Monday, February 16, 2015

FOOD -DONT WASTE IT



ಅಮೂಲ್ಯ ಆಹಾರ ಪದಾರ್ಥಗಳನ್ನು ಪೋಲುಮಾಡದಿರಿ

“ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ “ ಎನ್ನುವ ಆಡುಮಾತು, ನಮ್ಮ ದೇಶದ ರೈತರು – ಕೃಷಿಕರು ಬೆಳೆಯುತ್ತಿರುವ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳ ಮಟ್ಟಿಗೆ ಅನ್ವರ್ಥವೆನಿಸುತ್ತವೆ. ನಾವಿಂದು ಧಾರಾಳವಾಗಿ ಬೆಳೆಯುತ್ತಿರುವ ಆಹಾರಧಾನ್ಯಗಳನ್ನು ಸುರಕ್ಷಿತವಾಗಿ ಹಾಗೂ ಸುಸ್ಥಿತಿಯಲ್ಲಿ ಸಂರಕ್ಷಿಸಿ ಇರಿಸಬಲ್ಲ ಗೋದಾಮುಗಳು ಹಾಗೂ ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಸುಧೀರ್ಘಕಾಲ ಕೆಡದಂತೆ ಕಾಪಾಡಬಲ್ಲ ಶೈತ್ಯಾಗಾರಗಳ ಕೊರತೆ ಅಥವಾ ಅಭಾವಗಳಿಂದಾಗಿ, ೪೪,೦೦೦ ಕೋಟಿ ರೂ. ಮೌಲ್ಯದ  ಆಹಾರಪದಾರ್ಥಗಳು ಹುಳಹುಪ್ಪಟೆಗಳು- ಹೆಗ್ಗಣಗಳ ಪಾಲಾಗುತ್ತಿವೆ ಅಥವಾ ಕೆಟ್ಟುಹೋಗುತ್ತಿವೆ. ಆದರೆ ಇದೇ ಸಂದರ್ಭದಲ್ಲಿ ನಮ್ಮ ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ಜರಗುವ ವಿವಾಹ ನಿಶ್ಚಿತಾರ್ಥ, ವಿವಾಹ ಮತ್ತಿತರ ವಿಶೇಷ ಸಭೆ- ಸಮಾರಂಭಗಳ ಅವಿಭಾಜ್ಯ ಅಂಗವಾಗಿರುವ ಔತಣಕೂಟಗಳಲ್ಲಿ, ಊಟದ ತಟ್ಟೆ ಅಥವಾ ಎಲೆಗಳಲ್ಲಿ ಬಡಿಸಿದ ಭಕ್ಷ ಭೋಜ್ಯಗಳ ಶೇ.೧೫ ರಿಂದ ೩೦ ರಷ್ಟು  ಪಾಲು ಅತಿಥಿಗಳ ಉದರವನ್ನು ಸೇರದೇ ತ್ಯಾಜ್ಯಗಳೊಂದಿಗೆ ಎಸೆಯಲ್ಪಡುತ್ತದೆ!.
=============                ================                        ============               ================


 ಜಗತ್ತಿನಲ್ಲಿ ಮನುಷ್ಯನು ಆರೋಗ್ಯವಂತನಾಗಿ ಜೀವಿಸಲು  ಸ್ವಚ್ಛವಾದ ಗಾಳಿ ಹಾಗೂ ಶುದ್ಧವಾದ ನೀರಿನೊಂದಿಗೆ, ಸಮತೋಲಿತ ಆಹಾರ ಸೇವನೆಯೂ ಅತ್ಯವಶ್ಯಕವೆನಿಸುವುದು. ಆದರೆ ನಿರಂತರವಾಗಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿನಾವು ಉಸಿರಾಡುವ ಗಾಳಿಕುಡಿಯುವ ನೀರು ಮತ್ತು ಸೇವಿಸುವ ಆಹಾರಗಳ ಗುಣಮಟ್ಟಗಳು ದಿನೇದಿನೇ ನಶಿಸುತ್ತಿವೆಅನೇಕ ದೇಶಗಳಲ್ಲಿ ಕುಡಿಯುವ ನೀರು ಮತ್ತು ಆಹಾರ ಪದಾರ್ಥಗಳ ಕೊರತೆ ಅಥವಾ ಅಭಾವಗಳು ತಲೆದೋರುತ್ತಿವೆಆದರೆ ನಾವಿಂದು ಪೋಲು ಮಾಡುತ್ತಿರುವ ಆಹಾರ ಪದಾರ್ಥಗಳ ಪ್ರಮಾಣವನ್ನು ಗಮನಿಸಿದಲ್ಲಿ, ಮೂರು ಹೊತ್ತಿನ ತುತ್ತಿಗೆ ಗತಿಯಿಲ್ಲದ ಲಕ್ಷಾಂತರ ಜನರ ಹಸಿವನ್ನು ಹಿಂಗಿಸಲು ಇದು ಸಾಕಾಗುತ್ತದೆ!.

ಇದರೊಂದಿಗೆ ಮೂಲಸೌಕರ್ಯಗಳುಬೃಹತ್ ಉದ್ದಿಮೆಗಳು ಮತ್ತು  ವಸತಿ  ವಾಣಿಜ್ಯ ಕಟ್ಟಡ ಇತ್ಯಾದಿಗಳ ನಿರ್ಮಾಣ ಕಾಮಗಾರಿಗಳಿಂದಾಗಿ ನಶಿಸುತ್ತಿರುವ ಕೃಷಿ ಭೂಮಿಯಿಂದಾಗಿ ಹಾಗೂ ಕಾರಣಾಂತರಗಳಿಂದ ಕಷ್ಟನಷ್ಟಗಳಿಗೆ ಈಡಾಗಿರುವ ರೈತರು ಕೃಷಿಯನ್ನು ತ್ಯಜಿಸಿ ತಮ್ಮ ಜಮೀನನ್ನು ಮಾರಾಟ ಮಾಡಿರುವುದರಿಂದಆಹಾರ ಪದಾರ್ಥಗಳ ಕೊರತೆ ಉದ್ಭವಿಸದೇ?, ಎನ್ನುವ ಸಂದೇಹ ನಿಮ್ಮ ಮನದಲ್ಲೂ ಮೂಡಿರಬಹುದುಆದರೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕದೇಶದ ೧೨೫ ಕೋಟಿ ಜನರಿಗೆ ಸಾಕಾಗುವಷ್ಟು ಆಹಾರ ಧಾನ್ಯಗಳು ಮತ್ತು ಹಣ್ಣು  ತರಕಾರಿಗಳನ್ನು ಬೆಳೆಯಲು ನಾವಿಂದು ಯಶಸ್ವಿಯಾಗಿದ್ದೇವೆ
ವಿಶೇಷವೆಂದರೆ ಪ್ರಸ್ತುತ ಜಗತ್ತಿನ ಏಳು ಬಿಲಿಯನ್ ಜನರಿಗೆ ಸಾಕಾಗುವಷ್ಟು ಆಹಾರ ಪದಾರ್ಥಗಳನ್ನು ಪ್ರಪಂಚದ ವಿವಿಧ ರಾಷ್ಟ್ರಗಳು  ಬೆಳೆಯುತ್ತಿವೆ. ಇಷ್ಟು ಮಾತ್ರವಲ್ಲ, ೨೦೫೦ ರಲ್ಲಿ ಜಗತ್ತಿನ ಜನಸಂಖ್ಯೆಯು ಒಂಬತ್ತು ಬಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದ್ದು, ಅಷ್ಟೊಂದು ಜನರಿಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಬೆಳೆಯುವ ಸಾಮರ್ಥ್ಯವನ್ನು ಕೂಡಾ ಹೊಂದಿವೆ. ಅರ್ಥಾತ್, ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿರುವ ಅಪೌಷ್ಠಿಕತೆ ಮತ್ತು ತತ್ಸಂಬಂಧಿತ ಸಮಸ್ಯೆಗಳಿಗೆ ನಾವಿಂದು ಉತ್ಪಾದಿಸುತ್ತಿರುವ ಆಹಾರ ಪದಾರ್ಥಗಳ ಕೊರತೆ ಕಾರಣವಲ್ಲ.  ಸಮಸ್ಯೆಗೆ ನಾವಿಂದು ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ಆಹಾರ ಪದಾರ್ಥಗಳೇ ಕಾರಣ ಎಂದಲ್ಲಿ ನಿಮಗೂ ಅಚ್ಚರಿಯಾದೀತು.

ಭಾರತದ ಜನಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಿದ್ದು, ಇದಕ್ಕೆ ಅನುಗುಣವಾಗಿ ಆಹಾರಪದಾರ್ಥಗಳ ಬೇಡಿಕೆಯ ಪ್ರಮಾಣವೂ ಸ್ವಾಭಾವಿಕವಾಗಿಯೇ  ಹೆಚ್ಚುತ್ತಿದೆ. ಇದರೊಂದಿಗೆ ದೇಶದ ಅನೇಕ ರಾಜ್ಯಗಳಲ್ಲಿ ಗರ್ಭಿಣಿಯರು ಮತ್ತು ಪುಟ್ಟ ಮಕ್ಕಳನ್ನು ಪೀಡಿಸುವ ಅಪೌಷ್ಠಿಕತೆಯು ಅಸಾಮಾನ್ಯ ಸಮಸ್ಯೆಗಳಿಗೆ ಕಾರಣವೆನಿಸುತ್ತಿದೆ.  ಆದರೆ ಇದೇ ಸಂದರ್ಭದಲ್ಲಿ ದೇಶದ ಪ್ರಜೆಗಳು ಅನಾವಶ್ಯಕವಾಗಿ ಆಹಾರಪದಾರ್ಥಗಳನ್ನು ಪೋಲುಮಾಡುತ್ತಿರುವುದು ಮಾತ್ರ ನಂಬಲಸಾಧ್ಯವೆನಿಸುತ್ತದೆ.

ಸಾಮಾನ್ಯವಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳ  ಉತ್ಪಾದನೆಯ ಪ್ರಮಾಣವು ಹೆಚ್ಚದೇ ಇದ್ದಲ್ಲಿ, ಇವುಗಳ ಕೊರತೆ ತಲೆದೋರುವುದು ಸ್ವಾಭಾವಿಕ. ಜೊತೆಗೆ ಇವುಗಳನ್ನು ಸಂಗ್ರಹಿಸಿ ಸಂರಕ್ಷಿಸುವ ವ್ಯವಸ್ಥೆಗಳನ್ನೂ ಸರಕಾರ ಕಲ್ಪಿಸಬೇಕಾಗುತ್ತದೆ. ಈ ವ್ಯವಸ್ಥೆಯ ಕೊರತೆ ಅಥವಾ ಅಭಾವಗಳಿದ್ದಲ್ಲಿ, ಕೈಗೆ ಬಂದ ತುತ್ತು ಬಾಯಿಗೆ ಬಾರದೇ ವ್ಯರ್ಥವಾಗಿ  ಪೋಲಾಗುತ್ತದೆ. ಉದಾಹರಣೆಗೆ ನಮ್ಮ ದೇಶದಲ್ಲಿ ಸಂರಕ್ಷಣಾ ವ್ಯವಸ್ಥೆಯ ಕೊರತೆಯಿಂದಾಗಿ  ವರ್ಷಂಪ್ರತಿ ೨೧ ದಶಲಕ್ಷ ಟನ್ ಗೋಧಿಯು ಕೆಟ್ಟು ಹೋಗುತ್ತಿದ್ದು, ಇದು ಆಸ್ಟ್ರೇಲಿಯಾ ದೇಶವು ಒಂದು ವರ್ಷದಲ್ಲಿ ಬೆಳೆಯುವ ಗೋಧಿಯ ಪ್ರಮಾಣಕ್ಕೆ ಸಮನಾಗಿದೆ!.

ಭಾರತದಲ್ಲಿ ಆಧುನಿಕ ಕೃಷಿ ಪದ್ದತಿಯನ್ನು ಸಮರ್ಪಕವಾಗಿ ಬಳಸುವ ಮೂಲಕ, ದೇಶದ ಜನತೆಗೆ ಅವಶ್ಯವಿರುವಷ್ಟಕ್ಕಿಂತ ಅಧಿಕ ಪ್ರಮಾಣದ ಆಹಾರಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತಿದೆ. ೨೦೧೩-೧೪ ನೆ ಸಾಲಿನಲ್ಲಿ ನಾವು ೨೬೩ ದಶಲಕ್ಷ ಟನ್ ಆಹಾರಧಾನ್ಯಗಳನ್ನು ಬೆಳೆದಿದ್ದರೂ, ಪ್ರಜೆಗಳು ಸೇವಿಸಿದ್ದ ಪ್ರಮಾಣವು ಕೇವಲ ೨೨೦ ರಿಂದ ೨೨೫ ದಶಲಕ್ಷ ಟನ್ ಎಂದಲ್ಲಿ ನೀವೂ ನಂಬಲಾರಿರಿ. ಅದೇ ರೀತಿಯಲ್ಲಿ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಬೆಳೆಯುವ ದೇಶಗಳ ಯಾದಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದ್ದರೂ, ಇವುಗಳ ಶೇ.೪೦ ರಷ್ಟು ಪಾಲು ಸೇವನೆಗೆ ಲಭ್ಯವಾಗದೇ ಕೆಟ್ಟು ಹೋಗುತ್ತದೆ. ಇವುಗಳ ಒಟ್ಟು ಮೌಲ್ಯವು ಸುಮಾರು ೧೩,೩೦೦ ಕೋಟಿಗೂ ಅಧಿಕವಾಗಿದೆ. ಈ ಅಯಾಚಿತ ಕಷ್ಟನಷ್ಟಗಳಿಗೆ ಸೂಕ್ತ ಸಂಗ್ರಹ,ಸಾಗಾಣಿಕೆ, ಸಂರಕ್ಷಣೆ ಮತ್ತು ಮಾರಾಟ ವ್ಯವಸ್ಥೆಗಳ ಕೊರತೆ ಅಥವಾ ಅಭಾವಗಳೇ ಕಾರಣವೆನಿಸಿವೆ.

ಅಪೌಷ್ಠಿಕತೆ

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿರುವ ೭೮ ದೇಶಗಳ ಪಟ್ಟಿಯಲ್ಲಿ, ಭಾರತವು ೬೮ ನೆಯ ಸ್ಥಾನದಲ್ಲಿದೆ. ವಿಶೇಷವೆಂದರೆ ನಮ್ಮ ನೆರೆಯ ಶ್ರೀಲಂಕಾ ದೇಶವು ೪೩, ನೇಪಾಳ ೪೯, ಪಾಕಿಸ್ತಾನ ೫೭ ಮತ್ತು ಬಡ ಬಾಂಗ್ಲಾ ದೇಶವು ೫೮ ನೆಯ ಸ್ಥಾನಗಳಲ್ಲಿವೆ!. ಆದರೂ ನಮ್ಮ ದೇಶದಲ್ಲಿ ಆಹಾರಪದಾರ್ಥಗಳನ್ನು ವ್ಯರ್ಥವಾಗಿ ಪೋಲುಮಾಡುವ ಕೆಟ್ಟ ಹವ್ಯಾಸವು, ದಿನೇದಿನೇ ವೃದ್ಧಿಸುತ್ತಿದೆ. ದೇಶದ ಬಡಜನರನ್ನು ಕಾಡುತ್ತಿರುವ ಅಪೌಷ್ಠಿಕತೆಗೆ, ಇದೊಂದು ಪ್ರಮುಖ ಕಾರಣವೆನಿಸಿದೆ.

ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.೪೮  ರಷ್ಟು ಮಕ್ಕಳು ಕುಂಠಿತ ಬೆಳವಣಿಗೆಯ ಸಮಸ್ಯೆಯಿಂದ ಹಾಗೂ ಶೇ.೪೭ ರಷ್ಟು ಮಕ್ಕಳು ಕಡಿಮೆ ತೂಕದ ಸಮಸ್ಯೆಯಿಂದ  ಬಳಲುತ್ತಿದ್ದು, ಇದಕ್ಕೆ  ಅಪೌಷ್ಠಿಕತೆಯೇ ಮೂಲ ಕಾರಣವಾಗಿದೆ. ಅಂತೆಯೇ ಪುಟ್ಟ ಮಕ್ಕಳ ಅಕಾಲಿಕ ಮರಣಗಳ ಶೇ. ೫೦ ಪ್ರಕರಣಗಳಿಗೂ ಅಪೌಷ್ಠಿಕತೆ ಕಾರಣವೆನಿಸಿದೆ. ಸಂಯುಕ್ತ ರಾಷ್ಟ್ರಗಳು ಸಂಸ್ಥೆಯ ( ಯುನೈಟೆಡ್ ನೇಶನ್ಸ್ )ಆಹಾರ ಮತ್ತು ಕೃಷಿ ಸಂಘಟನೆಯ ಅಭಿಪ್ರಾಯದಂತೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಜಗತ್ತಿನ ಶೇ.  ೨೫ ರಷ್ಟು ಜನರು ಮತ್ತು ಇದೇ ಸಮಸ್ಯೆಯಿಂದ ಬಳಲುತ್ತಿರುವ ಶೇ.೩೩ ರಷ್ಟು ಮಕ್ಕಳು ಭಾರತೀಯರೇ ಆಗಿದ್ದಾರೆ.

ನಾವಿಂದು ನಮ್ಮ ದೇಶದ ಪ್ರಜೆಗಳಿಗೆ ಸಾಕಾಗುವಷ್ಟು ಆಹಾರಪದಾರ್ಥಗಳನ್ನು ಬೆಳೆಯುತ್ತಿದ್ದರೂ, ಗಣನೀಯ ಪ್ರಮಾಣದ ಜನರು ಅಪೌಷ್ಠಿಕತೆಯಿಂದ ಬಳಲುತ್ತಿರುವುದು ಸರಕಾರಕ್ಕೆ ತಿಳಿಯದ ವಿಚಾರವೇನಲ್ಲ. ಆದರೆ ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಭವ್ಯ ಭಾರತಕ್ಕೆ, ದೇಶದ ರೈತರು - ಕೃಷಿಕರು ಬೆಳೆದ ದವಸಧಾನ್ಯಗಳು, ಹಣ್ಣುಹಂಪಲುಗಳು ಮತ್ತು ತರಕಾರಿಗಳನ್ನು ಸಂಗ್ರಹಿಸಿ, ಕ್ಷಿಪ್ರಗತಿಯಲ್ಲಿ ಸಾಗಿಸಿ, ಸುರಕ್ಷಿತವಾಗಿ ಸಂರಕ್ಷಿಸಿ ಇರಿಸಬಲ್ಲ ಗೋದಾಮುಗಳು ಮತ್ತು ಶೈತ್ಯಾಗಾರಗಳನ್ನು ನಿರ್ಮಿಸಲು ಆಗದಷ್ಟು ಬಡತನವಿಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ದೇಶದ ಬೊಕ್ಕಸಕ್ಕೆ ಸಹಸ್ರಾರು ಕೋಟಿ  ರೂಪಾಯಿಗಳ ನಷ್ಟದೊಂದಿಗೆ, ಪ್ರಜೆಗಳ ಅನಾರೋಗ್ಯ ಮತ್ತು ಅಕಾಲಿಕ ಮರಣಗಳಿಗೂ ಕಾರಣವೆನಿಸುತ್ತಿರುವ ಈ ವಿಲಕ್ಷಣ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಪರಿಹರಿಸುವ ಇಚ್ಛಾಶಕ್ತಿ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು!.

ಅದೇನೇ ಇರಲಿ, ಜಗತ್ತಿನಲ್ಲಿ ಉತ್ಪಾದಿಸಲ್ಪಡುತ್ತಿರುವ ಶೇ. ೩೩ ರಷ್ಟು ಆಹಾರಪದಾರ್ಥಗಳನ್ನು ಅನಾವಶ್ಯಕವಾಗಿ ಪೋಲುಮಾಡುತ್ತಿರುವ ಜನಸಾಮಾನ್ಯರ ಕೆಟ್ಟ ಹವ್ಯಾಸಕ್ಕೆ ಕಡಿವಾಣವನ್ನು ತೊಡಿಸಲೇಬೇಕಾಗಿದೆ. ಜೊತೆಗೆ ವ್ಯರ್ಥವಾಗಿ ಪೋಲಾಗುತ್ತಿರುವ ಆಹಾರಪದಾರ್ಥಗಳನ್ನು ಉಳಿಸುವುದರೊಂದಿಗೆ,ಮೂರು ಹೊತ್ತಿನ ತುತ್ತಿಗೆ ತತ್ವಾರವಿರುವ ಹಾಗೂ ಅಪೌಷ್ಠಿಕತೆಯ ಸಮಸ್ಯೆಯಿಂದ ಪೀಡಿತರಾದ ಜನರಿಗೆ ಸಮತೋಲಿತ ಆಹಾರವನ್ನು ಒದಗಿಸಬೇಕಾದ ಹೊಣೆಗಾರಿಕೆಯು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಮೇಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು






No comments:

Post a Comment