Saturday, March 15, 2014

MLA's and MP's offices under RTI!.





   ಶಾಸಕ - ಸಂಸದರ ಕಚೇರಿಗಳು ಮಾಹಿತಿ ಹಕ್ಕಿನ ವ್ಯಾಪ್ತಿಗೆ 

 ರಾಜ್ಯದ- ದೇಶದ ಪ್ರಜೆಗಳು ಚುನಾಯಿಸಿದ ಶಾಸಕರು ಮತ್ತು ಸಂಸದರ ಕಛೇರಿಗಳು ಮಾಹಿತಿ ಹಕ್ಕು ಕಾಯಿದೆ ೨೦೦೫ ರ ಕಲಂ(೧) (ಎ ) ಮತ್ತು ೪ (೧) ( ಬಿ) ಗಳನ್ವಯ ಈ ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ?, ಎನ್ನುವ ಪ್ರಶ್ನೆಗೆ ಉತ್ತರವನ್ನು ನೀಡಲು ರಾಜ್ಯ ಸರಕಾರದ ಇಲಾಖೆಯೊಂದು ೯ ತಿಂಗಳುಗಳ ಕಾಲಾವಧಿಯನ್ನು ಬಳಸಿದೆ. ಮಾಹಿತಿ ಹಕ್ಕು ಕಾಯಿದೆಯಂತೆ ಈ ಪ್ರಶ್ನೆಯನ್ನು ಕೇಳಿದ್ದ ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ದಿನೇಶ್ ಭಟ್.ಕೆ, ಇವರು ಅಪೇಕ್ಷಿತ ಮಾಹಿತಿಯು ನಿಗದಿತ ಅವಧಿಯಲ್ಲಿ ದೊರೆತಿರದ ಕಾರಣದಿಂದಾಗಿ, ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ಸಲ್ಲಿಸಬೇಕಾಗಿ ಬಂದಿತ್ತು.

ಸರಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೆ ತರುವ ಮೂಲಕ ಸರಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗಳನ್ನು ಹೆಚ್ಚಿಸುವ ಸಲುವಾಗಿ ಅನುಷ್ಠಾನಗೊಂಡಿದ್ದ ಮಾಹಿತಿ ಪಡೆಯುವ ಹಕ್ಕು ಅಧಿನಿಯಮ ೨೦೦೫, ಅಪೇಕ್ಷಿತ ಪರಿಣಾಮವನ್ನು ತೋರಲು ವಿಫಲವಾಗಿರಲು, ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಔದಾಸೀನ್ಯತೆಗಳೇ ಕಾರಣವಾಗಿವೆ. ಅರ್ಜಿದಾರರು ಅಪೇಕ್ಷಿಸಿದ ಮಾಹಿತಿಯನ್ನು ನೀಡದಿರುವುದು, ನೀಡಲು ವಿಳಂಬಿಸುವುದು ಹಾಗೂ ಯಾವುದೇ ಪ್ರತಿಕ್ರಿಯೆಯನ್ನೇ ತೋರದಿರುವ ಮೂಲಕ, ವಿವಿಧ ಸಾರ್ವಜನಿಕ ಪ್ರಾಧಿಕಾರಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಈ ಕಾಯಿದೆಯ ಮೂಲ ಉದ್ದೇಶವನ್ನೇ ವಿಫಲಗೊಳಿಸಲು ಮಾಡುತ್ತಿರುವ ಪ್ರಯತ್ನಗಳು ಗುಟ್ಟಾಗಿ ಉಳಿದಿಲ್ಲ. ಆದರೆ ಅನೇಕ ಸ್ವಯಂಸೇವಾ ಸಂಘಟನೆಗಳು ಮಾ.ಹ. ಅಧಿನಿಯಮದ ಬಗ್ಗೆ ಜನಸಾಮಾನ್ಯರಿಗೆ ಅವಶ್ಯಕ ಮಾಹಿತಿ, ಮಾರ್ಗದರ್ಶನ ಮತ್ತು ಬೆಂಬಲಗಳನ್ನು ನೀಡುವ ಮೂಲಕ ಮತ್ತು ಅವಶ್ಯಕವೆನಿಸಿದಲ್ಲಿ ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ಸಲ್ಲಿಸಲು ಸೂಚಿಸುವ ಮೂಲಕ, ಜನರು ಅಪೇಕ್ಷಿಸುವ ಮಾಹಿತಿಗಳನ್ನು ಪಡೆದುಕೊಳ್ಳಲು ಸಫಲರಾಗುತ್ತಿದ್ದಾರೆ. ಕೆಲ ಸಂದರ್ಭಗಳಲ್ಲಿ ಇಂತಹ ಸಂಘಟನೆಗಳ ಕಾರ್ಯಕರ್ತರೂ ಅಪೇಕ್ಷಿತ ಮಾಹಿತಿಗಳನ್ನು ಪಡೆದುಕೊಳ್ಳಲು ಹರಸಾಹಸವನ್ನೇ ನಡೆಸಬೇಕಾಗುತ್ತದೆ!. ಇಂತಹ ಪ್ರಕರಣವೊಂದು ಇಂತಿದೆ. 

ನಮ್ಮನ್ನಾಳುವ ಶಾಸಕರು- ಸಂಸದರ ಕಛೇರಿಗಳು ಮಾ.ಹ.ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆಯೇ ಎಂದು ದಿನೇಶ್ ಭಟ್ ಇವರು ೨೦೦೮ ರ ಜುಲೈ ೨೮ ರಂದು ಸಾರ್ವಜನಿಕ ಮಾಹಿತಿ ಅಧಿಕಾರಿ, ಕರ್ನಾಟಕ ಸಿಬಂದಿ ಮತ್ತು ಸುಧಾರಣಾ ಇಲಾಖೆಗೆ ಮಾ. ಹ. ಕಾಯಿದೆಯನ್ವಯ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಸಿದ್ದರು. 

ಈ ಅರ್ಜಿಯಲ್ಲಿ ವಿಧಾನಸಭೆ ಮತ್ತು ಲೋಕಸಭೆಗಳ ಚುನಾಯಿತ ಜನಪ್ರತಿನಿಧಿಗಳಿಗೆ ರಾಜ್ಯ- ಕೇಂದ್ರ ಸರಕಾರಗಳ ವತಿಯಿಂದ ಕಚೇರಿ ಸೌಲಭ್ಯ, ಆಪ್ತ ಸಹಾಯಕರು, ದೂರವಾಣಿ, ವಾಹನಗಳು, ಕಚೇರಿಯ ನಿರ್ವಹಣಾ ವೆಚ್ಚ ಇತ್ಯಾದಿಗಳನ್ನು ಸರಕಾರವೇ ಒದಗಿಸುವುದರಿಂದ, ಈ ಕಚೇರಿಗಳಿಗೆ ಮಾ. ಹ. ಕಾಯಿದೆ ಅನ್ವಯವಾಗುವುದೇ ಹಾಗೂ ಅನ್ವಯವಾಗುವುದಿದ್ದಲ್ಲಿ ಮಾಹಿತಿಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಯಾರಿಗೆ ಮತ್ತು ಯಾವ ರೀತಿಯಲ್ಲಿ ಸಲ್ಲಿಸಬೇಕು, ಮತ್ತು ನಿಗದಿತ ಶುಲ್ಕವನ್ನು ಯಾರ ಹೆಸರಿನಲ್ಲಿ ಪಾವತಿಸಬೇಕು ಎನ್ನುವ ಕುರಿತಾಗಿ ಮಾಹಿತಿಯನ್ನು ನೀಡಬೇಕಾಗಿ ಕೋರಿದ್ದರು. 

ಆದರೆ ನಿಗದಿತ ೩೦ ದಿನಗಳ ಅವಧಿಯಲ್ಲಿ ತತ್ಸಂಬಂಧಿತ ಸಾರ್ವಜನಿಕ ಮಾಹಿತಿ ಅಧಿಕಾರಿಯು ಅಪೇಕ್ಷಿತ ಮಾಹಿತಿಗಳನ್ನು ನೀಡದೆ ಇದ್ದುದರಿಂದ, ಸೆಪ್ಟೆಂಬರ್ ೬, ೨೦೦೮ ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ ಈ ಬಗ್ಗೆ ದೂರನ್ನು ಸಲ್ಲಿಸಿದ್ದರು. ೨೦೦೮ ರ ಸೆಪ್ಟೆಂಬರ್ ೧೮ ರಂದು ಈ ದೂರನ್ನು ವಿಚಾರಣೆಗೆ ಎತ್ತಿಕೊಂಡ ಆಯೋಗವು, ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ನೀಡದ ಸಾ. ಮಾ. ಅಧಿಕಾರಿಗೆ ಏಕೆ ದಂಡವನ್ನು ವಿಧಿಸಬಾರದು ಎನ್ನುವ ಬಗ್ಗೆ ವಿವರಣೆಯನ್ನು ನೀಡಲು ಮತ್ತು ೨೦೦೯ ರ ಜನವರಿ ೩೦ ರಂದು ಆಯೋಗದ ಮುಂದೆ ಖುದ್ದು ಹಾಜರಾಗುವಂತೆ ಆದೇಶವನ್ನು ನೀಡಿತ್ತು. ಜೊತೆಗೆ ಈ ಮಾಹಿತಿಯನ್ನು ಬಹಿರಂಗಪಡಿಸಲು ಮಾ.ಹ.ಕಾಯಿದೆಯಲ್ಲಿ ವಿನಾಯಿತಿ ಹೊಂದಿಲ್ಲದೆ ಇದ್ದಲ್ಲಿ ಇದನ್ನು ತುರ್ತಾಗಿ ನೊಂದಾಯಿತ ಅಂಚೆಯ ಮೂಲಕ ದಿನೇಶ್ ಭಟ್ ಇವರಿಗೆ ಕಳುಹಿಸಿ, ಇದರ ಪ್ರತಿಯೊಂದನ್ನು ಆಯೋಗಕ್ಕೆ ಸಲ್ಲಿಸಲು ಆದೇಶಿಸಿತ್ತು. 

ಆಯೋಗದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತನ್ನೂ ನೀಡದ ಹಾಗೂ ಅರ್ಜಿದಾರರಿಗೆ  ಈ ಮಾಹಿತಿಯನ್ನು ನೀಡದ ಸಾ.ಮಾ. ಅಧಿಕಾರಿಯು ಜನವರಿ ೩೦ ರಂದು ಆಯೋಗದ ಮುಂದೆಯೂ ಹಾಜರಾಗಿರಲೇ ಇಲ್ಲ. ಈ ಅಧಿಕಾರಿಯ ನಿರ್ಲಕ್ಷ್ಯಮತ್ತು ಉದಾಸೀನತೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಆಯೋಗವು, ಈ ಅಧಿಕಾರಿಗೆ ಸೆಕ್ಷನ್ ೩೦ ಸಿ.ಪಿ.ಸಿ ಯನ್ವಯ ಸಮನ್ಸ್ ಜಾರಿಗೊಳಿಸಿ, ೩೦ ದಿನಗಳ ಒಳಗಾಗಿ ಅರ್ಜಿದಾರರಿಗೆ ಅಪೇಕ್ಷಿತ ಮಾಹಿತಿಯನ್ನು ಉಚಿತವಾಗಿ ನೊಂದಾಯಿತ ಅಂಚೆಯ ಮೂಲಕ ರವಾನಿಸಿ, ಇದರ ಪ್ರತಿಯೊಂದನ್ನು ಕಡ್ಡಾಯವಾಗಿ ಆಯೋಗಕ್ಕೆ ಸಲ್ಲಿಸಲು ಸೂಚಿಸಿತ್ತು. ಜೊತೆಗೆ ಈ ಬಗ್ಗೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಇವರ ಮೇಲಧಿಕಾರಿಗೆ ಮಾ.ಹ.ಕಲಂ ೧೯(೮)(ಎ) ಯಂತೆ ಆದೇಶಿಸಿತ್ತು. ಇದಲ್ಲದೇ ಮಾ.ಹ.ಕಾ. ಕಲಂ ೧೮(೩ ) (ಎ) ಅನ್ವಯ ಅರ್ಜಿದಾರರು ಕೋರಿರುವ ಮಾಹಿತಿಗೆ ಸಂಬಧಿಸಿದ ಕಡತಗಳೊಂದಿಗೆ ೨೦೦೯ ರ ಮೇ ೧೩ ರಂದು ಖುದ್ದಾಗಿ ಆಯೋಗದ ಮುಂದೆ ಹಾಜರಾಗುವಂತೆ ಸಾ.ಮಾ.ಅಧಿಕಾರಿಗೆ ಆದೇಶವನ್ನು ನೀಡಿತ್ತು. 

ಅಂತಿಮವಾಗಿ ತುಕ್ಕು ಹಿಡಿದಿದ್ದ ಸರಕಾರಿ ಯಂತ್ರವು ಮತ್ತೆ ಚಲಿಸಲು ಆರಂಭಿಸಿತ್ತು. ತತ್ಪರಿಣಾಮವಾಗಿ ಸರಕಾರದ ಪ್ರಧಾನ ಕಾರ್ಯದರ್ಶಿ, ಸಿಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಇವರು ೨೦೦೯ ರ ಏಪ್ರಿಲ್ ೧೩ ರಂದು ದಿನೇಶ್ ಭಟ್ ಕೋರಿದ್ದ ಮಾಹಿತಿಗಳನ್ನು ನೊಂದಾಯಿತ ಅಂಚೆಯ ಮೂಲಕ ಕಳುಹಿಸಿದ್ದರು. 

ಈ ಅಧಿಕಾರಿ ನೀಡಿರುವ ಮಾಹಿತಿಯಂತೆ ಮಾ.ಹ.ಕಾ. ೨೦೦೫ ರ ಕಲಂ ೪(೧) (ಎ) ಮತ್ತು ೪(೧) (ಬಿ) ಯನ್ವಯ ವಿಧಾನಸಭೆ ಮತ್ತು ಲೋಕಸಭೆಯ ಚುನಾಯಿತ ಸದಸ್ಯರ ಕಚೇರಿಗಳು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಒಳಪಡುತ್ತವೆ. ಅಪೇಕ್ಷಿತ ಮಾಹಿತಿಗಳನ್ನು ಪಡೆದುಕೊಳ್ಳಲು, ಜಿಲ್ಲಾಧಿಕಾರಿಗಳು ಅವರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ವಿಧಾನಸಭೆಯ ಮತ್ತು ಲೋಕಸಭೆಯ ಚುನಾಯಿತ ಜನಪ್ರತಿನಿಧಿಗಳಿಗೆ ಕಚೇರಿ ಸೌಲಭ್ಯ,ಆಪ್ತ ಸಹಾಯಕರ ಸೌಲಭ್ಯ ಮುಂತಾದವುಗಳನ್ನು ಒದಗಿಸುವುದರಿಂದ, ಸಂಬಂಧಿತ ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ನೇಮಿಸಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕಾಗಿ ನಿಗದಿಸಿರುವ ಶುಲ್ಕವನ್ನು ಸಾ.ಮಾ.ಅಧಿಕಾರಿಯ ಹೆಸರಿನಲ್ಲಿ ಪಾವತಿಸಬೇಕಾಗುತ್ತದೆ. 

ಕೊನೆಯ ಮಾತು 

ಜನಪ್ರತಿನಿಧಿಗಳಲ್ಲಿ ಉತ್ತರದಾಯಿತ್ವವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಇವರ ಕಚೇರಿಗಳನ್ನು ಮಾಹಿತಿ ಹಕ್ಕಿನ ವ್ಯಾಪ್ತಿಗೆ ತಂದಿರುವುದು ಪ್ರಶಂಸನೀಯ. ಆದರೆ ಈ ಮಾಹಿತಿಯನ್ನು ಪಡೆದುಕೊಳ್ಳಲು ಸ್ವಯಂಸೇವಾ ಸಂಘಟನೆಯೊಂದರ ಕಾರ್ಯಕರ್ತರು ಹಲವಾರು ತಿಂಗಳುಗಳ ಕಾಲ ಹೋರಾಟವನ್ನು ನಡೆಸಬೇಕಾಗಿ ಬಂದದ್ದು ವಿಷಾದನೀಯ. ರಾಜ್ಯ ಮಾಹಿತಿ ಆಯೋಗದ ಆದೇಶವನ್ನೂ ನಿರ್ಲಕ್ಷಿಸುವ ಸರಕಾರಿ ಅಧಿಕಾರಿಗಳಿಗೆ ಸೂಕ್ತ ಶಿಕ್ಷೆಯನ್ನು ವಿಧಿಸುವುದರೊಂದಿಗೆ, ದಂಡವನ್ನೂ ವಿಧಿಸುವ ಬಗ್ಗೆ ರಾಜ್ಯ ಮಾಹಿತಿ ಆಯೋಗವು ಅವಶ್ಯಕ ಕಾನೂನುಗಳನ್ನು ರೂಪಿಸಬೇಕಾದ ಅವಶ್ಯಕತೆ ಇದೀಗ ಅನಿವಾರ್ಯವೆನಿಸುತ್ತಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ೦೭-೦೫-೨೦೦೯ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ.


No comments:

Post a Comment