Wednesday, May 22, 2013

ಸ್ತನ ಕ್ಯಾನ್ಸರ್ -ಅರಿವು ಮೂಡಿಸುವ ಮಾಸ ಅಕ್ಟೋಬರ್
ಸಾಮಾನ್ಯವಾಗಿ ಮಧ್ಯ ವಯಸ್ಸನ್ನು ಮೀರಿದ ಮಹಿಳೆಯರನ್ನು ಮಾತ್ರ ಪೀಡಿಸುವ ವ್ಯಾಧಿಯೆಂದು ಅನೇಕರು ನಂಬಿರುವ ಸ್ತನ ಕ್ಯಾನ್ಸರ್, ಹದಿಹರೆಯದ ಹುಡುಗಿಯರು ಹಾಗೂ   ತರುಣಿಯರನ್ನೂ ಬಾಧಿಸಬಲ್ಲದು.ವಿಶೇಷವೆಂದರೆ ಈ ವ್ಯಾಧಿಯು ಕೇವಲ ಮಹಿಳೆಯರನ್ನು ಮಾತ್ರವಲ್ಲಾ, ಅತ್ಯಲ್ಪ  ಪ್ರಮಾಣದ ಪುರುಷರನ್ನೂ ಪೀಡಿಸಬಲ್ಲದೆಂದು ನಿಮಗೂ ತಿಳಿದಿರಲಾರದು.ಈ ಅಪಾಯಕಾರೀ ಕಾಯಿಲೆಯ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
               ಜಾಗತಿಕ ಮಟ್ಟದಲ್ಲಿ ಮಹಿಳೆಯರಲ್ಲಿ ಪತ್ತೆಯಾಗುತ್ತಿರುವ ವಿವಿಧ ರೀತಿಯ ಕ್ಯಾನ್ಸರ್ ಗಳಲ್ಲಿ, ಸ್ತನಗಳ ಕ್ಯಾನ್ಸರ್ ಅಗ್ರಸ್ಥಾನದಲ್ಲಿದೆ.ಆದರೆ ಈ ವ್ಯಾಧಿಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ, ಇದರ ಮಾರಕತೆಯನ್ನು ನಿಶ್ಚಿತವಾಗಿಯೂ ನಿಯಂತ್ರಿಸಬಹುದಾಗಿದೆ.ಈ ಸಂದೇಶದೊಂದಿಗೆ ಸ್ತನ ಕ್ಯಾನ್ಸರ್ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಉದ್ದೇಶದಿಂದ, ವರ್ಷಂಪ್ರತಿ ಅಕ್ಟೋಬರ್ ತಿಂಗಳನ್ನು "ಗುಲಾಬಿ ಮಾಸ"ವನ್ನಾಗಿ ಆಚರಿಸಲಾಗುತ್ತದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯ ಅಂಕಿ ಅಂಶಗಳಂತೆ ನಮ್ಮ ದೇಶದಲ್ಲಿ ಪ್ರತಿವರ್ಷ ಸುಮಾರು ಒಂದು ಲಕ್ಷ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ.ಆದರೆ ಇದರಲ್ಲಿ ಶೇ.70 ರಷ್ಟು ಅದಾಗಲೇ ಅಪಾಯಕಾರೀ ಹಂತವನ್ನು ತಲುಪಿರುತ್ತವೆ.ಇದಕ್ಕೂ ಮಿಗಿಲಾಗಿ ಈ ಸಂಖ್ಯೆಯು 2020ನೇ ಇಸವಿಯಲ್ಲಿ ಎರಡು ಪಟ್ಟು ಹೆಚ್ಚಲಿದೆ!.ಕೆಲವೇ ದಶಕಗಳ ಹಿಂದೆ ಮಧ್ಯವಯಸ್ಸು ಮೀರಿದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ವ್ಯಾಧಿಯು,ಇದೀಗ 25ರಿಂದ 30 ವರ್ಷದ ತರುಣಿಯರಲ್ಲಿ ಪತ್ತೆಯಾಗುತ್ತಿದೆ.ಮಹಿಳೆಯರ ವಯಸ್ಸು ಹೆಚ್ಚಾದಂತೆಯೇ,ಇದರ ಸಂಭಾವ್ಯತೆಯೂ ಹೆಚ್ಚುತ್ತದೆ.
ಸಂಭಾವ್ಯತೆ
ಸ್ತನಗಳ ಕ್ಯಾನ್ಸರ್ ಉದ್ಭವಿಸಲು ನಿಖರವಾದ ಹಾಗೂ ನಿರ್ದಿಷ್ಟವಾದ ಕಾರಣಗಳು ಏನೆಂದು ಹೇಳಲಾಗದು.ಆದರೆ ಇದರ ಸಂಭಾವ್ಯತೆಗೆ ಸಂಬಂಧಿಸಿದಂತೆ ಕೆಲವೊಂದು ಅಪಾಯಕಾರಿ ಅಂಶಗಳು ಇಂತಿವೆ.ಇವುಗಳಲ್ಲಿ 12 ವರ್ಷ ವಯಸ್ಸಾಗುವ ಮುನ್ನ ಪುಷ್ಪವತಿಯರಾದ ಮತ್ತು 55 ವರ್ಷ ವಯಸ್ಸಾದ  ಬಳಿಕ ಋತು ಬಂಧವಾದ ಸ್ತ್ರೀಯರು,ಅವಿವಾಹಿತರು,ಸಂತಾನ ಹೀನರು,40 ವರ್ಷ ವಯಸ್ಸಾದ ಬಳಿಕ ಮಕ್ಕಳನ್ನು ಹಡೆದವರು,ತಮ್ಮ ಮಗುವಿಗೆ ಮೊಲೆಹಾಲನ್ನು ಉಣಿಸದವರು, ಗರ್ಭನಿರೋಧಕ ಔಷಧಗಳನ್ನು ಹಿಂದೆ ಸೇವಿಸುತ್ತಿದ್ದವರು  ಹಾಗೂ ಇದೀಗ ಸೇವಿಸುತ್ತಿರುವವರು,ಅನ್ಯಕಾರಣಗಳಿಂದಾಗಿ ಕೆಲ ಹಾರ್ಮೋನುಗಳನ್ನು ಸೇವಿಸುವ ಮಹಿಳೆಯರು ಮತ್ತು ಸ್ತನ ಕ್ಯಾನ್ಸರ್ ಪೀಡಿತರ ಸಮೀಪದ ಸಂಬಂಧಿಗಳು ಈ  ವ್ಯಾಧಿಗೆ ಈಡಾಗುವ  ಸಾಧ್ಯತೆಗಳು ಹೆಚ್ಚಿವೆ.ಇದಲ್ಲದೆ ಅನುವಂಶಿಕತೆ ಮತ್ತು ಪರಿವರ್ತಿತ ಹಾಗೂ ಅಸಾಮಾನ್ಯ ವಂಶವಾಹಿನಿಗಳ ಇರುವಿಕೆ,ಅಧಿಕತೂಕ -ಅತಿಬೊಜ್ಜು, ಅತಿ ಮದ್ಯ-ಧೂಮಪಾನ ಮತ್ತು ನಿಷ್ಪ್ರಯೋಜಕ ಆಹಾರ (ಜಂಕ್ ಫುಡ್ )ಗಳ ಸೇವನೆಯ ಹವ್ಯಾಸ ಇರುವವರಲ್ಲೂ ಸ್ತನ ಕ್ಯಾನ್ಸರ್ ತಲೆದೋರುವ ಸಾಧ್ಯತೆಗಳು ಹೆಚ್ಚಾಗಿವೆ.
ಪ್ರಸ್ತುತ ಭಾರತದಲ್ಲಿ ವರ್ಷಂಪ್ರತಿ ಒಂದುಲಕ್ಷಕ್ಕೂ ಅಧಿಕ ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದರೂ,ಗ್ರಾಮೀಣ ಜನರ ಅಜ್ಞಾನ,ವಿದ್ಯಾವಂತರ ಲಜ್ಜೆ ಮತ್ತು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಮುಚ್ಚಿಡುವ ಅಥವಾ ನಿರ್ಲಕ್ಷಿಸುವ ಸ್ವಭಾವದಿಂದಾಗಿ ಗಣನೀಯ ಪ್ರಮಾಣದ ಪ್ರಕರಣಗಳು ವೈದ್ಯರ ಗಮನಕ್ಕೆ ಬರುತ್ತಿಲ್ಲ.ಪ್ರಾಯಶಃ ಇದೇ ಕಾರಣದಿಂದಾಗಿ ಬಹುತೇಕ ಮಹಿಳೆಯರು ತಮ್ಮ ಸ್ತನಗಳಲ್ಲಿ ಪುಟ್ಟ ಹುಣಸೆ ಬೀಜದಷ್ಟು ಗಾತ್ರದ ಗಡ್ದೆಯೊಂದು ಉದ್ಭವಿಸಿರುವುದು ತಿಳಿದೊಡನೆ(ಪ್ರಾಥಮಿಕ ಹಂತ )ವೈದ್ಯರನ್ನು ಸಂದರ್ಶಿಸುವುದಿಲ್ಲ.ಆದರೆ ಈ ಗಡ್ದೆಯು ತುಸು ದೊಡ್ಡದಾದ ಬಳಿಕ(ತುಸು ವೃದ್ಧಿಸಿದ ಹಂತ )ಮತ್ತು ಇನ್ನು ಕೆಲವರು ಈ ಗಡ್ಡೆಯಲ್ಲಿ ತೀವ್ರ ನೋವು ಆರಂಭವಾದ ಬಳಿಕವೇ ವೈದ್ಯರನ್ನು ಸಂಪರ್ಕಿಸುತ್ತಾರೆ.ತತ್ಪರಿಣಾಮವಾಗಿ ಸಾಕಷ್ಟು ಶಾರೀರಿಕ ಮತ್ತು ಮಾನಸಿಕ ಯಾತನೆಗಳೊಂದಿಗೆ ಆರ್ಥಿಕ ಸಂಕಷ್ಟಗಳಿಗೂ ಈಡಾಗುತ್ತಾರೆ.
ಎಲ್ಲವೂ ಕ್ಯಾನ್ಸರ್ ಅಲ್ಲ
ಅನೇಕ ವಿದ್ಯಾವಂತರೂ ಸ್ಥನಗಳಲ್ಲಿ ಉದ್ಭವಿಸುವ ಯಾವುದೇ  ಗಡ್ದೆಗಳು ಕ್ಯಾನ್ಸರ್ ಎಂದೇ ನಂಬಿದ್ದಾರೆ.ನಿಜಹೆಳಬೇಕಿದ್ದಲ್ಲಿ ಇವುಗಳಲ್ಲಿ ಗಣನೀಯ ಪ್ರಮಾಣದ ಗಡ್ದೆಗಳು ನಿರಪಾಯಕಾರಿಗಳೇ ಆಗಿರುತ್ತವೆ.ಆದರೆ ತಜ್ಞ ವೈದ್ಯರ ಪರೀಕ್ಷೆಗೆ ಒಳಗಾಗದೇ  ಇದನ್ನು ನಿರ್ಧರಿಸುವುದು ಅಸಾಧ್ಯವೂ ಹೌದು.ಆದುದರಿಂದ ಇಂತಹ ಸಮಸ್ಯೆ ಉದ್ಭವಿಸಿದಲ್ಲಿ ಇದನ್ನು ಮುಚ್ಚಿಡುವ ಪ್ರಯತ್ನವು "ಸೆರಗಿನಲ್ಲಿ ಕಟ್ಟಿಕೊಂಡ ಕೆಂಡದಂತೆ "ಆಗುವುದು ಎನ್ನುವುದನ್ನು ಮರೆಯದಿರಿ.
ನಮ್ಮ ದೇಶದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರಾರಂಭಿಕ ಹಂತದಲ್ಲೇ ಪತ್ತೆಯಾಗುವ ಪ್ರಮಾಣವು ಕೇವಲ ಶೇ.5 ರಿಂದ 10 ರಷ್ಟಿದೆ.ಈ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಜನಜಾಗೃತಿ ಮೂಡಿಸುವ ಮೂಲಕ, ಈ ವ್ಯಾಧಿಗೆ ಬಲಿಯಾಗುವವರ ಪ್ರಮಾಣವನ್ನು ಶೇ.30 ರಷ್ಟು ಕಡಿಮೆ ಮಾಡಬಹುದಾಗಿದೆ.ಇದೇ ಕಾರಣದಿಂದಾಗಿ ಈ ಮಾಹಿತಿಯನ್ನು ನಿಮ್ಮ ಬಂಧು ಮಿತ್ರರಿಗೂ ತಿಳಿಸುವ ಮೂಲಕ "ಗುಲಾಬಿ ಮಾಸ"ದ ಆಚರಣೆಯಲ್ಲಿ ನೀವೂ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ.ತನ್ಮೂಲಕ ಈ ವ್ಯಾಧಿಯ ಮಾರಕತೆಯನ್ನು ನಿಯಂತ್ರಿಸಬಹುದಾಗಿದೆ.
ಸ್ವಯಂ ಸ್ತನ ಪರೀಕ್ಷೆ
ಮಾರಕವೆನಿಸಬಲ್ಲ ಸ್ತನ ಕ್ಯಾನ್ಸರ್ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸ್ವಯಂ ಸ್ತನ ಪರೀಕ್ಷೆಯು ಅತ್ಯಂತ ಸರಳ ಹಾಗೂ ಸುಲಭದ ವಿಧಾನವಾಗಿದೆ.ವಯೋವೃದ್ಧ ಮಹಿಳೆಯರೂ ಈ ಸರಳ ವಿಧಾನವನ್ನು ತಮ್ಮ ವೈದ್ಯರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ.ಪ್ರತೀ ತಿಂಗಳಿನಲ್ಲೂ ತಪ್ಪದೇ ಸ್ವಯಂ ಸ್ತನ ಪರೀಕ್ಷೆಯನ್ನು ನಡೆಸುತ್ತಿದ್ದಲ್ಲಿ,ಸ್ಥನಗಳಲ್ಲಿ  ಕಂಡುಬರುವ ಅಸಾಮಾನ್ಯ ಬದಲಾವಣೆಗಳನ್ನು ಸುಲಭದಲ್ಲೇ ಪತ್ತೆಹಚ್ಚಬಹುದಾಗಿದೆ.ಇದಲ್ಲದೇ ಸ್ಥನಗಳಲ್ಲಿ ಉದ್ಭವಿಸಿರಬಹುದಾದ ಪುಟ್ಟ ಗಡ್ಡೆಗಳಲ್ಲಿ ನೋವು,ಜ್ವರ,ಸ್ತನ ಹಾಗೂ ಕಂಕುಳಿನಲ್ಲಿರುವ ಗ್ರಂಥಿಗಳಲ್ಲಿ ಬಾವು ಮತ್ತು ಯಾವುದೇ ರೀತಿಯ ಅಸಾಮಾನ್ಯ ಬೆಳವಣಿಗೆಗಳನ್ನು  ನಿರ್ಲಕ್ಷಿಸದೇ, ತಜ್ಞ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಲ್ಲಿ  ಅಯಾಚಿತ ತೊಂದರೆಗಳನ್ನು ಸುಲಭದಲ್ಲೇ ತಡೆಗಟ್ಟಬಹುದಾಗಿದೆ ಎನ್ನುವುದನ್ನು ಮರೆಯದಿರಿ.
ಡಾ.ಸಿ.ನಿತ್ಯಾನಂದ ಪೈ ,ಪುತ್ತೂರು
ವಿಳಾಸ -ಬಳಕೆದಾರರ ಹಿತರಕ್ಷಣಾ ವೇದಿಕೆ ,ಬೊಳುವಾರು
ಪುತ್ತೂರು -ದ.ಕ -574201

No comments:

Post a Comment