Friday, November 15, 2013

Aushada sevane anivaaryave?


                                           ಔಷದ ಸೇವನೆ ಅನಿವಾರ್ಯವೇ?

ವ್ಯಾಧಿಯೊಂದರ ಚಿಕಿತ್ಸೆಯಲ್ಲಿ ಔಷದ ನೀಡುವ ಅನಿವಾರ್ಯತೆ ಇದ್ದಾಗ, ಇವುಗಳ ಸೇವನೆಯಿಂದ ತನ್ನ ರೋಗಿಗಳಿಗೆ ಬಾಧಕಗಳಿಗಿಂತ ಸಾಧಕಗಳೇ ಹೆಚ್ಚಿರುವುದೆಂದು ವೈದ್ಯರು ನಿರ್ಧರಿಸಬೇಕಾಗುವುದು. ಜೊತೆಗೆ ಕನಿಷ್ಠ ಬೆಲೆಯ, ಕನಿಷ್ಠ ಪ್ರಮಾಣದ ಔಷದಗಳನ್ನು ನೀಡಿ ಕನಿಷ್ಠ ಅವಧಿಯಲ್ಲಿ ಗರಿಷ್ಠ ಉಪಶಮನ ನೀಡಲು ಯತ್ನಿಸಬೇಕಾಗುವುದು ವೈದ್ಯರ ವೃತ್ತಿ ಧರ್ಮವೂ ಹೌದು. 
--------------                   -------------------                     -----------------                    ----------------               ----------------------

  ಮನುಕುಲವನ್ನು ರೋಗರುಜಿನಗಳಿಂದ ರಕ್ಷಿಸಲು ವೈದ್ಯರು ಅನುಸರಿಸುವ ಅನೇಕ ಉಪಕ್ರಮಗಳಲ್ಲಿ, ಔಷದ ನೀಡುವುದೂ ಒಂದಾಗಿದೆ. ಅಂತೆಯೇ ಸಹಸ್ರಾರು ಔಷದಗಳ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಅರಿತಿರಬೇಕಾಗುವುದು ವೈದ್ಯರ ಪ್ರಾಥಮಿಕ ಹೊಣೆಗಾರಿಕೆಯೂ ಹೌದು. 

ಸಾಮಾನ್ಯವಾಗಿ ವೈದ್ಯ ತನ್ನ ರೋಗಿಯನ್ನು ಬಾಧಿಸುತ್ತಿರುವ ವ್ಯಾಧಿಯನ್ನು ಅವಶ್ಯಕ ಪರೀಕ್ಷೆಗಳ ಮೂಲಕ ನಿಖರವಾಗಿ ಪತ್ತೆ ಹಚ್ಚಬೇಕಾಗುವುದು. ಬಳಿಕ ಈ ವ್ಯಾಧಿಯನ್ನು ಗುಣಪಡಿಸಲು ಔಷದ ಸಹಿತ ಅಥವಾ ಔಷದ ರಹಿತ ಚಿಕಿತ್ಸೆಗಳಲ್ಲಿ ಯಾವುದು ಹಿತಕರವೆಂದು ನಿರ್ಧರಿಸಬೇಕಾಗುವುದು. 

ಔಷದ ಸಹಿತ ಚಿಕಿತ್ಸೆಯನ್ನು ಆಯ್ದುಕೊಂಡಲ್ಲಿ, ಈ ಔಷದವನ್ನು ಆಯ್ಕೆ ಮಾಡಲು ಸಮರ್ಥನೀಯ ಕಾರಣಗಳು ಹಾಗೂ ಇವುಗಳ ಸೇವನೆಯಿಂದ ಉದ್ಭವಿಸಬಲ್ಲ ಒಳ್ಳೆಯ- ಕೆಟ್ಟ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸುವರು. ಇದಲ್ಲದೇ ರೋಗಿಯು ಇತರ ಕಾಯಿಲೆಗಳಿಗಾಗಿ ಈಗಾಗಲೇ ಸೇವಿಸುತ್ತಿರುವ ಔಷದಗಳೊಂದಿಗೆ ತಾನು ಇದೀಗ ನೀಡಲಿರುವ ಔಷದಗಳ ನಡುವಿನ ಅಂತರ್ ಕ್ರಿಯೆಗಳ ಕುರಿತ ಸ್ಪಷ್ಟ ಮಾಹಿತಿಯನ್ನು ಅರಿತಿರಬೇಕಾಗುತ್ತದೆ. ಕೊನೆಯದಾಗಿ ರೋಗಿಯ ಆರ್ಥಿಕ ಸ್ಥಿತಿಗತಿಗಳನ್ನು ಅರಿತುಕೊಂಡ ಬಳಿಕವೇ ಔಷದಗಳನ್ನು ಸೂಚಿಸಬೇಕಾಗಿದೆ. 

ತನ್ನ ರೋಗಿಯ ಹಿತದೃಷ್ಟಿಯಿಂದ ಇಷ್ಟೆಲ್ಲಾ ಮಾಹಿತಿಗಳನ್ನು ಪರಾಮರ್ಶಿಸಿದ ಬಳಿಕವೇ ಚಿಕಿತ್ಸೆಯನ್ನು ಆರಂಭಿಸುವ ಪ್ರಾಮಾಣಿಕ ವೈದ್ಯರೂ, ಕೆಲವೊಮ್ಮೆ ತಮ್ಮ ರೋಗಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ!. 

ಔಷದ ಅನಿವಾರ್ಯವೇ?

ದೈನಂದಿನ ಜೀವನದಲ್ಲಿ ನಿಮ್ಮನ್ನು ಕಾಡುವ ಅನೇಕ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ಔಷದ ಸೇವಿಸಬೇಕಾಗಿಲ್ಲ. ಆದರೆ ಕ್ಷುಲ್ಲಕ ಸಮಸ್ಯೆಯೊಂದನ್ನು ಗಂಭೀರವೆಂದು ನಂಬಿದ ರೋಗಿಗಳು, ಚಿಕಿತ್ಸೆ ಬೇಡವೆನ್ನುವ ಅರ್ಥಾತ್ ಔಷದವನ್ನು ನೀಡದ ವೈದ್ಯರನ್ನು ತುಸು ತಾತ್ಸಾರದಿಂದ ಕಾಣುವುದುಂಟು. ಮತ್ತೆ ಕೆಲವರು ತಮ್ಮ ಗಂಭೀರ ಸಮಸ್ಯೆಗಳಿಗೂ ಸಣ್ಣಪುಟ್ಟ ಔಷದಗಳನ್ನು ನೀಡಲು ಕೋರುವುದು ಅಥವಾ ಚಿಕಿತ್ಸೆಯನ್ನೆ ನಿರಾಕರಿಸುವುದು ಅಪರೂಪವೇನಲ್ಲ. ಅಲ್ಪ ಪ್ರಮಾಣದ ರೋಗಿಗಳು ಚಿಕಿತ್ಸೆ ಬೇಡವೆನ್ನುವ ವೈದ್ಯರನ್ನು ಹೊಗಳುವಂತೆಯೇ, ಇಂಜೆಕ್ಷನ್ ನೀಡದ ವೈದ್ಯರನ್ನು ತೆಗಳುವವರ ಸಂಖ್ಯೆ ಕಡಿಮೆಯೇನಿಲ್ಲ!. 

ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗಗಳು ಪತ್ತೆಯಾದಾಗ ಚಿಕಿತ್ಸೆ ಅನಿವಾರ್ಯವೆಂದು ಅರಿತಿರುವ ಅನೇಕ ವಿದ್ಯಾವಂತರೂ ಔಷದ ಸೇವಿಸಲು ಸಿದ್ಧರಿರುವುದಿಲ್ಲ. ಮಾತ್ರವಲ್ಲ, ಬಂಧುಮಿತ್ರರು ಸೂಚಿಸುವ "ನಿಶ್ಚಿತವಾಗಿಯೂ ಹಾನಿಕಾರಕವಲ್ಲದ" ಕೆಲವೊಂದು ಪ್ರಯೋಗಗಗಳನ್ನು ಕೈಗೊಳ್ಳುವುದು "ವಿಚಿತ್ರವಾದರೂ ನಿಜ". ಇಂತಹ ಮನೋಭಾವನೆಗಳಿಂದಾಗಿ ಪ್ರತಿಯೊಬ್ಬ ರೋಗಿಯನ್ನು ಸಂತುಷ್ಟಿಗೊಳಿಸುವುದು ಪ್ರಖ್ಯಾತ ವೈದ್ಯರಿಗೂ ಅಸಾಧ್ಯವೆನಿಸುವುದು. 

ಔಷದಗಳ ಆಯ್ಕೆ ಎಂತು?

ಸಾಮಾನ್ಯವಾಗಿ ಆಧುನಿಕ ಸಂಶೋಧನೆಗಳ ಫಲವಾಗಿ ಮಾರುಕಟ್ಟೆಗೆ ಬಿಡುಗಡೆಯಾದ ನೂತನ ಔಷದಗಳು ದುಬಾರಿ ಬೆಲೆಗೆ ಮಾರಾಟವಾಗುತ್ತವೆ. ಏಕೆಂದರೆ ಇವುಗಳ ತಯಾರಕರು ತಾವು ಹೂಡಿದ ಬಂಡವಾಳದೊಂದಿಗೆ ಸಾಕಷ್ಟು ಲಾಭವನ್ನು ಅಪೇಕ್ಷಿಸುವುದು ಸ್ವಾಭಾವಿಕ. ಕಾಲಕ್ರಮೇಣ ಇದಕ್ಕಿಂತಲೂ ಉತ್ತಮ ಗುಣಮಟ್ಟದ ಮತ್ತೊಂದು ಔಷದವು ಮಾರುಕಟ್ಟೆಗೆ ಬಿದುಗಡೆಯಾದೊಡನೆ, ಹಳೆಯ ಔಷದಗಳ ಬೇಡಿಕೆಯೊಂದಿಗೆ ಅವುಗಳ ಬೆಲೆಯೂ ಕುಸಿಯುವುದು. 

ಬಹುತೇಕ ವೈದ್ಯರು ಬದರೋಗಿಗಳ ಚಿಕಿತ್ಸೆಯಲ್ಲಿ ಇಂತಹ ಕಡಿಮೆಬೆಲೆಯ ಔಷದಗಳನ್ನು ಆಯ್ಕೆ ಮಾಡುತ್ತಾರೆ. ಈ ಔಷದಗಳ ಬೆಲೆ ಕುಸಿದರೂ, ಇವುಗಳ ಗುಣಮಟ್ಟ ಮಾತ್ರ ಕುಸಿಯುವುದಿಲ್ಲ. ಇದರರ್ಥ ದುಬಾರಿ ಬೆಲೆಯ ಔಷದಗಳನ್ನು ಬಳಸಬಾರದೆಂದಲ್ಲ. ಬಡರೋಗಿಯ ಪ್ರಾಣರಕ್ಷಣೆಗೆ ಅನಿವಾರ್ಯವೆನಿಸಿದಾಗ ಅಥವಾ ಇವುಗಳನ್ನು ಕೊಳ್ಳುವ ಸಾಮರ್ಥ್ಯವಿರುವ ಶ್ರೀಮಂತ ರೋಗಿಗಳ ಚಿಕಿತ್ಸೆಯಲ್ಲಿ ದುಬಾರಿ ಉಶದಗಲ ಬಳಕೆ ನಿಶ್ಚಿತವಾಗಿಯೂ ಸಮರ್ಥನೀಯ. 

ಔಷದಗಳ ಕಾಕ್ ಟೈಲ್!

ಅನೇಕ ವೈದ್ಯಕೀಯ ಸಂಶೋಧನೆಗಳಿಂದ ತಿಳಿದುಬಂದಂತೆ ಕೆಲವೊಂದು ವ್ಯಾಧಿಗಳ ಚಿಕಿತ್ಸೆಯಲ್ಲಿ ಒಂದಕ್ಕೂ ಹೆಚ್ಚು ವಿಧದ ಔಷದಗಳ ಸಂಯುಕ್ತ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ. ಉದಾಹರಣೆಗೆ ಅನಿಯಂತ್ರಿತ ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಗಂಭೀರ ಕಾಯಿಲೆಗಳನ್ನು ಇಂತಹ ಚಿಕಿತ್ಸೆಯಿಂದ ಹತೋಟಿಯಲ್ಲಿರಿಸುವುದು ಸುಲಭಸಾಧ್ಯ. ಆದರೆ ಈ ಸೂತ್ರವನ್ನು ಸಾರಾಸಗಟಾಗಿ ಪ್ರತಿಯೊಂದು ಕಾಯಿಲೆಗಳ ಚಿಕಿತ್ಸೆಯಲ್ಲಿ ಅನ್ವಯಿಸುವಂತಿಲ್ಲ. 

ಕೆಲವೊಮ್ಮೆ ಔಷದ ತಯಾರಕರು ಹಳೆಯ ಔಷದವೊಂದನ್ನು ಹೊಸದೊಂದು ಔಷದದೊಂದಿಗೆ ಸೇರಿಸಿ ತಯಾರಿಸಿದ ನೂತನ ಉತ್ಪನ್ನವನ್ನು ನಿರ್ದಿಷ್ಟ ಕಾಯಿಲೆಯೊಂದಕ್ಕೆ ನಿಶ್ಚಿತವಾಗಿಯೂ ಪರಿಣಾಮಕಾರಿ ಎನ್ನುವುದುಂಟು. ನಿಜ ಹೇಳಬೇಕಿದ್ದಲ್ಲಿ ಇದೀಗ ಬೇಡಿಕೆಯನ್ನು ಕಳೆದುಕೊಂಡಿರುವ ಹಳೆಯ ಔಷದವನ್ನು ಹೊಸದೊಂದು ಔಷದದೊಂದಿಗೆ ಸೇರಿಸಿ ಮಾರಾಟಮಾಡುವುದು, ಲಾಭವನ್ನು ಗಳಿಸುವ ತಂತ್ರವೇ ಹೊರತು ಬೇರೇನೂ ಅಲ್ಲ!. 

ಔಷದಗಳ ಅಂತರ್ ಕ್ರಿಯೆ 

ರೋಗಿಯೋರ್ವನಲ್ಲಿ ಒಂದಕ್ಕೂ ಹೆಚ್ಚು ವಿಧದ ಕಾಯಿಲೆಗಳಿವೆ ಎಂದಿಟ್ಟುಕೊಳ್ಳೋಣ. ಈ ರೋಗಿಗೆ ಒಂದಕ್ಕೂ ಹೆಚ್ಚು ವಿಧದ ಔಷದ ನೀಡುವ ಅನಿವಾರ್ಯತೆ ಇರುವುದು. ಇಂತಹ ಸಂದರ್ಭದಲ್ಲಿ ವಿಭಿನ್ನ ಔಷದಗಳ ನಡುವಿನ ಅಂತರ್ ಕ್ರಿಯೆಗಳಿಂದಾಗಿ ಕೆಲವೊಂದು ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಏಕಕಾಲದಲ್ಲಿ ರೋಗಿ  ಎರಡು ಔಷದಗಳಲ್ಲಿ ಒಂದರ ಪ್ರಭಾವದಿಂದ ಮತ್ತೊಂದರ ಪರಿಣಾಮ ವೃದ್ಧಿಸುವುದು ಅಥವಾ ಕುಂಠಿತಗೊಳ್ಳುವುದುಂಟು. ಇದರಿಂದಾಗಿ ಪ್ರತಿಯೊಬ್ಬ ವೈದ್ಯರಿಗೂ ತಾವು ನೀಡುವ ಔಷದಗಳ ಪರಿಪೂರ್ಣ ಮಾಹಿತಿ ತಿಳಿದಿರಲೇಬೇಕು. 

ವಿಶೇಷವಾಗಿ ವಯೋವೃದ್ಧರನ್ನು ಬಾಧಿಸುವ ಹಲವಾರು ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ವಿವಿಧ ಔಷದಗಳ ನಡುವಿನ ಅಂತರ್ ಕ್ರಿಯೆಗಳಿಂದಾಗಿ ಹೊಸದೊಂದು ಸಮಸ್ಯೆ ಹುಟ್ಟಿಕೊಳ್ಳಬಹುದು. ಇಂತಹ ಸಮಸ್ಯೆಗಳು ಯಾವುದಾದರೂ ಕಾಯಿಲೆಯ ಲಕ್ಷಣಗಳೇ ಅಥವಾ ಔಷದಗಳ ಅಂತರ್ ಕ್ರಿಯೆಗಳ ಪರಿಣಾಮದಿಂದ ಬಂದಿರುವುದೇ ಎಂದು ಅರಿತುಕೊಳ್ಳಲು ವೈದ್ಯರಿಗೆ ಜೀವಶಾಸ್ತ್ರದ ಬಗ್ಗೆ ಸಾಕಷ್ಟು ಪರಿಣತಿ ಇರಲೇಬೇಕು. 

ಔಷದಗಳ ಉಪಯೋಗ 

ವೈದ್ಯರು ತಮ್ಮ ರೋಗಿಗಳನ್ನು ಚಿಕಿತ್ಸಿಸುವಾಗ ಯಾವ ಔಷದಗಳನ್ನು ಬಳಸುತ್ತಿದ್ದಾರೆ ಎನ್ನುವುದಕ್ಕಿಂತ ಯಾವ ರೀತಿಯಲ್ಲಿ ಬಳಸುತ್ತಿದ್ದಾರೆ ಎನ್ನುವುದು ಮಹತ್ವಪೂರ್ಣ. ಔಷದಗಳನ್ನು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಹಾಗೂ ನಿಗದಿತ ಅವಧಿಗೆ ಸೇವಿಸುವುದು ಅತ್ಯವಶ್ಯಕ. ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ "ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ" ಎನ್ನುವಂತೆ ಪ್ರಬಲವಾದ ಔಷದಗಳ ಪ್ರಯೋಗವು ರೋಗಿಯ ಆರೋಗ್ಯಕ್ಕೆ ಹಾನಿಕರವೆನಿಸುವುದು. ಆದರೆ ಒಂದು ನಿಮಿಷವೂ ಬಿಡುವಿಲ್ಲ ಎನ್ನುವ ಜೀವನ ಶೈಲಿಯಿಂದಾಗಿ, ಅನೇಕ ರೋಗಿಗಳು ವೈದ್ಯರ ಮೇಲೆ ಒತ್ತಡ ಹೆರುವ ಮೂಲಕ ತಮ್ಮನ್ನು ಬಾಧಿಸುವ ಕ್ಷುಲ್ಲಕ ಕಾಯಿಲೆಗಳಿಗೂ ಪ್ರಬಲ ಔಷದಗಳನ್ನು ಪಡೆಯುವುದು ಅಪರೂಪವೇನಲ್ಲ. ಅದೇ ರೀತಿಯಲ್ಲಿ ಅಲ್ಪಾವಧಿಯಲ್ಲೇ ಖ್ಯಾತಿ ಗಳಿಸುವ ಸಲುವಾಗಿ ಬೆರಳೆಣಿಕೆಯಷ್ಟು ಸಂಖ್ಯೆಯ ವೈದ್ಯರೂ ಇಂತಹ ಮಾರ್ಗವನ್ನು ಅನುಸರಿಸುವುದು ನಂಬಲಸಾಧ್ಯವೆನಿಸುತ್ತದೆ. 

ಔಷದಗಳ ಪ್ರಮಾಣ 

ಸಾಮಾನ್ಯವಾಗಿ ರೋಗಿಯ ವಯಸ್ಸು, ಶರೀರದ  ತೂಕ, ಕಾಯಿಲೆಯ ಅವಧಿ ಹಾಗೂ ತೀವ್ರತೆ ಮತ್ತು ರೋಗಿಯಲ್ಲಿರಬಹುದಾದ ಇತರ ಕಾಯಿಲೆಗಳನ್ನು ಗಮನದಲ್ಲಿರಿಸಿ, ಔಷದಗಳ ಪ್ರಮಾಣ ಮತ್ತು ಅವಧಿಗಳನ್ನು ವೈದ್ಯರು ನಿರ್ಧರಿಸುವರು. ತಮ್ಮ ವೃತ್ತಿಜೀವನದ ಅನುಭವಗಳು ಹೆಚ್ಚಿದಂತೆಯೇ, ಇವುಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವರು. 

ನೂತನ ಔಷದವೊಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಾಗ ಇವುಗಳ ತಯಾರಕರು ಈ ಔಷದವನ್ನು ನೀಡಬೇಕಾದ ಪ್ರಮಾಣವನ್ನು ಸೂಚಿಸುತ್ತಾರೆ. ಆದರೆ ವಿಭಿನ್ನ ರೋಗಿಗಳಲ್ಲಿ ವಿಭಿನ್ನ ಪ್ರಮಾಣಗಳಲ್ಲಿ ನೀಡಿದಾಗಲೂ ಈ ಔಷದಗಳು ಅಪೇಕ್ಷಿತ ಪರಿಣಾಮವನ್ನು ನೀಡುವುದುಂಟು. ಉದಾಹರಣೆಗೆ ಹೃದಯ ಸಂಬಂಧಿ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಲ್ಲಿ ನೀಡುವ "ಆಟೆನೊಲಾಲ್" ಔಷದವು ಮೊದಲಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾದಾಗ, ತಯಾರಕರ ಸೂಚನೆಯಂತೆ ೧೦೦ ಮಿ. ಗ್ರಾಂ ನ ಮಾತ್ರೆಯನ್ನು ದಿನದಲ್ಲಿ ಒಂದುಬಾರಿ ಸೇವಿಸಬೇಕಿತ್ತು. ಆದರೆ ಅನುಭವೀ ವೈದ್ಯರು ತಮ್ಮ ರೋಗಿಗಳ ಕಾಯಿಲೆಯ ತೀವ್ರತೆಗೆ ಅನುಗುಣವಾಗಿ ಇದೇ ಔಷದವನ್ನು ೫೦ ಹಾಗೂ ೨೫ ಮಿ. ಗ್ರಾಂ ನಂತೆ ನೀಡಿದಾಗಲೂ ಅನೇಕ ರೋಗಿಗಳಿಗೆ ನಿರೀಕ್ಷಿತ ಪರಿಣಾಮ ದೊರೆತಿತ್ತು!. ಮಹತ್ವಪೂರ್ಣವಾದ ಈ ವಿಚಾರವನ್ನು ಅರಿತ ಔಷದ ತಯಾರಕರು ತದನಂತರ ಈ ಔಷದವನ್ನು ೫೦, ೨೫ ಮತ್ತು ೧೨.೫ ಮಿ. ಗ್ರಾಂ ಗಳ ಮಾತ್ರೆಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

ಕೆಲವೊಂದು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಸ್ವಯಂ ವೈದ್ಯರಾಗುವ ಮೂಲಕ ಪ್ರಾನಾಪಾಯಕ್ಕೆ ಆಹ್ವಾನ ನೀಡುವುದುಂಟು. ಜೀವನಪರ್ಯಂತ ಔಷದ ಸೇವನೆ ಹಾನಿಕರವೆಂದು ಧೃಢವಾಗಿ ನಂಬುವ ಇಂತಹ ರೋಗಿಗಳು, ವೈದ್ಯರು ಸೂಚಿಸಿದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಅಥವಾ ಪ್ರತಿನಿತ್ಯ ಸೇವಿಸುವಲ್ಲಿ ಎರಡು ದಿನಗಳಿಗೊಮ್ಮೆ ಔಷದವನ್ನು ಸೇವಿಸಿ ತಮ್ಮ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಾರೆ. 

ಪ್ರತಿಕೂಲ ಪರಿಣಾಮಗಳು 

ಔಷದಗಳ ಸೇವನೆಯಿಂದ ಶರೀರದ ಯಾವುದೇ ಭಾಗದಲ್ಲಿ ತುರಿಕೆಯಿಂದ ಆರಂಭಿಸಿ, ಕ್ಷಣಮಾತ್ರದಲ್ಲಿ ರೋಗಿಯ ಮರಣಕ್ಕೆ ಕಾರಣವೆನಿಸಬಲ್ಲ ಪ್ರತಿಕೂಲ ಪರಿಣಾಮಗಳು ಅಪರೂಪದಲ್ಲಿ ಕಂಡುಬರುತ್ತವೆ. ಇವುಗಳಲ್ಲಿ ನಿರೀಕ್ಷಿತ, ಅನಿರೀಕ್ಷಿತ, ವಿಷಕಾರಕ ಮತ್ತು ಅಡ್ಡ ಪರಿಣಾಮಗಳಲ್ಲದೇ, ಒಗ್ಗದಿರುವಿಕೆ ಹಾಗೂ ತಾಳದಿರುವಿಕೆಗಳು ಸೇರಿವೆ. ಇದಲ್ಲದೆ ಔಷದ ಸೇವನೆಯ ಪರಿಣಾಮದಿಂದ ಉದ್ಭವಿಸಬಲ್ಲ ಕ್ಯಾನ್ಸರ್, ಗರ್ಭಪಾತ, ವಂಶವಾಹಿನಿಗಳ ತೊಂದರೆಗಳು ಕೂಡಾ ಅಲ್ಪ ಪ್ರಮಾಣದ ರೋಗಿಗಳಲ್ಲಿ ಕಂಡುಬರಬಹುದು. ಆದರೆ ಅದೃಷ್ಟವಶಾತ್ ಇಂತಹ ಸಮಸ್ಯೆಗಳನ್ನು ಸೃಷ್ಟಿಸಬಲ್ಲ ಔಷದಗಳ ಸಂಖ್ಯೆ ಅತ್ಯಲ್ಪವಾದುದರಿಂದ, ಇಂತಹ ಸಮಸ್ಯೆಗಳ ಸಂಭಾವ್ಯತೆಗಳೂ ತೀರಾ ಕಡಿಮೆ. 

ಕೆಲವೊಂದು ರೋಗಿಗಳಲ್ಲಿ ವೈದ್ಯರು ನೀಡಿದ ಔಷದವು ಶಾರೀರಿಕ- ಮಾನಸಿಕ ಅವಲಂಬನೆಗೆ ಕಾರಣವೆನಿಸುವ ಸಾಧ್ಯತೆಗಳಿವೆ. ಉದಾಹರಣೆಗೆ ಸಂಧಿವಾತ ಅಥವಾ ನಿದ್ರಾಹೀನತೆಗಾಗಿ ರೋಗಿ ಸೇವಿಸುವ ಔಷದಗಳ ಸೇವನೆಯನ್ನು ನಿಲ್ಲಿಸಿದೊಡನೆ ಮಂಡಿನೋವು ಹಾಗೂ ನಿದ್ರಾಹೀನತೆ ಮತ್ತೆ ಮರುಕಳಿಸುವುದು. ಆದುದರಿಂದ ಇಂತಹ ಔಷದಗಳನ್ನು ನೀಡಿದಲ್ಲಿ, ಇವುಗಳ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದ ಬಳಿಕವೇ ನಿಲ್ಲಿಸಲು ಸೂಚಿಸುವರು. 

ರೋಗಿಗಳಲ್ಲಿ ಆಕಸ್ಮಿಕವಾಗಿ ಉದ್ಭವಿಸಬಲ್ಲ ಹಾಗೂ ಪ್ರಾಣಾಪಾಯಕ್ಕೆ ಕಾರನವೆನಿಸಬಲ್ಲ ಪ್ರತಿಕೂಲ ಪರಿಣಾಮಗಳನ್ನು ಕ್ಷಿಪ್ರಗತಿಯಲ್ಲಿ ಚಿಕಿತ್ಸಿಸಲು ವೈದ್ಯರು ಸದಾ ಸನ್ನದ್ಧರಾಗಿರಬೇಕಾಗುವುದು. 

ಅವಶ್ಯಕ ಔಷದಗಳು 

ದೇಶದ ಬಹುತೇಕ ಜನತೆಗೆ ಅನಿವಾರ್ಯವೆನಿಸುವ ಔಷದಗಳನ್ನು "ಅವಶ್ಯಕ ಔಷದ" ಗಳು ಎನ್ನುತ್ತಾರೆ. ಇವು ಆಯಾ ದೇಶದ ಪರಿಸ್ಥಿತಿಗೆ ಅನುಗುಣವಾಗಿ ವಿಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಸುರಕ್ಷಿತವೆನಿಸುವ, ಖಚಿತ ಪರಿಣಾಮ ನೀಡಬಲ್ಲ ಹಾಗೂ ದುಬಾರಿಯಲ್ಲದ ಔಷದಗಳು ಈ ಪಟ್ಟಿಯಲ್ಲಿ ಸೇರಿರುತ್ತವೆ. ಆದರೆ ಈ ಪಟ್ಟಿಯು ಕಾಲಕ್ರಮೇಣ ಬದಲಾಗುತ್ತಲೇ ಇರುತ್ತದೆ. ಆದರೆ ಇದರಲ್ಲಿ ಸ್ಥಾನವನ್ನು ಗಳಿಸದ ಔಷದಗಳನ್ನು ಅನಾವಶ್ಯಕ ಔಷದಗಳೆನ್ನಲಾಗದು. ಏಕೆಂದರೆ ಕೆಲವೊಂದು ವಿಶಿಷ್ಟ ಕಾಯಿಲೆಗಳಲ್ಲಿ ಅಥವಾ ವಿಶಿಷ್ಟ ಸನ್ನಿವೇಶಗಳಲ್ಲಿ ಇಂತಹ ಔಷದಗಳ ಬಳಕೆ ಅನಿವಾರ್ಯವೆನಿಸುವುದು. 

ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಅವಶ್ಯಕ ಔಷದಗಳ ಪಟ್ಟಿಯಲ್ಲಿ ಇರುವ ಔಷದಗಳ ಸಂಖ್ಯೆಯ ಹಲವಾರು ಪಟ್ಟು ಅಧಿಕ ಔಷದಗಳು ಭಾರತದಲ್ಲಿ ಮಾರಾಟವಾಗುತ್ತಿರಲು, ಕೆಲವೊಮ್ಮೆ ವೈದ್ಯರೂ ಕಾರಣಕರ್ತರೆನಿಸುತ್ತಾರೆ. ಇವೆಲ್ಲಕ್ಕಿಂತ ಮಿಗಿಲಾಗಿ ತಾವು ಕಂಡ ಜಾಹೀರಾತುಗಳಿಂದ ಪ್ರಭಾವಿತರಾದ ಜನಸಾಮಾನ್ಯರು, ಇಂತಹ ಔಷದಗಳ ಒಳಿತು- ಕೆಡುಕುಗಳ ಬಗ್ಗೆ ಯೋಚಿಸದೇ ಖರೀದಿಸಿ ಬಳಸುವ ಮೂಲಕ ಅಯಾಚಿತ ಸಮಸ್ಯೆಗಳಿಗೆ ಈಡಾಗುತ್ತಾರೆ!. 

ರೋಗಿಗಳ ಹೊಣೆಗಾರಿಕೆ 

ವೈದ್ಯರು ಸೂಚಿಸಿದ ಔಷದಗಳನ್ನು ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಹಾಗೂ ನಿಗದಿತ ಅವಧಿಗೆ ಸೇವಿಸಬೇಕಾದ ಹೊಣೆಗಾರಿಕೆ ರೋಗಿಗಳ ಮೇಲಿದೆ. ಕಾರಣಾಂತರಗಳಿಂದ ಇದನ್ನು ಪರಿಪಾಲಿಸದ ರೋಗಿಗಳು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಿಸಿಕೊಳ್ಳುತ್ತಾರೆ. ಇದಲ್ಲದೇ ಆರ್ಥಿಕ ಸಮಸ್ಯೆಗಳು, ಔಷದಗಳ ಬಗ್ಗೆ ಅಸಹ್ಯ, ಇಂಜೆಕ್ಷನ್ ಗಳ ಭಯ, ಪ್ರತಿಕೂಲ ಪರಿಣಾಮಗಳ ಬಗ್ಗೆ ಹೆದರಿಕೆಗಳೂ ಔಷದ ಸೇವನಾ ಕ್ರಮದಲ್ಲಿ ವ್ಯತ್ಯಯವಾಗಲು ಕಾರಣವೆನಿಸಬಹುದು. 

ಇಂತಹ ಸಮಸ್ಯೆಗಳ ನಿವಾರಣೆಗಾಗಿ ವೈದ್ಯರು ಅತ್ಯಂತ ಸರಳ ಹಾಗೂ ಪರಿಣಾಮಕಾರೀ ಚಿಕಿತ್ಸಾ ವಿಧಾನಗಳನ್ನು ಆಯ್ದುಕೊಳ್ಳಬೇಕಿದೆ. ದಿನದಲ್ಲಿ ಒಂದು ಅಥವಾ ಎರಡುಬಾರಿ ಮಾತ್ರ ಸೇವಿಸಬೇಕಾದ, ಕನಿಷ್ಠ ಸಂಖ್ಯೆಯ ಹಾಗೂ ದುಬಾರಿಯಲ್ಲದ ಔಷದಗಳನ್ನು ಸೂಚಿಸಿದಲ್ಲಿ ರೋಗಿಗಳು ಇವುಗಳನ್ನು ಕ್ರಮಬದ್ಧವಾಗಿ ಸೇವಿಸುವುದರಲ್ಲಿ ಸಂದೇಹವಿಲ್ಲ. ಜೀವನಪರ್ಯಂತ ಅಥವಾ ದೀರ್ಘಾವಧಿ ಚಿಕಿತ್ಸೆಯಲ್ಲೂ ಮೇಲಿನ ಸೂತ್ರದೊಂದಿಗೆ, ಪ್ರತಿ ತಿಂಗಳು ಅಥವಾ ನಿಗದಿತ ಅವಧಿಯ ಬಳಿಕ ತನ್ನಲ್ಲಿ ಬಂದು ಪರೀಕ್ಷಿಸಿಕೊಳ್ಳಲೇ ಬೇಕೆಂಬ ಷರತ್ತು ವಿಧಿಸುವ ವೈದ್ಯರ ಚಿಕಿತ್ಸೆ ಅಪೇಕ್ಷಿತ ಪರಿಣಾಮವನ್ನು ನೀಡುವುದು. ವಿಶಿಷ್ಟ ಸಂದರ್ಭಗಳಲ್ಲಿ ವಯೋವೃದ್ಧರು, ಮರೆಗುಳಿ ಸ್ವಭಾವದವರು ಹಾಗೂ ಮಾನಸಿಕ ರೋಗಿಗಳು ಕ್ರಮಬದ್ಧವಾಗಿ ಔಷದ ಸೇವಿಸಲು ಮನೆಮಂದಿಯ ಸಹಕಾರ ಅವಶ್ಯವೆನಿಸುವುದು. ಅಂತಿಮವಾಗಿ ಚಿಕಿತ್ಸೆ ಅನಿವಾರ್ಯವೆನಿಸಿದಾಗ ನಿಮ್ಮ ವೈದ್ಯರು ಸೂಚಿಸಿದ ಔಷದಗಳನ್ನು ಸೇವಿಸಲೆಬೇಕಾಗುವುವಂತೆಯೇ, ವಿನಾಕಾರಣ ಹಾಗೂ ಅನಾವಶ್ಯಕವಾಗಿ ಔಷದಗಳನ್ನು ಸೇವಿಸಲೇಬಾರದು ಎನ್ನುವುದನ್ನು ಮರೆಯದಿರಿ!. 

ಡಾ. ಸಿ. ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೮-೦೭-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 

 

Wednesday, November 13, 2013

Sakkare kaayileya bagge akkareyirali!



                           ಸಕ್ಕರೆ "ಕಾಯಿಲೆ"ಯ ಬಗ್ಗೆ ಅಕ್ಕರೆಯಿರಲಿ!

    ನಿಮ್ಮ ತಂದೆತಾಯಿಯರಿಗೆ ಮಧುಮೇಹವಿದ್ದಲ್ಲಿ ನಿಮ್ಮ ವೈದ್ಯರಲ್ಲಿ ಮರೆಯದೇ ತಿಳಿಸಿ. ಯಾವುದೇ ಕಾರಣದಿಂದ ವೈದ್ಯರು ನಿಮ್ಮ ರಕ್ತ,ಮೂತ್ರ ಇತ್ಯಾದಿಗಳನ್ನು ಪರೀಕ್ಷಿಸಲು ಸಲಹೆ ನೀಡಿದಾಗ ನಿರಾಕರಿಸದಿರಿ. ಆಕಸ್ಮಿಕವಾಗಿ ಮಧುಮೇಹ ಪತ್ತೆಯಾದಲ್ಲಿ, ಆಕಾಶವೇ ತಲೆಗೆ ಬಿದ್ದಂತೆ ಗಾಬರಿಯಾಗದಿರಿ. ಏಕೆಂದರೆ ಶೇ. ೫೦ ರಷ್ಟು ರೋಗಿಗಳಲ್ಲಿ ಆಹಾರದಲ್ಲಿ ಪಥ್ಯ ಹಾಗೂ ಶಾರೀರಿಕ ವ್ಯಾಯಾಮಗಳಿಂದ ಇದನ್ನು ನಿಯಂತ್ರಿಸಲು ಸಾಧ್ಯವೆನ್ನುವುದನ್ನು ಮರೆಯದಿರಿ. 
---------           ------------------                                   ---------------------                               --------------------               -----------

  ಅಲೋಪತಿಯಲ್ಲಿ "ಡಯಾಬೆಟೆಸ್  ಮೆಲೈಟಸ್" ಹಾಗೂ ಆಯುರ್ವೇದದಲ್ಲಿ "ಮಧುಮೇಹ" ಎಂದು ಕರೆಯಲ್ಪಡುವ, ಸುಂದರ ಹೆಸರಿನ ಗಂಭೀರ ಕಾಯಿಲೆಯು ವಿಶ್ವದ ಪ್ರತಿಯೊಂದು ರಾಷ್ಟ್ರಗಳಲ್ಲಿ ವ್ಯಾಪಕವಾಗಿದ್ದು ಶೇ. ೧೦ ರಿಂದ ೨೦ ರಷ್ಟು ಜನರನ್ನು ಪೀಡಿಸುತ್ತದೆ. ಐವತ್ತು ಪ್ರತಿಶತ ಮಧುಮೇಹ ಪೀಡಿತರಲ್ಲಿ ಈ ವ್ಯಾಧಿ ಪತ್ತೆಯಾಗಿರುವುದೇ ಇಲ್ಲ!. 

ಡಯಾಬೆಟೆಸ್  ಉದ್ಭವಿಸುವುದೆಂತು?

ನಿಮ್ಮ ಶರೀರದಲ್ಲಿ ಇನ್ಸುಲಿನ್ ನ ಉತ್ಪಾದನೆಯು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ನಶಿಸಿದಾಗ ಡಯಾಬೆಟೆಸ್ ಕಾಯಿಲೆ ಉದ್ಭವಿಸುವುದು. ಈ ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದಗಳನ್ನು ಜಗತ್ತಿನ ಯಾವುದೇ ವೈದ್ಯಕೀಯ ವಿಜ್ಞಾನಿಗಳು ಇಂದಿನ ತನಕ ಪತ್ತೆಹಚ್ಚಿಲ್ಲ. ಆದರೂ ಜನಸಾಮಾನ್ಯರ ಮಾನವ ಸಹಜ ದೌರ್ಬಲ್ಯ ಮತ್ತು ಅತಿಯಾಸೆಗಳನ್ನು ದುರುಪಯೋಗಿಸಿಕೊಳ್ಳುವ ಅಸಂಖ್ಯ ನಕಲಿ ವೈದ್ಯರು ಮತ್ತು ಕೆಲ ನಕಲಿ ಔಷದ ಕಂಪೆನಿಗಳು, ರೋಗಿಗಳನ್ನು ವಂಚಿಸಿ ಸಹಸ್ರಾರು ರೂಪಾಯಿಗಳನ್ನು ದೋಚುತ್ತಿರುವುದು ನಿತ್ಯಸತ್ಯ. 

ನಿಜಹೇಳಬೇಕಿದ್ದಲ್ಲಿ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸಬಲ್ಲ ಔಷದವನ್ನು ಕಂಡುಹಿಡಿಯುವ ಸಂಶೋಧಕರಿಗೆ "ನೊಬೆಲ್" ಪ್ರಶಸ್ತಿ ಕಟ್ಟಿಟ್ಟ ಬುತ್ತಿ. ಕೋಟಿಗಟ್ಟಲೆ ಬಹುಮಾನದ ಹಣದೊಂದಿಗೆ "ವಿಶ್ವ ವಿಖ್ಯಾತ'ರಾಗುವ ಸುವರ್ಣಾವಕಾಶವನ್ನು ಬಿಟ್ಟು, ಕರಪತ್ರ- ವೃತ್ತಪತ್ರಿಕೆಗಳ ಮೂಲಕ ಮಧುಮೇಹವನ್ನು ಶಾಶ್ವತವಾಗಿ ಗುಣಪಡಿಸುವುದಾಗಿ ಜಾಹೀರಾತುಗಳನ್ನು ನೀಡಿ,  ಊರಿಂದೂರಿಗೆ ಸುತ್ತಾಡುತ್ತಾ ಜುಜುಬಿ ಕಾಸಿಗಾಗಿ ಕಷ್ಟಪಡುವ ನಕಲಿವೈದ್ಯರಿಗೂ ಇದು ತಿಳಿಯದ ವಿಚಾರವೇನಲ್ಲ. ಇದರೊಂದಿಗೆ "ನಾಯಿಕೊಡೆ" ಗಳಂತೆ ತಲೆಯೆತ್ತಿರುವ ಅನೇಕ ಔಷದ ಕಂಪೆನಿಗಳು ಜಾಹೀರಾತುಗಳ ಮೂಲಕ ನೇರವಾಗಿ ರೋಗಿಗಳಿಗೆ ತಲುಪಿಸುವ ತಮ್ಮ ಅವಿರತ ಸಂಶೋಧನೆಗಳ ಫಲವಾದ "ಸಂಜೀವಿನಿ"ಯಂತಹ ಔಷದಗಳ ಬಗ್ಗೆ ಯಾವ ರೀತಿಯಲ್ಲಿ ಪ್ರಚಾರ ಮಾಡುತ್ತಾರೆ ಎಂದು ನಿಮಗೆ ಗೊತ್ತೇ?. ಇವರು ನೀಡುವ ಜಾಹೀರಾತುಗಳಲ್ಲಿ "ನೀವು ನಮ್ಮ ಔಷದಗಳನ್ನು ಸೇವಿಸಲು ಆರಂಭಿಸಿದ ಬಳಿಕ, ಇದುವರೆಗೆ ಸೇವಿಸುತ್ತಿದ್ದ ಮಾತ್ರೆ, ಇನ್ಸುಲಿನ್ ಇಂಜೆಕ್ಷನ್ ಗಳನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದು, ಒಂದು ಹಂತದಲ್ಲಿ ಇವುಗಳನ್ನು ಶಾಶ್ವತವಾಗಿ ನಿಲ್ಲಿಸಬಹುದು" ಎನ್ನುವ ಭರವಸೆಯನ್ನು ನೀಡುತ್ತಾರೆ. ಆದರೆ ತತ್ಪರಿಣಾಮವಾಗಿ ನೀವು ಉಸಿರಾಡುವುದನ್ನೇ ಶಾಶ್ವತವಾಗಿ ನಿಲ್ಲಿಸುವ ಸಾಧ್ಯತೆಗಳಿವೆ ಎನ್ನುವುದನ್ನು ತಿಳಿಸಲು ಮರೆತುಬಿಡುತ್ತಾರೆ!. 

ಮಧುಮೇಹಕ್ಕೆ ಕಾರಣವೇನು?

ನಿಮ್ಮ ಶರೀರದಲ್ಲಿ ಉತ್ಪಾದನೆಯಾಗುವ ಇನ್ಸುಲಿನ್ ನ ಪ್ರಮಾಣದಲ್ಲಿ  ಕೊರತೆ ಅಥವಾ ಅಭಾವದಿಂದ ಮಧುಮೇಹ ವ್ಯಾಧಿ ಆರಂಭವಾಗುತ್ತದೆ. ಈ ಸಮಸ್ಯೆಗೆ ಶರೀರದಲ್ಲಿನ ಮೇದೋಜೀರಕ ಗ್ರಂಥಿಯ ತೊಂದರೆ- ಕಾಯಿಲೆಗಳು, ಇನ್ಸುಲಿನ್ ನ ಕಾರ್ಯಕ್ಷಮತೆಯನ್ನು ಕುಂಠಿತಗೊಲಿಸಬಲ್ಲ ಹಾರ್ಮೋನ್ ಗಳು, ಕೆಲ ವಿಧದ ಔಷದಗಳು( ಉದಾ- ಸ್ಟೆರಾಯ್ಡ್ ಗಳು), ಜನ್ಮದತ್ತ ಕಾಯಿಲೆಗಳು ಹಾಗೂ ಅನುವಂಶಿಕತೆಯೂ ಕಾರಣವೆನಿಸಬಹುದು. ಇದಲ್ಲದೆ ಕೆಲ ವೈರಸ್ ಗಳ ಸೋಂಕು, ನೀವು ಸೇವಿಸುವ ಆಹಾರ, ತಾಯಿಯ ಹಾಲು ನಶಿಸಿದಾಗ ಹಸುಗೂಸಿಗೆ ನೀಡುವ ಹಸುವಿನ ಹಾಲು, ಸ್ಥೂಲಕಾಯ, ಅಧಿಕತೂಕ, ಮದ್ಯಪಾನ, ಅಧಿಕ ರಕ್ತದೊತ್ತಡ ಹಾಗೂ ಸ್ತ್ರೀಯರಲ್ಲಿ ಗರ್ಭಧಾರನೆಯೂ ಕಾರಣವೆನಿಸಬಹುದು. ಜತೆಗೆ ಶಾರೀರಿಕ ಚಟುವಟಿಕೆಗಲ ಅಭಾವವೂ ( ನಿಷ್ಕ್ರಿಯತೆ) ಇಂದಿನ ಹೈಟೆಕ್ ಯುಗದಲ್ಲಿ ಡಯಾಬೆಟೆಸ್ ಉದ್ಭವಿಸಲು ಪ್ರಮುಖ ಪಾತ್ರವಹಿಸುತ್ತದೆ . 

ಪ್ರಭೇದಗಳು 

ಮಧುಮೇಹವನ್ನು ಸ್ಥೂಲವಾಗಿ ಎರಡು ಎರಡು ವಿಧಗಳನ್ನಾಗಿ ವಿಂಗಡಿಸಲಾಗಿದ್ದು, ಇವುಗಳನ್ನು  ಇನ್ಸುಲಿನ್ ಅವಲಂಬಿತ, ಅರ್ಥಾತ್ ಪ್ರಭೇದ- ೧ ಮತ್ತು ಇನ್ಸುಲಿನ್ ಹೊರತುಪಡಿಸಿ ಅನ್ಯ ಔಷದ ಅವಲಂಬಿತ, ಅರ್ಥಾತ್ ಪ್ರಭೇದ-೨ ಎಂದು ಹೆಸರಿಸಲಾಗಿದೆ. 

ಸಾಮಾನ್ಯವಾಗಿ ಪ್ರಭೇದ-೧ ಅದೇ ತಾನೇ ಹುಟ್ಟಿದ ಹಸುಗೂಸಿನಿಂದ ಆರಂಭಿಸಿ ಹದಿಹರೆಯದ ಮಕ್ಕಳಲ್ಲೂ ಹೆಚ್ಚಾಗಿ ಕಂಡುಬರುವುದಾದರೂ, ಯಾವುದೇ ವ್ಯಕ್ತಿಯಲ್ಲಿ ಯಾವುದೇ ವಯಸ್ಸಿನಲ್ಲೂ ಉದ್ಭವಿಸುವ ಸಾಧ್ಯತೆಗಳಿವೆ. 

ಪ್ರಭೇದ-೨ ಹೆಚ್ಚಾಗಿ ೫೦ ರಿಂದ ೬೦ ವರ್ಷ ವಯಸ್ಸಿನವರಲ್ಲಿ ಪ್ರಾರಂಭವಾಗುವುದಾದರೂ, ಪ್ರಸ್ತುತ ಆಧುನಿಕ ಜೀವನ ಶೈಲಿ, ತೀವ್ರ ಮಾನಸಿಕ ಒತ್ತಡ ಮತ್ತು ನಿಷ್ಕ್ರಿಯತೆಗಳಿಂದಾಗಿ ೩೦ ರಿಂದ ೪೦ ವರ್ಷ ವಯಸ್ಸಿನವರಲ್ಲೇ ಪತ್ತೆಯಾಗುತ್ತಿರುವುದು ಗಮನಾರ್ಹ. 

ಪ್ರಭೇದ-೧ ವಿಧದ ಮಧುಮೇಹವು ಶ್ರೀಮಂತರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಡತನದ ರೇಖೆಗಿಂತ ಕೆಳಗಿರುವ ಜನರು ಕಡಿಮೆ ಆಹಾರವನ್ನು ಸೇವಿಸಿ, ಹೆಚ್ಚು ದುಡಿಯುವುದರಿಂದ ಈ ಸಮಸ್ಯೆಯ ಪ್ರಮಾಣವು ಅವರಲ್ಲಿ ಅತ್ಯಲ್ಪ. ಇವೆರಡೂ ವರ್ಗಗಳಿಗೆ ಸೇರದ ಮಧ್ಯಮ ಆದಾಯದ ಜನರಲ್ಲಿ ಇದರ ಪ್ರಮಾಣವು ಬಡವರಿಗಿಂತ ಎರಡು ಪಟ್ಟು ಹಾಗೂ ಸುಖಲೋಲುಪ ಶ್ರೀಮಂತರಲ್ಲಿ ನಾಲ್ಕು ಪಟ್ಟು ಇರುವುದೆಂದು ತಿಳಿದುಬಂದಿದೆ. 

ಮಧುಮೇಹದ ಲಕ್ಷಣಗಳು 

ಅತಿಮೂತ್ರ,ಅತಿ ಬಾಯಾರಿಕೆ, ಅತಿಯಾಗಿ ಬೆವರುವುದು, ತಲೆ ತಿರುಗಿದಂತಾಗುವುದು, ಕೈಕಾಲುಗಳಲ್ಲಿ ನಡುಕ, ಶರೀರದ ತೂಕ ಕಡಿಮೆಯಾಗುತ್ತಲೇ ಹೋಗುವುದು, ಕಣ್ಣಿನ ದೃಷ್ಟಿ ಮಂಜಾಗುವುದು, ಗಾಯಗಳು ಮತ್ತು ಕಾಯಿಲೆಗಳು ಅನೇಕ ದಿನಗಳು ಕಳೆದರೂ ಗುಣವಾಗದಿರುವುದು ಅಥವಾ ಉಲ್ಬಣಿಸುವುದು, ಹೊಟ್ಟೆನೋವು ಹಾಗೂ ವಾಂತಿ, ಮೂತ್ರ ವಿಸರ್ಜನಾಂಗಗಳಲ್ಲಿ ತುರಿಕೆ, ಕೈಕಾಲುಗಳಲ್ಲಿ ಸ್ಪರ್ಶಜ್ಞಾನದ ಕೊರತೆ ಅಥವಾ ನೋವಿನ ಸಂವೇದನೆಯ ಅಭಾವ ಮತ್ತು ಕೆಲವರಲ್ಲಿ ನಿಮಿರುದೌರ್ಬಲ್ಯ ಗಳಂತಹ ಲಕ್ಷಣಗಳು ಕಂಡುಬರುತ್ತವೆ. 

ಚಿಕಿತ್ಸೆ 

ಮಧುಮೇಹ ವ್ಯಾಧಿಯನ್ನು ನಿಯಂತ್ರಿಸಲು ಮೂರು ವಿಧದ ಚಿಕಿತ್ಸಾ ಕ್ರಮಗಳನ್ನು ವೈದ್ಯರು ಅನುಸರಿಸುತ್ತಾರೆ. 

ಮೊದಲನೆಯದಾಗಿ ಆಹಾರ ಸೇವನೆಯಲ್ಲಿ ಪಥ್ಯ ಹಾಗೂ ಶಾರೀರಿಕ ವ್ಯಾಯಾಮ. ಇದರಿಂದ ಶೇ ೫೦ ರಷ್ಟು ರೋಗಿಗಳು ತಮ್ಮ ವ್ಯಾಧಿಯನ್ನು ಹತೋಟಿಯಲ್ಲಿಡಲು ಸಾಧ್ಯ. ಎರಡನೆಯದಾಗಿ ಆಹಾರದಲ್ಲಿ ಪಥ್ಯ, ಶಾರೀರಿಕ ವ್ಯಾಯಾಮ ಮತ್ತು ಮಾತ್ರೆಗಳ ಸೇವನೆ. ಇದರಿಂದ ಶೇ. ೨೦ ರಿಂದ ೩೦ ರೋಗಿಗಳು ತಮ್ಮ ವ್ಯಾಧಿಯನ್ನು ನಿಯಂತ್ರಿಸಬಹುದಾಗಿದೆ. ಮೂರನೆಯ ವಿಧಾನದಲ್ಲಿ ಆಹಾರದಲ್ಲಿ ಪಥ್ಯ, ಶಾರೀರಿಕ ವ್ಯಾಯಾಮ ಮತ್ತು ಇನ್ಸುಲಿನ್ ಇಂಜೆಕ್ಷನ್. ಈ ಚಿಕಿತ್ಸೆಯಿಂದ ಶೇ ೨೦ ರಿಂದ ೩೦ ರಷ್ಟು ರೋಗಿಗಳು ಮಧುಮೇಹವನ್ನು ಸಂಪೂರ್ಣವಾಗಿ ಹತೋಟಿಯಲ್ಲಿರಿಸುವುದು ಸುಲಭ ಸಾಧ್ಯ. 

ಸಮಸ್ಯೆಗಳು 

ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹಠಾತ್ ಹಾಗೂ ತೀವ್ರವಾಗಿ ಕುಸಿಯುವುದು ಪ್ರಮುಖ ಸಮಸ್ಯೆಯೂ ಹೌದು. ಈ ಸ್ಥಿತಿಯಲ್ಲಿ ರೋಗಿ ವಿಪರೀತವಾಗಿ ಬೆವರುವುದು, ಅಂಗಾಂಗಗಳಲ್ಲಿ ನಡುಕ, ತೀವ್ರ ಎದೆಬಡಿತ, ಅತಿ ಹಸಿವೆ ಹಾಗೂ ಬಾಯಾರಿಕೆ, ವಾಕರಿಕೆ, ತಲೆನೋವು, ಅತಿ ಆಯಾಸ ಮತ್ತು ಮಾತನಾಡಲು ಆಗದಿರುವುದೇ ಮುಂತಾದ ಸಮಸ್ಯೆಗಳು ಬಾಧಿಸುತ್ತವೆ. ಇದಲ್ಲದೆ ಕೆಲ ರೋಗಿಗಳಲ್ಲಿ ಅಪಸ್ಮಾರದಂತಹ ಸೆಳೆತಗಳು, ಲಘು ಪಕ್ಷವಾತ, ಮೆದುಳಿಗೆ ಆಂಶಿಕವಾಗಿ ಹಾನಿಯಾಗುವುದು ಮತ್ತು ಹೃದಯಾಘಾತದಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವುದುಂಟು. 

ಇಂತಹ ಸಮಸ್ಯೆಗಳು ಹೆಚ್ಚಾಗಿ ಅವಶ್ಯಕತೆಗಿಂತ ಹೆಚ್ಚು ಪ್ರಮಾಣದ ಔಷದ ಸೇವನೆ, ಔಷದ ಸೇವನೆಯ ಬಳಿಕ ಸೂಕ್ತ ಸಮಯದಲ್ಲಿ ಸೂಕ್ತ ಪ್ರಮಾಣದ ಆಹಾರವನ್ನು ಸೇವಿಸದಿರುವುದು, ತೀವ್ರ ಶಾರೀರಿಕ ವ್ಯಾಯಾಮ-ಚಟುವಟಿಕೆ ಮತ್ತು ಮದ್ಯಪಾನದಿಂದಲೂ ಸಂಭವಿಸಬಲ್ಲದು. ಇಂತಹ ಪರಿಸ್ಥಿತಿಯಲ್ಲಿ ಪ್ರಜ್ಞಾಹೀನ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ತುರ್ತುಚಿಕಿತ್ಸೆ ನೀಡಬೇಕಾಗುವುದು. ಪ್ರಜ್ಞೆ ಇರುವ ರೋಗಿಗಳಿಗೆ ಒಂದಿಷ್ಟು ಸಕ್ಕರೆಯನ್ನು ನೀರು ಅಥವಾ ಹಾಲಿನಲ್ಲಿ ಬೆರೆಸಿ ಕುಡಿಸಿದಲ್ಲಿ, ಕೆಲವೇ ನಿಮಿಷಗಳಲ್ಲಿ ರೋಗಿಯು ಸ್ವಸ್ಥನಾಗುವನು. 

ರೋಗಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ತೀವ್ರವಾಗಿ ಹೆಚ್ಚಿದಲ್ಲಿ ಡಯಾಬೆಟಿಕ್ ಕೀಟೋಅಸಿಡೋಸಿಸ್  ಹಾಗೂ ಕೋಮಾದಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಬೇಕಾಗುತ್ತದೆ. 

ದೀರ್ಘಕಾಲೀನ ಮಧುಮೇಹದಿಂದ ಬಳಲುತ್ತಿರುವ ರೋಗಿಗಳಲ್ಲಿ ಹೃದಯ ಹಾಗೂ ರಕ್ತನಾಳಗಳ ಕಾಯಿಲೆಗಳು, ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ತೊಂದರೆಗಳು, ಮೂತ್ರಪಿಂಡ-ನಾಳಗಳಿಗೆ ಸಂಬಂಧಿಸಿದ ರೊಗಗಲು. ಮೆದುಳು ಹಾಗೂ ನರಮಂಡಲಗಳ ಕಾಯಿಲೆಗಳು ಮತ್ತು ಪಾದಗಳಲ್ಲಿ ಉಲ್ಬಣಿಸಬಲ್ಲ ಗಾಯ- ಹುಣ್ಣುಗಳಂತಹ ಗಂಭೀರ ತೊಂದರೆಗಳು ಕಂಡುಬರುವುದುಂಟು. ಇವುಗಳನ್ನು ಸೂಕ್ತ ಔಷದ, ಆಹಾರ ಮತ್ತು ವ್ಯಾಯಾಮಗಳಿಂದ ತಡೆಗಟ್ಟುವುದು ಸುಲಭ ಸಾಧ್ಯ. ಅಂತಿಮವಾಗಿ ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತಲೂ ಉತ್ತಮ ಎನ್ನುವಂತೆ, ಮಧುಮೇಹವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಪರಿಪಾಲಿಸುವುದು ಹಿತಕರ ಎನ್ನುವುದನ್ನು ಮರೆಯದಿರಿ. 

ಇನ್ಸುಲಿನ್ - ತಪ್ಪುಕಲ್ಪನೆಗಳು 

ಮಧುಮೇಹ ಪೀಡಿತರು ಒಂದು ಬಾರಿ ಇನ್ಸುಲಿನ್ ಇಂಜೆಕ್ಷನ್ ಪಡೆಯಲು ಪ್ರಾರಂಭಿಸಿದಲ್ಲಿ, ಜೀವನ ಪರ್ಯಂತ ಇದನ್ನು ಪಡೆದುಕೊಳ್ಳುವುದು ಅನಿವಾರ್ಯವೆಂದು ಅನೇಕ ವಿದ್ಯಾವಂತರೂ ನಂಬಿರುವುದು "ಅಪ್ಪಟ ಸುಳ್ಳು". ಪ್ರಾಯಶಃ ಇಂತಹ ಗಾಳಿ ಸುದ್ದಿಗಳಿಗೆ ಇಂಬುಕೊಡುವ ನಕಲಿವೈದ್ಯರು ಇದಕ್ಕೆ ಕಾರಣಕರ್ತರೆಂದಲ್ಲಿ ತಪ್ಪೆನಿಸಲಾರದು. 

ಅನೇಕ ಮಧುಮೇಹ ರೋಗಿಗಳಲ್ಲಿ ಗಂಭೀರ ಕಾಯಿಲೆಗಳು ಉದ್ಭವಿಸಿದಾಗ ಅಥವಾ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದ್ದಾಗ, ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿ ಈ ವ್ಯಾಧಿಯ ನಿಯಂತ್ರಣದ ಅನಿವಾರ್ಯತೆಯಿಂದಾಗಿ ಇನ್ಸುಲಿನ್ ಇಂಜೆಕ್ಷನ್ ಗಳನ್ನು ನೀಡಬೇಕಾಗುವುದು. ಆದರೆ ಕಾಯಿಲೆ ಗುಣವಾದ ಬಳಿಕ ಅಥವಾ ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಚೇತರಿಸಿಕೊಂಡಂತೆಯೇ ಹಿಂದಿನಂತೆ ಮಾತ್ರೆಗಳನ್ನು ಸೇವಿಸಬಹುದಾಗಿದೆ. 

ದೀರ್ಘಕಾಲೀನ ಮಧುಮೇಹಿಗಳು, ವಯೋವೃದ್ಧರು, ಮಾತ್ರೆಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸಲಾಗದ ಪರಿಸ್ಥಿತಿಯಲ್ಲಿ ಮತ್ತು ಬಾಲ್ಯದಲ್ಲಿ ಕಂಡುಬರುವ ಮಧುಮೇಹದಲ್ಲಿ ಜೀವನ ಪರ್ಯಂತ ಇನ್ಸುಲಿನ್ ಪಡೆದುಕೊಳ್ಳಬೇಕಾಗುತ್ತದೆ. 

ನಿಮಗಿದು ತಿಳಿದಿರಲಿ 

ಮಧುಮೇಹ ಪತ್ತೆಯಾದಂತೆಯೇ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣಕ್ಕೆ ಅನುಗುಣವಾಗಿ, ನಿಮ್ಮ ಕಾಯಿಲೆಯನ್ನು ಹತೋಟಿಗೆ ತರಲು ವೈದ್ಯರಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಿ. ಔಷದ ಸೇವನೆ ಆರಂಭಿಸಿದ ಬಳಿಕ ಕಂಡುಬರಬಹುದಾದ ಯಾವುದೇ ಸಮಸ್ಯೆಗಳನ್ನು ವೈದ್ಯರ ಗಮನಕ್ಕೆ ತನ್ನಿ. ಪದೇ ಪದೇ ವೈದ್ಯರನ್ನು ಬದಲಾಯಿಸದಿರಿ. 

ಹೆಚ್ಚು ನಾರಿನಂಶ ಹಾಗೂ ಕಡಿಮೆ ಕೊಬ್ಬಿನಂಶವಿರುವ ಆಹಾರಗಳನ್ನು ಸೇವಿಸಿ. ಹಸಿ ತರಕಾರಿಗಳು,ಧಾನ್ಯಗಳು, ಗೋಧಿ, ರಾಗಿ ಹಾಗೂ ಹಸಿರು ಸೊಪ್ಪುಗಳನ್ನು ಸೇವಿಸಿ. ನೆಲದ ಕೆಳಗೆ ಬೆಳೆಯುವ ಗೆಡ್ಡೆ ಗೆಣಸುಗಳು ಮತ್ತು ಬೀಟ್ರೂಟ್, ಕ್ಯಾರೆಟ್ ನಂತಹ ತರಕಾರಿಗಳನ್ನು ವರ್ಜಿಸಿ. ಚೆನ್ನಾಗಿ ಕಳಿತ ಬಾಳೆ ,ಮಾವು, ಚಿಕ್ಕು ಮತ್ತು ದ್ರಾಕ್ಷಿ ಹಣ್ಣುಗಳನ್ನು ಸೇವಿಸದಿರಿ. 

ಪ್ರತಿದಿನ ನಿಗದಿತ ಸಮಯದಲ್ಲಿ, ನಿಗದಿತ ಪ್ರಮಾಣದಲ್ಲಿ ಔಷದವನ್ನು ಸೇವಿಸಿ. ವೈದ್ಯರು ಸೂಚಿಸಿದ ಔಷದಗಳ ಪ್ರಮಾಣವನ್ನು ನೀವಾಗಿ ಹೆಚ್ಚು- ಕಡಿಮೆ ಮಾಡದಿರಿ. ಅಂತೆಯೇ "ನಿಮ್ಮ ನಾಲಗೆಯ ರುಚಿಯ ಮೇಲೆ ನಿಯಂತ್ರಣವಿರಲಿ". 

ಮಧುಮೇಹ ರೋಗಿಗಳು ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ತಾವು ಮಧುಮೇಹ ರೋಗಿ, ಸೇವಿಸುತ್ತಿರುವ ಔಷದ- ಇಂಜೆಕ್ಷನ್ ಗಳ ವಿವರಗಳು ಮತ್ತು ತಮ್ಮ ವೈದ್ಯರ ಹೆಸರು-ವಿಳಾಸಗಳೊಂದಿಗೆ ದೂರವಾಣಿ ಸಂಖ್ಯೆಗಳನ್ನು ನಮ್ಮೊದಿಸಿದ ಕಾರ್ಡ್ ಒಂದನ್ನು ತಮ್ಮ ಜೇಬಿನಲ್ಲಿ- ಪರ್ಸ್ ನಲ್ಲಿ ಇರಿಸಿಕೊಳ್ಳುವುದು ಉತ್ತಮ. ಅಕಸ್ಮಾತ್ ಸಂಭವಿಸಬಹುದಾದ ಅಪಘಾತ, ಆರೋಗ್ಯದ ಸಮಸ್ಯೆಗಳು ಮತ್ತು ತುರ್ತು ಪರಿಸ್ಥಿತಿಯಲ್ಲಿ, ಈ ಮಾಹಿತಿಯು ನಿಮ್ಮ ಪ್ರಾಣವನ್ನು ಉಳಿಸುವಲ್ಲಿ ಮಹತ್ವಪೂರ್ಣ ಎನಿಸಬಲ್ಲದು. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ೦೬-೦೩- ೨೦೦೩ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.  




Nov.14- World Diabetes Day



                                            

                    ಸಕ್ಕರೆಯ ಮೇಲೆ ಏಕಿಷ್ಟು ಅಕ್ಕರೆ?

   ಸಕ್ಕರೆಯಂತಹ ಸವಿಮಾತುಗಳಿಗೆ ಮನಸೋಲುವ ಹುಲುಮಾನವರು, ಸಕ್ಕರೆಯಿಂದ ತಯಾರಿಸಿದ ಸ್ವಾದಿಷ್ಟ ಖಾದ್ಯ-ಪೇಯಗಳಿಗೆ ಮನಸೋಲದಿರುವುದು ಅಸಾಧ್ಯ. ಜಿಲೇಬಿ, ಗುಲಾಬ್ ಜಾಮೂನ್, ಚಂಪಾಕಲಿ, ಲಾಡು, ಹೋಳಿಗೆ, ಪಾಯಸಗಳ ಹೆಸರುಗಳನ್ನು ಕೇಳಿದೊಡನೆ ಬಾಯಲ್ಲಿ ನೀರೂರಿಸದ ಭಾರತೀಯರೇ ಇಲ್ಲವೆಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಪ್ರಾಯಶಃ ಇದೇ ಕಾರಣದಿಂದಾಗಿ ಭಾರತೀಯರ ಅಡುಗೆಮನೆಯಲ್ಲಿ ಸಕ್ಕರೆಗೆ ಅಗ್ರಸ್ಥಾನ ಸಲ್ಲುತ್ತದೆ!. 

ಶುಭ ಸಮಾಚಾರಗಳು ಅಥವಾ ಯಾವುದೇ ಸಂತೋಷದ ಸುದ್ದಿಯೊಂದನ್ನು ಬಂಧುಮಿತ್ರರಿಗೆ ತಿಳಿಸುವಾಗ, ಬಾಯಿ ಸಿಹಿಮಾಡುವ ಸಂಪ್ರದಾಯ ಭಾರತೀಯರ ವೈಶಿಷ್ಟ್ಯವಾಗಿದೆ. ಜನನ-ಮರಣಗಳಿಗೆ ಸಂಬಂಧಿಸಿದ ವಿಶಿಷ್ಟ ಆಚರಣೆಗಳ ಸಂದರ್ಭಗಳಲ್ಲೂ, ಸಿಹಿತಿಂಡಿಗಳನ್ನು ಬಡಿಸುವುದು ನಮ್ಮ ಸಂಪ್ರದಾಯವಾಗಿದೆ. ವಿವಿಧ ಧರ್ಮೀಯರ ಹಬ್ಬ ಹರಿದಿನಗಳಲ್ಲಂತೂ, ಸಿಹಿತಿಂಡಿಗಳ ವಿನಿಮಯ ಅನಿವಾರ್ಯವೆನಿಸಿದೆ. ಈ ರೀತಿಯಲ್ಲಿ ಭಾರತೀಯರು ಸೇವಿಸುತ್ತಿರುವ ವೈವಿಧ್ಯಮಯ ಸಿಹಿತಿಂಡಿಗಳ ಪ್ರಮಾಣವು, ಪ್ರಾಯಶಃ ಜಗತ್ತಿನ ಅನ್ಯ ರಾಷ್ಟ್ರಗಳ ಜನರಿಗಿಂತ ಸಾಕಷ್ಟು ಹೆಚ್ಚಿದೆ. 

ಭಾರತದಲ್ಲಿ ಜರಗುವ ಪ್ರತಿಯೊಂದು ಸಮಾರಂಭ ಹಾಗೂ ಔತಣಕೂಟಗಳಲ್ಲಿ ಸಿಹಿತಿಂಡಿಗಳು ಮತ್ತು ಪಾಯಸಗಳಿಗೆ ವಿಶೇಷವಾದ ಸ್ಥಾನಮಾನಗಳಿವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೈವಿಧ್ಯಮಯ ಸಿಹಿತಿನಿಸುಗಳನ್ನು ಮನಸಾರೆ ಸವಿಯುವ ಅತಿಥಿಗಳು, ಅಪ್ಪಿತಪ್ಪಿಯೂ ತಾವು ಸೇವಿಸಿದ ಖಾದ್ಯಪೇಯಗಳಲ್ಲಿನ ಸಕ್ಕರೆಯ ಪ್ರಮಾಣ ಹಾಗೂ ಇವುಗಳ ಅತಿಸೇವನೆಯು, ತಮ್ಮ ಆರೋಗ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ. ಅಂತೆಯೇ ಅನೇಕ ಮಧುಮೇಹ ಪೀಡಿತರೂ ಮನೆಮಂದಿಯ ಕಣ್ಣುತಪ್ಪಿಸಿ, ಸ್ವಾದಿಷ್ಟವಾದ ಸಿಹಿತಿಂಡಿಗಳನ್ನು ಮನಸಾರೆ ಸವಿಯುವ ಸಮಾರಂಭಗಳನ್ನು ತಪ್ಪಿಸಿಕೊಳ್ಳುವುದಿಲ್ಲ!. 

ಅನುಭವೀ ವೈದ್ಯರೇ ಹೇಳುವಂತೆ, ಅವರಲ್ಲಿ ತಪಾಸಣೆಗಾಗಿ ಬಂದವರಿಗೆ ಆಕಸ್ಮಿಕವಾಗಿ ಮಧುಮೇಹ ವ್ಯಾಧಿಯ ಇರುವಿಕೆ ಪತ್ತೆಯಾದಲ್ಲಿ, ಈ ವ್ಯಾಧಿಗಿಂತಲೂ ಹೆಚ್ಚಾಗಿ ತಾವಿನ್ನು ಸಿಹಿತಿಂಡಿಗಳನ್ನು ಸವಿಯುವಂತಿಲ್ಲ ಎನ್ನುವ ವಿಚಾರವೇ ಅಸಹನೀಯವೆನಿಸುತ್ತದೆ. ಭಾರತೀಯರಿಗೆ ಸಕ್ಕರೆಯ ಮೇಲಿರುವ ಅತಿಯಾದ ಅಕ್ಕರೆಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇರೊಂದಿಲ್ಲ!. 

ಅತಿಯಾದರೆ ಅಮೃತವೂ........ 

೨೦೦೮-೦೯ ರ  ಅಂಕಿ ಅಂಶಗಳಂತೆ ಭಾರತೀಯರು ವರ್ಷಂಪ್ರತಿ ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವು ಸುಮಾರು ೩೦ ಕಿಲೋಗ್ರಾಂ ಎಂದಲ್ಲಿ ನೀವೂ ನಂಬಲಾರಿರಿ. ಅರ್ಥಾತ್, ಪ್ರತಿಯೊಬ್ಬ ಭಾರತೀಯನು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವು ೮೦ ಗ್ರಾಂ ಗಳಷ್ಟಿರುತ್ತದೆ. ಕಳೆದ ಎರಡು ವರ್ಷಗಳಿಂದ ಈ ಪ್ರಮಾಣವು ಶೇ. ೨೦ ರಷ್ಟು ಹೆಚ್ಚುತ್ತಿದೆ. ಈ ಪ್ರಮಾಣವು ಇನ್ನಷ್ಟು ಹೆಚ್ಚುತ್ತ ಹೋದಲ್ಲಿ, ೨೦೨೦ ಕ್ಕೂ ಮುನ್ನ ಪ್ರತಿವರ್ಷ ನಾವು ಸೇವಿಸುವ ಸಕ್ಕರೆಯ ಪ್ರಮಾಣವು ದುಪ್ಪಟ್ಟಾಗಲಿದೆ!. 

ಪ್ರಸ್ತುತ ಭಾರತವು ವಿಶ್ವದ ಮಧುಮೇಹಿಗಳ ರಾಜಧಾನಿ ಎನಿಸಿರಲು ಇತರ ಕೆಲವು ಕಾರಣಗಳೊಂದಿಗೆ, ಸಕ್ಕರೆಯ ಮೇಲಿರುವ ಅತಿಯಾದ ಅಕ್ಕರೆಯೂ ಪ್ರಮುಖ ಕಾರಣವೆನಿಸಿದೆ. ಶಾಶ್ವತ ಪರಿಹಾರವಿಲ್ಲದ ಈ ಗಂಭೀರ ಕಾಯಿಲೆಗೆ ಸುಲಭವಾಗಿ ಈಡಾಗಲು, ಅತಿಯಾದ ಸಿಹಿತಿಂಡಿಗಳ ಸೇವನೆಯೂ ಕಾರಣವೆಂದು ಅನೇಕ ವಿದ್ಯಾವಂತರಿಗೂ ತಿಳಿದಿಲ್ಲ. 

ನಾವು ದಿನನಿತ್ಯ ಬಳಸುವ ಒಂದು ಟೀ ಸ್ಪೂನ್ ಸಕ್ಕರೆಯಲ್ಲಿ ೪೮ ಕ್ಯಾಲರಿಗಳಿವೆ. ಸಕ್ಕರೆಯ ಅತಿಸೇವನೆಯಿಂದ ದಂತಕುಳಿಗಳು, ಮಧುಮೇಹ, ಅತಿಬೊಜ್ಜು, ಗೌಟ್, ಹೃದ್ರೋಗಗಳು ಮತ್ತು ಕ್ಯಾನ್ಸರ್ ನಂತಹ ಗಂಭೀರ- ಮಾರಕ ವ್ಯಾಧಿಗಳು ಬಾಧಿಸುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಸಂಶೋಧಕರು ಅಭಿಪ್ರಾಯ ಪಡುತ್ತಾರೆ. 

ಸಕ್ಕರೆಯಿಂದ ಕೊಬ್ಬು?

ನಾವು ಸೇವಿಸಿದ ಸಕ್ಕರೆಯು ಜೀರ್ಣವಾದ ಬಳಿಕ ಗ್ಲೂಕೋಸ್ ಮತ್ತು ಫ್ರುಕ್ಟೋಸ್ ಗಳಾಗಿ ವಿಭಜಿಸಲ್ಪಟ್ಟು ಸಣ್ಣಕರುಳಿನ ಮೂಲಕ ಕ್ಷಿಪ್ರಗತಿಯಲ್ಲಿ ಹೀರಲ್ಪಟ್ಟ ಬಳಿಕ ರಕ್ತದಲ್ಲಿ ಬಿಡುಗಡೆಯಾಗುತ್ತವೆ. ತತ್ಪರಿಣಾಮವಾಗಿ ರಕ್ತದಲ್ಲಿನ ಗ್ಲೂಕೋಸ್ ನ ಪ್ರಮಾಣವು ಹೆಚ್ಚಿ, ನಮ್ಮ ಶಾರೀರಿಕ ಕ್ರಿಯೆಗಳು ಹಾಗೂ ಅನ್ಯ ಚಟುವಟಿಕೆಗಳಿಗೆ ಅವಶ್ಯವೆನಿಸುವ "ಶಕ್ತಿ"ಯನ್ನು ಒದಗಿಸುತ್ತದೆ. ಆದರೆ ನಮ್ಮ ಶರೀರಕ್ಕೆ ತತ್ ಕ್ಷಣ ಅವಶ್ಯವಿರುವುದಕ್ಕಿಂತಲೂ ಅಧಿಕ ಪ್ರಮಾಣದ ಗ್ಲೂಕೋಸ್ ಲಭ್ಯವಾದರೆ, ಅದು ಗ್ಲೈಕೋಜೆನ್ ಅಥವಾ ಕೊಬ್ಬಿನ ರೂಪದಲ್ಲಿ ಪರಿವರ್ತನೆಗೊಂಡು ಶರೀರದಲ್ಲಿ ಸಂಗ್ರಹವಾಗುತ್ತದೆ. ಇದೇ ಕಾರಣದಿಂದಾಗಿ ನಮ್ಮ ಶರೀರಕ್ಕೆ ಅಗತ್ಯವಿರುವುದಕ್ಕಿಂತ ಅಧಿಕ ಪ್ರಮಾಣದ ಸಕ್ಕರೆಯ ಸೇವನೆಯೊಂದಿಗೆ ಶಾರೀರಿಕ ಚಟುವಟಿಕೆಗಳೂ ಕಡಿಮೆಯಾದಲ್ಲಿ, ಸ್ವಾಭಾವಿಕವಾಗಿ ಶರೀರದಲ್ಲಿ ಸಂಗ್ರಹವಾಗುವ ಕೊಬ್ಬಿನ ಪ್ರಮಾಣವು ಹೆಚ್ಚಿ, ಅತಿಬೊಜ್ಜಿನ ಸಮಸ್ಯೆಗೆ ಕಾರಣವೆನಿಸುತ್ತದೆ. 

ಸಕ್ಕರೆಯಿಂದ ತಯಾರಿಸಿದ ಖಾದ್ಯಪೇಯಗಳ ಅತಿಸೇವನೆಯಿಂದ ಶರೀರದಲ್ಲಿ ಇನ್ಸುಲಿನ್ ನ ಸ್ರಾವವು ಅಧಿಕವಾಗುವುದರಿಂದ, ರಕ್ತದಲ್ಲಿನ ಟ್ರೈ ಗ್ಲಿಸರೈಡ್ ಗಳ ಪ್ರಮಾಣವು ಹೆಚ್ಚುವುದು. ಪರಿಣಾಮವಾಗಿ ಎಚ್. ಡಿ . ಎಲ್ ಕೊಲೆಸ್ಟರಾಲ್ ನ ಪ್ರಮಾಣವು ಕಡಿಮೆಯಾಗುವುದರಿಂದ ಹೃದ್ರೋಗಗಳು ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತವೆ. 

ಸಕ್ಕರೆಯ ಬಳಕೆಗೆ ಕತ್ತರಿ!

ನಿಜ ಹೇಳಬೇಕಿದ್ದಲ್ಲಿ ನಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆಯ ಸೇವನೆ ಅನಿವಾರ್ಯವಲ್ಲ. ಕೆಲ ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ಸಕ್ಕರೆಯ ಸೇವನೆಯನ್ನು ಕಡಿಮೆಮಾಡುವಂತೆ ಜನರ ಮನವನ್ನು ಒಲಿಸಲು ಅಂತರ ರಾಷ್ಟ್ರೀಯ ಅಭಿಯಾನವೊಂದನ್ನು ನಡೆಸಿತ್ತು. ಜಾಗತಿಕ ಮಟ್ಟದಲ್ಲಿ ಸಕ್ಕರೆಯ ಅತಿಸೇವನೆಯಿಂದ ಉದ್ಭವಿಸುವ ಅತಿಬೊಜ್ಜು, ಮಧುಮೇಹ ಹಾಗೂ ಹ್ರುದ್ರೋಗಗಳಂತಹ ಗಂಭೀರ ಆರೋಗ್ಯದ ಸಮಸ್ಯೆಗಳ ಪ್ರಮಾಣ ಹೆಚ್ಚಲಾರಂಭಿಸಿದ್ದೇ , ಈ ಅಭಿಯಾನವನ್ನು ಹಮ್ಮಿಕೊಳ್ಳಲು ಮೂಲಕಾರಣ ಎನಿಸಿತ್ತು. 

ಪ್ರಾಯಶಃ ಇವೆಲ್ಲಾ ಕಾರಣಗಳಿಂದಾಗಿ ಅನೇಕ ಪಾಶ್ಚಾತ್ಯರು ತಾವು ದಿನನಿತ್ಯ ಸೇವಿಸುವ ಚಹಾ- ಕಾಫಿಗಳಲ್ಲಿ ಸಕ್ಕರೆಯನ್ನು ಬೆರೆಸುವುದಿಲ್ಲ. ಆದರೆ ನಮ್ಮ ದೇಶದಲ್ಲಿ ಅನೇಕ ಮಧುಮೇಹಿಗಳೂ ಸಕ್ಕರೆಯನ್ನು ವರ್ಜಿಸುವುದಿಲ್ಲ!. 

ಪ್ರಸ್ತುತ ನೀವು ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆಮಾಡಲು ಬಯಸಿದಲ್ಲಿ, ಈ ಕೆಳಗಿನ ಸೂಚನೆಗಳನ್ನು ಪಾಲಿಸಿ. 
*ಚಾಕಲೇಟ್,ಸಿಹಿತಿಂಡಿಗಳು, ಲಗ್ಹುಪಾನೀಯಗಳು ಮತ್ತು ಐಸ್ ಕ್ರೀಮ್ ಗಳನ್ನೂ ಆಗಾಗ ಸೇವಿಸದಿರಿ. 
*ಸಮಾರಂಭ ಹಾಗೂ ಔತಣಕೂಟಗಳಲ್ಲಿ ಭಾಗವಹಿಸಿದಾಗ ಕೇವಲ ಒಂದು ಸಿಹಿತಿಂಡಿ ಅಥವಾ ಒಂದಿಷ್ಟು ಪಾಯಸವನ್ನುಮಾತ್ರ ಸೇವಿಸಿ. 
*ಪ್ರತಿನಿತ್ಯ ಸಿಹಿತಿಂಡಿಗಳನ್ನು ಮೆಲ್ಲುವ ಹವ್ಯಾಸವನ್ನು ನಿಲ್ಲಿಸಿ. 
*ಹಾಲು- ಮೊಸರುಗಳಿಗೂ ಸಕ್ಕರೆಯನ್ನು ಬೆರೆಸಿ ಸೇವಿಸದಿರಿ. ಚಹಾ- ಕಾಫಿಗಳಲ್ಲಿ ಬಳಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ. 
* ನಿಮ್ಮ ಮಕ್ಕಳಿಗೆ ಇಡ್ಲಿ,ದೋಸೆ, ಉಪ್ಪಿಟ್ಟು ಮತ್ತಿತರ ತಿಂಡಿಗಳೊಂದಿಗೆ ಸಕ್ಕರೆ ಅಥವಾ ಹಣ್ಣಿನ ಜಾಮ್ ಗಳನ್ನೂ ಬೆರೆಸಿ ತಿನ್ನಿಸುವ ಹವ್ಯಾಸವನ್ನು ನಿಲ್ಲಿಸಿ. ಇದಕ್ಕೆ ಬದಲಾಗಿ ಸ್ವಾಭಾವಿಕವಾಗಿ ಸಿಹಿಯಾಗಿರುವ ಹಣ್ಣುಹಂಪಲುಗಳನ್ನು ಹಿತಮಿತವಾಗಿ ತಿನ್ನಿ. 

ಅಂತಿಮವಾಗಿ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರೊಂದಿಗೆ, ದಿನನಿತ್ಯ ೩೦ ರಿಂದ ೬೦ ನಿಮಿಷಗಳ ಕಾಲ ವ್ಯಾಯಾಮ, ನಡಿಗೆ ಅಥವಾ ಕ್ರೀಡೆಗಳಲ್ಲಿ ಭಾಗವಹಿಸಿ. ಇದರಿಂದಾಗಿ ಅತಿಬೊಜ್ಜು, ಅಧಿಕ ತೂಕ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹ್ರುದ್ರೋಗಗಳಲ್ಲದೇ ಇತರ ಅನೇಕ ವ್ಯಾಧಿಗಳ ಸಂಭಾವ್ಯತೆಯನ್ನು ತಡೆಗಟ್ಟುವುದು ಸುಲಭಸಾಧ್ಯ ಎನಿಸುವುದು. 


 ವಿಶ್ವ ಮಧುಮೇಹ ದಿನದ ಮಹತ್ವ  

ಜಗತ್ತಿನಾದ್ಯಂತ ಅನಿಯಂತ್ರಿತವಾಗಿ ಹೆಚ್ಚುತ್ತಿರುವ "ಮಧುಮೇಹ" ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ, ವರ್ಷಂಪ್ರತಿ ನವಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ಅಂತರ ರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ನೇತ್ರತ್ವದಲ್ಲಿ ವಿವಿಧ ರಾಷ್ಟ್ರಗಳ ವೈದ್ಯಕೀಯ ಮತ್ತು ಸ್ವಯಂಸೇವಾ ಸಂಘಟನೆಗಳು ಈ ದಿನ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. 

ಅಸಂಖ್ಯ ಮಧುಮೇಹಿಗಳ ಪಾಲಿಗೆ "ಸಂಜೀವಿನಿ" ಎನಿಸಿರುವ "ಇನ್ಸುಲಿನ್" ಔಷದವನ್ನು ಚಾರ್ಲ್ಸ್ ಬೆಸ್ಟ್ ಅವರೊಂದಿಗೆ ಸಂಶೋಧಿಸಿದ ವೈದ್ಯಕೀಯ ವಿಜ್ಞಾನಿ ಫ್ರೆಡರಿಕ್ ಬಾಂಟಿಂಗ್ ರ ಜನ್ಮ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಧುಮೇಹ ವ್ಯಾಧಿಯ ಸಂಭಾವ್ಯತೆ, ತಡೆಗಟ್ಟುವ ಮಾರ್ಗೋಪಾಯಗಳು, ಇದರ ದುಷ್ಪರಿಣಾಮಗಳು,ಮಾರಕತೆ ಮತ್ತು ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 

ವಿಶ್ವ ಮಧುಮೇಹ ಒಕ್ಕೂಟವು "ಮಧುಮೇಹದಿಂದ ರಕ್ಷಿಸಿಕೊಳ್ಳಿ" ಎನ್ನುವ ಘೋಷಣೆಯೊಂದಿಗೆ ಈ ವರ್ಷದ ವಿಶ್ವ ಮಧುಮೇಹ ದಿನವನ್ನು ಆಚರಿಸುತ್ತಿದೆ. ಈ ಘೋಷಣೆಯನ್ನು ಅಕ್ಷರಶಃ ಪರಿಪಾಲಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ. 

ಡಾ. ಸಿ. ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ 
ಬೊಳುವಾರು,ಪುತ್ತೂರು,ದ. ಕ

ಉದಯವಾಣಿ ಪತ್ರಿಕೆಯ ದಿ. ೧೪-೧೧-೨೦೦೮ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 




Tuesday, November 12, 2013

Rogi bayasiddu haalu, Vaidyaru neediddu.........?



              ರೋಗಿ ಬಯಸಿದ್ದು ಹಾಲು, ವೈದ್ಯರು ನೀಡಿದ್ದು ........?

ತಮ್ಮ ವೃತ್ತಿಜೀವನದಲ್ಲಿ ವೈದ್ಯರು ಗಳಿಸುವ ವಿಶಿಷ್ಟ ಅನುಭವಗಳಲ್ಲಿ ಕೆಲವೊಂದು ಘಟನೆಗಳು ಅವಿಸ್ಮರಣೀಯ ಎನಿಸುತ್ತವೆ. ಬಹುತೇಕ ಸಂದರ್ಭಗಳಲ್ಲಿ ರೋಗಿಗಳ ಅಜ್ಞಾನ, ತಪ್ಪುಕಲ್ಪನೆಗಳು ಅಥವಾ ಮೂಢನಂಬಿಕೆಗಳೇ ಇದಕ್ಕೆ ಕಾರಣವಾಗಿರುತ್ತವೆ. 
--------------                ------------                  ------------------                -----------------                    ------------       ---------------

   ಬಹುತೇಕ ವಯೋವೃದ್ಧರಿಗೆ "ಮರಣದ ಭೀತಿ" ಕಾಡುವಂತೆಯೇ, ಅನೇಕ ಆರೋಗ್ಯವಂತರು ಹಾಗೂ ಮಧ್ಯವಯಸ್ಸಿನ ವ್ಯಕ್ತಿಗಳಿಗೆ ಶಾಶ್ವತ ಪರಿಹಾರವಿಲ್ಲದ ಗಂಭೀರ ಕಾಯಿಲೆಗಳ ಬಗ್ಗೆ ಅವ್ಯಕ್ತ ಭಯ ಇರುತ್ತದೆ. ಜೀವನ ಪರ್ಯಂತ ಔಷದ ಸೇವನೆಯ ಅನಿವಾರ್ಯತೆ ಇರುವ ಇಂತಹ ಕಾಯಿಲೆಗಳನ್ನು ವೈದ್ಯರು ನಿಖರವಾಗಿ ಪತ್ತೆಹಚ್ಚಿ ರೋಗಿಗೆ ತಿಳಿಸಿದಾಗ, ಈ ಕಾಯಿಲೆ ತನ್ನನ್ನು ಬಾಧಿಸುತ್ತಿದೆ ಎಂದು ಒಪ್ಪಿಕೊಳ್ಳಲು ಅನೇಕರು ಸಿದ್ಧರಿರುವುದಿಲ್ಲ. ಅಂತೆಯೇ ಈ ವ್ಯಾಧಿಯನ್ನು ನಿಯಂತ್ರಿಸಲು ಅವಶ್ಯಕವೆನಿಸುವ ಔಷದಗಳನ್ನು ಸೇವಿಸಲೂ ಒಪ್ಪುವುದೇ ಇಲ್ಲ!. 

ಇನ್ನು ಕೆಲವರು ತಮ್ಮ ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳನ್ನೇ ಪಡೆದುಕೊಳ್ಳುವುದಿಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೆ ಔಷದಗಳನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಳ್ಳುವ ಇಂತಹ ವ್ಯಕ್ತಿಗಳು, ಅನೇಕಬಾರಿ ತಮ್ಮ ನಿರ್ಲಕ್ಷ್ಯದಿಂದಾಗಿ ಅಯಾಚಿತ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಅಪರೂಪವೇನಲ್ಲ. 

ವೀರಪ್ಪನ ಬಿ. ಪಿ 

ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಅನಿವಾರ್ಯವಾಗಿ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ವೀರಪ್ಪನು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದಾಗಿ ಯಶಸ್ವೀ ಉದ್ಯಮಿ ಎನಿಸಿದ್ದನು. ಬಾಲ್ಯದಲ್ಲಿ ಕಿತ್ತು ತಿನ್ನುತ್ತಿದ್ದ ಬಡತನದಿಂದಾಗಿ ದಿನವಿಡೀ ಮೈಮುರಿಯುವಂತೆ ದುಡಿಯುತ್ತಿದ್ದ ವೀರಪ್ಪನಿಗೆ ಅನಾರೋಗ್ಯವೆಂದರೆ ಏನೆಂದೇ ತಿಳಿದಿರಲಿಲ್ಲ. ಜತೆಗೆ ಸಣ್ಣಪುಟ್ಟ ಕಾಯಿಲೆಗಳು ಬಾಧಿಸಿದ ಸಂದರ್ಭಗಳಲ್ಲೂ, ಔಷದ ಪಡಯಲು ಬೇಕಾದಷ್ಟು ಹಣ ಆತನಲ್ಲಿ ಇರುತ್ತಿರಲಿಲ್ಲ. ಏಕೆಂದರೆ ಆತನ ದುಡಿಮೆಯಿಂದಲೇ ಆತನ ತಾಯಿ ಮತ್ತು ತಂಗಿಯರ ಹೊಟ್ಟೆ ತುಂಬಬೇಕಿತ್ತು. 

ಆದರೆ ಇದೀಗ ಹತ್ತಾರು ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಿದ್ದ ವೀರಪ್ಪನು ೫೦ ವರ್ಷ ವಯಸ್ಸಾದ ಬಳಿಕ ಹೆಚ್ಚಿನ ಜವಾಬ್ದಾರಿಗಳನ್ನು ಮಗನಿಗೆ ವಹಿಸಿ, ಹೆಸರಿಗೆ ತಕ್ಕಂತೆ ಇವೆಲ್ಲವುಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದನು. 

ಇತ್ತೀಚಿನ ಕೆಲವು ತಿಂಗಳುಗಳಿಂದ ವೀರಪ್ಪನನ್ನು ಕಾಡುತ್ತಿದ್ದ ಅತಿಆಯಾಸ ಮತ್ತು ತಲೆನೋವಿನ ಸಮಸ್ಯೆಯು  ಹೆಚ್ಚಾದ ಕಾರಣದಿಂದಾಗಿ ನಗರದ ಖ್ಯಾತ ವೈದ್ಯರ ಸಲಹೆ ಪಡೆಯಲು ತೆರಳಿದ್ದನು. ವೀರಪ್ಪನ ಸಮಸ್ಯೆಗಳನ್ನು ಆಲಿಸಿದ ಬಳಿಕ ಶಾರೀರಿಕ ತಪಾಸಣೆಯನ್ನು ನಡೆಸಿದ ವೈದ್ಯರಿಗೆ ಆತನನ್ನು ಪೀಡಿಸುತ್ತಿರುವ ತೊಂದರೆಗಳಿಗೆ ಅಧಿಕ ರಕ್ತದೊತ್ತಡವೇ ಕಾರಣವೆಂದು ತಿಳಿಯಿತು. ಅಪಾಯಕಾರಿ ಮಟ್ಟವನ್ನು ತಲುಪಿದ್ದ ರಕ್ತದೊತ್ತಡವನ್ನು ಕ್ಷಿಪ್ರಗತಿಯಲ್ಲಿ ನಿಯಂತ್ರಿಸದೇ ಇದ್ದಲ್ಲಿ ಪ್ರಾಣಾಪಾಯಕ್ಕೆ ಕಾರಣವೆನಿಸುವ ಸಾಧ್ಯತೆಗಳನ್ನು ಅರಿತ ವೈದ್ಯರು, ತಕ್ಷಣವೇ ಚಿಕಿತ್ಸೆಯನ್ನು ಆರಂಭಿಸುವಂತೆ ಸೂಚಿಸಿದ್ದರು. ಜತೆಗೆ ಮರುದಿನ ಬೆಳಗ್ಗೆ ಆಹಾರ ಸೇವನೆಗೆ ಮುನ್ನ ರಕ್ತಪರೀಕ್ಷೆಯನ್ನು ಮಾಡಿಸಿಕೊಳ್ಳಲು ಆದೇಶಿಸಿದ್ದರು. ತನಗೆ ಅಧಿಕರಕ್ತದೊತ್ತಡ ಇದೆ ಎಂದು ಒಪ್ಪಲು ಸಿದ್ಧನಿಲ್ಲದ ವೀರಪ್ಪನು, ರಕ್ತಪರೀಕ್ಷೆಯ ಪರಿಣಾಮ ದೊರೆತ ಬಳಿಕವೇ ಚಿಕಿತ್ಸೆ ಆರಂಭಿಸುವುದಾಗಿ ಪಟ್ಟು ಹಿಡಿದಾಗ ಅನ್ಯಮಾರ್ಗವಿಲ್ಲದೆ ವೈದ್ಯರು ಸುಮ್ಮನಾಗಿದ್ದರು. 
 
ಮರುದಿನ ಸಂಜೆ ವೈದ್ಯರಲ್ಲಿಗೆ ಬಂದ ವೀರಪ್ಪನ ಗಂಟಿಕ್ಕಿದ ಮುಖವನ್ನು ಕಂಡ ವೈದ್ಯರಿಗೆ ಏನೋ ಎಡವಟ್ಟಾಗಿದೆ ಎನ್ನುವ ಸಂದೇಹ ಮೂಡಿತ್ತು. ಆದರೂ ಮುಗುಳುನಗೆಯೊಂದಿಗೆ ಆತನನ್ನು ಸ್ವಾಗತಿಸಿದ ವೈದ್ಯರು, ರಕ್ತ ಪರೀಕ್ಷೆ ಮಾಡಿಸಿಕೊಂಡಿರಾ ಎಂದು ಕೇಳಿದರು. ತಾನು ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದು, ಈ ಪರೀಕ್ಷೆಯನ್ನು ಮಾಡಿದ "ಡಾಕ್ಟರರು" ರಕ್ತದಲ್ಲೇನೂ ತೊಂದರೆಗಳಿಲ್ಲ ಎಂದು ಹೇಳಿದ್ದು, ನಿಮ್ಮ ಮಾತನ್ನು ನಂಬಿ ಬಿ. ಪಿ.  ಯ ಮಾತ್ರೆಗಳನ್ನು ನುಂಗಿದ್ದಲ್ಲಿ ಪಕ್ಷವಾತದಿಂದ ಹಾಸಿಗೆ ಹಿಡಿಯಬೇಕಿತ್ತು ಎಂದು ದೂರಿದ್ದನು. ಆತನ ಕಟು ಮಾತುಗಳನ್ನು ಕೇಳಿ ದಿಗ್ಭ್ರಾಂತರಾದ ವೈದ್ಯರು ಸಾವರಿಸಿಕೊಳ್ಳುವಷ್ಟರಲ್ಲಿ, ವೀರಪ್ಪನು ದುರ್ದಾನ ಪಡೆದವನಂತೆ ಹೊರನಡೆದಿದ್ದನು!. 

ನಿಜ ಹೇಳಬೇಕಿದ್ದಲ್ಲಿ ವೀರಪ್ಪನ ಸೋದರ ಸಂಬಂಧಿಯೊಬ್ಬರು ಅಧಿಕ ರಕ್ತದೊತ್ತಡ ಪೀಡಿತರಾಗಿದ್ದು, ಔಷದಗಳನ್ನು ಕ್ರಮಬದ್ಧವಾಗಿ ಸೇವಿಸದ ಕಾರಣದಿಂದಾಗಿ ಪಕ್ಷವಾತಕ್ಕೆ ಈಡಾಗಿದ್ದರು.ಸೂಕ್ತ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಈ ರೋಗಿಗೆ ಬಿ. ಪಿ. ಯ ಮಾತ್ರೆಗಳನ್ನು ದಿನನಿತ್ಯ ತಪ್ಪದೆ ಜೀವನಪರ್ಯಂತ ಸೇವಿಸಬೇಕೆಂದು ತಜ್ನವೈದ್ಯರು ಎಚ್ಚರಿಕೆ ನೀಡಿದ್ದರು. ಈ ವಿಚಾರವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದ ವೀರಪ್ಪನ ಅಭಿಪ್ರಾಯವು ಇದಕ್ಕೆ ತದ್ವಿರುದ್ಧವಾಗಿತ್ತು. ಇದೇ ಕಾರಣದಿಂದಾಗಿ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ಹಿಂಜರಿದಿದ್ದ ವೀರಪ್ಪನ ರಕ್ತವನ್ನು ಪರೀಕ್ಷಿಸಿದ್ದ ಮೈಕ್ರೋ ಬಯಾಲಜಿಸ್ಟ್ "ನಿಮಗೇನೂ ತೊಂದರೆಯಿಲ್ಲ"(ಅರ್ಥಾತ್ ಆತನ ರಕ್ತದಲ್ಲಿನ ಕೊಲಸ್ಟ ರಾಲ್ ಮತ್ತು ಟ್ರೈ ಗ್ಲಿಸರೈಡ್ ಗಳ ಪ್ರಮಾಣವು ನಾರ್ಮಲ್ ಆಗಿವೆ) ಎಂದು ಹೇಳಿದಾಗ, ತನಗೆ ಅಧಿಕ ರಕ್ತದೊತ್ತಡ ಇಲ್ಲವೆಂದು ವೀರಪ್ಪನು ಅಪಾರ್ಥ ಮಾಡಿಕೊಂಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವೆನಿಸಿತ್ತು!. 

ಭಾಗ-೨

ಸುಮಾರು ಮೂರು ತಿಂಗಳುಗಳ ಬಳಿಕ ತನ್ನ ಅತಿಆಯಾಸ ಮತ್ತು ತಲೆನೋವುಗಳನ್ನು ಸಹಿಸಲಾಗದ ವೀರಪ್ಪನು, ಮಂಗಳೂರಿನ ದೊಡ್ದಾಸ್ಪತ್ರೆಯ ಸುಪ್ರಸಿದ್ಧ ತಜ್ಞರನ್ನು ಭೇಟಿಯಾದನು. ಈ ಸಂದರ್ಭದಲ್ಲಿ ಆತನಿಂದ ಹಿಂದೆ ನಡೆದಿದ್ದ ಘಟನೆಯನ್ನು ಕೇಳಿ ತಿಳಿದ ವೈದ್ಯರು ಮೀಸೆಯಡಿಯಲ್ಲೇ ನಕ್ಕರು. ವೀರಪ್ಪನನ್ನು ಕೂಲಂಕುಶವಾಗಿ ಪರೀಕ್ಷಿಸಿದ ವೈದ್ಯರಿಗೆ ಆತನ ರಕ್ತದೊತ್ತಡವು ಅತಿಯಾಗಿರುವುದು ತಿಳಿದುಬಂದಿತ್ತು. ಆದರೆ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ಸಿದ್ಧನಿಲ್ಲದ ಆತನಿಗೆ ಒಳ್ಳೆಯ ಉದ್ದೇಶದಿಂದ ಸುಳ್ಳು ಹೇಳುವ ಧರ್ಮಸಂಕಟ ವೈದ್ಯರಿಗೆ ಬಂದಿತ್ತು. 

ವೀರಪ್ಪನಿಗೆ ಗಂಭೀರ ತೊಂದರೆಗಳಿಲ್ಲವೆಂದು ಸಮಾಧಾನ ಹೇಳಿದ ವೈದ್ಯರು, ಆತನ ಬಳಲಿಕೆ ಮತ್ತು ತಲೆನೋವುಗಳನ್ನು ನಿವಾರಿಸಲು ಔಷದಗಳನ್ನು ಸೂಚಿಸಿದರು. ಜತೆಗೆ ಮಧ್ಯವಯಸ್ಸನ್ನು ಮೀರಿದವರನ್ನು ಬಾಧಿಸುವ ಅತಿಆಯಾಸವನ್ನು ಶಾಶ್ವತವಾಗಿ ಪರಿಹರಿಸುವುದು ಅಸಾಧ್ಯವೆನಿಸುವುದರಿಂದ, ತಾನು ಸೂಚಿಸಿದ "ಶಕ್ತಿ ವರ್ಧಕ" ಔಷದಗಳನ್ನು ದಿನನಿತ್ಯ ತಪ್ಪದೆ ಸೇವಿಸುವಂತೆ ಹೇಳಿದರು. 

ವೈದ್ಯರ ಸೂಚನೆಗಳನ್ನು ಅಕ್ಷರಶಃ ಪರಿಪಾಲಿಸಿದ ವೀರಪ್ಪನ ತೊಂದರೆಗಳು ವಾರ ಕಳೆಯುವಷ್ಟರಲ್ಲೇ ಮಾಯವಾಗಿದ್ದವು. ವೈದ್ಯರು ನೀಡಿದ್ದ ಶಕ್ತಿ ವರ್ಧಕ ಮಾತ್ರೆಗಳು ನಿಜಕ್ಕೂ ಅದ್ಭುತ ಪರಿಣಾಮವನ್ನು ತೋರಿದ್ದವು!. 

ಸುಮಾರು ಆರು ತಿಂಗಳುಗಳ ಬಳಿಕ ವೀರಪ್ಪನ ಮನೆಗೆ ಭೇಟಿ ನೀಡಿದ್ದ ಸೋದರಮಾವನೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ, ಅವರಿಗೂ ಅತಿಆಯಾಸ ಮತ್ತು ತಲೆನೋವಿನ ಬಾಧೆಯಿರುವುದನ್ನು ಅರಿತ ವೀರಪ್ಪನು ತಾನು ಸೇವಿಸುತ್ತಿರುವ ಮಾತ್ರೆಯೊಂದನ್ನು ಅವರಿಗೆ ನೀಡಿದ್ದನು. ಈ ಮಾತ್ರೆಯನ್ನು ಗುರುತಿಸಿದ ಸೋದರಮಾವನು, ಇವು ತಾನು ಹಿಂದೆ ಸೇವಿಸುತ್ತಿದ್ದ ಬಿ. ಪಿ. ಯ ಮಾತ್ರೆಯೆಂದು ಹೇಳಿದಾಗ ವೀರಪ್ಪನಿಗೆ ಗಾಬರಿಯಾಗಿತ್ತು.

ಮರುದಿನ ಔಷದ ಅಂಗಡಿಗೆ ತೆರಳಿ ಇದು ಬಿ. ಪಿ. ಯ ಮಾತ್ರೆ ಎನ್ನುವುದನ್ನು ಖಚಿತಪಡಿಸಿಕೊಂಡ ವೀರಪ್ಪನು, ಪಕ್ಕದಲ್ಲೇ ಇದ್ದ ವೈದ್ಯರಲ್ಲಿ ತನ್ನ ರಕ್ತದ ಒತ್ತಡವನ್ನು ಪರೀಕ್ಷಿಸುವಂತೆ ಹೇಳಿದ್ದನು. ಆತನ ವ್ಯಾಧಿಯ ಬಗ್ಗೆ ಅರಿವಿಲ್ಲದ ವೈದ್ಯರು ಆತನನ್ನು ಪರೀಕ್ಷಿಸಿದ ಬಳಿಕ ಬಿ. ಪಿ. ತೃಪ್ತಿಕರವಾಗಿದೆ ಎಂದಿದ್ದರು. ಆದರೆ ತಜ್ನವೈದ್ಯರು ನೀಡಿದ್ದ ಮಾತ್ರೆಗಳ ಸೇವನೆಯಿಂದಲೇ ತನ್ನ ರಕ್ತದೊತ್ತಡ ಕಡಿಮೆಯಾಗಿರುವುದನ್ನು ನಂಬಲು ಸಿದ್ಧನಿಲ್ಲದ ವೀರಪ್ಪನಿಗೆ, ಶಕ್ತಿವರ್ಧಕ ಮಾತ್ರೆಗಳೆಂದು ಬಿ. ಪಿ. ಯ ಮಾತ್ರೆ ನೀಡಿದ ವೈದ್ಯರ ಮೇಲೆ ಭಾರೀ ಸಿಟ್ಟುಬಂದಿತ್ತು. ಇದರೊಂದಿಗೆ ಈ ಮಾತ್ರೆಗಳ ಸೇವನೆಯೂ ನಿಂತುಹೋಗಿತ್ತು!. 

ಭಾಗ- ೩ 

ತಜ್ಞವೈದ್ಯರ ಚಿಕಿತ್ಸೆಯಿಂದ ತನ್ನ ಸಮಸ್ಯೆಗಳು ಪರಿಹಾರಗೊಂಡಿದ್ದರೂ, ಬಿ. ಪಿ. ಯಾ ಮಾತ್ರೆಗಳ ಸೇವನೆಯನ್ನು ನಿಲ್ಲಿಸಿದ್ದ ವೀರಪ್ಪನಿಗೆ ಮುಂದೆ ಸಂಭವಿಸಬಹುದಾದ ಅನಾಹುತಗಳ ಅರಿವಿರಲಿಲ್ಲ. ಔಷದ ಸೇವನೆಯನ್ನು ನಿಲ್ಲಿಸಿ ವಾರ ಕಳೆಯುವಷ್ಟರಲ್ಲೇ ಮತ್ತೆ ಮರುಕಳಿಸಿದ ತಲೆನೋವಿನೊಂದಿಗೆ, ತಲೆತಿರುಗಿದಂತಾಗುವ ತೊಂದರೆಯೂ ಹೊಸದಾಗಿ ಆರಂಭವಾಗಿತ್ತು. ಇದರಿಂದಾಗಿ ಆತನಿಗೆ ಸಾಕಷ್ಟು ಹಿಂಸೆಯಾಗುತ್ತಿದ್ದರೂ, ಮತ್ತೆ ಮಾತ್ರೆಗಳನ್ನು ಸೇವಿಸದಿರಲು, ಪಕ್ಷವಾತದ ಹೆದರಿಕೆಯೇ ಕಾರಣವಾಗಿತ್ತು. 

ಚಿಕಿತ್ಸೆಯನ್ನು ನಿಲ್ಲಿಸಿ ಒಂದೆರಡು ತಿಂಗಳುಗಳ ಬಳಿಕ ತನ್ನ ತಂಗಿಯ ಮನೆಯಲ್ಲಿನ ಶುಭಕಾರ್ಯಕ್ಕೆ ಹೋಗಿದ್ದ ವೀರಪ್ಪನು ಒಂದೆರಡು ರಾತ್ರಿ ನಿದ್ದೆಗೆಟ್ಟಿದ್ದನು. ಊರಿಗೆ ಮರಳಿದಂದು ಮಧ್ಯರಾತ್ರಿಯಲ್ಲಿ ಎಚ್ಚರಗೊಂಡ ವೀರಪ್ಪನಿಗೆ ಮೂತ್ರಶಂಕೆಗೆ ಹೋಗಬೇಕೆನಿಸಿತ್ತು. ಹಾಸಿಗೆಯಿಂದ ಎದ್ದೇಳಲು ಪ್ರಯತ್ನಿಸಿದಾಗ ಆತನ ಶರೀರದ ಬಳಭಾಗವು ಜೋಮುಹಿಡಿದಂತಾಗಿದ್ದು, ಸಂಪೂರ್ಣವಾಗಿ ನಿಶ್ಚೇಷ್ಟಿತವಾಗಿತ್ತು. ಪತ್ನಿಯನ್ನು ಕರೆಯಲು ಪ್ರಯತ್ನಿಸಿದಾಗ ನಾಲಿಗೆಯೂ ಸ್ವಾಧೀನದಲ್ಲಿ ಇಲ್ಲದಿರುವುದು ಅರಿವಿಗೆ ಬಂದಂತೆಯೇ, ಹತಾಶನಾಗಿ ಕಣ್ಣೀರು ಸುರಿಸಿದ್ದನು. 

ಅದೃಷ್ಟವಶಾತ್ ನಾಯಿ ಬೊಗಳಿದ ಸದ್ದಿಗೆ ಎಚ್ಚೆತ್ತ ಆತನ ಪತ್ನಿಯು ಹಜಾರಕ್ಕೆ ಬಂದು ದೀಪ ಉರಿಸಿದಾಗ, ಆಕೆಯನ್ನು ಕಂಡು ಮಾತನಾಡಲು ಪ್ರಯತ್ನಿಸಿ ತೊದಲುತ್ತಿದ್ದ ಪತಿಯ ಮುಖವೂ ವಕ್ರವಾಗಿದ್ದನ್ನು ಕಂಡು ಗಾಬರಿಯಿಂದ ಮಗನನ್ನು ಕರೆದಿದ್ದಳು. ಅರ್ಧ ಗಂಟೆಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟ ವೀರಪ್ಪನಿಗೆ ಸೂಕ್ತ ಸಮಯದಲ್ಲಿ ತುರ್ತುಚಿಕಿತ್ಸೆ ಲಭಿಸಿತ್ತು. ಮರುದಿನ ಸಂಜೆಯ ಹೊತ್ತಿಗೆ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ವೀರಪ್ಪನನ್ನು ಕಂಡು, ಮನೆಮಂದಿ ನಿಟ್ಟುಸಿರು ಬಿಟ್ಟಿದ್ದರು. ಚಿಕಿತ್ಸೆ ನೀಡಿದ ತಜ್ಞವೈದ್ಯರ ಅಭಿಪ್ರಾಯದಂತೆ ರೋಗಿಯ ರಕ್ತನಾಳದಲ್ಲಿ ಹೆಪ್ಪುಗಟ್ಟಿದ ರಕ್ತದ ತುಣುಕಿನಿಂದ ಉದ್ಭವಿಸಿದ ಅಡಚಣೆಯಿಂದಾಗಿ ಕ್ಷಣಕಾಲ ಬಾಧಿಸುವ "ಟ್ರಾನ್ಸಿಯೆಂಟ್ ಇಸ್ಕೀಮಿಕ್ ಎಟಾಕ್" ವೀರಪ್ಪನನ್ನು ಕಾಡಿತ್ತು. ಅದೃಷ್ಟವಶಾತ್ ತುರ್ತು ಚಿಕಿತ್ಸೆ ಲಭಿಸಿದ್ದರಿಂದ ಶಾಶ್ವತವಾದ ಹಾಗೂ ಸುದೀರ್ಘಕಾಲ ಬಾಧಿಸಬಲ್ಲ ಶಾರೀರಿಕ ನ್ಯೂನತೆಗಳು ಉದ್ಭವಿಸಿರಲಿಲ್ಲ. 

ಕೆಲವೇ ದಿನಗಳಲ್ಲಿ ಮನೆಗೆ ಮರಳಿದ ವೀರಪ್ಪನು ಸಂಪೂರ್ಣವಾಗಿ ಗುನಮುಖನಾಗಿದ್ದನು. ಜತೆಗೆ ತನ್ನ ನಿರ್ಲಕ್ಷ್ಯ ಮತ್ತು ತಪ್ಪು ಕಲ್ಪನೆಗಳಿಂದಾಗಿ ಸಂಭವಿಸಿದ್ದ ಅನಾಹುತದಿಂದ ಕೂದಲೆಳೆಯಷ್ಟು ಅಂತರದಿಂದ ಪಾರಗಿದ್ದುದನ್ನು ಅರ್ಥೈಸಿಕೊಂಡಿದ್ದ ಆತನು, ಜೀವನ ಪರ್ಯಂತ ಬಿ. ಪಿ. ಯ ಮಾತ್ರೆಗಳನ್ನು ಸೇವಿಸಲು ನಿರ್ಧರಿಸಿದ್ದನು. 

ಕೊನೆಯ ಮಾತು 

ಶಾಶ್ವತ ಪರಿಹಾರವಿಲ್ಲದ ಅಥವಾ ಇತರ ಗಂಭೀರ ಕಾಯಿಲೆಗಳು ಬಾಧಿಸಿದ ಸಂದರ್ಭದಲ್ಲಿ ವೈದ್ಯರ ಚಿಕಿತ್ಸೆಯನ್ನು ನಿರಾಕರಿಸುವ ಅಸಂಖ್ಯ ರೋಗಿಗಳು ಅನಾವಶ್ಯಕವಾಗಿ ಪ್ರಾಣಾಪಾಯಕ್ಕೆ ಕಾರಣವೆನಿಸಬಲ್ಲ ಸಮಸ್ಯೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ. ಅಂತೆಯೇ ಹೃದ್ರೋಗ,ಮಧುಮೇಹ ಹಾಗೂ  ಅಧಿಕ ರಕ್ತದೊತ್ತಡಗಳಂತಹ ವ್ಯಾಧಿಗಳು ತಲೆದೋರಿದಾಗ ಜೀವನಪರ್ಯಂತ ಔಷದ ಸೇವನೆ ಒಳ್ಳೆಯದಲ್ಲ ಅಥವಾ ಅಪಾಯಕಾರಿ ಎಂದು ಭಾವಿಸಿ, ವೈದ್ಯರು ಸೂಚಿಸಿದ ಔಷದಗಳ ಪ್ರಮಾಣ( ಒಂದು ಮಾತ್ರೆಗೆ ಬದಲಾಗಿ ಅರ್ಧ ಮಾತ್ರೆ) ಹಾಗೂ ಅವಧಿ (ದಿನನಿತ್ಯ ಸೇವಿಸುವ ಬದಲಾಗಿ ಎರಡು ದಿನಗಳಿಗೊಮ್ಮೆ) ಗಳನ್ನು ತಾವಾಗಿ ಬದಲಾಯಿಸಿಕೊಳ್ಳುತ್ತಾರೆ. ಬಳಿಕ ಯಾವುದೇ ತೊಂದರೆಗಳು ಕಂಡುಬರದೇ ಇದ್ದಲ್ಲಿ, ತಮ್ಮ ಬಂಧುಮಿತ್ರರಿಗೂ ಇಂತಹ ಉಪಕ್ರಮಗಳನ್ನು ಅನುಸರಿಸುವಂತೆ ಸಲಹೆಯನ್ನೂ ನೀಡುತ್ತಾರೆ!. ತತ್ಪರಿಣಾಮವಾಗಿ ಅನಿರೀಕ್ಷಿತವಾಗಿ ಉದ್ಭವಿಸುವ ಅಪಾಯಕಾರಿ ಸನ್ನಿವೇಶಗಳಿಂದ ಪಾರಾಗಿ ಬಂದಲ್ಲಿ "ಕೆಟ್ಟ ಮೇಲೆ ಬುದ್ಧಿ ಬಂತು" ಎನ್ನುವಂತೆ ಜೀವನಪರ್ಯಂತ ವೈದ್ಯರ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪರಿಪಾಲಿಸುತ್ತಾರೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೧-೧೦-೨೦೦೭ ರ ಸಂಚಿಕೆಯ ಬಳಕೆದಾರ:ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 


Monday, November 11, 2013

Influenza


                           ಇನ್ ಫ್ಲುಯೆಂಜಾ ಜ್ವರ: ಏನಿದರ ಅವತಾರ?

ವರ್ಷಂಪ್ರತಿ ನಮ್ಮೆಲ್ಲರನ್ನೂ ತಪ್ಪದೆ ಪೀಡಿಸುವ,ಜನಸಾಮಾನ್ಯರು ಕ್ಷುಲ್ಲಕವೆಂದು ಭಾವಿಸಿ ನಿರ್ಲಕ್ಷಿಸುವ ಕಾಯಿಲೆಗಳಲ್ಲಿ ಇನ್ ಫ್ಲುಯೆಂಜಾ ಜ್ವರ ಕೂಡಾ ಒಂದಾಗಿದೆ. ಆದರೆ ಈ ವ್ಯಾಧಿಯ ವಿವಿಧ ಅವತಾರಗಳು, ಇದರ ಸಾಂಕ್ರಾಮಿಕತೆ, ತೀವ್ರತೆ ಮತ್ತು ಮಾರಕತೆಗಳ ಬಗ್ಗೆ ಅವಶ್ಯಕ ಮಾಹಿತಿಗಳ ಅರಿವಿಲ್ಲದಿರುವುದೇ ಜನರು ಇದನ್ನು ನಿರ್ಲಕ್ಷಿಸಲು ಪ್ರಮುಖ ಕಾರಣವೆನಿಸಿದೆ!. 
------------------                          -----------------------------                         -------------------------------------                        -------------------------------                 ---------------------

ಮಳೆಗಾಲದಲ್ಲಿ ಮಳೆಗೆ ಒದ್ದೆಯಾಗುವುದರಿಂದ ಅಥವಾ ಋತುಗಳು ಬದಲಾದಾಗ ಆರಂಭವಾಗುವುದೆಂದು ಇಂದಿಗೂ ಅನೇಕರು ನಂಬಿರುವ, ಆಡುಭಾಷೆಯಲ್ಲಿ "ಫ್ಲೂ ಜ್ವರ" ಎಂದು ಕರೆಯಲ್ಪಡುವ ಕಾಯಿಲೆಯನ್ನು, ವೈದ್ಯಕೀಯ ಪರಿಭಾಷೆಯಲ್ಲಿ "ಇನ್ ಫ್ಲುಯೆಂಜಾ" ಎನ್ನುತ್ತಾರೆ. ನಾಲ್ಕಾರು  ದಿನಗಳಲ್ಲಿ ಗುಣವಾಗುವ "ಶೀತ- ಜ್ವರ" ಗಳ ಸಂಮಿಶ್ರಣವೆಂದು ಜನರು ಉಪೇಕ್ಷಿಸುವ ಈ ಕಾಯಿಲೆಯ ಕೆಲವೊಂದು ಅವತಾರಗಳು ನಿಜಕ್ಕೂ "ಅತಿ ಭಯಂಕರ" ವೂ ಹೌದು. 

ಇತಿಹಾಸ 

ನೂರಾರು ವರ್ಷಗಳಿಂದ ತನ್ನ ವಿವಿಧ ಅವತಾರಗಳ ಮೂಲಕ ಮನುಕುಲಕ್ಕೆ ಮಾರಕವೆನಿಸಿರುವ ಇನ್ ಫ್ಲುಯೆಂಜಾ ವ್ಯಾಧಿಗೆ ತನ್ನದೇ ಆದ ಇತಿಹಾಸವಿದೆ. ಗತ ಶತಮಾನದಲ್ಲಿ ನಾಲ್ಕು ಬಾರಿ ಜಾಗತಿಕವಾಗಿ ತನ್ನ ಸಾಂಕ್ರಾಮಿಕತೆಯನ್ನು ಮೆರೆದು, ಲಕ್ಷಾಂತರ ಜನರನ್ನು ಬಲಿಪಡೆದಿದ್ದ ಈ ಫ್ಲೂ ಜ್ವರದ ವಿವಿಧ ಅವತಾರಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

೧೯೧೮-೧೯ ರಲ್ಲಿ ಮೊತ್ತ ಮೊದಲ ಬಾರಿಗೆ ತನ್ನ ತೀವ್ರ ಸಾಂಕ್ರಾಮಿಕತೆ  ಹಾಗೂ ಮಾರಕತೆಗಳಿಂದಾಗಿ ಪ್ರಥಮ ಜಾಗತಿಕ ಯುದ್ಧದಲ್ಲಿ ಮಾಡಿದವರ ನಾಲ್ಕು ಪಟ್ಟು, ಅಂದರೆ ೪೦ ದಶಲಕ್ಷಕ್ಕೂ ಅಧಿಕ ಜನರ ಮರಣಕ್ಕೆ ಕಾರಣವೆನಿಸಿದ್ದ ಇನ್ ಫ್ಲುಯೆಂಜಾ ವ್ಯಾಧಿಯು ಇದೇ ಕಾರಣದಿಂದಾಗಿ ಭಯಾನಕವೆನಿಸಿತ್ತು. ಅಂತೆಯೇ ವೈದ್ಯಕೀಯ ವಿಜ್ಞಾನಿಗಳ ಗಮನವನ್ನು ಸೆಳೆಯಲು ಯಶಸ್ವಿಯಾಗಿತ್ತು.

ಬಳಿಕ ೧೯೫೭ ರಲ್ಲಿ "ಏಶಿಯನ್ ಫ್ಲೂ" ಮತ್ತು ೧೯೬೮ ರಲ್ಲಿ" ಹಾಂಗ್ ಕಾಂಗ್ ಫ್ಲೂ" ಗಳ ರೂಪದಲ್ಲಿ ಮರುಕಳಿಸಿದ್ದ ಈ ವ್ಯಾಧಿಯು, ಮೂರರಿಂದ ನಾಲ್ಕು ದಶಲಕ್ಷ ರೋಗಿಗಳ ಪ್ರಾಣಕ್ಕೆ ಎರವಾಗಿತ್ತು. ತದನಂತರ ೧೯೮೬ ರಿಂದ ೧೯೯೭ ರ ನಡುವೆ ವಿವಿಧ ಅವತಾರಗಳಲ್ಲಿ ಪ್ರತ್ಯಕ್ಷವಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತಾಂಡವವಾಡಿತ್ತು. 

೧೯೯೭ ರ ಎಪ್ರಿಲ್- ಮೇ ತಿಂಗಳುಗಳಲ್ಲಿ ಮತ್ತೊಮ್ಮೆ ವಿನೂತನ ರೂಪದಲ್ಲಿ ಪ್ರತ್ಯಕ್ಷವಾಗಿ, ಮಿಂಚಿನಂತೆ ಸಂಚರಿಸಿ, ಹಲವಾರು ದೇಶಗಳಲ್ಲಿ ಕೋಟ್ಯಂತರ ಕೋಳಿಗಳ ಮಾರಣ ಹೋಮಕ್ಕೆ ಕಾರಣವೆನಿಸಿದ್ದ "ಪಕ್ಷಿ ಜ್ವರ" ವೂ ಇನ್ ಫ್ಲುಯೆಂಜಾ ವ್ಯಾಧಿಯ ಮತ್ತೊಂದು ರೂಪವಾಗಿತ್ತು. ಏವಿಯನ್ ಫ್ಲೂ ಅರ್ಥಾತ್ ಪಕ್ಷಿ ಜ್ವರವೆಂದೇ ಕುಖ್ಯಾತವಾಗಿದ್ದ ಮಾರಕ ಕಾಯಿಲೆಗೆ ಇನ್ ಫ್ಲುಯೆಂಜಾ ವೈರಸ್ ಗಳ ಪರಿವರ್ತಿತ ತಳಿಯೊಂದು ಕಾರಣವೆನಿಸಿತ್ತು. 

ಸಾಮಾನ್ಯವಾಗಿ ಪಕ್ಷಿ ಜ್ವರಕ್ಕೆ ಕಾರಣವೆನಿಸುವ ಈ ವೈರಸ್, ಮನುಷ್ಯರನ್ನು ಬಾಧಿಸುವುದಿಲ್ಲ. ಆದರೆ ೧೯೯೭ ರಿಂದ ೨೦೦೫ ರ ಅವಧಿಯಲ್ಲಿ ವಿಶೇಷವಾಗಿ ಏಶಿಯಾ ಖಂಡದ ಅನೇಕ ದೇಶಗಳ ಪ್ರಜೆಗಳಲ್ಲಿ ಇದರ ಸೋಂಕು ಬಾಧಿಸಿರುವುದು ಪತ್ತೆಯಾಗಿತ್ತು. ಮಾತ್ರವಲ್ಲ, ಈ ಸೋಂಕು ತಗಲಿದ ಸಹಸ್ರಾರು ಜನರಲ್ಲಿ ೮೦ ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದರು. 

ಕುಕ್ಕುಟ ಜ್ವರ ಪ್ರತ್ಯಕ್ಷವಾಗಿ ತಿಂಗಳು ಕಳೆಯುವಷ್ಟರಲ್ಲೇ ಆಕಸ್ಮಿಕವಾಗಿ ಉದ್ಭವಿಸಿ ಕಾಡ್ಗಿಚ್ಚಿನಂತೆ ಹರಡಿದ್ದ "ಸಾರ್ಸ್", ಸುಮಾರು ೨೦ ದೇಶಗಳ ೮೦೦೦ ಸಾವಿರ ಜನರನ್ನು ಬಾಧಿಸಿದ ಪರಿಣಾಮವಾಗಿ ೮೦೦ ಕ್ಕೂ ಅಧಿಕ ರೋಗಿಗಳು ಮೃತಪಟ್ಟಿದ್ದರು. ಈ ಭಯಾನಕ ಘಟನೆಯು ಇದೇ ರೀತಿಯಲ್ಲಿ ಪದೇ ಪದೇ ಹೊಸ ರೂಪದಲ್ಲಿ ಪ್ರತ್ಯಕ್ಷವಾಗಿ, ಕ್ಷಿಪ್ರಗತಿಯಲ್ಲಿ ಹರಡಬಲ್ಲ ಈ ಕಾಯಿಲೆಯು, ಜಾಗತಿಕರೂಪದಲ್ಲಿ ತನ್ನ ಸಾಂಕ್ರಾಮಿಕತೆ ಹಾಗೂ ಮಾರಕತೆಗಳನ್ನು ತೋರುವ ಸಂಭಾವ್ಯತೆಗಳ ಸ್ಪಷ್ಟ ಉದಾಹರಣೆಯೂ ಆಗಿದೆ. ಕೊರೊನಾ ವೈರಸ್ ಗಳಿಂದ ಉದ್ಭವಿಸುವ ಸಾರ್ಸ್ ಅಥವಾ ಮಿಕ್ಸೋ ವೈರಸ್ ಗಳಿಂದ ಆರಂಭವಾಗುವ ಫ್ಲೂ, ಇವೆರಡೂ ವ್ಯಾಧಿಗಳಿಗೆ ಕಾರಣವೆನಿಸುವ ವೈರಸ್ ಗಳು ತ್ವರಿತ ಗತಿಯಲ್ಲಿ ಹರಡುವ ಸಾಧ್ಯತೆಗಳಿಂದಾಗಿ ಇವುಗಳ ಮಾರಕತೆಯ ಪ್ರಮಾಣವೂ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. 

ಕಳೆದ ಒಂದು ದಶಕದಲ್ಲಿ ಇವೆರಡೂ ವ್ಯಾಧಿಗಳು ತೋರಿದ್ದ ಹಾವಳಿಯು ವೈದ್ಯಕೀಯ ವಿಜ್ಞಾನಿಗಳನ್ನು ತಲ್ಲಣಗೊಳಿಸಿತ್ತು. ಏಕೆಂದರೆ ಈ ಆಧುನಿಕ ಯುಗದಲ್ಲಿ ದೇಶ- ವಿದೇಶಗಳ ನಡುವೆ ಕ್ಷಿಪ್ರವಾಗಿ ಸಂಚರಿಸಬಲ್ಲ ವಿಮಾನಯಾನದಿಂದಾಗಿ, ಯಾವುದೇ ಸಾಂಕ್ರಾಮಿಕ ವ್ಯಾಧಿಯು ಅಷ್ಟೇ ಕ್ಷಿಪ್ರಗತಿಯಲ್ಲಿ ವಿಶ್ವದ ಹಲವಾರು ರಾಷ್ಟ್ರಗಳಿಗೆ ಸುಲಭದಲ್ಲೇ ಹರಡುವ ಸಾಧ್ಯತೆಗಳಿವೆ. ಇದೇ ಕಾರಣದಿಂದಾಗಿ ಇಂತಹ ವ್ಯಾಧಿಗಳು ಜಗತ್ತಿನಾದ್ಯಂತ ಹರಡಿದಲ್ಲಿ ಸಂಭವಿಸಬಲ್ಲ ಕಷ್ಟ ನಷ್ಟಗಳು ಮತ್ತು ಪ್ರಾಣಹಾನಿಗಳನ್ನು ಊಹಿಸುವುದು ಕೂಡಾ ಅಸಾಧ್ಯವೆನಿಸುತ್ತದೆ. 

ಏನಿದು ಇನ್ ಫ್ಲುಯೆಂಜಾ?

'ಮಿಕ್ಸೋ ವೈರಸ್' ಎನ್ನುವ ಗುಂಪೊಂದು ಇನ್ ಫ್ಲುಯೆಂಜಾ ಉದ್ಭವಿಸಲು ಕಾರಣವೆನಿಸುತ್ತದೆ. ಸಾಮಾನ್ಯವಾಗಿ ಸಾಂಕ್ರಾಮಿಕ ರೂಪದಲ್ಲಿ ಕಂಡುಬರುವ ಈ ವ್ಯಾಧಿಯು ಕೆಲ ಸಂದರ್ಭಗಳಲ್ಲಿ ಕಾರಣಾಂತರಗಳಿಂದ ತೀವ್ರ ಸಾಂಕ್ರಾಮಿಕ ರೂಪವನ್ನು ತಳೆದು ವ್ಯಾಪಕವಾಗಿ ಹರಡಿ, ತನ್ನ ಮಾರಕತೆಯನ್ನು ಮೆರೆಯುತ್ತದೆ. 

ಈ ವೈರಸ್ ಗಳಲ್ಲಿ ಮೂರು ಪ್ರಭೇದಗಳಿದ್ದು ಇವುಗಳನ್ನು ಎ, ಬಿ ಮತ್ತು ಸಿ ಗಳೆಂದು ವಿಂಗಡಿಸಲಾಗಿದೆ. ಇವುಗಳಲ್ಲಿ ಬಿ ಮತ್ತು ಸಿ ವೈರಸ್ ಗಳು ಕೇವಲ ಮನುಷ್ಯರಲ್ಲಿ ಮಾತ್ರ ಕಂಡುಬರುತ್ತವೆ. ಅದರಲ್ಲೂ ಸಿ ವೈರಸ್ ಗಳು ಅತ್ಯಂತ ಅಪರೂಪವೆನಿಸಿವೆ. ಅದೇ ರೀತಿಯಲ್ಲಿ ಬಿ ವಿಧದ ವೈರಸ್ ಗಳ ತೀವ್ರತೆ ಹಾಗೂ ಸಾಂಕ್ರಾಮಿಕತೆಗಳು ಅಲ್ಪ ಪ್ರಮಾಣದಲ್ಲಿ ಇರುವುದರಿಂದ ಇವುಗಳ ಉಪಟಳಗಳೂ ನಗಣ್ಯವೆನಿಸಿವೆ. 

ಆದರೆ ಇನ್ ಫ್ಲುಯೆಂಜಾ ಎ ಪ್ರಭೇದಕ್ಕೆ ಸೇರಿದ ವೈರಸ್ ಗಳು ಕೆಲವೊಂದು ಪ್ರಾಣಿಗಳು ಮತ್ತು ಪಕ್ಷಿಗಳಲ್ಲಿ, ಅದರಲ್ಲೂ ವಿಶೇಷವಾಗಿ ವಲಸೆ ಹೋಗುವ ಸ್ವಭಾವದ ಜಲಪಕ್ಷಿಗಳಲ್ಲಿ ಕಂಡುಬರುವುದರಿಂದ ಅತ್ಯಂತ ಅಪಾಯಕಾರಿ ಎನಿಸುತ್ತವೆ. ಎ ವೈರಸ್ ಗಳ ಹೊರಮೈಯ್ಯಲ್ಲಿ ಇರುವ ಎರಡು ವಿಧದ ಪ್ರೋಟೀನ್ ಗಳಾದ ಹೇಮಾಗ್ಲುಟಿನ್ ಮತ್ತು ನ್ಯೂರಾಮೈನೈಡೇಸ್ ಗಳ ಆಧಾರದ ಮೇಲೆ ಇವುಗಳನ್ನು ಎಚ್ ಮತ್ತು ಏನ್ ಎಂದು ವಿಂಗಡಿಸಲಾಗಿದೆ. ಅಂತೆಯೇ ಎಚ್ ಗುಂಪಿನಲ್ಲಿ ೧೫ ಮತ್ತು ಏನ್ ಗುಂಪಿನಲ್ಲಿ ೯ ವಿಧಗಳಿದ್ದು, ಇವೆಲ್ಲವೂ ವಿಭಿನ್ನವಾಗಿವೆ. ವಿಶೇಷವೆಂದರೆ ಇವೆರಡೂ ಗುಂಪುಗಳ ಸಮ್ಮಿಶ್ರಣದ ಉಪಭೇದಗಳು ಪಕ್ಷಿಗಳಲ್ಲಿ ಪತ್ತೆಯಾಗಿದ್ದರೂ, ಇವುಗಳು ಸಾಮಾನ್ಯವಾಗಿ ಮನುಷ್ಯರನ್ನು ಬಾಧಿಸುವುದಿಲ್ಲ. 

ಈ ವೈರಸ್ ಗಳ ಉಪಭೇದಗಳಾದ ಎಚ್ ೧ ಎನ್  ೧, ಎಚ್ ೧ ಎನ್  ೨, ಎಚ್ ೩ ಎನ್ ೩ ಎನ್ನುವ ಮೂರು ತಳಿಗಳು ಮನುಷ್ಯರಲ್ಲಿ ಕಂಡುಬರುತ್ತವೆ. ಅಂತೆಯೇ ಈ ತಳಿಗಳಲ್ಲಿನ ವಂಶವಾಹಿನಿಗಳ ಕೆಲ ಅಂಶಗಳು ಮೂಲತಃ ಪಕ್ಷಿಗಳಲ್ಲಿ ಕಾಣಸಿಗುವ ತಳಿಗಳಿಂದ ಬಂದಿರುವ ಸಾಧ್ಯತೆಗಳೂ ಇವೆ. ಏಕೆಂದರೆ ಇನ್ ಫ್ಲುಯೆಂಜಾ ವೈರಸ್ ಗಳು ನಿರಂತರವಾಗಿ ಪರಿವರ್ತನೆಗೊಳ್ಳುತ್ತಲೇ ಇರುತ್ತವೆ. ಇದೇ ಕಾರಣದಿಂದಾಗಿ ಮನುಷ್ಯರನ್ನು ಬಾಧಿಸದ ಈ ವೈರಸ್ ನ ತಳಿಯೊಂದು ಪರಿವರ್ತನೆಗೊಂಡು ತಳೆದ ನೂತನ ಅವತಾರದ ಪರಿಣಾಮವಾಗಿ ಎಚ್ ೫ ಎನ್ ೧ ಎನ್ನುವ, ಪಕ್ಷಿಜ್ವರಕ್ಕೆ ಕಾರಣವಾಗಿರುವ ವೈರಸ್ ಮನುಷ್ಯರ ಶರೀರದಲ್ಲಿ ಪ್ರವೇಶಗಳಿಸಲು ಸಫಲವಾಗಿತ್ತು. 

ಇದಕ್ಕೂ ಮಿಗಿಲಾಗಿ ಕೇವಲ ಪಕ್ಷಿಗಳಿಂದ ಅಥವಾ ಸಾಕುಪ್ರಾಣಿಗಳಿಂದ ಮನುಷ್ಯರಿಗೆ ಹರಡಿದ್ದ ಎಚ್ ೫ ಎನ್ ೧ ತಳಿಗಳು ಮತ್ತಷ್ಟು ಪರಿವರ್ತನೆಗೊಂಡು, ಮನುಷ್ಯರಿಂದ ಮನುಷ್ಯರಿಗೆ ನೇರವಾಗಿ ಹರಡುವ ಸಾಮರ್ಥ್ಯ ಗಳಿಸಿಕೊಂಡಲ್ಲಿ ಜಾಗತಿಕ ಸಾಂಕ್ರಾಮಿಕತೆಯ  ಅಪಾಯ ತಪ್ಪಿದ್ದಲ್ಲ. ಜತೆಗೆ ಇದರ ಘೋರ ಪರಿಣಾಮಗಳು ಮತ್ತು ಇದರಿಂದಾಗಿ ಸಂಭವಿಸಬಲ್ಲ ಸಾವುನೋವು ಮತ್ತು ಕಷ್ಟನಷ್ಟಗಳನ್ನು ಊಹಿಸಲೂ ಸಾಧ್ಯವಿಲ್ಲ. 

ಆದರೆ ಇಂತಹ ಸಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಹಲವಾರು ರಾಷ್ಟ್ರಗಳ ವೈದ್ಯಕೀಯ ವಿಜ್ಞಾನಿಗಳು, ಇವುಗಳ ಹಾವಳಿಯನ್ನು ತಡೆಗಟ್ಟಬಲ್ಲ ವಿಧಾನ, ಔಷದ ಮತ್ತು ಲಸಿಕೆಗಳನ್ನು ಕಂಡುಹಿಡಿಯಲು ಹಗಲಿರುಳು ಶ್ರಮಿಸುತ್ತಿದ್ದಾರೆ. 

ಫ್ಲೂ ಹರಡುವುದೆಂತು?

ಇನ್ ಫ್ಲುಯೆಂಜಾ ವೈರಸ್ ಗಳು ಈ ರೋಗಪೀಡಿತರ - ರೋಗಿಗಳ ಆರೈಕೆ ಮಾಡುತ್ತಿರುವವರ ನೇರ ಸಂಪರ್ಕದಿಂದ, ರೋಗಪೀಡಿತರಾಗದಿದ್ದರೂ ತಮ್ಮ ಶರೀರದಲ್ಲಿ ಈ ವೈರಸ್ ಗಳನ್ನು ಸಲಹುವ ವಾಹಕರಿಂದ, ರೋಗಿ ಕೆಮ್ಮಿದಾಗ ಹೊರಬೀಳುವ ಜೊಲ್ಲಿನ ತುಂತುರುಗಳಿಂದ, ರೋಗಿ ಬಳಸಿದ- ಮುಟ್ಟಿದ ವಸ್ತುಗಳನ್ನು ಇತರರು ಬಳಸುವುದರಿಂದ ಸುಲಭ ಹಾಗೂ ಸಾಂಕ್ರಾಮಿಕವಾಗಿ ಹರಡುತ್ತದೆ. ಇದೇ ಕಾರಣದಿಂದಾಗಿ ಹಲವಾರು ಸದಸ್ಯರಿರುವ ಒಂದು ಕುಟುಂಬದ ಒಬ್ಬರಿಗೆ ಫ್ಲೂ ಆರಂಭವಾದಲ್ಲಿ, ಇದು ಮನೆಮಂದಿಗೆಲ್ಲ ಹರಡುತ್ತದೆ. ಅಂತೆಯೇ ನೂರಾರು- ಸಹಸ್ರಾರು ಜನರು ಸೇರುವ ಸಭೆ ಸಮಾರಂಭಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಕಾರ್ಖಾನೆ- ಉದ್ಯೋಗ ಕೇಂದ್ರಗಳಲ್ಲಿ ಮತ್ತು ಹಾಸ್ಟೆಲ್ ಗಳಲ್ಲಿರುವ ರೋಗಿಗಳು ತಮ್ಮ ವ್ಯಾಧಿಯನ್ನು ಅನಾಯಾಸವಾಗಿ ಇತರರಿಗೆ ಹರಡುತ್ತಾರೆ. 

ರೋಗಲಕ್ಷಣಗಳು 

ಇನ್ ಫ್ಲುಯೆಂಜಾ ವೈರಸ್ ಗಳು ನಿಮ್ಮ ಶರೀರದಲ್ಲಿ ಪ್ರವೆಶಗಳಿಸಿದ ೨೪ ರಿಂದ ೪೮ ಗಂಟೆಗಳಲ್ಲಿ ತಮ್ಮ ಇರುವಿಕೆಯನ್ನು ತೋರುತ್ತವೆ. ಆಕಸ್ಮಿಕವಾಗಿ ಆರಂಭವಾಗುವ ತಲೆಸಿಡಿತ- ನೋವು, ಬೆನ್ನು ಮತ್ತು ಕೈಕಾಲುಗಳಲ್ಲಿ ನೋವು, ಸುಮಾರು ೧೦೦-೧೦೨ ಡಿಗ್ರಿ ಜ್ವರದೊಂದಿಗೆ ಚಳಿ ಮತ್ತು ಕೆಲ ರೋಗಿಗಳಲ್ಲಿ ಒಂದಿಷ್ಟು ನಡುಕ, ಹಸಿವಿಲ್ಲದಿರುವುದು, ವಾಕರಿಕೆ ಅಥವಾ ವಾಂತಿಗಳಂತಹ ಲಕ್ಷಣಗಳು ಮುಂದಿನ ೩ ರಿಂದ ೭ ದಿನಗಳ ಕಾಲ ರೋಗಿಯನ್ನು ಪೀಡಿಸುತ್ತವೆ. ಇದಲ್ಲದೇ ರೋಗಿಯ ಮುಖವು ಕೆಂಪಾಗಿ, ಕಣ್ಣುಗಳು ಕಿರಿದಾಗಿ ಉರಿದಂತೆ ಭಾಸವಾಗುತ್ತದೆ. ಇಷ್ಟೆಲ್ಲಾ ಸಾಲದೆನ್ನುವಂತೆ ಜ್ವರ ಪೀಡಿತ ರೋಗಿಯನ್ನು ಹಿಂಡಿ ಹಿಪ್ಪೆಮಾಡುವಂತಹ ತೀವ್ರವಾದ ಒಣಕೆಮ್ಮು ತಪ್ಪದೆ ಕಾಡುತ್ತದೆ. ಈ ಸಂದರ್ಭದಲ್ಲಿ ವ್ಯಾಧಿಯ ಲಕ್ಷಣಗಳು ಶ್ವಾಸಾಂಗಗಳ ಸೋಂಕಿಗೆ ಕಾರಣವೆನಿಸಬಲ್ಲ ಇತರ ವೈರಸ್ ಗಳಿಂದ ಉದ್ಭವಿಸುವ ಕಾಯಿಲೆಗಳಂತೆ ಭಾಸವಾಗುತ್ತದೆ. ಹಾಗೂ ಇದೇ ಕಾರಣದಿಂದಾಗಿ ರೋಗಿಯನ್ನು ಪೀಡಿಸುತ್ತಿರುವ ಕಾಯಿಲೆಯು "ಫ್ಲೂ" ಎಂದು ನಿಖರವಾಗಿ ನಿರ್ಧರಿಸುವುದು ಕಷ್ಟಸಾಧ್ಯವೂ ಹೌದು. 



ಆದರೆ ಫ್ಲೂ ಜ್ವರದ ಬಾಧೆ ೩ ರಿಂದ ೭ ದಿನಗಳಲ್ಲಿ ಪರಿಹಾರಗೊಂಡರೂ, ರೋಗಿಯನ್ನು ಬಾಧಿಸುವ ಅತಿ ಆಯಾಸ ಹಾಗೂ ನಿಶ್ಶಕ್ತಿಗಳು ಮುಂದಿನ ಹಲವಾರು ದಿನಗಳ ಕಾಲ ಇರುತ್ತವೆ. ಮಕ್ಕಳಲ್ಲಿ ಹಾಗೂ ವಯೋವೃದ್ಧರಲ್ಲಿ ತುಸು ಅಧಿಕವೆನಿಸಬಲ್ಲ ಈ ಸಮಸ್ಯೆಗೆ, ವೈದ್ಯರು ನೀಡಿದ್ದ "ಶಕ್ತಿಯುತ ಅಥವಾ ಪ್ರಬಲ ಔಷದ"ಗಳ ದುಷ್ಪರಿಣಾಮವೇ ಕಾರಣವೆಂದು ಅನೇಕರು ದೂರುವುದು ಅಪರೂಪವೇನಲ್ಲ!. 

ಫ್ಲೂ ಪೀಡಿತ ರೋಗಿಗಳನ್ನು ಬಾಧಿಸಬಲ್ಲ ದ್ವಿತೀಯ ಹಂತದ ಸೋಂಕು ಮತ್ತು ಇತರ ಕಾರಣಗಳಿಂದ, ಶ್ವಾಸಾಂಗಗಳ ಉರಿಯೂತದಂತಹ ಗಂಭೀರ ಸಮಸ್ಯೆಗಳು ಉದ್ಭವಿಸುವುದುಂಟು. ಅಪರೂಪದಲ್ಲಿ ಹೃದಯದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು "ಕಾರ್ಡಿಯೋ ಮಯೋಪತಿ" ಎನ್ನುವ ತೊಂದರೆಯಿಂದ ಆಕಸ್ಮಿಕವಾಗಿ ಮೃತಪಡುವ ಸಾಧ್ಯತೆಗಳೂ ಇವೆ. ಇದಲ್ಲದೆ ಮೆದುಳಿನ ಉರಿಯೂತದಂತಹ ಗಂಭೀರ- ಪ್ರಾಣಾಪಾಯಕ್ಕೆ ಕಾರಣವೆನಿಸಬಲ್ಲ ಹತ್ತು ಹಲವು ಸಮಸ್ಯೆಗಳು ಫ್ಲೂ ರೋಗಿಗಳನ್ನು ಶಾಪದಂತೆ ಕಾಡುವುದು ನಿಜ. 

ಚಿಕಿತ್ಸೆ 

ಫ್ಲೂ ಜ್ವರ ಪೀಡಿತರು ಈ ವ್ಯಾಧಿಯಿಂದ ಸಂಪೂರ್ಣವಾಗಿ ಮುಕ್ತರಾಗುವ ತನಕ ಸಂಪೂರ್ಣ ವಿಶ್ರಾಂತಿ ಪಡೆಯಲೇಬೇಕು. ಜತೆಗೆ ತಮ್ಮ ಸಮಸ್ಯೆಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷದಗಳನ್ನು  ಸೇವಿಸುವುದರೊಂದಿಗೆ, ಪೋಷಕಾಂಶಗಳಿಂದ ಸಮೃದ್ಧವಾದ ಆಹಾರ ಮತ್ತು ಸಾಕಷ್ಟು ದ್ರವಾಹಾರಗಳನ್ನು ಸೇವಿಸುವುದು ಹಿತಕರವೆನಿಸುವುದು. ಈ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳನ್ನು ಇಂದಿನ ತನಕ ಕಂಡುಹಿಡಿದಿಲ್ಲ.ಆದರೆ ರೋಗಿಯಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಅವಶ್ಯಕ ಔಷದಗಳನ್ನು ನೀಡಬೇಕಾಗುತ್ತದೆ. ಜತೆಗೆ ಇದು ಸಾಂಕ್ರಾಮಿಕವಾಗಿ ಹರಡುವುದರಿಂದ, ರೋಗಪೀಡಿತರು ಏಕಾಂತವಾಸಕ್ಕೆ ಶರಣಾದಲ್ಲಿ ಇತರರಿಗೆ ಹರಡುವುದನ್ನು ತಡೆಗಟ್ಟಬಹುದು. 

ವೈರಸ್ ಗಳು ಬ್ಯಾಕ್ಟೀರಿಯಾಗಳಂತೆ ಸ್ವತಂತ್ರವಾಗಿ ಜೀವಿಸಲಾರವು. ಸಾಮಾನ್ಯವಾಗಿ ತಾವು ಪ್ರವೇಶಗಳಿಸಿದ್ದ ಜೀವಿಯ ಜೈವಿಕ- ರಾಸಾಯನಿಕ ವ್ಯವಸ್ಥೆಯನ್ನು ಬಳಸಿ ವೈರಸ್ ಗಳು ಬೆಳೆಯುತ್ತವೆ. ಇದೇ ಕಾರಣದಿಂದಾಗಿ ಸಾಧಾರಣ "ಜೀವನಿರೋಧಕ"ಗಳು ವೈರಸ್ ಗಳ ವಿರುದ್ಧ ಕಾರ್ಯಾಚರಿಸಲು ವಿಫಲವಾಗುತ್ತವೆ. ಹಾಗೂ ಇದಕ್ಕಾಗಿ ವಿಶೇಷ ರೀತಿಯ ವೈರಸ್ ವಿರೋಧಿ ಔಷದಗಳನ್ನು ಸಂಶೋಧಿಸಿ ಸಿದ್ಧಪಡಿಸಬೇಕಾಗುತ್ತದೆ. ಆದರೆ ಅದೃಷ್ಟವಶಾತ್ ವೈರಸ್ ಗಳ ಹಾವಳಿಯನ್ನು ತಡೆಗಟ್ಟಬಲ್ಲ ಲಸಿಕೆಗಳು ಇಂತಹ ಸನ್ನಿವೇಶಗಳಲ್ಲಿ ಉಪಯುಕ್ತವೆನಿಸುತ್ತವೆ. (ಉದಾ- ಪೋಲಿಯೋ, ಸಿಡುಬು ಇತ್ಯಾದಿ) 

ಇನ್ ಫ್ಲುಯೆಂಜಾ ವ್ಯಾಧಿಗೆ ಕಾರಣವೆನಿಸಿರುವ ವೈರಸ್ ಗಳು ನಿರಂತರವಾಗಿ ತಮ್ಮ ವಂಶವಾಹಿನಿಗಳನ್ನು ಪರಿವರ್ತಿಸಿಕೊಳ್ಳುತ್ತಲೇ ಇರುವುದರಿಂದ ಹಾಗೂ ಇವುಗಳ ಪ್ರಭೇದ- ಉಪಭೇದಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ, ಇವುಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಬಲ್ಲ ಲಸಿಕೆಯನ್ನು ಸಿದ್ಧಪಡಿಸುವುದು ಅಸಾಧ್ಯವೆನಿಸಿದೆ. ಆದುದರಿಂದ ಮಾರುಕಟ್ಟೆಯಲ್ಲಿ ದೊರೆಯುವ ಫ್ಲೂ ಲಸಿಕೆಗಳು ವರ್ಷಂಪ್ರತಿ ಬದಲಾಗುತ್ತಲೇ ಇರುತ್ತವೆ. ಪ್ರಸ್ತುತ ಜೀವನ ಪರ್ಯಂತ ಫ್ಲೂ ವೈರಸ್ ಗಳನ್ನು ತಡೆಗಟ್ಟಬಲ್ಲ ಲಸಿಕೆಯೊಂದನ್ನು ಪತ್ತೆಹಚ್ಚುವ ಪ್ರಯತ್ನಗಳು ಸಫಲವಾಗುವ ಲಕ್ಷಣಗಳು ಗೋಚರಿಸುತ್ತಿವೆ. ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಯಶಸ್ವಿಯಾದಲ್ಲಿ, ಫ್ಲೂ ಜ್ವರದ ಹಾವಳಿಯೊಂದಿಗೆ ಇದರ ಮಾರಕತೆಯೂ ದೂರವಾಗಲಿದೆ. 

ಕೊನೆಯ ಮಾತು- ಇದೀಗ ಭಾರತಕ್ಕೆ ಮರಳುತ್ತಿರುವ ಹಜ್ ಯಾತ್ರಿಗಳಲ್ಲಿ ಪತ್ತೆಯಾಗುತ್ತಿರುವ" ಮಿಡ್ಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್" (ಎಂ ಇ ಆರ್ ಎಸ್ -ಸಿ ಓ ವಿ) , ಫ್ಲೂ ವೈರಸ್ ನ ಅತ್ಯಾಧುನಿಕ ಅವತಾರವಾಗಿದೆ. ಮಧ್ಯ ಪ್ರಾಚ್ಯದಲ್ಲಿ ಪತ್ತೆಯಾಗಿದ್ದ ಈ ನೂತನ ವೈರಸ್, ಈಗಾಗಲೇ ಅನೇಕ ರೋಗಿಗಳನ್ನು ಬಲಿಪಡೆದಿದೆ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೮-೦೬- ೨೦೦೬ ರ ಸಂಚಿಕೆಯ ಬಳಕೆದಾರ:ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ 

Wednesday, November 6, 2013

Nakali vaidyariddaare, echarike!



                                     ನಕಲಿ ವೈದ್ಯರಿದ್ದಾರೆ, ಎಚ್ಚರಿಕೆ!

ವಿವಾಹದ ಮೊದಲು ಅಥವಾ ಅನಂತರ ಉಂಟಾಗುವ ಎಲ್ಲ ತರಹದ ನಿಶ್ಶಕ್ತಿ, ನರಗಳ ದೌರ್ಬಲ್ಯ, ತಾರುಣ್ಯ ನಾಶ,ಸ್ವಪ್ನ ಸ್ಖಲನ, ಶೀಘ್ರ ಸ್ಖಲನ ಮತ್ತು ಎಲ್ಲಾ ತರಹದ ಲೈಂಗಿಕ ಸಮಸ್ಯೆಗಳಿಗೆ ನೀವೇನು ಮಾಡುತ್ತೀರಿ?. ನಿಮ್ಮ ದಾಂಪತ್ಯ ಜೀವನವನ್ನು ಸುಖಮಯವಾಗಿಸಲು ಪರಿಪೂರ್ಣ ಚಿಕಿತ್ಸೆಗೆ ದಕ್ಷಿಣ ಭಾರತದ ಹೆಸರಾಂತ ಅಪೂರ್ವ ಅನುಭವಿಗಳಾದ ವೈದ್ಯರು, ನಿಮ್ಮ ಊರಿನ ಲಾಡ್ಜ್ ಗಳಲ್ಲೇ ಸಿಗುತ್ತಾರೆ!. 
-------------                 -----------------                         --------------------                      --------------------               -------------

ಅಂಗಡಿಯಲ್ಲಿ ತನ್ನ ತಂದೆಯ ಜತೆ ವ್ಯಾಪಾರ ಮಾಡಲು ಆರಂಭಿಸಿರುವ ಪ್ರವೀಣನಿಗೆ ಈಗ ಮದುವೆಯ ಪ್ರಾಯ. ಬೆಳೆದು ನಿಂತ ಪ್ರವೀಣನಿಗೆ ಹುಡುಗಿ ನೋಡಿ ನಿಶ್ಚಿತಾರ್ಥವೂ ಆಯಿತು. ಮದುವೆಗೆ ಇನ್ನೇನು ತಿಂಗಳಿದೆ ಎನ್ನುವಾಗ ಪ್ರವೀಣನಿಗೆ ತನ್ನ "ಆರೋಗ್ಯ"ದ ಮೇಲೆ ತುಸು ಸಂಶಯ ಮೂಡತೊಡಗಿತು. "ಲೈಂಗಿಕ ರೋಗಗಳಿಗೆ ಸೂಕ್ತ ಪರಿಹಾರ, ಮದುವೆಯ ಅನಂತರ ನಿಶ್ಶಕ್ತಿಯಿಂದ ಬಳಲದಿರಿ, ಸ್ವಪ್ನ ಸ್ಖಲನ- ಶೀಘ್ರ ಸ್ಖಲನಕ್ಕೆ ಚಿಕಿತ್ಸೆ..... "  ಎನ್ನುವ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿರುವುದನ್ನು ನೋಡಿದ ಅನಂತರ ಪ್ರವೀಣನಿಗೆ ತನ್ನ ಸಮಸ್ಯೆಗೆ ಪರಿಹಾರ ದೊರೆಯಿತೆನ್ನುವ ಸಮಾಧಾನವಾಯಿತು. ಜಾಹೀರಾತು ನೀಡಿರುವ "ತಜ್ಞ ವೈದ್ಯ" ರನ್ನು ಭೇಟಿಯಾಗಿ ತನಗಿರುವ ಸ್ವಪ್ನ ಸ್ಖಲನದ ತೊಂದರೆಯನ್ನು ಹೇಳಿಕೊಂಡ. 'ಔಷಧಿ" ನೀಡಿದ ವೈದ್ಯರು ಪರವೀನನಿಗೆ ಯಶಸ್ವೀ ದಾಂಪತ್ಯದ ಪಾಠವನ್ನು ಹೇಳಿಕೊಟ್ಟು ವಾರ ಬಿಟ್ಟು ಬರುವಂತೆ ತಿಳಿಸಿದರು. 'ಚಿಕಿತ್ಸೆ" ಸಂಪೂರ್ಣ ಮುಗಿಯುವ ವೇಳೆಗೆ ಪ್ರವೀಣ ವೈದ್ಯರಿಗೆ ಸಹಸ್ರಾರು ರೂಪಾಯಿಗಳ ಫೀಸನ್ನು ಪಾವತಿಸಿದ್ದ!. 

ಸ್ವಪ್ನ ಸ್ಖಲನ- ಶೀಘ್ರ ಸ್ಖಲನಗಳು ರೋಗವೇ ಅಲ್ಲ. ಆರೋಗ್ಯವಂತ ಮನುಷ್ಯನ ಪ್ರಕೃತಿ ಸಹಜ ಬೆಳವಣಿಗೆಯ ಲಕ್ಷಣಗಳಿವು ಎನ್ನುವ ಅರಿವು ಪ್ರವೀಣನಿಗೆ ಇರುತ್ತಿದ್ದರೆ ಆತ "ಐವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯ"ರಿಂದ ತಲೆಬೋಳಿಸಿಕೊಳ್ಳುತ್ತಿರಲಿಲ್ಲ

ಲೈಂಗಿಕತೆ ರಹಸ್ಯವಲ್ಲ!

ಲೈಂಗಿಕತೆಯ ಕುರಿತು ಜನಸಾಮಾನ್ಯರಿಗಿರುವ ಅಜ್ಞಾನದ ಲಾಭವನ್ನು ಪಡೆಯುತ್ತಿರುವ ನಕಲಿ ವೈದ್ಯರ ಕಾರ್ಯಾಚರಣೆ ನಾಯಿಕೊಡೆಯಂತೆ ಎಲ್ಲ ಊರು-ಕೇರಿಗಳಲ್ಲಿ ತಲೆಯೆತ್ತುತ್ತಿದೆ. ಲಾಡ್ಜ್ ನ ಕೋಣೆಗಳಲ್ಲಿ "ಚಿಕಿತ್ಸೆ ನೀಡುವ" ಈ ವೈದ್ಯರು ಪತ್ರಿಕೆಗಳಲ್ಲಿ ಭರ್ಜರಿ ಜಾಹೀರಾತುಗಳನ್ನು ನೀಡುತ್ತಾರೆ. ಆದರೆ ತಮ್ಮ ವೈದ್ಯಕೀಯ ಅರ್ಹತೆ- ಪದವಿಗಳನ್ನು ತಿಳಿಸಲು ಪ್ರತಿಸಲವೂ ಮರೆತೇ ಬಿಡುತ್ತಾರೆ!. ಪ್ರಚಾರಕ್ಕಾಗಿ ಗೋಡೆಯನ್ನೂ ಆಶ್ರಯಿಸುವ ಈ ತಜ್ಞರು,ಏಡ್ಸ್ ಗುಣಪಡಿಸುತ್ತೇವೆಂದು  ಘೋಷಿಸಲು ಸಹ ಹಿಂಜರಿಯುವುದಿಲ್ಲ!. 

ಸಾಲದೆಂಬಂತೆ ಪ್ರಪಂಚದ ಯಾವ ವೈದ್ಯರೂ ಶಾಶ್ವತವಾಗಿ ಗುಣಪಡಿಸಲಾಗದ ಮಾರಣಾಂತಿಕ ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳನ್ನು ಶಾಶ್ವತವಾಗಿ ಗುಣಪಡಿಸುವುದಾಗಿ ರೋಗಿಗಳನ್ನು ನಂಬಿಸಿ, ರೋಗಿಗಳ ಜೇಬನ್ನು ಬರಿದಾಗಿಸುತ್ತಾರೆ. 

ಮೆಡಿಕಲ್ ಕಾಲೇಜುಗಳೂ ನಕಲಿ 

ಮಧ್ಯ ವಯಸ್ಕರನ್ನು ಸಾಮಾನ್ಯವಾಗಿ ಕಾಡುವ ಎದೆಯುರಿ, ಹುಳಿತೇಗು, ಮಲಬದ್ಧತೆ, ನಿದ್ರಾಹೀನತೆ, ಅಜೀರ್ಣ, ಗ್ಯಾಸ್ ಟ್ರಬಲ್, ಮೂಲವ್ಯಾಧಿಗಳಿಗೂ ಚಿಕಿತ್ಸೆ ನೀಡುತ್ತೇವೆ ಎನ್ನುವ ಇಂತಹ ವೈದ್ಯರನ್ನು, ಆರೇ ತಿಂಗಳುಗಳಲ್ಲಿ "ಪದವಿ" ಯನ್ನು ನೀಡಿ ಸೃಷ್ಟಿಸುವ ಖಾಸಗಿ ಕಾಲೇಜುಗಳೂ ನಮ್ಮ ದೇಶದಲ್ಲಿರುವುದು ಈ ಧಂಧೆಯನ್ನು ಸುಲಭಗೊಳಿಸಿದೆ. ಆರೋಗ್ಯದ ಕುರಿತು ಸಾಮಾನ್ಯವಾಗಿ ಭಾರತೀಯರಲ್ಲಿರುವ ಅಜ್ಞಾನ,ಮೂಢನಂಬಿಕೆಗಳು, ಕಿತ್ತು ತಿನ್ನುವ ಬಡತನ, ಲೈಂಗಿಕತೆಯ ಬಗ್ಗೆ ಮುಕ್ತ ಮಾತುಕತೆಗೆ ಅವಕಾಶವಿಲ್ಲದಿರುವುದು ಮತ್ತು ಇವೆಲ್ಲಕ್ಕಿಂತ ಹೆಚ್ಚಾಗಿ ದುಬಾರಿಯಾಗುತ್ತಿರುವ ಆಧುನಿಕ ವೈದ್ಯಕೀಯ ಚಿಕಿತ್ಸೆಗಳು ಹೆಚ್ಚು ಹೆಚ್ಚು ರೋಗಿಗಳು ನಕಲಿವೈದ್ಯರನ್ನು ಆಶ್ರಯಿಸುವಂತೆ ಮಾಡಿವೆ. ದುರಂತವೆಂದರೆ ನಕಲಿವೈದ್ಯರಿಂದ ತೊಂದರೆಗೆ ಈಡಾದವರು, ಸುಲಿಗೆಗೆ ಒಳಗಾದವರು ತಮಗಾಗಿರುವ ಅನ್ಯಾಯ- ವಂಚನೆಗಳನ್ನು ಹೇಳಿಕೊಳ್ಳಲು ನಾಚುತ್ತಾರೆ. ಹೀಗೆ ಹೇಳಿಕೊಳ್ಳುವುದು, ದೂರು ಸಲ್ಲಿಸುವುದರಿಂದ ತಮಗೆ ಅವಮಾನವಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಹಾಗಾಗಿ ಈ ಧಂಧೆ ನಮ್ಮ ನೆಲದಲ್ಲಿ ಹುಲುಸಾಗಿ ಬೆಳೆದಿದೆ. ಹೀಗಾಗಿಯೇ ಮಕ್ಕಳಿಲ್ಲದವರಿಗೆ ಮಕ್ಕಳಾಗಲು ಯಾವುದೇ ಪರೀಕ್ಷೆಗಳಿಲ್ಲದೆ, ಕಷಾಯವನ್ನು ಕೊಟ್ಟು ಚಿಕಿತ್ಸೆ ನೀಡುವ ಭೂಪರು ಯಾವ ಆತಂಕವೂ ಇಲ್ಲದೆ ಭದ್ರವಾಗಿ ನೆಲೆಯೂರಿದ್ದಾರೆ. ಸಹಸ್ರಾರು ರೂಪಾಯಿಗಳ ಕಷಾಯ ಕುಡಿದ ಬಳಿಕವೂ ಮಕ್ಕಳಾಗದಿದ್ದರೆ, ಅಂತಹ ದಂಪತಿಗಳಿಗೆ "ಸಂತಾನ ಭಾಗ್ಯ"ವಿಲ್ಲಾ ಎನ್ನುವ ಅರ್ಥವೇ ಹೊರತು ಅದು ಈ ವೈದ್ಯರ ತಪ್ಪಲ್ಲ!. 

ಚಿಕಿತ್ಸಾ ವಿಧಾನ 

ಹೃದಯದ ರಕ್ತನಾಳಗಳಲ್ಲಿ ಅಡಚಣೆಯಿರುವ ರೋಗಿಯೊಬ್ಬರು ಇಂತಹ ನಕಲಿವೈದ್ಯನನ್ನು ಸಂದರ್ಶಿಸಿದ್ದರು. ಕೇವಲ ಮೂರರಿಂದ ಆರು ವಾರಗಳಲ್ಲಿ ರಕ್ತನಾಳಗಳಲ್ಲಿನ ಅಡಚಣೆಯನ್ನು ನಿವಾರಿಸುವುದಾಗಿ ಹೇಳಿದ ವೈದ್ಯರು,  ಎರಡು ವಾರಗಳ  ನೀಡಿದರು. ಎರಡು ವಾರಗಳ ಬಳಿಕ ಬಂದ ರೋಗಿಯನ್ನು ವಿಶಿಷ್ಟ ರೀತಿಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. 

ತೆಳ್ಳಗಿನ ರಟ್ಟನ್ನು ಸುರುಳಿಮಾಡಿ ಒಂದು ತುದಿಯನ್ನು ರೋಗಿಯ ಹೃದಯದ ಭಾಗಕ್ಕೆ ಒತ್ತಿ ಹಿಡಿದು, ಮತ್ತೊಂದು ತುದಿಗೆ ವೈದ್ಯ ಮಹಾಶಯ ಕಿವಿಗೊಟ್ಟು ಹೃದಯದ ಬಡಿತವನ್ನು ಸುಮಾರು ಮೂರು ನಿಮಿಷಗಳ ಕಾಲ ಪರೀಕ್ಷಿಸಿ,  ೭೦ ಶೇಕಡಾ ರಕ್ತನಾಳಗಳ ಅಡಚಣೆ ನಿವಾರಬನಿವಾರಣೆಯಾಗಿದೆ ಎಂದು ಧೃಢಪಡಿಸಿದ್ದನು!. ಮುಂದಿನ ಎರಡು ವಾರಗಳ ಔಷದ ಸೇವನೆಯ ಬಳಿಕ ರೋಗಿ ಸೇವಿಸುತ್ತಿದ್ದ ಆಧುನಿಕ ಔಷದಗಳ ಸೇವನೆಯನ್ನು ಶಾಶ್ವತವಾಗಿ ನಿಲ್ಲಿಸಲೂ ಹೇಳಿದ್ದನು. ತತ್ಪರಿಣಾಮವಾಗಿ ಕೆಲವೇ ದಿನಗಳಲ್ಲಿ ರೋಗಿಯ ಹೃದಯ ಬಡಿತವನ್ನೇ ಶಾಶ್ವತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದನು!. 

ವೃತ್ತಿಯಲ್ಲಿ ದರ್ಜಿಯಾಗಿದ್ದ ವ್ಯಕ್ತಿಯೊಬ್ಬ ಸ್ವಯಂ ಔಷದಗಳನ್ನು ನೀಡಲಾರಂಭಿಸಿ ಖ್ಯಾತ ಆಸ್ತಮಾ ತಜ್ಞನಾಗಿ ರೂಪುಗೊಂಡ ಪರಿಯನ್ನುನೆನಪಿಸಿಕೊಂಡು, ನಮ್ಮ ಊರಿನ ಜವುಳಿ ಉದ್ಯಮಿಯೊಬ್ಬರು ಆಶ್ಚರ್ಯ ಪಡುತ್ತಾರೆ. ಲಂಗಗಳನ್ನು ಹೊಲಿಯುತ್ತಿದ್ದ ಈ ದರ್ಜಿಯು ಆಸ್ತಮಾ ರೋಗಕ್ಕೆ ಮದ್ದು ನೀಡುತ್ತಿರುವುದಷ್ಟೇ ಆಲ್ಲದೇ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನೂರಾರು ಚಿಕಿತ್ಸಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿರುವ ಚಮತ್ಕಾರವೂ ನಡೆದಿದೆ. 

ಆಗಬೇಕಾಗಿರುವುದು ಏನು?

ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಅವಶ್ಯವಾಗಿ ಹೊಂದಿರಬೇಕಾದ ಅರ್ಹತೆಗಳನ್ನು ನಕಲಿ ವೈದ್ಯರು ಹೊಂದಿಲ್ಲವಾದುದರಿಂದ ತಮ್ಮ ಆರೋಗ್ಯ ರಕ್ಷಣೆಯ ಹೊಣೆ ಹೊರುವ ಜವಾಬ್ದಾರಿ ಇವರಿಗಿಲ್ಲ ಎನ್ನುವ ಸತ್ಯವನ್ನು ಜನಸಾಮಾನ್ಯರು ಅರಿತುಕೊಳ್ಳಬೇಕು. ವೈದ್ಯರೆಂದು ಹೇಳಿಕೊಂಡು ಜನರ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ವೈದ್ಯರ ಕಾರ್ಯಾಚರಣೆಯನ್ನು ಕಾನೂನಿನ ಕಡಿವಾಣಕ್ಕೆ ಒಳಪಡಿಸುವ ನಿಟ್ಟಿನಲ್ಲಿ, ಸರಕಾರೀ ಇಲಾಖೆಗಳು ಕ್ರಿಯಾಶೀಲವಾಗಬೇಕು. ಬೆಳೆದುನಿಂತ ಮಕ್ಕಳು ತಮ್ಮ ಹೆತ್ತವರಲ್ಲಿ ಮುಚ್ಚುಮರೆಯಿಲ್ಲದೆ ತಮ್ಮ ದೈಹಿಕ ಬದಲಾವಣೆಗಳ ಕುರಿತು ಮಾತುಕತೆಯನ್ನು ನಡೆಸುವ ವಾತಾವರಣ ಮನೆಯಲ್ಲಿ ನಿರ್ಮಾಣವಾಗಬೇಕು. ಸ್ವಪ್ನ ಸ್ಖಲನ- ಶೀಘ್ರ ಸ್ಖಲನಗಳಂತಹ ಶಾರೀರಿಕ ಪ್ರಕ್ರಿಯೆಗಳು ರೋಗವಲ್ಲ ಎನ್ನುವ ಅರಿವು ಮೀಸೆಯ ಜತೆಯಲ್ಲೇ ಮೂಡಬೇಕು. ಬಡವರಿಗೆ ದುಬಾರಿಯೆನಿಸದ ಚಿಕಿತ್ಸೆ ನೀಡಲು ಆರೋಗ್ಯ ತಪಾಸಣೆ- ಚಿಕಿತ್ಸಾ ಶಿಬಿರಗಳನ್ನು ಸರಕಾರ ಮತ್ತು ಸ್ವಯಂ ಸೇವಾ ಸಂಘಟನೆಗಳು ನಡೆಸಬೇಕು. 

ಇದಲ್ಲವಾದಲ್ಲಿ  ರೋಗಿ ಎನ್ನುವ ಬಳಕೆದಾರನ ಶೋಷಣೆ ತಡೆಯಿಲ್ಲದೇ ಸಾಗುವುದರಲ್ಲಿ ಸಂಶಯವಿಲ್ಲ. ತಜ್ಞವೈದ್ಯರ ನಿರ್ಲಕ್ಷ್ಯಗಳಿಂದ ಉಂಟಾಗಿರುವ ನಷ್ಟದ ವಿರುದ್ಧ ಬಳಕೆದಾರರು ನ್ಯಾಯಾಲಯಗಳಲ್ಲಿ ದಾವೆ ಹೂಡಿ ಪರಿಹಾರಗಳಿಸಿರುವ ಪ್ರಕರಣಗಳು ಈಗಾಗಲೇ ದಾಖಲೆಗೊಂಡಿವೆ. ಹೀಗಾಗಿ ಎಲ್ಲ ವೈದ್ಯರೂ ತಮ್ಮ ರೋಗಿಗಳಿಗೆ ಅತೀವ ಎಚ್ಚರಿಕೆಯಿಂದ ಚಿಕಿತ್ಸೆ ನೀಡುವಂತಾಗಿದೆ. ಶುಲ್ಕ ಪಾವತಿಸಿ ಸೇವೆ ಪಡೆಯುವ ಬಳಕೆದಾರನ ಹಕ್ಕುಗಳು ಅಬಾಧಿತವಾಗಿ ಉಳಿಯಬೇಕಾಗಿರುವುದು ಇಂದಿನ ಅವಶ್ಯಕತೆ. 

ನಕಲಿವೈದ್ಯರ ವಿರುದ್ಧ ಕಾನೂನು ಕ್ರಮ ಸಾಧ್ಯವೇ?

ನಕಲಿ ಔಷಧಿ, ಉಪಯೋಗವಿಲ್ಲದ ಅವೈಜ್ಞಾನಿಕ ಚಿಕಿತ್ಸೆ ಇತ್ಯಾದಿಗಳಿಂದ ಬಳಕೆದಾರರಿಗೆ ಅನ್ಯಾಯವಾದಾಗ ಪರಿಹಾರ ಪಡೆಯುವುದು ಇತ್ತೀಚಿನವರೆಗೆ ಸಾಧ್ಯವಾಗುತ್ತಿರಲಿಲ್ಲ. ಡ್ರಗ್ಸ್ ಎಂಡ್ ಮೇಜಿಕ್ ರೆಮಿಡೀಸ್ (ಮಿಸ್ ಲೀಡಿಂಗ್ ಅಡ್ವರ್ಟೈಸ್ ಮೆಂಟ್ಸ್) ಆಕ್ಟ್, ಡ್ರಗ್ಸ್ ಎಂಡ್ ಕಾಸ್ಮೆಟಿಕ್ಸ್ ರೂಲ್ಸ್ ಮುಂತಾದ ಕಾಯಿದೆಗಳಲ್ಲಿ ನಕಲಿ ಔಷಧಿಗಳ ವಿರುದ್ಧ, ನಕಲಿ ಚಿಕಿತ್ಸಾ ಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದ್ದರೂ, ಈ ಕಾಯಿದೆಗಳಲ್ಲಿರುವ ಲೋಪ ದೋಷಗಳಿಂದಾಗಿ ನಕಲಿ ವೈದ್ಯರು ಸುಲಭದಲ್ಲೇ ತಪ್ಪಿಸಿಕೊಳ್ಳುತ್ತಾರೆ. 

ಇದರಿಂದಾಗಿ ಆಸ್ತಮಾ ಚಿಕಿತ್ಸೆ ಎಂದು ಸ್ಟೀರಾಯ್ಡ್ ಮಾತ್ರೆಗಳ ಪುಡಿಯನ್ನು ಕೊಡುವ ನಕಲಿವೈದ್ಯರ ವ್ಯಾಪಾರ ಅನಿಯಂತ್ರಿತವಾಗಿ ಹೆಚ್ಚುತ್ತಿದೆ. ಇದೀಗ ಬಳಕೆದಾರರ ರಕ್ಷಣಾ ಕಾಯಿದೆಯ ಮೂಲಕ ನಕಲಿವೈದ್ಯರನ್ನು ಹತೋಟಿಯಲ್ಲಿಡಲು ಸಾಧ್ಯವೆಂದು ಭಾರತದಾದ್ಯಂತ ಇರುವ ಬಳಕೆದಾರರ ನ್ಯಾಯಾಲಯಗಳ ತೀರ್ಪುಗಳು ಸಾರಿ ಸಾರಿ ಹೇಳುತ್ತಿವೆ. 

ಯಾವುದೇ ಚಿಕಿತ್ಸೆಯಿಂದ ಬಳಕೆದಾರರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾದಲ್ಲಿ ಅಥವಾ ರೋಗಿಯ ಪ್ರಾಣಕ್ಕೆ ಅಪಾಯ ಉಂಟಾದಲ್ಲಿ, ವೈದ್ಯರ ಮೇಲೆ ನಿರ್ಲಕ್ಷ್ಯದ ಆಪಾದನೆ ಹೊರಿಸಲು ಸಾಧ್ಯವೇ?. ಚಿಕಿತ್ಸೆ ನೀಡಿದ ವೈದ್ಯರಿಗೆ ಸೂಕ್ತ ಅರ್ಹತೆ ಇಲ್ಲದಿದ್ದಲ್ಲಿ ಖಂಡಿತವಾಗಿಯೂ ನಿರ್ಲಕ್ಷ್ಯದ ಆಪಾದನೆ ಹೊರಿಸಲು ಸಾಧ್ಯವಿದೆ. 

ಉದಾಹರಣೆಗಾಗಿ ಶಸ್ತ್ರಚಿಕಿತ್ಸೆಗಾಗಿ ರೋಗಿಯ ಪ್ರಜ್ಞೆ ತಪ್ಪಿಸುವುದನ್ನು ಅರಿವಳಿಕೆ ತಜ್ಞರೇ ಮಾಡಬೇಕಿದೆ. ಒಂದು ವೇಳೆ ಸೂಕ್ತ ಅರ್ಹತೆ(ಪದವಿ) ಇಲ್ಲದ ವೈದ್ಯರು ಅರಿವಳಿಕೆ ಔಷಧಿ ಕೊಟ್ಟು ರೋಗಿಯ ಮರಣಕ್ಕೆ ಕಾರಣರಾದಲ್ಲಿ, ಅದು 'ವೈದ್ಯಕೀಯ ನಿರ್ಲಕ್ಷ್ಯ" ಎಂದೆನಿಸುತ್ತದೆ. ವೈದ್ಯರಿಗೆ ಅಲೋಪತಿ ಶಾಸ್ತ್ರದ ಎಂ. ಬಿ. ಬಿ. ಎಸ್ ಪದವಿ ಇದ್ದರೂ,ಅರಿವಳಿಕೆ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಇಲ್ಲದಿದ್ದಲ್ಲಿ, ಪ್ರಜ್ಞೆ ತಪ್ಪಿಸುವ ಪ್ರಕ್ರಿಯೆಯನ್ನು ಅವರು ನಡೆಸುವಂತಿಲ್ಲ. ಇದೇ ಆಧಾರದಲ್ಲಿ ನಕಲಿ ಔಷಧಿ ನೀಡುವ ನಕಲಿವೈದ್ಯರನ್ನು ಕಾನೂನಿನ ಹಿಡಿತದಲ್ಲಿ ಸಿಲುಕಿಸುವುದು ಕಷ್ಟವಾಗಲಾರದು. 

ಅಂತೆಯೇ ಅಲೋಪತಿ ಶಾಸ್ತ್ರದಲ್ಲಿ ಪದವಿ ಪಡೆದ ವೈದ್ಯರು ಅಲೋಪತಿ ಔಷದಗಳನ್ನೇ ನೀಡಬಹುದೇ ಹೊರತು ಆಯುರ್ವೇದ ಔಷದಗಳನ್ನಲ್ಲ. ಅದೇ ರೀತಿಯಲ್ಲಿ ಆಯುರ್ವೇದ ವೈದ್ಯರು ತಾವು ಕಲಿತಿರದ ಇತರ ಪದ್ದತಿಗಳ ಔಷದಗಳನ್ನು ನೀಡುವಂತಿಲ್ಲ ಎಂದು ಕಾನೂನು ಸ್ಪಷ್ಟಪಡಿಸುತ್ತದೆ. ಈ ಕಾನೂನಿನ ಆಧಾರದಲ್ಲಿ ನಕಲಿವೈದ್ಯರನ್ನು ನಿಯಂತ್ರಿಸುವುದು ಸಾಧ್ಯವಿದೆ. 

ಡಾ. ಸಿ. ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೩೧-೧೦-೨೦೦೨ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಡಾ. ರವೀಂದ್ರನಾಥ ಶಾನುಭಾಗರು ಪ್ರಕಟಿಸಿದ್ದ ನನ್ನ  ಮೊತ್ತ ಮೊದಲನೆಯ ಲೇಖನ. 


Tuesday, November 5, 2013

Enidu gas trabal?


                                                ಏನಿದು ಗ್ಯಾಸ್ ಟ್ರಬಲ್?

ಮಾಧ್ಯಮಗಳಲ್ಲಿ ನಿಯಮಿತವಾಗಿ ಪ್ರಕಟಗೊಳ್ಳುವ ಉತ್ಪ್ರೇಕ್ಷಿತ ಜಾಹೀರಾತುಗಳಲ್ಲಿ ಬಣ್ಣಿಸಿದ ವಿವಿಧ ರೋಗಲಕ್ಷಣಗಳನ್ನು ಓದಿ, ನಿಮಗೂ ಇಂತಹ ಕಾಯಿಲೆ ಇರಬಹುದೆಂದು ಭಾವಿಸಿರುವಿರಾ?. ಇಂತಹ ಜಾಹೀರಾತುಗಳಲ್ಲಿ ಒಂದಾಗಿರುವ ಹಾಗೂ ಕಪೋಲಕಲ್ಪಿತ ಕಾಯಿಲೆಗಳಲ್ಲಿ ಪ್ರಮುಖವಾಗಿರುವ,  "ಗ್ಯಾಸ್ ಟ್ರಬಲ್" ಎನ್ನುವ ಶಬ್ದವೇ ವೈದ್ಯಕೀಯ ಪರಿಭಾಷೆಯಲ್ಲಿ ಇಲ್ಲವೆಂದಲ್ಲಿ ನೀವೂ ನಂಬಲಾರಿರಿ. ಈ ಬಗ್ಗೆ ನೀವು ಅರಿತಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 
-------------            ------------               ---------------                ---------------                      -------------            -----------------------

ಸಾಮಾನ್ಯವಾಗಿ ಎಲ್ಲರಲ್ಲೂ ಕಂದುಬರಬಹುದಾದ ಅಜೀರ್ಣ,ಹೊಟ್ಟೆನೋವು, ಹೊಟ್ಟೆಯುಬ್ಬರ, ಎದೆ- ಹೊಟ್ಟೆ ಉರಿ, ಎದೆನೋವು, ಹಸಿವಿಲ್ಲದಿರುವುದು, ಅತಿಹಸಿವೆ, ಹೊಟ್ಟೆ ತೊಳಸಿದಂತೆ ಆಗುವುದು ಮತ್ತು ವಾಕರಿಕೆ ಅಥವಾ ವಾಂತಿ ಇತ್ಯಾದಿ ಲಕ್ಷಣಗಳನ್ನು ಒಂದಾಗಿಸಿ, ಜನಸಾಮಾನ್ಯರೇ ಸೃಷ್ಟಿಸಿರುವ  ಹಾಗೂ ಅಬಾಲವೃದ್ಧರೆಲ್ಲರನ್ನೂ ಬಾಧಿಸಬಲ್ಲದೆಂದು ನೀವು ನಂಬಿರುವ "ಗ್ಯಾಸ್ ಟ್ರಬಲ್ " ಒಂದು ನಿಗೂಢ ಕಾಯಿಲೆಯಲ್ಲ. 

ಏನಿದು ಗ್ಯಾಸ್ ಟ್ರಬಲ್?

ನಿಮ್ಮ ದೈನಂದಿನ ಆಹಾರಸೇವನೆಯ ಸಮಯದಲ್ಲಿ ವ್ಯತ್ಯಯ, ಮಸಾಲೆ ಹೆಚ್ಚಿರುವ,ಎಣ್ಣೆ- ತುಪ್ಪದಲ್ಲಿ ಕರಿದ, ಖಾರ ಹೆಚ್ಚಿರುವ ಉಪ್ಪಿನಕಾಯಿ, ಮೀನು ಮಾಂಸಗಳಂತಹ ಆಹಾರಗಳ ಸೇವನೆ, ತಂಬಾಕು ಹಾಗೂ ಮದ್ಯಪಾನ ಇತ್ಯಾದಿಗಳಿಂದ ನಿಮ್ಮಲ್ಲಿ ಮೇಲೆ ನಮೂದಿಸಿದ ಕೆಲವು ಲಕ್ಷಣಗಳು ಕಂಡುಬರಬಹುದು. ಇದಲ್ಲದೇ ನಿದ್ರಾಹೀನತೆ, ತೀವ್ರ ಮಾನಸಿಕ ಒತ್ತಡ ಮತ್ತು ಕೆಲ ವಿಧದ ಔಷದಗಳ ಸೇವನೆಯಿಂದಲೂ, ವೈದ್ಯಕೀಯ ಪರಿಭಾಷೆಯಲ್ಲಿ ' ಗ್ಯಾಸ್ತ್ರೈಟಿಸ್" ಎಂದು ಕರೆಯಲ್ಪಡುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದೇ ರೀತಿಯ ಲಕ್ಷಣಗಳನ್ನು ತೋರುವ ಹಲವಾರು ವ್ಯಾಧಿಗಳು ಇರುವುದರಿಂದ, ಇಂತಹ ಸಮಸ್ಯೆಯನ್ನು ನಿರ್ಲಕ್ಷಿಸಿದಲ್ಲಿ ಪ್ರಾಣಾಪಾಯಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ. 

ಬಹುತೇಕ ಜನರು ನಂಬಿರುವಂತೆ ದ್ವಿದಳ ಧಾನ್ಯಗಳು,ಬಟಾಟೆ,ಗೆಣಸು ಮತ್ತು ನಿಮ್ಮ ಅಚ್ಚುಮೆಚ್ಚಿನ ದೇವಿ ಹಲಸು ಇತ್ಯಾದಿಗಳು ನಿಶ್ಚಿತವಾಗಿಯೂ "ವಾಯುಕಾರಕ" ಗಳಲ್ಲ ಎಂದಲ್ಲಿ ನೀವು ನಂಬಲಾರಿರಿ. ಉದಾಹರಣೆಗೆ ಬಟಾಟೆ ಉರುಫ್ ಆಲೂಗಡ್ಡೆಯನ್ನು ತಿಂದಲ್ಲಿ ಗ್ಯಾಸ್ ಟ್ರಬಲ್ ಬಾಧಿಸುವುದು ನಿಜವಾದಲ್ಲಿ, ಫ್ರಾನ್ಸ್ ದೇಶದ ಸಮಸ್ತ ಜನರಿಗೂ ಈ ಸಮಸ್ಯೆ ಬಾಧಿಸುತ್ತಿದ್ದುದರಲ್ಲಿ ಸಂದೇಹವಿಲ್ಲ. ಏಕೆಂದರೆ ಭಾರತೀಯರು ಅನ್ನವನ್ನು ಸೇವಿಸುವಂತೆಯೇ, ಫ್ರಾನ್ಸ್ ದೇಶದ ಜನರು ಬಟಾಟೆಯ ವಿವಿಧ ಖಾದ್ಯಗಳನ್ನು ದಿನವಿಡೀ ಸವಿಯುತ್ತಾರೆ!. 

ನಾವು ಘನ ಆಹಾರವನ್ನು ಸೇವಿಸುವಾಗ, ನೀರು ಕುಡಿಯುವಾಗ ಮತ್ತು ಮಾತನಾಡುವಾಗ ಅಲ್ಪ ಪ್ರಮಾಣದಲ್ಲಿ ಗಾಳಿಯನ್ನು ನುಂಗುವುದು ಸ್ವಾಭಾವಿಕ. ಇದೇ ರೀತಿಯಲ್ಲಿ ನಾವು ಸೇವಿಸಿದ ಆಹಾರ ಜೀರ್ಣವಾಗುವಾಗ ಜರಗುವ ರಾಸಾಯನಿಕ ಕ್ರಿಯೆಗಳಿಂದ ಅಲ್ಪ ಪ್ರಮಾಣದ 'ಅನಿಲ" ಉತ್ಪನ್ನವಾಗುವುದು. ಸಾಮಾನ್ಯವಾಗಿ ಈ "ವಾಯು" ನಮ್ಮ ಬಾಯಿ ಅಥವಾ ಗುದದ್ವಾರದಿಂದ ಹೊರಹೋಗುವುದು. ಈ ರೀತಿಯಲ್ಲಿ ಹೊರಬೀಳುವ ತೇಗು ಹಾಗೂ ಅಪಾನವಾಯುಗಳು ಗ್ಯಾಸ್ ಟ್ರಬಲ್ ನ ಲಕ್ಷಣಗಳಲ್ಲ. ತಾಯಿಯ ಮೊಲೆಹಾಲು ಕುಡಿದು ಹೊಟ್ಟೆ ತುಂಬಿದ ಪುಟ್ಟ ಕಂದ ಗ್ಯಾಸ್ ಟ್ರಬಲ್ ನಿಂದಲ್ಲ!. 

ಅದೇನೇ ಇರಲಿ, ನಿಮ್ಮಲ್ಲಿ ಇಂತಹ ತೊಂದರೆಗಳು ಕಂಡುಬಂದಾಗ ಅಜೀರ್ಣ,ಎಸಿಡಿಟಿ ಅಥವಾ ಗ್ಯಾಸ್ ಟ್ರಬಲ್ ಎಂದು ನೀವಾಗಿ ನಿರ್ಧರಿಸಿ, ಸ್ವಯಂ ಚಿಕಿತ್ಸೆ ಪ್ರಯೋಗಿಸದೇ ಅಥವಾ ನಿರ್ಲಕ್ಷಿಸದೇ ನಿಮ್ಮ ಕುಟುಂಬ ವೈದ್ಯರನ್ನು ಸಂದರ್ಶಿಸಿ. 

ದೀಪ್ತಿಯ ಎಸಿಡಿಟಿ 

ಅರಳು ಹುರಿದಂತೆ ಮಾತನಾಡುವ ಪುಟ್ಟ ದೀಪ್ತಿ, ಮೋಹನರ ಮುದ್ದಿನ ಮಗಳು. ಈ ಮಾತಿನ ಮಲ್ಲಿ ಅಂದೇಕೋ ತೀವ್ರ ಹೊಟ್ಟೆನೋವಿನಿಂದ ಮಂಕಾಗಿದ್ದಳು. ವಿಷಯವನ್ನರಿತ ಮೋಹನರು ತತ್ಕ್ಷಣ ಪರಿಚಿತ ವೈದ್ಯರಲ್ಲಿಗೆ ಮಗಳನ್ನು ಕರೆದೊಯ್ದರು.ವೈದ್ಯರು  ದೀಪ್ತಿಯನ್ನು ಪರೀಕ್ಷಿಸುತ್ತಾ ಕೇಳುತ್ತಿದ್ದ ಪ್ರಶ್ನೆಗಳಿಗೆ ಮೋಹನರೇ ಉತ್ತರಿಸುತ್ತಿದ್ದರು. ನಿನ್ನೆ ಸರಿಯಾಗಿ ಕೋಳಿಯ ಪದಾರ್ಥ ತಿಂದಿದ್ದ ಕಾರಣದಿಂದ ಇಂದು ಹೊಟ್ಟೆನೋವು ಬಂದಿರಬೇಕು, ಹಾಗೂ ಇದು ಬಹುಶಃ "ಎಸಿಡಿಟಿ " ಇರಬಹುದೆಂದು ವೈದ್ಯರಿಗೆ ಸಲಹೆಯನ್ನೂ ನೀಡಿದರು. 

ಆದರೆ ವೈದ್ಯರ ಮನದಲ್ಲಿ ಮೂಡಿದ್ದ ಸಂದೇಹ ನಿವಾರಣೆಗಾಗಿ ಅಲ್ಟ್ರಾ ಸೌಂಡ್ ಸೋನೋಗ್ರಾಂ ಮಾಡಿಸುವ ಅವಶ್ಯಕತೆ ಇದೆಯೆಂದು ವೈದ್ಯರು ಸೂಚಿಸಿದರೂ, ತುರ್ತಾಗಿ ಮೂದಬಿದರೆಗೆ ಹೋಗಲಿದೆಯೆಂದು ಹೇಳಿದ ಮೋಹನರು, ನಾಳೆ ಸ್ಕ್ಯಾನ್ ಮಾಡಿಸುವುದಾಗಿ ಹೇಳಿ ತಾತ್ಕಾಲಿಕ ಚಿಕಿತ್ಸೆಯನ್ನು ಪಡೆದು ಮಗಳನ್ನು ಮನೆಗೆ ಕರೆದೊಯ್ದರು. ಮತ್ತೆ ದೀಪ್ತಿಯನ್ನು ವೈದ್ಯರು ಕಂಡದ್ದು ಮೂರು ವಾರಗಳ ನಂತರ. ಈ ಬಾರಿ ಸಮಾ ಮೀನಿನ ಪದಾರ್ಥ ತಿಂದು ಹೊಟ್ಟೆನೋವು ಬಂದಿದೆ ಎನ್ನುವ ಹೇಳಿಕೆ ಹಾಗೂ ಸ್ಕ್ಯಾನ್ ಮಾಡಿಸಲು ಪುರುಸೊತ್ತಿಲ್ಲವೆಂದು ತಾತ್ಕಾಲಿಕ ಚಿಕಿತ್ಸೆಯ ಪುನರಾವರ್ತನೆಯಾಯಿತು. ಆದರೆ ಮುಂದಿನ ಕೆಲವೇ ದಿನಗಳಲ್ಲಿ ದೀಪ್ತಿಯ ಹೊಟ್ಟೆನೋವು ಮತ್ತೆ ಮರುಕಳಿಸಿದಾಗ ಮೋಹನರು ಎಚ್ಚೆತ್ತರು. ಸ್ಕ್ಯಾನ್ ಮಾಡಿಸಿದ ವರದಿಯೊಂದಿಗೆ ವೈದ್ಯರನ್ನು ಭೇಟಿ ಮಾಡಿದ ಬಳಿಕ, ಅವರ ಸಲಹೆಯಂತೆ ಶಸ್ತ್ರಚಿಕಿತ್ಸಾ ತಜ್ಞರಲ್ಲಿಗೆ ಕರೆದೊಯ್ದರು. 

ಮರುದಿನ ದೀಪ್ತಿಗೆ ಶಸ್ತ್ರಚಿಕಿತ್ಸೆ ನಡೆಸಿ, ಸೋಂಕು ಪೀಡಿತ ಅಪೆಂಡಿಕ್ಸ್ ನ್ನು ತೆಗೆಯಲಾಯಿತು. ವಿಶೇಷವೆಂದರೆ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡ ದೀಪ್ತಿಗೆ, ತದನಂತರ ಮೀನು- ಮಾಂಸಗಳನ್ನು ಸೇವಿಸಿದರೂ ಹೊಟ್ಟೆನೋವು ಮಾತ್ರ ಪೀಡಿಸುವುದೇ ಇಲ್ಲ!. 

ಗೋಪಣ್ಣನ ಗ್ಯಾಸ್ ಟ್ರಬಲ್ 

ಮಧ್ಯವಯಸ್ಸಿನ ಗೋಪಣ್ಣ ಸಮಾಜಸೆವಕರಾಗಿ ಜನಪ್ರಿಯರು. ಹಗಲಿರುಳು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುವ ಗೋಪಣ್ಣನಿಗೆ ಆಕಸ್ಮಿಕವಾಗಿ ನಡುರಾತ್ರಿಯಲ್ಲಿ ಪ್ರಾರಂಭವಾಗಿದ್ದ ಹೊಟ್ಟೆನೋವು,ಬೆನ್ನಿನ ಒಂದು ಪಾರ್ಶ್ವಕ್ಕೂ ಹರಡಿತ್ತು.ಅನಿರೀಕ್ಷಿತವಾಗಿ ಬಂದೆರಗಿದ ಸಮಸ್ಯೆಯಿಂದ  ಗಾಬರಿಗೊಂಡ ಗೋಪಣ್ಣ, ತಕ್ಷಣ ತಮ್ಮ ಪರಿಚಿತ ವೈದ್ಯರನ್ನು ಮನೆಗೆ ಕರೆಸಿದರು. ವೈದ್ಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಾನು ಸಂಜೆ ತಿಂದ ಮಸಾಲೆ ದೋಸೆ ಮತ್ತು ರಾತ್ರಿ ಸೇವಿಸಿದ್ದ ಮಾಂಸಾಹಾರಗಳಿಂದಾಗಿ ತನಗಿದ್ದ 'ಗ್ಯಾಸ್ ಟ್ರಬಲ್" ಉಲ್ಬಣಿಸಿದೆ ಎನ್ನುತ್ತಾ,ಪ್ರಯತ್ನಪೂರ್ವಕವಾಗಿ ತೇಗುತ್ತಿದ್ದರು. ಮಂದಹಾಸ ಬೀರಿದ ವೈದ್ಯರು ನೋವು ನಿವಾರಕ ಇಂಜೆಕ್ಷನ್ ನೀಡಿ, ಮರುದಿನ ಬೆಳಿಗ್ಗೆ ಆಹಾರ ಸೇವನೆಗೆ ಮುನ್ನ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿಸಲು ಸೂಚಿಸಿದ್ದರು. ಮರುದಿನ ವೈದ್ಯರು ಕಾದಿದ್ದರೂ, ಗೋಪಣ್ಣ ಮಾತ್ರ ನಾಪತ್ತೆಯಾಗಿದ್ದರು. 

ವಾರ ಕಳೆಯುವಷ್ಟರಲ್ಲಿ ಅಪರಾತ್ರಿಯಲ್ಲಿ ಮರುಕಳಿಸಿದ್ದ ನೋವಿನ ತೀವ್ರತೆಗೆ ಹೆದರಿದ್ದ ಗೋಪಣ್ಣ, ಮತ್ತೆ ವೈದ್ಯರನ್ನು ಮನೆಗೆ ಕರೆಸಿದ್ದರು. ಆದರೆ ವೈದ್ಯರ ನೋವು ನಿವಾರಕ ಇಂಜೆಕ್ಷನ್ ಅಪೇಕ್ಷಿತ ಪರಿಣಾಮವನ್ನು ತೋರದ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಮರುದಿನ ತಜ್ಞ ವೈದ್ಯರ ಸೂಚನೆಯಂತೆ ಸ್ಕ್ಯಾನ್ ಮಾಡಿದಾಗ, ಗೋಪಣ್ಣನ ಮೂತ್ರಪಿಂಡ ಮತ್ತು ಮೂತ್ರನಾಳದಲ್ಲಿ ಹಲವಾರು ಕಲ್ಲುಗಳು ಪತ್ತೆಯಾಗಿದ್ದವು. ಸೂಕ್ತ ಚಿಕಿತ್ಸೆಯ ಬಳಿಕ ಗೋಪಣ್ಣನ ಆರೋಗ್ಯ ಸುಧಾರಿಸಿದ್ದು, ಅವರ ಗ್ಯಾಸ್ ಟ್ರಬಲ್ ಕೂಡಾ ಕಾಣದಂತೆ ಮಾಯವಾಗಿದೆ!. 

ಶಿವಪ್ಪನ ಅಜೀರ್ಣ 

ಅವಿವಾಹಿತ ತರುಣ ಶಿವಪ್ಪನು ಕೇಂದ್ರ ಅಬಕಾರಿ ಇಲಾಖೆಯ ಉದ್ಯೋಗಿ. ಒಂಟಿಜೀವವಾಗಿದ್ದರಿಂದ ಊಟತಿಂಡಿಗಳಿಗೆ ಹೋಟೆಲನ್ನು ಆಶ್ರಯಿಸಿದ್ದನು. ಇಲಾಖೆಯ ನಿರೀಕ್ಷಕ ಜಯರಾಮರು ಮತ್ತವರ ಪತ್ನಿಗೆ ಶಿವಪ್ಪನ ಬಗ್ಗೆ ಅತೀವ ಮಮತೆ. ಅವರ ಮನೆಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಂದು ಆತನಿಗೆ ಮೀನು- ಮಾಂಸಗಳ ಪುಷ್ಕಳ ಭೋಜನ ಮತ್ತು ಮರುದಿನ ಅಜೀರ್ಣ ಮತ್ತು ಹೊಟ್ಟೆನೋವಿನಿಂದ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ವಾಡಿಕೆಯಾಗಿತ್ತು. ವಿವಿಧ ವೈದ್ಯರಿಂದ ವಿಭಿನ್ನ ಪದ್ದತಿಗಳ ಚಿಕಿತ್ಸೆಯನ್ನು ಪಡೆದುಕೊಂಡರೂ, ಶಿವಪ್ಪನ ಹೊಟ್ಟೆನೋವು ಛಲ ಬಿಡದ ತ್ರಿವಿಕ್ರಮನ ಕಥೆಯ ಭೇತಾಳನಂತೆ ಆತನನ್ನು ಬಿಡುತ್ತಿರಲಿಲ್ಲ. 

ಅಂತಿಮವಾಗಿ ತನ್ನ ಕಚೇರಿಯ ಪಕ್ಕದಲ್ಲಿದ್ದ ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸಾ ತಜ್ಞರನ್ನು ಭೇಟಿಯಾಗಿ, ಅವರ ಸೂಚನೆಯಂತೆ ಅವಶ್ಯಕ ಪರೀಕ್ಷೆಗಳನ್ನು ನಡೆಸಿದಾಗ ಆತನ ಪಿತ್ತಕೋಶದಲ್ಲಿ ಅನೇಕ ಕಲ್ಲುಗಳು ತುಂಬಿ ಊದಿಕೊಂಡಿರುವುದು ಪತ್ತೆಯಾಗಿತ್ತು. ಯಶಸ್ವೀ ಶಸ್ತ್ರ ಚಿಕಿತ್ಸೆಯ ಬಳಿಕ ಶಿವಪ್ಪನ ಅಜೀರ್ಣ ಎನ್ನುವ ಭೇತಾಳ ಕಣ್ಮರೆಯಾಗಿತ್ತು!. 

ದೀಪ್ತಿ, ಗೋಪಣ್ಣ ಮತ್ತು ಶಿವಪ್ಪ ಈ ಮೂವರಲ್ಲೂ ಕಂಡು ಬರುತ್ತಿದ್ದ ರೋಗಲಕ್ಷಣಗಳಲ್ಲಿ ಸಾಮ್ಯತೆ ಇದ್ದರೂ, ಇವರ ಕಾಯಿಲೆಗಳು ವಿಭಿನ್ನವಾಗಿದ್ದವು. ಇದೇ ರೀತಿಯ ಲಕ್ಷಣಗಳನ್ನು ಜಠರದ ಹುಣ್ಣುಗಳು, ಯಕೃತ್ತಿನ ಹುಣ್ಣು, ಮೇದೋಜೀರಕ ಗ್ರಂಥಿಯ ಉರಿಯೂತ, ಪಿತ್ತಕೋಶದಲ್ಲಿ ಕಲ್ಲುಗಳು ಮತ್ತು ಇದರ ನಾಳದಲ್ಲಿ ಅಡಚಣೆ, ಮೂತ್ರಪಿಂಡ- ನಾಳಗಳಲ್ಲಿನ ಕಲ್ಲುಗಳು, ಸ್ತ್ರೀಯರ ಆಂತರಿಕ ಪ್ರಜನನಾಂಗಗಳ ಕಾಯಿಲೆಗಳು ಹಾಗೂ ಉದರದೊಳಗಿನ  ಇನ್ನಿತರ ಅಂಗಗಳಲ್ಲಿನ ಕಾಯಿಲೆಗಳು  ಮತ್ತು ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲೂ ಕಾಣಬಹುದು. ಕೆಲವೊಮ್ಮೆ ಸಣ್ಣ ಎದೆ ನೋವು, ಹೊಟ್ಟೆಯುಬ್ಬರ, ವಾಂತಿಯಂತಹ ಲಕ್ಷಣಗಳು ಹೃದಯಾಘಾತವಾದಾಗಲೂ ಕಂಡುಬರುತ್ತವೆ. 

ಕಾಲೇಜು ಕನ್ಯೆಯರಿಗೊಂದು ಕಿವಿಮಾತು!

ಹದಿಹರೆಯದ ಶಿಲ್ಪಾ ಕಾಲೇಜು ವಿದ್ಯಾರ್ಥಿನಿ. ತುಸು ಧಡೂತಿ ದೇಹದ ಆಕೆಗೆ ಒಂದಿಷ್ಟು ಕೀಳರಿಮೆಯೂ ಇದ್ದುದರಿಂದ ಆಹಾರವನ್ನು ಸೇವಿಸಲು ಹಿಂಜರಿಯುತ್ತಿದ್ದಳು. ಪ್ರಾಯಶಃ ಇದೇ ಕಾರಣದಿಂದಾಗಿ ಪ್ರಯೋಗಶಾಲೆಯಲ್ಲಿ ಅನೇಕಬಾರಿ ಕಣ್ಣುಕತ್ತಲೆ ಬಂದು ಬಿದ್ದಿದ್ದಳು. ಆಕೆಯ ಗೆಳತಿಯಿಂದ ವಿಷಯವರಿತ ಅವಳ ತಾಯಿಯು, ಮಗಳನ್ನು ಪರಿಚಯದ ವೈದ್ಯರಲ್ಲಿ ಕರೆದೊಯ್ದರು.

ಸುಂದರಿಯಾಗಿದ್ದರೂ ಶರೀರದ ತೂಕ ಸ್ವಲ್ಪ ಹೆಚ್ಚೇ ಇದ್ದ ಕಾರಣದಿಂದ ಮತ್ತು ಐಶ್ವರ್ಯಾ ರೈ ಯಂತಹ ಅಂಗಸೌಷ್ಟವ ಹೊಂದುವ ಬಯಕೆಯಿಂದ,ಆಕೆ ಅಲ್ಪಾಹಾರ ಮತ್ತು ಕೆಲವೊಮ್ಮೆ ನಿರಾಹಾರ ವೃತವನ್ನು ಪರಿಪಾಲಿಸುತ್ತಿದ್ದುದು ವೈದ್ಯರಿಗೆ ತಿಳಿದುಬಂದಿತ್ತು. ಶಿಲ್ಪಾಳನ್ನು ತಪಾಸಣೆ ಮಾಡಿದ ವೈದ್ಯರಿಗೆ ಆಕೆಯು ಎಟ್ರೋಪಿಕ್ ಗ್ಯಾಸ್ಟ್ರೈಟಿಸ್ ಮತ್ತು ಪೋಷಕಾಂಶಗಳ ಕೊರತೆಯಿಂದ ಉದ್ಭವಿಸುವ ರಕ್ತಹೀನತೆಯಿಂದ ಬಳಲುತ್ತಿರುವುದು ಪತ್ತೆಯಾಗಿತ್ತು. 

ಮಾನವ ಶರೀರ ಒಂದು ಜೀವಂತ ಯಂತ್ರ. ಮನುಷ್ಯನ ವಿವಿಧ ಶಾರೀರಿಕ ಕ್ರಿಯೆಗಳು ಸಮರ್ಪಕವಾಗಿ ನಡೆಯಲು ಅವಶ್ಯವಾದ "ಇಂಧನ", ಅರ್ಥಾತ್ ಆಹಾರ ಸಮಯಾನುಸಾರ ದೊರೆಯದೆ ಇದ್ದಲ್ಲಿ, ಶರೀರದ ಕಾರ್ಯಕ್ಷಮತೆ ಕುಂಠಿತಗೊಳ್ಳುವುದು. ಪರಿಣಾಮವಾಗಿ ಶರೀರದ ತೂಕ ಮತ್ತು ಬೆಳವಣಿಗೆಗಳು ಕಡಿಮೆಯಾಗುತ್ತವೆ. ವಿಶೇಷವಾಗಿ ಮುಖ, ಕೈ ಕಾಲುಗಳು ಮತ್ತು ಹೊಟ್ಟೆಯ ಭಾಗದಲ್ಲಿ ಚರ್ಮ ತೆಳ್ಳಗಾಗಿ ಹೊಳಪನ್ನು ಕಳೆದುಕೊಳ್ಳುವುದು. ಕಣ್ಣುಗಳು ಗುಳಿಸೇರಿ ಕಾಂತಿಹೀನವಾಗುವುವು. ತಲೆಗೂದಲಿನ ಸ್ವಾಭಾವಿಕ ಅಂದ ಮತ್ತು ಹೊಳಪು ಮಾಯವಾಗುವುದು. ಹೃದಯದ ಗಾತ್ರ ಕುಗ್ಗಿ ಅದರ ಮತ್ತು ನಾಡಿಯ ಬಡಿತ ಕ್ಷೀಣಿಸುವುದು. ಜಠರ ಮತ್ತು ಸಣ್ಣ ಕರುಳುಗಳು ಕುಗ್ಗಿ ಆಹಾರದ ಪಚನಕ್ರಿಯೆ ಹಾಗೂ ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ಷಮತೆ ಕುಂದುವುದು. ಇದೇ ಸಂದರ್ಭದಲ್ಲಿ ಭೇದಿ ಪ್ರಾರಂಭವಾದಲ್ಲಿ ಶರೀರದಲ್ಲಿ ನೀರು ಮತ್ತು ಲವಣಗಳ ಕೊರತೆ ಉದ್ಭವಿಸುತ್ತದೆ. ಇದರೊಂದಿಗೆ ಅತಿ ಆಯಾಸ, ಶರೀರದ ವಿವಿಧ ಅಂಗಗಳಲ್ಲಿ ಬಾವು ಮತ್ತು ರಕ್ತಹೀನತೆ ಕಂಡುಬರುತ್ತದೆ. ಕೆಲ ವ್ಯಕ್ತಿಗಳು ಶಿಲ್ಪಾ ಳಿಗೆ ಆಗುತ್ತಿದ್ದಂತೆ ಕಣ್ಣು ಕತ್ತಲೆ ಬಂದು ಪ್ರಜ್ಞೆ ತಪ್ಪುವುದು ಅಪರೂಪವೇನಲ್ಲ. 

ಶಿಲ್ಪಾಳ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಲು ಸಮತೋಲಿತ ಆಹಾರಸೇವನೆಯೊಂದಿಗೆ ಶರೀರಕ್ಕೆ ಅಗತ್ಯವಿರುವ ಕಾರ್ಬೋಹೈಡ್ರೇಟ್, ಪ್ರೋಟೀನ್, ಖನಿಜಗಳು, ಲವಣಗಳು ಮತ್ತು ವಿಭಿನ್ನ ಜೀವಸತ್ವಗಳ ಬಗ್ಗೆ ಪುಟ್ಟ ಭಾಷಣವನ್ನೇ ಬಿಗಿದರು. ವೈದ್ಯರ ಸಲಹೆ ಸೂಚನೆಗಳನ್ನು ಅಕ್ಷರಶಃ ಪರಿಪಾಲಿಸಿದ ಶಿಲ್ಪಾಳ ಆರೋಗ್ಯವು ಕೆಲವೇ ತಿಂಗಳುಗಳಲ್ಲಿ ಸಾಕಷ್ಟು ಸುಧಾರಿಸಿತ್ತು. 

ನೀವೇನು ಮಾಡಬಾರದು

ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಬಾಧಿಸಿದಾಗ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಲ್ಲಿ ನಮೂದಿಸಿರುವ ರೋಗಲಕ್ಷಣಗಳನ್ನು ಕಂಡು ಅಥವಾ ರೋಗಿಗಳ ಸಮಸ್ಯೆಗಳಿಗೆ ವೈದ್ಯರು ನೀಡಿದ ಸಮಾಧಾನ ಮತ್ತು ಚಿಕಿತ್ಸೆಗಳನ್ನು ಗಮನಿಸಿ ಇದೇ ರೀತಿಯ ಸಮಸ್ಯೆಗಳು ನಿಮ್ಮಲ್ಲೂ ಇವೆ ಎಂದು ಭ್ರಮಿಸದಿರಿ. ಇಂತಹ ಸ್ಥಿತಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ "ಹೈಪೋಕಾಂಡ್ರಿಯಾಸಿಸ್" ಅರ್ಥಾತ್, ತನ್ನ ಆರೋಗ್ಯದ ಬಗ್ಗೆ ಮಾರಕ ಚಿಂತೆ ಇರುವ- ತನಗೆ (ಕಪೋಲ ಕಲ್ಪಿತ) ಯಾವುದೋ ರೋಗ ಇರುವುದೆಂದು ದೂರುವ ಪ್ರವೃತ್ತಿ ಎನ್ನುತ್ತಾರೆ. ಇಂತಹ ಸಮಸ್ಯೆ ಆರೋಗ್ಯವಂತರಲ್ಲೂ ಕಂಡುಬರುವುದುಂಟು. ವೈದ್ಯರು ಇಂತಹ ರೋಗಿಗಳಲ್ಲಿ "ವಾದ" ಮಾಡದೆ "ಸಂವಾದ" ನಡೆಸುವ ಮೂಲಕ ಸಮಾಧಾನ ನೀಡುವುದು ಅನಿವಾರ್ಯ. 

ಇದಲ್ಲದೆ ಒಂದು ಊರಿನಿಂದ ಮತ್ತೊಂದು ಊರಿಗೆ ಸುತ್ತಾಡುತ್ತಾ ಸೇವೆ ಸಲ್ಲಿಸುವ "ಪದವಿ ಹೀನ" ಹಾಗೂ ಮಾನ್ಯತೆ ಇಲ್ಲದ ನಕಲಿ ವೈದ್ಯರಿಂದ ದೂರವಿರಿ. ಅವಶ್ಯಕ ತಪಾಸಣೆ- ಪರೀಕ್ಷೆಗಳನ್ನು ನಡೆಸದೆ ಚಿಕಿತ್ಸೆ ಪಡೆಯದಿರಿ. ನಿಮ್ಮಂತಹದ್ದೇ ಸಮಸ್ಯೆಗಳಿರುವ ಬಂಧುಮಿತ್ರರ ಪುಕ್ಕಟೆ ಸಲಹೆಯಂತೆ, ಅವರು ಸೇವಿಸುತ್ತಿರುವ ಔಷದಗಳನ್ನು ಸೇವಿಸಬೇಡಿ. 

ನೀವೇನು ಮಾಡಬಹುದು?

 ನಿಮ್ಮನ್ನು ಬಾಧಿಸಬಹುದಾದ ಗ್ಯಾಸ್ಟ್ರೈಟಿಸ್ ತಡೆಗಟ್ಟಲು ನಿಗದಿತ ಸಮಯದಲ್ಲಿ ನಿಯಮಿತ ಪ್ರಮಾಣದಲ್ಲಿ ಸಮತೋಲಿತ ಆಹಾರವನ್ನು ಸೇವಿಸಿ. ಅನ್ನ,ಚಪಾತಿ, ರೊಟ್ಟಿಗಳೊಂದಿಗೆ ಹಸಿ ತರಕಾರಿಗಳ ಸಲಾಡ್, ಸಿಹಿ ಮೊಸರು,ಹಣ್ಣುಹಂಪಲುಗಳು ಮತ್ತು ದಿನದಲ್ಲಿ ಕನಿಷ್ಠ ೨ ರಿಂದ ೩ ಲೀಟರ್ ಶುದ್ಧ ನೀರನ್ನು ಸೇವಿಸಿರಿ. ಎಣ್ಣೆ- ತುಪ್ಪದಲ್ಲಿ ಕರಿದ, ಅಧಿಕ ಖಾರವಿರುವ ಮಾಂಸಾಹಾರಗಳ ಸೇವನೆ, ತಂಬಾಕು ಮತ್ತು ಮದ್ಯಪಾನಗಳ ವರ್ಜನೆಯಿಂದ ಈ ಸಮಸ್ಯೆಯನ್ನು ತಡೆಗಟ್ಟುವುದು ಸುಲಭಸಾಧ್ಯ. ಅಂತೆಯೇ ನಿದ್ರೆಗೆಡುವುದು ಮತ್ತು ಮಾನಸಿಕ ಒತ್ತಡಗಳನ್ನು ನಿವಾರಿಸುವುದು ಅಷ್ಟೇ ಅವಶ್ಯ. ಇವುಗಳೊಂದಿಗೆ ಪ್ರತಿನಿತ್ಯ ಶಾರೀರಿಕ ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವುದು ಉಪಯುಕ್ತವೆನಿಸೀತು. ನಿಮ್ಮ ವೈದ್ಯರು ಯಾವುದೇ ಸಂದರ್ಭದಲ್ಲಿ ಔಷದವನ್ನು ನೀಡುವಾಗ, ಇವುಗಳ ಸೇವನೆಯಿಂದ ಗ್ಯಾಸ್ಟ್ರೈಟಿಸ್ ಉಂಟಾಗುವ ಸಾಧ್ಯತೆಗಳಿದ್ದಲ್ಲಿ ಅದನ್ನು ತಡೆಗಟ್ಟುವ ಔಷದವನ್ನು ಇದರ ಜತೆಯಲ್ಲಿ ನೀಡಿರುವುದನ್ನು ಖಚಿತಪಡಿಸಿಕೊಳ್ಳಿ. 

ಆಕಸ್ಮಿಕವಾಗಿ ತೀವ್ರ ಹೊಟ್ಟೆನೋವು ಅಥವಾ ಎದೆನೋವು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ. ಅಗತ್ಯವಿದ್ದಲ್ಲಿ ತಜ್ಞವೈದ್ಯರ ಸಲಹೆ ಹಾಗೂ ಅವರ ಸೂಚನೆಯಂತೆ ರಕ್ತ ಇತ್ಯಾದಿಗಳ ಪರೀಕ್ಷೆ, ಎಕ್ಸ್-ರೇ, ಅಲ್ಟ್ರಾ ಸೌಂಡ್ ಸ್ಕ್ಯಾನ್, ಗ್ಯಾಸ್ತ್ರೋಸ್ಕೋಪಿ ಮತ್ತಿತರ ಪರೀಕ್ಷೆಗಳನ್ನು ಮಾಡಿಸಿ ವೈದ್ಯರೊಂದಿಗೆ ಸಹಕರಿಸಿ. 

ನಿಮ್ಮ ವೈದ್ಯರಲ್ಲಿ ನಿಮ್ಮನ್ನು ಬಾಧಿಸುತ್ತಿರುವ ಕಾಯಿಲೆ ಯಾವುದೆಂದು ಕೇಳಿ ತಿಳಿದುಕೊಳ್ಳಿ. ಅವರು ಸೂಚಿಸುವ ಚಿಕಿತ್ಸಾ ವಿಧಾನಗಳ ಬಗ್ಗೆ (ಔಷದ, ಮಾತ್ರೆ, ಸಿರಪ್, ಇಂಜೆಕ್ಷನ್ ಅಥವಾ ಶಸ್ತ್ರಚಿಕಿತ್ಸೆ ಇತ್ಯಾದಿ)  ಸಂಪೂರ್ಣ ಮಾಹಿತಿಯನ್ನು ಪಡೆದು, ನಿಮ್ಮ ನಿರ್ಧಾರವನ್ನು ಅವರಿಗೆ ತಿಳಿಸುವ ಹಕ್ಕು ನಿಮಗಿದೆ. ಅಂತೆಯೇ ಚಿಕಿತ್ಸೆಯನ್ನು ನಿರಾಕರಿಸುವ ಅಥವಾ ಮತ್ತೊಬ್ಬ ವೈದ್ಯರ ಸಲಹೆಯನ್ನು ಪಡೆಯುವ ಹಕ್ಕು ನಿಮಗಿದೆ. ಅಂತಿಮವಾಗಿ ನಿಮ್ಮ ಕಾಯಿಲೆ ಮತ್ತು ಅದರ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪಡೆಯುವ ಅಧಿಕಾರ ನಿಮಗಿದೆ ಎನ್ನುವುದನ್ನು ಮರೆಯದಿರಿ. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು  

ಉದಯವಾಣಿ ಪತ್ರಿಕೆಯ ದಿ. ೨೮-೧೧-೨೦೦೨ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ