Monday, February 3, 2014

Chikungunya





                             ಚಿಂತಾಜನಕ ಚಿಕುನ್ ಗುನ್ಯಾ 

ಅಪರೂಪದ ಆಲ್ಫಾ ವೈರಸ್ ಗಳಿಂದ ಉದ್ಭವಿಸಿ, ಸಾಂಕ್ರಾಮಿಕವಾಗಿ ಹರಡಬಲ್ಲ ಚಿಕುನ್ ಗುನ್ಯಾ ಕಾಯಿಲೆಯ ವಿಚಿತ್ರ ನಾಮಧೇಯದಿಂದಾಗಿ ಜನಸಾಮಾನ್ಯರು ಇದನ್ನು "ಕುಕ್ಕುಟ ಜ್ವರ" ದ ಮತ್ತೊಂದು ಅವತಾರವೆಂದು ಭಾವಿಸಿದ್ದರು. ನಾಲ್ಕಾರು ವಾರಗಳಿಂದ ಹಿಡಿದು ನಾಲ್ಕಾರು ತಿಂಗಳುಗಳ ಕಾಲ ಪೀದಿಸಬಲ್ಲ ಈ ವ್ಯಾಧಿಯ ಉಪಟಳವನ್ನು ಕ್ಷಿಪ್ರಗತಿಯಲ್ಲಿ ಗುಣಪಡಿಸಬಲ್ಲ ಔಷದಗಳು ಇಂದಿಗೂ ಲಭ್ಯವಿಲ್ಲ. ಈ ಬಗ್ಗೆ ಕಿಂಚಿತ್ ಮಾಹಿತಿ ಇಲ್ಲಿದೆ.
---------              ------------               -------------                 -----------               --------------            

 ಅರುವತ್ತು ವರ್ಷ ವಯಸ್ಸಿನ ಅನಂತಮೂರ್ತಿಯವರಿಗೆ ಅಪರಾತ್ರಿಯಲ್ಲಿ ಆಕಸ್ಮಿಕವಾಗಿ ತೀವ್ರಜ್ವರ, ಚಳಿ ಮತ್ತು ನಡುಕಗಳು ಆರಂಭವಾಗಿದ್ದವು. ಎಂದಿನಂತೆ ಸಜೆಯ ವಾಕಿಂಗ್ ಮುಗಿಸಿ ಮನೆಗೆ ಮರಳಿದ ಬಳಿಕ ರಾತ್ರಿಯ ಊಟ ಮುಗಿಸುವ ತನಕ ಆರಾಮವಾಗಿದ್ದ ಮೂರ್ತಿಯವರಿಗೆ, ಜ್ವರ ಬಾಧಿಸಬಹುದಾಗಿದ್ದ ಯಾವುದೇ ಪೂರ್ವಸೂಚನೆಗಳೇ ಕಂಡುಬಂದಿರಲಿಲ್ಲ. ಆದರೆ ನಡುರಾತ್ರಿಯಲ್ಲಿ ಪ್ರತ್ಯಕ್ಶವಾಗಿದ್ದ ತೀವ್ರ ಜ್ವರವು, ನಾಲ್ಕಾರು ಕಂಬಳಿಗಳನ್ನು ಹೊದ್ದರೂ ಕಡಿಮೆಯಾಗದ ಕಾರಣದಿಂದಾಗಿ ಸೇವಿಸಿದ್ದ ಪಾರಾಸಿಟಮಾಲ್ ಮಾತ್ರೆಯ ಪರಿಣಾಮದಿಂದ ತುಸು ಕಡಿಮೆಯಾಗಿತ್ತು. 

ಮರುದಿನ ಬೆಳಿಗ್ಗೆ ಎಚ್ಚರವಾದೊಡನೆ ಬಚ್ಚಲು ಮನೆಗೆ ಹೋಗಲೆಂದು ಎದ್ದ ಮೂರ್ತಿಯವರಿಗೆ, ಎರಡೂ ಕಾಲುಗಳ ಮಂಡಿ ಮತ್ತು ಪಾದಗಳಲ್ಲಿ  ಸಹಿಸಲು ಅಸಾಧ್ಯವಾದ ನೋವು ಕಾಣಿಸಿಕೊಂಡಿತ್ತು. ನೋವಿನ ತೀವ್ರತೆಯನ್ನು ತಡೆಯಲಾರದೇ ಹಾಸಿಗೆಯ ಮೇಲೆ ಕುಳಿತಿದ್ದ ಪತಿಯನ್ನು ಕಂಡ ಮಾಲತಿಗೆ, ವಿಷಯವನ್ನರಿತು ಗಾಬರಿಯಾಗಿತ್ತು. ಮಾಲತಿಯ ಕರೆಗೆ ಓಗೊಟ್ಟು ಮನೆಗೆ ಧಾವಿಸಿದ ಕುಟುಂಬ ವೈದ್ಯರು ಮೂರ್ತಿಯವರನ್ನು ಪರೀಕ್ಷಿಸಿದ ಬಳಿಕ ಇದು ಚಿಕುನ್ ಗುನ್ಯಾ ಕಾಯಿಲೆಯೆಂದು ಸಂದೇಹಿಸಿದ್ದರು. 

ವೈದ್ಯರ ಹೇಳಿಕೆಯಂತೆ ಸೊಳ್ಳೆಗಳ ಕಡಿತದಿಂದ ಹರಡುವ ಚಿಕುನ್ ಗುನ್ಯಾ ವ್ಯಾಧಿಗೆ ಆಲ್ಫಾ ವೈರಸ್ ಗಳು ಕಾರಣವಾಗಿದ್ದು, ಮಧ್ಯವಯಸ್ಸನ್ನು ದಾಟಿದ ವ್ಯಕ್ತಿಗಳಲ್ಲಿ ಇದರ ಹಾವಳಿಯು ಸುಮಾರು ಮೂರು ತಿಂಗಳುಗಳ ಕಾಲ ಬಾಧಿಸುವ ಸಾಧ್ಯತೆಗಳಿತ್ತು. ಈ ವ್ಯಾಧಿಯನ್ನು ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಪತ್ತೆ ಹಚ್ಚದೇ ಇರುವುದರಿಂದ , ರೋಗಿಯಲ್ಲಿ ಕಂಡುಬರುವ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಬೇಕಾಗಿತ್ತು. 

ಸಂಪೂರ್ಣ ವಿಶ್ರಾಂತಿಯೊಂದಿಗೆ ವೈದ್ಯರು ನೀಡಿದ್ದ ಔಷದಗಳನ್ನು ಕ್ರಮಬದ್ಧವಾಗಿ ಸೇವಿಸಿದ ಮೂರ್ತಿಯವರ ಜ್ವರವು ನಾಲ್ಕು ದಿನಗಳಲ್ಲೇ ಮಾಯವಾಗಿದ್ದರೂ, ಮಂದಿ ಮತ್ತು ಪಾದಗಲ್ಲಿನ ನೋವು ಮತ್ತು ಬಾವುಗಳು ಸಂಪೂರ್ಣವಾಗಿ ಶಮನಗೊಳ್ಳಲು ಮೂರು ತಿಂಗಳುಗಳೇ ಕಳೆದಿದ್ದವು!. 

ಚಿಕುನ್ ಗುನ್ಯಾದ ಚರಿತ್ರೆ 

೧೯೫ ರಲ್ಲಿ ಪೂರ್ವ ಆಫ್ರಿಕಾದಲ್ಲಿ ಸಾಂಕ್ರಾಮಿಕವಾಗಿ ಕಂಡುಬಂದಿದ್ದ "ಡೆಂಗೆ ಜ್ವರ' ದಂತಹ ವ್ಯಾಧಿಪೀಡಿತರಲ್ಲಿ ಪತ್ತೆಯಾಗಿದ್ದ " ಚಿಕುನ್ ಗುನ್ಯಾ ವೈರಸ್" ಗಳು, ಬಳಿಕ ದಕ್ಷಿಣ ಭಾರತ ಮತ್ತು ದಕ್ಷಿಣ ಪೂರ್ವ ಆಫ್ರಿಕಾಗಳಲ್ಲಿ ಡೆಂಗೆ ಮತ್ತು ರಕ್ತಸ್ರಾವಕ ಜ್ವರಗಳು ಸಾಂಕ್ರಾಮಿಕವಾಗಿ ಕಾಣಿಸಿಕೊಂಡಾಗ ಮತ್ತೊಮ್ಮೆ ಪ್ರತ್ಯಕ್ಷವಾಗಿದ್ದವು. ಎಡೆಸ್ ಈಜಿಪ್ತೈ ಮತ್ತು ಎಡೆಸ್ ಆಫ್ರಿಕಾನ್ಸ್ ಎನ್ನುವ ಎರಡು ವಿಧದ ಸೊಳ್ಳೆಗಳು ಈ ವೈರಸ್ ಗಳ ಹರಡುವಿಕೆಗೆ ಕಾರಣವಾಗಿವೆ. 

೨ ವರ್ಷಗಳ ಬಳಿಕ ೨೦೦೫ ರಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದ ಚಿಕುನ್ ಗುನ್ಯಾ ವೈರಸ್ ಗಳ ಹಾವಳಿಯೂ ವೈದ್ಯಕೀಯ ಕ್ಷೇತ್ರವನ್ನು ತಲ್ಲಣಗೊಳಿಸಿತ್ತು. ಏಕೆಂದರೆ ಈ ವೈರಸ್ ಗಳ ತಳಿಗಳು ಆಫ್ರಿಕನ್ ಮೂಲದವಾಗಿದ್ದು, ೨೦೦೦ ನೆ ಇಸವಿಗೆ ಮುನ್ನ ಭಾರತದಲ್ಲಿ ಪತ್ತೆಯಾಗಿರಲಿಲ್ಲ. ಇಷ್ಟು ಮಾತ್ರವಲ್ಲ,ಈ ವೈರಸ್ ಗಳ ತಳಿಗಳು ೨೦೦೬ ಮತ್ತು ೨೦೦೭ ರ ನಡುವೆ ಪರಿವರ್ತನೆಗೊಂಡಿದ್ದ ಪುರಾವೆಗಳು ವೈದ್ಯಕೀಯ ವಿಜ್ಞಾನಿಗಳಿಗೆ ಲಭಿಸಿದ್ದವು. 

೧೯೭೩ ರಲ್ಲಿ ನಮ್ಮ ಉಪಖಂಡದಲ್ಲಿ ಉದ್ಭವಿಸಿದ್ದ ಚಿಕುನ್ ಗುನ್ಯಾ ವ್ಯಾಧಿಯು ಮಹಾರಾಷ್ಟ್ರದ ಬಾರ್ಸಿಯಲ್ಲಿ ವ್ಯಾಪಕವಾಗಿ ಕಂಡುಬಂದಿದ್ದು, ೨೦೦೫ ರಲ್ಲಿ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳಗಳಲ್ಲಿ ಉದ್ಭವಿಸಿ ಸಾಂಕ್ರಾಮಿಕವಾಗಿ ಹರಡಿತ್ತು. ತದನಂತರ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳಗಳಿಗೆ ಲಗ್ಗೆ ಹಾಕಿದ ಈ ವೈರಸ್ ಗಳು, ಆಕಸ್ಮಿಕವಾಗಿ ಪ್ರತ್ಯಕ್ಷವಾಗಲು ಕಾರಣವೇನೆಂದು ತಿಳಿದುಬಂದಿಲ್ಲ. 

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ೨೦೦೬ ರಿಂದ ೨೦೦೭ ರ ಅವಧಿಯಲ್ಲಿ ಭಾರತದಲ್ಲಿ ೧.೪ ಮಿಲಿಯನ್ ಚಿಕುನ್ ಗುನ್ಯಾ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವೈರಸ್ ಗಳ "ವಂಶವಾಹಿನಿಗಳ ನಕ್ಷೆ" ಯನ್ನು ಅಧ್ಯಯನ ಮಾಡಿದಾಗ, ಇದಕ್ಕೂ ಮುನ್ನ ಭಾರತದಲ್ಲಿ ಪತ್ತೆಯಾಗಿದ್ದ ಏಷಿಯನ್ ತಳಿಯ ವೈರಸ್ ಗಳಿಗೆ ಬದಲಾಗಿ "ಈಸ್ಟ್ ಸೆಂಟ್ರಲ್ ಸೌತ್ ಆಫ್ರಿಕನ್" ತಳಿಗಳೇ ಇದಕ್ಕೆ ಕಾರಣವೆಂದು ತಿಳಿದುಬಂದಿದೆ. 

ಪುದುಚೇರಿ, ತಮಿಳುನಾಡು ಮತ್ತು ಕೇರಳದ ವೈದ್ಯಕೀಯ ಸಂಶೋಧನಾ ಸಂಸ್ಥೆಗಳ ತಂಡವೊಂದು ೧೩ ಶಂಕಿತ ಚಿಕುನ್ ಗುನ್ಯಾ ಪೀಡಿತ ರೋಗಿಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಪರಿಶೀಲನೆ ಮತ್ತು ಅಧ್ಯಯನಗಳನ್ನು ನಡೆಸಿತ್ತು. ಈ ಸಂದರ್ಭದಲ್ಲಿ ೯ ರೋಗಿಗಳ ರಕ್ತದಲ್ಲಿ ಚಿಕುನ್ ಗುನ್ಯಾ ವೈರಸ್ ಗಳು ಪತ್ತೆಯಾಗಿದ್ದು, ಇವುಗಳಲ್ಲಿ ೮ ಆಫ್ರಿಕನ್ ಮತ್ತು ಕೇವಲ ೧ ಏಷಿಯನ್ ತಳಿ ಪತ್ತೆಯಾಗಿದ್ದವು. ಇದಕ್ಕೂ ಮಿಗಿಲಾಗಿ ಸ್ಥಳೀಯ ಪರಿಸರ- ವಾತಾವರಣಗಳಿಗೆಬೇಕಾದಂತೆ ಪರಿವರ್ತನೆಗೊಳ್ಳುವ ಈ ವೈರಸ್ ತಳಿಗಳು, ಇದೀಗ ಎಡೆಸ್ ಈಜಿಪ್ತೈ ಸೊಳ್ಳೆಗಳಲ್ಲದೇ ಇತರ ಸೊಳ್ಳೆಗಳ ಮೂಲಕವೂ ಹರಡುವ ಸಾಮರ್ಥ್ಯವನ್ನು ಗಳಿಸಿಕೊಂಡಿವೆ ಎಂದು ತಿಳಿದುಬಂದಿದೆ. ಪ್ರಸ್ತುತ ವ್ಯಾಪಕವಾಗಿ ಹರಡುತ್ತಿರುವ ಚಿಕುನ್ ಗುನ್ಯಾ ವೈರಸ್ ಗಳ ಹಾವಳಿಯು, ಹವಾಮಾನದ ವ್ಯತ್ಯಯದಿಂದಾಗಿ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಲಿದೆ. 

ಲಕ್ಷಣಗಳು 

ತೀವ್ರ ಜ್ವರ, ತಲೆನೋವು, ವಿಪರೀತ ಚಳಿ- ನಡುಕ, ಅಸ್ತಿ ಸಂದಿಗಳಲ್ಲಿ ನೋವು- ಬಾವು, ಮಾಮ್ಸಪೇಶಿ- ಸ್ನಾಯುಗಳಲ್ಲಿ ಸೆಳೆತ, ಬಾಯಿ ಹುಣ್ಣುಗಳು ಮತ್ತು ಶರೀರದ ಕೆಲ ಭಾಗಗಳಲ್ಲಿ ಬೆವರುಸಾಲೆಯಂತಹ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳುವುಡು, ವಿಪರೀತ ಆಯಾಸ ಮತ್ತು ಹಸಿವಿಲ್ಲದಿರುವುದೇ ಮುಂತಾದ ಲಕ್ಷಣಗಳು ಈ ವ್ಯಾಧಿಪೀಡಿತರಲ್ಲಿ ಕಂಡುಬರುತ್ತವೆ. ಕೆಲ ರೋಗಿಗಳಲ್ಲಿ ಅಂಗೈ ಮತ್ತು ಅಂಗಾಲುಗಳ ಚರ್ಮವು ಶುಷ್ಕವಾಗಿ ಎದ್ದುಬರುವುದು ಅಪರೂಪವೇನಲ್ಲ. ಮಧ್ಯ ವಯಸ್ಸನ್ನು ನ್ದಾತಿದ ರೋಗಿಗಳಲ್ಲಿ ಕೈಕಾಲುಗಳ ಅಸ್ತಿ- ಮಾಂಸಪೇಶಿಗಳಲ್ಲಿನ ನೋವಿನ ತೀವ್ರತೆಯಿಂದಾಗಿ, ರೋಗಿಯು ಕುಳಿತುಕೊಳ್ಳಲು ಅಥವಾ ಎದ್ದೇಳಲು ಸಾಧ್ಯವಿಲ್ಲದೇ ಅಸಹಾಯಕರಾಗುವುದು ಮತ್ತು ವ್ಯಾಧಿಮುಕ್ತರಾದ ಬಳಿಕವೂ ಸುದೀರ್ಘ ಕಾಲ ಇಂತಹ ನೋವಿನಿಂದ ಬಳಲುವುದು ಈ ವ್ಯಾಧಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. 

ಚಿಕಿತ್ಸೆ 

ಚಿಕುನ್ ಗುನ್ಯಾ ವ್ಯಾಧ್ಯು ಸಾಮಾನ್ಯವಾಗಿ ಮೂರು ವಾರಗಳಿಂದ ಹಿಡಿದು ಮೂರು ತಿಂಗಳುಗಳ ಕಾಲ ಬಾಧಿಸಬಲ್ಲದು. ರೋಗಿಗಳನ್ನು ಕಾಡುವ ಚಳಿ- ಜ್ವರಗಳು ನಾಲ್ಕಾರು ದಿನಗಳಲ್ಲೇ ಕಡಿಮೆಯಾಗುವುದಾದರೂ, ಅಸ್ತಿಸಂದಿಗಳ ನೋವು ಮತ್ತು ಬಾವುಗಳು ಕೆಲವಾರು ತಿಂಗಳುಗಳ ಕಾಲ ಪೀಡಿಸುತ್ತವೆ. ಸ್ವಾಭಾವಿಕ ಚಲನವಲನಗಳಿಗೆ ಅಡ್ಡಿಪಡಿಸುವ ಈ ತೀವ್ರ ನೋವು, ಔಷದಗಳನ್ನು ಸೇವಿಸುತ್ತಿರುವಾಗ ಕಡಿಮೆಯಾಗುವುದಾದರೂ ಔಷದ ಸೇವನೆಯನ್ನು ನಿಲ್ಲಿಸಿದೊಡನೆ ಮತ್ತೆ ಮರುಕಳಿಸುವುದು. ಪ್ರಾಯಶಃ ಇದೇ ಕಾರಣದಿಂದಾಗಿ ಈ ವ್ಯಾಧಿಪೀದಿತರು ಪದೇಪದೇ ವೈದ್ಯರನ್ನು ಬದಲಾಯಿಸುವುದು ಅಥವಾ ವಿವಿಧ ಪದ್ಧತಿಯ ಚಿಕಿತ್ಸೆಗಳನ್ನು ಪ್ರಯೋಗಿಸುವುದು ಸ್ವಾಭಾವಿಕವೂ ಹೌದು. ಕೆಲ ರೋಗಿಗಳು ನೋವಿನ ತೀವ್ರತೆಯನ್ನು ಸಹಿಸಲಾರದೇ ವೈದ್ಯರ ಬಳಿ ಕಾಡಿ ಬೇಡಿ ಸೂಜಿಮದ್ದನ್ನು ಪಡೆದುಕೊಂಡರೂ, ಇದರ ಪ್ರಭಾವ ಕೆಲವೇ ತಾಸುಗಳಿಗೆ ಸೀಮಿತವಾಗಿರುವುದರಿಂದ ನೋವು ಮತ್ತೆ ಮರುಕಳಿಸುವುದು. 

ಸ್ವಯಂ ಶಮನಗೊಳ್ಳುವ ಈ ವ್ಯಾಧಿಯನ್ನು ಖಚಿತವಾಗಿ ಗುಣಪಡಿಸಬಲ್ಲ ಔಷದಗಳನ್ನು ಇದುವರೆಗೆ ಯಾವುದೇ ವೈದ್ಯಕೀಯ ಸಂಶೋಧಕರು ಪತ್ತೆಹಚ್ಚಲು ಯಶಸ್ವಿಯಾಗಿಲ್ಲ. ಆದರೆ ವಿಶೇಷವಾಗಿ ಮಧ್ಯವಯಸ್ಸನ್ನು ಮೀರಿದ ರೋಗಿಗಳನ್ನು ಪರಾವಲಂಬಿಗಳನ್ನಾಗಿಸುವ ಅಥವಾ ಹಾಸಿಗೆ ಹಿಡಿಸಬಲ್ಲ ಅಸ್ತಿಸಂದಿಗಳ ನೋವನ್ನು, ಉರಿಯೂತ ನಿರೋಧಕ ಹಾಗೂ ವೇದನಾ ಶಾಮಕ ಔಷದಗಳಿಂದ ನಿಯಂತ್ರಿಸಬಹುದಾಗಿದೆ. 

ಸಾಮಾನ್ಯವಾಗಿ ಜ್ವರದ ನಿಯಂತ್ರಣಕ್ಕಾಗಿ ಪಾರಾಸಿಟಮಾಲ್ ಮತ್ತು ಅಸ್ತಿಸಂದಿಗಳ ನೋವು ಮತ್ತು ಬಾವುಗಳ ಶಮನಕ್ಕಾಗಿ ಇಬುಪ್ರೊಫೇನ್, ಡೈಕ್ಲೋಫೆನಾಕ್, ನಾಪ್ರೊಕ್ಸೇನ್,ಆಸ್ಪಿರಿನ್ ಇತ್ಯಾದಿ ಔಷದಗಳನ್ನು ವೈದ್ಯರು ಬಳಸುತ್ತಾರೆ. ಆದರೆ ಈ ಔಷದಗಳ ಅಡ್ಡಪರಿಣಾಮ ಹಾಗೂ ಸುದೀರ್ಘಕಾಲ ಸೇವಿಸಿದಲ್ಲಿ ಬಾಧಿಸುವ ದುಷ್ಪರಿಣಾಮಗಳಿಂದಾಗಿ, ವೈದ್ಯರ ಸಲಹೆ- ಸೂಚನೆಗಳನ್ನು ಪಡೆಯದೇ ಇವುಗಳನ್ನು ಸೇವಿಸುವುದು ಅಯಾಚಿತ ಸಮಸ್ಯೆಗಳಿಗೆ ಕಾರಣವೆನಿಸಬಲ್ಲದು. ಉದಾಹರಣೆಗ ೧೨ ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಸ್ಪಿರಿನ್ ನೀಡುವಂತಿಲ್ಲ. ಅದೇ ರೀತಿಯಲ್ಲಿ ಅತಿಆಮ್ಲದ ತೊಂದರೆ, ಜಠರದ ಹುಣ್ಣುಗಳು ಮತ್ತು ಆಸ್ತಮಾ ವ್ಯಾಧಿಪೀಡಿತರು ಇಬುಪ್ರೊಫೇನ್ ಸೇವಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನಿಸುವುದು. 

ಕೆಲ ವೈದ್ಯರು ಒಂದೆರಡು ವಿಧದ ಜೀವನಿರೋಧಕ ಔಷದಗಳನ್ನು ೫ ರಿಂದ ೭ ದಿನಗಳ ಅವಧಿಗೆ ನೀಡುವ ಮೂಲಕ ಈ ವೈರಸ್ ನ ಹಾವಳಿಯನ್ನು ತಡೆಗಟ್ಟಬಹುದು ಎನ್ನುವರಾದರೂ, ಇದರ ಉಪಯುಕ್ತತೆಯ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ. ಸುದೀರ್ಘಕಾಲ ಬಾಧಿಸಬಲ್ಲ ಹಾಗೂ ಸೂಕ್ತ ಚಿಕಿತ್ಸೆ ಲಭ್ಯವಿಲ್ಲದ ವ್ಯಾಧಯಾಗಳಿಂದ ಬಳಲುತ್ತಿರುವ ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ವೈದ್ಯರ ಸಲಹೆ ಸೂಚನೆಗಳಿಗಿಂತ ಹೆಚ್ಚಾಗಿ, ತಮ್ಮ ಬಂಧುಮಿತ್ರರ ಅಥವಾ ನೆರೆಕೆರೆಯ ವ್ಯಕ್ತಿಗಳ "ಉಚಿತ ಸಲಹೆ" ಗಳಿಗೆ ಹೆಚ್ಚು ಮಹತ್ವವನ್ನು ನೀಡುವ ಮೂಲಕ ತಮ್ಮ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿಕೊಳ್ಳುತ್ತಾರೆ!. 


 ಆದರೆ ನಿಮ್ಮ ವೈದ್ಯರು ಯಾವುದೇ ಕಾಯಿಲೆಯನ್ನು ನಿಖರವಾಗಿ ಪತ್ತೆ ಹಚ್ಚಿದ ಬಳಿಕ, ವ್ಯಾಧಿಪೀಡಿತರ ವಯಸ್ಸು, ಸಾಮಾನ್ಯ ಆರೋಗ್ಯದ ಮಟ್ಟ, ಇವರಲ್ಲಿ ಇರಬಹುದಾದ ಇತರ ಕಾಯಿಲೆಗಳು ಮತ್ತಿತರ ಅನೇಕ ವಿಚಾರಗಳನ್ನು ಪರಿಗಣಿಸಿದ ಬಳಿಕವೇ ಚಿಕಿತ್ಸೆಯನ್ನು ಸೂಚಿಸುತ್ತಾರೆ. ಜೊತೆಗೆ ಇದೇ ಆಧಾರದ ಮೇಲೆ ತಾವು ನೀಡಬೇಕಾದ ಔಷದಗಳು, ಇವುಗಳ ಪ್ರಮಾಣ ಮತ್ತು  ಸೇವಿಸಬೇಕಾದ ಅವಧಿಗಳನ್ನೂ ನಿರ್ಧರಿಸುತ್ತಾರೆ. ಇಷ್ಟು ಮಾತ್ರವಲ್ಲ, ಚಿಕಿತ್ಸೆಯನ್ನು ಆರಂಭಿಸಿದ ಬಳಿಕ ಅನಿರೀಕ್ಷಿತವಾಗಿ ಅದ್ದಪರಿನಾಮಗಳು ತಲೆದೊರಿದಲ್ಲಿ, ಇವುಗಳನ್ನು ಪರಿಹರಿಸಿದ ಬಳಿಕ ಔಷದಗಳನ್ನು ಬದಲಾಯಿಸುತ್ತಾರೆ. 

ಮುಂಜಾಗರೂಕತೆ 

ಚಿಕುನ್ ಗುನ್ಯಾ ವ್ಯಾಧಿಯು ನಿಶ್ಚಿತವಾಗಿಯೂ ಮಾರಕವಲ್ಲ. ಆದರೆ ಭಾರತದ ವಿವಿಧ ರಾಜ್ಯಗಳಲ್ಲಿ ಈ ವ್ಯಾಧಿಪೀಡಿತರು ಮೃತಪಟ್ಟ ಉದಾಹರಣೆಗಳಿವೆ. ಇದಕ್ಕೆ ಅವರಲ್ಲಿದ್ದ ಅನ್ಯ ಗಂಭೀರ ಕಾಯಿಲೆಗಳು ಅಥವಾ ಅವರು ಪಡೆದುಕೊಂಡಿದ್ದ ಚಿಕಿತ್ಸೆ- ಔಷದಗಳೂ ಕಾರಣವಾಗಿರಬಹುದು. 

ತೀವ್ರ ಸಾಂಕ್ರಾಮಿಕವಾಗಿ ಹರಡಿ ರೋಗಿಗಳನ್ನು ಅಸಹಾಯಕರನ್ನಾಗಿಸಬಲ್ಲ ಈ ವ್ಯಾಧಿಯನ್ನು ತಡೆಗಟ್ಟುವುದೇ ಇದರಿಂದ ಪಾರಾಗಲು ಇರುವ ಏಕೈಕ ವಿಧಾನವಾಗಿದೆ. ಆದರೆ ಈ ವ್ಯಾಧಿಯನ್ನು ನಿಶ್ಚಿತವಾಗಿ ತಡೆಗಟ್ಟಬಲ್ಲ ಲಸಿಕೆಯನ್ನು ಇಂದಿನ ತನಕ ಕಂಡುಹಿಡಿದಿಲ್ಲ. ಈ ನಿಟ್ಟಿನಲ್ಲಿ ಅವಿರತ ಪ್ರಯತ್ನಗಳು ನಡೆಯುತ್ತಿದ್ದು, ಸದ್ಯೋಭವಿಷ್ಯದಲ್ಲಿ ಇಂತಹ ಲಸಿಕೆಗಳು ಮಾರುಕಟ್ಟೆಯನ್ನು ಪ್ರವೇಶಿಸುವುದರಲ್ಲಿ ಸಂದೇಹವಿಲ್ಲ. ಅಲ್ಲಿಯ ತನಕ ನಮ್ಮ ವಸತಿ- ವಾಣಿಜ್ಯ ಕಟ್ಟಡಗಳು, ಬಡಾವಣೆಗಳು, ನಗರಗಳ ಬೀದಿಬದಿಯಲ್ಲಿನ ಚರಂಡಿಗಳೇ ಮುಂತಾದ ತಾಣಗಳನ್ನು ಸ್ವಚ್ಚವಾಗಿರಿಸುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಗಟ್ಟುವ ಮೂಲಕ ಈ ವ್ಯಾಧಿಯ ಹರಡುವಿಕೆಯನ್ನು ತಕ್ಕ ಮಟ್ಟಿಗೆ ನಿಯಂತ್ರಿಸಬಹುದಾಗಿದೆ. ಇದರೊಂದಿಗೆ ಕೆಲವಿಧದ ಕೀಟನಾಶಕಗಳನ್ನು ಸೂಕ್ತ ಮುಂಜಾಗರೂಕತೆಯೊಂದಿಗೆ ಬಳಸುವುದು ಮತ್ತು ವ್ಯಾಧಿಪೀದಿತ ಪ್ರದೇಶಗಳಲ್ಲಿನ ನಿವಾಸಿಗಳು ಸೊಳ್ಳೆಪರದೆಯನ್ನು ಕಡ್ಡಾಯವಾಗಿ ಬಳಸುವುದೇ ಇದಕ್ಕೊಂದು ಸರಳ ಮತ್ತು ಸುರಕ್ಷಿತ ವಿಧಾನವಾಗಿದೆ.  

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೭-೦೪-೨೦೦೮ ರ ಸಂಚಿಕೆಯ ಬಳಕೆದಾರ: ಸಮಸ್ಯೆ- ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ. 











 

No comments:

Post a Comment