Saturday, June 8, 2013

June-14,World blood donors day

                ಜೂನ್ ೧೪ :ವಿಶ್ವ ರಕ್ತದಾನಿಗಳ ದಿನಾಚರಣೆಯ ದಶಮಾನೋತ್ಸವ
ಪ್ರಾಣಾಪಾಯದ ಸ್ಥಿತಿಯಲ್ಲಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಿರಬೇಕಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು,ಮೂರು ವ್ಯಕ್ತಿಗಳ ಜೀವವನ್ನು ಉಳಿಸಬಲ್ಲದು. ಆದುದರಿಂದ ವಿಶ್ವ ರಕ್ತದಾನಿಗಳ ದಿನಾಚರಣೆಯ ದಶಮಾನೋತ್ಸವವನ್ನು ಇಂದೇ ರಕ್ತದಾನ ಮಾಡುವ ಮೂಲಕ ಆಚರಿಸಿ. "ಜೀವ"ದ ಕೊಡುಗೆಯನ್ನು ನೀಡಿ,ರಕ್ತದಾನ ಮಾಡಿ,ಎನ್ನುವ ಘೋಷಣೆಯನ್ನು ಸಾಕಾರಗೊಳಿಸಿ.
----------           -----------         ------------           -------------            ------------           --------------         -----------
                     ವಿಶ್ವ ರಕ್ತದಾನಿಗಳ ದಿನವನ್ನು ಜೂನ್ ೧೪,೨೦೦೪ ರಂದು ಮೊತ್ತ ಮೊದಲಬಾರಿಗೆ ಆಚರಿಸಲಾಗಿತ್ತು. ತದನಂತರ ವರ್ಷಂಪ್ರತಿ ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಅವಶ್ಯಕತೆ,ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳು,ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವುಮೂಡಿಸುವ ಕಾರ್ಯಕ್ರಮಗಳೊಂದಿಗೆ,ಅಸಂಖ್ಯ ಪ್ರಾಣಗಳನ್ನು ಉಳಿಸಿರುವ ರಕ್ತದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಸುರಕ್ಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳ ಪೂರಣವು ಲಕ್ಷಾಂತರ ಜನರ ಪ್ರಾಣವನ್ನು ಉಳಿಸುತ್ತಿದೆ. ಪ್ರಾಣಾಪಾಯದ ಸ್ಥಿತಿಯಿಂದ ರಕ್ಷಿಸುವುದಲ್ಲದೇ,ಸುಧೀರ್ಘಕಾಲ ಆರೋಗ್ಯವಂತರಾಗಿ ಜೀವಿಸಲು ನೆರವಾಗುತ್ತದೆ. ಸಂಕೀರ್ಣ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಲು ಹಾಗೂ ಬಾಣಂತಿಯರು ಮತ್ತು ನವಜಾತ ಶಿಶುಗಳನ್ನು ಪ್ರಾಣಾಪಾಯದ ಸ್ಥಿತಿಯಲ್ಲಿ ಕಾಪಾಡುತ್ತದೆ.  
ದಾನಿಗಳ-ರಕ್ತದ ಕೊರತೆ
ವಿಶ್ವಾದ್ಯಂತ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಗಾಧ ಪ್ರಮಾಣದ ಅಂತರವಿದೆ. ನಮ್ಮ ದೇಶದಲ್ಲಿ ವರ್ಷಂಪ್ರತಿ ಸುಮಾರು ನಾಲ್ಕು ಕೋಟಿ ಯೂನಿಟ್ ರಕ್ತದ ಬೇಡಿಕೆಯಿದ್ದರೂ,ಪೂರೈಕೆಯ ಪ್ರಮಾಣವು ಕೇವಲ ೪೦ ಲಕ್ಷ ಯೂನಿಟ್ ಗಳಾಗಿವೆ. ತತ್ಪರಿಣಾಮವಾಗಿ ತುರ್ತು ಪರಿಸ್ಥಿತಿಯಲ್ಲಿ ಅವಶ್ಯಕ ಪ್ರಮಾಣದ ರಕ್ತಪೂರಣವಾಗದೇ,ಲಕ್ಷಾಂತರ ಜನರು ಅಕಾಲಿಕ ಮರಣಕ್ಕೆ ಈಡಾಗುತ್ತಾರೆ. ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಹಲವಾರು ಅಂತರ ರಾಷ್ಟ್ರೀಯ ಸಂಘಟನೆಗಳ ಸಹಕಾರದೊಂದಿಗೆ,ಸ್ವಯಂಪ್ರೇರಿತ ರಕ್ತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ವಿಶ್ವ ರಕ್ತದಾನಿಗಳ ದಿನವನ್ನು ವರ್ಷಂಪ್ರತಿ ಆಚರಿಸುತ್ತಿದೆ.
ಪ್ರಸ್ತುತ ವಿಶ್ವದ ೬೨ ರಾಷ್ಟ್ರಗಳಲ್ಲಿ "ರಕ್ತಪೂರಣ"ಸೇವೆಯು ಸ್ವಯಂಪ್ರೇರಿತ ರಕ್ತದಾನಿಗಳ ನೆರವಿನಿಂದಲೇ ನಡೆಯುತ್ತಿದ್ದು,೨೦೦೨ ರಲ್ಲಿ ಈ ವ್ಯವಸ್ಥೆಯು ಕೇವಲ ೩೯ ರಾಷ್ಟ್ರಗಳಿಗೆ ಸೀಮಿತವಾಗಿತ್ತು. ೨೦೦೯ ರ ಮೆಲ್ಬೋರ್ನ್ ಘೋಷಣೆಯಂತೆ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ೨೦೨೦ ಕ್ಕೆ ಮುನ್ನ,ರಕ್ತದಾನದ ಸೇವೆಯನ್ನು ಶತಪ್ರತಿಶತ ಫಲಾಪೇಕ್ಷೆಯಿಲ್ಲದೆ ನೀಡುವ ದಾನಿಗಳಿಂದ ಸಂಗ್ರಹಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ರಕ್ತಪೂರಣದ ಅವಶ್ಯಕತೆ ಇರುವವರಿಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ಸ್ವಯಂಪ್ರೇರಿತ ದಾನಿಗಳಿಂದ ಪಡೆಯಲಾಗುತ್ತಿದೆ. ಕೆಲಸಂದರ್ಭಗಳಲ್ಲಿ ಸಮೀಪದ ಸಂಬಂಧಿಗಳಿಂದ ಮತ್ತು ಅನಿವಾರ್ಯವೆನಿಸಿದಾಗ ಹಣವನ್ನು ಪಡೆದು ರಕ್ತವನ್ನು ನೀಡುವ ವೃತ್ತಿಪರ ದಾನಿಗಳಿಂದ ಪಡೆಯಲಾಗುತ್ತದೆ. ಇದೇ ದಶಕದ ಅಂತ್ಯಕ್ಕೆ ಮುನ್ನ,ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಸ್ವಯಂಪ್ರೇರಿತ ರಕ್ತದಾನದ ಮೂಲಕ ಅವಶ್ಯಕ ಪ್ರಮಾಣದ ರಕ್ತವನ್ನು ಪಡೆಯುವ ಪದ್ಧತಿ ಜಾರಿಗೆ ಬರಲಿ ಎನ್ನುವುದೇ ವಿಶ್ವ ಆರೋಗ್ಯ ಸಂಸ್ಥೆಯ ಆಶಯವಾಗಿದೆ.
ರಕ್ತದಾನ-ಶ್ರೇಷ್ಠ ದಾನ
ಅನಾದಿ ಕಾಲದಿಂದಲೂ ಭಾರತದ ಹಿಂದೂ ಮತ್ತು ಅನ್ಯ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧ ರೀತಿಯ ದಾನಗಳನ್ನು ನೀಡುವ ಪದ್ಧತಿ ರೂಢಿಯಲ್ಲಿತ್ತು. ಅರ್ಹ ವ್ಯಕ್ತಿಗಳಿಗೆ ನೀಡುವ ದಾನಗಳಿಂದ ತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಒಂದಿಷ್ಟು ಪುಣ್ಯವೂ ಲಭಿಸುತ್ತದೆ ಎನ್ನುವ ನಂಬಿಕೆಯು ಇಂದಿಗೂ ನಮ್ಮಲ್ಲಿ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವೇ ರಕ್ತದಾನ. ಅಕ್ಷರಶಃ "ಜೀವದಾನ" ಎನಿಸುವ ಈ ದಾನಕ್ಕೆ ಇತರ ಯಾವುದೇ ದಾನಗಳು ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ಇಂದೇ ರಕ್ತದಾನ ಮಾಡಿರಿ.
ನಿಮಗಿದು ತಿಳಿದಿರಲಿ
ನಿಮಗೆ ೧೮ ವರ್ಷ ವಯಸ್ಸಾದಂದಿನಿಂದ ೬೦ ನೇ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ರಕ್ತದಾನ ಮಾಡುತ್ತಿದ್ದಲ್ಲಿ,೫೦೦ ಕ್ಕೂ ಅಧಿಕ ಜನರ ಪ್ರಾಣಗಳನ್ನು ಉಳಿಸಬಹುದಾಗಿದೆ. ತನ್ಮೂಲಕ ಸಾಕಷ್ಟು ಪುಣ್ಯ ಮತ್ತು ಮಾನಸಿಕ ಸಂತೃಪ್ತಿಯನ್ನು ಗಳಿಸಬಹುದಾಗಿದೆ. ಇಷ್ಟು ಮಾತ್ರವಲ್ಲ,ನಿಯಮಿತವಾಗಿ ರಕ್ತವನ್ನು ನೀಡುವ ಮೂಲಕ ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.
ಮಹತ್ವ
ಕಾರ್ಲ್ ಲ್ಯಾಂಡ್ ಸ್ಟೈನರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ರಕ್ತಪೂರಣದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯರು,೧೯೦೧ ರಲ್ಲಿ ರಕ್ತದ ಎ ಬಿ ಒ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ಆಧುನಿಕ ಪದ್ದತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ "ರೀಸಸ್ ಫ್ಯಾಕ್ಟರ್" ಎನ್ನುವ ಅಂಶವನ್ನು ಗುರುತಿಸುವ ಮೂಲಕ,ರೋಗಿಯ  ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತಪೂರಣವನ್ನು ಮಾಡಲು ಕಾರಣಕರ್ತರೆನಿಸಿದ್ದರು. ಈ ವೈದ್ಯರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ,ಇವರ ಜನ್ಮದಿನವನ್ನು ರಕ್ತದಾನಿಗಳ ದಿನವನ್ನಾಗಿ ಆಚರಿಸುವ ಮೂಲಕ ಗೌರವಿಸಲಾಗಿದೆ.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

No comments:

Post a Comment