Thursday, May 1, 2014

A TRAIN TO HIMALAYA ?




  ಹಿಮಾಲಯ ಪರ್ವತವನ್ನು ಏರಲು ಪುಟ್ಟ ಸುರಂಗ ರೈಲು ?

ಲೇಖನದ ಶಿರೋನಾಮೆಯನ್ನು ಕಂಡು ನಿಮಗೆ ಅಚ್ಚರಿಯಾಗಿರುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ೮೮೫೦ ಮೀಟರ್ ಎತ್ತರದ ಎವರೆಸ್ಟ್ ಶಿಖರವನ್ನು ರೈಲಿನ ಮೂಲಕ ತಲುಪಬಹುದೆನ್ನುವ ಕಲ್ಪನೆಯೇ ಊಹಾತೀತ ಎಂದಲ್ಲಿ ಅತಿಶಯೋಕ್ತಿ ಎನಿಸಲಾರದು. ಆದರೆ ನಮ್ಮ ರಾಜ್ಯದ ಕೆಲ ಶಾಸಕರ ಅನಿಸಿಕೆಯಂತೆ, ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸುರಂಗ ಮಾರ್ಗವೊಂದನ್ನು ಸಿದ್ಧಪಡಿಸಿ ಪುಟ್ಟ ರೈಲೊಂದನ್ನು ಓಡಿಸಲು ಆರಂಭಿಸಿದಲ್ಲಿ, ನಮ್ಮ ದೇಶಕ್ಕೆ ವಿದೇಶೀ ಪ್ರವಾಸಿಗರನ್ನು ಆಕರ್ಷಿಸುವುದು ಸುಲಭಸಾಧ್ಯ. ಬಿ.ಜೆ.ಪಿ ಸರ್ಕಾರದ ಆಡಳಿತಾವಧಿಯಲ್ಲಿ ಕರ್ನಾಟಕ ವಿಧಾನ ಸಭೆಯ ಭರವಸೆಗಳ ಸಮಿತಿಯ ಸದಸ್ಯರಾಗಿದ್ದ ಎಂಟು ಶಾಸಕರು ವಿದೇಶ ಪ್ರವಾಸದಿಂದ ಮರಳಿದ ಬಳಿಕ ಸಲ್ಲಿಸಿದ್ದ  ಅಧ್ಯಯನದ ವರದಿಯಲ್ಲಿ ಈ ಅದ್ಭುತ ಪ್ರಸ್ತಾವನೆಯನ್ನು ನಮೂದಿಸಲಾಗಿದೆ. ಅಂತೆಯೇ ಇದಕ್ಕೊಂದು ಸಮರ್ಥನೀಯ  ಕಾರಣವೂ ಇದೆ. 

ಸದನ ಸಮಿತಿಗಳು 

ಕರ್ನಾಟಕ ವಿಧಾನಸಭೆಯಲ್ಲಿ ಒಂದು ಡಜನ್ ಗಿಂತಲೂ ಅಧಿಕ ಸದನ ಸಮಿತಿಗಳಿದ್ದು, ವಿಧಾನ ಸಭೆ ಮತ್ತು ಪರಿಷತ್ತುಗಳ ಶಾಸಕರು ಇವುಗಳ ಸದಸ್ಯರಾಗಿರುತ್ತಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ಈ ಸದಸ್ಯರಿಗೆ ಸರಕಾರದ ವತಿಯಿಂದ ಅನೇಕ " ಉಚಿತ ಸೌಲಭ್ಯಗಳು" ದೊರೆಯುತ್ತವೆ. ಇವುಗಳಲ್ಲಿ ವಿಧಾನ ಸಭೆಯ ಐದು ವರ್ಷಗಳ ಅವಧಿಯಲ್ಲಿ ಇಂತಹ ಸದನ ಸಮಿತಿಗಳ ಸದಸ್ಯರಿಗೆ ಮೂರು  ಬಾರಿ ಸ್ವದೇಶ ಪ್ರವಾಸ ಮತ್ತು ಒಂದು ಬಾರಿ ವಿದೇಶ ಪ್ರವಾಸದ ಭಾಗ್ಯ ಪುಕ್ಕಟೆಯಾಗಿ ಲಭಿಸುತ್ತದೆ. ಶಾಸಕರ ವಿದೇಶ ಪ್ರವಾಸಗಳ ಬಗ್ಗೆ ಬಹಿರಂಗಗೊಂಡಿದ್ದ ಕೆಲ ವರದಿಗಳ ಪರಿಣಾಮವಾಗಿ, ಸಾರ್ವಜನಿಕರಿಂದ ಈ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೆ ಶಾಸಕರಿಗೆ ನೀಡಿರುವ ಈ ವಿಶೇಷ ಸವಲತ್ತನ್ನು ರದ್ದುಪಡಿಸಲು ಹಿಂಜರಿದ ಸರ್ಕಾರವು, ಇದನ್ನು ಅಧ್ಯಯನ ಪ್ರವಾಸ ಎಂದು ಸಮಜಾಯಿಷಿ ನೀಡಿ ಕೈತೊಳೆದುಕೊಂಡಿತ್ತು!. ಹಾಗೂ ವಿದೇಶ ಪ್ರವಾಸದಿಂದ ಮರಳಿದ ಸದನ ಸಮಿತಿಗಳ ಸದಸ್ಯರು, ತಾವು ನಡೆಸಿದ್ದ " ಅಧ್ಯಯನದ ವರದಿ" ಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು. 

ಬಿ.ಜೆ.ಪಿ ಸರ್ಕಾರದ ಆಡಳಿತಾವಧಿಯಲ್ಲಿ ಸರ್ಕಾರಿ ಭರವಸೆಗಳ ಸಮಿತಿಯು ೨೮-೦೮- ೨೦೦೯ ರಿಂದ ೦೯-೦೯-೨೦೦೯ ರ ವರೆಗೆ ಯುನೈಟೆಡ್ ಕಿಂಗ್ ಡಂ, ಫ್ರಾನ್ಸ್, ಬೆಲ್ಜಿಯಂ, ನೆದರ್ಲ್ಯಾಂಡ್, ಜರ್ಮನಿ,ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಇಟಲಿ ಮತ್ತು ದುಬೈ ದೇಶಗಳಲ್ಲಿ ಕೈಗೊಂಡಿದ್ದ ವಿದೇಶ ಪ್ರವಾಸದಲ್ಲಿ ಶಾಸಕರಾದ ಗೋಪಾಲಕೃಷ್ಣ ಬೇಳೂರು ( ಸಮಿತಿಯ ಅಧ್ಯಕ್ಷರು), ನೆಹರು ಚನ್ನಬಸಪ್ಪ ಒಲೆಕಾರ್, ವೀರಭದ್ರಪ್ಪ ಹಾಲಹರವಿ, ಕೆ.ಎಂ. ವಿರೂಪಾಕ್ಷಪ್ಪ, ಕೆ.ವೆಂಕಟೇಶ್, ಕೆ.ಬಿ.ಚಂದ್ರಶೇಖರ್, ಸಿ.ಪುಟ್ಟರಂಗ ಶೆಟ್ಟಿ, ಜೆ.ಡಿ.ನಾಯ್ಕ್ ಮತ್ತು ಸಿ.ಬಿ.ಸುರೇಶ ಬಾಬು ಪಾಲ್ಗೊಂಡಿದ್ದರು. ಈ ಸಮಿತಿಯ ಸದಸ್ಯರು ಸಲ್ಲಿಸಿದ್ದ ಅಧ್ಯಯನದ ವರದಿಯಲ್ಲಿ ತಾವು ವಿವಿಧ ದೇಶಗಳಲ್ಲಿ ಕಂಡಿದ್ದ ಅನೇಕ ವ್ಯವಸ್ಥೆಗಳು ಮತ್ತು ವಿಶೇಷ ಸೌಲಭ್ಯಗಳನ್ನು ನಮ್ಮ ರಾಜ್ಯದಲ್ಲಿ ಮತ್ತು ನಮ್ಮ ದೇಶದಲ್ಲಿ ಅನುಷ್ಠಾನಗೊಳಿಸಬೇಕು ಎನ್ನುವ ಸಲಹೆಯನ್ನು ನೀಡಿದ್ದಾರೆ. ವಿಶೇಷವೆಂದರೆ ಇತರ ಸದನ ಸಮಿತಿಗಳೂ ಇದೇ ರೀತಿಯ ಅನೇಕ ಸಲಹೆಗಳನ್ನು ತಮ್ಮ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಸರ್ಕಾರಿ ಭರವಸೆಗಳ ಸಮಿತಿಯು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸುರಂಗ ರೈಲು ಮಾರ್ಗವನ್ನು ನಿರ್ಮಿಸಬೇಕೆನ್ನುವ ಸಲಹೆಗೆ ಇತರ ಯಾವುದೇ ಸಲಹೆ ಸಾಟಿಯಲ್ಲ.

ಯುಂಗ್ ಫ್ರಾವ್ ಯೋಕ್ (JUNGFRAUJOCH)

ಸರ್ಕಾರಿ ಭರವಸೆಗಳ ಸಮಿತಿಯು ಸ್ವಿಟ್ಜರ್ಲೆಂಡ್ ದೇಶಕ್ಕೆ ಭೇಟಿಯನ್ನು ನೀಡಿದ್ದ ಸಂದರ್ಭದಲ್ಲಿ, ಅಲ್ಲಿನ ಸುಪ್ರಸಿದ್ಧ ಪ್ರವಾಸಿ ತಾಣವೆನಿಸಿರುವ ಯುಂಗ್ ಫ್ರಾವ್ ಯೋಕ್ ಎನ್ನುವ ಸುಮಾರು ೩೬೭೧ ಮೀಟರ್ ಎತ್ತರದ ಪರ್ವತದ ಶಿಖರಕ್ಕೆ ಭೇಟಿ ನೀಡಿತ್ತು. ಈ ಹಿಮಾಚ್ಛಾದಿತ ಶಿಖರವನ್ನು ಸುಲಭವಾಗಿ ಏರಲು ಅದ್ಭುತವಾದ ಸುರಂಗಗಳಿರುವ ರೈಲುಮಾರ್ಗವೊಂದನ್ನು ನಿರ್ಮಿಸಲಾಗಿದೆ. ೧೮೯೬ ರಲ್ಲಿ ಆರಂಭಗೊಂಡಿದ್ದ ಈ ರೈಲುಮಾರ್ಗದ ಕಾಮಗಾರಿಗಳು ಪರಿಪೂರ್ಣಗೊಳ್ಳಲು ೧೬ ವರ್ಷಗಳೇ ತಗಲಿದ್ದವು. ಈ ರೈಲುಮಾರ್ಗದಲ್ಲಿ ನಾಲ್ಕು ಭೋಗಿಗಳು ಇರುವ ಪುಟ್ಟ ರೈಲೊಂದರ ಮೂಲಕ ಪ್ರವಾಸಿಗಳು ಪರ್ವತದ ಶಿಖರವನ್ನು ಕೇವಲ ೫೦ ನಿಮಿಷಗಳಲ್ಲಿ ತಲುಪಬಹುದಾಗಿದೆ. ಸುಮಾರು ೯ ಕಿ.ಮೀ ಉದ್ದದ ಈ ರೈಲುಮಾರ್ಗದಲ್ಲಿ ಹಲವಾರು ಸುರಂಗಗಳಿವೆ. ಪರ್ವತದ ಬುಡದಿಂದ ಈ ಪುಟ್ಟ ರೈಲಿನ ಮೂಲಕ ಮೇಲೇರುವಾಗ, ಸುಮಾರು ೯೪೦೦ ಅಡಿ ಎತ್ತರದಲ್ಲಿಣ " ವೀಕ್ಷಣಾ ಕೇಂದ್ರ" ದ ಬಳಿ ರೈಲನ್ನು ನಿಲ್ಲಿಸಲಾಗುತ್ತದೆ. ಬಳಿಕ ೧೦೩೬೮ ಅಡಿ ಎತ್ತರದಲ್ಲಿ ಮತ್ತೊಮ್ಮೆ ರೈಲನ್ನು ನಿಲ್ಲಿಸಿ, ಸುತ್ತಮುತ್ತಲ ಸುಂದರ ಪರ್ವತ ಶ್ರೇಣಿಗಳನ್ನು ವೀಕ್ಷಿಸಲು ಅವಕಾಶವಿರುತ್ತದೆ. ತದನಂತರ ಶಿಖರದ ತುತ್ತತುದಿಯನ್ನು ತಲುಪಿದಾಗ ಜರ್ಮನಿ ಮತ್ತು ಫ್ರಾನ್ಸ್ ದೇಶಗಳು ಗೋಚರಿಸುತ್ತವೆ. ಜೊತೆಗೆ ಅಲ್ಲಿರುವ ಐಸ್ ಪ್ಯಾಲೇಸ್ ಮತ್ತು ಮ್ಯೂಸಿಯಂಗಳಲ್ಲಿ ಅನೇಕ ಆಕರ್ಷಕ ಕಲಾಕೃತಿಗಳನ್ನು ವೀಕ್ಷಿಸಬಹುದಾಗಿದೆ. 

ಈ ಪರ್ವತ ಶಿಖರವನ್ನು ಏರಲು ಬೆಟ್ಟವನ್ನು ಕೊರೆದು ನಿರ್ಮಿಸಿರುವ ಅದ್ಭುತ ರೈಲುಮಾರ್ಗವನ್ನು ಮತ್ತು ಪುಟ್ಟ ರೈಲನ್ನು ಕಂಡು ಆಶ್ಚರ್ಯಚಕಿತರಾಗಿದ್ದ ನಮ್ಮ ಶಾಸಕರು, ತಮ್ಮ ಅಧ್ಯಯನದ ವರದಿಯಲ್ಲಿ ಇದನ್ನು ದಾಖಲಿಸಿದ್ದಾರೆ. ಜೊತೆಗೆ " ನಮ್ಮ ರಾಷ್ಟ್ರದಲ್ಲಿನ ಹಿಮಾಲಯ ಪ್ರದೇಶಗಳಲ್ಲಿ ಅನೇಕ ಪರ್ವತ ಶಿಖರಗಳಿದ್ದು, ಇದೆ ರೀತಿಯಾದ ಸೌಲಭ್ಯವನ್ನು ಅಲ್ಲಿಯೂ ಸಹ ಕಲ್ಪಿಸಿಕೊಟ್ಟರೆ ಹೆಚ್ಚುಹೆಚ್ಚು ಪ್ರವಾಸಿಗಳನ್ನು ಆಕರ್ಷಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿತು" ಎಂದು ಉಲ್ಲೇಖಿಸಿದ್ದಾರೆ!. 

ನಿಜ ಹೇಳಬೇಕಿದ್ದಲ್ಲಿ ನಮ್ಮ ಶಾಸಕರಿಗೆ ಹಿಮಾಲಯ ಪರ್ವತಶಿಖರ ಪ್ರದೇಶವು " ಪರಿಸರ ಸೂಕ್ಷ್ಮ ಪ್ರದೇಶ" ಎನ್ನುವುದೇ ತಿಳಿದಿಲ್ಲ. ಅಂತೆಯೇ ಇಂತಹ ಪ್ರದೇಶಗಳಲ್ಲಿ ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳನ್ನು ನಡೆಸುವಂತಿಲ್ಲ. ಈಗಾಗಲೇ ಹೆಚ್ಚುತ್ತಿರುವ ಜಾಗತಿಕ ತಾಪಮಾನದ ಪರಿಣಾಮವಾಗಿ ಹಿಮಾಲಯ ಪರ್ವತ ಶಿಖರದಲ್ಲಿನ ಹಿಮರಾಶಿ ಕರಗುತ್ತಿರುವ ವೇಗ ಹೆಚ್ಚುತ್ತಿರುವ ಬಗ್ಗೆ ಪರಿಸರ ತಜ್ಞರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಮಹತ್ವಪೂರ್ಣ  ವಿಚಾರಗಳ ಅರಿವಿಲ್ಲದ ನಮ್ಮ ಶಾಸಕರು, ಕಾಟಾಚಾರಕ್ಕಾಗಿ ತಾವು ಸಲ್ಲಿಸುವ ವಿದೇಶ ಅಧ್ಯಯನ ಪ್ರವಾಸದ ವರದಿಯಲ್ಲಿ ಇಂತಹ ಶಿಫಾರಸುಗಳನ್ನು ಮಾಡಿರುವುದು ನಿಜಕ್ಕೂ ಹಾಸ್ಯಾಸ್ಪದ ಎನ್ನದೇ ವಿಧಿಯಿಲ್ಲ!. 


ಬಿ. ಜೆ. ಪಿ ಸರ್ಕಾರದ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ವಿವಿಧ ಸದನ ಸಮಿತಿಗಳು ಕೈಗೊಂಡಿದ್ದ ವಿದೇಶ ಪ್ರವಾಸದ ವರದಿಗಳನ್ನು ಮಾಹಿತಿಹಕ್ಕು ಕಾಯಿದೆಯನ್ವಯ ಪಡೆದುಕೊಳ್ಳಲು ಸುಮಾರು ಸುಮಾರು ಒಂದು ಸಾವಿರ ರೂಪಾಯಿ ವೆಚ್ಚವಾಗಿತ್ತು. ಆದರೆ ಇದರಿಂದಾಗಿ ನಮ್ಮ ಶಾಸಕರು ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸ ಕೈಗೊಳ್ಳುವುದು ಮೋಜು- ಮಸ್ತಿ ಮಾಡಲೆಂದೇ ವಿನಃ , ಯಾವುದೇ ಅನ್ಯಕಾರಣಕ್ಕಾಗಿ  ಅಲ್ಲ ಎನ್ನುವುದು ಅಧಿಕೃತವಾಗಿ ಸಾಬೀತಾಗಿದೆ.  ಏಕೆಂದರೆ ವಿವಿಧ ಸಮಿತಿಗಳು ಸಂದರ್ಶಿಸಿದ್ದ ದೇಶಗಳ ಬಗ್ಗೆ ಸಲ್ಲಿಸಿದ್ದ ವರದಿಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ!. 

ಕೊನೆಯ ಮಾತು 

೧೯೫೩ ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಮೊಟ್ಟಮೊದಲಬಾರಿಗೆ ಏರಿದ್ದ ಎಡ್ಮಂಡ್ ಹಿಲರಿ ಮತ್ತು ತೇನ್ಸಿಂಗ್ ನಾರ್ಗೆ, ಅಕ್ಷರಶಃ ಹರಸಾಹಸವನ್ನೇ  ನಡೆಸಿದ್ದರು. ಪ್ರಸ್ತುತ ನಮ್ಮ ರಾಜ್ಯದ ಸನ್ಮಾನ್ಯ ಶಾಸಕರ ಶಿಫಾರಸನ್ನು ಅನುಷ್ಠಾನಗೊಳಿಸಿದಲ್ಲಿ, ನೀವು ಕೂಡಾ ಹಿಮಾಲಯ ಪರ್ವತವನ್ನು ಕಿಂಚಿತ್ ಶ್ರಮವಿಲ್ಲದೇ ಆರಾಮವಾಗಿ ರೈಲಿನಲ್ಲಿ ಕುಳಿತು ತಲುಪಬಹುದಾಗಿದೆ!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


Thursday, April 24, 2014

sweat it out.....





  ಸಾಕಷ್ಟು ಶ್ರಮಿಸಿ ಬೆವರಿಳಿಸಿ - ತೂಕ ಇಳಿಸಿಕೊಳ್ಳಿ 

ಬಹುತೇಕ ಭಾರತೀಯ ನಾರಿಯರು ವಿವಾಹಕ್ಕೆ ಮುನ್ನ ತಮ್ಮ ಶರೀರದ ತೂಕ, ಆಕಾರ ಮತ್ತು ಸೌಂದರ್ಯಗಳ ಬಗ್ಗೆ ಸಾಕಷ್ಟು ಕಾಳಜಿಯನ್ನು ತೋರುತ್ತಾರೆ. ಆದರೆ ವಿವಾಹವಾಗಿ ಒಂದೆರಡು ಮಕ್ಕಳನ್ನು ಹಡೆದ ಬಳಿಕ ಇವೆಲ್ಲವನ್ನೂ ನಿರ್ಲಕ್ಷಿಸುತ್ತಾರೆ. ತತ್ಪರಿಣಾಮವಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ಅಧಿಕ ತೂಕ-ಅತಿಬೊಜ್ಜಿನ ಪೀಡೆಯಿಂದಾಗಿ, ಧಡೂತಿ ದೇಹವನ್ನು ಗಳಿಸಿಕೊಳ್ಳುತ್ತಾರೆ!. 

ಅತಿಬೊಜ್ಜು-ಅಧಿಕ ತೂಕ 

ಜಗತ್ತಿನ ಬಹುತೇಕ ಶ್ರೀಮಂತ ರಾಷ್ಟ್ರಗಳ ಪ್ರಜೆಗಳನ್ನು ಪೀಡಿಸುತ್ತಿರುವ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗೆ ಭಾರತೀಯರು, ಅದರಲ್ಲೂ ವಿಶೇಷವಾಗಿ ಭಾರತೀಯ ನಾರಿಯರು ಅಪವಾದವೆನಿಸಿಲ್ಲ. ಕಳೆದ ಒಂದೆರಡು ದಶಕಗಳಿಂದ ಪಾಶ್ಚಾತ್ಯರ ಜೀವನಶೈಲಿಯನ್ನು ಅನುಸರಿಸುತ್ತಿರುವ ಭಾರತೀಯರು, ಈ ವಿಶಿಷ್ಟ ಹಾಗೂ ಗಂಭೀರ ಸಮಸ್ಯೆಗೆ ಸುಲಭದಲ್ಲೇ ಈಡಾಗುತ್ತಿದ್ದಾರೆ. ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಈ ಸಮಸ್ಯೆಯು ಇತ್ತೀಚಿನ ಕೆಲವರ್ಷಗಳಿಂದ ಎಳೆಯ ವಯಸ್ಸಿನವರಲ್ಲೂ ವಾಪಕವಾಗಿ ಕಂಡುಬರುತ್ತಿದೆ. 

ಅಂಕಿ ಅಂಶಗಳೇ ಹೇಳುವಂತೆ ೧೯೯೮- ೨೦೦೫ ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಅಧಿಕ ತೂಕದ ಸಮಸ್ಯೆಯು ಶೇ. ೨೦ ರಷ್ಟು ಹೆಚ್ಚಾಗಿತ್ತು. ಪ್ರಸ್ತುತ ಪ್ರತಿ ಆರು ಭಾರತೀಯ ಮಹಿಳೆಯರಲ್ಲಿ ಒಬ್ಬರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ನಗರ ಪ್ರದೇಶಗಳಲ್ಲಿ ಶೇ.೪೦ ರಷ್ಟಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಕಡಿಮೆ ಇದೆ.

ನಿಷ್ಪ್ರಯೋಜಕ ಆಹಾರಗಳ (junk food) ಅತಿ ಸೇವನೆ, ನಿಷ್ಕ್ರಿಯತೆ, ಆರಾಮದಾಯಕ ಜೀವನಶೈಲಿಯೊಂದಿಗೆ, ಅನುವಂಶಿಕತೆಯೂ ಇದಕ್ಕೆ ಕಾರಣವೆನಿಸುತ್ತಿದೆ. ಜೊತೆಗೆ ಜೀವನಪರ್ಯಂತ ಬಾಧಿಸಬಲ್ಲ ಹಾಗೂ ಶಾಶ್ವತ ಪರಿಹಾರವೇ ಇಲ್ಲದಂತಹ ಮಧುಮೇಹ, ಅಧಿಕ ರಕ್ತದ ಒತ್ತಡ, ಹೃದಯ ಮತ್ತು ರಕ್ತನಾಳಗಳ ಮತ್ತು ಇನ್ನಿತರ ಅನೇಕ ವಿಧದ ಗಂಭೀರ ಕಾಯಿಲೆಗಳಿಗೆ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯೇ ಕಾರಣವೆನಿಸುತ್ತಿದೆ. ಅನಿಯಂತ್ರಿತವಾಗಿ ವೃಧ್ಧಿಸುತ್ತಿರುವ ಈ ಅಪಾಯಕಾರಿ ಪಿಡುಗನ್ನು ಶಿಸ್ತುಬದ್ಧ ಜೀವನಶೈಲಿಯನ್ನು ಅನುಸರಿಸುವ ಮೂಲಕ ತಡೆಗಟ್ಟುವುದೇ ಇದಕ್ಕೊಂದು ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಅರ್ಥಾತ್, " ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ" ಎನ್ನುವಂತೆಯೇ, ನಿಮ್ಮ ಶರೀರದ ತೂಕ ಮತ್ತು ಗಾತ್ರಗಳನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಿಕೊಳ್ಳುವುದೇ ಇದಕ್ಕೊಂದು ನಿಶ್ಚಿತ ಪರಿಹಾರವಾಗಿದೆ.

ಆದರೆ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯು ಮಿತಿಮೀರಿದ ಬಳಿಕ ಬಂದುಮಿತ್ರರ ವ್ಯಂಗೋಕ್ತಿಗಳಿಂದ ನೊಂದ ಮಹಿಳೆಯರು, ಅನಿವಾರ್ಯವಾಗಿ ತಮ್ಮ ಶರೀರದ ತೂಕವನ್ನು ಇಳಿಸಿಕೊಳ್ಳಲು ಹರಸಾಹಸವನ್ನೇ ನಡೆಸುತ್ತಾರೆ. ಈ ಸಂದರ್ಭದಲ್ಲಿ ಒಂದೆರಡು ದಶಕಗಳಿಂದ ಗಳಿಸಿಕೊಂಡಿದ್ದ ತಮ್ಮ ಧಡೂತಿ ದೇಹವನ್ನು, ಒಂದೆರಡು ತಿಂಗಳುಗಳಲ್ಲೇ ಕರಗಿಸಿಕೊಳ್ಳಲು ಶಾರೀರಿಕ ಶ್ರಮದ ಅವಶ್ಯಕತೆಯೇ ಇಲ್ಲದ ದುಬಾರಿ ಚಿಕಿತ್ಸೆಗಳನ್ನು ಪ್ರಯೋಗಿಸುತ್ತಾರೆ!. 

ತೂಕ ಇಳಿಸುವ ಔಷದಗಳು 

ನೀವು ಪ್ರತಿದಿನ ತಪ್ಪದೆ ವೀಕ್ಷಿಸುವ ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುವ ಅಸಂಖ್ಯ ಜಾಹೀರಾತುಗಳಲ್ಲಿ, ಕೊಬ್ಬಿನಿಂದ ಉಬ್ಬಿರುವ ನಿಮ್ಮ ಉದರವನ್ನು ಔಷದಯುಕ್ತ ತೈಲವನ್ನು ಹಚ್ಚುವ ಮೂಲಕ ಅಥವಾ ಪೇಯಗಳ ರೂಪದಲ್ಲಿ ಸೇವಿಸಿ ಕುಗ್ಗಿಸಬಹುದಾದ  ಆಕರ್ಷಕ ಜಾಹೀರಾತುಗಳನ್ನು ಕಂಡಿರಲೇಬೇಕು.ನಿಜ ಹೇಳಬೇಕಿದ್ದಲ್ಲಿ ಇಂತಹ ತೈಲಗಳನ್ನು ನೂರಾರು ಬಾರಿ ಹಚ್ಚಿ ಮಾಲಿಶ್ ಮಾಡಿದರೂ ಹಾಗೂ ತಿಂಗಳುಗಟ್ಟಲೆ ಇಂತಹ ದುಬಾರಿ ಪೇಯಗಳನ್ನು ಕುಡಿದರೂ, ಉಬ್ಬಿರುವ ನಿಮ್ಮ ಉದರ ಮತ್ತು ಕೊಬ್ಬಿದ ಶರೀರವು ಕಿಂಚಿತ್ ಕೂಡಾ ಕುಗ್ಗುವ ಸಾಧ್ಯತೆಗಳೇ ಇಲ್ಲ. ಆದರೆ ಪ್ರತಿನಿತ್ಯ ಈ ತೈಲವನ್ನು ಮಾಲಿಶ್ ಮಾಡಲು ವಿನಿಯೋಗಿಸುವಷ್ಟೇ ಸಮಯವನ್ನು ಶಾರೀರಿಕ ವ್ಯಾಯಾಮಕ್ಕಾಗಿ ವಿನಿಯೋಗಿಸಿದಲ್ಲಿ, ನಿಮ್ಮ ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬಿನ ಅಂಶವು ಒಂದಿಷ್ಟು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ!. 

ಕೆಲವೊಂದು ಜಾಹೀರಾತುಗಳಲ್ಲಿ ನೀವು ೩೦ ವರ್ಷಗಳಲ್ಲಿ ಗಳಿಸಿಕೊಂಡಿರುವ ಅಧಿಕತೂಕವನ್ನು ಕೇವಲ ೩ ತಿಂಗಳುಗಳಲ್ಲೇ ಇಳಿಸುವ ಆಶ್ವಾಸನೆಯನ್ನು ನೀಡಿದರೂ, ಈ ದುಬಾರಿ ವೆಚ್ಚದ ತೂಕ ಇಳಿಸುವ ವಿಧಾನವು ಅನಪೇಕ್ಷಿತ ಮತ್ತು ಅಡ್ಡಪರಿಣಾಮಗಳಿಗೆ ಕಾರಣವೆನಿಸುವುದು ಅಪರೂಪವೇನಲ್ಲ.ಅನೇಕ ಖ್ಯಾತನಾಮ ಸಂಸ್ಥೆಗಳು ತಮ್ಮ "ತೂಕ ಇಳಿಸುವ ಕಾರ್ಯಕ್ರಮ" ದ ಸಲುವಾಗಿ, ನೀವು ಕಳೆದುಕೊಳ್ಳಲಿರುವ ಪ್ರತಿಯೊಂದು ಕಿಲೋಗ್ರಾಮ್ ಗೆ ಇಂತಿಷ್ಟು ಸಾವಿರ ರೂಪಾಯಿ ಶುಲ್ಕವನ್ನು ನಿ ಗದಿಸಿರುತ್ತಾರೆ.ಹಾಗೂ ಈ ಮೊತ್ತವನ್ನು ಮುಂಗಡವಾಗಿಯೇ ಪಡೆದುಕೊಳ್ಳುತ್ತಾರೆ!. 

ಅನೇಕ ಮುಂದುವರೆದ ರಾಷ್ಟ್ರಗಳಲ್ಲಿ ತಜ್ಞವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಮಹಾಕಾಯರ ಶರೀರದ ನಿರ್ದಿಷ್ಟ ಭಾಗಗಳಲ್ಲಿ ಶೇಖರವಾಗಿರುವ ಕೊಬ್ಬನ್ನು ತೆಗೆಯುವ ಮೂಲಕ ಧಡೂತಿ ದೇಹದ ಗಾತ್ರವನ್ನು ಕುಗ್ಗಿಸುತ್ತಾರೆ. ಆದರೆ ಈ ಚಿಕಿತ್ಸೆಯು ಅತ್ಯಂತ ದುಬಾರಿಯಾಗಿರುವುದರಿಂದ, ಸಾಮಾನ್ಯ ಜನರು ಇದರ ಗೊಡವೆಗೆ ಹೋಗುವುದೇ ಇಲ್ಲ. ಅದೇ ರೀತಿಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ನಿಮ್ಮ ಜಠರದ ಮೇಲ್ಭಾಗದಲ್ಲಿ ಹಿಗ್ಗಬಲ್ಲ ಸಿಲಿಕಾನ್ ಬಳೆಯೊಂದನ್ನು ಅಳವಡಿಸುವ ಮೂಲಕ ಜಠರದ ಗಾತ್ರವನ್ನು ಕುಗ್ಗಿಸುವ ವಿಧಾನವು ವಿದೇಶಗಳಲ್ಲಿ ಮಾತ್ರವಲ್ಲ, ಭಾರತದಲ್ಲೂ ವ್ಯಾಪಕವಾಗಿ ಬಳಸಲ್ಪಡುತ್ತಿದೆ. ಈ ರೀತಿಯಲ್ಲಿ ಕುಗ್ಗಿಸಿದ ಜಠರವು ಅಲ್ಪ ಪ್ರಮಾಣದ ಆಹಾರವನ್ನು ಸೇವಿಸಿದೊಡನೆ ತುಂಬುವುದರಿಂದಾಗಿ, ನೀವು ಸೇವಿಸುವ ಆಹಾರದ ಪ್ರಮಾಣವು ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸಾ ವಿಧಾನದ ದೀರ್ಘಕಾಲೀನ ಅಡ್ಡ ಪರಿಣಾಮ- ದುಷ್ಪರಿಣಾಮಗಳ ಮಾಹಿತಿಗಳು ಲಭಿಸಲು ಹಲವಾರು ವರ್ಷಗಳೇ ಬೇಕಾಗುತ್ತವೆ. 

ಅಪಾಯಕಾರಿ ಔಷದಗಳಿಗೆ ನಿಷೇಧ 

ಮೇಲೆ ವಿವರಿಸಿದ ತೂಕ ಇಳಿಸುವ ವಿಧಾನಗಳಿಗಿಂತಲೂ ಅತ್ಯಂತ ವ್ಯಾಪಕವಾಗಿ ಬಳಸಲ್ಪಡುತ್ತಿದ್ದ ಮತ್ತು ತಜ್ಞ ವೈದ್ಯರೇ ಶಿಫಾರಸು ಮಾಡುತ್ತಿದ್ದ " ಔಷದ ಚಿಕಿತ್ಸೆ" ಯು ಇನ್ನು ಮುಂದೆ ಭಾರತೀಯರಿಗೆ ಅಲಭ್ಯವೆನಿಸಲಿದೆ. ಏಕೆಂದರೆ ಅತಿಬೊಜ್ಜು - ಅಧಿಕ ತೂಕದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಬಳಸಲ್ಪಡುತ್ತಿದ್ದ ಇಂತಹ ಔಷದಗಳನ್ನು ನಿಷೇಧಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಅವಶ್ಯಕ ಕ್ರಮಗಳನ್ನು ಕೈಗೊಂಡಿದೆ. ತತ್ಪರಿಣಾಮವಾಗಿ ಇಂತಹ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸದಂತೆ, ವಿದೇಶಗಳಿಂದ ಆಮದು ಮಾಡದಂತೆ ಮತ್ತು ಭಾರತದಲ್ಲಿ ಮಾರಾಟ ಮಾಡದಂತೆ ಅಧಿಕೃತ ಕಾನೂನನ್ನು ಜಾರಿಗೆ ತರಲಿದೆ. 

ಈ ಔಷದವನ್ನು ಸೇವಿಸುವುದರಿಂದ ನಿಮ್ಮ ಹಸಿವು ಕಡಿಮೆಯಾಗುವುದರಿಂದಾಗಿ, ನೀವು ಸೇವಿಸುವ ಆಹಾರದ ಪ್ರಮಾಣವು ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ಇದರಿಂದಾಗಿ ಕಾಲಕ್ರಮೇಣ ನಿಮ್ಮ ಶರೀರದ ತೂಕವು ನಿಶ್ಚಿತವಾಗಿಯೂ ಕಡಿಮೆಯಾಗುತ್ತದೆ. ಆದರೆ ಈ ಔಷದಗಳ ಸೇವನೆಯನ್ನು ನಿಲ್ಲಿಸಿದೊಡನೆ ಅತಿಬೊಜ್ಜು- ಅಧಿಕ ತೂಕದ ಸಮಸ್ಯೆಯು ಮತ್ತೆ ಮರುಕಳಿಸುತ್ತದೆ. ಇಷ್ಟು ಮಾತ್ರವಲ್ಲ, ಇಂತಃ ಔಷದಗಳ ಸೇವನೆಯಿಂದ ಹೃದಯಕ್ಕೆ ಹಾನಿ ಸಂಭವಿಸುವ, ರಕ್ತದ ಒತ್ತಡ ಹೆಚ್ಚುವ, ಪಕ್ಷವಾತ ಮತ್ತು ಹೃದಯಾಘಾತಗಳಂತಹ ಗಂಭೀರ ದುಷ್ಪರಿಣಾಮಗಳು ತಲೆದೋರುವ ಸಾಧ್ಯತೆಗಳೂ ಇವೆ. ಆದರೆ ಶಾರೀರಿಕ ಶ್ರಮದ ಅವಶ್ಯಕತೆ ಇಲ್ಲದೆ ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದ ಆಲಸಿಗಳಿಂದಾಗಿ, ಈ ಔಷದಗಳಿಗೆ ಸಾಕಷ್ಟು ಬೇಡಿಕೆ ಇದ್ದಿತು. ವಿಶೇಷವೆಂದರೆ ಇಂತಹ ಔಷದಗಳ ದೀರ್ಘಕಾಲೀನ ಸೇವನೆಯಿಂದ ಉದ್ಭವಿಸುತ್ತಿರುವ ದುಷ್ಪರಿಣಾಮ ಮತ್ತು ಅಡ್ಡ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಇವುಗಳನ್ನು ನಿಷೇಧಿಸಲು ಅವಶ್ಯಕ ಕ್ರಮ ಕೈಗೊಂಡಿದೆ. ಹಾಗೂ ಇದೇ ಕಾರಣದಿಂದಾಗಿ ಅತಿಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿರುವವರು, ಇನ್ನು ಮುಂದೆ ಪ್ರತಿನಿತ್ಯ ವ್ಯಾಯಾಮ ಹಾಗೂ ಸಮತೋಲಿತ ಆಹಾರ ಸೇವನೆಮತ್ತು ತಮ್ಮ ಜೀವನಶೈಲಿಯಲ್ಲಿ ಅವಶ್ಯಕ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. 

ಅಂತಿಮವಾಗಿ ಹೇಳುವುದಾದಲ್ಲಿ ನಿಮ್ಮ ಶರೀರದ ತೂಕವು ಅತಿಯಾಗಿ ಹೆಚ್ಚುತ್ತಿರುವ ಲಕ್ಷಣಗಳು ಕಂಡುಬರುವ ಮುನ್ನವೇ ಅವಶ್ಯಕ ಕ್ರಮಗಳನ್ನು ಕೈಗೊಳ್ಳುವ ಮತ್ತು ಇದನ್ನು ತಡೆಗಟ್ಟುವ ಮಾರ್ಗೋಪಾಯಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ನಿಶ್ಚಿತವಾಗಿಯೂ ಹಿತಕರವೆನಿಸುವುದು.

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ.೨೧-೦೧-೨೦೧೧ ರ ಸಂಚಿಕೆಯ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ.



Saturday, April 19, 2014

MISUSE OF REDCROSS LOGO





  "ರೆಡ್ ಕ್ರಾಸ್" ಲಾಂಛನದ ಅನಧಿಕೃತ ಬಳಕೆ ದಂಡನಾರ್ಹ !

ಹಳ್ಳಿಯಿಂದ ಆರಂಭಿಸಿ ದಿಲ್ಲಿಯ ತನಕ, ಪ್ರತಿಯೊಂದು ಕಡೆಯಲ್ಲೂ ನೀವು ದಿನನಿತ್ಯ ಕಾಣಬಹುದಾದ "ರೆಡ್ ಕ್ರಾಸ್" ಚಿಹ್ನೆಯು ವೈದ್ಯರು, ಆಸ್ಪತ್ರೆಗಳು ಅಥವಾ ಔಷದ ಅಂಗಡಿಗಳನ್ನು ಜ್ಞಾಪಿಸುವುದು ಸ್ವಾಭಾವಿಕ. ಇದಲ್ಲದೇ ಅಸಂಖ್ಯ ವೈದ್ಯರ ಸ್ವಂತ ವಾಹನಗಳು ಮತ್ತು ಚಿಕಿತ್ಸಾಲಯಗಳಲ್ಲಿ ರಾರಾಜಿಸುವ ಈ ಚಿಹ್ನೆಯು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ನಿಜ ಹೇಳಬೇಕಿದ್ದಲ್ಲಿ ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸೊಸೈಟಿಯನ್ನು ಹೊರತುಪಡಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಇದನ್ನು ಅನಧಿಕೃತವಾಗಿ ಬಳಸುವುದು ಕಾನೂನುಬಾಹಿರ ಎಂದಲ್ಲಿ ನೀವೂ ನಂಬಲಾರಿರಿ!. 

ಅಧಿಕೃತ ಲಾಂಛನ 

ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಅಧಿಕೃತ ಲಾಂಚನವಾಗಿರುವ ರೆಡ್ ಕ್ರಾಸ್ ಚಿಹ್ನೆಯು ಸೇವೆ ಮತ್ತು ರಕ್ಷಣೆಗಳ ಸೂಚಕವೂ ಹೌದು. ೧೯೬೦ ರಲ್ಲಿ ಜರಗಿದ್ದ ಜಿನೀವಾ ಸಮ್ಮೇಳನದ ನಾಲ್ಕನೆಯ ಪರಿಚ್ಛೇದದಲ್ಲಿ ರಕ್ಷಣೆಯ ದ್ಯೋತಕವಾದ "ರೆಡ್ ಕ್ರಾಸ್' ಚಿಹ್ನೆಯನ್ನು ಅಂತರ ರಾಷ್ಟ್ರೀಯ ಮಾನವೀಯತಾ ಕಾನೂನಿನಂತೆ " ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸೊಸೈಟಿ" ಗೆ ಪ್ರದಾನ ಮಾಡಲಾಗಿತ್ತು. ಇದೇ ಸಮ್ಮೇಳನದಲ್ಲಿ ಅಂಗೀಕರಿಸಿದ್ದ ೩೮ ನೆಯ ಮತ್ತು ೪೪ ನೆಯ ನಿರ್ಣಯಗಳಂತೆ, ಈ ಚಿಹ್ನೆಯನ್ನು ಯುದ್ಧಕಾಲದಲ್ಲಿ ಮಿಲಿಟರಿ ವೈದ್ಯಕೀಯ ಸೇವೆಗಳನ್ನು ನೀಡುವವರು ಬಳಸಬಹುದಾಗಿದೆ. ಅದೇ ರೀತಿಯಲ್ಲಿ ಶಾಂತಿ ಸಮಯದಲ್ಲಿ ಈ ಚಿಹ್ನೆಯು ರೆಡ್ ಕ್ರಾಸ್ ಅಭಿಯಾನವನ್ನು ಸೂಚಿಸುತ್ತದೆ. 

ಅನಧಿಕೃತ ಬಳಕೆ 

ನೀವು ಪ್ರತಿನಿತ್ಯ ಕಾಣುವ ಅಸಂಖ್ಯ ವೈದ್ಯರ ವಾಹನಗಳು, ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಎಂಬುಲೆನ್ಸ್, ಔಷದ ಅಂಗಡಿಗಳು, ವೈದ್ಯಕೀಯ ಪರೀಕ್ಷಾ ಕೇಂದ್ರಗಳು, ವೈದ್ಯಕೀಯ ಸಂಸ್ಥೆ- ಸಂಘಟನೆಗಳು ಮತ್ತು ಜುಜುಬಿ ತಲೆನೋವಿನ ಮಾತ್ರೆಗಳ ಹೊರಕವಚಗಳ ಮೇಲೂ ' ರೆಡ್ ಕ್ರಾಸ್' ಚಿಹ್ನೆ ರಾರಾಜಿಸುತ್ತಿರುವುದನ್ನು ನೀವೂ ಗಮನಿಸಿರಲೇಬೇಕು.ಆದರೆ ರೆಡ್ ಕ್ರಾಸ್ ಚಿಹ್ನೆಯ ದುರ್ಬಳಕೆಯೂ ದಂಡನಾರ್ಹ ಅಪರಾಧವೆಂದು, ಈ ಚಿಹ್ನೆಯನ್ನು ಬಳಸುತ್ತಿರುವ ಬಹುತೇಕ ಜನರಿಗೆ ತಿಳಿದಿಲ್ಲ!. 

ರೆಡ್ ಕ್ರಾಸ್ ಚಿಹ್ನೆಯ ದುರುಪಯೋಗದ ಪರಿಣಾಮವಾಗಿ ಇಂದು ಜನಸಾಮಾನ್ಯರು ಇದನ್ನು ಪ್ರಥಮ ಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಯ ಸಂಕೇತವೆಂದೇ  ತಪ್ಪಾಗಿ ಅರ್ಥೈಸಿಕೊಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ಏಕೆಂದರೆ ನೀವು ದಿನನಿತ್ಯ ಪಯಣಿಸುವ ಆಟೋರಿಕ್ಷಾ ಅಥವಾ ಬಸ್ಸುಗಳಲ್ಲಿ ಕಡ್ಡಾಯವಾಗಿ ಇರಿಸಲೇ ಬೇಕಾದ " ಪ್ರಥಮ ಚಿಕಿತ್ಸೆ" ಯ ಪೆಟ್ಟಿಗೆಯ ಮೇಲೂ ರೆಡ್ ಕ್ರಾಸ್ ಚಿಹ್ನೆಯನ್ನು ಮುದ್ರಿಸಲಾಗುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಇದೀಗ ಅಂತರ ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯು ತನ್ನ ಲಾಂಛನದ ಅನಧಿಕೃತ ಬಳಕೆಯ ವಿರುದ್ಧ ವೈದ್ಯಕೀಯ ಕ್ಷೇತ್ರ ಹಾಗೂ ಸಾರ್ವಜನಿಕರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಿ, ಅವರಲ್ಲಿರಬಹುದಾದ ತಪ್ಪುಕಲ್ಪ್ಪನೆಗಳನ್ನು ನಿವಾರಿಸುವತ್ತ ಗಂಭೀರ ಪ್ರಯತ್ನಗಳನ್ನು ನಡೆಸುತ್ತಿದೆ.

ವಿಶೇಷ ಅಭಿಯಾನ  

ಈ ಬಗ್ಗೆ ವಿಶೇಷ ಅಭಿಯಾನವನ್ನು ಕೈಗೊಂಡಿರುವ ರೆಡ್ ಕ್ರಾಸ್ ಸಂಸ್ಥೆಯು ಇದೀಗ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳಲು ಸಮರ್ಥನೀಯ ಕಾರಣಗಳಿವೆ ಎಂದು ಸಂಸ್ಥೆಯ ಪ್ರತಿನಿಧಿಯೊಬ್ಬರು ಸ್ಪಷ್ಟೀಕರಿಸಿದ್ದಾರೆ. ಅವರ ವಾದದಂತೆ "ರೆಡ್ ಕ್ರಾಸ್" ಲಾಂಛನವನ್ನು ಪ್ರದರ್ಶಿಸುವ ತಮ್ಮ ಸಂಸ್ಥೆಯ ಅಧಿಕೃತ ವಾಹನ ಹಾಗೂ ಅನಧಿಕೃತವಾಗಿ ಈ ಲಾಂಛನವನ್ನು ಬಳಸುವ ಇತರ ವಾಹನಗಳ ನಡುವಿನ ವ್ಯತ್ಯಾಸವನ್ನು ಅರಿಯದ ಜನಸಾಮಾನ್ಯರಿಗೆ ಮತ್ತು ತಮ್ಮ ಸಂಸ್ಥೆಗೂ, ಕೆಲ ಸಂದರ್ಭಗಳಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಇದರಿಂದಾಗಿ ರೆಡ್ ಕ್ರಾಸ್ ಸಂಸ್ಥೆಯು ಅವಶ್ಯಕತೆ ಇರುವವರಿಗೆ ತಮ್ಮ ಸೇವೆಯನ್ನು ನೀಡಲು ತೊಡಕಾಗುವ ಸಾಧ್ಯತೆಗಳೂ ಇವೆ. ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಲಾಂಛನದ ದುರ್ಬಳಕೆಯನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದರೂ, ಅಪೇಕ್ಷಿತ ಪರಿಣಾಮ ದೊರೆಯದೆ ಇರುವುದು ಕೂಡಾ ಇದೀಗ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ಪ್ರಮುಖ ಕಾರಣವೆನಿಸಿದೆ. ಅಂತೆಯೇ ಈ ಲಾಂಛನವನ್ನು ಭಯೋತ್ಪಾದನೆಗಾಗಿ ದುರುಪಯೋಗಪಡಿಸಿರುವ ಅನೇಕ ಪ್ರಕರಣಗಳನ್ನೂ ದಾಖಲಿಸಲಾಗಿದೆ. 

ವೈದ್ಯರು, ಆಸ್ಪತ್ರೆಗಳು, ಔಷದ ಅಂಗಡಿಗಳು, ಎಂಬುಲೆನ್ಸ್ ಮತ್ತಿತರ ವೈದ್ಯಕೀಯ ಸೇವೆಗಳನ್ನು ಒದಗಿಸುವವರಿಗೆ ರೆಡ್ ಕ್ರಾಸ್ ಚಿಹ್ನೆಯನ್ನು ಬಳಸದಂತೆ ಈಗಾಗಲೇ ಸೂಚನೆಯನ್ನು ನೀಡಲಾಗಿದೆ. ಅಂತೆಯೇ ಈ ಚಿಹ್ನೆಯನ್ನು ಬಳಸುತ್ತಿದ್ದವರಿಗೆ ನೂತನ ಹಾಗೂ ವಿಭಿನ್ನ ಚಿಹ್ನೆಗಳನ್ನು ನೀಡಿದ್ದು, ಇವುಗಳನ್ನೇ ಕಡ್ಡಾಯವಾಗಿ ಬಳಸುವಂತೆ ಆಗ್ರಹಿಸಲಾಗಿದೆ. ಇವೆಲ್ಲಾ ಕ್ರಮಗಳನ್ನು ಕೈಗೊಂಡ ಬಳಿಕವೂ ತನ್ನ ಅಧಿಕೃತ ಲಾಂಛನದ ದುರುಪಯೋಗ ಮುಂದುವರೆದಲ್ಲಿ. ಮುಂದಿನ ದಿನಗಳಲ್ಲಿ ರೆಡ್ ಕ್ರಾಸ್ ಸಂಸ್ಥೆಯು ತನ್ನ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಲಿದೆ. 

ರೆಡ್ ಕ್ರಾಸ್ ಚಿಹ್ನೆಯನ್ನು ತಮ್ಮ ವಾಹನ ಅಥವಾ ವೃತ್ತಿ- ವಾಣಿಜ್ಯ ಕೇಂದ್ರಗಳಲ್ಲಿ ಬಳಸುವ ಖಾಸಗಿ ವೈದ್ಯರು, ವಾಹನಗಳು ಅಥವಾ ಔಷದ ಅಂಗಡಿಗಳಲ್ಲಿ ಇರಬಹುದಾದ ಸಮಸ್ತ ವಸ್ತುಗಳನ್ನು ಮುಟ್ಟುಗೋಲು ಹಾಕುವುದರೊಂದಿಗೆ, ಕನಿಷ್ಠ ೩,೫೦೦ ರೂ. ದಂಡವನ್ನು ವಿಧಿಸಲು ಕಾನೂನಿನಂತೆ ಅವಕಾಶವಿದೆ. ಪ್ರಸ್ತುತ ಈ ದಂಡದ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವಂತೆ ಸಂಸ್ಥೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. 

ವೈದ್ಯಕೀಯ ಕ್ಷೇತ್ರಕ್ಕೆ ಅವಶ್ಯಕವೆನಿಸುವ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿರುವ ಎಲ್ಲರಿಗೂ ಈ ಬಗ್ಗೆ ಮಾಹಿತಿಯನ್ನು ನೀಡಲು ಕಳೆದ ತಿಂಗಳು ಬೆಂಗಳೂರಿನಲ್ಲಿ  ವಿಚಾರಸಂಕಿರಣವೊಂದನ್ನು ರೆಡ್ ಕ್ರಾಸ್ ಸಂಸ್ಥೆಯು ಏರ್ಪಡಿಸಿತ್ತು.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೨-೦೯- ೨೦೦೪ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ. 



Friday, April 18, 2014

POOJYA DEVALADA MUNDE TYAAJYAGALA SAAMRAAJYA !




 ಪೂಜ್ಯ ದೇವಳದ ಮುಂದೆ ತ್ಯಾಜ್ಯಗಳ ಸಾಮ್ರಾಜ್ಯ !

ಮುತ್ತು ಬೆಳೆಯುತ್ತಿದ್ದ ಊರೆಂದೇ ಖ್ಯಾತಿವೆತ್ತ ಪುತ್ತೂರಿನ ಮತ್ತು ಸುತ್ತಮುತ್ತಲ ಹತ್ತಾರು ಊರುಗಳ ಆರಾಧ್ಯದೈವ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆಯು ಬಹಳ ಸಂಭ್ರಮ- ಸಡಗರಗಳಿಂದ ಜರಗುತ್ತದೆ. ಗತವರ್ಷದಲ್ಲಿ ನೆರವೇರಿದ್ದ ಬ್ರಹ್ಮಕಲಶ ಕಾರ್ಯಕ್ರಮದಿಂದಾಗಿ ಮೇ ತಿಂಗಳಿನಲ್ಲಿ ಜರಗಿದ್ದುದನ್ನು ಹೊರತುಪಡಿಸಿದಲ್ಲಿ, ಶ್ರೀ ದೇವರ ಜಾತ್ರೆಯು ಅನಾದಿಕಾಲದಿಂದಲೂ ಎಪ್ರಿಲ್ ತಿಂಗಳಿನ ೧೭ ರಂದೇ  ಜರಗುತ್ತದೆ. ಇತ್ತೀಚಿನ ಕೆಲವರ್ಷಗಳಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಗವದ್ಭಕ್ತರು ಪಾಲ್ಗೊಳ್ಳುವ ಈ ವರ್ಷಾವಧಿ ಜಾತ್ರೆಯಂದು, ರಥೋತ್ಸವ ನಡೆಯುವ ಬಾಕಿಮಾರು ಗದ್ದೆಯು ಜನರಿಂದ ಕಿಕ್ಕಿರಿದು ತುಂಬಿರುತ್ತದೆ. ಅಂತೆಯೇ ಮರುದಿನ ಬಾಕಿಮಾರು ಗದ್ದೆಯ ಉದ್ದಗಲಕ್ಕೂ ಅಗಾಧ ಪ್ರಮಾಣದ ತ್ಯಾಜಗಳು ಅಲ್ಲಲ್ಲಿ  ರಾಶಿಯಾಗಿ ಅಥವಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. 

ಪುತ್ತೂರು ಮತ್ತು ಸುತ್ತುಮುತ್ತಲ ಹತ್ತಾರು ಊರುಗಳ ಜನರು ಶ್ರದ್ಧಾಭಕ್ತಿಪೂರ್ವಕವಾಗಿ ಆರಾಧಿಸುವ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯನ್ನು ಪ್ರವೇಶಿಸುವಾಗ, ಮಡಿ ಮೈಲಿಗೆಗಳತ್ತ ಗಮನಹರಿಸಿ ಸ್ನಾನವನ್ನು ಮಾಡಿ ಶುಚಿರ್ಭೂತರಾಗಿ ಬರುವ ಭಕ್ತರು, ರಥೋತ್ಸವ ನಡೆಯುವ ಗದ್ದೆಯನ್ನು ಪ್ರವೇಶಿಸಿದೊಡನೆ ಇವೆಲ್ಲವನ್ನೂ ಮರೆತುಬಿಡುತ್ತಾರೆ. ಪ್ರಾಯಶಃ ಇದೇ ಕಾರಣದಿಂದಾಗಿ ಜಾತ್ರೆಯ ಮರುದಿನ ಬಾಕಿಮಾರು ಗದ್ದೆಯಾದ್ಯಂತ ಅಗಾಧಪ್ರಮಾಣದ ವೈವಿಧ್ಯಮಯ ತ್ಯಾಜ್ಯಗಳ ಸಾಮ್ರಾಜ್ಯವು ಕಣ್ಣುಹಾಯಿಸಿದಲ್ಲೆಲ್ಲಾ ಕಾಣಸಿಗುತ್ತದೆ. ಆದರೆ ಇದಕ್ಕೊಂದು ನಿರ್ದಿಷ್ಟ ಕಾರಣವೂ ಇದೆ. 

ಖಾದ್ಯಪೇಯಗಳಿಂದ ತ್ಯಾಜ್ಯ 

ಜಾತ್ರೆಯ ಸಂದರ್ಭದಲ್ಲಿ ಶ್ರೀ ದೇವಳದ ಮುಂಭಾಗದಲ್ಲಿನ ಗದ್ದೆಯಲ್ಲಿ ಹಲವಾರು ವಿಧದ ಮಳಿಗೆಗಳು ತಲೆಯೆತ್ತುತ್ತವೆ. ಇವುಗಳಲ್ಲಿ ದೇವಳಕ್ಕೆ ಭೇಟಿ ನೀಡುವ ಭಕ್ತಾದಿಗಳ ಹಸಿವು ನೀರಡಿಕೆಗಳನ್ನು ನೀಗಿಸುವ ಖಾದ್ಯ-ಪೇಯಗಳ ಮಳಿಗೆಗಳ ಸಂಖ್ಯೆ ಸ್ವಾಭಾವಿಕವಾಗಿಯೇ ಹೆಚ್ಚಾಗಿರುತ್ತದೆ. ಈ ಮಳಿಗೆಗಳಲ್ಲಿ ದೇವಿ ಹಲಸು,ಗೆಣಸು ಹಾಗೂ ಮೆಣಸುಗಳ ಪೋಡಿ, ಗೋಬಿ ಮಂಚೂರಿಯನ್, ಚುರುಮುರಿ ಮಸಾಲೆ, ತಂಪು ಪಾನೀಯಗಳು, ಐಸ್ ಕ್ರೀಮ್,  ಹಾಲು ಮತ್ತು ಇತರ ಹಣ್ಣಿನ ರಸಗಳು ಮತ್ತು ಕುರುಕಲು ತಿಂಡಿಗಳ ಮಾರಾಟದ ಭರಾಟೆ ಜೋರಾಗಿಯೇ ನಡೆಯುತ್ತದೆ. ಇಂತಹ ಮಳಿಗೆಗಳಲ್ಲಿ ಗ್ರಾಹಕರಿಗೆ  ಖಾದ್ಯ-ಪೇಯಗಳನ್ನು ನೀಡುವಾಗ ಪ್ಲಾಸ್ಟಿಕ್ ನಿರ್ಮಿತ ತಟ್ಟೆ,ಲೋಟ ಮತ್ತು  ಚಮಚಗಳನ್ನು ಬಳಸಲಾಗುತ್ತದೆ. ಇದರೊಂದಿಗೆ ಭಕ್ತಾದಿಗಳು ತಮ್ಮ ಮನೆಯಿಂದ ತಂದಿರಬಹುದಾದ ಖಾದ್ಯ-ಪೇಯಗಳನ್ನು ಮುಗಿಸಿದ ಬಳಿಕ, ಇವುಗಳನ್ನು ತುಂಬಿಸಿ ತಂದಿದ್ದ ಪ್ಲಾಸ್ಟಿಕ್ ಬಾಟಲಿಗಳು, ತಟ್ಟೆ-ಲೋಟಗಳು ಮತ್ತು ಬಳಸಿ ಎಸೆಯುವ ಕಾಗದ- ವೃತ್ತ ಪತ್ರಿಕೆಗಳು, ಗದ್ದೆಯಲ್ಲಿನ  ತ್ಯಾಜ್ಯಗಳ ಪ್ರಮಾಣ ಇನ್ನಷ್ಟು ಹೆಚ್ಚಲು ಕಾರಣವೆನಿಸುತ್ತದೆ. 

ಈ ಬಾರಿ ಸ್ಥಳೀಯ ಜೇಸೀಸ್ ಸಂಘಟನೆಯು ಗದ್ದೆಯ ಉದ್ದಗಲಕ್ಕೂ ಅನೇಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು " ಕಸದ ತೊಟ್ಟಿ" ಗಳನ್ನು ಇರಿಸುವುದರೊಂದಿಗೆ, ತ್ಯಾಜ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವನ್ನುಂಟುಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆದರೆ ಬ್ರಹ್ಮರಥೋತ್ಸವದಂದು ಆಗಮಿಸಿದ್ದ ಅಸಂಖ್ಯ ಜನರಿಂದಾಗಿ ಕ್ಷಣಮಾತ್ರದಲ್ಲಿ ತುಂಬುತ್ತಿದ್ದ ಈ ಕಸದ ತೊಟ್ಟಿಗಳಲ್ಲಿ ತುಂಬಿರುವ ತ್ಯಾಜ್ಯಗಳನ್ನು ಸಂಗ್ರಹಿಸಿ ಕೊಂಡೊಯ್ಯಲು ಅವಶ್ಯಕವೆನಿಸುವ ಪುರಸಭೆಯ ವಾಹನಗಳು, ಕಿಕ್ಕಿರಿದ ಜನಸ್ತೋಮದ ನಡುವೆ ಸಂಚರಿಸಲು ಅಸಾಧ್ಯವೆನಿಸಿದ್ದುದರಿಂದಾಗಿ ಹಾಗೂ ಕಸದ ತೊಟ್ಟಿಗಳು ಖಾಲಿಯಾಗಿದ್ದರೂ ಇವುಗಳಲ್ಲಿ ತ್ಯಾಜ್ಯಗಳನ್ನು ಹಾಕದೇ ಅಲ್ಲಲ್ಲಿ ಎಸೆದಿದ್ದ ಜನರಿಂದಾಗಿ, ಜಾತ್ರೆಯ ಗದ್ದೆಯಾದ್ಯಂತ ತ್ಯಾಜ್ಯಗಳ ಸಾಮ್ರಾಜ್ಯವೇ ನೋಡುಗರಿಗೆ ಗೋಚರಿಸುತ್ತಿತ್ತು. ಅದೇನೇ ಇರಲಿ, ಜೇಸೀಸ್ ಸಂಘಟನೆಯ ಪ್ರಯತ್ನವು ನಿಜಕ್ಕೂ ಅನುಕರಣೀಯ ಎನ್ನುವುದರಲ್ಲಿ ಸಂದೇಹವಿಲ್ಲ. 

ಮುಂದಿನ ವರ್ಷ ಜಾತ್ರೆಯ ಗದ್ದೆಯಲ್ಲಿ ಇರಿಸುವ ಕಸದ ತೊಟ್ಟಿಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ, ಇವುಗಳು ತುಂಬಿದೊಡನೆ ಸಂಗ್ರಹಿಸಿ ಸಾಗಿಸಲು ಸಣ್ಣ ವಾಹನಗಳ(ತ್ರಿಚಕ್ರ ಅಥವಾ ಚತುಷ್ಚಕ್ರ) ವ್ಯವಸ್ಥೆಯನ್ನು ಮಾಡಿದಲ್ಲಿ ಗದ್ದೆಯಲ್ಲಿ ಕಾಣಸಿಗುವ ತ್ಯಾಜ್ಯಗಳ ಪ್ರಮಾಣ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಜೊತೆಗೆ ಪುತ್ತೂರು ಪುರಸಭೆಯು ಪ್ಲಾಸ್ಟಿಕ್ ತಟ್ಟೆ, ಲೋಟ, ಚಮಚ ಮತ್ತು ಕೈಚೀಲಗಳನ್ನು ಜಾತ್ರೆಯ ಗದ್ದೆಯಲ್ಲಿ ಬಳಸದಂತೆ ಕೇವಲ ಎಚ್ಚರಿಕೆಯನ್ನು ನೀಡುವ ಪದ್ದತಿಯನ್ನು ಕೈಬಿಟ್ಟು, ಇವುಗಳನ್ನು ಬಳಸುವ ಮಳಿಗೆಗಳಿಗೆ ದಂಡವನ್ನು ವಿಧಿಸುವ ಎದೆಗಾರಿಕೆಯನ್ನು ತೋರಬೇಕಾಗಿದೆ. ಜೊತೆಗೆ ತ್ಯಾಜ್ಯಗಳನ್ನು ಉತ್ಪಾದಿಸುವ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹ ಮತ್ತು ವಿಲೆವಾರಿಗಳಿಗಾಗಿ ಶುಲ್ಕವನ್ನು ವಿಧಿಸಬೇಕಿದೆ. ಪ್ರಾಯಶಃ ಇಂತಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಲ್ಲಿ ಪೂಜ್ಯ ದೇವಳದ ಮುಂದಿನ ಗದ್ದೆಯಲ್ಲಿ ಜಾತ್ರೆಯ ಸಂದರ್ಭದಲ್ಲಿ ಕಾಣಸಿಗುವ " ತ್ಯಾಜ್ಯಗಳ ಸಾಮ್ರಾಜ್ಯ" ವು ನಿಶ್ಚಿತವಾಗಿಯೂ ಕಣ್ಮರೆಯಾಗಲಿದೆ. 

ಕೊನೆಯ ಮಾತು 

ಜಾತ್ರೆಯ ದಿನಗಳಲ್ಲಿ ಪುತ್ತೂರು ಪುರಸಭೆಯ ಪೌರ ಕಾರ್ಮಿಕರ ದಂಡು ಮುಂಜಾನೆಯಿಂದ ಮುಸ್ಸಂಜೆಯ ತನಕ ಶ್ರಮಿಸಿದರೂ, ಗದ್ದೆಯಲ್ಲಿ ತುಂಬಿದ ತ್ಯಾಜ್ಯಗಳನ್ನು ಸಂಗ್ರಹಿಸಿ ಸಾಗಿಸಲು ಹಲವಾರು ದಿನಗಳೇ ಬೇಕಾಗುತ್ತವೆ. ಕೆಲವೊಮ್ಮೆ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಕೈಜೋಡಿಸುವ ಮೂಲಕ ಪೌರ ಕಾರ್ಮಿಕರ ಕೆಲಸದ ಹೊರೆಯನ್ನು ತುಸು ಕಡಿಮೆ ಮಾಡಿದರೂ, ಬಾಕಿಮಾರು ಗದ್ದೆಯನ್ನು ಪೂರ್ವಸ್ಥಿತಿಗೆ ಸರಿಯಾಗಿ ಸ್ವಚ್ಚಗೊಳಿಸಲು ಅನೇಕ ದಿನಗಳೇ ತಗಲುತ್ತವೆ. ಆದರೆ ಭಕ್ತಾಭಿಮಾನಿಗಳು ಜಾತ್ರೆಯ ಗದ್ದೆಯ ಸ್ವಚ್ಚತೆಯ ಬಗ್ಗೆ ಒಂದಿಷ್ಟು ಕಾಳಜಿಯನ್ನು ತೋರಿದಲ್ಲಿ ಈ ಸಮಸ್ಯೆಯನ್ನು ಸುಲಭದಲ್ಲೇ ಬಗೆಹರಿಸಬಹುದಾಗಿದೆ.

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ಸುದಿನ ಸಂಚಿಕೆಯಲ್ಲಿ ದಿ. ೧೯-೦೪-೨೦೧೪ ರಂದು ಪ್ರಕಟಿತ ಲೇಖನ. 



Wednesday, April 16, 2014

KUDIYALU NEERILLADA OORIGE.........





   ಕುಡಿಯಲು ನೀರಿಲ್ಲದ ಊರಿಗೆ, ಕಡಿಯಲು ಕಸಾಯಿಖಾನೆ ಏಕೆ ?

ಮುನ್ನುಡಿ 

ಕರಾವಳಿ ಕರ್ನಾಟಕದ ಆಯ್ದ ಹತ್ತು ನಗರ- ಪಟ್ಟಣಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಗತದಶಕದಲ್ಲಿ ರಾಜ್ಯ ಸರ್ಕಾರವು ಎ. ಡಿ. ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ಸಹಸ್ರಾರು ಕೋಟಿ ರೂಪಾಯಿಗಳ ಈ ಯೋಜನೆಯ ಸಾಧಕ- ಬಾಧಕಗಳು ಮತ್ತು ಸಾಲದ ಮೊತ್ತದ ಮೇಲೆ ವಿಧಿಸುವ ದುಬಾರಿ ಬಡ್ಡಿಗಳ ಬಗ್ಗೆ ಬಸ್ರೂರು ಬಳಕೆದಾರರ ವೇದಿಕೆಯ ಡಾ. ರವೀಂದ್ರನಾಥ ಶಾನುಭಾಗರು ಪುತ್ತೂರಿನ ನಾಗರಿಕರಿಗೆ ಮಾಹಿತಿಯನ್ನು ನೀಡಿದ್ದರು. ಇದೇ ಕಾರಣದಿಂದಾಗಿ ಈ ಯೋಜನೆಯ ಬಗ್ಗೆ ಆಸಕ್ತನಾಗಿ, ಪುತ್ತೂರಿನ ಕುಡ್ಸೆಂಪ್ ಯೋಜನೆಗಳ ಪ್ರತಿಯೊಂದು ಉಪಯೋಜನೆಗಳ ವಿಶದವಾದ ಮಾಹಿತಿಗಳನ್ನು ಸಂಗ್ರಹಿಸಿ ಬರೆದಿದ್ದ ನೂರಾರು ಲೇಖನಗಳನ್ನು ಉದಯವಾಣಿ ಪತ್ರಿಕೆ ಪ್ರಕಟಿಸಿತ್ತು. ಕುಡ್ಸೆಂಪ್ ಯೋಜನೆಯ ಸಾಧಕ- ಬಾಧಕಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವನ್ನು ಮೂಡಿಸುವ ಸಲುವಾಗಿ, ಮಂಗಳೂರಿನ ಏನ್.ಜಿ.ಓ ಟಾಸ್ಕ್ ಫೋರ್ಸ್ ಎನ್ನುವ ಸ್ವಯಂ ಸೇವಾ ಸಂಘಟನೆಯು ರಾಜ್ಯ ಮಟ್ಟದ ಸ್ಪರ್ದೆಯೊಂದನ್ನು ಘೋಷಿಸಿ, ಎ. ಡಿ, ಬಿ ಸಾಲ ಆಧಾರಿತ ಕುಡ್ಸೆಂಪ್ ಯೋಜನೆಗಳ ಬಗ್ಗೆ ಪತ್ರಕರ್ತರು ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಇದರಲ್ಲಿ ಭಾಗವಹಿಸುವಂತೆ ವಿನಂತಿಸಿತ್ತು. ಅದಾಗಲೇ ಪುತ್ತೂರಿನ ಕುಡ್ಸೆಂಪ್ ಯೋಜನೆಗಳ ಬಗ್ಗೆ ೫೦ ಕ್ಕೂ ಅಧಿಕ ಲೇಖನಗಳನ್ನು ಪ್ರಕಟಿಸಿದ್ದ ನನ್ನನ್ನು ಸಂಪರ್ಕಿಸಿ, ಮಂಗಳೂರಿನ ಕುಡ್ಸೆಂಪ್ ಯೋಜನೆಯ ಬಗ್ಗೆ ವಿಶೇಷ ಲೇಖನವೊಂದನ್ನು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಆಗ್ರಹಿಸಿತ್ತು. ಸಂಸ್ಥೆಯ ಕಾರ್ಯಕರ್ತರ ಮನವಿಗೆ ಸ್ಪಂದಿಸಿ ನಾನು ಬರೆದಿದ್ದ ಈ ಲೇಖನವು ಸಾಕಷ್ಟು ಜನ ಮನ್ನಣೆ ಗಳಿಸಲು ಯಶಸ್ವಿಯಾಗಿತ್ತು. 

ಏನ್.ಜಿ.ಓ ಟಾಸ್ಕ್ ಫೋರ್ಸ್ ಕುಡ್ಸೆಂಪ್ ಯೋಜನೆಗಳ ಬಗ್ಗೆ ಆಯೋಜಿಸಿದ್ದ " ತನಿಖಾ ವರದಿಗಳ ಸ್ಪರ್ದೆ" ಯಲ್ಲಿ ಹವ್ಯಾಸಿ ಪತ್ರಕರ್ತನಾಗಿದ್ದ ನನಗೆ ಮೊದಲ ಸ್ಥಾನ ದೊರೆತಿತ್ತು. ಅನೇಕ ವೃತ್ತಿಪರ ಪತ್ರಕರ್ತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ನಾನು ಬರೆದ ಲೇಖನಗಳ ಸಂಖ್ಯೆ, ಯೋಜನೆಗಳ ವಿಸ್ತೃತ ಮಾಹಿತಿಗಳು, ಕಾಮಗಾರಿಗಳ ಅನುಷ್ಠಾನದಲ್ಲಿ ಸಂಭವಿಸುತ್ತಿರುವ ಲೋಪದೋಷಗಳೇ ಮುಂತಾದ ತನಿಖಾ ವರದಿ ಮತ್ತು ಇತರ ಮಾಹಿತಿಗಳನ್ನು ಪರಿಗಣಿಸಿ, ನನಗೆ ಮೊದಲ ಬಹುಮಾನವನ್ನು ನೀಡಲಾಗಿತ್ತು. ಈ ಲೇಖನಗಳನ್ನು ಬರೆಯಲು ನನ್ನನ್ನು ಪ್ರೋತ್ಸಾಹಿಸಿದ್ದ ಡಾ. ರವೀಂದ್ರನಾಥ ಶಾನುಭಾಗರಿಗೆ ಮತ್ತು ಪ್ರಕಟಿಸಿದ್ದ ಉದಯವಾಣಿ ಪತ್ರಿಕೆಯ ಬಳಗಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು. ಅಂತೆಯೇ ಏನ್.ಜಿ.ಓ ಟಾಸ್ಕ್ ಫೋರ್ಸ್ ನ ಕಾರ್ಯಕರ್ತರು ಮತ್ತು ನನ್ನ ಲೇಖನಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ್ದ ಓದುಗರಿಗೂ ವಂದನೆಗಳು. 

ಡಾ. ಸಿ. ನಿತ್ಯಾನಂದ ಪೈ 
-------------              -------------                 --------------           ----------------               -------------------

ಸುಮಾರು ೧೭೦ ಕೋಟಿ ರೂಪಾಯಿಗಳನ್ನು ವ್ಯಯಿಸಿ ಮಂಗಳೂರಿನ ಜನತೆಗೆ ಅತ್ಯವಶ್ಯಕವೆನಿಸಿದ್ದ ಕುಡಿಯುವ ನೀರಿನ ಯೋಜನೆಯನ್ನು ಕುಡ್ಸೆಂಪ್ ಅನುಷ್ಠಾನಿಸಿದೆ. ಆದರೆ ಈ ಯೋಜನೆ ಇದೀಗ ಸಫಲವಾಗಲು ಅನಿವಾರ್ಯವೆನಿಸಿರುವ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣ ಅಸಾಧ್ಯವೆಂದು ಚಂಡಿ ಹಿಡಿದಿರುವ ಕುಡ್ಸೆಂಪ್ ಸಂಸ್ಥೆಯ ಈ ಧೋರಣೆಗೆ ಕಾರಣವೇನು?. ಈ ಬಗ್ಗೆ ನೀವು ತಿಳಿದಿರಲೇಬೇಕಾದ ಒಂದಿಷ್ಟು ಮಾಹಿತಿ ಇಲ್ಲಿದೆ. 

---------------              ---------------              ----------------               --------------------            ---------------

ಮನುಷ್ಯನು ಬದುಕಿರಲು ಅತ್ಯವಶ್ಯಕವೆನಿಸುವ ಶುದ್ಧ ಗಾಳಿಯ ನಂತರದ ಸ್ಥಾನವು ಶುದ್ಧವಾದ ಕುಡಿಯುವ ನೀರಿಗೆ ಸಲ್ಲುತ್ತದೆ. ಆಹಾರವಿಲ್ಲದೇ ಹಲವಾರು ವಾರಗಳ ಕಾಲ ಬದುಕಿರಬಲ್ಲ ಮಾನವರು, ಕುಡಿಯುವ ನೀರಿಲ್ಲದೇ ಕೆಲವೇ ದಿನಗಳ ಕಾಲ ಬದುಕುವುದು ಅಸಾಧ್ಯವೆನಿಸುವುದು. ಇದೇ ಕಾರಣದಿಂದಾಗಿ ನಮ್ಮ ದೈನಂದಿನ ಬದುಕಿಗೆ ಅನಿವಾರ್ಯ ಎನಿಸುವ ನೀರು, ನಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಪ್ರಮುಖವಾಗಿದೆ. 

ಮಂಗಳೂರಿನಲ್ಲಿ ನೀರಿನ ಕೊರತೆಗೆ ಕಾರಣವೇನು?

ಅನೇಕ ವರ್ಷಗಳಿಂದ ಬೇಸಗೆಯ ದಿನಗಳಲ್ಲಿ ತೀವ್ರವಾದ ನೀರಿನ ಕೊರತೆಯಿಂದ ಬಳಲುತ್ತಿದ್ದ ಮಂಗಳೂರಿನ ನಿವಾಸಿಗಳ ಸಂಕಷ್ಟವನ್ನು ಪರಿಹರಿಸಲು, ೧೯೯೨ ರಲ್ಲಿ ತುಂಬೆಯಲ್ಲಿ ನೇತ್ರಾವತಿ ನದಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಗಳ ಫಲವಾಗಿ ಕೇವಲ ೧೦ ವರ್ಷಗಳಲ್ಲೇ ಸೋರಲು ಆರಂಭಿಸಿದ್ದ ಈ ಅಣೆಕಟ್ಟಿನಿಂದ ಹಾಗೂ ನೀರು ಸರಬರಾಜು ಮಾಡುವ ಕೊಳವೆಗಳ ಜಾಲದಲ್ಲಿನ ಸಮಸ್ಯೆಗಳಿಂದಾಗಿ, ಮಂಗಳೂರಿಗೆ ಸರಬರಾಜಾಗುತ್ತಿದ್ದ ನೀರಿನ ಶೇ.೬೦ ರಷ್ಟು ಪಾಲು ಸೋರಿಹೊಗುತ್ತಿತ್ತು!. 

ಇದರೊಂದಿಗೆ ಬೇಸಗೆಯ ದಿನಗಳಲ್ಲಿ ನೇತ್ರಾವತಿ ನದಿಯಲ್ಲಿ ಸ್ವಾಭಾವಿಕವಾಗಿ ನೀರಿನ ಒಳಹರಿವು ಕಡಿಮೆಯಾಗುತ್ತಿದ್ದುದರಿಂದ, ಈ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವೂ ಸಹಜವಾಗಿಯೇ ಕಡಿಮೆಯಾಗುತ್ತಿತ್ತು. ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ಉದ್ಭವಿಸುತ್ತಿದ್ದ ಈ ಸಮಸ್ಯೆಯು, ಮಾರ್ಚ್ ತಿಂಗಳಿನ ಮಧ್ಯಭಾಗದ ಬಳಿಕ ಉಲ್ಬಣಿಸಲು , ನೀರಿನ ಒಳಹರಿವು ಸಂಪೂರ್ಣವಾಗಿ ನಿಂತುಹೋಗುತ್ತಿದ್ದುದೇ ಕಾರಣವೆನಿಸಿತ್ತು. ಈ ಸಂದರ್ಭದಲ್ಲಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರು ಮುಂಗಾರು ಮಳೆ ಆರಂಭವಾಗುವ ತನಕ ಮಂಗಳೂರಿನ ಜನತೆಗೆ ದಿನನಿತ್ಯ ಪೂರೈಸಲು ಸಾಕಾಗುವುದಿಲ್ಲ. ಇದೇ ಕಾರಣದಿಂದಾಗಿ ಇಂತಹ ಪರಿಸ್ಥಿತಿಯಲ್ಲಿ ಮಂಗಳೂರಿನ ನಿವಾಸಿಗಳಿಗೆ ನಾಲ್ಕು ದಿನಗಳಿಗೊಂದು ಬಾರಿ ನೀರನ್ನು ಸರಬರಾಜು ಮಾಡುವಂತಹ ಕಠಿಣ ನಿರ್ಧಾರವನ್ನು ನಗರ ಪಾಲಿಕೆಯು ಅನಿವಾರ್ಯವಾಗಿ ಕೈಗೊಳ್ಳಬೇಕಾಗುತ್ತಿತ್ತು. 

ಮಂಗಳೂರಿನ ಜನತೆಯನ್ನು ಶಾಪದೋಪಾದಿಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು, ಕುಡ್ಸೆಂಪ್ ಯೋಜನೆಯಲ್ಲಿ ಪರಿಹಾರವನ್ನು ರೂಪಿಸಲಾಗಿತ್ತು. ವಿಶೇಷವೆಂದರೆ ಈ ಅಸಮರ್ಪಕ ಪರಿಹಾರವೇ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಿತ್ತು!. 

ಕುಡಿಯುವ ನೀರಿನ ಯೋಜನೆ 

ಪ್ರಸ್ತುತ ಮಂಗಳೂರಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಕುಡಿಯುವ ನೀರಿನ ಯೋಜನೆಗೆ ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ ನಿಂದ ಪಡೆದಿರುವ ಸಾಲವನ್ನು ಬಳಸಲಾಗಿದೆ. ಈ ಯೋಜನೆಯ ಬಗ್ಗೆ ಅಧ್ಯಯನವನ್ನು ನಡೆಸಿದ್ದ "ನೆಡೆಕೊ" ಸಂಸ್ಥೆಯು, ಕುಡಿಯುವ ನೀರಿನ ಯೋಜನೆಗಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಆಯೋಜಿಸಿದ್ದ ದೆಹಲಿಯ "ಕನ್ಸಲ್ಟಿಂಗ್ ಎಂಜಿನಿಯರಿಂಗ್ ಸರ್ವಿಸಸ್" ಸಂಸ್ಥೆ ೧೯೯೮ ರಲ್ಲಿ ಸಿದ್ಧಪಡಿಸಿದ್ದ ವರದಿಯನ್ನು ಆಧಾರವಾಗಿ ಪರಿಗಣಿಸಿತ್ತು. ಸತ್ಯಕ್ಕೆ ದೂರವಾದ ಹಾಗೂ ಅಸಮರ್ಪಕ ಅಂಕಿ- ಅಂಶಗಳಿಂದ ಕೂಡಿರುವ ಈ ವರದಿಯ ಆಧಾರದ ಮೇಲೆ ಇದೀಗ ಅನುಷ್ಠಾನಗೊಂಡಿರುವ ಕುಡಿಯುವ ನೀರಿನ ಯೋಜನೆಯು, ಇದೇ ಕಾರಣದಿಂದಾಗಿ ನಿಷ್ಪ್ರಯೋಜಕವೆನಿಸಲಿದೆ!. 

೧೯೯೮ ರ ಈ ವರದಿಯಂತೆ ಈಗಿನ ಕಿಂಡಿ ಆಣೆಕಟ್ಟು ೯.೫೬ ಮಿಲಿಯನ್ ಕ್ಯುಬಿಕ್ ಮೀಟರ್ (ಮಿ.ಕ್ಯು.ಮೀ)ನೀರನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಮಂಗಳೂರು ನಗರಕ್ಕೆ ವರ್ಷವಿಡೀ ನೀರನ್ನು ಸರಬರಾಜು ಮಾಡಲು ಇದು ಸಾಕಾಗುತ್ತದೆ. ಮಾತ್ರವಲ್ಲ, ವೃದ್ಧಿಸುತ್ತಿರುವ ಜನಸಂಖ್ಯೆಯನ್ನು ಪರಿಗಣಿಸಿದರೂ, ಈ ವ್ಯವಸ್ಥೆಯು ೨೦೨೬ ನೇ ಇಸವಿಯ ತನಕ ಧಾರಾಳವಾಗಿ ಸಾಕಾಗುತ್ತದೆ. ಆದುದರಿಂದ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣ ಅನಾವಶ್ಯಕ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂಸ್ಥೆಯ ಅಭಿಪ್ರಾಯವನ್ನು ಮನ್ನಿಸಿದ ಕುಡ್ಸೆಂಪ್, ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣವನ್ನು ಈ ಯೋಜನೆಯಿಂದ ಕೈಬಿಟ್ಟಿತ್ತು!. 

ಆದರೆ ೨೦೦೩ ನೇ ಇಸವಿಯ ಬೇಸಗೆಯಲ್ಲಿ ತಲೆದೋರಿದ "ಜಲಾಕ್ಷಾಮ" ದಿಂದ ಧೃತಿಗೆಟ್ಟಿದ್ದ ಕುಡ್ಸೆಂಪ್, ಬೆಂಗಳೂರಿನ ಟೋರ್ ಸ್ಟೀಲ್ ರಿಸರ್ಚ್ ಫೌಂಡೆಶನ್ ಸಂಸ್ಥೆಗೆ ಈಗಿನ ಕಿಂಡಿ ಅಣೆಕಟ್ಟಿನ ಸಾಮರ್ಥ್ಯ ಹಾಗೂ ದುರಸ್ತಿಯ ಬಗ್ಗೆ ಮತ್ತು ಅವಶ್ಯಕವೆನಿಸಿದಲ್ಲಿ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣದ ಬಗ್ಗೆ ಅಧ್ಯಯನವನ್ನು ನಡೆಸಿ, ಇದರ ವಿನ್ಯಾಸವನ್ನು ಸಿದ್ಧಪಡಿಸಿ ವರದಿಯನ್ನು ಸಲ್ಲಿಸುವಂತೆ ಆದೇಶಿಸಿತ್ತು. 

ಈ ಸಂಸ್ಥೆಯು ೨೦೦೪ ರಲ್ಲಿ ಸಲ್ಲಿಸಿದ ವರದಿಯು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತಿತ್ತು. ಏಕೆಂದರೆ ಈ ವರದಿಯಂತೆ ಸೋರುತ್ತಿರುವ ಹಳೆಯ ಅಣೆಕಟ್ಟಿನ ದುರಸ್ತಿಗೆ ಕನಿಷ್ಠ ೨ ಕೋಟಿ ರೂಪಾಯಿ ವೆಚ್ಚದೊಂದಿಗೆ, ೧ ರಿಂದ ೨ ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ ದುರಸ್ತಿ ಪಡಿಸಿದ ಬಳಿಕವೂ ಈ ಅಣೆಕಟ್ಟಿನ ನೀರಿನ ಸಂಗ್ರಹಣಾ ಸಾಮರ್ಥ್ಯವು ಕೇವಲ ೪.೬೫ ಮಿ.ಕ್ಯು.ಮೀ. ಆಗಿರುತ್ತದೆ. ಮಂಗಳೂರಿನ ನಿವಾಸಿಗಳ ಇಂದಿನ ಬೇಡಿಕೆಯನ್ನು ಪೂರೈಸಲೂ ಇದು ಸಾಕಾಗುವುದಿಲ್ಲ. ಇದರೊಂದಿಗೆ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ೨೦೨೬ ರಲ್ಲಿ ಮಂಗಳೂರಿನ ನೀರಿನ ಬೇಡಿಕೆಯ ಪ್ರಮಾಣವು ೧೨.೧೧೭ ಮಿ.ಕ್ಯು.ಮೀ. ಆಗಲಿರುವುದು. 

ತಜ್ಞರ ಅಭಿಪ್ರಾಯದಂತೆ ಫೆಬ್ರವರಿ ಮಧ್ಯಭಾಗದ ಬಳಿಕ ಅಣೆಕಟ್ಟಿಗೆ ಹರಿದು ಬರಲಿರುವ ನೀರಿನ ಒಳಹರಿವು ಸ್ವಾಭಾವಿಕವಾಗಿಯೇ ಕಡಿಮೆಯಾಗುವುದು. ತದನಂತರ ಮಾರ್ಚ್ ಮಧ್ಯಭಾಗದ ಬಳಿಕ ನದಿಯ ನೀರಿನ ಒಳಹರಿವು ಸಂಪೂರ್ಣವಾಗಿ ನಿಂತು ಹೋಗುವುದರಿಂದ, ಈಗಿನ ಅಣೆಕಟ್ಟಿನಲ್ಲಿ ಸಂಗ್ರಹಿತ ನೀರು ಮಂಗಳೂರಿನ ಜನತೆಗೆ ಕೇವಲ ೨೫ ದಿನಗಳಿಗಷ್ಟೇ ಸಾಕಾಗುವುದು. ತದನಂತರ ಸುಮಾರು ೭೫ ದಿನಗಳ ಕಾಲ ನೀರಿನ ಒಳಹರಿವಿಲ್ಲದ ಕಾರಣದಿಂದಾಗಿ, ಮಂಗಳೂರು ನಗರಕ್ಕೆ ನಾಲ್ಕು ದಿನಗಳಿಗೊಮ್ಮೆ ನೀರು ಬಿಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಇದಲ್ಲದೇ ಧರ್ಮಸ್ಥಳ ಹಾಗೂ ಸರಪಾಡಿಯಲ್ಲಿನ ಮತ್ತು ಇದೀಗ ಪುತ್ತೂರಿನ ಬಳಿ ನಿರ್ಮಾಣಗೊಳ್ಳುತ್ತಿರುವ ನೂತನ ಕಿಂಡಿ ಆಣೆಕಟ್ಟುಗಳಿಂದಾಗಿ,ತುಂಬೆ ಅಣೆಕಟ್ಟಿಗೆ ನೀರಿನ ಹರಿವು ಇನ್ನಷ್ಟು ಕಡಿಮೆಯಾಗಲಿದೆ. ಇದರೊಂದಿಗೆ ನೂತನ ಯೋಜನೆಯಲ್ಲಿ ಈಗಾಗಲೇ ಸೇರ್ಪಡೆಗೊಂಡಿರುವ ಉಳ್ಳಾಲ  ಮತ್ತು ಮೂಲ್ಕಿ ಪರಿಸರದ ನಿವಾಸಿಗಳಿಗೂ ನೀರಿಲ್ಲದೆ ಸೊರಗಿರುವ ಈಗಿನ ಅಣೆಕಟ್ಟಿನಿಂದಲೇ ನೀರನ್ನು ಪೂರೈಸಬೇಕಾಗುತ್ತದೆ. ಇವೆಲ್ಲಾ ಕಾರಣಗಳಿಂದಾಗಿ ಮಂಗಳೂರು ನಗರಕ್ಕೆ ವರ್ಷವಿಡೀ ನಿರಂತರವಾಗಿ ನೀರನ್ನು ಪೂರೈಸಲು, ನೂತನ ಕಿಂಡಿ ಅಣೆಕಟ್ಟನ್ನು ನಿರ್ಮಾಣ ಮಾಡಲೇಬೇಕು. ಈಗಿನ ಅಣೆಕಟ್ಟಿಗಿಂತ ಅಧಿಕ ಎತ್ತರದ (ಸುಮಾರು ೮ ಮೀಟರ್ ಎತ್ತರದ) ನೂತನ ಅಣೆಕಟ್ಟನ್ನು, ಈಗಿನ ಅಣೆಕಟ್ಟಿಗಿಂತಲೂ ೫೦ ರಿಂದ ೧೦೦ ಮೀಟರ್ ಕೆಳಗೆ ನಿರ್ಮಿಸಿದಲ್ಲಿ, ೧೪.೪೮೩ ಮಿ.ಕ್ಯು.ಮೀ. ನೀರನ್ನು ಇದರಲ್ಲಿ ಸಂಗ್ರಹಿಸುವುದು ಸುಲಭಸಾಧ್ಯವೆಂದು ಈ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಬೇಸಗೆಯ ದಿನಗಳಲ್ಲೂ ಮಂಗಳೂರಿಗೆ ಕುಡಿಯುವ ನೀರನ್ನು ನಿರಂತರವಾಗಿ ಸರಬರಾಜು ಮಾಡಲು ಅನುಕೂಲವಾಗಲಿರುವುದು. 

ಆದರೆ ಕೆ.ಯು.ಐ.ಡಿ.ಎಫ್.ಸಿ ಯ ಆಡಳಿತ ನಿರ್ದೇಶಕರು ಈ ವರದಿಯನ್ನು ಉಲ್ಲೇಖಿಸಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಮಾತ್ರ ಅಚ್ಚರಿಯನ್ನು ಉಂಟುಮಾಡುತ್ತದೆ. ಈ ಅಧಿಕಾರಿ ಬರೆದಿರುವಂತೆ ನೂತನ ಕಿಂಡಿ ಆಣೆಕಟ್ಟು ಅವಶ್ಯಕವಾದರೂ, ಇದೀಗ ಕುಡ್ಸೆಂಪ್ ಯೋಜನೆಗಳ ಅನುಷ್ಠಾನಕ್ಕೆ ನೀಡಿರುವ ಕಾಲಾವಧಿ ಮುಗಿದಿದೆ. ಇದಲ್ಲದೇ ಈಗಿನ ಅಣೆಕಟ್ಟಿನ ದುರಸ್ತಿ ಅಥವಾ ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಈ ಯೋಜನೆಯಿಂದ ಹಣವನ್ನು ಒದಗಿಸುವುದು ಅಸಾಧ್ಯ. ಆದುದರಿಂದ ಈಗಿನ ಅಣೆಕಟ್ಟನ್ನು ಮಹಾನಗರ ಪಾಲಿಕೆಯ ವತಿಯಿಂದ ದುರಸ್ತಿಪಡಿಸಿಕೊಳ್ಳುವಂತೆ ಅಥವಾ ನೂತನ ಅಣೆಕಟ್ಟಿನ ನಿರ್ಮಾಣಕ್ಕಾಗಿ ಸುಮಾರು ೨೦ ಕೋಟಿ ರೂಪಾಯಿಗಳನ್ನು ಹೊಂದಿಸಿಕೊಂಡು ಪಾಲಿಕೆಯ ವತಿಯಿಂದ ನಿರ್ಮಿಸುವಂತೆ ಉದಾರ ಸಲಹೆಯನ್ನು ನೀಡಿದ್ದಾರೆ!. 

ಆದರೆ ಮಂಗಳೂರು ಮಹಾನಗರ ಪಾಲಿಕೆಯು ಸದನದಲ್ಲಿ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣದ ನಿರ್ಧಾರವನ್ನು ಅನುಮೋದಿಸಿದೆ. ಅದೇ ರೀತಿಯಲ್ಲಿ ಎ.ಡಿ. ಬಿ ಸಾಲದ ಯೋಜನೆಗಳ ಮೇಲುಸ್ತುವಾರಿಯನ್ನು ವಹಿಸಿರುವ "ಎಂಪವರ್ಡ್ ಕಮಿಟಿ" ಯು ಇಂತಹದ್ದೇ ನಿರ್ಣಯವನ್ನು ಅಂಗೀಕರಿಸಿದ್ದರೂ, ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಆರ್ಥಿಕ ಅಡಚಣೆಗಳು ಇರುವುದರಿಂದ, ಈಗಿನ ಅಣೆಕಟ್ಟನ್ನೇ ದುರಸ್ತಿಪಡಿಸಿ ಮುಂದಿನ ೫ ವರ್ಷಗಳ ಕಾಲ ಉಪಯೋಗಿಸುವಂತೆ ಸೂಚಿಸಿದೆ. ಆದರೆ ಈ ಸೂಚನೆಯನ್ನು ಜಾರಿಗೊಳಿಸಿದಲ್ಲಿ ೫ ವರ್ಷಗಳ ಬಳಿಕ ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಬೇಕಾಗುವ ೪ ವರ್ಷಗಳ ಅವಧಿಯಲ್ಲಿ ಮಂಗಳೂರಿನ ಜನತೆಗೆ ಬೇಕಾಗುವ ನೀರನ್ನು ಎಲ್ಲಿಂದ ಮತ್ತು ಹೇಗೆ ಪೂರೈಸುವುದೆಂದು ಈ ಸಮಿತಿಯು ತಿಳಿಸಿಲ್ಲ!. 

ಕಸಾಯಿಖಾನೆಗೆ ಹಣವಿಹುದೇ?

ನೂತನ ಅಣೆಕಟ್ಟಿನ ನಿರ್ಮಾಣಕ್ಕೆ ಅಥವಾ ಈಗಿನ ಅಣೆಕಟ್ಟಿನ ದುರಸ್ತಿಗೆ ತನ್ನ ಬಳಿ ಹಣವಿಲ್ಲ ಎನ್ನುವ ಕುಡ್ಸೆಂಪ್, ಈ ಯೋಜನೆಗಳ ಪ್ರಾರಂಭಿಕ ಹಂತದಲ್ಲಿ ನೂತನ ಕಸಾಯಿಖಾನೆಯ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ೧ ಕೋಟಿ ರೂಪಾಯಿಗಳನ್ನು ಇದೀಗ ೧೪ ಕೋಟಿಗೆ ಹೆಚ್ಚಿಸಲು ಹಣದ ಕೊರತೆ ಬಾಧಿಸಲಿಲ್ಲವೇಕೆ?. ಅದೇ ರೀತಿಯಲ್ಲಿ ಮಹಾನಗರ ಪಾಲಿಕೆ ಅಪೇಕ್ಷಿಸಿದಂತೆ ಮಂಗಳೂರಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಕಸಾಯಿಖಾನೆಯ ನಿರ್ಮಾಣಕ್ಕಾಗಿ ಮೀಸಲಿಟ್ಟ ಹಣವನ್ನು ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣಕ್ಕೆ ಬಳಸಲು ಕುಡ್ಸೆಂಪ್ ಸಮ್ಮತಿಸುತ್ತಿಲ್ಲವೇಕೆ?. ಕುಡಿಯಲು ನೀರಿಲ್ಲದ ಊರಿಗೆ, ಪ್ರಾಣಿಗಳನ್ನು ಕಡಿಯಲು ಕಸಾಯಿಖಾನೆ ಏಕೆ?. ಇವೆಲ್ಲ ಪ್ರಶ್ನೆಗಳಿಗೆ ಇದೀಗ ಕುಡ್ಸೆಂಪ್ ಉತ್ತರವನ್ನು ನೀಡಬೇಕಾಗಿದೆ. 

ಈ ಯೋಜನೆಗೆ ಸಾಲವನ್ನು ನೀಡಿರುವ ಎ.ಡಿ.ಬಿ ಯ ನಿಯಮಗಳಂತೆ, ಯೋಜನೆಯ ಫಲಾನುಭವಿಯಾಗಿರುವ ಸ್ಥಳೀಯ ಸಂಸ್ಥೆಗಳು ತಮಗೆ ಅವಶ್ಯಕವೆನಿಸುವ ಯೋಜನೆಗಳಿಗೆ ಈ ಹಣವನ್ನು ಬಳಸಬಹುದಾಗಿದೆ. ಆದರೆ "ದೇವರು ಕೊಟ್ಟರೂ, ಪೂಜಾರಿ ಬಿಡ" ಎನ್ನುವಂತೆ, ಕುಡ್ಸೆಂಪ್ ಮಾತ್ರ ಇದಕ್ಕೆ ತಡೆಯೊಡ್ಡಿದೆ!. 

ಇವೆಲ್ಲಕ್ಕಿಂತಲೂ ಮಿಗಿಲಾಗಿ ೧೦೭ ಕೋಟಿ ರೂಪಾಯಿಗಳನ್ನು ವ್ಯಯಿಸಿ, ಮಂಗಳೂರಿನಾದ್ಯಂತ ನೀರು ಸರಬರಾಜು ವ್ಯವಸ್ಥೆಯನ್ನೇ ದ್ವಿಗುಣಗೊಳಿಸಿರುವ ಈ ಯೋಜನೆಯು ಸಫಲವಾಗಲು ಕೇವಲ ೨೦ ಕೋಟಿ ರೂ.ವೆಚ್ಚವಾಗಲಿರುವ ನೂತನ ಕಿಂಡಿ ಅಣೆಕಟ್ಟನ್ನು ನಿರ್ಮಿಸದಿರುವುದು, ನಿಜಕ್ಕೂ ಕುಡ್ಸೆಂಪ್ ನ ಮೂರ್ಖತನದ ಪರಮಾವಧಿ ಎನ್ನಬೇಕಷ್ಟೇ!. 

ಪರಿಹಾರವೇನು?

ಮಂಗಳೂರಿನ ಜನತೆಗೆ ಅತ್ಯವಶ್ಯಕವಾಗಿರುವ ನೂತನ ಕಿಂಡಿ ಅಣೆಕಟ್ಟಿನ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ಮಂಜೂರಾತಿಯನ್ನು ನೀಡಲೇಬೇಕು. ಹಣದ ಅಡಚಣೆ ಇದ್ದಲ್ಲಿ ಮಹಾನಗರ ಪಾಲಿಕೆಯ ಅಪೇಕ್ಷೆಯಂತೆ ಇತರ ಯೋಜನೆಗಳನ್ನು ರದ್ದುಪಡಿಸಿ, ಇದಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಅಣೆಕಟ್ಟಿನ ನಿರ್ಮಾಣಕ್ಕೆ ಬಳಸಬೇಕು. ಅನಿವಾರ್ಯ ಎನಿಸಿದಲ್ಲಿ ರಾಜ್ಯ ಮುಂಗಡಪತ್ರದಲ್ಲಿ ಈ ಯೋಜನೆಗಾಗಿ ಹಣವನ್ನು ನೀಡಬೇಕು. 

ನೂತನ ಅಣೆಕಟ್ಟಿನ ನಿರ್ಮಾಣಕ್ಕಾಗಿ ಜನಸಾಮಾನ್ಯರು ಜನಪ್ರತಿನಿಧಿಗಳ ಮೇಲೆ ಹಾಗೂ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಇದಕ್ಕಾಗಿ ಒತ್ತಡವನ್ನು ಹೇರಬೇಕು. ಪಕ್ಷಭೇದವನ್ನು ಮರೆತು ರಾಜಕೀಯ ನೇತಾರರು ಮತ್ತು ಜನಸಾಮಾನ್ಯರು ಒಂದಾಗಿ, ಈ ಯೋಜನೆಯ ಅನುಷ್ಠಾನಕ್ಕಾಗಿ ಅಹಿಂಸಾತ್ಮಕ ಚಳವಳಿಯನ್ನು ಆರಂಭಿಸಬೇಕು. ಪತ್ರಿಕೆಗಳು ಮತ್ತು ಇತರ ಮಾಧ್ಯಮಗಳು ಈ ಚಳವಳಿಗೆ ಬೆಂಬಲ ಮತ್ತು ಪ್ರಚಾರಗಳನ್ನು ನೀಡಬೇಕು. ಇವೆಲ್ಲ ಉಪಕ್ರಮಗಳು ಯಶಸ್ವಿಯಾದಲ್ಲಿ ಮಾತ್ರ ಮಂಗಳೂರಿನ ಜನತೆಯ ಕುಡಿಯುವ ನೀರಿನ ಕೊರತೆಯನ್ನು ನೀಗಿಸಬಲ್ಲ ಹೊಸದೊಂದು ಕಿಂಡಿ ಅಣೆಕಟ್ಟಿನ ನಿರ್ಮಾಣ ಅತ್ಯವಶ್ಯ ಕವೆಂದು ಸರ್ಕಾರಕ್ಕೆ ಮನವರಿಕೆಯಾಗುವುದರಲ್ಲಿ ಸಂದೇಹವಿಲ್ಲ.

ಡಾ.ಸಿ.ನಿತ್ಯಾನಂದ ಪೈ 
ಬಳಕೆದಾರರ ಹಿತರಕ್ಷಣಾ ವೇದಿಕೆ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೦-೦೩-೨೦೦೫ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 






Tuesday, April 15, 2014

Low backpain




      ಸೊಂಟನೋವು ಗಂಟುಬಿದ್ದೀತು ಜೋಕೆ !

ಸೊಂಟನೋವು ಪ್ರಾರಂಭವಾಗಲು ಹಾಗೂ ತೀವ್ರಗೊಳ್ಳಲು ನಿಮ್ಮ ಜೀವನಶೈಲಿ, ನಿಮ್ಮ ಉದ್ಯೋಗ, ಶಾರೀರಿಕ ಕ್ಷಮತೆಯ ಮಟ್ಟ ಮತ್ತು ದುರಭ್ಯಾಸಗಳೂ ಕಾರಣವೆನಿಸಬಲ್ಲವು, ಅಂತೆಯೇ ಸ್ತ್ರೀಯರಲ್ಲಿ ವಿವಿಧ ರೀತಿಯ ಶ್ರಮದಾಯಕ ಮನೆಗೆಲಸಗಳಿಂದ ಆರಂಭಿಸಿ, ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನು ಧರಿಸುವ " ಫ್ಯಾಶನ್" ಕೂಡಾ ಈ ಸಮಸ್ಯೆಗೆ ಮೂಲವೆನಿಸುವ ಸಾಧ್ಯತೆಗಳಿವೆ.
---------------                   ----------------                ----------------             ----------------           ----------------

  ಯಾವುದೇ ಪೂರ್ವಸೂಚನೆಗಳಿಲ್ಲದೇ ಕ್ಷಣಮಾತ್ರದಲ್ಲಿ ಪ್ರಾರಂಭಗೊಳ್ಳುವ ಸೊಂಟನೋವು, ನಿಮಿಷಾರ್ಧದಲ್ಲಿ ನಿಮ್ಮನ್ನು ಪರಾವಲಂಬಿಯನ್ನಾಗಿಸುವಷ್ಟು ಪ್ರಬಲವಾಗಿರಲು " ಉಷ್ಣ' ಅಥವಾ "ವಾಯು" ಗಳಂತೂ ಖಂಡಿತವಾಗಿಯೂ ಕಾರಣವಲ್ಲ. ಹೆಚ್ಚಿನ ಜನರಲ್ಲಿ ಸಣ್ಣಪುಟ್ಟ ಕಾರಣಗಳಿಂದಾಗಿ ಪ್ರಾರಂಭವಾಗುವ ಈ ವಿಶಿಷ್ಟ ಸಮಸ್ಯೆಯು, ಸ್ವಯಂ ಚಿಕಿತ್ಸೆ ಹಾಗೂ ವಿಶ್ರಾಂತಿಗಳಿಂದ ಶಮನವಾಗದೇ ಇದ್ದಲ್ಲಿ ವೈದ್ಯರ ಸಲಹೆ ಪಡೆಯುವುದು ಹಿತಕರ. 

ದೀವಿಹಲಸಿನ ಪೋಡಿ ಕಾರಣವೇ?

 ಹೊಟ್ಟೆಯ ಪಾಡಿಗಾಗಿ ಪುಟ್ಟ ದಿನಸಿ ಅಂಗಡಿಯನ್ನು ನಡೆಸುತ್ತಿದ್ದ ನಾಗಪ್ಪನು ದಿನದಲ್ಲಿ ಹದಿನೈದು ಗಂಟೆಗಳ ಕಾಲ ದುಡಿಯುವುದು ಅನಿವಾರ್ಯವಾಗಿತ್ತು. ಆದರೂ ದಣಿವೆಂದರೆ ಏನೆಂದು ಅರಿಯದ ಆತನಿಗೆ, ಇತ್ತೀಚಿನ ಕೆಲದಿನಗಳಿಂದ ಸೊಂಟನೋವು ಆರಂಭವಾಗಿತ್ತು. ಅದೊಂದು ದಿನ ಹೆಂಡತಿ ತಯಾರಿಸಿದ್ದ ದೀವಿಹಲಸಿನ ಪೋಡಿಯನ್ನು ಪೊಗದಸ್ತಾಗಿ ತಿಂದಿದ್ದ ನಾಗಪ್ಪನಿಗೆ, ಸಂಜೆ ಗಿರಾಕಿಯೊಬ್ಬರ ಚೀಲವನ್ನು ಎತ್ತಿಕೊಡುವಾಗ ಸೊಂಟದಲ್ಲಿ ಛಳಕು ಹೊಡೆದಂತಾಗಿತ್ತು. ನೋವಿನ ತೀವ್ರತೆಗೆ ಕ್ಷಣಕಾಲ ಕಣ್ಣು ಕತ್ತಲಾವರಿಸಿದಂತೆ ಆದರೂ, ಸಾವರಿಸಿಕೊಂಡು ಸಮೀಪದಲ್ಲಿದ್ದ ಗೋಣಿಚೀಲದ ಮೇಲೆ ಪ್ರಯಾಸದಿಂದ ಕುಳಿತುಕೊಳ್ಳಬೇಕಾಯಿತು. ಆಕಸ್ಮಿಕವಾಗಿ ಉಲ್ಬಣಿಸಿದ ತನ್ನ ಸೊಂಟನೋವಿಗೆ, ದೀವಿಹಲಸಿನ ಪೋಡಿಯೇ  ಕಾರಣವಾಗಿರಬೇಕೆನ್ನುವ ಸಂದೇಹ ನಾಗಪ್ಪನಿಗೆ ಮೂಡಿತ್ತು. ಮುಂದಿನ ಮೂರುದಿನಗಳ ಕಾಲ ಹೆಂಡತಿ ತಯಾರಿಸಿ ನೀಡುತ್ತಿದ್ದ ಜೀರಿಗೆ ಕಷಾಯ ಹಾಗೂ ದಿನದಲ್ಲಿ ಎರಡು ಬಾರಿ ತಿಕ್ಕುತ್ತಿದ್ದ ನೋವಿನ ಎಣ್ಣೆಗಳ ಚಿಕಿತ್ಸೆಯ ಬಳಿಕವೂ, ಸೊಂಟನೋವಿಗೆ ಕಾರಣವೆಂದು ಭಾವಿಸಿದ್ದ " ವಾಯು" ಶಮನಗೊಂಡಿರಲಿಲ್ಲ. 

ಮರುದಿನ ಬೆಳಗ್ಗೆ ಹಾಸಿಗೆಯಿಂದ ಏಳಲಾರದೆ ನರಳುತ್ತಿದ್ದ ನಾಗಪ್ಪನ ಅವಸ್ಥೆಯನ್ನು ಕಂಡು ಗಾಬರಿಗೊಂಡ ಆತನ ಪತ್ನಿಯು, ಸಮೀಪದ ವೈದ್ಯರನ್ನು ಮನೆಗೆ ಕರೆಸಿದ್ದಳು. ರೋಗಿಯನ್ನು ಪರೀಕ್ಷಿಸಿದ ಬಳಿಕ ನೋವು ನಿವಾರಕ ಇಂಜೆಕ್ಷನ್ ನೀಡಿದ ವೈದ್ಯರು, ತಜ್ಞ ವೈದ್ಯರ ಸಲಹೆ ಪಡೆಯಲು ಸೂಚಿಸಿದ್ದರು. ಅದೇ ಸಂಜೆ ತಜ್ಞ ವೈದ್ಯರ ಬಳಿಗೆ ತೆರಳಿದ ನಾಗಪ್ಪನನ್ನು ಅವಶ್ಯಕ ಪರೀಕ್ಷೆಗಳಿಗೆ ಒಳಪಡಿಸಿದ ಬಳಿಕ ಆತನನ್ನು ಕಾಡುತ್ತಿರುವ ಸಮಸ್ಯೆಗೆ " ಸ್ಲಿಪ್ ಡಿಸ್ಕ್" ಕಾರಣವೆಂದು ಪತ್ತೆಯಾಗಿತ್ತು. ಮೂರುವಾರಗಳ ವಿಶ್ರಾಂತಿ ಹಾಗೂ ಚಿಕಿತ್ಸೆಯಿಂದ ಸಮಸ್ಯೆ ಬಗೆಹರಿಯದೇ ಇದ್ದುದರಿಂದ, ಅಂತಿಮವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿಬಂದಿತ್ತು.ಶಸ್ತ್ರಚಿಕಿತ್ಸೆಯ ಬಳಿಕ ನಾಗಪ್ಪನು ಸಂಪೂರ್ಣವಾಗಿ ಗುಣಮುಖನಾದರೂ, ತದನಂತರ ಅಪ್ಪಿತಪ್ಪಿಯೂ ದೀವಿಹಲಸಿನ ಪೋಡಿಯನ್ನು ತಿನ್ನುವುದನ್ನೇ ನಿಲ್ಲಿಸಿದ್ದನು!. 

ಬೆಂಬಿಡದ ಬೆನ್ನುನೋವು 

ವೈದ್ಯಕೀಯ ಪರಿಭಾಷೆಯಲ್ಲಿ " ಲೋ ಬ್ಯಾಕ್ ಪೈನ್" ಎಂದು ಕರೆಯಲ್ಪಡುವ ಈ ಸಮಸ್ಯೆಯು ವಿಶ್ವದ ಶೇ.೮೦ ರಷ್ಟು ಜನರ ಜೀವಿತಾವಧಿಯಲ್ಲಿ ಒಂದಲ್ಲ ಒಂದುಬಾರಿಯಾದರೂ ಬಾಧಿಸುತ್ತದೆ. ಜಗತ್ತಿನಾದ್ಯಂತ ಅತ್ಯಂತ ವ್ಯಾಕವಾಗಿ ಕಂಡುಬರುವ ಶೀತ ಹಾಗೂ ತಲೆನೋವುಗಳ  ಅನಂತರ ಮೂರನೆಯ ಸ್ಥಾನ ಸೊಂಟನೋವಿಗೆ ಸಲ್ಲುತ್ತದೆ. ಜನಸಾಮಾನ್ಯರ ದೈನಂದಿನ ಕೆಲಸಕಾರ್ಯಗಳಿಗೂ ತೊಡಕಾಗಬಲ್ಲ ಈ ಸೊಂಟನೋವು ತೀವ್ರಗೊಂದಾಗ, ಎಂಟೆದೆಯ ಬಂಟರೂ ಹಾಸಿಗೆ ಹಿಡಿಯುವುದು ಆಶ್ಚರ್ಯವೇನಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ ಈ ಸಮಸ್ಯೆ ಇನ್ನಷ್ಟು ಹೆಚ್ಚಲು ಆಧುನಿಕ - ಆರಾಮದಾಯಕ ಜೀವನಶೈಲಿಯೇ ಕಾರಣವೆನ್ನಬಹುದು.

ಯೌವ್ವನ- ವೃದ್ಧಾಪ್ಯ, ಬಡವ- ಬಲ್ಲಿದ ಮತ್ತು ಸ್ತ್ರೀ- ಪುರುಷರೆನ್ನುವ ಭೇದವಿಲ್ಲದೇ ಎಲ್ಲರನ್ನೂ ಬಾಧಿಸಬಲ್ಲ ಸೊಂಟನೋವಿನ ಬಗ್ಗೆ ಜನಮನದಲ್ಲಿ ಸಾಕಷ್ಟು ತಪ್ಪುಕಲ್ಪನೆಗಳಿವೆ. ಬಹುತೇಕ ಜನರಲ್ಲಿ ಆಕಸ್ಮಿಕವಾಗಿ ಆರಂಭವಾಗಿ ತೀವ್ರಗೊಳ್ಳುವ ಸೊಂಟನೋವಿಗೆ, " ವಾಯು, ಉಷ್ಣ ಮತ್ತು ಗ್ಯಾಸ್ಟ್ರಿಕ್" ತೊಂದರೆಗಳೇ ಕಾರಣವೆಂದು ನಂಬುವವರಲ್ಲಿ ಹೆಚ್ಚಿನವರು ವಿದ್ಯಾವಂತರೆಂದಲ್ಲಿ ನೀವೂ  ನಂಬಲಾರಿರಿ. ಅಧಿಕತಮ ಜನರು ಈ ಸಮಸ್ಯೆಯನ್ನು ಪ್ರಾರಂಭಿಕ ಹಂತದಲ್ಲಿ ನಿರ್ಲಕ್ಷಿಸುವುದು ಅಥವಾ ಸ್ವಯಂಚಿಕಿತ್ಸೆ ಪ್ರಯೋಗಿಸುವುದು ಅಪರೂಪವೇನಲ್ಲ. ಕುಳಿತರೆ ಏಳಲಾಗದ, ಬಗ್ಗಿದ ಬಳಿಕ ನೆಟ್ಟಗಾಗದ ಮತ್ತು ಮಲಗಿದಲ್ಲಿಂದ ಎದ್ದೇಳಲಾರದ  ಸ್ಥಿತಿಯನ್ನು ತಲುಪಿದ ಬಳಿಕವೇ ವೈದ್ಯರ ಸಲಹೆ ಮತ್ತು ಚಿಕಿತ್ಸೆಗಳಿಗೆ ಶರಣಾಗುವುದು ಭಾರತೀಯರ ವಿಶೇಷತೆ ಅನ್ನುವುದು ನಿಮಗೂ ತಿಳಿದಿರಲೇಬೇಕು!. 

ಕಾರಣಗಳೇನು?

ಸೊಂಟನೋವು ಪ್ರಾರಂಭವಾಗಲು ಹಾಗೂ ತೀವ್ರಗೊಳ್ಳಲು ನಿಮ್ಮ ಜೀವನಶೈಲಿ, ಉದ್ಯೋಗ, ಶಾರೀರಿಕ ಕ್ಷಮತೆಯ ಮಟ್ಟ ಮತ್ತು ದುರಭ್ಯಾಸಗಳೂ ಕಾರಣವೆನಿಸಬಲ್ಲವು. ಅಂತೆಯೇ ಸ್ತ್ರೀಯರಲ್ಲಿ ವಿವಿಧ ರೀತಿಯ ಶ್ರಮದಾಯಕ ಮನೆಗೆಲಸಗಳಿಂದ ಆರಂಭಿಸಿ, ಎತ್ತರದ ಹಿಮ್ಮಡಿಯ ಪಾದರಕ್ಷೆಗಳನ್ನೂ ಧರಿಸುವ "ಫ್ಯಾಶನ್" ಕೂಡಾ ಈ ಸಮಸ್ಯೆಗೆ ಮೂಲವೆನಿಸುವ ಸಾಧ್ಯತೆಗಳಿವೆ. 

ಆರಾಮದಾಯಕ ಜೀವನ ಶೈಲಿ, ವ್ಯಾಯಾಮ ಮತ್ತು ಶಾರೀರಿಕ ಕ್ಷಮತೆಯ ಅಭಾವ, ಅತಿಯಾದ ಶಾರೀರಿಕ ಶ್ರಮದ ಕೆಲಸಗಳು, ಅಸಮರ್ಪಕ ಶಾರೀರಿಕ ಭಂಗಿಗಳು, ಅತಿಯಾದ ಭಾರವನ್ನು ಎತ್ತುವುದು ಹಾಗೂ ಹೊರುವುದು, ಎರಡಕ್ಕೂ ಅಧಿಕಬಾರಿ ಗರ್ಭಧಾರಣೆ ಮತ್ತು ಪ್ರಸವ, ಅತಿಬೊಜ್ಜು, ಅಧಿಕತೂಕ, ಅತಿ ಧೂಮಪಾನ- ಮದ್ಯಪಾನ ಮತ್ತು ವೃತ್ತಿ ಸಂಬಂಧಿತ ಅಪಾಯಕಾರಿ ಅಂಶಗಳು ಸೊಂಟನೋವಿಗೆ ಪ್ರಮುಖ ಕಾರಣಗಳಾಗಿವೆ. 

ಬೆನ್ನುಮೂಳೆಯ ಅಸಹಜತೆ, ಕೆಲವಿಧದ ಸೋಂಕುಗಳು, ಕಶೇರು ಆಸ್ಥಿಯ ಕುಸಿತ, ವಿಶಿಷ್ಟ ರೀತಿಯ ಮಾಂಸಪೇಶಿಗಳ  ಕಾಯಿಲೆ ( ಫೈಬ್ರೋಮಯಾಲ್ಜಿಯಾ), ರಾಜಯಕ್ಷ್ಮ (ಟಿ.ಬಿ) ಮತ್ತು ಕೆಲವಿಧದ ಕ್ಯಾನ್ಸರ್ (ಉದಾ- ಬೆನ್ನುಮೂಳೆಯ ಕ್ಯಾನ್ಸರ್- ಸ್ತ್ರೀಯರ ಅಂಡಾಶಯಗಳ ಕ್ಯಾನ್ಸರ್) ಇತ್ಯಾದಿಗಳೂ ಈ ಸಮಸ್ಯೆಗೆ ಹೇತುವೆನಿಸಬಲ್ಲವು. ಇದಲ್ಲದೇ ಅಸ್ಥಿಸಂಧಿಗಳ  ಉರಿಯೂತ, ಸ್ಪಾಂಡಿಲೈಟಿಸ್, ರುಮಟಾಯ್ಡ್ ಆರ್ಥ್ರೈಟಿಸ್, ರುಮ್ಯಾಟಿಕ್ ಜ್ವರ, ಮೂಳೆಗಳ ದೌರ್ಬಲ್ಯ ಮತ್ತು ಸವೆತ, ಸ್ಥಾನಪಲ್ಲಟಗೊಂಡ ಅಥವಾ ಹೊರಚಾಚಿದ ಕಶೇರು ಅಸ್ಥಿ ( ಸ್ಲಿಪ್ ಡಿಸ್ಕ್), ದೀರ್ಘಕಾಲೀನ ಮಾನಸಿಕ ಖಿನ್ನತೆ, ಕೆಮ್ಮು ಮತ್ತು ಸ್ಟೆರಾಯ್ಡ್ ಔಷದಗಳ ದೀರ್ಘಕಾಲೀನ ಸೇವನೆಗಳಿಂದಲೂ ಸೊಂಟನೋವು ಉದ್ಭವಿಸುವ ಹಾಗೂ ಉಲ್ಬಣಿಸುವ ಸಾಧ್ಯತೆಗಳಿವೆ. ಕೆಲವಿಧದ ಮೂತ್ರಪಿಂಡಗಳ ಹಾಗೂ ಗರ್ಭಕೋಶದ ಕಾಯಿಲೆಗಳು, ಮೂತ್ರಾಶಯದ ಸೋಂಕು, ರಿಕೆಟ್ಸ್ ಮತ್ತು ಆಸ್ಟಿಯೋ ಮಲೆಶಿಯದಂತಹ ವ್ಯಾಧಿಗಳು ಬೆನ್ನುನೋವಿನ ಸಮಸ್ಯೆಗಳನ್ನು ಹುಟ್ಟುಹಾಕುವುದುಂಟು. 

ಅಪಾಯಕಾರಿ ಸಂಕೇತಗಳು 

೧೮ ವರ್ಷಕ್ಕಿಂತ ಕೆಳಗಿನ ಮತ್ತು ೫೦ ವರ್ಷ ಮೀರಿದ ವ್ಯಕ್ತಿಗಳಲ್ಲಿ ಆಕಸ್ಮಿಕವಾಗಿ ಪ್ರಾರಂಭವಾಗಿ, ಕ್ಷಣಮಾತ್ರದಲ್ಲಿ ತೀವ್ರಗೊಂಡು ಅನೇಕ ದಿನಗಳ ಕಾಲ ಬಾಧಿಸುವ ಸೊಂಟನೋವು, ಕೈಕಾಲು ಮತ್ತು ತೊಡೆಗಳಲ್ಲಿ ಬಲಹೀನತೆ ಅಥವಾ ಸ್ಪರ್ಶಜ್ಞಾನದ ಅಭಾವ, ಕೈಕಾಲುಗಳ ಮಾಂಸಪೇಶಿಗಳಲ್ಲಿ ಅಸಹಜ ದೌರ್ಬಲ್ಯ, ಸೊಂಟದ ಹಿಂಭಾಗದಿಂದ ಹಿಡಿದು ಕಾಲಿನ ಹಿಮ್ಮಡಿಯ ತನಕ ಅಥವಾ ಹೆಗಲಿನಿಂದ ಹಿಡಿದು ಕೈಬೆರಳುಗಳ ತನಕ ಛಳಕು ಹೊಡೆದಂತೆ ಬರುವ ನೋವು, ಜ್ವರ, ಬೆನ್ನು ಅಥವಾ ಸೊಂಟದಲ್ಲಿ ಬಾವು ಮತ್ತು ಉರಿಯೂತ, ಸೊಂಟದ ಮಧ್ಯಭಾಗದಲ್ಲಿ ತೀವ್ರ ಉರಿ ಮತ್ತು ನೋವು, ಅರಿವಿಲ್ಲದೆ ಮಲಮೂತ್ರಗಳ ವಿಸರ್ಜನೆ, ಮೂತ್ರ ವಿಸರ್ಜಿಸಲು ಕಷ್ಟಸಾಧ್ಯವೆನಿಸುವುದು, ಜನನಾಂಗದಲ್ಲಿ ಅಥವಾ ಸೊಂಟದಿಂದ ಪಾದಗಳ ತನಕ ತೀವ್ರನೋವು ಮತ್ತು ನಡೆಯುವಾಗ ನಿಯಂತ್ರಣ ಇಲ್ಲದಂತೆ ಆಗುವುದು ಇತ್ಯಾದಿ ಸಮಸ್ಯೆಗಳು ನಿಮ್ಮನ್ನು ಪೀಡಿಸುತ್ತಿದ್ದಲ್ಲಿ ತಕ್ಷಣ ತಜ್ಞ ವೈದ್ಯರ ಸಲಹೆ- ಚಿಕಿತ್ಸೆ ಪಡೆಯುವುದರಿಂದ ಮುಂದೆ ಸಂಭವಿಸಬಹುದಾದ ಗಂಭೀರ ಸಮಸ್ಯೆಗಳನ್ನು ತಡೆಗಟ್ಟುವುದು ಸುಲಭಸಾಧ್ಯ. 

ಅವಶ್ಯಕ ಪರೀಕ್ಷೆಗಳು 

ಬಹುತೇಕ ಜನರಲ್ಲಿ ಅಪರೂಪದಲ್ಲಿ ಕಂಡುಬರುವ ಸೌಮ್ಯರೂಪದ ಸೊಂಟನೋವಿಗೆ ದೈನಂದಿನ ಚಟುವಟಿಕೆ ಅಥವಾ ಆಘಾತಗಳೇ ಕಾರಣವಾಗಿರುತ್ತವೆ. ಅಲ್ಪಾವಧಿಯ ಚಿಕಿತ್ಸೆಯಿಂದ ಶಮನಗೊಳ್ಳುವ ಇಂತಹ ತೊಂದರೆಗಳಲ್ಲಿ ವಿಶೇಷ ಪರೀಕ್ಷೆಗಳನ್ನು ನಡೆಸುವ ಅವಶ್ಯಕತೆಯೇ ಇರದು. 

ರೋಗಿಯ ದೈನಂದಿನ ಚಟುವಟಿಕೆ ಹಾಗೂ ಕೆಲಸಕಾರ್ಯಗಳಿಗೆ ಅದ್ದಿಯಾಗಬಲ್ಲ, ತೀವ್ರ ನೋವಿನಿಂದ ಹಾಸಿಗೆ ಹಿಡಿಸಬಲ್ಲಮತ್ತು ದೀರ್ಘಕಾಲೀನ ಬೆನ್ನು- ಸೊಂಟನೋವುಗಳಿಗೆ ನಿರ್ದಿಷ್ಟ ಕಾರಣವನ್ನು ಅರಿತುಕೊಳ್ಳಲು ನಿಖರವಾದ ಪರೀಕ್ಷೆಗಳನ್ನು ನಡೆಸಬೇಕಾಗುವುದು.ಇವುಗಳಲ್ಲಿ ಕ್ಷ- ಕಿರಣ, ಸಿ.ಟಿ ಸ್ಕ್ಯಾನ್, ಎಂ.ಆರ್.ಐ ,ಮತ್ತು ಕಿಂಚಿತ್ ಅಧಿಕ ಮಾಹಿತಿಗಾಗಿ ಬೋನ್ ಸ್ಕ್ಯಾನ್ ಎನ್ನುವ ಪರೀಕ್ಷೆಗಳು ಪ್ರಮುಖವಾಗಿವೆ. ಇದಲ್ಲದೇ ರೋಗಿಯ ಸ್ಥಿತಿಗತಿಗಳಿಗೆ ಅನುಸಾರವಾಗಿ ತಜ್ಞ ವೈದ್ಯರು ಅನ್ಯ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. 

ಚಿಕಿತ್ಸೆ ಎಂತು - ಏನು ?

ಬೆನ್ನು - ಸೊಂಟನೋವುಗಳ ರೋಗನಿದಾನ ಮತ್ತು ಚಿಕಿತ್ಸೆಗಳಲ್ಲಿ ಕುಟುಂಬ ವೈದ್ಯರು, ವೈದ್ಯಕೀಯ ತಜ್ಞರು, ಮೂಳೆಗಳ ತಜ್ಞರು, ಮೆದುಳು- ನರರೋಗ ತಜ್ಞರು, ಶಾರೀರಿಕ ಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತು ಕೆಲ ಸಂದರ್ಭಗಳಲ್ಲಿ ಮಾನಸಿಕ ತಜ್ಞರ ಪಾತ್ರ ಮಹತ್ವಪೂರ್ಣ ಹಾಗೂ ಅವಶ್ಯಕವೆನಿಸುವುದು. 

ವೈವಿಧ್ಯಮಯ ಕಾರಣಗಳಿಂದ ತಲೆದೋರುವ ಈ ವಿಶಿಷ್ಟ ಸಮಸ್ಯೆಯಲ್ಲಿ ತೀವ್ರ ನೋವು ಬಾಧಿಸಿದಾಗ ಸಂಪೂರ್ಣ ವಿಶ್ರಾಂತಿಯು ಪ್ರಾಥಮಿಕ ಅವಶ್ಯಕತೆಯಾಗಿದೆ. ಆದರೆ ಇತ್ತೀಚಿನ ಸಂಶೋಧನೆಗಳಂತೆ ವಿಶ್ರಾಂತಿ ಮತ್ತು ಔಷದ ಸೇವನೆಯಿಂದ ನೋವಿನ ತೀವ್ರತೆ ಕಡಿಮೆಯಾದಂತೆಯೇ, ಅಲ್ಪಪ್ರಮಾಣದ ಚಲನವಲನಗಳು ಮತ್ತು ಲಘು ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳುವುದು ಲಾಭದಾಯಕ ಎನಿಸುವುದು. 

ಗಂಭೀರ ಸಮಸ್ಯೆಗಳು ಉದ್ಭವಿಸಿದಲ್ಲಿ ಔಷದ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಮಾನಸಿಕ ತಜ್ಞರ ಚಿಕಿತ್ಸೆ ಮತ್ತು ಶಾರೀರಿಕ ಚಿಕಿತ್ಸಕರ ಸಂಯುಕ್ತ ಪ್ರಯೋಗವು ಅತ್ಯಗತ್ಯ ಎನಿಸಬಹುದು. ಶಾರೀರಿಕ ಚಿಕಿತ್ಸೆಯ ಅಂಗವಾಗಿ ನಿಮ್ಮ ನೋವು ಉಲ್ಬಣಿಸದಂತಹ , ವಿಶೇಷವಾಗಿ ಬೆನ್ನು- ಸೊಂಟದ ಮಾಂಸಪೇಶಿಗಳು, ಅಸ್ಥಿ- ಅಸ್ಥಿಸಂಧಿಗಳು ಹಾಗೂ ಶಾರೀರಿಕ ಕ್ಷಮತೆಯ ಮಟ್ಟವನ್ನು ಹೆಚ್ಚಿಸವನ್ನು ಹೆಚ್ಚಿಸಬಲ್ಲ ಲಘು ವ್ಯಾಯಾಮಗಳು ಖಚಿತವಾಗಿಯೂ ಅಪೇಕ್ಷಿತ ಪರಿಣಾಮವನ್ನು ನೀಡುತ್ತವೆ. ಶಾಖ, ಅಲ್ಟ್ರಾ ಸೌಂಡ್ ಡೈನಾವೇವ್, ಮಸಾಜ್, ಬಿಸಿನೀರಿನ ಚೀಲ, ಇನ್ಫ್ರಾ ರೆಡ್ ದೀಪ ಹಾಗೂ ಶಾರ್ಟ್ ವೇವ್  ಡಯಾಥರ್ಮಿಗಳನ್ನು ಸೊಂಟನೋವಿನ ಚಿಕಿತ್ಸೆಯಲ್ಲಿ ಬಳಸುತ್ತಾರೆ. 

ರೋಗಿಯನ್ನು ಹಾಸುಗೆಯ ಮೇಲೆ ಮಲಗಿಸಿ "ಟ್ರಾಕ್ಶನ್ " ನೀಡುವುದು, ಸೊಂಟಕ್ಕೆ ಆಧಾರ ನೀಡುವ ಲಂಬೋ ಸಾಕ್ರಲ್ ಬೆಲ್ಟ್ ಧರಿಸುವುದು, ಸೊಂಟದ ನಿರ್ದಿಷ್ಟ ಭಾಗದಲ್ಲಿ ಎಪಿಡ್ಯೂರಲ್ ಇಂಜೆಕ್ಷನ್ ನೀಡುವುದು, ಅಕ್ಯುಪಂಕ್ಚರ್, ಯೋಗ ಇತ್ಯಾದಿಗಳೂ ಈ ಸಮಸ್ಯೆಯ ಪರಿಹಾರದಲ್ಲಿ ಪರಿಣಾಮಕಾರಿ ಎನಿಸುತ್ತವೆ. 

ಆದರೆ ಗಂಭೀರ ಹಾಗೂ ಅಪಾಯಕಾರಿ ಸಂಕೇತ- ಲಕ್ಷಣಗಳು ಕಂಡುಬಂದಲ್ಲಿ ಶಸ್ತ್ರಚಿಕಿತ್ಸೆ ಏಕಮಾತ್ರ ಪರಿಹಾರವೆನಿಸುವುದು ಅಪರೂಪವೇನಲ್ಲ. 
  
ಕೊನೆಯದಾಗಿ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಸೊಂಟ- ಬೆನ್ನು ನೋವು ನಿಮ್ಮನ್ನು ಪೀಡಿಸುತ್ತಿದ್ದಲ್ಲಿ, ಅವಶ್ಯವಾಗಿ ತಜ್ಞ ವೈದ್ಯರ ಸಲಹೆ- ಚಿಕಿತ್ಸೆಗಳನ್ನು ಪಡೆದುಕೊಳ್ಳಿ. ನೆರೆಕರೆಯ ಸ್ವಯಂವೈದ್ಯರು ನೀಡುವ ಯಾವುದೇ ಮಾತ್ರೆ- ಮುಲಾಮುಗಳನ್ನು ಬೇಕೆನಿಸಿದಾಗ ಬಳಸದಿರಿ. ನಿಮಗೆ ವಯಸ್ಸಾದಂತೆಯೇ ಸವೆತಕ್ಕೊಳಗಾದ ನಿಮ್ಮ ಅಸ್ಥಿಸಂಧಿಗಳಲ್ಲಿ ಪ್ರಾರಂಭವಾಗುವ ನೋವು, ಕೇವಲ ಒಂದು ಇಂಜೆಕ್ಷನ್ ನಿಂದ ಶಾಶ್ವತವಾಗಿ ಗುಣವಾಗದೆಂದು ಅರಿತಿರಿ. ಅದೇ ರೀತಿಯಲ್ಲಿ ಮೂಳೆಗಳು ತಮ್ಮ ಧೃಢತೆಯನ್ನು ಕಳೆದುಕೊಳ್ಳುವುದರಿಂದಾಗಿ, ವಯಸ್ಸಾದವರಲ್ಲಿ ಮೂಳೆಗಳ ದೌರ್ಬಲ್ಯವೂ ಹೆಚ್ಚಾಗಿ ಕಂಡುಬರುವುದು. ನೋವು ನಿವಾರಕ ಮುಲಾಮು-ಎಣ್ಣೆಗಳನ್ನು ತಿಕ್ಕುವುದರಿಂದ ಮೂಳೆಗಳು ಮತ್ತೆ ತಮ್ಮ ಧೃಢತೆಯನ್ನು ಮರಳಿ ಗಳಿಸಿಕೊಳ್ಳುವುದು ಅಸಾಧ್ಯ ಎನ್ನುವುದು ನೆನಪಿರಲಿ. 

ಆರೋಗ್ಯಕರ ಜೀವನಶೈಲಿ, ಶಿಸ್ತುಬದ್ಧ ಜೀವನಕ್ರಮ, ಸಮತೋಲಿತ ಆಹಾರ ಸೇವನೆ, ಪ್ರತಿನಿತ್ಯ ವ್ಯಾಯಾಮ- ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಮಾನಸಿಕ ಒತ್ತಡಗಳನ್ನು ದೂರವಿರಿಸುವುದೇ ಮುಂತಾದ ಉಪಕ್ರಮಗಳಿಂದ ನಿಮ್ಮ ಶಾರೀರಿಕ ಕ್ಷಮತೆ ಮತ್ತು ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳುವುದು ನಿಶ್ಚಿತವಾಗಿಯೂ ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೦೯-೦೯-೨೦೦೪ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.


Monday, April 14, 2014

Smoke in your kitchen



  ಅಡುಗೆಮನೆಯ ಧೂಮಪಾನಿಗಳು !

ಹಲವಾರು ದಶಕಗಳ ಹಿಂದೆ ಬಹುತೇಕ ಭಾರತೀಯರು ತಮ್ಮ ಅಡುಗೆಮನೆಯಲ್ಲಿ ಸೌದೆ, ಬೆರಣಿ, ತೆಂಗಿನ ಸೋಗೆ,ಗೆರಟೆ, ಮರದ ಹುಡಿ, ಒಣಗಿದ ಗಿಡಗಂಟಿಗಳು, ಇದ್ದಿಲು ಇತ್ಯಾದಿಗಳನ್ನು ಉರುವಲಿನ ರೂಪದಲ್ಲಿ ಬಳಸುತ್ತಿದ್ದರು. ಏಕೆಂದರೆ ಅಂದಿನ ದಿನಗಳಲ್ಲಿ ವಿದ್ಯುತ್, ಸೌರ ಒಲೆಗಳು ಮತ್ತು ಅಡುಗೆ ಅನಿಲಗಳಂತಹ ಸ್ವಚ್ಚ ಶಕ್ತಿಮೂಲಗಳು ಮತ್ತು ಇಂಧನಗಳು ಬಡವರ ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತಿರಲಿಲ್ಲ. 

ಆದರೆ ಇಂದು ಪರ್ಯಾಯ ಶಕ್ತಿಮೂಲಗಳು- ಇಂಧನಗಳು ಲಭ್ಯವಿದ್ದರೂ, ಕಾರಣಾಂತರಗಳಿಂದ ಭಾರತವೂ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳ ಶೇ. ೫೦ ಕ್ಕೂ ಅಧಿಕ ಪ್ರಜೆಗಳು ಇಂದಿಗೂ ಸಾಂಪ್ರದಾಯಿಕ ಉರುವಲುಗಳನ್ನೇ ಬಳಸುತ್ತಿದ್ದಾರೆ. ಇದರೊಂದಿಗೆ ಬಳಸಿ ಎಸೆಯುವ ಪ್ಲಾಸ್ಟಿಕ್ ಚೀಲಗಳು, ಕಾಗದಗಳು, ರಟ್ಟು ಮತ್ತಿತರ ತ್ಯಾಜ್ಯವಸ್ತುಗಳನ್ನು ಉರುವಲಿನ ರೂಪದಲ್ಲಿ ಬಳಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. 

ಈ ಉರುವಲುಗಳನ್ನು ಮನೆಯಲ್ಲಿ ಅಡುಗೆಗಾಗಿ ಉಪಯೋಗಿಸುವಾಗ ಉತ್ಪನ್ನವಾಗುವ ಹೊಗೆಯಲ್ಲಿ ಕಾರ್ಬನ್ ಮೊನೊಕ್ಸೈಡ್ ಮತ್ತಿತರ ಅನೇಕ ಅಪಾಯಕಾರಿ ಅನಿಲ ಇತ್ಯಾದಿಗಳಿದ್ದು, ಮನೆಮಂದಿ ಉಸಿರಾಡುವ ಗಾಳಿಯನ್ನು ಕಲುಷಿತಗೊಳಿಸುತ್ತದೆ. ಜನಸಾಮಾನ್ಯರ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ ಎನಿಸುವ ಹತ್ತು ಪ್ರಮುಖ ಕಾರಣಗಳಲ್ಲಿ, ಈ ಒಳಾಂಗಣ ಧೂಮವೂ ಒಂದಾಗಿದ್ದು, ವರ್ಷಂಪ್ರತಿ ಲಕ್ಷಾಂತರ ಅಮಾಯಕರ ಮರಣಕ್ಕೆ ಕಾರಣವೆನಿಸುತ್ತಿದೆ. 

ಪರಿಸರ ಪ್ರದೂಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಎನಿಸಿರುವ ಕಲುಷಿತ ನೀರು ದ್ವಿತೀಯ ಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲಿ ಮನೆಯೊಳಗಿನ ಹಾಗೂ ಹೊರಗಿನ ಗಾಳಿಯನ್ನು ಕಲುಷಿತಗೊಳಿಸುವ " ಧೂಮ" ಕ್ಕೆ ಸಲ್ಲುತ್ತದೆ. ಈ ವಿಷಕಾರಕ ಹೊಗೆಯ ಹಾವಳಿಗೆ ವರ್ಷಂಪ್ರತಿ ಜಗತ್ತಿನಾದ್ಯಂತ ಎರಡು ಲಕ್ಷ ಜನರು ಬಲಿಯಾಗುತ್ತಿದ್ದು, ಒಳಾಂಗಣ ವಾಯುಮಾಲಿನ್ಯದಿಂದಾಗಿ ಸಂಭವಿಸುವ ಆರೋಗ್ಯದ ಸಮಸ್ಯೆಗಳೇ ಇದಕ್ಕೆ ಕಾರಣವೆನಿಸಿವೆ. 

ವಿಷಕಾರಕ "ಧೂಮಕೇತು"!

ಸಮರ್ಪಕವಾದ ವಾತಾಯನ ವ್ಯವಸ್ಥೆ ಇಲ್ಲದಿರುವ ಬಡವರ ಗುಡಿಸಲುಗಳು ಅಥವಾ ಪುಟ್ಟ ಮನೆಗಳಲ್ಲಿ ಸಾಂಪ್ರದಾಯಿಕ ಉರುವಲುಗಳು ಹೊರಸೂಸುವ ಹೊಗೆಯಿಂದಾಗಿ, ಮನೆಯಲ್ಲಿರುವ ಹೆಂಗಸರು, ಮಕ್ಕಳು ಮತ್ತು ವಯೋವೃದ್ಧರ ಆರೋಗ್ಯವು ಸುಲಭದಲ್ಲೇ ಹದಗೆಡುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವುದಾದಲ್ಲಿ, ಮನುಷ್ಯನ ಪಂಚೇಂದ್ರಿಯಗಳಿಗೆ ಸಂಬಂಧಿಸಿದ ಅನೇಕ ಆರೋಗ್ಯದ ಸಮಸ್ಯೆಗಳೊಂದಿಗೆ ಹೃದ್ರೋಗಗಳು, ನ್ಯುಮೋನಿಯ ಮತ್ತು ಶ್ವಾಸಕೋಶಗಳ ದೀರ್ಘಕಾಲೀನ ಅಡಚಣೆಯ ವ್ಯಾಧಿಗಳಂತಹ ಗಂಭೀರ ಸಮಸ್ಯೆಗಳು ಬಾಧಿಸುತ್ತವೆ. 

ಸಾಂಪ್ರದಾಯಿಕ ಉರುವಲುಗಳನ್ನು ಅಸಮರ್ಪಕವಾಗಿ ಉರಿಸುವುದರಿಂದ ಉತ್ಪನ್ನವಾಗುವ ಹೊಗೆಯಲ್ಲಿ ಕಾರ್ಬನ್ ಮೊನೊಕ್ಸೈಡ್, ನೈಟ್ರೋಜನ್ ಆಕ್ಸೈಡ್, ಪೊಲಿ ಆರೋಮ್ಯಾಟಿಕ್ ಹೈಡ್ರೋ ಕಾರ್ಬನ್ಸ್, ಬೆನ್ಜೀನ್ ಮತ್ತಿತರ ವಿಷಕಾರಕ ದ್ರವ್ಯಗಳು ಇರುತ್ತವೆ. ಇಂತಹ ಉರುವಲುಗಳನ್ನೇ ಅತಿಯಾಗಿ ಬಳಸುವ ಬಡವರ ಮನೆಗಳಲ್ಲಿ ತುಂಬಿಕೊಳ್ಳುವ ಧೂಮದಿಂದಾಗಿ, ಮನೆಮಂದಿ ಉಸಿರಾಡುವಾಗ ಈ ಹೊಗೆಯು ಶ್ವಾಸಾಂಗಗಳನ್ನು ಸುಲಭದಲ್ಲೇ ಪ್ರವೇಶಿಸುತ್ತದೆ. ಸಾಮಾನ್ಯವಾಗಿ ಅಡುಗೆ ಕೆಲಸವನ್ನು ನಿರ್ವಹಿಸುವ ಹೆಂಗಸರು ಹಲವಾರು ಗಂಟೆಗಳ ಕಾಲ ಅಡುಗೆ ಮನೆಯಲ್ಲಿ ಇರಬೇಕಾಗುವುದರಿಂದ, ಇವರು ತಮ್ಮ ಉಸಿರಿನೊಂದಿಗೆ ಸೇವಿಸುವ ಹೊಗೆಯ ಪ್ರಮಾಣವು ಎರಡು ಪ್ಯಾಕೆಟ್ ಸಿಗರೇಟಿನ ಹೊಗೆಗೆ ಸಮಾನವಾಗಿರುತ್ತದೆ. ಈ ಧೂಮದಿಂದಾಗಿ ಉದ್ಭವಿಸುವ ನ್ಯುಮೋನಿಯ ಮತ್ತಿತರ ಆರೋಗ್ಯದ ಸಮಸ್ಯೆಗಳು ಮನೆಯಲ್ಲಿರುವ ಹೆಂಗಸರು ಮತ್ತು ಪುಟ್ಟ ಮಕ್ಕಳನ್ನೇ ಹೆಚ್ಚಾಗಿ ಬಾಧಿಸುತ್ತದೆ. ಏಕೆಂದರೆ ಮನೆಯ ಯಜಮಾನರಾಗಿರುವ ಗಂಡಸರು ಹಗಲಿಡೀ ದುಡಿಯುವ ಸಲುವಾಗಿ ಮನೆಯಿಂದ ಹೊರಗಿರುವುದೇ ಇದಕ್ಕೆ ಕಾರಣವೆನಿಸಿದೆ. 

ಸುಮಾರು ೨೧ ದೇಶಗಳಲ್ಲಿ ಈ ಬಗ್ಗೆ ನಡೆಸಿದ್ದ ಅಧ್ಯಯನಗಳಿಂದ ತಿಳಿದುಬಂದಂತೆ, ಒಳಾಂಗಣ ವಾಯುಮಾಲಿನ್ಯವು ಶೇ.೫ ರಷ್ಟು ಮರಣಗಳಿಗೆ ಹಾಗೂ ಗಂಭೀರ ಕಾಯಿಲೆಗಳಿಗೆ ನೇರವಾಗಿ ಕಾರಣವೆನಿಸುತ್ತಿದೆ. 

ಸಾಂಪ್ರದಾಯಿಕ ಉರುವಲಿನ ಬಳಕೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ೪ ರಿಂದ ೬ ಲಕ್ಷ ಜನರು ಸಾವಿಗೀಡಾಗುತ್ತಿದ್ದು, ನೆರೆಯ ಚೀನಾ ದೇಶದಲ್ಲಿ ಈ ಪ್ರಮಾಣವು ೪ ಲಕ್ಷಕ್ಕಿಂತಲೂ ಕಡಿಮೆಯಿದೆ. ವಿಶೇಷವೆಂದರೆ ಈ ರೀತಿಯಲ್ಲಿ ಮೃತಪಡುತ್ತಿರುವ ಭಾರತೀಯರಲ್ಲಿ, ಅಧಿಕತಮ ಜನರು ಶ್ವಾಸಾಂಗಗಳ ಸೋಂಕಿನಿಂದ ಮತ್ತು ಅಲ್ಪಪ್ರಮಾಣದ ಜನರು ಕ್ಯಾನ್ಸರ್ ನಂತಹ ಕಾಯಿಲೆಗಳಿಂದಲೇ ಮೃತಪಡುತ್ತಿದ್ದಾರೆ. 

ಬಡ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜನಸಾಮಾನ್ಯರ ಅಜ್ಞಾನ ಮತ್ತು ಬಡತನಗಳಿಂದಾಗಿ ಸಂಭವಿಸುತ್ತಿರುವ ಇಂತಹ ಅಕಾಲಿಕ ಮರಣಗಳನ್ನು ತಡೆಗಟ್ಟಲು, ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಗಮನವನ್ನು ಹರಿಸಿದೆ. ಅಮೇರಿಕದ ನ್ಯಾಶನಲ್ ಇನ್ಸ್ ಟಿಟ್ಯೂಟ್ ಆಫ್ ಹೆಲ್ತ್ ಸಂಸ್ಥೆಯ ನಿರ್ದೇಶಕರು ಹೇಳುವಂತೆ, ಮನೆಮಂದಿಯ ಆರೋಗ್ಯಕ್ಕೆ ಮಾರಕವೆನಿಸುತ್ತಿರುವ ಈ ಧೂಮದ ಹಾವಳಿಯನ್ನು ನಿವಾರಿಸುವ - ನಿಯಂತ್ರಿಸುವ ಪ್ರಯತ್ನಗಳು ಇತ್ತೀಚಿಗೆ ಆರಂಭಗೊಂಡಿವೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆರಂಭಗೊಂಡಿರುವ ಈ ಅಭಿಯಾನದ ಫಲವಾಗಿ ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳು ನಡೆಯುತ್ತಿವೆ. ತತ್ಪರಿಣಾಮವಾಗಿ ಹೊಗೆಯನ್ನು ಉಗುಳದ ಆಧುನಿಕ ಒಲೆಗಳನ್ನು ಈಗಾಗಲೇ ಆವಿಷ್ಕರಿಸಲಾಗಿದೆ. ಇಂತಹ ಒಲೆಗಳನ್ನು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಮತ್ತು ಬಡ ಕುಟುಂಬಗಳು ಬಳಸಲು ಆರಂಭಿಸಿದಲ್ಲಿ, ಇವರ ಆರೋಗ್ಯದ ಮಟ್ಟವು ಸುಧಾರಿಸುವುದರೊಂದಿಗೆ ಅಕಾಲಿಕ ಮರಣದ ಪ್ರಮಾಣವೂ ಕಡಿಮೆಯಾಗಲಿದೆ. 

ಕೇಂದ್ರ ಸರ್ಕಾರವು ದೇಶದ ಬಡಜನರನ್ನು ಕಾಡುತ್ತಿರುವ ವೈವಿಧ್ಯಮಯ ಕಾಯಿಲೆಗಳನ್ನು ನಿರ್ಮೂಲನ ಮಾಡಲು ವರ್ಷಂಪ್ರತಿ ಸಹಸ್ರಾರು ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದರ ಒಂದು ಅಂಶವನ್ನು ಬಡ ಜನರಿಗೆ ಅಡುಗೆ ಅನಿಲದ ಸಂಪರ್ಕವನ್ನು ಒದಗಿಸಲು ಬಳಸಿದಲ್ಲಿ, ಲಕ್ಷಾಂತರ ಬಡಜನರ ಆರೋಗ್ಯದ ಮಟ್ಟವನ್ನು ಸುಧಾರಿಸಲು ನಿಶ್ಚಿತವಾಗಿಯೂ ಉಪಯುಕ್ತವೆನಿಸಲಿದೆ!. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೨೫-೧೧- ೨೦೧೧ ರ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ.