Thursday, May 2, 2013

 ನಿರುಪಯುಕ್ತ   ಖಾದ್ಯ-ಪೇಯಗಳಿಗೆ ಪ್ಲಾಸ್ಟಿಕ್ ಕವಚ
ಬಳಸುವಂತಿಲ್ಲ!
ವಿಶೇಷವಾಗಿ ಪುಟ್ಟ ಮಕ್ಕಳು ಮತ್ತು ಯುವಜನರು ಮೆಚ್ಚಿ ಸವಿಯುವ ನಿರುಪಯುಕ್ತ  ಖಾದ್ಯಗಳನ್ನು(ಜಂಕ್ ಫುಡ್) ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿ ಎನಿಸಿರುವ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತುಂಬಿಸಿ ಮಾರಾಟ ಮಾಡುವುದನ್ನು,ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ಇದೇ ವರ್ಷದ ಆದಿಯಲ್ಲಿ ನಿಷೇಧಿಸಿದೆ. ಇಂತಹ ಅನಾರೋಗ್ಯಕರ ಖಾದ್ಯಗಳನ್ನು ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಕವಚಗಳಲ್ಲೇ ತುಂಬಿಸಿ ಮಾರಾಟ ಮಾಡುವಂತೆ ಆದೇಶಿಸಿದೆ. ಎಪ್ರಿಲ್ ಒಂದರಿಂದ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಬೇಕಾದ ಹೊಣೆಗಾರಿಕೆ ರಾಜ್ಯ ಸರಕಾರದ ಮೇಲಿದೆ.
 ಹಿಮಾಚಲದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠಕ್ಕೆ ೨೦೧೦ ರಲ್ಲಿ  ಸಲ್ಲಿಸಿದ್ದ ಮೂರು ಮನವಿಗಳ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯವು ಇದೇ ವರ್ಷದ ಜನವರಿ ೧೦ ರಂದು ಪ್ರಕಟಿಸಿದ್ದ ತೀರ್ಪಿನಲ್ಲಿ,ಪ್ಲಾಸ್ಟಿಕ್ ಕವಚಗಳಲ್ಲಿ ತುಂಬಿಸಿ ಮಾರುತ್ತಿರುವ ನಿರುಪಯುಕ್ತ ಖಾದ್ಯಗಳನ್ನೇ ನಿಷೇಧಿಸುವ ವಿಚಾರವು ತನ್ನ ಮುಂದೆ ಇಲ್ಲದಿರುವುದರಿಂದ ಈ ಬಗ್ಗೆ ಏನನ್ನೂ ಹೇಳಬಯಸುವುದಿಲ್ಲ. ಆದರೆ ಹಿಮಾಚಲ ಪ್ರದೇಶ್ ನಾನ್ ಬಯೋಡಿಗ್ರೆಡೆಬಲ್ (ಕಂಟ್ರೋಲ್) ಏಕ್ಟ್ ೧೯೯೫ ರನ್ವಯ,ಇಂತಹ ಅಪಾಯಕಾರಿ ಉತ್ಪನ್ನಗಳನ್ನು ಮಣ್ಣಿನಲ್ಲಿ ಸುಲಭವಾಗಿ ಕರಗಿ ಬೆ ರೆಯಬಲ್ಲ ಕವಚಗಳಲ್ಲೇ ತುಂಬಿ ಮಾರಾಟ ಮಾಡಬೇಕು ಎಂದು ಆದೇಶಿಸಿತ್ತು. ಇಂತಹ ಕವಚಗಳಿಂದಾಗಿ ಈ ಉತ್ಪನ್ನಗಳ ಬೆಲೆ ಹೆಚ್ಚುವುದಾದರೂ,ಪರಿಸರ ಮತ್ತು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸಮರ್ಥನೀಯವೂ ಹೌದು ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸಬಲ್ಲ 
ಪ್ಲಾಸ್ಟಿಕ್ ನ ಅತಿಯಾದ ಬಳಕೆಯನ್ನು ನಿಯಂತ್ರಿಸುವಂತೆ ೨೦೧೦ ರಲ್ಲಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಸಮಿತಿಯೊಂದನ್ನು ರಚಿಸಿತ್ತು.ಈ ಸಮಿತಿಯು  ಖಾದ್ಯ ಉತ್ಪನ್ನಗಳ ಪ್ಯಾಕೆಜಿಂಗ್ ನಲ್ಲಿ ಪ್ಲಾಸ್ಟಿಕ್ ನ  ಅನುಚಿತ ಮತ್ತು ಅತಿಯಾದ ಬಳಕೆಯನ್ನು ಕಡಿಮೆಮಾಡಬಲ್ಲ ವಿಧಾನಗಳು ಮತ್ತಿತರ ಸಲಹೆ ಸೂಚನೆಗಳನ್ನು ಶಿಫಾರಸು ಮಾಡಬೇಕಿತ್ತು. ಆದರೆ ಈ ಸಮಿತಿಯು 
ನ್ಯಾಯಾಲಯದ ಆದೇಶವನ್ನು ಪಾಲಿಸಲು ವಿಫಲವಾಗಿತ್ತು. ತದನಂತರ ನೇಮಕಗೊಂಡಿದ್ದ ಮತ್ತೊಂದು ಸಮಿತಿಯು ಸುದೀರ್ಘಕಾಲ ಮೀನ ಮೇಷ ಎಣಿಸಿದ ಬಳಿಕ,ಇದೇ ವರ್ಷದ ಆದಿಯಲ್ಲಿ ತನ್ನ ಶಿಫಾರಸುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. 
ಸಮಿತಿಯ ಅಭಿಪ್ರಾಯದಂತೆ ಜಂಕ್ ಫುಡ್ ಎಂದು ಗುರುತಿಸಿರುವ ಆಲೂಗೆಡ್ಡೆಯ ಚಿಪ್ಸ್ ಮತ್ತಿತರ ಕುರುಕಲು ತಿಂಡಿಗಳು,ಬಿಸ್ಕಿಟ್,ಕ್ಯಾಂಡಿ,ವೇಫರ್ಸ್,ಚ್ಯೂಯಿಂಗ್ ಗಮ್,ಐಸ್ ಕ್ರೀಮ್,ನೂಡಲ್ಸ್,ಚಾಕಲೇಟ್,ಕಾರ್ನ್ ಫ್ಲೇಕ್,ಪಿಜ್ಜಾ,ಬರ್ಗರ್,ಕೇಕ್,ಲಘು ಪಾನೀಯಗಳು ಮತ್ತು ಹಣ್ಣಿನ ರಸ ಇವೇ ಮುಂತಾದವುಗಳ ಅತಿಸೇವನೆಯಿಂದ ಅಧಿಕತೂಕ,ಅತಿಬೊಜ್ಜು,ಮಧುಮೇಹ,ಅಧಿಕ ರಕ್ತದೊತ್ತಡ,ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು,ಕರುಳಿನ ಕ್ಯಾನ್ಸರ್ ಮತ್ತಿತರ ಗಂಭೀರ-ಮಾರಕ ಆರೋಗ್ಯದ ಸಮಸ್ಯೆಗಳು ತಲೆದೋರುವ ಸಾಧ್ಯತೆಗಳಿವೆ. ಜಂಕ್ ಫುಡ್ ಗಳನ್ನು ಪ್ಲಾಸ್ಟಿಕ್ ಕವಚಗಳಲ್ಲಿ ತುಂಬಿ ಮಾರಾಟ ಮಾಡುವುದರಿಂದ ಇನ್ನಷ್ಟು ಕಾಯಿಲೆಗಳು ಬಂದೆರಗುವ ಸಾಧ್ಯತೆಗಳಿವೆ. ಆದುದರಿಂದ ಇವೆಲ್ಲಾ ಉತ್ಪನ್ನಗಳನ್ನು ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಬಯೋ ಡಿಗ್ರೆಡೆಬಲ್ ಕವಚಗಳಲ್ಲೇ ತುಂಬಿ ಮಾರಾಟ ಮಾಡುವಂತೆ ಸಮಿತಿಯು ಸೂಚಿಸಿತ್ತು.
ಸಮಿತಿಯ ಶಿಫಾರಸುಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು,ಬಯೋ ಡಿಗ್ರೆಡೆಬಲ್ ಕವಚಗಳು ದುಬಾರಿ ಎನಿಸುವುದರೊಂದಿಗೆ ಇವುಗಳಲ್ಲಿ ತುಂಬಿದ ಖಾದ್ಯಗಳು ಸುದೀರ್ಘ ಕಾಲ ತಮ್ಮ ತಾಜಾತನವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿಲ್ಲ. ಇದರಿಂದಾಗಿ ತಯಾರಕರಿಗೆ ಸಾಕಷ್ಟು ನಷ್ಟ ಸಂಭವಿಸಲಿದೆ ಎಂದು ವಾದಿಸಲಾಗುತ್ತಿದೆ. ಆದರೆ ಜನಸಾಮಾನ್ಯರ ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯದ ಮತ್ತು ಪರಿಸರದ ಮೇಲೆ ಪ್ಲಾಸ್ಟಿಕ್ ಕವಚಗಳು ಬೀರುವ ದುಷ್ಪರಿಣಾಮಗಳನ್ನು ಪರಿಗಣಿಸಿದಲ್ಲಿ,ಇವುಗಳನ್ನು ನಿಷೇಧಿಸುವುದು ಅನಿವಾರ್ಯ ಎನಿಸಲಿದೆ.
ಅಂತಿಮವಾಗಿ ಹೇಳುವುದಾದಲ್ಲಿ ಖಾದ್ಯ ಅಥವಾ ಇತರ ಯಾವುದೇ ಉತ್ಪನ್ನಗಳ ಪ್ಯಾಕೇಜಿಂಗ್ ನಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ಪ್ಲಾಸ್ಟಿಕ್ ಕವಚಗಳು,ದೇಶದ ಪ್ರತಿಯೊಂದು ನಗರ-ಪಟ್ಟಣಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ತತ್ಪರಿಣಾಮವಾಗಿ ಜನಸಾಮಾನ್ಯರ ಆರೋಗ್ಯ ಮತ್ತು ಪರಿಸರದ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮಗಳನ್ನು ಬೀರುತ್ತಿವೆ. ಇದೇ ಕಾರಣದಿಂದಾಗಿ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ಆದೇಶವನ್ನು ದೇಶದ ಪ್ರತಿಯೊಂದು ರಾಜ್ಯಗಳೂ ಅನುಕರಿಸಬೇಕಿದೆ.
ಡಾ. ಸಿ. ನಿತ್ಯಾನಂದ ಪೈ,ಪುತ್ತೂರು

No comments:

Post a Comment