Saturday, December 14, 2013

SONTANOVU GANTUBIDDEETU, JOKE!


                                            ಸೊಂಟನೋವು ಗಂಟುಬಿದ್ದೀತು ಜೋಕೆ!

ಯಾವುದೇ ಪೂರ್ವಸೂಚನೆಗಳಿಲ್ಲದೇ ಕ್ಷಣಮಾತ್ರದಲ್ಲಿ ಪ್ರಾರಂಭವಾಗಿ ತೀವ್ರಗೊಳ್ಳುವ ಸೊಂಟನೋವು, ನಿಮ್ಮನ್ನು ನಿಮಿಷಾರ್ಧದಲ್ಲಿ ಪರಾವಲಂಬಿಯನ್ನಾಗಿ ಪರಿವರ್ತಿಸುವಷ್ಟು ಪ್ರಬಲವಾಗಿರಲು "ಉಷ್ಣ" ಅಥವಾ "ವಾಯು" ಗಳಂತೂ ಖಂಡಿತವಾಗಿಯೂ ಕಾರಣವಲ್ಲ. ಹೆಚ್ಚಿನ ಜನರಲ್ಲಿ ಸಣ್ಣಪುಟ್ಟ ಕಾರಣಗಳಿಂದ ಪ್ರಾರಂಭವಾಗುವ ಈ ವಿಶಿಷ್ಟ ಸಮಸ್ಯೆಯು ಸ್ವಯಂ ಚಿಕಿತ್ಸೆ- ವಿಶ್ರಾಂತಿಗಳಿಂದಶಮನವಾಗದಿದ್ದಲ್ಲಿ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯುವುದು ಹಿತಕರ. 

ದೇವಿ ಹಲಸಿನ ಪೋಡಿ ಕಾರಣವೇ?

ಹೊಟ್ಟೆಪಾಡಿಗಾಗಿ ಪುಟ್ಟ ದಿನಸಿ ಅಂಗಡಿಯನ್ನು ನಡೆಸುತ್ತಿದ್ದ ನಾಗಪ್ಪನು ದಿನದಲ್ಲಿ ಹದಿನೈದು ಗಂಟೆಗಳ ಕಾಲ ದುಡಿಯುವದು ಅನಿವಾರ್ಯವಾಗಿತ್ತು. ಆದರೂ ದನಿವೆಂದರೆ ಏನೆಂದು ಅರಿಯದ ಆತನಿಗೆ ನಾಲ್ಕಾರು ತಿಂಗಳುಗಳಿಂದ ಆಗಾಗ ಸೊಂಟನೋವು ಬಾಧಿಸುತ್ತಿತ್ತು. ಅದೊಂದು ದಿನ ಹೆಂಡತಿ ತಯಾರಿಸಿದ "ದೇವಿ ಹಲಸಿನ ಪೋಡಿ" ಯನ್ನು ಪೊಗದಸ್ತಾಗಿ ತಿಂದಿದ್ದ ನಾಗಪ್ಪನಿಗೆ, ಅಂಗಡಿಯಲ್ಲಿ ಗಿರಾಕಿಯೊಬ್ಬರ ಚೀಲವನ್ನು ಎತ್ತಿಕೊಡುವಾಗ ಸೊಂಟದಲ್ಲಿ ಛಳಕುಹೊಡೆದಂತಾಯಿತು. ನೋವಿನ ತೀವ್ರತೆಗೆ ಕಣ್ಣು ಕತ್ತಲಾವರಿಸಿದಾಗ, ಸಾವರಿಸಿಕೊಂಡು ಸಮೀಪದಲ್ಲಿದ್ದ ಗೋಣಿಚೀಲದ ಮೇಲೆ ಪ್ರಯಾಸದಿಂದ ಕುಳಿತುಕೊಳ್ಳಬೇಕಾಯಿತು. ಆಕಸ್ಮಿಕವಾಗಿ ಉಲ್ಬಣಿಸಿದ್ದ ತನ್ನ ಸೊಂತನೋವಿಗೆ, ದೀವಿಹಲಸಿನ ಪೊಡಿಯ ಸೇವನೆಯೇ ಕಾರಣವಾಗಿರಬೇಕೆಂದು ನಾಗಪ್ಪನಿಗೆ ಸಂದೇಹ ಮೂಡಿತ್ತು. ಮುಂದಿನ ಮೂರು ದಿನಗಳ ಕಾಲ ಹೆಂಡತಿ ನೀಡಿದ ಜೀರಿಗೆ ಕಷಾಯ ಹಾಗೂ ದಿನಕ್ಕೆರಡು ಬಾರಿ ತಿಕ್ಕುತ್ತಿದ್ದ ನೋವಿನೆಣ್ಣೆಗಳ ಚಿಕಿತ್ಸೆಯಿಂದ ಆತನು ಸಂದೆಹಿಸಿದ್ದ ವಾಯುಬಾಧೆ ಶಮನವಾಗಲೇ ಇಲ್ಲ. 

ನಾಲ್ಕನೆಯ ದಿನ ಹಾಸಿಗೆಯಿಂದ ಏಳಲಾರದೇ ನರಳುತ್ತಿದ್ದ ಪತಿಯ ಅವಸ್ಥೆಯನ್ನು ಕಂಡು ಗಾಬರಿಗೊಂಡ ಆತನ ಪತ್ನಿಯು, ಸಮೀಪದಲ್ಲಿದ್ದ ವೈದ್ಯರನ್ನು ಮನೆಗೆ ಕರೆಸಿದ್ದಳು. ರೋಗಿಯನ್ನು ಪರೀಕ್ಷಿಸಿ ವೇದನಾ ಶಾಮಕ ಇಂಜೆಕ್ಷನ್ ನೀಡಿದ ವೈದ್ಯರು, ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯುವಂತೆ ಸೂಚಿಸಿದ್ದರು. ಅದೇ ಸಂಜೆ ತಜ್ನವೈದ್ಯೆರಲ್ಲಿಗೆ ತೆರಳಿದ ನಾಗಪ್ಪನಿಗೆ ಅವಶ್ಯಕ ಪರೀಕ್ಷೆಗಳನ್ನು ನಡೆಸಿದ ವೈದ್ಯರಿಗೆ "ಸ್ಲಿಪ್ ಡಿಸ್ಕ್" ಬಾಧಿಸುತ್ತಿರುವುದು ಪತ್ತೆಯಾಗಿತ್ತು. ಸುಮಾರು ಮೂರು ವಾರಗಳ ಚಿಕಿತ್ಸೆ ಹಾಗೂ ವಿಶ್ರಾಂತಿಗಳಿಂದ ಸಮಸ್ಯೆ ಬಗೆಹರಿಯದ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣಮುಖನಾದ ನಾಗಪ್ಪನು, ಇಂದಿಗೂ ಅಪ್ಪಿತಪ್ಪಿಯೂ ದೀವಿಹಲಸಿನ ಪೋಡಿಯನ್ನು ಮಾತ್ರ ತಿನ್ನುವುದೇ ಇಲ್ಲ!. 

ರೋಗಿಯ ನಿರ್ಲಕ್ಷ್ಯ- ಹೊಸ ವ್ಯಾಧಿ ಪ್ರತ್ಯಕ್ಷ!

ಬಾಲ್ಯದಿಂದಲೂ ಔಷದಗಳ ಬಗ್ಗೆ ವಿಪರೀತ ವ್ಯಾಮೊಹವಿದ್ದ ಸಂತೋಷನಿಗೆ ಔಷದ ಅಂಗಡಿಯ ಮಾಲೀಕ ಗಣೇಶನ ಪರಿಚಯವಾಗಿದ್ದು ವರದಾನವೆನಿಸಿತ್ತು. ದಿನದಲ್ಲಿ ಒಂದೆರಡು ಗಂಟೆಗಳ ಕಾಲ ಗಣೇಶನ ಅಂಗಡಿಯಲ್ಲಿ ಪಟ್ಟಾಂಗ ಹೊಡೆಯುತ್ತಿದ್ದ ಸಂತೋಷನಿಗೆ, ಕ್ರಮೇಣ ಕಳವಾರು ಔಷದಗಳ ಹೆಸರು ಮತ್ತು ಉಪಯೋಗಗಳನ್ನು ತಿಳಿದುಕೊಳ್ಳುವ ಅವಕಾಶವೂ ನಿರಾಯಾಸವಾಗಿ ದೊರೆತಿತ್ತು. 

ಖ್ಯಾತನಾಮ ವೈದ್ಯರ ರೋಗಿಗಳು ಇಲ್ಲಿ ಔಷದಗಳನ್ನು ಖರೀದಿಸುತ್ತಿದುದರಿಂದ ವಿವಿಧ ಕಾಯಿಲೆಗಳಿಗೆ ವಿಭಿನ್ನ ವೈದ್ಯರು ನೀಡುತ್ತಿದ್ದ ಚಿಕಿತ್ಸೆಗಳ ಬಗ್ಗೆ ಅರಿತುಕೊಳ್ಳುವ ಅವಕಾಶವೂ ಲಭಿಸಿತ್ತು. ಒಂದೆರಡು ವರ್ಷಗಳಲ್ಲಿ ಈ "ವಿದ್ಯೆ" ಯನ್ನು ಕರತಲಾಮಕ ಮಾಡಿಕೊಂಡಿದ್ದ ಸಂತೋಷನು ತನ್ನ ಪರಿಚಿತರ ಆರೋಗ್ಯದ ಸಮಸ್ಯೆಗಳಿಗೆ ಔಷದಗಳನ್ನು ನೀಡಲು ಆರಂಭಿಸಿದ್ದನು. ವೈದ್ಯರಿಗೆ ನೀಡಬೇಕಾದ ಶುಲ್ಕ ಉಳಿಯುವುದೆಂದು ಈತನ ಚಿಕಿತ್ಸೆಯನ್ನು ಪಡೆಯುತ್ತಿದ್ದ ವ್ಯಕ್ತಿಗಳಿಗೆ, ಮುಂದೆ ಸಂಭವಿಸಬಹುದಾದ ಅನಾಹುತಗಳ ಅರಿವೇ ಇರಲಿಲ್ಲ. 

ಸಂತೋಷನ ಖ್ಯಾತಿಯನ್ನು ಕೇಳಿದ್ದ ಆತನ ಮನೆಯ ಮಾಲೀಕ ಶಾಮಣ್ಣನವರು,ಒಂದೆರಡು ವರ್ಷಗಳಿಂದ ತಮ್ಮನ್ನು ಪೀಡಿಸುತ್ತಿದ್ದ ಸೊಂತನೋವಿನ ಚಿಕಿತ್ಸೆಗಾಗಿ ಆತನ ಸಲಹೆ ಪಡೆದಿದ್ದರು. ದಿನದಲ್ಲಿ ಮೂರುಬಾರಿ ಸೇವಿಸಬೇಕಾದ ಮೂರು ವಿಧದ ಮಾತ್ರೆಗಳು- ಕ್ಯಾಪ್ಸೂಲ್ ಗಳೊಂದಿಗೆ ಸೊಂಟಕ್ಕೆ ಹಚ್ಚಿಕೊಳ್ಳಲು ಜೆಲ್ ನೀಡಿದ ಸಂತೋಷನು, ನಾರ ಕಳೆಯುವಷ್ಟರಲ್ಲಿ ಸಮಸ್ಯೆ ಪರಿಹಾರವಾಗುವುದು ಎಂದು ಭರವಸೆಯನ್ನು ನೀಡಿದ್ದನು. 

ಆದರೆ ವಾರ ಕಳೆದರೂ ಸಮಸ್ಯೆ ಪರಿಹಾರಗೊಳ್ಳದ ಕಾರಣದಿಂದಾಗಿ ಸಂತೋಷನ ಚಿಕಿತ್ಸೆ ಮುಂದುವರೆದಿತ್ತು. ಮೂರು ವಾರಗಳ ಬಳಿಕ ಸೊಂಟನೋವು ಕಡಿಮೆಯಾಗದಿದ್ದರೂ, ಶಾಮಣ್ಣನವರಿಗೆ ಎದೆಯುರಿ ಮತ್ತು ಹೊಟ್ಟೆನೋವು ಆರಂಭವಾಗಿತ್ತು. ವಿಷಯವರಿತ ಸಂತೋಷನು ತನ್ನ ಚಿಕಿತ್ಸೆ ಮತ್ತು ಈ ಹೊಸ ಸಮಸ್ಯೆಗೆ ಏನೇನೂ ಸಂಬಂಧವಿಲ್ಲ ಎಂದು ಕೈಯ್ಯಾಡಿಸಿದ್ದನು. ಇದಾದ ಒಂದೆರಡು ದಿನಗಳ ಬಳಿಕ ಅಪರಾತ್ರಿಯಲ್ಲಿ ಶಾಮಣ್ಣನವರ ಹೊಟ್ಟೆನೋವು- ಎದೆಯುರಿಗಳು ತೀವ್ರವಾಗಿ ಉಲ್ಬಣಿಸಿದ ಪರಿಣಾಮವಾಗಿ ರಕ್ತ ಮಿಶ್ರಿತ ವಾಂತಿಯೂ ಆಗಿತ್ತು. ನೆರೆಕರೆಯವರ ಸಹಾಯದಿಂದ ಆಸ್ಪತ್ರೆಗೆ ಸೇರಿಸಲ್ಪಟ್ಟ ಶಾಮಣ್ಣನವರ ಜಠರದ ಹುಣ್ಣು ಉಳ್ಬನಿಸಿರುವುದು ವೈದ್ಯರಿಗೆ ಪತ್ತೆಯಾಗಿತ್ತು. ಹತ್ತಾರು ದಿನಗಳ ಆಸ್ಪತ್ರೆವಾಸದ ಬಳಿಕ ಮನೆಗೆ ಮರಳಿದ ಶಾಮಣ್ಣನವರು ಸಂತೋಷನ ಚಿಕಿತ್ಸೆಯಿಂದ ತಮ್ಮ ಆರೋಗ್ಯದೊಂದಿಗೆ ಸಹಸ್ರಾರು ರೂಪಾಯಿಗಳನ್ನು ಕಳೆದುಕೊಂಡಿದ್ದು ವಿಚಿತ್ರ ಆದರೂ ಸತ್ಯ!. 

ಬೆಂಬಿಡದ ಬೆನ್ನುನೋವು 

ವೈದ್ಯಕೀಯ ಪರಿಭಾಷೆಯಲ್ಲಿ "ಲೋ ಬ್ಯಾಕ್ ಪೈನ್" ಎಂದು ಕರೆಯಲ್ಪಡುವ ಈ ಸಮಸ್ಯೆಯು, ವಿಶ್ವದ ಶೇ. ೮೦ ರಷ್ಟು ಜನರ ಜೀವಿತಾವಧಿಯಲ್ಲಿ ಒಂದಲ್ಲ ಒಂದುಬಾರಿಯಾದರೂ ಬಾಧಿಸುತ್ತದೆ. ಜಗತ್ತಿನಾದ್ಯಂತ ವ್ಯಾಪಕವಾಗಿ ಕಂಡುಬರುವ ಶೀತ ಮತ್ತು ತಲೆನೋವುಗಳ ಅನಂತರ, ಮೂರನೆಯ ಸ್ಥಾನವು ಸೊಂಟನೋವಿಗೆಸಲ್ಲುತ್ತದೆ!. ಜನಸಾಮಾನ್ಯರ ದೈನಂದಿನ ಕೆಲಸಕಾರ್ಯಗಳಿಗೂ ತೊಡಕಾಗಬಲ್ಲ ಈ ಸೊಂಟನೋವು, ಆಕಸ್ಮಿಕವಾಗಿ ಉಲ್ಬಣಿಸಿದಲ್ಲಿ, ಎಂಟೆದೆಯ ಬಂಟರೂ ಹಾಸಿಗೆ ಹಿಡಿಯುವುದು ಅಪರೂಪವೇನಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ ಈ ಸಮಸ್ಯೆ ಹೆಚ್ಚುತ್ತಿರಲು ಆಧುನಿಕ- ಆರಾಮದಾಯಕ ಜೀವನ ಶೈಲಿಯೇ ಕಾರಣವೆನ್ನಬಹುದು. 

ಯೌವ್ವನ- ವೃದ್ಧಾಪ್ಯ, ಬಡವ- ಬಲ್ಲಿದ ಮತ್ತು ಸ್ತ್ರೀ- ಪುರುಷರೆನ್ನುವಭೇದವನ್ನೇ ತೋರದೇ, ಎಲ್ಲರನ್ನೂ ಬಾಧಿಸಬಲ್ಲ ಸೊಂಟನೋವಿನ ಬಗ್ಗೆ ಜನರ ಮನದಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಬಹುತೇಕ ಜನರಲ್ಲಿ ಆಕಸ್ಮಿಕವಾಗಿ ಪ್ರಾರಂಭವಾಗಿ ತೀವ್ರಗೊಳ್ಳುವ ಸೊಂಟನೋವಿಗೆ"ವಾಯು, ಉಷ್ಣ ಮತ್ತು ಗ್ಯಾಸ್ಟ್ರಿಕ್" ತೊಂದರೆಗಳೇ ಕಾರಣವೆಂದು ನಂಬಿರುವವರಲ್ಲಿ ಹೆಚ್ಚಿನವರು ವಿದ್ಯಾವಂತರೇ ಎಂದಲ್ಲಿ ನೀವೂ ನಂಬಲಾರಿರಿ. ಅಧಿಕತಮ ಜನರು ಪ್ರಾರಂಭಿಕ ಹಂತದಲ್ಲಿ ಇದನ್ನು ನಿರ್ಲಕ್ಷಿಸುವುದು ಅಥವಾ ಸ್ವಯಂ ಚಿಕಿತ್ಸೆ ಪ್ರಯೋಗಿಸುವುದು ಅಪರೂಪವೇನಲ್ಲ. ಕುಳಿತರೆ ಏಳಲಾರದ, ಬಗ್ಗಿದಾಗ ಮತ್ತೆ ನೆಟ್ಟಗೆ ನಿಲ್ಲಲಾರದ ಅಥವಾ ಮಲಗಿದಲ್ಲಿಂದ ಎದ್ದೇಳಲಾರದ ಸ್ಥಿತಿಯನ್ನು ತಲುಪಿದ ಬಳಿಕವೇ ವೈದ್ಯರ ಸಲಹೆ- ಚಿಕಿತ್ಸೆಗಳಿಗೆ ಶರಣಾಗುವುದು ಭಾರತೀಯರ ವಿಶೇಷತೆ ಎನ್ನುವುದು ನಿಮಗೂ ತಿಳಿದಿರಲೇಬೇಕು!. 

ಕಾರಣಗಳೇನು?

ಸೊಂಟನೋವು ಪ್ರಾರಂಭವಾಗಲು ಹಾಗೂ ತೀವ್ರಗೊಳ್ಳಲು ನಿಮ್ಮ ಜೀವನ ಶೈಲಿ, ನಿಮ್ಮ ಉದ್ಯೋಗ, ಶಾರೀರಿಕ ಕ್ಷಮತೆಯ ಮಟ್ಟ ಮತ್ತು ದುರಭ್ಯಾಸಗಳೂ ಕಾರಣವೆನಿಸಬಲ್ಲವು. ಅಂತೆಯೇ ಸ್ತ್ರೀಯರಲ್ಲಿ ವಿವಿಧ ಶ್ರಮದಾಯಕ ಮನೆಗೆಲಸಗಳಿಂದ ಪ್ರಾರಂಭಿಸಿ, ಎತ್ತರದ ಹಿಮ್ಮಡಿಯ ಪಾದರಕ್ಷೆಯನ್ನು ಧರಿಸುವ "ಫ್ಯಾಶನ್" ಕೂಡಾ ಈ ಸಮಸ್ಯೆಗೆ ಮೂಲವೆನಿಸುವ ಸಾಧ್ಯತೆಗಳಿವೆ. 

ಆರಾಮದಾಯಕ ಜೀವನ ಶೈಲಿ, ದೈನಂದಿನ ವ್ಯಾಯಾಮ ಮತ್ತು ಶಾರೀರಿಕ ಕ್ಷಮತೆಯ ಅಭಾವ, ಅತಿಯಾದ ಶಾರೀರಿಕ ಶ್ರಮದ ಕೆಲಸಗಳು, ಅಸಮರ್ಪಕ ಶಾರೀರಿಕ ಭಂಗಿಗಳು, ಅತಿಭಾರ ಎತ್ತುವುದು ಹಾಗೂ ಹೊರುವುದು, ಎರಡಕ್ಕೂ ಹೆಚ್ಚುಬಾರಿ ಗರ್ಭಧಾರಣೆ ಮತ್ತು ಪ್ರಸವ, ಅತಿಬೊಜ್ಜು, ಅಧಿಕ ತೂಕ, ಅತಿ ಧೂಮಪಾನ , ಅತಿ ಮದ್ಯಪಾನ ಮತ್ತು ವೃತ್ತಿ ಸಂಬಂಧಿತ ಅಪಾಯಕಾರಿ ಅಂಶಗಳು ಸೊಂಟನೋವಿಗೆ ಪ್ರಮುಖ ಕಾರಣಗಳಾಗಿವೆ. 

ಬೆನ್ನು ಮೂಳೆಯೇ ಅಸಹಜತೆ,ಕೆಲ ವಿಧದ ಸೋಂಕುಗಳು, ಕಶೇರು ಅಸ್ಥಿಯ ಕುಸಿತ, ವಿಶಿಷ್ಟ ರೀತಿಯ ಮಾಂಸ ಪೇಶಿಗಳ ಕಾಯಿಲೆ, ಟಿ. ಬಿ , ಕೆಲವಿಧದ ಅರ್ಬುದ ( ಉದಾ- ಬೆನ್ನು ಮೂಳೆಯ ಕ್ಯಾನ್ಸರ್), ಸ್ತ್ರೀಯರ ಅಂಡಾಶಯಗಳ ಕ್ಯಾನ್ಸರ್ ಇತ್ಯಾದಿಗಳೂ ಈ ಸಮಸ್ಯೆಯನ್ನುಂಟು ಮಾಡಬಲ್ಲವು. ಅಂತೆಯೇ ಅಸ್ಥಿಸಂಧಿಗಳ ಉರಿಯೂತ, ಸ್ಪಾಂಡಿಲೈಟಿಸ್, ರುಮಾಟಾಯ್ದ್ ಆರ್ಥ್ರೈಟಿಸ್, ರುಮಾಟಿಕ್ ಜ್ವರ, ಮೂಲೆಗಳ ದೌರ್ಬಲ್ಯ ಹಾಗೂ ಸವೆತ, ಸ್ಥಾನಪಲ್ಲಟಗೊಂಡ ಅಥವಾ ಹೊರಚಾಚಿದ ಕಶೇರು ಅಸ್ಥಿ, ದೀರ್ಘಕಾಲೀನ ಮಾನಸಿಕ ಖಿನ್ನತೆ, ಅತಿಯಾದ ಕೆಮ್ಮು ಮತ್ತು ಸ್ಟೆರಾಯ್ಡ್ ಔಷದಗಳ ದೀರ್ಘಕಾಲೀನ ಸೇವನೆಗಳಿಂದಲೂ ಸೊಂಟನೋವು ಉದ್ಭವಿಸುವ ಹಾಗೂ ಉಲ್ಬಣಿಸುವ ಸಾಧ್ಯತೆಗಳಿವೆ. ಇದಲ್ಲದೆ ಕೆಲವಿಧದ ಮೂತ್ರಪಿಂಡಗಳ- ಗರ್ಭಕೋಶದ ಕಾಯಿಲೆಗಳು, ಮೂತ್ರಾಶಯದ ಸೋಂಕು, ರಿಕೆಟ್ಸ್ ಮತ್ತು ಆಸ್ಟಿಯೋಮಲೇಶಿಯಾ ಗಳಂತಹ ವ್ಯಾಧಿಗಳು ಬೆನ್ನು ನೋವಿನ ಸಮಸ್ಯೆಯನ್ನು ಹುಟ್ಟುಹಾಕುವುದುಂಟು. 

ಅಪಾಯಕಾರಿ ಸಂಕೇತಗಳು 

೧೮ ವರ್ಷಕ್ಕಿಂತ ಕೆಳಗಿನ ಮತ್ತು ೫೦ ವರ್ಷ ಮೀರಿದ ವ್ಯಕ್ತಿಗಳಲ್ಲಿ ಆಕಸ್ಮಿಕವಾಗಿ ಪ್ರಾರಂಭವಾಗಿ, ಕ್ಷಣಮಾತ್ರದಲ್ಲಿ ತೀವ್ರಗೊಂಡು ಅನೇಕ ದಿನಗಳ ಕಾಲ ಬಾಧಿಸುವ ಸೊಂಟನೋವು, ಕೈಕಾಲು ಮತ್ತು ತೊದೆಗಳಲ್ಲಿ ಬಲಹೀನತೆ ಅಥವಾ ಸ್ಪರ್ಶಜ್ಞಾನದ ಅಭಾವ, ಕೈಕಾಲುಗಳ ಮಾಂಸಪೇಶಿಗಳಲ್ಲಿ ಅಸಹಜ ದೌರ್ಬಲ್ಯ, ಸೊಂಟದ ಹಿಂಭಾಗದಿಂದ ಆರಂಭಿಸಿ ಕಾಲಿನ ಹಿಮ್ಮಡಿಯ ತನಕ ಅಥವಾ ಹೆಗಲಿನಿಂದ ಆರಂಭಿಸಿ ಕೈಬೆರಳುಗಳ ತನಕ ಛಳಕು ಹೊಡೆದಂತೆ ನೋವು, ಜ್ವರ, ಬೆನ್ನು ಅಥವಾ ಸೊಂಟದಲ್ಲಿ ಬಾವು ಮತ್ತು ಉರಿಯೂತ, ಸೊಂಟದ ಮಧ್ಯಭಾಗದಲ್ಲಿ ತೀವ್ರ ಉರಿ ಮತ್ತು ನೋವು, ಮಲ- ಮೂತ್ರ ವಿಸರ್ಜನೆಗಳು ರೋಗಿಗೆ ಅರಿವಿಲ್ಲದಂತೆ ಆಗುವುದು, ಮೂತ್ರ ವಿಸರ್ಜಿಸಲು ಕಷ್ಟಸಾಧ್ಯವೆನಿಸುವುದು, ಜನನಾಂಗದಲ್ಲಿ ಅಥವಾ ಸೊಂಟದಿಂದ ಪಾದಗಳ ತನಕ ತೀವ್ರ ನೋವು ಮತ್ತು ನಡೆಯುವಾಗ ನಿಯಂತ್ರಣ ಇಲ್ಲದಂತಾಗುವ ಸಮಸ್ಯೆಗಳು ರೋಗಿಯನ್ನು ಕಾಡುತ್ತಿದ್ದಲ್ಲಿ, ವಿಳಂಬಿಸದೆ ತಜ್ಞವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯುವುದರಿಂದ ಮುಂದೆ ಸಂಭವಿಸಬಹುದಾದ ಗಂಭೀರ ತೊಂದರೆಗಳನ್ನು ತಡೆಗಟ್ಟುವುದು ಸುಲಭಸಾಧ್ಯ. 

ಅವಶ್ಯಕ ಪರೀಕ್ಷೆಗಳು 

ಬಹುತೇಕ ಜನರಲ್ಲಿ ಅಪರೂಪದಲ್ಲಿ ಕಂಡುಬರುವ ಸೌಮ್ಯ ರೂಪದ ಸೊಂತನೋವಿಗೆ ದೈನಂದಿನ ಚಟುವಟಿಕೆಗಳು ಅಥವಾ ಆಘಾತಗಳು ಕಾರಣವಾಗಿರುತ್ತವೆ. ಅಲ್ಪಾವಧಿಯ ಚಿಕಿತ್ಸೆಯಿಂದ ಶಮನಗೊಳ್ಳುವ ಇಂತಹ ನೋವಿಗೆ ವಿಶೇಷ ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯೇ ಇರದು. ಆದರೆ ರೋಗಿಯ ದೈನಂದಿನ ಚಟುವಟಿಕೆ- ಕೆಲಸಕಾರ್ಯಗಳಿಗೂ ಅಡ್ಡಿಯಾಗಬಲ್ಲ, ತೀವ್ರ ನೋವಿನಿಂದ ಹಾಸಿಗೆ ಹಿಡಿಸಬಲ್ಲ ಮತ್ತು ದೀರ್ಘಕಾಲೀನ ಬೆನ್ನು- ಸೊಂಟನೋವುಗಳಿಗೆನಿರ್ದಿಷ್ಟ ಕಾರಣಗಳನ್ನು ಅರಿತುಕೊಳ್ಳಲು ನಿಖರವಾದ ಪರೀಕ್ಷೆಗಳನ್ನು ನಡೆಸಬೇಕಾಗುವುದು. ಇವುಗಳಲ್ಲಿ ಕ್ಷ- ಕಿರಣ, ಸಿ. ಟಿ ಸ್ಕ್ಯಾನ್, ಎಂ. ಆರ್. ಐ ಇತ್ಯಾದಿ ಪರೀಕ್ಷೆಗಳು ಪ್ರಮುಖವಾಗಿವೆ. 

ಚಿಕಿತ್ಸೆ: ಎಂತು- ಏನು? 

ಬೆನ್ನು- ಸೊಂತನೋವಿನ ರೋಗ ನಿದಾನ (Diagnosis) ಮತ್ತು ಚಿಕಿತ್ಸೆಗಳಲ್ಲಿ ಕುಟುಂಬ ವೈದ್ಯರು, ವೈದ್ಯಕೀಯ ತಜ್ಞರು, ಮೂಳೆಗಳ ತಜ್ಞರು, ಮೆದುಳು- ನರರೋಗ ತಜ್ಞರು, ಶಾರೀರಿಕ ಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತು ಕೆಲ ಸಂದರ್ಭಗಳಲ್ಲಿ ಮಾನಸಿಕ ತಜ್ಞರ ಪಾತ್ರ ಮಹತ್ವಪೂರ್ಣ ಹಾಗೂ ಅತ್ಯವಶ್ಯಕ ಎನಿಸುವುದು. ವೈವಿಧ್ಯಮಯ ಕಾರಣಗಳಿಂದ ತಲೆದೋರುವ ಈ ವಿಶಿಷ್ಟ ಸಮಸ್ಯೆಯಲ್ಲಿ ತೀವ್ರ ನೋವು ಬಾಧಿಸಿದಾಗ ಪರಿಪೂರ್ಣ ವಿಶ್ರಾಂತಿ ಪ್ರಾಥಮಿಕ ಅವಶ್ಯಕತೆಯಾಗಿದೆ. ಆದರೆ ಇತ್ತೀಚಿನ ಸಂಶೋಧನೆಗಳಂತೆ ವಿಶ್ರಾಂತಿ ಮತ್ತು ಔಷದಗಳಿಂದ ನೋವಿನ ತೀವ್ರತೆ ಕಡಿಮೆಯಾದಂತೆಯೇ , ಅಲ್ಪ ಪ್ರಮಾಣದ ಚಲನವಲನಗಳು ಮತ್ತು ಲಘು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದು ಲಾಭದಾಯಕ ಎನಿಸುವುದು. 

ಅಂತೆಯೇ ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ ಔಷದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಮಾನಸಿಕ ತಜ್ಞರ ಚಿಕಿತ್ಸೆ ಮತ್ತು ಶಾರೀರಿಕ ಚಿಕಿತ್ಸೆಗಳ ಸಂಯುಕ್ತ ಪ್ರಯೋಗವು ಅವಶ್ಯವೆನಿಸುವುದು. ಶಾರೀರಿಕ ಚಿಕಿತ್ಸೆಯ ಅಂಗವಾಗಿ ನಿಮ್ಮ ಬೆನ್ನು- ಸೊಂಟದ ಭಾಗಗಳಲ್ಲಿನ ಮಾಂಸಪೇಶಿಗಳು, ಅಸ್ಥಿಸಂಧಿಗಳು ಹಾಗೂ ಶಾರೀರಿಕ ಕ್ಷಮತೆಯ ಮಟ್ಟವನ್ನು ಹೆಚ್ಚಿಸಬಲ್ಲ ಲಘು ವ್ಯಾಯಾಮಗಳು ಖಚಿತವಾಗಿಯೂ ಅಪೇಕ್ಷಿತ ಪರಿಣಾಮವನ್ನು ನೀಡುತ್ತವೆ. ಇದಲ್ಲದೆ ಸಂದರ್ಭೋಚಿತವಾಗಿ ಶಾಖ, ಅಲ್ಟ್ರಾ ಸೌಂಡ್, ಡೈನಾವೇವ್, ಮಸಾಜ್ ಮತ್ತು ಬಿಸಿನೀರಿನ ಚೀಲ, ಇನ್ಫ್ರಾ ರೆಡ್ ದೀಪ ಹಾಗೂ ಶಾರ್ಟ್ ವೇವ್ ಡಯಾಥರ್ಮಿಗಳನ್ನೂ ಬಳಸುತ್ತಾರೆ. 

ರೋಗಿಯನ್ನು ಹಾಸಿಗೆಯಲ್ಲಿ ಮಲಗಿಸಿ "ಟ್ರಾಕ್ಶನ್" ನೀಡುವುದು, ಸೊಂಟಕ್ಕೆ ಆಧಾರವನ್ನು ನೀಡುವ ಲಂಬೋ ಸಾಕ್ರಲ್ ಬೆಲ್ಟ್ ಧರಿಸುವುದು, ಸೊಂಟದ ನಿರ್ದಿಷ್ಟ ಭಾಗದಲ್ಲಿ ಇಂಜೆಕ್ಷನ್ ನೀಡುವುದು, ಆಕ್ಯುಪಂಕ್ಚರ್, ಯೋಗ ಇತ್ಯಾದಿಗಳೂ ಈ ಸಮಸ್ಯೆಯ ಪರಿಹಾರದಲ್ಲಿ ಪರಿಣಾಮಕಾರಿ ಎನಿಸುತ್ತವೆ. ಆದರೆ ಗಂಭೀರ ಹಾಗೂ ಅಪಾಯಕಾರಿ ಸಂಕೇತಗಳು- ಲಕ್ಷಣಗಳು ಕಂಡುಬಂದಲ್ಲಿ ಶಸ್ತ್ರಚಿಕಿತ್ಸೆಯೇ ಏಕಮಾತ್ರ ಪರಿಹಾರವೆನಿಸುವುದು. 

ಕೊನೆಯದಾಗಿ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಸೊಂಟ- ಬೆನ್ನು ನೋವು ನಿಮ್ಮನ್ನು ಪೀಡಿಸುತ್ತಿದ್ದಲ್ಲಿ, ಅವಶ್ಯವಾಗಿ ತಜ್ಞವೈದ್ಯರ ಸಲಹೆ ಪಡೆಯಿರಿ. ನಿಮ್ಮ ನೆರೆಕರೆಯ "ಸ್ವಯಂವೈದ್ಯ" ರು ಸೂಚಿಸುವ ಗುಳಿಗೆಗಳನ್ನು ಯಾವುದೇ ಕಾರಣಕ್ಕೂ ಸೇವಿಸದಿರಿ. ನಿಮಗೆ ವಯಸ್ಸಾದಂತೆಯೇ ಸವೆತಕ್ಕೊಳಗಾದ ನಿಮ್ಮ ಅಸ್ಥಿಸಂಧಿಗಳಲ್ಲಿ ಪ್ರಾರಂಭವಾಗುವ ನೋವು, ಕೇವಲ ಒಂದು ಇಂಜೆಕ್ಷನ್ ನಿಂದ ಶಾಶ್ವತವಾಗಿ ಗುಣವಾಗದೆಂದು ಅರಿತಿರಿ. ಅದೇ ರೀತಿಯಲ್ಲಿ ಮೂಳೆಗಳು ಕಾಲಕ್ರಮೇಣ ತಮ್ಮ ಧೃಢತೆಯನ್ನು ಕಳೆದುಕೊಳ್ಳುವುದರಿಂದಾಗಿ, ವಯಸ್ಸಾದವರಲ್ಲಿ ಮೂಳೆಗಳ ದೌರ್ಬಲ್ಯವೂ ಹೆಚ್ಚಾಗಿ ಕಂಡುಬರುವುದು. ಇದಕ್ಕಾಗಿ ನೋವು ನಿವಾರಕ ಎಣ್ಣೆಗಳನ್ನುತಿಕ್ಕುವುದರಿಂದ ನಿಮ್ಮ ಮೂಳೆಗಳು ತಮ್ಮ ಧೃಢತೆಯನ್ನು ಮತ್ತೆ ಗಳಿಸಿಕೊಳ್ಳುವುದು ಅಸಾಧ್ಯ ಎನ್ನುವುದನ್ನು ಮರೆಯದಿರಿ. 

ಆರೋಗ್ಯಕರ ಜೀವನಶೈಲಿ, ಶಿಸ್ತುಬದ್ಧ ಜೀವನ ಕ್ರಮ,ಸಮತೋಲಿತ ಆಹಾರ ಸೇವನೆ, ಪ್ರತಿನಿತ್ಯ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಮಾನಸಿಕ ಒತ್ತಡಗಳನ್ನು ದೂರವಿರಿಸುವ ಮೂಲಕ ನಿಮ್ಮ ದೈಹಿಕ ಕ್ಷಮತೆ ಹಾಗೂ ಆರೋಗ್ಯಗಳನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳುವುದು ನಿಶ್ಚಿತವಾಗಿಯೂ ಸುಲಭಸಾಧ್ಯವೆನಿಸುವುದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೯-೦೯-೨೦೦೪ ರ ಸಂಚಿಕೆಯ ಬಳಕೆದಾರ; ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 


No comments:

Post a Comment