Wednesday, May 22, 2013


     ಪಕ್ಷನಿಷ್ಠೆ  ತೊರೆಯುತ್ತಿರುವ ಭಾರತದ ಮತದಾರರು! 
ಹಲವಾರು  ವರ್ಷಗಳ ಹಿಂದೆ ಭಾರತದ ರಾಜಕಾರಣಿಗಳು ಪಕ್ಷಾಂತರ ಎನ್ನುವ ಪಿಡುಗಿಗೆ ಬಲಿಯಾಗುತ್ತಿರಲಿಲ್ಲ.ಅಂದಿನ ದಿನಗಳಲ್ಲಿ  ದೇಶಸೇವೆ-ಜನಸೇವೆ ಮಾಡುವ ಏಕಮಾತ್ರ ಉದ್ದೇಶದಿಂದ ಚುನಾವಣೆಗಳಲ್ಲಿ ಸ್ಪರ್ದಿಸಿ,ಗೆದ್ದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದ ಹಾಗೂ ಸೋತಲ್ಲಿ ತೆರೆಮರೆಗೆ ಸರಿಯುತ್ತಿದ್ದ ಪ್ರಾಮಾಣಿಕ ವ್ಯಕ್ತಿಗಳ ಸಂಖ್ಯೆ ಸಾಕಷ್ಟಿತ್ತು. ಆದರೆ ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ, ಇಂದಿನ ರಾಜಕಾರಣಿಗಳಲ್ಲಿ ದೇಶ-ಜನಸೇವೆಯ ಉದ್ದೇಶವೇ ಕಾಣಸಿಗುವುದಿಲ್ಲ.
ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ "ಮುಳುಗುತ್ತಿರುವ ಹಡಗು"ಎಂದು ಪರಿಗಣಿಸಿರುವ ತನ್ನ ಪಕ್ಷವನ್ನು ತೊರೆದು,"ಗೆಲ್ಲಲಿರುವ ಪಕ್ಷ"ಕ್ಕೆ ಹಾರುವ ಪಕ್ಷಾಂತರಿಗಳ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ. ಅದೇ ರೀತಿಯಲ್ಲಿ ಕೋಟ್ಯಾಧೀಶ ರಾಜಕಾರಣಿಗಳ ಸಂಖ್ಯೆ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ" ಮತದಾರ ಪ್ರಭುಗಳು",ಅನೇಕ ವರ್ಷಗಳಿಂದ ಸ್ವಇಚ್ಛೆಯಿಂದ ಬೆಂಬಲಿಸಿ ಮತವನ್ನು ನೀಡುತ್ತಿದ್ದ ಪಕ್ಷದ "ಪಕ್ಷನಿಷ್ಠೆ"ಯನ್ನು ತೊರೆದು ಮತ್ತೊಂದು ಪಕ್ಷದ ಅಥವಾ ಪಕ್ಷೇತರ ಅಭ್ಯರ್ಥಿಗೆ ಮತವನ್ನು ನೀಡುವ  ಮೂಲಕ ಪಕ್ಷಾಂತರ ಮಾಡಲು ಆರಂಭಿಸಿದ್ದಾರೆ.  ಪಕ್ಷನಿಷ್ಠೆಯನ್ನು ಬದಲಿಸಿದ ಮತದಾರೊಬ್ಬರು ಹೇಳುವಂತೆ,ಪಕ್ಶಾಂತರವು ಕೇವಲ ರಾಜಕಾರಣಿಗಳ ಸೋತ್ತೆನಲ್ಲ.ಆದರೆ ರಾಜಕಾರಣಿಗಳು ಪಕ್ಷಾಂತರ ಮಾಡಲು ವೈಯುಕ್ತಿಕ ಸ್ವಾರ್ಥ ಕಾರಣವೆನಿಸಿದ್ದರೆ,ಮತದಾರರು ಮಾಡುತ್ತಿರುವುದು 
ಸಮಾಜದ ಹಿತದೃಷ್ಟಿಯಿಂದ.  ಇನ್ನು ಕೆಲವು ಮತದಾರರು "ಪಕ್ಷಾತೀತ"ರಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಪ್ರಾಮಾಣಿಕ ಹಾಗೂ ಯೋಗ್ಯ ವ್ಯಕ್ತಿಗೆ ಮತವನ್ನು ನೀಡಲು ಆರಂಭಿಸಿದ್ದಾರೆ. ಈ ವಿದ್ಯಮಾನಗಳು ಭಾರತದ ಮತದಾರರು "ಪ್ರಜ್ಞಾವಂತ"ರಾಗುತ್ತಿರುವ ಮತ್ತು ಅಪ್ಪ ನೆಟ್ಟ ಆಲದ ಮರಕ್ಕೆ ಜೋತುಬೀಳುವ ಪ್ರವೃತ್ತಿಯನ್ನು ತ್ಯಜಿಸುತ್ತಿರುವುದಕ್ಕೆ ಸೂಕ್ತ ಪುರಾವೆಯೂ ಹೌದು. ವಿಶೇಷವೆಂದರೆ ಇಂತಹ ಆರೋಗ್ಯಕರ ಬೆಳವಣಿಗೆಗಳು ಬಹುತೇಕ ರಾಜಕಾರಣಿಗಳ ನಿದ್ದೆಗೆಡಿಸಲು ಯಶಸ್ವಿಯಾಗಿವೆ.
ಪಕ್ಷನಿಷ್ಠೆಯ ಹಿನ್ನೆಲೆ
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ದೊರೆತ ಬಳಿಕ ನಡೆದಿದ್ದ ಚುನಾವಣೆಗಳಲ್ಲಿ ಅನಾಯಾಸವಾಗಿ ಗೆದ್ದು ಅಧಿಕಾರಕ್ಕೆ ಬಂದಿತ್ತು. ಅಂದಿನ ದಿನಗಳಲ್ಲಿ ಇತರ ಪಕ್ಷಗಳ ಸಂಖ್ಯೆಯೂ ಬೆರಳೆಣಿಕೆಯಷ್ಟೇ ಇದ್ದಿತು. ಆದರೆ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ತಪ್ಪದೆ ಮತವನ್ನು ನೀಡುತ್ತಿದ್ದ ಮತದಾರರ "ಪಕ್ಷನಿಷ್ಠೆ"ಯೇ ಆ ಪಕ್ಷಕ್ಕೆ ಶ್ರೀರಕ್ಷೆಯಾಗಿತ್ತು. ಆದರೆ ೧೯೭೦ ರ ದಶಕದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಅತಿರೇಕಗಳ ಪರಿಣಾಮವಾಗಿ,ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋತಿತ್ತು. ಹಲವು ವಿರೋಧಪಕ್ಷಗಳು ವಿಲೀನಗೊಂಡು ಹುಟ್ಟಿದ್ದ ಜನತಾ ಪಕ್ಷವನ್ನು ಬಹುತೇಕ ಮತದಾರರು ಚುನಾಯಿಸಿದ್ದುದೇ ಈ ಸೋಲಿಗೆ ಪ್ರಮುಖ ಕಾರಣವೆನಿಸಿತ್ತು. ಆದರೆ ಜನತಾ ಪಕ್ಷದ ನಾಯಕರ ಆಂತರಿಕ ಕಿತ್ತಾಟಗಳಿಂದಾಗಿ ಸಿಡಿದು ಹೋಳಾಗಿ ಹೊರಬಂದಿದ್ದ ಕೆಲಪಕ್ಷಗಳು,ಮುಂದಿನ ಚುನಾವಣೆಗಳಲ್ಲಿ ದಯನೀಯವಾಗಿ ಸೋತಿದ್ದವು. ಜೊತೆಗೆ ಜನತೆಯ ವಿಶ್ವಾಸವನ್ನೇ ಕಳೆದುಕೊಂಡಿದ್ದವು.
ತದನಂತರ ರಾಷ್ಟ್ರಮಟ್ಟದಲ್ಲಿ ಕೆಲ ಪಕ್ಷಗಳು ಮಿಂಚಿದ್ದರೂ,ಇವುಗಳ ಪ್ರಭಾವ ಕೆಲವೇ ರಾಜ್ಯಗಳಿಗೆ ಸೀಮಿತವಾಗಿತ್ತು.ತದನಂತರ ರಾಮಜನ್ಮಭೂಮಿ-ರಾಮಮಂದಿರ ನಿರ್ಮಾಣದ ಆಶ್ವಾಸನೆಯೊಂದಿಗೆ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು.ಈ ಸಂದರ್ಭದಲ್ಲಿ ರಾಷ್ಟ್ರೀಯ  ಮತ್ತು ಪ್ರಾದೇಶಿಕ ಪಕ್ಷಗಳು ಕೈಜೋಡಿಸಿ ರಚಿಸಿದ ಸಮ್ಮಿಶ್ರ ಸರಕಾರ ಆಡಳಿತವನ್ನು ನಡೆಸುವ ಪದ್ಧತಿ
 ಜಾರಿಗೆ ಬಂದಿತ್ತು.  ಇದರೊಂದಿಗೆ ಕೇವಲ ಒಂದು ಅಥವಾ ಎರಡು ರಾಜ್ಯಗಳಿಗೆ ಸೀಮಿತವಾಗಿದ್ದ ಪ್ರಾದೇಶಿಕ ಪಕ್ಷಗಳು ತಮ್ಮ ನೆಲೆಯನ್ನು ಭದ್ರಗೊಳಿಸಿದ್ದವು. ಅದಾಗಲೇ ರಾಷ್ಟ್ರಮಟ್ಟದ ಮತ್ತು ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ನಿಷ್ಠಾವಂತ ಮತದಾರರನ್ನು ಗಳಿಸಿಕೊಳ್ಳಲು ಯಶಸ್ವಿಯಾಗಿದ್ದವು. ಹಾಗೂ ನಿರ್ದಿಷ್ಟ ಪಕ್ಷವೊಂದು ಚುನಾವಣೆಯಲ್ಲಿ ಗೆದ್ದು ಅಧಿಕಾರದ ಗದ್ದುಗೆಯನ್ನು ಏರಲು ಇಂತಹ ಮತದಾರರ ಪಕ್ಷನಿಷ್ಠೆ ನಿರ್ಣಾಯಕವೆನಿಸುತ್ತಿತ್ತು.
ಆದರೆ ಇತ್ತೀಚಿನ ಕೆಲವರ್ಷಗಳಿಂದ ಅಧಿಕಾರದ ಸೂತ್ರವನ್ನು ಕೈಗೆತ್ತಿಕೊಂಡ ರಾಜಕಾರಣಿಗಳ ಭ್ರಷ್ಟಾಚಾರ,ಸ್ವಜನ ಪಕ್ಷಪಾತ,ಅಧಿಕಾರದ ದುರುಪಯೋಗ ಮತ್ತು ಹತ್ತು ಹಲವು ಹಗರಣಗಳನ್ನು ಕಂಡು ರೋಸಿಹೋದ ಮತದಾರರು,ಇದೀಗ ತಮ್ಮ ಪಕ್ಷನಿಷ್ಠೆಗೆ ತಿಲಾಂಜಲಿಯನ್ನಿತ್ತು ಪ್ರಜ್ಞಾವಂತ ಮತದಾರರಾಗಿ ಪರಿವರ್ತನೆಗೊಂಡಿದ್ದಾರೆ. ಹಾಗೂ ತಮ್ಮ ಕ್ಷೇತ್ರದಿಂದ ಸ್ಪರ್ದಿಸುತ್ತಿರುವ ಅಭ್ಯರ್ಥಿಗಳಲ್ಲಿ ಸಚ್ಚಾರಿತ್ರ್ಯವುಳ್ಳ,ಪ್ರಾಮಾಣಿಕ,ಕಳಂಕ ರಹಿತ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬಲ್ಲ ಯೋಗ್ಯ ಅಭ್ಯರ್ಥಿಗಳಿಗೆ ಮತವನ್ನು ನೀಡಲು ಆರಂಭಿಸಿದ್ದಾರೆ. ಯಾವುದೇ ಪ್ರಚಾರ ಮತ್ತು ಸದ್ದು ಗದ್ದಲಗಳಿಲ್ಲದೆ ಆರಂಭಗೊಂಡಿರುವ ಈ "ಕ್ರಾಂತಿ"ಯು,ಇತ್ತೀಚಿಗೆ ರಾಜ್ಯದಲ್ಲಿ ನಡೆದಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಂದರ್ಭದಲ್ಲಿ ಗೋಚರಿಸಿದೆ. ಅಂತೆಯೇ  ರಾಜಕೀಯ ಪಕ್ಷಗಳ ನಾಯಕರಿಗೆ ದಿಗಿಲು ಹುಟ್ಟಿಸುತ್ತಿದೆ.
ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಸಂದರ್ಭದಲ್ಲಿ ದೇಶಾದ್ಯಂತ ವ್ಯಕ್ತವಾಗಿದ್ದ ಬೆಂಬಲವು ಇದೀಗ ಅದೃಶ್ಯವಾಗಿದೆ. ಆದರೆ ದೇಶದ ಪ್ರಜ್ಞಾವಂತ ಮತದಾರರು ತಳೆದಿರುವ ನಿರ್ಧಾರಗಳು ಮತ್ತು ಚಲಾಯಿಸಲಿರುವ ಮತಗಳು ಮುಂದೆ ನಡೆಯಲಿರುವ ಚುನಾವಣೆಗಳ ಚಿತ್ರಣ ಮತ್ತು ಪರಿಣಾಮಗಳನ್ನೇ ಬದಲಾಯಿಸಲಿವೆ!.
ಡಾ.ಸಿ.ನಿತ್ಯಾನಂದ ಪೈ,ಪುತ್ತೂರು

No comments:

Post a Comment