Thursday, May 12, 2016

VANISHING WATERBODISES !


        ದೇಶದ ಜಲಮೂಲಗಳು ಬತ್ತಿಹೋಗುತ್ತಿವೆ, ಜೋಕೆ! 

ಜಾಗತಿಕ ತಾಪಮಾನದ ಹೆಚ್ಚಳ ಮತ್ತು ತತ್ಸಂಬಂಧಿತ ಅನ್ಯ ಕಾರಣಗಳ ಫಲವಾಗಿ ರಾಜ್ಯದ ಜನತೆ ಇದುವರೆಗೆ ಕಂಡುಕೇಳರಿಯದ ಬೇಸಗೆಯ ಧಗೆಯಿಂದ ಹೈರಾಣಾಗಿದ್ದಾರೆ. ಜೊತೆಗೆ ಬಹುತೇಕ ಜಿಲ್ಲೆಗಳಲ್ಲಿ ಉದ್ಭವಿಸಿರುವ ಜಲಕ್ಷಾಮದಿಂದ ಕಂಗಾಲಾಗಿದ್ದಾರೆ. ಕೆಲವೆಡೆ ಕುಡಿಯುವ ನೀರನ್ನು ಅರಸಿಕೊಂಡು  ಅಲೆದಾಡಬೇಕಾದಂತಹ ಭೀಕರ ಬರ ಬಾಧಿಸುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜಲಮೂಲಗಳು ಬತ್ತಿಹೋಗಿವೆ ಅಥವಾ ಬತ್ತಿಹೋಗುತ್ತಿವೆ. ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಜನತೆಯನ್ನು ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅವಶ್ಯಕ ಹಾಗೂ ದೀರ್ಘಕಾಲೀನ ಪರಿಹಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲು ವಿಫಲವಾಗಿರುವ ಪರಿಣಾಮವಾಗಿ, ಇದೀಗ ಜಲಕ್ಷಾಮದ ತೀವ್ರತೆ ಇನ್ನಷ್ಟು ಹೆಚ್ಚಿದೆ. 

ವಿಶೇಷವೆಂದರೆ ಕರ್ನಾಟಕವೂ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿನ ಜಲಮೂಲಗಳು ನಶಿಸುತ್ತಿರುವ ಮತ್ತು ಅಂತರ್ಜಲದ ಮಟ್ಟವು ಪಾತಾಳಕ್ಕೆ ಕುಸಿಯುತ್ತಿರುವ ಬಗ್ಗೆ " ವಿಶ್ವ ಬ್ಯಾಂಕ್ " ಐದು ವರ್ಷಗಳ ಹಿಂದೆಯೇ ಎಚ್ಚರಿಕೆಯನ್ನು ನೀಡಿತ್ತು. ಅಂತೆಯೇ ಈ ಸಮಸ್ಯೆಯನ್ನು ತಡೆಗಟ್ಟುವಂತಹ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಪರೋಕ್ಷವಾಗಿ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಕಾರಣಕರ್ತರೆನಿಸಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಜಲಕ್ಷಾಮದ ಕರಿನೆರಳು 

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಒಬ್ಬ ವ್ಯಕ್ತಿಗೆ ಒಂದುದಿನದಲ್ಲಿ ಬೇಕಾಗುವ ನೀರಿನ ಪ್ರಮಾಣ ೧೩೫ ಲೀಟರ್. ಆದರೆ ಧಾರಾಳ ನೀರು ಲಭ್ಯವಿರುವ ಪ್ರದೇಶಗಳ ನಿವಾಸಿಗಳು ಇದರ ಹತ್ತಾರು ಪಟ್ಟು ನೀರನ್ನು ಅನಾವಶ್ಯಕವಾಗಿ ಪೋಲುಮಾಡುತ್ತಾರೆ. ತತ್ಪರಿಣಾಮವಾಗಿ ನಮ್ಮ ದೇಶದ ಶೇ. ೬೦ ರಷ್ಟು ಜಲಮೂಲಗಳು ನಿಧಾನವಾಗಿ ನಶಿಸುತ್ತಾ, ಮುಂದಿನ ೧೫ ವರ್ಷಗಳಲ್ಲಿ ಸಂಪೂರ್ಣವಾಗಿ ಬತ್ತಿಹೋಗಲಿವೆ ಎಂದು ವಿಶ್ವಬ್ಯಾಂಕ್ ೨೦೧೧ ರಲ್ಲೇ ಎಚ್ಚರಿಕೆಯನ್ನು ನೀಡಿತ್ತು. ವಿಶ್ವಬ್ಯಾಂಕ್ ಮುಂದಿನ ೧೫ ವರ್ಷಗಳಲ್ಲಿ ಸಂಭವಿಸಲಿಸಲಿದೆ ಎಂದಿದ್ದ ಭವಿಷ್ಯವು, ಕೇವಲ ೫ ವರ್ಷಗಳಲ್ಲೇ ನಿಜವಾಗುತ್ತಿದೆ. 

ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಿರುವಂತೆ ೨೦೧೧ ರಲ್ಲೇ ಭಾರತದಲ್ಲಿರುವ ಶೇ.೨೯ ರಷ್ಟು ಜಲಮೂಲಗಳು ಅಪಾಯಕಾರಿ, ಗಂಭೀರ ಸ್ಥಿತಿಯಲ್ಲಿ ಅಥವಾ ವಿನಾಶದ ಹಾದಿಯಲ್ಲಿದ್ದವು. ಭಾರತೀಯರ ನೀರಿನ ದುರ್ಬಳಕೆಯ ಪ್ರಮಾಣವು ಇದೇ ರೀತಿಯಲ್ಲಿ ಹಾಗೂ ಇದೇ ವೇಗದಲ್ಲಿ ಮುದುವರೆದಲ್ಲಿ, ೨೦೨೫ ರಲ್ಲಿ ಶೇ. ೬೫ ರಷ್ಟು ಜಲಮೂಲಗಳು ಗಂಭೀರ ಸ್ಥಿತಿಯನ್ನು ತಲುಪಲಿವೆ. ಇದರೊಂದಿಗೆ ದೇಶದ ವಿವಿಧಭಾಗಗಳಲ್ಲಿ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಗಳೂ, ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಕಾರಣವೆನಿಸಲಿವೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ನಮೂದಿಸಲಾಗಿತ್ತು. 

ಭಾರತೀಯರು ಅತಿಯಾಗಿ ಪೋಲುಮಾಡುತ್ತಿರುವ ನೀರಿನ ಬಗ್ಗೆ ಒಂದಿಷ್ಟು ಅರಿವು ಮೂಡಿಸಬಲ್ಲ ಮಾಹಿತಿಯೊಂದು ಈ ವರದಿಯಲ್ಲಿ ಸೇರಿತ್ತು. ಪ್ರಪಂಚದ ಜನರೆಲ್ಲರೂ ಒಂದು ದಿನದಲ್ಲಿ ಬಳಸುವ ನೀರಿನ ಶೇ. ೨೫ ರಷ್ಟು ಪಾಲನ್ನು ಬಳಸುವವರು ಭಾರತೀಯರೇ ಆಗಿದ್ದಾರೆ. ಭಾರತೀಯರು ಒಂದು ವರ್ಷದಲ್ಲಿ ಬಳಸುವ ನೀರಿನ ಪ್ರಮಾಣವು ಅಂದು ೨೩೦ ಕ್ಯುಬಿಕ್ ಕಿಲೋ ಲೀಟರ್ ಗಳಾಗಿತ್ತು!. 

ದೇಶದ ವಿವಿಧ ರಾಜ್ಯಗಳ ಕೃಷಿಕರು ಬಳಸುತ್ತಿದ್ದ ಶೇ.೬೫ ರಷ್ಟು ನೀರು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಪೂರೈಸುತ್ತಿದ್ದ ಶುದ್ಧೀಕರಿಸಿದ ಕುಡಿಯುವ ನೀರಿನ ಶೇ. ೮೦ ರಷ್ಟನ್ನು ಪಡೆದುಕೊಳ್ಳಲು ಅಂತರ್ಜಲ ಮತ್ತು ಭೂಜಲ ಮೂಲಗಳನ್ನೇ ಅವಲಂಬಿಸಿವೆ. 

ಭಾರತದಲ್ಲಿರುವ ೫೭೨೩ ಭೂಜಲ ಕ್ಷೇತ್ರಗಳಲ್ಲಿ ೧೬೧೫ ಕ್ಷೇತ್ರಗಳು ಅತಿ ಗಂಭೀರ ಅಥವಾ ಅತಿಯಾಗಿ ಬಳಸಲ್ಪಡುವ ಸ್ಥಿತಿಯಲ್ಲಿವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಭೂಜಲ ಪ್ರಾಧಿಕಾರವು ಇವುಗಳಲ್ಲಿನ ೧೦೮ ಪ್ರಮುಖ ಕ್ಷೇತ್ರಗಳನ್ನು ಸಂರಕ್ಷಿಸಲು ಐದುವರ್ಷಗಳ ಹಿಂದೆಯೇ ಅವಶ್ಯಕ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಕೇಂದ್ರ ಭೂಜಲ ಪ್ರಾಧಿಕಾರ ಮತ್ತು ಕೆಲ ರಾಜ್ಯ ಸರ್ಕಾರಗಳ ಬಳಿ ಭೂಜಲ ಸಂರಕ್ಷಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಅವಶ್ಯಕ ಸಿಬಂದಿಗಳೇ ಇರದಿದ್ದ ಕಾರಣದಿಂದಾಗಿ, ಇದು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗಿರಲಿಲ್ಲ. 

ಪರಿಹಾರವೇನು?

ನಮ್ಮ ಮುಂದಿನ ಪೀಳಿಗೆಯನ್ನು ಜಲಕ್ಷಾಮದ ಸಮಸ್ಯೆ ಬಾಧಿಸದಂತೆ ತಡೆಗಟ್ಟಲು, ನಾವಿಂದು ಅನಾವಶ್ಯಕ ಹಾಗೂ ಅತಿಯಾಗಿ ಪೋಲುಮಾಡುತ್ತಿರುವ ನೀರಿನ ಪ್ರಮಾಣವನ್ನು ನಿಶ್ಚಿತವಾಗಿಯೂ ಕಡಿಮೆ ಮಾಡಲೇಬೇಕು. ಇದರೊಂದಿಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಜಲಸಂರಕ್ಷಣೆಯ ಕೆಲವೊಂದು ಉಪಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಅನುಷ್ಠಾನಿಸಲೇಬೇಕು. 

ರೈತಾಪಿ ಜನರು ಬೆಳೆಯುವ ಬೆಳೆಗಳಿಗೆ ಅಗತ್ಯವಿರುವಷ್ಟೇ ನೀರುಣಿಸುವ ವೈಜ್ಞಾನಿಕ ಮಾಹಿತಿಗಳನ್ನು ಕೃಷಿಕರಿಗೆ ಸರ್ಕಾರವೇ ಒದಗಿಸಬೇಕು. ಜೊತೆಗೆ ರೈತರಿಗೆ ಉಚಿತವಾಗಿ ವಿದ್ಯುತ್ ಒದಗಿಸುತ್ತಿರುವುದರಿಂದ ದಿನದಲ್ಲಿ ಹಲವಾರು ಘಂಟೆಗಳ ಕಾಲ ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದ ನೀರನ್ನು ಪೋಲುಮಾಡುವುದನ್ನು ನಿಯಂತ್ರಿಸಬೇಕು. ಇದಕ್ಕಾಗಿ ರೈತರು ಬಳಸುವ ವಿದ್ಯುತ್ತಿಗೆ ಒಂದಿಷ್ಟು ಶುಲ್ಕವನ್ನು ವಿಧಿಸಬೇಕು. ಸರ್ಕಾರದ ಅನುಮತಿ ಇಲ್ಲದೇ ಖಾಸಗಿ ವ್ಯಕ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಯಂತ್ರಿಸಬೇಕು. ಅದರಲ್ಲೂ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದ ಸ್ಥಳಗಳಲ್ಲಿ, ಇನ್ನಷ್ಟು ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಷೇಧಿಸಬೇಕು. ಇದಕ್ಕೆ ಬದಲಾಗಿ ತೆರೆದ ಮತ್ತು ಕೊಳವೆ ಬಾವಿಗಳ ಜಲಮರುಪೂರಣವನ್ನು ಕಡ್ಡಾಯಗೊಳಿಸಬೇಕು. 

ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಮಳೆನೀರಿನ ಕೊಯ್ಲನ್ನು ಕಡ್ಡಾಯಗೊಳಿಸಬೇಕು. ಕೆರೆ ಮತ್ತು ತೆರೆದ ಬಾವಿಗಳ ಹೂಳನ್ನು ತೆಗೆಸುವುದರೊಂದಿಗೆ, ಕಾರಣಾಂತರಗಳಿಂದ ಮುಚ್ಚಿರುವ ಕೆರೆ- ಬಾವಿಗಳನ್ನು ಮತ್ತೆ ಪುನರುಜ್ಜೀವನಗೊಳಿಸಲೇಬೇಕು. ನಗರ - ಮಹಾನಗರಗಳಲ್ಲಿನ ಬಹುಮಹಡಿ ಕಟ್ಟಡಗಳು, ಬೃಹತ್ ಉದ್ದಿಮೆಗಳು ಮತ್ತು ಅನ್ಯ ವಾಣಿಜ್ಯ ಕಟ್ಟಡಗಳಿಂದ ವಿಸರ್ಜಿಸಲ್ಪಡುವ ಕಲುಷಿತ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಮರುಬಳಕೆ ಮಾಡಬಲ್ಲ ಘಟಕಗಳ ಸ್ಥಾಪನೆಯನ್ನು ಕಡ್ಡಾಯಗೊಳಿಸಬೇಕು. 

ಸ್ಥಳೀಯ ಸಂಸ್ಥೆಗಳು ಜನರಿಗೆ ಪೂರೈಕೆಮಾಡುವ ಶುದ್ಧೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಗಲುವ ಸಂಪೂರ್ಣ ವೆಚ್ಚವನ್ನು ಜನರಿಂದಲೇ ವಸೂಲು ಮಾಡಬೇಕು. ತತ್ಪರಿಣಾಮವಾಗಿ ಅಲ್ಪಬೆಲೆಗೆ ನಿರಾಯಾಸವಾಗಿ ಲಭಿಸುವ ಶುದ್ಧೀಕರಿಸಿದ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಬಹುದಾಗಿದೆ. 

ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಹಾಗೂ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ, ದೇಶದ ಪ್ರತಿಯೊಬ್ಬ ಪ್ರಜೆಯೂ ಜಲಸಂರಕ್ಷಣೆಯ ಉಪಕ್ರಮಗಳನ್ನು ಸ್ವಯಂಪ್ರೇರಿತರಾಗಿ ಅನುಷ್ಠಾನಗೊಳಿಸಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ವಿಶ್ವಬ್ಯಾಂಕ್ ವರದಿಯಲ್ಲಿ ನಮೂದಿಸಿದಂತೆ, ದೇಶದ ಜಲಮೂಲಗಳು ಸದ್ಯೋಭವಿಷ್ಯದಲ್ಲಿ ನಶಿಸಲಿವೆ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 




Friday, May 6, 2016

DO NOT WASTE WATER


                    ಜೀವಜಲವನ್ನು ಅನಾವಶ್ಯಕವಾಗಿ ಪೋಲುಮಾಡದಿರಿ

ಕೆಲವೇ ದಶಕಗಳ ಹಿಂದೆ ಹಗಲಿರುಳು ಸುರಿಯುತ್ತಿದ್ದ ಮುಂಗಾರು ಮಳೆಯು ಕಾಲಕ್ರಮೇಣ ಕ್ಷಯಿಸುತ್ತಾ ಬಂದು ವರುಷಗಳೇ ಸಂದಿವೆ. ಥಟ್ಟನೆ ಬಂದೆರಗಿ ಅಷ್ಟೇ ವೇಗವಾಗಿ ಅದೃಶ್ಯವಾಗುವ ಇಂದಿನ ಮುಂಗಾರು ಮಳೆ ಮತ್ತು ಎಡೆಬಿಡದೆ ಧೋ ಎಂದು ಸುರಿಯುತ್ತಿದ್ದ ಹಿಂದಿನ ಜಡಿಮಳೆಗಳಿಗೆ ಅಜಗಜಾಂತರ ವ್ಯತ್ಯಾಸವೂ ಇದೆ. ಮುಂಗಾರು ಮಳೆಯ ಕೊರತೆ ಮತ್ತು ಹೆಚ್ಚುತ್ತಿರುವ ನೀರಿನ ಬಳಕೆಗಳು ಸುದೀರ್ಘಕಾಲದ ಬಳಿಕ ಜಲಕ್ಷಾಮಕ್ಕೆ ಕಾರಣವೆನಿಸಿದೆ. 

ಜಲಕ್ಷಾಮದ ಸಮಸ್ಯೆ 

ಬೆಳಗಿನ ಜಾವ ಸೂರಿನ ಮೇಲೆ ಬೀಳುತ್ತಿದ್ದ ಮಳೆನೀರಿನ ಸದ್ದಿಗೆ ಎಚ್ಚರವಾಗುತ್ತಿದ್ದ ಹಾಗೂ ಮಳೆಯ ಸದ್ದನ್ನು ಆಲಿಸುತ್ತಾ ನಿದ್ರೆಗೆ ಜಾರುತ್ತಿದ್ದ ದಿನಗಳು ಇದೀಗ ಕೇವಲ ನೆನಪುಗಳಾಗಿವೆ. ಬಾವಿ, ಕೆರೆ, ತೊರೆ ಮತ್ತು ಸದಾ ತುಂಬಿರುತ್ತಿದ್ದ ಹಾಗೂ ಜಲಕ್ಷಾಮ ಎಂದರೇನೆಂದು ಅರಿತಿರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯಲೂ ನೀರಿಲ್ಲದಿರುವುದು ಸಮಸ್ಯೆಯ ಗಂಭೀರತೆಯನ್ನು ಸಾರುತ್ತಿದೆ. ಪ್ರಸ್ತುತ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಈ ಬಾರಿ ಕಣ್ಮರೆಯಾಗಿರುವ ಮುಂಗಾರು ಪೂರ್ವ ಮಳೆಗಳ ಸಂಯುಕ್ತ ಪರಿಣಾಮದಿಂದಾಗಿ  ಪ್ರಾಕೃತಿಕ ಜಲಮೂಲಗಳಾದ ಬಾವಿ, ಕೆರೆ, ತೊರೆ ಮತ್ತು ನದಿಗಳು ಈಗಾಗಲೇ ಬತ್ತಿ ಬರಡಾಗಿವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯು ಪುನರಪಿ ಕಾಡದಂತೆ ಹಾಗೂ ಪಾತಾಳವನ್ನು ತಲುಪಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು, ಕೊಳವೆಬಾವಿಗಳಿಗೆ ಜಲ ಮರುಪೂರಣ ಮತ್ತು ಮಳೆನೀರಿನ ಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾಗಿದೆ. ಜೊತೆಗೆ ನಾವಿಂದು ಅನಾವಶ್ಯಕ ಹಾಗೂ ಅತಿಯಾಗಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. 

ಜಗತ್ತಿನ ಜಲಸಂಪನ್ಮೂಲದ ಶೇ. ೪ ರಷ್ಟನ್ನು ಹೊಂದಿರುವ ಭಾರತವು ಕೆಲವೇ ವರ್ಷಗಳ ಹಿಂದೆ " ಜಲ ಸಮೃದ್ಧ " ದೇಶವಾಗಿತ್ತು. ಅಗಾಧ ಪ್ರಮಾಣದ ಜಲ ಸಂಪನ್ಮೂಲಗಳಿದ್ದರೂ, ೨೦೧೧ ರಲ್ಲಿ ನಮ್ಮ ದೇಶವು " ನೀರಿನ ಕೊರತೆಯ ಸಮಸ್ಯೆ " ಇರುವ ರಾಷ್ಟ್ರಗಳ ಯಾದಿಯಲ್ಲಿ ಸೇರ್ಪಡೆಗೊಂಡಿತ್ತು. ಇದಕ್ಕೆ ನಿರ್ದಿಷ್ಟ ಕಾರಣವೂ ಇದ್ದಿತು. 

ಬೇಡಿಕೆ - ಲಭ್ಯತೆ 

ಒಂದೆರಡು ವರ್ಷಗಳ ಹಿಂದೆ ಭಾರತದಲ್ಲಿ ನೀರಿನ ಬೇಡಿಕೆಯ ಪ್ರಮಾಣವು ೭೧೮ ಬಿಲಿಯನ್ ( ದಶಲಕ್ಷ ಕೋಟಿ ) ಕ್ಯುಬಿಕ್ ಮೀಟರ್ ಗಳಾಗಿದ್ದು, ೨೦೫೦ ರಲ್ಲಿ ಇದು ೮೩೩ ಬಿ. ಕ್ಯು. ಮೀಟರ್ ತಲುಪಲಿದೆ ಎಂದು ಊಹಿಸಲಾಗಿತ್ತು. ಇದರಲ್ಲಿ ಕೃಷಿ ಜಮೀನಿನ ನೀರಾವರಿಗಾಗಿ ಬಳಸಲ್ಪಡುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ೫೫೭ ಬಿ.ಕ್ಯು. ಮೀಟರ್ ಆಗಿದ್ದು, ೨೦೫೧ ರಲ್ಲಿ ಇದು ೮೦೭ ಬಿ.ಕ್ಯು. ಮೀಟರ್ ತಲುಪಲಿದೆ ಎನ್ನಲಾಗಿತ್ತು. ಇದೇ ಸಂದರ್ಭದಲ್ಲಿ ದೇಶದ ಜನತೆಯ ಗೃಹಬಳಕೆಯ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೪೩ ಬಿ.ಕ್ಯು. ಮೀ. ಆಗಿದ್ದು, ೨೦೨೫ ರಲ್ಲಿ ೬೨ ಹಾಗೂ ೨೦೫೦ ರಲ್ಲಿ ೧೧೧ ಬಿ.ಕ್ಯು.ಮೀ ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಉದ್ದಿಮೆಗಳು ಬಳಸುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೩೭ ಬಿ.ಕ್ಯು.ಮೀ. ಆಗಿದ್ದು, ೨೦೨೫ ರಲ್ಲಿ ಇದು ೬೭ ಮತ್ತು ೨೦೫೦ ರಲ್ಲಿ ೮೧ ಬಿ. ಕ್ಯು. ಮೀ. ಆಗಲಿದೆ ಎಂದು ಊಹಿಸಲಾಗಿತ್ತು. ಅದೇ ರೀತಿಯಲ್ಲಿ ೨೦೧೦೧ ರಲ್ಲಿ ವಿದ್ಯುತ್ ಉತ್ಪಾದನೆಗಾಗಿ ೧೯ ಬಿ.ಕ್ಯು.ಮೀ. ಬಳಕೆಯಾಗಿದ್ದು, ೨೦೨೫ ರಲ್ಲಿ ಇದು ೩೦ ಮತ್ತು ೨೦೫೦ ರಲ್ಲಿ ೭೦ ಬಿ.ಕ್ಯು.ಮೀ. ಮೀರಲಿದೆ ಎಂದು ಅಂದಾಜಿಸಲಾಗಿದೆ. ಈ ರೀತಿಯಲ್ಲಿ ವಿವಿಧ ಉದ್ದೇಶಗಳಿಗಾಗಿ ನಮಗಿಂದು ಅಗಾಧ ಪ್ರಮಾಣದ ನೀರಿನ ಅವಶ್ಯಕತೆ ಇದ್ದರೂ, ದೇಶದ ಅನೇಕ ಭಾಗಗಳಲ್ಲಿ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಏಕೆಂದರೆ ನಮ್ಮಲ್ಲಿ ಸುರಿಯುವ ಮಳೆನೀರಿನ ಶೇ. ೬೫ ರಷ್ಟು ಪಾಲು ಸಮುದ್ರವನ್ನು ಸೇರುತ್ತಿದೆ. 

ಭಾರತೀಯರು ಒಂದು ವರ್ಷದಲ್ಲಿ ೨೧೦ ಬಿ.ಕ್ಯು.ಮೀ. ಗೂ ಅಧಿಕ ಪ್ರಮಾಣದ ಅಂತರ್ಜಲವನ್ನು ಬಳಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎನ್ನಲಾಗಿದೆ. ನಮ್ಮ ದೇಶದಲ್ಲಿನ ಶೇ. ೬೦ ರಷ್ಟು ನೀರಾವರಿ ಜಮೀನಿಗೆ ಇದೇ ಅಂತರ್ಜಲವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ದೇಶದ ಶೇ. ೬೦ ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಕೊರತೆ ಬಾಧಿಸುತ್ತಿದೆ. 

೨೦೧೦ ರಲ್ಲಿ ದೇಶದ ಜನಸಂಖ್ಯೆಯು ೧.೦೨೯ ಬಿಲಿಯನ್ ಆಗಿದ್ದು, ಅಂದಿನ ನೀರಿನ ಲಭ್ಯತೆಯ ಪ್ರಮಾಣವು ಒಂದುವರ್ಷದಲ್ಲಿ ತಲಾ ೧೮೧೬ ಕ್ಯು. ಮೀ. ಆಗಿತ್ತು. ೨೦೧೧ ರಲ್ಲಿ ಜನಸಂಖ್ಯೆಯು ೧.೨೧೦ ಬಿ. ಹಾಗೂ ನೀರಿನ ಲಭ್ಯತೆಯ ಪ್ರಮಾಣವು ತಲಾ ೧೫೪೫ ಆಗಿತ್ತು. ೨೦೨೫ ರಲ್ಲಿ ದೇಶದ ಜನಸಂಖ್ಯೆಯು ೧.೩೯೪ ಬಿ. ( ಅಂದಾಜು ) ಮತ್ತು ನೀರಿನ ಲಭ್ಯತೆ ೧೩೪೦ ಮತ್ತು ೨೦೫೦ ರಲ್ಲಿ ಜನಸಂಖ್ಯೆ ೧.೬೪೦ ಬಿ. ಹಾಗೂ ನೀರಿನ ಲಭ್ಯತೆಯು ೧೧೪೦ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಅರ್ಥಾತ್, ದೇಶದ ಜನಸಂಖ್ಯೆ ಹೆಚ್ಚಿದಂತೆಯೇ, ನೀರಿನ ಲಭ್ಯತೆಯ ಪ್ರಮಾಣವು ಕುಸಿಯಲಿದೆ. 

ಕಲುಷಿತ ನೀರು 

ದೇಶದಲ್ಲಿನ ಉದ್ದಿಮೆಗಳು ಬಳಸಿ ವಿಸರ್ಜಿಸುವ ಶೇ. ೯೦ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸಿ ನದಿ - ಸಮುದ್ರಗಳಿಗೆ ವಿಸರ್ಜಿಸುತ್ತಿವೆ. ಆದರೆ ಈ ಶುದ್ಧೀಕರಿಸಿದ ಕಲುಷಿತ ನೀರು ಪರಿಸರಸ್ನೇಹಿ ಮಾನದಂಡಗಳಿಗೆ ಅನುಗುಣವಾಗಿಲ್ಲ. ನಮ್ಮ ದೇಶದಲ್ಲಿ ಶೇ.೭೦ ರಷ್ಟು ಪ್ರಮಾಣದ ಜಲಪ್ರದೂಷಣೆಗೆ ನಮ್ಮ ನಗರ - ಮಹಾನಗರಗಳು ಉತ್ಪಾದಿಸುತ್ತಿರುವ ತ್ಯಾಜ್ಯಗಳೇ ಕಾರಣವೆನಿಸಿವೆ. ದೇಶದ ಶೇ. ೩೬ ರಷ್ಟು ಜನರು ವಾಸಿಸುವ ನಗರಗಳು ಬೃಹತ್ ಪ್ರಮಾಣದ ಕಲುಷಿತ ನೀರನ್ನು ಉತ್ಪಾದಿಸಿ ವಿಸರ್ಜಿಸುತ್ತಿವೆ. ಅವಶ್ಯಕ ಮೂಲಸೌಕರ್ಯಗಳ ಕೊರತೆಯಿಂದಾಗಿ ಸ್ಥಳೀಯ ಸಂಸ್ಥೆಗಳು ಕೇವಲ ಶೇ. ೩೧ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸುತ್ತಿವೆ. ಹಾಗೂ ಇನ್ನುಳಿದ ಶೇ. ೬೯ ರಷ್ಟು ಕಲುಷಿತ ನೀರನ್ನು ಚರಂಡಿಗಳಲ್ಲಿ ವಿಸರ್ಜಿಸುತ್ತಿವೆ. ಈ ಕಲುಷಿತ ನೀರನ್ನು ಶುದ್ಧೀಕರಿಸಿ ಅನ್ಯ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಹಾಗೂ ಇದಕ್ಕಾಗಿ ವಿವಿಧ ಸಾಮರ್ಥ್ಯದ ಜಲಶುದ್ಧೀಕರಣ ಸ್ಥಾವರಗಳು ಲಭ್ಯವಿದೆ. ಗಣನೀಯ ಪ್ರಮಾಣದ ಕಲುಷಿತ ನೀರನ್ನು ಚರಂಡಿಗಳಿಗೆ ವಿಸರ್ಜಿಸುವ ಪ್ರತಿಯೊಂದು ಕಟ್ಟಡ, ಉದ್ದಿಮೆ ಇತ್ಯಾದಿಗಳು ಕಡ್ಡಾಯವಾಗಿ ಜಲಶುದ್ಧೀಕರಣ ಸ್ಥಾವರಗಳನ್ನು ಸ್ಥಾಪಿಸುವಂತೆ ಸರ್ಕಾರವು ಆದೇಶಿಸಿದಲ್ಲಿ, ಬೃಹತ್ ಪ್ರಮಾಣದ ನೀರಿನ ಉಳಿತಾಯವಾಗಲಿದೆ. 

ಪರಿಹಾರವೇನು?

ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ - ಪಟ್ಟಣಗಳಲ್ಲಿರುವ ಪ್ರತಿಯೊಂದು ಕಟ್ಟಡಗಳಲ್ಲೂ ಮಳೆನೀರು ಕೊಯ್ಲನ್ನು ಕಡ್ಡಾಯವಾಗಿಸಬೇಕು. ಇದರಿಂದಾಗಿ ನಾವಿಂದು ಬಳಸದೇ ಇರುವ ಶೇ. ೬೫ ರಷ್ಟು ಮಳೆನೀರನ್ನು ಉಳಿಸಿ ಬಳಸಬಹುದಾಗಿದೆ. 

ಅಂತೆಯೇ ಕಲುಷಿತ ಜಲಮೂಲಗಳಲ್ಲಿನ ನೀರನ್ನು ಶುದ್ಧೀಕರಿಸಲು ಲಭ್ಯವಿರುವ ೧೩೦ ಕ್ಕೂ ಅಧಿಕ ವಿಧದ ಸಸ್ಯಗಳು ಮತ್ತು ಸೂಕ್ಷ್ಮಾಣುಜೀವಿಗಳನ್ನೂ ಬಳಸುವ ಮೂಲಕ, ಇಂತಹ ನೀರಿನ ಗುಣಮಟ್ಟಗಳನ್ನು ಹೆಚ್ಚಿಸಬೇಕು. ಜೊತೆಗೆ ಇಂತಹ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಮತ್ತಷ್ಟು ಜನರು ಇವುಗಳನ್ನು ಬಳಸುವಂತಾಗಬೇಕು. 

ಅಂತಿಮವಾಗಿ ಅತ್ಯಧಿಕ ಪ್ರಮಾಣದ ಜಲಪ್ರದೂಷಣೆಗೆ ಕಾರಣವೆನಿಸುತ್ತಿರುವ ಬೃಹತ್ ಉದ್ದಿಮೆ - ಕೈಗಾರಿಕಾ ಘಟಕಗಳು ಹಾಗೂ ನಗರ - ಮಹಾನಗರಗಳು, ಈ ಸಮಸ್ಯೆಯನ್ನು ಸ್ವಯಂ ಪರಿಹರಿಸಬೇಕು ಎನ್ನುವ ಕಾನೂನನ್ನು ರೂಪಿಸಿ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇವೆಲ್ಲವುಗಳೊಂದಿಗೆ ನಾವಿಂದು ಅತಿಯಾಗಿ ಬಳಸಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸಲು, ದೇಶದ ಪ್ರತಿಯೊಬ್ಬ ಪ್ರಜೆಯೂ ಧೃಢ ಸಂಕಲ್ಪ ಮಾಡಬೇಕು. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು   


Tuesday, May 3, 2016

HOTTEST SUMMER AND ................


             ಧಗಧಗಿಸುವ ಬೇಸಗೆ : ಜೊತೆಗೆ ಜಲಕ್ಷಾಮದ ಬೇಗೆ 

ದಕ್ಷಿಣ ಕನ್ನಡದ ಜನತೆ ಈ ಬಾರಿ ಇದುವರೆಗೆ ಕಂಡುಕೇಳರಿಯದಂತಹ ಸೆಖೆ ಮತ್ತು ಜಲಕ್ಷಾಮದ ಸಮಸ್ಯೆಯಿಂದ ಬಸವಳಿದಿದ್ದಾರೆ. ಜಿಲ್ಲೆಯ ಸರಾಸರಿ ತಾಪಮಾನವು ೩೮ ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜಲಕ್ಷಾಮದ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವೆನಿಸುತ್ತಿದೆ. ಕೆರೆ, ತೊರೆ, ಬಾವಿಗಳು ಮಾತ್ರವಲ್ಲ, ನದಿಗಳೂ ಬತ್ತಿಹೋಗಿವೆ. ಕುಡಿಯಲು ಶುದ್ಧವಾದ ನೀರಿಲ್ಲದೇ ಜನರು ಹೈರಾಣಾಗಿದ್ದಾರೆ. ರಾಜ್ಯದ ೨೭ ಜಿಲ್ಲೆಗಳು ಹಾಗೂ ೧೩೦ ತಾಲೂಕುಗಳು ಬರದ ಬೇಗೆಯಿಂದ ಬಳಲುತ್ತಿವೆ. ಆದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಬರ ತಲೆದೋರದೇ ಇದ್ದರೂ, ಸಹಿಸಲಾರದ ಬೇಸಗೆಯ ಧಗೆ ಮತ್ತು ಕುಡಿಯುವ ನೀರಿನ ಕೊರತೆ ಈ ಜಿಲ್ಲೆಗಳ ಜನತೆಯನ್ನು ಬಾಧಿಸುತ್ತಿವೆ. 

ಕಾರಣವೇನು?
ಪ್ರಾಯಶಃ ಹೆಚ್ಚುತ್ತಿರುವ ಜನ - ವಾಹನಗಳ ಸಂಖ್ಯೆ, ವೃದ್ಧಿಸುತ್ತಿರುವ ಕಾಂಕ್ರೀಟ್ ಕಾಡುಗಳ ಸಂಖ್ಯೆ, ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಬೃಹತ್ ಉದ್ದಿಮೆಗಳು, ನಾವಿಂದು ಅತಿಯಾಗಿ ಹಾಗೂ ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳು ಮತ್ತು ಪೋಲು ಮಾಡುತ್ತಿರುವ ನೀರಿನ ಪ್ರಮಾಣ, ವೈವಿಧ್ಯಮಯ ಕಾರಣಗಳಿಂದಾಗಿ ಸಂಭವಿಸುತ್ತಿರುವ ಪರಿಸರ ಮಾಲಿನ್ಯ, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಹಸಿರುಮನೆ ಅನಿಲಗಳ ದುಷ್ಪರಿಣಾಮಗಳೊಂದಿಗೆ, ಕ್ಷಯಿಸುತ್ತಿರುವ ಮುಂಗಾರು ಮತ್ತು ಹಿಂಗಾರು ಮಳೆಗಳ ಪ್ರಮಾಣಗಳೂ ಈ ಗಂಭೀರ ಸಮಸ್ಯೆಗಳಿಗೆ ಪ್ರಮುಖ ಕಾರಣವೆನಿಸಿವೆ. 

ಮಳೆಯ ಕೊರತೆ 

ಕೆಲವೇ ದಶಕಗಳ ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರುಮಳೆಯು ಹಗಲಿರುಳು ಸುರಿಯುತ್ತಿದ್ದುದನ್ನು ನೀವೂ ಕಂಡಿರಬಹುದು. ಅಂತೆಯೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭತ್ತದ ಗದ್ದೆಗಳಲ್ಲಿ ಸಂಗ್ರಹವಾದ ಹಾಗೂ ದೊಡ್ಡ ಗಾತ್ರದ ಚರಂಡಿಗಳಲ್ಲಿ ನಿರ್ಮಿಸುತ್ತಿದ್ದ ಒಡ್ಡುಗಳಿಂದಾಗಿ ಸಂಗ್ರಹವಾಗುತ್ತಿದ್ದ ಮಳೆನೀರು ಅಯಾಚಿತವಾಗಿ ಭೂಗರ್ಭವನ್ನು ಸೇರುವ ಮೂಲಕ ಅಂತರ್ಜಲದ ಪ್ರಮಾಣವು ಹೆಚ್ಚುತ್ತಿತ್ತು. ಇದಲ್ಲದೇ ಪ್ರತಿಯೊಂದು ಊರುಗಳಲ್ಲೂ ಕಾಣಸಿಗುತ್ತಿದ್ದ ಕೆರೆ - ತೊರೆಗಳು ಮತ್ತು ತುಂಬಿಹರಿಯುತ್ತಿದ್ದ ನದಿಗಳಿಂದಾಗಿ ಜಲಮರುಪೂರಣದ ಪ್ರಕ್ರಿಯೆ ಸ್ವಾಭಾವಿಕವಾಗಿಯೇ ನಡೆಯುತ್ತಿತ್ತು. ಬಹುತೇಕ ಮನೆಗಳಲ್ಲಿ ಕುಡಿಯುವ ನೀರಿನ ಬಾವಿಗಳು ಅಥವಾ ಹಳ್ಳಿಗಳಲ್ಲಿನ ಕೆರೆಗಳು, ಕಡು ಬೇಸಗೆಯ ದಿನಗಳಲ್ಲೂ ಬತ್ತುತ್ತಿರಲಿಲ್ಲ. ತತ್ಪರಿಣಾಮವಾಗಿ ಜಿಲ್ಲೆಯ ಜನತೆಗೆ ಜಲಕ್ಷಾಮದ ಬೇಗೆ ಏನೆಂದೇ ತಿಳಿದಿರಲಿಲ್ಲ. 

ಕಣ್ಮರೆಯಾಗುತ್ತಿರುವ ಬಾವಿಗಳು 

ಆದರೆ ಕಾಲಕ್ರಮೇಣ ಸರ್ಕಾರದ ವತಿಯಿಂದ ಜನತೆಗೆ ಶುದ್ಧೀಕರಿಸಿದ ಕುಡಿಯುವ ನೀರಿನ ಪೂರೈಕೆ ಆರಂಭವಾದಂತೆಯೇ, ನಗರವಾಸಿಗಳು ತಮ್ಮ ಬಾವಿಗಳಿಂದ ನೀರನ್ನು ಸೇದುವ ಹವ್ಯಾಸವನ್ನು ತೊರೆಯಲಾರಂಭಿಸಿದ್ದರು. ಮುಂದಿನ ಕೆಲವೇ ವರ್ಷಗಳಲ್ಲಿ ಅನೇಕ ನಗರವಾಸಿಗಳು ತಮ್ಮ ಬಾವಿಗಳನ್ನೇ ಮುಚ್ಚಿಸಿದ್ದರು!. ಇದಕ್ಕೂ ಮಿಗಿಲಾಗಿ ಜಿಲ್ಲೆಯ ಬಹುತೇಕ ಊರುಗಳಲ್ಲಿ ಕಾಣಸಿಗುತ್ತಿದ್ದ ಸರ್ಕಾರಿ ಬಾವಿಗಳನ್ನು ಬಳಸುತ್ತಿದ್ದ ನೂರಾರು ಜನರು, ಸಾರ್ವಜನಿಕ ನಳ್ಳಿಗಳನ್ನು ಬಳಸಲು ಆರಂಭಿಸಿದ್ದರು. ಪುಕ್ಕಟೆಯಾಗಿ ಹಾಗೂ ಶಾರೀರಿಕ ಶ್ರಮವಿಲ್ಲದೇ ಶುದ್ಧೀಕರಿಸಿದ ಕುಡಿಯುವ ನೀರು ಲಭಿಸಲು ಆರಂಭವಾದ ಬಳಿಕ, ಜನರು ಬಾವಿಯ ನೀರಿನ ಬಳಕೆಯನ್ನೇ ನಿಲ್ಲಿಸಿದ್ದ ಪರಿಣಾಮವಾಗಿ ನಿರುಪಯುಕ್ತವೆನಿಸಿದ್ದ ಸಾರ್ವಜನಿಕ ಬಾವಿಗಳ ನೀರು, ಅಲ್ಪಾವಧಿಯಲ್ಲೇ ಕಲುಷಿತಗೊಂಡಿತ್ತು. ವಿಶೇಷವೆಂದರೆ ಇಂತಹ ನಿರುಪಯುಕ್ತ ಸರ್ಕಾರಿ ಬಾವಿಗಳನ್ನು ಸ್ವಚ್ಛಗೊಳಿಸಿ ಸಂರಕ್ಷಿಸಬೇಕಿದ್ದ ಸ್ಥಳೀಯ ಸಂಸ್ಥೆಗಳೇ ಇವುಗಳನ್ನು ಮುಚ್ಚಿಸಿದ್ದವು!. 

ಕೊಳವೆಬಾವಿಗಳ ಹಾವಳಿ 

ಕೆಲವರ್ಷಗಳ ಹಿಂದೆ ನಿರ್ದಿಷ್ಟ ಕಾರಣಗಳಿಂದಾಗಿ ಭತ್ತವನ್ನು ಬೆಳೆಯುವುದನ್ನು ನಿಲ್ಲಿಸಿದ್ದ ಜಿಲ್ಲೆಯ ಕೃಷಿಕರು, ತಮ್ಮ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ನೆಡಲು ಆರಂಭಿಸಿದ್ದರು. ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಗಗನಕ್ಕೇರಿದ ಪರಿಣಾಮವಾಗಿ ಆರಂಭವಾಗಿದ್ದ ಈ ಚಟುವಟಿಕೆಯು, ಕೃಷಿಕರು ತಮ್ಮ ಅಡಿಕೆ ತೋಟಗಳಿಗೆ ನೀರುಣಿಸಲು ಕೊಳವೆ ಬಾವಿಗಳನ್ನು ಕೊರೆಸುವ ಹಂತಕ್ಕೆ ತಲುಪಿತ್ತು. ವರುಷಗಳು ಉರುಳಿದಂತೆಯೇ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರವೂ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ಕೊಳವೆ ಬಾವಿಗಳನ್ನು ಕೊರೆಸಲು ಆರಂಭಿಸಿದ್ದವು. ಇದೀಗ ಬರಪೀಡಿತ ಪ್ರದೇಶಗಳಲ್ಲಿ ಮತ್ತಷ್ಟು ಕೊಳವೆ ಬಾವಿಗಳನ್ನು ಕೊರೆಸುತ್ತಿರುವ ಸರ್ಕಾರವು, ಅಂತರ್ಜಲದ ಮಟ್ಟವು ಇನ್ನಷ್ಟು ಕುಸಿಯಲು ಪರೋಕ್ಷವಾಗಿ ಕಾರಣೀಭೂತವಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕೆಲವೇ ವರ್ಷಗಳ ಹಿಂದೆ ೪೦೦ - ೬೦೦ ಅಡಿಗಳಷ್ಟು ಕೊರೆದಾಗ ಲಭಿಸುತ್ತಿದ್ದ ನೀರು, ಇದೀಗ ಬಲ್ಲವರು ಹೇಳುವಂತೆ ೧೦೦೦ ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಕೆಲವರ್ಷಗಳ ಹಿಂದೆಯೇ ರಾಜ್ಯ ಸರ್ಕಾರವು ಮಳೆನೀರಿನ ಕೊಯ್ಲು ಹಾಗೂ ಕೊಳವೆಬಾವಿಗಳಿಗೆ ಜಲಮರುಪೂರಣ, ಕೆರೆ, ತೊರೆ ಮತ್ತು ಬಾವಿಗಳ ಪುನಶ್ಚೇತನಗಳನ್ನು ಕ್ರಮಬದ್ಧವಾಗಿ ಹಾಗೂ ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದಲ್ಲಿ, ಇಂದು ತೀವ್ರಸ್ವರೂಪದ ಬರ ಮತ್ತು ಕುಡಿಯುವ ನೀರಿಗಾಗಿ ಪರದಾಡಬೇಕಾದಂತಹ ಸ್ಥಿತಿ ಉದ್ಭವಿಸುತ್ತಿರಲಿಲ್ಲ. 

ಕೊನೆಯ ಮಾತು 

ಅದೇನೇ ಇರಲಿ, ಪ್ರಸ್ತುತ ನಮ್ಮ ರಾಜ್ಯದ ಮತ್ತು ದೇಶದ ಅನೇಕ ರಾಜ್ಯಗಳನ್ನು ಪೀಡಿಸುತ್ತಿರುವ ಸಮಸ್ಯೆಗಳಿಗೆ ಹೆಚ್ಚುತ್ತಿರುವ ಜನಸಂಖ್ಯೆಯೂ ಕಾರಣ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಯಾವುದೇ ರಾಜಕೀಯ ಪಕ್ಷಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇವಲ ತಮ್ಮ ಮತಬ್ಯಾಂಕ್ ಬಗ್ಗೆ ಮಾತ್ರ ಚಿಂತಿಸುವ ರಾಜಕಾರಣಿಗಳು, ದೇಶದ ಜನತೆಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹರಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಭಾರತೀಯರನ್ನು ಎಡೆಬಿಡದೇ ಪೀಡಿಸುತ್ತಿರುವ ಬಹುತೇಕ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 



Sunday, May 1, 2016

INTERNATIONAL NOISE AWARENESS DAY

    

  ಶಬ್ದಮಾಲಿನ್ಯದ ಗದ್ದಲವನ್ನು ನಿಯಂತ್ರಿಸುವವರು ಯಾರು ?

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಎಪ್ರಿಲ್ ೨೭ ರಂದು " ಇಂಟರ್ನ್ಯಾಶನಲ್ ನೋಯ್ಸ್ ಅವೇರ್ನೆಸ್ ಡೇ " ಯನ್ನು ಆಚರಿಸಲಾಗುತ್ತದೆ. ದ ಸೆಂಟರ್ ಫಾರ್ ಹಿಯರಿಂಗ್  ಎಂಡ್  ಕಮ್ಯೂನಿಕೇಶನ್  ಈ ಕಾರ್ಯಕ್ರಮವನ್ನು ೧೯೯೬ ರಲ್ಲಿ ಆರಂಭಿಸಿದ್ದು, ಇದೀಗ ೨೧ ನೇ ವರ್ಷದ ಐ ಎನ್  ಎ ಡಿ ಕಾರ್ಯಕ್ರಮವು ಇಂದು ಜರಗಲಿದೆ. ಈ ಸಂದರ್ಭದಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಕಾಡುತ್ತಿರುವ " ಶಬ್ದಮಾಲಿನ್ಯದ ಸಮಸ್ಯೆ " ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 
 
ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸಲು ಭಾರತದ ಸಂವಿದಾನದಲ್ಲಿ ಅನೇಕ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಹಾಗೂ ಇದಕ್ಕಾಗಿಯೇ ಹಲವಾರು ಕಾನೂನು ಮತ್ತು ನೀತಿ ನಿಯಮಗಳನ್ನೂ ರೂಪಿಸಲಾಗಿದೆ.ಆದರೆ ಇವೆಲ್ಲವನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವ ಏಕಮಾತ್ರ ಕಾರಣದಿಂದಾಗಿ, ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳು ಮತ್ತು ಅಡ್ಡಿಆತಂಕಗಳನ್ನು ಎದುರಿಸಬೇಕಾಗುತ್ತಿದೆ. ಇಂತಹ ಸಮಸ್ಯೆಗಳಲ್ಲಿ " ಶಬ್ದ ಮಾಲಿನ್ಯ" ವೂ ಒಂದಾಗಿದೆ.
 
ನಿಮ್ಮೂರಿನ ರಸ್ತೆಗಳಲ್ಲಿ ನಡೆದಾಡುವಾಗ ನಿಮ್ಮನ್ನು ಬೆಚ್ಚಿಬೀಳಿಸುವಂತಹ ವಾಹನಗಳ ಕರ್ಕಶವಾದ ಹಾರ್ನ್ ಮತ್ತು ಸಭೆ - ಸಮಾರಂಭ ಮತ್ತಿತರ ಕಾರ್ಯಕ್ರಮಗಳ ಪ್ರಚಾರದ ಸಲುವಾಗಿ, ವಾಹನಗಳಲ್ಲಿ ಅಳವಡಿಸಿರುವ ಗಜಗಾತ್ರದ ಸ್ಪೀಕರ್ ಗಳಿಂದ ಹೊರಹೊಮ್ಮುವ ಕಿವಿಯ ತಮ್ಮಟೆ ಒಡೆದುಹೋಗುವಂತಹ ಸಂಗೀತ ಅಥವಾ ಪ್ರಚಾರಕರ ಕಿರುಚಾಟಗಳಿಂದ ಸಾಕಷ್ಟು ತೊಂದರೆಗಳನ್ನು ನೀವೂ ಅನುಭವಿಸಿರಲೇಬೇಕು. ಪರೀಕ್ಷೆಗಳ ಸಮಯದಲ್ಲಂತೂ, ಇಂತಹ ಸದ್ದು ಗದ್ದಲಗಳಿಂದ ವಿದ್ಯಾರ್ಥಿಗಳ ನೆಮ್ಮದಿಗೆ ಭಂಗಬರುವುದರಲ್ಲಿ ಸಂದೇಹವಿಲ್ಲ. ಆದರೆ ಕಾನೂನುಬಾಹಿರವಾಗಿ ಇಷ್ಟೊಂದು ಶಬ್ದಮಾಲಿನ್ಯವನ್ನು ಮಾಡುತ್ತಿರುವವರ ವಿರುದ್ಧ, ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುವುದೇ ಇಲ್ಲ. ತತ್ಪರಿಣಾಮವಾಗಿ ಈ ವಿಲಕ್ಷಣ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುತ್ತಲೇ ಇದೆ.
 
ಕಾನೂನುಬಾಹಿರ
 
ಸಾರಿಗೆ ಇಲಾಖೆಯ ನಿಯಮಗಳಂತೆ ನಗರಗಳಲ್ಲಿ ಕರ್ಕಶವಾದ ಹಾರ್ನ್ ಗಳನ್ನು ಬಳಸುವಂತಿಲ್ಲ. ವಿಶೇಷವಾಗಿ ಶಾಲಾಕಾಲೇಜುಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಮತ್ತು ಶುಶ್ರೂಷಾ ಕೇಂದ್ರಗಳ ಆಸುಪಾಸಿನಲ್ಲಿ ಮತ್ತು ಇತರ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ಕಶ ಹಾರ್ನ್ ಮತ್ತು ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ. ಅಂತೆಯೇ ಶಬ್ದಮಾಲಿನ್ಯ ನಿಯಂತ್ರಣ ಕಾಯಿದೆ ೨೦೦೦ ದ ನಿಯಮ ೩ ರನ್ವಯ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಉಚ್ಛ ನ್ಯಾಯಾಲಯ ಆದೇಶಿಸಿದೆ. ಇದಲ್ಲದೇ ರಾತ್ರಿ ೧೦ ಗಂಟೆಯಿಂದ ಬೆಳಗಿನ ಜಾವ ೬ ಗಂಟೆಯ ತನಕ ದ್ವನಿವರ್ಧಕಗಳನ್ನು ಬಳಸದಂತೆ ಸರ್ವೋಚ್ಛ ನ್ಯಾಯಾಲಯದ ಆದೇಶವಿದೆ. ಆದರೆ ಈ ಆದೇಶವನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ. ದೇಶದ ಪ್ರಜೆಗಳ ಮೂಲಭೂತ ಹಕ್ಕು ಮತ್ತು ಆರೋಗ್ಯಗಳಿಗೆ ಚ್ಯುತಿಯಾಗುವಂತಹ ಇಂತಹ ಕಾನೂನುಬಾಹಿರ ವರ್ತನೆಗಳಿಗೆ ಕಡಿವಾಣವನ್ನು ತೊಡಿಸಲೇಬೇಕಾಗಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ಇತ್ತೀಚೆಗೆ ರಾಜ್ಯದ ಉಚ್ಛ ನ್ಯಾಯಾಲಯವು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
 
ಪರವಾನಿಗೆಯ ನಿಯಮ
 
ಸಾಮಾನ್ಯವಾಗಿ ಖಾಸಗಿ ಆಥವಾ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಧ್ವನಿವರ್ಧಕಗಳನ್ನು ಬಳಸುವ ಮುನ್ನ ಸ್ಥಳೀಯ ಆರಕ್ಷಕ ಠಾಣೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳಬೆಕಾಗುತ್ತದೆ. ಈ ಅರ್ಜಿಯಲ್ಲಿ ನಮೂದಿಸಿರುವ ಒಂದು ಷರತ್ತಿನಂತೆ ದ್ವನಿವರ್ಧಕವನ್ನು ಯಾವುದೇ ಪ್ರಚಾರ ಅಥವಾ ಅಪಪ್ರಚಾರಕ್ಕಾಗಿ ಬಳಸುವಂತಿಲ್ಲ. ವಿಶೇಷವೆಂದರೆ ಅನುಮತಿಯನ್ನು ಪಡೆದುಕೊಳ್ಳುವ ಅಧಿಕತಮ ಜನರು ಇದನ್ನು ಕೇವಲ ಪ್ರಚಾರಕ್ಕಾಗಿಯೇ ಬಳಸುತ್ತಾರೆಯೇ ಹೊರತು ಅನ್ಯ ಉದ್ದೇಶಗಳಿಗಾಗಿ ಅಲ್ಲ !.
 
ಧ್ವನಿವರ್ಧಕದ ಬಳಕೆಗಾಗಿ ಅನುಮತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವಾಗ ಅರ್ಜಿದಾರರ ಹೆಸರು, ವಿಳಾಸ, ಅನುಮತಿ ಪಡೆಯುವ ಉದ್ದೇಶ, ಇದರ ಪರಿಮಿತಿ, ವ್ಯಾಪ್ತಿ, ದಿನಾಂಕ, ವೇಳೆಗಳೊಂದಿಗೆ ಉಪಯೋಗಿಸುವ ಸ್ಥಳದ ವಿವರಗಳನ್ನು ನಮೂದಿಸಬೇಕಾಗುವುದು. ಜೊತೆಗೆ ಅನುಮತಿ ಪತ್ರದಲ್ಲಿರುವ ಷರತ್ತುಗಳನ್ನು ಕಡ್ಡಾಯವಾಗಿ ಪರಿಪಾಲಿಸಬೇಕಾಗುತ್ತದೆ. ಇದಕ್ಕೆ ತಪ್ಪಿದಲ್ಲಿ ಧ್ವನಿವರ್ಧಕವನ್ನು ಮುಟ್ಟುಗೋಲು ಹಾಕುವುದದರೊಂದಿಗೆ ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ ೩೭ ರಂತೆ, ೩ ತಿಂಗಳ ಸಜೆ ಅಥವಾ ೫೦೦ ರೂ. ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ. ಬಹುತೇಕ ಜನರು ನಿರ್ದಿಷ್ಟ ಕಾರ್ಯಕ್ರಮವೊಂದರ ಪ್ರಚಾರದ ಸಲುವಾಗಿಯೇ ಅನುಮತಿಯನ್ನು ಪಡೆದುಕೊಳ್ಳುತ್ತಿದ್ದು, ಪರವಾನಿಗೆಯ ಷರತ್ತಿನಂತೆ ಧ್ವನಿವರ್ಧಕವನ್ನು ಪ್ರಚಾರ - ಅಪಪ್ರಚಾರಕ್ಕಾಗಿ ಬಳಸುವಂತಿಲ್ಲ. ಅರ್ಥಾತ್, ಸಂಗೀತ, ನಾಟಕ, ನೃತ್ಯ ಮತ್ತಿತರ ಸಬಾ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ !.
 
ಆದರೆ ಕಿವಿಗಡಚಿಕ್ಕುವ ಸದ್ದುಮಾಡುವ ಧ್ವನಿವರ್ಧಕಗಳ ಬಳಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಪರವಾನಿಗೆಯ ಶರತ್ತಿನ ಉಲ್ಲಂಘನೆಯ ಸಲುವಾಗಿ ಆರಕ್ಷಕರು ಇವುಗಳನ್ನು ಬಳಸುವವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಂಡಿರುವುದು ನಮಗಂತೂ ತಿಳಿದಿಲ್ಲ. ಇತ್ತೀಚಿಗೆ ರಾಜ್ಯದ ಉಚ್ಛ ನ್ಯಾಯಾಲಯವು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿರುವ ಪರಿಣಾಮ ಏನಾಗಲಿದೆ ಎಂದು ಕಾದುನೋಡಬೇಕಷ್ಟೇ.
 
ಡಾ.ಸಿ.ನಿತ್ಯಾನಂದ ಪೈ, ಪುತ್ತೂರು





 
 

Friday, April 22, 2016

WORMS IN HUMANS


                     ಜಂತುಹುಳವೆಂಬ ಒಡಲ ಪೀಡೆ! 

ನೀವು ಸೇವಿಸಿದ ಆಹಾರದಲ್ಲಿರುವ ಪೌಷ್ಠಿಕಾಂಶಗಳನ್ನು ಕಬಳಿಸುವ ಜಂತು ಹುಳಗಳು, ಅನೇಕ ವಿಧದ ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು. ಇವುಗಳ ಬಗ್ಗೆ ಅವಶ್ಯಕ ಮಾಹಿತಿಗಳನ್ನು ನೀಡಬೇಕಾದ ಹೊಣೆಗಾರಿಕೆ ವೈದ್ಯರ ಮೇಲಿದೆ. ಇದನ್ನು ತಿಳಿದುಕೊಳ್ಳುವ ತಾಳ್ಮೆ ರೋಗಿ ಮತ್ತು ಆತನ ಕುಟುಂಬದವರಿಗೂ ಇರಲೇಬೇಕಾಗುತ್ತದೆ. ಜಂತು ಹುಳಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಆರ್ಥಿಕವಾಗಿ ಹಿಂದುಳಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಜಂತು ಹುಳಗಳ ಬಾಧೆಯು, ಜನಸಾಮಾನ್ಯರಲ್ಲಿ ಅನೇಕ ವಿಧದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಿದೆ. ಅವಿದ್ಯಾವಂತರ ಅಜ್ಞಾನ, ಕಿತ್ತು ತಿನ್ನುವ ಬಡತನ, ಸಮರ್ಪಕ ಶೌಚಾಲಯಗಳ ಕೊರತೆ ಅಥವಾ ಅಭಾವ, ವೈಯುಕ್ತಿಕ ಆರೋಗ್ಯದ ಬಗ್ಗೆ ಪ್ರಾಥಮಿಕ ಮಾಹಿತಿಯ ಅಭಾವ, ಪರಿಸರ ಮಾಲಿನ್ಯ ಮತ್ತು ಪ್ರಮುಖವಾಗಿ ಶುದ್ಧೀಕರಿಸಿದ ಕುಡಿಯುವ ನೀರಿನ ಅಭಾವಗಳಂತಹ ಕಾರಣಗಳಿಂದಾಗಿ, ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಹುತೇಕ ರಾಷ್ಟ್ರಗಳು ಯಶಸ್ವಿಯಾಗಿಲ್ಲ. ನಮ್ಮ ದೇಶವೂ ಇದಕ್ಕೆ ಅಪವಾದವೆನಿಸಿಲ್ಲ. 

ಮನುಷ್ಯನ ಶರೀರದಲ್ಲಿ ಮನೆಮಾಡಿಕೊಂಡಿರುವ ಜಂತು ಹುಳಗಳು ಆತನು ಸೇವಿಸಿದ ಆಹಾರದಲ್ಲಿರುವ ಪೌಷ್ಠಿಕಾಂಶಗಳನ್ನು ಅನಾಯಾಸವಾಗಿ ಕಬಳಿಸುತ್ತವೆ. ತತ್ಪರಿಣಾಮವಾಗಿ ಪೋಷಕಾಂಶಗಳ ಕೊರತೆಯಿಂದ ಉದ್ಭವಿಸಬಲ್ಲ ವಿವಿಧ ವ್ಯಾಧಿಗಳು ತಲೆದೋರುವ ಸಾಧ್ಯತೆಗಳೂ ಇವೆ. ರಕ್ತಹೀನತೆ, ಅಂಗಾಂಗಗಳು ಹಾಗೂ ಇಂದ್ರಿಯಗಳಿಗೆ ಹಾನಿ ಸಂಭವಿಸುವುದು, ಕರುಳಿನಲ್ಲಿ ಅಡಚಣೆ ಉದ್ಭವಿಸುವುದು ಮತ್ತು ಮನುಷ್ಯನ ಸಾಮಾನ್ಯ ಆರೋಗ್ಯದ ಮಟ್ಟದಲ್ಲಿ ನ್ಯೂನತೆಗಳು ಉಂಟಾಗುವುದೇ ಮುಂತಾದ ಹತ್ತು ಹಲವು ಸಮಸ್ಯೆಗಳು ಜಂತು ಹುಳಗಳಿಂದ ಉದ್ಭವಿಸುವ ಸಾಧ್ಯತೆಗಳಿವೆ. ಅಂತೆಯೇ ವಿವಿಧ ರೀತಿಯ ಜಂತು ಹುಳಗಳಿಂದ ಸಾಮಾನ್ಯ ಅಥವಾ ಗಂಭೀರ ಕಾಯಿಲೆಗಳು ತಲೆದೋರುವ ಸಾಧ್ಯತೆಗಳೂ ಇವೆ. 

ವೈದ್ಯರು ಮತ್ತು ರೋಗಿಗಳ ನಡುವೆ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿರುವ ಜಂತು ಹುಳಗಳ ಸಮಸ್ಯೆಗಳಿಗೆ, ಅವಿದ್ಯಾವಂತರಲ್ಲಿ ಬೇರೂರಿರುವ ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳೇ ಕಾರಣವೆನಿಸಿವೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ.

ಕರಗಿಹೋದ ಹುಳಗಳು! 

ವಯೋವೃದ್ಧೆ ಕಮಲಮ್ಮನಿಗೆ ತನ್ನ ಏಕಮಾತ್ರ ಮೊಮ್ಮಗನೆಂದರೆ ಪಂಚಪ್ರಾಣ. ಮೂರು ವರ್ಷದ ಮುಕುಂದನು ದಿನವಿಡೀ ಹೊಟ್ಟೆಬಾಕನಂತೆ ತಿನ್ನುತ್ತಲೇ ಇದ್ದರೂ, ಆತನ ಕೈಕಾಲುಗಳು ಕಡ್ಡಿಗಳಂತಾಗಿ, ಹೊಟ್ಟೆ ಉಬ್ಬಿಕೊಂಡು ರೋಗಪೀಡಿತನಂತೆ ಕಾಣಿಸುತ್ತಿದ್ದನು.  

ಯುಗಾದಿಯಂದು ಪಟ್ಟಾಗಿ ತಿಂದಿದ್ದ ಮುಕುಂದನಿಗೆ ಸಂಜೆಯ ವೇಳೆಗೆ ಆಕಸ್ಮಿಕವಾಗಿ ವಾಂತಿ ಆರಂಭವಾಗಿತ್ತು. ವಾಂತಿಯೊಂದಿಗೆ ಆತನ ಬಾಯಿ ಮೂಗುಗಳಿಂದಲೂ ನಾಲ್ಕಾರು ಜಂತುಹುಳಗಳು ಹೊರಬಿದ್ದಿದ್ದವು. ಜಂತುಹುಳಗಳು ಉದ್ರೇಕಗೊಂಡಿರುವುದೇ ಇದಕ್ಕೆ ಕಾರಣವೆಂದು ನಿರ್ಧರಿಸಿದ್ದ ಕಮಲಮ್ಮನು ತಮ್ಮ ಕುಟುಂಬ ವೈದ್ಯರಿಂದ ಒತ್ತಾಯಪೂರ್ವಕವಾಗಿ ಇವುಗಳನ್ನು ಶಾಂತಗೊಳಿಸಬಲ್ಲ ಔಷದವನ್ನು ತಂದು ಮೊಮ್ಮಗನಿಗೆ ನೀಡಿದ್ದಳು. 

ಜಂತುಹುಳಗಳು ಉದ್ರೇಕಗೊಂಡು ವಾಂತಿಯಾಗುವ ಸಾಧ್ಯತೆಗಳು ಹಾಗೂ ಇವುಗಳನ್ನು ಶಾಂತಗೊಳಿಸಬಲ್ಲ ಔಷದಗಳೇ ಇಲ್ಲವೆನ್ನುವ ವಿಚಾರ ಅನಕ್ಷರಸ್ಥೆ ಕಮಲಮ್ಮನಿಗೆ ತಿಳಿದಿರಲಿಲ್ಲ. ಆದರೆ ಆಕೆಯೊಂದಿಗೆ ಚರ್ಚಿಸಲು ಸಿದ್ಧರಿಲ್ಲದ ವೈದ್ಯರು ವಾಂತಿ ನಿಲ್ಲಿಸುವ ಔಷದವನ್ನು ನೀಡಿದ್ದುದು ಮಾತ್ರ ಸುಳ್ಳೇನಲ್ಲ!.

ವೈದ್ಯರ ಔಷದ ಸೇವಿಸಿದ ಬಳಿಕ ಸ್ವಸ್ಥನಾದ ಮುಕುಂದನಿಗೆ ಮೂರುದಿನಗಳ ಬಳಿಕ ಜಂತುಹುಳಗಳ ನಿವಾರಣೆಗಾಗಿ ಔಷದವನ್ನು ನೀಡುವಂತೆ ವೈದ್ಯರು ಸೂಚಿಸಿದ್ದರು. ಆದರೆ " ಚಳಿಗಾಲ " ದಲ್ಲಿ ಹುಳಗಳ ನಿವಾರಣೆಗಾಗಿ ಔಷದವನ್ನು ನೀಡಿದರೂ, ಜಂತುಹುಳಗಳು ಹೊರಬೀಳುವುದಿಲ್ಲ ಎಂದು ಎಂದು ಧೃಢವಾಗಿ ನಂಬಿದ್ದ ಕಮಲಮ್ಮನು ವೈದ್ಯರ ಬಳಿ ಹೋಗಿರಲೇ ಇಲ್ಲ. ಏಕೆಂದರೆ ಜಂತುಹುಳಗಳ ನಿವಾರಣೆಗೆ ಚಳಿ - ಮಳೆಗಾಳವೆನ್ನದೇ, ವರ್ಷದ ೩೬೫ ದಿನಗಳಲ್ಲೂ ಔಷದವನ್ನು ನೀಡಬಹುದೆನ್ನುವ ವೈಜ್ಞಾನಿಕ ಸತ್ಯ ಆಕೆಗೆ ತಿಳಿದಿರಲಿಲ್ಲ.  

ಬೇಸಗೆಯ ದಿನಗಳು ಆರಂಭವಾದೊಡನೆ ಮೊಮ್ಮಗನ ಸಲುವಾಗಿ ಹುಳದ ಔಷದವನ್ನು ಪಡೆಯಲು ವೈದ್ಯರ ಬಳಿ ತೆರಳಿದ್ದ ಕಮಲಮ್ಮನಿಗೆ, ಹಲವಾರು ವರ್ಷಗಳಿಂದ ತಾನೂ ಈ ಔಷದವನ್ನು ಸೇವಿಸದಿದ್ದುದು ನೆನಪಾಗಿತ್ತು. ಇದೇ ಕಾರಣದಿಂದಾಗಿ ತಮಗಿಬ್ಬರಿಗೂ ಬೇಕಾಗುವಷ್ಟು ಔಷದವನ್ನು ಪಡೆದುಕೊಂಡು ಹಿಂದಿರುಗಿದ ಆಕೆ, ಅದೇ ರಾತ್ರಿ ಮೊಮ್ಮಗನಿಗೂ ಔಷದವನ್ನು ನೀಡಿ ತಾನೂ ಸೇವಿಸಿದ್ದಳು. 

ಮರುದಿನ ಮುಂಜಾನೆ ಪುಟ್ಟ ಮುಕುಂದನು ಮಲವಿಸರ್ಜನೆ ಮಾಡಿದಾಗ ಹೊರಬಿದ್ದ ಅಸಂಖ್ಯ ಹುಳಗಳನ್ನು ಕಂಡ ಅಜ್ಜಿಗೆ ದಿಗಿಲಾಗಿತ್ತು. ಆದರೆ ಆಕೆಗೆ ಮಾತ್ರ ಒಂದೆರಡು ಬಾರಿ ಹೊಟ್ಟೆನೋವಿನೊಂದಿಗೆ ಮಲವಿಸರ್ಜನೆಯಾದರೂ, ಒಂದೇ ಒಂದು ಜಂತುಹುಳ ಹೊರಬಿದ್ದಿರಲಿಲ್ಲ. ತತ್ಪರಿಣಾಮವಾಗಿ ಆಕೆಯ ಮನದಲ್ಲಿ ಸಂಶಯದ ಹುಳವೊಂದು ಕೊರೆಯಲಾರಂಭಿಸಿತ್ತು. 

ಅದೇ ಸಂಜೆ ವೈದ್ಯರನ್ನು ಭೇಟಿಯಾದ ಕಮಲಮ್ಮನು ತನ್ನ ಪುಟ್ಟ ಮೊಮ್ಮಗನ ಹೊಟ್ಟೆಯಿಂದ ನೂರಾರು ಹುಳಗಳು ಹೊರಬಿದ್ದರೂ, ತನ್ನ ಶರೀರದಿಂದ ಒಂದಾದರೂ ಹುಳ ಹೋಗಿಲ್ಲವೆಂದು ದೂರಿದ್ದಳು. ಆಕೆಯ ಮಾತನ್ನು ಕೇಳಿ ಮೀಸೆಯಡಿಯಲ್ಲೇ ನಕ್ಕ ವೈದ್ಯರು, ಜಂತುಹುಳಗಳು ಕರಗಿ ಹೋಗಿದ್ದುದರಿಂದ ನಿಮಗೆ ಕಾಣಿಸಿಲ್ಲ ಎಂದು ಉತ್ತರಿಸಿದ್ದರು!. ಆದರೆ ಮೊಮ್ಮಗನ ಹೊಟ್ಟೆಯಲ್ಲಿದ್ದ ಹುಳಗಳು ಕರಗದೇ ಹೊರಬಿದ್ದಿದ್ದು ಹೇಗೆ?, ಎಂದು ವೈದ್ಯರನ್ನು ಪ್ರಶ್ನಿಸುವಷ್ಟು ಬುದ್ಧಿಶಕ್ತಿ ಈ ಬಡಪಾಯಿ ವೃದ್ಧೆಯಲ್ಲಿರಲಿಲ್ಲ. ಆಕೆಯ ಹೊಟ್ಟೆಯಲ್ಲಿ ಹುಳಗಳೇ ಇದ್ದಿರದ ಕಾರಣದಿಂದಾಗಿ ಹೊರಬಿದ್ದಿಲ್ಲವೆಂದು ವೈದ್ಯರು ಹೇಳಿದ್ದಲ್ಲಿ, ಆಕೆಯು ವೈದ್ಯರ ಮಾತನ್ನು ನಂಬುವ ಸಾಧ್ಯತೆಗಳೇ ಇರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ವೈದ್ಯರು ಮೇಲಿನ ಉತ್ತರವನ್ನು ನೀಡಿದ್ದರು. ಆಶ್ಚರ್ಯವೆಂದರೆ ವೈದ್ಯರ ಉತ್ತರದಿಂದ ಸಂತುಷ್ಟಳಾದ ಕಮಲಮ್ಮನು ನೆಮ್ಮದಿಯಿಂದ ಮನೆಗೆ ಮರಳಿದ್ದಳು. 

ನಿಜ ಹೇಳಬೇಕಿದ್ದಲ್ಲಿ ತಮ್ಮ ತಲೆ ತಿನ್ನುವ ರೋಗಿಗಳನ್ನು ಸಾಗಹಾಕಲು ಅನೇಕ ವೈದ್ಯರು ನೀಡುವ ಇಂತಹ ಉತ್ತರಗಳು ನೂರಕ್ಕೆ ನೂರಷ್ಟು ಸುಳ್ಳು ಎನ್ನುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಜಂತುಹುಳಗಳ ನಿವಾರಣೆಗಾಗಿ ವೈದ್ಯರು ನೀಡುವ ಯಾವುದೇ ವಿಧದ ಔಷದಗಳ ಸೇವನೆಯಿಂದ ಹುಳಗಳು ಕರಗಿಹೋಗುವ ಸಾಧ್ಯತೆಗಳೇ ಇಲ್ಲ!. 

ಸತ್ಯಸಂಗತಿ ಇಂತಿದೆ 

ಸಾಮಾನ್ಯವಾಗಿ ಜಂತುಹುಳಗಳ ನಿವಾರಣೆಗಾಗಿ ಬಳಸುವ ಔಷದಗಳಲ್ಲಿ ಎರಡುವಿಧಗಳಿವೆ. ಜಂತುಹುಳಗಳನ್ನು ಕೊಲ್ಲುವಂತಹ ಔಷದಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ ವರ್ಮಿಸೈಡ್ ಹಾಗೂ ಇವುಗಳನ್ನು ಶರೀರದಿಂದ ಹೊರಹಾಕಬಲ್ಲ ಔಷದಗಳನ್ನು ವರ್ಮಿಫ್ಯೂಜ್ ಎಂದು ಕರೆಯುವರು. 

ಮನುಷ್ಯನನ್ನು ಬಾಧಿಸಬಲ್ಲ ಜಂತುಹುಳಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳನ್ನು ಟ್ರೆಮಟೋಡ್ಸ್, ಸೆಸ್ಟೋಡ್ಸ್ ಮತ್ತು ನೆಮಟೋಡ್ಸ್ ಎನ್ನುತ್ತಾರೆ. ಈ ಮೂರು ಗುಂಪುಗಳಲ್ಲಿ ಹಲವು ಜಾತಿಯ ಹುಳಗಳಿವೆ. ಪ್ರತಿಯೊಂದು ವಿಧದ ಹುಳವೂ ಮನುಷ್ಯನಲ್ಲಿ ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು. ಇವುಗಳ ಬಾಧೆ ಅತಿಯಾದಾಗ ರೋಗಿಯ ಶರೀರದಲ್ಲಿ ಕಂಡುಬರುವ ಗುಣಲಕ್ಷಣಗಳನ್ನು ಅಥವಾ ನಿರ್ದಿಷ್ಟ ವ್ಯಾಧಿಯನ್ನು ನಿಖರವಾಗಿ ಗುರುತಿಸುವ ವೈದ್ಯರು, ಸಮಸ್ಯೆಯ ನಿವಾರಣೆಗೆ ಸೂಕ್ತ ಚಿಕಿತ್ಸೆಯನ್ನು ನೀಡುವರು. 

ಸಾಮಾನ್ಯವಾಗಿ ಬಾಲ್ಯಾವಸ್ಥೆಯಲ್ಲಿ ವರ್ಷದಲ್ಲಿ ಎರಡುಬಾರಿ ಸೇವಿಸಬೇಕಾದ ಈ ಔಷದವನ್ನು, ತದನಂತರ ವರ್ಷದಲ್ಲಿ ಒಂದುಬಾರಿಯಾದರೂ ಸೇವಿಸುವುದು ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಮಹತ್ವಪೂರ್ಣವೆನಿಸಬಲ್ಲದು. 

ಅಂದಹಾಗೆ ಕಮಲಮ್ಮನ ಮೊಮ್ಮಗ ಮುಕುಂದನು ಜಂತುಹುಳಗಳ ನಿವಾರಣೆಯ ಬಳಿಕ ಇದೀಗ ಮೈಕೈ ತುಂಬಿಕೊಂಡು ಆರೋಗ್ಯವಂತನಾಗಿದ್ದಾನೆ. ಆರು ತಿಂಗಳ ಹಿಂದಿನ ತನಕ ಆತನು ಬಕಾಸುರನಂತೆ ತಿನ್ನುತ್ತಿದ್ದ ಆಹಾರದಲ್ಲಿನ ಪೋಷಕಾಂಶಗಳು ಜಂತುಹುಳಗಳ ಉದರವನ್ನು ಸೇರುತ್ತಿತ್ತು. ಇದೀಗ ಇವೆಲ್ಲವೂ ಆತನ ಶರೀರಕ್ಕೆ ಲಭಿಸುತ್ತಿರುವುದೇ ಇದಕ್ಕೆ ಕಾರಣವೆನಿಸಿದೆ.

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 

೧೨- ೦೫- ೨೦೦೫ ರ ತರಂಗ ವಾರಪತ್ರಿಕೆಯಲ್ಲಿ ಪ್ರಕಟಿತ ಲೇಖನ. 



Friday, March 4, 2016

BAN ON PLASTIC PRODUCTS IN KARNATAKA



           ಪ್ಲಾಸ್ಟಿಕ್ ನಿಷೇಧದ ನಿರ್ಧಾರ : ಪ್ರಜೆಗಳಿಗೆ ಹಿತಕರ 

ರಾಜ್ಯ ಸಚಿವ ಸಂಪುಟವು ಇದೀಗ ಹಲವಾರು ವಿಧದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ಅಂತಿಮ ಅಧಿಸೂಚನೆಯನ್ನು ಅನುಮೋದಿಸಿದೆ. ರಾಜ್ಯ ಗಜೆಟ್ ನಲ್ಲಿ ಇದು ಪ್ರಕಟಗೊಂಡ ಬಳಿಕ ಜಾರಿಗೆ ಬರಲಿದೆ. ತತ್ಪರಿಣಾಮವಾಗಿ ಸ್ವಚ್ಛ ಕರ್ನಾಟಕ ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ತೊಡಕಾಗಿ ಪರಿಣಮಿಸಿದ್ದ ಬಹುದೊಡ್ಡ ಸಮಸ್ಯೆಯೊಂದು ಪರಿಹಾರಗೊಳ್ಳಲಿದೆ. ರಾಜ್ಯ ಸಚಿವ ಸಂಪುಟದ ಈ ನಿರ್ಧಾರವು ಸ್ವಚ್ಛತೆ ಮತ್ತು ಪ್ರಜೆಗಳ ಆರೋಗ್ಯದ ದೃಷ್ಟಿಯಿಂದ ನಿಶ್ಚಿತವಾಗಿಯೂ ಆರೋಗ್ಯಕರವೆನಿಸಲಿದೆ. 

ಹಿನ್ನೆಲೆ 

ಕರ್ನಾಟಕ ರಾಜ್ಯ ಸರ್ಕಾರವು ೨೦೧೫ ರ  ಅಕ್ಟೋಬರ್ ತಿಂಗಳಿನಲ್ಲಿ ಪರಿಸರ ಸಂರಕ್ಷಣಾ ಕಾಯಿದೆಯ ಕಲಂ  ೫ ರನ್ವಯ ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳ ಮೇಲೆ ನಿಷೇಧವನ್ನು ಹೇರುವ ಕರಡು ಅಧಿಸೂಚನೆಗೆ ಹಸಿರು ನಿಶಾನೆಯನ್ನು ತೋರಿತ್ತು. ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯು ಈ ಬಗ್ಗೆ ಸೂಚನೆಯನ್ನು ಪ್ರಕಟಿಸಿದ್ದು, ಸಾರ್ವಜನಿಕರಿಂದ ಸೂಕ್ತ ಸಲಹೆಗಳು ಅಥವಾ ಆಕ್ಷೇಪಗಳನ್ನು ಆಹ್ವಾನಿಸಿತ್ತು. ರಾಜ್ಯ ಮಂತ್ರಿ ಮಂಡಲದ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿದ್ದ ಈ  ಕರಡು ಅಧಿಸೂಚನೆಯಲ್ಲಿ ೪೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಲಕೋಟೆಗಳು, ಜಾಹೀರಾತುಗಳಲ್ಲಿ ಬಳಸುವ ಫ್ಲೆಕ್ಸ್, ಪ್ಲಾಸ್ಟಿಕ್ ತೋರಣಗಳು ಹಾಗೂ ಧ್ವಜಗಳು, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆಗಳು, ಥರ್ಮೋಕೂಲ್ ನಿರ್ಮಿತ ತಟ್ಟೆ ಮತ್ತು ಲೋಟ ಇತ್ಯಾದಿ ೧೩ ವಿಧದ ವಸ್ತುಗಳ ತಯಾರಿಕೆ, ಸಾಗಾಣಿಕೆ, ವಿತರಣೆ ಮತ್ತು ಮಾರಾಟಗಳನ್ನೇ ನಿಷೇಧಿಸುವ ಪ್ರಸ್ತಾವನೆ ಇದ್ದಿತು.  ಅಂತಿಮವಾಗಿ ಕೆಲವಿಧದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ಅಂತಿಮ ಅಧಿಸೂಚನೆಯನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಿದ್ದರೂ, ಗಜೆಟ್ ಪ್ರಕಟಣೆ ಮತ್ತು ತದನಂತರ ಇದನ್ನು ಅನುಷ್ಠಾನಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. 

ನಿಷೇಧ ಪರಿಣಾಮಕಾರಿಯಾಗಲಿ

೨೦೧೧ ರಲ್ಲಿ ದೇಶಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯಗಳ ನಿಭಾವಣೆ ಮತ್ತು ನಿರ್ವಹಣೆಗಳ ನಿಯಮ ೨೦೧೧ ಜಾರಿಗೆ ಬಂದಿದ್ದು, ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳ ತಯಾರಿಕೆ ಮತ್ತು ಮಾರಾಟಗಳನ್ನು ನಿಷೇಧಿಸಲಾಗಿತ್ತು. ತದನಂತರ ಕೆಲ ರಾಜ್ಯಗಳು ಮತ್ತು ಮಹಾನಗರಗಳು ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳ ಮಾರಾಟವನ್ನು ನಿಷೇಧಿಸಿದ್ದವು.ಆದರೆ ಈ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರ ಅಸಹಕಾರಗಳಿಂದಾಗಿ, ಇಂದಿಗೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳನ್ನು ದೇಶಾದ್ಯಂತ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ!.

ಪ್ಲಾಸ್ಟಿಕ್ ಉದ್ದಿಮೆಗಳ ವಕ್ತಾರರು ಹೇಳುವಂತೆ ರಾಜ್ಯದಲ್ಲಿ ತೆಳ್ಳನೆಯ ಪ್ಲಾಸ್ಟಿಕ್ ಕೈಚೀಲಗಳನ್ನು ತಯಾರಿಸದೇ  ಇದ್ದರೂ, ನೆರೆಯ ರಾಜ್ಯಗಳಿಂದ ಇವುಗಳನ್ನು ಕದ್ದುಮುಚ್ಚಿ ಆಮದು ಮಾಡಲಾಗುತ್ತಿದೆ. ಇದರಿಂದಾಗಿ ೨೦ ಮೈಕ್ರಾನ್ ನ ನಮ್ಮ ಉತ್ಪನ್ನಗಳು ಮಾರಾಟವಾಗದೇ ನಷ್ಟ ಸಂಭವಿಸುತ್ತಿದೆ. ಆದರೆ ಕೆಲ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾತ್ರಿಯ ಪಾಳಿಯಲ್ಲಿ ತಯಾರಿಸಿ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ೨೦ ಮೈಕ್ರಾನ್ ದಪ್ಪದ ಹಾಗೂ ಇದಕ್ಕೂ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲಗಳ ಬೆಲೆಗಳ ನಡುವೆ ಅಗಾಧ ಅಂತರ ಇರುವುದರಿಂದಾಗಿ, ತೆಳ್ಳಗಿನ ಪ್ಲಾಸ್ಟಿಕ್ ಚೀಲಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೂ ಇದೇ ಕಾರಣದಿಂದಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೆನಿಸುತ್ತಿದೆ.

ತ್ಯಾಜ್ಯಗಳ ಸಮಸ್ಯೆ  

ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಗಲಿರುಳು ಕಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಆಂಶಿಕವಾಗಿ ಪರಿಹರಿಸಬಲ್ಲ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ತಳೆದಿದೆ. ಕೊನೆಗೂ ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ ಮತ್ತೆ ಚಲಿಸಲು ಆರಂಭಿಸಿದ ಪರಿಣಾಮವಾಗಿ, ಇದೀಗ  ಮೈಕ್ರಾನ್ ಮತ್ತು ಗುಣಮಟ್ಟಗಳನ್ನು ಪರಿಗಣಿಸದೇ, ಕೈಚೀಲ ಮತ್ತಿತರ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ಅನ್ಯವಿಧದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಲು ರಾಜ್ಯ ಮಂತ್ರಿಮಂಡಲವು ನಿರ್ಧರಿಸಿದೆ. ಪ್ರಾಯಶಃ ಅನೇಕ ವರ್ಷಗಳಿಂದ ಇಂತಹ ದಿಟ್ಟ ನಿರ್ಧಾರವೊಂದನ್ನು ತಳೆಯಲು ಸರ್ಕಾರವನ್ನು ಒತ್ತಾಯಿಸುತ್ತಿದ್ದ ಸ್ವಯಂ ಸೇವಾ ಸಂಘಟನೆಗಳ ಆಗ್ರಹಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ನಿರ್ಧಾರವು ಅನುಷ್ಠಾನಗೊಂಡ ಬಳಿಕ ರಾಜ್ಯದ ಪ್ರತಿಯೊಂದು ಹಳ್ಳಿಗಳಿಂದ ಆರಂಭಿಸಿ, ರಾಜಧಾನಿಯಾಗಿರುವ ಬೆಂಗಳೂರಿನ ತನಕ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯು ತಕ್ಕ ಮಟ್ಟಿಗೆ ಪರಿಹಾರಗೊಳ್ಳಲಿದೆ. ಆದರೆ ಈ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳಬೇಕಿದ್ದಲ್ಲಿ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಅಸಂಖ್ಯ ಗ್ರಾಹಕ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ವಿವಿಧ ರೀತಿಯ ಪ್ಲಾಸ್ಟಿಕ್ ಗಳನ್ನೂ ನಿಷೇಧಿಸಲೇಬೇಕು. ಇದಕ್ಕೆ ತಪ್ಪಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಇವುಗಳಿಂದಾಗಿ ಉದ್ಭವಿಸುವ ವೈವಿಧ್ಯಮಯ ಸಮಸ್ಯೆಗಳನ್ನು ಸಮರ್ಪಕವಾಗಿ ಸಂಪೂರ್ಣವಾಗಿ ಪರಿಹರಿಸುವುದು ಅಸಾಧ್ಯವೆನಿಸಲಿದೆ.

ಸಮಸ್ಯೆ ಪರಿಹಾರವಾಗುವುದೇ?

ಪ್ರಸ್ತುತ ಸರ್ಕಾರವು ಅಂಗೀಕರಿಸಿರುವ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ನಿರ್ಮಿತ ಕೈಚೀಲಗಳು, ಬ್ಯಾನರ್, ತೋರಣ, ಫ್ಲೆಕ್ಸ್, ತಟ್ಟೆ, ಲೋಟ, ಚಮಚ, ಹಾಳೆ, ಥರ್ಮೊಕೂಲ್ ನಿರ್ಮಿತ ತಟ್ಟೆ ಹಾಗೂ ಲೋಟ ಇವೇ ಮುಂತಾದ ಸುಮಾರು ಒಂದು ಡಜನ್ ಉತ್ಪನ್ನಗಳನ್ನು ನಿಷೇಧಿಸುವ ಪ್ರಸ್ತಾವನೆಯಿದೆ. ಆದರೆ ನರ್ಸರಿ ಮತ್ತು ಡೈರಿ ಉದ್ದಿಮೆ, ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಕೈಚೀಲ ಇತ್ಯಾದಿಗಳಿಗೆ ವಿನಾಯಿತಿ ನೀಡಲಾಗಿದೆ. 

ಕೆಲವರ್ಷಗಳ ಹಿಂದೆ ರಾಜ್ಯ ಸರ್ಕಾರವು ೨೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ನಿಷೇಧಿಸಿತ್ತು. ನಿಷೇಧ ಜಾರಿಯಾದ ಕೆಲವೇ ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಅತ್ಯಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳು, ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿದ್ದವು!. ವಿಶೇಷವೆಂದರೆ ಈ ಬಾರಿ ೪೦ ಮೈಕ್ರಾನ್ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾಜ್ಯದಲ್ಲಿ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡಲು ಅವಕಾಶವನ್ನು ನೀಡಲಾಗಿದೆ. ಅರ್ಥಾತ್ ೪೦ ಮೈಕ್ರಾನ್ ಗಿಂತ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಪ್ಲಾಸ್ಟಿಕ್ ಉತ್ಪನ್ನಗಳ ಘಟಕಗಳು ತಯಾರಿಸಬಹುದಾಗಿದೆ. ಹಾಗೂ ಇದೇ ಕಾರಣದಿಂದಾಗಿ ಇಂತಹ ಉತ್ಪನ್ನಗಳು ರಾಜ್ಯದ ಮಾರುಕಟ್ಟೆಗಳಲ್ಲಿ ಹಿಂದಿನಂತೆ ಗುಪ್ತವಾಗಿ ಮಾರಾಟವಾಗುವ ಸಾಧ್ಯತೆಗಳೂ ಇವೆ. ಇದನ್ನು ನಿಶ್ಚಿತವಾಗಿ ನಿಯಂತ್ರಿಸಬೇಕಿದ್ದಲ್ಲಿ, ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲಿ ತಯಾರಿಸುವ ಮತ್ತು ವಿದೇಶಗಳಿಗೆ ರಫ್ತು ಮಾಡುವುದನ್ನೂ ನಿಷೇಧಿಸಲೇಬೇಕಾಗುವುದು.

ತ್ಯಾಜ್ಯಗಳು ಕಡಿಮೆಯಾಗಲಿವೆ

ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಕಾಣಸಿಗುವ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಸಭೆ - ಸಮಾರಂಭಗಳ ಸಂದರ್ಭದಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ನಿರ್ಮಿತ ತಟ್ಟೆ, ಲೋಟ, ಚಮಚ ಮತ್ತಿತರ ತ್ಯಾಜ್ಯಗಳ ಪ್ರಮಾಣವು ನಿಸ್ಸಂದೇಹವಾಗಿ ಕಡಿಮೆಯಾಗಲಿದೆ. ಇದರಿಂದಾಗಿ ರಸ್ತೆಯ ಬದಿಗಳಲ್ಲಿನ ಚರಂಡಿಗಳಲ್ಲಿ ವಿಸರ್ಜಿಸಲ್ಪಡುವ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗಲಿದ್ದು, ಇವುಗಳನ್ನು ತಿಂದು ಅಸುನೀಗುವ ಪಶುಪಕ್ಷಿಗಳ ಸಂಖ್ಯೆಯೂ ಇಳಿಮುಖವಾಗಲಿದೆ. ಇದಲ್ಲದೇ ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಹರಿದು ನದಿ ಮತ್ತು ಸಮುದ್ರಗಳನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗಲಿದೆ.  ಇಷ್ಟು ಮಾತ್ರವಲ್ಲ, ಈ ತ್ಯಾಜ್ಯಗಳಿಂದಾಗಿ ಸಂಭವಿಸುತ್ತಿದ್ದ  ಜಲಪ್ರದೂಷಣೆಯ ಪ್ರಮಾಣವು ನಿಯಂತ್ರಿಸಲ್ಪಡುವುದಲ್ಲದೇ, ಜಲಚರಗಳ ಅಕಾಲಿಕ ಮರಣದ ಪ್ರಮಾಣವೂ ಕಡಿಮೆಯಾಗಲಿದೆ.

ಸರ್ಕಾರದ ಈ ನಿರ್ಧಾರದಿಂದ ಖಾಲಿಜಾಗಗಳು ಮತ್ತು ಚರಂಡಿಗಳಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಕೊಳಚೆನೀರಿನ ಹರಿವಿಗೆ ಅಡಚಣೆಯಾಗುತ್ತಿದ್ದ ಕಾರಣದಿಂದಾಗಿ ಉದ್ಭವಿಸುತ್ತಿದ್ದ ಅನೇಕ ಆರೋಗ್ಯದ ಸಮಸ್ಯೆಗಳು ಮತ್ತು ಧಾರಾಕಾರ ಮಳೆ ಸುರಿದಾಗ ಉದ್ಭವಿಸುವ ಕೃತಕ ನೆರೆಯ ಸಮಸ್ಯೆಗಳು  ಸ್ವಾಭಾವಿಕವಾಗಿಯೇ ನಿಯಂತ್ರಿಸಲ್ಪಡಲಿವೆ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಗೆ ಬೆಂಕಿ ಹಚ್ಚಿ ಸುಡುವುದರಿಂದ ಉತ್ಪನ್ನವಾಗುವ ಅಪಾಯಕಾರಿ ಹಸಿರುಮನೆ ಅನಿಲಗಳಿಂದಾಗಿ ಹೆಚ್ಚುವ ಜಾಗತಿಕ ತಾಪಮಾನ ಮತ್ತು ತತ್ಪರಿಣಾಮವಾಗಿ ಉದ್ಭವಿಸುವ ಹವಾಮಾನದ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳೂ ಕಡಿಮೆಯಾಗಲಿವೆ.

ಇವೆಲ್ಲಕ್ಕೂ ಮಿಗಿಲಾಗಿ ರಾಜದ ಸ್ಥಳೀಯ ಸಂಸ್ಥೆಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿರುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆ, ಸಾಗಾಟ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ತಗಲುವ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ. ಇದರೊಂದಿಗೆ ವಿದೇಶಗಳಿಂದ ಆಮದು ಮಾಡುತ್ತಿರುವ ಕಚ್ಚಾ ತೈಲಕ್ಕಾಗಿ ಸರ್ಕಾರವು ವ್ಯಯಿಸುತ್ತಿರುವ ಅಮೂಲ್ಯವಾದ ವಿದೇಶೀ ವಿನಿಮಯವೂ  ಉಳಿತಾಯವಾಗಲಿದೆ.

ಆದರೂ ಕೇವಲ ಕೆಲವಿಧದ ಪ್ಲಾಸ್ಟಿಕ್ ಗಳನ್ನು ನಿಷೇಧಿಸುವುದರಿಂದ ತ್ಯಾಜ್ಯಗಳ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳುವ ಸಾಧ್ಯತೆಗಳಿಲ್ಲ. ಹಾಗೂ ಇದೇ ಕಾರಣದಿಂದಾಗಿ ಸರ್ಕಾರವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಪ್ರಸ್ತುತ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಿದಂತೆಯೇ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಇವುಗಳು ಉತ್ಪನ್ನವಾಗುವ ಮೂಲಗಳಿಂದಲೇ ಪ್ರತ್ಯೇಕಿಸಿ ಸಂಗ್ರಹಿಸುವ, ಸುರಕ್ಷಿತವಾಗಿ ಸಾಗಿಸುವ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಗಳನ್ನು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲೂ ಒದಗಿಸಬೇಕು. ಉದಾಹರಣೆಗೆ  ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುವುದನ್ನು ಕಡ್ಡಾಯಗೊಳಿಸುವ ಮೂಲಕ, ರಸ್ತೆಗಳ ನಿರ್ಮಾಣದ ವೆಚ್ಚವನ್ನು ಉಳಿಸುವ, ರಸ್ತೆಗಳ ಆಯುಷ್ಯವನ್ನು ಹೆಚ್ಚಿಸುವ ಮತ್ತು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಹಾಗೂ ಉಪಯುಕ್ತವೆನಿಸುವಂತೆ ವಿಲೇವಾರಿ ಮಾಡುವ ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲೇಬೇಕು. ಇಂತಹ ಉಪಕ್ರಮಗಳನ್ನು ಶೀಘ್ರದಲ್ಲಿ ಜಾರಿಗೊಳಿಸದೇ, ಕೇವಲ ನಿರ್ದಿಷ್ಟ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಅಪೇಕ್ಷಿತ ಫಲಿತಾಂಶ ದೊರೆಯದು ಎನ್ನುವುದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕಿದೆ.

ಕೊನೆಯ ಮಾತು 

ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವ ನಿರ್ಧಾರವನ್ನು ತಳೆಯಲು ರಾಜ್ಯ ಸರ್ಕಾರವು ಸಾಕಷ್ಟು ಸಮಯವನ್ನು ತೆಗೆದುಕೊಂಡಿದೆ. ಇದೀಗ ಈ ಅಧಿಸೂಚನೆಯನ್ನು ಕ್ಷಿಪ್ರಗತಿಯಲ್ಲಿ ಗಜೆಟ್ ನಲ್ಲಿ ಪ್ರಕಟಿಸುವ ಮೂಲಕ ಇದನ್ನು ಅನುಷ್ಠಾನಿಸಬೇಕಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 





Wednesday, March 2, 2016

HERBAL ANTI DIABETES PILL TO BE LAUNCHED


          ಮಧುಮೇಹ ನಿಯಂತ್ರಿಸಲು ಗಿಡಮೂಲಿಕೆಗಳ ಔಷದ 

ವಿಶ್ವಾದ್ಯಂತ ಅಸಂಖ್ಯ ಜನರನ್ನು ಪೀಡಿಸುತ್ತಿರುವ ಹಾಗೂ ಇಂದಿನ ತನಕ ಈ ವ್ಯಾಧಿಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಕಂಡುಹಿಡಿಯಲು ವಿಫಲರಾಗಿರುವ ವೈದ್ಯಕೀಯ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿರುವ " ಮಧುಮೇಹ " ವ್ಯಾಧಿಯನ್ನು ನಿಯಂತ್ರಿಸಲು ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಔಷದವೊಂದು ನಮ್ಮ ರಾಜ್ಯದ ಜನತೆಗೆ ಸದ್ಯೋಭವಿಷ್ಯದಲ್ಲಿ ಲಭ್ಯವಾಗಲಿದೆ. BGS - 34 ಎಂದು ಹೆಸರಿಸಲ್ಪಟ್ಟಿರುವ ಈ ಔಷದವು ಒಂದೆರಡು ತಿಂಗಳುಗಳಲ್ಲಿ ರಾಜ್ಯದ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಮಧುಮೇಹ ಪೀಡಿತರು ಈಗಾಗಲೇ ಸೇವಿಸುತ್ತಿರುವ ಆಧುನಿಕ ಔಷದಗಳಿಗೆ ಪೂರಕವಾಗಿ ಪರಿಣಮಿಸುವುದಾದರೂ, ಇದು " ಪವಾಡ ಸದೃಶ " ಪರಿಣಾಮವನ್ನು ನೀಡಲು ಅಥವಾ ಮಧುಮೇಹವನ್ನು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಗುಣಪಡಿಸಲಾರದು ಡಾ. ವಿಶಾಲ್ ರಾವ್ ಹೇಳಿದ್ದಾರೆ. ಜೊತೆಗೆ ಆಧುನಿಕ ಮತ್ತು ಆಯುರ್ವೇದ ಔಷದಗಳ ಸಮ್ಮಿಶ್ರ ಚಿಕಿತ್ಸೆಯುಲ್ಲಿ ಆಯುರ್ವೇದ ಔಷದಗಳು ಪರಿಣಾಮಕಾರಿಯಾಗಿರುವುದಾದರೂ, ಮಧುಮೇಹವನ್ನು ನಿಯಂತ್ರಿಸಲು ಜೀವನಶೈಲಿಯ ಬದಲಾವಣೆ ಅತ್ಯವಶ್ಯಕ ಎಂದು ಅಭಿಪ್ರಾಯಿಸಿದ್ದಾರೆ. ಖ್ಯಾತ ಕ್ಯಾನ್ಸರ್ ತಜ್ಞರಾಗಿರುವ ಈ ವೈದ್ಯರು ಆಯುರ್ವೇದ ಔಷದಗಳು ಮತ್ತು ಚಿಕಿತ್ಸೆಯ ಬಗ್ಗೆ ಸಾಕಷ್ಟು ಆಸಕ್ತಿಯನ್ನು ತೋರುತ್ತಿದ್ದಾರೆ. 

ನಿಜ ಹೇಳಬೇಕಿದ್ದಲ್ಲಿ ನೀವು ದಿನನಿತ್ಯ ಓದುವ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನೇಕ ಜಾಹೀರಾತುಗಳಲ್ಲಿ, ಮಧುಮೇಹ ವ್ಯಾಧಿಯ ಚಿಕಿತ್ಸೆಯಲ್ಲಿ ಬಳಸಬಹುದಾದ ಹಾಗೂ ಗಿಡಮೂಲಿಕೆಗಳಿಂದ ತಯಾರಿಸಿರುವ ಮತ್ತು ಪರ್ಯಾಯ ಪದ್ದತಿಯ ಔಷದಗಳ ಜಾಹೀರಾತುಗಳೂ ಸೇರಿವೆ. ಆದರೆ ಇದುವರೆಗೆ ಯಾವುದೇ ಪದ್ದತಿಯ ವಿಜ್ಞಾನಿಗಳು ಮತ್ತು ವೈದ್ಯರು,ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಆವಿಷ್ಕರಿಸಿಲ್ಲ. ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವನ್ನು ಪತ್ತೆಹಚ್ಚಿದವರಿಗೆ ವಿಶ್ವ ವಿಖ್ಯಾತ ನೊಬೆಲ್ ಪ್ರಶಸ್ತಿಯೊಂದಿಗೆ ಕೋಟ್ಯಾಂತರ ಡಾಲರ್ ಬಹುಮಾನ ದೊರೆಯುವುದರಲ್ಲಿ ಸಂದೇಹವಿಲ್ಲ. 

ಮಧುಮೇಹ ಎಂದರೇನು? 

ನಿಮ್ಮ ಶರೀರದಲ್ಲಿರುವ ಮೇದೋಜೀರಕ ಗ್ರಂಥಿಗಳಲ್ಲಿನ ಬೀಟಾ ಜೀವಕಣಗಳು ಉತ್ಪಾದಿಸುವ ಇನ್ಸುಲಿನ್ ನ ಪ್ರಮಾಣವು ಕಡಿಮೆಯಾದಾಗ ಅಥವಾ ಸಂಪೂರ್ಣವಾಗಿ ನಶಿಸಿದಾಗ, ನಿಮ್ಮ ರಕ್ತದಲ್ಲಿನ ಗ್ಲುಕೋಸ್ ನ ಪ್ರಮಾಣವು ಅನಿಯಂತ್ರಿತವಾಗಿ ಹೆಚ್ಚುವುದು. ತತ್ಪರಿಣಾಮವಾಗಿ ಮಧುಮೇಹ ವ್ಯಾಧಿ ಉದ್ಭವಿಸುವುದು. ಮಧುಮೇಹವನ್ನು ಸ್ಥೂಲವಾಗಿ ಎರಡು ವಿಧಗಳನ್ನಾಗಿ ವಿಂಗಡಿಸಿದ್ದು, ಇನ್ಸುಲಿನ್ ಅವಲಂಬಿತ ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಎಂದು ಕರೆಯಲ್ಪಡುತ್ತವೆ. ಇದಲ್ಲದೆ ಮಹಿಳೆಯರು ಗರ್ಭ ಧರಿಸಿದಾಗ ಪ್ರತ್ಯಕ್ಷವಾಗುವ ಹಾಗೂ ಬಹುತೇಕ ಮಹಿಳೆಯರಲ್ಲಿ ಹೆರಿಗೆಯ ಬಳಿಕ ಅದೃಶ್ಯವಾಗುವ ಮಧುಮೇಹವೂ ಇತ್ತೀಚಿನ ವರ್ಷಗಳಲ್ಲಿ ಅತಿಯಾಗಿ ಕಾಣಸಿಗುತ್ತಿದೆ. ಆದರೆ ಇದನ್ನು ಜೀವನಶೈಲಿಯ ಬದಲಾವಣೆ ಮತ್ತು ಅವಶ್ಯಕತೆಯಿದ್ದಲ್ಲಿ ಸೂಕ್ತ ಔಷದಗಳ ಸೇವನೆಯಿಂದ ನಿಯಂತ್ರಿಸುವುದು ಸುಲಭಸಾಧ್ಯ. 

ಚಿಕಿತ್ಸೆ 

ಇನ್ಸುಲಿನ್ ಅವಲಂಬಿತ ಮಧುಮೇಹ ಪೀಡಿತರು ದಿನನಿತ್ಯ ಇನ್ಸುಲಿನ್ ಚುಚ್ಚು ಮದ್ದನ್ನು ಪಡೆದುಕೊಳ್ಳುವುದು ಅನಿವಾರ್ಯ. ಆದರೆ ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಮಧುಮೇಹ ಪೀಡಿತರಿಗೆ ಆಧುನಿಕ ಪದ್ದತಿಯ ಮಾತ್ರೆಗಳ ಸೇವನೆಯಿಂದ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ. ಅಂತೆಯೇ ಸೌಮ್ಯ ಸ್ವರೂಪದ ಮಧುಮೇಹವನ್ನು ಕೇವಲ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟಿನ ಪಥ್ಯ, ದೈನಂದಿನ ವ್ಯಾಯಾಮ, ಮಾನಸಿಕ ಒತ್ತಡಗಳಿಂದ ದೂರವಿರುವುದೇ ಮುಂತಾದ ಜೀವನಶೈಲಿಯ ಬದಲಾವಣೆಯಿಂದ ಸಮರ್ಪಕವಾಗಿ ನಿಯಂತ್ರಿಸಬಹುದಾಗಿದೆ. 

ಮಿಥ್ಯೆ 

ಅನೇಕರು ಹೇಳುವಂತೆ ಆಧುನಿಕ ಪದ್ದತಿಯ ಔಷದಗಳನ್ನು ಸೇವಿಸುವ ಮಧುಮೇಹ ಪೀಡಿತರಿಗೆ ಕಣ್ಣು, ಮೂತ್ರಪಿಂಡಗಳು ಮತ್ತು ನರಗಳಿಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳು ಬಾಧಿಸುತ್ತವೆ ಎನ್ನುವುದು ಅಪ್ಪಟ ಸುಳ್ಳು. ಜಿಹ್ವಾ ಚಾಪಲ್ಯವನ್ನು ಬಿಡಲೊಲ್ಲದ ಮಧುಮೇಹಿಗಳು ಸಕ್ಕರೆ ಹಾಗೂ ಬೆಲ್ಲದಿಂದ ತಯಾರಿಸಿದ ತಿಂಡಿಗಳನ್ನು ಅತಿಯಾಗಿ ಸೇವಿಸುವುದು, ದ್ರಾಕ್ಷಿ, ಮಾವು, ಸಪೋಟ ( ಚಿಕ್ಕು ) ಚೆನ್ನಾಗಿ ಕಳಿತ ಬಾಳೆಹಣ್ಣು ಮತ್ತಿತರ ಅತ್ಯಂತ ಮಧುರವಾದ ಹಣ್ಣುಗಳನ್ನು ಸೇವಿಸುವುದು ಮತ್ತು ನಿಷ್ಕ್ರಿಯ ಜೀವನ ಶೈಲಿಯನ್ನು ಪರಿಪಾಲಿಸಿದಲ್ಲಿ ಯಾವುದೇ ಪದ್ದತಿಯ ಔಷದಗಳನ್ನು ಸೇವಿಸಿದರೂ ಮೇಲೆ ನಮೂದಿಸಿದ ಆರೋಗ್ಯದ ಸಮಸ್ಯೆಗಳು ಬಾಧಿಸುವುದರಲ್ಲಿ ಸಂದೇಹವಿಲ್ಲ. ಆದುದರಿಂದ ಗಿಡಮೂಲಿಕೆಗಳಿಂದ ತಯಾರಿಸಿದ ಔಷದಗಳು ಅಡ್ಡ ಪರಿಣಾಮವನ್ನು ಬೀರುವುದಿಲ್ಲ ಮತ್ತು ಶತಪ್ರತಿಶತ ಸುರಕ್ಷಿತ ಎನ್ನುವುದು ಮಧುಮೇಹ ಚಿಕಿತ್ಸೆಯ ವಿಚಾರದಲ್ಲಿ ನಿಜವಲ್ಲ!. ವಿಶೇಷವೆಂದರೆ ಯಾವುದೇ ಪದ್ದತಿಯ ಔಷದಗಳನ್ನು ಸೇವಿಸುವ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಗ್ಲುಕೋಸ್ ನ ಮಟ್ಟವನ್ನು ಸಮರ್ಪಕವಾಗಿ ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಯಶಸ್ವಿಯಾದಲ್ಲಿ, ಅನ್ಯ ವಿಧದ ಆರೋಗ್ಯದ ಸಮಸ್ಯೆಗಳು ಉದ್ಭವಿಸುವ ಮತ್ತು ಉಲ್ಬಣಿಸುವ ಸಾಧ್ಯತೆಗಳು ಅತ್ಯಲ್ಪ ಎನ್ನುವುದರಲ್ಲಿ ಸಂದೇಹವಿಲ್ಲ. 

BGS - 34 

ಕೌನ್ಸಿಲ್ ಆಫ್ ಸಯಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್ ( ಸಿ ಎಸ್ ಐ ಆರ್ ) ಸಂಸ್ಥೆಯು ಸುಮಾರು ಆರು ವರ್ಷಗಳ ಕಾಲ ಶ್ರಮಿಸಿ, ಆರು ವಿಧದ ಗಿಡಮೂಲಿಕೆಗಳನ್ನು ಬಳಸಿ ಸಿದ್ಧಪಡಿಸಿರುವ ಬಿ ಜಿ ಎಸ್ - 34 ನಾಮಧೇಯದ ಮಾತ್ರೆಗಳು, ಮಧುಮೇಹ ಪೀಡಿತರು ಈಗಾಗಲೇ ಸೇವಿಸುತ್ತಿರುವ ಅನ್ಯ ಔಷದಗಳೊಂದಿಗೆ ಮಧುಮೇಹವನ್ನು ನಿಯಂತ್ರಿಸಲು ಪೂರಕವಾಗಿ ಬಳಸಬಹುದಾಗಿದೆ ಎನ್ನುವ ವಿವರವನ್ನು ಪ್ರಕಟಿಸಲಾಗಿದೆ. ಆದರೆ ಈ ಔಷದ ಅಥವಾ ಅನ್ಯ ಯಾವುದೇ ಔಷದಗಳ ಸೇವನೆಯಿಂದ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸುವ ಸಾಧ್ಯತೆಗಳೇ ಇಲ್ಲ ಎನ್ನುವುದನ್ನು ಮರೆಯದಿರಿ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು