Tuesday, February 25, 2014

MINISTERS BUNGALOW'S RENOVATION COSTS 7 CRORES.





     ಆನೆ ನಡೆದಿದ್ದೇ ದಾರಿ: ರಾಜಕಾರಣಿಗಳು ಮಾಡಿದ್ದೇ ಸರಿ!

ಪ್ರತೀಬಾರಿ ರಾಜ್ಯದ ವಿಧಾನಸಭಾ ಚುನಾವಣೆಗಳು ನಡೆದು ನೂತನ ಸರಕಾರ ಅಸ್ತಿತ್ವಕ್ಕೆ ಬಂದೊಡನೆ, ವಿಧಾನಸೌಧದಲ್ಲಿನ ಮಂತ್ರಿವರ್ಯರ ಕೊಠಡಿಗಳ ಪುನರ್ನವೀಕರಣದ ಕಾಮಗಾರಿಗಳನ್ನು ನಡೆಸಲಾಗುತ್ತದೆ. ಅದೇ ರೀತಿಯಲ್ಲಿ ಈ ಮಂತ್ರಿ ಮಹೋದಯರಿಗೆ ಸರಕಾರ ನೀಡುವ ವಿಲಾಸೀ ವಸತಿಗೃಹಗಳ ನವೀಕರಣದ ಕಾಮಗಾರಿಗಳೂ ನಡೆಯುತ್ತವೆ. ಇದಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಸರಕಾರದ ಬೊಕ್ಕಸದಿಂದ ವ್ಯಯಿಸಲಾಗುತ್ತಿದೆ. ವಿಶೇಷವೆಂದರೆ ಇಂತಹ ಕಾಮಗಾರಿಗಳಿಗೆ ಇಂತಿಷ್ಟೇ ಹಣವನ್ನು ವ್ಯಯಿಸಬೇಕೆನ್ನುವ ನಿಯಮಗಳಿಲ್ಲದ ಕಾರಣದಿಂದಾಗಿ, ಪ್ರತಿಯೊಬ್ಬ ಮಂತ್ರಿಯು ಬಯಸಿದಂತೆ ನವೀಕರಣದ ಕಾಮಗಾರಿಗಳನ್ನು ನಡೆಸಲಾಗುತ್ತದೆ. 

ಗತವರ್ಷದಲ್ಲಿ ಬಹುಮತವನ್ನು ಗಳಿಸಿದ್ದ ಕಾಂಗ್ರೆಸ್ ಸರಕಾರ ಅಧಿಕಾರದ ಗದ್ದುಗೆಯನ್ನು ಏರಿದ ಬಳಿಕ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರಿಗೆ ನೀಡಿದ್ದ ಸರಕಾರಿ ನಿವಾಸಗಳ ಪುನರ್ನವೀಕರಣ ಮತ್ತು ನೂತನ ಪೀಠ-ಉಪಕರಣಗಳನ್ನು ಖರೀದಿಸಲು ಬರೋಬರಿ ೭.೧೭ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ!. 
ಇದರಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರಕಾರಿ ನಿವಾಸಗಳ ಪುನರ್ನವೀಕರಣಕ್ಕಾಗಿಯೇ ೧.೯೨ ಕೋಟಿ ರೂ. ಗಳನ್ನೂ ವ್ಯಯಿಸಲಾಗಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿರುವ "ಕಾವೇರಿ" ಯ ನವೀಕರಣಕ್ಕೆ ೧.೭೨ ಕೋಟಿ ರೂ., ಹಾಗೂ ಮೊದಲು ವಾಸ್ತವ್ಯವಿದ್ದ " ಕುಮಾರ ಕೃಪಾ- ೧ ಸೌತ್" ನಿವಾಸದ ನವೀಕರಣಕ್ಕೆ ೯.೯ ಲಕ್ಷ ರೂ. ಮತ್ತು ಗೃಹಕಚೇರಿ "ಕೃಷ್ಣಾ" ದ ನವೀಕರಣಕ್ಕಾಗಿ ೯.೮ ಲಕ್ಷ ರೂ. ಗಳನ್ನು ಸರಕಾರದ ಬೊಕ್ಕಸದಿಂದ ಖರ್ಚುಮಾಡಲಾಗಿದೆ.

ಕರ್ನಾಟಕ ರಾಜ್ಯ ಸರಕಾರವು ಜೂನ್ ೨೦೧೩ ರಿಂದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಸದಸ್ಯರ ಅಧಿಕೃತ ನಿವಾಸಗಳು ಮತ್ತು ಕಚೇರಿಗಳ ನವೀಕರಣಕ್ಕಾಗಿ ಮತ್ತು ಪೀಠ - ಉಪಕರಣಗಳಿಗಾಗಿ ಒಟ್ಟು ೭. ೧೭  ಕೋಟಿ ರೂ. ಗಳನ್ನು ವ್ಯಯಿಸಿದೆ. ಇದಲ್ಲದೆ ೪೦ ಲಕ್ಷ ರೂ. ಗಳನ್ನು ಸಚಿವರ ನಿವಾಸಗಳಿಗೆ ಪೀಠ - ಉಪಕರಣಗಳನ್ನು ಖರೀದಿಸಲು ಬಳಸಲಾಗಿದೆ.ಆದರೆ ಪುನರ್ನವೀಕರಣದ ಕಾಮಗಾರಿಗಳನ್ನು ನಡೆಸಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲು ಕಾರಣವೇನೆಂದು ಮಾತ್ರ ತಿಳಿಸಿಲ್ಲ!.

ಸಚಿವರ ನಿವಾಸಗಳಲ್ಲಿ ಆರ್. ವಿ. ದೇಶಪಾಂಡೆ- ೩೧.೨ ಲಕ್ಷ, ರಮಾನಾಥ ರೈ - ೧೦.೮೫, ಕೆ. ಎಚ್. ಪಾಟೀಲ್ - ೩೮.೪, ಕಮರುಲ್ ಇಸ್ಲಾಂ - ೨೧, ಮಹಾದೇವ ಪ್ರಸಾದ್ - ೯.೬, ಸತೀಶ್ ಜಾರಕಿಹೊಳಿ - ೯.೫, ಎಚ್. ಆಂಜನೇಯ- ೨೪.೩, ಶರಣಪ್ಪ ಪಾಟೀಲ್ - ೧೫.೯, ವಿನಯ ಕುಮಾರ್ ಸೊರಕೆ - ೨೬.೮, ಯು. ಟಿ. ಖಾದರ್ - ೧೮, ಕಿಮ್ಮನೆ ರತ್ನಾಕರ್ - ೧೩,೩, ವಿ. ಶ್ರೀನಿವಾಸ ಪ್ರಸಾದ್ - ೯ ಮತ್ತು ಪ್ರಕಾಶ್ ಹುಕ್ಕೇರಿ - ೯.೫ ಲಕ್ಷ ರೂ.ಗಳನ್ನು ತಮ್ಮ ನಿವಾಸಗಳ ನವೀಕರಣಕ್ಕಾಗಿ ವ್ಯಯಿಸಿದ್ದಾರೆ!. 

 
ಇನ್ನು, ವಿಧಾನಸೌಧ ಮತ್ತು ವಿಕಾಸ ಸೌಧಗಳಲ್ಲಿನ ಸಚಿವರುಗಳ ಕಛೇರಿಗಳ ನವೀಕರಣಕ್ಕಾಗಿ ೨,೨೩ ಕೋಟಿ ರೂ. ಗಳನ್ನು ಖರ್ಚುಮಾಡಿದ್ದು, ಇದರಲ್ಲಿ ಮಹಾದೇವಪ್ಪನವರ ಕಚೇರಿಗೆ ೧೩.೩೯ ಲಕ್ಷ ರೂ., ಎಂ. ಬಿ. ಪಾಟೀಲರ ಕಚೇರಿಗೆ ೧೨,೧೪ ಲಕ್ಷ, ಟಿ. ಬಿ. ಜಯಚಂದ್ರರ ಕಚೇರಿಗೆ ೧೧,೫ ಲಕ್ಷ, ವೆಚ್ಚ ಮಾಡಲಾಗಿದೆ!.



ಕಳೆದಬಾರಿ ಬಿ.ಜೆ,ಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ರೀತಿಯಲ್ಲಿ ಸಚಿವರ ಸರಕಾರಿ ನಿವಾಸಗಳ ಪುನರ್ನವೀಕರಣಕ್ಕಾಗಿ ಸರಕಾರದ ಬೊಕ್ಕಸದಿಂದ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿತ್ತು. ಈ ಬಗ್ಗೆ ವಿಧಾನಸಭೆಯಲ್ಲಿ ಖರ್ಚುವೆಚ್ಚಗಳ ಮಾಹಿತಿಯನ್ನು ನೀಡುತ್ತಿದ್ದ ಲೋಕೋಪಯೋಗಿ ಸಚಿವರ ಹೇಳಿಕೆಯನ್ನು ಕೇಳಿದ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಅಚ್ಚರಿಯಾಗಿತ್ತು. ಏಕೆಂದರೆ ಅವರ ಸರಕಾರಿ ನಿವಾಸಕ್ಕೆ ಕೇವಲ ಸುಣ್ಣ ಬಣ್ಣಗಳನ್ನು ಮಾತ್ರ ಬಳಿಸಿದ್ದರೂ, ಇದಕ್ಕಾಗಿ ಸುಮಾರು ೩೦ ಲಕ್ಷಕ್ಕೂ ಅಧಿಕ ಮೊತ್ತವನ್ನು ವ್ಯಯಿಸಿರುವುದಾಗಿ ಲೋಕೋಪಯೋಗಿ ಇಲಾಖೆಯು ಮಾಹಿತಿ ನೀಡಿತ್ತು!. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವೆ ಶೋಭಾರವರು, ಇಷ್ಟೊಂದು ಹಣವನ್ನು ತನ್ನ ಮನೆಗೆ ಯಾವ ಕಾಮಗಾರಿಗಳ ಸಲುವಾಗಿ ವ್ಯಯಿಸಲಾಗಿತ್ತು?, ಎಂದು ಸಂಬಂಧಿತ ಸಚಿವರನ್ನು ಪ್ರಶ್ನಿಸಿದ್ದರು. ವಿಶೇಷವೆಂದರೆ ಸಚಿವೆಯ ಪ್ರಶ್ನೆಗೆ ಉತ್ತರ ದೊರೆಯದಿರುವುದರೊಂದಿಗೆ, ಈ ಬಗ್ಗೆ ಸತ್ಯವನ್ನು ಅರಿಯಲು ಯಾವುದೇ ತನಿಖೆಯೂ ನಡೆಸಲಾಗಿರಲಿಲ್ಲ!. ಐದು ವರ್ಷಗಳ ಹಿಂದೆ ನಡೆದಿದ್ದ ಈ ಘಟನೆಯ ಪುನರಾವರ್ತನೆ ಈ ಬಾರಿಯೂ ಆಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ತಮ್ಮ ಮನೆಯ ನವೀಕರಣದ ಕಾಮಗಾರಿಗಳಿಗೆ ಎಷ್ಟು ವೆಚ್ಚವಾಗಬಹುದೆನ್ನುವ ವಿಚಾರ ನಮ್ಮ ಸಚಿವರಿಗೆ ತಿಳಿದಿರುವ ಸಾಧ್ಯತೆಗಳೇ ಇಲ್ಲ!.


ರಾಜ್ಯದ ಸಚಿವ ಸಂಪುಟದಲ್ಲಿದ್ದರೂ, ಡಿ.ಕೆ.ಶಿವಕುಮಾರ್, ಉಮಾಶ್ರೀ, ರೋಶನ್ ಬೇಗ್ ಮತ್ತು ರಾಮಲಿಂಗ ರೆಡ್ಡಿಯವರು  ತಮ್ಮ ಸ್ವಂತ ಮನೆಗಳಲ್ಲೇ ವಾಸಮಾಡುತ್ತಿದ್ದಾರೆ. ವಿಶೇಷವೆಂದರೆ ಈ ನಾಲ್ವರು ಸಚಿವರಿಗೂ ಮನೆ ಬಾಡಿಗೆಯೆಂದು ಮಾಸಿಕ ೫೦,೦೦೦ ರೂ. ಗಳನ್ನು ಸರಕಾರ ಪಾವತಿಸುತ್ತಿದೆ!. ಇನ್ನು ಸಚಿವ ಅಭಯಚಂದ್ರ ಮತ್ತು ಬಾಬು ರಾವ್ ಚಿಂಚಸನೂರ್ ಶಾಸಕರ ಭವನದಲ್ಲೇ ವಾಸ್ತವ್ಯ ಹೂಡಿದ್ದಾರೆ. 

ಬಾಯಿ ಬಿಟ್ಟರೆ ಅಲ್ಪ ಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಏಳಿಗೆಯ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ನಮ್ಮ ಸಚಿವರು, ಸರಕಾರದ ಬೊಕ್ಕಸದ ಹಣವನ್ನು ಯಾವ ರೀತಿಯಲ್ಲಿ ತಮ್ಮ ಸುಖ ವೈಭೋಗಗಳಿಗಾಗಿ ವ್ಯಯಿಸುತ್ತಾರೆ ಎನ್ನುವುದನ್ನು ಅರಿತಾಗ ನಿಜಕ್ಕೂ ನಂಬಲಸಾಧ್ಯವೆನಿಸುತ್ತದೆ. ಆದರೆ ಲೋಕೋಪಯೋಗಿ ಇಲಾಖೆಯ ಸಚಿವ ಮಹಾದೇವಪ್ಪನವರು ದಿ. ೨೧-೦೨-೨೦೧೪ ರಂದು ಸದನದಲ್ಲಿ ನೀಡಿದ್ದ ಈ ಮಾಹಿತಿಯು ಶತ ಪ್ರತಿಶತ ಅಧಿಕೃತವಾಗಿದೆ!.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 

 

No comments:

Post a Comment