Wednesday, November 13, 2013

Nov.14- World Diabetes Day



                                            

                    ಸಕ್ಕರೆಯ ಮೇಲೆ ಏಕಿಷ್ಟು ಅಕ್ಕರೆ?

   ಸಕ್ಕರೆಯಂತಹ ಸವಿಮಾತುಗಳಿಗೆ ಮನಸೋಲುವ ಹುಲುಮಾನವರು, ಸಕ್ಕರೆಯಿಂದ ತಯಾರಿಸಿದ ಸ್ವಾದಿಷ್ಟ ಖಾದ್ಯ-ಪೇಯಗಳಿಗೆ ಮನಸೋಲದಿರುವುದು ಅಸಾಧ್ಯ. ಜಿಲೇಬಿ, ಗುಲಾಬ್ ಜಾಮೂನ್, ಚಂಪಾಕಲಿ, ಲಾಡು, ಹೋಳಿಗೆ, ಪಾಯಸಗಳ ಹೆಸರುಗಳನ್ನು ಕೇಳಿದೊಡನೆ ಬಾಯಲ್ಲಿ ನೀರೂರಿಸದ ಭಾರತೀಯರೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಪ್ರಾಯಶಃ ಇದೇ ಕಾರಣದಿಂದಾಗಿ ಭಾರತೀಯರ ಅಡುಗೆಮನೆಯಲ್ಲಿ ಸಕ್ಕರೆಗೆ ಅಗ್ರಸ್ಥಾನ ಸಲ್ಲುತ್ತದೆ!. 

ಶುಭ ಸಮಾಚಾರಗಳು ಅಥವಾ ಯಾವುದೇ ಸಂತೋಷದ ಸುದ್ದಿಯೊಂದನ್ನು ಬಂಧುಮಿತ್ರರಿಗೆ ತಿಳಿಸುವಾಗ, ಬಾಯಿ ಸಿಹಿಮಾಡುವ ಸಂಪ್ರದಾಯ ಭಾರತೀಯರ ವೈಶಿಷ್ಟ್ಯವಾಗಿದೆ. ಜನನ-ಮರಣಗಳಿಗೆ ಸಂಬಂಧಿಸಿದ ವಿಶಿಷ್ಟ ಆಚರಣೆಗಳ ಸಂದರ್ಭಗಳಲ್ಲೂ, ಸಿಹಿತಿಂಡಿಗಳನ್ನು ಬಡಿಸುವುದು ನಮ್ಮ ಸಂಪ್ರದಾಯವಾಗಿದೆ. ವಿವಿಧ ಧರ್ಮೀಯರ ಹಬ್ಬ ಹರಿದಿನಗಳಲ್ಲಂತೂ, ಸಿಹಿತಿಂಡಿಗಳ ವಿನಿಮಯ ಅನಿವಾರ್ಯವೆನಿಸಿದೆ. ಈ ರೀತಿಯಲ್ಲಿ ಭಾರತೀಯರು ಸೇವಿಸುತ್ತಿರುವ ವೈವಿಧ್ಯಮಯ ಸಿಹಿತಿಂಡಿಗಳ ಪ್ರಮಾಣವು, ಪ್ರಾಯಶಃ ಜಗತ್ತಿನ ಅನ್ಯ ರಾಷ್ಟ್ರಗಳ ಜನರಿಗಿಂತ ಸಾಕಷ್ಟು ಹೆಚ್ಚಿದೆ. 

ಭಾರತದಲ್ಲಿ ಜರಗುವ ಪ್ರತಿಯೊಂದು ಸಮಾರಂಭ ಹಾಗೂ ಔತಣಕೂಟಗಳಲ್ಲಿ ಸಿಹಿತಿಂಡಿಗಳು ಮತ್ತು ಪಾಯಸಗಳಿಗೆ ವಿಶೇಷವಾದ ಸ್ಥಾನಮಾನಗಳಿವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೈವಿಧ್ಯಮಯ ಸಿಹಿತಿನಿಸುಗಳನ್ನು ಮನಸಾರೆ ಸವಿಯುವ ಅತಿಥಿಗಳು, ಅಪ್ಪಿತಪ್ಪಿಯೂ ತಾವು ಸೇವಿಸಿದ ಖಾದ್ಯಪೇಯಗಳಲ್ಲಿನ ಸಕ್ಕರೆಯ ಪ್ರಮಾಣ ಹಾಗೂ ಇವುಗಳ ಅತಿಸೇವನೆಯು, ತಮ್ಮ ಆರೋಗ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ. ಅಂತೆಯೇ ಅನೇಕ ಮಧುಮೇಹ ಪೀಡಿತರೂ ಮನೆಮಂದಿಯ ಕಣ್ಣುತಪ್ಪಿಸಿ, ಸ್ವಾದಿಷ್ಟವಾದ ಸಿಹಿತಿಂಡಿಗಳನ್ನು ಮನಸಾರೆ ಸವಿಯುವ ಸಮಾರಂಭಗಳನ್ನು ತಪ್ಪಿಸಿಕೊಳ್ಳುವುದಿಲ್ಲ!. 

ಅನುಭವೀ ವೈದ್ಯರೇ ಹೇಳುವಂತೆ, ಅವರಲ್ಲಿ ತಪಾಸಣೆಗಾಗಿ ಬಂದವರಿಗೆ ಆಕಸ್ಮಿಕವಾಗಿ ಮಧುಮೇಹ ವ್ಯಾಧಿಯ ಇರುವಿಕೆ ಪತ್ತೆಯಾದಲ್ಲಿ, ಈ ವ್ಯಾಧಿಗಿಂತಲೂ ಹೆಚ್ಚಾಗಿ ತಾವಿನ್ನು ಸಿಹಿತಿಂಡಿಗಳನ್ನು ಸವಿಯುವಂತಿಲ್ಲ ಎನ್ನುವ ವಿಚಾರವೇ ಅಸಹನೀಯವೆನಿಸುತ್ತದೆ. ಭಾರತೀಯರಿಗೆ ಸಕ್ಕರೆಯ ಮೇಲಿರುವ ಅತಿಯಾದ ಅಕ್ಕರೆಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇರೊಂದಿಲ್ಲ!. 

ಅತಿಯಾದರೆ ಅಮೃತವೂ........ 

೨೦೦೮-೦೯ ರ  ಅಂಕಿ ಅಂಶಗಳಂತೆ ಭಾರತೀಯರು ವರ್ಷಂಪ್ರತಿ ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವು ಸುಮಾರು ೩೦ ಕಿಲೋಗ್ರಾಂ ಎಂದಲ್ಲಿ ನೀವೂ ನಂಬಲಾರಿರಿ. ಅರ್ಥಾತ್, ಪ್ರತಿಯೊಬ್ಬ ಭಾರತೀಯನು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವು ೮೦ ಗ್ರಾಂ ಗಳಷ್ಟಿರುತ್ತದೆ. ಕಳೆದ ಎರಡು ವರ್ಷಗಳಿಂದ ಈ ಪ್ರಮಾಣವು ಶೇ. ೨೦ ರಷ್ಟು ಹೆಚ್ಚುತ್ತಿದೆ. ಈ ಪ್ರಮಾಣವು ಇನ್ನಷ್ಟು ಹೆಚ್ಚುತ್ತ ಹೋದಲ್ಲಿ, ೨೦೨೦ ಕ್ಕೂ ಮುನ್ನ ಪ್ರತಿವರ್ಷ ನಾವು ಸೇವಿಸುವ ಸಕ್ಕರೆಯ ಪ್ರಮಾಣವು ದುಪ್ಪಟ್ಟಾಗಲಿದೆ!. 

ಪ್ರಸ್ತುತ ಭಾರತವು ವಿಶ್ವದ ಮಧುಮೇಹಿಗಳ ರಾಜಧಾನಿ ಎನಿಸಿರಲು ಇತರ ಕೆಲವು ಕಾರಣಗಳೊಂದಿಗೆ, ಸಕ್ಕರೆಯ ಮೇಲಿರುವ ಅತಿಯಾದ ಅಕ್ಕರೆಯೂ ಪ್ರಮುಖ ಕಾರಣವೆನಿಸಿದೆ. ಶಾಶ್ವತ ಪರಿಹಾರವಿಲ್ಲದ ಈ ಗಂಭೀರ ಕಾಯಿಲೆಗೆ ಸುಲಭವಾಗಿ ಈಡಾಗಲು, ಅತಿಯಾದ ಸಿಹಿತಿಂಡಿಗಳ ಸೇವನೆಯೂ ಕಾರಣವೆಂದು ಅನೇಕ ವಿದ್ಯಾವಂತರಿಗೂ ತಿಳಿದಿಲ್ಲ. 

ನಾವು ದಿನನಿತ್ಯ ಬಳಸುವ ಒಂದು ಟೀ ಸ್ಪೂನ್ ಸಕ್ಕರೆಯಲ್ಲಿ ೪೮ ಕ್ಯಾಲರಿಗಳಿವೆ. ಸಕ್ಕರೆಯ ಅತಿಸೇವನೆಯಿಂದ ದಂತಕುಳಿಗಳು, ಮಧುಮೇಹ, ಅತಿಬೊಜ್ಜು, ಗೌಟ್, ಹೃದ್ರೋಗಗಳು ಮತ್ತು ಕ್ಯಾನ್ಸರ್ ನಂತಹ ಗಂಭೀರ- ಮಾರಕ ವ್ಯಾಧಿಗಳು ಬಾಧಿಸುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. 

ಸಕ್ಕರೆಯಿಂದ ಕೊಬ್ಬು?

ನಾವು ಸೇವಿಸಿದ ಸಕ್ಕರೆಯು ಜೀರ್ಣವಾದ ಬಳಿಕ ಗ್ಲೂಕೋಸ್ ಮತ್ತು ಫ್ರುಕ್ಟೋಸ್ ಗಳಾಗಿ ವಿಭಜಿಸಲ್ಪಟ್ಟು ಸಣ್ಣಕರುಳಿನ ಮೂಲಕ ಕ್ಷಿಪ್ರಗತಿಯಲ್ಲಿ ಹೀರಲ್ಪಟ್ಟ ಬಳಿಕ ರಕ್ತದಲ್ಲಿ ಬಿಡುಗಡೆಯಾಗುತ್ತವೆ. ತತ್ಪರಿಣಾಮವಾಗಿ ರಕ್ತದಲ್ಲಿನ ಗ್ಲೂಕೋಸ್ ನ ಪ್ರಮಾಣವು ಹೆಚ್ಚಿ, ನಮ್ಮ ಶಾರೀರಿಕ ಕ್ರಿಯೆಗಳು ಹಾಗೂ ಅನ್ಯ ಚಟುವಟಿಕೆಗಳಿಗೆ ಅವಶ್ಯವೆನಿಸುವ "ಶಕ್ತಿ"ಯನ್ನು ಒದಗಿಸುತ್ತದೆ. ಆದರೆ ನಮ್ಮ ಶರೀರಕ್ಕೆ ತತ್ ಕ್ಷಣ ಅವಶ್ಯವಿರುವುದಕ್ಕಿಂತಲೂ ಅಧಿಕ ಪ್ರಮಾಣದ ಗ್ಲೂಕೋಸ್ ಲಭ್ಯವಾದರೆ, ಅದು ಗ್ಲೈಕೋಜೆನ್ ಅಥವಾ ಕೊಬ್ಬಿನ ರೂಪದಲ್ಲಿ ಪರಿವರ್ತನೆಗೊಂಡು ಶರೀರದಲ್ಲಿ ಸಂಗ್ರಹವಾಗುತ್ತದೆ. ಇದೇ ಕಾರಣದಿಂದಾಗಿ ನಮ್ಮ ಶರೀರಕ್ಕೆ ಅಗತ್ಯವಿರುವುದಕ್ಕಿಂತ ಅಧಿಕ ಪ್ರಮಾಣದ ಸಕ್ಕರೆಯ ಸೇವನೆಯೊಂದಿಗೆ ಶಾರೀರಿಕ ಚಟುವಟಿಕೆಗಳೂ ಕಡಿಮೆಯಾದಲ್ಲಿ, ಸ್ವಾಭಾವಿಕವಾಗಿ ಶರೀರದಲ್ಲಿ ಸಂಗ್ರಹವಾಗುವ ಕೊಬ್ಬಿನ ಪ್ರಮಾಣವು ಹೆಚ್ಚಿ, ಅತಿಬೊಜ್ಜಿನ ಸಮಸ್ಯೆಗೆ ಕಾರಣವೆನಿಸುತ್ತದೆ. 

ಸಕ್ಕರೆಯಿಂದ ತಯಾರಿಸಿದ ಖಾದ್ಯಪೇಯಗಳ ಅತಿಸೇವನೆಯಿಂದ ಶರೀರದಲ್ಲಿ ಇನ್ಸುಲಿನ್ ನ ಸ್ರಾವವು ಅಧಿಕವಾಗುವುದರಿಂದ, ರಕ್ತದಲ್ಲಿನ ಟ್ರೈ ಗ್ಲಿಸರೈಡ್ ಗಳ ಪ್ರಮಾಣವು ಹೆಚ್ಚುವುದು. ಪರಿಣಾಮವಾಗಿ ಎಚ್. ಡಿ . ಎಲ್ ಕೊಲೆಸ್ಟರಾಲ್ ನ ಪ್ರಮಾಣವು ಕಡಿಮೆಯಾಗುವುದರಿಂದ ಹೃದ್ರೋಗಗಳು ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತವೆ. 

ಸಕ್ಕರೆಯ ಬಳಕೆಗೆ ಕತ್ತರಿ!

ನಿಜ ಹೇಳಬೇಕಿದ್ದಲ್ಲಿ ನಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆಯ ಸೇವನೆ ಅನಿವಾರ್ಯವಲ್ಲ. ಕೆಲ ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ಸಕ್ಕರೆಯ ಸೇವನೆಯನ್ನು ಕಡಿಮೆಮಾಡುವಂತೆ ಜನರ ಮನವನ್ನು ಒಲಿಸಲು ಅಂತರ ರಾಷ್ಟ್ರೀಯ ಅಭಿಯಾನವೊಂದನ್ನು ನಡೆಸಿತ್ತು. ಜಾಗತಿಕ ಮಟ್ಟದಲ್ಲಿ ಸಕ್ಕರೆಯ ಅತಿಸೇವನೆಯಿಂದ ಉದ್ಭವಿಸುವ ಅತಿಬೊಜ್ಜು, ಮಧುಮೇಹ ಹಾಗೂ ಹ್ರುದ್ರೋಗಗಳಂತಹ ಗಂಭೀರ ಆರೋಗ್ಯದ ಸಮಸ್ಯೆಗಳ ಪ್ರಮಾಣ ಹೆಚ್ಚಲಾರಂಭಿಸಿದ್ದೇ , ಈ ಅಭಿಯಾನವನ್ನು ಹಮ್ಮಿಕೊಳ್ಳಲು ಮೂಲಕಾರಣ ಎನಿಸಿತ್ತು. 

ಪ್ರಾಯಶಃ ಇವೆಲ್ಲಾ ಕಾರಣಗಳಿಂದಾಗಿ ಅನೇಕ ಪಾಶ್ಚಾತ್ಯರು ತಾವು ದಿನನಿತ್ಯ ಸೇವಿಸುವ ಚಹಾ- ಕಾಫಿಗಳಲ್ಲಿ ಸಕ್ಕರೆಯನ್ನು ಬೆರೆಸುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಅನೇಕ ಮಧುಮೇಹಿಗಳೂ ಸಕ್ಕರೆಯನ್ನು ವರ್ಜಿಸುವುದಿಲ್ಲ!. 

ಪ್ರಸ್ತುತ ನೀವು ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡಲು ಬಯಸಿದಲ್ಲಿ, ಈ ಕೆಳಗಿನ ಸೂಚನೆಗಳನ್ನು ಪಾಲಿಸಿ. 
*ಚಾಕಲೇಟ್,ಸಿಹಿತಿಂಡಿಗಳು, ಲಗ್ಹುಪಾನೀಯಗಳು ಮತ್ತು ಐಸ್ ಕ್ರೀಮ್ ಗಳನ್ನೂ ಆಗಾಗ ಸೇವಿಸದಿರಿ. 
*ಸಮಾರಂಭ ಹಾಗೂ ಔತಣಕೂಟಗಳಲ್ಲಿ ಭಾಗವಹಿಸಿದಾಗ ಕೇವಲ ಒಂದು ಸಿಹಿತಿಂಡಿ ಅಥವಾ ಒಂದಿಷ್ಟು ಪಾಯಸವನ್ನುಮಾತ್ರ ಸೇವಿಸಿ. 
*ಪ್ರತಿನಿತ್ಯ ಸಿಹಿತಿಂಡಿಗಳನ್ನು ಮೆಲ್ಲುವ ಹವ್ಯಾಸವನ್ನು ನಿಲ್ಲಿಸಿ. 
*ಹಾಲು- ಮೊಸರುಗಳಿಗೂ ಸಕ್ಕರೆಯನ್ನು ಬೆರೆಸಿ ಸೇವಿಸದಿರಿ. ಚಹಾ- ಕಾಫಿಗಳಲ್ಲಿ ಬಳಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ. 
* ನಿಮ್ಮ ಮಕ್ಕಳಿಗೆ ಇಡ್ಲಿ,ದೋಸೆ, ಉಪ್ಪಿಟ್ಟು ಮತ್ತಿತರ ತಿಂಡಿಗಳೊಂದಿಗೆ ಸಕ್ಕರೆ ಅಥವಾ ಹಣ್ಣಿನ ಜಾಮ್ ಗಳನ್ನೂ ಬೆರೆಸಿ ತಿನ್ನಿಸುವ ಹವ್ಯಾಸವನ್ನು ನಿಲ್ಲಿಸಿ. ಇದಕ್ಕೆ ಬದಲಾಗಿ ಸ್ವಾಭಾವಿಕವಾಗಿ ಸಿಹಿಯಾಗಿರುವ ಹಣ್ಣುಹಂಪಲುಗಳನ್ನು ಹಿತಮಿತವಾಗಿ ತಿನ್ನಿ. 

ಅಂತಿಮವಾಗಿ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರೊಂದಿಗೆ, ದಿನನಿತ್ಯ ೩೦ ರಿಂದ ೬೦ ನಿಮಿಷಗಳ ಕಾಲ ವ್ಯಾಯಾಮ, ನಡಿಗೆ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಿ. ಇದರಿಂದಾಗಿ ಅತಿಬೊಜ್ಜು, ಅಧಿಕ ತೂಕ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹ್ರುದ್ರೋಗಗಳಲ್ಲದೇ ಇತರ ಅನೇಕ ವ್ಯಾಧಿಗಳ ಸಂಭಾವ್ಯತೆಯನ್ನು ತಡೆಗಟ್ಟುವುದು ಸುಲಭಸಾಧ್ಯ ಎನಿಸುವುದು. 


 ವಿಶ್ವ ಮಧುಮೇಹ ದಿನದ ಮಹತ್ವ  

ಜಗತ್ತಿನಾದ್ಯಂತ ಅನಿಯಂತ್ರಿತವಾಗಿ ಹೆಚ್ಚುತ್ತಿರುವ "ಮಧುಮೇಹ" ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ, ವರ್ಷಂಪ್ರತಿ ನವಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ಅಂತರ ರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ನೇತ್ರತ್ವದಲ್ಲಿ ವಿವಿಧ ರಾಷ್ಟ್ರಗಳ ವೈದ್ಯಕೀಯ ಮತ್ತು ಸ್ವಯಂಸೇವಾ ಸಂಘಟನೆಗಳು ಈ ದಿನ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. 

ಅಸಂಖ್ಯ ಮಧುಮೇಹಿಗಳ ಪಾಲಿಗೆ "ಸಂಜೀವಿನಿ" ಎನಿಸಿರುವ "ಇನ್ಸುಲಿನ್" ಔಷದವನ್ನು ಚಾರ್ಲ್ಸ್ ಬೆಸ್ಟ್ ಅವರೊಂದಿಗೆ ಸಂಶೋಧಿಸಿದ ವೈದ್ಯಕೀಯ ವಿಜ್ಞಾನಿ ಫ್ರೆಡರಿಕ್ ಬಾಂಟಿಂಗ್ ರ ಜನ್ಮ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಧುಮೇಹ ವ್ಯಾಧಿಯ ಸಂಭಾವ್ಯತೆ, ತಡೆಗಟ್ಟುವ ಮಾರ್ಗೋಪಾಯಗಳು, ಇದರ ದುಷ್ಪರಿಣಾಮಗಳು,ಮಾರಕತೆ ಮತ್ತು ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

ವಿಶ್ವ ಮಧುಮೇಹ ಒಕ್ಕೂಟವು "ಮಧುಮೇಹದಿಂದ ರಕ್ಷಿಸಿಕೊಳ್ಳಿ" ಎನ್ನುವ ಘೋಷಣೆಯೊಂದಿಗೆ ಈ ವರ್ಷದ ವಿಶ್ವ ಮಧುಮೇಹ ದಿನವನ್ನು ಆಚರಿಸುತ್ತಿದೆ. ಈ ಘೋಷಣೆಯನ್ನು ಅಕ್ಷರಶಃ ಪರಿಪಾಲಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ. 

ಡಾ. ಸಿ. ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ 
ಬೊಳುವಾರು,ಪುತ್ತೂರು,ದ. ಕ

ಉದಯವಾಣಿ ಪತ್ರಿಕೆಯ ದಿ. ೧೪-೧೧-೨೦೦೮ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 




Tuesday, November 12, 2013

Rogi bayasiddu haalu, Vaidyaru neediddu.........?



              ರೋಗಿ ಬಯಸಿದ್ದು ಹಾಲು, ವೈದ್ಯರು ನೀಡಿದ್ದು ........?

ತಮ್ಮ ವೃತ್ತಿಜೀವನದಲ್ಲಿ ವೈದ್ಯರು ಗಳಿಸುವ ವಿಶಿಷ್ಟ ಅನುಭವಗಳಲ್ಲಿ ಕೆಲವೊಂದು ಘಟನೆಗಳು ಅವಿಸ್ಮರಣೀಯ ಎನಿಸುತ್ತವೆ. ಬಹುತೇಕ ಸಂದರ್ಭಗಳಲ್ಲಿ ರೋಗಿಗಳ ಅಜ್ಞಾನ, ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳೇ ಇದಕ್ಕೆ ಕಾರಣವಾಗಿರುತ್ತವೆ. 
--------------                ------------                  ------------------                -----------------                    ------------       ---------------

   ಬಹುತೇಕ ವಯೋವೃದ್ಧರಿಗೆ "ಮರಣದ ಭೀತಿ" ಕಾಡುವಂತೆಯೇ, ಅನೇಕ ಆರೋಗ್ಯವಂತರು ಹಾಗೂ ಮಧ್ಯವಯಸ್ಸಿನ ವ್ಯಕ್ತಿಗಳಿಗೆ ಶಾಶ್ವತ ಪರಿಹಾರವಿಲ್ಲದ ಗಂಭೀರ ಕಾಯಿಲೆಗಳ ಬಗ್ಗೆ ಅವ್ಯಕ್ತ ಭಯ ಇರುತ್ತದೆ. ಜೀವನ ಪರ್ಯಂತ ಔಷದ ಸೇವನೆಯ ಅನಿವಾರ್ಯತೆ ಇರುವ ಇಂತಹ ಕಾಯಿಲೆಗಳನ್ನು ವೈದ್ಯರು ನಿಖರವಾಗಿ ಪತ್ತೆಹಚ್ಚಿ ರೋಗಿಗೆ ತಿಳಿಸಿದಾಗ, ಈ ಕಾಯಿಲೆ ತನ್ನನ್ನು ಬಾಧಿಸುತ್ತಿದೆ ಎಂದು ಒಪ್ಪಿಕೊಳ್ಳಲು ಅನೇಕರು ಸಿದ್ಧರಿರುವುದಿಲ್ಲ. ಅಂತೆಯೇ ಈ ವ್ಯಾಧಿಯನ್ನು ನಿಯಂತ್ರಿಸಲು ಅವಶ್ಯಕವೆನಿಸುವ ಔಷದಗಳನ್ನು ಸೇವಿಸಲೂ ಒಪ್ಪುವುದೇ ಇಲ್ಲ!. 

ಇನ್ನು ಕೆಲವರು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನೇ ಪಡೆದುಕೊಳ್ಳುವುದಿಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೆ ಔಷದಗಳನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಳ್ಳುವ ಇಂತಹ ವ್ಯಕ್ತಿಗಳು, ಅನೇಕಬಾರಿ ತಮ್ಮ ನಿರ್ಲಕ್ಷ್ಯದಿಂದಾಗಿ ಅಯಾಚಿತ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಅಪರೂಪವೇನಲ್ಲ. 

ವೀರಪ್ಪನ ಬಿ. ಪಿ 

ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಅನಿವಾರ್ಯವಾಗಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ವೀರಪ್ಪನು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದಾಗಿ ಯಶಸ್ವೀ ಉದ್ಯಮಿ ಎನಿಸಿದ್ದನು. ಬಾಲ್ಯದಲ್ಲಿ ಕಿತ್ತು ತಿನ್ನುತ್ತಿದ್ದ ಬಡತನದಿಂದಾಗಿ ದಿನವಿಡೀ ಮೈಮುರಿಯುವಂತೆ ದುಡಿಯುತ್ತಿದ್ದ ವೀರಪ್ಪನಿಗೆ ಅನಾರೋಗ್ಯವೆಂದರೆ ಏನೆಂದೇ ತಿಳಿದಿರಲಿಲ್ಲ. ಜತೆಗೆ ಸಣ್ಣಪುಟ್ಟ ಕಾಯಿಲೆಗಳು ಬಾಧಿಸಿದ ಸಂದರ್ಭಗಳಲ್ಲೂ, ಔಷದ ಪಡಯಲು ಬೇಕಾದಷ್ಟು ಹಣ ಆತನಲ್ಲಿ ಇರುತ್ತಿರಲಿಲ್ಲ. ಏಕೆಂದರೆ ಆತನ ದುಡಿಮೆಯಿಂದಲೇ ಆತನ ತಾಯಿ ಮತ್ತು ತಂಗಿಯರ ಹೊಟ್ಟೆ ತುಂಬಬೇಕಿತ್ತು. 

ಆದರೆ ಇದೀಗ ಹತ್ತಾರು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದ ವೀರಪ್ಪನು ೫೦ ವರ್ಷ ವಯಸ್ಸಾದ ಬಳಿಕ ಹೆಚ್ಚಿನ ಜವಾಬ್ದಾರಿಗಳನ್ನು ಮಗನಿಗೆ ವಹಿಸಿ, ಹೆಸರಿಗೆ ತಕ್ಕಂತೆ ಇವೆಲ್ಲವುಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದನು. 

ಇತ್ತೀಚಿನ ಕೆಲವು ತಿಂಗಳುಗಳಿಂದ ವೀರಪ್ಪನನ್ನು ಕಾಡುತ್ತಿದ್ದ ಅತಿಆಯಾಸ ಮತ್ತು ತಲೆನೋವಿನ ಸಮಸ್ಯೆಯು  ಹೆಚ್ಚಾದ ಕಾರಣದಿಂದಾಗಿ ನಗರದ ಖ್ಯಾತ ವೈದ್ಯರ ಸಲಹೆ ಪಡೆಯಲು ತೆರಳಿದ್ದನು. ವೀರಪ್ಪನ ಸಮಸ್ಯೆಗಳನ್ನು ಆಲಿಸಿದ ಬಳಿಕ ಶಾರೀರಿಕ ತಪಾಸಣೆಯನ್ನು ನಡೆಸಿದ ವೈದ್ಯರಿಗೆ ಆತನನ್ನು ಪೀಡಿಸುತ್ತಿರುವ ತೊಂದರೆಗಳಿಗೆ ಅಧಿಕ ರಕ್ತದೊತ್ತಡವೇ ಕಾರಣವೆಂದು ತಿಳಿಯಿತು. ಅಪಾಯಕಾರಿ ಮಟ್ಟವನ್ನು ತಲುಪಿದ್ದ ರಕ್ತದೊತ್ತಡವನ್ನು ಕ್ಷಿಪ್ರಗತಿಯಲ್ಲಿ ನಿಯಂತ್ರಿಸದೇ ಇದ್ದಲ್ಲಿ ಪ್ರಾಣಾಪಾಯಕ್ಕೆ ಕಾರಣವೆನಿಸುವ ಸಾಧ್ಯತೆಗಳನ್ನು ಅರಿತ ವೈದ್ಯರು, ತಕ್ಷಣವೇ ಚಿಕಿತ್ಸೆಯನ್ನು ಆರಂಭಿಸುವಂತೆ ಸೂಚಿಸಿದ್ದರು. ಜತೆಗೆ ಮರುದಿನ ಬೆಳಗ್ಗೆ ಆಹಾರ ಸೇವನೆಗೆ ಮುನ್ನ ರಕ್ತಪರೀಕ್ಷೆಯನ್ನು ಮಾಡಿಸಿಕೊಳ್ಳಲು ಆದೇಶಿಸಿದ್ದರು. ತನಗೆ ಅಧಿಕರಕ್ತದೊತ್ತಡ ಇದೆ ಎಂದು ಒಪ್ಪಲು ಸಿದ್ಧನಿಲ್ಲದ ವೀರಪ್ಪನು, ರಕ್ತಪರೀಕ್ಷೆಯ ಪರಿಣಾಮ ದೊರೆತ ಬಳಿಕವೇ ಚಿಕಿತ್ಸೆ ಆರಂಭಿಸುವುದಾಗಿ ಪಟ್ಟು ಹಿಡಿದಾಗ ಅನ್ಯಮಾರ್ಗವಿಲ್ಲದೆ ವೈದ್ಯರು ಸುಮ್ಮನಾಗಿದ್ದರು. 
 
ಮರುದಿನ ಸಂಜೆ ವೈದ್ಯರಲ್ಲಿಗೆ ಬಂದ ವೀರಪ್ಪನ ಗಂಟಿಕ್ಕಿದ ಮುಖವನ್ನು ಕಂಡ ವೈದ್ಯರಿಗೆ ಏನೋ ಎಡವಟ್ಟಾಗಿದೆ ಎನ್ನುವ ಸಂದೇಹ ಮೂಡಿತ್ತು. ಆದರೂ ಮುಗುಳುನಗೆಯೊಂದಿಗೆ ಆತನನ್ನು ಸ್ವಾಗತಿಸಿದ ವೈದ್ಯರು, ರಕ್ತ ಪರೀಕ್ಷೆ ಮಾಡಿಸಿಕೊಂಡಿರಾ ಎಂದು ಕೇಳಿದರು. ತಾನು ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಈ ಪರೀಕ್ಷೆಯನ್ನು ಮಾಡಿದ "ಡಾಕ್ಟರರು" ರಕ್ತದಲ್ಲೇನೂ ತೊಂದರೆಗಳಿಲ್ಲ ಎಂದು ಹೇಳಿದ್ದು, ನಿಮ್ಮ ಮಾತನ್ನು ನಂಬಿ ಬಿ. ಪಿ.  ಯ ಮಾತ್ರೆಗಳನ್ನು ನುಂಗಿದ್ದಲ್ಲಿ ಪಕ್ಷವಾತದಿಂದ ಹಾಸಿಗೆ ಹಿಡಿಯಬೇಕಿತ್ತು ಎಂದು ದೂರಿದ್ದನು. ಆತನ ಕಟು ಮಾತುಗಳನ್ನು ಕೇಳಿ ದಿಗ್ಭ್ರಾಂತರಾದ ವೈದ್ಯರು ಸಾವರಿಸಿಕೊಳ್ಳುವಷ್ಟರಲ್ಲಿ, ವೀರಪ್ಪನು ದುರ್ದಾನ ಪಡೆದವನಂತೆ ಹೊರನಡೆದಿದ್ದನು!. 

ನಿಜ ಹೇಳಬೇಕಿದ್ದಲ್ಲಿ ವೀರಪ್ಪನ ಸೋದರ ಸಂಬಂಧಿಯೊಬ್ಬರು ಅಧಿಕ ರಕ್ತದೊತ್ತಡ ಪೀಡಿತರಾಗಿದ್ದು, ಔಷದಗಳನ್ನು ಕ್ರಮಬದ್ಧವಾಗಿ ಸೇವಿಸದ ಕಾರಣದಿಂದಾಗಿ ಪಕ್ಷವಾತಕ್ಕೆ ಈಡಾಗಿದ್ದರು.ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಈ ರೋಗಿಗೆ ಬಿ. ಪಿ. ಯ ಮಾತ್ರೆಗಳನ್ನು ದಿನನಿತ್ಯ ತಪ್ಪದೆ ಜೀವನಪರ್ಯಂತ ಸೇವಿಸಬೇಕೆಂದು ತಜ್ನವೈದ್ಯರು ಎಚ್ಚರಿಕೆ ನೀಡಿದ್ದರು. ಈ ವಿಚಾರವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ವೀರಪ್ಪನ ಅಭಿಪ್ರಾಯವು ಇದಕ್ಕೆ ತದ್ವಿರುದ್ಧವಾಗಿತ್ತು. ಇದೇ ಕಾರಣದಿಂದಾಗಿ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ಹಿಂಜರಿದಿದ್ದ ವೀರಪ್ಪನ ರಕ್ತವನ್ನು ಪರೀಕ್ಷಿಸಿದ್ದ ಮೈಕ್ರೋ ಬಯಾಲಜಿಸ್ಟ್ "ನಿಮಗೇನೂ ತೊಂದರೆಯಿಲ್ಲ"(ಅರ್ಥಾತ್ ಆತನ ರಕ್ತದಲ್ಲಿನ ಕೊಲಸ್ಟ ರಾಲ್ ಮತ್ತು ಟ್ರೈ ಗ್ಲಿಸರೈಡ್ ಗಳ ಪ್ರಮಾಣವು ನಾರ್ಮಲ್ ಆಗಿವೆ) ಎಂದು ಹೇಳಿದಾಗ, ತನಗೆ ಅಧಿಕ ರಕ್ತದೊತ್ತಡ ಇಲ್ಲವೆಂದು ವೀರಪ್ಪನು ಅಪಾರ್ಥ ಮಾಡಿಕೊಂಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವೆನಿಸಿತ್ತು!. 

ಭಾಗ-೨

ಸುಮಾರು ಮೂರು ತಿಂಗಳುಗಳ ಬಳಿಕ ತನ್ನ ಅತಿಆಯಾಸ ಮತ್ತು ತಲೆನೋವುಗಳನ್ನು ಸಹಿಸಲಾಗದ ವೀರಪ್ಪನು, ಮಂಗಳೂರಿನ ದೊಡ್ದಾಸ್ಪತ್ರೆಯ ಸುಪ್ರಸಿದ್ಧ ತಜ್ಞರನ್ನು ಭೇಟಿಯಾದನು. ಈ ಸಂದರ್ಭದಲ್ಲಿ ಆತನಿಂದ ಹಿಂದೆ ನಡೆದಿದ್ದ ಘಟನೆಯನ್ನು ಕೇಳಿ ತಿಳಿದ ವೈದ್ಯರು ಮೀಸೆಯಡಿಯಲ್ಲೇ ನಕ್ಕರು. ವೀರಪ್ಪನನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರಿಗೆ ಆತನ ರಕ್ತದೊತ್ತಡವು ಅತಿಯಾಗಿರುವುದು ತಿಳಿದುಬಂದಿತ್ತು. ಆದರೆ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ಸಿದ್ಧನಿಲ್ಲದ ಆತನಿಗೆ ಒಳ್ಳೆಯ ಉದ್ದೇಶದಿಂದ ಸುಳ್ಳು ಹೇಳುವ ಧರ್ಮಸಂಕಟ ವೈದ್ಯರಿಗೆ ಬಂದಿತ್ತು. 

ವೀರಪ್ಪನಿಗೆ ಗಂಭೀರ ತೊಂದರೆಗಳಿಲ್ಲವೆಂದು ಸಮಾಧಾನ ಹೇಳಿದ ವೈದ್ಯರು, ಆತನ ಬಳಲಿಕೆ ಮತ್ತು ತಲೆನೋವುಗಳನ್ನು ನಿವಾರಿಸಲು ಔಷದಗಳನ್ನು ಸೂಚಿಸಿದರು. ಜತೆಗೆ ಮಧ್ಯವಯಸ್ಸನ್ನು ಮೀರಿದವರನ್ನು ಬಾಧಿಸುವ ಅತಿಆಯಾಸವನ್ನು ಶಾಶ್ವತವಾಗಿ ಪರಿಹರಿಸುವುದು ಅಸಾಧ್ಯವೆನಿಸುವುದರಿಂದ, ತಾನು ಸೂಚಿಸಿದ "ಶಕ್ತಿ ವರ್ಧಕ" ಔಷದಗಳನ್ನು ದಿನನಿತ್ಯ ತಪ್ಪದೆ ಸೇವಿಸುವಂತೆ ಹೇಳಿದರು. 

ವೈದ್ಯರ ಸೂಚನೆಗಳನ್ನು ಅಕ್ಷರಶಃ ಪರಿಪಾಲಿಸಿದ ವೀರಪ್ಪನ ತೊಂದರೆಗಳು ವಾರ ಕಳೆಯುವಷ್ಟರಲ್ಲೇ ಮಾಯವಾಗಿದ್ದವು. ವೈದ್ಯರು ನೀಡಿದ್ದ ಶಕ್ತಿ ವರ್ಧಕ ಮಾತ್ರೆಗಳು ನಿಜಕ್ಕೂ ಅದ್ಭುತ ಪರಿಣಾಮವನ್ನು ತೋರಿದ್ದವು!. 

ಸುಮಾರು ಆರು ತಿಂಗಳುಗಳ ಬಳಿಕ ವೀರಪ್ಪನ ಮನೆಗೆ ಭೇಟಿ ನೀಡಿದ್ದ ಸೋದರಮಾವನೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ, ಅವರಿಗೂ ಅತಿಆಯಾಸ ಮತ್ತು ತಲೆನೋವಿನ ಬಾಧೆಯಿರುವುದನ್ನು ಅರಿತ ವೀರಪ್ಪನು ತಾನು ಸೇವಿಸುತ್ತಿರುವ ಮಾತ್ರೆಯೊಂದನ್ನು ಅವರಿಗೆ ನೀಡಿದ್ದನು. ಈ ಮಾತ್ರೆಯನ್ನು ಗುರುತಿಸಿದ ಸೋದರಮಾವನು, ಇವು ತಾನು ಹಿಂದೆ ಸೇವಿಸುತ್ತಿದ್ದ ಬಿ. ಪಿ. ಯ ಮಾತ್ರೆಯೆಂದು ಹೇಳಿದಾಗ ವೀರಪ್ಪನಿಗೆ ಗಾಬರಿಯಾಗಿತ್ತು.

ಮರುದಿನ ಔಷದ ಅಂಗಡಿಗೆ ತೆರಳಿ ಇದು ಬಿ. ಪಿ. ಯ ಮಾತ್ರೆ ಎನ್ನುವುದನ್ನು ಖಚಿತಪಡಿಸಿಕೊಂಡ ವೀರಪ್ಪನು, ಪಕ್ಕದಲ್ಲೇ ಇದ್ದ ವೈದ್ಯರಲ್ಲಿ ತನ್ನ ರಕ್ತದ ಒತ್ತಡವನ್ನು ಪರೀಕ್ಷಿಸುವಂತೆ ಹೇಳಿದ್ದನು. ಆತನ ವ್ಯಾಧಿಯ ಬಗ್ಗೆ ಅರಿವಿಲ್ಲದ ವೈದ್ಯರು ಆತನನ್ನು ಪರೀಕ್ಷಿಸಿದ ಬಳಿಕ ಬಿ. ಪಿ. ತೃಪ್ತಿಕರವಾಗಿದೆ ಎಂದಿದ್ದರು. ಆದರೆ ತಜ್ನವೈದ್ಯರು ನೀಡಿದ್ದ ಮಾತ್ರೆಗಳ ಸೇವನೆಯಿಂದಲೇ ತನ್ನ ರಕ್ತದೊತ್ತಡ ಕಡಿಮೆಯಾಗಿರುವುದನ್ನು ನಂಬಲು ಸಿದ್ಧನಿಲ್ಲದ ವೀರಪ್ಪನಿಗೆ, ಶಕ್ತಿವರ್ಧಕ ಮಾತ್ರೆಗಳೆಂದು ಬಿ. ಪಿ. ಯ ಮಾತ್ರೆ ನೀಡಿದ ವೈದ್ಯರ ಮೇಲೆ ಭಾರೀ ಸಿಟ್ಟುಬಂದಿತ್ತು. ಇದರೊಂದಿಗೆ ಈ ಮಾತ್ರೆಗಳ ಸೇವನೆಯೂ ನಿಂತುಹೋಗಿತ್ತು!. 

ಭಾಗ- ೩ 

ತಜ್ಞವೈದ್ಯರ ಚಿಕಿತ್ಸೆಯಿಂದ ತನ್ನ ಸಮಸ್ಯೆಗಳು ಪರಿಹಾರಗೊಂಡಿದ್ದರೂ, ಬಿ. ಪಿ. ಯಾ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿದ್ದ ವೀರಪ್ಪನಿಗೆ ಮುಂದೆ ಸಂಭವಿಸಬಹುದಾದ ಅನಾಹುತಗಳ ಅರಿವಿರಲಿಲ್ಲ. ಔಷದ ಸೇವನೆಯನ್ನು ನಿಲ್ಲಿಸಿ ವಾರ ಕಳೆಯುವಷ್ಟರಲ್ಲೇ ಮತ್ತೆ ಮರುಕಳಿಸಿದ ತಲೆನೋವಿನೊಂದಿಗೆ, ತಲೆತಿರುಗಿದಂತಾಗುವ ತೊಂದರೆಯೂ ಹೊಸದಾಗಿ ಆರಂಭವಾಗಿತ್ತು. ಇದರಿಂದಾಗಿ ಆತನಿಗೆ ಸಾಕಷ್ಟು ಹಿಂಸೆಯಾಗುತ್ತಿದ್ದರೂ, ಮತ್ತೆ ಮಾತ್ರೆಗಳನ್ನು ಸೇವಿಸದಿರಲು, ಪಕ್ಷವಾತದ ಹೆದರಿಕೆಯೇ ಕಾರಣವಾಗಿತ್ತು. 

ಚಿಕಿತ್ಸೆಯನ್ನು ನಿಲ್ಲಿಸಿ ಒಂದೆರಡು ತಿಂಗಳುಗಳ ಬಳಿಕ ತನ್ನ ತಂಗಿಯ ಮನೆಯಲ್ಲಿನ ಶುಭಕಾರ್ಯಕ್ಕೆ ಹೋಗಿದ್ದ ವೀರಪ್ಪನು ಒಂದೆರಡು ರಾತ್ರಿ ನಿದ್ದೆಗೆಟ್ಟಿದ್ದನು. ಊರಿಗೆ ಮರಳಿದಂದು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡ ವೀರಪ್ಪನಿಗೆ ಮೂತ್ರಶಂಕೆಗೆ ಹೋಗಬೇಕೆನಿಸಿತ್ತು. ಹಾಸಿಗೆಯಿಂದ ಎದ್ದೇಳಲು ಪ್ರಯತ್ನಿಸಿದಾಗ ಆತನ ಶರೀರದ ಬಳಭಾಗವು ಜೋಮುಹಿಡಿದಂತಾಗಿದ್ದು, ಸಂಪೂರ್ಣವಾಗಿ ನಿಶ್ಚೇಷ್ಟಿತವಾಗಿತ್ತು. ಪತ್ನಿಯನ್ನು ಕರೆಯಲು ಪ್ರಯತ್ನಿಸಿದಾಗ ನಾಲಿಗೆಯೂ ಸ್ವಾಧೀನದಲ್ಲಿ ಇಲ್ಲದಿರುವುದು ಅರಿವಿಗೆ ಬಂದಂತೆಯೇ, ಹತಾಶನಾಗಿ ಕಣ್ಣೀರು ಸುರಿಸಿದ್ದನು. 

ಅದೃಷ್ಟವಶಾತ್ ನಾಯಿ ಬೊಗಳಿದ ಸದ್ದಿಗೆ ಎಚ್ಚೆತ್ತ ಆತನ ಪತ್ನಿಯು ಹಜಾರಕ್ಕೆ ಬಂದು ದೀಪ ಉರಿಸಿದಾಗ, ಆಕೆಯನ್ನು ಕಂಡು ಮಾತನಾಡಲು ಪ್ರಯತ್ನಿಸಿ ತೊದಲುತ್ತಿದ್ದ ಪತಿಯ ಮುಖವೂ ವಕ್ರವಾಗಿದ್ದನ್ನು ಕಂಡು ಗಾಬರಿಯಿಂದ ಮಗನನ್ನು ಕರೆದಿದ್ದಳು. ಅರ್ಧ ಗಂಟೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ವೀರಪ್ಪನಿಗೆ ಸೂಕ್ತ ಸಮಯದಲ್ಲಿ ತುರ್ತುಚಿಕಿತ್ಸೆ ಲಭಿಸಿತ್ತು. ಮರುದಿನ ಸಂಜೆಯ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ವೀರಪ್ಪನನ್ನು ಕಂಡು, ಮನೆಮಂದಿ ನಿಟ್ಟುಸಿರು ಬಿಟ್ಟಿದ್ದರು. ಚಿಕಿತ್ಸೆ ನೀಡಿದ ತಜ್ಞವೈದ್ಯರ ಅಭಿಪ್ರಾಯದಂತೆ ರೋಗಿಯ ರಕ್ತನಾಳದಲ್ಲಿ ಹೆಪ್ಪುಗಟ್ಟಿದ ರಕ್ತದ ತುಣುಕಿನಿಂದ ಉದ್ಭವಿಸಿದ ಅಡಚಣೆಯಿಂದಾಗಿ ಕ್ಷಣಕಾಲ ಬಾಧಿಸುವ "ಟ್ರಾನ್ಸಿಯೆಂಟ್ ಇಸ್ಕೀಮಿಕ್ ಎಟಾಕ್" ವೀರಪ್ಪನನ್ನು ಕಾಡಿತ್ತು. ಅದೃಷ್ಟವಶಾತ್ ತುರ್ತು ಚಿಕಿತ್ಸೆ ಲಭಿಸಿದ್ದರಿಂದ ಶಾಶ್ವತವಾದ ಹಾಗೂ ಸುದೀರ್ಘಕಾಲ ಬಾಧಿಸಬಲ್ಲ ಶಾರೀರಿಕ ನ್ಯೂನತೆಗಳು ಉದ್ಭವಿಸಿರಲಿಲ್ಲ. 

ಕೆಲವೇ ದಿನಗಳಲ್ಲಿ ಮನೆಗೆ ಮರಳಿದ ವೀರಪ್ಪನು ಸಂಪೂರ್ಣವಾಗಿ ಗುನಮುಖನಾಗಿದ್ದನು. ಜತೆಗೆ ತನ್ನ ನಿರ್ಲಕ್ಷ್ಯ ಮತ್ತು ತಪ್ಪು ಕಲ್ಪನೆಗಳಿಂದಾಗಿ ಸಂಭವಿಸಿದ್ದ ಅನಾಹುತದಿಂದ ಕೂದಲೆಳೆಯಷ್ಟು ಅಂತರದಿಂದ ಪಾರಗಿದ್ದುದನ್ನು ಅರ್ಥೈಸಿಕೊಂಡಿದ್ದ ಆತನು, ಜೀವನ ಪರ್ಯಂತ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ನಿರ್ಧರಿಸಿದ್ದನು. 

ಕೊನೆಯ ಮಾತು 

ಶಾಶ್ವತ ಪರಿಹಾರವಿಲ್ಲದ ಅಥವಾ ಇತರ ಗಂಭೀರ ಕಾಯಿಲೆಗಳು ಬಾಧಿಸಿದ ಸಂದರ್ಭದಲ್ಲಿ ವೈದ್ಯರ ಚಿಕಿತ್ಸೆಯನ್ನು ನಿರಾಕರಿಸುವ ಅಸಂಖ್ಯ ರೋಗಿಗಳು ಅನಾವಶ್ಯಕವಾಗಿ ಪ್ರಾಣಾಪಾಯಕ್ಕೆ ಕಾರಣವೆನಿಸಬಲ್ಲ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ. ಅಂತೆಯೇ ಹೃದ್ರೋಗ,ಮಧುಮೇಹ ಹಾಗೂ  ಅಧಿಕ ರಕ್ತದೊತ್ತಡಗಳಂತಹ ವ್ಯಾಧಿಗಳು ತಲೆದೋರಿದಾಗ ಜೀವನಪರ್ಯಂತ ಔಷದ ಸೇವನೆ ಒಳ್ಳೆಯದಲ್ಲ ಅಥವಾ ಅಪಾಯಕಾರಿ ಎಂದು ಭಾವಿಸಿ, ವೈದ್ಯರು ಸೂಚಿಸಿದ ಔಷದಗಳ ಪ್ರಮಾಣ( ಒಂದು ಮಾತ್ರೆಗೆ ಬದಲಾಗಿ ಅರ್ಧ ಮಾತ್ರೆ) ಹಾಗೂ ಅವಧಿ (ದಿನನಿತ್ಯ ಸೇವಿಸುವ ಬದಲಾಗಿ ಎರಡು ದಿನಗಳಿಗೊಮ್ಮೆ) ಗಳನ್ನು ತಾವಾಗಿ ಬದಲಾಯಿಸಿಕೊಳ್ಳುತ್ತಾರೆ. ಬಳಿಕ ಯಾವುದೇ ತೊಂದರೆಗಳು ಕಂಡುಬರದೇ ಇದ್ದಲ್ಲಿ, ತಮ್ಮ ಬಂಧುಮಿತ್ರರಿಗೂ ಇಂತಹ ಉಪಕ್ರಮಗಳನ್ನು ಅನುಸರಿಸುವಂತೆ ಸಲಹೆಯನ್ನೂ ನೀಡುತ್ತಾರೆ!. ತತ್ಪರಿಣಾಮವಾಗಿ ಅನಿರೀಕ್ಷಿತವಾಗಿ ಉದ್ಭವಿಸುವ ಅಪಾಯಕಾರಿ ಸನ್ನಿವೇಶಗಳಿಂದ ಪಾರಾಗಿ ಬಂದಲ್ಲಿ "ಕೆಟ್ಟ ಮೇಲೆ ಬುದ್ಧಿ ಬಂತು" ಎನ್ನುವಂತೆ ಜೀವನಪರ್ಯಂತ ವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಾರೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೧-೧೦-೨೦೦೭ ರ ಸಂಚಿಕೆಯ ಬಳಕೆದಾರ:ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


Monday, November 11, 2013

Influenza


                           ಇನ್ ಫ್ಲುಯೆಂಜಾ ಜ್ವರ: ಏನಿದರ ಅವತಾರ?

ವರ್ಷಂಪ್ರತಿ ನಮ್ಮೆಲ್ಲರನ್ನೂ ತಪ್ಪದೆ ಪೀಡಿಸುವ,ಜನಸಾಮಾನ್ಯರು ಕ್ಷುಲ್ಲಕವೆಂದು ಭಾವಿಸಿ ನಿರ್ಲಕ್ಷಿಸುವ ಕಾಯಿಲೆಗಳಲ್ಲಿ ಇನ್ ಫ್ಲುಯೆಂಜಾ ಜ್ವರ ಕೂಡಾ ಒಂದಾಗಿದೆ. ಆದರೆ ಈ ವ್ಯಾಧಿಯ ವಿವಿಧ ಅವತಾರಗಳು, ಇದರ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳ ಬಗ್ಗೆ ಅವಶ್ಯಕ ಮಾಹಿತಿಗಳ ಅರಿವಿಲ್ಲದಿರುವುದೇ ಜನರು ಇದನ್ನು ನಿರ್ಲಕ್ಷಿಸಲು ಪ್ರಮುಖ ಕಾರಣವೆನಿಸಿದೆ!. 
------------------                          -----------------------------                         -------------------------------------                        -------------------------------                 ---------------------

ಮಳೆಗಾಲದಲ್ಲಿ ಮಳೆಗೆ ಒದ್ದೆಯಾಗುವುದರಿಂದ ಅಥವಾ ಋತುಗಳು ಬದಲಾದಾಗ ಆರಂಭವಾಗುವುದೆಂದು ಇಂದಿಗೂ ಅನೇಕರು ನಂಬಿರುವ, ಆಡುಭಾಷೆಯಲ್ಲಿ "ಫ್ಲೂ ಜ್ವರ" ಎಂದು ಕರೆಯಲ್ಪಡುವ ಕಾಯಿಲೆಯನ್ನು, ವೈದ್ಯಕೀಯ ಪರಿಭಾಷೆಯಲ್ಲಿ "ಇನ್ ಫ್ಲುಯೆಂಜಾ" ಎನ್ನುತ್ತಾರೆ. ನಾಲ್ಕಾರು  ದಿನಗಳಲ್ಲಿ ಗುಣವಾಗುವ "ಶೀತ- ಜ್ವರ" ಗಳ ಸಂಮಿಶ್ರಣವೆಂದು ಜನರು ಉಪೇಕ್ಷಿಸುವ ಈ ಕಾಯಿಲೆಯ ಕೆಲವೊಂದು ಅವತಾರಗಳು ನಿಜಕ್ಕೂ "ಅತಿ ಭಯಂಕರ" ವೂ ಹೌದು. 

ಇತಿಹಾಸ 

ನೂರಾರು ವರ್ಷಗಳಿಂದ ತನ್ನ ವಿವಿಧ ಅವತಾರಗಳ ಮೂಲಕ ಮನುಕುಲಕ್ಕೆ ಮಾರಕವೆನಿಸಿರುವ ಇನ್ ಫ್ಲುಯೆಂಜಾ ವ್ಯಾಧಿಗೆ ತನ್ನದೇ ಆದ ಇತಿಹಾಸವಿದೆ. ಗತ ಶತಮಾನದಲ್ಲಿ ನಾಲ್ಕು ಬಾರಿ ಜಾಗತಿಕವಾಗಿ ತನ್ನ ಸಾಂಕ್ರಾಮಿಕತೆಯನ್ನು ಮೆರೆದು, ಲಕ್ಷಾಂತರ ಜನರನ್ನು ಬಲಿಪಡೆದಿದ್ದ ಈ ಫ್ಲೂ ಜ್ವರದ ವಿವಿಧ ಅವತಾರಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

೧೯೧೮-೧೯ ರಲ್ಲಿ ಮೊತ್ತ ಮೊದಲ ಬಾರಿಗೆ ತನ್ನ ತೀವ್ರ ಸಾಂಕ್ರಾಮಿಕತೆ  ಹಾಗೂ ಮಾರಕತೆಗಳಿಂದಾಗಿ ಪ್ರಥಮ ಜಾಗತಿಕ ಯುದ್ಧದಲ್ಲಿ ಮಾಡಿದವರ ನಾಲ್ಕು ಪಟ್ಟು, ಅಂದರೆ ೪೦ ದಶಲಕ್ಷಕ್ಕೂ ಅಧಿಕ ಜನರ ಮರಣಕ್ಕೆ ಕಾರಣವೆನಿಸಿದ್ದ ಇನ್ ಫ್ಲುಯೆಂಜಾ ವ್ಯಾಧಿಯು ಇದೇ ಕಾರಣದಿಂದಾಗಿ ಭಯಾನಕವೆನಿಸಿತ್ತು. ಅಂತೆಯೇ ವೈದ್ಯಕೀಯ ವಿಜ್ಞಾನಿಗಳ ಗಮನವನ್ನು ಸೆಳೆಯಲು ಯಶಸ್ವಿಯಾಗಿತ್ತು.

ಬಳಿಕ ೧೯೫೭ ರಲ್ಲಿ "ಏಶಿಯನ್ ಫ್ಲೂ" ಮತ್ತು ೧೯೬೮ ರಲ್ಲಿ" ಹಾಂಗ್ ಕಾಂಗ್ ಫ್ಲೂ" ಗಳ ರೂಪದಲ್ಲಿ ಮರುಕಳಿಸಿದ್ದ ಈ ವ್ಯಾಧಿಯು, ಮೂರರಿಂದ ನಾಲ್ಕು ದಶಲಕ್ಷ ರೋಗಿಗಳ ಪ್ರಾಣಕ್ಕೆ ಎರವಾಗಿತ್ತು. ತದನಂತರ ೧೯೮೬ ರಿಂದ ೧೯೯೭ ರ ನಡುವೆ ವಿವಿಧ ಅವತಾರಗಳಲ್ಲಿ ಪ್ರತ್ಯಕ್ಷವಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತಾಂಡವವಾಡಿತ್ತು. 

೧೯೯೭ ರ ಎಪ್ರಿಲ್- ಮೇ ತಿಂಗಳುಗಳಲ್ಲಿ ಮತ್ತೊಮ್ಮೆ ವಿನೂತನ ರೂಪದಲ್ಲಿ ಪ್ರತ್ಯಕ್ಷವಾಗಿ, ಮಿಂಚಿನಂತೆ ಸಂಚರಿಸಿ, ಹಲವಾರು ದೇಶಗಳಲ್ಲಿ ಕೋಟ್ಯಂತರ ಕೋಳಿಗಳ ಮಾರಣ ಹೋಮಕ್ಕೆ ಕಾರಣವೆನಿಸಿದ್ದ "ಪಕ್ಷಿ ಜ್ವರ" ವೂ ಇನ್ ಫ್ಲುಯೆಂಜಾ ವ್ಯಾಧಿಯ ಮತ್ತೊಂದು ರೂಪವಾಗಿತ್ತು. ಏವಿಯನ್ ಫ್ಲೂ ಅರ್ಥಾತ್ ಪಕ್ಷಿ ಜ್ವರವೆಂದೇ ಕುಖ್ಯಾತವಾಗಿದ್ದ ಮಾರಕ ಕಾಯಿಲೆಗೆ ಇನ್ ಫ್ಲುಯೆಂಜಾ ವೈರಸ್ ಗಳ ಪರಿವರ್ತಿತ ತಳಿಯೊಂದು ಕಾರಣವೆನಿಸಿತ್ತು. 

ಸಾಮಾನ್ಯವಾಗಿ ಪಕ್ಷಿ ಜ್ವರಕ್ಕೆ ಕಾರಣವೆನಿಸುವ ಈ ವೈರಸ್, ಮನುಷ್ಯರನ್ನು ಬಾಧಿಸುವುದಿಲ್ಲ. ಆದರೆ ೧೯೯೭ ರಿಂದ ೨೦೦೫ ರ ಅವಧಿಯಲ್ಲಿ ವಿಶೇಷವಾಗಿ ಏಶಿಯಾ ಖಂಡದ ಅನೇಕ ದೇಶಗಳ ಪ್ರಜೆಗಳಲ್ಲಿ ಇದರ ಸೋಂಕು ಬಾಧಿಸಿರುವುದು ಪತ್ತೆಯಾಗಿತ್ತು. ಮಾತ್ರವಲ್ಲ, ಈ ಸೋಂಕು ತಗಲಿದ ಸಹಸ್ರಾರು ಜನರಲ್ಲಿ ೮೦ ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು. 

ಕುಕ್ಕುಟ ಜ್ವರ ಪ್ರತ್ಯಕ್ಷವಾಗಿ ತಿಂಗಳು ಕಳೆಯುವಷ್ಟರಲ್ಲೇ ಆಕಸ್ಮಿಕವಾಗಿ ಉದ್ಭವಿಸಿ ಕಾಡ್ಗಿಚ್ಚಿನಂತೆ ಹರಡಿದ್ದ "ಸಾರ್ಸ್", ಸುಮಾರು ೨೦ ದೇಶಗಳ ೮೦೦೦ ಸಾವಿರ ಜನರನ್ನು ಬಾಧಿಸಿದ ಪರಿಣಾಮವಾಗಿ ೮೦೦ ಕ್ಕೂ ಅಧಿಕ ರೋಗಿಗಳು ಮೃತಪಟ್ಟಿದ್ದರು. ಈ ಭಯಾನಕ ಘಟನೆಯು ಇದೇ ರೀತಿಯಲ್ಲಿ ಪದೇ ಪದೇ ಹೊಸ ರೂಪದಲ್ಲಿ ಪ್ರತ್ಯಕ್ಷವಾಗಿ, ಕ್ಷಿಪ್ರಗತಿಯಲ್ಲಿ ಹರಡಬಲ್ಲ ಈ ಕಾಯಿಲೆಯು, ಜಾಗತಿಕರೂಪದಲ್ಲಿ ತನ್ನ ಸಾಂಕ್ರಾಮಿಕತೆ ಹಾಗೂ ಮಾರಕತೆಗಳನ್ನು ತೋರುವ ಸಂಭಾವ್ಯತೆಗಳ ಸ್ಪಷ್ಟ ಉದಾಹರಣೆಯೂ ಆಗಿದೆ. ಕೊರೊನಾ ವೈರಸ್ ಗಳಿಂದ ಉದ್ಭವಿಸುವ ಸಾರ್ಸ್ ಅಥವಾ ಮಿಕ್ಸೋ ವೈರಸ್ ಗಳಿಂದ ಆರಂಭವಾಗುವ ಫ್ಲೂ, ಇವೆರಡೂ ವ್ಯಾಧಿಗಳಿಗೆ ಕಾರಣವೆನಿಸುವ ವೈರಸ್ ಗಳು ತ್ವರಿತ ಗತಿಯಲ್ಲಿ ಹರಡುವ ಸಾಧ್ಯತೆಗಳಿಂದಾಗಿ ಇವುಗಳ ಮಾರಕತೆಯ ಪ್ರಮಾಣವೂ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. 

ಕಳೆದ ಒಂದು ದಶಕದಲ್ಲಿ ಇವೆರಡೂ ವ್ಯಾಧಿಗಳು ತೋರಿದ್ದ ಹಾವಳಿಯು ವೈದ್ಯಕೀಯ ವಿಜ್ಞಾನಿಗಳನ್ನು ತಲ್ಲಣಗೊಳಿಸಿತ್ತು. ಏಕೆಂದರೆ ಈ ಆಧುನಿಕ ಯುಗದಲ್ಲಿ ದೇಶ- ವಿದೇಶಗಳ ನಡುವೆ ಕ್ಷಿಪ್ರವಾಗಿ ಸಂಚರಿಸಬಲ್ಲ ವಿಮಾನಯಾನದಿಂದಾಗಿ, ಯಾವುದೇ ಸಾಂಕ್ರಾಮಿಕ ವ್ಯಾಧಿಯು ಅಷ್ಟೇ ಕ್ಷಿಪ್ರಗತಿಯಲ್ಲಿ ವಿಶ್ವದ ಹಲವಾರು ರಾಷ್ಟ್ರಗಳಿಗೆ ಸುಲಭದಲ್ಲೇ ಹರಡುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಇಂತಹ ವ್ಯಾಧಿಗಳು ಜಗತ್ತಿನಾದ್ಯಂತ ಹರಡಿದಲ್ಲಿ ಸಂಭವಿಸಬಲ್ಲ ಕಷ್ಟ ನಷ್ಟಗಳು ಮತ್ತು ಪ್ರಾಣಹಾನಿಗಳನ್ನು ಊಹಿಸುವುದು ಕೂಡಾ ಅಸಾಧ್ಯವೆನಿಸುತ್ತದೆ. 

ಏನಿದು ಇನ್ ಫ್ಲುಯೆಂಜಾ?

'ಮಿಕ್ಸೋ ವೈರಸ್' ಎನ್ನುವ ಗುಂಪೊಂದು ಇನ್ ಫ್ಲುಯೆಂಜಾ ಉದ್ಭವಿಸಲು ಕಾರಣವೆನಿಸುತ್ತದೆ. ಸಾಮಾನ್ಯವಾಗಿ ಸಾಂಕ್ರಾಮಿಕ ರೂಪದಲ್ಲಿ ಕಂಡುಬರುವ ಈ ವ್ಯಾಧಿಯು ಕೆಲ ಸಂದರ್ಭಗಳಲ್ಲಿ ಕಾರಣಾಂತರಗಳಿಂದ ತೀವ್ರ ಸಾಂಕ್ರಾಮಿಕ ರೂಪವನ್ನು ತಳೆದು ವ್ಯಾಪಕವಾಗಿ ಹರಡಿ, ತನ್ನ ಮಾರಕತೆಯನ್ನು ಮೆರೆಯುತ್ತದೆ. 

ಈ ವೈರಸ್ ಗಳಲ್ಲಿ ಮೂರು ಪ್ರಭೇದಗಳಿದ್ದು ಇವುಗಳನ್ನು ಎ, ಬಿ ಮತ್ತು ಸಿ ಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಬಿ ಮತ್ತು ಸಿ ವೈರಸ್ ಗಳು ಕೇವಲ ಮನುಷ್ಯರಲ್ಲಿ ಮಾತ್ರ ಕಂಡುಬರುತ್ತವೆ. ಅದರಲ್ಲೂ ಸಿ ವೈರಸ್ ಗಳು ಅತ್ಯಂತ ಅಪರೂಪವೆನಿಸಿವೆ. ಅದೇ ರೀತಿಯಲ್ಲಿ ಬಿ ವಿಧದ ವೈರಸ್ ಗಳ ತೀವ್ರತೆ ಹಾಗೂ ಸಾಂಕ್ರಾಮಿಕತೆಗಳು ಅಲ್ಪ ಪ್ರಮಾಣದಲ್ಲಿ ಇರುವುದರಿಂದ ಇವುಗಳ ಉಪಟಳಗಳೂ ನಗಣ್ಯವೆನಿಸಿವೆ. 

ಆದರೆ ಇನ್ ಫ್ಲುಯೆಂಜಾ ಎ ಪ್ರಭೇದಕ್ಕೆ ಸೇರಿದ ವೈರಸ್ ಗಳು ಕೆಲವೊಂದು ಪ್ರಾಣಿಗಳು ಮತ್ತು ಪಕ್ಷಿಗಳಲ್ಲಿ, ಅದರಲ್ಲೂ ವಿಶೇಷವಾಗಿ ವಲಸೆ ಹೋಗುವ ಸ್ವಭಾವದ ಜಲಪಕ್ಷಿಗಳಲ್ಲಿ ಕಂಡುಬರುವುದರಿಂದ ಅತ್ಯಂತ ಅಪಾಯಕಾರಿ ಎನಿಸುತ್ತವೆ. ಎ ವೈರಸ್ ಗಳ ಹೊರಮೈಯ್ಯಲ್ಲಿ ಇರುವ ಎರಡು ವಿಧದ ಪ್ರೋಟೀನ್ ಗಳಾದ ಹೇಮಾಗ್ಲುಟಿನ್ ಮತ್ತು ನ್ಯೂರಾಮೈನೈಡೇಸ್ ಗಳ ಆಧಾರದ ಮೇಲೆ ಇವುಗಳನ್ನು ಎಚ್ ಮತ್ತು ಏನ್ ಎಂದು ವಿಂಗಡಿಸಲಾಗಿದೆ. ಅಂತೆಯೇ ಎಚ್ ಗುಂಪಿನಲ್ಲಿ ೧೫ ಮತ್ತು ಏನ್ ಗುಂಪಿನಲ್ಲಿ ೯ ವಿಧಗಳಿದ್ದು, ಇವೆಲ್ಲವೂ ವಿಭಿನ್ನವಾಗಿವೆ. ವಿಶೇಷವೆಂದರೆ ಇವೆರಡೂ ಗುಂಪುಗಳ ಸಮ್ಮಿಶ್ರಣದ ಉಪಭೇದಗಳು ಪಕ್ಷಿಗಳಲ್ಲಿ ಪತ್ತೆಯಾಗಿದ್ದರೂ, ಇವುಗಳು ಸಾಮಾನ್ಯವಾಗಿ ಮನುಷ್ಯರನ್ನು ಬಾಧಿಸುವುದಿಲ್ಲ. 

ಈ ವೈರಸ್ ಗಳ ಉಪಭೇದಗಳಾದ ಎಚ್ ೧ ಎನ್  ೧, ಎಚ್ ೧ ಎನ್  ೨, ಎಚ್ ೩ ಎನ್ ೩ ಎನ್ನುವ ಮೂರು ತಳಿಗಳು ಮನುಷ್ಯರಲ್ಲಿ ಕಂಡುಬರುತ್ತವೆ. ಅಂತೆಯೇ ಈ ತಳಿಗಳಲ್ಲಿನ ವಂಶವಾಹಿನಿಗಳ ಕೆಲ ಅಂಶಗಳು ಮೂಲತಃ ಪಕ್ಷಿಗಳಲ್ಲಿ ಕಾಣಸಿಗುವ ತಳಿಗಳಿಂದ ಬಂದಿರುವ ಸಾಧ್ಯತೆಗಳೂ ಇವೆ. ಏಕೆಂದರೆ ಇನ್ ಫ್ಲುಯೆಂಜಾ ವೈರಸ್ ಗಳು ನಿರಂತರವಾಗಿ ಪರಿವರ್ತನೆಗೊಳ್ಳುತ್ತಲೇ ಇರುತ್ತವೆ. ಇದೇ ಕಾರಣದಿಂದಾಗಿ ಮನುಷ್ಯರನ್ನು ಬಾಧಿಸದ ಈ ವೈರಸ್ ನ ತಳಿಯೊಂದು ಪರಿವರ್ತನೆಗೊಂಡು ತಳೆದ ನೂತನ ಅವತಾರದ ಪರಿಣಾಮವಾಗಿ ಎಚ್ ೫ ಎನ್ ೧ ಎನ್ನುವ, ಪಕ್ಷಿಜ್ವರಕ್ಕೆ ಕಾರಣವಾಗಿರುವ ವೈರಸ್ ಮನುಷ್ಯರ ಶರೀರದಲ್ಲಿ ಪ್ರವೇಶಗಳಿಸಲು ಸಫಲವಾಗಿತ್ತು. 

ಇದಕ್ಕೂ ಮಿಗಿಲಾಗಿ ಕೇವಲ ಪಕ್ಷಿಗಳಿಂದ ಅಥವಾ ಸಾಕುಪ್ರಾಣಿಗಳಿಂದ ಮನುಷ್ಯರಿಗೆ ಹರಡಿದ್ದ ಎಚ್ ೫ ಎನ್ ೧ ತಳಿಗಳು ಮತ್ತಷ್ಟು ಪರಿವರ್ತನೆಗೊಂಡು, ಮನುಷ್ಯರಿಂದ ಮನುಷ್ಯರಿಗೆ ನೇರವಾಗಿ ಹರಡುವ ಸಾಮರ್ಥ್ಯ ಗಳಿಸಿಕೊಂಡಲ್ಲಿ ಜಾಗತಿಕ ಸಾಂಕ್ರಾಮಿಕತೆಯ  ಅಪಾಯ ತಪ್ಪಿದ್ದಲ್ಲ. ಜತೆಗೆ ಇದರ ಘೋರ ಪರಿಣಾಮಗಳು ಮತ್ತು ಇದರಿಂದಾಗಿ ಸಂಭವಿಸಬಲ್ಲ ಸಾವುನೋವು ಮತ್ತು ಕಷ್ಟನಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ. 

ಆದರೆ ಇಂತಹ ಸಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಹಲವಾರು ರಾಷ್ಟ್ರಗಳ ವೈದ್ಯಕೀಯ ವಿಜ್ಞಾನಿಗಳು, ಇವುಗಳ ಹಾವಳಿಯನ್ನು ತಡೆಗಟ್ಟಬಲ್ಲ ವಿಧಾನ, ಔಷದ ಮತ್ತು ಲಸಿಕೆಗಳನ್ನು ಕಂಡುಹಿಡಿಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. 

ಫ್ಲೂ ಹರಡುವುದೆಂತು?

ಇನ್ ಫ್ಲುಯೆಂಜಾ ವೈರಸ್ ಗಳು ಈ ರೋಗಪೀಡಿತರ - ರೋಗಿಗಳ ಆರೈಕೆ ಮಾಡುತ್ತಿರುವವರ ನೇರ ಸಂಪರ್ಕದಿಂದ, ರೋಗಪೀಡಿತರಾಗದಿದ್ದರೂ ತಮ್ಮ ಶರೀರದಲ್ಲಿ ಈ ವೈರಸ್ ಗಳನ್ನು ಸಲಹುವ ವಾಹಕರಿಂದ, ರೋಗಿ ಕೆಮ್ಮಿದಾಗ ಹೊರಬೀಳುವ ಜೊಲ್ಲಿನ ತುಂತುರುಗಳಿಂದ, ರೋಗಿ ಬಳಸಿದ- ಮುಟ್ಟಿದ ವಸ್ತುಗಳನ್ನು ಇತರರು ಬಳಸುವುದರಿಂದ ಸುಲಭ ಹಾಗೂ ಸಾಂಕ್ರಾಮಿಕವಾಗಿ ಹರಡುತ್ತದೆ. ಇದೇ ಕಾರಣದಿಂದಾಗಿ ಹಲವಾರು ಸದಸ್ಯರಿರುವ ಒಂದು ಕುಟುಂಬದ ಒಬ್ಬರಿಗೆ ಫ್ಲೂ ಆರಂಭವಾದಲ್ಲಿ, ಇದು ಮನೆಮಂದಿಗೆಲ್ಲ ಹರಡುತ್ತದೆ. ಅಂತೆಯೇ ನೂರಾರು- ಸಹಸ್ರಾರು ಜನರು ಸೇರುವ ಸಭೆ ಸಮಾರಂಭಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಕಾರ್ಖಾನೆ- ಉದ್ಯೋಗ ಕೇಂದ್ರಗಳಲ್ಲಿ ಮತ್ತು ಹಾಸ್ಟೆಲ್ ಗಳಲ್ಲಿರುವ ರೋಗಿಗಳು ತಮ್ಮ ವ್ಯಾಧಿಯನ್ನು ಅನಾಯಾಸವಾಗಿ ಇತರರಿಗೆ ಹರಡುತ್ತಾರೆ. 

ರೋಗಲಕ್ಷಣಗಳು 

ಇನ್ ಫ್ಲುಯೆಂಜಾ ವೈರಸ್ ಗಳು ನಿಮ್ಮ ಶರೀರದಲ್ಲಿ ಪ್ರವೆಶಗಳಿಸಿದ ೨೪ ರಿಂದ ೪೮ ಗಂಟೆಗಳಲ್ಲಿ ತಮ್ಮ ಇರುವಿಕೆಯನ್ನು ತೋರುತ್ತವೆ. ಆಕಸ್ಮಿಕವಾಗಿ ಆರಂಭವಾಗುವ ತಲೆಸಿಡಿತ- ನೋವು, ಬೆನ್ನು ಮತ್ತು ಕೈಕಾಲುಗಳಲ್ಲಿ ನೋವು, ಸುಮಾರು ೧೦೦-೧೦೨ ಡಿಗ್ರಿ ಜ್ವರದೊಂದಿಗೆ ಚಳಿ ಮತ್ತು ಕೆಲ ರೋಗಿಗಳಲ್ಲಿ ಒಂದಿಷ್ಟು ನಡುಕ, ಹಸಿವಿಲ್ಲದಿರುವುದು, ವಾಕರಿಕೆ ಅಥವಾ ವಾಂತಿಗಳಂತಹ ಲಕ್ಷಣಗಳು ಮುಂದಿನ ೩ ರಿಂದ ೭ ದಿನಗಳ ಕಾಲ ರೋಗಿಯನ್ನು ಪೀಡಿಸುತ್ತವೆ. ಇದಲ್ಲದೇ ರೋಗಿಯ ಮುಖವು ಕೆಂಪಾಗಿ, ಕಣ್ಣುಗಳು ಕಿರಿದಾಗಿ ಉರಿದಂತೆ ಭಾಸವಾಗುತ್ತದೆ. ಇಷ್ಟೆಲ್ಲಾ ಸಾಲದೆನ್ನುವಂತೆ ಜ್ವರ ಪೀಡಿತ ರೋಗಿಯನ್ನು ಹಿಂಡಿ ಹಿಪ್ಪೆಮಾಡುವಂತಹ ತೀವ್ರವಾದ ಒಣಕೆಮ್ಮು ತಪ್ಪದೆ ಕಾಡುತ್ತದೆ. ಈ ಸಂದರ್ಭದಲ್ಲಿ ವ್ಯಾಧಿಯ ಲಕ್ಷಣಗಳು ಶ್ವಾಸಾಂಗಗಳ ಸೋಂಕಿಗೆ ಕಾರಣವೆನಿಸಬಲ್ಲ ಇತರ ವೈರಸ್ ಗಳಿಂದ ಉದ್ಭವಿಸುವ ಕಾಯಿಲೆಗಳಂತೆ ಭಾಸವಾಗುತ್ತದೆ. ಹಾಗೂ ಇದೇ ಕಾರಣದಿಂದಾಗಿ ರೋಗಿಯನ್ನು ಪೀಡಿಸುತ್ತಿರುವ ಕಾಯಿಲೆಯು "ಫ್ಲೂ" ಎಂದು ನಿಖರವಾಗಿ ನಿರ್ಧರಿಸುವುದು ಕಷ್ಟಸಾಧ್ಯವೂ ಹೌದು. 



ಆದರೆ ಫ್ಲೂ ಜ್ವರದ ಬಾಧೆ ೩ ರಿಂದ ೭ ದಿನಗಳಲ್ಲಿ ಪರಿಹಾರಗೊಂಡರೂ, ರೋಗಿಯನ್ನು ಬಾಧಿಸುವ ಅತಿ ಆಯಾಸ ಹಾಗೂ ನಿಶ್ಶಕ್ತಿಗಳು ಮುಂದಿನ ಹಲವಾರು ದಿನಗಳ ಕಾಲ ಇರುತ್ತವೆ. ಮಕ್ಕಳಲ್ಲಿ ಹಾಗೂ ವಯೋವೃದ್ಧರಲ್ಲಿ ತುಸು ಅಧಿಕವೆನಿಸಬಲ್ಲ ಈ ಸಮಸ್ಯೆಗೆ, ವೈದ್ಯರು ನೀಡಿದ್ದ "ಶಕ್ತಿಯುತ ಅಥವಾ ಪ್ರಬಲ ಔಷದ"ಗಳ ದುಷ್ಪರಿಣಾಮವೇ ಕಾರಣವೆಂದು ಅನೇಕರು ದೂರುವುದು ಅಪರೂಪವೇನಲ್ಲ!. 

ಫ್ಲೂ ಪೀಡಿತ ರೋಗಿಗಳನ್ನು ಬಾಧಿಸಬಲ್ಲ ದ್ವಿತೀಯ ಹಂತದ ಸೋಂಕು ಮತ್ತು ಇತರ ಕಾರಣಗಳಿಂದ, ಶ್ವಾಸಾಂಗಗಳ ಉರಿಯೂತದಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವುದುಂಟು. ಅಪರೂಪದಲ್ಲಿ ಹೃದಯದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು "ಕಾರ್ಡಿಯೋ ಮಯೋಪತಿ" ಎನ್ನುವ ತೊಂದರೆಯಿಂದ ಆಕಸ್ಮಿಕವಾಗಿ ಮೃತಪಡುವ ಸಾಧ್ಯತೆಗಳೂ ಇವೆ. ಇದಲ್ಲದೆ ಮೆದುಳಿನ ಉರಿಯೂತದಂತಹ ಗಂಭೀರ- ಪ್ರಾಣಾಪಾಯಕ್ಕೆ ಕಾರಣವೆನಿಸಬಲ್ಲ ಹತ್ತು ಹಲವು ಸಮಸ್ಯೆಗಳು ಫ್ಲೂ ರೋಗಿಗಳನ್ನು ಶಾಪದಂತೆ ಕಾಡುವುದು ನಿಜ. 

ಚಿಕಿತ್ಸೆ 

ಫ್ಲೂ ಜ್ವರ ಪೀಡಿತರು ಈ ವ್ಯಾಧಿಯಿಂದ ಸಂಪೂರ್ಣವಾಗಿ ಮುಕ್ತರಾಗುವ ತನಕ ಸಂಪೂರ್ಣ ವಿಶ್ರಾಂತಿ ಪಡೆಯಲೇಬೇಕು. ಜತೆಗೆ ತಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷದಗಳನ್ನು  ಸೇವಿಸುವುದರೊಂದಿಗೆ, ಪೋಷಕಾಂಶಗಳಿಂದ ಸಮೃದ್ಧವಾದ ಆಹಾರ ಮತ್ತು ಸಾಕಷ್ಟು ದ್ರವಾಹಾರಗಳನ್ನು ಸೇವಿಸುವುದು ಹಿತಕರವೆನಿಸುವುದು. ಈ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಕಂಡುಹಿಡಿದಿಲ್ಲ.ಆದರೆ ರೋಗಿಯಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಅವಶ್ಯಕ ಔಷದಗಳನ್ನು ನೀಡಬೇಕಾಗುತ್ತದೆ. ಜತೆಗೆ ಇದು ಸಾಂಕ್ರಾಮಿಕವಾಗಿ ಹರಡುವುದರಿಂದ, ರೋಗಪೀಡಿತರು ಏಕಾಂತವಾಸಕ್ಕೆ ಶರಣಾದಲ್ಲಿ ಇತರರಿಗೆ ಹರಡುವುದನ್ನು ತಡೆಗಟ್ಟಬಹುದು. 

ವೈರಸ್ ಗಳು ಬ್ಯಾಕ್ಟೀರಿಯಾಗಳಂತೆ ಸ್ವತಂತ್ರವಾಗಿ ಜೀವಿಸಲಾರವು. ಸಾಮಾನ್ಯವಾಗಿ ತಾವು ಪ್ರವೇಶಗಳಿಸಿದ್ದ ಜೀವಿಯ ಜೈವಿಕ- ರಾಸಾಯನಿಕ ವ್ಯವಸ್ಥೆಯನ್ನು ಬಳಸಿ ವೈರಸ್ ಗಳು ಬೆಳೆಯುತ್ತವೆ. ಇದೇ ಕಾರಣದಿಂದಾಗಿ ಸಾಧಾರಣ "ಜೀವನಿರೋಧಕ"ಗಳು ವೈರಸ್ ಗಳ ವಿರುದ್ಧ ಕಾರ್ಯಾಚರಿಸಲು ವಿಫಲವಾಗುತ್ತವೆ. ಹಾಗೂ ಇದಕ್ಕಾಗಿ ವಿಶೇಷ ರೀತಿಯ ವೈರಸ್ ವಿರೋಧಿ ಔಷದಗಳನ್ನು ಸಂಶೋಧಿಸಿ ಸಿದ್ಧಪಡಿಸಬೇಕಾಗುತ್ತದೆ. ಆದರೆ ಅದೃಷ್ಟವಶಾತ್ ವೈರಸ್ ಗಳ ಹಾವಳಿಯನ್ನು ತಡೆಗಟ್ಟಬಲ್ಲ ಲಸಿಕೆಗಳು ಇಂತಹ ಸನ್ನಿವೇಶಗಳಲ್ಲಿ ಉಪಯುಕ್ತವೆನಿಸುತ್ತವೆ. (ಉದಾ- ಪೋಲಿಯೋ, ಸಿಡುಬು ಇತ್ಯಾದಿ) 

ಇನ್ ಫ್ಲುಯೆಂಜಾ ವ್ಯಾಧಿಗೆ ಕಾರಣವೆನಿಸಿರುವ ವೈರಸ್ ಗಳು ನಿರಂತರವಾಗಿ ತಮ್ಮ ವಂಶವಾಹಿನಿಗಳನ್ನು ಪರಿವರ್ತಿಸಿಕೊಳ್ಳುತ್ತಲೇ ಇರುವುದರಿಂದ ಹಾಗೂ ಇವುಗಳ ಪ್ರಭೇದ- ಉಪಭೇದಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ, ಇವುಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬಲ್ಲ ಲಸಿಕೆಯನ್ನು ಸಿದ್ಧಪಡಿಸುವುದು ಅಸಾಧ್ಯವೆನಿಸಿದೆ. ಆದುದರಿಂದ ಮಾರುಕಟ್ಟೆಯಲ್ಲಿ ದೊರೆಯುವ ಫ್ಲೂ ಲಸಿಕೆಗಳು ವರ್ಷಂಪ್ರತಿ ಬದಲಾಗುತ್ತಲೇ ಇರುತ್ತವೆ. ಪ್ರಸ್ತುತ ಜೀವನ ಪರ್ಯಂತ ಫ್ಲೂ ವೈರಸ್ ಗಳನ್ನು ತಡೆಗಟ್ಟಬಲ್ಲ ಲಸಿಕೆಯೊಂದನ್ನು ಪತ್ತೆಹಚ್ಚುವ ಪ್ರಯತ್ನಗಳು ಸಫಲವಾಗುವ ಲಕ್ಷಣಗಳು ಗೋಚರಿಸುತ್ತಿವೆ. ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಯಶಸ್ವಿಯಾದಲ್ಲಿ, ಫ್ಲೂ ಜ್ವರದ ಹಾವಳಿಯೊಂದಿಗೆ ಇದರ ಮಾರಕತೆಯೂ ದೂರವಾಗಲಿದೆ. 

ಕೊನೆಯ ಮಾತು- ಇದೀಗ ಭಾರತಕ್ಕೆ ಮರಳುತ್ತಿರುವ ಹಜ್ ಯಾತ್ರಿಗಳಲ್ಲಿ ಪತ್ತೆಯಾಗುತ್ತಿರುವ" ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್" (ಎಂ ಇ ಆರ್ ಎಸ್ -ಸಿ ಓ ವಿ) , ಫ್ಲೂ ವೈರಸ್ ನ ಅತ್ಯಾಧುನಿಕ ಅವತಾರವಾಗಿದೆ. ಮಧ್ಯ ಪ್ರಾಚ್ಯದಲ್ಲಿ ಪತ್ತೆಯಾಗಿದ್ದ ಈ ನೂತನ ವೈರಸ್, ಈಗಾಗಲೇ ಅನೇಕ ರೋಗಿಗಳನ್ನು ಬಲಿಪಡೆದಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೮-೦೬- ೨೦೦೬ ರ ಸಂಚಿಕೆಯ ಬಳಕೆದಾರ:ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 

Wednesday, November 6, 2013

Nakali vaidyariddaare, echarike!



                                     ನಕಲಿ ವೈದ್ಯರಿದ್ದಾರೆ, ಎಚ್ಚರಿಕೆ!

ವಿವಾಹದ ಮೊದಲು ಅಥವಾ ಅನಂತರ ಉಂಟಾಗುವ ಎಲ್ಲ ತರಹದ ನಿಶ್ಶಕ್ತಿ, ನರಗಳ ದೌರ್ಬಲ್ಯ, ತಾರುಣ್ಯ ನಾಶ,ಸ್ವಪ್ನ ಸ್ಖಲನ, ಶೀಘ್ರ ಸ್ಖಲನ ಮತ್ತು ಎಲ್ಲಾ ತರಹದ ಲೈಂಗಿಕ ಸಮಸ್ಯೆಗಳಿಗೆ ನೀವೇನು ಮಾಡುತ್ತೀರಿ?. ನಿಮ್ಮ ದಾಂಪತ್ಯ ಜೀವನವನ್ನು ಸುಖಮಯವಾಗಿಸಲು ಪರಿಪೂರ್ಣ ಚಿಕಿತ್ಸೆಗೆ ದಕ್ಷಿಣ ಭಾರತದ ಹೆಸರಾಂತ ಅಪೂರ್ವ ಅನುಭವಿಗಳಾದ ವೈದ್ಯರು, ನಿಮ್ಮ ಊರಿನ ಲಾಡ್ಜ್ ಗಳಲ್ಲೇ ಸಿಗುತ್ತಾರೆ!. 
-------------                 -----------------                         --------------------                      --------------------               -------------

ಅಂಗಡಿಯಲ್ಲಿ ತನ್ನ ತಂದೆಯ ಜತೆ ವ್ಯಾಪಾರ ಮಾಡಲು ಆರಂಭಿಸಿರುವ ಪ್ರವೀಣನಿಗೆ ಈಗ ಮದುವೆಯ ಪ್ರಾಯ. ಬೆಳೆದು ನಿಂತ ಪ್ರವೀಣನಿಗೆ ಹುಡುಗಿ ನೋಡಿ ನಿಶ್ಚಿತಾರ್ಥವೂ ಆಯಿತು. ಮದುವೆಗೆ ಇನ್ನೇನು ತಿಂಗಳಿದೆ ಎನ್ನುವಾಗ ಪ್ರವೀಣನಿಗೆ ತನ್ನ "ಆರೋಗ್ಯ"ದ ಮೇಲೆ ತುಸು ಸಂಶಯ ಮೂಡತೊಡಗಿತು. "ಲೈಂಗಿಕ ರೋಗಗಳಿಗೆ ಸೂಕ್ತ ಪರಿಹಾರ, ಮದುವೆಯ ಅನಂತರ ನಿಶ್ಶಕ್ತಿಯಿಂದ ಬಳಲದಿರಿ, ಸ್ವಪ್ನ ಸ್ಖಲನ- ಶೀಘ್ರ ಸ್ಖಲನಕ್ಕೆ ಚಿಕಿತ್ಸೆ..... "  ಎನ್ನುವ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವುದನ್ನು ನೋಡಿದ ಅನಂತರ ಪ್ರವೀಣನಿಗೆ ತನ್ನ ಸಮಸ್ಯೆಗೆ ಪರಿಹಾರ ದೊರೆಯಿತೆನ್ನುವ ಸಮಾಧಾನವಾಯಿತು. ಜಾಹೀರಾತು ನೀಡಿರುವ "ತಜ್ಞ ವೈದ್ಯ" ರನ್ನು ಭೇಟಿಯಾಗಿ ತನಗಿರುವ ಸ್ವಪ್ನ ಸ್ಖಲನದ ತೊಂದರೆಯನ್ನು ಹೇಳಿಕೊಂಡ. 'ಔಷಧಿ" ನೀಡಿದ ವೈದ್ಯರು ಪರವೀನನಿಗೆ ಯಶಸ್ವೀ ದಾಂಪತ್ಯದ ಪಾಠವನ್ನು ಹೇಳಿಕೊಟ್ಟು ವಾರ ಬಿಟ್ಟು ಬರುವಂತೆ ತಿಳಿಸಿದರು. 'ಚಿಕಿತ್ಸೆ" ಸಂಪೂರ್ಣ ಮುಗಿಯುವ ವೇಳೆಗೆ ಪ್ರವೀಣ ವೈದ್ಯರಿಗೆ ಸಹಸ್ರಾರು ರೂಪಾಯಿಗಳ ಫೀಸನ್ನು ಪಾವತಿಸಿದ್ದ!. 

ಸ್ವಪ್ನ ಸ್ಖಲನ- ಶೀಘ್ರ ಸ್ಖಲನಗಳು ರೋಗವೇ ಅಲ್ಲ. ಆರೋಗ್ಯವಂತ ಮನುಷ್ಯನ ಪ್ರಕೃತಿ ಸಹಜ ಬೆಳವಣಿಗೆಯ ಲಕ್ಷಣಗಳಿವು ಎನ್ನುವ ಅರಿವು ಪ್ರವೀಣನಿಗೆ ಇರುತ್ತಿದ್ದರೆ ಆತ "ಐವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯ"ರಿಂದ ತಲೆಬೋಳಿಸಿಕೊಳ್ಳುತ್ತಿರಲಿಲ್ಲ

ಲೈಂಗಿಕತೆ ರಹಸ್ಯವಲ್ಲ!

ಲೈಂಗಿಕತೆಯ ಕುರಿತು ಜನಸಾಮಾನ್ಯರಿಗಿರುವ ಅಜ್ಞಾನದ ಲಾಭವನ್ನು ಪಡೆಯುತ್ತಿರುವ ನಕಲಿ ವೈದ್ಯರ ಕಾರ್ಯಾಚರಣೆ ನಾಯಿಕೊಡೆಯಂತೆ ಎಲ್ಲ ಊರು-ಕೇರಿಗಳಲ್ಲಿ ತಲೆಯೆತ್ತುತ್ತಿದೆ. ಲಾಡ್ಜ್ ನ ಕೋಣೆಗಳಲ್ಲಿ "ಚಿಕಿತ್ಸೆ ನೀಡುವ" ಈ ವೈದ್ಯರು ಪತ್ರಿಕೆಗಳಲ್ಲಿ ಭರ್ಜರಿ ಜಾಹೀರಾತುಗಳನ್ನು ನೀಡುತ್ತಾರೆ. ಆದರೆ ತಮ್ಮ ವೈದ್ಯಕೀಯ ಅರ್ಹತೆ- ಪದವಿಗಳನ್ನು ತಿಳಿಸಲು ಪ್ರತಿಸಲವೂ ಮರೆತೇ ಬಿಡುತ್ತಾರೆ!. ಪ್ರಚಾರಕ್ಕಾಗಿ ಗೋಡೆಯನ್ನೂ ಆಶ್ರಯಿಸುವ ಈ ತಜ್ಞರು,ಏಡ್ಸ್ ಗುಣಪಡಿಸುತ್ತೇವೆಂದು  ಘೋಷಿಸಲು ಸಹ ಹಿಂಜರಿಯುವುದಿಲ್ಲ!. 

ಸಾಲದೆಂಬಂತೆ ಪ್ರಪಂಚದ ಯಾವ ವೈದ್ಯರೂ ಶಾಶ್ವತವಾಗಿ ಗುಣಪಡಿಸಲಾಗದ ಮಾರಣಾಂತಿಕ ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸುವುದಾಗಿ ರೋಗಿಗಳನ್ನು ನಂಬಿಸಿ, ರೋಗಿಗಳ ಜೇಬನ್ನು ಬರಿದಾಗಿಸುತ್ತಾರೆ. 

ಮೆಡಿಕಲ್ ಕಾಲೇಜುಗಳೂ ನಕಲಿ 

ಮಧ್ಯ ವಯಸ್ಕರನ್ನು ಸಾಮಾನ್ಯವಾಗಿ ಕಾಡುವ ಎದೆಯುರಿ, ಹುಳಿತೇಗು, ಮಲಬದ್ಧತೆ, ನಿದ್ರಾಹೀನತೆ, ಅಜೀರ್ಣ, ಗ್ಯಾಸ್ ಟ್ರಬಲ್, ಮೂಲವ್ಯಾಧಿಗಳಿಗೂ ಚಿಕಿತ್ಸೆ ನೀಡುತ್ತೇವೆ ಎನ್ನುವ ಇಂತಹ ವೈದ್ಯರನ್ನು, ಆರೇ ತಿಂಗಳುಗಳಲ್ಲಿ "ಪದವಿ" ಯನ್ನು ನೀಡಿ ಸೃಷ್ಟಿಸುವ ಖಾಸಗಿ ಕಾಲೇಜುಗಳೂ ನಮ್ಮ ದೇಶದಲ್ಲಿರುವುದು ಈ ಧಂಧೆಯನ್ನು ಸುಲಭಗೊಳಿಸಿದೆ. ಆರೋಗ್ಯದ ಕುರಿತು ಸಾಮಾನ್ಯವಾಗಿ ಭಾರತೀಯರಲ್ಲಿರುವ ಅಜ್ಞಾನ,ಮೂಢನಂಬಿಕೆಗಳು, ಕಿತ್ತು ತಿನ್ನುವ ಬಡತನ, ಲೈಂಗಿಕತೆಯ ಬಗ್ಗೆ ಮುಕ್ತ ಮಾತುಕತೆಗೆ ಅವಕಾಶವಿಲ್ಲದಿರುವುದು ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ದುಬಾರಿಯಾಗುತ್ತಿರುವ ಆಧುನಿಕ ವೈದ್ಯಕೀಯ ಚಿಕಿತ್ಸೆಗಳು ಹೆಚ್ಚು ಹೆಚ್ಚು ರೋಗಿಗಳು ನಕಲಿವೈದ್ಯರನ್ನು ಆಶ್ರಯಿಸುವಂತೆ ಮಾಡಿವೆ. ದುರಂತವೆಂದರೆ ನಕಲಿವೈದ್ಯರಿಂದ ತೊಂದರೆಗೆ ಈಡಾದವರು, ಸುಲಿಗೆಗೆ ಒಳಗಾದವರು ತಮಗಾಗಿರುವ ಅನ್ಯಾಯ- ವಂಚನೆಗಳನ್ನು ಹೇಳಿಕೊಳ್ಳಲು ನಾಚುತ್ತಾರೆ. ಹೀಗೆ ಹೇಳಿಕೊಳ್ಳುವುದು, ದೂರು ಸಲ್ಲಿಸುವುದರಿಂದ ತಮಗೆ ಅವಮಾನವಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಹಾಗಾಗಿ ಈ ಧಂಧೆ ನಮ್ಮ ನೆಲದಲ್ಲಿ ಹುಲುಸಾಗಿ ಬೆಳೆದಿದೆ. ಹೀಗಾಗಿಯೇ ಮಕ್ಕಳಿಲ್ಲದವರಿಗೆ ಮಕ್ಕಳಾಗಲು ಯಾವುದೇ ಪರೀಕ್ಷೆಗಳಿಲ್ಲದೆ, ಕಷಾಯವನ್ನು ಕೊಟ್ಟು ಚಿಕಿತ್ಸೆ ನೀಡುವ ಭೂಪರು ಯಾವ ಆತಂಕವೂ ಇಲ್ಲದೆ ಭದ್ರವಾಗಿ ನೆಲೆಯೂರಿದ್ದಾರೆ. ಸಹಸ್ರಾರು ರೂಪಾಯಿಗಳ ಕಷಾಯ ಕುಡಿದ ಬಳಿಕವೂ ಮಕ್ಕಳಾಗದಿದ್ದರೆ, ಅಂತಹ ದಂಪತಿಗಳಿಗೆ "ಸಂತಾನ ಭಾಗ್ಯ"ವಿಲ್ಲಾ ಎನ್ನುವ ಅರ್ಥವೇ ಹೊರತು ಅದು ಈ ವೈದ್ಯರ ತಪ್ಪಲ್ಲ!. 

ಚಿಕಿತ್ಸಾ ವಿಧಾನ 

ಹೃದಯದ ರಕ್ತನಾಳಗಳಲ್ಲಿ ಅಡಚಣೆಯಿರುವ ರೋಗಿಯೊಬ್ಬರು ಇಂತಹ ನಕಲಿವೈದ್ಯನನ್ನು ಸಂದರ್ಶಿಸಿದ್ದರು. ಕೇವಲ ಮೂರರಿಂದ ಆರು ವಾರಗಳಲ್ಲಿ ರಕ್ತನಾಳಗಳಲ್ಲಿನ ಅಡಚಣೆಯನ್ನು ನಿವಾರಿಸುವುದಾಗಿ ಹೇಳಿದ ವೈದ್ಯರು,  ಎರಡು ವಾರಗಳ  ನೀಡಿದರು. ಎರಡು ವಾರಗಳ ಬಳಿಕ ಬಂದ ರೋಗಿಯನ್ನು ವಿಶಿಷ್ಟ ರೀತಿಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. 

ತೆಳ್ಳಗಿನ ರಟ್ಟನ್ನು ಸುರುಳಿಮಾಡಿ ಒಂದು ತುದಿಯನ್ನು ರೋಗಿಯ ಹೃದಯದ ಭಾಗಕ್ಕೆ ಒತ್ತಿ ಹಿಡಿದು, ಮತ್ತೊಂದು ತುದಿಗೆ ವೈದ್ಯ ಮಹಾಶಯ ಕಿವಿಗೊಟ್ಟು ಹೃದಯದ ಬಡಿತವನ್ನು ಸುಮಾರು ಮೂರು ನಿಮಿಷಗಳ ಕಾಲ ಪರೀಕ್ಷಿಸಿ,  ೭೦ ಶೇಕಡಾ ರಕ್ತನಾಳಗಳ ಅಡಚಣೆ ನಿವಾರಬನಿವಾರಣೆಯಾಗಿದೆ ಎಂದು ಧೃಢಪಡಿಸಿದ್ದನು!. ಮುಂದಿನ ಎರಡು ವಾರಗಳ ಔಷದ ಸೇವನೆಯ ಬಳಿಕ ರೋಗಿ ಸೇವಿಸುತ್ತಿದ್ದ ಆಧುನಿಕ ಔಷದಗಳ ಸೇವನೆಯನ್ನು ಶಾಶ್ವತವಾಗಿ ನಿಲ್ಲಿಸಲೂ ಹೇಳಿದ್ದನು. ತತ್ಪರಿಣಾಮವಾಗಿ ಕೆಲವೇ ದಿನಗಳಲ್ಲಿ ರೋಗಿಯ ಹೃದಯ ಬಡಿತವನ್ನೇ ಶಾಶ್ವತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದನು!. 

ವೃತ್ತಿಯಲ್ಲಿ ದರ್ಜಿಯಾಗಿದ್ದ ವ್ಯಕ್ತಿಯೊಬ್ಬ ಸ್ವಯಂ ಔಷದಗಳನ್ನು ನೀಡಲಾರಂಭಿಸಿ ಖ್ಯಾತ ಆಸ್ತಮಾ ತಜ್ಞನಾಗಿ ರೂಪುಗೊಂಡ ಪರಿಯನ್ನುನೆನಪಿಸಿಕೊಂಡು, ನಮ್ಮ ಊರಿನ ಜವುಳಿ ಉದ್ಯಮಿಯೊಬ್ಬರು ಆಶ್ಚರ್ಯ ಪಡುತ್ತಾರೆ. ಲಂಗಗಳನ್ನು ಹೊಲಿಯುತ್ತಿದ್ದ ಈ ದರ್ಜಿಯು ಆಸ್ತಮಾ ರೋಗಕ್ಕೆ ಮದ್ದು ನೀಡುತ್ತಿರುವುದಷ್ಟೇ ಆಲ್ಲದೇ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನೂರಾರು ಚಿಕಿತ್ಸಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿರುವ ಚಮತ್ಕಾರವೂ ನಡೆದಿದೆ. 

ಆಗಬೇಕಾಗಿರುವುದು ಏನು?

ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಅವಶ್ಯವಾಗಿ ಹೊಂದಿರಬೇಕಾದ ಅರ್ಹತೆಗಳನ್ನು ನಕಲಿ ವೈದ್ಯರು ಹೊಂದಿಲ್ಲವಾದುದರಿಂದ ತಮ್ಮ ಆರೋಗ್ಯ ರಕ್ಷಣೆಯ ಹೊಣೆ ಹೊರುವ ಜವಾಬ್ದಾರಿ ಇವರಿಗಿಲ್ಲ ಎನ್ನುವ ಸತ್ಯವನ್ನು ಜನಸಾಮಾನ್ಯರು ಅರಿತುಕೊಳ್ಳಬೇಕು. ವೈದ್ಯರೆಂದು ಹೇಳಿಕೊಂಡು ಜನರ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ವೈದ್ಯರ ಕಾರ್ಯಾಚರಣೆಯನ್ನು ಕಾನೂನಿನ ಕಡಿವಾಣಕ್ಕೆ ಒಳಪಡಿಸುವ ನಿಟ್ಟಿನಲ್ಲಿ, ಸರಕಾರೀ ಇಲಾಖೆಗಳು ಕ್ರಿಯಾಶೀಲವಾಗಬೇಕು. ಬೆಳೆದುನಿಂತ ಮಕ್ಕಳು ತಮ್ಮ ಹೆತ್ತವರಲ್ಲಿ ಮುಚ್ಚುಮರೆಯಿಲ್ಲದೆ ತಮ್ಮ ದೈಹಿಕ ಬದಲಾವಣೆಗಳ ಕುರಿತು ಮಾತುಕತೆಯನ್ನು ನಡೆಸುವ ವಾತಾವರಣ ಮನೆಯಲ್ಲಿ ನಿರ್ಮಾಣವಾಗಬೇಕು. ಸ್ವಪ್ನ ಸ್ಖಲನ- ಶೀಘ್ರ ಸ್ಖಲನಗಳಂತಹ ಶಾರೀರಿಕ ಪ್ರಕ್ರಿಯೆಗಳು ರೋಗವಲ್ಲ ಎನ್ನುವ ಅರಿವು ಮೀಸೆಯ ಜತೆಯಲ್ಲೇ ಮೂಡಬೇಕು. ಬಡವರಿಗೆ ದುಬಾರಿಯೆನಿಸದ ಚಿಕಿತ್ಸೆ ನೀಡಲು ಆರೋಗ್ಯ ತಪಾಸಣೆ- ಚಿಕಿತ್ಸಾ ಶಿಬಿರಗಳನ್ನು ಸರಕಾರ ಮತ್ತು ಸ್ವಯಂ ಸೇವಾ ಸಂಘಟನೆಗಳು ನಡೆಸಬೇಕು. 

ಇದಲ್ಲವಾದಲ್ಲಿ  ರೋಗಿ ಎನ್ನುವ ಬಳಕೆದಾರನ ಶೋಷಣೆ ತಡೆಯಿಲ್ಲದೇ ಸಾಗುವುದರಲ್ಲಿ ಸಂಶಯವಿಲ್ಲ. ತಜ್ಞವೈದ್ಯರ ನಿರ್ಲಕ್ಷ್ಯಗಳಿಂದ ಉಂಟಾಗಿರುವ ನಷ್ಟದ ವಿರುದ್ಧ ಬಳಕೆದಾರರು ನ್ಯಾಯಾಲಯಗಳಲ್ಲಿ ದಾವೆ ಹೂಡಿ ಪರಿಹಾರಗಳಿಸಿರುವ ಪ್ರಕರಣಗಳು ಈಗಾಗಲೇ ದಾಖಲೆಗೊಂಡಿವೆ. ಹೀಗಾಗಿ ಎಲ್ಲ ವೈದ್ಯರೂ ತಮ್ಮ ರೋಗಿಗಳಿಗೆ ಅತೀವ ಎಚ್ಚರಿಕೆಯಿಂದ ಚಿಕಿತ್ಸೆ ನೀಡುವಂತಾಗಿದೆ. ಶುಲ್ಕ ಪಾವತಿಸಿ ಸೇವೆ ಪಡೆಯುವ ಬಳಕೆದಾರನ ಹಕ್ಕುಗಳು ಅಬಾಧಿತವಾಗಿ ಉಳಿಯಬೇಕಾಗಿರುವುದು ಇಂದಿನ ಅವಶ್ಯಕತೆ. 

ನಕಲಿವೈದ್ಯರ ವಿರುದ್ಧ ಕಾನೂನು ಕ್ರಮ ಸಾಧ್ಯವೇ?

ನಕಲಿ ಔಷಧಿ, ಉಪಯೋಗವಿಲ್ಲದ ಅವೈಜ್ಞಾನಿಕ ಚಿಕಿತ್ಸೆ ಇತ್ಯಾದಿಗಳಿಂದ ಬಳಕೆದಾರರಿಗೆ ಅನ್ಯಾಯವಾದಾಗ ಪರಿಹಾರ ಪಡೆಯುವುದು ಇತ್ತೀಚಿನವರೆಗೆ ಸಾಧ್ಯವಾಗುತ್ತಿರಲಿಲ್ಲ. ಡ್ರಗ್ಸ್ ಎಂಡ್ ಮೇಜಿಕ್ ರೆಮಿಡೀಸ್ (ಮಿಸ್ ಲೀಡಿಂಗ್ ಅಡ್ವರ್ಟೈಸ್ ಮೆಂಟ್ಸ್) ಆಕ್ಟ್, ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ರೂಲ್ಸ್ ಮುಂತಾದ ಕಾಯಿದೆಗಳಲ್ಲಿ ನಕಲಿ ಔಷಧಿಗಳ ವಿರುದ್ಧ, ನಕಲಿ ಚಿಕಿತ್ಸಾ ಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದರೂ, ಈ ಕಾಯಿದೆಗಳಲ್ಲಿರುವ ಲೋಪ ದೋಷಗಳಿಂದಾಗಿ ನಕಲಿ ವೈದ್ಯರು ಸುಲಭದಲ್ಲೇ ತಪ್ಪಿಸಿಕೊಳ್ಳುತ್ತಾರೆ. 

ಇದರಿಂದಾಗಿ ಆಸ್ತಮಾ ಚಿಕಿತ್ಸೆ ಎಂದು ಸ್ಟೀರಾಯ್ಡ್ ಮಾತ್ರೆಗಳ ಪುಡಿಯನ್ನು ಕೊಡುವ ನಕಲಿವೈದ್ಯರ ವ್ಯಾಪಾರ ಅನಿಯಂತ್ರಿತವಾಗಿ ಹೆಚ್ಚುತ್ತಿದೆ. ಇದೀಗ ಬಳಕೆದಾರರ ರಕ್ಷಣಾ ಕಾಯಿದೆಯ ಮೂಲಕ ನಕಲಿವೈದ್ಯರನ್ನು ಹತೋಟಿಯಲ್ಲಿಡಲು ಸಾಧ್ಯವೆಂದು ಭಾರತದಾದ್ಯಂತ ಇರುವ ಬಳಕೆದಾರರ ನ್ಯಾಯಾಲಯಗಳ ತೀರ್ಪುಗಳು ಸಾರಿ ಸಾರಿ ಹೇಳುತ್ತಿವೆ. 

ಯಾವುದೇ ಚಿಕಿತ್ಸೆಯಿಂದ ಬಳಕೆದಾರರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾದಲ್ಲಿ ಅಥವಾ ರೋಗಿಯ ಪ್ರಾಣಕ್ಕೆ ಅಪಾಯ ಉಂಟಾದಲ್ಲಿ, ವೈದ್ಯರ ಮೇಲೆ ನಿರ್ಲಕ್ಷ್ಯದ ಆಪಾದನೆ ಹೊರಿಸಲು ಸಾಧ್ಯವೇ?. ಚಿಕಿತ್ಸೆ ನೀಡಿದ ವೈದ್ಯರಿಗೆ ಸೂಕ್ತ ಅರ್ಹತೆ ಇಲ್ಲದಿದ್ದಲ್ಲಿ ಖಂಡಿತವಾಗಿಯೂ ನಿರ್ಲಕ್ಷ್ಯದ ಆಪಾದನೆ ಹೊರಿಸಲು ಸಾಧ್ಯವಿದೆ. 

ಉದಾಹರಣೆಗಾಗಿ ಶಸ್ತ್ರಚಿಕಿತ್ಸೆಗಾಗಿ ರೋಗಿಯ ಪ್ರಜ್ಞೆ ತಪ್ಪಿಸುವುದನ್ನು ಅರಿವಳಿಕೆ ತಜ್ಞರೇ ಮಾಡಬೇಕಿದೆ. ಒಂದು ವೇಳೆ ಸೂಕ್ತ ಅರ್ಹತೆ(ಪದವಿ) ಇಲ್ಲದ ವೈದ್ಯರು ಅರಿವಳಿಕೆ ಔಷಧಿ ಕೊಟ್ಟು ರೋಗಿಯ ಮರಣಕ್ಕೆ ಕಾರಣರಾದಲ್ಲಿ, ಅದು 'ವೈದ್ಯಕೀಯ ನಿರ್ಲಕ್ಷ್ಯ" ಎಂದೆನಿಸುತ್ತದೆ. ವೈದ್ಯರಿಗೆ ಅಲೋಪತಿ ಶಾಸ್ತ್ರದ ಎಂ. ಬಿ. ಬಿ. ಎಸ್ ಪದವಿ ಇದ್ದರೂ,ಅರಿವಳಿಕೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಇಲ್ಲದಿದ್ದಲ್ಲಿ, ಪ್ರಜ್ಞೆ ತಪ್ಪಿಸುವ ಪ್ರಕ್ರಿಯೆಯನ್ನು ಅವರು ನಡೆಸುವಂತಿಲ್ಲ. ಇದೇ ಆಧಾರದಲ್ಲಿ ನಕಲಿ ಔಷಧಿ ನೀಡುವ ನಕಲಿವೈದ್ಯರನ್ನು ಕಾನೂನಿನ ಹಿಡಿತದಲ್ಲಿ ಸಿಲುಕಿಸುವುದು ಕಷ್ಟವಾಗಲಾರದು. 

ಅಂತೆಯೇ ಅಲೋಪತಿ ಶಾಸ್ತ್ರದಲ್ಲಿ ಪದವಿ ಪಡೆದ ವೈದ್ಯರು ಅಲೋಪತಿ ಔಷದಗಳನ್ನೇ ನೀಡಬಹುದೇ ಹೊರತು ಆಯುರ್ವೇದ ಔಷದಗಳನ್ನಲ್ಲ. ಅದೇ ರೀತಿಯಲ್ಲಿ ಆಯುರ್ವೇದ ವೈದ್ಯರು ತಾವು ಕಲಿತಿರದ ಇತರ ಪದ್ದತಿಗಳ ಔಷದಗಳನ್ನು ನೀಡುವಂತಿಲ್ಲ ಎಂದು ಕಾನೂನು ಸ್ಪಷ್ಟಪಡಿಸುತ್ತದೆ. ಈ ಕಾನೂನಿನ ಆಧಾರದಲ್ಲಿ ನಕಲಿವೈದ್ಯರನ್ನು ನಿಯಂತ್ರಿಸುವುದು ಸಾಧ್ಯವಿದೆ. 

ಡಾ. ಸಿ. ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೩೧-೧೦-೨೦೦೨ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಡಾ. ರವೀಂದ್ರನಾಥ ಶಾನುಭಾಗರು ಪ್ರಕಟಿಸಿದ್ದ ನನ್ನ  ಮೊತ್ತ ಮೊದಲನೆಯ ಲೇಖನ. 


Tuesday, November 5, 2013

Enidu gas trabal?


                                                ಏನಿದು ಗ್ಯಾಸ್ ಟ್ರಬಲ್?

ಮಾಧ್ಯಮಗಳಲ್ಲಿ ನಿಯಮಿತವಾಗಿ ಪ್ರಕಟಗೊಳ್ಳುವ ಉತ್ಪ್ರೇಕ್ಷಿತ ಜಾಹೀರಾತುಗಳಲ್ಲಿ ಬಣ್ಣಿಸಿದ ವಿವಿಧ ರೋಗಲಕ್ಷಣಗಳನ್ನು ಓದಿ, ನಿಮಗೂ ಇಂತಹ ಕಾಯಿಲೆ ಇರಬಹುದೆಂದು ಭಾವಿಸಿರುವಿರಾ?. ಇಂತಹ ಜಾಹೀರಾತುಗಳಲ್ಲಿ ಒಂದಾಗಿರುವ ಹಾಗೂ ಕಪೋಲಕಲ್ಪಿತ ಕಾಯಿಲೆಗಳಲ್ಲಿ ಪ್ರಮುಖವಾಗಿರುವ,  "ಗ್ಯಾಸ್ ಟ್ರಬಲ್" ಎನ್ನುವ ಶಬ್ದವೇ ವೈದ್ಯಕೀಯ ಪರಿಭಾಷೆಯಲ್ಲಿ ಇಲ್ಲವೆಂದಲ್ಲಿ ನೀವೂ ನಂಬಲಾರಿರಿ. ಈ ಬಗ್ಗೆ ನೀವು ಅರಿತಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
-------------            ------------               ---------------                ---------------                      -------------            -----------------------

ಸಾಮಾನ್ಯವಾಗಿ ಎಲ್ಲರಲ್ಲೂ ಕಂದುಬರಬಹುದಾದ ಅಜೀರ್ಣ,ಹೊಟ್ಟೆನೋವು, ಹೊಟ್ಟೆಯುಬ್ಬರ, ಎದೆ- ಹೊಟ್ಟೆ ಉರಿ, ಎದೆನೋವು, ಹಸಿವಿಲ್ಲದಿರುವುದು, ಅತಿಹಸಿವೆ, ಹೊಟ್ಟೆ ತೊಳಸಿದಂತೆ ಆಗುವುದು ಮತ್ತು ವಾಕರಿಕೆ ಅಥವಾ ವಾಂತಿ ಇತ್ಯಾದಿ ಲಕ್ಷಣಗಳನ್ನು ಒಂದಾಗಿಸಿ, ಜನಸಾಮಾನ್ಯರೇ ಸೃಷ್ಟಿಸಿರುವ  ಹಾಗೂ ಅಬಾಲವೃದ್ಧರೆಲ್ಲರನ್ನೂ ಬಾಧಿಸಬಲ್ಲದೆಂದು ನೀವು ನಂಬಿರುವ "ಗ್ಯಾಸ್ ಟ್ರಬಲ್ " ಒಂದು ನಿಗೂಢ ಕಾಯಿಲೆಯಲ್ಲ. 

ಏನಿದು ಗ್ಯಾಸ್ ಟ್ರಬಲ್?

ನಿಮ್ಮ ದೈನಂದಿನ ಆಹಾರಸೇವನೆಯ ಸಮಯದಲ್ಲಿ ವ್ಯತ್ಯಯ, ಮಸಾಲೆ ಹೆಚ್ಚಿರುವ,ಎಣ್ಣೆ- ತುಪ್ಪದಲ್ಲಿ ಕರಿದ, ಖಾರ ಹೆಚ್ಚಿರುವ ಉಪ್ಪಿನಕಾಯಿ, ಮೀನು ಮಾಂಸಗಳಂತಹ ಆಹಾರಗಳ ಸೇವನೆ, ತಂಬಾಕು ಹಾಗೂ ಮದ್ಯಪಾನ ಇತ್ಯಾದಿಗಳಿಂದ ನಿಮ್ಮಲ್ಲಿ ಮೇಲೆ ನಮೂದಿಸಿದ ಕೆಲವು ಲಕ್ಷಣಗಳು ಕಂಡುಬರಬಹುದು. ಇದಲ್ಲದೇ ನಿದ್ರಾಹೀನತೆ, ತೀವ್ರ ಮಾನಸಿಕ ಒತ್ತಡ ಮತ್ತು ಕೆಲ ವಿಧದ ಔಷದಗಳ ಸೇವನೆಯಿಂದಲೂ, ವೈದ್ಯಕೀಯ ಪರಿಭಾಷೆಯಲ್ಲಿ ' ಗ್ಯಾಸ್ತ್ರೈಟಿಸ್" ಎಂದು ಕರೆಯಲ್ಪಡುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದೇ ರೀತಿಯ ಲಕ್ಷಣಗಳನ್ನು ತೋರುವ ಹಲವಾರು ವ್ಯಾಧಿಗಳು ಇರುವುದರಿಂದ, ಇಂತಹ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. 

ಬಹುತೇಕ ಜನರು ನಂಬಿರುವಂತೆ ದ್ವಿದಳ ಧಾನ್ಯಗಳು,ಬಟಾಟೆ,ಗೆಣಸು ಮತ್ತು ನಿಮ್ಮ ಅಚ್ಚುಮೆಚ್ಚಿನ ದೇವಿ ಹಲಸು ಇತ್ಯಾದಿಗಳು ನಿಶ್ಚಿತವಾಗಿಯೂ "ವಾಯುಕಾರಕ" ಗಳಲ್ಲ ಎಂದಲ್ಲಿ ನೀವು ನಂಬಲಾರಿರಿ. ಉದಾಹರಣೆಗೆ ಬಟಾಟೆ ಉರುಫ್ ಆಲೂಗಡ್ಡೆಯನ್ನು ತಿಂದಲ್ಲಿ ಗ್ಯಾಸ್ ಟ್ರಬಲ್ ಬಾಧಿಸುವುದು ನಿಜವಾದಲ್ಲಿ, ಫ್ರಾನ್ಸ್ ದೇಶದ ಸಮಸ್ತ ಜನರಿಗೂ ಈ ಸಮಸ್ಯೆ ಬಾಧಿಸುತ್ತಿದ್ದುದರಲ್ಲಿ ಸಂದೇಹವಿಲ್ಲ. ಏಕೆಂದರೆ ಭಾರತೀಯರು ಅನ್ನವನ್ನು ಸೇವಿಸುವಂತೆಯೇ, ಫ್ರಾನ್ಸ್ ದೇಶದ ಜನರು ಬಟಾಟೆಯ ವಿವಿಧ ಖಾದ್ಯಗಳನ್ನು ದಿನವಿಡೀ ಸವಿಯುತ್ತಾರೆ!. 

ನಾವು ಘನ ಆಹಾರವನ್ನು ಸೇವಿಸುವಾಗ, ನೀರು ಕುಡಿಯುವಾಗ ಮತ್ತು ಮಾತನಾಡುವಾಗ ಅಲ್ಪ ಪ್ರಮಾಣದಲ್ಲಿ ಗಾಳಿಯನ್ನು ನುಂಗುವುದು ಸ್ವಾಭಾವಿಕ. ಇದೇ ರೀತಿಯಲ್ಲಿ ನಾವು ಸೇವಿಸಿದ ಆಹಾರ ಜೀರ್ಣವಾಗುವಾಗ ಜರಗುವ ರಾಸಾಯನಿಕ ಕ್ರಿಯೆಗಳಿಂದ ಅಲ್ಪ ಪ್ರಮಾಣದ 'ಅನಿಲ" ಉತ್ಪನ್ನವಾಗುವುದು. ಸಾಮಾನ್ಯವಾಗಿ ಈ "ವಾಯು" ನಮ್ಮ ಬಾಯಿ ಅಥವಾ ಗುದದ್ವಾರದಿಂದ ಹೊರಹೋಗುವುದು. ಈ ರೀತಿಯಲ್ಲಿ ಹೊರಬೀಳುವ ತೇಗು ಹಾಗೂ ಅಪಾನವಾಯುಗಳು ಗ್ಯಾಸ್ ಟ್ರಬಲ್ ನ ಲಕ್ಷಣಗಳಲ್ಲ. ತಾಯಿಯ ಮೊಲೆಹಾಲು ಕುಡಿದು ಹೊಟ್ಟೆ ತುಂಬಿದ ಪುಟ್ಟ ಕಂದ ಗ್ಯಾಸ್ ಟ್ರಬಲ್ ನಿಂದಲ್ಲ!. 

ಅದೇನೇ ಇರಲಿ, ನಿಮ್ಮಲ್ಲಿ ಇಂತಹ ತೊಂದರೆಗಳು ಕಂಡುಬಂದಾಗ ಅಜೀರ್ಣ,ಎಸಿಡಿಟಿ ಅಥವಾ ಗ್ಯಾಸ್ ಟ್ರಬಲ್ ಎಂದು ನೀವಾಗಿ ನಿರ್ಧರಿಸಿ, ಸ್ವಯಂ ಚಿಕಿತ್ಸೆ ಪ್ರಯೋಗಿಸದೇ ಅಥವಾ ನಿರ್ಲಕ್ಷಿಸದೇ ನಿಮ್ಮ ಕುಟುಂಬ ವೈದ್ಯರನ್ನು ಸಂದರ್ಶಿಸಿ. 

ದೀಪ್ತಿಯ ಎಸಿಡಿಟಿ 

ಅರಳು ಹುರಿದಂತೆ ಮಾತನಾಡುವ ಪುಟ್ಟ ದೀಪ್ತಿ, ಮೋಹನರ ಮುದ್ದಿನ ಮಗಳು. ಈ ಮಾತಿನ ಮಲ್ಲಿ ಅಂದೇಕೋ ತೀವ್ರ ಹೊಟ್ಟೆನೋವಿನಿಂದ ಮಂಕಾಗಿದ್ದಳು. ವಿಷಯವನ್ನರಿತ ಮೋಹನರು ತತ್ಕ್ಷಣ ಪರಿಚಿತ ವೈದ್ಯರಲ್ಲಿಗೆ ಮಗಳನ್ನು ಕರೆದೊಯ್ದರು.ವೈದ್ಯರು  ದೀಪ್ತಿಯನ್ನು ಪರೀಕ್ಷಿಸುತ್ತಾ ಕೇಳುತ್ತಿದ್ದ ಪ್ರಶ್ನೆಗಳಿಗೆ ಮೋಹನರೇ ಉತ್ತರಿಸುತ್ತಿದ್ದರು. ನಿನ್ನೆ ಸರಿಯಾಗಿ ಕೋಳಿಯ ಪದಾರ್ಥ ತಿಂದಿದ್ದ ಕಾರಣದಿಂದ ಇಂದು ಹೊಟ್ಟೆನೋವು ಬಂದಿರಬೇಕು, ಹಾಗೂ ಇದು ಬಹುಶಃ "ಎಸಿಡಿಟಿ " ಇರಬಹುದೆಂದು ವೈದ್ಯರಿಗೆ ಸಲಹೆಯನ್ನೂ ನೀಡಿದರು. 

ಆದರೆ ವೈದ್ಯರ ಮನದಲ್ಲಿ ಮೂಡಿದ್ದ ಸಂದೇಹ ನಿವಾರಣೆಗಾಗಿ ಅಲ್ಟ್ರಾ ಸೌಂಡ್ ಸೋನೋಗ್ರಾಂ ಮಾಡಿಸುವ ಅವಶ್ಯಕತೆ ಇದೆಯೆಂದು ವೈದ್ಯರು ಸೂಚಿಸಿದರೂ, ತುರ್ತಾಗಿ ಮೂದಬಿದರೆಗೆ ಹೋಗಲಿದೆಯೆಂದು ಹೇಳಿದ ಮೋಹನರು, ನಾಳೆ ಸ್ಕ್ಯಾನ್ ಮಾಡಿಸುವುದಾಗಿ ಹೇಳಿ ತಾತ್ಕಾಲಿಕ ಚಿಕಿತ್ಸೆಯನ್ನು ಪಡೆದು ಮಗಳನ್ನು ಮನೆಗೆ ಕರೆದೊಯ್ದರು. ಮತ್ತೆ ದೀಪ್ತಿಯನ್ನು ವೈದ್ಯರು ಕಂಡದ್ದು ಮೂರು ವಾರಗಳ ನಂತರ. ಈ ಬಾರಿ ಸಮಾ ಮೀನಿನ ಪದಾರ್ಥ ತಿಂದು ಹೊಟ್ಟೆನೋವು ಬಂದಿದೆ ಎನ್ನುವ ಹೇಳಿಕೆ ಹಾಗೂ ಸ್ಕ್ಯಾನ್ ಮಾಡಿಸಲು ಪುರುಸೊತ್ತಿಲ್ಲವೆಂದು ತಾತ್ಕಾಲಿಕ ಚಿಕಿತ್ಸೆಯ ಪುನರಾವರ್ತನೆಯಾಯಿತು. ಆದರೆ ಮುಂದಿನ ಕೆಲವೇ ದಿನಗಳಲ್ಲಿ ದೀಪ್ತಿಯ ಹೊಟ್ಟೆನೋವು ಮತ್ತೆ ಮರುಕಳಿಸಿದಾಗ ಮೋಹನರು ಎಚ್ಚೆತ್ತರು. ಸ್ಕ್ಯಾನ್ ಮಾಡಿಸಿದ ವರದಿಯೊಂದಿಗೆ ವೈದ್ಯರನ್ನು ಭೇಟಿ ಮಾಡಿದ ಬಳಿಕ, ಅವರ ಸಲಹೆಯಂತೆ ಶಸ್ತ್ರಚಿಕಿತ್ಸಾ ತಜ್ಞರಲ್ಲಿಗೆ ಕರೆದೊಯ್ದರು. 

ಮರುದಿನ ದೀಪ್ತಿಗೆ ಶಸ್ತ್ರಚಿಕಿತ್ಸೆ ನಡೆಸಿ, ಸೋಂಕು ಪೀಡಿತ ಅಪೆಂಡಿಕ್ಸ್ ನ್ನು ತೆಗೆಯಲಾಯಿತು. ವಿಶೇಷವೆಂದರೆ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ದೀಪ್ತಿಗೆ, ತದನಂತರ ಮೀನು- ಮಾಂಸಗಳನ್ನು ಸೇವಿಸಿದರೂ ಹೊಟ್ಟೆನೋವು ಮಾತ್ರ ಪೀಡಿಸುವುದೇ ಇಲ್ಲ!. 

ಗೋಪಣ್ಣನ ಗ್ಯಾಸ್ ಟ್ರಬಲ್ 

ಮಧ್ಯವಯಸ್ಸಿನ ಗೋಪಣ್ಣ ಸಮಾಜಸೆವಕರಾಗಿ ಜನಪ್ರಿಯರು. ಹಗಲಿರುಳು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುವ ಗೋಪಣ್ಣನಿಗೆ ಆಕಸ್ಮಿಕವಾಗಿ ನಡುರಾತ್ರಿಯಲ್ಲಿ ಪ್ರಾರಂಭವಾಗಿದ್ದ ಹೊಟ್ಟೆನೋವು,ಬೆನ್ನಿನ ಒಂದು ಪಾರ್ಶ್ವಕ್ಕೂ ಹರಡಿತ್ತು.ಅನಿರೀಕ್ಷಿತವಾಗಿ ಬಂದೆರಗಿದ ಸಮಸ್ಯೆಯಿಂದ  ಗಾಬರಿಗೊಂಡ ಗೋಪಣ್ಣ, ತಕ್ಷಣ ತಮ್ಮ ಪರಿಚಿತ ವೈದ್ಯರನ್ನು ಮನೆಗೆ ಕರೆಸಿದರು. ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಾನು ಸಂಜೆ ತಿಂದ ಮಸಾಲೆ ದೋಸೆ ಮತ್ತು ರಾತ್ರಿ ಸೇವಿಸಿದ್ದ ಮಾಂಸಾಹಾರಗಳಿಂದಾಗಿ ತನಗಿದ್ದ 'ಗ್ಯಾಸ್ ಟ್ರಬಲ್" ಉಲ್ಬಣಿಸಿದೆ ಎನ್ನುತ್ತಾ,ಪ್ರಯತ್ನಪೂರ್ವಕವಾಗಿ ತೇಗುತ್ತಿದ್ದರು. ಮಂದಹಾಸ ಬೀರಿದ ವೈದ್ಯರು ನೋವು ನಿವಾರಕ ಇಂಜೆಕ್ಷನ್ ನೀಡಿ, ಮರುದಿನ ಬೆಳಿಗ್ಗೆ ಆಹಾರ ಸೇವನೆಗೆ ಮುನ್ನ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಲು ಸೂಚಿಸಿದ್ದರು. ಮರುದಿನ ವೈದ್ಯರು ಕಾದಿದ್ದರೂ, ಗೋಪಣ್ಣ ಮಾತ್ರ ನಾಪತ್ತೆಯಾಗಿದ್ದರು. 

ವಾರ ಕಳೆಯುವಷ್ಟರಲ್ಲಿ ಅಪರಾತ್ರಿಯಲ್ಲಿ ಮರುಕಳಿಸಿದ್ದ ನೋವಿನ ತೀವ್ರತೆಗೆ ಹೆದರಿದ್ದ ಗೋಪಣ್ಣ, ಮತ್ತೆ ವೈದ್ಯರನ್ನು ಮನೆಗೆ ಕರೆಸಿದ್ದರು. ಆದರೆ ವೈದ್ಯರ ನೋವು ನಿವಾರಕ ಇಂಜೆಕ್ಷನ್ ಅಪೇಕ್ಷಿತ ಪರಿಣಾಮವನ್ನು ತೋರದ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಮರುದಿನ ತಜ್ಞ ವೈದ್ಯರ ಸೂಚನೆಯಂತೆ ಸ್ಕ್ಯಾನ್ ಮಾಡಿದಾಗ, ಗೋಪಣ್ಣನ ಮೂತ್ರಪಿಂಡ ಮತ್ತು ಮೂತ್ರನಾಳದಲ್ಲಿ ಹಲವಾರು ಕಲ್ಲುಗಳು ಪತ್ತೆಯಾಗಿದ್ದವು. ಸೂಕ್ತ ಚಿಕಿತ್ಸೆಯ ಬಳಿಕ ಗೋಪಣ್ಣನ ಆರೋಗ್ಯ ಸುಧಾರಿಸಿದ್ದು, ಅವರ ಗ್ಯಾಸ್ ಟ್ರಬಲ್ ಕೂಡಾ ಕಾಣದಂತೆ ಮಾಯವಾಗಿದೆ!. 

ಶಿವಪ್ಪನ ಅಜೀರ್ಣ 

ಅವಿವಾಹಿತ ತರುಣ ಶಿವಪ್ಪನು ಕೇಂದ್ರ ಅಬಕಾರಿ ಇಲಾಖೆಯ ಉದ್ಯೋಗಿ. ಒಂಟಿಜೀವವಾಗಿದ್ದರಿಂದ ಊಟತಿಂಡಿಗಳಿಗೆ ಹೋಟೆಲನ್ನು ಆಶ್ರಯಿಸಿದ್ದನು. ಇಲಾಖೆಯ ನಿರೀಕ್ಷಕ ಜಯರಾಮರು ಮತ್ತವರ ಪತ್ನಿಗೆ ಶಿವಪ್ಪನ ಬಗ್ಗೆ ಅತೀವ ಮಮತೆ. ಅವರ ಮನೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಂದು ಆತನಿಗೆ ಮೀನು- ಮಾಂಸಗಳ ಪುಷ್ಕಳ ಭೋಜನ ಮತ್ತು ಮರುದಿನ ಅಜೀರ್ಣ ಮತ್ತು ಹೊಟ್ಟೆನೋವಿನಿಂದ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ವಾಡಿಕೆಯಾಗಿತ್ತು. ವಿವಿಧ ವೈದ್ಯರಿಂದ ವಿಭಿನ್ನ ಪದ್ದತಿಗಳ ಚಿಕಿತ್ಸೆಯನ್ನು ಪಡೆದುಕೊಂಡರೂ, ಶಿವಪ್ಪನ ಹೊಟ್ಟೆನೋವು ಛಲ ಬಿಡದ ತ್ರಿವಿಕ್ರಮನ ಕಥೆಯ ಭೇತಾಳನಂತೆ ಆತನನ್ನು ಬಿಡುತ್ತಿರಲಿಲ್ಲ. 

ಅಂತಿಮವಾಗಿ ತನ್ನ ಕಚೇರಿಯ ಪಕ್ಕದಲ್ಲಿದ್ದ ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸಾ ತಜ್ಞರನ್ನು ಭೇಟಿಯಾಗಿ, ಅವರ ಸೂಚನೆಯಂತೆ ಅವಶ್ಯಕ ಪರೀಕ್ಷೆಗಳನ್ನು ನಡೆಸಿದಾಗ ಆತನ ಪಿತ್ತಕೋಶದಲ್ಲಿ ಅನೇಕ ಕಲ್ಲುಗಳು ತುಂಬಿ ಊದಿಕೊಂಡಿರುವುದು ಪತ್ತೆಯಾಗಿತ್ತು. ಯಶಸ್ವೀ ಶಸ್ತ್ರ ಚಿಕಿತ್ಸೆಯ ಬಳಿಕ ಶಿವಪ್ಪನ ಅಜೀರ್ಣ ಎನ್ನುವ ಭೇತಾಳ ಕಣ್ಮರೆಯಾಗಿತ್ತು!. 

ದೀಪ್ತಿ, ಗೋಪಣ್ಣ ಮತ್ತು ಶಿವಪ್ಪ ಈ ಮೂವರಲ್ಲೂ ಕಂಡು ಬರುತ್ತಿದ್ದ ರೋಗಲಕ್ಷಣಗಳಲ್ಲಿ ಸಾಮ್ಯತೆ ಇದ್ದರೂ, ಇವರ ಕಾಯಿಲೆಗಳು ವಿಭಿನ್ನವಾಗಿದ್ದವು. ಇದೇ ರೀತಿಯ ಲಕ್ಷಣಗಳನ್ನು ಜಠರದ ಹುಣ್ಣುಗಳು, ಯಕೃತ್ತಿನ ಹುಣ್ಣು, ಮೇದೋಜೀರಕ ಗ್ರಂಥಿಯ ಉರಿಯೂತ, ಪಿತ್ತಕೋಶದಲ್ಲಿ ಕಲ್ಲುಗಳು ಮತ್ತು ಇದರ ನಾಳದಲ್ಲಿ ಅಡಚಣೆ, ಮೂತ್ರಪಿಂಡ- ನಾಳಗಳಲ್ಲಿನ ಕಲ್ಲುಗಳು, ಸ್ತ್ರೀಯರ ಆಂತರಿಕ ಪ್ರಜನನಾಂಗಗಳ ಕಾಯಿಲೆಗಳು ಹಾಗೂ ಉದರದೊಳಗಿನ  ಇನ್ನಿತರ ಅಂಗಗಳಲ್ಲಿನ ಕಾಯಿಲೆಗಳು  ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲೂ ಕಾಣಬಹುದು. ಕೆಲವೊಮ್ಮೆ ಸಣ್ಣ ಎದೆ ನೋವು, ಹೊಟ್ಟೆಯುಬ್ಬರ, ವಾಂತಿಯಂತಹ ಲಕ್ಷಣಗಳು ಹೃದಯಾಘಾತವಾದಾಗಲೂ ಕಂಡುಬರುತ್ತವೆ. 

ಕಾಲೇಜು ಕನ್ಯೆಯರಿಗೊಂದು ಕಿವಿಮಾತು!

ಹದಿಹರೆಯದ ಶಿಲ್ಪಾ ಕಾಲೇಜು ವಿದ್ಯಾರ್ಥಿನಿ. ತುಸು ಧಡೂತಿ ದೇಹದ ಆಕೆಗೆ ಒಂದಿಷ್ಟು ಕೀಳರಿಮೆಯೂ ಇದ್ದುದರಿಂದ ಆಹಾರವನ್ನು ಸೇವಿಸಲು ಹಿಂಜರಿಯುತ್ತಿದ್ದಳು. ಪ್ರಾಯಶಃ ಇದೇ ಕಾರಣದಿಂದಾಗಿ ಪ್ರಯೋಗಶಾಲೆಯಲ್ಲಿ ಅನೇಕಬಾರಿ ಕಣ್ಣುಕತ್ತಲೆ ಬಂದು ಬಿದ್ದಿದ್ದಳು. ಆಕೆಯ ಗೆಳತಿಯಿಂದ ವಿಷಯವರಿತ ಅವಳ ತಾಯಿಯು, ಮಗಳನ್ನು ಪರಿಚಯದ ವೈದ್ಯರಲ್ಲಿ ಕರೆದೊಯ್ದರು.

ಸುಂದರಿಯಾಗಿದ್ದರೂ ಶರೀರದ ತೂಕ ಸ್ವಲ್ಪ ಹೆಚ್ಚೇ ಇದ್ದ ಕಾರಣದಿಂದ ಮತ್ತು ಐಶ್ವರ್ಯಾ ರೈ ಯಂತಹ ಅಂಗಸೌಷ್ಟವ ಹೊಂದುವ ಬಯಕೆಯಿಂದ,ಆಕೆ ಅಲ್ಪಾಹಾರ ಮತ್ತು ಕೆಲವೊಮ್ಮೆ ನಿರಾಹಾರ ವೃತವನ್ನು ಪರಿಪಾಲಿಸುತ್ತಿದ್ದುದು ವೈದ್ಯರಿಗೆ ತಿಳಿದುಬಂದಿತ್ತು. ಶಿಲ್ಪಾಳನ್ನು ತಪಾಸಣೆ ಮಾಡಿದ ವೈದ್ಯರಿಗೆ ಆಕೆಯು ಎಟ್ರೋಪಿಕ್ ಗ್ಯಾಸ್ಟ್ರೈಟಿಸ್ ಮತ್ತು ಪೋಷಕಾಂಶಗಳ ಕೊರತೆಯಿಂದ ಉದ್ಭವಿಸುವ ರಕ್ತಹೀನತೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. 

ಮಾನವ ಶರೀರ ಒಂದು ಜೀವಂತ ಯಂತ್ರ. ಮನುಷ್ಯನ ವಿವಿಧ ಶಾರೀರಿಕ ಕ್ರಿಯೆಗಳು ಸಮರ್ಪಕವಾಗಿ ನಡೆಯಲು ಅವಶ್ಯವಾದ "ಇಂಧನ", ಅರ್ಥಾತ್ ಆಹಾರ ಸಮಯಾನುಸಾರ ದೊರೆಯದೆ ಇದ್ದಲ್ಲಿ, ಶರೀರದ ಕಾರ್ಯಕ್ಷಮತೆ ಕುಂಠಿತಗೊಳ್ಳುವುದು. ಪರಿಣಾಮವಾಗಿ ಶರೀರದ ತೂಕ ಮತ್ತು ಬೆಳವಣಿಗೆಗಳು ಕಡಿಮೆಯಾಗುತ್ತವೆ. ವಿಶೇಷವಾಗಿ ಮುಖ, ಕೈ ಕಾಲುಗಳು ಮತ್ತು ಹೊಟ್ಟೆಯ ಭಾಗದಲ್ಲಿ ಚರ್ಮ ತೆಳ್ಳಗಾಗಿ ಹೊಳಪನ್ನು ಕಳೆದುಕೊಳ್ಳುವುದು. ಕಣ್ಣುಗಳು ಗುಳಿಸೇರಿ ಕಾಂತಿಹೀನವಾಗುವುವು. ತಲೆಗೂದಲಿನ ಸ್ವಾಭಾವಿಕ ಅಂದ ಮತ್ತು ಹೊಳಪು ಮಾಯವಾಗುವುದು. ಹೃದಯದ ಗಾತ್ರ ಕುಗ್ಗಿ ಅದರ ಮತ್ತು ನಾಡಿಯ ಬಡಿತ ಕ್ಷೀಣಿಸುವುದು. ಜಠರ ಮತ್ತು ಸಣ್ಣ ಕರುಳುಗಳು ಕುಗ್ಗಿ ಆಹಾರದ ಪಚನಕ್ರಿಯೆ ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ಷಮತೆ ಕುಂದುವುದು. ಇದೇ ಸಂದರ್ಭದಲ್ಲಿ ಭೇದಿ ಪ್ರಾರಂಭವಾದಲ್ಲಿ ಶರೀರದಲ್ಲಿ ನೀರು ಮತ್ತು ಲವಣಗಳ ಕೊರತೆ ಉದ್ಭವಿಸುತ್ತದೆ. ಇದರೊಂದಿಗೆ ಅತಿ ಆಯಾಸ, ಶರೀರದ ವಿವಿಧ ಅಂಗಗಳಲ್ಲಿ ಬಾವು ಮತ್ತು ರಕ್ತಹೀನತೆ ಕಂಡುಬರುತ್ತದೆ. ಕೆಲ ವ್ಯಕ್ತಿಗಳು ಶಿಲ್ಪಾ ಳಿಗೆ ಆಗುತ್ತಿದ್ದಂತೆ ಕಣ್ಣು ಕತ್ತಲೆ ಬಂದು ಪ್ರಜ್ಞೆ ತಪ್ಪುವುದು ಅಪರೂಪವೇನಲ್ಲ. 

ಶಿಲ್ಪಾಳ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಲು ಸಮತೋಲಿತ ಆಹಾರಸೇವನೆಯೊಂದಿಗೆ ಶರೀರಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟ್, ಪ್ರೋಟೀನ್, ಖನಿಜಗಳು, ಲವಣಗಳು ಮತ್ತು ವಿಭಿನ್ನ ಜೀವಸತ್ವಗಳ ಬಗ್ಗೆ ಪುಟ್ಟ ಭಾಷಣವನ್ನೇ ಬಿಗಿದರು. ವೈದ್ಯರ ಸಲಹೆ ಸೂಚನೆಗಳನ್ನು ಅಕ್ಷರಶಃ ಪರಿಪಾಲಿಸಿದ ಶಿಲ್ಪಾಳ ಆರೋಗ್ಯವು ಕೆಲವೇ ತಿಂಗಳುಗಳಲ್ಲಿ ಸಾಕಷ್ಟು ಸುಧಾರಿಸಿತ್ತು. 

ನೀವೇನು ಮಾಡಬಾರದು

ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಬಾಧಿಸಿದಾಗ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಲ್ಲಿ ನಮೂದಿಸಿರುವ ರೋಗಲಕ್ಷಣಗಳನ್ನು ಕಂಡು ಅಥವಾ ರೋಗಿಗಳ ಸಮಸ್ಯೆಗಳಿಗೆ ವೈದ್ಯರು ನೀಡಿದ ಸಮಾಧಾನ ಮತ್ತು ಚಿಕಿತ್ಸೆಗಳನ್ನು ಗಮನಿಸಿ ಇದೇ ರೀತಿಯ ಸಮಸ್ಯೆಗಳು ನಿಮ್ಮಲ್ಲೂ ಇವೆ ಎಂದು ಭ್ರಮಿಸದಿರಿ. ಇಂತಹ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ "ಹೈಪೋಕಾಂಡ್ರಿಯಾಸಿಸ್" ಅರ್ಥಾತ್, ತನ್ನ ಆರೋಗ್ಯದ ಬಗ್ಗೆ ಮಾರಕ ಚಿಂತೆ ಇರುವ- ತನಗೆ (ಕಪೋಲ ಕಲ್ಪಿತ) ಯಾವುದೋ ರೋಗ ಇರುವುದೆಂದು ದೂರುವ ಪ್ರವೃತ್ತಿ ಎನ್ನುತ್ತಾರೆ. ಇಂತಹ ಸಮಸ್ಯೆ ಆರೋಗ್ಯವಂತರಲ್ಲೂ ಕಂಡುಬರುವುದುಂಟು. ವೈದ್ಯರು ಇಂತಹ ರೋಗಿಗಳಲ್ಲಿ "ವಾದ" ಮಾಡದೆ "ಸಂವಾದ" ನಡೆಸುವ ಮೂಲಕ ಸಮಾಧಾನ ನೀಡುವುದು ಅನಿವಾರ್ಯ. 

ಇದಲ್ಲದೆ ಒಂದು ಊರಿನಿಂದ ಮತ್ತೊಂದು ಊರಿಗೆ ಸುತ್ತಾಡುತ್ತಾ ಸೇವೆ ಸಲ್ಲಿಸುವ "ಪದವಿ ಹೀನ" ಹಾಗೂ ಮಾನ್ಯತೆ ಇಲ್ಲದ ನಕಲಿ ವೈದ್ಯರಿಂದ ದೂರವಿರಿ. ಅವಶ್ಯಕ ತಪಾಸಣೆ- ಪರೀಕ್ಷೆಗಳನ್ನು ನಡೆಸದೆ ಚಿಕಿತ್ಸೆ ಪಡೆಯದಿರಿ. ನಿಮ್ಮಂತಹದ್ದೇ ಸಮಸ್ಯೆಗಳಿರುವ ಬಂಧುಮಿತ್ರರ ಪುಕ್ಕಟೆ ಸಲಹೆಯಂತೆ, ಅವರು ಸೇವಿಸುತ್ತಿರುವ ಔಷದಗಳನ್ನು ಸೇವಿಸಬೇಡಿ. 

ನೀವೇನು ಮಾಡಬಹುದು?

 ನಿಮ್ಮನ್ನು ಬಾಧಿಸಬಹುದಾದ ಗ್ಯಾಸ್ಟ್ರೈಟಿಸ್ ತಡೆಗಟ್ಟಲು ನಿಗದಿತ ಸಮಯದಲ್ಲಿ ನಿಯಮಿತ ಪ್ರಮಾಣದಲ್ಲಿ ಸಮತೋಲಿತ ಆಹಾರವನ್ನು ಸೇವಿಸಿ. ಅನ್ನ,ಚಪಾತಿ, ರೊಟ್ಟಿಗಳೊಂದಿಗೆ ಹಸಿ ತರಕಾರಿಗಳ ಸಲಾಡ್, ಸಿಹಿ ಮೊಸರು,ಹಣ್ಣುಹಂಪಲುಗಳು ಮತ್ತು ದಿನದಲ್ಲಿ ಕನಿಷ್ಠ ೨ ರಿಂದ ೩ ಲೀಟರ್ ಶುದ್ಧ ನೀರನ್ನು ಸೇವಿಸಿರಿ. ಎಣ್ಣೆ- ತುಪ್ಪದಲ್ಲಿ ಕರಿದ, ಅಧಿಕ ಖಾರವಿರುವ ಮಾಂಸಾಹಾರಗಳ ಸೇವನೆ, ತಂಬಾಕು ಮತ್ತು ಮದ್ಯಪಾನಗಳ ವರ್ಜನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟುವುದು ಸುಲಭಸಾಧ್ಯ. ಅಂತೆಯೇ ನಿದ್ರೆಗೆಡುವುದು ಮತ್ತು ಮಾನಸಿಕ ಒತ್ತಡಗಳನ್ನು ನಿವಾರಿಸುವುದು ಅಷ್ಟೇ ಅವಶ್ಯ. ಇವುಗಳೊಂದಿಗೆ ಪ್ರತಿನಿತ್ಯ ಶಾರೀರಿಕ ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವುದು ಉಪಯುಕ್ತವೆನಿಸೀತು. ನಿಮ್ಮ ವೈದ್ಯರು ಯಾವುದೇ ಸಂದರ್ಭದಲ್ಲಿ ಔಷದವನ್ನು ನೀಡುವಾಗ, ಇವುಗಳ ಸೇವನೆಯಿಂದ ಗ್ಯಾಸ್ಟ್ರೈಟಿಸ್ ಉಂಟಾಗುವ ಸಾಧ್ಯತೆಗಳಿದ್ದಲ್ಲಿ ಅದನ್ನು ತಡೆಗಟ್ಟುವ ಔಷದವನ್ನು ಇದರ ಜತೆಯಲ್ಲಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಿ. 

ಆಕಸ್ಮಿಕವಾಗಿ ತೀವ್ರ ಹೊಟ್ಟೆನೋವು ಅಥವಾ ಎದೆನೋವು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ. ಅಗತ್ಯವಿದ್ದಲ್ಲಿ ತಜ್ಞವೈದ್ಯರ ಸಲಹೆ ಹಾಗೂ ಅವರ ಸೂಚನೆಯಂತೆ ರಕ್ತ ಇತ್ಯಾದಿಗಳ ಪರೀಕ್ಷೆ, ಎಕ್ಸ್-ರೇ, ಅಲ್ಟ್ರಾ ಸೌಂಡ್ ಸ್ಕ್ಯಾನ್, ಗ್ಯಾಸ್ತ್ರೋಸ್ಕೋಪಿ ಮತ್ತಿತರ ಪರೀಕ್ಷೆಗಳನ್ನು ಮಾಡಿಸಿ ವೈದ್ಯರೊಂದಿಗೆ ಸಹಕರಿಸಿ. 

ನಿಮ್ಮ ವೈದ್ಯರಲ್ಲಿ ನಿಮ್ಮನ್ನು ಬಾಧಿಸುತ್ತಿರುವ ಕಾಯಿಲೆ ಯಾವುದೆಂದು ಕೇಳಿ ತಿಳಿದುಕೊಳ್ಳಿ. ಅವರು ಸೂಚಿಸುವ ಚಿಕಿತ್ಸಾ ವಿಧಾನಗಳ ಬಗ್ಗೆ (ಔಷದ, ಮಾತ್ರೆ, ಸಿರಪ್, ಇಂಜೆಕ್ಷನ್ ಅಥವಾ ಶಸ್ತ್ರಚಿಕಿತ್ಸೆ ಇತ್ಯಾದಿ)  ಸಂಪೂರ್ಣ ಮಾಹಿತಿಯನ್ನು ಪಡೆದು, ನಿಮ್ಮ ನಿರ್ಧಾರವನ್ನು ಅವರಿಗೆ ತಿಳಿಸುವ ಹಕ್ಕು ನಿಮಗಿದೆ. ಅಂತೆಯೇ ಚಿಕಿತ್ಸೆಯನ್ನು ನಿರಾಕರಿಸುವ ಅಥವಾ ಮತ್ತೊಬ್ಬ ವೈದ್ಯರ ಸಲಹೆಯನ್ನು ಪಡೆಯುವ ಹಕ್ಕು ನಿಮಗಿದೆ. ಅಂತಿಮವಾಗಿ ನಿಮ್ಮ ಕಾಯಿಲೆ ಮತ್ತು ಅದರ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆಯುವ ಅಧಿಕಾರ ನಿಮಗಿದೆ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  

ಉದಯವಾಣಿ ಪತ್ರಿಕೆಯ ದಿ. ೨೮-೧೧-೨೦೦೨ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 


Sunday, November 3, 2013

Citizens responsibilities


                                           ನಾಗರಿಕರ ಹೊಣೆಗಾರಿಕೆಗಳು 

ನಾಗರಿಕರು ತಮ್ಮ ಹಕ್ಕುಗಳ ಬಗ್ಗೆ ತಿಳುವಳಿಕೆ ಹೊಂದಿದರೆ ಸಾಲದು. ತಮ್ಮ ಹೊಣೆಗಾರಿಕೆಯ ಕುರಿತೂ ಸ್ವಲ್ಪ ಜ್ಞಾನವಿರುವುದು ಅವಶ್ಯ. ಹಕ್ಕು ಮತ್ತು ಹೊಣೆಗಾರಿಕೆಗಳು ಒಂದೇ ನಾಣ್ಯದ ಎರಡು ಮುಖಗಳು. ಈ ಅರಿವು ಮೂಡಿದಾಗಲೇ ಜೀವನ ಸುಗಮವಾದೀತು. 
-------------            -------------           ------------            ---------              ----------------                       -----------              -------------

ಕೇಂದ್ರ- ರಾಜ್ಯ ಸರಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳು ನಾಗರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತಾಗಲು ಹಾಗೂ ಉತ್ತಮ ಗುಣಮಟ್ಟದ ಸಂವೇದನಾಶೀಲ ಆಡಳಿತ ವ್ಯವಸ್ಥೆಯನ್ನು ಜನರಿಗೆ ನೀಡುವಂತಾಗಲು, ನಾಗರಿಕ- ಬಳಕೆದಾರರ ವೇದಿಕೆಗಳು ನಿರಂತರವಾಗಿ ಶ್ರಮಿಸುತ್ತಿವೆ. ಇದರೊಂದಿಗೆ ಜನಸಾಮಾನ್ಯರ ವೈಯುಕ್ತಿಕ ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಕ್ಷಿಪ್ರವಾಗಿ ಪರಿಹರಿಸಲು ಸೂಕ್ತ ಮಾರ್ಗದರ್ಶನವನ್ನೂ ನೀಡುತ್ತವೆ. ಕಾರಣಾಂತರಗಳಿಂದ ಸಮಸ್ಯೆಗಳು  ಬಗೆಹರಿಯದೆ ಇದ್ದಲ್ಲಿ, ಶಾಂತಿಯುತ ಹೋರಾಟವನ್ನು ನಡೆಸಲು ಅವಶ್ಯಕ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುವಲ್ಲಿ ಇಂತಹ ವೇದಿಕೆಗಳು ಪ್ರಮುಖಪಾತ್ರವಹಿಸುತ್ತವೆ. 

ಆದರೆ ಅನೇಕ ಸಂದರ್ಭಗಳಲ್ಲಿ ಪ್ರತಿಯೊಬ್ಬ ನಾಗರಿಕರಲ್ಲಿ ಇರಲೇಬೇಕಾದ ಹೊಣೆಗಾರಿಕೆಯ ಬಗ್ಗೆ ಜನಸಾಮಾನ್ಯರಿಗೆ ತಿಳಿದಿರುವುದಿಲ್ಲ. ಅಂತೆಯೇ ಈ ಬಗ್ಗೆ ಅರಿವು ಮೂಡಿಸಬಲ್ಲ ಲೇಖನಗಳು ಮಾಧ್ಯಮಗಳಲ್ಲಿ ಅಪರೂಪದಲ್ಲಿ ಪ್ರಕಟಗೊಂಡರೂ,ಓದುಗರು ಮಾತ್ರ ಇವನ್ನು ಓದುವ ಹವ್ಯಾಸವನ್ನೇ ರೂಢಿಸಿಕೊಂಡಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಬಹುತೇಕ ಜನರಿಗೆ ತಮ್ಮ ಹೊಣೆಗಾರಿಕೆಗಳ ಬಗ್ಗೆ ಪ್ರಾಥಮಿಕ ಮಾಹಿತಿಯೇ ಇಲ್ಲದಿರುವುದು ಅಪರೂಪವೇನಲ್ಲ!. 

ಅವಕಾಶ ವಂಚಿತ ಅನಂತ 

ಅಂತಿಮ ವರ್ಷದ ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ ಅನಂತನಿಗೆ ಅತೀವ ಆನಂದವಾಗಿತ್ತು. ಇದರೊಂದಿಗೆ ವಿದೇಶದಲ್ಲಿ ನೆಲೆಸಿದ್ದ ಬಂಧುವೊಬ್ಬರು ಉತ್ತಮ ಉದ್ಯೋಗವನ್ನು ಕೊಡಿಸುವ ಭರವಸೆ ನೀಡಿದಾಗ, ಅನಂತನಿಗೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತ್ತು. 

ವಿದೇಶ ಪ್ರಯಾಣದ ಸಿದ್ಧತೆಯ ಪ್ರಾಥಮಿಕ ಅವಶ್ಯಕತೆಯಂತೆ, ಆ ದೇಶದ ದೂತಾವಾಸಕ್ಕೆ ಅವಶ್ಯಕ ದಾಖಲೆಗಳೊಂದಿಗೆ ಆತನು ಅರ್ಜಿ ಸಲ್ಲಿಸಿದ್ದನು. ವಾರ ಕಳೆಯುವಷ್ಟರಲ್ಲಿ ದೂತಾವಾಸದಿಂದ ಬಂದಿದ್ದ ಪತ್ರದಲ್ಲಿ, ಆತನ ಜನನ ಪ್ರಮಾಣ ಪತ್ರವನ್ನು ಏಳುದಿನಗಳಲ್ಲಿ ನೀಡುವಂತೆ ತಿಳಿಸಲಾಗಿತ್ತು. ತನ್ನ ಎಸ್. ಎಸ್. ಎಲ್. ಸಿ ಅಂಕಪಟ್ಟಿಯಲ್ಲಿನ ಜನನ ದಿನಾಂಕವನ್ನೇ ಅಧಿಕೃತ "ದಾಖಲೆ" ಎಂದು ನಂಬಿದ್ದ ಅನಂತನಿಗೆ, ಇದೀಗ ಗಾಬರಿಯಾಗಿತ್ತು. ಮಗನ ಜನನ ಪ್ರಮಾಣ ಪತ್ರದ ಬಗ್ಗೆ ತಲೆಕೆದಿಸಿಕೊಂಡಿರದ ಆತನ ತಂದೆಯ ನಿರ್ಲಕ್ಷ್ಯವೇ ಇದೀಗ "ಅನಂತನ ಅವಾಂತರ"ಕ್ಕೆ ಕಾರಣವೆನಿಸಿತ್ತು. 

ಧೃತಿಗೆಡದ ಅನಂತನು ತನ್ನ ಹುಟ್ಟೂರಿಗೆ ಧಾವಿಸಿ, ಅಲ್ಲಿನ ಔರಸಭೆಯ ಅಧಿಕಾರಿಗಳಲ್ಲಿ ಅಂಗಲಾಚಿ ೨೩ ವರ್ಷಗಳ ಹಿಂದಿನ ಕಡತಗಳನ್ನು ಹುಡುಕಿಸಬೇಕಾಯಿತು. ಅಂತೂ ಜನನ ಪ್ರಮಾಣ ಪತ್ರ ಕೈಸೇರುವಾಗ ನಾಲ್ಕು ದಿನಗಳೇ ಕಳೆದಿದ್ದವು. ಬದುಕಿದೆಯಾ ಬಡ ಜೀವವೇ ಎಂದು ಭಾವಿಸಿದ ಅನಂತನು, ಅಂದೇ ರಾತ್ರಿ ಮದ್ರಾಸಿಗೆ ಪ್ರಯಾಣಿಸಿದ್ದನು. ಪ್ರಮಾಣ ಪತ್ರವನ್ನು ದೂತಾವಾಸದ ಅಧಿಕಾರಿಯಲ್ಲಿ ಹಾಜರುಪಡಿಸಿದ ಸ್ವಲ್ಪ ಹೊತ್ತಿನ ಬಳಿಕ ಆತನನ್ನು ಒಳಕ್ಕೆ ಕರೆಯಲಾಯಿತು. ಆತನು ನೀಡಿದ್ದ ಪ್ರಮಾಣ ಪತ್ರದಲ್ಲಿ ಆತನ ತಂದೆಯ ಹೆಸರು ಸುರೇಂದ್ರ ಎಂದು ಇರಬೇಕಾದಲ್ಲಿ, ಸುಂದರ ಎಂದು ನಮೂದಿಸಿದ್ದರಿಂದ ಅನಂತನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು!. 

ವಿದ್ಯಾಭ್ಯಾಸ ಮುಗಿದಂತೆಯೇ ಕೈತುಂಬಾ ಸಂಬಳ ದೊರೆಯುವಂತಹ ಹಾಗೂ ವಿದೇಶದಲ್ಲಿ ನೆಲೆಸುವ ಸುವರ್ಣಾವಕಾಶದಿಂದ ವಂಚಿತನಾಗಲು, ೨೩ ವರ್ಷಗಳಿಂದ ತನ್ನ ಜನನ ಪ್ರಮಾಣ ಪತ್ರವನ್ನು ಪಡೆಯದ ಹಾಗೂ ಪಡೆದ ಬಳಿಕವೂ ಅದನ್ನು ಪರಿಶೀಲಿಸದ ಅನಂತನು "ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಂಡಿದ್ದನು! 

ಅಜಾಗರೂಕತೆಗಾಗಿ ದಂಡ ತೆತ್ತ ವೈದ್ಯರು!

ಅರೆಕ್ಷಣವೂ ಬಿಡುವಿಲ್ಲದ ಪ್ರಸಿದ್ಧ ವೈದ್ಯರೊಬ್ಬರಿಗೆ ತನ್ನ ಮಗನ ಸಿ. ಇ. ಟಿ  ಕೌನ್ಸೆಲಿಂಗ್ ಗಾಗಿ ಬೆಂಗಳೂರಿಗೆ ಹೋಗುವ ಪ್ರಸಂಗ ಬಂದಿತ್ತು. ಪೂರ್ವ ನಿರ್ಧಾರಿತ ಕಾರ್ಯಕ್ರಮದಂತೆ ಬಸ್ಸಿನಲ್ಲಿ ಹೋಗಲು ಆಗದೇ, ಸ್ವಂತ ಕಾರಿನಲ್ಲಿ ಪಯಣಿಸಬೇಕಾಯಿತು. 

ಬೆಂಗಳೂರಿಗೆ ತಲುಪುವ ಮೊದಲೇ ಈ ಮರೆಗುಳಿ ವೈದ್ಯರ ಪತ್ನಿ ಕಾರಿನಲ್ಲಿ ಹುಡುಕಾಡಿದಾಗ ವಾಹನದ ದಾಖಲೆಗಳು ಮತ್ತು ವೈದ್ಯರ ವಾಹನ ಚಾಲನಾ ಪರವಾನಿಗೆಗಳು ಸಿಕ್ಕಿರಲಿಲ್ಲ. ಆದರೆ ವಿಷಯವನ್ನರಿತ ವೈದ್ಯರು ಗಾಬರಿಗೊಳ್ಳಲಿಲ್ಲ. ತನ್ನ ಕಾರಿನ ಹಿಂದೆ- ಮುಂದೆ ರಾರಾಜಿಸುವ "ರೆಡ್ ಕ್ರಾಸ್" ಚಿಹ್ನೆಯನ್ನೇ ಆಪದ್ಬಾಂಧವ ಎಂದು ನಂಬಿದ್ದ ವೈದ್ಯರು ನಿರಾಳವಾಗಿದ್ದರು!. 

ಪರವೂರಿನ ಚಾಲಕರಿಗೆ ಚಕ್ರವ್ಯೂಹದಂತೆ ಭಾಸವಾಗುವ ಬೆಂಗಳೂರಿನ ರಸ್ತೆಗಳಲ್ಲಿ, ಸಾಕಷ್ಟು ಮುಂಜಾಗರೂಕತೆ ವಹಿಸಿದ್ದರೂ" ನೋ ಎಂಟ್ರಿ " ಯಲ್ಲಿ ವಾಹನ ಚಲಾಯಿಸಿದ ವೈದ್ಯರು, ಸಂಚಾರ ವಿಭಾಗದ ಆರಕ್ಷಕನ ಕಣ್ಣಿಗೆ ಬಿದ್ದಿದ್ದರು. ವೈದ್ಯರ ಕಾರನ್ನು ತಡೆದು ನಿಲ್ಲಿಸಿದ ಆರಕ್ಷಕನಲ್ಲಿ ಪರಿಪರಿಯಾಗಿ ಕೇಳಿಕೊಂಡರೂ ಪ್ರಯೋಜನವಾಗದೇ ಇದ್ದಾಗ, ಕೊನೆಯ ಪ್ರಯತ್ನವೆಂದು ಕಾರಿನ ಮೇಲೆ ರಾರಾಜಿಸುತ್ತಿದ್ದ "ರೆಡ್ ಕ್ರಾಸ್" ಚಿಹ್ನೆಯನ್ನು ತೋರಿಸಿ ತಾನೊಬ್ಬ ವೈದ್ಯನೆಂದು ಹೇಳಿದ್ದರು. 

ಮೀಸೆಯಡಿಯಲ್ಲೇ ನಸುನಕ್ಕ ಪೋಲೀಸನು ವಿಳಂಬಿಸದೇ ಏಕಮುಖ ಸಂಚಾರವಿರುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ವಾಹನ ಚಲಾಯಿಸಿದ ಬಗ್ಗೆ , ವಾಹನ ಚಾಲನಾ ಪರವಾನಿಗೆ ಮತ್ತು ಕಾರಿನ ನೋಂದಣಿ,ವಿಮೆ ಮತ್ತು ಸುಂಕ ಪಾವತಿಸಿದ ದಾಖಲೆಗಳನ್ನು ಹೊಂದಿರದ ಬಗ್ಗೆ ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಕಾನೂನು ಬಾಹಿರವಾಗಿ ರೆಡ್ ಕ್ರಾಸ್ ಚಿಹ್ನೆಯನ್ನು ಬಳಸಿದ್ದಕ್ಕಾಗಿ ಪ್ರತ್ಯೇಕವಾಗಿ ೫೦೦ ರೂ. ದಂಡವನ್ನು ವಿಧಿಸಿದ್ದನು!. ತನ್ನ ಅಜಾಗರೂಕತೆ ಮತ್ತು ಬೇಜವಾಬ್ದಾರಿಗಳಿಂದಾಗಿ, ವೈದ್ಯರು "ಅಂಗೈ ತೋರಿಸಿ ಅವಲಕ್ಷಣ' ಎನ್ನಿಸಿಕೊಂಡಿದ್ದರು!

ಜವಾಬ್ದಾರಿ ನಿಮ್ಮದೇ 

ಪ್ರಾಯಶಃ ನಿಮಗೂ ಅನಂತನಿಗೆ ಆದಂತಹ ಅನುಭವ ಆಗಿರಬಹುದು. ನಿಮ್ಮ ವೈಯುಕ್ತಿಕ ದಾಖಲೆಗಳನ್ನು ಸರಿಯಾದ ಸಮಯದಲ್ಲಿ ಪಡೆದುಕೊಂಡು ಅದರಲ್ಲಿನ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಬಳಿಕ ಪ್ರತಿಯೊಂದು ದಾಖಲೆಯ ಜೆರಾಕ್ಸ್ ಪ್ರತಿಗಳನ್ನು ಮಾಡಿಸಿ, ಇವುಗಳನ್ನು ಪ್ರತ್ಯೇಕವಾಗಿ ಇರಿಸಿಕೊಳ್ಳಿ. ಆಕಸ್ಮಿಕವಾಗಿ ಮೂಲ ದಾಖಲೆಗಳು ಕಳೆದುಹೊದಲ್ಲಿ ಅಥವಾ ನಾಶವಾದಲ್ಲಿ, ಧೃಡೀಕೃತ ನಕಲುಗಳನ್ನು ಪಡೆದುಕೊಳ್ಳಲು ಜೆರಾಕ್ಸ್ ಪ್ರತಿಗಳು ಉಪಯುಕ್ತವೆನಿಸುತ್ತವೆ. 

ಜನನ ಪ್ರಮಾಣ ಪತ್ರ, ಶಾಲಾ ದಾಖಲಾತಿ ವಿವರ, ಶಾಲಾ ವರ್ಗಾವಣೆ ಪತ್ರ, ಎಸ್. ಎಸ್. ಎಲ್. ಸಿ, ಪಿ. ಯು. ಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳಲ್ಲಿ ನಿಮ್ಮ ಮತ್ತು ನಿಮ್ಮ ಹೆತ್ತವರ ಹೆಸರುಗಳು ಏಕರೀತಿಯಲ್ಲಿ ಇವೆಯೇ ಎಂದು ಪರಿಶೀಲಿಸಿ. ವಿಶೇಷವಾಗಿ ಹೆಸರುಗಳಲ್ಲಿನ ಅಕ್ಷರಗಳಲ್ಲಿ ಲೋಪದೋಷಗಳು ಇರಬಾರದ ಕಾರಣದಿಂದಾಗಿ ಇವುಗಲತ್ತ ಲಕ್ಷ್ಯವಿರಲಿ. ಅಕಸ್ಮಾತ್ ಇಂತಹ ಲೋಪದೋಷಗಳು ಇದ್ದಲ್ಲಿ, ತಕ್ಷಣ ಸಂಬಂಧಿತ ಅಧಿಕಾರಿಗನ್ನು ಸಂಪರ್ಕಿಸಿ ಇದನ್ನು ಸರಿಪಡಿಸಿಕೊಳ್ಳಿ. 

ಸಾಮಾನ್ಯವಾಗಿ ಹೆಂಗಸರು ಹೆರಿಗೆಗಾಗಿ ದಾಖಲಾದ ಆಸ್ಪತ್ರೆಗಳ ಮೂಲಕ ಜನನ ಪ್ರಮಾಣ ಪತ್ರವನ್ನು ಪಡೆಯಲು ಅವಶ್ಯಕ ವಿವರಗಳು ಸಂಬಂಧಿತ ಇಲಾಖೆಗೆ ರವಾನೆಯಾಗುವುದು. ಇದೇ ಕಾರಣದಿಂದಾಗಿ ಇದರಲ್ಲಿ ನಮೂದಿಸಲೇಬೇಕಾದ ಹೆಸರುಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ನಮೂದಿಸುವುದು ಹಿತಕರ. ಮಾತ್ರವಲ್ಲ, ಈ ಪ್ರಮಾಣ ಪತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರತ್ಯೇಕವಾಗಿ ಪಡೆದುಕೊಳ್ಳುವುದು ಇನ್ನಷ್ಟು ಹಿತಕರ. ಏಕೆಂದರೆ ಹೆಸರಿನಲ್ಲಿರುವ ಅಕ್ಷರಗಳನ್ನು ತಪ್ಪಿಲ್ಲದೆ ಸ್ಪಷ್ಟವಾಗಿ ಬರೆಯದೇ ಇದ್ದಲ್ಲಿ, ಕನ್ನಡದ 'ವಿಶ್ವನಾಥ" ನು ಆಂಗ್ಲ ಭಾಷೆಯಲ್ಲಿ "ವಿಸ್ವನಾತ್ " (viswanat) ಆಗಿ ಬದಲಾಗುವ ಸಾಧ್ಯತೆಗಳಿವೆ. 

ನಿಮ್ಮ ಪಡಿತರ ಚೀಟಿ, ಮತದಾರರ ಗುರುತು ಚೀಟಿ, ಬ್ಯಾಂಕ್- ಅಂಚೆ ಕಚೇರಿಯ ಪಾಸ್ ಪುಸ್ತಕಗಳು, ಫಿಕ್ಸೆಡ್ ಡೆಪೋಸಿಟ್ ರಸೀತಿಗಳು,ಪಾಸ್ ಪೋರ್ಟ್, ಆದಾಯ ತೆರಿಗೆ ಇಲಾಖೆಯ ಪಾನ್ ಕಾರ್ಡ್, ಆಧಾರ್ ಕಾರ್ಡ್, ಎನ್. ಪಿ. ಆರ್ ಕಾರ್ಡ್, ಕ್ರೆಡಿಟ್- ಡೆಬಿಟ್ ಕಾರ್ಡ್, ವಿದ್ಯುತ್- ದೂರವಾಣಿ ಸಂಪರ್ಕಗಳಿಗೆ ಸಂಬಂಧಿಸಿದ ದಾಖಲೆಗಳು, ವಾಹನ ಚಾಲನಾ ಪರವಾನಿಗೆ, ವಾಹನದ ತೆರಿಗೆ,ವಿಮೆ ಹಾಗೂ ನೋಂದಣಿ ದಾಖಲೆಗಳು, ಜೀವವಿಮೆ- ಆರೋಗ್ಯ ವಿಮೆಯ ದಾಖಲೆಗಳು, ಎಲ್ಲ ಸ್ಥಿರ- ಚರ ಸೊತ್ತುಗಳ ದಾಖಲೆಗಳು ಮತ್ತು ಇನ್ನಿತರ ಅವಶ್ಯಕ ದಾಖಲೆಗಳನ್ನು ಭದ್ರವಾಗಿರಿಸಿ. ಅಂತೆಯೇ ನವೀಕರಿಸಬೇಕಾದ, ಕಾಲ ಕಾಲಕ್ಕೆ ಹಣವನ್ನು ಕಂತುಗಳ ಮೂಲಕ ಪಾವತಿಸಬೇಕಾದ ಸೌಲಭ್ಯಗಳನ್ನು ಸೂಕ್ತ ಸಮಯದಲ್ಲಿ ನವೀಕರಿಸುವುದು- ಪಾವತಿಸುವ ಹೊಣೆಗಾರಿಕೆ ನಿಮ್ಮದೇ ಆಗಿದೆ. 

ದಾಖಲೆಗಳು ಕಳೆದುಹೋದಾಗ 

ನಿಮ್ಮಲ್ಲಿರುವ ಯಾವುದೇ ಮೂಲ ದಾಖಲೆಗಳು ಕಳೆದುಹೊದಲ್ಲಿ ಅಥವಾ ಕದ್ದುಹೋದಲ್ಲಿ, ಸಮೀಪದ ಪೋಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಿ. ಈ ದಾಖಲೆಗಳನ್ನು ಇತರರು ದುರುಪಯೋಗಪಡಿಸಿಕೊಂಡಲ್ಲಿ ಸಂಭವಿಸಬಹುದಾದ ಯಾವುದೇ ಕಷ್ಟ- ನಷ್ಟಗಳ ನಿವಾರಣೆಗೆ ಇದು ಅತ್ಯವಶ್ಯಕವೆನಿಸುವುದು. ಉದಾಹರಣೆಗೆ ನಿಮ ಪಾಸ್ ಪೋರ್ಟ್ ಕಳೆದುಹೋದ ಬಗ್ಗೆ ದೂರು ನೀಡಿದ ಬಳಿಕ, ಸಂಬಂಧಿತ ಇಲಾಖೆಯು ಕ್ಷಿಪ್ರವಾಗಿ "ಲುಕ್ ಔಟ್" ನೋಟೀಸ್ ಜಾರಿ ಮಾಡುತ್ತದೆ. ಅದೇ ರೀತಿಯಲ್ಲಿ ಶೇರು ಸರ್ಟಿಫಿಕೇಟ್ ಗಳು ಕಳೆದುಹೋದಲ್ಲಿ, ಆರಕ್ಷಕ ಠಾಣೆಗೆ ದೂರು ನೀಡಿದ ರಶೀದಿಯ ಆಧಾರದ ಮೇಲೆ ಬದಲಿ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. 

ನಿಮ್ಮ ವಿಳಾಸ ಬದಲಾದಲ್ಲಿ ಇದನ್ನು ಸಂಬಂಧಿತ ಇಲಾಖೆ- ಸಂಸ್ಥೆಗಳಿಗೆ ತಿಳಿಸಿ, ಮೂಲ ದಾಖಲೆಗಳಲ್ಲಿ ಹೊಸ ವಿಳಾಸವನ್ನು ದಾಖಲಿಸುವುದು ಅತ್ಯಗತ್ಯ. ಇದರಿಂದ ಅನಗತ್ಯ ತೊಂದರೆಗಳನ್ನು ತಡೆಗಟ್ಟುವುದು ಸುಲಭ ಸಾಧ್ಯ. 

ಸರಕಾರಿ- ಖಾಸಗಿ ಸಂಸ್ಥೆ- ಇಲಾಖೆಗಳೊಂದಿಗೆ ಯಾವುದೇ ವಿಷಯದ ಬಗ್ಗೆ ನೀವು ನಡೆಸಿರುವ ಪತ್ರ ವ್ಯವಹಾರದ ನಕಲೊಂದನ್ನು ಅವಶ್ಯವಾಗಿ ತೆಗೆದಿರಿಸಿ. ಅಂತೆಯೇ ನಗದು ಪಾವತಿಸಿದ ರಶೀದಿಗಳನ್ನು ಜೋಪಾನವಾಗಿರಿಸಿ. 

ನೀವೇನು ಮಾಡಬಹುದು?

ನಿಮ್ಮ ಮಕ್ಕಳು ಹೈಸ್ಕೂಲ್ ಹಂತವನ್ನು ತಲುಪಿದ ಬಳಿಕ ಕನಿಷ್ಠ ರಜಾ ದಿನಗಳಲ್ಲಾದರೂ ಅವರನ್ನು ಬ್ಯಾಂಕ್, ಅಂಚೆ ಕಚೇರಿ, ಪುರಸಭಾ ಕಚೇರಿ, ಜೀವ ವಿಮಾ ಕಚೇರಿ, ಕಂದಾಯ,ಕೃಷಿ ಮತ್ತಿತರ ಇಲಾಖೆಗಳ ಕಛೇರಿಗಳು ಮತ್ತು ನಿಮ್ಮ ಕೆಲಸ ಕಾರ್ಯಗಳಿರುವ ಕಚೇರಿಗಳಿಗೆ ಕರೆದೊಯ್ದು, ಅಲ್ಲಿನ ಕಾರ್ಯ ವಿಧಾನವನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶವನ್ನು ಕಲ್ಪಿಸಿ. ಮಕ್ಕಳ ಮುಂದಿನ ಜೀವನದಲ್ಲಿ ಇದು ಅತ್ಯಂತ ಪ್ರಯೋಜನಕಾರಿ ಎನಿಸುವುದರೊಂದಿಗೆ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇದು ಉಪಯುಕ್ತವೆನಿಸುವುದು. 

ನಿಮ್ಮ ದೈನಂದಿನ ಜೀವನದಲ್ಲಿ ಅನಿವಾರ್ಯವೆನಿಸುವ ವೈಯುಕ್ತಿಕ ಅಥವಾ ಸಾರ್ವಜನಿಕ ಸಮಸ್ಯೆಗಳ ಪರಿಹಾರಕ್ಕಾಗಿ ಅಗತ್ಯವಿರುವ ವಿವಿಧ ಇಲಾಖೆಗಳೊಂದಿಗೆ ನಡೆಸಬೇಕಾದ ಪತ್ರ ವ್ಯವಹಾರದ ವಿವಿಧ ಹಂತಗಳ ಮಾಹಿತಿಯನ್ನು ಅರಿತುಕೊಳ್ಳಿ. ಅದೇ ರೀತಿಯಲ್ಲಿ ವೈಯುಕ್ತಿಕ ಸಮಸ್ಯೆಗಳ ನಿವಾರಣೆಗೆ ನಡೆಸುವ ಪ್ರಯತ್ನಗಳನ್ನು, ಅಷ್ಟೇ ಶೃದ್ಧೆಯಿಂದ ಸಾರ್ವಜನಿಕ ಸಮಸ್ಯೆಗಳ ನಿವಾರಣೆಗಾಗಿ ನಡೆಸುವುದು ಸಮಾಜಕ್ಕೆ ನಿಮ್ಮ ಕಿರು ಕಾಣಿಕೆ ಎನಿಸೀತು. ನಿಮ್ಮ ಸಲಹೆ- ಸೂಚನೆಗಳನ್ನು ಸಂಬಂಧಿತ ಇಲಾಖೆಗಳಿಗೆ- ಅಧಿಕಾರಿಗಳಿಗೆ ನೀಡಿದ ಬಳಿಕವೂ ಸ್ಪಂದಿಸದಿದ್ದಲ್ಲಿ, ಪತ್ರಿಕೆಗಳಿಗೆ ಮಾಹಿತಿ ನೀಡಿ ಜನಾಭಿಪ್ರಾಯವನ್ನು ಮೂಡಿಸಲು ಪ್ರಯತ್ನಿಸಿ. 

ಈ ರೀತಿಯಲ್ಲಿ ನಿಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ, ಅನಾವಶ್ಯಕ ಸಮಸ್ಯೆಗಳು- ತೊಂದರೆಗಳನ್ನು ಸುಲಭದಲ್ಲೇ ನಿವಾರಿಸಿಕೊಳ್ಳಬಹುದಾಗಿದೆ ಎನ್ನಿವುದನ್ನು ಮರೆಯದಿರಿ. 

ಲೇಖನ- ಡಾ. ಸಿ.  ನಿತ್ಯಾನಂದ ಪೈ, ಪುತ್ತೂರು 
ಮಾಹಿತಿ- ದಿನೇಶ್ . ಕೆ. ಭಟ್,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೯-೦೮- ೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 


Friday, November 1, 2013

Abdominal pain


                                    ಉದರಶೂಲೆಯನ್ನು ಉಪೇಕ್ಷಿಸದಿರಿ!

  ಜನಸಾಮಾನ್ಯರನ್ನು ಅಪರೂಪದಲ್ಲಿ ಕಾಡಬಹುದಾದ ಉದರ ಸಂಬಂಧಿ ತೊಂದರೆಗಳಿಗೆ ಅಧಿಕತಮ ಜನರು "ಸ್ವಯಂ ಚಿಕಿತ್ಸೆ" ಪ್ರಯೋಗಿಸುವುದು ಸ್ವಾಭಾವಿಕ. ಆದರೆ ಇಂತಹ ತೊಂದರೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದಲ್ಲಿ ಅಥವಾ ಉಲ್ಬಣಿಸುತ್ತಿದ್ದಲ್ಲಿ, ಇದನ್ನು ಉಪೇಕ್ಷಿಸದೆ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಹಿತಕರ. 
----------------                            -----------------------------                             -----------------------                          ---------------------------                      --------------------

    ಉದರಶೂಲೆಯ ಬಾಧೆಯನ್ನು ತಮ್ಮ ಜೀವಿತಾವಧಿಯಲ್ಲಿ ಒಂದುಬಾರಿಯಾದರೂ ಅನುಭವಿಸದವರು ಈ ಜಗತ್ತಿನಲ್ಲೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಅಜೀರ್ಣದಿಂದ ಆರಂಭಿಸಿ ಮಾರಕ ಕ್ಯಾನ್ಸರ್ ನಂತಹ ಅನೇಕ ವ್ಯಾಧಿಗಳಲ್ಲಿ ಪ್ರಧಾನವಾಗಿ ಕಂಡುಬರಬಹುದಾದ ಉದರಶೂಲೆಯನ್ನು ಉಪೇಕ್ಷಿಸುವುದು, ಗಂಭೀರ ಸಮಸ್ಯೆಗಳಿಗೂ ಕಾರಣವೆನಿಸಬಹುದು. ಇದೇ ಕಾರಣದಿಂದಾಗಿ "ಹೊಟ್ಟೆ ನೋವಿನ ಗುಟ್ಟೇನು" ಎನ್ನುವುದನ್ನೇ ಅರಿಯದ ಅಮಾಯಕರು, ಅನೇಕ ಸಂದರ್ಭಗಳಲ್ಲಿ ಸ್ವಯಂ ಚಿಕಿತ್ಸೆಯ ಪ್ರಯೋಗಕ್ಕೆ ಬಲಿಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಂತೆಯೇ ಪ್ರಾರಂಭಿಕ ಹಂತದಲ್ಲೇ ಅರ್ಹ ವೈದ್ಯರ ಸಲಹೆ- ಚಿಕಿತ್ಸೆಗಳಿಂದ ಈ ಸಮಸ್ಯೆಯನ್ನು ಪರಿಹಾರಿಸಿಕೊಳ್ಳುವುದು ಅಸಾಧ್ಯವೇನಲ್ಲ. 

ತಿಂಡಿಪೋತ ತಿರುಮಲ 

ಬಂಧು ಮಿತ್ರರಿಂದ ತಿಂಡಿಪೋತ ಎಂದೇ ಕರೆಯಲ್ಪಡುತ್ತಿದ್ದ ತಿರುಮಲನು ೩೫ ರ ಹರೆಯದಲ್ಲಿ ೧೨೦ ಕಿಲೋ ತೂಗುತ್ತಿದ್ದನು!. ಸದಾಶಿವನಿಗೆ ಅದೇ ಧ್ಯಾನ ಎನ್ನುವಂತೆ, ತಿರುಮಲನಿಗೆ ತಿಂಡಿ ತೀರ್ಥಗಳದ್ದೇ ಧ್ಯಾನ ಎಂದು ಸ್ನೇಹಿತರು ತಮಾಷೆ ಮಾಡುವಷ್ಟು ಮಟ್ಟಿಗೆ ಆತನ ಹೊತ್ತೆಬಾಕತನ ಖ್ಯಾತಿವೆತ್ತಿತ್ತು. ನಿಜ ಹೇಳಬೇಕಿದ್ದಲ್ಲಿ ನಿದ್ರಿಸಿದಾಗ ಮಾತ್ರ ಆತನ ಜಠರಾಗ್ನಿಗೆ ವಿಶ್ರಾಂತಿ ದೊರೆಯುತ್ತಿತ್ತು!. 

ದಿನದಲ್ಲಿ ಹಲವಾರು ಬಾರಿ ಹೊಟ್ಟೆತುಂಬಾ ತಿಂದುಣ್ಣುತ್ತಿದ್ದ ತಿರುಮಲನಿಗೆ  ಇತ್ತೀಚಿನ ಕೆಲದಿನಗಳಿಂದ ಅಪರೂಪದಲ್ಲೊಮ್ಮೆ ಹೊಟ್ಟೆನೋವು ಬಾಧಿಸುತ್ತಿತ್ತು. ಅತಿಆಹಾರ ಸೇವನೆಯಿಂದ ಉದ್ಭವಿಸಿರಬಹುದಾದ ಅಜೀರ್ಣವೇ ಈ ತೊಂದರೆಗೆ ಕಾರಣವೆಂದು ನಂಬಿದ್ದ ತಿರುಮಲನು, ನೋವು ಕಾಣಿಸಿಕೊಂಡಾಗಲೆಲ್ಲಾ ಒಂದು ಸೋಡಾ ಕುಡಿದು ಡರ್ರನೇ ತೇಗಿ ಸಮಾಧಾನಪಟ್ಟುಕೊಳ್ಳುತ್ತಿದ್ದನು. 

ಊರಿನ ಜಾತ್ರೆಯಂದು ಹೆಂಡತಿ ಮಾಡಿದ್ದ ಹಬ್ಬದಡುಗೆಯನ್ನು ಪೊಗದಸ್ತಾಗಿ ಉಂಡು, ಸಂಜೆ ಜಾತ್ರೆಯ ಗದ್ದೆಯಲ್ಲಿ ಸ್ನೇಹಿತರೊಂದಿಗೆ ಸುತ್ತಾಡುತ್ತಾ ಕಂಡದ್ದೆಲ್ಲವನ್ನೂ ಕೊಂಡು ಕಬಳಿಸಿದ ತಿರುಮಲನು ಮಧ್ಯರಾತ್ರಿಯಲ್ಲಿ ಮನೆಗೆ ಮರಳಿದ್ದನು. ಬೆಳಗಿನ ಜಾವ ನಾಲ್ಕು ಗಂಟೆಗೆ ಎಚ್ಚರಗೊಂಡಿದ್ದ ಆತನಿಗೆ ಹೊಟ್ಟೆಯುಬ್ಬರ ಮತ್ತು ವಾಕರಿಕೆಯೊಂದಿಗೆ ತೀವ್ರ ಉದರಶೂಲೆಯೂ ಆರಂಭವಾಗಿತ್ತು. ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಹೊಟ್ಟೆನೋವನ್ನು ತಾಳದೇ ನರಳುತ್ತಿದ್ದ ಪತಿಯನ್ನು ಕಂಡು ಲಕ್ಷ್ಮಿಗೆ ದಿಗಿಲಾಗಿತ್ತು. ತಕ್ಷಣ ನೆರೆಮನೆಯವರ ವಾಹನದಲ್ಲಿ ಪತಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು, ತುರ್ತು ಚಿಕಿತ್ಸೆಯನ್ನು ಕೊಡಿಸಿದ ಬಳಿಕ ತಿರುಮಲನ ಉದರಶೂಲೆ ಕೊಂಚ ಶಮನಗೊಂಡಿತ್ತು. 

ಮರುದಿನ ತಜ್ಞವೈದ್ಯರು  ಆತನನ್ನು ಪರೀಕ್ಷಿಸಿದ ಬಳಿಕ ಉದರದ ಸೋನೋಗ್ರಾಮ್ ಮಾಡಿಸಿದಾಗ, ತಿರುಮಲನ ಪಿತ್ತಕೋಶದಲ್ಲಿ ಅನೇಕ ಕಲ್ಲುಗಳು ಪತ್ತೆಯಾಗಿದ್ದವು. ಸಮಸ್ಯೆಯ ತೀವ್ರತೆಯನ್ನು ಅರಿತ ಶಸ್ತ್ರಚಿಕಿತ್ಸಾ ತಜ್ಞರ ಸಲಹೆಯಂತೆ, ಶಸ್ತ್ರಚಿಕಿತ್ಸೆಯನ್ನು ನಡೆಸಿ ಆತನ ಪಿತ್ತಕೋಶವನ್ನು ತೆಗೆಯಲಾಯಿತು. 

ಒಂದು ವಾರದ ಬಳಿಕ ಗುಣಮುಖನಾಗಿ ಮನೆಗೆ ಮರಳಿದ ತಿರುಮಲನು ವೈದ್ಯರ ಸಲಹೆಯಂತೆ ಮಿತಾಹಾರ ಸೇವನೆ ಮತ್ತು ಶಾರೀರಿಕ ವ್ಯಾಯಾಮಗಳನ್ನು ಪರಿಪಾಲಿಸಿದ ಪರಿಣಾಮವಾಗಿ, ಎರಡೇ ವರ್ಷಗಳಲ್ಲಿ ಆತನ ತೂಕವು ೮೫ ಕಿಲೋಗಳಿಗೆ ಇಳಿದಿತ್ತು. ಇದರೊಂದಿಗೆ ಆತನನ್ನು ಆಗಾಗ ಬಾಧಿಸುತ್ತಿದ್ದ ಅಜೀರ್ಣದ ತೊಂದರೆಯೂ ಮಾಯವಾಗಿತ್ತು!. 

ಉಪವಾಸದ ಉಪದ್ರವ?

ಕಳೆದ ನಾಲ್ಕಾರು ತಿಂಗಳುಗಳಿಂದ ತನ್ನನ್ನು ಬಾಧಿಸುತ್ತಿದ್ದ ಹೊಟ್ಟೆನೋವಿಗೆ "ವಾಯು ಬಾಧೆ"ಯೇ ಕಾರಣವೆಂದು ಧೃಢವಾಗಿ ನಂಬಿದ್ದ ಖತೀಜಮ್ಮನು, ಇದರ ಪರಿಹಾರಕ್ಕಾಗಿ ಜೀರಿಗೆಯ ಕಷಾಯವನ್ನು ತಯಾರಿಸಿ ಕುಡಿಯುತ್ತಿದ್ದಳು. ಪ್ರಾರಂಭಿಕ ಹಂತದಲ್ಲಿ ಕಷಾಯ ಸೇವನೆಯಿಂದ ಕೊಂಚ ಶಮನಗೊಳ್ಳುತ್ತಿದ್ದ ಹೊಟ್ಟೆನೋವು, ಇದೀಗ ಪ್ರತಿನಿತ್ಯ ಆಕೆಯನ್ನು ಪೀಡಿಸಲು ಆರಂಭಿಸಿತ್ತು. ಜೊತೆಗೆ ನೋವಿನ ಅವಧಿಯೂ ದಿನೇ ದಿನೇ ಹೆಚ್ಚಲಾರಂಭಿಸಿತ್ತು. 

ತನ್ಮಧ್ಯೆ ರಂಜಾನ್ ಮಾಸ ಆರಂಭವಾದಂತೆಯೇ ತನ್ನ ಸಮಸ್ಯೆಯನ್ನು ನಿರ್ಲಕ್ಷಿಸಿದ ಖತೀಜಮ್ಮನು ಉಪವಾಸವನ್ನು ಆಚರಿಸಲು ಆರಂಭಿಸಿದ್ದಳು. ಏಕೆಂದರೆ ಕಳೆದ ೩೫ ವರ್ಷಗಳಿಂದ ಪ್ರತಿವರ್ಷವೂ ತಪ್ಪದೆ ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದ ಈ ಧಾರ್ಮಿಕ ಆಚರಣೆಯನ್ನು ಬಿಡಲು ಆಕೆ ಸಿದ್ಧಳಿರಲಿಲ್ಲ. 

ಆದರೆ ಉಪವಾಸ ಆರಂಭಿಸಿ ವಾರ ಕಳೆಯುವಷ್ಟರಲ್ಲೇ ಆಕೆಯ ಸಮಸ್ಯೆ ಉಲ್ಬಣಿಸುವುದರೊಂದಿಗೆ ಹೊಟ್ಟೆಯುಬ್ಬರ, ವಾಕರಿಕೆ ಹಾಗೂ ವಾಂತಿಯೊಂದಿಗೆ, ಹೊಟ್ಟೆ ಹಿಂಡಿದಂತಹ ತೀವ್ರ ನೋವಿನಿಂದಾಗಿ ಆಕೆ ಹೈರಾಣಾಗಿದ್ದಳು. ಆಹಾರ ಸೇವಿಸಿದ ಕೆಲ ಹೊತ್ತಿನಲ್ಲೇ ತೀವ್ರಗೊಳ್ಳುತ್ತಿದ್ದ ಆಕೆಯ ಉದರಶೋಲೆಯು, ತಿಂದ ಆಹಾರ ವಾಂತಿಯಾದ ಬಳಿಕ ತುಸು ಕಡಿಮೆಯಾದಂತೆ ಭಾಸವಾಗುತ್ತಿತ್ತು. ಇದೇ ಕಾರಣದಿಂದಾಗಿ ಘನ ಆಹಾರವನ್ನು ಸೇವಿಸಲು ಹೆದರಿ, ಕೇವಲ ನೀರು ಮತ್ತು ಹಣ್ಣಿನ ರಸಗಳನ್ನು ಮಾತ್ರ ಕುಡಿಯುತ್ತಿದ್ದುದರಿಂದ ಉದ್ಭವಿಸಿದ ನಿಶ್ಶಕ್ತಿಯು ಆಕೆ ಹಾಸಿಗೆ ಹಿಡಿಯುವಂತೆ ಮಾಡಿತ್ತು. 

ಸದಾ ತನ್ನ ವ್ಯಾಪಾರ ವಹಿವಾಟುಗಳಲ್ಲಿ ಮಗ್ನರಾಗಿರುತ್ತಿದ್ದ ಅಬ್ಬಾಸ್ ಸಾಹೇಬರಿಗೆ, ಪತ್ನಿ ಹಾಸಿಗೆ ಹಿಡಿಯುವ ತನಕ ಆಕೆಯ ಅನಾರೋಗ್ಯದ ಅರಿವಿರಲಿಲ್ಲ. ಆದರೆ ಇದೀಗ ಪತ್ನಿಯ ಸ್ಥಿತಿಯನ್ನು ಕಂಡು ಗಾಬರಿಯಾದ ಸಾಹೇಬರು, ಕುಟುಂಬ ವೈದ್ಯರನ್ನು ಮನೆಗೆ ಕರೆಯಿಸಿದ್ದರು. ಖತೀಜಮ್ಮನನ್ನು ಸಾವಕಾಶವಾಗಿ ಪರೀಕ್ಷಿಸಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ವೈದ್ಯರು, ಅವಶ್ಯಕ ಇಂಜೆಕ್ಷನ್ ಮತ್ತು ಔಷದಗಳನ್ನು ನೀಡಿ ತಕ್ಷಣದಿಂದಲೇ ಉಪವಾಸವನ್ನು ನಿಲ್ಲಿಸುವಂತೆ ಆದೇಶಿಸಿದ್ದರು. ಜೊತೆಗೆ ಹಣ್ಣು ಹಂಪಲುಗಳು ಹಾಗೂ ಮೊಸರು ಮತ್ತು ಮಸಾಲೆಗಳಿಲ್ಲದ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಆಗಾಗ ಸೇವಿಸುವಂತೆ ಹೇಳಿದರು. ಅಂತೆಯೇ ಒಂದೆರಡು ದಿನಗಳ ಬಳಿಕ ಬರಿ ಹೊಟ್ಟೆಯಲ್ಲಿ ಜಠರ ದರ್ಶಕ ಪರೀಕ್ಷೆಯನ್ನು ಮಾಡಿಸುವಂತೆ ಸೂಚಿಸಿದ್ದರು. 

ಈ ಪರೀಕ್ಷೆಯಿಂದ ಖತೀಜಮ್ಮನ ಜಠರದಲ್ಲಿ ಪುಟ್ಟ ಹುಣ್ಣು ಪತ್ತೆಯಾಗಿತ್ತು. ಅಂತೆಯೇ ಈ ಹುಣ್ಣು ಉದ್ಭವಿಸಲು ನಿರ್ದಿಷ್ಟ ಕಾರಣವೂ ಇದ್ದಿತು. ಅನೇಕ ವರ್ಷಗಳಿಂದ ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಆಕೆಗೆ, ಸುಮಾರು ಮೂರು ವರ್ಷಗಳ ಹಿಂದೆ ಕಾಯಿಲೆ ತೀವ್ರವಾಗಿ ಉಲ್ಬಣಿಸಿತ್ತು. ಈ ಸಂದರ್ಭದಲ್ಲಿ ಕಾಯಿಲೆಯ ತೀವ್ರತೆಯನ್ನು ನಿಯಂತ್ರಿಸಲು ತಜ್ಞವೈದ್ಯರು ಇತರ ಔಷದಗಳೊಂದಿಗೆ ಸ್ಟೆರಾಯ್ಡ್ ಮಾತ್ರೆಗಳನ್ನು ನೀಡಿದ್ದರು. ಈ ಮಾತ್ರೆಗಳ ಅದ್ಭುತ ಪರಿಣಾಮದಿಂದ ಪ್ರಭಾವಿತಳಾದ ಖತೀಜಮ್ಮನು, ಇದೇ ಮಾತ್ರೆಗಳನ್ನು ಔಷದ ಅಂಗಡಿಯಿಂದ ತರಿಸಿ ತನಗೆ ಬೇಕೆನಿಸಿದಾಗ ನುಂಗುತ್ತಿದ್ದಳು!. 

ಕಳೆದ ಮೂರು ವರ್ಷಗಳಿಂದ ಸ್ಟೆರಾಯ್ಡ್ ಮಾತ್ರೆಗಳನ್ನು ಮಿತಿಮೀರಿ ಸೇವಿಸಿದ್ದುದರಿಂದ ಹಾಗೂ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸದೆ ಇದ್ದುದರಿಂದ ಮತ್ತು ಹೆಚ್ಚಾಗಿ ಮಸಾಲೆಗಳಿಂದ ಸಮೃದ್ಧವಾಗಿರುವ ಮಾಂಸಾಹಾರಗಳನ್ನೇ ಸೇವಿಸುತ್ತಿದ್ದ ಆಕೆಯ ಜಠರದಲ್ಲಿ ಹುಣ್ಣು ಉದ್ಭವಿಸಿ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವೆನಿಸಿತ್ತು. 

ತಜ್ಞವೈದ್ಯರ ಆದೇಶದಂತೆ ಉಪವಾಸವನ್ನು ಕೈಬಿಟ್ಟು ಕ್ರಮಬದ್ಧವಾಗಿ ಆಹಾರವನ್ನು ಸೇವಿಸಲು ಆರಂಭಿಸಿದ ಖತೀಜಮ್ಮ ತುಸು ಚೇತರಿಸಿಕೊಂಡಿದ್ದಳು. ಇದುವರೆಗೆ ಆಕೆ ಬೇಕಾಬಿಟ್ಟಿಯಾಗಿ ಸೇವಿಸುತ್ತಿದ್ದ ಸ್ಟೆರಾಯ್ಡ್ ಮಾತ್ರೆಗಳನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಕೆಲವೇ ದಿನಗಳಲ್ಲಿ ಇದರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಇದರೊಂದಿಗೆ ಆಕೆಯನ್ನು ಪೀಡಿಸುತ್ತಿರುವ ಆಸ್ತಮಾ ಮತ್ತು ಜಠರದ ಹುಣ್ಣು ಮಾಗಲು ವೈದ್ಯರು ನೀಡಿದ್ದ ಔಷದಗಳನ್ನು ಸೇವಿಸಲು ಆರಂಭಿಸಿದ್ದ ಖತೀಜಮ್ಮನು, ಎರಡೇ ತಿಂಗಳುಗಳಲ್ಲಿ ಗುಣಮುಖಳಾಗಿದ್ದಳು. 

ಹರೀಶನಿಗೆ ಹಸಿವಿಲ್ಲವೇಕೆ?

ದ್ವಿತೀಯ ಪಿ. ಯು. ಸಿ ಯಲ್ಲಿ ಕಲಿಯುತ್ತಿದ್ದ ಹರೀಶನಿಗೆ ಹಲವಾರು ವಾರಗಳಿಂದ ಹಸಿವಿಲ್ಲದಿರುವುದು, ವಾಕರಿಕೆ ಹಾಗೂ ಹೊಟ್ಟೆಯಲ್ಲಿ ಸಂಕಟ ಮತ್ತು ನೋವು ಬಾಧಿಸಲಾರಂಭಿಸಿತ್ತು. ತಾಯಿಯ ಒತ್ತಾಯಕ್ಕೆ ಮಣಿದು ಪರಿಚಿತ ವೈದ್ಯರಲ್ಲಿ ತೆರಳಿ ಚಿಕಿತ್ಸೆ ಪಡೆದರೂ, ಆತನ ಸಮಸ್ಯೆ ಇನ್ನಷ್ಟು ಉಲ್ಬಣಿಸಿತ್ತೇ ಹೊರತು ಕಿಂಚಿತ್ ಕೂಡಾ ಕಡಿಮೆಯಾಗಿರಲಿಲ್ಲ. 

ಇದೇ ಸಂದರ್ಭದಲ್ಲಿ ನಗರದಲ್ಲಿ ನಡೆಯಲಿದ್ದ ಮನೋವೈದ್ಯರ ಸಮ್ಮೇಳನಕ್ಕಾಗಿ ಆಗಮಿಸಿದ್ದ ಸೋದರ, ಶೇಖರನ ಬಳಿ ತನ್ನ ಮಗನ ಕಾಯಿಲೆಗೆ ಸೂಕ್ತ ಚಿಕಿತ್ಸೆಯನ್ನು ನೀಡುವಂತೆ ರುಕ್ಮಿಣಿಯು ಒತ್ತಾಯಿಸಿದ್ದಳು. 

ಮುಂದಿನ ಮೂರು ದಿನಗಳ ಕಾಲ ಬೆಳಗ್ಗೆ ಮತ್ತು ರಾತ್ರಿ ಹರೀಶನ ಚರ್ಯೆಗಳನ್ನು ಗಮನಿಸಲು ಆರಂಭಿಸಿದ ಶೇಖರನಿಗೆ, ಆತನು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿರುವ ಸಂದೇಹ ಮೂಡಿತ್ತು. ಇದನ್ನು ಅರಿತುಕೊಳ್ಳುವ ಸಲುವಾಗಿ ಹರೀಶನನ್ನು ಸಮೀಪದ ಉದ್ಯಾನವನಕ್ಕೆ ಕರೆದೊಯ್ದು ಆಪ್ತ ಸಂವಾದ ನಡೆಸಿದ್ದ ಶೇಖರನಿಗೆ ಸಮಸ್ಯೆಯ ಮೂಲ ಪತ್ತೆಯಾಗಿತ್ತು. 

ಆಗರ್ಭ ಶ್ರೀಮಂತರಾಗಿದ್ದ ಸುರೇಶರಿಗೆ ತನ್ನ ಏಕಮಾತ್ರ ಪುತ್ರನು ಪ್ರಖ್ಯಾತ ವೈದ್ಯನಾಗಬೇಕೆಂಬ ಹಂಬಲವಿತ್ತು. ಇದುವರೆಗೆ ಶೇ. ೭೦ ಕ್ಕೂ ಅಧಿಕ ಅಂಕಗಳನ್ನು ಗಳಿಸದಿದ್ದ ಹರೀಶನಿಗೆ, ವೈದ್ಯಕೀಯ ಕಾಲೇಜಿನಲ್ಲಿ ಸೀಟು ದೊರೆಯುವಷ್ಟು ಅಂಕಗಳನ್ನು ಗಳಿಸುವ ವಿಶ್ವಾಸವೇ ಇರಲಿಲ್ಲ. ತತ್ಪರಿಣಾಮವಾಗಿ ತಂದೆಯ ಬಯಕೆಯನ್ನು ಈಡೇರಿಸಲಾಗದ ನೋವಿನೊಂದಿಗೆ ಮಾನಸಿಕ ಒತ್ತಡವೂ ಸೇರಿಕೊಂಡು, ಆತನಲ್ಲಿ ಇಂತಹ ಆರೋಗ್ಯದ ತೊಂದರೆಗಳು ಉದ್ಭವಿಸಿದ್ದವು. "ನರ್ವಸ್ ಡಿಸ್ಪೆಪ್ಸಿಯಾ" ಎಂದು ಕರೆಯಲ್ಪಡುವ ಈ ಸಮಸ್ಯೆಯನ್ನು ಅರಿತುಕೊಳ್ಳದೆ ಪರಿಚಿತ ವೈದ್ಯರು ನೀಡಿದ್ದ ಚಿಕಿತ್ಸೆಯು ಫಲಕಾರಿಯಾಗಿರಲಿಲ್ಲ. 

ಅದೇ ಸಂಜೆ ತನ್ನ ತಂಗಿ ಮತ್ತು ಭಾವನನ ಬಳಿ ಹರೀಶನ ಸಮಸ್ಯೆಯನ್ನು ಅಮೂಲಾಗ್ರವಾಗಿ ವಿವರಿಸಿದ ಶೇಖರನು, ಆತನ ಅಪೇಕ್ಷೆಯಂತೆ ಎಂಜಿನಿಯರಿಂಗ್ ಕಲಿಯಲು ಅವಕಾಶ ಮತ್ತು ಪ್ರೋತ್ಸಾಹ ನೀಡುವಂತೆ ಸೂಚಿಸಿದ್ದನು. ಇದಕ್ಕೆ ತಪ್ಪಿದಲ್ಲಿ ಹರೀಶನ ಆರೋಗ್ಯದ ಸಮಸ್ಯೆ ಇನ್ನಷ್ಟು ಉಲ್ಬಣಿಸಿ, ಮಾನಸಿಕ ಕಾಯಿಲೆಗಳಿಗೆ ಕಾರಣವೆನಿಸುವ ಸಾಧ್ಯತೆಗಳಿವೆ ಎಂದು ಹೇಳಿದ್ದನು. ಅಂತೆಯೇ ನೀವು ಇದಕ್ಕೆ ಸಮ್ಮತಿಸಿದಲ್ಲಿ, ಚಿಟಿಕೆ ಹೊಡೆಯುವಷ್ಟರಲ್ಲಿ ಹರೀಶನ ಸಮಸ್ಯೆಯನ್ನು ಪರಿಹರಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದನು. ಮನೋವೈದ್ಯ ಶೇಖರನ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ದಂಪತಿಗಳು ಇದಕ್ಕೆ ಸಮ್ಮತಿಸಿದ್ದರು. ರಾತ್ರಿ ಊಟದ ಹೊತ್ತಿನಲ್ಲಿ ತನ್ನ ತಂದೆಯಿಂದ ವಿಷಯವನ್ನರಿತ ಹರೀಶನ ಮುಖದಲ್ಲಿ ಮಂದಹಾಸ ಮೂಡಿತ್ತು. ಅನುಭವೀ ಮನೋವೈದ್ಯ ಶೇಖರನ ಪ್ರಯತ್ನದಿಂದಾಗಿ ಔಷದ ಸೇವನೆಯ ಅವಶ್ಯಕತೆ ಇಲ್ಲದೆ ಹರೀಶನ ಸಮಸ್ಯೆ ಬಗೆಹರಿಯಲು "ಆಪ್ತ ಸಂವಾದ" ವೇ ಕಾರಣವೆನಿಸಿತ್ತು. 

ನಿಮಗಿದು ತಿಳಿದಿರಲಿ 

ಬಹುತೇಕ ಉದರ ಸಂಬಂಧಿ ವ್ಯಾಧಿಗಳಲ್ಲಿ ಹೊಟ್ಟೆ ನೋವು, ವಾಕರಿಕೆ, ವಾಂತಿ,ಎದೆ ಉರಿ, ಹೊಟ್ಟೆಯುಬ್ಬರ ಹಾಗೂ ತೇಗುವಿಕೆಯಂತಹ ಲಕ್ಷಣಗಳು ಕಂಡುಬರುತ್ತವೆ. ಜೊತೆಗೆ ಅಧಿಕತಮ ಜನರಲ್ಲಿ ಇಂತಹ ಲಕ್ಷಣಗಳಿಗೆ ಅಜೀರ್ಣ, ಅತಿ ಆಹಾರ ಸೇವನೆ, ಶರೀರಕ್ಕೆ ಒಗ್ಗದ ಆಹಾರ ಸೇವನೆ, ಆತಂಕ, ಭಯ, ದುಃಖ ಹಾಗೂ ಮಾನಸಿಕ ಒತ್ತಡಗಳೇ ಕಾರಣವಾಗಿರುತ್ತವೆ. ಮತ್ತೆ ಕೆಲವರಲ್ಲಿ ಈ ತೊಂದರೆಗಳಿಗೆ ಮೂತ್ರಾಂಗ- ಪಿತ್ತಕೋಶದಲ್ಲಿನ ಕಲ್ಲುಗಳು ಹಾಗೂ ಜಠರದ ಹುನ್ನುಗಳು ಮತ್ತು ಅಲ್ಪ ಪ್ರಮಾಣದ ರೋಗಿಗಳಲ್ಲಿ ಗಂಭೀರ- ಮಾರಕ ಕ್ಯಾನ್ಸರ್ ವ್ಯಾಧಿಗಳು ಕಾರಣವಾಗಿರುತ್ತವೆ. 

ಆದರೆ ಯಾವ ಕಾರಣದಿಂದ, ಯಾವ ರೀತಿಯಲ್ಲಿ ಹೊಟ್ಟೆನೋವು ಬರುತ್ತಿದೆ ಹಾಗೂ ಇದರ ಅವಧಿ ಮತ್ತು ತೀವ್ರತೆ ಎಷ್ಟಿದೆ, ನೋವು ಆರಂಭವಾಗಲು ಹಾಗೂ ಉಲ್ಬಣಿಸಲು ಕಾರಣವೆನಿಸಬಲ್ಲ ಅಂಶಗಳು, ಉದರದ ಯಾವ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಹಾಗೂ ಯಾವ ರೀತಿಯಲ್ಲಿ ಶಮನಗೊಳ್ಳುತ್ತದೆ ಎನ್ನುವುದನ್ನು ರೋಗಿಯೇ ವೈದ್ಯರಿಗೆ ತಿಳಿಸಬೇಕಾಗುವುದು. ಇದರೊಂದಿಗೆ ರೋಗಿಯಲ್ಲಿ ಕಂಡುಬರಬಹುದಾದ ಇತರ ಲಕ್ಷಣಗಳು ಹಾಗೂ ಆತನ ಮಾನಸಿಕ ಸ್ಥಿತಿಗಳನ್ನು ಪರಿಗಣಿಸಿದ ಬಳಿಕ ಶಾರೀರಿಕ ಅಥವಾ ಇತರ ಪರೀಕ್ಷೆಗಳನ್ನು ನಡೆಸುವುದರ ಮೂಲಕ , ವೈದ್ಯರು ಈ ತೊಂದರೆಗಳಿಗೆ ಕಾರಣವೆನಿಸಿರುವ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚುತ್ತಾರೆ. ತದನಂತರ ಆಹಾರ ಸೇವನೆಯಲ್ಲಿ ಅವಶ್ಯಕ ಬದಲಾವಣೆಗಳು, ಔಷದ ಸೇವನೆ ಅಥವಾ ಶಸ್ತ್ರಚಿಕಿತ್ಸೆ ಮತ್ತು ಮಾನಸಿಕ ಕಾರಣಗಳು ಇದ್ದಲ್ಲಿ ಆಪ್ತ ಸಂವಾದ ಮತ್ತು ಔಷದ ಸೇವನೆಯಂತಹ ಉಪಕ್ರಮಗಳನ್ನು ಕೈಗೊಳ್ಳುತ್ತಾರೆ. 

ಇವೆಲ್ಲವನ್ನೂ ಕ್ರಮಬದ್ಧವಾಗಿ ಪರಿಪಾಲಿಸಿದಲ್ಲಿ ನಿಮ್ಮನ್ನು ಕಾಡುವ ಉದರಶೂಲೆಯು ಕ್ಷಿಪ್ರಗತಿಯಲ್ಲಿ ಪರಿಹಾರಗೊಳ್ಳುವುದರಲ್ಲಿ ಸಂದೇಹವಿಲ್ಲ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೫-೦೪-೨೦೦೭ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ