Wednesday, May 22, 2013


 ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಅನುಸರಿಸಿ 
ಈ ವರ್ಷದ ಬೇಸಗೆಯು  ಪ್ರಾರಂಭಿಕ ಹಂತದಿಂದಲೇ ತನ್ನ ಪ್ರತಾಪವನ್ನು ತೋರುತ್ತಿದೆ. ಇದೀಗ ವಾತಾವರಣದ ತಾಪಮಾನದ ಮಟ್ಟವು ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ತಲುಪುವ ಹಂತವನ್ನು ಮೀರಿದೆ. ಇದರೊಂದಿಗೆ ಅನಿಯಮಿತ ವಿದ್ಯುತ್ ಕಡಿತದ ಬಾಧೆಯೂ ದಿನೇ ದಿನೇ ಹೆಚ್ಚುತ್ತಿದೆ. ವಾತಾವರಣದ ಉಷ್ಣತೆಯು ಮಿತಿಮೀರಿದ ಸಂದರ್ಭದಲ್ಲಿ ಅಕಾಲಿಕ ಮಳೆ ಸುರಿದು ಇಳೆಯನ್ನು ತಂಪಾಗಿಸಿದರೂ,ಮರುದಿನ ಬಿಸಿಲಿನ ಧಗೆಯು ಮತ್ತಷ್ಟು ಹೆಚ್ಚುತ್ತದೆ. ಇದೇ ಕಾರಣದಿಂದಾಗಿ ವಿದ್ಯುತ್ ಪಂಖಗಳು,ಹವಾ ನಿಯಂತ್ರಕಗಳು,ರೆಫ್ರಿಜೆರೇಟರ್ ಹಾಗೂ ಕೃಷಿ ಮತ್ತು ಕುಡಿಯುವ ನೀರಿನ ಪೂರೈಕೆಗಾಗಿ ಬಳಸುವ ವಿದ್ಯುತ್ ಪಂಪ್ ಇತ್ಯಾದಿಗಳು ಅವ್ಯಾಹತವಾಗಿ ಬಳಸಲ್ಪಡುತ್ತವೆ. ತತ್ಪರಿಣಾಮವಾಗಿ ವಿದ್ಯುತ್ತಿನ ಬಳಕೆಯ ಪ್ರಮಾಣವು ಸ್ವಾಭಾವಿಕವಾಗಿಯೇ ಇನ್ನಷ್ಟು ಹೆಚ್ಚುತ್ತದೆ. ಆದರೆ ಇದೇ ಸಂದರ್ಭದಲ್ಲಿ ವಿದ್ಯುತ್ ಉತ್ಪಾದನೆಯ  ಪ್ರಮಾಣವು ಕಾರಣಾಂತರಗಳಿಂದ ಕಡಿಮೆಯಾಗಿರುವುದರಿಂದ ಅನಿಯಮಿತ ವಿದ್ಯುತ್ ಕಡಿತ ಜಾರಿಗೊಂಡಿದ್ದು ,ಜನಸಾಮಾನ್ಯರ ದೈನಂದಿನ ಕೆಲಸಕಾರ್ಯಗಳಿಗೆ ಅಡಚಣೆಗಳು ಸಂಭವಿಸುತ್ತಿವೆ. ವಿಶೇಷವೆಂದರೆ ವಿದ್ಯುತ್ ಕ್ಷಾಮದ ಸಮಸ್ಯೆಯು ರಾಜ್ಯದ ಜನತೆಯನ್ನು ಹಲವಾರು ವರ್ಷಗಳಿಂದ ಪೀಡಿಸುತ್ತಿದ್ದರೂ,ಸರಕಾರ ಮತ್ತು ಪ್ರಜೆಗಳು ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಮಾತ್ರ ಕಟ್ಟುನಿಟ್ಟಾಗಿ ಅನುಸರಿಸುತ್ತಿಲ್ಲ.
ನಿಜ ಹೇಳಬೇಕಿದ್ದಲ್ಲಿ ಸರಕಾರವು ಹಲವಾರು ವರ್ಷಗಳ ಹಿಂದೆಯೇ ವಿದ್ಯುತ್ ಉಳಿತಾಯದ ಉಪಕ್ರಮಗಳನ್ನು ಸೂಚಿಸಿದ್ದು,ಸರಕಾರೀ ಕಚೇರಿಗಳಲ್ಲೇ ಇದು ಜಾರಿಗೊಂಡಿಲ್ಲ. ಇವುಗಳಲ್ಲಿ ಸರಕಾರೀ ಕಚೇರಿಗಳಲ್ಲಿ ಇರುವ ಟ್ಯೂಬ್ ಲೈಟ್ ಮತ್ತು ಸಾಮಾನ್ಯ ಬಲ್ಬ್ ಗಳು ಕೆಟ್ಟುಹೋದಲ್ಲಿ,ಇವುಗಳಿಗೆ ಬದಲಾಗಿ ಸಿ.ಎಫ್. ಎಲ್ ಬಲ್ಬ್ ಗಳನ್ನು ಅಳವಡಿಸುವುದು,ಪಂಖಗಳಿಗೆ ಎಲೆಕ್ಟ್ರಾನಿಕ್ ನಿಯಂತ್ರಕಗಳನ್ನು 
ಬಳಸುವುದು,ಹವಾನಿಯಂತ್ರಕಗಳನ್ನು ಅನಾವಶ್ಯಕವಾಗಿ ಬಳಸುವುದು,ನೂತನ ಕಚೇರಿಯೊಂದನ್ನು ನಿರ್ಮಿಸುವಾಗ ಧಾರಾಳ ಗಾಳಿ-ಬೆಳಕು ಬರುವಂತೆ ವಿನ್ಯಾಸಗೊಳಿಸುವುದು,ಕಡ್ಡಾಯವಾಗಿ ಸಿ.ಎಫ್.ಎಲ್ ಬಲ್ಬ್ ಗಳನ್ನೇ ಅಳವಡಿಸುವುದು,ಸ್ಥಳೀಯ ಸಂಸ್ಥೆಗಳ 
ವ್ಯಾಪ್ತಿಯಲ್ಲಿ ಇರುಳಿಡೀ ಬೆಳಗುವ ದಾರಿದೀಪಗಳಲ್ಲಿ ಶೇ. ೫೦ ರಷ್ಟು ದೀಪಗಳ ಸಂಪರ್ಕವನ್ನು ಕಡಿತಗೊಳಿಸುವುದೇ ಮುಂತಾದ 
ಸೂಚನೆಗಳು ಪ್ರಮುಖವಾಗಿದ್ದವು. ಆದರೆ ಈ ಉಪಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಟಾನಿಸಿದ ಒಂದೇ ಒಂದು ಸರಕಾರೀ ಕಚೇರಿ
 ಹಾಗೂ ಸ್ಥಳೀಯ ಸಂಸ್ಥೆಯನ್ನು  ಯಾರೊಬ್ಬರೂ ಕಂಡಿರುವ ಸಾಧ್ಯತೆಗಳಿಲ್ಲ. ಆದರೆ ಹಗಲಲ್ಲೂ ಟ್ಯೂಬ್ ಲೈಟ್ ಗಳು ಬೆಳಗುವ ಮತ್ತು 
ಸಿಬಂದಿಗಳು ಭೋಜನಕ್ಕಾಗಿ ತೆರಳಿದ ಸಂದರ್ಭದಲ್ಲೂ ಪಂಖಗಳು ತಿರುಗುತ್ತಿರುವ ಮತ್ತು ಹಗಲಿನಲ್ಲೂ ದಾರಿದೀಪಗಳು ಬೆಳಗುವ ದೃಶ್ಯಗಳು ಕಾಣಸಿಗುವುದರಲ್ಲಿ ಸಂದೇಹವಿಲ್ಲ. 
ಅದೇ ರೀತಿಯಲ್ಲಿ ಜನಸಾಮಾನ್ಯರೂ ತಮ್ಮ ದೈನಂದಿನ ವಿದ್ಯುತ್ ಬಳಕೆಯ ಪ್ರಮಾಣದಲ್ಲಿ ಒಂದಿಷ್ಟು ಉಳಿತಾಯ ಮಾಡುವ 
ಮಾರ್ಗೋಪಾಯಗಳನ್ನು ಅನುಸರಿಸುವುದಿಲ್ಲ. ದಿನವಿಡೀ ಕಿರಿಚುವ ಟೀವಿ,ನಿರಂತರವಾಗಿ ತಿರುಗುವ ಪಂಖಗಳು,ಅವಶ್ಯಕತೆ 
ಇಲ್ಲದಿದ್ದರೂ ಬೆಳಗುತ್ತಿರುವ ದೀಪಗಳು,ಸದಾ ಆನ್ ಆಗಿರುವ ಹವಾನಿಯಂತ್ರಕ ಗಳಿಂದಾಗಿ,ರಾಜ್ಯಾದ್ಯಂತ ಅಗಾಧ ಪ್ರಮಾಣದ 
ವಿದ್ಯುತ್  ಪೋಲಾಗುತ್ತಿದೆ.ಇಷ್ಟೆಲ್ಲಾ ಸಾಲದೆನ್ನುವಂತೆ ಬೇಸಗೆಯ ದಿನಗಳಲ್ಲೇ ಜರಗುವ
 ಜಾತ್ರೆ,ಬ್ರಹ್ಮಕಲಶ,ಮದುವೆ,ಮುಂಜಿ,ಗೃಹ ಪ್ರವೇಶಗಳಂತಹ ಕಾರ್ಯಕ್ರಮಗಳ ಸಂದರ್ಭದಲ್ಲಿ 
ಇರುಳಿಡೀ ಉರಿಸುವ ಬಣ್ಣಬಣ್ಣದ ವಿದ್ಯುತ್ ದೀಪಗಳು ಅಗಾಧ ಪ್ರಮಾಣದ ವಿದ್ಯುತ್ತನ್ನು
 ಕಬಳಿಸುತ್ತವೆ. ತತ್ಪರಿಣಾಮವಾಗಿ ಸಂಭವಿಸುವ  ವಿದ್ಯುತ್ತಿನ ಅಪವ್ಯಯದಿಂದಾಗಿ, ವಿಶೇಷವಾಗಿ ಬೇಸಗೆಯ ದಿನಗಳಲ್ಲಿ ತಪ್ಪದೆ ತಲೆದೋರುವ ವಿದ್ಯುತ್ ಕ್ಷಾಮದ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ.
ಅದೇನೇ ಇರಲಿ,ಇದೀಗ ಶಾಲಾಕಾಲೇಜುಗಳ ವಿದ್ಯಾರ್ಥಿಗಳ ಪರೀಕ್ಷೆಗಳು ಆರಂಭಗೊಂಡಿದ್ದು,ವಿದ್ಯುತ್ ಕಡಿತದ ಸಮಸ್ಯೆಯು ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಯ ಮೇಲೆ ನೇರವಾಗಿ ಪರಿಣಾಮವನ್ನು ಬೀರುತ್ತದೆ. ಕನಿಷ್ಠ ಪಕ್ಷ ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ
ನಾವು ಅನಾವಶ್ಯಕವಾಗಿ ಪೋಲುಮಾಡುತ್ತಿರುವ ವಿದ್ಯುತ್ತನ್ನು ಉಳಿಸಿದಲ್ಲಿ,ನಿಶ್ಚಿತವಾಗಿಯೂ ವಿದ್ಯುತ್ ಕ್ಷಾಮದ ಸಮಸ್ಯೆಯು ತಕ್ಕ ಮಟ್ಟಿಗೆ ಪರಿಹಾರಗೊಳ್ಳುವುದರಲ್ಲಿ ಸಂದೇಹವಿಲ್ಲ.
ಡಾ. ಸಿ . ನಿತ್ಯಾನಂದ ಪೈ,ಪುತ್ತೂರು
 ಶಾಲಾ ಕಾಲೇಜುಗಳ ಅಂತಿಮ ಪರೀಕ್ಷೆಗಳು ಆರಂಭವಾಗುವ ಮುನ್ನ ಪ್ರಕಟಿಸಿದ್ದ ಲೇಖನ
ವಿದ್ಯುತ್ ಉಳಿಸಬಲ್ಲ ಎಲ್.ಇ. ಡಿ ದಾರಿದೀಪಗಳು -ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ
ಇರುಳಿಡೀ ಬೆಳಗುವ ವಿದ್ಯುತ್ ದೀಪಗಳು

No comments:

Post a Comment