Wednesday, May 22, 2013

    ಕಣ್ಣು ಹಾಯಿಸಿದಲ್ಲೆಲ್ಲ ಕಾಣಸಿಗುವ ಕಸದರಾಶಿಗಳು
"ಎಲ್ಲೆಲ್ಲಿ ನೋಡಲಿ,ನಿನ್ನನ್ನೇ ಕಾಣುವೆ" ಎನ್ನುವ ಜನಪ್ರಿಯ ಚಲನಚಿತ್ರ ಗೀತೆಯು ನಮ್ಮೂರಿನ ಬೀದಿಬೀದಿಗಳಲ್ಲಿ ಕಾಣಸಿಗುವ ತ್ಯಾಜ್ಯಗಳ ಬಗ್ಗೆ ಅನ್ವರ್ಥವೆನಿಸುತ್ತದೆ. ಇದನ್ನು ಕಂಡಾಗ ನಮ್ಮ ಜಿಲ್ಲೆಗೆ ನಿರ್ಮಲ ಗ್ರಾಮ ಪುರಸ್ಕಾರವನ್ನು ನೀಡಿರುವುದಾದರೂ ಹೇಗೆ?,ಎನ್ನುವ ಪ್ರಶ್ನೆ ನಮ್ಮ ನಿಮ್ಮೆಲ್ಲರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಈ ಸಮಸ್ಯೆಗೆ ಸ್ಥಳೀಯ ಸಂಸ್ಥೆಯೊಂದಿಗೆ,ಸ್ಥಳೀಯ ನಿವಾಸಿಗಳೂ ಕಾರಣಕರ್ತರೆಂದಲ್ಲಿ ತಪ್ಪೆನಿಸಲಾರದು.
ಪುತ್ತೂರಿನ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಅನುಷ್ಠಾನಗೊಂಡಿದ್ದ ಎ.ಡಿ.ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಯಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗಾಗಿ ೨.೭೦ ಕೋಟಿಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿತ್ತು. ಇದರಲ್ಲಿ ತ್ಯಾಜ್ಯಗಳನ್ನು ಹಾಕಲು ವಿದೇಶೀ ನಿರ್ಮಿತ ಫೈಬರ್ ತೊಟ್ಟಿಗಳು,ಸಾಗಾಟಕ್ಕಾಗಿ ವಾಹನಗಳು ಮತ್ತು ವೈಜ್ಞಾನಿಕ ವಿಲೇವಾರಿಗಾಗಿ ಲ್ಯಾಂಡ್ ಫಿಲ್ ಸೈಟ್ ಇತ್ಯಾದಿಗಳನ್ನು ಒದಗಿಸಲಾಗಿತ್ತು. ಆದರೆ ಈ ವ್ಯವಸ್ಥೆ ಅಪೇಕ್ಷಿತ ರೀತಿಯಲ್ಲಿ ಹಾಗೂ ಯಶಸ್ವಿಯಾಗಿ ಕಾರ್ಯಾಚರಿಸಲು, ಸ್ಥಳೀಯ ಜನರಿಗೆ ನೀಡಲೇಬೇಕಾಗಿದ್ದ ಮಾಹಿತಿ ಮತ್ತು ಮಾರ್ಗದರ್ಶನಗಳ ಅಭಾವದಿಂದಾಗಿ ಸಮಗ್ರ ಯೋಜನೆಯೇ ವಿಫಲವಾಗಿತ್ತು.
ಈ ಯೋಜನೆಯ ಅಂಗವಾಗಿ ನಗರದ ಪ್ರತಿಯೊಂದು ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುವ ತ್ಯಾಜ್ಯಗಳನ್ನು ಸಂಗ್ರಹಿಸುವ ವ್ಯವಸ್ಥೆಯು ನಿಯೋಜಿತ ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಸ್ಥಳೀಯರ ಅಸಹಕಾರಗಳಿಂದಾಗಿ ಯಶಸ್ವಿಯಾಗಲಿಲ್ಲ. ಇದನ್ನು ಪರಿಗಣಿಸದೇ ನಗರದ ವಿವಿಧ ಭಾಗಗಳಲ್ಲಿ ಇರಿಸಿದ್ದ ಕಸದ ತೊಟ್ಟಿಗಳನ್ನು ತೆರವುಗೊಳಿಸಿದ ಬಳಿಕ,ತೊಟ್ಟಿಗಳಿದ್ದ ಜಾಗಗಳಲ್ಲಿ (ಮತ್ತು ಇಲ್ಲದಿದ್ದ ಜಾಗಗಳಲ್ಲೂ)ಕಸವನ್ನೆಸೆಯುವ ಸ್ಥಳೀಯರ ಹವ್ಯಾಸವು ಇಂದಿಗೂ ಮುಂದುವರೆದಿದೆ. ಇದರೊಂದಿಗೆ ತುಸು ಅಧಿಕ ಪ್ರಮಾಣದಲ್ಲಿ ತ್ಯಾಜ್ಯಗಳನ್ನು ಉತ್ಪಾದಿಸುವ ಕೆಲ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳನ್ನು ಕತ್ತಲಾದ ಬಳಿಕ ಸಮೀಪದ ಚರಂಡಿಗಳಲ್ಲಿ ಎಸೆಯಲಾಗುತ್ತಿದೆ. ಈ ರೀತಿಯಲ್ಲಿ ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದು ಅಸಾಧ್ಯ ಎನ್ನುವುದರ ಅರಿವಿದ್ದರೂ,ಇಂತಹ ಕೆಟ್ಟ ಹವ್ಯಾಸ ಇಂದಿಗೂ ಕೊನೆಗೊಂಡಿಲ್ಲ. ಇಷ್ಟೆಲ್ಲಾ ಸಾಲದೆನ್ನುವಂತೆ ಚರಂಡಿಗಳಲ್ಲಿ ಎಸೆದ ತ್ಯಾಜ್ಯಗಳನ್ನು ಪೌರ ಕಾರ್ಮಿಕರು ತೆರವುಗೊಳಿಸದ ಕಾರಣದಿಂದಾಗಿ ಕೊಳಚೆ ನೀರು ಮಡುಗಟ್ಟಿ ನಿಲ್ಲುವುದರಿಂದ, ಸೊಳ್ಳೆಗಳು ಮತ್ತು ಅನ್ಯ ರೋಗಾಣುಗಳ ತಾಣವೆನಿಸಲು ಪುರಸಭೆಯೇ ಕಾರಣವೆಂದು ಜನಸಾಮಾನ್ಯರು ದೂರುತ್ತಲೇ ಇರುತ್ತಾರೆ. ಆದರೆ ಚರಂಡಿಗಳಿಗೆ ಸಕಲ ವಿಧದ ತ್ಯಾಜ್ಯಗಳನ್ನು ಎಸೆಯುವವರ ಬಗ್ಗೆ ಯಾರೂ ಹರಿಹಾಯುವುದಿಲ್ಲ!.
ಸುಮಾರು ೩೬ ಚದರ ಕಿಲೋಮೀಟರ್ ವಿಸ್ತೀರ್ಣವಿರುವ ಪುತ್ತೂರಿನ ಪುರಸಭಾ ವ್ಯಾಪ್ತಿಯಲ್ಲಿರುವ ಚರಂಡಿಗಳಲ್ಲಿ ಎಸೆಯುವ ಅಗಾಧ ಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳನ್ನು ನಿಯಮಿತವಾಗಿ ಸಂಗ್ರಹಿಸಲು ನೂರಾರು ಪೌರಕಾರ್ಮಿಕರ ದಂಡಿಗೂ ಅಸಾಧ್ಯವೆನಿಸುವುದರಲ್ಲಿ ಸಂದೇಹವಿಲ್ಲ. ಈ ವಿಚಾರದ ಅರಿವಿದ್ದರೂ,ತ್ಯಾಜ್ಯಗಳನ್ನು ಎಸೆಯುವ ಜನರ ಮನೋಭಾವ ಬದಲಾಗುತ್ತಿಲ್ಲ.
ಅದೇ ರೀತಿಯಲ್ಲಿ ನಾವಿಂದು ಅನಾವಶ್ಯಕ ಮತ್ತು ಅತಿಯಾಗಿ ಉತ್ಪಾದಿಸುತ್ತಿರುವ ತ್ಯಾಜ್ಯಗಳು ಮತ್ತು ಸಭೆ-ಸಮಾರಂಭಗಳಲ್ಲಿ ಉಪಯೋಗಿಸುತ್ತಿರುವ ಒಂದು ಬಾರಿ ಬಳಸಿ ಎಸೆಯುವ ವಸ್ತುಗಳ ಬಳಕೆಯನ್ನು ನಿಷೇಧಿಸುವ ಬಗ್ಗೆ ಯಾರೂ ಗಮನ 
ಹರಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು  ಪೌರ ಕಾರ್ಮಿಕರನ್ನು ದೂರುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ!. 
ನಿಜಹೆಳಬೇಕಿದ್ದಲ್ಲಿ ಕುಡ್ಸೆಂಪ್ ಯೋಜನೆಯ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಯೋಜನೆಯಲ್ಲಿ ತ್ಯಾಜ್ಯಗಳು ಉತ್ಪನ್ನವಾಗುವ ಮೂಲಗಳಲ್ಲಿ ಇವುಗಳನ್ನು ಪ್ರತ್ಯೇಕಿಸಿ,ಪುನರ್ ಆವರ್ತನಗೊಳಿಸಬಲ್ಲ ಹಾಗೂ ಗೊಳಿಸಲಾಗದ ಎಂದು ಪ್ರತ್ಯೇಕಿಸಿ ಸಂಗ್ರಹಿಸಬೇಕಿತ್ತು.ಇದರಲ್ಲಿ ಪುನರ್ ಆವರ್ತನಗೊಳಿಸಬಹುದಾದ ತ್ಯಾಜ್ಯಗಳನ್ನು  ತತ್ಸಂಬಂಧಿತ ಘಟಕಗಳಿಗೆ ರವಾನಿಸಿ,ಉಳಿದವುಗಳನ್ನು 
ಲ್ಯಾಂಡ್ ಫಿಲ್ ಸೈಟ್ ನಲ್ಲಿ ಹರಡಿ ಮಣ್ಣಿನಿಂದ ಮುಚ್ಚಬೇಕಿತ್ತು.  ಜೊತೆಗೆ ತರಕಾರಿ ಮತ್ತಿತರ ಕೊಳೆಯುವಂತಹ ತ್ಯಾಜ್ಯಗಳನ್ನು ಬಳಸಿ ಸಾವಯವ ಗೊಬ್ಬರವನ್ನು ತಯಾರಿಸುವ ಘಟಕವನ್ನುಸ್ಥಾಪಿಸಬೇಕಿತ್ತು. ಆದರೆ ದುರದೃಷ್ಟವಶಾತ್ ಇವೆಲ್ಲವೂ ಕ್ರಮಬದ್ಧವಾಗಿ ಅನುಷ್ಠಾನಗೊಂಡಿರಲೇ ಇಲ್ಲ. ಇಷ್ಟೆಲ್ಲಾ ಸಾಲದೆನ್ನುವಂತೆ ಸ್ಥಳೀಯ ನಾಗರಿಕರು ಈ ನಿಟ್ಟಿನಲ್ಲಿ ಪುರಸಭೆಯೊಂದಿಗೆ ಸಹಕರಿಸಲಿಲ್ಲ. ತತ್ಪರಿಣಾಮವಾಗಿ ಪುತ್ತೂರು ಮಾತ್ರವಲ್ಲ,ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿಗಳು ಕಾಣಲು ಸಿಗುತ್ತಿರುವುದರಲ್ಲಿ ವಿಶೇಷವೇನಿಲ್ಲ!.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

No comments:

Post a Comment