Wednesday, June 29, 2016

NATIONAL DOCTORS DAY


      ಜುಲೈ ೧ : ರಾಷ್ಟ್ರೀಯ ವೈದ್ಯರ ದಿನಾಚರಣೆ
                             ಬೆಳ್ಳಿ ಹಬ್ಬದ ಸಂಭ್ರಮಾಚರಣೆ 

ಸಹಸ್ರಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ವೈದ್ಯ ಬಾಂಧವರನ್ನು ಸದಾ ಗೌರವಿಸುತ್ತಿದ್ದ ನಮ್ಮ ಪೂರ್ವಜರು, ಕೃತಜ್ಞತಾ ಪೂರ್ವಕವಾಗಿ " ವೈದ್ಯೋ ನಾರಾಯಣೋ ಹರಿ " ಎಂದು ನಮಿಸುತ್ತಿದ್ದರು. ಅಂತೆಯೇ ನಮ್ಮ ದೇಶದಲ್ಲಿ ೧೯೯೧ ರಿಂದ ವರ್ಷಂಪ್ರತಿ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಇದೀಗ ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಬೆಳ್ಳಿಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಾಗೂ ನಿಮ್ಮ ಆತ್ಮೀಯ ಮಿತ್ರರೂ ಆಗಿರುವ ವೈದ್ಯರಿಗೆ, ನಿಮ್ಮ ಪ್ರೀತಿ ವಿಶ್ವಾಸಗಳ ದ್ಯೋತಕವಾಗಿ ಇಂದು ಶುಭಕಾಮನೆಗಳನ್ನು ಸಲ್ಲಿಸುವ ಮೂಲಕ ಈ ದಿನವನ್ನು ಅವಿಸ್ಮರಣೀಯವನ್ನಾಗಿಸಿ. 

ವೈದ್ಯರ ದಿನಾಚರಣೆಯ ಹಿನ್ನೆಲೆ 

ಜಾಗತಿಕ ಮಟ್ಟದಲ್ಲಿ ಮೊತ್ತಮೊದಲಬಾರಿಗೆ " ವೈದ್ಯರ ದಿನ " ವನ್ನು ೧೯೩೩ ರ ಮಾರ್ಚ್ ೩೦ ರಂದು ಆಚರಿಸಲಾಗಿತ್ತು. ಖ್ಯಾತ ವೈದ್ಯ ಚಾರ್ಲ್ಸ್. ಬಿ . ಆಲ್ಮಂಡ್ ಇವರ ಪತ್ನಿ ಇ. ಬಿ. ಆಲ್ಮಂಡ್ ಇವರು, ವೈದ್ಯರನ್ನು ಗೌರವಿಸುವ ಸಲುವಾಗಿ ವರ್ಷದಲ್ಲಿ ಕನಿಷ್ಠ ಒಂದು ದಿನವನ್ನು ಮೀಸಲಿಡಬೇಕು ಎಂದು ನಿರ್ಧರಿಸಿದಂತೆ ಇದನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ವೈದ್ಯರಿಗೆ ಶುಭಾಶಯ ಪತ್ರವನ್ನು ಕಳುಹಿಸುವ ಅಥವಾ ಹೇಳುವ ಮತ್ತು ವಿಧಿವಶರಾಗಿರುವ ಖ್ಯಾತ ವೈದ್ಯರ ಸಮಾಧಿಗಳ ಮೇಲೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ಗೌರವಿಸಲಾಗುತ್ತಿತ್ತು. 

ತದನಂತರ ಅಮೆರಿಕ ದೇಶದ ಜನಪ್ರತಿನಿಧಿಗಳು ೧೯೫೮ ರ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸುವ ನಿರ್ಣಯವೊಂದನ್ನು ಅಂಗೀಕರಿಸಿದ್ದರು. ಜಾರ್ಜ್ ಬುಶ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ವರ್ಷಂಪ್ರತಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನಾಗಿ ಆಚರಿಸುವ ವಿಧೇಯಕಕ್ಕೆ ೧೯೯೦ ರ ಅಕ್ಟೋಬರ್ ೩೦ ರಂದು ಸಹಿಹಾಕಿದ್ದು, ೧೯೯೧ ರಿಂದ ಇದು ಜಾರಿಗೊಂಡಿತ್ತು. 

ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸಲು ನಿರ್ದಿಷ್ಟ ಕಾರಣವೊಂದು ಇಂತಿದೆ. ಡಾ. ಕ್ರಾಫರ್ಡ್ ಲಾಂಗ್ ಎನ್ನುವ ವೈದ್ಯರು ೧೮೪೨ ರ ಮಾರ್ಚ್ ೩೦ ರಂದು ಮೊತ್ತಮೊದಲಬಾರಿಗೆ ಈಥರ್ ಎನ್ನುವ ಅರಿವಳಿಕೆ ಔಷದವನ್ನು ಬಳಸಿ, ರೋಗಿಯ ಕತ್ತಿನ ಭಾಗದಲ್ಲಿದ್ದ ಗೆಡ್ಡೆಯೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದರು. ಈ ಸಂದರ್ಭದಲ್ಲಿ ತನಗೆ ಕಿಂಚಿತ್ ಕೂಡಾ ನೋವಿನ ಅನುಭವ ಆಗಿರಲಿಲ್ಲವೆಂದು ರೋಗಿ ಹೇಳಿದ್ದನು. ನೋವಿಲ್ಲದೇ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾದ ವಿಧಾನ ಮತ್ತು ಔಷದವನ್ನು ಸಂಶೋಧಿಸಿ ಬಳಸಿದ್ದ ಈ ದಿನವನ್ನು, ಜಗತ್ತಿನ ಬಹುತೇಕ ರಾಷ್ಟ್ರಗಳು ವೈದ್ಯರ ದಿನವನ್ನಾಗಿ ಆಚರಿಸುತ್ತಿವೆ. 

ಡಾ. ಬಿ. ಸಿ. ರಾಯ್ ಜನ್ಮದಿನ 

ಅಪ್ರತಿಮ ವೈದ್ಯ ಹಾಗೂ ಮಹಾನ್ ರಾಜಕಾರಣಿ ಎಂದೇ ಸುಪ್ರಸಿದ್ಧರಾಗಿದ್ದ ಡಾ. ಬಿದಾನ ಚಂದ್ರ ರಾಯ್ ಇವರ ಜನ್ಮದಿನವನ್ನು ಭಾರತದಲ್ಲಿ " ರಾಷ್ಟ್ರೀಯ ವೈದ್ಯರ ದಿನ " ವನ್ನಾಗಿ ಆಚರಿಸಲಾಗುತ್ತಿದೆ. ವಿಶೇಷವೆಂದರೆ ಜುಲೈ ೧, ೧೮೮೨ ರಂದು ಜನಿಸಿದ್ದ ಡಾ. ರಾಯ್, ೧೯೬೨ ಜುಲೈ ೧ ರಂದು ಅರ್ಥಾತ್ ತಮ್ಮ ಜನ್ಮದಿನದಂದೇ  ವಿಧಿವಶರಾಗಿದ್ದರು. ಈ ಮಹಾನ್ ಸಾಧಕನ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರವು ೧೯೯೧ ರಲ್ಲಿ ನಿರ್ಧರಿಸಿತ್ತು. 

೧೮೮೨ ಜುಲೈ ೧ ರಂದು ಜನಿಸಿದ್ದ ಬಿ. ಸಿ. ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದ ಬಳಿಕ, ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ೧೯೧೧ ರಲ್ಲಿ ಸ್ವದೇಶಕ್ಕೆ ಮರಳಿದ ಡಾ. ರಾಯ್, ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. 

ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಡಾ. ರಾಯ್, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ತದನಂತರ ೧೪ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮುಖ್ಯಮಂತ್ರಿಯಂತಹ ಬಿಡುವಿಲ್ಲದ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ಪ್ರತಿನಿತ್ಯ ಕನಿಷ್ಠ ೧ ಗಂಟೆಯಷ್ಟು ಸಮಯವನ್ನು ಕೊಳೆಗೇರಿಯ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ವಿನಿಯೋಗಿಸುತ್ತಿದ್ದರು. ಡಾ. ರಾಯ್ ಇವರ ಮಹೋನ್ನತ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರವು, ೧೯೬೧ ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 
--------------------------------------------------------------------------------------------
                ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮ ಕೈಯ್ಯಲ್ಲೇ ಇದೆ!
--------------------------------------------------------------------------------------------

ಪ್ರಸ್ತುತ ನಮ್ಮ ದೇಶದಲ್ಲಿ ವಿಭಿನ್ನ ವೈದ್ಯಕೀಯ ಚಿಕಿತ್ಸಾ ಪದ್ದತಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸಹಸ್ರಾರು ವರ್ಷಗಳ ಹಿಂದೆ ಆವಿಷ್ಕರಿಸಿದ್ದ ಆಯುರ್ವೇದದೊಂದಿಗೆ ಸಿದ್ಧ, ಯುನಾನಿ, ಹೋಮಿಯೋಪತಿ, ಆಲೋಪತಿಗಳಲ್ಲದೇ, ಪ್ರಕೃತಿ ಚಿಕಿತ್ಸಾ ಪದ್ದತಿಯೂ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ ಅತ್ಯಧಿಕ ಸಂಖ್ಯೆಯ ಭಾರತೀಯರು ತಮ್ಮ ಆರೋಗ್ಯದ ರಕ್ಷಣೆಗಾಗಿ, ಮಾರಕ ಅಥವಾ ಗಂಭೀರ ಕಾಯಿಲೆಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಮತ್ತು ಅನ್ಯ ವ್ಯಾಧಿಗಳು ಬಾಧಿಸಿದ ಸಂದರ್ಭಗಳಲ್ಲಿ ಆಧುನಿಕ ಅರ್ಥಾತ್ ಅಲೋಪತಿ ವೈದ್ಯಕೀಯ ಪದ್ದತಿಯನ್ನು ಬಳಸುತ್ತಿದ್ದಾರೆ. ಈ ರೀತಿಯಲ್ಲಿ ಹಲವಾರು ವೈದ್ಯಕೀಯ ಪದ್ದತಿಗಳು ನಮ್ಮ ದೇಶದಲ್ಲಿ ಬಳಸಲ್ಪಡುತ್ತಿದ್ದರೂ, ಇವೆಲ್ಲಾ ಪದ್ದತಿಗಳ ಮೂಲ ಉದ್ದೇಶವು ಮನುಷ್ಯನ ಸ್ವಾಸ್ಥ್ಯ ರಕ್ಷಣೆಯೇ ಆಗಿದೆ. 

ಮನುಷ್ಯನನ್ನು ಬಾಧಿಸಬಲ್ಲ ಸಹಸ್ರಾರು ವಿಧದ ಕಾಯಿಲೆಗಳಿಗೆ ಕಾರಣಗಳೂ ನೂರಾರು. ಇವುಗಳಲ್ಲಿ ರೋಗನಿರೋಧಕ ಶಕ್ತಿಯ ಕೊರತೆ, ಅನುವಂಶಿಕತೆ, ಬ್ಯಾಕ್ಟೀರಿಯಾ ಹಾಗೂ ವೈರಸ್ ಮತ್ತಿತರ ರೋಗಕಾರಕ ಸೂಕ್ಷ್ಮಾಣುಜೀವಿಗಳು, ಜನ್ಮದತ್ತ ವೈಕಲ್ಯ ಹಾಗೂ ತೊಂದರೆಗಳು, ಆಧುನಿಕ ಜೀವನಶೈಲಿ, ಅತಿಯಾದ ಮಾನಸಿಕ ಒತ್ತಡ, ಮಾದಕ ದ್ರವ್ಯ ಇತ್ಯಾದಿಗಳ ಸೇವನೆಯಂತಹ ದುಶ್ಚಟಗಳು, ಪ್ರದೂಷಿತ ಪರಿಸರ, ಕಲುಷಿತ ನೀರು ಮತ್ತು ಗಾಳಿ, ಕೀಟನಾಶಕಗಳನ್ನು ಬಳಸಿ ಬೆಳೆಸಿದ ಆಹಾರ ಪದಾರ್ಥಗಳ ಸೇವನೆಯೊಂದಿಗೆ, ಅಲ್ಪಾವಧಿಯಲ್ಲಿ ಕೈತುಂಬಾ ಸಂಪಾದಿಸುವ ಸಲುವಾಗಿ ನಿದ್ರಾಹಾರಗಳನ್ನು ನಿರ್ಲಕ್ಷಿಸಿ ಎಡೆಬಿಡದೇ ದುಡಿಯುವುದೇ ಮುಂತಾದ ಕಾರಣಗಳು ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. 

ಅದೇ ರೀತಿಯಲ್ಲಿ ಮನುಷ್ಯನನ್ನು ಬಾಧಿಸುವ ಬಹುತೇಕ ವ್ಯಾಧಿಗಳನ್ನು ಗುಣಪಡಿಸಬಲ್ಲ ಔಷದಗಳು ಲಭ್ಯವಿದ್ದು, ಶಾಶ್ವತ ಪರಿಹಾರವೇ ಇಲ್ಲದ ಕೆಲ ಗಂಭೀರ ಕಾಯಿಲೆಗಳನ್ನು ಸಮರ್ಪಕವಾಗಿ ನಿಯಂತ್ರಿಸಬಲ್ಲ ಔಷದಗಳಿವೆ. ಆದರೆ ಕೆಲವಿಧದ ಗಂಭೀರ ಅಥವಾ ಮಾರಕ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳೇ ಇಲ್ಲವೆನ್ನುವುದು ನಿಮಗೂ ತಿಳಿದಿರಲೇಬೇಕು. ಆದರೆ ಇಂತಹ ವ್ಯಾಧಿಗಳನ್ನು ಗುಣಪಡಿಸಬಲ್ಲ ಔಷದಗಳನ್ನು ಪತ್ತೆಹಚ್ಚಲು ವೈದ್ಯಕೀಯ ವಿಜ್ಞಾನಿಗಳು ನಿರಂತರವಾಗಿ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ. 

ಆರೋಗ್ಯವೇ ಭಾಗ್ಯ 

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಅದೇ ರೀತಿಯಲ್ಲಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ ಎನ್ನುವ ಉಕ್ತಿಯನ್ನೂ ಕೇಳಿರಬೇಕು. ಇವೆರಡೂ ಮಾತುಗಳನ್ನು ಅಕ್ಷರಶಃ ಪರಿಪಾಲಿಸಿದಲ್ಲಿ, ಕಾಯಿಲೆಗಳನ್ನು ದೂರವಿರಿಸುವುದು ಸುಲಭಸಾಧ್ಯ. 

ನಿಮ್ಮ ಶಾರೀರಿಕ ಕ್ಷಮತೆಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಪರಿಪಾಲಿಸಬೇಕು. ಇದರ ಅಂಗವಾಗಿ ದಿನನಿತ್ಯ ಮುಂಜಾನೆ ಬೇಗನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ಕನಿಷ್ಠ ಅರ್ಧದಿಂದ ಒಂದು ಗಂಟೆಯ ಕಾಲ ವ್ಯಾಯಾಮ ಅಥವಾ ಯೋಗ ಹಾಗೂ ಪ್ರಾಣಾಯಾಮ ಅಥವಾ ಶಾರೀರಿಕ ಶ್ರಮದ ಕ್ರೀಡೆಗಳಲ್ಲಿ ಅಥವಾ ನಡಿಗೆಯಲ್ಲಿ ತೊಡಗಿಸಿಕೊಳ್ಳಿರಿ. 

ಪ್ರತಿನಿತ್ಯ ಸಮತೋಲಿತ ಆಹಾರವನ್ನು ಸೇವಿಸಿ. ಎಣ್ಣೆ, ಬೆಣ್ಣೆ, ತುಪ್ಪಗಳನ್ನು ಬಳಸಿ ತಯಾರಿಸಿದ ಮತ್ತು ಸಿಹಿತಿಂಡಿಗಳ ಸೇವನೆಯಲ್ಲಿ ಇತಿಮಿತಿಗಳಿರಲಿ. ಮಾಂಸಾಹಾರಕ್ಕಿಂತ ಸಸ್ಯಾಹಾರದ ಸೇವನೆ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಎನ್ನುವುದನ್ನು ಮರೆಯದಿರಿ. 

ನಿಮ್ಮ ಮಕ್ಕಳನ್ನು ಗಂಭೀರ ಅಥವಾ ಮಾರಕ ವ್ಯಾಧಿಗಳಿಂದ ರಕ್ಷಿಸಬಲ್ಲ ವಿವಿಧ ಲಸಿಕೆಗಳನ್ನು ನಿಗದಿತ ಸಮಯದಲ್ಲಿ ತಪ್ಪದೆ ಕೊಡಿಸಿ. ಅಂತೆಯೇ ಸಾಂಕ್ರಾಮಿಕ ವ್ಯಾಧಿಗಳು ವ್ಯಾಪಕವಾಗಿ ಕಂಡುಬಂದಲ್ಲಿ, ಇವುಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದ್ದಲ್ಲಿ ಪಡೆದುಕೊಳ್ಳಿ. ಅಂತೆಯೇ ಅನ್ಯ ಕಾಯಿಲೆಗಳು ಬಾಧಿಸಿದಾಗ ನಿಮ್ಮ ನಂಬಿಗಸ್ಥ ವೈದ್ಯರ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆಯಿರಿ. ವೈದ್ಯರ ನಿರ್ಧಾರದ ಬಗ್ಗೆ ಸಂದೇಹವಿದ್ದಲ್ಲಿ, ಅವರು ಸೂಚಿಸಿದ ಚಿಕಿತ್ಸೆಯನ್ನು ನಿರಾಕರಿಸುವ ಹಾಗೂ ಮತ್ತೊಬ್ಬ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವ ಹಕ್ಕು ನಿಮಗಿದೆ.

ಅಂತಿಮವಾಗಿ ಕ್ಷಿಪ್ರಗತಿಯಲ್ಲಿ ಶ್ರೀಮಂತರಾಗುವ ಹಂಬಲದಿಂದ ನಿದ್ರಾಹಾರಗಳನ್ನು ನಿರ್ಲಕ್ಷಿಸಿ ಕೈತುಂಬಾ ಹಣವನ್ನು ಸಂಪಾದಿಸುವ ಸಂದರ್ಭದಲ್ಲಿ  ಕಳೆದುಕೊಂಡ ಆರೋಗ್ಯವನ್ನು ಮತ್ತೆ ಗಳಿಸಲು, ಅದುವರೆಗೆ ಸಂಪಾದಿಸಿದ ಹಣವನ್ನು ಮತ್ತೆ ಕಳೆದುಕೊಳ್ಳದಿರಿ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 



Sunday, June 12, 2016

JUNE 14 - WORLD BLOOD DONORS DAY



---

                       ಜೂನ್ 14 : ವಿಶ್ವ ರಕ್ತದಾನಿಗಳ ದಿನ 

2004 ರಿಂದ ಜಗತ್ತಿನ ಅನೇಕ ರಾಷ್ಟ್ರಗಳು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತವೆ.
 ಈ ಬಾರಿ " ರಕ್ತವು ನಮ್ಮೆಲ್ಲರನ್ನೂ ಜೋಡಿಸುತ್ತದೆ "  ಎನ್ನುವ ಘೋಷವಾಕ್ಯದೊಂದಿಗೆ, ಈ ದಿನವನ್ನು ಆಚರಿಸಲಾಗುತ್ತಿದೆ. ಸರಳವಾಗಿ ಹೇಳಬೇಕಿದ್ದಲ್ಲಿ,ನೀವು ಸ್ವಯಂಪ್ರೇರಿತವಾಗಿ ನೀಡುವ ರಕ್ತವು ನಿಮ್ಮ ಸಂಬಂಧಿಗಳಲ್ಲದ ವ್ಯಕ್ತಿಗಳೊಂದಿಗೆ  " ರಕ್ತಸಂಬಂಧ " ವನ್ನು ಅಯಾಚಿತವಾಗಿ ಸೃಷ್ಟಿಸುತ್ತದೆ!. 

ರಕ್ತದಾನ - ಜೀವದಾನ
ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಬೇಕೆಂದಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಎರಡಲ್ಲ, ಮೂರು ಜೀವಗಳನ್ನು ಉಳಿಸಬಲ್ಲದು. ಜೊತೆಗೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ, ನಿಮ್ಮ ಆರೋಗ್ಯದ ಮಟ್ಟವೂ ಉನ್ನತಸ್ತರದಲ್ಲಿ ಇರುವುದು. ಇದಕ್ಕೂ ಮಿಗಿಲಾಗಿ ಹಲವಾರು ಜೀವಗಳನ್ನು ಉಳಿಸಿದ ಸಂತೃಪ್ತಿಯು ನಿಮ್ಮ ಮನಸ್ಸಿಗೆ ಮುದನೀಡುವುದು.

ರಕ್ತದ ಬೇಡಿಕೆ ಮತ್ತು ಪೂರೈಕೆ

ಜಾಗತಿಕ ಮಟ್ಟದಲ್ಲಿ ಪ್ರಾಣಾಪಾಯದ ಸ್ಥಿತಿಯಲ್ಲಿರುವ ರೋಗಿಗಳನ್ನು ಬದುಕಿಸಲು ಅತ್ಯವಶ್ಯಕವೆನಿಸುವ  ಸುರಕ್ಷಿತ ರಕ್ತ ಮತ್ತು ಇತರ ರಕ್ತದ ಉತ್ಪನ್ನಗಳ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಆದರೆ ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ರಕ್ತ ಮತ್ತು ರಕ್ತದ ಅನ್ಯ ಉತ್ಪನ್ನಗಳ ಪೂರೈಕೆ ಅಪೇಕ್ಷಿತ ಪ್ರಮಾಣದಲ್ಲಿ ಹೆಚ್ಚುತ್ತಿಲ್ಲ. ಅರ್ಥಾತ್ ಅಧಿಕತಮ ಆರೋಗ್ಯವಂತ ಯುವಕ - ಯುವತಿಯರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರುವುದಿಲ್ಲ!.

ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ ವಿಶ್ವ ರಕ್ತದಾನಿಗಳ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಜನಸಾಮಾನ್ಯರನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ಜೊತೆಗೆ ರಕ್ತದಾನದ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಮತ್ತು ಜನರ ಮನಸ್ಸಿನಲ್ಲಿ ಈ ಬಗ್ಗೆ ಇರಬಹುದಾದ ತಪ್ಪುಕಲ್ಪನೆಗಳನ್ನು ತೊಡೆದುಹಾಕುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ರಕ್ತದಾನಿಗಳ ದಿನ

ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ ವಿಶ್ವ ರಕ್ತದಾನಿಗಳ ದಿನವನ್ನು  ೨೦೦೪ ರ ಜೂನ್ ೧೪ ರಂದು ಆಚರಿಸಲಾಗಿತ್ತು. ರಕ್ತದ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಆಧುನಿಕ ರಕ್ತಪೂರಣ ಪದ್ಧತಿಯ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯ ವಿಜ್ಞಾನಿ, ೧೯೦೧ ರಲ್ಲಿ ರಕ್ತದ ಎ, ಬಿ, ಎಬಿ ಮತ್ತು ಓ ಗುಂಪುಗಳನ್ನು ಪತ್ತೆಹಚ್ಚಿದ ಮತ್ತು ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ ಮಾನವನ ರಕ್ತದಲ್ಲಿರುವ “ ರೀಸಸ್ ಫ್ಯಾಕ್ಟರ್ “ ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಗಳ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತದ ಮರುಪೂರಣವನ್ನು ನಡೆಸಲು ಇವರು ಕಾರಣಕರ್ತರೆನಿಸಿದ್ದರು. ಈ ಮಹಾನ್ ಸಂಶೋಧಕರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಯಾವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ದಿನದಂದು ವಿಶೇಷವಾಗಿ ಸ್ವಯಂಪ್ರೇರಿತ ರಕ್ತದಾನವನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮಗಳನ್ನು ಸ್ವಯಂಸೇವಾ ಸಂಘಟನೆಗಳು ಹಮ್ಮಿಕೊಳ್ಳುತ್ತವೆ. ತನ್ಮೂಲಕ ಇನ್ನಷ್ಟು ಜನರು ಈ ಮಹಾನ್ ಕಾರ್ಯದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತವೆ.

ರಕ್ತದಾನಕ್ಕೆ ಆದ್ಯತೆ

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಪ್ರತಿ ೧೦೦೦ ಜನರಲ್ಲಿ ಕನಿಷ್ಠ ೧೦ ವ್ಯಕ್ತಿಗಳು ಮಾಡುವ ರಕ್ತದಾನದ ಪ್ರಮಾಣ ತೃಪ್ತಿಕರವೆನಿಸುತ್ತದೆ. ಆದರೆ ೭೫ ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರಕ್ತದಾನದ ಪ್ರಮಾಣವು ಇದಕ್ಕೂ ಸಾಕಷ್ಟು ಕಡಿಮೆಯಿದೆ. ಈ ಕೊರತೆಯನ್ನು ನೀಗಿಸಲು ನಿಯಮಿತವಾಗಿ, ಸ್ವಯಂಪ್ರೇರಿತವಾಗಿ ಮತ್ತು ಉಚಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಪ್ರೋತ್ಸಾಹಿಸುವ ಮೂಲಕ ಸುರಕ್ಷಿತ ರಕ್ತದ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಈ ವಿಧಾನದ ಮೂಲಕ ರಕ್ತವನ್ನು ಸಂಗ್ರಹಿಸುವಂತೆ ಸಲಹೆಯನ್ನು ನೀಡಿದೆ.

ಜಗತ್ತಿನ 62 ದೇಶಗಳು ತಮಗೆ ಬೇಕಾಗುವ ಶೇ. 100 ರಷ್ಟು ರಕ್ತವನ್ನು ಸ್ವಯಂಪ್ರೇರಿತ ದಾನಿಗಳಿಂದಲೇ ಸಂಗ್ರಹಿಸುತ್ತಿವೆ. ಇತ್ತೀಚಿನ ಅಂಕಿಅಂಶಗಳಂತೆ. ಜಗತ್ತಿನಾದ್ಯಂತ 108 ದಶಲಕ್ಷ ಯುನಿಟ್ ರಕ್ತವನ್ನು ಸಂಗ್ರಹಿಸಲಾಗುತ್ತಿದೆ. ನಿಜ ಹೇಳಬೇಕಿದ್ದಲ್ಲಿ ಜಗತ್ತಿನ ಜನಸಂಖ್ಯೆಯ ಶೇ. 1 ರಷ್ಟು ಜನರು ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಲ್ಲಿ, ಹೆಚ್ಚುತ್ತಿರುವ ರಕ್ತದ ಬೇಡಿಕೆಯನ್ನು ನಿರಾಯಾಸವಾಗಿ ಪೂರೈಸಬಹುದಾಗಿದೆ. 

ಜಾಗತಿಕ ಮಟ್ಟದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆಯು ಗತದಶಕದಲ್ಲಿ ಹೆಚ್ಚಾಗಿದ್ದು ,ಜಗತ್ತಿನ  ೭೩ ರಾಷ್ಟ್ರಗಳು ತಮ್ಮ ಅವಶ್ಯಕತೆಯ ಶೇ.೯೦ ರಷ್ಟು ರಕ್ತವನ್ನು ಇಂತಹ ದಾನಿಗಳಿಂದಲೇ ಸಂಗ್ರಹಿಸುತ್ತಿವೆ. ಆದರೆ ೧೬ ಅತ್ಯಧಿಕ ಆದಾಯವಿರುವ, ೪೮ ಮಧ್ಯಮ ಆದಾಯವಿರುವ ಮತ್ತು ೧೬ ಕನಿಷ್ಠ ಆದಾಯವಿರುವ ದೇಶಗಳು ಸೇರಿದಂತೆ ೭೨ ರಾಷ್ಟ್ರಗಳು  ಶೇ. ೫೦ ರಷ್ಟು ರಕ್ತವನ್ನು ಹಣವನ್ನು ಪಡೆದು ರಕ್ತವನ್ನು ನೀಡುವ ಅಥವಾ ತಾವು ನೀಡಿದ್ದ ರಕ್ತಕ್ಕೆ ಪ್ರತಿಯಾಗಿ ಬೇರೊಂದು ಗುಂಪಿನ ರಕ್ತವನ್ನು ಮರಳಿ ಪಡೆಯುವ ದಾನಿಗಳಿಂದಲೇ ಸಂಗ್ರಹಿಸುತ್ತಿವೆ!.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಇದೀಗ ಜಗತ್ತಿನ ಶೇ. ೬೦ ರಾಷ್ಟ್ರಗಳು ಅವಶ್ಯಕತೆಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ದಾನಿಗಳಿಂದ ಸಂಗ್ರಹಿಸುತ್ತಿವೆ. ಇನ್ನುಳಿದ ಶೇ.೪೦ ರಾಷ್ಟ್ರಗಳು ರೋಗಿಗಳ ಸಂಬಂಧಿಗಳನ್ನು ಅಥವಾ ಅನ್ಯ ಮೂಲಗಳನ್ನು  ಅವಲಂಬಿಸುತ್ತಿವೆ. ೨೦೨೦ ನೇ ಇಸವಿಗೆ ಮುನ್ನ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ತಮಗೆ ಬೇಕಾದಷ್ಟು ಪ್ರಮಾಣದ ರಕ್ತವನ್ನು ಉಚಿತವಾಗಿ ಮತ್ತು ಸ್ವಯಂಪ್ರೇರಿತವಾಗಿ ರಕ್ತವನ್ನು ನೀಡುವ ದಾನಿಗಳಿಂದಲೇ ಸಂಗ್ರಹಿಸಬೇಕೆನ್ನುವ  ಉದ್ದೇಶ ಮತ್ತು ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಹೊಂದಿದೆ. ಈ ಉದ್ದೇಶ ನೆರವೇರಲು ಮತ್ತು ನಿಗದಿತ ಗುರಿಯನ್ನು ಸಾಧಿಸಲು, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳು ಸ್ವಯಂಪ್ರೇರಿತ ರಕ್ತದಾನವನ್ನು ಮಾಡಬೇಕಿದೆ.

ರಕ್ತದಾನ – ಶ್ರೇಷ್ಠ ದಾನ

ಅನಾದಿಕಾಲದಿಂದಲೂ ಭಾರತದ ಹಿಂದೂ ಮತ್ತು ಅನ್ಯ ಕೆಲ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧ ರೀತಿಯ – ವಸ್ತುಗಳನ್ನು ದಾನವಾಗಿ ನೀಡುವ ಪದ್ಧತಿ ರೂಢಿಯಲ್ಲಿತ್ತು. ಅರ್ಹ ವ್ಯಕ್ತಿಗಳಿಗೆ ನೀಡುವ ದಾನಗಳಿಂದ ತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಕಿಂಚಿತ್ ಪುಣ್ಯವೂ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಗೆಯೂ ಇದಕ್ಕೆ ಕಾರಣವೆನಿಸಿತ್ತು. ಈ ನಂಬಿಗೆಯು ಇಂದಿಗೂ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿದವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವೇ ರಕ್ತದಾನ. ಅಕ್ಷರಶಃ “ ಜೀವದಾನ “ ಎನಿಸುವ ಈ ದಾನಕ್ಕೆ ಜಾತಿಮತಗಳ ಮತ್ತು ಬಡವ ಬಲ್ಲಿದರೆನ್ನುವ ಭೇದವಿಲ್ಲ.ಅಂತೆಯೇ ಈ ದಾನಕ್ಕೆ ಅನ್ಯ ಯಾವುದೇ ದಾನಗಳು ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ವಿಶ್ವ ರಕ್ತದಾನಿಗಳ ದಿನವನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ಮರಣೀಯವನ್ನಾಗಿಸಿ.

ನಿಮಗಿದು ತಿಳಿದಿರಲಿ

ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಅಪಘಾತ, ಹೆರಿಗೆ ಮತ್ತು ಅನ್ಯ ಕಾರಣಗಳಿಂದ ಸಂಭವಿಸುವ ಅತಿಯಾದ ರಕ್ತಸ್ರಾವಗಳಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ, ಸೂಕ್ತ ಸಮಯದಲ್ಲಿ ನಿರ್ದಿಷ್ಟ ಗುಂಪಿನ ಹಾಗೂ ಅವಶ್ಯಕ ಪ್ರಮಾಣದ ಸುರಕ್ಷಿತ ರಕ್ತ ಲಭ್ಯವಾಗದೇ ಸಹಸ್ರಾರು ಜನರು ಮೃತಪಡುತ್ತಾರೆ. ನಮ್ಮ ದೇಶವೂ ಈ ಸಮಸ್ಯೆಗೆ ಅಪವಾದವೆನಿಸಿಲ್ಲ. ಇದಲ್ಲದೇ ಅನೇಕರಿಗೆ ರಕ್ತದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಅನೇಕ ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಆದರೆ ಇತ್ತೀಚಿನ ಕೆಲವರ್ಷಗಳಿಂದ ಭಾರತದ ಹಲವಾರು ಸ್ವಯಂಸೇವಾ ಸಂಸ್ಥೆಗಳು ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ನಮ್ಮಲ್ಲಿ ಸ್ವಯಂಪ್ರೇರಿತ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

ನಿಮಗೆ ೧೮ ವರ್ಷ ತುಂಬಿದಂದಿನಿಂದ ೬೦ ವರ್ಷ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದಲ್ಲಿ, ೫೦೦ ಕ್ಕೂ ಅಧಿಕ ವ್ಯಕ್ತಿಗಳ ಪ್ರಾಣಗಳನ್ನು ಉಳಿಸಬಹುದಾಗಿದೆ. ಇದರೊಂದಿಗೆ ಸಾಕಷ್ಟು ಪುಣ್ಯ ಮತ್ತು ಮಾನಸಿಕ ನೆಮ್ಮದಿಯನ್ನೂ ಗಳಿಸಬಹುದಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು