Sunday, December 1, 2013

Solid waste management


      ತ್ಯಾಜ್ಯ ಸಂಗ್ರಹ- ವಿಲೇವಾರಿಯ ವೈಫಲ್ಯ: ಸ್ಥಳೀಯ ಸಂಸ್ಥೆಗಳ ವಿರುದ್ಧ ದಾವೆ 

  ಭಾರತದ ಪ್ರತಿಯೊಂದು ತಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ದೈನಂದಿನ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಳ ಸಮಸ್ಯೆ ದಿನೇದಿನೇ ಉಲ್ಬಣಿಸುತ್ತಿದೆ. ಏಕೆಂದರೆ ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ, ನಾವಿಂದು ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ವೈವಿಧ್ಯಮಯ ತ್ಯಾಜ್ಯಗಳ ಪ್ರಮಾಣ ಮಿತಿಮೀರಿದೆ. ಇದರೊಂದಿಗೆ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಇವುಗಳನ್ನು ಪ್ರತ್ಯೇಕಿಸಿ ಸಂಗ್ರಹಿಸುವ ಅಥವಾ ಸಂಗ್ರಹಿಸಿದ ಬಳಿಕ ಪ್ರತ್ಯೇಕಿಸಿ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಯ ವೈಫಲ್ಯದಿಂದಾಗಿ, ಕಣ್ಣು ಹಾಯಿಸಿದಲ್ಲೆಲ್ಲಾ ತ್ಯಾಜ್ಯಗಳ ರಾಶಿಗಳು ರಾರಾಜಿಸುತ್ತಿವೆ!. 

ಇಷ್ಟೆಲ್ಲಾ ಸಾಲದೆನ್ನುವಂತೆ ಕಂಡಲ್ಲಿ ಕಸವನ್ನು ಎಸೆಯುವ ಜನರ ಕೆಟ್ಟ ಹವ್ಯಾಸ ಅನಿಯಂತ್ರಿತವಾಗಿ ವ್ರುದ್ಧಿಸುತ್ತಿರುವುದು, ತ್ಯಾಜ್ಯಗಳ ಮತ್ತು ಪರಿಸರ ಪ್ರದೂಷಣೆಗಳ ಪ್ರಮಾಣ ಇನ್ನಷ್ಟು ಹೆಚ್ಚಲು ಪ್ರಮುಖ ಕಾರಣವೆನಿಸಿದೆ. ಇದಲ್ಲದೇ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸದ ನಾಗರಿಕರಿಂದಾಗಿ, ದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶವೇ ಅನುಷ್ಠಾನಗೊಳ್ಳದೆ ಇರಲು ಕಾರಣವೆನಿಸಿದೆ. 

ವ್ಯವಸ್ಥೆಯ ವೈಫಲ್ಯ 

ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ವಸತಿ- ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯಗಳನ್ನು ಸಂಗ್ರಹಿಸಬೇಕಿದೆ. ಈ ತ್ಯಾಜ್ಯಗಳನ್ನು ಪ್ರತ್ಯೆಕಿಸಬೇಕಾದ ಹೊಣೆಗಾರಿಕೆಯು ಈ ಕಟ್ಟಡಗಳ ನಿವಾಸಿಗಳದ್ದೇಆಗಿದೆ. ತಾವು ಉತ್ಪಾದಿಸಿದ ಜೈವಿಕ, ಪುನರ್ ಆವರ್ತನಗೊಳಿಸಬಲ್ಲ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ವಿಂಗಡಿಸಿ ನೀಡಲು ಸಿದ್ಧರಿಲ್ಲದ ಅನೇಕ ನಾಗರಿಕರಿಂದಾಗಿ, ಸಮಗ್ರ ವ್ಯವಸ್ಥೆಯೇ ನಿಗದಿತ ಉದ್ದೇಶವನ್ನು ಈಡೇರಿಸಲು ದಯನೀಯವಾಗಿ ವಿಫಲವೆನಿಸಿದೆ. ಏಕೆಂದರೆ ಸಹಸ್ರಾರು ವಸತಿ- ವಾಣಿಜ್ಯ ಕಟ್ಟಡಗಳಿಂದ ಪ್ರತ್ಯೆಕಿಸದೇ ಸಂಗ್ರಹಿಸಿದ ತ್ಯಾಜ್ಯಗಳನ್ನು ಇದಕ್ಕಾಗಿ ನಿಯೋಜಿತ ಸಿಬಂದಿಗಳು ಅಥವಾ ಪೌರ ಕಾರ್ಮಿಕರು ವಿಂಗಡಿಸುವುದು ಅಕ್ಷರಶಃ ಅಸಾಧ್ಯವೂ ಹೌದು. ಆದರೆ ಪ್ರತ್ಯೇಕಿಸಿ ನೀಡಿದ ಜೈವಿಕ ತ್ಯಾಜ್ಯಗಳನ್ನು ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ, ಪುನರ್ ಆವರ್ತನಗೊಳಿಸಬಹುದಾದ ತ್ಯಾಜ್ಯಗಳನ್ನು ತತ್ಸಂಬಂಧಿತ ಘಟಕಗಳಿಗೆ ರವಾನಿಸುವುದು ಮತ್ತು ಪುನರ್ ಆವರ್ತಿಸಲಾಗದ ತ್ಯಾಜ್ಯಗಳನ್ನು ತ್ಯಾಜ್ಯ ವಿಲೇವಾರಿ ಘಟಕದಲ್ಲಿನ "ಲ್ಯಾಂಡ್ ಫಿಲ್ ಸೈಟ್" ನಲ್ಲಿ ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವುದು ಸುಲಭಸಾಧ್ಯವೂ ಹೌದು. 

ಆದರೆ "ಎರಡು ಕೈಗಳು ಸೇರದೆ ಚಪ್ಪಾಳೆ ಆಗದು" ಎನ್ನುವ ಮಾತಿನಂತೆ, ಸ್ಥಳೀಯ ನಾಗರಿಕರು ಸ್ಥಳೀಯ ಸಂಸ್ಥೆಗಳ ಸಿಬಂದಿಗಳೊಂದಿಗೆ ಸಹಕರಿಸಿ ಕೈಜೋಡಿಸಿದಲ್ಲಿ, ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳು "ನಿರ್ಮಲ ಗ್ರಾಮ"ಗಳಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ. ವಿಶೇಷವೆಂದರೆ ತಮ್ಮ ವಸತಿ- ವಾಣಿಜ್ಯ ಕಟ್ಟಡಗಳು ಮತ್ತು ಆವರಣಗಳನ್ನು ಚೊಕ್ಕಟವಾಗಿ ಇರಿಸಿಕೊಳ್ಳುವ ನಾಗರಿಕರು, ತಮ್ಮ ಬೀದಿ, ತಮ್ಮ ಬಡಾವಣೆ ಮತ್ತು ತಮ್ಮ ಊರಿನ ಸ್ವಚ್ಚತೆ ಹಾಗೂ ನೈರ್ಮಲ್ಯಗಳ ಬಗ್ಗೆ ಕಿಂಚಿತ್ ಕಾಳಜಿಯನ್ನೂ ತೋರುವುದಿಲ್ಲ!. ಹಾಗೂ ಇದೇ ಕಾರಣದಿಂದಾಗಿ ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲೂ, ತ್ಯಾಜ್ಯ ಸಂಗ್ರಹ ಮತ್ತು ವಿಲೆವಾರಿಗಳು ಸಮರ್ಪಕ ಹಾಗೂ ಯಶಸ್ವಿಯಾಗಿ ನಡೆಯುತ್ತಿಲ್ಲ. 
     

    ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಮ 

ಕರ್ನಾಟಕ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯು ಘನತ್ಯಾಜ್ಯ ಸಂಗ್ರಹ- ವಿಲೆವಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸದ ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮಂಡಳಿಯ ಅದ್ಯಕ್ಷರು ಇತ್ತೀಚಿಗೆ ಬೆಂಗಳೂರಿನಲ್ಲಿ ಜರಗಿದ್ದ "ವೇಸ್ಟ್ ಮೇನೇಜ್ಮೆಂಟ್ ಸಮ್ಮಿಟ್-೨೦೧೩" ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಈ ವಿಚಾರದಲ್ಲಿ ಸೇರ್ಪಡೆಗೊಳಿಸುವುದಿಲ್ಲ ಎಂದೂ ಹೇಳಿದ್ದರು. ಅಂಕಿ ಅಂಶಗಳೇ ಹೇಳುವಂತೆ ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದ ಘನ ತ್ಯಾಜ್ಯಗಳನ್ನು ಉತ್ಪಾದಿಸುವ ನಗರಗಳಲ್ಲಿ ಬೆಂಗಳೂರು ನಗರವು ನಿಜಕ್ಕೂ "ರಾಜಧಾನಿ" ಎನಿಸಿದೆ!. ಅಂತೆಯೇ ತ್ಯಾಜ್ಯಗಳ ವಿಂಗಡಣೆ, ಸಂಗ್ರಹಣೆ, ಸಾಗಾಟ ಮತ್ತು ವಿಲೆವಾರಿಗಳ ವೈಫಲ್ಯದಲ್ಲೂ ಅಗ್ರಸ್ಥಾನದಲ್ಲಿದೆ. ಆದರೂ ರಾಜ್ಯದ ಅನ್ಯ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗಲಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾನೂನು ಕ್ರಮಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ವಿನಾಯಿತಿ ನೀಡಿರುವುದು ಸಮಂಜಸವಲ್ಲ. ಅದೇ ರೀತಿಯಲ್ಲಿ ಸ್ಥಳೀಯರ ಅಸಹಕಾರದಿಂದ ವಿಫಲವಾಗುತ್ತಿರುವ ಈ ವ್ಯವಸ್ಥೆಗಾಗಿ, ಸ್ಥಳೀಯ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸುವುದು ಸರ್ವಥಾ ಸಮರ್ಥನೀಯವಲ್ಲ. 

ಪರಿಹಾರವೇನು?

ಅಧಿಕತಮ ನಾಗರಿಕರು ಘನತ್ಯಾಜ್ಯ ನಿರ್ವಹಣೆಯ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸದೆ ಇರಲು, ಇದಕ್ಕಾಗಿ ತೆರಬೇಕಾದ ಮಾಸಿಕ ಶುಲ್ಕವನ್ನು ತೆರಲು ಮತ್ತು ತ್ಯಾಜ್ಯಗಳನ್ನು ಪ್ರತ್ಯೇಕಿಸಲು ವ್ಯವಧಾನ ಇಲ್ಲದಿರುವುದೇ ಕಾರಣವೆನಿಸಿದೆ. ಜನಸಾಮಾನ್ಯರ ಈ ವಿಲಕ್ಷಣ ಮನೋಭಾವನೆಯನ್ನು ಬದಲಾಯಿಸುವ ವಿಧಾನಗಳೊಂದಿಗೆ,ಇದೊಂದು ಸಾಮಾಜಿಕ ಹೊಣೆಗಾರಿಕೆ ಹಾಗೂ ಅನಾರೋಗ್ಯದ ಸಮಸ್ಯೆಗಳು, ಪರಿಸರ ಮಾಲಿನ್ಯ ಮತ್ತು ಹವಾಮಾನದ ವೈಪರೀತ್ಯಗಳಂತಹಗಂಭೀರ ಸಮಸ್ಯೆಗಳನ್ನು ತಡೆಗಟ್ಟುವ ಏಕಮಾತ್ರ ವಿಧಾನ ಎನ್ನುವುದನ್ನು ಮನವರಿಕೆ ಮಾಡಬೇಕಾದ ಹೊಣೆಗಾರಿಕೆ ಸರಕಾರದ್ದೇ ಆಗಿದೆ. ಇವೆಲ್ಲಕ್ಕೂ ಮಿಗಿಲಾಗಿ ತ್ಯಾಜ್ಯ ಸಂಗ್ರಹ- ವಿಲೇವಾರಿ ವ್ಯವಸ್ಥೆಗಳಿಗೆ ಶುಲ್ಕವನ್ನು ನೀಡಲು ನಿರಾಕರಿಸುವ ನಾಗರಿಕರಿಂದಾಗಿ ಈ ವ್ಯವಸ್ಥೆ ವಿಫಲವಾಗದಿರಲು, ಸ್ವಯಂ ಘೋಷಿತ ಆಸ್ತಿ ತೆರಿಗೆಯೊಂದಿಗೆ ಈ ಶುಲ್ಕವನ್ನು ಕಡ್ಡಾಯವಾಗಿ ಸಂಗ್ರಹಿಸುವ ಅಧಿಕಾರವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಲು ತತ್ಸಂಬಂಧಿತ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಬೇಕಿದೆ. ಇವೆಲ್ಲವುಗಳ ಸಂಯುಕ್ತ ಪರಿಣಾಮಗಳಿಂದಾಗಿ ರಾಜ್ಯಾದ್ಯಂತ ಘನ ತ್ಯಾಜ್ಯ ಸಂಗ್ರಹ- ವಿಲೇವಾರಿ ವ್ಯವಸ್ಥೆ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. 


ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


No comments:

Post a Comment