Tuesday, May 28, 2013


 ಟ್ರಾಫಿಕ್  ಜಾಮ್ ಗೆ ಕಾರಣವೆನಿಸುವ ಮೆರವಣಿಗೆಗಳು
ದೇಶದ ಪ್ರತಿಯೊಂದು ನಗರಗಳು,ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ದಿನನಿತ್ಯ ಸಂಭವಿಸುತ್ತಿರುವ ಟ್ರಾಫಿಕ್ ಜಾಮ್ ನಲ್ಲಿ ಒಂದಲ್ಲ ಒಂದುಬಾರಿ ನೀವೂ ಸಿಲುಕಿರಲೇಬೇಕು. ಅದರಲ್ಲೂ ತುರ್ತು ಸಂದರ್ಭಗಳಲ್ಲಿ ಸಿಲುಕಿಕೊಂಡು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಲಾರದೇ ಅಸಹಾಯಕರಾಗಿ ಕೈ ಹಿಸುಕಿಕೊಂಡು ಚಡಪಡಿಸಿರಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಸಮಸ್ಯೆಗೆ ಕಾರಣಕರ್ತರಾದ ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಮನಸಾರೆ ಶಪಿಸಿರಲೂ ಬಹುದು. ಆದರೆ ಹೊಟ್ಟೆಯಲ್ಲಿ ಸಿಟ್ಟಿದ್ದರೂ,ರಟ್ಟೆಯಲ್ಲಿ ಬಲವಿಲ್ಲದ ಕಾರಣದಿಂದಾಗಿ ತೆಪ್ಪಗೆಕುಳಿತಿರಬಹುದು!.
ಇತ್ತೀಚಿಗೆ ನಡೆದಿದ್ದ ವಿಧಾನ ಸಭಾ ಚುನಾವಣೆಗಳ ಫಲಿತಾಂಶ ಪ್ರಕಟವಾದ ಬಳಿಕ,ವಿವಿಧ ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಅಭ್ಯರ್ಥಿಗಳ ವಿಜಯೋತ್ಸವದ ಮೆರವಣಿಗೆಗಳು ಇಂದಿಗೂ ನಡೆಯುತ್ತಿವೆ. ನೂರಾರು ಕಾರ್ಯಕರ್ತರು,ಅಭಿಮಾನಿಗಳು ಮತ್ತು ಬೆಂಬಲಿಗರೊಂದಿಗೆ ಹಲವಾರು ವಾಹನಗಳು ಮತ್ತು ಬಾಜಾಬಜಂತ್ರಿಗಳೊಂದಿಗೆ ನಡೆಯುವ ಇಂತಹ ಮೆರವಣಿಗೆಗಳು,ಹಲವಾರು ತಾಸುಗಳ ಕಾಲ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣವೆನಿಸುತ್ತಿವೆ. ಜನಸಾಮಾನ್ಯರಿಗೆ ಅಯಾಚಿತ ತೊಂದರೆಗಳಿಗೂ ಕಾರಣವೆನಿಸುತ್ತಿವೆ.
ಟ್ರಾಫಿಕ್ ಜಾಮ್ ಸಮಸ್ಯೆಗೆ ಕಾರಣಗಳೇನು?
ಅದೇನೇ ಇರಲಿ, ಈ ಟ್ರಾಫಿಕ್ ಜಾಮ್ ಸಂಭವಿಸಲು ಅನೇಕ ಕಾರಣಗಳಿವೆ. ಇವುಗಳಲ್ಲಿ ರಾಜಕೀಯ ಪಕ್ಷಗಳು-ಇತರ ಸಂಘಟನೆಗಳು ನಡೆಸುವ ರಸ್ತೆ ತಡೆ-ಬಂದ್,ಅಗಲಕಿರಿದಾದ ರಸ್ತೆಗಳು,ಪಾದಚಾರಿಗಳಿಗೆ ಅತ್ಯವಶ್ಯಕ ಎನಿಸುವ ಕಾಲುದಾರಿಗಳ ಅಭಾವ,ರಸ್ತೆಗಳ ದುರಸ್ತಿ-ಡಾಮರೀಕರಣದ ಕಾಮಗಾರಿಗಳು,ರಸ್ತೆಬದಿಗಳಲ್ಲಿ ವಾಹನಗಳ ನಿಲುಗಡೆ,ಅತಿಯಾದ ವಾಹನಗಳ ಸಂಖ್ಯೆ,ಸಾರಿಗೆ ನಿಯಮಗಳನ್ನು ಪರಿಪಾಲಿಸದ ವಾಹನ ಚಾಲಕರು,ಅಲೆಮಾರಿ ಜಾನುವಾರುಗಳ ಹಾವಳಿ,ಹಬ್ಬ-ಹರಿದಿನಗಳು ಅಥವಾ ಸಭೆ-ಸಮಾರಂಭಗಳು,ಶಾಲಾಕಾಲೇಜುಗಳು ಹಾಗೂ ಕಛೇರಿಗಳು ಆರಂಭವಾಗುವ ಮತ್ತು ಮುಚ್ಚುವ ಸಮಯ,ರಸ್ತೆ ಅಪಘಾತಗಳು,  ಧಾರ್ಮಿಕ ಹಾಗೂ ರಾಜಕೀಯ ಪಕ್ಷಗಳ ಮೆರವಣಿಗೆಗಳು ಮತ್ತು ವಾಹನಗಳ ರೇಲಿಗಳು ಪ್ರಮುಖವಾಗಿವೆ.
ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಒಂದಿಷ್ಟು ಅಡಚಣೆ ಸಂಭವಿಸಿದೊಡನೆ ಸಾಲುಗಟ್ಟಿ ನಿಲ್ಲುವ ವಾಹನಗಳನ್ನು ದಾಟಿ ಮುನ್ನುಗುವ ಇತರ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಅಭೇದ್ಯವೆನಿಸುತ್ತದೆ. ಇಂತಹ ಸಂದರ್ಭದಲ್ಲಿ ದ್ವಿಚಕ್ರ-ತ್ರಿಚಕ್ರ ವಾಹನಗಳ ಚಾಲಕರ ಆತುರದಿಂದಾಗಿ,ಸಮಸ್ಯೆಯು ಇನ್ನಷ್ಟು ಜಟಿಲಗೊಳ್ಳುತ್ತದೆ.
ಸಂಚಾರ ವಿಭಾಗದ ಆರಕ್ಷಕರ ಅನುಪಸ್ಥಿತಿಯಲ್ಲಿ ಸಹನೆಯಿಲ್ಲದ ಚಾಲಕರ ನಡುವೆ ವಾಗ್ಯುದ್ಧವೇ ನಡೆಯುತ್ತದೆ. ತತ್ಪರಿಣಾಮವಾಗಿ 
ನೂರಾರು ವಾಹನಗಳಿಂದ ತುಂಬಿ ತುಳುಕುವ ರಸ್ತೆಯಲ್ಲಿ ಪಾದಚಾರಿಗಳು ಸಂಚರಿಸುವುದೂ ಅಸಾಧ್ಯವೆನಿಸುತ್ತದೆ.
ಆದರೆ ಇವೆಲ್ಲಕ್ಕೂ ಮಿಗಿಲಾಗಿ ಸಾಲುಗಟ್ಟಿ ನಿಂತ ಅಸಂಖ್ಯ ವಾಹನಗಳ ಎಂಜಿನ್ ಗಳು ಕಾರ್ಯಾಚರಿಸುತ್ತಲೇ ಇರುವುದರಿಂದ ಅಗಾಧ ಪ್ರಮಾಣದ ಇಂಧನವು ಪೋಲಾಗುತ್ತದೆ. ಜೊತೆಗೆ ನೂರಾರು ವಾಹನಗಳು ಏಕಕಾಲದಲ್ಲಿ ಉಗುಳುವ ಹೊಗೆಯಿಂದಾಗಿ ಸುತ್ತಮುತ್ತಲ ಪರಿಸರವು ಕಲುಷಿತಗೊಳ್ಳುತ್ತದೆ. ಹಾಗೂ ಈ ಕಲುಷಿತ ಗಾಳಿಯನ್ನು ಸೇವಿಸಿದ ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರುತ್ತದೆ. ಪುಟ್ಟ ಮಕ್ಕಳ ಪಾಲಿಗೆ ಕಾರ್ಬನ್ ಡೈ ಆಕ್ಸೈಡ್ ಮಿಶ್ರಿತ ಧೂಮವು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಇಷ್ಟೆಲ್ಲಾ ಸಾಲದೆನ್ನುವಂತೆ ಸಾಲುಗಟ್ಟಿ ನಿಂತ ವಾಹನಗಳ ಚಾಲಕರು ಎಡೆಬಿಡದೇ ಬಾರಿಸುವ ಕರ್ಕಶವಾದ ಹಾರ್ನ್ ಗಳಿಂದಾಗಿ ಶಬ್ದಮಾಲಿನ್ಯವೂ ಉಂಟಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಡೆಗಟ್ಟಲು, ಸಂಬಂಧಿತ ಇಲಾಖೆಗಳ ಅಧಿಕಾರಿಗಳಲ್ಲಿನ  ಇಚ್ಛಾಶಕ್ತಿಯ ಕೊರತೆಯೂ ಕಾರಣವೆನಿಸಿದೆ. ಜೊತೆಗೆ ಈ ಸಾರ್ವತ್ರಿಕ ಸಮಸ್ಯೆಯನ್ನು ತಡೆಗಟ್ಟಲು ಅವಶ್ಯಕ ನಿಯಮಗಳನ್ನು ರೂಪಿಸಬೇಕಾದ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ರಾಜಕೀಯ ನೇತಾರರು-ಪಕ್ಷಗಳು,ತಾವೇ ನಡೆಸುವ ರಸ್ತೆ ತಡೆ,ಧರಣಿ ಮುಷ್ಕರ,ಬಂದ್,ಮೆರವಣಿಗೆ ಮತ್ತು ರೇಲಿಗಳಿಗೆ ಅಡಚನೆಯಾಗಬಹುದು ಎನ್ನುವ ಕಾರಣದಿಂದಾಗಿ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಸಂದೇಹ ದೇಶದ ಜನತೆಯನ್ನು ಕಾಡುತ್ತಿರುವುದು ಮಾತ್ರ ಸುಳ್ಳೇನಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
ಫೋಟೋ-ಕಾಂಗ್ರೆಸ್ಸ್ ಪಕ್ಷದ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ್ದ ಟ್ರಾಫಿಕ್ ಜಾಮ್

Friday, May 24, 2013


ಪೂಜ್ಯ ದೇವಳದ ಮುಂದಿನ ಗದ್ದೆಯಲ್ಲಿ ಎಷ್ಟೊಂದು ತ್ಯಾಜ್ಯ!
ಪುತ್ತೂರಿನ ಮತ್ತು ಸುತ್ತಮುತ್ತಲ ಹತ್ತಾರು ಊರುಗಳ ನಿವಾಸಿಗಳ ಆರಾಧ್ಯ ದೇವತೆಯಾಗಿರುವ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯು ವರ್ಷಂಪ್ರತಿ ವಿಜೃಂಭಣೆಯಿಂದ ಜರಗುತ್ತದೆ. ಆದರೆ ಈ ವರ್ಷ ಸಂಪೂರ್ಣವಾಗಿ ಪುನರ್ನಿರ್ಮಿತ ದೇವಳದ ಬ್ರಹ್ಮಕಲಶದ ಸಡಗರ-ಸಂಭ್ರಮಗಳೊಂದಿಗೆ ವರ್ಷಾವಧಿ ಜಾತ್ರೆಯೂ ಅದ್ಧೂರಿಯಾಗಿ ನಡೆಯುತ್ತಿರುವುದು ವಿಶೇಷ.
ಇದೇ ತಿಂಗಳಿನ ಮೊದಲನೆಯ ವಾರದಲ್ಲಿ ಆರಂಭಗೊಂಡಿದ್ದ ಬ್ರಹ್ಮಕಲಶದ ಕಾರ್ಯಕ್ರಮವು ಮುಗಿದಂತೆಯೇ ಜಾತ್ರೆ ಆರಂಭಗೊಂಡಿತ್ತು. ಬ್ರಹ್ಮಕಲಶದ ಸಂದರ್ಭದಲ್ಲಿ ನಡೆಯುತ್ತಿದ್ದ ಅನೇಕ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ,ಪ್ರತಿನಿತ್ಯ ಬೆಳಗಿನ ಜಾವದಿಂದ ನಟ್ಟಿರುಳಿನ ತನಕ ನಡೆಯುತ್ತಿದ್ದ ಅನ್ನ ದಾಸೋಹದಲ್ಲಿ ಸಹಸ್ರಾರು ಭಕ್ತಾಭಿಮಾನಿಗಳು ಶ್ರದ್ಧಾ ಭಕ್ತಿಪೂರ್ವಕವಾಗಿ ಭಾಗವಹಿಸಿದ್ದರು. ಅತ್ಯಂತ ಶಿಸ್ತುಬದ್ಧವಾಗಿ ಜರಗಿದ್ದ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಕಾರ್ಯಕರ್ತರು  ಮತ್ತು ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು.  ಆರಂಭದಿಂದ ಅಂತ್ಯದ ತನಕ ಬ್ರಹ್ಮಕಲಶದ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀದೇವಳದ ಆವರಣ ಮತ್ತು ಮುಂಭಾಗದಲ್ಲಿನ ಗದ್ದೆಗಳಲ್ಲಿ ಸ್ವಚ್ಚತೆಯನ್ನು ಜತನದಿಂದ ಕಾಪಾಡಲಾಗಿತ್ತು. ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಲು ಅಲ್ಲಲ್ಲಿ ಪ್ಲಾಸ್ಟಿಕ್ ಡ್ರಮ್ ಗಳನ್ನೂ ಇರಿಸಿದ್ದು,ಅಪ್ಪಿತಪ್ಪಿ ಎಲ್ಲಾದರೂ ಎಸೆದ ತ್ಯಾಜ್ಯಗಳನ್ನು ತಕ್ಷಣ ಹೆಕ್ಕಿ ತೆಗೆಯುತ್ತಿದ್ದ ಸ್ವಯಂಸೇವಕರ ದಂಡು,ಸ್ವಚ್ಚತೆಯನ್ನು ಕಾಪಾಡಲು ಸದಾ ಶ್ರಮಿಸುತ್ತಿತ್ತು.
ಆದರೆ ಬ್ರಹ್ಮಕಲಶದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ ಬಳಿಕ ವರ್ಷಾವಧಿ ಜಾತ್ರೆಯ ಕಾರ್ಯಕ್ರಮಗಳು ಆರಂಭವಾದಂತೆಯೇ,ದೇವಳದ ಮುಂಭಾಗದ ಗದ್ದೆಯಲ್ಲಿ ತಾತ್ಕಾಲಿಕ ಮಳಿಗೆಗಳು ತಲೆಯೆತ್ತಿದ್ದವು. ಇವುಗಳಲ್ಲಿ ಭಕ್ತಾಭಿಮಾನಿಗಳ ಹಸಿವು-ನೀರಡಿಕೆಗಳನ್ನು ನೀಗಿಸುವ ಖಾದ್ಯ-ಪೇಯಗಳನ್ನು ಮಾರಾಟಮಾಡುವ ಮಳಿಗೆಗಳ ಸಂಖ್ಯೆಯು ಸ್ವಾಭಾವಿಕವಾಗಿಯೇ ಹೆಚ್ಚಾಗಿತ್ತು. ಇಂತಹ ಮಳಿಗೆಗಳಿಂದಾಗಿ ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳ ಉತ್ಪಾದನೆ ಅತಿಯಾಗುತ್ತಿದೆ. 
ಅನಾದಿ ಕಾಲದಿಂದಲೂ ಸೀಮೆಯ ಆರಾಧ್ಯದೇವತೆಯ ಬಗ್ಗೆ ಅಪಾರವಾದ ಭಕ್ತಿ-ವಿಶ್ವಾಸ ವನ್ನು ಹೊಂದಿರುವ ಅಸಂಖ್ಯ ಭಕ್ತರು,ದೇವಳವನ್ನು ಪ್ರವೇಶಿಸುವಾಗ ಮಡಿ ಮೈಲಿಗೆಗಳನ್ನು ಅರಿತು ಸ್ನಾನವನ್ನು ಮಾಡಿ 
ಶುಚಿರ್ಭೂತರಾಗಿ ಬರುತ್ತಾರೆ. ದೇವಳದ ಆವರಣದಲ್ಲೂ ದೈವ ಸನ್ನಿಧಿಯ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಾರೆ. ಆದರೆ
 ಜಾತ್ರೆಯ ಗದ್ದೆಯನ್ನು ಪ್ರವೇಶಿಸಿದೊಡನೆ ಇವೆಲ್ಲವನ್ನೂ ಮರೆತುಬಿಡುತ್ತಾರೆ!. 
ಜಾತ್ರೆಯ  ಸಂದರ್ಭದಲ್ಲಿ ಉತ್ಪನ್ನವಾಗಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು, ಬ್ರಹ್ಮಕಲಶದ ಸಂದರ್ಭದಲ್ಲಿ ಕಾಣಿಸದಿರಲು ನಿರ್ದಿಷ್ಟ ಕಾರಣವೂ ಇದೆ. ಬ್ರಹ್ಮಕಲಶದ ಕಾರ್ಯಕ್ರಮದ ಎಲ್ಲಾ ದಿನಗಳಲ್ಲೂ,ದೇವಳಕ್ಕೆ ಭೇಟಿನೀಡಿದ ಭಕ್ತರಿಗೆ ಊಟ-ಉಪಾಹಾರಗಳ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಉತ್ಪನ್ನವಾದ ಯಾವುದೇ ತ್ಯಾಜ್ಯಗಳನ್ನು ಸದಾ ಸಿದ್ಧವಾಗಿರುತ್ತಿದ್ದ ವಾಹನಗಳಲ್ಲಿ ನೇರವಾಗಿ ತುಂಬಿಸಿ,ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆಯೂ ಇತ್ತು. ಜೊತೆಗೆ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಯಂಸೇವಕರು ಇದರ ಉಸ್ತುವಾರಿಯನ್ನು ಸಮರ್ಪಕವಾಗಿ ನಡೆಸುತ್ತಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ಉಚಿತ ಊಟ-ಉಪಾಹಾರಗಳ ವ್ಯವಸ್ಥೆ ಇದ್ದುದರಿಂದಾಗಿ,ಗದ್ದೆಯಲ್ಲಿ ಹಣವನ್ನು ತೆತ್ತು ಇವುಗಳನ್ನು ಪಡೆಯಬೇಕಾದ ಅವಶ್ಯಕತೆಯೇ ಇರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಖಾದ್ಯ-ಪೇಯಗಳ ಮಳಿಗೆಗಳನ್ನು ಯಾರೊಬ್ಬರೂ ತೆರೆದಿರದ ಕಾರಣದಿಂದಾಗಿ,ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳು ತುಂಬಿರಲಿಲ್ಲ!.
ಆದರೆ ಜಾತ್ರೆ ಆರಂಭವಾದಂತೆಯೇ ದೇವಳದ ಮುಂದಿನ ಬಾಕಿಮಾರು ಗದ್ದೆಯಲ್ಲಿ ತ್ಯಾಜ್ಯಗಳ ಪ್ರಮಾಣವು ದಿನೇದಿನೇ ಹೆಚ್ಚಲಾರಂಭಿಸಿತ್ತು. ಗದ್ದೆಯ ವಿವಿಧ ಭಾಗಗಳಲ್ಲಿ ತ್ಯಾಜ್ಯಸಂಗ್ರಹಕ್ಕಾಗಿ ತೊಟ್ಟಿಗಳನ್ನು ಇರಿಸಿದ್ದರೂ,ಕಂಡಲ್ಲಿ ಕಸವನ್ನು ಎಸೆಯುವ ಜನರ ಕೆಟ್ಟ ಹವ್ಯಾಸದಿಂದಾಗಿ ಅಲ್ಲಲ್ಲಿ ಕಸಗಳ ರಾಶಿ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿತ್ತು.ಜೊತೆಗೆ ಗದ್ದೆಯಲ್ಲಿ ಇರಿಸಿದ್ದ ಕಸದ ತೊಟ್ಟಿಗಳ ಸಂಖ್ಯೆಯು ತೀರಾ ಕಡಿಮೆಯಾಗಿದ್ದು,ಇವುಗಳು ತುಂಬಿದೊಡನೆ 
ತೆರವುಗೊಳಿಸಲು ಜನದಟ್ಟಣೆಯು ಅಡ್ಡಿಯಾಗುತ್ತಿತ್ತು.ಆದರೂ ಬೆಳಗಿನ ಜಾವ ಕರ್ತವ್ಯಕ್ಕೆ ಹಾಜರಾಗುವ ಪುತ್ತೂರು ಪುರಸಭೆಯ ಪೌರ ಕಾರ್ಮಿಕರು ಗದ್ದೆಯ ಉದ್ದಗಲಕ್ಕೂ ಹರಡಿರುವ ಈ ತ್ಯಾಜ್ಯಗಳನ್ನು ಸಂಗ್ರಹಿಸಿ,ವಾಹನಗಳಲ್ಲಿ ತುಂಬಿ ವಿಲೇವಾರಿ ಮಾಡಲು ಹರಸಾಹಸವನ್ನೇ ನಡೆಸುತ್ತಿದ್ದಾರೆ. ಕೆಲವೇ ದಿನಗಳ ಮುನ್ನ ದೇವಳದ ಸುತ್ತಮುತ್ತಲ ಪರಿಸರವನ್ನು ಚೊಕ್ಕಟವಾಗಿ ಇರಿಸಲು ಸಹಕರಿಸಿದ್ದ ಭಕ್ತಾಭಿಮಾನಿಗಳು,ಇದೀಗ ಅಸಹ್ಯವೆನಿಸುವ ಕಸದ ರಾಶಿಗಳನ್ನು ಹುಟ್ಟುಹಾಕಲು ಕಾರಣವೆನಿಸಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ.
ಅದೇನೇ ಇರಲಿ,ಇನ್ನು ಮುಂದಾದರೂ ದೇವಳದ ಪಾವಿತ್ರ್ಯಕ್ಕೆ ಧಕ್ಕೆಯಾಗುವ,ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸಬಲ್ಲ,ನಮ್ಮ ಸುತ್ತಮುತ್ತಲ ಪರಿಸರಕ್ಕೆ ಹಾನಿಕಾರಕ ಎನಿಸುವ ತ್ಯಾಜ್ಯಗಳನ್ನು,ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸಲು,ಬಳಿಕ ಸುರಕ್ಷಿತವಾಗಿ ಸಾಗಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಿದೆ. ಇದಕ್ಕೂ ಮಿಗಿಲಾಗಿ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಇವುಗಳನ್ನು ಸಂಗ್ರಹಿಸುವ ಮತ್ತು ಕಂಡಲ್ಲಿ ಕಸವನ್ನು ಎಸೆಯುವುದರಿಂದ ಸಂಭವಿಸಬಲ್ಲ ಗಂಭೀರ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.
ಕೊನೆಯ ಮಾತು
ಪುತ್ತೂರು ಪುರಸಭೆಯ ವತಿಯಿಂದ ದೇವಳದ ಕಾರ್ಯಕ್ರಮದ ಸಂದರ್ಭದಲ್ಲಿ ಅಲಂಕಾರಕ್ಕಾಗಿ  ಪ್ಲಾಸ್ಟಿಕ್ ನಿರ್ಮಿತ ತೋರಣ ಹಾಗೂ ಫ್ಲೆಕ್ಸ್ ಅಭಿನಂದನಾ-ಸ್ವಾಗತ ಫಲಕಗಳನ್ನು ಬಳಸದೇ,ನೈಸರ್ಗಿಕ ವಸ್ತುಗಳಿಂದ ಸಿದ್ಧಪಡಿಸಿದ ತಳಿರು ತೋರಣಗಳು ಮತ್ತು ಬಟ್ಟೆಯಿಂದ ತಯಾರಿಸಿದ ಬ್ಯಾನರ್ ಗಳನ್ನು ಬಳಸುವಂತೆ ಸೂಚಿಸಲಾಗಿತ್ತು. ಇದರೊಂದಿಗೆ ಗದ್ದೆಯಲ್ಲಿನ ಖಾದ್ಯ-ಪೇಯಗಳು ಮತ್ತು ಅನ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್-ಥರ್ಮೊಕೊಲ್ ನಿರ್ಮಿತ ತಟ್ಟೆ,ಲೋಟ,ಚಮಚ,ಬಾಟಲಿಗಳೇ ಮುಂತಾದವುಗಳನ್ನು ಬಳಸದಂತೆ ಎಚ್ಚರಿಕೆಯನ್ನು ನೀಡಲಾಗಿತ್ತು. ಇದನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದ ಅಧಿಕಾರಿಗಳು,ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸಿದ್ದರು!. ಪುರಸಭೆಯ ನಿಷ್ಕ್ರಿಯತೆಯ ಬಗ್ಗೆ ಚೆನ್ನಾಗಿ ಅರಿತಿರುವ ಸ್ಥಳೀಯರು,ಇಂತಹ ಪೊಳ್ಳು ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ. ಹಾಗೂ ಇದೇ ಕಾರಣದಿಂದಾಗಿ ಜಾತ್ರೆಯ ಗದ್ದೆ ಮತ್ತು ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ಪ್ರಮಾಣವು ಹೆಚ್ಚುವುದರಲ್ಲಿ ಸಂದೇಹವಿಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
24-05-2013
ಬ್ರಹ್ಮ ರಥೋತ್ಸವದ ಮರುದಿನ ಬೆಳಿಗ್ಗೆ ತೆಗೆದ ಫೋಟೋ

Wednesday, May 22, 2013

aatmeeya odugare,

ಆತ್ಮೀಯ ಓದುಗರೇ,
ಬಳಕೆದಾರರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ,ಜನಸಾಮಾನ್ಯರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಉದಯವಾಣಿ ಮತ್ತು ಇತರ ಕನ್ನಡ ಪತ್ರಿಕೆಗಳಲ್ಲಿ ಕಳೆದ ಹತ್ತಾರು ವರ್ಷಗಳಲ್ಲಿಸಾಕಷ್ಟುಲೇಖನಗಳನ್ನುಬರೆದಿದ್ದೇನೆ.ಇದೀಗ ನನ್ನದೇ ಆದ ಬ್ಲಾಗ್ ನಲ್ಲಿ ಕೆಲವೊಂದು ಲೇಖನಗಳನ್ನು ಪ್ರಕಟಿಸಲಿದ್ದೇನೆ. ನಿಮ್ಮ ಅನಿಸಿಕೆಗಳು ಮತ್ತು ಅಭಿಪ್ರಾಯಗಳಿಗೆ ಸ್ಪಂದಿಸಲು ಪ್ರಯತ್ನಿಸುತ್ತೇನೆ.

ಇಂತಿ,
ಡಾ.ಸಿ.ನಿತ್ಯಾನಂದ ಪೈ
ಸಂಚಾಲಕ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು
ಪುತ್ತೂರು,ದ. ಕ
ದಿ -೦೮ -೦ ೩ -೨ ೦ ೧ ೩
   ದಾರಿತಪ್ಪಿಸುವ ಜಾಹೀರಾತುಗಳತ್ತ ಕೇಂದ್ರಸರಕಾರದ ಚಿತ್ತ
ವಿವಿಧ ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಕಟವಾಗುವ ಅಸಂಖ್ಯ ಜಾಹೀರಾತುಗಳಲ್ಲಿ ಜನಸಾಮಾನ್ಯರ ದಾರಿತಪ್ಪಿಸುವ,ಸತ್ಯಕ್ಕೆ ದೂರವಾದ ಮತ್ತು ಉತ್ಪ್ರೇಕ್ಷಿತ  ಜಾಹೀರಾತುಗಳ ಸಂಖ್ಯೆ ಸಾಕಷ್ಟಿದೆ. ಇಂತಹ  ಜಾಹೀರಾತುಗಳನ್ನು ನಿಯಂತ್ರಿಸಲು ಹಾಗೂ ನಿಷೇಧಿಸಲು ಮತ್ತು ಇವುಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಮ್ಮ ದೇಶದಲ್ಲಿ ಅವಶ್ಯಕ ವ್ಯವಸ್ಥೆಗಳೂ ಇವೆ.  ಆದರೆ  ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು  ಈ ಕಾನೂನುಗಳನ್ನು  ಕಟ್ಟುನಿಟ್ಟಾಗಿ ಜಾರಿಗೊಳಿಸದ ಕಾರಣದಿಂದಾಗಿ, ಇಂತಹ ಜಾಹೀರಾತುಗಳ  ಹಾವಳಿ ಇತ್ತೀಚಿನ ಕೆಲ ವರ್ಷಗಳಿಂದ ಹೆಚ್ಚುತ್ತಿದೆ. ಹಾಗೂ ಇದೇ ಕಾರಣದಿಂದಾಗಿ ಇವುಗಳ ವಿರುದ್ಧ ದೂರುಗಳನ್ನು ನೀಡುತ್ತಿರುವ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರವು, ಈ ಸಮಸ್ಯೆಯನ್ನು  ನಿಯಂತ್ರಿಸಲು ಕಠಿಣ  ಕ್ರಮಗಳನ್ನು ಕೈಗೊಳ್ಳಲು ಸನ್ನದ್ಧವಾಗಿದೆ.  
-----------          ------------           -------------          ------------           -----------          ------------         ------------                           ಪ್ರತಿನಿತ್ಯ ವಿವಿಧ ಮಾಧ್ಯಮಗಳಲ್ಲಿ ಪ್ರಕಟ- ಪ್ರಸಾರವಾಗುವ ವೈವಿಧ್ಯಮಯ ಜಾಹೀರಾತುಗಳಲ್ಲಿ ಕೆಲವೊಂದು ಜಾಹೀರಾತುಗಳು  ಮುಗ್ಧ ಹಾಗೂ ಅಮಾಯಕ ಜನರನ್ನು ಮರುಳುಗೊಳಿಸುತ್ತವೆ. ಜನಸಾಮಾನ್ಯರನ್ನು ದಾರಿತಪ್ಪಿಸಬಲ್ಲ, ಸತ್ಯಕ್ಕೆ ದೂರವಾದ ಮತ್ತು ವಿಸ್ಮಯಕಾರಿ- ಪವಾಡ ಸದೃಶ ಪರಿಣಾಮಗಳನ್ನು ಬೀರಬಲ್ಲ ಎಂದು ಘೋಷಿಸುವ ವಿವಿಧ ಗ್ರಾಹಕ ಉತ್ಪನ್ನಗಳ ಜಾಹೀರಾತುಗಳನ್ನು ನಿಯಂತ್ರಿಸಲು ಇದೀಗ ಕೇಂದ್ರ ಸರಕಾರ ಸಜ್ಜಾಗಿದೆ.
ಆಹಾರ ಸುರಕ್ಷಾ ಮತ್ತು ಗುಣಮಟ್ಟ ಕಾಯಿದೆ, ಗ್ರಾಹಕ ರಕ್ಷಣಾ ಕಾಯಿದೆ ಮತ್ತು ಔಷದ ಮತ್ತು ವಿಸ್ಮಯಕಾರಿ ಚಿಕಿತ್ಸೆಗಳ ಕಾಯಿದೆಗಳು ಅಸ್ತಿತ್ವದಲ್ಲಿದ್ದರೂ, ಇಂತಹ ಜಾಹೀರಾತುಗಳ ಹಾವಳಿ ಮಿತಿಮೀರಿದೆ. ಇವುಗಳಿಗೆ ಕಡಿವಾಣವನ್ನು ತೊಡಿಸುವ ಸಲುವಾಗಿ ಅಂತರ್ ಸಚಿವಾಲಯ ಮಟ್ಟದ ಸಮಿತಿಯೊಂದನ್ನು ರೂಪಿಸುವುದಾಗಿ ಕೇಂದ್ರದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರು  ಮೇ ತಿಂಗಳಿನಲ್ಲಿ ಹೇಳಿಕೆಯೊಂದನ್ನು ನೀಡಿದ್ದರು.
ಇಂತಹ ಜಾಹೀರಾತುಗಳನ್ನು  ತಡೆಗಟ್ಟಲು ಸಮಗ್ರವಾದ ಕಾನೂನನ್ನು ರೂಪಿಸುವ ಅವಶ್ಯಕತೆಯಿದ್ದು, ಇದಕ್ಕಾಗಿ ಸಂಬಂಧಿತರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುತ್ತಿದೆ. ಸಂಸ್ಥೆಗಳು ತಮ್ಮ ಜಾಹೀರಾತುಗಳಲ್ಲಿ ನೀಡುವ ಸುಳ್ಳು ಭರವಸೆಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸುವ ಹಕ್ಕನ್ನು, ನೂತನ ಕಾಯಿದೆಯು ಗ್ರಾಹಕರಿಗೆ ನೀಡಲಿದೆ ಎಂದು ಸಚಿವರು ನುಡಿದಿದ್ದರು. ಜೊತೆಗೆ ಈ ವಿಚಾರದಲ್ಲಿ ಸ್ವಯಂ ನಿಯಂತ್ರಣ ಮತ್ತು ಕಾನೂನು ನಿಯಂತ್ರಣಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕು ಎನ್ನುವ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತಗೊಂಡಿದೆ ಎಂದು ಹೇಳಿದ್ದರು.
ಅವಶ್ಯಕ ಕಾನೂನುಗಳು ಇದ್ದರೂ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಈ ಸಮಸ್ಯೆಯನ್ನು ಖಚಿತವಾಗಿ ನಿಯಂತ್ರಿಸುವತ್ತ ಕೇಂದ್ರ ಸರಕಾರವು ತನ್ನ ಗಮನವನ್ನು ಹರಿಸಿರುವುದು ಇದರ ತೀವ್ರತೆ ಮತ್ತು ದುಷ್ಪರಿಣಾಮಗಳನ್ನು  ಸೂಚಿಸುತ್ತದೆ. ಅಸಂಖ್ಯ ಗ್ರಾಹಕ ಉತ್ಪನ್ನಗಳು, ಸೌಂದರ್ಯ ಪ್ರಸಾದನಗಳು ಮತ್ತು ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದ ವೈವಿಧ್ಯಮಯ ಉತ್ಪನ್ನಗಳ ಕೆಲವೊಂದು  ಜಾಹೀರಾತುಗಳಿಂದ ಪ್ರಭಾವಿತರಾಗಿ, ಇವುಗಳನ್ನು ಖರೀದಿಸಿ ಬಳಸಿದ ಪರಿಣಾಮವಾಗಿ ಕಷ್ಟ ನಷ್ಟಗಳಿಗೆ ಈಡಾಗಿದ್ದ ಗ್ರಾಹಕರಿಂದ ಬಂದಿದ್ದ ಸಹಸ್ರಾರು ದೂರುಗಳೇ, ಸರಕಾರದ ಈ ಕ್ರಮಕ್ಕೆ ಕಾರಣವೆನ್ನುವುದರಲ್ಲಿ ಸಂದೇಹವಿಲ್ಲ. 
ಮೋಡಿ ಮಾಡುವ ಜಾಹೀರಾತುಗಳು 
ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಸಾರವಾಗುವ ಸಹಸ್ರಾರು ಜಾಹೀರಾತುಗಳಲ್ಲಿ ಮನುಷ್ಯನ ಶರೀರ, ಮನಸ್ಸು ಮತ್ತು  ಆರೋಗ್ಯಗಳಿಗೆ ಸಂಬಂಧಿಸಿದ ಅನೇಕ ಜಾಹೀರಾತುಗಳು ಗ್ರಾಹಕರನ್ನು ಆಯಸ್ಕಾಂತದಂತೆ ಆಕರ್ಷಿಸುತ್ತವೆ. ಇವುಗಳಲ್ಲಿ ಕೃಷ್ಣ ವರ್ಣದವರನ್ನು ಗೌರ ವರ್ಣದವರನ್ನಾಗಿಸಬಲ್ಲ,ಬಕ್ಕತಲೆಯಲ್ಲಿ    ಮತ್ತೆ ಕೂದಲುಗಳನ್ನು ಮೂಡಿಸಬಲ್ಲ, ಕುಳ್ಳರನ್ನು ನೀಳಕಾಯರನ್ನಾಗಿಸುವ,  ಕೃಶಕಾಯರನ್ನು ಅತಿಕಾಯರನ್ನಾಗಿಸುವ,  ಧಡೂತಿ ದೇಹದವರನ್ನು ಬಳುಕುವ ಬಳ್ಳಿಯಂತೆ ಪರಿವರ್ತಿಸುವ, ಮರೆಗುಳಿಗಳ ಸ್ಮರಣ ಶಕ್ತಿಯನ್ನು ಹೆಚ್ಚಿಸುವ, ಇಳಿವಯಸ್ಸಿನವರ ಲೈಂಗಿಕ ಸಾಮರ್ಥ್ಯವನ್ನು ವೃದ್ಧಿಸುವ, ಗಂಟು - ಸೊಂಟ ನೋವುಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸಬಲ್ಲ,ಆಸ್ತಮಾ-ಮಧುಮೇಹ-ಅಧಿಕ ರಕ್ತದೊತ್ತಡ-ಹೃದ್ರೋಗ ಮತ್ತು ಮಾರಕ ಕ್ಯಾನ್ಸರ್ ಗಳಂತಹ ಶಾಶ್ವತ ಪರಿಹಾರವಿಲ್ಲದ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸುವುದಾಗಿ ಘೋಷಿಸುವ ನೂರಾರು ವಿಸ್ಮಯಕಾರಿ ಔಷದಗಳ  ಜಾಹೀರಾತುಗಳನ್ನು    ನೀವೂ ಕಂಡಿರಲೇಬೇಕು.ನಿಜ ಹೇಳಬೇಕಿದ್ದಲ್ಲಿ   ಔಷದ ನಿಯಂತ್ರಣ ಇಲಾಖೆಯ ನಿಯಮಗಳಲ್ಲಿ ೫೪ ವಿಧದ ಕಾಯಿಲೆಗಳು- ಆರೋಗ್ಯದ ಸಮಸ್ಯೆಗಳನ್ನು ಹೆಸರಿಸಿದ್ದು, ಇವುಗಳ ಬಗ್ಗೆ ಯಾವುದೇ ರೀತಿಯ ಜಾಹೀರಾತುಗಳನ್ನು ನೀಡುವಂತಿಲ್ಲ.  ಇವುಗಳಲ್ಲಿ ಮಧುಮೇಹ, ಕ್ಯಾನ್ಸರ್,  ತೊನ್ನು, ಅತಿಬೊಜ್ಜು, ನಪುಂಸಕತ್ವ, ಸಂತಾನ ಹೀನತೆ, ಜಠರದ ಹುಣ್ಣುಗಳು, ಲೈಂಗಿಕ ರೋಗಗಳು-ಸಮಸ್ಯೆಗಳು ,ಹೃದ್ರೋಗಗಳು ಮತ್ತು  ಸ್ತ್ರೀಯರ ಸ್ತನಗಳ ಮತ್ತು ಶರೀರದ ಗಾತ್ರಗಳಿಗೆ  ಸಂಬಂಧಿಸಿದ ಮತ್ತು ಇತರ ಕೆಲ  ಸಮಸ್ಯೆಗಳೂ  ಸೇರಿವೆ. ೨೦೦೪ ರಲ್ಲಿ ಈ ಪಟ್ಟಿಯನ್ನು ಪುನರ್ ವಿಮರ್ಶಿಸಿದ್ದು, ಎಚ್.ಐ. ವಿ-ಏಡ್ಸ್ ಮತ್ತು ಪೋಲಿಯೋ ಇತ್ಯಾದಿ ಕಾಯಿಲೆಗಳನ್ನು ಇದರಲ್ಲಿ ಸೇರಿಸಲಾಗಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯವು ಇಂತಹ ಕಾಯಿಲೆಗಳನ್ನು ಗುಣಪಡಿಸುವುದಾಗಿ ಜಾಹೀರಾತುಗಳನ್ನು ನೀಡಿ ಜನಸಾಮಾನ್ಯರನ್ನು ಮರುಳುಗೊಳಿಸುವ ಸಂಸ್ಥೆಗಳ ಮತ್ತು ನಕಲಿ ವೈದ್ಯರ  ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ೨೦೦೪ರಲ್ಲಿ  ಸಮಿತಿಯೊಂದನ್ನು ರಚಿಸಿತ್ತು. ಡ್ರಗ್ಸ್ ಎಂಡ್ ಮ್ಯಾಜಿಕ್ ರೆಮಿಡೀಸ್(ಅಬ್ಜೆಕ್ಷನೆಬಲ್ ಅಡ್ವರ್ಟೈಸ್ಮೆಂಟ್ಸ್)ಆಕ್ಟ್ ೧೯೫೪ ಮತ್ತು ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ರೂಲ್ಸ್ ಕಾಯಿದೆಗಳನ್ವಯ  ಇಂತಹ ಜಾಹೀರಾತುಗಳನ್ನು ನೀಡುವ ವ್ಯಕ್ತಿಗಳು- ಸಂಸ್ಥೆಗಳ ವಿರುದ್ಧ ಔಷದ ನಿಯಂತ್ರಣ ಇಲಾಖೆಯು ನ್ಯಾಯಾಲಯದಲ್ಲಿ  ದಾವೆಯನ್ನು ಹೂಡಿ, ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಆದರೆ ನಮ್ಮ ದೇಶದಲ್ಲಿ ಇವೆರಡೂ ಕಾಯಿದೆಗಳನ್ನು ರಾಜಾರೋಷವಾಗಿ ಉಲ್ಲಂಘಿಸಲಾಗುತ್ತಿದೆ. ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಇಂತಹ ಜಾಹೀರಾತುಗಳ ವಿರುದ್ಧ ನ್ಯಾಯಾಲಯಗಳಲ್ಲಿ ದಾವೆಯನ್ನು ಹೂಡಿ, ಶಿಕ್ಷೆಯನ್ನು ಕೊಡಿಸಿದ್ದ ಪ್ರಕರಣಗಳು ಮತ್ತು ಇವುಗಳಿಂದ  ಮೋಸ ಹೋಗಿದ್ದ ಗ್ರಾಹಕರು ಇಲಾಖೆಗೆ ಸಲ್ಲಿಸಿದ್ದ ದೂರುಗಳ ಸಂಖ್ಯೆಯೂ ಕೇವಲ ಬೆರಳೆಣಿಕೆಯಷ್ಟೇ ಇವೆ.ಪ್ರಾಯಶಃ ಇದೇ ಕಾರಣದಿಂದಾಗಿ ದಾರಿತಪ್ಪಿಸುವ ಜಾಹೀರಾತುಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ಈ ವಿಲಕ್ಷಣ ಸಮಸ್ಯೆಗೆ ಕರ್ನಾಟಕವೂ ಅಪವಾದ ಎನಿಸಿಲ್ಲ.
ಉದಾಹರಣೆಗೆ ಉತ್ತಮ ಗುಣಮಟ್ಟದ ಹಾಗೂ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರವನ್ನು ಸೇವಿಸದೇ ಮತ್ತು  ಯಾವುದೇ ರೀತಿಯ ವ್ಯಾಯಾಮವನ್ನು ಮಾಡದೇ ಪೈಲ್ವಾನರಂತಹ ಕಟ್ಟುಮಸ್ತಾದ ಶರೀರವನ್ನು ಹೊಂದುವುದು  ಅಸಾಧ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಸುಪ್ರಸಿದ್ದ ನಟರು ಅಥವಾ ಕ್ರೀಡಾಪಟುಗಳು ರೂಪದರ್ಶಿಯಾಗಿರುವ  ದುಬಾರಿ ಬೆಲೆಯ ಔಷದವೊಂದನ್ನು ಪ್ರತಿನಿತ್ಯ ಸೇವಿಸಿ ಆಕರ್ಷಕ ಅಂಗಸೌಷ್ಟವವನ್ನು ಗಳಿಸಿರಿ ಎಂದು ಘೋಷಿಸುವ ಜಾಹೀರಾತುಗಳಿಗೆ ಮರುಳಾಗಿ ಇದನ್ನು ಖರೀದಿಸಿ ಸೇವಿಸಿದಲ್ಲಿ, ದೊಡ್ಡ ಮೊತ್ತದ ಹಣದೊಂದಿಗೆ ನಿಮ್ಮ ಆರೋಗ್ಯವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ .ಏಕೆಂದರೆ ಇಂತಹ ಉತ್ಪನ್ನಗಳ ಹೊರಕವಚಗಳ ಮೇಲೆ ಇವುಗಳಲ್ಲಿ ಬಳಸಿರುವ ಔಷದ-ಅನ್ಯ ದ್ರವ್ಯಗಳ ವಿವರಗಳನ್ನು ಮುದ್ರಿಸಿರುವುದಿಲ್ಲ. ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ ಎನ್ನುವ ಇಂತಹ ಉತ್ಪನ್ನಗಳಲ್ಲಿ, ಅನಬಾಲಿಕ್ ಸ್ಟೆರಾಯ್ಡ್ ನಂತಹ ಔಷದಗಳನ್ನು ಬೆರೆಸಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇಂತಹ ಔಷದಗಳ ಅತಿಯಾದ ಸೇವನೆಯಿಂದ ಅಯಾಚಿತ ಹಾಗೂ ಗಂಭೀರ ಸಮಸ್ಯೆಗಳು ತಲೆದೋರುವುದರಲ್ಲಿ ಸಂದೇಹವಿಲ್ಲ.ತಜ್ಞ ವೈದ್ಯರ ಸಲಹೆ ಪಡೆಯದೇ ಸ್ಟೆರಾಯ್ಡ್ ಗಳನ್ನು ಸೇವಿಸುವುದು ಬೆಂಕಿಯೊಂದಿಗೆ ಸರಸವಾಡಿದಂತೆ ಎನ್ನುವುದನ್ನು ಮರೆಯದಿರಿ.
ಕೇವಲ ಜಾಹೀರಾತುಗಳ ಬಲದಿಂದಲೇ ಮಾರಾಟವಾಗುವ ಲೈಂಗಿಕ ಶಕ್ತಿವರ್ಧಕ ಔಷದಗಳು ಅತ್ಯಂತ ದುಬಾರಿಯಾಗಿದ್ದರೂ, ಇವುಗಳಲ್ಲಿ ನಿಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಬಲ್ಲ ಔಷದಗಳೇ ಇರುವುದಿಲ್ಲ. ಇದಕ್ಕೂ ಮಿಗಿಲಾಗಿ ಇಂತಹ ಔಷದಿಗಳೊಂದಿಗೆ  ಉಚಿತವಾಗಿ ನೀಡುವ, ಪುರುಷರ ಪ್ರಜನನಾಂಗದ ಉದ್ದ ಮತ್ತು ಗಾತ್ರಗಳನ್ನು ಹೆಚ್ಚಿಸುವ "ಯಂತ್ರ"ವನ್ನು ಇಂದಿನ ತನಕ ಸಂಶೋಧಿಸಿಲ್ಲ. ಮಾತ್ರವಲ್ಲ, ಇದು ಸಾಧ್ಯವೂ ಅಲ್ಲ.
ಇನ್ನು ಚರ್ಮದ ಮೇಲಿನ ಬಿಳಿ ಮಚ್ಚೆಗಳು ಅರ್ಥಾತ್ ತೊನ್ನು ಎಂದು ಕರೆಯಲ್ಪಡುವ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸುವುದಾಗಿ ಘೋಷಿಸುವ ಔಷದಗಳನ್ನು ಹಚ್ಚಿದ ಕೆಲವೇ ಗಂಟೆಗಳಲ್ಲಿ ,ಚರ್ಮದ ಮೇಲಿನ ಬಿಳಿಯ ಕಲೆಗಳ ಬಣ್ಣ ಬದಲಾಗುವ  ಸಾಧ್ಯತೆಗಳೇ ಇಲ್ಲ.
ಇನ್ನು ಸ್ತ್ರೀಯರ ಸ್ತನಗಳ ಗಾತ್ರ ಹಾಗೂ ಆಕಾರಗಳನ್ನು ಹೆಚ್ಚಿಸಿ, ಆಕರ್ಷಣೀಯವಾಗಿ ಪರಿವರ್ತಿಸಬಲ್ಲ ಔಷದಗಳು ನಿಜಕ್ಕೂ ಲಭ್ಯವಿದ್ದಲ್ಲಿ,ನಿಮ್ಮ ಚಿರಪರಿಚಿತ ಕುಟುಂಬ ವೈದ್ಯರು ನಿಮಗೆ ಇದನ್ನು ಸೇವಿಸುವಂತೆ ಸೂಚಿಸುವುದರಲ್ಲಿ ಸಂದೇಹವಿಲ್ಲ!.
ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರನ್ನು ಜೀವನ ಪರ್ಯಂತ ಕಾಡಬಲ್ಲ ಮತ್ತು ಶಾಶ್ವತ ಪರಿಹಾರವೇ ಇಲ್ಲದ ಅಧಿಕ ರಕ್ತದೊತ್ತಡ, ಮಧುಮೇಹ, ಕೆಲ ವಿಧದ ಹೃದ್ರೋಗಗಳಂತಹ  ಕಾಯಿಲೆಗಳನ್ನು  ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಗುಣಪಡಿಸುವಂತಹ ಔಷದಗಳನ್ನು ಇಂದಿನ ತನಕ ಸಂಶೋಧಿಸಿಲ್ಲ. ನಿಜಕ್ಕೂ ಇಂತಹ ಔಷದಗಳನ್ನು ಸಂಶೋಧಿಸಿದ ವ್ಯಕ್ತಿಗಳಿಗೆ ಜಗತ್ಪ್ರಸಿದ್ಧ "ನೊಬೆಲ್ ಪ್ರಶಸ್ತಿ" ದೊರೆಯುವುದರಲ್ಲಿ ಸಂದೇಹವಿಲ್ಲ!.
ಕಾನೂನು ಕ್ರಮ ಕೈಗೊಳ್ಳುವವರು ಯಾರು?
ಕಾನೂನುಬಾಹಿರವಾಗಿ ಈ ರೀತಿಯ ಜಾಹೀರಾತುಗಳು ಪ್ರತಿನಿತ್ಯ ಪ್ರಕಟವಾಗುತ್ತಿದ್ದರೂ,ಇವುಗಳನ್ನು ನೀಡುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಗಳ ವಿರುದ್ಧ ಔಷದ ನಿಯಂತ್ರಣ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಡ್ರಗ್ಸ್ ಎಂಡ್ ಮ್ಯಾಜಿಕ್ ರೇಮಿಡೀಸ್  (ಒಬ್ಜೆಕ್ಷನೆಬಲ್ ಅಡ್ವರ್ಟೈಸ್ ಮೆಂಟ್ಸ್)ಆಕ್ಟ್ ೧೯೫೪ ರಂತೆ ಇಂತಹ ಜಾಹೀರಾತುಗಳನ್ನು ನೀಡುವ ಸಂಸ್ಥೆಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ, ಶಿಕ್ಷೆಗೆ ಗುರಿಯಾಗಿದ್ದ ಸಂಸ್ಥೆಗಳೂ ಮತ್ತೆ ಇದೇ ಜಾಹೀರಾತುಗಳನ್ನು ಪ್ರಕಟಿಸುತ್ತಿರುವುದು ಮಾತ್ರ ನಂಬಲಸಾಧ್ಯ ಎನಿಸುತ್ತದೆ. ಕರ್ನಾಟಕ ರಾಜ್ಯದ ಔಷದ ನಿಯಂತ್ರಣ ಇಲಾಖೆಯಿಂದ ಮಾಹಿತಿ ಹಕ್ಕು ಕಾಯಿದೆಯಂತೆ ಪಡೆದುಕೊಂಡಿದ್ದ ವಿವರಗಳಿಂದ ಈ ವಿಚಾರ ಬಯಲಾಗಿದೆ.
ಆದರೆ ಮಾಧ್ಯಮಗಳಲ್ಲಿ ಇದೇ ರೀತಿಯ  ಅನೇಕ ಜಾಹೀರಾತುಗಳು ಪ್ರಕಟವಾಗುತ್ತಿದ್ದು ಈ ಬಗ್ಗೆ ನೀವು ಕೈಗೊಂಡಿರುವ ಕ್ರಮಗಳೇನು?,ಎಂದು  ಮಾಹಿತಿ ಹಕ್ಕು ಕಾಯಿದೆಯನ್ವಯ ನಾವು ಸಲ್ಲಿಸಿದ್ದ ಅರ್ಜಿಯಲ್ಲಿ ನಮೂದಿಸಿರುವ ವಿವರಗಳು ಮತ್ತು ಇದರೊಂದಿಗೆ ಲಗತ್ತಿಸಿದ್ದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಜಾಹೀರಾತುಗಳ ತುಣುಕುಗಳನ್ನು  ಕಂಡ ಬಳಿಕ ಎಚ್ಚೆತ್ತ ಇಲಾಖೆಯು ಜಾಹೀರಾತುದಾರರಿಗೆ ನೋಟೀಸು ಜಾರಿಗೊಳಿಸಿರುವುದಾಗಿ ನಮಗೆ ತಿಳಿಸಿದೆ!. ಅರ್ಥಾತ್, ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದಿಲ್ಲ   ಹಾಗೂ ಟೆಲಿವಿಶನ್ ಚಾನಲ್ ಗಳನ್ನು ನೋಡುವುದೇ ಇಲ್ಲ ಎನ್ನುವಂತಹ ಹಾರಿಕೆಯ ಉತ್ತರವನ್ನು ನೀಡಿರುವುದು ಇವರ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಇಷ್ಟು ಮಾತ್ರವಲ್ಲ, ಇಂತಹ ಜಾಹೀರಾತುದಾರರ ವಿರುದ್ಧ ಇಲಾಖೆಯು ಮೊಕದ್ದಮೆಗಳನ್ನು ಹೂಡಿರುವ ಬಗ್ಗೆ ವಿವರಗಳನ್ನು ಒದಗಿಸುವಂತೆ ಕೋರಲಾಗಿದ್ದು, ಇಂತಹ ಪ್ರಕರಣಗಳ ತೀರ್ಪಿನ ಸಂಪೂರ್ಣ ವಿವರಗಳನ್ನೇ ನೀಡದ ಅಧಿಕಾರಿಗಳು ಕೇವಲ ಮೊದಲನೆಯ ಪುಟಗಳ ಜೆರಾಕ್ಸ್ ಪ್ರತಿಗಳನ್ನು ನೀಡಿರುವುದು ಹಲವಾರು ಸಂದೇಹಗಳಿಗೆ ಆಸ್ಪದವನ್ನು ನೀಡುವಂತಿದೆ. ಹಾಗೂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗಳನ್ನು ತೋರಿಸುತ್ತದೆ.
ಇದಕ್ಕೂ ಮಿಗಿಲಾಗಿ ಅಧಿಕಾರಿಗಳು ನೋಟೀಸನ್ನು ನೀಡಿರುವುದಾಗಿ ತಿಳಿಸಿರುವ ಸಂಸ್ಥೆಗಳು ನೀಡುತ್ತಿರುವ ದಾರಿ ತಪ್ಪಿಸುವ ಜಾಹೀರಾತುಗಳು, ಮಾಧ್ಯಮಗಳಲ್ಲಿ ಇಂದಿಗೂ ಪ್ರಕಟವಾಗುತ್ತಲೇ ಇವೆ!.ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ನಿಜಕ್ಕೂ ಈ ಸಂಸ್ಥೆಗಳಿಗೆ ನೋಟೀಸನ್ನು ನೀಡಿದ್ದಲ್ಲಿ,ಈ ರೀತಿಯ ಜಾಹೀರಾತುಗಳು ಇಂದಿಗೂ ಪ್ರಕಟವಾಗುತ್ತಿರುವುದಾದರೂ  ಹೇಗೆ?,ಎನ್ನುವ ಪ್ರಶ್ನೆಗೆ ಸಂಬಂಧಿತ ಅಧಿಕಾರಿಗಳೇ ಉತ್ತರಿಸಬೇಕಷ್ಟೇ!.
ಆದರೆ ಇದೇ ಸಂದರ್ಭದಲ್ಲಿ ನೆರೆಯ ಕೇರಳದ ಔಷದ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಇದೇ ವರ್ಷದ ಮೇ ತಿಂಗಳಿನಲ್ಲಿ ತಮ್ಮ ರಾಜ್ಯಾದ್ಯಂತ ಶೃಂಗಾರ ಸಾಧನಗಳು, ಸೌಂದರ್ಯ ವರ್ಧಕಗಳು ಮತ್ತು ತ್ವರಿತಗತಿಯಲ್ಲಿ ಕೆಲವೊಂದು ಕಾಯಿಲೆಗಳನ್ನು ಗುಣಪಡಿಸುವುದಾಗಿ ಘೋಷಿಸುವ ಔಷದಗಳನ್ನು ತಯಾರಿಸುವ ಸಂಸ್ಥೆಗಳ ಮೇಲೆ ದಾಳಿನಡೆಸಿ, ೫೦ ಲಕ್ಷ ರೂ. ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದರು. ಹಾಗೂ ಈ ಸಂಸ್ಥೆಗಳ ವಿರುದ್ಧ ಡ್ರಗ್ಸ್ ಎಂಡ್ ಮ್ಯಾಜಿಕ್ ರೇಮಿಡೀಸ್(ಒಬ್ಜೆಕ್ಷನೆಬಲ್ ಅಡ್ವರ್ಟೈಸ್ ಮೆಂಟ್ಸ್) ಆಕ್ಟ್ ೧೯೫೪ ರಂತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಇಂತಹ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡು, ಈ ಉತ್ಪನ್ನಗಳನ್ನು ಬಳಸುವಂತೆ ಜನಸಾಮಾನ್ಯರ ಮೇಲೆ ಪ್ರಭಾವವನ್ನು ಬೀರುವ ಖ್ಯಾತ ಕ್ರೀಡಾ ಪಟುಗಳು ಮತ್ತು ಚಲನ ಚಿತ್ರ ನಟರಿಗೆ ಇಂತಹ ಜಾಹೀರಾತುಗಳಲ್ಲಿ ನಟಿಸದಂತೆ ಮತ್ತು ಇಂತಹ ಉತ್ಪನ್ನಗಳನ್ನು ಅನುಮೋದಿಸದಂತೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕೇರಳದ ಔಷದ ನಿಯಂತ್ರಣ ಇಲಾಖೆ ಈ ರೀತಿಯ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಮೂಲಕ ತಮ್ಮ ರಾಜ್ಯದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ನ್ಯಾಯಾಲಯದಿಂದ ನಿಷೇಧಿತ  ಉತ್ಪನ್ನಗಳ ಜಾಹೀರಾತುಗಳು, ಇಂದಿಗೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ!.
ಅದೇನೇ ಇರಲಿ, ರಾಜ್ಯದ ಔಷದ ನಿಯಂತ್ರಣ ಇಲಾಖೆಯು ಈ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೂ, ನೀವಂತೂ ಇಂತಹ ಜಾಹೀರಾತುಗಳಿಗೆ ಮರುಳಾಗದಿರಿ.ಜೊತೆಗೆ ನೀವು ಕಷ್ಟಪಟ್ಟು ಸಂಪಾದಿಸಿದ ಹಣದೊಂದಿಗೆ  ನಿಮ್ಮ ಆರೋಗ್ಯವನ್ನೂ  ಕಳೆದುಕೊಳ್ಳದಿರಿ!.

ದಿ . ೦೫-೧೧-೨೦೧೨ ರ ಹೊಸ ದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು, ಪುತ್ತೂರು-೫೭೪೨೦೧



ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ದಾರಿತಪ್ಪಿಸುವ ಹಾಗೂ ಕಾನೂನುಬಾಹಿರ ಜಾಹೀರಾತುಗಳು


      ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ!
ನಮ್ಮ ದೇಶದಲ್ಲಿ  ಸಣ್ಣದೊಂದು ಉದ್ಯೋಗ ದೊರೆಯಬೇಕಿದ್ದಲ್ಲಿ ಕನಿಷ್ಠ ವಿದ್ಯಾರ್ಹತೆ,ಅನುಭವ,ಶಾರೀರಿಕ ಹಾಗೂ ಮಾನಸಿಕ ಆರೋಗ್ಯಗಳ ಮಟ್ಟ ಇತ್ಯಾದಿಗಳಿಗೆ ನಿರ್ದಿಷ್ಟ ಮಾನದಂಡಗಳಿವೆ. ಜೊತೆಗೆ ನಿವೃತ್ತಿಯ ವಯೋಮಿತಿಯೂ ಇದೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಪಂಚಾಯತ್ ನಿಂದ ಆರಂಭಿಸಿ ಲೋಕಸಭೆಯ ವರೆಗಿನ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸಲು ಇಂತಹ ಮಾನದಂಡಗಳನ್ನು ನಿಗದಿಸಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳ,ಅತ್ಯಾಚಾರ,ದರೋಡೆ ಅಥವಾ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಜೈಲಿಗೆ ಹೋಗಿಬಂದವರಿಗೂ,ಚುನಾವಣೆಗಳಲ್ಲಿ ಸ್ಪರ್ಧಿ ಸುವ ಮತ್ತು ಗೆದ್ದಲ್ಲಿ ಮಂತ್ರಿಯಾಗುವ ಅವಕಾಶವಿರುವುದು ಪ್ರಾಯಶಃ ಭವ್ಯ ಭಾರತದಲ್ಲಿ ಮಾತ್ರ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಇದೇ ಕಾರಣದಿಂದಾಗಿ"ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುವರಯ್ಯಾ"ಎನ್ನಲು ಅಡ್ಡಿಯಿಲ್ಲ!.
ರಾಜಕೀಯ ದೊಂಬರಾಟ
ಕರ್ನಾಟಕದಲ್ಲಿ ಇದುವರೆಗೆ ನಡೆದಿದ್ದ ಚುನಾವಣೆಗಳಲ್ಲಿ ಕಂಡುಕೇಳರಿಯದ ವಿಚಿತ್ರ ವಿದ್ಯಮಾನಗಳನ್ನು ಕಣ್ಣಾರೆ ಕಾಣುವ ಸೌಭಾಗ್ಯವು ಇದೀಗ ರಾಜ್ಯದ ಜನತೆಗೆ ಪ್ರಾಪ್ತಿಯಾಗಿದೆ. ಈ ಬಾರಿಯ ಚುನಾವಣೆಯು ನಮ್ಮನ್ನಾಳುವವರ ನಿಜವಾದ ಬಣ್ಣವನ್ನು ಬಯಲುಮಾಡುತ್ತಿದೆ. ಅಧಿಕಾರದ ಗದ್ದುಗೆಯನ್ನು ಏರುವ ಹೆಬ್ಬಯಕೆಯು,ರಾಜಕೀಯ ಪುಡಾರಿಗಳು ನಡೆಸುತ್ತಿರುವ ಕಸರತ್ತುಗಳಿಗೆ ಕಾರಣವೆನಿಸಿದೆ. ಈ ದೊಂಬರಾಟವನ್ನು ವೀಕ್ಷಿಸುತ್ತಿರುವ ಮತದಾರರಿಗೆ ಮಾತ್ರ,ಅಭ್ಯರ್ಥಿಗಳ ಮರಕೋತಿ ಆಟವು  ಪ್ರಾಣ-ಧರ್ಮ ಸಂಕಟಗಳಿಗೆ ಕಾರಣವೆನಿಸುತ್ತಿದೆ. ಇದ್ದ ಮೂವರಲ್ಲಿ ಮೂವರೂ ಕದ್ದವರೇ ಆಗಿದ್ದಲ್ಲಿ,ತಾವು ಮತವನ್ನು ನೀಡುವುದಾದರೂ ಯಾರಿಗೆ?,ಎನ್ನುವ ಪ್ರಶ್ನೆ ಮತದಾರರನ್ನು ಕಾಡುತ್ತಿದೆ. 
ಅಂದು ಆ ಪಕ್ಷದಲ್ಲಿದ್ದವರು ಇಂದು ಈ ಪಕ್ಷದಲ್ಲಿ ಹಾಗೂ ಇಂದು ಈ ಪಕ್ಷದಲ್ಲಿ  ಇದ್ದವರು ನಾಳೆ ಇನ್ನೊಂದು ಪಕ್ಷಕ್ಕೆ  ವಲಸೆ ಹೋಗುತ್ತಿದ್ದು,ಯಾವ
 ಅಭ್ಯರ್ಥಿ ಯಾವ ಪಕ್ಷದಲ್ಲಿ ಇದ್ದಾನೆ ಎನ್ನುವುದು ಮತದಾರರಿಗೆ ತಿಳಿಯುತ್ತಿಲ್ಲ. ಕ್ಷಣಮಾತ್ರದಲ್ಲಿ ಅಭ್ಯರ್ತಿಗಳು
ಪಕ್ಷನಿಷ್ಠೆ ಬದಲಾಯಿಸಲು,ನಿರ್ದಿಷ್ಟ   ಪಕ್ಷದಿಂದ ಟಿಕೇಟು 
ದೊರೆಯದಿರುವುದು  ಕಾರಣವೇ ಹೊರತು,ಅನ್ಯ ಕಾರಣಗಳು ನಿಶ್ಚಿತವಾಗಿಯೂ ಅಲ್ಲ. ಆದರೂ ತಮ್ಮದೇ ಪಕ್ಷದಿಂದ ಚುನಾಯಿತರಾಗಿ,ಆಪರೇಶನ್ ಮೂಲಕ ಮತ್ತೊಂದು ಪಕ್ಷವನ್ನು ಸೇರಿ,ಇದೀಗ ಮತ್ತೆ ಮಾತೃ ಪಕ್ಷಕ್ಕೆ ಬಂದವರಿಗೆ ಟಿಕೇಟು ನೀಡುತ್ತಿರುವುದು ರಾಜಕೀಯ ಪಕ್ಷಗಳ ನೈತಿಕ ದಿವಾಳಿತನವನ್ನು ಬಯಲುಮಾಡಿದೆ.
ರಾಜಕೀಯ ಕ್ಷೇತ್ರದಲ್ಲಿ ತಮ್ಮ ಘನತೆ-ಗೌರವಗಳನ್ನು ಮೆರೆದಿದ್ದ ಹಿರಿಯ ರಾಜಕಾರಣಿಗಳು, ಇದೀಗ ತಮ್ಮ ಮಕ್ಕಳಿಗೆ ಸೂಕ್ತ ಸ್ಥಾನಮಾನವನ್ನು ಗಳಿಸಿಕೊಳ್ಳುವ ಸಲುವಾಗಿ ಟಿಕೇಟನ್ನು ನೀಡುವಂತೆ ತೆರೆಯ ಮರೆಯಲ್ಲಿ ನಡೆಸುತ್ತಿರುವ ಪ್ರಯತ್ನಗಳು ಜನಸಾಮಾನ್ಯರಿಗೆ ತಿಳಿಯದ ವಿಚಾರವೇನಲ್ಲ. ಚಲಾವಣೆಯಲ್ಲಿ ಇಲ್ಲದ ನಾಣ್ಯ ಎನಿಸಿರುವ ಇಂತಹ ಹಳೆಯ ತಲೆಮಾರಿನ ರಾಜಕಾರಣಿಗಳ ಅಧಿಕಾರ ದಾಹಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಮತ್ತೊಂದಿಲ್ಲ!.
ಮತದಾರರಿಗೆ ಮನೋರಂಜನೆ
ಚುನಾವಣೆಯ ದಿನಗಳು ಸಮೀಪಿಸುತ್ತಿರುವಂತೆಯೇ ವಿವಿಧ ಪಕ್ಷಗಳ ನೇತಾರರ ಆಲಾಪ-ಪ್ರಲಾಪಗಳು ಅತಿಯಾಗುತ್ತಿವೆ. ಒಂದು ದಿನ ತಮ್ಮ ವಿರೋಧಿಗಳ ವಿರುದ್ಧ ಘರ್ಜಿಸಿದ ನಾಯಕರು,ಮರುದಿನ ಮತ್ತೊಂದು ವೇದಿಕೆಯಲ್ಲಿ ಗಳಗಳನೆ ಅಳುವುದು ಮತದಾರರಿಗೆ ಪುಕ್ಕಟೆ ಮನೋರಂಜನೆಯನ್ನು ಒದಗಿಸುತ್ತಿದೆ. ಮೊಸಳೆ ಕಣ್ಣೀರು ಸುರಿಸುವ ಇಂತಹ ನಾಯಕರ ಬಗ್ಗೆ "ನಗುವ ಹೆಂಗಸರನ್ನು ನಂಬಬೇಡ,ಅಳುವ ಗಂಡಸರನ್ನು ನಂಬಬೇಡ" ಎಂದು ಮತದಾರರು ಆಡಿಕೊಳ್ಳುವಂತಾಗಿದೆ.
ತಾವು ಸ್ಪರ್ದಿಸಿರುವ ಕ್ಷೇತ್ರದ ಜನರ ಸಮಸ್ಯೆಗಳು ಮತ್ತು ಇವುಗಳನ್ನು ಪರಿಹರಿಸಲು ತಾನು ಕೈಗೊಳ್ಳಲಿರುವ ಕಾರ್ಯತಂತ್ರಗಳ ಬಗ್ಗೆ ಯಾವುದೇ ಅಭ್ಯರ್ಥಿಯು ಚುನಾವಣಾ ಪ್ರಚಾರ ಸಭೆಗಳಲ್ಲಿ ವಿವರಿಸುವುದನ್ನು ನೀವೂ ಕೇಳಿರಲಿಕ್ಕಿಲ್ಲ. ಆದರೆ ತನ್ನ ಎದುರಾಳಿಗಳು -ಪಕ್ಷಗಳು ಹೆಣೆದಿರುವ "ಷಡ್ಯಂತ್ರ" ಗಳ ಬಗ್ಗೆ ನಿರರ್ಗಳವಾಗಿ ಕೊರೆಯುವ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ.ತನ್ನ ವಿರೋಧಿಗಳ ದೌರ್ಬಲ್ಯಗಳು,ಹಗರಣಗಳು ಮತ್ತು ಆತನ ಚರಿತ್ರೆಯನ್ನು ಕೂಲಂಕುಶವಾಗಿ ಅರಿತುಕೊಳ್ಳಲು ಸಾಕಷ್ಟು ಸಮಯವನ್ನು ವಿನಿಯೋಗಿಸಿದರೂ,ಸ್ವಕ್ಷೇತ್ರದ ಸಮಸ್ಯೆಗಳನ್ನು ತಿಳಿದುಕೊಳ್ಳಲು ಇವರಿಗೆ ಬಿಡುವೇ ಇರುವುದಿಲ್ಲ!.
ಪಕ್ಷಾತೀತರು
ತನ್ನ ಪಕ್ಷದ ಟಿಕೇಟು ಲಭಿಸದ ಕಾರಣದಿಂದಾಗಿ ಪಕ್ಷವನ್ನು ತೊರೆದು,ಪಕ್ಷ ಮತ್ತು ನಾಯಕರನ್ನು ವಾಚಾಮಗೋಚರವಾಗಿ ದೂಷಿಸುವ ಅಭ್ಯರ್ಥಿಗಳು,ತಾವು ಈ ಹಿಂದೆ ದೂಷಿಸುತ್ತಿದ್ದ ಮತ್ತೊಂದು ಪಕ್ಷವನ್ನು ಸೇರಿ ಹಾಡಿಹೊಗಳಲು,ಆ ಪಕ್ಷವು ಈತನಿಗೆ ನೀಡಿದ್ದ ಟಿಕೇಟಿನ ಪ್ರಭಾವವೇ ಹೊರತು ಬೇರೇನೂ ಅಲ್ಲ!.
ಪಕ್ಷದ ಶಿಸ್ತಿನ ಸಿಪಾಯಿಯಾಗಿ ಅನೇಕ ವರ್ಷಗಳಿಂದ ದುಡಿಯುತ್ತಿದ್ದ ಅಭ್ಯರ್ಥಿಯೊಬ್ಬನನ್ನು ಕಡೆಗಣಿಸಿ,ಇದೀಗ ಮತ್ತೊಂದು ಪಕ್ಷದಲ್ಲಿ ಸಲ್ಲದೇ(ಟಿಕೇಟು ದೊರೆಯದೆ) ಈ ಪಕ್ಷವನ್ನು ಸೇರಿದವರಿಗೆ  ಟಿಕೆಟ್ ನೀಡುವುದು ರಾಜಕೀಯ ರಂಗದ ಚದುರಂಗದಾಟದ ನಡೆಗಳಲ್ಲಿ ಒಂದಾಗಿದೆ. ತಮ್ಮ ಪಕ್ಷದ ತತ್ವ-ಸಿದ್ದಾಂತಗಳಲ್ಲಿ ನಂಬಿಕೆ ಇಲ್ಲದಿದ್ದರೂ,ಟಿಕೆಟ್ ನ ಆಸೆಯಿಂದ ವಲಸೆ ಬಂದಿರುವ ಪಕ್ಷಾಂತರಿಗಳನ್ನು  ವಿರೋಧಿಸುವ ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವ ನಾಯಕರು,ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು "ವ್ಯಕ್ತಿಗಿಂತ ಪಕ್ಷ ದೊಡ್ಡದು" ಎಂದು ಹೇಳಲು ಹಿಂಜರಿಯುವುದಿಲ್ಲ.
ಇಷ್ಟು ಮಾತ್ರವಲ್ಲ,ಅಂತಿಮ ಕ್ಷಣದಲ್ಲಿ ಟಿಕೆಟ್ ನೀಡಲು ನಿರಾಕರಿಸಿ ಕಡೆಗಣಿಸಿದ್ದ ತಮ್ಮದೇ ಪಕ್ಷದ ಪ್ರಭಾವಿ ಅಭ್ಯರ್ಥಿಯನ್ನು ಸಮಾಧಾನಿಸಲು ಅವರನ್ನು ಎಂ.ಎಲ್.ಸಿ ಮಾಡುವ ಅಥವಾ ಸೂಕ್ತ ಸ್ಥಾನಮಾನವನ್ನು ನೀಡುವ ಆಮಿಷವನ್ನು ಒಡ್ಡುವುದು ಸುಳ್ಳೇನಲ್ಲ.
ಆಶ್ವಾಸನೆಗಳ ಸುರಿಮಳೆ
ಚುನಾವಣಾ ಕಣದಲ್ಲಿರುವ ಒಂದು ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಆಶ್ವಾಸನೆಗಳ ಸುರಿಮಳೆಯು ಮತ್ತೊಂದು ಪಕ್ಷದ ಭರವಸೆಗಳ ಮಹಾಪೂರದಲ್ಲಿ ಕೊಚ್ಚಿಹೊಗುತ್ತಿದೆ. ಇದೇ ಕಾರಣದಿಂದಾಗಿ ಮಗದೊಂದು ಪಕ್ಷವು,ಇವೆರಡೂ ಪಕ್ಷಗಳ ಪ್ರಣಾಳಿಕೆಗಳಲ್ಲಿನ ಪ್ರಮುಖ ಅಂಶಗಳೊಂದಿಗೆ ತನ್ನ ಪಾಲಿನ ಇನ್ನಷ್ಟು ಆಶ್ವಾಸನೆಗಳನ್ನು ಸೇರಿಸಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತದೆ!.
ಇವೆಲ್ಲಕ್ಕೂ ಮಿಗಿಲಾಗಿ,ತಾವು ಅಧಿಕಾರದಲ್ಲಿ ಇದ್ದಾಗ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದ ನೇತಾರರು,ಇದೀಗ ಮತದಾರರು ನಿರೀಕ್ಷಿಸದ ಕೊಡುಗೆಗಳನ್ನು ನೀಡಲು ಮುಂದಾಗಿರುವುದು ನಂಬಲು ಅಸಾಧ್ಯವೆನಿಸುತ್ತದೆ. ಆದರೆ ಇವರು ಏನನ್ನು ನೀಡುವುದಾದರೂ ರಾಜ್ಯ ಸರಕಾರದ ಬೊಕ್ಕಸದಿಂದಲೇ ಹೊರತು,ತಮ್ಮ ಜೇಬಿನಿಂದ ಅಲ್ಲ ಎನ್ನುವುದನ್ನು ಅರ್ಥೈಸಿಕೊಳ್ಳಲು ಆಗದಷ್ಟು ಹೆಡ್ದರಲ್ಲ ರಾಜ್ಯದ ಮತದಾರರು.
ವಿಶೇಷವೆಂದರೆ ಚುನಾವಣಾ ಪ್ರಚಾರ ಸಭೆಗಳಲ್ಲಿ ತಾವು ಘೋಷಿಸಿದ್ದ  ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಮುದ್ರಿಸಿದ್ದ ಆಶ್ವಾಸನೆಗಳನ್ನು,ಚುನಾವಣೆಯಲ್ಲಿ ಗೆದ್ದು  ಅಧಿಕಾರದ ಸೂತ್ರವನ್ನು ಕೈಗೆತ್ತಿಕೊಂಡ ಬಳಿಕ ಮರೆತುಬಿಡಲು ಅಲ್ಜೀಮರ್ಸ್ ಕಾಯಿಲೆಯಂತೂ ಕಾರಣವಲ್ಲ ಎನ್ನುವುದರಲ್ಲಿ ಮಾತ್ರ ಸಂದೇಹವಿಲ್ಲ!.
ಅದೇನೇ ಇರಲಿ,ಮುಂದಿನ ಕೆಲವೇ ದಿನಗಳಲ್ಲಿ ಚುನಾವಣೆಗಳು-ಮತ ಎಣಿಕೆಗಳ ಕಾರ್ಯ ಮುಗಿದು,ನಮ್ಮನ್ನು ಆಳುವವರು ಯಾರು?,ಎನ್ನುವ ಪ್ರಶ್ನೆಗೆ ಉತ್ತರ ದೊರೆಯಲಿದೆ. ಆದರೆ ಜನಸಾಮಾನ್ಯರನ್ನು ಕಾಡುತ್ತಿರುವ ನೂರಾರು  ಸಮಸ್ಯೆಗಳು ಮಾತ್ರ ಎಂದಿನಂತೆಯೇ ಮುಂದುವರೆಯಲಿವೆ!.
ಬಾಕ್ಸ್ ಐಟಂ
ಸಮಾಜಸೇವೆಯ ಸೋಗಿನಲ್ಲಿ ಶಾಸಕ-ಮಂತ್ರಿಯಾಗುವ ರಾಜಕಾರಣಿಗಳು,ರಾಜ್ಯದ ಬೊಕ್ಕಸಕ್ಕೆ ಕನ್ನವನ್ನು ಕೊರೆಯುವ ಮೂಲಕ ಅಗಾಧ ಪ್ರಮಾಣದ ಆಸ್ತಿಪಾಸ್ತಿಗಳನ್ನು ಬೆವರಿಳಿಸದೇ ಗಳಿಸುತ್ತಾರೆ. ಈ ರೀತಿಯಲ್ಲಿ ಅಕ್ರಮವಾಗಿ ಗಳಿಸಿದ್ದ ಸಂಪತ್ತನ್ನು ಉಳಿಸಿಕೊಳ್ಳುವ ಸಲುವಾಗಿ ಮತ್ತೆ ಚುನಾವಣೆಯಲ್ಲಿ ಗೆಲ್ಲಲು ಹೆಣಗುತ್ತಾರೆ. ಇದಕ್ಕಾಗಿ ತಾನು ಗಳಿಸಿದ್ದ ಸಂಪತ್ತಿನ ಸಣ್ಣದೊಂದು ಅಂಶವನ್ನು ವ್ಯಯಿಸುತ್ತಾರೆ. ಈ ವಿಚಾರವನ್ನು ಚೆನ್ನಾಗಿ ಅರಿತಿರುವ ಅಧಿಕತಮ ಪ್ರಜ್ಞಾವಂತ ಮತದಾರರು,ಇಂತಹ ಭ್ರಷ್ಟ ರಾಜಕಾರಣಿಗಳಿಗೆ ತಕ್ಕ ಪಾಠವನ್ನು ಕಲಿಸಲು ಸನ್ನದ್ಧರಾಗಿದ್ದಾರೆ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು



    ಲಘುಪಾನೀಯಗಳ ಅತಿಸೇವನೆ ಹಿತಕರವಲ್ಲ
ವಿಶ್ವದ ಬಹುತೇಕ ರಾಷ್ಟ್ರಗಳ ಮಕ್ಕಳು ಮತ್ತು ಯುವಜನರು ಲಘುಪಾನೀಯಗಳ ಅತಿಸೇವನೆಯ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ.ಆಧುನಿಕ ಜೀವನಶೈಲಿಯ ಅವಿಭಾಜ್ಯ ಅಂಗವೆನಿಸಿರುವ ಇಂತಹ ಹವ್ಯಾಸಗಳು,ಅನೇಕವಿಧದ ಆರೋಗ್ಯದ ಸಮಸ್ಯೆಗಳಿಗೆ ಕಾರಣವೆನಿಸುತ್ತಿವೆ.ಅನೇಕ ದೇಶಗಳು ನಡೆಸಿದ್ದ ಹಲವಾರು ವೈದ್ಯಕೀಯ ಅಧ್ಯಯನ-ಸಂಶೋಧನೆಗಳಿಂದ ಬೆಳಕಿಗೆ ಬಂದಿರುವ ಈ ವಿಚಾರದ ಬಗ್ಗೆ ಜನಸಾಮಾನ್ಯರಿಗೆ ಅರಿವಿದ್ದರೂ,ಇದನ್ನು ನಿರ್ಲಕ್ಷಿಸುತ್ತಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತಿದೆ!.
ಕೆಲವೇ ವರ್ಷಗಳ ಹಿಂದೆ ಸಾಮಾನ್ಯವಾಗಿ ಮಧ್ಯವಯಸ್ಸು ಕಳೆದ ಬಳಿಕ ಉದ್ಭವಿಸುತ್ತಿದ್ದ ಕೆಲವಿಧದ ಗಂಭೀರ ಕಾಯಿಲೆಗಳು,ಇದೀಗ ಹದಿಹರೆಯದವರನ್ನು ಕಾಡಲು ಲಘುಪಾನೀಯ,ನಿಷ್ಪ್ರಯೋಜಕ ಆಹಾರ(ಜಂಕ್ ಫುಡ್ )ಗಳ ಅತಿಸೇವನೆಯೊಂದಿಗೆ ನಿಷ್ಕ್ರಿಯ ಜೀವನಶೈಲಿಯೂ ಕಾರಣವೆಂದು ತಿಳಿದುಬಂದಿದೆ.
ಲಘುಪಾನೀಯಗಳಿಂದ ಅಪಾಯ
ಸಾಮಾನ್ಯವಾಗಿ ಕೃತಕ ರಾಸಾಯನಿಕಗಳು,ರುಚಿಕಾರಕ ಹಾಗೂ ರುಚಿವರ್ಧಕ ದ್ರವ್ಯಗಳಿಗೆ ಸಾಕಷ್ಟು ಸಕ್ಕರೆ ಅಥವಾ ಕೃತಕ ಮಾಧುರ್ಯಕಾರಕಗಳನ್ನು ಸೇರಿಸಿ,ನೀರಿನಲ್ಲಿ ಬೆರೆಸಿದ ಬಳಿಕ ಬಾಟಲಿಗಳಲ್ಲಿ ತುಂಬಿ,ಒಂದಿಷ್ಟು ಇಂಗಾಲಾಮ್ಲವನ್ನು ಸೇರಿಸಿ ಲಘುಪಾನೀಯವನ್ನು ತಯಾರಿಸುತ್ತಾರೆ.ಆದರೆ ಇವುಗಳ ಅತಿಸೇವನೆಯ ದುಷ್ಪರಿಣಾಮಗಳ ಬಗ್ಗೆ ಇಂತಹ ಉತ್ಪನ್ನಗಳ ತಯಾರಕರು ಯಾವುದೇ ಮಾಹಿತಿಯನ್ನು ಅಥವಾ ಎಚ್ಚರಿಕೆಯನ್ನು ಪ್ರಕಟಿಸುವುದಿಲ್ಲ.ಜನಸಾಮಾನ್ಯರಂತೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ.
ವಿಶೇಷವೆಂದರೆ ಖ್ಯಾತ ಚಲನಚಿತ್ರ ತಾರೆಯರು ಮತ್ತು ಕ್ರಿಕೆಟ್ ಆಟಗಾರರು ಕೈತುಂಬಾ ಸಂಭಾವನೆಯನ್ನು ಪಡೆದು,ತಾವು ಅನುಮೋದಿಸುವ ಲಘುಪಾನೀಯವನ್ನು ಇದರ ಜಾಹೀರಾತಿನ ಚಿತ್ರೀಕರಣದ ಸಂದರ್ಭದಲ್ಲಿ ಮಾತ್ರ ಗುಟುಕರಿಸುತ್ತಾರೆ!.ಆದರೆ ಇಂತಹ ಜಾಹೀರಾತುಗಳಿಂದ ಪ್ರಭಾವಿತರಾದ ಜನರು ಪ್ರತಿನಿತ್ಯ ಇದನ್ನು ಸೇವಿಸುತ್ತಾರೆ.
ನೀವು ಮೆಚ್ಚಿ ಸವಿಯುವ ಲಘುಪಾನೀಯದಲ್ಲಿ ಏನಿದೆ ಎನ್ನುವುದು ಪ್ರಾಯಶಃ ನಿಮಗೂ ತಿಳಿದಿರಲಾರದು.ಉದಾಹರಣೆಗೆ ಮುಚ್ಚಳ ತೆಗೆದೊಡನೆ ನೊರೆಯೊಂದಿಗೆ ಹೊರಬರುವ ಕೋಲಾಗಳನ್ನು ಸಕ್ಕರೆ ,ಕೆಫೀನ್ ಮತ್ತು ಫಾಸ್ಫಾರಿಕ್ ಆಮ್ಲಗಳೊಂದಿಗೆ ಒಂದಿಷ್ಟು ವರ್ಣಕಾರಕ ಮತ್ತು ರುಚಿವರ್ಧಕ ದ್ರವ್ಯಗಳ ಸಮ್ಮಿಶ್ರಣಗಳಿಂದ ತಯಾರಿಸಲಾಗುತ್ತದೆ.ಇತ್ತೀಚಿಗೆ ಜನಪ್ರಿಯವೆನಿಸಿರುವ ಡಯಟ್ ಕೋಲಾಗಳಲ್ಲಿ ಸಕ್ಕರೆಯ ಬದಲಿಗೆ ಕೃತಕ ಮಾಧುರ್ಯಕಾರಕವನ್ನು ಬಳಸುತ್ತಿದ್ದು,ಇವೆಲ್ಲವೂ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂದು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ.
ಒಂದು ಬಾಟಲಿ ಕೋಲಾದಲ್ಲಿ ಸಾಕಷ್ಟು ಪ್ರಮಾಣದ ಫಾಸ್ಫಾರಿಕ್ ಆಮ್ಲವಿದ್ದು,ನೀವು ಬಳಸುವ ಕಬ್ಬಿಣದ ಮೊಳೆ-ಬೀಗದಕೈಗಳಿಗೆ ಹಿಡಿದ ತುಕ್ಕನ್ನು ಕರಗಿಸಲು ಉಪಯುಕ್ತವೆನಿಸುತ್ತದೆ.ಜೊತೆಗೆ ನಿಮ್ಮ ಶೌಚಾಲಯದಲ್ಲಿನ ಅಪಾಯಕಾರಿ ರೋಗಾಣುಗಳನ್ನು ನಾಶಪಡಿಸುವಷ್ಟು ಶಕ್ತಿಶಾಲಿಯಾಗಿದೆ.ಈ ಆಮ್ಲದಿಂದಾಗಿ ಕೋಲಾಗಳ ಪಿ.ಎಚ್ ನ ಪ್ರಮಾಣವು ೨.೬ ಅಂದರೆ ಸರಿಸುಮಾರು ವಿನೆಗರ್ ನಲ್ಲಿ ಇರುವಷ್ಟೇ ಆಗಿರುತ್ತದೆ.
ಒಂದು ಬಾಟಲಿ ಕೋಲಾ ಅಥವಾ ಇತರ ಲಘುಪಾನೀಯಗಳಲ್ಲಿ ಸುಮಾರು ೧೫೦ರಿಂದ ೨೦೦ ಕ್ಯಾಲರಿಗಳಿದ್ದು,ಈ ನಿಷ್ಪ್ರಯೋಜಕ ಕ್ಯಾಲರಿಗಳನ್ನು ಹೊರತುಪಡಿಸಿ ನಿಮ್ಮ ಶರೀರಕ್ಕೆ ಯಾವುದೇ ಪೋಷಕಾಂಶಗಳು ದೊರೆಯುವುದಿಲ್ಲ.ಅಂತೆಯೇ ಈ ಕ್ಯಾಲರಿಗಳ ಬಹುದೊಡ್ಡ ಪಾಲು ಇವುಗಳಲ್ಲಿನ ಸಕ್ಕರೆಯಿಂದಾಗಿ ಲಭ್ಯವಾಗುವುದರಿಂದ,ಇವುಗಳ ಅತಿಸೇವನೆಯಿಂದ ವಯಸ್ಕರಲ್ಲಿ ಮಧುಮೇಹ,ಅತಿಬೊಜ್ಜು,ಅಧಿಕತೂಕ,ಅಧಿಕ ರಕ್ತದೊತ್ತಡ,ಹೃದಯ-ರಕ್ತನಾಳಗಳ ಕಾಯಿಲೆಗಳು ಮತ್ತು ಮಕ್ಕಳಲ್ಲಿ ಅಧಿಕ ತೂಕ ಹಾಗೂ ಅತಿಬೊಜ್ಜಿನಂತಹ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು.
ನಮ್ಮ ಜಠರದಲ್ಲಿರುವ ಕ್ಷಾರ-ಆಮ್ಲಗಳ ಸಮತೋಲನವು ಬಹಳ ಸೂಕ್ಷ್ಮ ಪ್ರವೃತ್ತಿಯದಾಗಿದ್ದು,ಅತಿಯಾದ ಲಘುಪಾನೀಯಗಳ ಸೇವನೆಯಿಂದ ಇದರಲ್ಲಿ ವ್ಯತ್ಯಯವಾಗುವುದು.ಅನುಭವೀ ವೈದ್ಯರೇ ಹೇಳುವಂತೆ ನಮ್ಮ ಜಠರದಲ್ಲಿ ಹೆಚ್ಚುವ ಆಮ್ಲದ ಪ್ರಮಾಣಕ್ಕೆ ಅನುಗುಣವಾಗಿ,ಉದರ ಸಂಬಂಧಿತ ವ್ಯಾಧಿಗಳ ಸಂಭಾವ್ಯತೆಯೂ ಹೆಚ್ಚಾಗುವುದು.ಜಠರದ ಲೋಳ್ಪರೆಯ ಉರಿಯೂತ-ಕೊರೆತಗಳಿಗೆ ಕಾರಣವೆನಿಸಬಲ್ಲ ಆಮ್ಲದಿಂದಾಗಿ ಉದರಶೂಲೆಯೂ ಉದ್ಭವಿಸಬಹುದು.ಈ ವಿಶಿಷ್ಟ ಸಮಸ್ಯೆಗೆ ಲಘುಪಾನೀಯಗಳಲ್ಲಿರುವ ಕೆಫೀನ್ ಹಾಗೂ ಅಸಿಟಿಕ್,ಫ್ಯುಮರಿಕ್,ಲುಕೊನಿಕ್ ಅಥವಾ ಪ್ಹಾಸ್ಫಾರಿಕ್ ಆಮ್ಲಗಳೇ ಕಾರಣವೆನಿಸುತ್ತವೆ.ಇದಲ್ಲದೆ ಕಾರ್ಬನ್ ಡೈ ಆಕ್ಸೈಡ್ ಬಳಸಿ ಸಿದ್ಧಪಡಿಸುವ ಎಲ್ಲಾ ಲಘುಪಾನೀಯಗಳು ಆಮ್ಲೀಯ ಗುಣವನ್ನು ಹೊಂದಿರುತ್ತವೆ.ಇಂತಹ ಒಂದು ಲಘುಪಾನೀಯವನ್ನು ಸೇವಿಸಿದಾಗ ನಿಮ್ಮ ಉದರವನ್ನು ಆಮ್ಲವನ್ನು ನಿಷ್ಕ್ರಿಯಗೊಳಿಸಲು,ಹತ್ತು ಲೋಟ ಕ್ಷಾರೀಯ ಗುಣವುಳ್ಳ ನೀರನ್ನು ಕುಡಿಯಬೇಕಾಗುವುದು!.
ಬಹುತೇಕ ಲಘುಪಾನೀಯಗಳಲ್ಲಿರುವ ಫಾಸ್ಫಾರಿಕ್ ಆಮ್ಲವು ಜಠರದಲ್ಲಿರುವ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ಹೋರಾಡುವುದರಿಂದಾಗಿ ಅಜೀರ್ಣ,ಹೊಟ್ಟೆಯುಬ್ಬರ,ಎದೆಯುರಿ,ಮತ್ತು ಹುಳಿತೇಗಿನಂತಹ ತೊಂದರೆಗಳು ಉದ್ಭವಿಸುವ ಸಾಧ್ಯತೆಗಳಿವೆ.ನಿಮಗೆ ಅತಿಯಾದ ಹಸಿವೆ ಬಾಧಿಸಿದಾಗ ಕೇವಲ ಒಂದು ಬಾಟಲಿ ಲಘುಪಾನೀಯವನ್ನು ಕುಡಿದಲ್ಲಿ ಹೊಟ್ಟೆತುಂಬಿದಂತಹ ಭಾವನೆ ಮೂಡುವುದು.ಪ್ರಾಯಶಃ ಇದೇ ಕಾರಣದಿಂದಾಗಿ ಇವುಗಳನ್ನು ಅತಿಯಾಗಿ ಸೇವಿಸುವ ವ್ಯಕ್ತಿಗಳು,ಸೂಕ್ತ ಸಮಯದಲ್ಲಿ ಸೂಕ್ತಪ್ರಮಾಣದ ಆಹಾರವನ್ನು ಸೇವಿಸುವುದಿಲ್ಲ.ತತ್ಪರಿಣಾಮವಾಗಿ ಶರೀರಕ್ಕೆ ಅವಶ್ಯಕ ಪ್ರಮಾಣದ ಪೋಷಕಾಂಶಗಳೇ ದೊರೆಯದೇ ಸೊರಗುವ ಶರೀರವು,ತನ್ನ ರೋಗನಿರೋಧಕ ಶಕ್ತಿಯನ್ನೇ ಕಳೆದುಕೊಳ್ಳಬಹುದು.ಹಾಗೂ ಇದರಿಂದಾಗಿ ಅಯಾಚಿತ ಆರೋಗ್ಯದ ಸಮಸ್ಯೆಗಳು ಉದ್ಭವಿಸಬಹುದು.
ಕೋಲಾಗಳಲ್ಲಿ ಇರುವ ಕೆಫೀನ್ ನಮ್ಮ ಶರೀರದಲ್ಲಿರುವ ಕ್ಯಾಲ್ಸಿಯಂ ನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.ಇದರೊಂದಿಗೆ ಕೋಲಾಗಳಲ್ಲಿ ಇರುವ ಫಾಸ್ಫಾರಿಕ್ ಆಮ್ಲ ಮತ್ತು ಕಾರ್ಬನ್ ಡೈ ಆಕ್ಸೈಡ್ ಮೂಳೆಗಳಲ್ಲಿನ ಖನಿಜಾಂಶಗಳನ್ನು ನಿವಾರಿಸುವುದರಿಂದಾಗಿ ದುರ್ಬಲವಾಗುವ ಮೂಳೆಗಳು,ಸುಲಭದಲ್ಲೇ ಮುರಿಯುವ ಸಾಧ್ಯತೆಗಳಿವೆ.
ಇದಲ್ಲದೇ ಈ ಪಾನೀಯಗಳಲ್ಲಿ ಇರುವ ಕೆಫೀನ್ ಜಠರದ ಹುಣ್ಣುಗಳಿಗೆ ಕಾರಣವೆನಿಸಬಲ್ಲದು.ಜೊತೆಗೆ ಹೃದಯ ಮತ್ತು ಕೇಂದ್ರ ನರಮಂಡಲಗಳನ್ನು ಇದು ಉತ್ತೇಜಿಸುವುದರಿಂದ ತೀವ್ರ ಎದೆಬಡಿತ,ಅತಿಚಟುವಟಿಕೆ ಮತ್ತು ನಿದ್ರಾಹೀನತೆಗಳಿಗೆ ಕಾರಣವೆನಿಸಬಲ್ಲದು.ಕೆಫೀನ್ ನ ಅತಿಸೇವನೆಯು ರಕ್ತದ ಒತ್ತಡವನ್ನು ಹೆಚ್ಚಿಸುವುದರಿಂದ ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳು ಮತ್ತು ಗರ್ಭಿಣಿಯರು ಇವುಗಳನ್ನು ಸೇವಿಸದೇ ಇರುವುದು ಹಿತಕರ.
ಪುಟ್ಟ ಮಕ್ಕಳಲ್ಲಿ ಲಘುಪಾನೀಯಗಳ ಅತಿಸೇವನೆಯು "ದಂತಕುಳಿ "ಗಳಿಗೆ ಕಾರಣವೆನಿಸಲು ಇವುಗಳಲ್ಲಿರುವ ಸಕ್ಕರೆಯೇ ಕಾರಣ.ಅಂತೆಯೇ  ಇವುಗಳಲ್ಲಿನ ಆಮ್ಲಗಳು ಖನಿಜಾಂಶವನ್ನು ತೊಡೆದುಹಾಕುವುದರಿಂದ ದಂತಕ್ಷಯಕ್ಕೂ ಮೂಲವೆನಿಸುತ್ತವೆ.ವಿಶೇಷವಾಗಿ ಬೆಳೆಯುವ ವಯಸ್ಸಿನ ಮಕ್ಕಳು ಲಘುಪಾನೀಯಗಳ ಅತಿಸೇವನೆಯ ವ್ಯಸನಕ್ಕೆ ಒಳಗಾಗಿದ್ದಲ್ಲಿ,ಅವಶ್ಯಕ ಪ್ರಮಾಣದ ಸಮತೋಲಿತ ಆಹಾರವನ್ನೇ ಸೇವಿಸದೇ ಇರುವುದರಿಂದ ಇವರ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವ ಸಾಧ್ಯತೆಗಳಿವೆ.ಇದರೊಂದಿಗೆ ನಿಷ್ಪ್ರಯೋಜಕ ಆಹಾರಗಳನ್ನು ಅತಿಯಾಗಿ ಸೇವಿಸುವ ಮಕ್ಕಳು ಅಧಿಕತೂಕ ಮತ್ತು ಅತಿಬೊಜ್ಜಿನಂತಹ ಸಮಸ್ಯೆಗಳಿಗೆ ಈಡಾಗುತ್ತಾರೆ.ಇವೆಲ್ಲವುಗಳೊಂದಿಗೆ ನಿಷ್ಕ್ರಿಯ ಜೀವನಶೈಲಿಯನ್ನು ಅನುಸರಿಸುವ ಮಕ್ಕಳು ಹದಿಹರೆಯದಲ್ಲೇ ಅನುವಂಶಿಕ ಮತ್ತು ಇತರ ಕಾಯಿಲೆಗಳಿಗೆ ಸುಲಭದಲ್ಲೇ ಈಡಾಗುತ್ತಾರೆ!.
ಅಂತಿಮವಾಗಿ ಲಘುಪಾನೀಯಗಳಲ್ಲಿ ಅಲ್ಪಪ್ರಮಾಣದಲ್ಲಿ ನಿಶ್ಚಿತವಾಗಿಯೂ ಇದೆಯೆಂದು ಇವುಗಳ ತಯಾರಕರೇ ಒಪ್ಪಿಕೊಂಡಿರುವ ಕೀಟನಾಶಕಗಳು,ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿದ್ದಲ್ಲಿ ಸಂಭವಿಸಬಲ್ಲ ವಿಷಕಾರಕ ಪರಿಣಾಮಗಳು ಗಂಭೀರ ಸಮಸ್ಯೆಗಳಿಗೆ ಕಾರಣವೆನಿಸಬಲ್ಲವು.ಇವೆಲ್ಲಾ ಕಾರಣಗಳಿಂದಾಗಿ ಲಘುಪಾನೀಯಗಳ ಅತಿಸೇವನೆಯಿಂದ ಅನಾರೋಗ್ಯವನ್ನು ಆಹ್ವಾನಿಸುವುದಕ್ಕಿಂತಲೂ,ಇವುಗಳ ಸೇವನೆಯನ್ನೇ  ವರ್ಜಿಸುವುದು ಹಿತಕರವೆನಿಸುವುದು.
ಡಾ.ಸಿ.ನಿತ್ಯಾನಂದ ಪೈ
ಬಳಕೆದಾರರ ಹಿತರಕ್ಷಣಾ ವೇದಿಕೆ
ಬೊಳುವಾರು,ಪುತ್ತೂರು.ದ.ಕ



                ಹರ ಹರಾ, ಇದೇನಿದು ಇಲಿಜ್ವರ ?
ಕಣ್ಣುಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆಯೊಂದಿಗೆ ಬಿಸಿಲು ಮಳೆಗಳ ಮೇಳದಿಂದಾಗಿ, ಜನಸಾಮಾನ್ಯರನ್ನು ಕಾಡುತ್ತಿರುವ ಕಾಯಿಲೆಗಳ ಬಾಧೆ ತುಸು ಅಧಿಕವಾಗಿದೆ. ಸಾಮಾನ್ಯ ಶೀತ, ಫ್ಲೂ ಜ್ವರ, ಡೆಂಗೆ, ಟೈಫಾಯಿಡ್, ವಾಂತಿ-ಭೇದಿ ಇತ್ಯಾದಿ ವ್ಯಾಧಿಗಳೊಂದಿಗೆ, ಇಲಿ ಜ್ವರದ ಹಾವಳಿಯೂ ನಮ್ಮ ಜಿಲ್ಲೆಯಲ್ಲಿ  ಸಾಂಕ್ರಾಮಿಕವಾಗಿ ಹಬ್ಬಿದೆ.ಇವುಗಳಲ್ಲಿ  ಹಿಂದೂ ಬಾಂಧವರ ಆರಾಧ್ಯ ದೈವ  ವಿಘ್ನೇಶನ ವಾಹನವಾಗಿರುವ ಮೂಷಿಕದ ನಾಮಧೇಯದ ಕಾಯಿಲೆಯು ಈಗಾಗಲೇ ಕೆಲ ಅಮಾಯಕರನ್ನು ಬಲಿಪಡೆದಿದೆ. ಮಾರಕವೆನಿಸಬಲ್ಲ ಈ ವ್ಯಾಧಿಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
"ಇಲಿ ಓಡಿತು ಎನ್ನುವುದನ್ನು ಕೇಳಿದವನು, ಹುಲಿ ಓಡಿತು ಎಂದು ಹೇಳಿದಂತೆ' ಎಂಬರ್ಥದ ತುಳುವರ ಆಡುಮಾತು ಇಲಿ ಜ್ವರದ ಮಟ್ಟಿಗೆ ಅನ್ವರ್ಥವೆನಿಸುತ್ತದೆ. ಏಕೆಂದರೆ ಈ ಸೋಂಕಿನಿಂದ ಪೀಡಿತವಾದ ಇಲಿಯ ಮೂತ್ರದ ಮೂಲಕ ಹರಡುವ ಇಲಿ ಜ್ವರವು, ಅನೇಕ ರೋಗಿಗಳ ಪಾಲಿಗೆ ಪ್ರಾಣಾಂತಿಕವಾಗಿ ಪರಿಣಮಿಸುತ್ತದೆ. ಅಪರೂಪದಲ್ಲಿ ತಲೆದೋರುವ ಈ ಕಾಯಿಲೆಯು "ಸ್ಪೈರೋಕೆಟ್" ಎನ್ನುವ ಬ್ಯಾಕ್ಟೀರಿಯಾಗಳಿಂದ ಉದ್ಭವಿಸುತ್ತದೆ.
ಉದ್ಭವಿಸುವುದೆಂತು? 
ಲೆಪ್ಟೋಸ್ಪೈರೋಸಿಸ್ ಎಂದು ಕರೆಯಲ್ಪಡುವ ಇಲಿಜ್ವರವು ಈ ಸೋಂಕು ಪೀಡಿತ ಇಲಿಗಳ ಮೂತ್ರ ಹಾಗೂ ನಾಸಿಕ, ನೇತ್ರ ಮತ್ತು ಇತರ ಕೆಲ ಅಂಗಾಂಗಗಳ ಸ್ರಾವಗಳ ಮೂಲಕ ಮತ್ತು ಇಲಿಗಳು ಕಚ್ಚುವ ಮೂಲಕವೂ, ಸಾಕು-ಕಾಡು ಪ್ರಾಣಿಗಳೊಂದಿಗೆ ಮನುಷ್ಯರಿಗೂ ಹರಡಬಲ್ಲದು. ಡಾ.ವೇಲ್ ಎಂಬಾತನು ಮೊತ್ತ ಮೊದಲ ಬಾರಿಗೆ ಈ ವ್ಯಾಧಿಯ ಲಕ್ಷಣಗಳನ್ನು ನಿಖರವಾಗಿ ವಿವರಿಸಿದ್ದುದರಿಂದ ಇದನ್ನು "ವೇಲ್ಸ್ ಸಿಂಡ್ರೋಮ್' ಎಂದೂ ಕರೆಯುತಾರೆ.
ಈ ಸೋಂಕು ಪೀಡಿತ ಇಲಿಗಳು ವಿಸರ್ಜಿಸಿದ ಒಂದು ಮಿ.ಲೀ.  ಮೂತ್ರದಲ್ಲಿ ಸುಮಾರು ೧೦ ಕೋಟಿಗೂ ಅಧಿಕ ರೋಗಾಣುಗಳಿದ್ದು,  ಇವುಗಳಿಂದ  ಕಲುಷಿತಗೊಂಡ  ನೀರು ಮತ್ತು ಮಣ್ಣಿನ ಮೂಲಕವೂ ಈ ಸೋಂಕು ಹರಡುತ್ತದೆ. ಉದಾಹರಣೆಗೆ ನಿಮ್ಮ ಮನೆಯ ಅಂಗಳದಲ್ಲಿನ ಹುಲ್ಲಿನ ಮೇಲೆ ಸೋಂಕು ಪೀಡಿತ ಇಲಿಯೊಂದು ವಿಸರ್ಜಿಸಿದ ಮೂತ್ರವನ್ನು ನಿಮ್ಮ ಸಾಕು ನಾಯಿಯು ನೆಕ್ಕಿದಲ್ಲಿ, ಅದರಲ್ಲಿದ್ದ ಬ್ಯಾಕ್ಟೀರಿಯಾಗಳು ನಾಯಿಯ ಶರೀರವನ್ನು ಪ್ರವೇಶಿಸಿ ರೋಗವನ್ನು ಉಂಟುಮಾಡುತ್ತವೆ. ಅದೇರೀತಿಯಲ್ಲಿ ನಿಮ್ಮ ಕೈ-ಕಾಲುಗಳಲ್ಲಿ ಇರಬಹುದಾದ ಗಾಯಗಳ ಮೂಲಕ ಅಥವಾ ಸಂದರ್ಭೋಚಿತವಾಗಿ ನಿಮ್ಮ ಕಣ್ಣು, ಮೂಗು ಹಾಗೂ ಬಾಯಿಗಳ ಮೂಲಕ ನಿಮ್ಮ ಶರೀರದಲ್ಲಿ ಪ್ರವೇಶವನ್ನು ಗಳಿಸಿದ ಬ್ಯಾಕ್ಟೀರಿಯಾಗಳು ಇಲಿಜ್ವರಕ್ಕೆ ಕಾರಣವೆನಿಸುತ್ತವೆ. ಇಲಿಜ್ವರವು ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡಬಲ್ಲದಾದರೂ, ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.
ಮನುಷ್ಯರಲ್ಲಿ ಈ ವ್ಯಾಧಿ ಉದ್ಭವಿಸಲು ಲೆಪ್ಟೋಸ್ಪೈರಾ ಇಕ್ಟೆರೋ ಹೆಮೊರೆಜಿಯೇ ಅಥವಾ ಲೆ.ಕೆನಿಕೊಲ ಎನ್ನುವ ಎರಡು ವಿಧದ ಬ್ಯಾಕ್ಟೀರಿಯಾಗಳೇ  ಕಾರಣವೆನಿಸುತ್ತವೆ.
ರೋಗ ಲಕ್ಷಣಗಳು
ಈ ರೋಗಾಣುಗಳು ಮನುಷ್ಯನ ಶರೀರವನ್ನು ಪ್ರವೇಶಿಸಿದ ನಂತರ ಸುಮಾರು ನಾಲ್ಕರಿಂದ ಇಪ್ಪತ್ತೊಂದು ದಿನಗಳಲ್ಲಿ ಇಲಿಜ್ವರದ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಮೊದಲ ಹಂತದಲ್ಲಿ ಫ್ಲೂ ಜ್ವರದ ಲಕ್ಷಣಗಳನ್ನೇ ಹೋಲುವ ವಿಪರೀತ ತಲೆನೋವು, ಶರೀರದ ಮಾಂಸಖಂಡಗಳು, ಆಸ್ಥಿಸಂಧಿಗಳು ಮತ್ತು ಕಣ್ಣುಗಳಲ್ಲಿ ನೋವು, ಕಣ್ಣುಗಳು ಕೆಂಪಾಗುವುದು, ಒಂದಿಷ್ಟು ಚಳಿ ಮತ್ತು ಜ್ವರ ಕಂಡುಬರುವುದು. ಮುಂದಿನ ಐದರಿಂದ ಹತ್ತು ದಿನಗಳಲ್ಲಿ ಇವೆಲ್ಲಾ ಲಕ್ಷಣಗಳು ನಿಧಾನವಾಗಿ ಮಾಯವಾಗುತ್ತವೆ. ಈ ಹಂತದಲ್ಲಿ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆಯದವರು, ಸ್ವಯಂ ಚಿಕಿತ್ಸೆ ಪ್ರಯೋಗಿಸಿದವರು ಮತ್ತು ಇಂತಹ ಸಣ್ಣ ಪುಟ್ಟ ಜ್ವರಗಳಿಗೆ ಔಷದ ಸೇವನೆ ತರವಲ್ಲ ಎಂದು ನಿರ್ಲಕ್ಷಿಸುವ ವ್ಯಕ್ತಿಗಳಿಗೆ ಮುಂದಿನ ಹಂತದಲ್ಲಿ ಗಂಭೀರ ಸಮಸ್ಯೆಗಳು ಬಾಧಿಸುವ ಸಾಧ್ಯತೆಗಳಿವೆ.
ದ್ವಿತೀಯ ಹಂತದಲ್ಲಿ ಮತ್ತೆ ಮರುಕಳಿಸುವ ಮೊದಲ ಹಂತದ ಲಕ್ಷಣಗಳೊಂದಿಗೆ, ಕೆಲ ರೋಗಿಗಳಲ್ಲಿ ಕಣ್ಣು, ಮೆದುಳು ಮತ್ತು ಬೆನ್ನುಹುರಿಗಳಿಗೆ ಸಂಬಂಧಿಸಿದ ನರಗಳ ಉರಿಯೂತ ಹಾಗೂ ಕುತ್ತಿಗೆಯ ಸೆಡೆತಗಳು ಉದ್ಭವಿಸುತ್ತವೆ. ಜೊತೆಗೆ ಈ ರೋಗಾಣುಗಳು ಮೆದುಳಿನ ಮೇಲೆ ಪರೋಕ್ಷವಾಗಿ ಬೀರುವ ಪರಿಣಾಮದಿಂದಾಗಿ ಮೆದುಳುಜ್ವರವನ್ನು ಹೋಲುವ ಲಕ್ಷಣಗಳು ಅನೇಕ ರೋಗಿಗಳಲ್ಲಿ ಕಂಡುಬರುತ್ತವೆ. ಅಪರೂಪದಲ್ಲಿ ಕೆಲರೋಗಿಗಳಲ್ಲಿ ಶ್ವಾಸಕೋಶಗಳು, ಯಕೃತ್, ಪ್ಲೀಹ, ಮೂತ್ರಾಂಗಗಳು ಮತ್ತು ಹೃದಯದ ವೈಫಲ್ಯಗಳಂತಹ ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ, ಇಲಿಜ್ವರವು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಈ ರೀತಿಯ ಯಾವುದೇ ಸಮಸ್ಯೆಗಳು ತಲೆದೋರದಿದ್ದಲ್ಲಿ, ನಾಲ್ಕು ವಾರಗಳ ಅವಧಿಯಲ್ಲಿ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರು.
ಇಲಿಜ್ವರವನ್ನು ನಿಖರವಾಗಿ ಪತ್ತೆ ಹಚ್ಚಬಲ್ಲ ಪರೀಕ್ಷೆಗಳು ನಮ್ಮ ದೇಶದಲ್ಲೂ ಲಭ್ಯವಿದ್ದು, ಕೇವಲ ೨ ನಿಮಿಷಗಳಲ್ಲಿ ಇದನ್ನು ಪತ್ತೆ ಹಚ್ಚುವ ವಿಧಾನವನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಅದೇ ರೀತಿಯಲ್ಲಿ ವ್ಯಾಧಿಯ ಮೊದಲ ಹಂತದಲ್ಲೇ ನಿಯಂತ್ರಿಸಬಲ್ಲ ಜೀವನಿರೋಧಕ ಔಷದಗಳು ಲಭ್ಯವಿದೆ.ಆದುದರಿಂದ ಜ್ವರ ಪೀಡಿತ ವ್ಯಕ್ತಿಗಳು ತಮ್ಮ ಕಾಯಿಲೆ ಯಾವುದೆಂದು ಆರಿಯದೇ, ನಿರ್ಲಕ್ಷಿಸುವುದರ ಬದಲಾಗಿ ತಮ್ಮ ನಂಬಿಗಸ್ಥ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಂಡಲ್ಲಿ ಪ್ರಾಣಾಪಾಯದ ಸಂಭಾವ್ಯತೆಯನ್ನು ನಿಶ್ಚಿತವಾಗಿಯೂ ತಡೆಗಟ್ಟಬಹುದಾಗಿದೆ.  
ಇಲಿಜ್ವರ ಪೀಡಿತ ವ್ಯಕ್ತಿಗಳಲ್ಲಿ ಶೇ.೧೦ ರಿಂದ ೪೦ ರಷ್ಟು ರೋಗಿಗಳು ಗಂಭೀರ ಸಮಸ್ಯೆಗಳಿಂದ ಮೃತಪಡುತ್ತಾರೆ. ಆದರೆ ರೋಗಿಯ ವಯಸ್ಸು, ವ್ಯಾಧಿಯ ತೀವ್ರತೆ ಹಾಗೂ ಇದರಿಂದ ಆತನ ಅಂಗಾಂಗಗಳಿಗೆ ಸಂಭವಿಸಿರುವ ಹಾನಿಯ ಪ್ರಮಾಣ, ಆತನಲ್ಲಿ ಅದಾಗಲೇ ಇದ್ದ ಅನ್ಯ ಗಂಭೀರ ಆರೋಗ್ಯದ ಸಮಸ್ಯೆಗಳು(ಉದಾ-ಅನಿಯಂತ್ರಿತ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಗಂಭೀರ ಹೃದ್ರೋಗಗಳು) ಮತ್ತು ಆತನ ಸಾಮಾನ್ಯ ಆರೋಗ್ಯದ ಮಟ್ಟಗಳನ್ನು ಹೊಂದಿಕೊಂಡು, ಇಲಿಜ್ವರದ ಮಾರಕತೆಯ ಪ್ರಮಾಣವೂ ಹೆಚ್ಚು- ಕಡಿಮೆಯಾಗಬಲ್ಲದು.
ಇಲಿಜ್ವರವನ್ನು ತಡೆಗಟ್ಟಬಲ್ಲ ಲಸಿಕೆಯೊಂದು ಕೆಲ ದೇಶಗಳಲ್ಲಿ ಈಗಾಗಲೇ ಲಭ್ಯವಿದ್ದರೂ, ನಮ್ಮ ದೇಶದಲ್ಲಿ ಇದನ್ನು ತರಿಸಿ ಬಳಸುವವರ ಸಂಖ್ಯೆ ತೀರಾ ಕಡಿಮೆಯಿದೆ. ಆದರೆ ಈ ವ್ಯಾಧಿ ಸಾಂಕ್ರಾಮಿಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಕೆಲ ವಿಧದ ಜೀವನಿರೋಧಕ ಔಷದವನ್ನು ವಾರದಲ್ಲಿ ಒಂದು ಬಾರಿ ಸೇವಿಸುವ ಮೂಲಕ ತಡೆಗಟ್ಟುವ ವಿಧಾನ ನಮ್ಮ ದೇಶದಲ್ಲಿ ಬಳಸಲ್ಪಡುತ್ತಿದೆ.
ಡಾ. ಸಿ. ನಿತ್ಯಾನಂದ ಪೈ, ಪುತ್ತೂರು