Thursday, February 12, 2015

MAHARASHTRA : CONTROLLING MOUNTING EXPENSES




ಮಹಾರಾಷ್ಟ್ರ : ಹೆಚ್ಚುತ್ತಿರುವ ಯೋಜನೆಗಳ ವೆಚ್ಚಗಳಿಗೆ ಕಡಿವಾಣ 

ದೇಶದ ಪ್ರತಿಯೊಂದು ರಾಜ್ಯಗಳಲ್ಲಿ ವರ್ಷವಿಡೀ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪರಿಪೂರ್ಣಗೊಳ್ಳುವುದೇ ಇಲ್ಲ. ತತ್ಪರಿಣಾಮವಾಗಿ ಇಂತಹ ಯೋಜನೆಗಳ ಖರ್ಚುವೆಚ್ಚಗಳೂ ಪ್ರಾರಂಭಿಕ ಹಂತದಲ್ಲಿ ಸಿದ್ಧಪಡಿಸಿದ್ದ ಅಂದಾಜುಪಟ್ಟಿಗೆ ಅನುಗುಣವಾಗಿ ಇರುವುದಿಲ್ಲ. ಹಾಗೂ ಇದೇ ಕಾರಣದಿಂದಾಗಿ ಯೋಜನೆಗಳ ವೆಚ್ಚವನ್ನು ಮರುಪರಿಷ್ಕರಣೆ ಮಾಡುತ್ತಿರುವ ರಾಜ್ಯ ಸರ್ಕಾರಗಳ ಧೋರಣೆಯಿಂದಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಬೊಕ್ಕಸಗಳಿಗೆ ಸಹಸ್ರಾರು ಕೋಟಿ ರೂಪಾಯಿಗಳ ನಷ್ಟ ಸಂಭವಿಸುತ್ತಿದೆ. ಇದನ್ನು ನಿಯಂತ್ರಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್, ಅತ್ಯಂತ ಪರಿಣಾಮಕಾರಿ ನಿರ್ಧಾರವೊಂದನ್ನು ಜಾರಿಗೊಳಿಸಿದ್ದಾರೆ.

ಹೆಚ್ಚುತ್ತಿರುವ ವೆಚ್ಚಕ್ಕೆ ಕಡಿವಾಣ

ಇತ್ತೀಚೆಗಷ್ಟೇ ಅಧಿಕಾರದ ಗದ್ದುಗೆಯನ್ನು ಏರಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವಿಸ್ ಅವರುರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿರುವ  ಯಾವುದೇ ನಿರ್ಮಾಣ ಕಾಮಗಾರಿಗಳ ಯೋಜನೆಯ ವೆಚ್ಚವನ್ನು ಮರುಪರಿಷ್ಕರಿಸದಂತೆ ವಿವಿಧ ಇಲಾಖೆಗಳಿಗೆ ನಿರ್ದೇಶಿಸಿದ್ದಾರೆ. ಇದಲ್ಲದೇ ಕಾಮಗಾರಿಗಳನ್ನು ಪರಿಪೂರ್ಣಗೊಳಿಸಲು ನಿಗದಿಸಿದ ಕಾಲಾವಧಿ, ಯೋಜನೆಗಳ ವೆಚ್ಚ ಮತ್ತು ಆರ್ಥಿಕ ನಕಾಶೆಗಳುನಿಗದಿತ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಆರಂಭಿಸುವ ಸಂದರ್ಭದಲ್ಲಿ ನೀಡುವ ಆದೇಶದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು ಎಂದು ಸೂಚಿಸಿದ್ದಾರೆ.ಹಾಗೂ ಯಾವುದೇ ಕಾರಣಕ್ಕೂ ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದೂ ಆದೇಶಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿರುವ ನಿರ್ಮಾಣ ಕಾಮಗಾರಿಗಳ ವೆಚ್ಚದ ಮರುಪರಿಷ್ಕರಣೆಯ ಸಮಸ್ಯೆಯನ್ನು ಬಗೆಹರಿಸಲು ಮುಖ್ಯಮಂತ್ರಿಗಳು ಹೂಡಿರುವ ಈ ಕಟ್ಟುನಿಟ್ಟಿನ ತಂತ್ರವನ್ನುಅನ್ಯ ರಾಜ್ಯ ಸರ್ಕಾರಗಳೂ ಅನುಕರಿಸಬೇಕಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಧಿಕತಮ ನಿರ್ಮಾಣ ಕಾಮಗಾರಿಗಳಲ್ಲಿ ಸಂಭವಿಸುತ್ತಿರುವ ವಿಳಂಬದಿಂದಾಗಿ, ಹೆಚ್ಚುತ್ತಿರುವ ಯೋಜನೆಯ ಖರ್ಚುವೆಚ್ಚಗಳನ್ನು ನಿಯಂತ್ರಿಸಲು ಇಂತಹ ಉಪಕ್ರಮಗಳು ಅನಿವಾರ್ಯವೆನಿಸುತ್ತವೆ.

೨೦೧೨ ರದ ಕೇಂದ್ರ ಸರ್ಕಾರದ ಇಲಾಖೆಯೊಂದರ ವರದಿಯಂತೆ ಸರ್ಕಾರವು ಅನುಷ್ಠಾನಗೊಳಿಸಿದ್ದ ೫೬೬ ಯೋಜನೆಗಳಲ್ಲಿ ೨೩೪ ಯೋಜನೆಗಳು ನಿಗದಿತ ಅವಧಿಯಲ್ಲಿ ಪರಿಪೂರ್ಣಗೊಂಡಿರಲಿಲ್ಲ. ತತ್ಪರಿಣಾಮವಾಗಿ ಕೇಂದ್ರದ ಬೊಕ್ಕಸಕ್ಕೆ ೧,೨೦,೩೧೯ ಕೋಟಿ ರೂ. ಹೆಚ್ಚುವರಿ ಹೊರೆ ಬಿದ್ದಿತ್ತು !. ಈ ೫೬೬ ಯೋಜನೆಗಳೂ ೫೦೦ ಕೋಟಿ ರೂ. ಗಳಿಗೂ ಅಧಿಕ ಮೊತ್ತದ ಯೋಜನೆಗಳಾಗಿದ್ದು, ಇದಕ್ಕೂ ಕಡಿಮೆ ಮೊತ್ತದ ಯೋಜನೆಗಳನ್ನು ಇಲ್ಲಿ ಪರಿಗಣಿಸಿಲ್ಲ.

ಕರ್ನಾಟಕದ ಉದಾಹರಣೆ

ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ನಿರ್ಮಿಸಿ ಚಳಿಗಾಲದ ಅಧಿವೇಶನವನ್ನು ನಡೆಸಲು ರಾಜ್ಯ ಸರ್ಕಾರವು ಗತದಶಕದಲ್ಲೇ ನಿರ್ಧರಿಸಿತ್ತು. ೨೦೦೯ ರಲ್ಲಿ ಇದಕ್ಕಾಗಿ ಬೇಕಾಗುವ ಜಮೀನಿನ ಮೌಲ್ಯವೂ ಸೇರಿದಂತೆ, ೨೫೦.೬೫ ಕೋಟಿ ರೂ.ಗಳ ಅಂದಾಜುಪಟ್ಟಿಯನ್ನು ಸಿದ್ಧಪಡಿಸಿತ್ತು. ಆದರೆ ಸ್ವಲ್ಪ ಸಮಯದ ಬಳಿಕ ಈ ಮೊತ್ತವನ್ನು ೩೫೦ ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿತ್ತು. ಇದನ್ನು ಸಮರ್ಥಿಸಲು ೩೫೨೦ ಚದರ ಅಡಿಗಳ ಹೆಚ್ಚುವರಿ ನಿರ್ಮಾಣದ ನೆಪವನ್ನು ಮುಂದೊಡ್ಡಲಾಗಿತ್ತು. ೦೧-೦೭-೨೦೦೯ ರಲ್ಲಿ ಆರಂಭಗೊಂಡಿದ್ದ ಸೌಧದ ನಿರ್ಮಾಣಕ್ಕೆ ೧೮ ತಿಂಗಳುಗಳ ಕಾಲಾವಧಿಯನ್ನು ನಿಗದಿಸಲಾಗಿತ್ತು. ಆದರೆ ಹಲವಾರು ವರ್ಷಗಳ ಬಳಿಕ ಪರಿಪೂರ್ಣಗೊಂಡಿದ್ದ ಈ ಕಾಮಗಾರಿಯ ವೆಚ್ಚವು, ೪೧೦ ಕೋಟಿಯನ್ನು ಮೀರಿತ್ತು !.

ಅದೇ ರೀತಿಯಲ್ಲಿ ಮೈಸೂರು – ಮಾಣಿ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳ ಯೋಜನೆಯ ಅಂತಿಮ ಭಾಗವಾಗಿದ್ದ ಸಂಪಾಜೆ – ಮಾಣಿ ನಡುವಿನ ೭೧.೯೦ ಕಿ.ಮೀ. ರಸ್ತೆಯ ಪುನರ್ನಿರ್ಮಾಣದ ಕಾಮಗಾರಿಗಳಿಗೆ ಸುಮಾರು ೧೩೪ ಕೋಟಿ ರೂ.ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ೨೦೦೯ ರಲ್ಲಿ ಆಂಧ್ರ ಮೂಲದ ಕೆ ಎಂ ಸಿ ಸಂಸ್ಥೆಗೆ ಇದರ ಗುತ್ತಿಗೆಯನ್ನು ನೀಡುವಾಗ ಈ ಮೊತ್ತವು ೧೭೨.೬೨ ಕೋಟಿ ರೂ.ಗಳಿಗೆ ಏರಿತ್ತು !. ಗುತ್ತಿಗೆಯನ್ನು ನೀಡುವ ಸಂದರ್ಭದಲ್ಲಿ ಈ ಕಾಮಗಾರಿಗಳನ್ನು ಮುಗಿಸಲು ೩೦ ತಿಂಗಳುಗಳ ಕಾಲಾವಕಾಶವನ್ನು ನಿಗದಿಸಿದ್ದರೂ, ಈ ಕಾಮಗಾರಿಗಳು ಇಂದಿನ ತನಕ ಪರಿಪೂರ್ಣಗೊಂಡಿಲ್ಲ. ಹಾಗೂ ಇದೇ ಕಾರಣದಿಂದಾಗಿ ಗುತ್ತಿಗೆಯ ಮೊತ್ತವು ಇನ್ನಷ್ಟು ಹೆಚ್ಚುವುದರಲ್ಲಿ ಸಂದೇಹವಿಲ್ಲ !.

ವಿಶೇಷವೆಂದರೆ ಸಿದ್ದರಾಮಯ್ಯನವರು ರಾಜ್ಯದ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಮೈಸೂರಿನಲ್ಲಿ ಉದ್ಘಾಟಿಸಿದ್ದ ಈ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿಗಳು, ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ವರ್ಷ ಕಳೆದರೂ ಪರಿಪೂರ್ಣಗೊಳ್ಳದಿರುವುದು ವಿಪರ್ಯಾಸವೇ ಸರಿ.

ಅದೇನೇ ಇರಲಿ, ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಜಾರಿಗೊಳಿಸಿರುವ ವಿನೂತನ ಕ್ರಮವನ್ನು, ದೇಶದ ಪ್ರತಿಯೊಂದು ರಾಜ್ಯಗಳಲ್ಲೂ ಅನುಷ್ಠಾನಗೊಳಿಸಲೇಬೇಕು. ತನ್ಮೂಲಕ ದೇಶದ ಪ್ರಜೆಗಳು ತೆತ್ತಿರುವ ತೆರಿಗೆಯ ಹಣವು ಪೋಲಾಗುವುದನ್ನು ತಡೆಗಟ್ಟಲೇಬೇಕೆಂದು ರಾಜ್ಯದ ಪ್ರಜೆಗಳು ಸರ್ಕಾರವನ್ನು ಒತ್ತಾಯಿಸಬೇಕು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಚಿತ್ರ - ಸಂಪಾಜೆ - ಮಾಣಿ ಹೆದ್ದಾರಿ 


No comments:

Post a Comment