Tuesday, September 23, 2014

DIABETES

ಸಕ್ಕರೆಯ ಮೇಲೆ ಏಕಿಷ್ಟು ಅಕ್ಕರೆ?

ಸಕ್ಕರೆಯಂತಹ ಸವಿಮಾತುಗಳಿಗೆ ಮನಸೋಲುವ ಹುಲುಮಾನವರು, ಸಕ್ಕರೆಯಿಂದ ತಯಾರಿಸಿದ ಸ್ವಾದಿಷ್ಟ ಖಾದ್ಯಪೇಯಗಳಿಗೆ ಮನಸೋಲದಿರುವುದು ಅಸಾಧ್ಯ. ಜಿಲೇಬಿ, ಗುಲಾಬ್ ಜಾಮೂನ್, ಹೋಳಿಗೆ, ಪಾಯಸಗಳ ಹೆಸರುಗಳನ್ನೂ ಕೇಳಿದೊಡನೆ ಬಾಯಲ್ಲಿ ನೀರೂರಿಸುವ ಭಾರತೀಯರ ಅಡುಗೆಮನೆಯಲ್ಲಿಸಕ್ಕರೆಗೆ ಪ್ರಾಯಶಃ ಇದೇ ಕಾರಣದಿಂದಾಗಿ ಅಗ್ರಸ್ಥಾನ ಸಲ್ಲುತ್ತದೆ.
ಶುಭ ಸಮಾಚಾರಗಳನ್ನು ಅಥವಾ ವಿಶೇಷವಾದ ಸಂತೋಷದ ಸುದ್ದಿಯೊಂದನ್ನು ಬಂಧುಮಿತ್ರರಿಗೆ ತಿಳಿಸುವಾಗ ಬಾಯಿ ಸಿಹಿಮಾಡುವ ಸಂಪ್ರದಾಯ ನಮ್ಮಲ್ಲಿದೆ. ಜನನ- ಮರಣಗಳಿಗೆ ಸಂಬಂಧಿಸಿದ ವಿಶಿಷ್ಟ ಆಚರಣೆಗಳ ಸಂದರ್ಭಗಳಲ್ಲೂಸಿಹಿತಿಂಡಿಗಳನ್ನು ಬಡಿಸುವುದು ಭಾರತೀಯರ ವಿಶೇಷತೆಯಾಗಿದೆ. ವಿವಿಧ ಧರ್ಮೀಯರ ಹಬ್ಬಹರಿದಿನಗಳಲ್ಲಂತೂ ಸಿಹಿತಿಂಡಿಗಳ ವಿನಿಮಯ ಅನಿವಾರ್ಯವೆನಿಸಿದೆ. ಇವೆಲ್ಲಾ ಕಾರಣಗಳಿಂದಾಗಿ ಭಾರತೀಯರು ಸೇವಿಸುತ್ತಿರುವ ವೈವಿಧ್ಯಮಯ  ಸಿಹಿತಿಂಡಿಗಳ ಪ್ರಮಾಣವುಅನ್ಯ ದೇಶಗಳ ಜನರಿಗಿಂತ ಸಾಕಷ್ಟು ಹೆಚ್ಚಾಗಿದೆ.
ಭಾರತದಲ್ಲಿ ಜರಗುವ ಪ್ರತಿಯೊಂದು ಸಮಾರಂಭ ಹಾಗೂ ಔತಣಕೂಟಗಳಲ್ಲಿ ಸಿಹಿತಿಂಡಿಗಳು ಮತ್ತು ಪಾಯಸಗಳಿಗೆ ವಿಶೇಷವಾದ ಸ್ಥಾನಮಾನಗಳಿವೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವೈವಿಧ್ಯಮಯ ಸಿಹಿತಿಂಡಿಗಳನ್ನು ಮನಸಾರೆ ಸವಿಯುವ ಅತಿಥಿಗಳು, ಅಪ್ಪಿತಪ್ಪಿಯೂ ತಾವು ಸೇವಿಸಿರುವ ಖಾದ್ಯಪೇಯಗಳಲ್ಲಿ ಇದ್ದ ಸಕ್ಕರೆಯ ಪ್ರಮಾಣ ಹಾಗೂ ಇವುಗಳ ಅತಿಯಾದ ಸೇವನೆಯು ತಮ್ಮ ಆರೋಗ್ಯದ ಮೇಲೆ ಬೀರಬಹುದಾದ ದುಷ್ಪರಿಣಾಮಗಳ ಬಗ್ಗೆ ಚಿಂತಿಸುವುದೇ ಇಲ್ಲ. ಇಷ್ಟು ಮಾತ್ರವಲ್ಲ, ಅನೇಕ ಮಧುಮೇಹ ಪೀದಿತರೂ ತಮ್ಮ ಮನೆಮಂದಿಯ ಕಣ್ಣು ತಪ್ಪಿಸಿಸಿಹಿತಿಂಡಿಗಳನ್ನು ಮೆಲ್ಲಬಹುದಾದ ಇಂತಹ ಅವಕಾಶಗಳನ್ನು ತಪ್ಪಿಸಿಕೊಳ್ಳುವುದಿಲ್ಲ!.
ಅನುಭವೀ ವೈದ್ಯರೇ ಹೇಳುವಂತೆಅವರಲ್ಲಿ ತಪಾಸಣೆಗಾಗಿ ಬಂದವರಿಗೆ ಆಕಸ್ಮಿಕವಾಗಿ ಮಧುಮೇಹ ವ್ಯಾಧಿ ಇರುವುದು ಪತ್ತೆಯಾದಲ್ಲಿಈ ವ್ಯಾಧಿಯ ಇರುವಿಕೆಗಿಂತ ಹೆಚ್ಚಾಗಿ ತಾವಿನ್ನು ಸಿಹಿತಿಂಡಿಗಳನ್ನು ತಿನ್ನುವಂತಿಲ್ಲ ಎನ್ನುವ ವಿಚಾರವೇ ಅವರಿಗೆ " ಶಾಕ್ " ನೀಡುತ್ತದೆ. ಭಾರತೀಯರಿಗೆ ಸಕ್ಕರೆಯ ಮೇಲಿರುವ ಅತಿಯಾದ ಅಕ್ಕರೆಗೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇರೊಂದಿಲ್ಲ!.
ಅತಿಯಾದರೆ ಅಮೃತವೂ......
ಇತ್ತೀಚಿನ ಅಂಕಿ ಅಂಶಗಳಂತೆ ಭಾರತೀಯರು ವರ್ಷಂಪ್ರತಿ ಸೇವಿಸುತ್ತಿರುವ ಸಕ್ಕರೆಯ ಸರಾಸರಿ ಪ್ರಮಾಣವು ತಲಾ ೩೦ ಕಿಲೋಗ್ರಾಂ ಎಂದಲ್ಲಿ ನೀವೂ ನಂಬಲಾರಿರಿ. ಅರ್ಥಾತ್ ಪ್ರತಿಯೊಬ್ಬ ಭಾರತೀಯನು ಒಂದು ದಿನದಲ್ಲಿ ಸೇವಿಸುವ ಸಕ್ಕರೆಯ ಪ್ರಮಾಣವು ಸುಮಾರು ೮೨ ಗ್ರಾಂ ಗಳಷ್ಟಿರುತ್ತದೆ. ಕಳೆದ ಎರಡು ವರ್ಷಗಳಿಂದ ಈ ಪ್ರಮಾಣವು ಶೇ.೨೦ ರಷ್ಟು ಹೆಚ್ಚುತ್ತಿದೆ. ಈ ಸೇವನಾ ಪ್ರಮಾಣವು ಇನ್ನಷ್ಟು ಹೆಚ್ಚುತ್ತಾ ಹೋದಲ್ಲಿ೨೦೨೦ ಕ್ಕೂ ಮುನ್ನ ಪ್ರತಿವರ್ಷ ನಾವು ಸೇವಿಸುವ ಸಕ್ಕರೆಯ ಪ್ರಮಾಣವು ದುಪ್ಪಟ್ಟಾಗಳಿದೆ!.
ಪ್ರಸ್ತುತ ಭಾರತವು ವಿಶ್ವ ಮಧುಮೇಹಿಗಳ ರಾಜಧಾನಿ ಎನಿಸಿರಲು ಇತರ ಕೆಲವು ಕಾರಣಗಳೊಂದಿಗೆ, ಭಾರತೀಯರಿಗೆ ಸಕ್ಕರೆಯ ಮೇಲಿರುವ ಅತಿಯಾದ ಅಕಾರೆಯೂ ಪ್ರಮುಖ ಕಾರಣವೆನಿಸಿದೆ. ವಿಶೇಷವೆಂದರೆ ಶಾಶ್ವತ ಪರಿಹಾರವಿಲ್ಲದ ಗಂಭೀರ ಕಾಯಿಲೆಯೊಂದಕ್ಕೆ ತಾವು ಸುಲಭವಾಗಿ ಈಡಾಗಲುಅತಿಯಾದ ಸಿಹಿತಿಂಡಿಗಳ ಸೇವನೆಯೂ ಕಾರಣವೆನಿಸಬಲ್ಲದು ಎನ್ನುವುದು ಅನೇಕ ವಿದ್ಯಾವಂತರಿಗೂ ತಿಳಿದಿಲ್ಲ.
ನಾವು ದಿನನಿತ್ಯ ಬಳಸುವ ಒಂದು ಟೀ ಸ್ಪೂನ್ ಸಕ್ಕರೆಯಲ್ಲಿ ೪೮ ಕ್ಯಾಲರಿಗಳಿವೆ. ಸಕ್ಕರೆಯ ಅತಿಯಾದ ಸೇವನೆಯಿಂದ ದಂತ ಕುಳಿಗಳು, ಮಧುಮೇಹ, ಅತಿಬೊಜ್ಜು, ಗೌಟ್ಹೃದ್ರೋಗಗಳು ಮತ್ತು ಕ್ಯಾನ್ಸರ್ ನಂತಹ ಮಾರಕ ವ್ಯಾಧಿಗಳು ಬಾಧಿಸುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಸಂಶೋಧಕರು ಅಭಿಪ್ರಾಯ ಪಡುತ್ತಾರೆ.
ಸಕ್ಕರೆಯಿಂದ ಕೊಬ್ಬು?
ನಾವು ಸೇವಿಸಿದ ಸಕ್ಕರೆಯು ಜೀರ್ಣವಾದ ಬಳಿಕ ಗ್ಲೂಕೋಸ್ ಮತ್ತು ಫ್ರೂಕ್ಟೋಸ್ ಗಳಾಗಿ ವಿಭಜಿಸಲ್ಪಟ್ಟುಸಣ್ಣ ಕರುಳಿನ ಮೂಲಕ ಕ್ಷಿಪ್ರಗತಿಯಲ್ಲಿ ಹೀರಲ್ಪಡುತ್ತದೆ. ಬಳಿಕ ರಕ್ತದಲ್ಲಿ ಬಿಡುಗಡೆಯಾಗುತ್ತದೆ. ತತ್ಪರಿಣಾಮವಾಗಿ ರಕ್ತದಲ್ಲಿನ ಗ್ಲೂಕೋಸ್ ನ ಪ್ರಮಾಣವು ಹೆಚ್ಚಿನಮ್ಮ ಶಾರೀರಿಕ ಕ್ರಿಯೆಗಳು ಹಾಗೂ ಅನ್ಯ ಚಟುವಟಿಕೆಗಳಿಗೆ ಅವಶ್ಯಕವಾದ " ಶಕ್ತಿ " (ENERGY) ಯನ್ನು ಒದಗಿಸುತ್ತದೆ. ನಮ್ಮ ಶರೀರಕ್ಕೆ ತತ್ ಕ್ಷಣಕ್ಕೆ ಅವಶ್ಯವಿರುವುದಕ್ಕಿಂತಲೂ ಅಧಿಕ ಪ್ರಮಾಣದ ಗ್ಲೂಕೋಸ್ ಲಭ್ಯವಾದಲ್ಲಿ, ಅದು ಗ್ಲೈಕೋಜೆನ್ ಅಥವಾ ಕೊಬ್ಬಿನ ರೂಪದಲ್ಲಿ ಪರಿವರ್ತನೆಗೊಂಡು ಶರೀರದಲ್ಲಿ ಸಂಗ್ರಹವಾಗುತ್ತದೆ. ಇದೆ ಕಾರಣದಿಂದಾಗಿ ನಮ್ಮ ಶರೀರಕ್ಕೆ ಅಗತ್ಯವಿರುವುದಕ್ಕಿಂತ ಅಧಿಕ ಪ್ರಮಾಣದ ಸಕ್ಕರೆಯ ಸೇವನೆಯೊಂದಿಗೆ ಶಾರೀರಿಕ ಚಟುವಟಿಕೆಗಳೂ ಕಡಿಮೆಯಾದಲ್ಲಿ, ಸ್ವಾಭಾವಿಕವಾಗಿ ನಮ್ಮ ಶರೀರದಲ್ಲಿ ಸಂಗ್ರಹವಾಗುವ ಕೊಬ್ಬಿನ ಪ್ರಮಾಣವೂ ಹೆಚ್ಚಿ ಅತಿಬೊಜ್ಜಿನ ಸಮಸ್ಯೆಗೆ ಕಾರಣವೆನಿಸುತ್ತದೆ.
ಸಕ್ಕರೆಯಿಂದ ತಯಾರಿಸಿದ ಖಾದ್ಯಪೇಯಗಳಅತಿಸೇವನೆಯಿಂದ ಶರೀರದಲ್ಲಿ ಇನ್ಸುಲಿನ್ ನ ಸ್ರಾವವು ಹೆಚ್ಚಾಗುವುದರಿಂದರಕ್ತದಲ್ಲಿನ ಟ್ರೈಗ್ಲಿಸರೈಡ್ ಗಳ ಪ್ರಮಾಣವು ಹೆಚ್ಚುವುದು. ಪರಿಣಾಮವಾಗಿ ಎಚ್ .ಡಿ.ಎಲ್ ಕೊಲೆಸ್ಟರಾಲ್ ಣ ಪ್ರಮಾಣವು ಕಡಿಮೆಯಾಗುವುದರಿಂದ ಹೃದ್ರೋಗಗಳು ಬಾಧಿಸುವ ಸಾಧ್ಯತೆಗಳು ಹೆಚ್ಚುತ್ತದೆ.
ಸಕ್ಕರೆಯ ಬಳಕೆಗೆ ಕತ್ತರಿ!
ನಿಜ ಹೇಳಬೇಕಿದ್ದಲ್ಲಿ ನಮ್ಮ ದೈನಂದಿನ ಆಹಾರದಲ್ಲಿ ಸಕ್ಕರೆಯ ಸೇವನೆ ಅನಿವಾರ್ಯವಲ್ಲ. ಕೆಲ ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವಂತೆ ಜನರ ಮನವೊಲಿಸಲು ಅಂತರ ರಾಷ್ಟ್ರೀಯ ಅಭಿಯಾನವೊಂದನ್ನು ನಡೆಸಿತ್ತು. ಜಾಗತಿಕ ಮಟ್ಟದಲ್ಲಿ ಸಕ್ಕರೆಯ ಅತಿಸೇವನೆಯಿಂದ ಉದ್ಭವಿಸುತ್ತಿರುವ ಅತಿಬೊಜ್ಜು, ಮಧುಮೇಹ ಹಾಗೂ ಹೃದ್ರೋಗಗಳಂತಹ ಗಂಭೀರ ಆರೋಗ್ಯದ ಸಮಸ್ಯೆಗಳ ಪರಮಾನ್ ಹೆಚ್ಚಲು ಆರಂಭಿಸಿದ್ದುದೇ,ಈ ಅಭಿಯಾನವನ್ನು ಹಮ್ಮಿಕೊಳ್ಳಲು ಮೂಲಕಾರಣವೆನಿಸಿತ್ತು.
ಪ್ರಾಯಶಃ ಇವೆಲ್ಲಾ ಕಾರಣಗಳಿಂದಾಗಿ ಅನೇಕ ಪಾಶ್ಚಾತ್ಯರು ತಾವು ದಿನನಿತ್ಯ ಸೇವಿಸುವ ಚಹಾ- ಕಾಫಿಗಳಲ್ಲೂ ಸಕ್ಕರೆಯನ್ನು ಬೆರೆಸುವುದಿಲ್ಲ. ಆದರೆ ಭಾರತದಲ್ಲಿ ಅನೇಕ ಮಧುಮೇಹ ಪೀಡಿತರೂ ಸಕ್ಕರೆಯನ್ನು ವರ್ಜಿಸುವುದೇ ಇಲ್ಲ!.
ಪ್ರಸ್ತುತ ನೀವು ಸೇವಿಸುತ್ತಿರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಬಯಸುವುದಾದಲ್ಲಿಈ ಕೆಳಗಿನ ಸಲಹೆ ಸೂಚನೆಗಳನ್ನು ಪರಿಪಾಲಿಸಿ.
ಚಾಕೊಲೆಟ್,ಸಿಹಿತಿಂಡಿಗಳು, ಲಗ್ಹುಪಾನೀಯಗಳು ಮತ್ತು ಐಸ್ ಕರೀಂ ಗಳನ್ನು ಆಗಾಗ ಸೇವಿಸದಿರಿ. ಸಮಾರಂಭ- ಔತಣ ಕೂಟಗಳಲ್ಲಿ ಭಾಗವಹಿಸಿದಾಗ ಕೇವಲ ಒಂದು ಸಿಹಿತಿಂಡಿ ಅಥವಾ ಒಂದಿಷ್ಟು ಪಾಯಸವನ್ನು ಮಾತ್ರ ಸೇವಿಸಿ. ಪ್ರತಿನಿತ್ಯ ಸಿಹಿತಿಂಡಿಗಳನ್ನು ಮೆಲ್ಲುವ ಹವ್ಯಾಸವನ್ನು ತ್ಯಜಿಸಿ. ಹಾಲು- ಮೊಸರುಗಳಿಗೂ ಸಕ್ಕರೆಯನ್ನು ಬೆರೆಸಿ ಸೇವಿಸದಿರಿ. ಚಹಾ- ಕಾಫಿಗಳಲ್ಲಿ ಬೆರೆಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ. ನಿಮ್ಮ ಮಕ್ಕಳಿಗೆ ದೋಸೆ, ಇಡ್ಲಿ, ಪೂರಿ ಹಾಗೂ ಉಪ್ಪಿಟ್ಟುಗಳಂತಹ ತಿಂಡಿಗಳೊಂದಿಗೆ ಸಕ್ಕರೆ ಅಥವಾ ಹಣ್ಣುಗಳ ಜಾಮ್ ಬೆರೆಸಿ ತಿನ್ನಿಸುವ ಪರಿಪಾಠವನ್ನು ನಿಲ್ಲಿಸಿ. ಇದಕ್ಕೆ ಬದಲಾಗಿ ಸ್ವಾಭಾವಿಕವಾಗಿ ಸಿಹಿಯಾಗಿರುವ ಹಣ್ಣುಗಳನ್ನು ಹಿತಮಿತವಾಗಿ ಸೇವಿಸಿ.
ಅಂತಿಮವಾಗಿ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರೊಂದಿಗೆ ದಿನನಿತ್ಯ ೩೦ ರಿಂದ ೬೦ ನಿಮಿಷಗಳ ಕಾಲ್ ನಡಿಗೆವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗಿಸಿಕೊಂಡಲ್ಲಿಅತಿಬೊಜ್ಜು, ಅಧಿಕ ತೂಕ, ಅಧಿಕ ರಕ್ತದ ಒತ್ತಡ, ಮಧುಮೇಹ ಮತ್ತು ಹೃದ್ರೋಗಗಳಲ್ಲದೇಇತರ ಹಲವಾರು ವ್ಯಾಧಿಗಳ ಸಂಭಾವ್ಯತೆಯನ್ನು ಕಡಿಮೆ ಮಾಡುವುದು ಸುಲಭಸಾಧ್ಯ ಎನ್ನುವುದನ್ನು ಮರೆಯದಿರಿ.
ಇಂದು ವಿಶ್ವ ಮಧುಮೇಹ ದಿನ
ವಿಶ್ವಾದ್ಯಂತ ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಮಧುಮೇಹ ವ್ಯಾಧಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲುಪ್ರತಿವರ್ಷ ನವೆಂಬರ್ ೧೪ ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತಿದೆ. ಅಂತರ ರಾಷ್ಟ್ರೀಯ ಮಧುಮೇಹ ಒಕ್ಕೂಟ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳ ನೇತ್ರತ್ವದಲ್ಲಿ ವಿವಿಧ ರಾಷ್ಟ್ರಗಳ ವೈದ್ಯಕೀಯ ಮತ್ತು ಸ್ವಯಂಸೇವಾ ಸಂಘಟನೆಗಳು ಈ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಅಸಂಖ್ಯ ಮಧುಮೇಹಿಗಳ ಪಾಲಿಗೆ ' ಸಂಜೀವಿನಿ " ಎನಿಸಿರುವ ಇನ್ಸುಲಿನ್ ಔಷದವನ್ನು ಚಾರ್ಲ್ಸ್ ಬೆಸ್ಟ್ ಇವರೊಂದಿಗೆ ಸಂಶೋಧಿಸಿದ್ದ ವಿಜ್ಞಾನಿ ಫ್ರೆಡರಿಕ್ ಬಾಂಟಿನ್ಗ್ ಇವರ ಜನ್ಮ ದಿನವನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಧುಮೇಹ ವ್ಯಾಧಿಯ ಸಂಭಾವ್ಯತೆ, ತಡೆಗಟ್ಟುವ ಮಾರ್ಗೋಪಾಯಗಳು, ಇದರ ದುಷ್ಪರಿಣಾಮಗಳು, ಮಾರಕತೆ ಮತ್ತು ಸೂಕ್ತ ಚಿಕಿತ್ಸಾ ವಿಧಾನಗಳ ಬಗ್ಗೆ ಕನರಿಗೆ ಮಾಹಿತಿಯನ್ನಿ ನೀಡುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿರುವಂತೆ ಪ್ರಸ್ತುತ ಜಗತ್ತಿನಾದ್ಯಂತ ೨೫೦ ಮಿಲಿಯ ಮಧುಮೇಹ ಪೀಡಿತರಿದ್ದಾರೆ. ಗರಿಷ್ಟ ಸಂಖ್ಯೆಯ ಮಧುಮೇಹಿಗಳಿರುವ ಹತ್ತು ರಾಷ್ಟ್ರಗಳಲ್ಲಿ ಭಾರತವು ಆಗ್ರ ಸ್ಥಾನದಲ್ಲಿದೆ. ಹಾಗೂ ಇದೆ ಕಾರಣದಿಂದಾಗಿ ಭಾರತವನ್ನು ವಿಶ್ವದ ಮಧುಮೇಹಿಗಳ ರಾಜಧಾನಿ ಎಂದು ಕರೆಯಲಾಗುತ್ತದೆ. ಭಾರತಕ್ಕಿಂತ ತುಸು ಅಧಿಕ ಜನಸಂಖ್ಯೆ ಇರುವ ಚೀನಾ ದೇಶವು ಈ ಪತ್ತಿಯಾಲಿ ದ್ವಿತೀಯ ಸ್ಥಾನದಲ್ಲಿದೆ.
ಜಗತ್ತಿನಾದ್ಯಂತ ಸಂಭವಿಸುವ ಶೇ.೫ ರಷ್ಟು ಮರಣಗಳುಮಧುಮೇಹ ವ್ಯಾಧಿಯ ಬಾಧೆಯಿಂದಾಗಿಯೇ ಸಂಭವಿಸುತ್ತಿವೆ. ಮಧುಮೇಹ ವ್ಯಾಧಿಯನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ, ಮಧುಮೇಹ ರೋಗಿಗಳ ಮರಣದ ಪ್ರಮಾಣವು ಮುಂದಿನ ೧೦ ವರ್ಷಗಳಲ್ಲಿ ಶೇ.೫೦ ರಷ್ಟು ಹೆಚ್ಚಲಿದೆ.
ಡಾ.ಸಿ.ನಿತ್ಯಾನಂದ ಪೈ, ಪುತ್ತೂರು
ಉದಯವಾಣಿ ಪತ್ರಿಕೆಯ ಡಿ. ೧೪-೧೧-೨೦೦೮ ರ ಸಂಚಿಕೆಯ ಬಳಕೆದಾರ: ಸಮಸ್ಯೆ-ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ.    


No comments:

Post a Comment