Tuesday, February 18, 2014

MAAHITIHAKKU KAAYIDE: HEEGOO UNTE?




           ಮಾಹಿತಿ ಹಕ್ಕು ಕಾಯಿದೆ: ಹೀಗೂ ಉಂಟೇ?

ದೇಶಾದ್ಯಂತ ಮಾಹಿತಿ ಪಡೆಯುವ ಹಕ್ಕು ಕಾಯಿದೆ ೨೦೦೫, ಜಾರಿಗೆ ಬಂದು ಎಂಟು ವರ್ಷಗಳೇ ಕಳೆದಿವೆ. ಈ ಅವಧಿಯಲ್ಲಿ ಅನೇಕ ಪ್ರಜ್ಞಾವಂತ ನಾಗರಿಕರು ಮತ್ತು ಸ್ವಯಂ ಸೇವಾ ಸಂಘಟನೆಗಳು ಈ ಕಾಯಿದೆಯನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಇನ್ನು ಕೆಲವರಂತೂ ಭಾರೀ ಹಗರಣಗಳನ್ನು ಬಯಲಿಗೆಳೆಯಲು ಯಶಸ್ವಿಯಾಗಿದ್ದಾರೆ. ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ಕೂಡಾ ಇದಕ್ಕೆ ಅಪವಾದವೆನಿಸಿಲ್ಲ. ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅವಶ್ಯಕ ಮಾಹಿತಿಗಳನ್ನು ಪಡೆದುಕೊಳ್ಳಲು ವೇದಿಕೆಯ ಕಾರ್ಯಕರ್ತರು ಮಾಹಿತಿಹಕ್ಕು ಕಾಯಿದೆಯನ್ನು ಬಳಸುವ ಮೂಲಕ ಸಹಸ್ರಾರು ಪ್ರಕರಣಗಳನ್ನು ಸಮರ್ಪಕವಾಗಿ ಪರಿಹರಿಸಿದ್ದಾರೆ.

ಶಾಸಕರ ವಿದೇಶಯಾತ್ರೆಯ ಮಾಹಿತಿ 

ಗತವರ್ಷದಲ್ಲಿ ಸಾಕಷ್ಟು ವಾದವಿವಾದಗಳಿಗೆ ಕಾರಣವೆನಿಸಿದ್ದ ನಮ್ಮ ರಾಜ್ಯದ ಶಾಸಕರ ವಿದೇಶ ಯಾತ್ರೆಯ ಬಗ್ಗೆ ಒಂದಿಷ್ಟು ನೈಜ ಮಾಹಿತಿಗಳನ್ನು ಪಡೆದುಕೊಳ್ಳುವ ಸಲುವಾಗಿ, ವೇದಿಕೆಯ ಸಂಚಾಲಕರು ಮಾ. ಹ. ಕಾಯಿದೆಯನ್ವಯ ವಿಧಾನಸಭೆಯ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ೨೮-೧೨-೨೦೧ ರಂದು ಅರ್ಜಿಯನ್ನು ಸಲ್ಲಿಸಿದ್ದರು. ಇದರಲ್ಲಿ ಬಿ.ಜೆ.ಪಿ ಸರ್ಕಾರದ ಆದಲ್ತದ ಅವಧಿಯಲ್ಲಿ ವಿಧಾನಸಭೆ ಮತ್ತು ಪರಿಷತ್ತುಗಳ ವಿವಿಧ ಸದನ ಸಮಿತಿಗಳು ಅಧ್ಯಯನದ ಉದ್ದೇಶದಿಂದ ಕೈಗೊಂಡಿದ್ದ ವಿದೇಶ ಪ್ರವಾಸಗಳ ಸಂಖ್ಯೆ, ಇದಕ್ಕಾಗಿ ರಾಜ್ಯ ಸರ್ಕಾರ ವ್ಯಯಿಸಿರುವ ಒಟ್ಟು ಮೊತ್ತ, ಈ ಪ್ರವಾಸಗಳಲ್ಲಿ ಭಾಗವಹಿಸಿದ್ದ ಶಾಸಕರ ಸಂಖ್ಯೆ ಮತ್ತು ಭೇಟಿ ನೀಡಿದ್ದ ದೇಶಗಳ ಹೆಸರುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಗಳನ್ನು ಒದಗಿಸಲು ಕೋರಲಾಗಿತ್ತು. ಜೊತೆಗೆ ಈ ಸಮಿತಿಗಳ ಸದಸ್ಯರು ಸರ್ಕಾರಕ್ಕೆ ಸಲ್ಲಿಸಿದ್ದ ಅಧ್ಯಯನದ ವರದಿಗಳ ಯಥಾಪ್ರತಿಗಳು ಹಾಗೂ ಇವುಗಳ ಆಧಾರದ ಮೇಲೆ ರಾಜ್ಯದಲ್ಲಿ ಅನುಷ್ಠಾನಿಸಿರುವ ಯೋಜನೆಗಳ ವಿವರಗಳು ಹಾಗೂ ಇದರಿಂದ ಲಭಿಸಿರುವ ಪ್ರಯೋಜನ ಮತ್ತು ಪರಿಣಾಮಗಳ ಸಂಕ್ಷಿಪ್ತ ಮಾಹಿತಿಗಳನ್ನು ನೀಡುವಂತೆ ಕೇಳಲಾಗಿತ್ತು. 

 ಈ ಅರ್ಜಿಯನ್ನು ಸ್ವೀಕರಿಸಿದ್ದ ಸಾ. ಮಾ. ಅಧಿಕಾರಿಯು ಇದನ್ನು ವಿಧಾನಸಭೆ, ವಿಧಾನ ಪರಿಷತ್ತು ಮತ್ತು ವಿವಿಧ ಸದನ ಸಮಿತಿಗಳ ತತ್ಸಂಬಂಧಿತ ಅಧಿಕಾರಿಗಳಿಗೆ ರವಾನಿಸಿ ಅರ್ಜಿದಾರರಿಗೆ ಅಪೇಕ್ಷಿತ ಮಾಹಿತಿಗಳನ್ನು ನೇರವಾಗಿ ಕಳುಹಿಸಲು ಸೂಚಿಸಿದ್ದರು. ೦೭-೦೧-೨೦೧೪ ರಂದು ವಿಧಾನ ಸಭೆಯ ಅಧೀನ ಕಾರ್ಯದರ್ಶಿಯವರು ಬರೆದಿದ್ದ ನಾಲ್ಕು ಪತ್ರಗಳ ಯಥಾಪ್ರತಿಗಳನ್ನು ವೇದಿಕೆಯ ಸಂಚಾಲಕರಿಗೆ ಪ್ರತ್ಯೇಕ ಲಕೋಟೆಗಳಲ್ಲಿ ಹಾಕಿ ನೊಂದಾಯಿತ ಅಂಚೆಯ ಮೂಲಕ ಕಳುಹಿಸಲಾಗಿತ್ತು!. ಈ ನಾಲ್ಕೂ ಪತ್ರಗಳನ್ನು ಒಂದೇ ಲಕೋಟೆಯಲ್ಲಿ ಹಾಕಿ ಕಳುಹಿಸಿದ್ದಲ್ಲಿ ಇದರ ಅಂಚೆವೆಚ್ಚವು ಕೇವಲ ೨೫/- ರೂ.ಗಲಾಗುತ್ತಿದ್ದು, ಪ್ರತ್ಯೇಕ ಲಕೋಟೆಗಳಲ್ಲಿ ಕಳುಹಿಸಿದ್ದುದರಿಂದ ಅಂಚೆ ವೆಚ್ಚವು ೧೦೦/- ರೂ. ಗಳಾಗಿತ್ತು. ಸರಕಾರದ ಹಣವನ್ನು ಅಧಿಕಾರಿಗಳು ಪೋಲು ಮಾಡುವುದಕ್ಕೆ ಇದೊಂದು ಉತ್ತಮ ಉದಾಹರಣೆಯೂ ಹೌದು.

ಅಧೀನ ಕಾರ್ಯದರ್ಶಿಯವರ ಪತ್ರ ತಲುಪಿದಂತೆಯೇ ಸದನದ ೧೪ ಸಮಿತಿಗಳ ಅಧಿಕಾರಿಗಳ ಪತ್ರಗಳು ಅರ್ಜಿದಾರರಿಗೆ ಬರಲಾರಂಭಿಸಿದ್ದವು. ಇವುಗಳಲ್ಲಿ ಮೂರು ಸದನ ಸಮಿತಿಗಳ ಸದಸ್ಯರು ವಿದೇಶ ಪ್ರವಾಸಕ್ಕೆ ಹೋಗಿರಲಿಲ್ಲ ಎನ್ನುವ ಮಾಹಿತಿಯಲ್ಲದೇ, ಕೆಲ ಸಮಿತಿಗಳ ವಿದೇಶ ಪ್ರವಾಸದ ಮಾಹಿತಿ ಮತ್ತು ಅಧ್ಯಯನದ  ವರದಿಗಳನ್ನು ನೀಡಲು ಇಂತಿಷ್ಟು ಶುಲ್ಕವನ್ನು ನೀಡಬೇಕೆಂದು ಸೂಚಿಸಲಾಗಿತ್ತು. ಇನ್ನು ಕೆಲ ಸಮಿತಿಗಳ ಬಗ್ಗೆ ಒಂದೆರಡು ಪುಟಗಳ ಮಾಹಿತಿಯನ್ನು ಉಚಿತವಾಗಿ ಒದಗಿಸಲಾಗಿತ್ತು.ಆದರೆ ಕೆಲ ಸಮಿತಿಗಳ ವರದಿಗಳನ್ನು ನೀಡಲು ನಿಗದಿತ ಶುಲ್ಕದೊಂದಿಗೆ ಅಂಚೆ ವೆಚ್ಚವನ್ನು ಪಾವತಿಸಲು ಸೂಚಿಸಲಾಗಿತ್ತು.  

ಶುಲ್ಕ ಪಾವತಿಸಲು ಸೂಚಿಸಿದ್ದ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ೪೫ ಪುಟಗಳ ಮಾಹಿತಿಗೆ ೯೦/- ರೂ, ಸಾರ್ವಜನಿಕ ಉದ್ಯಮಗಳ ಸಮಿತಿಯ ೨೨ ಪುಟಗಳಿಗೆ ೪೪/- ರೂ, ಶಾಸಕರ ಭವನದ ವಸತಿ ಸೌಕರ್ಯಗಳ ಸಮಿತಿಯ ೧೦೩ ಪುಟಗಳಿಗೆ ೨೦೬/- ರೂ. ಶುಲ್ಕವನ್ನು ನೀಡುವಂತೆ ಸೂಚಿಸಲಾಗಿತ್ತು. ಈ ಮೂರೂ ಸಮಿತಿಗಳ ವರದಿಗಳನ್ನು ನೀಡಲು ಅಂಚೆವೆಚ್ಚವನ್ನು ಕೇಳಿರಲೇ ಇಲ್ಲ.ಕೇವಲ ವರದಿಗಳ ಪುಟಗಳ ಸಂಖ್ಯೆಗೆ ಅನುಗುಣವಾಗಿ ನಿಗದಿತ ಮೊತ್ತವನ್ನು ಪಾವತಿಸಿದ ಬಳಿಕ ಈ ಮಾಹಿತಿಗಳನ್ನು ಕಳುಹಿಸಲಾಯಿತು.

ಅಂಚೆವೆಚ್ಚ ಪಾವತಿಸಿ!

ಆದರೆ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ೧೭ ಪುಟಗಳ ಮಾಹಿತಿಗೆ ೩೪/- ರೂ. ಶುಲ್ಕದೊಂದಿಗೆ, ಇದೇ ಮೊದಲಬಾರಿಗೆ  ೩೦/- ರೂ. ಅಂಚೆ ವೆಚ್ಚವನ್ನು ಪಾವತಿಸಲು ನಿರ್ದೇಶಿಸಲಾಗಿತ್ತು. ಅದೇ ರೀತಿಯಲ್ಲಿ ಭರವಸೆಗಳ ಸಮಿತಿಯ ೩೫ ಪುಟಗಳಿಗೆ ೭೦/- ರೂ.  ಶುಲ್ಕದೊಂದಿಗೆ ಅಂಚೆವೆಚ್ಚ ೪೫/- ರೂ. , ವಿಧಾನಸಭೆಯ ಅರ್ಜಿಗಳ ಸಮಿತಿಯ ೭೫ ಪುಟಗಳಿಗೆ ೧೫೦/- ರೂ. ಶುಲ್ಕ ಹಾಗೂ ಅಂಚೆವೆಚ್ಚ ೧೩೦/- ರೂ. ಮತ್ತು ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿಯ ೨೦ ಪುಟಗಳಿಗೆ ೪೦/- ರೂ. ಶುಲ್ಕದೊಂದಿಗೆ ಅಂಚೆವೆಚ್ಚ ೫೦/- ರೂ. ಗಳನ್ನೂ ಪಾವತಿಸಲು ಸೂಚಿಸಲಾಗಿತ್ತು. ಮಾಹಿತಿಹಕ್ಕು ಕಾಯಿದೆಯನ್ವಯ ಅಂಚೆಯ ಮೂಲಕ ಮಾಹಿತಿಯನ್ನು ಕಳುಹಿಸಬೇಕಾದರೆ ಅದಕ್ಕೆ ತಗಲುವ ವೆಚ್ಚವನ್ನು ಶುಲ್ಕದೊಂದಿಗೆ ಸೇರಿಸಬಾರದೆನ್ನುವ ನಿಯಮವಿಲ್ಲ. ಮಹಾರಾಷ್ಟ್ರ ಸರ್ಕಾರ ಪ್ರಕಟಿಸಿರುವ ನಿಯಮದಲ್ಲಿ ಅಂಚೆಗೆ ತಗಲುವ ವೆಚ್ಚವನ್ನು ಅರ್ಜಿದಾರರಿಂದ ಪಡೆಯಬಹುದೆಂದು ಹೇಳಲಾಗಿದೆ. (ಸೆಕ್ಷನ್ ೪, ಮಾಹಿತಿಹಕ್ಕು ನಿಯಮ-೨೦೦೫).

ಕರ್ನಾಟಕ ರಾಜ್ಯ ಸರ್ಕಾರದ ನಿಯಮಗಳಲ್ಲಿ ಅಂಚೆವೆಚ್ಚವನ್ನು ಅರ್ಜಿದಾರರಿಂದ ಪಡೆಯುವ ಬಗ್ಗೆ ನಿಯಮಗಳಿವೆಯೇ ಎನ್ನುವ ಸ್ಪಷ್ಟ ಮಾಹಿತಿ ನಮಗೂ ತಿಳಿದಿಲ್ಲ. ಆದರೆ ಇದಕ್ಕೂ ಮುನ್ನ ಸರ್ಕಾರದಿಂದ ಪಡೆದುಕೊಂಡಿದ್ದ ನೂರಾರು ಮಾಹಿತಿಗಳನ್ನು ಒದಗಿಸುವಾಗ ಅಂಚೆವೆಚ್ಚವನ್ನು ಶುಲ್ಕದೊಂದಿಗೆ ಸೇರಿಸುವ ಪದ್ದತಿಯೇ ಇರಲಿಲ್ಲ. ಮಾತ್ರವಲ್ಲ. ಈ ಬಾರಿಯೂ ೧೪ ಸದನ ಸಮಿತಿಗಳಲ್ಲಿ ಕೇವಲ ನಾಲ್ಕು ಸಮಿತಿಗಳ ಅಧಿಕಾರಿಗಳು ಮಾತ್ರ ಅಂಚೆ ವೆಚ್ಚವನ್ನು ನೀಡುವಂತೆ ಸೂಚಿಸಿದ್ದು, ಇನ್ನುಳಿದ ಸಮಿತಿಗಳ ಅಧಿಕಾರಿಗಳು ಅಂಚೆವೆಚ್ಚ ಪಡೆದುಕೊಳ್ಳದೆ ಅಪೇಕ್ಷಿತ ಮಾಹಿತಿಗಳನ್ನು ನೀಡಿದ್ದರು. ಒಂದೇ ಸರ್ಕಾರದ ವಿಭಿನ್ನ ಇಲಾಖೆಗಳ ಅಧಿಕಾರಿಗಳ ಧೋರಣೆಗಳಲ್ಲಿ ಈ ರೀತಿಯ ವ್ಯತ್ಯಾಸ ಏಕೆಂದು ನಮಗೂ ಅರ್ಥವಾಗಿಲ್ಲ. ಪ್ರಾಯಶಃ ಮಾಹಿತಿಹಕ್ಕು ಕಾಯಿದೆಯನ್ನು ಬಳಸಿಕೊಂಡು ಅನೇಕ ಹಗರಣಗಳನ್ನು ಬಯಲು ಮಾಡಿರುವ ಪ್ರಜ್ಞಾವಂತ ನಾಗರಿಕರು ಅಥವಾ ಸ್ವಯಂಸೇವಾ ಸಂಘಟನೆಗಳ ಕಾರ್ಯಕರ್ತರನ್ನು "ಸತಾಯಿಸುವ " ವಿಧಾನ ಇದಾಗಿರಬಹುದೆನ್ನುವ ಸಂದೇಹ ನಮ್ಮಲ್ಲಿ ಮೂಡುತ್ತಿರುವುದು ಸುಳ್ಳೇನಲ್ಲ. 

ಕೊನೆಯ ಮಾತು 

ಬಿ.ಜೆ.ಪಿ ಸರ್ಕಾರ ಅಧಿಕಾರದ ಗದ್ದುಗೆಯನ್ನು ಏರುವ ಮುನ್ನ ವಿಧಾನಸಭೆ- ಪರಿಷತ್ತುಗಳ ವಿವಿಧ ಸದನ ಸಮಿತಿಗಳ ಸದಸ್ಯರು ತಮ್ಮ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಕೇವಲ ಒಂದುಬಾರಿ ವಿದೇಶ ಪ್ರವಾಸ ಮಾಡುವ ಅವಕಾಶವಿತ್ತು. ಆದರೆ ಬಿ.ಜೆ.ಪಿ ಸರ್ಕಾರವು ಸದನ ಸಮಿತಿಗಳ ಸದಸ್ಯರಿಗೆ ಎರಡುಬಾರಿ ವಿದೇಶ ಪ್ರವಾಸ ಮಾಡಲು ಅವಕಾಶವನ್ನು ಕಲ್ಪಿಸಿತ್ತು!. ಈ ಬಗ್ಗೆ ಸಾಕಷ್ಟು ವಾದವಿವಾದಗಳು ನಡೆದಿದ್ದುದರಿಂದ, ಇದನ್ನು ಅಧ್ಯಯನ ಪ್ರವಾಸ ಎಂದು ನಾಮಕರಣ ಮಾಡಲಾಗಿತ್ತು. ಹಾಗೂ ಪ್ರವಾಸದಿಂದ ಮರಳಿದ ಬಳಿಕ ಇವೆಲ್ಲ ಸಮಿತಿಗಳು ತಮ್ಮ "ಅಧ್ಯಯನ" ದ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿತ್ತು. 

ಆದರೆ ನಮಗೆ ಲಭಿಸಿದ್ದ ಮಾಹಿತಿಯಂತೆ ಅನೇಕ ಸಮಿತಿಗಳು ಅಧ್ಯಯನದ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಏಕೆಂದರೆ ಇಂತಹ ವರದಿಗಳನ್ನೇ ಸಮಿತಿಗಳು ಸಿದ್ಧಪಡಿಸಿರಲಿಲ್ಲ!.

ಅದೇನೇ ಇರಲಿ,ಮಾಹಿತಿಹಕ್ಕು ಕಾಯಿದೆಯನ್ವಯ ಲಭ್ಯ ಮಾಹಿತಿಯಂತೆ, ಬಿ.ಜೆ.ಪಿ ಸರ್ಕಾರದ ಐದು ವರ್ಷಗಳ ಆಡಳಿತದ ಅವಧಿಯಲ್ಲಿ ಸದನ ಸಮಿತಿಗಳ ವಿದೇಶ ಪ್ರವಾಸಕ್ಕಾಗಿ ೭,೦೩,೪೮,೫೮೫/- ರೂ.ಗಳನ್ನುವ್ಯಯಿಸಲಾಗಿದೆ. ಈ ಸಮಿತಿಗಳ ಸದಸ್ಯರೊಂದಿಗೆ ಪ್ರವಾಸದಲ್ಲಿ ಭಾಗವಹಿಸಿದ್ದ ಸರ್ಕಾರಿ ಅಧಿಕಾರಿಗಳ ಪ್ರವಾಸದ ವೆಚ್ಚವು ೧,೯೯,೮೨,೬೫೮/- ರೂ. ಗಳಾಗಿವೆ. ಅರ್ಥಾತ್ ಶಾಸಕರು ಮತ್ತು ಅಧಿಕಾರಿಗಳ ವಿದೇಶ ಪ್ರವಾಸಕ್ಕಾಗಿ ಸರ್ಕಾರವು ಸುಮಾರು ೯ ಕೋಟಿ ರೂ. ಗಳನ್ನು ವ್ಯಯಿಸಿದೆ!. ಇವೆಲ್ಲಕ್ಕೂ ಮಿಗಿಲಾಗಿ ಈ ಸಮಿತಿಗಳು ನೀಡಿದ್ದ ಅಧ್ಯಯನದ ವರದಿಗಳ ಆಧಾರದ ಮೇಲೆ ರಾಜ್ಯದಲ್ಲಿ ಯಾವುದೇ ಯೋಜನೆಗಳನ್ನು ಇಂದಿನ ತನಕ ಅನುಷ್ಥಾನಗೊಳಿಸಿಲ್ಲ!.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು. 




No comments:

Post a Comment