Monday, May 25, 2015

ARE BPL FAMILIES INCREASING IN KARNATAKA ?







ಕರ್ನಾಟಕದಲ್ಲಿ ಬಿ ಪಿ ಎಲ್ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿದೆ !

ಒಂದಾನೊಂದು ಕಾಲದಲ್ಲಿ ನಮ್ಮ ದೇಶದಲ್ಲಿ ಬಡತನದ ಸಮಸ್ಯೆ ಅತ್ಯಂತ ವ್ಯಾಪಕವಾಗಿತ್ತು. ಮೂರು ಹೊತ್ತಿನ ತುತ್ತು ಬಿಡಿ, ಒಂದು ಹೊತ್ತಿನ ತುತ್ತಿಗೂ ತತ್ವಾರವಿದ್ದ ಕುಟುಂಬಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿತ್ತು. ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಹೊಟ್ಟೆ ಬಟ್ಟೆಗಳಿಗೆ ಕೊರತೆಯಿರದ ಕುಟುಂಬಗಳ ಸಂಖ್ಯೆ ಸಾಕಷ್ಟಿದೆ. ದುಡಿಯುವ ಕೈಗಳಿಗೆ ಯಾವುದಾದರೊಂದು ಉದ್ಯೋಗ ಸಿಕ್ಕೇ ಸಿಗುತ್ತದೆ. ಜೊತೆಗೆ ಸಣ್ಣಪುಟ್ಟ ಕೆಲಸಗಳನ್ನು ಮಾಡುವವರಿಗೂ ಉತ್ತಮ ವೇತನ ದೊರೆಯುತ್ತದೆ. ನಿಜಸ್ಥಿತಿ ಇಂತಿದ್ದರೂ, ಸರ್ಕಾರದ ದಾಖಲೆಗಳಂತೆ ಇಂದಿಗೂ ನಮ್ಮ ರಾಜ್ಯದಲ್ಲಿ " ಬಡತನದ ರೇಖೆಗಿಂತ ಕೆಳಗಿರುವ " ಕುಟುಂಬಗಳ ಸಂಖ್ಯೆ ಹಾಗೂ  ಅಂತ್ಯೋದಯ ಮತ್ತು ಬಿ ಪಿ ಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಸಂಖ್ಯೆಯು ಸರಿಸುಮಾರು ಒಂದು ಕೋಟಿಗೂ ಅಧಿಕವಾಗಿದೆ. ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ.

ಸರಕಾರೀ ಸೌಲಭ್ಯಗಳಿಗೆ ರಹದಾರಿ

ಕಳೆದ ಹಲವಾರು ವರ್ಷಗಳಿಂದ ಅಧಿಕಾರದ ಗದ್ದುಗೆಯನ್ನೇರುವ ಸಲುವಾಗಿಯೇವಿವಿಧ ರಾಜಕೀಯ ಪಕ್ಷಗಳು ಮತದಾರರಿಗೆ ಹತ್ತು ಹಲವು ಆಮಿಷಗಳನ್ನು ಒಡ್ಡುವ ಪದ್ಧತಿಯನ್ನು ಹುಟ್ಟುಹಾಕಿದ್ದವು. ಇದರ ಅಂಗವಾಗಿ ರಾಜ್ಯದಲ್ಲಿನ " ಬಿ ಪಿ ಎಲ್ ಕುಟುಂಬ " ಗಳ ಸಲುವಾಗಿಯೇ ಅನೇಕ ಸಾಮಾಜಿಕ ಹಾಗೂ ಜನಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದವು. ಒಂದು ಪಕ್ಷದ ಸರ್ಕಾರ ಅಧಿಕಾರವನ್ನು ಕಳೆದುಕೊಂಡ ಬಳಿಕ ಅಧಿಕಾರದ ಗದ್ದುಗೆಯನ್ನು ಏರಿದ ಮತ್ತೊಂದು ಪಕ್ಷವು ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ  ಮತ್ತಷ್ಟು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಿಸುತ್ತಿತ್ತು. ಆದರೆ ಇಂತಹ ಜನಪರ ಯೋಜನೆಗಳಿಗಾಗಿ ಸರ್ಕಾರದ ಬೊಕ್ಕಸದ ಹಣವನ್ನು ವ್ಯಯಿಸಲಾಗುತ್ತಿತ್ತೇ ಹೊರತುಪಕ್ಷದ ನಿಧಿಯಿಂದಲ್ಲ. ರಾಜ್ಯದ ಆರ್ಥಿಕ ಸ್ಥಿತಿಗತಿಗಳು ಆರೋಗ್ಯಕರ ಮಟ್ಟದಲ್ಲಿ ಇಲ್ಲದಿದ್ದರೂ ಹಾಗೂ ರಾಜ್ಯ ಸರ್ಕಾರದ ತಲೆಯ ಮೇಲಿನ ಸಾಲದ ಮೊತ್ತ ಒಂದು ಲಕ್ಷ ಕೋಟಿಯನ್ನು ಮೀರಿದರೂ, ಅಧಿಕಾರದಲ್ಲಿರುವ ರಾಜಕೀಯ ಪಕ್ಷವು ಇಂತಹ ಇನ್ನಷ್ಟು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಿಸಲು ಹಿಂಜರಿಯುವುದಿಲ್ಲ. ಏಕೆಂದರೆ ಸರ್ಕಾರ ಹಿಂದೆ  ಮಾಡಿದ್ದ ಹಾಗೂ ಇದೀಗ ಮಾಡಲಿರುವ ಸಾಲವನ್ನು ಮರುಪಾವತಿಸಬೇಕಾದ ಹೊಣೆಗಾರಿಕೆಯು ಇಂದಿನ ಸರ್ಕಾರದ ಮೇಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಇತೀಚಿನ ಕೆಲವರ್ಷಗಳಿಂದ ಅಧಿಕಾರದಲ್ಲಿರುವ ಪಕ್ಷಗಳು ರಾಜ್ಯದ ಬಡ ಜನತೆಯ ಸಲುವಾಗಿ ಅನೇಕ  " ಉಚಿತ ಭಾಗ್ಯ " ಗಳನ್ನು ನೀಡುವ ಸಂಪ್ರದಾಯವನ್ನು ಆರಂಭಿಸಿವೆ. ಈಗಂತೂ ಪಡಿತರ ಅಕ್ಕಿ ಹಾಗೂ ಗೋಧಿಗಳನ್ನು ಉಚಿತವಾಗಿ ಮತ್ತು ಸಕ್ಕರೆ, ಎಣ್ಣೆ ಮತ್ತು ಉಪ್ಪುಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ. ಇದಲ್ಲದೆ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ. ಅಂತೆಯೇ ಆಶ್ರಯ ಯೋಜನೆಯಲ್ಲಿ ಮನೆಕಟ್ಟಲು ಜಮೀನು, ಶೌಚಾಲಯ ನಿರ್ಮಿಸಲು ಸಹಾಯಧನ ಮತ್ತಿತರ ಹತ್ತುಹಲವು ಯೋಜನೆಗಳ ಸೌಭಾಗ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅಂತೆಯೇ ಇಂತಹ ಭಾಗ್ಯಗಳನ್ನು ಪಡೆದುಕೊಳ್ಳಬೇಕಿದ್ದಲ್ಲಿ, ಬಿ ಪಿ ಎಲ್ ಪಡಿತರ ಚೀಟಿಯನ್ನು ಹೊಂದಿರುವುದು ಕಡ್ದಾಯವಾಗಿದೆ. ತತ್ಪರಿಣಾಮವಾಗಿ ಬಿ ಪಿ ಎಲ್ ಚೀಟಿಗಳನ್ನು ಪಡೆದುಕೊಳ್ಳಲು ಸಾಕಷ್ಟು ಸ್ಥಿತಿವಂತರೂ ಹರಸಾಹಸವನ್ನೇ ನಡೆಸುತ್ತಿರುವುದು ಸರ್ಕಾರಕ್ಕೆ ತಿಳಿಯದ ಗುಟ್ಟೇನಲ್ಲ. ಇಲ್ಲದಿದ್ದಲ್ಲಿ ಒಂದೆರಡು ವರ್ಷಗಳ ಹಿಂದೆ ಸರ್ಕಾರದ ಅಧಿಕೃತ ಅಂಕಿಅಂಶಗಳಂತೆ, ರಾಜ್ಯದಲ್ಲಿ ಇರುವ ಒಟ್ಟು ಕುಟುಂಬಗಳ ಸಂಖ್ಯೆಗಿಂತ ಹೆಚ್ಚು ಪಡಿತರ ಚೀಟಿಗಳು ಇರಲು ಸಾಧ್ಯವೇ ಇರಲಿಲ್ಲ. ಆದರೆ ತಮ್ಮ ಮತಬ್ಯಾಂಕ್ ಗಳನ್ನು ಭದ್ರವಾಗಿರಿಸಿಕೊಳ್ಳಲು ಅನರ್ಹ ಕುಟುಂಬಗಳ ಬಿ ಪಿ ಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲು ಅಧಿಕಾರದಲ್ಲಿರುವ ಪಕ್ಷ ಹಿಂದೇಟು ಹಾಕುತ್ತಿದೆ.ಇತ್ತೀಚಿಗೆ ಒಂದಷ್ಟು ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದರೂ,  ಹೊಸದಾಗಿ ಪಡಿತರ ಚೀಟಿಗಳನ್ನು ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಿದೆ.  ಹಾಗೂ ಇದೇ ಕಾರಣದಿಂದಾಗಿ  ಪ್ರಜೆಗಳು ತೆತ್ತ ಕೋಟ್ಯಂತರ ರೂಪಾಯಿಗಳ ತೆರಿಗೆಯ ಹಣವು, ಇಂತಹ ಯೋಜನೆಗಳಿಂದಾಗಿ  ಅನರ್ಹರ ಪಾಲಾಗುತ್ತಿದೆ.

ಅನರ್ಹರಿಗೆ ಬಿ ಪಿ ಎಲ್  ಕಾರ್ಡ್   

ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವೊಂದು ಹಿಂದಿನ ಸರ್ಕಾರದ ಅಧಿಕಾರದ ಅವಧಿಯಲ್ಲಿ ನಡೆದಿತ್ತು. ಹಾಗೂ ಇದಕ್ಕಾಗಿಯೇ  ಬಿ ಪಿ ಎಲ್ ಪಡಿತರ ಚೀಟಿಯನ್ನು ಪಡೆಯಲು ಕೆಲವೊಂದು ಮಾನದಂಡಗಳನ್ನೂ ನಿಗದಿಸಿತ್ತು.. ಈ ನಿಯಮಗಳನ್ನು ಇದೀಗ ಅಧಿಕಾರದಲ್ಲಿರುವ ಸರ್ಕಾರ ಅನುಷ್ಠಾನಿಸಲು ಮುಂದಾಗಿದ್ದು, ಇದರ ಪರಿಣಾಮ ಏನಾಗಲಿದೆ ಎನ್ನುವುದುಮುಂದಿನ ಕೆಲವೇ ತಿಂಗಳುಗಳಲ್ಲಿ ತಿಳಿಯಲಿದೆ.

ನಿಜ ಹೇಳಬೇಕಿದ್ದಲ್ಲಿ ಸರ್ಕಾರ ಪ್ರಕಟಿಸಿರುವ ಮಾನದಂಡವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಿದಲ್ಲಿ, ಅಧಿಕತಮ ಬಿ ಪಿ ಎಲ್ ಪಡಿತರ ಚೀಟಿಗಳು ರದ್ದಾಗುವುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ ೧೦೦ ಸಿ ಸಿ ಗಿಂತ ಅಧಿಕ ಸಾಮರ್ಥ್ಯದ ಹಾಗೂ ಇಂಧನ ಚಾಲಿತ ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳನ್ನು ಹೊಂದಿದವರು ಬಿ ಪಿ ಎಲ್ ಪಡಿತರ ಚೀಟಿಯನ್ನು ಪಡೆಯಲು ಅರ್ಹರಲ್ಲ, ಎನ್ನುವ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದಲ್ಲಿ ಲಕ್ಷಾಂತರ ಕುಟುಂಬಗಳ  ಚೀಟಿಗಳು ರದ್ದಾಗುವುದರಲ್ಲಿ ಸಂದೇಹವೇ ಇಲ್ಲ.  ಆದರೆ ಅರ್ಜಿದಾರರು ಒದಗಿಸಿದ ಮಾಹಿತಿಗಳನ್ನು ಅಡ್ಡ ಪರಿಶೀಲನೆ ಮಾಡುವ ಅಧಿಕಾರಿಗಳು, ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸದೇ ಇದ್ದಲ್ಲಿ, ಅನರ್ಹರ ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆಗಳೇ ಇಲ್ಲ. ಇದರೊಂದಿಗೆ ಭ್ರಷ್ಟ ಅಧಿಕಾರಿಗಳ ಕೈವಾಡ, ರಾಜಕೀಯ ಪ್ರಭಾವ- ಹಸ್ತಕ್ಷೇಪ  ಮತ್ತು ಮಧ್ಯವರ್ತಿಗಳ ಅಡ್ಡ ದಾರಿಗಳೇ ಮುಂತಾದ  ವಿಧಾನಗಳನ್ನು ಬಳಸುವ ಮೂಲಕ ಬಿ ಪಿ ಎಲ್ ಪಡಿತರ ಚೀಟಿಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ನಿಮಗೆ ತಿಳಿದಂತೆ ಅನರ್ಹ ಕುಟುಂಬಗಳು ಬಿ ಪಿ ಎಲ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿದ್ದಲ್ಲಿ, ತತ್ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡುವಂತೆ ಸರ್ಕಾರವೇ ಕೋರಿದ್ದರೂ, ಜನಸಾಮಾನ್ಯರು ಮಾಹಿತಿಯನ್ನು ನೀಡಿದ್ದ ಹಾಗೂ ಚೀಟಿಗಳು ರದ್ದಾದ ನಿದರ್ಶನಗಳೇ ಇಲ್ಲ. ಇವೆಲ್ಲವುಗಳ ಸಂಯುಕ್ತ ಪರಿಣಾಮದಿಂದಾಗಿ ಲಕ್ಷಾಂತರ ಅನರ್ಹ ಕುಟುಂಬಗಳು ಬಡವರಿಗಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ದುರ್ಬಳಕೆ ಮಾಡುವುದನ್ನು ತಡೆಗಟ್ಟಲು ಆಗುತ್ತಿಲ್ಲ.

ಕೊನೆಯ ಮಾತು

ರಾಜ್ಯದಲ್ಲಿರುವ  ನಕಲಿ ಎ ಪಿ ಎಲ್, ಅಂತ್ಯೋದಯ ಮತ್ತು ಬಿ ಪಿ ಎಲ್ ಪಡಿತರ ಚೀಟಿಗಳನ್ನು ಪತ್ತೆಹಚ್ಚುವ ಸಲುವಾಗಿ, ಪ್ರತಿಯೊಂದು ಕುಟುಂಬದ ಸದಸ್ಯರ ಬಯೋಮೆಟ್ರಿಕ್ಸ್ ಮತ್ತು ಭಾವಚಿತ್ರಗಳನ್ನು ಪಡೆದುಕೊಳ್ಳಲಾಗಿದೆ.ಜೊತೆಗೆ ಇದರೊಂದಿಗೆ  ಆಧಾರ್ ಮತ್ತು ಮತದಾರರ ಚೀಟಿಗಳ ಸಂಖ್ಯೆಗಳನ್ನು ಜೋಡಿಸುವ ಕಾರ್ಯ ಈಗಾಗಲೇ ನಡೆದಿದೆ. ಇದರಿಂದಾಗಿ ಲಕ್ಷಾಂತರ ನಕಲಿ ಪಡಿತರ ಚೀಟಿಗಳು ಪತ್ತೆಯಾಗಿದ್ದು, ಗಣನೀಯ ಪ್ರಮಾಣದ ಚೀಟಿಗಳು ರದ್ದುಗೊಂಡಿವೆ. ಇದೀಗ ಜಾತಿ ಜನಗಣತಿ ಕಾರ್ಯದ ಸಂದರ್ಭದಲ್ಲಿ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಿದ್ದು, ಇದರಿಂದಾಗಿ ಮತ್ತಷ್ಟು ನಕಲಿ ಬಿ ಪಿ ಎಲ್ ಪಡಿತರ ಚೀಟಿಗಳು ರದ್ದಾಗುವ ಸಾಧ್ಯತೆಗಳಿವೆ. ಆದರೆ ಜನಗಣತಿಯ ಸಂದರ್ಭದಲ್ಲಿ ಅನೇಕರು ನೈಜ ಮಾಹಿತಿಯನ್ನು ನೀಡದೇ ಇರುವುದರಿಂದ, ಅವಶ್ಯಕತೆಯಿದ್ದಲ್ಲಿ ಅಡ್ಡ ಪರಿಶೀಲನೆ ನಡೆಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕಿದೆ.

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು






No comments:

Post a Comment