Monday, November 9, 2015

NOV 14 - WORLD DIABETES DAY



                    ನವೆಂಬರ್ ೧೪ : ವಿಶ್ವ ಮಧುಮೇಹ ದಿನ

          ಮಧುಮೇಹದ ಪಿಡುಗನ್ನು ತಡೆಗಟ್ಟಲು ಪ್ರಯತ್ನಿಸಿ

ಮಧುಮೇಹ ಎನ್ನುವ ಸುಂದರ ನಾಮಧೇಯದ ಗಂಭೀರ ವ್ಯಾಧಿಯು ಪ್ರಪಂಚದ ಪ್ರತಿಯೊಂದು ದೇಶಗಳಲ್ಲಿ ವ್ಯಾಪಕವಾಗಿ ಪತ್ತೆಯಾಗುತ್ತಿದ್ದು, ಆಧುನಿಕ ಹಾಗೂ ನಿಷ್ಕ್ರಿಯ ಜೀವನ ಶೈಲಿ ಮತ್ತು ಆಹಾರವಿಹಾರಗಳೂ ಇದಕ್ಕೆ ಕಾರಣವೆನಿಸಿವೆ. ಪರಸ್ಪರ ಹರಡದ ಆದರೆ ವರ್ಷಂಪ್ರತಿ ಜಗತ್ತಿನಾದ್ಯಂತ ಸಹಸ್ರಾರು ಜನರನ್ನು ಬಲಿಪಡೆಯುವ ಕೆಲವೇ ಕಾಯಿಲೆಗಳಲ್ಲಿ ಮಧುಮೇಹವೂ ಒಂದಾಗಿದೆ. ಈ ಅಪಾಯಕಾರಿ ಹಾಗೂ ಮಾರಕವೆನಿಸಬಲ್ಲ ಕಾಯಿಲೆಯ ಪಿಡುಗನ್ನು ತಡೆಗಟ್ಟುವ ಉದ್ದೇಶದಿಂದ ಮತ್ತು ಜನಸಾಮಾನ್ಯರಲ್ಲಿ ಇದರ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ, ವರ್ಷಂಪ್ರತಿ ನವೆಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಜಾಗತಿಕ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಗುತ್ತಿದೆ.

ವಿಶ್ವ ಮಧುಮೇಹ ದಿನ

ಸಹ ವಿಜ್ಞಾನಿ ಚಾರ್ಲ್ಸ್ ಬೆಸ್ಟ್ ಇವರ ಜೊತೆಯಲ್ಲಿ ಹಗಲಿರುಳು ಶ್ರಮಿಸಿ, ವಿಶ್ವದ ಮಧುಮೇಹಿಗಳ ಪಾಲಿಗೆ ಅಕ್ಷರಶಃ " ಸಂಜೀವಿನಿ " ಎನಿಸಿರುವ " ಇನ್ಸುಲಿನ್ " ಔಷದವನ್ನು ಆವಿಷ್ಕರಿಸಿದ್ದ ಫ್ರೆಡರಿಕ್ ಬಾಂಟಿಂಗ್ ಎನ್ನುವ ವಿಜ್ಞಾನಿಯ ಜನ್ಮದಿನವನ್ನು, ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದರೊಂದಿಗೆ ಈ ವ್ಯಾಧಿಯ ಸಂಭಾವ್ಯತೆ, ತಡೆಗಟ್ಟುವಿಕೆ, ಅನಪೇಕ್ಷಿತ ಹಾಗೂ ಗಂಭೀರ ದುಷ್ಪರಿಣಾಮಗಳು ಮತ್ತು ಸಮರ್ಪಕ ಚಿಕಿತ್ಸೆಗಳ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು, ವಿಶ್ವ ಮಧುಮೇಹ ಒಕ್ಕೂಟ, ಸಂಯುಕ್ತ ರಾಷ್ಟ್ರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ನವೆಂಬರ್ ೧೪ ರಂದು ಆಯೋಜಿಸಲಾಗುತ್ತದೆ.

ಪ್ರಸ್ತುತ ಜಗತ್ತಿನಾದ್ಯಂತ ೩೮೭ ದಶಲಕ್ಷ  ಮಧುಮೇಹ ಪೀಡಿತರಿದ್ದು, ಈ ಸಂಖ್ಯೆಯು ೨೦೩೫ ರಲ್ಲಿ ೬೦೦ ದಶಲಕ್ಷವನ್ನು ಮೀರಲಿದೆ ಎಂದು  ಅಂದಾಜಿಸಲಾಗಿದೆ. ಭಾರತದಲ್ಲಿ ೨೦೧೧ ರಲ್ಲಿ ಈ ಸಂಖ್ಯೆಯು ೬೧ ದಶಲಕ್ಷವಾಗಿದ್ದು, ೨೦೩೦ ರಲ್ಲಿ ೧೦೧ ದಶಲಕ್ಷವನ್ನು ಮೀರಲಿದೆ!. ಆದರೆ ಚೀನಾ ದೇಶದಲ್ಲಿ ೯೩ ದಶಲಕ್ಷ ಮಧುಮೇಹಿಗಳಿದ್ದು, ವಿಶ್ವದ ಮಧುಮೇಹಿಗಳ ರಾಜಧಾನಿ ಎಂದೇ ಕರೆಯಲ್ಪಡುತ್ತಿದೆ. 

ಮಧುಮೇಹ ಎಂದರೇನು?

ಮನುಷ್ಯನ ಶರೀರದ ಮೇದೋಜೀರಕ ಗ್ರಂಥಿಗಳಲ್ಲಿನ ಬೀಟಾ ಜೀವಕಣಗಳಲ್ಲಿ ಉತ್ಪನ್ನವಾಗುವ ಇನ್ಸುಲಿನ್ ಚೋದನಿಯ ಪ್ರಮಾಣ ಕುಂಠಿತಗೊಂಡಾಗ ಅಥವಾ ಉತ್ಪನ್ನವಾದ ಇನ್ಸುಲಿನ್ ಚೋದನಿಯನ್ನು ಶರೀರವು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲವಾದಾಗ ಅಥವಾ ಇನ್ಸುಲಿನ್ ನ ಉತ್ಪಾದನೆ ಸಂಪೂರ್ಣವಾಗಿ ನಶಿದಾಗ ಮಧುಮೇಹ ವ್ಯಾಧಿ ಉದ್ಭವಿಸುತ್ತದೆ. ತತ್ಪರಿಣಾಮವಾಗಿ ರೋಗಿಯ ರಕ್ತದಲ್ಲಿನ ಸಕ್ಕರೆಯ ( ಗ್ಲೂಕೋಸ್ ) ಪ್ರಮಾಣವು ಅನಿಯಂತ್ರಿತವಾಗಿ ವೃದ್ಧಿಸುತ್ತದೆ. ಈ ವ್ಯಾಧಿಯನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ, ರೋಗಿಯ ಶರೀರ ಮತ್ತು ಪ್ರಮುಖ ಅಂಗಾಂಗಗಳಿಗೆ ಹಾನಿ ಸಂಭವಿಸುವ ಅಥವಾ ಇವುಗಳ ವೈಫಲ್ಯಕ್ಕೆ ಕಾರಣವೆನಿಸುವ ಸಾಧ್ಯತೆಗಳಿವೆ.

ಪ್ರಭೇದಗಳು

ಮಧುಮೇಹ ವ್ಯಾಧಿಯನ್ನು ಸ್ಥೂಲವಾಗಿ ಎರಡು ಪ್ರಭೇದಗಳನ್ನಾಗಿ ವಿಂಗಡಿಸಿದ್ದು, ಪ್ರಭೇದ ೧ ನ್ನು ಇನ್ಸುಲಿನ್ ಅವಲಂಬಿತ ಮತ್ತು ಪ್ರಭೇದ ೨ ನ್ನು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ ಎಂದು ವರ್ಗೀಕರಿಸಲಾಗಿದೆ. ಇದಲ್ಲದೇ ಮಹಿಳೆಯರು ಗರ್ಭವತಿಯರಾದಾಗ ಪ್ರತ್ಯಕ್ಷವಾಗುವ ಜೆಸ್ಟೇಶನಲ್ ಡಯಾಬೆಟೆಸ್ ಎಂದು ಕರೆಯಲ್ಪಡುವ ಪ್ರಭೇದವು, ತಾಯಿ ಮತ್ತು ಗರ್ಭಸ್ಥ ಶಿಶುವಿಗೆ ಅಸಾಮಾನ್ಯ ತೊಂದರೆಗಳಿಗೆ ಕಾರಣವೆನಿಸಬಲ್ಲದು. ಬಹುತೇಕ ಮಹಿಳೆಯರಲ್ಲಿ ಹೆರಿಗೆಯ ಬಳಿಕ ಇದು ಕಣ್ಮರೆಯಾಗುವುದು. ಆದರೆ ಈ ಸಮಸ್ಯಾ ಪೀಡಿತ ಮಹಿಳೆಯರಲ್ಲಿ ಶೇ. ೫೦ ರಷ್ಟು ಮಹಿಳೆಯರು ಮುಂದಿನ ೫ ರಿಂದ ೧೦ ವರ್ಷಗಳಲ್ಲಿ ಮಧುಮೇಹ ( ಪ್ರಭೇದ -೨ ) ವ್ಯಾಧಿಗೆ ಈಡಾಗುತ್ತಾರೆ.

ಇನ್ಸುಲಿನ್ ಅವಲಂಬಿತ ಮಧುಮೇಹವು ಸಾಮಾನ್ಯವಾಗಿ ಸ್ವಯಂ ಪ್ರತಿರೋಧಕ ಪ್ರತಿಕ್ರಿಯೆಯ ಪರಿಣಾಮವಾಗಿ ಉದ್ಭವಿಸುವುದಾಗಿದ್ದು, ಇದರಲ್ಲಿ ಶರೀರದ ರಕ್ಷಣಾ ವ್ಯವಸ್ಥೆಯೇ ಇನ್ಸುಲಿನ್ ಉತ್ಪಾದಿಸುವ ಬೀಟಾ ಕಣಗಳ ಮೇಲೆ ದಾಳಿ ನಡೆಸುತ್ತದೆ. ಈ ಪ್ರಭೇದವು ಹೆಚ್ಚಾಗಿ ನವಜಾತ ಶಿಶುಗಳು ಮತ್ತು ಹದಿಹರೆಯದವರನ್ನೇ ಕಾಡುವುದಾದರೂ, ಯಾವುದೇ ವಯಸ್ಸಿನಲ್ಲೂ  ತಲೆದೋರಬಹುದು. ಹಾಗೂ ಈ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ಪ್ರತಿನಿತ್ಯ ಇನ್ಸುಲಿನ್ ಚುಚ್ಚು ಮದ್ದನ್ನು ಪಡೆದುಕೊಳ್ಳಬೇಕಾಗುವುದು. ಆದರೆ ಪ್ರಭೇದ ೨ ಮಧುಮೇಹವು ಹೆಚ್ಚಾಗಿ ಮಧ್ಯ ಅಥವಾ ಇಳಿ ವಯಸ್ಸಿನಲ್ಲಿ ಉದ್ಭವಿಸುವುದಾದರೂ, ಇತ್ತೀಚಿನ ಕೆಲವರ್ಷಗಳಿಂದ ಹದಿಹರೆಯದವರಲ್ಲೂ ಪತ್ತೆಯಾಗುತ್ತಿದೆ. ಪಾಶ್ಚಾತ್ಯರ ಜೀವನಶೈಲಿಯ ಅಂಧಾನುಕರಣೆ, ನಿರುಪಯುಕ್ತ ಹಾಗೂ ಅತಿಯಾದ ಕೊಬ್ಬಿನ ಅಂಶಗಳಿರುವ ( ಜಂಕ್ ಫುಡ್ ) ಆಹಾರಗಳ ಅತಿಸೇವನೆ, ನಿಷ್ಕ್ರಿಯತೆ, ತೀವ್ರ ಮಾನಸಿಕ ಒತ್ತಡ, ಅತಿಬೊಜ್ಜು, ಅಧಿಕ ತೂಕ, ಪ್ರದೂಷಿತ ಪರಿಸರ ಮತ್ತು ಅನುವಂಶಿಕತೆ ಇತ್ಯಾದಿ ಕಾರಣಗಳಿಂದ ಉದ್ಭವಿಸುವ " ಡಯಾಬೆಟೆಸ್ ಮೆಲೈಟಸ್ " ಅರ್ಥಾತ್ ಮಧುಮೇಹ ವ್ಯಾಧಿಯ ಸಂಭಾವ್ಯತೆಯ ಪ್ರಮಾಣವು ದಿನೇದಿನೇ ಹೆಚ್ಚುತ್ತಿದೆ.

ಅಪಾಯಕಾರಿ ಅಂಶಗಳು

ಮಧುಮೇಹದ ಪ್ರಭೇದ ೧ ರ ಅಪಾಯಕಾರಿ ಅಂಶಗಳ ಬಗ್ಗೆ ಸಂಶೋಧನೆ ನಡೆಯುತ್ತಲೇ ಇದೆ. ಆದರೆ ಕುಟುಂಬದ ಹಿರಿಯರಲ್ಲಿ ಈ ವಿಧದ ಮಧುಮೇಹವಿದ್ದಲ್ಲಿ, ಇದರ ಸಂಭಾವ್ಯತೆಯ ಅಪಾಯವು ತುಸು ಹೆಚ್ಚುತ್ತದೆ. ಪರಿಸರಕ್ಕೆ ಸಂಬಂಧಿಸಿದ ಅಂಶಗಳು ಮತ್ತು ಕೆಲ ವಿಧದ ವೈರಸ್ ಗಳ ಸೋಂಕುಗಳೂ ಇದಕ್ಕೆ ಕಾರಣವೆನಿಸುತ್ತವೆ.

ಪ್ರಭೇದ ೨ ಕ್ಕೆ ಕಾರಣವೆನಿಸಬಲ್ಲ ಅಪಾಯಕಾರಿ ಅಂಶಗಳಲ್ಲಿ ಅನುವಂಶಿಕತೆ, ಅಧಿಕತೂಕ ಹಾಗೂ ಅತಿಬೊಜ್ಜು, ಅನಾರೋಗ್ಯಕರ ಆಹಾರ ಸೇವನೆ, ನಿಷ್ಕ್ರಿಯತೆ, ಹೆಚ್ಚುತ್ತಿರುವ ವಯಸ್ಸು, ಜನಾಂಗ, ಗ್ಲುಕೋಸ್ ನ ಅಸಹಿಷ್ಣುತೆ, ಗರ್ಭಾವಸ್ಥೆಯಲ್ಲಿ ಪೌಷ್ಠಿಕ ಆಹಾರದ ಕೊರತೆ ಮತ್ತು ಮಧುಮೇಹದ ಇರುವಿಕೆಗಳು ಪ್ರಮುಖವಾಗಿವೆ.

ಪೂರ್ವಸೂಚನೆಗಳು

ಪದೇ ಪದೇ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ ಹಾಗೂ ಹಸಿವೆ, ಅತಿಆಯಾಸ, ಶರೀರದ ತೂಕ ಕಡಿಮೆಯಾಗುವುದು, ಕಣ್ಣಿನ ದೃಷ್ಟಿ ಮಸುಕಾಗುವುದು, ಮೂತ್ರ ವಿಸರ್ಜನಾಂಗಗಳಲ್ಲಿ ತುರಿಕೆ ಉಂಟಾಗುವುದು, ಗಾಯವಾದಾಗ ಹಾಗೂ ಅನ್ಯ ಕಾಯಿಲೆಗಳು ಬಾಧಿಸಿದಾಗ ಸೂಕ್ತ ಚಿಕಿತ್ಸೆ ಪಡೆದರೂ ವಾಸಿಯಾಗದಿರುವುದು ಅಥವಾ ಉಲ್ಬಣಿಸುವುದೇ ಮುಂತಾದ ಪೂರ್ವಸೂಚನೆಗಳು ಮಧುಮೇಹ ಪೀಡಿತರಲ್ಲಿ ಕಂಡುಬರುತ್ತದೆ. ವಿಶೇಷವೆಂದರೆ ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸುವ ಜನರು ಮುಂದೆ ಗಂಭೀರ ಸಮಸ್ಯೆಗಳಿಗೆ ಈಡಾಗಿ ಆಸ್ಪತ್ರೆ ಸೇರಿದ ಬಳಿಕವೇ ಮಧುಮೇಹದ ಇರುವಿಕೆ ಪತ್ತೆಯಾಗುವುದು!.

ಚಿಕಿತ್ಸೆ

ಮಧುಮೇಹ ಪೀಡಿತ ವ್ಯಕ್ತಿಗಳು ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರೊಂದಿಗೆ ಆಹಾರ ಸೇವನೆಯಲ್ಲಿ ಪಥ್ಯ, ಸಮತೋಲಿತ ಹಾಗೂ ಪೌಷ್ಠಿಕ ಅಂಶಗಳಿರುವ ಆಹಾರ ಸೇವನೆ, ಪ್ರತಿನಿತ್ಯ ನಡಿಗೆ, ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಭಾಗವಹಿಸುವುದು, ಅಧಿಕತೂಕ – ಅತಿಬೊಜ್ಜು ಇದ್ದಲ್ಲಿ ಇದನ್ನು ಇಳಿಸಿಕೊಳ್ಳುವುದು, ಮಾನಸಿಕ ಒತ್ತಡದ ನಿವಾರಣೆಗೆ ಓದು, ಸಂಗೀತ ಅಥವಾ ಯೋಗಾಭ್ಯಾಸ, ಪ್ರಾಣಾಯಾಮ ಅಥವಾ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದು ಹಿತಕರವೆನಿಸುವುದು. ಇದರೊಂದಿಗೆ ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಸಮಯದಲ್ಲಿ ಹಾಗೂ ನಿಗದಿತ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಸೇವಿಸುವ ಮೂಲಕ ಈ ವ್ಯಾಧಿಯನ್ನು ನಿಯಂತ್ರಿಸಬಹುದು ಮತ್ತು ಇದು ಉಲ್ಬಣಿಸಿದಲ್ಲಿ ಉದ್ಭವಿಸಬಲ್ಲ ಸಮಸ್ಯೆಗಳನ್ನು ತಡೆಗಟ್ಟಬಹುದು.

ಮಧುಮೇಹ ವ್ಯಾಧಿಯು ಕಾರಣಾಂತರಗಳಿಂದ ಉಲ್ಬಣಿಸಿದಲ್ಲಿ ಅಧಿಕ ರಕ್ತದೊತ್ತಡ, ಹ್ರದ್ರೋಗಗಳು,ದೃಷ್ಟಿನಾಶ, ಮೂತ್ರಪಿಂಡಗಳ ವೈಫಲ್ಯ ಹಾಗೂ ಕೆಲ ಸಂದರ್ಭಗಳಲ್ಲಿ ಅಂಗ ವಿಚ್ಛೇದನದಂತಹ ಗಂಭೀರ ಸಮಸ್ಯೆಗಳಿಗೆ ಮತ್ತು ರೋಗಿಯ ಅಕಾಲಿಕ ಮರಣಕ್ಕೂ ಕಾರಣವೆನಿಸಬಲ್ಲದು.

ತಪ್ಪುಕಲ್ಪನೆಗಳು

ಅನೇಕ ಮಧುಮೇಹ ಪೀಡಿತ ವ್ಯಕ್ತಿಗಳು ನಂಬಿರುವಂತೆ ಸಕ್ಕರೆಯ ಸೇವನೆಗೆ ಬದಲಾಗಿ ಬೆಲ್ಲ, ಕಲ್ಲುಸಕ್ಕರೆ ಮತ್ತು ಜೇನುತುಪ್ಪಗಳನ್ನು ಧಾರಾಳವಾಗಿ ಸೇವಿಸುವುದು ನಿಶ್ಚಿತವಾಗಿಯೂ ಸುರಕ್ಷಿತ ಮತ್ತು ನಿಜವಲ್ಲ. ಅಂತೆಯೇ ಜಗತ್ತಿನ ವಿವಿಧ ದೇಶಗಳಲ್ಲಿರುವ ವೈವಿಧ್ಯಮಯ ವೈದ್ಯಕೀಯ ಪದ್ದತಿಗಳಲ್ಲಿ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ಇದಕ್ಕೂ ಮಿಗಿಲಾಗಿ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಸಂಶೋಧಿಸಿದವರಿಗೆ “ ನೊಬೆಲ್ ಪ್ರಶಸ್ತಿ “ ಯೊಂದಿಗೆ ಕೋಟ್ಯಂತರ ಡಾಲರ್ ಬಹುಮಾನ ದೊರೆಯುವುದರಲ್ಲಿ ಸಂದೇಹವಿಲ್ಲ. ಆದರೆ ನಮ್ಮ ದೇಶದ ಮೂಲೆಮೂಲೆಗಳಲ್ಲಿ ಕಾಣಸಿಗುವ “ ನಕಲಿ ವೈದ್ಯರು “ , ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸುವ ಭರವಸೆಯೊಂದಿಗೆ ನೀಡಿದ ಔಷದಗಳನ್ನು ಸೇವಿಸಿ, ತಜ್ಞ ವೈದ್ಯರು ತಮಗೆ ನೀಡಿದ್ದ ಔಷದಗಳ ಸೇವನೆಯನ್ನು ನಿಲ್ಲಿಸಿದ್ದ ಅಸಂಖ್ಯ ವ್ಯಕ್ತಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡ ಘಟನೆಗಳು ಸಾಕಷ್ಟಿವೆ. ಇದೇ ಕಾರಣದಿಂದಾಗಿ ನಕಲಿ ವೈದ್ಯರ ಪೊಳ್ಳು ಭರವಸೆಗಳಿಗೆ ಬಲಿಯಾಗಿ, ನೀವು ಕಷ್ಟಪಟ್ಟು ಸಂಪಾದಿಸಿದ್ದ ಸಹಸ್ರಾರು ರೂಪಾಯಿಗಳೊಂದಿಗೆ ನಿಮ್ಮ ಪ್ರಾಣವನ್ನೂ ಕಳೆದುಕೊಳ್ಳದಿರಿ!.


ಕೊನೆಯ ಮಾತು

ಮಧುಮೇಹ ಪೀಡಿತರಾದ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರಿಗೆ, ಈ ವ್ಯಾಧಿಯ ಇರುವಿಕೆ ತಿಳಿದಿರುವುದೇ ಇಲ್ಲ. ಆದುದರಿಂದ ನಿಮ್ಮ ಮಾತಾಪಿತರ ಕುಟುಂಬಗಳ ಸದಸ್ಯರಲ್ಲಿ ಮಧುಮೇಹ ಪೀಡಿತರು ಇದ್ದಲ್ಲಿ, ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಪಡೆದು ರಕ್ತದ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ತನ್ಮೂಲಕ ಈ ವ್ಯಾಧಿ ಇರುವುದನ್ನು ಅಥವಾ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು











Tuesday, November 3, 2015

CONJESTION CHARGES AND TRAFFIC JAM



  ವಾಹನ ದಟ್ಟಣೆಯನ್ನು ನಿಶ್ಚಿತವಾಗಿ ನಿಯಂತ್ರಿಸಬಲ್ಲ ವಿಶಿಷ್ಟ ಶುಲ್ಕ!

ಭಾರತದ ಪ್ರತಿಯೊಂದು ಪಟ್ಟಣ, ನಗರ ಮತ್ತು ಮಹಾನಗರಗಳ ರಸ್ತೆಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಕಾರುಗಳ ಮೇಲೆ " ದಟ್ಟಣೆ ಶುಲ್ಕ " ವನ್ನು ವಿಧಿಸುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚಿಂತನೆಯನ್ನು ನಡೆಸಿತ್ತು. ಈ ಶುಲ್ಕವನ್ನು ವಿಧಿಸುವ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ ಹಾಗೂ ನಿರ್ದಿಷ್ಟ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವುದರೊಂದಿಗೆ, ವಾಹನ ದಟ್ಟಣೆಯಿಂದಾಗಿ ಸಂಭವಿಸುವ ವಾಯು ಮಾಲಿನ್ಯ ಮತ್ತು ಪರಿಸರ ಪ್ರದೂಷಣೆಯನ್ನೂ ಸುಲಭದಲ್ಲೇ ನಿಯಂತ್ರಿಸಬಹುದಾಗಿತ್ತು. ಆದರೆ ಈ ಚಿಂತನೆಯು ಇಂದಿನ ತನಕ ಕಾರ್ಯರೂಪಕ್ಕೆ ಬರದಿರಲು ಕಾರಣವೇನೆಂದು ನಮಗೂ ತಿಳಿದಿಲ್ಲ.

ಭಾರತದ ಬಹುತೇಕ ರಸ್ತೆಗಳ ಬಹುದೊಡ್ಡ ಭಾಗವನ್ನು ಮೋಟಾರು ಕಾರುಗಳೇ ಬಳಸುತ್ತವೆ. ಈ " ಕಾರುಬಾರನ್ನು " ನಿಯಂತ್ರಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದು, ಇದರ ಸಾಧಕ - ಬಾಧಕಗಳ ಅಧ್ಯಯನವನ್ನು ನಡೆಸಿದ ಬಳಿಕ ಅನುಷ್ಠಾನಿಸುವಂತೆ ಆದೇಶಿಸಿದೆ. ಕೇಂದ್ರ ನಗರಾಭಿವೃದ್ಧಿ ಮಂತ್ರಾಲಯದ ಸ್ವಾಯತ್ತ ಸಂಸ್ಥೆಯಾಗಿರುವ ಇನ್ಸ್ ಸ್ಟಿಟ್ಯೂಟ್ ಆಫ್ ಅರ್ಬನ್ ಟ್ರಾನ್ಸ್ ಪೋರ್ಟ್, ಕಾರುಗಳ ಮೇಲೆ ಈ ಶುಲ್ಕವನ್ನು ವಿಧಿಸುವ ಪ್ರಸ್ತಾವನೆಯನ್ನು ಶಿಫಾರಸು ಮಾಡಿತ್ತು.

ಏನಿದು ದಟ್ಟಣೆ ಶುಲ್ಕ?

ಕಾನೂನುಬದ್ಧವಾಗಿ ಘೋಷಿಸಿರುವ ಹಾಗೂ ಅತಿಯಾದ ವಾಹನ ದಟ್ಟಣೆಯಿರುವ ನಿರ್ದಿಷ್ಟ ಪ್ರದೇಶವನ್ನು ಪ್ರವೇಶಿಸುವ ವಾಹನಗಳಿಗೆ ಪೂರ್ವ ನಿರ್ಧಾರಿತ ಶುಲ್ಕವನ್ನು ವಿಧಿಸುವ ಪರಿಣಾಮಕಾರಿ ವಿಧಾನವೇ " ದಟ್ಟಣೆ ಶುಲ್ಕ " ಅರ್ಥಾತ್ ಕಂಜೆಶನ್ ಚಾರ್ಜ್. ಸುಗಮ ಸಂಚಾರಕ್ಕೆ ಸಂಭವಿಸುವ ಅಡ್ಡಿ ಆತಂಕಗಳು, ವಿಳಂಬ, ಸಮಯ ಹಾಗೂ ಇಂಧನದ ಅಪವ್ಯಯ, ವಾಯುಮಾಲಿನ್ಯ, ಪರಿಸರ ಪ್ರದೂಷಣೆ ಇವೇ ಮುಂತಾದ ಸಮಸ್ಯೆಗಳನ್ನು ತಡೆಗಟ್ಟಲು ಈ ಶುಲ್ಕವನ್ನು ವಿಧಿಸುವುದು ಉಪಯುಕ್ತವೆನಿಸಲಿದೆ.

ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳನ್ನು ಸದಾ ಅನಿಯಂತ್ರಿತವಾಗಿ ಪ್ರವೇಶಿಸುವ ವಾಹನಗಳು ಅನ್ಯ ಪರ್ಯಾಯ ರಸ್ತೆಗಳ ಮೂಲಕ ಸಂಚರಿಸುವುದರಿಂದ, ಜನಸಾಮಾನ್ಯರು ಸ್ವಂತ ವಾಹನಗಳ ಬದಲಾಗಿ ಸಾರ್ವಜನಿಕ ಸಾರಿಗೆ ವಾಹನಗಳನ್ನು ಬಳಸುವುದರಿಂದ ಮತ್ತು ತತ್ಪರಿಣಾಮವಾಗಿ ಈ ಪ್ರದೇಶ ಹಾಗೂ ನಿರ್ದಿಷ್ಟ ರಸ್ತೆಗಳಲ್ಲಿ ತಂಗುವ  ವಾಹನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗುವುದು. ಈ ಬಗ್ಗೆ ಅಧ್ಯಯನವನ್ನು ನಡೆಸಿದ್ದ ದಿಲ್ಲಿಯ ಸ್ಕೂಲ್ ಆಫ್ ಪ್ಲಾನಿಂಗ್ ಎಂಡ್ ಆರ್ಕಿಟೆಕ್ಚರ್ ಸಂಸ್ಥೆಯು ಹೇಳುವಂತೆ, ವಾಹನವೊಂದಕ್ಕೆ ಕೇವಲ ೧೦ ರೂ. ದಟ್ಟಣೆ ಶುಲ್ಕವನ್ನು ವಿಧಿಸಿದಲ್ಲಿ ಇಂತಹ ಪ್ರದೇಶಗಳಲ್ಲಿನ ವಾಹನ ದಟ್ಟಣೆಯ ಪ್ರಮಾಣವು ಶೇ. ೨೦ ರಿಂದ ೨೫ ರಷ್ಟು ಕಡಿಮೆಯಾಗುವುದು. ಸಿಂಗಾಪುರ, ಸ್ಟಾಕ್ ಹೋಮ್ ಹಾಗೂ ಲಂಡನ್ ಮುಂತಾದಲ್ಲಿ ಈ ಶುಲ್ಕವನ್ನು ಕೆಲವರ್ಷಗಳಿಂದ ವಿಧಿಸಲಾಗುತ್ತಿದ್ದು, ಈ ಪ್ರಯೋಗವು ಅಪೇಕ್ಷಿತ ಪರಿಣಾಮವನ್ನು ನೀಡುವಲ್ಲಿ ಯಶಸ್ವಿಯಾಗಿದೆ.

ಕಡತಗಳಲ್ಲಿ ಉಳಿದ ಪ್ರಸ್ತಾವನೆ

ನಮ್ಮ ದೇಶದಲ್ಲಿ ಮೊಟ್ಟಮೊದಲಬಾರಿಗೆ ದಟ್ಟಣೆ ಶುಲ್ಕ ವಿಧಿಸುವ ವಿಚಾರವನ್ನು ರಾಷ್ಟ್ರೀಯ ಸಾರಿಗೆ ಧೋರಣೆ - ೨೦೦೬ ರಲ್ಲಿ ಪ್ರಸ್ತಾವಿಸಲಾಗಿದ್ದರೂ, ಸಂಬಂಧಿತ ಸಚಿವಾಲಯವು ಇದನ್ನು ಪರಿಗಣಿಸಿರಲಿಲ್ಲ. ತದನಂತರ ೧೨ ನೆ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು, ದಟ್ಟಣೆ ಶುಲ್ಕವನ್ನು ವಿಧಿಸುವ ಮತ್ತು ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸುವ ಮೂಲಕ ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಸ್ತಾವನೆ ಇದ್ದಿತು. ಜೊತೆಗೆ ಯೋಜನಾ ಆಯೋಗವು ಜಾಗತಿಕ ಮಟ್ಟದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ದಟ್ಟಣೆ ಶುಲ್ಕವನ್ನು ನಿರ್ಧರಿಸುವ ವಿಧಾನವನ್ನು ಅಧ್ಯಯನ ಮಾಡಿ ವಿಶ್ಲೇಷಿಸಲು ಸೂಚಿಸಿತ್ತು. ಆದರೆ ನಮ್ಮ ದೇಶದಲ್ಲಿ " ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ " ವು ಚಲಿಸುವುದು ಅತ್ಯಂತ ನಿಧಾನವಾಗಿರುವುದರಿಂದ, ಪ್ರಸ್ತಾವನೆಗಳು ಮತ್ತು ಆದೇಶಗಳು ಅನುಷ್ಠಾನಗೊಳ್ಳುವುದಕ್ಕಿಂತಲೂ ಕಸದ ಬುಟ್ಟಿಯನ್ನು ಸೇರುವ ಸಾಧ್ಯತೆಗಳೇ ಅಧಿಕ.

೨೦೦೮ ರಲ್ಲಿ ನಗರ ಮೂಲಸೌಕರ್ಯಗಳ ಸಲಹಾ ಸಂಸ್ಥೆಯೊಂದು ನಡೆಸಿದ್ದ ಅಧ್ಯಯನದಂತೆ, ೨೦೩೦ ರಲ್ಲಿ ದೇಶದ ಮಹಾನಗರಗಳಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳು ಓಡಾಡುವ ಸಮಯ ( ಪೀಕ್ ಅವರ್ ) ದಲ್ಲಿ ಇವುಗಳ ವೇಗವು ಗಂಟೆಗೆ ಕೇವಲ ೬ ಕಿ.ಮೀ. ಗೆ ಕುಸಿಯಲಿದೆ ಎಂದು ತಿಳಿದುಬಂದಿತ್ತು. (ಆದರೆ ವಾಸ್ತವದಲ್ಲಿ ೨೦೧೫ ಕ್ಕೆ ಮುನ್ನವೇ ಈ ಪರಿಸ್ಥಿತಿ ಉದ್ಭವಿಸಿದೆ.) ಅರ್ಥಾತ್ ವಾಹನಗಳ ಸಂಚಾರವು ಅಕ್ಷರಶಃ ಸ್ಥಗಿತಗೊಳ್ಳಲಿದೆ ಎಂದು ಭವಿಷ್ಯವನ್ನು ನುಡಿದಿತ್ತು!.

ಸಾರ್ವಜನಿಕ ಸಾರಿಗೆ ಅಭಿವೃದ್ಧಿ

ತಜ್ಞರ ಅಭಿಪ್ರಾಯದಂತೆ ನಮ್ಮ ದೇಶದಲ್ಲಿ ದಟ್ಟಣೆ ಶುಲ್ಕವನ್ನು ವಿಧಿಸುವುದು ಉಪಯುಕ್ತವೆನಿಸುವುದಾದರೂ, ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಸುಲಭಸಾಧ್ಯವೇನಲ್ಲ. ಏಕೆಂದರೆ ನಮ್ಮ ದೇಶದ ವಿವಿಧ ನಗರಗಳ ಗಾತ್ರ, ಜನಸಂಖ್ಯೆ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿನ ವ್ಯತ್ಯಾಸಗಳು ಅನೇಕ ಗೊಂದಲಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ. ಇದಕ್ಕಾಗಿ ಸಮರ್ಪಕವಾದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದರೊಂದಿಗೆ, ದಟ್ಟಣೆ ಶುಲ್ಕವನ್ನು ವಿಧಿಸುವ ಮೂಲಕ ಕಡಿಮೆಯಾಗಲಿರುವ ವಾಹನಗಳ ಸಂಖ್ಯೆಗಳ ವೈಜ್ಞಾನಿಕ ಲೆಕ್ಕಾಚಾರವನ್ನು ಮಾಡಬೇಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ದಟ್ಟಣೆ ಶುಲ್ಕವನ್ನು ವಿಧಿಸುವ ಮುನ್ನ ಸಮರ್ಪಕವಾದ ಹಾಗೂ ಸುಗಮ ವಾಹನ ಸಂಚಾರಕ್ಕೆ ಅತ್ಯವಶ್ಯಕವೆನಿಸುವ ಉತ್ತಮ ರಸ್ತೆಗಳು, ಪಾದಚಾರಿಗಳಿಗಾಗಿ ಸುರಕ್ಷಿತ ಕಾಲುದಾರಿಗಳೇ ಮುಂತಾದ ಮೂಲ ಸೌಕರ್ಯಗಳನ್ನು ಸಿದ್ಧಪಡಿಸಲು ಅವಶ್ಯಕ ಅತ್ಯಾಧುನಿಕ ತಂತ್ರಜ್ಞಾನ ಮತ್ತಿತರ ವ್ಯವಸ್ಥೆಗಳಿಗಾಗಿ ಸಹಸ್ರಾರು ಕೋಟಿ ರೂಪಾಯಿಗಳ ಹೂಡಿಕೆಯ ಅವಶ್ಯಕತೆಯಿದೆ. ಆದರೆ ತತ್ಪರಿಣಾಮವಾಗಿ ಜನಸಾಮಾನ್ಯರಿಗೆ ಲಭಿಸಲಿರುವ ಪ್ರಯೋಜನಗಳನ್ನು, ಅಂದರೆ ವಾಹನಗಳ ದಟ್ಟಣೆಯ ಪ್ರಮಾಣದಲ್ಲಿ ಇಳಿಕೆ, ಸುಗಮ ವಾಹನ ಸಂಚಾರಕ್ಕೆ ಆಸ್ಪದ, ಸಮಯ ಮತ್ತು ಇಂಧನಗಳ  ಉಳಿತಾಯ, ಕಡಿಮೆಯಾಗಲಿರುವ ವಾಯುಮಾಲಿನ್ಯ ಹಾಗೂ ಪರಿಸರ ಪ್ರದೂಷಣೆಯ ಪ್ರಮಾಣ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದ ಗಳಿಸಬಹುದಾದ ಹೆಚ್ಚುವರಿ ಆದಾಯಗಳನ್ನು ಪರಿಗಣಿಸಿದಾಗ, ಇದು ನಿಸ್ಸಂದೇಹವಾಗಿಯೂ ಅತ್ಯಂತ ಲಾಭದಾಯಕವೆನಿಸಲಿದೆ.

ಪ್ರಸ್ತುತ ನಮ್ಮ ದೇಶದ ಪ್ರತಿಯೊಂದು ನಗರ - ಮಹಾನಗರಗಳಲ್ಲಿನ ವಾಹನ ದಟ್ಟಣೆ ಹಾಗೂ ತತ್ಸಂಬಂಧಿತ ಅನ್ಯ ಸಮಸ್ಯೆಗಳನ್ನು ಗಮನಿಸಿದಾಗ, ದಟ್ಟಣೆ ಶುಲ್ಕವನ್ನು ತ್ವರಿತಗತಿಯಲ್ಲಿ ಜಾರಿಗೆ ತರುವುದು ಅನಿವಾರ್ಯವೆನಿಸುತ್ತಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Wednesday, October 21, 2015

GOVT. BANS PLASTIC CARRY BAGS ETC.


           ಪ್ಲಾಸ್ಟಿಕ್ ನಿಷೇಧದ ನಿರ್ಧಾರ : ನಿಜಕ್ಕೂ ಆರೋಗ್ಯಕರ

ಕರ್ನಾಟಕ ರಾಜ್ಯ ಸರ್ಕಾರವು ಇದೀಗ ಪರಿಸರ ಸಂರಕ್ಷಣಾ ಕಾಯಿದೆಯ ಕಲಂ  ೫ ರನ್ವಯ ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಉತ್ಪನ್ನಗಳ ಮೇಲೆ ನಿಷೇಧವನ್ನು ಹೇರುವ ಕರಡು ಅಧಿಸೂಚನೆಗೆ ಹಸಿರು ನಿಶಾನೆಯನ್ನು ತೋರಿದೆ. ರಾಜ್ಯ ಪರಿಸರ ಮತ್ತು ಅರಣ್ಯ ಇಲಾಖೆಯು ಈ ಬಗ್ಗೆ ಸೂಚನೆಯನ್ನು ಪ್ರಕಟಿಸಲಿದ್ದು, ಸಾರ್ವಜನಿಕರಿಂದ ಸೂಕ್ತ ಸಲಹೆಗಳು ಅಥವಾ ಆಕ್ಷೇಪಗಳನ್ನು ಆಹ್ವಾನಿಸಲಿದೆ. ರಾಜ್ಯ ಮಂತ್ರಿ ಮಂಡಲದ ಸಭೆಯಲ್ಲಿ ಅಂಗೀಕರಿಸಲ್ಪಟ್ಟಿರುವ ಕರಡು ಅಧಿಸೂಚನೆಯಲ್ಲಿ ೪೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮತ್ತಿತರ ಲಕೋಟೆಗಳು, ಜಾಹೀರಾತುಗಳಲ್ಲಿ ಬಳಸುವ ಫ್ಲೆಕ್ಸ್, ಪ್ಲಾಸ್ಟಿಕ್ ತೋರಣಗಳು ಹಾಗೂ ಧ್ವಜಗಳು, ತಟ್ಟೆ, ಲೋಟ, ಚಮಚ, ಪ್ಲಾಸ್ಟಿಕ್ ಹಾಳೆಗಳು, ಥರ್ಮೋಕೂಲ್ ನಿರ್ಮಿತ ತಟ್ಟೆ ಮತ್ತು ಲೋಟ ಇತ್ಯಾದಿ ೧೩ ವಿಧದ ವಸ್ತುಗಳ ತಯಾರಿಕೆ, ಸಾಗಾಣಿಕೆ, ವಿತರಣೆ ಮತ್ತು ಮಾರಾಟಗಳನ್ನೇ ನಿಷೇಧಿಸುವ ಪ್ರಸ್ತಾವನೆಯಿದೆ. ಪ್ರಾಯಶಃ ಇದೇ ವರ್ಷದ ಅಂತ್ಯಕ್ಕೆ ಮುನ್ನ ಈ ಅಧಿಸೂಚನೆಯು ಜಾರಿಯಾಗಲಿದೆ.

ನಿಷೇಧ ಪರಿಣಾಮಕಾರಿಯಾಗಲಿ

೨೦೧೧ ರಲ್ಲಿ ದೇಶಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯಗಳ ನಿಭಾವಣೆ ಮತ್ತು ನಿರ್ವಹಣೆಗಳ ನಿಯಮ ೨೦೧೧ ಜಾರಿಗೆ ಬಂದಿದ್ದು, ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳ ತಯಾರಿಕೆ ಮತ್ತು ಮಾರಾಟಗಳನ್ನು ನಿಷೇಧಿಸಲಾಗಿತ್ತು. ಅಂತೆಯೇ ಕೆಲ ರಾಜ್ಯಗಳು ಮತ್ತು ಮಹಾನಗರಗಳು ೪೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳ ಮಾರಾಟವನ್ನು ನಿಷೇಧಿಸಿದ್ದವು.ಆದರೆ ಈ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದ ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಕರ ಅಸಹಕಾರಗಳಿಂದಾಗಿ, ಇಂದಿಗೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳನ್ನು ದೇಶಾದ್ಯಂತ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿದೆ!.

ಪ್ಲಾಸ್ಟಿಕ್ ಉದ್ದಿಮೆಗಳ ವಕ್ತಾರರು ಹೇಳುವಂತೆ ರಾಜ್ಯದಲ್ಲಿ ತೆಳ್ಳನೆಯ ಪ್ಲಾಸ್ಟಿಕ್ ಕೈಚೀಲಗಳನ್ನು ತಯಾರಿಸದೆ ಇದ್ದರೂ, ನೆರೆಯ ರಾಜ್ಯಗಳಿಂದ ಇವುಗಳನ್ನು ಕದ್ದುಮುಚ್ಚಿ ಆಮದು ಮಾಡಲಾಗುತ್ತಿದೆ. ಇದರಿಂದಾಗಿ ನಮ್ಮ ಉತ್ಪನ್ನಗಳು ಮಾರಾಟವಾಗದೇ ನಷ್ಟ ಸಂಭವಿಸುತ್ತಿದೆ. ಆದರೆ ಕೆಲ ಅಧಿಕಾರಿಗಳು ಹೇಳುವಂತೆ ರಾಜ್ಯದಲ್ಲೂ ೨೦ ಮೈಕ್ರಾನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾತ್ರಿಯ ಪಾಳಿಯಲ್ಲಿ ತಯಾರಿಸಿ ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ೨೦ ಮೈಕ್ರಾನ್ ದಪ್ಪದ ಹಾಗೂ ಇದಕ್ಕೂ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲಗಳ ಬೆಲೆಗಳ ನಡುವೆ ಅಗಾಧ ಅಂತರ ಇರುವುದರಿಂದಾಗಿ, ತೆಳ್ಳಗಿನ ಪ್ಲಾಸ್ಟಿಕ್ ಚೀಲಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗೂ ಇದೇ ಕಾರಣದಿಂದಾಗಿ ಈ ಸಮಸ್ಯೆಯನ್ನು ನಿಯಂತ್ರಿಸುವುದು ಅಸಾಧ್ಯವೆನಿಸುತ್ತಿದೆ.

ತ್ಯಾಜ್ಯಗಳ ಸಮಸ್ಯೆ 

ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಹಗಲಿರುಳು ಕಾಡುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯನ್ನು ಆಂಶಿಕವಾಗಿ ಪರಿಹರಿಸಬಲ್ಲ ದಿಟ್ಟ ನಿರ್ಧಾರವನ್ನು ರಾಜ್ಯ ಸರ್ಕಾರ ತಳೆದಿದೆ. ಕೊನೆಗೂ ತುಕ್ಕು ಹಿಡಿದಿರುವ ಸರ್ಕಾರಿ ಯಂತ್ರ ಮತ್ತೆ ಚಲಿಸಲು ಆರಂಭಿಸಿದ ಪರಿಣಾಮವಾಗಿ, ಇದೀಗ ೪೦ ಮೈಕ್ರಾನ್ ಗಳಿಗಿಂತ ತೆಳ್ಳಗಿನ ಕೈಚೀಲ ಮತ್ತಿತರ ಪ್ಲಾಸ್ಟಿಕ್ ಉತ್ಪನ್ನಗಳು ಹಾಗೂ ದಿನಬಳಕೆಯ ವಸ್ತುಗಳನ್ನು ನಿಷೇಧಿಸಲು ರಾಜ್ಯ ಮಂತ್ರಿಮಂಡಲವು ನಿರ್ಧರಿಸಿದೆ. ಅನೇಕ ವರ್ಷಗಳಿಂದ ಇಂತಹ ದಿಟ್ಟ ನಿರ್ಧಾರವೊಂದನ್ನು ತಳೆಯಲು ಸರ್ಕಾರವನ್ನು ಒತ್ತಾಯಿಸುತ್ತಿದ್ದ ಸ್ವಯಂ ಸೇವಾ ಸಂಘಟನೆಗಳ ಆಗ್ರಹಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ನಿರ್ಧಾರವು ಅನುಷ್ಠಾನಗೊಂಡ ಬಳಿಕ ರಾಜ್ಯದ ಪ್ರತಿಯೊಂದು ಹಳ್ಳಿಗಳಿಂದ ಆರಂಭಿಸಿ, ರಾಜಧಾನಿಯಾಗಿರುವ ಬೆಂಗಳೂರಿನ ತನಕ ಕಾಣಸಿಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಸಮಸ್ಯೆಯು ತಕ್ಕ ಮಟ್ಟಿಗೆ ಪರಿಹಾರಗೊಳ್ಳಲಿದೆ. ಆದರೆ ಈ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳಬೇಕಿದ್ದಲ್ಲಿ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಅಸಂಖ್ಯ ಗ್ರಾಹಕ ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ವಿವಿಧ ರೀತಿಯ ಪ್ಲಾಸ್ಟಿಕ್ ಗಳನ್ನೂ ನಿಷೇಧಿಸಲೇಬೇಕು. ಇದಕ್ಕೆ ತಪ್ಪಿದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಇವುಗಳಿಂದಾಗಿ ಉದ್ಭವಿಸುವ ವೈವಿಧ್ಯಮಯ ಸಮಸ್ಯೆಗಳನ್ನು ಸಮರ್ಪಕವಾಗಿ ಸಂಪೂರ್ಣವಾಗಿ ಪರಿಹರಿಸುವುದು ಅಸಾಧ್ಯವೆನಿಸಲಿದೆ.

ಕೆಲವರ್ಷಗಳ ಹಿಂದೆ ರಾಜ್ಯ ಸರ್ಕಾರವು ೨೦ ಮೈಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ನಿಷೇಧಿಸಿತ್ತು. ನಿಷೇಧ ಜಾರಿಯಾದ ಕೆಲವೇ ತಿಂಗಳುಗಳ ಕಾಲ ಕಣ್ಮರೆಯಾಗಿದ್ದ ಅತ್ಯಂತ ತೆಳ್ಳಗಿನ ಪ್ಲಾಸ್ಟಿಕ್ ಕೈಚೀಲಗಳು, ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೆ ಮಾರುಕಟ್ಟೆಯಲ್ಲಿ ಪ್ರತ್ಯಕ್ಷವಾಗಿದ್ದವು!. ವಿಶೇಷವೆಂದರೆ ಈ ಬಾರಿ ೪೦ ಮೈಕ್ರಾನ್ ಗಿಂತ ಕಡಿಮೆಯಿರುವ ಪ್ಲಾಸ್ಟಿಕ್ ಕೈಚೀಲ ಮುಂತಾದವುಗಳನ್ನು ರಾಜ್ಯದಲ್ಲಿ ತಯಾರಿಸಿ ಹೊರದೇಶಗಳಿಗೆ ರಫ್ತು ಮಾಡಲು ಅವಕಾಶವನ್ನು ನೀಡಲಾಗಿದೆ. ಅರ್ಥಾತ್ ೪೦ ಮೈಕ್ರಾನ್ ಗಿಂತ ತೆಳ್ಳಗಿರುವ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಪ್ಲಾಸ್ಟಿಕ್ ಉತ್ಪನ್ನಗಳ ಘಟಕಗಳು ತಯಾರಿಸಬಹುದಾಗಿದೆ. ಹಾಗೂ ಇದೇ ಕಾರಣದಿಂದಾಗಿ ಇಂತಹ ಉತ್ಪನ್ನಗಳು ರಾಜ್ಯದ ಮಾರುಕಟ್ಟೆಗಳಲ್ಲಿ ಹಿಂದಿನಂತೆ ಗುಪ್ತವಾಗಿ ಮಾರಾಟವಾಗುವ ಸಾಧ್ಯತೆಗಳೂ ಇವೆ. ಇದನ್ನು ನಿಶ್ಚಿತವಾಗಿ ನಿಯಂತ್ರಿಸಬೇಕಿದ್ದಲ್ಲಿ, ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲಿ ತಯಾರಿಸುವ ಮತ್ತು ವಿದೇಶಗಳಿಗೆ ರಫ್ತು ಮಾಡುವುದನ್ನೂ ನಿಷೆಧಿಸಲೇಬೇಕಾಗುವುದು.

ತ್ಯಾಜ್ಯಗಳು ಕಡಿಮೆಯಾಗಲಿವೆ

ರಾಜ್ಯ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ಮೂಲೆಮೂಲೆಗಳಲ್ಲಿ ಕಾಣಸಿಗುವ ವೈವಿಧ್ಯಮಯ ಪ್ಲಾಸ್ಟಿಕ್ ತ್ಯಾಜ್ಯಗಳು ಮತ್ತು ಸಭೆ - ಸಮಾರಂಭಗಳ ಸಂದರ್ಭದಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ನಿರ್ಮಿತ ತಟ್ಟೆ, ಲೋಟ, ಚಮಚ ಮತ್ತಿತರ ತ್ಯಾಜ್ಯಗಳ ಪ್ರಮಾಣವು ನಿಸ್ಸಂದೇಹವಾಗಿ ಕಡಿಮೆಯಾಗಲಿದೆ. ಇದರಿಂದಾಗಿ ರಸ್ತೆಯ ಬದಿಗಳಲ್ಲಿನ ಚರಂಡಿಗಳಲ್ಲಿ ವಿಸರ್ಜಿಸಲ್ಪಡುವ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗಲಿದ್ದು, ಇವುಗಳನ್ನು ತಿಂದು ಅಸುನೀಗುವ ಪಶುಪಕ್ಷಿಗಳ ಸಂಖ್ಯೆಯೂ ಇಳಿಮುಖವಾಗಲಿದೆ. ಇದಲ್ಲದೇ ಮಳೆಗಾಲದಲ್ಲಿ ಮಳೆನೀರಿನೊಂದಿಗೆ ಹರಿದು ನದಿ ಮತ್ತು ಸಮುದ್ರಗಳನ್ನು ಸೇರುವ ಪ್ಲಾಸ್ಟಿಕ್ ತ್ಯಾಜ್ಯಗಳ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗಲಿದೆ.  ಇಷ್ಟು ಮಾತ್ರವಲ್ಲ, ಈ ತ್ಯಾಜ್ಯಗಲಿಂದಾಗಿ ಸಂಭವಿಸುತ್ತಿದ್ದ  ಜಲಪ್ರದೂಷಣೆಯ ಪ್ರಮಾಣವು ನಿಯಂತ್ರಿಸಲ್ಪಡುವುದಲ್ಲದೇ, ಜಲಚರಗಳ ಅಕಾಲಿಕ ಮರಣದ ಪ್ರಮಾಣವೂ ಕಡಿಮೆಯಾಗಲಿದೆ.

ಸರ್ಕಾರದ ಈ ನಿರ್ಧಾರದಿಂದ ಖಾಲಿಜಾಗಗಳು ಮತ್ತು ಚರಂಡಿಗಳಲ್ಲಿ ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಕೊಳಚೆನೀರಿನ ಹರಿವಿಗೆ ಅಡಚಣೆಯಾಗುತ್ತಿದ್ದ ಕಾರಣದಿಂದಾಗಿ ಉದ್ಭವಿಸುತ್ತಿದ್ದ ಅನೇಕ ಆರೋಗ್ಯದ ಸಮಸ್ಯೆಗಳು ಮತ್ತು ಧಾರಾಕಾರ ಮಳೆ ಸುರಿದಾಗ ಉದ್ಭವಿಸುವ ಕೃತಕ ನೆರೆಯ ಸಮಸ್ಯೆಗಳು  ಸ್ವಾಭಾವಿಕವಾಗಿಯೇ ನಿಯಂತ್ರಿಸಲ್ಪಡಲಿವೆ. ಅಂತೆಯೇ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿಗೆ ಬೆಂಕಿ ಹಚ್ಚಿ ಸುಡುವುದರಿಂದ ಉತ್ಪನ್ನವಾಗುವ ಅಪಾಯಕಾರಿ ಹಸಿರುಮನೆ ಅನಿಲಗಳಿಂದಾಗಿ ಹೆಚ್ಚುವ ಜಾಗತಿಕ ತಾಪಮಾನ ಮತ್ತು ತತ್ಪರಿಣಾಮವಾಗಿ ಉದ್ಭವಿಸುವ ಹವಾಮಾನದ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳೂ ಕಡಿಮೆಯಾಗಲಿವೆ.

ಇವೆಲ್ಲಕ್ಕೂ ಮಿಗಿಲಾಗಿ ರಾಜದ ಸ್ಥಳೀಯ ಸಂಸ್ಥೆಗಳಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿರುವ ಅಗಾಧ ಪ್ರಮಾಣದ ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆ, ಸಾಗಾಟ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ತಗಲುವ ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಲಿದೆ. ಇದರೊಂದಿಗೆ ವಿದೇಶಗಳಿಂದ ಆಮದು ಮಾಡುತ್ತಿರುವ ಕಚ್ಚಾ ತೈಲಕ್ಕಾಗಿ ಸರ್ಕಾರವು ವ್ಯಯಿಸುತ್ತಿರುವ ಅಮೂಲ್ಯವಾದ ವಿದೇಶೀ ವಿನಿಮಯವೂ  ಉಳಿತಾಯವಾಗಲಿದೆ.

ಆದರೂ ಕೇವಲ ಕೆಲವಿಧದ ಪ್ಲಾಸ್ಟಿಕ್ ಗಳನ್ನು ನಿಷೇಧಿಸುವುದರಿಂದ ತ್ಯಾಜ್ಯಗಳ ಸಮಸ್ಯೆಯು ಸಂಪೂರ್ಣವಾಗಿ ಪರಿಹಾರಗೊಳ್ಳುವ ಸಾಧ್ಯತೆಗಳಿಲ್ಲ. ಹಾಗೂ ಇದೇ ಕಾರಣದಿಂದಾಗಿ ಸರ್ಕಾರವು ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ. ಪ್ರಸ್ತುತ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೊಳಿಸಿದಂತೆಯೇ, ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಇವುಗಳು ಉತ್ಪನ್ನವಾಗುವ ಮೂಲಗಳಿಂದಲೇ ಪ್ರತ್ಯೇಕಿಸಿ ಸಂಗ್ರಹಿಸುವ, ಸುರಕ್ಷಿತವಾಗಿ ಸಾಗಿಸುವ ಮತ್ತು ವೈಜ್ಞಾನಿಕ ವಿಧಾನಗಳಿಂದ ವಿಲೇವಾರಿ ಮಾಡುವ ವ್ಯವಸ್ಥೆಗಳನ್ನು ಪ್ರತಿಯೊಂದು ಸ್ಥಳೀಯ ಸಂಸ್ಥೆಗಳಲ್ಲೂ ಒದಗಿಸಬೇಕು. ಉದಾಹರಣೆಗೆ  ಪ್ಲಾಸ್ಟಿಕ್ ತ್ಯಾಜ್ಯಗಳನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುವುದನ್ನು ಕಡ್ಡಾಯಗೊಳಿಸುವ ಮೂಲಕ, ರಸ್ತೆಗಳ ನಿರ್ಮಾಣದ ವೆಚ್ಚವನ್ನು ಉಳಿಸುವ, ರಸ್ತೆಗಳ ಆಯುಷ್ಯವನ್ನು ಹೆಚ್ಚಿಸುವ ಮತ್ತು ಅಪಾಯಕಾರಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುರಕ್ಷಿತವಾಗಿ ಹಾಗೂ ಉಪಯುಕ್ತವೆನಿಸುವಂತೆ ವಿಲೇವಾರಿ ಮಾಡುವ ವಿಧಾನಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲೇಬೇಕು. ಇಂತಹ ಉಪಕ್ರಮಗಳನ್ನು ಶೀಘ್ರದಲ್ಲಿ ಜಾರಿಗೊಳಿಸದೇ, ಕೇವಲ ನಿರ್ದಿಷ್ಟ ಗುಣಮಟ್ಟದ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಅಪೇಕ್ಷಿತ ಫಲಿತಾಂಶ ದೊರೆಯದು ಎನ್ನುವುದನ್ನು ಸರ್ಕಾರ ಅರ್ಥೈಸಿಕೊಳ್ಳಬೇಕಿದೆ.

ಇವೆಲ್ಲಕ್ಕೂ ಮಿಗಿಲಾಗಿ ನಿಷೇಧಿಸಲ್ಪಡಲಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ವರ್ತಕರು ಖರೀದಿಸದಿರುವ ಮತ್ತು ಗ್ರಾಹಕರು ತಿರಸ್ಕರಿಸುವ ಇಚ್ಛಾಶಕ್ತಿಯನ್ನು ತೋರದಿದ್ದಲ್ಲಿ, ಸರ್ಕಾರದ ಪ್ರಯತ್ನವು ನಿಶ್ಚಿತವಾಗಿಯೂ ನಿಷ್ಪ್ರಯೋಜಕ ಎನಿಸಲಿದೆ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


Friday, October 16, 2015

G Category sites - Politicians grab it!



          ಜಿ ಪ್ರವರ್ಗದ ನಿವೇಶನ :ರಾಜಕಾರಣಿಗಳಿಂದ ಆಪೋಶನ

ಸಮಾಜ ಸೇವೆ ಮಾಡುವ ಸಲುವಾಗಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದಾಗಿ ಹೇಳುವ ರಾಜಕಾರಣಿಗಳು, ಒಂದುಬಾರಿ ಚುನಾವಣೆಯಲ್ಲಿ ಗೆದ್ದ  ಬಳಿಕ ತಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸಾಕಷ್ಟು ಶ್ರಮಿಸುತ್ತಾರೆ. ಅಂತೆಯೇ ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸಿದಷ್ಟು ಪ್ರಮಾಣದಲ್ಲಿ ತಮ್ಮ ಸಂಬಳ, ಭತ್ಯೆ, ಪಿಂಚಿಣಿ ಮತ್ತಿತರ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವುದರೊಂದಿಗೆ, ಸಾಕಷ್ಟು ಸಂಪತ್ತನ್ನೂ ಗಳಿಸುವತ್ತ ಗಮನ ಹರಿಸುತ್ತಾರೆ. ಇಂತಹ ಸವಲತ್ತುಗಳಲ್ಲಿ ಕ್ಷುಲ್ಲಕ ಬೆಲೆಗೆ ಬೆಂಗಳೂರಿನಲ್ಲಿ  “ ಜಿ ಪ್ರವರ್ಗದ ನಿವೇಶನ “ ವನ್ನು ಮಂಜೂರು ಮಾಡಿಸಿಕೊಳ್ಳುವುದೂ ಸೇರಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಕಳೆದ ಹಲವರು ವರ್ಷಗಳಿಂದ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ " ಜಿ ಪ್ರವರ್ಗದ ನಿವೇಶನ " ಗಳ ವಿಚಾರವು, ಇದೀಗ ಮತ್ತೊಮ್ಮೆ ಮಾಧ್ಯಮಗಳಿಗೆ ಗ್ರಾಸವೆನಿಸುತ್ತಿದೆ. ರಾಜ್ಯದ ಉಚ್ಛ ನ್ಯಾಯಾಲಯದ ಆದೇಶದಂತೆ ಸ್ಥಗಿತಗೊಂಡಿದ್ದ ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯು ಮತ್ತೊಮ್ಮೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗೂ ಇದಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆಯ ನಿಯಮಗಳಿಗೆ ರಾಜ್ಯ ಸರ್ಕಾರವು ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ. ವಿಶೇಷವೆಂದರೆ ಕೆಲ ವರ್ಷಗಳ ಹಿಂದೆ ಉಚ್ಛ ನ್ಯಾಯಾಲಯವು ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯ ಪ್ರಕರಣದ ಬಗ್ಗೆ ತೀರ್ಪನ್ನು ನೀಡುವಾಗ, ರಾಜ್ಯ ಸರ್ಕಾರವು ಬಿಡಿ ನಿವೇಶನಗಳ ಹಂಚಿಕೆಯ ನಿಯಮಗಳನ್ನು ಸಮರ್ಪಕವಾಗಿ ರೂಪಿಸುವಂತೆ ನೀಡಿದ್ದ ಸಲಹೆಯನ್ನು ಈ ತಿದ್ದುಪಡಿಗಾಗಿ ಬಳಸಿಕೊಂಡಿದೆ!.

ಜಿ ಪ್ರವರ್ಗ ರಾಜಕಾರಣಿಗಳಿಗಲ್ಲ

 ಕರ್ನಾಟಕದಲ್ಲಿ ಜರಗಿದ್ದ ಹಲವಾರು ಹಗರಣಗಳಲ್ಲಿ ದುಬಾರಿ ಬೆಲೆಯ ಗೃಹ ನಿವೇಶನಗಳನ್ನು ಅತ್ಯಲ್ಪ ಬೆಲೆಗೆ  ರಾಜ್ಯದ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಇವರ ಬಂಧುಮಿತ್ರರಿಗೆ ಹಂಚಿದ್ದ ಹಗರಣವೂ ಸೇರಿದೆ. ಜಿ ಪ್ರವರ್ಗದ ನಿವೇಶನಗಳನ್ನು ಈ ರೀತಿಯಲ್ಲಿ ವಿತರಿಸುವುದು ಸರಿಯಲ್ಲ ಎಂದು ರಾಜ್ಯದ ಉಚ್ಛ ನ್ಯಾಯಾಲಯವೇ ೨೦೧೦ ರ ತೀರ್ಪಿನಲ್ಲಿ ಉಲ್ಲೇಖಿಸಿದೆ.  ೧೯೭೬ ರ ಬಿ ಡಿ ಎ ನಿಯಮಗಳಂತೆ  ಗೃಹ ನಿವೇಶನಗಳನ್ನು ಹಂಚುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲದಿದ್ದರೂ,ಸಹಸ್ರಾರು ನಿವೇಶನಗಳನ್ನು ಹಂಚಿದ್ದು ಕಾನೂನುಬಾಹಿರವೆಂದು ಹೇಳಿದ್ದು, ಈ ರೀತಿಯಲ್ಲಿ ನಿವೇಶನಗಳನ್ನು ಹಂಚುವುದನ್ನು ನಿಲ್ಲಿಸುವಂತೆ ಆದೇಶಿಸಿತ್ತು. ಈ ತೀರ್ಪು ಹೊರಬಿದ್ದ ಬಳಿಕವೂ, ರಾಜ್ಯ ಸರ್ಕಾರವು ಕೆಲ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತಿತರ ೨೨ ಪ್ರಭಾವಶಾಲಿ ವ್ಯಕ್ತಿಗಳಿಗೆ ೨೦೧೧ ರಲ್ಲಿ ಮತ್ತೆ ಜಿ ಪ್ರವರ್ಗದ ನಿವೇಶನಗಳನ್ನು ಮಂಜೂರು ಮಾಡಿತ್ತು!.

೧೯೯೭ ರಿಂದ ೨೦೧೧ ರ ಅವಧಿಯಲ್ಲಿ ಜಿ ಪ್ರವರ್ಗದನ್ವಯ ೧೧೨೮ ನಿವೇಶನಗಳನ್ನು ಮುಖ್ಯಮಂತ್ರಿಗಳ  ಕೋಟಾದಲ್ಲಿ ವಿತರಿಸಲಾಗಿತ್ತು. ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್. ಎಂ . ಕೃಷ್ಣ – ೩೩೪, ಜೆ. ಎಚ್. ಪಟೇಲ್ – ೨೨೨, ಧರ್ಮ ಸಿಂಗ್ – ೭೬, ಕುಮಾರಸ್ವಾಮಿ – ೨೮೬ ಮತ್ತು ಯಡ್ಡ್ಯೂರಪ್ಪ – ೨೧೦ ನಿವೇಶನಗಳನ್ನು ವಿತರಿಸಿದ್ದು, ಇದರಲ್ಲಿ ರಾಜ್ಯದ ಸಂಸದರು ಮತ್ತು ಶಾಸಕರಿಗೆ ಸಿಂಹಪಾಲು ಸಂದಿದೆ.

ಜಿ ಪ್ರವರ್ಗದ ನಿವೇಶನಗಳನ್ನು ಹಂಚುವ ಅಧಿಕಾರವನ್ನು ರಾಜ್ಯ ಸರ್ಕಾರ – ಮುಖ್ಯಮಂತ್ರಿಗಳಿಗೆ ನೀಡಿರುವುದನ್ನು ರದ್ದುಪಡಿಸುವಂತೆ ಹಿರಿಯ ವಕೀಲರೊಬ್ಬರು ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ  ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ೨೦೦೯ ರ ಅಂತ್ಯದಲ್ಲಿ ಸಲ್ಲಿಸಿದ್ದರು. ಜಿ ಪ್ರವರ್ಗದ ನಿವೇಶನಗಳ ವಿತರಣೆಗೆ ತಡೆಯಾಜ್ಞೆ ನೀಡಿದ ನ್ಯಾಯಾಲಯವು, ತದನಂತರ ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ ಹೊಂದಿರದವರಿಗೆ ನಿವೇಶನಗಳನ್ನು ನೀಡಬಹುದು ಎಂದಿತ್ತು. ಇದಲ್ಲದೇ ಬಿ ಡಿ ಎ ನಿವೇಶನಗಳ ಹಂಚಿಕೆಗಾಗಿ ಸೂಕ್ತ ನಿಯಮಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಹಾಗೂ ಜಿ ಪ್ರವರ್ಗದ ನಿವೇಶನಗಳ ಮಂಜೂರಾತಿಯ ಬಗ್ಗೆ ವಿಚಾರಣೆಯನ್ನು ನಡೆಸಲು ನ್ಯಾ. ಪದ್ಮರಾಜ ಆಯೋಗವನ್ನು ನೇಮಿಸಿತ್ತು. ಆಯೋಗವು ವಿಚಾರಣೆಯನ್ನು ನಡೆಸಿದ ಬಳಿಕ ೨೦೦೪ – ೨೦೧೧ ರ ಅವಧಿಯಲ್ಲಿ ನೀಡಿದ್ದ ೩೦೮ ನಿವೇಶನಗಳ ಮಂಜೂರಾತಿಯನ್ನು ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆಯೋಗದ ವರದಿಯನ್ನು ತಿರಸ್ಕರಿಸಿದ್ದ ಸರ್ಕಾರವು ಇದಕ್ಕಾಗಿ ಮತ್ತೊಂದು ಸಮಿತಿಯನ್ನು ನೇಮಿಸಿತ್ತು!.  

ಪ್ರಸ್ತುತ ಉಚ್ಛ ನ್ಯಾಯಾಲಯವು ಬಿ ಡಿ ಎ ನಿಯಮಗಳನ್ನು ಸಮರ್ಪಕವಾಗಿ ರೂಪಿಸುವಂತೆ ಉಚ್ಛ ನ್ಯಾಯಾಲಯ ಹಿಂದೆ ನೀಡಿದ್ದ ಆದೇಶವನ್ನು ಬಳಸಿಕೊಂಡಿರುವ ಸರ್ಕಾರವು, ರಾಜ್ಯದ ಶಾಸಕರು ಮತ್ತು ಸಂಸದರಿಗೆ ಜಿ ಪ್ರವರ್ಗದ ನಿವೇಶನಗಳನ್ನು ನೀಡಲು ಅನುಕೂಲವಾಗುವಂತೆ ಬಿ ಡಿ ಎ ನಿಯಮಗಳಿಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ.

ಬಿ ಡಿ ಎ ನಿಯಮಗಳು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ತಾನು ನಿರ್ಮಿಸಿರುವ ಬಡಾವಣೆಗಳಲ್ಲಿನ ಬಿಡಿ ನಿವೇಶನಗಳನ್ನು ವಿತರಿಸಲು ಕೆಲವೊಂದು ನಿಯಮಗಳನ್ನು ರೂಪಿಸಿದೆ. ನಿಯಮ ೫ ( ನಿವೇಶನಗಳ ಮಂಜೂರಾತಿ ) ೧೦೮೪ ಮತ್ತು ೧೯೯೭ ರಂತೆ ಬಿಡಿ ನಿವೇಶನಗಳ ವಿತರಣೆಗಾಗಿ ಏಳು  ಪ್ರವರ್ಗಗಳನ್ನು ಗುರುತಿಸಿದೆ. ಇವುಗಳಲ್ಲಿ ಎ ಪ್ರವರ್ಗಕ್ಕೆ ಸೇರಿದ ನಿವೇಶನಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ವಿತರಿಸಬೇಕಾಗುವುದು. ಬಿ ಪ್ರವರ್ಗದ ನಿವೇಶನಗಳನ್ನು ಕ್ರೀಡೆಗಳಲ್ಲಿ ಉನ್ನತ ಸಾಧನೆಗೈದವರಿಗೆ, ಸಿ ಪ್ರವರ್ಗ – ಕಲೆ, ವಿಜ್ಞಾನ, ಸಾಹಿತ್ಯ, ಶಿಕ್ಷಣ, ವೈದ್ಯಕೀಯ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಸಾಧನೆಗೈದವರಿಗೆ, ಡಿ – ಮಾಜಿ ಸೈನಿಕರಿಗೆ, ಎಫ್ – ಕರ್ತವ್ಯದಲ್ಲಿರುವಾಗ ಮೃತಪಟ್ಟ ಸರ್ಕಾರಿ ನೌಕರರ ಅವಲಂಬಿತರಿಗೆ ಮತ್ತು ಜಿ ಪ್ರವರ್ಗದ ನಿವೇಶನಗಳನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ವ್ಯಕ್ತಿಗಳಿಗೆ ( ಸರ್ಕಾರದ ಸೂಚನೆಯಂತೆ,ಇಂತಹ ವ್ಯಕ್ತಿಗಳಿಗೆ ನಿವೇಶನಗಳನ್ನು ಮಂಜೂರು ಮಾಡುವ ಅಧಿಕಾರವನ್ನು ರಾಜ್ಯದ ಮುಖ್ಯಮಂತ್ರಿಗಳಿಗೆ ನೀಡಿರುವುದರಿಂದ ಇದನ್ನು ಮುಖ್ಯಮಂತ್ರಿಗಳ ವಿವೇಚನಾ ಕೋಟಾ ಎಂದು ಕರೆಯಲಾಗುತ್ತಿದೆ ) ವಿತರಿಸಬೇಕಾಗುತ್ತದೆ. ಆದರೆ ಬಿ ಡಿ ಎ ರೂಪಿಸಿರುವ ನಿಯಮಗಳನ್ನು ಅನೇಕ ಸಂದರ್ಭಗಳಲ್ಲಿ ರಾಜಾರೋಷವಾಗಿ ಉಲ್ಲಂಘಿಸಲಾಗಿದೆ. ಈ ವಿಚಾರದಲ್ಲಿ ರಾಜಕಾರಣಿಗಳು, ಉನ್ನತ ಸರ್ಕಾರಿ ಅಧಿಕಾರಿಗಳು ಮತ್ತು ಇವರ ಬಂಧುಮಿತ್ರರಿಗೆ ( ಜಿ ಪ್ರವರ್ಗದ ನಿವೇಶನಗಳನ್ನು ಪಡೆಯುವ ಅರ್ಹತೆ ಇಲ್ಲದಿದ್ದರೂ ) ದುಬಾರಿ ಬೆಲೆಯ ನಿವೇಶನಗಳನ್ನು ಅತ್ಯಲ್ಪ ಬೆಲೆಗೆ ಕಾನೂನುಬಾಹಿರವಾಗಿ ಮಂಜೂರು ಮಾಡಲಾಗಿದೆ.

ಬಿ ಡಿ ಎ ನಿಯಮಗಳಂತೆ ಜಿ ಪ್ರವರ್ಗದ ನಿವೇಶನಗಳನ್ನು ಪಡೆಯುವ ವ್ಯಕ್ತಿಗಳು ಸ್ವಂತ ಮನೆ ಅಥವಾ ನಿವೇಶನವನ್ನು ಹೊಂದಿರಬಾರದು. ಅದಾಗಲೇ ಒಂದು ನಿವೇಶನವನ್ನು ಪಡೆದುಕೊಂಡವರು ಮತ್ತೊಂದು ನಿವೇಶನವನ್ನು ಪಡೆಯುವಂತಿಲ್ಲ. ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ಕಟ್ಟಲು ಪಡೆದ ನಿವೇಶನವನ್ನು ಮುಂದಿನ ೧೦ ವರ್ಷಗಳ ಕಾಲ ಮಾರುವಂತಿಲ್ಲ. ಏಕೆಂದರೆ ನಿವೇಶನ ಮಂಜೂರಾದ ೧೦ ವರ್ಷಗಳ ಬಳಿಕವೇ ಇದು ಫಲಾನುಭವಿಗಳ ಹೆಸರಿಗೆ ವರ್ಗಾವಣೆಯಾಗುತ್ತದೆ. ಹಾಗೂ ಈ ೧೦ ವರ್ಷಗಳ ಅವಧಿಯಲ್ಲಿ ಫಲಾನುಭವಿಗಳು ವಾರ್ಷಿಕ ೧೦ ರೂ. ಸ್ಥಳ ಬಾಡಿಗೆಯನ್ನು ಬಿ ಡಿ ಎ ಗೆ ಪಾವತಿಸಬೇಕು. ನಿವೇಶನ ಮಂಜೂರಾದ ಬಳಿಕ ಐದು ವರ್ಷಗಳಲ್ಲಿ ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ನಿರ್ಮಿಸಬೇಕೇ ಹೊರತು, ಬೇರೆ ಯಾವುದೇ ರೀತಿಯ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಈ ನಿವೇಶನ ಅಥವಾ ಕಟ್ಟಡವನ್ನು ಪರಭಾರೆ ಮಾಡುವಂತಿಲ್ಲ. ಈ ಷರತ್ತುಗಳನ್ನು ಅಥವಾ ೧೯೮೪ ರ ನಿವೇಶನ ಹಂಚಿಕೆ ನಿಯಮಗಳನ್ನು ಉಲ್ಲಂಘಿಸಿದಲ್ಲಿ, ೧೫ ದಿನಗಳ ನೋಟೀಸನ್ನು ನೀಡಿ, ಯಾವುದೇ ಪರಿಹಾರವನ್ನು ನೀಡದೇ ಈ ಸ್ವತ್ತನ್ನು ಬಿ ಡಿ ಎ ಸ್ವಾಧೀನ ಪಡಿಸಿಕೊಳ್ಳಬಹುದು. ಇದಲ್ಲದೆ ಅನ್ಯ ಕೆಲವು ಷರತ್ತುಗಳಿದ್ದರೂ, ಜಿ ಪ್ರವರ್ಗದ ನಿವೇಶನಗಳನ್ನು ಪಡೆದಿರುವ ಬಹುತೇಕ ರಾಜಕಾರಣಿಗಳು ಅಧಿಕತಮ ಷರತ್ತುಗಳನ್ನು ರಾಜಾರೋಷವಾಗಿ ಉಲ್ಲಂಘಿಸಿದ್ದಾರೆ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಸ್ವಂತ ವಾಸ್ತವ್ಯಕ್ಕಾಗಿ ಮನೆಯೊಂದನ್ನು ಕಟ್ಟಲು ಪಡೆದಿದ್ದ ನಿವೇಶನದಲ್ಲಿ ಐದು ಅಂತಸ್ತಿನ ವಾಣಿಜ್ಯ ಸಂಕೀರ್ಣವನ್ನೇ ನಿರ್ಮಿಸಿದ್ದಾರೆ!. ಬಿ ಡಿ ಎ ಶರತ್ತುಗಳ ಉಲ್ಲಂಘನೆಯ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡಲ್ಲಿ, ನೂರಾರು ಜಿ ಪ್ರವರ್ಗದ ನಿವೇಶನಗಳನ್ನು ಯಾವುದೇ ಪರಿಹಾರ ನೀಡದೇ ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಆದರೆ “ ಬೆಕ್ಕಿನ ಕೊರಳಿಗೆ ಗಂಟೆಯನ್ನು ಕಟ್ಟುವವರು ಯಾರು? “ ಎನ್ನುವ ಸಮಸ್ಯೆ ಇದಾಗಿದೆ.

ಬಿ ಡಿ ಎ ನೀಡಿದ್ದ ಮಾಹಿತಿ

ಜಿ ಪ್ರವರ್ಗದ ನಿವೇಶನಗಳ ಹಂಚಿಕೆಯ ಬಗ್ಗೆ ಮಾಹಿತಿ ಹಕ್ಕು ಕಾಯಿದೆಯನ್ವಯ ೨೦೦೯ ರಲ್ಲಿ ಬಳಕೆದಾರರ ಹಿತರಕ್ಷಣಾ ವೇದಿಕೆಯು ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಲಭಿಸಿದ್ದ ಮಾಹಿತಿ ಇಂತಿದೆ. ಬಿ ಡಿ ಎ ನಿವೇಶನ ಹಂಚಿಕೆ ನಿಯಮಾವಳಿ ೧೯೮೪ ರನ್ವಯ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ. ಆದರೂ ೦೬-೦೮-೧೯೯೭ ರ ಸರ್ಕಾರದ ಮಾರ್ಗಸೂಚಿಯನುಸಾರ ಬಿ ಡಿ ಎ ಬಿಡಿ ನಿವೇಶನಗಳನ್ನು ವಿಲೇವಾರಿ ಮಾಡಬೇಕಾಗಿರುತ್ತದೆ.ಸದರಿ ಮಾರ್ಗಸೂಚಿಯನ್ವಯ ಸರ್ಕಾರ ನಿರ್ದೇಶನ ನೀಡುವ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳಿಗೆ ( ಪ್ರಾಯಶಃ ಸಾರ್ವಜನಿಕ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಿದ್ದ – ಉನ್ನತ ಸಾಧನೆಗೈದ ಎನ್ನುವ ಅರ್ಥದಲ್ಲಿ ) ಜಿ ಪ್ರವರ್ಗದ ನಿವೇಶನಗಳನ್ನು ಹಂಚಿಕೆ ಮಾಡಲು ಆವಕಾಶವಿರುತ್ತದೆ ಎನ್ನುವ ಮಾಹಿತಿಯನ್ನು ನೀಡಲಾಗಿತ್ತು. ಆದರೆ ಇದೀಗ ಮತ್ತೆ ರಾಜಕಾರಣಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರವು, ಜಿ ಪ್ರವರ್ಗದ ನಿವೇಶನಗಳನ್ನು ಮುಖ್ಯಮಂತ್ರಿಗಳ ಆದೇಶದಂತೆ ವಿತರಿಸಲು ಬಿ ಡಿ ಎ ನಿಯಮಗಳಿಗೆ ಅವಶ್ಯಕ ತಿದ್ದುಪಡಿಗಳನ್ನು ಮಾಡಿದೆ. ಇದರಂತೆ ಲಭ್ಯ ನಿವೇಶನಗಳಲ್ಲಿ ಶೇ.೩೦ ರಷ್ಟನ್ನು ಸಾರ್ವಜನಿಕ ಸೇವೆಯಲ್ಲಿರುವವರಿಗೆ ( ಅರ್ಥಾತ್ ರಾಜಕಾರಣಿಗಳಿಗೆ ) ವಿತರಿಸಲು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ.  ತತ್ಪರಿಣಾಮವಾಗಿ ಮುಂದಿನ ಕೆಲವೇ ತಿಂಗಳುಗಳಲ್ಲಿ ರಾಜ್ಯದ ಅನೇಕ ರಾಜಕಾರಣಿಗಳು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಅತ್ಯಲ್ಪ ಬೆಲೆಗೆ ದುಬಾರಿ ನಿವೇಶನಗಳನ್ನು ಪಡೆಯಲಿದ್ದಾರೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು






Thursday, October 8, 2015

RTI ACT 2005 - LOOSING ITS TEETH



      ಮಾಹಿತಿಹಕ್ಕು ಕಾಯಿದೆ : ಇನ್ನಷ್ಟು ದುರ್ಬಲಗೊಳ್ಳುವುದೇ? 

ದೇಶಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ ಜಾರಿಗೆ ಬಂದು ಹತ್ತು ವರ್ಷಗಳೇ ಸಂದಿವೆ. ಕಳೆದ ಹತ್ತು ವರ್ಷಗಳಲ್ಲಿ ಈ ಕಾಯಿದೆಯ ಯಶಸ್ಸಿನಿಂದ ಕುಪಿತರಾಗಿರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಇದನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಇಂದಿಗೂ ಮುಂದುವರೆಸಿದ್ದಾರೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭವ್ಯ ಭಾರತದ ಪ್ರಜಾಡಳಿತ ವ್ಯವಸ್ಥೆಯಲ್ಲಿ ದಕ್ಷತೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಗಳು ದುರ್ಲಭವೆನಿಸಿವೆ. ತತ್ಪರಿಣಾಮವಾಗಿ ದೇಶದ ಪ್ರಜೆಗಳು ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹಲವಾರುಬಾರಿ ಅಲೆದಾಡುವುದು ಮತ್ತು ಅಧಿಕಾರಿಗಳಿಂದ ಅನಾವಶ್ಯಕ ಕಿರುಕುಳಗಳಿಗೆ ಒಳಗಾಗುವುದು ಅನಿವಾರ್ಯವೆನಿಸಿದೆ. ನಮ್ಮನ್ನಾಳುವ ರಾಜಕೀಯ ನೇತಾರರು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳ ಇಂತಹ ವರ್ತನೆಗಳಿಂದಾಗಿ, ಪ್ರಜಾಪ್ರಭುತ್ವದಲ್ಲಿ ಪ್ರಜಾಪೀಡನೆಯೇ  ಮೂಲಮಂತ್ರವೆನಿಸಿದೆ!.

ಈ ಅವ್ಯವವಸ್ಥೆಯನ್ನು ಸರಿಪಡಿಸಲು ದೇಶದ ಪ್ರಜ್ಞಾವಂತ ನಾಗರಿಕರು ಪ್ರಯತ್ನಿಸದಿದ್ದರೂ, ಬೆರಳೆಣಿಕೆಯಷ್ಟು ಸಂಖ್ಯೆಯ ಸರ್ಕಾರೇತರ ಸ್ವಯಂಸೇವಾ ಸಂಘಟನೆಗಳು ಹಾಗೂ ಭಾರತಕ್ಕೆ ಕೋಟ್ಯಂತರ ಡಾಲರ್ ಸಾಲವನ್ನು ನೀಡುವ ವಿಶ್ವ ಬ್ಯಾಂಕ್ ಮತ್ತು ಕೆಲ ಪಾಶ್ಚಿಮಾತ್ಯ ದೇಶಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರವು, ಅಂತಿಮವಾಗಿ ೨೦೧೫ ರ ಅಕ್ಟೋಬರ್ ೧೨ ರಂದು ದೇಶಾದ್ಯಂತ " ಮಾಹಿತಿ ಪಡೆಯುವ ಹಕ್ಕು ಕಾಯಿದೆ - ೨೦೧೫ ನ್ನು ಜಾರಿಗೆ ತಂದಿತ್ತು. ಯು ಪಿ ಎ ಸರ್ಕಾರದ ಈ ಕೊಡುಗೆಯು ಜನಸಾಮಾನ್ಯರ ಪಾಲಿಗೆ ಅತ್ಯಂತ ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು!.

ತಮ್ಮ ಹಕ್ಕುಗಳಿಗೆ ಚ್ಯುತಿಯಾದಾಗ, ಅನ್ಯಾಯವಾದಾಗ, ತಮ್ಮ ನ್ಯಾಯಸಮ್ಮತ ಕೆಲಸಕಾರ್ಯಗಳಿಗೆ ಸರ್ಕಾರಿ ಅಧಿಕಾರಿಗಳು ಅಥವಾ ಸಿಬಂದಿಗಳು ಅಡ್ಡಿಆತಂಕಗಳನ್ನು ಒಡ್ಡಿದಾಗ ಮತ್ತು ಇವರಿಂದ ಅನಾವಶ್ಯಕ ಕಿರುಕುಳಗಳಿಗೆ ಗುರಿಯಾಗುತ್ತಿದ್ದ ಪ್ರಜೆಗಳಿಗೆ ರಕ್ಷಣೆಯನ್ನು ನೀಡಲು ಮಾಹಿತಿಹಕ್ಕು ಕಾಯಿದೆಯು ಯಶಸ್ವಿಯಾಗಿತ್ತು. ಇಷ್ಟು ಮಾತ್ರವಲ್ಲ, ದೇಶದ ರಾಜಕಾರಣಿಗಳು, ಉನ್ನತ ಅಧಿಕಾರಿಗಳು ಮತ್ತು ಇತರ ಸಿಬಂದಿಗಳು ಶಾಮೀಲಾಗಿರುವ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತ್ತು. ತತ್ಪರಿಣಾಮವಾಗಿ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬಂದಿಗಳ ಸ್ವೇಚ್ಛಾಚಾರ,ಭ್ರಷ್ಟಾಚಾರ ಮತ್ತು ಸರ್ವಾಧಿಕಾರಿ ಪ್ರವೃತ್ತಿಗಳಿಗೆ ಕಡಿವಾಣವನ್ನು ತೊಡಿಸಿತ್ತು.

ಅಸಹಾಯಕ ಹಾಗೂ ಪ್ರಾಮಾಣಿಕ ನಾಗರಿಕರ ಪಾಲಿಗೆ ಪ್ರಬಲ ಅಸ್ತ್ರವೆನಿಸಿದ್ದ ಈ ಕಾಯಿದೆಯು ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ರಾಜಕೀಯ ನೇತಾರರಿಗೂ ಕಂಟಕಪ್ರಾಯವಾಗಿ ಪರಿಣಮಿಸಿದ್ದ ಪರಿಣಾಮವಾಗಿ, ಇದನ್ನು ದುರ್ಬಲಗೊಳಿಸುವ ಪ್ರಯತ್ನಗಳು ಅಂದಿನ ದಿನಗಳಲ್ಲೇ ಆರಂಭವಾಗಿದ್ದವು. ಇದರ ಅಂಗವಾಗಿ ಈ ಕಾಯಿದೆಗೆ ಕೆಲವೊಂದು ತಿದ್ದುಪಡಿಗಳನ್ನು ಜಾರಿಗೆ ತರುವ ಮೂಲಕ, ಹಲ್ಲು ಕಿತ್ತ ಹಾವಿನಂತಾಗಿಸುವ ಸರ್ಕಾರದ ಪ್ರಯತ್ನವನ್ನು  ಸಾರ್ವಜನಿಕರ ಪ್ರಬಲ ಪ್ರತಿಭಟನೆಯಿಂದಾಗಿ ಕೈಬಿಡಲಾಗಿತ್ತು.

ಅಸಮರ್ಪಕ ಅನುಷ್ಠಾನ

ಈ ಕಾಯಿದೆಯ ಸೆಕ್ಷನ್ ೪ ರಂತೆ ಸಾರ್ವಜನಿಕ ಪ್ರಾಧಿಕಾರಗಳು ೧೭ ವಿಧದ ಮಾಹಿತಿಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸಬೇಕಿದೆ. ಇವುಗಳಲ್ಲಿ ಪ್ರಾಧಿಕಾರದ ಸಂರಚನೆ, ಕಾರ್ಯನಿರ್ವಹಿಸುವ ಕ್ರಮ, ಪ್ರಾಧಿಕಾರದ ಆಯವ್ಯಯಗಳ ವಿವರಗಳು, ಸಾರ್ವಜನಿಕರು ಭಾಗವಹಿಸಬಹುದಾದ ವೇದಿಕೆಗಳ ವಿವರ, ಮಾಹಿತಿ ಪಡೆಯುವ ವಿಧಾನಗಳೇ ಮುಂತಾದ ಮಾಹಿತಿಗಳನ್ನು ತಾವಾಗಿ ಪ್ರಕಟಿಸುವುದರೊಂದಿಗೆ ಆಗಾಗ ಪರಿಷ್ಕರಿಸಬೇಕಿದೆ. ನಾಗರಿಕರಿಗೆ ಅವಶ್ಯಕ ಮತ್ತು ಉಪಯುಕ್ತವೆನಿಸುವ ಮಾಹಿತಿಗಳನ್ನು ನೇರವಾಗಿ ಮತ್ತು ಸುಲಭವಾಗಿ ಒದಗಿಸಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಅಧಿಕತಮ ಪ್ರಾಧಿಕಾರಗಳು ಸ್ವಯಂಪ್ರೇರಿತವಾಗಿ ಇಂತಹ ಮಾಹಿತಿಗಳನ್ನು ಪ್ರಕಟಿಸದೇ ಇರುವುದರಿಂದಾಗಿ, ಈ ಕಾಯಿದೆಯ ಪ್ರಾಥಮಿಕ ಉದ್ದೇಶವೇ ವಿಫಲವಾಗುತ್ತಿದೆ. ಜೊತೆಗೆ ಈ ಮಾಹಿತಿಗಳನ್ನು ಪಡೆದುಕೊಳ್ಳಲೂ ಮಾ.ಹ.ಕಾಯಿದೆಯನ್ವಯ ಅರ್ಜಿಯನ್ನು ಸಲ್ಲಿಸಬೇಕಿದೆ!.

ಮಾಹಿತಿಯನ್ನೇ ನೀಡದ ಅಧಿಕಾರಿಗಳು

ಸರ್ಕಾರ ನಿಗದಿಸಿರುವ ಕೆಲವೊಂದು ನಿರ್ದಿಷ್ಟ ಮಾಹಿತಿಗಳನ್ನು ಹೊರತುಪಡಿಸಿ, ಜನಸಾಮಾನ್ಯರು ಅಪೇಕ್ಷಿಸುವ ಮಾಹಿತಿಗಳನ್ನು ನೀಡಬೇಕಾದ ಹೊಣೆಗಾರಿಕೆಯನ್ನು ಸಾರ್ವಜನಿಕ ಪ್ರಾಧಿಕಾರಗಳು ಸಮರ್ಪಕವಾಗಿ ನಿಭಾಯಿಸಲು ವಿಫಲವಾಗಿವೆ. ನಿರ್ದಿಷ್ಟ ಮಾಹಿತಿಯನ್ನು ಪಡೆಯಲು ನಾಗರಿಕರು ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ, ಅರ್ಜಿಗಳನ್ನು ಸ್ವೀಕರಿಸಿದರೂ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದ, ಅಪೂರ್ಣ ಅಥವಾ ಸುಳ್ಳು ಮಾಹಿತಿಗಳನ್ನು ನೀಡಿದ, ಅರ್ಜಿದಾರರಿಗೆ ಕಿರುಕುಳ ನೀಡಿದ ಹಾಗೂ ಬೆದರಿಕೆಯನ್ನು ಒಡ್ಡಿದ ಅಸಂಖ್ಯ ಪ್ರಕರಣಗಳು ದೇಶಾದ್ಯಂತ ಸಂಭವಿಸಿವೆ. ಇದಕ್ಕೂ ಮಿಗಿಲಾಗಿ ಬೃಹತ್ ಹಗರಣಗಳನ್ನು ಬಯಲಿಗೆಳೆಯಳು ಪ್ರಯತ್ನಿಸಿದ ೩೦೦ ರಕ್ಕೂ ಅಧಿಕ ಮಾಹಿತಿಹಕ್ಕು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದ್ದು,೪೦ ಕ್ಕೂ  ಅಧಿಕ ಕಾರ್ಯಕರ್ತರನ್ನು ನಿರ್ದಾಕ್ಷಿಣ್ಯವಾಗಿ ಹತ್ಯೆಗೈಯ್ಯಲಾಗಿದೆ. ಜನಸಾಮಾನ್ಯರ ಮನದಲ್ಲಿ ಭೀತಿಯನ್ನು ಹುಟ್ಟಿಸುವ ಮೂಲಕ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯಲು ಪ್ರಯತ್ನಿಸುವ ಕಾರ್ಯಕರ್ತರನ್ನು ದಮನಿಸಲು ಯತ್ನಿಸಲಾಗುತ್ತಿದೆ.

ಮಾಹಿತಿ ಹಕ್ಕು ಕಾಯಿದೆಯನ್ನು ಪರೋಕ್ಷವಾಗಿ ದುರ್ಬಲಗೊಳಿಸಲು ಕೆಲ ಅಧಿಕಾರಿಗಳು ಅನುಸರಿಸುವ ತಂತ್ರಗಳು ಇಂತಿವೆ. ಅರ್ಜಿದಾರರು ಅಂಚೆಯ ಮೂಲಕ ಕಳುಹಿಸಿದ ಲಕೋಟೆಯಲ್ಲಿ ಅರ್ಜಿಯೇ ಇರಲಿಲ್ಲ ಎನ್ನುವುದು,ಅಪೇಕ್ಷಿಸಿರುವ ಮಾಹಿತಿಗಳನ್ನು ನಿಗದಿತ ಅವಧಿಯಲ್ಲಿ ನೀಡದಿರುವುದು, ನಿಗದಿತ ಶುಲ್ಕಕ್ಕೆ ಬದಲಾಗಿ ದುಬಾರಿ ಶುಲ್ಕವನ್ನು ವಿಧಿಸುವುದು, ಅಪೇಕ್ಷಿತ ಮಾಹಿತಿ ( ಕಡತಗಳು ) ತಮ್ಮಲ್ಲಿಲ್ಲ ಎನ್ನುವುದು, ಪ್ರಥಮ ಮೇಲ್ಮನವಿ ಸಲ್ಲಿಸಿದರೂ ಮಾಹಿತಿ ನೀಡದಿರುವುದೇ ಮುಂತಾದ ವಿಧಾನಗಳಿಂದ ಅರ್ಜಿದಾರರನ್ನು ಸತಾಯಿಸಿದ ಘಟನೆಗಳು ಸಾಕಷ್ಟಿವೆ. ಇದರೊಂದಿಗೆ ಕೇಂದ್ರ ಸರ್ಕಾರ ಮತ್ತು ಬಹುತೇಕ ರಾಜ್ಯ ಸರ್ಕಾರಗಳು ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳಿಗೆ ಅವಶ್ಯಕ ಸಂಖ್ಯೆಯ ಆಯುಕ್ತರನ್ನು ನೇಮಿಸದೇ ಇರುವುದರಿಂದಾಗಿ, ಈ ಆಯೋಗಗಳಲ್ಲಿ ಮೇಲ್ಮನವಿಯನ್ನು ಸಲ್ಲಿಸಿರುವ ಸಹಸ್ರಾರು ಪ್ರಕರಣಗಳು ಇತ್ಯರ್ಥವಾಗದೇ ಉಳಿದುಕೊಂಡಿವೆ!.

ಶಿಕ್ಷೆ – ದಂಡ ವಿಧಿಸದ ಆಯೋಗ

ಇಷ್ಟೆಲ್ಲಾ ಸಾಲದೆನ್ನುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳು ಅಪೇಕ್ಷಿತ ಮಾಹಿತಿಗಳನ್ನು ನೀಡಲು ವಿಳಂಬಿಸಿದ ಅಥವಾ ನಿರಾಕರಿಸಿದ ಕಾರಣದಿಂದಾಗಿ ರಾಜ್ಯ ಹಾಗೂ ಕೇಂದ್ರ ಮಾಹಿತಿ ಆಯೋಗಕ್ಕೆ ದೂರನ್ನು ಮೇಲ್ಮನವಿ ಸಲ್ಲಿಸಿದ ಸಂದರ್ಭದಲ್ಲಿ, ವಿಚಾರಣೆಯ ಬಳಿಕ ಅಪೇಕ್ಷಿತ ಮಾಹಿತಿಗಳನ್ನು ನೀಡುವಂತೆ ಆಯುಕ್ತರು ಆದೇಶಿಸಿದರೂ, ತಪ್ಪಿತಸ್ತ ಅಧಿಕಾರಿಗೆ ದಂಡವನ್ನು ವಿಧಿಸದ ಹಾಗೂ ಶಿಸ್ತುಕ್ರಮ ಕೈಗೊಳ್ಳದ ನೂರಾರು ಪ್ರಕರಣಗಳಿವೆ. ಪ್ರಾಯಶಃ ಅಧಿಕತಮ ಆಯುಕ್ತರು ನಿವೃತ್ತ ಐ ಎ ಎಸ್  ಅಧಿಕಾರಿಗಳೇ ಆಗಿರುವುದರಿಂದ, ಇವರು ತಮ್ಮ ಹಿಂದಿನ ಸಹೋದ್ಯೋಗಿಗಳಿಗೆ ದಂಡ ವಿಧಿಸಲು ಅಥವಾ ಶಿಕ್ಷೆಯನ್ನು ನೀಡಲು ಹಿಂಜರಿಯುತ್ತಾರೆ.ಆದರೆ ಅಧಿಕಾರಿಗಳು ಎಸಗಿದ ತಪ್ಪಿಗೆ ಸೂಕ್ತ ಶಿಕ್ಷೆ ನೀಡದಿರುವುದು ಈ ಕಾಯಿದೆಯ ಮೂಲ ಉದ್ದೇಶಕ್ಕೆ ಕಂಟಕವಾಗಿ ಪರಿಣಮಿಸಿದೆ.

ಪ್ರಸ್ತುತ ದೇಶದ ಬಹುತೇಕ ರಾಜ್ಯಗಳ ಮಾಹಿತಿ ಆಯೋಗಗಳ ಮುಂದೆ ವಿಚಾರಣೆಗಾಗಿ ಉಳಿದಿರುವ ಪ್ರಕರಣಗಳ ಸಂಖ್ಯೆ ಲಕ್ಷಕ್ಕೂ ಹೆಚ್ಚಿವೆ.ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಂದೆ ವಿಚಾರಣೆಗಾಗಿ ಕಾಯುತ್ತಿರುವ ಪ್ರಕರಣಗಳ ಒಟ್ಟು ಸಂಖ್ಯೆಯೇ ೧೪ ಸಾವಿರದಷ್ಟಿದೆ.ಆಯೋಗವು ಮೊದಲ ಆಲಿಕೆಯನ್ನು ಕೈಗೆತ್ತಿಕೊಳ್ಳಲು ಸರಾಸರಿ ೬ ರಿಂದ ೮ ತಿಂಗಳುಗಳು ತಗಲುತ್ತದೆ. ಕೆಲ ರಾಜ್ಯಗಳ ಮಾಹಿತಿ ಆಯೋಗಗಳು ಇದೀಗ ಕೈಗೆತ್ತಿಕೊಂಡಿರುವ ಪ್ರಕರಣಗಳು ೨೦೧೨ ರಲ್ಲಿ ಮೇಲ್ಮನವಿಯನ್ನು ಸಲ್ಲಿಸಿದವೇ ಆಗಿವೆ. ಇನ್ನು ಕೇಂದ್ರ ಮಾಹಿತಿ ಆಯೋಗದಲ್ಲಿ ಇದೇ   ವರ್ಷದ ಜುಲೈ ತಿಂಗಳಿನಲ್ಲಿ ವಿಚಾರಣೆಗಾಗಿ ಕಾಯುತ್ತಿದ್ದ ಪ್ರಕರಣಗಳ ಸಂಖ್ಯೆಯು ೪೦ ಸಾವಿರದ ಗಡಿಯನ್ನು ದಾಟಿತ್ತು!. ಈ ರೀತಿಯಲ್ಲಿ ದೇಶದ ಪ್ರಜೆಗಳು ಅಪೇಕ್ಷಿಸುವ ಮಾಹಿತಿಗಳನ್ನು ನೀಡದೇ ಸತಾಯಿಸುವ ವಿಶಿಷ್ಠ  ಧೋರಣೆಯಿಂದಾಗಿ, ಜನಸಾಮಾನ್ಯರ ಮೂಲಭೂತ ಹಕ್ಕಿಗೆ ಚ್ಯುತಿಯಾಗುವುದರೊಂದಿಗೆ, ಕಾಯಿದೆಯನ್ನು ಜಾರಿಗೆ ತಂದ ಮೂಲ ಉದ್ದೇಶವೇ ವಿಫಲವಾಗಿದೆ.

ಅದೇನೇ ಇರಲಿ, ಪ್ರಸ್ತುತ ಮಾಹಿತಿ ಪಡೆಯುವ ಹಕ್ಕು ಕಾಯಿದೆಯ ದಶಮಾನೋತ್ಸವದ ಸಂದರ್ಭದಲ್ಲಿ ದೇಶದ ನಾಗರಿಕರು ಈ ಕಾಯಿದೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸುವ ಮೂಲಕ, ಪ್ರಜಾಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ದಕ್ಷತೆಗಳನ್ನು ಹೆಚ್ಚಿಸಲು  ಯತ್ನಿಸುವ ಮೂಲಕ, ಸರ್ಕಾರಿ ಅಧಿಕಾರಿಗಳು ಮತ್ತು ನಮ್ಮನ್ನಾಳುವವರ  ಭ್ರಷ್ಟಾಚಾರ ಹಾಗೂ ಸ್ವೇಚ್ಛಾಚಾರಗಳಿಗೆ ಕಡಿವಾಣವನ್ನು ತೊಡಿಸಲು ಶ್ರಮಿಸಬೇಕಾಗಿದೆ. ಜೊತೆಗೆ ಈ ಕಾಯಿದೆಯನ್ನು ಇನ್ನಷ್ಟು ಪ್ರಬಲಗೊಳಿಸಲು ಪ್ರಯತ್ನಿಸಬೇಕಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು







Saturday, September 26, 2015

PARTICIPATE IN SWACH BHAARAT MISSION



   ಭಾರತವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರವನ್ನಾಗಿಸಲು ಶ್ರಮಿಸಿ


ಗತವರ್ಷದ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕಸವನ್ನು ಗುಡಿಸುವ ಮೂಲಕ " ಸ್ವಚ್ಚ ಭಾರತ ಅಭಿಯಾನ " ವನ್ನು  ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ವಾರದಲ್ಲಿ ಎರಡು ಘಂಟೆಗಳಂತೆ, ವರ್ಷದಲ್ಲಿ ೧೦೦ ಘಂಟೆಗಳನ್ನು ಸ್ವಚ್ಛತೆಗಾಗಿ ವಿನಿಯೋಗಿಸಬೇಕು ಎಂದು ವಿನಂತಿಸಿದ್ದರು. ಈ ಅಭಿಯಾನವು ಮುಂದಿನ ಐದು ವರ್ಷಗಳ ಕಾಲ ನಿರಂತರವಾಗಿ ನಡೆಯಲಿದ್ದು, ಗಾಂಧೀಜಿಯವರ ೧೫೦ ನೇ ಜನ್ಮದಿನದಂದು ಸಂಪನ್ನಗೊಳ್ಳಲಿದ್ದು, ಈ ಅವಧಿಯಲ್ಲಿ ನಮ್ಮ ದೇಶವು ಸ್ವಚ್ಛ ಮತ್ತು ಸುಂದರವನ್ನಾಗಿಸಲು ದೇಶದ ಪ್ರಜೆಗಳೆಲ್ಲರೂ ಶ್ರಮಿಸುವಂತೆ ಕರೆನೀಡಿದ್ದರು.

ಗತವರ್ಷದಲ್ಲಿ ಈ ಅಭಿಯಾನದ ಉದ್ಘಾಟನೆಯ ಸಂದರ್ಭದಲ್ಲಿ ದೇಶದ ಪ್ರತಿಯೊಂದು ರಾಜ್ಯಗಳ ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳು, ಬೃಹತ್ ಉದ್ದಿಮೆ – ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಇದರಲ್ಲಿ ಭಾಗಿಯಾಗಿದ್ದು, ಇನ್ನುಮುಂದೆ ಪ್ರತಿ ತಿಂಗಳಿನಲ್ಲೂ ಸ್ವಚ್ಛತಾ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸುವುದಾಗಿ ಘೋಷಿಸಿದ್ದರು. ಆದರೆ ಈ ಆರಂಭಶೂರತ್ವವು ಒಂದೆರಡು ತಿಂಗಳುಗಳಲ್ಲೇ ಅಂತ್ಯಗೊಂಡಿದ್ದುದು ಮಾತ್ರ ಸುಳ್ಳೇನಲ್ಲ!. ಪ್ರಾಯಶಃ ಮಾಧ್ಯಮಗಳಲ್ಲಿ ಲಭಿಸಲಿರುವ ಪುಕ್ಕಟೆ ಪ್ರಚಾರಕ್ಕಾಗಿ ಭಾಗಿಯಾಗಿದ್ದ ಇವರೆಲ್ಲರೂ, ಇದೀಗ ಅಭಿಯಾನದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತೆ ಸಕ್ರಿಯರಾಗಲಿದ್ದಾರೆ. ಆದರೆ  ಕೇವಲ ಪ್ರಚಾರದ ಸಲುವಾಗಿ ಭಾಗಿಯಾಗುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ  ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ದೇಶದ ಜನತೆ ಮನಸ್ಪೂರ್ವಕವಾಗಿ ಇದರಲ್ಲಿ ಭಾಗವಹಿಸಿದಲ್ಲಿ, ಇದು ಯಶಸ್ವಿಯಾಗುವುದರಲ್ಲೂ ಸಂದೇಹವಿಲ್ಲ.

ಅಭಿಯಾನಕ್ಕೆ ಒಂದು ವರ್ಷ

ದೇಶದ ವಿವಿಧ ರಾಜ್ಯಗಳ ಮಾಹಿತಿಯನ್ನು ಪರಿಶೀಲಿಸಿದಾಗ ಈ ಅಭಿಯಾನವು ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಆದರೆ ಪ್ರಧಾನಿಯವರ ಅಪೇಕ್ಷೆಯಂತೆ ದೇಶದ ಪ್ರತಿಯೊಬ್ಬ ಪ್ರಜೆಯು ಇದರಲ್ಲಿ ಭಾಗವಹಿಸಿದ್ದಲ್ಲಿ, ಅಭಿಯಾನವು  ಇನ್ನಷ್ಟು ಯಶಸ್ವಿಯಾಗುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಅಂತೆಯೇ ಸ್ಥಳೀಯ ಸಂಸ್ಥೆಗಳು, ರಾಜ್ಯಮತ್ತು ಕೇಂದ್ರ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ಸಂಗ್ರಹ ಮಾತ್ರವಲ್ಲ, ಈ ತ್ಯಾಜ್ಯಗಳನ್ನು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಿವಿಧಾನಗಳಿಂದ ಪುನರ್ಬಳಕೆ ಹಾಗೂ ಪುನರ್ ಆವರ್ತನಗೊಳಿಸುವ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ, ಸಿಮೆಂಟ್ ಮತ್ತು ಉಕ್ಕಿನ ಕಾರ್ಖಾನೆಗಳ ಕುಲುಮೆಗಳಲ್ಲಿ ಇಂಧನವನ್ನಾಗಿ ಬಳಸುವ, ಭಗ್ನಗೊಳಿಸಿದ ಕಟ್ಟಡಗಳ ತ್ಯಾಜ್ಯಗಳಿಂದ ಹೊಸ ಕಟ್ಟಡಗಳನ್ನು ಅಥವಾ ಹೊಸ ರಸ್ತೆಗಳನ್ನು ನಿರ್ಮಿಸುವ, ತ್ಯಾಜ್ಯಗಳನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಘಟಕಗಳನ್ನು ಸ್ಥಾಪಿಸುವ, ಸಂಪೂರ್ಣವಾಗಿ ನಿರುಪಯುಕ್ತ ಎನಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಇನ್ಸಿನರೇಟರ್ ಮೂಲಕ ಸುರಕ್ಷಿತವಾಗಿ ದಹಿಸುವ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ವಾಹನಗಳಲ್ಲಿ ಬಳಸಬಹುದಾದ ಇಂಧನವನ್ನು ತಯಾರಿಸಬಲ್ಲ ಘಟಕಗಳನ್ನು ಸ್ಥಾಪಿಸಿದಲ್ಲಿ, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಮತ್ತು ಲ್ಯಾಂಡ್ ಫಿಲ್ ಸೈಟ್ ಗಳಲ್ಲಿ ತುಂಬಿ ತುಳುಕುತ್ತಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು ಕಣ್ಮರೆಯಾಗಲಿವೆ. ಹಾಗೂ ಇದರಿಂದಾಗಿ ಹೊಸ ಲ್ಯಾಂಡ್ ಫಿಲ್ ಸೈಟ್ ಗಳ ನಿರ್ಮಾಣಕ್ಕಾಗಿ ಸ್ಥಳವನ್ನು ಹುಡುಕುವ ಹಾಗೂ ಸ್ಥಾಪಿಸಲು ತಗಲುವ ವೆಚ್ಚಗಳನ್ನು ಮತ್ತು ಇವುಗಳ ಸ್ಥಾಪನೆಯನ್ನು ವಿರೋಧಿಸುವ ಜನರ ಪ್ರತಿಭಟನೆಗಳನ್ನು ನಿವಾರಿಸಬಹುದಾಗಿದೆ.

ನೀವೇನು ಮಾಡಬಹುದು

ಬಡವ ಶ್ರೀಮಂತರೆನ್ನುವ ಭೇದವಿಲ್ಲದೇ ದೇಶದ ಪ್ರಜೆಗಳೆಲ್ಲರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು.ಕಾರಣಾಂತರಗಳಿಂದ ಈ ಅಭಿಯಾನದಲ್ಲಿ ಪ್ರತ್ಯಕ್ಷವಾಗಿ ಭಾಗಿಗಳಾಗಲು ಸಾಧ್ಯವಿಲ್ಲದಿದ್ದಲ್ಲಿ, ತಾವು ದಿನನಿತ್ಯ ಉತ್ಪಾದಿಸುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹಾಗೂ ಎಲ್ಲೆಂದರಲ್ಲಿ ಎಸೆಯುವ ಕೆಟ್ಟ ಹವ್ಯಾಸವನ್ನು ತೊರೆಯುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬಹುದಾಗಿದೆ. ಅಂತೆಯೇ ಅಧಿಕತಮ ಜನರು ಅತಿಯಾಗಿ ಬಳಸುವ ಪ್ಲಾಸ್ಟಿಕ್ ಕೈಚೀಲ ಮತ್ತಿತರ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವ, ಪುನರ್ ಬಳಕೆ ಮಾಡುವ ಮೂಲಕ ಹಾಗೂ ನಿರುಪಯುಕ್ತ ಪ್ಲಾಸ್ಟಿಕ್ ಚೀಲಗಳನ್ನು ಪುನರ್ ಆವರ್ತನಗೊಳಿಸುವ ಸಲುವಾಗಿ ಪ್ರತ್ಯೇಕಿಸಿ ಇರಿಸುವ ಮೂಲಕ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ನಿರಾಕರಿಸುವ ಮೂಲಕ, ಇಂತಹ ವಸ್ತುಗಳನ್ನು ತ್ಯಾಜ್ಯ ರೂಪದಲ್ಲಿ ವಿಸರ್ಜಿಸುವುದನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ.

ವಿದ್ಯಾರ್ಥಿಗಳಿಗೊಂದು ಅವಕಾಶ

ಶಾಲಾಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವುದರೊಂದಿಗೆ ಒಂದಿಷ್ಟು ಆದಾಯವನ್ನು ಗಳಿಸಬಲ್ಲ ಸುಲಭೋಪಾಯವೊಂದು ಇಂತಿದೆ. ತಮ್ಮ ಮನೆಗಳಲ್ಲಿ, ಶಾಲಾಕಾಲೇಜುಗಳ ಆವರಣಗಳಲ್ಲಿ, ತಾವು ದಿನನಿತ್ಯ ನಡೆದಾಡುವ ರಸ್ತೆಗಳ ಬದಿಗಳಲ್ಲಿ ಕಾಣಸಿಗುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಸ್ವಚ್ಚವಾದ ಪ್ಲಾಸ್ಟಿಕ್ ಕೈಚೀಲ ಇತ್ಯಾದಿಗಳನ್ನು ಸಂಗ್ರಹಿಸಿ, ನಿಮ್ಮದೇ ಊರಿನ ಗುಜರಿ ಅಂಗಡಿಗಳಿಗೆ ನೀಡಬಹುದಾಗಿದೆ. ಅದೇ ರೀತಿಯಲ್ಲಿ ರಟ್ಟಿನ ಪೆಟ್ಟಿಗೆಗಳು ನಿರುಪಯುಕ್ತ ಕಾಗದ ಇತ್ಯಾದಿ ವಸ್ತುಗಳನ್ನು ಒಲೆಯಲ್ಲಿ ಸುಡುವ ಬದಲಾಗಿ, ಇವುಗಳನ್ನು ಕೂಡಾ ಗುಜರಿ ಅಂಗಡಿಗಳಿಗೆ ಮಾರಬಹುದಾಗಿದೆ. ಇದರಿಂದಾಗಿ ತ್ಯಾಜ್ಯಗಳ ಉತ್ಪಾದನೆಯು ಕಡಿಮೆಯಾಗುವುದಲ್ಲದೇ, ನೀವು ಸಂಗ್ರಹಿಸಿ ಮಾರಾಟ ಮಾಡುವ ತ್ಯಾಜ್ಯಗಳ ಪ್ರಮಾಣಕ್ಕೆ ಅನುಗುಣವಾಗಿ ನಿಮಗೆ ಒಂದಿಷ್ಟು ಆದಾಯವೂ ಲಭಿಸುತ್ತದೆ. ನಮ್ಮೂರಿನ ಶಾಲೆಯೊಂದರ ವಿದ್ಯಾರ್ಥಿಗಳು ಈ ವಿಧಾನವನ್ನು ಅನುಸರಿಸುವ ಮೂಲಕ, ತಮಗೆ ಬೇಕಾಗುವ ಸ್ಲೇಟು, ಪುಸ್ತಕ, ಪೆನ್ಸಿಲ್, ಪೆನ್, ಸ್ಕೂಲ್ ಬ್ಯಾಗ್, ಕೊಡೆ ಮತ್ತಿತರ ವಸ್ತುಗಳನ್ನು ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪಡೆಯುತ್ತಿದ್ದಾರೆ. ಈ ವಿಧಾನವನ್ನು ದೇಶದ ಎಲ್ಲ ಶಾಲಾಕಾಲೇಜುಗಳಲ್ಲಿ ಅನುಷ್ಠಾನಿಸಬಹುದಾಗಿದೆ. ತನ್ಮೂಲಕ ವಿದ್ಯಾರ್ಥಿಗಳಿಗೆ ಈ ಅಭಿಯಾನದಲ್ಲಿ ಭಾಗವಹಿಸುವ ಅವಕಾಶವನ್ನು ಕಲ್ಪಿಸುವುದರೊಂದಿಗೆ, ಅವರ ಹೊಣೆಗಾರಿಕೆಯನ್ನು ಹೆಚ್ಚಿಸಬಹುದಾಗಿದೆ.

ಮಾರುಕಟ್ಟೆ ಅಥವಾ ಸಮೀಪದ ಅಂಗಡಿಗಳಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಹೋಗುವಾಗ ಬಟ್ಟೆಯ ಚೀಲವೊಂದನ್ನು ಒಯ್ಯಿರಿ. ಸರಣಿ ಮಳಿಗೆಗಳಲ್ಲಿ ಖರೀದಿಸುವ ಪ್ರತಿಯೊಂದು ತರಕಾರಿ ಹಾಗೂ ಹಣ್ಣುಗಳನ್ನು ಪ್ರತ್ಯೇಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಲೇಬೇಕೆಂದು ಒತ್ತಾಯಿಸಿದಲ್ಲಿ ನಿರಾಕರಿಸಿ. ಇವೆಲ್ಲವುಗಳನ್ನು ತೂಕ ಮಾಡಿದ ಬಳಿಕ ಇವುಗಳ ತೂಕ ಮತ್ತು ಬೆಲೆಯನ್ನು ಸೂಚಿಸುವ  ಸ್ಟಿಕ್ಕರ್ ಗಳನ್ನು ಕೇವಲ ಒಂದು ಪ್ಲಾಸ್ಟಿಕ್ ಚೀಲಕ್ಕೆ ಅಂಟಿಸುವಂತೆ ಸೂಚಿಸಿ. ಅನಿವಾರ್ಯವಾಗಿ ಪ್ಲಾಸ್ಟಿಕ್ ಚೀಲವನ್ನು ವ್ಯಾಪಾರಿಗಳಿಂದ ಪಡೆದುಕೊಂಡಲ್ಲಿ, ಇದನ್ನು ಹಲವಾರು ಬಾರಿ ಪುನರ್ಬಳಸಿ. ಯಾವುದೇ ಸಂದರ್ಭದಲ್ಲೂ ನಿಮ್ಮ ಮನೆಯಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಸಲುವಾಗಿಯೇ ಪ್ಲಾಸ್ಟಿಕ್ ಕೈಚೀಲಗಳನ್ನು ಕೇಳಿ ಪಡೆಯದಿರಿ!.

ಪ್ರಧಾನ ಮಂತ್ರಿಯವರು ಅಪೇಕ್ಷಿಸಿದಂತೆ ಕನಿಷ್ಠ ನೀವು ದಿನನಿತ್ಯ ಉತ್ಪಾದಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆಮಾಡಿ.ಉತ್ಪಾದಿಸಿರುವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ, ಹಸಿ ತ್ಯಾಜ್ಯಗಳನ್ನು ನಿಮ್ಮ ಆವರಣದಲ್ಲಿರುವ ಮರಗಿಡಗಳ ಬುಡದಲ್ಲಿ ಹಾಕಿರಿ. ಗುಜರಿ ಅಂಗಡಿಗೆ ನೀಡಲು ಆಸಾಧ್ಯವೆನಿಸುವ ಹಾಗೂ ತೀರಾ ನಿರುಪಯುಕ್ತ ಮತ್ತು ಪುನರ್ ಆವರ್ತನಗೊಳಿಸಲಾಗದ ತ್ಯಾಜ್ಯಗಳನ್ನು ಮಾತ್ರ ನಿಮ್ಮ ವಸತಿ – ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯಕರ್ತರಿಗೆ ನೀಡಿ. ನಿಮ್ಮೂರಿನ ಸ್ಥಳೀಯ ಸಂಸ್ಥೆಯು ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ನಿರ್ವಹಿಸಲು ವಿಧಿಸುವ ಶುಲ್ಕವನ್ನು ತಪ್ಪದೆ ಪಾವತಿಸಿ. ಈ ಶುಲ್ಕವನ್ನು ಉಳಿಸುವ ಸಲುವಾಗಿ ತ್ಯಾಜ್ಯಗಳನ್ನು ರಸ್ತೆಬದಿ ಅಥವಾ ಚರಂಡಿಗಳಲ್ಲಿ ಎಸೆಯದಿರಿ. ನಿಮ್ಮ ನೆರೆಕರೆಯ ನಿವಾಸಿಗಳಿಗೂ ಇದೇ ರೀತಿಯಲ್ಲಿ ಸಹಕರಿಸಲು ಪ್ರೇರೇಪಿಸಿ.

ಕೊನೆಯ ಮಾತು

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಸ್ವಚ್ಚತೆ ಮತ್ತು ನಮ್ಮ ಆರೋಗ್ಯಕ್ಕೆ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ಸ್ವಚ್ಛತೆ ಇರುವಲ್ಲಿ ವ್ಯಾಧಿಗಳ ಬಾಧೆ ಇರುವ ಸಾಧ್ಯತೆಗಳಿಲ್ಲ. ಆದರೆ ಅಸ್ವಚ್ಛ ಪರಿಸರದಲ್ಲಿ ಕಾಯಿಲೆಗಳ ಹಾವಳಿ ಸ್ವಾಭಾವಿಕವಾಗಿಯೇ ಹೆಚ್ಚಾಗಿರುತ್ತದೆ. ಆದುದರಿಂದ ನಿಮ್ಮ ಮನೆ, ಸುತ್ತಲಿನ ಆವರಣ, ಸಮೀಪದ ರಸ್ತೆ, ನಿಮ್ಮ ಕೇರಿ ಮತ್ತು ಊರಿನ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ, ನಮ್ಮ ದೇಶವನ್ನು ಸ್ವಚ್ಛ, ಸ್ವಸ್ಥ ಮತ್ತು ಸುಂದರ ಭಾರತವನ್ನಾಗಿಸಿ.


ಡಾ.ಸಿ.ನಿತ್ಯಾನಂದ ಪೈ, ಪುತ್ತೂರು


Thursday, September 10, 2015

ONE UNIT OF ELECTRICITY SAVED IS .............



                 ವಿದ್ಯುತ್ ಉಳಿತಾಯದತ್ತ ಸರ್ಕಾರದ ಚಿತ್ತ

ದಶಕಗಳಿಂದ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ಅನುಭವಿಸುತ್ತಿರುವ ಕರ್ನಾಟಕದ ಜನತೆಗೆ ಇದೀಗ ಮುಂಗಾರು ಮಳೆಯ ಕೊರತೆಯಿಂದಾಗಿ, ವಿದ್ಯುತ್ ಕಡಿತದ ಬಿಸಿ ತಟ್ಟುತ್ತಿದೆ. ಇದರೊಂದಿಗೆ ಸುಡು ಬಿಸಿಲಿನ ಬೇಗೆಯಿಂದ ಬಳಲಿ ಬೆಂಡಾಗಿರುವ ಕನ್ನಡಿಗರು, ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಭೀಕರ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ನಿಯಂತ್ರಿಸಲು, ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಸರಿಸಲು ಆಸಕ್ತಿಯನ್ನು ತೋರುತ್ತಿಲ್ಲ.

ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ದಿನನಿತ್ಯ ೮೦೦೦ ಮೆಗಾವಾಟ್ ವಿದ್ಯುತ್ತಿನ ಬೇಡಿಕೆಯಿದ್ದರೂ, ಪೂರೈಕೆಯ ಪ್ರಮಾಣವು ಸುಮಾರು ೬೦೦೦ ಮೆಗಾವಾಟ್ ಆಗಿದೆ. ಅರ್ಥಾತ್ ಸುಮಾರು ೨೦೦೦ ಮೆಗಾವಾಟ್ ವಿದ್ಯುತ್ತಿನ ಕೊರತೆ ಉದ್ಭವಿಸಿದೆ. ಮುಂಗಾರು ಮಳೆಯ ಪ್ರಮಾಣ ಕಡಿಮೆಯಾಗಿರುವ ಕಾರಣದಿಂದಾಗಿ ರಾಜ್ಯದ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ, ಜಲವಿದ್ಯುತ್ ಉತ್ಪಾದನಾ ಘಟಕಗಳು ಉತ್ಪಾದಿಸುತ್ತಿರುವ ವಿದುತ್ತಿನ ಪ್ರಮಾಣವೂ ಸ್ವಾಭಾವಿಕವಾಗಿಯೇ ಕಡಿಮೆಯಾಗಿದೆ. ಇದರೊಂದಿಗೆ ರಾಜ್ಯದ ಉಷ್ಣ ಮತ್ತು ಅಣುವಿದ್ಯುತ್ ಉತ್ಪಾದನಾ ಘಟಕಗಳು ಕಾರಣಾಂತರದಿಂದ ಉತ್ಪಾದಿಸುತ್ತಿರುವ ವಿದ್ಯುತ್ತಿನ ಪ್ರಮಾಣವೂ ಕಡಿಮೆಯಾಗಿರುವುದರಿಂದ, ವಿದ್ಯುತ್ ಕ್ಷಾಮದ ಸಮಸ್ಯೆ ತಲೆದೋರಿದೆ. ಆದರೆ ವರ್ಷಂಪ್ರತಿ ರಾಜ್ಯದ ವಿದ್ಯುತ್ತಿನ ಬೇಡಿಕೆಯ ಪ್ರಮಾಣವು ಹೆಚ್ಚುತ್ತಲೇ ಇದೆ.

ರಾಜ್ಯದಲ್ಲಿ ಸುರಿಯಲಿರುವ ಹಿಂಗಾರು ಮಳೆಯ ಪ್ರಮಾಣವು ಹೆಚ್ಚಾಗಿ, ಜಲಾಶಯಗಳು ತುಂಬಿದಲ್ಲಿ, ಉಷ್ಣ ವಿದ್ಯುತ್  ಮತ್ತು ಅಣು ವಿದ್ಯುತ್ ಉತ್ಪಾದನಾ ಸ್ಥಾವರಗಳು ತಮ್ಮ ಸಾಮರ್ಥ್ಯಕ್ಕೆ ಸರಿಯಾಗಿ ವಿದ್ಯುತ್ತನ್ನು ಉತ್ಪಾದಿಸಲು ಆರಂಭಿಸಿದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ. ಜೊತೆಗೆ ರಾಜ್ಯ ಸರ್ಕಾರವು ನಮ್ಮದೇ ರಾಜ್ಯದ ಸಕ್ಕರೆ ಹಾಗೂ ಸಿಮೆಂಟ್ ಕಾರ್ಖಾನೆಗಳು ಉತ್ಪಾದಿಸುವ ಮತ್ತು ಹೆಚ್ಚುವರಿ ವಿದ್ಯುತ್ತನ್ನು ಉತ್ಪಾದಿಸುತ್ತಿರುವ ನೆರೆಯ ರಾಜ್ಯಗಳಿಂದ ವಿದ್ಯುತ್ತನ್ನು ಖರೀದಿಸಿದಲ್ಲಿ  ಸಮಸ್ಯೆಯು ತಕ್ಕಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅವಶ್ಯಕತೆಯೂ ಇದೆ.

ರಾಜ್ಯದಲ್ಲಿ ಉದ್ಭವಿಸಿರುವ ವಿದ್ಯುತ್ ಕ್ಷಾಮದ ಸಮಸ್ಯೆಯನ್ನು ತಕ್ಕಮಟ್ಟಿಗೆ ನಿಯಂತ್ರಿಸಲು ಇತರ ಹಲವಾರು ಉಪಕ್ರಮಗಳೊಂದಿಗೆ, ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ದಾರಿದೀಪಗಳನ್ನು ಒಂದು ತಾಸು ತಡವಾಗಿ ಉರಿಸಬೇಕೆಂದು ಇಂಧನ ಸಚಿವರೇ ಆದೇಶಿಸಿದ್ದಾರೆ. ಆದರೆ ದಾರಿದೀಪಗಳು ಬಳಸುವ ವಿದ್ಯುತ್ತಿನಲ್ಲಿ ಇನ್ನಷ್ಟು ಉಳಿತಾಯ ಮಾಡಬೇಕಿದ್ದಲ್ಲಿ, ಸಚಿವರು ಆಯ್ಕೆ ಮಾಡಿರುವುದಕ್ಕಿಂತ ಪರಿಣಾಮಕಾರಿ ವಿಧಾನವೊಂದು ಇಂತಿದೆ.

ದಾರಿದೀಪಗಳ ಸಂಪರ್ಕ ಕಡಿತ

ಸಾಮಾನ್ಯವಾಗಿ ಮಹಾನಗರಗಳನ್ನು ಹೊರತುಪಡಿಸಿ ಅನ್ಯ ನಗರ ಮತ್ತು ಪಟ್ಟಣಗಳಲ್ಲಿ ರಾತ್ರಿ ಹತ್ತು ಗಂಟೆಯ ಬಳಿಕ ಜನಸಂಚಾರ ಸಾಕಷ್ಟು ಕಡಿಮೆ ಇರುತ್ತದೆ. ಆದರೆ ಪ್ರತಿಯೊಂದು ನಗರ - ಪಟ್ಟಣಗಳಲ್ಲಿ ಅನಾವಶ್ಯಕವಾಗಿ ಮತ್ತು ಅವೈಜ್ಞಾನಿಕವಾಗಿ ಅಳವಡಿಸಿರುವ ಅಸಂಖ್ಯ ದಾರಿದೀಪಗಳು ಇರುಳಿಡೀ  ( ಕೆಲವೆಡೆ ಹಗಲಿರುಳು )    ಬೆಳಗುತ್ತವೆ. ಇಂಧನ ಸಚಿವರಿಗೆ ಬೀದಿದೀಪಗಳು ಕಬಳಿಸುವ ಅಗಾಧ ಪ್ರಮಾಣದ ವಿದ್ಯುತ್ತನ್ನು ಉಳಿತಾಯ ಮಾಡಬೇಕೆನ್ನುವ ಉದ್ದೇಶವಿದ್ದಲ್ಲಿ, ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ದಾರಿದೀಪಗಳಲ್ಲಿ ಶೇ. ೫೦ ರಷ್ಟು ದೀಪಗಳ ( ಒಂದು ಕಂಬವನ್ನು ಬಿಟ್ಟು ಮತ್ತೊಂದು ಕಂಬದಲ್ಲಿನ ದೀಪದ ಸಂಪರ್ಕ ಕಡಿತ ) ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಬೇಕು. ಜೊತೆಗೆ ಇತ್ತೀಚಿನ ಕೆಲವರ್ಷಗಳಿಂದ ಹಳ್ಳಿಹಳ್ಳಿಗಳಲ್ಲೂ ಕಾಣಸಿಗುವ ಹೈಮಾಸ್ಟ್ ದೀಪಗಳ ಸಂಪರ್ಕವನ್ನು ಕಡಿತಗೊಳಿಸಬೇಕು. ಇದರಿಂದಾಗಿ ದಾರಿದೀಪಗಳು ಕಬಳಿಸುತ್ತಿರುವ ಶೇ. ೫೦ ರಿಂದ ೬೦ ರಷ್ಟು ವಿದುತ್ತನ್ನು ಅನಾಯಾಸವಾಗಿ ಉಳಿಸಬಹುದಾಗಿದೆ. ಈ ವಿಧಾನವನ್ನು ಅನುಸರಿಸಿದಲ್ಲಿ  ಇಂಧನ ಸಚಿವರ ಅಪೇಕ್ಷೆಯಂತೆ ಒಂದು ರಾತ್ರಿಯಲ್ಲಿ ಒಂದು ಗಂಟೆಯ ವಿದ್ಯುತ್ ಉಳಿತಾಯಕ್ಕೆ ಬದಲಾಗಿ, ಆರು ಗಂಟೆಗಳ ವಿದ್ಯುತ್ ಉಳಿತಾಯವಾಗುವುದರಲ್ಲಿ ಸಂದೇಹವಿಲ್ಲ. ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಇದನ್ನು ಅನುಷ್ಠಾನಗೊಳಿಸಿದಲ್ಲಿ, ಗಣನೀಯ ಪ್ರಮಾಣದ ವಿದ್ಯುತ್ ಉಳಿತಾಯವಾಗುತ್ತದೆ ಎನ್ನುವುದು ಪ್ರಾಯಶಃ ಇಂಧನ ಸಚಿವರಿಗೂ ಹೊಳೆದಿರಲಿಕ್ಕಿಲ್ಲ!.

ಇದಲ್ಲದೇ ಪ್ರತಿಯೊಂದು ವಸತಿ – ವಾಣಿಜ್ಯ ಕಟ್ಟಡಗಳಲ್ಲಿ ವಿದ್ಯುತ್ ಉಳಿತಾಯಮಾಡಬಲ್ಲ ಸಿ ಎಫ್ ಎಲ್ ಮತ್ತು ಎಲ್ ಇ ಡಿ ದಾರಿದೀಪಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಜನಸಾಮಾನ್ಯರಿಗೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಆದೇಶಿಸಬೇಕು. ವಿಶೇಷವಾಗಿ ಕತ್ತಲಾದ ಬಳಿಕ ದಾರಿದೀಪಗಳನ್ನು ಉರಿಸಿ, ನಸುಕು ಮೂಡಿದೊಡನೆ ಆರಿಸುವ ನೌಕರರು ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಬೇಕು. ಅದೇ ರೀತಿಯಲ್ಲಿ ಸರ್ಕಾರಿ ಕಛೇರಿಗಳಲ್ಲಿ ದಿನವಿಡೀ ಅನಾವಶ್ಯಕವಾಗಿ ಉರಿಯುವ ದೀಪಗಳು ಮತ್ತು ಫ್ಯಾನ್ ಗಳ ಬಳಕೆಯನ್ನು ನಿಯಂತ್ರಿಸಬೇಕು. ಇದರೊಂದಿಗೆ ಕರೆಂಟು ಕಬಳಿಸುವ ಹವಾನಿಯಂತ್ರಕಗಳ ಬಳಕೆಯನ್ನು ನಿಲ್ಲಿಸಬೇಕು.

ಸರ್ಕಾರದ ಆದೇಶವೇನಾಯಿತು ?

ಕೆಲ ವರ್ಷಗಳ ಹಿಂದೆ ವಿದ್ಯುತ್ ಕ್ಷಾಮದ ಸಮಸ್ಯೆಯು ತುಸು ಉಲ್ಬಣಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಘೋಷಿಸಿತ್ತು. ಇವುಗಳಲ್ಲಿ ಆಯ್ದ ಉಪಕ್ರಮಗಳು ಇಂತಿವೆ. ಸರ್ಕಾರಿ ಕಚೇರಿಗಳಲ್ಲಿರುವ ಹಳೆಯ ಟ್ಯೂಬ್ ಲೈಟ್ ಗಳು ಕೆಟ್ಟು ಹೋದಲ್ಲಿ, ಇವುಗಳಿಗೆ ಬದಲಾಗಿ ಸಿ ಎಫ್ ಎಲ್ ದೀಪಗಳನ್ನು ಅಳವಡಿಸಬೇಕು. ನೂತನ ಸರ್ಕಾರಿ ಕಛೇರಿಗಳ ಕಟ್ಟಡಗಳನ್ನು ನಿರ್ಮಿಸುವಾಗ ಸಾಕಷ್ಟು ಗಾಳಿ ಹಾಗೂ ಬೆಳಕು ಬರುವಂತೆ ವಿನ್ಯಾಸಗೊಳಿಸಬೇಕು. ಹಾಗೂ ನೂತನ ಕಟ್ಟಡಗಳಲ್ಲಿ ಕಡ್ಡಾಯವಾಗಿ ಸಿ ಎಫ್ ಎಲ್ ದೀಪಗಳನ್ನೇ ಅಳವಡಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಆದರೆ ಈ ಆದೇಶವು ವಿದ್ಯುತ್ ಮಂಡಳಿಗಳ ಕಚೇರಿಗಳೂ ಸೇರಿದಂತೆ ಯಾವುದೇ ಸರ್ಕಾರಿ ಕಚೇರಿಗಳಲ್ಲೂ ಇಂದಿನ ತನಕ ಅನುಷ್ಠಾನಗೊಂಡಿಲ್ಲ!.  

ರಾಜ್ಯದ ಲಕ್ಷಾಂತರ ಜನರು ತಮ್ಮ ವಸತಿ ಕಟ್ಟಡಗಳಲ್ಲಿ ವಿದ್ಯುತ್ ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸಲು ಕೆಲ ವರ್ಷಗಳ ಹಿಂದೆ ಬೆಸ್ಕಾಂ ವಿನೂತನ ಯೋಜನೆಯನ್ನು ಜಾರಿಗೊಳಿಸಿತ್ತು. ಈ ಯೋಜನೆಯಲ್ಲಿ ಬೆಂಗಳೂರಿನ ನಿವಾಸಿಗಳು ತಮ್ಮ ವಿದ್ಯುತ್ ಬಿಲ್ಲನ್ನು ಪಾವತಿಸುವ ಸಂದರ್ಭದಲ್ಲಿ, ತಾವು ಬಳಸುತ್ತಿದ್ದ ಸಾಮಾನ್ಯ ಬಲ್ಬ್ ಗಳನ್ನು ಬೆಸ್ಕಾಂ ಗೆ ನೀಡಿ, ಇದಕ್ಕೆ ಪ್ರತಿಯಾಗಿ ಅಂದಿನ ದಿನಗಳಲ್ಲಿ ತುಸು ದುಬಾರಿಯಾಗಿದ್ದ ೨ ಅಥವಾ ೩ ಸಿ ಎಫ್ ಎಲ್ ಬಲ್ಬ್ ಗಳನ್ನು ಪಡೆಯಬಹುದಾಗಿತ್ತು. ಈ ಸಿ ಎಫ್ ಎಲ್ ಬಲ್ಬ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಬಲ್ಬ್ ಗಳ ಬೆಲೆಯನ್ನು ಪ್ರತಿ ತಿಂಗಳ ವಿದ್ಯುತ್ ಬಿಲ್ಲಿನೊಂದಿಗೆ ಕಂತಿನಲ್ಲಿ ಪಾವತಿಸುವ ಸೌಲಭ್ಯವನ್ನೂ ನೀಡಲಾಗಿತ್ತು. ಆದರೆ ಈ ಉತ್ತಮ ಯೋಜನೆಯು ಅಲ್ಪಾವಧಿಯಲ್ಲೇ ಅಸುನೀಗಿತ್ತು!.

ಅದೇನೇ ಇರಲಿ, ಇದೀಗ ತೀವ್ರ ಸ್ವರೂಪದ ವಿದ್ಯುತ್ ಕ್ಷಾಮದಿಂದಾಗಿ ಜಾರಿಗೆ ಬಂದಿರುವ ಅನಿಯಮಿತ ವಿದ್ಯುತ್ ಕಡಿತವನ್ನು ಜನಸಾಮಾನ್ಯರು ಅನಿವಾರ್ಯವಾಗಿ ಸಹಿಸಿಕೊಳ್ಳಲೇಬೇಕಾಗಿದೆ. ಇದರೊಂದಿಗೆ ಒಂದಿಷ್ಟು ವಿದ್ಯುತ್ ಲಿತಾಯದ ಉಪಕ್ರಮಗಳನ್ನೂ ಅನುಸರಿಸಿದಲ್ಲಿ, ವಿದ್ಯುತ್ ಕಡಿತದ ಬಾಧೆಯೂ ಕೊಂಚ ಕಡಿಮೆಯಾಗಲಿದೆ. ಅಂತಿಮವಾಗಿ ಹೇಳುವುದಾದಲ್ಲಿ “ ಒಂದು ಯೂನಿಟ್ ವಿದ್ಯುತ್ತಿನ ಉಳಿತಾಯವು, ಎರಡು ಯೂನಿಟ್ ವಿದ್ಯುತ್ತಿನ ಉತ್ಪಾದನೆ ಸಮ “ ಎನ್ನುವ ರಾಜ್ಯ ವಿದ್ಯುತ್ ಮಂಡಳಿಯ ಘೋಷಣೆಯನ್ನು ಅಕ್ಷರಶಃ ಪರಿಪಾಲಿಸಬೇಕಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು