Wednesday, September 24, 2014

RTI ACT - may become useless

ಮಾಹಿತಿ ಹಕ್ಕು ಕಾಯಿದೆಗೆ ಆಪತ್ತು!

ನಮ್ಮ ದೇಶದ ಭ್ರಷ್ಟ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು, ಗಣಿ ಮತ್ತು ಭೂಗಳ್ಳರ ಬಹುಕೋಟಿ ಹಗರಣಗಳನ್ನು ಬಯಲಿಗೆಳೆಯಲು ಅತ್ಯಂತ ಉಪಯುಕ್ತವೆನಿಸಿದ್ದ " ಮಾಹಿತಿ ಪಡೆಯುವ ಹಕ್ಕು ಕಾಯಿದೆ- ೨೦೦೫ " ರ ಮೂಲ ಉದ್ದೇಶವನ್ನೇ ವಿಫಲಗೊಳಿಸಬಲ್ಲ ತೀರ್ಪೊಂದನ್ನು ಮದ್ರಾಸಿನ ಉಚ್ಚ ನ್ಯಾಯಾಲಯವು ನೀಡಿದೆ. ತತ್ಪರಿಣಾಮವಾಗಿ  ಪ್ರಜಾಡಳಿತದಲ್ಲಿ ಅತ್ಯವಶ್ಯಕವೆನಿಸುವ ಪಾರದರ್ಶಕತೆ ಮತ್ತು ಉತ್ತರದಾಯಿತ್ವಗಳನ್ನೇ ನಿರ್ಮೂಲನಗೊಳಿಸುವಂತಹ ಸನ್ನಿವೇಶ ಸೃಷ್ಠಿಯಾಗಲಿದೆ. ಜೊತೆಗೆ ಈ ಕಾಯಿದೆಯು " ಹಲ್ಲು ಕಿತ್ತ ಹಾವಿನಂತಾಗಲಿದೆ ". 

ಮಾಹಿತಿ ಹಕ್ಕು ಕಾಯಿದೆಗೆ ಸಂಬಂಧಿಸಿದ ವ್ಯಾಜ್ಯವೊಂದರ ಬಗ್ಗೆ ತನ್ನ ತೀರ್ಪನ್ನು ಪ್ರಕಟಿಸಿರುವ ಮದ್ರಾಸಿನ ಉಚ್ಚ ನ್ಯಾಯಾಲಯವುಮಾಹಿತಿ ಹಕ್ಕು ಕಾಯಿದೆಯನ್ವಯ ನಿರ್ದಿಷ್ಟ ಮಾಹಿತಿಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸುವಾಗಈ ಮಾಹಿತಿಯನ್ನು ಯಾವ ಉದ್ದೇಶಕ್ಕಾಗಿ ಪಡೆದುಕೊಳ್ಳಲು ಬಯಸುವುದಾಗಿ ಅರ್ಜಿದಾರರು ತಿಳಿಸಬೇಕಾಗುತ್ತದೆ. ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಒಬ್ಬರಿಗೆ ಸಂಬಂಧಿಸಿದ ವ್ಯಾಜ್ಯವೊಂದರ ತೀರ್ಪಿನಲ್ಲಿ,  ಅಪೇಕ್ಷಿತ ಮಾಹಿತಿಯನ್ನು ಪಡೆದುಕೊಳ್ಳಲು ಇಚ್ಚಿಸುವ ವ್ಯಕ್ತಿಯು ಇದಕ್ಕೆ ಸೂಕ್ತ ಕಾರಣ ಮತ್ತು ಉದ್ದೇಶಗಳನ್ನು ತನ್ನ ಅರ್ಜಿಯಲ್ಲಿ ನಮೂದಿಸಲೇಬೇಕು ಹಾಗೂ ಇದು ಕಾನೂನು ಸಮ್ಮತವಾಗಿರಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಜೊತೆಗೆ ಮಾಹಿತಿಯನ್ನು ಒಬ್ಬ ವ್ಯಕ್ತಿಗೆ ನೀಡಬೇಕಿದ್ದಲ್ಲಿಇದನ್ನು ಪಡೆದುಕೊಳ್ಳಲು ಯಾವುದೇ ಕಾರಣ ಇಲ್ಲದಿದ್ದಲ್ಲಿಮಾಹಿತಿ ಹಕ್ಕು ಕಾಯಿದೆಯನ್ವಯ ಇಂತಹ ಮಾಹಿತಿಗಳನ್ನು " ಕರಪತ್ರ " ಗಳಂತೆ ಹಂಚುವುದು ವಿಧೇಯಕದ ಉದ್ದೇಶವಲ್ಲ ಎಂದು ತೀರ್ಪಿನಲ್ಲಿ ನಮೂದಿಸಿದ್ದು, ಇದು ಮಾಹಿತಿ ಹಕ್ಕು ಕಾಯಿದೆಗೆ ತೊಡಕಾಗಿ ಪರಿಣಮಿಸಲಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.

ವಿಶೇಷವೆಂದರೆ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ ೬ (೨ ) ರಂತೆಅಪೇಕ್ಷಿತ ಮಾಹಿತಿಗಾಗಿ ಕೋರಿಕೆಯನ್ನು ಸಲ್ಲಿಸುವ ಅರ್ಜಿದಾರರನ್ನು, ಅವರನ್ನು ಸಂಪರ್ಕಿಸಲು ಅವಶ್ಯವಿರುವ ವಿವರಗಳನ್ನು ಹೊರತುಪಡಿಸಿ ಮಾಹಿತಿ ಕೋರಿಕೆಗೆ ಯಾವುದೇ ಕಾರಣವನ್ನು ಅಥವಾ ಯಾವುದೇ ಇತರ ವಿವರಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಆದರೆ ಉಚ್ಚ ನ್ಯಾಯಾಲಯವು ಇದನ್ನು ಪರಿಗಣಿಸಿದಂತೆ ಕಾಣುವುದಿಲ್ಲ.

ಖ್ಯಾತ ನ್ಯಾಯವಾದಿಗಳ ಅಭಿಪ್ರಾಯದಂತೆ ಈ ಆದೇಶವು " ಕಾನೂನುಬಾಹಿರ " ವಾಗಿದ್ದು, ಇದಕ್ಕೂ ಮುನ್ನ ಅನೇಕ ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳಂತೆಆಡಳಿತದಲ್ಲಿ ಪಾರದರ್ಶಕತೆಯನ್ನು ಜಾರಿಗೊಳಿಸುವುದನ್ನು ನಿಸ್ಸಂದೇಹವಾಗಿಯೂ ಅಡ್ಡಿಯಾಗಲಿದೆ. ಅಂತೆಯೇ ನ್ಯಾಯಾಲಯವು ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ ೬ (೨ ) ನ್ನು ಹೆಸರಿಸದೇಇದನ್ನು ಕಿತ್ತು ಹಾಕುತ್ತದೆ ಹಾಗೂ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪೊಂದರಲ್ಲಿ ಘೋಷಿಸಿದ್ದಂತೆಮಾಹಿತಿ ಪಡೆಯುವ ಹಕ್ಕು ಮೂಲಭೂತ ಹಕ್ಕು ಎನ್ನುವುದನ್ನೇ ಉಲ್ಲಂಘಿಸುತ್ತದೆ ಎಂದು ಅನೇಕ ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ.

ಈ ತೀರ್ಪಿನ ಪರಿಣಾಮವಾಗಿ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಹಿನ್ನಡೆಯಾಗಲಿದೆ. ಆದರೆ ಇದೇ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿಗಳು ಹಾಗೂ  ರಾಜಕಾರಣಿಗಳು ಮತ್ತು ಸರ್ಕಾರಿ ಸಂಪತ್ತನ್ನು ದೋಚುತ್ತಿರುವ ಗಣಿ ಹಾಗೂ ಭೂಗಳ್ಳರಿಗೆ ಇದು ನಿಶ್ಚಿತವಾಗಿಯೂ ವರದಾನವೆನಿಸಲಿದೆ.


ಅದೇನೇ ಇರಲಿ, ನಮ್ಮ ದೇಶದಲ್ಲಿ ಸಕ್ರಿಯವಾಗಿರುವ ಅನೇಕ ಸ್ವಯಂ ಸೇವಾ ಸಂಘಟನೆಗಳು ಮದ್ರಾಸಿನ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದರಲ್ಲಿ ಸಂದೇಹವಿಲ್ಲ. ಅದೇ ರೀತಿಯಲ್ಲಿ " ಸತ್ಯಮೇವ ಜಯತೇ " ಎನ್ನುವ ಮಾತು ನಿಜವೆನಿಸುವುದರಲ್ಲಿಯೂ ಸಂದೇಹವಿಲ್ಲ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು  



No comments:

Post a Comment