Wednesday, June 29, 2016

NATIONAL DOCTORS DAY


      ಜುಲೈ ೧ : ರಾಷ್ಟ್ರೀಯ ವೈದ್ಯರ ದಿನಾಚರಣೆ
                             ಬೆಳ್ಳಿ ಹಬ್ಬದ ಸಂಭ್ರಮಾಚರಣೆ 

ಸಹಸ್ರಾರು ವರ್ಷಗಳಿಂದ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ವೈದ್ಯ ಬಾಂಧವರನ್ನು ಸದಾ ಗೌರವಿಸುತ್ತಿದ್ದ ನಮ್ಮ ಪೂರ್ವಜರು, ಕೃತಜ್ಞತಾ ಪೂರ್ವಕವಾಗಿ " ವೈದ್ಯೋ ನಾರಾಯಣೋ ಹರಿ " ಎಂದು ನಮಿಸುತ್ತಿದ್ದರು. ಅಂತೆಯೇ ನಮ್ಮ ದೇಶದಲ್ಲಿ ೧೯೯೧ ರಿಂದ ವರ್ಷಂಪ್ರತಿ ಜುಲೈ ೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಇದೀಗ ರಾಷ್ಟ್ರೀಯ ವೈದ್ಯರ ದಿನಾಚರಣೆಗೆ ಬೆಳ್ಳಿಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆರೋಗ್ಯದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಹಾಗೂ ನಿಮ್ಮ ಆತ್ಮೀಯ ಮಿತ್ರರೂ ಆಗಿರುವ ವೈದ್ಯರಿಗೆ, ನಿಮ್ಮ ಪ್ರೀತಿ ವಿಶ್ವಾಸಗಳ ದ್ಯೋತಕವಾಗಿ ಇಂದು ಶುಭಕಾಮನೆಗಳನ್ನು ಸಲ್ಲಿಸುವ ಮೂಲಕ ಈ ದಿನವನ್ನು ಅವಿಸ್ಮರಣೀಯವನ್ನಾಗಿಸಿ. 

ವೈದ್ಯರ ದಿನಾಚರಣೆಯ ಹಿನ್ನೆಲೆ 

ಜಾಗತಿಕ ಮಟ್ಟದಲ್ಲಿ ಮೊತ್ತಮೊದಲಬಾರಿಗೆ " ವೈದ್ಯರ ದಿನ " ವನ್ನು ೧೯೩೩ ರ ಮಾರ್ಚ್ ೩೦ ರಂದು ಆಚರಿಸಲಾಗಿತ್ತು. ಖ್ಯಾತ ವೈದ್ಯ ಚಾರ್ಲ್ಸ್. ಬಿ . ಆಲ್ಮಂಡ್ ಇವರ ಪತ್ನಿ ಇ. ಬಿ. ಆಲ್ಮಂಡ್ ಇವರು, ವೈದ್ಯರನ್ನು ಗೌರವಿಸುವ ಸಲುವಾಗಿ ವರ್ಷದಲ್ಲಿ ಕನಿಷ್ಠ ಒಂದು ದಿನವನ್ನು ಮೀಸಲಿಡಬೇಕು ಎಂದು ನಿರ್ಧರಿಸಿದಂತೆ ಇದನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ತಮ್ಮ ವೈದ್ಯರಿಗೆ ಶುಭಾಶಯ ಪತ್ರವನ್ನು ಕಳುಹಿಸುವ ಅಥವಾ ಹೇಳುವ ಮತ್ತು ವಿಧಿವಶರಾಗಿರುವ ಖ್ಯಾತ ವೈದ್ಯರ ಸಮಾಧಿಗಳ ಮೇಲೆ ಪುಷ್ಪಗುಚ್ಛಗಳನ್ನು ಇರಿಸುವ ಮೂಲಕ ಗೌರವಿಸಲಾಗುತ್ತಿತ್ತು. 

ತದನಂತರ ಅಮೆರಿಕ ದೇಶದ ಜನಪ್ರತಿನಿಧಿಗಳು ೧೯೫೮ ರ ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸುವ ನಿರ್ಣಯವೊಂದನ್ನು ಅಂಗೀಕರಿಸಿದ್ದರು. ಜಾರ್ಜ್ ಬುಶ್ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ವರ್ಷಂಪ್ರತಿ ಮಾರ್ಚ್ ೩೦ ರಂದು ವೈದ್ಯರ ದಿನವನ್ನಾಗಿ ಆಚರಿಸುವ ವಿಧೇಯಕಕ್ಕೆ ೧೯೯೦ ರ ಅಕ್ಟೋಬರ್ ೩೦ ರಂದು ಸಹಿಹಾಕಿದ್ದು, ೧೯೯೧ ರಿಂದ ಇದು ಜಾರಿಗೊಂಡಿತ್ತು. 

ಮಾರ್ಚ್ ೩೦ ರಂದು ವೈದ್ಯರ ದಿನವನ್ನು ಆಚರಿಸಲು ನಿರ್ದಿಷ್ಟ ಕಾರಣವೊಂದು ಇಂತಿದೆ. ಡಾ. ಕ್ರಾಫರ್ಡ್ ಲಾಂಗ್ ಎನ್ನುವ ವೈದ್ಯರು ೧೮೪೨ ರ ಮಾರ್ಚ್ ೩೦ ರಂದು ಮೊತ್ತಮೊದಲಬಾರಿಗೆ ಈಥರ್ ಎನ್ನುವ ಅರಿವಳಿಕೆ ಔಷದವನ್ನು ಬಳಸಿ, ರೋಗಿಯ ಕತ್ತಿನ ಭಾಗದಲ್ಲಿದ್ದ ಗೆಡ್ಡೆಯೊಂದನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದರು. ಈ ಸಂದರ್ಭದಲ್ಲಿ ತನಗೆ ಕಿಂಚಿತ್ ಕೂಡಾ ನೋವಿನ ಅನುಭವ ಆಗಿರಲಿಲ್ಲವೆಂದು ರೋಗಿ ಹೇಳಿದ್ದನು. ನೋವಿಲ್ಲದೇ ಶಸ್ತ್ರಚಿಕಿತ್ಸೆಯನ್ನು ಮಾಡಬಹುದಾದ ವಿಧಾನ ಮತ್ತು ಔಷದವನ್ನು ಸಂಶೋಧಿಸಿ ಬಳಸಿದ್ದ ಈ ದಿನವನ್ನು, ಜಗತ್ತಿನ ಬಹುತೇಕ ರಾಷ್ಟ್ರಗಳು ವೈದ್ಯರ ದಿನವನ್ನಾಗಿ ಆಚರಿಸುತ್ತಿವೆ. 

ಡಾ. ಬಿ. ಸಿ. ರಾಯ್ ಜನ್ಮದಿನ 

ಅಪ್ರತಿಮ ವೈದ್ಯ ಹಾಗೂ ಮಹಾನ್ ರಾಜಕಾರಣಿ ಎಂದೇ ಸುಪ್ರಸಿದ್ಧರಾಗಿದ್ದ ಡಾ. ಬಿದಾನ ಚಂದ್ರ ರಾಯ್ ಇವರ ಜನ್ಮದಿನವನ್ನು ಭಾರತದಲ್ಲಿ " ರಾಷ್ಟ್ರೀಯ ವೈದ್ಯರ ದಿನ " ವನ್ನಾಗಿ ಆಚರಿಸಲಾಗುತ್ತಿದೆ. ವಿಶೇಷವೆಂದರೆ ಜುಲೈ ೧, ೧೮೮೨ ರಂದು ಜನಿಸಿದ್ದ ಡಾ. ರಾಯ್, ೧೯೬೨ ಜುಲೈ ೧ ರಂದು ಅರ್ಥಾತ್ ತಮ್ಮ ಜನ್ಮದಿನದಂದೇ  ವಿಧಿವಶರಾಗಿದ್ದರು. ಈ ಮಹಾನ್ ಸಾಧಕನ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲು ಭಾರತ ಸರ್ಕಾರವು ೧೯೯೧ ರಲ್ಲಿ ನಿರ್ಧರಿಸಿತ್ತು. 

೧೮೮೨ ಜುಲೈ ೧ ರಂದು ಜನಿಸಿದ್ದ ಬಿ. ಸಿ. ರಾಯ್, ಕೊಲ್ಕತ್ತಾದಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆದ ಬಳಿಕ, ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ೧೯೧೧ ರಲ್ಲಿ ಸ್ವದೇಶಕ್ಕೆ ಮರಳಿದ ಡಾ. ರಾಯ್, ಕೊಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. 

ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾಗಿದ್ದ ಡಾ. ರಾಯ್, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಸಕ್ರಿಯವಾಗಿ ಭಾಗಿಯಾಗಿದ್ದರು. ತದನಂತರ ೧೪ ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮುಖ್ಯಮಂತ್ರಿಯಂತಹ ಬಿಡುವಿಲ್ಲದ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ಪ್ರತಿನಿತ್ಯ ಕನಿಷ್ಠ ೧ ಗಂಟೆಯಷ್ಟು ಸಮಯವನ್ನು ಕೊಳೆಗೇರಿಯ ನಿವಾಸಿಗಳಿಗೆ ವೈದ್ಯಕೀಯ ಚಿಕಿತ್ಸೆಯನ್ನು ನೀಡಲು ವಿನಿಯೋಗಿಸುತ್ತಿದ್ದರು. ಡಾ. ರಾಯ್ ಇವರ ಮಹೋನ್ನತ ಸಾಧನೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರವು, ೧೯೬೧ ರಲ್ಲಿ ಇವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. 
--------------------------------------------------------------------------------------------
                ನಿಮ್ಮ ಆರೋಗ್ಯದ ರಕ್ಷಣೆ ನಿಮ್ಮ ಕೈಯ್ಯಲ್ಲೇ ಇದೆ!
--------------------------------------------------------------------------------------------

ಪ್ರಸ್ತುತ ನಮ್ಮ ದೇಶದಲ್ಲಿ ವಿಭಿನ್ನ ವೈದ್ಯಕೀಯ ಚಿಕಿತ್ಸಾ ಪದ್ದತಿಗಳು ಬಳಕೆಯಲ್ಲಿವೆ. ಇವುಗಳಲ್ಲಿ ಸಹಸ್ರಾರು ವರ್ಷಗಳ ಹಿಂದೆ ಆವಿಷ್ಕರಿಸಿದ್ದ ಆಯುರ್ವೇದದೊಂದಿಗೆ ಸಿದ್ಧ, ಯುನಾನಿ, ಹೋಮಿಯೋಪತಿ, ಆಲೋಪತಿಗಳಲ್ಲದೇ, ಪ್ರಕೃತಿ ಚಿಕಿತ್ಸಾ ಪದ್ದತಿಯೂ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ ಅತ್ಯಧಿಕ ಸಂಖ್ಯೆಯ ಭಾರತೀಯರು ತಮ್ಮ ಆರೋಗ್ಯದ ರಕ್ಷಣೆಗಾಗಿ, ಮಾರಕ ಅಥವಾ ಗಂಭೀರ ಕಾಯಿಲೆಗಳಿಂದ ರಕ್ಷಣೆಯನ್ನು ಪಡೆದುಕೊಳ್ಳಲು ಮತ್ತು ಅನ್ಯ ವ್ಯಾಧಿಗಳು ಬಾಧಿಸಿದ ಸಂದರ್ಭಗಳಲ್ಲಿ ಆಧುನಿಕ ಅರ್ಥಾತ್ ಅಲೋಪತಿ ವೈದ್ಯಕೀಯ ಪದ್ದತಿಯನ್ನು ಬಳಸುತ್ತಿದ್ದಾರೆ. ಈ ರೀತಿಯಲ್ಲಿ ಹಲವಾರು ವೈದ್ಯಕೀಯ ಪದ್ದತಿಗಳು ನಮ್ಮ ದೇಶದಲ್ಲಿ ಬಳಸಲ್ಪಡುತ್ತಿದ್ದರೂ, ಇವೆಲ್ಲಾ ಪದ್ದತಿಗಳ ಮೂಲ ಉದ್ದೇಶವು ಮನುಷ್ಯನ ಸ್ವಾಸ್ಥ್ಯ ರಕ್ಷಣೆಯೇ ಆಗಿದೆ. 

ಮನುಷ್ಯನನ್ನು ಬಾಧಿಸಬಲ್ಲ ಸಹಸ್ರಾರು ವಿಧದ ಕಾಯಿಲೆಗಳಿಗೆ ಕಾರಣಗಳೂ ನೂರಾರು. ಇವುಗಳಲ್ಲಿ ರೋಗನಿರೋಧಕ ಶಕ್ತಿಯ ಕೊರತೆ, ಅನುವಂಶಿಕತೆ, ಬ್ಯಾಕ್ಟೀರಿಯಾ ಹಾಗೂ ವೈರಸ್ ಮತ್ತಿತರ ರೋಗಕಾರಕ ಸೂಕ್ಷ್ಮಾಣುಜೀವಿಗಳು, ಜನ್ಮದತ್ತ ವೈಕಲ್ಯ ಹಾಗೂ ತೊಂದರೆಗಳು, ಆಧುನಿಕ ಜೀವನಶೈಲಿ, ಅತಿಯಾದ ಮಾನಸಿಕ ಒತ್ತಡ, ಮಾದಕ ದ್ರವ್ಯ ಇತ್ಯಾದಿಗಳ ಸೇವನೆಯಂತಹ ದುಶ್ಚಟಗಳು, ಪ್ರದೂಷಿತ ಪರಿಸರ, ಕಲುಷಿತ ನೀರು ಮತ್ತು ಗಾಳಿ, ಕೀಟನಾಶಕಗಳನ್ನು ಬಳಸಿ ಬೆಳೆಸಿದ ಆಹಾರ ಪದಾರ್ಥಗಳ ಸೇವನೆಯೊಂದಿಗೆ, ಅಲ್ಪಾವಧಿಯಲ್ಲಿ ಕೈತುಂಬಾ ಸಂಪಾದಿಸುವ ಸಲುವಾಗಿ ನಿದ್ರಾಹಾರಗಳನ್ನು ನಿರ್ಲಕ್ಷಿಸಿ ಎಡೆಬಿಡದೇ ದುಡಿಯುವುದೇ ಮುಂತಾದ ಕಾರಣಗಳು ವೈವಿಧ್ಯಮಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತವೆ. 

ಅದೇ ರೀತಿಯಲ್ಲಿ ಮನುಷ್ಯನನ್ನು ಬಾಧಿಸುವ ಬಹುತೇಕ ವ್ಯಾಧಿಗಳನ್ನು ಗುಣಪಡಿಸಬಲ್ಲ ಔಷದಗಳು ಲಭ್ಯವಿದ್ದು, ಶಾಶ್ವತ ಪರಿಹಾರವೇ ಇಲ್ಲದ ಕೆಲ ಗಂಭೀರ ಕಾಯಿಲೆಗಳನ್ನು ಸಮರ್ಪಕವಾಗಿ ನಿಯಂತ್ರಿಸಬಲ್ಲ ಔಷದಗಳಿವೆ. ಆದರೆ ಕೆಲವಿಧದ ಗಂಭೀರ ಅಥವಾ ಮಾರಕ ಕಾಯಿಲೆಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷದಗಳೇ ಇಲ್ಲವೆನ್ನುವುದು ನಿಮಗೂ ತಿಳಿದಿರಲೇಬೇಕು. ಆದರೆ ಇಂತಹ ವ್ಯಾಧಿಗಳನ್ನು ಗುಣಪಡಿಸಬಲ್ಲ ಔಷದಗಳನ್ನು ಪತ್ತೆಹಚ್ಚಲು ವೈದ್ಯಕೀಯ ವಿಜ್ಞಾನಿಗಳು ನಿರಂತರವಾಗಿ ಅಧ್ಯಯನ ಮತ್ತು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ. 

ಆರೋಗ್ಯವೇ ಭಾಗ್ಯ 

ಆರೋಗ್ಯವೇ ಭಾಗ್ಯ ಎನ್ನುವ ಮುತ್ತಿನಂತಹ ಮಾತುಗಳನ್ನು ನೀವು ಕೇಳಿರಲೇಬೇಕು. ಅದೇ ರೀತಿಯಲ್ಲಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ ಎನ್ನುವ ಉಕ್ತಿಯನ್ನೂ ಕೇಳಿರಬೇಕು. ಇವೆರಡೂ ಮಾತುಗಳನ್ನು ಅಕ್ಷರಶಃ ಪರಿಪಾಲಿಸಿದಲ್ಲಿ, ಕಾಯಿಲೆಗಳನ್ನು ದೂರವಿರಿಸುವುದು ಸುಲಭಸಾಧ್ಯ. 

ನಿಮ್ಮ ಶಾರೀರಿಕ ಕ್ಷಮತೆಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಉನ್ನತಸ್ತರದಲ್ಲಿ ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಪರಿಪಾಲಿಸಬೇಕು. ಇದರ ಅಂಗವಾಗಿ ದಿನನಿತ್ಯ ಮುಂಜಾನೆ ಬೇಗನೆ ಎದ್ದು, ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ಕನಿಷ್ಠ ಅರ್ಧದಿಂದ ಒಂದು ಗಂಟೆಯ ಕಾಲ ವ್ಯಾಯಾಮ ಅಥವಾ ಯೋಗ ಹಾಗೂ ಪ್ರಾಣಾಯಾಮ ಅಥವಾ ಶಾರೀರಿಕ ಶ್ರಮದ ಕ್ರೀಡೆಗಳಲ್ಲಿ ಅಥವಾ ನಡಿಗೆಯಲ್ಲಿ ತೊಡಗಿಸಿಕೊಳ್ಳಿರಿ. 

ಪ್ರತಿನಿತ್ಯ ಸಮತೋಲಿತ ಆಹಾರವನ್ನು ಸೇವಿಸಿ. ಎಣ್ಣೆ, ಬೆಣ್ಣೆ, ತುಪ್ಪಗಳನ್ನು ಬಳಸಿ ತಯಾರಿಸಿದ ಮತ್ತು ಸಿಹಿತಿಂಡಿಗಳ ಸೇವನೆಯಲ್ಲಿ ಇತಿಮಿತಿಗಳಿರಲಿ. ಮಾಂಸಾಹಾರಕ್ಕಿಂತ ಸಸ್ಯಾಹಾರದ ಸೇವನೆ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಎನ್ನುವುದನ್ನು ಮರೆಯದಿರಿ. 

ನಿಮ್ಮ ಮಕ್ಕಳನ್ನು ಗಂಭೀರ ಅಥವಾ ಮಾರಕ ವ್ಯಾಧಿಗಳಿಂದ ರಕ್ಷಿಸಬಲ್ಲ ವಿವಿಧ ಲಸಿಕೆಗಳನ್ನು ನಿಗದಿತ ಸಮಯದಲ್ಲಿ ತಪ್ಪದೆ ಕೊಡಿಸಿ. ಅಂತೆಯೇ ಸಾಂಕ್ರಾಮಿಕ ವ್ಯಾಧಿಗಳು ವ್ಯಾಪಕವಾಗಿ ಕಂಡುಬಂದಲ್ಲಿ, ಇವುಗಳನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಗಳು ಲಭ್ಯವಿದ್ದಲ್ಲಿ ಪಡೆದುಕೊಳ್ಳಿ. ಅಂತೆಯೇ ಅನ್ಯ ಕಾಯಿಲೆಗಳು ಬಾಧಿಸಿದಾಗ ನಿಮ್ಮ ನಂಬಿಗಸ್ಥ ವೈದ್ಯರ ಸಲಹೆ ಹಾಗೂ ಚಿಕಿತ್ಸೆಗಳನ್ನು ಪಡೆಯಿರಿ. ವೈದ್ಯರ ನಿರ್ಧಾರದ ಬಗ್ಗೆ ಸಂದೇಹವಿದ್ದಲ್ಲಿ, ಅವರು ಸೂಚಿಸಿದ ಚಿಕಿತ್ಸೆಯನ್ನು ನಿರಾಕರಿಸುವ ಹಾಗೂ ಮತ್ತೊಬ್ಬ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವ ಹಕ್ಕು ನಿಮಗಿದೆ.

ಅಂತಿಮವಾಗಿ ಕ್ಷಿಪ್ರಗತಿಯಲ್ಲಿ ಶ್ರೀಮಂತರಾಗುವ ಹಂಬಲದಿಂದ ನಿದ್ರಾಹಾರಗಳನ್ನು ನಿರ್ಲಕ್ಷಿಸಿ ಕೈತುಂಬಾ ಹಣವನ್ನು ಸಂಪಾದಿಸುವ ಸಂದರ್ಭದಲ್ಲಿ  ಕಳೆದುಕೊಂಡ ಆರೋಗ್ಯವನ್ನು ಮತ್ತೆ ಗಳಿಸಲು, ಅದುವರೆಗೆ ಸಂಪಾದಿಸಿದ ಹಣವನ್ನು ಮತ್ತೆ ಕಳೆದುಕೊಳ್ಳದಿರಿ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 



Sunday, June 12, 2016

JUNE 14 - WORLD BLOOD DONORS DAY



---

                       ಜೂನ್ 14 : ವಿಶ್ವ ರಕ್ತದಾನಿಗಳ ದಿನ 

2004 ರಿಂದ ಜಗತ್ತಿನ ಅನೇಕ ರಾಷ್ಟ್ರಗಳು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸುತ್ತವೆ.
 ಈ ಬಾರಿ " ರಕ್ತವು ನಮ್ಮೆಲ್ಲರನ್ನೂ ಜೋಡಿಸುತ್ತದೆ "  ಎನ್ನುವ ಘೋಷವಾಕ್ಯದೊಂದಿಗೆ, ಈ ದಿನವನ್ನು ಆಚರಿಸಲಾಗುತ್ತಿದೆ. ಸರಳವಾಗಿ ಹೇಳಬೇಕಿದ್ದಲ್ಲಿ,ನೀವು ಸ್ವಯಂಪ್ರೇರಿತವಾಗಿ ನೀಡುವ ರಕ್ತವು ನಿಮ್ಮ ಸಂಬಂಧಿಗಳಲ್ಲದ ವ್ಯಕ್ತಿಗಳೊಂದಿಗೆ  " ರಕ್ತಸಂಬಂಧ " ವನ್ನು ಅಯಾಚಿತವಾಗಿ ಸೃಷ್ಟಿಸುತ್ತದೆ!. 

ರಕ್ತದಾನ - ಜೀವದಾನ
ಸಾವಿನ ದವಡೆಗಳಲ್ಲಿ ಸಿಲುಕಿರುವವರನ್ನು ಬದುಕಿಸಲು ನೀವು ವೈದ್ಯರೇ ಆಗಬೇಕೆಂದಿಲ್ಲ. ನೀವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಎರಡಲ್ಲ, ಮೂರು ಜೀವಗಳನ್ನು ಉಳಿಸಬಲ್ಲದು. ಜೊತೆಗೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ, ನಿಮ್ಮ ಆರೋಗ್ಯದ ಮಟ್ಟವೂ ಉನ್ನತಸ್ತರದಲ್ಲಿ ಇರುವುದು. ಇದಕ್ಕೂ ಮಿಗಿಲಾಗಿ ಹಲವಾರು ಜೀವಗಳನ್ನು ಉಳಿಸಿದ ಸಂತೃಪ್ತಿಯು ನಿಮ್ಮ ಮನಸ್ಸಿಗೆ ಮುದನೀಡುವುದು.

ರಕ್ತದ ಬೇಡಿಕೆ ಮತ್ತು ಪೂರೈಕೆ

ಜಾಗತಿಕ ಮಟ್ಟದಲ್ಲಿ ಪ್ರಾಣಾಪಾಯದ ಸ್ಥಿತಿಯಲ್ಲಿರುವ ರೋಗಿಗಳನ್ನು ಬದುಕಿಸಲು ಅತ್ಯವಶ್ಯಕವೆನಿಸುವ  ಸುರಕ್ಷಿತ ರಕ್ತ ಮತ್ತು ಇತರ ರಕ್ತದ ಉತ್ಪನ್ನಗಳ ಬೇಡಿಕೆ ದಿನೇದಿನೇ ಹೆಚ್ಚುತ್ತಿದೆ. ಆದರೆ ಬೇಡಿಕೆಯ ಪ್ರಮಾಣಕ್ಕೆ ಅನುಗುಣವಾಗಿ ರಕ್ತ ಮತ್ತು ರಕ್ತದ ಅನ್ಯ ಉತ್ಪನ್ನಗಳ ಪೂರೈಕೆ ಅಪೇಕ್ಷಿತ ಪ್ರಮಾಣದಲ್ಲಿ ಹೆಚ್ಚುತ್ತಿಲ್ಲ. ಅರ್ಥಾತ್ ಅಧಿಕತಮ ಆರೋಗ್ಯವಂತ ಯುವಕ - ಯುವತಿಯರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರುವುದಿಲ್ಲ!.

ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿಯೇ ವಿಶ್ವ ರಕ್ತದಾನಿಗಳ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಜನಸಾಮಾನ್ಯರನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ. ಜೊತೆಗೆ ರಕ್ತದಾನದ ಮಹತ್ವದ ಬಗ್ಗೆ ಅರಿವನ್ನು ಮೂಡಿಸುವ ಮತ್ತು ಜನರ ಮನಸ್ಸಿನಲ್ಲಿ ಈ ಬಗ್ಗೆ ಇರಬಹುದಾದ ತಪ್ಪುಕಲ್ಪನೆಗಳನ್ನು ತೊಡೆದುಹಾಕುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ರಕ್ತದಾನಿಗಳ ದಿನ

ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ ವಿಶ್ವ ರಕ್ತದಾನಿಗಳ ದಿನವನ್ನು  ೨೦೦೪ ರ ಜೂನ್ ೧೪ ರಂದು ಆಚರಿಸಲಾಗಿತ್ತು. ರಕ್ತದ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.

ಆಧುನಿಕ ರಕ್ತಪೂರಣ ಪದ್ಧತಿಯ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಈ ವೈದ್ಯ ವಿಜ್ಞಾನಿ, ೧೯೦೧ ರಲ್ಲಿ ರಕ್ತದ ಎ, ಬಿ, ಎಬಿ ಮತ್ತು ಓ ಗುಂಪುಗಳನ್ನು ಪತ್ತೆಹಚ್ಚಿದ ಮತ್ತು ಆಧುನಿಕ ಪದ್ಧತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ ಮಾನವನ ರಕ್ತದಲ್ಲಿರುವ “ ರೀಸಸ್ ಫ್ಯಾಕ್ಟರ್ “ ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಗಳ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತದ ಮರುಪೂರಣವನ್ನು ನಡೆಸಲು ಇವರು ಕಾರಣಕರ್ತರೆನಿಸಿದ್ದರು. ಈ ಮಹಾನ್ ಸಂಶೋಧಕರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಯಾವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ದಿನದಂದು ವಿಶೇಷವಾಗಿ ಸ್ವಯಂಪ್ರೇರಿತ ರಕ್ತದಾನವನ್ನು ಮಾಡುತ್ತಿರುವ ವ್ಯಕ್ತಿಗಳಿಗೆ ಧನ್ಯವಾದ ಸಮರ್ಪಿಸುವ ಕಾರ್ಯಕ್ರಮಗಳನ್ನು ಸ್ವಯಂಸೇವಾ ಸಂಘಟನೆಗಳು ಹಮ್ಮಿಕೊಳ್ಳುತ್ತವೆ. ತನ್ಮೂಲಕ ಇನ್ನಷ್ಟು ಜನರು ಈ ಮಹಾನ್ ಕಾರ್ಯದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತವೆ.

ರಕ್ತದಾನಕ್ಕೆ ಆದ್ಯತೆ

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಪ್ರತಿ ೧೦೦೦ ಜನರಲ್ಲಿ ಕನಿಷ್ಠ ೧೦ ವ್ಯಕ್ತಿಗಳು ಮಾಡುವ ರಕ್ತದಾನದ ಪ್ರಮಾಣ ತೃಪ್ತಿಕರವೆನಿಸುತ್ತದೆ. ಆದರೆ ೭೫ ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರಕ್ತದಾನದ ಪ್ರಮಾಣವು ಇದಕ್ಕೂ ಸಾಕಷ್ಟು ಕಡಿಮೆಯಿದೆ. ಈ ಕೊರತೆಯನ್ನು ನೀಗಿಸಲು ನಿಯಮಿತವಾಗಿ, ಸ್ವಯಂಪ್ರೇರಿತವಾಗಿ ಮತ್ತು ಉಚಿತವಾಗಿ ರಕ್ತದಾನ ಮಾಡುವ ದಾನಿಗಳನ್ನು ಪ್ರೋತ್ಸಾಹಿಸುವ ಮೂಲಕ ಸುರಕ್ಷಿತ ರಕ್ತದ ಪೂರೈಕೆಯ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ ಈ ವಿಧಾನದ ಮೂಲಕ ರಕ್ತವನ್ನು ಸಂಗ್ರಹಿಸುವಂತೆ ಸಲಹೆಯನ್ನು ನೀಡಿದೆ.

ಜಗತ್ತಿನ 62 ದೇಶಗಳು ತಮಗೆ ಬೇಕಾಗುವ ಶೇ. 100 ರಷ್ಟು ರಕ್ತವನ್ನು ಸ್ವಯಂಪ್ರೇರಿತ ದಾನಿಗಳಿಂದಲೇ ಸಂಗ್ರಹಿಸುತ್ತಿವೆ. ಇತ್ತೀಚಿನ ಅಂಕಿಅಂಶಗಳಂತೆ. ಜಗತ್ತಿನಾದ್ಯಂತ 108 ದಶಲಕ್ಷ ಯುನಿಟ್ ರಕ್ತವನ್ನು ಸಂಗ್ರಹಿಸಲಾಗುತ್ತಿದೆ. ನಿಜ ಹೇಳಬೇಕಿದ್ದಲ್ಲಿ ಜಗತ್ತಿನ ಜನಸಂಖ್ಯೆಯ ಶೇ. 1 ರಷ್ಟು ಜನರು ನಿಯಮಿತವಾಗಿ ರಕ್ತದಾನ ಮಾಡುತ್ತಿದ್ದಲ್ಲಿ, ಹೆಚ್ಚುತ್ತಿರುವ ರಕ್ತದ ಬೇಡಿಕೆಯನ್ನು ನಿರಾಯಾಸವಾಗಿ ಪೂರೈಸಬಹುದಾಗಿದೆ. 

ಜಾಗತಿಕ ಮಟ್ಟದಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಖ್ಯೆಯು ಗತದಶಕದಲ್ಲಿ ಹೆಚ್ಚಾಗಿದ್ದು ,ಜಗತ್ತಿನ  ೭೩ ರಾಷ್ಟ್ರಗಳು ತಮ್ಮ ಅವಶ್ಯಕತೆಯ ಶೇ.೯೦ ರಷ್ಟು ರಕ್ತವನ್ನು ಇಂತಹ ದಾನಿಗಳಿಂದಲೇ ಸಂಗ್ರಹಿಸುತ್ತಿವೆ. ಆದರೆ ೧೬ ಅತ್ಯಧಿಕ ಆದಾಯವಿರುವ, ೪೮ ಮಧ್ಯಮ ಆದಾಯವಿರುವ ಮತ್ತು ೧೬ ಕನಿಷ್ಠ ಆದಾಯವಿರುವ ದೇಶಗಳು ಸೇರಿದಂತೆ ೭೨ ರಾಷ್ಟ್ರಗಳು  ಶೇ. ೫೦ ರಷ್ಟು ರಕ್ತವನ್ನು ಹಣವನ್ನು ಪಡೆದು ರಕ್ತವನ್ನು ನೀಡುವ ಅಥವಾ ತಾವು ನೀಡಿದ್ದ ರಕ್ತಕ್ಕೆ ಪ್ರತಿಯಾಗಿ ಬೇರೊಂದು ಗುಂಪಿನ ರಕ್ತವನ್ನು ಮರಳಿ ಪಡೆಯುವ ದಾನಿಗಳಿಂದಲೇ ಸಂಗ್ರಹಿಸುತ್ತಿವೆ!.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿಯಂತೆ ಇದೀಗ ಜಗತ್ತಿನ ಶೇ. ೬೦ ರಾಷ್ಟ್ರಗಳು ಅವಶ್ಯಕತೆಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ದಾನಿಗಳಿಂದ ಸಂಗ್ರಹಿಸುತ್ತಿವೆ. ಇನ್ನುಳಿದ ಶೇ.೪೦ ರಾಷ್ಟ್ರಗಳು ರೋಗಿಗಳ ಸಂಬಂಧಿಗಳನ್ನು ಅಥವಾ ಅನ್ಯ ಮೂಲಗಳನ್ನು  ಅವಲಂಬಿಸುತ್ತಿವೆ. ೨೦೨೦ ನೇ ಇಸವಿಗೆ ಮುನ್ನ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ತಮಗೆ ಬೇಕಾದಷ್ಟು ಪ್ರಮಾಣದ ರಕ್ತವನ್ನು ಉಚಿತವಾಗಿ ಮತ್ತು ಸ್ವಯಂಪ್ರೇರಿತವಾಗಿ ರಕ್ತವನ್ನು ನೀಡುವ ದಾನಿಗಳಿಂದಲೇ ಸಂಗ್ರಹಿಸಬೇಕೆನ್ನುವ  ಉದ್ದೇಶ ಮತ್ತು ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ಹೊಂದಿದೆ. ಈ ಉದ್ದೇಶ ನೆರವೇರಲು ಮತ್ತು ನಿಗದಿತ ಗುರಿಯನ್ನು ಸಾಧಿಸಲು, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳು ಸ್ವಯಂಪ್ರೇರಿತ ರಕ್ತದಾನವನ್ನು ಮಾಡಬೇಕಿದೆ.

ರಕ್ತದಾನ – ಶ್ರೇಷ್ಠ ದಾನ

ಅನಾದಿಕಾಲದಿಂದಲೂ ಭಾರತದ ಹಿಂದೂ ಮತ್ತು ಅನ್ಯ ಕೆಲ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧ ರೀತಿಯ – ವಸ್ತುಗಳನ್ನು ದಾನವಾಗಿ ನೀಡುವ ಪದ್ಧತಿ ರೂಢಿಯಲ್ಲಿತ್ತು. ಅರ್ಹ ವ್ಯಕ್ತಿಗಳಿಗೆ ನೀಡುವ ದಾನಗಳಿಂದ ತಮ್ಮ ಮತ್ತು ಕುಟುಂಬದ ಸದಸ್ಯರಿಗೆ ಕಿಂಚಿತ್ ಪುಣ್ಯವೂ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಗೆಯೂ ಇದಕ್ಕೆ ಕಾರಣವೆನಿಸಿತ್ತು. ಈ ನಂಬಿಗೆಯು ಇಂದಿಗೂ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಹಾಗೂ ಸಾವಿನ ದವಡೆಗಳಲ್ಲಿ ಸಿಲುಕಿದವರನ್ನು ಬದುಕಿಸಬಲ್ಲ ಮತ್ತು ಅತ್ಯಂತ ಶ್ರೇಷ್ಠವಾದ ದಾನವೇ ರಕ್ತದಾನ. ಅಕ್ಷರಶಃ “ ಜೀವದಾನ “ ಎನಿಸುವ ಈ ದಾನಕ್ಕೆ ಜಾತಿಮತಗಳ ಮತ್ತು ಬಡವ ಬಲ್ಲಿದರೆನ್ನುವ ಭೇದವಿಲ್ಲ.ಅಂತೆಯೇ ಈ ದಾನಕ್ಕೆ ಅನ್ಯ ಯಾವುದೇ ದಾನಗಳು ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ವಿಶ್ವ ರಕ್ತದಾನಿಗಳ ದಿನವನ್ನು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಸ್ಮರಣೀಯವನ್ನಾಗಿಸಿ.

ನಿಮಗಿದು ತಿಳಿದಿರಲಿ

ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಅಪಘಾತ, ಹೆರಿಗೆ ಮತ್ತು ಅನ್ಯ ಕಾರಣಗಳಿಂದ ಸಂಭವಿಸುವ ಅತಿಯಾದ ರಕ್ತಸ್ರಾವಗಳಂತಹ ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ, ಸೂಕ್ತ ಸಮಯದಲ್ಲಿ ನಿರ್ದಿಷ್ಟ ಗುಂಪಿನ ಹಾಗೂ ಅವಶ್ಯಕ ಪ್ರಮಾಣದ ಸುರಕ್ಷಿತ ರಕ್ತ ಲಭ್ಯವಾಗದೇ ಸಹಸ್ರಾರು ಜನರು ಮೃತಪಡುತ್ತಾರೆ. ನಮ್ಮ ದೇಶವೂ ಈ ಸಮಸ್ಯೆಗೆ ಅಪವಾದವೆನಿಸಿಲ್ಲ. ಇದಲ್ಲದೇ ಅನೇಕರಿಗೆ ರಕ್ತದಾನದ ಬಗ್ಗೆ ಇರುವ ತಪ್ಪುಕಲ್ಪನೆಗಳು ಮತ್ತು ಮೂಢನಂಬಿಕೆಗಳಿಂದಾಗಿ, ಅನೇಕ ಜನರು ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಆದರೆ ಇತ್ತೀಚಿನ ಕೆಲವರ್ಷಗಳಿಂದ ಭಾರತದ ಹಲವಾರು ಸ್ವಯಂಸೇವಾ ಸಂಸ್ಥೆಗಳು ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವ ಮೂಲಕ, ನಮ್ಮಲ್ಲಿ ಸ್ವಯಂಪ್ರೇರಿತ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ.

ನಿಮಗೆ ೧೮ ವರ್ಷ ತುಂಬಿದಂದಿನಿಂದ ೬೦ ವರ್ಷ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದಲ್ಲಿ, ೫೦೦ ಕ್ಕೂ ಅಧಿಕ ವ್ಯಕ್ತಿಗಳ ಪ್ರಾಣಗಳನ್ನು ಉಳಿಸಬಹುದಾಗಿದೆ. ಇದರೊಂದಿಗೆ ಸಾಕಷ್ಟು ಪುಣ್ಯ ಮತ್ತು ಮಾನಸಿಕ ನೆಮ್ಮದಿಯನ್ನೂ ಗಳಿಸಬಹುದಾಗಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು



Monday, May 23, 2016

FAKE DOCTORS








                          ನಕಲಿ ವೈದ್ಯರಿಗಿನ್ನು ಉಳಿಗಾಲವಿಲ್ಲ!

ರಾಜ್ಯದ ಪ್ರಜೆಗಳ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟದ ಆರೋಗ್ಯಪಾಲನೆಗೆ ಉತ್ತೇಜನ ನೀಡುವುದು ಮತ್ತು ವೈದ್ಯ ಧರ್ಮದ ತತ್ವಗಳಿಗನುಸಾರವಾಗಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಒದಗಿಸಬೇಕಾದ ಸೇವೆಯ ಗುಣಮಟ್ಟಗಳನ್ನು ನಿಗದಿಪಡಿಸುವ ಮೂಲಕ, ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ವ್ಯವಹಾರಗಳನ್ನು ಕಾನೂನಿನ ಮೂಲಕ ನಿಯಂತ್ರಿಸಿ ಮೇಲ್ವಿಚಾರಣೆ ಮಾಡುವುದು ಯುಕ್ತವಾಗಿರುವುದರಿಂದ ಇದಕ್ಕಾಗಿ ಸೂಕ್ತ ಕಾಯಿದೆಯೊಂದನ್ನು ರಾಜ್ಯ ಸರ್ಕಾರವು ೨೦೧೦ ರಲ್ಲಿ ಜಾರಿಗೆ ತಂದಿತ್ತು.ಇದನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ಎಂದು ಹೆಸರಿಸಲಾಗಿತ್ತು.

ಸುಮಾರು ಐದು ವರ್ಷಗಳ ಹಿಂದೆ ರಾಜ್ಯಾದ್ಯಂತ ಅನುಷ್ಠಾನಗೊಂಡಿದ್ದ " ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ ೨೦೦೭ " ಕಾಯಿದೆಯನ್ವಯ, ಕರ್ನಾಟಕದ ಪ್ರತಿಯೊಬ್ಬ ವೈದ್ಯರು, ಚಿಕಿತ್ಸಾಲಯಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಸ್ಕ್ಯಾನ್ ಸೆಂಟರ್ ಗಳು ಮತ್ತು ಇದಕ್ಕೆ ಸಂಬಂಧಿಸಿದ ಪ್ರತಿಯೊಂದು ಖಾಸಗಿ ಸಂಸ್ಥೆಗಳು ೨೦೧೦ ರ ಫೆಬ್ರವರಿ ತಿಂಗಳಿನಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಸರ್ಕಾರ ಆದೇಶಿಸಿತ್ತು.ಹಾಗೂ ಸರ್ಕಾರಿ ಅಧಿಕಾರಿಗಳು, ಐ ಎಂ ಎ ಮತ್ತು ಆಯುಷ್ ನ ಪ್ರತಿನಿಧಿಗಳಿರುವ ತಂಡವು ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಯನ್ನು ಸಂದರ್ಶಿಸಿ, ಕಾಯಿದೆಯ ಮಾನದಂಡಗಳಿಗೆ ಅನುಗುಣವಾಗಿ ಇದೆಯೇ ಎಂದು ಪರಿಶೀಲಿಸಬೇಕಿತ್ತು. ಈ ಸಂದರ್ಭದಲ್ಲಿ ವಿವಿಧ ವೈದ್ಯಕೀಯ ಪದ್ದತಿಗಳ ಪದವೀಧರ ವೈದ್ಯರು, ತಮ್ಮ ಪದವಿ ಹಾಗೂ ಸ್ನಾತಕೊತ್ತರ ಪದವಿಗಳ ಮತ್ತು ತಾವು ವೈದ್ಯಕೀಯ ಮಂಡಳಿಗಳಲ್ಲಿ ನೋಂದಣಿ ಮಾಡಿಸಿರುವ ದಾಖಲೆಗಳ ಯಥಾಪ್ರತಿಗಳನ್ನು ನಿಯೋಜಿತ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಬೇಕಿತ್ತು. 

ಈ ಕಾಯಿದೆಯನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘೋಷಿಸಿದ್ದಂತೆ " ನಕಲಿ ವೈದ್ಯರಿಗಿನ್ನು ಉಳಿಗಾಲವಿಲ್ಲ " ಎನ್ನುವ ಶಿರೋನಾಮೆಯ ಲೇಖನಗಳು ಮುದ್ರಣ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟಗೊಂಡಿದ್ದವು. ಆದರೆ ಕಾಯಿದೆ ಅನುಷ್ಠಾನಗೊಂಡು ಐದು ವರ್ಷಗಳೇ ಕಳೆದಿದ್ದರೂ, ಯಾವುದೇ ರೀತಿಯ ವೈದ್ಯಕೀಯ ಪದವಿಯನ್ನೇ ಗಳಿಸದ ಮತ್ತು ವೈದ್ಯಕೀಯ ವಿಜ್ಞಾನದ ಗಂಧಗಾಳಿಗಳನ್ನೇ ಅರಿತಿರದ ಅಸಂಖ್ಯ " ನಕಲಿ ವೈದ್ಯರು ", ಇಂದಿಗೂ ತಮ್ಮ ವೃತ್ತಿಯನ್ನು ನಿರಾತಂಕವಾಗಿ ನಡೆಸುತ್ತಲೇ ಇದ್ದಾರೆ!. ಇಷ್ಟು ಮಾತ್ರವಲ್ಲ, " ನಕಲಿ ವೈದ್ಯಕೀಯ ಪದವಿ " ಗಳನ್ನು ಹಣಕೊಟ್ಟು ಖರೀದಿಸಿದ್ದ ನೂರಾರು ಜನರು ರಾಜಾರೋಷವಾಗಿ ತಮ್ಮ ಹೆಸರಿನ ಹಿಂದೆ " ಡಾ " ಎನ್ನುವ ಪದವನ್ನು ಜೋಡಿಸಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವುದು ರಾಜ್ಯ ಸರ್ಕಾರಕ್ಕೆ ತಿಳಿಯದ ವಿಚಾರವೇನಲ್ಲ. ಆದರೆ ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ. 

ಕ. ಖಾ. ವೈ. ಸಂಸ್ಥೆಗಳ ಅಧಿನಿಯಮದಂತೆ ತಮ್ಮ ಹೆಸರನ್ನು ನೋಂದಣಿ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬ ವೈದ್ಯರು ಸಲ್ಲಿಸಿದ್ದ ಪದವಿ ಅಥವಾ ಸ್ನಾತಕೋತ್ತರ ಪದವಿಗಳ ಪ್ರಮಾಣಪತ್ರದ ಯಥಾಪ್ರತಿಗಳನ್ನು ಬಳಸಿ, ಆಯಾ ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸಿ ಇವುಗಳ ಸಾಚಾತನವನ್ನು ತತ್ಸಂಬಂಧಿತ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕಿತ್ತು. ತತ್ಪರಿಣಾಮವಾಗಿ ಅನೈತಿಕ ಮತ್ತು ಕಾನೂನುಬಾಹಿರವಾಗಿ ಅನೇಕರು ಗಳಿಸಿದ್ದ ನಕಲಿ ಪದವಿ ಪ್ರಮಾಣಪತ್ರಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿತ್ತು. ಹಾಗೂ ಇವರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಬಹುದಾಗಿತ್ತು. ಅದೇ ರೀತಿಯಲ್ಲಿ ಬಹುತೇಕ ನಗರ ಮತ್ತು ಪಟ್ಟಣಗಳಲ್ಲಿ ಯಾವುದೇ ವೈದ್ಯಕೀಯ ಪದವಿಯನ್ನೇ ಗಳಿಸಿರದ ಮತ್ತು ಕಾನೂನುಬಾಹಿರವಾಗಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವ ( ಸರ್ಕಾರದ ಆದೇಶದಂತೆ ನೋಂದಣಿ ಮಾಡಿಸದ ) ನಕಲಿ ವೈದ್ಯರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಖಚಿತ ಮಾಹಿತಿ ತಿಳಿದಿದ್ದರೂ, ಇಂತಹ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕಾನೂನುಕ್ರಮಗಳನ್ನು ಕೈಗೊಳ್ಳದ ಕಾರಣದಿಂದಾಗಿ ಇವರೆಲ್ಲರೂ ನಿಶ್ಚಿಂತೆಯಿಂದ ತಮ್ಮ ಧಂಧೆಯನ್ನು ನಡೆಸುತ್ತಲೇ ಇದ್ದಾರೆ. ಹಾಗೂ ಅಮಾಯಕ ರೋಗಿಗಳ ಸುಲಿಗೆಯನ್ನು ಮಾಡುವುದರೊಂದಿಗೆ, ಅವರ  ಪ್ರಾಣಕ್ಕೆ ಎರವಾಗುತ್ತಿದ್ದಾರೆ. ವಿಶೇಷವೆಂದರೆ ಇಂತಹ ನಕಲಿ ವೈದ್ಯರಲ್ಲಿ ಕ್ಯಾನ್ಸರ್ ತಜ್ಞರು, ಸಂತತಿ ಇಲ್ಲದವರಿಗೆ ಸಂತಾನಭಾಗ್ಯ ಕರುಣಿಸುವ ಮತ್ತು ಮಧುಮೇಹದಂತಹ ಶಾಶ್ವತ ಪರಿಹಾರವಿಲ್ಲದ ಕಾಯಿಲೆಗಳನ್ನು ಗುಣಪಡಿಸುವುದಾಗಿ ಘೋಷಿಸುವ ತಜ್ಞರುಗಳು ಇದ್ದಾರೆ. ಇಷ್ಟೆಲ್ಲಾ ಸಾಲದೆನ್ನುವಂತೆ ಶಾಶ್ವತ ಪರಿಹಾರವೇ ಇಲ್ಲದ ಕಾಯಿಲೆಗಳನ್ನು ಖಚಿತವಾಗಿ ಗುಣಪಡಿಸುವ ಭರವಸೆಯನ್ನು ನೀಡುವ ಜಾಹೀರಾತುಗಳನ್ನು ನೀಡುವ ನಕಲಿ ವೈದ್ಯರು ಮತ್ತು ಔಷದ ತಯಾರಿಕಾ ಸಂಸ್ಥೆಗಳ ಹಾವಳಿಯೂ ದಿನೇದಿನೇ ಹೆಚ್ಚುತ್ತಲೇ ಇದೆ. ಆದರೆ ರಾಜ್ಯದ ಪ್ರಜೆಗಳನ್ನು ಕಾಡುತ್ತಿರುವ ಇಂತಹ  ಸಮಸ್ಯೆಗಳನ್ನು ಪರಿಹರಿಸುವುದು ಬಿಡಿ, ನಿಯಂತ್ರಿಸುವುದರಲ್ಲೂ ರಾಜ್ಯದ ಆರೋಗ್ಯ ಇಲಾಖೆ ದಯನೀಯವಾಗಿ ವಿಫಲವಾಗಿರುವುದು ಸುಳ್ಳೇನಲ್ಲ!. 

ಆದರೆ ಇದೀಗ ಮತ್ತೊಮ್ಮೆ ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳಲು ಸನ್ನದ್ಧವಾಗಿರುವ ಆರೋಗ್ಯ ಇಲಾಖೆಯು, ಐದು ವರ್ಷಗಳ ಹಿಂದೆ ಕ.ಖಾ. ವೈ. ಸಂ. ಅಧಿನಿಯಮದಂತೆ ನೋಂದಣಿ ಮಾಡಿಸಿಕೊಂಡಿದ್ದ ಅಸಲಿ ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳು, ಇದೀಗ ಮತ್ತೊಮ್ಮೆ ನಿಗದಿತ ಶುಲ್ಕವನ್ನು ಪಾವತಿಸಿ ತಮ್ಮ ನೋಂದಣಿಯನ್ನು ನವೀಕರಿಸುವಂತೆ ಸೂಚನೆಯನ್ನು ನೀಡಿದೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



Thursday, May 12, 2016

VANISHING WATERBODISES !


        ದೇಶದ ಜಲಮೂಲಗಳು ಬತ್ತಿಹೋಗುತ್ತಿವೆ, ಜೋಕೆ! 

ಜಾಗತಿಕ ತಾಪಮಾನದ ಹೆಚ್ಚಳ ಮತ್ತು ತತ್ಸಂಬಂಧಿತ ಅನ್ಯ ಕಾರಣಗಳ ಫಲವಾಗಿ ರಾಜ್ಯದ ಜನತೆ ಇದುವರೆಗೆ ಕಂಡುಕೇಳರಿಯದ ಬೇಸಗೆಯ ಧಗೆಯಿಂದ ಹೈರಾಣಾಗಿದ್ದಾರೆ. ಜೊತೆಗೆ ಬಹುತೇಕ ಜಿಲ್ಲೆಗಳಲ್ಲಿ ಉದ್ಭವಿಸಿರುವ ಜಲಕ್ಷಾಮದಿಂದ ಕಂಗಾಲಾಗಿದ್ದಾರೆ. ಕೆಲವೆಡೆ ಕುಡಿಯುವ ನೀರನ್ನು ಅರಸಿಕೊಂಡು  ಅಲೆದಾಡಬೇಕಾದಂತಹ ಭೀಕರ ಬರ ಬಾಧಿಸುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಜಲಮೂಲಗಳು ಬತ್ತಿಹೋಗಿವೆ ಅಥವಾ ಬತ್ತಿಹೋಗುತ್ತಿವೆ. ಕಳೆದ ಹಲವಾರು ವರ್ಷಗಳಿಂದ ರಾಜ್ಯದ ಜನತೆಯನ್ನು ಪೀಡಿಸುತ್ತಿರುವ ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಅವಶ್ಯಕ ಹಾಗೂ ದೀರ್ಘಕಾಲೀನ ಪರಿಹಾರಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲು ವಿಫಲವಾಗಿರುವ ಪರಿಣಾಮವಾಗಿ, ಇದೀಗ ಜಲಕ್ಷಾಮದ ತೀವ್ರತೆ ಇನ್ನಷ್ಟು ಹೆಚ್ಚಿದೆ. 

ವಿಶೇಷವೆಂದರೆ ಕರ್ನಾಟಕವೂ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿನ ಜಲಮೂಲಗಳು ನಶಿಸುತ್ತಿರುವ ಮತ್ತು ಅಂತರ್ಜಲದ ಮಟ್ಟವು ಪಾತಾಳಕ್ಕೆ ಕುಸಿಯುತ್ತಿರುವ ಬಗ್ಗೆ " ವಿಶ್ವ ಬ್ಯಾಂಕ್ " ಐದು ವರ್ಷಗಳ ಹಿಂದೆಯೇ ಎಚ್ಚರಿಕೆಯನ್ನು ನೀಡಿತ್ತು. ಅಂತೆಯೇ ಈ ಸಮಸ್ಯೆಯನ್ನು ತಡೆಗಟ್ಟುವಂತಹ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು. ಆದರೆ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಪರೋಕ್ಷವಾಗಿ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಕಾರಣಕರ್ತರೆನಿಸಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಜಲಕ್ಷಾಮದ ಕರಿನೆರಳು 

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಒಬ್ಬ ವ್ಯಕ್ತಿಗೆ ಒಂದುದಿನದಲ್ಲಿ ಬೇಕಾಗುವ ನೀರಿನ ಪ್ರಮಾಣ ೧೩೫ ಲೀಟರ್. ಆದರೆ ಧಾರಾಳ ನೀರು ಲಭ್ಯವಿರುವ ಪ್ರದೇಶಗಳ ನಿವಾಸಿಗಳು ಇದರ ಹತ್ತಾರು ಪಟ್ಟು ನೀರನ್ನು ಅನಾವಶ್ಯಕವಾಗಿ ಪೋಲುಮಾಡುತ್ತಾರೆ. ತತ್ಪರಿಣಾಮವಾಗಿ ನಮ್ಮ ದೇಶದ ಶೇ. ೬೦ ರಷ್ಟು ಜಲಮೂಲಗಳು ನಿಧಾನವಾಗಿ ನಶಿಸುತ್ತಾ, ಮುಂದಿನ ೧೫ ವರ್ಷಗಳಲ್ಲಿ ಸಂಪೂರ್ಣವಾಗಿ ಬತ್ತಿಹೋಗಲಿವೆ ಎಂದು ವಿಶ್ವಬ್ಯಾಂಕ್ ೨೦೧೧ ರಲ್ಲೇ ಎಚ್ಚರಿಕೆಯನ್ನು ನೀಡಿತ್ತು. ವಿಶ್ವಬ್ಯಾಂಕ್ ಮುಂದಿನ ೧೫ ವರ್ಷಗಳಲ್ಲಿ ಸಂಭವಿಸಲಿಸಲಿದೆ ಎಂದಿದ್ದ ಭವಿಷ್ಯವು, ಕೇವಲ ೫ ವರ್ಷಗಳಲ್ಲೇ ನಿಜವಾಗುತ್ತಿದೆ. 

ವಿಶ್ವಬ್ಯಾಂಕ್ ವರದಿಯಲ್ಲಿ ಉಲ್ಲೇಖಿಸಿರುವಂತೆ ೨೦೧೧ ರಲ್ಲೇ ಭಾರತದಲ್ಲಿರುವ ಶೇ.೨೯ ರಷ್ಟು ಜಲಮೂಲಗಳು ಅಪಾಯಕಾರಿ, ಗಂಭೀರ ಸ್ಥಿತಿಯಲ್ಲಿ ಅಥವಾ ವಿನಾಶದ ಹಾದಿಯಲ್ಲಿದ್ದವು. ಭಾರತೀಯರ ನೀರಿನ ದುರ್ಬಳಕೆಯ ಪ್ರಮಾಣವು ಇದೇ ರೀತಿಯಲ್ಲಿ ಹಾಗೂ ಇದೇ ವೇಗದಲ್ಲಿ ಮುದುವರೆದಲ್ಲಿ, ೨೦೨೫ ರಲ್ಲಿ ಶೇ. ೬೫ ರಷ್ಟು ಜಲಮೂಲಗಳು ಗಂಭೀರ ಸ್ಥಿತಿಯನ್ನು ತಲುಪಲಿವೆ. ಇದರೊಂದಿಗೆ ದೇಶದ ವಿವಿಧಭಾಗಗಳಲ್ಲಿ ಕಂಡುಬರುತ್ತಿರುವ ಹವಾಮಾನದ ವೈಪರೀತ್ಯಗಳೂ, ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಲು ಕಾರಣವೆನಿಸಲಿವೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ನಮೂದಿಸಲಾಗಿತ್ತು. 

ಭಾರತೀಯರು ಅತಿಯಾಗಿ ಪೋಲುಮಾಡುತ್ತಿರುವ ನೀರಿನ ಬಗ್ಗೆ ಒಂದಿಷ್ಟು ಅರಿವು ಮೂಡಿಸಬಲ್ಲ ಮಾಹಿತಿಯೊಂದು ಈ ವರದಿಯಲ್ಲಿ ಸೇರಿತ್ತು. ಪ್ರಪಂಚದ ಜನರೆಲ್ಲರೂ ಒಂದು ದಿನದಲ್ಲಿ ಬಳಸುವ ನೀರಿನ ಶೇ. ೨೫ ರಷ್ಟು ಪಾಲನ್ನು ಬಳಸುವವರು ಭಾರತೀಯರೇ ಆಗಿದ್ದಾರೆ. ಭಾರತೀಯರು ಒಂದು ವರ್ಷದಲ್ಲಿ ಬಳಸುವ ನೀರಿನ ಪ್ರಮಾಣವು ಅಂದು ೨೩೦ ಕ್ಯುಬಿಕ್ ಕಿಲೋ ಲೀಟರ್ ಗಳಾಗಿತ್ತು!. 

ದೇಶದ ವಿವಿಧ ರಾಜ್ಯಗಳ ಕೃಷಿಕರು ಬಳಸುತ್ತಿದ್ದ ಶೇ.೬೫ ರಷ್ಟು ನೀರು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಪೂರೈಸುತ್ತಿದ್ದ ಶುದ್ಧೀಕರಿಸಿದ ಕುಡಿಯುವ ನೀರಿನ ಶೇ. ೮೦ ರಷ್ಟನ್ನು ಪಡೆದುಕೊಳ್ಳಲು ಅಂತರ್ಜಲ ಮತ್ತು ಭೂಜಲ ಮೂಲಗಳನ್ನೇ ಅವಲಂಬಿಸಿವೆ. 

ಭಾರತದಲ್ಲಿರುವ ೫೭೨೩ ಭೂಜಲ ಕ್ಷೇತ್ರಗಳಲ್ಲಿ ೧೬೧೫ ಕ್ಷೇತ್ರಗಳು ಅತಿ ಗಂಭೀರ ಅಥವಾ ಅತಿಯಾಗಿ ಬಳಸಲ್ಪಡುವ ಸ್ಥಿತಿಯಲ್ಲಿವೆ. ಈ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಭೂಜಲ ಪ್ರಾಧಿಕಾರವು ಇವುಗಳಲ್ಲಿನ ೧೦೮ ಪ್ರಮುಖ ಕ್ಷೇತ್ರಗಳನ್ನು ಸಂರಕ್ಷಿಸಲು ಐದುವರ್ಷಗಳ ಹಿಂದೆಯೇ ಅವಶ್ಯಕ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಕೇಂದ್ರ ಭೂಜಲ ಪ್ರಾಧಿಕಾರ ಮತ್ತು ಕೆಲ ರಾಜ್ಯ ಸರ್ಕಾರಗಳ ಬಳಿ ಭೂಜಲ ಸಂರಕ್ಷಣೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಅವಶ್ಯಕ ಸಿಬಂದಿಗಳೇ ಇರದಿದ್ದ ಕಾರಣದಿಂದಾಗಿ, ಇದು ಅಪೇಕ್ಷಿತ ಪರಿಣಾಮವನ್ನು ನೀಡಲು ಯಶಸ್ವಿಯಾಗಿರಲಿಲ್ಲ. 

ಪರಿಹಾರವೇನು?

ನಮ್ಮ ಮುಂದಿನ ಪೀಳಿಗೆಯನ್ನು ಜಲಕ್ಷಾಮದ ಸಮಸ್ಯೆ ಬಾಧಿಸದಂತೆ ತಡೆಗಟ್ಟಲು, ನಾವಿಂದು ಅನಾವಶ್ಯಕ ಹಾಗೂ ಅತಿಯಾಗಿ ಪೋಲುಮಾಡುತ್ತಿರುವ ನೀರಿನ ಪ್ರಮಾಣವನ್ನು ನಿಶ್ಚಿತವಾಗಿಯೂ ಕಡಿಮೆ ಮಾಡಲೇಬೇಕು. ಇದರೊಂದಿಗೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಜಲಸಂರಕ್ಷಣೆಯ ಕೆಲವೊಂದು ಉಪಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಅನುಷ್ಠಾನಿಸಲೇಬೇಕು. 

ರೈತಾಪಿ ಜನರು ಬೆಳೆಯುವ ಬೆಳೆಗಳಿಗೆ ಅಗತ್ಯವಿರುವಷ್ಟೇ ನೀರುಣಿಸುವ ವೈಜ್ಞಾನಿಕ ಮಾಹಿತಿಗಳನ್ನು ಕೃಷಿಕರಿಗೆ ಸರ್ಕಾರವೇ ಒದಗಿಸಬೇಕು. ಜೊತೆಗೆ ರೈತರಿಗೆ ಉಚಿತವಾಗಿ ವಿದ್ಯುತ್ ಒದಗಿಸುತ್ತಿರುವುದರಿಂದ ದಿನದಲ್ಲಿ ಹಲವಾರು ಘಂಟೆಗಳ ಕಾಲ ಅವಶ್ಯಕತೆಗಿಂತಲೂ ಅಧಿಕ ಪ್ರಮಾಣದ ನೀರನ್ನು ಪೋಲುಮಾಡುವುದನ್ನು ನಿಯಂತ್ರಿಸಬೇಕು. ಇದಕ್ಕಾಗಿ ರೈತರು ಬಳಸುವ ವಿದ್ಯುತ್ತಿಗೆ ಒಂದಿಷ್ಟು ಶುಲ್ಕವನ್ನು ವಿಧಿಸಬೇಕು. ಸರ್ಕಾರದ ಅನುಮತಿ ಇಲ್ಲದೇ ಖಾಸಗಿ ವ್ಯಕ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಯಂತ್ರಿಸಬೇಕು. ಅದರಲ್ಲೂ ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿದ ಸ್ಥಳಗಳಲ್ಲಿ, ಇನ್ನಷ್ಟು ಕೊಳವೆಬಾವಿಗಳನ್ನು ಕೊರೆಸುವುದನ್ನು ನಿಷೇಧಿಸಬೇಕು. ಇದಕ್ಕೆ ಬದಲಾಗಿ ತೆರೆದ ಮತ್ತು ಕೊಳವೆ ಬಾವಿಗಳ ಜಲಮರುಪೂರಣವನ್ನು ಕಡ್ಡಾಯಗೊಳಿಸಬೇಕು. 

ರಾಜ್ಯದ ಪ್ರತಿಯೊಂದು ಹಳ್ಳಿ, ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಮಳೆನೀರಿನ ಕೊಯ್ಲನ್ನು ಕಡ್ಡಾಯಗೊಳಿಸಬೇಕು. ಕೆರೆ ಮತ್ತು ತೆರೆದ ಬಾವಿಗಳ ಹೂಳನ್ನು ತೆಗೆಸುವುದರೊಂದಿಗೆ, ಕಾರಣಾಂತರಗಳಿಂದ ಮುಚ್ಚಿರುವ ಕೆರೆ- ಬಾವಿಗಳನ್ನು ಮತ್ತೆ ಪುನರುಜ್ಜೀವನಗೊಳಿಸಲೇಬೇಕು. ನಗರ - ಮಹಾನಗರಗಳಲ್ಲಿನ ಬಹುಮಹಡಿ ಕಟ್ಟಡಗಳು, ಬೃಹತ್ ಉದ್ದಿಮೆಗಳು ಮತ್ತು ಅನ್ಯ ವಾಣಿಜ್ಯ ಕಟ್ಟಡಗಳಿಂದ ವಿಸರ್ಜಿಸಲ್ಪಡುವ ಕಲುಷಿತ ನೀರನ್ನು ಸಂಸ್ಕರಿಸಿ, ಶುದ್ಧೀಕರಿಸಿ ಮರುಬಳಕೆ ಮಾಡಬಲ್ಲ ಘಟಕಗಳ ಸ್ಥಾಪನೆಯನ್ನು ಕಡ್ಡಾಯಗೊಳಿಸಬೇಕು. 

ಸ್ಥಳೀಯ ಸಂಸ್ಥೆಗಳು ಜನರಿಗೆ ಪೂರೈಕೆಮಾಡುವ ಶುದ್ಧೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಗಲುವ ಸಂಪೂರ್ಣ ವೆಚ್ಚವನ್ನು ಜನರಿಂದಲೇ ವಸೂಲು ಮಾಡಬೇಕು. ತತ್ಪರಿಣಾಮವಾಗಿ ಅಲ್ಪಬೆಲೆಗೆ ನಿರಾಯಾಸವಾಗಿ ಲಭಿಸುವ ಶುದ್ಧೀಕರಿಸಿದ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಬಹುದಾಗಿದೆ. 

ಇವೆಲ್ಲಕ್ಕೂ ಮಿಗಿಲಾಗಿ ನಮ್ಮ ಹಾಗೂ ನಮ್ಮ ಮುಂದಿನ ಸಂತತಿಯ ಹಿತದೃಷ್ಟಿಯಿಂದ, ದೇಶದ ಪ್ರತಿಯೊಬ್ಬ ಪ್ರಜೆಯೂ ಜಲಸಂರಕ್ಷಣೆಯ ಉಪಕ್ರಮಗಳನ್ನು ಸ್ವಯಂಪ್ರೇರಿತರಾಗಿ ಅನುಷ್ಠಾನಗೊಳಿಸಬೇಕಾಗಿದೆ. ಇದಕ್ಕೆ ತಪ್ಪಿದಲ್ಲಿ ವಿಶ್ವಬ್ಯಾಂಕ್ ವರದಿಯಲ್ಲಿ ನಮೂದಿಸಿದಂತೆ, ದೇಶದ ಜಲಮೂಲಗಳು ಸದ್ಯೋಭವಿಷ್ಯದಲ್ಲಿ ನಶಿಸಲಿವೆ. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 




Friday, May 6, 2016

DO NOT WASTE WATER


                    ಜೀವಜಲವನ್ನು ಅನಾವಶ್ಯಕವಾಗಿ ಪೋಲುಮಾಡದಿರಿ

ಕೆಲವೇ ದಶಕಗಳ ಹಿಂದೆ ಹಗಲಿರುಳು ಸುರಿಯುತ್ತಿದ್ದ ಮುಂಗಾರು ಮಳೆಯು ಕಾಲಕ್ರಮೇಣ ಕ್ಷಯಿಸುತ್ತಾ ಬಂದು ವರುಷಗಳೇ ಸಂದಿವೆ. ಥಟ್ಟನೆ ಬಂದೆರಗಿ ಅಷ್ಟೇ ವೇಗವಾಗಿ ಅದೃಶ್ಯವಾಗುವ ಇಂದಿನ ಮುಂಗಾರು ಮಳೆ ಮತ್ತು ಎಡೆಬಿಡದೆ ಧೋ ಎಂದು ಸುರಿಯುತ್ತಿದ್ದ ಹಿಂದಿನ ಜಡಿಮಳೆಗಳಿಗೆ ಅಜಗಜಾಂತರ ವ್ಯತ್ಯಾಸವೂ ಇದೆ. ಮುಂಗಾರು ಮಳೆಯ ಕೊರತೆ ಮತ್ತು ಹೆಚ್ಚುತ್ತಿರುವ ನೀರಿನ ಬಳಕೆಗಳು ಸುದೀರ್ಘಕಾಲದ ಬಳಿಕ ಜಲಕ್ಷಾಮಕ್ಕೆ ಕಾರಣವೆನಿಸಿದೆ. 

ಜಲಕ್ಷಾಮದ ಸಮಸ್ಯೆ 

ಬೆಳಗಿನ ಜಾವ ಸೂರಿನ ಮೇಲೆ ಬೀಳುತ್ತಿದ್ದ ಮಳೆನೀರಿನ ಸದ್ದಿಗೆ ಎಚ್ಚರವಾಗುತ್ತಿದ್ದ ಹಾಗೂ ಮಳೆಯ ಸದ್ದನ್ನು ಆಲಿಸುತ್ತಾ ನಿದ್ರೆಗೆ ಜಾರುತ್ತಿದ್ದ ದಿನಗಳು ಇದೀಗ ಕೇವಲ ನೆನಪುಗಳಾಗಿವೆ. ಬಾವಿ, ಕೆರೆ, ತೊರೆ ಮತ್ತು ಸದಾ ತುಂಬಿರುತ್ತಿದ್ದ ಹಾಗೂ ಜಲಕ್ಷಾಮ ಎಂದರೇನೆಂದು ಅರಿತಿರದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಡಿಯಲೂ ನೀರಿಲ್ಲದಿರುವುದು ಸಮಸ್ಯೆಯ ಗಂಭೀರತೆಯನ್ನು ಸಾರುತ್ತಿದೆ. ಪ್ರಸ್ತುತ ಜಾಗತಿಕ ತಾಪಮಾನದ ಹೆಚ್ಚಳ ಮತ್ತು ಈ ಬಾರಿ ಕಣ್ಮರೆಯಾಗಿರುವ ಮುಂಗಾರು ಪೂರ್ವ ಮಳೆಗಳ ಸಂಯುಕ್ತ ಪರಿಣಾಮದಿಂದಾಗಿ  ಪ್ರಾಕೃತಿಕ ಜಲಮೂಲಗಳಾದ ಬಾವಿ, ಕೆರೆ, ತೊರೆ ಮತ್ತು ನದಿಗಳು ಈಗಾಗಲೇ ಬತ್ತಿ ಬರಡಾಗಿವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯು ಪುನರಪಿ ಕಾಡದಂತೆ ಹಾಗೂ ಪಾತಾಳವನ್ನು ತಲುಪಿರುವ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು, ಕೊಳವೆಬಾವಿಗಳಿಗೆ ಜಲ ಮರುಪೂರಣ ಮತ್ತು ಮಳೆನೀರಿನ ಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾಗಿದೆ. ಜೊತೆಗೆ ನಾವಿಂದು ಅನಾವಶ್ಯಕ ಹಾಗೂ ಅತಿಯಾಗಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಿದೆ. 

ಜಗತ್ತಿನ ಜಲಸಂಪನ್ಮೂಲದ ಶೇ. ೪ ರಷ್ಟನ್ನು ಹೊಂದಿರುವ ಭಾರತವು ಕೆಲವೇ ವರ್ಷಗಳ ಹಿಂದೆ " ಜಲ ಸಮೃದ್ಧ " ದೇಶವಾಗಿತ್ತು. ಅಗಾಧ ಪ್ರಮಾಣದ ಜಲ ಸಂಪನ್ಮೂಲಗಳಿದ್ದರೂ, ೨೦೧೧ ರಲ್ಲಿ ನಮ್ಮ ದೇಶವು " ನೀರಿನ ಕೊರತೆಯ ಸಮಸ್ಯೆ " ಇರುವ ರಾಷ್ಟ್ರಗಳ ಯಾದಿಯಲ್ಲಿ ಸೇರ್ಪಡೆಗೊಂಡಿತ್ತು. ಇದಕ್ಕೆ ನಿರ್ದಿಷ್ಟ ಕಾರಣವೂ ಇದ್ದಿತು. 

ಬೇಡಿಕೆ - ಲಭ್ಯತೆ 

ಒಂದೆರಡು ವರ್ಷಗಳ ಹಿಂದೆ ಭಾರತದಲ್ಲಿ ನೀರಿನ ಬೇಡಿಕೆಯ ಪ್ರಮಾಣವು ೭೧೮ ಬಿಲಿಯನ್ ( ದಶಲಕ್ಷ ಕೋಟಿ ) ಕ್ಯುಬಿಕ್ ಮೀಟರ್ ಗಳಾಗಿದ್ದು, ೨೦೫೦ ರಲ್ಲಿ ಇದು ೮೩೩ ಬಿ. ಕ್ಯು. ಮೀಟರ್ ತಲುಪಲಿದೆ ಎಂದು ಊಹಿಸಲಾಗಿತ್ತು. ಇದರಲ್ಲಿ ಕೃಷಿ ಜಮೀನಿನ ನೀರಾವರಿಗಾಗಿ ಬಳಸಲ್ಪಡುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ೫೫೭ ಬಿ.ಕ್ಯು. ಮೀಟರ್ ಆಗಿದ್ದು, ೨೦೫೧ ರಲ್ಲಿ ಇದು ೮೦೭ ಬಿ.ಕ್ಯು. ಮೀಟರ್ ತಲುಪಲಿದೆ ಎನ್ನಲಾಗಿತ್ತು. ಇದೇ ಸಂದರ್ಭದಲ್ಲಿ ದೇಶದ ಜನತೆಯ ಗೃಹಬಳಕೆಯ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೪೩ ಬಿ.ಕ್ಯು. ಮೀ. ಆಗಿದ್ದು, ೨೦೨೫ ರಲ್ಲಿ ೬೨ ಹಾಗೂ ೨೦೫೦ ರಲ್ಲಿ ೧೧೧ ಬಿ.ಕ್ಯು.ಮೀ ತಲುಪಲಿದೆ ಎಂದು ಅಂದಾಜಿಸಲಾಗಿತ್ತು. ಉದ್ದಿಮೆಗಳು ಬಳಸುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೩೭ ಬಿ.ಕ್ಯು.ಮೀ. ಆಗಿದ್ದು, ೨೦೨೫ ರಲ್ಲಿ ಇದು ೬೭ ಮತ್ತು ೨೦೫೦ ರಲ್ಲಿ ೮೧ ಬಿ. ಕ್ಯು. ಮೀ. ಆಗಲಿದೆ ಎಂದು ಊಹಿಸಲಾಗಿತ್ತು. ಅದೇ ರೀತಿಯಲ್ಲಿ ೨೦೧೦೧ ರಲ್ಲಿ ವಿದ್ಯುತ್ ಉತ್ಪಾದನೆಗಾಗಿ ೧೯ ಬಿ.ಕ್ಯು.ಮೀ. ಬಳಕೆಯಾಗಿದ್ದು, ೨೦೨೫ ರಲ್ಲಿ ಇದು ೩೦ ಮತ್ತು ೨೦೫೦ ರಲ್ಲಿ ೭೦ ಬಿ.ಕ್ಯು.ಮೀ. ಮೀರಲಿದೆ ಎಂದು ಅಂದಾಜಿಸಲಾಗಿದೆ. ಈ ರೀತಿಯಲ್ಲಿ ವಿವಿಧ ಉದ್ದೇಶಗಳಿಗಾಗಿ ನಮಗಿಂದು ಅಗಾಧ ಪ್ರಮಾಣದ ನೀರಿನ ಅವಶ್ಯಕತೆ ಇದ್ದರೂ, ದೇಶದ ಅನೇಕ ಭಾಗಗಳಲ್ಲಿ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಏಕೆಂದರೆ ನಮ್ಮಲ್ಲಿ ಸುರಿಯುವ ಮಳೆನೀರಿನ ಶೇ. ೬೫ ರಷ್ಟು ಪಾಲು ಸಮುದ್ರವನ್ನು ಸೇರುತ್ತಿದೆ. 

ಭಾರತೀಯರು ಒಂದು ವರ್ಷದಲ್ಲಿ ೨೧೦ ಬಿ.ಕ್ಯು.ಮೀ. ಗೂ ಅಧಿಕ ಪ್ರಮಾಣದ ಅಂತರ್ಜಲವನ್ನು ಬಳಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎನ್ನಲಾಗಿದೆ. ನಮ್ಮ ದೇಶದಲ್ಲಿನ ಶೇ. ೬೦ ರಷ್ಟು ನೀರಾವರಿ ಜಮೀನಿಗೆ ಇದೇ ಅಂತರ್ಜಲವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ದೇಶದ ಶೇ. ೬೦ ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಕೊರತೆ ಬಾಧಿಸುತ್ತಿದೆ. 

೨೦೧೦ ರಲ್ಲಿ ದೇಶದ ಜನಸಂಖ್ಯೆಯು ೧.೦೨೯ ಬಿಲಿಯನ್ ಆಗಿದ್ದು, ಅಂದಿನ ನೀರಿನ ಲಭ್ಯತೆಯ ಪ್ರಮಾಣವು ಒಂದುವರ್ಷದಲ್ಲಿ ತಲಾ ೧೮೧೬ ಕ್ಯು. ಮೀ. ಆಗಿತ್ತು. ೨೦೧೧ ರಲ್ಲಿ ಜನಸಂಖ್ಯೆಯು ೧.೨೧೦ ಬಿ. ಹಾಗೂ ನೀರಿನ ಲಭ್ಯತೆಯ ಪ್ರಮಾಣವು ತಲಾ ೧೫೪೫ ಆಗಿತ್ತು. ೨೦೨೫ ರಲ್ಲಿ ದೇಶದ ಜನಸಂಖ್ಯೆಯು ೧.೩೯೪ ಬಿ. ( ಅಂದಾಜು ) ಮತ್ತು ನೀರಿನ ಲಭ್ಯತೆ ೧೩೪೦ ಮತ್ತು ೨೦೫೦ ರಲ್ಲಿ ಜನಸಂಖ್ಯೆ ೧.೬೪೦ ಬಿ. ಹಾಗೂ ನೀರಿನ ಲಭ್ಯತೆಯು ೧೧೪೦ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಅರ್ಥಾತ್, ದೇಶದ ಜನಸಂಖ್ಯೆ ಹೆಚ್ಚಿದಂತೆಯೇ, ನೀರಿನ ಲಭ್ಯತೆಯ ಪ್ರಮಾಣವು ಕುಸಿಯಲಿದೆ. 

ಕಲುಷಿತ ನೀರು 

ದೇಶದಲ್ಲಿನ ಉದ್ದಿಮೆಗಳು ಬಳಸಿ ವಿಸರ್ಜಿಸುವ ಶೇ. ೯೦ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸಿ ನದಿ - ಸಮುದ್ರಗಳಿಗೆ ವಿಸರ್ಜಿಸುತ್ತಿವೆ. ಆದರೆ ಈ ಶುದ್ಧೀಕರಿಸಿದ ಕಲುಷಿತ ನೀರು ಪರಿಸರಸ್ನೇಹಿ ಮಾನದಂಡಗಳಿಗೆ ಅನುಗುಣವಾಗಿಲ್ಲ. ನಮ್ಮ ದೇಶದಲ್ಲಿ ಶೇ.೭೦ ರಷ್ಟು ಪ್ರಮಾಣದ ಜಲಪ್ರದೂಷಣೆಗೆ ನಮ್ಮ ನಗರ - ಮಹಾನಗರಗಳು ಉತ್ಪಾದಿಸುತ್ತಿರುವ ತ್ಯಾಜ್ಯಗಳೇ ಕಾರಣವೆನಿಸಿವೆ. ದೇಶದ ಶೇ. ೩೬ ರಷ್ಟು ಜನರು ವಾಸಿಸುವ ನಗರಗಳು ಬೃಹತ್ ಪ್ರಮಾಣದ ಕಲುಷಿತ ನೀರನ್ನು ಉತ್ಪಾದಿಸಿ ವಿಸರ್ಜಿಸುತ್ತಿವೆ. ಅವಶ್ಯಕ ಮೂಲಸೌಕರ್ಯಗಳ ಕೊರತೆಯಿಂದಾಗಿ ಸ್ಥಳೀಯ ಸಂಸ್ಥೆಗಳು ಕೇವಲ ಶೇ. ೩೧ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸುತ್ತಿವೆ. ಹಾಗೂ ಇನ್ನುಳಿದ ಶೇ. ೬೯ ರಷ್ಟು ಕಲುಷಿತ ನೀರನ್ನು ಚರಂಡಿಗಳಲ್ಲಿ ವಿಸರ್ಜಿಸುತ್ತಿವೆ. ಈ ಕಲುಷಿತ ನೀರನ್ನು ಶುದ್ಧೀಕರಿಸಿ ಅನ್ಯ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಹಾಗೂ ಇದಕ್ಕಾಗಿ ವಿವಿಧ ಸಾಮರ್ಥ್ಯದ ಜಲಶುದ್ಧೀಕರಣ ಸ್ಥಾವರಗಳು ಲಭ್ಯವಿದೆ. ಗಣನೀಯ ಪ್ರಮಾಣದ ಕಲುಷಿತ ನೀರನ್ನು ಚರಂಡಿಗಳಿಗೆ ವಿಸರ್ಜಿಸುವ ಪ್ರತಿಯೊಂದು ಕಟ್ಟಡ, ಉದ್ದಿಮೆ ಇತ್ಯಾದಿಗಳು ಕಡ್ಡಾಯವಾಗಿ ಜಲಶುದ್ಧೀಕರಣ ಸ್ಥಾವರಗಳನ್ನು ಸ್ಥಾಪಿಸುವಂತೆ ಸರ್ಕಾರವು ಆದೇಶಿಸಿದಲ್ಲಿ, ಬೃಹತ್ ಪ್ರಮಾಣದ ನೀರಿನ ಉಳಿತಾಯವಾಗಲಿದೆ. 

ಪರಿಹಾರವೇನು?

ದೇಶದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ನಗರ - ಪಟ್ಟಣಗಳಲ್ಲಿರುವ ಪ್ರತಿಯೊಂದು ಕಟ್ಟಡಗಳಲ್ಲೂ ಮಳೆನೀರು ಕೊಯ್ಲನ್ನು ಕಡ್ಡಾಯವಾಗಿಸಬೇಕು. ಇದರಿಂದಾಗಿ ನಾವಿಂದು ಬಳಸದೇ ಇರುವ ಶೇ. ೬೫ ರಷ್ಟು ಮಳೆನೀರನ್ನು ಉಳಿಸಿ ಬಳಸಬಹುದಾಗಿದೆ. 

ಅಂತೆಯೇ ಕಲುಷಿತ ಜಲಮೂಲಗಳಲ್ಲಿನ ನೀರನ್ನು ಶುದ್ಧೀಕರಿಸಲು ಲಭ್ಯವಿರುವ ೧೩೦ ಕ್ಕೂ ಅಧಿಕ ವಿಧದ ಸಸ್ಯಗಳು ಮತ್ತು ಸೂಕ್ಷ್ಮಾಣುಜೀವಿಗಳನ್ನೂ ಬಳಸುವ ಮೂಲಕ, ಇಂತಹ ನೀರಿನ ಗುಣಮಟ್ಟಗಳನ್ನು ಹೆಚ್ಚಿಸಬೇಕು. ಜೊತೆಗೆ ಇಂತಹ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಮತ್ತಷ್ಟು ಜನರು ಇವುಗಳನ್ನು ಬಳಸುವಂತಾಗಬೇಕು. 

ಅಂತಿಮವಾಗಿ ಅತ್ಯಧಿಕ ಪ್ರಮಾಣದ ಜಲಪ್ರದೂಷಣೆಗೆ ಕಾರಣವೆನಿಸುತ್ತಿರುವ ಬೃಹತ್ ಉದ್ದಿಮೆ - ಕೈಗಾರಿಕಾ ಘಟಕಗಳು ಹಾಗೂ ನಗರ - ಮಹಾನಗರಗಳು, ಈ ಸಮಸ್ಯೆಯನ್ನು ಸ್ವಯಂ ಪರಿಹರಿಸಬೇಕು ಎನ್ನುವ ಕಾನೂನನ್ನು ರೂಪಿಸಿ, ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಇವೆಲ್ಲವುಗಳೊಂದಿಗೆ ನಾವಿಂದು ಅತಿಯಾಗಿ ಬಳಸಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸಲು, ದೇಶದ ಪ್ರತಿಯೊಬ್ಬ ಪ್ರಜೆಯೂ ಧೃಢ ಸಂಕಲ್ಪ ಮಾಡಬೇಕು. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು   


Tuesday, May 3, 2016

HOTTEST SUMMER AND ................


             ಧಗಧಗಿಸುವ ಬೇಸಗೆ : ಜೊತೆಗೆ ಜಲಕ್ಷಾಮದ ಬೇಗೆ 

ದಕ್ಷಿಣ ಕನ್ನಡದ ಜನತೆ ಈ ಬಾರಿ ಇದುವರೆಗೆ ಕಂಡುಕೇಳರಿಯದಂತಹ ಸೆಖೆ ಮತ್ತು ಜಲಕ್ಷಾಮದ ಸಮಸ್ಯೆಯಿಂದ ಬಸವಳಿದಿದ್ದಾರೆ. ಜಿಲ್ಲೆಯ ಸರಾಸರಿ ತಾಪಮಾನವು ೩೮ ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜಲಕ್ಷಾಮದ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವೆನಿಸುತ್ತಿದೆ. ಕೆರೆ, ತೊರೆ, ಬಾವಿಗಳು ಮಾತ್ರವಲ್ಲ, ನದಿಗಳೂ ಬತ್ತಿಹೋಗಿವೆ. ಕುಡಿಯಲು ಶುದ್ಧವಾದ ನೀರಿಲ್ಲದೇ ಜನರು ಹೈರಾಣಾಗಿದ್ದಾರೆ. ರಾಜ್ಯದ ೨೭ ಜಿಲ್ಲೆಗಳು ಹಾಗೂ ೧೩೦ ತಾಲೂಕುಗಳು ಬರದ ಬೇಗೆಯಿಂದ ಬಳಲುತ್ತಿವೆ. ಆದರೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದ ಬರ ತಲೆದೋರದೇ ಇದ್ದರೂ, ಸಹಿಸಲಾರದ ಬೇಸಗೆಯ ಧಗೆ ಮತ್ತು ಕುಡಿಯುವ ನೀರಿನ ಕೊರತೆ ಈ ಜಿಲ್ಲೆಗಳ ಜನತೆಯನ್ನು ಬಾಧಿಸುತ್ತಿವೆ. 

ಕಾರಣವೇನು?
ಪ್ರಾಯಶಃ ಹೆಚ್ಚುತ್ತಿರುವ ಜನ - ವಾಹನಗಳ ಸಂಖ್ಯೆ, ವೃದ್ಧಿಸುತ್ತಿರುವ ಕಾಂಕ್ರೀಟ್ ಕಾಡುಗಳ ಸಂಖ್ಯೆ, ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಬೃಹತ್ ಉದ್ದಿಮೆಗಳು, ನಾವಿಂದು ಅತಿಯಾಗಿ ಹಾಗೂ ಅನಾವಶ್ಯಕವಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳು ಮತ್ತು ಪೋಲು ಮಾಡುತ್ತಿರುವ ನೀರಿನ ಪ್ರಮಾಣ, ವೈವಿಧ್ಯಮಯ ಕಾರಣಗಳಿಂದಾಗಿ ಸಂಭವಿಸುತ್ತಿರುವ ಪರಿಸರ ಮಾಲಿನ್ಯ, ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಹಸಿರುಮನೆ ಅನಿಲಗಳ ದುಷ್ಪರಿಣಾಮಗಳೊಂದಿಗೆ, ಕ್ಷಯಿಸುತ್ತಿರುವ ಮುಂಗಾರು ಮತ್ತು ಹಿಂಗಾರು ಮಳೆಗಳ ಪ್ರಮಾಣಗಳೂ ಈ ಗಂಭೀರ ಸಮಸ್ಯೆಗಳಿಗೆ ಪ್ರಮುಖ ಕಾರಣವೆನಿಸಿವೆ. 

ಮಳೆಯ ಕೊರತೆ 

ಕೆಲವೇ ದಶಕಗಳ ಹಿಂದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರುಮಳೆಯು ಹಗಲಿರುಳು ಸುರಿಯುತ್ತಿದ್ದುದನ್ನು ನೀವೂ ಕಂಡಿರಬಹುದು. ಅಂತೆಯೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭತ್ತದ ಗದ್ದೆಗಳಲ್ಲಿ ಸಂಗ್ರಹವಾದ ಹಾಗೂ ದೊಡ್ಡ ಗಾತ್ರದ ಚರಂಡಿಗಳಲ್ಲಿ ನಿರ್ಮಿಸುತ್ತಿದ್ದ ಒಡ್ಡುಗಳಿಂದಾಗಿ ಸಂಗ್ರಹವಾಗುತ್ತಿದ್ದ ಮಳೆನೀರು ಅಯಾಚಿತವಾಗಿ ಭೂಗರ್ಭವನ್ನು ಸೇರುವ ಮೂಲಕ ಅಂತರ್ಜಲದ ಪ್ರಮಾಣವು ಹೆಚ್ಚುತ್ತಿತ್ತು. ಇದಲ್ಲದೇ ಪ್ರತಿಯೊಂದು ಊರುಗಳಲ್ಲೂ ಕಾಣಸಿಗುತ್ತಿದ್ದ ಕೆರೆ - ತೊರೆಗಳು ಮತ್ತು ತುಂಬಿಹರಿಯುತ್ತಿದ್ದ ನದಿಗಳಿಂದಾಗಿ ಜಲಮರುಪೂರಣದ ಪ್ರಕ್ರಿಯೆ ಸ್ವಾಭಾವಿಕವಾಗಿಯೇ ನಡೆಯುತ್ತಿತ್ತು. ಬಹುತೇಕ ಮನೆಗಳಲ್ಲಿ ಕುಡಿಯುವ ನೀರಿನ ಬಾವಿಗಳು ಅಥವಾ ಹಳ್ಳಿಗಳಲ್ಲಿನ ಕೆರೆಗಳು, ಕಡು ಬೇಸಗೆಯ ದಿನಗಳಲ್ಲೂ ಬತ್ತುತ್ತಿರಲಿಲ್ಲ. ತತ್ಪರಿಣಾಮವಾಗಿ ಜಿಲ್ಲೆಯ ಜನತೆಗೆ ಜಲಕ್ಷಾಮದ ಬೇಗೆ ಏನೆಂದೇ ತಿಳಿದಿರಲಿಲ್ಲ. 

ಕಣ್ಮರೆಯಾಗುತ್ತಿರುವ ಬಾವಿಗಳು 

ಆದರೆ ಕಾಲಕ್ರಮೇಣ ಸರ್ಕಾರದ ವತಿಯಿಂದ ಜನತೆಗೆ ಶುದ್ಧೀಕರಿಸಿದ ಕುಡಿಯುವ ನೀರಿನ ಪೂರೈಕೆ ಆರಂಭವಾದಂತೆಯೇ, ನಗರವಾಸಿಗಳು ತಮ್ಮ ಬಾವಿಗಳಿಂದ ನೀರನ್ನು ಸೇದುವ ಹವ್ಯಾಸವನ್ನು ತೊರೆಯಲಾರಂಭಿಸಿದ್ದರು. ಮುಂದಿನ ಕೆಲವೇ ವರ್ಷಗಳಲ್ಲಿ ಅನೇಕ ನಗರವಾಸಿಗಳು ತಮ್ಮ ಬಾವಿಗಳನ್ನೇ ಮುಚ್ಚಿಸಿದ್ದರು!. ಇದಕ್ಕೂ ಮಿಗಿಲಾಗಿ ಜಿಲ್ಲೆಯ ಬಹುತೇಕ ಊರುಗಳಲ್ಲಿ ಕಾಣಸಿಗುತ್ತಿದ್ದ ಸರ್ಕಾರಿ ಬಾವಿಗಳನ್ನು ಬಳಸುತ್ತಿದ್ದ ನೂರಾರು ಜನರು, ಸಾರ್ವಜನಿಕ ನಳ್ಳಿಗಳನ್ನು ಬಳಸಲು ಆರಂಭಿಸಿದ್ದರು. ಪುಕ್ಕಟೆಯಾಗಿ ಹಾಗೂ ಶಾರೀರಿಕ ಶ್ರಮವಿಲ್ಲದೇ ಶುದ್ಧೀಕರಿಸಿದ ಕುಡಿಯುವ ನೀರು ಲಭಿಸಲು ಆರಂಭವಾದ ಬಳಿಕ, ಜನರು ಬಾವಿಯ ನೀರಿನ ಬಳಕೆಯನ್ನೇ ನಿಲ್ಲಿಸಿದ್ದ ಪರಿಣಾಮವಾಗಿ ನಿರುಪಯುಕ್ತವೆನಿಸಿದ್ದ ಸಾರ್ವಜನಿಕ ಬಾವಿಗಳ ನೀರು, ಅಲ್ಪಾವಧಿಯಲ್ಲೇ ಕಲುಷಿತಗೊಂಡಿತ್ತು. ವಿಶೇಷವೆಂದರೆ ಇಂತಹ ನಿರುಪಯುಕ್ತ ಸರ್ಕಾರಿ ಬಾವಿಗಳನ್ನು ಸ್ವಚ್ಛಗೊಳಿಸಿ ಸಂರಕ್ಷಿಸಬೇಕಿದ್ದ ಸ್ಥಳೀಯ ಸಂಸ್ಥೆಗಳೇ ಇವುಗಳನ್ನು ಮುಚ್ಚಿಸಿದ್ದವು!. 

ಕೊಳವೆಬಾವಿಗಳ ಹಾವಳಿ 

ಕೆಲವರ್ಷಗಳ ಹಿಂದೆ ನಿರ್ದಿಷ್ಟ ಕಾರಣಗಳಿಂದಾಗಿ ಭತ್ತವನ್ನು ಬೆಳೆಯುವುದನ್ನು ನಿಲ್ಲಿಸಿದ್ದ ಜಿಲ್ಲೆಯ ಕೃಷಿಕರು, ತಮ್ಮ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ನೆಡಲು ಆರಂಭಿಸಿದ್ದರು. ಮಾರುಕಟ್ಟೆಯಲ್ಲಿ ಅಡಿಕೆಯ ಬೆಲೆ ಗಗನಕ್ಕೇರಿದ ಪರಿಣಾಮವಾಗಿ ಆರಂಭವಾಗಿದ್ದ ಈ ಚಟುವಟಿಕೆಯು, ಕೃಷಿಕರು ತಮ್ಮ ಅಡಿಕೆ ತೋಟಗಳಿಗೆ ನೀರುಣಿಸಲು ಕೊಳವೆ ಬಾವಿಗಳನ್ನು ಕೊರೆಸುವ ಹಂತಕ್ಕೆ ತಲುಪಿತ್ತು. ವರುಷಗಳು ಉರುಳಿದಂತೆಯೇ ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರವೂ ನೀರಿನ ಕೊರತೆಯಿರುವ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ಕೊಳವೆ ಬಾವಿಗಳನ್ನು ಕೊರೆಸಲು ಆರಂಭಿಸಿದ್ದವು. ಇದೀಗ ಬರಪೀಡಿತ ಪ್ರದೇಶಗಳಲ್ಲಿ ಮತ್ತಷ್ಟು ಕೊಳವೆ ಬಾವಿಗಳನ್ನು ಕೊರೆಸುತ್ತಿರುವ ಸರ್ಕಾರವು, ಅಂತರ್ಜಲದ ಮಟ್ಟವು ಇನ್ನಷ್ಟು ಕುಸಿಯಲು ಪರೋಕ್ಷವಾಗಿ ಕಾರಣೀಭೂತವಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಕೆಲವೇ ವರ್ಷಗಳ ಹಿಂದೆ ೪೦೦ - ೬೦೦ ಅಡಿಗಳಷ್ಟು ಕೊರೆದಾಗ ಲಭಿಸುತ್ತಿದ್ದ ನೀರು, ಇದೀಗ ಬಲ್ಲವರು ಹೇಳುವಂತೆ ೧೦೦೦ ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಕೆಲವರ್ಷಗಳ ಹಿಂದೆಯೇ ರಾಜ್ಯ ಸರ್ಕಾರವು ಮಳೆನೀರಿನ ಕೊಯ್ಲು ಹಾಗೂ ಕೊಳವೆಬಾವಿಗಳಿಗೆ ಜಲಮರುಪೂರಣ, ಕೆರೆ, ತೊರೆ ಮತ್ತು ಬಾವಿಗಳ ಪುನಶ್ಚೇತನಗಳನ್ನು ಕ್ರಮಬದ್ಧವಾಗಿ ಹಾಗೂ ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದಲ್ಲಿ, ಇಂದು ತೀವ್ರಸ್ವರೂಪದ ಬರ ಮತ್ತು ಕುಡಿಯುವ ನೀರಿಗಾಗಿ ಪರದಾಡಬೇಕಾದಂತಹ ಸ್ಥಿತಿ ಉದ್ಭವಿಸುತ್ತಿರಲಿಲ್ಲ. 

ಕೊನೆಯ ಮಾತು 

ಅದೇನೇ ಇರಲಿ, ಪ್ರಸ್ತುತ ನಮ್ಮ ರಾಜ್ಯದ ಮತ್ತು ದೇಶದ ಅನೇಕ ರಾಜ್ಯಗಳನ್ನು ಪೀಡಿಸುತ್ತಿರುವ ಸಮಸ್ಯೆಗಳಿಗೆ ಹೆಚ್ಚುತ್ತಿರುವ ಜನಸಂಖ್ಯೆಯೂ ಕಾರಣ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಯಾವುದೇ ರಾಜಕೀಯ ಪಕ್ಷಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೇವಲ ತಮ್ಮ ಮತಬ್ಯಾಂಕ್ ಬಗ್ಗೆ ಮಾತ್ರ ಚಿಂತಿಸುವ ರಾಜಕಾರಣಿಗಳು, ದೇಶದ ಜನತೆಯನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹರಿಸಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಭಾರತೀಯರನ್ನು ಎಡೆಬಿಡದೇ ಪೀಡಿಸುತ್ತಿರುವ ಬಹುತೇಕ ಸಮಸ್ಯೆಗಳು ಇಂದಿಗೂ ಬಗೆಹರಿದಿಲ್ಲ!. 

ಡಾ.ಸಿ. ನಿತ್ಯಾನಂದ ಪೈ, ಪುತ್ತೂರು 



Sunday, May 1, 2016

INTERNATIONAL NOISE AWARENESS DAY

    

  ಶಬ್ದಮಾಲಿನ್ಯದ ಗದ್ದಲವನ್ನು ನಿಯಂತ್ರಿಸುವವರು ಯಾರು ?

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಎಪ್ರಿಲ್ ೨೭ ರಂದು " ಇಂಟರ್ನ್ಯಾಶನಲ್ ನೋಯ್ಸ್ ಅವೇರ್ನೆಸ್ ಡೇ " ಯನ್ನು ಆಚರಿಸಲಾಗುತ್ತದೆ. ದ ಸೆಂಟರ್ ಫಾರ್ ಹಿಯರಿಂಗ್  ಎಂಡ್  ಕಮ್ಯೂನಿಕೇಶನ್  ಈ ಕಾರ್ಯಕ್ರಮವನ್ನು ೧೯೯೬ ರಲ್ಲಿ ಆರಂಭಿಸಿದ್ದು, ಇದೀಗ ೨೧ ನೇ ವರ್ಷದ ಐ ಎನ್  ಎ ಡಿ ಕಾರ್ಯಕ್ರಮವು ಇಂದು ಜರಗಲಿದೆ. ಈ ಸಂದರ್ಭದಲ್ಲಿ ನಮ್ಮ ದೈನಂದಿನ ಜೀವನದಲ್ಲಿ ಕಾಡುತ್ತಿರುವ " ಶಬ್ದಮಾಲಿನ್ಯದ ಸಮಸ್ಯೆ " ಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. 
 
ದೇಶದ ಪ್ರಜೆಗಳು ನೆಮ್ಮದಿಯಿಂದ ಜೀವಿಸಲು ಭಾರತದ ಸಂವಿದಾನದಲ್ಲಿ ಅನೇಕ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಹಾಗೂ ಇದಕ್ಕಾಗಿಯೇ ಹಲವಾರು ಕಾನೂನು ಮತ್ತು ನೀತಿ ನಿಯಮಗಳನ್ನೂ ರೂಪಿಸಲಾಗಿದೆ.ಆದರೆ ಇವೆಲ್ಲವನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವ ಏಕಮಾತ್ರ ಕಾರಣದಿಂದಾಗಿ, ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸಮಸ್ಯೆಗಳು ಮತ್ತು ಅಡ್ಡಿಆತಂಕಗಳನ್ನು ಎದುರಿಸಬೇಕಾಗುತ್ತಿದೆ. ಇಂತಹ ಸಮಸ್ಯೆಗಳಲ್ಲಿ " ಶಬ್ದ ಮಾಲಿನ್ಯ" ವೂ ಒಂದಾಗಿದೆ.
 
ನಿಮ್ಮೂರಿನ ರಸ್ತೆಗಳಲ್ಲಿ ನಡೆದಾಡುವಾಗ ನಿಮ್ಮನ್ನು ಬೆಚ್ಚಿಬೀಳಿಸುವಂತಹ ವಾಹನಗಳ ಕರ್ಕಶವಾದ ಹಾರ್ನ್ ಮತ್ತು ಸಭೆ - ಸಮಾರಂಭ ಮತ್ತಿತರ ಕಾರ್ಯಕ್ರಮಗಳ ಪ್ರಚಾರದ ಸಲುವಾಗಿ, ವಾಹನಗಳಲ್ಲಿ ಅಳವಡಿಸಿರುವ ಗಜಗಾತ್ರದ ಸ್ಪೀಕರ್ ಗಳಿಂದ ಹೊರಹೊಮ್ಮುವ ಕಿವಿಯ ತಮ್ಮಟೆ ಒಡೆದುಹೋಗುವಂತಹ ಸಂಗೀತ ಅಥವಾ ಪ್ರಚಾರಕರ ಕಿರುಚಾಟಗಳಿಂದ ಸಾಕಷ್ಟು ತೊಂದರೆಗಳನ್ನು ನೀವೂ ಅನುಭವಿಸಿರಲೇಬೇಕು. ಪರೀಕ್ಷೆಗಳ ಸಮಯದಲ್ಲಂತೂ, ಇಂತಹ ಸದ್ದು ಗದ್ದಲಗಳಿಂದ ವಿದ್ಯಾರ್ಥಿಗಳ ನೆಮ್ಮದಿಗೆ ಭಂಗಬರುವುದರಲ್ಲಿ ಸಂದೇಹವಿಲ್ಲ. ಆದರೆ ಕಾನೂನುಬಾಹಿರವಾಗಿ ಇಷ್ಟೊಂದು ಶಬ್ದಮಾಲಿನ್ಯವನ್ನು ಮಾಡುತ್ತಿರುವವರ ವಿರುದ್ಧ, ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುವುದೇ ಇಲ್ಲ. ತತ್ಪರಿಣಾಮವಾಗಿ ಈ ವಿಲಕ್ಷಣ ಸಮಸ್ಯೆಯು ಅನಿಯಂತ್ರಿತವಾಗಿ ವೃದ್ಧಿಸುತ್ತಲೇ ಇದೆ.
 
ಕಾನೂನುಬಾಹಿರ
 
ಸಾರಿಗೆ ಇಲಾಖೆಯ ನಿಯಮಗಳಂತೆ ನಗರಗಳಲ್ಲಿ ಕರ್ಕಶವಾದ ಹಾರ್ನ್ ಗಳನ್ನು ಬಳಸುವಂತಿಲ್ಲ. ವಿಶೇಷವಾಗಿ ಶಾಲಾಕಾಲೇಜುಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಮತ್ತು ಶುಶ್ರೂಷಾ ಕೇಂದ್ರಗಳ ಆಸುಪಾಸಿನಲ್ಲಿ ಮತ್ತು ಇತರ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕರ್ಕಶ ಹಾರ್ನ್ ಮತ್ತು ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದೆ. ಅಂತೆಯೇ ಶಬ್ದಮಾಲಿನ್ಯ ನಿಯಂತ್ರಣ ಕಾಯಿದೆ ೨೦೦೦ ದ ನಿಯಮ ೩ ರನ್ವಯ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಸರ್ಕಾರ ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಉಚ್ಛ ನ್ಯಾಯಾಲಯ ಆದೇಶಿಸಿದೆ. ಇದಲ್ಲದೇ ರಾತ್ರಿ ೧೦ ಗಂಟೆಯಿಂದ ಬೆಳಗಿನ ಜಾವ ೬ ಗಂಟೆಯ ತನಕ ದ್ವನಿವರ್ಧಕಗಳನ್ನು ಬಳಸದಂತೆ ಸರ್ವೋಚ್ಛ ನ್ಯಾಯಾಲಯದ ಆದೇಶವಿದೆ. ಆದರೆ ಈ ಆದೇಶವನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ. ದೇಶದ ಪ್ರಜೆಗಳ ಮೂಲಭೂತ ಹಕ್ಕು ಮತ್ತು ಆರೋಗ್ಯಗಳಿಗೆ ಚ್ಯುತಿಯಾಗುವಂತಹ ಇಂತಹ ಕಾನೂನುಬಾಹಿರ ವರ್ತನೆಗಳಿಗೆ ಕಡಿವಾಣವನ್ನು ತೊಡಿಸಲೇಬೇಕಾಗಿದೆ. ಪ್ರಾಯಶಃ ಇದೇ ಕಾರಣದಿಂದಾಗಿ ಇತ್ತೀಚೆಗೆ ರಾಜ್ಯದ ಉಚ್ಛ ನ್ಯಾಯಾಲಯವು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.
 
ಪರವಾನಿಗೆಯ ನಿಯಮ
 
ಸಾಮಾನ್ಯವಾಗಿ ಖಾಸಗಿ ಆಥವಾ ಸಾರ್ವಜನಿಕ ಕಾರ್ಯಕ್ರಮಕ್ಕಾಗಿ ಧ್ವನಿವರ್ಧಕಗಳನ್ನು ಬಳಸುವ ಮುನ್ನ ಸ್ಥಳೀಯ ಆರಕ್ಷಕ ಠಾಣೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳಬೆಕಾಗುತ್ತದೆ. ಈ ಅರ್ಜಿಯಲ್ಲಿ ನಮೂದಿಸಿರುವ ಒಂದು ಷರತ್ತಿನಂತೆ ದ್ವನಿವರ್ಧಕವನ್ನು ಯಾವುದೇ ಪ್ರಚಾರ ಅಥವಾ ಅಪಪ್ರಚಾರಕ್ಕಾಗಿ ಬಳಸುವಂತಿಲ್ಲ. ವಿಶೇಷವೆಂದರೆ ಅನುಮತಿಯನ್ನು ಪಡೆದುಕೊಳ್ಳುವ ಅಧಿಕತಮ ಜನರು ಇದನ್ನು ಕೇವಲ ಪ್ರಚಾರಕ್ಕಾಗಿಯೇ ಬಳಸುತ್ತಾರೆಯೇ ಹೊರತು ಅನ್ಯ ಉದ್ದೇಶಗಳಿಗಾಗಿ ಅಲ್ಲ !.
 
ಧ್ವನಿವರ್ಧಕದ ಬಳಕೆಗಾಗಿ ಅನುಮತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸುವಾಗ ಅರ್ಜಿದಾರರ ಹೆಸರು, ವಿಳಾಸ, ಅನುಮತಿ ಪಡೆಯುವ ಉದ್ದೇಶ, ಇದರ ಪರಿಮಿತಿ, ವ್ಯಾಪ್ತಿ, ದಿನಾಂಕ, ವೇಳೆಗಳೊಂದಿಗೆ ಉಪಯೋಗಿಸುವ ಸ್ಥಳದ ವಿವರಗಳನ್ನು ನಮೂದಿಸಬೇಕಾಗುವುದು. ಜೊತೆಗೆ ಅನುಮತಿ ಪತ್ರದಲ್ಲಿರುವ ಷರತ್ತುಗಳನ್ನು ಕಡ್ಡಾಯವಾಗಿ ಪರಿಪಾಲಿಸಬೇಕಾಗುತ್ತದೆ. ಇದಕ್ಕೆ ತಪ್ಪಿದಲ್ಲಿ ಧ್ವನಿವರ್ಧಕವನ್ನು ಮುಟ್ಟುಗೋಲು ಹಾಕುವುದದರೊಂದಿಗೆ ಕರ್ನಾಟಕ ಪೊಲೀಸ್ ಕಾಯಿದೆಯ ಸೆಕ್ಷನ್ ೩೭ ರಂತೆ, ೩ ತಿಂಗಳ ಸಜೆ ಅಥವಾ ೫೦೦ ರೂ. ದಂಡ ಅಥವಾ ಇವೆರಡನ್ನೂ ವಿಧಿಸಬಹುದಾಗಿದೆ. ಬಹುತೇಕ ಜನರು ನಿರ್ದಿಷ್ಟ ಕಾರ್ಯಕ್ರಮವೊಂದರ ಪ್ರಚಾರದ ಸಲುವಾಗಿಯೇ ಅನುಮತಿಯನ್ನು ಪಡೆದುಕೊಳ್ಳುತ್ತಿದ್ದು, ಪರವಾನಿಗೆಯ ಷರತ್ತಿನಂತೆ ಧ್ವನಿವರ್ಧಕವನ್ನು ಪ್ರಚಾರ - ಅಪಪ್ರಚಾರಕ್ಕಾಗಿ ಬಳಸುವಂತಿಲ್ಲ. ಅರ್ಥಾತ್, ಸಂಗೀತ, ನಾಟಕ, ನೃತ್ಯ ಮತ್ತಿತರ ಸಬಾ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ !.
 
ಆದರೆ ಕಿವಿಗಡಚಿಕ್ಕುವ ಸದ್ದುಮಾಡುವ ಧ್ವನಿವರ್ಧಕಗಳ ಬಳಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಪರವಾನಿಗೆಯ ಶರತ್ತಿನ ಉಲ್ಲಂಘನೆಯ ಸಲುವಾಗಿ ಆರಕ್ಷಕರು ಇವುಗಳನ್ನು ಬಳಸುವವರ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಂಡಿರುವುದು ನಮಗಂತೂ ತಿಳಿದಿಲ್ಲ. ಇತ್ತೀಚಿಗೆ ರಾಜ್ಯದ ಉಚ್ಛ ನ್ಯಾಯಾಲಯವು ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿರುವ ಪರಿಣಾಮ ಏನಾಗಲಿದೆ ಎಂದು ಕಾದುನೋಡಬೇಕಷ್ಟೇ.
 
ಡಾ.ಸಿ.ನಿತ್ಯಾನಂದ ಪೈ, ಪುತ್ತೂರು