Wednesday, October 26, 2016

BDA : SUPPRESSING RTI?

           ಬಿ ಡಿ ಎ : ಮಾಹಿತಿಹಕ್ಕು ಕಾಯಿದೆಯನ್ನು ದಮನಿಸುತ್ತಿದೆಯೇ?

ಕೆಲದಿನಗಳಿಂದ ಸಾಕಷ್ಟು ವಾದವಿವಾದಗಳಿಗೆ ಗ್ರಾಸವೆನಿಸಿರುವ ಮತ್ತು ಮಾಧ್ಯಮಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವೆನಿಸಿರುವ “ ಉಕ್ಕಿನ ಮೇಲ್ಸೇತುವೆ “ ಯ ನಿರ್ಮಾಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮಾಹಿತಿಹಕ್ಕು ಕಾರ್ಯಕರ್ತರೊಬ್ಬರಿಗೆ ನೀಡಲು ಬಿ ಡಿ ಎ ನಿರಾಕರಿಸಿದೆ. ತನ್ಮೂಲಕ ಸರ್ಕಾರವೇ ತನ್ನ ಪ್ರಜೆಗಳಿಗೆ ನೀಡಿದ್ದ ಮಾಹಿತಿ ಪಡೆಯುವ ಹಕ್ಕನ್ನು ದಮನಿಸಿದೆ!.

 ದೇಶಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ ಜಾರಿಗೆ ಬಂದು ೧೧ ವರ್ಷಗಳೇ ಸಂದಿವೆ. ಈ ಅವಧಿಯಲ್ಲಿ ಈ ಕಾಯಿದೆಯನ್ನು ದುರ್ಬಲಗೊಳಿಸಲು, ತೆರೆಯ ಮರೆಯಲ್ಲಿ ನಿರಂತರ ಪ್ರಯತ್ನಗಳೂ ನಡೆಯುತ್ತಲೇ ಇವೆ. ಪ್ರಾರಂಭಿಕ ಹಂತದಿಂದಲೂ ಈ ಕಾಯಿದೆಯನ್ನು ವಿರೋಧಿಸುತ್ತಿದ್ದ ಅನೇಕ ಸರ್ಕಾರಿ ಅಧಿಕಾರಿಗಳ ಮತ್ತು ರಾಜಕಾರಣಿಗಳ ಬಹುಕೋಟಿ ಹಗರಣಗಳು ಬೆಳಕಿಗೆ ಬರಲು ಈ ಪ್ರಬಲ ಕಾಯಿದೆ ಕಾರಣವೆನಿಸಿದೆ. ಜನಸಾಮಾನ್ಯರ ಪಾಲಿಗೆ ಅತ್ಯಂತ ಪ್ರಬಲ ಅಸ್ತ್ರವೆನಿಸಿರುವ ಹಕ್ಕು ಕಾಯಿದೆಯನ್ವಯ ಅರ್ಜಿ ಸಲ್ಲಿಸಿದ್ದ ಪ್ರಜೆಗಳಿಗೆ ಕುಂಟು ನೆಪವನ್ನು ಮುಂದೊಡ್ಡಿ ಅಪೇಕ್ಷಿತ ಮಾಹಿತಿಗಳನ್ನು ನೀಡಲು ನಿರಾಕರಿಸಿದ ಪ್ರಕರಣಗಳು ಸಾಕಷ್ಟಿವೆ. ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಇದಕ್ಕೆ ಸೇರ್ಪಡೆಯಾಗಿದೆ!.

ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳಲಿರುವ ನೂತನ  " ಸ್ಟೀಲ್ ಫ್ಲೈ ಓವರ್ " ಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸುವಂತೆ ಮಾ.. ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸಿದ್ದ ವ್ಯಕ್ತಿಗೆ ಬಿ. ಡಿ. ಎ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಉತ್ತರವು, ಈ ಕಾಯಿದೆಯ ಮೂಲ ಉದ್ದೇಶಕ್ಕೆ ಧಕ್ಕೆಯುಂಟುಮಾಡುವಂತಿದೆ!.

ಮಾಹಿತಿಯೇ ಅಲ್ಲ!

ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳವನ್ನು ಸಂಪರ್ಕಿಸುವ ಸಲುವಾಗಿ ನಿರ್ಮಿಸಲು ಉದ್ದೇಶಿಸಿರುವ ಸುಮಾರು ೧೮೦೦ ಕೋಟಿ ರೂ. ವೆಚ್ಚದ ಸ್ಟೀಲ್ ಫ್ಲೈ ಓವರ್ ನಿರ್ಮಾಣದ ಸಲುವಾಗಿ ಕರೆದಿದ್ದ ಟೆಂಡರ್ ನ ವಿವರಗಳನ್ನು ನೀಡುವಂತೆ ಅರ್ಜಿಯನ್ನು ಸಲ್ಲಿಸಿದ್ದ ಸಾಯಿದತ್ತ ಎನ್ನುವ ಕಾರ್ಯಕರ್ತರಿಗೆ ಬಿ.ಡಿ. ಎ ನೀಡಿರುವ ಉತ್ತರ ಇಂತಿದೆ. ಸಾ. ಮಾ ಅಧಿಕಾರಿ ನೀಡಿರುವ ಉತ್ತರದಲ್ಲಿ ಅರ್ಜಿದಾರರು ಕೋರಿರುವ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ, ಏಕೆಂದರೆ ಈ ಮಾಹಿತಿಗಳು ಮಾಹಿತಿಹಕ್ಕು ಕಾಯಿದೆಯನ್ವಯ " ಮಾಹಿತಿ " ಎಂದು ಅರ್ಥೈಸುವಂತಿಲ್ಲ. ಅರ್ಜಿದಾರರು ಅಪೇಕ್ಷಿಸಿರುವ ದಾಖಲೆಗಳನ್ನು ಸೃಷ್ಟಿಸಬೇಕಿದ್ದು, ಇದರ ವಿವರಗಳು ಬಿ.ಡಿ. ಎ ಮತ್ತು ಖಾಸಗಿ ಸಂಸ್ಥೆಗಳ ಒಡಂಬಡಿಕೆಯ ಷರತ್ತು - ನಿಯಮಗಳ ಅಧೀನದಲ್ಲಿ ಬರುತ್ತವೆ. ಇದಲ್ಲದೇ ಅಪೇಕ್ಷಿತ ಮಾಹಿತಿಗಳು “ ವೈಯುಕ್ತಿಕ “ ವಾಗಿದ್ದು, ಇದನ್ನು ಇದನ್ನು ಪ್ರಕಟಿಸುವುದಕ್ಕೆ ಮತ್ತು ಸಾರ್ವಜನಿಕ ಚಟುವಟಿಕೆ ಹಾಗೂ ಹಿತಾಸಕ್ತಿಗಳಿಗೆ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.

ಇಷ್ಟು ಮಾತ್ರವಲ್ಲ, ಮಾಹಿತಿಹಕ್ಕು ಕಾಯಿದೆಯ ಸೆಕ್ಷನ್ ೮ ( ೧ ) ( ಜೆ ) ಯಂತೆ ಈ ಮಾಹಿತಿಯು “ ತೃತೀಯ ವ್ಯಕ್ತಿ “ ಗೆ ಸಂಬಂಧಿಸಿದ್ದಾಗಿದ್ದು, ಅಪೇಕ್ಷಿತ ಮಾಹಿತಿಗಳನ್ನು ಅರ್ಜಿದಾರರಿಗೆ ನೀಡಲು ಕೆಲ ದಾಖಲೆಗಳನ್ನು ಸೃಷ್ಟಿಸಬೇಕಾಗುವುದು. ಬಿ ಡಿ ಎ ನ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಉತ್ತರದಲ್ಲಿ, ಕೇಂದ್ರ ಮಾಹಿತಿ ಆಯೋಗದ ಆದೇಶವೊಂದರಂತೆ “ ಮಾ. ಹ. ಕಾಯಿದೆಯ ಸೆಕ್ಷನ್ ೨ ( ಜೆ ) ಯನ್ವಯ ಯಾವುದೇ ಸಾರ್ವಜನಿಕ ಪ್ರಾಧಿಕಾರವು ದಾಖಲೆಗಳನ್ನು ಸೃಷ್ಟಿಸುವಂತಿಲ್ಲ. ಇದರೊಂದಿಗೆ ತಮಿಳುನಾಡಿನ ಮಾಹಿತಿ ಆಯೋಗವು ಯಾವುದೇ ಯೋಜನೆಯ ವಿವರಗಳನ್ನು ಯೋಜನೆಯ ಪ್ರಾರಂಭಿಕ ಹಂತದಲ್ಲಿ ಬಹಿರಂಗಪಡಿಸುವಂತಿಲ್ಲ ಎಂದು ಹಿಂದೆ ನೀಡಿದ್ದ  ತೀರ್ಪೊಂದನ್ನು ಉಲ್ಲೇಖಿಸಲಾಗಿದೆ.ಹಾಗೂ ಇದೇ ಕಾರಣದಿಂದಾಗಿ ಇದೀಗ ಪ್ರಾರಂಭಿಕ ಹಂತದಲ್ಲಿರುವ ಉಕ್ಕಿನ ಮೇಲ್ಸೇತುವೆಯ ನಿರ್ಮಾಣದ ಯೋಜನೆಯ ವಿವರಗಳನ್ನು ಬಹಿರಂಗಪಡಿಸಲಾಗದು ಎಂದು ಉತ್ತರಿಸಲಾಗಿದೆ.

ಇವೆಲ್ಲಕ್ಕೂ ಮಿಗಿಲಾಗಿ ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಯು ಅಗಾಧವಾಗಿದ್ದು, ಇದನ್ನು ಒದಗಿಸಲು ಸಾಕಷ್ಟು ಸಂಪನ್ಮೂಲಗಳ ಅವಶ್ಯಕತೆಯಿದ್ದು ಇದಕ್ಕಾಗಿ ಸಾಕಷ್ಟು ಸಮಯವನ್ನೂ ವ್ಯಯಿಸಬೇಕಾಗುತ್ತದೆ. ಈ ಮಾಹಿತಿಗಳು ರಾಜ್ಯದ ಅಭಿವೃದ್ಧಿ  ಕ್ರಿಯಾ ಯೋಜನೆ ಮತ್ತು ಆರ್ಥಿಕ ಹಿತಗಳನ್ನು ಒಳಗೊಂಡಿರುವುದರಿಂದ, ಈ ಯೋಜನೆಯ ವಿವರಗಳನ್ನು ನೀಡುವಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ಪುರಸ್ಕರಿಸುವಂತಿಲ್ಲ ಎಂದು ಸಾ. ಮಾ. ಅಧಿಕಾರಿ ಉತ್ತರಿಸಿದ್ದಾರೆ!.

ಸ್ವಯಂಪ್ರೇರಿತ ಮಾಹಿತಿ

ಮಾಹಿತಿಹಕ್ಕು ಕಾಯಿದೆಯನ್ವಯ ಕೆಲವೊಂದು ನಿರ್ದಿಷ್ಟ ಮಾಹಿತಿಗಳಿಗೆ ಸೆಕ್ಷನ್ ೮ ( ೧ ) ಮತ್ತು ೯ ರನ್ವಯ ವಿನಾಯಿತಿಯನ್ನು ನೀಡಲಾಗಿದೆ. ಇದೇ ಸೆಕ್ಷನ್ ನ ೮ ( ೧ ) ( ಜೆ ) ಯನ್ನು ತಿರುಚಿರುವ ಬಿ ಡಿ ಎ ನ ಸಾ. ಮಾ. ಅಧಿಕಾರಿಯು, ಈ ಸೆಕ್ಷನ್ ನ ಅಂತ್ಯದಲ್ಲಿ ನಮೂದಿಸಿರುವಂತೆ “ ಮೇಲೆ ಹೇಳಿದ ವಿನಾಯಿತಿಗಳು ಪರಿಪೂರ್ಣವಾದುದಲ್ಲ. ಈ ಮಾಹಿತಿಯನ್ನು ನೀಡುವುದರಿಂದ ಸಾರ್ವಜನಿಕ ಹಿತವನ್ನು ರಕ್ಷಿಸಿದಂತಾಗುತ್ತದೆ ( ಸೆಕ್ಷನ್ ೮ ( ೨ ) ) ಎಂದಾದಲ್ಲಿ, ಈ ಮಾಹಿತಿಯನ್ನು ನೀಡಬಹುದು “ ಎನ್ನುವ ಸಾಲನ್ನು ಅನುಕೂಲಕರವಾಗಿ ಮರೆತುಬಿಟ್ಟಿದ್ದಾರೆ!.

ಇವೆಲ್ಲಕ್ಕೂ ಮಿಗಿಲಾಗಿ ಮಾ. ಹ. ಕಾಯಿದೆ ೨೦೦೫ ಅನ್ವಯವಾಗುವ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಕೆಲವೊಂದು ಮಾಹಿತಿಗಳನ್ನು ಯಾರೂ ಕೇಳದಿದ್ದರೂ, ಸ್ವಯಂಪ್ರೇರಿತವಾಗಿ ತಮ್ಮ ಕಚೇರಿಯ ಸೂಚನಾ ಫಲಕ್ ಮತ್ತು ಅಂತರ್ಜಾಲ ತಾಣಗಳಲ್ಲಿ ಪ್ರಕಟಿಸಬೇಕೆಂದು ಹೇಳುತ್ತದೆ. ಇದೊಂದು ಬಹುಮುಖ್ಯ ಅಂಶವಾಗಿದ್ದು, ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಸಂಪೂರ್ಣ ವಿವರಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸುವ ಹೊಣೆಗಾರಿಕೆ ಇವುಗಳ ಮೇಲಿದೆ. ಅರ್ಥಾತ್, ಯಾರೊಬ್ಬರೂ ಕೇಳದೇ ಇದ್ದರೂ ಅಥವಾ ಮಾಹಿತಿಹಕ್ಕು ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸದೇ ಇದ್ದರೂ, ಸ್ಟೀಲ್ ಫ್ಲೈ ಓವರ್ ಕಾಮಗಾರಿಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ಬಿ ಡಿ ಎ ಸ್ವಯಂಪ್ರೇರಿತವಾಗಿ ಪ್ರಕಟಿಸಲೇಬೇಕಾಗುತ್ತದೆ.

ಕೊನೆಯ ಮಾತು

ಬಿ ಡಿ ಎ ನ ಸಾ. ಮಾ. ಅಧಿಕಾರಿಯು ಅಪೇಕ್ಷಿತ ಮಾಹಿತಿಗಳನ್ನು ಒದಗಿಸದಿರುವ ಬಗ್ಗೆ ಅರ್ಜಿದಾರರು ಮಾ. ಹ. ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ದೂರನ್ನು ನೀಡಿದ ಬಳಿಕವೂ ಅಪೇಕ್ಷಿತ ಮಾಹಿತಿ ಲಭಿಸದೇ ಇದ್ದಲ್ಲಿ, ರಾಜ್ಯ ಮಾಹಿತಿ ಆಯೋಗಕ್ಕೆ ದೂರನ್ನು ನೀಡುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಮಾಹಿತಿ ಆಯೋಗವು ಅರ್ಜಿದಾರರು ಅಪೇಕ್ಷಿಸಿರುವ ಮಾಹಿತಿಗಳನ್ನು ಕ್ಷಿಪ್ರವಾಗಿ ಮತ್ತು ನಿಶ್ಶುಲ್ಕವಾಗಿ ನೀಡುವಂತೆ ಆದೇಶಿಸುವುದರಲ್ಲೂ ಸಂದೇಹವಿಲ್ಲ. ಇದರೊಂದಿಗೆ ಇನ್ನು ಮುಂದೆ ಇಂತಹ ಮಾಹಿತಿಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸುವಂತೆ ಸೂಚಿಸಿದಲ್ಲಿ, ಇಂತಹ ಘಟನೆಗಳ ಪುನರಾವರ್ತನೆ ಆಗುವ ಸಾಧ್ಯತೆಗಳೂ ಇಲ್ಲ!.


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


Monday, October 3, 2016

BREAST CANCER




     ಸ್ತನ ಕ್ಯಾನ್ಸರ್ : ಅರಿವು ಮೂಡಿಸುವ ಮಾಸ ಅಕ್ಟೋಬರ್ 

ಕೇವಲ ಮಧ್ಯವಯಸ್ಸನ್ನು ಮೀರಿದ ಮಹಿಳೆಯರನ್ನು ಮಾತ್ರ ಬಾಧಿಸುವ ವ್ಯಾಧಿಯೆಂದು ಅನೇಕ ಭಾರತೀಯರು ಇಂದಿಗೂ ನಂಬಿರುವ ಸ್ತನಗಳ ಕ್ಯಾನ್ಸರ್ ವ್ಯಾಧಿಯು, ಹದಿಹರೆಯದ ಹುಡುಗಿಯರು ಮತ್ತು ತರುಣಿಯರನ್ನೂ ಪೀಡಿಸಬಲ್ಲದು. ವಿಶೇಷವೆಂದರೆ ಈ ವ್ಯಾಧಿಯು ಕೇವಲ ಮಹಿಳೆಯರನ್ನು ಮಾತ್ರವಲ್ಲ, ಅತ್ಯಲ್ಪ ಪ್ರಮಾಣದ ಪುರುಷರನ್ನೂ ಬಾಧಿಸಬಲ್ಲದು ಎಂದು ನಿಮಗೂ ತಿಳಿದಿರಲಾರದು. ಈ ವಿಶಿಷ್ಟ ವ್ಯಾಧಿಯ ಬಗ್ಗೆ ನೀವು ತಿಳಿದಿರಲೇಬೇಕಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅಗ್ರಸ್ಥಾನ 

ಜಾಗತಿಕ ಮಟ್ಟದಲ್ಲಿ ಮಹಿಳೆಯರಲ್ಲಿ ಪತ್ತೆಯಾಗುತ್ತಿರುವ ವೈವಿಧ್ಯಮಯ ಕ್ಯಾನ್ಸರ್ ಗಳಲ್ಲಿ ಸ್ತನ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ. ಈ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವುದರೊಂದಿಗೆ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಇದರ ಮಾರಕತೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ. ಈ ಸಂದೇಶದೊಂದಿಗೆ, ಈ ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನಿತರ ಸಂಘಟನೆಗಳು ಜೊತೆಗೂಡಿ, ವರ್ಷಂಪ್ರತಿ ಅಕ್ಟೋಬರ್ ತಿಂಗಳನ್ನು " ಗುಲಾಬಿ ಮಾಸ " ವನ್ನಾಗಿ ಆಚರಿಸುತ್ತವೆ. ಹಾಗೂ ಇದಕ್ಕೆ ಗುಲಾಬಿ ವರ್ಣದ ರಿಬ್ಬನ್ ಲಾಂಛನವನ್ನಾಗಿ ಬಳಸಲಾಗುತ್ತಿದೆ.  

ಭಾರತದಲ್ಲಿ ಸ್ತನ ಕ್ಯಾನ್ಸರ್ ಪೀಡಿತರ ಬಗ್ಗೆ ನಿಖರವಾದ ಅಂಕಿಅಂಶಗಳು ಲಭ್ಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಂದ ಇಂತಹ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹಿಸಿ, ಅವಶ್ಯಕ ವಿವರಗಳನ್ನು ದಾಖಲಿಸಿಕೊಳ್ಳುವ ಪದ್ದತಿಯು ಇದಿಗೂ ಅನುಷ್ಠಾನಗೊಂಡಿಲ್ಲ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಭಿಪ್ರಾಯದಂತೆ, ಭಾರತದ ಪ್ರತಿ ೨೨ ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ನಿಂದ ಪೀಡಿತರಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬಾಕೆಯು, ತನ್ನ ಜೀವಿತಾವಧಿಯಲ್ಲಿ ಸ್ತನ ಕ್ಯಾನ್ಸರ್ ಗೆ ಈಡಾಗುವ ಸಾಧ್ಯತೆಗಳಿವೆ.  ಮಹಿಳೆಯರ ವಯಸ್ಸು ಹೆಚ್ಚಾದಂತೆಯೇ, ಇದರ ಸಂಭಾವ್ಯತೆಯೂ ಹೆಚ್ಚುತ್ತದೆ. 

ಕಾರಣವೇನು?

ಸ್ತನಗಳ ಕ್ಯಾನ್ಸರ್ ಉದ್ಭವಿಸಲು ನಿಖರವಾದ ಹಾಗೂ ನಿರ್ದಿಷ್ಟವಾದ ಕಾರಣಗಳು ಏನೆಂದು ಹೇಳಲಾಗದು. ಆದರೆ ಈ ವ್ಯಾಧಿಯ ಸಂಭಾವ್ಯತೆಗೆ ಸಂಬಂಧಿಸಿದಂತೆ ಕೆಲವೊಂದು ಅಪಾಯಕಾರಿ ಅಂಶಗಳು ಇಂತಿವೆ. ಇವುಗಳಲ್ಲಿ ಮೇಲೆ ನಮೂದಿಸಿದಂತೆ ಲಿಂಗ ಮತ್ತು ವಯಸ್ಸು, ೧೨ ವರ್ಷ ವಯಸ್ಸಿಗೆ ಮುನ್ನ ಪುಷ್ಪವತಿಯರಾಗಿದ್ದ ಬಾಲಕಿಯರು, ೫೫ ವರ್ಷ ವಯಸ್ಸಿನ ಬಳಿಕ ಋತುಬಂಧವಾದ ಸ್ತ್ರೀಯರು, ಅವಿವಾಹಿತರು, ಸಂತಾನ ಪ್ರಾಪ್ತಿಯಾಗದವರು, ೪೦ ವರ್ಷ ವಯಸ್ಸಿನ ಬಳಿಕ ಮಕ್ಕಳನ್ನು ಹೆತ್ತವರು, ಕಂದನಿಗೆ ತನ್ನ ಮೊಲೆಹಾಲನ್ನು ಊಡಿಸದವರು, ಗರ್ಭನಿರೋಧಕ ಔಷದಗಳನ್ನು ಸೇವಿಸುತ್ತಿದ್ದ ಮತ್ತು ಸೇವಿಸುತ್ತಿರುವವರು, ಅನ್ಯ ಕಾರಣಗಳಿಗಾಗಿ ಹಾರ್ಮೋನ್ ಯುಕ್ತ ಔಷದಗಳನ್ನು ಸೇವಿಸುವ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಸಮೀಪದ ಸಂಬಂಧಿಗಳು ಈ ವ್ಯಾಧಿಗೆ ತುತ್ತಾಗುವ ಸಾಧ್ಯತೆಗಳಿವೆ. ಇದಲ್ಲದೆ ಅನುವಂಶಿಕತೆ ಮತ್ತು ಪರಿವರ್ತಿತ ಹಾಗೂ ಅಸಾಮಾನ್ಯ ವಂಶವಾಹಿನಿಗಳ ಇರುವಿಕೆ, ಅಧಿಕ ತೂಕ ಹಾಗೂ ಅತಿ ಬೊಜ್ಜು, ಅತಿಯಾದ ಧೂಮ ಹಾಗೂ ಮದ್ಯಪಾನ ಮತ್ತು ನಿರುಪಯುಕ್ತ ಆಹಾರಗಳನ್ನು ( ಜಂಕ್ ಫುಡ್ ) ಅತಿಯಾಗಿ ಸೇವಿಸುವ ಹವ್ಯಾಸ ಇರುವವರಲ್ಲೂ, ಈ ವ್ಯಾಧಿ ತಲೆದೋರುವ ಸಾಧ್ಯತೆಗಳು ಹೆಚ್ಚಿವೆ. 

ಜಾಗತಿಕ ಮಟ್ಟದಲ್ಲಿ ವರ್ಷಂಪ್ರತಿ ೧.೩೮ ದಶಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ೪,೫೮,೦೦೦ ರೋಗಿಗಳು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಗೆ ಅಭಿವೃದ್ಧಿ ಹೊಂದಿರುವ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳೂ ಅಪವಾದವೆನಿಸಿಲ್ಲ. ಆದರೆ ಮಧ್ಯಮ ಮತ್ತು ಅಲ್ಪ ಆದಾಯವಿರುವ ದೇಶಗಳಲ್ಲಿ ಸ್ತನ ಕ್ಯಾನ್ಸರ್ ವ್ಯಾಧಿಗೆ ಬಲಿಯಾಗುತ್ತಿರುವವರ ಪ್ರಮಾಣವು ೨,೬೯,೦೦೦ ಕ್ಕೂ ಹೆಚ್ಚಿದೆ. 

ಸ್ತನ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆಯು ವರ್ಷಂಪ್ರತಿ ನಿಧಾನವಾಗಿ ಆದರೆ ನಿಶ್ಚಿತವಾಗಿ ಹೆಚ್ಚುತ್ತಲೇ ಇದ್ದು, ಇದಕ್ಕೆ ಅನುಗುಣವಾಗಿ ವ್ಯಾಧಿಪೀಡಿತರ ಮರಣದ ಪ್ರಮಾಣವೂ ವೃದ್ಧಿಸುತ್ತಿದೆ. ಆದರೆ ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಇದನ್ನು ಗುಣಪಡಿಸುವ ಸಾಧ್ಯತೆಗಳು ಶೇ.೯೮ ರಷ್ಟಿದ್ದು, ವಿಳಂಬವಾದಲ್ಲಿ ಇದರ ಪ್ರಮಾಣವು ಕೇವಲ ಶೇ. ೨೭ ರಷ್ಟಿರುತ್ತದೆ.  

ಪ್ರಸ್ತುತ ಭಾರತದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಗ್ರಾಮೀಣ ಜನರ ಅಜ್ಞಾನ, ವಿದ್ಯಾವಂತರ ಲಜ್ಜೆ ಮತ್ತು ತಮ್ಮ ಶಾರೀರಿಕ ಆರೋಗ್ಯದ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಥವಾ ಮುಚ್ಚಿಡುವ ಹವ್ಯಾಸಗಳಿಂದಾಗಿ, ಗಣನೀಯ ಪ್ರಮಾಣದ ಪ್ರಕರಣಗಳು ವೈದ್ಯರ ಗಮನಕ್ಕೆ ಬರುವುದೇ ಇಲ್ಲ!. 

ಪ್ರಾಯಶಃ ಇಂತಹ ಕಾರಣಗಳಿಂದಾಗಿಯೇ ಬಹುತೇಕ ಮಹಿಳೆಯರು ತಮ್ಮ ಸ್ತನಗಳಲ್ಲಿ ಪುಟ್ಟ ಹುಣಸೆ ಬೀಜದಷ್ಟು ಗಾತ್ರದ ಗೆಡ್ಡೆಯೊಂದು ಇರುವುದನ್ನು ( ಪ್ರಾಥಮಿಕ ಹಂತ ) ಅರಿತರೂ, ವೈದ್ಯರನ್ನು ಸಂದರ್ಶಿಸುವುದಿಲ್ಲ. ಈ ಗೆಡ್ಡೆಯು ತುಸು ದೊಡ್ಡದಾದ ಬಳಿಕ ( ತುಸು ವೃದ್ಧಿಸಿದ ಹಂತ ) ಮತ್ತು ಇನ್ನು ಕೆಲವರು ಈ ಗೆಡ್ಡೆಯಲ್ಲಿ ತೀವ್ರ ನೋವು ಆರಂಭಗೊಂಡ ಬಳಿಕ ( ಮೂರನೇ ಹಂತ ) ವೈದ್ಯರನ್ನು ಭೇಟಿಯಾಗುತ್ತಾರೆ. ತತ್ಪರಿಣಾಮವಾಗಿ ಈ ರೋಗಿಗಳು ಸಾಕಷ್ಟು ಶಾರೀರಿಕ ಹಾಗೂ ಮಾನಸಿಕ ಯಾತನೆಗಳೊಂದಿಗೆ, ಆರ್ಥಿಕ ಸಂಕಷ್ಟಗಳಿಗೂ ಒಳಗಾಗುತ್ತಾರೆ. 

ಎಲ್ಲವೂ ಕ್ಯಾನ್ಸರ್ ಅಲ್ಲ 

ಅನೇಕ ವಿದ್ಯಾವಂತರೂ ಸ್ತನಗಳಲ್ಲಿ ಉದ್ಭವಿಸುವ ಗೆಡ್ಡೆಗಳೆಲ್ಲವೂ ಕ್ಯಾನ್ಸರ್ ಎಂದೇ ನಂಬುತ್ತಾರೆ. ಆದರೆ ನಿಜ ಹೇಳಬೇಕಿದ್ದಲ್ಲಿ, ಇವುಗಳಲ್ಲಿ ಶೇ. ೭೫ ರಷ್ಟು ಗೆಡ್ಡೆಗಳು ನಿರಪಾಯಕಾರಿಗಳೇ ಆಗಿರುತ್ತವೆ. ಆದುದರಿಂದ ಯಾವುದೇ ಕಾರಣಕ್ಕೂ ಇಂತಹ ಗೆಡ್ಡೆಗಳು ಉದ್ಭವಿಸಿದಲ್ಲಿ, ಇದನ್ನು ನಿರಪಾಯಕಾರಿ ಎಂದು ನೀವಾಗಿ ನಿರ್ಧರಿಸಿ ಮುಚ್ಚಿಡುವ ಪ್ರಯತ್ನವು " ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ " ದಂತಾಗುವುದು ಎನ್ನುವುದನ್ನು ಮರೆಯದಿರಿ. ಈ ಮಾಹಿತಿಯನ್ನು ನಿಮ್ಮ ಬಂಧುಮಿತ್ರರೊಂದಿಗೆ ಹಂಚಿಕೊಳ್ಳುವ ಮೂಲಕ " ಗುಲಾಬಿ ಮಾಸ " ದ ಆಚರಣೆಯಲ್ಲಿ ನೀವೂ ಸಕ್ರಿಯವಾಗಿ ಪಾಲ್ಗೊಳ್ಳಿರಿ. ತನ್ಮೂಲಕ ಸ್ತನ ಕ್ಯಾನ್ಸರ್ ನ ಮಾರಕತೆಯನ್ನು ತಡೆಗಟ್ಟಲು ಸಹಕರಿಸಿ. 

ಸ್ವಯಂ ಸ್ತನ ಪರೀಕ್ಷೆ 

ಮಾರಕವೆನಿಸಬಲ್ಲ ಸ್ತನ ಕ್ಯಾನ್ಸರ್ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸ್ವಯಂ ಸ್ತನ ಪರೀಕ್ಷೆಯು ಅತ್ಯಂತ ಸರಳ ಹಾಗೂ ಸುಲಭ ವಿಧಾನವೂ ಹೌದು. ಹದಿಹರೆಯದ ಹುಡುಗಿಯರಿಂದ ಆರಂಭಿಸಿ, ವಯೋವೃದ್ಧ ಮಹಿಳೆಯರ ತನಕ ಪ್ರತಿಯೊಬ್ಬರೂ ಈ ಸರಳ ವಿದಾನವನ್ನು ತಮ್ಮ ಪರಿಚಿತ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ. ಬಳಿಕ ಪ್ರತಿ ತಿಂಗಳಲ್ಲೂ ಸ್ವಯಂ ಸ್ತನ ಪರೀಕ್ಷೆಯನ್ನು ನಡೆಸುತ್ತಿದ್ದಲ್ಲಿ, ಅಸಾಮಾನ್ಯ ಬದಲಾವಣೆಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ. ಜೊತೆಗೆ ಸ್ತನಗಳಲ್ಲಿ ನೋವು, ಜ್ವರ, ಸ್ತನ ಹಾಗೂ ಕಂಕುಳಿನಲ್ಲಿ ಇರುವ ಲಿಂಫ್ ಗ್ರಂಥಿಗಳಲ್ಲಿ ಬಾವು, ಸ್ತನಗಳಲ್ಲಿ ಉದ್ಭವಿಸಿರುವ ಚಿಕ್ಕಪುಟ್ಟ ಗೆಡ್ಡೆಗಳು ಅಥವಾ ಯಾವುದೇ ರೀತಿಯ ಅಸಾಮಾನ್ಯ ಬದಲಾವಣೆಗಳನ್ನು ಗಮನಿಸಿದೊಡನೆ, ತಜ್ಞ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ ಅಯಾಚಿತ ಸಮಸ್ಯೆಗಳನ್ನು ನಿಶ್ಚಿತವಾಗಿ ತಡೆಗಟ್ಟಬಹುದು. 

ಅಂತಿಮವಾಗಿ ಹೇಳುವುದಾದಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಾಥಮಿಕ ಹಂತದಲ್ಲೇ ಪತ್ತೆಯಾಗುತ್ತಿರುವ ಪ್ರಮಾಣವು ಅತ್ಯಲ್ಪವಾಗಿದೆ. ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಜನಜಾಗೃತಿಯನ್ನು ಮೂಡಿಸಬೇಕಾಗಿದೆ. ತನ್ಮೂಲಕ ಇದಕ್ಕೆ ಬಲಿಯಾಗುವ ರೋಗಿಗಳ ಪ್ರಮಾಣವನ್ನೂ ಕನಿಷ್ಠ ಶೇ.೩೦ ರಷ್ಟು ಕಡಿಮೆ ಮಾಡಬಹುದಾಗಿದೆ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 













  

SWACH BHARATH SECOND ANNIVERSARY


      ಸ್ವಚ್ಛ ಭಾರತ ಅಭಿಯಾನದ ದ್ವಿತೀಯ ವಾರ್ಷಿಕೋತ್ಸವ  

ಎರಡು ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ದೇಶದ ಪ್ರಧಾನ ಜನಸೇವಕ ನರೇಂದ್ರ ಮೋದಿಯವರು ಸ್ವತಃ ಕಸವನ್ನು ಗುಡಿಸುವ ಮೂಲಕ " ಸ್ವಚ್ಛಭಾರತ ಅಭಿಯಾನ " ವನ್ನು  ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ವಾರದಲ್ಲಿ ಎರಡು ಘಂಟೆಗಳಂತೆ, ವರ್ಷದಲ್ಲಿ ೧೦೦ ಘಂಟೆಗಳನ್ನು ಸ್ವಚ್ಛತೆಗಾಗಿ ವಿನಿಯೋಗಿಸಬೇಕು ಎಂದು ವಿನಂತಿಸಿದ್ದರು. ಈ ಅಭಿಯಾನವು ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ನಡೆಯಲಿದ್ದು, ಗಾಂಧೀಜಿಯವರ ೧೫೦ ನೇ ಜನ್ಮದಿನದಂದು ಸಂಪನ್ನಗೊಳ್ಳಲಿದ್ದು, ಈ ಅವಧಿಯಲ್ಲಿ ನಮ್ಮ ದೇಶವನ್ನು  ಸ್ವಚ್ಛ, ಸ್ವಸ್ಥ ಮತ್ತು ಸುಂದರವನ್ನಾಗಿಸಲು ದೇಶದ ಪ್ರಜೆಗಳೆಲ್ಲರೂ ಶ್ರಮಿಸುವಂತೆ ಕರೆನೀಡಿದ್ದರು.

 ಈ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳ ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳು, ಬೃಹತ್ ಉದ್ದಿಮೆ – ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಶ್ರೀಸಾಮಾನ್ಯರು ಇದರಲ್ಲಿ ಭಾಗಿಯಾಗಿದ್ದು, ಇನ್ನುಮುಂದೆ ಪ್ರತಿ ತಿಂಗಳಿನಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುವುದಾಗಿ ಘೋಷಿಸಿದ್ದರು. ಆದರೆ ಈ ಆರಂಭಶೂರತ್ವವು ಒಂದೆರಡು ತಿಂಗಳುಗಳಲ್ಲೇ ಅಂತ್ಯಗೊಂಡಿದ್ದುದು ಮಾತ್ರ ಸುಳ್ಳೇನಲ್ಲ!. ಪ್ರಾಯಶಃ ಮಾಧ್ಯಮಗಳಲ್ಲಿ ಲಭಿಸಲಿರುವ ಪುಕ್ಕಟೆ ಪ್ರಚಾರಕ್ಕಾಗಿ ಭಾಗಿಯಾಗಿದ್ದ ಇವರೆಲ್ಲರೂ, ಬಳಿಕ ಕಣ್ಮರೆಯಾಗಿದ್ದರು. ನಿಜ ಹೇಳಬೇಕಿದ್ದಲ್ಲಿ  ಕೇವಲ ಪ್ರಚಾರದ ಸಲುವಾಗಿ ಭಾಗಿಯಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ  ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ದೇಶದ ಜನತೆ ಮನಸ್ಪೂರ್ವಕವಾಗಿ ಇದರಲ್ಲಿ ಭಾಗವಹಿಸಿದಲ್ಲಿ, ಇದು ಯಶಸ್ವಿಯಾಗುವುದರಲ್ಲೂ ಸಂದೇಹವಿಲ್ಲ.

ವಿಶೇಷವೆಂದರೆ ಈ ಅಭಿಯಾನ ಆರಂಭವಾಗುವ ಮುನ್ನವೇ ದೇಶದ ಅನೇಕ ಮಹಾನಗರಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ " ಆಗ್ಲಿ ಇಂಡಿಯನ್ಸ್ " ನಾಮಧೇಯದ ಸೇವಾ ಸಂಘಟನೆ ಮತ್ತು ಅಭಿಯಾನ ಆರಂಭವಾದ ಬಳಿಕ ಇದರಲ್ಲಿ ಭಾಗಿಯಾಗಿದ್ದ ರಾಮಕೃಷ್ಣ ಮಿಶನ್ ಮತ್ತಿತರ ಬೆರಳೆಣಿಕೆಯಷ್ಟು ಸಂಘಟನೆಗಳು, ಇಂದಿಗೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುತ್ತಿವೆ. ತತ್ಪರಿಣಾಮವಾಗಿ ಅನೇಕ ನಗರಗಳಲ್ಲಿನ ದುರ್ವಾಸನೆಯನ್ನು ಬೀರುವ ಹಾಗೂ ಅಸಹ್ಯವೆನಿಸುವ ತ್ಯಾಜ್ಯಗಳ ರಾಶಿಗಳು ಕಣ್ಮರೆಯಾಗಿವೆ. ಜೊತೆಗೆ ಇಂತಹ ಸ್ಥಳಗಳು ಸ್ವಚ್ಚ ಮತ್ತು ಸುಂದರವಾಗಿವೆ. 

ಅಭಿಯಾನಕ್ಕೆ ಎರಡು ವರ್ಷ

ದೇಶದ ವಿವಿಧ ರಾಜ್ಯಗಳ ಮಾಹಿತಿಯನ್ನು ಪರಿಶೀಲಿಸಿದಾಗ ಈ ಅಭಿಯಾನವು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಪ್ರಧಾನಿಯವರ ಅಪೇಕ್ಷೆಯಂತೆ ದೇಶದ ಪ್ರತಿಯೊಬ್ಬ ಪ್ರಜೆಯು ಇದರಲ್ಲಿ ಭಾಗವಹಿಸಿದ್ದಲ್ಲಿ, ಅಭಿಯಾನವು  ಇನ್ನಷ್ಟು ಯಶಸ್ವಿಯಾಗುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸ್ಥಳೀಯ ಸಂಸ್ಥೆಗಳು, ರಾಜ್ಯಮತ್ತು ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ಸಂಗ್ರಹ ಮಾತ್ರವಲ್ಲ, ಈ ತ್ಯಾಜ್ಯಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಿವಿಧಾನಗಳಿಂದ ಪುನರ್ಬಳಕೆ ಹಾಗೂ ಪುನರ್ ಆವರ್ತನಗೊಳಿಸುವ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ, ಸಿಮೆಂಟ್ ಮತ್ತು ಉಕ್ಕಿನ ಕಾರ್ಖಾನೆಗಳ ಕುಲುಮೆಗಳಲ್ಲಿ ಇಂಧನವನ್ನಾಗಿ ಬಳಸುವ, ಭಗ್ನಗೊಳಿಸಿದ ಕಟ್ಟಡಗಳ ತ್ಯಾಜ್ಯಗಳಿಂದ ಹೊಸ ಕಟ್ಟಡಗಳನ್ನು ಅಥವಾ ಹೊಸ ರಸ್ತೆಗಳನ್ನು ನಿರ್ಮಿಸುವ, ತ್ಯಾಜ್ಯಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳನ್ನು ಸ್ಥಾಪಿಸುವ, ಸಂಪೂರ್ಣವಾಗಿ ನಿರುಪಯುಕ್ತ ಎನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇನ್ಸಿನರೇಟರ್ ಮೂಲಕ ಸುರಕ್ಷಿತವಾಗಿ ದಹಿಸುವ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ವಾಹನಗಳಲ್ಲಿ ಬಳಸಬಹುದಾದ ಇಂಧನವನ್ನು ತಯಾರಿಸಬಲ್ಲ ಘಟಕಗಳನ್ನು ಸ್ಥಾಪಿಸಿದಲ್ಲಿ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಮತ್ತು ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ತುಂಬಿ ತುಳುಕುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು ಕಣ್ಮರೆಯಾಗುತ್ತಿದ್ದವು. ತತ್ಪರಿಣಾಮವಾಗಿ ಹೊಸ ಲ್ಯಾಂಡ್ ಫಿಲ್ ಸೈಟ್ ಗಳ ನಿರ್ಮಾಣಕ್ಕಾಗಿ ಸ್ಥಳವನ್ನು ಹುಡುಕುವ ಹಾಗೂ ಸ್ಥಾಪಿಸಲು ತಗಲುವ ವೆಚ್ಚಗಳನ್ನು ಮತ್ತು ಇವುಗಳ ಸ್ಥಾಪನೆಯನ್ನು ವಿರೋಧಿಸುವ ಜನರ ಪ್ರತಿಭಟನೆಗಳನ್ನು ಸುಲಭದಲ್ಲೇ ನಿವಾರಿಸಬಹುದಾಗಿತ್ತು. 

ನೀವೇನು ಮಾಡಬಹುದು

ಬಡವ ಶ್ರೀಮಂತರೆನ್ನುವ ಭೇದವಿಲ್ಲದೇ ದೇಶದ ಪ್ರಜೆಗಳೆಲ್ಲರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.ಕಾರಣಾಂತರಗಳಿಂದ ಈ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಭಾಗಿಗಳಾಗಲು ಸಾಧ್ಯವಿಲ್ಲದಿದ್ದಲ್ಲಿ, ತಾವು ದಿನನಿತ್ಯ ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆಯುವ ಕೆಟ್ಟ ಹವ್ಯಾಸವನ್ನು ತೊರೆಯುವ ಮೂಲಕವೂ ಅಭಿಯಾನವನ್ನು ಯಶಸ್ವಿಗೊಳಿಸಬಹುದಾಗಿದೆ. ಅಂತೆಯೇ ಅಧಿಕತಮ ಜನರು ಅತಿಯಾಗಿ ಬಳಸುವ ಪ್ಲಾಸ್ಟಿಕ್ ಕೈಚೀಲ ಮತ್ತಿತರ " ಬಳಸಿ ಎಸೆಯುವ " ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ, ಪುನರ್ ಬಳಕೆ ಮಾಡುವ ಮೂಲಕ ಹಾಗೂ ನಿರುಪಯುಕ್ತ ಪ್ಲಾಸ್ಟಿಕ್ ಚೀಲಗಳನ್ನು ಪುನರ್ ಆವರ್ತನಗೊಳಿಸುವ ಸಲುವಾಗಿ ಪ್ರತ್ಯೇಕಿಸಿ ಇರಿಸುವ ಮೂಲಕ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ನಿರಾಕರಿಸುವ ಮೂಲಕ, ಇಂತಹ ವಸ್ತುಗಳನ್ನು ತ್ಯಾಜ್ಯ ರೂಪದಲ್ಲಿ ವಿಸರ್ಜಿಸುವುದನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ.

ವಿದ್ಯಾರ್ಥಿಗಳಿಗೊಂದು ಅವಕಾಶ

ಶಾಲಾಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವುದರೊಂದಿಗೆ ಒಂದಿಷ್ಟು ಆದಾಯವನ್ನು ಗಳಿಸಬಲ್ಲ ಸುಲಭೋಪಾಯವೊಂದು ಇಂತಿದೆ. ತಮ್ಮ ಮನೆಗಳಲ್ಲಿ, ಶಾಲಾಕಾಲೇಜುಗಳ ಆವರಣಗಳಲ್ಲಿ, ತಾವು ದಿನನಿತ್ಯ ನಡೆದಾಡುವ ರಸ್ತೆಗಳ ಬದಿಗಳಲ್ಲಿ ಕಾಣಸಿಗುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಸ್ವಚ್ಚವಾದ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಸಂಗ್ರಹಿಸಿ, ನಿಮ್ಮದೇ ಊರಿನ ಗುಜರಿ ಅಂಗಡಿಗಳಿಗೆ ನೀಡಬಹುದಾಗಿದೆ. ಅದೇ ರೀತಿಯಲ್ಲಿ ರಟ್ಟಿನ ಪೆಟ್ಟಿಗೆಗಳು ನಿರುಪಯುಕ್ತ ಕಾಗದ ಇತ್ಯಾದಿ ವಸ್ತುಗಳನ್ನು ಒಲೆಯಲ್ಲಿ ಸುಡುವ ಬದಲಾಗಿ, ಇವುಗಳನ್ನು ಕೂಡಾ ಗುಜರಿ ಅಂಗಡಿಗಳಿಗೆ ಮಾರಬಹುದಾಗಿದೆ. ಇದರಿಂದಾಗಿ ತ್ಯಾಜ್ಯಗಳ ಉತ್ಪಾದನೆಯು ಕಡಿಮೆಯಾಗುವುದಲ್ಲದೇ, ನೀವು ಸಂಗ್ರಹಿಸಿ ಮಾರಾಟ ಮಾಡುವ ತ್ಯಾಜ್ಯಗಳ ಪ್ರಮಾಣಕ್ಕೆ ಅನುಗುಣವಾಗಿ ನಿಮಗೆ ಒಂದಿಷ್ಟು ಆದಾಯವೂ ಲಭಿಸುತ್ತದೆ. ನಮ್ಮೂರಿನ ಶಾಲೆಯೊಂದರ ವಿದ್ಯಾರ್ಥಿಗಳು ಈ ವಿಧಾನವನ್ನು ಅನುಸರಿಸುವ ಮೂಲಕ, ತಮಗೆ ಬೇಕಾಗುವ ಸ್ಲೇಟು, ಪುಸ್ತಕ, ಪೆನ್ಸಿಲ್, ಪೆನ್, ಸ್ಕೂಲ್ ಬ್ಯಾಗ್, ಕೊಡೆ ಮತ್ತಿತರ ವಸ್ತುಗಳನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪಡೆಯುತ್ತಿದ್ದಾರೆ. ಈ ವಿಧಾನವನ್ನು ದೇಶದ ಎಲ್ಲ ಶಾಲಾಕಾಲೇಜುಗಳಲ್ಲಿ ಅನುಷ್ಠಾನಿಸಬಹುದಾಗಿದೆ. ತನ್ಮೂಲಕ ವಿದ್ಯಾರ್ಥಿಗಳಿಗೆ ಈ ಅಭಿಯಾನದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸುವುದರೊಂದಿಗೆ, ಅವರ ಹೊಣೆಗಾರಿಕೆಯನ್ನು ಹೆಚ್ಚಿಸಬಹುದಾಗಿದೆ.

ಇಷ್ಟು ಮಾತ್ರವಲ್ಲ, ಮಾರುಕಟ್ಟೆ ಅಥವಾ ಸಮೀಪದ ಅಂಗಡಿಗಳಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಹೋಗುವಾಗ ಮರೆಯದೇ ಬಟ್ಟೆಯ ಚೀಲವೊಂದನ್ನು ಒಯ್ಯಿರಿ. ಸರಣಿ ಮಳಿಗೆಗಳಲ್ಲಿ ಖರೀದಿಸುವ ಪ್ರತಿಯೊಂದು ತರಕಾರಿ ಹಾಗೂ ಹಣ್ಣುಗಳನ್ನು ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಲೇಬೇಕೆಂದು ಒತ್ತಾಯಿಸಿದಲ್ಲಿ ನಿರಾಕರಿಸಿ. ಇವೆಲ್ಲವುಗಳನ್ನು ತೂಕ ಮಾಡಿದ ಬಳಿಕ ಇವುಗಳ ತೂಕ ಮತ್ತು ಬೆಲೆಯನ್ನು ಸೂಚಿಸುವ  ಸ್ಟಿಕ್ಕರ್ ಗಳನ್ನು ಕೇವಲ ಒಂದು ಪ್ಲಾಸ್ಟಿಕ್ ಚೀಲಕ್ಕೆ ಅಂಟಿಸುವಂತೆ ಸೂಚಿಸಿ. ಅನಿವಾರ್ಯವಾಗಿ ಪ್ಲಾಸ್ಟಿಕ್ ಚೀಲವನ್ನು ವ್ಯಾಪಾರಿಗಳಿಂದ ಪಡೆದುಕೊಂಡಲ್ಲಿ, ಇದನ್ನು ಹಲವಾರು ಬಾರಿ ಪುನರ್ಬಳಸಿ. ಯಾವುದೇ ಸಂದರ್ಭದಲ್ಲೂ ನಿಮ್ಮ ಮನೆಯಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಸಲುವಾಗಿಯೇ ಪ್ಲಾಸ್ಟಿಕ್ ಕೈಚೀಲಗಳನ್ನು ಕೇಳಿ ಪಡೆಯದಿರಿ!.

ಪ್ರಧಾನ ಮಂತ್ರಿಯವರು ಅಪೇಕ್ಷಿಸಿದಂತೆ ಕನಿಷ್ಠ ನೀವು ದಿನನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡಿ.ಉತ್ಪಾದಿಸಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಹಸಿ ತ್ಯಾಜ್ಯಗಳನ್ನು ನಿಮ್ಮ ಆವರಣದಲ್ಲಿರುವ ಮರಗಿಡಗಳ ಬುಡದಲ್ಲಿ ಹಾಕಿರಿ. ಗುಜರಿ ಅಂಗಡಿಗೆ ನೀಡಲು ಆಸಾಧ್ಯವೆನಿಸುವ ಹಾಗೂ ತೀರಾ ನಿರುಪಯುಕ್ತ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ಮಾತ್ರ ನಿಮ್ಮ ವಸತಿ – ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯಕರ್ತರಿಗೆ ನೀಡಿ. ನಿಮ್ಮೂರಿನ ಸ್ಥಳೀಯ ಸಂಸ್ಥೆಯು ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ನಿರ್ವಹಿಸಲು ವಿಧಿಸುವ ಶುಲ್ಕವನ್ನು ತಪ್ಪದೆ ಪಾವತಿಸಿ. ಈ ಶುಲ್ಕವನ್ನು ಉಳಿಸುವ ಸಲುವಾಗಿ ತ್ಯಾಜ್ಯಗಳನ್ನು ರಸ್ತೆಬದಿ ಅಥವಾ ಚರಂಡಿಗಳಲ್ಲಿ ಎಸೆಯದಿರಿ. ನಿಮ್ಮ ನೆರೆಕರೆಯ ನಿವಾಸಿಗಳಿಗೂ ಇದೇ ರೀತಿಯಲ್ಲಿ ಸಹಕರಿಸಲು ಪ್ರೇರೇಪಿಸಿ.

ಅಭಿಯಾನದ ಪ್ರಗತಿ 

ಸರ್ಕಾರಿ ಅಂಕಿ ಅಂಶಗಳಂತೆ ಸ್ವಚ್ಛ ಭಾರತ ಅಭಿಯಾನದಲ್ಲಿ ಗಣನೀಯ ಪ್ರಮಾಣದ ಪ್ರಗತಿ ಕಂಡುಬರುತ್ತದೆ. ಈ ಅಭಿಯಾನದಲ್ಲಿ ಬಯಲು ಶೌಚಮುಕ್ತ ಭಾರತ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣವೆ ಮುಂತಾದ ಅನ್ಯ ಯೋಜನೆಗಳನ್ನು ಸೇರಿಸಿದ್ದು, ಇವೆಲ್ಲವನ್ನೂ ಒಂದಾಗಿ ಪರಿಗಣಿಸಿರುವುದು ಇದಕ್ಕೆ ಕಾರಣವೆನಿಸುತ್ತದೆ. ಆದರೆ ದೇಶದ ಮೂಲೆಮೂಲೆಗಳಲ್ಲಿ ಇಂದಿಗೂ ಕಾಣಸಿಗುವ ತ್ಯಾಜ್ಯಗಳ ರಾಶಿಗಳನ್ನು ಕಂಡಾಗ, ಅಭಿಯಾನದ ಯಶಸ್ಸಿನ ಬಗ್ಗೆ ಸಂದೇಹವೂ ಮೂಡುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ತ್ಯಾಜ್ಯಗಳ ಸಮಸ್ಯೆ ಬಗೆಹರಿಯಬೇಕಿದ್ದಲ್ಲಿ, ದೇಶದ ಪ್ರತ್ಯೊಬ್ಬ ಪ್ರಜೆಯ ಸಹಕಾರ ಅತ್ಯವಶ್ಯಕ ಎನಿಸುತ್ತದೆ. ಆದುದರಿಂದ ಮುಂದಿನ ಮೂರು ವರ್ಷಗಳಲ್ಲಿ ಈ ಅಭಿಯಾನವು ಅಪೇಕ್ಷಿತ ಫಲಿತಾಂಶವನ್ನು ನೀಡಬೇಕಿದ್ದಲ್ಲಿ, ನಾವುನೀವೆಲ್ಲರೂ ಒಂದಾಗಿ ಇದರ ಯಶಸ್ಸಿಗಾಗಿ ಶ್ರಮಿಸಲೇಬೇಕು. 

ಕೊನೆಯ ಮಾತು

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಸ್ವಚ್ಛತೆ ಮತ್ತು ನಮ್ಮ ಆರೋಗ್ಯಕ್ಕೆ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ಸ್ವಚ್ಛತೆ ಇರುವಲ್ಲಿ ವ್ಯಾಧಿಗಳ ಬಾಧೆ ಇರುವ ಸಾಧ್ಯತೆಗಳಿಲ್ಲ. ಆದರೆ ಅಸ್ವಚ್ಛ ಪರಿಸರದಲ್ಲಿ ಕಾಯಿಲೆಗಳ ಹಾವಳಿ ಸ್ವಾಭಾವಿಕವಾಗಿಯೇ ಹೆಚ್ಚಾಗಿರುತ್ತದೆ. ಆದುದರಿಂದ ನಿಮ್ಮ ಮನೆ, ಸುತ್ತಲಿನ ಆವರಣ, ಸಮೀಪದ ರಸ್ತೆ, ನಿಮ್ಮ ಕೇರಿ ಮತ್ತು ಊರಿನ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ, ನಮ್ಮ ದೇಶವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರ ಭಾರತವನ್ನಾಗಿಸಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು