Wednesday, August 19, 2015

NO LOAD SHEDDING NEXT YEAR !



       ಮುಂದಿನ ವರ್ಷದಿಂದ ರಾಜ್ಯದಲ್ಲಿ ವಿದ್ಯುತ್ ಕಡಿತವಿಲ್ಲ!

ರಾಜ್ಯದ ಜನತೆಗೆ ಯಾವುದೇ ಪೂರ್ವಸೂಚನೆಯನ್ನೇ ನೀಡದೇ ಹಠಾತ್ ಜಾರಿಗೆ ಬಂದಿರುವ ವಿದ್ಯುತ್ ಕಡಿತದ ಸಮಸ್ಯೆಯಿಂದ ವ್ಯಗ್ರರಾಗಿರುವ ಜನರಿಗೆ, ಲೇಖನದ ತಲೆಬರಹವನ್ನು ಕಂಡು ಅಚ್ಚರಿಯಾಗಿರಬಹುದು. ಹಲವಾರು ವರ್ಷಗಳಿಂದ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಹೊಣೆಗಾರಿಕೆಯನ್ನು ವಹಿಸಿಕೊಂಡ ಪ್ರತಿಯೊಬ್ಬ ಸಚಿವರು, ವರ್ಷಂಪ್ರತಿ ನೀಡುತ್ತಿದ್ದ  ಹೇಳಿಕೆಯನ್ನೇ ಈ ಲೇಖನದ ತಲೆಬರಹವನ್ನಾಗಿ ಬಳಸಲಾಗಿದೆ. ಈ ಪ್ರಮಖ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಹಲವಾರು ಮಂತ್ರಿಗಳು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ, ಇವುಗಳು ಸಮರ್ಪಕವಾಗಿ ಸಕಾಲದಲ್ಲಿ ಅನುಷ್ಠಾನಗೊಂಡ ಹಾಗೂ ವಿದ್ಯುತ್ ಉತ್ಪಾದನೆಯ ಪ್ರಮಾಣ ಹೆಚ್ಚಿದ ನಿದರ್ಶನಗಳೇ ಇಲ್ಲ. ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪನವರು ದೂರದ ಛತ್ತೀಸ್ ಘಡದಲ್ಲಿ ವಿದ್ಯುತ್ ಉತ್ಪಾದನಾ ಘಟಕವೊಂದನ್ನು ಸ್ಥಾಪಿಸಲು ಮುಂದಾಗಿದ್ದರೂ, ಅಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ರಾಜ್ಯಕ್ಕೆ ರವಾನಿಸುವುದು ಹೇಗೆನ್ನುವ ವಿಚಾರವನ್ನು ವಿಮರ್ಶಿಸಿರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಛತ್ತೀಸ್ ಘಡದಿಂದ ನಮ್ಮ ರಾಜ್ಯಕ್ಕೆ ಇಂದಿನತನಕ ವಿದ್ಯುತ್ ಸರಬರಜಾಗಿಲ್ಲ.

ವಿದ್ಯುತ್ ಕ್ಷಾಮ
 ಕೆಲ ವರ್ಷಗಳ ಹಿಂದೆ ಬೇಸಗೆಯ ದಿನಗಳಲ್ಲಿ ಉದ್ಭವಿಸುತ್ತಿದ್ದ ವಿದ್ಯುತ್ ಕ್ಷಾಮದ ಸಮಸ್ಯೆಯು, ಕಾಲಕ್ರಮೇಣ ಚಳಿಗಾಲದಲ್ಲಿ ಮತ್ತು ಇದೀಗ ಮಳೆಗಾಲ ಮುಗಿಯುವ ಮುನ್ನವೇ ತಲೆದೋರುತ್ತಿದೆ. ಈ ವಿಲಕ್ಷಣ ಸಮಸ್ಯೆಗೆ ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ಕೊರತೆಯೊಂದಿಗೆ, ನಾವಿಂದು ಅನಾವಶ್ಯಕವಾಗಿ ಪೋಲುಮಾಡುತ್ತಿರುವ ಅಗಾಧ ಪ್ರಮಾಣದ ವಿದ್ಯುತ್ ಕೂಡಾ ಪ್ರಮುಖ ಕಾರಣವೆನಿಸಿದೆ. ಆದರೆ " ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯ, ಎರಡು ಯೂನಿಟ್ ವಿದ್ಯುತ್ತಿನ ಉತ್ಪಾದನೆಗೆ ಸಮ " ಎನ್ನುವ ಘೋಷಣೆಯನ್ನು ರಾಜ್ಯದ ಎಸ್ಕಾಂ ಗಳೂ ಮರೆತುಬಿಟ್ಟಿವೆ!
ಪ್ರಸ್ತುತ ಉಡುಪಿಯ ಯು ಪಿ ಸಿ ಎಲ್ ಘಟಕದಲ್ಲಿ ಉತ್ಪಾದನೆಯಾಗುತ್ತಿದ್ದ ವಿದ್ಯುತ್ತಿನ ಪ್ರಮಾಣದಲ್ಲಿ 1200  ಮೆಗಾವಾಟ್ ಖೋತಾ ಆಗಿದೆ. ಇದರೊಂದಿಗೆ ರಾಯಚೂರು ವಿದ್ಯುತ್ ಉತ್ಪಾದನ  ಕೇಂದ್ರದ ಒಂದು ಘಟಕವೂ ಕೈಕೊಟ್ಟಿದ್ದು, ರಾಜ್ಯಾದ್ಯಂತ ವಿದ್ಯುತ್ ಕಡಿತ ಆರಂಭಗೊಂಡಿದೆ. ವಿದ್ಯುತ್ತಿನ ಉತ್ಪಾದನೆಗಿಂತ ಬೇಡಿಕೆಯ ಪ್ರಮಾಣ ಹೆಚ್ಚಾದಾಗ, ಅನಿವಾರ್ಯವಾಗಿ ಸರ್ಕಾರವು ಇಂತಹ ನಿರ್ಧಾರವನ್ನು ತಳೆಯಬೇಕಾಗುತ್ತದೆ. ವಿಶೇಷವೆಂದರೆ ಈ ಸಮಸ್ಯೆಯು ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಜನತೆಯನ್ನು ಕಾಡುತ್ತಿದ್ದರೂ, ಇದನ್ನು ಸಮರ್ಪಕವಾಗಿ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ.

ಉತ್ಪಾದನೆಗಿಂತ ಅಧಿಕ ಬೇಡಿಕೆ

ಇಷ್ಟೆಲ್ಲಾ ಸಾಲದೆನ್ನುವಂತೆ ಈ ವರ್ಷದಲ್ಲಿ ಸುರಿದಿರುವ ಮುಂಗಾರು ಮಳೆಯ ಪ್ರಮಾಣವು ಸಾಕಷ್ಟು ಕಡಿಮೆಯಾಗಿದ್ದು, ರಾಜ್ಯದ ಅನೇಕ ಭಾಗಗಳಲ್ಲಿ " ಬರ " ದ ಸಮಸ್ಯೆಯು ತಲೆದೋರಿದೆ. ತತ್ಪರಿಣಾಮವಾಗಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಂಬಂಧಿಸಿದ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗಿದೆ. ಲಿಂಗನಮಕ್ಕಿ, ಮಾಣಿ ಮತ್ತು ಸೂಪಾ ಜಲಾಶಯಗಳಲ್ಲಿ ಸಂಗ್ರಹಿತ ನೀರಿನ ಕೊರತೆಯಿಂದಾಗಿ, ಸುಮಾರು 2500 ಮೆಗಾವಾಟ್ ವಿದ್ಯುತ್ತಿನ ಉತ್ಪಾದನೆಯಲ್ಲಿ ಕೊರತೆಯಾಗಲಿದೆ. ಇಷ್ಟು ಮಾತ್ರವಲ್ಲ, ಕೇಂದ್ರದಿಂದ ಲಭಿಸುವ ಸೌರ ವಿದ್ಯುತ್ತಿನ ಪ್ರಮಾಣದಲ್ಲೂ 1000 ಮೆಗಾವಾಟ್ ಕಡಿತಗೊಂಡಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮದಿಂದಾಗಿ, ರಾಜ್ಯಾದಂತ ಲೋಡ್ ಶೆಡ್ಡಿಂಗ್ ಜಾರಿಯಾಗಿದೆ.

ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ತಿನ ಬೇಡಿಕೆಯ ಪ್ರಮಾಣವು 9000 ಮೆಗಾವಾಟ್ ಇದ್ದು, ಕೇಂದ್ರದ ಪಾಲು ಸೇರಿದಂತೆ ಪೂರೈಕೆಯ ಪ್ರಮಾಣವು 6000 ದಿಂದ 7000 ಮೆಗಾವಾಟ್ ಗಳಾಗಿವೆ. ಇದರಿಂದಾಗಿ ಪ್ರತಿನಿತ್ಯ ಒಂದರಿಂದ ಎರಡು ಸಾವಿರ ಮೆಗಾವಾಟ್ ವಿದ್ಯುತ್ತಿನ ಕೊರತೆ ತಲೆದೋರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮುಂಗಾರು ಮಳೆ ಅದೃಶ್ಯವಾಗಿದ್ದು, ರಣಬಿಸಿಲು ಕಾಯುತ್ತಿದೆ. ಇದೀಗ ವಿದ್ಯುತ್ ಕಡಿತದ ಬಿಸಿಯು ರಾಜ್ಯದ ವಿವಿಧ ನಗರ ಹಾಗೂ ಪಟ್ಟಣಗಳೊಂದಿಗೆ, ರಾಜಧಾನಿಯ ನಿವಾಸಿಗಳಿಗೂ ತಟ್ಟುತ್ತಿದೆ.

ಉಳಿತಾಯದತ್ತ ಗಮನಹರಿಸಿಲ್ಲ

ವರ್ಷಂಪ್ರತಿ ಕರ್ನಾಟಕದಲ್ಲಿ ವಿದ್ಯುತ್ ಕ್ಷಾಮದ ಸಮಸ್ಯೆ ಉದ್ಭವಿಸುತ್ತಿದ್ದರೂ, ರಾಜ್ಯ ಸರ್ಕಾರ ಮತ್ತು ಎಸ್ಕಾಂ ಗಳು ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಿಸಲು ಪ್ರಾಮಾಣಿಕ ಪ್ರಯತ್ನವನ್ನೇ ನಡೆಸಿಲ್ಲ. ಉದಾಹರಣೆಗೆ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ನಿವಾಸಿಗಳಿಗೆ ಕೇವಲ 10/- ರೂ.ಗಳಿಗೆ ಅಲ್ಪಪ್ರಮಾಣದ ವಿದ್ಯುತ್ತನ್ನು ಬಳಸುವ ಸಿ ಎಫ್ ಎಲ್ ಬಲ್ಬುಗಳನ್ನು ಒದಗಿಸುವ “ ಬೆಳಕು “ ನಾಮಧೇಯದ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಅಲ್ಪಾವಧಿಯಲ್ಲೇ ಈ ಯೋಜನೆಗೆ ಗ್ರಹಣ ಹಿಡಿದಿತ್ತು.

ಅಂತೆಯೇ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇರುಳಿಡೀ ಬೆಳಗುವ ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ, ಬೀದಿದೀಪಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ವಿದ್ಯುತ್ ಕ್ಷಾಮದ ಸಂದರ್ಭದಲ್ಲಿ ಶೇ. 50 ರಷ್ಟು ದಾರಿದೀಪಗಳ ಸಂಪರ್ಕವನ್ನು ಕಡಿತ ಮಾಡುವುದು, ಸಿ ಎಫ್ ಎಲ್ ಅಥವಾ ಎಲ್ ಇ ಡಿ  ದೀಪಗಳನ್ನು ಬಳಸುವುದು, ಕತ್ತಲಾಗುವ ಸಮಯದಲ್ಲಿ ಬೆಳಗಿಸಿ ಸೂರ್ಯ ಮೂಡಿದೊಡನೆ ಆರಿಸುವುದು, ಕರೆಂಟು ಕಬಳಿಸುವ ಸೋಡಿಯಂ ದೀಪಗಳನ್ನು ಬದಲಾಯಿಸುವುದೇ ಮುಂತಾದ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದಲ್ಲಿ ಗಣನೀಯ ಪ್ರಮಾಣದ ವಿದ್ಯುತ್ತನ್ನು ಉಳಿಸಬಹುದಾಗಿದೆ. ಆದರೆ ಇಂತಹ ಉಪಕ್ರಮಗಳನ್ನು ಕೈಗೊಳ್ಳಲು ನಮ್ಮನ್ನಾಳುವವರಿಗೆ ಧೃಢವಾದ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ.

ವಿದ್ಯುತ್ ಕಡಿತದ ಸಂದರ್ಭದಲ್ಲಿ ತತ್ಸಂಬಂಧಿತರನ್ನು ಶಪಿಸುವ ರಾಜ್ಯದ ಪ್ರಜೆಗಳು, ತಮ್ಮ ವಸತಿ – ವಾಣಿಜ್ಯ ಕಟ್ಟಡಗಳಲ್ಲಿ ಸಿ ಎಫ್ ಎಲ್ ಅಥವಾ ಎಲ್ ಇ ಡಿ ದೀಪಗಳನ್ನು ಬಳಸುವುದು, ಸೋಲಾರ್ ವಾಟರ್ ಹೀಟರ್ ಬಳಸುವುದು, ಕರೆಂಟು ಕಬಳಿಸುವ ವಿದ್ಯುತ್ ಉಪಕರಣಗಳ ಬಳಕೆಯನ್ನು ನಿಯಂತ್ರಿಸುವುದೇ ಮುಂತಾದ ವಿಧಾನಗಳಿಂದ ಸಾಕಷ್ಟು ವಿದ್ಯುತ್ತನ್ನು ಉಳಿತಾಯ ಮಾಡಬಹುದಾಗಿದೆ.

ವಿಶೇಷವಾಗಿ ಬೇಸಗೆಯ ದಿನಗಳಲ್ಲಿ ಜರಗುವ ಜಾತ್ರೆ – ಉತ್ಸವಗಳ ಮತ್ತು ವಿಶೇಷ ಸಭೆ – ಸಮಾರಂಭಗಳ ಸಂದರ್ಭಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರವನ್ನು ಕಡಿಮೆ ಮಾಡುವದು ಮತ್ತು ತಡರಾತ್ರಿಯ ಬಳಿಕ ಇವುಗಳನ್ನು ಆರಿಸುವುದರಿಂದ ನೂರಾರು ಯೂನಿಟ್ ವಿದ್ಯುತ್ತನ್ನು ಉಳಿಸಬಹುದಾಗಿದೆ,

ಅಂತಿಮವಾಗಿ ಹೇಳುವುದಾದಲ್ಲಿ ಎಸ್ಕಾಂ ಗಳು, ರಾಜ್ಯದ ಪ್ರಜೆಗಳು ಮತ್ತು ಸರ್ಕಾರ ಕೈಜೋಡಿಸುವ ಮೂಲಕ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಸರಿಸುವುದರೊಂದಿಗೆ, ಮುಂದಿನ ಹತ್ತು ವರ್ಷಗಳ ಅವಧಿಗೆ ರಾಜ್ಯದ ಬೇಡಿಕೆಯನ್ನುಪೂರೈಸುವಷ್ಟು ವಿದ್ಯುತ್ತನ್ನು ಉತ್ಪಾದಿಸುವ ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಿದೆ. ಇದಕ್ಕೆ ತಪ್ಪಿದಲ್ಲಿ ಮುಂದಿನ ವರ್ಷಗಳಲ್ಲಿ ವಿದ್ಯುತ್ ಕ್ಷಾಮದ ಸಮಸ್ಯೆಯು ರಾಜ್ಯದ ಜನತೆಯನ್ನು ಶಾಪದೋಪಾದಿಯಲ್ಲಿ ಪೀಡಿಸಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು

ಚಿತ್ರ – ಎಲ್ ಇ ಡಿ ದಾರಿದೀಪಗಳು






Friday, August 14, 2015

AUGUST 20 - WORLD MOSQUITO DAY



      ಆಗಸ್ಟ್ ೨೦ : ವಿಶ್ವ ಸೊಳ್ಳೆಗಳ ದಿನಾಚರಣೆ !

ದಷ್ಟಪುಷ್ಟ ಶರೀರವನ್ನು ಹೊಂದಿರುವ ಎಂಟೆದೆಯ ಬಂಟರನ್ನೂ ಹಾಸಿಗೆ ಹಿಡಿಸಬಲ್ಲ ಶಕ್ತಿ ಒಂದು ಪುಟ್ಟ ಸೊಳ್ಳೆಗಿದೆ. ಜಾನುವಾರುಗಳು ಮತ್ತು ಮನುಷ್ಯರ ರಕ್ತವನ್ನು ಹೀರುವ ಈ ಕ್ಷುದ್ರ ಜೀವಿಗೆ, ಮಾರಕ ಕಾಯಿಲೆಗಳನ್ನು ಹರಡುವ ಸಾಮರ್ಥ್ಯವೂ ಇದೆ. ಇದೇ ಕಾರಣದಿಂದಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ವ್ಯಾಪಕವಾಗಿ ಪತ್ತೆಯಾದಾಗ, ಅಧಿಕತಮ ಜನರು ಸ್ವಾಭಾವಿಕವಾಗಿಯೇ ಭಯಭೀತರಾಗುತ್ತಾರೆ. ಮನುಷ್ಯರ ರಕ್ತವನ್ನು ಹೀರಿ ಜೀವಿಸುವ ಹಾಗೂ ವೈವಿಧ್ಯಮಯ ಮತ್ತು ಮಾರಕವಾಗಿ ಪರಿಣಮಿಸಬಲ್ಲ ಕಾಯಿಲೆಗಳನ್ನು ಹರಡುವ ಈ  ರಕ್ತಪಿಪಾಸುವಿನ ಸಲುವಾಗಿ “ ವಿಶ್ವ ಸೊಳ್ಳೆಗಳ ದಿನ “ ವನ್ನು ಆಚರಿಸಲಾಗುತ್ತಿದೆಯೇ?, ಎಂದು ಅಚ್ಚರಿ ಪಡದಿರಿ. ಏಕೆಂದರೆ ಈ ವಿಶೇಷ ದಿನಾಚರಣೆಗೆ ನಿರ್ದಿಷ್ಟ ಕಾರಣವಿದೆ.

ಸೊಳ್ಳೆಗಳಿಗೊಂದು ದಿನ !
ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಕಳೆದ ೧೧೪ ವರ್ಷಗಳಿಂದ ಆಗಸ್ಟ್ 20 ರಂದು " ವಿಶ್ವ ಸೊಳ್ಳೆಗಳ ದಿನ " ವನ್ನು ಆಚರಿಸಲಾಗುತ್ತಿದೆ. ಬ್ರಿಟನ್ ನ ಖ್ಯಾತ ವೈದ್ಯ ಸರ್ ರೋನಾಲ್ಡ್ ರಾಸ್ಸ್ ಇವರು ೧೮೯೭ ರಲ್ಲಿ ಹೆಣ್ಣು ಸೊಳ್ಳೆಗಳಿಂದ ಮಲೇರಿಯ ವ್ಯಾಧಿಯು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎನ್ನುವುದನ್ನು ಪತ್ತೆಹಚ್ಚಿದ್ದರು.ತತ್ಪರಿಣಾಮವಾಗಿ ಜಗತ್ತಿನ ವೈದ್ಯಕೀಯ ಸಂಶೋಧಕರು ಮಲೇರಿಯ ಕಾಯಿಲೆಯನ್ನು ಹರಡುವ ಸೊಳ್ಳೆಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಅರಿತುಕೊಳ್ಳುವ ಹಾಗೂ ಇವುಗಳನ್ನು ನಿವಾರಿಸುವ ಮತ್ತು ನಾಶಪಡಿಸುವ ವಿಚಾರಗಳನ್ನು ಅಭಿವೃದ್ಧಿಪಡಿಸಲು ಮೂಲವೆನಿಸಿತ್ತು. ಈ ಸಂಶೋಧನೆಗಾಗಿ ಡಾ.ರಾಸ್ ಇವರಿಗೆ ೧೯೦೨ ರಲ್ಲಿ ವೈದ್ಯಕೀಯ ಸಂಶೋಧನೆಗೆ  ಸಂಬಂಧಿಸಿದ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು.  ಇದರ ಸ್ಮರಣಾರ್ಥ ಹಾಗೂ ಡಾ.ರಾಸ್ಸ್ ಇವರ ಅಪೇಕ್ಷೆಯಂತೆ ಲಂಡನ್ ಸ್ಕೂಲ್ ಆಫ್ ಹೈಜೀನ್ ಎಂಡ್ ಟ್ರೋಪಿಕಲ್ ಮೆಡಿಸಿನ್ ಸಂಸ್ಥೆಯು ವರ್ಷಂಪ್ರತಿ ಆಗಸ್ಟ್ ೨೦ ರಂದು ವಿಶ್ವ ಸೊಳ್ಳೆಗಳ ದಿನವನ್ನು ಆಚರಿಸುತ್ತಿದೆ. ೧೯೩೦ ರಿಂದ ಈ ಸಂಪ್ರದಾಯವನ್ನು ಪರಿಪಾಲಿಸುತ್ತಿರುವ ಸಂಸ್ಥೆಯು, ಈ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ಸೊಳ್ಳೆಗಳಿಂದ ಅನಾರೋಗ್ಯ

ಸೊಳ್ಳೆಗಳಲ್ಲಿ ಹಲವಾರು ತಳಿಗಳಿದ್ದು, ಕೆಲ ತಳಿಗಳು ನಿರಪಾಯಕಾರಿ ಅಥವಾ ಮನುಕುಲಕ್ಕೆ ಉಪಯುಕ್ತವೆನಿಸಿದರೂ, ಬಹುತೇಕ ಸೊಳ್ಳೆಗಳು ಮನುಷ್ಯನೂ ಸೇರಿದಂತೆ ಅನ್ಯ ಕಶೇರುಕಗಳ ರಕ್ತವನ್ನು ಹೀರುವ ಕಾರಣದಿಂದಾಗಿ ಅತ್ಯಂತ ಅಪಾಯಕಾರಿ ಹಾಗೂ ಉಪದ್ರವಕಾರಿ ಎನಿಸಿವೆ. ಅಧಿಕತಮ ಹೆಣ್ಣು ಸೊಳ್ಳೆಗಳು ರಕ್ತವನ್ನು ಸೇವಿಸುವ ಕೀಟಗಳಾಗಿದ್ದು, ಇವುಗಳಲ್ಲಿ ಕೆಲ ತಳಿಗಳು ಮನುಷ್ಯರಿಗೆ ಅತ್ಯಂತ ಅಪಾಯಕಾರಿ  ಎನಿಸುವ ಮಲೇರಿಯ,ಡೆಂಗೆ, ಚಿಕುನ್ ಗುನ್ಯಾ, ಎಲ್ಲೊ ಫಿವರ್ ಮತ್ತು ಫೈಲೆರಿಯಾಸಿಸ್,ವೆಸ್ಟ್ ನೈಲ್ ವೈರಸ್, ಜಪಾನೀಸ್ ಎನ್ಸೆಫಲೈಟಿಸ್, ಸೈಂಟ್ ಲೂಯಿಸ್ – ವೆಸ್ಟರ್ನ್ ಇಕ್ವೈನ್ – ಈಸ್ಟರ್ನ್ ಇಕ್ವೈನ್ – ವೆನೆಜುವೇಲನ್ ಹಾಗೂ ಲಾ ಕ್ರಾಸ್  ಎನ್ಸೆಫಲೈಟಿಸ್, ಜಿಕಾ ಜ್ವರ, ಸಾಂಕ್ರಾಮಿಕ ಪಾಲಿಆರ್ಥ್ರೈಟಿಸ್ ಗಳಂತಹ ಕಾಯಿಲೆಗಳನ್ನು ಹರಡುತ್ತವೆ. ಆರೋಗ್ಯ ಕ್ಷೇತ್ರದ ಕೆಲ ತಜ್ಞರ ಅಭಿಪ್ರಾಯದಂತೆ ಸೊಳ್ಳೆಗಳು ಮನುಷ್ಯರ ಪಾಲಿಗೆ ಅತ್ಯಂತ ಅಪಾಯಕಾರಿಗಳಾಗಿದ್ದು, ಕೆಲ ಸಂದರ್ಭಗಳಲ್ಲಿ ಮಾರಕವೆನಿಸಬಲ್ಲ ಕಾಯಿಲೆಗಳನ್ನು ಹರಡಬಲ್ಲ ಜೀವಿಗಳಾಗಿವೆ. ಅದೃಷ್ಟವಶಾತ್ ಸೊಳ್ಳೆಗಳ ಜೀವಿತಾವಧಿಯು ಕೇವಲ ೩೦ ದಿನಗಳಾಗಿರುವುದರಿಂದ, ಇವುಗಳು ಹರಡುವ ಕಾಯಿಲೆಗಳ ಪ್ರಮಾಣವೂ ಸ್ವಾಭಾವಿಕವಾಗಿಯೇ ನಿಯಂತ್ರಿಸಲ್ಪಡುತ್ತದೆ. ಮನುಷ್ಯನಿಗೆ ತಿಳಿದಿರುವ ಸುಮಾರು ೧೪,೦೦೦ ರೋಗಕಾರಕ ಸೂಕ್ಷ್ಮಾಣುಜೀವಿಗಳಲ್ಲಿ, ೬೦೦ ರೋಗಾಣುಗಳು ಮನುಷ್ಯರು ಮತ್ತು ಪ್ರಾಣಿಗಳಲ್ಲಿ ಕಂಡುಬರುತ್ತವೆ. ಇಂತಹ ರೋಗಾಣುಗಳ “ ಆಶ್ರಯ ತಾಣ “ ಕ್ಕೆ ಸೊಳ್ಳೆಗಳು ಉತ್ತಮ ಉದಾಹರಣೆಯೆನಿಸುತ್ತವೆ!.

ರೋಗಪೀಡಿತ ವ್ಯಕ್ತಿಗೆ ಕಚ್ಚಿದ ಸೊಳ್ಳೆಗಳು ಹೀರಿದ ರಕ್ತದೊಂದಿಗೆ ಅವುಗಳ ಶರೀರವನ್ನು ಪ್ರವೇಶಿಸಿದ ರೋಗಾಣುಗಳು, ಈ ಸೊಳ್ಳೆಯು ಮತ್ತೊಬ್ಬ ವ್ಯಕ್ತಿಗೆ ಕಚ್ಚಿದಾಗ ಆತನ ಶರೀರದಲ್ಲಿ ಪ್ರವೇಶವನ್ನು ಗಳಿಸುತ್ತವೆ. ಸೊಳ್ಳೆಗಳು ಮನುಷ್ಯನನ್ನು ಕಚ್ಚುವಾಗ ಸ್ರವಿಸುವ ಜೊಲ್ಲಿನಲ್ಲಿ ರಕ್ತವು ಹೆಪ್ಪುಗಟ್ಟುವುದನ್ನು ತಡೆಗಟ್ಟುವ ಅಂಶಗಳು ಸೇರಿದ್ದು, ರಕ್ತವನ್ನು ಅಡೆತಡೆ ಇಲ್ಲದೇ ಹೀರಲು ಉಪಯುಕ್ತವೆನಿಸುತ್ತದೆ.  

ಅಂಕಿ ಅಂಶಗಳು

ಸೊಳ್ಳೆಗಳ ವಿವಿಧ ತಳಿಗಳು ಅನೇಕ ವಿಧದ ಕಾಯಿಲೆಗಳನ್ನು ಹರಡುತ್ತಿದ್ದು, ಇವುಗಳು ಒಂದು ವರ್ಷದಲ್ಲಿ ಆಫ್ರಿಕ, ಸೌತ್ ಮತ್ತು ಸೆಂಟ್ರಲ್ ಅಮೇರಿಕ, ಮೆಕ್ಸಿಕೊ, ರಷ್ಯ ಮತ್ತು ಏಷ್ಯಾ ಖಂಡಗಳಿಗೆ ಸೇರಿದ ೭೦೦ ದಶಲಕ್ಷಕ್ಕೂ ಅಧಿಕ ಜನರನ್ನು ಪೀಡಿಸುವುದರೊಂದಿಗೆ, ಕನಿಷ್ಠ ೨ ದಶಲಕ್ಷ ಜನರ ಮರಣಕ್ಕೆ ಕಾರಣವೆನಿಸುತ್ತಿದೆ. ಸೊಳ್ಳೆಗಳ ಕಡಿತದಿಂದ ಹರಡುವ ಮಲೇರಿಯ ವ್ಯಾಧಿಗೆ ವರ್ಷಂಪ್ರತಿ ಲಕ್ಷಾಂತರ ಜನರು ಈಡಾಗುತ್ತಿದ್ದು, ೭,೮೧,೦೦೦ ರೋಗಿಗಳ ಅಕಾಲಿಕ ಮರಣಕ್ಕೆ( ವಿಶೇಷವಾಗಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ) ಕಾರಣವೆನಿಸುತ್ತಿದೆ. ಇದರಲ್ಲಿ ಶೇ.೯೦ ರಷ್ಟು ಜನರು ಆಫ್ರಿಕನ್ ದೇಶಗಳ ನಿವಾಸಿಗಳಾಗಿದ್ದಾರೆ. ಅದೇ ರೀತಿಯಲ್ಲಿ ಜಗತ್ತಿನಾದ್ಯಂತ ೪೦ ದಶಲಕ್ಷಕ್ಕೂ ಅಧಿಕ ಜನರು ಫೈಲೆರಿಯಾಸಿಸ್ ವ್ಯಾಧಿಯಿಂದ ಬಳಲುತ್ತಿದ್ದಾರೆ.

ತಡೆಗಟ್ಟುವುದೆಂತು?

ಈ ಅಪಾಯಕಾರಿ ಮತ್ತು ಮಾರಕ ಸಮಸ್ಯೆಯನ್ನು ತಡೆಗಟ್ಟಲು, ಸೊಳ್ಳೆಗಳ ಸಂತತಿಯನ್ನು ನಿಯಂತ್ರಿಸುವ ಮತ್ತು ನಾಶಪಡಿಸುವ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಅಂತೆಯೇ ಇವುಗಳಿಂದ ಹರಡಬಲ್ಲ ಕಾಯಿಲೆಗಳನ್ನು ತಡೆಗಟ್ಟಬಲ್ಲ ಔಷದಗಳ ಬಳಕೆ ಮತ್ತು ಲಸಿಕೆಗಳ ಸಂಶೋಧನೆಗಳೇ ಉಪಯುಕ್ತ ಹಾಗೂ ಪರಿಣಾಮಕಾರಿ ವಿಧಾನಗಳಾಗಿವೆ. ಅಂತೆಯೇ ಸೊಳ್ಳೆಗಳ ಕಡಿತದಿಂದ ಪಾರಾಗಲು ಸೊಳ್ಳೆ ಪರದೆಗಳು, ಚರ್ಮದ ಮೇಲೆ ಹಚ್ಚುವ ಮುಲಾಮುಗಳು, ಸೊಳ್ಳೆಗಳನ್ನೂ ದೂರವಿರಿಸಬಲ್ಲ ಬತ್ತಿಗಳು ಹಾಗೂ ದ್ರವಗಳ ಬಳಕೆಯೂ ತಕ್ಕ ಮಟ್ಟಿಗೆ ಉಪಯುಕ್ತವೆನಿಸಬಲ್ಲದು. ಅಂತೆಯೇ ನಿಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿ ಇರಿಸುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವುದು ಅತ್ಯವಶ್ಯಕವೂ ಹೌದು. ಇವೆಲ್ಲಕ್ಕೂ ಮಿಗಿಲಾಗಿ ಸೊಳ್ಳೆಗಳಿಂದ ಹರಡುವ ವ್ಯಾಧಿಪೀಡಿತ ವ್ಯಕ್ತಿಯನ್ನು ಪ್ರತ್ಯೇಕವಾಗಿರಿಸಿ, ನಿರ್ದಿಷ್ಟ ವ್ಯಾಧಿಗೆ ಚಿಕಿತ್ಸೆಯನ್ನು ನೀಡುವುದರ ಜೊತೆಗೆ, ಆತನನ್ನು ಮತ್ತಷ್ಟು ಸೊಳ್ಳೆಗಳು ಕಡಿದು ಇನ್ನಷ್ಟು ಜನರಿಗೆ ವ್ಯಾಧಿಯನ್ನು ಹರಡದಂತೆ ಸೊಳ್ಳೆ ಪರದೆಯನ್ನು ಬಳಸುವುದು ಅತ್ಯಂತ ಪರಿಣಾಮಕಾರಿ ಎನಿಸುವುದು.

ಕೊನೆಯ ಮಾತು

ಅದೇನೇ ಇರಲಿ, ಇದುವರೆಗೆ ನಿಮಗೆ ತಿಳಿದಿರದ ವಿಶ್ವ ಸೊಳ್ಳೆಗಳ ದಿನಾಚರಣೆಯ ಬಗ್ಗೆ ಹಾಗೂ ಸೊಳ್ಳೆಗಳಿಂದ ಹರಡಬಲ್ಲ ಅಪಾಯಕಾರಿ ಕಾಯಿಲೆಗಳು ಮತ್ತು ಮಾರಕತೆಗಳ ಮಾಹಿತಿಗಳನ್ನು ಅರಿತುಕೊಂಡ ಬಳಿಕ, ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟಲು ನಿಮ್ಮ ಸುತ್ತಮುತ್ತಲ ಪರಿಸರದ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಶ್ರಮಿಸಿದಲ್ಲಿ ಈ ಲೇಖನದ ಉದ್ದೇಶ ಸಫಲವೆನಿಸುವುದು.


ಡಾ.ಸಿ. ನಿತ್ಯಾನಂದ ಪೈ, ಪುತ್ತೂರು


Wednesday, August 12, 2015

SVACH BHAARAT MISSION



             ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಇಚ್ಛಾಶಕ್ತಿಯ ಕೊರತೆ

ದೇಶದ ಪ್ರಧಾನ ಸೇವಕನೆಂದು ಸ್ವಯಂ ಘೋಷಿಸಿದ್ದ ನರೇಂದ್ರ ಮೋದಿಯವರು ಕಳೆದ ವರ್ಷದ ಅಕ್ಟೋಬರ್ ೨ ರಂದು ಸ್ವತಃ ಕಸವನ್ನು ಗುಡಿಸುವ ಮೂಲಕ " ಸ್ವಚ್ಛ ಭಾರತ ಅಭಿಯಾನ " ಕ್ಕೆ ಚಾಲನೆಯನ್ನು ನೀಡಿದ್ದರು. ಗಾಂಧೀ ಜಯಂತಿಯಂದು ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದ ಮೋದಿಯವರು, ದೇಶದ ಪ್ರತಿಯೊಬ್ಬ ಪ್ರಜೆಯೂ ವಾರದಲ್ಲಿ ಕನಿಷ್ಠ ಎರಡು ಗಂಟೆಗಳಂತೆ, ವರ್ಷದಲ್ಲಿ ೧೦೦ ಗಂಟೆಗಳನ್ನು  ಸ್ವಚ್ಛತೆಗಾಗಿ ವಿನಿಯೋಗಿಸಬೇಕೆಂದು ವಿನಂತಿಸಿದ್ದರು.

ಪ್ರಾರಂಭಿಕ ಹಂತದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ದೊರೆತಿದ್ದ ಅಭೂತಪೂರ್ವ ಪ್ರತಿಕ್ರಿಯೆಯನ್ನು ಕಂಡಾಗ , ನಿರೀಕ್ಷಿತ ಅವಧಿಗೆ ಮುನ್ನ ಇದು ಯಶಸ್ವಿಯಾಗುವುದೆನ್ನುವ ಭರವಸೆಯು ಇದೀಗ ಹುಸಿಯಾಗಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣವೊಂದರಲ್ಲಿ  " ಮೋದಿಯವರ ಸ್ವಚ್ಛ ಭಾರತ ಅಭಿಯಾನವು ವಿಫಲವಾಗಿರುವುದು ಇದೀಗ ಇತಿಹಾಸ " ಎನ್ನುವ ಅಭಿಪ್ರಾಯವನ್ನು ಪ್ರಕಟಿಸಿದ್ದ ವ್ಯಕ್ತಿಗೆ, ಇದರ ವೈಫಲ್ಯಕ್ಕೆ ಮತ್ತು ತತ್ಪರಿಣಾಮವಾಗಿ ಮುಂದೆ ದೇಶದ ಜನತೆಯನ್ನು ಕಾಡಲಿರುವ ಸಮಸ್ಯೆಗಳಿಗೆ ಹೊಣೆಗಾರರು  ನಾವೇ ಹೊರತು ಮೋದಿಯವರಲ್ಲ ಎನ್ನುವ ಸತ್ಯದ ಅರಿವಿಲ್ಲದಿರುವುದನ್ನು ಗಮನಿಸಿ ಅಚ್ಚರಿಯೂ ಆಗಿತ್ತು. ರಾಜಕೀಯ ದೃಷ್ಠಿಯಿಂದ ಇಂತಹ ಅಭಿಪ್ರಾಯವನ್ನು ಪ್ರಕಟಿಸುವ ಸಂಕುಚಿತ ಮನೋಭಾವದ ವ್ಯಕ್ತಿಗಳಿಂದ ಇದಕ್ಕೂ ಹೆಚ್ಚೇನನ್ನೂ ಅಪೇಕ್ಷಿಸುವಂತಿಲ್ಲ.ಆದರೆ ಅದೃಷ್ಟವಶಾತ್ ಇಂತಹ ಪ್ರತಿಕ್ರಿಯೆಗಳಿಂದಾಗಿ ಸ್ವಚ್ಚ ಭಾರತ ಅಭಿಯಾನಕ್ಕೆ ಹಿನ್ನಡೆಯಾಗುವ ಸಾಧ್ಯತೆಗಳೇ ಇಲ್ಲ.

ಈ ಅಭಿಯಾನದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸಕ್ರಿಯವಾಗಿ ಭಾಗಿಯಾಗಿದ್ದಲ್ಲಿ ನಮ್ಮ ದೇಶವೂ ಅನೇಕ ಪಾಶ್ಚಾತ್ಯ ದೇಶಗಳಂತೆಯೇ ಸ್ವಚ್ಛವಾಗುವುದರೊಂದಿಗೆ, ಇದೀಗ ಸ್ವಸ್ಥ ಹಾಗೂ ಸುಂದರವಾಗುತ್ತಿತ್ತು. ಆದರೆ ಕೇವಲ ಪ್ರಚಾರದ ಸಲುವಾಗಿ ಇದರಲ್ಲಿ ಭಾಗಿಯಾಗಿದ್ದ ರಾಜಕೀಯ ನೇತಾರರು ಮತ್ತು ಕೆಲ ಸಂಘಟನೆಗಳು, ಒಂದೆರಡು ತಿಂಗಳುಗಳ ಬಳಿಕ ಈ ವಿಚಾರವನ್ನೇ ಮರೆತಿದ್ದು ವಿಪರ್ಯಾಸವೇ ಸರಿ.

ಸ್ವಚ್ಚತಾ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗಲು ಇಚ್ಛೆಯಿಲ್ಲದ ಜನರು ಕನಿಷ್ಠ ಪಕ್ಷ ತಾವು ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಉತ್ಪಾದಿಸಿರುವ ತ್ಯಾಜ್ಯಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಯಲ್ಲಿ ಸಹಕರಿಸುವ ಮೂಲಕ ಪರೋಕ್ಷವಾಗಿ ಭಾಗಿಯಾಗಬಹುದಿತ್ತು. ಆದರೆ ಕಾರಣಾಂತರಗಳಿಂದ ಸಹಕರಿಸದೆ ಇದ್ದ ಜನರಿಂದಾಗಿ ಈ ಅಭಿಯಾನವು ನಿರೀಕ್ಷಿತ ಮಟ್ಟದಲ್ಲಿ ಫಲಪ್ರದವೆನಿಸಿಲ್ಲ. ಹಾಗೂ ಇದೇ ಕಾರಣದಿಂದಾಗಿ ನಮ್ಮ ದೇಶದ ಜನತೆಯನ್ನು ಪೀಡಿಸುವ ಹಲವಾರು ವಿಧದ ರೋಗರುಜಿನಗಳ ಸಮಸ್ಯೆಯೂ ಬಗೆಹರಿದಿಲ್ಲ. ವಿಶೇಷವೆಂದರೆ ಅನೇಕ ವಿದ್ಯಾವಂತರಿಗೂ ಈ ಸತ್ಯದ ಅರಿವಿಲ್ಲ!.

ಸ್ವಚ್ಛತೆ ಮತ್ತು ಆರೋಗ್ಯ

ನಮ್ಮ ಸುತ್ತಮುತ್ತಲ ಪರಿಸರದ ಸ್ವಚ್ಛತೆ ಮತ್ತು ನಮ್ಮ ಆರೋಗ್ಯಗಳಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ವೈಯುಕ್ತಿಕ ಮತ್ತು ಸುತ್ತಮುತ್ತಲ ಪರಿಸರದ ಸ್ವಚ್ಛತೆಗಳಿಗೆ ಅನುಗುಣವಾಗಿ ನಮ್ಮ ಆರೋಗ್ಯ ಮತ್ತು ಅನಾರೋಗ್ಯಗಳ ಸ್ಥಿತಿಗತಿಗಳು ಬದಲಾಗುತ್ತಲೇ ಇರುತ್ತವೆ. ಜೊತೆಗೆ ನಾವಿಂದು ಅತಿಯಾಗಿ ಹಾಗೂ ಅನಾವಶ್ಯಕವಾಗಿ ಉತ್ಪಾದಿಸಿ, ಅವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು, ನಮ್ಮ ಪರಿಸರದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮವನ್ನು ಬೀರುತ್ತಿವೆ. ತತ್ಪರಿಣಾಮವಾಗಿ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಹವಾಮಾನದ ವ್ಯತ್ಯಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸುತ್ತಿವೆ. ಜನಸಾಮಾನ್ಯರ ಆರೋಗ್ಯದೊಂದಿಗೆ ದೇಶದ ಆರ್ಥಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುವ ಈ  ಸಮಸ್ಯೆಯನ್ನು ತಡೆಗಟ್ಟಲು, ಸ್ವಚ್ಛತಾ ಅಭಿಯಾನವು ಯಶಸ್ವಿಯಾಗಲೇಬೇಕಿದೆ.

ನೀವೇನು ಮಾಡಬಹುದು

ಪ್ರಧಾನ ಮಂತ್ರಿಯವರು ವಿನಂತಿಸಿರುವಂತೆ ವಾರದಲ್ಲಿ ಕನಿಷ್ಠ ೨ ತಾಸುಗಳನ್ನು ಸ್ವಚ್ಛತೆಗಾಗಿ ಮೀಸಲಿಡಿ. ಇದು ಅಸಾಧ್ಯವೆನಿಸಿದಲ್ಲಿ ನೀವು ಪ್ರತಿನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ನಿಯಂತ್ರಿಸಿ. ಯಾವುದೇ ಕಾರಣಕ್ಕೂ ಸಂಗ್ರಹಿತ ತ್ಯಾಜ್ಯಗಳನ್ನು ಚರಂಡಿ ಅಥವಾ ಎಲ್ಲೆಂದರಲ್ಲಿ ಎಸೆಯದಿರಿ. ಉತ್ಪಾದಿತ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಹಸಿ ತ್ಯಾಜ್ಯಗಳನ್ನು ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಲು ಬಳಸಿ. ಅಥವಾ ನಿಮ್ಮ ಮನೆಯ ಅವರಣದಲ್ಲಿರುವ ಮರಗಳ ಬುಡದಲ್ಲಿ ಹಾಕಿ. ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಪುನರ್ ಬಳಸಿ. ಮಾರುಕಟ್ಟೆಗೆ ತೆರಳುವಾಗ ಬಟ್ಟೆಯ ಚೀಲವನ್ನು ತಪ್ಪದೆ ಕೊಂಡೊಯ್ಯಿರಿ. ವರ್ತಕರು ನೀಡುವ ಪ್ಲಾಸ್ಟಿಕ್ ಚೀಲಗಳನ್ನು ನಯವಾಗಿ ನಿರಾಕರಿಸಿ. ಪುನರ್ ಆವರ್ತನಗೊಳಿಸಬಲ್ಲ  ಪ್ಲಾಸ್ಟಿಕ್ ಬಾಟಲಿ ಇತ್ಯಾದಿ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಮನೆಮನೆಯಿಂದ ತ್ಯಾಜ್ಯ ಸಂಗ್ರಹ ಮಾಡುವ ಕಾರ್ಯಕರ್ತರಿಗೆ ನೀಡಿ ಗುಜರಿ ಅಂಗಡಿಗಳಿಗೆ ಮಾರುವಂತೆ ಸೂಚಿಸಿ. ನಿಮ್ಮ ನೆರೆಕರೆಯವರಿಗೂ ಇದೇ ಸಲಹೆಯನ್ನು ನೀಡಿ, ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿ. ನಿಮ್ಮ ಮನೆ, ಸುತ್ತಮುತ್ತಲ ಆವರಣ, ಸಮೀಪದ ರಸ್ತೆ, ನಿಮ್ಮೂರು ಮತ್ತು ಪರಿಸರವನ್ನು ಸ್ವಚ್ಛವಾಗಿ ಇರಿಸಲು ಮನಸ್ಪೂರ್ವಕವಾಗಿ ಸಹಕರಿಸಿ. ತನ್ಮೂಲಕ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡು, “ ಸ್ವಚ್ಛ ಭಾರತ, ಸ್ವಸ್ಥ ಮತ್ತು ಸುಂದರ ಭಾರತ “ ಎನ್ನುವ ಮಹಾತ್ಮ ಗಾಂಧಿಯವರ ಕನಸನ್ನು ನನಸಾಗಿಸಲು ಶ್ರಮಿಸುವ ಮೂಲಕ ಗಾಂಧೀಜಿಯವರ ಜನ್ಮ ದಿನವನ್ನು ಅವಿಸ್ಮರಣೀಯವನ್ನಾಗಿಸಿ.

ಇದನ್ನು ಬಾಕ್ಸ್ ನಲ್ಲಿ ಪ್ರಕಟಿಸಿ

ಅಂತರಂಗ – ಬಹಿರಂಗ ಶುದ್ಧಿ

ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಬರೆಯುವಾಗ ಬಾಲ್ಯದಲ್ಲಿ ಓದಿದ್ದ ಕತೆಯೊಂದು ನೆನಪಾಗುತ್ತಿದೆ. ಗುರುಕುಲವೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಲ್ಲ ಶಿಷ್ಯರಿಗೆ ಒಂದೊಂದು ತಂಬಿಗೆಯನ್ನು ನೀಡಿದ ಗುರುಗಳು, ಇದನ್ನು ಸ್ವಚ್ಛಗೊಳಿಸಿ ತರುವಂತೆ ಆದೇಶಿಸಿದ್ದರು. ಸ್ವಲ್ಪ ಸಮಯದ ಬಳಿಕ ಮರಳಿದ ಶಿಷ್ಯರೆಲ್ಲರ ಕೈಗಳಲ್ಲಿ ಥಳಥಳಿಸುವ ತಂಬಿಗೆಗಳಿದ್ದವು. ಆದರೆ ಒಬ್ಬ ಶಿಷ್ಯನ ಕೈಯ್ಯಲ್ಲಿದ್ದ ತಂಬಿಗೆಯು ಮೇಲ್ನೋಟಕ್ಕೆ ಕೊಳಕಾಗಿ ಕಾಣಿಸುತ್ತಿದ್ದುದನ್ನು ಕಂಡ ಇತರ ಶಿಷ್ಯರು, ಆತನನ್ನು ಲೇವಡಿ ಮಾಡಿದ್ದರು. ಇದನ್ನು ಕಂಡ ಗುರುಗಳು ಆತನ ಬಳಿಯಿದ್ದ ತಂಬಿಗೆಯನ್ನು ಪರಿಶೀಲಿಸಿದಾಗ, ಅದರ ಒಳಭಾಗವು ಅತ್ಯಂತ ಸ್ವಚ್ಛವಾಗಿರುವುದು ಅರಿಯಿತು. ಬಳಿಕ ಅನ್ಯ ಶಿಷ್ಯರ ಕೈಯ್ಯಲ್ಲಿದ್ದ ತಂಬಿಗೆಗಳನ್ನು ಒಂದೊಂದಾಗಿ ಪರಿಶೀಲಿಸಿದಾಗ, ಅವುಗಳ ಒಳಭಾಗ ಅತ್ಯಂತ ಕೊಳಕಾಗಿರುವುದು ತಿಳಿದುಬಂದಿತ್ತು. ಇದನ್ನು ಗಮನಿಸಿದ ಗುರುಗಳ ಮುಖದಲ್ಲಿ ಮಂದಹಾಸ ಮಿನುಗಿತ್ತು. ಗುರುಗಳ ಅಭಿಪ್ರಾಯದಂತೆ ಕೇವಲ ಒಬ್ಬ ಶಿಷ್ಯನು ಅಂತರಂಗದ ಶುಚಿತ್ವಕ್ಕೆ ಗಮನವನ್ನು ನೀಡಿದ್ದು, ಇತರ ಶಿಷ್ಯರು ಬಹಿರಂಗ ಶುದ್ಧಿಗೆ ಪ್ರಾಮುಖ್ಯವನ್ನು ನೀಡಿದ್ದರು.

ಮೇಲಿನ ಕತೆಯಲ್ಲಿ ಅಂತರಂಗ ಶುದ್ಧಿಗೆ ನೀಡಿರುವ ಪ್ರಾಮುಖ್ಯತೆಯನ್ನು ಇಂದು ನಾವೆಲ್ಲರೂ ತಪ್ಪದೇ ಪರಿಪಾಲಿಸುತ್ತಿದ್ದೇವೆ. ಅರ್ಥಾತ್, ನಮ್ಮ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಸಲುವಾಗಿ  ಪ್ರತಿನಿತ್ಯ ಸಾಕಷ್ಟು ಶ್ರಮಿಸುತ್ತೇವೆ. ಆದರೆ ನಮ್ಮ ಮನೆಯ ಮುಂದಿನ ರಸ್ತೆ, ನಮ್ಮ ಕೇರಿ ಮತ್ತು ನಮ್ಮ ಊರಿನ ಸ್ವಚ್ಛತೆಯನ್ನು ಕಾಪಾಡಲು ನಿರ್ಲಕ್ಷಿಸುತ್ತಿದ್ದೇವೆ. ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಬೇಕಿದ್ದಲ್ಲಿ, ಅಂತರಂಗ ಮತ್ತು ಬಹಿರಂಗ ಶುದ್ಧಿಗಳೆರಡಕ್ಕೂ ಸಮಾನವಾದ ಪ್ರಾಮುಖ್ಯತೆಯನ್ನು ನಾವಿಂದು ನೀಡಲೆಬೇಕಾಗಿದೆ.

ಕೊನೆಯ ಮಾತು

ಪ್ರಧಾನಿಯವರ ಕರೆಗೆ ಓಗೊಟ್ಟು ಸ್ವಯಂಪ್ರೇರಿತವಾಗಿ ಸ್ವಚ್ಛತೆಗಾಗಿ ಶ್ರಮಿಸುವ ವ್ಯಕ್ತಿಗಳು ಅಥವಾ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರನ್ನು ಪ್ರೋತ್ಸಾಹಿಸಿ ಗೌರವಿಸಿ. ಸಾಧ್ಯವಿದ್ದಲ್ಲಿ ಅವರೊಂದಿಗೆ ಕೈಜೋಡಿಸಿ. ಅವರು ಸ್ವಚ್ಛಗೊಳಿಸಿರುವ ಸ್ಥಳದಲ್ಲಿ ಮತ್ತೆ ತ್ಯಾಜ್ಯಗಳನ್ನು ಸುರಿಯದಿರಿ.

ಆಗ್ಲಿ ಇಂಡಿಯನ್ಸ್ ಮತ್ತು ರಾಮಕೃಷ್ಣ ಮಿಶನ್ ಗಳಂತಹ ಕೆಲ ಸಂಸ್ಥೆಗಳು ನಿಯಮಿತವಾಗಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಇದೇ ರೀತಿಯಲ್ಲಿ ದೇಶದ ಎಲ್ಲ ಪ್ರಜೆಗಳು ಮತ್ತು ಇನ್ನಷ್ಟು ಸಂಘಟನೆಗಳು ಇದರಲ್ಲಿ ಭಾಗಿಯಾದಲ್ಲಿ, ನಮ್ಮ ದೇಶವು ಸ್ವಸ್ಥ ಮತ್ತು ಸುಂದರವಾಗುವುದರಲ್ಲಿ ಸಂದೇಹವಿಲ್ಲ.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು





Tuesday, August 11, 2015

NO SUBSIDISED FOOD FOR KARNATAKA MLA's.



          ಸಂಸದರಿಗೆ ಲಭ್ಯ ಸೌಲಭ್ಯ : ಕರ್ನಾಟಕದ  ಶಾಸಕರಿಗೆ ಲಭ್ಯವಿಲ್ಲ !

ದೇಶದ ಸಂಸದರಿಗೆ ಪಾರ್ಲಿಮೆಂಟ್ ಭವನದಲ್ಲಿನ ಉಪಾಹಾರ ಗೃಹದಲ್ಲಿ ಅಲ್ಪಬೆಲೆಗೆ ಒದಗಿಸುವ ಖಾದ್ಯಪೇಯಗಳಿಗಾಗಿ ಕಳೆದ ಐದು ವರ್ಷಗಳಲ್ಲಿ ೬೦ ಕೋಟಿ ರೂ.ಗಳನ್ನು ಸಹಾಯಧನದ ರೂಪದಲ್ಲಿ ಕೇಂದ್ರ ಸರ್ಕಾರವು ವ್ಯಯಿಸಿದ್ದ ವಿಚಾರವು ಬಹಿರಂಗವಾದಂತೆಯೇ ಸಾಕಷ್ಟು ವಾದವಿವಾದಗಳಿಗೆ ಹಾಗೂ ಚರ್ಚೆಗಳಿಗೆ ಗ್ರಾಸವೆನಿಸಿತ್ತು. ಮಾಸಿಕ ೧.೪ ಲಕ್ಷದಷ್ಟು ವೇತನದೊಂದಿಗೆ, ಇತರ ಭತ್ಯೆ ಮತ್ತಿತರ ಸೌಲಭ್ಯಗಳನ್ನು ಪಡೆಯುತ್ತಿರುವ ಸಂಸದರಿಗೆ ಅಲ್ಪಬೆಲೆಗೆ ಖಾದ್ಯಪೇಯಗಳನ್ನು ಒದಗಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯವೂ  ಸಾರ್ವತ್ರಿಕವಾಗಿ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕದ ಶಾಸಕರಿಗೆ ಇದೇ ರೀತಿಯ ಸೌಲಭ್ಯವನ್ನು ಒದಗಿಸಲಾಗುತ್ತಿದೆಯೇ ಎನ್ನುವುದನ್ನು ಅರಿತುಕೊಳ್ಳಲು, ಮಾಹಿತಿ ಪಡೆಯುವ ಹಕ್ಕು ಕಾಯಿದೆಯನ್ವಯ ಪಡೆದಿದ್ದ ಒಂದಿಷ್ಟು ಮಾಹಿತಿ ಮತ್ತು ಸಂಸದರಿಗೆ ಲಭಿಸುತ್ತಿರುವ ಈ ವಿಶೇಷ ಸೌಲಭ್ಯದ ಬಗ್ಗೆ ಒಂದಿಷ್ಟು ವಿವರಗಳು ಇಲ್ಲಿವೆ.

ಕರ್ನಾಟಕದ ಜನತೆಗೆ ಸದಾ ಒಂದಲ್ಲ ಒಂದು ಭಾಗ್ಯವನ್ನು ಕೊಡುಗೆಗಳ ರೂಪದಲ್ಲಿ ಕರುಣಿಸುವ ರಾಜ್ಯದ ಶಾಸಕರು, ತಮಗಾಗಿ ಕೆಲವೊಂದು ಭರ್ಜರಿ ಕೊಡುಗೆಗಳನ್ನು ತಾವೇ ಪಡೆದುಕೊಳ್ಳುತ್ತಲೇ ಇರುತ್ತಾರೆ. ಇತೀಚೆಗೆ ತಮ್ಮ ಮಾಸಿಕ ವೇತನ, ಭತ್ಯೆಗಳು, ನಿವೃತ್ತಿಯ ಬಳಿಕ ಲಭಿಸುವ ಪಿಂಚಣಿಯೇ ಮುಂತಾದ ಸೌಲಭ್ಯಗಳನ್ನು ಹೆಚ್ಚಿಸಿಕೊಂಡಿರುವ ನಮ್ಮ ಶಾಸಕರು, ದೇಶದ ಸಂಸದರಿಗೆ  ಸರಿಸಮಾನವಾದ ಆದಾಯವನ್ನು ಗಳಿಸುತ್ತಿದ್ದಾರೆ. ಆದರೆ ಲೋಕಸಭೆ ಮತ್ತು ರಾಜ್ಯಸಭೆಗಳ ಸದಸ್ಯರಿಗೆ ಪಾರ್ಲಿಮೆಂಟ್ ಭವನದ ಉಪಾಹಾರ ಗೃಹದಲ್ಲಿ ಅಲ್ಪಬೆಲೆಗೆ ದೊರೆಯುತ್ತಿರುವ ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಭೋಜ್ಯಗಳನ್ನು, ನಮ್ಮ ಶಾಸಕರಿಗೆ ವಿಧಾನಸಭೆಯ ಉಪಾಹಾರ ಗೃಹದಲ್ಲಿ ಒದಗಿಸಲಾಗುತಿಲ್ಲ. ಈ ಒಂದು ವಿಚಾರದಲ್ಲಿ ಮಾತ್ರ ನಮ್ಮ ಶಾಸಕರು ಹಿಂದುಳಿದಿರಲು ಕಾರಣವೇನೆಂದು ನಮಗೂ ತಿಳಿದಿಲ್ಲ. ಆದರೆ ಶ್ರೀಸಾಮಾನ್ಯನಿಗೆ ರಾಜ್ಯದ ಬಹುತೇಕ ಉಪಾಹಾರ ಗೃಹಗಳಲ್ಲಿ ಲಭಿಸುವ ಸಸ್ಯಾಹಾರಿ ಭಕ್ಷ್ಯಭೋಜ್ಯಗಳಷ್ಟೇ ಬೆಲೆಯನ್ನು ತೆತ್ತು, ನಮ್ಮ ಶಾಸಕರು ವಿಧಾನಸಭೆಯ ಉಪಾಹಾರ ಗೃಹದಲ್ಲಿ ಕೇವಲ  ಸಸ್ಯಾಹಾರಿ ಆಹಾರವನ್ನು ಸೇವಿಸುವುದು ನಿಜಕ್ಕೂ ಪ್ರಶಂಸನೀಯ.

ಹಿನ್ನೆಲೆ

ಸರ್ಕಾರದ ಸಹಾಯಧನದ ಮೂಲಕ ಕಡಿಮೆ ಬೆಲೆಗೆ ದೊರೆಯುವ ಅಡುಗೆ ಅನಿಲದ ಸೌಲಭ್ಯವನ್ನು ತ್ಯಜಿಸುವಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇದೇ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಕರೆನೀಡಿದ್ದರು. ಶ್ರೀಮಂತರು ತ್ಯಜಿಸುವ ಸಹಾಯಧನದ ಅನಿಲ ಜಾಡಿಗಳನ್ನು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಇಡುಗಂಟು ರಹಿತವಾಗಿ ನೀಡುವ ಉದ್ದೇಶವೇ ಇದಕ್ಕೆ ಪ್ರಮುಖ ಕಾರಣವಾಗಿತ್ತು. ಸಹಸ್ರಾರು ಜನರು ಇದಕ್ಕೆ ಸ್ಪಂದಿಸಿದ್ದು, ಈ ಪಟ್ಟಿಯಲ್ಲಿ ಶ್ರೀಮಂತ ವರ್ಗಕ್ಕೆ ಸೇರಿದ ಉದ್ಯಮಪತಿಗಳಲ್ಲದೇ, ಬೆರಳೆಣಿಕೆಯಷ್ಟು ಸಂಸದರು ಮತ್ತು ಶಾಸಕರೂ ಸೇರಿದ್ದರು. ಆದರೆ ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಬ್ಬ ಶಾಸಕರು ಮತ್ತು ಸಂಸದರು ( ದೇಶದ ಸಂಸದರಲ್ಲಿ ೪೪೨ ಜನರು ಮತ್ತು ವಿವಿಧ ರಾಜ್ಯಗಳ ಸಹಸ್ರಾರು ಶಾಸಕರು ಕೋಟ್ಯಾಧಿಪತಿಗಳಾಗಿದ್ದರೂ ) ಈ ಸವಲತ್ತನ್ನು ತ್ಯಜಿಸಿರಲಿಲ್ಲ. ಮಾಸಿಕ ವೇತನ ಮತ್ತು ವಿವಿಧ ಭತ್ಯೆಗಳ ರೂಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಪಡೆಯುತ್ತಿರುವ ಜನಪ್ರತಿನಿಧಿಗಳ ಈ ಧೋರಣೆಯು ಮತದಾರ ಪ್ರಭುವಿನ ಅಸಮಾಧಾನಕ್ಕೆ ಕಾರಣವೆನಿಸಿತ್ತು.

ಅಲ್ಪಬೆಲೆಗೆ ಖಾದ್ಯಪೇಯಗಳು

ಇದೇ ಸಂದರ್ಭದಲ್ಲಿ ದೇಶದ ಸಂಸತ್ ಸದಸ್ಯರಿಗೆ ಸಂಸತ್ತಿನ ಕ್ಯಾಂಟೀನ್ ನಲ್ಲಿ ಸರ್ಕಾರದ ಸಹಾಯಧನದ ಮೂಲಕ ಅತ್ಯಲ್ಪ ಬೆಲೆಗೆ ಅತ್ಯುತ್ತಮ ಭಕ್ಷ್ಯ ಭೋಜ್ಯಗಳನ್ನು ಒದಗಿಸುತ್ತಿರುವ ವಿಚಾರವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದಂತೆಯೇ, ಮತದಾರ ಪ್ರಭುವಿಗೆ ದಿಗ್ಭ್ರಮೆಯಾಗಿತ್ತು. ನಿಜ ಹೇಳಬೇಕಿದ್ದಲ್ಲಿ ನಮ್ಮ ಸಂಸದರಿಗೆ ಅಲ್ಪಬೆಲೆಗೆ ಕೇವಲ ಸಸ್ಯಾಹಾರ ಮಾತ್ರವಲ್ಲ, ಮಾಂಸಾಹಾರವನ್ನೂ ಒದಗಿಸಲಾಗುತ್ತಿದೆ.ಹಾಗೂ ಸಂಸದರಿಗೆ ಈ ವಿಶೇಷ ಸೌಲಭ್ಯವನ್ನು ಒದಗಿಸಲು, ೨೦೦೯- ೧೦ ರಲ್ಲಿ ೧೦.೪ ಕೋಟಿ, ೨೦೧೦-೧೧ ರಲ್ಲಿ ೧೧., ೨೦೧೧-೧೨ ರಲ್ಲಿ ೧೧., ೨೦೧೨-೧೩ ರಲ್ಲಿ ೧೨.೫ ಮತ್ತು ೨೦೧೪-೧೫ ರಲ್ಲಿ ೧೪ ಕೋಟಿ ರೂ.ಗಳು ಸೇರಿದಂತೆ,ಕೇಂದ್ರ ಸರ್ಕಾರವು ೬೦ ಕೋಟಿ ರೂ.ಗಳನ್ನು ಸಹಾಯಧನದ ರೂಪದಲ್ಲಿ ನೀಡಿತ್ತು. ಮಾಹಿತಿ ಹಕ್ಕು ಕಾಯಿದೆಯನ್ವಯ ಕಾರ್ಯಕರ್ತರೊಬ್ಬರು ಪಡೆದುಕೊಂಡಿದ್ದ ಈ ಮಾಹಿತಿಯೇ ಜನಸಾಮಾನ್ಯರ ಅಸಮಾಧಾನಕ್ಕೆ ಮೂಲವೆನಿಸಿತ್ತು.

ನಮ್ಮ ಶಾಸಕರಿಗಿಲ್ಲ ಈ ಸೌಲಭ್ಯ

ದೇಶದ ಸಂಸದರಿಗೆ ಸಂಸತ್ತಿನ ಉಪಾಹಾರ ಗೃಹದಲ್ಲಿ ಪೂರೈಸುವ ಕೆಲವೊಂದು ಖಾದ್ಯಪೇಯಗಳ ಹೆಸರು ಮತ್ತು ಇವುಗಳ ಬೆಲೆಗಳ ಸ್ಯಾಂಪಲ್ ಇಂತಿದೆ. ಚಹಾ, ಕಾಫಿ,ರೋಟಿ, ಚಪಾತಿ ಒಂದರ ರೂ. ೧, ದಾಲ್ ೧.೫೦. ಅನ್ನ ೨, ದೋಸೆ, ವೆಜಿಟೆಬಲ್ ಸೂಪ್  ೪ , ಮಸಾಲೆದೋಸೆ ೬, ವೆಜ್ ಪಲಾವ್ ೮, ಮೊಸರನ್ನ ೧೧, ವೆಜ್ ಥಾಲಿ ೧೨.೫೦, ಫಿಶ್ ಕರಿ ರೈಸ್ ೧೩,ಚಿಕನ್ ಕರಿ ೨೦.೫೦,ನಾನ್ ವೆಜ್ ಥಾಲಿ ೨೨, ಚಿಕನ್ ಮಸಾಲ ೨೪.೫೦, ಬಟರ್ ಚಿಕನ್ ೩೭, ಚಿಕನ್ ಬಿರಿಯಾನಿ ೫೧, ಹುರಿದ ಮೀನು ೨೫, ಮಟನ್ ಕಟ್ಲೆಟ್ ೧೮, ಮಟನ್ ಕರಿ ೨೦ ರೂಪಾಯಿಗಳಂತೆ ಬೆಲೆಯನ್ನು ನಿಗದಿಸಲಾಗಿದೆ. ಇದಲ್ಲದೇ ಇನ್ನೂ ಹತ್ತುಹಲವು ವಿಧಗಳ ಖಾದ್ಯಪೇಯಗಳನ್ನು ನಮ್ಮ ಸಂಸದರಿಗೆ ಶೇ. ೬೩ ರಿಂದ ಶೇ. ೯೦ ರಷ್ಟು ರಿಯಾಯಿತಿ ದರದಲ್ಲಿ ಪೂರೈಸಲಾಗುತ್ತದೆ!.

ಆದರೆ ಕೆಲ ಸಂಸದರು ಹೇಳುವಂತೆ ಈ ಸೌಲಭ್ಯವನ್ನು ಅಲ್ಪಪ್ರಮಾಣದ ಸಂಸದರು ಮಾತ್ರ ಬಳಸುತ್ತಿದ್ದು, ಪಾರ್ಲಿಮೆಂಟಿನ ಸಿಬಂದಿಗಳು ಹಾಗೂ ಪತ್ರಕರ್ತರು ಹೆಚ್ಚಾಗಿ ಬಳಸುತ್ತಾರೆ. ಸಂಸದರು ಹೇಳಿರುವುದು ನಿಜವಾಗಿದ್ದಲ್ಲಿ, ಸಂಸದರಿಗಾಗಿ ಒದಗಿಸುವ ಈ ಸೌಲಭ್ಯವನ್ನು ಅನ್ಯರು ಬಳಸುವುದು ತಪ್ಪಲ್ಲವೇ?, ಎನ್ನುವ ಪ್ರಶ್ನೆಯೂ  ಉದ್ಭವಿಸುತ್ತದೆ.

ವಿಧಾನಸಭೆಯ ಸಚಿವಾಲಯವು ಮಾಹಿತಿಹಕ್ಕು ಕಾಯಿದೆಯನ್ವಯ ಇದೇ ತಿಂಗಳಿನ ಮಧ್ಯಭಾಗದಲ್ಲಿ ನಮಗೆ ನೀಡಿದ್ದ ಮಾಹಿತಿಯಂತೆ,  ಕರ್ನಾಟಕದ ಶಾಸಕರು ಒಂದು ಮಸಾಲೆ ದೋಸೆಗೆ ವಿಧಾನ ಸೌಧದ ಉಪಾಹಾರ ಗೃಹದಲ್ಲಿ ೩೦ ರೂ. ಗಳನ್ನು  ತೆರಬೇಕಾಗುತ್ತದೆ. ಅಂತೆಯೇ ಖಾರಬಾತ್ ೨೦, ಕೇಸರಿಬಾತ್ ೨೦, ೨ ಇಡ್ಲಿಗಳಿಗೆ ೧೯, ೧ ರವೆ ಇಡ್ಲಿ ಒಂದರ  ೧೯, ಮಸಾಲೆವಡೆ, ಉದ್ದಿನ ವಡೆ, ಪಕೋಡಗಳಿಗೆ ತಲಾ ೧೯, ಮಸಾಲೆದೋಸೆ, ಈರುಳ್ಳಿ ದೋಸೆಗಳಿಗೆ ೩೦, ಪುಳಿಯೋಗರೆ,ಲೆಮನ್ ರೈಸ್,ಮೊಸರನ್ನ ಇತ್ಯಾದಿಗಳಿಗೆ ತಲಾ ೨೯, ಪುಳಿಯೋಗರೆ, ಶ್ಯಾವಿಗೆಬಾತ್ ಬಿಸಿಬೇಳೆಬಾತ್ ಗಳಿಗೆ ೩೫, ಪ್ಲೇಟ್ ಊಟಕ್ಕೆ ೫೦, ಸಿಹಿತಿಂಡಿಗಳಿಗೆ ೨೯ ರಿಂದ  ೫೦, ಟೊಮೇಟೊ ಸೂಪ್, ವೆಜ್ ಕಟ್ಲೆಟ್ ಗಳಿಗೆ ತಲಾ  ೩೦, ಲಘು ಪಾನೀಯಗಳಿಗೆ  ೨೩,  ಟೊಮೇಟೊ ಸೂಪ್ ರೂ.೩೦ ಮತ್ತು ಕಾಫಿ – ಟೀ ಗಳಿಗೆ ರೂ.೧೮ ರಂತೆ ಪಾವತಿಸಬೇಕಾಗುವುದು. ಇದಲ್ಲದೇ ಇತರ ಅನೇಕ ವಿಧದ ಭಕ್ಷ್ಯ ಭೋಜ್ಯಗಳನ್ನು ಶಾಸಕರಿಗೆ ಒದಗಿಸಲಾಗುತ್ತಿದ್ದು, ಇವೆಲ್ಲವುಗಳಿಗೂ ಮಧ್ಯಮ ದರ್ಜೆಯ ಹೋಟೆಲ್ ಗಳಲ್ಲಿ ವಿಧಿಸುವ ದರವನ್ನು ನಿಗದಿಸಲಾಗಿದೆ. ಹಾಗೂ ಈ ಸೌಲಭ್ಯವು ವಿಧಾನ ಸಭೆಯ ಅಧಿವೇಶನ ನಡೆಯುವ ಸಂದರ್ಭದಲ್ಲಿ, ಸದನ ಆರಂಭವಾಗುವ ಸಮಯದಿಂದ ಮುಕ್ತಾಯಗೊಳ್ಳುವ ವರೆಗೆ ಮಾತ್ರ ಲಭ್ಯವಿರುತ್ತದೆ.

ಕೊನೆಯ ಮಾತು

ಪ್ರಸ್ತುತ ದೇಶದ ಸಂಸದರಿಗೆ ಲಭಿಸುತ್ತಿರುವ ಈ ವಿಶೇಷ ಸೌಲಭ್ಯವನ್ನು ತಮಗೂ ಒದಗಿಸುವಂತೆ ನಮ್ಮ ಶಾಸಕರು ಉಭಯ ಸದನಗಳ ಅಧ್ಯಕ್ಷ – ಸಭಾಪತಿಗಳನ್ನು  ಒತ್ತಾಯಿಸುವ ಅಥವಾ ಈ ಬಗ್ಗೆ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ!.  ಏಕೆಂದರೆ ತಮ್ಮ ಸಂಬಳ, ಭತ್ಯೆ ಮತ್ತಿತರ ಸವಲತ್ತುಗಳನ್ನು ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸಿದಷ್ಟು ಪ್ರಮಾಣದಲ್ಲಿ  ಹೆಚ್ಚಿಸುವ ನಿರ್ಧಾರವು ನಮ್ಮ ಶಾಸಕರ ಕೈಯ್ಯಲ್ಲೇ ಇದೆ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು




Thursday, August 6, 2015

JUNK FOOD - GIVE IT UP



   ನಿರುಪಯುಕ್ತ ಆಹಾರಗಳ ಸೇವನೆಯನ್ನು ನಿಯಂತ್ರಿಸಿ  

ಈ ಲೇಖನದ ತಲೆಬರಹವನ್ನು ಕಂಡು ಬಹುತೇಕ ಓದುಗರು ತಲೆಕೆಡಿಸಿಕೊಂಡಿರಲೇ ಬೇಕು. ಏಕೆಂದರೆ ನಾವಿಂದು ಮಾತನಾಡುವ ಕನ್ನಡ ಭಾಷೆಯಲ್ಲಿ ನೂರಾರು ಆಂಗ್ಲ ಭಾಷೆಯ ಪದಗಳನ್ನು ಬಳಸುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಉಪಯೋಗಿಸುವ ಅನೇಕ ಕನ್ನಡ ಪದಗಳು ಜನಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ. ಅದೇನೇ ಇರಲಿ, ಇದೀಗ ಈ ಲೇಖನದ ತಲೆಬರಹದಲ್ಲಿ ಬಳಸಿರುವ ನಿರುಪಯುಕ್ತ ಆಹಾರ ಎನ್ನುವ ಪದಕ್ಕೆ ಆಂಗ್ಲ ಭಾಷೆಯಲ್ಲಿ ಜಂಕ್ ಫುಡ್ ಎನ್ನುತ್ತಾರೆ. ಇದನ್ನು ಅರಿತ ಬಳಿಕ ನಿರುಪಯುಕ್ತ ಆಹಾರವೆಂದರೆ ಏನು ಎನ್ನುವುದು ನಿಮಗೆ ತಿಳಿದರೂ, ಇದರ ನಿಜವಾದ ಅರ್ಥ ನಿಮಗೂ ತಿಳಿದಿರಲಾರದು. ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶಗಳಿಂದ ಮತ್ತು ನಿಷ್ಪ್ರಯೋಜಕ ಕ್ಯಾಲರಿಗಳಿಂದ ಸಮೃದ್ಧವಾಗಿರುವ ಆಹಾರಗಳನ್ನು ಜಂಕ್ ಫುಡ್ ಎನ್ನುತ್ತಾರೆ. 

ಜಂಕ್ ಫುಡ್ ಎಂದರೇನು?

ಹೈದರಾಬಾದ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಶನ್ ನಿರೂಪಿಸುವಂತೆ ಪ್ರೋಟೀನ್, ವಿಟಮಿನ್ಸ್ ಹಾಗೂ  ಖನಿಜಗಳು ಅತ್ಯಲ್ಪ ಪ್ರಮಾಣದಲ್ಲಿರುವ ಅಥವಾ ಕಿಂಚಿತ್ ಪ್ರಮಾಣದಲ್ಲೂ ಇಲ್ಲದೇ ಇರುವ, ಆದರೆ ಸಕ್ಕರೆ, ಉಪ್ಪು ಮತ್ತು ಶಕ್ತಿ ( ಎನರ್ಜಿ ) ಗಳು ಅಧಿಕ ಪ್ರಮಾಣದಲ್ಲಿರುವ ಆಹಾರಗಳು ಜಂಕ್ ಫುಡ್ ಎಂದು ಕರೆಯಲ್ಪಡುತ್ತದೆ. ಇಂತಹ ಆಹಾರಗಳ ಸೇವನೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳು ಬಾಧಿಸುವ ಬಗ್ಗೆ ಸಾಕಷ್ಟು ಪುರಾವೆಗಳೂ ಇವೆ. ವಿಶೇಷವೆಂದರೆ ಭಾರತದಲ್ಲಿ ಗಣನೀಯ ಪ್ರಮಾಣದ ಮಕ್ಕಳು ಅಪೌಷ್ಠಿಕತೆಯ ಸಮಸ್ಯೆಯಿಂದ ಬಳಲುತ್ತಿದ್ದರೂ, ಸಾಕಷ್ಟು ಮಕ್ಕಳು ಬಾಲ್ಯ ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹಲವಾರು ಅಧ್ಯಯನಗಳ ವರದಿಗಳಂತೆ ಈ ಸಮಸ್ಯೆಗೆ ಅಧಿಕ ಕ್ಯಾಲರಿಗಳಿರುವ ನಿರುಪಯುಕ್ತ ಆಹಾರ ಸೇವನೆಯೂ ಕಾರಣವೆನಿಸಿದೆ.
ಇತ್ತೀಚೆಗಷ್ಟೇ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ ಬಳಿಕ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಗಿದ್ದ  ಮ್ಯಾಗಿ ಮತ್ತು ಇತರ ನಾಮಧೇಯಗಳ ನೂಡಲ್ಸ್, ಬರ್ಗರ್, ಪಿಜ್ಜಾ, ಲಘು ಪಾನೀಯಗಳು, ಕರಿದ ಹಾಗೂ  ವೈವಿಧ್ಯಮಯ ಕುರುಕಲು ತಿಂಡಿಗಳು ಮತ್ತು ಅನೇಕ ಅನ್ಯ ಖಾದ್ಯಪೇಯಗಳು ನಿರುಪಯುಕ್ತ ಆಹಾರಗಳ ಪಟ್ಟಿಯಲ್ಲಿ ಸೇರುತ್ತವೆ. ಇಂತಹ ಆಹಾರಗಳನ್ನು ನಿಯಮಿತವಾಗಿ ಹಾಗೂ ಅತಿಯಾಗಿ ಸೇವಿಸುವ ಮಕ್ಕಳಲ್ಲಿ ಅಧಿಕ ತೂಕ ಹಾಗೂ ಅತಿಬೊಜ್ಜಿನೊಂದಿಗೆ, ಇತರ ಕೆಲ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತವೆ.
ವ್ಯಾಯಾಮದ ಕೊರತೆ ಕಾರಣವಲ್ಲ

ವಿಶೇಷವೆಂದರೆ ಇಂತಹ ನಿರುಪಯುಕ್ತ ಖಾದ್ಯಪೇಯಗಳನ್ನು ತಯಾರಿಸಿ ನಮ್ಮ ದೇಶದಲ್ಲಿ ಮಾರಾಟ ಮಾಡುತ್ತಿರುವ ಅನೇಕ ಸಂಸ್ಥೆಗಳು, ಮಕ್ಕಳನ್ನು ಪೀಡಿಸುವ ಆರೋಗ್ಯದ ಸಮಸ್ಯೆಗಳಿಗೆ ಶಾರೀರಿಕ ಚಟುವಟಿಕೆ ಹಾಗೂ ವ್ಯಾಯಾಮಗಳ ಕೊರತೆ ಕಾರಣವೇ ಹೊರತು, ತಮ್ಮ ಉತ್ಪನ್ನಗಳ ಸೇವನೆ ಕಾರಣವಲ್ಲ ಎಂದು ವಾದಿಸುತ್ತಾರೆ. ಜೊತೆಗೆ ಮಕ್ಕಳ ಶಾರೀರಿಕ ಚಟುವಟಿಕೆಗಳಿಗೆ ಅತ್ಯವಶ್ಯಕ ಎನಿಸುವ " ಶಕ್ತಿ " ಯನ್ನು ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶಗಳಿರುವ ಆಹಾರ ಒದಗಿಸುತ್ತದೆ ಎನ್ನುತ್ತಾರೆ. ಆದರೆ ಸುಪ್ರಸಿದ್ಧ ಮಕ್ಕಳ ತಜ್ಞರ ಅಭಿಪ್ರಾಯದಂತೆ,ಶಾರೀರಿಕ ವ್ಯಾಯಾಮವು ನಿಶ್ಚಿತವಾಗಿಯೂ ಸಮತೋಲಿತ ಆಹಾರ ಸೇವನೆಗೆ ಪರ್ಯಾಯವಲ್ಲ!.

ಸಮಿತಿಯ ಸಲಹೆಗಳು

೨೦೧೦ ರಲ್ಲಿ ದೆಹಲಿಯ ಉಚ್ಛ ನ್ಯಾಯಾಲಯದಲ್ಲಿ ಸ್ವಯಂ ಸೇವಾ ಸಂಘಟನೆಯೊಂದು ಶಾಲಾಕಾಲೇಜುಗಳಲ್ಲಿ ಮತ್ತು ಇವುಗಳ ಆಸುಪಾಸಿನಲ್ಲಿ ಜಂಕ್ ಫುಡ್ ನಿಷೇಧಿಸಬೇಕೆಂದು ದಾವೆಯೊಂದನ್ನು ಹೂಡಿತ್ತು. ಈ ಸಮಸ್ಯೆಯ ಕುರಿತು ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸರ್ಕಾರವು ತಜ್ಞರ ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಿದ ನ್ಯಾಯಾಲಯವು, ನಿರುಪಯುಕ್ತ ಆಹಾರ ಸೇವನೆಯ ದುಷ್ಪರಿಣಾಮಗಳನ್ನು ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಮಕ್ಕಳ ತಜ್ಞರು ಈಗಾಗಲೇ ದಾಖಲಿಸಿದ್ದು, ಈ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವಂತೆ ಆದೇಶಿಸಿತ್ತು.

ಈ ಸಮಿತಿಯು ನಿರುಪಯುಕ್ತ ಆಹಾರಗಳ ವಿರುದ್ಧ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದಕ್ಕಿಂತಲೂ, ನಿರುಪಯುಕ್ತ ಆಹಾರ ಎಂದು ಹೇಳಲು ಇವುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶಗಳು ಇರಬೇಕು ಎನ್ನುವ ಮಾನದಂಡಗಳನ್ನು ರೂಪಿಸಲು ಯತ್ನಿಸಬೇಕಾಗಿಬಂದಿತ್ತು. ಇದರ ಆಧಾರದ ಮೇಲೆ ಒಂದು ಪಟ್ಟಿಯನ್ನು ಸಿದ್ಧಪಡಿಸಿದ್ದು, ಇದರಲ್ಲಿ ಸಾಮಾನ್ಯವಾಗಿ ನಿರುಪಯುಕ್ತ ಎಂದು ಗುರುತಿಸಿರುವ ಚಿಪ್ಸ್ ಮತ್ತು ಇತರ ಕರಿದ ಹಾಗೂ ಪ್ಯಾಕ್ ಮಾಡಿದ ತಿನಿಸುಗಳು, ಕಾರ್ಬೋನೇಟೆಡ್ ಲಘುಪಾನೀಯಗಳು, ನೂಡಲ್ಸ್ ಮತ್ತು ಬೇಕರಿ ಉತ್ಪನ್ನಗಳನ್ನು ಸೇರಿಸಲಾಗಿತ್ತು. ಸಮಿತಿಯ ಅಭಿಪ್ರಾಯದಂತೆ ಮಕ್ಕಳು ತಾವು ಸೇವಿಸಬಹುದಾದ ಆಹಾರಗಳನ್ನು ನಿರ್ಧರಿಸಲು ಯೋಗ್ಯರಲ್ಲದೇ ಇರುವುದರಿಂದ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಂದ ಸುಲಭದಲ್ಲೇ ಪ್ರಭಾವಿತರಾಗುವುದರಿಂದ, ಶಾಲಾಕಾಲೇಜುಗಳ ಆಸುಪಾಸಿನಲ್ಲಿ ಇವುಗಳ ಮಾರಾಟವನ್ನು ನಿಷೇಧಿಸಲು ಸಲಹೆಯನ್ನು ನೀಡಿತ್ತು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರಗಳ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಸೂಚಿಸಿತ್ತು. ಇದರೊಂದಿಗೆ ಶಾಲಾಕಾಲೆಜುಗಳಲ್ಲಿನ ಕ್ಯಾಂಟೀನ್ ಗಳಲ್ಲಿ ಶೇ. ೮೦ ರಷ್ಟು ಆಹಾರಗಳು ಆರೋಗ್ಯಕರವಾಗಿ ಇರಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸಿತ್ತು.ಇವೆಲ್ಲಕ್ಕೂ ಮಿಗಿಲಾಗಿ  ಖ್ಯಾತನಾಮ ಕ್ರೀಡಾಪಟುಗಳು ಹಾಗೂ ಚಲನಚಿತ್ರ ತಾರೆಯರು ಜಂಕ್ ಫುಡ್ ಗಳ ಜಾಹೀರಾತುಗಳಲ್ಲಿ ಭಾಗಿಯಾಗುವುದನ್ನೇ ನಿಷೇಧಿಸುವಂತೆ ಸಲಹೆಯನ್ನು ನೀಡಿತ್ತು.

ಆದರೆ ಸಮಿತಿಯ ಈ ಸಲಹೆ ಸೂಚನೆಗಳನ್ನು ಅಂಗೀಕರಿಸಲು ಜಂಕ್ ಫುಡ್ ಗಳ ತಯಾರಕರು ಮತ್ತು ಖ್ಯಾತನಾಮ ಸಂಸ್ಥೆಗಳು ಸಿದ್ಧರಿರಲಿಲ್ಲ. ಇವರ ಅಭಿಪ್ರಾಯದಂತೆ ಜಂಕ್ ಫುಡ್ ಗಳನ್ನು ನಿಷೇಧಿಸುವ ಬದಲಾಗಿ, ಮಕ್ಕಳು “ ಜವಾಬ್ದಾರಿಯುತವಾಗಿ ಆಹಾರವನ್ನು ಸೇವಿಸಬೇಕು “ ಎಂದಿದ್ದರೂ, ಜವಾಬ್ದಾರಿಯುತವಾಗಿ ಆಹಾರವನ್ನು ಸೇವಿಸಬೇಕು ಎನ್ನುವುದರ ಅರ್ಥವೇನೆಂದು ವಿವರಿಸಲು ವಿಫಲರಾಗಿದ್ದರು.

ಜಾಗತಿಕ ಮಟ್ಟದಲ್ಲಿ ಹೋರಾಟ

ಜಾಗತಿಕ ಮಟ್ಟದಲ್ಲಿ ಜಂಕ್ ಫುಡ್ ಗಳ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸುವ ಹಾಗೂ ಶಾಲಾಕಾಲೇಜುಗಳ ಸಮೀಪದಲ್ಲಿ ಇವುಗಳ ಮಾರಾಟವನ್ನು ನಿಷೇಧಿಸುವ ಮತ್ತು ಉತ್ಪ್ರೇಕ್ಷಿತ ಜಾಹೀರಾತುಗಳನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ. ಜೊತೆಗೆ ಖ್ಯಾತನಾಮ ವ್ಯಕ್ತಿಗಳು ಇವುಗಳ ಜಾಹೀರಾತುಗಳಲ್ಲಿ ಭಾಗವಹಿಸದಂತೆ ಹಾಗೂ ಆರೋಗ್ಯದಾಯಕ ಆಹಾರ ಸೇವನೆಯನ್ನು ಪ್ರೋತ್ಸಾಹಿಸುವಂತೆ ಮನವೊಲಿಸಲಾಗುತ್ತಿದೆ. ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ಇವರ ಪತ್ನಿ ಮಿಶೆಲ್ ಒಬಾಮರವರು ಜಂಕ್ ಫುಡ್ ಗಳ ವಿರುದ್ಧ ಪ್ರಚಾರ ನಡೆಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಆದರೆ ನಮ್ಮ ದೇಶದಲ್ಲಿ ಇಂತಹ ಪ್ರಯತ್ನಗಳು ಇನ್ನೂ ಆರಂಭವಾಗಿಲ್ಲದಿರುವುದು ವಿಪರ್ಯಾಸವೇ ಸರಿ.

ಕೊನೆಯ ಮಾತು

ಅದೇನೇ ಇರಲಿ, ನಿಮ್ಮ ಮಕ್ಕಳು ಅತಿಯಾದ ಪ್ರಮಾಣದಲ್ಲಿ ಮತ್ತು ದಿನನಿತ್ಯ ನಿರುಪಯುಕ್ತ ಆಹಾರಗಳನ್ನು ಸೇವಿಸುವ ಹವ್ಯಾಸವನ್ನು ಹೊಂದಿದ್ದಲ್ಲಿ, ಇದನ್ನು ಇಂದಿನಿಂದಲೇ ನಿಯಂತ್ರಿಸಿ. ಸಾಧ್ಯವಿದ್ದಲ್ಲಿ ಇವುಗಳ ಸೇವನೆಯನ್ನೇ ನಿಲ್ಲಿಸಲು ಪ್ರಯತ್ನಿಸಿ. 

ತಮ್ಮ ಮಕ್ಕಳು ಬೆಳಗ್ಗಿನ ಉಪಾಹಾರವನ್ನು ಸೇವಿಸಲು ನಿರಾಕರಿಸಿದಾಗ, ಬರಿ ಹೊಟ್ಟೆಯಲ್ಲಿ ಶಾಲೆಗೆ ಹೋಗುವುದು ಸರಿಯಲ್ಲವೆಂದು ಮ್ಯಾಗಿ ನೂಡಲ್ಸ್ ತಯಾರಿಸಿ ನೀಡುತ್ತಿದ್ದ ಮಾತೆಯರು ಇದೀಗ ಮಾರುಕಟ್ಟೆಯಿಂದ ಮ್ಯಾಗಿ ಮಾಯವಾದ ಬಳಿಕ ನಿರಾಳವಾಗಿದ್ದಾರೆ. ಅಂತೆಯೇ ಅನೇಕ ಮಕ್ಕಳು ಅನ್ಯಮಾರ್ಗವಿಲ್ಲದೇ ಅಮ್ಮ ತಯಾರಿಸಿದ ಇಡ್ಲಿ – ದೋಸೆಗಳನ್ನು ಸೇವಿಸುತ್ತಿದ್ದಾರೆ!.

ಅಂತಿಮವಾಗಿ ನಿಮ್ಮ ಮತ್ತು ನಿಮ್ಮ ಮಕ್ಕಳ ಆರೋಗ್ಯ ನಿಮ್ಮ ಕೈಯ್ಯಲ್ಲೇ ಇದೆ ಎನ್ನುವುದನ್ನು ಮಾತ್ರ ಮರೆಯದಿರಿ. ಆರೋಗ್ಯದಾಯಕ ಸಮತೋಲಿತ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ಆರೋಗ್ಯವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಿರಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು