Wednesday, March 2, 2016

HERBAL ANTI DIABETES PILL TO BE LAUNCHED


          ಮಧುಮೇಹ ನಿಯಂತ್ರಿಸಲು ಗಿಡಮೂಲಿಕೆಗಳ ಔಷದ 

ವಿಶ್ವಾದ್ಯಂತ ಅಸಂಖ್ಯ ಜನರನ್ನು ಪೀಡಿಸುತ್ತಿರುವ ಹಾಗೂ ಇಂದಿನ ತನಕ ಈ ವ್ಯಾಧಿಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಕಂಡುಹಿಡಿಯಲು ವಿಫಲರಾಗಿರುವ ವೈದ್ಯಕೀಯ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿರುವ " ಮಧುಮೇಹ " ವ್ಯಾಧಿಯನ್ನು ನಿಯಂತ್ರಿಸಲು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಔಷದವೊಂದು ನಮ್ಮ ರಾಜ್ಯದ ಜನತೆಗೆ ಸದ್ಯೋಭವಿಷ್ಯದಲ್ಲಿ ಲಭ್ಯವಾಗಲಿದೆ. BGS - 34 ಎಂದು ಹೆಸರಿಸಲ್ಪಟ್ಟಿರುವ ಈ ಔಷದವು ಒಂದೆರಡು ತಿಂಗಳುಗಳಲ್ಲಿ ರಾಜ್ಯದ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಮಧುಮೇಹ ಪೀಡಿತರು ಈಗಾಗಲೇ ಸೇವಿಸುತ್ತಿರುವ ಆಧುನಿಕ ಔಷದಗಳಿಗೆ ಪೂರಕವಾಗಿ ಪರಿಣಮಿಸುವುದಾದರೂ, ಇದು " ಪವಾಡ ಸದೃಶ " ಪರಿಣಾಮವನ್ನು ನೀಡಲು ಅಥವಾ ಮಧುಮೇಹವನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಲಾರದು ಡಾ. ವಿಶಾಲ್ ರಾವ್ ಹೇಳಿದ್ದಾರೆ. ಜೊತೆಗೆ ಆಧುನಿಕ ಮತ್ತು ಆಯುರ್ವೇದ ಔಷದಗಳ ಸಮ್ಮಿಶ್ರ ಚಿಕಿತ್ಸೆಯುಲ್ಲಿ ಆಯುರ್ವೇದ ಔಷದಗಳು ಪರಿಣಾಮಕಾರಿಯಾಗಿರುವುದಾದರೂ, ಮಧುಮೇಹವನ್ನು ನಿಯಂತ್ರಿಸಲು ಜೀವನಶೈಲಿಯ ಬದಲಾವಣೆ ಅತ್ಯವಶ್ಯಕ ಎಂದು ಅಭಿಪ್ರಾಯಿಸಿದ್ದಾರೆ. ಖ್ಯಾತ ಕ್ಯಾನ್ಸರ್ ತಜ್ಞರಾಗಿರುವ ಈ ವೈದ್ಯರು ಆಯುರ್ವೇದ ಔಷದಗಳು ಮತ್ತು ಚಿಕಿತ್ಸೆಯ ಬಗ್ಗೆ ಸಾಕಷ್ಟು ಆಸಕ್ತಿಯನ್ನು ತೋರುತ್ತಿದ್ದಾರೆ. 

ನಿಜ ಹೇಳಬೇಕಿದ್ದಲ್ಲಿ ನೀವು ದಿನನಿತ್ಯ ಓದುವ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನೇಕ ಜಾಹೀರಾತುಗಳಲ್ಲಿ, ಮಧುಮೇಹ ವ್ಯಾಧಿಯ ಚಿಕಿತ್ಸೆಯಲ್ಲಿ ಬಳಸಬಹುದಾದ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿರುವ ಮತ್ತು ಪರ್ಯಾಯ ಪದ್ದತಿಯ ಔಷದಗಳ ಜಾಹೀರಾತುಗಳೂ ಸೇರಿವೆ. ಆದರೆ ಇದುವರೆಗೆ ಯಾವುದೇ ಪದ್ದತಿಯ ವಿಜ್ಞಾನಿಗಳು ಮತ್ತು ವೈದ್ಯರು,ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಆವಿಷ್ಕರಿಸಿಲ್ಲ. ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವನ್ನು ಪತ್ತೆಹಚ್ಚಿದವರಿಗೆ ವಿಶ್ವ ವಿಖ್ಯಾತ ನೊಬೆಲ್ ಪ್ರಶಸ್ತಿಯೊಂದಿಗೆ ಕೋಟ್ಯಾಂತರ ಡಾಲರ್ ಬಹುಮಾನ ದೊರೆಯುವುದರಲ್ಲಿ ಸಂದೇಹವಿಲ್ಲ. 

ಮಧುಮೇಹ ಎಂದರೇನು? 

ನಿಮ್ಮ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಗಳಲ್ಲಿನ ಬೀಟಾ ಜೀವಕಣಗಳು ಉತ್ಪಾದಿಸುವ ಇನ್ಸುಲಿನ್ ನ ಪ್ರಮಾಣವು ಕಡಿಮೆಯಾದಾಗ ಅಥವಾ ಸಂಪೂರ್ಣವಾಗಿ ನಶಿಸಿದಾಗ, ನಿಮ್ಮ ರಕ್ತದಲ್ಲಿನ ಗ್ಲುಕೋಸ್ ನ ಪ್ರಮಾಣವು ಅನಿಯಂತ್ರಿತವಾಗಿ ಹೆಚ್ಚುವುದು. ತತ್ಪರಿಣಾಮವಾಗಿ ಮಧುಮೇಹ ವ್ಯಾಧಿ ಉದ್ಭವಿಸುವುದು. ಮಧುಮೇಹವನ್ನು ಸ್ಥೂಲವಾಗಿ ಎರಡು ವಿಧಗಳನ್ನಾಗಿ ವಿಂಗಡಿಸಿದ್ದು, ಇನ್ಸುಲಿನ್ ಅವಲಂಬಿತ ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಎಂದು ಕರೆಯಲ್ಪಡುತ್ತವೆ. ಇದಲ್ಲದೆ ಮಹಿಳೆಯರು ಗರ್ಭ ಧರಿಸಿದಾಗ ಪ್ರತ್ಯಕ್ಷವಾಗುವ ಹಾಗೂ ಬಹುತೇಕ ಮಹಿಳೆಯರಲ್ಲಿ ಹೆರಿಗೆಯ ಬಳಿಕ ಅದೃಶ್ಯವಾಗುವ ಮಧುಮೇಹವೂ ಇತ್ತೀಚಿನ ವರ್ಷಗಳಲ್ಲಿ ಅತಿಯಾಗಿ ಕಾಣಸಿಗುತ್ತಿದೆ. ಆದರೆ ಇದನ್ನು ಜೀವನಶೈಲಿಯ ಬದಲಾವಣೆ ಮತ್ತು ಅವಶ್ಯಕತೆಯಿದ್ದಲ್ಲಿ ಸೂಕ್ತ ಔಷದಗಳ ಸೇವನೆಯಿಂದ ನಿಯಂತ್ರಿಸುವುದು ಸುಲಭಸಾಧ್ಯ. 

ಚಿಕಿತ್ಸೆ 

ಇನ್ಸುಲಿನ್ ಅವಲಂಬಿತ ಮಧುಮೇಹ ಪೀಡಿತರು ದಿನನಿತ್ಯ ಇನ್ಸುಲಿನ್ ಚುಚ್ಚು ಮದ್ದನ್ನು ಪಡೆದುಕೊಳ್ಳುವುದು ಅನಿವಾರ್ಯ. ಆದರೆ ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಮಧುಮೇಹ ಪೀಡಿತರಿಗೆ ಆಧುನಿಕ ಪದ್ದತಿಯ ಮಾತ್ರೆಗಳ ಸೇವನೆಯಿಂದ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ. ಅಂತೆಯೇ ಸೌಮ್ಯ ಸ್ವರೂಪದ ಮಧುಮೇಹವನ್ನು ಕೇವಲ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಿನ ಪಥ್ಯ, ದೈನಂದಿನ ವ್ಯಾಯಾಮ, ಮಾನಸಿಕ ಒತ್ತಡಗಳಿಂದ ದೂರವಿರುವುದೇ ಮುಂತಾದ ಜೀವನಶೈಲಿಯ ಬದಲಾವಣೆಯಿಂದ ಸಮರ್ಪಕವಾಗಿ ನಿಯಂತ್ರಿಸಬಹುದಾಗಿದೆ. 

ಮಿಥ್ಯೆ 

ಅನೇಕರು ಹೇಳುವಂತೆ ಆಧುನಿಕ ಪದ್ದತಿಯ ಔಷದಗಳನ್ನು ಸೇವಿಸುವ ಮಧುಮೇಹ ಪೀಡಿತರಿಗೆ ಕಣ್ಣು, ಮೂತ್ರಪಿಂಡಗಳು ಮತ್ತು ನರಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಬಾಧಿಸುತ್ತವೆ ಎನ್ನುವುದು ಅಪ್ಪಟ ಸುಳ್ಳು. ಜಿಹ್ವಾ ಚಾಪಲ್ಯವನ್ನು ಬಿಡಲೊಲ್ಲದ ಮಧುಮೇಹಿಗಳು ಸಕ್ಕರೆ ಹಾಗೂ ಬೆಲ್ಲದಿಂದ ತಯಾರಿಸಿದ ತಿಂಡಿಗಳನ್ನು ಅತಿಯಾಗಿ ಸೇವಿಸುವುದು, ದ್ರಾಕ್ಷಿ, ಮಾವು, ಸಪೋಟ ( ಚಿಕ್ಕು ) ಚೆನ್ನಾಗಿ ಕಳಿತ ಬಾಳೆಹಣ್ಣು ಮತ್ತಿತರ ಅತ್ಯಂತ ಮಧುರವಾದ ಹಣ್ಣುಗಳನ್ನು ಸೇವಿಸುವುದು ಮತ್ತು ನಿಷ್ಕ್ರಿಯ ಜೀವನ ಶೈಲಿಯನ್ನು ಪರಿಪಾಲಿಸಿದಲ್ಲಿ ಯಾವುದೇ ಪದ್ದತಿಯ ಔಷದಗಳನ್ನು ಸೇವಿಸಿದರೂ ಮೇಲೆ ನಮೂದಿಸಿದ ಆರೋಗ್ಯದ ಸಮಸ್ಯೆಗಳು ಬಾಧಿಸುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳು ಅಡ್ಡ ಪರಿಣಾಮವನ್ನು ಬೀರುವುದಿಲ್ಲ ಮತ್ತು ಶತಪ್ರತಿಶತ ಸುರಕ್ಷಿತ ಎನ್ನುವುದು ಮಧುಮೇಹ ಚಿಕಿತ್ಸೆಯ ವಿಚಾರದಲ್ಲಿ ನಿಜವಲ್ಲ!. ವಿಶೇಷವೆಂದರೆ ಯಾವುದೇ ಪದ್ದತಿಯ ಔಷದಗಳನ್ನು ಸೇವಿಸುವ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಗ್ಲುಕೋಸ್ ನ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಯಶಸ್ವಿಯಾದಲ್ಲಿ, ಅನ್ಯ ವಿಧದ ಆರೋಗ್ಯದ ಸಮಸ್ಯೆಗಳು ಉದ್ಭವಿಸುವ ಮತ್ತು ಉಲ್ಬಣಿಸುವ ಸಾಧ್ಯತೆಗಳು ಅತ್ಯಲ್ಪ ಎನ್ನುವುದರಲ್ಲಿ ಸಂದೇಹವಿಲ್ಲ. 

BGS - 34 

ಕೌನ್ಸಿಲ್ ಆಫ್ ಸಯಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್ ( ಸಿ ಎಸ್ ಐ ಆರ್ ) ಸಂಸ್ಥೆಯು ಸುಮಾರು ಆರು ವರ್ಷಗಳ ಕಾಲ ಶ್ರಮಿಸಿ, ಆರು ವಿಧದ ಗಿಡಮೂಲಿಕೆಗಳನ್ನು ಬಳಸಿ ಸಿದ್ಧಪಡಿಸಿರುವ ಬಿ ಜಿ ಎಸ್ - 34 ನಾಮಧೇಯದ ಮಾತ್ರೆಗಳು, ಮಧುಮೇಹ ಪೀಡಿತರು ಈಗಾಗಲೇ ಸೇವಿಸುತ್ತಿರುವ ಅನ್ಯ ಔಷದಗಳೊಂದಿಗೆ ಮಧುಮೇಹವನ್ನು ನಿಯಂತ್ರಿಸಲು ಪೂರಕವಾಗಿ ಬಳಸಬಹುದಾಗಿದೆ ಎನ್ನುವ ವಿವರವನ್ನು ಪ್ರಕಟಿಸಲಾಗಿದೆ. ಆದರೆ ಈ ಔಷದ ಅಥವಾ ಅನ್ಯ ಯಾವುದೇ ಔಷದಗಳ ಸೇವನೆಯಿಂದ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸುವ ಸಾಧ್ಯತೆಗಳೇ ಇಲ್ಲ ಎನ್ನುವುದನ್ನು ಮರೆಯದಿರಿ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು


No comments:

Post a Comment