Tuesday, November 3, 2015

CONJESTION CHARGES AND TRAFFIC JAM



  ವಾಹನ ದಟ್ಟಣೆಯನ್ನು ನಿಶ್ಚಿತವಾಗಿ ನಿಯಂತ್ರಿಸಬಲ್ಲ ವಿಶಿಷ್ಟ ಶುಲ್ಕ!

ಭಾರತದ ಪ್ರತಿಯೊಂದು ಪಟ್ಟಣ, ನಗರ ಮತ್ತು ಮಹಾನಗರಗಳ ರಸ್ತೆಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಕಾರುಗಳ ಮೇಲೆ " ದಟ್ಟಣೆ ಶುಲ್ಕ " ವನ್ನು ವಿಧಿಸುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚಿಂತನೆಯನ್ನು ನಡೆಸಿತ್ತು. ಈ ಶುಲ್ಕವನ್ನು ವಿಧಿಸುವ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ ಹಾಗೂ ನಿರ್ದಿಷ್ಟ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವುದರೊಂದಿಗೆ, ವಾಹನ ದಟ್ಟಣೆಯಿಂದಾಗಿ ಸಂಭವಿಸುವ ವಾಯು ಮಾಲಿನ್ಯ ಮತ್ತು ಪರಿಸರ ಪ್ರದೂಷಣೆಯನ್ನೂ ಸುಲಭದಲ್ಲೇ ನಿಯಂತ್ರಿಸಬಹುದಾಗಿತ್ತು. ಆದರೆ ಈ ಚಿಂತನೆಯು ಇಂದಿನ ತನಕ ಕಾರ್ಯರೂಪಕ್ಕೆ ಬರದಿರಲು ಕಾರಣವೇನೆಂದು ನಮಗೂ ತಿಳಿದಿಲ್ಲ.

ಭಾರತದ ಬಹುತೇಕ ರಸ್ತೆಗಳ ಬಹುದೊಡ್ಡ ಭಾಗವನ್ನು ಮೋಟಾರು ಕಾರುಗಳೇ ಬಳಸುತ್ತವೆ. ಈ " ಕಾರುಬಾರನ್ನು " ನಿಯಂತ್ರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದು, ಇದರ ಸಾಧಕ - ಬಾಧಕಗಳ ಅಧ್ಯಯನವನ್ನು ನಡೆಸಿದ ಬಳಿಕ ಅನುಷ್ಠಾನಿಸುವಂತೆ ಆದೇಶಿಸಿದೆ. ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ಇನ್ಸ್ ಸ್ಟಿಟ್ಯೂಟ್ ಆಫ್ ಅರ್ಬನ್ ಟ್ರಾನ್ಸ್ ಪೋರ್ಟ್, ಕಾರುಗಳ ಮೇಲೆ ಈ ಶುಲ್ಕವನ್ನು ವಿಧಿಸುವ ಪ್ರಸ್ತಾವನೆಯನ್ನು ಶಿಫಾರಸು ಮಾಡಿತ್ತು.

ಏನಿದು ದಟ್ಟಣೆ ಶುಲ್ಕ?

ಕಾನೂನುಬದ್ಧವಾಗಿ ಘೋಷಿಸಿರುವ ಹಾಗೂ ಅತಿಯಾದ ವಾಹನ ದಟ್ಟಣೆಯಿರುವ ನಿರ್ದಿಷ್ಟ ಪ್ರದೇಶವನ್ನು ಪ್ರವೇಶಿಸುವ ವಾಹನಗಳಿಗೆ ಪೂರ್ವ ನಿರ್ಧಾರಿತ ಶುಲ್ಕವನ್ನು ವಿಧಿಸುವ ಪರಿಣಾಮಕಾರಿ ವಿಧಾನವೇ " ದಟ್ಟಣೆ ಶುಲ್ಕ " ಅರ್ಥಾತ್ ಕಂಜೆಶನ್ ಚಾರ್ಜ್. ಸುಗಮ ಸಂಚಾರಕ್ಕೆ ಸಂಭವಿಸುವ ಅಡ್ಡಿ ಆತಂಕಗಳು, ವಿಳಂಬ, ಸಮಯ ಹಾಗೂ ಇಂಧನದ ಅಪವ್ಯಯ, ವಾಯುಮಾಲಿನ್ಯ, ಪರಿಸರ ಪ್ರದೂಷಣೆ ಇವೇ ಮುಂತಾದ ಸಮಸ್ಯೆಗಳನ್ನು ತಡೆಗಟ್ಟಲು ಈ ಶುಲ್ಕವನ್ನು ವಿಧಿಸುವುದು ಉಪಯುಕ್ತವೆನಿಸಲಿದೆ.

ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳನ್ನು ಸದಾ ಅನಿಯಂತ್ರಿತವಾಗಿ ಪ್ರವೇಶಿಸುವ ವಾಹನಗಳು ಅನ್ಯ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವುದರಿಂದ, ಜನಸಾಮಾನ್ಯರು ಸ್ವಂತ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುವುದರಿಂದ ಮತ್ತು ತತ್ಪರಿಣಾಮವಾಗಿ ಈ ಪ್ರದೇಶ ಹಾಗೂ ನಿರ್ದಿಷ್ಟ ರಸ್ತೆಗಳಲ್ಲಿ ತಂಗುವ  ವಾಹನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುವುದು. ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ದಿಲ್ಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಎಂಡ್ ಆರ್ಕಿಟೆಕ್ಚರ್ ಸಂಸ್ಥೆಯು ಹೇಳುವಂತೆ, ವಾಹನವೊಂದಕ್ಕೆ ಕೇವಲ ೧೦ ರೂ. ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳಲ್ಲಿನ ವಾಹನ ದಟ್ಟಣೆಯ ಪ್ರಮಾಣವು ಶೇ. ೨೦ ರಿಂದ ೨೫ ರಷ್ಟು ಕಡಿಮೆಯಾಗುವುದು. ಸಿಂಗಾಪುರ, ಸ್ಟಾಕ್ ಹೋಮ್ ಹಾಗೂ ಲಂಡನ್ ಮುಂತಾದಲ್ಲಿ ಈ ಶುಲ್ಕವನ್ನು ಕೆಲವರ್ಷಗಳಿಂದ ವಿಧಿಸಲಾಗುತ್ತಿದ್ದು, ಈ ಪ್ರಯೋಗವು ಅಪೇಕ್ಷಿತ ಪರಿಣಾಮವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಕಡತಗಳಲ್ಲಿ ಉಳಿದ ಪ್ರಸ್ತಾವನೆ

ನಮ್ಮ ದೇಶದಲ್ಲಿ ಮೊಟ್ಟಮೊದಲಬಾರಿಗೆ ದಟ್ಟಣೆ ಶುಲ್ಕ ವಿಧಿಸುವ ವಿಚಾರವನ್ನು ರಾಷ್ಟ್ರೀಯ ಸಾರಿಗೆ ಧೋರಣೆ - ೨೦೦೬ ರಲ್ಲಿ ಪ್ರಸ್ತಾವಿಸಲಾಗಿದ್ದರೂ, ಸಂಬಂಧಿತ ಸಚಿವಾಲಯವು ಇದನ್ನು ಪರಿಗಣಿಸಿರಲಿಲ್ಲ. ತದನಂತರ ೧೨ ನೆ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ದಟ್ಟಣೆ ಶುಲ್ಕವನ್ನು ವಿಧಿಸುವ ಮತ್ತು ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸುವ ಮೂಲಕ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದ್ದಿತು. ಜೊತೆಗೆ ಯೋಜನಾ ಆಯೋಗವು ಜಾಗತಿಕ ಮಟ್ಟದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ದಟ್ಟಣೆ ಶುಲ್ಕವನ್ನು ನಿರ್ಧರಿಸುವ ವಿಧಾನವನ್ನು ಅಧ್ಯಯನ ಮಾಡಿ ವಿಶ್ಲೇಷಿಸಲು ಸೂಚಿಸಿತ್ತು. ಆದರೆ ನಮ್ಮ ದೇಶದಲ್ಲಿ " ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ " ವು ಚಲಿಸುವುದು ಅತ್ಯಂತ ನಿಧಾನವಾಗಿರುವುದರಿಂದ, ಪ್ರಸ್ತಾವನೆಗಳು ಮತ್ತು ಆದೇಶಗಳು ಅನುಷ್ಠಾನಗೊಳ್ಳುವುದಕ್ಕಿಂತಲೂ ಕಸದ ಬುಟ್ಟಿಯನ್ನು ಸೇರುವ ಸಾಧ್ಯತೆಗಳೇ ಅಧಿಕ.

೨೦೦೮ ರಲ್ಲಿ ನಗರ ಮೂಲಸೌಕರ್ಯಗಳ ಸಲಹಾ ಸಂಸ್ಥೆಯೊಂದು ನಡೆಸಿದ್ದ ಅಧ್ಯಯನದಂತೆ, ೨೦೩೦ ರಲ್ಲಿ ದೇಶದ ಮಹಾನಗರಗಳಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳು ಓಡಾಡುವ ಸಮಯ ( ಪೀಕ್ ಅವರ್ ) ದಲ್ಲಿ ಇವುಗಳ ವೇಗವು ಗಂಟೆಗೆ ಕೇವಲ ೬ ಕಿ.ಮೀ. ಗೆ ಕುಸಿಯಲಿದೆ ಎಂದು ತಿಳಿದುಬಂದಿತ್ತು. (ಆದರೆ ವಾಸ್ತವದಲ್ಲಿ ೨೦೧೫ ಕ್ಕೆ ಮುನ್ನವೇ ಈ ಪರಿಸ್ಥಿತಿ ಉದ್ಭವಿಸಿದೆ.) ಅರ್ಥಾತ್ ವಾಹನಗಳ ಸಂಚಾರವು ಅಕ್ಷರಶಃ ಸ್ಥಗಿತಗೊಳ್ಳಲಿದೆ ಎಂದು ಭವಿಷ್ಯವನ್ನು ನುಡಿದಿತ್ತು!.

ಸಾರ್ವಜನಿಕ ಸಾರಿಗೆ ಅಭಿವೃದ್ಧಿ

ತಜ್ಞರ ಅಭಿಪ್ರಾಯದಂತೆ ನಮ್ಮ ದೇಶದಲ್ಲಿ ದಟ್ಟಣೆ ಶುಲ್ಕವನ್ನು ವಿಧಿಸುವುದು ಉಪಯುಕ್ತವೆನಿಸುವುದಾದರೂ, ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಸುಲಭಸಾಧ್ಯವೇನಲ್ಲ. ಏಕೆಂದರೆ ನಮ್ಮ ದೇಶದ ವಿವಿಧ ನಗರಗಳ ಗಾತ್ರ, ಜನಸಂಖ್ಯೆ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳು ಅನೇಕ ಗೊಂದಲಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದರೊಂದಿಗೆ, ದಟ್ಟಣೆ ಶುಲ್ಕವನ್ನು ವಿಧಿಸುವ ಮೂಲಕ ಕಡಿಮೆಯಾಗಲಿರುವ ವಾಹನಗಳ ಸಂಖ್ಯೆಗಳ ವೈಜ್ಞಾನಿಕ ಲೆಕ್ಕಾಚಾರವನ್ನು ಮಾಡಬೇಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ದಟ್ಟಣೆ ಶುಲ್ಕವನ್ನು ವಿಧಿಸುವ ಮುನ್ನ ಸಮರ್ಪಕವಾದ ಹಾಗೂ ಸುಗಮ ವಾಹನ ಸಂಚಾರಕ್ಕೆ ಅತ್ಯವಶ್ಯಕವೆನಿಸುವ ಉತ್ತಮ ರಸ್ತೆಗಳು, ಪಾದಚಾರಿಗಳಿಗಾಗಿ ಸುರಕ್ಷಿತ ಕಾಲುದಾರಿಗಳೇ ಮುಂತಾದ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಲು ಅವಶ್ಯಕ ಅತ್ಯಾಧುನಿಕ ತಂತ್ರಜ್ಞಾನ ಮತ್ತಿತರ ವ್ಯವಸ್ಥೆಗಳಿಗಾಗಿ ಸಹಸ್ರಾರು ಕೋಟಿ ರೂಪಾಯಿಗಳ ಹೂಡಿಕೆಯ ಅವಶ್ಯಕತೆಯಿದೆ. ಆದರೆ ತತ್ಪರಿಣಾಮವಾಗಿ ಜನಸಾಮಾನ್ಯರಿಗೆ ಲಭಿಸಲಿರುವ ಪ್ರಯೋಜನಗಳನ್ನು, ಅಂದರೆ ವಾಹನಗಳ ದಟ್ಟಣೆಯ ಪ್ರಮಾಣದಲ್ಲಿ ಇಳಿಕೆ, ಸುಗಮ ವಾಹನ ಸಂಚಾರಕ್ಕೆ ಆಸ್ಪದ, ಸಮಯ ಮತ್ತು ಇಂಧನಗಳ  ಉಳಿತಾಯ, ಕಡಿಮೆಯಾಗಲಿರುವ ವಾಯುಮಾಲಿನ್ಯ ಹಾಗೂ ಪರಿಸರ ಪ್ರದೂಷಣೆಯ ಪ್ರಮಾಣ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಗಳಿಸಬಹುದಾದ ಹೆಚ್ಚುವರಿ ಆದಾಯಗಳನ್ನು ಪರಿಗಣಿಸಿದಾಗ, ಇದು ನಿಸ್ಸಂದೇಹವಾಗಿಯೂ ಅತ್ಯಂತ ಲಾಭದಾಯಕವೆನಿಸಲಿದೆ.

ಪ್ರಸ್ತುತ ನಮ್ಮ ದೇಶದ ಪ್ರತಿಯೊಂದು ನಗರ - ಮಹಾನಗರಗಳಲ್ಲಿನ ವಾಹನ ದಟ್ಟಣೆ ಹಾಗೂ ತತ್ಸಂಬಂಧಿತ ಅನ್ಯ ಸಮಸ್ಯೆಗಳನ್ನು ಗಮನಿಸಿದಾಗ, ದಟ್ಟಣೆ ಶುಲ್ಕವನ್ನು ತ್ವರಿತಗತಿಯಲ್ಲಿ ಜಾರಿಗೆ ತರುವುದು ಅನಿವಾರ್ಯವೆನಿಸುತ್ತಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



No comments:

Post a Comment