ ಇಬ್ಬರೂ ಕುಟುಂಬ ವೈದ್ಯರ ಬಳಿಗೆ ತೆರಳಿದ್ದರು. 

ಚಿಕ್ಕಪುಟ್ಟ ಸಮಸ್ಯೆಗಳಿಗೂ ತನ್ನ ಬಳಿ ಬರುತ್ತಿದ್ದ ಚಂದ್ರಪ್ಪನು ಈ ಬಾರಿ ಕಾಯಿಲೆ ಉಲ್ಬಣಿಸಿದ ಬಳಿಕ ಬಂದಿದ್ದುದು ವೈದ್ಯರಿಗೂ ಆಶ್ಚರ್ಯವೆನಿಸಿತ್ತು. ಪತಿಯ ಕಾಯಿಲೆಯ ಬಗ್ಗೆ ತನ್ನ ಸಂದೇಹ ಮತ್ತು ಅನಿಸಿಕೆಗಳನ್ನು ಹೇಳಲಾರಂಭಿಸಿದ ಆತನ ಪತ್ನಿಯನ್ನು ಸುಮ್ಮನಿರುವಂತೆ ಹೇಳಿದ ವೈದ್ಯರು, ಚಂದ್ರಪ್ಪನನ್ನು ಪರೀಕ್ಷಾ ಕೊಠಡಿಗೆ ಕರೆದೊಯ್ದರು. ಚಂದ್ರಪ್ಪನನ್ನು ಕಾಡುತ್ತಿದ್ದ ಸಮಸ್ಯೆಗೆ ಶೀಲಿಂದ್ರದ ಸೋಂಕು ಕಾರಣವೆಂದು ವೈದ್ಯರಿಗೆ ತಿಳಿದುಬಂದಿತ್ತು. ಇದನ್ನು ಗುಣಪಡಿಸಬಲ್ಲ ಔಷದ- ಮುಲಾಮುಗಳನ್ನು ನೀಡಿದ ವೈದ್ಯರು, ಆತನ ನಡತೆಯನ್ನು ಸಂದೆಹಿಸಿದ್ದ ಪತ್ನಿಗೆ ಛೀಮಾರಿ ಹಾಕಲು ಮರೆಯಲಿಲ್ಲ. ಏಳು ದಿನಗಳ ಚಿಕಿತ್ಸೆಯ ಬಳಿಕ ಚಂದ್ರಪ್ಪನ ಚರ್ಮರೋಗದೊಂದಿಗೆ, ಪತಿಪತ್ನಿಯರ ನಡುವೆ ಮೂಡಿದ್ದ ವಿರಸವೂ ಮಾಯವಾಗಿತ್ತು!. 

ಆಸ್ತಮಾ ಕಾಯಿಲೆಗೆ ಆಯಸ್ಕಾಂತ ಮದ್ದಲ್ಲ 

ಬಾಲ್ಯದಿಂದಲೇ ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ನೀಲಮ್ಮನಿಗೆ ಈ ಕಾಯಿಲೆಯ ಪೀಡೆಯಿಂದಾಗಿ ಜೀವನದಲ್ಲಿ ಜಿಗುಪ್ಸೆ ಮೂಡಿತ್ತು. ಯಾವುದೇ ರೀತಿಯ ಪೂರ್ವಸೂಚನೆಯನ್ನೇ ನೀಡದೆ ಬಂದೆರಗುತ್ತಿದ್ದ ಆಸ್ತಮಾದ ತೀವ್ರತೆಯು ಆಕೆಯನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ವಿವಿಧ ವೈದ್ಯರ ಮತ್ತು ವಿಭಿನ್ನ ಪದ್ದತಿಗಳ ಚಿಕಿತ್ಸೆಗೂ ಬಗ್ಗದ ನೀಲಮ್ಮನ ಆಸ್ತಮಾ, ಇದೀಗ ಇಳಿ  ವಯಸ್ಸಿನಲ್ಲಿ ಅಸಹನೀಯವೆನಿಸುತ್ತಿತ್ತು. 

ಅದೊಂದು ದಿನ ಅಯಾಚಿತವಾಗಿ ದೊರೆತಿದ್ದ ಕರಪತ್ರದಲ್ಲಿ "ಆಯಸ್ಕಾಂತ ಚಿಕಿತ್ಸೆ" ಯ ಅದ್ಭುತ ಪರಿಣಾಮಗಳನ್ನು ಓದಿದ ಆಕೆಗೆ, ತನ್ನ ಸಮಸ್ಯೆಯನ್ನು ಈ ಚಿಕಿತ್ಸೆಯ ಮೂಲಕ ಗುಣಪಡಿಸಬಹುದೆನ್ನುವ ಆಸೆ ಮನದಲ್ಲಿ ಮೂಡಿತ್ತು. ಮರುದಿನವೇ ಸಹಸ್ರಾರು ರೂಪಾಯಿಗಳನ್ನು ತೆತ್ತು ಖರೀದಿಸಿದ ವಿವಿಧ ಗಾತ್ರದ, ವಿವಿಧ ಆಕಾರಗಳ ಆಯಸ್ಕಾಂತಗಳನ್ನು ಕಂಡು, ತನ್ನ ಕಾಯಿಲೆ ಗುಣವಾಯಿತೆಂದೇ ನಂಬಿದರು. 

ಶರೀರದ ವಿವಿಧ ಭಾಗಗಳ ಮೇಲೆ ಉಪಯೋಗಿಸಬೇಕಾದ ವಿಭಿನ್ನ ಆಯಸ್ಕಾಂತಗಳನ್ನು ಗುರುತಿಸಿ, ವಿಂಗಡಿಸಿದ ಬಳಿಕ ನೀಲಮ್ಮನ ದೈನಂದಿನ ಚಿಕಿತ್ಸೆ ಆರಂಭವಾಯಿತು. ಕೈಕಾಲುಗಳನ್ನು ಆಯಸ್ಕಾಂತದ ಮೇಲಿರಿಸಿ ಧ್ಯಾನದ ಭಂಗಿಯಲ್ಲಿ ಕುಳಿತುಕೊಳ್ಳುವುದು, ನೀರಿನ ಪಾತ್ರೆಯಲ್ಲಿ ಪುಟ್ಟ ಆಯಸ್ಕಾಂತವನ್ನು ಮುಳುಗಿಸಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿಯುವುದೇ ಮುಂತಾದ ನಾಲ್ಕಾರು ವಿಧದ ಪ್ರಯೋಗಗಳು ಅವಿರತವಾಗಿ ನಡೆದವು. ಒಂದೆರಡು ತಿಂಗಳುಗಳಲ್ಲಿ ತನ್ನ ಸಮಸ್ಯೆ ಪರಿಹಾರಗೊಂದು ದೈನಂದಿನ ಔಷದ ಸೇವನೆಯನ್ನು ನಿಲ್ಲಿಸಬಹುದೆಂದು ನಂಬಿದ್ದ ನೀಲಮ್ಮನಿಗೆ, ಆರು ತಿಂಗಳ ಚಿಕಿತ್ಸೆಯಿಂದಲೂ ಕಿಂಚಿತ್ ಪರಿಹಾರವೂ ದೊರೆತಿರಲಿಲ್ಲ. ಇದೇ ಕಾರಣದಿಂದಾಗಿ ಉಂಟಾಗಿದ್ದ ಮಾನಸಿಕ ಒತ್ತಡವು ಆಕೆ ಸೇವಿಸುತ್ತಿದ್ದ ಔಷದಗಳ ಪ್ರಮಾಣ ಇನ್ನಷ್ಟು ಹೆಚ್ಚಾಗಲು ಕಾರಣವೆನಿಸಿತ್ತು. ಆರು ತಿಂಗಳ ಬಳಿಕ ತೀವ್ರವಾಗಿ ಉಲ್ಬಣಿಸಿದ್ದ ಆಸ್ತಮಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ್ದ ತಜ್ಞರ ಸಲಹೆಯಂತೆ, ನೀಲಮ್ಮನು ಆಯಸ್ಕಾಂತ ಚಿಕಿತ್ಸೆಗೆ ತಿಲಾಂಜಲಿ ನೀಡಿದ್ದಳು!. 

ಸರ್ವರೋಗಹರ ಆಯಸ್ಕಾಂತ ಹಾಸಿಗೆ!

ಹತ್ತಾರು ವರ್ಷಗಳ ಹಿಂದೆ ಮನುಷ್ಯನನ್ನು ಬಾಧಿಸಬಲ್ಲ ಯಾವುದೇ ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳಿಗೆ ಏಕಮಾತ್ರ ಪರಿಹಾರ ಎನ್ನುವ ಜಾಹೀರಾತು ಅಥವಾ ಕರಪತ್ರಗಳನ್ನು ನೀವು ಓದಿದ್ದುದು  ನೆನಪಿದೆಯೇ?. ಒಂದು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ, ಮೇಲ್ನೋಟಕ್ಕೆ ಚಾಪೆಯಂತೆ ಕಾಣುವ, ಅದ್ಭುತ ಶಕ್ತಿಯ ಈ ಆಯಸ್ಕಾಂತ ಹಾಸಿಗೆಯನ್ನು ಖರೀದಿಸಿದ ಪ್ರತಿಯೊಬ್ಬರೂ ಟೋಪಿ ಹಾಕಿಸಿಕೊಂದದ್ದು ನಿಜ. ಆದರೆ ಇದರ ತಯಾರಕರು ತಮ್ಮ ಗ್ರಾಹಕರಿಗೆ ನೀಡುವ ಶೇ. ೨೫ ರಷ್ಟು ಕಮಿಷನ್ ನ ಆಸೆಯಿಂದ ಟೋಪಿ ಹಾಕಿಸಿಕೊಂಡವರು ತಮ್ಮ ಬಂಧುಮಿತ್ರರಿಗೂ ಟೋಪಿ ಹಾಕಿಸಿದ್ದು ನಿಮ್ಮಾಣೆಗೂ ನಿಜ!. 

ಕೆಲವೇ ತಿಂಗಳುಗಳ ಹಿಂದೆ ಈ ಉತ್ಪನ್ನದ ತಯಾರಕರ ಮೇಲೆ ಆದಾಯಕರ ಮತ್ತು ಇತರ ಇಲಾಖೆಗಳು ದಾಳಿಯನ್ನು ನಡೆಸಿ, ಅಪಾರ ಪ್ರಮಾಣದ ಸಂಪತ್ತನ್ನು ಪತ್ತೆಹಚ್ಚುವುದರೊಂದಿಗೆ, ಇವರ ವಿರುದ್ಧ ವಂಚನೆಯ ಪ್ರಕರಣವನ್ನು ದಾಖಲಿಸಲಾಗಿದೆ. ಇದರೊಂದಿಗೆ ಟೋಪಿ ಹಾಕುವ ಮತ್ತು ಟೋಪಿ ಹಾಕಿಸಿಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿದೆ!. 

ಮೂಲತಃ ಅಲರ್ಜಿಯಿಂದ ಉದ್ಭವಿಸುವ ಆಸ್ತಮಾ ಉಲ್ಬಣಿಸಲು ಹಲವಾರು ಕಾರಣಗಳಿವೆ. ಉದಾಹರಣೆಗೆ ಆಸ್ತಮಾ ಬಾಧಿಸಲು ಧೂಳು ಕಾರಣವೆಂದಾದರೆ, ಧೂಳು ಇರುವ ಪರಿಸರದಿಂದ ದೂರವಿರುವುದು ಹಿತಕರ. ಆಸ್ತಮಾ ಬಾಧಿಸಿದಾಗ ಶ್ಲೇಷ್ಮದಿಂದ ತುಂಬಿ ಸಂಕುಚಿತಗೊಳ್ಳುವ ನಿಮ್ಮ ಶ್ವಾಸಕೋಶಗಳು, ಆಯಸ್ಕಾಂತ ಚಿಕಿತ್ಸೆಯಿಂದ ವಿಕಸಿತಗೊಳ್ಳುವುದು ನಿಜಕ್ಕೂ ಅಸಾಧ್ಯವೆಂದು ಅರಿತಿರಿ.

ಅಪರ್ಣಾಳ ಅಪಸ್ಮಾರ 

ಎರಡುವರ್ಷ ವಯಸ್ಸಿನ ಅಪರ್ಣಾಳಿಗೆ ಆಕಸ್ಮಿಕವಾಗಿ ಅಪಸ್ಮಾರ ಆರಂಭವಾದಾಗ ಆಕೆಯ ಮಾತಾಪಿತರಿಗೆ ಗಾಬರಿಯಾಗಿತ್ತು. ಆದರೆ ನೆರೆಮನೆಯವರು ಸೂಚಿಸಿದಂತೆ ಆಧುನಿಕ ಪದ್ಧತಿಯ ಔಷದಗಳು ಹಾನಿಕರವೆಂದು ಭಾವಿಸಿ ಅನ್ಯ ಪದ್ಧತಿಯ ಚಿಕಿತ್ಸೆಯನ್ನು ಆಕೆಗೆ ನೀಡಲಾಗುತ್ತಿತ್ತು. ವಿಶೇಷವೆಂದರೆ ಕುಟುಂಬ ವೈದ್ಯರಿಂದಲೂ ಈ ವಿಷಯವನ್ನು ಮುಚ್ಚಿಡಲಾಗಿತ್ತು.

ಅಪರ್ಣಾ ಪ್ರಾಥಮಿಕ ಶಾಲೆಗೇ ಹೋಗಲಾರಂಭಿಸಿದರೂ ಆಕೆಯ ಸಮಸ್ಯೆ ಸುರಕ್ಷಿತ ಪದ್ಧತಿಯ ಚಿಕಿತ್ಸೆಯಿಂದ ಕಡಿಮೆಯಾಗಿರಲಿಲ್ಲ. ಆದರೂ ಆಕೆಯ ಮಾತಾಪಿತರು ಈ ಚಿಕಿತ್ಸೆಯನ್ನು ನಿಲ್ಲಿಸಿರಲಿಲ್ಲ. ಶಾಲೆಗೆ ಹೋಗುತ್ತಿದ್ದ ಅಪರ್ಣಾ, ಕೆಲವೊಮ್ಮೆ ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಅಪಸ್ಮಾರದ ಸೆಳೆತಗಳಿಂದ ನಿಶ್ಚೇಷ್ಟಿತಳಾಗಿ ಬೀಳುತ್ತಿದ್ದಳು. ಆಕೆಯ ಆರೋಗ್ಯದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಾಪಕರು, ಆಕೆಯ ಮಾತಾಪಿತರನ್ನು ಶಾಲೆಗೇ ಕರೆಸಿ ಸೂಕ್ತ ಚಿಕಿತ್ಸೆಯನ್ನು ಕೊಡಿಸುವಂತೆ ಒತ್ತಾಯಿಸಿದ್ದರು. 

ಅಂತಿಮವಾಗಿ ಅನ್ಯಮಾರ್ಗವಿಲ್ಲದೇ ಕುಟುಂಬ ವೈದ್ಯರ ಸಲಹೆ ಪಡೆಯಲು ತೆರಳಿದ ಮಾತಾಪಿತರಿಗೆ, ಆಕೆಯನ್ನು ಖ್ಯಾತ ತಜ್ಞರಲ್ಲಿಗೆ ಸೂಚಿಸಲಾಗಿತ್ತು. ತಜ್ಞ ವೈದ್ಯರ ಚಿಕಿತ್ಸೆ ಪ್ರಾರಂಭವಾದಂತೆಯೇ, ಆಕೆಯ ಅಪಸ್ಮಾರದ ಸೆಳೆತಗಳೂ ಕಣ್ಮರೆಯಾಗಿದ್ದವು!. ಆಕೆಗೆ ಚಿಕಿತ್ಸೆಯನ್ನು ನೀಡಿದ ವೈದ್ಯರ ಅಭಿಪ್ರಾಯದಂತೆ, ಅಪರ್ಣಾಳಿಗೆ ಪ್ರಾರಂಭಿಕ ಹಂತದಲ್ಲೇ ಆಧುನಿಕ ಪದ್ಧತಿಯ ಚಿಕಿತ್ಸೆಯನ್ನುನೀಡಿದ್ದಲ್ಲಿ ಆಕೆಯ ಅಪಸ್ಮಾರ ನಿಶ್ಚಿತವಾಗಿಯೂ ಗುಣವಾಗುತ್ತಿತ್ತು. ಆದರೆ ಅನ್ಯ ಪದ್ಧತಿಯ ಚಿಕಿತ್ಸೆ ನೀಡಿದ್ದ ಕಾರಣದಿಂದಾಗಿ ಈ ವ್ಯಾಧಿಯು ಇನ್ನಷ್ಟು ಉಲ್ಬಣಿಸಿತ್ತು. ವಿಶೇಷವೆಂದರೆ ತಜ್ಞ ವೈದ್ಯರ ಚಿಕಿತ್ಸೆ ಆರಂಭವಾದ ಬಳಿಕ ಅಪರ್ಣಾಳ ಅಪಸ್ಮಾರ ಮಾಯವಾಗುವುದರೊಂದಿಗೆ, ಆಕೆಯ ಸಾಮಾನ್ಯ ಆರೋಗ್ಯದ ಮಟ್ಟವೂ ಸಾಕಷ್ಟು ಸುಧಾರಿಸಿತ್ತು!. 

ನಿಮ್ಮ ಆರೋಗ್ಯದ ಸಮಸ್ಯೆಗಳಿಗೆ ಪಡೆಯಲೇ ಬೇಕಾದ ಚಿಕಿತ್ಸೆಗಳಲ್ಲಿ ಆಧುನಿಕ- ಪುರಾತನ, ನೈಸರ್ಗಿಕ- ಕೃತಕ, ಅಡ್ಡ ಪರಿಣಾಮ ಬೀರುವ- ಬೀರದ ಮತ್ತು ಸುರಕ್ಷಿತ ಹಾಗೂ ಹಾನಿಕರ ಎನ್ನುವುದನ್ನು ನೀವಾಗಿ ನಿರ್ಧರಿಸದಿರಿ. ಎಲ್ಲ ವಿಧದ ಕಾಯಿಲೆಗಳಿಗೆ ಎಲ್ಲಾ ವಿಧದ ಪದ್ಧತಿಗಳ ಚಿಕಿತ್ಸೆ ಪರಿಣಾಮಕಾರಿ ಆಗದು ಎನ್ನುವುದನ್ನು ಮರೆಯದಿರಿ. 

ಮನುಷ್ಯನ ಜೀವಿತಾವಧಿಯಲ್ಲಿ ಆಹಾರ, ವಸತಿ ಮತ್ತು ವಸ್ತ್ರಗಳಷ್ಟೇ ಅವಶ್ಯಕವೆನಿಸುವ ಆರೋಗ್ಯ ರಕ್ಷಣೆ ಹಾಗೂ ಕಾಯಿಲೆಗಳು ಪೀಡಿಸಿದಾಗ ಪಡೆದುಕೊಳ್ಳಲೇ  ಬೇಕಾದ ಸಮರ್ಪಕ ಚಿಕಿತ್ಸೆಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳು, ಮೂಢನಂಬಿಕೆಗಳು ಮತ್ತು ತಾನು ಆರೋಗ್ಯದಿಂದ ಇದ್ದೇನೆ ಎನ್ನುವ ಆತ್ಮವಿಶ್ವಾಸಗಳು ಪ್ರಾಣಾಪಾಯಕ್ಕೂ ಕಾರಣವೆನಿಸಬಹುದು. ಆಧುನಿಕ ವಿಜ್ಞಾನದ ಫಲವಾದ, ನಮ್ಮ ದೈನಂದಿನ ಜೀವನವನ್ನು ಇನ್ನಷ್ಟು ಸುಖಕರವಾಗಿಸಬಲ್ಲ ಸಕಲ ವಸ್ತುಗಳನ್ನೂ ಬಯಸುವ ಜನರು, ಆಧುನಿಕ ವೈದ್ಯಕೀಯ ಸಂಶೋಧನೆಗಳ ಫಲವನ್ನು ತಮ್ಮ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸಿಸಲು ಬಳಸಲು ಹಿಂಜರಿಯುವುದು ಸರಿಯಲ್ಲ. ತಮ್ಮನ್ನು ಬಾಧಿಸುವ ಕಾಯಿಲೆ ಯಾವುದೆಂದು ಅರಿಯದೇ ಹಾಗೂ ಯಾವುದೇ ಪದ್ಧತಿಯ ಚಿಕಿತ್ಸೆಯನ್ನು ಆರಂಭಿಸುವ ಮೊದಲು, ಪದವೀಧರ ವೈದ್ಯರು ಅಥವಾ ತಜ್ಞವೈದ್ಯರ ಸಲಹೆಯನ್ನು ಪಡೆಯುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಹಿತಕರ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೦-೧೧-೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


Tuesday, March 25, 2014

VAIDYO NARAYANO HARI!



  ವೈದ್ಯೋ ನಾರಾಯಣೋ ಹರಿ!

ನಿರಂತರವಾಗಿ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳ ಫಲವಾಗಿ ನಮಗಿಂದು ಅತ್ಯುತ್ತಮ ಔಷದಗಳು ಲಭ್ಯವಿದ್ದರೂ, ನಮ್ಮನ್ನು ನಿರಂತರವಾಗಿ ರೋಗರಹಿತರಾಗಿ ಕಾಪಾಡಬಲ್ಲ ಔಷದಗಳನ್ನು ಯಾವುದೇ ವೈದ್ಯಕೀಯ ವಿಜ್ಞಾನಿಗಳು ಇಂದಿಗೂ ಕಂಡುಹುಡುಕಿಲ್ಲ. ಗಂಭೀರ - ಮಾರಕ ಕಾಯಿಲೆಗಳು ಬಾಧಿಸಿದಾಗ ಔಷದರಹಿತ ಚಿಕಿತ್ಸೆ ಅಥವಾ ನಕಲಿವೈದ್ಯರ ಚಿಕಿತ್ಸೆಗಳನ್ನು ಪ್ರಯೋಗಿಸಲು ಪ್ರಯತ್ನಿಸಿದಲ್ಲಿ, ಮತ್ತಷ್ಟು ಸಮಸ್ಯೆಗಳು ಉದ್ಭವಿಸುವುದರಲ್ಲಿ ಸಂದೇಹವಿಲ್ಲ ಎನ್ನುವುದನ್ನು ಮರೆಯದಿರಿ. 
-------------             -------------             ------------               ---------------          --------------

ಚಿಕಿತ್ಸೆಯನ್ನೇ ಒಲ್ಲದ ಚಿದಾನಂದ 

ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಚಿದಾನಂದರಿಗೆ ದಿನವಿಡೀ ಬಿಡುವಿಲ್ಲದ ದುಡಿತ. ಅಪರೂಪದಲ್ಲೊಮ್ಮೆ ಅತಿಯಾದ ಆಯಾಸ ಹಾಗೂ ತಲೆತಿರುಗಿದಂತಾಗಲು ತನ್ನ ವಯಸ್ಸೇ ಕಾರಣವೆಂದು ಅವರು ನಂಬಿದ್ದರು. ಅದೊಂದು ದಿನ ವ್ಯಾಪಾರ ಮುಗಿಸಿ ಮನೆಗೆ ಬಂದು ಸಾಕಷ್ಟು ವಿಶ್ರಾಂತಿ ಪಡೆದ ಬಳಿಕವೂ, ಆಯಾಸ ಮತ್ತು ತಲೆತಿರುಗುವುದು ಮಾತ್ರ ಕಡಿಮೆಯಾಗಿರಲಿಲ್ಲ. 

ಮರುದಿನ ಪರಿಚಯದ ವೈದ್ಯರಲ್ಲಿ ತೆರಳಿ ಪರೀಕ್ಷಿಸಿಕೊಂಡ ಚಿದಾನಂದರಿಗೆ ಅಧಿಕ ರಕ್ತದೊತ್ತಡ ಇರುವುದು ಪತ್ತೆಯಾಗಿತ್ತು. ಔಷದ ಸೇವನೆಗೆ ಒಪ್ಪದಿದ್ದ ರೋಗಿಗೆ ಆಹಾರದಲ್ಲಿ ಪಥ್ಯ, ಜೀವನಶೈಲಿಯಲ್ಲಿ ಬದಲಾವಣೆ ಹಾಗೂ ದಿನನಿತ್ಯ ನಡಿಗೆಗಳನ್ನು ಅನುಸರಿಸುವಂತೆ ಸೂಚಿಸಿದ ವೈದ್ಯರು, ವಾರದಲ್ಲಿ ಒಂದುಬಾರಿ ತನ್ನಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಿದ್ದರು. ತಿಂಗಳೊಪ್ಪತ್ತಿನಲ್ಲಿ ಚಿದಾನಂದರ ರಕ್ತದೊತ್ತಡ ಗಮನಾರ್ಹವಾಗಿ ಕಡಿಮೆಯಾದರೂ, ಅವರನ್ನು ಕಾಡುತ್ತಿದ್ದ ಅತಿಆಯಾಸ ಮತ್ತು ತಲೆತಿರುಗುವಿಕೆಗಳು ಕಿಂಚಿತ್ ಕೂಡಾ ಕಡಿಮೆಯಾಗಿರಲಿಲ್ಲ. ಇದೇ ಕಾರಣದಿಂದಾಗಿ ಮಧುಮೇಹವನ್ನು ಸಂದೇಹಿಸಿದ ವೈದ್ಯರು ಅವಶ್ಯಕ ಪರೀಕ್ಷೆಗಳನ್ನು ನಡೆಸಿದಾಗ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ತೀವ್ರವಾಗಿ ಹೆಚ್ಚಿರುವುದು ತಿಳಿದುಬಂದಿತ್ತು. ವಿಷಯವರಿತ ಚಿದಾನಂದರಿಗೆ ಆಕಾಶವೇ ತಲೆಗೆ ಬಿದ್ದಂತಾಗಿತ್ತು. ವೈದ್ಯರ ಅಭಿಪ್ರಾಯದಂತೆ ಔಷದ ಸೇವನೆ ಅನಿವಾರ್ಯವಾಗಿದ್ದರೂ, ಚಿದಾನಂದರು ಮಾತ್ರ ಇದಕ್ಕೆ ಸುತರಾಂ ಸಿದ್ಧರಿರಲಿಲ್ಲ. ಏಕೆಂದರೆ ಜೀವನಪರ್ಯಂತ ಔಷದಸೇವನೆ ಅವರಿಗೆ ಇಷ್ಟವಿರಲಿಲ್ಲ!. 

ಆದರೆ ಔಷದವನ್ನೇ ಸೇವಿಸದೆ ಇದ್ದಲ್ಲಿ ಮಧುಮೇಹವು ಹತೋಟಿಗೆ ಬಾರದ ಕಾರಣದಿಂದಾಗಿ ರೋಗಿಗೆ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇತ್ತು.ಈ ಬಗ್ಗೆ ವೈದ್ಯರು ಪರಿಪರಿಯಾಗಿ ಸಮಾಧಾನ ಹೇಳಿದರೂ, ಚಿದಾನಂದರು ಮಾತ್ರ ತಮ್ಮ ಹಠವನ್ನು ಬಿಡಲೇ ಇಲ್ಲ. ತನ್ನ ತಲೆಯ ಮೇಲೊಂದು ತೂಗುಕತ್ತಿ ನೇತಾಡುತ್ತಿರುವುದರ ಅರಿವು ಅವರಿಗಿರಲಿಲ್ಲ. 

ಅನೇಕ ರೋಗಿಗಳು ಚಿದನಂದರಂತೆಯೇ ತಮ್ಮ ತಪ್ಪುಕಲ್ಪನೆ ಮತ್ತು ಅತಿಯಾದ ಆತ್ಮವಿಶ್ವಾಸದಿಂದಾಗಿ ಚಿಕಿತ್ಸೆಯನ್ನೇ ನಿರಾಕರಿಸುವುದುಂಟು. ಆದರೆ ಇಂತಹ ವ್ಯಕ್ತಿಗಳು ತಮ್ಮನ್ನು ಬಾಧಿಸುತ್ತಿರುವ ಗಂಭೀರ- ಮಾರಕ ವ್ಯಾಧಿಗಳನ್ನು ನಿಯಂತ್ರಿಸಲು ಔಷದ ಸೇವನೆ ಅನಿವಾರ್ಯ ಎನ್ನುವುದನ್ನು ನಿರ್ಲಕ್ಷಿಸಿ, ಮುಂದೊಂದು ದಿನ ಯಾವುದೇ ಪೂರ್ವಸೂಚನೆಯನ್ನು ನೀಡದೆ ಬಂದೆರಗಬಲ್ಲ ಅಪಾಯಗಳಿಗೆ ಬಲಿಯಾಗುತ್ತಾರೆ. 

ವೈದ್ಯರ ಕ್ಯಾನ್ಸರ್ ಗುಣವಾಯಿತು 

ಎಪ್ಪತ್ತರ ಇಳಿವಯಸ್ಸಿನಲ್ಲಿ ಕಮಲಮ್ಮನಿಗೆ ಆಕಸ್ಮಿಕವಾಗಿ ಸ್ತನದ ಕ್ಯಾನ್ಸರ್ ಪತ್ತೆಯಾಗಿತ್ತು. ಸುಮಾರು ಹದಿನೈದು ವರ್ಷಗಳಿಂದ ತನ್ನ ಎಡಸ್ತನದಲ್ಲಿ ಗೆಡ್ಡೆಯೊಂದು ಬೆಳೆಯುತ್ತಿದ್ದು, ಸಾಕಷ್ಟು ನೋವಿದ್ದರೂ ಮನೆಮಂದಿಗೆ ತಿಳಿಸದೇ ಇದ್ದ ಕಮಲಮ್ಮನ ಸಮಸ್ಯೆ ಇದೀಗ ಉಲ್ಬಣಿಸಿತ್ತು. ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದ ವೈದ್ಯರು, ಮುಂದಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದರು. ವೈದ್ಯರ ಸಲಹೆಯನ್ನು ಮನ್ನಿಸದೆ ಅನ್ಯ ವಿಧದ ಚಿಕಿತ್ಸೆಗೆ ಮೊರೆಹೋದ ಕಮಲಮ್ಮನ ದೇಹಸ್ಥಿತಿಯು ಚಿಂತಾಜನಕವಾಗಿತ್ತು. ಈ ಸಂದರ್ಭದಲ್ಲಿ ಆಕೆಯನ್ನು ಕಾಣಲು ಬಂದಿದ್ದ ಸಂಬಂಧಿಯೊಬ್ಬರು ಘಟ್ಟದ ಮೇಲಿನ ಊರೊಂದರಲ್ಲಿ ಕ್ಯಾನ್ಸರ್ ವ್ಯಾಧಿಗೆ ಚಿಕಿತ್ಸೆ ನೀಡುವ ವ್ಯಕ್ತಿಯೊಬ್ಬರಿದ್ದು, ಅವರ ಚಿಕಿತ್ಸೆಯಿಂದ ಜಿಲ್ಲೆಯ ಖ್ಯಾತ ವೈದ್ಯರೊಬ್ಬರನ್ನು ಪೀಡಿಸುತ್ತಿದ್ದ ಮಾರಕ ಕ್ಯಾನ್ಸರ್ ಗುಣವಾಗಿದ್ದ ಘಟನೆಯನ್ನು ಹೇಳಿದ್ದರು. ಮರುದಿನವೇ ಈ "ವೈದ್ಯ" ರ ಬಳಿ ತೆರಳಿದ ಕಮಲಮ್ಮನ ಮಗನು, ಸಾಕಷ್ಟು ಹಣತೆತ್ತು ಅವಶ್ಯಕ ಔಷದಗಳನ್ನು ತಂದು ತನ್ನ ತಾಯಿಗೆ ನೀಡಲಾರಂಭಿಸಿದ್ದನು. ಆದರೆ ಮುಂದಿನ ಮೂರೇ ವಾರಗಳಲ್ಲಿ ತೀವ್ರವಾಗಿ ಉಲ್ಬಣಿಸಿದ್ದ ವ್ಯಾಧಿಯಿಂದಾಗಿ, ಕಮಲಮ್ಮ ಕೊನೆಯುಸಿರು ಎಳೆದಿದ್ದರು!. 

ನಿಮ್ಮ ಬಂಧುಮಿತ್ರರು ಉಚಿತವಾಗಿ ನೀಡುವ ಸಲಹೆಯಂತೆ, ಯಾರೋ ಹೇಳಿದಂತೆ ಹಾಗೂ ಯಾವುದೋ ವ್ಯಕ್ತಿ ಅಥವಾ ವೈದ್ಯರು, ಯಾರನ್ನೋ ಬಾಧಿಸುತ್ತಿದ್ದ ಕ್ಯಾನ್ಸರ್(ಅಥವಾ ಅನ್ಯ ಗಂಭೀರ ಮತ್ತು ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು) ಗುಣಪಡಿಸಿದರು ಎನ್ನುವ ವದಂತಿಗಳನ್ನು ನಂಬಿ ಮೋಸಹೋಗದಿರಿ. ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಗೆ ಹುಲ್ಲುಕಡ್ಡಿಯೂ ಆಸರೆ ಎನ್ನುವಂತೆ, ಗುಣಪಡಿಸಲಾಗದ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸುವುದಾಗಿ  ನಂಬಿಸಿ ಹಣವನ್ನು ದೋಚುವ ನಕಲಿವೈದ್ಯರಿಗೆ ನಮ್ಮ ದೇಶದಲ್ಲಿ ಕೊರತೆಯಿಲ್ಲ ಎನ್ನುವುದನ್ನು ಮರೆಯದಿರಿ!. 

ಮಧುಮೇಹ ಗುಣವಾಗದೇ?

ಅನೇಕ ವರ್ಷಗಳಿಂದ ಮಧುಮೇಹ ವ್ಯಾಧಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದ ಮಧುಸೂಧನರಿಗೆ, ಎರಡು ವರ್ಷಗಳಿಂದ ಮಾತ್ರೆಗಳ ಸೇವನೆಯಿಂದ ಅಪೇಕ್ಷಿತ ಪರಿಣಾಮ ದೊರೆಯದ ಕಾರಣದಿಂದಾಗಿ ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್ ಪಡೆಯುವಂತೆ ವೈದ್ಯರು ಸೂಚಿಸಿದ್ದರು.ಮಧುಸೂಧನರಿಗೆ ಸಾಕಷ್ಟು ಆರ್ಥಿಕ ಸಮಸ್ಯೆಗಳಿದ್ದರೂ, ರೋಗವನ್ನು ಹತೋಟಿಯಲ್ಲಿರಿಸಲು ನಿಯಮಿತವಾಗಿ ಇನ್ಸುಲಿನ್ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಸುಮಾರು ಎರಡು ವರ್ಷಗಳ ಬಳಿಕ ಹಠಾತ್ತನೆ ಇಂಜೆಕ್ಷನ್ ಪಡೆದುಕೊಳ್ಳುವುದನ್ನು ಅವರು ನಿಲ್ಲಿಸಿರಲು ಕಾರಣವೇನೆಂದು ವೈದ್ಯರಿಗೂ ತಿಳಿದಿರಲಿಲ್ಲ. 

ಒಂದು ವಾರದ ಬಳಿಕ ಮಧುಸೂಧನರ ಸೊಸೆ ವೈದ್ಯರ ಚಿಕಿತ್ಸಾಲಯಕ್ಕೆ ಧಾವಿಸಿ, ತನ್ನ ಮಾವ ಪ್ರಜ್ನೆತಪ್ಪಿ ಬಿದ್ದಿದ್ದು ತಕ್ಷಣ ಮನೆಗೆ ಬರುವಂತೆ ವಿನಂತಿಸಿದ್ದಳು. ವಿಳಂಬಿಸದೆ ರೋಗಿಯ ಮನೆಗೆ ತೆರಳಿದ ವೈದ್ಯರಿಗೆ, ಮಧುಸೂಧನರ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಅತಿಯಾಗಿ ಪ್ರಜ್ನೆತಪ್ಪಿರುವುದು ಖಚಿತವಾಯಿತು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆಯನ್ನು ನೀಡಿದ್ದರಿಂದ ರೋಗಿಯ ಪ್ರಾಣ ಉಳಿಯಿತು. ಮುಂದಿನ ಮೂರೇ ದಿನಗಳಲ್ಲಿ ಚೇತರಿಸಿಕೊಂಡ ಮಧುಸೂಧನರು ಮತ್ತೆ ಮನೆಗೆ ಮರಳಿದ್ದರು. 

ಮರಿದಿನ ಚುಚ್ಚುಮದ್ದು ಪಡೆದುಕೊಳ್ಳಲು ಬಂದಿದ್ದ ಮಧುಸೂಧನರಲ್ಲಿ ಚಿಕಿತ್ಸೆಯನ್ನು ನಿಲ್ಲಿಸಿದ ಕಾರಣವೇನೆಂದು ವೈದ್ಯರು ಪ್ರಶ್ನಿಸಿದಾಗ, ಕಳೆದ ಎರಡು ವರ್ಷಗಳಿಂದ ತಾನು ಪಡೆದಿರುವ ನೂರಾರು ಇಂಜೆಕ್ಷನ್ ಗಳ ಪರಿಣಾಮವಾಗಿ ತನ್ನ ಮಧುಮೇಹ ಗುಣವಾಗಿದೆಯೇ ಎಂದು ಪರೀಕ್ಷಿಸುವ ಸಲುವಾಗಿ ಎಂದು ಉತ್ತರಿಸಿದ ರೋಗಿಯ ಮಾತುಗಳನ್ನು ಆಲಿಸಿದ ವೈದ್ಯರು ಮೂಕವಿಸ್ಮಿತರಾಗಿದ್ದರು.

ಮುಂದೆ ಇಂತಹ ಸಾಹಸಕ್ಕೆ ಕೈಹಾಕದಿರಿ ಎಂದು ಎಚ್ಚರಿಕೆಯನ್ನು ನೀಡಿದ ವೈದ್ಯರು, ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಯಾರೂ ಸಂಶೋಧಿಸಿಲ್ಲ ಎಂದು ಹೇಳಿದ್ದರು. ಆದರೆ ಕಾರಣಾಂತರಗಳಿಂದ ಮುಂದಿನ ಮೂರೇ ತಿಂಗಳುಗಳ ಬಳಿಕ ಪುನರಪಿ ಇದೇ ಪ್ರಯೋಗ ಮಾಡಿದ್ದ ಮಧುಸೂಧನರು, ಹೃದಯಾಘಾತಕ್ಕೆ ಬಲಿಯಾಗಿದ್ದರು. 

ಆಯುರ್ವೇದ ಶಾಸ್ತ್ರದಲ್ಲಿ ಮಾನವನು ಗೊತ್ತಿದ್ದೂ ಮಾಡುವ ಅಪರಾಧಗಳಿಗೆ "ಪ್ರಜ್ಞಾಪರಾಧ" ಎನ್ನುತ್ತಾರೆ. ಸಾಮಾನ್ಯವಾಗಿ ಇಂತಹ ಪ್ರಜ್ಞಾಪರಾಧಗಳು ರೋಗಿಯ ಮರಣದಲ್ಲಿ ಪರ್ಯವಸಾನಗೊಳ್ಳುವುದು ಅಪರೂಪವೇನಲ್ಲ. ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳಿಗೆ ಜೀವನ ಪರ್ಯಂತ ಔಷದ ಸೇವನೆ ಅತ್ಯವಶ್ಯಕ ಎನ್ನುವುದನ್ನು ತಿಳಿದ ಬಳಿಕವೂ, ಔಷದ ಸೇವಿಸದೇ ತಮ್ಮ ವ್ಯಾಧಿಯನ್ನು ಇನ್ನಷ್ಟು ಉಲ್ಬಣಿಸಿಕೊಂಡು ಅಕಾಲಿಕ ಮರಣಕ್ಕೆ ಈಡಾಗುವುದು ಪ್ರಜ್ಞಾಪರಾಧವೇ ಹೊರತು ಬೇರೇನೂ ಅಲ್ಲ.

ಕೇಶವನ ಕೆಮ್ಮು ಗುಣವಾಗದೇಕೆ?

ಕಳೆದ ಏಳುದಿನಗಳಿಂದ ತೀವ್ರ ಕೆಮ್ಮು ಮತ್ತು ಜ್ವರಗಳಿಂದ ಬಳಲುತ್ತಿದ್ದ ಕೇಶವನು ವೈದ್ಯರ ಬಳಿ ತನ್ನ ಕಾಯಿಲೆಯ ವಿವರಗಳನ್ನು ಹೇಳುತ್ತಾ, ಈ ಕಾಯಿಲೆಯ ಚಿಕಿತ್ಸೆಗಾಗಿ ಕಳೆದ ಆರುದಿನಗಳಲ್ಲಿ ತಾನು ಭೇಟಿಯಾಗಿದ್ದ ಆರು ವೈದ್ಯರ ಬಗ್ಗೆ ಕಿಡಿಕಾರಿದ್ದನು. ಕೇಶವನ ಮಾತುಗಳನ್ನು ಆಲಿಸಿದ ವೈದ್ಯರು, ಆತನಿಗೆ ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಕೇಶವನು ವೈದ್ಯರೊಂದಿಗೆ ಜಗಳಕ್ಕೆ ಇಳಿದಿದ್ದನು. ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ ಕಾರಣವನ್ನು ಶಾಂತ ಚಿತ್ತದಿಂದ ವಿವರಿಸಿದ ವೈದ್ಯರು, ನಾಳೆ ನೀನು ಭೇಟಿಯಾಗಲಿರುವ ವೈದ್ಯರ ಬಳಿ ನನ್ನನ್ನೂ ಸೇರಿಸಿ ದೂಷಿಸುವುದು ಬೇಡ ಎನ್ನುವ ಕಾರಣದಿಂದಾಗಿ ನಿನಗೆ ಚಿಕಿತ್ಸೆ ನೀಡುವುದಿಲ್ಲ ಎಂದಿದ್ದರು!. 

ತನ್ನ ತಪ್ಪನ್ನು ಅರಿತ ಕೇಶವನು ವೈದ್ಯರಲ್ಲಿ ಕ್ಷಮೆ ಯಾಚಿಸಿದನು. ಬಳಿಕ ಹತ್ತಾರು ಸ್ನೇಹಿತರ ಸಲಹೆಯಂತೆ ನಿಮ್ಮಲ್ಲಿ ಬಂದಿದ್ದು, ನನ್ನ ಸಮಸ್ಯೆಯು ತಮ್ಮಿಂದ ಬಗೆಹರಿಯುತ್ತದೆ ಎನ್ನುವ ವಿಶ್ವಾಸ ಇರುವುದಾಗಿ ಹೇಳಿದ್ದನು. ಕೇಶವನನ್ನು ಪರೀಕ್ಷಿಸಿದ ವೈದ್ಯರಿಗೆ ಶ್ವಾಸಕೋಶದ ಸೋಂಕು ಪತ್ತೆಯಾಗಿತ್ತು.ಬಳಿಕ ತಾನು ಸೂಚಿಸಿದ ಅವಧಿಗೆ ಚಿಕಿತ್ಸೆ ಪಡೆಯಲೇಬೇಕು ಎನ್ನುವ ಶರತ್ತಿನೊಂದಿಗೆ, ವೈದ್ಯರು ಒಂದು ವಾರದ ಔಷದಗಳನ್ನು ನೀಡಿದ್ದರು. ಮುಂದಿನ ವಾರ ವೈದ್ಯರನ್ನು ಭೇಟಿಯಾಗಲು ಬಂದಿದ್ದ ಕೇಶವನ ಮುಖದಲ್ಲಿನ ಮಂದಹಾಸವೇ, ಚಿಕಿತ್ಸೆ ಫಲಪ್ರದವೆನಿಸಿದೆ ಎಂದು ಸೂಚಿಸುತ್ತಿತ್ತು. 

ಸಣ್ಣಪುಟ್ಟ ಕಾಯಿಲೆಗಳಿಗೆ ಕೇವಲ ಮೂರು ಹೊತ್ತಿನ ಔಷದ ಸಾಕೆಂದು ತಾವಾಗಿ ನಿರ್ಧರಿಸುವ ಕೇಶವನಂತಹ ರೋಗಿಗಳು, ವೈದ್ಯರ ಸಲಹೆ ಸೂಚನೆಗಳಿಗೆ ಬೆಲೆಯನ್ನೇ ನೀಡುವುದಿಲ್ಲ. ಮೂರು ಹೊತ್ತಿನ ಔಷದವನ್ನು ಸೇವಿಸಿದ ಬಳಿಕ " ಕಾಯಿಲೆ ಗುಣವಾಗದೇ ಇರುವುದರಿಂದ", ಬಟ್ಟೆ ಬದಲಾಯಿಸಿದಂತೆಯೇ ವೈದ್ಯರನ್ನು ಬದಲಾಯಿಸಲು ಹಿಂಜರಿಯುವುದಿಲ್ಲ!. 

ಪ್ರಧಾನಿಗೆ ಚಿಕಿತ್ಸೆ ನೀಡಿದ ಭೂಪ!

೬೮ ವರ್ಷ ವಯಸ್ಸಿನ ಅನಸೂಯಮ್ಮನಿಗೆ "ಅಲ್ಜ್ಹೀ ಮರ್ಸ್" ಕಾಯಿಲೆ ತೀವ್ರಗೊಂಡ ಪರಿಣಾಮವಾಗಿ ಹಾಸಿಗೆ ಹಿಡಿದು ಮೂರು ತಿಂಗಳುಗಳೇ ಕಳೆದಿದ್ದವು. ಮನೆಮಂದಿಯೆಲ್ಲ ಮರುಗುವಷ್ಟು ಅಸಹಾಯಕರಾಗಿ, ಪುಟ್ಟ ಮಗುವಿನಂತೆ ತನ್ನ ಬೇಕು ಬೇಡಗಳ ಹಾಗೂ ಇಹಪರಗಳ ಅರಿವಿಲ್ಲದೆ ಅನಸೂಯಮ್ಮ ದಿನಕಳೆ
ಯುತ್ತಿದ್ದಲ್ಲಿ, ಸಮರ್ಪಕ ಚಿಕಿತ್ಸೆಯೇ ಇಲ್ಲದ ಈ ವ್ಯಾಧಿಯಿಂದ ಪತ್ನಿ ನರಳುತ್ತಿರುವುದನ್ನು ಕಂಡು ಕೃಷ್ಣರಾಯರೂ ಕೊರಗುತ್ತಿದ್ದರು. 

ಈ ಸಂದರ್ಭದಲ್ಲಿ ಅನಸೂಯಮ್ಮನನ್ನು ಕಾಣಲು ಬಂದಿದ್ದ ಸಂಬಂಧಿಕರೊಬ್ಬರ ಸಲಹೆಯಂತೆ, ಈ ವಿಲಕ್ಷಣ ಕಾಯಿಲೆಯನ್ನು ಗುಣಪಡಿಸಬಲ್ಲ ವ್ಯಕ್ತಿಯೊಬ್ಬರನ್ನು ಕೃಷ್ಣರಾಯರು ಭೇಟಿಯಾಗಿದ್ದರು. ರೋಗಿಯ ಭಾವಚಿತ್ರ ವೀಕ್ಷಣೆಯಿಂದಲೇ ಆಕೆಯು ಸಂಪೂರ್ಣ ಗುಣಮುಖಳಾಗಿ ೮೦ ವರ್ಷ ವಯಸಿನ ತನಕ ಬದುಕುವುದಾಗಿ ಈ "ಚಿಕಿತ್ಸಕ" ರು ಆಶ್ವಾಸನೆ ನೀಡಿದ್ದರು!. ಕಾಸ್ಮಿಕ್ ರೇಯ್ಸ್ ಮೂಲಕ ಇವರು ನೀಡುವ ಚಿಕಿತ್ಸೆಗೆ, ರೋಗಿಯನ್ನು ಕಾಣುವ ಅಥವಾ ಪರೀಕ್ಷಿಸುವ ಅವಶ್ಯಕತೆಯೇ ಇರಲಿಲ್ಲ. ೧೦೦ ರೂ. ಶುಲ್ಕ ನೀಡಿದೊಡನೆ ಈತನ ಚಿಕಿತ್ಸೆ ಆರಂಭವಾಗುತ್ತಿತ್ತು. 

ತನ್ನಲ್ಲಿ ಬಂದವರಿಗೆ ಮಾಜಿ ಪ್ರಧಾನಿ ವಾಜಪೇಯಿಯವರ ಎರಡು ಭಾವಚಿತ್ರಗಳನ್ನು ತೋರಿಸಿ, ಬಾಡಿದ ಮುಖದ ಚಿತ್ರವು ತನ್ನ ಚಿಕಿತ್ಸೆಗೆ ಮುನ್ನ ತೆಗೆದ ಹಾಗೂ ನಗುಮೊಗದ ಚಿತ್ರವು ತನ್ನ ಚಿಕಿತ್ಸೆಯ ಬಳಿಕ ತೆಗೆದಿದ್ದೆಂದು ಈತ ಹೇಳುತ್ತಿದ್ದನು. ಅಂತೆಯೇ ಇಂಗ್ಲೆಂಡ್ ನ ರಾಣಿ ಎಲಿಜಬೆತ್ ರ ಮಗ ಚಾರ್ಲ್ಸ್ ನ ಪುತ್ರ ಪ್ರಿನ್ಸ್ ವಿಲಿಯಮ್ಸ್ ಕೂಡಾ ತನ್ನಿಂದ ಚಿಕಿತ್ಸೆ ಪಡೆದಿದ್ದರು ಎಂದು ಬೊಗಳೆ ಬಿಡುವ ಈತನು, ಬಿ ಬಿ ಸಿ ಯ ವರದಿಗಾರರ ಕೈಯ್ಯಲ್ಲಿ ಸಿಕ್ಕಿಬಿದ್ದಿದ್ದು ಸತ್ಯ. ತನಗೆ ಯಾವುದೇ ಪಬ್ಲಿಸಿಟಿ ಬೇಡವೆಂದು ಹೇಳುತ್ತಿದ್ದ ಈ ವ್ಯಕ್ತಿಯು, ದೇಶ ವಿದೇಶಗಳ ಗಣ್ಯರಿಗೆ ತಾನು ಚಿಕಿತ್ಸೆ ನೀಡಿ ಗುಣಪಡಿಸಿರುವುದಾಗಿ ಬುರುಡೆ ಬಿಡುವುದೇ ಈತನ ನೆಚ್ಚಿನ "ಪಬ್ಲಿಸಿಟಿ"!. 

ಅದೇನೇ ಇರಲಿ, ಇದೀಗ ಅನಸೂಯಮ್ಮನಿಗೆ ಈತನ ಚಿಕಿತ್ಸೆ ಫಲಪ್ರದವೆನಿಸಿದಲ್ಲಿ, ಮುಂದಿನ ವರ್ಷ ವೈದ್ಯಕೀಯ ಸಂಶೋಧನೆಗಾಗಿ ನೀಡುವ " ನೊಬೆಲ್ ಪ್ರಶಸ್ತಿ" ಈ ಚಿಕಿತ್ಸಕನಿಗೆ ದೊರೆಯುವುದರಲ್ಲಿ ಸಂದೇಹವಿಲ್ಲ!. 

ನಿಮಗಿದು ತಿಳಿದಿರಲಿ 

ನಿಮ್ಮನ್ನು ಕಾಡುವ ಆರೋಗ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ವೈದ್ಯರನ್ನು ಭೇಟಿಯಾದಾಗ, ಕಾಯಿಲೆಯ ಸಂಕ್ಷಿಪ್ತ ವಿವರಗಳನ್ನು ತಿಳಿಸಿ. ಕಾಯಿಲೆಯ ಅವಧಿ ಮತ್ತು ತೀವ್ರತೆಗಳನ್ನು ಮುಚ್ಚಿಡಬೇಡಿ. ವೈದ್ಯರು ನಿಮ್ಮನ್ನು ಪರೀಕ್ಷಿಸಿದ ಬಳಿಕ ರೋಗ ನಿರ್ಧಾರ ಮತ್ತು ಅವಶ್ಯಕ ಚಿಕಿತ್ಸೆಯ ವಿವರಗಳನ್ನು ಕೇಳಿ ತಿಳಿದುಕೊಳ್ಳಿ. ವೈದ್ಯರು ಇದನ್ನು ತಿಳಿಸುವ ಮುನ್ನವೇ ಮೂರು ಹೊತ್ತಿನ ಔಷದಗಳು ಸಾಕೆಂದು ಹೇಳದಿರಿ. ನಿಮ್ಮ ಕಾಯಿಲೆಯ ಅವಧಿ, ತೀವ್ರತೆ, ನಿಮ್ಮ ವಯಸ್ಸು,ಶರೀರದ ತೂಕ ಹಾಗೂ ನಿಮ್ಮಲ್ಲಿರಬಹುದಾದ ಅನ್ಯ ವ್ಯಾಧಿಗಳ ಇರುವಿಕೆಯನ್ನು ಹೊಂದಿಕೊಂಡು, ಚಿಕಿತ್ಸೆಯ ಅವಧಿ ಮತ್ತು ಔಷದಗಳ ಪ್ರಮಾಣ ನಿರ್ಧರಿಸಲ್ಪಡುವುದು. ವೈದ್ಯರು ಸೂಚಿಸಿದಷ್ಟು ಕಾಲ ಔಷದಗಳನ್ನು ಸೇವಿಸುವುದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಎನ್ನುವುದನ್ನು ನೆನಪಿಡಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೬-೧೧-೨೦೦ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


Sunday, March 23, 2014

Karnataka MLA's foreign tour





  ಪ್ರಜೆಗಳ ದುಡ್ಡು: ಶಾಸಕರ ವಿದೇಶ ಯಾತ್ರೆ!

ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎನ್ನುವ ಆಡುಮಾತನ್ನು ನೀವೂ ಕೇಳಿರಲೇಬೇಕು. ಹಾಗಿದ್ದಲ್ಲಿ "ಪ್ರಜೆಗಳ ದುಡ್ಡು, ಶಾಸಕರ ವಿದೇಶ ಯಾತ್ರೆಯ ಬಗ್ಗೆ ಅರಿತುಕೊಳ್ಳುವ ಕುತೂಹಲ ನಿಮ್ಮಲ್ಲಿದ್ದಲ್ಲಿ, ಈ ಲೇಖನವನ್ನು ಓದಲೇಬೇಕು. ಕರ್ನಾಟಕದ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ತಮ್ಮ ಮೋಜು-ಮಸ್ತಿಗಳಿಗಾಗಿ ನಮ್ಮ ಶಾಸಕರು ಯಾವ ರೀತಿಯಲ್ಲಿ ಪೋಲು ಮಾಡುತ್ತಾರೆ, ಎನ್ನುವ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ಬಳಕೆದಾರರ ಹಿತರಕ್ಷಣಾ ವೇದಿಕೆಯು ಪಡೆದುಕೊಂಡಿರುವ ಅಧಿಕೃತ ಮಾಹಿತಿ ಇಲ್ಲಿದೆ. 
-------------             ----------          --------------             --------------              -------------------         ------------

ಒಂದುಬಾರಿ ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಮ್ಮ ರಾಜ್ಯದ ರಾಜಕಾರಣಿಗಳಿಗೆ ಸರ್ಕಾರದಿಂದ ಲಭಿಸುವ "ಪುಕ್ಕಟೆ ಭಾಗ್ಯಗಳು" ಅಸಂಖ್ಯ. ಇಂತಹ ಭಾಗ್ಯಗಳಲ್ಲಿ ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿರುವ ಶಾಸಕರಿಗೆ ದೊರೆಯುವ " ಪುಕ್ಕಟೆ ವಿದೇಶ ಪ್ರವಾಸ" ದ ಭಾಗ್ಯವೂ ಒಂದಾಗಿದೆ!. ರಾಜ್ಯದ ಪ್ರಜೆಗಳು ತೆತ್ತ ತೆರಿಗೆಯ ಹಣವನ್ನು ವ್ಯಯಿಸಿ,ವಿದೇಶ ಪ್ರವಾಸವನ್ನು ಕೈಗೊಳ್ಳುವ ನಮ್ಮ ಶಾಸಕರ ಮೋಜು- ಮಸ್ತಿಗಳ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಪ್ರತಿಕೂಲ ವರದಿಗಳ ಪರಿಣಾಮವಾಗಿಯೋ ಏನೋ, ಇದನ್ನು ವಿದೇಶಿ ಅಧ್ಯಯನ ಪ್ರವಾಸವೆಂದು ಪುನರ್ ನಾಮಕರಣ ಮಾಡಲಾಗಿತ್ತು. ಜೊತೆಗೆ ಪ್ರವಾಸದಿಂದ ಮರಳಿದ ಬಳಿಕ, ಅಧ್ಯಯನದ ವರದಿಯೊಂದನ್ನು ಸಭಾದ್ಯಕ್ಷರಿಗೆ ನೀಡುವ ಸಂಪ್ರದಾಯವೂ ಆರಂಭವಾಗಿತ್ತು. ವಿಶೇಷವೆಂದರೆ ಕೇವಲ ಕಾಟಾಚಾರಕ್ಕಾಗಿ ಸಲ್ಲಿಸುವ ಈ ವರದಿಗಳು ನಿಜಕ್ಕೂ ಶಾಲಾ ಮಕ್ಕಳ 'ಪ್ರವಾಸ ಕಥನ' ದಂತಿದ್ದು, ನಗೆಹಬ್ಬದ ಹಾಸ್ಯ ಚಟಾಕಿಗಳಿಗಿಂತ ತಮಾಷೆಯಾಗಿದೆ. 

ಇದಕ್ಕೂ ಮಿಗಿಲಾಗಿ ಈ ಸದನ ಸಮಿತಿಗಳ ಕರ್ತವ್ಯ ಹಾಗೂ ಹೊಣೆಗಾರಿಕೆಗಳಿಗೆ ಮತ್ತು ಸಮಿತಿಗಳ ಸದಸ್ಯರು ಕೈಗೊಳ್ಳುವ ವಿದೇಶ ಪ್ರವಾಸಗಳಿಗೆ ಏನೇನೂ ಸಂಬಂಧವಿಲ್ಲ. ಉದಾಹರಣೆಗೆ ಸದನದ ಅಂದಾಜುಗಳ ಸಮಿತಿ, ಅರ್ಜಿಗಳ ಸಮಿತಿ, ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ, ಸರ್ಕಾರಿ ಭರವಸೆಗಳ ಸಮಿತಿ, ಗ್ರಂಥಾಲಯಗಳ ಸಮಿತಿ, ಶಾಸಕರ ಭವನದ ವಸತಿ ಸೌಕರ್ಯಗಳ ಸಮಿತಿ ಮತ್ತು ಇತರ ಸಮಿತಿಗಳ ಸದಸ್ಯರು ವಿದೇಶಿ ಅಧ್ಯಯನ ಪ್ರವಾಸ ಕೈಗೊಳ್ಳುವ ಉದ್ದೇಶವೇನು?, ಹಾಗೂ ಈ ಪ್ರವಾಸಗಳಿಂದ ಆಯಾ ಸಮಿತಿಗಳ ಕೆಲಸ ಕಾರ್ಯಗಳು ಮತ್ತು ಇತರ ಹೊಣೆಗಾರಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅಥವಾ ಅಭಿವೃದ್ಧಿಪಡಿಸಲು ಈ ಪ್ರವಾಸಗಳು ಅವಶ್ಯಕವೇ?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ. ಆದರೆ ಸದನ ಸಮಿತಿಗಳು ವಿದೇಶ ಪ್ರವಾಸದ ಸಂದರ್ಭದಲ್ಲಿ ಭೇಟಿ ನೀಡಿದ್ದ ದೇಶಗಳ ಯಾದಿಯಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಕಾವೋ, ಥಾಯ್ಲೆಂಡ್, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್, ಬೆಲ್ಜಿಯಂ, ಇಟಲಿ, ಹಾಂಗ್ ಕಾಂಗ್, ಜಪಾನ್, ಸೌತ್ ಕೊರಿಯ, ನೆದರ್ಲೆಂಡ್, ಆಸ್ಟ್ರಿಯಾ,ಮತ್ತು ದುಬೈ ದೇಶಗಳ ಹೆಸರುಗಳಿದ್ದು, ಇವೆಲ್ಲ ದೇಶಗಳೂ ಪ್ರಖ್ಯಾತ ಪ್ರವಾಸಿ ತಾಣಗಳೇ ಆಗಿವೆ. ಅರ್ಥಾತ್, ನಮ್ಮ ಶಾಸಕರು ವಿದೇಶಿ ಅಧ್ಯಯನ ಪ್ರವಾಸದ ಸೋಗಿನಲ್ಲಿ ಮೋಜು- ಮಸ್ತಿ ಮಾಡುತ್ತಿರುವುದು ಧೃಢಪಡುತ್ತದೆ. ಆದರೂ  ಮಂಡಲಗಳ ಸದನ ಸಮಿತಿಗಳ ಪ್ರತಿಯೊಬ್ಬ  ಸದಸ್ಯರೂ, ತಮ್ಮ ಪುಕ್ಕಟೆ ವಿದೇಶಿ ಅಧ್ಯಯನ ಪ್ರವಾಸಗಳನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳುವುದು ನಂಬಲಸಾಧ್ಯವೆನಿಸುತ್ತದೆ!. 

ಯಾವುದೇ ಸಮಿತಿಯ ಸದಸ್ಯರು ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಸಭಾದ್ಯಕ್ಷರ ಅನುಮತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಅಸ್ತಿತ್ವದಲ್ಲಿರುವ ನಿಯಮಗಳಂತೆ ಈ ಸಮಿತಿಗಳೊಂದಿಗೆ ಉಚಿತ ಪ್ರವಾಸವನ್ನು ಕೈಗೊಳ್ಳುವ ಅಧಿಕಾರಿಗಳ ಸಂಖ್ಯೆ ೩ ಕ್ಕೆ ಸೀಮಿತವಾಗಿದೆ. ಆದರೆ ೨೦೧೩ ರಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದ ಅರ್ಜಿಗಳ ಸಮಿತಿಯ ಪ್ರವಾಸದ ತಂಡದಲ್ಲಿ ಕೇವಲ ೬ ಸದಸ್ಯರಿದ್ದು, ಇವರೊಂದಿಗೆ ಹೋಗಿದ್ದ ಅಧಿಕಾರಿಗಳ ಸಂಖ್ಯೆ ೭ ಆಗಿತ್ತು!. ವಿಶೇಷವೆಂದರೆ ಈ ಅಧಿಕಾರಿಗಳಲ್ಲಿ ಸಭಾಪತಿ ಮತ್ತು ಉಪ ಸಭಾಪತಿಗಳ ಆಪ್ತ ಸಹಾಯಕರು ಸೇರಿದ್ದು, ನಿಗದಿತ ಸಂಖ್ಯೆಗಿಂತ ಹೆಚ್ಚಾಗಿದ್ದ (ಏಳು ಜನ )ಅಧಿಕಾರಿಗಳ ತಂಡಕ್ಕೆ ಮಾನ್ಯ ಸಭಾಪತಿಗಳು ಅನುಮತಿಯನ್ನು ನೀಡಿದ್ದು ಹೇಗೆಂದು ನಮಗೂ ಅರ್ಥವಾಗುತ್ತಿಲ್ಲ. 

ಇವೆಲ್ಲಕ್ಕೂ ಮಿಗಿಲಾಗಿ ವಿದೇಶ ಪ್ರವಾಸದ ಸಂದರ್ಭದಲ್ಲಿ ಭೇಟಿ ನೀಡಿದ್ದ ದೇಶಗಳಲ್ಲಿನ ಜನರ ಶಿಸ್ತು, ಕಾನೂನು ಪರಿಪಾಲನೆ, ಸಾರಿಗೆ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ, ಉತ್ತಮ ಗುಣಮಟ್ಟದ ರಸ್ತೆಗಳು- ಕಾಲುದಾರಿಗಳು, ಆಕರ್ಷಕ ಉದ್ಯಾನವನಗಳೇ ಮುಂತಾದವುಗಳನ್ನು ನಮ್ಮ ದೇಶದಲ್ಲೂ ಅನುಷ್ಠಾನಗೊಳಿಸಬೇಕೆನ್ನುವ ಸಲಹೆ- ಸೂಚನೆಗಳನ್ನು ಪ್ರತಿಯೊಂದು ಸಮಿತಿಯ ವರದಿಗಳಲ್ಲಿ ಕಾಣಬಹುದಾಗಿದೆ. ಆದರೆ ಈ ಸದನ ಸಮಿತಿಗಳ ಯಾವುದೇ ಸಲಹೆ-ಸೂಚನೆಗಳನ್ನು ನಮ್ಮ ರಾಜ್ಯದಲ್ಲಂತೂ ಅನುಷ್ಠಾನಗೊಳಿಸಿಲ್ಲ ಎನ್ನುವುದನ್ನು, ಮಾಹಿತಿ ಹಕ್ಕು ಕಾಯಿದೆಯನ್ವಯ ನಾವು ಪಡೆದುಕೊಂಡಿರುವ " ಅಧಿಕೃತ ಮಾಹಿತಿ" ಗಳು ಸಾಬೀತುಪಡಿಸುತ್ತವೆ!. 

ವರದಿಗಳಲ್ಲಿನ ಆಯ್ದ ಅಣಿಮುತ್ತುಗಳು 

ರಾಜ್ಯದ ಶಾಸಕರು ಸಲ್ಲಿಸಿದ್ದ " ವಿದೇಶಿ ಅಧ್ಯಯನ ಪ್ರವಾಸ" ದ ವರದಿಗಳಲ್ಲಿನ ಅಣಿಮುತ್ತುಗಳಲ್ಲಿ  ಆಯ್ದ ಕೆಲವನ್ನು ಅಕ್ಷರಶಃ ಹಾಗೂ ಯಥಾವತ್ತಾಗಿ ಇಲ್ಲಿ ನಮೂದಿಸಲಾಗಿದೆ.

ಬ್ರೆಜಿಲ್ ದೇಶಕ್ಕೆ ಭೇಟಿ ನೀಡಿದ್ದ ಸಾರ್ವಜನಿಕ ಉದ್ಯಮಗಳ ಸಮಿತಿಯ ವರದಿಯಲ್ಲಿ ದಾಖಲಿಸಿದ ಭಾಗ- ಮಾನ್ಯ ಸದಸ್ಯರು ನದಿಯಲ್ಲೇ ತೇಲುತ್ತಿರುವ ಮನೆಗಳು, ಹೋಟೆಲ್ ಗಳು, ಪೆಟ್ರೋಲ್ ಪಂಪುಗಳನ್ನು ಖುದ್ದಾಗಿ ವೀಕ್ಷಿಸಿದರು. ಮಳೆಗಾಲದಲ್ಲಿ ಹೆಚ್ಚಿನ ನೀರು ಬರುವುದರಿಂದ ಜೀವ ಮತ್ತು ಆಸ್ತಿಪಾಸ್ತಿಗಳ ಹಾನಿ ತಡೆಗಟ್ಟುವ ತಂತ್ರವಾಗಿದೆ.
ಇಲ್ಲಿ ಎರಡು ನದಿಗಳು ( ಒಂದು ಕಪ್ಪುನೀರು ಇನ್ನೊಂದು ಬಿಳಿನೀರು) ಕೂಡುವ ಸಂಗಮವನ್ನು ಕಂಡು ಸಂತೋಷಪಡಲಾಯಿತು.

ಮಾನ್ಯ ಸದಸ್ಯರು ವಿಶೇಷವಾಗಿ ಗಮನಿಸಿರುವುದೇನೆಂದರೆ ಸುಮಾರು ಕಟ್ಟಡಗಳು ಅಪೂರ್ಣವಸ್ಥೆಯಲ್ಲಿದ್ದು ನಾಗರಿಕರ ತೆರಿಗೆ ಪಾವತಿಸದಿರಲು ಈ ತಂತ್ರ ಅಳವಡಿಸಿರುವುದು,ತೆರಿಗೆ ಪಾವತಿಸುತ್ತಿರುವ ನಾಗರೀಕ ವಲಯಗಳಲ್ಲಿ ಸಂಪೂರ್ಣ ಅಭಿವೃದ್ಧಿಯನ್ನು ಗಮನಿಸಲಾಯಿತು. 

ಲಿಮಾದಲ್ಲಿ ಮ್ಯೂಸಿಯಂ ಆಫ್ ಗೋಲ್ಡ್ ಭೇಟಿ- ವಿಶೇಷವಾಗಿ ಜಗತ್ತಿನಾದ್ಯಂತ ಸಂಗ್ರಹಿಸಲಾದ ಶಸ್ತ್ರಾಸ್ತಗಳಲ್ಲಿ ಟಿಪ್ಪುಸುಲ್ತಾನನ ಖಡ್ಗ ಮತ್ತು ಕೂರ್ಗ ರೈಫಲ್ ಗಮನಿಸಲಾಯಿತು. ನಮ್ಮ ರಾಷ್ಟ್ರದ ಹೈದರಾಬಾದ್ ಮ್ಯೂಸಿಯಂ ನಲ್ಲಿ ಇಷ್ಟೊಂದು ವಿಧದ ಶಸ್ರಾಸ್ತ್ರಗಳು ಇಲ್ಲದಿರುವುದನ್ನು ನೆನಪಿಸಲಾಯಿತು. 

ಪೀಸಾ ವಾಲುಗೋಪುರ ವೀಕ್ಷಣೆ- ಪೀಸಾದ ವಾಲುಗೋಪುರವು ಪ್ರಸ್ತುತ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುತ್ತದೆ. ಗೋಪುರವು ಅಲ್ಲಿನ ಚರ್ಚ್ ಎದುರಿಗೆ ವಾಲಿ ನಿಂತಿರುವುದು ಆಶ್ಚರ್ಯಕರ ಎಂದು ಸಮಿತಿಯ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದರು. ಇದರ ಎತ್ತರ ೧೭೯ ಅಡಿ ಇದ್ದು ಬಲಭಾಗಕ್ಕೆ ಸ್ವಲ್ಪ ವಾಲಿರುತ್ತದೆ. ಗೋಪುರದ ಮೂಲ ಅಸ್ತಿಭಾರದಲ್ಲೇ ದೋಷವಿದೆ. ವರ್ಷದಿಂದ ವರ್ಷಕ್ಕೆ ಗೋಪುರವು ಸುಮಾರು ೦.೦೪ ಡಿಗ್ರಿಯಷ್ಟು ವಾಲುವ ಚಲನೆಯಲ್ಲಿದ್ದು, ಕೊನೆಗೆ ಭೂಮಿಗೆ ಬೀಳುವ ಸಂಭವ ಇರುವುದಾಗಿ ಸಮಿತಿಗೆ ತಿಳಿದುಬಂತು(!).  

ಐಫೆಲ್ ಟವರ್ - ಸಾರ್ವಜನಿಕ ಉದ್ಯಮಗಳ ಸಮಿತಿಯು ೨೦೦೯ ರಲ್ಲಿ ನೀಡಿದ್ದ ವರದಿ- ಗಗನಚುಂಬಿ ಕತ್ತದವಾದ ಐಫೆಲ್ ಟವರ್ ಹತ್ತಿರ ಕೋಚ್ ನಿಲ್ಲಿಸಲಾಗಿ, ಸಮಿತಿಯು ಖುದ್ದಾಗಿ ಐಫೆಲ್ ಟವರ್ ನ ವಿನ್ಯಾಸ, ಕಾಮಗಾರಿಗಳ ಗುಣಮಟ್ಟ ಮುಂತಾದವನ್ನು ವೀಕ್ಷಿಸಿತು. 

ಇಂಗ್ಲೆಂಡ್ ನ ರಾಜಕುಮಾರಿ  ಪ್ರಿನ್ಸ್(?)  ಡಯಾನ ದಿನಾಂಕ ೧- ೦೮- ೧೯೯೭ ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಗರದ ಮಧ್ಯಭಾಗದಲ್ಲಿ ಡಲ್ಮಾ ಟನೆಲ್ ಒಳಗಡೆ ಅಪಘಾತಕ್ಕೀಡಾಗಿ ಮೃತಪತ್ತಿರುವ ಸ್ಥಳವನ್ನು ವೀಕ್ಷಿಸಿತು. ಈ ಸ್ಥಳದಲ್ಲಿ ವರ್ಷವಿಡೀ ದೀಪ ಉರಿಯುತ್ತದೆ. 

ವೆನಿಸ್ ನಲ್ಲಿ ಸಮಿತಿಯ ಸಭೆ- ಯುರೋಪ್ ಖಂಡದ ಪ್ರವಾಸದ ಸಂದರ್ಭದಲ್ಲಿ ಸದಸ್ಯರು ವಿಶೇಷವಾಗಿ ಗಮನಿಸಿದ ಅಂಶಗಳನ್ನು ಸಮಿತಿಯ ಗಮನಕ್ಕೆ ತರಬೇಕೆಂದು ಕೋರಿದ್ದ ಅಧ್ಯಕ್ಷರು. 
ಸದಸ್ಯ ಬಿ. ರಮಾನಾಥ ರೈ- ಯುರೋಪ್ ದೇಶದ ಜನರು ಯಾವುದೇ ವಸ್ತುವನ್ನು ಉಚಿತವಾಗಿ ಅನುದಾನದ ರೂಪದಲ್ಲಾಗಲೀ, ಪರಿಹಾರದ ರೂಪದಲ್ಲಾಗಲೀ ಸರ್ಕಾರದಿಂದ ಪಡೆಯಲು ಇಚ್ಚಿಸುವುದಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಜನರೇ ಸರ್ಕಾರದ ನೆರವಿಗೆ ಬರುತ್ತಾರೆ. ಆದರೆ ನಮ್ಮ ದೇಶದ ಜನರು ಪ್ರತಿಯೊಂದನ್ನು ಸರ್ಕಾರದಿಂದ ಉಚಿತವಾಗಿ ಪಡೆಯಲು ಬಯಸುತ್ತಾರೆ. ಈ ಮನೋಭಾವದ ವ್ಯವಸ್ಥೆ ಬದಲಾಗಬೇಕು. 
ಸದಸ್ಯ ಕೆ.ಬಿ. ಮುನಿವೆಂಕಟ ರೆಡ್ಡಿ- ಈ ದೇಶದ ರಾಷ್ಟ್ರದ ರಾಷ್ಟ್ರಪತಿಗಳ ಮಗನಾದರೂ ಸರಿ, ಪ್ರಧಾನಿಯ ಮಗನಾದರೂ ಸರಿ ಮತ್ತು ಶ್ರೀಸಾಮಾನ್ಯನಿಗೂ ಒಂದೇ ಕಾನೂನು ಇರುವುದು ಮೆಚ್ಚತಕ್ಕ ಸಂಗತಿಯಾಗಿದೆ. 

ಯುರೋಪ್ ನಲ್ಲಿ - ಯುರೋಪ್ ನ ಅತ್ಯಂತ ಎತ್ತರದ (೧೧,೩೧೯ ಅಡಿ) JUNGFRAUJOCH ಶಿಖರವನ್ನು ವೀಕ್ಷಿಸಿದ್ದ ಸಮಿತಿಯ ವರದಿಯಂತೆ ಇಲ್ಲಿ ಅನೇಕ ಕಡೆಗಳಲ್ಲಿ ಬೆಟ್ಟವನ್ನು ಕೊರೆದು ರೈಲ್ವೇ ಮಾರ್ಗವನ್ನು ಮಾಡಿಕೊಂಡು ಹೋಗಿದ್ದಾರೆ. ಇದರಲ್ಲಿ ಒಂದುಕಡೆ ಮಾತ್ರ ೯ ಕಿ.ಮೀ.ವರೆಗೆ ಸುರಂಗ ಮಾಡಿಕೊಂಡು ಮೇಲಕ್ಕೆ ಟ್ರೈನ್ ಹೋಗುವುದಕ್ಕೆ ವ್ಯವಸ್ಥೆ ಮಾಡಿರತಕ್ಕಂಥದ್ದು ವಿಶಿಷ್ಟವಾಗಿರುವುದಲ್ಲದೇ ಇದನ್ನು ೧೦೦ ವರ್ಷಗಳ ಹಿಂದೆಯೇ ಸುಮಾರು ೧೬ ವರ್ಷಗಳ ವರೆಗೆ ನಿರಂತರವಾಗಿ ಕೆಲಸ ಮಾಡಿ ನಿರ್ಮಿಸಲಾಗಿದೆ. 
ಶಿಖರದ ಕೆಳಭಾಗದಲ್ಲಿರುವ ರೈಲ್ವೇ ಸ್ಟೇಶನ್ ಗೆ ಸಮಿತಿ ಆಗಮಿಸಿ ಅಲ್ಲಿಂದ ನಾಲ್ಕು ಬೋಗಿಗಳನ್ನು ಹೊಂದಿರುವ ಸಣ್ಣ ರೈಲಿನ ಮೂಲಕ ಶಿಖರದ ಮೇಲೆಕ್ಕೆ ಪ್ರಯಾಣ ಬೆಳೆಸಿತು. ೯೪೦೦ ಅಡಿ ಹೋದಾಗ ಟ್ರೈನ್ ನಿಲ್ಲಿಸಲಾಗುತ್ತದೆ. ಅಲ್ಲಿಂದ view point ಹತ್ತಿರ ಹೋಗಿ ಸುಂದರ ಪರ್ವತ ಶಿಖರಗಳನ್ನು ಸಮಿತಿ ವೀಕ್ಷಿಸಿತು. ಮತ್ತೆ ಇದೇ ರೀತಿಯಾಗಿ ೧೦, ೩೬೮ ಅಡಿಯಲ್ಲಿ ಮತ್ತೆ ಟ್ರೈನ್ ನಿಲ್ಲಿಸಿ ವೀಕ್ಷಣೆ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ. ೨೬೦೦ ಮೀಟರ್ ವರೆಗೆ ಟ್ರೈನ್ ಮೂಲಕ ಪ್ರಯಾಣ ಮಾಡಿ ಅಲ್ಲಿಂದ ಇನ್ನೊಂದು ಟ್ರೈನ್ ಮೂಲಕ ಪ್ರಯಾಣ ಮಾಡಿ ಶಿಖರ ತುತ್ತ ತುದಿಯನ್ನು ತಲುಪುತ್ತೇವೆ. ಸುಮಾರು ೯ ಕಿಲೋಮೀಟರ್ ವರೆಗೆ ಬೆಟ್ಟವನ್ನು ಕೊರೆದು ಮೇಲಕ್ಕೆ ಟ್ರೈನ್ ಮೂಲಕ ಕರೆದುಕೊಂಡು ಹೋಗತಕ್ಕಂಥದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸುತ್ತದೆ. 
ನಮ್ಮ ರಾಷ್ಟ್ರದಲ್ಲಿನ ಹಿಮಾಲಯ ಪ್ರದೇಶಗಳಲ್ಲಿ ಅನೇಕ ಪರ್ವತ ಶಿಖರಗಳಿದ್ದು, ಇದೇ ರೀತಿಯಾದ ಸೌಲಭ್ಯವನ್ನು ಅಲ್ಲಿಯೂ ಕಲ್ಪಿಸಿಕೊಟ್ಟರೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು. 

ಆಸ್ಟ್ರೇಲಿಯಾ ದೇಶಕ್ಕೆ ಭೇಟಿ ನೀಡಿದ್ದ ಬಹುತೇಕ ಸಮಿತಿಗಳ ವರದಿಗಳಲ್ಲಿ, ರಸ್ತೆಯ ಮೂಲಕ ಸಂಚರಿಸುತ್ತಿದ್ದಾಗ ಕಾಣಸಿಕ್ಕುವ ವಿಶಾಲವಾದ ಹುಲ್ಲುಗಾವಲುಗಳಲ್ಲಿ ಸಹಸ್ರಾರು ಹಸುಗಳು ಮತ್ತು ಕುರಿಗಳು ಮೇಯುತ್ತಿರುವ ಮತ್ತು ಇವುಗಳನ್ನು ಕಾಯಲು ದನಗಾಹಿಗಳು ಇಲ್ಲದಿರುವ ಬಗ್ಗೆ ಸದಸ್ಯರಿಗೆ ಅಚ್ಚರಿಯಾಗಿದ್ದುದನ್ನು ನಮೂದಿಸಲಾಗಿದೆ. ಹಸು ಮತ್ತು ಕುರಿಗಳು ಹುಲ್ಲನ್ನು ಮೇಯುವುದರಲ್ಲಿ ಆಚ್ಚರಿಪಡುವಂತಹದ್ದು ಏನಿದೆ?, ಎನ್ನುವುದು ಓದುವಾಗ ಓದುಗರಿಗೆ ಅಚ್ಚರಿಯಾಗುವುದರಲ್ಲಿ ಸಂದೇಹವಿಲ್ಲ!. 

ಸ್ವಾಮೀ, ಇಂತಹ ಹಲವಾರು ಹಾಸ್ಯಾಸ್ಪದ ವರದಿಗಳು ನಾವು ಮಾಹಿತಿ ಹಕ್ಕು ಕಾಯಿದೆಯನ್ವಯ ಪಡೆದುಕೊಂಡಿರುವ ವಿದೇಶಿ ಅಧ್ಯಯನದ ಪ್ರವಾಸದ ವರದಿಗಳಲ್ಲಿ ಕಾಣಸಿಕ್ಕಿದ್ದು, ಅವೆಲ್ಲವನ್ನೂ ಈ ಲೇಖನದಲ್ಲಿ ಸೇರಿಸಿದಲ್ಲಿ ಯಾವುದೇ ಪತ್ರಿಕೆಗಳು ಪ್ರಕಟಿಸುವ ಸಾಧ್ಯತೆಗಳಿಲ್ಲ. ಏಕೆಂದರೆ ಇವೆಲ್ಲವನ್ನೂ ಪ್ರಕಟಿಸಿದಲ್ಲಿ, ಅನ್ಯ ಸುದ್ದಿಗಳನ್ನು ಪ್ರಕಟಿಸಲು ಜಾಗವೇ ಉಳಿಯುವುದಿಲ್ಲ!. 

ಅದೇನೇ ಇರಲಿ, ಇದೀಗ ನಾವೇ ಚುನಾಯಿಸಿ ಕಳುಹಿಸಿದ ಶಾಸಕರು ವಿಧಾನ ಮಂಡಲಗಳ ವಿವಿಧ ಸಮಿತಿಗಳ ಸದಸ್ಯರಾಗಿ ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ನಿಮಗೆ ದೊರೆತಿರಬಹುದು. ತಮಗೆ ಬೇಕೆನಿಸಿದಾಗ ಹಾಗೂ ತಮಗೆ ಬೇಕೆನಿಸಿದಷ್ಟು ಸಂಬಳ- ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ, ಒಮ್ಮೆ ಶಾಸಕರಾಗಿ ಆಯ್ಕೆಯಾಗಿ ಐದು ವರ್ಷಗಳ ಅವಧಿಯನ್ನು ಪೂರೈಸಿದಲ್ಲಿ ಅಜೀವ ಪರ್ಯಂತ ಪಿಂಚಣಿ ಹಾಗೂ ಇತರ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳುವ  ಮತ್ತು ಬಹುತೇಕ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳುವ ನಮ್ಮ ಶಾಸಕರು, ನಮ್ಮ ದೇಶದ ಜನರು ಪ್ರತಿಯೊಂದನ್ನೂ ಸರಕಾರದಿಂದ ಉಚಿತವಾಗಿ ಪಡೆಯಲು ಬಯಸುತ್ತಾರೆ ಎನ್ನುವುದು ನಿಜಕ್ಕೂ ಹಾಸ್ಯಾಸ್ಪದವೆನಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೦-೦೩-೨೦೧೪ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 




Wednesday, March 19, 2014

PLASTIC WASTE




   ಪ್ಲಾಸ್ಟಿಕ್ ತ್ಯಾಜ್ಯ : ನಿಯಂತ್ರಣ ಸಾಧ್ಯವೇ?

ಮನುಷ್ಯನು ನಡೆಸಿದ್ದ ಸಂಶೋಧನೆಗಳ ಸಂದರ್ಭದಲ್ಲಿ ಆಕಸ್ಮಿಕವಾಗಿ ಆವಿಷ್ಕರಿಸಿದ್ದ " ಪ್ಲಾಸ್ಟಿಕ್", ಇಂದು ನಮ್ಮೆಲ್ಲರ ದೈನಂದಿನ ಜೀವನದ ಅವಿಭಾಜ್ಯ ಅಂಗವೆನಿಸಿದೆ. ಅಂತೆಯೇ ಘನತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಗೆ ತೊಡಕಾಗಿ ಪರಿಣಮಿಸುತ್ತಿದೆ. ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರ ಎನ್ನುವ ಭೇದವಿಲ್ಲದೇ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಪ್ಲಾಸ್ತಿಕ್ ತ್ಯಾಜ್ಯಗಳು, ಪರಿಸರದೊಂದಿಗೆ ಜನಸಾಮಾನ್ಯರ ಆರೋಗ್ಯದ ಮೇಲೂ ತೀವ್ರಸ್ವರೂಪದ ದುಷ್ಪರಿಣಾಮಗಳನ್ನು ಬೀರುತ್ತಿದೆ.
---------------               --------------              -----------           ------------------           ---------------

ಅಲೆಕ್ಸಾಂಡರ್ ಪಾರ್ಕ್ಸ್ ಎನ್ನುವ ಸಂಶೋಧಕನು ೧೮೬೨ ರಲ್ಲಿ ಮೊದಲಬಾರಿಗೆ ಮಾನವ ನಿರ್ಮಿತ ಪ್ಲಾಸ್ಟಿಕ್ ನ್ನು ಗ್ರೇಟ್ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ನಲ್ಲಿ ಪ್ರದರ್ಶಿಸಿದ್ದನು. ಆದರೆ ೧೯೦೭ ರಲ್ಲಿ ಲಿಯೋ ಹೆಂಡ್ರಿಕ್ ಬೇಕ್ ಲ್ಯಾಂಡ್ ಎನ್ನುವ ರಸಾಯನ ಶಾಸ್ತ್ರಜ್ಞನು ಆಕಸ್ಮಿಕವಾಗಿ ಕೋಲ್ ಟಾರ್ ನಿಂದ ಲಭ್ಯವಾಗುವ " ಸಿಂಥೆಟಿಕ್ ಪಾಲಿಮರ್" ನ್ನು ತಯಾರಿಸಬಲ್ಲ ವಿಧಾನವೊಂದನ್ನು ಪತ್ತೆಹಚ್ಚಿದ್ದನು. ಈ ಪಾಲಿಮರ್ ಗೆ ಬೇಕ್ಲೈಟ್ ಎಂದು ನಾಮಕರಣ ಮಾಡಿದ್ದರೂ, ಈ ನೂತನ ವಸ್ತುವನ್ನು ಬಣ್ಣಿಸಲು ಆತನು ' ಪ್ಲಾಸ್ಟಿಕ್' ಎನ್ನುವ ಶಬ್ದವನ್ನು ಹುಟ್ಟುಹಾಕಿದ್ದನು. 

ಪ್ರಥಮ ಜಾಗತಿಕ ಯುದ್ಧದ ಬಳಿಕ ಪೆಟ್ರೋಲಿಯಂ- ಕಚ್ಚಾ ತೈಲದಿಂದ ಪ್ಲಾಸ್ಟಿಕ್ ನ ತಯಾರಿಕೆ ಆರಂಭವಾಯಿತು. ಪ್ರಥಮ ಮತ್ತು ದ್ವಿತೀಯ ಜಾಗತಿಕ ಯುದ್ಧದ ಸಂದರ್ಭದಲ್ಲಿ ಮತ್ತು ತದನಂತರ ಆರ್ಥಿಕ ಸಂಕಷ್ಟಗಳಿಂದ ಪೀಡಿತ ಜನರು ಮರ, ಗಾಜು ಮತ್ತು ಲೋಹಗಳಿಗೆ ಬದಲಾಗಿ ಸುಲಭ ಬೆಲೆಗೆ ಲಭಿಸುತ್ತಿದ್ದ ಪ್ಲಾಸ್ಟಿಕ್ ನ್ನು ಬಳಸಲು ಆರಂಭಿಸಿದ್ದರು. 

ದ್ವಿತೀಯ ಮಹಾಯುದ್ಧದ ಬಳಿಕ ಪಾಲಿಯುರಿಥೆನ್, ಪಾಲಿಯೆಸ್ಟರ್, ಪಾಲಿಪ್ರೋಪೈಲೀನ್, ಪಾಲಿಸ್ಟೈರೀನ್, ಪಾಲಿವೈನಿಲ್ ಕ್ಲೋರೈಡ್ ಗಳಂತಹ ವಿನೂತನ ಪ್ಲಾಸ್ಟಿಕ್ ಗಳನ್ನೂ ಕಂಡುಹಿಡಿಯಲಾಯಿತು. ೧೯೬೦ ರ ಬಳಿಕ ಅತ್ಯಲ್ಪ ಬೆಲೆಯ ಅನೇಕ ವಿಧದ ಪ್ಲಾಸ್ಟಿಕ್ ಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದವು. ೧೯೭೦ ರ ಬಳಿಕ ಹೈಟೆಕ್ ಪ್ಲಾಸ್ಟಿಕ್ ನ ಆವಿಷ್ಕಾರವಾದಂತೆಯೇ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇದರ ವ್ಯಾಪಕ ಬಳಕೆಯೂ ಆರಂಭವಾಯಿತು. 

ಪ್ರಸ್ತುತ ಜೀವನಾವಶ್ಯಕ ವಸ್ತುಗಳ ತಯಾರಿಕೆಯಲ್ಲಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಅದೇ ರೀತಿಯಲ್ಲಿ ಜನಸಾಮಾನ್ಯರು ಬಳಸಿದ ಬಳಿಕ ನಿರುಪಯುಕ್ತವೆನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಅತಿಯಾಗುತ್ತಿದೆ. ಇವುಗಳಲ್ಲಿ ಜನಸಾಮಾನ್ಯರು ದಿನನಿತ್ಯ ಬಳಸಿ ಎಸೆಯುವ ಪುಟ್ಟ ಪೊಟ್ಟಣಗಳಿಂದ ಆರಂಭಿಸಿ, ಕೈಚೀಲಗಳು, ದೊಡ್ಡ ಚೀಲಗಳು ಮತ್ತು ಬಾಟಲಿಗಳೇ ಮುಂತಾದ ತ್ಯಾಜ್ಯಗಳು ಪರಿಸರ ಪ್ರದೂಷಣೆ ಮತ್ತು ಇತರ ಅನೇಕ ವಿಧದ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ. ಪ್ರಾಯಶಃ ಈ ಪ್ಲಾಸ್ಟಿಕ್ ನ್ನು ಆವಿಷ್ಕರಿಸಿದ್ದ ಬೇಕ್ ಲ್ಯಾಂಡ್, ತನ್ನ ಸಂಶೋಧನೆಯು ಮುಂದೊಂದು ದಿನ " ಜಾಗತಿಕ ಸಮಸ್ಯೆ" ಗೆ ಕಾರಣವೆನಿಸಬಹುದು ಎಂದು ಊಹಿಸಿರಲಾರನು ಎನ್ನುವುದರಲ್ಲಿ ಸಂದೇಹವಿಲ್ಲ. 

ಜಾಗತಿಕ ಮಟ್ಟದಲ್ಲಿ ಪ್ರತಿಯೊಂದು ದೇಶಗಳಲ್ಲೂ ಹೇರಳವಾಗಿ ಬಳಸಲ್ಪಟ್ಟು, ತ್ಯಾಜ್ಯರೂಪದಲ್ಲಿ ಎಸೆಯಲ್ಪಡುತ್ತಿರುವ ಪ್ಲಾಸ್ಟಿಕ್ ನ ಕ್ರಮಬದ್ಧ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವುದು ಸ್ಥಳೀಯ ಸಂಸ್ಥೆಗಳಿಗೆ ಬೃಹತ್ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ೧೯೮೦ ರ ಬಳಿಕ ಕೆಲವಿಧದ ತ್ಯಾಜ್ಯ ಪ್ಲಾಸ್ಟಿಕ್ ನ್ನು ಪುನರ್ ಆವರ್ತನಗೊಳಿಸುವ ( ರಿ ಸೈಕ್ಲಿಂಗ್ ) ಮಾಡುವ ವಿಧಾನಗಳು ಆರಂಭಗೊಂಡಿದ್ದವು. ಇದರೊಂದಿಗೆ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲ್ಪಡುವ ಕಚ್ಚಾ ವಸ್ತುಗಳ ಮತ್ತು ಪ್ಲಾಸ್ಟಿಕ್ ನ ಬಳಕೆಯನ್ನೇ ಕಡಿಮೆ ಮಾಡುವ ಪ್ರಯತ್ನಗಳು ತಕ್ಕಮಟ್ಟಿಗೆ ಫಲಪ್ರದವೆನಿಸಿವೆ. 

ತ್ಯಾಜ್ಯಗಳಿಂದ ಸಮಸ್ಯೆ 

ನಮ್ಮ ದೇಶದ ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳ ಪ್ರತಿಯೊಂದು ಬೀದಿಗಳಲ್ಲಿ ಕಾಣಸಿಗುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳು ಜನಸಾಮಾನ್ಯರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗಳ ಸಂಕೇತವಾಗಿದೆ. ನಮ್ಮ ಪರಿಸರ ಮತ್ತು ಆರೋಗ್ಯಗಳನ್ನು ಹಾಳುಗೆಡವಬಲ್ಲ ಈ ತ್ಯಾಜ್ಯ ಮನುಕುಲಕ್ಕೆ ಮಾರಕವೆನಿಸುತ್ತಿದೆ. 
ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಸ್ವಾಭಾವಿಕವಾಗಿ ಭೂಮಿಗೆ ನೀರು ಇಂಗುವ ಪ್ರಕ್ರಿಯೆಗೆ ಅಡಚಣೆ ಉಂಟಾಗುವುದರಿಂದ ಅಂತರ್ಜಲದ ಮಟ್ಟವೂ ಕುಸಿಯುತ್ತಿದೆ, ಕೆಲವರ್ಷಗಳ ಹಿಂದೆ ಮುಂಬೈ ಮತ್ತು ಬೆಂಗಳೂರುಗಳಲ್ಲಿ ಉದ್ಭವಿಸಿದ್ದ ಕೃತಕ ನೆರೆಗೆ, ಚರಂಡಿಗಳಲ್ಲಿ ತುಂಬಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳೇ ಕಾರಣವೆಂದು ತಿಳಿದುಬಂದಿದೆ. ಅದೇ ರೀತಿಯಲ್ಲಿ ಈ ತ್ಯಾಜ್ಯಗಳನ್ನು ಅರಿಯದೇ ತಿಂದಿದ್ದ ಅಸಂಖ್ಯ ಜಾನುವಾರುಗಳು ಮತ್ತು ಜಲಚರಗಳು ಮೃತಪಟ್ಟಿವೆ. 

ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬೆಂಕಿಹಚ್ಚಿ ಸುಡುವುದರಿಂದ ಕಾರ್ಬನ್ ಮೊನೊಕ್ಸೈಡ್, ನೈಟ್ರೋಜನ್ ಆಕ್ಸೈಡ್, ಡಯಾಕ್ಸಿನ್ ಮತ್ತು ಫ್ಯೂರಾನ್ ಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸುವ ಈ ಹಸಿರುಮನೆ ಅನಿಲಗಳು (Greenhouse gaases), ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುವ ಮೂಲಕ ಅತಿಯಾದ ಚಳಿ, ಹಿಮಪಾತ, ಅತಿಯಾದ ಸೆಕೆ, ಅತಿವೃಷ್ಟಿ ಮತ್ತು  ಅನಾವೃಷ್ಟಿಗಳಿಗೆ ಕಾರಣವೆನಿಸುವ ಮೂಲಕ ಅನೇಕ ವಿಧದ ಕಾಯಿಲೆಗಳಿಗೂ ಮೂಲವೆನಿಸುತ್ತಿದೆ. 

ಭಾರತದಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ಸುಮಾರು ಒಂದು ಲಕ್ಷದ ಎಪ್ಪತ್ತೈದು ಸಾವಿರ ಟನ್ ತ್ಯಾಜ್ಯಗಳಲ್ಲಿ, ಬಳಸಿ ಎಸೆದಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವು ಸಾಕಷ್ಟಿದೆ. ಏಕೆಂದರೆ ಒಮ್ಮೆ ಬಳಸಿ ಎಸೆಯುವ ವಸ್ತುಗಳನ್ನು ಬಳಸುವುದು ಭಾರತೀಯರಿಗೆ ಪ್ರತಿಷ್ಠೆಯ ವಿಚಾರವೆನಿಸಿದೆ. 

ನಿಯಂತ್ರಣವೇ ಪರಿಹಾರ 

ತ್ಯಾಜ್ಯ ಪ್ಲಾಸ್ಟಿಕ್ ನ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಅಸಾಧ್ಯ. ಆದರೆ ನಾವು ಬಳಸುತ್ತಿರುವ ಪ್ಲಾಸ್ಟಿಕ್ ಉತ್ಪನ್ನಗಳ, ಅದರಲ್ಲೂ ವಿಶೇಷವಾಗಿ ಕೈಚೀಲ- ಪೊಟ್ಟಣಗಳ ಬಳಕೆಯನ್ನು ಕಡಿಮೆ ಮಾಡಿದಲ್ಲಿ, ಈ ತ್ಯಾಜ್ಯಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗುವುದು. ಭಾರತದ ಪ್ರತಿಯೊಬ್ಬ ಪ್ರಜೆಯೂ ದಿನಕ್ಕೊಂದು ಪ್ಲಾಸ್ಟಿಕ್ ಕೈಚೀಲವನ್ನು ಬಳಸುವುದನ್ನು ಕಡಿಮೆ ಮಾಡಿದಲ್ಲಿ, ಒಂದು ದಿನದಲ್ಲಿ ನಾವು ಒಂದು ಶತಕೋಟಿಗೂ ಅಧಿಕ ಪ್ಲಾಸ್ಟಿಕ್ ಕೈಚೀಲಗಳನ್ನು ಉಳಿಸಬಹುದಾಗಿದೆ. ಜೊತೆಗೆ ಇಷ್ಟೇ ಸಂಖ್ಯೆಯ ನಿರುಪಯುಕ್ತ ಕೈಚೀಲಗಳು ಕಸದ ತೊಟ್ಟಿಯನ್ನು ಸೇರುವುದನ್ನು ತಡೆಗಟ್ಟಬಹುದಾಗಿದೆ!. 

ನಮ್ಮ ದೇಶದಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ವೈಜ್ಞಾನಿಕ ವಿಧಾನಗಳಿಂದ ಸಂಸ್ಕರಿಸಿ ಮರುಬಳಕೆ ಮಾಡುವುದು, ರಸ್ತೆಗಳ ನಿರ್ಮಾಣಗಳಲ್ಲಿ ಬಳಸುವುದೇ ಮುಂತಾದ ವಿಧಾನಗಳಿಂದ ಸುರಕ್ಷಿತವಾಗಿ ವಿಲೇವಾರಿ ಮಾಡಬಹುದಾಗಿದೆ. ಇದರಿಂದ ಅಪಾಯಕಾರಿ ತ್ಯಾಜ್ಯಗಳ ಸುರಕ್ಷಿತ ವಿಲೆವಾರಿಯೊಂದಿಗೆ, ರಸ್ತೆಗಳ ನಿರ್ಮಾಣದ ವೆಚ್ಚ ಕಡಿಮೆಯಾಗುವುದಲ್ಲದೇ, ಇಂತಹ ರಸ್ತೆಗಳು ಸುದೀರ್ಘಕಾಲ ಬಾಳ್ವಿಕೆಬರುತ್ತವೆ. ತತ್ಪರಿಣಾಮವಾಗಿ ಸರಕಾರದ ಬೊಕ್ಕಸಕ್ಕೆ ಸಾಕಷ್ಟು ಹಣದ ಉಳಿತಾಯವೂ ಆಗುತ್ತದೆ. 

ತ್ಯಾಜ್ಯ ಪ್ಲಾಸ್ಟಿಕ್ ಮತ್ತಿತರ ಹೈಡ್ರೋ ಕಾರ್ಬನ್ ಉತ್ಪನ್ನಗಳನ್ನು ದ್ರವ ಅಥವಾ ಅನಿಲ ರೂಪದ ಇಂಧನವನ್ನಾಗಿ ಪರಿವರ್ತಿಸಬಲ್ಲ ತಂತ್ರಜ್ಞಾನವು ಇದೀಗ ನಮ್ಮ ದೇಶದಲ್ಲೂ ಲಭ್ಯವಿದೆ. ಅದೇ ರೀತಿಯಲ್ಲಿ ಉಕ್ಕಿನ ಕಾರ್ಖಾನೆಗಳಲ್ಲಿ ಬಳಸುವ ಕಲ್ಲಿದ್ದಲು ಮತ್ತು ಕಿಟ್ಟಗಳ ಬಳಕೆಯನ್ನು ಶೇ.೩೦ ರಷ್ಟು ಕಡಿಮೆಮಾಡಿ, ಇದರ ಬದಲಾಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಉಪಯೋಗಿಸುವ ವಿನೂತನ ವಿಧಾನವೊಂದನ್ನು, ಭಾರತೀಯ ಸಂಜಾತೆ ವೀಣಾ ಸಹಜವಾಲ್ ಎನ್ನುವ ಎನ್ನುವ ವಿಜ್ಞಾನಿಯೊಬ್ಬರು ಸಂಶೋಧಿಸಿ ಕೆಲವರ್ಷಗಳೇ ಕಳೆದಿವೆ. ಈ ತಂತ್ರಜ್ಞಾನವನ್ನು ಆಸ್ಟ್ರೇಲಿಯಾದ ಅತಿ ದೊಡ್ಡ ಉಕ್ಕು ತಯಾರಿಕಾ ಸಂಸ್ಥೆಯಾಗಿರುವ " ವನ್ ಸ್ಟೀಲ್ " ಬಳಸಲು ಆರಂಭಿಸಿದೆ. ಜೊತೆಗೆ ಜಗತ್ತಿನ ಅನೇಕ ಪ್ರಮುಖ ಉಕ್ಕು ತಯಾರಿಕಾ ಘಟಕಗಳು ಈ ತಂತ್ರಜ್ಞಾನವನ್ನು ಬಳಸಲು ಅನುಮತಿಯನ್ನು ಪಡೆದಿವೆ.ಆದರೆ ಭಾರತದ  ಉಕ್ಕು ತಯಾರಿಕಾ ಸ್ಥಾವರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲು ಆರಂಭಿಸಿಲ್ಲ. 

ವಿಶ್ವಾದ್ಯಂತ ಪರಿಸರ ಮಾಲಿನ್ಯಕ್ಕೆ ಕಾರಣವೆನಿಸುತ್ತಿರುವ ಉಕ್ಕು ತಯಾರಿಕಾ ಸ್ಥಾವರಗಳು, ತಮ್ಮ ಕುಲುಮೆಗಳಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಳಸುವ ಮೂಲಕ ವಾಯುಮಾಲಿನ್ಯದೊಂದಿಗೆ, ಪ್ಲಾಸ್ಟಿಕ್ ನಿಂದ ಸಂಭವಿಸಬಲ್ಲ ಪರಿಸರ ಮಾಲಿನ್ಯವನ್ನೂ ಸುಲಭದಲ್ಲೇ ನಿಯಂತ್ರಿಸಬಹುದಾಗಿದೆ. ಹಾಗೂ ಇದರಿಂದಾಗಿ ಈ ಸ್ಥಾವರಗಳ ಇಂಧನದ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ.

ಇವೆಲ್ಲಕ್ಕೂ ಮಿಗಿಲಾಗಿ ಪ್ಲಾಸ್ಟಿಕ್ ನ ಬಳಕೆಯನ್ನೇ ಕಡಿಮೆಮಾಡಿದಲ್ಲಿ, ನಾವು ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗುವುದು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಮುಜರಾಯಿ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನೇ ನಿಷೇಧಿಸಿರುವುದು ಅತ್ಯಂತ ಪರಿಣಾಮಕಾರಿ ನಿರ್ಧಾರವೆನಿಸಿದೆ. 

ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಸಮರ್ಪಕವಾಗಿ ನಿಯಂತ್ರಿಸಲು ಸರಕಾರವು ಪ್ಲಾಸ್ಟಿಕ್ ಬಳಕೆಯ ಮೇಲೆ ವಿಶೇಷ ತೆರಿಗೆಯನ್ನು ವಿಧಿಸಬೇಕು. ಜೊತೆಗೆ ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹಿಸಿ ಮರಳಿಸುವ ಜನರಿಗೆ ಸ್ಥಳೀಯ ಸಂಸ್ಥೆಗಳು ಪ್ರೋತ್ಸಾಹ ಧನ ನೀಡಿದಲ್ಲಿ, ಕಂಡಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವ ಕೆಟ್ಟ ಹವ್ಯಾಸಕ್ಕೆ ಕಡಿವಾಣ ಬೀಳಲಿದೆ. ಜೊತೆಗೆ ಇಂತಹ ಉಪಕ್ರಮಗಳಿಂದಾಗಿ, ಈ ರೀತಿಯ ತ್ಯಾಜ್ಯಗಳ ಸಂಗ್ರಹಕ್ಕಾಗಿ ವ್ಯಯಿಸುವ ಶ್ರಮ ಮತ್ತು ವೆಚ್ಚಗಳಲ್ಲಿ ಸಾಕಷ್ಟು ಉಳಿತಾಯವಾಗಲಿದೆ. ಇದಲ್ಲದೆ ನಿರುಪಯುಕ್ತ ತ್ಯಾಜ್ಯಗಳನ್ನು "ಲ್ಯಾಂಡ್ ಫಿಲ್ ಸೈಟ್" ಗಳಲ್ಲಿ ಸುಲಭದಲ್ಲೇ ವಿಲೇವಾರಿ ಮಾಡಬಹುದಾಗಿದೆ. 

ಇವೆಲ್ಲಕ್ಕೂ ಮಿಗಿಲಾಗಿ ಪುನರ್ ಆವರ್ತನ ಮಾಡಲು ಸಾಧ್ಯವಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಖರೀದಿಸಿ, ಪುನರ್ ಆವರ್ತನಗೊಳಿಸಿ ಬಳಸುವ ಉದ್ದಿಮೆಗಳಿಗೆ ಸರಕಾರ ಪ್ರೋತ್ಸಾಹ ಧನ ನೀಡುವುದು, ರಸ್ತೆಗಳ ಡಾಮರೀಕರಣದಲ್ಲಿ ಬಳಸಬಹುದಾದ ಕೆಲ ವಿಧದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಡ್ಡಾಯವಾಗಿ ಬಳಸುವುದೇ ಮುಂತಾದ ಉಪಕ್ರಮಗಳಿಂದಾಗಿ, ಗಣನೀಯ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ವಿಲೆವಾರಿಯೊಂದಿಗೆ ಇವುಗಳ ಸದ್ಬಳಕೆಯೂ ಆಗುವುದು. 

ಅಂತಿಮವಾಗಿ ಆಂಗ್ಲ ಭಾಷೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಸಲುವಾಗಿ ರೂಪಿಸಿರುವ ಸೂತ್ರವಾಗಿರುವ " ತ್ರೀ ಆರ್" (Three "R"s - Reduse,re use, recycle) , ಅರ್ಥಾತ್ ಕಡಿಮೆಮಾಡಿ, ಮರುಬಳಕೆ ಮಾಡಿ, ಪುನರ್ ಆವರ್ತನಗೊಳಿಸಿ ಎನ್ನುವ ಶಬ್ದಗಳೊಂದಿಗೆ, refuse ಅರ್ಥಾತ್ ನಿರಾಕರಿಸಿ ಎನ್ನುವುದನ್ನು ಸೇರಿಸಿ ಅನುಸರಿಸಿದಲ್ಲಿ, ನಾವು ಉತ್ಪಾದಿಸುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣ ನಿಸ್ಸಂದೇಹವಾಗಿ ಕಡಿಮೆಯಾಗಲಿದೆ. ಇದಕ್ಕೆ ತಪ್ಪಿದಲ್ಲಿ ಈ ತ್ಯಾಜ್ಯಗಳ ದುಷ್ಪರಿಣಾಮಗಳು ನಮ್ಮ ಮುಂದಿನ ಸಂತತಿಯನ್ನು ಶಾಪದೋಪಾದಿಯಲ್ಲಿ ಬಾಧಿಸಲಿದೆ ಎನ್ನುವುದನ್ನು ಮರೆಯದಿರಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. -೦೧-೨೦೦೯ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.





Tuesday, March 18, 2014

JUNK FOOD





  ನಿಷ್ಪ್ರಯೋಜಕ ಆಹಾರ: ಆರೋಗ್ಯಕ್ಕೆ ಹಾನಿಕರ 

ಮನುಷ್ಯನು ಆರೋಗ್ಯವಂತನಾಗಿ ಬದುಕಲು ಶುದ್ಧವಾದ ಗಾಳಿ ಹಾಗೂ ನೀರು, ಪೌಷ್ಟಿಕ ಅಂಶಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರ ಮತ್ತು ನಿರ್ಮಲವಾದ ಪರಿಸರ ಅತ್ಯವಶ್ಯಕ ಎನಿಸುವುದು. ಅದೇ ರೀತಿಯಲ್ಲಿ ಇವೆಲ್ಲವುಗಳ ಗುಣಮಟ್ಟಗಳಲ್ಲಿ ನ್ಯೂನ್ಯತೆ ಅಥವಾ ವ್ಯತ್ಯಯಗಳು ಸಂಭವಿಸಿದಲ್ಲಿ, ಅನಾರೋಗ್ಯ ಮತ್ತು ಇತರ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ. 

ಪ್ರಸ್ತುತ ಬಹುತೇಕ ಭಾರತೀಯರು ಮಾರುಹೋಗಿರುವ ಪಾಶ್ಚಾತ್ಯ ಜೀವನಶೈಲಿಯಿಂದಾಗಿ ಅತಿಯಾದ ಪ್ರಮಾಣದಲ್ಲಿ "ನಿಷ್ಪ್ರಯೋಜಕ ಆಹಾರ" (junk food) ಗಳನ್ನು ಸೇವಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಶ್ರೀಮಂತರು, ಮೇಲ್ಮಧ್ಯಮ ವರ್ಗದವರು, ಉದ್ಯೋಗಸ್ತ ದಂಪತಿಗಳ ಕುಟುಂಬಗಳು ಮತ್ತು ಯುವಪೀಳಿಗೆಯವರು ಇಂತಹ ಸಂಸ್ಕರಿತ, ಸಿದ್ಧ ಹಾಗೂ ಉಪ್ಪು, ಕೊಬ್ಬು ಮತ್ತು ಸಕ್ಕರೆಗಳಿಂದ ಸಮೃದ್ಧವಾಗಿರುವ ವೈವಿಧ್ಯಮಯ ನಿಷ್ಪ್ರಯೋಜಕ ಆಹಾರಗಳ ದಾಸಾನುದಾಸರಾಗಿದ್ದಾರೆ. ಈ ಕುಟುಂಬಗಳ ಪುಟ್ಟ ಮಕ್ಕಳೂ ಇದಕ್ಕೆ ಅಪವಾದವೆನಿಸಿಲ್ಲ. ಆದರೆ ಎಳೆಯ ಮಕ್ಕಳು ಇಂಥ ಆಹಾರಗಳನ್ನು ಸೇವಿಸುವುದರಿಂದ ಉದ್ಭವಿಸಬಲ್ಲ ಗಂಭೀರ ಆರೋಗ್ಯದ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಿಗೆ ಒಂದಿಷ್ಟು ಮಾಹಿತಿ ತಿಳಿದಿದ್ದರೂ, ಇವುಗಳ ಸೇವನೆಯನ್ನು ಮಾತ್ರ ನಿಲ್ಲಿಸುವುದೇ ಇಲ್ಲ!. 

ತಮ್ಮ ಮಕ್ಕಳು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಊಟ ಉಪಾಹಾರಗಳನ್ನು ಸೇವಿಸದಿರುವ ಸಮಸ್ಯೆಯನ್ನು ಪರಿಹರಿಸಲು, ಉತ್ತಮವಾದ ಟಾನಿಕ್ ಒಂದನ್ನು ನೀಡುವಂತೆ ವೈದ್ಯರನ್ನು ಒತ್ತಾಯಿಸುವ ದಂಪತಿಗಳ ಸಂಖ್ಯೆ ಸಾಕಷ್ಟಿದೆ. ಮಕ್ಕಳ ಹಸಿವನ್ನು ಹೆಚ್ಚಿಸಬಲ್ಲ ಮತ್ತು ತನ್ಮೂಲಕ ಮಕ್ಕಳು ಸೇವಿಸುವ ಆಹಾರದ ಪ್ರಮಾಣವನ್ನು ವೃದ್ಧಿಸಬಲ್ಲ ಟಾನಿಕ್ ನೀಡುವಂತೆ ಅಂಗಲಾಚುವ ತಂದೆತಾಯಂದಿರಿಗೆ, ಈ ಸಮಸ್ಯೆಯ ಮೂಲ ಕಾರಣ ಏನೆಂದು ತಿಳಿದಿದೆ. ಏಕೆಂದರೆ ಇಡ್ಲಿ, ದೋಸೆ, ಚಪಾತಿ ಮತ್ತು ಅನ್ನಗಳನ್ನು ತಿನ್ನಲೊಪ್ಪದ ಮಕ್ಕಳು, ಪಿಜ್ಜಾ, ಬರ್ಗರ್, ನೂಡಲ್ಸ್ ಮತ್ತು ಕುರುಕಲು ತಿಂಡಿಗಳನ್ನು ತಿನ್ನಲು ನಿರಾಕರಿಸುವುದೇ ಇಲ್ಲ. ವಿಶೇಷವೆಂದರೆ ಪೋಷಕ ಅಂಶಗಳೇ ಇಲ್ಲದ ಇಂತಹ ಆಹಾರಗಳ ಸೇವನೆಯಿಂದಾಗಿ, ಈ ಮಕ್ಕಳು ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಸುಲಭದಲ್ಲೇ ಈಡಾಗುತ್ತಾರೆ. 

ಬುದ್ಧಿಶಕ್ತಿ ಸೊರಗುವುದೇ?

ಒಂದೆರಡು ವರ್ಷಗಳ ಹಿಂದೆ ಬ್ರಿಟನ್ ನಲ್ಲಿ ಪ್ರಕಟವಾಗಿದ್ದ ವೈದ್ಯಕೀಯ ಅಧ್ಯಯನದ ವರದಿಯಂತೆ, ನಿಷ್ಪ್ರಯೋಜಕ ಹಾಗೂ ಸಂಸ್ಕರಿತ ಆಹಾರಗಳನ್ನೇ ಹೆಚ್ಚಾಗಿ ಸೇವಿಸುವ ನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳ ಬುದ್ಧಿಶಕ್ತಿಯ ಮಟ್ಟವು ಕಡಿಮೆಯಾಗುತ್ತದೆ. ಸುಮಾರು ೪೦೦೦ ಮಕ್ಕಳ ಆಹಾರ ಸೇವನಾ ಕ್ರಮಗಳ ಬಗ್ಗೆ ನಡೆಸಿದ್ದ ಈ ಅಧ್ಯಯನದಿಂದಾಗಿ, ಪ್ರತಿನಿತ್ಯ ನಿಷ್ಪ್ರಯೋಜಕ ಆಹಾರಗಳನ್ನು ಸೇವಿಸುತ್ತಿರುವ ಮಕ್ಕಳಿಗೆ ಎಂಟೂವರೆ ವರ್ಷ ವಯಸ್ಸಾಗುವಾಗ ಇವರ ಬೌದ್ಧಿಕ ಮಟ್ಟವು ಇಂತಹ ಆಹಾರಗಳನ್ನು ಸೇವಿಸದ ಮಕ್ಕಳಿಗಿಂತಲೂ ತುಸು ಕಡಿಮೆ ಇರುವುದು ಪತ್ತೆಯಾಗಿತ್ತು. ಈ ಮಕ್ಕಳು ನಿಯಮಿತವಾಗಿ ಸೇವಿಸುವ ನಿಷ್ಪ್ರಯೋಜಕ ಆಹಾರಪದಾರ್ಥಗಳ ಪ್ರಮಾಣವು ಹೆಚ್ಚಾದಂತೆಯೇ, ಇವರ ಬುದ್ಧಿಮತ್ತೆಯ ಮಟ್ಟವು ಇದಕ್ಕೆ ಅನುಗುಣವಾಗಿ ಇನ್ನಷ್ಟು ಕಡಿಮೆಯಾಗುತ್ತಿರುವುದು ತಿಳಿದುಬಂದಿತ್ತು. 

ಬ್ರಿಟನ್ ನಲ್ಲಿರುವ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು ಹಲವಾರು ವರ್ಷಗಳ ಕಾಲ ನಡೆಸಿದ್ದ ಈ ಅಧ್ಯಯನದ ಅಂಗವಾಗಿ ೩, ೬. ೭ ಮತ್ತು ೮.೬ ವರ್ಷ ವಯಸ್ಸಿನ ಆಯ್ದ ಮಕ್ಕಳ ಆಹಾರ ಸೇವನೆಯನ್ನು ಕ್ರಮಬದ್ಧವಾಗಿ ನಿರೀಕ್ಷಿಸಲಾಗಿತ್ತು. ಈ ಸಂಶೋಧನಾ ತಂಡದ ನಾಯಕರೂ ಆಗಿದ್ದ ಖ್ಯಾತ ವೈದ್ಯರೊಬ್ಬರ ಅಭಿಪ್ರಾಯದಂತೆ, ಅಲ್ಪ ಪ್ರಮಾಣದ ಉತ್ತಮ ಆಹಾರದೊಂದಿಗೆ ಅತಿಯಾದ ಸಂಸ್ಕರಿತ ಹಾಗೂ ನಿಷ್ಪ್ರಯೋಜಕ ಆಹಾರಪದಾರ್ಥಗಳನ್ನು ಸೇವಿಸುವ ಎಳೆಯ ವಯಸ್ಸಿನ ಮಕ್ಕಳ ಈ ಕೆಟ್ಟ ಹವ್ಯಾಸಕ್ಕೆ ಮತ್ತು ಅವರ ಬುದ್ಧಿಶಕ್ತಿಯ ಮಟ್ಟದಲ್ಲಿ ಕಂಡುಬರಬಹುದಾದ ನ್ಯೂನತೆಗಳಿಗೆ ಅವಿನಾಭಾವ ಸಂಬಂಧವಿದೆ. 

ಇಷ್ಟು ಮಾತ್ರವಲ್ಲ, ಉತ್ತಮ ಗುಣಮಟ್ಟದ ಸಮತೋಲಿತ ಹಾಗೂ ಆರೋಗ್ಯದಾಯಕ ಆಹಾರವನ್ನೇ ಸೇವಿಸುವ ಮಕ್ಕಳ ಬುದ್ಧಿಮತ್ತೆಯು ಉನ್ನತಸ್ತರದಲ್ಲಿ ಇರುತ್ತದೆ. ಏಕೆಂದರೆ ಇಂತಹ ಆಹಾರಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳು ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಆದರೂ ಈ ಬಗ್ಗೆ ಇನ್ನಷ್ಟು ಸಂಶೋಧನೆಗಳನ್ನು ನಡೆಸಬೇಕಾಗಿದೆ. 

ಬ್ರಿಟನ್ ನ ಆಹಾರ ಮತ್ತು ಪಾನೀಯ ಒಕ್ಕೂಟದ ಅಧ್ಯಕ್ಷರು ಹೇಳುವಂತೆ, ಆರೋಗ್ಯದಾಯಕ ಹಾಗೂ ಸಮತೋಲಿತ ಆಹಾರ ಸೇವನೆಯಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚುವುದು ಅಚ್ಚರಿ ಮೂಡಿಸುವಂತಹ ವಿಷಯವೇನಲ್ಲ. ಏಕೆಂದರೆ ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಮತ್ತು ಆರೋಗ್ಯ ರಕ್ಷಣೆಗಳ ವಿಚಾರದಲ್ಲಿ ಸಮತೋಲಿತ ಆಹಾರ ಸೇವನೆ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿರುವುದು ಅನೇಕ ವರ್ಷಗಳ ಹಿಂದೆಯೇ ವೈದ್ಯಕೀಯ ಕ್ಷೇತ್ರಕ್ಕೆ ತಿಳಿದಿತ್ತು. ಇದೇ ಕಾರಣದಿಂದಾಗಿ ಇಂತಹ ಆಹಾರಗಳನ್ನೇ ಮಕ್ಕಳಿಗೆ ನೀಡುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು. 

ಆಹಾರಸೇವನೆಯೆಂಬ ಶಿಸ್ತು 

ಬ್ರಿಟನ್ ನ ಸಂಶೋಧಕರು ಪ್ರಕಟಿಸಿರುವ ವರದಿಯಲ್ಲಿನ ಮಾಹಿತಿಗಳು ಶತಪ್ರತಿಶತ ನಿಜವೆಂದು ನಿಮಗೂ ಅನಿಸಿರಲೇಬೇಕು. ಏಕೆಂದರೆ ಸುಮಾರು ಎರಡು ದಶಕಗಳ ಹಿಂದೆ ಭಾರತದ ಮಾರುಕಟ್ಟೆಗಳಲ್ಲಿ " ಜಂಕ್ ಫುಡ್" ಗಳ ಹಾವಳಿ ಇಲ್ಲದಿದ್ದ ಸಂದರ್ಭದಲ್ಲಿ, ಬಹುತೇಕ ಎಳೆಯ ಮಕ್ಕಳು ಅಪ್ಪಟ ಭಾರತೀಯ ಶೈಲಿಯ ಹಾಗೂ ಸಾಂಪ್ರದಾಯಿಕ ಖಾದ್ಯಪೇಯಗಳನ್ನು ಸವಿಯುತ್ತಿದ್ದರು. ಆದರೆ ಜಾಗತೀಕರಣ ಮತ್ತು ಉದಾರೀಕರಣಗಳ ಫಲವಾಗಿ ಭಾರತದ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿದ್ದ ಪಿಜ್ಜಾ- ಬರ್ಗರ್ ಮತ್ತು ವೈವಿಧ್ಯಮಯ ಸಂಸ್ಕರಿತ ಆಹಾರಗಳ ಜಾಹೀರಾತುಗಳಿಗೆ ಮನಸೋತ ಎಳೆಯ ಮಕ್ಕಳು, ಸ್ವಾಭಾವಿಕವಾಗಿಯೇ ಇಂತಹ ಆಹಾರಗಳತ್ತ ಆಕರ್ಷಿತರಾಗಿದ್ದರು. 

ಶ್ರೀಮಂತ ಕುಟುಂಬಗಳ ಮತ್ತು ಉದ್ಯೋಗಸ್ತ ದಂಪತಿಗಳ ಮಕ್ಕಳ ಪಾಲಿಗಂತೂ ಇಂತಹ ಜಂಕ್ ಫುಡ್ ಗಳು ದೈನಂದಿನ ಆಹಾರದ ಅವಿಭಾಜ್ಯ ಅಂಗವೆನಿಸಿವೆ. ಪ್ರಾಯಶಃ ಇದೇ ಕಾರಣದಿಂದಾಗಿ ಇವರ ಮಕ್ಕಳ ಬುದ್ಧಿಶಕ್ತಿಯ ಮತ್ತು ಆರೋಗ್ಯದ ಮಟ್ಟಗಳು ಸ್ವಾಭಾವಿಕವಾಗಿಯೇ ಕುಸಿಯಲಾರಂಭಿಸಿವೆ. ಜಂಕ್ ಫುಡ್ ಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ಕೃತಕ ರಾಸಾಯನಿಕಗಳಿಂದ ತಯಾರಿಸಿದ ರುಚಿವರ್ಧಕ ಮತ್ತು ಸಂರಕ್ಷಕ ದ್ರವ್ಯಗಳ ಸೇವನೆಯಿಂದ ಉದ್ಭವಿಸಬಲ್ಲ ಅನೇಕ ವಿಧದ ಸಮಸ್ಯೆಗಳಲ್ಲಿ ಇದು ಪ್ರಮುಖವಾಗಿದೆ. 

ಆದರೆ ವೈದ್ಯಕೀಯ ಸಂಶೋಧನೆ- ಅಧ್ಯಯನಗಳ ವರದಿಗಳು ಇಂತಹ ಮಾಹಿತಿಗಳನ್ನು ಬಹಿರಂಗಪಡಿಸಿದ ಬಳಿಕವೂ ನಿಮ್ಮ ಮಕ್ಕಳು ನಿಷ್ಪ್ರಯೋಜಕ ಆಹಾರಗಳನ್ನು ಸೇವಿಸುವ ಕೆಟ್ಟ ಹವ್ಯಾಸವನ್ನು ನಿಲ್ಲಿಸದೇ ಇದ್ದಲ್ಲಿ, ಸಂಭಾವ್ಯ ಸಮಸ್ಯೆಗಳನ್ನು ತಡೆಗಟ್ಟುವುದು ನಿಶ್ಚಿತವಾಗಿಯೂ ಅಸಾಧ್ಯವೆನಿಸುವುದು ಎನ್ನುವುದನ್ನು ಮರೆಯದಿರಿ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು. 

ಉದಯವಾಣಿ ಪತ್ರಿಕೆಯ ದಿ. ೧೮-೦೨-೨೦೧೧ ರ ಸಂಚಿಕೆಯ ಮಹಿಳಾ ಸಂಪದದಲ್ಲಿ( ಮನೆಯಡುಗೆ ಅಮೃತ ಸಮಾನ ಎನ್ನುವ ಶೀರ್ಷಿಕೆಯಲ್ಲಿ) ಪ್ರಕಟಿತ ಲೇಖನ. 


Monday, March 17, 2014

RISING TEMPERATURE........





  ಏರುತ್ತಿರುವ ತಾಪಮಾನ  : ಇದಕ್ಕೇನು ಕಾರಣ ?

ಕಳೆದ ಕೆಲದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲಭಾಗಗಳಲ್ಲಿ ಬೇಸಗೆಯ ಧಗೆ ಅತಿಯಾಗಿ ಹೆಚ್ಚುತ್ತಿದೆ. ಒಂದೆರಡು ದಶಕಗಳಲ್ಲಿ ಜಿಲ್ಲೆಯ ಜನರು ಕಂಡು ಕೇಳರಿಯದಂತಹ ತಾಪಮಾನದ ಹೆಚ್ಚಳವು ಇನ್ನಷ್ಟು ಹೆಚ್ಚಲಿದೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ಪ್ರಕಟಿಸಿದೆ. ಬಳ್ಳಾರಿಯ ಸುಡು ಬಿಸಿಲಿನ ಬೇಗೆಯನ್ನು ಮೀರಿಸುವಂತಹ  ಪರಿಸ್ಥಿತಿಗೆ ಕಾರಣವೇನು?, ಎಂದು ಕೇಳುತ್ತಿರುವ ಜನಸಾಮಾನ್ಯರ ಪ್ರಶ್ನೆಗೆ ಸಂಬಂಧಿತ ಇಲಾಖೆಯ ಅಧಿಕಾರಿಗಳು " ವೈಜ್ಞಾನಿಕ ಉತ್ತರ" ವನ್ನು ನೀಡಬೇಕಾಗಿದೆ. 

ಧಗಧಗಿಸುತಿಹುದು ಬೇಸಗೆ 

ಈ ವರ್ಷದ ಮಾರ್ಚ್ ತಿಂಗಳಿನ ಮೊದಲ ವಾರದಲ್ಲಿ ಸಂಜೆಯ ಮತ್ತು ಮುಂಜಾನೆಯ ಹೊತ್ತಿನಲ್ಲಿ ಸಾಕಷ್ಟು ತಂಪಾಗಿ ಇರುತ್ತಿದ್ದ ಹಾಗೂ ಕೆಲವೊಮ್ಮೆ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿತ್ತು. ಜೊತೆಗೆ ಕೆಲವೊಮ್ಮೆ ಮೋಡ ಕವಿದ ವಾತಾವರಣದೊಂದಿಗೆ, ಜಿಲ್ಲೆಯ ಕೆಲ ಭಾಗಗಳಲ್ಲಿ ತುಂತುರು ಮತ್ತು ಕೆಲವೆಡೆ ಉತ್ತಮ ಮಳೆ ಸುರಿದಿತ್ತು.(ಅಂತೆಯೇ ರಾಜ್ಯದ ಇತರ ಕೆಲ ಜಿಲ್ಲೆಗಳಲ್ಲಿ ಅಕಾಲಿಕವಾಗಿ ಆಲಿಕಲ್ಲು ಮಳೆ ಸುರಿದ ಪರಿಣಾಮವಾಗಿ ಕೃಷಿಕರ ಫಸಲು ನಾಶಗೊಂಡು, ರೈತರಿಗೆ ಅಪಾರ ಪ್ರಮಾಣದ ನಷ್ಟವೂ ಸಂಭವಿಸಿದೆ.) ತದನಂತರ ಏಕಾಏಕಿಯಾಗಿ ಬಿಸಿಲಿನ ಝಳ ಹೆಚ್ಚುತ್ತಾ ಹೋದಂತೆಯೇ, ಇಲ್ಲಿನ ತಾಪಮಾನದ ಮಟ್ಟವು ೪೦ ಡಿಗ್ರಿ ಸೆಲ್ಸಿಯಸ್ ನ ಆಸುಪಾಸಿನಲ್ಲಿ ಸುಳಿದಾಡುತ್ತಿದೆ. ಪುತ್ತೂರಿನಲ್ಲಂತೂ ಜಿಲ್ಲೆಯಲ್ಲೇ ಗರಿಷ್ಠ ಎನಿಸಿರುವ ತಾಪಮಾನದ ಮಟ್ಟವು, ಈಗಾಗಲೇ ೪೦ ಡಿಗ್ರಿ ಸೆಲ್ಸಿಯಸ್ ಮೀರಿದೆ. ಸಾಮಾನ್ಯವಾಗಿ ಎಪ್ರಿಲ್ - ಮೇ ತಿಂಗಳುಗಳಲ್ಲಿ ಬೇಸಗೆಯ ಧಗೆ ವಿಪರೀತವೆನಿಸುವ ನಮ್ಮ ಜಿಲ್ಲೆಯಲ್ಲಿ, ಮಾರ್ಚ್ ತಿಂಗಳಿನಲ್ಲಿ ತಾಪಮಾನದ ಮಟ್ಟವು ದಾಖಲೆಯನ್ನು ನಿರ್ಮಿಸಿದ್ದು, ಮುಂದಿನ ತಿಂಗಳುಗಳಲ್ಲಿ ಇದು ಎಲ್ಲಿಗೆ ತಲುಪಬಹುದೆಂದು ಜನಸಾಮಾನ್ಯರು ಚಿಂತಾಕ್ರಾಂತರಾಗಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಒಂದೆರಡು ಮಳೆ ಸುರಿದಲ್ಲಿ ತಂಪಾಗಲಿರುವ ವಾತಾವರಣವು, ಮತ್ತೆ ಬಿಸಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

೨೦೧೦ ನೆ ಇಸವಿಯ ಮೊದಲ ನಾಲ್ಕು ತಿಂಗಳುಗಳ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ದಾಖಲಾಗಿರುವ ತಾಪಮಾನದ ಮಟ್ಟವು, ಹಳೆಯ ದಾಖಲೆಗಳನ್ನು ಮುರಿದು ವಿಶ್ವ ದಾಖಲೆಯನ್ನು ನಿರ್ಮಿಸಿತ್ತು. ಈ ಅವಧಿಯಲ್ಲಿ ಭೂಮಿಯ ಮತ್ತು ಸಮುದ್ರದ ಮೇಲ್ಮೈಯ ಸರಾಸರಿ ತಾಪಮಾನದ ಮಟ್ಟವು ೧೩.೩ ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಇದು ೨೦ ನೆ ಶತಮಾನದ ಸರಾಸರಿಗಿಂತಲೂ ೦.೬೯ ಡಿಗ್ರಿ ಹೆಚ್ಚಾಗಿದೆ. ಭಾರತವೂ ಇದಕ್ಕೆ ಅಪವಾದವೆನಿಸಿಲ್ಲ. ಏಕೆಂದರೆ ದಕ್ಷಿಣದ ರಾಜ್ಯಗಳಲ್ಲಿ ೨೦೧೦ ರ ಮೇ ತಿಂಗಳಿನಲ್ಲಿ ದಾಖಲಾಗಿದ್ದ ತಾಪಮಾನವು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಅದೇ ರೀತಿಯಲ್ಲಿ ೨೦೧೦ ರ ಮಾರ್ಚ್-ಎಪ್ರಿಲ್ ತಿಂಗಳುಗಳಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲಿ ದಾಖಲಾಗಿದ್ದ ತಾಪಮಾನದ ಮಟ್ಟವು, ಸಾಮಾನ್ಯವಾಗಿ ಮೇ ತಿಂಗಳಿನ ಕಡುಬೇಸಗೆಯ ದಿನಗಳಲ್ಲಿ ಕಂಡುಬರುತ್ತಿದ್ದ ತಾಪಮಾನಕ್ಕಿಂತಲೂ ಸಾಕಷ್ಟು ಅಧಿಕವಾಗಿತ್ತು. ವಿಶೇಷವೆಂದರೆ ಸಾಮಾನ್ಯವಾಗಿ " ಉಷ್ಣ ಅಲೆ" ಯ ಪೀಡೆ ಬಾಧಿಸಿರದ ಕೇರಳದ ಪಾಲಕ್ಕಾಡ್ ಮತ್ತು ನಮ್ಮ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಸುರಿಯುವ ಸುಬ್ರಮಣ್ಯದಲ್ಲಿ ಅಂದು ೪೦ ರಿಂದ ೪೫ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. 

ಇದಕ್ಕೇನು ಕಾರಣ?

ಜಾಗತಿಕ ಮಾತದಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಈ ಸಮಸ್ಯೆಗೆ ನಿರಂತರವಾಗಿ ಹೆಚ್ಚುತ್ತಿರುವ ಜನ- ವಾಹನಗಳ ಸಂಖ್ಯೆ, ಅತಿಯಾಗುತ್ತಿರುವ ನಗರೀಕರಣ, ಹೆಚ್ಚುತ್ತಿರುವ ಕಟ್ಟಡಗಳ ನಿರ್ಮಾಣ, ಅರಣ್ಯ- ಕೃಷಿ ಭೂಮಿಗಳನ್ನು ನಾಶಪಡಿಸಿ ತಲೆ ಎತ್ತುತ್ತಿರುವ ಕೈಗಾರಿಕೆ,ಉದ್ದಿಮೆ, ವಿದ್ಯುತ್ ಉತ್ಪಾದನಾ ಘಟಕಗಳು ಮತ್ತು ವಿಶೇಷ ವಿತ್ತ ವಲಯಗಳೊಂದಿಗೆ ಮಿತಿಮೀರಿದ ಪರಿಸರ ಪ್ರದೂಷಣೆಗಳೇ ಕಾರಣವೆಂದು ಬಲ್ಲವರು ಹೇಳುತ್ತಾರೆ. 

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿಸಿರುವ ಜಾಗತಿಕ ತಾಪಮಾನದ ಹೆಚ್ಚಳವೂ, ಬೇಸಗೆಯ ಧಗೆ ಇನ್ನಷ್ಟು ಹೆಚ್ಚಲು ಕಾರಣವೆನಿಸುತ್ತಿದೆ. ಜೊತೆಗೆ ಇದರಿಂದಾಗಿ ಸಂಭವಿಸುತ್ತಿರುವ ಹವಾಮಾನದ ವೈಪರೀತ್ಯಗಳಿಂದಾಗಿ, ಕಡುಬೇಸಗೆಯ ದಿನಗಳಲ್ಲೂ ಗುಡುಗು- ಮಿಂಚುಗಳೊಂದಿಗೆ ಆಲಿಕಲ್ಲು ಮಳೆ ಸುರಿಯುತ್ತಿದೆ. ಒಂದೆಡೆ ಅತಿವೃಷ್ಟಿ ಹಾಗೂ ಕೆಲವೆಡೆ ಅನಾವೃಷ್ಟಿ, ಕೆಲವೆಡೆ ಅತಿಯಾದ ಸೆಕೆ ಮತ್ತೆ ಕೆಲವೆಡೆ ಅತಿಯಾದ ಚಳಿಗಳಂತಹ  ವ್ಯತ್ಯಯಗಳನ್ನು ತೋರುತ್ತಿರುವ ಹವಾಮಾನದ ವೈಪರೀತ್ಯಗಳಿಗೆ ಮೇಲೆ ನಮೂದಿಸಿದ ಕಾರಣಗಳಲ್ಲದೇ ಇತರ ಕಾರಣಗಳೂ ಇರಲೇಬೇಕು. ಏಕೆಂದರೆ ನಮ್ಮ ದೇಶದ ಕಳೆದ ೫೦ ವರ್ಷಗಳ ಹವಾಮಾನದ ದಾಖಲೆಗಳನ್ನು ಪರಿಶೀಲಿಸಿದಾಗ, ಸುಮಾರು ೫ ದಶಕಗಳ ಹಿಂದೆಯೂ ಅತಿಯಾದ ತಾಪಮಾನ ದಾಖಲಾಗಿದ್ದುದು ತಿಳಿದುಬರುತ್ತದೆ. ೫೦ ವರ್ಷಗಳ ಹಿಂದೆ ಭಾರತದ ಜನ- ವಾಹನಗಳ ಸಂಖ್ಯೆ, ಪರಿಸರ ಪ್ರದೂಷಣೆಯ ಪ್ರಮಾಣ ಇತ್ಯಾದಿಗಳು ಸಾಕಷ್ಟು ಕಡಿಮೆ ಇದ್ದಿತು. ಆದರೂ ಅಂದಿನ ದಿನಗಳಲ್ಲಿ ಭಾರತದ ಅನೇಕ ರಾಜ್ಯಗಳಲ್ಲಿ ಬೇಸಗೆಯ ದಿನಗಳಲ್ಲಿ ತಾಪಮಾನದ ಮಟ್ಟವು ೪೫ ಡಿಗ್ರಿ ಸೆಲ್ಸಿಯಸ್ ಮೀರಿದ್ದುದನ್ನು ದಾಖಲೆಗಳು ಧೃಢಪಡಿಸುತ್ತವೆ. ನಿಜ ಸ್ಥಿತಿ ಹೀಗಿದ್ದಲ್ಲಿ ಅಂದಿನ ದಿನಗಳಲ್ಲಿ ತಾಪಮಾನದ ಮಟ್ಟವು ಅತಿಯಾಗಿ ಹೆಚ್ಚಿದ್ದುದಕ್ಕೆ ನೈಜ ಕಾರಣ ಏನೆಂದು ಹವಾಮಾನ ತಜ್ಞರೇ ಹೇಳಬೇಕಷ್ಟೆ. 

ಪ್ರಸ್ತುತ ಭಾರತದ ಅನೇಕ ರಾಜ್ಯಗಳಲ್ಲಿ ದಾಖಲಾಗುತ್ತಿರುವ ಅತಿಯಾದ ತಾಪಮಾನದ ಪ್ರಮಾಣವು ಗಾಬರಿ ಹುಟ್ಟಿಸುವಂತಿದೆ. ಅಂತೆಯೇ ಅತಿಯಾಗಿ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಗಳೂ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಪ್ರಾಕೃತಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹವಾಮಾನ ತಜ್ಞರು - ವಿಜ್ಞಾನಿಗಳು ಇದಕ್ಕೊಂದು ಸೂಕ್ತ ಪರಿಹಾರವನ್ನು ಪತ್ತೆಹಚ್ಚಬೇಕಿದೆ. ಅಲ್ಲಿಯ ತನಕ ಈ ಅಸಹನೀಯ ಮತ್ತು ಅಪಾಯಕಾರೀ ಸಮಸ್ಯೆಯನ್ನು ನಾವೆಲ್ಲರೂ ಅನಿವಾರ್ಯವಾಗಿ ಸಹಿಸಿಕೊಳ್ಳಲೇಬೇಕಾಗಿದೆ.

ಕೊನೆಯ ಮಾತು 

ಈ ಕಡು ಬೇಸಗೆಯ ಸುಡು ಬಿಸಿಲಿನಲ್ಲಿ ಶಾರೀರಿಕ ಶ್ರಮದ ಕೆಲಸಗಳನ್ನು ಮಾಡಿದಲ್ಲಿ ಧಾರಾಕಾರವಾಗಿ ಬೆವರು ಸುರಿಯುತ್ತದೆ. ಈ ಸಂದರ್ಭದಲ್ಲಿ ಬಾಯಾರಿಕೆಯಾದಲ್ಲಿ ಕೇವಲ ನೀರನ್ನು ಮಾತ್ರ ಕುಡಿಯುವುದು ಹಿತಕರವಲ್ಲ. ಏಕೆಂದರೆ  ಬೆವರಿದಾಗ ನಿಮ್ಮ ಶರೀರದಲ್ಲಿರುವ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕೃತ ಸ್ಥಿತಿ (ಡಿ ಹೈಡ್ರೇಶನ್ ) ಉದ್ಭವಿಸುವುದರೊಂದಿಗೆ, ಇತರ ಕೆಲ ಅಂಶಗಳೂ  ಕಡಿಮೆಯಾಗುತ್ತವೆ. ಇಂತಹ ಸ್ಥಿತಿಯಲ್ಲಿ ಸಕ್ಕರೆ ಮತ್ತು ಚಿಟಿಕೆ ಉಪ್ಪನ್ನು ಬೆರೆಸಿದ ನೀರು ಅಥವಾ ಶರಬತ್ತು ಅಥವಾ ನಮ್ಮ ಪೂರ್ವಜರಂತೆ ತುಂಡು ಬೆಲ್ಲದೊಂದಿಗೆ ನೀರನ್ನು ಕುಡಿಯುವುದು ಅತ್ಯಂತ ಆರೋಗ್ಯಕರವೂ ಹೌದು. 

ಇದಲ್ಲದೆ ಮಟಮಟ ಮಧ್ಯಾಹ್ನ ಕೊಡೆಯನ್ನು ಹಿಡಿಯದೆ ಬಿಸಿಲಿನಲ್ಲಿ ನಡೆದಾಡುವುದರಿಂದ " ಸೂರ್ಯಾಘಾತ" ಅರ್ಥಾತ್ ಸನ್ ಸ್ಟ್ರೋಕ್ ಬಾಧಿಸುವ ಸಾಧ್ಯತೆಗಳಿವೆ. ವಯೋವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಮಕ್ಕಳಿಗೆ ಇದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು