Friday, May 24, 2013


ಪೂಜ್ಯ ದೇವಳದ ಮುಂದಿನ ಗದ್ದೆಯಲ್ಲಿ ಎಷ್ಟೊಂದು ತ್ಯಾಜ್ಯ!
ಪುತ್ತೂರಿನ ಮತ್ತು ಸುತ್ತಮುತ್ತಲ ಹತ್ತಾರು ಊರುಗಳ ನಿವಾಸಿಗಳ ಆರಾಧ್ಯ ದೇವತೆಯಾಗಿರುವ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯು ವರ್ಷಂಪ್ರತಿ ವಿಜೃಂಭಣೆಯಿಂದ ಜರಗುತ್ತದೆ. ಆದರೆ ಈ ವರ್ಷ ಸಂಪೂರ್ಣವಾಗಿ ಪುನರ್ನಿರ್ಮಿತ ದೇವಳದ ಬ್ರಹ್ಮಕಲಶದ ಸಡಗರ-ಸಂಭ್ರಮಗಳೊಂದಿಗೆ ವರ್ಷಾವಧಿ ಜಾತ್ರೆಯೂ ಅದ್ಧೂರಿಯಾಗಿ ನಡೆಯುತ್ತಿರುವುದು ವಿಶೇಷ.
ಇದೇ ತಿಂಗಳಿನ ಮೊದಲನೆಯ ವಾರದಲ್ಲಿ ಆರಂಭಗೊಂಡಿದ್ದ ಬ್ರಹ್ಮಕಲಶದ ಕಾರ್ಯಕ್ರಮವು ಮುಗಿದಂತೆಯೇ ಜಾತ್ರೆ ಆರಂಭಗೊಂಡಿತ್ತು. ಬ್ರಹ್ಮಕಲಶದ ಸಂದರ್ಭದಲ್ಲಿ ನಡೆಯುತ್ತಿದ್ದ ಅನೇಕ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ,ಪ್ರತಿನಿತ್ಯ ಬೆಳಗಿನ ಜಾವದಿಂದ ನಟ್ಟಿರುಳಿನ ತನಕ ನಡೆಯುತ್ತಿದ್ದ ಅನ್ನ ದಾಸೋಹದಲ್ಲಿ ಸಹಸ್ರಾರು ಭಕ್ತಾಭಿಮಾನಿಗಳು ಶ್ರದ್ಧಾ ಭಕ್ತಿಪೂರ್ವಕವಾಗಿ ಭಾಗವಹಿಸಿದ್ದರು. ಅತ್ಯಂತ ಶಿಸ್ತುಬದ್ಧವಾಗಿ ಜರಗಿದ್ದ ಈ ಕಾರ್ಯಕ್ರಮದಲ್ಲಿ ಸಹಸ್ರಾರು ಕಾರ್ಯಕರ್ತರು  ಮತ್ತು ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು.  ಆರಂಭದಿಂದ ಅಂತ್ಯದ ತನಕ ಬ್ರಹ್ಮಕಲಶದ ಕಾರ್ಯಕ್ರಮದ ಸಂದರ್ಭದಲ್ಲಿ ಶ್ರೀದೇವಳದ ಆವರಣ ಮತ್ತು ಮುಂಭಾಗದಲ್ಲಿನ ಗದ್ದೆಗಳಲ್ಲಿ ಸ್ವಚ್ಚತೆಯನ್ನು ಜತನದಿಂದ ಕಾಪಾಡಲಾಗಿತ್ತು. ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಲು ಅಲ್ಲಲ್ಲಿ ಪ್ಲಾಸ್ಟಿಕ್ ಡ್ರಮ್ ಗಳನ್ನೂ ಇರಿಸಿದ್ದು,ಅಪ್ಪಿತಪ್ಪಿ ಎಲ್ಲಾದರೂ ಎಸೆದ ತ್ಯಾಜ್ಯಗಳನ್ನು ತಕ್ಷಣ ಹೆಕ್ಕಿ ತೆಗೆಯುತ್ತಿದ್ದ ಸ್ವಯಂಸೇವಕರ ದಂಡು,ಸ್ವಚ್ಚತೆಯನ್ನು ಕಾಪಾಡಲು ಸದಾ ಶ್ರಮಿಸುತ್ತಿತ್ತು.
ಆದರೆ ಬ್ರಹ್ಮಕಲಶದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದ ಬಳಿಕ ವರ್ಷಾವಧಿ ಜಾತ್ರೆಯ ಕಾರ್ಯಕ್ರಮಗಳು ಆರಂಭವಾದಂತೆಯೇ,ದೇವಳದ ಮುಂಭಾಗದ ಗದ್ದೆಯಲ್ಲಿ ತಾತ್ಕಾಲಿಕ ಮಳಿಗೆಗಳು ತಲೆಯೆತ್ತಿದ್ದವು. ಇವುಗಳಲ್ಲಿ ಭಕ್ತಾಭಿಮಾನಿಗಳ ಹಸಿವು-ನೀರಡಿಕೆಗಳನ್ನು ನೀಗಿಸುವ ಖಾದ್ಯ-ಪೇಯಗಳನ್ನು ಮಾರಾಟಮಾಡುವ ಮಳಿಗೆಗಳ ಸಂಖ್ಯೆಯು ಸ್ವಾಭಾವಿಕವಾಗಿಯೇ ಹೆಚ್ಚಾಗಿತ್ತು. ಇಂತಹ ಮಳಿಗೆಗಳಿಂದಾಗಿ ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳ ಉತ್ಪಾದನೆ ಅತಿಯಾಗುತ್ತಿದೆ. 
ಅನಾದಿ ಕಾಲದಿಂದಲೂ ಸೀಮೆಯ ಆರಾಧ್ಯದೇವತೆಯ ಬಗ್ಗೆ ಅಪಾರವಾದ ಭಕ್ತಿ-ವಿಶ್ವಾಸ ವನ್ನು ಹೊಂದಿರುವ ಅಸಂಖ್ಯ ಭಕ್ತರು,ದೇವಳವನ್ನು ಪ್ರವೇಶಿಸುವಾಗ ಮಡಿ ಮೈಲಿಗೆಗಳನ್ನು ಅರಿತು ಸ್ನಾನವನ್ನು ಮಾಡಿ 
ಶುಚಿರ್ಭೂತರಾಗಿ ಬರುತ್ತಾರೆ. ದೇವಳದ ಆವರಣದಲ್ಲೂ ದೈವ ಸನ್ನಿಧಿಯ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತಾರೆ. ಆದರೆ
 ಜಾತ್ರೆಯ ಗದ್ದೆಯನ್ನು ಪ್ರವೇಶಿಸಿದೊಡನೆ ಇವೆಲ್ಲವನ್ನೂ ಮರೆತುಬಿಡುತ್ತಾರೆ!. 
ಜಾತ್ರೆಯ  ಸಂದರ್ಭದಲ್ಲಿ ಉತ್ಪನ್ನವಾಗಿರುವ ಅಗಾಧ ಪ್ರಮಾಣದ ತ್ಯಾಜ್ಯಗಳು, ಬ್ರಹ್ಮಕಲಶದ ಸಂದರ್ಭದಲ್ಲಿ ಕಾಣಿಸದಿರಲು ನಿರ್ದಿಷ್ಟ ಕಾರಣವೂ ಇದೆ. ಬ್ರಹ್ಮಕಲಶದ ಕಾರ್ಯಕ್ರಮದ ಎಲ್ಲಾ ದಿನಗಳಲ್ಲೂ,ದೇವಳಕ್ಕೆ ಭೇಟಿನೀಡಿದ ಭಕ್ತರಿಗೆ ಊಟ-ಉಪಾಹಾರಗಳ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸಲಾಗಿತ್ತು. ಈ ಸಂದರ್ಭದಲ್ಲಿ ಉತ್ಪನ್ನವಾದ ಯಾವುದೇ ತ್ಯಾಜ್ಯಗಳನ್ನು ಸದಾ ಸಿದ್ಧವಾಗಿರುತ್ತಿದ್ದ ವಾಹನಗಳಲ್ಲಿ ನೇರವಾಗಿ ತುಂಬಿಸಿ,ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆಯೂ ಇತ್ತು. ಜೊತೆಗೆ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಯಂಸೇವಕರು ಇದರ ಉಸ್ತುವಾರಿಯನ್ನು ಸಮರ್ಪಕವಾಗಿ ನಡೆಸುತ್ತಿದ್ದರು. ಇವೆಲ್ಲಕ್ಕೂ ಮಿಗಿಲಾಗಿ ಉಚಿತ ಊಟ-ಉಪಾಹಾರಗಳ ವ್ಯವಸ್ಥೆ ಇದ್ದುದರಿಂದಾಗಿ,ಗದ್ದೆಯಲ್ಲಿ ಹಣವನ್ನು ತೆತ್ತು ಇವುಗಳನ್ನು ಪಡೆಯಬೇಕಾದ ಅವಶ್ಯಕತೆಯೇ ಇರಲಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಖಾದ್ಯ-ಪೇಯಗಳ ಮಳಿಗೆಗಳನ್ನು ಯಾರೊಬ್ಬರೂ ತೆರೆದಿರದ ಕಾರಣದಿಂದಾಗಿ,ಜಾತ್ರೆಯ ಗದ್ದೆಯಲ್ಲಿ ತ್ಯಾಜ್ಯಗಳು ತುಂಬಿರಲಿಲ್ಲ!.
ಆದರೆ ಜಾತ್ರೆ ಆರಂಭವಾದಂತೆಯೇ ದೇವಳದ ಮುಂದಿನ ಬಾಕಿಮಾರು ಗದ್ದೆಯಲ್ಲಿ ತ್ಯಾಜ್ಯಗಳ ಪ್ರಮಾಣವು ದಿನೇದಿನೇ ಹೆಚ್ಚಲಾರಂಭಿಸಿತ್ತು. ಗದ್ದೆಯ ವಿವಿಧ ಭಾಗಗಳಲ್ಲಿ ತ್ಯಾಜ್ಯಸಂಗ್ರಹಕ್ಕಾಗಿ ತೊಟ್ಟಿಗಳನ್ನು ಇರಿಸಿದ್ದರೂ,ಕಂಡಲ್ಲಿ ಕಸವನ್ನು ಎಸೆಯುವ ಜನರ ಕೆಟ್ಟ ಹವ್ಯಾಸದಿಂದಾಗಿ ಅಲ್ಲಲ್ಲಿ ಕಸಗಳ ರಾಶಿ ಕಣ್ಣಿಗೆ ರಾಚುವಂತೆ ಗೋಚರಿಸುತ್ತಿತ್ತು.ಜೊತೆಗೆ ಗದ್ದೆಯಲ್ಲಿ ಇರಿಸಿದ್ದ ಕಸದ ತೊಟ್ಟಿಗಳ ಸಂಖ್ಯೆಯು ತೀರಾ ಕಡಿಮೆಯಾಗಿದ್ದು,ಇವುಗಳು ತುಂಬಿದೊಡನೆ 
ತೆರವುಗೊಳಿಸಲು ಜನದಟ್ಟಣೆಯು ಅಡ್ಡಿಯಾಗುತ್ತಿತ್ತು.ಆದರೂ ಬೆಳಗಿನ ಜಾವ ಕರ್ತವ್ಯಕ್ಕೆ ಹಾಜರಾಗುವ ಪುತ್ತೂರು ಪುರಸಭೆಯ ಪೌರ ಕಾರ್ಮಿಕರು ಗದ್ದೆಯ ಉದ್ದಗಲಕ್ಕೂ ಹರಡಿರುವ ಈ ತ್ಯಾಜ್ಯಗಳನ್ನು ಸಂಗ್ರಹಿಸಿ,ವಾಹನಗಳಲ್ಲಿ ತುಂಬಿ ವಿಲೇವಾರಿ ಮಾಡಲು ಹರಸಾಹಸವನ್ನೇ ನಡೆಸುತ್ತಿದ್ದಾರೆ. ಕೆಲವೇ ದಿನಗಳ ಮುನ್ನ ದೇವಳದ ಸುತ್ತಮುತ್ತಲ ಪರಿಸರವನ್ನು ಚೊಕ್ಕಟವಾಗಿ ಇರಿಸಲು ಸಹಕರಿಸಿದ್ದ ಭಕ್ತಾಭಿಮಾನಿಗಳು,ಇದೀಗ ಅಸಹ್ಯವೆನಿಸುವ ಕಸದ ರಾಶಿಗಳನ್ನು ಹುಟ್ಟುಹಾಕಲು ಕಾರಣವೆನಿಸಿರುವುದು ಮಾತ್ರ ನಂಬಲು ಅಸಾಧ್ಯವೆನಿಸುತ್ತದೆ.
ಅದೇನೇ ಇರಲಿ,ಇನ್ನು ಮುಂದಾದರೂ ದೇವಳದ ಪಾವಿತ್ರ್ಯಕ್ಕೆ ಧಕ್ಕೆಯಾಗುವ,ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸಬಲ್ಲ,ನಮ್ಮ ಸುತ್ತಮುತ್ತಲ ಪರಿಸರಕ್ಕೆ ಹಾನಿಕಾರಕ ಎನಿಸುವ ತ್ಯಾಜ್ಯಗಳನ್ನು,ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮರ್ಪಕವಾಗಿ ಸಂಗ್ರಹಿಸಲು,ಬಳಿಕ ಸುರಕ್ಷಿತವಾಗಿ ಸಾಗಿಸಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಿದೆ. ಇದಕ್ಕೂ ಮಿಗಿಲಾಗಿ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಿಂದಲೇ ಇವುಗಳನ್ನು ಸಂಗ್ರಹಿಸುವ ಮತ್ತು ಕಂಡಲ್ಲಿ ಕಸವನ್ನು ಎಸೆಯುವುದರಿಂದ ಸಂಭವಿಸಬಲ್ಲ ಗಂಭೀರ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.
ಕೊನೆಯ ಮಾತು
ಪುತ್ತೂರು ಪುರಸಭೆಯ ವತಿಯಿಂದ ದೇವಳದ ಕಾರ್ಯಕ್ರಮದ ಸಂದರ್ಭದಲ್ಲಿ ಅಲಂಕಾರಕ್ಕಾಗಿ  ಪ್ಲಾಸ್ಟಿಕ್ ನಿರ್ಮಿತ ತೋರಣ ಹಾಗೂ ಫ್ಲೆಕ್ಸ್ ಅಭಿನಂದನಾ-ಸ್ವಾಗತ ಫಲಕಗಳನ್ನು ಬಳಸದೇ,ನೈಸರ್ಗಿಕ ವಸ್ತುಗಳಿಂದ ಸಿದ್ಧಪಡಿಸಿದ ತಳಿರು ತೋರಣಗಳು ಮತ್ತು ಬಟ್ಟೆಯಿಂದ ತಯಾರಿಸಿದ ಬ್ಯಾನರ್ ಗಳನ್ನು ಬಳಸುವಂತೆ ಸೂಚಿಸಲಾಗಿತ್ತು. ಇದರೊಂದಿಗೆ ಗದ್ದೆಯಲ್ಲಿನ ಖಾದ್ಯ-ಪೇಯಗಳು ಮತ್ತು ಅನ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್-ಥರ್ಮೊಕೊಲ್ ನಿರ್ಮಿತ ತಟ್ಟೆ,ಲೋಟ,ಚಮಚ,ಬಾಟಲಿಗಳೇ ಮುಂತಾದವುಗಳನ್ನು ಬಳಸದಂತೆ ಎಚ್ಚರಿಕೆಯನ್ನು ನೀಡಲಾಗಿತ್ತು. ಇದನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದ ಅಧಿಕಾರಿಗಳು,ಇವೆಲ್ಲವನ್ನೂ ಕಂಡೂ ಕಾಣದಂತೆ ವರ್ತಿಸಿದ್ದರು!. ಪುರಸಭೆಯ ನಿಷ್ಕ್ರಿಯತೆಯ ಬಗ್ಗೆ ಚೆನ್ನಾಗಿ ಅರಿತಿರುವ ಸ್ಥಳೀಯರು,ಇಂತಹ ಪೊಳ್ಳು ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ. ಹಾಗೂ ಇದೇ ಕಾರಣದಿಂದಾಗಿ ಜಾತ್ರೆಯ ಗದ್ದೆ ಮತ್ತು ಪುರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯಗಳ ಪ್ರಮಾಣವು ಹೆಚ್ಚುವುದರಲ್ಲಿ ಸಂದೇಹವಿಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು
24-05-2013
ಬ್ರಹ್ಮ ರಥೋತ್ಸವದ ಮರುದಿನ ಬೆಳಿಗ್ಗೆ ತೆಗೆದ ಫೋಟೋ

No comments:

Post a Comment